ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ : ಸಮಾಜದ ಕಪ್ಪು ಮುಖ


-ಡಾ.ಎಸ್.ಬಿ. ಜೋಗುರ


ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳು ವಿಶ್ವದ ಎಲ್ಲ ರಾಷ್ಟ್ರಗಳಿಂದಲೂ ಗಮನ ಸೆಳೆಯುವ ಸಾಮಾಜಿಕ ಸಂಗತಿಯಾಗಿದೆ. ಈ ದಿಶೆಯಲ್ಲಿ ಅನೇಕರು ಸ್ಥಿತಿ ಅಧ್ಯಯನವನ್ನು ಮಾಡಿ ಕೆಲ ಅಪರೂಪವಾದ ಮಾಹಿತಿಯನ್ನು ಹೊರಹಾಕಿರುವುದಿದೆ. ಡಯಾನಾ ರಸಲ್ ಎನ್ನುವವರು ಸ್ಯಾನ್ ಫ್ರಾನ್ಸಿಸ್ಕೊದ ಸುಮಾರು 930 ಮಹಿಳೆಯರನ್ನು ಅಧ್ಯಯನ ಮಾಡಿ, ಅವರು ಬಾಲಕಿಯಾಗಿದ್ದಾಗ ಅವರ ಮೇಲೆ ಜರುಗಿದ ದೌರ್ಜನ್ಯಗಳನ್ನು ಕುರಿತು ಅವರಿಂದ ಮಾಹಿತಿ ಕಲೆಹಾಕಿ ಅಧ್ಯಯನ ಮಾಡಿರುವರು. ಅಲ್ಲಿ ಕೆಲವರು ಬೇಬಿ ಸಿಟರ್ ಒಬ್ಬನಿಂದ, ತಂದೆಯಿಂದ, ಸಹೋದರನಿಂದ, ನೆರೆಯವನಿಂದ, ಚಿಕ್ಕಪ್ಪನಿಂದ ಹೀಗೆ ಅನೇಕ ಹತ್ತಿರದ ಸಂಬಂಧಿಗಳಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ವಸ್ತು ಸ್ಥಿತಿ ಅಧ್ಯಯನಗಳನ್ನು ಆಕೆ ಮಾಡಿ ಮಾಹಿತಿ ನೀಡಿರುವುದಿದೆ.

ರಾಶೆಲಾ ಎನ್ನುವ ಬಾಲಕಿ 10 ವರ್ಷದವಳಿದ್ದಾಗ ಆಕೆ ಇದ್ದ ವಸತಿಶಾಲೆಯ ವಾರ್ಡನ್ ಆಕೆಯನ್ನು ಬೆತ್ತಲು ಮಾಡಿ ತನ್ನ ಜನನಾಂಗಗಳನ್ನು ಮುಟ್ಟುವಂತೆ ಪ್ರಚೋದಿಸಿದ ಬಗ್ಗೆ ಆಕೆ ಸಂಶೋಧಕಿ ಡಯಾನಾ ರಸಲ್ ಎದುರು ಹೇಳಿಕೊಂಡಿರುವುದಿದೆ. ಇದು ಕೆವಲ ಒಂದು ಬಾರಿಯಲ್ಲ, ಸುಮಾರು ಹತ್ತಾರು ಬಾರಿ ಎನ್ನುವುದನ್ನು ರಾಶೆಲಾ ಹೇಳಿರುವದಿದೆ. [Sexual exploitation-Diana Russell-p25] ಡಯಾನಾ ರಸೆಲ್ ತನ್ನ ಅಧ್ಯಯನದಲ್ಲಿ ಕಂಡುಕೊಂಡ ಸಂಗತಿಗಳೆಂದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಹತ್ತಿರದ ಸಂಬಂಧಿಗಳು, ಅಗಮ್ಯಗಮನ ಸಂಬಂಧಗಳು, ಮಲತಂದೆ ಇಲ್ಲವೆ ಮಲತಾಯಿ, ವಸತಿಶಾಲೆಗಳಲ್ಲಿ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಹೆಚ್ಚು ಎನ್ನುವುದನ್ನು ತಮ್ಮ ಅಧ್ಯಯನದ ಮೂಲಕ ತೊರಿಸಿರುವುದಿದೆ. ತಂದೆ ಮಗಳನ್ನು ಲೈಂಗಿಕವಾಗಿ ಶೋಷಿಸುವ ಸಂಬಂಧದ ಪ್ರಮಾಣವನ್ನು ಸ್ಯಾನ್ ಫ್ರಾನ್ಸಿಸ್ಕೊ ನಗರದಲ್ಲಿ 4.5 ಪ್ರತಿಶತದಷ್ಟಿರುವ ಬಗ್ಗೆಯೂ ಆಕೆ ತನ್ನ ಅಧ್ಯಯನದಲ್ಲಿ ತಿಳಿಸಿರುವುದಿದೆ.

ಬಾಲಕ ಇಲ್ಲವೇ ಬಾಲಕಿ ಒಟ್ಟಾರೆ ನಿರಾಕರಿಸಲಾಗದ ಸ್ಥಿತಿಯಲ್ಲಿಯೇ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವ ರೀತಿಯನ್ನು ಆಕೆ ಕೆಲ ಸ್ಥಿತಿ ಅಧ್ಯಯನಗಳಲ್ಲಿ ಚಿತ್ರಿಸಿರುವುದಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎನ್ನುವದು 18 ವರ್ಷದೊಳಗಿನ ಬಾಲಕ ಇಲ್ಲವೇ ಬಾಲಕಿಯ ಜೊತೆಗಿನ ಲೈಂಗಿಕ ಕ್ರಿಯೆ ಎಂದಾಗುತ್ತದೆ. ಡಯಾನಾ ಮಾತ್ರ ಈ ಲೈಂಗಿಕ ಕ್ರಿಯೆ ಇಲ್ಲವೇ ದೌರ್ಜನ್ಯ ಎನ್ನುವದನ್ನು ಕೇವಲ ಅವರೊಂದಿಗೆ ಭೌತಿಕ ಸಂಪರ್ಕ ಹೊಂದುವುದಕ್ಕೆ ಮಾತ್ರ ಸೀಮಿತಗೊಳಿಸದೇ ಅವರನ್ನು ಮುಟ್ಟುವುದು, ಅವರ ಜನನಾಂಗಗಳನ್ನು ಸ್ಪರ್ಷಿಸುವುದು, ಅಶ್ಲೀಲವಾದ ಚಿತ್ರಗಳನ್ನು ತೋರಿಸುವುದು ಮುಂತಾದ ಅಂಶಗಳು ಈ ಲೈಂಗಿಕ ದೌರ್ಜನ್ಯ ಎನ್ನುವ ಅರ್ಥದಲ್ಲಿ ಅಡಕವಾಗಿರುವ ಬಗ್ಗೆ ಅವರು ಹೇಳಿರುವುದಿದೆ.

ಇದು ಅಮೆರಿಕೆಯಂಥಾ ಮಹಾನಗರಗಳಲ್ಲಾಯಿತು. ನಮ್ಮಲ್ಲಿ ಅದೆಲ್ಲಾ ತೀರಾ ಕಡಿಮೆ ಎಂದು ವಾದಮಾಡುವಂಥ ಸ್ಥಿತಿ ಈಗಿಲ್ಲ. ಕರ್ನಾಟಕದಂತಹ ಸಾಂಸ್ಕೃತಿಕ ನಾಡಿನಲ್ಲಿಯೂ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವುದಿದೆ. ರಾಜ್ಯ ಅಪರಾಧಿ ವಿಭಾಗದ ಅಂಕಿಅಂಶಗಳ ಪ್ರಕಾರ [ಎಸ್.ಸಿ.ಆರ್.ಬಿ.] ನಮ್ಮ ರಾಜ್ಯದಲ್ಲಿ 2006 ರ ಸಂದರ್ಭದಲ್ಲಿ 84 ಪ್ರಕರಣಗಳು ಲೈಂಗಿಕ ದೌರ್ಜನ್ಯದ ವಿಷಯವಾಗಿ ದಾಖಲಾಗಿದ್ದರೆ, 2008 ರಲ್ಲಿ ಆ ಪ್ರಮಾಣ 97ರಷ್ಟಿದೆ. 2009 ರಲ್ಲಿ ಅದು 104 ರಷ್ಟಿದೆ. 2010 ರಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಮ್ಮಲ್ಲಿ 107 ರಷ್ಟು ದಾಖಲಾಗಿವೆ. ಇದೆಲ್ಲವನ್ನು ನೋಡಿದಾಗ ನಮ್ಮಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣ ಕಡಿಮೆ ಇದೆಯೆಂದು ಭಾವಿಸುವ ಅವಶ್ಯಕತೆಯಿಲ್ಲ.

ಇನ್ನು ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ. 2010 ರ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಪ್ರಮಾಣ ಹೀಗಿದೆ. ಬೆಳಗಾಂವದಲ್ಲಿ ಅತೀ ಹೆಚ್ಚು ಅಂದರೆ 23 ಪ್ರಕರಣಗಳು, ಮೈಸೂರಿನಲ್ಲಿ 19 ಪ್ರಕರಣಗಳು, ಕೊಡಗಿನಲ್ಲಿ 12 ಪ್ರಕರಣಗಳು, ಚಿಕ್ಕಮಗಳೂರಿನಲ್ಲಿ 10 ಪ್ರಕರಣಗಳು, ಶಿವಮೊಗ್ಗದಲ್ಲಿ 9 ಪ್ರಕರಣಗಳು, ಮಂಡ್ಯದಲ್ಲಿ 8 ಪ್ರಕರಣಗಳು, ಬಿದರದಲ್ಲಿ 6 ಪ್ರಕರಣಗಳು, ಚಿತ್ರದುರ್ಗದಲ್ಲಿ 6 ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ನಮ್ಮಲ್ಲಿಯೂ ಈಗ ಮಕ್ಕಳ ಮೆಲಾಗುವ ಲೈಂಗಿಕ ದೌರ್ಜನ್ಯದ ಪ್ರಮಾಣಗಳು ಕಡಿಮೆಯಿಲ್ಲ ಎನ್ನುವುದು ವಿಧಿತವಾಗುತ್ತದೆ.

ಬೆಳಗಾಂವ ಜಿಲ್ಲೆಯಲ್ಲಿ ಕೇವಲ ಲೈಂಗಿಕ ದೌರ್ಜನ್ಯಗಳು ಮಾತ್ರವಲ್ಲದೇ ಮಕ್ಕಳ ಅಪಹರಣದ ಸಂಗತಿಗಳು ಕೂಡಾ ಬಯಲಾಗಿವೆ. ರಾಜ್ಯದ ಇತರೆ ಕಡೆಗಳಲ್ಲಿ ಮಕ್ಕಳ ಅಪಹರಣಗಳು ಜರುಗಿವೆಯಾದರೂ ಬೆಳಗಾವಿ ಮಾತ್ರ ಎಲ್ಲ ಜಿಲ್ಲೆಗಳಿಗಿಂತಲೂ ಈ ವಿಷಯವಾಗಿ ಮುಂಚೂಣಿಯಲ್ಲಿದೆ. 2010 ರ ಸಂದರ್ಭದಲ್ಲಿ ಸುಮಾರು 34 ರಷ್ಟು ಮಕ್ಕಳ ಅಪಹರಣದ ಪ್ರಕರಣಗಳು ಬೆಳಗಾವಿಯಲ್ಲಿ ಜರುಗಿದೆ [ದಿ ಹಿಂದೂ ಜೂನ್ 20-2012].

ಇಡೀ ದೇಶದಲ್ಲಿ ಮಕ್ಕಳ ಮೇಲೆ ಒಂದಿಲ್ಲಾ ಒಂದು ಬಗೆಯ ದೌರ್ಜನ್ಯಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ದಾಖಲಾಗುವ ಪ್ರಮಾಣ ತೀರಾ ಕಡಿಮೆ. ಮಕ್ಕಳನ್ನು ವಸ್ತುಗಳಂತೆ ಮಾರಾಟ ಮಾಡುವ ದೊಡ್ದ ಜಾಲವೂ ನಮ್ಮಲ್ಲಿದೆ. ಮಕ್ಕಳು ದೇವರು ಎಂದು ಹೇಳುತ್ತಲೇ ಈ ಬಗೆಯ ಲೈಂಗಿಕ ದೌರ್ಜನ್ಯ, ಮಾರಾಟ, ಬಾಲಕಾರ್ಮಿಕರನ್ನಾಗಿ ಮಾಡುವುದು ನಿರಂತರವಾಗಿ ನಡದೇ ಇವೆ ಎನ್ನುವುದು ನಾಗರಿಕ ಸಮಾಜದ ಒಂದು ಕಪ್ಪು ಮುಖದರ್ಶನ ಎಂದೇ ಅರ್ಥ.

ಈ ಬಗೆಯ ಲೈಂಗಿಕ ದೌರ್ಜನ್ಯಕ್ಕೆ ಅತಿ ಮುಖ್ಯವಾದ ಕಾರಣಗಳಾಗಿ ಈ ಕೆಳಗಿನ ಸಂಗತಿಗಳನ್ನು ಹೇಳಬಹುದು.

  •   ಪುರುಷ ಪ್ರಾಧಾನ್ಯತೆ
  •    ತಂದೆ-ತಾಯಿ ಇಲ್ಲದಿರುವುದು
  •    ತಾಯಿ ಮಾತ್ರ ಇರುವುದು
  •    ದುರ್ಬಲವಾಗಿರುವ ತಂದೆ ತಾಯಿಗಳು
  •    ಹೆಚ್ಚು ಜನ ಒಂದೇ ಕಡೆ ಮಲಗುವ ಕುಟುಂಬ
  •    ಮನೆಯಿಂದ ದೂರ ಉಳಿಯುವುದು
  •    ಇನ್ನೊಬ್ಬರ ಮನೆಯಲ್ಲಿ ಉಳಿಯುವುದು ಇಲ್ಲವೆ ವಸತಿಗೃಹದಲ್ಲಿ ಉಳಿಯುವುದು
  •    ಮಗುವಿನ ಮುಗ್ದತೆ ಮತ್ತು ಅಸಹಾಯಕತೆ

ಫಿಂಕ್ಲರ್ ಎನ್ನುವ ಚಿಂತಕರು ಹೇಳುವ ಹಾಗೆ ಮಕ್ಕಳಿಗೆ ಮನೆಯಲ್ಲಿ ಈ ಬಗೆಯ ಕೃತ್ಯಗಳನ್ನು ಪ್ರತಿರೋಧಿಸುವ ಬಗ್ಗೆ ತಿಳುವಳಿಕೆ ಮತ್ತು ಶಿಕ್ಷಣವನ್ನು ನೀಡಬೇಕು ಕೆಲಬಾರಿ ಒತ್ತಡದಿಂದ ಈ ಬಗೆಯ ಲೈಂಗಿಕ ದೌರ್ಜನ್ಯಗಳು ಜರುಗುವ ಬಗೆಯನ್ನು ಅವರು ಡಯಾನಾ ರಸಲ್‌ರ ಒಂದು ಸ್ಥಿತಿ ಅಧ್ಯಯನವನ್ನು ಆಧರಿಸಿ ಅವರು ಮಾತನಾಡಿರುವುದಿದೆ. ಆತ ಆ ಮಗುವಿನ ಮಲತಂದೆ. ಆಕೆ ಮಲಗುವ ಕೋಣೆಗೆ ನುಗ್ಗಿ, ಚೀರಿದರೆ ತಲೆದಿಂಬನ್ನು ಬಾಯಿಗೆ ಹಿಡಿದು ಸಾಯಿಸುವುದಾಗಿ ಹೇಳಿದ. ಆ ಬಾಲಕಿಯ ಮೇಲೆ ರಾಕ್ಷಸನಂತೆ ಎರಗಿದ. ಆ ಬಾಲಕಿಗೆ ದಿಕ್ಕೇ ತೋಚಲಿಲ್ಲ. ತಕ್ಷಣವೇ ಕೈಗೆ ಸಿಕ್ಕ ಹ್ಯಾಮರ್ ಒಂದರಿಂದ ಆತನ ತಲೆಗೆ ಹೊಡೆದು ಓಡಿ ಹೋದಳು. ಇದನ್ನು ಹೇಳುತ್ತಾ ಇದು ಎಲ್ಲ ಬಾಲಕಿಯರಿಗೆ ಸಾಧ್ಯವಾಗುವುದಿಲ್ಲ ಎನ್ನುವ ವಾಸ್ತವವನ್ನೂ ಅವರು ಚರ್ಚಿಸಿದ್ದಾರೆ. ಒಟ್ಟಾರೆ ಮೇಲೆ ಹೇಳಲಾದ ಕಾರಣಗಳಿಂದ ಅವಳನ್ನು ಬಿಡುಗಡೆಗೊಳಿಸಿದರೆ ತಕ್ಕ ಮಟ್ಟಿಗೆ ಈ ಬಗೆಯ ದೌರ್ಜನ್ಯದಿಂದ ಅವಳನ್ನು ಪಾರು ಮಾಡಬಹುದು. ಆ ದಿಶೆಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ಮತ್ತು ತರಬೇತಿಯ ಅವಶ್ಯಕತೆಯೂ ಇದೆ.

Leave a Reply

Your email address will not be published. Required fields are marked *