Daily Archives: May 30, 2012

ಭ್ರಷ್ಟಾಚಾರಕ್ಕೆ ಭದ್ರತೆ, ಪ್ರಾಮಾಣಿಕತೆಯ ಹತ್ಯೆ

– ಬಿ.ಎಸ್. ಕುಸುಮ

ಸಮಾಜದಲ್ಲಿ ಪ್ರಾಮಾಣಿಕತೆ ಎಂಬ ಪದ ಬಹಳ ಸಂಕೀರ್ಣಗೊಳ್ಳುತ್ತಿದೆ. ಕೇವಲ ರಾಜಕಾರಣಿಗಳ ಭಾಷಣದಲ್ಲಿ, ಚಳವಳಿಗಾರರ ವೇದಿಕೆಗಳಲ್ಲಿ ಮಾತ್ರ ಪ್ರಾಮಾಣಿಕತೆ ಎಂಬ ಪದ ಸುಳಿದಾಡುತ್ತಿದೆಯೇ ಹೊರತು, ಪ್ರಾಮಾಣಿಕತೆಯ ಹತ್ಯೆ ಸಾಲು ಸಾಲಾಗಿ ನಡೆಯುತ್ತಲೇ ಇದೆ. ಇದಕ್ಕೆ ಅನೇಕ ಪ್ರಕರಣಗಳು ಸಾಕ್ಷಿಯಾಗಿವೆ. ದೇಶದ ಕೆಲವು ರಾಜ್ಯಗಳಲ್ಲಿ  ಭ್ರಷ್ಟಾಚಾರದ ವಿರುದ್ದ ನಿಲ್ಲುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳನ್ನು ಕೊಲ್ಲುವುದು ಹೊಸದೇನಲ್ಲ, ಬಿಹಾರದಲ್ಲಿ ರಸ್ತೆ ನಿರ್ಮಾಣದಲ್ಲಿನ ಕಳಪೆ ಗುಣ್ಣಮಟ್ಟದ ಕಾರ್ಯವನ್ನು ಪತ್ತೆ ಹಚ್ಚಿದ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿ ಕೃಷ್ಣಯ್ಯ ಅವರನ್ನು 1994ರಲ್ಲಿ ರಸ್ತೆಯ ಮಧ್ಯದಲ್ಲೇ ಗುಂಡು ಹೊಡೆದು ನಂತರ ಕಲ್ಲಲ್ಲಿ ಹೊಡೆದು ಹತ್ಯೆ ಮಾಡಿದ ಪ್ರಕರಣ ರಾಷ್ಟವ್ಯಾಪ್ತಿ ಪ್ರಚಾರ ಪಡೆದಿತ್ತು. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ದ ನಿಂತ ಸತ್ಯೇಂದ್ರ ದುಬೆ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಯೋಜನಾ ನಿರ್ದೇಶಕನಾಗಿದ್ದ 30ರ ವಯಸ್ಸಿನ ಯುವಕ) ಮತ್ತು ಎಸ್. ಮಂಜುನಾಥ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಮ್ಯಾನೇಜರ್ ಆಗಿದ್ದ ಕೆ.ಜಿ.ಎಫ್‌.ನ ಯುವಕ) ರ ಹತ್ಯೆಯೂ ಸಹ ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಚಲಿತದಲ್ಲಿತ್ತು. ಈಗ ಕರ್ನಾಟಕದಲ್ಲಿಯೂ ಅಂತಹುದೇ ಹತ್ಯೆಗಳು ಜರುಗಲು ಆರಂಭವಾಗಿವೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎ.ಸಿ.ಎಫ್. ಮದನ ನಾಯಕ್‌ರ ಹತ್ಯೆ ಒಂದು ಘಟನೆಯಾದರೆ,  ಅದಾದ ಕೆಲವೇ ದಿನಗಳಲ್ಲಿ ಸಹಕಾರ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎ.ಎಸ್. ಅಧಿಕಾರಿ ಮಹಾಂತೇಶ್ ಹತ್ಯೆ ಮತ್ತೊಂದು. ಇದರಿಂದ ರಾಜ್ಯದಲ್ಲಿ ಪ್ರಾಮಾಣಿಕವಾಗಿ ಮತ್ತು ಧೈರ್ಯವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಜೀವಕ್ಕೆ ಸಮಾಜದಲ್ಲಿ ಯಾವುದೇ ಭದ್ರತೆ ಇಲ್ಲ ಎಂಬುದು ಸಾಬೀತಾಗುತ್ತಿದೆ.

ಮಹಾಂತೇಶ್ ಮೂಲತಃ ಕುಣಿಗಲ್ ತಾಲೂಕಿನ ಸೀಗೆಹಳ್ಳಿಯವರು. ಅವರ ತಂದೆ ಪುಟ್ಟಣ್ಣಯ್ಯ ಕುಣಿಗಲ್ ಪುರಸಭೆಯ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದ್ದಿದರು. ಪುಟ್ಟಣ್ಣಯ್ಯ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಹಂತೇಶ್ ಒಬ್ಬರೇ ಗಂಡು ಮಗ. ಮಹಾಂತೇಶ್ ಪಡೆದ್ದು ಕಾನೂನು ಪದವಿ, ಆದರೇ ಅದದ್ದು ಕೆಎಎಸ್ ಅಧಿಕಾರಿ. ದಾವಣಗೆರೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ಬೆಂಗಳೂರಿಗೆ 2 ವರ್ಷಗಳ ಹಿಂದೆ ಹಿಂತಿರುಗಿ, ನಗರದ ಚಾಮರಾಜಪೇಟೆಯ ವಿಠ್ಠಲನಗರದಲ್ಲಿ ವಾಸವಾಗಿದ್ದರು. ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಇಲಾಖೆಯಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದ ಮಹಾಂತೇಶ್ ಮೇ 20 ರಂದು ಬೆಳಿಗ್ಗೆ 6:30 ಕ್ಕೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವನ್ನಪ್ಪಿದರು. ದುರಂತ ಎಂದರೆ ಅವರ ಸಾವಿನ ಹಿಂದಿನ ದಿನ ಅವರ 15 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಇತ್ತು, ಜೊತೆಗೆ ಒಬ್ಬ ಮಗಳ ಹನ್ನೊಂದನೇ ವರ್ಷದ ಹುಟ್ಟು ಹಬ್ಬವಿತ್ತು.

ಹಲ್ಲೆಯ ಹಿನ್ನೆಲೆ

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕನಾಗಿ ಮಹಾಂತೇಶ್ ಕೆಲಸ ನಿರ್ವಹಿಸುತ್ತಿದ್ದರು. ಎರಡೂವರೆ ವರ್ಷದಿಂದ ನಗರ ವಿಭಾಗದ ಪ್ರತಿಯೊಂದು ಹೌಸಿಂಗ್ ಸೊಸೈಟಿಯ ಕಡತಗಳ ಪರಿಶೀಲನೆಯು ಮಹಾಂತೇಶ್ ಅವರ ಮಾರ್ಗದರ್ಶದಲ್ಲಿಯೇ ನಡೆಯುತ್ತಿತ್ತು. ಲಂಚ ಎಂದರೆ ಕಿಡಿ ಕಾರುತ್ತಿದ್ದ ಮಹಾಂತೇಶ್ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ 2 ಪ್ರಮುಖ ಸೊಸೈಟಿಗಳಿಗೆ ಸಂಬಂದಪಟ್ಟ ಕಡತಗಳ ಪರಿಶೀಲನೆಯನ್ನು ನಡೆಸುತ್ತಿದ್ದರು. ಬೆಮೆಲ್, ಟಿಲಿಕಾಂ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಸಹಕಾರ ಸಂಘಗಳ ಅವ್ಯವಹಾರವನ್ನು ಬಗ್ಗೆ ತನಿಖೆ ನಡೆಸುತ್ತಿದ್ದ ಮಹಾಂತೇಶ್ ಅನೇಕ ಭೂಮಾಫಿಯ ಜನರಿಗೆ ಮತ್ತು ಅವರ ಅಕ್ರಮ ಕಾರ್ಯಸಾಧನೆಗೆ ಅಡ್ಡಿಯಾಗಿದ್ದರು. ಇದರ ಹಿನ್ನೆಲ್ಲೆಯಲ್ಲಿ ಮಹಾಂತೇಶ್ ಮೇಲೆ ಈ ಹಿಂದೆ ಕೂಡ ಹಲ್ಲೆ ನಡೆದಿತ್ತು. ಬೆದರಿಕೆಯ ಕರೆಗಳು ಸಹಾ ಬರುತ್ತಿದ್ದವು. ಆದರೆ ಮಹಾಂತೇಶ್ ಯಾವುದೇ ದೂರನ್ನು ದಾಖಲಿಸಿರಲ್ಲಿಲ್ಲ.

ಬೆಂಗಳೂರಿನ ಸುತ್ತಮುತ್ತ ಇರುವ ಭೂಮಿಯ ಬೆಲೆ ಬಂಗಾರಕ್ಕೆ ಸಮವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ಕಾಣುತ್ತಾರೆ, ಇಂತಹ ಜನರ ಕನಸನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಲವಾರು ರಿಯಲ್ ಎಸ್ಟೇಟ್ ಏಜಂಟರು ಗೃಹ ನಿರ್ಮಾಣ ಸಹಕಾರ ಸಂಘಗಳನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಚಾಲಾಕಿತನವನ್ನು ಬಳಸಿ ಜನರ ಸಂಪರ್ಕ ಸಂಪಾದಿಸಿ ಕೋಟಿಗಟ್ಟಲೆ ವ್ಯವಹಾರ ನಡೆಸುವ ದಂಧೆ ಇದಾಗಿದೆ. ಸಹಕಾರ ಸಂಘಗಳನ್ನು ರಚಿಸಿ ಕಂತುಗಳಲ್ಲಿ ಹಣ ಪಡೆದು ನಿವೇಶನ ನೀಡುವುದು ಈ ಸಹಕಾರ ಸಂಘಗಳ ಕೆಲಸ. ಆದರೆ ಕೆಲವು ಸಂಘಗಳು ಸರಿಯಾದ ಸಮಯಕ್ಕೆ ನಿವೇಶನ ನೀಡದೆ ಜನರ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಮತ್ತು ಸುಮಾರು 253 ಸಹಕಾರ ಸಂಘಗಳಲ್ಲಿ ಈ ರೀತಿಯ ಅಕ್ರಮ ಎಸಗಿರುವುದು 2010 ಮತ್ತು 2011 ನೇ ಸಾಲಿನ ಲೆಕ್ಕ ಪರಿಶೋಧನೆಯ ವಾರ್ಷಿಕ ವರದಿಯಲ್ಲಿ ಬಯಲಾಗಿತ್ತು. ಈ ಲೆಕ್ಕ ಪರಿಶೋಧನೆಯ ಉಪನಿರ್ದೇಕರಾಗಿದ್ದ ಮಹಾಂತೇಶ್ ಇಂತಹ ಭೂಅಕ್ರಮಗಳಲ್ಲಿ ತೊಡಗಿದ್ದ ಕೆಲವರ ವಿರುದ್ದ ತನಿಖೆಗೆ ಶಿಫಾರಸ್ಸು ಮಾಡಲು ಮುಂದಾಗಿದ್ದರು.

ಜೀವನ್ಮರಣ ಹೋರಾಟ ಅಂತ್ಯ

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕನಾಗಿ ಮಹಾಂತೇಶ್ ಅವ್ಯವಹಾರಗಳನ್ನು ಬಯಲಿಗೆ ತರುವ ಮೂಲಕ ದುಷ್ಕರ್ಮಿಗಳ ಕೋಪಕ್ಕೆ ಗುರಿಯಾಗಿದ್ದರು. ಎಮ್.ಎಸ್. ಬಿಲ್ಡಿಂಗ್‌ನಲ್ಲಿರುವ ಕಛೇರಿಯಿಂದ ಮೇ 15 ರಂದು ಸಂಜೆ 4 ಗಂಟೆಗೆ ಅವರು ಸಹಕಾರ ನಗರ ಕೋ-ಆಪರೇಟಿವ್ ಸೊಸೈಟಿಗೆ ಲೆಕ್ಕ ಪರಿಶೋಧನೆಗೆ ತೆರಳಿದ್ದರು. ಅಲ್ಲಿ ಆಡಿಟಿಂಗ್ ಮುಗಿಸಿ ರಾತ್ರಿ 8.30 ಕ್ಕೆ ರ ಸಮಯಕ್ಕೆ ಚಾಮರಾಜಪೇಟೆಯಲ್ಲಿರುವ ತಮ್ಮ ಮನೆಗೆ ವಾಪಸಾಗುತ್ತಿದ್ದಾಗ ಅವರ ಕಾರನ್ನು ವಿಧಾನಸೌಧಕ್ಕೆ ಕೂಗಳತೆಯ ದೂರದಲ್ಲಿರುವ ಏಟ್ರಿಯಾ ಹೋಟೆಲ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್‌ರನ್ನು ಕಂಡ ದಾರಿಹೋಕರು ವಿಧಾನಸೌಧ ಪೊಲೀಸ್ ಠಾಣೆಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಾಂತೇಶರನ್ನು ಮಲ್ಲಿಗೆ ಆಸ್ಪತ್ರೆಗೆ ಸೇರಿಸಿದರು. ಎಡ ಬದಿಯ ಕಣ್ಣಿನ ರೆಪ್ಪೆ ಸಮೀಪ ರಾಡಿನ ಗಾಯ, ಎಡ ಕಣ್ಣು ಮತ್ತು ಮೂಗಿನ ಮಧ್ಯದ ಭಾಗದಲ್ಲಿ ಹಾಗೂ ಬಲ ಭಾಗದ ಹಣೆ ಮೇಲೆ, ತಲೆ ಹಿಂಭಾಗದಲ್ಲಿ 2.5 ಇಂಚು ಗಾಯ, ತಲೆ ಮಧ್ಯದಲ್ಲಿ 1.5 ಇಂಚು ಗಾಯ ಹಾಗೂ ಮಂಡಿಗಳ ಮೇಲೆಲ್ಲ ಗಾಯಗಲಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ನಾಲ್ಕು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ 6:30 ಕ್ಕೆ ಮಹಾಂತೇಶ್ ಸಾವನ್ನಪ್ಪಿದರು,

ಸರ್ಕಾರದ ಉತ್ತರ, ಶೀಘ್ರ ಮಾಹಿತಿ ಬಯಸಿದ ಕೋರ್ಟ್

ಮಹಾಂತೇಶರ ಮೇಲೆ ಹಲ್ಲೆಯಾಗಿ ಇಂದಿಗೆ 15 ದಿನವಾಗಿದೆ. ಅವರು ಸತ್ತು ಹತ್ತು ದಿನ ಮೀರುತ್ತ ಬಂದಿದೆ. ಆದರೂ ಇಲ್ಲಿಯವರೆಗೆ ಅವರ ಹತ್ಯೆಯ ಹಿಂದಿನ ದುಷ್ಕರ್ಮಿಗಳನ್ನು ಬಂಧಿಸಲಾಗಲಿ. ಅವರ ವಿವರಗಳನ್ನಾಗಲಿ ಶೇಖರಿಸಲು ನಗರದ ಪೋಲಿಸ್ ಇಲಾಖೇಯಿಂದ ಸಾಧ್ಯವಾಗಿಲ್ಲ. ಕೊಲೆಗೆ ಸಂಬಂಧ ಪಟ್ಟಂತೆ ತನಿಖೆಯನ್ನು ತೀವ್ರಗೊಳಿಸಿರುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಹೇಳಿ ವಾರದ ಮೇಲಾಯಿತು. ಪ್ರಕರಣದ ತನಿಖೆಗೆ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆಯನ್ನು ಕೌಟುಂಬಿಕ ಹಿನ್ನೆಲೆ, ವೃತ್ತಿ ವೈಷಮ್ಯ ಅಥವಾ ವೈಯಕ್ತಿಕ ಕಾರಣ ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಮಹಾಂತೇಶ್ ಕೊಲೆ ಪ್ರಕರಣ ಸಂಬಂದ ಪಟ್ಟಂತೆ ಪೊಲೀಸರು 17 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಎಂದು ವಾರದಿಂದೆಯೇ ಸುದ್ದಿಯಾಗಿತ್ತು.  ಮತ್ತು 6 ಜನರನ್ನು ಪೋಲಿಸ್ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಅಧಿಕಾರಿಗಳೇ ಹೇಳಿದ್ದರು. ಆದರೂ ಸಹಾ ಈ ವಿಚಾರದಲ್ಲಿ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಇದನ್ನೆಲ್ಲ ಮತ್ತು ಮಹಾಂತೇಶರ ಪ್ರಾಮಾಣಿಕ ಸೇವೆಯ ಹಿನ್ನೆಲೆಯನ್ನು ಗಮನಿಸಿ ರಾಜ್ಯದ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನರವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ. ಜೂನ್ 20ರ ಒಳಗೆ ತನಿಖೆ ಮಾಹಿತಿಯನ್ನು ನೀಡಬೇಕು ಎಂದು ಪೀಠ ನಿರ್ದೇಶಿಸಿ ವಿಚಾರಣಿಯನ್ನು ಮೇ 21 ಕ್ಕೆ ಮುಂದೂಡಿದೆ.

ಇತ್ತೀಚಿನ ಸುದ್ದಿಗಳ ಪ್ರಕಾರ ಪೊಲೀಸರು ಮಹಾಂತೇಶರ ಕುಟುಂಬದವರಿಂದ ಮತ್ತು ಅವರ ಸಹೋದ್ಯೋಗಿಗಳಿಂದ ಮಾಹಿತಿ ಪಡೆಯುವ ಕಾರ್ಯ ಮುಗಿಸಿದ್ದು ತನಿಖೆ ಗತಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ ಇನ್ನೂ ಹೆಚ್ಚಿನ ವಿಷಾದ ಏನೆಂದರೆ ಒಬ್ಬ ಸರ್ಕಾರಿ ನೌಕರ ಹಲ್ಲೆಗೀಡಾಗಿ ಸತ್ತಿದ್ದರೂ ಈ ವಿಚಾರದಲ್ಲಿ ಪೊಲೀಸರನ್ನೂ ಒಳಗೊಂಡಂತೆ ಇತರೆ ಸರ್ಕಾರಿ ನೌಕರರ ಎದ್ದುಕಾಣಿಸುತ್ತಿರುವ ದಿವ್ಯನಿರ್ಲಕ್ಷ್ಯ. ತನಿಖೆ ತೀವ್ರಗತಿಯಲ್ಲಿ ಸಾಗಿ ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗಲಿ ಎಂಬ ಯಾವುದೇ ಒತ್ತಡ ಈ ಸರ್ಕಾರಿ ನೌಕರರಿಂದ ಮತ್ತು ಅವರ ಸಂಘಗಳಿಂದ ಬೀಳುತ್ತಿರುವ ಹಾಗೆ ಕಾಣಿಸುತ್ತಿಲ್ಲ.

“ಕರ್ನಾಟಕ ರತ್ನ” ಹಾಗೂ “ಬಸವಶ್ರೀ” ಪ್ರಶಸ್ತಿ ಎಸ್.ಆರ್. ಹಿರೇಮಠರಿಗೆ ಸಲ್ಲಬೇಕು

– ಆನಂದ ಪ್ರಸಾದ್

ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಅದಿರಿನ ರಕ್ಷಣೆ ಹಾಗೂ ಗಣಿಗಾರಿಕೆಯ ಹಿಂದಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಕಾನೂನು ಹೋರಾಟದಲ್ಲಿ ತೊಡಗಿ ಕರ್ನಾಟಕಕ್ಕೆ ನಿಸ್ವಾರ್ಥವಾಗಿ ಸಲ್ಲಿಸಿರುವ ಸೇವೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. ಇಂಥವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಘನತೆ ಹೆಚ್ಚಲಿದೆ. ಅಮೇರಿಕಾದಲ್ಲಿ ಕೈತುಂಬಾ ಸಂಬಳ ತರುತ್ತಿದ್ದ ಹುದ್ದೆಯನ್ನು ತೊರೆದು ರಾಜ್ಯಕ್ಕೆ ವಾಪಾಸಾಗಿ ಓರ್ವ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತ ನಾಡಿನ ಗಣಿ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲದ ಉಳಿವಿಗಾಗಿ ಕಾನೂನು ಹೋರಾಟದಲ್ಲಿ ತೊಡಗಿರುವ ಹಿರೇಮಠರು ನಮಗೆ ಒಂದು ಆದರ್ಶವಾಗಬೇಕಾಗಿದೆ. ಬಸವಣ್ಣನವರ ಆದರ್ಶಗಳ ಸಾಕಾರ ರೂಪದಂತಿರುವ ಹಿರೇಮಠರು ಬಸವಶ್ರೀ ಪ್ರಶಸ್ತಿಗೆ ಕೂಡ ಅರ್ಹ ಸೂಕ್ತ ವ್ಯಕ್ತಿಯೆನ್ನಲು ಅಡ್ಡಿಯಿಲ್ಲ.

ಇಂದು ಭಾರತದಲ್ಲಿ ಭ್ರಷ್ಟಾಚಾರ, ಅನಾಚಾರ, ಅದಕ್ಷತೆ, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಲೋಪಗಳು, ನ್ಯಾಯ ನಿರ್ಣಯದಲ್ಲಿ ನಡೆಯುತ್ತಿರುವ ವಿಳಂಬ, ಚುನಾವಣಾ ವ್ಯವಸ್ಥೆಯಲ್ಲಿರುವ  ಲೋಪಗಳು ಮೊದಲಾದವುಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿರಲು ಪ್ರಧಾನ ಕಾರಣ ದೇಶದಲ್ಲಿ ನಾಯಕರ ಕೊರತೆಯಿರುವುದೇ ಆಗಿದೆ. ದೇಶದಲ್ಲಿ ಸಾರ್ವಜನಿಕ ವಿಚಾರಗಳ ಬಗ್ಗೆ ನಿಸ್ವಾರ್ಥವಾಗಿ ಕೆಲಸ ಮಾಡುವವರ ಕೊರತೆ ಇದೆ.  ಸಾರ್ವಜನಿಕ ಆಸಕ್ತಿಯ ವಿಚಾರಗಳನ್ನು ಎತ್ತಿಕೊಂಡು ಜನಜಾಗೃತಿ ಮಾಡುವುದು ಇಂದು ಬಹಳ ಕಠಿಣವಾದ ಕೆಲಸವಾಗಿದೆ. ಏಕೆಂದರೆ ಇಂದು  ಬಹುತೇಕ ಜನರಿಗೆ ರಾಷ್ಟ್ರದ ಅಥವಾ ರಾಜ್ಯದ ಆಗುಹೋಗುಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವವೇ  ಇದೆ. ಅದೂ ಅಲ್ಲದೆ ಜನಸಾಮಾನ್ಯರಿಗೆ ತಮ್ಮ ಕುಟುಂಬ ಪಾಲನೆ, ಉದ್ಯೋಗ ಮೊದಲಾದ ಜವಾಬ್ದಾರಿಗಳೂ ಇರುವ ಕಾರಣ ಸಾರ್ವಜನಿಕ ಸಮಸ್ಯೆಗಳ ಬಗೆಗಾಗಲಿ, ದೇಶದ, ರಾಜ್ಯದ  ಸಮಸ್ಯೆಗಳ ಬಗೆಗಾಗಲಿ ಹೋರಾಟ ರೂಪಿಸುವುದಾಗಲಿ ಅಥವಾ ಅದರಲ್ಲಿ ಭಾಗವಹಿಸುವುದಾಗಲಿ ಅಸಾಧ್ಯ. ಹೀಗಾಗಿ ಒಂದು ಹಂತದವರೆಗೆ ತಮ್ಮ ಉದ್ಯೋಗ ಹಾಗೂ ಕುಟುಂಬದ ಜವಾಬ್ದಾರಿಯನ್ನು  ನಿಭಾಯಿಸಿ ನಿವೃತ್ತಿ ಆಗಿರುವವರು, ಅಂದರೆ ತಮ್ಮ ಮಕ್ಕಳ ಕಲಿಕೆಯನ್ನು ಪೂರೈಸಿ ಅವರು ಉದ್ಯೋಗ ಪಡೆದ ನಂತರ ದೇಶದ, ರಾಜ್ಯದ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ  ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದೆ ಬರಬೇಕಾದ ಅಗತ್ಯ ಇದೆ. ಸುಮಾರು ಅರುವತ್ತರ ವಯಸ್ಸಿನ ಆಸುಪಾಸಿನಲ್ಲಿ ವ್ಯಕ್ತಿಯೊಬ್ಬನ ಮಕ್ಕಳ ಕಲಿಕೆ ಮುಗಿದು ಅವರು ಉದ್ಯೋಗ ಪಡೆದು, ಅವರ ಮದುವೆ ಇತ್ಯಾದಿಗಳು ಮುಗಿದು ವ್ಯಕ್ತಿಯೊಬ್ಬನ ಪ್ರಮುಖ ಕೌಟುಂಬಿಕ ಜವಾಬ್ದಾರಿ ಮುಗಿದಿರುತ್ತದೆ. ಹೀಗಾಗಿ ದೇಶದಲ್ಲಿ ನಿವೃತ್ತರು ಅಥವಾ ಅರುವತ್ತರ ನಂತರದ ವಯಸ್ಸಿನವರು ಸಾರ್ವಜನಿಕ ಹಿತಾಸಕ್ತಿಯ ಹೋರಾಟದಲ್ಲಿ ತೊಡಗಲು ಮುಂದೆ ಬಂದರೆ ದೇಶದಲ್ಲಿ  ಬದಲಾವಣೆಯನ್ನು, ಸುಧಾರಣೆಗಳನ್ನು ತರಲು ಸಾಧ್ಯ.

ಸಾರ್ವಜನಿಕ ಜೀವನದ ಸಮಸ್ಯೆಗಳು ಅಥವಾ ದೇಶದ ಸಮಸ್ಯೆಗಳಾದ ಭ್ರಷ್ಟಾಚಾರ, ಸ್ವಜನ  ಪಕ್ಷಪಾತ, ಜಾತೀಯತೆ, ನ್ಯಾಯಾಂಗದ ನಿಧಾನ ಗತಿ, ಚುನಾವಣಾ ಸುಧಾರಣೆಗಳ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಹೋರಾಡುವವರು ಪಕ್ಷಾತೀತ ನಿಲುವನ್ನು ಹೊಂದಿರಬೇಕಾಗುತ್ತದೆ. ಒಂದು ಪಕ್ಷದ ಭ್ರಷ್ಟಾಚಾರವನ್ನು ಟೀಕಿಸಿ ಇನ್ನೊಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಮೌನ ವಹಿಸುವುದು ಜನಬೆಂಬಲ ಕಳೆದುಕೊಳ್ಳಲು ಕಾರಣವಾಗುತ್ತದೆ.  ಇದಕ್ಕೆ ಸ್ಪಷ್ಟ ಉದಾಹರಣೆ ಅಣ್ಣಾ ಹಜಾರೆ ಹಾಗೂ ಯೋಗ ಗುರು ರಾಮದೇವ್ ಅವರ ಹೋರಾಟಗಳು. ಇಂಥ ಸ್ಥಗಿತ ಸ್ಥಿತಿಯಲ್ಲಿ ಎಸ್.ಆರ್. ಹಿರೇಮಠರಂಥ ನಿಷ್ಪಕ್ಷಪಾತ ಹಾಗೂ ಪ್ರಗತಿಶೀಲ ಮನಸಿನ ವ್ಯಕ್ತಿಗಳು ದೇಶದಲ್ಲಿ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಂಥ ವ್ಯಕ್ತಿಗಳನ್ನು ಮಾಧ್ಯಮಗಳು ಮುಂಚೂಣಿಗೆ ತಂದು ಹೆಚ್ಚಿನ ಪ್ರಚಾರ ನೀಡಬೇಕಾದ ಅಗತ್ಯ ಇದೆ. ಅನಿವಾಸಿ ಭಾರತೀಯರು ಕೂಡ ಇಂಥ ಹೋರಾಟಗಳಿಗೆ ನೈತಿಕ ಹಾಗೂ ಹಣಕಾಸಿನ ಬೆಂಬಲವನ್ನು ನೀಡಲು ಮುಂದೆ ಬರಬೇಕಾದ ಅಗತ್ಯ ಇದೆ. ದೇಶದ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಮಾನಮನಸ್ಕ, ಹೆಚ್ಚಿನ ಕೌಟುಂಬಿಕ ಜವಾಬ್ದಾರಿ ಇಲ್ಲದ ಮತ್ತು ಆರ್ಥಿಕವಾಗಿ ದೃಢ  ಸ್ಥಿತಿಯಲ್ಲಿ ಇರುವ ನಿವೃತ್ತರು ಹಾಗೂ ಇನ್ನಿತರರು ಹೋರಾಟ ಸಮಿತಿ ಹಾಗೂ ಸಂಘಟನೆಗಳನ್ನು ಮಾಡಿಕೊಂಡು ದೇಶವ್ಯಾಪಿ ಹೋರಾಟವನ್ನು ಕಟ್ಟಬೇಕಾದ ಅವಶ್ಯಕತೆ ಇದೆ.  ಬಾಲ್ಯ, ಯೌವನ, ಗೃಹಸ್ಥ ಅವಸ್ಥೆಗಳನ್ನು ಪೂರೈಸಿರುವ ನಿವೃತ್ತರು ಹಾಗೂ ಅರುವತ್ತರ ವಯಸ್ಸನ್ನು ಮೀರಿದವರು ವಾನಪ್ರಸ್ಥ  ಜೀವನಕ್ಕೆ ಅಂದರೆ ದೇಶದ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಜೀವನಕ್ಕೆ  ತಮ್ಮನ್ನು ತೊಡಗಿಸಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಅಗತ್ಯವಿದೆ. ದೇಶದಲ್ಲಿ ಉದ್ಭವಿಸಿರುವ ನಾಯಕತ್ವದ ಕೊರತೆಯನ್ನು ನೀಗಿಸಲು ಇಂಥ ವಾನಪ್ರಸ್ಥ ಅವಸ್ಥೆಯ ಹಿರಿಯ ಜನಾಂಗದ ಅವಶ್ಯಕತೆ ಇದೆ.

ಯುವಕರು ಕಲಿಕೆಯ ಹಂತಗಳಲ್ಲಿ ಅಥವಾ ಉದ್ಯೋಗದ ಪ್ರಾರಂಭಾವಸ್ಥೆಯಲ್ಲಿ  ಇರುವುದರಿಂದ ಅವರು ಇಂಥ ಹೋರಾಟಗಳಲ್ಲಿ ತೊಡಗುವುದು ಅವರ ಕಲಿಕೆಯ ಮೇಲೆ ಅಥವಾ ಉದ್ಯೋಗದ ಮೇಲೆ ಪರಿಣಾಮ  ಬೀರುತ್ತದೆ.  ಹೀಗಾಗಿ ಅವರು ಇಂಥ ಹೋರಾಟಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಲಾರದು. ಆದರೆ ಅವರು ಇಂಥ ಹೋರಾಟಗಳಿಗೆ ನೈತಿಕ ಬೆಂಬಲ ನೀಡಬಹುದು. ಭ್ರಷ್ಟಾಚಾರವು ನಮ್ಮ ದೇಶದಲ್ಲಿ ಮಿತಿಮೀರಿ ಬೆಳೆಯಲು ಕಾರಣ ಭ್ರಷ್ಟರಿಗೆ ಯಾವುದೇ ಶಿಕ್ಷೆ ಆಗದಿರುವುದು ಮತ್ತು ಅವರು ಅಕ್ರಮವಾಗಿ ಕೂಡಿಹಾಕಿದ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗದಿರುವುದೇ ಆಗಿದೆ. ಭ್ರಷ್ಟರಿಗೆ ಶೀಘ್ರವಾಗಿ ಶಿಕ್ಷೆಯಾಗಿ ಅವರು ಕಠಿಣ ಜೈಲು ಶಿಕ್ಷೆ ಅನುಭವಿಸುವಂತಾಗಿ ಅವರು ಕೂಡಿಹಾಕಿದ ಎಲ್ಲ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಂಡು ದೇಶದ ಅಭಿವೃದ್ಧಿಗೆ ಬಳಸುವಂತಾದರೆ ಮುಂದೆ ಭ್ರಷ್ಟಾಚಾರ ಮಾಡಲು ರಾಜಕಾರಣಿಗಳು ಹಾಗೂ ಉದ್ಯಮಿಗಳು ಹಿಂಜರಿಯುವ ಪರಿಸ್ಥಿತಿ ನಿರ್ಮಾಣ ಆಗಿಯೇ ಆಗುತ್ತದೆ. ಅದರಲ್ಲಿ ಸಂದೇಹವಿಲ್ಲ.