Monthly Archives: May 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-7)


– ಡಾ.ಎನ್.ಜಗದೀಶ್ ಕೊಪ್ಪ


 

Dignitaries fell Wrapped in their togas of worm-eaten mud, nameless people shouldered spears, tumbled the walls, nailed the tyrant to his golden door.  – Pablo Neruda

“ಶ್ರೀಕಾಕುಳಂ” ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿ ಸಮೃದ್ಧ ಹಸಿರು, ಅರಣ್ಯ, ಮತ್ತು ಗುಡ್ಡಗಾಡುಗಳಿಂದ ಆವೃತ್ತವಾಗಿರುವ, ಪೂರ್ವ ಕರಾವಳಿಯ ಒಂದು ಜಿಲ್ಲೆ. ಶೇ. 60ಕ್ಕೂ ಹೆಚ್ಚು ಮಂದಿ ಅರಣ್ಯವಾಸಿಗಳಾದ (ಜಟಪು ಜನಾಂಗ) ಗಿರಿಜನರಿಂದ ಕೂಡಿರುವ ಈ ನೆಲ ಸ್ವಾತಂತ್ರ್ಯ ಪೂರ್ವದಿಂದಲೂ ಎಲ್ಲಾ ವಿಧವಾದ ಅಭಿವೃದ್ಧಿ ಮತ್ತು ಸವಲತ್ತುಗಳಿಂದ ವಂಚಿತವಾಗಿರುವ ನತದೃಷ್ಟರನಾಡು. ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಿಂದ 650 ಕಿಲೋಮೀಟರ್ ದೂರದಲ್ಲಿರುವ ಈ ಜಿಲ್ಲೆ, ತನ್ನ ಉತ್ತರಭಾಗದ ಈಶಾನ್ಯಕ್ಕೆ ಒರಿಸ್ಸಾ, ವಾಯುವ್ಯ ಭಾಗಕ್ಕೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡ, ಪಶ್ಚಿಮಕ್ಕೆ ಮಹರಾಷ್ಟ್ರ, ಪೂರ್ವಕ್ಕೆ ಕರಾವಳಿ ಪ್ರದೇಶವನ್ನು ಹೊಂದಿದ್ದು, ತನ್ನ ಒಡಲೊಳಗೆ ಸಮೃದ್ಧವಾದ ಖನಿಜ ಸಂಪತ್ತು, ಅರಣ್ಯ ಸಂಪತ್ತು, ಹೊಂದಿರುವಂತೆ, ತನ್ನ ಚರಿತ್ರೆಯ ಪುಟಗಳಲ್ಲಿ ರಕ್ತಸಿಕ್ತ ಅಧ್ಯಾಯಗಳನ್ನು ಸಹ ಹೊಂದಿದೆ.

“ಶ್ರೀಕಾಕುಳಂ” ಎಂದರೆ, ಚರಿತ್ರೆಯಲ್ಲಿ ಒಂದು ಅಳಿಸಲಾರದ ಹೆಸರು, ಭಾರತದ ಭವಿಷ್ಯದ ಚರಿತ್ರೆಯ ಸಂಪುಟ, ಕ್ರಾಂತಿಕಾರಿಗಳ ಉಕ್ಕಿನ ಕೋಟೆ ಎಂದೆಲ್ಲಾ ನಕ್ಸಲ್ ಚಳವಳಿಯ ಸಂಸ್ಥಾಪಕ ಚಾರು ಮುಜಂದಾರ್‌ನಿಂದ ಹೊಗಳಿಸಿಕೊಂಡ ಈ ಜಿಲ್ಲೆಯ ನೆಲದ ಇತಿಹಾಸ ತಿಳಿಯದೇ ಹೋದರೆ, ಅಲ್ಲಿನ ಹಿಂಸೆ ಮತ್ತು ಹೋರಾಟದ  ಐತಿಹಾಸಿಕ ಕಥನ ಅರ್ಥವಾಗುವುದು ಕಷ್ಟ. ವಿಶಾಖಪಟ್ಟಣದದಿಂದ 50 ಕಿ.ಮಿ. ದೂರದಲ್ಲಿರುವ ವಿಜಯನಗರಂ ಎಂಬ ರೈಲು ನಿಲ್ದಾಣದಿಂದ ಬೆಳಗಿನ ಜಾವ ರಾಜಮಂಡ್ರಿ ಗೆಳೆಯರಿಗೆ ವಿದಾಯ ಹೇಳಿ, ಶ್ರೀಕಾಕುಳಂ ಜಿಲ್ಲೆಯತ್ತ ನಾನು ಪ್ರಯಾಣ ಹೊರಟಾಗ ನನ್ನ ತಲೆಯಲ್ಲಿ ಕಲ್ಪನೆ ಇದ್ದದ್ದು, ಅದೊಂದು ನಮ್ಮ ರಾಜ್ಯದಲ್ಲಿ ವಂಚಿತವಾಗಿರುವ ಉತ್ತರ ಕರ್ನಾಟಕದ ಕಪ್ಪುಭೂಮಿ ಹಾಗೂ ಜಾಲಿ ಮರಗಳ ಒಣ ಪ್ರದೇಶದ ನೀರಿನಿಂದ ವಂಚಿತವಾಗಿರುವ ಜಿಲ್ಲೆಯಂತೆ ಇರಬಹುದಾದ ಜಿಲ್ಲೆ ಎಂದು ಅಲ್ಲಿಗೆ ಕಾಲಿಟ್ಟ ಕ್ಷಣ ನನಗೆ ಆಶ್ಚರ್ಯವಾಯಿತು. ನನ್ನ ನೆಲವಾದ ಅಲ್ಲಿಂದ ಒಂದೂವರೆ ಸಾವಿರ ಕಿ.ಮಿ. ದೂರದ ಮಂಡ್ಯದ ನೆಲದಲ್ಲೇ ನಾನು ಇದ್ದೀನಿ ಎಂಬ ಭಾವನೆ ಮೂಡತೊಡಗಿತು.

ಎಲ್ಲೆಲ್ಲೂ ಭತ್ತದ ಗದ್ದೆಗಳು, ತುಂಬಿ ಹರಿಯುವ ಕಾಲುವೆಗಳು, ಆಲೆಮನೆ ಮತ್ತು ಸಕ್ಕರೆ ಕಾರ್ಖಾನೆ ಸಾಗುತ್ತಿದ್ದ ಕಬ್ಬು ತುಂಬಿದ ಜೊಡೆತ್ತಿನ ಗಾಡಿಗಳು, ಬತ್ತದ ಗದ್ದೆಯಲ್ಲಿ ನಡುಬಗ್ಗಿಸಿ ಕಳೆ ಕೀಳುತ್ತಿದ್ದ, ನನ್ನಕ್ಕ ತಂಗಿಯರಂತಹ ಬಡ ಹೆಣ್ಣು ಮಕ್ಕಳು, ಅಲ್ಲಲ್ಲಿ ಹಸಿರು ಗುಡ್ಡ, ಚಿಕ್ಕದಾದರೂ, ಚೊಕ್ಕವಾದ ಬಾಳೆ ಮತ್ತು ತೆಂಗಿನ ಗಿಡಗಳಿಂದ ಕೂಡಿದ ತೋಟಗಳು ಇವೆಲ್ಲವೂ ನಾನು ಈ ನೆಲಕ್ಕೆ ಪರಕೀಯ ಎಂಬ ಭಾವನೆಯನ್ನು ಅಳಿಸಿ ಹಾಕಿದವು. ಆದರೆ, ಹಳ್ಳಗಳಿಗೆ ಕಾಲಿಟ್ಟ ತಕ್ಷಣ ಆಂಧ್ರ ಸಂಸ್ಕೃತಿ ಮತ್ತು ಅಲ್ಲಿನ ಗುಡ್ಡಗಾಡು ಜನರ ಜನರ ಸಂಸ್ಕೃತಿ ಎದ್ದು ಕಾಣುತ್ತದೆ. ಪ್ರತಿ ಊರಿನಲ್ಲೂ ನೆಲಬಾವಿಗಳು, ಅವುಗಳ ಸುತ್ತಾ ಕೆತ್ತಿದ ಕಲ್ಲಿನಲ್ಲಿ ಕಟ್ಟಿರುವ ಸುಂದರ ತಡೆಗೋಡೆಗಳು, ಜೊತೆಗೆ ನೆಲಕ್ಕೆ ಹಾಸಿರುವ ಕಲ್ಲು ಚಪ್ಪಡಿಯ ಹಾಸುಗೆಗಳು, ಅಲ್ಲಿಯೇ ಕುಳಿತು. ಬಾವಿಯಲ್ಲಿ ನೀರು ಸೇದಿಕೊಂಡು ಯಾವ ಸಂಕೋಚವಿಲ್ಲದೆ, ಸ್ನಾನ ಮಾಡುವ ಹೆಂಗಸರು, ಪ್ರತಿ ಊರಿನಲ್ಲಿ ಎದುರಾಗುವ ಆಂಜನೇಯನ ಗುಡಿಗಳು, ಅವುಗಳ ಮೇಲೆ ಆಳೆತ್ತರಕ್ಕೆ ಎದೆ ಸೀಳುತ್ತಾ ನಿಂತಿರುವ, ಸೀಮೆಂಟ್‌ನಿಂದ ತಯಾರಾದ ಆಂಜನೇಯನ ಮೂರ್ತಿಗಳು, ಅವುಗಳಿಗೆ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಬಳಿದಿರುವ ಕಡುಬಣ್ಣ ಇವುಗಳು ಮಾತ್ರ ಪಕ್ಕಾ ಆಂಧ್ರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಅಂಶಗಳು.

ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶವನ್ನು ಅಲ್ಲಿನ  ಜನ ಹೆಮ್ಮೆಯಿಂದ ವಿಶಾಲಾಂಧ್ರವೆಂದು ಕರೆಯುತ್ತಾರೆ. ಆದರೆ, ವಾಸ್ತವವಾಗಿ ಅಲ್ಲಿ ಅಸ್ತಿತ್ವದಲ್ಲಿರುವುದು ಮೂರು ಆಂಧ್ರಗಳು. ಒಂದು, ಕಡಪ, ಅನಂತಪುರ, ನೆಲ್ಲೂರು, ಚಿತ್ತೂರು ಜಿಲ್ಲೆಗಳನ್ನು ಒಳಗೊಂಡ ರಾಯಲಸೀಮೆ, ಇದು ರೆಡ್ಡಿ ಜನಾಂಗದ ಪ್ರದೇಶ. ಎರಡನೇಯದು ತೆಲಂಗಾಣವೆಂದು ಕರೆಸಿಕೊಳ್ಳುವ ಮಧ್ಯಭಾಗದ ಆಂಧ್ರಪ್ರದೇಶವಾದ ಕಮ್ಮ ಜನಾಂಗ ಪ್ರಭಾವವಿರುವ, ಮೇಡಕ್, ಸಂಗರೆಡ್ಡಿ, ಕಮ್ಮಮಂ, ಕರೀಂನಗರ, ವಾರಂಗಲ್, ನಲ್ಗೊಂಡ, ಮುಂತಾದ ಜಿಲ್ಲೆಗಳು ಈ ಪ್ರಾಂತ್ಯಕ್ಕೆ ಸೇರುತ್ತವೆ. ಕೃಷ್ಣಾ ನದಿ ಮತ್ತು ಗೋದಾವರಿ ನದಿ ತೀರದ ಜಿಲ್ಲೆಗಳಾದ ವಿಜಯವಾಡ, ರಾಜಮಂಡ್ರಿ, ಅದಿಲಾಬಾದ್, ಇವುಗಳು ಕೂಡ ತೆಲಂಗಾಣ ಪ್ರಾಂತ್ಯಕ್ಕೆ ಸೇರುತ್ತವೆ. ಸಾಂಸ್ಕೃತಿಕವಾಗಿ ಮತ್ತು ರಾಜಕೀಯ ಹಾಗೂ ಸಾಮಾಜಿಕವಾಗಿ ಭಿನ್ನತೆ ಇರುವುದು, ಗೋದಾವರಿ ನದಿಯಾಚೆಗಿನ ಜಿಲ್ಲೆಗಳಲ್ಲಿ. ಅಂದರೆ, ವಿಶಾಖಪಟ್ಟಣ, ಪೂರ್ವಗೋದಾವರಿ ಜಿಲ್ಲೆ, ಶ್ರೀಕಾಕುಳಂ ಜಿಲ್ಲೆಗಳಲ್ಲಿ.

ಈ ಪ್ರದೇಶಗಳ ಗುಡ್ಡಗಾಡುಗಳಲ್ಲಿ ಅತ್ಯಧಿಕ ಮಂದಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗ ವಾಸಿಸುತ್ತಿದ್ದು, ಈ ನೆಲದ ಸಂಸ್ಕೃತಿಯನ್ನು ಇವತ್ತಿಗೂ ಜೀವಂತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇವರಲ್ಲಿ ಪ್ರಮುಖ ಜನಾಂಗಗಳೆಂದರೆ, ಗೊಂಡ, ಕೊಂಡರೆಡ್ಡಿ, ಚೆಂಚು, ಮರಿಯ, ಜಟಪು, ಸವರ, ತೋಲಂ, ಕೋಯ ಮುಖ್ಯವಾದವುಗಳು. ಇವರನ್ನು ಗುರುತಿಸಿ ಹೊರಜಗತ್ತಿಗೆ ಪರಿಚಯಿಸಿದ  ಕೀರ್ತಿ ಪ್ರಖ್ಯಾತ ಸಮಾಜಶಾಸ್ತ್ರಜ್ಙ ವೇರಿಯನ್‌ ಎಲ್ವಿನ್‌ಗೆ ಸಲ್ಲಬೇಕು. ಒಂದು ಕಾಲದಲ್ಲಿ ಮಳೆಯನ್ನು ಆಶ್ರಯಿಸಿಕೊಂಡು, ಒಣ ಭೂಮಿಯಾಗಿದ್ದ ಈ ನೆಲಕ್ಕೆ ನೀರುಣಿಸಿ, ಇಲ್ಲಿನ ಭೂಮಿಯನ್ನು ಹಸನುಗೊಳಿಸಿದವನು, ಬ್ರಿಟಿಷ್ ಸರ್ಕಾರದಲ್ಲಿ ಮುಖ್ಯಇಂಜೀಯರ್ ಆಗಿ ಮದ್ರಾಸ್ ಪ್ರಾಂತ್ಯಕ್ಕೆ ನೆರೆಯ ಬರ್ಮಾದಿಂದ 1821 ರಲ್ಲಿ ಬಂದ ಸರ್ ಅರ್ಥರ್‌ ಕಾಟನ್. ಅನಾವಶ್ಯಕವಾಗಿ ಕೃಷ್ಣ ಮತ್ತು ಗೋದಾವರಿ ನದಿಯ ನೀರು ಸಮುದ್ರ ಸೇರುತ್ತಿರುವುದನ್ನು ಗಮನಿಸಿ, ಈ ಎರಡು ನದಿಗಳಿಗೆ ಅಣೆಕಟ್ಟು ನಿರ್ಮಿಸಿದ ಮಹಾನುಭಾವ ಈತ. 1851 ರಿಂದ 1855 ರ ನಡುವೆ ಸ್ವತಃ ಹಲವಾರು ಬಾರಿ ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ರಾಣಿ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮನವೊಲಿಸಿ, 12 ಸಾವಿರ ಪೌಂಡ್ ಹಣವನ್ನು ತಂದು, ನೀರಾವರಿ ಯೋಜನೆಗಳ ನೀಲನಕ್ಷೆ ತಯಾರಿಸಿ, ತಾನೇ ಸ್ವತಃ ನಿಂತು ಕೃಷ್ಣಾನದಿಗೆ ಮತ್ತು ಗೋದಾವರಿ ನದಿಗೆ ತಲಾ ಒಂದೊಂದು ಅಣೆಕಟ್ಟನ್ನು ನಿರ್ಮಿಸಿದ.

1860 ರಲ್ಲಿ ನಿವೃತ್ತಿಯ ನಂತರ ಕಾಟನ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿ ಹೋದರೂ, ಇಲ್ಲಿ ಜನತೆ ಆತನನ್ನು ಮತ್ತು ಅವನ ಋಣವನ್ನು ಮರೆಯಲಿಲ್ಲ. 1900 ರಲ್ಲಿ ರಾಜಮಂಡ್ರಿ ಪಟ್ಟಣದ ಸಮೀಪ ಹರಿಯುವ ಗೋದಾವರಿ ನದಿಗೆ ನಿರ್ಮಿಸಲಾದ ಒಂದೂವರೆ ಕಿ.ಮಿ.ಉದ್ದದ ರೈಲ್ವೆ ಸೇತುವೆಗೆ ಅರ್ಥರ್‌ ಕಾಟನ್‌ನ ಹೆಸರನ್ನು ನಾಮಕರಣ ಮಾಡಿದರು. ಅದು ಶಿಥಿಲಗೊಂಡ ನಂತರ 1987 ರಲ್ಲಿ ಮತ್ತೊಂದು ಹೊಸ ಸೇತುವೆಯನ್ನು ಸಹ (ಕಮಾನು ಸೇತುವೆ) ನಿರ್ಮಿಸಲಾಗಿದೆ. ಇಲ್ಲಿನ ಜನತೆ ಅರ್ಥರ್‌ ಕಾಟನ್ ದೂರದೃಷ್ಟಿ ಯೋಜನೆಗಳಿಂದ ತಮ್ಮ ಭೂಮಿಗೆ ನೀರನ್ನು ಕಂಡರೂ ಸಹ ಹೈದರಾಬಾದ್‌ನ ನಿಜಾಮ ಮತ್ತು ಸ್ಥಳೀಯ ಪಾಳೇಗಾರರು, ಜಮೀನ್ದಾರರು ಇವರುಗಳ ಕಿರುಕುಳದ ಕಾರಣದಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಲ್ಲಲು ಸಾಧ್ಯವಾಗಲೇ ಇಲ್ಲ.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ  ಜಗತ್ತಿನ ಅತೀ ಶ್ರೀಮಂತರುಗಳ ಪೈಕಿ ಒಬ್ಬನಾಗಿದ್ದ ಹೈದರಾಬಾದಿನ ಏಳನೇ ನಿಜಾಮ ವಾರ್ಷಿಕವಾಗಿ 25 ಲಕ್ಷರೂಪಾಯಿಗಳನ್ನು ಪಾಳೇಗಾರರು ಮತ್ತು ಜಮೀನ್ದಾರರಿಂದ ಭೂಮಿಯ ಕಂದಾಯ ರೂಪದಲ್ಲಿ ಆದಾಯ ಪಡೆಯುತ್ತಿದ್ದ. ಬಿಟಿಷ್ ಸರ್ಕಾರ ವೇರಿಯರ್ ಎಲ್ವಿನ್ ನೀಡಿದ್ದ ವರದಿಗೆ ಸ್ಪಂದಿಸಿ, ಆದಿವಾಸಿಗಳಿಗೆ, ಅರಣ್ಯ ಭೂಮಿಯ ಹಕ್ಕನ್ನು ದಯಪಾಲಿಸಿತ್ತು. ಆದರೆ, ಅಕ್ಷರ ಲೋಕದಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗಕ್ಕೆ ಭೂಮಿಯ ದಾಖಲೆ ಅಂದರೆ, ಏನು, ಹಕ್ಕು ಎಂದರೆ ಏನು ಎಂಬುದು ಅರ್ಥವಾಗುವುದರೊಳಗೆ  ಅವೆಲ್ಲವೂ ಪಟ್ಟಭದ್ರ ಹಿತಾಶಕ್ತಿಗಳ ಪಾಲಾಗಿದ್ದವು. ಅತ್ಯಂತ ಸ್ವಾರ್ಥ ಮತ್ತು ಕ್ರೂರಿಯಾಗಿದ್ದ ಈ ನಿಜಾಮ ಎಂದೂ ಸಹ ತನ್ನ ಅರಮನೆಗೆ ಯಾವುದೇ ಅತಿಥಿಗಳನ್ನು ಆಹ್ವಾನಿಸದ ವಿಚಿತ್ರ ವ್ಯಕ್ತಿತ್ವ ಹೊಂದಿದವನಾಗಿದ್ದ. ಅವನ ವೈಭೋಗದ ಬದುಕಿಗೆ ಈಗ ಹೈದರಾಬಾದ್ ನಗರದಲ್ಲಿರುವ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರೆ, ಸಾಕು. ಜಗತ್ತಿನ ಎಲ್ಲಾ ವಿಧವಾದ ಶ್ರೇಷ್ಠ ಕೃತಿಗಳು, ವಸ್ತುಗಳು ಅಲ್ಲಿ ಸಂಗ್ರಹವಾಗಿವೆ. ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸಂಗ್ರಹವಾಗಿರುವ ಇವುಗಳನ್ನು ವೀಕ್ಷಿಸಲು ಕನಿಷ್ಟ ಒಂದು ದಿನವಾದರೂ ಬೇಕು.

ಇವತ್ತಿಗೂ ಭಾರತದಲ್ಲಿ ನಕ್ಸಲ್ ಚಳವಳಿ ಆರಂಭವಾದದ್ದು ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಹಳ್ಳಿಯ ಮೂಲಕ ಎಂದು ಪ್ರತಿಬಿಂಬಿಸಿಕೊಂಡು ಬರಲಾಗುತ್ತಿದೆ. ಇದು ಅರ್ಧಸತ್ಯ ಮಾತ್ರ. ನಿಜವಾದ ನಕ್ಸಲ್ ಹೋರಾಟದ ಮೂಲ ಬೇರುಗಳು ಇರುವುದು ಆಂಧ್ರದ “ಶ್ರೀಕಾಕುಳಂ” ಜಿಲ್ಲೆಯಲ್ಲಿ. ಅದರಲ್ಲೂ ಪಾರ್ವತಿಪುರ ಎಂಬ ತಾಲೂಕು ಕೇಂದ್ರದಲ್ಲಿ. ಇದು ಪ್ರಪಥಮ ಬಾರಿಗೆ ಹೋರಾಟಕ್ಕೆ ನಾಂದಿ ಹಾಡಿದ ನೆಲ. ಸಿಲಿಗುರಿ ಪ್ರಾಂತ್ಯದ ನಕ್ಸಲ್ ಬಾರಿಯಲ್ಲಿ ಹೋರಾಟ ಆರಂಭಗೊಂಡಿದ್ದು 1967 ರಲ್ಲಿ ಆದರೆ, ಅದಕ್ಕೂ ಮುನ್ನ 1961 ರಲ್ಲಿ ಯಾವುದೇ ಕಮ್ಯೂನಿಷ್ಟ್ ಸಿದ್ಧಾಂತಗಳ ಹಂಗಿಲ್ಲದೆ ಇಲ್ಲಿನ ಗಿರಿಜನ ಜಮೀನ್ದಾರರ ವಿರುದ್ಧ ಹೋರಾಟ ಆರಂಭಿಸಿದ್ದರು. 1967 ರ ನಂತರ ಈ ಪ್ರದೇಶಕ್ಕೆ ಭೇಟಿ ನೀಡಿದ ಚಾರು ಮುಜಂದಾರ್, ಇಲ್ಲಿನ ಹೋರಾಟದ ಅಸ್ತಿಪಂಜರಕ್ಕೆ ಕಮ್ಯೂನಿಷ್ಟ್ ವಿಚಾರಗಳ, ಮಾಂಸ ಮತ್ತು ಮಜ್ಜೆಯನ್ನು ತುಂಬಿದ.

ಶ್ರೀಕಾಕುಳಂ ನೆಲದ ಕಪ್ಪು ಇತಿಹಾಸದಲ್ಲಿ ಹಲವಾರು ನೆತ್ತರಿನ ಅಧ್ಯಾಯಗಳಿವೆ. ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ರಕ್ತದ ಕೋಡಿಯನ್ನು ಹರಿಸಿ, ನಂತರ ಹಿಂಸೆಯನ್ನು ತ್ಯಜಿಸಿ, ಆನಂತರ ಅಹಿಂಸೆಯ ಮಾರ್ಗ ಹಿಡಿದು ಬೌದ್ಧ ಧರ್ಮ ಸ್ವೀಕಾರ ಮಾಡಿದಾಗ ಆ ಘಟನೆಗೆ ಈ ನೆಲ ಸಾಕ್ಷಿಯಾಗಿತ್ತು. ಆಂಧ್ರದ ಗೋದಾವರಿ ನದಿಯಾಚೆಗಿನ ಪ್ರದೇಶ ಅಶೋಕನ ಅಧೀಪತ್ಯಕ್ಕೆ ಒಳಪಟ್ಟಿದ್ದರೆ, ಮಧ್ಯಭಾಗದ ಆಂಧ್ರದ ವಾರಂಗಲ್‌ನ ಕಾಕತೀಯ ಅರಸರ ವಂಶಸ್ಥರ ಆಳ್ವಿಕೆ ಒಳಪಟ್ಟಿತ್ತು. ಹೈದರಾಬಾದ್ ಪ್ರಾಂತ್ಯ ಹಾಗೂ ಸುತ್ತಮುತ್ತಲಿನ ಪ್ರದೇಶ ನೇರವಾಗಿ ಮೊಗಲರಿಂದ ನಿಜಾಮರ ಕೈ ಸೇರಿತ್ತು. ಇನ್ನು ದಕ್ಷಿಣ ಆಂದ್ರದ ಜಿಲ್ಲೆಗಳ ಪ್ರದೇಶ ವಿಜಯನಗರದ ಅರಸರ ಆಳ್ವಿಕೆ ಒಳಪಟ್ಟಿದ್ದ ಕಾರಣ ಈ ಪ್ರದೇಶವನ್ನು ರಾಯಲಸೀಮ (ಕೃಷ್ಣದೇವರಾಯ ಆಳಿದ ನಾಡು) ಎಂದು ಕರೆಯಲಾಗುತ್ತದೆ.

ಶ್ರೀಕಾಕುಳಂ ನಕ್ಸಲ್ ಇತಿಹಾಸ ಈವರೆಗೆ ಬೆಳಕಿಗೆ ಬಾರದೇ ಇತಿಹಾಸದ ಮಣ್ಣಲ್ಲಿ ಹುದುಗಿ ಹೋಗಿದೆ. ಇಲ್ಲಿನ ಬುಡಕಟ್ಟು ಜನಾಂಗ ಅನುಭವಿಸಿದ ಯಾತನೆಗಳು ಶಬ್ಧ ಮತ್ತು ಅಕ್ಷರಕ್ಕೆ ನಿಲುಕಲಾರದವು. ನಿತ್ಯಹರಿಧ್ವರ್ಣದ ಅರಣ್ಯ, ಅಪಾರ ಖನಿಜ ಸಂಪತ್ತಿನ ಒಡೆಯರಾಗಿದ್ದ ಈ ಜನರಿಗೆ, ಇವರ ಸಂಸ್ಕೃತಿಗೆ ಮತ್ತು ಬದುಕಿಗೆ ಭಂಗವನ್ನುಂಟು ಮಾಡಬಾರದೆಂದು ಅರಣ್ಯ ಭೂಮಿಯ ಹಕ್ಕನ್ನು ಬ್ರಿಟಿಷ್ ಸರ್ಕಾರ ದಯಪಾಲಿಸಿತ್ತು ಅಲ್ಲದೆ, ಇವರ ಭೂಮಿಯನ್ನು ಬುಡಕಟ್ಟು ಜನಾಂಗ ಹೊರತುಪಡಿಸಿ ಇತರರು ಕೊಳ್ಳದಂತೆ ಕಾಯ್ದೆಯನ್ನು ರೂಪಿಸಿಲಾಗಿತ್ತು. 1951 ರಲ್ಲಿ ಭಾರತ ಸರ್ಕಾರ ಕೂಡ ಈ ಕಾಯ್ದೆಗೆ ಹಲವು ತಿದ್ದುಪಡಿ ಮಾಡಿ (ಅರಣ್ಯ ಭೂಮಿಯಲ್ಲಿರುವ ಮರ ಮತ್ತು ಖನಿಜ ಸಂಪತ್ತು ಸರ್ಕಾರದ ಸ್ವತ್ತು) ಅನುಷ್ಠಾನಗೊಳಿಸಿತ್ತು. ಆಂಧ್ರದ ಪೂರ್ವ ಕರಾವಳಿಯ ಗುಡ್ಡಗಾಡಿನ ಬಹುತೇಕ ಅರಣ್ಯವಾಸಿಗಳು, ಪೋಡು ಎಂಬ ಪುಟ್ಟ ಗ್ರಾಮಗಳಲ್ಲಿ ವಾಸಿಸುತ್ತಾ, ಹೈನುಗಾರಿಕೆ, ಬೇಸಾಯ, ಅರಣ್ಯದ ಕಿರುಉತ್ಪನ್ನವನ್ನು ನಂಬಿ ಬದುಕಿದ್ದರು.

1950 ದಶಕದಲ್ಲಿ ಇಲ್ಲಿ ಆರಂಭವಾದ ಸರ್ಕಾರಿ ಸ್ವಾಮ್ಯದ ಸಿರ್ಪುರ್ ಪೇಪರ್‌ಮಿಲ್ (ಈಗಿನ ಆಂಧ್ರ ಪೇಪರ್ಸ್ ಮಿಲ್ ಲಿಮಿಟೆಡ್) ಹಾಗೂ ಕೇಂದ್ರ ಸರ್ಕಾರದ ಸಿಂಗರೇಣಿ ಕಲ್ಲಿದ್ದಲು ಗಣಿಗಾರಿಕೆ ಇವರ ನೈಜ ಸಾಂಸ್ಕೃತಿಕ ಬದುಕನ್ನು ಪಲ್ಲಟಗೊಳಿಸಿತು. ಪೇಪರ್ ಮಿಲ್‌ಗೆ ಬಿದಿರಿನ ಬೊಂಬುಗಳನ್ನು ಸರಬರಾಜು ಮಾಡಲು ಬಂದ ದಳ್ಳಾಳಿಗಳು ಕೆ.ಜಿ. ಗೆ 7 ಪೈಸೆಯಂತೆ ಕೊಳ್ಳಲು ಸಿದ್ದರಿದ್ದೇವೆ ಎಂದು ಅರಣ್ಯವಾಸಿಗಳಿಗೆ ಆಮಿಷ ಒಡ್ಡಿದರು. ಅದೇ ರೀತಿ ಅತ್ಯಂತ ಕಷ್ಟವಾದ ಕಲ್ಲಿದ್ದಲು ಗಣಿಗಾರಿಕೆಗೆ ತಿಂಗಳಿಗೆ 120 ರೂಪಾಯಿ ಸಂಬಳದ ಆಧಾರದ ಮೇಲೆ ಗುತ್ತಿಗೆದಾರರು ಇವರನ್ನು ನೇಮಕ ಮಾಡಿಕೊಳ್ಳತೊಡಗಿದರು. ಇವರ ಜೊತೆ ಕೇರಳದ ಮಾಪಿಳ್ಳೆಗಳು ಮರ ಕಡಿಯುವ ಗುತ್ತಿಗೆದಾರರಾಗಿ, ದಕ್ಷಿಣ ಆಂಧ್ರ ಕೊಮಟಿಗರು ಬಟ್ಟೆ ಮತ್ತು ದಿನಸಿ ವ್ಯಾಪಾರಿಗಳಾಗಿ ಈ ಪ್ರದೇಶಕ್ಕೆ ಕಾಲಿಟ್ಟರು. ವ್ಯವಹಾರ ಮತ್ತು ಆರ್ಥಿಕ ಚಟುವಟಿಕೆಯ ಲೋಕವೇ ಗೊತ್ತಿಲ್ಲದ ಮುಗ್ಧ ಜನರಿಗೆ ಸಾಲ ನೀಡಿ ಅದಕ್ಕೆ ಪ್ರತಿಯಾಗಿ ಖಾಲಿ ಬಿಳಿಯ ಕಾಗದದ ಮೇಲೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುವ ಮೂಲಕ ಅರಣ್ಯವಾಸಿಗಳ ಜಮೀನುಗಳನ್ನು ಕಬಳಿಸಿದರು. ಇವರ ಈ ದುಷ್ಕೃತ್ಯಕ್ಕೆ ನೆರವಾದವರು, ಪಕ್ಕದ ಮಹಾರಾಷ್ಟ್ರದಿಂದ ವಲಸೆ ಬಂದ ಪಟ್ವಾರಿಗಳು. ಇವರು ಭೂದಾಖಲೆಗಳನ್ನು ನಿರ್ವಹಿಸುವುದನ್ನೇ ಕುಲ ಕಸುಬು ಮಾಡಿಕೊಂಡವರು. ಇಂತ ವೃತ್ತಿಯಲ್ಲಿದ್ದವರನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಗಳೆಂದು, ದಕ್ಷಿಣ ಕರ್ನಾಟಕದಲ್ಲಿ ಶ್ಯಾನುಬೋಗರೆಂದು ಕರೆಯುತ್ತಿದ್ದರು.

ಈ ವಂಚನೆಯ ತಂಡ ಅರಣ್ಯವಾಸಿಗಳ ಭೂಮಿಯನ್ನು ಕಬಳಿಸಿ ನಂತರ ಇವುಗಳನ್ನು ಶ್ರೀಮಂತ ಜಮೀನ್ದಾರರಿಗೆ ಅಧಿಕ ಲಾಭಕ್ಕೆ ವರ್ಗಾವಣೆ ಮಾಡುತ್ತಿದ್ದರು. ತಮಗೆ ಅರಿವಿಲ್ಲದಂತೆ ಇಂತಹ ವಂಚನೆಯ ಜಾಲದಲ್ಲಿ ಸಿಲುಕಿದ ಅಮಾಯಕ ಗಿರಿಜನ, ಜಮೀನ್ದಾರರ ಗೂಂಡಾ ಪಡೆಗಳಿಗೆ ಹೆದರಿ, ತಮ್ಮ ಭೂಮಿಯಲ್ಲಿ ತಾವೇ ಬೆಳೆದ ಫಸಲನ್ನು ಭೂಮಾಲೀಕನಿಗೆ ನೀಡಿ ಇದಕ್ಕೆ ಪ್ರಫಲವಾಗಿ ಅವನು ಭಿಕ್ಷೆಯಂತೆ ಕೊಟ್ಟ ಅಲ್ಪ ಪ್ರಮಾಣದ ಫಸಲನ್ನು ಪಡೆದು ಮನೆಗೆ ಹಿಂತಿರುಗುತ್ತಿದ್ದರು. ನಾಗರೀಕ ಜಗತ್ತಿನ ವ್ಯವಹಾರದ ಅರಿವಿಲ್ಲದ ಈ ಜನ ಸಾಲ ಅಥವಾ ಬಡ್ಡಿ ಎಂದರೆ, ಏನು?, ಭೂ ದಾಖಲೆಗಳು ಎಂದರೆ ಏನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಹಳ ವರ್ಷಗಳೇ ಕಳೆದು ಹೋದವು. ಇವೆಲ್ಲಕ್ಕಿಂತ ಕ್ರೂರವಾದ ಅಮಾನುಷ ಕೃತ್ಯಗಳಿಗೆ ಇವರು ಬಲಿಯಾದರು. ಅರಣ್ಯದಲ್ಲಿ ಕಿರು ಉತ್ಪನ್ನ, ಇಲ್ಲವೆ ಸೌದೆ ಆರಿಸಲು ಹೋದ ಮಹಿಳೆಯರು, ನದಿಯಲ್ಲಿ ಸ್ನಾನಕ್ಕೆ ಹೋದ ಆದಿವಾಸಿ ಮಹಿಳೆಯರು ಈ ಹೃದಯಹೀನ ಜನರ ಅತ್ಯಾಚಾರಕ್ಕೆ ಒಳಗಾದರು. ಅಲ್ಲದೆ, ಕಪ್ಪು ವರ್ಣದ ಸುಂದರ ಮೈಕಟ್ಟಿನ ಆದಿವಾಸಿ ಜನಾಂಗದ ಹೆಂಗಸರು, ಹದಿ ಹರೆಯದ ಹುಡುಗಿಯರು, ತಮ್ಮ ಗಂಡಂದಿರ, ಅಪ್ಪಂದಿರ ಎದುರು ಜಮೀನ್ದಾರರ ಮನೆಗೆ ಅವರ ಕಾಮತೃಷೆ ನೀಗಿಸಲು ಪ್ರಾಣಿಗಳಂತೆ ಸಾಗಿಸಲ್ಪಟ್ಟರು. ಬಾಯಿಲ್ಲದ ಈ ಮೂಕ ಜನರಿಗೆ ನ್ಯಾಯ ದೊರಕಿಸಿಕೊಡಲು, ಅವರ ಹೋರಾಡಲು ಒಬ್ಬ ಅಪ್ಪಟ ಮನುಷ್ಯನಿಗಾಗಿ ಅಸಹಾಯಕ ಮತ್ತು ಅಮಾಯಕ ಗಿರಿಜನರ ಜಗತ್ತು ಎದುರು ನೋಡುತ್ತಿತ್ತು.

ಇಂತಹ ಸಮಯದಲ್ಲಿ ಇವರಿಗೆ ಬೆನ್ನೆಲುಬಾಗಿ ನಿಂತ ಹೃದಯವಂತ ವ್ಯಕ್ತಿ, ವೆಂಪಟಾಪು ಸತ್ಯನಾರಾಯಣ. ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಈತ, ಬುಡಕಟ್ಟು ಜನಾಂಗದ ಮೇಲಿನ ಅನ್ಯಾಯ, ಅತ್ಯಾಚಾರವನ್ನು ಸಹಿಸಲಾಗದೆ, ತನ್ನ ವೃತ್ತಿಗೆ ತಿಲಾಂಜಲಿ ನೀಡಿ, ಗಿರಿಜನರನ್ನು ಸಂಘಟಿಸುವುದರ ಜೊತೆಗೆ ಭೂಮಾಲೀಕರ ಜೊತೆ ಸಂಘರ್ಷಕ್ಕೆ ನಾಂದಿ ಹಾಡಿದ. ಒಂದು ಅರ್ಥದಲ್ಲಿ ನಿಜವಾದ ನಕ್ಸಲ್ ಚಳವಳಿಯ ಪಿತಾಮಾಹನೆಂದರೆ, ಈ ಸತ್ಯನಾರಯಣ. ಆದರೆ, ಭಾರತದ ಎಡಪಂಥಿಯ ವಿಚಾರಧಾರೆಗಳ ಅಬ್ಬರದ ಪ್ರಚಾರದಲ್ಲಿ ಈ ಹುತಾತ್ಮ ಇವತ್ತಿಗೂ ಬೆಳಕಿಗೆ ಬಾರದೇ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದಾನೆ.

 (ಮುಂದುವರಿಯುವುದು)

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

– ಮಹಾದೇವ ಹಡಪದ

ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಾಹಾನ್ ನಾಯಕರು ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನು ಪರಶೀಲಿಸಿ  ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲ. ಮತ್ತು ಇಂದಿಗೂ ಆ ವ್ಯಂಗ್ಯಚಿತ್ರ ಅಂಬೇಡ್ಕರ್ ಅವರ ಘನತೆಯನ್ನೇನೂ ಕಡಿಮೆ ಮಾಡಲಾರದು. ಆದರೆ ಅದನ್ನು ಪಠ್ಯದಲ್ಲಿ ಹಾಕಿರುವುದು ಒಂದು ಅಪರಾಧವೇ ಸೈ. ಆ ಚಿತ್ರ ಅವತ್ತಿನ ಭಾರತದ ಆ ಸಂದರ್ಭಕ್ಕೆ ಸರಿಯಾಗಿ ಕಲಾವಿದನ ಮೊನಚು ನೋಟದಲ್ಲಿ ಅರಳಿರುವುದು ಒಪ್ಪೋಣ. ಹಾಗೆಂದ ಮಾತ್ರಕ್ಕೆ ಇಂದಿನ ಭಾರವಾದ ಬದುಕಿನ ಮೆಕಾಲೆ ಮೊಮ್ಮಕ್ಕಳಿಗೆ ಆ ಚಿತ್ರದ ಬಗ್ಗೆ ಏಕಮುಖಿ ಅಭಿಪ್ರಾಯ ಹೋಗುತ್ತದೆ. ಅದು ಭವಿಷ್ಯದಲ್ಲಿ ತಪ್ಪು ತಿಳುವಳಿಕೆ ನೀಡಲಾರದು ಎನ್ನುವುದು ಗ್ರಹಿಕೆಗೆ ನಿಲುಕಲಾರದ್ದೇನಲ್ಲ.

ಒಂದು ಉದಾಹರಣೆ ಹೇಳುತ್ತೇನೆ- ಹೆಗ್ಗೋಡು ಹೈಸ್ಕೂಲಿನ ಒಬ್ಬ ಮಾಸ್ತರರು ಗಾಂಧಿಯ ಪಾಠವನ್ನು ಮತಾಂಧ ಹಿಂದುತ್ವ ಪ್ರತಿಪಾದನೆಯ ಮಾದರಿಯಲ್ಲಿಯೇ ಮಾಡುತ್ತಾರೆ. ಅವರ ಶಿಷ್ಯನು ಇತಿಹಾಸಕ್ಕೆ ಜಾಣಕುರುಡನಾಗಿ ಗಾಂಧಿಯನ್ನು ದ್ವೇಷಿಸುತ್ತಾನೆ. ಆ ಹುಡುಗ ಆ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ. (ನಾನು ಹೆಗ್ಗೋಡಿನಲ್ಲಿದ್ದಾಗ ಆತ ನನ್ನ ನೆರೆಮನೆಯಾತನೂ ಆಗಿದ್ದ.) ಹೀಗಿರುವಾಗ ವ್ಯಂಗ್ಯಚಿತ್ರವನ್ನು ಪಾಠವಾಗಿ ವಿವರಿಸುವ ಆಸಾಮಿ ದೇವರ ಸೇವೆಗೆ ಬಂದವನಾಗಿದ್ದರೆ ಅಥವಾ ಅಂಬೇಡ್ಕರ್ ಕುರಿತು ಗೌರವ ಇಲ್ಲದವನಾಗಿದ್ದರೆ ಹೇಗೆ ಅದನ್ನು ಚಿತ್ರಿಸಬಹುದು ಎಂಬುದನ್ನು ಯೋಚಿಸುವುದು ಸದ್ಯದ ಅವಶ್ಯಕತೆಯಾಗಿದೆ. ಆದ್ದರಿಂದ ಅದು ಅಂಬೇಡ್ಕರರಿಗೆ ಮಾಡಿದ ಅವಮಾನವೇ ಆಗಿದೆ.

1949 ರಲ್ಲಿ ಶಂಕರಪಿಳ್ಳೆ ಬರೆದ ಆ ಚಿತ್ರ ಮೂರು ವರ್ಷದ ವಿಳಂಬವನ್ನ ವಿಡಂಬಿಸಿರುವುದು ರಾಜ್ಯಶಾಸ್ತ್ರ, ಸಮಾಜವಿಜ್ಞಾನವೇನೂ ಆಗಲಾರದು. ಆ ಶ್ರಮದ ಫಲವನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಪಠ್ಯವೊಂದರಲ್ಲಿ ಸೇರಿಸುವ ಮೂಲಕ (ಯಾದವ್ ಮತ್ತು ಫಲೀಷ್ಕರ್ ಅವರು ಯಾವ ಕುತಂತ್ರವನ್ನು ಹೊಂದಿದವರಲ್ಲ) ಅಂಬೇಡ್ಕರ್ ಅವರ ರಥದ ಗಾಲಿಗೆ ಕೈ ಹಾಕಿದವರ ಅಭಿಮಾನಕ್ಕೆ ಧಕ್ಕೆ ಆಗಿರುವುದಂತು ಸತ್ಯವಾದ ಮಾತು. ಆದರೆ ಪ್ರಿಯ ಪ್ರಗತಿಪರ ಚಿಂತಕರು ಆ ಪಠ್ಯವನ್ನು ಸ್ವತಃ ಸರಕಾರವೇ ಪಠ್ಯದಿಂದ ಕೈ ಬಿಡುವಾಗ ’ಅದನ್ನು ಪಠ್ಯದಿಂದ ಕೈ ಬಿಟ್ಟರೆ ಅಂಬೇಡ್ಕರ್ ಅವರಿಗೆ ಅವಮಾನ,’ ಎಂದೆಲ್ಲ ಹೇಳಿ ತಮ್ಮ ಫೇಸ್‌ಬುಕ್ಕಿನ ಹಾಳೆಗಳಿಗೆ ಪ್ರತಿಕ್ರಿಯೆಯನ್ನು ಸಂಪಾದಿಸುತ್ತಿದ್ದಾರೆ. ಅವರಿಗೆ ಗೊತ್ತಿರಲಿಕ್ಕಿಲ್ಲ.. ಹಸಿವೆಗಿಂತಲೂ ಅವಮಾನದ ಕಹಿ ನುಂಗಲಾರದ ತುತ್ತೆಂಬುದು.

ಈ ಇಂಡಿಯಾದ ವರ್ಣ-ವರ್ಗ ವ್ಯವಸ್ಥೆಯಲ್ಲಿ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿರುವ ಅಸ್ಪೃಶ್ಯತೆ ಮತ್ತೆ ಯಾವ ಮಾದರಿಯಲ್ಲಿ ಹುಟ್ಟಿಕೊಳ್ಳುತ್ತದೋ ತಿಳಿಯದು. ಇವತ್ತಿನ ಖಾಸಗೀಕರಣದಲ್ಲಿ ಅವರವರದೇ ಸಂವಿಧಾನಗಳು, ಅವರವರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸುತ್ತಿವೆ. ನ್ಯಾಯಕಟ್ಟೆಗಳು ಅವರ ಇಚ್ಛೆಯಂತೆ ಅವರಿಗೆ ಬೇಕಾದವರಿಗೆ ಬೇಕುಬೇಕಾದಂತೆ ನ್ಯಾಯ ಹೇಳುತ್ತಿವೆ. ರಾಳೇಗಾಂವ್ ಸಿದ್ಧಿಯ ಗಾಂಧಿಟೋಪಿ ಬಾಬಾನೂ ಅವರೂರಿನಲ್ಲಿ ಅವರೇ ನ್ಯಾಯಾಧೀಶ, ಸರಕಾರ ಎಲ್ಲವೂ ಆಗಿದ್ದಾರೆ. ಹಾಗೆ ಮಾಡುವವರು ಸಂವಿಧಾನವನ್ನೆ ಧಿಕ್ಕರಿಸುವ ನಿಲುವುಳ್ಳವರು. ಇಂದಿಗೂ ಕರ್ನಾಟಕದ ಮಧ್ಯಭಾಗದಲ್ಲಿ ಒಂದು ಮಠ (ತರಳಬಾಳು) ಸ್ವಂತ ನ್ಯಾಯಾಲಯವನ್ನು ನಡೆಸುತ್ತದೆ ಎಂದರೆ ನಂಬುತ್ತೀರಾ? ಅಲ್ಲಿ ನ್ಯಾಯಾಧೀಶರು ಒಬ್ಬ “ಪ್ರಗತಿಪರ” ಮಠಾಧೀಶರು. ಹೀಗೇ ತಮ್ಮ ಸುಪರ್ದಿಯ ಯಾವ ಹಕ್ಕನ್ನೂ ಬಿಟ್ಟುಕೊಡದ ಒಂದು ವ್ಯವಸ್ಥೆ ಹನ್ನೆರಡನೆಯ ಶತಮಾನದಿಂದ ಏಕೆ ಅನಾದಿ ಕಾಲದಿಂದಲೂ ನಿರಂತರವಾಗಿ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವಾಗ ಆ ಪಠ್ಯವನ್ನ ಖಂಡಿಸಲೇಬೇಕಾಗಿತ್ತು.

ಆದ್ದರಿಂದ ಆ ಸಂಘಟನೆಯ ಮುಖಂಡನಿಗೆ ಅದು ಬರೀ ಕುರುಡು ಅಭಿಮಾನ ಇದ್ದಿರಬಹುದು. ಹಾಗೆಂದ ಮಾತ್ರಕ್ಕೆ ಅವರ ಹಲ್ಲೆಯನ್ನು ತಿರಸ್ಕರಿಸುವಷ್ಟು ಅಪರಾಧವೇನೂ ಅಲ್ಲ. ಯಾಕೆಂದರೆ ಯಾವ ಹುತ್ತದಲ್ಲಿ ಎಂಥ ವಿಷಕಾರಿ ಹಾವು ಕೂತಿರುತ್ತದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಜಾತಿ ರಾಜಕಾರಣದ ನಡುವೆ ತಳಸಮುದಾಯಗಳು ಒಡೆದಮನೆಗಳಂತೆ ಮೇಲುಕೀಳಿನ ಅಂದಾಜು ಲೆಕ್ಕಾಚಾರದಲ್ಲಿ ನೆನೆಗುದಿಗೆ ಬಿದ್ದಿರುವಾಗ ಮತ್ತೆ ಸನಾತನ ವ್ಯವಸ್ಥೆ ಸ್ಥಾಪಿಸುವ ಎಲ್ಲ ತಯಾರಿಯನ್ನು ಈ ಮೇಲ್ಜಾತಿಗಳು ಮಾಡಿಕೊಂಡು ಕೂತಿರುವುದನ್ನು ಕಾಣುತ್ತಿದ್ದೇವೆ. ಅಲ್ಲಾ ಸ್ವಾಮಿ, ಈ ಕನ್ನಡದ ಪಿಚ್ಚರ್ ಒಂದರಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಕಿರಚಾಡುವ ಕಪಿ ಸೈನ್ಯದಂತೆ ದಲಿತ ಸಂಘಟನೆಗಳೂ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಗ್ರಹಿಕೆ. ನಿಜವಾಗಲೂ ದಲಿತ ಸಂಘಟನೆಗಳಿಗೆ ಈಗಲೂ ಬದ್ಧತೆ ಇದೆ. ಬದುಕಿನ ಬಗ್ಗೆ ತೀವ್ರ ಕಾಳಜಿ ಇದೆ.

ಅದೆಷ್ಟೋ ವರ್ಷಗಳಿಂದ ಕತ್ತಿನ ಮೇಲೆ ಕಾಲಿಟ್ಟು ಒತ್ತಲ್ಪಟ್ಟ ಉಸುರಿಗೆ ಹೊಸ ಚೈತನ್ಯ ಕೊಟ್ಟ ಜೀವಧಾತುವಿನ ವಿಳಂಬದ ವ್ಯಂಗ್ಯ ಚಿತ್ರವನ್ನಿಟ್ಟುಕೊಂಡು ಇತಿಹಾಸದ ಪಾಠ ಮಾಡುವುದಾದರೆ ಇವತ್ತಿನ ವಾಸ್ತವವನ್ನು ಕಲಿಯುವ ವಿದ್ಯಾರ್ಥಿಗೆ ಸ್ವತಃ ಅನುಭವಕ್ಕೆ ಬರುವಂತೆ ಮಾಡಲು ತಹಶೀಲ್ದಾರನೊಬ್ಬ ತನ್ನ ಸ್ವಂತ ಮಗಳಿಗೆ ತಟ್ಟೆ ಕೊಟ್ಟು ದೇವಸ್ಥಾನದ ಮುಂದೆ ಕೂತು ಭಿಕ್ಷೆ ಬೇಡುವುದನ್ನು ಪಠ್ಯವಾಗಿ ಇಡಲು ಬಯಸುತ್ತೀರಾ?

ಸರಕಾರ ವ್ಯಂಗ್ಯಚಿತ್ರವನ್ನು ಪುಸ್ತಕದಿಂದ ನಿಷೇಧ ಮಾಡಿರುವುದು ಸ್ವಾಗತಾರ್ಹ.

ಸುಗತ, ನಿಮಗೆ ಸ್ವಾಗತ

– ವರ್ತಮಾನ ಬಳಗ

ಕನ್ನಡ ಪತ್ರಿಕೋದ್ಯಮಕ್ಕಿದು ಸಿಹಿ ಸುದ್ದಿ. ಸುಗತ ಶ್ರೀನಿವಾಸರಾಜು ಕನ್ನಡದ ಬಹುಮುಖ್ಯ ದಿನಪತ್ರಿಕೆ ವಿಜಯ ಕರ್ನಾಟಕದ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಗತ ವಿಕೆ ಸಂಪಾದಕ ಎಂದಾಕ್ಷಣ ನಾಡಿನ ಹಲವೆಡೆ ನೂರಾರು ಹುಬ್ಬುಗಳು ಆಕಾಶಕ್ಕೆ ಹಾರಿದ್ದು ಉಂಟು. ಔಟ್ ಲುಕ್ ಪತ್ರಿಕೆ ಸಹ ಸಂಪಾದಕ ಹುದ್ದೆಯನ್ನು ಬಿಟ್ಟು, ಮುಖ್ಯವಾಗಿ ಇದುವರೆಗೂ ತಾವು ತೊಡಗಿಸಿಕೊಂಡಿದ್ದ ಇಂಗ್ಲಿಷ್ ಪತ್ರಿಕೋದ್ಯಮದಿಂದ ಕನ್ನಡ ಪತ್ರಿಕೆಯೊಂದಕ್ಕೆ ಹಾರಿದ್ದಾರೆ. ಅವರ ಅನುಭವದ ಹರವು ದೊಡ್ಡದು. ಡೆಕ್ಕನ್ ಹೆರಾಲ್ಡ್, ಹಿಂದೂಸ್ಥಾನ್ ಟೈಮ್ಸ್, ಐರಿಷ್ ಟೈಮ್ಸ್, ಔಟ್ ಲುಕ್ ಪತ್ರಿಕೆಗಳಲ್ಲಿ ವರದಿಗಾರನಾಗಿ, ಸಂಪಾದಕೀಯ ಡೆಸ್ಕ್ ನಲ್ಲಿ ಕೆಲಸ ಮಾಡಿದ್ದಾರೆ.

ಸರಳವಾಗಿ ಹೇಳುವುದಾದರೆ ಸುಗತ ಒಬ್ಬ ಪಕ್ಕಾ ಪತ್ರಕರ್ತ ಮತ್ತು ಬರಹಗಾರ. ಸುದ್ದಿಯನ್ನು ಹುಡುಕಿ, ಹೆಕ್ಕಿ, ವಿಶ್ಲೀಷಿಸಿ ಚೆಂದಗೆ ಮಂಡಿಸುವ ಕಲೆ ಇದೆ. ಅವರದು ಕಾಳಜಿಗಳಿರುವ ವ್ಯಕ್ತಿತ್ವ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ನರ ಬಲಿ ಪ್ರಕರಣವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ವಿವರವಾಗಿ ಬರೆದದ್ದು ಸುಗತ. ಅವರ ವರದಿ ಪ್ರಕರಣದ ಆರೋಪಿಗಳು ಯಾರು ಎನ್ನುವುದನ್ನು ‘ಸ್ಪಷ್ಟವಾಗಿ’ ಹೇಳುತ್ತದೆ. ಒಬ್ಬ ದಲಿತ ಯುವಕ ಉಳ್ಳವರ ಮೂಢನಂಬಿಕೆಗೆ ಬಲಿಯಾದ ಘಟನೆಯನ್ನು ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲದೆ ನಿರೂಸಿದ್ದರು. ಅಂತಹದೊಂದು ವರದಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಬರಲಿಲ್ಲ. ಸುಗತ ಕನ್ನಡದಲ್ಲಿ ಬಾಂಗ್ಲಾ ಭಾಷಾ ಹೋರಾಟ ಕುರಿತ ‘ಎಕೂಷೆ ಫೆಬ್ರವರಿ’ ಪುಸ್ತಕ ಹೊರತಂದಿದ್ದಾರೆ. ಅವರ ತಂದೆಯ ಮೂಕ ನಾಟಕಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಅವರ ಎರಡು ಇಂಗ್ಲಿಷ್ ಪುಸ್ತಕಗಳು Keeping Faith with the Mother Tongue – The Anxieties of a Local Culture ಮತ್ತು ಇತ್ತೀಚೆಗೆ ಬಿಡುಗಡೆಯಾದ Pickles from Home.

ಸುಗತ ವಿಕೆ ಮುಂದಾಳತ್ವ ವಹಿಸಿದ ನಂತರ ನಿರೀಕ್ಷೆಗಳು ನೂರಾರು. ಕಾರ್ಪೊರೆಟ್ ಸಂಸ್ಥೆಯಂತೆ ನಡೆಯುತ್ತಿರುವ ಸಂಸ್ಥೆಗೆ ಇವರು ಒಗ್ಗಿಕೊಳ್ಳುವುದು ಹೇಗೆ? ಇದುವರೆಗೆ ಅವರು ತನ್ನ ಪಾಡಿಗೆ, ತನಗೆ ಕಂಡಿದ್ದನ್ನು ಬರೆದುಕೊಂಡಿದ್ದವರು. ಈಗ ಹಾಗಿಲ್ಲ. ಕರ್ನಾಟಕದ ಯಾವುದೋ ಮೂಲೆಯಿಂದ ವರದಿಗಾರನೊಬ್ಬ ಫೋನ್ ಮಾಡಿ ಕೇಳಬಹುದು ‘ಸರ್ ನನಗೆ ಈ ಬಾರಿ ಇಂಕ್ರಿಮೆಂಟ್ ಇಲ್ಲ. ವಿಜಯವಾಣಿಯಿಂದ ಆಫರ್ ಇದೆ ಏನು ಮಾಡಲಿ?’ ಇದು ಸಣ್ಣ ಸ್ಯಾಂಪಲ್. ಇದು ಸುಗತರಿಗೆ ಗೊತ್ತಿಲ್ಲದ್ದೇನಲ್ಲ. ಈ ಎಲ್ಲಾ ಜಂಜಡಗಳು ಎದುರಾಗುತ್ತವೆ ಎನ್ನುವುದು ಗೊತ್ತಿದ್ದೇ ಅವರು ಈ ಜವಾಬ್ದಾರಿ ಒಪ್ಪಿಕೊಂಡಿರುತ್ತಾರೆ.

ಕನ್ನಡದಲ್ಲಿ ‘ಪೇಯ್ಡ್ ನ್ಯೂಸ್’ ನ್ನು ಢಾಳಾಗಿ ತಂದ ಖ್ಯಾತಿ ಟೈಮ್ಸ್ ಗ್ರೂಪ್ ಗಿದೆ. ಸುಗತ ಪೇಯ್ಡ್ ನ್ಯೂಸ್ ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಕುತೂಹಲ ಇದೆ. ಜೊತೆಗೆ ಅವರು ಕನ್ನಡದ ಸಾಹಿತ್ಯಕ, ಸಾಂಸ್ಕೃತಿಕ ಲೋಕಕ್ಕೆ ಚೆನ್ನಾಗಿ ಪರಿಚಿತ. ಹಾಗಾಗಿ ಅವರ ಬಗ್ಗೆ ನಿರೀಕ್ಷೆಗಳು ಸಹಜವಾಗಿಯೇ ದೊಡ್ಡ ಸಂಖ್ಯೆಯಲ್ಲಿರುತ್ತವೆ. ಸುಗತ ನಿಮಗೆ ವಿಜಯ ಕರ್ನಾಟಕ ಓದುಗರ ಪರವಾಗಿ ಸ್ವಾಗತ. ನಿಮಗೆ ಶುಭವಾಗಲಿ.

ಬಹಿರಂಗವಾದ “ಲಂಚಾವತಾರಿ”ಯ ಜಾತಿ ಪ್ರೇಮ


– ಸೂರ್ಯ ಮುಕುಂದರಾಜ್


 

ತುಂಬಾ ದಿನಗಳಿಂದ ಲೋಕದ ಡೊಂಕನ್ನು ಅಪಹಾಸ್ಯ ಮಾಡುವ ಮೂಲಕ ಹಣ ಮಾಡಿಕೊಂಡಿದ್ದ ವ್ಯುಕ್ತಿಯೊಬ್ಬನ ನಿಜ ಮುಖದ ದರ್ಶನ ತಡವಾದರೂ ಬಹಿರಂಗವಾಗಿದೆ. ಮೇ 14 ನೇ ಸೋಮವಾರದ ಪ್ರಜಾವಾಣಿ ಪತ್ರಿಕೆಯ ವರದಿಯೊಂದರ ತಲೆ ಬರಹ ‘ಬ್ರಾಹ್ಮಣ ಸಾಹಿತಿಗಳ ಕಡೆಗಣನೆ’ ನೋಡಿದಾಗ ಪೇಜಾವರ ಸ್ವಾಮಿಯೋ, ಇಲ್ಲವೇ ಕೇಸರಿಕರಣದ ಪ್ರಭಾವದಿಂದ ಹೊಸದಾಗಿ ಉದಯಿಸಿದ ಬ್ರಾಹ್ಮಣ ಸಾಹಿತಿಯೊಬ್ಬನ ಗೋಳಿನ ನುಡಿಯಿರಬಹುದೆಂದುಕೊಂಡೆ. ವರದಿ ಓದುತ್ತಿದ್ದಂತೆ, ‘ಓ ನಮ್ಮ ಲಂಚಾವತರ, ಪಬ್ಲಿಕ್ ರೇಡರ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟಿರೋ ಹೊಸಾ ಥಿಯರಿ,’ ಅಂತ ಗೊತ್ತಾಯಿತು. ಹಲವಾರು ವರ್ಷಗಳಿಂದ ವೃತ್ತಿರಂಗಭೂಮಿಯಲ್ಲಿ ದುಡಿದು ಕುಡುಕಾವತಾರ ತಳೆದು ಲಂಚಾವತಾರದ ಮೂಲಕ ಅಬ್ರಾಹ್ಮಣ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ವೇದಿಕೆ ಮೇಲೆ ಛೀ ಥೂ ಎನ್ನುವ ಮೂಲಕ ಬಹುಸಂಖ್ಯಾತ ಅಬ್ರಾಹ್ಮಣ ಪ್ರೇಕ್ಷಕರ ಹಣದಿಂದಲೇ ಹೆಸರು ಆಸ್ತಿ ಸಂಪಾದಿಸಿದ ಮಾಸ್ಟರ್ ಹಿರಣ್ಣಯ್ಯ ಇಂದು ಅವರಲ್ಲಡಗಿದ್ದ ಜಾತಿಭ್ರಷ್ಟನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ.

ತಮ್ಮ ಭಾಷಣದಲ್ಲಿ ಲಂಚಾವತಾರಿ ಕುವೆಂಪು ಅವರಿಗೆ ನೀಡಿರುವಷ್ಟು ಪ್ರಾಶಸ್ತ್ಯವನ್ನು ಪುತಿನ, ಅನಕೃ, ಡಿವಿಜಿ ಅವರಿಗೆ ನೀಡದೇ ಬ್ರಾಹ್ಮಣ ಸಮುದಾಯವನ್ನು ಕಡೆಗಾಣಿಸಲಾಗಿದೆಯೆಂದು ಬೇಸರಪಟ್ಟುಕೊಂಡಿದ್ದಾರೆ. ಪಾಪ, ಹಿರಣ್ಣಯ್ಯನವರ ಜೀವಮಾನದಲ್ಲಿ ಅವರು ಆಡಿದ ನಾಟಕಕ್ಕೆ ಸ್ಕ್ರಿಪ್ಟ್ ಬರೆದವರೇ ಆಲ್ಲ, ಇನ್ನು ಕುವೆಂಪು ಸಾಹಿತ್ಯ ಓದಿರಲು ಹೇಗೆ ಸಾಧ್ಯ? ಹಾಗೇನಾದರೂ ಅವರು ಕುವೆಂಪು ಸಾಹಿತ್ಯವನ್ನು ಓದಿದ್ದರೆ ಬಹುಶಃ ಮಾಸ್ಟರ್ ಈ ರೀತಿ ಹೇಳುತ್ತಿರಲಿಲ್ಲವೇನೋ. ಹಾಗೆಯೇ ಅವರ ನಾಟಕದ ಕ್ವಾಲಿಟಿಯೂ ಆ ಕಾಲದಲ್ಲೇ ಸುಧಾರಿಸಿರುತ್ತಿತ್ತು.

ಬಸವಣ್ಣನ ನಂತರ ಆಧುನಿಕ ಕಾಲಘಟ್ಟದಲ್ಲಿ ಜಾತಿ-ಮತಗಳ ಎಲ್ಲೆ ಮೀರಿ ದೇಶವೇ ದೇವರೆಂದ ಕವಿ ಕುವೆಂಪು. ಪುರೋಹಿತ ಶಾಹಿಯ ಕರ್ಮಠತೆಯನ್ನು ಕತ್ತರಿಸಿ ಹಾಕಲು ಶೂದ್ರರಿಗೆ ಶಕ್ತಿ ತುಂಬಿದ್ದು ಕುವೆಂಪು ಅವರ ಸಾಹಿತ್ಯ. ತನ್ನ ಜಾತಿಯೊಳಗಿನ ಮೌಢ್ಯವನ್ನೇ ಖಂಡಿಸಿ ಅದ್ದೂರಿ ವಿವಾಹಗಳಿಗೆ ಬದಲಾಗಿ ಸರಳವಿವಾಹವನ್ನು ಜನಪ್ರಿಯಗೊಳಿಸಿದ ಕೀರ್ತಿ ಕುವೆಂಪು ಅವರದು. ಬಹುಜನರಿಗೆ ಅರ್ಥವಾಗದ ಮಂತ್ರಗಳನ್ನು ಹೇಳಿ ಮೌಢ್ಯಕ್ಕ ತಳ್ಳಿದ್ದ ಪುರೋಹಿತಶಾಹಿಗಳ ಆಟ ನಿಲ್ಲಲು ಮಂತ್ರಮಾಂಗಲ್ಯವನ್ನು ಪರಿಚಿಯಿಸಿದರು. ರೈತ, ದರಿದ್ರನಾರಾಯಣನಿಂದ ಹಿಡಿದು ಆರಕ್ಕೇರದ ಮೂರಕ್ಕಿಳಿಯದ ಮಧ್ಯಮವರ್ಗದ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದು ಕುವೆಂಪು. ಕುವೆಂಪು ಕೇವಲ ಸಾಹಿತಿಯಷ್ಟೇ ಆಗಿರಲಿಲ್ಲ ಎನ್ನುವುದು ಕನ್ನಡದ ಜನತೆಗೆ ತಿಳಿದ ವಿಚಾರ. ಮತ್ತು ಕನ್ನಡದ ಜನತೆ ಅವರನ್ನೆಂದೂ ಜಾತಿಗೆ ಸೀಮಿತಗೊಳಿಸಿಲ್ಲ. ಒಕ್ಕಲಿಗರಲ್ಲಿರುವ ಕೆಲವು ಜಾತಿವಾದಿಗಳು ಮತ್ತು ಹಿರಣ್ಣಯ್ಯನವರಂತಹ ಒಕ್ಕಲಿಗೇತರ ಜಾತಿವಾದಿಗಳು ಮಾತ್ರ ಕುವೆಂಪುರವರನ್ನು ಜಾತಿಯ ದೃಷ್ಟಿಯಿಂದ ನೋಡಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಹಾಗೆಯೇ, ಹಿರಣ್ಣಯ್ಯನವರು ಕನ್ನಡಿಗರು ನಾನಾ ಕಾರಣಗಳಿಗೆ ಮೆಚ್ಚಿಕೊಂಡ, ಓದಿಕೊಂಡ ಪುತಿನ, ಅನಕೃ, ಡಿವಿಜಿಯವರನ್ನು ತಮ್ಮ ರೀತಿಯೇ ಜಾತಿಯ ಕಾಮಾಲೆ ಕಣ್ಣಿನಿಂದ ನೋಡುವಂತೆ ಪ್ರೇರೇಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಜಕ್ಕೂ ಈ ಹಿರಿಯರ ಬಗ್ಗೆ ಹಿರಣ್ಣಯ್ಯನವರಿಗೆ ಗೌರವ ಇದ್ದಿದ್ದೇ ಆದರೆ ಈ ರೀತಿ ಅವರನ್ನು ಜಾತಿ-ಮತಗಳ ಕ್ಷುದ್ರ ಪರಿಧಿಗೆ ಎಳೆಯುತ್ತಿರಲಿಲ್ಲ.

ಹಿರಣ್ಣಯ್ಯ ಮುಂದುವರೆದು ತಮ್ಮ ಹರಿತ ನಾಲಗೆಯಿಂದ, “ದೇವರ ಕೆಲಸಕ್ಕೆ ಹುಟ್ಟಿದ ನಮಗೆ ಯಾರೋ ಒಬ್ಬರು ತಪ್ಪು ಮಾಡಿದರು ಎಂದು ಇಡೀ ಸಮುದಾಯವನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ,” ಎಂದು ಪ್ರಶ್ನಿಸುತ್ತಾರೆ. ಒಬ್ಬ ಪ್ರಬುದ್ಧ ರಂಗನಟನಾಗಿದ್ದರೆ ಈ ರೀತಿ ಕಂದಾಚಾರಿಯಂತೆ ಮಾತನಾಡುತ್ತಿರಲಿಲ್ಲವೇನೋ. ಹಿರಣ್ಣಯ್ಯ ಇನ್ನೂ ತನ್ನ ಸಮಾಜದ ಬಾಂಧವರು ದೇವರ ಕೆಲಸಕ್ಕೆ ಹುಟ್ಟಿದವರೆಂದು ಕರೆದುಕೊಳ್ಳುವುದೇ ಅಸಹ್ಯ ಅನ್ನಿಸದಿರುವುದು ಖೇದಕರ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಅನಂತಮೂರ್ತಿ ತಮ್ಮ ಜಾತಿಯೊಳಗಿನ ಕರ್ಮಠತೆಯನ್ನು ಟೀಕಿಸುವ ಮೂಲಕ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರೊ.ಕಿ.ರಂ.ನಾಗರಾಜ ತಮ್ಮ ಬದುಕಿನ ಕಡೆಗಾಲದವರೆಗೂ ಕೂಡ ಬ್ರಾಹ್ಮಣರಂತೆ ಬಾಳಲಿಲ್ಲ. ನೂರಾರು ಶಿಷ್ಯರನ್ನು ಸಲುಹಿದ ಕಿ.ರಂ. ಎಂದಿಗೂ ತಮ್ಮ ಶಿಷ್ಯರ ಬೆನ್ನು ತಡವಿ ಜನಿವಾರವಿದೆಯೇ ಎಂದು ಪರೀಕ್ಷಿಸಿದವರಲ್ಲ. ಇವರೆಲ್ಲ ಬ್ರಾಹ್ಮಣ್ಯದ ಕರ್ಮಠತೆಯಿಂದ ಹೊರಗೆ ಬಂದವರು. ಆದರೆ ಹಿರಣ್ಣಯ್ಯ? ಜಗತ್ತಿಗೇ ಬುದ್ಧಿ ಹೇಳುವವರಂತೆ ನಟಿಸುವ ವ್ಯಕ್ತಿ ಈ ರೀತಿ ಒಬ್ಬ ಕಂದಾಚಾರಿಯಂತೆ “ದೇವರ ಸೇವೆಗೆ ಹುಟ್ಟಿದವರು ನಾವು” ಎಂದು ಹೇಳಿಕೊಳ್ಳಲು ಹಿಂಜರಿಯದಿರುವುದು ಅವರಲ್ಲಿನ ಜಾತಿಪ್ರೇಮ ಜೀವಂತವಾಗಿರುವುದರ ಪ್ರತೀಕ. ಕುವೆಂಪು ಜಗತ್ತಿಗೆ ವಿಶ್ವಮಾನವಧರ್ಮ ಸಾರಿದವರು. “ಮನುಷ್ಯ ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ,” ಎಂದೇಳಿದ್ದರು. ಹಾಗೇ ನೋಡಿದಾಗ ಹಿರಣ್ಣಯ್ಯ ಜಾತಿವಾದಿಯಾಗುವ ಮೂಲಕ ಅಲ್ಪಮಾನವನಾಗಿದ್ದಾರೆ ಎಂದರೆ ತಪ್ಪಾಗಲಾರದೇನೋ?

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 20)


– ಡಾ.ಎನ್.ಜಗದೀಶ್ ಕೊಪ್ಪ


 

ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲೇ ತಂಗಿದ್ದ ಕಾರ್ಬೆಟ್ ಆ ದಿನ ರಾತ್ರಿ ನರಭಕ್ಷಕ ಮತ್ತೇ ಸುಳಿಯಬಹುದೆಂದು ಕಿಟಕಿಯ ಬಳಿ ಕಾದುಕುಳಿತರೂ ಏನು ಪ್ರಯೋಜನವಾಗಲಿಲ್ಲ, ನರಭಕ್ಷಕ ಚಿರತೆ ತನ್ನ ಮಾರ್ಗ ಬದಲಿಸಿ ಪಕ್ಕದ ಹಳ್ಳಿಯಲ್ಲಿ ಗರ್ಭಿಣಿ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ರಾತ್ರಿ ಊಟವಾದ ನಂತರ ಮನೆಯ ಹಿಂಬಾಗಿಲ ಬಳಿ ಪಾತ್ರೆ ತೊಳೆಯುತ್ತಿದ್ದ ಹೆಂಗಸಿನ ಮೇಲೆ ನರಭಕ್ಷಕ ದಾಳಿ ಮಾಡಿತು. ಆಕೆ ಕಿರುಚಿಕೊಳ್ಳುತ್ತಿದ್ದಂತೆ ಕುತ್ತಿಗೆಯನ್ನು ಬಾಯಲ್ಲಿ ಹಿಡಿದು ಆಕೆಯನ್ನು ಊರಿನ ಕಿರಿದಾದ ಓಣಿಯ ನಡುವೆ ಎಳೆದೊಯ್ದು ಹೊರವಲಯದ ಕಣಿವೆಯಲ್ಲಿ ಅರ್ಧ ತಿಂದು ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ಹೋಗಿತ್ತು.

ಚಿರತೆಯ ಈ ಅನಿರೀಕ್ಷಿತ ದಾಳಿಗೆ ಬೆಚ್ಚಿದ ಗ್ರಾಮಸ್ಥರು ತಮ್ಮ ಮನೆಯ ಕಿಟಕಿ, ಬಾಗಿಲು ಮುಚ್ಚಿ ಹೊರಬರಲು ಹಿಂದೇಟು ಹಾಕಿದರು. ಮನೆಯೊಳಗೆ ಚುಟ್ಟಾ ಸೇದುತ್ತಾ ಕುಳಿತ್ತಿದ್ದ ಆಕೆಯ ಯಜಮಾನನಿಗೆ ನರಭಕ್ಷಕ ಚಿರತೆಯ ಆಕ್ರಮಣದ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಪಾತ್ರೆ ತೊಳೆಯುತ್ತಿದ್ದ ಹೆಂಡತಿ ಕಿರುಚಿಕೊಂಡರೂ ಸಹ ಒಳಕ್ಕೆ ಬಾರದಿರುವುದರಿಂದ ಅನುಮಾನಗೊಂಡ ಅವನು ಮನೆಯ ಹಿಂಭಾಗಕ್ಕೆ ಬಂದಾಗ ನರಭಕ್ಷಕ ಆಕೆಯನ್ನು ಎಳೆದೊಯ್ಯುತ್ತಿರುವುದನ್ನು ಅಸಹಾಯಕನಾಗಿ ನೋಡುತ್ತಾ ನಿಲ್ಲಬೇಕಾಯಿತು. ಮಾರನೇ ದಿನ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ, ಪ್ರವಾಸಿ ಮಂದಿರದಿಂದ ಸುಮಾರು ನಾಲ್ಕು ಮೈಲಿ ದೂರದ ಪರ್ವತದ ಮೇಲಿದ್ದ ಹಳ್ಳಿಯ ಆಕೆಯ ಮನೆಗೆ ಬಂದ ಕಾರ್ಬೆಟ್ ಆಕೆಯ ರಕ್ತದ ಕಲೆಗಳ ಜಾಡು ಹಿಡಿದು ಚಿರತೆ ಸಾಗಿರುವ ದಾರಿಯನ್ನು ಹಿಂಬಾಲಿಸಿದ. ಅದು ಹೆಂಗಸಿನ ಶವದ ಜೊತೆ ನಾಲ್ಕು ಅಡಿ ಎತ್ತರದ ಗೋಡೆ ಹಾರಿ ಹೋಗಿರುವುದು ಅವನ ಗಮನಕ್ಕೆ ಬಂತು. ಇದು ಬಲಿಷ್ಟ ದೇಹದ ವಯಸ್ಸಾದ ನರಭಕ್ಷಕ ಎಂದು ಆ ಕೂಡಲೇ ಕಾರ್ಬೆಟ್ ನಿರ್ಧರಿಸಿದ.

ಊರಾಚೆಗಿನ ಕಣಿವೆಯೊಂದರ ಬಳಿ ಆ ಹೆಂಗಸಿನ ಶವವನ್ನು ಇಟ್ಟುಕೊಂಡು ಮುಕ್ಕಾಲು ಭಾಗ ತಿಂದು ಮುಗಿಸಿದ ನರಭಕ್ಷಕ ಉಳಿದ ಭಾಗವನ್ನು ಅಲ್ಲಿಯೇ ಉಳಿಸಿ ಹೋಗಿತ್ತು. ಮಹಿಳೆಯ ಶವವಿದ್ದ ಸುತ್ತ ಮುತ್ತಲಿನ ಜಾಗವನ್ನೊಮ್ಮೆ ಕಾರ್ಬೆಟ್ ಅವಲೋಕಿಸಿದ. ಶವವಿದ್ದ ಜಾಗದಿಂದ 40 ಅಡಿ ದೂರದಲ್ಲಿ ಇಳಿಜಾರಿನಲ್ಲಿ ಒಂದು ಮರವಿತ್ತು ಜೊತೆಗೆ ಮರದ ಸುತ್ತ ಕಟ್ಟೆಯಾಕಾರದಲ್ಲಿ ಎತ್ತರದಷ್ಟು ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಸುಮಾರು ಆರು ಅಡಿ ಉದ್ದ-ಅಗಲದ ಅಟ್ಟಣಿಗೆಯನ್ನು ನಿರ್ಮಿಸಲಾಗಿತ್ತು. ದನಕರು ಮೇಕೆ ಕಾಯುವ ಹಳ್ಳಿಗರು ಮರದ ನೆರಳಿನಲ್ಲಿ ಕೂರುವುದಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದರು.ರಾತ್ರಿ ಮರದ ಮೇಲೆ ಕುಳಿತು ನರಭಕ್ಷಕ ಚಿರತೆಯನ್ನು ಬೇಟೆಯಾಡಲು ಇದು ಸೂಕ್ತವಾದ ಜಾಗ ಎಂದು ಕಾರ್ಬೆಟ್ ನಿರ್ಧರಿಸಿದ.

ಸಂಜೆಯಾಗುತ್ತಿದ್ದಂತೆ ತನ್ನ ಸೇವಕರು, ಗ್ರಾಮಸ್ಥರ ಜೊತೆ ಅಲ್ಲಿಗೆ ಬಂದ ಕಾರ್ಬೆಟ್ ಇದೇ ಮೊದಲ ಬಾರಿಗೆ ಚಿರತೆಯನ್ನು ಬೇಟೆಯಾಡಲು ವಿನೂತನ ಪ್ರಯೋಗಕ್ಕೆ ಮುಂದಾದ. ಬೆಳಿಗ್ಗೆ ಶವ ವೀಕ್ಷಣೆಗೆ ಬಂದಿದ್ದಾಗ ಚಿರತೆ ಶವವನ್ನು ತಿಂದು ಕಣಿವೆಯಲ್ಲಿದ್ದ ಕಾಲುದಾರಿಯಲ್ಲಿ ತೆರಳಿತ್ತು. ಮತ್ತೇ ಇದೇ ದಾರಿಯಲ್ಲಿ ಬರಬಹುದೆಂದು ಊಹಿಸಿದ ಕಾರ್ಬೆಟ್, ಗ್ರಾಮಸ್ಥರು ತಂದಿದ್ದ ಎರಡು ಬಿದರಿನ ಬೊಂಬುಗಳನ್ನು ಆ ಕಾಲುದಾರಿಯ ಎರಡು ಬದಿಗಳಲ್ಲಿ ನೆಡಸಿದ. ತಾನು ತಂದಿದ್ದ ಮೂರು ಬಂದೂಕಗಳ ಪೈಕಿ ಒಂದನ್ನು ಬೊಂಬಿಗೆ ಕಟ್ಟಿ ದಾರಿಗೆ ಅಡ್ಡಲಾಗಿ ಮೀನು ಶಿಕಾರಿಗೆ ಬಳಸುವ ಪ್ಲಾಸ್ಟಿಕ್ ದಾರವನ್ನು ಕಟ್ಟಿದ. ದಾರದ ಇನ್ನೊಂದು ತುದಿಯನ್ನು ಬಂದೂಕದ ಒತ್ತುಗುಂಡಿಗೆ ಕಟ್ಟಿದ. ನರಭಕ್ಷಕ ಕಾಲುದಾರಿಯಲ್ಲಿ ಬಂದು ದಾರವನ್ನು ಸೋಕಿಸಿದರೆ ಸಾಕು ಬಂದೂಕಿನಿಂದ ಗುಂಡು ಸಿಡಿಯುವಂತೆ ವ್ಯವಸ್ಥೆ ಮಾಡಿದ. ಇಂತಹದ್ದೇ ಇನ್ನೊಂದು ವ್ಯವಸ್ಥೆಯನ್ನು ಶವವಿದ್ದ ಹಿಂಬದಿಯ ಭಾಗದಲ್ಲೂ ನಿರ್ಮಿಸಿದ. ನರಭಕ್ಷಕ ಒಂದು ದಾರಿಯಲ್ಲಿ ತಪ್ಪಿಸಿಕೊಂಡರೆ, ಅದು ಇನ್ನೋಂದು ದಾರಿಯಲ್ಲಾದರೂ ಗುಂಡಿಗೆ ಬಲಿಯಾಗಬೇಕು ಇದು ಕಾರ್ಬೆಟ್‌ನ ಆಲೋಚನೆಯಾಗಿತ್ತು.

ಸ್ಥಳದಲ್ಲಿ ಕತ್ತಲು ಆವರಿಸುತ್ತಿದ್ದಂತೆ ಎಲ್ಲರನ್ನು ವಾಪಸ್ ಹಳ್ಳಿಗೆ ಕಳಿಸಿದ ಕಾರ್ಬೆಟ್, ತನ್ನ ಸಹಾಯಕರನ್ನು ಆ ರಾತ್ರಿ ಹಳ್ಳಿಯ ಮುಖಂಡನ ಮನೆಯಲ್ಲಿ ಮಲಗಲು ಹೇಳಿದ. ರಾತ್ರಿಯ ಶಿಕಾರಿಗಾಗಿ ತಾನು ತಂದಿದ್ದ, ಬಿಸ್ಕೇಟ್, ನೀರು, ಸಿಗರೇಟು, ಬಂದೂಕ, ಒಂದು ಪಿಸ್ತೂಲ್, ಚಾಕು, ಎಲ್ಲವನ್ನು ತೆಗೆದುಕೊಂಡು ಮರವೇರಿ ಕುಳಿತ. ಕತ್ತಲು ಆವರಿಸುವ ಸಮಯದಲ್ಲಿ ನಿರ್ಮಲವಾಗಿದ್ದ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುತ್ತಿದ್ದವು. ಕ್ರಮೇಣ ಮೋಡಗಳು ಆವರಿಸಿಕೊಂಡು ಕತ್ತಲು ಹೆಪ್ಪುಗಟ್ಟಿತು. ಮುಂಜ್ರಾಗತಾ ಕ್ರಮವಾಗಿ ಕಾರ್ಬೆಟ್ ಮಹಿಳೆಯ ಶವದ ಬಳಿ ಬಿಳಿಯ ಬಣ್ಣದ ಒಂದು ಬೆಣಚು ಕಲ್ಲನ್ನು ಇರಿಸಿದ್ದ. ಚಿರತೆ ಶವದ ಬಳಿ ಬಂದರೆ, ಕತ್ತಲೆಯಲ್ಲಿ ಗುರಿ ಇಡಲು ಬಿಳಿಯ ಬಣ್ಣದ ಕಲ್ಲು ಇರಲಿ ಎಂಬುದು ಅವನ ಮುಂದಾಲೋಚನೆಯಾಗಿತ್ತು. ರಾತ್ರಿ ಒಂಬತ್ತರ ಸಮಯಕ್ಕೆ ಸರಿಯಾಗಿ ಹಿಮ ಪರ್ವತದಿಂದ ಶೀತಗಾಳಿ ಬೀಸಲು ಪ್ರಾರಂಭಿಸುತ್ತಿದ್ದಂತೆ ಆಗಸದಿಂದ ದಪ್ಪನೆಯ ಮಳೆ ಹನಿ ಸಹ ಬೀಳತೊಡಗಿತು.

ಇದೇ ಸಮಯಕ್ಕೆ ಸರಿಯಾಗಿ ಕಣಿವೆಯ ಮೇಲ್ಭಾಗದಿಂದ ಕಲ್ಲುಗಳು ಕೆಳಕ್ಕೆ ಉರುಳತೊಡಗಿ ನರಭಕ್ಷಕನ ಆಗಮನದ ಸೂಚನೆ ನೀಡತೊಡಗಿದವು. ದೂರದಲ್ಲಿ ಜಿಂಕೆಗಳ ಚೀತ್ಕಾರ, ಮಂಗಗಳ ಕಿರುಚುವಿಕೆ, ಪಕ್ಷಿಗಳ ಅಸಹಜವಾದ ಧ್ವನಿ ಇವೆಲ್ಲವೂ ಚಿರತೆಯ ಆಗಮನವನ್ನು ಕಾರ್ಬೆಟ್‌ಗೆ ಧೃಡಪಡಿಸಿದವು. ಬಿರುಸಿನ ಮಳೆಯ ಶಬ್ಧದಿಂದಾಗಿ ಏನೂ ಕಾಣುವಂತಿರಲಿಲ್ಲ, ಕೇಳುವಂತಿರಲಿಲ್ಲ. ಮಳೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆ ಕಾರ್ಬೆಟ್ ಕುಳಿತ್ತಿದ್ದ ಮರದ ಕೆಳಗಿನ ಚಪ್ಪರದ ಅಡಿಯಲ್ಲಿ ಶಬ್ದವಾದ ಹಾಗೆ ಭಾಸವಾಯ್ತು. ಕುತೂಹಲದಿಂದ ಗಮನಿಸಿದಾಗ, ಆ ನರಭಕ್ಷಕ ಚಿರತೆ ಮಳೆಯಿಂದ ತಪ್ಪಿಸಿಕೊಳ್ಳಲು ಚಪ್ಪರವನ್ನೇ ಆಶ್ರಯಿಸಿತ್ತು. ಚಪ್ಪರದ ಮೇಲೆ ಹುಲ್ಲನ್ನು ದಟ್ಟವಾಗಿ ಹಾಸಿದ್ದ ಪರಿಣಾಮ ಅದು ಅವನಿಗೆ ಕಾಣುವಂತೆ ಇರಲಿಲ್ಲ. ಹತ್ತಿರದಿಂದ ಹೊಡೆದು ಉರುಳಿಸುವ ಅವಕಾಶ ತಪ್ಪಿಹೋದುದಕ್ಕೆ ಕಾರ್ಬೆಟ್ ಕೈ ಕೈ ಹಿಸುಕಿಕೊಳ್ಳುವಂತಾಯಿತು. ಮಳೆ ನಿಂತ ನಂತರ agave ನಿಧಾನವಾಗಿ ಹೆಂಗಸಿನ ಶವವಿದ್ದ ಜಾಗದ ಕಡೆ ನಡೆದು ಹೋಗುತ್ತಿರುವುದು ನೆಲದಲ್ಲಿ ಹರಿಯುತ್ತಿದ್ದ ಮಳೆಯ ನೀರಿನಲ್ಲಿ ಅದರ ಹೆಜ್ಜೆಯ ಶಬ್ದದಿಂದ ಖಚಿತಪಡಿಸಿಕೊಂಡ. ತಾನು ಶವದ ಬಳಿ ಇಟ್ಟಿದ್ದ ಬಿಳಿಯ ಕಲ್ಲು ಕಾರ್ಬೆಟ್‌ಗೆ ಕಾಣದಾಯ್ತು. ಹೆಂಗಸಿನ ಶವದ ಕೆಳಗೆ ಮಳೆಯ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ಚಿರತೆ ಶವವನ್ನು ಸ್ವಲ್ಪ ದೂರಕ್ಕೆ ಎಳೆದಿತ್ತು. ಇದರಿಂದಾಗಿ, ಕಲ್ಲು ಶವದ ಕೆಳಕ್ಕೆ ಸೇರಿಹೋದ ಕಾರಣ, ಕಾರ್ಬೆಟ್ ನರಭಕ್ಷಕನಿಗೆ ಗುರಿ ಇಡುವುದು ಕಷ್ಟವಾಯ್ತು.

ಆ ಕಗ್ಗತ್ತಲಿನಲ್ಲಿ ಅಂದಾಜಿನ ಮೇಲೆ ಚಿರತೆ ಶವದ ಮೂಳೆ ಅಗಿಯುವ ಶಬ್ಧವನ್ನು ಆಲಿಸುತ್ತಾ ದಿಕ್ಕನ್ನು ಗುರುತಿಸತೊಡಗಿದ. ಮತ್ತೇ ಮಳೆ ಹನಿ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಶವವನ್ನು ತಿನ್ನುವುದನ್ನು ನಿಲ್ಲಿಸಿ, ಪೊದೆಯಲ್ಲಿ ಅಡಗಿಕೊಂಡಿತು. ಹೀಗೆ ಸತತ ನಾಲ್ಕು ಗಂಟೆಗಳ ಕಾಲ, ಮಳೆಯ ಕಾರಣ, ಚಿರತೆ ಬರುವುದು, ಹೋಗುವುದು ಮಾಡುತ್ತಲೇ ಇತ್ತು. ಕಾರ್ಬೆಟ್ ಮರಕ್ಕೆ ಕಟ್ಟಿದ್ದ ಕೋವಿಯ ದಾರವನ್ನು ಸಹ ಅದು ತುಳಿಯಲೇ ಇಲ್ಲ. ಮಳೆ ನಿಂತ ಬಳಿಕ ಆಕಾಶ ಸ್ವಲ್ಪ ಮಟ್ಟಿಗೆ ಶುಭ್ರವಾಯಿತು. ಹೆಂಗಸಿನ ಶವದ ಬಳಿ ಇರಿಸಿದ್ದ ಕಲ್ಲು ಕಾರ್ಬೆಟ್ ಕಣ್ಣಿಗೆ ಅಸೃಷ್ಟವಾಗಿ ಗೋಚರಿಸತೊಡಗಿತು. ಮತ್ತೆ ನರಭಕ್ಷಕ ಶವದ ಬಳಿ ಆಗಮಿಸುತ್ತಿರುದನ್ನು ಗಮನಿಸಿದ ಅವನು ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನಿಸಿ ಕಲ್ಲನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿಬಿಟ್ಟ. ಅದರ ಪರಿಣಾಮವನ್ನು ತಿಳಿಯಬೇಕಾದರೆ, ಅವನು ಬೆಳಕು ಹರಿಯುವವರೆಗೆ ಕಾಯಲೇಬೇಕಿತ್ತು.

ಬೆಳಗಿನ ಜಾವ ಕಾರ್ಬೆಟ್ ಮರದಿಂದ ಕೆಳಕ್ಕೆ ಇಳಿದು ನೋಡಿದಾಗ ಅವನಿಗೆ ತೀವ್ರ ನಿರಾಶೆಯಾಯಿತು. ಕೂದಲೆಳೆಯ ಅಂತರದಲ್ಲಿ ನರಭಕ್ಷಕ ಗುಂಡಿನಿಂದ ತಪ್ಪಿಸಿಕೊಂಡಿತ್ತು. ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿದ್ದ ಗುಂಡು ನೆಲಕ್ಕೆ ಬಡಿದಿತ್ತು. ಚಿರತೆಯ ಕುತ್ತಿಗೆ ಭಾಗದ ಕೂದಲುಗಳು ನೆಲದ ಮೇಲೆ ಹರಡಿದ್ದವು. ಕಾರ್ಬೆಟ್ ತೀವ್ರ ನಿರಾಶನಾಗಿ ಮರಕ್ಕೆ ಕಟ್ಟಿದ್ದ ಕೋವಿಗಳನ್ನು ಬಿಚ್ಚಿಕೊಂಡು ಪ್ರವಾಸಿ ಮಂದಿರದತ್ತ ಹೆಜ್ಜೆ ಹಾಕಿದನು. ಚಿರತೆಗೆ ಬಲಿಯಾದ ಹೆಂಗಸಿನ ಪತಿ ಆಕೆಯ ಅಳಿದುಳಿದ ಶವದ ಭಾಗಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಆಯ್ದುಕೊಂಡನು. ಆ ಹಳ್ಳಿಯ ಜನಕ್ಕೆ ನಿರಾಶೆಯಾದರೂ ಕಾರ್ಬೆಟ್ ಬಗ್ಗೆ ಅಗಾಧ ಭರವಸೆ ಇತ್ತು. ಒಂದಲ್ಲ ಒಂದು ದಿನ ಈ ಬಿಳಿಯ ಸಾಹೇಬ ನರಭಕ್ಷಕನಿಂದ ನಮ್ಮನ್ನು ಕಾಪಾಡುತ್ತಾನೆ ಎಂದು ಅವರು ನಂಬಿದ್ದರು. ರಾತ್ರಿಯಲ್ಲಿ ಒಂಟಿಯಾಗಿ ಬಂದೂಕ ಹಿಡಿದು ತಿರುಗುವ ಕಾರ್ಬೆಟ್‌ಗೆ ಅಗೋಚರವಾದ ದೈವಿಶಕ್ತಿ ಇದೆ ಎಂದು ಅವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಘರ್ವಾಲ್ ಪ್ರಾಂತ್ಯದ ಯಾವುದೇ ಹಳ್ಳಿಗೆ ಕಾರ್ಬೆಟ್ ಹೋದರೂ ಸಹ ಅವನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು ಗೌರವಿಸುತ್ತಿದ್ದರು. ಅಮಾಯಕ. ಮುಗ್ಧ ಹಳ್ಳಿಗರ ಪ್ರೀತಿಗೆ ಕಾರ್ಬೆಟ್ ಮನಸೋತ್ತಿದ್ದ. ಇವರ ಪ್ರೀತಿಗೆ ಕಾಣಿಕೆಯಾಗಿ, ನರಭಕ್ಷಕನನ್ನು ಬೇಟೆಯಾಡಲೇ ಬೇಕು ಎಂಬ ದೃಢ ನಿರ್ಧಾರವೊಂದು ಅವನ ಮನದಲ್ಲಿ ಮನೆ ಮಾಡಿತು.

 ( ಮುಂದುವರಿಯುವುದು)