– ಸೂರ್ಯ ಮುಕುಂದರಾಜ್
ಯಡಿಯೂರಪ್ಪನವರ ಬೆಂಬಲ ಪಡೆದು ಮುಖ್ಯಮಂತ್ರಿ ಗಾದಿಗೇರುತ್ತಿರುವ ಜಗದೀಶ್ ಶೆಟ್ಟರ್ ಮಾಡಿರುವ ಈ ಡಿನೋಟಿಫಿಕೇಷನ್ ಪ್ರಕರಣ ಅವರನ್ನು ಯಡಿಯೂರಪ್ಪನವರ ಸಾಲಿಗೆ ಸೇರಿಸುವುದಷ್ಟೇ ಅಲ್ಲದೆ, ಎಕರೆಗಳ ಲೆಕ್ಕದಲ್ಲಿ ತೆಗೆದುಕೊಂಡರೆ ಯಡಿಯೂರಪ್ಪನವರು ಮಾಡಿದ್ದನ್ನೂ ಮೀರಿಸುತ್ತದೆ. ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರದಲ್ಲಿ ರೈತರಿಗೆ ಮಾರುಕಟ್ಟೆ ಮಾಡಿಕೊಡುವ ಒಂದು ಉತ್ತಮ ಯೋಜನೆಯನ್ನು ಮಣ್ಣು ಪಾಲು ಮಾಡಿದ ಶೆಟ್ಟರ್ ಅವರ ಮಹತ್ಕಾರ್ಯವನ್ನು ಇಲ್ಲಿ ವಿವರವಾಗಿ ದಾಖಲೆಗಳ ಸಮೇತ ಮುಂದಿಡಲಾಗಿದೆ. ಈ ದಾಖಲೆಗಳನ್ನು ಕಳೆದ 8 ತಿಂಗಳಿಂದ ಶೋಧಿಸುತ್ತಿದ್ದು ಇನ್ನೂ ಅನೇಕ ದಾಖಲೆಗಳು ಸಿಗಬೇಕಿದೆ. ಆದರೆ ಇನ್ನು ಒಂದೆರಡು ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ ಮತ್ತು ಸ್ವಚ್ಛ ವ್ಯಕ್ತಿತ್ವದ ಪ್ರಾಮಾಣಿಕ ಎಂದು ಮಾಧ್ಯಮಗಳಲ್ಲಿ ಹೊಗಳಿಸಿಕೊಳ್ಳುತ್ತಿರುವ ಶೆಟ್ಟರ ಇನ್ನೊಂದು ಮುಖವನ್ನು ಜನತೆಯ ಮುಂದೆ ಬಹಿರಂಗ ಮಾಡುವ ಆರಂಭಿಕ ಪ್ರಯತ್ನ ಇದು.
ರಾಜ್ಯದ ರೈತರಿಗೆ ಅನುಕೂಲವಾಗಲು 1998-99ನೇ ವರ್ಷದಲ್ಲಿ ಬೃಹತ್ ಕೃಷಿ ಮಾರುಕಟ್ಟೆಯೊಂದನ್ನು ಒಂದೇ ಜಾಗದಲ್ಲಿ ತೆರೆಯಲು ರಾಜ್ಯ ಸರ್ಕಾರ ಮುಂದಾಗಿತ್ತು. ಇಲ್ಲಿ ಗೋಡೌನ್ಗಳು, ಹರಾಜುಕಟ್ಟೆ, ರೈತರು-ವ್ಯಾಪಾರಿಗಳಿಗೆ ಸಾಂದರ್ಭಿಕ ವಸತಿ ಅನುಕೂಲ, ಸೂಕ್ತ ರಸ್ತೆ ಮಾರ್ಗ ಇತ್ಯಾದಿ ಆಧುನಿಕ ಸೌಲಭ್ಯಗಳಿಂದ ಕೂಡಿದ ಏಕಸೂರಿನ ಅಡಿಯ , ಮುಂದುವರೆದ ದೇಶಗಳಲ್ಲಿ ಇರುವಂತಹ ರೀತಿಯ ಮೇಗಾ ಮಾರುಕಟ್ಟೆ ಇರಬೇಕೆಂಬ ಇರಾದೆ ಕೃಷಿ ಉತ್ಪನ್ನಗಳ ಮಾರಾಟ ಇಲಾಖೆಗೆ (ಎ.ಪಿ.ಎಂ.ಸಿ.) ಇತ್ತು. ಇಲ್ಲಿ ಆಲುಗಡ್ಡೆ, ಈರುಳ್ಳಿ, ದಿನಸಿ, ತರಕಾರಿ… ಹೀಗೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಇದಾಗಬೇಕು ಎಂಬ ಪ್ರಸ್ತಾವನೆ ಅದಾಗಿತ್ತು.
ಇದಕ್ಕಾಗಿ ಕರ್ನಾಟಕ ಸರ್ಕಾರ ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕಿನ (ಯಶವಂತಪುರಕ್ಕೆ ಹೊಂದಿಕೆಯಂತೆ ಇರುವ) ಹೊನ್ನಸಂದ್ರ, ಪಿಳ್ಳದಳ್ಳಿ, ವಡೇರಹಳ್ಳಿ, ಮತ್ತಹಳ್ಳಿ, ಶೇಷಗಿರಿಪಾಳ್ಯದಲ್ಲಿ ಒಟ್ಟು 356.36 1/2ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ದಿನಾಂಕ 20.03.2001ರಲ್ಲಿ 4(1) ಹಾಗು 6(1) ಕಲಂನ ಅಡಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಬೆಂಗಳೂರು ನಗರ ಭೂಸ್ವಾಧೀನ ಅಧಿಕಾರಿಗಳಿಂದ ವಿಶೇಷ ಜಿಲ್ಲಾಧಿಕಾರಿಗಳು ಮಾಡಿದ್ದರು. ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ 356.36 1/2 ಎಕರೆಗೆ ನೋಟಿಫಿಕೇಷನ್ ಹೊರಬಿದ್ದ ನಂತರ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ತಕ್ಷಣವೇ ವಶಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ 13,01,47,091 ರೂಗಳನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳ ಬಳಿ ಠೇವಣಿ ಹಣವಾಗಿ ಪಾವತಿಸಿತ್ತು. ಕೃಷಿ ಮಾರುಕಟ್ಟೆಗಾಗಿ ಸ್ವಾಧೀನ ಮಾಡಿಕೊಂಡಿದ್ದ ಒಟ್ಟು 356.36 ಎಕರೆ ಸದರಿ ಜಮೀನಿನಲ್ಲಿ 168.27 ಎಕರೆ ಸರ್ಕಾರಿ ಭೂಮಿಯಾಗಿತ್ತು. ಉಳಿಕೆ 188.9 1/2 ಎಕರೆ ಭೂಮಿ ಖಾಸಗಿಯವರದ್ದಾಗಿತ್ತು. ಈ ಖಾಸಗಿ ಭೂಮಿಗೆ ಪರಿಹಾರ ಕೊಡಲು ಸುಮಾರು 13 ಕೋಟಿಗಳ ಹಣವನ್ನು ಎ.ಪಿ.ಎಂ.ಸಿ. ಇಲಾಖೆ ಜಿಲ್ಲಾ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಬಳಿ ಠೇವಣಿ ಇಟ್ಟಿದ್ದು, ಕೊನೆಗೆ ಕಂದಾಯ ಇಲಾಖೆ ದಿನಾಂಕ 04.03.2006ರಲ್ಲಿ ಇಡೀ ಖಾಸಗಿಯವರ ಭೂಮಿಯನ್ನು ಸ್ವಾಧೀನ ಅಸಿಂಧು ಎಂಬ ನೆಪದ ಅಡಿ ಭೂಸ್ವಾಧೀನದಿಂದ ಬಿಡುಗಡೆ ( ಡಿನೋಟಿಫಿಕೇಷನ್) ಮಾಡಿದೆ. ಇದಾದ ನಂತರ ಅದೇ ಕಂದಾಯ ಇಲಾಖೆಯ ಅಧಿಕಾರಿಗಳು ಸದರಿ ಮೊತ್ತದಲ್ಲಿ 4(1) ಹಾಗು 6(1) ಅಧಿಸೂಚನಾ ಪ್ರಕಟಣೆ ಹಾಗೂ ಪ್ರಚಾರದ ವೆಚ್ಚವಾಗಿ 1,64,772 ರೂಗಳನ್ನು ಮುರಿದುಕೊಂಡು ಉಳಿಕೆ ಹಣವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಿಂದಿರುಗಿಸಲು ಪತ್ರ ಬರೆದಿದೆ.
ಈ ಅಸಿಂಧು ಪ್ರಕ್ರಿಯೆ 2004ರಲ್ಲೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಸಲು ಅಂದಿನ ಎಸ್.ಎಂ. ಕೃಷ್ಣ ಸರ್ಕಾರದ ಕೆಲವು ಮಂತ್ರಿಗಳು ಪ್ರಯತ್ನಿಸಿದ್ದರು. ಕೆಲವು ರಿಯಲ್ ಎಸ್ಟೇಟ್ ಡೆವಲಪರ್ಗಳು ಖಾಸಗಿ ಜಮೀನನ್ನು 4(1), 6(1) ನಿಂದ ಬಿಡಿಸಿ ತಮ್ಮ ಬಡಾವಣೆಗಳನ್ನು ನಿರ್ಮಿಸಲು ಇದರ ಹಿಂದೆ ಬಿದ್ದಿದ್ದರು. ಕಂದಾಯ ಇಲಾಖೆಯ ಅಧಿಕಾರಿಗಳು ಆಳುವ ಮಂತ್ರಿಗಳ ಹಾಗು ರಿಯಲ್ ಎಸ್ಟೇಟ್ ಕುಳಗಳ ಪ್ರಭಾವಕ್ಕೆ ಮಣಿದು ಕೃಷಿ ಮೇಗಾ ಮಾರುಕಟ್ಟೆಗೆ ವಶಪಡಿಸಿಕೊಂಡಿದ್ದ 356.36 1/2 ಎಕರೆ ಭೂಮಿಯಲ್ಲಿ ಖಾಸಗಿಯವರ 188.9 1/2 ಗುಂಟೆಯನ್ನು ಭೂಸ್ವಾಧೀನ ಅಸಿಂಧು ಮಾಡಲು ‘ವಿಳಂಬ ಕಾಲ’ ಎಂಬ ಗ್ರೌಂಡನ್ನು ಸೃಷ್ಠಿ ಮಾಡಿದ್ದರು. ಆದರೆ ಅವರ ಆಸೆ ಆಗ ಇಡೇರಲಿಲ್ಲ. ಇದಕ್ಕೆ ಕಾರಣ ಒಮ್ಮೆ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟು 4(1) ಹಾಗು 6(1) ಆದರೆ ಅಸಿಂಧು ಹೆಸರಿನ ಡಿನೋಟಿಫಿಕೇಷನ್ ಆಗಲಿ, ಇತರ ಯಾವುದೇ ಬಗೆಯ ಡಿನೋಟಿಫಿಕೇಷನನ್ನಾಗಲಿ ಅಂದಿನ ಸಚಿವ ಸಂಪುಟಕ್ಕೆ ಮಾತ್ರ ಕೈಬಿಡಲು ಅಧಿಕಾರವಿದೆ. ಅಂದು ಈ ನಿರ್ಣಯ ಸಚಿವ ಸಂಪುಟದ ಮುಂದೆ ಬಂದಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಸಿಂಧು ಪರಿಣಾಮ ಉಂಟುಮಾಡಿದ ಕಂದಾಯ ಅಧಿಕಾರಿಗಳಿಗೆ ಛೀಮಾರಿ ಹಾಕಿ ಭೂಸ್ವಾಧೀನದ ಮರು ಪ್ರಕ್ರಿಯೆ ನಡೆಸುವಂತೆ ಸೂಚಿಸಿ ಸ್ವಾಧೀನ ಕೈಬಿಡುವುದನ್ನು ತಿರಸ್ಕರಿಸಿದ್ದರು. ಸಚಿವ ಸಂಪುಟದ ಮುಂದೆ ಈ ಸಂಗತಿ ಬಂದಾಗ ತಿರಸ್ಕೃತಗೊಳ್ಳುವಂತೆ ಮಾಡಿದ್ದರಲ್ಲಿ ಕೃಷಿ ಮಾರುಕಟ್ಟೆ ಸಮಿತಿಯ ಅಧಿಕಾರಿಗಳ ಶ್ರಮವೂ ಇತ್ತು. ಅಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯಾದರ್ಶಿಗಳಾಗಿದ್ದ ಜಿ. ಶರತ್ಚಂದ್ರ ರಾನಡೆ, ಆಡಳಿತಾಧಿಕಾರಿ ಜಿ.ವಿ.ಕೊಂಗವಾಡರು ನಿರ್ದೇಶಕರಿಗೆ (ಕೃಷಿ ಮಾರಾಟ ಇಲಾಖೆ) ಪತ್ರ ಬರೆದು ತಮ್ಮ ಇಲಾಖೆ ಯೋಜಿಸುತ್ತಿರುವ ಮೆಗಾ ಮಾರುಕಟ್ಟೆ ಕಟ್ಟಲು ಈ ಇಡೀ ಭೂಮಿ ಬೇಕೆಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿಗಳನ್ನು ಸಿಎಂ, ಸ್ವಾಧೀನಾಧಿಕಾರಿ, ಕಂದಾಯ ಕಾರ್ಯದರ್ಶಿ ಎಲ್ಲರಿಗೂ ರವಾನಿಸಿದ್ದರು.
“ಭೂಸ್ವಾಧೀನದ ಮರು ಪ್ರಕ್ರಿಯೆಯಾದರೂ ಸರಿ, ಈಗಾಗಲೇ ನಡೆದಿರುವ ಪ್ರಕ್ರಿಯೆಯನ್ನು ಸರಿ ಮಾಡಿದರಾದರೂ ಸರಿ ಉದ್ದೇಶಿತ ಯೋಜನೆಗೆ ಭೂಮಿ ನೀಡಿ” ಎಂದು 18.06.2004ರಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಯಿತು.
ದುರಂತವೆಂದರೆ. ಸ್ವಾಧೀನವಾದ ಈ ಭೂಮಿ ಹೈಪವರ್ ಕಮಿಟಿಯ ವರದಿಯನ್ನು ಗಾಳಿಗೆ ತೂರಿ ದಿನಾಂಕ 04.03.2006ರಲ್ಲಿ (ಕುಮಾರಸ್ವಾಮಿ-ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ) ಡಿನೋಟಿಫಿಕೇಷನ್ ಆಯ್ತು. ಇನ್ನೂ ವಿಚಿತ್ರವೆಂದರೆ ಭೂಸ್ವಾಧೀನ ಕಾಯ್ದೆ ಕಲಂ 4(1) ಹಾಗು 6(1) ರ ಪ್ರಕಾರ ಸ್ವಾಧೀನಗೊಂಡ ಭೂಮಿಯ ನಿರ್ಧಾರವನ್ನು ಸಚಿವ ಸಂಪುಟ ಮಾತ್ರ ಮಾಡಬೇಕು ಎಂದಿದ್ದರೂ ಕೇವಲ ಕಿಲ್ಲಾ ಕಂದಾಯ ಅಧಿಕಾರಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕೈಯಲ್ಲೇ ಇದನ್ನು ಮಾಡಿಸಲಾಯ್ತು.
ರಾಜ್ಯದಲ್ಲಿ ಮೆಗಾ ಮಾರುಕಟ್ಟೆಗಳ ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಹೈಪವರ್ ಕಮಿಟಿ (ಉನ್ನತ ಮಟ್ಟದ ಸಮಿತಿ)ಯನ್ನು ಮಾಡಿತ್ತು. ಇದರ ಸಭೆಯಲ್ಲಿ ವಿಷಯ ಮೂರು ಆಗಿ ಚರ್ಚೆಗೊಂಡು, “ಸರ್ಕಾರಿ ಜಮೀನನ್ನು ಮಾತ್ರ ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಕ್ರಮ ಜರುಗಿಸಿ, ಖಾಸಗಿ ಜಮೀನಿನಲ್ಲಿ ಸರ್ಕಾರಿ ಜಮೀನಿಗೆ ಹೊಂದಿಕೊಂಡಿದ್ದನ್ನು ಮಾತ್ರ ವಶಪಡಿಸಿಕೊಳ್ಳುವುದು ಸೂಕ್ತ” ಎಂಬ ಸಚಿವರ ಅಭಿಪ್ರಾಯ ನಡಾವಳಿ ಪತ್ರದಲ್ಲಿ ದಾಖಲಾಗಿದೆ. ಇದನ್ನೆ ಅಂಗೀಕರಿಸಿ ಖಾಸಗಿಯವರ ಕೇವಲ ಎರಡು ಎಕರೆಗಳನ್ನು ಮಾತ್ರ ಭೂಸ್ವಾಧೀನ ಮಾಡಿಕೊಂಡು ಉಳಿಕೆ 186.9 1/2 ಎಕರೆಗಳನ್ನು ಸನ್ಮಾನ್ಯ ಸಚಿವರು ಅಧಿಸೂಚನೆ ಅಸಿಂಧುವೆಂದು ಮತ್ತು ಕೇವಲ ಸರ್ಕಾರಿ ಭೂಮಿಯನ್ನು ಸಂಪೂರ್ಣ ವಶಪಡಿಸಿಕೊಳ್ಳಲು ಸಚಿವ ಸಂಪುಟದ ಸಭೆ ಮುಂದೆ ತಂದು ಒಪ್ಪಿಗೆ ಪಡೆಯಲು ಕಂದಾಯ ಇಲಾಖೆಯ ಭೂಮಾಪನಾ ಉಪ ಕಾರ್ಯದರ್ಶಿಗೆ ಸೂಚಿಸುತ್ತಾರೆ.
ಆದರೆ ಖಾಸಗಿಯವರ 186.9 1/2 ಎಕರೆಗಳನ್ನು ಕೈಬಿಡುವ ವಿಚಾರವನ್ನು ಸಂಪುಟದ ಮುಂದೆ ತರುವುದಿಲ್ಲ. ಅಸಿಂಧು ಕಾರಣವೇ ಪ್ರಧಾನ ಎಂದಾಗಿದ್ದರೆ ಖಾಸಗಿಯವರ 188.9 1/2 ಎಕರೆಯಲ್ಲಿ 186.9 1/2 ಯನ್ನು ಕೈಬಿಟ್ಟು ಕೇವಲ ಎರಡು ಎಕರೆಗಳನ್ನು ಸ್ವಾಧೀನ ಮಾಡಿಕೊಳ್ಳುವುದು ಕೂಡಾ ಕಾನೂನಿನ ತೊಡಕೇ ಆಗಿತ್ತಲ್ಲವೆ?. ರೈತರ, ಜನರ, ಇಲಾಖೆಯ ಕೆಲಸವೇ ಮುಖ್ಯವಾಗಿದ್ದರೆ ಆ ಎರಡು ಎಕರೆಗೆ ಕಾಯ್ದೆಯ (ಅಧಿಸೂಚನೆ ಅಸಿಂಧು) ತೊಡಕು ಬಗೆಹರಿಸಿದಂತೆ ಉಳಿಕೆ 186.9 1/2 ಎಕರೆ ಖಾಸಗಿ ಜಾಗಕ್ಕೂ ಬಗೆಹರಿಸಿ ಉನ್ನತ ಮಟ್ಟದ ಮೆಗಾ ಮಾರುಕಟ್ಟೆ ತಲೆ ಎತ್ತುವಂತೆ
ವಿಪರ್ಯಾಸವೆಂದರೆ ಇದೆಲ್ಲದರ ಹಿಂದೆ ಇರುವವರು ಈಗಿನ ನಮ್ಮ ಭಾವಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ರವರು; ಜೆಡಿ(ಎಸ್)-ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದವರು. ಇವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನ ಭೂಮಿಯನ್ನು ಕೈಬಿಡುವ ನಿರ್ಣಯ ತೆಗೆದುಕೊಂಡಿದ್ದು. ಇದಾದ ನಂತರ ದಿನಾಂಕ: 04.03.2006ರಂದು ಸಚಿವ ಸಂಪುಟದ ಗಮನಕ್ಕೆ ತರದೆ ಕೈ ಬಿಟ್ಟಿದ್ದು. ಈಗ ಆ ಜಾಗದಲ್ಲಿ ಭವ್ಯವಾದ, ಐಷಾರಾಮಿ ಖಾಸಗಿ ಲೇಔಟ್ಗಳು ತಲೆ ಎತ್ತಿವೆ!
ಅರ್ಧ ಎಕರೆ, ಒಂದು ಎಕರೆ ಜಾಗದ ಡಿನೋಟಿಫಿಕೇಷನ್ ವಿಚಾರಗಳಲ್ಲೆಲ್ಲಾ ಮಂತ್ರಿ, ಮುಖ್ಯಮಂತ್ರಿಗಳು ಜೈಲಿಗೆ ಹೋಗುವ ಪರಿಸ್ಥಿತಿ ನ್ಯಾಯಾಂಗದ ಕೃಪೆಯಿಂದ ಇಂದು ಇದೆ. ಇದು ನಡೆಯುತ್ತಿರುವ ವಾಸ್ತವ. ಆದರೆ 186.9 1/2 ಎಕರೆಯನ್ನು ಕನಿಷ್ಠ ಸಚಿವ ಸಂಪುಟದ ಗಮನಕ್ಕೂ ತರದೆ, ಕೇವಲ ತಮ್ಮ ಕಂದಾಯ ಇಲಾಖೆಯ ಅಧಿಕಾರಿಗಳ ಹಂತದಲ್ಲೆ ಕೈಬಿಟ್ಟಿರುವುದು ಅಕ್ರಮ ಎನ್ನದಿರಲು ಸಾಧ್ಯವೇ? ಎಸ್.ಎಂ. ಕೃಷ್ಣರ ಸರ್ಕಾರ ಮಾಡಲು ಹಿಂಜರಿದ ಡಿನೋಟಿಫಿಕೇಷನ್ ಶೆಟ್ಟರ್ ಕಂದಾಯ ಮಂತ್ರಿಯಾದಾಗ ಮಾಡಲು ಇದ್ದ ಒತ್ತಡಗಳಾದರೂ ಏನು? ಭ್ರಷ್ಟಾಚಾರದ ಕಾರಣ ಇಲ್ಲದೆ ಬೇರೆ ಇರಲು ಸಾಧ್ಯವೇ? ಪ್ರಾಮಾಣಿಕ ಮತ್ತು ಕೈಶುದ್ಧ ಎನ್ನಿಸಿಕೊಳ್ಳುತ್ತಿರುವ ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ಜನರ ಮುಂದೆ ಸ್ವಚ್ಚವಾಗಿ ಬರುವ ಸಮಯ ಇದಾಗಿದೆ.