Monthly Archives: June 2012

ಪಿ. ಮಹಮ್ಮದ್ ಹಾಗೂ ಕನ್ನಡದ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು

ಇದನ್ನು ಬರೆದದ್ದು “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ನನ್ನ “ಅಮೆರಿಕದಿಂದ ರವಿ” ಅಂಕಣಕ್ಕಾಗಿ; ಜೂನ್ 29, 2007 ರ ಸಂಚಿಕೆಯಲ್ಲಿ . ಸರಿಯಾಗಿ ಐದು ವರ್ಷದ ಹಿಂದೆ. ಅಲ್ಲಿಂದೀಚೆಗೆ ಸಾಕಷ್ಟು ಬದಲಾವಣೆ ಆಗಿದೆ. ಪ್ರಮುಖವಾಗಿ ಬದಲಾವಣೆ ಆಗದ್ದು ಏನೆಂದರೆ ಪಿ. ಮಹಮ್ಮದ್ ಮತ್ತು ಕನ್ನಡದ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳ ಬಗೆಗಿನ ನನ್ನ ಅಭಿಪ್ರಾಯ. ಆಗ ನನ್ನ ಮನಸ್ಸಿನಲ್ಲಿದ್ದ ಹಲವು ಟ್ಯಾಬ್ಲಾಯ್ಡ್ ದಿನಪತ್ರಿಕೆಗಳಲ್ಲಿ ಒಂದು ದಿನಪತ್ರಿಕೆ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಸುಧಾರಿಸಿದೆ. ನಮಗೀಗ ಪ್ರಜಾವಾಣಿಯೂ ಬೇಕು, ಮತ್ತು ಪ್ರಜಾವಾಣಿಗೆ ಅದರದೇ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪೈಪೋಟಿ ಕೊಡುವ ಇನ್ನೊಂದು ಜನಪರ ಪತ್ರಿಕೆಯೂ ಬೇಕು. ಆ ಪೈಪೋಟಿ ಖಂಡಿತವಾಗಿ ಆ ಪತ್ರಿಕೆಗಳು ಸಾಕಷ್ಟು ಜನಪರ ವಿಚಾರಗಳನ್ನು ಮತು ಅಧಿಕಾರಸ್ಥರ ಭ್ರಷ್ಟಾಚಾರವನ್ನು ಜನರ ಮುಂದೆ ಇಡಲು ಸಹಕಾರಿಯಾಗುತ್ತದೆ ಮತ್ತು ಆ ಮೂಲಕ ಅವೂ ಸಹ ಸಧೃಢವಾಗುತ್ತವೆ ಎನ್ನುವ ವಿಶ್ವಾಸ ನನ್ನದು. ಅಂತಹುದೊಂದು ಆರೋಗ್ಯಕರ ಪೈಪೋಟಿ ಈಗ ಕನ್ನಡದಲ್ಲಿ ಆರಂಭವಾಗಿದೆ ಎನ್ನಿಸುತ್ತದೆ. ಮುಖ್ಯವಾಗಿ ಈ ಪತ್ರಿಕೆಗಳ ಸಂಪಾದರು ಮತ್ತು ಸಂಪಾದಕೀಯ ಮಂಡಳಿಗಳು ನೇರವಾಗಿ, ಧೈರ್ಯದಿಂದ, ರಾಜಿಯಾಗದ ಪ್ರಾಮಾಣಿಕತೆಯಿಂದ, ಮತ್ತು ಸ್ವತಂತ್ರ ವೃತ್ತಿಧರ್ಮದ ಸ್ಪಿರಿಟ್‌ನಿಂದ ಮುಂದುವರೆದರೆ ಅದು ಸಾಧ್ಯವಾಗಲಿದೆ. ಸದ್ಯದ ವರ್ತಮಾನವಂತೂ ಅಂತಹ ಪ್ರಾಮಾಣಿಕ ಪ್ರಯತ್ನಗಳಿಗೆ ಕಾಯುತ್ತಿದೆ ಮತ್ತು ಪ್ರಶಸ್ತವಾಗಿದೆ. ಕಾದು ನೋಡೋಣ.

ಮಹಮ್ಮದ್‌ರು ಪ್ರಜಾವಾಣಿಯಿಂದ ಹೊರನಡೆಯುತ್ತಿರುವ ಈ ಸಂದರ್ಭದಲ್ಲಿ ಅವರಿಗೆ, ಇಷ್ಟು ದಿನಗಳ ಕಾಲ ಅವರಿಗೆ ವೇದಿಕೆ ಕೊಟ್ಟ ಪ್ರಜಾವಾಣಿಗೆ, ಮತ್ತು ಮಹಮ್ಮದ್‌ರ ಮುಂದಿನ ನಿಲ್ದಾಣದ ಪತ್ರಿಕೆಗೂ, ಒಳ್ಳೆಯದನ್ನು ಆಶಿಸುತ್ತೇನೆ. ಇವರ ಯಶಸ್ಸಿನಲ್ಲಿ ನಮ್ಮ ಸಮಾಜದ ಸ್ವಾಸ್ಥ್ಯವೂ ಇದೆ.

– ರವಿ ಕೃಷ್ಣಾರೆಡ್ಡಿ


ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 29, 2007 ರ ಸಂಚಿಕೆಯಲ್ಲಿನ  “ಅಮೆರಿಕದಿಂದ ರವಿ” ಅಂಕಣದ ಲೇಖನ)

ಕಳೆದ ಮೂರು ವರ್ಷಗಳಿಂದ ಆತ್ಮೀಯ ಸ್ನೇಹಿತರಲ್ಲೊಬ್ಬರಾಗಿದ್ದ, ಕನ್ನಡ, ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದ, ತಂತ್ರಜ್ಞಾನ ಕ್ಷೇತ್ರದಲ್ಲಿ ಪೇಟೆಂಟ್‌ಗಳನ್ನೂ ಗಳಿಸಿ ನಮ್ಮ ನಡುವೆಯ ಮೇಧಾವಿ ಎನಿಸಿದ್ದ ಆಪ್ತ ಸ್ನೇಹಿತ ಸ್ವಾಮಿ ಇದೇ ತಿಂಗಳು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.

ಜನಾರ್ಧನ ಸ್ವಾಮಿ ನನ್ನ ಹಾಗೆಯೆ ಹಳ್ಳಿಯಿಂದ ಬಂದವರು. ದಾವಣಗೆರೆಯ ಹತ್ತಿರದ ಹಳ್ಳಿ ಅವರದು. ಹತ್ತನೆ ತರಗತಿಯ ತನಕ ಓದಿದ್ದೆಲ್ಲ ಹಳ್ಳಿಯಲ್ಲಿಯೆ. ದಾವಣಗೆರೆಯ BDT ಯಲ್ಲಿ B.E. ಮಾಡಿ, ಬೆಂಗಳೂರಿನ IISc ಯಲ್ಲಿ MTech ಮಾಡಿ, ಸುಮಾರು ಹತ್ತು ವರ್ಷಗಳ ಹಿಂದೆ ಅಮೇರಿಕಕ್ಕೆ ಬಂದು Sun Microsystems ನಲ್ಲಿ cutting-edge technology ಯ ಮೇಲೆ ಇಲ್ಲಿಯ ತನಕ ಕೆಲಸ ಮಾಡುತ್ತಿದ್ದವರು. ನಾಲ್ಕೈದು ವರ್ಷಗಳ ಹಿಂದೆ ಚಿಪ್ ಡಿಸೈನ್‌ನಲ್ಲಿ ಪೇಟೆಂಟ್ ಸಹ ಪಡೆದಿದ್ದಾರೆ. ಇಂತಹ ಸ್ವಾಮಿ ಕನ್ನಡ ಮೀಡಿಯಮ್ SSLC ಯಲ್ಲಿ ಪಾಸಾಗಿದ್ದು ಮಾತ್ರ ಸೆಕೆಂಡ್ ಕ್ಲಾಸ್‌ನಲ್ಲಿ ಎಂದರೆ ಯಾರಿಗೇ ಆಗಲಿ ಆಶ್ಚರ್ಯವಾಗದೇ ಇರದು! ಇನ್ನೂ ಆಶ್ಚರ್ಯವೆಂದರೆ, ಆ ಹಳ್ಳಿಯ ಶಾಲೆಯಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದ ಇವರೇ ಟಾಪ್ ಸ್ಕೋರರ್!

ಇಲ್ಲಿನ ಸಿಲಿಕಾನ್ ಕಾಣಿವೆಯಲ್ಲಿ ಸ್ವಾಮಿಯವರ ತರಹವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಧಾವಿಗಳಾಗಿರುವ ಅನೇಕ ಭಾರತೀಯರಿದ್ದಾರೆ. ಅದೇನೂ ಅಂತಹ ದೊಡ್ಡ ವಿಷಯವಲ್ಲ. ಆದರೆ ಸ್ವಾಮಿಯಂತಹ ಒಬ್ಬ  ಉತ್ತಮ ವ್ಯಂಗಚಿತ್ರಕಾರ, ಅಷ್ಟೇ ಉತ್ತಮ ಕಂಪ್ಯೂಟರ್ ಗ್ರಾಫ಼ಿಕ್ಸ್ ಡಿಸೈನರ್, ರೈತರಿಗೆ ಯಾವ ಯಾವ ಸಾಧನ-ಸಲಕರಣೆ ಮಾಡಿದರೆ ಅವರ ದೈನಂದಿನ ಜೀವನ ಉತ್ತಮಗೊಳ್ಳುತ್ತದೆ, ಅವರ ಪ್ರೊಡಕ್ಟಿವಿಟಿ ಹೆಚ್ಚುತ್ತದೆ ಎಂದು ಆಲೋಚಿಸುವ ಕನ್ನಡ ಇಂಜಿನಿಯರ್ ವಿರಳಾತಿ ವಿರಳ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೆ ಅಲ್ಲಿನ ಸ್ಥಳೀಯ ಕನ್ನಡ ಪತ್ರಿಕೆಗಳಿಗೆ ಸ್ವಾಮಿ ಕಾರ್ಟೂನ್ ಬರೆಯುತ್ತಿದ್ದರು. ಅದೇ ಸಮಯದಲ್ಲಿ “Electronics For You” ಯಂತಹ ಟೆಕ್ನಾಲಜಿ ಸಂಬಂಧಿತ ಮ್ಯಾಗಜ಼ೈನ್‌ಗಳಿಗೂ ಇಂಗ್ಲಿಷ್‌ನಲ್ಲಿ ಕಾರ್ಟೂನ್ ಬರೆಯುತ್ತಿದ್ದರು. ಅವರೇ ಹೇಳುವ ಪ್ರಕಾರ, ಒಮ್ಮೊಮ್ಮೆ ಅವರ ಇಂಜಿನಿಯರಿಂಗ್ ಕಾಲೇಜಿನ ಲೆಕ್ಚರರ್‌ಗಳು ಗಳಿಸುತ್ತಿದ್ದಕ್ಕಿಂತ ಹೆಚ್ಚಿನ ದುಡ್ಡು ಈ ಕಾರ್ಟೂನ್ ಬರೆಯುವುದರಿಂದಲೆ ಇವರಿಗೆ ಬರುತ್ತಿತ್ತಂತೆ. ಈ ಮಧ್ಯೆ ಅವರ ವ್ಯಂಗ್ಯಚಿತ್ರ ಬರವಣಿಗೆ ಕಮ್ಮಿಯಾಗಿದೆಯಾದರೂ, ಪೂರ್ಣವಾಗಿ ನಿಂತಿಲ್ಲ. ಅವರ ವೆಬ್‌ಸೈಟ್ www.jswamy.com ನಲ್ಲಿ ಅವರ ನೂರಾರು ಕನ್ನಡ ಮತ್ತು ಇಂಗ್ಲಿಷ್ ಕಾರ್ಟೂನ್‌ಗಳಿವೆ.

ಈ ಸ್ವಾಮಿಯ ಜೊತೆಗೂಡಿ ಒಂದು ವರ್ಷಪೂರ್ತಿ ಕೆಲಸ ಮಾಡಿದ ಹೆಮ್ಮೆ ನನ್ನದು. ಅಮೇರಿಕಾದಲ್ಲಿಯ ದೊಡ್ಡ ಕನ್ನಡ ಕೂಟಗಳಲ್ಲಿ ಒಂದಾದ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟಕ್ಕೆ 2005 ರಲ್ಲಿ ನಾನು ಅಧ್ಯಕ್ಷನಾಗಿದ್ದೆ. ಸ್ವಾಮಿ ಉಪಾಧ್ಯಕ್ಷರಾಗಿದ್ದರು. ಅದರ ಜೊತೆಗೆ ಸಂಘದ ಆ ವರ್ಷದ ಸಾಹಿತ್ಯಕ ಸಂಚಿಕೆಯ ಮುಖ್ಯಸಂಪಾದಕರೂ ಅವರೆ. ಅವರ ಸಂಪಾದಕತ್ವದ ಸಮಿತಿಯಲ್ಲಿ ನಾನು ಉಪಸಂಪಾದಕ. ಆ ಸಮಯದಲ್ಲಿ ನಾನು ಅವರಿಂದ ಕಲಿತದ್ದು ಅಪಾರ. ಇಲ್ಲಿಯ ಕನ್ನಡದ ಕೆಲಸಕ್ಕೆ ಅನೇಕ ಹಗಲು-ರಾತ್ರಿಗಳನ್ನು ಅವರು ಕಂಪ್ಯೂಟರ್ ಮುಂದೆ ಕಳೆದಿದ್ದಾರೆ. ಅದೇ ರೀತಿ, ಅಕ್ಕ ವಿಶ್ವಕನ್ನಡ ಸಮ್ಮೇಳನದ ಬಹುಪಾಲು ಸ್ಮರಣ ಸಂಚಿಕೆಗಳ ಮುಖಪುಟ ವಿನ್ಯಾಸವೂ ಸ್ವಾಮಿಯವರದೆ.

ಎಮ್ಮೆ ಮೇಯಿಸುತ್ತ ಹಳ್ಳಿಯಲ್ಲಿ ಬೆಳೆದ ಸ್ವಾಮಿಯವರು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದಾಗ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹೇಗೆ ಎಂಬ ವಿಷಯಕ್ಕೆ ಯಡಿಯೂರಪ್ಪನವರ ಜೊತೆಯೆಲ್ಲ ಮಾತನಾಡಿದರು. ಆದರೆ ಶಕ್ತಿರಾಜಕಾರಣದಲ್ಲಿ ಮುಳುಗಿ ಹೋದ ನಮ್ಮ ಸ್ವಾರ್ಥಿ ರಾಜಕಾರಣಿಗಳಿಗೆ ಇವರ ಭಾಷೆ ಅರ್ಥವಾಗುತ್ತದೆಯೆ ಎನ್ನುವ ಸಂಶಯ ನನ್ನದು. ಊರಿನಿಂದ ಇಷ್ಟು ದಿನ ದೂರವಿದ್ದ ಸ್ವಾಮಿ ಅಲ್ಲಿ ಏನೇನು ಮಾಡಬಹುದು ಎನ್ನುವ ಥಿಯರಿ ಪ್ರಪಂಚದಲ್ಲಿ ಮುಳುಗಿ ಬಿಟ್ಟಿದ್ದರು. ಈಗ ಅವರ ಥಿಯರಿಗಳನ್ನೆಲ್ಲ ಪ್ರಾಕ್ಟಿಕಲ್ಸ್‌ಗೆ ಪರಿವರ್ತಿಸುವ ಸಮಯ ಬಂದಿದೆ. ಅವರ ಪ್ರಾಕ್ಟಿಕಲ್ಸ್ ಯಶಸ್ವಿಯಾಗಲಿ ಎಂದು ಹಾರೈಸೋಣ. ಯಾಕೆಂದರೆ, ಅವರ ಸಾಧನೆಯಲ್ಲಿ ಸಮಾಜದ ಹಿತವೂ ಇರುತ್ತದೆ ಎನ್ನುವ ನಂಬಿಕೆ ನನ್ನದು.

ಭಾರತದ ಕಾರ್ಟೂನಿಸ್ಟ್‌ಗಳಲ್ಲಿ ಸ್ವಾಮಿಯವರಿಗೆ ಅತಿ ಹೆಚ್ಚು ಇಷ್ಟವಾದವರು ಆರ್.ಕೆ. ಲಕ್ಷಣ್ ಎಂದು ಹೇಳಲು ಅಷ್ಟೇನೂ ಊಹಿಸಬೇಕಿಲ್ಲ. ಕನ್ನಡದ ಕಾರ್ಟೂನಿಸ್ಟ್‌ಗಳಲ್ಲಿ ಅವರಿಗೆ ಹೆಚ್ಚು ಇಷ್ಟವಾದವರು ಪ್ರಜಾವಾಣಿಯ ಪಿ. ಮಹಮ್ಮದ್. ಸ್ವಾಮಿಯವರಿಗೇ ಏನು, ಬಹುಶಃ ಇವತ್ತು ಕರ್ನಾಟಕದ ಪ್ರಜ್ಞಾವಂತರ ಮೆಚ್ಚಿನ ಕಾರ್ಟೂನಿಸ್ಟ್ ಪಿ.ಮಹಮ್ಮದ್ದೆ. ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡಾಗಿನಿಂದ ‘ಮಹಮ್ಮದ್‌ರ ಇವತ್ತಿನ ಕಾರ್ಟೂನ್ ನೋಡಿದಿರ?’ ಎಂದು ಅನೇಕರು ಅನೇಕ ಸಲ ನನಗೆ ಕೇಳಿದ್ದಾರೆ, ಅನೇಕ ಸಲ ನಾನೆ ಇತರರನ್ನು ಕೇಳಿದ್ದೇನೆ. ಪ್ರಸ್ತುತ ವಿಷಯಗಳ ಬಗ್ಗೆ ಅಷ್ಟು ಪರಿಣಾಮಕಾರಿಯಾಗಿ, ಕಲಾತ್ಮಕತೆಯಿಂದ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ. ಆ ವಿಷಯಕ್ಕೆ ಬಂದರೆ, ಸ್ಟಾರ್ ವ್ಯಾಲ್ಯೂ ಇರುವ ಮೊದಲ ಕನ್ನಡ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್.

ಪಿ. ಮಹಮ್ಮದ್ ಪ್ರಜಾವಾಣಿ ಬಿಟ್ಟು ಕನ್ನಡದ ಇನ್ಯಾವ ಪತ್ರಿಕೆಗೆ ಬರೆದಿದ್ದರೂ ನನಗೆ ಅವರ ಬಗ್ಗೆ ಇಷ್ಟು ಹೆಮ್ಮೆ ಅನ್ನಿಸುತ್ತಿರಲಿಲ್ಲ ಎನ್ನಿಸುತ್ತದೆ. ಬೇರೆ ಇನ್ಯಾವ ಪತ್ರಿಕೆಗೆ ಅವರು ಬರೆದರೂ ಆ ಪತ್ರಿಕೆಗಳ ಧ್ಯೇಯಧೋರಣೆಗಳೆ ಬೇರೆ ಇರುವುದರಿಂದ ಅವರು ಇಷ್ಟು ಮುಕ್ತವಾಗಿ, ಪರಿಣಾಮಕಾರಿಯಾಗಿ ಬರೆಯಲೂ ಸಾಧ್ಯವಿಲ್ಲ ಎನ್ನಿಸುತ್ತದೆ. ಇವತ್ತಿನ ಕನ್ನಡ ದಿನಪತ್ರಿಕೆಗಳಲ್ಲಿ ಬಹುಜನರ ಹಿತ ಬಯಸುವ ಪತ್ರಿಕೆ ಅಂದರೆ ಅದು ಪ್ರಜಾವಾಣಿಯೆ. ಯಾವುದೆ ಒಂದು ವಿಷಯದ ಬಗ್ಗೆ ಎರಡೂ ಕಡೆಯವರಿಗೂ ತಮ್ಮ ವಾದ ಮಂಡಿಸಲು ವೇದಿಕೆ ನಿಡುತ್ತಿರುವ ಪತ್ರಿಕೆಯೂ ಅದೆ. ಮಿಕ್ಕವು ಟ್ಯಾಬ್ಲಾಯ್ಡ್ ಹೆಡ್ಡಿಂಗುಗಳ, ಹಿಂಸಾವಿನೋದಿ, ಪಿತೂರಿಕೋರ, ಸೀಮಿತವರ್ಗವನ್ನು ಓಲೈಸುತ್ತ, ಅವರ ಅಹಂ ಅನ್ನು ತಣಿಸುತ್ತಿರುವ ಪತ್ರಿಕೆಗಳು.

ಇದೇ ಸಂಚಿಕೆಯಲ್ಲಿನ ತಮ್ಮ ಅಂಕಣದಲ್ಲಿ (ಪುಟ 21) ಅರವಿಂದ ಚೊಕ್ಕಾಡಿಯವರು ಹೀಗೆ ಬರೆಯುತ್ತಾರೆ:

“ನಮ್ಮ ಪತ್ರಿಕಾರಂಗ ಮೂರು ಅತಿರೇಕಗಳಲ್ಲಿದೆ. ಒಂದು ವರ್ಗ ಮತಾಂಧತೆಯನ್ನು ಪ್ರಚಾರ ಮಾಡುವುದನ್ನೇ ಪತ್ರಿಕೆಗಳ ಪವಿತ್ರ ಕರ್ತವ್ಯವನ್ನಾಗಿ ಮಾಡಿಕೊಂಡಿದೆ. ಇನ್ನೊಂದು ವರ್ಗ ಇನ್ಫೋಸಿಸ್ ನಾರಾಯಣ ಮೂರ್ತಿ, ಬಯೋಕಾನ್ ಕಿರಣ್ ಮಜುಮ್‌ದಾರ್‌ಗಳನ್ನು ರಾಮದಾಸ್‌ರಂತವರ ಸ್ಥಾನಕ್ಕೆ ತಂದು ಕೂರಿಸುವ ಪವಿತ್ರ ಕಾರ್ಯದಲ್ಲಿ ನಿರತವಾಗಿದೆ. ಮತ್ತೊಂದು ವರ್ಗಕ್ಕೆ ಸೆಕ್ಸ್-ಕ್ರೈಂ ವಿಜೃಂಭಣೆ ಮತ್ತು ಗಂಭೀರವಾದದ್ದನ್ನೆಲ್ಲ ಲಘುವಾಗಿ ಮಾಡುವುದೇ ಪತ್ರಕರ್ತನ ಕಾರ್ಯವಾಗಿದೆ. ಒಂದು ಪತ್ರಿಕೆ ಒಬ್ಬ ಸಾಹಿತಿಯ ತೇಜೋವಧೆ ಮಾಡುವ ಏಕೈಕ ಉದ್ದೇಶದಿಂದ ಕಾರ್ಯಪ್ರವೃತ್ತವಾಗುವ ನೀಚತನವನ್ನು ಪ್ರದರ್ಶಿಸುವ ಸಂದರ್ಭದಲ್ಲೇ…”

ಇಂತಹ ಸಂದರ್ಭದಲ್ಲಿ ದಿನಪತ್ರಿಕೆಗಳ ವಲಯದಲ್ಲಿ ಉಳಿದಿರುವ ಏಕೈಕ ಆಶಾಕಿರಣ ಎಂದರೆ ಅದು ಪ್ರಜಾವಾಣಿಯೆ.

ನಮ್ಮ ಪತ್ರಿಕೆ ಪ್ರಾರಂಭವಾಗುವುದಕ್ಕಿಂತ ಮುಂಚೆ ನಮ್ಮ ಪ್ರಕಾಶನದಿಂದ ಬೆಂಗಳೂರಿನಲ್ಲಿ ಒಂದು ಸಂವಾದ ಏರ್ಪಡಿಸಿದ್ದೆವು. ಅಂದಿನ ಸಂವಾದದಲ್ಲಿ ಕನ್ನಡಪ್ರಭದ ಸತ್ಯನಾರಾಯಣ, ಉದಯವಾಣಿಯ ಆರ್. ಪೂರ್ಣಿಮ, ಉಷಾಕಿರಣದ ವೆಂಕಟನಾರಾಯಣ, ಪ್ರಜಾವಾಣಿಯ ಪದ್ಮರಾಜ ದಂಡಾವತಿಯವರು “ಸಮಕಾಲೀನ ರಾಜಕೀಯ ಮತ್ತು ಕನ್ನಡ ಪತ್ರಿಕೋದ್ಯಮದ” ಬಗ್ಗೆ ಮಾತನಾಡಿದ್ದರು. ಆ ಸಂವಾದಕ್ಕೆ ಪ್ರಜಾವಾಣಿಯ ಅಂದಿನ ಸಂಪಾದಕರಾದ ಕೆ.ಎನ್. ಶಾಂತಕುಮಾರ್‌ರವರನ್ನು ಆಹ್ವಾನಿಸಲು ಹಿರಿಯ ಪತ್ರಕರ್ತ ಜಯರಾಮ ಅಡಿಗರೊಂದಿಗೆ ಹೋಗಿದ್ದೆ. ಕರ್ನಾಟಕದ ಪ್ರಜೆಯಾಗಿ, ಒಬ್ಬ ಓದುಗನಾಗಿ ಅವರನ್ನು ಅಂದು ನಾನು ಕೇಳಿಕೊಂಡದ್ದು ಇಷ್ಟೆ: “ಸಾರ್, ದಯವಿಟ್ಟು ಯಾವುದೇ ಕಾರಣಕ್ಕೂ ಪ್ರಜಾವಾಣಿಯ ಪ್ರಭಾವ ಕ್ಷೀಣಿಸದಂತೆ ನೋಡಿಕೊಳ್ಳಿ. ಇವತ್ತಿನ ದಿನ ಕರ್ನಾಟಕದ ಸಾಮಾಜಿಕ ಸಾಮರಸ್ಯಕ್ಕೆ, ಬಹುಜನರ ಹಿತಕ್ಕೆ ಪ್ರಜಾವಾಣಿ ಎಲ್ಲರಿಗಿಂತಲೂ ಮೇಲಿರಬೇಕು; ಅದು ಎಂದಿಗೂ ಸೋಲಬಾರದು.” ಬಹುಶಃ ಅದು ನನ್ನೊಬ್ಬನದೆ ಆಗ್ರಹವಲ್ಲ, ಕನ್ನಡದ ಬಹುಪಾಲು ಪ್ರಜ್ಞಾವಂತರದೂ ಹೌದು.

ಕಳೆದ ಐದಾರು ತಿಂಗಳುಗಳಿಂದ ಎಸ್.ಎಲ್. ಭೈರಪ್ಪನವರ “ಆವರಣ” ಕಾದಂಬರಿಯ ಪರವಾಗಿ ಕೆಲವು ಕನ್ನಡ ಪತ್ರಿಕೆಗಳು ಮಾಡುತ್ತಿರುವ ಪ್ರಚೋದನೆಗಳು, ಪಿತೂರಿಗಳು, ಬಡಿದೆಬ್ಬಿಸುತ್ತಿರುವ ಭೂತಗಳು ಸುಸ್ಪಷ್ಟವಾಗಿದೆ. ಆವರಣ ಬಿಡುಗಡೆಯಾದ ತಕ್ಷಣ ಬ್ಯಾನ್ ಮಾಡಿಬಿಡುತ್ತಾರೆ, ಎಂಬಂತಹ ಸುದ್ದಿಗಳಿಂದ ಆರಂಭಿಸಿ, ಮೊದಲಿನಿಂದಲೂ ಬಹಳ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ, ಲೆಕ್ಕಾಚಾರವಾಗಿ ಮಾಡುತ್ತ ಬಂದಿದ್ದಾರೆ. ಉದಾರವಾದಿ, ಜನತಾಂತ್ರಿಕ ಮೌಲ್ಯಗಳನ್ನು ಗೌರವಿಸುವ, ಆಧುನಿಕ ಮನೋಭಾವದ ಕನ್ನಡಿಗರೇ ಇಲ್ಲ, ಎಲ್ಲರೂ ತಮ್ಮಂತೆಯೆ ಕೋಮುವಾದಿಗಳು ಎನ್ನುವಂತೆ ಬಿಂಬಿಸುತ್ತಿದ್ದಾರೆ. ಕಾಲಕ್ರಮೇಣ ತಮ್ಮೆಲ್ಲ ಭವಿಷ್ಯ, ಜ್ಯೋತಿಷ್ಯಗಳು ಸುಳ್ಳಾಗುತ್ತಿದ್ದಂತೆ ಹುತಾತ್ಮರಾಗಬೇಕೆಂದು ಬಯಸಿದ್ದ ಈ ಜನರು ಹತಾಶರಾಗಿ ಓಡಾಡುತ್ತಿದ್ದಾಗ ಕೆಲವು ಹಿರಿಯರು ವ್ಯವಸ್ಥಿತ ಪಿತೂರಿಗೆ ಬಲಿಯಾಗಿಬಿಟ್ಟು, ಇತ್ತೀಚೆಗೆ ತಾನೆ ಆ ಪುಣ್ಯಾತ್ಮರಿಗೆ ಒಂದಷ್ಟು ಗಂಗಾಜಲ ಕರುಣಿಸಿಬಿಟ್ಟರು.

ಅಂದ ಹಾಗೆ, ಈ ಸ್ವಘೋಷಿತ ಸತ್ಯ ಮತ್ತು ಸೌಂದರ್ಯೋಪಾಸಕರು ಭಾರತದ ಇತಿಹಾಸ ಪುಸ್ತಕಗಳು ಸುಳ್ಳು ಹೇಳುತ್ತವೆ ಎಂದು ಘೋಷಿಸುತ್ತಿದ್ದಾರಲ್ಲ, ಹೌದೆ? ನಾನು ಏಳನೆ ತರಗತಿಯ ತನಕ ಓದಿದ್ದು ನನ್ನ ಹಳ್ಳಿಯ ಸರ್ಕಾರಿ ಶಾಲೆಯ ಕನ್ನಡ ಮೀಡಿಯಮ್‌ನಲ್ಲಿ. ಹೈಸ್ಕೂಲ್‌ನಲ್ಲಿ ಓದಿದ್ದೂ ಕರ್ನಾಟಕ ಸರ್ಕಾರ ಸಿದ್ದಪಡಿಸಿದ್ದ ಸಿಲಬಸ್ ಅನ್ನೆ. ನಾನು ಓದಿದ ಯಾವುದೆ ಸಮಾಜ ಶಾಸ್ತ್ರದ ಪುಸ್ತಕದಲ್ಲಿ ಔರಂಗಜೇಬ ಪರಮತ ಸಹಿಷ್ಣು ಎಂದು ಇರಲಿಲ್ಲ. ಒಳ್ಳೆಯ ರಾಜ ಎಂದೂ ಇರಲಿಲ್ಲ. ಅವನ ಆಳ್ವಿಕೆಯಲ್ಲಿ ಹಿಂದೂಗಳಿಗೆ ಜೆಸ್ಸಿಯಾ ಅಂದರೆ ತಲೆಗಂದಾಯ ಇರಲಿಲ್ಲ ಎಂದೂ ಇರಲಿಲ್ಲ. ಖಿಲ್ಜಿಯ ದಂಡಯಾತ್ರೆಗಳ ಬಗ್ಗೆಯಾಗಲಿ, ವಿಗ್ರಹಾರಾಧನೆ ಕೂಡದೆಂದು ಮಲ್ಲಿಕ್ ಕಾಫರ್ ಮತ್ತು ಇತರ ಕೆಲವು ಮುಸ್ಲಿಮ್ ರಾಜರು ದೇವಾಲಯಗಳಲ್ಲಿ ವಿಗ್ರಹಗಳನ್ನು ಭಗ್ನಗೊಳಿಸಿದ ಬಗ್ಗೆಯಾಗಲಿ, ತುಘಲಕ್‌ನ ತಿಕ್ಕಲುತನಗಳಾಗಲಿ, ಮುಸ್ಲಿಮ್ ಅರಸರ ಆಟಾಟೋಪಕ್ಕೆ ವಿರುದ್ಧವಾಗಿಯೆ ಮೇಲೆದ್ದ ವಿಜಯನಗರ ಸಾಮ್ರಾಜ್ಯ, ಮರಾಠರ ಶಿವಾಜಿಯ ಬಗ್ಗೆಯಾಗಲಿ ಎಲ್ಲೂ ಮುಚ್ಚಿಟ್ಟಿರಲಿಲ್ಲ. ಇವನ್ನೆಲ್ಲ ಮುಚ್ಚಿಟ್ಟಿದ್ದಾರೆ ಎಂದು ಈ ನವಸತ್ಯಾಗ್ರಹಿಗಳು ಹುಯಿಲಿಡುತ್ತಿದ್ದಾರಲ್ಲ, ಯಾವ ದೇಶದ ಪಠ್ಯಪುಸ್ತಕದಲ್ಲಿ, ಸ್ವಾಮಿ?

ನನ್ನ ಮತವೇ ಶ್ರೇಷ್ಠ, ಎಲ್ಲಾ ಪರಮತಗಳೂ ಕೆಟ್ಟವು ಎನ್ನುವ ಮತಾಂಧರು ಜಾತಿವಾದಿಗಳೂ ಆಗಿರುತ್ತಾರೆ ಎನ್ನಲು ಈಗ ಚಲಾವಣೆಯಲ್ಲಿರುವ ಕೆಲವು ಸಾಹಿತಿಗಳೆ ಉದಾಹರಣೆ. ಮೂರು ತಿಂಗಳ ಹಿಂದೆ ಮೈಸೂರಿನಲ್ಲಿದ್ದಾಗ ಅಲ್ಲಿನ ಪರಿಚಿತರೊಬ್ಬರು ಒಂದು ವಿಷಯ ಹೇಳಿದರು. “ಹಿಂದೂಗಳೆಲ್ಲ ತಮ್ಮ ತಪ್ಪುಗಳನ್ನು ತಿದ್ದಿಕೊಂಡುಬಿಟ್ಟಿದ್ದಾರೆ, ಮುಸ್ಲಿಮರು ತಿದ್ದಿಕೊಳ್ಳುತ್ತಿಲ್ಲ, ಅವರನ್ನು ತಿದ್ದಬೇಕು,” ಎಂದು ಹೇಳುತ್ತಿರುವ ಸಾಹಿತಿಯೊಬ್ಬರು ಅವರ ಜಾತಿಯ ಸಂಘದಲ್ಲಿ ಬಹಳ ಸಕ್ರಿಯವಾಗಿ ಇದ್ದಾರಂತೆ. ಕ್ಷಮಿಸಿ, ಜಾತಿಯದೂ ಅಲ್ಲ, ಜಾತಿಯಲ್ಲಿನ ಒಳಪಂಗಡದ ಸಂಸ್ಥೆ ಅದು. ಕರ್ನಾಟಕದ ಜಾತಿ ವ್ಯವಸ್ಥೆ ಗೊತ್ತಿರುವವರಿಗೆ ಜಾತಿಗಳಲ್ಲಿನ ಒಳಪಂಗಡಗಳ ಬಗ್ಗೆಯೂ ಗೊತ್ತಿರುತ್ತದೆ. ಲಿಂಗಾಯತರಲ್ಲಿ ಸಾದರ, ಬಣಜಿಗ, ಪಂಚಮಸಾಲಿ ಎಂದು ಇತ್ಯಾದಿ ಒಳಪಂಗಡಗಳಿದ್ದರೆ, ಕರ್ನಾಟಕದ ಬ್ರಾಹ್ಮಣರಲ್ಲಿ ಸ್ಮಾರ್ಥ, ಮಾಧ್ವ, ಶ್ರೀವೈಷ್ಣವ ಪಂಗಡಗಳಿವೆ. ಹಾಗೆಯೆ ಒಕ್ಕಲಿಗರಲ್ಲಿ ಕುಂಚಟಿಗ, ನಾಮಧಾರಿ, ದಾಸ, ಮರಸು, ಇತ್ಯಾದಿ. ಎಷ್ಟೋ ಸಲ ಈ ಒಳಪಂಗಡಗಳಲ್ಲಿ ಒಳಪಂಗಡಗಳಿವೆ. ಉದಾಹರಣೆಗೆ ಕರ್ನಾಟಕದ ಸ್ಮಾರ್ಥರಲ್ಲಿ ಹವ್ಯಕ, ಹೊಯ್ಸಳ ಕರ್ನಾಟಕ, ಬಬ್ಬೂರು ಕಮ್ಮೆ, ಸಂಕೇತಿ, ಕೋಟ, ಇತ್ಯಾದಿಯಾಗಿ ಮತ್ತೊಂದಷ್ಟಿವೆ. ಇಂತಹ ಒಳಪಂಗಡದಲ್ಲೊಂದು ಒಳಪಂಗಡದ ಜಾತಿ ಸಂಘದಲ್ಲಿ ಈ ಮಾನ್ಯರು ಕ್ರಿಯಾಶೀಲರಾಗಿದ್ದಾರಂತೆ. ಹಿಂದೂ ಒಂದು ಎಂದು ದೇಶಕ್ಕೆಲ್ಲ ಉಪದೇಶ ಬೋಧಿಸುವ ಇಂತಹವರು ಸಮಾಜವಿಭೇದದ ಮೂಲರೂಪವಾದ ಜಾತಿ ಸಂಘಗಳಲ್ಲಿ ಅದು ಹೇಗೆ ಕ್ರಿಯಾಶೀಲರಾಗಿರುತ್ತಾರೆ, ಅವರಿಗೆ ಕನಿಷ್ಠ ಸಂಕೋಚವೂ ಇಲ್ಲವೆ ಎನ್ನುವುದು ಇಲ್ಲಿಯ ಪ್ರಶ್ನೆ.

ಈ ಧರೆಗೆ ದೊಡ್ಡವರ ಮಕ್ಕಳು ತಮ್ಮ ಕಾಲೇಜು ದಿನಗಳಲ್ಲಿ “ರೌಡಿ” ಗಳಂತಿದ್ದರು ಎಂದು ಅವರ ಕಟ್ಟರ್ ಅಭಿಮಾನಿಯೊಬ್ಬರು ಗುಪ್ತನಾಮವೊಂದರಲ್ಲಿ ಗುಪ್ತಗುಪ್ತವಾಗಿ ಇತ್ತೀಚೆಗೆ ಬ್ಲಾಗೊಂದರಲ್ಲಿ ಬರೆದಿದ್ದಾರೆ. ಆ ಅಭಿಮಾನಿ ಹಾಗೆ ಬರೆಯಲು ನಮಗೆ ಮೈಸೂರಿನ ಪರಿಚಿತರು ಹೇಳಿದ ಘಟನೆಯೆ ಮೂಲಕಾರಣ ಎಂದು ನನ್ನ ಅಂದಾಜು. ಅದೇನೆಂದರೆ, ಈ ಸಾಹಿತಿಗಳ ಮಗ ತಮ್ಮ ಒಳಪಂಗಡದ ಸಂಸ್ಥೆಯ ಬೆಲೆಬಾಳುವ ಕಟ್ಟಡವನ್ನು ತನ್ನ ಹೆಸರಿಗೆ ಗುತ್ತಿಗೆ ಪಡೆಯಲೊ, ತನ್ನ ಕೈವಶ ಮಾಡಿಕೊಳ್ಳಲೊ ಅಪ್ಪನ ಮುಖಾಂತರ ಸಂಘದ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಅದನ್ನು ಸಂಘದ ಹಿರಿಯರು ವಿರೋಧಿಸಿದ್ದಾರೆ. ಅದಕ್ಕೆ ಆ ಮಗ ವಿದೇಶದಿಂದಲೆ ಆ ಹಿರಿಯರಿಗೆಲ್ಲ ಧಮಕಿ ಹಾಕುತ್ತಿದ್ದಾನಂತೆ. ಇದು ದೇಶಕ್ಕೆಲ್ಲ ಬುದ್ಧಿ ಹೇಳಲು, ಇತಿಹಾಸ ಸರಿಪಡಿಸಲು ಓಡಾಡುತ್ತಿರುವವರ ವರ್ತಮಾನ! ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು, ಅಮಾನವೀಯತೆಯನ್ನು ತೊಡೆದು ಹಾಕಬೇಕು, ಎಲ್ಲರೂ ಒಂದೆ, ಹಿಂದೂ ಒಂದು ಎನ್ನುವ ಜನ ತಾವು ಬೆಂಬಲಿಸುತ್ತಿರುವುದು ಜಾತಿವಾದಿಗಳನ್ನು ಎನ್ನುವುದನ್ನು ಮೊದಲು ಗಮನಿಸಬೇಕು. ಅವರ ಮಾತು ಕೇಳಿದರೆ ಹಿಂದೂ ಸಮಾಜ ಸುಧಾರಣೆಯಾಗುವುದಿಲ್ಲ ಎನ್ನುವುದನ್ನು ಈ ಉಗ್ರ ದೇಶಪ್ರೇಮಿಗಳು ಬೇಗ ಗಮನಿಸಿದಷ್ಟೂ ದೇಶಕ್ಕೆ ಒಳ್ಳೆಯದು.

ಈ ಮತಾಂಧ, ಜಾತಿವಾದಿ ಜಾತ್ಯಂಧರು ಹೇಳುತ್ತಿರುವುದು ಇತಿಹಾಸದಲ್ಲಿನ ಸತ್ಯವನ್ನು ಹೇಳುತ್ತಿದ್ದೇವೆ ಎಂದು. ಕರ್ನಾಟಕದ ಅತಿ ಪ್ರಸಿದ್ಧ ಲೇಖಕನ ಅತಿ ಪ್ರಸಿದ್ಧ ಅಭಿಮಾನಿ ಬಾಲಲೇಖಕರೊಬ್ಬರು ಒಬ್ಬ ಸಾಹಿತಿಯ ಬಗ್ಗೆ ಮಾತನಾಡುತ್ತ ಅವರೇನು ಗಾಂಧಿಯ ಚಡ್ಡಿದೋಸ್ತಾ, ಗಾಂಧಿ ಹೀಗೆ ಹೇಳುತ್ತಿದ್ದರು ಎಂದು ಹೇಳುತ್ತಾರೆ, ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ನಿಜವಾದ ಮಾತು. ಇತಿಹಾಸ ನಾನು ಹೇಳುವ ಹಾಗೆಯೆ ಇದೆ ಎನ್ನುತ್ತಿರುವವರು ಈ ಯುವ ಲೇಖಕರ ಮಾತನ್ನು ಗಂಭೀರವಾಗಿ ತೆಗೆದುಕೊಂಡು ತಮಗೇ ಅನ್ವಯಿಸಿಕೊಳ್ಳಬೇಕು. ತಾವು ನೋಡುವ ಇತಿಹಾಸವೂ ತಮ್ಮದೆ ಪೂರ್ವಾಗ್ರಹಗಳಿಂದ ಕೂಡಿದ್ದು, ತಾವು ಪ್ರತ್ಯಕ್ಷವಾಗಿ ನೋಡಿಲ್ಲದ, ಕೇವಲ ಇತಿಹಾಸ ಗ್ರಂಥಗಳ ಆಧಾರದ ಮೇಲೆ ಬರೆಯುವ ತಮ್ಮದೂ ಒಂದು ಕಟ್ಟು ಕತೆ ಯಾಕಾಗಿರಬಾರದು ಎನ್ನುವ ವಿನಯ ಬೆಳೆಸಿಕೊಳ್ಳಬೇಕು.

ಅಷ್ಟೇ ಅಲ್ಲ, ಇತಿಹಾಸವನ್ನು ಪ್ರತೀಕಾರದ ಮೂಲಕ ಸರಿಪಡಿಸಿಕೊಳ್ಳಬೇಕು ಎನ್ನುವ ರೀತಿಯಲ್ಲಿ ಹೇಳುವವರು ಸಮಾಜ ದ್ರೋಹಿಗಳೂ ಆಗುತ್ತಾರೆ. ಯಾಕೆಂದರೆ, ಅವರ ಕತೆಗಳನ್ನು ಓದಿ, ಮಂದಿರಮಸೀದಿಗಳನ್ನು ಉರುಳಿಸಲು ರಾತ್ರೋರಾತ್ರಿ ಯಾರೂ ಎದ್ದು ಓಡದಿದ್ದರೂ, ಮನಸ್ಸನ್ನು ವಿಷ ಮಾಡಲು, ಅಸಹಿಷ್ಣುತೆ ಬೆಳೆಸಲು ಆ ಓದು ಕಾರಣವಾಗುತ್ತದೆ. ಮುಂದಿನ ಬೆಂಕಿಗೆ ಈಗಿನ ಕಾವು ಅದು. ಜರ್ಮನ್ನರು ಹೋಲೊಕಾಸ್ಟ್ ನ ಅಪಚಾರವನ್ನು ಒಪ್ಪಿಕೊಂಡು ಅದನ್ನು ನಿರಾಕರಿಸಿದಂತೆ ಮೌಲ್ಯವಂತ ಭಾರತೀಯ ಸಮಾಜ ಇಂತಹ ಬರವಣಿಗೆಯನ್ನು ಸುಮ್ಮನೆ ನಿರಾಕರಿಸುತ್ತ ಹೋಗಬೇಕು. ಯಾರು ಎಷ್ಟೇ ಪ್ರಚೋದಿಸಿದರೂ ಪ್ರಚೋದನೆಗೊಳಗಾಗದ ಮೂಲಕವಷ್ಟೆ ಇಂತಹ ದುಷ್ಟತನವನ್ನು ನಾವು ಸೋಲಿಸಬೇಕಾಗಿರುವುದು.

ಇವತ್ತಿನ ಭಾರತ ಯುವ ಭಾರತ. ಶೇ. 35 ಭಾರತೀಯರು 15 ವರ್ಷಕ್ಕಿಂತ ಚಿಕ್ಕವರು ಎನ್ನುತ್ತದೆ ಒಂದು ವರದಿ. 54% ರಷ್ಟು ಭಾರತೀಯರು 25 ವರ್ಷಕ್ಕಿಂತ ಚಿಕ್ಕ ವಯಸ್ಸಿನವರು ಎನ್ನುತ್ತದೆ ಇನ್ನೊಂದು ವರದಿ. ಸಾಮರಸ್ಯದ, ಜೀವಪರ ಭಾರತದ ಭವಿಷ್ಯ ನಿಂತಿರುವುದೆ ಇವರ ಮೇಲೆ. ಇವರು ಹೇಗೆ ರೂಪುಗೊಳ್ಳುತ್ತಾರೆ ಎನ್ನುವುದರ ಮೇಲೆ ಇಡೀ ಭಾರತದ ಭವಿಷ್ಯ ನಿಂತಿದೆ. ಇನ್ನೊಬ್ಬರಿಂದ ಅತಿ ಎನ್ನುವಷ್ಟು ಪ್ರಭಾವಿತಗೊಳ್ಳುವ ವಯಸ್ಸು ಹದಿವಯಸ್ಸು. ರೋಲ್‌ಮಾಡೆಲ್‌ಗಳನ್ನು, ಅದರಲ್ಲೂ ಗೆಲ್ಲುವ ರೋಲ್‌ಮಾಡೆಲ್‌ಗಳನ್ನು ಬಯಸುವ ವಯಸ್ಸಿದು. ಹಾಗಾಗಿ, ಸಮಾಜದ ಹಿತಬಯಸುವ, ಮೌಢ್ಯಕ್ಕೆ, ದ್ವೇಷಕ್ಕೆ ತಳ್ಳದ, ಸ್ವಾರ್ಥಿಗಳಲ್ಲದ ಜನರ ಗೆಲುವು ಹಿಂದೆಂದಿಗಿಂತಲೂ ಇಂದು ಅಗತ್ಯ. ಈ ಯುವ ಭಾರತೀಯ ಮನಸ್ಸುಗಳು ಫ್ಯಾಸಿಸ್ಟ್‌ಗಳಾಗದಂತೆ ನೋಡಿಕೊಳ್ಳುವ ಜರೂರು ಇವತ್ತಿನ ಪ್ರಜ್ಞಾವಂತ ಹಿರಿಯರ ಮೇಲಿದೆ. ತಮ್ಮೆಲ್ಲ ವೈಯಕ್ತಿಕ ಸ್ವಾರ್ಥಗಳನ್ನು, ಸಣ್ಣತನಗಳನ್ನು ಬಿಟ್ಟು ಸಮಷ್ಠಿಯ ಹಿತವನ್ನಷ್ಟೆ ಬಯಸಬೇಕಾದ ಸಮಯ ಇದು. ಆದರೆ ಇದು ಎಷ್ಟೋ ಜನರಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಮಾತ್ರ ಸದ್ಯಕ್ಕೆ ಕೂರ ವಾಸ್ತವದಂತೆ ಕಾಣಿಸುತ್ತಿದೆ.

ಪ್ರಜಾವಾಣಿಗೆ ರಾಜೀನಾಮೆ ನೀಡಿದ ಪಿ. ಮಹಮ್ಮದ್

– ಶಿವರಾಮ್ ಕೆಳಗೋಟೆ

ಪ್ರಜಾವಾಣಿ ಓದುಗರಿಗೆ ಒಂದು ಬೇಸರದ ಸುದ್ದಿ. ಓದುಗರ ಮನಗೆದ್ದಿದ್ದ ಕಾರ್ಟೂನಿಸ್ಟ್ ಪಿ. ಮಹಮ್ಮದ್ ಪ್ರಜಾವಾಣಿಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಸದ್ಯ ನೋಟಿಸ್ ಪೀರಿಯಡ್‌ನಲ್ಲಿದ್ದಾರೆ. ಕೆಲವೇ ದಿನಗಳ ನಂತರ ಅವರ ಪಾಕೆಟ್ ಕಾರ್ಟೂನ್‌ಗಳು ಪ್ರಜಾವಾಣಿಯಲ್ಲಿ ಪ್ರಕಟವಾಗುವುದಿಲ್ಲ. ಪ್ರತಿದಿನ ಪ್ರಜಾವಾಣಿಯಲ್ಲಿ ಮಹಮ್ಮದ್ ರೇಖೆಗಳಿಗೆ ತಡಕಾಡುತ್ತಿದ್ದವರಿಗೆ ಇದು ಬೇಸರದ ಸಂಗತಿ.

ಮಹಮ್ಮದ್ ದೇಶದ ಅಗ್ರ ಕಾರ್ಟೂನಿಸ್ಟ್ ರ ಸಾಲಿಗೆ ಸೇರಬಹುದಾದ ಒಂದು ಪ್ರತಿಭೆ. ಅವರ ಕಾರ್ಟೂನ್‌ಗಳಲ್ಲಿ ರಾಜಕೀಯ ವಿಶ್ಲೇಷಣೆ, ವಿಡಂಬನೆ, ಅಮಾಯಕ ಮತದಾರನ ಪ್ರಶ್ನೆ, ಟೀಕೆ, ಮೂದಲಿಕೆ.. ಹೀಗೆ ಎಲ್ಲವೂ ಇರುತ್ತವೆ. ಅವರ ಇಂದಿನ ಕಾರ್ಟೂನ್ (ದಿನಾಂಕ ಜೂನ್ 30, 2012) ಕೂಡಾ ಇದಕ್ಕೆ ತಕ್ಕ ಉದಾಹರಣೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಪೈಪೋಟಿ ಏರ್ಪಟ್ಟಿರುವಾಗ ಮುಖ್ಯಮಂತ್ರಿ ಕಚೇರಿ ಜವಾನ, ಮುಖ್ಯಮಂತ್ರಿ ಯಾಕಾಗಬಾರದು ಎಂಬ ಪ್ರಶ್ನೆಗೆ ‘ನನಗೆ ಆಸಕ್ತಿ ಇಲ್ಲ’ ಎಂಬ ಮಾತು, ಮತ್ತು ಅವನ ಭಂಗಿ ಟೀಕೆ, ವಿಡಂಬನೆ ಸ್ಪಷ್ಟವಾಗಿ ಹೇಳುತ್ತವೆ.

ಪಿ.ಮಹಮ್ಮದ್ ಅವರ ಅನೇಕ ಕಾರ್ಟೂನ್ ಗಳು ಅಜರಾಮರ. ಯುಪಿಎ ಮೊದಲ ಬಾರಿಗೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಅಧಿಕಾರದ ಅಂಚಿಗೆ ಬಂದಿದ್ದಾಗ, ಚುನಾವಣೆಯಲ್ಲಿ ಅವರನ್ನು ಸೋಲಿಸಲಾಗದ ಬಿಜೆಪಿ ಪಕ್ಷ ‘ಸೋನಿಯಾ ವಿದೇಶಿ’ ಎಂದು ಕೂಗು ಎಬ್ಬಿಸಿತ್ತು. ಆಗ ಮಹಮ್ಮದ್ ಒಂದು ಕಾರ್ಟೂನ್ ಬರೆದರು – ಆನೆಯೊಂದು ಸೋನಿಯಾಗೆ ಹಾರ ಹಾಕುವ ಚಿತ್ರ, ಪಕ್ಕದಲ್ಲಿದ್ದ ನಾಯಿಯೊಂದು ‘ವಿದೇಶಿ’ ಎಂದು ಬೊಗಳುತ್ತಿತ್ತು.

ಜೆಡಿಎಸ್-ಬಿಜೆಪಿ ಯ 20-20 ಒಪ್ಪಂದದ ಆಡಳಿತದ ಅವಧಿಯಲ್ಲಿ ಮಹಮ್ಮದ್ ಕಾರ್ಟೂನ್ ಗಳು ವಿಶೇಷ ಖದರ್ ಹೊಂದಿದ್ದವು. ದೇವೇಗೌಡರಿಗೆ ತಮ್ಮ ಮಗನ ಬ್ಯಾಟಿಂಗ್ ನಂತರ ಪಿಚ್ ಅನ್ನು ಹಾಳುಮಾಡುವ ಐಡಿಯಾ ಇದೆ ಎಂದು ಮೊದಲು ಸ್ಪಷ್ಟವಾಗಿ ಹೇಳಿದವರು. (ಅದೇ ಸಂದರ್ಭದಲ್ಲಿ ಮುಂಬೈನಲ್ಲಿ ಶಿವಸೇನೆ ಪಡೆಯವರು ಕ್ರಿಕೆಟ್ ಪಿಚ್ ಅಗೆದು ಹಾಳು ಮಾಡಿದ್ದರು). ಮುಂದೆ ಮಹಮ್ಮದ್ ಅವರ ಮಾತು ನಿಜವಾಯಿತು.

ಮೊನ್ನೆಮೊನ್ನೆಯ ಇನ್ನೊಂದು ಕಾರ್ಟೂನ್ ‘ರೈತನಿಗೆ ಬೀಜ ಕೊಟ್ಟಿದ್ದೀವಿ, ಗೊಬ್ಬರ ಕೊಟ್ಟಿದೀವಿ, ಸಬ್ಸಿಡಿ ಕೊಟ್ಟಿದೀವಿ..ಇನ್ನು ಏನು ಮಾಡಬೇಕು,’ ಎಂದು ಮುಖ್ಯಮಂತ್ರಿ ಹೇಳಿದರೆ, ಅಮಾಯಕ ರೈತ ಹೇಳ್ತಾನೆ ‘ಸ್ವಾಮಿ ಭೂಮಿನೆ ಕಿತ್ತುಕೊಂಡ್ರಲ್ಲಾ?’. ಒಂದು ಸಂಪಾದಕೀಯ, ವಿಸ್ತೃತ ವರದಿ ಹೇಳಬೇಕಾದ್ದನ್ನ ಅಥವಾ ಹೇಳದೇ ಹೋದದ್ದನ್ನು ಇವರ ಒಂದು ಕಾರ್ಟೂನ್ ಹೇಳುತ್ತದೆ.

ಮಹಮ್ಮದ್ ಮುಂದೆ ಎಲ್ಲಿ ಕೆಲಸ ಮಾಡುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೊಂದು ದಿನಪತ್ರಿಕೆಯಿಂದ ಅವರಿಗೆ ಆಹ್ವಾನ ಬಂದಿದೆ ಎನ್ನುವ ಸುದ್ದಿ ಇದೆ. ಏನೇ ಆಗಲಿ, ಕನ್ನಡದ ಓದುಗರು ಅವರ ಕಾರ್ಟೂನ್ ಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.

(ವ್ಯಂಗ್ಯಚಿತ್ರ ಕೃಪೆ: ಪ್ರಜಾವಾಣಿ)

ಮಧ್ಯಂತರ ಚುನಾವಣೆ ಪರಿಹಾರವೇ?

– ಆನಂದ ಪ್ರಸಾದ್

ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ನಿರಂತರವಾಗಿ ನಡೆಯುತ್ತಿರುವ ಕಿತ್ತಾಟ ನೋಡಿ ಬೇಸತ್ತಿರುವ ಜನ ಇದಕ್ಕೆ ಮಧ್ಯಂತರ ಚುನಾವಣೆಯೇ ಪರಿಹಾರ ಎಂಬ ಅಭಿಪ್ರಾಯವನ್ನು ಬಹಳ ಹಿಂದಿನಿಂದಲೇ ಹೇಳುತ್ತಾ ಬಂದಿದ್ದಾರೆ. ಆದರೆ ಇಂದಿನ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಂಡುಬರುತ್ತಿರುವ ಗುಂಪುಗಾರಿಕೆಯನ್ನುನೋಡಿದರೆ ಮಧ್ಯಂತರ ಚುನಾವಣೆಯೂ ಪರಿಹಾರ ನೀಡುವ ಸಂಭವ ಇದೆ ಎನಿಸುವುದಿಲ್ಲ. ಈಗ ಚುನಾವಣೆ ನಡೆದರೂ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬರುತ್ತದೆ ಎಂಬ ನಂಬಿಕೆ ಯಾರಲ್ಲಿಯೂ ಉಳಿದಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು ಇಟ್ಟುಕೊಂಡರೂ ಏನಾದರೂ ಪರಿಸ್ಥಿತಿ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಕಾರಣ ಕಾಂಗ್ರೆಸ್ ಪಕ್ಷದಲ್ಲಿಯೂ ಇರುವ ಬಣ ರಾಜಕೀಯ. ಕಾಂಗ್ರೆಸ್ ಪಕ್ಷದಲ್ಲಿ ಎಸ್. ಎಂ. ಕೃಷ್ಣ ಗುಂಪಿನ ಬಣ, ಮೊಯಿಲಿ ಬಣ, ಸಿದ್ಧರಾಮಯ್ಯ ಬಣ, ಖರ್ಗೆ ಬಣ ಇತ್ಯಾದಿ ಬಣಗಳ ಮೇಲಾಟದಲ್ಲಿ ಪರಿಸ್ಥಿತಿ ಈಗಿರುವ ಬಿಜೆಪಿಗಿಂತ ಉತ್ತಮವಾಗಿದ್ದೀತು ಎಂದು ನಿರೀಕ್ಷಿಸುವುದು ಹೇಗೆ? ಭ್ರಷ್ಟಾಚಾರದ ವಿಷಯಕ್ಕೆ ಬಂದರೂ ಅಷ್ಟೇ. ಕಾಂಗ್ರೆಸ್ ಪಕ್ಷದಲ್ಲಿಯೂ ಘಟಾನುಘಟಿ ಭ್ರಷ್ಟ ನಾಯಕರಿದ್ದಾರೆ. ಇಂಥ ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಕಾಂಗ್ರೆಸ್ ಹೈಕಮಾಂಡಿಗೆ ಇಲ್ಲ. ಅಲ್ಲದೆ ಕೆಲವು ಕಾಂಗ್ರೆಸ್ಸಿಗರು ಇನ್ನೂ ಕೆಲವು ಮಹಾಭ್ರಷ್ಟರನ್ನು ಇತರ ಪಕ್ಷಗಳಿಂದ ಜಾತಿಯ ಆಧಾರದಲ್ಲಿ ತಮ್ಮ ಪಕ್ಷಕ್ಕೆ ತರಬೇಕೆಂಬ ಚಿಂತನೆಯಲ್ಲಿಯೂ ಇದ್ದಾರೆ. ಹೀಗಿರುವಾಗ ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆದೀತು ಎಂದು ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.

ಮೂರನೇ ಅತಿ ದೊಡ್ಡ ಪಕ್ಷವಾದ ಜೆಡಿಎಸ್ ಪಕ್ಷ ತನ್ನ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಶಕ್ತಿಯನ್ನು ಸಿದ್ಧರಾಮಯ್ಯ ಹಾಗೂ ಇನ್ನಿತರ ನಾಯಕರು ಆ ಪಕ್ಷವನ್ನು ತ್ಯಜಿಸಿದಾಗಲೇ ಕಳೆದುಕೊಂಡಿದೆ. ಹೀಗಾಗಿ ಅದು ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಅಲ್ಲದೆ ಜೆಡಿಸ್ ನಾಯಕ ಕುಮಾರಸ್ವಾಮಿಯ ಮೇಲೂ ಭ್ರಷ್ಟಾಚಾರದ ಆಪಾದನೆಗಳಿವೆ ಹಾಗೂ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಬೇನಾಮಿ ಆಸ್ತಿ ಗಳಿಸಿರುವ ಗುಸುಗುಸು ರಾಜ್ಯಾದ್ಯಂತ ಕೇಳಿಬರುತ್ತಿದೆ. ಅಲ್ಲದೆ ಜೆಡಿಎಸ್ ಪಕ್ಷವು ತಂದೆ ಮಕ್ಕಳ ಪಕ್ಷ ಎಂಬ ಬಿರುದನ್ನೂ ಪಡೆದುಕೊಂಡಿದೆ. ಹೀಗಾಗಿ ಈ ಪಕ್ಷವು ಮುಂದೆಯೂ ರಾಜ್ಯದಲ್ಲಿ ಬೆಳೆಯುವ ಸಾಧ್ಯತೆ ಇಲ್ಲ. ಅಕ್ರಮ ಗಣಿಗಾರಿಕೆಯ ದೇಶದ್ರೋಹದ ದುಡ್ಡಿನಿಂದ ಜನ್ಮ ತಾಳಿದ ಶ್ರೀರಾಮುಲು ನೇತೃತ್ವದ ಪಕ್ಷವೂ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಅಕ್ರಮ ಗಣಿ ದುಡ್ಡನ್ನು ಚೆಲ್ಲಿದರೂ ಹತ್ತಿಪ್ಪತ್ತು ಸ್ಥಾನಗಳಿಗಿಂಥ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಶ್ರೀರಾಮುಲು ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದರೂ ಇವೆರಡೇ ಪಕ್ಷಗಳು ಅಧಿಕಾರಕ್ಕೆ ಬರುವಷ್ಟು ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಇನ್ನೊಂದು ಸಾಧ್ಯತೆ ಎಂದರೆ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಚುನಾವಣೋತ್ತರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂಬಹುದು. ಇದರಿಂದ ಕರ್ನಾಟಕದ ರಾಜಕೀಯ ಅಕ್ರಮ ಗಣಿಗಾರಿಕೆಯ ದುಡ್ಡಿನಿಂದ ಮತ್ತೆ ಕುಲಗೆಡುವ ಪರಿಸ್ಥಿತಿ ಬರಬಹುದು. ಚುನಾವಣೋತ್ತರ ಪರಿಸ್ಥಿತಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮತ್ತೆ ಕೈಜೋಡಿಸಿ ಸಮಯ ಸಾಧಕ ರಾಜಕಾರಣ ತೋರಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬಿಜೆಪಿ ಒಂದು ಪಕ್ಷವಾಗಿ ಅಧಿಕಾರ ಹಿಡಿದಿರುವಾಗಲೆ ಅಧಿಕಾರಕ್ಕಾಗಿ ಭೀಕರ ಕಚ್ಚಾಟ ನಡೆಯುತ್ತಿರುವಾಗ ಎರಡು ಸಮಯಸಾಧಕ, ತಾತ್ವಿಕವಾಗಿ ವಿರೋಧಿ ನಿಲುವಿನ ಪಕ್ಷಗಳು ಜೊತೆ ಸೇರಿದರೆ ಅಧಿಕಾರಕ್ಕಾಗಿ ಇನ್ನೆಂಥ ಕಚ್ಚಾಟ ನಡೆಯಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ. ಇಂಥ ನಿರ್ವಾತದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಬದಲಾವಣೆ ಉಂಟಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ಹೀಗಿರುವಾಗ ಮಧ್ಯಂತರ ಚುನಾವಣೆಯಿಂದ ಪರಿಹಾರ ದೊರೆತೀತು ಎಂಬುದು ಕನಸಿನ ಮಾತಾಗುತ್ತದೆ.

ಶೇಕಡಾ 75 ಅಕ್ಷರಸ್ಥರನ್ನು ಹೊಂದಿರುವ ಕರ್ನಾಟಕದಲ್ಲಿ ಆರೋಗ್ಯಕರ ರಾಜಕೀಯವನ್ನು ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ವಿಚಾರವಾಗಿದೆ. ಕರ್ನಾಟಕದ ಮಾಧ್ಯಮಗಳಲ್ಲಿ ಆರೋಗ್ಯಕರ ಪರ್ಯಾಯ ರಾಜಕೀಯವನ್ನು ಕಟ್ಟಬೇಕಾಗಿರುವುದರ ಅವಶ್ಯಕತೆಯನ್ನು ಕುರಿತು ಯಾವುದೇ ಚರ್ಚೆ ನಡೆಯುತ್ತಾ ಇಲ್ಲ. ಎಲ್ಲ ಮಾಧ್ಯಮಗಳೂ ಸೇರಿ ಇಂಥ ಒಂದು ಚರ್ಚೆಯನ್ನು ನಿರಂತರವಾಗಿ ನಡೆಸುತ್ತ ಬಂದರೆ ಈ ಕುರಿತು ರಾಜ್ಯದಲ್ಲಿ ಇಂಥ ಒಂದು ಜಾಗೃತಿ ಆಗಿಯೇ ಆಗುತ್ತದೆ. ಆದರೆ ಯಾವ ಮಾಧ್ಯಮಗಳಿಗೂ ಇದು ಮುಖ್ಯ ಎನಿಸುತ್ತಿಲ್ಲ. ಒಂದು ಕನ್ನಡ ವಾಹಿನಿಗೆ ನಿತ್ಯಾನಂದನ ವಿಷಯವೇ ರಾಜ್ಯವನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಯಾಗಿರುವಂತೆ ಕಂಡುಬರುತ್ತದೆ. ಯಾವುದೇ ಮುಖ್ಯ ವಾಹಿನಿಯ ಮಾಧ್ಯಮಗಳಿಗೂ ಕರ್ನಾಟಕದ ಪ್ರಸಕ್ತ ನಿರ್ವಾತ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ತಾವು ಕೊಡುಗೆ ಕೊಡಬಹುದು ಎಂಬ ಒಂದು ಚಿಂತನೆಯೇ ಇರುವಂತೆ ಕಾಣುತ್ತಿಲ್ಲ. ಹೀಗಾಗಿ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಒಂದು ಪ್ರಹಸನ ಮಾತ್ರ ಆಗಿ ಉಳಿದಿದೆ. ವ್ಯವಸ್ಥೆಯನ್ನು ಬದಲಾಯಿಸಬಹುದು, ಅದಕ್ಕಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಎಂಬ ಪ್ರಜ್ಞೆ ನಮ್ಮ ಜನರಲ್ಲಿ ಇರುವಂತೆ ಕಾಣುವುದಿಲ್ಲ. ಇಂಥ ಪ್ರಜ್ಞೆಯನ್ನು ಜನರಲ್ಲಿ ತರಬೇಕಾಗಿರುವ ಮಹತ್ತರ ಜವಾಬ್ದಾರಿ ಇರುವ ಮಾಧ್ಯಮಗಳು ಇದು ತಮಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿವೆ. ಹೀಗಾಗಿಯೇ ನಮ್ಮ ಯೋಗ್ಯತೆಗೆ ಅನುಗುಣವಾದ ಭ್ರಷ್ಟ ರಾಜಕೀಯ ವ್ಯವಸ್ಥೆ ರೂಪುಗೊಂಡಿದೆ. ಇದನ್ನು ಬದಲಾಯಿಸಬಹುದು, ಬದಲಾಯಿಸಬೇಕು ಎಂಬ ಅಶಾವಾದವೇ ನಮ್ಮಲ್ಲಿ ಕಂಡುಬರುತ್ತಿಲ್ಲ. ಎಲ್ಲೆಲ್ಲೂ ನಿರಾಶಾವಾದ ಕಂಡುಬರುತ್ತಿದೆ. ನಮ್ಮ ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಸಿನಿಮಾ ನಟರು, ವಿಜ್ಞಾನಿಗಳು, ಚಿಂತಕರು, ವಿವಿಧ ಕ್ಷೇತ್ರಗಳ ಸಾಧಕರು, ಪ್ರಮುಖ ಸಂಘಟನೆಗಳು ಪರ್ಯಾಯ ರಾಜಕೀಯದ ಅವಶ್ಯಕತೆಯ ಬಗ್ಗೆ ಧ್ವನಿ ಎತ್ತುತ್ತಾ ಇಲ್ಲ. ಎಲ್ಲರೂ ಸೇರಿ ದನಿ ಎತ್ತಿದರೆ ಈ ಬಗ್ಗೆ ನಿಧಾನವಾಗಿಯಾದರೂ ಏನಾದರೂ ಬೆಳವಣಿಗೆ ಆದೀತು. ಆದರೆ ನಮ್ಮ ಜನರಿಗೆ ಕವಿದ ನಿರಾಶವಾದ ಯಾವುದೇ ಧನಾತ್ಮಕ ಚಿಂತನೆಯೇ ಮಾಡದಂತೆ ತಡೆದಿರುವಂತೆ ಕಾಣುತ್ತದೆ. ಇಂಥ ಸ್ಥಿತಿಯಲ್ಲಿ ಬೆಳಕನ್ನು ತೋರುವವರು ಯಾರು?

ಪತ್ರಕರ್ತರು ಅಥವ ಸಮನ್ಸೂ ಇಷ್ಯು ಮಾಡುವ, ದೂರೂ ಕೊಟ್ಟು, ಅಟ್ಟಾಡಿಸಿ ಹಿಡಿವ…

– ರಾಜೇಶ್ ದೇವನಹಳ್ಳಿ

ಪತ್ರಕರ್ತರು ಇತ್ತೀಚೆಗೆ ತಮ್ಮ ವೃತ್ತಿ ಬಿಟ್ಟು ಅಥವಾ ತಮ್ಮ ವೃತ್ತಿ ಜೊತೆಗೆ ಇತರ ಚಟುವಟಿಕೆಗಳಿಂದ ಸುದ್ದಿ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ಸುದ್ದಿವಾಹಿನಿಯ ವರದಿಗಾರನೊಬ್ಬ ಹಲವು ಆರೋಪ ಹೊತ್ತ ಸ್ವಾಮೀಜಿ ಒಬ್ಬರಿಗೆ ಸಮನ್ಸ್ ಜಾರಿ ಮಾಡುವ ಪ್ರಯತ್ನ ಮಾಡಿ ಸುದ್ದಿ ಮಾಡಿದ್ದರು. (ವಿಶಿಷ್ಟ ಎಂದರೆ, ಅದೇ ವರದಿಗಾರನ ಸಂಪಾದಕರು ಸಮನ್ಸ್ ಜಾರಿಯಾದರೂ ಕೋರ್ಟ್‌ಗೆ ಹಾಜರಾಗದೆ, ಕೊನೆಗೆ ಬಂಧನಕ್ಕೆ ಒಳಗಾಗಬೇಕಾಯಿತು. ಆದರೂ ಕನ್ನಡಪ್ರಭ ವರದಿಯಲ್ಲಿ ಮಾತ್ರ ‘ಸಮನ್ಸ್ ಸಮನ್ವಯ’ ಕೊರತೆಯಿಂದ ಹೀಗಾಯಿತು ಎಂದು ಬರೆದರು. ಸಮನ್ಸ್ ಸಮನ್ವಯ ಅಂದ್ರೇನು ಅನ್ನೋದು ಇನ್ನಷ್ಟೆ ಗೊತ್ತಾಗಬೇಕು.)

ಈಗ ಇಲ್ಲೊಂದು ಸುದ್ದಿ ಇದೆ ನೋಡಿ. ತುಮಕೂರಿನ ಇಬ್ಬರು ಪತ್ರಕರ್ತರು ಲಂಚ ತೆಗೆದುಕೊಳ್ಳುತ್ತಿದ್ದ ಎನ್ನಲಾದ ಸರಕಾರಿ ನೌಕರರೊಬ್ಬರನ್ನು ಅಟ್ಟಾಡಿಸಿ ಹಿಡಿದು ಲೋಕಾಯುಕ್ತರಿಗೆ ಒಪ್ಪಿಸಿದರಂತೆ. ಈ ಬಗ್ಗೆ ವರದಿಯೊಂದು ತುಮಕೂರು ಮೂಲದ ‘ಪ್ರಜಾ ಪ್ರಗತಿ’ಯಲ್ಲಿ ಪ್ರಕಟವಾಗಿದೆ. ಆ ನೌಕರನ ವಿರುದ್ಧ ಲೋಕಾಯುಕ್ತರಿಗೆ ದೂರು ಕೊಟ್ಟದ್ದು ಪತ್ರಕರ್ತರೇ. ನಂತರ ಲೋಕಾಯುಕ್ತ ದಾಳಿಯಂತಹ ಸನ್ನಿವೇಶ ಸೃಷ್ಟಿಯಾದಾಗ ಆ ನೌಕರ ಗಲಿಬಿಲಿಯಾಗಿ ಓಡಲಾರಂಭಿಸುತ್ತಾನೆ. ಆ ನೌಕರರನ್ನು ಚಿತ್ರದಲ್ಲಿರುವ ಇಬ್ಬರು ಬೆನ್ನಟ್ಟಿ ಕೊರಳ ಪಟ್ಟಿ ಹಿಡಿದು ತರುತ್ತಾರೆ; ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸುತ್ತಾರೆ.

ಈ ಇಬ್ಬರು ಪತ್ರಕರ್ತರಲ್ಲಿ ಒಬ್ಬ ನಂಬರ್ 1 ಆಂಗ್ಲ ಭಾಷಾ ಪತ್ರಿಕೆಯ ಸ್ಥಳೀಯ ವರದಿಗಾರ, ಮತ್ತೊಬ್ಬ ಸದ್ಯ ಭಾರೀ ಸುದ್ದಿಯಲ್ಲಿರುವ ಸುದ್ದಿವಾಹಿನಿಯ ವರದಿಗಾರ.

(ಚಿತ್ರಕೃಪೆ: ಪ್ರಜಾ ಪ್ರಗತಿ)

ಪ್ರಗತಿಶೀಲ ಸಾಹಿತ್ಯದಲ್ಲಿ ಜನಸಾಮಾನ್ಯರ ನೋವುಗಳ ಅನಾವರಣ


-ಬಿ. ಶ್ರೀಪಾದ್ ಭಟ್


 

 

ನಾವು ಬದುಕುತ್ತಿರುವ ವರ್ತಮಾನದ ಸ್ಥಿತಿಗತಿಗಳ ಬಗೆಗೆ ನಿಮಗೆ ಅರಿವಿಲ್ಲದಿದ್ದರೆ ನೀವು ನನ್ನ ಕತೆಗಳನ್ನು ಓದಬೇಕು. ಈ ನನ್ನ ಕತೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಂದಿನ ವರ್ತಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ”

– ಸಾದತ್ ಹಸನ್ ಮಂಟೋ.

 

“There was a grief I smoked
in silence, like a cigarette                                                                                                                                                                                                                                                                                                                                                                                                                                                                                                                                                                                                                                                                            only a few poems fell
out of the ash I flicked from it.”
– ಅಮೃತಾ ಪ್ರೀತಮ್.

“ಇಂಡಿಯಾದ ಸಾಹಿತ್ಯವು ವಾಸ್ತವದ ಸ್ಥಿತಿಯನ್ನು ಎದುರಿಸುವುದನ್ನು ತಪ್ಪಿಸಿಕೊಳ್ಳಲು ದಯನೀಯವಾಗಿ ಪ್ರಯತ್ನಿಸುತ್ತಿದೆ. ವಾಸ್ತವದ ಅಸಮಾನತೆಗಳನ್ನು, ಬಡತನವನ್ನು ಎದುರಿಸಲಿಕ್ಕಾಗದೆ ಆಧ್ಯಾತ್ಮದ ಮೊರೆ ಹೋಗುತ್ತಲಿದೆ. ಬದಲಾಗಿ ನಿರ್ಜಿವವಾದ, ವ್ಯತಿರಿಕ್ತವಾದ ಜಡತ್ವವನ್ನು ಪ್ರದರ್ಶಿಸುತ್ತಿದೆ. ಇದು ಹೆಚ್ಚೂ ಕಡಿಮೆ ರಕ್ತಮಾಂಸವಿಲ್ಲದ ಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿ ಇಂಡಿಯಾದ ಹೊಸ ಬರಹಗಾರರು ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಸಾಹಿತ್ಯದಲ್ಲಿ ವೈಜ್ಞಾನಿಕವಾದ ಪರಿವರ್ತನೆಗೆ ಹೆಗಲುಗೊಡಬೇಕಾಗಿದೆ. ವೈಯುಕ್ತಿಕ ಸಂಸಾರ, ಧರ್ಮ ಮತ್ತು ಜಾತಿಗಳನ್ನು ಹೊದ್ದುಕೊಂಡಿರುವ ಇಂಡಿಯಾದ ಸಾಹಿತ್ಯವನ್ನು ಪ್ರೋತ್ಸಾಹಿಸದೆ ಕೋಮುವಾದ, ಜಾತಿವಾದ ಮತ್ತು ಮನುಷ್ಯ ಮನುಷ್ಯನನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ನಾಶಪಡಿಸುವತ್ತ ಹೆಜ್ಜೆ ಇಡಬೇಕಾಗಿದೆ. ಇಂಡಿಯಾದ ಸಾಹಿತ್ಯವನ್ನು ಸಾಂಪ್ರದಾಯಿಕ ಶಕ್ತಿಗಳಿಂದ ರಕ್ಷಿಸಬೇಕಾಗಿದೆ. ಇದು ನಮ್ಮ ಸಂಘಟನೆಯ ಮೂಲ ಉದ್ದೇಶ. ಈ ಮೂಲಕ ಸಾಹಿತ್ಯವನ್ನು ಜನರ ಬಳಿಗೆ ತರಬೇಕಾಗಿದೆ. ಇಂಡಿಯಾದ ಪ್ರಗತಿಪರ ಸಾಹಿತ್ಯವು ಈ ದೇಶದ ಮೂಲಭೂತ ಕಂಟಕಗಳಾದ ಹಸಿವು ಮತ್ತು ಬಡತನ, ಸಾಮಾಜಿಕ ಹಿಂದುಳುವಿಕೆ ಮತ್ತು ರಾಜಕೀಯ ಪರಿವರ್ತನೆಗಳನ್ನು ಉದ್ದೇಶಿಸಿ ಬರೆಯಬೇಕಾಗಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಎತಿಹಿಡಿಯಬೇಕಾಗಿದೆ”.

ಇದು 75 ವರ್ಷಗಳ ಹಿಂದೆ 1936 ರಲ್ಲಿ ಅಸ್ತಿತ್ವಕ್ಕೆ ಬಂದ “ಪ್ರಗತಿಪರ ಲೇಖಕರ ಚಳವಳಿ”ಯ ಮ್ಯಾನಿಫೆಸ್ಟೋದ ಸಂಕ್ಷಿಪ್ತ ಸಾರಾಂಶ. ಈ ಪ್ರಗತಿಪರ ಲೇಖಕರ ಚಳವಳಿಯಲ್ಲಿರುವ ಬಹುಪಾಲು ಲೇಖಕರು ಎಡಪಂಥೀಯ ಚಿಂತಕರಾಗಿದ್ದರು. ವಸಾಹತುಶಾಹಿಯ ವಿರೋಧಿಗಳಾಗಿದ್ದರು. ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ತಮ್ಮ ಸಾಹಿತ್ಯವನ್ನು ರಚಿಸಿದರು. ಈ ಲೇಖಕರು ಮಹಾನ್ ಕಾದಂಬರಿಕಾರ ಮುನ್ಷಿ ಪ್ರೇಮಚಂದರಿಂದ ಸ್ಪೂರ್ತಿಯನ್ನು, ಬೆಂಬಲವನ್ನು ಪಡೆದಿದ್ದರು. ಈ ಪ್ರಗತಿಪರ ಲೇಖಕರ ಚಳವಳಿಯ ಅಸ್ಥಿತ್ವವನ್ನು ಮೊದಲಿಗೆ ಘೋಷಿಸಿದವರು ಉರ್ದು ಲೇಖಕರಾದ ಅಹಮದ್ ಅಲಿ, ಮಾಮುದ್ ಜಫರ್ ಮತ್ತು ಸೈಯ್ಯದ್ ಸಾಜದ್ ಜಾಹಿರ್. ಇವರೊಂದಿಗೆ ಈ ಪ್ರಗತಿಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರಮುಖ ಲೇಖಕರೆಂದರೆ ಸಾದತ್ ಹಸನ್ ಮಂಟೋ, ಅಲಿ ಜವಾದ್ ಜೈದಿ, ಫೈಜ್ ಅಹ್ಮದ್ ಫೈಜ್, ಭೀಷ್ಮ ಸಹಾನಿ, ಇಸ್ಮತ್ ಚುಗತಾಯಿ, ತನ್ವೀರ್ ಹಬೀಬ್, ಕೈಫಿ ಅಜ್ಮಿ, ಕೃಷ್ಣಚಂದರ್, ರಾಜೇಂದ್ರಸಿಂಗ್ ಬೇಡಿ, ಫಿರಕ್ ಗೋರಕ್ಪುರಿ, ಇದ್ರಿಸ್ ಇಜಾದ್, ಮುಲ್ಕರಾಜ್ ಆನಂದ್, ಕೆ.ಎ.ಅಬ್ಬಾಸ್, ಮುಂತಾದವರು.

ಇವರೆಲ್ಲ ಮನರಂಜನಾತ್ಮಕ ಸಾಹಿತ್ಯ ರಚನೆಯನ್ನು ಸಾರಾಸಗಟಾಗಿ ತ್ಯಜಿಸಿದರು. ಬದಲಾಗಿ ಕಲೋನಿಯಲ್ ಸಂದರ್ಭದಲ್ಲಿ ಬದುಕುತ್ತಿದ್ದ ಸಾಮಾನ್ಯ ಜನರ, ಮಧ್ಯಮವರ್ಗಗಳ ಬವಣೆಗಳನ್ನು, ನೋವುಗಳನ್ನು ತಮ್ಮ ಸಾಹಿತ್ಯದ ಮೂಲಧಾತುವಾಗಿ ಅಳವಡಿಸಿಕೊಂಡರು. ಇದರ ಫಲವಾಗಿ ಆ ಕಾಲಕ್ಕೆ ಜನಪ್ರಿಯವಾಗಿದ್ದ ಅತಿರಂಜಿತ, ಕಾಲ್ಪನಿಕ ಸುಂದರ ನಾಯಕ, ನಾಯಕಿರ ಮನಮೋಹಕ ಕಥೆಗಳು ಕರಗಿಹೋಗಿ ಬದಲಾಗಿ ದಿನನಿತ್ಯದಲ್ಲಿ ಕಾಣುವಂತಹ ನಮ್ಮ ನೆರೆಮನೆಯ ಹುಡುಗ, ಹುಡುಗಿಯರು, ಕಲೋನಿಯಲ್‌ನ ಕ್ರೂರತೆಗೆ ಬಲಿಯಾದ ದಂಪತಿಗಳು ಸಾಹಿತ್ಯದ ಅಕ್ಷರಗಳಲ್ಲಿ ಒಡಮೂಡತೊಗಿದರು. ಅದೂ ಅತ್ಯಂತ ಶಕ್ತಿಶಾಲಿಯಾಗಿ. ಭಾವಪೂರ್ಣವಾಗಿ, ಕೆಲವೊಮ್ಮೆ ರೋಮ್ಯಾಂಟಿಕ್ ಆಗಿಯೂ ಸಹ. ಅದರೂ ಈ ಪ್ರಗತಿಪರ ಲೇಖಕರ ಸಹಜ ಅಭಿವ್ಯಕ್ತಿಯ ಸಾಹಿತ್ಯದಲ್ಲಿ ಇಂಡಿಯಾದ ಸಂದರ್ಭದಲ್ಲಿ ಜನಸಾಮಾನ್ಯರ ಕತ್ತಲು ಬದುಕಿನ ನೋವುಗಳು ನೇರವಾಗಿ ಅನಾವರಣಗೊಂಡಿತು. ಈ ಬಿಚ್ಚುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಆಕ್ರೋಶಕ್ಕೆ ಬದಲಾಗಿ ತಣ್ಣನೆಯ, ಮೌನವಾಗಿ ಪ್ರತಿಭಟಿಸುವ ಧೋರಣೆಯಿತ್ತು. ಆದರೆ ಆದರ್ಶವನ್ನು ಎಂದೂ ಬಿಟ್ಟುಕೊಡಲಿಲ್ಲ. ಈ ಪ್ರಗತಿಪರ ಲೇಖಕರು ಎಲ್ಲಿಯೂ ರೋಚಕತೆಗೆ ಬಲಿಯಾಗಲಿಲ್ಲ. ಎಡಪಂಥೀಯರಾಗಿದ್ದರೂ ಸಿದ್ಧಾಂತದ ಗೊಡ್ಡುತನವನ್ನು, ಮಾರ್ಕ್ಸವಾದದ ಭೌತಿಕವಾದವನ್ನು, “ಕೆಂಬಾವುಟ” ಕಾಮ್ರೇಡ್ತನವನ್ನು, “ಪಾಂಪ್ಲೆಟ್” ಘೋಷಣೆಗಳನ್ನು ಸಾಹಿತ್ಯದಿಂದ ಗಾವುದ, ಗಾವುದ ದೂರ ಇಟ್ಟಿದ್ದರು ಈ ಪ್ರಗತಿಶೀಲ ಲೇಖಕರು. ಇವರ ಈ ನೆಲದ ಜೀವಂತಿಕೆಯಿಂದಾಗಿಯೇ ಇವರ ಸಾಹಿತ್ಯದಲ್ಲಿ ತನ್ನೆಲ್ಲ ಸಹಜತೆಯೊಂದಿಗೆ ರೋಮ್ಯಾಂಟಿಸಂ ಮೈದಾಳಿತ್ತು. ಆದರೆ ಅಲ್ಲಿ ಸೌಂದರ್ಯದ ಮೀಮಾಂಸೆ ಇರಲಿಲ್ಲ. ಅಲ್ಲಿ ಮನದಾಳದ ನೋವು ಮತ್ತು ಪ್ರೀತಿ ಒಟ್ಟೊಟ್ಟಿಗೇ ಚಲಿಸುತ್ತಿದ್ದವು. ದಿಟ್ಟತೆಯ ಹೊಸ ನೋಟಗಳು ತನ್ನೆಲ್ಲ ಸಹಜತೆ ಮತ್ತು ಪ್ರಾಮಾಣಿಕತೆಯೊಂದಿಗೆ ಓದುಗರನ್ನು ಮನದಾಳಕ್ಕೆ ಲಗ್ಗೆಯಿಡುತ್ತಿದ್ದವು.

ಆದರೆ ಈ ದಿಟ್ಟತೆಯಲ್ಲಿ ಬೆಚ್ಚಿ ಬೀಳಿಸುವ, ರೋಚಕತೆಯ ಹಪಾಹಪಿತನ ಲವಲೇಶವೂ ಇರಲಿಲ್ಲ. ಉರ್ದು ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿದ “ಇಸ್ಮತ್ ಚುಗ್ತಾಯಿ” ಆ ಕಾಲದ ದಿಟ್ಟ ಹಾಗೂ ಸ್ತ್ರೀವಾದಿ ಬರಹಗಾರ್ತಿಯಾಗಿದ್ದರು. ಸ್ತ್ರೀ ಸಂವೇದನೆಗಳನ್ನು ತನ್ನ ಮೊನಚು ಭಾಷೆಯಲ್ಲಿ ಬರೆದ ಮೊದಲ ಉರ್ದು ಲೇಖಕಿ. 60 ವರ್ಷಗಳ ಹಿಂದೆಯೇ ಮುಸ್ಲಿಂ ಮಹಿಳೆಯರು ಬುರ್ಖಾ ತೊಡುವ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಚುಗ್ತಾಯಿ 40ರ ದಶಕದಲ್ಲಿ ಬರೆದ ತಮ್ಮ “ಲಿಹಾಫೆ” ಕಥೆಯ ಮೂಲಕ ಸಲಿಂಗಕಾಮದ ಬಗೆಗೆ ಬರೆದಿದ್ದರು. ಇದು ಸಂಪ್ರದಾಯವಾದಿಗಳಲ್ಲಿ ಎಷ್ಟೊಂದು ಕೆರಳಿಸಿತ್ತೆಂದರೆ ಈ ಪುಸ್ತಕವು ಇಂಡಿಯಾದಲ್ಲಿ ಮಾತ್ರವಲ್ಲ ದಕ್ಷಿಣ ಏಷ್ಯಾದಲ್ಲಿಯೂ ನಿಷೇದಿತಗೊಂಡಿತು. ಇವರನ್ನು ಕೋರ್ಟಗೆ ಸಹ ಎಳೆಯಲಾಯಿತು. 40ರ ದಶಕದಲ್ಲಿ ಈ 30ರ ಹರೆಯದ “ಚುಗ್ತಾಯಿ” ಕ್ಷಮೆ ಕೋರಲಿಲ್ಲ. ತಾವು ಬರೆದದ್ದನ್ನು ಸಮರ್ಥಿಸಿಕೊಂಡರು. ವಿಚಾರಣೆಯಲ್ಲಿ ಗೆಲವು ಸಾಧಿಸಿದರು. ಆದರೆ ಚುಗ್ತಾಯಿಯ ಸ್ತ್ರೀವಾದಿ ನೆಲೆಯ ಬಂಡಾಯ ನಮ್ಮ ಕಾಲದ ಲೇಖಕಿ “ತಸ್ಲೀಮ” ಅವರ ಬಂಡಾಯಕ್ಕಿಂತಲೂ ಭಿನ್ನವಾದದ್ದು. “ಇಸ್ಮತ್ ಚುಗ್ತಾಯಿ” ಅವರ ಬಂಡಾಯ ಅಪಾರ ತಿಳುವಳಿಕೆ, ಭದ್ರ ಬುನಾದಿ ಮತ್ತು ಕ್ರಿಯಾಶೀಲತೆಯಿಂದ ಕೂಡಿತ್ತು. ಇವರ ಇನ್ನೊಂದು ಕಥೆ “ಪವಿತ್ರ ಕರ್ತವ್ಯ”ದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗುವ ಹಾಗೂ ತದ ನಂತರದ ವಿದ್ಯಾಮಾನಗಳ ಸುತ್ತ ಹೆಣೆಯಲ್ಪಟ್ಟದ್ದು. ಇದು “ಚುಗ್ತಾಯಿ”ಯವರ ಉತ್ತಮ ಕಥೆಗಳಲ್ಲೊಂದು. ಪಂಜಾಬ್ ಸಾಹಿತ್ಯದ ಮೊಟ್ಟ ಮೊದಲ ಆಧುನಿಕ ಲೇಖಕಿಯೆಂದು ಹೆಸರು ಪಡೆದ “ಅಮೃತಾ ಪ್ರೀತಮ್” ತನ್ನ ವೈಯುಕ್ತಿಕ ಜೀವನದ ವಿಫಲ ದಾಂಪತ್ಯವನ್ನು ಆಧರಿಸಿ ಅನೇಕ ಕಥೆಗಳನ್ನು ಬರೆದರು. ಆದರೆ ಅ ಕಥೆಗಳು ಎಂದೂ ಸ್ವಮರುಕದ, ಎಲ್ಲವನ್ನೂ ಅಬ್ಬರವಾಗಿ ಕೂಗಿ ಚೀರಿಕೊಳ್ಳುವ ಗುಣಗಳನ್ನು ಹೊಂದಿರಲಿಲ್ಲ. ಬದಲಾಗಿ ಆ ಕಥೆಗಳಲ್ಲಿ ತಣ್ಣನೆಯ ನೋವಿತ್ತು. ಈ ನೋವು ಓದುಗರಲ್ಲಿ ವಿಷಾದ ಮೂಡಿಸುತ್ತಿತ್ತು. “ಅಮೃತಾ ಪ್ರೀತಮ್” ತನ್ನ ಅನುಭವಗಳನ್ನು ಕಥೆಗಳ, ಕವನಗಳ ರೂಪದಲ್ಲಿ ಹೇಳುವಾಗ ಬಳಸುತ್ತಿದ್ದ ಅನೇಕ ರೂಪಕಗಳು ಸಂಕೀರ್ಣವಾಗಿದ್ದರೂ ತನ್ನ ಪ್ರಾಮಾಣಿಕತೆಯ ಕಾರಣದಿಂದಾಗಿಯೇ ಓದುಗರ ಪ್ರಜ್ನೆಗೆ ತಟ್ಟುತ್ತಿತ್ತು.

ಈ ಲೇಖಕಿಯ “ರಶೀದಿ ಚೀಟಿ” ಆತ್ಮಕಥೆ ಒಂದು ಮಾದರಿ ಆತ್ಮಕಥೆ. ಈಕೆಯ ಬರೆದ ನಾನು ನಾಳಿನ ತನಕ ಇರಬೇಕಾಗಿಲ್ಲ ಎನ್ನುವ ಕವನವನ್ನು ಪಂಜಾಬಿನ ಜನಪದ ಗಾಯಕರು ಹಾಡಿನ ಮೂಲಕ ಅಲ್ಲಿನ ಸಾಮಾನ್ಯ ಜನತೆಗೆ ತಲುಪಿಸಿದ್ದರು. ದೇಶ ವಿಭಜನೆಯ ಕಾಲದ ಘಟನೆಗಳ ಕುರಿತಾದ “ಪಿಂಜಾರ್” ಕಾದಂಬರಿ ಆ ವಿಭಜನೆ ಕಾಲದ ನೋವನ್ನು. ವಿದಾಯದ ವಿರಹವನ್ನು ಅತ್ಯಂತ ಶಕ್ತಿಶಾಲಿಯಾಗಿ ಕಟ್ಟಿಕೊಟ್ಟಿತು. ಗುಲ್ಜಾರ್ ಹೇಳುತ್ತಾರೆ ‘ಅಮೃತಾ ಪ್ರೀತಮ್‌ಜೀ ತಮ್ಮ ಪಂಜಾಬಿ ಕವನದ ಪುಟಗಳ ಮೂಲಕ ಇಡೀ 20ನೇ ಶತಮಾನವನ್ನು ಸಂಚರಿಸುತ್ತಾರೆ. ಸಿನಿಮಾ ರಂಗದಲ್ಲಿ ಪ್ರೇಮ ಗೀತೆಗಳನ್ನು ಬರೆಯುತ್ತಿದ್ದರೂ ಸಹ ಸಾಹಿರ್ “ಯೆ ಮೆಹಲೋ, ಯೆ ತಕ್ತೋ, ಯೆ ತಾಜೋಂಕಿ ದುನಿಯಾ, ಯೆ ದುನಿಯಾ ಅಗರ ಮಿಲ್ಭಿ ಜಾಯೆತೊ ಕ್ಯಾಹೆ, ಯೆ ದುನಿಯಾ ಅಗರ ಮಿಲ್ಭಿ ಜಾಯೆತೊ ಕ್ಯಾಹೆ”, ಎಂದು ಅತ್ಯಂತ ಧೀಮಂತಿಕೆಯಿಂದ ನಿರಾಕರಣೆಯ ಅರ್ಥಪೂರ್ಣ ಧ್ವನಿಯನ್ನು ತನ್ನ ಮರೆಯಲಾರದ ಸಾಹಿತ್ಯದ ಮೂಲಕ ವ್ಯಕ್ತಪಡಿಸುತ್ತಾನೆ. ಆ ಸಂದರ್ಭದಲ್ಲಿ ಇದು ಗಳಿಸುವ ಯಶಸ್ಸು ಬಲು ಶ್ರೇಷ್ಟವಾದದ್ದು. ಭೀಷ್ಮ ಸಹಾನಿಯವರು ತಮ್ಮ “ತಮಸ್” ಕಾದಂಬರಿಯಲ್ಲಿ ಎಲ್ಲಿಯೂ ಎಡಪಂಥೀಯ ಧೋರಣೆಗಳನ್ನು ತುರುಕುವುದಿಲ್ಲ. ಬದಲಾಗಿ ಈ ರಾಜಕೀಯ ಕಾದಂಬರಿಯಲ್ಲಿ ನೇರವಾಗಿ ಸ್ವಾಂತ್ರ್ಯಪೂರ್ವದ ರಾಷ್ಟ್ರೀಯವಾದಿ ಚಳವಳಿಗಳ ಧೋರಣೆಗಳು ಮತ್ತು ಆ ಕಾಲಘಟ್ಟದ ಒಟ್ಟೂ ವಿದ್ಯಾಮಾನಗಳನ್ನು ಅತ್ಯಂತ ಸ್ಥಿತಪ್ರಜ್ಞೆಯಿಂದ, ಮಾನವತಾವಾದಿ ಲೇಖಕನ ಜೀವಂತಿಕೆಯ ನೆಲೆಯಿಂದ ಕಟ್ಟಿಕೊಡುತ್ತಾರೆ. ಮತೀಯವಾದಿ ಆರೆಸಸ್ ಕೋಮುಗಲಭೆಗಳನ್ನು ಹುಟ್ಟು ಹಾಕುವ ದೃಶ್ಯಗಳನ್ನು ನಿರೂಪಿಸುವ ಸಂದರ್ಭದಲ್ಲೂ ಸಹ ರೋಚಕತೆಗೆ ಬಲಿಯಾಗುವುದಿಲ್ಲ.

ಭಾರತದ ವಿಭಜನೆಯ ಸಂದರ್ಭದಲ್ಲಿ ಮಹಿಳೆಯರು ಬಲತ್ಕಾರವಾಗಿ ಅಪಹರಿಸಲ್ಲಡುತ್ತಿದ್ದರು. ಅನೇಕ ತಿಂಗಳುಗಳ ನಂತರ ಎರಡೂ ರಾಷ್ಟ್ರಗಳು ಅಪಹರಣಗೊಂಡ ಮಹಿಳೆಯರನ್ನು ಬದಲಾಯಿಕೊಳ್ಳುವ ಆ ಮೂಲಕ ಈ ಮಹಿಳೆಯರನ್ನು ತಮ್ಮ ತಮ್ಮ ಗೂಡಿಗೆ ಮರಳಿ ಹೋಗುವ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದರು. ಆದರೆ ಈ ಅಮಾನವೀಯ ಪ್ರಕ್ರಿಯೆಯಲ್ಲಿ ಮಹಿಳೆ ವೈಯುಕ್ತಿಕವಾಗಿ ಅನುಭವಿಸುವ ಅವಮಾನಗಳನ್ನು, ನೋವುಗಳನ್ನು ರಾಜೇಂದ್ರಸಿಂಗ್ ಬೇಡಿಯವರು ತಮ್ಮ ಕಥೆ “ಲಾಜವಂತಿ”ಯಲ್ಲಿ ಎಲ್ಲಿಯೂ ರೋಚಕತೆಗೆ ಬಲಿಯಾಗದೆ ಶಕ್ತಿಶಾಲಿಯಾಗಿ ನಿರೂಪಿಸುತ್ತಾರೆ. ಕಡೆಗೆ ಓದುಗನಲ್ಲಿ ಉಳಿಯುವುದು ತೀವ್ರ ವಿಷಾದ ಮತ್ತು ಪಾಪ ಪ್ರಜ್ಞೆ. ಇದು ಮಂಟೋ ಕಥೆಗಳ ಸಂದರ್ಭದಲ್ಲಿಯೂ ಅಷ್ಟೇ ನಿಜ. ಈ ಸಾದತ್ ಮಂಟೋನ ಕಥೆಗಳು ಮನುಕುಲದ ದುರಂತತೆಯನ್ನು ಯಶಸ್ವಿಯಾಗಿ ದಾಖಲಿಸುತ್ತವೆ. 1932 ರಲ್ಲಿ ಅಹ್ಮದ್ ಅಲಿ ಮತ್ತು ಸಾಜ್ಜದ್ ಜಾಹೀರ್, ಮಹಮ್ಮದ್ ಜಫರ್, ರಶೀದ್ ಜಹಾನ್ ಒಟ್ಟಾಗಿ ಮೊಟ್ಟಮೊದಲ ಬಾರಿಗೆ ಸಂಪಾದಿಸುವ “ಅಂಗಾರೆ” ಕಥಾ ಸಂಕಲನದಲ್ಲಿ ಸರಳವಾಗಿ ಆದರೆ ಅರ್ಥಗರ್ಭಿತವಾಗಿ ತನ್ನ ಬಂಡಾಯವನ್ನು ಹುಲ್ಲಿನ ಗರುಕೆಯಂತೆ ಮೂಡಿಸುತ್ತಾರೆ. ಇಲ್ಲಿನ ರಾಜಕೀಯ ರ್‍ಯಾಡಿಕಲ್‌ತನವು ಯುರೋಪ್ ಮಾದರಿಯಿಂದ ಪ್ರೇರಣೆಗೊಂಡಿತ್ತು. ಆದರೆ ಈ ತಣ್ಣನೆಯ, ತೀಕ್ಷ್ಣ ಬಂಡಾಯ ಅಂದಿನ ಭಾರತ ಸರ್ಕಾರವನ್ನು ಕೆರಳಿಸುತ್ತದೆ. ಪ್ರಕಟಣೆಗೊಂಡು ಕೆಲವು ತಿಂಗಳುಗಳೊಳಗೆ  “ಅಂಗಾರೆ” ಪುಸ್ತಕವನ್ನು ಸರ್ಕಾರ ನಿಷೇಧಿಸುತ್ತದೆ. ಆದರೆ ಮೇಲಿನ ಲೇಖಕರು ಒತ್ತಡಕ್ಕೆ ಮಣಿಯದೆ “ಡಿಫೆನ್ಸ್ ಆಫ್ ಅಂಗಾರೆ” ಎನ್ನುವ ಹೇಳಿಕೆಯ ಸಂದರ್ಭದಲ್ಲಿ ಈ ಪ್ರಗತಿಪರ ಲೇಖಕರ ಸಂಘಟನೆ ಮೈದಾಳುತ್ತದೆ. ಈ ಪ್ರಗತಿಪರ ಲೇಖಕರು ಉರ್ದು ಸಾಹಿತ್ಯಕ್ಕೆ ನೀಡಿದ ಹೊಳಪು, ತಾಜಾತನ, ಸಿನಿಕತೆ ಮತ್ತು, ನೋವಿನ ಲೇಪನದ ತೀಕ್ಣ್ಷತೆ ಮತ್ತು ನೇರವಾದ ಪ್ರತಿಭಟನೆ ಎಲ್ಲವನ್ನೂ ಒಳಗೊಂಡ Intellectual touch  ಎಷ್ಟು ಶ್ರೇಷ್ಟವಾಗಿತ್ತೆಂದರೆ 75 ವರ್ಷಗಳ ನಂತರವೂ ಅದು ಇಂದಿಗೂ ತನ್ನ ಜೀವಂತಿಕೆಯನ್ನು ಕಳೆದುಕೊಂಡಿಲ್ಲ. ಕತ್ತಲ ಗರ್ಭವನ್ನು ಸೀಳಿ ಬೆಳಕಿನೆಡೆಗೆ ಪ್ರಯಾಣವನ್ನು ಬೆಳೆಸುವ ತಾತ್ವಿಕ ಮಾರ್ಗವನ್ನು ಈ ಲೇಖಕರು ನಂಬಿದ್ದರು.

ಈ ಕಾರಣಕ್ಕಾಗಿಯೇ ಇವರ ಕಥೆಗಳಲ್ಲಿ ಕಾದಂಬರಿಗಳಲ್ಲಿ, ಕವಿತೆಗಳಲ್ಲಿ, ಗಝಲ್‌ಗಳಲ್ಲಿ ಕತ್ತಲಲ್ಲಿರುವ ಹೆಣ್ಣು ಸದಾ ಕಾಲ ಬಿಡುಗಡೆಯ ಪ್ರವಾಹದಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾಳೆ. ತುಳಿತಕ್ಕೊಳಗಾದ ರೈತ ತನ್ನ ಆತ್ಮಾಭಿಮಾನವನ್ನು ಬಿಟ್ಟುಕೊಡುವುದಿಲ್ಲ. 85 ವರ್ಷಗಳ ಹಿಂದೆ ಇಂಡಿಯಾದ ಉರ್ದು ಲೇಖಕರು ತಮ್ಮ ಸಮಾಜದ ರಾಜಕೀಯ ಸುಳಿಯೊಳಗೆ ಸಿಲುಕಿದ್ದರು. ಇದರಿಂದ ಬಿಡುಗಡೆಗೆ ಅವರು ಕಂಡುಕೊಂಡಿದ್ದು ಒಂದೇ ದಾರಿ ಅದೇ ಸಾಮಾಜಿಕ ವಿಮರ್ಶೆಯನ್ನು ಒಳಗೊಂಡ ವಾಸ್ತವವಾದಿ ಮಾರ್ಗ. ಈ ವಾಸ್ತವಾದಿವಾದಿ ಮಾರ್ಗವನ್ನು ಆ ಕಾಲಘಟ್ಟದ ಉರ್ದು ಲೇಖಕರು ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆಗೆ ರಹದಾರಿಯಾಗಿಯೂ ರೂಪಿಸಿಕೊಂಡರು. ಈ ಸಂದರ್ಭದಲ್ಲಿ ಸೋವಿಯತ್ ಯೂನಿಯನ್‌ನಲ್ಲಿ ಜರುಗಿದ ರಷ್ಯಾ ಕ್ರಾಂತಿ ಸಹ ಇವರ ಜಾಗೃತಾವಸ್ಥೆಯೊಳಗೆ ಬೇರು ಬಿಟ್ಟಿತು.ಈ ಉರ್ದು ಲೇಖಕರು 19ನೇ ಶತಮಾನದ ಮಿರ್ಜಾ ಗಾಲಿಬನಿಂದ ಅನುಭಾವವಾದದ ರೋಮ್ಯಾಂಟಿಸ್ಮ್‌ನ್ನು, 20ನೇ ಶತಮಾನದ ಆರಂಭದ ಇಕ್ಬಾಲ್ ಮತ್ತು ಪ್ರೇಮಚಂದ್ರಿಂದ ವಸಾಹತುಶಾಹೀ ವಿರೋದಿ, ಫ್ಯೂಡಲ್ ವಿರೋಧಿ, ಬಂಡವಾಳಶಾಹಿ ವಿರೋಧಿ ಸಾಮಾಜಿಕ ಜವಾಬ್ದಾರಿಯ ಪ್ರೇರಣೆಗಳನ್ನು ಪಡೆದುಕೊಂಡೇ ಈ ಪ್ರಗತಿಪರ ಲೇಖಕರ ಸಂಘಟನೆಯನ್ನು ರೂಪಿಸಿದರು. 40 ಮತ್ತು 50ನೇ ದಶಕಗಳಲ್ಲಿ ಅತ್ಯಂತ ಶ್ರೇಷ್ಟವೆನ್ನುಬಹುದಾದ ಸಾಹಿತ್ಯವನ್ನು ರಚಿಸಿದರು. ಆದರೆ ಇವರಲ್ಲೂ ಅನೇಕ ಬಗೆಯ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತಲೆದೋರಿದವು. 50ರ ದಶಕದಲ್ಲಿ ಟಿಸಿಲೊಡೆದ ಈ ವಿಭಿನ್ನತೆಯ ವೈಚಾರಿಕತೆಯ ಜಗಳಗಳು ಅವರ ಜೀವಿತ ಕಾಲದವರೆಗೂ ಮುಂದುವರೆಯಿತು. ಒಂದು ಕಡೆ ಸಜ್ಜಿದ್ ಜಹೀರ್, ಅಲಿ ಸರ್ದಾರ್ ಜಫ್ರಿರವರಂತಹ ಸಿದ್ದಾಂತವಾದಿಗಳಿದ್ದರೆ ಮತ್ತೊಂದು ಕಡೆ ಇಸ್ಮತ್ ಚುಗ್ತಾಯಿ, ಮಂಟೋ (ನಂತರ ಇವರು ಪಾಕೀಸ್ತಾನಕ್ಕೆ ಹೋಗಿ ನೆಲೆಸಿದರು), ಇಫ್ರತ್, ಅಕ್ತರ್ ಹುಸೇನ್‌ರವರಂತಹ ಸೂಕ್ಷ್ಮವಾದಿ ಸಾಹಿತಿಗಳಿದ್ದರು. ಇವರ ನಡುವಿನ ಭಿನ್ನಾಭಿಪ್ರಯಗಳು ಅನೇಕ ಬಾರಿ ಸಾಹಿತ್ಯದ ಮಟ್ಟಿಗೆ, ಸೈದ್ಧಾಂತಿಕ ಬೇಧೀಯತೆಗೆ ಸೀಮಿತವಾಗಿದ್ದರೂ ಕೆಲವೊಮ್ಮೆ ವೈಯುಕ್ತಿಕ ಮಟ್ಟಕ್ಕೂ ಇಳಿದು ತೀವ್ರವಾದ ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತಿದ್ದವು.

ಈ ಪ್ರಗತಿಶೀಲ ಚಳವಳಿಗೆ ನಾಂದಿ ಹಾಡಿದ ಅಹ್ಮದ ಅಲಿ ಅನೇಕ ಬಾರಿ ತಟಸ್ಥ ಧೋರಣೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೂ ನಮ್ಮ ಎಲ್ಲ ಪ್ರಗತಿಪರ ಸಂಘಟನೆಗಳಿಗೂ ಆದಂತೆ ಈ ಪ್ರಗತಿಶೀಲ ಸಂಘಟನೆಯು ಸಹ ಕೊನೆ ಕೊನೆಗೆ ಆದರ್ಶಗಳು ಮತ್ತು ಬದ್ಧತೆಗಳು ಒಂದೇ ಆಗಿದ್ದರೂ ವೈಯುಕ್ತಿಕ ಹಿತಾಸಕ್ತಿಗಳೇ ಮೇಲುಗೈ ಸಾಧಿಸಿದ್ದುದರ ಪರಿಣಾಮವಾಗಿ ಅನೇಕ ಬಾರಿ ವಿಘಟನೆಗಳಿಗೆ ಒಳಗಾಯಿತು. 70ರ ದಶಕದ ವೇಳೆಗೆ ಸಹಜವಾಗಿಯೇ ಹಿನ್ನೆಲೆಗೆ ಸರಿದ ಈ ಸಾಹಿತ್ಯ ಚಳವಳಿ ನಂತರ ಅವಜ್ನೆಗೆ ಈಡಾಗಿದೆ. ಇಂದು ತನ್ನ ಮೂಲ ಹೆಸರಿನೊಂದಿಗೇ ಸಂಘಟನೆ ನಡೆಸುತ್ತಿರುವ ಈ ಪ್ರಗತಿಪರ ಲೇಖಕರ ಸಂಘಟನೆಗೆ ಇಂದು ಆ 40 ಹಾಗೂ 50ರ ದಶಕಗಳ ರೋಮ್ಯಾಂಟಿಕ್ ಖದರ್ ಇಲ್ಲ, ಆ ಮುಗ್ಧ ಆದರ್ಶಗಳಿಲ್ಲ, ಆ ಇಸ್ಮತ್ ಚುಗ್ತಾಯಿ, ಮಂಟೋ, ಅಹ್ಮದ್ ಅಲಿರಂತಹವರ ವಿಕ್ಷಿಪ್ತತೆಯ, ದಿಟ್ಟತೆಯ ವ್ಯಗ್ರ ವ್ಯಕ್ತಿತ್ವವೇ ಇಲ್ಲ, ಕೆ.ಎ.ಅಬ್ಬಾಸರ ಸರಳತೆ ಇಲ್ಲ, ಅಮೃತಾ ಪ್ರೀತಂಳ ಕ್ರಿಯಾಶೀಲ ದಿಟ್ಟತೆಯ ರೋಮ್ಯಾಂಟಿಕ್ ಮಾದರಿ ಇಲ್ಲವೇ ಇಲ್ಲ. ಆದರ್ಶವನ್ನಾಧರಿಸಿದ ಸಾಹಿತ್ಯಕ್ಕೆ, ಎಡಪಂಥೀಯ ಬದ್ಧತೆಯನ್ನಾಧರಿಸಿದ ಸಾಹಿತ್ಯಕ್ಕೆ ತನ್ನದೇ ಬಗೆಯಲ್ಲಿ ಮಧುರ ರೋಮಾಂಚನವನ್ನು ತಂದು ಕೊಟ್ಟ ಈ ಲೇಖಕರು ಮತ್ತು ಲೇಖಕಿಯರ ಬಿಟ್ಟನೆಂದರೂ ಬಿಡದ ನೆನಪುಗಳು ಮಾತ್ರ ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ.

ಆದರೆ ಈ ಸಾಹಿತ್ಯ ಚಳವಳಿಯ ಸೈದ್ಧಾಂತಿಕ ಧೋರಣೆಯನ್ನು ಅನುಸರಿಸಿಯೇ ನಮ್ಮಲ್ಲಿ ಹುಟ್ಟಿಕೊಂಡ ಪ್ರಗತಿಶೀಲ ಚಳವಳಿಯ ಲೇಖಕರು 40 ರಿಂದ 60ರ ದಶಕಗಳವರೆಗೂ ವಿಫುಲವಾದ ಸಾಹಿತ್ಯವನ್ನು ರಚಿಸಿದರು. ಮೇಲಿನ ಉರ್ದು ಹಾಗೂ ಹಿಂದಿ ಲೇಖಕರು ತಮ್ಮ ಹಿಂದಿನ ತಲೆಮಾರಿನ ಜಡತ್ವವನ್ನು ಟೀಕಿಸಿದಂತೆಯೇ ನಮ್ಮ ಪ್ರಗತಿಶೀಲ ಸಾಹಿತಿಗಳು ನವೋದಯದವರನ್ನು ಮಡಿವಂತಿಕೆಯ, ಕಂದಾಚಾರಿ ಸಾಹಿತಿಗಳೆಂದು ದೂಷಿಸಿಸಿದರು. ಆದರೆ ಮರಳಿ ಕಟ್ಟುವ ಹಾದಿಯಲ್ಲಿ ಉರ್ದು ಹಾಗೂ ಹಿಂದೀ ಭಾಷೆಯ ಪ್ರಗತಿಶೀಲ ಲೇಖಕರು ಸಾಧಿಸಿದ ಯಶಸ್ಸನ್ನು ನಮ್ಮ ಪ್ರಗತಿಶೀಲ ಲೇಖಕರು ಸಾಧಿಸಲಾಗಲಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು. ಬಲು ಮುಖ್ಯ ಕಾರಣವೆಂದರೆ ನಮ್ಮಲ್ಲಿನ ಹಿಂದೂ ಧರ್ಮದ ಅಪಾಯಕಾರಿ ಧೋರಣೆಗಳು ಮತ್ತು ವರ್ಣಾಶ್ರಮದ ಸಂಕೀರ್ಣ ನೆಲೆಗಳು ನಮ್ಮ ಪ್ರಗತಿಶೀಲ ಸಾಹಿತಿಗಳ ಗ್ರಹಿಕೆಗೆ ಆಳವಾಗಿ ತಟ್ಟಲೇ ಇಲ್ಲ. ಹೀಗಾಗಿಯೇ ಇವರು ಮಾರ್ಕ್ಸವಾದವನ್ನು ತೀರಾ ತೆಳುಮಟ್ಟದಲ್ಲಿ ಗ್ರಹಿಸಿ ಈ ಗ್ರಹಿಕೆಯನ್ನೂ ಸಹ ಸಾಹಿತ್ಯದ ಮಾದರಿಗೆ ಒಗ್ಗಿಸಿಕೊಳ್ಳುವಾಗ ಎಡವಿದರು. ಇದರ ಪರಿಣಾಮವಾಗಿ ಅನೇಕ ಬಾರಿ ತೀರ ತೆಳುವಾದ ಕೃತಿಗಳು ರಚಿತವಾದವು. ಇದರ ವಿಮರ್ಶೆಗೆ ಇದು ತಕ್ಕುದಾದ ವೇದಿಕೆಯಲ್ಲ. ಆದರೆ ಬಸವರಾಜ ಕಟ್ಟೀಮನಿಯವರ ಜರತಾರೀ ಜಗದ್ಗುರು, ಜ್ವಾಲಾಮುಖಿ, ನಿರಂಜನರ ಚಿರಸ್ಮರಣೆ, ತರಾಸು ಅವರ ಚಂದವಳ್ಳಿಯ ತೋಟ ಮುಂತಾದ ಕಾದಂಬರಿಗಳು ಇಂದಿಗೂ ತಮ್ಮ ಶ್ರೇಷ್ಟತೆಯನ್ನು ಉಳಿಸಿಕೊಂಡಿವೆ. ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಇಂದಿಗೂ ನಮ್ಮನ್ನು ಕಾಡುತ್ತವೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈ ಲೇಖಕರು ಕನ್ನಡದಲ್ಲಿ ಓದುವ ಬಲು ದೊಡ್ಡ ಓದುಗ ವಲಯವನ್ನು ಸೃಷ್ಟಿಸಿದರು. ಈ ಸಾಧನೆಯನ್ನು ಅಳೆಯಲು ಸಾಧ್ಯವೇ ಇಲ್ಲ. ಅನಕೃರವರು ತಮ್ಮ ಸೋಲರಿಯದ ಕನ್ನಡತನದ ಮೂಲಕ ಹುಟ್ಟಿಹಾಕಿದ ಕನ್ನಡ ಚಳವಳಿಯನ್ನು ಬೆಲೆ ಕಟ್ಟಲಾಗುವುದೇ ಇಲ್ಲ. ಅನಕೃ ಬಾರಿಸಿದ ಕನ್ನಡದ ಡಿಂಡಿಮದ ಆದರ್ಶವೇ ಇಂದಿಗೂ ಪ್ರಜ್ಞಾವಂತರನ್ನು ಪೊರೆಯುತ್ತಿರುವುದು. ತಮ್ಮ ಇಳಿ ವಯಸ್ಸಿನಲ್ಲಿಯೂ ನಿರಂಜನರು ಸಾಹಿತ್ಯದ ಪ್ರೀತಿಯನ್ನು ಬಿಟ್ಟುಕೊಡದೆ ವಿಶ್ವಕಥಾ ಕೋಶ ಮಾಲಿಕೆಯಲ್ಲಿ ಯುರೋಪಿನ, ಪಶ್ಚಿಮ, ಏಷ್ಯಾ, ಆಫ್ರಿಕ ರಾಷ್ಟ್ರಗಳ ಕಥೆಗಳನ್ನು ಕನ್ನಡಕ್ಕೆ ಸಂಪಾದಿಸಿ ಕೊಟ್ಟರು. 80ರ ದಶಕದಲ್ಲಿ ನಮ್ಮಂತಹ ಲಕ್ಷಾಂತರ ಜನಸಾಮಾನ್ಯರಲ್ಲಿ ಜಾಗತಿಕ ಸಾಹಿತ್ಯದ ಪರಿಚಯ ಮಾಡಿಸಿದ್ದು ಬಲು ದೊಡ್ಡ ಕನ್ನಡಮ್ಮನ ಸೇವೆ. ಈ ಪ್ರಗತಿಶೀಲ ಲೇಖಕರ ಈ ಕನ್ನಡತನ ದಶಕಗಳು ಕಳೆದರೂ ನಮ್ಮ ಗ್ರಹಿಕೆಯಿಂದ ಸ್ವಲ್ಪವೂ ಪಲ್ಲಟಗೊಂಡಿಲ್ಲ.