ನೀವೇ ಮಾಧ್ಯಮದ ಮೇಲೆ ಚಾಟಿ ಬೀಸಿದರೆ ಹೇಗೆ ?


-ಚಿದಂಬರ ಬೈಕಂಪಾಡಿ


 

ಮಂಗಳೂರಲ್ಲಿ ‘ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ’ಘಟನೆಯ ಕುರಿತು ಪೊಲೀಸರ ವಕ್ರದೃಷ್ಟಿ ಮಾಧ್ಯಮದವರ ಮೇಲೆ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು. ದಕ್ಷ ಪೊಲೀಸ್ ಅಧಿಕಾರಿ ಎನ್ನುವ ಖ್ಯಾತಿ ಪಡೆದಿದ್ದ ಹಾಲಿ ಮಂಗಳೂರು ಪೊಲೀಸ್ ಆಯುಕ್ತರು ಹೀಗೇಕಾದರು? ಈ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೇನೆ. ಅವರು ಈ ಹಿಂದೆ ದಕ್ಷಿಣ ಕನ್ನಡ ಪೊಲೀಸ್ ಅಧಿಕಾರಿಯಾಗಿದ್ದವರು. ಕೋಮುಗಲಭೆ ನಿಯಂತ್ರಿಸುವುದರಲ್ಲಿ ಪಳಗಿದವರು. ಅತ್ಯಂತ ಸೂಕ್ಷ್ಮ ಸಂದರ್ಭದಲ್ಲೂ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದವರು. ಪತ್ರಕರ್ತನಾಗಿ ಅವರನ್ನು ಹತ್ತಿರದಿಂದ ಬಲ್ಲವನಾದ ನಾನೇ ಈಗ ಕಕ್ಕಾಬಿಕ್ಕಿಯಾಗುವಂತಾಗಿದೆ.

ದಾಳಿ ನಡೆದ ವಿಚಾರವನ್ನು ಪೊಲೀಸರಿಗೆ ತಿಳಿಸಲಿಲ್ಲ ಎನ್ನುವ ಆರೋಪದ ಮೇಲೆ ಇಬ್ಬರು ಮಾಧ್ಯಮ ಸ್ನೇಹಿತರ ಮೇಲೆ ಕೇಸು ಜಡಿದು ಸಮಾಧಾನಪಟ್ಟುಕೊಳ್ಳುವ ಮನಸ್ಥಿತಿ ಸೀಮಂತ್ ಕುಮಾರ್ ಅವರಿಗೆ ಬಂದದ್ದು ನಿಜಕ್ಕೂ ಬೇಸರದ ಸಂಗತಿ. ಮಾಧ್ಯಮದವರ ಹೇಳಿಕೆಯನ್ನು ನಂಬುವುದಾದರೆ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದಾರೆ, ಆದರೆ ಸ್ವೀಕರಿಸಿಲ್ಲವಂತೆ.(ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಿದರೆ ಗೊತ್ತಾಗುತ್ತದೆ ಎನ್ನುವುದು ಅವರಿಗೂ ಗೊತ್ತು). ಮಾಹಿತಿಯನ್ನು ಮಾಧ್ಯಮದವರೇ ಕೊಡಬೇಕೆಂದು ನಿರೀಕ್ಷೆ ಮಾಡಿದ್ದೇ ಮೊದಲ ತಪ್ಪು, ಹಾಗಾದರೆ ಇಂಟೆಲ್‌ಜೆನ್ಸಿ ಬರ್ಖಾಸ್ತ್ ಆಗಿದೆಯೇ? ಅಥವಾ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂದುಕೊಳ್ಳೋಣವೇ?

ಇಂಥ ಘಟನೆಗಳು ಇಲ್ಲಿಗೇ ಅಂತ್ಯವಾಗಬೇಕು ಎನ್ನುವುದು ಎಲ್ಲರ ಹಾರೈಕೆಯಾದರೂ, ಪೊಲೀಸರು ಮಾಧ್ಯದವರತ್ತ ನೆಟ್ಟಿರುವ ನೋಟ ನೋಡಿದರೆ ದಾಳಿ ಹತ್ತಿಕ್ಕುವುದಕ್ಕಿಂತಲೂ ಮಾಧ್ಯಮದ ಮಂದಿಯ ಬಾಯಿಗೆ ಬೀಗ ಹಾಕುವಂಥ ಯತ್ನಕ್ಕೆ ಹಾತೊರೆಯುವಂತಿದೆ.

ಪೊಲೀಸರು ಅನೈತಿಕ ಚಟುವಟಿಕೆ (ಮಾರ್ನಿಂಗ್ ಮಿಸ್ಟ್ ಘಟನೆಯ ಬಗ್ಗೆ ಅಲ್ಲ) ಅಥವಾ ಮಾದಕ ವಸ್ತು ಮಾರಾಟ ದಂಧೆಯ ಬಗ್ಗೆ ದೂರು ನೀಡಿದರೆ ಸ್ಪಂದಿಸುತ್ತಿಲ್ಲ ಎನ್ನುವುದು ಹತಾಶೆಯಾದವರ ಮಾತು. ಇದನ್ನು ಇಲಾಖೆ ನೊದಲು ಅರ್ಥ ಮಾಡಿಕೊಳ್ಳಬೇಕು. ಇಂಥ ಹತಾಶೆಯಿಂದಾಗಿಯೇ ನೈತಿಕ ಪೊಲೀಸ್ ಕಾರ್ಯಾಚರಣೆಗಳು ಆರಂಭವಾದವು. ಇಲಾಖೆ ಸರಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದರೆ ಜನ ಸ್ವಯಂಪ್ರೇರಣೆಯಿಂದ ದೂರುಕೊಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಅನಿವಾರ್ಯವಾಗಿ ಸಣ್ಣಪುಟ್ಟ ರಾಜಿಪಂಚಾಯಿತಿಗಳಿಗೆ, ವಸೂಲಿಗೆ ಭೂಗತ ಲೋಕದ ಸಂಪರ್ಕ ಇದ್ದವರ ಮೊರೆಹೋಗುತ್ತಿದ್ದಾರೆ. ಅದೂ ಭೂಮಾಫಿಯಾ ಬಂದ ಮೇಲೆ ಮಂಗಳೂರಿನ ಚಿತ್ರಣವೇ ಬದಲಾಗಿದೆ. ಹತ್ತು-ಹದಿನೈದು ವರ್ಷಗಳ ಹಿಂದೆ ಯಾಕೆ ಇಂಥ ಕಾರ್ಯಾಚರಣೆ ಮಂಗಳೂರಲ್ಲಿ ನಡೆಯುತ್ತಿರಲಿಲ್ಲ? ದಾಳಿಯ ಸುದ್ದಿ ಮಾಧ್ಯಮದವರಿಗೆ ಮೊದಲು ಮುಟ್ಟಿದೆ ಎನ್ನುವುದರ ಅರ್ಥ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಡಿಮೆಯಾಗಿದೆ ಎನ್ನುವುದೇ ಹೊರತು ಬೇರೆ ಅಲ್ಲ. ಈ ವಿಚಾರವನ್ನು ಅತ್ಯಂತ ತಾಳ್ಮೆಯಿಂದ ಯೋಚಿಸಿ.

ಹಾಸಟ್ಟಿ ಎನ್ನುವ ಪೊಲೀಸ್ ಅಧಿಕಾರಿಯನ್ನು ರೌಡಿಗಳು ಹತ್ಯೆ ಮಾಡಿದಾಗ ಈ ಜಿಲ್ಲೆಯ ಜನ, ಮಾಧ್ಯಮಗಳು (ಆಗ ಟಿವಿ ಚಾನೆಲ್‌ಗಳಿರಲಿಲ್ಲ)  ಪೊಲೀಸರಿಗೆ ಕೊಟ್ಟ ಬೆಂಬಲವನ್ನು ಅವಲೋಕಿಸಿ. ಆಗ ಜಾತಿ, ಮತ, ಧರ್ಮ, ಭಾಷೆ ಇಂಥ ಅಡ್ಡಗೋಡೆಗಳಿರಲಿಲ್ಲ. ಕಸ್ತೂರಿರಂಗನ್, ರೇವಣ್ಣ ಸಿದ್ಧಯ್ಯ, ಕೆಂಪಯ್ಯ, ನೀಲಂ ಅಚ್ಚುತರಾವ್, ಎಂ.ಆರ್.ಪೂಜಾರ್, ಭಾಸ್ಕರ್ ರಾವ್, ಸುರೇಶ್ ಬಾಬು ಮುಂತಾದ ಪೊಲೀಸ್ ಅಧಿಕಾರಿಗಳಿದ್ದಾಗ ಯಾಕೆ ಮಾಧ್ಯಮಗಳ ಮೇಲೆ ಕೆಂಗಣ್ಣು ಬಿದ್ದಿರಲಿಲ್ಲ? ರಿಪ್ಪರ್ ಚಂದ್ರನ್ ದಂಡುಪಾಳ್ಯ ಗ್ಯಾಂಗಿಗಿಂತೇನೂ ಕಡಿಮೆ ಅಪರಾಧ ಮಾಡಿದವನಲ್ಲ. ಅವನ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾದರೆನ್ನುವ ಇತಿಹಾಸವಿದೆ. ಈ ಮಾತುಗಳನ್ನು ಹೇಳಿದ ಕಾರಣವೆಂದರೆ ದಾಳಿ ಮಾಡಿದವರು ಯಾರು, ಅದು ಸರಿಯೇ, ತಪ್ಪೇ? ಸ್ಟೇ ಹೋಮ್‌ನಲ್ಲಿ ನಡೆದಿದ್ದೇನು? ಎನ್ನುವ ಕುರಿತು ಕಾಳಜಿ ಮಾಡುವುದಕ್ಕಿಂತಲೂ ಮಾಧ್ಯಮದಲ್ಲಿ ದಾಳಿ ಸುದ್ದಿ ಹರಿದಾಡಿತೆನ್ನುವ ಸಿಟ್ಟಿಗೆ ಮಾಧ್ಯಮಗಳ ಮಂದಿಗೆ ಬರೆ ಹಾಕಲು ಹೊರಟದ್ದು ಸರಿಯಲ್ಲ. ಕ್ಷಣಕ್ಕೆ ಸಿಟ್ಟು ಮತ್ತು ಹತಾಶೆಯಿಂದ ಹಾಗೆ ಮಾಡಿದರೆ ಭವಿಷ್ಯದ ದಿನಗಳಲ್ಲಿ ಇಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ.

ಪೊಲೀಸ್ ಇಲಾಖೆ ಯಾವಾಗಲೂ ಮಾಹಿತಿ ಕಲೆ ಹಾಕಲು ಮುಂಚೂಣಿಯಲ್ಲಿರಬೇಕು. ಮಾಹಿತಿ ಮೂಲಗಳನ್ನು ಇಲಾಖೆ ಹೊಂದಿದ್ದರೆ ಮಾತ್ರ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯ. ಪೊಲೀಸ್ ಮತ್ತು ಮಾಧ್ಯಮಗಳ ಮಂದಿಯ ನಡುವೆ ಸಂಪರ್ಕ ಇರಬೇಕಾಗುತ್ತದೆ. ಅದು ಹಿಂದೆ ಇತ್ತು, ಈಗ ಇಲ್ಲ. ಆದರೆ ಅಂಥ ಸಂಪರ್ಕ ವೃತ್ತಿಧರ್ಮವನ್ನು ಮೀರುವಂತಿರಬಾರದು.

ಇದಕ್ಕೊಂದು ಉದಾಹರಣೆ ಅಂದುಕೊಳ್ಳಬಹುದು. ಉಡುಪಿಯಲ್ಲಿ ದನದ ವ್ಯಾಪಾರಿಯನ್ನು ಸಂಘಟನೆಯವರು ಬೆತ್ತಲೆ ಮಾಡಿದ ಘಟನೆ ನೆನಪಿರಬಹುದು. ಆಗ ನಾನು ಪತ್ರಿಕೆಯ ಪ್ರಧಾನ ವರದಿಗಾರನಾಗಿದ್ದೆ. ಉಡುಪಿಯಿಂದ ಬೆತ್ತಲೆ ಪ್ರಕರಣದ ಸುದ್ದಿ ಮತ್ತು ಫೋಟೋಗಳು ಕಚೇರಿಗೆ ಬಂದಿದ್ದವು, ಇಲ್ಲಿಂದ ಬೆಂಗಳೂರಿನ ಪ್ರಧಾನ ಕಚೇರಿಗೆ ರವಾನೆಯಾಗಿದ್ದವು. ಈ ಸುದ್ದಿಯನ್ನು ಫೋಟೋ ಸಹಿತ ಮುಖಪುಟದಲ್ಲಿ ಪ್ರಕಟಿಸಲು ಕಾರ್ಯನಿರ್ವಾಹಕ ಸಂಪಾದಕರು ನಿರ್ಧರಿಸಿ ರಾತ್ರಿ ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ (ರಾತ್ರಿ 1 ಗಂಟೆ ಹೊತ್ತಿಗೆ) ಮತ್ತೊಮ್ಮೆ ಘಟನೆಯ ಮಾಹಿತಿಯನ್ನು ನನ್ನಿಂದ ಪಡೆದುಕೊಂಡರು. ಪತ್ರಿಕೆಯಲ್ಲಿ ಆ ಸುದ್ದಿ ಫೋಟೋ ಸಹಿತ ಪ್ರಕಟವಾಗಿತ್ತು. ಆಗ ಧರಂ ಸಿಂಗ್ ಮುಖ್ಯಮಂತ್ರಿ. ಉಡುಪಿಯಲ್ಲಿ ಮುರುಗನ್ ಎಸ್ಪಿಯಾಗಿದ್ದರು. ಪಶ್ಚಿಮ ವಲಯದ ಡಿಐಜಿಯಾಗಿ ಸತ್ಯನಾರಾಯಣ ರಾವ್ ಇದ್ದರು. ಮುಂಜಾನೆ ಈ ಸುದ್ದಿ ಓದಿದ ಧರಂ ಸಿಂಗ್ ಕೆಂಡಾಮಂಡಲರಾಗಿದ್ದಾರೆ. ನೇರವಾಗಿ ಎಸ್ಪಿಗೆ ದೂರವಾಣಿ ಕರೆ ಮಾಡಿ ಉಡುಪಿಯಲ್ಲಿ ಏನು ನಡೆದಿದೆ? ಎಂದು ಕೂಲ್ ಆಗಿ ಕೇಳಿದ್ದಾರೆ. ‘ಲಾ ಅಂಡ್ ಆರ್ಡರ್ ಓಕೆ ಸಾರ್’ ಅಂದಿದ್ದಾರೆ. ಆದರೆ ಉಡುಪಿ ಬೀದಿಯಲ್ಲಿ ಜನರ ಮುಂದೆ ರಾತ್ರಿ ಹತ್ತು ಗಂಟೆ ಹೊತ್ತಿಗೆ ವ್ಯಕ್ತಿಯನ್ನು ಬೆತ್ತಲೆ ಮಾಡಿರುವುದು ಎಸ್ಪಿಯವರಿಗೇ ಗೊತ್ತಿರಲಿಲ್ಲವಂತೆ. ಆಗ ಧರಂ ಸಿಂಗ್ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

ಆ ನಂತರ ಮುರುಗನ್ ತಮ್ಮ ಕೆಳಗಿನವರನ್ನು ಕೇಳಿದ್ದಾರೆ. ಆಗ ಅವರು ಕೊಟ್ಟ ಉತ್ತರ ಬೆತ್ತಲೆ ನಡೆದ ಘಟನೆ ನಿಜ, ಅದು ಸಣ್ಣ ವಿಚಾರ ಎನ್ನುವ ಕಾರಣಕ್ಕೆ ನಿಮಗೆ ತಿಳಿಸಿರಲಿಲ್ಲ ಅಂದರಂತೆ. ಈ ಉತ್ತರ ಕೇಳಿ ಕೆಂಡಾಮಂಡಲರಾದ ಮುರುಗನ್ ತಮಗೆ ಮಾಹಿತಿ ಕೊಡದವರ ಬೆವರಿಳಿಸಿದ್ದಾರೆ. ಎರಡು ದಿನಗಳ ನಂತರ ಮುರುಗನ್ ನನಗೆ ಫೋನ್ ಮಾಡಿ ನಿಮ್ಮೊಂದಿಗೆ ಮಾತನಾಡಬೇಕು ಉಡುಪಿಗೆ ಬರುವಿರಾ? ಅಂದರು. ಅವರು ಮಂಗಳೂರಲ್ಲಿ ಟ್ರೈನಿಂಗ್ ಮಾಡುತ್ತಿದ್ದಾಗ ಪರಿಚಯವಿತ್ತು. ಆದರೆ ಉಡುಪಿಗೆ ಹೋಗಬೇಕಲ್ಲ ಎಂದುಕೊಂಡು ಸಾಧ್ಯವಾದರೆ ಬರುತ್ತೇನೆ ಅಂದೆ. ನಿಮಗೆ ಕಾರು ಕಳುಹಿಸುತ್ತೇನೆ, ಬಂದು ಹೋಗಿ, ಮಾತನಾಡಬೇಕು, ಅಂದರು. ಒಪ್ಪಿದೆ. ಕಾರು ಮತ್ತು ನನಗೂ ಪರಿಚಿತರಾಗಿದ್ದ ಪೊಲೀಸ್ ಅಧಿಕಾರಿಯೂ ಬಂದಿದ್ದರು. ನೇರವಾಗಿ ಅವರ ಮನೆಗೆ ಹೋದೆ. ಕಾಫಿ ಕೊಟ್ಟರು. ಸೌಜನ್ಯದ ಮಾತುಗಳ ನಂತರ ಬೆತ್ತಲೆ ಪ್ರಕರಣದ ಸುದ್ದಿ, ಫೋಟೋ ಕುರಿತು ಧರಂ ಸಿಂಗ್ ಅವರ ಸಿಟ್ಟಿಗೆ ಕಾರಣವಾದ ಘಟನೆಯನ್ನು ವಿವರಿಸಿದರು. ಇಷ್ಟೇ ಆಗಿದ್ದರೆ ಫೋನ್ ಮೂಲಕ ಮಾತನಾಡುತ್ತಿದ್ದರು. ಆದರೆ ಅವರಿಗೆ ಹೇಳಬೇಕಾಗಿದ್ದನ್ನು ಖುದ್ದು ಹೇಳಿದರು. ‘ನೀವು ಪರಿಚಿತರು. ಈ ಘಟನೆ ಬಗ್ಗೆ ನನಗೆ ಒಂದು ಮಾತು ಹೇಳಿದ್ದರೆ ಮುಜುಗರ ಪಡುವಂತಿರಲಿಲ್ಲ. ಇನ್ನು ಮುಂದೆ ಆಗಾಗ ನಾನೇ ನಿಮಗೆ ಫೋನ್ ಮಾಡ್ತೀನಿ, ಸಹಕಾರ ಕೊಡಿ,’ ಅಂದರು. ಮುರುಗನ್ ಅವರ ಮಾತಿನಲ್ಲಿ ಸುದ್ದಿ, ಫೋಟೋ ಪ್ರಕಟವಾಗಿರುವುದಕ್ಕೆ ಆಕ್ಷೇಪವಿರಲಿಲ್ಲ. ಬದಲಾಗಿ ತಮಗೆ ಮಾಹಿತಿ ಸಿಗಲಿಲ್ಲ ಎನ್ನುವ ಕೊರಗಿತ್ತು. ಆ ಹೊಣೆಯನ್ನು ಅವರು ನನ್ನ ಮೇಲೆ ಹೊರಿಸಲಿಲ್ಲ. ತಮ್ಮ ಸಹೋದ್ಯೋಗಿಗಳು ಆ ಘಟನೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೆ ಅವಗಣನೆ ಮಾಡಿದರು ಎನ್ನುವುದು ಗೊತ್ತಿತ್ತು. ಐಪಿಎಸ್ ಅಧಿಕಾರಿಯಾಗಿದ್ದ ಮುರುಗನ್ ಮಾಹಿತಿಯ ಕೊರತೆಯಿಂದಾಗಿ ಎಡವಟ್ಟು ಮಾಡಿಕೊಂಡ ನೋವನ್ನು ತೋಡಿಕೊಂಡರೇ ಹೊರತು ಬೆದರಿಕೆ ಹಾಕಲಿಲ್ಲ ಎನ್ನುವುದು ಮುಖ್ಯ.

ಈ ಘಟನೆಗೂ, ಮಂಗಳೂರಿನ ಈಗಿನ ಘಟನೆಗೂ ಅದೆಷ್ಟು ಅಂತರ? ಮಂಗಳೂರಲ್ಲಿ ಪೊಲೀಸ್ ಅಧಿಕಾರಿಗಳಿಂದ ಇಂಥ ಸೌಜನ್ಯವನ್ನು ಮಾಧ್ಯಮಗಳು ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ಮಾಧ್ಯಮ ಮಂದಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ ಪರಿಣಾಮ ಏನಾಗಬಹುದು? ಯಾರು ಆ ಕೆಲಸ ಮಾಡುತ್ತಾರೋ ಅವರೇ ಸೋಲನ್ನು ಒಪ್ಪಿಕೊಂಡಂತಾಗುತ್ತದೆ. ತಪ್ಪು ಮಾಡಿದ್ದರೆ ಅವರಿಗಿರುವ ಕಾನೂನು ದತ್ತವಾದ ಅಧಿಕಾರವನ್ನು ಮುಲಾಜಿಲ್ಲದೆ ಮಾಧ್ಯಮದವರ ಮೇಲೆಯೂ ಪ್ರಯೋಗಿಸಬಹುದು.

ಅಧಿಕಾರಿಗಳ ವಿರೋಧ ಕಟ್ಟಿಕೊಂಡರೆ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಅಂತೆಯೇ ಮಾಧ್ಯಮಗಳನ್ನು ಹೆಡೆಮುರಿಕಟ್ಟುವಂಥ ಪ್ರಯತ್ನಗಳು ಬುದ್ಧಿವಂತರು ಮಾಡುವ ಕೆಲಸವಲ್ಲ. ಅಧಿಕಾರದ ಆಚೆಗೂ ಒಂದು ಲೋಕವಿರುತ್ತದೆ. ಅದರಲ್ಲಿ ಸಿಗುವ ಅನುಭವ ಅಮೂಲ್ಯವಾದುದು. ಸಾರ್ವಜನಿಕ ಸಂಪರ್ಕ, ಸಂವಹನ ದೊಡ್ಡ ಗಂಡಾಂತರವನ್ನು ಸುಲಭವಾಗಿ ಪರಿಹಾರ ಮಾಡಬಲ್ಲದು. ಇಲಾಖೆಗೆ ಕಳಂಕ ಬಂತು ಎನ್ನುವ ಕಾರಣಕ್ಕಾಗಿಯೇ ಮಾಧ್ಯಮಗಳ ಮೇಲೆ ಹರಿಹಾಯ್ದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಪ್ರತೀ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ಮಾಡುವುದು ಕಡ್ಡಾಯವಲ್ಲವೇ? ಅಂಥ ಸಭೆಗಳು ನಡೆಯುತ್ತಿವೆಯೇ? ಗಲಭೆಯಾದಾಗ ಮಾತ್ರವಲ್ಲವಲ್ಲವೇ ಸಭೆ ನಡೆಸುವುದು? ತಿಂಗಳಿಗೆ ಅರ್ಧ ಗಂಟೆ ಠಾಣೆಯಲ್ಲಿ ಕುಳಿತು ಆಯುಕ್ತರು ಜನಸಂಪರ್ಕ ಸಭೆ ನಡೆಸಿದರೆ ಎಲ್ಲಾ ಅಪನಂಬಿಕೆಗಳು ದೂರವಾಗುತ್ತವೆ, ಮಾಹಿತಿ ನೀವು ಇರುವಲ್ಲಿಗೇ ಬರುತ್ತವೆ. ಪ್ರಯೋಗ ಮಾಡಿದರೆ ಫಲ ಸಿಗುತ್ತದೆ.

3 thoughts on “ನೀವೇ ಮಾಧ್ಯಮದ ಮೇಲೆ ಚಾಟಿ ಬೀಸಿದರೆ ಹೇಗೆ ?

  1. anand prasad

    ಬಳ್ಳಾರಿ ಅಕ್ರಮ ಗಣಿಗಾರಿಕೆಯಲ್ಲಿ ಪಾತ್ರ ಹೊಂದಿದ ಆರೋಪ ಹೊಂದಿರುವ ಸೀಮಂತ್ ಕುಮಾರ್ ಸಿಂಗ್ ಅವರಂಥ “ದಕ್ಷ” ಪೋಲೀಸ್ ಅಧಿಕಾರಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಕೇಸು ಜಡಿದಿರುವುದು ನಿರೀಕ್ಷಿತವೇ. ಇಂಥ ಕೇಸು ಜಡಿಯಲು ಮೂಲಭೂತವಾದಿ ಸಂವಿಧಾನಬಾಹಿರ ಶಕ್ತಿಕೇಂದ್ರದಿಂದ ಹುಕುಂ ಹೊರಟಿರುವ ಸಂಭವ ಇದೆ. ಈ ಪ್ರಕರಣವು ದೇಶಾದ್ಯಂತ ಪ್ರಸಾರವಾಗಿ ಕೋಲಾಹಲವಾಗಿರುವ ಕಾರಣ ಸಂಘ ಪರಿವಾರದ ಸಿಟ್ಟು ಇದನ್ನು ಬಯಲಿಗೆಳೆದ ಮಾಧ್ಯಮದ ಮೇಲೆ ತಿರುಗಿರುವುದು ಕೂಡ ನಿರೀಕ್ಷಿತವೇ. ಎಲ್ಲ ಸರ್ವಾಧಿಕಾರಿಗಳೂ ಮಾಧ್ಯಮವನ್ನು ಸಹಿಸುವುದಿಲ್ಲ.

    Reply
  2. Basavaraja Halli

    Police adikarigalu Keval Pagara tindu manege hoguvudakke iddare anisutte. avara Maneyavaru hotelge hodaga hindu jagarana vedike goondagalu hodediddare aa novu gottagutittu

    Reply
  3. shylesh

    nivu yako madyamada bagge soft doraneyannu hondiruvanthide ..madyamagalu tamma t r p gagi yara batte bicchi chitrisalu haguprasaramadalu redi….avarige yavude nithikatheyailla

    Reply

Leave a Reply to shylesh Cancel reply

Your email address will not be published. Required fields are marked *