Monthly Archives: May 2012

ದಲಿತ ಶೋಷಣೆಯ ಅಪಮಾನಕರ ಚಿತ್ರಗಳು

– ಅರುಣ್ ಜೋಳದಕೂಡ್ಲಿಗಿ

ರಾಜಕಾರಣದ ಸುದ್ದಿಯ ಗದ್ದಲದ ಕಾಲ್ತುಳಿತದಲ್ಲಿ ಕೆಲವು ದಲಿತ ಶೋಷಣೆಯ ಚಿತ್ರಗಳು ಮಸುಕಾಗುತ್ತವೆ. ಅವುಗಳು ಸ್ಥಳೀಯ ಸುದ್ದಿಯ ಕಾಲಮ್ಮಿನಲ್ಲಿ ಮುಚ್ಚಿಹೋಗುವ ಮೊದಲು, ಆ ಪುಟಗಳನ್ನು ತೆರೆದಿಡುವ ಅಗತ್ಯವಿದೆ. ಅಂತಹ ಮೂರು ಚಿತ್ರಗಳು ಹೀಗಿವೆ:

ಶೋಷಣೆ-1

ಹಾವೇರಿಯಿಂದ 8 ಕಿಲೋಮೀಟರ್ ದೂರದ ದೇವಿಹೊಸೂರು ಗ್ರಾಮದ ದಲಿತರಾದ ಗುಡ್ಡಪ್ಪ ಬಾಸೂರ, ಗಂಗವ್ವ ಕಾಳಿ ಅವರ ಕುಟುಂಬಕ್ಕೆ ಊರು ಬಹಿಷ್ಕಾರ ಹಾಕಿದೆ. ಕಾರಣ ಫೆಬ್ರವರಿಯಲ್ಲಿ ಗ್ರಾಮಪಂಚಾಯತಿ ಆಡಳಿತದಿಂದ ರಸ್ತೆ ನಿರ್ಮಾಣ ನಡೆಸಿತ್ತು. ಈ ಸಂದರ್ಭದಲ್ಲಿ ಗುಡ್ಡಪ್ಪ ಚಲವಾದಿ ಎರಡೂ ಬದಿಯಲ್ಲಿ ಸಮಾನವಾಗಿ ಭೂಮಿ ಪಡೆದು ರಸ್ತೆ ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಊರಿನ ಸವರ್ಣೀಯರು ಕೋಪಗೊಂಡು ರಾತ್ರೋರಾತ್ರಿ ಗುಡ್ಡಪ್ಪನ ಮನೆ ಮುಂದಿನ ಹತ್ತಕ್ಕೂ ಹೆಚ್ಚಿನ ತೆಂಗು, ತೇಗ, ಚಿಕ್ಕು ಗಿಡಮರಗಳನ್ನು ಜೆ.ಸಿ .ಬಿ. ಯಿಂದ ಕಿತ್ತಿದ್ದಾರೆ. ಇದನ್ನು ವಿರೋಧಿಸಿದ ಗುದ್ಲೆಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಅದೀಗ ತಾರಕ್ಕೇರಿದೆ.

ಗುದ್ಲೆಪ್ಪನ ಈಗಿರುವ ಮನೆಯ ಜಾಗದಲ್ಲಿ ಮನೆಯೇ ಇಲ್ಲ ಎಂದು ಗ್ರಾಮಪಂಚಾಯ್ತಿ ನೋಟೀಸ್ ನೀಡಿದೆ. ಮನೆಗೆ ನೀರಿನ ಸಂಪರ್ಕವನ್ನು ನಿಲ್ಲಿಸಲಾಗಿದೆ. ಸತತ ಮೂರು ತಿಂಗಳು ನೀರಿಲ್ಲದಂತೆ ನೋಡಿಕೊಳ್ಳಲಾಗಿದೆ. ಕ್ಷೌರ ಮಾಡುವಂತಿಲ್ಲ, ಕೂಲಿಗೆ ಕರೆಯುವಂತಿಲ್ಲ ಮುಂತಾಗಿ ಊರವರಿಗೆ ತಾಕೀತು ಹಾಕಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಲು ಪಿ.ಎಸ್.ಐ ಸಹಕರಿಸಿಲ್ಲ, ಬದಲಾಗಿ ಇವರನ್ನೆ ಬೆದರಿಸಿದ್ದಾಗಿ ಪಕ್ಕೀರವ್ವ ಅಳುಕಿನಿಂದಲೇ ಹೇಳಿದರು. ಇದು ಮಾದ್ಯಮಗಳಲ್ಲಿ ಸುದ್ದಿಯಾದ ನಂತರ ಎ.ಸಿ, ಡಿ.ಸಿ ಭೇಟಿ ನೀಡಿ ಪರಿಸ್ಥಿತಿಯನ್ನು ಸದ್ಯಕ್ಕೆ ಸುಧಾರಿಸಿದ್ದಾರೆ.

ಆದರೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಬೈಗುಳ ನಿಂದನೆ ಇನ್ನೂ ನಡೆದಿದೆ, ಸರ್ಕಾರದೋರು ಎಷ್ಟು ದಿನ ನಿಮಿಗೆ ರಕ್ಷಣಿ ಕೋಡ್ತಾರ ನೋಡೋಣು ಎನ್ನುವಂತಹ ಬೆದರಿಕೆಯ ಮಾತುಗಳು ನಿಂತಿಲ್ಲ. ’ಬಾಳ ಕಷ್ಟ ಐತಿ ಸಾರ್ ಬದುಕೋದು’ ಎಂದು ಗುದ್ಲೆಪ್ಪ ಆತಂಕದಿಂದ ನನ್ನೊಂದಿಗೆ ಮಾತನಾಡಿದರು. ಅವರ ಕುಟುಂಬ ಈಗ ಭಯಭೀತವಾಗಿ ಅಲ್ಲಿ ಜೀವನ ನಡೆಸಿದೆ.

ಶೋಷಣೆ-2

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬೈರಮಡ್ಡಿಯ ದಲಿತರಿಗೆ ಅಲ್ಲಿನ ಬಹುಸಂಖ್ಯಾತ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ದಲಿತರೊಂದಿಗೆ ಮಾತನಾಡುವಂತಿಲ್ಲ, ಕೂಲಿ ಕೆಲಸಕ್ಕೆ ಕರೆಯುವಂತಿಲ್ಲ, ಕಿರಾಣಿ ಅಂಗಡಿಯವರು ದಲಿತರೊಂದಿಗೆ ವ್ಯವಹರಿಸುವಂತಿಲ್ಲ, ಜಿನ್ನಿನಲ್ಲಿ ಕಾಳನ್ನು ಹಿಟ್ಟು ಮಾಡುವಂತಿಲ್ಲ, ಆಟೋದವರು ಹತ್ತಿಸಿಕೊಳ್ಳುವಂತಿಲ್ಲ ಎನ್ನುವ ವಿಧಿಯಿದೆ. ಇದನ್ನು ಮೀರಿದವರಿಗೆ 5000 ದಂಡ ವಿಧಿಸುವ ಬೆದರಿಕೆ ಇದೆ.

ತಿಂಗಳ ಹಿಂದೆ ಎರಡು ಕೋಮಿನ ಯುವಕರ ಮದ್ಯೆ ಜಗಳ ನಡೆದು, ದಲಿತ ಯುವಕನ ಕೈ ಮುರಿದಿತ್ತು. ಆ ಹೊತ್ತಿಗೆ ಬಹುಸಂಖ್ಯಾತ ಕೋಮಿನವರು ದೂರು ದಾಖಲಾಗದಂತೆ ಪ್ರಭಾವ ಬೀರಿದ್ದರು. ಹಾಗಾಗಿ ಎರಡು ಕೋಮಿನ ಮುಖಂಡರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಹೀಗಿರುವಾಗ, ಗ್ರಾಮದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಅಡ್ಲಿಗಿ ತುಂಬಲು ಸವರ್ಣೀಯರು ದಲಿತರನ್ನು ಕರೆದಿದ್ದಾರೆ. ಆದರೆ ದಲಿತರು ನಾವು ಇನ್ನುಮುಂದೆ ಅಡ್ಲಗಿ ತುಂಬಲು ಬರುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ.

ಬೈರಮಡ್ಡಿಯ ದಲಿತ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದಾಗ ಈಗಲೂ ಬಹಿಷ್ಕಾರ ಮುಂದುವರೆದಿರುವ ಬಗ್ಗೆ ತಿಳಿಸಿದರು. ಡಿ.ವೈ.ಎಸ್.ಪಿ ಭೇಟಿ ನೀಡಿದ್ದು ಬಿಟ್ಟರೆ, ಜಿಲ್ಲಾಧಿಕಾರಿಗಳಾಗಲಿ, ತಹಶಿಲ್ದಾರರಾಗಲಿ ಊರಿಗೆ ಭೇಟಿ ನೀಡಿಲ್ಲ. ಈಗ ಪೋಲಿಸಿನವರ ಕಾವಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೇಲೆ ಕೇಸಿದ್ದರೂ ಪೊಲೀಸ್ ಇಲಾಖೆ ಈತನಕ ಯಾವುದೇ ಕ್ರಮ ಜರುಗಿಸಿಲ್ಲವೆಂದು ತಿಳಿಯಿತು.

ಶೋಷಣೆ-3

ಜೀತ ಮುಕ್ತ ಕುಟುಂಬ ಪುನಃ ಜೀತಕ್ಕಿರುವ ಘಟನೆ ಗುಡಿಬಂಡೆ ತಾಲೂಕು ತಿರುಮಣಿ ಗ್ರಾಮ ಪಂಚಾಯತಿಗೆ ಸೇರಿದ ಬೋಗೆನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕದಿರಪ್ಪ ಕುಟುಂಬದವರು ಕಳೆದ ವರ್ಷ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದ ಸ್ಥಿತಿವಂತರೊಬ್ಬರಿಂದ 20 ಸಾವಿರ ಸಾಲ ಮಾಡಿದ್ದರು. ಅದರ ಬಡ್ಡಿ ತೀರಿಸಲು ಕುಟುಂಬದ ಒಂಬತ್ತು ಜನ ಜೀತದಾಳಾಗಿ ಆ ಮನೆಯಲ್ಲಿ ದುಡಿಯುತ್ತಿದ್ದರು. ಇದನ್ನು ಗುರುತಿಸಿ ಜೀತ ವಿಮುಕ್ತ ಕರ್ನಾಟಕ ಸಂಘಟನೆ ಮತ್ತು ಎ.ಸಿ ಅವರು ಈ ಕುಟುಂಬವನ್ನು ಜೀತ ಮುಕ್ತಗೊಳಿಸಿ ಒಂದು ಸಾವಿರ ಪರಿಹಾರ ಧನ ನೀಡಿದ್ದರು.

ಆನಂತರ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ, ಜಿಲ್ಲಾ ಆಡಳಿತ ಈ ಜೀತ ಮುಕ್ತರಿಗೆ ಪುನರ್ ವಸತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಕಾರಣ ಆರು ತಿಂಗಳಿನಿಂದ ಗ್ರಾಮ ತೊರೆದು ಮತ್ತೆ ಜೀತದಾಳುಗಳಾಗಿ ಈ ಕುಟುಂಬ ಜೀವನ ನಡೆಸುತ್ತಿದೆ. ಇವರು ಮತ್ತೆ ಜೀತಪದ್ದತಿಗೆ ಮರಳಲು ಮುಖ್ಯವಾಗಿ ತಾಲೂಕು, ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣವಾಗಿದೆ. ಈ ಭಾಗದ ಜೀ.ವಿ.ಕ ಸಂಘಟನೆಯ ಬೀಚಗಾನಹಳ್ಳಿಯ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದಾಗ ಗುಡಿಬಂಡೆ, ಬಾಗೆಪಲ್ಲಿ ಒಳಗೊಂಡಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಲೂ ಜೀತ ಪದ್ದತಿ ಇರುವ ಬಗ್ಗೆ ಮಾಹಿತಿ ನೀಡಿದರು. ಇದನ್ನು ಕೇಳಿ ಆತಂಕವಾಯಿತು.

ಇದೇ ಹೊತ್ತಿಗೆ ಸುದ್ದಿಯಾಗದ ಹಲವು ದಲಿತ ಶೋಷಣೆಯ ಘಟನೆಗಳು ನಡೆದಿರಬಹುದು. ಆದರೆ ಮೇಲಿನವು ಮಾದ್ಯಮಗಳಲ್ಲಿ ಸುದ್ದಿಯಾದಂತವು. ಸುದ್ದಿಯಾದರೂ ದಲಿತರಿಗೆ ನ್ಯಾಯ ಸಿಗದೆ ಭಯದ ವಾತಾವರಣ ಮುಂದುವರಿದಿದೆ. ಇದನ್ನು ನೋಡಿದರೆ ದಲಿತ ಶೋಷಣೆಯ ಸ್ವರೂಪದ ಅರಿವಾಗುತ್ತದೆ. ಮುಖ್ಯವಾಗಿ ಊರಿನ ಬಹುಸಂಖ್ಯಾತರು ಅಲ್ಲಿನ ಪೊಲೀಸ್ ಇಲಾಖೆಯ ಮೇಲೆ ಪ್ರಭಾವ ಬೀರಿ ದಲಿತರ ಕೇಸು ದಾಖಲಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಟೆಂಪೋಗಳಲ್ಲಿ ದಲಿತರನ್ನು ಹತ್ತಿಸಿಕೊಳ್ಳದೆ ತಾತ್ಕಾಲಿಕವಾಗಿ ನಗರದ ಸಂಪರ್ಕವನ್ನೂ ತಪ್ಪಿಸಲಾಗುತ್ತಿದೆ. ಕುಡಿವ ನೀರನ್ನು ನಿಷೇದಿಸಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿಯೂ ದಲಿತರ ಹತ್ತಿಕ್ಕುವ ರಾಜಕಾರಣ ನಡೆಯುತ್ತಿದೆ. ಇವುಗಳೆಲ್ಲಾ ನಿರಂತರವಾಗಿ ನಡೆಯುತ್ತಲೇ ಇವೆ.

***

ಈ ಮೇಲಿನ ಘಟನೆಗಳಿಗೆ ಸಂಬಂಧಿಸಿದ ರಾಜ್ಯಮಟ್ಟದ ಅಧಿಕಾರಿ ವರ್ಗ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ದಲಿತರ ಕೇಸುಗಳು ದಾಖಲು ಮಾಡಿಕೊಳ್ಳವ ಮತ್ತು ಮಾಡಿಕೊಳ್ಳದಿರುವ ಬಗ್ಗೆ ಕಠಿಣ ಕ್ರಮಗಳನ್ನು ಜರುಗಿಸುವ ಅಗತ್ಯವಿದೆ. ದಲಿತ, ದಲಿತಪರ ಸಂಘಟನೆಗಳು ಈ ಘಟನೆಗಳ ವಿರುದ್ಧ ರಾಜ್ಯವ್ಯಾಪಿ ಧ್ವನಿ ಎತ್ತಬೇಕಾಗಿದೆ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 22)


– ಡಾ.ಎನ್.ಜಗದೀಶ್ ಕೊಪ್ಪ


 

ಚಿರತೆಯ ಆರ್ಭಟ ಮತ್ತು ಗುಂಡಿನ ಸದ್ದು ಕೇಳಿದ ರುದ್ರಪ್ರಯಾಗದ ಜನ ನರಭಕ್ಷಕ ಗುಂಡಿಗೆ ಬಲಿಯಾಗಿದೆ ಎಂದು ಭಾವಿಸಿ, ಲಾಟೀನು, ದೊಣ್ಣೆ ಸಮೇತ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಸ್ಥಳಕ್ಕೆ ಓಡೋಡಿ ಬಂದರು. ಹಳ್ಳಿಯ ಜನರೆಲ್ಲಾ ಬಂದಿದ್ದರಿಂದ ಧೈರ್ಯ ಮಾಡಿದ ಕಾರ್ಬೆಟ್ ಮರದಿಂದ ಕೆಳಗಿಳಿದು ಟಾರ್ಚ್‌ ಬೆಳಕಿನ ಸಹಾಯದಿಂದ ಹಳ್ಳದಲ್ಲಿ ಚಿರತೆಗಾಗಿ ತಡಕಾಡಿದ. ತನ್ನ ಮುಂಗಾಲುಗಳು ಕತ್ತರಿಯಲ್ಲಿ ಸಿಲುಕಿದ್ದ ಕಾರಣ ಚಲಿಸಲಾರದೆ, ಅದರಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆಯನ್ನು ಹಳ್ಳದಲ್ಲಿ ಕಂಡಾಕ್ಷಣ ತಡ ಮಾಡದೆ, ಕಾರ್ಬೆಟ್ ಅದರ ತಲೆಗೆ ಗುಂಡುಹಾರಿಸಿದ. ಅತ್ಯಂತ ಹತ್ತಿರದಿಂದ ಹಾರಿಸಿದ ಗುಂಡಿನ ಹೊಡೆತಕ್ಕೆ ಕ್ಷಣಾರ್ಧದಲ್ಲೇ ಚಿರತೆ ಸಾವನ್ನಪ್ಪಿತು.

ಕಗ್ಗತ್ತಲೆಯಲ್ಲಿ ಸತ್ತು ಮಲಗಿದ ಚಿರತೆಯನ್ನು ನೋಡಿದಾಕ್ಷಣ ಗ್ರಾಮಸ್ಥರ ಸಂತಸ ಎಲ್ಲೇ ಮೀರಿತು. ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರನ್ನು ಹೆಗಲ ಮೇಲೆ ಎತ್ತಿ ಕುಣಿದಾಡಿದರು. ಬಿದರಿನ ಗಳಕ್ಕೆ ಚಿರತೆಯನ್ನು ಕಟ್ಟಿ ಆ ರಾತ್ರಿಯಲ್ಲೇ ಪ್ರಯಾಗದ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಕಾರ್ಬೆಟ್‌ನನ್ನೂ ಸಹ ಬಿಡದೆ, ಊರಿನ ಹೊರವಲಯದಿಂದ ಮೆರವಣಿಗೆಯಲ್ಲಿ ಹೊತ್ತು ತಂದರು. ಎಲ್ಲರೂ ನರಭಕ್ಷಕ ಗುಂಡಿಗೆ ಬಲಿಯಾಯಿತು ಎಂದು ನಂಬಿದ್ದರು. ಆದರೆ, ಕಾರ್ಬೆಟ್ ಅದನ್ನು ಖಚಿತ ಪಡಿಸಿಕೊಳ್ಳವ ತನಕ ನಂಬಲು ಸಿದ್ದನಿರಲಿಲ್ಲ. ಈ ಹಿಂದೆ ಶಿಕಾರಿಯ ಸಂದರ್ಭದಲ್ಲಿ ನೋಡಿದ್ದ ಚಿರತೆಗೂ, ಈಗ ಬಲಿಯಾಗಿರುವ ಚಿರತೆಯ ಮೈಬಣ್ಣದಲ್ಲಿನ ಅಲ್ಪ ವ್ಯತ್ಯಾಸ ಕಾರ್ಬೆಟ್‌ನನ್ನು ಗೊಂದಲದಲ್ಲಿ ದೂಡಿತ್ತು.

ಪ್ರವಾಸಿ ಮಂದಿರದ ಬಳಿಗೆ ಚಿರತೆಯ ಶವ ತಂದ ನಂತರ ಅದರ ಕುತ್ತಿಗೆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದ. ಕೇವಲ ಎಂಟು ಹತ್ತು ದಿನಗಳ ಹಿಂದೆ ಕೂದಲೆಳೆಯ ಹಂತರದಿಂದ ಪಾರಾಗಿದ್ದ ನರಭಕ್ಷಕನಿಗೆ ಗುಂಡು ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿತ್ತು, ಅಲ್ಲದೇ ಆ ಭಾಗದಲ್ಲಿ ಅದರ ಕೂದಲುಗಳು ಉದುರಿಹೋಗಿದ್ದವು. ಆದರೆ, ಈ ಚಿರತೆಯಲ್ಲಿ ಅದರ ಯಾವ ಲಕ್ಷಣಗಳು ಕಾಣಲಿಲ್ಲ. ಹಾಗಾಗಿ ಇದು ನರಭಕ್ಷಕ ಚಿರತೆಯಲ್ಲ, ಬೇರೊಂದು ಗಂಡು ಚಿರತೆ ಎಂದು ಜಿಮ್ ಕಾರ್ಬೆಟ್ ನಿರ್ಧರಿಸಿದ. ಆದರೆ, ಇವನ ತೀರ್ಮಾನವನ್ನು ಇಬ್ಸ್‌ಟನ್ ಆಗಲಿ, ರುದ್ರಪ್ರಯಾಗದ ಜನರಾಗಲಿ ನಂಬಲು ಸಿದ್ಧರಿರಲಿಲ್ಲ. ಸದ್ಯಕ್ಕೆ ಯಾವುದೇ ವಾದವಿವಾದ ಬೇಡ, ಕನಿಷ್ಟ ಒಂದು ವಾರ ಮೊದಲಿನ ಹಾಗೆ ರಾತ್ರಿ ವೇಳೆ ಎಚ್ಚರ ವಹಿಸಿ ಎಂದು ಪ್ರಯಾಗದ ಜನರಿಗೆ ಕಾರ್ಬೆಟ್ ಮನವಿ ಮಾಡಿಕೊಂಡ.

ತಡರಾತ್ರಿ ಪ್ರವಾಸಿ ಮಂದಿರದಲ್ಲಿ, ಇಬ್ಸ್‌ಟನ್ ಅವನ ಪತ್ನಿ ಜೀನ್ ಜೊತೆ ಕುಳಿತು ಊಟ ಮಾಡುವಾಗ, ತಕ್ಣಣ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುವುದು ಬೇಡ ಎಂದು ಕಾರ್ಬೆಟ್ ಇಬ್ಸ್‌ಟನಗೆ ಮನವಿ ಮಾಡಿದ. ಅದಕ್ಕೆ ಅವನು ಸಮ್ಮತಿ ಸೂಚಿಸಿದ. ಮಾರನೇ ದಿನ ಬೆಳಿಗ್ಗೆ ಪೌರಿಯಿಂದ ಬಂದಿದ್ದ ಕೆಲವು ಕಾಗದ ಪತ್ರಗಳನ್ನು ವಿಲೇವಾರಿ ಮಾಡುವುದರಲ್ಲಿ ಇಬ್ಸ್‌ಟನ್ ನಿರತನಾದ. ಕಾರ್ಬೆಟ್ ತನ್ನ ಸಹಾಯಕರಿಗೆ ಚಿರತೆಯ ಚರ್ಮ ಸುಲಿಯಲು ತಿಳಿಸಿ, ಮಂದಾಕಿನಿ ನದಿಯಲ್ಲಿ ಮೀನು ಬೇಟೆಯಾಡಲು ಹೊರಟ. ಕಾರ್ಬೆಟ್ ನರಭಕ್ಷಕನ ಸಾವಿನ ಬಗ್ಗೆ ಖಚಿತಪಡಿಸಿಕೊಳ್ಳಲು ಒಂದು ವಾರ ಸಮಯ ಕೇಳಿದ್ದ ಆದರೆ, ಕೇವಲ ಎರಡು ದಿನಗಳ ಅವಧಿಯಲ್ಲಿ ನರಭಕ್ಷಕ ನದಿಯಾಚೆಗಿನ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿ ಒಬ್ಬ ಹೆಂಗಸನ್ನು ಬಲಿತೆಗೆದುಕೊಂಡ ವಿಷಯವನ್ನು ಹಳ್ಳಿಗರು ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದು ಕಾರ್ಬೆಟ್‌ಗೆ ಮುಟ್ಟಿಸಿದರು.

ಕಾರ್ಬೆಟ್‌ನ ಸಂಶಯ ಕಡೆಗೂ ನಿಜವಾಯಿತು. ಆ ವೇಳೆಗಾಗಲೇ ಇಬ್ಸ್‌ಟನ್ ವಾಪಸ್ ಪೌರಿಗೆ ಮತ್ತು ಕಾರ್ಬೆಟ್ ನೈನಿತಾಲ್‌ಗೆ ಹೋಗಿ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡು ಬರುವುದೆಂದು ನಿರ್ಧಾರವಾಗಿತ್ತು. ಇಬ್ಬರೂ ಎರಡು ದಿನಗಳ ಮಟ್ಟಿಗೆ ತಮ್ಮ ಕಾರ್ಯಕ್ರಮವನ್ನು ಮುಂದೂಡಿ, ಹೆಂಗಸು ಬಲಿಯಾಗಿದ್ದ ಹಳ್ಳಿಗೆ ಕುದುರೆಯೇರಿ ಹೊರಟರು. ಊರ ಹೊರ ವಲಯದಲ್ಲಿ ಹೆಂಗಸಿನ ಶವವಿದ್ದ ಜಾಗದಲ್ಲಿ ಆಕೆಯ ಸಂಬಂಧಿ ಕಾರ್ಬೆಟ್ ಬರುವಿಕೆಗಾಗಿ ಕಾಯುತ್ತಿದ್ದ. ಕಾರ್ಬೆಟ್‌ಗೆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ. ಚಿರತೆಗೆ ಬಲಿಯಾದ ಹೆಂಗಸಿನ ಶವವಿದ್ದ ಜಾಗ ಮತ್ತು ಆಕೆಯ ಮನೆ ಎಲ್ಲವನ್ನು ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಸೂಕ್ಷ್ಮವಾಗಿ ಅವಲೋಕಿಸಿದರು.

ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ನರಭಕ್ಷಕನ ಹೆಜ್ಜೆ ಗುರುತು ಎಲ್ಲೆಡೆ ಸ್ಪಷ್ಟವಾಗಿ ಮೂಡಿದ್ದವು. ಮನೆಯಿಂದ ದೃಡವಾಗಿದ್ದ, ಐವತ್ತು ಕೆ.ಜಿ. ಗೂ ಹೆಚ್ಚು ತೂಕವಿದ್ದ ಹೆಂಗಸಿನ ಶವವನ್ನು ಎಲ್ಲಿಯೂ ಭೂಮಿಗೆ ತಾಗದಂತೆ ಬಾಯಲ್ಲಿ ಕಚ್ಚಿ ಹಿಡಿದು ಸಾಗಿದ್ದ ನರಭಕ್ಷಕ ಚಿರತೆಯ ಸಾಮರ್ಥ್ಯದ ಬಗ್ಗೆ ಕಾರ್ಬೆಟ್ ನಿಜಕ್ಕೂ ಬೆರಗಾದ. ಸಂಜೆ ನಾಲ್ಕು ಗಂಟೆಯ ವೇಳೆಗೆ ಶವವಿದ್ದ ಜಾಗದಿಂದ ಸುಮಾರು 60 ಅಡಿ ದೂರದಲ್ಲಿದ್ದ ಮರವೇರಿ ರಾತ್ರಿ ಹತ್ತು ಗಂಟೆಯವರೆಗೂ ಚಿರತೆಗಾಗಿ ಕಾಯಲು ಇಬ್ಬರೂ ನಿರ್ಧರಿಸಿದರು. ಕಾರ್ಬೆಟ್‌ನ ಸೇವಕರು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳಸಿದ್ದರಿಂದ ಅವರಿನ್ನೂ ಹಳ್ಳಿ ತಲುಪಿರಲಿಲ್ಲ. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಹಳ್ಳಿಯ ಮುಖಂಡನಿಗೆ ತಿಳಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಕೋವಿ, ಟಾರ್ಚ್ ಮತ್ತು ಪೆಟ್ರೋಮ್ಯಾಕ್ಸ್ ಜೊತೆ ಹೊರಟು ಮರವೇರಿ ಕುಳಿತರು.

ಗ್ರಾಮಸ್ಥರು ಚಿರತೆ ಉತ್ತರ ದಿಕ್ಕಿನ ಕಾಡಿನತ್ತ ಹೋಯಿತು ಎಂದು ತಿಳಿಸಿದ್ದರಿಂದ, ಎತ್ತರದ ಕೊಂಬೆಯೇರಿದ ಇಬ್ಸ್‌ಟನ್ ಉತ್ತರ ದಿಕ್ಕಿಗೆ ಮುಖಮಾಡಿ ಕೈಯಲ್ಲಿ ಬಂದೂಕ ಹಿಡಿದು ಕುಳಿತರೆ, ಕಾರ್ಬೆಟ್ ಇನ್ನೊಂದು ದಿಕ್ಕಿಗೆ ಮುಖಮಾಡಿ ಕುಳಿತ. ಪೆಟ್ರೋಮ್ಯಾಕ್ಸ್ ಮೇಲೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮರದ ಬುಡದ ಪೊಟರೆಯಲ್ಲಿ ಇಟ್ಟರು. ಇಬ್ಬರ ಬಳಿ ಟಾರ್ಚ್ ಇತ್ತಾದರೂ ಅವುಗಳ ಬ್ಯಾಟರಿಗಳು ಶಕ್ತಿಗುಂದಿದ್ದವು. ಆದರೂ ನರಭಕ್ಷಕ ಬಂದರೆ, ಗುರಿಯಿಡುವ ಆತ್ಮವಿಶ್ವಾಸ ಇಬ್ಬರಿಗೂ ಇತ್ತು. ಆದರೆ, ಇವರ ನಿರೀಕ್ಷೆ ಮೀರಿ, ಉತ್ತರ-ದಕ್ಷಿಣ ದಿಕ್ಕುಗಳನ್ನು ಬಿಟ್ಟು ಪಶ್ಚಿಮ ದಿಕ್ಕಿನ ಪರ್ವತದಿಂದ ನರಭಕ್ಷಕ ಇಳಿದು ಬರುವುದನ್ನು ಕಾಡು ಕೋಳಿಗಳು ಕೂಗುವುದರ ಮೂಲಕ ಸೂಚನೆ ನೀಡಿದವು. ಇವರು ಕುಳಿತ್ತಿದ್ದ ಮರಕ್ಕೂ ಆ ಪಶ್ಚಿಮ ದಿಕ್ಕಿನ ನಡುವೆ ಕಲ್ಲು ಬಂಡೆ ಅಡ್ಡಿಯಾದ್ದರಿಂದ ಇಬ್ಬರೂ ಸರಸರನೆ ಮರದಿಂದ ಇಳಿದು ಕಲ್ಲು ಬಂಡೆ ಏರಲು ನಿರ್ಧರಿಸಿದರು. ಅದಕ್ಕಾಗಿ ಪೊಟರೆಯಲ್ಲಿ ಇಟ್ಟಿದ್ದ ಪೆಟ್ರೋಮ್ಯಾಕ್ಸ್ ತೆಗೆದು ಹತ್ತಿಸಿದರು. ಆದರೆ, ಇಬ್ಸ್‌ಟನ್ ಅದನ್ನು ಹಿಡಿದು ಬಂಡೆಯತ್ತ ಸಾಗುತ್ತಿರುವಾಗ, ನೆಲದ ಮೇಲಿನ ಕಲ್ಲೊಂದಕ್ಕೆ ತಾಗಿಸಿಬಿಟ್ಟ. ಇದರಿಂದಾಗಿ ಅದರ ಗಾಜು ಮತ್ತು ರೇಷ್ಮೆ ಬತ್ತಿ ಎರಡೂ ಉದುರಿಹೋದವು. ಆದರೂ ಅದರಿಂದ ಸಣ್ಣನೆಯ ನೀಲಿ ಜ್ವಾಲೆ ಹೊರಹೊಮ್ಮುತ್ತಿತ್ತು ಇದರ ಸಾಮರ್ಥ್ಯ ಕೇವಲ ಐದಾರು ನಿಮಿಷ ಎಂದು ಇಬ್ಸ್ ಹೇಳಿದ ಕೂಡಲೇ ಕಾರ್ಬೆಟ್, ಕತ್ತಲೆಯಲ್ಲಿ ಇಲ್ಲಿರುವುದು ಅಪಾಯಕಾರಿ ಎಂದು ನಿರ್ಧರಿಸಿ, ಹಳ್ಳಿಯತ್ತ ಹೆಜ್ಜೆ ಹಾಕಲು ಇಬ್ಸ್‌ಟನ್‌ಗೆ ಸೂಚಿಸಿದ.

ಇಬ್ಸ್ ಉರಿಯುತ್ತಿರುವ ಪೆಟ್ರೋಮ್ಯಾಕ್ಸ್‌ನ ಸಣ್ಣ ಜ್ವಾಲೆಯ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಕಾರ್ಬೆಟ್ ಅವನ ಹಿಂದೆ ಬಂದೂಕ ಹಿಡಿದು ಪ್ರತಿ ಎರಡು ಹೆಜ್ಜೆಗೆ ಒಮ್ಮೆ ಹಿಂತಿರುಗಿ ನೋಡಿ ಹೆಜ್ಜೆ ಹಾಕುತ್ತಿದ್ದ. ಕತ್ತಲೆಯಲ್ಲಿ ನರಭಕ್ಷಕ ಯಾವ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಅಂಜಿಕೆ ಆ ಕ್ಷಣದಲ್ಲಿ ಕಾರ್ಬೆಟ್‌ನನ್ನು ಬಲವಾಗಿ ಕಾಡಿತು ಕೊನೆಗೂ ಪೆಟ್ರೋಮ್ಯಾಕ್ಷ್ ಆರಿ ಹೋಗುವ ಮುನ್ನ ಊರಿನ ಹೊರಭಾಗದಲ್ಲಿದ್ದ ರೈತನ ಮನೆ ಬಾಗಿಲಿಗೆ ಮುಟ್ಟಿದ್ದರು. ಕಾರ್ಬೆಟ್ ಬಾಗಿಲು ಬಡಿದು ವಿನಂತಿಸಿಕೊಂಡ ಮೇಲೆ ರೈತ ಬಾಗಿಲು ತೆರೆದು, ಅವರಿಗೆ ಚಹಾ ಮಾಡಿಕೊಟ್ಟು, ಅವನ ಸೇವಕರು ಉಳಿದುಕೊಂಡಿದ್ದ ಮನೆಯ ಬಗ್ಗೆ ಮಾಹಿತಿ ನೀಡಿದ. ಅವನಿಂದ ಚಿಮಣಿ ಎಣ್ಣಿಯ ಒಂದು ಪುಟ್ಟ ಲಾಂಧ್ರವೊಂದನ್ನು ಪಡೆದು, ಅದರ ಮಂದ ಬೆಳಕಿನಲ್ಲಿ ಆ ಮನೆಯಲ್ಲಿದ್ದ ಕೆಲವು ಗಂಡಸರ ನೆರವಿನಿಂದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರು ಉಳಿದುಕೊಂಡಿದ್ದ ಮನೆ ತಲುಪಿದರು. ಮನೆಯ ಬಾಗಿಲಲ್ಲಿ ಮಲಗಿದ್ದ ಬೀದಿ ನಾಯಿ ಇವರನ್ನು ಕಾಲು ಮೂಸಿ ಸ್ವಾಗತಿಸಿತು. ಮನೆಯೊಳಗೆ ಹೋಗಿ, ಇಬ್ಬರೂ ಮಲಗಲು ಸಿದ್ಧರಾಗುವ ವೇಳೆಗೆ ನಾಯಿ ವಿಚಿತ್ರವಾಗಿ ಬೊಗಳತೊಡಗಿತು. ಅವರು ಉಳಿದು ಕೊಂಡಿದ್ದ ರಸ್ತೆಯಿಂದ ಹತ್ತು ಅಡಿ ಎತ್ತರದ ಪ್ರದೇಶದಲ್ಲಿದ್ದ ಕಾರಣ ಮೆಟ್ಟಲಿನ ಮೇಲೆ ನಿಂತಿದ್ದ ನಾಯಿ ಒಂದೇ ದಿಕ್ಕಿನಿತ್ತ ಮುಖ ಮಾಡಿ ಬೊಗಳುತ್ತಿತ್ತು. ನಾಯಿಯ ಈ ವರ್ತನೆಯಿಂದ ನರಭಕ್ಷಕ ನಮ್ಮನ್ನು ಮನೆಯವರಿಗೂ ಹಿಂಬಾಲಿಸಿಕೊಂಡು ಬಂದಿದೆ ಎಂಬ ಸೂಚನೆ ಕಾರ್ಬೆಟ್‌ಗೆ ಸಿಕ್ಕಿತು. ಮನೆಯ ಕಿಟಕಿ, ಬಾಗಿಲುಗಳನ್ನು ಮತ್ತಷ್ಟು ಭದ್ರಪಡಿಸಿ ಮಲಗಿದ ಜೊತೆಗೆ ನಾಯಿ ಬಾಗಿಲಲ್ಲಿ ಇದ್ದ ಕಾರಣ ಅವನಿಗೆ ಆತಂಕ ಮತ್ತು ಭಯ ಇಲ್ಲವಾಗಿತ್ತು.

ಬೆಳಿಗ್ಗೆ ಎದ್ದು ನೋಡಿದಾಗ, ಕಾರ್ಬೆಟ್‌ಗೆ ಚಿರಪರಿಚಿತವಾದ ಅದೇ ನರಭಕ್ಷಕನ ಹೆಜ್ಜೆಗುರುತುಗಳು ಮನೆಯ ಮುಂಭಾಗದಲ್ಲಿ ಮೂಡಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿದ ಕಾರ್ಬೆಟ್ ಮತ್ತೆ ಹೆಂಗಸಿನ ಶವ ಇದ್ದ ಜಾಗಕ್ಕೆ ಹೋಗಿ ನೋಡಿ ಬಂದ. ಆ ರಾತ್ರಿ ಚಿರತೆ ಶವವನ್ನು ಮುಟ್ಟಿರಲಿಲ್ಲ. ಮಧ್ಯಾದ ವೇಳೆಗೆ ರುದ್ರಪ್ರಯಾಗದಲ್ಲಿದ್ದ ಜಿನ್ ಕತ್ತರಿಯನ್ನು ತರಿಸಿಕೊಂಡ ಕಾರ್ಬೆಟ್, ಸಂಜೆ ಮತ್ತೇ ಹೆಂಗಸಿನ ಶವವಿದ್ದ ಸ್ಥಳಕ್ಕೆ ತೆರಳಿ, agave ಬರುವ ಹಾದಿಯಲ್ಲಿ ಕತ್ತರಿಯನ್ನಿಟ್ಟು, ರುದ್ರಪ್ರಯಾಗದಲ್ಲಿ ಸಂಗ್ರಹಿಸಿದ್ದ ಸೈನೈಡ್ ವಿಷದ ಮಾತ್ರೆಗಳನ್ನು ಶವದ ಅಂಗಾಂಗಳ ನಡುವೆ ಹುದುಗಿಸಿ ಇಟ್ಟ. ಚಾಣಾಕ್ಷ ನರಭಕ್ಷಕ ಇವೆರಡರಲ್ಲಿ ಒಂದಕ್ಕೆ ಬಲಿಯಾಗುವುದು ಖಚಿತ ಎಂದು ಅವನು ನಂಬಿದ್ದ. ಆ ರಾತ್ರಿ ಕೂಡ ಅವನ ನಿರೀಕ್ಷೆ ಹುಸಿಯಾಯಿತು. ಇನ್ನು ಕಾಯುವುದು ಪ್ರಯೋಜವಿಲ್ಲ ಎಂದು ತೀರ್ಮಾನಿಸದ ಕಾರ್ಬೆಟ್, ಹೆಂಗಸಿನ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಿಳಿಸಿ, ನೈನಿತಾಲ್‌ಗೆ ಹೊರಡಲು ಅನುವಾದ.

ಇಬ್ಸ್‌ಟನ್‌ನ ಹದಿನೈದು ದಿನಗಳ ರಜೆ ಮುಗಿದ ಕಾರಣ ಅವನೂ ಕೂಡ ಪೌರಿಗೆ ವಾಪಸ್ ಹಿಂತಿರುಗಬೇಕಿತ್ತು. ತಮ್ಮ ತಮ್ಮ ಸಾಮಾನುಗಳನ್ನು ಪ್ರಯಾಣಕ್ಕೆ ಸಿದ್ಧಪಡಿಸುತ್ತಿದ್ದ ವೇಳೆಗೆ ನಾಲ್ಕು ಮೈಲಿ ದೂರದಲ್ಲಿ ನರಭಕ್ಷಕ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ಧಿ ಕಾರ್ಬೆಟ್‌ಗೆ ಮುಟ್ಟಿತು. ನೈನಿತಾಲ್‌ಗೆ ಹೋಗುವ ದಾರಿಯಲ್ಲಿ ಅದನ್ನು ಗಮನಿಸಿ ಹೋಗೋಣವೆಂದು ತನ್ನ ಸೇವಕರೊಂದಿಗೆ ಕಾರ್ಬೆಟ್ ಹಳ್ಳಿಯತ್ತ ಪ್ರಯಾಣ ಬೆಳಸಿದ. ಇಲ್ಲು ಕೂಡ ನರಭಕ್ಷಕ ಚಿರತೆ ಮನೆಗೆ ನುಗ್ಗಲುಯತ್ನಿಸಿ, ವಿಫಲವಾದ ನಂತರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಕೊಂಡೊಯ್ದಿತ್ತು. ಪ್ರಯಾಣ ಮತ್ತು ನಿರಂತರವಾಗಿ ಅನೇಕ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು ಆಯಾಸಗೊಂಡಿದ್ದ ಕಾರ್ಬೆಟ್ ಹಸುವಿನ ಕಳೇಬರಕ್ಕೆ ವಿಷವನ್ನು ಬೆರಸಿ, ಜಿನ್ ಕತ್ತರಿಯನ್ನು ಸನೀಹದ ದಾರಿಯಲ್ಲಿ ಇರಿಸಿದ. ಕತ್ತಲಾಗುವ ಮುನ್ನವೇ ರಾತ್ರಿಯ ಊಟ ಮುಗಿಸಿ, ದೋರದ ಪೈನ್ ಮರದ ಮೇಲೆ ಕಟ್ಟಲಾಗಿದ್ದ ಮಚ್ಚಾನ್ ಮೇಲೆ ಬಂದು ಮಲಗಿ ನಿದ್ರಿಸಿದ.

ಕತ್ತರಿಗೆ ನರಭಕ್ಷಕ ಸಿಲುಕಿಕೊಂಡರೆ, ಹೋಗಿ ಗುಂಡು ಹಾರಿಸಿ ಕೊಲ್ಲುವುದು ಅವನ ಯೋಜನೆಯಾಗಿತ್ತು. ಆದರೆ, ಚಾಣಾಕ್ಷತನದ ನರಭಕ್ಷಕ ಅಡಕತ್ತರಿಯನ್ನು ದಾಟಿ ಹಸುವಿನ ಕಳೇಬರವನ್ನು ಬೇರೊಂದು ಜಾಗಕ್ಕೆ ಎಳೆದೊಯ್ದು ತಿಂದು ಮುಗಿಸಿತ್ತು. ಬೆಳಿಗ್ಗೆ ಎದ್ದು ನೋಡಿದ ಕಾರ್ಬೆಟ್, ಹಳ್ಳಿಯ ಜನರನ್ನು ಕರೆಸಿ ಸುತ್ತಮುತ್ತಲಿನ ಕಾಡನ್ನು ಜಾಲಾಡಿಸಿದ ಎಲ್ಲಿಯೂ ಚಿರತೆ ಸತ್ತು ಬಿದ್ದಿರುವ ಕುರುಹು ಕಾಣಲಿಲ್ಲ. ಸಾಮಾನ್ಯವಾಗಿ ಬೆಕ್ಕು ಮತ್ತು ಚಿರತೆಗಳು ವಿಷವನ್ನು ತಿಂದ ಸಮಯದಲ್ಲಿ ಗರಿಕೆ ಹುಲ್ಲನ್ನು ತಿಂದು ವಾಂತಿ ಮಾಡುತ್ತವೆ. ಇಲ್ಲಿಯೂ ಸಹ ನರಭಕ್ಷಕ ವಿಷ ತಿಂದರೂ ಸಾವಿನಿಂದ ಪಾರಾಗಿತ್ತು. ಈ ಘಟನೆಯಿಂದ ಒಂದು ರೀತಿಯಲ್ಲಿ ತೀವ್ರ ಹತಾಶನಾದಂತೆ ಕಂಡು ಬಂದ ಕಾರ್ಬೆಟ್ ಹಳ್ಳಿಯ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಿ, ವಿಶ್ರಾಂತಿ ಪಡೆದು ಮತ್ತೆ ಮರಳಿ ಬರತ್ತೇನೆ ಎಂಬ ಭರವಸೆ ನೀಡಿ ನೈನಿತಾಲ್‌ನತ್ತ ಪ್ರಯಾಣ ಬೆಳಸಿದ.

(ಮುಂದುವರಿಯುವುದು)

ಬದುಕು ಜಟಕಾ ಬಂಡಿ

– ದಿನೇಶ್ ಕುಮಾರ್. ಎಸ್. ಸಿ

ನಂಗೆ ನನ್ನ ಹೆಂಡತಿ ಬೇಕು ಸಾರ್, ತುಂಬಾ ಒಳ್ಳೆಯವಳು ಸಾರ್…
ಹೀಗಂತನೇ ಮಾತು ಶುರುಮಾಡಿದ ವಾಸುದೇವ. ನೋಡಕ್ಕೆ ಚೆನ್ನಾಗಿದ್ದಾನೆ. ಆರು ವರ್ಷದ ಮುದ್ದಾದ ಮಗಳಿದ್ದಾಳೆ. ಹೆಂಡತಿ ಮನೆ ಬಿಟ್ಟು ತವರಿಗೆ ಹೋಗಿ ಕುಳಿತಿದ್ದಾಳೆ. ವಾಪಾಸು ಬರುವ ಯಾವ ಸಾಧ್ಯತೆಯೂ ಇಲ್ಲದೆ ಅವನು ನನ್ನ ಬಳಿ ಬಂದಿದ್ದ. ಇವನದೊಂದು ಸಮಸ್ಯೆಯಿದೆ, ಏನಾದರೂ ಮಾಡೋದಕ್ಕೆ ಸಾಧ್ಯನಾ ನೋಡಿ ಅಂತ ಗೆಳತಿಯೊಬ್ಬಳು ನನ್ನ ಬಳಿ ಕಳಿಸಿದ್ದಳು.

ಏನಾಯ್ತು? ಯಾಕಾಯ್ತು? ಮಾಮೂಲಿ ಪ್ರಶ್ನೆಗಳು ನನ್ನಿಂದ. ಹತ್ತು ವರ್ಷಗಳ ಸಂಸಾರ, ಆರು ವರ್ಷದ ಮಗಳು, ಸರ್ಕಾರಿ ಉದ್ಯೋಗದಲ್ಲಿರುವ ಗಂಡ ಎಲ್ಲ ಬಿಟ್ಟು ಆ ಹೆಣ್ಣುಮಗಳೇಕೆ ತವರಿಗೆ ಹೋಗಿದ್ದಾಳೆ? ಇದು ನನ್ನ ಸಹಜ ಕುತೂಹಲ.
ಒಂದು ಮಿಸ್ಟೇಕು ಸಾರ್. ಇವಳ ಕಡೆ ಗಮನ ಕಡಿಮೆಯಾಗಿ ಹೋಗಿತ್ತು. ನನ್ನ ಕೆಲಸ ನೋಡಿ, ಊರೂರು ಸುತ್ತಬೇಕು. ಬೆಳಿಗ್ಗೆನೇ ಮನೆ ಬಿಡಬೇಕು, ಗಂಟೆಗಟ್ಟಲೆ ಪ್ರಯಾಣ. ರಾತ್ರಿ ಆಯಾಸವಾಗಿರುತ್ತೆ ಮನೆ ತಲುಪುವಷ್ಟರಲ್ಲಿ. ಇವಳನ್ನು ಮಾತಾಡಿಸುವಷ್ಟೂ ಪುರುಸೊತ್ತು ಇರಲಿಲ್ಲ. ಮನೇಲಿ ಅಮ್ಮ ಮತ್ತು ಇವಳಿಗೆ ಅಷ್ಟಕ್ಕಷ್ಟೆ. ಏನೇನು ಜಗಳ ಆಗ್ತಾ ಇದ್ವೋ ಗೊತ್ತಿಲ್ಲ.

ಅವನು ಹೇಳ್ತಾ ಹೋದ. ಮಧ್ಯೆ ಮಧ್ಯೆ ಕೊಂಚ ಸೆಲ್ಫ್ ಡೆಫೆನ್ಸ್ಗಾಗಿ ಸುಳ್ಳು, ಅಥವಾ ಹಾರಿಕೆಯ ಮಾತು. ಎಷ್ಟೇ ದೊಡ್ಡ ಫಟಿಂಗರು ತಲೆಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದರೂ ಧ್ವನಿಯ ವೈಬ್ರೇಷನ್ನಿಂದಲೇ ಗೊತ್ತಾಗಿಬಿಡುತ್ತೆ ನನಗೆ ಅದು ಸುಳ್ಳು ಅಂತ. ಹೀಗಾಗಿ ಮಧ್ಯೆ ಮಧ್ಯೆ ಕೆಣಕು ಪ್ರಶ್ನೆಗಳು ನನ್ನಿಂದ. ಅವನು ಮುಂದುವರೆಸುತ್ತಾ ಹೋದ. ನನ್ನ ಪ್ರಶ್ನೆಗಳು ಜೋರಾದ ನಂತರ ಪೂತರ್ಿ ಶರಣಾಗತನಂತೆ ಸತ್ಯವನ್ನಷ್ಟೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದವನಂತೆ ಕರುಣಾಜನಕವಾಗಿ ಮಾತನಾಡತೊಡಗಿದ.

ಈ ನಡುವೆ ಅವನು ಬಂದ ಸಾರ್. ಬಾಂಬೆಯವನು. ಯಾರೋ ಏನೋ ಗೊತ್ತಿಲ್ಲ. ಇವಳಿಗೆ ಇಂಟರ್ನೆಟ್ನಿಂದ ಪರಿಚಯ. ಅವನು ಬ್ರಾಥಲ್ ನಡೆಸ್ತಾನೆ ಸಾರ್, ನಂಗೊತ್ತು, ನಾ ತನಿಖೆ ಮಾಡಿದ್ದೇನೆ. ನನ್ನ ಹತ್ರ ಪ್ರೂಫ್ ಇದೆ. ಒಂದ್ ದಿನ ಇವಳ ಮೊಬೈಲ್ ಚೆಕ್ ಮಾಡಿದಾಗ ಎಲ್ಲ ಡೀಟೇಲ್ಸು ಗೊತ್ತಾಯ್ತು. ನನ್ನ ಫ್ರೆಂಡ್ ಅಂತಾಳೆ, ಹೇಗೆ ನಂಬೋದು ಸಾರ್. ಅವನ ಜತೆ ಫೋನಲ್ಲಿ ಮಾತಾಡಿದೆ. ಕೆಟ್ಟದಾಗಿ ಮಾತಾಡಿದ ನಂಜೊಂತೆ, ಬೇಕಾದ್ರೆ ನೋಡಿ ನಾ ರೆಕಾರ್ಡ್ ಮಾಡ್ಕೊಂಡಿದ್ದೀನಿ..

ಮಾತು ಮಾತಿನ ನಡುವೆ ಅವನು ತನ್ನ ಸಾಕ್ಷ್ಯಗಳನ್ನೆಲ್ಲ ನನ್ನ ಮುಂದೆ ಮಂಡಿಸುತ್ತಿದ್ದ. ಬಾಂಬೆಯವನ ಫೇಸ್ ಬುಕ್ ಪೇಜ್ನ ಲಿಂಕುಗಳು, ಅವನು ನಡೆಸುವ ಗ್ರೂಪ್ನ ವಿವರಗಳು, ಇತ್ಯಾದಿ ಇತ್ಯಾದಿ…

ಅವನು ತನ್ನ ಸಾಕ್ಷ್ಯಗಳ ಕುರಿತು ತೋರುತ್ತಿದ್ದ ವಿಪರೀತ ಆಸಕ್ತಿಯಿಂದಲೇ, ಅವನ ಸಾಕ್ಷ್ಯಗಳ ಮೇಲೆ ನನಗೆ ಆಸಕ್ತಿ ಹೊರಟುಹೋಗಿತ್ತು. ಅವುಗಳನ್ನೆಲ್ಲ ನಿರ್ಲಕ್ಷ್ಯದಿಂದ ಪಕ್ಕಕ್ಕೆ ಸರಿಸಿ, ಮುಂದೇನಾಯ್ತು ಹೇಳು ಅಂದೆ.

ಒಂದ್ ತಪ್ ಕೆಲಸ ಮಾಡಿಬಿಟ್ಟೆ ಸಾರ್. ಒಂದು ಮಹಿಳಾ ಸಂಘದ ಅಧ್ಯಕ್ಷರೊಬ್ಬರಿದ್ದಾರೆ ಸಾರ್ ವಿಜಯಮ್ಮ ಅಂತ. ಅವರ ಹತ್ರ ಹೇಳ್ಕೊಂಡೆ. ಅವರು ನಿನ್ನ ಸಮಸ್ಯೆಗೆ ಪರಿಹಾರ ಆಗಬೇಕು ಅಂದ್ರೆ ಒಂದು ಟೀವಿ ಶೋಗೆ ಹೋಗಬೇಕು. ಅನುರಾಧ ಅಂತ ಫಿಲ್ಮ್ ಆಕ್ಟರ್ ಗೊತ್ತರು ತಾನೇ ನಿಂಗೆ? ಸೀರಿಯಲ್ನಲ್ಲೂ ಮಾಡ್ತಾರೆ. ತುಂಬಾ ಒಳ್ಳೆಯವರು. ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ? ಅವರೇ ಕಾರ್ಯಕ್ರಮ ನಡೆಸಿಕೊಡೋದು. ಅವರಿಗೆ ಒಂಥರಾ ಡಿವೈನ್ ಶಕ್ತಿಗಳಿವೆ ಅಂತಾರೆ. ಅವರ ಕೊರಳಲ್ಲಿ ದಪ್ಪದಪ್ಪ ರುದ್ರಾಕ್ಷಿ ಮಾಲೆ ಇರುತ್ತೆ, ಎದುರಿಗೆ ಕೂತವರ ನೆಗಟಿವ್ ಎನರ್ಜಿನೆಲ್ಲ ಆ ಮಣಿಗಳು ಹೀರಿ ಬಿಡ್ತಾವಂತೆ. ಎಲ್ಲರ ಸಮಸ್ಯೆಗಳನ್ನು ಮಾತಾಡಿ ಬಗೆಹರಿಸಿಬಿಡ್ತಾರೆ, ನಿಮ್ಮಿಬ್ಬರ ಸಮಸ್ಯೆ ಪರಿಹಾರವಾಗುತ್ತೆ. ಆದ್ರೆ ಒಂದು ಕಂಡಿಷನ್, ನಿನ್ನ ಹೆಂಡತಿಗೆ ಅಲ್ಲಿಗೆ ಹೋಗೋದು ಗೊತ್ತಾಗೋದು ಬೇಡ, ಹೋದ ಮೇಲೆ ಹೇಗೂ ಗೊತ್ತಾಗುತ್ತೆ. ಏನಾದ್ರೂ ಬೇರೆ ಕಾರಣ ಹೇಳಿ ಕರೆದುಕೊಂಡು ಬಂದುಬಿಡು. ಬಾಂಬೆಯವನ ಫೋನ್ ನಂಬರ್ ಕೊಡು, ಅವನನ್ನು ಕರೆಸೋ ಜವಾಬ್ದಾರಿ ಚಾನಲ್ ನವರದ್ದು. ಅವರು ಹೇಗಾದ್ರೂ ಕರೆಸಿಕೊಳ್ತಾರೆ…

ವಿಜಯಮ್ಮ ಹೇಳಿದ್ದನ್ನು ನಾನು ನಂಬಿದೆ ಸಾರ್, ಅವರು ಹೇಳಿದ ಹಾಗೇನೇ ಮಾಡಿದೆ.
ವಿಷಯನೂ ಹೇಳದೇ ಹೆಂಡತಿನಾ ಯಾಕ್ ಕರ್ಕೊಂಡ್ ಹೋದೆ? ಅಂತ ರೇಗಿದೆ.
ಏನ್ ಮಾಡಲಿ ಸಾರ್, ಅದೇ ನಾನ್ ಮಾಡಿದ ತಪ್ಪು ಎನ್ನುತ್ತ ತಲೆತಗ್ಗಿಸಿಕೊಂಡ. ಕಥೆ ಮುಂದುವರೆಯಿತು.

ಮುಂದಿನದ್ದನ್ನು ನಾನೂ ಟೀವಿಯಲ್ಲಿ ನೋಡಿದ್ದೆ. ಕೌಟುಂಬಿಕ ಸಮಸ್ಯೆಗಳನ್ನು ಒಂಥರಾ ಹಳ್ಳಿ ಪಂಚಾಯ್ತಿ ರೀತಿಯಲ್ಲಿ ಬಗೆಹರಿಸುವ ಕಾರ್ಯಕ್ರಮ ಅದು. ಕಾರ್ಯಕ್ರಮದಲ್ಲಿ ಜಗಳ ಆಗುತ್ತೋ ಅಥವಾ ಜಗಳಕ್ಕಾಗಿ ಕಾರ್ಯಕ್ರಮ ಮಾಡ್ತಾರೋ ಗೊತ್ತಾಗೋದೇ ಇಲ್ಲ. ನಿರೂಪಕಿ ಜಗಳ ಮಾಡಿಕೊಂಡು ಬಂದವರನ್ನು ಪ್ರಶ್ನೆ ಕೇಳುವ ಧಾಟಿಯಲ್ಲೇ ಜಗಳ ಮಾಡಿಸುವ ಸಂಚು ಕಾಣಿಸುತ್ತದೆ. ಆಮೇಲೆ ಚಪ್ಪಲಿಯಲ್ಲಿ ಹೊಡೆಯೋ ಪ್ರೋಗ್ರಾಂ. ಕ್ಯಾಮೆರಾಗಳು ಎಲ್ಲಾ ದಿಕ್ಕುಗಳಿಂದಲೂ ಓಡಾಡುತ್ತೆ. ನಿರೂಪಕಿ ಮಾತ್ರ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿರುತ್ತಾರೆ. ನೆಗೆಟಿವ್ ಎನರ್ಜಿ ಹೀರುವ ಮಣಿಗಳು ಫಳಫಳ ಹೊಳೆಯುತ್ತಾ ಇರುತ್ತವೆ.

ಇವನ ವಿಷಯದಲ್ಲಿ ನಡೆದದ್ದೂ ಅದೇನೇ. ಬಾಂಬೆಯವನನ್ನು ಚಾನಲ್ ನವರೇ ಪುಸಲಾಯಿಸಿ ಏರ್ ಟಿಕೆಟ್ ಮಾಡಿಸಿ ಕರೆಸಿಕೊಂಡಿದ್ದರು. ಹೀಗೆ ಕ್ಯಾಮೆರಾಗಳ ಎದುರು, ಲಕ್ಷಾಂತರ ಕಣ್ಣುಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಸಿಕೊಳ್ಳಬೇಕಾದ ಅಸಹಾಯಕತೆಯಿಂದಾಗಿ ಈಕೆ ಕಂಗೆಟ್ಟಿದ್ದಳು. ಅನುರಾಧರಿಂದ ಪ್ರಶ್ನೆಗಳ ಕೂರಂಬು ತೂರಿಬರುತ್ತಲೇ ಇತ್ತು. ಆಕೆ ಅಳ್ತಾ ಇದ್ದಳು, ತನ್ನನ್ನು ಯಾವುದೋ ಜ್ಯೋತಿಷಿ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿ ಇಲ್ಲಿಗೆ ಕರೆತಂದು ಮರ್ಯಾದೆ ಕಳೆದ ಗಂಡನ ಮೇಲೆ ಅಸಹನೆಯಿಂದ ಮಿಡುಕುತ್ತಿದ್ದಳು. ಪರಪುರುಷನ ಜತೆ ಸ್ನೇಹ ಮಾಡಿದ ಹೆಂಡತಿಯ ಮೇಲೆ ಸೇಡು ತೀರಿಸಿಕೊಂಡ ವಿಕೃತ ಸಂತೋಷ ಇವನ ಮುಖದಲ್ಲಿ.

ಚರ್ಚೆ ನಡೆಯುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಇವನ ತಮ್ಮ ಸಭಿಕರ ಸಾಲಿನಿಂದ ಎದ್ದುಬಂತು ಬಾಂಬೆಯವನ ಮೇಲೆ ಎರಗಿ ದಾಳಿ ಮಾಡುತ್ತಾಳೆ. ಅದರಿಂದ ಸ್ಫೂರ್ತಿ ಪಡೆದ ಇವನು ಹೆಂಡತಿಯನ್ನೇ ಎಲ್ಲರ ಎದುರು ಬಾರಿಸುತ್ತಾನೆ. ಇಬ್ಬರೂ ನೆಲದ ಮೇಲೆ ಬಿದ್ದು ಒದ್ದಾಡುತ್ತಾರೆ. ಅನುರಾಧ ಗಲಾಟೆ ಮಾಡಬೇಡಿ ಎಂದು ಹಣೆಹಣೆ ಚಚ್ಚಿಕೊಂಡು ಹೇಗೋ ಒಂದು ಬ್ರೇಕ್ನ ಬಳಿಕ ಎಲ್ಲರನ್ನೂ ಸಮಾಧಾನಪಡಿಸುತ್ತಾಳೆ.

ಏನಮ್ಮಾ, ಕಡೆದಾಗಿ ಕೇಳ್ತಾ ಇದ್ದೀನಿ, ಏನ್ ಮಾಡ್ತೀಯಾ? ಎಂದು ನಿರೂಪಕಿ ಘಟವಾಣಿ ಹೆಂಗಸಿನ ಶೈಲಿಯಲ್ಲಿ ಈಕೆಯನ್ನು ಕೇಳುತ್ತಾಳೆ. ನಾನು ಬಾಂಬೆಯವನ ಜತೆ ಹೋಗ್ತೀನೋ ಇಲ್ವೋ ಗೊತ್ತಿಲ್ಲ, ಆದರೆ ನನ್ನನ್ನು ಇಲ್ಲಿಗೆ ತಂದು ಮಯರ್ಾದೆ ಕಳೆದ ಗಂಡನ ಮನೆಗಂತೂ ಹೋಗಲಾರೆ ಎಂದು ಆಕೆ ಅಲ್ಲಿಂದ ಎದ್ದುಹೋಗುತ್ತಾಳೆ. ಮತ್ತೆ ಒಂದಷ್ಟು ಗಲಾಟೆ, ಪೊಲೀಸರು, ರಂಪಾಟ. ಅಲ್ಲಿಗೆ ಎಪಿಸೋಡು ಮುಗಿಯುತ್ತದೆ.

ಇವನು ನನ್ನ ಬಳಿ ಬರುವುದಕ್ಕೂ ಮುನ್ನವೇ, ನನ್ನ ಗೆಳತಿ ಈ ಕಾರ್ಯಕ್ರಮದ ವಿಡಿಯೋ ಲಿಂಕ್ಗಳನ್ನು ನನಗೆ ಕಳುಹಿಸಿದ್ದಳಾದ್ದರಿಂದ ಈ ಎಲ್ಲ ಕದನವನ್ನೂ ನೋಡಿದ್ದೆ.
ಅಲ್ಲಪ್ಪ, ಆ ಹೆಣ್ಣುಮಗಳ ಮೇಲೆ ಹಾಗೆ ಕೈ ಮಾಡಿದೆಯಲ್ಲ, ಅಸಹ್ಯ ಅನ್ನಿಸಲ್ವಾ ನಿನ್ನ ಮೇಲೆ ನಿನಗೆ? ಅಂತ ಕೇಳಿದೆ. ನಿಜ ಹೇಳಬೇಕೆಂದರೆ ಇವನನ್ನು ಎದುರಿಗೆ ಕೂರಿಸಿಕೊಂಡು ಮಾತಾಡ್ತಾ ಇದ್ದಿದ್ದಕ್ಕೇ ನನಗೆ ನನ್ನ ಮೇಲೆ ಅಸಹ್ಯ ಹುಟ್ಟುವಂತಾಗಿತ್ತು. ಸಾರ್, ತಪ್ಪಾಯ್ತು, ಹಾಗೆ ಮಾಡಬಾರದಿತ್ತು ಎನ್ನುತ್ತ ಮುಷ್ಠಿ ಬಿಗಿಹಿಡಿದು ತನ್ನ ಬಲಗೈಗೆ ಶಿಕ್ಷೆ ಕೊಡುತ್ತಿರುವಂತೆ ತಿರುಚಿದ.
ಏನ್ ಮಾಡಲಿ ಸಾರ್, ಪ್ರೋಗ್ರಾಂನವರು ಮೊದಲೇ ನನ್ನ ತಮ್ಮನ ಜತೆ ಮಾತಾಡಿದ್ದರಂತೆ. ನಾವು ಸಿಗ್ನಲ್ ಕೊಡ್ತೀವಿ. ಅವಾಗ ಬಂದು ಬಾಂಬೆಯವನಿಗೆ ನಾಲ್ಕು ತದುಕು. ಉಳಿದದ್ದು ನಾವು ನೋಡ್ಕೋತೀವಿ ಅಂತ. ನಾವು ಮಾತಾಡೋ ಟೈಮಿನಲ್ಲಿ ಸಿಗ್ನಲ್ ಬಂದಿದೆ. ಅವನು ಬಂದು ಹೊಡೆದ. ಅದನ್ನು ಇವಳು ಪ್ರತಿಭಟಿಸಿದ್ದು ನಂಗೆ ಸರಿ ಅನಿಸಲಿಲ್ಲ, ಕೋಪದಿಂದ ಹೊಡೆದೆ ಸಾರ್, ಹೊಡೀಬಾರದಿತ್ತು ಸಾರ್ ಅಂದ.

ಸರಿ, ಆಮೇಲೇನಾಯ್ತು, ಅದನ್ನಾದ್ರೂ ಹೇಳು ಅಂದೆ.
ಇನ್ನೇನ್ ಸಾರ್, ಎಲ್ಲಾ ಮುಗಿದುಹೋಯ್ತು. ಇವಳು ಹೋಗಿ ತವರು ಮನೆಯಲ್ಲಿ ಕೂತ್ಕೊಂಡಳು. ವಾಪಾಸ್ ಬಾ ಅಂತ ಫೋನ್ ಮಾಡಿ ಹೇಳಿದೆ. ಕೇಳಲಿಲ್ಲ. ಅವಳು ರಸ್ತೆಯಲ್ಲಿ ಓಡಾಡದಂತೆ ಆಗೋಗಿದೆ ಸಾರ್. ನಿಮಗೇ ಗೊತ್ತಲ್ವಾ ಸಾರ್, ನಮ್ಮ ಎಪಿಸೋಡು ಮೂರು ದಿನ ಪ್ರಸಾರ ಮಾಡಿದ್ರು ಚಾನಲ್ನಲ್ಲಿ. ಅದರ ಮೇಲೆ ರಿಪೀಟ್ ಟೆಲಿಕಾಸ್ಟ್ಗಳು ಬೇರೆ. ತುಂಬಾ ಜನ ನೋಡಿದ್ದಾರೆ. ಯಾರು ಸಿಕ್ಕರೂ ನೀವು ಟೀವಿಯಲ್ಲಿ ಬಂದಿದ್ರಿ ಅಲ್ವಾ ಅಂತಾರೆ. ನನಗೇ ತಲೆ ಎತ್ತಿಕೊಂಡು ತಿರುಗಾಡೋದಕ್ಕೆ ಸಾಧ್ಯವಾಗ್ತಾ ಇಲ್ಲ. ಇನ್ನು ಅವಳ ಕಥೆ ನೀವೇ ಯೋಚನೆ ಮಾಡಿ ಸಾರ್.

ಸಾರ್, ಶೂಟಿಂಗ್ ಆದ ಮೇಲೆ ನಾನು ಮಾಡಿದ್ದು ತಪ್ಪು ಅಂತ ನಂಗೆ ಗೊತ್ತಾಯ್ತು. ಶೋನ ದಯವಿಟ್ಟು ಪ್ರಸಾರ ಮಾಡಬೇಡಿ. ಮಾಡಿದರೆ ನಾನು, ನನ್ನ ಹೆಂಡ್ತಿ ಒಂದಾಗೋದಕ್ಕೆ ಇರೋ ಕಡೆಯ ಅವಕಾಶನೂ ಹಾಳಾಗುತ್ತೆ ಅಂತ ಪರಿಪರಿಯಾಗಿ ಬೇಡಿಕೊಂಡೆ ಸಾರ್. ಅವರು ಕೇಳಲೇ ಇಲ್ಲ. ಕೋಟರ್ಿನಲ್ಲಿ ಸ್ಟೇ ತಗೊಳ್ಳೋದಕ್ಕೆ ಸಮಯ ಇರಲಿಲ್ಲ ಸಾರ್, ರಜೆ ಬಂದಿತ್ತು. ಕಡೆಗೆ ಗಾಂಧಿನಗರದಲ್ಲಿ ಇದ್ದಾರಲ್ಲ ಸಾರ್, ಫೇಮಸ್ ಲಾಯರ್ ಎಸ್.ಸಿ. ಮಥುರಾನಾಥ್ ಅಂತ. ಅವರ ಬಳಿ ಹೋದೆ. ಅವರು ಒಂದು ಲೀಗಲ್ ನೋಟಿಸ್ ಕೊಟ್ರು ಚಾನಲ್ಗೆ. ಯಾವುದೇ ಕಾರಣಕ್ಕೂ ಪ್ರಸಾರ ಮಾಡಬಾರದು ಅಂತ. ಅವರು ಕ್ಯಾರೇ ಅನ್ನಲಿಲ್ಲ ಸಾರ್, ಪ್ರಸಾರ ಮಾಡೇಬಿಟ್ರು.

ಅದ್ಸರಿ ಈಗೇನ್ ಮಾಡೋದು? ಏನ್ ಮಾಡಿದರೆ ನಿನ್ನ ಪತ್ನಿ ವಾಪಾಸ್ ಬರ್ತಾಳೆ ಅಂದುಕೊಂಡಿದ್ದೀಯಾ?
ಗೊತ್ತಾಗ್ತಾ ಇಲ್ಲ ಸಾರ್. ತುಂಬಾ ಜನರ ಹತ್ರ ಹೋಗಿ ಕೇಳಿದೆ. ಎಲ್ಲರೂ ಬೇರೆಬೇರೆಯಾಗಿಬಿಡಿ, ಲೀಗಲ್ ಆಗಿ ಸೆಪರೇಟ್ ಆಗಿಬಿಡಿ ಅಂತಾರೆ. ಅವರಿಗೇನ್ ಗೊತ್ತು ಸಾರ್. ನನ್ನ ಹೆಂಡತಿ ಒಳ್ಳೆಯವಳು. ಹತ್ತು ವರ್ಷ ಸಂಸಾರ ಮಾಡಿದ್ದೀನಿ ಸಾರ್. ಮಗು ತಾಯಿ ನೆನಪಿಸಿಕೊಂಡು ಅಳುತ್ತೆ. ಕೌನ್ಸಿಲಿಂಗ್ ಮಾಡಿಸ್ತಾ ಇದ್ದೀನಿ. ಸರಿ ಹೋಗ್ತಾ ಇಲ್ಲ. ನಂಗೆ ಅವಳು ಬೇಕು ಸಾರ್, ಅವಳು ಬೇಕು….
ಇವನು ಇಷ್ಟೆಲ್ಲ ಮಾತನಾಡುವಾಗ ಡಾ. ನೀಲಾ ನೆನಪಾದರು. ಮಹಿಳೆಯರಿಗೆ ಸಂಬಂಧಿಸಿದ ಎನ್ಜಿಓದಲ್ಲಿ ಕೆಲಸ ಮಾಡ್ತಾ ಇರೋರು ಅವರು. ಲೈಂಗಿಕ ಶೋಷಿತ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ಕೆಲಸಮಾಡಿದವರು. ಅವರು ಇವನಿಗೂ ಪರಿಚಯವಿತ್ತು. ಸಮಸ್ಯೆ ಹೀಗಿದೆ ಮೇಡಂ, ಬನ್ನಿ ಮಾತಾಡೋಣ ಅಂದೆ, ಮಾರನೇ ದಿನವೇ ಅವರೂ ಬಂದರು. ಮತ್ತೆ ಅವರೆದುರು ಎಲ್ಲ ವಿಷಯಗಳು ಪ್ರಸ್ತಾಪವಾದವು. ಇವನ ಬ್ಯಾಗ್ ತುಂಬಾ ಬಾಂಬೆಯವನ ವಿರುದ್ಧದ ಸಾಕ್ಷ್ಯಗಳು.

ನಾನೂ, ಮೇಡಂ ಇಬ್ಬರೂ ರೇಗಿದೆವು. ನಿಮ್ಮ ಸಾಕ್ಷ್ಯಗಳನ್ನೆಲ್ಲ ಮೊದಲು ಬೆಂಕಿಗೆ ಹಾಕಿ ಆಮೇಲೆ ನಿಮ್ಮಿಬ್ಬರ ಸಂಬಂಧ ಸುಧಾರಿಸಿಕೊಳ್ಳೋದಕ್ಕೆ ಪ್ರಯತ್ನಪಡು. ನಿನ್ನ ಸಾಕ್ಷ್ಯಗಳು ನಿನ್ನ ವಿರುದ್ಧವೇ ಕೆಲಸ ಮಾಡಿವೆ. ಅವುಗಳಿಂದಾಗಿಯೇ ನೀನು ಕೆಟ್ಟಿದ್ದೀಯ. ನಿನ್ನನ್ನು ನೀನು ಸಮಥರ್ಿಸಿಕೊಳ್ಳುವುದಕ್ಕೆ ಅವಳನ್ನು ಕೆಟ್ಟವಳನ್ನಾಗಿಮಾಡಬೇಕಿತ್ತು. ಅದನ್ನು ನೀನು ಯಶಸ್ವಿಯಾಗಿ ಮಾಡಿದ್ದೀ. ಇನ್ನೇನೂ ಉಳಿದಿಲ್ಲ. ಆಕೆಗೆ ಬದುಕುವ ಮಾರ್ಗವನ್ನೇ ಬಂದ್ ಮಾಡಿದ್ದೀಯ. ಅವಳು ಈಗ ನಿನ್ನ ಜತೆ ನಾಯಿಯಂತೆ ಬದುಕಿರುತ್ತಾಳೆ ಅನ್ನೋದು ನಿನ್ನ ಲೆಕ್ಕಾಚಾರವಾಗಿದ್ದಿರಬೇಕು. ಆದರೆ ಅವಳ ಕಣ್ಣಿನಲ್ಲಿ ನೀನು ಪಾತಾಳಕ್ಕೆ ಇಳಿದುಹೋಗಿದ್ದೀಯಾ. ಹಾಗಾಗಿ ಅವಳು ನಿನ್ನ ಜತೆ ಬದುಕೋದು ಸಾಧ್ಯವೇ ಇಲ್ಲ ಅನ್ನಿಸುತ್ತೆ.

ನಾವಿಬ್ಬರೂ ಅಥವಾ ಇಡೀ ಸಮಾಜವೇ ಬಂದು ಅವಳ ಎದುರು ನಿಂತು, ನಿನ್ನ ತಪ್ಪುಗಳನ್ನು ಮನ್ನಿಸಿ ನಿನ್ನ ಜತೆ ಸಂಸಾರ ಮುಂದುವರೆಸಲು ಹೇಳಿದರೂ ಆಕೆ ಕೇಳಲಾರಳೇನೋ. ಹೀಗಾಗಿ ನಾವು ಮಾತಾಡೋದೂ ಸರಿಯಲ್ಲ. ನಿನ್ನ ಪರವಾಗಿ ಮಾತನಾಡೋದಕ್ಕೂ ಏನೂ ಉಳಿದಿಲ್ಲ.

ಈಗ ನಿನಗಿರೋದು ಒಂದೇ ದಾರಿ. ಅವಳ ಕಾಲು ಹಿಡಿದು ಅವಳನ್ನು ಒಪ್ಪಿಸೋದು. ನಿನ್ನ ಮೇಲಿಟ್ಟ ನಂಬಿಕೆಯನ್ನು ನೀನು ಒಡೆದು ಚೂರು ಮಾಡಿದ್ದೀ. ಅದನ್ನು ಸರಿಪಡಿಸಿಕೊಳ್ಳುವುದು ಒಂದು ಭೇಟಿ, ಒಂದು ಸಿಟ್ಟಿಂಗ್ನಲ್ಲಿ ಆಗುವ ಕೆಲಸವಲ್ಲ. ನೋಡು ಪ್ರಯತ್ನಪಡು, ಉಳಿದದ್ದು ನಿನಗೆ ಸೇರಿದ್ದು…
ಹೀಗೆಂದು ನಾವು ಸುಮ್ಮನಾದೆವು.

ಅವಳು ಒಪ್ಪದಿದ್ದರೆ ನನ್ನ ಮಗಳ ಕತೆ? ಅವಳು ಮಾನಸಿಕ ಅಸ್ವಸ್ಥೆಯಾಗಿಬಿಡ್ತಾಳೆ ಸಾರ್ ಎಂದು ಅವನು ಬಿಕ್ಕಿದ.

ನಮ್ಮ ಬಳಿ ಉತ್ತರವಿರಲಿಲ್ಲ. ಟಿವಿ ಕಾರ್ಯಕ್ರಮದ ನಿರೂಪಕಿ ಅನುರಾಧಾ ಅವರನ್ನೇ ಕೇಳಬೇಕೆನಿಸಿತು. ಆಕೆ ಈಗೀಗ ತುಂಬಾ ಬಿಜಿ. ರಾಜಕೀಯ ಪಕ್ಷವೊಂದರ ಕಾರ್ಯಕತರ್ತೆಯಾಗಿ ಅವರು ಸಮಾಜಸೇವೆಯಲ್ಲಿ ತೊಡಗಿದ್ದಾರೆ.

ಮಹಾನಗರಗಳ ಮಾಲಾ ‘ಮಾಲ್’ ಸಂಸ್ಕೃತಿ


-ಡಾ.ಎಸ್.ಬಿ. ಜೋಗುರ


ಆ ರಿಕ್ಷಾದವನಿಗೆ ಅದೇನೋ ನನ್ನ ಬಗ್ಗೆ ಖಾಳಜಿ ಇದ್ದಂಗಿತ್ತು. ನನ್ನ ಮುಖದಲ್ಲಿ ಅವನಿಗೆ ಕಂಡ ಮುಗ್ದತೆಗೆ ನಾನು ಸಾಕ್ಷಿ ಇಲ್ಲವೇ ಕಾರಣವನ್ನೂ ಕೇಳಲು ಹೋಗಲಿಲ್ಲ. ಬದಲಾಗಿ ಆತನ ಎಚ್ಚರಿಕೆಯ ಮಾತುಗಳಿಗೆ ಹೌದೆ..? ಎನ್ನುವ ಪ್ರಶ್ನೆಯನ್ನು ಹಾಕುತ್ತಾ ಹೋದೆ. ನಾನು ಈಚೆಗೆ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದೆ. ಅಂದು ರವಿವಾರ ಮೆಜೆಸ್ಟಿಕ್‌ಗೆ ಹತ್ತಿರವಿರುವ ಮಾಲ್ ಒಂದಕ್ಕೆ ಭೇಟಿ ನೀಡಲು ತೆರಳುವಾಗ ಆ ರಿಕ್ಷಾದವನು ಹೀಗೆ ಉಪದೇಶಿಸಿದ್ದ. ‘ಸರ್ ಅಲ್ಲಿ ಏನೂ ಖರೀದಿ ಮಾಡಬೇಡಿ..! ತುಂಬಾ ಕಾಸ್ಟ್ಲೀ ಅಲ್ಲೇನಿದ್ದರೂ ಬರೀ ಒಂದು ಸುತ್ತು ಹಾಕಿ ಬರಬೇಕು ಅಷ್ಟೇ’ ಅಂದ. ನನ್ನಂಥ ಮಧ್ಯಮ ವರ್ಗದವನಿಗೆ ಈ ಮಾಲ್‌ಗಳು ಅಲ್ಲಿಯ ಜಿಗ್ ಜಾಗ್ ನಿಂದಾಗಿ ತುಂಬಾ ಕಮಾಲ್ ಆಗಿ ಕಂಡರೂ ಒಳಗೊಳಗೆ ಒಂದು ಸಣ್ಣ ಭಯ ಇದ್ದೇ ಇರುತ್ತದೆ. ಆ ಭಯದ ಹಿಂದೆ ಆ ರಿಕ್ಷಾದವನ ಎಚ್ಚರಿಕೆಯ ಮಾತುಗಳು ಕೂಡಾ ಅಡಕವಾಗಿರುತ್ತವೆ.

ರವಿವಾರದ ಆ ಜನಜಂಗುಳಿಯನ್ನು ಕಂಡು ಈ ಮಾಲ್‌ಗಳು ಸದ್ಯದ ಯುವಜನಾಂಗದವರಲ್ಲಿ ಅದು ಯಾವ ಬಗೆಯ ಕೊಳ್ಳುಬಾಕತನದ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿವೆ ಎನ್ನುವುದನ್ನು ಕಣ್ಣಾರೆ ಕಂಡು ಹೌಹಾರಿದೆ. ನನ್ನ ಮಗ ನೋಡಬೇಕೆಂದ ಇಂಗ್ಲಿಷ ಸಿನೇಮಾ ಒಂದರ ಟಿಕೆಟ್ ದರ ಕೇವಲ 520 ರೂಪಾಯಿ ಮಾತ್ರ..! ಅತ್ಯಂತ ಕಡುಬಡತನದಲ್ಲಿ ಬೆಳೆದ ನನಗೆ ಅವ್ವ ಸಾಸಿವೆ ಡಬ್ಬಿಯಲ್ಲಿ ಹುದುಗಿಸಿಡುತ್ತಿದ್ದ ಎಂಟಾಣೆ ನೆನಪಾಗಿ ಒಂದು ಬಾರಿ ಸಣ್ಣಗೆ ಕಂಪಿಸಿ ಹೋದೆ. ಹಣ ಈ ಮಟ್ಟಿಗೆ ಅಗ್ಗವಾಗಿದೆ ಎನ್ನುವುದರ ಪ್ರತ್ಯಕ್ಷ ನಿದರ್ಶನವನ್ನು ಈ ಮಾಲ್‌ನಲ್ಲಿ ನಾನು ಕಂಡೆ. ಬರ್ಫಿಗೆ ಬಣ್ಣ ಸುರಿದು, ಗೋಲಾ ಎಂದು ಮಕ್ಕಳ ಕೈಗಿಡುವ ಐಸ್‌ಗೆ 40 ರೂಪಾಯಿ. ಬದುಕು ಇಷ್ಟೊಂದು ದುಬಾರಿಯಾಯಿತಲ್ಲ..! ಎಂದುಕೊಳ್ಳುತ್ತಲೇ ಮಗನ ಸಣ್ಣ ಬಯಕೆಯನ್ನು ಈಡೇರಿಸಿ ಹಗುರಾಗಿದ್ದೆ.

ಬೆಂಗಳೂರಲ್ಲಿ ಈಗ ಮಾಲ್ ಕಲ್ಚರ್ ರಭಸದಿಂದ ಬೆಳೆಯುತ್ತಿದೆ ಎನ್ನುವುದನ್ನು ಒಬ್ಬ ಸಾಮಾನ್ಯ ರಿಕ್ಷಾ ಓಡಿಸುವಾತನೂ ಬಲ್ಲ. ನಿಜ. ಈ ಮಾಲ್‌ಗಳಿಗೊಂದು ವಿಶಿಷ್ಟ ಮತ್ತು ವಿಚಿತ್ರ ಬಗೆಯ ಸಂಸ್ಕೃತಿಯಿದೆ. ಈ ಬಗೆಯ ಜೀವನ ವಿಧಾನದಲ್ಲಿ ಒಂದು ಬಗೆಯ ಪರಕೀಯ ಪ್ರಜ್ಞೆ ನನ್ನಂಥವನನ್ನು ಕಾಡುವುದಿದೆ. ಇಲ್ಲಿಯ ಜನರ ಮಾತು, ವ್ಯವಹಾರ, ಖರ್ಚು ಮಾಡುವ ರೀತಿ, ಆಯ್ಕೆ, ವೇಷ ಭೂಷಣ ಇವೆಲ್ಲವುಗಳ ನಡುವೆ ನನ್ನಂಥಾ ಯಾರೇ ಆಗಲಿ ತುಸು ಹಿಂದುಳಿದವರಂತೆ ಭಾಸವಾಗುವುದು ಸಹಜವೇ.. ಅಲ್ಲಿಯ ಆಹಾರದ ಪದ್ಧತಿ ಪಕ್ಕಾ ಪರದೇಶಿಯದು ಅನ್ನುವಂತಹದು. ಎಳೆಯ ಗೋಧಿ ಹುಲ್ಲಿನ ಜ್ಯೂಸ್‌ನಿಂದ ಹಿಡಿದು ಗೋವಿನ ಜೋಳದ ಕಾಳಿನವರೆಗೂ ಅಲ್ಲಿ ಪಾಲಿಶ್ ಆಗಿ ಪರಕೀಯತೆಯ ಡೌಲಲ್ಲಿ ಮಾರಾಟವಾಗುತ್ತಿವೆ. ಸೀದಾ ಸಾದಾ ನಿಂಬೆ ಹಣ್ಣಿನ ರಸವೊಂದು ಹತ್ತಾರು ಬಣ್ಣಗಳಲ್ಲಿ ವಿಧ ವಿಧದ ನಾಮಧೇಯಗಳನ್ನು ಹೊತ್ತು  ಜ್ಯೂಸ್ ಹೆಸರಲ್ಲಿ ಬಯಲಾಗುತ್ತಿದೆ. ತಿನ್ನುವ ಆಹಾರದಿಂದ ಹಿಡಿದು ತೊಡುವ ಬಟ್ಟೆಯವರೆಗೂ ಎಲ್ಲವೂ ಗ್ಲಾಮರಸ್. ಬಹಳಷ್ಟು ಶಾಪಗಳಲ್ಲಿ ಸುತ್ತು ಹಾಕುವಾಗ ಗಮನಿಸಿದ ಒಂದು ಪ್ರಮುಖ ಸಂಗತಿಯೆಂದರೆ ಇಲ್ಲಿಯ ಬಹುತೇಕ ಶಾಪ್‌ಗಳಲ್ಲಿ ಕನ್ನಡ ಮಾತನಾಡುವವರು ತುಂಬಾ ವಿರಳ. ಎಲ್ಲವೂ ಇಂಗ್ಲಿಷಮಯ. ದಿಪಂಕರ್ ಗುಪ್ತಾ ಅವರು ತಮ್ಮ ‘ಮಿಸ್ಟೇಕನ್ ಮಾಡರ್ನಿಟಿ’ ಎನ್ನುವ ಕೃತಿಯಲ್ಲಿ ಬಳಸಿದ ‘ವೆಸ್ಟಾಕ್ಸಿಕೇಶನ್’ ಎನ್ನುವ ಪದದ ಅಂತರಂಗೀಕರಣ ಈ ಮಾಲ್‌ಗಳಲ್ಲಿ ಎದ್ದು ತೋರುತ್ತದೆ.

ನಮ್ಮ ಯುವಜನಾಂಗವನ್ನು ಈ ಮಾಲ್‌ಗಳು ಇನ್ನಷ್ಟು ಹೈಬ್ರಿಡ್ ಮಾಡುತ್ತಿವೆಯೇನೋ ಎನ್ನುವ ಅಳುಕು ಕೂಡಾ ಸಮಾಜಶಾಸ್ತ್ರದ ವಿದ್ಯಾರ್ಥಿಯಾದ ನನ್ನನ್ನು ಈ ಮಾಲ್ ಸಂಸ್ಕೃತಿ ಕಾಡಿರುವುದಿದೆ. ಜಾಗತೀಕರಣದ ಸಂದರ್ಭದಲ್ಲಿ ಈ ಮಾಲ್‌ಗಳು ಪಾಶ್ಚಾತ್ತೀಕರಣದ ಗುಂಗಿನಲ್ಲಿರುವವರಿಗೆ ಸಮಾಧಾನಕರ ಅಡ್ಡೆಗಳಾಗಿ ಕಂಡು ಬಂದರೆ, ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನಂಥವರಿಗೆ ಗ್ರಾಮ-ನಗರಗಳ ಅಂತರದ ತೀವ್ರತೆಯ ಪ್ರತಿಮೆಗಳಾಗಿ ತೋರುವುದರಲ್ಲಿ ಒಂದು ಅರ್ಥವಿದೆ. ಅಂದು ರವಿವಾರವಾಗಿತ್ತಾದ್ದರಿಂದ ಮಾಲ್ ತುಂಬಿ ತುಳುಕುತ್ತಿತ್ತು. ಈ ಮಾಲ್‌ಗಳು ಬೆಂಗಳೂರಿನ ಮಾಲಾಮಾಲ್‌ಗಳೆಂದು ಪತ್ನಿಗೆ ಹೇಳಿದೆ. ಅವಳೂ ಕೂಡಾ ‘ದುಡ್ಡಿಗೆ ಬೆಲೆನೇ ಇಲ್ದಂಗ ಆಯ್ತಲ್ಲ..!’ ಎನ್ನುವ ಮಾತಿನೊಂದಿಗೆ ಅಲ್ಲಿಂದ ಹೊರನಡೆದಿದ್ದಳು. ಹೌದು ಇಲ್ಲಿ ಹಣವಿಲ್ಲದೇ ಇರುವವರು ತಮ್ಮ ಅಸ್ಥಿತ್ವವನ್ನೇ ಪ್ರಶ್ನಿಸುತ್ತಾ ಅಲೆಯಬೇಕು. ದೊಡ್ಡ ಪ್ರಮಾಣದ ಬಂಡವಾಳವನ್ನು ತೊಡಗಿಸಿ ಅತ್ಯಂತ ಗ್ಲಾಮರಸ್ ಆಗಿ ನಿರ್ಮಿಸಿರುವ ಈ ಮಾಲ್‌ಗಳ ಘನ ಉದ್ದೇಶ ಇಲ್ಲಿಯ ವ್ಯವಹಾರವನ್ನು ಮಾಲಾಮಾಲ್ ಮಾಡುವುದಾಗಿದೆ. ಯಾರೋ ನನ್ನಂಥಾ ಒಬ್ಬರೋ ಇಬ್ಬರೋ ಇಲ್ಲಿಯ ದರಗಳಿಗೆ ಹೆದರಿದರೆ ಮಾಲ್‌ಗಳ ವ್ಯವಹಾರ ಸೊರಗುವುದಿಲ್ಲ. ಅಷ್ಟಕ್ಕೂ ಈ ಮಾಲ್‌ಗಳಿಗೆ ನನ್ನಂಥವನು ಬೇಕಾಗಿಯೂ ಇಲ್ಲ.

ಈ ಮಾಲ್‌ಗಳು ಒಂದು ಹೊಸ ಬಗೆಯ ಆರ್ಥಿಕ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿವೆ. ಅದು ಹೈದರಾಬಾದ್, ಪೂನಾ, ಬೆಂಗಳೂರು, ದೆಹಲಿ, ಕೋಲ್ಕತ್ತಾ ದೇಶದ ಯಾವುದೇ ಮಹಾನಗರವಾದರೂ ಈ ಮಾಲ್‌ಗಳಲ್ಲಿಯ ಸಂಸ್ಕೃತಿ ಸಾರೂಪ್ಯತೆಯಿಂದ ಕೂಡಿದ್ದಾಗಿದೆ. ಇಲ್ಲಿಗೆ ಬರುವವರು ಒಳಬರುತ್ತಿರುವಂತೆ ಇಲ್ಲಿಯ ಆಹಾರ, ವಿಹಾರ, ನೋಟ, ನಡಿಗೆ, ಖರ್ಚು ಇವುಗಳಿಗೆ ತಕ್ಕುದಾದ ರೀತಿಯಲ್ಲಿಯೇ ಮಾನಸಿಕವಾಗಿ ಸಜ್ಜಾದವರು. ಮಾಲ್‌ಗಳು ತೀರಾ ಅಪರೂಪಕ್ಕೊಮ್ಮೆ ಬರು ಹೋಗುವ ನನ್ನಂಥವನನ್ನು ಅನ್ಯ ಲೋಕದ ಜೀವಿಯಂತೆಯೆ ಗ್ರಹಿಸುವುದರೊಂದಿಗೆ ಮಾಲ್ ಸಂಸ್ಕೃತಿಯಲ್ಲಿ ನನ್ನಂಥವರನ್ನು ಅರಗಿಸಿಕೊಳ್ಳುವುದಿಲ್ಲ. ನನ್ನಂಥವರು ಸಮುದ್ರದಲ್ಲಿಯ ಶವದಂತೆ ಅಲ್ಲಿ ಹೆಚ್ಚು ಹೊತ್ತು ದಕ್ಕದೇ ದಡಕ್ಕೆ ಬರುವುದು ಖಚಿತ.

ಈ ಮಾಲ್‌ಗೆ ಬರುವ ಮಂದಿಯ ಜೇಬುಗಳು ಮಾಲಾಮಾಲ್ ಆಗಿರುತ್ತವೆ ಎನ್ನುವ ದೃಢನಿಶ್ಚಯದಿಂದಲೇ ಮಾಲ್ ಎದುರಲ್ಲಿರುವ ರಿಕ್ಷಾದವನು ಕೂಡಾ ರವಿವಾರ ತನ್ನ ಆಟೊ ದರವನ್ನು ಹೈಕ್ ಮಾಡಿರುತ್ತಾನೆ. ನಾನು ಮಾಲ್‌ನಿಂದ ಮರಳಿ ಬರುವಾಗ ಇದೇನು ಮಾರಾಯಾ ನಿನ್ನ ರೇಟ್ ದುಪ್ಪಟ್ಟು..? ಅಂದಾಗ ಆತ ತೀರಾ ಸಹಜವಾಗಿಯೇ ನಗುತ್ತಾ ‘ಸರ್ ಇವತ್ತು ಸಂಡೆ ಅಲ್ಲವಾ..? ಇನ್ನೂ ಸ್ವಲ್ಪ ತಡ ಮಾಡಿದರೆ ನಿಮಗೆ ರಿಕ್ಷಾನೂ ಸಿಗೊಲ್ಲ’ ಅಂದಾಗ ಮರು ಮಾತಾಡದೇ ಹತ್ತಿ ಕುಳಿತಿದ್ದೆ. ಮಾಲ್ ಕಡೆಗೆ ತೆರಳುವವರ ದಟ್ಟತೆಯ ಪ್ರಮಾಣದಲ್ಲಿ ಮಾತ್ರ ಇಳಿಮುಖತೆ ಕಾಣಲಿಲ್ಲ.

ಕಂಚ ಐಲಯ್ಯ, ಚಂದ್ರಬಾನು ಪ್ರಸಾದ್, ಡಿಆರ್‌ಎನ್: ವಿಧ್ವಂಸಕಾರಿ ಮತ್ತು ಒಳಗೊಳ್ಳುವಿಕೆ


-ಬಿ. ಶ್ರೀಪಾದ್ ಭಟ್


 

1995 ರ ವರ್ಷವಿರಬೇಕು. ಬೆಂಗಳೂರಿನ ಯವನಿಕಾದಲ್ಲಿ ಲೇಖಕ ಮಂಗ್ಳೂರು ವಿಜಯ ಅವರು ಅನುವಾದಿಸಿದ “ನಾನೇಕೆ ಹಿಂದು ಅಲ್ಲ” ಎನ್ನುವ ಪುಸ್ತಕದ ಬಿಡುಗಡೆ ಮತ್ತು ವಿಚಾರ ಸಂಕಿರಣ ಇತ್ತು. ಇದರ ಮೂಲ ಲೇಖಕ ದಲಿತ ಚಿಂತಕರಾದ ಕಂಚ ಐಲಯ್ಯ. ಅಂದಿನ ಸಮಾರಂಭದಲ್ಲಿ ದಿವಂಗತ ಡಿ.ಆರ್.ನಾಗರಾಜ, ದಲಿತ ಹೋರಾಟಗಾರರಾದ ಗಂಗಾಧರ ಮೂರ್ತಿಯವರು ಭಾಗವಹಿಸಿದ್ದರು. ಪುಸ್ತಕ ಬಿಡುಗಡೆಗೊಳ್ಳುವ ವೇಳೆಯಲ್ಲಿ ಹಿನ್ನೆಲೆಯಲ್ಲಿ ಮಂಗಳ ವಾದ್ಯವನ್ನು ನುಡಿಸಲಾಗಿತ್ತು. ಇದಕ್ಕೆ ಹೋರಾಟಗಾರರಾದ ಗಂಗಾಧರ ಮೂರ್ತಿಯವರು ಆಕ್ಷೇಪಣೆ ವ್ಯಕ್ತಪಡಿಸಿದರು. “ನಾನೇಕೆ ಹಿಂದು ಅಲ್ಲ” ಎನ್ನುವಂತಹ ವೈಚಾರಿಕ ಕೃತಿ ಬಿಡುಗಡೆ ಮಾಡುವಾಗ ಹಿಂದೂ ಧರ್ಮದ ಸನಾತನ ಪರಂಪರೆಯ ಈ ಮಂಗಳ ವಾದ್ಯವನ್ನು ನುಡಿಸುವುದು ಇಡೀ ವಿಚಾರ ಸಂಕಿರಣದ ಹಿನ್ನೆಲೆಗೆ ಅಪಮಾನಕರ ಎನ್ನುವ ಅರ್ಥದಲ್ಲಿ ಗಂಗಾಧರ ಮೂರ್ತಿಯವರು ಹೇಳಿದರು. ಆದರೆ ಡಿ.ಆರ್.ನಾಗರಾಜ್ ಇದಕ್ಕೆ ಒಪ್ಪಲಿಲ್ಲ. ಇದರಲ್ಲಿ ತಪ್ಪೇನಿಲ್ಲ, ನಾವೆಲ್ಲ ಇನ್ನು ಮುಂದೆ ಒಳಗೊಳ್ಳುವಿಕೆಯ (Inclusive policy) ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ದಿವಂಗತ ಡಿ.ಆರ್.ಎನ್. ಹೇಳಿದ್ದು ನೆನಪು.

ಮೊನ್ನೆ 17 ವರ್ಷಗಳ ನಂತರ ಯವನಿಕಾದಲ್ಲಿ ನಡೆದ “ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳು ಹಾಗು ಮುಂದಿನ ದಾರಿ” ಎನ್ನುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ದಲಿತ ಚಿಂತಕ “ಕಂಚ ಐಲಯ್ಯ” ಅವರ ಭಾಷಣವನ್ನು ಕೇಳಿದಾಗ ಮೇಲಿನ ಘಟನೆ ನೆನಪಾಯಿತು. ತಮ್ಮ ತಡೆರಹಿತ ಭಾಷಣದಲ್ಲಿ ಐಲಯ್ಯನವರು ಪುರೋಹಿತಶಾಹಿ ಪರಂಪರೆಗಳಿರಲಿ, ಹಿಂದುಳಿದವರ ದಲಿತರ ಎಲ್ಲಾ ಅವೈದಿಕ ಸ್ಮೃತಿಗಳನ್ನು, ತತ್ವಗಳನ್ನು, ನೆಲ ಸಂಸ್ಕೃತಿಯನ್ನು ಸಹ ಸಂಪೂರ್ಣವಾಗಿ ನಿರಾಕರಿಸಿದರು. ಎಲ್ಲಾ ಹಿಂದುಳಿದ ಮತ್ತು ದಲಿತ ಜಾತಿಗಳು ಇವಕ್ಕೆಲ್ಲ ತಿಲಾಂಜಲಿ ಕೊಟ್ಟು ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂ ಮತದೆಡೆಗೆ ಪಯಣಿಸಬೇಕು ಎಂದು ಅತ್ಯಂತ ರ್‍ಯಾಡಿಕಲ್ ಆಗಿ ಪ್ರತಿಪಾದಿಸಿದರು.

ಈ ಭಾಷಣದ ಭರದಲ್ಲಿ ಗಾಂಧಿ ಹಾಗೂ ಲೋಹಿಯಾರವರನ್ನು “ಅಪಾಯಕಾರಿ ಬನಿಯಾಗಳೆಂದು” ಜರಿದು ಇವರ ಚಿಂತನೆಗಳಿಗೆ ಇಂದು ಪ್ರೇಕ್ಷಕರಿಲ್ಲ ಎಂದೇ ಹೀಗೆಳೆದರು. ಐಲಯ್ಯನವರು ಪ್ರತಿಪಾದಿಸುವ ಈ ವಸ್ತುನಿಷ್ಠ ಮಾದರಿ ದಲಿತರಿಗಾಗಲಿ, ಹಿಂದುಳಿದ ಮಾದರಿಗಾಗಲಿ ಯಾವುದೇ ಹೊಸ ಮಾರ್ಗಗಳನ್ನು, ದಿಕ್ಕುಗಳನ್ನು ತೋರಲಾರವೆಂದು ನನಗೂ ಮತ್ತು ಗೆಳೆಯರಿಗೂ ಅಂದು ಮನದಟ್ಟಾಯಿತು. ಏಕೆಂದರೆ ಗಾಂಧಿ ಮತ್ತು ಲೋಹಿಯಾರವರು ತಮ್ಮ ಅಪೂರ್ವ ಸೈದ್ಧಾಂತಿಕ ಮತ್ತು ವೈಚಾರಿಕ ಚಿಂತನೆಗಳ ಮೂಲಕ, ಸರ್ವ ಜನಾಂಗದ ಶಾಂತಿಯ ತೋಟಕ್ಕಾಗಿ ನಿರಂತರವಾಗಿ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ 30 ವರ್ಷಗಳ ಕಾಲ ಭೌತಿಕವಾಗಿ ಭಾಗವಹಿಸಿ ಕಟ್ಟಿದ ಸಹನೆ, ಸಹಬಾಳ್ವೆ, ಸರ್ವರಿಗೂ ಸಮಪಾಲು ತತ್ವಗಳನ್ನು ಐಲಯ್ಯನವರು ಈ ರೀತಿಯಾಗಿ ಗಾಂಧಿ ಅಥವಾ ಲೋಹಿಯಾರನ್ನು ಅಪಾಯಕಾರಿಗಳೆಂದು ಜರಿದು ಏಕರೂಪಿಯಾಗಿ ಹರಿಯುವ ತಮ್ಮ ಈ ಅತಿಯಾದ ರ್‍ಯಾಡಿಕಲ್ ತತ್ವಗಳ ಮೂಲಕ ಒಂದೇ ಏಟಿಗೆ ಹೊಡೆದುರುಳಿಸುವ ಈ ವಿಧ್ವಂಸಕಾರಿ ಚಿಂತನೆಗಳು ಬಲು ಸೀಮಿತ ನೆಲೆಯುಳ್ಳದ್ದು. ಐಲಯ್ಯನವರ ಚಿಂತನೆಗಳು ಸಂಪೂರ್ಣ ನಿರಾಕರಣೆಯ ಮಾದರಿಯಾಗಿದ್ದರೆ ಗಾಂಧಿ ಮತ್ತು ಲೋಹಿಯಾರ ತತ್ವಗಳು ವ್ಯಾಪಕ ಹರಹು ಮತ್ತು ಒಳಗೊಳ್ಳುವಿಕೆಯ (Inclusive policy) ದಾರಿದೀಪಗಳು.

ಇಲ್ಲಿ ಕೇವಲ ಆದರ್ಶಗಳ ಬೊಗಳೆಗಳಿಲ್ಲ. ಬದಲಾಗಿ ಇಲ್ಲಿ ಅನೇಕ ಪರಿಹಾರ ಮಾರ್ಗಗಳಿವೆ. ಗಾಂಧಿ ಮತ್ತು ಲೋಹಿಯಾರನ್ನು ಒಬ್ಬ ಸಾಮಾನ್ಯ ಮನುಷ್ಯನ ನೆಲೆಗಟ್ಟಿನಲ್ಲಿ ಗ್ರಹಿಸದೆ ಬೇಕೆಂತಲೇ ಮಾರ್ಕ್ಸ್‌ವಾದಿಗಳ ತೀವ್ರವಾದಿ ನೆಲೆಗಟ್ಟಿನಲ್ಲಿ ನೋಡುವುದರ ಮೂಲಕ ಐಲಯ್ಯನವರು ಇಂಡಿಯಾ ನೆಲದಲ್ಲಿರುವ ಸೆಕ್ಯುಲರಿಸಂನ ತತ್ವಾಧಾರಿತ ರಾಜಕಾರಣದ ಅಸ್ತಿತ್ವವನ್ನೇ ನಿರಾಕರಿಸುತ್ತಾರೆ. ಲೋಹಿಯಾರವರ ಜಾತಿವಿನಾಶದ ತತ್ವಗಳನ್ನು ಅನಗತ್ಯವಾಗಿ ಯುರೋಪಿಯನ್ ಮಾದರಿಯ ಆಡಂಬರದ, ರೋಮ್ಯಾಂಟಿಕ್ ಸಮಾಜವಾದಕ್ಕೆ ಹೋಲಿಸಿ ಸೋಲುತ್ತಾರೆ. ಏಕೆಂದರೆ ಲೋಹಿಯಾವಾದದ ಸಮಾಜವಾದವು ಮತ್ತು ಗಾಂಧಿವಾದವು ಪಶ್ಚಿಮ ನಾಗರಿಕತೆಯನ್ನು ಮತ್ತು ಅದರ ಆಧುನಿಕತೆಯನ್ನು 50 ಹಾಗೂ 60ರ ದಶಕದಲ್ಲಿಯೇ ಕಟುವಾದ ವಿಮರ್ಶೆಗೆ ಒಳಪಡಿಸುತ್ತದೆ ಹಾಗೂ ಇದಕ್ಕೆ ಪ್ರತಿಯಾಗಿ ಎತ್ತಿಕೊಳ್ಳುವುದು ಇಲ್ಲಿನ ನೆಲ ಸಂಸ್ಕೃತಿಯ ಬೀಜಗಳನ್ನು, ಇಲ್ಲಿನ ಗ್ರಾಮ ಸ್ವರಾಜ್ಯ ಮಾದರಿಗಳನ್ನು ಮತ್ತು ವೈವಿಧ್ಯತೆಯಲ್ಲಿ ಏಕತೆಯ ಆಶಯವನ್ನು. ಇದನ್ನು ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ ಐಲಯ್ಯನವರ ಮಾದರಿ. ಕಡೆಗೂ ಐಲಯ್ಯನವರ ನಾಸ್ತಿಕವಾದದ ಮಾದರಿ ಸಹ ಪಶ್ಚಿಮ ಶೈಲಿಯದು. ಪಶ್ಚಿಮದ ಈ ಏಕರೂಪಿ ದುರಹಂಕಾರದ ನಿರಾಕಾರಣೆಯ ಮಾದರಿಗಳು ಮತ್ತು ಅನೇಕ ಮಿತಿಗಳು ಐಲಯ್ಯನವರಿಗೆ ಕಳೆದ 25 ವರ್ಷಗಳಿಂದಲೂ ಅರ್ಥವಾಗದೇ ಹೋದದ್ದು ನಿಜಕ್ಕೂ ಸೋಜಿಗವೇ ಸರಿ.

ಮಾರ್ಕ್ಸ್‌ವಾದದ ಭೌತಿಕವಾದದ ಚಿಂತನೆಗಳು ಈ ನೆಲಕ್ಕೆ ಸಂಪೂರ್ಣವಾಗಿ ಅಪರಿಚಿತವಾದವು ಎಂದು ಅತ್ಯಂತ ತರ್ಕಬದ್ಧವಾಗಿ ನಮಗೆಲ್ಲ ತೋರಿಸಿಕೊಟ್ಟವರು ಲೋಹಿಯಾರವರು. ಇವರ 60ರ ದಶಕದ ಮಾರ್ಕ್ಸ್‌ವಾದದ ವಿಮರ್ಶೆಗಳು ಇಂದು ನಿಜವಾಗತೊಡಗಿವೆ. ಐಲಯ್ಯನವರಿಗೆ ಇದನ್ನು ಗಮನಿಸುವ ವ್ಯವಧಾನವಾಗಲೀ, ಸಹನೆಯಾಗಲೀ ಇಲ್ಲ. ಇದು ಇವರ ಬಲು ದೊಡ್ಡ ಮಿತಿಗಳಲ್ಲೊಂದು. ಲೋಹಿಯಾರವರ ವಿಕೇಂದ್ರಿಕರಣದ, ಜಾತಿವಿನಾಶದ ಚಿಂತನೆಗಳು ಅಪಾರವಾದ ನಿರಂತರ ಅಧ್ಯಯನದ ಮೂಲಕವೂ, ನಿರಂತರ ರಾಜಕೀಯ ಹೋರಾಟಗಳು, ಸಂಘರ್ಷಗಳು, ಕಟ್ಟುವಿಕೆಯ ಕ್ರಿಯಾತ್ಮಕತೆಯ ಭಾಗವಾಗಿಯೂ ಮತ್ತು ಕೆಡವುದರ ಋಣಾತ್ಮಕ ಭಾಗವಾಗಿಯೂ ಹುಟ್ಟಿಕೊಂಡಂತದ್ದು. ಇದು ಕೇವಲ ಪುಸ್ತಕದ ಬದನೇಕಾಯಿಯಾಗಿದ್ದರೆ ಲೋಹಿಯಾ ಎಂದೋ ಅಪ್ರಸ್ತುತರಾಗಿಬಿಡುತ್ತಿದ್ದರು.

ಆದರೆ ಇಂದು ಐಲಯ್ಯ ಮತ್ತು ಮಾರ್ಕ್ಸ್‌ವಾದಿಗಳು ಮಾಡುವ ಅಪಾಯಕಾರಿ ಅಪಪ್ರಚಾರವೆಂದರೆ ಇಂದಿನ ಭಾರತದ ಗ್ರಾಮ ಪಂಚಾಯ್ತಿಯ, ಪಂಚಾಯ್ತಿರಾಜ್ ಮಾದರಿಯ ವಿಕೇಂದ್ರಿಕರಣದ ಸೋಲನ್ನು ಲೋಹಿಯಾರ ತಲೆಗೆ ಕಟ್ಟಲು ಹವಣಿಸುತ್ತಿರುವುದು. ಅವರ ಅನುಯಾಯಿಗಳ ಸೋಲಿನ ಜವಾಬ್ದಾರಿಯನ್ನು ಲೋಹಿಯಾವಾದಕ್ಕೆ ವಹಿಸುವ ಅನಗತ್ಯ ಆತುರ ಮತ್ತು ಬೇಕೆಂತಲೇ ಯಾವುದೇ ಸಂಬಂಧವಿಲ್ಲದಿದ್ದರೂ ನೋಡಿ ಲಾಲು ಪ್ರಸಾದ ಯಾದವ್, ಮುಲಾಯಂ ಸಿಂಗ್ ಯಾದವ್ ಅವರೂ ಸಹ ಲೋಹಿಯಾವಾದಿಗಳೇ ಎಂದು ಗೇಲಿಮಾಡುವುದು. ಇದು ಅನಗತ್ಯವಾಗಿ ಹೊಸ ತಲೆಮಾರಿನ ತರುಣರನ್ನು ಸಂಪೂರ್ಣವಾಗಿ ಹಾದಿ ತಪ್ಪಿಸುತ್ತದೆ. ಆಧುನಿಕ ವೈಚಾರಿಕತೆಯನ್ನು ತಮ್ಮೊಳಗೆ ಬಿಟ್ಟುಕೊಳ್ಳುತ್ತಲೇ ಇಂಡಿಯಾದಲ್ಲಿ ಜಾತ್ಯಾತೀತತೆಯ, ಜಾತಿ ವಿನಾಶದ, ಮಹಿಳೆಯರಿಗೆ ಸಮಾನ ಹಕ್ಕುಗಳ ಹೊಸ ನಾಗರಿಕತೆಯನ್ನು ಕಟ್ಟುವಂತಹ ಕನಸನ್ನು ಕಂಡ ಲೋಹಿಯಾ ನಿಜವಾದ ವಿಗ್ರಹಭಂಜಕರು ಹಾಗೂ ಸ್ವತಂತ್ರ ಭಾರತದ ಬಲು ದೊಡ್ಡ ಪ್ರತಿ ನಾಯಕ (Anti hero) ಮತ್ತು ದಿವಂಗತ ತೇಜಸ್ವಿಯವರು ಹೇಳಿದ ಹಾಗೆ ಭಾರತದ ಒರಿಜಿನಲ್ ಚಿಂತಕ.

ಪುರೋಹಿತಶಾಹಿಯ ಮನುವಾದಿ ಮತ್ತು ಸನಾತನವಾದವನ್ನು ಹಾಗೂ ದಲಿತರ ಅವೈದಿಕ ನೆಲ ಸಂಸ್ಕೃತಿಯನ್ನು ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಐಲಯ್ಯನವರು ಹೆಚ್ಚೂ ಕಡಿಮೆ ಚಲನಶೀಲತೆಯನ್ನೇ ನಿರಾಕರಿಸುತ್ತಾರೆ ಮತ್ತು ಇದನ್ನು ನೆಚ್ಚಿಕೊಂಡರೆ ಮುಂದೆ ಯಾವುದೇ ದಾರಿಗಳಿಲ್ಲವೇ ಇಲ್ಲ ಎಂದು ದಿಕ್ಕು ತಪ್ಪಿಸುತ್ತಾರೆ. ಇಲ್ಲಿ ಜ್ಯೋತಿ ಬಾ ಪುಲೆಯವರನ್ನು ಆದರ್ಶವಾಗಿ ಪರಿಗಣಿಸುವ ಐಲಯ್ಯನವರು ಸರಿಯಾಗಿಯೇ ಮತ್ತು ನ್ಯಾಯಯುತವಾಗಿಯೇ ಹಿಂದೂ ಧರ್ಮದ ಬ್ರಾಹ್ಮಣ್ಯಶಾಹಿಯನ್ನು, ಪ್ರತಿಷ್ಠಿತ ಮಧ್ಯಮ ಜಾತಿಗಳನ್ನು ತೀವ್ರವಾಗಿ ಖಂಡಿಸುತ್ತಾ ಅವುಗೊಳೊಂದಿಗೆ ಯಾವುದೇ ರೀತಿಯ ಅನುಸಂಧಾನದ ಮಾರ್ಗಗಳನ್ನೂ ನಿರಾಕರಿಸುತ್ತಾರೆ. ಇವರ ಈ ಚಿಂತನೆಗಳು ಜ್ಯೋತಿ ಬಾ ಫುಲೆ ನೆಲೆಗಟ್ಟಿನಿಂದ ಹುಟ್ಟಿಕೊಂಡದ್ದು. Total inclusive  policy ಯನ್ನು ಮೊಟ್ಟಮೊದಲ ಬಾರಿಗೆ ಚಿಂತಿಸಿದವರು ಜ್ಯೋತಿ ಬಾ ಫುಲೆಯವರು.

150 ವರ್ಷಗಳ ಹಿಂದೆ ಫುಲೆಯವರು ಇಲ್ಲಿನ ಜಾತೀಯತೆಯನ್ನು ವಿಶ್ಲೇಷಿಸುವಾಗ ಹಿಂದುತ್ವವಾದಕ್ಕಿಂತಲೂ ಬ್ರಾಹ್ಮಣವಾದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಇವರ ಪ್ರಕಾರ ಹಿಂದುತ್ವವೆನ್ನುವುದು ವೇದಗಳು, ಮನುಸ್ಮೃತಿ ಎನ್ನುವ ಎರಡು ಕೃತಿಗಳಿಂದ, ಚಿಂತನೆಗಳಿಂದ ರೂಪುಗೊಂಡಿದೆ. ಈ ಕೃತಿಗಳು ಬ್ರಾಹ್ಮಣವಾದದಿಂದ ಬರೆಯಲ್ಪಟ್ಟವು. ಈ ಮೂಲಕ ತಮ್ಮ ಸಾರ್ವಭೌಮತ್ವವನ್ನು ಸಮಾಜದಲ್ಲಿ ಪ್ರತಿಷ್ಠಾಪಿಸಿದವು. ಬ್ರಾಹ್ಮಣಿಕೆಯ ಈ ಶ್ರೇಷ್ಟತೆಯ ಯಜಮಾನಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಫುಲೆಯವರು ಈ ವೈದಿಕಶಾಹಿ ಕೃತಿಗಳ ಏಕಸ್ವಾಮ್ಯತೆಯನ್ನೂ ತಿರಸ್ಕರಿದರು. ಅಂದರೆ ಈ ಪುರೋಹಿಶಾಹಿ ಕೃತಿಗಳನ್ನು ಪರಿಷ್ಕರಿಸಿ ಇವಕ್ಕೆ ಮಾನವೀಯ ಸ್ಪರ್ಶ ನೀಡಬೇಕನ್ನುವ ಉದಾರವಾದ ಚಿಂತನೆಯನ್ನು ಫುಲೆ ಪ್ರತಿಪಾದಿಸಲಿಲ್ಲ. ಬದಲಾಗಿ ಫುಲೆ ಪ್ರತಿಪಾದಿಸಿದ್ದು ಬ್ರಾಹ್ಮಣೀಕೃತ ಪ್ರೇರೇಪಿತ ಎಲ್ಲ ಶೈಕ್ಷಣಿಕ, ಸಾಮಾಜಿಕ ಸಿದ್ಧಾಂತದ ಪುಸ್ತಕಗಳನ್ನೂ ನಿಷೇದಿಸಬೇಕೆಂಬುದನ್ನು. ಶೂದ್ರಾತಿಶೂದ್ರ ನೆಲೆಗಟ್ಟಿನಲ್ಲಿ ಈ ಬ್ರಾಹ್ಮಣತ್ವ ಆಧಾರಿತ ಚರಿತ್ರೆಯನ್ನು ಅಲ್ಲಗೆಳೆಯುತ್ತಾ ಅದನ್ನು ತಿರಸ್ಕರಿಸಿ ಚರಿತ್ರೆಯನ್ನು ತಳಸಮುದಾಯಗಳ ಮೂಲಕ ಪುನರ್ರಚಿಸುವುದಕ್ಕೆ ಚಾಲನೆ ನೀಡುತ್ತಾರೆ. ತಮ್ಮ ಚಿಂತನೆಗಳಲ್ಲಿ ಜಾತೀಯತೆಗಿಂತಲೂ ವರ್ಣಾಶ್ರಮತೆಗೆ ಪ್ರಾಧಾನ್ಯತೆ ನೀಡುತ್ತ ಆ ಮೂಲಕ Dichotomous Structure ಅನ್ನು ಸೃಷ್ಟಿಸುತ್ತಾ ಇಲ್ಲಿ ಬ್ರಾಹ್ಮಣತ್ವ ಹಾಗೂ ಶೂದ್ರಾತಿಶೂದ್ರರೆನ್ನುವ ಎರಡು ಧೃವಗಳ ಸಮಾಜದ ಪರಿಕಲ್ಪನೆಯನ್ನು ಬಳಸುತ್ತಾರೆ. ತೀವ್ರವಾದ ಬದಲಾವಣೆಯ ಹರಿಕಾರರಾಗಿದ್ದ, ಬ್ರಾಹ್ಮಣೀಕರಣದ ಕಟು ವಿರೋದಿಯಾಗಿದ್ದ, ಆದರೆ ಭಕ್ತಿ ಪಂಥದಿಂದ ಪ್ರಭಾವಕ್ಕೊಳಗಾಗಿದ್ದ, ಚರ್ಚೆ, ಸಿದ್ಧಾಂತಗಳ ಗಂಗೋತ್ರಿಯಾಗಿದ್ದ, ಹತೊಂಬತ್ತನೇ ಶತಮಾನದ ಬಲು ದೊಡ್ಡ ಸಮಾಜ ಸುಧಾರಕರಾಗಿದ್ದ ಜ್ಯೋತಿ ಬಾ ಫುಲೆಯವರು ಸಂವಾದದಲ್ಲಿ ನಂಬುಗೆ ಇಟ್ಟಿದ್ದರು.

ಇವರ ಮಾರ್ಗ ಬುದ್ಧನ ಮಾರ್ಗವಾಗಿತ್ತು. ಬುದ್ಧನದೂ ಸಂವಾದದ ಮಾರ್ಗವಾಗಿತ್ತು. ಆದರೆ ಸಂತ ಜ್ಯೋತಿ ಬಾ ಫುಲೆಯವರಿಂದ ಬ್ರಾಹ್ಮಣತ್ವ ಮತ್ತು ಬ್ರಾಹ್ಮಣೀಕರಣದ ಕಟುಟೀಕೆಯನ್ನು ಸರಿಯಾಗಿಯೇ ಗ್ರಹಿಸಿದ ಐಲಯ್ಯನವರು ಫುಲೆಯವರ ಸಂವಾದದ ಮಾರ್ಗವನ್ನು ಒಳಗೊಳ್ಳಲು ಸೋತಿದ್ದಾರೆ. 19ನೇ ಶತಮಾನದ ಫುಲೆಯವರ ಚಿಂತನೆಗಳನ್ನು 21ನೇ ಶತಮಾನಕ್ಕೆ ಸಮೀಕರಿಸುವ ಸಂದರ್ಭದಲ್ಲಿ ಇಲ್ಲಿ ಮುಂಟೇ ಸ್ವಾಮಿಗಳು, ಸಿದ್ದಯ್ಯ ದೇವರು, ಮತ್ತು ಮಾರಮ್ಮ, ಹೊಸೂರಮ್ಮ, ಜಂಬಲಮ್ಮ, ಪೂಚಮ್ಮ ಇತ್ಯಾದಿ ಗ್ರಾಮ ದೇವತೆಗಳು ಸಹ ನಾಗರೀಕತೆಯ ಆಧುನಿಕ ಸಮಾಜದೊಂದಿಗೆ ಮುಖಾಮುಖಿಯಾಗುತ್ತಾ ದಲಿತರಿಗೆ ಅಪಾರವಾದ ನೈತಿಕ ನೆಲೆಯನ್ನು, ಬ್ರಾಹ್ಮಣತ್ವ ಮತ್ತು ಬ್ರಾಹ್ಮಣೀಕರಣದ ಶೋಷಣೆಯನ್ನು ಎದುರಿಸಲು ಬಲು ದೊಡ್ಡ ಸಾಂಸ್ಕೃತಿಕ ಆಯಾಮವನ್ನು ದೊರಕಿಸಿಕೊಡುತ್ತವೆ ಈ ಮೂಲಕ ಆಧುನಿಕ ದಲಿತರು ಮಾತ್ರ ಈ ನೆಲದ ಬಹು ಸಂಸ್ಕೃತಿಯನ್ನು ಮರಳಿ ಸ್ಥಾಪಿಸುವುದಕ್ಕೆ ಮಾರ್ಗಗಳೂ ಸಹ ಎಂಬುದು ಮತ್ತೇನಲ್ಲದೆ ಜ್ಯೋತಿ ಬಾ ಫುಲೆಯವರ ಆಶಯಗಳಿಗೆ ನ್ಯಾಯ ದೊರಕಿಸಿಕೊಟ್ಟಂತೆ. ಆದರೆ ಕಾಂಚ ಐಲಯ್ಯ ಮಾದರಿ ಚಿಂತಕರಿಗೆ ಇದೇಕೆ ಗೌಣವಾಗಿ ಕಂಡಿತು ಎಂಬುದು ಇಂದಿಗೂ ಚಿದಂಬರ ರಹಸ್ಯ.

ಚಿಂತಕ ದಿವಂಗತ ಡಿ.ಆರ್.ನಾಗರಾಜ್ ಅವರು ಪೆರಿಯಾರ್ ಮಾದರಿಯನ್ನು ವಿಮರ್ಶಿಸುತ್ತ ಬಹಳ ಅದ್ಭುತವಾಗಿ ಹೇಳುತ್ತಾರೆ “ಪೆರಿಯಾರರ ಮಾದರಿಯ ಮುಖ್ಯ ಸಮಸ್ಯೆಯೆಂದರೆ ಶೂದ್ರಾತಿಶೂದ್ರರಿಗೆ ಈ ಸಂಸ್ಕೃತಿಯಲ್ಲಿ ಯಾವ ಪಾಲೂ ಇಲ್ಲ ಎಂದು ಭಾವಿಸುವುದು. ಆಧುನಿಕ ಪಾಶ್ಚಾತ್ಯ ನಾಸ್ತಿಕವಾದದ, ವಿಚಾರವಾದದ ಎಲ್ಲ ಘೋರ ಮಿತಿಗಳು ಪೆರಿಯಾರರನ್ನು ಕಬಳಿಸಿ ಹಾಕಿ ಬಿಟ್ಟವು. ಇಲ್ಲಿ ಪ್ರತಿಷ್ಟಿತ ಮತ್ತು ಕೆಳಜಾತಿಗಳ ನಡುವಣ ಘರ್ಷಣೆ ಸಂಸ್ಕೃತಿಯ ಮೇಲು ಹಾಗು ಕೆಳಗಿನ ಸ್ತರಗಳಲ್ಲಿ ಜತೆಜತೆಯಾಗಿಯೇ ಹರಿದು ಬಂದದನ್ನು ಪೆರಿಯಾರರು ಗುರುತಿಸಲು ವಿಫಲರಾದರು. ಪೆರಿಯಾರರ ಮಾದರಿ ಭಾರತೀಯ ಸಂಪ್ರದಾಯ ಶರಣತೆಗೆ ಗಾಳಿಗುದ್ದುಗಳನ್ನು ಮಾತ್ರ ಕೊಡುತ್ತದೆ. ತನ್ನ ತೀವ್ರತೆಯಿಂದಲೇ ಎದುರಾಳಿ ನಾಶವಾಗಿದ್ದಾನೆ ಎಂಬ ಧೋರಣೆ ಇದು”. ಇದು ಕಂಚ ಐಲಯ್ಯನವರಿಗೆ ಕೂಡ ಅನ್ವಯಿಸುತ್ತದೆ. ಕಡೆಗೂ ಕಂಚ ಐಲಯ್ಯನವರ ಚಿಂತನೆಗಳು ಮತ್ತು ಮಾರ್ಗಗಳು ಚರ್ಚೆಗೆ ಒಳಪಡಲೇಬೇಕು. ಏಕೆಂದರೆ ಕಂಚ ಐಲಯ್ಯನವರು ನಮ್ಮ ಕಾಲದ ಬಲು ಮುಖ್ಯ ದಲಿತ ಚಿಂತಕರು. ಇವರನ್ನು ಕಡೆಗಣಿಸಿದ ದಲಿತರ ಚಿಂತನೆಗಳು ನಿಜಕ್ಕೂ ಅಪೂರ್ಣ.

ಕಡೆಗೆ ಇಂಡಿಯಾದ ಮತ್ತೊಂದು ದುರಂತವೆಂದರೆ “ಕೆಲಸ ಕೊಡುವವರಾಗಿ, ಕೆಲಸ ಕೇಳುವವರಾಗಬೇಡಿ” ಎನ್ನುವ ಸ್ವಾಯತ್ತತೆಯ, ಸ್ವಾವಲಂಬನೆಯ ಘೋಷಣೆಯೊಂದಿಗೆ ಹುಟ್ಟಿಕೊಂಡ “ದಲಿತ ಉದ್ಯಮಿಗಳು ಅರ್ಥಾತ ದಲಿತ ಛೇಂಬರ್ಸ್ ಆಫ್ ಕಾಮರ್ಸ್” ಹಾಗೂ ಕಳೆದ 20 ವರ್ಷಗಳಿಂದ ಇದರ ಪರವಾಗಿ ಚಿಂತಿಸಿದ ಖ್ಯಾತ ದಲಿತ ಚಿಂತಕ ಚಂದ್ರಬಾನು ಪ್ರಸಾದ್ ಇವರ ಚಿಂತನೆಗಳಿಗೆ ಮತ್ತು ಮಾರ್ಗಗಳಿಗೆ ನಮ್ಮ ಅಕಡೆಮಿಕ್ ಬುದ್ಧಿಜೀವಿಗಳು ತೋರಿಸಿದ ನಿರ್ಲಕ್ಷ್ಯತನ. ಇದು ನಿಜಕ್ಕೂ ಆತ್ಮವಂಚನೆಯೇ ಸರಿ. ದಲಿತರು ಹಾಗೂ ಆದಿವಾಸಿಗಳನ್ನು ಸಮಾಜದ ಮಖ್ಯವಾಹಿನಿಗೆ ತರಲು ದಿಗ್ವಿಜಯಸಿಂಗ್‌ರವರ ನಾಯಕತ್ವದಲ್ಲಿ ಐತಿಹಾಸಿಕ ಭೂಪಾಲ ದಾಖಲೆಯನ್ನು ರೂಪಿಸಿದ ಚಂದ್ರಬಾನು ಪ್ರಸಾದರು ಈ ಮೂಲಕ ಸರ್ಕಾರವು ದಲಿತ ಹಾಗೂ ಆದಿವಾಸಿಗಳ ಉದ್ಯಮಗಳಿಂದ ಶೇಕಡಾ 30 ರಷ್ಟನ್ನು ಕೊಳ್ಳಬೇಕು ಎನ್ನುವ ಭೂಪಾಲ ಘೋಷಣೆಯನ್ನೂ ಸಹ ಮಾಡಲಾಯಿತು. ಇಲ್ಲಿಯೂ ಸಹ ಯಾವುದೇ ಗೊಂದಲಗಳಿಲ್ಲ. ಸಮಾಜದ ಮುಖ್ಯವಾಹಿನಿಗೆ ದಲಿತರು ಪ್ರವೇಶ ಪಡೆಯಲೇಬೇಕಾದರೆ ದಲಿತ ಮಧ್ಯಮ ವರ್ಗ ಸೃಷ್ಟಿಯಾಗಬೇಕು, ನಂತರ ಇದೇ ದಲಿತ ಮಧ್ಯಮ ವರ್ಗ ಮುಂದೆ ಬೆಳೆದು ದಲಿತ ಉದ್ಯಮಿಗಳಾಗಬೇಕು ಎನ್ನುವ ಘೋಷಣೆ ಹಾಗು ಚಿಂತನೆ ಇಲ್ಲಿನ ಮೂಲ ಆಶಯ. ಇದರ ಮೂಲ ತಿರುಳು ಚಲನಶೀಲತೆ. ಇದು ಸಾಕಾರಗೊಂಡರೆ ದಲಿತರು ಸ್ವತಹ ತಾವೇ ಮಾಲೀಕರಾಗುವುದರ ಜೊತೆಗೆ, ಸರ್ಕಾರಿ ಕಛೇರಿಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಶಾಲೆಗಳಲ್ಲಿ ಮತ್ತು ಇನ್ನಿತರ ಸಾರ್ವಜನಿಕ ವಲಯಗಳಲ್ಲಿ ಮೇಲ್ಜಾತಿಗಳಿಂದ ಪದೇ ಪದೇ ಅವಮಾನಕ್ಕೊಳಗಾಗುವ ನಿರಂತರ ವಿದ್ಯಾಮಾನಕ್ಕೆ ಮುಂದೊಂದು ದಿನ ಸಂಪೂರ್ಣ ತಿಲಾಂಜಲಿ ಇಡಬಹುದು.

ನವೀಯತೆಯ ಕುರುಡು ಆರಾಧನೆಯನ್ನು, ಎಲ್ಲವೂ ಸರಿ ಇದೆ ಎನ್ನುವ ತೆಳುವಾದ ಧೋರಣೆಯನ್ನು ನಾವ್ಯಾರೂ ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ ಚಂದ್ರಬಾನು ಪ್ರಸಾದರ ಈ ವಿಶಾಲ ಮನೋಭಾವದ, ದಲಿತರ ಆಧುನೀಕರಣದ ಚಲನಶೀಲತೆಯನ್ನು ತಲಸ್ಪರ್ಶಿಯಾಗಿ, ಆಳವಾಗಿ ಚರ್ಚಿಸದೆ ಕೇವಲ ವಿರೋಧಕ್ಕಾಗಿ ಎಡಪಂಥೀಯ ಚಿಂತಕರು ತೀವ್ರವಾಗಿ ವಿರೋಧಿಸುವುದು ಮಾತ್ರ ಪಲಾಯನವಾದವೆನಿಸಿಕೊಳ್ಳುತ್ತದೆ. ಇವರ ವಿರೋಧಕ್ಕೆ ಮೂಲಭೂತ ಕಾರಣ ಇದು ಪಶ್ಚಿಮದ ಬಂಡವಾಳಶಾಹೀ ಮಾರ್ಗ ಮತ್ತು ಇದು ವಸಾಹತುಶಾಹಿಯನ್ನು ಪುನಹ ನೀರೆರೆದು ಪೋಷಿಸುತ್ತದೆ ಎಂದು. ಹಿಂದೊಮ್ಮೆ ಲೇಖಕ ದಿವಂಗತ ಪಿ.ಲಂಕೇಶ್ ಹೇಳಿದಂತೆ ತಮ್ಮ ಕೂಪ ಮಂಡೂಕತನದ ಚಿಂತನೆಗಳು, ಪ್ರತಿಯೊಂದು ಪ್ರಯೋಗವನ್ನು, ಚಲನಶೀಲತೆಯನ್ನು, ಬದಲಾವಣೆಯ ಹೊಸಗಾಳಿಯನ್ನು ಬಂಡವಾಳ ಶಾಹಿ, ಜಾಗತೀಕರಣವೆಂದು ಪಟ್ಟ ಕಟ್ಟುತ್ತಾ ಆತ್ಮವಂಚನೆಯಲ್ಲಿ ತೊಡಗಿರುವ ಈ ಬುದ್ಧಿಜೀವಿಗಳು ದೇಶವನ್ನು ಮುಂದಕ್ಕೂ ಕೊಂಡಯ್ಯಲು ಬಿಡುವುದಿಲ್ಲ, ಹಿಂದಕ್ಕೂ ತಳ್ಳುವುದಿಲ್ಲ. ಇಲ್ಲಿ ನಾವು ನಮ್ಮ ತಲ್ಲಣಗಳನ್ನು ಸಾಕಾರಿಸಿಕೊಳ್ಳಲು ನಿರಾಕರಿಸುತ್ತಿದ್ದೇವೆ. ಹೊಸ ಬಗೆಯ ಸಂವಾದಗಳನ್ನು ಸೃಷ್ಟಿಸಲು ತಡಕಾಡುತ್ತಿರುವ ನಾವೆಲ್ಲ ನಮ್ಮೆದುರಿಗೇ ಇರುವ ಚಲಶೀಲತೆಯ ಮಾರ್ಗಗಳನ್ನು ಮುಚ್ಚಿಕೊಳ್ಳುವ ಅವಸರ ಮಾತ್ರ ಊಹೆಗೂ ನಿಲುಕದ್ದು. ದಿನನಿತ್ಯ ಕಾಣಿಸಿಕೊಳ್ಳುವ ದುರಂತಗಳಿಗೆ ಸ್ಪಂದಿಸುವ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ. ಏಕೆಂದರೆ ನಮಗೆ ಎಲ್ಲವೂ ಅಪರೂಪವಾಗಿರಬೇಕು ಆಗಲೇ ಪ್ರತಿಕ್ರಿಯಾತ್ಮಕವಾಗಿ ಸಂಘಟಿತರಾಗುವುದು ನಮ್ಮ ಅನಾದಿ ಕಾಲದ ಚಾಳಿಗಳಲ್ಲೊಂದು.

ಇಲ್ಲಿ ಸೋತವನಾದ, ಅವಮಾನಿತನಾದ, ಭ್ರಷ್ಟನಾದ, ಕಳಂಕಿತನಾದ, ಅನೈತಿಕತೆಯನ್ನು ಹೊದ್ದುಕೊಂಡ ಯಡಿಯ್ಯೂರಪ್ಪ, ಶ್ರೀರಾಮುಲು, ರೆಡ್ಡಿಗಳಂತಹ ಮೌಲ್ಯರಹಿತ ರಾಜಕಾರಣಿಗಳು ಮತ್ತೆ ಮತ್ತೆ ಫೀನಿಕ್ಸನಂತೆ ಮರಳಿ ಬರುತ್ತೇವೆ, ನಿರಂತರ ಹೋರಾಟ ಮಾಡುತ್ತೇವೆ, ರಾಜ್ಯದಾದ್ಯಂತ ಪಾದಯಾತ್ರೆ ಮಾಡುತ್ತೇವೆ, ಪ್ರವಾಸ ಮಾಡಿ ಜನರ ಬಳಿಗೆ ಮರಳುತ್ತೇವೆ ಎಂದು ನಿರ್ಲಜ್ಯರಾಗಿ ಹೇಳುತ್ತಿದ್ದರೆ, ಇಲ್ಲಿ ಪ್ರಗತಿಪರರು ತಮ್ಮ ಪ್ರತಿಭಟನೆಯ ಚಹರೆಗೆ ಹುಡುಕಾಡುತ್ತ, ಹದಗೆಟ್ಟ ವ್ಯವಸ್ಥೆಯಲ್ಲಿ ದನಿಯಾಗಲು ಇಷ್ಟು ವರ್ಷಗಳ ನಂತರವೂ ಸ್ವರಗಳಿಗೆ, ಭಾಷೆಗಳಿಗೆ ಹುಡುಕಾಡುತ್ತಿದ್ದರೆ, ನಮ್ಮ ಕಣ್ಣೆದುರಿಗೆ ಇರುವ ಸೃಜನಶೀಲತೆಯ ಸ್ವರೂಪಗಳು ಮತ್ತು ಆಶಯಗಳು ನಮಗೆ ಅಗೋಚರವಾಗಿವೆಯೆಂದರೆ ಯೇಟ್ಸ್ ಕವಿಯ things falls apart ಕವನ ನೆನಪಾಗುತ್ತದೆ ಜೊತೆ ಜೊತೆಗೆ ನೀಷೆಯ I Felt a cry in the whole universe ಎನ್ನುವ ಮಾತು ನೆನಪಾಗುತ್ತದೆ.