-ಸೂರ್ಯ ಮುಕುಂದರಾಜ್
ಬಹುಶಃ ಪೆಟ್ರೋಲ್ ಬೆಲೆ ಏರಿಕೆಯ ಭಾರಕ್ಕಿಂತ ಸುಪ್ರೀಂಕೋರ್ಟ್ನಲ್ಲಿ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದೇಶದ ಅಸಂಖ್ಯಾತ ಕಾರು ಮಾಲೀಕರನ್ನು ಚಿಂತೆಗೀಡು ಮಾಡಿದೆ. ತಮ್ಮ ಕಾರುಗಳ ಕಿಟಕಿಗಳಿಗೆ ಹಾಕಿರುವ ಸನ್ಫಿಲಮ್ಗಳನ್ನು ಸಾರಿಗೆ ಕಾನೂನು ಪ್ರಕಾರ ಇಲ್ಲವಾದರೆ ತೆಗೆದುಹಾಕಬೇಕೆಂದು ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ತಮ್ಮ ಖಾಸಗಿತನವೇ ಬಟಾಬಯಲು ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
ಆರ್.ಟಿ.ಒ. ಕಾನೂನು ಕಾರುಗಳ ಸನ್ಫಿಲಮ್ಗಳು ಮುಂಭಾಗ, ಹಿಂಭಾಗ 70 ರಷ್ಟು ಮತ್ತು ಪಕ್ಕದ ಗಾಜುಗಳು 50 ರಷ್ಟು ಕಾಣುವಂತಿರಬೇಕೆಂದು ಹೇಳುತ್ತದೆ. ಕಾರಣ ಅಪಘಾತಗಳು ಸಂಭವಿಸುತ್ತವೆ, ಕಾರಿನಲ್ಲೇ ಅತ್ಯಾಚಾರವೆಸಗುತ್ತಾರೆ, ಅಪರಾಧಿಗಳ ಇರುವಿಕೆ ತಿಳಿಯುವುದಿಲ್ಲ ಇತ್ಯಾದಿ ಕಾರಣಗಳು. ಇಲ್ಲಿಯವರೆಗೂ ಎಷ್ಟು ಅಪಘಾತಗಳು ಸನ್ಫಿಲಮ್ಗಳ ಕಾರಣದಿಂದ ಆಗಿವೆಯೆಂದು ಅಂಕಿಅಂಶಗಳಿವೆಯೇ?. ಕಾರಿನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತದೆಯೆಂದು ವಾದಮುಂದಿಡುವ ಅರ್ಜಿದಾರರ ಪ್ರಕಾರ ದೇಶದ ಎಲ್ಲಾ ಟಿಂಟೆಡ್ ಗಾಜುಗಳ ಕಾರುಗಳ ಮಾಲೀಕರು ಅತ್ಯಾಚಾರಿಗಳೇ?. ದೊಡ್ಡ ದೊಡ್ಡ ಕಾರುಗಳಲ್ಲಿ ಅತ್ಯಾಚಾರ ನಡೆಯುತ್ತದೆ ಎಂಬುದನ್ನು ನಂಬಬಹುದು, ಮಾರುತಿ 800, ನ್ಯಾನೋದಂತಹ ಸಣ್ಣಕಾರುಗಳಲ್ಲೂ ರೇಪ್ ಕಿಡ್ನಾಪ್ಗಳಾಗಲು ಸಾಧ್ಯವೇ?. ನಮ್ಮ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಾಗರಿಕರ ಖಾಸಗಿತನದ ವಿಚಾರದಲ್ಲಿ ಸುಪ್ರೀಂಕೋರ್ಟ್ ಎಲ್ಲೋ ನಡೆದ ಒಂದೆರಡು ಘಟನೆಗಳನ್ನು ಮುಂದುಮಾಡಿಕೊಂಡು ಏಕಪಕ್ಷೀಯ ನಿರ್ಧಾರ ಪ್ರಕಟಿಸಿರುವುದು ಸರಿಯಾದ ಕ್ರಮವಲ್ಲ.
ಕೆಲವೇ ಕೆಲವು ಕಹಿಘಟನೆಗಳನ್ನು ನೆಪಮಾಡಿಕೊಂಡು ಹಲವು ರೀತಿಯ ಅನೂಕೂಲಗಳಿಗೆ ಬರೆಯೆಳೆಯುವುದು ನ್ಯಾಯಸಮ್ಮತವಲ್ಲ. ಹೆಣ್ಣುಮಕ್ಕಳ ರಕ್ಷಣೆಯನ್ನೇ ಮುಖ್ಯವಾಗಿಟ್ಟು ಅರ್ಜಿದಾರರ ವಾದವನ್ನು ಪರಿಗಣಿಸುವ ನ್ಯಾಯಾಲಯ ಒಂಟಿಯಾಗಿ ಕಾರುಗಳಲ್ಲಿ ಸಂಚರಿಸುವ ಹೆಣ್ಣುಮಕ್ಕಳ ರಕ್ಷಣೆ ಮುಖ್ಯವೆನಿಸುವುದಿಲ್ಲವೇ?. ಯಾವುದೇ ಪ್ರೇರಿತ ಹಿತಾಸಕ್ತಿಗಳನ್ನು ಮನದಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿಯ ಅಭಿಪ್ರಾಯವೇ ಸರ್ವಸಮ್ಮತವೆಂದು ಭಾವಿಸಿಕೊಳ್ಳುವುದು ನ್ಯಾಯದಾನದಲ್ಲಿ ಅಸಮತೋಲನ. ಎಷ್ಟೋ ಜನ ಪುರುಷರು ಕೂಡ ತಮ್ಮ ಕಛೇರಿಗಳ ರಾತ್ರಿ ಪಾಳಿಗಳಿಗೆ ಹೋಗುವಾಗ ದುಷ್ಕರ್ಮಿಗಳ ಕಣ್ಣಿಗೆ ಬೀಳುವ ಮಿಕಗಳಾಗುತ್ತಾರೆ.
ಕಾರುಗಳಲ್ಲಿನ ಬೆಲೆಬಾಳುವ ಸ್ಟೀರಿಯೋಗಳು ಕಳ್ಳರ ಪಾಲಾಗುತ್ತದೆ. ಬೆಲೆಬಾಳುವ ಲ್ಯಾಪ್ಟಾಪ್ಗಳು, ಕ್ಯಾಮೆರಗಳು ಕೂಡ ಕಾರಿನಿಂದ ಮಾಯಾವಾಗುತ್ತದೆ. ಒಂದು ಕ್ಷಣ ಕಾರಿಗಳ ಸನ್ಫಿಲಮ್ಗಳ ಮರೆಯಿಂದ ಅಪರಾಧಗಳು ಘಟಿಸುತ್ತವೆಯೆಂದಾದರೆ ನಾಳೆ ಇನ್ನೊಬ್ಬ ನಾಲ್ಕು ಗೋಡೆಗಳ ಮರೆಯಲ್ಲಿ ಲಂಚ ಸ್ವೀಕರಿಸುತ್ತಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಹೆಂಡತಿಯರ ಮೇಲೆ ಸೀಮೆಯೆಣ್ಣೆ ಸುರಿದು ಬೆಂಕಿಯಿಡುತ್ತಾರೆ, ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿಕೊಳ್ಳುತ್ತಾರೆ, ರಾಜಕಾರಣಿ, ಅಧಿಕಾರಿಗಳು ಹಣ ಪೇರಿಸಿಕೊಳ್ಳುತ್ತಾರೆ ಆದ್ದರಿಂದ ಮನೆಗಳಿಗೆ ಕಿಟಕಿ ಬಾಗಿಲು ಗೋಡೆಗಳೇ ಇರಬಾರದೆಂದು ಅರ್ಜಿ ಸಲ್ಲಿಸಿದರೇ ಆತನ ವಾದಕ್ಕೆ ಬೆಲೆಕೊಟ್ಟು ನಡೆದುಕೊಂಡುಬಿಟ್ಟರೇ ದೇಶದ ಪ್ರಜೆಗಳ ಖಾಸಗಿತನದ ಹಕ್ಕು ಬಟಾಬಯಲಾಗುತ್ತದೆ. ಕೋಣೆಗಳು ಪಾರದರ್ಶಕವಾಗಿರಬೇಕೆಂದು ಹೇಳುವುದು ಅಸಮಂಜಸವೋ ಹಾಗೆಯೇ ಕಾರುಗಳ ಸನ್ಫಿಲಮ್ ತೆಗೆಯಬೇಕೆಂದು ನಿರ್ದೇಶಿಸುವುದು ಅಸಮಂಜಸ.
ಏಕಪಕ್ಷೀಯವಾಗಿ ದೂಷಿಸುವ ಮೂಲಕ ಸನ್ಫಿಲಮ್ಗಳಿಂದಾಗುವ ಅನುಕೂಲತೆಗಳನ್ನು ಮರೆಯಬಾರದು. ಬಿಸಿಲಿನ ಪ್ರಭಾವನ್ನು ಕಡಿಮೆಮಾಡುವ ಮೂಲಕ ಹೆಚ್ಚು ಏಸಿ ಬಳಕೆಯನ್ನು ತಡೆಯುತ್ತದೆ. ಜೊತೆಗೆ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸಿ ಚರ್ಮರೋಗಕ್ಕೀಡಾಗುವುದು ತಪ್ಪುತ್ತದೆ. ಇತ್ತೀಚಿನ ಕೆಲವು ಅಪರಾಧ ಸುದ್ಧಿಗಳ ಕಡೆಗೆ ಕಣ್ಣಾಯಿಸಿದರೆ ಹಣ ಸಾಗಿಸುವ ವಾಹನಗಳ ಲೂಟಿ ಮಾಡುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನ್ಯಾಯಾಲಯದ ಆಜ್ಞೇಯ ಮೇರೆಗೆ ಸನ್ಫಿಲಮ್ಗಳನ್ನು ತೆಗೆದು ನಿಮ್ಮ ಕಾರ್ಗಳಲ್ಲಿ ಹಣ ಕೊಂಡೊಯ್ಯುವ ಧೈರ್ಯ ಬರುತ್ತದೆಯೇ? ಇಲ್ಲಿ ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆಯೆಳೆದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಕಾರ್ಗಳು ಇಂದು ಕೇವಲ ಸಂಚಾರ ವ್ಯವಸ್ಥೆಯ ಭಾಗವಾಗಿ ಉಳಿದಿಲ್ಲ. ಸಾವಿರಾರು ಜನರ ಸಂಚಾರಿ ಕಛೇರಿಗಳಾಗಿ, ತಮ್ಮ ಪರ್ಯಾಯ ಮನೆಗಳಾಗಿ ಬದುಕಿನ ಮುಖ್ಯ ಅಂಗಗಳಾಗಿವೆ. ತಮ್ಮ ಮುಖ್ಯವಾದ ದಾಖಲೆಗಳು, ಕಡತಗಳನ್ನು ಕಾರ್ಗಳಲ್ಲಿಟ್ಟು ಕೊಂಡಿರುತ್ತಾರೆ. ಕೇವಲ ವಿ.ಐ.ಪಿ. ಗಳಲ್ಲದೇ ಕರ್ತವ್ಯ ಮುಗಿಸಿ ಮನೆಗೆ ತೆರಳುವ ಪೊಲೀಸ್ ಅಧಿಕಾರಿಗಳ, ವ್ಯಾಪಾರಿಗಳ, ವಕೀಲರು, ಮಾಧ್ಯಮದವರ ಜೀವಕ್ಕೆ ಅಲ್ಪಮಟ್ಟಿಗೆ ರಕ್ಷಣೆಯಿರುವುದು ಟಿಂಟೆಡ್ ಗ್ಲಾಸ್ಗಳಿಂದ. ಸನ್ಫಿಲಮ್ ತಯಾರಿಸುವ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ, ಮಾರಾಟಮಾಡುವ ಫಿಲಮ್ಗಳನ್ನು ಹಾಕುವ ಸಾವಿರಾರು ದುಡಿಯುವ ಕೈಗಳನ್ನು ಕತ್ತರಿಸುವ ತೀರ್ಪು ಇದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಸನ್ಫಿಲಮ್ಗಳ ವಿಲೇವಾರಿಯ ಬಗ್ಗೆ ಯೋಚಿಸಿದರೆ ಸಾಕು ದೇಶಕ್ಕೆ ಆಗುವ ನಷ್ಟದ ಪ್ರಮಾಣದ ಕಲ್ಪನೆಯೇ ಭೀಕರ. ಕಾರ್ಗಳ ಮಾಲೀಕರು ಟಿಂಟೆಡ್ಗಳನ್ನು ತೆಗೆಸುವು ನಷ್ಟವನ್ನು ಪರಿಗಣಿಸಿದರೆ ಅವರಿಗೆ ಪೆಟ್ರೋಲ್ ಬೆಲೆ ಏರಿಕೆ ಬಾಧೆಯುಂಟುಮಾಡುವುದಿಲ್ಲ. ಸುಪ್ರೀಂಕೋರ್ಟ್ ಏಕಪಕ್ಷೀಯವಾಗಿ ಯೋಚನೆ ಮಾಡದೆ ಈ ದೇಶದ ಖಾಸಗಿ ಹಕ್ಕನ್ನು ಕಿತ್ತುಕೊಳ್ಳುವ ತೀರ್ಪಿನ ಬಗ್ಗೆ ಪುನರಾವಲೋಕನೆ ಮಾಡಬೇಕಿದೆ. ಸಮಾಜದ ಹಿತಕ್ಕಾಗಿ ಸ್ವಯಂಪ್ರೇರಿತರಾಗಿ ಕಾರ್ಗಳ ಮಾಲೀಕರು, ವಕೀಲರು ಸುಪ್ರೀಂಕೋರ್ಟ್ಗೆ ಪುನರ್ಪರಿಶೀಲನಾ ಅರ್ಜಿಸಲ್ಲಿಸುವ ಹೆಜ್ಜೆಯಿಡಬೇಕು. ಭವಿಷ್ಯದಲ್ಲಿ ಸುಪ್ರೀರಂಕೋರ್ಟ್ ಕೆಟ್ಟ ಉದಾಹರಣೆಗಳನ್ನೇ ಮುಂದಿಟ್ಟುಕೊಂಡು ದೇಶದ ನಾಗರಿಕರಿಗೆ ಹೊರೆಯಾಗುವಂತಹ ತೀರ್ಪು ನೀಡದಿರಲಿ.