ಶಿಕ್ಷಣ ಸಚಿವರೆ, ಕೇಸರೀಕರಣವೇನೂ ಭಾರತದ ಸಂಸ್ಕೃತಿಯಲ್ಲ…

– ಮಹಾದೇವ ಹಡಪದ

ಕೇಸರೀಕರಣಕ್ಕೆ ಒಂದು ಉದಾತ್ತ ಧ್ಯೇಯ, ಉದ್ಧೇಶ ಮತ್ತು ಅರ್ಥವಿದೆ ಎಂದೆಲ್ಲ ಹೇಳುವ ಸಂಕುಚಿತ ಸಂಸ್ಕೃತಿ ಆರಾಧಕರು. ಪಠ್ಯದಲ್ಲಿ ರಾಷ್ಟ್ರೀಯತೆಯೆಂದು ತಾವೇ ಕರೆದುಕೊಳ್ಳುತ್ತಿರುವ, ತಮ್ಮ ಪಕ್ಷ ಸಿದ್ಧಾಂತದ ಅಜಂಡಾವೊಂದನ್ನೆ ಹಿನ್ನೆಲೆಯಾಗಿಟ್ಟುಕೊಂಡು, ಭಾರತೀಯತೆಯನ್ನು ಜಾಗೃತಗೊಳಿಸುವ ಸಲುವಾಗಿಯೇ ಭಾವುಕರಾಗಿ ಇತಿಹಾಸದ ಒಂದೆಳೆಯ ಸತ್ಯವನ್ನೇ ಈ ದೇಶಾಭಿಮಾನದ ಸಂಕೇತವಾಗಿಸಿ, ಭಾರತೀಯತೆ, ರಾಷ್ಟ್ರೀಯತೆ ಎಂಬ ಮನೋಭಾವ ಬೆಳೆಸುವುದಾದರೆ ಇತಿಹಾಸದ ಸಂಶೋಧನಾ ಒರೆಗಲ್ಲಿನಲ್ಲಿ ಫಳಫಳ ಹೊಳೆಯುವ ಸತ್ಯಗಳು ಎಷ್ಟೋ ಇದ್ದಾವಲ್ಲ ಅಂತಹುದನ್ಯಾಕೆ ಪಠ್ಯದಲ್ಲಿ ಸೇರಿಸಲಾಗುವುದಿಲ್ಲ? ಇತಿಹಾಸದಲ್ಲಿನ ಕೇಸರೀಕರಣವನ್ನು ಪತ್ತೆಹಚ್ಚಿ ಅತ್ಯುತ್ಸಾಹದಲ್ಲಿ ಹೇಳುವುದಾದರೆ ಸೋತ ಭಾರತೀಯತೆಯ ಮುಖಭಂಗವನ್ನು ಸಹಿಸಲಾರದ ಬಾಲಿಶ ಅಜಂಡಾವೊಂದನ್ನು ಎಲ್ಲ ಧರ್ಮೀಯರ ಮಕ್ಕಳಿಗೂ ಕಲಿಸುವುದು ಯಾವ ನ್ಯಾಯ? ರಾಷ್ಟ್ರೀಯತೆ ಭಾವನೆ ಜಾಗೃತಗೊಳ್ಳುವುದು ಇತಿಹಾಸದಿಂದ ಎನ್ನುವುದು ನಗೆಪಾಟಲು.

ಓದು-ಬರಹ ಕಲಿಯದ ವ್ಯಕ್ತಿಗಳು ಕೂಡಾ ತನ್ನ ಆಸ್ತಿ, ಜಾತಿ, ಕುಟುಂಬ ಮಕ್ಕಳು ಮರಿಗಳನ್ನು ಪ್ರೀತಿಸುವುದು ಈ ಇಂಡಿಯಾದ ಸಂಸ್ಕೃತಿಯ ಭಾಗವೇ ಅಲ್ಲವೇ! ಅವರುಗಳು ಯಾರೂ ಫ್ಯಾಸಿಸ್ಟ ಅಲ್ಲ. ಮಕ್ಕಳಲ್ಲಿ ಮುಖ್ಯವಾಗಿ ಮನಷ್ಯತ್ವವನ್ನು ಕಲಿಸಬೇಕು, ಸುತ್ತಲಿನ ಪರಿಸರ ಪ್ರೀತಿಸುವುದನ್ನು ಕಲಿಸಬೇಕು. ಇಂದಿಗೂ ಮರ್ಯಾದಾ ಹತ್ಯೆಗಳು, ಮಲ ಬಳಿಯುವುದು, ಮಲ ಹೊರುವುದು, ದಲಿತರ ಮೇಲೆ ದೌರ್ಜನ್ಯ ನಡೆಸುವುದನ್ನು ಶ್ರದ್ಧೆಯಿಂದ ರೂಢಿಸಿಕೊಂಡವರು ಇರುವಾಗ ರಾಷ್ಟ್ರೀಯತೆಯ ಕುರಿತಾಗಿ ಜಾಗೃತಗೊಳ್ಳಲು ಹಪಹಪಿಸುವ ಕೇಸರಿಕರಣ ತನ್ನ ವೈದಿಕೀಕರಣದ ರೂಪುಗಳನ್ನು ಮಕ್ಕಳ ಮನಸ್ಸಿನ ಮೇಲೆ ಹೇರುವ ಮೂಲಕ ಸಾಂಸ್ಕೃತಿಕ ಚಲನೆಯನ್ನು ದಿಕ್ಕುತಪ್ಪಿಸಿ ಸನಾತನ ವೈದಿಕ ಪರಂಪರೆಯನ್ನ ಪುನಃ ಸ್ಥಾಪಿಸುವ ಹುನ್ನಾರವನ್ನು ನಡೆಸುತ್ತಿದೆ.

ಭಾರತ-ಚೀನಾದ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಬಿಜಾಪೂರ ಜಿಲ್ಲೆಯ ಜನತೆ ಅಂದಿನ ಪ್ರಧಾನಿಯವರ ತೂಕದಷ್ಟು ಚಿನ್ನವನ್ನು ತೂಗಿ ಕೊಟ್ಟದ್ದು ಭಾರತೀಯತೆಯ ಅಭಿಮಾನದಿಂದ ಹೊರತು ಕೇಸರೀಕರಣ ಹೇಳುವ ದೇಶಾಭಿಮಾನದಿಂದಲ್ಲ. ಕಟುವಾಸ್ತವದಿಂದಲೇ ದೇಶದ ಆಳ-ಅಂತಸ್ತಿನ ಬಗ್ಗೆ ಗೌರವ ಬರುತ್ತದೆ ಹೊರತು ಪುರೂರವ, ಯೋಗ, ಧ್ಯಾನ, ದತ್ತಪೀಠಗಳಿಂದಲ್ಲ. ವೈಚಾರಿಕ ಜಗತ್ತಿನ ಎಷ್ಟೋ ಸತ್ಯಗಳನ್ನು ಬಗ್ಗಿಸಿ ತಮ್ಮ ಅಜಂಡಾದ ಜೊತೆಗೆ ಸೇರಿಸಿಕೊಂಡು ರಾಜಕೀಯವಾಗಿ ಸದೃಢರಾಗಲು ಹೆಣಗುತ್ತಿರುವವರು ಇಂದು ಕೇಸರೀಕರಣವನ್ನು ಮಕ್ಕಳ ಮನಸ್ಸಿನ ಮೇಲೆ ಗಟ್ಟಿಗೊಳಿಸುವ ಮೂಲಕ ಇತಿಹಾಸದಲ್ಲಿ ಆಗಿರುವ ಕೆಲವು ಸಾಂಸ್ಕೃತಿಕ ಅನುಸಂಧಾನಗಳಿಗೆ ಬೇರೆಯದೇ ಆದ ಬಣ್ಣ ಬರೆಯಲು, ಅರ್ಧ ಸತ್ಯವನ್ನೆ ನೂರು ಸಲ ಜಪಿಸುವ ಮೂಲಕ ಸುಳ್ಳನ್ನು ಸತ್ಯವನ್ನಾಗಿಸುವ ಹುನ್ನಾರ ನಡೆಸಿದ್ದಾರೆ. ನನ್ನದು-ನಮ್ಮದು ಎನ್ನುವಲ್ಲಿ ಇನ್ನೊಬ್ಬರದು-ಇನ್ನೊಂದನ್ನು ದ್ವೇಷಿಸುವ ಭಾವ ಇರುತ್ತದೆ ಎನ್ನುವ ಸತ್ಯವನ್ನು ಭೋದಿಸುವ ಇವರ ವಸುದೈವ ಕುಟುಂಬಕಂ ಕಲ್ಪನೆ ಕೇಸರೀಕರಣವಲ್ಲದೆ ಮತ್ತೇನು?

ಕರ್ನಾಟಕದ ಶಿಕ್ಷಣ ಸಚಿವ ಕಾಗೇರಿಯವರು ಮೂಲ ಭಾರತೀಯ ಸಂಸ್ಕೃತಿಯಲ್ಲಿ ಮಾನಸಿಕ ಗುಲಾಮಗಿರಿ ಇರಲಿಲ್ಲವೆಂದು ಹೇಳಿರುವುದು ಗಮನಿಸಿದರೆ ಕಾಮಾಲೆ ಕಣ್ಣಿಂದ ಇತಿಹಾಸವನ್ನು ನೋಡುತ್ತಿರುವವರು ಯಾರೆಂಬುದನ್ನು ಅವರೇ ಹೇಳಿಕೊಂಡಂತಾಗಿದೆ. ನಿಮ್ಮ ಸಂಸ್ಕೃತಿಯಲ್ಲಿ ರಾಮನನ್ನು ಪ್ರತಿಷ್ಠಾಪಿಸುವ ಕಾರಣಕ್ಕಾಗಿಯೇ ರಾವಣನನ್ನು ರಾಕ್ಷಸನನ್ನಾಗಿ ಸೃಷ್ಟಿಸಿದೀರಲ್ಲ? ರಾಮ ಶಿವಧನಸ್ಸು ಮುರಿಯುವಲ್ಲಿ ಶಿವನೆಂಬ ದ್ರಾವಿಡ ಸಂಸ್ಕೃತಿಯೊಂದನ್ನು ಅಳಿಸಿ ವೈದಿಕತೆಯನ್ನು ಸ್ಥಾಪಿಸಿದರಲ್ಲ? ಒಂದು ವರ್ಗಕ್ಕೆ ವೈದಿಕರು ಸೃಷ್ಟಿಸಿರುವ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ, ಅಕ್ಷರ ಅಭ್ಯಾಸ, ಅಧ್ಯಯನಗಳಲ್ಲಿ ತೊಡಗಲು ನಿಮ್ಮ ಮೂಲ ಸಂಸ್ಕೃತಿಯಲ್ಲಿ ಅವಕಾಶ ಮಾಡಿಕೊಡಲಾಗಿತ್ತೋ? ಇಂಥ ಎಷ್ಟೋ ಅಸಮಾನತೆಗಳನ್ನು ಸೃಷ್ಟಿಸಿ ಸರ್ವೇಜನಾಃ ಸುಖಿನೋಭವಂತು ಎಂದು ಹೇಳುವ ನಿಮ್ಮ ಈ ಜಗತ್ತಿನ ಪ್ರೀತಿಯಲ್ಲಿ ಕೇಸರ ಹೊರತಾದ ಬೇರೆ ಬಣ್ಣಗಳಿಗೆ ಅವಕಾಶವಿಲ್ಲವೇ?

ಮುಕ್ತವಾದ ಸಮಾಜ ಕಟ್ಟುವ ಕನಸುಗಳನ್ನು ಎಳೆವಯಸ್ಸಿನಲ್ಲಿಯೇ ಬೋಧಿಸಬೇಕು. ಮುಕ್ಕಾದ ಇತಿಹಾಸವನ್ನಲ್ಲ. ವೇದವು ಗೊಡ್ಡು ಪುರಾಣ ಕಟ್ಟೆಯ ಹರಟೆ ಎಂಬ ಅರ್ಥದ ವಚನಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ. ಅಂಥ ವೈಚಾರಿಕ ತರ್ಕವನ್ನ ಪಠ್ಯವಾಗಿಸುತ್ತೀರಾ? ಭಾರತೀಯ ತತ್ವಶಾಸ್ತ್ರದಲ್ಲಿ ಬರುವ ಭಾವುಕ ಸಿದ್ಧಾಂತಿಗಳ ವಿಚಕ್ಷಕ ದೃಷ್ಟಿಕೋನದ ನಿಲುವುಗಳನ್ನು ಪಠ್ಯವಾಗಿ ಇಡಬಲ್ಲರೇ? ಅದಿರಲಿ, ಸ್ವಾತಂತ್ರ್ಯಾಪೂರ್ವದ 1918 1818 ರಲ್ಲಿ ಮಹಾರಾಷ್ಟ್ರದ ಭೀಮಾತೀರದ ಕೋರೆಗಾಂವದಲ್ಲಿ ಪೇಶ್ವೆ ಮತ್ತು ಮಹಾರರ ನಡುವೆ ಯುದ್ಧ ನಡೆದಾಗ ಪೇಶ್ವೆಗಳ 32 ಸಾವಿರ ಸೈನಿಕರನ್ನು ಮಾಹಾರರ 500 ಸೈನಿಕರು ಕೇವಲ ಹನ್ನೆರಡು ಗಂಟೆಗಳಲ್ಲಿ ಸೋಲಿಸಿದ (ಆ ಘಟನೆಯ ನೆನಪಿಗಾಗಿ ಕೋರೆಗಾಂವನಲ್ಲಿ ಶೌರ್ಯಸ್ಥಂಭ ಸ್ಥಾಪಿಸಲಾಗಿದೆ) ಇತಿಹಾಸವನ್ನೂ ನಿಮ್ಮ ಪಠ್ಯದಲ್ಲಿ ಸೇರಿಸುವುದಿಲ್ಲ ಯಾಕೆ?

ಇಡೀ ಜಗತ್ತನ್ನು ಪ್ರೀತಿಸು ಎಂಬ ತತ್ವವನ್ನು ಸಾರಿರುವುದಾಗಿ ಹೇಳಿಕೊಳ್ಳುವ ವೈದಿಕ ಮನಸ್ಸುಗಳು ಯಾವ ಅಸ್ಮಿತೆಯನ್ನು ಉಳಿಸಿಕೊಳ್ಳಲು ಯಾವ ರಾಷ್ಟ್ರೀಯತೆ ಭಾವನೆಯನ್ನು ಜಾಗೃತಗೊಳಿಸಲು ಶಿಕ್ಷಣದಲ್ಲಿ ಕೇಸರೀಕರಣದ ಪಠ್ಯ ಹಾಕುತ್ತಿದ್ದಾರೆ? ಇತಿಹಾಸದಲ್ಲಿ ಮರೆಯಾದ ಧರ್ಮಧಾರಿತ ಅಂದರೆ ವೈದಿಕ ಪುರೋಹಿತಶಾಹಿತ್ವವನ್ನು ಪ್ರತಿಪಾದಿಸಿದ ವ್ಯಕ್ತಿಗಳನ್ನು ಪರಿಚಯಿಸುವುದು ನಮ್ಮ ಶಿಕ್ಷಣ ಸಚಿವರಿಗೆ ಭಾರತೀಯತೆ, ರಾಷ್ಟ್ರೀಯತೆಯ ಅಭಿಮಾನವಾಗಿಬಿಟ್ಟಿದೆ. ಮಕ್ಕಳಲ್ಲಿ ಮೊದಲು ಸ್ವಾತಂತ್ರ್ಯದ ಕಲ್ಪನೆ, ಮಾನವೀಯ ಮೌಲ್ಯಗಳು, ಸಮಾನತೆಯ ಬದುಕಿನ ಕುರಿತಾದ ಅರಿವು ಮೂಡಿಸುವುದು ಮುಖ್ಯ. ಕೇಸರೀಕರಣವೇ ಭಾರತೀಕರಣ ಎನ್ನುವ ಶಿಕ್ಷಣ ಸಚಿವರು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು-ತಮ್ಮ ಪಕ್ಷ ಸಿದ್ಧಾಂತದ ಅಜಂಡಾವನ್ನು ಕರ್ನಾಟಕದ ಮಕ್ಕಳ ಮನಸ್ಸಿಗೆ ತುರುಕುವ ಪ್ರಯತ್ನ ರಾಷ್ಟ್ರೀಯತೆ ಆಗಲಾರದು.

7 thoughts on “ಶಿಕ್ಷಣ ಸಚಿವರೆ, ಕೇಸರೀಕರಣವೇನೂ ಭಾರತದ ಸಂಸ್ಕೃತಿಯಲ್ಲ…

  1. Pavan

    Maha deva avare.. Bharathada ithihasa thilisi kododanne Kesarikarana ennuvudadare kesarikarana olleyader bidi…

    Reply
  2. ಮಹಾದೇವ ಹಡಪದ

    ವಿನಯಜೀ ಹೌದು ಕಣ್ಣದೋಷದಿಂದ 1818 ಜನೆವರಿ 1 ಬರೆಯುವುದು 1918 ಆಗಿದೆ… ಆದರೆ ಸೈನಿಕರ ಸಂಖ್ಯೆ 32000 ಸರಿಯಾಗಿದೆ.

    Reply
  3. Naveen

    Whether its right or wrong if history is taught as it is it will be light for e future generation. Else it bring darkness. When we taught we lost to china it made us to probe why we lost to china. When we always taught we are cruels, insensitive, sub standard it made us to feel guilt ourselves always and be slaves to Englishmans.
    So do we remain gult ridden second grade clerks or let learn something from Which we get inspire, get motivation and move forward.

    Let learn the evils of our past take them as lesson and let learn also the brave and grand things of our past and let get inspire from it.
    We need history which makes us get lesson, improve and move forward not the one which only builds guilty and make us less confident second grade clerk in bpo co.
    Thanks
    Naveen Hanmantgad

    Reply
  4. Pavan

    Well said Naveen.. Till I completed 2nd PUC we thought Gajni and all were Heros, later only we got to know those are all smugglers and they theft India.. but our old text indicates those are all heros.. If Govt tells they are smugglers, some people will tel that is Kesarikarana and all… shame on some people..

    Reply
  5. ರಾಕೇಶ್ ಶೆಟ್ಟಿ

    ಮಹಾದೇವ ಅವರೇ,
    “ರಾಮ ಶಿವಧನಸ್ಸು ಮುರಿಯುವಲ್ಲಿ ಶಿವನೆಂಬ ದ್ರಾವಿಡ ಸಂಸ್ಕೃತಿಯೊಂದನ್ನು ಅಳಿಸಿ ವೈದಿಕತೆಯನ್ನು ಸ್ಥಾಪಿಸಿದರಲ್ಲ?”
    ಪುರಾಣಕ್ಕೂ,ಇತಿಹಾಸಕ್ಕೂ ವ್ಯತ್ಯಾಸವಿದೆಯಲ್ವೆ? ಆದರೂ ಬಿಲ್ಲು ಮುರಿಯುವ ರಾಮಾಯಣ ಬರೆದ ವಾಲ್ಮೀಕಿ ಆರ್ಯನೇ? (ನನ್ನ ಪಾಲಿಗೆ ಈ ಆರ್ಯ-ದ್ರಾವಿಡ ಥಿಯರಿ ಅನ್ನುವುದು ಈಗಿನ ಕಾಲ ಘಟ್ಟಕ್ಕೆ ಸತ್ತ ಕುದುರೆಯಿದ್ದಂತೆ.ಅದರಿಂದ್ಯಾವ ಪ್ರಯೋಜನವೂ ಇಲ್ಲ)

    ೨ ವರ್ಷದ ಹಿಂದೆ ಕೇಸರಿಕರಣದ ಕುರಿತು ಚರ್ಚೆಯಾಗುವಾಗ ನಾನು ಬರೆದುಕೊಂಡಿದ್ದ ಲೇಖನವಿದು :

    ಬಹುಷಃ ಈಗಲೂ ಸ್ಥಿತಿ ಹಾಗೆ ಇದೆ ಅನ್ಕೊತಿನಿ, ಅದೇ ಗಾಂಧೀಜಿ,ನೆಹರೂ,ಅದೇ ಸತ್ಯಾಗ್ರಹ,ಅದೇ ಶಾಂತಿ,ಅಸಹಕಾರ,ಕ್ವಿಟ್ ಇಂಡಿಯಾ ಚಳುವಳಿ ಇವೆಲ್ಲವೂ ಮಾತ್ರ ಇದ್ದಿದ್ದರಿಂದಲೇ ‘ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು’ ಅನ್ನೋ ಇತಿಹಾಸದ ಪಾಠ. ಇವಿಷ್ಟನ್ನೇ ಹೇಳುವ ಇತಿಹಾಸವನ್ನೇ ಓದಿ ನಾನು ಬೆಳೆದಿದ್ದು. ನೀವು ಇದನ್ನೇ ಓದಿದ್ದಿರಿ ಅಲ್ವಾ? ನನ್ನ ಶಾಲಾ ಜೀವನ ಮುಗಿದು ಕಾಲೇಜ್ ಮುಗಿಸುವ ಹಂತಕ್ಕೆ ಬರುವವರೆಗೂ ನಾನು ಇವಿಷ್ಟರಿಂದಲೇ ನಮಗೆ ಸ್ವಾತಂತ್ರ ಬಂದಿದ್ದು ಅಂತ ತಿಳ್ಕೊಂಡಿದ್ದೆ.ಯಾಕೆಂದರೆ ಅಲ್ಲಿಯವರೆಗೂ ನಾನು ಈ ಮಹನಿಯರಿಬ್ಬರ ಸಾಧನೆಗಳೇ ಹೆಚ್ಚಾಗಿ ಇದ್ದಂತಹ ಇತಿಹಾಸವನ್ನು ಓದಿ ಬಂದವನಾಗಿದ್ದೆ. ಹೆಚ್ಚೆಂದರೆ ಸುಭಾಷ್,ತಿಲಕ್,ರವಿಂದ್ರನಾಥ್ ಠಾಗೋರ್,ಲಾಲ ಲಜಪತ ರಾಯ್ ಅವರ ಬಗ್ಗೆ ಒಂದೆರಡು ಲೈನ್ ಓದಿದ ನೆನಪಿತ್ತು ಅಷ್ಟೆ. ನಮ್ಮ ಇತಿಹಾಸದಲ್ಲಿ ಒಬ್ಬ ಭಗತ್ ಸಿಂಗ್ ಇದ್ದ ಅಂತ ನನಗೆ ತಿಳಿದಿದ್ದೇ, ‘The Legend of Bhagat Singh’ ಅನ್ನುವ ಚಿತ್ರ ನೋಡಿದ ಮೇಲೆಯೇ. ಆಗಲೇ ಚಂದ್ರ ಶೇಖರ್ ಆಜಾದ್,ರಾಜ್ ಗುರು,ಸುಖ ದೇವ್,ಭಟುಕೆಶ್ವರ ಮುಂತಾದವರ ಬಗ್ಗೆ ತಿಳಿದಿದ್ದು. ಸುಭಾಷರ ಐ.ಎನ್.ಎ ಅಭಿಯಾನದ ಬಗ್ಗೆಯಾಗಲಿ, ರಾಸ್ ಬಿಹಾರಿ ಬೋಸ್ ಎಂಬ ಮಹಾನ್ ಕ್ರಾಂತಿಕಾರಿಯ ಬಗ್ಗೆಯಾಗಲಿ, ಇಲ್ಲ ಸ್ವಾತಂತ್ರ ಚಳುವಳಿಗೊಸ್ಕರ ಜೀವವನ್ನೇ ತೇದ ವೀರ ಸಾವರ್ಕರ್ ಬಗ್ಗೆಯೂ ನಂಗೆ ತಿಳಿದಿರಲಿಲ್ಲ. ಕೇವಲ ಒಬ್ಬ ನಾಯಕನನ್ನು ಮೆಚ್ಚಿಸುವುದಕ್ಕೊಸ್ಕರ ಅವನ ಬಾಲಬುಡುಕರು ನಮಗೆ ಓದಿಸಿದ ಇತಿಹಾಸವೆಂಬುದು ಅರೆಬೆಂದ ಅನ್ನದಂತೆ.ಅಲ್ಲಿ ನಮಗೆ ಯಾವುದು ಪೂರ್ತಿಯಾಗಿ ಸಿಗುವುದಿಲ್ಲ.ಹಾಗೇ ಮಂಗಳೂರಿನ ಅಬ್ಬಕ್ಕ, ಅಲುಪ, ತುಳುವರ ಇತಿಹಾಸವೆಲ್ಲಿ? ಹುಬ್ಬಳ್ಳಿಯ ಪುಟ್ಟ ಪೋರ ನಾರಾಯಣ ಮಹಾದೇವ ಧೋನಿ ಎಷ್ಟು ಜನರಿಗೆ ಗೊತ್ತು?

    ನಾನು ಹೇಳದೆ ಬಿಟ್ಟ, ನೀವು ಹೇಳಿದಂತ : ( 1818 ರಲ್ಲಿ ಮಹಾರಾಷ್ಟ್ರದ ಭೀಮಾತೀರದ ಕೋರೆಗಾಂವದಲ್ಲಿ ಪೇಶ್ವೆ ಮತ್ತು ಮಹಾರರ ನಡುವೆ ಯುದ್ಧ ನಡೆದಾಗ ಪೇಶ್ವೆಗಳ 32 ಸಾವಿರ ಸೈನಿಕರನ್ನು ಮಾಹಾರರ 500 ಸೈನಿಕರು ಕೇವಲ ಹನ್ನೆರಡು ಗಂಟೆಗಳಲ್ಲಿ ಸೋಲಿಸಿದ (ಆ ಘಟನೆಯ ನೆನಪಿಗಾಗಿ ಕೋರೆಗಾಂವನಲ್ಲಿ ಶೌರ್ಯಸ್ಥಂಭ ಸ್ಥಾಪಿಸಲಾಗಿದೆ) ಇತಿಹಾಸವನ್ನೂ ನಿಮ್ಮ ಪಠ್ಯದಲ್ಲಿ ಸೇರಿಸುವುದಿಲ್ಲ ಯಾಕೆ? ) ಇನ್ನು ಹಲವಾರು ಘಟನೆಗಳು ಸೇರಿದ ಸತ್ಯ ಸಂಗತಿಗಳೇ ನಮ್ಮ ಇತಿಹಾಸ ಪಾಠವಾಗಬೇಕಲ್ಲವೇ?

    ಸ್ವಾತಂತ್ರ್ಯ – ಹೋರಾಟ ಇದರ ಬಗ್ಗೆ ಅಷ್ಟೇ ಅಲ್ಲ ಅಂದಿನ ಉದಾತ್ತ ವ್ಯಕ್ತಿಗಳಾದ, ವಿವೇಕಾನಂದ, ಅಭೇದಾನಂದ, ವಿನೋಬ ಭಾವೆ ಇನ್ನು ಮುಂತಾದವರ ಬಗ್ಗೆ ನಮಗೆಲ್ಲ ತಿಳುವಳಿಕೆ ಪಕ್ಕಕ್ಕಿರಲಿ, ಇವರ ಹೆಸರುಗಳೇ ನನಗೆ ನೆನಪಿನಲ್ಲಿರೋದು ಕಾಲೇಜು ದಿನಗಳಲ್ಲಿ ನಾನು ಓದಿದ ಪಠ್ಯೇತರ ಪುಸ್ತಕಗಳಿಂದ. ಇದಕ್ಕೆಲ್ಲ ಕಾರಣವಾಗಿರುವ ನಮ್ಮ ಶಿಕ್ಷಣವ್ಯವಸ್ಥೆಯನ್ನು ಎಷ್ಟು ಹಾಡಿ ಹೊಗಳಿದರೂ ಸಾಲದು.

    ಪರಿಷ್ಕರಣೆ ಮಾಡುವುದು ತಪ್ಪೇನು ಅಲ್ಲ.ಪರಿಷ್ಕರಣೆ ಆದ ನಂತರ ಅದರಲ್ಲಿ ಯಾವ ಅಂಶ ಸರಿ ಇಲ್ಲ ಅನ್ನುವುದನ್ನು ಸಾಬಿತು ಮಾಡಬಹುದಲ್ಲವೇ? ಅದು ಬಿಟ್ಟು ಬಿಜೆಪಿಯವರು ಮಾಡುವುದೆಲ್ಲಕ್ಕು ಕೇಸರಿ ಬಣ್ಣ ಹಚ್ಚುವುದಾದರೆ ಕಾಂಗ್ರೆಸ್ಸು,ಕಮ್ಯುನಿಸ್ಟರಿಗೆ ಹಸಿರು,ಕೆಂಪು ಬಣ್ಣ ಹಚ್ಚಬಹುದಲ್ಲವೇ?

    ನಾವ್ಯಾಕೆ ಬಹಳಷ್ಟು ವಿಷಯಗಳನ್ನು ವಿರೋಧಿಸಲೇಬೇಕು ಅನ್ನುವಂತೆ ವಿರೋಧಿಸುತ್ತೇವೆ?

    Reply
  6. Pavan

    Rakesh Shetty avare, Nivu heliddu 100 percent correct… kelavarige Kesarikarana anta mathu adodu fashion agide.. adakkee bayi chapala thiriskolthare aste…

    Reply

Leave a Reply

Your email address will not be published. Required fields are marked *