Monthly Archives: May 2012

ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕಲಾಚಿತ್ರ

The Scream” ಚಿತ್ರಕಾರ ಎಡ್ವರ್ಡ್ ಮುಂಕ್ 1983ರಲ್ಲಿ ಚಿತ್ರಿಸಿದ ಚಿತ್ರ. ಎರಡು ದಿನದ ಹಿಂದೆ ನ್ಯೂ ಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಸುಮಾರು 12 ಕೋಟಿ ಡಾಲರ್‌ಗೆ (ಸುಮಾರು 600 ಕೋಟಿ ರೂ.)  ಮಾರಾಟವಾಗಿದೆ. ಹರಾಜಿನಲ್ಲಿ ಮಾರಾಟವಾದ ಅತಿ ಹೆಚ್ಚು ಬೆಲೆಯ ಕಲಾಚಿತ್ರ ಇದು.

 

ಇಲ್ಲಿಯವರೆಗೆ ಆ ದಾಖಲೆ ಹೊಂದಿದ್ದದ್ದು ಪಿಕಾಸೋನ 1932ರ ಚಿತ್ರ, “Nude, Green Leaves and Bust

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-5)


– ಡಾ.ಎನ್.ಜಗದೀಶ್ ಕೊಪ್ಪ


 

ಅನಿರೀಕ್ಷಿತವಾಗಿ ಜರುಗಿದ ನಕ್ಸಲ್‌ಬಾರಿ ಹಿಂಸಾಚಾರದ ಘಟನೆ ಕಮ್ಯೂನಿಷ್ಟ್ ಪಕ್ಷವನ್ನು ತನ್ನ ಸಿದ್ಧಾಂತ ಹಾಗೂ ಪ್ರಣಾಳಿಕೆ ಕುರಿತಾದ ವಿಷಯಗಳ ಬಗೆಗಿನ ಆತ್ಮಾವಲೋಕನಕ್ಕೆ ಪ್ರೇರೇಪಿಸಿತು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತ ಬಾರದ ಕಾರಣ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿಜವಾದ ನಿಲುವುಗಳನ್ನು ಮನವರಿಕೆ ಮಾಡಿಕೊಡುವ ಜವಬ್ದಾರಿ ಕೂಡ ಕಮ್ಯೂನಿಷ್ಟ್ ಪಕ್ಷದ ಮೇಲೆ ಇತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಹಿಂಸಾಚಾರ ಕುರಿತಂತೆ ಪಕ್ಷದ ಕಾರ್ಯಕರ್ತರಲ್ಲಿ ಹಲವು ಅನುಮಾನಗಳು, ಗೊಂದಲಗಳು ಸೃಷ್ಟಿಯಾಗ ತೊಡಗಿದವು. ಈ ಎಲ್ಲಾ ಗೊಂದಲಗಳಿಂದ ಹೊರಬಂದು ಪಕ್ಷದ ಭವಿಷ್ಯದ ನಿಲುವುಗಳನ್ನು ಸ್ಪಷ್ಟಪಡಿಸಬೇಕಾದ ಅನಿವಾರ್ಯ ಸ್ಥಿತಿಗೆ ನಾಯಕರು ಸಿಲುಕಿದರು ಏಕೆಂದರೆ, ಪಕ್ಷದ ಕಾರ್ಯಕರ್ತರ ಮೇಲೆ ನಾಯಕತ್ವದ ಹಿಡಿತವಿಲ್ಲ ಎಂಬುದನ್ನು ಈ ಘಟನೆ ಅನಾವರಣಗೊಳಿಸಿತ್ತು. ಜೊತೆಗೆ ಡಾರ್ಜಲಿಂಗ್ ಜಿಲ್ಲೆ ಮತ್ತು ಸಿಲಿಗುರಿ ಪ್ರಾಂತ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದು ಮೈತ್ರಿ ಸರ್ಕಾರದ ಅಸಮರ್ಥತೆಯನ್ನು ಸಹ ಎತ್ತಿ ತೋರಿಸಿತ್ತು.

ಪಕ್ಷದಲ್ಲಿ ಶಿಸ್ತು ಹಾಗೂ ತತ್ವ ಸಿದ್ಧಾಂತಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 1967 ರ ಆಗಸ್ಟ್ 17 ಮತ್ತು 18 ರಂದು ಪಕ್ಷದ ಕಾರ್ಯಕಾರಿಣಿ ಸಭೆಯನ್ನು ತಮಿಳುನಾಡಿನ ಮಧುರೈ ನಗರದಲ್ಲಿ ಕರೆಯಲಾಯಿತು. ಪಕ್ಷದಲ್ಲಿ ಬಾಹ್ಯಶಕ್ತಿಗಳು ಮಧ್ಯಪ್ರವೇಶ ಮಾಡಿ ಕಾರ್ಯಕರ್ತರನ್ನು ಹಾದಿ ತಪ್ಪಿಸುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಅಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಲವು ನಾಯಕರಿಂದ ಒತ್ತಾಯ ಕೇಳಿ ಬಂದ ಹಿನ್ನಲೆಯಲ್ಲಿ ಸಭೆ ಕರೆಯಲಾಯಿತು. ಕೇಂದ್ರ ಸಮಿತಿಯ ಸಭೆಯಲ್ಲಿ, ಪಕ್ಷದ ಕೆಲವರು, ಬಾಹ್ಯ ರಾಷ್ಟ್ರಗಳ (ಚೀನಾ) ಪ್ರೇರಣೆಗಳಿಂದ ಪಕ್ಷವನ್ನು, ಹಾಗೂ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುತ್ತಿರುವ ಬಗ್ಗೆ ಗಂಭೀರವಾಗಿ ಚರ್ಚಿಸಿ, ಭಾರತದ ಕಮ್ಯೂನಿಷ್ಟ್ ಪಕ್ಷಕ್ಕೆ ಯಾವುದೇ ಹೊರಗಿನ ರಾಷ್ಟ್ರಗಳ ಮಾರ್ಗದರ್ಶನ ಬೇಕಾಗಿಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು.

ಪಕ್ಷದ ಭವಿಷ್ಯದ ದೃಷ್ಟಿಯಿಂದ ಮುಂದೆ ಪಕ್ಷದ ಆಂತರೀಕ ವಿಷಯಗಳಲ್ಲಿ ನೇರ ಪ್ರವೇಶಿಸಿ, ಸಲಹೆ ನೀಡುವ ಅಧಿಕಾರವನ್ನು ಸಹ ಪಕ್ಷದ ಕೇಂದ್ರ ಸಮಿತಿಗೆ ನೀಡಲಾಯಿತು. 1960 ರ ದಶಕದ ಕಮ್ಯೂನಿಷ್ಟ್ ಪಕ್ಷದಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಚೀನಾ ಮತ್ತು ಸೋವಿಯತ್ ರಷ್ಯಾ ಕಮ್ಯೂನಿಷ್ಟ್ ವಿಚಾರಧಾರೆಗಳು ಲಗ್ಗೆ ಇಟ್ಟ ಪರಿಣಾಮ ಈ ರೀತಿಯ ಗೊಂದಲಗಳು ಸಾಮಾನ್ಯವಾಗಿದ್ದವು. ಅಂತಿಮವಾಗಿ 1968 ರ ಏಪ್ರಿಲ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚೀನಾ ಮಾದರಿಯ ಹೋರಾಟವನ್ನು ಕೈಬಿಡಲು ನಿರ್ಧರಿಸಲಾಯಿತು.

ಪಕ್ಷದ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಚಾರು ಮುಜಂದಾರ್ ಇದು ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಮತ್ತೇ ಸಾಮಾನ್ಯ ಸ್ಥಿತಿಗೆ ಎಳೆದೊಯ್ಯುವ ನಿರ್ಧಾರ ಎಂದು ಆರೋಪಿಸಿದನು. ಇಂತಹ ಸ್ಥಿತಿಯಲ್ಲಿ ಅಸಮಾನತೆಯನ್ನು ಬಿತ್ತಿ ಪೋಷಿಸುತ್ತಿರುವ ಸರ್ಕಾರಗಳು ಮತ್ತು ದುಷ್ಟಶಕ್ತಿಗಳ ವಿರುದ್ಧ ಯುದ್ಧ ಅನಿವಾರ್ಯ ಎಂದು ಪ್ರತಿಪಾದಿಸಿದ ಚಾರು ಮತ್ತು ಅವನ ಗೆಳೆಯರು ಮಾರ್ಕ್ಸ್‌‍ವಾದದ ಕಮ್ಯುನಿಷ್ಟ್ ಪಕ್ಷವನ್ನು ತೈಜಿಸಲು ನಿರ್ಧರಿಸಿದರು. ಅಮೇರಿಕಾದ ಬಂಡವಾಳ ನೀತಿಯನ್ನು ಪರೋಕ್ಷವಾಗಿ ಅಪ್ಪಿಕೊಂಡು ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವ ಸೋವಿಯತ್ ರಷ್ಯಾದ ಕಮ್ಯೂನಿಷ್ಟ್ ಪ್ರಣಾಳಿಕೆಯನ್ನು ಸಹ ತಿರಸ್ಕರಿಸಿದರು.

ತಾವು ಈಗ ಅನುಸರಿಸಬೇಕಾದ ತೀವ್ರಗಾಮಿ ಧೋರಣೆಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಅವುಗಳೆಂದರೆ:

  1. ಎಲ್ಲಾ ಹಂತದಲ್ಲೂ ಹೋರಾಟವನ್ನು ತೀವ್ರಗೊಳಿಸುವುದು, ನಕ್ಷಲ್‌ಬಾರಿ ಮಾದರಿಯ ಹೋರಾಟಕ್ಕೆ ರೈತರು ಮತ್ತು ಆದಿವಾಸಿಗಳನ್ನು ಸಜ್ಜುಗೊಳಿಸುವುದು.
  2. ಪ್ರತಿ ಹಳ್ಳಿಯಲ್ಲಿ ತೀವ್ರಗಾಮಿ ಮನೋಭಾವದ ಯುವಕರ ಪಡೆಯನ್ನು ಹುಟ್ಟು ಹಾಕಿ, ರೈತರು, ಕೃಷಿಕೂಲಿ ಕಾರ್ಮಿಕರು, ವ್ಯವಸಾಯ ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳನ್ನು ಹೋಗಲಾಡಿಸುವುದು.
  3. ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಯ ಜೊತೆಗೆ ಮಾವೋತ್ಸೆ ತುಂಗನ ವಿಚಾರಗಳನ್ನು ಪಕ್ಷದ ಸಂಘಟನೆಯಲ್ಲಿ ಅಳವಡಿಸಿಕೊಂಡು, ಭಾರತದ ಸಂದರ್ಭಕ್ಕೆ ಅನುಗುಣವಾಗಿ ಕೆಲವು ಮಾರ್ಪಾಡು ಮಾಡಿಕೊಂಡು ಇವುಗಳ ಹಾದಿಯಲ್ಲಿ ಕಟ್ಟುನಿಟ್ಟಾಗಿ ನಡೆಯುವುದು.

ಇವುಗಳನ್ನು  ಆಚರಣೆಗೆ ತರುವ ನಿಟ್ಟಿನಲ್ಲಿ 1968 ಅಂತ್ಯದ ವೇಳೆಗೆ ಕೊಲ್ಕತ್ತ ನಗರದಲ್ಲಿ ಎಲ್ಲಾ ಉಗ್ರ ಕಮ್ಯೂನಿಷ್ಟ್ ವಾದಿಗಳ ಸಭೆಯನ್ನು ಗುಪ್ತವಾಗಿ ಕರೆಯಲಾಗಿತ್ತು. ಕ್ರಾಂತಿಕಾರಕ ವಿಚಾರಗಳನ್ನು ಆಚರಣೆಗೆ ತರಲು ಅಖಿಲ ಭಾರತ ಮಟ್ಟದಲ್ಲಿ ಒಂದು ಸಮನ್ವಯ ಸಮಿತಿಯನ್ನು ಸಹ ರಚಿಸಲಾಯಿತು. ಸಭೆಯ ನಂತರ ಚಾರು ಮುಜಂದಾರ್ ಮಾವೋ ವಿಚಾರಧಾರೆಯ ಅಡಿಯಲ್ಲಿ ಭಾರತದಲ್ಲಿ ಪ್ರಜಾಸತ್ತಾತ್ಮಕವಾದ ಕ್ರಾಂತಿಕಾರಕ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸಲಾಗುವುದು ಎಂದು ಘೊಷಿಸಿದನು. ಕೊಲ್ಕತ್ತ ಸಭೆಯ ನಿರ್ಣಯಕ್ಕೆ ಆಂಧ್ರದ ನಾಯಕ ನಾಗಿರೆಡ್ಡಿ ಕೆಲವು ಆಕ್ಷೇಪ ಎತ್ತಿದನು. ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಘಟನೆಯನ್ನು ಒಳಗೊಳ್ಳದ ಯಾವುದೇ ಹೋರಾಟಕ್ಕೆ ಜಯ ಸಿಗಲಾರದು ಎಂಬುದು ಆಂಧ್ರ ನಾಯಕರ ಅಭಿಪ್ರಾಯವಾಗಿತ್ತು. ನೂತನ ಪಕ್ಷದ ಸಂಘಟನೆಯ ಗೊಂದಲ ಹೀಗೆ ಮುಂದುವರಿದಾಗ, 1969 ರ ಫೆಬ್ರವರಿಯಲ್ಲಿ ಸಭೆ ಸೇರಿದ ನಾಯಕರು, ಪಕ್ಷದ ಸಮನ್ವಯ ಸಮಿತಿಯ ನಿಷ್ಕ್ರೀಯತೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರು. ಇದೇ ವೇಳೆಗೆ ಚೀನಾ ಸರ್ಕಾರ ಹಾಗೂ ಅಲಿನ್ಲ ಕಮ್ಯೂನಿಷ್ಟ್ ಪಕ್ಷ  ಭಾರತದ ಎಡಪಂಥೀಯ ಪಕ್ಷದ ಆಂತರೀಕ ವಿಷಯಗಳಿಗೆ ತಲೆ ಹಾಕಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದವು. ಈ ಅವಕಾಶವನ್ನು ಬಳಸಿಕೊಂಡು ಭಾರತದಲ್ಲಿ ಮಾರ್ಕ್ಸ್ ವಿಚಾರಧಾರೆಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆ ಅತ್ಯಾವಶ್ಯಕ ಎಂಬ ಬೀಜವನ್ನು ಇಲ್ಲಿನ ಉಗ್ರಗಾಮಿ ನಾಯಕರ ತಲೆಯೊಳಕ್ಕೆ ಚೀನಾ ಬಿತ್ತನೆ ಮಾಡಿತು. ಜೊತೆಗೆ ಸಂಘಟನೆಗೆ ಅವಶ್ಯಕವಾದ ಹಣ, ಶಸ್ರಾಸ್ತ್ರ ಪೂರೈಸುವ ಭರವಸೆ ನೀಡಿತು. ಅಂದಿನ ಶ್ರೀಲಂಕಾದ ಕಮ್ಯೂನಿಷ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯನಾದ ಷಣ್ಮುಗದಾಸ್‌ನನ್ನು ನೇಪಾಳ ಮೂಲಕ ಚೀನಾಕ್ಕೆ ಕರೆಸಿಕೊಂಡ ಅಲ್ಲಿನ ಸರ್ಕಾರ ಆತನ ಮೂಲಕ ಎಲ್ಲಾ ಸಂದೇಶಗಳನ್ನು ಭಾರತದ ಉಗ್ರಗಾಮಿ ನಾಯಕರಿಗೆ ರವಾನಿಸಿತು.

ಇದರಿಂದ ಪ್ರೇರಣೆಗೊಂಡ ಇಲ್ಲಿನ ನಾಯಕರು 1969 ರ ಏಪ್ರಿಲ್ 22 ರಂದು ಲೆನಿನ್‌ನ ಶತಮಾನೋತ್ಸವ ಜನ್ಮದಿನಾಚರಣೆಯಂದು ಹೊಸ ಪಕ್ಷದ ಅಸ್ತಿತ್ವವನ್ನು ಘೋಷಿಸಿದರು. ಪಕ್ಷಕ್ಕೆ ಕಮ್ಯೂನಿಷ್ಟ್ ಪಾರ್ಟಿ (ಮಾರ್ಕ್ಸ್ ಮತ್ತು ಲೆನಿನ್) ಬಣ ಎಂದು ಹೆಸರಿಸಲಾಯ್ತು. ಪಕ್ಷವನ್ನು ಹುಟ್ಟು ಹಾಕುವುದರ ಜೊತೆಗೆ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು. ಭಾರತ ದೇಶ ಅರೆ ವಸಾಹತುಶಾಯಿ ಮತ್ತು ಅರೆ ದಬ್ಬಾಳಿಕೆಯ ವ್ಯವಸ್ಥೆಯಲ್ಲಿ ನರಳುತ್ತಿದೆ, ಇಲ್ಲಿ ಅಧಿಕಾರಿಗಳು ಮತ್ತು ಭೂಮಾಲೀಕರು, ಬಂಡವಾಳಶಾಹಿಗಳ ಕೈಗೊಂಬೆಯಾಗಿ ವರ್ತಿಸುತ್ತಾ ಬಡಜನತೆಯನ್ನು ಶೋಷಿಸುತ್ತಿದ್ದಾರೆ. ಇಲ್ಲಿ ಈ ವ್ಯವಸ್ಥೆಗೆ ಭಾರತ ಸರ್ಕಾರ ಅಮೇರಿಕಾದ ಬಂಡವಾಳ ನೀತಿಯನ್ನು ಮತ್ತು ಸೋವಿಯತ್ ರಷ್ಯಾದ ಅರೆಬೆಂದ ಸಮಾಜವಾದ ನೀತಿಯನ್ನು ಅನುಸರಿಸುತ್ತಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಣಾಳಿಕೆಯಲ್ಲಿ ಇಲ್ಲಿನ ವ್ಯವಸ್ಥೆಯನ್ನು ಕಟು ವಿಮರ್ಶೆಗೆ ಒಳಪಡಿಸಲಾಗಿತ್ತು. ಭಾರತದ ದುಡಿಯುವ ವರ್ಗ ಮತ್ತು ರೈತರ ದಯನೀಯವಾದ ಈ ಸ್ಥಿತಿಯಲ್ಲಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ಅತ್ಯಗತ್ಯ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಬಲವಾಗಿ ಪ್ರತಿಪಾದಿಸಲಾಗಿತ್ತು.

ಸರ್ಕಾರದ ವಿರುದ್ಧ ವ್ಯವಸ್ಥಿತ ಹೋರಾಟಕ್ಕೆ ಗೆರಿಲ್ಲಾ ಯುದ್ಧವೊಂದೇ ಅನಿವಾರ್ಯ ಮಾರ್ಗ ಎಂದು ತಿಳಿಸಿ ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ರೈತರು, ಕೂಲಿಕಾರ್ಮಿಕರು, ಮತ್ತು ಆದಿವಾಸಿಗಳನ್ನು ಸಂಘಟಿಸಿ ಹೋರಾಟಕ್ಕೆ ಸಿದ್ಧವಾಗಬೇಕೆಂದು ಪಕ್ಷ ಕರೆ ನೀಡಿತ್ತು. ಪಕ್ಷದ ಸಂಘಟನೆಯನ್ನು ಅತ್ಯಂತ ಗೋಪ್ಯವಾಗಿ ಮಾಡಬೇಕೆಂದು ಹಾಗೂ ಯಾವ ಕಾರಣಕ್ಕೂ ಸಂಘಟನೆಯಲ್ಲಿ ನಿರತರಾದ ನಾಯಕರ ಮಾಹಿತಿಯನ್ನು ವಿಶೇಷವಾಗಿ ವ್ಯಯಕ್ತಿಕ ಮಾಹಿತಿಯನ್ನು ಪಕ್ಷದ ಕಾರ್ಯಕತ್ರಿಗೂ ತಿಳಿಸಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಲಾಯಿತು. ಈ ಕಾರಣಕ್ಕಾಗಿ ಈ ಹಿಂದೆ ಸಿಲಿಗುರಿ ಪ್ರಾಂತ್ಯದಲ್ಲಿ ಕಿಸಾನ್‌ಸಭಾ ಘಟಕಗಳನ್ನು ಸಂಘಟಿಸಿದ ಮಾದರಿಯನ್ನು ಅಂದರೆ, ಬಹಿರಂಗಸಭೆ ಕೈಬಿಟ್ಟು, ಪ್ರತಿಯೊಬ್ಬ ವ್ಯಕ್ತಿಯ ಜೊತೆ ಮಾತುಕತೆ ಮತ್ತು ಸಂಧಾನದ  ಪಕ್ಷವನ್ನು ತಳಮಟ್ಟದಿಂದ ಕಟ್ಟಲು ನಾಯಕರು ನಿರ್ಧರಿಸಿದರು. ಇದು ಭಾರತದ ರಾಜಕೀಯ ಇತಿಹಾಸದ ಎಡಪಂಥೀಯ ವಿಚಾರ ಧಾರೆಗಳ ಸಮಾನ ಮನಸ್ಕ ವ್ಯಕ್ತಿಗಳಲ್ಲಿ ಗೊಂದಲ, ಜಿಜ್ಙಾಸೆ ಮೂಡಿಸಿ, ತಮ್ಮ ಮುಂದಿನ ಮಾರ್ಗ ಯಾವುದು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತು.

(ಮುಂದುವರಿಯುವುದು)

ಗಾಣಕ್ಕೆ ಸಿಕ್ಕ ಗಬಾಳಿಗರು

– ವೀರಣ್ಣ ಮಡಿವಾಳರ

ಉತ್ತರ ಕರ್ನಾಟಕದ ಕೂಲಿಯ ಚಿತ್ರಗಳು ಭಿನ್ನವಾದವು. ಇಲ್ಲಿ ತಂದೆಯೊಬ್ಬ ಬಡತನದ ದಯನೀಯ ಸ್ಥಿತಿಯಲ್ಲಿ ಎಳೆಯ ಹೆಣ್ಣುಮಕ್ಕಳನ್ನು ನೇಗಿಲಿಗೆ ಹೂಡಿ ಹೊಲ ಹಸನುಮಾಡುವ ಹೃದಯ ಬಿರಿಯುವ ಚಿತ್ರ, ಅದೀಗ ವಸಂತಕ್ಕೆ ಕಾಲಿಡುತ್ತಿರುವ ಹುಡುಗಿಯೊಬ್ಬಳು ಪೆನ್ನು ಪುಸ್ತಕ ಹಿಡಿದು ಕಾಲೇಜು ಓದುತ್ತಲೇ ಮಸಾರಿ ಹೊಲದಲ್ಲಿ ದೊಡ್ಡ ಎತ್ತುಗಳ ಪಳಗಿಸಿಕೊಂಡು ಅಷ್ಟು ಭಾರದ ಕುಂಟೆಯನ್ನು ಎತ್ತಿ ಕೆಡವಿ ಹರಗುವ ಪರಿಯ ಸೋಜಿಗದ ಚಿತ್ರ. ಹೀಗೆ ಅನೇಕ ಚಿತ್ರಗಳು ತಲ್ಲಣಿಸುವಂತೆ ಮಾಡುತ್ತವೆ. ಕಮತ ಇಂದು ಕಗ್ಗಂಟಾಗಿದೆ. ಕಾಲ ಸರಿದಂತೆ ಉಳ್ಳವರ ಮೋಸಕ್ಕೆ ಬಲಿಯಾಗಿ ಇದ್ದ ತುಂಡು ಜಮೀನುಗಳನ್ನು ಬಡ್ಡಿ ಚಕ್ರಬಡ್ಡಿಗೆ ಕಳೆದುಕೊಂಡು ತಮ್ಮದೇ ಜಮೀನಿನಲ್ಲಿ ಪರರಿಗೆ ಜೀತವಿರುವವರು ಇಲ್ಲಿ ಹಲವು ಜನರಿದ್ದಾರೆ.

ಇನ್ನೂ ನಮ್ಮ ಹಳ್ಳಿಗಳಲ್ಲಿ ಜಮೀನ್ದಾರರು, ಸಾಹುಕಾರರೇ ಬ್ಯಾಂಕುಗಳಾಗಿದ್ದಾರೆ. ಅವರು ಹಾಕಿದ್ದೇ ಬಡ್ಡಿ, ಇಟ್ಟದ್ದೇ ಲೆಕ್ಕ. ಯಾರದೋ ಬೆಳೆ ವಿಮೆಯ ದುಡ್ಡು ಯಾರದೋ ಜೇಬಿಗೆ ಸೇರುತ್ತದೆ. ಸಾಲ ಮರುಪಾವತಿ ಮಾಡಿ, ಹೊಸಸಾಲ ಪಡೆಯುವಾಗ ನಡೆಯುವ ಅಕ್ರಮಗಳು ಜೀವ ಹಿಂಡುತ್ತವೆ. ಸಾಲ ಪಾವತಿ ಮಾಡುವವನಿಗೆ ಬ್ಯಾಂಕಿನ ಬಾಗಿಲಲ್ಲೇ ದುಡ್ಡಿದ್ದವರು ಕಾದು ಕುಳಿತಿರುತ್ತಾರೆ. ಉಳ್ಳವರಿಂದ ದುಡ್ಡು ಪಡೆದು ಬ್ಯಾಂಕಿಗೆ ತುಂಬಿ, ಮರುಸಾಲ ಪಡೆದ ತಕ್ಷಣವೇ ದುಡ್ಡು ಕೊಟ್ಟವನಿಗೆ ನೂರಕ್ಕೆ ಹತ್ತು ರೂಪಾಯಿಯಂತೆ ಬಡ್ಡಿ ಸೇರಿಸಿ ಮರಳಿ ಕೊಡಬೇಕು. ಹತ್ತು ನಿಮಿಷದಲ್ಲಿ ಸಾವಿರ ಸಾವಿರ ದುಡ್ಡನ್ನು ಬಡ್ಡಿಯ ರೂಪದಲ್ಲಿ ಕಿತ್ತುಕೊಳ್ಳುವವರು ಇಲ್ಲಿ ಅನೇಕರಿದ್ದಾರೆ. ಸಾಮಾನ್ಯವಾಗಿ ಇವರು ಜಮೀನನ್ನು ಅಡವಿಟ್ಟುಕೊಂಡವರಿರುತ್ತಾರೆ.

ಜೀತದ ಸ್ವರೂಪವೇ ಇಂದು ಬೇರೆಯಾಗಿದೆ. ಬೆಳಗ್ಗೆ ಹೊತ್ತು ಮೂಡುವ ಮುನ್ನವೇ ಮಕ್ಕಳ ಮುಖ ನೋಡದೆ ಎದ್ದು ಬಂದು ಸಾಹುಕಾರರ ಎತ್ತಿನ ಮನೆಯನ್ನು ಚಂದಗಾಣಿಸಿ ಹೊಲದ ಕೆಲಸ ಮಾಡುತ್ತಾ ಹೊತ್ತೇರಿದಾಗ ತುತ್ತು ತಿಂದು ಹೊತ್ತು ಮುಳುಗಿದ ಮೇಲೆ ಸಾಹುಕಾರರ ಮನೆಗೆ ಬಂದು ಇದ್ದಬದ್ದ ಚಾಕರಿ ಮುಗಿಸಿ ತನ್ನ ಮನೆಗೆ ಹೋದಾಗ ಮಕ್ಕಳು ಮಲಗಿರುತ್ತವೆ. ಇದು ಒಂದು ಊರಿನ ಒಂದು ಮನೆಯ ಚಿತ್ರವೇನಲ್ಲ. ಹಲವು ಹಳ್ಳಿಗಳ ಹಲವು ಜನರ ಸಂಕಥನವೂ ಇದೇ.

ಕೃಷಿ ಕೂಲಿಕಾರ್ಮಿಕರ ಸ್ಥಿತಿಗತಿ ಹೇಳತೀರದು. ಅವರ ಸಂಕಷ್ಟದ ರೂಪಗಳು ಹಲವು. ಕೂಲಿಗೆ ನಿರ್ದಿಷ್ಟ ಸ್ವರೂಪವಿಲ್ಲ, ಕಾಲಮಿತಿಯಿಲ್ಲ, ಇಷ್ಟೇ ದುಡ್ಡು ಎಂತಲೂ ಇಲ್ಲ. ಅನುಭವಿಸಲಾಗದ, ಹಂಚಿಕೊಳ್ಳಲಾಗದ ತೀವ್ರ ಸಂಕಷ್ಟದಲ್ಲಿ ಇಲ್ಲಿನ ಕೂಲಿ ಕಾರ್ಮಿಕರಿದ್ದಾರೆ. ನಮ್ಮ ಕಾನೂನುಗಳು ಆರಕ್ಷಕ ಠಾಣೆಗಳಲ್ಲಿ, ಅಧಿಕಾರಿಗಳ ಫೈಲುಗಳಲ್ಲಿ ಮಲಗಿವೆ. ಹಳ್ಳಿಗಳಲ್ಲಿ ಉಳ್ಳವರೇ ನ್ಯಾಯಾಧೀಶರು, ಮಾತನಾಡಿದ್ದೇ ಕಾನೂನು.

ಬೆಳಗಾವಿ ಜಿಲ್ಲೆಯ ಸುಮಾರು ಕಡೆ ತಿರುಗಾಡುತ್ತಾ ಹೋದರೆ ಕರ್ನಾಟಕದ ಕೂಲಿ ಕಾರ್ಮಿಕರ ಸ್ಥಿತಿಗಳು ಹೆಚ್ಚು ಅರ್ಥವಾಗುತ್ತವೆ. ಅವು ಮನೆಗಳಲ್ಲ, ಗುಡಿಸಲುಗಳಲ್ಲ, ಗೂಡುಗಳು. ಇಂಥ ಸಾವಿರ ಗೂಡುಗಳಲ್ಲಿ ಸಾವಿರ ಸಾವಿರ ಕೂಲಿ ಕಾರ್ಮಿಕರು ಬದುಕುತ್ತಲೇ ದುಡಿಯುತ್ತಿದ್ದಾರೆ. ಈ ಜಿಲ್ಲೆಯಲ್ಲಿ  ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಮಧ್ಯದಲ್ಲಿ ನೂರಾರು ಗೂಡುಗಳ ಸಮೂಹ ಕಣ್ಣಿಗೆ ರಾಚುತ್ತವೆ. ಊರಿನಲ್ಲಿಯೇ ಇದ್ದರೂ ಒಳ್ಳೆಯ ಸಿಮೆಂಟ್ ಕಟ್ಟಡಗಳ ನಡುವಿನ ಜಾಗದಲ್ಲಿ ಇಂಥದೇ ಹತ್ತಾರು ಗೂಡುಗಳನ್ನು ಕಟ್ಟಿಕೊಂಡು ಬದುಕು ದೂಡುತ್ತಿರುವ ಸನ್ನಿವೇಷಗಳು ಸಾಕಷ್ಟು. ಇಂಡಿಯಾದ ವಾಸ್ತವಗಳೇ ಹೀಗೆ.

ಮನುಷ್ಯರೇ ಆದರೂ ಪ್ರಾಣಿಗಳೂ ಆಶ್ಚರ್ಯಪಡುವಂತೆ ಬದುಕುತ್ತಿರುವ ಇವರಾರು? ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಸುಮಾರು ಇಪ್ಪತ್ತೊಂದು ಸಕ್ಕರೆ ಕಾರ್ಖಾನೆಗಳಿವೆ. ಇದರಲ್ಲಿ ಅರ್ಧ ಖಾಸಗಿ ಒಡೆತನದವು. ಎರಡು ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚು ಜಮೀನಿನಲ್ಲಿ ಕಬ್ಬು ಬೆಳೆಯಲಾಗುತ್ತದೆ. ಹೀಗೆ ಬೆಳೆದ ಕಬ್ಬನ್ನು ಕಡಿದು ತಂದು ಕಾರ್ಖಾನೆಗೆ ಮುಟ್ಟಿಸಿ ದೇಶಕ್ಕೆಲ್ಲ ಸಕ್ಕರೆ ತಿನ್ನಿಸುವ ಕೂಲಿ ಕಾರ್ಮಿಕರೇ ಹೀಗೆ ಅನಾಥ ಬಯಲ ಬದುಕು ನಡೆಸುತ್ತಿರುವ ನಿರ್ಗತಿಕರು. ಇವರಲ್ಲಿ ಕೆಲವರು ಬಿಜಾಪುರ, ಬಾಗಲಕೋಟೆ, ಬಳ್ಳಾರಿ ಮುಂತಾದ  ಜಿಲ್ಲೆಗಳಿಂದ ಬಂದಿದ್ದರೆ, ಇನ್ನು ಕೆಲವರು ಮಹಾರಾಷ್ಟ್ರದ ಬೀಡ, ಜತ್, ಉಸ್ಮಾನಾಬಾದ್ ಮುಂತಾದ ಜಿಲ್ಲೆಗಳಿಂದ ಬಂದಿರುತ್ತಾರೆ. ಇಲ್ಲಿನ ಜನ ಇವರನ್ನು ಗಬಾಳಿಗರು ಎನ್ನುತ್ತಾರೆ. ಗಬಾಳ ಎನ್ನುವುದು ಇಲ್ಲಿನವರ ಪ್ರಕಾರ ಜಾತಿಯಲ್ಲ ಅದು ಒಟ್ಟು ಕಬ್ಬು ಕಡಿಯಲು ಬರುವ ಕೂಲಿ ಕಾರ್ಮಿಕರನ್ನು ಸೂಚಿಸುವ ಪದ.

ಕಾರ್ಖಾನೆಯ ಸಮೀಪ ಬಂದು ನೋಡಿದರೆ ಗೂಡುಗಳ ಸಮುದ್ರವೇ ಗೋಚರಿಸುತ್ತದೆ. ಈ ಗೂಡುಗಳಲ್ಲಿರುವವರೆಲ್ಲ ಬೇರೆ ಬೇರೆ ಕಡೆಗಳಿಂದ ಬಂದ ದುಡಿಯುವ ದರ್ದಿನವರೇ.  ಸ್ವಲ್ಪ ಹತ್ತಿರದಿಂದ ಈ ದುಡಿಯುವ ಜನಗಳ ಬದುಕನ್ನು ನೋಡಿದರೆ ಕೆಲವು ಅಸಹನೀಯ ಸತ್ಯಗಳು ಎದೆ ಕಲಕುತ್ತವೆ. ಈ ಗೂಡುಗಳನ್ನು ಇವರೆಲ್ಲ ಕಬ್ಬಿನ ರವುದಿಯಿಂದಲೇ ಕಟ್ಟಿಕೊಳ್ಳುತ್ತಾರೆ. ಪಕ್ಕದಲ್ಲೇ ತಮ್ಮೊಂದಿಗೆ ತಂದಿರುವ ಎಮ್ಮೆ ಆಕಳು ಎತ್ತುಗಳಿಗೂ. ಕೋಳಿಗಳ  ಜೊತೆ ತಮ್ಮ ಮಕ್ಕಳನ್ನೂ ಕರೆದುಕೊಂಡು ಈ ಜನ ಅದು ಹೇಗೆ ಅಷ್ಟು ಪುಟ್ಟ ಗೂಡುಗಳಲ್ಲಿ ಬದುಕುತ್ತಾರೋ ಕಣ್ಣುಗಳೇ ಹೆದರುತ್ತವೆ. ಕುಡಿಯಲು ಸಾಕಷ್ಟು ನೀರಿಲ್ಲ. ಅಷ್ಟು ಸಾವಿರ ಜನರಿಗೆ ಮಧ್ಯದಲ್ಲೆಲ್ಲೋ ಒಂದು ನೀರಿನ ಟ್ಯಾಂಕು. ರಾತ್ರಿಯಾದರೆ ಕಗ್ಗತ್ತಲು. ಹೌದು ಸೂರ್ಯ ಮುಳುಗಿದರೆ ಸಾಕು ಎಲ್ಲೆಲ್ಲೂ ಹುಡುಕಿದರೆ ಬೊಗಸೆ ಬೆಳಕು ಸಿಗುವುದಿಲ್ಲ. ಬಹಳಷ್ಟು ಕಡೆ ಹೀಗಿದೆ. ವಿಷಕಾರಿ  ಕೀಟಗಳು ಹೀಗೆ ಕತ್ತಲಲ್ಲಿ ಬದುಕುತ್ತಿರುವ ಇವರ ಚೈತನ್ಯವನ್ನು ಕಂಡೇ ಹತ್ತಿರ ಸುಳಿಯುವುದಿಲ್ಲವೇನೋ. ಅಡುಗೆ ಮಾಡಿಕೊಳ್ಳಲು ಉರುವಲಿಗೆ ತಮ್ಮ ತಮ್ಮ ಎತ್ತುಗಳ ಸಗಣಿಯಿಂದ ಮಾಡಿದ ಕುಳ್ಳುಗಳೇ ಗತಿ. ಇವು ಯಾವುವೂ ಇವರನ್ನು ಬಾಧಿಸುವುದಿಲ್ಲ.

ಹೀಗೆ ಕಬ್ಬು ಕಡಿಯಲು ಬರುವ ಈ ಕೂಲಿ ಕಾರ್ಮಿಕರು ವರ್ಷದ ಸುಮಾರು ಎಂಟು ತಿಂಗಳು ಇಲ್ಲಿ ದುಡಿಯುತ್ತಾರೆ. ಕೊರೆಯುವ ಚಳಿ, ಜೀವ ಹಿಂಡುವ ಮಳೆ, ಉರಿಯುವ  ಬಿಸಿಲು ಎಲ್ಲವನ್ನೂ ಇವರು ಅನುಭವಿಸುತ್ತಾರೆ ಯಾವುದೇ ಆತಂಕವಿಲ್ಲದೆ. ಬೆಳಗಿನ ಜಾವ ಇನ್ನೂ ಕತ್ತಲಲ್ಲೇ ಎದ್ದು ಬಂಡಿಗೆ ಎತ್ತುಗಳನ್ನು ಹೂಡಿಕೊಂಡು ರಸ್ತೆ ಹಿಡಿದು ಹೊರಡ ಬೇಕು ಕಬ್ಬಿರುವ ಹೊಲಕ್ಕೆ. ಕೆಲವು ಹತ್ತಿರದಲ್ಲಿದ್ದರೆ, ಕೆಲವು ಕಾರ್ಖಾನೆಯಿಂದ ಹಲವು ಕಿಲೋಮೀಟರ್‌‌ಗಳ ದೂರದಲ್ಲಿರುತ್ತವೆ.

ಕಬ್ಬಿನ ಬೆಳೆಯ ರಚನೆಯೂ ಈ ಕೂಲಿ ಕಾರ್ಮಿಕರನ್ನು ಹೇಗೆ ಹಿಂಸಿಸುತ್ತದೆ ಎನ್ನುವುದಕ್ಕೆ ಇವರ ಮುಖ, ಅಂಗೈ, ಕೈಕಾಲುಗಳನ್ನು ನೋಡಬೇಕು. ಮುಖದ ತುಂಬ ಯಾರೋ ಹರಿತವಾದ ರೇಜರ್‌ನಿಂದ ಪರಚಿದಂತಹ ಗೆರೆಗಳು, ಕಬ್ಬು ಕಡಿಯುವಾಗ ತಪ್ಪಿ ಬಿದ್ದು ಇನ್ನೂ ತುಂಡಾಗದೆ ಅಲ್ಲೇ ಕೂಡಿಕೊಂಡಿರುವ ಕೈಬೆರಳುಗಳು. ಮೈತುಂಬ ಪರಚಿದ ಗಾಯಗಳು. ಕಬ್ಬಿನ ಹಸಿ ಎಲೆಗಳು ತುಂಬ ಹರಿತ. ಅವುಗಳನ್ನು ಮುಷ್ಠಿಮಾಡಿ ಹಿಡಿದು ಕುಡುಗೋಲಿನಿಂದ ಕಡಿಯುವಾಗ ಇಷ್ಟೆಲ್ಲವನ್ನೂ ಅನುಭವಿಸಲೇಬೇಕು. ಇದು ಯಾರದೋ ಒಬ್ಬರ ಸ್ಥಿತಿಯಲ್ಲ ಕಬ್ಬು ಕಡಿಯುವ ಯಾರ ಅಂಗೈಯನ್ನು ನೋಡಿದರು ಈ ರೀತಿಯ ಗಾಯಗಳು ಸಾಮಾನ್ಯ. ಈ ಜನ ಕೇವಲ ಬೆವರನ್ನು ಹರಿಸುವುದಿಲ್ಲ, ರಕ್ತದ ಹನಿಗಳನ್ನೂ ಉದುರಿಸಬೇಕು.

ದುಡಿಮೆಯಲ್ಲಿನ ಇವರ ಶ್ರದ್ಧೆ, ತನ್ಮಯತೆ ಕಠೋರತೆ ಅನನ್ಯವಾದುದು. ಕಬ್ಬಿನ ದೊಡ್ಡ ದೊಡ್ಡ ಹೊಲಗಳು ಗಬಾಳಿಗರ ದುಡಿತದ ದಾಳಿಗೆ ವಿನಯದಿಂದ ಬಾಗುತ್ತವೆ. ಈ ದುಡಿಮೆಯ ಚಿತ್ರಗಳನ್ನು ಗಮನಿಸಿದರೆ ಬಹುಶಃ ದುಡಿಮೆಯಾಚೆಗೆ ಇವರು ಬೇರೇನನ್ನೂ ಯೋಚಿಸುವುದಿಲ್ಲ ಎನ್ನಿಸುತ್ತದೆ. ಈ ರಾಜ್ಯ, ಇಲ್ಲಿನ ಜನಪ್ರತಿನಿಧಿಗಳು, ಇಲ್ಲಿನ ಬಡ್ಜೆಟ್ಟು ಎಲ್ಲವನ್ನೂ ಸಾರಾಸಗಟಾಗಿ ಧಿಕ್ಕರಿಸಿ ತಮ್ಮ ದುಡಿತದ ಮೂಲಕವೇ, ತಮ್ಮ ಬದುಕಿನ ಸಂಕಷ್ಟದ ಆತ್ಯಂತಿಕ ಸ್ಥಿತಿಯ ಮೂಲಕವೇ ಈ ಪ್ರಭುತ್ವಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ ಎನ್ನಿಸುತ್ತದೆ.

ಇಲ್ಲಿನ ದುಡಿಮೆಗಾರರನ್ನು ಮಾತನಾಡಿಸಿದರೆ ನಾವು ಬಹುಶಃ ಊಹಿಸಲಾರದ ಕಠೋರ ವಾಸ್ತವಗಳು ಹೊರಬೀಳುತ್ತವೆ. ಮುಖ್ಯವಾದದ್ದೆಂದರೆ ಈ ಗಬಾಳಿಗರಿಗೂ ಮತ್ತು ಕಾರ್ಖಾನೆಗಳಿಗೂ ಯಾವುದೇ ಸಂಬಂಧವೇ ಇಲ್ಲ. ಅಂದರೆ ಇವರು ಕಬ್ಬನ್ನು ಕಡಿದು ತಂದು ಕಾರ್ಖಾನೆಗೆ ಮುಟ್ಟಿಸಿದರೂ ಕಾರ್ಖಾನೆ ಇವರಿಗೆ ಕೂಲಿ ಕೊಡುವುದಿಲ್ಲ ಬದಲಾಗಿ ಮಧ್ಯದ ದಲ್ಲಾಳಿಗಳು ನೀಡುತ್ತಾರೆ. ಇಲ್ಲಿರುವುದೇ ಎಣಿಕೆಗೆ ನಿಲುಕದ ಸೌಮ್ಯ ಮೋಸಗಳು. ಹೀಗೆ ಅಲೆಮಾರಿಗಳಾಗಿ ಬರುವ ಗಬಾಳಿಗರ ಮೂಲ ಊರುಗಳಿಗೆ ಹೋಗಿ ದಲ್ಲಾಳಿಗಳು ಕೆಲಸಕ್ಕೆ ಬರುವ ಮೊದಲೇ ದುಡ್ಡನ್ನು ಕೊಟ್ಟು ಎಷ್ಟು ಜನ ಬರಬೇಕು, ಎಷ್ಟು ಕೆಲಸ ಮಾಡಬೇಕು ಎಲ್ಲಿ ಕೆಲಸ ಮಾಡಬೇಕು ಮುಂತಾಗಿ  ಎಲ್ಲವನ್ನೂ ನಿರ್ಧರಿಸಿರುತ್ತಾರೆ. ಹಾಗಾದರೆ ಈ ದಲ್ಲಾಳಿಗಳಿಗೆ ದುಡ್ಡು ಹೇಗೆ ಬರುತ್ತದೆ ಎಂದು ವಿಚಾರಿಸಿದರೆ ಕಾರ್ಖಾನೆಗಳೇ ಈ ದಲ್ಲಾಳಿಗಳಿಗೆ ದುಡ್ಡನ್ನು ಕೊಟ್ಟಿರುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ. ದಲ್ಲಾಳಿಗಳಿಗೇನಿದೆ ಲಾಭ ಎಂದು ಯೋಚಿಸಿದರೆ ತಾವು ಹೂಡುವ ಎತ್ತಿಗಿಂತಲೂ ಭಯಂಕರವಾಗಿ ದುಡಿಯುವುದು ಗೊತ್ತಿರುವ ನಮ್ಮ ಜನ ಅದೆಷ್ಟು ಸುಲಭವಾಗಿ ವಂಚನೆಗೊಳಗಾಗುತ್ತಿದ್ದಾರೆ ಎಂಬುದು ವಿಷದವಾಗುತ್ತದೆ.

ಹೊಲದಿಂದ ಟನ್ನುಗಟ್ಟಲೆ ಕಬ್ಬನ್ನು ಕಡಿದು, ಫ್ಯಾಕ್ಟರಿಗಳೇ ಪೂರೈಸಿರುವ ಬಂಡಿಗಳಲ್ಲಿ ತುಂಬಿ ತಂದು ಕಾರ್ಖಾನೆಗೆ ಮುಟ್ಟಿಸಿದರೆ ಟನ್ನಿಗೆ ಇಂತಿಷ್ಟು ಎಂದು ಕಾರ್ಖಾನೆ ದುಡ್ಡು ನಿಗದಿಪಡಿಸಿರುತ್ತದೆ. ಅಲ್ಲಿನ ಲೆಕ್ಕ ಬರೆದುಕೊಳ್ಳುವವ ಕೂಲಿಕಾರ್ಮಿಕನ ಹೆಸರು ಬರೆದುಕೊಂಡು ಎಷ್ಟು ದುಡ್ಡಾಯಿತು ಎಂದೂ ಬರೆದುಕೊಳ್ಳುತ್ತಾನೆ. ಕೂಲಿಕಾರ್ಮಿಕ ತಂದ ಕಬ್ಬಿಗೆ ಕಾರ್ಖಾನೆ ನಿಗದಿಪಡಿಸಿದ ದುಡ್ಡಿನಲ್ಲಿ ನೂರಕ್ಕೆ ೧೮ ರೂಪಾಯಿಯಿಂದ ೨೫ ರೂಪಾಯಿಯವರೆಗೆ ಕಮೀಷನ್ ದಲ್ಲಾಳಿಗೆ ಹೋಗುತ್ತದೆ ಎಂಬುದಾಗಿ ಇಲ್ಲಿನ ಜನ ಅಲವತ್ತುಕೊಳ್ಳುತ್ತಾರೆ. ಕಾರ್ಖಾನೆಯವರೂ ಸಹ ಬಂಡಿಯನ್ನೇನು ಪುಗಸಟ್ಟೆ ನೀಡುವುದಿಲ್ಲ, ಅದಕ್ಕೂ ದಿನಬಾಡಿಗೆ ಕಟ್ಟಲೇಬೇಕು. ಹೀಗೆ ದಲ್ಲಾಳಿಯ ಕಮೀಷನ್, ಬಂಡಿಯ ಬಾಡಿಗೆ ತೆಗೆದು ಒಂದು ಗಬಾಳ ಕುಟುಂಬ ಗಂಡ, ಹೆಂಡತಿಯ ದುಡಿಮೆಯ ಜೊತೆಗೆ ಎರಡು ಎತ್ತುಗಳ ದುಡಿಮೆಯನ್ನೂ ಸೇರಿಸಿ ಸಿಗುವ ಪ್ರತಿಫಲ ಮಾತ್ರ ಕನಿಕರ ಉಕ್ಕಿಸುವಂಥದ್ದು. ಹೀಗೆ ಯಾರದೋ ದುಡಿತದಿಂದ ತಮ್ಮ ಜೇಬು ತುಂಬಿಸಿಕೊಳ್ಳುವ ದಲ್ಲಾಳಿ ಜನ ಇಲ್ಲಿ ಬಹಳ. ಆದರೂ ಬೇರೆ ಕೃಷಿ ಕೂಲಿಗೆ ಹೋಲಿಸಿದರೆ ಗಬಾಳಿಗರ ದುಡಿಮೆಯ ಫಲ ಸ್ವಲ್ಪ ಹೆಚ್ಚೇ, ಅದು ಕೇವಲ ದುಡ್ಡಿನ ರೂಪದಲ್ಲಲ್ಲ ಬೆವರು ರಕ್ತದ ರೂಪದಲ್ಲೂ.

ದುಡಿಯಲು ಬರುವ ಮೊದಲೇ ಸಿಕ್ಕ ದುಡ್ಡನ್ನು ಕೆಲವರು ಮಕ್ಕಳ ಮದುವೆ ಮಾಡಿ, ಜಾತ್ರೆ, ಹಬ್ಬ ಮಾಡಿ, ಇನ್ನೂ ಕೆಲವರು ಕುಡಿದು, ಜೂಜಾಡಿ ಖಾಲಿಯಾಗಿ ದುಡಿತಕ್ಕೆ ಬರುತ್ತಾರೆ. ಹೀಗೆ ಬಂದು ಇಲ್ಲಿ ಸಿಕ್ಕ ಬಯಲಿನ ಜಾಗದಲ್ಲಿ ರವುದಿಯಿಂದ ಗೂಡು ಕಟ್ಟಿ ದಿನದ ದುಡಿತದ ಯುದ್ಧಕ್ಕೆ ಅಣಿಮಾಡುವ ತಾಯಂದಿರ ಸ್ಥಿತಿಗತಿಗಳು ಮಹಿಳಾ ಕಲ್ಯಾಣದ ಮಾತನ್ನಾಡುವ ಪ್ರಭುತ್ವವನ್ನು ಅಣಕಿಸುವಂತಿವೆ. ಹೊತ್ತು ಮೂಡುವ ಮುನ್ನವೇ ಕತ್ತಲು ತುಂಬಿರುವ ಬಯಲಿನ್ಲಲ್ಲಿಯೇ ನೂರಾರು ಮಹಿಳೆಯರ  ಸ್ನಾನವೆಂದರೆ ನಮ್ಮ ಅತ್ಯಾಧುನಿಕ ನಾಗರಿಕತೆ ಇನ್ನೂ ಅಲ್ಲೇ ಇದೆ ಅನಿಸುತ್ತದೆ. ಸಿಕ್ಕ ದುಂಡು ಕಲ್ಲುಗಳಿಂದಲೇ ಒಲೆ ಹೂಡಿ, ಬೆರಣಿಗಳಿಂದ ಒಲೆ ಹೊತ್ತಿಸಿ ಅಡುಗೆ ಮಾಡಿಕೊಂಡು ಬಂಡಿ ಹತ್ತಿದಾಗ ಇನ್ನೂ ಬೆಳಕು  ಮೂಡಿರುವುದಿಲ್ಲ. ಕಬ್ಬು ಕಡಿಯುವಿಕೆ ಪ್ರಾರಂಭವಾಗಿ  ಬಂಡಿ ತುಂಬಿಸಿ ಹೊಲ ಸಮೀಪವಿದ್ದರೆ ಒಂದು ಬಂಡಿ ಕಾರ್ಖಾನೆಗೆ ಮುಟ್ಟಿಸಿ ಮತ್ತೆ ಇನ್ನೊಂದು ಬಂಡಿ ಒಯ್ಯುವ  ಧಾವಂತದಲ್ಲಿ ಬಂಡಿ ಏರುತ್ತಾರೆ. ಹೆಣ್ಣುಮಕ್ಕಳೇ ಅಷ್ಟು ಬಲವಾದ ಉಢಾಳ ಎತ್ತುಗಳನ್ನು ಪಳಗಿಸಿ ತಾವೇ ಬಂಡಿ ಕಟ್ಟುತ್ತಾರೆ, ತಾವೇ  ಬಂಡಿ ನಡೆಸುತ್ತಾರೆ. ಟನ್ನುಗಟ್ಟಲೇ ಕಬ್ಬನ್ನು ಹೇರಿಕೊಂಡು  ಹೀಗೆ ಬಂಡಿ ನಡೆಸಿಕೊಂಡು ಬರುವ ದಾರಿಯೇನು  ಹಸನಾದದ್ದಲ್ಲ. ಮುದುಕರು ಸರಾಗವಾಗಿ ನಡೆದುಕೊಂಡು ಬರಲು ಸಾಧ್ಯವಿಲ್ಲದ ತಗ್ಗು ದಿನ್ನೆಗಳಿಂದ ಕೂಡಿರುವ ರಸ್ತೆಯಲ್ಲಿ ಹೀಗೆ ಬರುವುದು ದುಸ್ಸಾಹಸವೇ ಸರಿ. ಕಷ್ಟ ಎದುರಾಗುವುದು ಏರುದಿನ್ನೆಗಳು ಬಂದಾಗ . ಎತ್ತುಗಳು ಜಗ್ಗಲು ಆಗದೇ ಒದ್ದಾಡುವಾಗ ಈ ಹೆಣ್ಣುಮಕ್ಕಳು ತಮ್ಮೆಲ್ಲ ಶಕ್ತಿಯನ್ನೂ ಕೂಡಿಸಿಕೊಂಡು ಎತ್ತುಗಳ ಜೊತೆ ಕಬ್ಬು ತುಂಬಿದ ಬಂಡಿಯನ್ನು ಎಳೆಯುತ್ತಾರೆ. ಹೀಗೆ ಎಳೆಯುವಾಗ ಆಗುವ ಅನಾಹುತಗಳು ತುಂಬ ಕ್ರೂರವಾದವು. ಎತ್ತುಗಳ ಕಾಲುಗಳೇ ಮುರಿಯುತ್ತವೆ, ಕಬ್ಬು ತುಂಬಿದ ಬಂಡಿ ಮುಗುಚಿ ಬೀಳುತ್ತವೆ, ಮತ್ತೆ ಎತ್ತುಗಳನ್ನು ಸುಧಾರಿಸಿಕೊಂಡು, ಕಬ್ಬನ್ನು ಮರಳಿ ತುಂಬಿ ಕಾರ್ಖಾನೆಗೆ ಮುಟ್ಟಿಸುವ ಕರ್ಮವೇ ಇಲ್ಲಿನ ಜನರ ಬದುಕಿನ ಚೈತನ್ಯವನ್ನು ಹೇಳುತ್ತದೆ.

ಇದಕ್ಕಿಂತ  ಭಯಾನಕ ಸನ್ನಿವೇಶವೆಂದರೆ ಗರ್ಭಿಣಿ ಹೆಣ್ಣುಮಕ್ಕಳು ಯಾವುದೇ ಅಳುಕಿಲ್ಲದೆ, ಆತಂಕವಿಲ್ಲದೆ ಕಿಲೋಮೀಟರ್ ಗಟ್ಟಲೆ ನಡೆದು ಕಬ್ಬು ಕಡಿಯಲು ಬರುವ ಚಿತ್ರ ಎಂಥವರನ್ನೂ ಅಲುಗಾಡಿಸದೇ ಇರದು. ಇನ್ನು ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗುತ್ತದೆ ಎನ್ನುವಾಗಲೂ ಇಲ್ಲಿನ ಮಹಿಳೆಯರು ಹೊಲದಲ್ಲಿ ಕಬ್ಬು ಕಡಿಯುತ್ತಿರುತ್ತಾರೆ. ತೀರಾ ತುರ್ತಿಗೆ ಬಂದು ನರಳಲು ಪ್ರಾರಂಭಿಸಿದ ಮೇಲೆ ಕನಿಷ್ಠ ವೈದ್ಯಕೀಯ ಸೌಲಭ್ಯವಿಲ್ಲದೆ ಬದುಕುತ್ತಿರುವ ಈ ದುಡಿಮೆಗಾರರು ಹೇಗೋ ರಸ್ತೆಗೆ ಬಂದು ಸಿಕ್ಕ ಬಸ್ಸನ್ನೇರಿ ಎಲ್ಲೋ ಇರುವ ಆಸ್ಪತ್ರೆಯನ್ನು ಹುಡುಕಿ ನಡೆಯುತ್ತಾರೆ.  ಹೀಗೆ ಹೋಗುವಾಗ  ಬಸ್ಸಿನಲ್ಲಿಯೇ ಹೆರಿಗೆಯಾದ ಉದಾಹರಣೆಗಳನ್ನು ಕೇಳಿ ದಿಗಿಲಾಯಿತು .  ಜೀವ ಪಣಕ್ಕಿಟ್ಟು ಮತ್ತೊಂದು ಜೀವಕ್ಕೆ ಜನ್ಮ ಕೊಡುವಾಗ ಯಾವ ಡಾಕ್ಟರುಗಳೂ ಇಲ್ಲದೆ ಔಷಧ, ಇಂಜೆಕ್ಷನ್ ಇಲ್ಲದೆ ಹೆರಿಗೆ ನಡೆಯುತ್ತದೆ ಎಂದರೆ ನಮ್ಮ ನವನಾಗರೀಕ ಸಮಾಜದ ಹೊಣೆ ಹೊತ್ತ ನಾಡ ಪ್ರಭುಗಳು ಏನು ಹೇಳುತ್ತಾರೆ.  ‘ಜನನಿ ಸುರಕ್ಷಾ’ ಯೋಜನೆ ತಾನು ಸುರಕ್ಷಿತವಾಗಿದೆಯೇ ಎಂದು ಕೇಳಬೇಕಾಗುತ್ತದೆ. ಬಿಡಿ ಇದು ದುಡಿತಕ್ಕೆ ಒಗ್ಗಿಕೊಂಡ ಇಲ್ಲಿನ ಜನಕ್ಕೆ ಯಾವುದೂ ಅಸಹಜವೆನಿಸುವುದಿಲ್ಲ ಎಂಬುದು ಅವರನ್ನು ಮಾತನಾಡಿಸಿದಾಗ ತಿಳಿಯುತ್ತದೆ. ಇಂಥ ಘೋರ ಸಂಕಷ್ಟಗಳನ್ನೆಲ್ಲ ಇವರು ತುಂಬ ಸರಳವಾಗಿ ನಿರಾಕರಿಸಿ ಮುಂದಡಿಯಿಡುತ್ತಾರಲ್ಲ ಈ ಧೀಮಂತಿಕೆಗೆ ಸಾಟಿ ಯಾವುದು.

ಇತ್ತೀಚೆಗೆ ಹೊಸದಾಗಿ ರೂಪಿಸಲಾದ ಶಿಕ್ಷಣ ಹಕ್ಕು ಕಾಯಿದೆ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ. ಇದರ ಪ್ರಕಾರ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗುವಂತಿಲ್ಲ. ಹಾಗೇನಾದರೂ ಆದರೆ ಅದಕ್ಕೆ ಕಾರಣರಾದ ತಂದೆ ತಾಯಿಯಾಗಲಿ, ಶಿಕ್ಷಕರಾಗಲಿ ಎಲ್ಲರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆದರೆ ಈ ದುಡಿಯುವ ಜನಗಳ ಜೊತೆ ಬರುವ ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಎಳೆಯ ರಟ್ಟೆಗಳಲ್ಲಿಯೇ ಕಬ್ಬು ಕಡಿಯುತ್ತಿರುವ ಚಿತ್ರ ಈ ಕಟ್ಟು ನಿಟ್ಟಿನ ಕಾಯಿದೆಯನ್ನು ಕಟ್ಟುನಿಟ್ಟಾಗಿ ನಿರಾಕರಿಸಿರುವುದನ್ನು ಸೂಚಿಸುತ್ತದೆ. ನಮ್ಮ ಮಕ್ಕಳು ಶಿಕ್ಷಣದಿಂದ ವಿಮುಖರಾಗಬಾರದೆಂದು ಏನೆಲ್ಲ ಯೋಜನೆಗಳು, ಎಷ್ಟು ಸಾವಿರ ಕೋಟಿ  ರೂಪಾಯಿಗಳು ಎಲ್ಲಿ ಹೋಗುತ್ತಿವೆ ಎಂಬ ಪ್ರಶ್ನೆ ಮೂಡುತ್ತದೆ. ಆಟವಾಡಬೇಕಾದ ಮಕ್ಕಳು ಆಳೆತ್ತರದ ಕಬ್ಬನ್ನು ಹರಿತ ಕುಡುಗೋಲಿನಿಂದ ಕಡಿಯುತ್ತಾ, ಮೈಮುಖಗಳನ್ನೆಲ್ಲ ಗಾಯಮಾಡಿಕೊಂಡು ಎತ್ತುಗಳನ್ನು ಹೂಡಿಕೊಂಡು ಬಂಡಿ ನಡೆಸುವ ಚಿತ್ರಕ್ಕೆ ಉತ್ತರ ಕೊಡುವವರಾರು?

ಉತ್ತರ ಕರ್ನಾಟಕದ ಮಕ್ಕಳ ಎದೆಯ ಮೇಲೆ ಮತ್ತು ಎದೆಯ ಒಳಗೆ ಬಿದ್ದಿರುವ ಬರೆಗಳು ಅಮಾನುಷವಾದವು. ತೋರಿಸಿ ಅರ್ಥೈಸಲಾರದವು. ಹೊಲದಲ್ಲಿ ಕಬ್ಬು ಕಡಿಯುತ್ತಿರುವ ತಮ್ಮ ಪುಟ್ಟ ಮಕ್ಕಳನ್ನು, ಹಸುಗೂಸುಗಳನ್ನು ಅಲ್ಲಿಯೇ ನೆರಳಿರುವ ಜಾಗ ನೋಡಿ , ಕಬ್ಬಿನ ಎಲೆಗಳನ್ನೇ ಹಾಸಿ ಮಲಗಿಸಿರುತ್ತಾರೆ. ಹೀಗೆ ಮಲಗಿಸಿರುವಾಗ ಹಿಮ್ಮುಖವಾಗಿ ಕಬ್ಬು ಹೇರಲು ಬಂದ ಟ್ರ್ಯಾಕ್ಟರ್ ಗಾಲಿಗೆ ಸಿಕ್ಕು ಜೀವ ಕಳೆದುಕೊಂಡ ಹಸುಗೂಸುಗಳ ಸಾವಿನ ಹೊಣೆ ಯಾರು ಹೊರುತ್ತಾರೆ? ಈ ದುರಂತಗಳು ಹುಡುಕಿದಷ್ಟು ಭೀಕರ. ಆದರೆ ಈ ದುರಂತಗಳ ಪರಿಹಾರದ ದಾರಿಗಳ ತುಂಬ ಮುಳ್ಳುಗಳು ತುಂಬಿವೆ. ಕೂಲಿ ಕಾರ್ಮಿಕರಿಗೆ ಅವರ ದುಡಿಮೆಗೆ ಸಂಬಂಧಿಸಿದಂತೆ ಹಲವು ಕಾನೂನುಗಳಿವೆ. ಈ ಕಾನೂನುಗಳನ್ನು ರೂಪಿಸಿದ ಪ್ರಭುತ್ವವೇ ಕಾನೂನನ್ನು ಹೇಗೆ ಮುರಿಯುತ್ತಿದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಈಗಿರುವ ಕಾನೂನಿನ ಪ್ರಕಾರ ಒಂದು ದಿನಕ್ಕೆ ನಿಗದಿಪಡಿಸಿದ ಕೂಲಿಯನ್ನು ಪ್ರಭುತ್ವ ಅಂಗನವಾಡಿ ಆಯಾಗಳಿಗೆ, ಬಿಸಿಯೂಟದ ಕಾರ್ಯಕರ್ತೆಯರಿಗೆ ನೀಡುತ್ತಿದೆಯೆ? ಉತ್ತರಿಸುವವರಾರು?

ಕೃಷಿಯ ಅವಸಾನಕ್ಕೂ, ಕೂಲಿಕಾರ್ಮಿಕರು ಎದುರಿಸುತ್ತಿರುವ ದುರಂತಗಳಿಗೂ ನೇರವಾದ ಸಂಬಂಧಗಳಿವೆ. ನಮ್ಮ ಪ್ರಭುತ್ವದ ಇಂದಿನ ನಡೆಯನ್ನು ಗಮನಿಸಿದರೆ ಅದು ಕೃಷಿಗೆ ಬಂದೆರಗಿರುವ ವಿಪತ್ತುಗಳನ್ನು ದೂರಮಾಡುವಿಕೆಯಲ್ಲಿ  ಗಮನಹರಿಸದೆ ಕೃಷಿಯನ್ನು ಕಾರ್ಪೋರೇಟ್ ಗೊಳಿಸುವಿಕೆಯಲ್ಲಿ ಹೆಚ್ಚು ಆಸ್ಥೆವಹಿಸಿದೆ ಎಂಬುದು ಸಹಜವಾಗಿ ಅರಿವಿಗೆ ಬರುತ್ತದೆ. ಈ ಕಾರಣದಿಂದಲೇ ಇಂದು ಸಾವಿರ ಜನ ಭೂಮಿ ಕಳೆದುಕೊಳ್ಳುತ್ತಿದ್ದಾರೆ, ಹಾಗೆ ಭೂಮಿ ಕಳೆದುಕೊಂಡವರು ಸಹಜವಾಗಿ ಕೂಲಿಕಾರ್ಮಿಕರಾಗಿ ಈ ರೀತಿ ತಬ್ಬಲಿ ಬದುಕಿಗೆ ಒಗ್ಗಿಕೊಳ್ಳುವಂತಾಗಿದೆ. ನಮ್ಮ ಅನ್ನದಾತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನಿಗದಿಪಡಿಸದೆ, ಆ ಬೆಳೆದ ಬೆಳೆಯ ಉತ್ಪನ್ನ, ಉಪಉತ್ಪನ್ನಗಳ ಬೆಲೆಯನ್ನು ಗಮನಿಸಿದರೆ ಈ ಮಹಾಮೋಸದ  ಅರಿವಾಗುತ್ತದೆ. ಗೋಧಿಯ ಬೆಲೆಯಲ್ಲಿ ಎರಡು ದಶಕಗಳಲ್ಲಿ ಆಗಿರುವ ಬೆಳವಣಿಗೆಗಳಿಗೂ, ಅದರ ಉತ್ಪನ್ನಗಳಾದ ಬಿಸ್ಕಿಟ್, ಬೇಕರಿ ತಿಂಡಿಗಳ ಬೆಲೆಯಲ್ಲಿ ಆಗಿರುವ ಏರಿಕೆಯನ್ನು ಹೋಲಿಸಿದರೆ ತುಂಬ ಆತಂಕವಾಗುತ್ತದೆ. ಹತ್ತಿ ಬೆಳೆಯ ಬೆಲೆಯಲ್ಲಿ  ಆಗದಿರುವ ಏರಿಕೆ ಬಟ್ಟೆಯ ಬೆಲೆಯಲ್ಲಿ ಆಗಿದೆಯಲ್ಲ, ಇದು ಎಂಥ ವಿಪರ್ಯಾಸ. ತಾನೇ ಬೆಳೆದ ಹತ್ತಿಯಿಂದ ತಯಾರಿಸಿದ ಬಟ್ಟೆಯನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲಾಗದೆ ಬೆತ್ತಲೆ ಫಕೀರರಂತೆ ಬದುಕು ದೂಡುತ್ತಿರುವ ಹಲವು ರೈತರನ್ನು ನಾವು ನೋಡುತ್ತಲೇ ಬಂದಿದ್ದೇವೆ. ರೈತಮಕ್ಕಳ ಹರಕುಬಟ್ಟೆಯಲ್ಲಿ ಈ ದೇಶದ ಚಿತ್ರ ಯಾರು ಬರೆದರೋ?

ಈ ಬದುಕಿನ ಎರಡು ಅಂಚುಗಳನ್ನು ಗಮನಿಸಿದರೆ ಈ ನೆಲದ ಚೈತನ್ಯ ಮತ್ತು ಪ್ರಭುತ್ವದ ದಾರಿದ್ರ್ಯದ ವಾಸ್ತವಗಳು ಸ್ಪಷ್ಟವಾಗುತ್ತವೆ. ಹೀಗೆ ಏನೆಲ್ಲ ಸಂಕಷ್ಟಗಳನ್ನು ಎದುರಿಸಿಯೂ ಇದೇ ದುಡಿಮೆಯ ದುಡ್ಡಿನಿಂದ ಇರುವ ಎರಡೂ ಹೆಣ್ಣುಮಕ್ಕಳನ್ನು ಓದಿಸಿ ಡಾಕ್ಟರ್, ಟೀಚರ್ ಮಾಡಿ ಬದುಕನ್ನು ಚಂದಗಾಣಿಸಿಕೊಂಡಿರುವ ಕುಟುಂಬದ ಉದಾಹರಣೆಯೂ ಇಲ್ಲಿದೆ. ತಮ್ಮ ಮಕ್ಕಳ ಮದುವೆಗೆ ನಾಲ್ಕು ಲಕ್ಷದವರೆಗೆ ಖರ್ಚುಮಾಡಿ ದುಡಿಯಲು ಬಂದವರೂ ಇದ್ದಾರೆ. ಜಮೀನಿದ್ದೂ ಕಾಲದ ಅವಕೃಪೆಯಿಂದ  ವ್ಯವಸಾಯ ಮಾಡಲಾಗದೆ ಇಲ್ಲಿ ಬಂದು ದುಡಿದು ಮತ್ತೆ ತಮ್ಮ ಊರುಗಳಲ್ಲಿ ಬದುಕು ಕಟ್ಟಿಕೊಳ್ಳುವ ಕುಟುಂಬಗಳೂ ಇಲ್ಲಿವೆ.

ಹಾಗೆಯೇ  ಹೀಗೆ ಅಲೆಮಾರಿಗಳಾಗಿ ಇಲ್ಲಿ ಕೃಷಿಕೂಲಿ ಕಾರ್ಮಿಕರಾಗಿ  ಬಂದವರಲ್ಲಿ ಬಹುತೇಕ ಜನ ಗ್ರಾಮೀಣ ತಳಸಮುದಾಯದವರು. ಇರಲು ಮನೆಯಿಲ್ಲದೆ ಜೋಪಡಿಗಳಲ್ಲಿ ವಾಸ ಮಾಡುತ್ತಲೇ ಸಿಕ್ಕ ಕೆಲಸ ಮಾಡುತ್ತ  ಜೀವನ ನಡೆಸುತ್ತಿದ್ದವರಿಗೆ, ಯಾವ  ಕೆಲಸಗಳೂ ಸಿಗದೆ ದುಸ್ಥರವಾದಾಗ ಹೀಗೆ ಗಬಾಳಿಗರಾಗಿ ಇಲ್ಲಿ  ಬಂದು ಬದುಕು ದೂಡುತ್ತಿದ್ದಾರೆ. ಊರಿನ ಸಾಮಾಜಿಕ ದೌರ್ಜನ್ಯಗಳು, ಅವಮಾನಗಳು, ಕೊನೆಗೆ ಮನುಷ್ಯರಾಗಿ  ನೋಡುವ ಕಣ್ಣಿಲ್ಲದ ಮೇಲ್ಜಾತಿಗಳ ಅಮಾನವೀಯತೆಗೆ ಬೇಸತ್ತು  ಊರು ತೊರೆದು ಬಂದವರಿದ್ದಾರೆ. ಈ ಪ್ರಭುತ್ವದ ದಲಿತೋದ್ಧಾರದ ಮಾತುಗಳು, ಯೋಜನೆಗಳು ಯಾರ  ಹೆಸರಿನಲ್ಲಿ ಯಾರಿಗೆ ಸೇರುತ್ತಿವೆ ಎನ್ನುವುದಕ್ಕೆ ಇದಕ್ಕಿಂತ ವಾಸ್ತವಗಳು ಬೇರೆ ಇಲ್ಲ. ಹಲವರಿಗೆ ತಾವು ಇಂತವರೆಂದು ಹೇಳಿಕೊಳ್ಳಲೂ ಸಹ ಮತದಾನದ ಗುರುತಿನ ಚೀಟಿಗಳೇ ಇಲ್ಲದ ಮೇಲೆ ಯಾವ ಸೌಲಭ್ಯ ತಾನೆ ಯಾರಿಗೆ ದಕ್ಕುತ್ತೆ?

ಇಲ್ಲಿನ ಮೋಸದ ಚಹರೆಗಳನ್ನು ಗಮನಿಸುತ್ತಾ ಹೋದರೆ ನಮ್ಮ ಕಲ್ಪನೆಗೂ ಮೀರಿದ ವಾಸ್ತವಗಳು ತೆರೆದುಕೊಳ್ಳುತ್ತವೆ. ಕಬ್ಬು ಬೆಳೆಗಾರರೂ ಸಹ ಏಜೆಂಟರ ವಂಚನೆಗಳಿಗೆ ಬಲಿಯಾಗಿದ್ದಾರೆ. ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಗಳಿಗೆ ಕೊಂಡೊಯ್ಯಲು ಇದೇ ಏಜೆಂಟರಿಗೆ ಎರಡು ಸಾವಿರದವರೆಗೆ ದುಡ್ಡು ಕೊಟ್ಟು ಕೈಸುಟ್ಟುಕೊಳ್ಳಬೇಕಾಗುತ್ತದೆ. ಒಂದು ವೇಳೆ ದುಡ್ಡು ಕೊಡದೆ ಹೋದರೆ ಆ ರೈತನ ಕಬ್ಬು ಹೊಲದಲ್ಲಿಯೇ  ಉಳಿಯಬೇಕಾಗುತ್ತದೆ. ವಂಚನೆಗೊಳಗಾಗಲೇಬೇಕಾಗದ ಅನಿವಾರ್ಯತೆಯನ್ನು ಇಲ್ಲಿನ ಏಜೆಂಟರು ಸೃಷ್ಟಿಸಿದ್ದಾರೆ.

ಇಲ್ಲಿ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಮ್ಮ ರೈತ ಹೋರಾಟಗಳು ಯಾರನ್ನು ಕೇಂದ್ರೀಕರಿಸಿಕೊಂಡಿವೆ, ಯಾರನ್ನು ಅಲಕ್ಷಿಸಿವೆ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕಬ್ಬು ಬೆಳೆಗಾರರಿಗಾಗಿ ಸಂಘಗಳನ್ನು ಕಟ್ಟಿಕೊಂಡು ನ್ಯಾಯಯುತವಾದ  ಬೆಲೆಗಾಗಿ ಹೋರಾಟ ನಡೆಸುತ್ತಿರುವುದು ಸರಿಯಷ್ಟೆ, ಆದರೆ ಈ ಹೋರಾಟ ಜಮೀನು ಉಳ್ಳವರ ಸಮಸ್ಯೆಗಳಲ್ಲಿ ತೋರಿದ ಆಸಕ್ತಿಯನ್ನು, ಕೂಲಿಕಾರ್ಮಿಕರ  ಸಂಕಷ್ಟಗಳನ್ನು ನಿವಾರಿಸುವಲ್ಲಿ ತೋರುತ್ತಿಲ್ಲ  ಏಕೆ?  ರೈತ ಸಂಘ ಉಳ್ಳವರ, ಜಮೀನು ವಾರಸುದಾರರ ಪರವಾಗಿ ಮಾತ್ರವಿದೆಯೆಂಬುದು ಮತ್ತೆ ಮತ್ತೆ ಸಾಬೀತಾಗಿದೆ.

ಕೂಲಿ  ಇಂದು ನೆಮ್ಮದಿಯ ಘನತೆಯ ಬದುಕಿಗೆ ದಾರಿಯಾಗದೆ, ಜೀವ ಉಳಿಸಿಕೊಳ್ಳುವುದಕ್ಕಾಗಿ ನಡೆಯುವ ಹೋರಾಟದಲ್ಲಿ ಸಿಕ್ಕ ಸಣ್ಣ ಭರವಸೆ ಮಾತ್ರವಾಗಿದೆ. ರೈತ ಬೆಳೆದ ಬೆಳೆಗೆ ನ್ಯಾಯಯುತವಾದ ಬೆಲೆ ದೊರೆತಿದ್ದರೆ  ಕೆಲವು ಜನ ಕೂಲಿಕಾರ್ಮಿಕರಾದರೂ ನೆಮ್ಮದಿಯಿಂದ  ಉಸಿರಾಡಬಹುದಿತ್ತು. ಜಮೀನನ್ನು ಊರ ಸಾಹುಕಾರನಿಗೋ, ಗೌಡನಿಗೋ ಅಡವಿಡದೆ ತಾವು ಬೆಳೆದ ಅನ್ನ ತಾವೇ ತಿನ್ನಬಹುದಿತ್ತು. ಇಂದು ಯಾರನ್ನೂ ಶೋಷಕರೆಂದು  ಬೊಟ್ಟು ಮಾಡಿ ತೋರಿಸುವಂತಿಲ್ಲ. ಇನ್ನೂ ಮುಂದುವರೆದು ಹೇಳುವುದಾದರೆ ದೌರ್ಜನ್ಯ ನಡೆಸುವವರಿಗೆ ನಿರ್ದಿಷ್ಟ ಆಕಾರವೇ ಇಲ್ಲ, ಇನ್ನು ಹೇಗೆ ಗುರುತಿಸುವುದು? ಶತಶತಮಾನದಿಂದ ನೋವೇ ಬದುಕಾದವರಿಗೆ ಶೋಷಣೆಯ ಚಹರೆಗಳು ಅರ್ಥವಾಗುವುದಿಲ್ಲ. ಸಮಾನತೆ ಕನಸೆ? ಕಾಲವೇ ಉತ್ತರಿಸುತ್ತದೆ.

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ.)

(ಚಿತ್ರಗಳು: ಲೇಖಕರವು)

ಧರ್ಮ ಹಾಗೂ ಆರ್ಥಿಕ ಅಂತ:ಸತ್ವ


-ಡಾ.ಎಸ್.ಬಿ. ಜೋಗುರ  


 

“Christianity will go. It will vanish and shrink. I needn’t argue about that; I’am right and I will be proved right. We ‘re more popular than Jesus now; I don’t know which will go first-rock’n’ roll or Christinity. Jesus was all right but his desciples were thick and ordinary. It’s them twisting it that ruins it for me.”  – John Lennon

ಧರ್ಮ ಮತ್ತು ಸಮಾಜದ ಮಧ್ಯೆ ಇರುವ ಸಂಬಂಧವನ್ನು ಕುರಿತ ಅಧ್ಯಯನ, ಮಾನವ ಸಮಾಜ ಅತ್ಯಂತ ಸರಳವಾಗಿರುವ ಹಂತದಿಂದಲೂ ಮುಂದುವರೆದುಕೊಂಡು ಬಂದಿರುವುದಿದೆ. ನಿಸರ್ಗದ ಎಲ್ಲ ವ್ಯಾಪಾರಗಳೂ ಧರ್ಮದಿಂದಲೇ ನಿಯಂತ್ರಿತ. ನಿರ್ಧರಿತ ಎನ್ನುವುದರಿಂದ ಆರಂಭಿಸಿ, ಸರ್ವಚೇತನವಾದ ಮತ್ತು ಲಾಂಛನವಾದಗಳ ಮೂಲಕ ಸಾಗಿ ಬಂದು, ಅನೇಕ ದೇವರ ಪರಿಕಲ್ಪನೆಯ ನಡುವೆ ಏಕದೇವತಾರಾಧನೆ ಮತ್ತು ದೇವನೊಬ್ಬ ನಾಮ ಹಲವು ಎನ್ನುವ ದಾರ್ಶನಿಕತೆಯವರೆಗೂ ಬಂದು ತಲುಪಿ, ಈಗ ನಮ್ಮ ನಡುವೆ ಪರಸ್ಪರ ಬಲಪ್ರದರ್ಶನದ ಮೂಲಕ ಗುರುತಿಸಿಕೊಳ್ಳುವ, ತಾನೇ ಶ್ರೇಷ್ಟ ಎನ್ನುವ ಅಹಮಿಕೆಯವರೆಗೂ ಬಂದು ತಲುಪಿರುವ ಅಗೋಚರ, ಅತಿಮಾನುಷ ಶಕ್ತಿಯಾದ ಧರ್ಮವು ಒಂದು ಸಮಾಜದ ಆರ್ಥಿಕ ಅಂತ:ಸತ್ವವಾಗಿಯೂ ಕೆಲಸ ಮಾಡುವುದಿದೆ ಎನ್ನುವುದನ್ನು ಕೆಲವು ಚಿಂತಕರಾದರೂ ತಮ್ಮ ಅಧ್ಯಯನದ ಮೂಲಕ ತೋರಿಸಿಕೊಟ್ಟಿರುವುದಿದೆ.

ಶ್ರೇಷ್ಟ ಮಾನವಶಾಸ್ತ್ರಜ್ಞರಾದ ಇವನ್ಸ್ ಫ್ರಿಚರ್ಡ್ ಮತ್ತು ರಾಡಕ್ಲಿಪ್ ಬ್ರೌನ್‌ರವರು ಸಾಮಾಜಿಕ ವಿಕಸನದ ಘಟ್ಟಗಳಾದ ಬೇಟೆಯಾಡುವ ಹಂತ, ಆಹಾರನ್ವೇಷಣೆಯ ಹಂತ, ಹುಲ್ಲುಗಾವಲು ಹಂತ ಮತ್ತು ಒಕ್ಕಲುತನದ ಹಂತದಲ್ಲಿಯ ಧರ್ಮದ ಸರಳ ಸ್ವರೂಪವನ್ನು ಕುರಿತು ಅಧ್ಯಯನ ಮಾಡಿರುವುದಿದೆ. ವಿಶ್ವದ ಎಲ್ಲ ಧರ್ಮಗಳು ಮನುಷ್ಯ ಕುಲವನ್ನು ಅಖಂಡವಾಗಿ ಬೆಸೆಯುವಲ್ಲಿ ಸೋತಿವೆ ಹಾಗಾಗಿ ಈಗಾಗಲೇ ಅಸ್ಥಿತ್ವದಲ್ಲಿರುವ ಜಾಗತಿಕ ಧರ್ಮಗಳು ತಮ್ಮ ಮೂಲ ಹೊಣೆಗಾರಿಕೆಯಿಂದ ವಿಚಲಿತವಾಗಿದ್ದು, ಅವುಗಳ ಸ್ಥಾನದಲ್ಲಿ ಮಾನವತಾವಾದಿ ಧರ್ಮವನ್ನು ಸ್ಥಾಪಿಸಬೇಕು. ನಿಸರ್ಗವನ್ನು ನಿಯಂತ್ರಿಸುವ, ಮನುಷ್ಯನ ಐಹಿಕ ಬೇಡಿಕೆಗಳನ್ನು ಈಡೇರಿಸುವುದು ಮನುಷ್ಯ ಮಾತ್ರನಿಂದ ಸಾಧ್ಯ ಹೀಗಾಗಿ ದೇವರ ಸ್ಥಾನದಲ್ಲಿ ಮಹಾಮಾನವನನ್ನು ಕುಳ್ಳರಿಸಬೇಕು ಎಂದು ಪ್ರತಿಪಾದನೆ ಮಾಡಿದ ಫ್ರಾನ್ಸ್ ದೇಶದ ಸಮಾಜಶಾಸ್ರ್ತಜ್ಞ ಅದು ಸಾಧ್ಯ ಮಾಡಲಾಗದೇ ಅಂಥಾ ಒಂದು ಧರ್ಮವನ್ನು ಸ್ಥಾಪಿಸಲಾಗದೇ ಜೀವನದ ಕೊನೆಯ ಗಳಿಗೆಯಲ್ಲಿ ತನ್ನ ಖಾಸಗಿ ಬದುಕಿನ ಪೆಟ್ಟುಗಳಲ್ಲಿ ಸಿಲುಕಿ ಅತ್ಯಂತ ಜರ್ಜರಿತನಾಗಿ ಹೋದದ್ದು ಈಗ ಚರಿತ್ರೆ. ಇಂಗ್ಲೆಂಡ್ ಮೂಲದ  ಸ್ಪೆನ್ಸರ್‌ನಂಥಾ ಚಿಂತಕರು ಧರ್ಮವನ್ನು ಸಾಮಾಜಿಕ ನಿಯಂತ್ರಣದ ಅನೌಪಚಾರಿಕ ಸಾಧನವನ್ನಾಗಿ ಗುರುತಿಸಿ ’ಇದ್ದವರ ಭಯದಿಂದ ರಾಜ್ಯ ಹಾಗೂ ಸತ್ತವರ ಭಯದಿಂದ ಧರ್ಮ ಹುಟ್ಟಿತು’ ಎಂದಿರುವುರು. ಇಲ್ಲಿ ಭಯ ಎನ್ನುವುದೇ ಧರ್ಮ ಇಲ್ಲವೇ ರಾಜ್ಯ ಎನ್ನುವ ಪ್ರಭುತ್ವಗಳ ಹುಟ್ಟಿಗೆ ಕಾರಣವಾಗಿರುವುದು ಕಟುವಾಸ್ತವ.

ಫ್ರಾನ್ಸ್ ದೇಶದ ಚಿಂತಕ ಡರ್ಖಹೀಮ್ ಧರ್ಮ ಎನ್ನುವುದು ಬದುಕಿನ ಭಾಗ, ಜೀವನದ ಅಗತ್ಯ ಎನ್ನುವ ಹಾಗೆ ಮಾತನಾಡಿ ಸಂಪ್ರದಾಯವಾದಿಗಳ ಸಾಲಿಗೆ ಸೇರಿರುವುದಿದೆ. ಭಾರತೀಯ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಅವರು 1952 ರ ಸಂದರ್ಭದಲ್ಲಿ  ದಕ್ಷಿಣ ಭಾರತದ ಕೊಡವರ ಧರ್ಮ ಮತ್ತು ಸಮಾಜ ಎನ್ನುವ ಅಧ್ಯಯನದ ಮೂಲಕ ಅಲ್ಲಿಯ ಪ್ರಾದೇಶಿಕತೆಯಲ್ಲಿ ಧರ್ಮ ಹೇಗೆ ಒಂದು ಬಗೆಯ ಅಸ್ಮಿತೆಯನ್ನು ಕಾಪಾಡಿಕೊಂಡಿತ್ತು ಎನ್ನುವ ಬಗ್ಗೆ ಚರ್ಚಿಸಿರುವರು. ಹೀಗೆ ಇನ್ನೂ ಅನೇಕರು ಧರ್ಮ ಮತ್ತು ಸಮಾಜವನ್ನು ಕುರಿತು ಅಧ್ಯಯನ ಮಾಡಿರುವರಾದರೂ ಜರ್ಮನಿಯ ಆರ್ಥಿಕ ಚಿಂತಕ ಮತ್ತು ಸಮಾಜಶಾಸ್ತ್ರಜ್ಞ  ಮ್ಯಾಕ್ಸ್‌ವೆಬರನ ನಿಲುವು ಮಾತ್ರ ಮಿಕ್ಕ ಎಲ್ಲರಿಗಿಂತಲೂ ವಿಭಿನ್ನವಾದುದು.

ಈ ಮ್ಯಾಕ್ಸ್‌‍ ವೆಬರ್ 19 ನೇ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನಲ್ಲಿ ಒಬ್ಬ ಶ್ರೀಮಂತ ಉದ್ಯಮಿಯಿದ್ದಾನೆ ಎಂದಾಗ ಆತ ಸಹಜವಾಗಿಯೇ ಪ್ರೊಟೆಸ್ಟಂಟ್ ಆಗಿರಬೇಕು ಎನ್ನುವಂಥಹ ನಂಬುಗೆಯ ಸ್ಥಾಪನೆಗೆ ಕ್ರಿಶ್ಚಿಯನ್ ಧರ್ಮದ ಪಂಗಡವೊಂದು ಕಾರಣವಾಗಿತ್ತು ಎನ್ನುವುದನ್ನು ತನ್ನ ಸಿದ್ಧಾಂತದಲ್ಲಿ ಅತ್ಯಂತ ತಾರ್ಕಿಕವಾಗಿ ಚರ್ಚಿಸಿದ್ದಾನೆ.  ಕ್ರಿಶ್ಚಿಯನ್ ಧರ್ಮದಲ್ಲಿ ಪ್ರೊಟೆಸ್ಟಂಟ್ ಮತ್ತು ಕ್ಯಾಥೊಲಿಕ್ ಎನ್ನುವ ಎರಡು ಪಂಗಡಗಳಿವೆ. 19 ನೇ ಶತಮಾನದ ಸಂದರ್ಭದಲ್ಲಿ ಯುರೋಪದಲ್ಲಿ ಪ್ರಬಲವಾದ ಸುಧಾರಣಾವಾದದ ಗಾಳಿಯೊಂದು ಬೀಸತೊಡಗಿತು. ಪ್ರೊಟೆಸ್ಟಂಟರು ಮಾತ್ರ ಆರ್ಥಿಕವಾಗಿ ಬೆಳೆಯಬಲ್ಲರು ಎನ್ನುವಂಥ ನಂಬುಗೆಯ ಗಾಳಿಯದು. ಇದರ ಹೊಡೆತಕ್ಕೆ ಸಿಲುಕಿ ಕ್ಯಾಥೊಲಿಕ್ ನೆಲೆಗಳಾದ ಆಷ್ಟ್ರಿಯಾ, ಫ್ರಾನ್ಸ್, ಇಟಲಿ, ಪೋರ್ಚುಗಲ್, ಸ್ಪೇನ್‌ನಂತಹ ರಾಷ್ಟ್ರಗಳು ಪ್ರೊಟೆಸ್ಟಂಟ್ ಪಂಥದ ಪ್ರಾಂತಗಳಾದ ಇಂಗ್ಲೆಂಡ್, ಹಾಲಂಡ್, ಸ್ಕಾಟಲ್ಯಾಂಡ್‌ಗಳ ಕಡೆಗೆ ಹೊರಳಿ ನೊಡುವಂತಾದದ್ದು ಚರಿತ್ರೆ. ಅದಕ್ಕೆ ಅತಿ ಮುಖ್ಯ ಕಾರಣ ಪ್ರೊಟೆಸ್ಟಂಟ್ ಧರ್ಮದ ವಸ್ತುನಿಷ್ಟ ನಿಲುವು.

ಶ್ರಮ ಮತ್ತು ಬಂಡವಾಳ ಶೇಖರಣೆಗಳೆರಡನ್ನೂ ಬಲವಾಗಿ ಪ್ರತಿಪಾದಿಸುವ ಆ ಪಂಗಡ ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಷ್ಟಾಪನೆಗೆ ಆಹ್ವಾನವನ್ನೂ ನೀಡಿತು ಎನ್ನುವುದನ್ನು ವೆಬರ್‌ ತನ್ನ ’ಪ್ರೊಟೆಸ್ಟಂಟ್ ಧರ್ಮ ಮತ್ತು ಬಂಡವಾಳಶಾಹಿ ಸಮಾಜದ ಅಂತ:ಸತ್ವ’ ಎನ್ನುವ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವುದಿದೆ. ಜರ್ಮನ್ ದೇಶ ಸುಧಾರಣಾವಾದದ ಪ್ರಭಾವಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮ್ಯಾಕ್ಸ್ ವೆಬರ್ ಅತ್ಯಂತ ಉತ್ಸಾಹಿ ತರುಣ. ಆತ ತನ್ನ ಹದಿಮೂರನೇಯ ವಯಸ್ಸಿನಲ್ಲಿ ತನ್ನ ಪಾಲಕರಿಗೆ ಕ್ರಿಸ್ಮಸ್ ಕೊಡುಗೆಯಾಗಿ ’About the Course of German History, with reference to the Positions of the Emperor and the Pope’ ಎನ್ನುವ ಪ್ರಬಂಧವನ್ನು ನೀಡಿರುವುದಿತ್ತು. ವಿಶ್ವದ ಮಹಾನ್ ತತ್ವಜ್ಞಾನಿಗಳನ್ನು ಅಧ್ಯಯನ ಮಾಡಿದ ವೆಬರ್, ಅರ್ಥಶಾಸ್ತ್ರದ ಅಧ್ಯಾಪಕನಾಗಿಯೂ ಕಾರ್ಯನಿರ್ವಹಿಸಿದ.

ಪಶ್ಚಿಮದ ನೆಲೆಗಳು ಶ್ರಮವಹಿಸಿ ದುಡಿಯುವುದನ್ನು ಮಾತ್ರವಲ್ಲದೇ  ಬಂಡವಾಳವನ್ನು ಉಳಿಸುವ, ಬೆಳೆಸುವ ದಿಶೆಯಲ್ಲೂ ಪ್ರೊಟೆಸ್ಟಂಟ್ ಪಂಗಡ ನೆರವಾಗಿರುವ ಬಗ್ಗೆ ಆತ ತನ್ನ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವುದಿದೆ.  ಜಗತ್ತಿನ ಬಹುತೇಕ ಧರ್ಮಗಳು, ತ್ಯಾಗ, ನಿರ್ಮೋಹ, ಅಸಂಗ್ರಹ ಪ್ರವೃತ್ತಿಯನ್ನೇ ಪ್ರತಿಪಾದಿಸುತ್ತವೆ ಹಾಗಾಗಿ ಅಂಥಾ ಧರ್ಮಗಳಿರುವ ರಾಷ್ಟ್ರಗಳು ಆರ್ಥಿಕವಾಗಿ ಹಿಂದುಳಿದಿರುವುದಿದೆ. ಪ್ರೊಟೆಸ್ಟಂಟ್ ಧರ್ಮ ಹಾಗಲ್ಲ ದುಡಿಮೆಯನ್ನು ಬಲವಾಗಿ ಬೆಂಬಲಿಸುವ ಜೊತೆಯಲ್ಲಿ  ಹಣವನ್ನು ಉಳಿಸುವ, ತೊಡಗಿಸುವ, ಬೆಳೆಸುವ ದಿಶೆಯಲ್ಲಿಯೂ ಅದು ನೆರವಾಗುತ್ತದೆ. ಮಾರುಕಟ್ಟೆಗಾಗಿ ಉತ್ಪಾದಿಸುತ್ತ, ತರ್ಕ ಸಮ್ಮತ ವ್ಯವಹಾರದೊಂದಿಗೆ ಹಣವನ್ನು ಕೂಡಿ ಹಾಕಬೇಕು ಎನ್ನುವ ಧರ್ಮ ಅದಾಗಿದೆ ಎನ್ನುತ್ತಾನೆ. ವಿಶ್ವದಲ್ಲಿ ಬಡ್ಡಿ ವ್ಯವಹಾರವನ್ನು ನಿರಾಕರಿಸದಿರುವ ಪಂಥವೆಂದರೆ ಈ ಪ್ರೊಟೆಸ್ಟಂಟ್ ಪಂಗಡ ಎಂದು ಆತ ಪ್ರತಿಪಾದಿಸುತ್ತಾನೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ಉಪದೇಶಿಸುವ ಯಾವುದೇ ಧರ್ಮಗಳು ಬಂಡವಾಳಶಾಹಿ ವ್ಯವಸ್ಥೆಗೆ ಗಟ್ಟಿ ಅಡಿಪಾಯವನ್ನು ಹಾಕಲಾರವು.

ಮನುಷ್ಯ ಈಗಾಗಲೇ ಭೌತಿಕತೆಯ ಧಾವಂತದಲ್ಲಿ ಎಸಗುತ್ತಿರುವ ಪ್ರಮಾದಗಳಿಗೆ ವೆಬರನ ಪ್ರೊಟೆಸ್ಟಂಟ್ ಧರ್ಮದ ವಿಚಾರಗಳು ಸಮರ್ಥನೀಯವಾದ ಪರಿಹಾರಗಳನ್ನು ಒದಗಿಸಲಾರವು ಎನ್ನುವ ಸತ್ಯದ ನಡುವೆಯೇ ಧರ್ಮ ಎನ್ನುವುದು ಕೇವಲ ಆಚರಣೆ. ಪೂಜೆ ಪುನಸ್ಕಾರಕ್ಕೆ ಸೀಮಿತವಾಗಿ ಉಳಿಯದೇ 12 ನೇ ಶತಮಾನದ ಶ್ರಮ ಸಂಸ್ಕೃತಿಯನ್ನು ಬೆಂಬಲಿಸಿದ್ದೇಯಾದರೆ ಖಂಡಿತ ವಿಶ್ವದ ಎಲ್ಲ ಧರ್ಮಗಳು ಸಮಾಜಮುಖಿಯಾಗಿ ಕಾರ್ಯ ಎಸಗಿದಂತಾಗುತ್ತದೆ. ಅಷ್ಟಕ್ಕೂ ಈಗೀಗ ಧರ್ಮ ಮತ್ತು ಅದರ ಸಹವಾಸದಲ್ಲಿರುವ ಮಠಗಳು ತಾವು ಧರ್ಮಕಾರಣಕ್ಕಾಗಿ ಮಾತ್ರವಲ್ಲದೇ ರಾಜಕಾರಣಕ್ಕಾಗಿಯೂ ಇದ್ದೇವೆ ಎನ್ನುವಂತೆ ವ್ಯವಹರಿಸುವುದನ್ನು ನೋಡಿದಾಗ ’ಅರ್ಥ’ ಕಾರಣದ ವಿಷಯದಲ್ಲಿಯೂ ಅವು ಹಿಂದೆ ಬಿದ್ದಿವೆ ಎನಿಸುವುದಿಲ್ಲ.

ಆದರೆ ವೆಬರ್ ಹೇಳುವಂತಹ ಬಂಡವಾಳಶಾಹಿ ಸಮಾಜದ ನಿರ್ಮಾಣದಲ್ಲಿ ಇವರ ’ಅರ್ಥ’ ಕಾರಣ ನಿರ್ಣಾಯಕವಾಗಲಾರದು. ವೆಬರ್ ಪರೋಕ್ಷವಾಗಿ ಬಸವೇಶ್ವರರ ಕಾಯಕದ ತತ್ವವನ್ನು ಕಟ್ಟುನಿಟ್ಟಾಗಿ ಪ್ರತಿಪಾದಿಸಿದರೂ ಆತ ಉದಾಹರಿಸುವ ಪ್ರೊಟೆಸ್ಟಂಟ್ ಪಂಥ ದಾಸೋಹದಂತಿರುವ ಮಾರ್ಗವೊಂದನ್ನು ಮಾತ್ರ ಬೆಂಬಲಿಸುವುದಿಲ್ಲ. ಬದಲಾಗಿ ದುಡಿಯಿರಿ, ಗಳಿಸಿರಿ, ಉಳಿಸಿರಿ, ಬೆಳೆಸಿರಿ ಎನ್ನುವಂಥಹ ತತ್ವಗಳನ್ನು  ಮೈಗೂಡಿಸಿಕೊಂಡ ಪ್ರೊಟೆಸ್ಟಂಟ್ ಪಂಥದಿಂದ ಮಾತ್ರ ಬಂಡವಾಳಶಾಹಿ ಸಮಾಜದ ಸ್ಥಾಪನೆ ಸಾಧ್ಯ ಎನ್ನುವ ವೆಬರನ ಅಭಿಪ್ರಾಯದಲ್ಲಿಯೂ ಒಂದು ಬಗೆಯ ತಥ್ಯ ಅಡಗಿದೆ. ಅದೇ ವೇಳೆಗೆ ಧರ್ಮ ಇಷ್ಟೊಂದು ಐಹಿಕವಾಗಿ ವ್ಯವಹರಿಸುವುದು ಸರಿಯೆ.? ಎನ್ನುವ ಪ್ರಶ್ನೆಯೂ ಹಾಗೇ ಉಳಿಯುತ್ತದೆ.

ದಕ್ಷಿಣ ಕನ್ನಡದ ದಲಿತರ ಮತ್ತು ತಳವರ್ಗದವರ ಸಮಸ್ಯೆಗಳು

– ನವೀನ್ ಸೂರಿಂಜೆ

ಕಳೆದ ಶನಿವಾರದಂದು (28/4/12) ಮಂಗಳೂರಿನ “ಪತ್ರಕರ್ತರ ಅಧ್ಯಯನ ಕೇಂದ್ರ” ಅಲ್ಲಿಯ  ಸಹೋದಯ ಸಭಾಂಗಣದಲ್ಲಿ “ತಳ ಸಮುದಾಯಗಳು ಮತ್ತು ಮಾಧ್ಯಮ ಎಂಬ ಸಂವಾದ” ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಂಡ ದಕ್ಷಿಣ ಕನ್ನಡದ ವಿಭಿನ್ನ ತಳ ಸಮುದಾಯಗಳ ಬಹುತೇಕ ನಾಯಕರು ತಮ್ಮ ಸಮುದಾಯಗಳ ಸಮಸ್ಯೆ ಮತ್ತು ನೋವುಗಳನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟರು. ಅಲ್ಲಿ ಮಾತನಾಡಿದ ಅನೇಕರು ಅವರ ಸಮುದಾಯಗಳ ಮೊದಲ ತಲೆಮಾರಿನ ವಿದ್ಯಾವಂತರು. ಹೆಚ್ಚಿನವರು ಪದವಿ ಶಿಕ್ಷಣ ಸಹ ಪಡೆಯದೆ ಇರುವಂತಹವರು. ಅವರಲ್ಲಿ ಕಾಡಿನ ಉತ್ಪನ್ನಗಳನ್ನು ಮಾರಿ ಜೀವನ ಸಾಗಿಸುವ ಮೂಲನಿವಾಸಿಗಳೇ ಹೆಚ್ಚು. ಅಲ್ಲಿ ಪಾಲ್ಗೊಂಡ ಆ ಸಮುದಾಯಗಳ ಕೆಲವು ಮುಖಂಡರಿಗೆ ಈ ರೀತಿ ತಮ್ಮ ಸಮಸ್ಯೆಗಳನ್ನು ಪತ್ರಕರ್ತರ ಮುಂದೆ ಹೇಳಿಕೊಳ್ಳಲು ಸಿಕ್ಕ ಮೊದಲ ಅವಕಾಶ ಇದು ಎನ್ನಬಹುದು. ತಮ್ಮ ಜನರ ನೋವು, ಈಗಲೂ ಇರುವ ಅಸ್ಪೃಶ್ಯತೆ, ಮೇಲ್ವರ್ಗದ ಜನರಿಗಾಗಿ ಮಾಡಬೇಕಾದ ಅತಿ ಅಮಾನವೀಯ ಕೊಳಕು ಸಂಪ್ರದಾಯಗಳು, ಶೋಷಣೆ, ಪೊಲೀಸರ ಕಾಟ, ಇವುಗಳ ಬಗ್ಗೆ ಪ್ರಸ್ತಾಪಿಸುತ್ತ ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಹಾಗೂ ಭೂಮಿಯ ಹಕ್ಕಿನ ಕುರಿತಂತೆ ಉಲ್ಲೇಖಿಸಿದರು.

ಸಭೆಯಲ್ಲಿ ಪಾಲ್ಗೊಂಡ ಮುಖಂಡರು ತಮ್ಮ ಸಮುದಾಯಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳನ್ನು ಹೀಗಿವೆ:

  • ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗಳ ಹೊರತಾಗಿಯೂ ನಮ್ಮ ಸಮುದಾಯದ ಬೆರಳೆಣಿಕೆಯ ಜನರು ಮಾತ್ರವೇ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಹಾಗಿದ್ದರೂ  ಭೂತ ಕಟ್ಟುವ ನಮ್ಮ ಸಮುದಾಯದವರು ದೊಡ್ಡ ವ್ಯಕ್ತಿಗಳಿಗೆ ತಲೆಬಾಗುವ ಶೋಷಣೆ ಮಾತ್ರ ಇಂದಿಗೂ ತಪ್ಪಿಲ್ಲ. ನಮ್ಮ ಜನರನ್ನು ಇಂದಿಗೂ ಇತರ ಸಮುದಾಯ ವಕ್ರದೃಷ್ಟಿಯಿಂದಲೇ ನೋಡುತ್ತಿದೆ. – ರತಿ, ಪಂಬದ ಸಮುದಾಯ.
  • ಕೆಳಸ್ತರದ ಜನರಿಗೆ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಜ್ಞಾನ, ಅರಿವನ್ನು ನೀಡಬೇಕಾಗಿದೆ. – ಜಗನ್ನಾಥ, ಪರವ ಸಮುದಾಯ.
  • ಕೊರಗ ಸಮುದಾಯದಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲ. ವರದಕ್ಷಿಣೆ, ವಿಧವೆ ಎಂಬ ಸಮಸ್ಯೆಗಳ ಜಂಜಾಟವಿಲ್ಲ. ಸಮುದಾಯದಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಇಂತಹ ಸಂದರ್ಭ ಸಮುದಾಯವು ಮುಖ್ಯವಾಹಿನಿಗೆ ಸೇರಬೇಕೆನ್ನುವ ಕರೆಯು ಆತಂಕ ಸೃಷ್ಟಿಸುತ್ತಿದೆ. ಸಮುದಾಯವು ಪ್ರಾಕೃತಿಕವಾಗಿ ಬದುಕಲು ಅನುಗುಣವಾದ ವ್ಯವಸ್ಥೆ ಆಗಬೇಕಿದೆ. – ಮತ್ತಡಿ, ಕೊರಗ ಸಮುದಾಯ.
  • ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಜಾಗ ಹಲವಾರು ವರ್ಷಗಳ ಹೋರಾಟದ ಬಳಿಕವೂ ತೆರವುಗೊಳಿಸಲಾಗಿಲ್ಲ. – ಎಸ್.ಪಿ. ಆನಂದ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮುದಾಯ ಬಹಳಷ್ಟು ಹಿಂದುಳಿದಿದೆ. ನಮ್ಮ ಸಮುದಾಯಕ್ಕೆ ಇನ್ನೂ ಜಾತಿ ಸರ್ಟಿಫಿಕೆಟ್ ಸಿಕ್ಕಿಲ್ಲ. – ಎಂ. ದುಶ್ಯಂತ, ಹಂಡಿ ಜೋಗಿ ಸಮುದಾಯ.
  • 600 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಮುದಾಯದ ಜನರಿಗೆ ಭೂಮಿ, ನಿವೇಶನದ ಹಕ್ಕು ಮಾತ್ರ ಸಿಗುತ್ತಿಲ್ಲ. – ಬಿ.ಕೆ. ಸೇಸಮಪ್ಪ ಬೆದ್ರಕಾಡು, ಬೈರ ಸಮುದಾಯ.
  • ರಾಜ್ಯದಲ್ಲಿ  ನಮ್ಮ ಸಮುದಾಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರ ಸಂಖ್ಯೆ 750 ಆಗಿದ್ದರೂ ಇಂಜಿನಿಯರ್ ಆಗಿರುವುದು ಮಾತ್ರ 53 ಮಂದಿ. – ಪದ್ಮನಾಭ ನರಿಂಗಾನ, ಬಾಕುಡ ಸಮುದಾಯ.
  • ಕಾಡಿನ ಜೀವನವನ್ನು ನಮ್ಮದಾಗಿಸಿಕೊಂಡಿರುವ ನಮ್ಮ ಸಮುದಾಯಕ್ಕೆ ನಕ್ಸಲ್ ವಿರುದ್ಧದ ಕಾರ್ಯಾಚರಣೆಯ ಹೆಸರಿನಲ್ಲಿ ಪೊಲೀಸರ ದೌರ್ಜನ್ಯವೇ ಅಧಿಕ. – ಸುಧಾಕರ, ಮಲೆಕುಡಿಯ ಸಮುದಾಯ.
  • ಮೂಲ ದ್ರಾವಿಡ ಜನಾಂಗವಾದ ನಮ್ಮ ಸಮುದಾಯ ಜಾತಿ ಪಟ್ಟಿಯಲ್ಲಿಯೇ ಇಲ್ಲ. ಇದರಿಂದಾಗಿ ನಾವು ಯಾವುದೇ ರೀತಿಯ ಸರಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. – ಚೆನ್ನಪ್ಪ ಕಕ್ಕೆಪದವು, ಮನ್ಸ ಸಮುದಾಯ.
  • ಉಳುವವನೇ ಹೊಲದೊಡೆಯ ಎಂಬ ಮಾತು  ನಮ್ಮ ಸಮಾಜಕ್ಕಿನ್ನೂ ಅನ್ವಯವಾಗಿಲ್ಲ. ಬದಲಾಗಿ ಈ ಸಮುದಾಯ ಸರಕಾರಿ ಪ್ರಾಯೋಜಿತ ದೌರ್ಜನ್ಯದಿಂದ ನಲುಗುತ್ತಿದೆ. ಅಲೆಮಾರಿ ಜನಾಂಗಗಳ ಬಗ್ಗೆ ಸಮೀಕ್ಷೆ  ನಡೆಸಿ ವ್ಯವಸ್ಥಿತವಾದ ಕಾನೂನು ಜಾರಿಗೊಳಿಸಬೇಕು. – ಭಾನುಚಂದ್ರ ಕೃಷ್ಣಾಪುರ, ಆದಿದ್ರಾವಿಡ ಸಮುದಾಯ.
  • ದ.ಕ. ಜಿಲ್ಲೆಯಲ್ಲಿ ಗೊಡ್ಡ ಸಮುದಾಯದ 152 ಕುಟುಂಬಗಳಿದ್ದು, ಏಳು ಮಂದಿ ಮಾತ್ರವೇ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಉಡುಪಿಯಲ್ಲಿ ನಾಲ್ಕು ಮಂದಿ ಎಲ್‌ಎಲ್‌ಬಿ ಹಾಗೂ ಆರು ಮಂದಿ ಸ್ನಾತಕೋತ್ತರ ಶಿಕ್ಷಣ ಪಡೆದವರು. –  ಕೃಷ್ಣಾನಂದ ಡಿ., ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ).

ಹಾಗೆಯೇ, ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನಾ ವೇದಿಕೆಯ ಡೀಕಯ್ಯ, ದಸಂಸ (ಭೀಮವಾದ) ಮುಖಂಡ ಪಿ. ಕೇಶವ ಹಾಗೂ ಇನ್ನಿತರರು ಸಹ ದಲಿತರ ಸಮಸ್ಯೆ ಮತ್ತು ಜಾತಿಪದ್ದತಿಯ ಬಗ್ಗೆ ಮಾತನಾಡಿದರು.

ಇದಾದ ನಂತರ ಮಾತನಾಡಿದ ಲೇಖಕ ರವಿ ಕೃಷ್ಣಾರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯವನ್ನು ಕಾಡುತ್ತಿರುವ ಭೂಮಿ ಹಕ್ಕು ಸಮಸ್ಯೆಯನ್ನು ವಿವಿಧ ದಲಿತ ಸಮುದಾಯಗಳ ನಾಯಕರು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ “ಚಳವಳಿಗಾರರ ಜವಾಬ್ಧಾರಿಗಳು ಮತ್ತು ಮಾಧ್ಯಮದ ಪಾತ್ರ”ದ ಬಗ್ಗೆ ಮಾತನಾಡಿದ ಅವರು,  ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಅರಣ್ಯ ಭೂಮಿಗಳು ಲಭ್ಯವಿದ್ದು, ಅರ್ಹ ದಲಿತರಿಗೆ ಅವುಗಳನ್ನು ಹಂಚುವಲ್ಲಿ ದಲಿತ ನಾಯಕರು ಪ್ರಮುಖವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು. ಶಿಕ್ಷಣದ ಸಮಸ್ಯೆಯು ಕೂಡಾ ತಳ ಮಟ್ಟದ ಹಲವಾರು ಸಮುದಾಯಗಳನ್ನು ಕಾಡುತ್ತಿದ್ದು, ಶಿಕ್ಷಣವಿಲ್ಲದ, ಉದ್ಯೋಗವಿಲ್ಲದ ದಲಿತ ಸಮುದಾಯಗಳ ವಯಸ್ಕ ಜನರಿಗೆ ದಲಿತ ಮೀಸಲಾತಿಯಿಂದ ಪ್ರಯೋಜನವಾಗದು, ಅಂತಹ ಜನರಿಗೆ ಕೃಷಿ ಭೂಮಿ ಹಂಚಿಕೆಯಿಂದ ಮಾತ್ರ ಸ್ವಾವಲಂಬನೆ ಮತ್ತು ಘನತೆ ದೊರಕಿಸಲು ಸಾಧ್ಯ ಎಂದರು. ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಲು, ಗೌರವ ಪಡೆದುಕೊಳ್ಳಲು ಸಾಧ್ಯ ಎಂಬ ನಿಟ್ಟಿನಲ್ಲಿ ದಲಿತರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಜಾಗೃತವಾಗುವ ಜೊತೆಗೆ ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು ಇಂದಿನ ಅತ್ಯಗತ್ಯ ಎಂದು ರವಿ ಕೃಷ್ಣಾರೆಡ್ಡಿ ಅಭಿಪ್ರಾಯಿಸಿದರು. ಹಾಗೆಯೇ, ದಲಿತ ಸಮುದಾಯಗಳ ಬಗ್ಗೆ ಪ್ರತಿದಿನವೂ ಬೆಳಕು ಚೆಲ್ಲುವಂತಹ ಲೇಖನಗಳನ್ನು ಪ್ರಕಟಿಸುತ್ತ, ಅವರ ಸ್ಥಿತಿಗತಿಗಳ ಬಗ್ಗೆ ಸಮಾಜದ ಜವಾಬ್ದಾರಿಯನ್ನು ನೆನಪಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಬೇಕೆಂದು ವಿನಂತಿಸಿದರು.

“ತಳ ಸಮುದಾಯಗಳ ಇತಿಹಾಸ ಮತ್ತು ಅಭಿವೃದ್ಧಿ ಹಿನ್ನೆಡೆ ಕಾರಣಗಳು” ಎಂಬ ವಿಷಯದಲ್ಲಿ ಮಾತನಾಡಿದ ಮಂಗಳೂರು ವಿವಿಯ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಉದಯ ಬಾರ್ಕೂರು, ತುಳುನಾಡಿನ ಇತಿಹಾಸವನ್ನು ಅವಲೋಕನ ಮಾಡಿದರೆ ಎಲ್ಲಿಯೂ ತಳವರ್ಗದ ಸಮಸ್ಯೆಗಳ ಬಗ್ಗೆ ಕಂಡುಬರುವುದಿಲ್ಲ, ಜೀತ ಪದ್ಧತಿ, ಸಂಸ್ಕೃತಿಯ ಬಗ್ಗೆ ಉಲ್ಲೇಖವೇ ಇಲ್ಲ, ಇದರಿಂದಾಗಿ ತಳಮಟ್ಟದ ಸಮಸ್ಯೆಗಳು ತಳಮಟ್ಟದಲ್ಲಿಯೇ ಉಳಿದು ಹೋಗಿದೆ, ಇದಕ್ಕೆ ಕಾರಣ ತುಳುನಾಡಿನ ಇತಿಹಾಸವನ್ನು ಬರೆದವರಿಗೆ ದಾಖಲೆಗಳನ್ನು ಕಲೆಹಾಕುವ ಮನಸ್ಥಿತಿ ಇಲ್ಲದಿರುವುದು, ಎಂದು ಬೇಸರಿಸಿದರು. ಆದರೆ ತುಳುನಾಡಿನ ಗುಲಾಮಗಿರಿಯ ಕುರಿತು “ಈಸ್ಟ್ ಇಂಡಿಯಾ ಸ್ಲೇವರಿ” ಎಂಬ ಸಂಪುಟದಲ್ಲಿ ಬಹಳಷ್ಟು ದಾಖಲೆ, ಮಾಹಿತಿಗಳಿವೆ. ಆದರೆ ತುಳುನಾಡಿನ ಇತಿಹಾಸಕಾರರು ಅದನ್ನು ತಿರುಚುವ ಅಥವಾ ಮರೆಮಾಚುವ ಕೆಲಸ ಮಾಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದರು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಸೇರಿದಂತೆ ಸಮಾಜವು ತಳ ಸಮುದಾಯಗಳ ಇತಿಹಾಸವನ್ನು ಅಧ್ಯಯನ ಮಾಡುವ ಜೊತೆಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಕೆಲಸವನ್ನು  ಮಾಡಬೇಕಾಗಿದೆ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ದಲಿತರಿಗೆ ಸಿಗಬೇಕಾದ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ಸೇರಿದಂತೆ ಅವರ ಭೂಮಿಯ ಹಕ್ಕನ್ನು ಒದಗಿಸುವ ಬಗ್ಗೆ ನಾಯಕರು ಸೇರಿದಂತೆ ತಳ ಮಟ್ಟದ ಕಾರ್ಯಕರ್ತರಿಂದ ಪ್ರಾಮಾಣಿಕವಾದ ಕೆಲಸ ಆಗಬೇಕು ಎಂದರು.