Monthly Archives: June 2012

ಸಾಮಾಜಿಕ ನ್ಯಾಯ ಮತ್ತು ಖಾಸಗಿ ಕ್ಷೇತ್ರ

-ಡಾ.ಎಸ್. ಜಾಫೆಟ್

ಭಾರತ ಸಂವಿಧಾನ ಜಾರಿಗೆ ಬಂದು 61 ವರ್ಷಗಳಾಯಿತು. ಹೆಚ್ಚೂಕಮ್ಮಿ ಇಷ್ಟೇ ವರ್ಷಗಳ ಮೀಸಲಾತಿಯ ಇತಿಹಾಸವನ್ನು ಈ ದೇಶ ಕಂಡಿದೆ. ಮೀಸಲಾತಿ ಅಂದಕೂಡಲೇ ಈ ನೆಲದ ತಳಸಮುದಾಯಗಳು ಅದರಲ್ಲೂ ದಲಿತ ಮತ್ತು ಬುಡಕಟ್ಟು ವರ್ಗಗಳು ಮೀಸಲಾತಿ ವಿರೋಧಿಗಳ ನಾಲಿಗೆಗೆ ಸುಲಭದ ಆಹಾರವಾಗಿ ಬಿಡುತ್ತವೆ. ಸರ್ಕಾರಿ  ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಿದ್ದ ಹೊತ್ತಲ್ಲೇ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು ಎಂಬ ಚರ್ಚೆ ದೇಶದ ಅಲ್ಲಲ್ಲಿ ಈಗ ಹುಟ್ಟಿಕೊಂಡಿವೆ. ಇದರಿಂದ ಹಠಾತ್ ಎಚ್ಚೆತ್ತುಕೊಂಡವರಂತೆ ಕಂಡ ಖಾಸಗಿ ಕ್ಷೇತ್ರದ ದುಡ್ಡಿನ ಜನ ರಂಗೋಲಿ ಕೆಳಗೆ ನುಗ್ಗಿ, ಮೀಸಲಾತಿ ನೀತಿಯನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸುವ ಸರ್ಕಾರದ ನಡೆಯನ್ನು ಆರಂಭದಲ್ಲೇ ಚಿವುಟಿ ಹಾಕುವ ಕೆಲಸಕ್ಕೆ ಕೈಹಾಕಿದ್ದಾರೆ. ಇತ್ತೀಚಿನ ಪಿ.ಎ.ಇನಾಂದಾರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ಪ್ರಕರಣವು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕೆನ್ನುವ ವಾದಕ್ಕೆ ಮತ್ತೆ ಜೀವಕೊಟ್ಟಿದೆ. ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಯನ್ನು ನೀಡಬೇಕೆನ್ನುವ ಜನಪರ ಕೂಗಿಗೆ ಒತ್ತಾಸೆಯಾಗಿ ನಿಂತು ಖಾಸಗಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ವರ್ಗದೊಂದಿಗೆ ಮಾತಿಗೂ ಇಳಿದಿದೆ.

ಪಿ.ಎ.ಇನಾಂದಾರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಹೊರ ಬಂದ ತೀರ್ಪಿನಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಮೀಸಲಾತಿ ನೀತಿಯನ್ನು ಪಾಲಿಸಬೇಕೆಂದು ನ್ಯಾಯಾಲಯವು ಹೇಳಿತು. ಮುಂದುವರೆದು ಖಾಸಗಿ ಕೈಗಾರಿಕಾ ವಲಯಗಳು ಕೂಡಾ ಇದರಡಿ ಬರುತ್ತವೆ ಎಂದು ಹೇಳಿತು. ಈ ತೀರ್ಪನ್ನು ಮುಂದಿಟ್ಟುಕೊಂಡು ಭಾರತ ಸರ್ಕಾರದ ಮಂತ್ರಿಗಳ ಸಮೂಹವೊಂದು ಖಾಸಗಿ ಒಡೆತನ ಹೊಂದಿರುವ ಅನೇಕ ಕೈಗಾರಿಕೆಗಳ ಮಾಲೀಕರೊಂದಿಗೆ ಮಾತಿಗೂ ಇಳಿಯಿತು. ಇದಕ್ಕೆ ಪ್ರತಿಯಾಗಿ ಆ ಮಾಲೀಕರಿಂದ ಬಂದ ಪ್ರತಿಕ್ರಿಯೆ ಹೀಗಿತ್ತು.

  1. ಸರ್ಕಾರಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯು ತಾತ್ಕಾಲಿಕವಾಗಿದ್ದು, ಅದು ಪರಿಣಾಮಕಾರಿಯಾಗಿ ಜಾರಿಯಾಗದಿದ್ದರೂ ಕೂಡ ಈಗಲೂ ಮುಂದುವರೆಯುತ್ತಿದೆ.
  2. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯನ್ನು ಜಾರಿಗೊಳಿಸಲು ಸರ್ಕಾರವು ಮುಂದಾಗಿರುವುದು ಸರಿಯಲ್ಲ, ಇದು ನಮ್ಮ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಕ್ರಮದಂತೆ ಕಾಣುತ್ತಿದೆ. ಕೈಗಾರಿಕೆಗಳು ಗಟ್ಟಿಯಾಗಿ ನಿಂತಿರುವುದೇ ಬಂಡವಾಳ ಹೂಡಿಕೆದಾರರಿಂದ; ನಾವು ಹೆಚ್ಚು ನಿಷ್ಠರಾಗಿರಬೇಕಾಗಿರುವುದು ಈ ಹೂಡಿಕೆದಾರರಿಗೆ ಮಾತ್ರವೇ. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ನೀತಿ ಜಾರಿಯಾಗುವ ವಿಚಾರವೇನಾದರೂ ನಮ್ಮ ಹೂಡಿಕೆದಾರರಿಗೆ ತಿಳಿದರೆ ಅವರು ಖಂಡಿತ ಹಣ ಹೂಡದೆ ಇಲ್ಲಿಂದ ಕಾಲ್ಕೀಳುತ್ತಾರೆ.
  3. ಇಂಥ ನೀತಿಗಳು ಜಾರಿಯಾದರೆ ಖಾಸಗಿ ಕ್ಷೇತ್ರದ ಸ್ವಾಸ್ಥ್ಯವೇ ಹದಗೆಡುತ್ತದೆ. ಇಲ್ಲಿ ಸ್ಪರ್ಧೆ ಇರಲಿ. ಯಾವ ಕಾರಣಕ್ಕೂ ಮೀಸಲಾತಿ ಬೇಡ.

ಮೀಸಲಾತಿ ನೀತಿಯನ್ನು ಖಾಸಗಿ ಕ್ಷೇತ್ರದಲ್ಲಿ ಜಾರಿಗೊಳಿಸಲು ಬಯಸದ ಜನರ ಅಭಿಪ್ರಾಯಗಳ ಬಗ್ಗೆ ಹೆಚ್ಚು ಬಿಡಿಸಿ ಹೇಳುವ ಅಗತ್ಯವಿಲ್ಲ.

ಮೊದಲನೆಯದಾಗಿ 2004 ರ ಮಾನವಾಭಿವೃದ್ಧಿ ವರದಿಯ ಪ್ರಕಾರ ಈಗ ಜಾರಿಯಲ್ಲಿರುವ ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳು ಪಡೆಯುತ್ತಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಈ ವರ್ಗಗಳ ಪ್ರಾತಿನಿದ್ಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ. ಇದಲ್ಲದೆ ನಗರ ಪ್ರದೇಶಗಳಲ್ಲಿ ಜಾತಿಯನ್ನು ಮೀರುವ ಮಧ್ಯಮ ವರ್ಗಗಳು ಸೃಷ್ಟಿಯಾಗಿದ್ದು ಈ ಮೀಸಲಾತಿ ನೀಡಿಕೆಯಿಂದಲೇ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಪರಿಸ್ಥಿತಿಗೆ ಹೋಲಿಸಿದರೆ ಇವತ್ತು ಮೀಸಲಾತಿ ಪಡೆದುಕೊಂಡಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಪ್ರಜ್ಞೆಯ ಅರಿವಿನ ನಡೆಯಲ್ಲಿ ಗಮನಾರ್ಹವೆನಿಸುವ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ದೇಶದಲ್ಲಿ ಮೀಸಲಾತಿ ನೀತಿ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎನ್ನುವ ಖಾಸಗಿ ಕ್ಷೇತ್ರದ ಜನರ ಮಾತುಗಳಲ್ಲಿ ಕಾಳಜಿಗಿಂತ ಹೆಚ್ಚು ಆತಂಕವೇ ತುಂಬಿದೆ.

ಎರಡನೆಯದಾಗಿ ಖಾಸಗಿ ಸ್ವಾಮ್ಯದಲ್ಲಿರುವ ಕೈಗಾರಿಕಾ ವಲಯಗಳ ಮೇಲೆ ಸರ್ಕಾರ ತಲೆಹಾಕಬಾರದೆನ್ನುವ ಅವರ ವಾದ ಸಾಮಾಜಿಕ ನ್ಯಾಯವನ್ನೇ ಅಣಕಿಸಿದಂತಿದೆ. ಇದು ಕೈಗಾರಿಕೆ, ಕಾರ್ಮಿಕ  ಮತ್ತು ಪರಿಸರಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನು ರೂಪಿಸುವ ಸಂಪೂರ್ಣ ಅಧಿಕಾರವನ್ನು ಸರ್ಕಾರವು ಖಾಸಗಿ ಕ್ಷೇತ್ರಗಳಿಗೆ ಬಿಟ್ಟುಕೊಡಬೇಕು ಅನ್ನುವಂತಿದೆ. ಬಂಡವಾಳ ಹೂಡಿಕೆದಾರರಿಗೆ ಮಾತ್ರ ನಿಷ್ಠವಾಗಿರುವ ಖಾಸಗಿ ಸಂಸ್ಥೆಗಳು, ಹೂಡಿಕೆದಾರರಿಗೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಮಾತ್ರ ಈ ದೇಶದ ಸರ್ಕಾರಗಳು ರಚಿಸಬೇಕು ಎನ್ನುವ ಧೋರಣೆಗಳಿಗೆ ಬಂದು ನಿಂತಂತೆ ವರ್ತಿಸುತ್ತಿವೆ.

ಮೂರನೆಯದಾಗಿ, ‘ಸ್ಪರ್ಧೆ ಇರಲಿ ಯಾವ ಕಾರಣಕ್ಕೂ ಮೀಸಲಾತಿ ಬೇಡ’ ಎನ್ನುವ ಖಾಸಗಿ ಸಂಸ್ಥೆಗಳು ಈ ದೇಶದ ಸಾಮಾಜಿಕ ನ್ಯಾಯವನ್ನು ಹೇಗೆ ನೋಡುತ್ತಿವೆ ಎಂಬುದು ಗೊತ್ತಾಗುತ್ತದೆ. ಇವರು ಹೇಳುವ ಸ್ಪರ್ಧೆಗೆ ಬೇಕಾದ ದಕ್ಷತೆಯನ್ನು ಇಟ್ಟುಕೊಂಡಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನಿಜಕ್ಕೂ ಪ್ರವೇಶ ದೊರಕುವುದೇ?. ಈ ದೇಶದ ಖಾಸಗಿ ವಲಯಗಳಲ್ಲಿ ಸ್ಪರ್ಧೆಎಂದರೆ ತಮಗೇ ಬೇಕಾದ ವರ್ಗವನ್ನು ಮಾತ್ರ ಒಳಕ್ಕೆ ಬಿಟ್ಟುಕೊಳ್ಳುವ ನೀತಿಯೆಂದೇ ಅರ್ಥ.

ಪ್ರತಿಯೊಂದಕ್ಕೂ ಅಮೆರಿಕಾದತ್ತ ಮುಖಮಾಡಿ ಅಲ್ಲಿನ ಮಾದರಿಯನ್ನು ಅನುಸರಿಸುವ ಭಾರತ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯ ವಿಚಾರದಲ್ಲಿ ಅಮೆರಿಕಾವನ್ನು ಇದುವರೆಗೂ ಕಣ್ಣೆತ್ತಿಯೂ ನೋಡಿಲ್ಲ. ಜಗತ್ತಿನ ಅತಿ ಶ್ರೀಮಂತ ದೇಶವೆಂದೇ ಕರೆಸಿಕೊಳ್ಳುವ ಅಮೆರಿಕಾ ಕಳೆದ ನಾಲ್ಕು ದಶಕಗಳಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡುತ್ತಾ ಬಂದಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಅನುಸರಿಸಿದರೆ ದೊಡ್ಡ ಬಂಡವಾಳ ಹೂಡಿಕೆದಾರರು ದೇಶದಿಂದಲೇ ಕಾಲ್ಕೀಳುತ್ತಾರೆ ಎನ್ನುವ ಭಾರತದ ಖಾಸಗಿ ವಲಯದ ಆತಂಕ ನಿಜವೇ ಆಗಿದ್ದರೆ ಇಷ್ಟು ಹೊತ್ತಿಗೆ ಅಮೆರಿಕಾದ ಆರ್ಥಿಕ ವ್ಯವಸ್ಥೆಯೇ ಕುಸಿದು ಬೀಳಬೇಕಿತ್ತಲ್ಲವೇ?.

ಪ್ರತಿಭೆಗೆ ಮಾತ್ರ ಮನ್ನಣೆ ನೀಡಬೇಕು ಎನ್ನುವ ಖಾಸಗಿ ಕ್ಷೇತ್ರದ ವಾದಕ್ಕೆ ಮಣೆ ಹಾಕುವುದಾದರೆ ಈ ದೇಶದ ತುಳಿತಕ್ಕೊಳಗಾದ ಎಲ್ಲ ಶೋಷಿತ ಸಮುದಾಯಗಳನ್ನು ಶಾಶ್ವತವಾಗಿ ಕತ್ತಲಲ್ಲಿಡಬೇಕಾಗುತ್ತದೆ. ಈ ದೇಶದ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಹೇಗಿದೆಯೆಂದರೆ ಪ್ರತಿಭೆಯ ಹೆಸರನ್ನು ಮುಂದಿಟ್ಟುಕೊಂಡು ಪುರಾತನ ಅಧಿಪತ್ಯಕ್ಕೆ ಲಾಭವಾಗುವ ನಿರ್ಣಯಗಳನ್ನು ಜಾರಿಮಾಡುವ ಸ್ಥಾನಗಳಲ್ಲಿ ಮೀಸಲಾತಿ ನೀತಿಯನ್ನು ಗಟ್ಟಿಯಾಗಿ ವಿರೋಧಿಸುವ ದೊಡ್ಡ ವರ್ಗವೇ ಕೂತುಬಿಟ್ಟಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಈ ದೇಶದಲ್ಲಿ ಹುಟ್ಟಿಕೊಂಡಾಗಲೆಲ್ಲ ಅದನ್ನು ಆರಂಭದಲ್ಲೇ ವಿರೋಧಿಸುವ ವರ್ಗ ಸದಾ ಕ್ರಿಯಾಶೀಲವಾಗಿರುತ್ತದೆ.

ಖಾಸಗಿ ಕ್ಷೇತ್ರದ ಸ್ಥಾಪನೆಗೆ ಅವಕಾಶ ನೀಡುವ ಸಂದರ್ಭಗಳಲ್ಲಿ ನಮ್ಮ ಸರ್ಕಾರಗಳು ಅಪಾರ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅವಕ್ಕೆ ಒದಗಿಸಿವೆ. ಒಂಭತ್ತು, ಹತ್ತು ಮತ್ತು ಹನ್ನೊಂದನೆಯ ಪಂಚವಾರ್ಷಿಕ ಯೋಜನೆಗಳಲ್ಲಿ ಜನತೆಯ ಹಣವನ್ನು ಖಾಸಗಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರವೇ ಖುದ್ದು ತೊಡಗಿಸಿದೆ. ಜನತೆಯ ತೆರಿಗೆ ಹಣದಿಂದ ಬೆಳೆದು ಕೊಬ್ಬುವ ಖಾಸಗಿ ಕ್ಷೇತ್ರವು ಸಾಮಾಜಿಕ ನ್ಯಾಯದ ಪರ ನಿಲ್ಲಬೇಕೆಂಬ ಪ್ರಶ್ನೆ ಬಂದಾಗ ಪಲಾಯನದ ಹಾದಿ ಹಿಡಿಯುತ್ತವೆ. ಸ್ವಾತಂತ್ರ್ಯೋತ್ತರದ ಕಳೆದ ಆರು ದಶಕಗಳಲ್ಲಿ ಇಲ್ಲಿನ ನೆಲ, ಜಲ, ಸಂಪನ್ಮೂಲ, ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡ ಖಾಸಗಿ ಕ್ಷೇತ್ರವು ಜನತೆಯ ಸಂಕಟಗಳಿಗೆ ಬೆನ್ನುತೋರಿಸಿದ್ದೇ ಹೆಚ್ಚು.

ಸರ್ಕಾರ ಏನು ಮಾಡಬಹುದು?

ಇವತ್ತು ಸರ್ಕಾರಿ ಸ್ವಾಮ್ಯದಲ್ಲಿರುವ ಬೃಹತ್ ಉದ್ದಿಮೆಗಳು ಖಾಸಗಿಯವರ ಹಿಡಿತದಲ್ಲೂ ಇವೆ. ಸರ್ಕಾರದ ಹಂಗಿಲ್ಲದೆ ಸ್ವಾತಂತ್ರ್ಯವಾಗಿ ಬೆಳೆದಿರುವ ಅನೇಕ ಕೈಗಾರಿಕಾ ಸಂಸ್ಥೆಗಳನ್ನು ನಾವು ಕಾಣಬಹುದು. ಸಾರ್ವಜನಿಕ ಹಿತಾಸಕ್ತಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುವುದು ಸಾಧ್ಯವಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಇರುವುದು ನಿಜವೇ ಆದಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸುವ, ಸರ್ಕಾರದ ನೀತಿಗಳಿಗೆ ಒಳಪಡುವಂತೆ ನಿಯಮಗಳನ್ನು ರಚಿಸಬಹುದಲ್ಲವೇ?

ಖಾಸಗಿ ಸ್ವಾಮ್ಯದ ಸಂಸ್ಥೆಗಳು ನಿರ್ವಾತ ಸ್ಥಿತಿಯಿಂದಾಗಲಿ, ಶೂನ್ಯದಿಂದಾಗಲಿ ಹುಟ್ಟಿಕೊಂಡಿಲ್ಲ. ಸರ್ಕಾರದ ಅನುದಾನ, ಸಬ್ಸಿಡಿ, ವಿಶೇಷ ಯೋಜನೆಗಳಿಂದಾಗಿ ಇವತ್ತು ಅನೇಕ ಖಾಸಗಿ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಉತ್ತೇಜನಕಾರಿ ಪೋಷಣೆ, ಬಂಡವಾಳ ಹೂಡಿಕೆಯನ್ನಷ್ಟೇ ನಂಬಿಗೊಂಡು ಹೆಜ್ಜೆ ಇಡುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಮೂಲಭೂತ ಸೌಕರ್ಯದ ನೆರವುಗಳು ದೊರಕದಿದ್ದರೆ ಅವು ಉಸಿರಾಡುವುದೇ ಕಷ್ಟವಾಗುತ್ತದೆ. ಖಾಸಗಿ ಸಂಸ್ಥೆಗಳು ಮೀಸಲಾತಿ ನೀತಿಯನ್ನು ಅಳವಡಿಸಿಕೊಳ್ಳಲು ನಿರಾಕರಿಸಿದರೆ ಆಗ, ಸರ್ಕಾರ ಅವುಗಳಿಗೆ ನೀಡಿರುವ ಸವಲತ್ತನ್ನು ಹಿಂತೆಗೆದುಕೊಳ್ಳಬಹುದು ಮತ್ತು ಅದರ ಮಾನ್ಯತೆಯನ್ನು ರದ್ದುಮಾಡುವ ಕ್ರಮಗಳಿಗೂ ಮುಂದಾಗಬಹುದು.

ಸಂವಿಧಾನವನ್ನು ಎದುರಿಗಿಟ್ಟುಕೊಂಡು:

ಸಾಮಾಜಿಕ ನ್ಯಾಯ ಮತ್ತು ಕಲ್ಯಾಣದ ಗುರಿಗಾಗಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಮೂಲಕ ಸಂವಿಧಾನದ ನೆರವಿನೊಂದಿಗೆ ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಗಾಗಿ ಪ್ರಯತ್ನಿಸಬಹುದು. ಈ ನಿಟ್ಟಿನಲ್ಲಿ ಅನುಚ್ಛೇದ 38, 39(ಬಿ) ಮತ್ತು (ಸಿ), 41 ಮತ್ತು 46 ನಮ್ಮ ಬೆನ್ನಿಗೆ ನಿಲ್ಲುತ್ತವೆ. ಅದರಲ್ಲೂ ಅನುಚ್ಛೇದ 46 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ  ಸ್ಥಿತಿಯನ್ನು ಉತ್ತಮ ಪಡಿಸಲು ರಾಜ್ಯವು ವಿಶೇಷ ನೀತಿಗಳನ್ನು ರಚಿಸಿ ಅನುಷ್ಠಾನಕ್ಕೆ ತರಬಹುದು ಎಂದು ಹೇಳುತ್ತದೆ.

ಅನುಚ್ಛೇದ 14 ಈ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು, ರಾಜ್ಯ ಅಥವಾ ಕೇಂದ್ರ ಸರ್ಕಾರವು ಯಾವುದೇ ನೆಪವೊಡ್ಡಿ ಈ ಸಮಾನತೆಯ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ವಿವೇಚಿಸುತ್ತದೆ. ಇಂದ್ರಸಾಹ್ನಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದ  ತೀರ್ಪಿನಲ್ಲಿ ಸರ್ವೊಚ್ಚ ನ್ಯಾಯಾಲಯವು ‘ಎಲ್ಲರಿಗೂ ಸಮಾನ ರಕ್ಷಣೆ ನೀಡುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ  ಬದಲಾವಣೆಗೆ ರಾಜ್ಯವು ಪ್ರಯತ್ನಿಸಬೇಕು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದರೆ ಆರ್ಥಿಕ ಸಂಪನ್ಮೂಲಗಳನ್ನು ಪಡೆಯಲು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದೇ ಆಗಿದೆ’ ಎಂದು ಹೇಳಿದೆ.

ಅನುಚ್ಛೇದ 15(1) ಈ ದೇಶದ ಯಾವುದೇ ನಾಗರಿಕನ ವಿರುದ್ಧ ಆತನ ಜಾತಿ, ಮತ, ಲಿಂಗ, ಹುಟ್ಟಿದ ಸ್ಥಳಗಳ ಆಧಾರದ ಮೇಲೆ ರಾಜ್ಯವು ತಾರತಮ್ಯ ಮಾಡಕೂಡದೆಂದು ಹೇಳುತ್ತದೆ. ಜೊತೆಗೆ ಅನುಚ್ಛೇದ 15(4) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಗತಿಗಾಗಿ ರಾಜ್ಯವು ತನಗೆ ಸರಿಕಂಡ ಉಪಬಂಧಗಳನ್ನು ರಚಿಸಿಕೊಳ್ಳಬಹುದು ಎಂದು ಹೇಳುತ್ತದೆ.

ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲಿಕ್ಕೆಂದೇ ನಮ್ಮಲ್ಲಿ ಅನೇಕ ಜನಪರ ಅಧಿನಿಯಮಗಳು ರಚನೆಯಾಗಿವೆ. ಹೆಣ್ಣನ್ನು ಆರ್ಥಿಕವಾಗಿ ಸಬಲಗೊಳಿಸಲು ‘ಸಮಾನ ವೇತನ ಅಧಿನಿಯಮ’ದಂತಹ ಕಾಯ್ದೆ ನಮ್ಮಲ್ಲಿದೆ. ಈ ಅಧಿನಿಯಮದ ಪ್ರಕಾರ ಹೆಣ್ಣಿಗೆ ಗಂಡಿನಷ್ಟೆ ಸಮಾನ ಕೆಲಸಕ್ಕಾಗಿ ಸಮಾನ ವೇತನ ಪಡೆಯುವ ಹಕ್ಕಿದೆ. ಈ ಅಧಿನಿಯಮ  ಸರ್ಕಾರಿ ಮತ್ತು ಖಾಸಗಿ ಎರಡು ಕ್ಷೇತ್ರಗಳಲ್ಲೂ ಒಳಪಡುತ್ತದೆ. ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೆಣ್ಣು ಗಂಡಿನಷ್ಟು ಕೆಲಸಮಾಡಲಾರಳು ಎಂಬ ಪೂರ್ವಗ್ರಹಕ್ಕೆ ಅಂಟಿಕೊಂಡು ಕೂತಿದ್ದರೆ ಇಂಥದೊಂದು ಅಧಿನಿಯಮ ಜಾರಿಯಾಗುತ್ತಲೇ ಇರಲಿಲ್ಲ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆ ವಿಚಾರದಲ್ಲಿ ಮೀನಮೇಷ ಎಣಿಸುತ್ತಿರುವ  ಸರ್ಕಾರಗಳು ಕಣ್ಣೆದುರಿಗಿರುವ ‘ಸಮಾನ ವೇತನ ಅಧಿನಿಯಮ’ದ ಯಶಸ್ಸಿನ ಫಲಿತಾಂಶಗಳತ್ತ ಸ್ವಲ್ಪ ಕಣ್ಣು ಹಾಯಿಸಲಿ.

ಕೊನೆಯದಾಗಿ, ಅನುಚ್ಛೇದ 21 ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಜೀವಿಸುವ, ಜೀವ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಪ್ರಜಾಪ್ರಭುತ್ವದ ಸಮಾಜದಲ್ಲಿ ಹೊಂದುವ ಹಕ್ಕುಗಳನ್ನು ನೀಡಿದೆ. ಇದರ ಪ್ರಕಾರ ಪ್ರತಿಯೊಬ್ಬ ನಾಗರಿಕನು ಉತ್ತಮ ಪರಿಸರದಲ್ಲಿ ಜೀವಿಸುವ, ಮೂಲಭೂತ ಸೌಕರ್ಯಗಳನ್ನು ಪಡೆಯುವ, ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯ ಕೇಂದ್ರಗಳಿಗಾಗಿ ರಾಜ್ಯದ ಮೊರೆ ಹೋಗಬಹುದಾಗಿದೆ.

ಬಂಧು ಮುಕ್ತಿ  ಮೋರ್ಚಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೊಚ್ಚ ನ್ಯಾಯಾಲಯವು ‘ಶೋಷಣೆ ಮುಕ್ತ ಮತ್ತು ಆತ್ಮಗೌರವದ ಬದುಕು ನಡೆಸುವ’ ಸಲುವಾಗಿ ಮೂಲಭೂತ ಹಕ್ಕುಗಳನ್ನು ಈ ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ನೀಡಿದೆ. ಅನುಚ್ಛೇದ 21ರ ಪ್ರಕಾರ ನೈತಿಕ ಮತ್ತು ಗೌರವದ ಬದುಕಿಗಾಗಿ ಈ ದೇಶದ ಪ್ರತಿಯೊಬ್ಬರು ರಾಜ್ಯ ನೀತಿಯ ನಿರ್ದೇಶಕ  ತತ್ವಗಳನ್ನು ಬಳಸಿಕೊಂಡು ಸರ್ಕಾರದ ಮೇಲೆ ಒತ್ತಡ ತರಬಹುದಾಗಿದೆ. ಆದರೆ ಖಾಸಗಿ ಸಂಸ್ಥೆಗಳು ಮೀಸಲಾತಿ ನೀತಿಯನ್ನು ಗಾಳಿಗೆ ತೂರಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳನ್ನು ಸಾಮಾಜಿಕ ಬದುಕಿನ ಮುಖ್ಯವಾಹಿನಿಗಳಿಂದ ದೂರವಿಡುವ ಕೆಲಸಗಳನ್ನು ಎಗ್ಗಿಲ್ಲದೆ ಮಾಡುತ್ತಲೇ ಇವೆ.

ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಉಳಿವಿಗಾಗಿ ಮತ್ತು ಈ ಜನರ ಜೀವನೋಪಾಯಕ್ಕಾಗಿ ಸರ್ಕಾರವು ವಿಶೇಷ ಅಧಿನಿಯಮಗಳನ್ನು ರಚಿಸಬಹುದೆಂದು ಸಂವಿಧಾನ ಹೇಳಿದರೆ, ಖಾಸಗಿ ಕ್ಷೇತ್ರಗಳು ಸರ್ಕಾರದ ಹಿಡಿತದಲ್ಲಿರುವ ಸಾರ್ವಜನಿಕ ಸಂಸ್ಥೆಗಳನ್ನು ನುಂಗಿಹಾಕುತ್ತಾ ಈ ಮಣ್ಣಿನ ತಳಸಮುದಾಯಗಳು ಯಾವ ಕಾರಣಕ್ಕೂ ಖಾಸಗಿ ಒಡೆತನದ ಸಂಸ್ಥೆಗಳ ಬಾಗಿಲು ತಟ್ಟದಂತೆ ನಾಜೂಕಾಗಿ ನೋಡಿಕೊಳ್ಳುತ್ತಿವೆ.

ಮಾದರಿಯಾಗಬಹುದಾದ ಪಶ್ಚಿಮದ ಪಾಠಗಳು:

ಭಾರತದಂತೆ ಅನೇಕ ಪಶ್ಚಿಮ ದೇಶಗಳು ಕೂಡ ಅಸಮಾನ ಸಮಾಜವನ್ನು ಸೃಷ್ಟಿಸಿ ಅದನ್ನು ಜೀವಂತವಾಗಿಡಲು ಹರಸಾಹಸ ನಡೆಸುತ್ತಿವೆ. ಪರಿಸ್ಥಿತಿ ಹೀಗಿದ್ದರೂ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾ ದೇಶಗಳು ಈಗಾಗಲೇ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿಯನ್ನು ಅಳವಡಿಸಿಕೊಂಡಿವೆ. ಅಲ್ಲಿನ ಪಾಠಗಳನ್ನು ಅವಲೋಕಿಸಿದರೆ ನಮ್ಮ ನೆಲದ ಕಾನೂನುಗಳು ಇನ್ನಷ್ಟು ಗಟ್ಟಿಯಾಗಿ ನಿಲ್ಲಲು ನೆರವಾಗಬಹುದೇನೋ.

ದಕ್ಷಿಣ ಆಫ್ರಿಕಾ:

ದಕ್ಷಿಣ ಆಫ್ರಿಕಾ ಸಂವಿಧಾನದ ಅನುಚ್ಛೇದ 9(2) ಮತ್ತು 36 ಗತಕಾಲದಿಂದ ಬೇರುಬಿಟ್ಟಿದ್ದ ಸಾಮಾಜಿಕ ತಾರತಮ್ಯವನ್ನು ಕೊನೆಗಾಣಿಸಲು ಪ್ರಭುತ್ವವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವನ್ನು ಬಳಸಿಕೊಂಡು ವಿಶೇಷ ಕಾನೂನುಗಳನ್ನು ರಚಿಸಬಹುದು ಎಂದು ವಿವೇಚಿಸುತ್ತದೆ. ಇದರ ಪ್ರಯತ್ನವಾಗಿ ದಕ್ಷಿಣ ಆಫ್ರಿಕಾದಲ್ಲಿ The Employment Equity Act, 1998 ಮತ್ತು The Promotion of Equality and Prevention of Unfair Discrimination Act, 2000  ಎಂಬೆರಡು ಅಧಿನಿಯಮಗಳು ಜಾರಿಗೆ ಬಂದವು. ಸರ್ಕಾರಿ ಮತ್ತು ಖಾಸಗಿ ಒಡೆತನದಲ್ಲಿರುವ ಸಂಸ್ಥೆಗಳು ಈ ಎರಡು ಅಧಿನಿಯಮದ ಉಪಬಂಧ ಮತ್ತು ನಿಯಮಗಳಿಗೆ ಒಳಪಡುತ್ತವೆ. ಜನಾಂಗ, ಮತ, ಹುಟ್ಟಿನ ಕಾರಣಗಳ ಆಧಾರದ ಮೇಲೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಯಾವುದೇ ರೀತಿಯಲ್ಲೂ ತಾರತಮ್ಯ, ಕಿರುಕುಳ, ದ್ವೇಷ ಕಾರುವ ಮಾತುಗಳಿಂದ ಶೋಷಣೆಗೆ ಒಳಪಡಿಸುವಂತಿಲ್ಲವೆಂದು The Promotion of Equality and Prevention of Unfair Discrimination Act, 2000 ಹೇಳಿದರೆ, ಕಪ್ಪು ಜನರ ಒಳಿತಿಗಾಗಿ ಉದ್ಯೋಗ ನೀಡಿಕೆಯಲ್ಲಿ ಸಮಾನ ಅವಕಾಶ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಲು ಈ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು The Employment Equity Act, 1998 ಹೇಳುತ್ತದೆ. ಈ ಅಧಿನಿಯಮದ ಕಲಂ 5 ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುವ ಕಪ್ಪು ಜನರಿಗೆ ತಾರತಮ್ಯ ಮತ್ತು ಶೋಷಣೆ ಮುಕ್ತ ಪ್ರದೇಶದಲ್ಲಿ ಕೆಲಸ ಮಾಡುವಂತಹ ವಾತಾವರಣವನ್ನು ಆ ಸಂಸ್ಥೆಗಳ ಒಡೆತನ ಹೊಂದಿರುವ ಮಾಲೀಕರೆ ನಿರ್ಮಿಸಬೇಕು ಮತ್ತು ಕಲಂ 6 ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿಯಡಿ ಕಪ್ಪು ಜನರಿಗೆ ಸೂಕ್ತ ಪ್ರಾತಿನಿಧ್ಯ ನೀಡದ ಸಂಸ್ಥೆಗಳನ್ನು ವಿಸರ್ಜಿಸುವ ಹಕ್ಕು ಪ್ರಭುತ್ವಕ್ಕಿದೆ ಎಂದು ಹೇಳುತ್ತದೆ.

ಈ ಎರಡು ಅಧಿನಿಯಮಗಳಿಗೆ ಒಳಪಡುವ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ದಕ್ಷಿಣ ಆಫ್ರಿಕಾ ಮಾನವ ಹಕ್ಕುಗಳ ಆಯೋಗಕ್ಕೆ ವಾರ್ಷಿಕ ವರದಿಯನ್ನು ನೀಡಬೇಕು. ಈ ಆಯೋಗವು ಸಮಾನ ಉದ್ಯೋಗ ನೀತಿಯನ್ನು ಕಾಯ್ದುಕೊಳ್ಳಲು ವಿಫಲವಾದ ಖಾಸಗಿ ಮತ್ತು ಸಾರ್ವಜನಿಗ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬಹುದಾಗಿದೆ.

ಅಮೆರಿಕಾ:

ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ನೀತಿಯನ್ನು ಜಾರಿಗೆ ತರಲು ಅಮೆರಿಕಾ ಕಾಂಗ್ರೆಸ್ 1964 ರಲ್ಲಿಯೇ Civil Rights Act ರಚಿಸಿಕೊಂಡಿದೆ. ಈ ಅಧಿನಿಯಮದ ಪ್ರಕಾರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ, ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುವ, ಕಾರ್ಮಿಕರಿಗೆ ಗುತ್ತಿಗೆ ನೀಡುವ, ಬಡ್ತಿ, ರಜೆ, ಪರಿಹಾರ, ನಿವೃತ್ತಿ ವೇತನ ಇವೇ ಮೊದಲಾದ ವಿಚಾರಗಳಲ್ಲಿ ಜನಾಂಗದ ಆಧಾರದ ಮೇಲೆ ಯಾರನ್ನೂ ತಾರತಮ್ಯಕ್ಕೆ ಒಳಪಡಿಸುವಂತಿಲ್ಲ ಎಂದು ಹೇಳುತ್ತದೆ. ಖಾಸಗಿ ಸಂಸ್ಥೆಗಳ ಮೇಲೆ ಕಣ್ಣಿಡಲೆಂದೇ ಸಮಾನ ಉದ್ಯೋಗ ಅವಕಾಶಗಳ ಆಯೋಗ (Equal Employment Opportunities Commission)ವನ್ನು ರಚಿಸಲಾಗಿದೆ. ಇದಲ್ಲದೆ ಸಂಸ್ಥೆಗಳ ಎಲ್ಲಾ ಬಗೆಯ ಚಟುವಟಿಕೆಗಳು ಕಾರ್ಮಿಕ ಇಲಾಖೆಯ ನಿಯಂತ್ರಣಕ್ಕೆ ಒಳಪಡುತ್ತವೆ. ಜೊತೆಗೆ ಬೃಹತ್ ಪ್ರಮಾಣದ ಲೋಕೋಪಯೋಗಿ ಕೆಲಸಗಳಿಗೆ ಹೊರಗುತ್ತಿಗೆ ನೀಡುವಾಗ ಕಡ್ಡಾಯವಾಗಿ ಸಮಾಜದ ಅಂಚಿನಲ್ಲಿರುವ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಅಮೆರಿಕಾ ಸಂವಿಧಾನವೇ ಹೇಳುತ್ತದೆ.

ಸಂವಿಧಾನದ ತಿದ್ದುಪಡಿಯಾಗಲಿ:

ಸರ್ಕಾರದಿಂದ ಅನುದಾನ, ಸಬ್ಸಿಡಿ, ರಿಯಾಯಿತಿ ಮತ್ತು ಇತರೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಪಡೆದಿರುವ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ತಮ್ಮ ಸಂಸ್ಥೆಯಲ್ಲಿ ಮೀಸಲಾತಿಯನ್ನು ನೀಡಬೇಕೆಂದು ಜನವರಿ 2004 ರಂದು ಮಹಾರಾಷ್ಟ್ರ ಸರ್ಕಾರವು ಮಸೂದೆಯೊಂದನ್ನು ಪಾಸು ಮಾಡಿತು. ಇದಕ್ಕೆ ಉತ್ತರವಾಗಿ ವಿಡಿಯೋಕಾನ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಶೇಕಡ 15 ರಿಂದ 20ರಷ್ಟು ಮೀಸಲಾತಿಯನ್ನು ತನ್ನ ಸಂಸ್ಥೆಯಲ್ಲಿ ಒದಗಿಸಿತು. ವಿಡಿಯೋಕಾನ್ ಬಿಟ್ಟರೆ ಮತ್ತಿನ್ನ್ಯಾವ ಸಂಸ್ಥೆಯೂ ಮೀಸಲಾತಿ ನೀಡಿಕೆಯಲ್ಲಿ ಎದೆಕೊಟ್ಟು ಮುಂದೆ ಬರಲಿಲ್ಲ. ಅಂತಹ ಸಂಸ್ಥೆಗಳಿಗೆ ಇನ್ನು ಮುಂದೆ ಸರ್ಕಾರದಿಂದ ಯಾವುದೇ ರೀತಿಯ ನೆರವು ದೊರಕಲಾರದೆಂದು ಮಹಾರಾಷ್ಟ್ರ ಸರ್ಕಾರವು ಆದೇಶವನ್ನು ಹೊರಡಿಸಿತು. ಖಾಸಗಿ ಸಂಸ್ಥೆಗಳು ಬೆಚ್ಚಿದ್ದೇ ಆಗ!

ಭಾರತ ಸ್ವಾತಂತ್ರ್ಯಗಳಿಸಿ 63 ವರ್ಷಗಳಾಯಿತು. ಸಂವಿಧಾನದ ಮೂಲಕ ಈ ನೆಲದ ತಳ ಸಮುದಾಯಗಳಿಗೆ, ಸಮಾಜದ ಅಂಚಿನಲ್ಲಿರುವ ಅಲಕ್ಷಿತ ಜಾತಿಗಳಿಗೆ ಸಿಗಬೇಕಿದ್ದ ಸಾಮಾಜಿಕ ನ್ಯಾಯವು ಸಂಪೂರ್ಣವಾಗಿ ಇದುವರೆವಿಗೂ ಸಿಕ್ಕಿಲ್ಲ. ಸರ್ಕಾರ ಖಾಸಗಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿ ಮೀಸಲಾತಿ ನೀತಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕೆಂಬ ಗಂಭೀರ ಮಿತಿಯನ್ನು ಒಡ್ಡದಿದ್ದರೆ, ಖಾಸಗಿ ಸಂಸ್ಥೆಗಳು ಇನ್ನಷ್ಟು ಬೆಳೆದು ಆರ್ಥಿಕ ಸಮಾನತೆಯ ಕನಸುಗಳು ಛಿದ್ರಗೊಳ್ಳಬಹುದು. ಖುದ್ದು ಪ್ರಭುತ್ವವೇ ನಿಯಂತ್ರಣ ಹಾಕದಿದ್ದರೆ ಖಾಸಗಿ ಸಂಸ್ಥೆಗಳು ಅಷ್ಟು ಸುಲಭವಾಗಿ ಮಣಿಯಲಾರವು.  ಈಗಾಗಲೇ ನಮ್ಮ ಸಂವಿಧಾನಕ್ಕೆ 94 ತಿದ್ದುಪಡಿಗಳಾಗಿವೆ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆ ವಿಚಾರದಲ್ಲಿ ಮತ್ತೊಂದು ತಿದ್ದುಪಡಿಯಾಗಬೇಕಾದ ತುರ್ತಿದೆ. ಇದಾಗದ ಹೊರತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯ ಕುರಿತು ಈಗ ನಡೆಯುತ್ತಿರುವ ಚರ್ಚೆಗಳಿಗೆ ಒಂದು ಸ್ಪಷ್ಟ ಆಕಾರ ದೊರಕಲಾರದೇನೋ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

ನಿತ್ಯಾನಂದನಿಗೆ ಒಂದು ನೀತಿ, ಭ್ರಷ್ಟ ರಾಜಕಾರಣಿಗಳಿಗೆ ಇನ್ನೊಂದು ನೀತಿ. ಏಕಿಂಥ ತಾರತಮ್ಯ?

-ಆನಂದ ಪ್ರಸಾದ್

ಸುವರ್ಣ ಸುದ್ದಿ ವಾಹಿನಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಿತ್ಯಾನಂದ ಸ್ವಾಮಿಯ ವಿರುದ್ಧ ಆಕ್ರಮಣಕಾರಿಯಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತ ಬಂದಿರುವುದರ ಪರಿಣಾಮವಾಗಿ ಇಂದು ಕರ್ನಾಟಕದಲ್ಲಿ ನಿತ್ಯಾನಂದನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಕ್ರೋಶ ರೂಪುಗೊಂಡಿರುವುದು ಕಂಡುಬರುತ್ತದೆ. ಇದೇ ರೀತಿಯ ಆಕ್ರೋಶ ಭ್ರಷ್ಟರ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಕರ್ನಾಟಕದಲ್ಲಿ ರೂಪುಗೊಳ್ಳುವುದಿಲ್ಲ ಏಕೆ? ಉದಾಹರಣೆಗೆ ಕರ್ನಾಟಕದಲ್ಲಿ ಲೋಕಾಯುಕ್ತ ಹುದ್ದೆ ಖಾಲಿ ಬಿದ್ದು ಹಲವಾರು ತಿಂಗಳುಗಳೇ ಕಳೆದಿವೆ, ಆದರೂ ಲೋಕಾಯುಕ್ತರ ನೇಮಕ ಏಕೆ ಮಾಡಿಲ್ಲ ಎಂದು ಯಾವುದೇ ವಾಹಿನಿಯವರು ಸರ್ಕಾರಕ್ಕೆ ನಿತ್ಯಾನಂದನ ವಿಷಯದಲ್ಲಿ ಸವಾಲು ಹಾಕಿರುವಂತೆ ಸವಾಲು ಹಾಕಿರುವುದು ಕಂಡುಬರುವುದಿಲ್ಲ. ಕರ್ನಾಟಕದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರ ನಿಯಂತ್ರಣಕ್ಕೆ ನಿಷ್ಪಕ್ಷಪಾತಿ ಲೋಕಾಯುಕ್ತರ ನೇಮಕ ಮಾಡಲೇಬೇಕು ಎಂದು ಗಡುವು ವಿಧಿಸಿ ಹೋರಾಟ ಮಾಡಲು, ಜನಜಾಗೃತಿ ಮೂಡಿಸಲು ಯಾವುದೇ ಟಿವಿ ವಾಹಿನಿಗಳು ಏಕೆ ಪ್ರಯತ್ನಿಸುತ್ತಿಲ್ಲ? ಏಕೆ ಈ ರೀತಿ ಯಾವುದೇ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಉಗ್ರ ಹೋರಾಟಕ್ಕೆ ಮುಂದಾಗುತ್ತಿಲ್ಲ?

ಟಿವಿ ವಾಹಿನಿಗಳಿಗೆ ಜನಜಾಗೃತಿ ಮೂಡಿಸುವ ಅಪಾರ ಸಾಮರ್ಥ್ಯ ಇದೆ ಎಂಬುದು ನಿತ್ಯಾನಂದನ ವಿಷಯದಲ್ಲಿ ಸುವರ್ಣ ಸುದ್ದಿವಾಹಿನಿ ನಡೆಸಿದ ನಿರಂತರ ಅಭಿಯಾನದಿಂದ ಗೊತ್ತಾಗುತ್ತದೆ. ನಿತ್ಯಾನಂದನ ವಿಷಯದಲ್ಲಿ ಈ ರೀತಿ ಆಕ್ರಮಣಕಾರಿಯಾಗಿ ನಡೆದುಕೊಳ್ಳಲು ಸುವರ್ಣ ಸುದ್ದಿ ವಾಹಿನಿಗೆ ಏನು ಹಿತಾಸಕ್ತಿಗಳು ಇವೆಯೋ ಗೊತ್ತಿಲ್ಲ. ಆದರೆ ಒಂದು ವಿಷಯವನ್ನು ತೆಗೆದುಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸಿದರೆ ವ್ಯಾಪಕ ಜನಜಾಗೃತಿ ಎಲ್ಲೆಡೆ ಆಗುವುದು ಖಚಿತ ಎಂದು ಇದರಿಂದ ಗೊತ್ತಾಗುತ್ತದೆ. ನಿತ್ಯಾನಂದನ ವಿಷಯದಲ್ಲಿ ನಿರಂತರ ಕಾರ್ಯಕ್ರಮ ಪ್ರಸಾರ ಮಾಡಿದ್ದರಿಂದ ವಿಶ್ವಾದ್ಯಂತ ಕನ್ನಡಿಗರಿಂದ ಆಕ್ರೋಶ ಭುಗಿಲೇಳಲು ಆರಂಭವಾಯಿತು. ಆರಂಭದಲ್ಲಿ ಸುವರ್ಣ ಸುದ್ದಿವಾಹಿನಿ ಮಾತ್ರ ಈ ವಿಷಯದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು. ಇದರಿಂದ ಉಂಟಾದ ಪ್ರಭಾವದಿಂದ ಇತರ ಟಿವಿ ವಾಹಿನಿಗಳೂ ಇದೇ ವಿಚಾರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದವು.

ಇದೇ ರೀತಿ ಭ್ರಷ್ಟ ರಾಜಕಾರಣಿಗಳ ವಿರುದ್ಧವೂ ಯಾಕೆ ಸುವರ್ಣ ಸುದ್ದಿ ವಾಹಿನಿಯವರು ಅಥವಾ ಇತರ ವಾಹಿನಿಗಳು ನಿರಂತರ ಅಭಿಯಾನ ನಡೆಸುವುದಿಲ್ಲ? ಜನತೆಗೆ ನಿತ್ಯಾನಂದನ ವಿಷಯದಲ್ಲಿ ಉಕ್ಕುತ್ತಿರುವ ಆಕ್ರೋಶ ಭ್ರಷ್ಟ ರಾಜಕಾರಣಿಗಳ ವಿಷಯದಲ್ಲಿಯೂ ಉಕ್ಕಿದರೆ ಒಳ್ಳೆಯದು. ನಿತ್ಯಾನಂದನನ್ನು ಗಡೀಪಾರು ಮಾಡಿರುವಂತೆ ಹಾಗೂ ಬಂಧಿಸಿರುವಂತೆ ಭ್ರಷ್ಟ ರಾಜಕಾರಣಿಗಳನ್ನು ಯಾಕೆ ಬಂಧಿಸುವುದಿಲ್ಲ ಹಾಗೂ ಗಡೀಪಾರು ಮಾಡುವುದಿಲ್ಲ? ಭ್ರಷ್ಟ ರಾಜಕಾರಣಿಗಳಿಗೆ ಜೈಲಿನಿಂದ ಹೊರಬಂದಾಗ ಅದ್ಧೂರಿ ಸ್ವಾಗತ ಕೋರುವ ಜನರು ಹಾಗೂ ಸ್ವಾಮೀಜಿಗಳ ದ್ವಿಮುಖ ನೀತಿಯಿಂದಾಗಿ ಕರ್ನಾಟಕವು ಇಂದು ಭ್ರಷ್ಟಾಚಾರದಲ್ಲಿ ನಂಬರ್ ಒಂದು ರಾಜ್ಯ ಎಂಬ ಹೆಸರುಗಳಿಸಿದೆ. ನಿತ್ಯಾನಂದನು ಈಗ ಆರೋಪಿಯಷ್ಟೆ, ಆತನು ಅಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಆದರೂ ಆತನ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಇದೇ ರೀತಿಯ ಆಕ್ರೋಶ ಭ್ರಷ್ಟ ರಾಜಕಾರಣಿಗಳು ಮೇಲೆಯೂ ಏಕೆ ಭುಗಿಲೆಳುವುದಿಲ್ಲ? ಭ್ರಷ್ಟ ರಾಜಕಾರಣಿಗಳ ವಿಷಯ ಬಂದಾಗ ಅವರ ಮೇಲೆ ಆರೋಪವಷ್ಟೇ ಇದೆ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗಿಲ್ಲ ಎಂದು ಏಕೆ ರಿಯಾಯತಿಯನ್ನು ಕೊಡಬೇಕು? ನಿತ್ಯಾನಂದ ಮಾಡಿರುವುದು ಮಾತ್ರ ಅನೈತಿಕವೇ? ನಂಬಿಕೆದ್ರೋಹವೇ? ಜನರ ಸೇವೆ ಮಾಡಲೋಸುಗ ಜನರಿಂದ ಆಯ್ಕೆಯಾಗಿ ಅಪರೇಷನ್ ಕಮಲ ಎಂಬ ಹೆಸರಿನಲ್ಲಿ ಶಾಸಕರನ್ನು ಪಶುಗಳಂತೆ ಕೊಳ್ಳುವುದು ನಂಬಿಕೆದ್ರೋಹವಲ್ಲವೇ? ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿ ಅಕ್ರಮ ಆಸ್ತಿ-ಪಾಸ್ತಿ ಮಾಡಿಕೊಳ್ಳುವುದು ಅನೈತಿಕವಲ್ಲವೇ? ಹೀಗಿದ್ದರೂ ನಮ್ಮ ಜನ ಲೈಂಗಿಕತೆ ವಿಚಾರದಲ್ಲಿ ಮಾತ್ರ ಏಕೆ ಅನೈತಿಕತೆ ಎಂದು ಆಕ್ರೋಶಗೊಳ್ಳುತ್ತಾರೆ? ಇದೇ ರೀತಿ ಭ್ರಷ್ಟರ ವಿರುದ್ಧ ಆಕ್ರೋಶಗೊಂಡು ರಾಜೀನಾಮೆಗೆ ಏಕೆ ಜನ ಪಟ್ಟು ಹಿಡಿದು ಬೀದಿಗೆ ಇಳಿಯುವುದಿಲ್ಲ ಅಥವಾ ಭ್ರಷ್ಟರ ಗಡೀಪಾರಿಗೆ ಅಗ್ರಹಿಸುವುದಿಲ್ಲ? ಜನತೆ ನಿತ್ಯಾನಂದನ ವಿರುದ್ಧ ತೋರಿದ ರೀತಿಯಲ್ಲೇ ಆಕ್ರೋಶವನ್ನು ಭ್ರಷ್ಟರ ವಿಷಯದಲ್ಲಿಯೂ ತೋರಿಸಿದರೆ ಕರ್ನಾಟಕ ಭ್ರಷ್ಟಾಚಾರದಿಂದ ಮುಕ್ತಿ ಪಡೆಯಲು ಹೆಚ್ಚು ಸಮಯ ಬೇಕಾಗಿಲ್ಲ.

ಜನಜಾಗೃತಿಯ ವಿಷಯದಲ್ಲಿ ಟಿವಿ ಮಾಧ್ಯಮ ತನಗಿರುವ ನೈಜ ಸಾಮರ್ಥ್ಯದ ಶೇಕಡಾ ಒಂದರಷ್ಟನ್ನೂ ಬಳಸುತ್ತಿಲ್ಲ ಎಂದು ಖಚಿತವಾಗಿ ಹೇಳಬಹುದು. ಟಿವಿ ಮಾಧ್ಯಮ ಭ್ರಷ್ಟಾಚಾರದ ವಿರುದ್ಧ, ಭ್ರಷ್ಟ ರಾಜಕಾರಣಿಗಳ ವಿರುದ್ಧ ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಜನರನ್ನು ಎಚ್ಚರಗೊಳಿಸಿದರೆ ರಾಜಕಾರಣಿಗಳು ಭ್ರಷ್ಟಾಚಾರ ಮಾಡಲು ಹೆದರಬಹುದು. ಲೈಂಗಿಕ ಅನೈತಿಕತೆಯ ವಿಷಯದಲ್ಲಿ ಜನತೆ ತೋರುವ ಬಹಿಷ್ಕಾರ, ಆಕ್ರೋಶ ಭ್ರಷ್ಟಾಚಾರದ ವಿಷಯದಲ್ಲಿಯೂ ಕಂಡುಬಂದರೆ ರಾಜಕಾರಣಿಗಳು ಎಚ್ಚರಿಕೆಯಿಂದ ವರ್ತಿಸಬಹುದು. ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲೇಬೇಕೆಂದು ಒಂದು ಗಡುವನ್ನು ನೀಡಿ ನಿರಂತರ ಜನಜಾಗೃತಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಿದರೆ ಲೋಕಾಯುಕ್ತರ ನೇಮಕ ಶೀಘ್ರವೇ ಆಗುವುದರಲ್ಲಿ ಸಂದೇಹವಿಲ್ಲ. ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಸಿನೆಮಾ ನಟರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸ್ಟುಡಿಯೋಗೆ ಕರೆಸಿ ನಿಷ್ಪಕ್ಷಪಾತ ನಿಲುವಿನ ಲೋಕಾಯುಕ್ತರ ನೇಮಕ ಏಕೆ ಅಗತ್ಯ ಎಂದು ಒತ್ತಡ ಹೇರಲು ಶುರುಮಾಡಿದರೆ ಸರ್ಕಾರದ ಮೇಲೆ ಒತ್ತಡ ಬಿದ್ದೇ ಬೀಳುತ್ತದೆ. ನಿತ್ಯಾನಂದನ ವಿಷಯದಲ್ಲಿ ಸರ್ಕಾರಕ್ಕೆ ಸವಾಲು ಹಾಕಿದಂತೆ ಟಿವಿ ವಾಹಿನಿಗಳು ಲೋಕಾಯುಕ್ತರ ನೇಮಕದ ವಿಷಯದಲ್ಲಿಯೂ ಸವಾಲು ಹಾಕಬೇಕಾದ ಅಗತ್ಯ ಇದೆ. ಜನರಿಂದ ಈ ವಿಷಯದಲ್ಲಿ ಅಭಿಪ್ರಾಯಗಳನ್ನು ಪಡೆದು ಕೆಲವು ದಿನ ನಿರಂತರ ಪ್ರಸಾರ ಮಾಡುತ್ತಿದ್ದರೆ ಜನತೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕುದಿಯಲು ಆರಂಭವಾಗುತ್ತದೆ. ಆಗ ಸರ್ಕಾರಗಳು ಬಗ್ಗಲೇಬೇಕಾಗುತ್ತದೆ. ಏಕೆಂದರೆ ಟಿವಿ ಮಾಧ್ಯಮದ ಶಕ್ತಿ ಅಷ್ಟು ಬಲವಾಗಿದೆ. ಈ ಕೆಲಸವನ್ನು ಟಿವಿ ವಾಹಿನಿಗಳು ಏಕೆ ಮಾಡಬಾರದು?

ರಾಜ್ಯದ ನೈಸರ್ಗಿಕ ಸಂಪನ್ಮೂಲಗಳಾದ ಕಬ್ಬಿಣದ ಅದಿರು ಮೊದಲಾದವುಗಳನ್ನು ಅಕ್ರಮವಾಗಿ ವಿದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿಹಾಕಿ ಆ ಹಣದ ಬಲದಿಂದ ರಾಜಕೀಯ ಮಾಡುವುದು ಅನೈತಿಕವಲ್ಲವೇ? ಅಂಥ ಅನೈತಿಕ ಹಣದ ಬಲದಿಂದ ಪಕ್ಷ ಕಟ್ಟಿ ಪಾದಯಾತ್ರೆ ಮಾಡುವವರ ವಿರುದ್ಧ ಏಕೆ ರಾಜ್ಯದಲ್ಲಿ ಜನತೆಯ ಆಕ್ರೋಶ ಸ್ಪೋಟಗೊಳ್ಳುವುದಿಲ್ಲ? ಇಂಥ ಅಕ್ರಮ ಹಾಗೂ ಅನೈತಿಕತೆ ಬಗ್ಗೆ ಟಿವಿ ವಾಹಿನಿಗಳ ಕಣ್ಣು ಏಕೆ ಕುರುಡಾಗಿದೆ? ಗಣಿ ಅಕ್ರಮದ ಹಣದ ಬಲದಿಂದ ಕಟ್ಟುತ್ತಿರುವ ಪಕ್ಷದ ಹಿಂದೆ ಜನ ಏಕೆ ಕುರಿಗಳಂತೆ ಹೋಗುತ್ತಿದ್ದಾರೆ? ಇಂಥ ಜನರನ್ನು ಎಚ್ಚರಿಸಿ ಗಣಿ ಅಕ್ರಮದ ಅನೈತಿಕ ಹಣದಿಂದ ರಾಜ್ಯವನ್ನು ಹಾಳುಗೆಡವುದರ ವಿರುದ್ಧ ಟಿವಿ ವಾಹಿನಿಗಳು ಏಕೆ ಆಂದೋಲನ ನಡೆಸುವುದಿಲ್ಲ? ಬದಲಾಗಿ ಅಂಥ ಪಾದಯಾತ್ರೆಯ ನಾಟಕವನ್ನು ಜನರ ಮುಂದೆ ಹಾಡಿ ಹೊಗಳಿ ಕಾರ್ಯಕ್ರಮ ಪ್ರಸಾರ ಮಾಡುವುದರ ಗುಟ್ಟೇನು?

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 24 )


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ವಯಸ್ಸಾಗುತ್ತಿದ್ದಂತೆ, ಜೀವನದ ವಿಶ್ರಾಂತಿಯ ಬಯಕೆ ಹೆಚ್ಚಾಗತೊಡಗಿತು. ನೈನಿತಾಲ್ ಪಟ್ಟಣದ ಪುರಸಭೆಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ. ಜೊತೆಗೆ ಮೊಕಮೆಘಾಟ್‌ನ ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಅಲ್ಲಿನ ಸರಕು ಮತ್ತು ಕಲ್ಲಿದ್ದಲು ಸಾಗಾಣಿಕೆಯ ಗುತ್ತಿಗೆಯನ್ನ ತನ್ನ ಬಳಿ ಎರಡು ದಶಕಕ್ಕೂ ಹೆಚ್ಚು ಕಾಲ ದುಡಿದ ನಿಷ್ಟಾವಂತ ಕೂಲಿಕಾರ್ಮಿಕರಿಗೆ ವಹಿಸಿ, ಅವರ ಪರವಾಗಿ ತಾನೇ ರೈಲ್ವೆ ಇಲಾಖೆಗೆ ಠೇವಣಿ ಹಣವನ್ನು ತುಂಬಿದ. ಎರಡು ದಶಕ ನನ್ನ ಜೊತೆ ದುಡಿದ ನಿಮಗೆ ಮತ್ತು ನಿಮ್ಮ ಪ್ರೀತಿಗೆ ನಾನು ನೀಡಬಹುದಾದ ಕಾಣಿಕೆ ಇದೊಂದೇ ಎಂದು ಅಗಲಿಕೆಯ ಸಂದರ್ಭದಲ್ಲಿ ಹೆಮ್ಮೆಯಿಂದ ಕಾರ್ಬೆಟ್ ಘೋಷಿದ. ನೈನಿತಾಲ್ ಪಟ್ಟಣದಲ್ಲಿ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರವನ್ನು ತಾಯಿ ಮೇರಿ ಕಾರ್ಬೆಟ್ ಹಾಗೂ ಮ್ಯಾಥ್ಯು ಕಂಪನಿಯ ವ್ಯವಹಾರವನ್ನು ಸಹೋದರಿ ಮ್ಯಾಗಿ ಹಾಗೂ ಮಲಸಹೋದರಿ ಮೇರಿಡೊಯಲ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಕಾರಣ, ಕಾರ್ಬೆಟ್ ಆಪ್ರಿಕಾದ ತಾಂಜೇನಿಯಾದ ಕೃಷಿ ಚಟುವಟಿಕೆಗಳತ್ತ ಗಮನ ನೀಡತೊಡಗಿದ.

ನೈನಿತಾಲ್ ಗಿರಿಧಾಮದ ಪ್ರತಿಷ್ಟಿತ ಯುರೋಪಿಯನ್ ಕುಟುಂಬಗಳಲ್ಲಿ ಕಾರ್ಬೆಟ್ ಕುಟುಂಬಕ್ಕೆ ಮಹತ್ವದ ಸ್ಥಾನವಿತ್ತು. ಅಲ್ಲಿನ ಜನ ಎಲ್ಲಾ ವ್ಯವಹಾರಗಳಿಗೆ ಕಾರ್ಬೆಟ್‌ನ ತಾಯಿ ಮೇರಿಯನ್ನು ಆಶ್ರಯಿಸುತ್ತಿದ್ದರು. ಮೇರಿ ಕಾರ್ಬೆಟ್ ಜೀವನ ಪೂರ್ತಿ ಹೋರಾಟ ನಡೆಸಿ ಬದುಕು ಕಟ್ಟಿಕೊಂಡ ಪರಿಣಾಮ ಸದಾ ತನ್ನ ಕುಟುಂಬ ಭದ್ರತೆ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮುಂದೆ ಎಂತಹದ್ದೇ ಸಂದರ್ಭಗಳಲ್ಲಿ ತಾನಾಗಲಿಗಲಿ, ಅಥವಾ ತನ್ನ ಮಕ್ಕಾಳಾಗಲಿ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಮೇರಿಯ ನಿಲುವಾಗಿತ್ತು. ಹಾಗಾಗಿ ಸಂಪಾದಿಸಿದ ಹಣಕ್ಕೆ ಮೇರಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಳು. ನೈನಿತಾಲ್ ಪಟ್ಟಣದಲ್ಲಿ ಅಷ್ಟೆಲ್ಲಾ ಆಸ್ತಿ ಇದ್ದರೂ ಕೂಡ ತನ್ನ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುತ್ತಿದ್ದಳು. ಜಿಮ್ ಕಾರ್ಬೆಟ್ ಹೊರತುಪಡಿಸಿ, ಇಡೀ ಕುಟುಂಬದ ಎಲ್ಲರೂ ಯಾವುದಕ್ಕೂ ಕೊರತೆ ಇಲ್ಲದಂತೆ ಐಷಾರಾಮದ ಬದುಕನ್ನು ರೂಢಿಸಿಕೊಂಡಿದ್ದರು. ಜಿಮ್ ಕಾರ್ಬೆಟ್ ಮಾತ್ರ ಎಂದೂ ದುಂದುವೆಚ್ಚಕ್ಕೆ ಅಥವಾ ಐಷಾರಾಮದ ಬದುಕಿಗೆ ಮನಸೋತವನಲ್ಲ. ಅವನ ಕೈಯಲ್ಲಿ ಕಾಡಿಗೆ ಶಿಕಾರಿಗೆ ತೆರಳುವ ಸಂದರ್ಭದಲ್ಲಿ ಮಾತ್ರ ರಿಸ್ಟ್ ವಾಚೊಂದು ಇರುತ್ತಿತ್ತು. ಉಳಿದಂತೆ ಸಾಧಾರಣ ಉಡುಪುಗಳಲ್ಲಿ ಇರುವುದು ಅವನ ಹವ್ಯಾಸವಾಗಿತ್ತು. ತಲೆಗೊಂದು ಹ್ಯಾಟ್ ಧರಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ರಾತ್ರಿ ಎರಡು ಪೆಗ್ ವಿಸ್ಕಿ ಮತ್ತು ದಿನಕ್ಕೆ ಇಪ್ಪತ್ತು ಸಿಗರೇಟ್ ಸೇದುವ ಹವ್ಯಾಸ, ಬೇಸರವಾದಾಗಲೆಲ್ಲಾ ಹಾಲಿಲ್ಲದ ಕಪ್ಪು ಚಹಾ ಕುಡಿಯುವ ಅಭ್ಯಾಸ ಅವನಿಗಿತ್ತು.

ಜಿಮ್ ಕಾರ್ಬೆಟ್ ಯಾವಾಗಲೂ ಅರಣ್ಯಕ್ಕೆ ಕಾಡ್ಗಿಚ್ಚು ಆವರಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚು ಚಿಂತಾಕ್ರಾಂತನಾಗುತ್ತಿದ್ದ. ಆಫ್ರಿಕಾದಲ್ಲಿ ವಿಶೇಷವಾಗಿ ಕೀನ್ಯಾ ಮತ್ತು ತಾಂಜೇನಿಯ ಕಾಡುಗಳಲ್ಲಿ ಬೇಸಿಗೆ ಸಮಯದಲ್ಲಿ ನೈಸರ್ಗಿಕವಾಗಿ ಕಾಡ್ಗಿಚ್ಚು ಆವರಿಸಿಕೊಳ್ಳುವುದನ್ನು ನೋಡಿದ್ದ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಮರಗಳ್ಳರು ಮತ್ತು ಅಕ್ರಮ ಬೇಟೆಗಾರರು ಕಾಡಿಗೆ ಬೆಂಕಿ ಇಡುವುದನ್ನು ಕಂಡು ಬಹುವಾಗಿ ನೊಂದುಕೊಳ್ಳತ್ತಿದ್ದ. ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಕಲದೊಂಗಿ ಮತ್ತು ಚೋಟಾಹಲ್ದಾನಿಯ ರೈತರನ್ನು ಕರೆದುಕೊಂಡು ಅರಣ್ಯದಲ್ಲಿ ಅಲೆದಾಡಿ ಕಾಡ್ಗಿಚ್ಚು ಆವರಿಸದಂತೆ ಎಚ್ಚರಿಕೆ ವಹಿಸುತ್ತಿದ್ದ. ಬಿದಿರು ಬೆಳೆದಿರುವ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸ್ಥಳಿಯರಿಗೆ ಕರೆ ನೀಡುತ್ತಿದ್ದ. ಇಡೀ ಕುಮಾವನ್ ಪ್ರಾಂತ್ಯದ ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇಂಜಿನಿಯರ್‌ಗಳು ವೈದ್ಯರು ಕಾರ್ಬೆಟ್‌ಗೆ ಪರಿಚತರಾಗಿದ್ದರು. ಅವರು ಭೇಟಿಯಾದಾಗಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಅವರ ಯೋಗಕ್ಷೇಮ ವಿಚಾರಿಸಿ, ಅವರ ಸೇವೆ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದ. ಮತ್ತು ವೃತ್ತಿಯಲ್ಲಿ ಇರಬೇಕಾದ ಕಾಳಜಿಗಳ ಬಗ್ಗೆ ವಿವರಿಸಿ ಹೇಳುತ್ತಿದ್ದ. ಭಾರತದ ಗೌರ್ವನ್ ಜನರಲ್‌ಗಳು. ಪ್ರಾಂತ್ಯದ ಜಿಲ್ಲಾಧಿಕಾರಿಗಳು, ಕಾರ್ಬೆಟ್‌ಗೆ ಗೆಳೆಯರಾದ ಕಾರಣ ಅಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಜಿಮ್ ಕಾರ್ಬೆಟ್ ಕುರಿತು ಭಯ ಮಿಶ್ರಿತ ಗೌರವವಿತ್ತು.

ತಾನು ವಾಸಿಸುತ್ತಿದ್ದ ನೈನಿತಾಲ್ ಗಿರಿಧಾಮದ ಪರಿಸರ ಅತಿಯಾದ ಪ್ರವಾಸಿಗರ ಭೇಟಿಯಿಂದಾಗಿ ಕಲುಷಿತವಾಗುತ್ತಿರುವುದನ್ನು ಕಂಡ ಕಾರ್ಬೆಟ್ ನಾಗರೀಕ ಸಮಿತಿಯೊಂದನ್ನು ರಚಿಸಿಕೊಂಡು, ಅದರ ರಕ್ಷಣೆಗೆ ಮುಂದಾದ. ಇದು ನಾಗರೀಕ ಸಮಿತಿಯಿಂದ ಸಾಧ್ಯವಿಲ್ಲ ಎಂಬುದನ್ನ ಮನಗಂಡಕೂಡಲೇ ಕಾರ್ಬೆಟ್ ಮತ್ತೇ ಅಲ್ಲಿನ ಪುರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವುದರ ಜೊತೆಗೆ ಉಪಾಧ್ಯಕ್ಷನ ಸ್ಥಾನ ಅಲಂಕರಿಸಿ, ನೈನಿತಾಲ್ ಪರಿಸರದ ರಕ್ಷಣೆಗೆ ಮುಂದಾದ. ಪಟ್ಟಣದ ಜನತೆ ಕುಡಿಯುವ ನೀರಿನ ಗುಣ ಮಟ್ಟ ಅಳೆಯಲು ಸಣ್ಣದೊಂದು ಪ್ರಯೋಗಾಲವೊಂದನ್ನು ನಿರ್ಮಿಸಿದ. ಮನೆಗಳಿಂದ ಹೊರಬರುವ ಕೊಳಚೆ ನೀರು ಅಲ್ಲಿನ ಸರೋವರ ಸೇರದಂತೆ ಮಾಡಲು ಪ್ರಪಥಮವಾಗಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೆ ತಂದ. ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಪಟ್ಟಣದ ರಸ್ತೆಗಳಲ್ಲಿ ಸಾಲು ಮರಗಳ ಸಸಿಗಳನ್ನು ನೆಟ್ಟು ಪೋಷಿಸಿದ. ಎಲ್ಲಾ ಧರ್ಮದ ಜನರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಮಶಾನ ಭೂಮಿಗಳನ್ನು ನಿರ್ಮಿಸಿದ. ಪಟ್ಟಣದ ಹೃದಯ ಭಾಗದಲ್ಲಿದ್ದ ನೈನಿ ಸರೋವರದ ಸುತ್ತ-ಮುತ್ತ ತಡೆಗೋಡಯನ್ನು ನಿರ್ಮಿಸಿ, ರಸ್ತೆಯ ಕೊಳಚೆ ನೀರು ಸರೋವರಕ್ಕೆ ಸೇರದಂತೆ ಮಾಡಿ, ಅಪರೂಪದ ಮಷೀರ್ ಜಾತಿಯ ಮೀನುಗಳನ್ನು ಸಾಕುವ ಯೋಜನೆಯೊಂದನ್ನು ರೂಪಿಸಿದ. ರಾತ್ರಿಯ ವೇಳೆ ಕೆಲವರು ಮೀನು ಶಿಕಾರಿಯಲ್ಲಿ ತೊಡಗಿರುವದನ್ನು ಕಂಡು, ಸರೋವರದಲ್ಲಿ  ಮೀನು ಶಿಕಾರಿ ನಿಷೇದಿಸಿದ ಕಾನೂನನ್ನು ಜಾರಿಗೆ ತಂದ.

ಅತಿ ವೇಗವಾಗಿ ಬೆಳೆಯುತ್ತಿದ್ದ ನೈನಿತಾಲ್ ಗಿರಿಧಾಮಕ್ಕೆ ಬೆಳೆವಣಿಗೆಗೆ ಕಡಿವಾಣ ಹಾಕಲು, ಸುತ್ತ ಮುತ್ತಲಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ವಸತಿ ಪ್ರದೇಶಗಳು ತಲೆ ಎತ್ತುವುದಕ್ಕೆ ಕಡಿವಾಣ ಹಾಕಿ, ಬಹುಮಹಡಿ ಕಟ್ಟಡಗಳಿಗೆ ಉತ್ತೇಜನ ನೀಡಿದ. ಕಣ್ಣೆದುರು, ವೇಗವಾಗಿ ಬೆಳೆಯುತ್ತಿರುವ ನಾಗರೀಕತೆಯಿಂದ ಅರಣ್ಯ ನಾಶವಾಗುತ್ತಿರುವುದನ್ನು ಮನಗಂಡು, ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ ಕುಮಾವನ್ ಪ್ರಾಂತ್ಯದ ಅರಣ್ಯ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾದ. ಕೆಲವೊಮ್ಮೆ ಸರ್ಕಾರದ ನಿರ್ಧಾರಗಳು ಅವನಲ್ಲಿ ಜಿಗುಪ್ಸೆ ಮೂಡಿಸುತ್ತಿದ್ದವು.

ಭಾರತದಲ್ಲಿ ಆಗ ತಾನೇ ವಿಸ್ತಾರಗೊಳ್ಳುತ್ತಿದ್ದ ರೈಲ್ವೆ ಯೋಜನೆಗಳಿಗೆ ಈಶಾನ್ಯ ರಾಜ್ಯಗಳ ಅರಣ್ಯ ಮತ್ತು ಹಿಮಾಲಯ ತಪ್ಪಲಿನ ಅರಣ್ಯ ಪ್ರದೇಶ ಬಲಿಯಾಗುತ್ತಿರುದನ್ನು ಕಂಡು ಕಾರ್ಬೆಟ್ ನೊಂದುಕೊಳ್ಳುತ್ತಿದ್ದ. ರೈಲ್ವೆ ಹಳಿಗಳ ಕೆಳಗೆ ಹಾಸಲು ವಯಸ್ಸಾದ ಸದೃಢ ಮರಗಳನ್ನು ಕಡಿದು ಹಾಕುವುದರ ಬಗ್ಗೆ ಅವನು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ. ಮರ ಕಡಿದ ಜಾಗದಲ್ಲಿ ಅತಿ ಶೀಘ್ರವಾಗಿ ಬೆಳೆಯವ ಮರಗಳನ್ನು ಬೆಳಸುವ ಸರ್ಕಾರದ ಯೋಜನೆಗಳಿಗೆ ಪ್ರತಿಭಟಿಸಿದ. ಆಯಾ ಪ್ರದೇಶದ ಬೌಗೂಳಿಕ ಲಕ್ಷಣಗಳಿಗೆ ಅನುಸಾರವಾಗಿ ಒಕ್ ಮತ್ತು ದೇವದಾರು ಮರಗಳನ್ನು ಬೆಳೆಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ. ಸರ್ಕಾರ ಮತ್ತು ಅಧಿಕಾರಿಗಳು ಅರಣ್ಯವನ್ನು ಮತ್ತು ಅಲ್ಲಿನ ಮರಗಳನ್ನು ವಾಣಿಜ್ಯ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಕಾರ್ಬೆಟ್‌ಗೆ ತೀವ್ರ ಅಸಹನೆಯಿತ್ತು. ಮರಗಳ ನಾಶದಿಂದ ಗೂಡು ಕಟ್ಟಲು ಪರಿತಪಿಸುತಿದ್ದ ಪಕ್ಷಿಗಳನ್ನು ಕಂಡಾಗ ಕಾರ್ಮೆಟ್ ತೀವ್ರವಾಗಿ ನೊಂದುಕೊಳ್ಳುತ್ತಿದ್ದ. ಒಮ್ಮೊಮ್ಮೆ ತನ್ನ ಅಂತರಂಗಕ್ಕೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡು, ಪರಿಸರ ಕುರಿತಂತೆ ತನ್ನ ನಿಲುವುಗಳಲ್ಲಿ ದ್ವಂದ್ವ ಇರುವುದನ್ನು ಕಂಡು ಮುಜುಗರ ಪಟ್ಟುಕೊಂಡ. ಇದಕ್ಕೆ ಪ್ರಾಯಸ್ಛಿತ್ತವಾಗಿ ಎಲ್ಲಾ ಬಗೆಯ ಅರಣ್ಯ ಶಿಕಾರಿಗಳಿಗೆ ತಿಲಾಂಜಲಿ ನೀಡಲು ನಿರ್ಧರಿಸಿದ.

ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟನೆಂದರೆ, ಮತ್ತೇ ರಾತ್ರಿಗೆ ಹಿಂತಿರುಗುತ್ತಿದ್ದ ಜಿಮ್ ಕಾರ್ಬೆಟ್ ತನ್ನ ವಯಸ್ಸು ಮಾಗುತ್ತಿದ್ದಂತೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಮತ್ತು ಪರಿಸರ ರಕ್ಷಿಸುವಲ್ಲಿ ಆಸಕ್ತಿ ತೋರತೊಡಗಿದ. ನೈನಿತಾಲ್ ಪಟ್ಟಣದ ರಸ್ತೆಗಳ ಅಗಲೀಕರಣಕ್ಕಾಗಿ ಸರ್ಕಾರದ ಲೋಕೋಪಯೊಗಿ ಇಲಾಖೆ ಮರಗಳನ್ನು ಕಡಿಯಲು ಮುಂದಾದಾಗ, ಪ್ರತಿಭಟಿಸಿ ತಡೆಯೊಡ್ಡಿದ. ಕಾರ್ಬೆಟ್, ರಸ್ತೆಗಾಗಿ ನೆಲಕ್ಕೆ ಉರುಳುವ ಮರಗಳ ಬದಲಾಗಿ ಅವುಗಳ ಸಂಖ್ಯೆಯ ದುಪ್ಪಟ್ಟು ಮರಗಳನ್ನು ನೆಡಲಾಗುವುದೆಂದು ಸರ್ಕಾರದಿಂದ ಆಶ್ವಾಸನೆ ಪಡೆದು ನಂತರವಷ್ಟೇ ರಸ್ತೆಯ ಅಗಲೀಕರಣಕ್ಕೆ ಅನುವು ಮಾಡಿಕೊಟ್ಟ. ಪಟ್ಟಣ ಪುರಸಭೆಯ ಹಿರಿಯ ಉಪಾಧ್ಯಕ್ಷ ಹಾಗೂ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದ ಕಾರ್ಬೆಟ್‌ನ ಕಾಳಜಿಗಳ ಬಗ್ಗೆ ಅಥವಾ ಆತನ ನಿಲುವುಗಳ ಬಗ್ಗೆ ಪ್ರಶ್ನಿಸುವ ಧೈರ್ಯ ನೈನಿತಾಲ್ ಪಟ್ಟಣ ಮಾತ್ರವಲ್ಲ, ಕುಮಾವನ್ ಪ್ರಾಂತ್ಯದಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಮತ್ತು ಪರಿಸರ ಕುರಿತು ಅಪಾರ ಕಾಳಜಿ ಬೆಳಸಿಕೊಂಡಿದ್ದ. ಕಾರ್ಬೆಟ್, ಸಾಮಾನ್ಯ ಜನತೆಗೆ ಈ ಕುರಿತು ಜಾಗೃತಿ ಮೂಡಿಸಲು ಹೊಸದೊಂದು ಯೋಜನೆಯನ್ನು ರೂಪಿಸಿದ. ಕ್ಯಾಮರಾ ಮೂಲಕ ಪ್ರಾಣಿ, ಪಕ್ಷಿಗಳ ಚಿತ್ರವನ್ನು ಸರೆಹಿಡಿದು ಅವುಗಳ ಬದುಕನ್ನು ಜನಸಾಮಾನ್ಯರಿಗೆ ವಿವರಿಸುವುದು, ಅವನ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು.

(ಮುಂದುವರಿಯುವುದು)

ಕತೆ: ನೀರು ಕಾರಣ…


-ಡಾ.ಎಸ್.ಬಿ. ಜೋಗುರ


 

*1*

ಬಿಜಾಪುರ ಜಿಲ್ಲೆಯ ಸಿಂದಗಿ ಊರಿಗೆ ಬರ ಬಂತಂದರ ಬಾಳ ಬಿರಿ ಬಂತು ಅಂತಲೇ ಅರ್ಥ. ಇಡೀ ಊರ ಅನ್ನೋದು ಬರದ ಬಿಸಿಯೊಳಗ ಬಾಡಿ ಕರ್ಲಾಗಿ ಬಿಡತ್ತಿತ್ತು. ಸೂರ್ಯ ಹುಟ್ಟೂದೇ ಊರ ಜನರನ್ನ ಸುಡಲಿಕ್ಕ ಅನ್ನೂವಂಗ ಮುಂಜುಮುಂಜಾನೆನೇ ರಾವ್ ಆಗಿ ಏರಿ ಬರತ್ತಿದ್ದ. ಹಂಗಾಗಿ ರಾತ್ರೀ ಹಗಲ ಕೂಡೇ ರಣರಣ ಅಂತಿತ್ತು. ನೀರ ಅನ್ನೂದು ತೀರಾ ಅಪರೂಪ ಆಗಿತ್ತು. ಊರಾಗಿರೋ ಬಹುತೇಕ ಬಾವಿಗೋಳು ತಳಾ ಕಂಡು ಬಿರುಕಬಿಟ್ಟಿದ್ವು. ಬಾಜಾರ ಬಾವಿ, ತೆಕ್ಕೇದ ಗಲ್ಲಿ ಬಾವಿ, ಕುರುಬರ ಕೇರಿ ಬಾವಿ, ಸಿದ್ದಲಿಂಗೇಶ್ವರ ಗುಡಿ ಬಾವಿ, ಬೀರಪ್ಪನ ಕೆರೆ ಎಲ್ಲಾ ತಳ ಕಂಡು ತಿಂಗಳಾಗಲಿಕ್ಕ ಬಂದಿತ್ತು. ತಪ್ಪಿ ಯಾವುದಾದರೂ ಬಾವಿಯೊಳಗ ಇಳದರ ಒಂದು ಸವನ ಝಳಾ ಅನ್ನೂದು ಗವ್.. ಅಂತ ಮುಖಕ್ಕ ಹೊಡೀತಿತ್ತು.

ಪಟ ಪಟ ಅಂತ ಒಳಗ ಸುತ್ತಲೂ ಕಣಕಪ್ಪಲಿ ಹಾರಾಡತಿದ್ವು. ಊರಾಗ ಅಲ್ಲಲ್ಲಿ ಹಾಕಸಿರೋ ಬೋರ್ ನೀರ ಸೈತಾ ಇನ್ನೇನು ಬಾಳ ದಿನಾ ಬರೂವಂಗಿಲ್ಲ ಯಾಕಂದರ ಅದಾಗಲೇ ಅವು ಸಣ್ಣ ಮಕ್ಕಳು ಉಚ್ಚೀ ಹೊಯ್ಯುವಂಗ ತಿಣಕಿ ಸುರೀತಿದ್ವು. ಅಂತಾ ಅಳಬುರಕಿ ಬೋರವೆಲ್ ಮುಂದೇ ನೂರಾರು ಕೊಡಾ ಪಹಳಿಯಲ್ಲಿರತಿದ್ವು. ಊರಾಗ ತಮ್ಮ ಮನೀಗಿ ಮುನಿಸಿಪಾಲ್ಟಿ ನಳಾ ತಗೋಂಡವರು ಬಾಳ ಕಡಿಮಿ. ಅವರೆಲ್ಲಾ ತಮಗೇ ಸಾಲೂದಿಲ್ಲ ಅಂತ ಹೇಳಿ ತೊಲೆಬಾಗಿಲು ಬಂದ್ ಮಾಡಿ ನೀರ ತುಂಬತ್ತಿದ್ದರು. ತಮ್ಮ ಜಾತಿಯವರು, ಸಂಬಂಧಿಗಳು ಯಾರರೇ ಬಂದರ ಅಷ್ಟೇ ಹಗೂರಕ ಬಾಗಿಲಾ ತಗದು, ಎರಡು ಕೊಡಾ ಬಿಡವರು. ಕೆಳಗಿನ ಕೇರಿ ಮಂದಿ ಅಂತೂ ಮುನಿಸಿಪಾಲ್ಟಿ ಟ್ಯಾಂಕರ್ ಮ್ಯಾಲೇ ಡಿಪೆಂಡ್ ಆಗಿದ್ದವರು.

ಅದು ಬಂದಾಗೇ.. ಇವರಿಗಿ ನೀರ ಸಿಕ್ಕಾಗೇ.. ’ಸಿಹಿ ನೀರ ಬರತೈತಿ ಅಂತ ನಂಬಕೊಂಡು ಕುಂತರ ಸತ್ತು ಹೋಗೂದಾಗತೈತಿ, ಸುಮ್ಮ ಸರ್ಕಾರಿ ದವಾಖಾನಿ ಹಿಂದ ಇರೋ ಸವಳು ಬಾವಿ ನೀರ ತಗೊಂಡು ಕುಡೀರಿ’ ಅಂತ ಕಟಕರ ಎಲ್ಲಪ್ಪ ತನ್ನ ಕೇರಿ ಮಂದೀಗಿ ತಿಳಿ ಹೇಳಿದ್ದ. ಹಿಂದಿನ ವಾರ ನೀರಿನ ಟ್ಯಾಂಕರ್ ಬರತೈತಿ ಅಂತ ಬೆಳ್ಳಬೆಳತನಕ ಟ್ಯಾಂಕರ್ ಬರೋ ದಾರಿಯೊಳಗ ಕಣ್ಣ ಹಾಸ್ಕೊಂಡು ನಿಂತರೂ ಟ್ಯಾಂಕರ್ ಬಂದಿರಲಿಲ್ಲ. ಮರುದಿನ ಇವರದೇ ಕೇರಿಯೊಳಗ ಖಾಲಿ ಟ್ಯಾಂಕರ್ ಹಾದು ಹೋಗೂ ಮುಂದ ಸಮಗಾರ ಚಿನ್ನಪ್ಪ ಓಡಿ ಬಂದು ’ಯಾಕಣ್ಣಾ ದಾವಲಸಾಬ್ ನಿನ್ನೆನೂ ಬಂದಿಲ್ಲ, ಇವತ್ತರೇ ಬರ್ತೀಯೋ ಇಲ್ಲೋ..?’ ಅಂದಾಗ ಅಂವಾ ನಕ್ಕೋಂತ ’ನಿನ್ನೆ ನೀರ ತಗೊಂಡು ಬಂದದ್ದೂ ಆಯ್ತು, ಸುರವಿದ್ದೂ ಆಯ್ತು..’ ಅಂದಾಗ ಎಲ್ಲಪ್ಪ ಗಡಬಡಿಸಿ ’ಎಲ್ಲಿ ಸುರದಿ ಮಾರಾಯಾ..? ಹಂಗ ಮಾಡಬ್ಯಾಡಪೋ.. ಪುಣ್ಯ ಬರತೈತಿ ಮನ್ಯಾಗ ಕುಡಿಲಾಕ ಒಂದು ತಂಬಗಿ ಸೈತ ನೀರಿಲ್ಲ. ನಿರ್ವಾ ಇರಲಾರದಕ ಎಲ್ಲರೂ ಆ ಸವುಳ ಬಾವಿ ನೀರ ಕುಡಿಯಾಕತ್ತೀವಿ.’ ’ನಿಮಗ ಅದರೇ ಐತಿ ಇಲ್ಲೇ ಪಕ್ಕದ ಸುಣ್ಣಳ್ಳಿಯೊಳಗ ಹನಿ ಹನಿ ನೀರಿಗೂ ಚಡಪಡಸಕತ್ತಾರ. ಒಂದು ಕೊಡಾ ನೀರಿಗಿ ಹತ್ತು ರೂಪಾಯಿ ಗೊತೈತಾ..?’ ಅಂದಾಗ ಎಲ್ಲಪ್ಪ ಮತ್ತ ಚಿನ್ನಪ್ಪ ಇಬ್ಬರೂ ಒಬ್ಬರ ಮುಖಾ ಒಬ್ಬರು ನೋಡಿ ’ನಮ್ಮ ಹತ್ತರ ಅಟ್ಟೆಲ್ಲಾ ರೊಕ್ಕಾ ಎಲ್ಲಿ ಐತಿ ಮಾರಾಯಾ..? ಹಂಗ ಮಾಡಬ್ಯಾಡ ಪುಣ್ಯ ಬರತೈತಿ. ಮೊಹರಂ ವ್ಯಾಳೆದೊಳಗ ಚಿನ್ನಪ್ಪ ಎರಡು ಚುಲೋ ಹದಾ ಇರೋ ತೊಗಲ ತಗದು ಹಲಗೀ ಮಾಡಿ ಕೊಡ್ತಾನ. ಕುಡಿಲಿಕ್ಕ ಒಂದು ಕೊಡಾ ನೀರಿದ್ದರ..?’ ’ನಿಂದೊಳ್ಳೆ ಐತಲ್ಲ ಇಡೀ ಟ್ಯಾಂಕರ ಉಲ್ಟಾ ಬಿಚ್ಚಿ ಹುಡಕದರೂ ಔಷಧಿಗೂ ಒಂದು ತಂಬಗಿ ನೀರ ಸಿಗುವಂಗಿಲ್ಲ.’ ಅಂತ ದಾವಲಸಾಬ್ ಅಂದದ್ದೇ ಎಲ್ಲಪ್ಪಗ ತುಸು ಬ್ಯಾಸರಾಗಿ

’ಶನಿವಾರಕೊಮ್ಮ ನಮ್ಮ ಕೇರಿಗಿ ಒಂದು ಟ್ಯಾಂಕರ್ ಅಂತ ಮಾತಾಗಿತ್ತು ಹೌದಿಲ್ಲೋ..?’

’ಯಾರ ಜೋಡಿ ಮಾತಾಗಿತ್ತು..?’

’ಎಮ್ಮೆಲ್ಲೆ ಶಂಕ್ರಪ್ಪನವರ ಎದುರ ಅವತ್ತ ನೀನೇ ಹುಂ ಅಂದಿದ್ದೆಲ್ಲ’

’ಈಗ ಅದೇ ಶಂಕ್ರಪ್ಪನವರೇ ಒಂದು ಟ್ಯಾಂಕರ್ ನೀರ ತಮ್ಮ ಬದನೀಗಿಡದ ತೋಟಕ್ಕ ಹಾಕಸಕೊಂಡರು ಇದಕ್ಕೇನಂತಿ..?’

’ಏನು ಅನ್ನೂದು ಮಾರಾಯಾ ದೊಡ್ಡ ಮಂದಿ ಏನರೇ ಅಂದ್ರ ನಮ್ಮನ್ನ ಕೇಳ್ತಾರಾ..? ಕುಡಿಯಾಕ ನೀರ ಕೊಟ್ಟರ ಸಾಕಾಗೈತಿ’

’ಇದನ್ನ ಅಲ್ಲಿ ಹೋಗಿ ಹೇಳು. ನನ್ನ ಮುಂದ ಹೇಳದರ ನಾ ಏನು ಮಾಡಂವ’

’ಅದೂ ಖರೆ ಐತಿ ಬಿಡಪಾ, ನೀ ಅರೇ ಏನು ಮಾಡಂವ’ ದಾವಲಸಾಬ ಟ್ಯಾಂಕರ್ ತಗೊಂಡು ಅಲ್ಲಿಂದ ನಡದ. ಎಲ್ಲಪ್ಪನ ಹೆಂಡತಿ ಹನುಮವ್ವ ದವಾಖಾನಿ ಹಿಂದಿರೋ ಸವುಳ ಬಾವಿಯಿಂದ ಒಂದು ಕೊಡಾ ನೀರ ತಗೊಂಡು ತಲಿ ಮ್ಯಾಲ ಇಟ್ಗೊಂಡು ಏನೋ ವಟವಟ ಅನ್ಕೊಂತ ಬಂದಳು. ’ನಮ್ಮ ನಸೀಬದಾಗ ಸಿಹಿ ನೀರು ಕುಡಿಯೂದು ಬರದಿಲ್ಲ, ಸುಳ್ಳೇ ಯಾರಿಗಂದು ಏನು ಮಾಡೂದೈತಿ..?’ ಅನ್ಕೊಂತ ಮನಿ ಕಡಿ ನಡದಳು. ಇವರ ಕೇರಿ ದಾಟಿ ತುಸು ಮುಂದ ಹೋದರ ಒಂದು ಲಕ್ಷ್ಮೀ ಗುಡಿ ಇತ್ತು ಅದಕ್ಕ ತಾಗಿರೋ ತ್ವಾಟಾನೇ ಎಮ್ಮೆಲ್ಲೆ ಶಂಕರಪ್ಪಂದು. ಅವರದೊಂದು ಸಿಹಿ ನೀರಿನ ಬಾವಿ ಆದರ ಈ ಕೆಳಗಿನ ಕೇರಿ ಮಂದಿ ಆ ಬಾವ್ಯಾಗ ಇಳಿಯೂವಂಗಿರಲಿಲ್ಲ. ಪಂಪ್ ಹಚ್ಚದಾಗ ಮ್ಯಾಲ ಕಾವಲಿಯೊಳಗ ನೀರ ಬೀಳೂ ಮುಂದ ಒಂದು ಕೊಡಾ ಹಿಡಕೊಂಡು ಬರೂದಿತ್ತು. ಈಗ ಆ ಬಾವಿನೂ ಬರಗಾಲದ ಹೊಡತಕ್ಕ ತಳ ಕಂಡಿತ್ತು. ಇಲೆಕ್ಷನ್ ಟೈಮದೊಳಗ ಕೆಳಗಿನ ಕೇರಿ ಮಂದಿಗಿ ನೀರ ಒಯ್ಯಲಾಕ ಅನುಕೂಲ ಆಗೂವಂಗ ಒಂದು ಸಿಮೆಂಟ್ ಟ್ಯಾಂಕ್ ಕಟ್ಟಿಸಿ ಪಂಪ್ ಹಚ್ಚಿ ಅದರೊಳಗ ನೀರ ಬೀಳೂವಂಗ ಮಾಡಿದ್ದ. ಇಲೆಕ್ಷನ್ ಮುಗದು ಕಟಾಕಟಿ ವೋಟಲ್ಲಿ ಆರಿಸಿ ಬಂದದ್ದೇ ತಡ ಮುಂದ ಒಂದು ತಿಂಗಳದೊಳಗ ಬಾವಿ ದಾರೀಗಿ ಮುಳ್ಳ ಹಚ್ಚಿಸಿಬಿಟ್ಟಿದ್ದ. ಅದೂ ಅಲ್ಲದೇ ಅಲ್ಲಿ ಇರೋ ಆಳು ಮನುಷ್ಯಾರಿಗಿ ಕೇಳಗಿನ ಕೇರಿಯವರು ಯಾರೇ ಬಂದರೂ ಒಂದು ತಂಬಗಿ ಸೈತಾ ನೀರ ಕೊಡಬ್ಯಾಡ್ರಿ ಅಂತ ಹುಕುಂ ಮಾಡಿದ್ದ. ದೆವ್ವಿನಂಥಾ ಎರಡು ನಾಯಿಗಳನ್ನ ಯಾವಾಗಲೂ ಬಿಚ್ಚೇ ಇಟ್ಟಿರತಿದ್ದ. ಹೀಂಗಾಗಿ ಯಾವ ನರಪಿಳ್ಳೆನೂ ಆ ಎಮ್ಮೆಲ್ಲೆ ತೋಟದ ಸಮೀಪ ಸೈತ ಹೋಗುವಂಗಿರಲಿಲ್ಲ.

      *2*

ಈ ಪರಿ ಕುಡಿಯೂ ನೀರಿಗಿ ಸಿಂದಗಿಯೊಳಗ ಎಂದೂ ಹಾಹಾಕಾರ ಆಗಿರಲಿಲ್ಲ. ಇದು ಯಾಕ ಹೀಂಗ..? ಅಂತ ವೀರಭದ್ರ ದೇವರ ಗುಡಿ ಪೂಜಾರಿ ಸ್ವಾಮಿ ಚಂಡ್ರಯ್ಯನ್ನ ಕೇಳಿದ್ದೇ ಅಂವಾ ಹಿಂದಿನ ವರ್ಷ ಮಹಾನವಮಿ ವ್ಯಾಳೆದೊಳಗ ದೇವಿ ಕೂಡಸಲಿಲ್ಲ, ಅದಕ್ಕೇ ಅಕಿ ಶಾಪ ಕೊಟ್ಟಾಳ ಅಂದಾಗ, ಸಿಂದಗಿ ಬಿಡು, ಸುತ್ತ ಮುತ್ತಲ್ಲಿನ ಹಳ್ಳಿಗೋಳು ಏನು ಪಾಪಾ ಮಾಡಿದ್ವು..? ಅಂತ ಮರು ಪ್ರಶ್ನೆ ಮಾಡಿದ್ದಕ ಸ್ವಾಮಿ ಚಂಡ್ರಯ್ಯ ತನ್ನ ಮೈಯಾಗೇ ದೇವರು ಬಂದವರಂಗ ಕಣ್ಣು ಕೆಂಪಗ ಮಾಡಕೊಂಡು, ಸೂಳಿ ಪಾಪ ಸನ್ಯಾಸಿಗಿ ಅಂತ ಕೇಳಿರಿಲ್ಲೋ.. ಅಂದಿದ್ದ. ಖರೆ ಹಕೀಕತ್ ಏನಂದ್ರ ದೇವಿ ಕೂಡಸದಾಗ ಆ ಒಂಬತ್ತು ದಿನ ಸ್ವಾಮಿ ಸಂಪಾಗಿರತಿದ್ದ. ಅದು ತಪ್ಪತಲ್ಲ.. ಅನ್ನೋ ತಾಪದಿಂದಾಗಿ ಹಂಗ ಹೇಳತಿದ್ದ. ಹಿಂದೊಮ್ಮ ಈ ಚಂಡ್ರಯ್ಯ ಗುಡಿ ಹಿಂದಿನ ಗವಿಯೊಳಗ ಹಗಲ ಹೊತ್ತಿನೊಳಗೇ ಮದರಿ ಸಂಗಣ್ಣನ ಹೆಂಡತಿನ್ನ ಗಟ್ಟಿ ಆಗಿ ಹಿಡಕೊಂಡು ಬಿಟ್ಟಿದ್ದ. ಆ ಹೆಂಗಸು ಜೋರಾಗಿ ಲಬೊಲಬೊ ಅಂತ ಹೊಯ್ಕೊಂಡ ಮ್ಯಾಲ ಮಂದಿ ಸೇರಿದ್ದೇ ತಡ ಚಂಡ್ರಯ್ಯ ಒಂದು ಸವನ ಜೋಲೀ ಹೊಡ್ಯಾಕ ಶುರು ಮಾಡಿದ್ದೇ ಅಲ್ಲಿ ನೆರೆದವರೆಲ್ಲಾ ಅಜ್ಜನ ಮೈಯಾಗ ದೇವರ ಬಂದೈತಿ ಅಂತ ಹತ್ತು ತೆಂಗಿನಕಾಯಿ ಒಡದಿಂದ ಚಂಡ್ರಯ್ಯ ಶಾಂತ ಆಗಿದ್ದ. ಎಲ್ಲಾ ದೇವರ ಮ್ಯಾಲ ಹಾಕೊಂಡು ಸ್ವಾಮಿ ಅರಾಮಾಗಿದ್ದ. ಇಂಥಾ ಸ್ವಾಮಿ ಗುಡಿ ಪೂಜಾರಕಿ ಮಾಡಾಕತ್ತೇ ಇಪ್ಪತ್ತು ವರ್ಷದ ಮ್ಯಾಲಾಗಿತ್ತು. ಉಪಜೀವನಕ ಅಂತ ಎರಡೆಕರೆ ಗುಡಿ ಹಿಂದಿನ ಜಾಗಾ ಈ ಚಂಡ್ರಯ್ಯಗ ಬಿಟ್ಟುಕೊಟ್ಟಿದ್ದರು. ಅಂವಾ ಅದನ್ನ ಎಮ್ಮೆಲ್ಲೆ ಶಂಕ್ರಪ್ಪನ್ನ ಹಿಡಕೊಂಡು ಎನ್ನೇ ಮಾಡಸಿ ಸೈಟ್ ಮಾಡಿ ಕೋಟಿಗಟ್ಟಲೆ ದುಡ್ಡ ಮಾಡಕೊಂಡು ಕೊರಳಾಗ ಎರಡು ತೊಲಿ ಬಂಗಾರ ಚೈನ, ಕೈಯಾಗ ಎರಡು ಬೆರಳಿಗಿ ಒಂದೊಂದು ತೊಲಿ ಉಂಗುರ ಹಾಕೊಂಡು ಗುಡಿಯಿಂದ ಮನಿಗಿ ಓಡ್ಯಾಡಲಿಕ್ಕ ಒಂದು ಕಾರು, ಅದಕ್ಕೊಬ್ಬ ಡ್ರೈವರ್ ಇಟಗೊಂಡು ಬೇಷ ಗಾಂವಾಗಿದ್ದ. ಈ ಸ್ವಾಮಿಗಿ ಕುಡಿಯೂ ನೀರಿಂದು ಯಾವ ತೊಂದರೆನೂ ಇರಲಿಲ್ಲ. ಮನ್ಯಾಗೇ ಒಂದು ಬೋರ್ ಹಾಕಸಿದ್ದ. ನೀರೂ ಚುಲೋ ಬಿದ್ದಿತ್ತು. ತನ್ನ ಮನಿಗಿ ಬೇಕಾದಷ್ಟು ನೀರು ಇಂಥಾ ಬರಗಾಲದೊಳಗೂ ಆ ಬೋರ್ ಹರಸತಿತ್ತು. ತನಗ ಸಾಕಾದ ಮ್ಯಾಲ ಹಿಂದಿನ ಬಾಗಿಲಾ ತಗದು ಒಂದು ಟ್ರಿಪ್‌ಗೆ ಐದು ನೂರು ರೂಪಾಯಿಯಂಗ ಉಡುಪಿ ಹೊಟೇಲಿಗೆ ನೀರ ಮಾರತ್ತಿದ್ದ. ಊರಾಗಿನ ಮಂದಿ ಅಂವಾ ಹೊಂಟರ ಸಾಕು ನೀರು ಮಾರೋ ಪೂಜಾರಿ ಹೊಂಟಾನೋಡು ಅಂತ ಅವನ ಕಿವಿಗಿ ಬೀಳೂವಂಗ ಹೇಳದ ಮ್ಯಾಲೂ ಅಂವಾ ತಲಿ ಕೆಡಸಕೋತಿರಲಿಲ್ಲ. ಅದಕೂ ದೇವರ ಆಜ್ಞೆ ಆಗೇದ ಅಂತಿದ್ದ. ಒಂದು ಕಡಿ ಎಮ್ಮೆಲ್ಲೆ ಇನ್ನೊಂದು ಕಡಿ ಈ ಪೂಜಾರಿ ಮತ್ತ ಊರಾಗಿನ ಒಂದಿಷ್ಟು ಅಂಗಡಿಕಾರರು ಬಿಟ್ಟರ ಇಡೀ ಊರಿಗೂರೇ ನೀರಿಗಾಗಿ ಹಪಾಪಿತನ ಮಾಡತಿತ್ತು. ಇದೇ ಎಮ್ಮೆಲ್ಲೆ ಇಲೆಕ್ಷನಕ ನಿಲ್ಲೂ ಮೊದಲ ಪ್ರತಿ ಹಳ್ಳಿಯೊಳಗೂ ನಿಮ್ಮ ಊರಿಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಾಡಸೇ ಮಾಡಸ್ತೀನಿ ಅಂತ ಆಶ್ವಾಸನೆ ಕೊಡಕೊಂತ ಬಂದಿದ್ದ. ಈಗ ನೋಡದರ ಕೆಳಗಿನ ಕೇರಿಗಿ ಹೋಗೂ ನೀರ ಸೈತ ಇವನ ಒಡ್ಡಲಕ ಸಾಲದಂಗ ಆಗಿತ್ತು. ಇವನ ಮನ್ಯಾಗ ನೀರ ತುಂಬಕೊಂಡ ಮ್ಯಾಲ ಹೆಚ್ಚಾಗಿ ಅದನ್ನ ಮನಿ ಮುಂದಿನ ಗಾರ್ಡನಕ ಬಿಡತ್ತಿದ್ದರು. ಆ ಪೈಪಿನಿಂದ ದಬದಬಾ ಅಂತ ನೀರು ಹರದು ಹೋಗೂದನ್ನ ಆಜೂ ಬಾಜೂ ಮನಿಯವರು ಬಾಯಿ ಬೆಳ್ಳಗ ಮಾಡಕೊಂಡು ನಿಂತು ನೋಡತಿದ್ದರು. ಒಬ್ಬರಿಗೂ ಒಂದೆರಡು ಕೊಡಾ ನೀರ ಬೇಕಾದರ ತಗೊಂಡು ಹೋಗರಿ ಅಂದಂವಲ್ಲ. ಅವನ ಮನ್ಯಾಗ ಅಡುಗೆ ಕೆಲಸಾ ಮಾಡೊ ಶಿವರಾಯಗೂ ಎರಡು ಕೊಡಾ ಕೊಡಂವಲ್ಲ. ನಿಮ್ಮ ಓಣಿಯೊಳಗ ಇವತ್ತ ಟ್ಯಾಂಕರ ಬರ್ತೈತಿ ಅಂತ ಸ್ಟೈಲಾಗಿ ಹೇಳತಿದ್ದ. ಹಂಗ ಎಮ್ಮೆಲ್ಲೆ ಹೇಳೂ ಮುಂದ ಶಿವರಾಯ ಬಾಯಿ ಒಣಗಿಸಿಕೊಂಡು ಗಾರ್ಡನ್‌ಗೆ ಹರಿದುಹೋಗೋ ನೀರ ನೋಡತಿದ್ದ. ಶಿವರಾಯ ಅವನ ಹೆಂಡತಿ ಮತ್ತ ಮಕ್ಕಳು ಎಲ್ಲರೂ ಶಂಕ್ರಪ್ಪಗೇ ವೋಟ್ ಹಾಕಿದ್ದರು. ಆವಾಗಿದ್ದ ಶಂಕ್ರಪ್ಪೋರು ಈಗಿಲ್ಲ ಅಂತ ಖುದ್ದ ಶಿವರಾಯನೇ ತನಗ ಪರಿಚಯ ಇರೋ ಬಾಳ ಮಂದಿ ಮುಂದ ಹೇಳಿರೂದಿತ್ತು. ಎಮ್ಮೆಲ್ಲೆ ಚೇಲಾ ಶ್ರೀಕಾಂತ ಒಂದು ದಿವಸ ನಿಮ್ಮ ಮನ್ಯಾಗ ಅಡುಗೆ ಮಾಡೊ ಶಿವರಾಯ ನಿಮ್ಮ ಬಗ್ಗೆ ಊರಾಗ ಇಲ್ಲದೊಂದು ಸುಳ್ಳದೊಂದು ಹೇಳಿ ನಿಮ್ಮ ವಾಹಿನಿ ಕೆಡಸಾಕತ್ತಾನ ಅಂದದ್ದೇ ಅವತ್ತೇ ಹಿಂದ ಮುಂದ ಯೋಚನೆ ಮಾಡದೇ ಶಿವರಾಯನನ್ನ ಕೆಲಸದಿಂದ ತಗದಿದ್ದ. ಶಿವರಾಯ ಎಮ್ಮೆಲ್ಲೆ ಮನೆ ಎದುರಿರೋ ವೀರಭದ್ರೇಶ್ವರ ಖಾನಾವಳಿಯೊಳಗ ಕೆಲಸಕ್ಕ ಸೇರಿದ್ದ. ಮನಿಗಿ ಹೋಗೂ ಮುಂದ ಆ ಖಾನಾವಳಿಯೊಳಗಿಂದೇ ಒಂದು ಕೊಡಾ ನೀರ ತಗೊಂಡು ಹೋಗತ್ತಿದ್ದ. ಹಂಗ ಹೋಗೂಮುಂದ ಬೇಕಂತ ಹೇಳಿ ಎಮ್ಮೆಲ್ಲೆ ಮನಿ ಕಡಿ ನೋಡಿ, ಆ ನೀರ ಕೊಡಾ ಹೆಗಲಮ್ಯಾಲ ಇಟ್ಗೊಂಡು ಗತ್ತಿನ್ಯಾಗ ನಡೀತಿದ್ದ. ತುಸು ಭುಜ ಕುಣಿಸಿ ಆ ಕೊಡಾ ನೀರ ತುಂಬಿದ್ದೈತಿ ಅಂತ ತುಸು ನೀರ ತುಳುಕಿಸಿ ತೋರಸತಿದ್ದ. ಸಿಂದಗಿಯೊಳಗ ಆ ವರ್ಷ ಬಾಳ ದೊಡ್ಡ ಬರಗಾಲ. ಒಂದು ಕೊಡಾ ನೀರಿದ್ದರ ಅವರು ಬಾಳ ಶ್ರೀಮಂತರು ಅನ್ನೂವಂಗ ಪರಿಸ್ಥಿತಿ ಇತ್ತು. ಈ ಬರಗಾಲಕ ಎದಿ ಕೊಟ್ಟು ಬದುಕು ಮಾಡೂದು ನೀಗಲಾರದ ಮಂದಿ ರತ್ನಾಗಿರಿ, ಗೋವಾ ಕಡೆಗೆ ಕೂಸು-ಕುನ್ನಿ ಕಟಗೊಂಡು ಗುಳೆ ಹೋಗಿದ್ದರು.

 *3*

ಕೆಳಗಿನ ಕೇರಿಯೊಳಗ ಜನರಿಗೆ ಕುಡಿಲಿಕ್ಕ ಚುಲೊ ನೀರ ಸಿಗಲಾರದಕ್ಕ ಮನಿಗೊಬ್ಬರು ಜಡ್ಡ ಬಂದು ಬೀಳೂವಂಗಾಯ್ತು. ಸರ್ಕಾರಿ ದವಾಖಾನಿ ಹಿಂದಿರೋ ನೀರು ಬರೀ ಸವಳು ಅಷ್ಟೇ ಅಲ್ಲ, ಬಾಳ ಹೊಲಸ ನೀರು. ಅದನ್ನ ಕಾಯಿಸಿ ಆರಿಸಿಕೊಂಡೂ ಕುಡಿಯುವಂಗಿರಲಿಲ್ಲ. ದನಕರುಗಳು ಸೈತಾ ಕುಡೀಲಾಕ ಹಿಂದಾಮುಂದ ನೋಡತಿದ್ವು. ಮೊದಲ ವಾರಕ್ಕೊಮ್ಮರೆ ಚುಲೊ ಕುಡಿಯುವ ನೀರ ಬರತಿತ್ತು ಈಗ ಅದೂ ಇಲ್ಲ. ಟ್ಯಾಂಕರ್ ಕೆಳಗಿನ ಕೇರಿಯೊಳಗ ಬರೂದೇನೋ ಹೌದು, ಆದರ ಖಾಲಿ ಆಗಿ. ತುಂಬಿದ ಟ್ಯಾಂಕರ್ ಸೀದಾ ಎಮ್ಮೆಲ್ಲೆ ತೋಟಕ್ಕ ಹೋಗಿ ಖಾಲಿ ಆಗ ತಿರುಗಿ ಬರತಿತ್ತು. ಕೆಳಗಿನ ಕೇರಿ ತಳವಾರ ತುಳಜಪ್ಪ ಎಮ್ಮೆಲ್ಲೆ ಹೊಲದೊಳಗೇ ಕೆಲಸಾ ಮಾಡತಿದ್ದ ಅನ್ನೂ ಕಾರಣಕ್ಕ ಒಂದೆರಡು ಕೊಡಾ ಚುಲೊ ಕುಡಿಯೂ ನೀರ ಸಿಗತಿದ್ವು. ಹೀಂಗಾಗಿ ಓಣಿಯೊಳಗಿನ ಎಲ್ಲಾ ಮಂದಿ ತುಳಜಪ್ಪನ ಮನಿ ಮುಂದ ಜಡ್ಡಿನವರ ಸಲಾಗಿ ಒಂದು ಗ್ಲಾಸ ಚುಲೊ ನೀರಿಗಾಗಿ ಗುಂಪಾಗಿ ನಿಲ್ಲತಿದ್ದರು. ಆ ತುಳಜಪ್ಪನ ಅಣ್ಣ ಪರಸಪ್ಪ ಜಡ್ಡ ಬಂದು ಹಾಸಗಿ ಹಿಡದು ತಿಂಗಳಾಗಿತ್ತು. ಅವನಿಗಿ ಕುಡಿಲಿಕ್ಕ ಸಿಹಿ ನೀರೇ ಬೇಕು. ತಪ್ಪಿ ಏನಾರೆ ಅವನಿಗಿ ಆ ದವಾಖಾನಿ ಹಿಂದಿನ ಸವಳು ಬಾವಿ ನೀರ ಕೊಟ್ಟರ ಅವನ ಕಥಿ ಮುಗದಂಗೇ ಅಂತ ಡಾಕ್ಟರು ಹೇಳಿದ್ದರು. ಹೀಂಗಾಗಿ ಪರಸಪ್ಪನ ಮಗಳು ರುಕುಮಿ ಕೊಡಾ ತಗೊಂಡು ಟ್ಯಾಂಕರ್ ಬಂದಿದ್ದೇ ತಡ ಎಮ್ಮೆಲ್ಲೆ ತೋಟದ ಕಡಿ ಬರತಿದ್ದಳು. ದಾವಲಸಾಬ ಓಡಿಬಂದು ಅಕಿ ಕೈಯಾಗಿನ ಕೊಡಾ ಇಸಕೊಂಡು ಒಂದು ಕೊಡಾ ನೀರು ತುಂಬಿ ಕೊಟ್ಟು, ಆ ಕೊಡಾ ತೋಟದ ಬಾಂದಾ ದಾಟೂಮಟ ತಾನೇ ಹೊತಗೊಂಡು ಅಕಿನ್ನ ಕಳಿಸಿಕೊಡತಿದ್ದ. ಹಿಂಗ ನೀರ ಕೊಟ್ಟು ಕಳಿಸೂಮುಂದ ಕಬ್ಬಿನ ತೋಟದೊಳಗ ಅಕಿನ್ನ ಕರಕೊಂಡು ಹೋಗಿ ತುಸು ಹೊತ್ತಿನ ಮ್ಯಾಲ ತಿರುಗಿ ಬರತಿದ್ದ. ರುಕುಮಿ ತನ್ನ ಸೀರಿ ಸರಿ ಮಾಡ್ಕೊಂತ, ಹಂಗೇ ಹಲ್ ಕಿಸ್ಕೊಂತ ಹೊಳ್ಳಿ ನೊಡ್ಕೊಂತ ಹೋಗತಿದ್ದಳು. ತುಳಜಪ್ಪಗ ಅವರಿಬ್ಬರೂ ಕಬ್ಬಿನ ಗದ್ದಿಯೊಳಗ ಹೋಗೂದು ನೋಡಿ ಎದಿಯೊಳಗ ಮುಳ್ಳು ಚುಚ್ಚದಂಗ ಆಗತಿತ್ತು ದಾವಲಸಾಬ  ನಕ್ಕೊಂತ ತುಳಜಪ್ಪ ಮಾಂವಾ ಅಂದಾಗಂತೂ ಅಂವಗ ಮತ್ತೂ ಸಿಟ್ಟ ಬರತಿತ್ತು. ಆದರ ಆ ಸಿಟ್ಟು ದವಡೀ ಬಿಟ್ಟು ಕೆಳಗ ಇಳಿಯೂವಂಗಿಲ್ಲ ಅಂತ ದಾವಲಸಬಗ ಗೊತ್ತಿತ್ತು.

ಅವತ್ತ ಲಕ್ಕಮ್ಮನ ಗುಡಿಯೊಳಗ ಕೆಳಗಿನ ಕೇರಿ ಮಂದಿ ಎಲ್ಲಾ ಕುತಗೊಂಡು ನೀರಿಂದು ತಮ್ಮ ಕೇರಿಗಿ ಹಿಂಗೇ ಆದರ ಹ್ಯಾಂಗ..? ನಾವೂ ಎಟ್ಟೇ ಆಗಲಿ ಇದೇ ಊರವರು.. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನೂ..? ತಿನ್ನಾಕ ಇಲ್ಲಾಂದ್ರ ನಡೀತೈತಿ ಕುಡಿಲಕ್ಕ ನೀರೇ ಇಲ್ಲಾಂದ್ರ ಹ್ಯಾಂಗ? ಅಂತ ಕಟಕರ ಎಲ್ಲಪ್ಪ, ಸಮಗಾರ ಚಿನ್ನಪ್ಪ, ಬ್ಯಾಡರ ಎಂಕಣ್ಣ, ತಳವಾರ ಮುದುಕಪ್ಪ ಎಲ್ಲರೂ ಅಲ್ಲಿ ಸೇರಿ ಮಾತಾಡತಿದ್ದರು. ಅವರೆಲ್ಲರ ನಡುವ ಚಕಮುಕಳಿ ಹಾಕೊಂಡು ಮುನಿಸಿಪಾಲ್ಟಿ ಮೇಂಬರ್ ಮಾದರ ಯಮನಪ್ಪ ಕುಂತಿದ್ದ. ಎಲ್ಲರೂ ಕೂಡಿ ಅಂವಗೇ ಬೆನ್ನಿಗಿ ಬಿದ್ದರು. ಏನರೇ ಮಾಡಿ ಒಂದು ಗತಿ ಕಾಣಸಬೇಕು. ಕೂಸು-ಕುನ್ನಿ ಇರೋ ಬಾಣತೇರಿಗಿ, ಜಡ್ಡು ಜಾಪತ್ರಿ ಇರೋ ವಯಸ್ಸಾದವರಗಿ ಆ ಸವಳು ನೀರು ಕುಡಿಲಿಕ್ಕ ಆಗಲ್ಲ, ಈಗ ಆ ಬಾವಿ ನೀರು ಮತ್ತೂ ಹೊಲಸ ಆಗೈತಿ. ನಾವೇನು ಮತ್ತಮತ್ತೊಂದು ಏನಾರೇ ಕೇಳಾಕತ್ತೀವಾ.? ಕುಡಿಲಾಕ ಚುಲೋ ನೀರು, ಉಳಿದ ಕೇರಿಗಳಿಗೆಲ್ಲಾ ಟ್ಯಾಂಕರ್ ಮೂಲಕ ಹಾಕೋ ನೀರೇ ನಾವೂ ಕೇಳೂದು. ಹಿಂಗೆಲ್ಲಾ ತಲಿಗೊಬ್ಬರು ಮಾತಾಡದ ಮ್ಯಾಲ ಯಮನಪ್ಪ ’ಇವತ್ತ ಎಮ್ಮೆಲ್ಲೆ ಅವರ ಮನಿಕಡಿ ಹೋಗೂಣು. ಹಕೀಕತ್ ಹೇಳೋಣ ಅಟ್ಟಾಗಿನೂ ಏನೂ ಪರಿಹಾರ ಸಿಗಲಿಲ್ಲ ಅಂದ್ರ ಹೋರಾಟ ಮಾಡೋಣ’ ಎಂದೆಲ್ಲಾ ಯಮನಪ್ಪ ಹೇಳಿ, ಎಮ್ಮೆಲ್ಲೆ ಮನಿಗಿ ಒಂದು ಪೋನ್ ಮಾಡಿ ಅವರು ಸಂಜೀ ಮುಂದ ಮನ್ಯಾಗ ಇರ್ತಾರೋ ಇಲ್ಲೋ ಅಂತ ಖಾತ್ರಿ ಮಾಡಿಕೊಂಡ. ’ಯಾರಾರು ಹೋಗೂದು ಅಂತ ಮೊದಲೇ ಪ್ಲ್ಯಾನ್ ಮಾಡಕೋರಿ, ಅಲ್ಲಿ ತಲಿಗೊಂದು ಮಾತಾಡಬ್ಯಾಡ್ರಿ, ಯಾರರೇ ಒಬ್ಬರು ಹಿರೇರು ಮಾತಾಡ್ರಿ. ಕುಡಿಯೂ ನೀರಿಂದು ಬಿಟ್ಟು ಬ್ಯಾರೇ ಏನೂ ಮಾತಾಡಬ್ಯಾಡ್ರಿ. ಅವರು ಏನರೆ ಸಿಟ್ಟೀಲೇ ಎರಡು ಮಾತು ಅಂದರೂನೂ ಅದನ್ನ ಯಾರೂ ಸೀರಿಯಸ್ ಆಗಿ ತಗೊಬ್ಯಾಡ್ರಿ’ ಎಂದೆಲ್ಲಾ ಯಮನಪ್ಪ ಅವರಿಗೆ ಹೇಳಿ ಹೋಗೂ ಟೈಮನ್ನ ಫಿಕ್ಸ್ ಮಾಡಿದ್ದ.

ಎಲ್ಲಪ್ಪ, ಚಿನ್ನಪ್ಪ, ಮುದುಕಪ್ಪ, ಸತ್ತೆಪ್ಪ ಒಟ್ಟ ಹತ್ತಿಪ್ಪತ್ತು ಮಂದಿ ಕೂಡಿ ಎಮ್ಮೆಲ್ಲೆ ಮನಿಗಿ ನಡದರು. ಎಲ್ಲಪ್ಪ ಪಟಕಾ ಸುತಗೊಂಡು ಇದ್ದವರೊಳಗೇ ತುಸು ನೇಟಾಗಿದ್ದ. ಚಿನ್ನಪ್ಪ ಹೊಸಾ ಗಡ್ಡೀ ಮೆಟ್ಟ ಹಾಕೊಂಡು ಹಣಿ ಮ್ಯಾಲ ಕುಂಕುಮ ಇಟಗೊಂಡು ಕೊರಳಾಗ ಒಂದು ತಾಯತ ಕಟಗೊಂಡು ಲಟ್ಟಾ ಹೆಜ್ಜೀ ಹಾಕತಾ ನಡದಿದ್ದ. ಇವರು ಬರೂದು ಮೊದಲೇ ಗೊತ್ತಿತ್ತು. ಹಿಂಗಾಗಿ ಎಮ್ಮೆಲ್ಲೆ ಪಿ.ಎ. ಇವರನ್ನೆಲ್ಲಾ ಆ ಗಾರ್ಡನ್ ಬಾಜೂ ಇರೋ ಬಯಲು ಜಾಗದೊಳಗ ಕುತಗೊಳಿಕ್ಕ ಹೇಳದ. ಮುನ್ಸೀಪಾಲ್ಟಿ ಮೇಂಬರ್ ಯಮನಪ್ಪನರೇ ಕರೀತಾರ ಅಂದರ ಅವನ್ನೂ ಅಲ್ಲೇ ಕೂಡಾಕ ಹೇಳದರು. ’ಎಮ್ಮೆಲ್ಲೆ ಯವರು ಈಗ ಸದ್ಯ ಬರ್ತಾರ’ ಅಂತ ಹೇಳಿ ಹೋದ ಪಿ.ಎ. ಬರಲಿಕ್ಕೇ ಒಂದು ತಾಸು ಐತು. ಒಂದೂವರೆ ತಾಸು ಹಂಗ ಅಲ್ಲಿ ಕೈದ ಮ್ಯಾಲ ಎಮ್ಮೆಲ್ಲೆಯವರ ಮುಖದರ್ಶನವಾಯಿತು. ಎಲ್ಲರೂ ಅವರು ಬಂದದ್ದೇ ಎದ್ದು ನಿಂತು ಬಾಗಿ ನಮಸ್ಕಾರ ಮಾಡದರು. ’ಊರಿನಿಂದ ಸಂಬಂಧಿಗಳು ಬಂದಾರ ಹಿಂಗಾಗಿ ತಡಾ ಐತು, ಏನು ಯಮನಪ್ಪ ಅರಾಮ ಇದಿಯಾ..? ಪೂರ್ತಿ ಠೋಳಿನೇ ಕರಕೊಂಡು ಬಂದೀಯಲ್ಲ..? ಏನು ವಿಶೇಷ’ ಅಂತಾ ಇದ್ದಂಗೆ ಯಮನಪ್ಪನ ಬಾಯಿ ಹಿ..ಹಿ..ಹಿ.. ಅಂತ ಕಿಸಬಾಯಿ ಆಗಿತ್ತು. ’ಸಾಯಿಬರ, ಎಲ್ಲಾ ನಿಮಗ ಗೊತ್ತಿದ್ದಿದ್ದೇ ಐತಿ. ಅದೇ ಕುಡಿಯುವ ನೀರು..’ ಅಂತಾ ಇದ್ದಂಗೆ ಎಮ್ಮೆಲ್ಲೆ ’ನಾ ಏನು ಮಾಡಲಿ ಹೇಳು, ನಿಮ್ಮ ಕೇರಿ ಮಂದಿ ಯಾರೂ ನನಗ ವೋಟು ಕೊಟ್ಟಿಲ್ಲ. ನಮ್ಮ ಮಂದಿ ನನ್ನ ಕೈ ಬಿಡಲಿಲ್ಲ ಅಂತ ನಾ ಆರಿಸಿ ಬಂದೆ.’ ಅಂದಾಗ ಎಲ್ಲಪ್ಪ ಎದ್ದು ನಿಂತು ’ಸಾಯಿಬರ ನಾವು ನಿಮಗ ವೋಟು ಕೊಟ್ಟಿಲ್ಲ ಅಂತ ಹ್ಯಾಂಗ ಅಂತೀರಿ..?’

’ವೋಟ್ ಕೊಟ್ಟೀನಿ ಅಂತ ನೀ ಹ್ಯಾಂಗ ಅಂತೀದಿ..?’

‘……………’

’ಏನೋ ತಪ್ಪಾಗೈತಿ, ಇದೊಂದು ಸಾರಿ ಹೊಟ್ಯಾಗ ಹಾಕೊರಿ’

’ನೋಡು ಯಮನಪ್ಪ, ನಂದೇ ಜನರಿಗಿ ನನಗ ನೀರ ಕೊಡಾಕ ಆಗಾಕತ್ತಿಲ’

’ಯಪ್ಪಾ ನಾವೂ ನಿಮ್ಮ ಊರವರೇ.. ನಿಮದೇ ಜನ.. ಬಾರೀಕಾಲ ನಿಮ್ಮ ಸೇವಾ ಮಾಡಕೊಂಡೇ ಬಂದೀವಿ’

’ನೋಡೊಣ.. ನಾನು ಚೀಫ್ ಆಫೀಸರ್ ಜೋಡಿ ಮಾತಾಡ್ತೀನಿ’

’ಪುಣ್ಯಾ ಕಟಗೊರಿ ಯಪಾ’

’ನೋಡಮ್ಮು ನಾ ಹೇಳಿ ಕಳ್ಸೂತನ ಮತ್ತ ಹಿಂಗ ಬರಬ್ಯಾಡ್ರಿ’ ಅಂತ ಮನಿ ಒಳಗ ನಡದ. ಇವರೂ ಅಲ್ಲಿಂದ ಜಾಗಾ ಖಾಲಿ ಮಾಡದರು.

    *4*

ಅವತ್ತು ಶನಿವಾರ ಮಟ ಮಟ ಮಧ್ಯಾಹ್ನ. ಹನುಮಂತ ದೇವರ ಗುಡಿ ಮುಂದಿನ ಮುನಸೀಪಾಲ್ಟಿ ನಳಾ ಬರೂದಿತ್ತು. ಕುಂಟೋಜಿ ಗುರಲಿಂಗನ ಚಾದ ಅಂಗಡಿ ಹಿಡದು ಇತ್ಲಾಗ  ಸುತಾರ ವೆಂಕೋಬನ ಬೀಡಿ ಅಂಗಡಿ ಮಟ ಕೊಡಾ ಪಾಳಿಗಿದ್ವು. ಪ್ರತಿ ಶನಿವಾರಕೊಮ್ಮ ನೀರ ಬಿಡತಿದ್ದರು. ಒಂದು ಮನಿಗಿ ಎರಡು ಕೊಡದ ಲೆಕ್ಕದಂಗ ಸಾವಿರಾರು ಕೊಡಾ ಅಲ್ಲಿ ಸಾಲಾಗಿ ನಿಂತಿದ್ವು. ಹಿಂಗ ಪಾಳಿಗಿರೋ ಕೊಡಾ ಹಿಂದಾ ಮುಂದ ಆಗಬಾರದು ಅಂತ ಮನ್ಯಾಗಿರೋ ಚುಕ್ಕೋಳನ್ನ ಅಲ್ಲಿ ನೋಡಲಿಕ್ಕ ನಿಲ್ಲಸತಿದ್ದರು. ನಳಾ ಸುಯ್.. ಅಂತ ಹವಾ ಬಿಡಾಕ ಸುರು ಆಗಿದ್ದೇ ಅಲ್ಲಿ ಪಾಳೇಕ ನಿಂತಗೊಂಡಿರೋ ಹುಡುಗರು ಓಡಿ ಹೋಗಿ ನೀರ ಬರೂದೈತಿ ನಳಾ ಹವಾ ಬಿಡಾಕತೈತಿ ಅಂತ ಡಂಗುರ ಸಾರಿ ಬರತಿದ್ದರು. ಇನ್ನೇನು ನಳಾ ಬರೂದೈತಿ.. ಅನ್ನೂದೇ ತಡ, ಓಣ್ಯಾಗಿನ ಹೆಂಗಸರೆಲ್ಲಾ ಓಡಿ ಬರತಿದ್ದರು. ಕೆಲವರಂತೂ ಅವರು ಮನ್ಯಾಗ ಯಾವ ಸ್ಥಿತಿಯೊಳಗ ಇದ್ದರೋ ಅದೇ ಸ್ಥಿತಿಯೊಳಗ ಎದ್ದು ಬರತಿದ್ದರು. ಹಿಂಗಾಗಿ ದಾರಿಯೊಳಗೇ ತಲಿಗೂದಲ ಸರಿ ಮಾಡಕೊಂತ, ತುರಬಾ ಬಿಕ್ಕೋಂತ ಧಾವಿಸಿ ಬರತಿದ್ದರು. ಒಂದು ಸಾರಿ ನಳಾ ಬಂತಂದರ ಆ ನಳದ ಸುತ್ತ ಮುತ್ತ ಜನಾ ಜಾತ್ರಿ. ಒಂದು ಸವನ ಕವಕವ ಅಂತ ಬಡಕೋತಿದ್ವು. ಬಾಯಿ ಸತ್ತ ಹೆಂಗಸರ ಕೆಲಸ ಅಲ್ಲೇನೂ ಇರಲಿಲ್ಲ. ಗಲ ಗಲ ಅಂತ ಗಂಟೀ ಚೌಡೆರಂಗ ಬಾಯಿ ಮಾಡವರದಷ್ಟೇ ಅಲ್ಲಿ ನಡೀತಿತ್ತು. ಅಲ್ಲಿ ಬರೋ ಎಲ್ಲಾ ಹೆಂಗಸರು ಶೇರಿಗೆ ಸವ್ವಾಶೇರು ಅನ್ನೂವಂಗ ಇದ್ದರು. ಅದರಾಗೂ ಮೂರ್‌ನಾಲ್ಕು ಹೆಂಗಸರು  ಬಾಳ ಜಗಳಗಂಟರು ಅಂತ ಫೇಮಸ್ ಆಗಿದ್ದರು. ಅವುಕರ ಬಾಯಿಗಿ ಹತ್ತೂದು ಅಂದ್ರ ಕೆದರಿ ಕ್ಯಾರ ಹಾಕೊಂಡಂಗ ಅಂತ ಎಲ್ಲಾರೂ ಮಾತಾಡತಿದ್ದರು. ಅಗಸರ ಸುಬ್ಯಾನ ಹೆಂಡತಿ ಅನಸವ್ವ, ತಾವರಗಿ ಮೋನಪ್ಪನ ಹೆಂಡತಿ ಮಾದೇವಿ, ಟೇಲರ್ ಸೈಪನನ ಹೆಂಡತಿ ರಾಜಮಾ, ಲೈನಮನ್ ಲಕ್ಕಪ್ಪನ ಹೆಂಡತಿ ಕಮಲವ್ವ ಅವರದೇನಾದರೂ ಜಗಳ ಸುರು ಆದ್ರ ಮುಗೀತು ಒಂದು ಧಾಡಸಿ ದೊಡ್ಡಾಟ ನೋಡದಂಗೇ ಇರತಿತ್ತು. ಇವರ ಜಗಳಾ ಬಿಡಿಸೋ ತಾಕತ್ತು ಸುತ್ತ ನಾಕು ಹಳ್ಳೀಯೊಳಗ ಯಾವ ಗಂಡಸರಿಗೂ ಇರಲಿಲ್ಲ. ಇವುಕರ ಬಾಯಿ ಅನ್ನೂದು ಬೈಗುಳಗಳ ಬಕಾರ ಇದ್ದಂಗ ಅದಕ್ಕಾಗಿನೇ ಎಲ್ಲಾರ ಮನಿಯೊಳಗೂ ನೀರಿಗಿ ಹೋಗೂ ಮುಂದ ಆ ಮಾನಗೇಡಿಗಳ ಬಾಯಿಗಿ ಹತ್ತಬ್ಯಾಡ್ರಿ ಅಂತ ಹೇಳಿ ಕಳಸತಿದ್ದರು. ಇವರ ಬಾಯಾಗ ಸಿಕ್ಕು ಎಂಥೆಂಥವರು ಬೆತ್ತಲೆ ಆಗಿ ಹೋಗ್ಯಾರೋ ಗೊತ್ತಿಲ್ಲ.

ಪಾಳಿಗಿರೋ ಕೊಡಾ ಹಿಂದಾ ಮುಂದಾ ಆಗಿದ್ದೇ ಈ ನಾಕೂ ಹೆಂಗಸರು ನಿಗರಕೊಂಡು ಜಗಳಕ್ಕ ಬರತಿದ್ದರು. ಆ ದಿನ ಮೋನಪ್ಪನ ಹೆಂಡತಿ ಮಾದೇವಿಗೂ ಲೈನಮನ್ ಲಕ್ಕಪ್ಪನ ಹೆಂಡತಿ ಕಮಲವ್ವಗೂ ಬಾಯಿ ಹತ್ತಿತ್ತು. ಅದಕ್ಕ ಕಾರಣ ಏನಂದರ ಕಮಲವ್ವ ತನ್ನ ಮುಂದ ಇರೋ ಕುರುಬರ ಸುಮಿತ್ರಾಳ ಕೊಡಾ ಸರಿಸಿ, ಅಕಿ ಕೊಡಾ ಮುಂದ ಇಟ್ಟಿದ್ದನ್ನ ಮಾದೇವಿ ನೊಡಿದ್ದಳಂತ. ಹಂಗೇ ನಾ ಮುಂದ… ನೀ ಮುಂದ ಅಂತ ಮಾತಿಗಿ ಬಿದ್ದಾಗ ಮಾದೇವಿ, ’ನಾ ಅಂಥಾ ಸೂಳಿ ಅಲ್ಲ. ಇನ್ನೂ ತಾಸ ತಡಾ ಆಗಲಿ ನಾ ಬ್ಯಾರೇ ರಂಡೇರಂಗ ಕೊಡಾ ಮುಂದ ಸರಸಕ್ಕಿ ಅಲ್ಲ’ ಅಂದದ್ದೇ ಕಮಲವ್ವ ’ಯಾವ ಬೋಸ್ಡೆವ್ವನ್ನೂ ಹಗರಿಲ್ಲ. ಯಾರೂ ನೋಡಲಿಲ್ಲ ಅಂದ್ರ ಎಲ್ಲರೂ ಸರಸವರೇ.’

’ಬಾಯಿ ಐತೆಂತ ಹ್ಯಾಂಗ ಬೇಕು ಹಂಗ ಬೊಗಳತೈತಿ’ ಅಂದಿದ್ದೇ ಕಮಲವ್ವ ಸೀದಾ ಮಾದೇವಿ ಮುಂದೇ ಬಂದು ನಿಂತಳು

’ನಿನಗ ನನ್ನ ಹೇಲ ತಿಲ್ಲಾರದೇ ಬೆಳಗೇ ಆಗಲ್ಲ.’

’ಏ ಹುಚ್ ರಂಡೀ.. ನೀ ಊರಮಂದೀದು ತಿನ್ನಾಕಿ ನಾ ಅಲ್ಲ.’

’ಊರಮಂದಿದು ನಾಯಾಕ ತಿನ್ನಲಿ.. ನಿನ್ನ ಗಂಡ ತಿಂತಾನ. ಅದ್ಕೇ ಅಲ್ಲಿ ಹೋಗಿ ಇಟ್ಟಂಗಿ ಭಟ್ಟಿ ಕಲ್ಲೀ ಮಗ್ಗಲಾಗ ಬೀಳ್ತಾನ.’

’ನಿನ್ನ ಗಂಡಂದೇನು ಗೊತ್ತಿಲ್ಲನೂ..? ಸಂತಿ ದಿನ ಕಂಡ ಕಂಡ ಹೆಂಗಸರಗಿಲ್ಲಾ ಕೈ ಮಾಡಿ ಮೆಟ್ಟಲೆ ಹೊಡಸಿಕೊಂಡಿದ್ದು ಇಡೀ ಊರಿಗೂರೇ ಗೊತೈತಿ.’

’ನಿಂದರೇ ಏನು..? ಆ ಗೊಲ್ಲರಂವ ಸೈತ ಸಾಲಲಿಲ್ಲ ನಿನಗ..’

’ನಂದೇನು ಹೇಳ್ತೇ ಹಲ್ಕಟ್ ರಂಡೆ. ಎಮ್ಮೀ ಕಾಯೂ ಮುದುಕಪ್ಪನ್ನೂ ಬಿಡಲಾರದ ಹೆಂಗಸ ನೀನು.’

’ನೋಡದವರಂಗ ಮಾತಾಡಬ್ಯಾಡ ನಿನ್ನ ಕುಂಡೀ ಮ್ಯಾಲ ಒದ್ದೇನು’ ಅಂತ ಅಂದಾಗ ಕಮಲವ್ವ ಓಡಿ ಬಂದು ಸೀರಿ ಮ್ಯಾಲ ಏರಿಸಿ  ಮಾದೇವಿದು ತಲಿ ಕೂದಲ ಹಿಡದು ಹಿಗ್ಗಾ ಮುಗ್ಗಾ ಎಳದಾಡಲಾಕ ಸುರು ಮಾಡದಳು. ಅಲ್ಲಿದ್ದವರೆಲ್ಲಾ ಬಿಡಸಲಿಕ್ಕ ಹೋದಷ್ಟು ಇವರ ಜಗಳ ಬಾಳ ನೇಟಾಗ್ತಿತ್ತು. ಹಿಂದೊಮ್ಮ ಇದೇ ತರ ಜಗಳದೊಳಗ ಕಮಲವ್ವ ತನಗ ಹೊಡದಿದ್ದನ್ನ ನೆನಪು ಮಾಡಕೊಂಡು ಅಗಸರ ಸುಬ್ಯಾನ ಹೆಂಡತಿ ಕಾಲಾಗಿನ ಚಪ್ಪಲಿ ಕೈಗಿ ತಗೊಂಡು ’ಹಾಕು ಆ ರಂಡಿಗಿ’ ಅಂತ ಎರಡೇಟು ಕಮಲವ್ವಗ ಬಿಟ್ಟಳು. ಕಮಲವ್ವಗ ಅದೆಲ್ಲಿದು ಸಿಟ್ಟ ಬಂತೊ ಏನೋ.. ಕಬ್ಬಿಣ ಕೊಡಾ ಎತಗೊಂಡು ಸುಬ್ಯಾನ ಹೆಂಡತಿ ಅನಸವ್ವಳ ತಲಿಗಿ ಟಕ್ಕ್ ಅಂತ ಒಂದೇಟು ಬಿಟ್ಟಳು. ಅಕಿ ತಲಿ ಒಡದು ರಕ್ತ ಅನ್ನೂದು ಬಳಳಳ ಅಂತ ಹಣಿ ಮ್ಯಾಲ ಸೋರಾಕತ್ತತು. ಅಂಗಡಿಯೊಳಗ ಇಸ್ತ್ರಿ ಮಾಡ್ತಿರೋ ಸುಬ್ಯಾ ಓಡಿ ಹೋಗಿ ಪೋಲಿಸರನ್ನ ಕರಕೊಂಡು ಬಂದು ಜಗಳ ಬಗಿಹರಿಸಿದ್ದ. ಸುಬ್ಯಾನ ಹೆಂಡತಿ ಅನಸವ್ವಳನ್ನ ದವಾಖಾನಿಗಿ ಕರಕೊಂಡು ಹೋದರು. ಯಾವಕ್ಕಿದೋ ಒಂದು ಕೊಡಾ ಸರಿಸಿ ಕಮಲವ್ವ ತನ್ನ ಪಾಳಿ ಮುಂದ ಹೋಗಿದ್ದಕ ಈ ಪರಿ ನಳದ ಮ್ಯಾಲ ಒಂದು ದೊಡ್ಡ ಕುರುಕ್ಷೇತ್ರಾನೇ ಆಗಿತ್ತು. ಈ ಥರಾ ಫೈಟಿಂಗ್ ಇದೇ ಮೊದಲೇನು ಅಲ್ಲ ಹಿಂಗ ಬಾಳ ಸಾರಿ ನಡದದ್ದಿತ್ತು. ಒಂದು ಕೊಡಾ ನೀರಿಗಾಗಿ ಇದಕ್ಕಿಂತಾ ದೊಡ್ಡ ದೊಡ್ಡ ಜಗಳ ಇಲ್ಲಿ ನಡದಿದೈತಿ.

 *5*

ಇಡೀ ಊರಿಗೂರೇ ಕೊಡಾ ನೀರಿಗಾಗಿ ಮಾಡಬಾರದ್ದನ್ನೆಲ್ಲಾ ಮಾಡೊವಾಗ ಇತ್ತ ಎಮ್ಮೆಲ್ಲೆ ಶಂಕ್ರಪ್ಪ ಮಾತ್ರ ದಿನ್ನಾ ಗಾರ್ಡನಗೆ ದಬ ದಬ ಅಂತ ಒಂದು ಸವನ ನೀರು ಸುರೀತಿದ್ದ. ಕೆಳಗಿನ ಕೇರಿಯವರಿಗೆ ಮಾತು ಕೊಟ್ಟಿದೇ ಆಯ್ತು ನೀರಂತೂ ಕೊಡಲಿಲ್ಲ. ಆ ದವಾಖಾನಿ ಹಿಂದಿರೋ ಸವುಳು ನೀರಿಗೇ ಅವರು ಒಗ್ಗಿಕೊಂಡರು. ಅವರ ಕೇರಿಗೆ ವಾರಕ್ಕೊಮ್ಮ ಬರಬೇಕಾಗಿರೋ ಟ್ಯಾಂಕರ್ ಬರೂದೂ ಹೌದು.. ಖಾಲಿಯಾಗಿ ಹೋಗೂದು ಹೌದು. ಇದನ್ನೆಲ್ಲಾ ನೋಡಿ ಕೆಳಗಿನ ಕೇರಿಯವರು ಎಮ್ಮೆಲ್ಲೆ ಶಂಕ್ರಪ್ಪಗ ಶಾಪ ಹಾಕಲಿಕ್ಕ ಶುರು ಮಾಡಿದ್ದರು. ಯಾರು ಏನೇ ಹೇಳಿದರೂ ಅವರು ನನಗ ವೋಟು ಕೊಟ್ಟಿಲ್ಲ ನಾಯಕ ನೀರ ಕೊಡಬೇಕು ಅಂತ ಕೇಳಿ ಎಮ್ಮೆಲ್ಲೆ ಮತ್ತೂ ತಾನೇ ಸರಿ ಅನ್ನೂವಂಗ ಮಾತಾಡತಿದ್ದ. ಆ ಕೆಳಗಿನ ಕೇರಿ ಮಂದಿಗಿ ಪಾಠಾ ಕಲಿಸಲಿಕ್ಕೇ ತನ್ನೂರಿಗಿ ಬರಗಾಲ ಬಂದೈತಿ ಅಂತ ತನ್ನ ಪಿ.ಎ. ಮುಂದ ಮಾತಾಡೂದನ್ನ ಅವನ ಮನಿಯೊಳಗ ಈ ಮೊದಲ ಅಡುಗಿ ಕೆಲಸಾ ಮಾಡ್ತಿರೊ ಶಿವರಾಯ ಕೇಳಿದ್ದಿತ್ತು. ಶಿವರಾಯ ಮನಸಿನೋಳಗೇ ಈ ಎಮ್ಮೆಲ್ಲೆ ಎಟ್ಟು ಸಣ್ಣ ಮನುಷ್ಯಾ ಅದಾನಲ್ಲ ಅಂತ ಅಂದ್ಕೊಂತಿದ್ದ. ಎಟ್ಟೋ ಸಾರಿ ಗಾರ್ಡನ್‌ಗೆ ನೀರ ಸಾಕಾಯ್ತು ಅಂತ ಕೆಲಸದಾಳು ಚಂದ್ರಾಮ ಹೇಳದರ ರಾತ್ರಿ ಬಾರಾ ಸುಮಾರ ಮನಿ ಮುಂದಿನ ಗಟಾರಕ ಬಿಡು ಅಂತ ಹೇಳಿಡೋ ಎಮ್ಮೆಲ್ಲೆಗೆ ತನ್ನ ಕೈ ಊಟಾ ಮಾಡಿ ಹಾಕಿರೋ ಬಗ್ಗೆ ಶಿವರಾಯಗ ಬೇಸರಿತ್ತು.

 *6*

ಆ ದಿವಸ ರಾತ್ರಿ ಯಾರೋ ಎಮ್ಮೆಲ್ಲೆ ಮನಿಗಿ ಕನೆಕ್ಟ್ ಆಗಿರೋ ದೊಡ್ಡ ನೀರಿನ ಪೈಪನ್ನ ಮನಿ ಹಿಂದ ಬಂದು ಒಡದಿರೋದಿತ್ತು. ಒಡದ ಪೈಪಿನ ನೀರ ಹ್ಯಾಂಗ ಬೇಕು ಹಂಗ ಹರದು ಗಟಾರ ಸೇರತು. ಅದು ರಿಪೇರಿ ಆಗಲಿಕ್ಕ ಕಮ್ಮೀತ ಕಮ್ಮಿ ಅಂದರೂ ಹದಿನೈದು ದಿನ ಬೇಕಿತ್ತು. ಬೋರವೆಲ್ ನೀರಂತೂ ಬಾಳಂದ್ರ ಬಾಳ ಸಣ್ಣ ಬರ್ತಿತ್ತು. ಎಮ್ಮೆಲ್ಲೆ ಗಾರ್ಡನ್ ಆ ಬಿರುಬಿಸಿಲಿಗೆ  ಒಣಗಿ ಹಳದೀ ಆಗಾಕತ್ತತು. ಟ್ಯಾಂಕರ್ ನಿಂದ ನೀರ ಹಾಕೋ ದಾವಲಸಾಬ ಮದುವಿ ಅಂತ ಊರಿಗಿ ಹೋದಂವ ಬಂದೇ ಇರಲಿಲ್ಲ. ಮನ್ಯಾಗಿರೋ ಎಲ್ಲಾ ಟ್ಯಾಂಕ್ ತಳ ಕಂಡಿದ್ದವು. ತೋಟದೊಳಗಿನ ಸೌತೀಬಳ್ಳಿ ಮತ್ತ ಬದನೀಪಡಾ ಒಣಗಿ ಹೋಗಿದ್ವು. ಹದಿನೈದು ದಿನಾ ಆದರೂ ಆ ಪೈಪ್ ರಿಪೇರಿ ಆಗಲಿಲ್ಲ. ಕುಡಿಲಿಕ್ಕ ಬೇರೆ ಊರಿಂದ ಎರಡು ದಿನಕ್ಕ ಒಂದು ಟ್ಯಾಂಕರ್ ತರಸೂದು ಸಾಲ್ತಿರಲಿಲ್ಲ. ಎಮ್ಮೆಲ್ಲೆ ಫೊನಿನೊಳಗ ಎಲ್ಲರ ಮೇಲೂ ಉರ ಉರದು ಹೈಲಿಕ್ಕ ಶುರು ಮಾಡದ. ’ಇನ್ನೂ ಒಂದು ವಾರ ಅಂದ್ರ ನಾವು ಏನು ಮಾಡಬೇಕು..? ನಾ ಡಿ.ಸಿ. ಗಿ ಕಂಪ್ಲೇಂಟ್ ಮಾಡ್ತೀನಿ. ನಿನ್ನನ್ನ ಸಸ್ಪೆಂಡೇ ಮಾಡ್ಸತೀನಿ’ ಎಂದೆಲ್ಲಾ ಒಂದು ಸವನ ಯಾವುದೋ ಅಧಿಕಾರಿ ಮ್ಯಾಲ ಚೀರಾಡತ್ತಿದ್ದ. ’ನಮ್ಮ ಮನಿ ಮುಂದಿನ ಪೈಪ್ ಒಡದವರು ಯಾರು ಅಂತ ಇವತ್ತಿಗೂ ನಿಮಗ ಹಿಡಿಲಿಕ್ಕ ಆಗಲಿಲ್ಲ ಅಂದ್ರ ಅದ್ಯಾಕ ಪೋಲಿಸ್ ಡ್ಯುಟಿ ಮಾಡ್ತೀರಿ..?’ ಅಂತ ಪೋಲಿಸ್ ಆಫೀಸರ್‌ನ ತರಾಟೆಗೆ ತಗೊಂಡಿದ್ದ. ಅದೇ ವ್ಯಾಳೆದೊಳಗ ವೀರಭದ್ರೇಶ್ವರ ಖಾನಾವಳಿಯೊಳಗಿಂದ ಶಿವರಾಯ ಒಂದು ಕೊಡಾ ನೀರ ತಗೊಂಡು ತನ್ನ ಭುಜದ ಮ್ಯಾಲ ಇಟಗೊಂಡು, ಎಮ್ಮೆಲ್ಲೆ  ಮನಿ ಮುಂದ ಹಾದು ಹೋಗುವಾಗ ಹೀಗೇ ಹೊರಳಿ ಜೋರಾಗಿ ’ಸಾಯಬರ ನಮಸ್ಕಾರ’ ಅಂದಿದ್ದ. ತುಂಬಿದ ಕೊಡಾ ಭುಜದ ಮ್ಯಾಲ ಇಟಗೊಂಡು ಕುಣಸಕೊಂತ, ತುಳಕಸಗೋಂತ ನಡದಿದ್ದ. ಶಿವರಾಯನ ಗತ್ತ ನೋಡಿ ಗಾರ್ಡನಲ್ಲಿರೋ ಚಂದ್ರಾಮ ಕದ್ದಲೇ ನಗತಿದ್ದ. ಎಮ್ಮೆಲ್ಲೆ ಒಂದರ ಮ್ಯಾಲೊಂದು ಫೊನ್ ಮಾಡಿ ದಭಾಯಿಸತಿದ್ದ. ಹದಿನೈದು ದಿನದಿಂದ ನೀರ ಇರಲಾರದಕ್ಕ ಎಮ್ಮೆಲ್ಲೆ ಮನಿ ಮುಂದಿನ ಚರಂಡಿ ವಾಸನಿ ಗಬ್ ಅಂತ ಮೂಗಿಗಿ ಹೊಡೀತಿತ್ತು. ’ಏ ಚಂದ್ರಾಮ ಆ ಗಟಾರಿಗೆ ತುಸು ನೀರ ಬಿಡು’ ಅಂದದ್ದೇ ಚಂದ್ರಾಮ ಮಿಕಿ ಮಿಕಿ ಅಂತ ಎಮ್ಮೆಲ್ಲೆ ಮುಖಾ ನೋಡಿ ಮೌನವಾಗಿದ್ದ.

ಗಡಿಪಾರು ಆಗಬೇಕಿರುವುದು ನಿತ್ಯಾನಂದನಲ್ಲ, ಧ್ಯಾನ ಎಂಬ ಸಮೂಹ ಸನ್ನಿ.

– ನವೀನ್ ಸೂರಿಂಜೆ

ಧ್ಯಾನ ಗುರು ನಿತ್ಯಾನಂದ ಸ್ವಾಮಿಯನ್ನೇನೋ ಸರಕಾರ ರಾಮನಗರ ಜಿಲ್ಲೆಯಿಂದ ಗಡಿಪಾರು ಮಾಡಿದೆ. ಸರಕಾರ ಅಥವ ವ್ಯವಸ್ಥೆ ಗಡಿಪಾರು ಮಾಡಬೇಕಿರುವುದು ಒರ್ವ ಸ್ವಾಮಿಯನ್ನೋ ಅಥವಾ ಗುರೂಜಿಯನ್ನೋ ಅಲ್ಲ. ಜನರನ್ನು ಸಮೂಹ ಸನ್ನಿಗೆ ಒಳಪಡಿಸೋ ಇಂತಹ ಗುರೂಜಿಗಳ ಚಿಂತನೆಯನ್ನು ಸರಕಾರ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಸನಾತನ ಕಾಲದಲ್ಲಿ ಋಷಿ ಮುನಿಗಳು ಧ್ಯಾನ ಮಾಡುತ್ತಿದ್ದರು ಎನ್ನವ ಕತೆಯನ್ನೇ ಇತಿಹಾಸವನ್ನಾಗಿಸಿ ಧ್ಯಾನವನ್ನು ವ್ಯಾಪಾರವನ್ನಾಗಿಸಲಾಗುತ್ತಿದೆ. ಒಬ್ಬ ನಿತ್ಯಾನಂದ ಮತ್ತೊಬ್ಬ ಗುರೂಜಿ ಅನಭಿಷಿಕ್ತ ನಾಯಕರಾಗಿರುವ ಧ್ಯಾನ ಲೋಕದಲ್ಲಿ ಸಮಾಜ ಮೂರಾಬಟ್ಟೆಯಾಗುತ್ತಿದೆ. ಇಷ್ಟಕ್ಕೂ ಧ್ಯಾನ ಎನ್ನುವುದು ವ್ಯಕ್ತಿಯೊಬ್ಬನನ್ನು ಸಮಾಜದಿಂದ ಬೇರ್ಪಡಿಸೋ ನಿಧಾನಗತಿಯ ಕಾರ್ಯಕ್ರಮ. ಪ್ರಾರಂಭದಲ್ಲಿ ಧ್ಯಾನ ತನ್ನ ಮನಸ್ಸಿನ ಆಯಾಸ ಕಳೆಯುತ್ತದೆ ಎನ್ನುವಂತೆ ಭಾಸವಾದರೂ ಧ್ಯಾನದ ಅಂತಿಮ ಘಟ್ಟ ತಲುಪಿದಾಗ ತನ್ನ ಕುಟುಂಬ ಮತ್ತು ಸಮಾಜಕ್ಕೂ ನನಗೂ ಸಂಬಂಧವೇ ಇಲ್ಲದಂತೆ ಧ್ಯಾನ ಮಾಡುವವರು ವರ್ತಿಸಲಾರಂಭಿಸುತ್ತಾರೆ. ಇದರ ಫಲವೇ ತನ್ನ ಆಸ್ತಿಯನ್ನೆಲ್ಲಾ ಸ್ವಾಮಿಗಳಿಗೋ, ಗುರೂಜಿಗಳಿಗೋ ಸಮರ್ಪಿಸಿ ತಾನಾಯಿತು ತನ್ನ ಪಾಡಾಯಿತು ಎಂದು ಧ್ಯಾನದಲ್ಲಿ ಮಗ್ನರಾಗುತ್ತಾರೆ.

ಒಬ್ಬ ಮೂವತ್ತೈದರ ಆಸುಪಾಸಿನ ಯುವಕ ನಿತ್ಯಾನಂದ ಕೇವಲ ಧ್ಯಾನವೊಂದರಿಂದ ಸಾವಿರಾರು ಕೋಟಿ ಸಂಪಾದಿಸಬಹುದು. ಮತ್ತೊಬ್ಬ ಕೀರಲು ದ್ವನಿಯ ಧ್ಯಾನದ ಗುರೂಜಿಯೊಬ್ಬ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಸಂಪಾದಿಸಬಹುದು ಎಂದಿದ್ದರೆ ಧ್ಯಾನ ಅಷ್ಟೊಂದು ಫವರ್‌ಫುಲ್ ಇದೆಯಾ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಸಹಜವಾಗಿ ಮೂಡುತ್ತದೆ. ನಿತ್ಯ ಜೀವನದ ಒತ್ತಡಗಳು, ಆಯಾಸಗಳು, ನೋವುಗಳು, ಸವೆತಗಳು ಧ್ಯಾನದಿಂದ ದೂರವಾಗುವವು ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಧ್ಯಾನ ಅಸ್ತಿತ್ವಕ್ಕೆ ಬಂದಿದೆ. ಜಗತ್ತಿನಲ್ಲಿ ಯಾವುದೇ ಜೀವಿಯ ಬದುಕಿನಲ್ಲಿ ಒತ್ತಡಗಳು, ಆಯಾಸಗಳು, ನೋವುಗಳು, ಸವೆತಗಳು ಇಲ್ಲದೇ ಇರುವ ಬದುಕೇ ಇರಲು ಸಾಧ್ಯವಿಲ್ಲ. ಉಳ್ಳವರ ಜೀವನದ ಒತ್ತಡ, ಆಯಾಸ, ನೋವು, ಸವೆತಗಳೇ ಈ ಧ್ಯಾನದ ಬಂಡವಾಳ.

ಧ್ಯಾನದ ವ್ಯಾಪಾರಿಗಳ ಪ್ರಕಾರ ಧ್ಯಾನ ಎಂದರೇನು?

“ಧ್ಯಾನ ಎಂದರೆ ಯೋಗ ನಿದ್ರೆ. ಧ್ಯಾನ ಸಾಧಕನು ಧ್ಯಾನವನ್ನು ಮಾಡುತ್ತಿರುವಾಗ ಮನಸ್ಸು ಧ್ಯಾನ ಮಾಡುತ್ತಾ ಎಚ್ಚರವಾಗಿದ್ದರೂ ಶರೀರಕ್ಕೆ ವಿಪರೀತವಾದ ವಿಶ್ರಾಂತಿ ಉಂಟು ಮಾಡುವುದು. ಇದನ್ನೇ ಯೋಗ ನಿದ್ರೆ ಎನ್ನುತ್ತಾರೆ. ಈ ಯೋಗ ನಿದ್ರೆಯಿಂದ ಶರೀರವು ತನಗಾಗಿರೋ ಆಯಾಸ, ಸವೆತ, ನೋವು ಇತ್ಯಾದಿಗಳನ್ನು ಹೊರಹಾಕಿ ತನ್ನನ್ನು ತಾನು ಸಾಕಷ್ಟು ಮಟ್ಟಿಗೆ ಸರಿಪಡಿಸಿಕೊಳ್ಳುವುದು. ಹೀಗೆ ಧ್ಯಾನದಿಂದ ಕೆಲವಾರು ಸಣ್ಣ ಪ್ರಮಾಣದ ಖಾಯಿಲೆಗಳು ಮಾಯವಾಗುವುದಲ್ಲದೆ ದೊಡ್ಡ ಪ್ರಮಾಣದ ಖಾಯಿಲೆಗಳಿದ್ದರೆ ಹೆಚ್ಚಾಗದಂತೆ ತಡೆಯುವುದು, ಮತ್ತು ಔಷಧಿಗಳ ಗುಣಕಾರಿ ಫಲವನ್ನು ಹೆಚ್ಚಿಸುವುದು. ಶರೀರದ ಆರೋಗ್ಯವು ಉತ್ತಮಗೊಂಡಾಗ ಧ್ಯಾನ ಸಾಧಕನಲ್ಲಿ ಮಾನಸಿಕ ಲವಲವಿಕೆ ಮತ್ತು ಉಲ್ಲಾಸ ಉಂಟಾಗುವುದು,” ಎನ್ನುತ್ತದೆ ಧ್ಯಾನ ಲೋಕ. ಧ್ಯಾನದಲ್ಲಿ ಮೂರ್ನಾಲ್ಕು ಹಂತಗಳಿವೆ. ಧ್ಯಾನ ಪ್ರಾರಂಭಿಸುವಾಗಲೇ ಎಲ್ಲರಿಗೂ ಕೆಲವೊಂದು ಸೂಚನೆಗಳನ್ನು ನೀಡಲಾಗುತ್ತದೆ. “ಧ್ಯಾನದಲ್ಲಿ ಅಥವಾ ಧ್ಯಾನ ನಂತರ ತಲೆ ಭಾರವಾಗಬಹುದು. ಅಥವಾ ಸ್ವಲ್ಪ ತಲೆ ನೋವಾಗಬಹುದು. ಇದು ಕೇವಲ ಧ್ಯಾನದಲ್ಲಿ ಸುರುಳಿ ಬಿಚ್ಚಿಕೊಂಡ ಕರ್ಮಗಳು ಹೊರ ಹೋಗಲು ಸ್ವಲ್ಪ ತಡವಾಗುವುದರಿಂದ ಈ ರೀತಿಯಾಗುತ್ತದೆ. ಆಗ ಕಣ್ಣುಗಳನ್ನು ಮುಚ್ಚಿ ಮನಸ್ಸನ್ನು ಸ್ವೇಚ್ಚೆಯಾಗಿ ಹರಿಯಲು ಬಿಟ್ಟು ಮೌನವಾಗಿ 10 – 15 ನಿಮಿಷ ಕುಳಿತುಕೊಳ್ಳಿ” ಎನ್ನುತ್ತಾರೆ. ಧ್ಯಾನದ ಫ್ರಾಥಮಿಕ ಹಂತದಲ್ಲೇ ಧ್ಯಾನ ಎಂದರೆ ಒಂದೋ ನಮ್ಮನ್ನು ಸಮಾಜದಿಂದ ಬೇರ್ಪಡಿಸೋ ಕ್ರೀಯೆ ಅಥವಾ ಸಮೂಹ ಸನ್ನಿಗೆ ಒಳಪಡಿಸಿ ನಮ್ಮನ್ನ ಅವರ ಸುಪರ್ದಿಯಲ್ಲಿರಿಸುವ ಯತ್ನ ಎಂಬುದನ್ನು ಮನಗಾಣಬೇಕು.

ಶರೀರಕ್ಕೆ ಜೀವನದ ಒತ್ತಡದಿಂದ ವಿಶ್ರಾಂತಿ ನೀಡುವ ಕ್ರೀಯೆಯಾಗಿ ಯೋಗ ನಿದ್ರೆ ಮಾಡುವುದು ಎಂದರೆ ನೀವು ಒತ್ತಡವನ್ನು ನಿವಾರಿಸಲು ಮಾಡುವ ಯೋಚನೆಯನ್ನು ಚಿವುಟುವುದು ಎಂದರ್ಥ. ನಿಮ್ಮ ಮಾನಸಿಕ ಕ್ಷೊಭೆಯನ್ನು ನಿಮ್ಮೊಳಗೆ ಇಂಗಿಸಿಕೊಂಡು ನಿಮ್ಮ ಮನಸ್ಸಿಗೆ ತಾತ್ಕಲಿಕ ರಿಲ್ಯಾಕ್ಸ್ ಕೊಡಿಸುವ ಮೂಲಕ ಶಾಶ್ವತ ಪರಿಹಾರದಿಂದ ವಿಮುಖರನ್ನಾಗಿಸುವುದೇ ಧ್ಯಾನ. ಸರಳವಾಗಿ ಹೇಳುವುದಾದರೆ ಯಾವುದೇ ಮಾನಸಿಕ ಕ್ಷೊಭೆಗೆ ಅಥವ ಜೀವನದ ಒತ್ತಡ ನಿವಾರಣೆಗೆ ಮಾತು ಮುಖ್ಯವೇ ಹೊರತು ಮೌನವಲ್ಲ. ಮನಸ್ಸಿನಲ್ಲಿ ಯಾವುದೋ ನೋವು ತುಂಬಿಕೊಂಡು ಅಥವಾ ಒತ್ತಡಗಳನ್ನು ಹೇರಿಕೊಂಡು ಕ್ಷೊಭೆಗೆ ಒಳಗಾಗಿದ್ದರೆ ಆತನನ್ನು ಮಾನಸಿಕ ರೋಗಿ ಎನ್ನಬಹುದು. ಒರ್ವ ಮಾನಸಿಕ ರೋಗಿ ಮೌನಿಯಾದಷ್ಟು ಆತನ ರೋಗ ಉಲ್ಬಣಗೊಳ್ಳುತ್ತದೆ. ಆತ ವೈದ್ಯರ ಬಳಿಯೋ, ಆಪ್ತ ಸಮಾಲೋಚಕರ ಬಳಿಯೋ ಎಲ್ಲವನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಮುಕ್ತವಾಗಿ ಮಾತನಾಡುವುದೇ ಮಾನಸಿಕ ರೋಗಕ್ಕೆ ಪ್ರಾಥಮಿಕ ಚಿಕಿತ್ಸೆ. ಆದರೆ ಧ್ಯಾನದ ಚಿಕಿತ್ಸೆಯಲ್ಲಿ ಯೋಗ ನಿದ್ರೆ ಮಾಡಲಾಗುತ್ತದೆ. ಇದು ತಾತ್ಕಾಲಿಕವಾಗಿ ಪರಿಹಾರ ಎನಿಸಬಹುದಾದರೂ ಇದೊಂದು ವಂಚನೆಯಷ್ಟೆ. ಇನ್ನು ಧ್ಯಾನವು ಹಲವು ರೋಗಗಳನ್ನು ಗುಣ ಮಾಡುತ್ತದೆ ಮತ್ತು ನಾವು ಸೇವಿಸಿದ ಔಷಧದ ಗುಣಫಲವನ್ನು ಹೆಚ್ಚಿಸುತ್ತದೆ ಎಂಬುದು ಮೂರ್ಖತನದ ಪರಮಾವಧಿ. ಇಷ್ಟಕ್ಕೂ ಕಣ್ಣುಗಳನ್ನು ಮುಚ್ಚಿ ಮೌನವಾಗಿ ಮನಸ್ಸನ್ನು ಸ್ವೇಚ್ಚೆಯಾಗಿ ಹರಿಯ ಬಿಡಿ ಎನ್ನುವುದು ಧ್ಯಾನದ ಅಂತಿಮ ಘಟ್ಟದ ಪೂರ್ವ ಸಿದ್ಧತೆ ಎನ್ನಬಹುದು. ನಿತ್ಯಾನಂದನಂತಹ ಗುರೂಜಿಗಳು ಇಂತಹ ಮೌನ ಸ್ವೇಚ್ಚೆಯನ್ನೇ ಧ್ಯಾನದ ಅಂತಿಮ ಘಟ್ಟದಲ್ಲಿ ಬಳಸಿಕೊಳ್ಳುತ್ತಾರೆ.

ಧ್ಯಾನವನ್ನು ಸಾಮೂಹಿಕವಾಗಿಯೇ ಯಾಕೆ ಮಾಡುತ್ತಾರೆ?

ಧ್ಯಾನ ವ್ಯಕ್ತಿಯೊಬ್ಬನಿಗೆ ವೈಯುಕ್ತಿಕ ಜೀವನದ ಒತ್ತಡದಿಂದ ತಾತ್ಕಾಲಿಕ ಪರಿಹಾರ ನೀಡಬಹುದು. ಈ ಧ್ಯಾನವನ್ನು ಎಲ್ಲರೂ ಸಾಮೂಹಿಕ ಧ್ಯಾನವನ್ನಾಗಿ ಮಾಡಿಸಲು ಮಾತ್ರ ಉತ್ಸುಕರಾಗಿದ್ದಾರೆ. ಸಾಮೂಹಿಕ ಧ್ಯಾನ ಮಾಡುವುದರಿಂದ ಇನ್ನಷ್ಟು ಜನರನ್ನು ಸಮೂಹ ಸನ್ನಿಗೆ ಒಳಪಡಿಸಬಹುದು ಎಂಬ ತಂತ್ರ ಇದರಲ್ಲಿ ಅಡಗಿದೆ. ದೇವರ ನಾಮ ಅಥವಾ ಗುಣವನ್ನು ಮನನ ಮಾಡುವುದೇ ಧ್ಯಾನ ಎಂದು ವೇದಗಳು ಹೇಳುತ್ತವೆ. “ಯಜ್ಞಾನಾಂ ಜಪಯಜ್ಞೋಸ್ಮಿ” – ಆಧ್ಯಾತ್ಮಿಕ ಸಾಧನೆಗಳಲೆಲ್ಲಾ ಶ್ರೇಷ್ಠವಾದ ಧ್ಯಾನವು ನಾನೇ ಆಗಿರುವೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಧ್ಯಾನದಲ್ಲಿ ಮೂರು ಬಗೆಯ ಧ್ಯಾನಗಳಿವೆ. 1. ವೈಖರಿ ಧ್ಯಾನ, 2. ಉಪಾಂಶು ಧ್ಯಾನ, 3. ಮಾನಸಿಕ ಧ್ಯಾನ. ನಾಲಿಗೆಯ ತುಟಿಗಳನ್ನು ಅಲುಗಾಡಿಸುತ್ತಾ ಇತರರಿಗೆ ಕೇಳಿಸುವಂತೆ ಮನನ ಮಾಡುವುದೇ ವೈಖರಿ ಧ್ಯಾನ. ಕಣ್ಣುಗಳನ್ನು ಮುಚ್ಚಿ ನಾಲಿಗೆ ತುಟಿಗಳನ್ನು ಅಲುಗಾಡಿಸುತ್ತಾ ಕೇವಲ ಮನಸ್ಸಿನಲ್ಲೇ ಮನನ ಮಾಡುವುದೇ ಉಪಾಂಶು ಧ್ಯಾನ. ಯಜ್ಞ ಯಾಗಾಧಿಗಳಿಂಧ ಸಾವಿರ ಪಟ್ಟು ಹೆಚ್ಚು ಫಲ ಸಿಗುವ ಮಾನಸಿಕ ಧ್ಯಾನಕ್ಕೆ ಕಣ್ಣುಗಳನ್ನು ಮುಚ್ಚಿ ತುಟಿಯನ್ನು ಅಲ್ಲಾಡಿಸದೇ ಮನಸ್ಸಿನಲ್ಲಿ ಮನನ ಮಾಡಿಕೊಳ್ಳಬೇಕು. ಇಂತಹ ಎಲ್ಲಾ ಧ್ಯಾನವನ್ನು ಪ್ರತಿಯೊಬ್ಬರು ಮನೆಯಲ್ಲಿ ತೀರಾ ವೈಯುಕ್ತಿಕವಾಗಿ ಮಾಡಬಹುದು. ಅಗತ್ಯವೆನಿಸಿದ್ದಲ್ಲಿ ಧ್ಯಾನದ ಬಗ್ಗೆ ಒಂದು ವಾರದ ಕಾರ್ಯಗಾರವನ್ನು ಮಾಡಿ ಧ್ಯಾನ ಮಾಡುವುದನ್ನು ಕಲಿಸಿಕೊಟ್ಟು ಮನೆಯಲ್ಲೇ ಧ್ಯಾನ ಮಾಡಿಸಬಹುದು. ಆದರೆ ಮನೆಯಲ್ಲೇ ಧ್ಯಾನ ಮಾಡಿ ಎಂದು ಯಾವ ಗುರೂಜಿಯೂ ಸಲಹೆ ಕೊಡುವುದಿಲ್ಲ. ನಿತ್ಯ ನಾವಿರುವಲ್ಲೇ ಒಂದು ಧ್ಯಾನ ಮಾಡಿ ಅನ್ನುತ್ತಾರೆ. ಧ್ಯಾನಿಗರ ಮಾನಸಿಕ ಸ್ಥಿತಿಯನ್ನು ಸಂಪೂರ್ಣವಾಗಿ ಕ್ಯಾಪ್ಚರ್ ಮಾಡಿಕೊಂಡ ನಂತರ ಆಶ್ರಮದಲ್ಲೇ ಇರಿ ಎನ್ನುತ್ತಾರೆ. ಕೊನೆಗೆ ಧ್ಯಾನ ಮರೆತ ಜನ ಒಂದೋ ಗುರೂಜಿಗಳ ಆಶ್ರಮದಲ್ಲಿ ಇರುತ್ತಾರೆ ಇಲ್ಲವೋ ಗುರೂಜಿಗಳ ಫೋಟೋವನ್ನು ಮನೆ ಅಥವಾ ಉದ್ಯೋಗದ ಸ್ಥಳದಲ್ಲಿಟ್ಟು ಪೂಜೆ ಮಾಡುತ್ತಾರೆ.

ನಿತ್ಯಾನಂದ ತರಾತುರಿ ಬಂಧನದ ಹಿಂದಿನ ಹುನ್ನಾರ

ನಿತ್ಯಾನಂದ ಆಶ್ರಮದಲ್ಲಿ ನಡೆದ ಗಲಾಟೆ, ನಂತರ ನಡೆದ ಬಂಧನ ಪ್ರಕ್ರಿಯೆಗಳ ಹಿಂದೆ ಹಲವಾರು ಹುನ್ನಾರಗಳಿರುವ ಬಗ್ಗೆ ಆರೋಪಗಳಿವೆ. ಅದೇನೇ ಇರಲಿ, ನಿತ್ಯಾನಂದ ಮಾಡಿರುವುದೆಲ್ಲ ಕಾನೂನು ಬಾಹಿರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈತನ ತರಾತುರಿ ಬಂಧನದ ಹಿಂದೆ ಧ್ಯಾನದ ಪಾವಿತ್ರ್ಯತೆಯನ್ನು ಉಳಿಸುವ ಕುತಂತ್ರ ಅಡಗಿದೆ. ನಿತ್ಯಾನಂದ ಬಂಧನ ಮಾಡಿ ಗಡಿಪಾರು ಆದೇಶ ನೀಡಿದ ನಂತರ ನಿತ್ಯಾನಂದನ ಧ್ಯಾನ ಮಾಡಿರೋ ಅವಾಂತರಗಳೆಲ್ಲವೂ ಅಡಗಿ ಹೋಯಿತು. ಈ ಧ್ಯಾನದಿಂದ ಸಂತ್ರಸ್ತರಾದ ಆರತಿ, ಬಾರದ್ವಜ್, ಸಂತೋಷ್ ಏನಾದರು ಎಂಬುದು ಗೊತ್ತೇ ಆಗಲಿಲ್ಲ. ಇಂತಹ ಎಷ್ಟು ಧ್ಯಾನ ಸಂತ್ರಸ್ತರಿದ್ದಾರೆ ಎಂಬುದೂ ಗೊತ್ತಾಗಿಲ್ಲ. ಧ್ಯಾನದ ಅಂತಿಮ ಘಟ್ಟದಲ್ಲಿ ಗುರೂಜಿಗಳು ಧ್ಯಾನಿಗರ ಧ್ಯಾನವನ್ನು ಹೇಗೆಲ್ಲಾ ಬಳಸುತ್ತಾರೆ ಎಂಬಿತ್ಯಾಧಿಗಳು ನಿತ್ಯಾನಂದ ಬಂಧನದಲ್ಲೇ ಮುಚ್ಚಿ ಹೋಗಿದೆ. ನಿಜವಾಗಿಯೂ ಧ್ಯಾನ ಗುರೂಜಿ ನಿತ್ಯಾನಂದನನ್ನು ಕಾನೂನಿನ ಬಾಹುಗಳಲ್ಲಿ ಬಂಧಿಸಬೇಕು ಎಂಬ ಇರಾದೆ ಸರಕಾರಕ್ಕೆ ಇದ್ದಿದ್ದರೆ ಗಡಿಪಾರು ಆದೇಶ ಮಾಡುತ್ತಿರಲಿಲ್ಲ. ಇಂತಹ ಸಮೂಹ ಸನ್ನಿಗೆ ಒಳ ಪಟ್ಟ ಸಾವಿರಾರು ಮಂದಿ ಇರುವ ಸಾಧ್ಯತೆಗಳು ಇರುತ್ತದೆ. ಈ ನಿಟ್ಟಿನಲ್ಲಿ ಸರಕಾರಗಳು ಮಾಮೂಲಿಯಾಗಿ ಒಂದು ತನಿಖಾ ನೀತಿಯನ್ನು ಹೊಂದಿರುತ್ತದೆ. ಸರಕಾರ ಒಂದೋ ನಿತ್ಯಾನಂದ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ವಿಶೇಷ ತಂಡವನ್ನು ರಚಿಸಬೇಕಿತ್ತು. ಆ ತಂಡದ ಮೂಲಕ ಜಿಲ್ಲಾ ಕೇಂದ್ರದಲ್ಲಿ ದೂರು ವಿಭಾಗವನ್ನು ಸ್ಥಾಪಿಸಿ ಸಂತ್ರಸ್ತರಿಂದ ದೂರುಗಳನ್ನು ಆಹ್ವಾನಿಸಬೇಕಿತ್ತು. ಅಥವಾ ಸರಕಾರ ನ್ಯಾಯಾಂಗ ತನಿಖೆಯನ್ನು ಮಾಡಬೇಕಿತ್ತು. ನಿವೃತ್ತ ನ್ಯಾಯಾಧೀಶರನ್ನು ಆಯೋಗದ ಅಧ್ಯಕ್ಷರನ್ನಾಗಿಸಿ, ಸೂಕ್ತ ಸಿಬ್ಬಂಧಿಯನ್ನು ನೀಡಿ, ಜಿಲ್ಲಾ/ತಾಲ್ಲೂಕು ಕೇಂದ್ರಗಳಲ್ಲಿ ಸಂತ್ರಸ್ತರಿಂದ ದೂರು ಸ್ವೀಕರಿಸಿ ತನಿಖೆ ಮಾಡಬೇಕಿತ್ತು. ದೂರುದಾದರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೇ ಜಾಸ್ತಿ ಇರುವುದರಿಂದ ಮತ್ತು ಧ್ಯಾನದ ಆಶ್ರಮಗಳಿಗೆ ಆಸ್ತಿ ನೀಡಿ ಮೂರ್ಖರಾದವರು ದೂರು ನೀಡಿ ಮತ್ತೆ ಮಾನ ಕಳೆದುಕೊಳ್ಳಲು ಹಿಂಜರಿಯುವುದರಿಂದ ದೂರುದಾರರ ವಿವರಗಳನ್ನು ಗೌಪ್ಯವಾಗಿಡೋ ಕ್ರಮಗಳನ್ನು ಕೈಗೊಂಡು ತನಿಖೆ ಮಾಡಬಹುದು. ಇದೆಲ್ಲಾ ಮಾಡಿದರೆ ನಿತ್ಯಾನಂದನಂತಹ ಗುರೂಜಿಗಳಿಗಿಂತಲೂ ಧ್ಯಾನ ಎಷ್ಟು ಭೋಗಸ್ ಎಂದು ತಿಳಿಯುತ್ತಿತ್ತು. ಒಬ್ಬ ನಿತ್ಯಾನಂದನ ಬಂಧನದ ಜೊತೆಗೆ ಜನರನ್ನು ಸಮೂಹ ಸನ್ನಿಗೆ ಒಳಗಾಗಿಸೋ ಹಲವಾರು ಸ್ವಾಮಿಗಳು, ಗುರೂಜಿಗಳು, ಕಲ್ಕಿಗಳು ಜನರ ಮುಂದೆ ಬೆತ್ತಲಾಗುತ್ತಿದ್ದರು.