Monthly Archives: July 2012

ಇಸ್ಲಾಂಪುರ, ಇತ್ತಾವರವೆಂಬ ಭಾರತವೂ ಹಾಗೂ ಇಲ್ಲಿನ ಸೂರಾಚಾರಿಗಳು


-ಬಿ. ಶ್ರೀಪಾದ್ ಭಟ್  


 

ಬಹಳಷ್ಟು ಜನ ನಿಜಕ್ಕೂ ಬೇರೇ ಜನ. ಅವರ ಚಿಂತನೆಗಳು ಬೇರೆಯವರ ಅಭಿಪ್ರಾಯಗಳಾಗಿರುತ್ತವೆ. ಅವರ ಜೀವನ ಮಿಮಿಕ್ರಿಯಾಗಿರುತ್ತದೆ. ಹೇಳಿಕೆಗಳು ಅವರ ಅನುಶಕ್ತಿಗಳಾಗಿರುತ್ತವೆ. – ಅಸ್ಕರ್ ವೈಲ್ಡ್

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪ್ರಖ್ಯಾತ ಕಥೆ “ಅವನತಿ” ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲ ಭಾರತೀಯ ಸಾಹಿತ್ಯದಲ್ಲೂ ಶ್ರೇಷ್ಠ ಕಥೆಗಳಲ್ಲೊಂದು ಎಂದು ನನ್ನ ಅನಿಸಿಕೆ. ಈ ಕಥೆಯು ಪ್ರಕಟವಾಗಿ ಹೆಚ್ಚೂಕಡಿಮೆ 40 ವರ್ಷಗಳ ನಂತರವೂ ಅದರ ತಾಜಾತನವನ್ನು, ಸಮಕಾಲೀನತೆಯನ್ನು ಇಂದಿಗೂ ಉಳಿಸಿಕೊಂಡಿದೆ. ಇಷ್ಟು ಮಾತ್ರ ಹೇಳಿದರೆ ಅವನತಿ ಕಥೆಯ ವೈಶಿಷ್ಟ್ಯತೆ ಮತ್ತು ಅನನ್ಯತೆಯನ್ನು ವಿವರಿಸಿದಂತಾಗುವುದಿಲ್ಲ.ಈ ಕಥೆಯನ್ನು ಕೇವಲ ಸಾಹಿತ್ಯಕವಾಗಿ ಮಾತ್ರ ನೋಡದೆ ಸಮಾಜ ಶಾಸ್ತ್ರದ ಹಿನ್ನೆಲೆಯಲ್ಲಿ ಕೂಡ ನೋಡಿದಾಗ ಇದು ಪ್ರಕಟವಾದ 70ರ ದಶಕದ ಕಾಲಘಟ್ಟದಲ್ಲೂ ಮತ್ತು ಇಂದಿನ 21ನೇ ಶತಮಾನದ ಎರಡನೇ ದಶಕದಲ್ಲೂ ’ಅವನತಿ’ಯ ಕಥೆಯ ಘಟನಾವಳಿಗಳಿಗೆ, ಇಂಚಿಂಚೂ ಪದಗಳಿಗೆ, ವ್ಯಕ್ತಿತ್ವಗಳಿಗೆ, ಗ್ರಹಿಕೆಗಳಿಗೆ ಭಾರತವು ಪ್ರತೀಕವಾಗಿಯೂ, ಜ್ವಲಂತ ಉದಾಹರಣೆಯಾಗಿಯೂ ಬೆತ್ತಲೆಯಾಗಿ ಬಯಲಾಗುತ್ತದೆ. ಇಂಡಿಯಾದಲ್ಲಿ 40 ವರ್ಷಗಳ ಹಿಂದೆಯೂ ಬಹುಪಾಲು ಜನ ಸೂರಾಚಾರಿಗಳೇ ಇಂದಿಗೂ ಇಂಡಿಯಾದ ಬಹುಪಾಲು ಜನ ಸೂರಾಚಾರಿಗಳು!!

ದೇಶವೊಂದರ ಸಾಂಸ್ಕೃತಿಕ ನೆಲೆಗಳು ಮತ್ತು ಸಾಮಾಜಿಕ ನೆಲೆಗಳ ಸಂರಚನೆಯು ಅದರ ಬುಡಕಟ್ಟುಗಳ, ವಿಭಿನ್ನ ಜಾತಿಗಳ, ಅವೈದಿಕ ನೆಲೆಗಳ ವೃತ್ತಿಕೌಶಲ್ಯದ ಮೇಲೆ ಪರಿಗಣಿತವಾಗುತ್ತದೆ. ಈ ವೃತ್ತಿಕೌಶಲ್ಯದ ಮಾದರಿಗಳೇ ಆ ದೇಶದ ನಿರಂತರ ಕ್ರಿಯಾಶೀಲ ಬದಲಾವಣೆಗಳಿಗೆ ಸಾಕ್ಷಿಯಾಗಿರುತ್ತವೆ. ಈ ವೃತ್ತಿಕೌಶಲ್ಯಗಳು ತನ್ನ ದಣಿವರಿಯದ, ನಳನಳಿಸುವ ಹೊಸತನದೊಂದಿಗೆ ಸದಾ ಚೇತೋಹಾರಿಯಾಗಿಯೂ, ದೇಶವೊಂದರ ಮಾನಸಿಕ ಸುಂದರತೆಗೂ ಕಾರಣವಾಗುತ್ತವೆ. ಸುಂದರ ವಿನ್ಯಾಸದ ಮಸ್ಲೀನ್ ಬಟ್ಟೆಗಳನ್ನು ನೇಯುವ ಕೈಗಳು ಅದಕ್ಕಾಗಿ ತನ್ನ ಉಗುರುಗಳನ್ನು ಬಳಸಿಕೊಳ್ಳುವ ಕೌಶಲ್ಯದ ಮಾದರಿಗೆ ಹೋಲಿಕೆಯೇ ಇಲ್ಲ. ತಮ್ಮಟೆಯ ಚರ್ಮದ ಹದಕ್ಕೆ ಹಾಗೂ ಅದರ ಸಾಂದ್ರತೆಯನ್ನು ಹೊಂದಿಸುವ ಕೌಶಲ್ಯ ಇಂದಿಗೂ ಅದ್ಭುತ. ಈ ರೀತಿಯ ತನ್ನ ವೃತ್ತಿಕೌಶಲ್ಯಗಳನ್ನು ಮರೆತ ಸಮಾಜ ನಿಧಾನವಾಗಿ ತನ್ನ ದೇಶವನ್ನು ಮಲದ ಗುಂಡಿಯನ್ನಾಗಿಸುತ್ತದೆ. ಇದರ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಅಥವಾ ಸಮಾಜದ ಐಡೆಂಟಿಟಿಯನ್ನು ಗುರುತಿಸುವುದು ಆತನ ಅಥವಾ ಸಮಾಜದ ವೃತ್ತಿಕೌಶಲ್ಯದ, ಬದ್ಧತೆಯ ಮೂಲಕವೋ ಅಥವಾ ಆ ವ್ಯಕ್ತಿಯ ಅಥವಾ ಸಮಾಜದ ಆಯ್ಕೆಗಳ ಮೌಲಿಕತೆಯ ಮೂಲಕವೋ ಎಂದು ಅವನತಿಯ ಸೂರಾಚಾರಿಯ ಮೂಲಕ ಹಾಗೂ ಆತನ ಸುತ್ತಲೂ ನಡೆಯುವ ಘಟನಾವಳಿಗಳ ಮೂಲಕ ತೇಜಸ್ವಿಯವರು ಪ್ರಶ್ನಿಸುತ್ತಾರೆ. ಸೂರಾಚಾರಿಯ ಐಡೆಂಟಿಟಿ ಆತ ನಿಜಕ್ಕೂ ಪ್ರತಿಭಾವಂತ ಶಿಲ್ಪಿಯಾಗಿದ್ದ ಅಥವಾ ಸೂರಾಚಾರಿಯು ತನ್ನ ಏಕಾಗ್ರತೆಯನ್ನು ಕೇಂದ್ರೀಕರಿಸಿದರೆ ಭವಿಷ್ಯದಲ್ಲಿ ಬಲು ದೊಡ್ಡ ಶಿಲ್ಪಿಯಾಗುವ ಪ್ರತಿಭೆ ಅವನಲ್ಲಿತ್ತು. ಆದರೆ ಇದಾವುದೂ ಆಗದೆ ಅನೇಕ ವೈರುಧ್ಯಗಳಿಗೆ ಬಲಿಯಾಗಿ ಹಾಗೂ ವ್ಯವಸ್ಥೆಯ ವಿಚಿತ್ರ ರೀತಿಯ ಆಕ್ರಮಣಗಳಿಗೆ ಬಲಿಯಾಗಿ ಅನಿವಾರ್ಯವಾಗಿ ಸೂರಾಚಾರಿಯು ಆಯ್ಕೆ ಮಾಡಿಕೊಳ್ಳುವ ತನ್ನದಲ್ಲದ, ತನ್ನ ಕೌಶಲ್ಯಕ್ಕೊಪ್ಪದ ವಿವಿಧ ರೀತಿಯ ಅಸಂಬದ್ಧ ಕಾಯಕಗಳ ಮೂಲಕ ಆತನ ಐಡೆಂಟಿಟಿ ಗುರಿತಿಸಲ್ಪಡುವುದೇ ಇಡೀ ಕಥೆಯ ದುರಂತದ ಧ್ವನಿಯಾಗುತ್ತದೆ.

ಅದೇ ರೀತಿಯಾಗಿಯೇ ಇಂದು ಭಾರತದ ಐಡೆಂಟಿಟಿಯು ಅದರ ಸಹಜ ಹಾಗೂ ಮೂಲಭೂತ ವೃತ್ತಿಕೌಶಲ್ಯಗಳಾದ ದೈಹಿಕ ಪ್ರಧಾನವಾದ ವ್ಯವಸಾಯ ಮತ್ತು ಕೈಗಾರಿಕ ಉತ್ಪಾದನೆಯನ್ನು ಆಧರಿಸಿ ನಿರ್ಧರಿಸಬೇಕಾದ ಸಂದರ್ಭದಲ್ಲಿ ಅದಾವುದೂ ಆಗದೆ ಇಂದಿನ ಜಾಗತೀಕರಣದ ನವಕಲೋನಿಯಲ್‌ನ ಸಂದರ್ಭದಲ್ಲಿ ಅತ್ಯಂತ ತಪ್ಪಾಗಿ ಹಾಗೂ ಅನೇಕ ಗೊಂದಲಗಳ ಮೂಲಕ ಸೇವಾ ವಲಯವನ್ನು ಮತ್ತು ಬೌದ್ಧಿಕ ಜ್ಞಾನದ ಉನ್ನತ ತಂತ್ರಜ್ಞಾನವನ್ನು ತನ್ನ ಐಡೆಂಟಿಟಿಯನ್ನಾಗಿ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಇಂದು ಇಂಡಿಯಾ ಸಂಪೂರ್ಣವಾಗಿ ದಿಕ್ಕುತಪ್ಪಿರುವುದು ಕಳೆದ 20 ವರ್ಷಗಳಲ್ಲಿನ ವಿದ್ಯಾಮಾನಗಳು ನಮ್ಮ ಕಣ್ಣೆದುರಿಗಿದೆ. ಅಂದರೆ ಚಿಂತಕ ’ಚೋಮೆಸ್ಕಿ’ಯ ಭಾಷೆಯಲ್ಲಿ ಹೇಳಬೇಕೆಂದರೆ 99% ವರ್ಸಸ್ 1% ರ ದುಸ್ಥಿಗೆ ಪ್ರಭುತ್ವವು ಇಂಡಿಯಾವನ್ನು ತಂದು ನಿಲ್ಲಿಸಿದೆ. ಈ ಕೆಟ್ಟದಾದ ಹಾಗೂ ಸಂಪೂರ್ಣವಾಗಿ ದಿಕ್ಕು ತಪ್ಪಿದ ಆಯ್ಕೆಯ ಐಡೆಂಟಿಟಿಯ ಫಲವಾಗಿ ಮಾವೋವಾದಿಗಳು ಹಿಂಸಾತ್ಮಕವಾದ ಹಾದಿ ತುಳಿಯುತ್ತಾರೆ. ಇಂದು ದಲಿತರು ತಮ್ಮ ಐಡೆಂಟಿಟಿಯನ್ನು ವಿಭಿನ್ನ ಕೌಶಲ್ಯಗಳನ್ನು ಇಂದಿನ ಆಧುನಿಕತೆಗೆ ತಕ್ಕಂತೆ ಕಲಿತು ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ಮುಖವಾಗಿ ಚಲಿಸುವ ಮೂಲಕ ಗುರಿತಿಸಿಕೊಳ್ಳುವುದಿಲ್ಲ. ಬದಲಾಗಿ ಸ್ವತಃ ತೀವ್ರವಾದ ಅಂಬೇಡ್ಕರ್‌ವಾದಿಗಳಾಗುವ ಆಯ್ಕೆಯ ಮುಖಾಂತರ ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಳ್ಳುತ್ತಾರೆ. ಒಂದು ತಂಡವಾಗಿ ಶೈಕ್ಷಣಿಕವಾಗಿ ಉನ್ನತ ವಲಯಕ್ಕೆ ಮುನ್ನುಗ್ಗುವ ಐಡೆಂಟಿಟಿಯನ್ನು ಧಿಕ್ಕರಿಸಿ ಎಡಬಲ ಜಾತಿಗಳಾಗಿ ತಮ್ಮನ್ನು ತಾವು ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಮ್ಮ ಐಡೆಂಟಿಟಿಗಳನ್ನು ಗುರುತಿಸಿಕೊಳ್ಳುತ್ತಾರೆ! ಇದಕ್ಕೆ ಕಾರಣವೂ ದಿಕ್ಕುತಪ್ಪಿದ ಸರ್ಕಾರಗಳ ಅರಾಜಕತೆ! ಇಂದು ಭಾರತದಲ್ಲಿ ಮುಸ್ಲಿಂರು ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವುದು ತಮ್ಮದಲ್ಲದ ಕಾರಣಗಳಿಗಾಗಿ ಇವರು ಮತ್ತೇ ಮತ್ತೇ ತಮ್ಮ Ghettoಗಳಾದ ಯಾರಬ್‌ನಗರ, ಗೌರೀಪಾಳ್ಯ, ಜುಹಾಪುರಗಳಿಗೆ ಮರಳುವ ಅನಿವಾರ್ಯವಾದ ಆಯ್ಕೆಯ ಮೂಲಕ ಹಾಗೂ ಅಲ್ಲಿನ ಕೊಳಕಿನ ಬದುಕಿನ ಮೂಲಕವೇ ಹೊರತಾಗಿ ತಮ್ಮ ಅದ್ಭುತ ವೃತ್ತಿಕೌಶಲ್ಯಗಳಾದ ಚರ್ಮ ಕೈಗಾರಿಕೆ, ರೇಷ್ಮೆ ನೇಯ್ಗೆಗಳ, ಕಲೆಗಾರಿಕೆಗಳ ಮೂಲಕವಲ್ಲ! ಇದಕ್ಕೆ ಕಾರಣವೂ ದಿಕ್ಕುತಪ್ಪಿದ ಸರ್ಕಾರಗಳ ಅರಾಜಕತೆ!

ಇಲ್ಲಿ ಚಿಂತಕ ’ಅಮಾರ್ತ್ಯ ಸೇನ್’ ಹೇಳಿದ ಇಟಲಿಯ ಹಳೆಯ ಪ್ರಸಂಗವೊಂದು ನೆನಪಾಗುತ್ತದೆ “20ರ ದಶಕದಲ್ಲಿ ’ಮುಸಲೋನಿ’ಯ ಫ್ಯಾಸಿಸ್ಟ್ ಪಕ್ಷಕ್ಕೆ ಇಟಲಿಯಾದ್ಯಾಂತ ಅಪಾರವಾದ ಬೆಂಬಲವು ವ್ಯಕ್ತವಾಗುತ್ತಿತ್ತು. ಈ ಸಂದರ್ಭದಲ್ಲಿ ಫ್ಯಾಸಿಸ್ಟ್ ಪಕ್ಷದ ರಾಜಕೀಯ ಕಾರ್ಯಕರ್ತನೊಬ್ಬ ಹಳ್ಳಿಗಾಡಿನ ಸೋಷಿಯಲಿಸ್ಟ್ ಒಬ್ಬನೊಂದಿಗೆ ಅವನನ್ನು ಫ್ಯಾಸಿಸ್ಟ್ ಪಕ್ಷಕ್ಕೆ ಸೇರಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಆದರೆ ಆ ಹಳ್ಳಿಗಾಡಿನ ಸೋಷಿಯಲಿಸ್ಟ್ ಇದನ್ನು ವಿರೋಧಿಸಿ “ಅದು ಹೇಗೆ ನಾನು ನಿನ್ನ ಫ್ಯಾಸಿಸ್ಟ್ ಪಕ್ಕಕ್ಕೆ ಸೇರಿಕೊಳ್ಳಲಿ? ನನ್ನ ತಂದೆ ಸೋಷಿಯಲಿಸ್ಟ್ ಆಗಿದ್ದ, ನನ್ನ ತಾತನು ಸೋಷಿಯಲಿಸ್ಟ್ ಆಗಿದ್ದ, ನಾನು ಸಹ ಸೋಷಿಯಲಿಸ್ಟ್ ಆಗಿಯೇ ಉಳಿಯುತ್ತೇನೆ ಹೊರತಾಗಿ ಫ್ಯಾಸಿಸ್ಟ್ ಆಗಿ ಅಲ್ಲ” ಎಂದು ಹೇಳಿದ. ಆಗ ಫ್ಯಾಸಿಸ್ಟ ಪಕ್ಷದ ರಾಜಕೀಯ ಕಾರ್ಯಕರ್ತ “ಇದು ಯಾವ ರೀತಿಯ ವಾಗ್ವಾದ? ಮಸಲ ನಿನ್ನ ತಂದೆ ಕೊಲೆಗಾರರಾಗಿದ್ದರೆ, ನಿನ್ನ ತಾತ ಕೊಲೆಗಾರರಾಗಿದ್ದರೆ, ನೀನು ಏನು ಮಾಡುತ್ತಿದ್ದೆ?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆ ಹಳ್ಳಿಗಾಡಿನ ಸೋಷಿಯಲಿಸ್ಟ್ ತಣ್ಣಗೆ ಉತ್ತರಿಸಿದ. “ಆಗ ಬಹುಶಃ ನಾನು ನಿನ್ನ ಫ್ಯಾಸಿಸ್ಟ್ ಪಕ್ಷಕ್ಕೆ ಸೇರುತ್ತಿದ್ದೆ””. ( ಅಮಾರ್ತ್ಯ ಸೇನ್‌ರ ’ಐಡೆಂಟಿಟಿ ಮತ್ತು ಹಿಂಸೆ’ ಪುಸ್ತಕದಿಂದ)

ಈ ಮೇಲಿನ ಪ್ರಸಂಗದಲ್ಲಿ ಅತ್ಯಂತ ನಿಚ್ಛಳವಾಗಿ ವ್ಯಕ್ತವಾಗುವುದು ಆ ಹಳ್ಳಿಗಾಡಿನ ಸೋಷಿಯಲಿಸ್ಟ್ ಯಾವುದೇ ಗೊಂದಲವಿಲ್ಲದೆಯೇ ತನ್ನ ಬದ್ಧತೆಯನ್ನು ನೆಚ್ಚಿ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳತ್ತಾನೆ ಹೊರತಾಗಿ ಯಾವುದೇ ರೀತಿಯ ಆಯ್ಕೆಗಳ ಗೊಂದಲಗಳ ಮೂಲಕ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವುದಿಲ್ಲ. ಆದರೆ ’ಅವನತಿ’ಯ ಸೂರಾಚಾರಿಗೆ ಈ ಅದೃಷ್ಟವಿಲ್ಲ!

ಇತ್ತೀಚೆಗೆ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಸೋಷಿಯಲಿಸ್ಟ್ ಹೋರಾಟಗಾರ್ತಿ ಮೃಣಾಲ್ ಗೋರೆಯವರ ಜೀವನದ ಕಥೆಯೂ ಸಹ ಮೇಲಿನ ಹಳ್ಳಿಗಾಡಿನ ಸೋಷಿಯಲಿಸ್ಟ್‌ನ ರೀತಿಯ ಬದ್ಧತೆಯ ಮಾದರಿಯದ್ದು. 40ರ ದಶಕದಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಸಮಾಜವಾದಿ ಚಳುವಳಿಗೆ ಧುಮುಕಿದ ಮೃಣಾಲ್ ಗೋರೆಯವರು 60/70/80 ರ ದಶಕಗಳಲ್ಲಿ ಬಾಂಬೆಯಲ್ಲಿ ಅತ್ಯಂತ ಪ್ರಖ್ಯಾತ ಸೋಷಿಯಲಿಸ್ಟ್ ಹೋರಾಟಗಾರ್ತಿಯಾಗಿದ್ದರು. ಆ ದಶಕದಳಲ್ಲಿ ಮಧ್ಯಮ ಹಾಗೂ ಸ್ಲಂ ವರ್ಗಗಳ ಮೂಲಭೂತ ಹಕ್ಕುಗಳಾದ ನೀರು, ರಸ್ತೆ, ಶೌಚಾಲಯ ಮತ್ತು ಒಳಚರಂಡಿ ಹಾಗೂ ನೈರ್ಮಲ್ಯೀಕರಣಗಳ ಅವಶ್ಯಕತೆಯ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿದವರು ಸೋಷಿಯಲಿಸ್ಟ್ ಮೃಣಾಲ್ ಗೋರೆಯವರು. ಆಗ ಇವರು ’ಪಾನೀವಾಲೀ ಬಾಯಿ’ ಎಂದು ಪ್ರಖ್ಯಾತರಾಗಿದ್ದರು. ಸೋಷಿಯಲಿಸ್ಟ್‌ರಾಗಿಯೇ ಜನತಾ ಪಕ್ಷದಿಂದ ಎರಡು ಬಾರಿ ಮಹಾರಾಷ್ಟ್ರದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1977ರಲ್ಲಿ ದಕ್ಷಿಣ ಬಾಂಬೆಯಿಂದ ಸಂಸದೆಯಾಗಿ ಲೋಕಸಭೆಗೆ ಚುನಾಯಿತರಾಗಿದ್ದರು. ಕೇಂದ್ರದಲ್ಲಿ ಸಚಿವ ಹುದ್ದೆಯನ್ನು ನಿರಾಕರಿಸಿದರು. ಆಗಲೇ ಲೋಕಸಭೆಯ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಪರಾಭವಗೊಂಡಿದ್ದರು. ಆಗ ಅತ್ಯಂತ ಜನಪ್ರಿಯ ಸ್ಲೋಗನ್ ಹೀಗಿತ್ತು: “ಪಾನೀವಾಲೀ ಬಾಯೀ ದಿಲ್ಲೀಮೆ, ದಿಲ್ಲೀವಾಲೀ ಬಾಯಿ ಪಾನೀಮೆ”! ಮಧು ಲಿಮಯೆ, ಮಧು ದಂಡವತೆಯಂತಹ ಖ್ಯಾತ ಸಮಾಜವಾದಿಗಳಿಗೆ ನಿಕಟವರ್ತಿಗಳಾಗಿದ್ದರು. ತಮ್ಮ ಇಡೀ ರಾಜಕೀಯ ಹಾಗು ಸಾಮಾಜಿಕ ಹೋರಾಟಗಳ ಬದುಕಿನ ಉದ್ದಕ್ಕೂ ಮೃಣಾಲ್ ಗೋರೆ ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಂಡಿದ್ದು ಸೋಷಿಯಲಿಸ್ಟ್ ಹೋರಾಟಗಾರ್ತಿಯಾಗಿಯೇ ಹೊರತಾಗಿ ಇನ್ನಾವುದೇ ಅನಿವಾರ್ಯ ಆಯ್ಕೆಗಳ ಮೂಲಕವಲ್ಲ. ಆದರೆ ಮೃಣಾಲ್ ಗೋರೆಯವರ ಸೋಷಿಯಲಿಸ್ಟ್ ಗೆಳೆಯರಾಗಿದ್ದ ಜಾರ್ಜ್ ಫರ್ನಾಂಡೀಸ್‌ರವರು ಅವಕಾಶವಾದಿಗಳಾಗಿ, ಭ್ರಷ್ಟರಾಗಿ 90ರ ದಶಕದ ಅಂತ್ಯದ ವೇಳೆಗೆ ಮತೀಯವಾದಿಗಳಾದ ಸಂಘಪರಿವಾರದೊಂದಿಗೆ ಕೈಜೋಡಿಸಿಕೊಳ್ಳುವುದರ ಆತ್ಮಹತ್ಯಾತ್ಮಕ ಆಯ್ಕೆಯ ಮೂಲಕ ತಮ್ಮ ಐಡೆಂಟಿಯನ್ನು ಗುರುತಿಸಿಕೊಳ್ಳುವ ಅಧಃಪತನಕ್ಕೆ ಇಳಿದರು. ಇಂದಿಗೂ ಜಾರ್ಜ್ ಫರ್ನಾಂಡೀಸರ ಐಡೆಂಟಿಟಿ ಇರುವುದು ಇವರು ಪಲಾಯನವಾದಿಗಳಾಗಿ ಕೋಮುವಾದಿಗಳೊಂದಿಗೆ ಕೈ ಜೋಡಿಸಿಕೊಳ್ಳುವುದರ ಆಯ್ಕೆಯ ಮೂಲಕವೇ ಹೊರತಾಗಿ ಮಾಜಿ ಫೈರ್ ಬ್ರಾಂಡ್ ಸೋಷಿಯಲಿಸ್ಟ್‌ರಾಗಿಯಂತೂ ಖಂಡಿತ ಅಲ್ಲ.

ಇಂದಿನ ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟ ರಾಜಕಾರಣಿಯಾದ, ನಮ್ಮ ನಾಡಿನ ಖನಿಜ ಸಂಪತ್ತನ್ನು ಲೂಟಿ ಮಾಡಿದ ಶ್ರೀರಾಮುಲುರಂತಹ ದಿಕ್ಕುತಪ್ಪಿದ ರಾಜಕಾರಣಿಯೊಂದಿಗೆ ಕೈ ಜೋಡಿಸುವುದರ ಮೂಲಕ ನಮ್ಮ ಕೆಲವು ಹಿರಿಯ ಜಾತ್ಯಾತೀತ, ಪ್ರಗತಿಪರ ಗೆಳೆಯರು ತಮ್ಮ ಹಿಂದಿನ ಪ್ರಗತಿಪರ ಹೋರಾಟಗಾರರೆಂಬ ಐಡೆಂಟಿಟಿಯನ್ನು ಕಳೆದುಕೊಂಡಿದ್ದಾರೆ. ಇವರು ಸಹ ಜಾರ್ಜ್ ತರಹದ ಅನಿವಾರ್ಯದ ಹೆಸರಿನಲ್ಲಿ ಅತ್ಯಂತ ಕೆಟ್ಟ ಆಯ್ಕೆಯ ಮೂಲಕ ಸೂರಾಚಾರಿಯ ಹಾದಿಯನ್ನು ತುಳಿದಿದ್ದಾರೆ. ನಾವು ಯಾವ ಗರ್ಭದಿಂದ ನಮ್ಮ ಹೋರಾಟದ ಬದುಕನ್ನು ಕಟ್ಟಿಕೊಳ್ಳುತ್ತೇವೆಯೋ, ಯಾವ ಗರ್ಭವು ನಮ್ಮ ಈ ಚಿಂತನೆಗಳಿಗೆ ಹಾಗೂ ಹೋರಾಟಗಳಿಗೆ ತಾತ್ವಿಕವಾದ ಹಾಗೂ ಜನಪರವಾದ ನೆಲೆಗಳನ್ನು ಕೊಟ್ಟಿದೆಯೋ ಅದೇ ಗರ್ಭದಲ್ಲಿಯೇ ನಮ್ಮ ಕಳೆದುಹೋದ ಬದ್ಧತೆಗಳನ್ನು ಹುಡುಕಾಡಬೇಕು ಮತ್ತು ಆ ಗರ್ಭದಲ್ಲಿಯೇ ಮರು ಕಟ್ಟುವಿಕೆಯ ಪ್ರಕ್ರಿಯೆಯನ್ನು ನಡೆಸಬೇಕು ಎನ್ನುವ ಮಾನವೀಯ ಪಾಠವನ್ನು ನಮ್ಮ ಹಿರಿಯ ಪ್ರಗತಿಪರ ಗೆಳಯರು ಮರೆತಿರುವುದು ತುಂಬಾ ನೋವಿನ ಸಂಗತಿ.

ಮೊನ್ನೆ ಫ್ಯೂಡಲ್‌ನ ದೌರ್ಜನ್ಯಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ತಮಟೆ ಕಲಾವಿದ ದಸರೀಘಟ್ಟದ ರವಿಕುಮಾರ್ ಅವರ ಅತ್ಮಹತ್ಯೆಗೆ ಕಾರಣವಾದ ಮೇಲ್ಜಾತಿಗಳ ಊಳಿಗಮಾನ್ಯ ಸಂಸ್ಕೃತಿಯನ್ನು ವಿರೋಧಿಸಿ ಅರೆ, ತಮಟೆ, ಕಹಳೆ, ದೋಣು ಕಲಾವಿದರು ತಿಪಟೂರಿನಲ್ಲಿ ಪ್ರತಿಭಟನೆ ನಡೆಸಿದರು. ತಿಪಟೂರಿನ ಪ್ರಗತಿಪರ ಗೆಳೆಯರು ಈ ಪ್ರತಿಭಟನಾ ಕಾರ್ಯವನ್ನು ಸಂಘಟಿಸಿದ್ದರು. ನಾವೆಲ್ಲ ಈ ಐತಿಹಾಸಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು. ಇಡೀ ಪ್ರತಿಭಟನೆಯುದ್ದಕ್ಕೂ ಕಹಳೆ, ತಮ್ಮಟೆಯನ್ನು ಬಾರಿಸಿದ ಈ ಕಲಾವಿದರು ದಸರೀಘಟ್ಟದ ರವಿಕುಮಾರ್‌ನ ಸಾವಿಗೆ ಕಾರಣರದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ರವಿಕುಮಾರ್ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ತಮಗೂ ಅತ್ಯಂತ ಸಮಂಜಸವಾದ, ನ್ಯಾಯಯುತವಾದ ವೇತನಗಳನ್ನು ನಿಗದಪಡಿಸಬೇಕು ಹಾಗೂ ಮಾಸಾಶನವನ್ನು ನೀಡಬೇಕೆಂದು ಮನವರಿಕೆ ಮಾಡಿಕೊಂಡರು. ಮುಖ್ಯವಾಗಿ ತಮ್ಮನ್ನು ಅರೆ, ತಮಟೆ, ಮೌರಿ, ದೋಣು, ಕಹಳೆ ವಾದ್ಯಗಳ ಕಲಾವಿದರೆಂದು ಗುರುತಿಸಿ ಅಸ್ಪೃಶ್ಯತೆ ಹಾಗೂ ಅವಮಾನದಿಂದ ಪಾರುಮಾಡಬೇಕೆಂದು ಆಗ್ರಹಿಸಿದರು. ಇದು ನಮ್ಮ ನೆಲದ ಕಲಾವಿದರು ತಮ್ಮ ಐಡೆಂಟಿಟಿಯನ್ನು ತಮ್ಮ ವೃತ್ತಿಗಳಾದ ಮೇಲಿನ ಕಲೆಗಳೊಂದಿಗೆ ಗುರುತಿಸಲು ಬಯಸಿದರು. ಇವರಾರೂ ಪರಿಸ್ಥಿಯ ಅನಿವಾರ್ಯತೆಗೆ ಬಲಿಯಾಗಿ ಪರ್ಯಾಯ ಆಯ್ಕೆಗಳ ಹಳ್ಳಕ್ಕೆ ಜಾರಲಿಲ್ಲ. ಯಾವುದೇ ಸಂದರ್ಭದಲ್ಲಿಯೂ ತಾವು ಅರೆ, ತಮಟೆ ಕಲಾವಿದರಾಗಿಯೇ ಉಳಿಯಬಯಸಿದರು. ಇವರ ಐಡೆಂಟಿಟಿಯ ಈ ಬದ್ಧತೆ ಬುದ್ಧ, ಗಾಂಧೀ, ಅಂಬೇಡ್ಕರ್ ಮಾದರಿಯಾಗಿತ್ತು. ಈ ಕಲಾವಿದರ ಐಡೆಂಟಿಟಿಯು ನಮಗೆಲ್ಲ ಮಾದರಿಯಾಬೇಕಾಗಿದೆ.

ಇಲ್ಲಿ ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್‌ಕುಮಾರ ಅವರು ಇಂಡಿಯಾದ ಮುಂದಿನ ಪ್ರಧಾನಿಯು ಸೆಕ್ಯುಲರ್ ಆಗಿರಬೇಕೆಂಬ ಜನಪ್ರಿಯ ಹೇಳಿಕೆಯ ಹಿಂದಿನ ಬದ್ಧತೆಯು ನಮಗೆ ಮುಖ್ಯವಾಗಬೇಕು. ಈ ಹೇಳಿಕೆಯಲ್ಲಿ ಅವಕಾಶವಾದಿತನ ಇರಬಹುದು. ಆದರೆ ಇಂಡಿಯಾಕ್ಕೆ ಸೆಕ್ಯುಲರ್ ಪ್ರಧಾನಿಯೇ ಬೇಕು ಎನ್ನುವ ಐಡೆಂಟಿಟಿ ಎಲ್ಲ ಕಾಲಕ್ಕೂ ಸತ್ಯ. ಇಲ್ಲದಿದ್ದರೆ ಈ ಮತೀಯವಾದಿಗಳ ನೆಲದಲ್ಲಿ ಮುಸ್ಲಿಂರಿಗೆ ಹಾಗೂ ದಲಿತರಿಗೆ ಅವರ ಹುಟ್ಟಿನ ಐಡೆಂಟಿಟಿಯಿಂದಾಗಿ ವಾಸಿಸಲಿಕ್ಕೆ ಮನೆ ಸಿಗುವುದಿಲ್ಲ, ಬದುಕಲಿಕ್ಕೆ ರೋಟಿ, ಕಪಡ ಔರ್ ಮಕಾನ್ ಗಗನಕುಸುಮಗಳಾಗಿಬಿಡುತ್ತವೆ. ಮುಸ್ಲಿಂ ಎನ್ನುವ ಐಡೆಂಟಿಟಿಯಿಂದಾಗಿ ಇಂದಿನ ಭಾರತದ ಜನಸಂಖ್ಯೆಯಲ್ಲಿ ಶೇಕಡ 11 ರಷ್ಟಿರುವ ಮುಸ್ಲಿಂರಲ್ಲಿ ಬೇರೆ ಸಮುದಾಯಗಳಿಗಿಂತ ಹೆಚ್ಚಿನ ಶೇಕಡಾವಾರು ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ (ಕಾರಾಗೃಹವಾಸಿಗಳಲ್ಲಿ ಮುಸ್ಲಿಮರ ಸಂಖ್ಯೆ 36%). ಈ ಮಾನಸಿಕ Ghettoಗಳ ಬಿಡುಗಡೆ ಮಾಡಲಾಗದಿದ್ದರೂ ಅದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿಯಾದರೂ ಇಂಡಿಯಾಕ್ಕೆ ಸೆಕ್ಯುಲರ್ ಪ್ರಧಾನಮಂತ್ರಿಯ ಐಡೆಂಟಿಟಿ ಅತ್ಯವಶ್ಯಕ. ಇಲ್ಲದೇ ಹೋದರೆ ಅಭಿವೃದ್ಧಿಯ ಹರಿಕಾರ ಎನ್ನುವ ಬೋಗಸ್ ಐಡೆಂಟಿಟಿಯನ್ನು ಹೊತ್ತುಕೊಂಡಿರುವ ಫ್ಯಾಸಿಸ್ಟ್ ಗುಣದ ಮತೀಯವಾದಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಬಿಡುತ್ತಾನೆ. ಆಗ ಈತನ ನಿಜದ ಐಡೆಂಟಿಟಿಗಳಾದ ಫ್ಯಾಸಿಸಂ ಮತ್ತು ಮತೀಯವಾದದಿಂದ ಉಂಟಾಗುವ ಕ್ರೌರ್ಯದ ಸಮಾಜದಿಂದ ಈ ಭಾರತವು ಹೊರ ಬರಲು ಶತಮಾನಗಳೇ ಬೇಕಾಗುತ್ತವೆ.

ಮನುಷ್ಯ ಬದುಕಿನಲ್ಲಿ, ವ್ಯವಸ್ಥೆಯಲ್ಲಿ ನಿರಂತರವಾಗಿ ತಲೆದೋರುವ ಸರಳವಾದ ವೈರುಧ್ಯಗಳು ಮತ್ತು ವಿರೋಧಾಬಾಸಗಳನ್ನು ಮಣಿಸುವ ಹುನ್ನಾರದಲ್ಲಿ ನಾವೆಲ್ಲ ಮತ್ತೊಂದು ಬಗೆಯ ಆಕ್ಟೋಪಸ್‌ನ ಹಿಡಿತಕ್ಕೆ ಸಿಕ್ಕಿಕೊಂಡುಬಿಡುತ್ತೇವೆ, ದೈತ್ಯ ಡೈನೋಸಾರಗಳು ನಮ್ಮನ್ನೆಲ್ಲ ಅನಿವಾರ್ಯ ಆಯ್ಕೆಗಳ ಹೆಸರಿನಲ್ಲಿ ಇಡೀ ಸಮಾಜವನ್ನೇ ಮತ್ತೊಂದು ಕಸದಗುಂಡಿಯನ್ನಾಗಿ ಮಾರ್ಪಡಿಸಿಬಿಡುವುದರ ಅಪಾಯದ ಕುರಿತಾಗಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ “ಅವನತಿ” ಕಥೆ ಅತ್ಯಂತ ಧ್ವನಿಪೂರ್ಣವಾಗಿ, ವಿಶಿಷ್ಟವಾಗಿ ಅನಾವರಣಗೊಳಿಸುತ್ತದೆ. ಇಲ್ಲಿ ಸಾಂಸ್ಕೃತಿಕ ದೇಸಿವಾದದ ಅನಿವಾರ್ಯತೆಯ ಅಗತ್ಯತೆಯನ್ನು ಕೂಡ ಎತ್ತಿಹಿಡಿಯಲಾಗುತ್ತದೆ. ತೇಜಸ್ವಿಯವರ “ಅವನತಿ” ಕಥೆಯೇ ನಮ್ಮ ಇಂದಿನ ಜಾಗತೀಕರಣಗೊಂಡ ನವಕಲೋನಿಯಲ್ ಭಾರತದ ಕಥೆ.

ಬಡತನಕ್ಕೆ ಬಾಯಿಲ್ಲವಾಗಿ…


– ಡಾ.ಎನ್.ಜಗದೀಶ್ ಕೊಪ್ಪ


ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಎನಿಸಿಕೊಂಡ ಕಾಯಿಲೆಗಳಲ್ಲಿ ಏಡ್ಸ್ ರೋಗ ಕೂಡ ಒಂದು. ಹೈಟಿ ದ್ವೀಪದಲ್ಲಿ 1980 ರ ದಶಕದಲ್ಲಿ ಗೊರಿಲ್ಲಾ ಮುಖಾಂತರ ಮನುಷ್ಯನಿಗೆ ತಗುಲಿಕೊಂಡ, ಮದ್ದಿಲ್ಲದ ಈ ಕಾಯಿಲೆಗೆ ಬಲಿಯಾದವರ ಸಂಖ್ಯೆ ಈಗ ನಿಖರವಾದ ಅಂಕಿ ಅಂಶಗಳಿಗೂ ನಿಲುಕದ ಸಂಗತಿ. ಪಾಶ್ಚಿಮಾತ್ಯ ಜಗತ್ತು ರೂಢಿಸಿಕೊಂಡ ಭೋಗದ ಲೋಲುಪತೆಯಯಿಂದಾಗಿ, ರಕ್ತದ ಮೂಲಕ, ವಿರ್ಯಾಣು ಮೂಲಕ, ತಾಯಿಯ ಎದೆ ಹಾಲು ಮೂಲಕ ರಕ್ತ ಬಿಜಾಸುರನಂತೆ ಹರಡಿ ಎದ್ದು ನಿಂತ ಈ ಮಹಾ ರೋಗಕ್ಕೆ ಕಡಿವಾಣವಿಲ್ಲದಂತಾಗಿದೆ. ನಿರಂತರ ಸಂಶೋಧನೆ ಮತ್ತು ಅವಿಷ್ಕಾರಗಳಿಂದ ಕೆಲವು ಔಷಧಗಳನ್ನು ಕಂಡುಕೊಂಡಿದ್ದರೂ ಸಹ ಅವುಗಳು, ಬರೆದಿಟ್ಟ ಸಾವಿನ ದಿನಾಂಕವನ್ನು ಅಲ್ಪದಿನಗಳ ಕಾಲ ಮುಂದೂಡಬಲ್ಲ ಸಾಧನಗಳಾಗಿವೆ ಅಷ್ಟೇ.

ಸೋಜಿಗದ ಸಂಗತಿಯೆಂದರೆ, ಪಾಶ್ಚಿಮಾತ್ಯ ಜಗತ್ತು ಅಂಟಿಸಿದ ಈ ಕಾಯಿಲೆಗೆ ಬಲಿಯಾದದ್ದು ಮಾತ್ರ ತೃತೀಯ ಜಗತ್ತು. ಅಂದರೆ, ಏಷ್ಯಾ ಮತ್ತು ಆಫ್ರಿಕಾ ಖಂಡದ ಜನತೆ. ಆಫ್ರಿಕಾದ ಹಲವಾರು ದೇಶಗಳಲ್ಲಿ ಛಾಲ್ತಿಯಲ್ಲಿದ್ದ ಮುಕ್ತ ಲೈಂಗಿಕ ಚಟುವಟಿಗಳು ರೋಗದ ಕ್ಷಿಪ್ರ ಹರಡುವಿಕೆಗೆ ಪರೋಕ್ಷವಾಗಿ ಸಹಕಾರಿಯಾದವು. ವಿಶ್ವಾದ್ಯಂತ ಜನತೆ ಒಣಗಿ ಹೋದ ತರಗಲೆಗಳಂತೆ ಉದುರಿ ಬಿದ್ದರು. ಭಾರತವೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಕಾಯಿಲೆಗೆ ಮದ್ದು ಹುಡುಕುವುದಕ್ಕಿಂತ ಈ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದ ಆಧುನಿಕ ಜಗತ್ತು, ಇತ್ತೀಚೆಗೆ ಏಡ್ಸ್ ರೋಗ ನಿಯಂತ್ರಣದತ್ತ ಗಂಭೀರವಾಗಿ ಗಮನ ಹರಿಸಿದೆ. ಇಂತಹ ಒಂದು ಪ್ರಯತ್ನಕ್ಕೆ ಕೈ ಜೋಡಿಸಿದ್ದು, ಬಿಲ್-ಮಿಲಿಂಡ  ಗೇಟ್ಸ್ ಪೌಂಡೇಶನ್. ಮೈಕ್ರೋಸಾಪ್ಟ್ ಸಂಸ್ಥೆಯ ಸಂಸ್ಥಾಪಕ ಬಿಲ್ ಗೇಟ್ಸ್‌ನ ಮಾನವೀಯ ಮುಖದ ಒಂದು ಭಾಗವಾಗಿರುವ ಈ ಪೌಂಡೇಶನ್ ಪ್ರತಿವರ್ಷ ಏಡ್ಸ್ ನಿಯಂತ್ರಣಾಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ದಾನವಾಗಿ ವಿನಿಯೋಗಿಸುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಜಗತ್ ಪ್ರಸಿದ್ಧ ಹೂಡಿಕೆದಾರ ವಾರೆನ್ ಬಪೆಟ್ ತನ್ನ ಸಂಪಾದನೆಯ ಬಹು ಭಾಗವನ್ನು ಧಾರೆಯರೆದು ಈ ಸಂಸ್ಥೆಯ ಜೊತೆ ಕೈಜೋಡಿಸಿದ್ದಾನೆ.

ಮಿಲಿಂಡ ಫೌಂಡೇಶನ್ ನೀಡುತ್ತಿರುವ ಆರ್ಥಿಕ ಸಹಾಯದ ಸಿಂಹ ಪಾಲು ಭಾರತ ಉಪಖಂಡದ ದೇಶಗಳು ಮತ್ತು ಆಫ್ರಿಕಾದ ದೇಶಗಳಿಗೆ ಸಲ್ಲುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಲೇರಿಯ, ಕ್ಷಯ ರೋಗ ನಿಯಂತ್ರಣ ಮತ್ತು ಮಕ್ಕಳ ಆರೋಗ್ಯದ ಕಡೆ ಸಹ ಗಮನ ಹರಿಸಿ ಈ ಸಂಸ್ಥೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೆಹಲಿಯಲ್ಲಿ ಮಿಲಿಂಡ ಗೇಟ್ಸ್‌ ಪೌಂಡೇಶನ್ ಸಂಸ್ಥೆಯ ಕಚೇರಿಯಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಸ್ವಯಂ ಸೇವಾ ಸಂಘಟನೆಗಳನ್ನು ಬಳಸಿಕೊಂಡು ದೇಶಾದ್ಯಂತ ಈ ಸಂಸ್ಥೆ ಕಾರ್ಯನಿರತವಾಗಿದೆ. 1998 ರಿಂದ ಈ ಸಂಸ್ಥೆಯ ಗೌರವ ಸಂದರ್ಶಕ ಸಲಹೆಗಾರರಾಗಿ ಕೆಲಸ ಮಾಡಿ ಅನುಭವ ಇರುವ ನಾನು ಮತ್ತು ಇತರೆ ರಂಗದ ಅನೇಕ ಮಿತ್ರರು, ಯೋಜನೆಗಳು ಗುರಿ ತಪ್ಪಿದಾಗ ಸರಿ ದಾರಿಗೆ ತರುವಲ್ಲಿ ಶ್ರಮಿಸಿದ್ದೇವೆ. (ಇದಕ್ಕೆ ಕಾರಣರಾದವರು ಈಗ ಪ್ರಧಾನಿ ಕಚೇರಿಯ ಹಿರಿಯ 19 ಮಂದಿ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಕರ್ನಾಟಕದ ಹಿರಿಯ ಐ.ಎ.ಎಸ್. ಅಧಿಕಾರಿ ಹಾಗೂ ತುಮಕೂರಿನ ನನ್ನ ಮಿತ್ರ ಎಲ್.ಕೆ. ಅತಿಕ್ ಅಹಮ್ಮದ್.)

ಭಾರತದಲ್ಲಿ ಏಡ್ಸ್ ಕಾಯಿಲೆ ಹರಡಲು ವೈಶ್ಯೆಯರು ಮತ್ತು ಲಾರಿ ಚಾಲಕರು ಎಂದು ಬಲವಾಗಿ ನಂಬಿದ್ದ ನಂಬಿಕೆಗಳನ್ನು ಅಲುಗಾಡಿಸಿ, ಅವರಿಗಿಂತ ಹೆಚ್ಚಾಗಿ ರೋಗ ಹರಡುತ್ತಿರುವುದು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವ ಕುಶಲರಲ್ಲದ ಕಾರ್ಮಿಕರು ಎಂಬುದನ್ನು ಅಧ್ಯಯನದಿಂದ ಸಾಬೀತು ಪಡಿಸಲಾಗಿದೆ. ಇದಕ್ಕೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿರುವುದನ್ನೂ ಸಹ ಗುರುತಿಸಲಾಗಿದೆ.

ಈ ಅಧ್ಯಯನಕ್ಕೆ ಆರಿಸಿಕೊಂಡ ಸ್ಥಳವೆಂದರೆ, ಗುಜರಾತಿನ ಆಳಂಗ್ ಎಂಬ ಕಡಲ ತೀರದ ಹಡಗು ಒಡೆಯುವ ಬಂದರಿನ ಒಂದು ಪ್ರದೇಶ. ಈ ಪುಟ್ಟ ಊರಿನಲ್ಲಿ ಉತ್ತರಪ್ರದೇಶ ಮತ್ತು ಬಿಹಾರದಿಂದ ದಿನಗೂಲಿಗೆ ದುಡಿಯುವ 56 ಸಾವಿರ ಕಾರ್ಮಿಕರು ಹಡಗು ಒಡೆಯುವ ಕೆಲಸದಲ್ಲಿ ನಿರತರಾಗಿದ್ದರು (ಇದು 2000 ನೇ ಇಸವಿಯ ಅಂಕಿ ಅಂಶ, ಈಗ ಇದು ದುಪ್ಪಟ್ಟಾಗಿರಬಹುದು.) ಇವರೆಲ್ಲರೂ ತಮ್ಮ ಕುಟುಂಬಗಳನ್ನ ಸ್ವಂತ ಊರುಗಳಲ್ಲಿ ಬಿಟ್ಟು ಬಂದು ಕಾರ್ಮಿಕರ ಶೆಡ್ಡುಗಳಲ್ಲಿ ಪ್ರಾಣಿಗಳಂತೆ ವಾಸಿಸುತ್ತಿದ್ದಾರೆ. ಕಠಿಣ ದುಡಿಮೆ, ಏಕಾಂತ, ಇವುಗಳ ನಡುವೆ ನರಳುವ ಇವರುಗಳು ಬಲುಬೇಗ ಕುಡಿತ ಮತ್ತು ವೈಶ್ಯಾವಾಟಿಕೆಗೆ ಬಲಿಯಾಗುವ ನತದೃಷ್ಟರು. ಸಮೀಕ್ಷೆಯ ಪ್ರಕಾರ ಇಲ್ಲಿನ ಶೇಕಡ 64ರಷ್ಟು ಕಾರ್ಮಿಕರು ಏಡ್ಸ್ ರೋಗಕ್ಕೆ ತಮಗೆ ಅರಿವಿಲ್ಲದಂತೆ ತುತ್ತಾಗಿದ್ದರು.  ಅಲ್ಲದೇ ತಮ್ಮ ತಮ್ಮ ಊರಿಗಳಿಗೆ ಹೋದಾಗ ತಾವು ಅಂಟಿಸಿಕೊಂಡ ಈ ಮಹಾಮಾರಿಯನ್ನು ತಮ್ಮ ಪತ್ನಿಯರಿಗೆ ದಾಟಿಸಿಬಂದಿದ್ದರು. ಅವರುಗಳು ಸಹ ತಮಗೆ ಅರಿವಿಲ್ಲದೆ, ಎದೆಯ ಹಾಲಿನ ಮೂಲಕ ಮಕ್ಕಳಿಗೆ ಈ ಕಾಯಿಲೆಯನ್ನು ಬಳುವಳಿಯಾಗಿ ನೀಡಿದ್ದರು. ಇದು ಆಳಂಗ್‌ನ ಒಂದು ಕಥೆ ಮಾತ್ರವಲ್ಲ, ಎಲ್ಲಾ ನಗರಗಳ ದುಡಿಯುವ, ಗ್ರಾಮೀಣ ಪ್ರದೇಶದಿಂದ ಬಂದ ಕಾರ್ಮಿಕರ ಕಥನವೂ ಹೌದು. (ಈ ಕುರಿತು ಮದ್ದಿಲದ ಸಾವ ಕುರಿತು ಎಂಬ ನನ್ನ ಸುಧೀರ್ಘ ಲೇಖನ, ಆರು ತಿಂಗಳ ಹಿಂದೆ ಸಂವಾದ ಮಾಸಪತ್ರಿಕೆಯಲ್ಲಿ ಮತ್ತು ಆಯಾಮ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಗಮನಿಸಬಹುದು.)

ಏಡ್ಸ್ ರೋಗ ನಿಯಂತ್ರಣ ಕುರಿತಂತೆ ಹಮ್ಮಿಕೊಂಡ ಕಾರ್ಯಕ್ರಮಗಳು ಭಾರತದಲ್ಲಿ ಹೆಮ್ಮೆ ಪಡುವಷ್ಟು ಸುಧಾರಣೆಯಾಗಿಲ್ಲ. ಹಣದಾಸೆಗೆ ಸೃಷ್ಟಿಯಾದ ಹಲವಾರು ಎನ್.ಜಿ.ಓ.ಗಳ ಅಸಮರ್ಪಕ ಕಾರ್ಯವೈಖರಿ ಇದಕ್ಕೆ ಮೂಲ ಕಾರಣ. ಜೊತೆಗೆ ಇದೊಂದು ಕಾಟಾಚಾರದ ಕೆಲಸ ಎಂಬ ಆಲಸ್ಯ ಬೆಳಸಿಕೊಂಡ ಸರ್ಕಾರಿ ಅಧಿಕಾರಿಗಳ ಸೋಮಾರಿತನ ಕೂಡ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಡಾಬದ ಬಳಿ ನಿಂತು ಅಲ್ಲಿಗೆ ಬರುವ ಲಾರಿ ಚಾಲಕರಿಗೆ ಉಚಿತ ಕಾಂಡೋಮ್ ಹಂಚುವುದು, ಅಥವಾ ವೈಶ್ಯಾವಾಟಿಕೆ ಪ್ರದೇಶಗಳಲ್ಲಿ ವೈಶ್ಯೆಯರಿಗೆ ಹಂಚುವುದರಿಂದ ಏಡ್ಸ್ ನಿಯಂತ್ರಣ ಸಾಧ್ಯ ಎಂಬ ಹುಂಬತನವನ್ನು ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಬೆಳಸಿಕೊಂಡಿವೆ. ಅದಕ್ಕೂ ಮೀರಿ, ಅವರ ಮನವೊಲಿಸುವುದು, ಅವರ ಆರ್ಥಿಕ ಬದುಕನ್ನು ಸುಧಾರಣೆ ಮಾಡುವುದು, ಕಾರ್ಮಿಕರ ವಲಸೆ ತಡೆಗಟ್ಟವುದು, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತುಕೊಡುವುದು, ಇವುಗಳು ಏಡ್ಸ್ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ಮನದಟ್ಟು ಮಾಡಿಕೊಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ.

ವರ್ಷದ ಹಿಂದೆ ಮಿಲಿಂಡ ಗೇಟ್ಸ್‌ ಸಂಸ್ಥೆ, ಕಾರ್ಯಕರ್ತರಿಗಾಗಿ ಮೂರು ದಿನಗಳ ತರಬೇತಿ ಶಿಬಿರವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿತ್ತು. ನಿಯಂತ್ರಣದ ಕಾರ್ಯತಂತ್ರವನ್ನು ಬದಲಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಏರ್ಪಡಿಸಲಾಗಿತ್ತು. ಸಮಾಲೋಚಕನಾಗಿ ಪಾಲ್ಗೊಂಡಿದ್ದ ನಾನು ಮತ್ತು ಗೆಳೆಯರು ಸಲಹೆ ನೀಡುವ ಮೊದಲು ಕಾರ್ಯಕರ್ತರ ಸಮಸ್ಯೆಯನ್ನು ತಿಳಿಯೋಣವೆಂದು ಕಾರ್ಯಕರ್ತರ ಅಭಿಪ್ರಾಯ ಮಂಡನೆಗೆ ಅವಕಾಶ ಮಾಡಿಕೊಟ್ಟೆವು.

ಪಾತಿಮಾ ಎಂಬ 55 ವರ್ಷದ ಮುಸ್ಲಿಂ ವಿಧವೆಯೊಬ್ಬಳು, ದಿನಕ್ಕೆ 50ರೂ ವೇತನದ ಆಧಾರದ ಮೇಲೆ ಸ್ಥಳಿಯ ಸ್ವಯಂ ಸೇವಾಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಅವಳ ಕೆಲಸ ಪ್ರತಿ ದಿನ ಕನಿಷ್ಟ ಹತ್ತು ಮಂದಿ ವೇಶ್ಯೆಯರನ್ನು ಗುರುತಿಸಿ ಸಂಸ್ಥೆಗೆ ಕರೆತರಬೇಕು. ಸಂಸ್ಥೆ ಅವರಿಗೆ ಏಡ್ಸ್ ಬಗ್ಗೆ ತಿಳುವಳಿಕೆ ನೀಡಿ ಕಾಂಡೋಮ್ ಉಪಯೋಗಿಸುವಂತೆ ಮನವೊಲಿಸುತಿತ್ತು. ಮಾತನಾಡಲು ಎದ್ದು ನಿಂತ ಆಕೆ “ಸಾಹೇಬ್ರ, ರಂಡೀರು (ವೇಶ್ಯೆಯರು) ಕರ್ಕೋಬರ್ರಿ, ಕರ್ಕೋಬರ್ರಿ ಅಂತಾರ, ಯಾವ ಹೆಣ್ಮಗಳು ನಾನು ರಂಡಿ ಅಂತ ಮುಂದ ಬತ್ತಾಳ ನೀವೇ ಹೇಳ್ರಲಾ? ಹಾಂಗ ನೋಡಿದ್ರೆ ನಾವು ಕೂಡ ರಂಡೀರೆ ಇದ್ದೀವಿ ಸಾಹೇಬ್ರ. ನಮ್ಮ ಗಂಡಂದಿರು ಸರಿ ಇದ್ರ ನಮಗೆ ಈ ಪಾಡು ಯಾಕ್ ಬತ್ತಿತು ಹೇಳ್ರಲಾ,” ಎನ್ನುತ್ತಾ ತನ್ನ ಸೆರಗಿನಿಂದ ಮುಖಮುಚ್ಚಿಕೊಂಡು ಬಿಕ್ಕಳಿಸಿ ಅತ್ತುಬಿಟ್ಟಳು. ತಡೆಹಿಡಿದುಕೊಂಡಿದ್ದ ಆಕೆಯ ಸಹನೆಯೆಲ್ಲಾ ಆ ಕ್ಷಣದಲ್ಲಿ ಕಟ್ಟೆಯೊಡೆದು ಮಾತುಗಳ ರೂಪದಲ್ಲಿ ಹೊರಬಿದ್ದಿತು. ಅವಳ ನೋವು ಮತ್ತು ಆಕ್ರೋಶದಲ್ಲಿ ನಾವು ಈವರೆಗೆ ಕಾಣಲಾಗದ ಬಡತನದ ಕರಾಳ ಮುಖವೊಂದು ಅಲ್ಲಿ ಅನಾವರಣಗೊಂಡಿತ್ತು.

ಹುಬ್ಬಳಿ ಧಾರವಾಡ ಅವಳಿ ನಗರಗಳಲ್ಲಿ ಮುಸ್ಲಿಂ ಮಹಿಳೆಯರೂ ಸೇರಿದಂತೆ 30 ಸಾವಿರಕ್ಕು ಹೆಚ್ಚು ಬಡ ಮಹಿಳೆಯರು ತಮ್ಮ ಕುಟುಂಬದ ರಥ ಎಳೆಯಬೇಕಾದ ಹೊಣೆ ಹೊತ್ತಿಕೊಂಡು ಉಳ್ಳವರ ಮನೆಯಲ್ಲಿ ಮನೆಗೆಲಸ ಮಾಡುತ್ತಾರೆ. ಸುಮಾರು ಎರಡು ಸಾವಿರ ಮಹಿಳೆಯರು ಖಾಸಾಗಿ ಹೋಟೆಲ್‌‍ಗಳಲ್ಲಿ ಮತ್ತು ಜೋಳದ ರೊಟ್ಟಿ ಮಾರುವ ಅಂಗಡಿಗಳಲ್ಲಿ ರೊಟ್ಟಿ ಬಡಿಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಇನ್ನಿತರೆ ಮೂರು ನಾಲ್ಕು ಸಾವಿರದಷ್ಟು ಹೆಂಗಸರು ಧಾರವಾಡ ಮತ್ತು ಹುಬ್ಬಳ್ಳಿ ಮಾರುಕಟ್ಟೆ ಪ್ರದೇಶದಲ್ಲಿ ಕಾಯಿಪಲ್ಲೆ ಮಾರುತ್ತಾರೆ. ಮನೆಗೆಲಸ ಮಾಡುತ್ತಿರುವ ಹೆಣ್ಣುಮಕ್ಕಳಲ್ಲಿ ಹಲವರು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದು, ಮಾನ ಮರ್ಯಾದೆ ದೃಷ್ಟಿಯಿಂದ ಇಲ್ಲವೇ ಅನೈತಿಕ ಸಂಬಂಧಕ್ಕೆ ಸಹಕರಿಸದಿದ್ದರೆ, ಕೆಲಸ ಕಳೆದುಕೊಳ್ಳುವ ಭಯದಿಂದ ತಾನು ಹೆತ್ತ ಮಕ್ಕಳ ತುತ್ತಿನ ಚೀಲ ತುಂಬಿಸಬೇಕಾದ ತುರ್ತು ಅಗತ್ಯದಿಂದ ಪುರುಷ ಲೋಕದ ಕ್ರೌರ್ಯಕ್ಕೆ ತಣ್ಣಗೆ ಬಲಿಯಾಗುತ್ತಿದ್ದಾರೆ. ಇದು ಪಾತಿಮಾ ಬಿಚ್ಚಿಟ್ಟ ವಾಸ್ತವದ ಬದುಕಿನ ಸತ್ಯ. ಇಂತಹ ಶೋಷಣೆಗೆ ಒಡ್ಡಿಕೊಳ್ಳಲು ಇಷ್ಟವಾಗದ ಮಹಿಳೆಯರು ಉರಿವ ಬಿಸಿಲಿನಲ್ಲಿ, ಸುರಿವ ಮಳೆಯಲ್ಲಿ ಸೊಪ್ಪು ತರಕಾರಿ ಮಾರುತ್ತಾ ತಮ್ಮ ಕಾಯವನ್ನು ಕರ್ಪೂರದಂತೆ ಕರಗಿಸುತ್ತಿದ್ದಾರೆ. ಇದು ಕೇವಲ ಹುಬ್ಬಳ್ಳಿ ಧಾರವಾಡದ ಕಥೆಯಲ್ಲ, ಈ ದೇಶದ ಯಾವುದೇ ನಗರದಲ್ಲಿ ನಡೆಯುತ್ತಿರುವ ಕಥೆ. ಈ ದುರಂತ ನಮ್ಮ ನಾಗರೀಕ ಜಗತ್ತು ತಲೆತಗ್ಗಿಸಬೇಕಾದ ಸಂಗತಿ. (ಕಳೆದ ವಾರ ಧಾರವಾಡ ಕರ್ನಾಟಕ ವಿ.ವಿ.ಯ ಪ್ರಾಧ್ಯಾಪಕನೊಬ್ಬ ಮನೆ ಗೆಲಸ ಮಾಡುತಿದ್ದ ವಿಧವೆ ಹೆಣ್ಣು ಮಗಳೊಬ್ಬಳನ್ನು ಒಂಬತ್ತು ತಿಂಗಳ ಕಾಲ ಪ್ರತ್ಯೇಕ ಮನೆ ಮಾಡಿ ಇರಿಸಿಕೊಂಡು ಶೋಷಿಸಿದ ಘಟನೆ ಬಹಿರಂಗಗೊಂಡು ಈಗ ಆತನ ವಿರುದ್ಧ  ಮೊಕದ್ದಮೆ ದಾಖಲಾಗಿದೆ.)

ಅಮಾಯಕ ಮಹಿಳೆಯರನ್ನು ಇಂತಹ ನರಕ ಸದೃಶ್ಯ ಬದುಕಿಗೆ ದೂಡಿದ, ದೂಡುತ್ತಿರುವ ಇವರ ಪತಿ ಮಹಾಶಯರ ಕಥನ ಒಂದು ರೀತಿಯಲ್ಲಿ ಶಹಜಾದೆ ಹೇಳುತ್ತಿದ್ದ ಅರೇಬಿಯನ್ ನೈಟ್ಸ್ ಕಥೆಯಂತಹದ್ದು. ಅದಕ್ಕೆ ಆದಿ-ಅಂತ್ಯವೆಂಬುದೇ ಇಲ್ಲ. 10 ವರ್ಷದ ಹಿಂದೆ ಇದೇ ಅವಳಿ ನಗರಕ್ಕೆ ಹೊಂದಿಕೊಂಡಂತೆ ಇರುವ 70ಕ್ಕೂ ಹೆಚ್ಚು ಹಳ್ಳಿಗಳ ಕಾರ್ಮಿಕರ ದಿನಗೂಲಿ ಕೇವಲ 35 ರೂಪಾಯಿ ಇತ್ತು. ಈ ಅಲ್ಪ ಹಣದಲ್ಲಿ ಅವರು ನೆಮ್ಮದಿಯ ಜೀವನ ಕೂಡ ಸಾಗಿಸುತಿದ್ದರು. ಅವರಿಗೆ ಬೇರೆ ಯಾವುದೇ ದುಶ್ಚಟಗಳು ಇರಲಿಲ್ಲ. ಮೂರು ರೂಪಾಯಿಗೆ ಒಂದು ಕೆ.ಜಿ. ರಾಗಿ, ಏಳು ರೂಪಾಯಿಗೆ ಜೋಳ, ಎಂಟರಿಂದ ಒಂಬತ್ತು ರೂಪಾಯಿಗೆ ಅಕ್ಕಿ, ಐದರಿಂದ ಹತ್ತು ರೂಪಾಯಿ ಒಳಗೆ ಕೈಚೀಲಸದ ತುಂಬಾ ಕಾಯಿ ಪಲ್ಲೆ ದೊರೆಯುತಿತ್ತು. ಇವರು ಕೂಲಿಗೆ ಬರುವಾಗ ಮನೆಯಿಂದ ತಂದ ರೊಟ್ಟಿ, ಪಲ್ಯ, ಬೇಸರವಾದಾಗ ಅಗಿಯಲು ಎಲೆ ಅಡಿಕೆ ತರುತ್ತಿದ್ದರು. ಇವಿಷ್ಟೇ ಅವರ ಹವ್ಯಾಸಗಳಾಗಿದ್ದವು. ದುಡಿದು ಸಂಪಾದಿಸಿದ ಹಣ ಅವರ  ಕುಟುಂಬದ ನಿರ್ವಹಣೆಗೆ ಮತ್ತು ಸರಳ ಜೀವನಕ್ಕೆ ಸಾಕಾಗುತ್ತಿತ್ತು.

ಈಗಿನ ಕೂಲಿದರ ಈ ರೀತಿ ಇದೆ.  ಕೃಷಿ ಚಟುವಟಿಕೆಗೆ ಹಳ್ಳಿಗಳಲ್ಲಿ ನೂರಾಐವತ್ತು ರೂ ಇದ್ದರೆ, ನಗರಗಳಲ್ಲಿ ಮಣ್ಣು ಅಗೆತ, ಕಟ್ಟಡ ನಿರ್ಮಾಣ ಕೆಲಸಕ್ಕೆ ಇನ್ನೂರು ರೂಪಾಯಿ ಇದೆ. ಅರೆ ಕುಶಲ ಕೆಲಸಗಳಾದ ನೆಲಕ್ಕೆ ಟೈಲ್ಸ್ ಹಾಕುವುದು, ನಳ ಜೋಡಿಸುವುದು, ಕಬ್ಬಿಣ ಕಟ್ಟುವುದು ಇವುಗಳ ಸಹಾಯಕರ ಕೆಲಸಕ್ಕೆ ಇನ್ನೂರ ಐವತ್ತು ಕೂಲಿ ಸಿಗುತ್ತಿದೆ. ಸರಾಸರಿ ಒಬ್ಬನ ಕೂಲಿ ಇನ್ನೂರು ರೂ. ಎಂದು ಲೆಕ್ಕ ಹಾಕಿದರೂ ತಿಂಗಳಲ್ಲಿ ನಾಲ್ಕು ವಾರದ ರಜೆ ಮತ್ತು ಮದುವೆ, ಹಬ್ಬ ಇತ್ಯಾದಿಗೆ ಒಂದು ದಿನ ರಜೆ ಇವುಗಳನ್ನು ಕಳೆದು ಉಳಿದ 25 ದಿನಗಳಿಗೆ ಒಬ್ಬ ಕಾರ್ಮಿಕನ ಸಂಪಾದನೆ 5 ಸಾವಿರ ರೂಪಾಯಿ.

ಇವತ್ತಿನ ವ್ಯಕ್ತಿಯೊಬ್ಬನ 5 ಸಾವಿರ ರೂ.ಗಳ ಆದಾಯದಲ್ಲಿ ಅವನ ವೈಯಕ್ತಿಕ ಖರ್ಚಿನ ವಿವರ ಹೀಗಿದೆ. ಪ್ರತಿ ದಿನ ನಗರಕ್ಕೆ ಬಂದು ಹೋಗವ ಬಸ್ ಪ್ರಯಾಣದ ವೆಚ್ಚ-20 ರೂ., ಹತ್ತು ಗುಟ್ಕಾ ಪಾಕೇಟ್ ಗಳಿಗೆ 20 ರೂ., ಎರಡು ಚಹಾ, ಮತ್ತು ಮಿರ್ಚಿಗೆ 20 ರೂ., ಮಧ್ಯಾಹ್ನದ ಲಘು ಊಟ ಅಥವಾ ಉಪಹಾರಕ್ಕೆ 15 ರೂ., ರಾತ್ರಿಯ ಕುಡಿತಕ್ಕೆ ಕಡಿಮೆ ದರದ ವಿಸ್ಕಿಗೆ (180 ಎಂ.ಎಲ್.) 50 ರೂ., ವಿಸ್ಕಿ ಜೊತೆ ತಿನ್ನುವ ಕುರುಕು ತಿಂಡಿಗೆ 10 ರೂ., ಆನಂತರ ಒಳಗೆ ಹೋದ ಪರಮಾತ್ಮ ಮಾತಾಡು ಕಂದಾ, ಮಾತಾಡು ಕಂದಾ ಎಂದು ರುದ್ರ ನರ್ತನ ಮಾಡಿ ಎದೆಗೆ ಒದ್ದ ಪರಿಣಾಮ, ಅವನ ಪರಿಚಿತರಿಗೆಲ್ಲಾ ಮಲಗಿರಲಿ ಎದ್ದಿರಲಿ ಮೊಬೈಲ್‌ನಲ್ಲಿ ಕರೆ ಮಾಡಿ ಮಾತನಾಡಿದ್ದಕ್ಕೆ ಸರಾಸರಿ ಕರೆನ್ಸಿ ವೆಚ್ಚ 20 ರೂಪಾಯಿ. ಇವುಗಳ ಒಟ್ಟು ಮೊತ್ತ ದಿನವೊಂದಕ್ಕೆ 145 ರೂಪಾಯಿ, ಅಂದರೆ, 30 ದಿನಗಳಿಗೆ 4ಸಾವಿರದ 350 ರೂಪಾಯಿ. ಉಳಿದ 650 ರೂಪಾಯಿಗಳಲ್ಲಿ ವಾರಕ್ಕೆ ಒಂದು ಸಿನಿಮಾ ಎಂದರೂ ನಾಲ್ಕು ವಾರಕ್ಕೆ 400 ರೂ. ಹೀಗೆ ಅವನ ಒಟ್ಟು ಸಂಪಾದನೆಯಲ್ಲಿ ಖರ್ಚು ಕಳೆದು ಉಳಿಯ ಬಹುದಾದ ಹಣ ಕೇವಲ 250 ರೂಪಾಯಿ. ಈ ಹಣದಲ್ಲಿ ಕುಟುಂಬ ಹೇಗೆ ನಡೆಯಬೇಕು, ನೀವೆ ನಿರ್ಧರಿಸಿ.

ನಗರ ಮತ್ತು ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ, ದುಡಿಯುವ ಕೈಗಳಿಗೆ ಕೈ ತುಂಬಾ ಕೆಲಸ ಮತ್ತು ಸಂಬಳ ಸಿಕ್ಕಿದೆ ಎಂದು ಅಭಿವೃದ್ಧಿಯ ಬಗ್ಗೆ ಬೊಗಳೆ ಬಿಡುವವರ ಮಾತಿನ ಹಿಂದೆ ಇರುವ ಕಹಿ ಸತ್ಯ ಇದು. ಆಧುನಿಕ ಜಗತ್ತಿನ ಅಭಿವೃದ್ಧಿಯ ಮಂತ್ರವೆಂದರೆ, ಬಲಗೈಯಲ್ಲಿ ಹತ್ತು ರೂಪಾಯಿ ನೀಡಿ, ಎಡಗೈಯಲ್ಲಿ ಒಂಬತ್ತು ರೂಪಾಯಿ ಕಿತ್ತು ಕೊಳ್ಳುವುದೇ ಆಗಿದೆ. ಭಾರತ ಮತ್ತು ಜಗತ್ತಿನ ಹಿರಿಯಣ್ಣ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ಬೆಳವಣಿಗೆಯಲ್ಲಿ ಏಕೆ ಮುಗ್ಗರಿಸುತ್ತಿವೆ, ಬಡತನ ಏಕೆ ನಿರ್ಮೂಲನವಾಗುತ್ತಿಲ್ಲ ಎಂಬ ಪ್ರಶ್ನೆಗೆ ನಾವು ರೂಪಿಸಿರುವ ಅಭಿವೃದ್ಧಿಯ ಕ್ರಮ ಎಂತಹದ್ದು ಎಂಬುದರ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಈ ರಾಜ್ಯದ ಅಬಕಾರಿ ಸಚಿವನೊಬ್ಬ ಅಬಕಾರಿ ಆದಾಯ 6 ಸಾವಿರ ಕೋಟಿಯಿಂದ 9 ಸಾವಿರ ಕೋಟಿಗೆ ಹೆಚ್ಚಿದೆ ಎಂದು ಹೆಮ್ಮೆಯಿಂದ ಹೇಳುಕೊಳ್ಳವದು ನಾಚಿಕೆಗೇಡಿನ ಸಂಗತಿ ಎಂದು ಯಾರಿಗೂ ಅನಿಸುತ್ತಿಲ್ಲ. 9 ಸಾವಿರ ಕೋಟಿ ಆದಾಯದಲ್ಲಿ ಈ ರಾಜ್ಯದ ಎಷ್ಟು ಹೆಣ್ಣು  ಮಕ್ಕಳ ಕಣ್ಣೀರಿನ ಕಥೆ ಅಡಗಿದೆ ಎಂಬುದು ನಮ್ಮನ್ನಾಳುವ ಮೂರ್ಖರಿಗೆ ಗೊತ್ತಿದೆಯಾ?

ಮನು ಕುಲವನ್ನು ಉದ್ಧಾರ ಮಾಡಲಾಗದ, ಈ ನೆಲದ ಮೇಲಿನ ಮನುಷ್ಯನ ಬದುಕಿಗೆ ಘನತೆ ತರಲಾದ ಯಾವುದೇ ಆರ್ಥಿಕ ಸಿದ್ಧಾಂತಗಳಿಗೆ, ಚಿಂತನೆಗಳಿಗೆ, ವೇದ, ಪುರಾಣ, ಉಪನ್ಯಾಸಗಳಿಗೆ ಬೆಂಕಿ ಹಚ್ಚಿ ನಾವೀಗ ಮನುಷ್ಯರಾಗಿ ಬದುಕುವ ಚಿಂತನೆಯ ಮಾದರಿಯನ್ನು ರೂಪಿಸಕೊಳ್ಳಬೇಕಾಗಿದೆ.

“ಮುಂಗಾರು” ಅಂದ್ರೆ ಇಷ್ಟೇ ಅಲ್ಲ… ಬೈಕಂಪಾಡಿಯವರ ಪ್ರತಿಕ್ರಿಯೆ


-ಚಿದಂಬರ ಬೈಕಂಪಾಡಿ


 

‘ಇದು ಮುಂಗಾರು’ ಪುಸ್ತಕದ ಕುರಿತು ಶಿವರಾಮ್ ಕೆಳಗೋಟೆಯವರು ಸುದೀರ್ಘವಾಗಿ ಮತ್ತು ಎಳೆ ಎಳೆಯಾಗಿ ಬರೆಯುತ್ತಾ ‘ಮುಂಗಾರು ಅಂದ್ರೆ ಇಷ್ಟೇನಾ?’ ಎನ್ನುವ ಶೀರ್ಷಿಕೆಯಲ್ಲಿ ಮತ್ತಷ್ಟು ಬರೆಯಲು ಕಾರಣರಾಗಿದ್ದಾರೆ, ಅವರಿಗೆ ವಂದನೆಗಳು.

ಮುಂಗಾರು ಅಂದ್ರೆ ಇಷ್ಟೇನೇ? ಎನ್ನುವ ತೀರ್ಮಾನವನ್ನು ಆ ಪತ್ರಿಕೆಯಲ್ಲಿ ಕೊನೆತನಕವೂ ದುಡಿದವನಾಗಿ ಕೊಡಲಾರೆ. ಯಾಕೆಂದರೆ ಮುಂಗಾರು ಪತ್ರಿಕೆ ಹುಟ್ಟು ಹಾಕಿದ ವಡ್ಡರ್ಸೆ ರಘುರಾಮ ಶೆಟ್ಟರನ್ನು, ಅವರ ಪತ್ರಿಕೋದ್ಯಮದ ಆಳವನ್ನು ಕೇವಲ ಐದಾರು ವರ್ಷದ ಅವರೊಂದಿಗಿನ ಒಡನಾಟವನ್ನು ಆಧಾರವಾಗಿಟ್ಟುಕೊಂಡು ತೀರ್ಮಾನ ಕೊಡುವುದು ನನ್ನಂಥ ಕಿರಿಯನಿಗೆ ಹೇಳಿಸಿದ್ದಲ್ಲ. ವಡ್ಡರ್ಸೆಯವರೇ ತಮ್ಮ ಪತ್ರಿಕೋದ್ಯಮದ ಪೂರ್ಣ ವರಸೆಯನ್ನು ಪ್ರಯೋಗಿಸಿರಲಿಲ್ಲ. ಅದಕ್ಕೆ ಕಾರಣ ಕರಾವಳಿ ಭಾಗದ ಓದುಗರ ವಿಶ್ವಾಸವನ್ನು ಸಂಪಾದಿಸುವ ಪ್ರಯೋಗವೇ ಪೂರ್ಣವಾಗಿರಲಿಲ್ಲ. ಮೊದಲ ಸಂಚಿಕೆಯ ಮುಖಪುಟದಲ್ಲಿ ವೈದಿಕರ ಕೈಯಿಂದ ತೀರ್ಥದ ಚೊಂಬು (ಚೆಂಬು) ಬೀಳುತ್ತಿರುವ ಕಾರ್ಟೂನ್ ವ್ಯಾಪಕ ಟೀಕೆಗೆ ಗುರಿಯಾಯಿತು. ಶತಮಾನಗಳಿಂದ ಆಚರಣೆ ಮಾಡಿಕೊಂಡು ಬರುತ್ತಿರುವ ಸಂಪ್ರದಾಯವನ್ನು ವಿರೋಧಿಸಿ, ನಂಬಿಕೆಗೆ ಅಪಚಾರ ಮಾಡುವ ಮೊದಲ ಯತ್ನವನ್ನು ಪತ್ರಿಕೆ ಮಾಡುತ್ತಿದೆ ಎನ್ನುವ ಆಕ್ರೋಷ ಒಂದು ವರ್ಗದಿಂದ ವ್ಯಕ್ತವಾಯಿತು. ಪತ್ರಿಕೆಯನ್ನು ಮುದ್ರಿಸಿ ಓದುಗರ ಕೈಗೆ ಒಪ್ಪಿಸುವ ಮುನ್ನಾದಿನ ಹೋಮ, ಹವನ, ಆರಾಧನೆ ಮಾಡಬೇಕು ಎನ್ನುವ ಒತ್ತಡ ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿದ್ದವರಿಂದಲೇ ಬಂದಾಗ ಶೆಟ್ಟರು ಸುತಾರಾಂ ಒಪ್ಪಲಿಲ್ಲ ಮತ್ತು ತಾವು ಅಂದುಕೊಂಡಂತೆಯೇ ತಮ್ಮ ನಂಬಿಕೆಗೆ ಅನುಗುಣವಾಗಿಯೇ ಮುದ್ರಣ ಕಾರ್ಯಕ್ಕೆ ಚಾಲನೆ ಕೊಟ್ಟು ಸಂಪ್ರದಾಯವನ್ನು ನಂಬಿಕೊಂಡು ಬಂದಿದ್ದ ನಿರ್ದೇಶಕರಲ್ಲೇ ಅಸಮಾಧಾನ ಹೊಗೆಯಾಡಲು ಕಾರಣವಾಯಿತು. ಮೊದಲ ಸಂಚಿಕೆಯಿಂದಲೇ ಓದುಗ ವಲಯದಿಂದ ವಿರೋಧದ ಧ್ವನಿ ಹೊರಹೊಮ್ಮಿದ್ದು ಮಾತ್ರವಲ್ಲಾ ನಂತರ ದಿನಗಳಲ್ಲಿ ತಪ್ಪು ಹುಡುಕುವುದಕ್ಕಾಗಿಯೇ ಪತ್ರಿಕೆಯನ್ನು ಓದುವವರ ಸಂಖ್ಯೆಯೂ ಬೆಳೆಯುತ್ತಿದ್ದರೆ ಬಹುಶಃ ಶೆಟ್ರು ಸೋಲುತ್ತಿರಲಿಲ್ಲ. ಓದುವವರಿಗೆ ಪತ್ರಿಕೆ ಮುಟ್ಟಿಸಲು ಮುಂದಾದ ಏಜೆಂಟರಿಗೆ ಕಡಿವಾಣ ಹಾಕುವ ಕೆಲಸ ನಡೆಯಿತು. ಆದ್ದರಿಂದ ವಡ್ಡರ್ಸೆಯವರು ಪತ್ರಿಕೋದ್ಯಮದ ಅಖಾಡಕ್ಕೆ ತಮ್ಮದೇ ಆದ ವರಸೆ, ಪಟ್ಟುಗಳೊಂದಿಗೆ ಇಳಿಯುತ್ತಿದ್ದಂತೆಯೇ ಅವರನ್ನು ಆವರಿಸಿಕೊಂಡ ಮತ್ತು ಇಂಥ ಅಗೋಚರ ವರಸೆಗಳನ್ನು ಕಲ್ಪನೆ ಮಾಡಿಕೊಳ್ಳದಿದ್ದ ಕಾರಣಕ್ಕೆ ವಡ್ಡರ್ಸೆಯವರು ಒಂದು ರೀತಿಯಲ್ಲಿ ಆರಂಭದಲ್ಲೇ ಹಿನ್ನಡೆಗೆ ಕಾರಣರಾದರು. ಆದರೂ, ಅವರು ಬರೆಯುತ್ತಿದ್ದ ಸಂಪಾದಕೀಯ, “ನಮ್ಮವರು” ಅಂಕಣಗಳು ಓದುಗರ ವರ್ಗವನ್ನು ನಿರ್ಮಿಸಿಕೊಂಡವು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ವಡ್ಡರ್ಸೆಯವರ ರಾಜಕೀಯ ನಿಲುವು, ಅವರ ವಿಚಾರಧಾರೆಗಳ ಬಗ್ಗೆ ಪುಸ್ತಕದಲ್ಲಿ ವಿವರಗಳಿಲ್ಲ ಎನ್ನುವ ಕೊರತೆಯನ್ನು ಶಿವರಾಮ್ ಎತ್ತಿದ್ದಾರೆ. ಇಂಥ ಮಾಹಿತಿಗಳನ್ನು ಸಹಜವಾಗಿಯೇ ಹೊಸ ಓದುಗರು ನಿರೀಕ್ಷೆ ಮಾಡುತ್ತಾರೆ. ವಡ್ಡರ್ಸೆಯವರ ಸೈದ್ಧಾಂತಿಕ ನಿಲುವು-ಒಲವುಗಳನ್ನು ವಿವರವಾಗಿ ಚರ್ಚೆ ಮಾಡಲು ನಾನು ಅಸಮರ್ಥ ಆ ಕಾಲಕ್ಕೆ, ಈಗಲೂ ಅದೇ ನಿಲುವು. ವಡ್ಡರ್ಸೆಯವರ ಲೋಹಿಯ, ಅಂಬೇಡ್ಕರ್, ಶೂದ್ರರ ಮೇಲೆ ಅವರಿಗಿದ್ದ ಕಾಳಜಿಯನ್ನೇ ಬಂಡವಾಳ ಮಾಡಿಕೊಂಡು ಅವರು ಪುಳಕವಾಗುವ ಹಾಗೆ ಮಾತನಾಡಿ ಕಾರ್ಯಸಾಧನೆ ಮಾಡಿಕೊಂಡವರ ನಡುವೆಯೂ ಶೆಟ್ಟರ ಕೋಪಕ್ಕೆ ಗುರಿಯಾಗಿ ಅವಮಾನ ಸಹಿಸಿಕೊಂಡು ಅವರ ವಿಶ್ವಾಸ ಸಂಪಾದಿಸಿದ ಹಿನ್ನೆಲೆಯನ್ನು ಅರ್ಥಮಾಡಿಕೊಂಡರೆ ಬಹುಶ: ಅವರು ಓದುಗರಿಗೂ ಅರ್ಥವಾಗುತ್ತಾರೆ ಎನ್ನುವ ಉದ್ದೇಶಕ್ಕೆ ನಾನೇ ಮಿತಿ ಹಾಕಿಕೊಂಡಿದ್ದೇನೆ ಹೊರತು ಅನ್ಯ ಕಾರಣಗಳಿಲ್ಲ.

ವಡ್ಡರ್ಸೆಯವರ ವೈಚಾರಿಕ ನಿಲುವುಗಳು ಆಳ ಅಧ್ಯಯನದ ಮೂಲಕವೇ ಬರಹದ ರೂಪ ಪಡೆಯಬೇಕಲ್ಲದೆ ಅವರೊಂದಿಗೆ ಕೆಲಸ ಮಾಡಿದಾಕ್ಷಣವೇ ಅವರ ವಿಚಾರಧಾರೆಗಳನ್ನು ಆವಾಹಿಸಿಕೊಂಡಿದ್ದೇನೆ ಎನ್ನುವ ತೀರ್ಮಾನಕ್ಕೆ ಬಂದು ಬಿಟ್ಟರೆ ನನಗೂ, ಅವರನ್ನು ಹೊಗಳಿಯೇ ಕಾಲ ಕಳೆದವರಿಗೂ ಯಾವ ವ್ಯತ್ಯಾಸವಿರುತ್ತದೆ? ಆದ್ದರಿಂದ ಓದುಗ ಬಯಸುವ ವಡ್ಡರ್ಸೆ ವಿಚಾರಧಾರೆಗಳನ್ನು ಅಂಥ ಶಕ್ತಿಶಾಲಿ ವಿಚಾರವಂತರೇ ಕೊಟ್ಟರೆ ಸರಿಯಾದ ನ್ಯಾಯ ಸಿಗುತ್ತದೆ ಎನ್ನುವುದು ನನ್ನ ತಿಳುವಳಿಕೆ.

ಬಹು ಮುಖ್ಯವಾಗಿ ‘ಇದು ಮುಂಗಾರು’ ಪುಸ್ತಕ ಒಂದು ಅನುಭವ ಕಥನವೇ ಹೊರತು ವೈಚಾರಿಕತೆಯ ಹೂರಣವಲ್ಲ. ಅಲ್ಲಿ ಪ್ರಸ್ತಾಪಿಸಿರುವ ಸಂಗತಿಗಳಿಗೆ ಬಹಳ ಮಿತಿಯಿದೆ. ಇದನ್ನು ಇತಿಹಾಸವೆಂದು ಅತ್ಯಂತ ನಿರೀಕ್ಷೆ ಇಟ್ಟುಕೊಂಡು ಓದಿದಾಗ ಭ್ರಮನಿರಸನವಾಗಬೇಕು ಎನ್ನುವುದು ನನ್ನ ಕಾಳಜಿಯಾಗಿರಲಿಲ್ಲ. ಎಲ್ಲೂ ನಾನು ಈ ಪುಸ್ತಕವೇ ವಡ್ಡರ್ಸೆಯವರ ಮುಂಗಾರುವಿನ ಪೂರ್ಣ ರೂಪ ಎನ್ನುವ ಪ್ರಸ್ತಾಪ ಮಾಡಿಲ್ಲ. ನನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು ಮಾತ್ರ ದಾಖಲಿಸಿದ್ದೇನೆ.

ವಡ್ಡರ್ಸೆಯವರು ವಿಧಾನ ಸೌಧಕ್ಕೆ ಬರುತ್ತಿದ್ದಾಗ ಸಿಗುತ್ತಿದ್ದ ಗೌರವ, ಬೀದರ್ ಸಾಹಿತ್ಯ ಸಮ್ಮೇಳನದಲ್ಲಿ ರೂಮಿನ ವ್ಯವಸ್ಥೆ ಮಾಡಲು ರಾಜ್ಯಸಭಾ ಸದಸ್ಯರು ಮುತುವರ್ಜಿ ವಹಿಸಿದ್ದು ಇತ್ಯಾದಿ ಸಾಮಾನ್ಯ ಸಂಗತಿಗಳು ಮುಂಗಾರುವಿನ ಚರಿತ್ರೆಯಾಗಿ ಬಿಡುವ ಅಪಾಯಗಳಿವೆ ಎನ್ನುವ ಆತಂಕವನ್ನು ಶಿವರಾಮ್ ವ್ಯಕ್ತಪಡಿಸಿದ್ದಾರೆ. ಇಂಥ ಅನೇಕ ಸಣ್ಣ ವಿಚಾರಗಳು ನನ್ನ ಪುಸ್ತಕದಲ್ಲಿ ಧಾರಾಳವಾಗಿ ಸ್ಥಾನ ಪಡೆದಿವೆ. ಆದರೆ ಇವುಗಳು ಮುಂಗಾರು ಪತ್ರಿಕೆಯ ಚರಿತ್ರೆಯಲ್ಲ. ಅವು ಚರಿತ್ರೆಯಾಗಬೇಕು ಎನ್ನುವ ಹಂಬಲದಿಂದ ದಾಖಲಿಸಿದವೂ ಅಲ್ಲ. ತಮ್ಮ ದೊಡ್ಡತನದ ನಡುವೆಯೂ ನನ್ನಂಥ ದಡ್ದನಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ಕಾಳಜಿ ಹಾಗೂ ಅವರ ಮಾತಿಗೆ, ನಡೆಗೆ ಸಿಗುತ್ತಿದ್ದ ಗೌರವ ಈಗ ಎಷ್ಟು ಜನರಿಗೆ ಸಿಗುತ್ತಿದೆ? ಈಗ ಸಿಗುವ ಮನ್ನಣೆಯನ್ನು ಅವಲೋಕಿಸಿದರೆ ಹಿಂದೆ ಒಬ್ಬ ಸಂಪಾದಕ ಕಿರಿಯರ ಬಗ್ಗೆ ವಹಿಸುತ್ತಿದ್ದ ಕಾಳಜಿ, ಈಗಿನ ವಾಸ್ತವ ಸ್ಥಿತಿ ಅರಿವಾಗಲೆಂಬ ವೈಯಕ್ತಿಕ ಆಸಕ್ತಿಯಿಂದ ಮಾತ್ರ ಉಲ್ಲೇಖಿತವಾದವು, ಇದು ಮತ್ತೆ ನನ್ನ ಮಿತಿಯೂ ಹೌದು.

ಓದುಗರ ಒಡೆತನದ ಪತ್ರಿಕೆ, ಶೇರು ಸಂಗ್ರಹದ ಕುರಿತು ಮಾಹಿತಿ ಬೇಕಿತ್ತು ಎನ್ನುವ ಅಂಶದ ಕುರಿತು. ಕಂಪೆನಿಯ ಹೂಡಿಕೆಯ ವಿವರಗಳು ಪುಸ್ತಕದಲ್ಲಿಲ್ಲ, ಯಾಕೆಂದರೆ ನನ್ನ ಉದ್ದೇಶ ಓದುಗರ ಒಡೆತನದ ಪತ್ರಿಕೆಯ ಆರ್ಥಿಕ ಸಾಮರ್ಥ್ಯವನ್ನು ಚರ್ಚಿಸುವುದಾಗಿರಲಿಲ್ಲ. ಕೇವಲ ಸಿರಿವಂತರಿಂದ ಬಂಡವಾಳ ಹೂಡಿಕೆ ಮಾಡಿಸಿ ದೊಡ್ಡ ಮಟ್ಟದ ಪತ್ರಿಕೆ ತರುವ ಬದಲು ಒಂದು ಸಾವಿರ ಮುಖಬೆಲೆಯ ಒಂದು ಶೇರನ್ನು ಖರೀದಿಸಿದರೆ ಅವನೂ ಮಾಲೀಕನಾಗುತ್ತಾನೆ. ಕೇವಲ ಐದು ಹತ್ತು ಮಂದಿ ಶ್ರೀಮಂತ ಕುಳಗಳಿಂದ ಬಂಡವಾಳ ಹಾಕಿಸಿದರೆ ಆ ಪತ್ರಿಕೆ ಅವರ ಧ್ವನಿಯಾಗಿಬಿಡುವ ಅಪಾಯವಿದೆ ಎನ್ನುವ ಕಾರಣಕ್ಕೆ ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ಕಟ್ಟಲು ಶೆಟ್ಟರು ಮುಂದಾಗಿದ್ದರು. ಪತ್ರಿಕೆಯ ಹಿಡಿತ ಶೇರುದಾರರ ಕೈಯಲ್ಲಿರಬೇಕು ಎಂಬುದು ಅವರ ಆಶಯವಾಗಿತ್ತು.

‘ಮುಂಗಾರು’ ಕರಾವಳಿಯ ಬದಲು ಬೇರೆ ಎಲ್ಲಿರಬೇಕಿತ್ತು? ಎನ್ನುವ ಪ್ರಶ್ನೆಯ ಬಗ್ಗೆ. ಕರಾವಳಿಯ ಬದಲು ಎಲ್ಲಿರುತ್ತಿದ್ದರೆ ಯಶಸ್ವಿಯಾಗುತ್ತಿತ್ತು ಎನ್ನುವುದನ್ನು ಲೇಖಕರು ಹೇಳಿಲ್ಲ ಎನ್ನುವ ಪ್ರಸ್ತಾಪ ಮಾಡಲಾಗಿದೆ. ಮುಂಗಾರು ಪ್ರವೇಶಕ್ಕೆ ಮುನ್ನದ ಪುಟ 12 ರಲ್ಲಿ ಮೂರನೆಯ ಪ್ಯಾರದ ಕೊನೆಯಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ. ‘ಬೆಂಗಳೂರು ಅಥವಾ ಮೈಸೂರಲ್ಲಿ ಮುಂಗಾರು ಜನ್ಮ ತಳೆಯುತ್ತಿದ್ದರೆ…’ ಎನ್ನುವ ಮಾತಿದೆ. ಆದರೆ ಕೆಂಡಸಂಪಿಗೆಯಲ್ಲಿ ಸರಣಿ ಬರೆಯುವಾಗ ಕೊನೆಯ ಕಂತಿನಲ್ಲಿ ಇದನ್ನು ಉಲ್ಲೇಖಿಸಿದ್ದೇನೆ (ಕೆಂಡಸಂಪಿಗೆಯನ್ನು ಪರಿಶೀಲಿಸಬಹುದು). ಆದರೆ ಅದನ್ನು ಪುಸ್ತಕ ರೂಪ ಪಡೆಯುವಾಗ ಬದಲಾವಣೆ ಮಾಡಲಾಗಿದೆ.

ಕೊನೆಯದಾಗಿ ‘ಇದು ಮುಂಗಾರು’ ವಡ್ಡರ್ಸೆಯವರ ಪತ್ರಿಕೋದ್ಯಮ, ಮುಂಗಾರು ಪತ್ರಿಕೆಯ ಅಧ್ಯಯನ, ವಿಚಾರಧಾರೆಗಳ ಮಂಥನದ ನಂತರದ ತಿರುಳಲ್ಲ ಎನ್ನುವುದನ್ನು ಪ್ರಾಮಾಣಿಕತೆಯಿಂದ ಹೇಳಿಕೊಳ್ಳುತ್ತೇನೆ. ತಿಳಿದವರು ಮತ್ತು ಆಳ ಅಧ್ಯಯನ ಮಾಡಿ ಬರೆಯಲು ಸಮರ್ಥರಾದವರಿಗೆ ಪ್ರೇರಣೆ ಕೊಟ್ಟರೆ ನನ್ನ ಶ್ರಮ ಸಾರ್ಥಕ. ಇದು ನನ್ನ ಅನುಭವ ಕಥನವೇ ಹೊರತು ಪತ್ರಿಕೋದ್ಯಮ ಕಲಿಯುವ ವಿದ್ಯಾರ್ಥಿಗಳಿಗೆ ಗೈಡ್ ಅಲ್ಲ. ಇದು ಸುದ್ದಿ ಎಂದು ತಿಳಿಸಿ ಹೇಳುವಂಥ ಕೃತಿಯೂ ಇದಲ್ಲ.

ವಡ್ಡರ್ಸೆಯವರ ಬಗ್ಗೆ ಬರೆಯಲು ಯಾರಿಗೆ ನೈತಿಕತೆ ಇದೆ-ಇಲ್ಲ ಎನ್ನುವ ತೀರ್ಮಾನವನ್ನು ಕೊಡುವಷ್ಟು ಸಮರ್ಥನಲ್ಲ. ಆದರೆ ಪ್ರತಿಕ್ರಿಯೆಯೊಂದರಲ್ಲಿ ನೈತಿಕತೆಯ ಉಲ್ಲೇಖ ಯಾಕೆ ಆಯಿತು ಎನ್ನುವುದೇ ಅಚ್ಚರಿ. ಮುಂಗಾರು ಪತ್ರಿಕೆಯಲ್ಲಿ ಕೊನೆತನಕ ಇದ್ದವರು ಯಾರು? ಅರ್ಧದಲ್ಲಿ ಬಿಟ್ಟವರು ಯಾರು? ಎನ್ನುವ ಸಾಮಾನ್ಯ ಮಾಹಿತಿ ಪಡೆದುಕೊಂಡೇ ಪ್ರತಿಕ್ರಿಯೆ ಕೊಟ್ಟರೆ ತಪ್ಪು ಸಂದೇಶಗಳು ರವಾನೆಯಾಗುವುದನ್ನು ತಡೆಯಬಹುದಲ್ಲವೇ? ಇಲ್ಲವಾದರೆ ಮುಂದೊಂದು ದಿನ ಮುಂಗಾರು ಚರಿತ್ರೆ ಬರೆಯುವ ಸಾಹಸಕ್ಕೆ ಮುಂದಾದರೆ ತಪ್ಪು ಮಾಹಿತಿಗಳೇ ಚರಿತ್ರೆಯ ಹಾದಿ ತಪ್ಪಿಸಬಹುದಲ್ಲವೇ?

‘ಇದು ಮುಂಗಾರು’ ಪುಸ್ತಕ ನಿಮ್ಮನ್ನು ನಿರಾಸೆಗೊಳಿಸಿದ್ದರೆ ಕ್ಷಮೆಯಿರಲಿ. ಉತ್ತಮ ಕೃತಿ ಮೂಡಿಬರಲು ನಿಮಗಾದ ನಿರಾಸೆ ಪ್ರೇರಣೆಯಾಗಲಿ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

[ಸ್ನೇಹಿತರೆ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಆಂಗ್ಲ ದಂಪತಿಗಳ ಮಗನಾಗಿ ಹುಟ್ಟಿ, ಇಲ್ಲಿಯೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆದು, ವಿಶ್ವಮಾನವನಾಗಿ ಬೆಳೆದ  ಜಿಮ್ ಕಾರ್ಬೆಟ್‌ ಎಂಬ ಅಸಾಮಾನ್ಯ ಮನುಷ್ಯನ ಕುರಿತು ಜಗದೀಶ್ ಕೊಪ್ಪರವರು ಕಳೆದ 29 ವಾರಗಳಿಂದ ನಮಗೆ ಬಹಳ ಆಪ್ತವಾಗಿ ಮತ್ತು ವಸ್ತುನಿಷ್ಟವಾಗಿ ಹೇಳುತ್ತ ಬಂದ ಲೇಖನ ಸರಣಿಯ ಕೊನೆಯ ಕಂತು ಇದು. ಕನ್ನಡದಲ್ಲಿ ಜಿಮ್ ಕಾರ್ಬೆಟ್ ಬಗ್ಗೆ ಇಷ್ಟು ವಿಷದವಾಗಿ  ಬರೆದಿರುವ ಇನ್ನೊಂದು ಕೃತಿ ಇಲ್ಲ. ಹಾಗಾಗಿಯೇ ಇದು ಸಹಜವಾಗಿ ವಿಶಿಷ್ಟವಾದದ್ದು. ಆದಷ್ಟು ಬೇಗ ಇದು ಪುಸ್ತಕವಾಗಿ “ವರ್ತಮಾನ.ಕಾಮ್” ಮತ್ತು ಕನ್ನಡದ ಅಂತರ್ಜಾಲದ ಹೊರಗಿರುವ ಕನ್ನಡ ಓದುಗರಿಗೂ ತಲುಪಲಿ ಎಂದು ಬಯಸುತ್ತೇನೆ. ಇದನ್ನು ವರ್ತಮಾನ.ಕಾಮ್‌ನಲ್ಲಿ ಸರಣಿ ರೂಪದಲ್ಲಿ ಬರೆದಿದ್ದಕ್ಕೆ ಮತ್ತು ವರ್ತಮಾನ.ಕಾಮ್‌ನ ಆರಂಭದ ದಿನಗಳಿಂದಲೂ ನಮ್ಮ ಜೊತೆಗಿದ್ದು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತ ಇರುವ ಶ್ರೀ ಕೊಪ್ಪರವರಿಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸಬಯಸುತ್ತೇನೆ. -ರವಿ ಕೃಷ್ಣಾರೆಡ್ಡಿ]

ಕೀನ್ಯಾದ ನೈರಿ ಪಟ್ಟಣದ ಸಮೀಪ ಪರ್ವತದ ತಪ್ಪಲಿನಲ್ಲಿ ಇದ್ದ ಔಟ್ ಸ್ಪಾನ್ ಹೆಸರಿನ ಹೊಟೇಲ್‌ನ ವಿಶೇಷ ಕಾಟೇಜ್‌ನಲ್ಲಿ ಉಳಿದುಕೊಂಡ ಬಳಿಕ, ಕಾರ್ಬೆಟ್ ಮತ್ತು ಸಹೋದರಿ ಮ್ಯಾಗಿಯ ಅಲೆದಾಟದ ಬದುಕಿಗೆ ಅಂತಿಮ ತೆರೆಬಿದ್ದಿತು. ಸುಂದರ ಹೂದೋಟ ಮತ್ತು ಹಿಮ ಪರ್ವತದ ಹಿನ್ನಲೆಯಿದ್ದ ಈ ಹೋಟೆಲ್ ಇಬ್ಬರ ಮನಸಿಗೆ ಹಿಡಿಸಿತು. ನೈನಿತಾಲ್ ಗಿರಿಧಾಮದ ವಾತಾವರಣವನ್ನು ಅವರು ಅಲ್ಲಿ ಕಂಡುಕೊಂಡರು.

ಭಾರತದಿಂದ ಕೀನ್ಯಾಕ್ಕೆ ಬಂದ ಮೇಲೆ ವೃದ್ಧಾಪ್ಯದ ವಯಸ್ಸಿನ ಕಾರಣದಿಂದ ಕಾರ್ಬೆಟ್ ಆರೋಗ್ಯದಲ್ಲಿ ಏರು ಪೇರು ಕಾಣತೊಡಗಿತು. ಮಲೇರಿಯಾ ರೋಗದಿಂದ ಚೇತರಿಸಿಕೊಂಡ ನಂತರವೂ ಕಾರ್ಬೆಟ್‌ನ ಎದೆಯಲ್ಲಿ ಕಫ ಕಟ್ಟಿಕೊಂಡು ತೊಂದರೆ ಕೊಡತೊಡಗಿತು. ಆತನ ನಡಿಗೆಯಲ್ಲಿ ಮೊದಲಿನ ವೇಗ ಇರಲಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ. ಬೇಸರವಾದಾಗ ಅರಣ್ಯಕ್ಕೆ ಹೋಗಿ ಬಗೆ ಬಗೆಯ ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ತೆಗೆಯುವ ಹವ್ಯಾಸ ರೂಢಿಸಿಕೊಂಡಿದ್ದ. ಉಳಿದ ವೇಳೆ ಅಕ್ಕ ತಮ್ಮ ಇಬ್ಬರೂ ತಮ್ಮ ಕಾಟೇಜ್ ವರಾಂಡದಲ್ಲಿ ಕೂರುತ್ತಿದ್ದರು, ಇಲ್ಲವೇ ಸಣ್ಣ ವಾಕ್ ಮಾಡುತ್ತಿದ್ದರು. ವಾರಾಂತ್ಯದಲ್ಲಿ  ಕಾರ್ಬೆಟ್ ಒಬ್ಬನೇ ಕೀನ್ಯಾದ ಉತ್ತರ ಭಾಗದಲ್ಲಿದ್ದ ಕಡಲತೀರಕ್ಕೆ ಹೋಗಿ ಅಲ್ಲಿ ಮಲಿಂಡಿ ಎಂಬ ನಗರದ ಹೊಟೇಲ್‌ನಲ್ಲಿ ಉಳಿದುಕೊಂಡು ಮೀನು ಶಿಕಾರಿ ಮಾಡುತ್ತಿದ್ದ. ಇಷ್ಟೆಲ್ಲಾ ಹವ್ಯಾಸಗಳ ನಡುವೆ ಅವನಿಗೆ ಭಾರತದಲ್ಲಿದ್ದಂತೆ ಸಾಮಾಜಿಕ ಬದುಕನ್ನು ಅಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಇದೊಂದು ಕೊರತೆ ಸದಾ ಕಾರ್ಬೆಟ್‌ನನ್ನು ಕಾಡುತಿತ್ತು.

ಕೀನ್ಯಾದ ಅರಣ್ಯಕ್ಕೆ ಭೇಟಿ ನೀಡಲು ವಿಶ್ವಾದ್ಯಂತ ಪ್ರವಾಸಿಗರು ಬರುತ್ತಿದ್ದದನ್ನು ಗಮನಿಸಿದ ಜಿಮ್ ಕಾರ್ಬೆಟ್ ತನ್ನ ಗೆಳೆಯ ಇಬ್ಬೊಟ್‌ಸನ್  ಹಾಗೂ ಮತ್ತೊಬ್ಬ ಗೆಳೆಯನ ಜೊತೆಗೂಡಿ ಅರಣ್ಯ ಸಫಾರಿಗಾಗಿ ಪ್ರವಾಸಿ ಸಂಸ್ಥೆಯನ್ನು 1948 ರಲ್ಲಿ ಹುಟ್ಟು ಹಾಕಿದ. ಪ್ರವಾಸಿಗರು ನೇರವಾಗಿ ಅರಣ್ಯಕ್ಕೆ ನುಸುಳಿ ಅಲ್ಲಿನ ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಕೊಡುವುದರ ಜೊತೆಗೆ ಕೆಲವೊಮ್ಮೆ ತಾವೇ ಅಪಾಯದ ಸ್ಥಿತಿಗೆ ಸಿಲುಕಿಕೊಳ್ಳತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಆರಂಭಿಸಿದ ಪ್ರವಾಸಿ ಸಂಸ್ಥೆ “ಸಫಾರಿ ಲ್ಯಾಂಡ್” ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತು. ಇದರಿಂದ ಬಂದ ಲಾಭದಿಂದ ಕಾರ್ಬೆಟ್ ಒಂದು ಐಷಾರಾಮಿ ಕಾರು ಖರೀದಿಸಿದ. ಅವನ ಓಡಾಟದ ಖರ್ಚಿಗೆ ತಾನು ಬರೆದಿದ್ದ ಕೃತಿಗಳಿಂದ ಆ ಕಾಲಕ್ಕೆ ಲಕ್ಷ ರೂಪಾಯಿಗೂ ಮೀರಿ ಬರುತ್ತಿದ್ದ ಲೇಖಕನ ಸಂಭಾವನೆ ಹಣವನ್ನು ವಿನಿಯೋಗಿಸುತ್ತಿದ್ದ.

1950 ರ ವೇಳೆಗೆ ಕೀನ್ಯಾದಲ್ಲೂ ಕೂಡ ಬ್ರಿಟಿಷರಿಂದ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದಿಂದ ಹಿಂಸಾತ್ಮಕ ಹೋರಾಟಗಳು ಆರಂಭಗೊಂಡವು. ಕೀನ್ಯಾದಲ್ಲಿ ಇದ್ದ ಯುರೋಪಿಯನ್ನರ ಕೃಷಿ ತೋಟಗಳು, ಕಾಫಿ, ಚಹಾ ಎಸ್ಟೇಟ್‌ಗಳು ದಾಳಿಗೆ ತುತ್ತಾದವು. ಬ್ರಿಟಿಷರ ಬಳಿ ಕೆಲಸ ಮಾಡುತ್ತಿದ್ದ ಆಫ್ರಿಕನ್ನರು ಹಿಂಸೆಯ ಹೋರಾಟದಲ್ಲಿ ಕೊಲ್ಲಲ್ಪಟ್ಟರು.

ಕಾರ್ಬೆಟ್ ಮತ್ತು ಮ್ಯಾಗಿ ಇವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಎರಡೂ ವೃದ್ಧ ಜೀವಗಳು ಸಾವಿನ ಭಯದಿಂದ ತತ್ತರಿಸಿ ಹೋದವು. ಕಿಕಿಯೂ ಎಂಬ ಬುಡಕಟ್ಟು ಜನಾಂಗ ಪ್ರಾರಂಭಿಸಿದ ಈ ಹೋರಾಟಕ್ಕೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಪ್ರೇರಣೆಯಾಗಿತ್ತು. ಕಾರ್ಬೆಟ್ ಮತ್ತು ಮ್ಯಾಗಿ ಇಬ್ಬರೂ ಸ್ವಲ್ಪ ಕಾಲ ಕೀನ್ಯಾ ತೊರೆದು ಇಂಗ್ಲೆಂಡ್‌ಗೆ ಬಂದು ವಾಸವಾಗಿದ್ದರು. ಭಾರತದಲ್ಲಿ ಪರಿಚಯವಾಗಿ ಇಂಗ್ಲೆಂಡ್‌ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಅವನ ಅನೇಕ ಅಧಿಕಾರಿ ಮಿತ್ರರು ನೆರವಾದರು.

1951 ರಿಂದ 1953ರ ನಡುವೆ ಕೀನ್ಯಾದಲ್ಲಿ ಹೋರಾಟ ತೀವ್ರವಾದಾಗಲೆಲ್ಲಾ ಇಂಗ್ಲೆಂಡ್‌ಗೆ ಬಂದು ಅಕ್ಕ ತಮ್ಮ ವಾಸಿಸುತ್ತಿದ್ದರು. ಈ ನಡುವೆ ಕಾರ್ಬೆಟ್‌ಗೆ ಭಾರತದ ನೆನಪು ಕಾಡತೊಡಗಿತು. ಅವನ ಸೇವಕರು, ಅವನ ಹಳ್ಳಿಯ ಜನ, ಕುಮಾವನ್ ಪ್ರಾಂತ್ಯದ ಘರ್ವಾಲ್ ಬುಡಕಟ್ಟು ಜನಾಂಗದ ಅನೇಕ ಹಳ್ಳಿಯ ರೈತರು ಅವನ ಸ್ಮೃತಿಯಲ್ಲಿ ಬರತೊಡಗಿದರು. ಇದರ ಪ್ರಭಾವದಿಂದ ಅವನು 1952 ರಲ್ಲಿ “ಮೈ ಇಂಡಿಯ” ಎಂಬ ಕೃತಿಯನ್ನು ಬರೆಯಲು ಸಾಧ್ಯವಾಯಿತು. ಇದನ್ನೂ ಕೂಡ ಆಕ್ಸಫರ್ಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಈ ಕೃತಿಯಲ್ಲಿ ಜಿಮ್ ಕಾರ್ಬೆಟ್ ಭಾರತದ ಬಗ್ಗೆ, ಇಲ್ಲಿನ ಜನರ ಔದಾರ್ಯದ ಬಗ್ಗೆ, ಶ್ರೀಮಂತ ಜಮೀನ್ದಾರರು, ಮತ್ತು ಹಣದ ಲೇವಾದೇವಿದಾರರ ಕೌರ್ಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಹಳ್ಳಿಗಳ ಸಾಮಾನ್ಯ ಜನ ಕಾರ್ಬೆಟ್‌ನ ಈ ಕೃತಿಯಲ್ಲಿ ನಾಯಕರಂತೆ ವಿಜೃಂಭಿಸಿದ್ದಾರೆ. ಈ ಕೃತಿ ಕೂಡ ವಿಶ್ವ ಪ್ರಸಿದ್ಧಿ ಪಡೆಯಿತು. “ಮೈ ಇಂಡಿಯ” ಕೃತಿಯ ಮೂಲಕ  ಕಾರ್ಬೆಟ್, ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯರ ಬಗ್ಗೆ ಇದ್ದ ಕೆಟ್ಟ ಭಾವನೆಗಳನ್ನು ಹೋಗಲಾಡಿಸಿದ. ಅಷ್ಟೇ ಅಲ್ಲ, ಭಾರತದ ಬಹು ಸಂಸ್ಕೃತಿಯ ನಡುವೆ ಇಲ್ಲಿ ಮುಗ್ಧ ಜನ ಸರಳವಾಗಿ ಬದುಕುವ ಕಲೆಯನ್ನ, ಅವರ ಔದಾರ್ಯವನ್ನು ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಕಾರ್ಬೆಟ್ ಕಟ್ಟಿಕೊಟ್ಟಿರುವುದು ವಿಶೇಷ. ಇದು ಅವನ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಈ ಕೃತಿಯ ನಂತರ ಕಾರ್ಬೆಟ್ ನೈನಿತಾಲ್ ಮತ್ತು ಕಲಾದೊಂಗಿ, ಚೋಟಿಹಲ್ದಾನಿ ಹಳ್ಳಿಗಳಲ್ಲಿ ಕಳೆದ ತನ್ನ ಬಾಲ್ಯವನ್ನು ಮತ್ತು ಅರಣ್ಯ ಮತ್ತು ಪರಿಸರಕ್ಕೆ ತನಗೆ ಪ್ರೇರಣೆಯಾದ ಬಗೆಯನ್ನು ವಿವರಿಸುವ “ಜಂಗಲ್ ಲೋರ್” ಕೃತಿಯನ್ನು ಬರೆದ. ಕಾರ್ಬೆಟ್‌ನ ಕೃತಿಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತನ್ನ ಶಿಕಾರಿಯ ಅನುಭವಗಳನ್ನೆಲ್ಲ ದಾಖಲಿಸಿದ. ಇಂತಹ ಕೃತಿಗಳಲ್ಲಿ “ಟೆಂಪಲ್ ಟೈಗರ್” ಪ್ರಮುಖವಾದುದು.

ಜಿಮ್ ಕಾರ್ಬೆಟ್ ಬರೆದ ಕೊನೆಯ ಪುಸ್ತಕವೆಂದರೆ, “ಟ್ರೀ ಟಾಪ್” ಎನ್ನುವ ಪುಟ್ಟ ಕೃತಿ. ಈಗಿನ ಇಂಗ್ಲೆಂಡಿನ ಎಲಿಜಬತ್ ರಾಣಿ (ಕಳೆದ ಜೂನ್‌ನಲ್ಲಿ ಈ ರಾಣಿಯ ಪಟ್ಟಾಭಿಷೇಕದ 60 ನೇ ವರ್ಷದ ಆಚರಣೆಯನ್ನು ಇಂಗ್ಲೆಂಡ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು) ಈಕೆ ತನ್ನ 22 ನೇ ವಯಸ್ಸಿನಲ್ಲಿ ತನ್ನ ಪತಿ ರಾಜಕುಮಾರ ಪಿಲಿಪ್ ಜೊತೆ 1952ರಲ್ಲಿ ಕೀನ್ಯಾ ಪ್ರವಾಸ ಕೈಗೊಂಡಿದ್ದಾಗ ಒಂದು ರಾತ್ರಿ ಮರದ ಮೇಲೆ ನಿರ್ಮಿಸುವ ಮಚ್ಚಾನಿನ ಮೇಲೆ ಕುಳಿತು ವನ್ಯ ಮೃಗಗಳನ್ನು ವೀಕ್ಷಿಸಬೇಕು ಎಂದು ಅಪೇಕ್ಷೆಪಟ್ಟಳು. ಅವಳ ಆಸೆಯಂತೆ ಕೀನ್ಯಾದ ಅರಣ್ಯದ ನಡುವೆ ಮರಗಳ ಮೇಲೆ 50 ಅಡಿ ಉದ್ದ ಮತ್ತು 20 ಅಡಿ ಅಗಲದ ವಿಶಾಲವಾದ ವೇದಿಕೆ ನಿರ್ಮಿಸಿ, ರಾಣಿ ಮತ್ತು ಅವಳ ಪರಿವಾರದ ನಲವತ್ತು ಸದಸ್ಯರಿಗೆ ರಾತ್ರಿ ಕಳೆಯಲು ವ್ಯವಸ್ಥೆ ಮಾಡಲಾಗಿತ್ತು. ರಾಣಿ ಕುಟುಂಬದ ಸುರಕ್ಷತೆ ಮತ್ತು ಉಸ್ತುವಾರಿಯನ್ನು ಕಾರ್ಬೆಟ್ ಹೊತ್ತಿದ್ದ. ಇಡೀ ರಾತ್ರಿ ರಾಣಿ ಕುಟುಂಬಕ್ಕೆ ಪ್ರಾಣಿಗಳ ಚಲನ ವಲನ, ಅವುಗಳ ಜೀವನ ವೈಖರಿ ಎಲ್ಲವನ್ನು ವಿವರಿಸಿದ. ನೀರಿನ ಹೊಂಡವಿದ್ದ ಸಮೀಪ ವೇದಿಕೆ ನಿರ್ಮಿಸಿದ್ದರಿಂದ ರಾತ್ರಿ ನೀರು ಕುಡಿಯಲು ಬಂದ ಪ್ರಾಣಿಗಳನ್ನು ನೋಡುವ ಅವಕಾಶ ರಾಣಿಗೆ ದೊರೆಯಿತು. ಇದು ಆಕೆಯ ಪಾಲಿಗೆ ಅತ್ಯಂತ ಸ್ಮರಣೀಯವಾದ ದಿನ. ಈ ಅನುಭವಗಳನ್ನು ಕುರಿತು. ಸುಮಾರು ನಲವತ್ತು ಪುಟಗಳಿರುವ ಕೃತಿ ಕಾರ್ಬೆಟ್ ಪಾಲಿಗೆ ಕೊನೆಯ ಕೃತಿಯಾಯಿತು.

1953ರ ವೇಳೆಗೆ ಸತತ ಅನಾರೋಗ್ಯದಿಂದ ಬಳಲಿದ ಕಾರ್ಬೆಟ್ ಕ್ಷಯ ರೋಗಕ್ಕೆ ಬಲಿಯಾಗಿ ನರಳತೊಡಗಿದ. ಅಂತಿಮವಾಗಿ 1955ರ ಏಪ್ರಿಲ್ 18 ರಂದು ಹೃದಯಾಘಾತಕ್ಕೆ ತುತ್ತಾಗಿ ಮರು ದಿನ 19ರಂದು ನೈರಿ ಆಸ್ಪತ್ರೆಯಲ್ಲಿ ತನ್ನ ಅಕ್ಕ ಮ್ಯಾಗಿಯ ತೊಡೆಯ ಮೇಲೆ ತಲೆ ಇಟ್ಟು ತನ್ನ 79 ವರ್ಷದ ವರ್ಣರಂಜಿತ ಬದುಕಿಗೆ ವಿದಾಯ ಹೇಳಿದ. ಸಾಯುವ ಮುನ್ನ ಕಾರ್ಬೆಟ್ ತನ್ನ ಅಕ್ಕನಿಗೆ ಹೇಳಿದ ಕೊನೆಯ ಮಾತುಗಳಿವು: “ಧೈರ್ಯವಾಗಿರು, ಇತರರು ಸುಖದಿಂದ ಬಾಳುವೆ ಮಾಡಲು, ಜಗತ್ತು ಸದಾ ಸಂತೋಷದಿಂದ ಇರುವಂತೆ ನೋಡಿಕೊ.” ಯುರೋಪ್ ಮೂಲದ ಕುಟುಂಬದಿಂದ ಭಾರತದಲ್ಲಿ ಹುಟ್ಟಿ, ನಂತರ ಆಫ್ರಿಕಾ ಖಂಡದಲ್ಲಿ ಸಾವನ್ನಪ್ಪಿದ ಕಾರ್ಬೆಟ್, ಒಂದರ್ಥದಲ್ಲಿ ಯುರೋಪ್, ಏಷ್ಯಾ, ಮತ್ತು ಆಫ್ರಿಕಾ ಖಂಡಗಳನ್ನು ತನ್ನ ಬದುಕಿನ ಮೂಲಕ ಬೆಸೆದು, ವಿಶ್ವಮಾನವನಾಗಿ, ಜಗತ್ತಿನಲ್ಲಿ ಚಿರಸ್ಥಾಯಿಯಾದ. ಜಿಮ್ ಕಾರ್ಬೆಟ್‌ನ ಶವವನ್ನು ನೃತಿ ಪಟ್ಟಣದ ಚರ್ಚ್‌ಗೆ ತಂದು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿ ಕ್ರೈಸ್ತರ ರುಧ್ರಭೂಮಿಯಲ್ಲಿ ಹೂಳಲಾಯಿತು.

ಜಿಮ್ ಕಾರ್ಬೆಟ್‌ನ ಸಾವಿನ ಸುದ್ಧಿಯನ್ನು ಜಗತ್ತಿನಾದ್ಯಂತ ಪತ್ರಿಕೆಗಳು ಸುದ್ದಿ ಮಾಡಿ, ಶ್ರದ್ಧಾಂಜಲಿಯ ಲೇಖನ ಬರೆದವು. ಟೈಮ್ಸ್ ನಿಯತಕಾಲಿಕೆ ತನ್ನ ಮೇ ತಿಂಗಳ ಸಂಚಿಕೆಯನ್ನು ಕಾರ್ಬೆಟ್‌ಗಾಗಿ ಮೀಸಲಿಟ್ಟು, ಅವನ ಒಡನಾಡಿಗಳಿಂದ ಲೇಖನಗಳನ್ನು ಬರೆಸಿ ಅವನನ್ನು ಹಾಡಿ ಹೊಗಳಿತು. ಕಾರ್ಬೆಟ್ ನಿಧನದ ನಂತರ ಅವನ ಆಸೆಯಂತೆ ಸಹೋದರಿ ಮ್ಯಾಗಿ ಭಾರತದ ಚೋಟಿ ಹಲ್ದಾನಿಯ ಹಳ್ಳಿಯ ಕಂದಾಯವನ್ನು ರೈತರ ಪರವಾಗಿ ಭರಿಸುತ್ತಾ ಬಂದಳು. 1957ರಲ್ಲಿ ಆಕೆಯ ನಿಧನಾನಂತರ ಭಾರತ ಸರ್ಕಾರ, ಅಲ್ಲಿನ ಭೂಮಿ ಮತ್ತು ನಿವೇಶನವನ್ನು ಕಾರ್ಬೆಟ್‌ನ ಕೊನೆಯ ಆಸೆಯಂತೆ ರೈತರ ಹೆಸರಿಗೆ ವರ್ಗಾಯಿಸಿತು. ಅವನು ವಾಸವಾಗಿದ್ದ ಚೋಟಿ ಹಲ್ದಾನಿಯ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡಿ, ಹಳ್ಳಿಯ ಜನರ ಉಸ್ತುವಾರಿಗೆ ವಹಿಸಿತು. ಇದಲ್ಲದೆ, ಹಿಂದೊಮ್ಮೆ ಜಿಮ್ ಕಾರ್ಬೆಟ್ ಆಸಕ್ತಿ ವಹಿಸಿ ಅಭಯಾರಣ್ಯ ಮಾಡಿದ್ದ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ ಅಧಿಕೃತವಾಗಿ “ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್” ಎಂದು ಘೋಷಿಸಿ ಕಾರ್ಬೆಟ್‌ಗೆ ಗೌರವ ಸೂಚಿಸಿತು.

ಇಂದು ಕೂಡ ಕಲದೊಂಗಿ ಮತ್ತು ಚೋಟಹಲ್ದಾನಿ ಹಳ್ಳಿಗಳ ಜನರ ಪಾಲಿಗೆ ದಂತ ಕಥೆಯಾಗಿರುವ, ತಮ್ಮ ಬದುಕಿಗೆ ಭೂಮಿ ಮತ್ತು ಮನೆ ನಿರ್ಮಿಸಿಕೊಟ್ಟು ದೈವವಾಗಿರುವ ಕಾರ್ಬೆಟ್ ಬಗ್ಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಈ ತಲೆಮಾರು ಕಾರ್ಬೆಟ್‌ನನ್ನು ನೋಡದಿದ್ದರೂ, ಬಾಯಿಂದ ಬಾಯಿಗೆ, ಎದೆಯಿಂದ ಎದೆಗೆ ಹರಿದು ಬಂದ ಅವನ ಗುಣವನ್ನು ಕಾಪಿಟ್ಟುಕೊಂಡು ಬಂದಿದೆ. ಹಾಗಾಗಿ ರಾಮನಗರ್, ಕಲದೊಂಗಿ, ಚೋಟಿ ಹಲ್ದಾನಿ ಹಳ್ಳಿಗಳಲ್ಲಿ, ಕಾರ್ಬೆಟ್ ಹೆಸರಿನ ಟೈಲರಿಂಗ್ ಶಾಪ್, ಸೇವಿಂಗ್ ಶಾಪ್, ಹೊಟೇಲ್, ಮೊಬೈಲ್ ಶಾಪ್ ಮತ್ತು ಬಡಾವಣೆಗಳನ್ನು ಕಾಣಬಹುದು. ಆದರೆ. ನೈನಿತಾಲ್ ಗಿರಿಧಾಮದಲ್ಲಿ ಜಿಮ್ ಕಾರ್ಬೆಟ್ ಹೆಸರು ಹೇಳಿದರೆ, ಹಾಗಂದರೇನು ಎಂದು ಪ್ರಶ್ನಿಸುವ ಜನರಿದ್ದಾರೆ. ಸ್ವತಃ ಕಾರ್ಬೆಟ್‌ನ ತಂದೆ ಕ್ರಿಸ್ಟೊಪರ್ ಹಾಗೂ ಕಾರ್ಬೆಟ್ ನಾಲ್ಕು ದಶಕಗಳ ಕಾಲ ಅಲ್ಲಿನ ಪುರಸಭೆಯ ಪ್ರತಿನಿಧಿಗಳಾಗಿ, ಉಪಾಧ್ಯಕ್ಷರಾಗಿ ದುಡಿದಿದ್ದರೂ ಕೂಡ ಈ ಕುರಿತು ಒಂದು ಸಣ್ಣ ದಾಖಲೆಯಿಲ್ಲ. ಇವತ್ತಿಗೂ ಉತ್ತರ ಭಾರತದ ಜನ ನೈನಿತಾಲ್ ಗಿರಿಧಾಮವನ್ನು ಕಾರ್ಬೆಟ್ ನೈನಿತಾಲ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಆದರೆ, ನೈನಿತಾಲ್ ಜನಕ್ಕೆ ಈ ಬಗ್ಗೆ  ಇತಿಹಾಸದ ಪ್ರಜ್ಞೆಯೇ ಇಲ್ಲ. ಇದು ನಿಜಕ್ಕೂ ನೋವಿನ ಸಂಗತಿ.

(ಮುಗಿಯಿತು.)

ರಾಜಕೀಯದ ಹೊಸ ಲೆಕ್ಕಾಚಾರದಲ್ಲಿ ಕರ್ನಾಟಕ

– ನಾಗರಾಜ್ ಹರಪನಹಳ್ಳಿ

ಕರ್ನಾಟಕದ ರಾಜಕಾರಣ ಸಂಪೂರ್ಣವಾಗಿ ಜಾತಿ ಲೆಕ್ಕಾಚಾರದಲ್ಲಿ ಮುಳುಗಿದೆ. ಬರ ರಾಜ್ಯದ ರೈತರನ್ನು ಕಾಡುತ್ತಿದ್ದರೆ. ಅಧಿಕಾರದಲ್ಲಿರುವವರು ಮತ್ತೆ ಅಧಿಕಾರಕ್ಕೆ ಬರುವುದು ಹೇಗೆ ಎಂದು ಗುಣಾಕಾರ ಭಾಗಾಕಾರ ಮಾಡುತ್ತಿದ್ದಾರೆ. ಫ್ಯಾಸಿಸ್ಟ ಶಕ್ತಿಗಳು ಜಾತಿಯ ಹೆಗಲ ಮೇಲೆ ಕುಳಿತು ನರ್ತಿಸುತ್ತಿವೆ. ಅಪರೇಶನ್ ಕಮಲ ಮತ್ತು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ದಾಹ ಬಿಜೆಪಿಯನ್ನು ಆವರಿಸಿಕೊಂಡಿದ್ದು, ಕಳೆದ 4 ವರ್ಷಗಳಲ್ಲಿ ಮಾಡಿರಬಹುದಾದ ಅಷ್ಟಿಷ್ಟು ಒಳ್ಳೆಯ ಕೆಲಸಗಳು ಸಹ ಮಾಸಿ ಹೋಗಿವೆ. ಬಿಜೆಪಿಯ ಅಧಿಕಾರಸ್ಥರನ್ನು ಆರ್.ಎಸ್.ಎಸ್. ಸೇರಿದಂತೆ ಅದರ ಅಂಗ ಸಂಸ್ಥೆಗಳು ಒಳಗೊಳಗೇ ಟೀಕಿಸುತ್ತಿವೆ. ಅಖಂಡ ಭಾರತದ ಕನಸುಗಾರರು, ಹಿಂದೂತ್ವ ಪ್ರತಿಪಾದಕರು ರಾಜ್ಯದ ಅಧಿಕಾರ ಹಿಡಿಯಬೇಕು ಎಂಬ ಒಳ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿವೆ. ಅಣ್ಣಾ ಹಜಾರೆ ಹೋರಾಟದಲ್ಲಿ ತೊಡಗಿಕೊಂಡಿರುವ ಅನೇಕರಲ್ಲಿ ಹಿಂದುತ್ವ ಪ್ರತಿಪಾದಕರು ತೂರಿಕೊಂಡಿರುವುದು, ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಮಾತ್ರ ಅಲ್ಲ; ರಾಜ್ಯದ ಅಧಿಕಾರ ನಡೆಸುವ ಕನಸನ್ನು ಸಹ ಹೊತ್ತವರೇ ಆಗಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚು ಜನಪರ ಆಗುವ ಬಯಕೆ ಹೊಂದಿವೆ. ಜನರ ಹತ್ತಿರ ತಲುಪಲು ಶತಪ್ರಯತ್ನ ಸಹ ಮಾಡುತ್ತಿವೆ.

ಮುಖ್ಯಮಂತ್ರಿ ಹುದ್ದೆಯ ಆಸೆ ಬಿಟ್ಟು ಜನಪರ ರಾಜಕಾರಣ ಮಾಡಿದರೆ ಪಶ್ಚಿಮ ಬಂಗಾಳದ  ಜ್ಯೋತಿ ಬಸ್ಸು, ಕೇರಳದಲ್ಲಿದ್ದ  ಕೆ. ಕರುಣಾಕರ್, ತಮಿಳುನಾಡಿನಲ್ಲಿದ್ದ  ಎಂಜಿಆರ್‌ರಂತೆ ಒಬ್ಬರನ್ನು ನಾಯಕನ್ನಾಗಿ ಒಪ್ಪಿಕೊಳ್ಳುವ ರಾಜಕೀಯ ಸಂದರ್ಭ ಕರ್ನಾಟಕದಲ್ಲಿ ಬಂದ್ರೆ ರಾಜ್ಯದ ಅಭಿವೃದ್ಧಿಯ ದಿಕ್ಕು ಬದಲಾಗಲಿದೆ. ಯಡಿಯೂರಪ್ಪ ಆ ಛಾನ್ಸ ಕಳೆದುಕೊಂಡರು. ಈ ಛಾನ್ಸ ಇರುವುದು ಜೆಡಿಎಸ್‌ನ ಕುಮಾರ ಸ್ವಾಮಿಗೆ ಮಾತ್ರ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿ. ಅವರ ನಾಯಕತ್ವವನ್ನು ಜೆಡಿಎಸ್‌ನಲ್ಲಿ ಇತರರು ಒಪ್ಪುತ್ತಾರೆ. ಅದು ಬಿಟ್ಟರೆ ಈ ಅವಕಾಶ ಇರುವುದು ಬಿಎಸ್ಆರ್ ಕಾಂಗ್ರೆಸ್‌ನ ಶ್ರೀರಾಮುಲು ಅವರಿಗೆ. ಆದರೆ ಅವರ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವಷ್ಟು ಸ್ಥಾನಗಳನ್ನು ಗೆಲ್ಲಲಾರದು. ಶ್ರೀರಾಮುಲು ಬಿಜೆಪಿಯನ್ನು ಎಷ್ಟು ಕ್ಷೇತ್ರಗಳಲ್ಲಿ ಸೋಲಿಸಬಲ್ಲರು ಎಂಬ ಲೆಕ್ಕಾಚಾರ ಆರಂಭವಾಗಿದೆ. ಅವರು 10 ರಿಂದ 12 ಎಂಎಲ್ಎ ಗಳನ್ನು ಕರ್ನಾಟಕ ವಿಧಾನಸಭೆಗೆ ಕಳುಹಿಸಬಲ್ಲರು ಎನ್ನುವ ಊಹೆಗಳಿವೆ. ಜೆಡಿಎಸ್ ಶಾಸಕರ ಸಂಖ್ಯೆಯನ್ನು 40 ರಿಂದ 45 ಕ್ಕೆ ಏರಬಹುದು. ಉಳಿದ ಸ್ಥಾನಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹಂಚಿಕೊಳ್ಳಬಹುದು. ಬಿಜೆಪಿ ಅಧಿಕಾರಕ್ಕೆ ಬರುವುದು ಅನುಮಾನ. 100 ರಿಂದ 110 ಸ್ಥಾನ ಕಾಂಗ್ರೆಸ್ ಗೆದ್ದರೆ, ಆಗ ಅವರಿಗೆ ರಾಮುಲು ಅಥವಾ ಕುಮಾರಸ್ವಾಮಿ ನೆರವು ಅನಿವಾರ್ಯ. ಹಾಗಾದಲ್ಲಿ ಮತ್ತೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ.

ಬಿಜೆಪಿ ಅಬ್ಬಾಬ್ಬಾ ಅಂದ್ರೆ 60 ರಿಂದ 70 ಶಾಸಕರನ್ನು ಹೊಂದಿ ವಿರೋಧಿ ಪಾಳಯದಲ್ಲಿ ಕುಳಿತುಕೊಳ್ಳಲು ಸಿದ್ಧತೆ ಮಾಡಿಕೊಳ್ಳಬಹುದು. ಕಾಂಗ್ರೆಸ್ ಪಕ್ಷ ಜೆಡಿಎಸ್ ಅಥವಾ ಬಿಎಸ್ಆರ್ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ಅಥವಾ ಜೆಡಿಎಸ್ ಮತ್ತು ಶ್ರೀರಾಮುಲು ಪಕ್ಷಗಳು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿಯಲು ಕಾಂಗ್ರೆಸ್ ಸಹಕಾರ ಕೋರಬಹುದು. ಈ ಸಮೀಕರಣಗಳೇ ಇನ್ನಾರು ತಿಂಗಳಲ್ಲಿ ನಡೆಯುವುದು ಖಚಿತ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರು ತಿಂಗಳು ಕಾಲ ಅಧಿಕಾರದಲ್ಲಿ ಇರಬಹುದು. ಮೂರು ಹೋಳಾಗಿರುವ ಬಿಜೆಪಿ ಭಿನ್ನಮತ ಚುನಾವಣೆಯ ವೇಳೆಗೆ ತಾರಕಕ್ಕೆ ಏರಲಿದೆ. ಯಡಿಯೂರಪ್ಪ ಜೊತೆ ಇರುವವರಲ್ಲಿ 35 ರಿಂದ 40 ಜನ  ಶಾಸಕರು ವಿಧಾನಸಭೆ ಪ್ರವೇಶಿಸಬಹುದು. ಅವರೇ ಹೊಸ ಸರ್ಕಾರಗಳ ಹಣೆಬರಹ ನಿರ್ಧರಿಸುವ ಸಾಧ್ಯತೆಗಳು ಇವೆ. ಹಾಲಿ ಸರ್ಕಾರದ ಪತನದ ನಂತರವೂ ಯಡಿಯೂರಪ್ಪ ಪ್ರಬಲ ನಾಯಕನಾಗಿ ಉಳಿಯ ಬಹುದು. ಆದರೆ ಅಧಿಕಾರ ಮಾತ್ರ ಬಿಜೆಪಿಯ ಕೈ ತಪ್ಪಲಿದೆ. ಆದರೆ ಕಾಂಗ್ರೆಸ್‌ನಲ್ಲಿನ ಸಮಸ್ಯೆಗಳು ಸದ್ಯಕ್ಕೆ ತಣ್ಣಗಾಗಿವೆ. ಆ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿನಲ್ಲೇ ನಾಯಕತ್ವದ ಸಮಸ್ಯೆ ಮತ್ತು ಮುಖ್ಯಮಂತ್ರಿ ಗಾದಿಗೆ ಕಿತ್ತಾಟ ನಡೆಯುವುದು ಗ್ಯಾರಂಟಿ.

ಶ್ರೀರಾಮುಲು ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಬೀದರ್‌ನಿಂದ ಬೆಂಗಳೂರಿನವರೆಗೆ 54 ದಿನಗಳ ಕಾಲ 914 ಕಿಲೋ ಮೀಟರ್ ಪಾದಯಾತ್ರೆ ಮಾಡಿರುವ ರಾಮುಲು ಹಿಂದುಳಿದ ವರ್ಗಗಳನ್ನು ಸಂಘಟಿಸಿಕೊಂಡಿದ್ದು ಚುನಾವಣೆಗಾಗಿ ಕಾದಿದ್ದಾರೆ. ಹಿಂದುಳಿದವರು, ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದರೆ ಕರ್ನಾಟಕದಲ್ಲಿ ಹೊಸ ರಾಜಕೀಯ ಶಕ್ತಿಯ ಸಮೀಕರಣವಾಗಬಹುದು ಎಂಬ ಲೆಕ್ಕಾಚಾರವೂ ಇದೆ. ಜೊತೆಗೆ ಕರಾವಳಿ, ಮಲೆನಾಡು, ಮೈಸೂರು ಭಾಗದಲ್ಲಿ ಸಂಕಲ್ಪ ಯಾತ್ರೆ ಸಹ ಹೊರಡುತ್ತಿದ್ದಾರೆ. ಜುಲೈ 29 ರಿಂದ ಅಗಸ್ಟ 5 ರವರೆಗೆ ನಡೆಯುವ ಸಂಕಲ್ಪ ಯಾತ್ರೆಯಲ್ಲಿ ಶ್ರೀರಾಮುಲು ಯಾರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂಬುದರ ಮೇಲೆ, ಅವರು ಯಾರ ಜೊತೆ ಸೇರಲಿದ್ದಾರೆ ಎಂದು ಸಹ ನಿರ್ಧರಿಸಬಹುದು. ಬಿಜೆಪಿ ಬಿಟ್ಟ ಹಾಲಾಡಿ ಸಹ ಶ್ರೀರಾಮುಲು ಪಕ್ಷ ಸೇರಿಕೊಂಡರೆ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಕರಾವಳಿಯಲ್ಲಿ ಒಂದು ಶಾಸಕ ಸ್ಥಾನದ ಗೆಲುವು ಗ್ಯಾರಂಟಿ. ಇನ್ನು ಜಾರಕಿಹೊಳಿ, ಅಸ್ನೋಟಿಕರ್ ಮತ್ತವರ ಬೆಂಬಲಿಗರು ಶ್ರೀರಾಮುಲು ಹಾಗೂ ಕುಮಾರಸ್ವಾಮಿ ಜೊತೆ ಸಮಾನ ಅಂತರ ಕಾದುಕೊಂಡವರು. ಅಧಿಕಾರ ಹೋಗುತ್ತಿದ್ದಂತೆ ಅಥವಾ ಸರ್ಕಾರ ಬೀಳುತ್ತಿದ್ದಂತೆ ಅವರು ಬಿಜೆಪಿ ಬಿಡುವುದು ಖಚಿತ.

ಕರ್ನಾಟಕದ ಜನ ಸದ್ಯಕ್ಕೆ ಜಾತಿಯ ಪ್ರವಾಹದಲ್ಲಿ ತೇಲಿ ಹೊದಂತೆ ಕಾಣುತ್ತಿದೆ. ಆದರೆ ಇಲ್ಲಿನ ಜನ ಬಹುತೇಕರು ಸೆಕ್ಯುಲರ್ ಮನೋಭಾವದವರು. ಆಡಳಿತ ವಿರೋಧಿ ಮತಗಳನ್ನು ಯಾರು ಹೆಚ್ಚು ಪಡೆಯುತ್ತಾರೆ ಎಂಬುದರ ಮೇಲೆ ಕರ್ನಾಟಕದ ರಾಜಕಾರಣದ ಭವಿಷ್ಯ ನಿಂತಿದೆ. ಸಿದ್ಧರಾಮಯ್ಯ, ಕುಮಾರಸ್ವಾಮಿ, ಅಥವಾ ಶ್ರೀರಾಮುಲು, ಈ ಮೂವರಲ್ಲಿ ಯಾರು ರಾಜ್ಯದ ಜನರನ್ನು ಹೆಚ್ಚು ಕನ್ವಿನ್ಸ ಮಾಡಲು ಯಶ ಕಾಣುತ್ತಾರೆ ಎಂಬುದರ ಮೇಲೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಮತಗಳು ಅವರ ಪಕ್ಷಗಳಿಗೆ ಹರಿದು ಬರಲಿವೆ.

ಯುವ ಪಡೆ ಮತ್ತು ಸಿನಿಮಾದ ಜನ

ರಾಜಕೀಯ ಪಕ್ಷಗಳು ಯುವಪಡೆಯನ್ನು ಪಾರ್ಟಿಗೆ ಸೇರಿಸಿಕೊಳ್ಳುತ್ತಿವೆ. ಜೊತೆಗೆ ಸಿನಿಮಾ ಮಂದಿಯನ್ನು ರಾಜಕೀಯಕ್ಕೆ ಎಳೆದು ತಂದಿವೆ. ಜೆಡಿಎಸ್ ಪಕ್ಷ ಮಳೆ ಹುಡುಗಿ ಪೂಜಾ ಗಾಂಧಿ, ಕಿರುತೆರೆಯ ಖ್ಯಾತ ನಟಿ ಮಾಳವಿಕರನ್ನು ರಾಜಕೀಯಕ್ಕೆ ಕರೆ ತಂದಿದೆ. ಬಂಗಾರಪ್ಪ ಅವರ ಪುತ್ರ ಮಧು ಸಹ ರಾಜ್ಯದ ಎಲ್ಲೆಡೆ ಸುತ್ತಾಡಿ ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಟಿ ರಮ್ಯ ಮತ್ತು ಭಾವನಾ ಇದ್ದಾರೆ. ಉಮಾಶ್ರೀ ಮೊದಲಿನಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿಯಲ್ಲಿ ಶೃತಿ, ಶ್ರೀನಾಥ ಕ್ರಿಯಾಶೀಲರಾಗಿದ್ದಾರೆ. ಇನ್ನು  ಬಿಎಸ್ಆರ್ ಪಕ್ಷದ ಶ್ರೀರಾಮುಲು ನಟಿ ರಕ್ಷಿತಾರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಚುನಾವಣೆಯ ಹೊತ್ತಿಗೆ ಮತ್ತೊಂದಿಷ್ಟು ನಟನಟಿಯರ ರಾಜಕೀಯ ಪ್ರವೇಶ ಖಂಡಿತ. ಆದರೆ ಇವರು ರಾಜಕೀಯಕ್ಕೆ ಯಾಕೆ ಬರುತ್ತಾರೆ ಮತ್ತು ಅವರಿಂದ ಯಾರಿಗೆ ಲಾಭ ಎಂದು ಅಂದಾಜು ಮಾಡುವುದು ಕಷ್ಟ.

ಮಳೆ ಪೂಜೆ ಮತ್ತು ಸರ್ಕಾರ

ಮಳೆಗಾಗಿ ಪೂಜೆ ಮಾಡಿಸಲು ಹೊರಟ ಸರ್ಕಾರ ವೈಚಾರಿಕತೆಯಿಂದ ಬಹುದೂರ ಎಂಬುದರಲ್ಲಿ ಎರಡು ಮಾತಿಲ್ಲ. 34 ಸಾವಿರ ದೇವಸ್ಥಾನಗಳಲ್ಲಿ ಸರ್ಕಾರ ಪೂಜೆ ಮಾಡಿಸಲು ಹೊರಟಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಜಲಾಭಿಷೇಕ ಮತ್ತು ಹೋಮ ಮಾಡಿಸಲು 17 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಆದೇಶಿಸಿದೆ. ಜುಲೈ 27 ಮತ್ತು ಆಗಸ್ಟ 2 ರಂದು ಪೂಜೆ ನಡೆಯಲಿದೆ. ಮಳೆಗಾಗಿ ಮೋಡ ಬಿತ್ತನೆ ಮಾಡದೇ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಹೊರಟಿರುವುದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್, ಜೆಡಿಎಸ್ ಮಳೆಗಾಗಿ ಸರ್ಕಾರಿ ಪೂಜೆಯನ್ನು ಟೀಕಿಸಿವೆ. ಜನರ ಭಾವನೆಗಳನ್ನ ದೇವರ ಜೊತೆ ತಳುಕು ಹಾಕಿದ್ರೆ ಮಳೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಗೆ ಸ್ವಲ್ಪ ಮತಗಳು ಬರಬಹುದು. ಅವೂ ಸಹ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಕಷ್ಟವೇ.