ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 22)


– ಡಾ.ಎನ್.ಜಗದೀಶ್ ಕೊಪ್ಪ


 

ಚಿರತೆಯ ಆರ್ಭಟ ಮತ್ತು ಗುಂಡಿನ ಸದ್ದು ಕೇಳಿದ ರುದ್ರಪ್ರಯಾಗದ ಜನ ನರಭಕ್ಷಕ ಗುಂಡಿಗೆ ಬಲಿಯಾಗಿದೆ ಎಂದು ಭಾವಿಸಿ, ಲಾಟೀನು, ದೊಣ್ಣೆ ಸಮೇತ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಸ್ಥಳಕ್ಕೆ ಓಡೋಡಿ ಬಂದರು. ಹಳ್ಳಿಯ ಜನರೆಲ್ಲಾ ಬಂದಿದ್ದರಿಂದ ಧೈರ್ಯ ಮಾಡಿದ ಕಾರ್ಬೆಟ್ ಮರದಿಂದ ಕೆಳಗಿಳಿದು ಟಾರ್ಚ್‌ ಬೆಳಕಿನ ಸಹಾಯದಿಂದ ಹಳ್ಳದಲ್ಲಿ ಚಿರತೆಗಾಗಿ ತಡಕಾಡಿದ. ತನ್ನ ಮುಂಗಾಲುಗಳು ಕತ್ತರಿಯಲ್ಲಿ ಸಿಲುಕಿದ್ದ ಕಾರಣ ಚಲಿಸಲಾರದೆ, ಅದರಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆಯನ್ನು ಹಳ್ಳದಲ್ಲಿ ಕಂಡಾಕ್ಷಣ ತಡ ಮಾಡದೆ, ಕಾರ್ಬೆಟ್ ಅದರ ತಲೆಗೆ ಗುಂಡುಹಾರಿಸಿದ. ಅತ್ಯಂತ ಹತ್ತಿರದಿಂದ ಹಾರಿಸಿದ ಗುಂಡಿನ ಹೊಡೆತಕ್ಕೆ ಕ್ಷಣಾರ್ಧದಲ್ಲೇ ಚಿರತೆ ಸಾವನ್ನಪ್ಪಿತು.

ಕಗ್ಗತ್ತಲೆಯಲ್ಲಿ ಸತ್ತು ಮಲಗಿದ ಚಿರತೆಯನ್ನು ನೋಡಿದಾಕ್ಷಣ ಗ್ರಾಮಸ್ಥರ ಸಂತಸ ಎಲ್ಲೇ ಮೀರಿತು. ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರನ್ನು ಹೆಗಲ ಮೇಲೆ ಎತ್ತಿ ಕುಣಿದಾಡಿದರು. ಬಿದರಿನ ಗಳಕ್ಕೆ ಚಿರತೆಯನ್ನು ಕಟ್ಟಿ ಆ ರಾತ್ರಿಯಲ್ಲೇ ಪ್ರಯಾಗದ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಕಾರ್ಬೆಟ್‌ನನ್ನೂ ಸಹ ಬಿಡದೆ, ಊರಿನ ಹೊರವಲಯದಿಂದ ಮೆರವಣಿಗೆಯಲ್ಲಿ ಹೊತ್ತು ತಂದರು. ಎಲ್ಲರೂ ನರಭಕ್ಷಕ ಗುಂಡಿಗೆ ಬಲಿಯಾಯಿತು ಎಂದು ನಂಬಿದ್ದರು. ಆದರೆ, ಕಾರ್ಬೆಟ್ ಅದನ್ನು ಖಚಿತ ಪಡಿಸಿಕೊಳ್ಳವ ತನಕ ನಂಬಲು ಸಿದ್ದನಿರಲಿಲ್ಲ. ಈ ಹಿಂದೆ ಶಿಕಾರಿಯ ಸಂದರ್ಭದಲ್ಲಿ ನೋಡಿದ್ದ ಚಿರತೆಗೂ, ಈಗ ಬಲಿಯಾಗಿರುವ ಚಿರತೆಯ ಮೈಬಣ್ಣದಲ್ಲಿನ ಅಲ್ಪ ವ್ಯತ್ಯಾಸ ಕಾರ್ಬೆಟ್‌ನನ್ನು ಗೊಂದಲದಲ್ಲಿ ದೂಡಿತ್ತು.

ಪ್ರವಾಸಿ ಮಂದಿರದ ಬಳಿಗೆ ಚಿರತೆಯ ಶವ ತಂದ ನಂತರ ಅದರ ಕುತ್ತಿಗೆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದ. ಕೇವಲ ಎಂಟು ಹತ್ತು ದಿನಗಳ ಹಿಂದೆ ಕೂದಲೆಳೆಯ ಹಂತರದಿಂದ ಪಾರಾಗಿದ್ದ ನರಭಕ್ಷಕನಿಗೆ ಗುಂಡು ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿತ್ತು, ಅಲ್ಲದೇ ಆ ಭಾಗದಲ್ಲಿ ಅದರ ಕೂದಲುಗಳು ಉದುರಿಹೋಗಿದ್ದವು. ಆದರೆ, ಈ ಚಿರತೆಯಲ್ಲಿ ಅದರ ಯಾವ ಲಕ್ಷಣಗಳು ಕಾಣಲಿಲ್ಲ. ಹಾಗಾಗಿ ಇದು ನರಭಕ್ಷಕ ಚಿರತೆಯಲ್ಲ, ಬೇರೊಂದು ಗಂಡು ಚಿರತೆ ಎಂದು ಜಿಮ್ ಕಾರ್ಬೆಟ್ ನಿರ್ಧರಿಸಿದ. ಆದರೆ, ಇವನ ತೀರ್ಮಾನವನ್ನು ಇಬ್ಸ್‌ಟನ್ ಆಗಲಿ, ರುದ್ರಪ್ರಯಾಗದ ಜನರಾಗಲಿ ನಂಬಲು ಸಿದ್ಧರಿರಲಿಲ್ಲ. ಸದ್ಯಕ್ಕೆ ಯಾವುದೇ ವಾದವಿವಾದ ಬೇಡ, ಕನಿಷ್ಟ ಒಂದು ವಾರ ಮೊದಲಿನ ಹಾಗೆ ರಾತ್ರಿ ವೇಳೆ ಎಚ್ಚರ ವಹಿಸಿ ಎಂದು ಪ್ರಯಾಗದ ಜನರಿಗೆ ಕಾರ್ಬೆಟ್ ಮನವಿ ಮಾಡಿಕೊಂಡ.

ತಡರಾತ್ರಿ ಪ್ರವಾಸಿ ಮಂದಿರದಲ್ಲಿ, ಇಬ್ಸ್‌ಟನ್ ಅವನ ಪತ್ನಿ ಜೀನ್ ಜೊತೆ ಕುಳಿತು ಊಟ ಮಾಡುವಾಗ, ತಕ್ಣಣ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುವುದು ಬೇಡ ಎಂದು ಕಾರ್ಬೆಟ್ ಇಬ್ಸ್‌ಟನಗೆ ಮನವಿ ಮಾಡಿದ. ಅದಕ್ಕೆ ಅವನು ಸಮ್ಮತಿ ಸೂಚಿಸಿದ. ಮಾರನೇ ದಿನ ಬೆಳಿಗ್ಗೆ ಪೌರಿಯಿಂದ ಬಂದಿದ್ದ ಕೆಲವು ಕಾಗದ ಪತ್ರಗಳನ್ನು ವಿಲೇವಾರಿ ಮಾಡುವುದರಲ್ಲಿ ಇಬ್ಸ್‌ಟನ್ ನಿರತನಾದ. ಕಾರ್ಬೆಟ್ ತನ್ನ ಸಹಾಯಕರಿಗೆ ಚಿರತೆಯ ಚರ್ಮ ಸುಲಿಯಲು ತಿಳಿಸಿ, ಮಂದಾಕಿನಿ ನದಿಯಲ್ಲಿ ಮೀನು ಬೇಟೆಯಾಡಲು ಹೊರಟ. ಕಾರ್ಬೆಟ್ ನರಭಕ್ಷಕನ ಸಾವಿನ ಬಗ್ಗೆ ಖಚಿತಪಡಿಸಿಕೊಳ್ಳಲು ಒಂದು ವಾರ ಸಮಯ ಕೇಳಿದ್ದ ಆದರೆ, ಕೇವಲ ಎರಡು ದಿನಗಳ ಅವಧಿಯಲ್ಲಿ ನರಭಕ್ಷಕ ನದಿಯಾಚೆಗಿನ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿ ಒಬ್ಬ ಹೆಂಗಸನ್ನು ಬಲಿತೆಗೆದುಕೊಂಡ ವಿಷಯವನ್ನು ಹಳ್ಳಿಗರು ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದು ಕಾರ್ಬೆಟ್‌ಗೆ ಮುಟ್ಟಿಸಿದರು.

ಕಾರ್ಬೆಟ್‌ನ ಸಂಶಯ ಕಡೆಗೂ ನಿಜವಾಯಿತು. ಆ ವೇಳೆಗಾಗಲೇ ಇಬ್ಸ್‌ಟನ್ ವಾಪಸ್ ಪೌರಿಗೆ ಮತ್ತು ಕಾರ್ಬೆಟ್ ನೈನಿತಾಲ್‌ಗೆ ಹೋಗಿ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡು ಬರುವುದೆಂದು ನಿರ್ಧಾರವಾಗಿತ್ತು. ಇಬ್ಬರೂ ಎರಡು ದಿನಗಳ ಮಟ್ಟಿಗೆ ತಮ್ಮ ಕಾರ್ಯಕ್ರಮವನ್ನು ಮುಂದೂಡಿ, ಹೆಂಗಸು ಬಲಿಯಾಗಿದ್ದ ಹಳ್ಳಿಗೆ ಕುದುರೆಯೇರಿ ಹೊರಟರು. ಊರ ಹೊರ ವಲಯದಲ್ಲಿ ಹೆಂಗಸಿನ ಶವವಿದ್ದ ಜಾಗದಲ್ಲಿ ಆಕೆಯ ಸಂಬಂಧಿ ಕಾರ್ಬೆಟ್ ಬರುವಿಕೆಗಾಗಿ ಕಾಯುತ್ತಿದ್ದ. ಕಾರ್ಬೆಟ್‌ಗೆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ. ಚಿರತೆಗೆ ಬಲಿಯಾದ ಹೆಂಗಸಿನ ಶವವಿದ್ದ ಜಾಗ ಮತ್ತು ಆಕೆಯ ಮನೆ ಎಲ್ಲವನ್ನು ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಸೂಕ್ಷ್ಮವಾಗಿ ಅವಲೋಕಿಸಿದರು.

ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ನರಭಕ್ಷಕನ ಹೆಜ್ಜೆ ಗುರುತು ಎಲ್ಲೆಡೆ ಸ್ಪಷ್ಟವಾಗಿ ಮೂಡಿದ್ದವು. ಮನೆಯಿಂದ ದೃಡವಾಗಿದ್ದ, ಐವತ್ತು ಕೆ.ಜಿ. ಗೂ ಹೆಚ್ಚು ತೂಕವಿದ್ದ ಹೆಂಗಸಿನ ಶವವನ್ನು ಎಲ್ಲಿಯೂ ಭೂಮಿಗೆ ತಾಗದಂತೆ ಬಾಯಲ್ಲಿ ಕಚ್ಚಿ ಹಿಡಿದು ಸಾಗಿದ್ದ ನರಭಕ್ಷಕ ಚಿರತೆಯ ಸಾಮರ್ಥ್ಯದ ಬಗ್ಗೆ ಕಾರ್ಬೆಟ್ ನಿಜಕ್ಕೂ ಬೆರಗಾದ. ಸಂಜೆ ನಾಲ್ಕು ಗಂಟೆಯ ವೇಳೆಗೆ ಶವವಿದ್ದ ಜಾಗದಿಂದ ಸುಮಾರು 60 ಅಡಿ ದೂರದಲ್ಲಿದ್ದ ಮರವೇರಿ ರಾತ್ರಿ ಹತ್ತು ಗಂಟೆಯವರೆಗೂ ಚಿರತೆಗಾಗಿ ಕಾಯಲು ಇಬ್ಬರೂ ನಿರ್ಧರಿಸಿದರು. ಕಾರ್ಬೆಟ್‌ನ ಸೇವಕರು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳಸಿದ್ದರಿಂದ ಅವರಿನ್ನೂ ಹಳ್ಳಿ ತಲುಪಿರಲಿಲ್ಲ. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಹಳ್ಳಿಯ ಮುಖಂಡನಿಗೆ ತಿಳಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಕೋವಿ, ಟಾರ್ಚ್ ಮತ್ತು ಪೆಟ್ರೋಮ್ಯಾಕ್ಸ್ ಜೊತೆ ಹೊರಟು ಮರವೇರಿ ಕುಳಿತರು.

ಗ್ರಾಮಸ್ಥರು ಚಿರತೆ ಉತ್ತರ ದಿಕ್ಕಿನ ಕಾಡಿನತ್ತ ಹೋಯಿತು ಎಂದು ತಿಳಿಸಿದ್ದರಿಂದ, ಎತ್ತರದ ಕೊಂಬೆಯೇರಿದ ಇಬ್ಸ್‌ಟನ್ ಉತ್ತರ ದಿಕ್ಕಿಗೆ ಮುಖಮಾಡಿ ಕೈಯಲ್ಲಿ ಬಂದೂಕ ಹಿಡಿದು ಕುಳಿತರೆ, ಕಾರ್ಬೆಟ್ ಇನ್ನೊಂದು ದಿಕ್ಕಿಗೆ ಮುಖಮಾಡಿ ಕುಳಿತ. ಪೆಟ್ರೋಮ್ಯಾಕ್ಸ್ ಮೇಲೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮರದ ಬುಡದ ಪೊಟರೆಯಲ್ಲಿ ಇಟ್ಟರು. ಇಬ್ಬರ ಬಳಿ ಟಾರ್ಚ್ ಇತ್ತಾದರೂ ಅವುಗಳ ಬ್ಯಾಟರಿಗಳು ಶಕ್ತಿಗುಂದಿದ್ದವು. ಆದರೂ ನರಭಕ್ಷಕ ಬಂದರೆ, ಗುರಿಯಿಡುವ ಆತ್ಮವಿಶ್ವಾಸ ಇಬ್ಬರಿಗೂ ಇತ್ತು. ಆದರೆ, ಇವರ ನಿರೀಕ್ಷೆ ಮೀರಿ, ಉತ್ತರ-ದಕ್ಷಿಣ ದಿಕ್ಕುಗಳನ್ನು ಬಿಟ್ಟು ಪಶ್ಚಿಮ ದಿಕ್ಕಿನ ಪರ್ವತದಿಂದ ನರಭಕ್ಷಕ ಇಳಿದು ಬರುವುದನ್ನು ಕಾಡು ಕೋಳಿಗಳು ಕೂಗುವುದರ ಮೂಲಕ ಸೂಚನೆ ನೀಡಿದವು. ಇವರು ಕುಳಿತ್ತಿದ್ದ ಮರಕ್ಕೂ ಆ ಪಶ್ಚಿಮ ದಿಕ್ಕಿನ ನಡುವೆ ಕಲ್ಲು ಬಂಡೆ ಅಡ್ಡಿಯಾದ್ದರಿಂದ ಇಬ್ಬರೂ ಸರಸರನೆ ಮರದಿಂದ ಇಳಿದು ಕಲ್ಲು ಬಂಡೆ ಏರಲು ನಿರ್ಧರಿಸಿದರು. ಅದಕ್ಕಾಗಿ ಪೊಟರೆಯಲ್ಲಿ ಇಟ್ಟಿದ್ದ ಪೆಟ್ರೋಮ್ಯಾಕ್ಸ್ ತೆಗೆದು ಹತ್ತಿಸಿದರು. ಆದರೆ, ಇಬ್ಸ್‌ಟನ್ ಅದನ್ನು ಹಿಡಿದು ಬಂಡೆಯತ್ತ ಸಾಗುತ್ತಿರುವಾಗ, ನೆಲದ ಮೇಲಿನ ಕಲ್ಲೊಂದಕ್ಕೆ ತಾಗಿಸಿಬಿಟ್ಟ. ಇದರಿಂದಾಗಿ ಅದರ ಗಾಜು ಮತ್ತು ರೇಷ್ಮೆ ಬತ್ತಿ ಎರಡೂ ಉದುರಿಹೋದವು. ಆದರೂ ಅದರಿಂದ ಸಣ್ಣನೆಯ ನೀಲಿ ಜ್ವಾಲೆ ಹೊರಹೊಮ್ಮುತ್ತಿತ್ತು ಇದರ ಸಾಮರ್ಥ್ಯ ಕೇವಲ ಐದಾರು ನಿಮಿಷ ಎಂದು ಇಬ್ಸ್ ಹೇಳಿದ ಕೂಡಲೇ ಕಾರ್ಬೆಟ್, ಕತ್ತಲೆಯಲ್ಲಿ ಇಲ್ಲಿರುವುದು ಅಪಾಯಕಾರಿ ಎಂದು ನಿರ್ಧರಿಸಿ, ಹಳ್ಳಿಯತ್ತ ಹೆಜ್ಜೆ ಹಾಕಲು ಇಬ್ಸ್‌ಟನ್‌ಗೆ ಸೂಚಿಸಿದ.

ಇಬ್ಸ್ ಉರಿಯುತ್ತಿರುವ ಪೆಟ್ರೋಮ್ಯಾಕ್ಸ್‌ನ ಸಣ್ಣ ಜ್ವಾಲೆಯ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಕಾರ್ಬೆಟ್ ಅವನ ಹಿಂದೆ ಬಂದೂಕ ಹಿಡಿದು ಪ್ರತಿ ಎರಡು ಹೆಜ್ಜೆಗೆ ಒಮ್ಮೆ ಹಿಂತಿರುಗಿ ನೋಡಿ ಹೆಜ್ಜೆ ಹಾಕುತ್ತಿದ್ದ. ಕತ್ತಲೆಯಲ್ಲಿ ನರಭಕ್ಷಕ ಯಾವ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಅಂಜಿಕೆ ಆ ಕ್ಷಣದಲ್ಲಿ ಕಾರ್ಬೆಟ್‌ನನ್ನು ಬಲವಾಗಿ ಕಾಡಿತು ಕೊನೆಗೂ ಪೆಟ್ರೋಮ್ಯಾಕ್ಷ್ ಆರಿ ಹೋಗುವ ಮುನ್ನ ಊರಿನ ಹೊರಭಾಗದಲ್ಲಿದ್ದ ರೈತನ ಮನೆ ಬಾಗಿಲಿಗೆ ಮುಟ್ಟಿದ್ದರು. ಕಾರ್ಬೆಟ್ ಬಾಗಿಲು ಬಡಿದು ವಿನಂತಿಸಿಕೊಂಡ ಮೇಲೆ ರೈತ ಬಾಗಿಲು ತೆರೆದು, ಅವರಿಗೆ ಚಹಾ ಮಾಡಿಕೊಟ್ಟು, ಅವನ ಸೇವಕರು ಉಳಿದುಕೊಂಡಿದ್ದ ಮನೆಯ ಬಗ್ಗೆ ಮಾಹಿತಿ ನೀಡಿದ. ಅವನಿಂದ ಚಿಮಣಿ ಎಣ್ಣಿಯ ಒಂದು ಪುಟ್ಟ ಲಾಂಧ್ರವೊಂದನ್ನು ಪಡೆದು, ಅದರ ಮಂದ ಬೆಳಕಿನಲ್ಲಿ ಆ ಮನೆಯಲ್ಲಿದ್ದ ಕೆಲವು ಗಂಡಸರ ನೆರವಿನಿಂದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರು ಉಳಿದುಕೊಂಡಿದ್ದ ಮನೆ ತಲುಪಿದರು. ಮನೆಯ ಬಾಗಿಲಲ್ಲಿ ಮಲಗಿದ್ದ ಬೀದಿ ನಾಯಿ ಇವರನ್ನು ಕಾಲು ಮೂಸಿ ಸ್ವಾಗತಿಸಿತು. ಮನೆಯೊಳಗೆ ಹೋಗಿ, ಇಬ್ಬರೂ ಮಲಗಲು ಸಿದ್ಧರಾಗುವ ವೇಳೆಗೆ ನಾಯಿ ವಿಚಿತ್ರವಾಗಿ ಬೊಗಳತೊಡಗಿತು. ಅವರು ಉಳಿದು ಕೊಂಡಿದ್ದ ರಸ್ತೆಯಿಂದ ಹತ್ತು ಅಡಿ ಎತ್ತರದ ಪ್ರದೇಶದಲ್ಲಿದ್ದ ಕಾರಣ ಮೆಟ್ಟಲಿನ ಮೇಲೆ ನಿಂತಿದ್ದ ನಾಯಿ ಒಂದೇ ದಿಕ್ಕಿನಿತ್ತ ಮುಖ ಮಾಡಿ ಬೊಗಳುತ್ತಿತ್ತು. ನಾಯಿಯ ಈ ವರ್ತನೆಯಿಂದ ನರಭಕ್ಷಕ ನಮ್ಮನ್ನು ಮನೆಯವರಿಗೂ ಹಿಂಬಾಲಿಸಿಕೊಂಡು ಬಂದಿದೆ ಎಂಬ ಸೂಚನೆ ಕಾರ್ಬೆಟ್‌ಗೆ ಸಿಕ್ಕಿತು. ಮನೆಯ ಕಿಟಕಿ, ಬಾಗಿಲುಗಳನ್ನು ಮತ್ತಷ್ಟು ಭದ್ರಪಡಿಸಿ ಮಲಗಿದ ಜೊತೆಗೆ ನಾಯಿ ಬಾಗಿಲಲ್ಲಿ ಇದ್ದ ಕಾರಣ ಅವನಿಗೆ ಆತಂಕ ಮತ್ತು ಭಯ ಇಲ್ಲವಾಗಿತ್ತು.

ಬೆಳಿಗ್ಗೆ ಎದ್ದು ನೋಡಿದಾಗ, ಕಾರ್ಬೆಟ್‌ಗೆ ಚಿರಪರಿಚಿತವಾದ ಅದೇ ನರಭಕ್ಷಕನ ಹೆಜ್ಜೆಗುರುತುಗಳು ಮನೆಯ ಮುಂಭಾಗದಲ್ಲಿ ಮೂಡಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿದ ಕಾರ್ಬೆಟ್ ಮತ್ತೆ ಹೆಂಗಸಿನ ಶವ ಇದ್ದ ಜಾಗಕ್ಕೆ ಹೋಗಿ ನೋಡಿ ಬಂದ. ಆ ರಾತ್ರಿ ಚಿರತೆ ಶವವನ್ನು ಮುಟ್ಟಿರಲಿಲ್ಲ. ಮಧ್ಯಾದ ವೇಳೆಗೆ ರುದ್ರಪ್ರಯಾಗದಲ್ಲಿದ್ದ ಜಿನ್ ಕತ್ತರಿಯನ್ನು ತರಿಸಿಕೊಂಡ ಕಾರ್ಬೆಟ್, ಸಂಜೆ ಮತ್ತೇ ಹೆಂಗಸಿನ ಶವವಿದ್ದ ಸ್ಥಳಕ್ಕೆ ತೆರಳಿ, agave ಬರುವ ಹಾದಿಯಲ್ಲಿ ಕತ್ತರಿಯನ್ನಿಟ್ಟು, ರುದ್ರಪ್ರಯಾಗದಲ್ಲಿ ಸಂಗ್ರಹಿಸಿದ್ದ ಸೈನೈಡ್ ವಿಷದ ಮಾತ್ರೆಗಳನ್ನು ಶವದ ಅಂಗಾಂಗಳ ನಡುವೆ ಹುದುಗಿಸಿ ಇಟ್ಟ. ಚಾಣಾಕ್ಷ ನರಭಕ್ಷಕ ಇವೆರಡರಲ್ಲಿ ಒಂದಕ್ಕೆ ಬಲಿಯಾಗುವುದು ಖಚಿತ ಎಂದು ಅವನು ನಂಬಿದ್ದ. ಆ ರಾತ್ರಿ ಕೂಡ ಅವನ ನಿರೀಕ್ಷೆ ಹುಸಿಯಾಯಿತು. ಇನ್ನು ಕಾಯುವುದು ಪ್ರಯೋಜವಿಲ್ಲ ಎಂದು ತೀರ್ಮಾನಿಸದ ಕಾರ್ಬೆಟ್, ಹೆಂಗಸಿನ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಿಳಿಸಿ, ನೈನಿತಾಲ್‌ಗೆ ಹೊರಡಲು ಅನುವಾದ.

ಇಬ್ಸ್‌ಟನ್‌ನ ಹದಿನೈದು ದಿನಗಳ ರಜೆ ಮುಗಿದ ಕಾರಣ ಅವನೂ ಕೂಡ ಪೌರಿಗೆ ವಾಪಸ್ ಹಿಂತಿರುಗಬೇಕಿತ್ತು. ತಮ್ಮ ತಮ್ಮ ಸಾಮಾನುಗಳನ್ನು ಪ್ರಯಾಣಕ್ಕೆ ಸಿದ್ಧಪಡಿಸುತ್ತಿದ್ದ ವೇಳೆಗೆ ನಾಲ್ಕು ಮೈಲಿ ದೂರದಲ್ಲಿ ನರಭಕ್ಷಕ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ಧಿ ಕಾರ್ಬೆಟ್‌ಗೆ ಮುಟ್ಟಿತು. ನೈನಿತಾಲ್‌ಗೆ ಹೋಗುವ ದಾರಿಯಲ್ಲಿ ಅದನ್ನು ಗಮನಿಸಿ ಹೋಗೋಣವೆಂದು ತನ್ನ ಸೇವಕರೊಂದಿಗೆ ಕಾರ್ಬೆಟ್ ಹಳ್ಳಿಯತ್ತ ಪ್ರಯಾಣ ಬೆಳಸಿದ. ಇಲ್ಲು ಕೂಡ ನರಭಕ್ಷಕ ಚಿರತೆ ಮನೆಗೆ ನುಗ್ಗಲುಯತ್ನಿಸಿ, ವಿಫಲವಾದ ನಂತರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಕೊಂಡೊಯ್ದಿತ್ತು. ಪ್ರಯಾಣ ಮತ್ತು ನಿರಂತರವಾಗಿ ಅನೇಕ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು ಆಯಾಸಗೊಂಡಿದ್ದ ಕಾರ್ಬೆಟ್ ಹಸುವಿನ ಕಳೇಬರಕ್ಕೆ ವಿಷವನ್ನು ಬೆರಸಿ, ಜಿನ್ ಕತ್ತರಿಯನ್ನು ಸನೀಹದ ದಾರಿಯಲ್ಲಿ ಇರಿಸಿದ. ಕತ್ತಲಾಗುವ ಮುನ್ನವೇ ರಾತ್ರಿಯ ಊಟ ಮುಗಿಸಿ, ದೋರದ ಪೈನ್ ಮರದ ಮೇಲೆ ಕಟ್ಟಲಾಗಿದ್ದ ಮಚ್ಚಾನ್ ಮೇಲೆ ಬಂದು ಮಲಗಿ ನಿದ್ರಿಸಿದ.

ಕತ್ತರಿಗೆ ನರಭಕ್ಷಕ ಸಿಲುಕಿಕೊಂಡರೆ, ಹೋಗಿ ಗುಂಡು ಹಾರಿಸಿ ಕೊಲ್ಲುವುದು ಅವನ ಯೋಜನೆಯಾಗಿತ್ತು. ಆದರೆ, ಚಾಣಾಕ್ಷತನದ ನರಭಕ್ಷಕ ಅಡಕತ್ತರಿಯನ್ನು ದಾಟಿ ಹಸುವಿನ ಕಳೇಬರವನ್ನು ಬೇರೊಂದು ಜಾಗಕ್ಕೆ ಎಳೆದೊಯ್ದು ತಿಂದು ಮುಗಿಸಿತ್ತು. ಬೆಳಿಗ್ಗೆ ಎದ್ದು ನೋಡಿದ ಕಾರ್ಬೆಟ್, ಹಳ್ಳಿಯ ಜನರನ್ನು ಕರೆಸಿ ಸುತ್ತಮುತ್ತಲಿನ ಕಾಡನ್ನು ಜಾಲಾಡಿಸಿದ ಎಲ್ಲಿಯೂ ಚಿರತೆ ಸತ್ತು ಬಿದ್ದಿರುವ ಕುರುಹು ಕಾಣಲಿಲ್ಲ. ಸಾಮಾನ್ಯವಾಗಿ ಬೆಕ್ಕು ಮತ್ತು ಚಿರತೆಗಳು ವಿಷವನ್ನು ತಿಂದ ಸಮಯದಲ್ಲಿ ಗರಿಕೆ ಹುಲ್ಲನ್ನು ತಿಂದು ವಾಂತಿ ಮಾಡುತ್ತವೆ. ಇಲ್ಲಿಯೂ ಸಹ ನರಭಕ್ಷಕ ವಿಷ ತಿಂದರೂ ಸಾವಿನಿಂದ ಪಾರಾಗಿತ್ತು. ಈ ಘಟನೆಯಿಂದ ಒಂದು ರೀತಿಯಲ್ಲಿ ತೀವ್ರ ಹತಾಶನಾದಂತೆ ಕಂಡು ಬಂದ ಕಾರ್ಬೆಟ್ ಹಳ್ಳಿಯ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಿ, ವಿಶ್ರಾಂತಿ ಪಡೆದು ಮತ್ತೆ ಮರಳಿ ಬರತ್ತೇನೆ ಎಂಬ ಭರವಸೆ ನೀಡಿ ನೈನಿತಾಲ್‌ನತ್ತ ಪ್ರಯಾಣ ಬೆಳಸಿದ.

(ಮುಂದುವರಿಯುವುದು)

Leave a Reply

Your email address will not be published. Required fields are marked *