Monthly Archives: June 2012

ಸೂರಿಲ್ಲದವರ ಊರಲ್ಲಿ ಹೊಸ ಕಾನೂನು – ನಿವೇಶನ ಶಾಸಕರ ಹಕ್ಕು!!

– ಶಿವರಾಮ್ ಕೆಳಗೋಟೆ

ಕಾನೂನು ಸಚಿವ ಸುರೇಶ ಕುಮಾರ್ ಅಕ್ರಮವಾಗಿ ಬಿಡಿಎ ನಿವೇಶನ ಪಡೆದ ಸುದ್ದಿ ಬಹಿರಂಗವಾದ ನಂತರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರು ‘ಇದೇನು ಅಂತಹ ಮಹಾಪರಾಧವಲ್ಲ, ಬಿಡಿಎ ನಿವೇಶನ ಶಾಸಕರ ಹಕ್ಕು’ ಎಂದು ರಾಜೀನಾಮೆ ಒಪ್ಪಲು ನಿರಾಕರಿಸಿದ್ದಾರೆ. ರಾಜೀನಾಮೆ ಕೊಡುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟದ್ದು. ಅಂತೆಯೆ ರಾಜೀನಾಮೆ ಸ್ವೀಕರಿಸುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟದ್ದು. ಈ ಪ್ರಕರಣದ ಮೂಲಕ ‘ಪ್ರಾಮಾಣಿಕ’ ಸಚಿವರ ಮುಖವಾಡದ ಜೊತೆಗೆ ಕೆಲವು ದೃಶ್ಯ ಮಾಧ್ಯಮ ಸಂಸ್ಥೆಗಳಲ್ಲಿನ ಪತ್ರಕರ್ತರ ‘ಸಾಚಾತನ’ವೂ ಬಯಲಾಗಿದೆ.

ಮಾಹಿತಿ ಹಕ್ಕು ಅಧಿನಿಯಮದಡಿ ಭಾಸ್ಕರನ್ ಎಂಬುವವರು ಮಾಹಿತಿ ಪಡೆದು ವಿಷಯ ಬಹಿರಂಗ ಮಾಡಿದ್ದಾರೆ. ಭಾಸ್ಕರನ್ ಅವರ ಹಿನ್ನೆಲೆ, ಉದ್ದೇಶ ಏನೇ ಇರಲಿ, ಅವರ ಬಳಿ ಇರುವ ಮಾಹಿತಿ ಎಷ್ಟರಮಟ್ಟಿಗೆ ಅಧಿಕೃತ ಎನ್ನುವುದಷ್ಟೆ ಮುಖ್ಯ. ಬಿಡಿಎ ಕಾನೂನು ಪ್ರಕಾರ ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಕೃಷಿ ಅಥವಾ ವಾಣಿಜ್ಯ ಭೂಮಿ ಹೊಂದಿದ ಯಾರಿಗೂ ಬಿಡಿಎ ನಿವೇಶನ ಪಡೆಯಲು ಅರ್ಹತೆ ಇಲ್ಲ. ಅರ್ಜಿದಾರರು ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಭೂಮಿ ಹೊಂದಿಲ್ಲ ಎಂದು ಅಫಿಡವಿಟ್ ಸಲ್ಲಿಸಲೇಬೇಕು.

ಅನೇಕರಿಗೆ ಗೊತ್ತಿರಬಹುದು, ಮಾಜಿ ಸಚಿವ ಮುಮ್ತಾಜ್ ಅಲಿ ಖಾನ್ ಇದೇ ವಿಚಾರವಾಗಿ ಬಿಡಿಎ ಸೈಟ್ ಬೇಡ ಎಂದರು. ಮುಖ್ಯಮಂತ್ರಿ ಆದೇಶದ ಮೇರೆಗೆ ಅವರಿಗೆ ನಿವೇಶನ ಮಂಜೂರಾಗಿತ್ತು. ಬಿಡಿಎ ಆಯುಕ್ತರು ಖಾನ್ ಅವರನ್ನು ಸಂಪರ್ಕಿಸಿ ಅಫಿಡವಿಟ್ ಕೊಡಿ ಎಂದರು. ಆಗ ಖಾನ್ ಅವರು ತಾನು ಹಾಗೆ ಅಫಿಡವಿಟ್ ಸಲ್ಲಿಸಲಾರೆ, ಏಕೆಂದರೆ ನಾನು ಈಗಾಗಲೇ ಬೆಂಗಳೂರಿನಲ್ಲಿ ಒಂದು ಮನೆಯ ಒಡೆಯನಾಗಿದ್ದೇನೆ ಎಂದು ಪತ್ರ ಬರೆದು ಸುಮ್ಮನಾದರು.

ಸತ್ಯ, ಪ್ರಾಮಾಣಿಕತೆಯನ್ನೇ ಉಸಿರಾಡುತ್ತೇನೆ ಅಥವಾ ಅಂತಹದೊಂದು ಇಮೇಜು ಇಟ್ಟುಕೊಂಡವರಿಗೆ ಮುಮ್ತಾಜ್ ಅಲಿ ಖಾನ್ ಉದಾಹರಣೆ ಏಕೆ ನೆನಪಾಗಲಿಲ್ಲ? ಅಮ್ಮನ ಹೆಸರಿನಲ್ಲಿದ್ದ, ಮಗಳ ಹೆಸರಿನಲ್ಲಿದ್ದ ಮನೆ/ನಿವೇಶನ ಮಾರಾಟ ಮಾಡಿ ಬಿಡಿಎ ನಿವೇಶನ ಮಂಜೂರಾದದ್ದನ್ನು ಸರಿ ಎಂದು ಸಮರ್ಥಿಸುವ ಅಗತ್ಯವೇನಿತ್ತು? ಮುಖ್ಯಮಂತ್ರಿಯಂತೂ ಈ ಪ್ರಕರಣದಲ್ಲಿ ಒಂದು ಹೆಜ್ಚೆ ಮುಂದೆ ಹೋಗಿ ‘ಬಿಡಿಎ ನಿವೇಶನ ಶಾಸಕರ ಹಕ್ಕು’ಎಂದಿದ್ದಾರೆ. ಬಿಡಿಎ ಕಾನೂನು ಅವರಿಗೆ ಗೊತ್ತಾ? ಕಾನೂನಿನ ಯಾವ ಮೂಲೆಯಲ್ಲಾದರೂ ‘ಶಾಸಕರ ಹಕ್ಕು’ಅಂತ ಇದೆಯಾ?

ನಾಡಿನ ಅನೇಕ ಸಂಸದರು, ಶಾಸಕರು ಹೀಗೆ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ಬೆಂಗಳೂರಿನ ಅನೇಕ ಶಾಸಕರು ವೈಯಕ್ತಿಕವಾಗಿ ಬೃಹತ್ ಬಂಗಲೆಗಳನ್ನು ಹೊಂದಿದ್ದಾಗ್ಯೂ ಬಿಡಿಎ ನಿವೇಶನಕ್ಕಾಗಿ ಅರ್ಜಿ ಹಾಕಿ ಪಡೆದಿದ್ದಾರೆ. ಚಿತ್ರದುರ್ಗದ ಸಂಸದ ಜನಾರ್ದನ ಸ್ವಾಮಿ ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಮೂರು ನಿವೇಶನಗಳನ್ನು (ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ಟಿನ ಪ್ರಕಾರ) ಇಟ್ಟುಕೊಂಡಿದ್ದರೂ ಮತ್ತೊಂದು ನಿವೇಶನವನ್ನು ಬಿಡಿಎ ಮೂಲಕ ಪಡೆದರು. ನಿಮಗೆ ನೆನಪಿರಲಿ, ಇವರ ನಿವೇಶನಗಳೆಲ್ಲವೂ ಮೂರರಿಂದ ನಾಲ್ಕು ಕೋಟಿ ರೂ ಬೆಲೆಬಾಳುವಂತಹವು, ಆದರೆ ಇವರು ಕಟ್ಟಿದ್ದು ಕೇವಲ ಎಂಟರಿಂದ ಹತ್ತು ಲಕ್ಷ ರೂ ಮಾತ್ರ! ಇಂತಹ ಕೃತ್ಯಗಳನ್ನು ಸಮರ್ಥಿಸಬೇಕೆ? ಬೆಂಗಳೂರಿನಲ್ಲಿ ಒಂದು ನಿವೇಶನ ಬೇಕು ಎಂದು ಹತ್ತಾರು ವರ್ಷಗಳಿಂದ ಅರ್ಜಿ ಹಿಡಿದು ಕಾಯುತ್ತಿರುವವರ ಪಾಡು ಕೇಳುವವರ್ಯಾರು?

ಕೆಲ ಟಿವಿ ಚಾನೆಲ್ ಆಂಕರ್‌ಗಳು ಏಕಾಏಕಿ ಸುರೇಶ್ ಕುಮಾರ್ ಸಮರ್ಥನೆಗೆ ನಿಂತಿದ್ದಂತೂ ವಿಶೇಷವಾಗಿತ್ತು. ಆರೋಪ ಬಂದಾಕ್ಷಣ ಅವರು ರಾಜೀನಾಮೆ ಕೊಟ್ಟು ಇತರರಿಗಿಂತ ಭಿನ್ನವಾಗಿದ್ದಾರೆ ಎಂದು ಅವರು ಹೊಗಳಿದರು. ಅಲ್ಲಾರೀ, ಬಿಡಿಎ ಸೈಟ್ ಪ್ರಕರಣ ಮಾಧ್ಯಮ ಮೂಲಕ ಬಹಿರಂಗ ಆಗಿದ್ದು ಅವರಿಗೆ ಬೇಸರ ಆಗಿ ರಾಜೀನಾಮೆ ಕೊಟ್ಟರಾ, ಅಥವಾ ತಮ್ಮಿಂದ ತಪ್ಪಾಗಿದೆ ಅಂತ ಅವರಿಗೆ ಮನವರಿಕೆ ಆಗಿ ರಾಜಿನಾಮೆ ನಿರ್ಧಾರ ತೆಗೆದುಕೊಂಡರಾ? ಇನ್ನೂ ಸ್ಪಷ್ಟವಾಗಿಲ್ಲ. ವಿಚಿತ್ರ ಅಂದರೆ, ಇತರ ಪಕ್ಷಗಳ ನಾಯಕರೂ ಇವರ ಬೆಂಬಲಕ್ಕೆ ನಿಂತಿದ್ದಾರೆ. ಕಾರಣ ಅವರಲ್ಲಿ ಕೆಲವರು ಇಂತಹದೇ ಮಾರ್ಗದಿಂದ ನಿವೇಶನ ಪಡೆದವರಲ್ಲವೆ?

ಕೆಲ ಆಂಕರ್‌ಗಳು ಆರ್.ಟಿ.ಐ. ಅರ್ಜಿದಾರನಿಗೆ ಕೇಳಿದ ಪ್ರಶ್ನೆಗಳು ಹೀಗಿದ್ದವು.

  • ನಿಮ್ಮ ಹಿನ್ನೆಲೆ ಏನು? ನಿಮಗೆ ಏನಾದ್ರೂ ರಾಜಕೀಯ ಉದ್ದೇಶ ಇದೆಯಾ?
  • ಎಲ್ಲಾ ಬಿಟ್ಟು ಸುರೇಶ ಕುಮಾರ್ ಬಗ್ಗೆನೇ ಯಾಕೆ ಆರೋಪ ಮಾಡ್ತೀರಿ?
  • ಮುಂದಿನ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವ ಹುನ್ನಾರವೆ?
  • ಈಗ ಸೈಟ್ ವಾಪಸ್ ಕೊಡ್ತೀನಿ ಅಂತ ಸುರೇಶ ಕುಮಾರ್ ಹೇಳಿದ್ದಾರಲ್ಲ, ಮತ್ತೇನು ನಿಮ್ಮದು?
  • ಹಿಂದೆ ಸಚಿವರು ಆರೋಪ ಬಂದರೆ ಸಮರ್ಥನೆ ಮಾಡಿಕೊಳ್ಳತಾ ಇದ್ರು. ಆದರೆ ಇವರು ತಕ್ಷಣ ರಾಜೀನಾಮೆ ಕೊಟ್ಟಿದ್ದಾರಲ್ಲ?

ಈ ಪ್ರಶ್ನೆಗಳೇ ಸೂಚಿಸುತ್ತಿದ್ದವು, ಅವರು ಯಾರ ಪರ ಇದ್ದರು ಎನ್ನುವುದನ್ನು.

ಭ್ರಷ್ಟಾಚಾರ ಅನ್ನೋದು ಒಪ್ಪಿತವೇ ಈ ಸಮಾಜದಲ್ಲಿ?

ಸಾಮಾಜಿಕ ಜಾಹೀರಾತುಗಳು: ಪರಿಣಾಮ ಹಾಗೂ ಪರಿವರ್ತನೆ


-ಡಾ.ಎಸ್.ಬಿ. ಜೋಗುರ


 

ಜಾಹೀರಾತುಗಳ ಮೂಲಕ ಗ್ಲಾಮರಸ್ ಆದ ಸರಕುಗಳನ್ನು ಮಾರಾಟಮಾಡುವಂತೆ ಮನುಷ್ಯ ಸಂಬಂಧಗಳನ್ನು ವಿಲೇವಾರಿ ಮಾಡಲಾಗುವುದಿಲ್ಲ. ಇದು ಸೋ ಕಾಲ್ಡ್ ಬುದ್ಧಿ ಜೀವಿಯಾದ ಮನುಷ್ಯನ ಮಿತಿಯೂ ಹೌದು. ಸಾಮಾಜಿಕ ಸಂಸ್ಥೆಗಳ ಸಾಲಲ್ಲಿಯೇ ಗುರುತಿಸಿಕೊಳ್ಳುವ ಜಾಹೀರಾತುಗಳು ಮಾರುಕಟ್ಟೆಯ ತಂತ್ರಗಾರಿಕೆಯ ಸಫಲ ಸಾಧನವೆನಿಸಿಕೊಂಡಿರುವುದರ ಹಿಂದೆ ಅದರ ಗಮ್ಮತ್ತು ಅಡಗಿದೆ. ಈ ಬಗೆಯ ಗತ್ತು ಸಾಮಾಜಿಕ ಜಾಹೀರಾತುಗಳಿಗೆ ಸಾಧ್ಯವಾಗದ ಕಾರಣ ಅವು ತಲುಪಬೇಕಾದ ಜನಸಮೂಹ, ಪ್ರಮಾಣ, ಪರಿಣಾಮ ಸಾಧ್ಯವಾಗುವುದಿಲ್ಲ. ಸಮಾಜದ ಅಭ್ಯುದಯವನ್ನೇ ಗುರಿಯಾಗಿಸಿಕೊಂಡ ಈ ಸಾಮಾಜಿಕ ಜಾಹೀರಾತುಗಳ ಆಶಯ ಸಮೂಹ ಹಿತಕರವಾಗಿದ್ದರೂ ಅದರ ಪರಿಣಾಮದಲ್ಲಿ ಮಾತ್ರ ಮಾರುಕಟ್ಟೆಯ ಜಾಹೀರಾತುಗಳ ಸೆಳೆತದ ಚಮಕ್ ಇರುವುದಿಲ್ಲ. ಅದಕ್ಕೆ ಅತಿ ಮುಖ್ಯವಾದ ಕಾರಣ ಈ ಬಗೆಯ ಜಾಹೀರಾತುಗಳ ಉದ್ದೇಶ ವ್ಯವಹಾರ ಕುದುರಿಸುವುದಾಗಿರದೇ ಸಾಮಾಜಿಕ ಕಳಕಳಿಯೇ ಆಗಿರುತ್ತದೆ.

ಸಾಮಾಜಿಕ ಜಾಹೀರಾತುಗಳ ಪರಿಕಲ್ಪನೆಯ ಬೇರುಗಳು ಅಸ್ಪಷ್ಟವಾಗಿಯಾದರೂ ತೀರಾ ಪ್ರಾಚೀನ ಕಾಲದಿಂದಲೂ ಇವೆ. ಪ್ರಾಚೀನ ಗ್ರೀಕ್ ಹಾಗೂ ರೋಮನ್ ಸಮಾಜದಲ್ಲಿ ’ಗುಲಾಮರನ್ನು ಬಿಡುಗಡೆ ಮಾಡಿ’ ಎನ್ನುವ ಕೂಗು ಆ ಸಂದರ್ಭದ ಸಾಮಾಜಿಕ ಜಾಹೀರಾತೇ ಹೌದು. 19 ನೇ ಶತಮಾನದಲ್ಲಿ ನಮ್ಮಲ್ಲಿ ಆರಂಭವಾದ ಸಮಾಜ ಸುಧಾರಣಾ ಆಂದೋಲನದ ಉದ್ದೇಶಗಳಲ್ಲಿಯೂ ಈ ಸಾಮಾಜಿಕ ಜಾಹೀರಾತಿನ ಕಳಕಳಿ ಅಡಕವಾಗಿದೆ. 1960 ರ ದಶಕದ ನಂತರ ಅಧಿಕೃತವಾಗಿ ಈ ದೇಶದ ಜನಸಂಖ್ಯೆಯ ಸ್ಫೋಟದೊಂದಿಗೆ ಸಾಮಾಜಿಕ ಜಾಹೀರಾತಿನ ಪ್ರಾಮುಖ್ಯತೆಯ ಅರಿವಾಯಿತು. ಅಲ್ಲಿಂದ ಆರಂಭವಾದ ಈ ಬಗೆಯ ಸಾಮಾಜಿಕ ಹಿತಾಸಕ್ತಿ ಪ್ರೇರಿತ ಜಾಹೀರಾತುಗಳು ಸರ್ಕಾರದ ಮುತುವರ್ಜಿಯಲ್ಲಿಯೇ ಮುಂದುವರೆದುಕೊಂಡು ಬಂದಿವೆ. ಸದ್ಯದ ಸಂದರ್ಭದಲ್ಲಂತೂ ಜನರ ಮನ:ಪ್ರವೃತ್ತಿಗಳಲ್ಲಿ ನಿರೀಕ್ಷಿತ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಕೆಲ ಸರ್ಕಾರೇತರ ಸಂಸ್ಥೆಗಳು ಈ ಬಗೆಯ ಜಾಹೀರಾತನ್ನೇ ಅವಲಂಬಿಸಿವೆ.

ಸಮೂಹ ಮಾಧ್ಯಮಗಳ ಸಾಲಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮ ಎಂದೇ ಗುರುತಿಸಿಕೊಂಡಿರುವ ಚಲನಚಿತ್ರ ಮತ್ತು ದೂರದರ್ಶನಗಳ ಮೂಲಕ ಜನರ ಮನಸನ್ನು ಪ್ರಭಾವಿಸುವ ಯತ್ನವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇತ್ತೀಚೆಗಂತೂ ಪ್ರತಿಯೊಂದು ಚಲನಚಿತ್ರದ ಆರಂಭದಲ್ಲಿ ಪೂರ್ವಪೀಠಿಕೆಯ ಹಾಗೆ ಈ ಸಾಮಾಜಿಕ ಜಾಹೀರಾತು ಮೂಡಿ ಬರುತ್ತಿರುವುದು ಅತ್ಯಂತ ತಾಕರ್ಕಿಕವಾದ ಬೆಳವಣಿಗೆ. ಆದರೆ ಈ ಬಗೆಯ ಜಾಹೀರಾತುಗಳು ಹೃದಯಕ್ಕೆ ಇಳಿಯುವ ಬದಲಾಗಿ ಬುದ್ಧಿಗೆ ಇಳಿದಷ್ಟು ಇವುಗಳ ಪ್ರಸಾರದ ಉದ್ದೇಶ ಹಾಗೂ ಗುರಿ ಸಾಫಲ್ಯತೆ ಸಾಧ್ಯವಾಗುತ್ತದೆ. ಮಧ್ಯಪಾನದ ಅಪಾಯ, ಸಿಗರೇಟ್ ಸೇವನೆಯ ಹಾನಿ, ಏಡ್ಸ್ ರೋಗದ ಬಗೆಗಿನ ಮುನ್ನೆಚ್ಚರಿಕೆ, ಹೆಣ್ಣು ಮಗುವಿನ ಬಗ್ಗೆ ತಾರತಮ್ಯ, ಕೃಷಿ, ಪೋಲಿಯೋ, ವರದಕ್ಷಿಣೆ, ದೇವದಾಸಿ ಪದ್ಧತಿ ಮುಂತಾದ ಹತ್ತು ಹಲವಾರು ಸಾಮಾಜಿಕ ರೋಗಗ್ರಸ್ಥ ಸಂಗತಿಗಳನ್ನು ಆಧರಿಸಿ ತಯಾರಾಗುವ ಸಾಮಾಜಿಕ ಜಾಹೀರಾತುಗಳಲ್ಲಿ ನಾನು ಈ ಮೊದಲೇ ಹೇಳಿದಂತೆ ಮಾರುಕಟ್ಟೆಗಾಗಿ ರೂಪಗೊಳ್ಳುವ ಜಾಹೀರಾತುಗಳಲ್ಲಿಯ ಗ್ಲಾಮರ್ ಕೊರತೆ ಎದ್ದು ತೋರುತ್ತದೆ. ಅಷ್ಟಕ್ಕೂ ಇವು ಉಚಿತ ಜಾಹೀರಾತುಗಳು. ಇವುಗಳಿಗೆ ಸಿಗುವ ಸ್ಥಳ, ಸಮಯ, ಮಾದರಿ ಇವೆಲ್ಲವೂ ಉಚಿತವೇ ಇವುಗಳ ರೂಪಧಾರಣೆಯಲ್ಲಿ ಸರ್ಕಾರವೇ ಮುಕ್ಕಾಲು ಭಾಗ ಹಣವನ್ನು ವ್ಯವಯಿಸುವುದಿದೆ. 2007 ರ ಸಂದರ್ಭದಲ್ಲಿ ಈ ಬಗೆಯ ಸಾಮಾಜಿಕ ಹಿತದೃಷ್ಟಿಯ ಜಾಹೀರಾತುಗಳ ಸೃಷ್ಟಿಯಲ್ಲಿ ಸರ್ಕಾರ 87% ಮೊತ್ತವನ್ನು ಭರಿಸಿದರೆ, ಕೆಲ ಸರ್ಕಾರೇತರ ಸಂಸ್ಥೆಗಳು ಕೇವಲ 13% ಮೊತ್ತವನ್ನು ಮಾತ್ರ ಭರಿಸಿರುವುದಿದೆ.

ಈ ಬಗೆಯ ಜಾಹೀರಾತುಗಳು ಭಾವನಾತ್ಮಕವಾಗಿ ಬೀರುವ ಪ್ರಭಾವಕ್ಕಿಂತಲೂ ಮುಖ್ಯವಾಗಿ ಬೌದ್ಧಿಕವಾಗಿ ಕೆಲಸ ಮಾಡಬೇಕಿದೆ. ಕೆಲವು ಜಾಹೀರಾತುಗಳು ಸರ್ಕಾರದ ನೆರವಿನೊಂದಿಗೆ ತಯಾರಾಗಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಜಾಹೀರಾತೆಂದು ಪುರಸ್ಕಾರಗಳನ್ನು ಪಡೆದರೂ ಅವು ಸಾಮಾನ್ಯನಿಗೆ ಮಾತ್ರ ಸರಿಯಾಗಿ ತಲುಪಿರುವುದಿಲ್ಲ. ದೂರದರ್ಶನ ಮತ್ತು ಇತರೇ ಖಾಸಗಿ ಚಾನೆಲ್‌ಗಳಲ್ಲಿರುವ ವ್ಯತ್ಯಾಸವೇ ಮಾರುಕಟ್ಟೆಯ ಜಾಹೀರಾತು ಮತ್ತು ಈ ಸಾಮಾಜಿಕ ಜಾಹೀರಾತಿನ ನಡುವೆ ಇದೆ. ಮೂಲಭೂತವಾಗಿ ಮಕ್ಕಳಿಂದ ಮುದುಕರವರೆಗೆ ಇಷ್ಟ ಪಡುವ ಚಾನೆಲ್‌ಗಳೆಲ್ಲಾ ಬಹುತೇಕವಾಗಿ ಮಸಾಲಾ ಚಾನೆಲ್‌ಗಳು. ಅಲ್ಲಿ ಬರುವ ಜಾಹೀರಾತುಗಳು ಮತ್ತೂ ಬರ್ಪೂರ್ ಮಸಾಲಾಮಯವಾಗಿರುತ್ತವೆ. ಹೀಗಿರಲು ದೂರದರ್ಶನದಲ್ಲಿ ಯಾವುದೋ ಒಂದು ಜನಪ್ರಿಯವಲ್ಲದ ಕಾರ್ಯಕ್ರಮದ ನಡುವೆ ಬಂದು ಹೋಗುವ ಈ ಸಾಮಾಜಿಕ ಜಾಹೀರಾತಿನ ಉದ್ದೇಶ ಈಡೇರುವದಾದರೂ ಹೇಗೆ..?

ಈ ಬಗೆಯ ಸಾಮಾಜಿಕ ಜಾಹೀರಾತುಗಳಲ್ಲಿ ಮಾದರಿಯಾಗಿ ಕೆಲಸ ಮಾಡುವವರು ಉಚಿತವಾಗಿಯೇ ಅಭಿನಯಿಸಬೇಕು. ಪರಿಣಾಮವಾಗಿ ಚಾಲ್ತಿಯಲ್ಲಿರದ ನಟ, ನಟಿ, ಆಟಗಾರರು ಈ ಜಾಹೀರಾತುಗಳಲ್ಲಿ ನಟಿಸಿದರೂ ಅವರು ಪ್ರಭಾವ ಬೀರುವಂತಿರುವುದಿಲ್ಲ. ಕೆಲ ಜಾಹೀರಾತುಗಳಂತೂ ತೀರಾ ಕಳಪೆಯಾಗಿ ತಯಾರಾಗಿರುತ್ತವೆ. ಅಂದ ಮೇಲೆ ಅದರ ಪ್ರಭಾವ, ಪರಿವರ್ತನೆಯ ಬಗ್ಗೆ ಯೋಚಿಸುವುದೇ ಬೇಡ. ಇನ್ನು ಕೆಲ ಗುಟ್ಕಾ, ಸಿಗರೇಟ್, ಮದ್ಯ ಮಾರಾಟದ ಕಂಪನಿಗಳು ಕೂಡಾ ಈ ಬಗೆಯ ಸಾಮಾಜಿಕ ಜಾಹೀರಾತನ್ನು ತಮ್ಮ ಉತ್ಪಾದನೆಯ ಪೊಟ್ಟಣ, ಬಾಟಲ್‌ದ ಮೇಲೆಯೇ ಔಪಚಾರಿಕವಾಗಿ ಮಾಡುವುದಿದೆ. ಅದು ಶಾಸನೀಯವಾದ ಒತ್ತಡದ ಹಿನ್ನೆಲೆಯಲ್ಲಿ ಮೂಡಿ ಬಂದ ಜಾಹೀರಾತೇ ಹೊರತು ಸ್ವಯಂಪ್ರೇರಣೆಯಿಂದಲ್ಲ. ಇಂಥವರು ಮಾಡುವ ಜಾಹೀರಾತಿಗೆ ಯಾವುದೇ ಬಗೆಯ ಶಕ್ತಿಯಾಗಲೀ.. ಸತ್ವವಾಗಲೀ ಇಲ್ಲ. ಸರ್ಕಾರ ಮತ್ತು ಕೆಲ ಸರ್ಕಾರೇತರ ಸಂಸ್ಥೆಗಳು ಮಾಡುವ ಜಾಹೀರಾತುಗಳಿಗೆ ಮಾತ್ರ ಒಂದು ಮೌಲ್ಯವಿದೆ. ಪ್ರತಿಯೊಂದು ರಾಷ್ಟ್ರದ ಭವಿಷ್ಯ ಅಲ್ಲಿಯ ಯುವಕರು. ನಮ್ಮ ದೇಶದಲ್ಲಿ ಮಿಕ್ಕ ಬೇರೆ ರಾಷ್ರಗಳಿಗಿಂತಲೂ ಹೆಚ್ಚಿನ ಪ್ರಮಾಣದ ಯುವಕರಿದ್ದಾರೆ. ಪ್ರೌಢ ಶಿಕ್ಷಣದ ಹಂತದಿಂದ ಆರಂಭಿಸಿ ಉನ್ನತ ಶಿಕ್ಷಣದ ಎಲ್ಲ ಹಂತಗಳಲ್ಲಿ ಅವರ ನೋಟ್ ಬುಕ್ ಮತ್ತು ಪುಸ್ತಕಗಳ ಹಿಂಬದಿ ಕಡ್ಡಾಯವಾಗಿ ಸಾಮಾಜಿಕ ಜಾಹೀರಾತುಗಳನ್ನು ಮುದ್ರಿಸುವಂತೆ ಸರ್ಕಾರ ಒತ್ತಡ ಹೇರಬೇಕು. ಎಲ್ಲ ಮಾಧ್ಯಮ ಮೂಲಗಳಿಂದಲೂ ಈ ಬಗೆಯ ಸಾಮಾಜಿಕ ಜಾಹೀರಾತುಗಳನ್ನು ಪರಿಣಾಮಕಾರಿಯಾಗಿ, ನಿರಂತರವಾಗಿ ಪ್ರಸರಣಗೊಳಿಸಿದರೆ ಜನಮಾನಸದಲ್ಲಿ ಪರಿವರ್ತನೆಗಳನ್ನುಂಟು ಮಾಡಬಹುದು. ಈ ಬಗೆಯ ಜಾಹೀರಾತುಗಳ ಮೂಲ ಆಶಯವೂ ಅದೇ ಆಗಿದೆ… ಆಗಿರಬೇಕು.

ತೈಲ ಬೆಲೆ ಏರಿಕೆ : ಅರ್ಥ ಮಾಡಿಕೊಳ್ಳುವುದು ಹೇಗೆ?

– ಪ್ರಕಾಶ್ ಕೆ

ಮನುಷ್ಯನಿಗೆ ಅಗತ್ಯವಾದ ವಸ್ತುಗಳ ಬೆಲೆಗಳು ಒಂದೇ ಸಮನೆ ಏರುತ್ತಿದೆ. ಜೊತೆಗೆ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ, ಸೀಮೆಎಣ್ಣೆ ಬೆಲೆಗಳು ಪದೇ ಪದೇ ಏರಿಕೆಯಾಗುತ್ತಿದೆ. ಸಾಮಾನ್ಯ ಜನ ಇದರಿಂದ ತತ್ತರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಇಂತಹ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಮತ್ತಷ್ಟು ಹೆಚ್ಚಿಸಬೇಕೆಂಬ ಮಾತುಗಳೂ ಬರುತ್ತಿವೆ. ರಾಜ್ಯ ಸರ್ಕಾರಗಳು ಇದರ ಲಾಭ ಮಾಡಿಕೊಳ್ಳುತ್ತಿವೆ. ಬೆಲೆ ಏರಿಕೆಯನ್ನು ಒಪ್ಪಿಕೊಂಡು ಅನುಭವಿಸಬೇಕಾ? ಅಥವಾ ಇದರ ಹಿಂದಿರುವ ಮೋಸದ ಜಾಲವನ್ನು ಬಯಲುಮಾಡಿ ವಿರೋಧಿಸಬೇಕಾ? ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ಗಮನಿಸಬೇಕು.

ಕಚ್ಛಾ ತೈಲದ ಬೆಲೆಯೆಷ್ಟು?

ಭಾರತ ತನಗೆ ಬೇಕಾದ ಒಟ್ಟು ಕಚ್ಛಾ ತೈಲದ ಪ್ರಮಾಣದಲ್ಲಿ ಸುಮಾರು ಶೇ.70 ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರ ಈಗಿನ ಅಂತರರಾಷ್ಟ್ರೀಯ ಬೆಲೆಗಳು ಬ್ಯಾರೆಲ್‌ಗೆ 83 ಡಾಲರ್‌ಗಳು ಎಂದುಕೊಳ್ಳಿ. ಉಳಿದ ಸುಮಾರು ಶೇ.30 ರಷ್ಟು ಕಚ್ಛಾ ತೈಲವನ್ನು ದೇಶದ ಒಳಗೇ ಸರ್ಕಾರಿ ಸ್ವಾಮ್ಯದ ONGC ಮತ್ತು OIL ಕಂಪನಿಗಳು ಇದರ ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುತ್ತವೆ. ಆದರೂ ಇದನ್ನು ಅಂತರರಾಷ್ಟ್ರೀಯ ಬೆಲೆಗಳಿಗೆ ಸಮನಾಗಿ (International Price Parity) ಪರಿಗಣಿಸುವ ಪದ್ಧತಿ ಜಾರಿಗೊಳಿಸಲಾಗಿದೆ. ಲೆಕ್ಕದ ಸಲುವಾಗಿ ನಾವೂ ಹಾಗೇ ಪರಿಗಣಿಸೋಣ. ಒಂದು ಬ್ಯಾರೆಲ್ ಎಂದರೆ 158.98 ಲೀಟರ್‌ಗಳು. ಈ ಪ್ರಕಾರ ಒಂದು ಲೀಟರ್ ಕಚ್ಛಾ ತೈಲಕ್ಕೆ 29 ರೂ.ಗಳಾಗುತ್ತವೆ.

ಇನ್ನು ಮುಖ್ಯವಾಗಿ ವೆಚ್ಚ ಎಂದು ಬರುವುದು ಹಡಗು ಸಾಗಣೆ, ವಿಮೆ, ಸಂಸ್ಕರಣೆ ಹಾಗೂ ಒಳ ಸಾಗಾಣಿಕೆ ಮಾಡಲು ಆಗುವ ವೆಚ್ಚ. ಒಂದು ಅಂದಾಜಿನ ಪ್ರಕಾರ ಒಂದು ಲೀಟರ್ ಸಿದ್ಧಗೊಂಡ ಪೆಟ್ರೋಲಿಯಂ ಉತ್ಪನ್ನದಲ್ಲಿ ಶೇ. 90 ರಷ್ಟು ಕಚ್ಛಾ ತೈಲದ ಬೆಲೆಯಿರುತ್ತದೆ. ಅಂದರೆ ಉಳಿದ ಶೇ. 1ರ ರಷ್ಟು ಮಾತ್ರವೇ ಉಳಿದ ವೆಚ್ಚವಾಗುತ್ತದೆ. ಅಂದರೆ ಒಂದು ಲೀ. ಕಚ್ಛಾ ತೈಲದ ಬೆಲೆಗೆ ಇತರೆ ವೆಚ್ಚ 3 ರೂಗಳನ್ನು ಸೇರಿಸಿದರೆ 1 ಲೀ. ಪೆಟ್ರೋಲ್ ಸುಮಾರು 33 ರೂಗಳಾಗುತ್ತದೆ. ಈ ರೀತಿ ಅಂತರರಾಷ್ಟ್ರೀಯ ಬೆಲೆಗಳ ಏರುಪೇರಿನ ಆಧಾರದಲ್ಲಿ ಲೆಕ್ಕ ಮಾಡಬಹುದು. ಹಾಗಾದರೆ ನಾವು ಪ್ರತಿ ಲೀ. ಪೆಟ್ರೋಲ್‌ಗೆ 79 ರೂಗಳನ್ನು ಪಾವತಿಸುವುದು ಏಕೆ?  ಕೇಂದ್ರ-ರಾಜ್ಯ ಸರ್ಕಾರಗಳು ವಿಧಿಸುವ ದುಬಾರಿ ತೆರಿಗೆಗಳ ಕಾರಣದಿಂದ. ಜಗತ್ತಿನಲ್ಲಿಯೇ ಅತಿ ಹೆಚ್ಚು ತೈಲ ತೆರಿಗೆಗಳನ್ನು ಭಾರತದಲ್ಲಿ ವಿಧಿಸಲಾಗಿದೆ.

‘ನಷ್ಟ’ವೆಂಬ ಸುಳ್ಳುಗಳು

ತೆರಿಗೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದರೂ ತೈಲ ಕಂಪನಿಗಳಿಗೆ ನಷ್ಟವಾಗುತ್ತಿದೆ, ಸಬ್ಸಿಡಿಯ ಮೊತ್ತ ಏರುತ್ತಿದೆ, ಸರ್ಕಾರ ದಿವಾಳಿಯಾಗುತ್ತದೆ ಎಂದೆಲ್ಲಾ ವಾದಿಸುವುದು ಏಕೆ? ತೈಲ ಕಂಪನಿಗಳು ನಿಜವಾಗಿ ನಷ್ಟ ಅನುಭವಿಸುತ್ತಿವೆಯೇ? ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOC) ನಮ್ಮ ದೇಶದ ಅತಿದೊಡ್ಡ ತೈಲ ಮಾರಾಟ ಕಂಪನಿಯಾಗಿದೆ. ಇದು ಸತತವಾಗಿ ಲಾಭಗಳಿಸುವ ಕಂಪನಿಯಾಗಿದೆ. ಅದೇ ರೀತಿ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಕಂಪನಿಗಳೂ ಕೂಡಾ ಸತತವಾಗಿ ಲಾಭ ಮಾಡುತ್ತಿರುವ ಕಂಪನಿಗಳಾಗಿವೆ. IOC 2009-2010ರಲ್ಲಿ ರೂ.10,998.68 ಕೋಟಿ ಹಾಗೂ 2010-2011ರಲ್ಲಿ ರೂ.8085.62 ಕೋಟಿ ನಿವ್ವಳ ಲಾಭಗಳಿಸಿದೆ. HPCL- 2009-10ರಲ್ಲಿ ರೂ.1476.48 ಕೋಟಿ ಹಾಗೂ 2010-2011 ರಲ್ಲಿ ರೂ.1702.04 ಕೋಟಿ ನಿವ್ವಳ ಲಾಭಗಳಿಸಿದೆ. BPCL- 2009-2010ರಲ್ಲಿ ರೂ.1719.98 ಕೋಟಿ ಹಾಗೂ 2010-2011ರಲ್ಲಿ ರೂ.1742.06 ಕೋಟಿ ನಿವ್ವಳ ಲಾಭಗಳಿಸಿದೆ. ಈ ಮೂರು ಕಂಪನಿಗಳು ಎಲ್ಲ ರೀತಿಯ ತೆರಿಗೆ, ಡಿವಿಡೆಂಡ್, ಇತ್ಯಾದಿಗಳನ್ನೆಲ್ಲಾ ಪಾವತಿಸಿದ ಮೇಲೆ ಗಳಿಸಿರುವ ಲಾಭದ ಪ್ರಮಾಣವಿದು. ಹೀಗಿದ್ದರೂ ಕಂಪನಿಗಳು ನಷ್ಟದಲ್ಲಿವೆ ಇನ್ನೇನು ಮುಳುಗಿ ಹೋಗುತ್ತವೆ ಎಂಬ ಆತಂಕವನ್ನು ಸೃಷ್ಟಿಸುತ್ತಿರುವುದು ಜನರನ್ನು ದಾರಿ ತಪ್ಪಿಸಲು.

Under Recovery ಎಂಬ ಕಲ್ಪಿತ ನಷ್ಟ

ಸರ್ಕಾರ ನಷ್ಟ ಎಂಬುದನ್ನು Under Recovery ಎನ್ನುತ್ತಿದೆ. ಇದರಿಂದ ತೈಲ ಮಾರ್ಕೆಟಿಂಗ್ ಕಂಪನಿಗಳಿಗೆ (OMCs – IOC, HP, BP) ಈಗಿನ ಬೆಲೆ ಏರಿಕೆ ನಂತರವೂ 1 ಲಕ್ಷ ಕೋಟಿ ರೂ.ಗಳಷ್ಟು ’ಕಳೆದು ಹೋಗುತ್ತಿದೆ’ಯಂತೆ. ಜಾಗತೀಕರಣದ ಲೂಟಿಕೋರರು ಕಂಡುಹಿಡಿದಿರುವ ಹೊಸ ಪದಗುಚ್ಚಗಳು ಜನರಿಗೆ ಅರ್ಥವಾಗುವುದೇ ಕಷ್ಟ. ಇದು ಬಂಡವಾಳಿಗರ ಭಾಷೆ. “Under Recoveries” ಎಂಬುದು “ನಷ್ಟ”ವಲ್ಲ. ಭಾರತದ ಪ್ರಮುಖ OMCಗಳ ಬ್ಯಾಲೆನ್ಸ್ ಷೀಟ್‌ಗಳಲ್ಲಿ ಎಲ್ಲಿಯೂ ಕೂಡಾ Under Recovery ಎಂಬ ಶಬ್ದವೇ ಇಲ್ಲ. ಈಗಾಗಲೇ ಹೇಳಿದೆ ಹಾಗೆ ನಮ್ಮ ದೇಶ ಕಚ್ಚಾ ತೈಲವನ್ನು ಅಮದು ಮಾಡಿಕೊಂಡು ಡೀಸೆಲ್, ಪೆಟ್ರೋಲ್‌ನಂತಹ ಪೆಟ್ರೋಲಿಯಂ ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸುತ್ತದೆ. ಆದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆಂದು ಕಲ್ಪಿಸಿಕೊಂಡು, ಜಾಗತೀಕವಾಗಿ ಅದಕ್ಕೇನು ಬೆಲೆಯಿದೆಯೋ ಅದೇ ಬೆಲೆಯನ್ನು ದೇಶದೊಳಗೆ ನಿಗದಿಪಡಿಸಬೇಕೆನ್ನುವ ವಿಚಿತ್ರವಾದ ವಾದದಿಂದ ಬಂದಿರುವುದೇ ಈ Under Recoveries. ಉದಾಹರಣೆಗೆ:- ಇಂಗ್ಲೆಂಡ್‌ನಲ್ಲಿ ಒಂದು ಲೀ. ಪೆಟ್ರೋಲ್‌ಗೆ ಸುಮಾರು 120 ರೂ.ಗಳಾಗುತ್ತದೆ ಎಂದುಕೊಳ್ಳೋಣ. ಭಾರತದ ಕಂಪನಿಯೊಂದು ಇಂಗ್ಲೆಂಡ್‌ನಿಂದ ಕಚ್ಛಾ ತೈಲವನ್ನು ಆಮದು ಮಾಡಿಕೊಂಡು ಪೆಟ್ರೋಲ್ ತಯಾರಿಸುತ್ತದೆ ಎಂದುಕೊಳ್ಳಿ. ಇಲ್ಲಿ ಒಂದು ಲೀ. ಪೆಟ್ರೋಲ್‌ಗೆ 33 ರೂ. ಆಗಬಹುದು. ಅಂತರರಾಷ್ಟ್ರೀಯ ಬೆಲೆ (IPP) 120 ರೂಪಾಯಿ ಇದೆಯಾದ್ದರಿಂದ ಇಲ್ಲಿನ ಗ್ರಾಹಕರೂ ಕೂಡಾ ಅದೇ ಬೆಲೆಯನ್ನು ನೀಡಬೇಕೆಂದು, ಅಷ್ಟು ಕೊಡದಿದ್ದರೆ 87 ರೂ.ಗಳ Under Recoveryಯನ್ನು ಕಂಪನಿ ಅನುಭವಿಸುತ್ತದೆ ಎಂದು ಹೇಳಬಹುದು. ಅಂದರೆ ಇಲ್ಲಿನ ಬೆಲೆಯನ್ನು ನಿಗದಿಪಡಿಸಲು ದೇಶೀಯ ಉತ್ಪಾದನಾ ವೆಚ್ಚದ ಬದಲಿಗೆ ಇಂಗ್ಲೆಂಡಿನ ಉತ್ಪಾದನಾ ವೆಚ್ಛವನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬುದು ಈ ವಾದ. ಇದನ್ನು ಸುಲಿಗೆಕೋರರ ಭಾಷೆ ಎನ್ನದೆ ಬೇರೇನೇಳಲು ಸಾಧ್ಯ?

ಒಂದು ಕಡೆ ಜನತೆಯ ತೀವ್ರ ವಿರೋಧವನ್ನು ಕಡೆಗಣಿಸಿ ತೆರಿಗೆಗಳನ್ನು ಕಡಿತಗೊಳಿಸಲು ನಿರಾಕರಿಸುತ್ತಾ, ಮತ್ತೊಂದು ಕಡೆ ಕಲ್ಪಿತ ನಷ್ಟವನ್ನೇ ನಿಜವಾದ ನಷ್ಟವೆಂದು ಬಿಂಬಿಸುತ್ತಾ, ಮತ್ತೆ ಮತ್ತೆ ಬೆಲೆಗಳನ್ನು ಏರಿಸಲು ಸರ್ಕಾರ ಹಾತೊರೆಯುತ್ತಿದೆ. ತೆರಿಗೆ ಕಡಿತಗೊಳಿಸಿದರೆ ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಮತ್ತು ಸಬ್ಸಿಡಿ ಹೊರೆ ಹೆಚ್ಚಾಗುತ್ತದೆ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ವಾಸ್ತವವೇನು? ಒಂದು ಉದಾಹರಣೆಯನ್ನೇ ಗಮನಿಸಿ :- 6 ತಿಂಗಳ ಹಿಂದೆ ಅಂತರರಾಷ್ಟ್ರೀಯ ಕಚ್ಛಾ ತೈಲ ಒಂದು ಬ್ಯಾರೆಲ್‌ಗೆ 110 ಡಾಲರ್ ಇದೆ ಇತ್ತು. ಎರಡು ವರ್ಷಗಳ ಹಿಂದೆ ಇದು 75 ಡಾಲರ್ ಇತ್ತು. ಆಮದು ಮಾಡುವಾಗ ಭಾರತ ಸರ್ಕಾರ ಶೇ.10 ರಷ್ಟು ಸುಂಕವನ್ನು ವಿಧಿಸಿದೆ ಎಂದುಕೊಳ್ಳೋಣ. ಇದರ ಆಧಾರದಲ್ಲಿ ಒಂದು ಬ್ಯಾರೆಲ್ ಮೇಲೆ ಭಾರತ ಸರ್ಕಾರಕ್ಕೆ 7.5 ಡಾಲರ್ ಆದಾಯ ಬರುತ್ತಿತ್ತು. ಅದೇ ಪ್ರಮಾಣದ ತೆರಿಗೆಯಿಂದ 6 ತಿಂಗಳ ಹಿಂದೆ 11 ಡಾಲರ್ ಆದಾಯ ಬರುತ್ತಿತ್ತು. ಸುಂಕದ ಪ್ರಮಾಣದಲ್ಲಿ ಹೆಚ್ಚಳವಿಲ್ಲದೆಯೇ ಸರ್ಕಾರಕ್ಕೆ 3.5 ಡಾಲರ್ ಹೆಚ್ಚು ಆದಾಯ ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರ ಶೇ.4 ರಷ್ಟು ಸುಂಕ ಇಳಿಸಿದರೂ ಆದಾಯ ಮೊದಲಿನಷ್ಟೇ ಇರುತ್ತದೆ ಅಥವಾ ಸ್ವಲ್ಪ ಹೆಚ್ಚಿಗೆ ಸಿಗುತ್ತಿರುತ್ತದೆ. ಆದ್ದರಿಂದ ಸರ್ಕಾರಕ್ಕೆ ನಷ್ಟವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂತರರಾಷ್ಟ್ರೀಯ ಬೆಲೆಗಳು ಏರಿದಂತೆಲ್ಲಾ ಸರ್ಕಾರಕ್ಕೆ ಆಮದು ಸುಂಕದಲ್ಲಿ ತಂತಾನೇ ಹೆಚ್ಚುವರಿ ಆದಾಯ ಬರುತ್ತಿರುತ್ತದೆ. ಹೀಗಾಗಿ ಹೆಚ್ಚೆಚ್ಚು ತೆರಿಗೆಗಳನ್ನು ಸರ್ಕಾರ ವಿಧಿಸಿ ಆದಾಯ ಸಂಗ್ರಹ ಮಾಡುತ್ತದೆ ಮತ್ತು ಬೆಲೆ ಏರಿಕೆಗೆ ಇದೇ ಮೂಲ ಕಾರಣವಾಗಿದೆ.

ಅಡಿಗೆ ಅನಿಲ ರಿಲಯನ್ಸ್ ತೆಕ್ಕೆಗೆ

ಅಡುಗೆ ಅನಿಲದ ಬೆಲೆಯನ್ನು 50 ರೂ. ಹೆಚ್ಚಿಸಿದ ನಂತರವೂ ಸರ್ಕಾರಕ್ಕೆ ಪ್ರತಿ ಸಿಲಿಂಡರ್ ಮೇಲೆ ರೂ.353.72 ನಷ್ಟವಾಗುತ್ತಿದೆ ಎನ್ನುತ್ತಿದೆ ಮನಮೋಹನಸಿಂಗ್ ಸರ್ಕಾರ. ಇದನ್ನು ಸಮರ್ಥನೆ ಮಾಡಿಕೊಳ್ಳಲು ಶ್ರೀಲಂಕ, ಬಾಂಗ್ಲಾ ದೇಶ, ಪಾಕಿಸ್ತಾನ, ನೇಪಾಳ ದೇಶಗಳೊಂದಿಗೆ ಹೋಲಿಸಿಕೊಂಡು ಅವರಿಗಿಂತ ನಮ್ಮದು ಕಡಿಮೆ ಬೆಲೆಯ ಗ್ಯಾಸ್ ಎನ್ನಲಾಗುತ್ತಿದೆ. ಮೊದಲನೆಯದಾಗಿ ಹೋಲಿಸುತ್ತಿರುವ ಯಾವ ದೇಶಗಳೂ ಸ್ವತಂತ್ರವಾಗಿ ಅನಿಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ನಮ್ಮ ರೀತಿಯಲ್ಲಿ ಹೊಂದಿಲ್ಲದ ದೇಶಗಳು ಮತ್ತು ಅತ್ಯಂತ ಬಡ ದೇಶಗಳು. ಆದರೆ ಅದೇ ದೇಶಗಳಲ್ಲಿ ನಮಗಿಂತ ಕಡಿಮೆ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್‌‍ನ್ನು ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಮರೆಮಾಚುತ್ತಿದೆ. ಅಡಿಗೆ ಅನಿಲದ ವಿಚಾರಕ್ಕೆ ಬಂದರೆ, ನಿಜ ಸರ್ಕಾರ ಸ್ವಲ್ಪ ಸಬ್ಸಿಡಿ ನೀಡುತ್ತಿದೆ. ಇದರ ನೆಪವೊಡ್ಡಿ ಅನಿಲ ಉತ್ಪಾದನೆಯನ್ನು ರಿಲಯನ್ಸ್ ಕಂಪನಿಗೆ ವರ್ಗಾಯಿಸುವ ಹುನ್ನಾರವನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಸಿಎಜಿ ವರದಿ ಬಹಿರಂಗ ಮಾಡಿರುವ ಪ್ರಾಥಮಿಕ ವರದಿಯ ಪ್ರಕಾರ ಮತ್ತು ಸಿಪಿಐ (ಎಂ) ಪಕ್ಷದ ಸಂಸದರಾದ ಬಸುದೇವ ಆಚಾರ್ಯ ಮತ್ತು ತಪನ್‌ಸೇನ್‌ರವರು 2007 ರಲ್ಲೇ ಹೇಳಿದ ಹಾಗೆ, ಆಂಧ್ರದ ಕೃಷ್ಣ ಗೋದಾವರಿ ಕಣಿವೆಯಲ್ಲಿ (KG Basin) ಡಿ-6 ಬ್ಲಾಕ್‌ನ್ನು ರಿಲಯನ್ಸ್ ಕಂಪನಿಗೆ ನೀಡಿರುವುದರಲ್ಲಿ ಲಕ್ಷಾಂತರ ಕೋಟಿ ಹಣ ದೇಶಕ್ಕೆ ನಷ್ಟವಾಗಲಿದೆ.

ಜನರಿಗಿಲ್ಲ ಸಹಾಯಧನ – ಬಂಡವಾಳಿಗರ ಸ್ವಾಹಾಕ್ಕೆ ಸರ್ಕಾರದ ಹಣ

ದೇಶದ ಜನರಿಗೆ ಕಡಿಮೆ ದರದಲ್ಲಿ ಅಡುಗೆ ಅನಿಲವನ್ನು ಪೊರೈಸಲು ಸಾಧ್ಯವಿರುವುದು ಸರ್ಕಾರಿ ಸ್ವಾಮ್ಯದ ONGC ಕಂಪನಿಪಿನಿಗೆ. 2005-2008ರ ಅವಧಿಯಲ್ಲಿ ಒಂದು ಯೂನಿಟ್ (MBTU= ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಸ್) ಗ್ಯಾಸ್‌ಗೆ 1.8 ಡಾಲರ್ ನೀಡಿ ONGC ಯಿಂದ ಪಡೆದುಕೊಳ್ಳಲಾಗುತ್ತಿತ್ತು. ಇದರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಗ್ಯಾಸ್ ನೀಡಲು ಸಹಾಯವಾಗುತ್ತಿತ್ತು. ರಿಲಯನ್ಸ್‌ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಒಂದು ಯೂನಿಟ್ ಗ್ಯಾಸನ್ನು 4.2 ಡಾಲರ್‌ಗೆ ಕೊಂಡುಕೊಳ್ಳಲಾಗುತ್ತಿದೆ. ಒಂದು ಯೂನಿಟ್ ಗ್ಯಾಸ್ ಮೇಲೆ 2.4 ಡಾಲರ್ ಹೆಚ್ಚು ಹಣವನ್ನು ರಿಲಯನ್ಸ್‌ಗೆ ಕೊಡಲು ಒಪ್ಪಂದ ಮಾಡಿಕೊಂಡಿದ್ದು ಯಾರ ಹಿತಕ್ಕಾಗಿ? ಕಡಿಮೆ ಬೆಲೆಯಲ್ಲಿ ಗ್ಯಾಸ್ ಉತ್ಪಾದಿಸುವ ONGCಯ ಬದಲಿಗೆ ರಿಲಯನ್ಸ್‌ಗೆ ದೇಶದ ಅಮೂಲ್ಯ ಅನಿಲ ಸಂಪತ್ತನ್ನು ಬಿಟ್ಟಿದ್ದೇಕೆ? ಮನಮೋಹನಸಿಂಗ್ ಸರ್ಕಾರ ಇದನ್ನು ಮುಚ್ಚಿಡಲು ಸಾಧ್ಯವಿಲ್ಲ. ರಿಲಯನ್ಸ್‌ನಂತಹ ಖಾಸಗಿ ಕಂಪನಿಗಳ ಜೊತೆ ಸೇರಿ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಗ್ಯಾಸ್‌ನ ಉತ್ಪಾದನಾ ಬೆಲೆಯನ್ನು ಕೃತಕವಾಗಿ ಏರಿಸಿದೆ. ಅದರ ಹೊರೆಯನ್ನು ಜನರ ಮೇಲೆ ವರ್ಗಾಯಿಸುತ್ತಿದೆ. ಇದನ್ನೇ ಸಬ್ಸಿಡಿ ಕೊಡುತ್ತಿದ್ದೇವೆಂದು ಹೇಳುತ್ತಿದೆ. ಸಬ್ಸಿಡಿ ನೀಡುತ್ತಿರುವುದು ಸಾಮಾನ್ಯ ಅಡುಗೆ ಅನಿಲದ ಗ್ರಾಹಕರಿಗಲ್ಲ, ಅಂಬಾನಿಯಂತಹ ಬಂಡವಾಳದಾರರಿಗೆ ಎಂಬುದನ್ನು ಗಮನಿಸಬೇಕು.

ಬೆಲೆ ಏರಿಕೆಯ ಧೋರಣೆಗೆ ಪ್ರೇರಣೆ ಯಾವುದು?

ಇಂತಹ ಮೂರ್ಖತನದ ಕೆಲಸವನ್ನು ಮಾಡಲು ಮನಮೋಹನಸಿಂಗ್ ಸರ್ಕಾರ ತುದಿಗಾಲಲ್ಲಿ ನಿಂತಿರುವುದು ಏಕೆ ? ಸಿಪಿಐ (ಎಂ) ಪಕ್ಷ ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೊರತಂದ ಕಿರುಹೊತ್ತಿಗೆ “ಸುಳ್ಳುಗಳ ಹಿಂದಿನ ಸತ್ಯ”ದಲ್ಲಿ ಈ ರೀತಿ ವಿವರಿಸಲಾಗಿದೆ; 1976 ರಲ್ಲಿ, ಭಾರತವನ್ನು ಲೂಟಿ ಮಾಡುತ್ತಿದ್ದ ಬರ್ಮಾ ಶೆಲ್, ಕಾಲ್ಟೆಕ್ಸ್, ಎಸ್ಸೊ ಎಂಬ ಬೃಹತ್ ವಿದೇಶೀ ಕಂಪನಿಗಳನ್ನು, ಶ್ರೀಮತಿ ಇಂದಿರಾ ಗಾಂಧಿ ರಾಷ್ಟ್ರೀಕರಣ ಮಾಡಿದರು. ಇದಕ್ಕೂ ಮೊದಲು ಈ ಕಂಪನಿಗಳು ಪೆಟ್ರೋಲಿಯಂ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ದರಗಳನ್ನು ಗ್ರಾಹಕರಿಂದ ವಸೂಲಿ ಮಾಡಿ ಅಪಾರ ಲಾಭಗಳಿಸುತ್ತಿದ್ದವು. ಇದನ್ನು ’ಆಮದು ಸಮಮೌಲ್ಯ ಬೆಲೆ ವ್ಯವಸ್ಥೆ? (Import Price Parity System) ಎನ್ನಲಾಗುತ್ತಿತ್ತು. ಬೃಹತ್ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಉದ್ಯಮಿಗಳ ಕೂಟಗಳ ಸೇರಿ ಜಗತ್ತಿನ ತೈಲ ಮಾರುಕಟ್ಟೆಗಳ ಹಿಡಿತ ಸಾಧಿಸುವುದು ಮತ್ತು ತಮ್ಮ ಲಾಭದ ಹೆಚ್ಚಳಕ್ಕಾಗಿ ದರಗಳಲ್ಲಿ ಕೈಚಳಕ (Manipulate) ಮಾಡುವುದು ಎಲ್ಲರಿಗೂ ತಿಳಿದ ವಿಚಾರ. 1976 ರಲ್ಲಿ ಆಮದು ಸಮಮೌಲ್ಯ ಬೆಲೆ ಪದ್ಧತಿಯನ್ನು ನಿಲ್ಲಿಸಲಾಯಿತು. ಆಗಿನ ಸರ್ಕಾರ “ಆಡಳಿತಾತ್ಮಕ ಬೆಲೆ ನಿಯಂತ್ರಣ” (APM – Administered Price Mechanism) ಪದ್ಧತಿಯನ್ನು ಜಾರಿಗೆ ತಂದಿತು. ಇದನ್ನು ‘ತೈಲ ನಿಧಿ ಖಾತೆ’ (Oil Pool Account) ಎಂದೂ ಸಹ ಕರೆಯಲಾಗಿತ್ತು. ದೇಶೀಯ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸುವುದು ಮತ್ತು ವಿದೇಶೀ ಕಂಪನಿಗಳ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಪ್ರಯತ್ನ ಇದಾಗಿತ್ತು. APM ಮೂಲಕ ಕಚ್ಛಾ ತೈಲದ ಬೆಲೆ, ಸಂಸ್ಕರಣಾ ವೆಚ್ಚ, ಸೂಕ್ತವಾದ ಲಾಭ ಎಲ್ಲವನ್ನೂ ಒಳಗೊಂಡು ಉತ್ಪನ್ನಗಳ ಬೆಲೆ ನಿಗದಿಯಾಗುತ್ತಿತ್ತು.

1991 ರಲ್ಲಿ ಮನಮೋಹನಸಿಂಗ್ ನೇತೃತ್ವದಲ್ಲಿ ನವ-ಉದಾರವಾದಿ ನೀತಿಗಳು ಶುರುವಾದ ಮೇಲೆ ವಿದೇಶೀ ಮತ್ತು ಸ್ವದೇಶೀ ಖಾಸಗಿ ಹೂಡಿಕೆದಾರರ ಹೆಚ್ಚಳವಾಯ್ತು. APM ವ್ಯವಸ್ಥೆಯನ್ನು ಕಿತ್ತುಹಾಕಿ 1976ಕ್ಕೂ ಹಿಂದೆ ಇದ್ದ ರೀತಿಯಲ್ಲೇ ಲೂಟಿ ಹೊಡೆಯಲು ಸರ್ಕಾರದ ಮೇಲೆ ವಿಪರೀತ ಒತ್ತಡ ಹಾಕಿದರು. 2002 ರಲ್ಲಿ ಬಿಜೆಪಿಯ ವಾಜಪೇಯಿ ಸರ್ಕಾರ APM ಅಥವಾ ತೈಲ ನಿಧಿ ಖಾತೆಯನ್ನು ಕಳಚಿ ಹಾಕಿತು. ಮತ್ತೆ ವಾಪಸ್ ಆಮದು ಸಮಮೌಲ್ಯ ಬೆಲೆ ಪದ್ಧತಿಗೆ ಬರಲಾಯ್ತು.

2002ರ ನಂತರ ರಿಲಯನ್ಸ್ ಮತ್ತು ಎಸ್ಸಾರ್‌ನಂತಹ ಖಾಸಗಿ ಕಂಪನಿಗಳು ಮತ್ತಷ್ಟು ನಿಯಂತ್ರಣ ಕಳಚಬೇಕೆಂದು ಬಯಸಿದವು. ಬಿಜೆಪಿ ಸರ್ಕಾರದ ಪ್ರಯತ್ನಗಳು ಅವರಿಗೆ ಸಾಕೆನಿಸಲಿಲ್ಲ. ಕಿರಿಟ್ ಪಾರಿಖ್ ಸಮಿತಿಯನ್ನು ಖಾಸಗಿಯವರ ಈ ಬೇಡಿಕೆಗಳನ್ನು ಪರಿಹರಿಸುವ ಉದ್ದೇಶದಿಂದಲೇ ನೇಮಿಸಲಾಯಿತು. ಈ ಸಮಿತಿಯು ಪೆಟ್ರೋಲಿಯಂ ವಸ್ತುಗಳನ್ನು ಸಂಪೂರ್ಣವಾಗಿ ಸರ್ಕಾರ ನಿಯಂತ್ರಣದಿಂದ ಕಳಚಿ ಹಾಕಬೇಕೆಂದು ವರದಿ ನೀಡಿತು. ಪ್ರಸಕ್ತ ಮನಮೋಹನಸಿಂಗ್ ಕಾಂಗ್ರೆಸ್ ಸರ್ಕಾರ ಈ ವರದಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡು, ಮೊದಲಿಗೆ ಪೆಟ್ರೋಲ್‌ಅನ್ನು ನಿಯಂತ್ರಣ ಮುಕ್ತಗೊಳಿಸಿ ಅದೇ ದಾರಿಯ ಮೂಲಕ ಆಮದು ಸಮಮೌಲ್ಯ ಬೆಲೆ ಪದ್ಧತಿಯನ್ನು (IPP) ಪುನರ್ಜಾರಿಗೊಳಿಸಿದೆ. ಹೀಗಾಗಿ ಭಾರತದ ಜನರನ್ನು ಖಾಸಗಿ ಕಂಪನಿಗಳ ನೇತೃತ್ವದ ಮಾರುಕಟ್ಟೆ ಹಿಡಿತಕ್ಕೆ ಒಪ್ಪಿಸಲಾಗಿದೆ.

ಖಾಸಗಿಯವರ ಸೂಪರ್ ಲಾಭವನ್ನು ಖಾತ್ರಿಗೊಳಿಸುವ ಸಲುವಾಗಿ ನಿಯಂತ್ರಣ ಮುಕ್ತ ಮಾಡಿರುವ ಕಾರಣದಿಂದಾಗಿಯೇ ಪೆಟ್ರೋಲಿಯಂ ದರಗಳು ರಾತ್ರೋರಾತ್ರಿ ಪದೇ ಪದೇ ಏರುತ್ತಿವೆ. ದರಗಳನ್ನು ಜಾಗತಿಕ ಮಾರುಕಟ್ಟೆಗೆ ಹೋಲಿಸಿ ಜನರಿಂದ ವಸೂಲಿ ಮಾಡಬೇಕೆನ್ನುವ ಸರ್ಕಾರ ಮತ್ತು ತೈಲ ಕಂಪನಿಗಳು ಅದೇ ರೀತಿ ಅದನ್ನು ಉತ್ಪಾದಿಸುವ ಕಾರ್ಮಿಕರಿಗೆ ಜಾಗತಿಕವಾಗಿ ನೀಡುವ ರೀತಿಯಲ್ಲಿ ಸಂಬಳಗಳನ್ನು ನೀಡುವ ಬಗ್ಗೆ ಮಾತನಾಡುವುದಿಲ್ಲ. ರಾಜ್ಯ ಸರ್ಕಾರಗಳೂ ಕೂಡಾ ಪೆಟ್ರೋಲಿಯಂ ವಸ್ತುಗಳನ್ನು ಹಿಂಡುವ ಕೆಚ್ಚಲನ್ನಾಗಿಯೇ ನೋಡುತ್ತಿವೆ. ರಾಷ್ಟ್ರಮಟ್ಟದಲ್ಲಿ ಬೆಲೆ ಏರಿದಂತೆಲ್ಲಾ ತಾವೂ ಲಾಭ ಮಾಡಿಕೊಳ್ಳುತ್ತಿವೆ.

ಪರಿಹಾರವೇನು?

ಈ ಹಿನ್ನೆಲೆಯಲ್ಲಿ ಜಾಗತೀಕವಾಗಿ ಏರುಪೇರಾಗುವ ತೈಲ ಬೆಲೆಗಳ ಸಮಸ್ಯೆಯನ್ನು ಎದುರಿಸಲು ಹಿಂದೆ ಇದ್ದ ರೀತಿಯಲ್ಲಿ ಆಡಳಿತಾತ್ಮಕ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವುದು ಅಗತ್ಯವಾಗಿದೆ. ಜೊತೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಇರುವ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿ ಪುನರ್ರಚಿಸಬೇಕಾದ ಅಗತ್ಯವಿದೆ. ದೇಶೀಯವಾಗಿ ಸ್ವಾವಲಂಬೀ ತೈಲ ಉತ್ಪಾದನೆಗೆ ವಿಶೇಷವಾದ ಯೋಜನೆಗಳನ್ನು ಸರ್ಕಾರ ರೂಪಿಸಬೇಕಾಗಿದೆ. ತೈಲ ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲ. ಇದನ್ನು ಸಾರ್ವಜನಿಕ ಸಂಪತ್ತಾಗಿ ಉಳಿಸಿಕೊಳ್ಳಬೇಕಾಗಿದೆ.

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-12)


– ಡಾ.ಎನ್.ಜಗದೀಶ್ ಕೊಪ್ಪ


1960ರ ದಶಕದಲ್ಲಿ ಹಿಂಸಾತ್ಮಕ ಘಟನೆಗಳ ಮೂಲಕ ಬೆಂಕಿ, ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟಕ್ಕೆ 70ರ ದಶಕದ ನಂತರ ಚಾರು ಮತ್ತು ಅವನ ಸಂಗಡಿಗರ ಹತ್ಯೆಯಿಂದಾಗಿ ಹಿನ್ನಡೆಯುಂಟಾಯಿತು. ಚಾರು ಮುಜುಂದಾರ್ ಮತ್ತು ವೆಂಪಟಾಪು ಸತ್ಯನಾರಾಯಣ ಇವರಿಬ್ಬರೂ ಕನಸು ಕಂಡಿದ್ದಂತೆ ಕೃಷಿಕೂಲಿ ಕಾರ್ಮಿಕರ ಹಾಗೂ ಆದಿವಾಸಿಗಳ ಬದುಕು ಹಸನಾಗದಿದ್ದರೂ ಅವರುಗಳ ಸಾಮಾಜಿಕ ಬದುಕಿನಲ್ಲಿ ಒಂದು ಮಹತ್ತರ ಬದಲಾವಣೆಯ ಕ್ರಾಂತಿಗೆ ನಕ್ಸಲ್ ಹೋರಾಟ ಕಾರಣವಾಯಿತು.

ನಕ್ಸಲ್ ಹೋರಾಟಕ್ಕೆ ಮುನ್ನ ಪೂರ್ವ ಮತ್ತು ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ದಲಿತರು, ಹಿಂದುಳಿದವರು, ಹಾಗೂ ಬಡ ಆದಿವಾಸಿಗಳು ಜಮೀನ್ದಾರರ ಪಾಳೇಗಾರ ಸಂಸ್ಕೃತಿಯಿಂದ ನಲುಗಿಹೋಗಿದ್ದರು. ಯಾರೊಬ್ಬರು ತಲೆಗೆ ಮುಂಡಾಸು ಕಟ್ಟುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಧರಿಸುವಂತಿರಲಿಲ್ಲ, ತಮ್ಮ ಮನೆಯ ಒಳಗೆ ಅಥವಾ ಹೊರಗೆ ಚಾರ್ ಪಾಯ್ ಮಂಚ ಬಳಸುವಂತಿರಲಿಲ್ಲ. (ತೆಂಗಿನ ಅಥವಾ ಸೆಣಬಿನ ನಾರು ಹಗ್ಗದಲ್ಲಿ ನೇಯ್ದು ಮಾಡಿದ ಮಂಚ. ಈಗಿನ ಹೆದ್ದಾರಿ ಪಕ್ಕದ ಡಾಬಗಳಲ್ಲಿ ಇವುಗಳನ್ನು ಕಾಣಬಹುದು) ಅಷ್ಟೇ ಏಕೆ? ತಮ್ಮ ಸೊಂಟಕ್ಕೆ ಪಂಚೆ ಅಥವಾ ಲುಂಗಿ ಕಟ್ಟುವಂತಿರಲಿಲ್ಲ. ನಕ್ಸಲರ ಆಗಮನದಿಂದಾಗಿ, ಆಂಧ್ರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ಶತ ಶತಮಾನಗಳ ಕಾಲ ಮುಕ್ತ ಪ್ರಾಣಿಗಳಂತೆ ಬದುಕಿದ್ದ ಬಡಜನತೆ ತಲೆ ಎತ್ತಿ ನಡೆಯುವಂತಾಯಿತು. ನಾವು ಸಿಡಿದೆದ್ದರೆ, ಭೂಮಿಯನ್ನು ತಲೆಕೆಳಗಾಗಿ ಮಾಡಬಲ್ಲೆವು ಎಂಬ ಆತ್ಮ ವಿಶ್ವಾಸವನ್ನು ನಕ್ಸಲ್ ಹೋರಾಟ ದೀನದಲಿತರಿಗೆ ತಂದುಕೊಟ್ಟಿತು. ನಕ್ಸಲಿಯರ ಈ ಹೋರಾಟ ಚಾರುವಿನ ಅನಿರೀಕ್ಷಿತ ಸಾವಿನಿಂದಾಗಿ, ಮುಂದಿನ ಒಂದು ದಶಕದ ಅವಧಿಯಲ್ಲಿ ಬಹುತೇಕ ಕವಲು ಹಾದಿಯಲ್ಲಿ ಸಾಗಿತು. ಏಕೆಂದರೆ, ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಞಾಸೆ ಮೂಡಿ, ಭಿನ್ನಭಿಪ್ರಾಯಕ್ಕೆ ಕಾರಣವಾಯಿತು. ಚಾರು ಮುಜುಂದಾರ್ ಕನಸಿದ್ದ ಹೋರಾಟದ ಮಾರ್ಗವನ್ನು (ಗೆರಿಲ್ಲಾ ಯುದ್ಧ ತಂತ್ರ ಮತ್ತು ಹಿಂಸೆ) ತುಳಿಯಲು ಹಲವು ನಾಯಕರಿಗೆ ಇಷ್ಟವಿರಲಿಲ್ಲ. ಚಾರು ರೂಪಿಸಿದ್ದ ಹೋರಾಟದ ಮೂರು ಮುಖ್ಯ ಸೂತ್ರಗಳೆಂದರೆ,

  • ಪ್ರತಿ ಹಂತದಲ್ಲಿ ಸಶಸ್ತ್ರಗಳನ್ನು ಬಳಸಿ, ಕಾರ್ಯಕರ್ತರ ಮನಸ್ಸನ್ನು ಸದಾ ಶತ್ರುಗಳ ವಿರುದ್ದ ಉನ್ಮಾದದ ಸ್ಥಿತಿಯಲ್ಲಿ ಇಡಬೇಕು. ಇದಕ್ಕಾಗಿ ಪ್ರತಿದಿನ ಭೂ ಮಾಲೀಕರ ಪಾಳೆಗಾರ ಸಂಸ್ಕೃತಿಯ ವಿರುದ್ಧ ಯುದ್ಧ ಜರುಗುತ್ತಲೇ ಇರಬೇಕು.
  • ನಕ್ಸಲ್ ಹೋರಾಟಕ್ಕೆ ಎಲ್ಲಾ ವಿದ್ಯಾವಂತ ವರ್ಗ ಧುಮುಕುವಂತೆ ಪ್ರೇರೇಪಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ನಗರಗಳಲ್ಲಿ ಗುಪ್ತ ಸಭೆಗಳನ್ನು ನಡೆಸಬೇಕು. ಅವರುಗಳಿಗೆ ಬಡವರ ಬವಣೆಗಳನ್ನು ಮನಮುಟ್ಟುವಂತೆ ವಿವರಿಸಬೇಕು. ಪ್ರತಿ ನಗರ ಹಾಗೂ ಪಟ್ಟಣಗಳಲ್ಲಿ ನಾಲ್ಕು ಅಥವಾ ಐದು ಜನರ ತಂಡವನ್ನು ತಯಾರಿಸಿ ನಕ್ಸಲ್ ಸಿದ್ಧಾಂತ ಎಲ್ಲೆಡೆ ಹರಡುವಂತೆ ನೋಡಿಕೊಳ್ಳಬೇಕು.
  • ಗ್ರಾಮಗಳಲ್ಲಿ ಕೃಷಿಕರು, ಕೂಲಿಗಾರರು ಇವರುಗಳನ್ನು ಸಂಘಟಿಸಿ, ಸಣ್ಣ ಮಟ್ಟದ ರ್‍ಯಾಲಿಗಳನ್ನು ನಡೆಸುವುದರ ಮೂಲಕ ಅವರುಗಳಿಗೆ ಶ್ರೀಮಂತರ ಸುಲಿಗೆ, ಸರ್ಕಾರದ ಇಬ್ಬಂದಿತನ, ಇವುಗಳನ್ನು ವಿವರಿಸಿ, ಅವರನ್ನು ಶೋಷಣೆಯಿಂದ ಮುಕ್ತರಾಗಲು ಹೋರಾಟವೊಂದೇ ಅಂತಿಮ ಮಾರ್ಗ ಎಂಬ ಮನಸ್ಥಿತಿಗೆ ತಂದು ನಿಲ್ಲಿಸಬೇಕು.

ಆದರೆ, ಇವುಗಳನ್ನು ಅನುಷ್ಠಾನಗೊಳಿಸಲು ಕೆಲವು ನಾಯಕರಿಗೆ ಮನಸ್ಸಿರಲಿಲ್ಲ.

ಚಾರು ಮುಜುಂದಾರ್‌ಗೆ 1975 ರ ಒಳಗೆ ಇಡೀ ಭಾರತವನ್ನು ಮಾವೋವಾದಿ ಕಮ್ಯೂನಿಷ್ಟರ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹೆಬ್ಬಯಕೆ ಇತ್ತು. ಈ ಕಾರಣಕ್ಕಾಗಿ ಅವನು ಯುವಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದ. ವಸಾಹತು ಕಾಲದಲ್ಲಿ ಬ್ರಿಟಿಷರ ಶೋಷಣೆ, ಸ್ವಾತಂತ್ರ್ಯದ ನಂತರದ ಶ್ರೀಮಂತ ಭೂಮಾಲೀಕರು, ಮತ್ತು ಭ್ರಷ್ಟ ಅಧಿಕಾರಿಗಳ ಶೋಷಣೆಯ ಬಗ್ಗೆ ಯುವ ಜನಾಂಗಕ್ಕೆ ಮನಮುಟ್ಟುವಂತೆ ತಲುಪಿಸುವಲ್ಲಿ ಅವನು ಯಶಸ್ವಿಯಾದ. ಜೊತೆಗೆ ರಾಷ್ಟ್ರೀಯ ನಾಯಕರ ಬಗ್ಗೆ ವಿಶೇಷವಾಗಿ, ಗಾಂಧಿ, ನೆಹರೂ, ಪಟೇಲ್, ರವೀಂದ್ರನಾಥ ಟ್ಯಾಗೂರ್, ಈಶ್ವರ ಚಂದ್ರ ವಿದ್ಯಾಸಾಗರ್ ಇವರುಗಳ ಬಗ್ಗೆ ಯುವಜನಾಂಗದಲ್ಲಿ ಇದ್ದ ಗೌರವ ಭಾವನೆಯನ್ನು ಅಳಿಸಿಹಾಕಿದ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದ ಬಡ ರೈತರ ಬಗ್ಗೆ, ಕೃಷಿಕೂಲಿ ಕಾರ್ಮಿಕರ ಬಗ್ಗೆ ಧ್ವನಿ ಎತ್ತದ ಈ ನಾಯಕರುಗಳೆಲ್ಲಾ ಚಾರುವಿನ ದೃಷ್ಟಿಯಲ್ಲಿ ಸೋಗಲಾಡಿತನದ ವ್ಯಕ್ತಿಗಳು ಎಂಬಂತಾಗಿದ್ದರು. ಚಾರುವಿನ ಪ್ರಚೋದನಕಾರಿ ಭಾಷಣ ಪಶ್ಚಿಮ ಬಂಗಾಳದಲ್ಲಿ ಹಲವು ಬಿಸಿ ರಕ್ತದ ತರುಣರನ್ನು ನಕ್ಸಲ್ ಹೋರಾಟಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಪೊಲೀಸ್ ಠಾಣೆಗಳನ್ನು, ಮತ್ತು ಸರ್ಕಾರಿ ಕಚೇರಿ ಕಟ್ಟಡಗಳನ್ನು ಚಾರು ಹಿಂಸಾತ್ಮಕ ದಾಳಿಗೆ ಗುರಿಯಾಗಿರಿಸಿಕೊಂಡಿದ್ದ. ಇದಕ್ಕೆ ಮೂಲ ಕಾರಣ, ಒಂದು ಕಡೆ ಸರ್ಕಾರದ ನೈತಿಕತೆಯನ್ನು ಕುಗ್ಗಿಸುತ್ತಾ, ಇನ್ನೊಂದೆಡೆ, ಸಂಘಟನೆಗೆ ಬೇಕಾದ ಬಂದೂಕಗಳು ಮತ್ತು ಗುಂಡುಗಳನ್ನು ಅಪಹರಿಸುವುದು ಅವನ ಉದ್ದೇಶವಾಗಿತ್ತು.

ಚಾರು ಮುಜುಂದಾರ್ ತಾನು ಪೊಲೀಸರಿಂದ 1971 ರಲ್ಲಿ ಹತ್ಯೆಯಾಗುವ ಮುನ್ನ, ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಕೇವಲ ಒಂದು ವರ್ಷದ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 3200 ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿದ್ದ. ಕೊಲ್ಕತ್ತ ನಗರವೊಂದರಲ್ಲೇ ಕಾರ್ಯಕರ್ತರು ಸೇರಿದಂತೆ ಒಟ್ಟು 139 ಮಂದಿ ಹತ್ಯೆಯಾದರು. ಇವರಲ್ಲಿ 78 ಮಂದಿ ಪೊಲೀಸರು ನಕ್ಸಲ್ ದಾಳಿಗೆ ಬಲಿಯಾದರು. ನಕ್ಸಲರು ಒಂದು ವರ್ಷದಲ್ಲಿ ಪೊಲೀಸ್ ಠಾಣೆಗಳಿಂದ 370 ಬಂದೂಕುಗಳನ್ನು ಅಪಹರಿಸುವಲ್ಲಿ ಯಶಸ್ವಿಯಾದರು. ಪಶ್ಚಿಮ ಬಂಗಾಳದ ಹೋರಾಟ ಪರೋಕ್ಷವಾಗಿ ಬಿಹಾರ್ ಮತ್ತು ಆಂಧ್ರ ರಾಜ್ಯದಲ್ಲಿ ಪರಿಣಾಮ ಬೀರಿ. ಅಲ್ಲಿಯೂ ಕೂಡ ಕ್ರಮವಾಗಿ 220 ಮತ್ತು 70 ಹಿಂಸಾತ್ಮಕ ಘಟನೆಗಳು ಜರುಗಿದವು. ಇದು ಅಂತಿಮವಾಗಿ ಚಾರುವಿನ ಹತ್ಯೆಗೆ ಪಶ್ಚಿಮ ಬಂಗಾಳದ ಪೊಲೀಸರನ್ನು ಪ್ರಚೋದಿಸಿತು.

ಚಾರುವಿನ ಸಾವಿನ ನಂತರ ಮಾವೋವಾದಿ ಸಂಘಟನೆ ಎರಡನೇ ವರ್ಗದ ನಾಯಕರ ಸ್ವಾರ್ಥ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಒಟ್ಟು 30 ಗುಂಪುಗಳಾಗಿ ಸಿಡಿದುಹೋಯಿತು. ಎಲ್ಲರ ಗುರಿ ಒಂದಾದರೂ ಕೂಡ ಬಹುತೇಕ ನಾಯಕರು ಹೋರಾಟದ ಮುಂಚೂಣಿಗೆ ಬರುವ ಆಸೆಯಿಂದ, ನಮ್ಮ ಕರ್ನಾಟಕದ ರೈತಸಂಘ, ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಗಳ ಮಾದರಿಯಲ್ಲಿ  ಒಡೆದು ಚೂರಾಯಿತು. ಇವುಗಳಲ್ಲಿ ಮುಖ್ಯವಾಗಿ ಚಾರುವಿನ ಸಿದ್ಧಾಂತವನ್ನು ಒಪ್ಪಿಕೊಂಡ ಒಂದು ಸಂಘಟನೆ ಹಾಗೂ ವಿರೋಧಿಸುವ ಇನ್ನೊಂದು ಸಂಘಟನೆ ಇವೆರಡು ಮಾತ್ರ ಜೀವಂತವಾಗಿ ನಕ್ಸಲ್ ಚಳವಳಿಯನ್ನು ಮುಂದುವರಿಸಿದವು. ಉಳಿದವುಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ಆಯಾ ಪ್ರಾಂತ್ಯಗಳಿಗೆ ಸೀಮಿತವಾದವು.

ನಕ್ಸಲ್ ಹೋರಾಟವನ್ನು ಮುನ್ನಡೆಸುತ್ತಾ, ಮಾವೋತ್ಸೆ ತುಂಗನ ಪರಮ ಆರಾಧಕನಾಗಿದ್ದ ಚಾರು ಮುಜುಂದಾರ್ ಹೋರಾಟದ ಉನ್ಮಾದದಲ್ಲಿ ಮಾವೋನ ಪ್ರಮುಖ ಸಿದ್ಧಾಂತವನ್ನು ಮರೆತದ್ದು ಪ್ರಥಮ ಹಂತದ ಹೋರಾಟದ ಯಶಸ್ವಿಗೆ ಅಡ್ಡಿಯಾಯಿತು. ಮಾವೋತ್ಸೆ ತುಂಗನ ಪ್ರಕಾರ, ಕಮ್ಯೂನಿಷ್ಟರು ಭವಿಷ್ಯ ನುಡಿಯುವ ಜೋತಿಷಿಗಳಲ್ಲ. ಅವರು ಸಮಾಜ ಮತ್ತು ಜನತೆ ಸಾಗಬೇಕಾದ ದಿಕ್ಕನ್ನು ಮತ್ತು ಮಾರ್ಗವನ್ನು ತೋರುವವರು ಮಾತ್ರ. ಕಮ್ಯೂನಿಷ್ಟರು ಅಭಿವೃದ್ಧಿಗೆ ಮಾರ್ಗದರ್ಶಕರೇ ಹೊರತು, ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ಗುರಿ ತಲುಪಬೇಕೆಂಬ ಹುಚ್ಚು ಆವೇಶವನ್ನು ಇಟ್ಟುಕೊಂಡವರಲ್ಲ. ಚಾರು, ಮಾವೋನ ಇಂತಹ ಮಾತುಗಳನ್ನು ಮರೆತ ಫಲವೋ ಏನೊ, ಪರೋಕ್ಷವಾಗಿ ದುರಂತ ಸಾವನ್ನು ಕಾಣಬೇಕಾಯಿತು.

ಇದೇ ವೇಳೆಗೆ 1970ರ ಆಗಸ್ಟ್ 11 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಜ್ಯಸಭೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ದೇಶಾದ್ಯಂತ ನಕ್ಸಲಿಯ ಚಟುವಟಿಕೆಗಳನ್ನು ಹತ್ತಿಕ್ಕಲು ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಣೆಗೆ ಆದೇಶ ನೀಡಿದರು. ಅರೆಸೇನಾಪಡೆ ಮತ್ತು ಆಯಾ ರಾಜ್ಯಗಳ ವಿಶೇಷ ಪೊಲೀಸ್ ಪಡೆಯೊಂದಿಗೆ “ಆಪರೇಷನ್ ಸ್ಟೀಪಲ್ ಚೇಸ್” ಎಂಬ ಹೆಸರಿನಲ್ಲಿ ಪ್ರಾರಂಭವಾದ ಕಾರ್ಯಾಚರಣೆಯಿಂದಾಗಿ 1971ರ ಜುಲೈನಲ್ಲಿ ಸಂಭವಿಸಿದ ಚಾರುವಿನ ಮರಣಾನಂತರ, ಎಲ್ಲಾ ರಾಜ್ಯಗಳಲ್ಲಿ ನಕ್ಸಲ್ ಚಳವಳಿಯ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಯಿತು. ನಕ್ಸಲ್ ಹೋರಾಟ ಮುಗಿಸಲು ಹೋರಾಡಿ ಎಂದು ಇಂದಿರಾ ನೀಡಿದ ಕರೆಗೆ ಅಭೂತಪೂರ್ವ ಯಸಸ್ಸು ದೊರಕಿತು. ದೇಶದ ಎಲ್ಲಾ ನಕ್ಸಲ್ ನಾಯಕರು ಬಂಧಿತರಾಗಿ ಸರೆಮನೆಗೆ ತಳ್ಳಲ್ಪಟ್ಟರು. ಪ್ರಮುಖ ನಾಯಕರಾದ ಕನುಸನ್ಯಾಲ್, ಜಂಗಲ್ ಸಂತಾಲ್, ನಾಗಭೂಷಣ್ ಪಟ್ನಾಯಕ್, ಕುನ್ನಿಕಲ್ ನಾರಾಯಣನ್, ಅಶೀಮ್ ಚಟರ್ಜಿ, ಹೀಗೆ, ಆಂಧ್ರದಲ್ಲಿ 1400, ಬಿಹಾರದಲ್ಲಿ 2000, ಪಶ್ಚಿಮ ಬಂಗಾಳದಲ್ಲಿ 4000, ಕೇರಳ, ಉತ್ತರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾದಲ್ಲಿ 1000 ಮಂದಿ ನಕ್ಸಲ್ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರುಗಳನ್ನು ಬಂಧಿಸಲಾಯಿತು. ಇದರಿಂದಾಗಿ ಸುಮಾರು ಆರು ವರ್ಷಗಳ ಕಾಲ (1971 ರಿಂದ 1977 ರ ವರೆಗೆ) ನಕ್ಸಲ್ ಹೋರಾಟಕ್ಕೆ ಹಿನ್ನಡೆಯುಂಟಾಯಿತು.

ಈ ನಡುವೆ ಚಾರು ಸಿದ್ಧಾಂತದಿಂದ ದೂರವಾಗಿ ತಮ್ಮದೇ ಬಣಗಳನ್ನು ಕಟ್ಟಿಕೊಂಡಿದ್ದ ಹಲವರು ನಕ್ಸಲ್ ಹೋರಾಟವನ್ನು ಜೀವಂತವಾಗಿ ಇಡುವಲ್ಲಿ ಸಫಲರಾದರು. ಚಾರು ಸಿದ್ಧಾಂತವನ್ನು ಒಪ್ಪಿಕೊಂಡವರು ಲಿನ್ ಬಯೋ ಗುಂಪು ಎಂದೂ, ವಿರೋಧಿ ಬಣವನ್ನು ಲಿನ್ ಬಯೋ ವಿರೋಧಿ ಬಣವೆಂದು ಕರೆಯುವ ವಾಡಿಕೆ ಆದಿನಗಳಲ್ಲಿ ಚಾಲ್ತಿಯಲ್ಲಿತ್ತು. (ಲಿನ್ ಬಯೋ ಎಂಬಾತ ಚೀನಾದಲ್ಲಿ ಮಾವೋ ನಂತರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಮ್ಯೂನಿಷ್ಟ್ ನಾಯಕ.) ಬಿಹಾರದಲ್ಲಿ ಅತ್ಯಂತ ಹಿಂದುಳಿದ ಜಾತಿಗಳಾದ ಅಹಿರ್, ಕುರ್ಮಿಸ್ ಮತ್ತು ಕೊಯಿರಿಸ್ ಜಾತಿಯ ಜನರನ್ನ ಜಗದೀಶ್ ಮಾತೊ ಎಂಬ ಶಿಕ್ಷಕ ಸಂಘಟಿಸಿ ಹೋರಾಟಕ್ಕೆ ಚಾಲನೆ ನೀಡಿದ. ಇವನಿಗೆ ರಾಮೇಶ್ವರ್ ಅಹಿರ್ ಎಂಬಾತ ಜೊತೆಯಾಗಿ ನಿಂತ. ಇವರಿಬ್ಬರ ಮುಖ್ಯ ಗುರಿ, ಕೆಳಜಾತಿಯ ಜನರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದ ಭೂಮಾಲೀಕರುಗಳನ್ನ ನಿರ್ನಾಮ ಮಾಡುವುದೇ ಆಗಿತ್ತು. ದೇಶದ ಪ್ರಮುಖ ನಕ್ಸಲ್ ನಾಯಕರಲ್ಲಾ ಬಂಧಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವಾಗ ಇವರಿಬ್ಬರು ಸಾರಿದ ಸಮರ ಬಿಹಾರ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವನ್ನೂ ನಡುಗಿಸಿತು. 1971 ರಿಂದ 77 ರ ಅವಧಿಯಲ್ಲಿ ಇವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 90 ಮಂದಿ ಭೂಮಾಲೀಕರು ನಿರ್ಧಯವಾಗಿ ಕೊಲ್ಲಲ್ಪಟ್ಟರು. ಕೊನೆಗೆ ಬಿಹಾರ ಪೊಲೀಸರು ‘ಆಪರೇಷನ್ ಥಂಡರ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜಗದೀಶ್ ಮಾತೊ, ಮತ್ತು ರಾಮೇಶ್ವರ್ ಅಹಿರ್ ಇಬ್ಬರನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡುವುದರೊಂದಿಗೆ ನಕ್ಸಲ್ ಹೋರಾಟವನ್ನು ಸದೆಬಡಿದರು.

ಈ ನಡುವೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲೂ ಸಹ ಚಾರು ಸಿದ್ಧಾಂತವನ್ನು ವಿರೋಧಿಸಿ ಹೊರಬಂದಿದ್ದ ನಕ್ಸಲರ ಬಣವೊಂದು ನಾಗಿರೆಡ್ಡಿಯ ನೇತೃತ್ವದಲ್ಲಿ ಸಂಘಟಿತವಾಯಿತು. ಇದೇ ರೀತಿ ಮತ್ತೇ ಬಿಹಾರದಲ್ಲಿ ಸತ್ಯನಾರಾಯಣಸಿಂಗ್ ನೇತೃತ್ವದಲ್ಲಿ ನಕ್ಸಲ್ ಬಣವೊಂದು ತಲೆಎತ್ತಿತು. ನಕ್ಸಲ್ ಚಳವಳಿಯಲ್ಲಿ ಚಾರು ಮುಜುಂದಾರ್ ಉಗ್ರವಾದದ ಹೋರಾಟವನ್ನು ಅಳಿಸಿ ಹಾಕಿ, ಸಮಾಜದ ಎಲ್ಲಾ ವರ್ಗದ ಜನತೆಯ ವಿಶ್ವಾಸಗಳಿಸಿಕೊಂಡು ಹೋರಾಟವನ್ನು ಮುನ್ನೆಡಸಬೇಕೆಂಬುದು, ಸತ್ಯನಾರಾಯಣಸಿಂಗ್‌ನ ಆಶಯವಾಗಿತ್ತು. ಈ ಕಾರಣಕ್ಕಾಗಿ ಅವನು ಮೊದಲು ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದ. 1975ರ ಆ ದಿನಗಳಲ್ಲಿ ನಕ್ಸಲ್ ಹೋರಾಟವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಹೋರಾಟದ ಮೂಲಕ ಕೊಂಡೊಯ್ಯಬೇಕೆಂಬುದು ಅವನ ಕನಸಾಗಿತ್ತು. ಸಾಧ್ಯವಾದರೆ, ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಚುನಾವಣೆಗೆ ನಿಂತು, ದಲಿತರು ಮತ್ತು ಬಡವರ ಶೋಷಣೆಯ ವಿರುದ್ಧ ಜನಪ್ರತಿನಿಧಿಗಳ ಸಭೆಯಲ್ಲಿ ಹೋರಾಡಬೇಕೆಂದು ಸತ್ಯನಾರಾಯಣ ಸಿಂಗ್ ಕರೆಯಿತ್ತ. ಈತನ ಹಲವಾರು ವಿಚಾರಗಳಿಗೆ ನಾಯಕರು ವಿಶೇಷವಾಗಿ ಕನುಸನ್ಯಾಲ್, ಅಶೀಮ್ ಚಟರ್ಜಿ, ನಾಗಭೂಷಣ್ ಪಟ್ನಾಯಕ್ ಮುಂತಾದವರು ಜೈಲಿನಿಂದಲೇ ತಮ್ಮ ವಿರೋಧ ವ್ಯಕ್ತಪಡಿಸಿದರು.

1975 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ, ಭಾರತದ ಎಲ್ಲಾ ರಾಜ್ಯಗಳಲ್ಲಿ ತಲೆ ಎತ್ತಿರುವ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಇದರಿಂದಾಗಿ ಹೊರಗೆ ಉಳಿದಿದ್ದ ಇನ್ನಿತರೆ 650 ಮಂದಿ ನಾಯಕರೂ ಸಹ ಜೈಲು ಸೇರಬೇಕಾಯಿತು. ಯಾವುದೇ ಹಿಂಸೆಯ ಘಟನೆಯಲ್ಲಿ ಪಾಲ್ಗೊಳ್ಳದ ಸತ್ಯನಾರಾಯಣ ಸಿಂಗ್ ಬಿಹಾರ ರಾಜ್ಯದಲ್ಲಿ ಭೂಗತನಾಗುವುದರ ಮೂಲಕ ಬಂಧನದಿಂದ ತಪ್ಪಿಕೊಂಡ.

1977 ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪತನಗೊಂಡು, ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರದ ಗದ್ದುಗೆ ಹಿಡಿಯಿತು. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿ, ಚರಣ್ ಸಿಂಗ್ ಗೃಹ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಮಂತ್ರಿ ಚರಣ್‌ಸಿಂಗ್‌ರವರನ್ನು ಭೇಟಿಯಾದ ಸತ್ಯನಾರಾಯಣಸಿಂಗ್, ಜನತಾ ಪಕ್ಷಕ್ಕೆ ಮಾವೋವಾದಿಗಳ ಕಮ್ಯೂನಿಷ್ಟ ಪಕ್ಷದ ಬೆಂಬಲವಿದೆ ಎಂದು ತಿಳಿಸಿ, ಯಾವ ಕಾರಣಕ್ಕೂ ದೇಶದ ಆಂತರೀಕ ಭದ್ರತೆಗೆ ಧಕ್ಕೆಯುಂಟುಮಾಡುವುದಿಲ್ಲ ಎಂದು ಭರವಸೆ ನೀಡಿದ; ಅಲ್ಲದೆ ಮಿಸಾ ಅಡಿ ಬಂಧನದಲ್ಲಿರುವ ನಕ್ಸಲ್ ನಾಯಕರನ್ನು ಬಿಡುಗಡೆಗೊಳಿಸಲು ಮನವಿ ಮಾಡಿದ.

ಲೋಕಸಭೆಯ ಸದಸ್ಯ ಹಾಗೂ ಆಲ್ ಇಂಡಿಯ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್ ಅಂಡ್ ಡೆಮಾಕ್ರಟಿಕ್ ರೈಟ್ಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೃಷ್ಣಕಾಂತ್ ಇವರ ದೆಹಲಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯನಾರಾಯಣ ಸಿಂಗ್, ಹಿಂಸೆ ನಮ್ಮ ಗುರಿಯಲ್ಲ. ಪ್ರಜಾಪ್ರಭುತ್ವದ ಅಹಿಂಸಾತ್ಮಕ ಹೋರಾಟಕ್ಕೆ ನಕ್ಸಲಿಯರ ಬೆಂಬಲವಿದೆ ಎಂದು ಘೋಷಿಸಿದ. ಆದರೆ, ಜೈಲು ಸೇರಿದ್ದ ಬಹುತೇಕ ನಾಯಕರು, ಸರ್ಕಾರದ ಜೊತೆಗಿನ ಮಾತುಕತೆಗೆ ನಮ್ಮ ಸಹ ಮತವಿಲ್ಲ ಎಂದು ಜಂಟಿಹೇಳಿಕೆ ನೀಡಿದರು. ಈ ಹೇಳಿಕೆಗೆ ಕನುಸನ್ಯಾಲ್, ಜಂಗಲ್ ಸಂತಾಲ್, ಅಶೀಮ್ ಚಟರ್ಜಿ ಹಾಗೂ ಸುರೇನ್ ಬೋಸ್ ಮುಂತಾದವರು ಸಹಿ ಹಾಕಿದ್ದರು.

ಅಂತಿಮವಾಗಿ 1977ರ ಮೇ 3 ರಂದು ಪ್ರಧಾನಿ ಮುರಾರ್ಜಿ ದೇಸಾಯಿ ನಕ್ಸಲ್ ನಾಯಕರ ವಿರುದ್ಧ ಇರುವ ಮೊಕದ್ದಮೆಗಳನ್ನು ಹಿಂಪಡೆದು, ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿದರು. ಈ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಹುದ್ದೆ ಏರಿದ್ದ ಜ್ಯೋತಿಬಸು ತಮ್ಮ ರಾಜ್ಯದಲ್ಲಿ ಬಂಧಿತರಾಗಿದ್ದ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಲ್ಲದೆ, ನೆರೆಯ ಆಂಧ್ರ ಮತ್ತು ಬಿಹಾರ, ಒರಿಸ್ಸಾದಲ್ಲಿ ಬಂಧನದಲ್ಲಿದ್ದವರನ್ನು ಬಿಡುಗಡೆಗೊಳಿಸುವಲ್ಲಿ ಸಫಲರಾದರು.

1977ರ ಅಂತ್ಯದ ವೇಳೆಗೆ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸತ್ಯನಾರಾಯಣ ಸಿಂಗ್ ಬಣದ ಐವರು ಅಭ್ಯರ್ಥಿಗಳು (ಪ.ಬಂಗಾಳದಲ್ಲಿ ಮೂವರು, ಬಿಹಾರ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು) ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅಂತಿಮವಾಗಿ, ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಕ್ಷೇತ್ರದಿಂದ ನಕ್ಸಲ್ ನಾಯಕ ಸಂತೋಷ್ ರಾಣಾ ಇವನ ಪತ್ನಿ ನಾಗರೀಕ ಹಕ್ಕುಗಳ ಹೋರಾಟಗಾರ್ತಿ, ಜಯಶ್ರೀ ರಾಣಾ ಗೆಲ್ಲುವಲ್ಲಿ ಯಶಸ್ವಿಯಾದಳು.

ಹೀಗೆ ಚಾರು ಮುಜುಂದಾರನ ನಿಧನದ ನಂತರ ಹಲವು ಬಣಗಳಾಗಿ ಸಿಡಿದುಹೋದ ನಕ್ಸಲ್ ಹೋರಾಟ, 1971 ರಿಂದ 1980ರ ವರೆಗೆ ನಿರಂತರ ಒಂಬತ್ತು ವರ್ಷಗಳ ಕಾಲ ನಾಯಕರ ತಾತ್ವಿಕ ಸಿದ್ಧಾಂತ ಮತ್ತು ಆಚರಣೆಗೆ ತರಬೇಕಾದ ಪ್ರಯೋಗಗಳ ಕುರಿತ ಭಿನ್ನಾಭಿಪ್ರಾಯದಿಂದ ತನ್ನ ಶಕ್ತಿ ಮತ್ತು ಸಾಮಥ್ಯವನ್ನು ಕುಂದಿಸಿಕೊಂಡಿತು. ಆದರೆ,  1980ರ ದಶಕದಲ್ಲಿ ಮತ್ತೇ ಫಿನಿಕ್ಸ್ ಹಕ್ಕಿಯಂತೆ ಪ್ರಜಾಸಮರ (ಪೀಪಲ್ಸ್ ವಾರ್ ಗ್ರೂಪ್) ಹೆಸರಿನಲ್ಲಿ ತಲೆ ಎತ್ತಿ ನಿಂತಿತು. ಇದನ್ನು ನಕ್ಸಲ್ ಇತಿಹಾಸದಲ್ಲಿ ಎರಡನೇ ಹಂತದ ಹೋರಾಟ ಎಂದು ಗುರುತಿಸಲಾಗುತ್ತಿದೆ. ಇದರ ಪ್ರಮುಖ ನಾಯಕರು, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಕಿಶನ್ ಜಿ, ರಾಜೇಂದ್ರಕುಮಾರ್ ಭಾಸ್ಕರ್, ಸಾಕೇತ್ ರಾಜನ್, ಸುನೀತ್ ಕುಮಾರ್ ಘೋಸ್ ಮುಂತಾದವರು.

 (ಮೊದಲ ಹಂತದ ಅಂತಿಮ ಅಧ್ಯಾಯ)


ಕೊನೆಯ ಮಾತು- ಪ್ರಿಯ ಓದುಗ ಮಿತ್ರರೇ, ಇಲ್ಲಿಗೆ ನಕ್ಸಲ್ ಇತಿಹಾಸದ ಮೊದಲ ಹಂತದ  ಹನ್ನೆರೆಡು ಅಧ್ಯಾಯಗಳ ಜೊತೆ ನನ್ನ ಕಥನವನ್ನು ಮುಗಿಸುತ್ತಿದ್ದೇನೆ. ಎರಡು ಮತ್ತು ಮೂರನೇ ಹಂತದ ನಕ್ಸಲ್ ಇತಿಹಾಸವನ್ನು ನೀವು ನವಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ನನ್ನ ಕೃತಿಯಲ್ಲಿ ಓದಬಹುದು. ಮತ್ತೇ ಒಂದಿಷ್ಟು ಅಧ್ಯಯನಕ್ಕಾಗಿ  ಜುಲೈ ಮೊದಲವಾರ ಮಹಾರಾಷ್ಟ್ರ, ಛತ್ತೀಸ್‌ಘಡ್ ಮತ್ತು ಮಧ್ಯಪ್ರಧೇಶ ರಾಜ್ಯಗಳ ನಡುವೆ ಇರುವ ದಂಡಕಾರಣ್ಯ (ಗಡ್ ಚಿರೋಲಿ, ದಂತೆವಾಡ, ರಾಯ್‌ಪುರ್, ಗೊಂಡಿಯ, ಬಾಳ್‌ಘಾಟ್) ಪ್ರದೇಶಕ್ಕೆ ತೆರಳುತ್ತಿದ್ದೇನೆ. ಜೊತೆಗೆ ಭಾರತದ ನಕ್ಸಲ್ ಪೀಡಿತ ಪ್ರದೇಶಗಳ ಕುರಿತಂತೆ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಪ್ರಬಂಧಗಳು “ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್” ಸಂಸ್ಥೆಯಿಂದ ಪ್ರಕಟವಾಗಿವೆ. ಅಲ್ಲದೇ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ. ಯ ಸಮಾಜ ಶಾಸ್ತ್ರಜ್ಞರು ಅಧ್ಯಯನ ಮಾಡಿರುವ ಪೂರ್ವ ಭಾರತದ ಬುಡಕಟ್ಟು ಜನಾಂಗಗಳ ಸ್ಥಿತಿ ಗತಿಯ ಬಗ್ಗೆ ಮಾಡಿರುವ ಅಧ್ಯಯನ ಕೂಡ ಪ್ರಕಟವಾಗಿದೆ. ಸದ್ಯಕ್ಕೆ ಕಥನಕ್ಕೆ ವಿರಾಮ ಹೇಳಿ ಅಧ್ಯಯನದ ಈ ಕೃತಿಗಳನ್ನು ಅವಲೋಕಿಸುತ್ತಿದ್ದೇನೆ.

ನಮಸ್ಕಾರ.
ಡಾ.ಎನ್. ಜಗದೀಶ್ ಕೊಪ್ಪ

ಆದರ್ಶ, ಆಡಳಿತ ಮತ್ತು ಆಚರಣೆಗಳ ನಡುವೆ : ದೇವರಾಜ ಅರಸು ಅವರ ಭೂ ಸುಧಾರಣೆಯಲ್ಲಿ ಪ್ರತ್ಯೇಕತೆಗೆ ಅವಕಾಶ

– ಪ್ರೊ. ನರೇಂದರ್ ಪಾಣಿ
ಕನ್ನಡಕ್ಕೆ: ಡಾ. ಎಚ್.ಎಸ್.ಅನುಪಮಾ

ಭಾರತ ಸಂವಿಧಾನ ಅಳವಡಿಸಿಕೊಂಡ ಅರವತ್ತು ವರ್ಷಗಳಲ್ಲಿ ಎದ್ದು ಕಾಣುವ ಒಂದು ಅಂಶವೆಂದರೆ ಕಾನೂನು ವ್ಯವಸ್ಥೆ ಮತ್ತು ಸುಧಾರಣೆಗಳ ನಡುವೆ ಬೆಳೆದಿರುವ ಸಂಬಂಧ. ಇತ್ತೀಚಿನ ದಶಕಗಳಲ್ಲಿ ಕಾನೂನು, ಸುಧಾರಣೆ ತರುವ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿದೆ. ಸುಧಾರಣೆಯ ಹಾದಿಯಲ್ಲಿ – ಭೂಸುಧಾರಣೆಯಿಂದ ಹಿಡಿದು ಲಿಂಗ ತಾರತಮ್ಯದವರೆಗೆ – ಸಾರ್ವಜನಿಕ ಅಭಿಪ್ರಾಯ ರೂಪಿಸುವಂತೆ ಕಾನೂನಿನಲ್ಲಿ ಅಗತ್ಯ ಬದಲಾವಣೆ ಮಾಡಬೇಕೆಂದು ಒತ್ತಾಯ ತರಲಾಗುತ್ತಿದೆ. ಒಮ್ಮೆ ಅದನ್ನು ಸಾಧಿಸಿದ ನಂತರ ಇಡೀ ರಾಜ್ಯ ಮತ್ತು ನ್ಯಾಯಾಂಗದ ಅಧಿಕಾರವನ್ನೆಲ್ಲಾ ಕಾನೂನು ಮತ್ತು ಅದು ಒಳಗೊಂಡ ಸುಧಾರಣೆಗಳನ್ನು ಜಾರಿಗೆ ತರುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಸುಧಾರಣೆಗಳಿಗೆ ಸಂಬಂಧ ಪಟ್ಟಂತೆ ಬದಲಾವಣೆಯ ಸಲುವಾಗಿ ಈ ಪ್ರಕ್ರಿಯೆಯು ಅವಶ್ಯಕ ನೆಲಗಟ್ಟನ್ನು ಒದಗಿಸಿದೆ ಮತ್ತು ಕಾನೂನಿನ ಸುಧಾರಣೆಗಳು ಅದನ್ನು ಗಟ್ಟಿಗೊಳಿಸಿದೆ. ಆದರೆ ಅವಶ್ಯಕ ನೆಲಗಟ್ಟನ್ನು ತಕ್ಕ ಮಟ್ಟಿಗೆ ಎಲ್ಲಿ ಸಿದ್ಧ ಮಾಡಿಲ್ಲವೋ ಅಲ್ಲಿ ಕಾನೂನು ಆ ನೆಲದ ನಂಬಿಕೆಗಳೊಂದಿಗೆ ಘರ್ಷಣೆಗಿಳಿಯಬೇಕಾಗುತ್ತದೆ. ಹೀಗೆ ಕಾನೂನಿಗೆ ಜನಾಭಿಪ್ರಾಯದ ಒಪ್ಪಿಗೆಯ ನೆಲಗಟ್ಟು ದೊರಕದಿದ್ದಲ್ಲಿ ಜನ ಕಾನೂನು ವಿರೋಧಿಸುವುದನ್ನೇ ಸಮರ್ಥಿಸಿಕೊಳ್ಳತೊಡಗುತ್ತಾರೆ. ಈ ಸಂಘರ್ಷ ಒಡ್ಡುವ ಪ್ರತಿರೋಧವು ಕಾನೂನು ವಿರೋಧಿಯಾಗಿರುತ್ತದೆ. ಇದನ್ನು ಇಪ್ಪತ್ತು ಇಪ್ಪತ್ತೊಂದನೇ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಆದರ್ಶಗಳಲ್ಲಿ ಸಮಂಜಸವೆಂದೇ ಪರಿಗಣಿಸಲ್ಪಟ್ಟಿದೆ. ಮದುವೆಯ ಪಾರಂಪರಿಕ ಕಟ್ಟು ಪಾಡುಗಳನ್ನು ಪಾಲಿಸದ ದಂಪತಿಗಳಿಗೆ ಖಾಪ್ ಪಂಚಾಯತಿಗಳು ವಿಧಿಸುವ ಮರಣದಂಡನೆ, ಹತ್ಯೆಗಳು ಈ ಪ್ರವೃತ್ತಿಯ ಸಣ್ಣ ಉದಾಹರಣೆಯಷ್ಟೇ. ಈ ಸಂಘರ್ಷವು ವ್ಯಾಪಕವಾಗುತ್ತಾ ಹೋದಂತೆ ರಾಜ್ಯ ಮತ್ತು ನ್ಯಾಯಾಂಗಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ.

ಆದರೂ ಈ ಸಂಘರ್ಷವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾದ ಘಟನೆಗಳ ಮೇಲಷ್ಟೇ ಬೆಳಕು ಚೆಲ್ಲಿದರೆ ಸಾಲದು. ಒತ್ತಾಯವಾಗಿ ಹೇರಲ್ಪಟ್ಟ ಕಾನೂನಿನ ಆಶಯಗಳೇ ಬೇರೆ, ಅದಕ್ಕೆ ಪರಿಣಾಮವಾಗಿ ಸಿಕ್ಕ ಫಲಿತಾಂಶಗಳೇ ಬೇರೆಯಾಗಿರುವ ಉದಾಹರಣೆಗಳೂ ಇವೆ. ತತ್ವಾಧಾರಿತ ಕಾನೂನು ಮತ್ತು ವಾಸ್ತವದ ಸತ್ಯಗಳು ಬೇರೆ ಬೇರೆಯಾಗಿರುವಾಗ ಇಂತಹ ವೈರುಧ್ಯ ಸಂಭವಿಸುವ ಅವಕಾಶ ಹೆಚ್ಚು. ಹಾಗಾಗಿ ಒಂದು ಪ್ರದೇಶದ ಸಾಮಾಜಿಕ ವಾಸ್ತವಗಳಿಗೆ ತಕ್ಕಂತೆ ರೂಪಿಸಲ್ಪಟ್ಟ ಕಾನೂನು ಭಿನ್ನ ಸಾಮಾಜಿಕ ವ್ಯವಸ್ಥೆಗಳಲ್ಲಿ ತದ್ವಿರುದ್ಧ ಪರಿಣಾಮಗಳನ್ನು ಬೀರಬಹುದು. ಒಂದೇ ತತ್ವದ ಆಧಾರದ ಮೇಲೆ ರೂಪುಗೊಂಡಿದ್ದರೂ ಬೇರೆ ಬೇರೆ ಪ್ರದೇಶಗಳಲ್ಲಿ ವಾಸ್ತವವು ಬೇರೆಯೇ ಆಗಿದ್ದಾಗ ಕಾನೂನಿನ ಸಿದ್ಧಾಂತ ಮತ್ತು ವಾಸ್ತವ ಸತ್ಯಗಳ ನಡುವಿನ ಈ ಅಂತರವು ನಿರೀಕ್ಷಿತವೇ ಆಗಿದೆ. ಹಾಗಾಗಿಯೇ ಈ ವ್ಯತ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲು ಕಾನೂನುಗಳನ್ನು – ಉದಾ: ಭೂ ಸುಧಾರಣೆಯಂತಹ ಕಾನೂನು – ಬೇರೆಬೇರೆಯಾಗಿಯೇ ರೂಪಿಸಲಾಗಿರುತ್ತದೆ. ಆದರೆ ಒಂದೇ ರಾಜ್ಯದ ಒಳಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ಢಾಳಾದ ಬದಲಾವಣೆಗಳಿರುವಾಗ ಒಂದೇ ರೀತಿಯಲ್ಲಿ ಕಾನೂನನ್ನು ಜಾರಿಗೊಳಿಸಿದಲ್ಲಿ ಅನಿರೀಕ್ಷಿತ ಹಾಗೂ ಅನಪೇಕ್ಷಿತ ಪರಿಣಾಮಗಳನ್ನುಂಟು ಮಾಡಬಹುದು.

ಇಂತಹ ಪರಿಣಾಮಗಳು ಮೂಲ ಕಾನೂನಿನ ಸದುದ್ದೇಶದಿಂದ ಎಷ್ಟು ದೂರ ಹೋಗಿವೆಯೆಂದು ತಿಳಿಯಬೇಕಾದರೆ 1974 ರ ಕರ್ನಾಟಕ ಭೂಸುಧಾರಣಾ ಕಾನೂನಿನ ಅನುಷ್ಠಾನದ ಅನುಭವವನ್ನು ನೋಡಬಹುದು. ಇದು ವಿಭಿನ್ನ ಸಾಮಾಜಿಕ ಸನ್ನಿವೇಶಗಳಲ್ಲಿ ಒಂದೇ ರೀತಿಯ ಕಾನೂನು ಅನುಷ್ಠಾನವಾದರೆ ಉಂಟಾಗುವ ಪರಿಣಾಮಗಳ ಬಗೆಗೆ ತಿಳಿಸುತ್ತದೆ. ಮತ್ತು ಕಾನೂನು ಹಾಗೂ ಬದಲಾಗುವ ವಾಸ್ತವ ಸತ್ಯಗಳ ನಡುವಿನ ಸಂಬಂಧ ಹೇಗಿರಬೇಕೆಂಬ ಗ್ರಹಿಕೆಯ ಕುರಿತಾದ ಪ್ರಶ್ನೆಗಳನ್ನೆತ್ತುತ್ತದೆ.

1974 ರ ಕರ್ನಾಟಕದ ಭೂಸುಧಾರಣೆ:

ಒಂದೇ ರೀತಿಯ ಕಾನೂನನ್ನು ಭಿನ್ನ ಸಾಮಾಜಿಕ ಸನ್ನಿವೇಶಗಳ ಮೇಲೆ ಹೇರಿದಾಗ ಏನಾಗಬಹುದೆಂದು ನೋಡಲು ಕರ್ನಾಟಕದ ಭೂಸುಧಾರಣೆಗಿಂತ ಉತ್ತಮ ಉದಾಹರಣೆ ಸಿಗಲಾರದು. ಈ ಇಡೀ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರೇ ಮುಂದಾಳಾಗಿ ನಿಂತಿದ್ದು ಸಾಮಾಜಿಕ ಸುಧಾರಣೆಯ ನಿಟ್ಟಿನಲ್ಲಿ ಇದನ್ನು ದೊಡ್ಡ ಯಶಸ್ಸು ಎಂದೇ ಗುರುತಿಸಲಾಗಿದೆ. ಅಲ್ಲದೇ ದೇವರಾಜ ಅರಸು ಅವರಿಗೆ ‘ಅಭಿಪ್ರಾಯ ಬದ್ಧ, ಪ್ರಗತಿಪರ’ ಎಂಬ ಹೆಸರನ್ನೂ ಇದು ನೀಡಿದೆ. ಭೂ ಸುಧಾರಣಾ ಕಾಯ್ದೆಯು ಭೂಮಿ ಒಡೆತನ ವ್ಯವಸ್ಥೆಯ ಮೇಲೆ ಭೂ ಪರಿಮಿತಿ ಹಾಗೂ ಭೂಸುಧಾರಣೆಯ ರೂಪದಲ್ಲಿ ಎರಡು ವಿಧದ ಆಘಾತ ನೀಡಿದರೂ ಅದರ ಮುಖ್ಯ ಉದ್ದೇಶ ಉಳುವವನಿಗೆ ಭೂಮಿಯ ಒಡೆತನ ನೀಡುವುದೇ ಆಗಿತ್ತು. ಗೇಣಿ ಸುಧಾರಣಾ ಕಾಯ್ದೆ ಜಾರಿಯ ಮೂಲ ರಾಜ್ಯ ಮತ್ತು ರಾಷ್ಟ್ರದಲ್ಲಿ ಒಂದೇ ಆಗಿತ್ತು. ಕೃಷಿಯು ದೊಡ್ಡ ಜಮೀನ್ದಾರರ ಹಿಡಿತದಲ್ಲಿದೆ ಮತ್ತು ಅವರು ಸಣ್ಣ ರೈತರಿಗೆ ಉಳಲು ಭೂಮಿಯನ್ನು ಗೇಣಿ ನೀಡುವುದರ ಮೂಲಕ ಸಾಗುವಳಿ ನಿಭಾಯಿಸುತ್ತಾರೆ ಎಂಬುದು ಒಟ್ಟಾರೆ ಕೃಷಿ ವ್ಯವಸ್ಥೆಯ ಬಗೆಗಿದ್ದ ಅಭಿಪ್ರಾಯವಾಗಿತ್ತು. ಉಳುವವನಿಗೆ ಭೂಮಿ ಎಂದರೆ ಗೇಣಿ ಪಡೆದವನಿಗೆ ಭೂಮಿಯ ಒಡೆತನದ ಹಕ್ಕು ನೀಡುವುದೇ ಆಗಿತ್ತು.

ಈ ಮೂಲತತ್ವ ವ್ಯಾಪಕವಾಗಿ ಅಂಗೀಕೃತವಾದಂತೆ ಮಾರ್ಚ್  1, 1974 ರಲ್ಲಿ ಕರ್ನಾಟಕದಲ್ಲಿ  ಭೂ ಸುಧಾರಣಾ ಕಾಯಿದೆ ಜಾರಿಗೆ ಬಂತು. ಗೇಣಿದಾರನಿಗೆ ಭೂಮಿಯ ಹಕ್ಕು ಕೊಡಿಸುವ ಕೆಲಸ ತೀವ್ರ ಗತಿಯಲ್ಲಿ ಶುರುವಾಯಿತು. ಕೃಷಿ ವ್ಯವಸ್ಥೆಯೆಂದರೇ ದೊಡ್ಡ ಭೂಮಾಲೀಕ – ಸಣ್ಣ ಗೇಣಿದಾರರ ಸಮೂಹ ಎಂಬ ನಂಬಿಕೆಯಿದ್ದುದರಿಂದ ಈ ಕಾಯಿದೆಗೆ ನೀಡಲಾದ ಕೆಲವು ರಿಯಾಯಿತಿಗಳೂ ಕೊರತೆಗಳೆಂದೇ ಭಾವಿಸಲಾಯಿತು. 1974 ರಲ್ಲಿ ತಿದ್ದುಪಡಿಯೊಂದನ್ನು ತಂದು ಸಣ್ಣ ರೈತರು, ವಿಧವೆಯರು, ಅಪ್ರಾಪ್ತ ವಯಸ್ಕರು, ಮಾನಸಿಕ ಅಸ್ವಸ್ಥರು, ಅಂಗವಿಕಲರಿಗೆ ಮೊದಲು ನೀಡಿದ್ದ ರಿಯಾಯ್ತಿಯನ್ನು ರದ್ದುಮಾಡಲಾಯಿತು. 1974 ರ ತಿದ್ದುಪಡಿಯ ಆಧಾರದ ಮೇಲೆ ಅವರೆಲ್ಲ ಭೂಮಿ ಕಳೆದುಕೊಂಡರು. ಕಾನೂನಿನ ಮೂಲ ಉದ್ದೇಶಗಳ  ಮೇಲೆ ಎಂಥ ಧೃಢ ವಿಶ್ವಾಸವಿತ್ತೆಂದರೆ ಈ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಒಂದು ಅಡ್ಡಿಯೆಂದೇ ಭಾವಿಸಲಾಯಿತು. ಕೋರ್ಟ್‍ನ ದಾವೆಗಳಿಂದ ವಿಳಂಬಗೊಂಡ ಕೇಸುಗಳನ್ನು ಇತ್ಯರ್ಥ ಮಾಡಲು ಭೂ ನ್ಯಾಯ ಮಂಡಳಿಗಳನ್ನು ಸ್ಥಾಪಿಸಲಾಯಿತು. ಸ್ಥಳೀಯ ಮುಖಂಡರು ಮತ್ತು ರಾಜಕಾರಣಿಗಳೇ ಮುಖಂಡರಾಗಿರುತ್ತಿದ್ದ ಮಂಡಳಿಗಳಿಗೆ ಭೂ ಸುಧಾರಣೆ ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಲಾಗಿತ್ತು. ಈ ನ್ಯಾಯಮಂಡಳಿಗಳಿಗೆ ವ್ಯಾಪಕ ಅಧಿಕಾರ ನೀಡಿ ಹಕ್ಕು ಪತ್ರ ಪರಿಶೀಲಿಸದೇ ಯಾರು ಗೇಣಿದಾರನೆಂದು ನಿರ್ಣಯಿಸುವ ಅಧಿಕಾರ ಕೊಡಲಾಗಿತ್ತು. ಸುಧೀರ್ ಕೃಷ್ಣ ಒಂದೆಡೆ ಹೇಳುವಂತೆ,  “ಯಾವ ದಾಖಲೆಗಳಿಲ್ಲದಿದ್ದರೂ ಸ್ಥಳೀಯವಾಗಿ ವಿಚಾರಿಸಿದಾಗ ಆತ ನ್ಯಾಯಯುತವಾಗಿ ಭೂಮಿಯನ್ನು ಅಂದು ಉಳುತ್ತಿದ್ದಾನೆ ಎಂಬ ವಿಷಯ ತಿಳಿದರೆ ಸಾಕು, ಆ ವ್ಯಕ್ತಿ ಗೇಣಿದಾರನೆಂದು ತೀರ್ಮಾನಿಸಲಾಗುತ್ತಿತ್ತು.”

ಈ ಕಾನೂನು ಜಾರಿಯ ತೀವ್ರ ಪ್ರಯತ್ನಗಳು ಕರ್ನಾಟಕದ ವಿವಿಧ ರೀತಿಯ ವ್ಯವಸ್ಥೆಗಳಲ್ಲಿ ವಿರುದ್ಧವಾಗಿಯೂ ಕಂಡುಬಂದವು. ಒಂದು ಕಡೆ ಭೂ ಸುಧಾರಣಾ ಕಾನೂನು ಜಾರಿಯ ಉದ್ದೇಶಕ್ಕೆ ತಕ್ಕದಾದ ಕೃಷಿ ವ್ಯವಸ್ಥೆಯಿತ್ತು. ಅದರಲ್ಲೂ ಕರಾವಳಿಯ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೂ ಮಾಲೀಕ – ಗೇಣಿದಾರ ವ್ಯವಸ್ಥೆ ಭೂ ಸುಧಾರಣಾ ಕಾನೂನು ಬದಲಾವಣೆ ತರಬಯಸಿದ್ದ ವ್ಯವಸ್ಥೆಯೇ ಆಗಿತ್ತು. 19ನೇ ಶತಮಾನದ ಮೊದಲ ಭಾಗದಲ್ಲಿ ಪ್ರವಾಸಿ ಬುಕಾನನ್ ಗಮನಿಸಿ ದಾಖಲಿಸಿದಂತೆ ಭೂ ಮಾಲೀಕನ ಜಮೀನುಗಳನ್ನು ಗೇಣಿದಾರರು ಉಳುಮೆ ಮಾಡುತ್ತಿದ್ದರು. 1881 ರ ಜನಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಲ್ಲಿ ಶೇ. 48. 51 ಗೇಣಿದಾರರಾಗಿದ್ದರು. 1872 ರ ಜನಗಣತಿಯು ಉತ್ತರ ಕನ್ನಡದ ಶೇ. 45. 53 ಕೃಷಿಕರು ಗೇಣಿದಾರರು ಎಂದು ತಿಳಿಸಿತ್ತು. ಮುಂದಿನ ಶತಮಾನದಲ್ಲಿ ಗೇಣಿ ಪದ್ಧತಿ ಹೇಗೆ ಹೆಚ್ಚುತ್ತ ಹೋಯಿತೆಂಬುದನ್ನು ಮುಂದಿನ ಕೋಷ್ಟಕ – 1 ತಿಳಿಸುತ್ತದೆ.

ಕೋಷ್ಟಕ – 1

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗೇಣಿದಾರರಿಂದ ಉಳುಮೆ ಮಾಡಲ್ಪಟ್ಟ ಒಟ್ಟು ಭೂಮಿಯ ಪ್ರಮಾಣ – 1971.

ಜಿಲ್ಲೆ 2 ಹೆಕ್ಟೇರುಗಳಿಗಿಂತ ಕಡಿಮೆ 2ರಿಂದ5 ಹೆಕ್ಟೇರುಗಳು 5 ಹೆಕ್ಟೇರುಗಳಿಗಿಂತ ಕಡಿಮೆ
ಉತ್ತರ ಕನ್ನಡ  71.32 60.13  60.87
ದಕ್ಷಿಣ ಕನ್ನಡ 57.57  53.62 31.52

ಮೂಲ: ಕರ್ನಾಟಕದ ಕೃಷಿ ಜಮೀನಿನ ಗಣತಿ, 1971.

ಆದರೆ ಪ್ರತಿ ಜಿಲ್ಲೆಯೊಳಗೂ ಗೇಣಿಯ ಸ್ವರೂಪ ಬೇರೆ ಬೇರೆಯಾಗಿತ್ತು. ಈ ಜಿಲ್ಲೆಗಳಲ್ಲಿ ಚಾರಿತ್ರಿಕವಾಗಿ ಎರಡು ರೀತಿಯ ಗೇಣಿ ಪದ್ಧತಿಯಿತ್ತು. ಮೂಲ ಗೇಣಿ ಹಾಗೂ ಚಾಲಗೇಣಿ. ಮೂಲಗೇಣಿಯು ಒಂದು ರೀತಿಯ ಖಾಯಮ್ಮಾದ, ವಂಶ ಪಾರಂಪರ್ಯ ಗೇಣಿ ವಿಧಾನ. ಭೂಮಾಲೀಕ ವಿಧಿಸಿದಷ್ಟು ಉತ್ಪನ್ನವನ್ನು ಸರಿಯಾಗಿ ಕೊಡುತ್ತ ಹೋದರೆ ಗೇಣಿದಾರ ಆ ಭೂಮಿಯನ್ನು ಅಡವಿಡಬಹುದಾಗಿತ್ತು. ಅದರ ಬಡ್ಡಿ ಅನುಭವಿಸಬಹುದಾಗಿತ್ತು. ಅಥವಾ ಬೇರೆಯವರಿಗೆ ಗೇಣಿಗೆ ಕೊಡಬಹುದಾಗಿತ್ತು. ಅವರು ‘ಗೇಣಿದಾರರಷ್ಟೇ ಅಲ್ಲ, ಅಧೀನ ಭೂಮಾಲೀಕರು.’  ಆದರೆ ಈ ಪದ್ಧತಿ ಪ್ರಧಾನ ಗೇಣಿ ವಿಧಾನವಾಗಿರಲಿಲ್ಲ. 1938 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 10 ಕ್ಕಿಂತ ಕಡಿಮೆ ಭೂಮಿ ಮೂಲಗೇಣಿಗೆ ಒಳಪಟ್ಟಿತ್ತು.

ಬಹುವಾಗಿ ಚಾಲ್ತಿಯಲ್ಲಿದ್ದ ಗೇಣಿ ವಿಧಾನವೆಂದರೆ ಚಾಲಗೇಣಿ – ಅಥವಾ ಬೇಡನ್ ಪೊವೆಲ್ ಹೇಳುವಂತೆ ‘ಐಚ್ಛಿಕ ಗೇಣಿ.’  1883 ರ ಗೆಜೆಟಿಯರಿನಲ್ಲಿ ತಿಳಿಸಿದಂತೆ ಬಹುಪಾಲು ಕೃಷಿ ಭೂಮಿಯು ವಾರ್ಷಿಕ ಗೇಣಿಯ ಚಾಲಗೇಣಿ ಪದ್ಧತಿಯಲ್ಲಿ ಉಳಲ್ಪಡುತ್ತಿತ್ತು. ಮೂಲ ಗೇಣಿದಾರನ ಸ್ಥಿತಿ ಗತಿಗಳಿಗಿಂತ ಚಾಲಗೇಣಿದಾರನ ಸ್ಥಿತಿಯು ಭಿನ್ನವಾಗಿದ್ದು ಅದು ಬಹುತೇಕ ಕೃಷಿ ಕೂಲಿ ಕಾರ್ಮಿಕರನ್ನು ಹೋಲುತ್ತಿತ್ತು. ಚಾಲ ಗೇಣಿದಾರರು ಹೆಚ್ಚಾಗಿ ಕೆಳಜಾತಿಯ ಹೊಲೆಯ ಮತ್ತು ಮಹಾರ್‌ಗಳಾಗಿದ್ದು ಅವರು ಕೃಷಿ ಕೂಲಿ ಕಾರ್ಮಿಕರೂ, ಚಾಲಗೇಣಿದಾರರೂ ಆಗಿದ್ದರು. ಈ ಎರಡೂ ಪದ್ಧತಿಗಳ ನಡುವೆ ತುಂಬ ಭಿನ್ನತೆಯಿತ್ತು. ಮೂಲಗೇಣಿದಾರ ಕೆಲವೊಮ್ಮೆ ತನ್ನ ಜಮೀನನ್ನು ಚಾಲಗೇಣಿಗೆ ಉಳುಮೆ ಮಾಡಲು ಕೊಡುತ್ತಿದ್ದ. ಬಹುಸಂಖ್ಯೆಯಲ್ಲಿದ್ದ ಚಾಲಗೇಣಿದಾರರನ್ನು ಗಮನದಲ್ಲಿಟ್ಟುಕೊಂಡರೆ ಭೂ ಸುಧಾರಣಾ ಕಾಯ್ದೆ ಯಾವ ಬದಲಾವಣೆ ತರಬೇಕೆಂದು ಉದ್ದೇಶಿಸಿತ್ತೋ ಅದು ಈ ಶಕ್ತಿ ಹೀನ ಗೇಣಿದಾರರನ್ನು ಕುರಿತೇ ಇತ್ತು. ಈ ಎರಡೂ ಜಿಲ್ಲೆಗಳಲ್ಲಿ 1971 ರ ವೇಳೆಗೆ ಚಾಲ್ತಿಯಲ್ಲಿದ್ದ ಗೇಣಿದಾರ ವರ್ಗದ ಗಾತ್ರವನ್ನು ಗಮನಿಸಿದರೆ ಇದು ತಿಳಿಯುತ್ತದೆ. ಎರಡು ಹೆಕ್ಟೇರಿಗಿಂತ ಕಡಿಮೆ ಭೂಮಿ ಉಳುತ್ತಿದ್ದವನ ಪ್ರಮಾಣ ಅತಿ ಹೆಚ್ಚಿದ್ದರೆ, ಹೆಚ್ಚೆಚ್ಚು ಭೂಮಿ ಉಳುತ್ತಿದ್ದ ಗೇಣಿದಾರರು ಕಡಿಮೆ ಸಂಖ್ಯೆಯಲ್ಲಿದ್ದರು. ಸಣ್ಣ ಗೇಣಿದಾರರ ಸಂಖ್ಯೆ ಎರಡೂ ಜಿಲ್ಲೆಗಳಲ್ಲಿ ಬೇರೆ ಬೇರೆ ಇದ್ದರೂ ಒಟ್ಟಾರೆ ಮಾದರಿ ಒಂದೇ ಆಗಿತ್ತು.

ಭೂ ಸುಧಾರಣಾ ಕಾನೂನಿನ ಜಾರಿ ಈ ಎರಡೂ ಜಿಲ್ಲೆಗಳಲ್ಲಿ ಕ್ರಾಂತಿಕಾರೀ ಪರಿಣಾಮ ತಂದಿತು. ಆ ಪ್ರದೇಶಗಳಲ್ಲಿ ‘ಉಳುವವನಿಗೇ ಭೂಮಿ’ ಘೋಷಣೆಯ ಮೂಲಕ ವ್ಯಾಪಕ ರಾಜಕೀಯ ಸಂಚಲನ ಶುರುವಾಗಿ ಕಾನೂನು ಜಾರಿಗೆ ಅನುಕೂಲವೇ ಆಯಿತು. ಗೇಣಿಗೆ ಭೂಮಿ ಕೊಟ್ಟ ಕೆಲವು ಸಣ್ಣ ರೈತರು ಭೂಮಿ ಕಳೆದುಕೊಂಡರು. ಆದರೆ ಅಂತಹವರ ಸಂಖ್ಯೆ ತುಂಬ ಕಡಿಮೆಯಿತ್ತು. 1980 ಅಕ್ಟೋಬರ್ ವೇಳೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಮಿ ಕಳೆದುಕೊಂಡು ಪರಿಹಾರ ಪಡೆದ ಸಣ್ಣ ಭೂಮಾಲೀಕರ ಸಂಖ್ಯೆ ಶೇ. 9 ಕ್ಕಿಂತ ಕಡಿಮೆ ಇತ್ತು. ಇದು ದಕ್ಷಿಣ ಕನ್ನಡದಲ್ಲಿ ಸ್ವಲ್ಪ ಹೆಚ್ಚಿದ್ದು ಶೇ. 11. 58 ಇತ್ತು. ಈ ಎರಡು ಜಿಲ್ಲೆಗಳಲ್ಲಿ ಕಾನೂನು ಉದ್ದೇಶಿಸಿದ ಹಾಗೆಯೇ ಭೂಮಿಯ ಒಡೆತನ ಉಳುವವನಿಗೇ ಹೋಯಿತು.

ಆದರೆ ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ  [ಕರ್ನಾಟಕದ ಬಹುಭಾಗಗಳಲ್ಲಿ ಎನ್ನಬಹುದು – ಕೃಷಿಯ ಚಿತ್ರಣ ಭೂ ಮಾಲೀಕ – ಗೇಣಿದಾರ ರೀತಿಯಾಗಿರದೇ ಭಿನ್ನವಾಗಿತ್ತು]  ಅದರಲ್ಲೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಈ ಜಿಲ್ಲೆಗಳ ಕೃಷಿ ಪದ್ಧತಿಗಳಲ್ಲಿ ಸಣ್ಣ ರೈತರದ್ದೇ ಮೇಲುಗೈ. ಕೋಷ್ಟಕ – 2 ತೋರಿಸುವಂತೆ ಒಟ್ಟಾರೆ ಗೇಣಿ ನೀಡಲ್ಪಟ್ಟ ಭೂಮಿ ತುಂಬ ಕಡಿಮೆ. ಕೆಲವೆಡೆಯಂತೂ – ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲಿ – ಶೇ. 10 ಕ್ಕಿಂತ ಕಡಿಮೆ. ಸ್ಕಾರ್ಲೆಟ್  ಎಪ್‍ಸ್ಟೀನನ  ಗ್ರಾಮ ಅಧ್ಯಯನವಿರಬಹುದು, ಅಥವಾ 1961 ರ ಜನಗಣತಿಯ ಗ್ರಾಮೀಣ ಸಮೀಕ್ಷೆಯ ವರದಿಯಿರಬಹುದು – ಅವು ಈ ಭಾಗದಲ್ಲಿ ಗೇಣಿ ಪದ್ಧತಿ ಕೃಷಿಯ ಪ್ರಧಾನ ವಿಧಾನವಾಗಿತ್ತೆಂದು ಹೇಳುವುದಿಲ್ಲ. ಇದಕ್ಕೆ ಚಾರಿತ್ರಿಕ ಸಾಕ್ಷ್ಯಗಳೂ ಇವೆ. 1881 ರ ಹಳೇ ಮೈಸೂರು ಗಣತಿಯ ಪ್ರಕಾರ ಈ ಭಾಗದ ಕೃಷಿಯಲ್ಲಿ ಗೇಣಿ ಪದ್ಧತಿ ಅತ್ಯಲ್ಪವಾಗಿದ್ದು ಒಟ್ಟು ಶೇ. 4.61 ಕ್ಕಿಂತ ಕಡಿಮೆ ಕೃಷಿಕರು ಗೇಣಿದಾರರಾಗಿದ್ದರೆಂದು ತಿಳಿಸುತ್ತದೆ.

ಕೋಷ್ಟಕ – 2

ದಕ್ಷಿಣ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಗೇಣಿ ಪದ್ಧತಿಯಿಂದ ಉಳುಮೆ ಮಾಡಲ್ಪಟ್ಟ, ಕೃಷಿ ಭೂಮಿಯ ಪ್ರಮಾಣ, 1971

ಜಿಲ್ಲೆ  2 ಹೆಕ್ಟೇರುಗಳಿಗಿಂತ ಕಡಿಮೆ 2ರಿಂದ5 ಹೆಕ್ಟೇರುಗಳು 5 ಹೆಕ್ಟೇರುಗಳಿಗಿಂತ ಕಡಿಮೆ
ಹಾಸನ 3.07 4.66 5.59
ಮಂಡ್ಯ 2.22 2.77 3.29
ಮೈಸೂರು 3.45 3.97 4.61
ತುಮಕೂರು 1.50 2.13 2.89
ಬೆಂಗಳೂರು 4.68 7.35 9.39

ಮೂಲ : ಕೃಷಿ ಭೂಮಿಯ ಗಣತಿ, 1971

ಹಳೇ ಮೈಸೂರು ಭಾಗದ ಆಡಳಿತಗಾರರು ಭೂಮಿಯನ್ನು ಉಳುಮೆಗಾಗಿ ನೇರ ರೈತರಿಗೇ ಕೊಡುತ್ತಿದ್ದುದರಿಂದ ಗೇಣಿ ಪದ್ಧತಿ ಕಡಿಮೆಯಿತ್ತು ಎನ್ನಬಹುದು. ಮಾರ್ಕ್ ವಿಲ್ಕ್ಸ್ ಹೇಳುವಂತೆ ಗೇಣಿದಾರ ಮತ್ತು ಆತನ ಉತ್ತರಾಧಿಕಾರಿಗಳು “ಎಲ್ಲಿಯವರೆಗೆ ವಿಧಿಸಲ್ಪಟ್ಟ ಶುಲ್ಕವನ್ನು ಜಿಲ್ಲಾಡಳಿತಕ್ಕೆ ಸಂದಾಯ ಮಾಡುತ್ತಾರೋ ಅಲ್ಲಿಯವರೆಗೆ ಅಷ್ಟೂ ಜಮೀನನ್ನು ತಮ್ಮದಾಗಿಟ್ಟುಕೊಳ್ಳಬಹುದು. ಗೇಣಿದಾರ ಉಳುಮೆ ನಿಲ್ಲಿಸಿದ ಕೂಡಲೇ ಭೂಮಿಯ ಹಕ್ಕು ಸರ್ಕಾರಕ್ಕೆ ಹಿಂದಿರುಗುತ್ತದೆ.  ಸರ್ಕಾರವು ಇದನ್ನು ಬೇರೊಬ್ಬನಿಗೆ ವಹಿಸಿಕೊಡಲು ಸ್ವತಂತ್ರ್ಯವಾಗಿರುತ್ತದೆ.” ಆದರೆ ಸರ್ಕಾರ ಭೂಮಿ ಹಿಂಪಡೆಯುವುದು ತುಂಬ ಅಪರೂಪವಾಗಿತ್ತು. ಎಲ್ಲಿಯವರೆಗೆ ಗೇಣಿದಾರ ಉಳುಮೆ ಮಾಡುತ್ತಾನೋ ಅಲ್ಲಿಯವರೆಗೆ ಭೂಮಿ ಕಳೆದುಕೊಳ್ಳುವ ಭಯವಿರಲಿಲ್ಲ. ತನಗೆ ಉಳಲು ಆಗುವುದಿಲ್ಲವೆಂದು ಮನವಿ ಸಲ್ಲಿಸಿದಲ್ಲಿ ಅವನಿಗೆ – ಟಕಾವಿ – ಸರಕು ಕೊಳ್ಳಲು ಸಾಲ ನಿಡಲಾಗುತ್ತಿತ್ತು.  ಕಾಲ ಕಳೆದಂತೆ ಹಾಗೂ ಉಳುಮೆ ಖಾಯಂ ಆಗುತ್ತ ಹೋದಂತೆ ರಾಜನಿಗೆ ನೀಡಬೇಕಾದ ಶುಲ್ಕ ಮತ್ತು ತೆರಿಗೆಯ ಅಂತರ ಅಳಿಸಿ ಹೋಯಿತು. ಹೀಗಾಗಿ ಮೊದಲು ರಾಜನ ಗೇಣಿದಾರರಾಗಿದ್ದವರು ಕೊನೆಗೆ ಭೂಮಿಯ ಒಡೆತನ ಪಡೆದುಕೊಂಡರು.

ಆದರೆ ಭೂ ಸುಧಾರಣಾ ಕಾನೂನಿನಲ್ಲಿ ವಿವರಿಸಲ್ಪಟ್ಟ ದೊಡ್ಡ ಭೂಮಾಲೀಕ – ಗೇಣಿದಾರ ರೀತಿಗಿಂತ ಈ ಪದ್ಧತಿ ತುಂಬ ಭಿನ್ನವಾಗಿತ್ತು. ಗೇಣಿಗಾಗಿ ಭೂಮಿಯನ್ನು ಕೊಡುವ ಅವಕಾಶ ತುಂಬ ಕಡಿಮೆ ಇತ್ತು. ಅಲ್ಲದೇ ಗೇಣಿ ನೀಡಿದ್ದರೂ ಅದು ಸದ್ಯದ ಅನುಕೂಲಕ್ಕೇ ಹೊರತು ಪಾರಂಪರಿಕವಾಗಿರಲಿಲ್ಲ. ಭೂ ಮಾಲೀಕ ಇದ್ದ ಸ್ವತ್ತನ್ನು ವಿಸ್ತರಿಸಲು ಹೆಚ್ಚುವರಿ ಭೂಮಿಯನ್ನು ಗೇಣಿಗೆ ಕೊಡುತ್ತಿದ್ದಿರಲೂಬಹುದು.  ‘ದಿ ರಿಮೆಂಬರ್ಡ್ ವಿಲೇಜ್’ ನಲ್ಲಿ ಶ್ರೀನಿವಾಸ್ ನೆನಪಿಸಿಕೊಳ್ಳುವಂತೆ ಭೂ ಮಾಲೀಕರು ಗೇಣಿದಾರರೂ ಆಗಬಹುದಿತ್ತು. ಹಾಗೆಯೇ ಸಣ್ಣ ರೈತನೊಬ್ಬ ಆ ವರ್ಷ ಉಳುಮೆ ಮಾಡಲಾಗದಿದ್ದರೆ ತನ್ನ ಭೂಮಿಯನ್ನು ಗೇಣಿಗೆ – ಕೆಲವು ಸಲ ಶ್ರೀಮಂತ ರೈತನಿಗೂ – ಕೊಡಬಹುದಿತ್ತು. ಒಟ್ಟಿನಲ್ಲಿ ಎಲ್ಲ ವರ್ಗಕ್ಕೆ ಸೇರಿದ ಭೂಮಾಲೀಕರೂ ಇದ್ದರು. ಹಾಗೆಯೇ ಗೇಣಿದಾರರಲ್ಲೂ ಸಣ್ಣ ಹಾಗೂ ದೊಡ್ಡ ಮತ್ತು ಪ್ರಭಾವೀ ಗೇಣಿದಾರರಿದ್ದರು. ಕೋಷ್ಟಕ – 2 ತೋರಿಸುವಂತೆ ಹಾಸನ, ಮಂಡ್ಯ, ಮೈಸೂರು, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಗೇಣಿದಾರರ ಜಮೀನಿನ ವಿಸ್ತೀರ್ಣ ಹೆಚ್ಚಿದಂತೆ ಅವರ ಸಂಖ್ಯೆಯೂ ಹೆಚ್ಚಾಗುತ್ತ ಬಂದಿದ್ದು ಕಂಡುಬರುತ್ತದೆ.

ಆದರೆ ಇಂಥ ಕೃಷಿ ಪದ್ಧತಿ ಇರುವ ಕಡೆ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದರೆ ಎಲ್ಲ ವರ್ಗಗಳಿಗೆ ಸೇರಿದ ಭೂಮಾಲೀಕರ ಭೂಮಿಯು, ಎಲ್ಲ ವರ್ಗಗಳಿಗೆ ಸೇರಿದ ಗೇಣಿದಾರರ ಕೈ ಸೇರುತ್ತದೆ. ಗೇಣಿದಾರರೆಲ್ಲ ಬಡವರೇ ಆಗಿರುವುದಿಲ್ಲ. 1980 ಅಕ್ಟೋಬರ್ ವೇಳೆಗೆ ದಕ್ಷಿಣ ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆಯಿಂದ ಭೂಮಿ ಕಳೆದುಕೊಂಡು ಪರಿಹಾರ ಪಡೆದವರ ಪ್ರಮಾಣ ಗಮನಾರ್ಹವಾಗಿಯೇ ಇತ್ತು. ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಂಡ ಮೂರನೇ ಒಂದು ಭಾಗ ರೈತರು ಸಣ್ಣ ರೈತರಾಗಿದ್ದರು. ಹಾಸನದಲ್ಲಿ ಭೂಮಿ ಕಳೆದುಕೊಂಡವರಲ್ಲಿ ಐದನೇ ಒಂದು ಭಾಗ ಸಣ್ಣ ರೈತರಾಗಿದ್ದರು. ಈ ಜಿಲ್ಲೆಗಳಲ್ಲಿ ಉಳುವವನಿಗೇ ಭೂಮಿ ಎಂಬ ಕಾನೂನಿನ ಅನುಷ್ಠಾನವು ಬಹಳ ತೀವ್ರಗತಿಯಲ್ಲಿ ನಡೆಯಿತು. 1971 ರ ಕೃಷಿ ಸ್ವತ್ತಿನ ಗಣತಿಯಲ್ಲಿ ಕಾಣುವ ಗೇಣಿದಾರರ ಸಂಖ್ಯೆಗೂ, 1980 ರ ವೇಳೆಗೆ ಭೂಸುಧಾರಣಾ ಕಾಯ್ದೆಯ ಅನ್ವಯ ಭೂಮಿ ಪಡೆದವರ ಸಂಖ್ಯೆಗೂ ಇರುವ ವ್ಯತ್ಯಾಸ ಗಮನಿಸಿದರೆ ಈ ಕಾಯ್ದೆ ಎಷ್ಟು ಭಾರೀ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿತೆಂದು ತಿಳಿಯುತ್ತದೆ. ಕುತೂಹಲಕಾರೀ ಸಂಗತಿಯೆಂದರೆ ಬೆಂಗಳೂರಿನಲ್ಲಿ ಕಾಯ್ದೆ ಜಾರಿ 100% ಆದರೆ ಕೆಲವು ಜಿಲ್ಲೆಗಳಲ್ಲಿ ಅದು ನೂರನ್ನೂ ಮೀರಿ – ಮೈಸೂರಿನಲ್ಲಿ 140. 85%, ಹಾಸನದಲ್ಲಿ 157. 25% – ಇತ್ತು. ಇದನ್ನು ಅರ್ಥೈಸುವುದು ಹೇಗೆ? ಬಹುಶಃ 1971 ರ ವರದಿಯಲ್ಲಿ ಗೇಣಿದಾರರ ಬಗ್ಗೆ ಮಾಹಿತಿ ಸರಿಯಾಗಿ ಸಿಗದೆ ಕಡಿಮೆ ಸಂಖ್ಯೆ ನಮೂದಾಗಿರಬಹುದು. ಅಥವಾ ಗೇಣಿದಾರರಲ್ಲದವರೂ ಈ ಕಾಯ್ದೆಯಡಿ ಭೂಮಿ ಪಡೆದಿರಬಹುದು. ದಾಖಲೆಗಳೇ ಅಗತ್ಯವಿಲ್ಲದ, ಸ್ಥಳೀಯ ಮುಖಂಡರನ್ನೊಳಗೊಂಡ ಭೂ ನ್ಯಾಯ ಮಂಡಳಿಯೇ ಗೇಣಿದಾರರನ್ನು ಗುರುತಿಸುವ ವ್ಯವಸ್ಥೆಯಲ್ಲಿ ಗೇಣಿದಾರನಲ್ಲದವನೂ ಫಲಾನುಭವಿಯಾಗಿರುವ ಸಾಧ್ಯತೆಯಿದೆ.

ಐಚ್ಛಿಕ – ಅನೈಚ್ಛಿಕ ಪರಿಣಾಮಗಳು:

ಕರ್ನಾಟಕದ ಭೂ ಸುಧಾರಣಾ ಕಾನೂನು ಜಾರಿಯ ಅನುಭವದ ಈ ಸಣ್ಣ ಭಾಗವು ಭಿನ್ನ ವ್ಯವಸ್ಥೆಗಳಲ್ಲಿ ಏಕರೂಪ ಶಾಸನ ಜಾರಿಯಾಗುವುದರಿಂದ ಭಿನ್ನ ಪರಿಣಾಮಗಳು ಹೇಗೆ ಉಂಟಾಗಬಹುದೆಂದು ತೋರಿಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಶಾಸನದ ಆಶಯದಂತೆ ಬಡ ಗೇಣಿದಾರರು ಭೂಮಿಯ ಒಡೆತನ ಪಡೆದುಕೊಂಡರು. ಗೇಣಿ ಪದ್ಧತಿಯೇ ಪ್ರಧಾನವಾಗಿ ಚಾಲ್ತಿಯಲ್ಲಿದ್ದ ಕಡೆ ಸಾಮಾಜಿಕ ಸುಧಾರಣೆಯಾಗಬೇಕಾದರೆ ವರ್ಗ ಸಂಬಂಧ ಬದಲಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿತು. ವರ್ಗಾಧಾರಿತ ಸಿದ್ಧಾಂತ ಹೊಂದಿದ ಕಮ್ಯುನಿಸ್ಟ್ ಪಕ್ಷಗಳು ಆ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದವು. ನೈತಿಕವಾಗಿಯೂ ಭೂಮಿಯನ್ನು ಶ್ರೀಮಂತ ಭೂಮಾಲೀಕರಿಂದ ಸಣ್ಣ ಗೇಣಿದಾರರಿಗೆ ಹಸ್ತಾಂತರಿಸಲು ಸಮರ್ಥನೆ ಸಿಕ್ಕಿತು.

ಅದಕ್ಕೆ ವಿರುದ್ಧವಾಗಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಗೇಣಿ ವಿಷಯವು ವರ್ಗ ಸಂಬಂಧಿ ಘರ್ಷಣೆಯ ಕಾರಣವಾಗಿತ್ತೇ ಎಂಬುದು ಎಂದೂ ಸ್ಪಷ್ಟವಾಗಿರಲಿಲ್ಲ. ವರ್ಗಾಧಾರಿತ ರಾಜಕೀಯ ಹೊಂದಿದ ಸುಧಾರಣೆಯೊಂದು ರಾಜಕೀಯ ಗುಂಪುಗಾರಿಕೆ ಇರುವ ಕಡೆ ಎಂತಹ ಪರಿಣಾಮ ಉಂಟು ಮಾಡಬಹುದೆಂದು ನೋಡಲು ಇದೊಂದು ನೈಜ ಉದಾಹರಣೆಯಾಗಿದೆ. ಶ್ರೀನಿವಾಸ್ ಅವರು ಗುಂಪುಗಳು ಎಲ್ಲ ಕಡೆ ಇರುವಂಥದ್ದೇ ಎಂದು ವಾದಿಸುತ್ತಾರೆ.  “ಗುಂಪುಗಳಿಲ್ಲದ ಹಳ್ಳಿಗಳೇ ಇಲ್ಲ. ಗ್ರಾಮೀಣ ಬದುಕಿನಲ್ಲಿ ಗುಂಪುಗಳು ಅಖಂಡ ಭಾಗಗಳಾಗಿವೆ”  ಎಂದಿದ್ದಾರೆ.  ಗುಂಪುಗಳ ಪ್ರಾಬಲ್ಯ ಎಷ್ಟರ ಮಟ್ಟಿಗೆ ಇರಬಹುದೆಂದರೆ, ಒಂದು ಗುಂಪಿಗೆ ವಿಧೇಯರಾಗಿರುವುದು ಬೇರೆ ಅಂತರಗಳನ್ನು – ಧರ್ಮ, ವರ್ಗ ಸಂಬಂಧೀ ಅಂತರಗಳನ್ನೂ ಸಹಾ – ಮುಚ್ಚಿ ಹಾಕುತ್ತದೆ. ಹಿಂದೂ ರೈತ ಮುಖಂಡನೊಬ್ಬನ ಗುಂಪಿನಲ್ಲಿ ಮುಸ್ಲಿಮನೊಬ್ಬ ಇರುವುದು ಅಸಾಮಾನ್ಯವೇನಲ್ಲ. ಭೂ ಮಾಲೀಕ – ಗೇಣಿದಾರ ಸಂಬಂಧ ಕೂಡಾ ಗುಂಪಿನೊಳಗೆ ಕರಗಿಬಿಡುವ ಸಾಧ್ಯತೆಯಿರುತ್ತದೆ. ಪ್ರಭಾವೀ ಭೂ ಮಾಲೀಕನೊಬ್ಬ ತನ್ನ ಅನುಯಾಯಿಯ  ದೀರ್ಘಾವಧಿ ಮತ್ತು ನಿಷ್ಠ ಸೇವೆಗೆ ಸ್ವಲ್ಪ ಭೂಮಿಯನ್ನೂ ಕೊಡುವ ಸಾಧ್ಯತೆಯೂ ಇದೆಯೆಂದು ಶ್ರೀನಿವಾಸ್ ಹೇಳುತ್ತಾರೆ.

ಹೀಗೆ ಗುಂಪು ಆಧಾರಿತ ಹಳ್ಳಿಯ ರಾಜಕಾರಣ ಗಮನಿಸಿದಾಗ; ಎಲ್ಲ ವರ್ಗಗಳಲ್ಲಿದ್ದ ಭೂ ಮಾಲೀಕರಿಂದ ಭೂಮಿಯನ್ನು ಕಸಿದುಕೊಂಡು ಎಲ್ಲ ವರ್ಗಗಳ ಗೇಣಿದಾರರಿಗೆ ಒಡೆತನ ನೀಡಿರುವುದು ನೋಡಿದಾಗ ಗುಂಪು ಸಂಘರ್ಷಕ್ಕೆ ಭೂ ಸುಧಾರಣಾ ಕಾಯಿದೆ ಒಂದು ಅಸ್ತ್ರವಾಗಿ ಬಳಕೆಯಾಗಿರುವ ಸಾಧ್ಯತೆಯಿದೆ. ಭೂ ನ್ಯಾಯಮಂಡಳಿಯಲ್ಲಿ ಸ್ಥಾನ ಸಂಪಾದಿಸಿದ ಗುಂಪೊಂದರ ನಾಯಕನು ತನ್ನ ಗುಂಪಿನವರ ಹಿತಾಸಕ್ತಿ ಕಾಯುವ, ಅವರಿಗೆ ಅನುಕೂಲಕರವಾಗಿ ಕಾಯ್ದೆ ಜಾರಿ ಮಾಡುವ ಅಧಿಕಾರ ಹೊಂದಿರುತ್ತಿದ್ದರು. ಅರ್ಜಿದಾರನೊಬ್ಬ ಗೇಣಿದಾರ ಹೌದೋ ಅಲ್ಲವೋ ಎಂದು ತೀರ್ಮಾನಿಸುವುದು ಭೂ ನ್ಯಾಯ ಮಂಡಳಿಗಳೇ ಆಗಿದ್ದರಿಂದ ತಮ್ಮ ಅನುಯಾಯಿಗಳಿಗೆ ಅವರು ಘರ್ಷಣೆಗಿಳಿದಾದರೂ ಭೂಮಿ ಕೊಡಿಸಬಲ್ಲವರಾಗಿದ್ದರು. ಇದರಲ್ಲಿ ಗುಂಪುಗಳ ಮುಖಂಡರ ಪ್ರಧಾನ ಪಾತ್ರ ಮತ್ತು ಗುಂಪುಗಳ ನಡುವಿನ ವೈರ ಎಷ್ಟರಮಟ್ಟಿಗಿತ್ತೆಂದರೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷ ಬದಲಾದ ಹಾಗೆ ಭೂನ್ಯಾಯ ಮಂಡಳಿಗಳೂ ಪುನರ್ ರಚಿತಗೊಂಡವು.

‘ಉಳುವವನೇ ಒಡೆಯ’ ಎಂಬ ನೈತಿಕ ತಳಹದಿಯ ಮೇಲೆ ವರ್ಗ ಸಂಬಂಧ ಬದಲಾಯಿಸುವ ಉದ್ದೇಶದಿಂದ ಬಂದ ಭೂ ಸುಧಾರಣಾ ಕಾಯ್ದೆಯನ್ನು ಕೂಡಾ ರಾಜಕೀಯ ಗುಂಪು ಸಂಘರ್ಷಕ್ಕೆ ಬಳಸಿಕೊಂಡಿದ್ದನ್ನು ಗಮನಿಸಿದರೆ, ಹೇಗೆ ರಾಜಕೀಯ ಗುಂಪುಗಾರಿಕೆಯು ನೈತಿಕ ತಳಹದಿಯನ್ನೇ ಕರಗಿಸಿಬಿಡುತ್ತದೆ ಎಂಬುದು ಗೊತ್ತಾಗುತ್ತದೆ. ವರ್ಗ ವಿಶ್ಲೇಷಣೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮಾನತೆಯ ತಳಹದಿಯ ಮೇಲೆ ನಿಂತ ಭೂ ಸುಧಾರಣಾ ಕಾಯ್ದೆ ಸ್ವೀಕಾರಾರ್ಹವಾಗುತ್ತದೆ. ಆದರೆ ಅದೇ ಕಾಯ್ದೆಯನ್ನು ಗುಂಪುಗಳು ತಮ್ಮ ಹಿತಕ್ಕೆ ಬಳಸಿಕೊಂಡಾಗ ಅವರ ಹಿತಾಸಕ್ತಿಗಳೇ ಬೇರೆಯಾಗಿರುತ್ತವೆ. ಗುಂಪಿನ ನಾಯಕ ತನ್ನ ಗುಂಪಿನವರಿಗೆ ಮಾತ್ರ ಹೆಚ್ಚು ಕರ್ತವ್ಯ ಬದ್ಧನಾಗಿರುತ್ತಾನೆ. ಇಲ್ಲಿ ನ್ಯಾಯವೆಂದರೆ ಅವನ ಗುಂಪಿನವನಿಗೆ ಕೊಡಿಸುವ ನ್ಯಾಯ ಎಂದು ನಿರೀಕ್ಷಿಸಲಾಗುತ್ತದೆ. ರಾಷ್ಟ್ರ – ರಾಜ್ಯ ಮಟ್ಟದಲ್ಲಿ ಭೂಸುಧಾರಣಾ ಕಾಯ್ದೆಯಿಂದ ವರ್ಗ ಸಂಬಂಧಗಳನ್ನು ಸುಧಾರಿಸುವ ಹಾಗೂ ಸಮಾನತೆಯ ಕಡೆಗೆ ಚಲಿಸುವ ನೈತಿಕ ಗುರಿ ಹೊಂದಿದ್ದರೆ, ಗ್ರಾಮೀಣ ಮಟ್ಟದಲ್ಲಿ ಇದು ಗುಂಪು ರಾಜಕೀಯಕ್ಕೆ  ಆರ್ಥಿಕ ಬಲ ಒದಗಿಸುವ ಸಾಧ್ಯತೆಯಿರುತ್ತದೆ.

ಕಾನೂನು ಮತ್ತು ಸುಧಾರಣೆ ಕುರಿತ ಕೆಲವು ಪ್ರಶ್ನೆಗಳು 

1974 ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ವಿಭಿನ್ನ ಅನುಭವಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುಧಾರಣೆಗಳ ನಡುವಿನ ಸಂಬಂಧಗಳ ಕುರಿತು ಮೂರು ಪ್ರಶ್ನೆಗಳು ಹುಟ್ಟುತ್ತವೆ. ಮೊದಲನೆಯದಾಗಿ ಸುಧಾರಣಾ ತತ್ವದ ಕುರಿತ ವಿಷಯ. ಕೆಲವರ ಅಭಿಪ್ರಾಯದಂತೆ ಒಟ್ಟಾರೆ ವಿಶ್ವಾತ್ಮಕ ಮತ್ತು ವಾಸ್ತವ ಗ್ರಹಿಕೆಯಿಂದ ಹುಟ್ಟಬೇಕಾದ ಸಿದ್ಧಾಂತಗಳೆಲ್ಲ ಆದರ್ಶವಾದಿಯಾಗಿರುತ್ತವೆ. ಆದರ್ಶವಾದಿ ತತ್ವವು ಸಮಾಜ ಸುಧಾರಣೆಯ ಆರಂಭ ಬಿಂದುವೂ ಆಗಿರುತ್ತದೆ. ಮೇಲೆ ನೋಡಿದ ಉದಾಹರಣೆಯಲ್ಲಿ ಉಳುವವನಿಗೇ ಭೂಮಿ ಎಂಬ ತತ್ವದೊಂದಿಗೆ ಇಡೀ ಭೂ ಸುಧಾರಣಾ ಕಾಯ್ದೆ ರೂಪಿಸಲ್ಪಟ್ಟಿತು. ಆದರೆ ಕೆಲವು ಪ್ರದೇಶಗಳಲ್ಲಿ ಇದು ಅನ್ವಯವಾಗದಿದ್ದಾಗ ಅನಪೇಕ್ಷಿತ ಮತ್ತು ವಿರುದ್ಧ ಪರಿಣಾಮಗಳನ್ನೂ ಕೊಟ್ಟಿತು. ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಮೊದಲೇ ಬೇರೆ ಬೇರೆ ಕೃಷಿ ಪದ್ಧತಿಗಳನ್ನು ಅನುಭವದಿಂದ ಗಮನಿಸಿ ನಂತರವೇ ಪ್ರತಿ ವ್ಯವಸ್ಥೆಗೂ ಹೊಂದುವಂತಹ ಅಗತ್ಯ ಸುಧಾರಣಾ ತತ್ವಗಳನ್ನು ರೂಪಿಸಬೇಕಿತ್ತೇ ಎಂದು. ಹಾಗಾದರೆ ಸುಧಾರಣೆಗಳ ತಾತ್ವಿಕ ಆರಂಭ ಬಿಂದುವನ್ನು ಆದರ್ಶವಾದಿ ತತ್ವಗಳಿಂದ ವಾಸ್ತವ ಅನುಭವಗಳ ನೆಲೆಗೆ ಬದಲಿಸಬೇಕಿತ್ತೆ?

ಸೈದ್ಧಾಂತಿಕ ಆರಂಭ ಬಿಂದು ಹಾಗೂ ವಾಸ್ತವ ಅನುಭವದ ಆರಂಭ ಬಿಂದುವಿನ ನಡುವಿನ ವ್ಯತ್ಯಾಸ ಎರಡನೆಯ ಪ್ರಶ್ನೆಯನ್ನೆತ್ತುತ್ತದೆ. ಸುಧಾರಣೆಯ ಹಾದಿಯಲ್ಲಿ ವಿಭಿನ್ನ ಗುಂಪುಗಳ ವರ್ತನೆಯನ್ನು ಈ ವ್ಯತ್ಯಾಸವು ಪ್ರಭಾವಿಸುತ್ತದೆಯೆ?. ಸಾಧಾರಣವಾಗಿ ಬುದ್ಧಿಜೀವಿಗಳು ಸೈದ್ಧಾಂತಿಕ ತತ್ವದ ಆರಂಭದೆಡೆಗೇ ವಾಲುತ್ತಾರೆ. ಅದಕ್ಕೆ ವಿರುದ್ಧವಾಗಿ ರಾಜಕಾರಣಿಗಳು – ಅವರ ಭವಿಷ್ಯ ವಾಸ್ತವ ಸತ್ಯಗಳ ಮೇಲೇ ಅವಲಂಬಿಸಿರುವುದರಿಂದ – ವಾಸ್ತವ ಗ್ರಹಿಕೆಗಳ ಆಧಾರದ ಕಡೆಗೇ ವಾಲುತ್ತಾರೆ. ಸೈದ್ಧಾಂತಿಕ ರಾಜಕೀಯ ಪಕ್ಷಕ್ಕೆ ಸೇರಿದ ರಾಜಕಾರಣಿಗಳೂ ಕೂಡಾ ವಾಸ್ತವ ಸತ್ಯಕ್ಕೆ ಎದುರಾದೊಡನೆ ವ್ಯಾವಹಾರಿಕವಾದ ನಿಲುವನ್ನೇ ತೆಗೆದುಕೊಳ್ಳುತ್ತಾರೆ. ರಾಜಕಾರಣಿಗಳೇ ಶಾಸನ ರೂಪಿಸುವವರೂ ಆಗಬೇಕಾದ್ದರಿಂದ ಅವರಿಗೆ ಎರಡೂ ಕಡೆ ಸಂಭಾಳಿಸಬೇಕಾದ ಜವಾಬ್ದಾರಿಯಿರುತ್ತದೆ. ಆದರ್ಶ ಮತ್ತು ಸದ್ಯದ ವಾಸ್ತವಗಳ ನಡುವಿನ ಮುಕ್ತ ಅವಕಾಶದಲ್ಲಿ ಯಾರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೋ ಅವರು ಯಶಸ್ವೀ ರಾಜಕಾರಣಿಗಳಾಗಿರುತ್ತಾರೆ. ಬೇಡಿಕೆಯ ಘರ್ಷಣೆಗಳ ನಡುವೆ ರಾಜಿ ಎಂಬಂತೆ ಇದು ಕಾಣಬಹುದು. ಆದರೆ 1974 ರ ಭೂ ಸುಧಾರಣಾ ಕಾಯ್ದೆಯ ದಕ್ಷಿಣ ಕರ್ನಾಟಕದ ಅನುಭವ ಮತ್ತೊಂದು ಸಾಧ್ಯತೆಯನ್ನೂ ತೋರಿಸುತ್ತದೆ. ವರ್ಗಾಧಾರಿತ ಭೂಸುಧಾರಣಾ ಕಾಯ್ದೆಯನ್ನು ರಾಜಕೀಯ ಗುಂಪುಗಳು ಆದರ್ಶ ಮತ್ತು ವಾಸ್ತವಗಳ ನಡುವೆಯೂ ತಮ್ಮ ಮಹತ್ವಾಕಾಂಕ್ಷಿ ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡವು. ಈ ಅವಕಾಶವನ್ನೇ ವಿಶೇಷ ರಾಜಕೀಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತಾಗಬೇಕು ಮತ್ತು ಅದು ಸುಧಾರಣೆಯ ಜೊತೆ ಯಾವ ಸಂಬಂಧವನ್ನೂ ಹೊಂದಬಾರದು.

ಇದು ಕೊನೆಗೆ ನಮ್ಮನ್ನು ಸುಧಾರಣಾ ಪ್ರಕ್ರಿಯೆಯಲ್ಲಿ ಕಾನೂನಿನ ಪಾತ್ರವೇನು ಎಂಬ ಪ್ರಶ್ನೆಯತ್ತ ತಂದು ನಿಲ್ಲಿಸುತ್ತದೆ. ಸುಧಾರಣೆಗಾಗಿ ಕಾನೂನೇ ಪ್ರಮುಖ ಅಸ್ತ್ರ ಎಂಬ ಧೋರಣೆಯಿಂದ ಕಾನೂನು ರೂಪಿಸುವವರ ಹಾಗೂ ಅನುಷ್ಠಾನಕ್ಕೆ ತರುವವರ ಜವಾಬ್ದಾರಿ ಹೆಚ್ಚುತ್ತದೆ. ಅಲ್ಲದೇ ಸದ್ಯದ ಸ್ಥಳೀಯ ವ್ಯವಸ್ಥೆಗೆ ತಕ್ಕುದಾಗಿ ಕಾನೂನು ರೂಪುಗೊಳ್ಳದಿದ್ದರೆ ಅದು ನ್ಯಾಯಾಂಗ ವ್ಯಸ್ಥೆಯ ವಿಶ್ವಾಸಾರ್ಹತೆಯನ್ನೇ ಘಾಸಿಗೊಳಿಸುತ್ತದೆ. ಇದರ ಪರಿಣಾಮವು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಕಾನೂನು ಬದಲಿಸುವವರಿಗೆ ಅನುಕೂಲಕರವಾಗುತ್ತದೆ. ಹಾಗೂ ಅವರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಡವರನ್ನೂ ಪ್ರತ್ಯೇಕಿಸಿ ಇಡಬಲ್ಲರಾದರೆ ಅದು ಸುಧಾರಣೆಯ ಮೂಲ ಆಶಯಕ್ಕೆ ವಿರುದ್ಧವಾಗುತ್ತದೆ. ಹಾಗಾಗಿ ಕಾನೂನು ಸುಧಾರಣೆಗಳನ್ನು ಸಶಕ್ತಗೊಳಿಸುವುದಲ್ಲದೇ ಬೇರೇನನ್ನಾದರೂ ಮಾಡಲು ಸಾಧ್ಯವೆ?  ಕಾನೂನು ಮತ್ತು ಅದರ ಜೊತೆಜೊತೆಗೇ ನಡೆವ ರಾಜ್ಯ ಆಡಳಿತ ಈ ಎರಡೂ ವಾಸ್ತವ ಸತ್ಯಗಳಲ್ಲಿ ಅಗತ್ಯ ಬದಲಾವಣೆ ತರಬಯಸುವ ಸಾಮಾಜಿಕ ಚಳವಳಿಗಳನ್ನು ಕಟ್ಟುವ ಪ್ರಕ್ರಿಯೆಗೆ ಬದಲೀ ವ್ಯವಸ್ಥೆ ಆಗಲಾರವು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.