ಭ್ರಷ್ಟಾಚಾರಕ್ಕೆ ಭದ್ರತೆ, ಪ್ರಾಮಾಣಿಕತೆಯ ಹತ್ಯೆ

– ಬಿ.ಎಸ್. ಕುಸುಮ

ಸಮಾಜದಲ್ಲಿ ಪ್ರಾಮಾಣಿಕತೆ ಎಂಬ ಪದ ಬಹಳ ಸಂಕೀರ್ಣಗೊಳ್ಳುತ್ತಿದೆ. ಕೇವಲ ರಾಜಕಾರಣಿಗಳ ಭಾಷಣದಲ್ಲಿ, ಚಳವಳಿಗಾರರ ವೇದಿಕೆಗಳಲ್ಲಿ ಮಾತ್ರ ಪ್ರಾಮಾಣಿಕತೆ ಎಂಬ ಪದ ಸುಳಿದಾಡುತ್ತಿದೆಯೇ ಹೊರತು, ಪ್ರಾಮಾಣಿಕತೆಯ ಹತ್ಯೆ ಸಾಲು ಸಾಲಾಗಿ ನಡೆಯುತ್ತಲೇ ಇದೆ. ಇದಕ್ಕೆ ಅನೇಕ ಪ್ರಕರಣಗಳು ಸಾಕ್ಷಿಯಾಗಿವೆ. ದೇಶದ ಕೆಲವು ರಾಜ್ಯಗಳಲ್ಲಿ  ಭ್ರಷ್ಟಾಚಾರದ ವಿರುದ್ದ ನಿಲ್ಲುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳನ್ನು ಕೊಲ್ಲುವುದು ಹೊಸದೇನಲ್ಲ, ಬಿಹಾರದಲ್ಲಿ ರಸ್ತೆ ನಿರ್ಮಾಣದಲ್ಲಿನ ಕಳಪೆ ಗುಣ್ಣಮಟ್ಟದ ಕಾರ್ಯವನ್ನು ಪತ್ತೆ ಹಚ್ಚಿದ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿ ಕೃಷ್ಣಯ್ಯ ಅವರನ್ನು 1994ರಲ್ಲಿ ರಸ್ತೆಯ ಮಧ್ಯದಲ್ಲೇ ಗುಂಡು ಹೊಡೆದು ನಂತರ ಕಲ್ಲಲ್ಲಿ ಹೊಡೆದು ಹತ್ಯೆ ಮಾಡಿದ ಪ್ರಕರಣ ರಾಷ್ಟವ್ಯಾಪ್ತಿ ಪ್ರಚಾರ ಪಡೆದಿತ್ತು. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ದ ನಿಂತ ಸತ್ಯೇಂದ್ರ ದುಬೆ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಯೋಜನಾ ನಿರ್ದೇಶಕನಾಗಿದ್ದ 30ರ ವಯಸ್ಸಿನ ಯುವಕ) ಮತ್ತು ಎಸ್. ಮಂಜುನಾಥ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಮ್ಯಾನೇಜರ್ ಆಗಿದ್ದ ಕೆ.ಜಿ.ಎಫ್‌.ನ ಯುವಕ) ರ ಹತ್ಯೆಯೂ ಸಹ ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಚಲಿತದಲ್ಲಿತ್ತು. ಈಗ ಕರ್ನಾಟಕದಲ್ಲಿಯೂ ಅಂತಹುದೇ ಹತ್ಯೆಗಳು ಜರುಗಲು ಆರಂಭವಾಗಿವೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎ.ಸಿ.ಎಫ್. ಮದನ ನಾಯಕ್‌ರ ಹತ್ಯೆ ಒಂದು ಘಟನೆಯಾದರೆ,  ಅದಾದ ಕೆಲವೇ ದಿನಗಳಲ್ಲಿ ಸಹಕಾರ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎ.ಎಸ್. ಅಧಿಕಾರಿ ಮಹಾಂತೇಶ್ ಹತ್ಯೆ ಮತ್ತೊಂದು. ಇದರಿಂದ ರಾಜ್ಯದಲ್ಲಿ ಪ್ರಾಮಾಣಿಕವಾಗಿ ಮತ್ತು ಧೈರ್ಯವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಜೀವಕ್ಕೆ ಸಮಾಜದಲ್ಲಿ ಯಾವುದೇ ಭದ್ರತೆ ಇಲ್ಲ ಎಂಬುದು ಸಾಬೀತಾಗುತ್ತಿದೆ.

ಮಹಾಂತೇಶ್ ಮೂಲತಃ ಕುಣಿಗಲ್ ತಾಲೂಕಿನ ಸೀಗೆಹಳ್ಳಿಯವರು. ಅವರ ತಂದೆ ಪುಟ್ಟಣ್ಣಯ್ಯ ಕುಣಿಗಲ್ ಪುರಸಭೆಯ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದ್ದಿದರು. ಪುಟ್ಟಣ್ಣಯ್ಯ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಹಂತೇಶ್ ಒಬ್ಬರೇ ಗಂಡು ಮಗ. ಮಹಾಂತೇಶ್ ಪಡೆದ್ದು ಕಾನೂನು ಪದವಿ, ಆದರೇ ಅದದ್ದು ಕೆಎಎಸ್ ಅಧಿಕಾರಿ. ದಾವಣಗೆರೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ಬೆಂಗಳೂರಿಗೆ 2 ವರ್ಷಗಳ ಹಿಂದೆ ಹಿಂತಿರುಗಿ, ನಗರದ ಚಾಮರಾಜಪೇಟೆಯ ವಿಠ್ಠಲನಗರದಲ್ಲಿ ವಾಸವಾಗಿದ್ದರು. ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಇಲಾಖೆಯಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದ ಮಹಾಂತೇಶ್ ಮೇ 20 ರಂದು ಬೆಳಿಗ್ಗೆ 6:30 ಕ್ಕೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವನ್ನಪ್ಪಿದರು. ದುರಂತ ಎಂದರೆ ಅವರ ಸಾವಿನ ಹಿಂದಿನ ದಿನ ಅವರ 15 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಇತ್ತು, ಜೊತೆಗೆ ಒಬ್ಬ ಮಗಳ ಹನ್ನೊಂದನೇ ವರ್ಷದ ಹುಟ್ಟು ಹಬ್ಬವಿತ್ತು.

ಹಲ್ಲೆಯ ಹಿನ್ನೆಲೆ

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕನಾಗಿ ಮಹಾಂತೇಶ್ ಕೆಲಸ ನಿರ್ವಹಿಸುತ್ತಿದ್ದರು. ಎರಡೂವರೆ ವರ್ಷದಿಂದ ನಗರ ವಿಭಾಗದ ಪ್ರತಿಯೊಂದು ಹೌಸಿಂಗ್ ಸೊಸೈಟಿಯ ಕಡತಗಳ ಪರಿಶೀಲನೆಯು ಮಹಾಂತೇಶ್ ಅವರ ಮಾರ್ಗದರ್ಶದಲ್ಲಿಯೇ ನಡೆಯುತ್ತಿತ್ತು. ಲಂಚ ಎಂದರೆ ಕಿಡಿ ಕಾರುತ್ತಿದ್ದ ಮಹಾಂತೇಶ್ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ 2 ಪ್ರಮುಖ ಸೊಸೈಟಿಗಳಿಗೆ ಸಂಬಂದಪಟ್ಟ ಕಡತಗಳ ಪರಿಶೀಲನೆಯನ್ನು ನಡೆಸುತ್ತಿದ್ದರು. ಬೆಮೆಲ್, ಟಿಲಿಕಾಂ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಸಹಕಾರ ಸಂಘಗಳ ಅವ್ಯವಹಾರವನ್ನು ಬಗ್ಗೆ ತನಿಖೆ ನಡೆಸುತ್ತಿದ್ದ ಮಹಾಂತೇಶ್ ಅನೇಕ ಭೂಮಾಫಿಯ ಜನರಿಗೆ ಮತ್ತು ಅವರ ಅಕ್ರಮ ಕಾರ್ಯಸಾಧನೆಗೆ ಅಡ್ಡಿಯಾಗಿದ್ದರು. ಇದರ ಹಿನ್ನೆಲ್ಲೆಯಲ್ಲಿ ಮಹಾಂತೇಶ್ ಮೇಲೆ ಈ ಹಿಂದೆ ಕೂಡ ಹಲ್ಲೆ ನಡೆದಿತ್ತು. ಬೆದರಿಕೆಯ ಕರೆಗಳು ಸಹಾ ಬರುತ್ತಿದ್ದವು. ಆದರೆ ಮಹಾಂತೇಶ್ ಯಾವುದೇ ದೂರನ್ನು ದಾಖಲಿಸಿರಲ್ಲಿಲ್ಲ.

ಬೆಂಗಳೂರಿನ ಸುತ್ತಮುತ್ತ ಇರುವ ಭೂಮಿಯ ಬೆಲೆ ಬಂಗಾರಕ್ಕೆ ಸಮವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ಕಾಣುತ್ತಾರೆ, ಇಂತಹ ಜನರ ಕನಸನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಲವಾರು ರಿಯಲ್ ಎಸ್ಟೇಟ್ ಏಜಂಟರು ಗೃಹ ನಿರ್ಮಾಣ ಸಹಕಾರ ಸಂಘಗಳನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಚಾಲಾಕಿತನವನ್ನು ಬಳಸಿ ಜನರ ಸಂಪರ್ಕ ಸಂಪಾದಿಸಿ ಕೋಟಿಗಟ್ಟಲೆ ವ್ಯವಹಾರ ನಡೆಸುವ ದಂಧೆ ಇದಾಗಿದೆ. ಸಹಕಾರ ಸಂಘಗಳನ್ನು ರಚಿಸಿ ಕಂತುಗಳಲ್ಲಿ ಹಣ ಪಡೆದು ನಿವೇಶನ ನೀಡುವುದು ಈ ಸಹಕಾರ ಸಂಘಗಳ ಕೆಲಸ. ಆದರೆ ಕೆಲವು ಸಂಘಗಳು ಸರಿಯಾದ ಸಮಯಕ್ಕೆ ನಿವೇಶನ ನೀಡದೆ ಜನರ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಮತ್ತು ಸುಮಾರು 253 ಸಹಕಾರ ಸಂಘಗಳಲ್ಲಿ ಈ ರೀತಿಯ ಅಕ್ರಮ ಎಸಗಿರುವುದು 2010 ಮತ್ತು 2011 ನೇ ಸಾಲಿನ ಲೆಕ್ಕ ಪರಿಶೋಧನೆಯ ವಾರ್ಷಿಕ ವರದಿಯಲ್ಲಿ ಬಯಲಾಗಿತ್ತು. ಈ ಲೆಕ್ಕ ಪರಿಶೋಧನೆಯ ಉಪನಿರ್ದೇಕರಾಗಿದ್ದ ಮಹಾಂತೇಶ್ ಇಂತಹ ಭೂಅಕ್ರಮಗಳಲ್ಲಿ ತೊಡಗಿದ್ದ ಕೆಲವರ ವಿರುದ್ದ ತನಿಖೆಗೆ ಶಿಫಾರಸ್ಸು ಮಾಡಲು ಮುಂದಾಗಿದ್ದರು.

ಜೀವನ್ಮರಣ ಹೋರಾಟ ಅಂತ್ಯ

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕನಾಗಿ ಮಹಾಂತೇಶ್ ಅವ್ಯವಹಾರಗಳನ್ನು ಬಯಲಿಗೆ ತರುವ ಮೂಲಕ ದುಷ್ಕರ್ಮಿಗಳ ಕೋಪಕ್ಕೆ ಗುರಿಯಾಗಿದ್ದರು. ಎಮ್.ಎಸ್. ಬಿಲ್ಡಿಂಗ್‌ನಲ್ಲಿರುವ ಕಛೇರಿಯಿಂದ ಮೇ 15 ರಂದು ಸಂಜೆ 4 ಗಂಟೆಗೆ ಅವರು ಸಹಕಾರ ನಗರ ಕೋ-ಆಪರೇಟಿವ್ ಸೊಸೈಟಿಗೆ ಲೆಕ್ಕ ಪರಿಶೋಧನೆಗೆ ತೆರಳಿದ್ದರು. ಅಲ್ಲಿ ಆಡಿಟಿಂಗ್ ಮುಗಿಸಿ ರಾತ್ರಿ 8.30 ಕ್ಕೆ ರ ಸಮಯಕ್ಕೆ ಚಾಮರಾಜಪೇಟೆಯಲ್ಲಿರುವ ತಮ್ಮ ಮನೆಗೆ ವಾಪಸಾಗುತ್ತಿದ್ದಾಗ ಅವರ ಕಾರನ್ನು ವಿಧಾನಸೌಧಕ್ಕೆ ಕೂಗಳತೆಯ ದೂರದಲ್ಲಿರುವ ಏಟ್ರಿಯಾ ಹೋಟೆಲ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್‌ರನ್ನು ಕಂಡ ದಾರಿಹೋಕರು ವಿಧಾನಸೌಧ ಪೊಲೀಸ್ ಠಾಣೆಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಾಂತೇಶರನ್ನು ಮಲ್ಲಿಗೆ ಆಸ್ಪತ್ರೆಗೆ ಸೇರಿಸಿದರು. ಎಡ ಬದಿಯ ಕಣ್ಣಿನ ರೆಪ್ಪೆ ಸಮೀಪ ರಾಡಿನ ಗಾಯ, ಎಡ ಕಣ್ಣು ಮತ್ತು ಮೂಗಿನ ಮಧ್ಯದ ಭಾಗದಲ್ಲಿ ಹಾಗೂ ಬಲ ಭಾಗದ ಹಣೆ ಮೇಲೆ, ತಲೆ ಹಿಂಭಾಗದಲ್ಲಿ 2.5 ಇಂಚು ಗಾಯ, ತಲೆ ಮಧ್ಯದಲ್ಲಿ 1.5 ಇಂಚು ಗಾಯ ಹಾಗೂ ಮಂಡಿಗಳ ಮೇಲೆಲ್ಲ ಗಾಯಗಲಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ನಾಲ್ಕು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ 6:30 ಕ್ಕೆ ಮಹಾಂತೇಶ್ ಸಾವನ್ನಪ್ಪಿದರು,

ಸರ್ಕಾರದ ಉತ್ತರ, ಶೀಘ್ರ ಮಾಹಿತಿ ಬಯಸಿದ ಕೋರ್ಟ್

ಮಹಾಂತೇಶರ ಮೇಲೆ ಹಲ್ಲೆಯಾಗಿ ಇಂದಿಗೆ 15 ದಿನವಾಗಿದೆ. ಅವರು ಸತ್ತು ಹತ್ತು ದಿನ ಮೀರುತ್ತ ಬಂದಿದೆ. ಆದರೂ ಇಲ್ಲಿಯವರೆಗೆ ಅವರ ಹತ್ಯೆಯ ಹಿಂದಿನ ದುಷ್ಕರ್ಮಿಗಳನ್ನು ಬಂಧಿಸಲಾಗಲಿ. ಅವರ ವಿವರಗಳನ್ನಾಗಲಿ ಶೇಖರಿಸಲು ನಗರದ ಪೋಲಿಸ್ ಇಲಾಖೇಯಿಂದ ಸಾಧ್ಯವಾಗಿಲ್ಲ. ಕೊಲೆಗೆ ಸಂಬಂಧ ಪಟ್ಟಂತೆ ತನಿಖೆಯನ್ನು ತೀವ್ರಗೊಳಿಸಿರುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಹೇಳಿ ವಾರದ ಮೇಲಾಯಿತು. ಪ್ರಕರಣದ ತನಿಖೆಗೆ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆಯನ್ನು ಕೌಟುಂಬಿಕ ಹಿನ್ನೆಲೆ, ವೃತ್ತಿ ವೈಷಮ್ಯ ಅಥವಾ ವೈಯಕ್ತಿಕ ಕಾರಣ ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಮಹಾಂತೇಶ್ ಕೊಲೆ ಪ್ರಕರಣ ಸಂಬಂದ ಪಟ್ಟಂತೆ ಪೊಲೀಸರು 17 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಎಂದು ವಾರದಿಂದೆಯೇ ಸುದ್ದಿಯಾಗಿತ್ತು.  ಮತ್ತು 6 ಜನರನ್ನು ಪೋಲಿಸ್ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಅಧಿಕಾರಿಗಳೇ ಹೇಳಿದ್ದರು. ಆದರೂ ಸಹಾ ಈ ವಿಚಾರದಲ್ಲಿ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಇದನ್ನೆಲ್ಲ ಮತ್ತು ಮಹಾಂತೇಶರ ಪ್ರಾಮಾಣಿಕ ಸೇವೆಯ ಹಿನ್ನೆಲೆಯನ್ನು ಗಮನಿಸಿ ರಾಜ್ಯದ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನರವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ. ಜೂನ್ 20ರ ಒಳಗೆ ತನಿಖೆ ಮಾಹಿತಿಯನ್ನು ನೀಡಬೇಕು ಎಂದು ಪೀಠ ನಿರ್ದೇಶಿಸಿ ವಿಚಾರಣಿಯನ್ನು ಮೇ 21 ಕ್ಕೆ ಮುಂದೂಡಿದೆ.

ಇತ್ತೀಚಿನ ಸುದ್ದಿಗಳ ಪ್ರಕಾರ ಪೊಲೀಸರು ಮಹಾಂತೇಶರ ಕುಟುಂಬದವರಿಂದ ಮತ್ತು ಅವರ ಸಹೋದ್ಯೋಗಿಗಳಿಂದ ಮಾಹಿತಿ ಪಡೆಯುವ ಕಾರ್ಯ ಮುಗಿಸಿದ್ದು ತನಿಖೆ ಗತಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ ಇನ್ನೂ ಹೆಚ್ಚಿನ ವಿಷಾದ ಏನೆಂದರೆ ಒಬ್ಬ ಸರ್ಕಾರಿ ನೌಕರ ಹಲ್ಲೆಗೀಡಾಗಿ ಸತ್ತಿದ್ದರೂ ಈ ವಿಚಾರದಲ್ಲಿ ಪೊಲೀಸರನ್ನೂ ಒಳಗೊಂಡಂತೆ ಇತರೆ ಸರ್ಕಾರಿ ನೌಕರರ ಎದ್ದುಕಾಣಿಸುತ್ತಿರುವ ದಿವ್ಯನಿರ್ಲಕ್ಷ್ಯ. ತನಿಖೆ ತೀವ್ರಗತಿಯಲ್ಲಿ ಸಾಗಿ ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗಲಿ ಎಂಬ ಯಾವುದೇ ಒತ್ತಡ ಈ ಸರ್ಕಾರಿ ನೌಕರರಿಂದ ಮತ್ತು ಅವರ ಸಂಘಗಳಿಂದ ಬೀಳುತ್ತಿರುವ ಹಾಗೆ ಕಾಣಿಸುತ್ತಿಲ್ಲ.

One thought on “ಭ್ರಷ್ಟಾಚಾರಕ್ಕೆ ಭದ್ರತೆ, ಪ್ರಾಮಾಣಿಕತೆಯ ಹತ್ಯೆ

  1. Ananda Prasad

    ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಭದ್ರತೆ ಹಾಗೂ ರಕ್ಷಣೆ ಒದಗಿಸಲೆಂದೇ ಲೋಕಾಯುಕ್ತ ಹುದ್ದೆಯನ್ನು ಖಾಲಿ ಬಿಡಲಾಗಿರುವಂತೆ ಕಾಣುತ್ತದೆ. ರಾಜ್ಯ ಸರಕಾರ ಯಾವ ರೀತಿ ಭ್ರಷ್ಟರ ಕಪಿಮುಷ್ಟಿಯಲ್ಲಿ ಇದೆ ಎಂಬುದನ್ನು ಇದು ತೋರಿಸುತ್ತದೆ. ಮಹಾಂತೇಶ್ ಕೊಲೆಯ ಹಿಂದೆಯೂ ಅಳುವ ಪಕ್ಷದ ಪ್ರಭಾವಿಗಳು ಇರುವ ಸಂಭವವಿದ್ದು ತನಿಖೆ ನಿಧಾನ ಗತಿಯಲ್ಲಿ ಸಾಗುತ್ತಿರುವಂತೆ ಅಥವಾ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿರುವಂತೆಯೂ ಕಾಣುತ್ತದೆ. ಹಲವು ತಿಂಗಳುಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇದ್ದರೂ ಈ ಬಗ್ಗೆ ರಾಜ್ಯದಲ್ಲಿ ಪ್ರತಿಭಟನೆಯ ಒಂದು ಕ್ಷೀಣ ದನಿಯೂ ಏಳುತ್ತಿಲ್ಲ. ನಮ್ಮ ಸಾರ್ವಜನಿಕ ಜೀವನ ಎಷ್ಟು ಸ್ವಾರ್ಥಮಯವಾಗಿದೆ ಹಾಗೂ ಸಂಕುಚಿತ ಮನೋಭಾವದಿಂದ ಕೂಡಿದೆ ಎಂಬುದು ಇದರಿಂದ ತಿಳಿಯುತ್ತದೆ.

    Reply

Leave a Reply

Your email address will not be published. Required fields are marked *