Monthly Archives: July 2012

ಹೊನ್ನಮ್ಮಜ್ಜಿಯ ಹಿತ್ತಲ [ಕಥೆ]

-ಶೀತಲ ನಾಯಕ

ಹೊನ್ನಮ್ಮಜ್ಜಿಯ ಕಣ್ಣೀರ ಧಾರೆ ಒಂದೇ ಸಮನೆ ಹರಿಯುತ್ತಿತ್ತು. ಬಾಯಿಗೂ ಪುರುಸೊತ್ತಿರಲಿಲ್ಲ. ಬೈಗುಳಗಳ ರಭಸ ಇನ್ನೂ ಜೋರಾಗಿತ್ತು. ಆಕೆಯ ನೋವಿನ ಕಟ್ಟೆ ಒಡೆದಾಗಿತ್ತು. ಯಾವತ್ತೂ ಯಾರ ಮನಸ್ಸನ್ನೂ ನೋಯಿಸದ ಹೊನ್ನಮ್ಮಜ್ಜಿ ಅಂದು ರಣಚಂಡಿಯಂತಾಗಿದ್ದಳು. ಸಿಟ್ಟಿಗೆ ಕಾರಣರಾದವರು ಎದುರಿಗೆ ಬಂದರೆ ಅವರನ್ನು ಚಚ್ಚಿ ಹಾಕಿ ಬಿಡುವಷ್ಟು ಕೋಪ ಅವಳಲ್ಲಿ ಮನೆಮಾಡಿತ್ತು.

‘ಆ ಬೋಳಿ ಮಕ್ಕಳ ಮನೆ ಹಾಳಾಗಾ, ಅವರ ವಂಶ ನಿರ್ವಂಶಾಗಾ, ನನ್ನ ಮಕ್ಕಳು ನಾಶವಾಗಿ ಹೊದಂಗೆ ಅವರ ಮಕ್ಕಳೂ ನಾಶವಾಗೋಗ್ಲಿ, ಬರ್‍ಯ್ರೋ ಬೋಳಿ ಮಕ್ಕಳಿಯಾ… ಬರ್ರಿ, ನಿಮ್ಮೂ ಇದನ್ನ ಹ್ಯಾಂಗೆ ಕಡದ ಹಾಕರಿ ಹಾಂಗೆ ನಿಮ್ಮೂ ಕಡದ ಹಾಕ್ತಿ ಬರ್ರಿ’ ಎಂದು ಜೋರ್ ಜೋರಾಗಿ ಬಾಯಿ ಮಾಡುತ್ತಿದ್ದಳು. ಇವಳ ಜೋರು ಬಾಯಿಗೆ ಎಚ್ಚರಗೊಂಡ ಶಂಕ್ರಣ್ಣ ನಮ್ಮವ್ವ ಇಂದಿಷ್ಟು ಜೋರಾಗಿ ಯಾರಿಗೆ ಬಾಯಿ ಮಾಡುತ್ತಿದ್ದಾಳೆ ಎಂದು ನೋಡಲು ಹಿತ್ತಲಕಡೆಗೆ ಬಂದ. ಅಲ್ಲಿ ಹೊನ್ನಮ್ಮಜ್ಜಿ ತಾನು, ತನ್ನ ಮಕ್ಕಳು ಸಾಕಿ ಬೆಳೆಸಿದ ಗಿಡಗಳನ್ನೆಲ್ಲಾ ಗುಡ್ಡೆ ಹಾಕಿ ನಡುವೆ ಕುಳಿತು ರೋಧಿಸುತ್ತಿದ್ದಳು. ಹಿತ್ತಲದಲ್ಲಿ ಮುಗಿಲ ಮುಟ್ಟಲೆಂಬಂತೆ ಎದೆಸೆಟೆಸಿ ನಿಂತಿದ್ದ ಅರ್ಧಕ್ಕರ್ಧ ಗಿಡ ಮರಗಳು ಅಂಗಾತ ನೆಲಕಚ್ಚಿದ್ದವು. ಮಗ ಶಂಕ್ರಣ್ಣನನ್ನು ನೋಡಿದ್ದೇ ಹೊನ್ನಮ್ಮಜ್ಜಿಯ ದು:ಖ ದುಪ್ಪಟ್ಟಾಯಿತು.  ‘ಶಂಕರಾ.. ನೋಡೋ ನನ್ನ ಮಕ್ಕಳನ್ನೆಲ್ಲಾ ಸಾಯಿಸಿಬಿಟ್ರೋ, ಹಾಳಾದೋರು ಇನ್ನೂ ತಮ್ಮ ಬುದ್ದಿನ ಬಿಟ್ಟಿಲ್ವಲ್ಲೋ, ಅವರು ಉದ್ದಾರಾಗುಲಾ, ಹುಳಾಬಿದ್ದೇ ಸಾಯ್ತರ, ನನ್ನ ಶಾಪ ತಟ್ಟದೇ ಬಿಡುದಿಲ್ಲಾ ನೋಡ ಬೇಕರೆ’ ಎನ್ನುತ್ತ ಸಣ್ಣ ಮಕ್ಕಳ ಹಾಗೆ ಎರಡೂ ಕೈಗಳಿಂದ ಕಣ್ಣೊರೆಸುತ್ತಿದ್ದಳು.

ಹಿತ್ತಲದಲ್ಲಿದ್ದ ಬಾಳೆ, ತೆಂಗು ಅಡಿಕೆ, ಬೇರಹಲಸಿನ ಮರ, ಮಾವಿನ ಗಿಡ, ನುಗ್ಗೆಕಾಯಿ, ಹೂವಿನಗಿಡಗಳು ನೆಲಕ್ಕೆ ತಲೆ ಉರುಳಿಸಿದ್ದವು. ಹಾಗೂ ಕುಂಬಳಕಾಯಿ, ಹಿರೇಕಾಯಿ ಬಳ್ಳಿಗಳೆಲ್ಲ ಬೇರು ಕಳಚಿ ಚಲ್ಲಾಪಿಲ್ಲಿಯಾಗಿದ್ದವು. ಆ ಅಜ್ಜಿಯ ಕೂಗಾಟಕ್ಕೆ ಅಕ್ಕ ಪಕ್ಕದವರೂ ಬಂದು ಸೇರಿದರು. ಇಟ್ಟ ಕಷ್ಟ ಪಟ್ಟೆ ಪ್ರೀತಿಯಿಂದ ಬೆಳೆಸದೆ ಅವನೆಲ್ಲ ಕುಂದ ಹಾಕಬಿಟ್ರಲ್ಲೇ ಸಾವಿತ್ರಿ ಎಂದು ಪಕ್ಕದಮನೆಯವರ ಹತ್ತಿರ ಅಜ್ಜಿ ತನ್ನ ಅಳಲನ್ನು ತೋಡಿಕೊಂಡಳು. ಎಲ್ಲರ ಕಣ್ಣುಗಳಲ್ಲೂ ಕತ್ತರಿಸಿ ಬಿದ್ದ ಗಿಡಮರಗಳ ಬಗ್ಗೆ ದಯಾಮಯ ನೋಟವೇ ತೋರುತ್ತಿತ್ತು. ಆ ಹಿತ್ತಲ ಅವಸ್ತೆ ನೋಡಿ ಕ್ಷಣ ಹೊತ್ತು ದಂಗಾದರು. ಹೊನ್ನಮ್ಮಜ್ಜಿ ಈ ಗಿಡಗಳನ್ನ ತನ್ನ ಮಕ್ಕಳಂತೇ ಬೆಳಸತ. ಇವುನೆಲ್ಲ ಹೆಂಗೆ ನಾಶಮಾಡರ ನೋಡ, ಇವರೇನು? ಮನುಷ್ಯರೋ, ರಾಕ್ಷಸರೋ, ಪಾಪ..! “ಹೊನ್ನಮ್ಮಜ್ಜಿ ಆ ಗಿಡಗಳನ್ನ ಬೆಳೆಸುಕೆ  ಆಗಿರೋ ಕಷ್ಟ ಅಟ್ಟಿಟ್ಟೆ ಅಲ್ಲ. ಅದರ ಕೆಲಸ ನೋಡಿದವರಿಗೇ ಗುತ್ತ, ಅವ್ರಿಗೇನ ಗುತ್ತ್ತ ಮುಂಡೆ ಮಕ್ಕಳಿಗೆ” ಅಂತ ನೆರೆದ ಜನ ಮಾತನಾಡುತ್ತಿದ್ದರು. ಹೊನ್ನಮ್ಮಜ್ಜಿಗೋ ಗಿಡಮರಗಳೆಂದರೆ ಪಂಚಪ್ರಾಣ. ತನ್ನ ಸೊಸೆಗೆ ಒಂದಿಷ್ಟು ಸಹಾಯ ಮಾಡಿ, ಉಳಿದ ಎಲ್ಲಾ ಸಮಯವನ್ನ ಈ ಗಿಡಮರಗಳ ನಡುವೆಯೇ ಕಳೆಯುತ್ತಿದ್ದಳು. ಅವುಗಳಿಗೆ ನೀರುಣಿಸುವುದು, ಬುಡ ಸರಿ ಮಾಡುವುದು, ಕೀಟಗಳನ್ನು ತೆಗೆದು ಹಾಕುವುದು, ಗೊಬ್ಬರ ಹಾಕುವುದು ಹೀಗೆ ಜೀವಕ್ಕಿಂತಲೂ ಹೆಚ್ಚು ಜೋಪಾನ ಮಾಡಿದ ಗಿಡ ಮರಗಳು ಅಂದು ನೆಲಕ್ಕುರುಳಿದ್ದವು. ಇದಕ್ಕೆಲ್ಲ ಕಾರಣ ಯಾರು ಎನ್ನುವುದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಷ್ಟೇ ಸ್ಪಷ್ಟವಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆಗಲೇ ಇಂಥ ಅವಗಡಕ್ಕೆ ಅವರು ಮನಸ್ಸು ಮಾಡಿರುವುದು ಇಡೀ ಆ ಕೇರಿಯ ಜನರಲ್ಲಿ ಅಚ್ಚರಿಯನ್ನುಂಟು ಮಾಡಿತ್ತು.

*

ಆ ಊರ ಹೆಸರು ಹೊನ್ನೂರು. ಬೆಟ್ಟ ಗುಡ್ಡಗಳಿಂದ ಆವೃತವಾದ ಪುಟ್ಟ ಊರು. ಹೊರಗಿನ ಕೇರಿಯ ಮೂರು ಮನೆಗಳನ್ನು ಹಿಡಿದರೆ ಅಲ್ಲಿದ್ದದ್ದು ನೂರಿಪ್ಪತ್ತು ಮನೆಗಳು. ಈ ಹೊನ್ನುರಿನ ಹೊಟ್ಟೆಯ ಭಾಗದಲ್ಲಿರುವ ಮನೆಯ ಹೊನ್ನಮ್ಮಜ್ಜಿಯದು. ಒಂದು ಕಾಲದಲ್ಲಿ ಇಪ್ಪತ್ತರಷ್ಟು ಸದಸ್ಯರಿದ್ದ ಈ ಮನೆಯಲ್ಲಿ ಈಗ ಇದ್ದದ್ದು ಕೇವಲ ಅಜ್ಜಿಯನ್ನೊಳಗೊಂಡು ಐದೇ ಜನ. ಹೊನ್ನಮ್ಮಜ್ಜಿ, ಮಗ ಶಂಕರಣ್ಣ, ಸೊಸೆ ತಾರಾ, ಮೊಮ್ಮಗ ರಾಜು, ಮೊಮ್ಮಗಳು ರಾಗಿಣಿ ಇದಿಷ್ಟು ಈ ಕುಟುಂಬದ ಪರಿಚಯ. ಊರಿನ ಎಲ್ಲರೊಂದಿಗೂ ಬೆರೆಯುವ ಈ ಕುಟುಂಬ ಎಲ್ಲರೊಳಗೊಂದಾಗಿತ್ತು. ಊರಲ್ಲಿ ಯಾರಿಗಾದರೂ ಸಹಾಯಬೇಕಾದರೆ ಹೊನ್ನಮಜ್ಜಿಯನ್ನು ನೆನೆಸಿಕೊಳ್ಳದೇ ಇರುತ್ತಿರಲಿಲ್ಲ. ಬೇಡಿ ಬಂದವರಿಗೆ ಆ ಅಜ್ಜಿ ಬರಿಗೈಯಲ್ಲಿ ವಾಪಸ್ಸು ಕಳಿಸುತ್ತಿರಲಿಲ್ಲ. ಹಸಿದು ಬಂದವರಿಗಂತೂ ಊಟ, ಆಶ್ರಯ ಖಂಡಿತ ಸಿಗುತ್ತಿತ್ತು. ಇಂಥ ಹೊನ್ನಮ್ಮಜ್ಜಿಗೂ ಆ ಊರಿನಲ್ಲಿ ಶತ್ರುಗಳಿದ್ದರು ಎಂದರೆ ನಂಬಲೇಬೇಕು.

ಅಂದು ಶನಿವಾರ ಸಮಯ ಸರಿಸುಮಾರು ರಾತ್ರಿ ಎಂಟು ಗಂಟೆ. ಎಂದಿನಂತೆ ಅತ್ತೆ ಮತ್ತು ಮಕ್ಕಳಿಗೆ ಊಟಕ್ಕೆ ಬಡಿಸಿ ತಾರಾ ಗಂಡನಿಗಾಗಿ ಕಾಯುತ್ತಿದ್ದಳು. ಶಂಕರಣ್ಣ ಗದ್ದೆಯ ಕಳೆ ತೆಗೆಯಲು ಆಳಿಗೆ ಹೇಳಲು ಹೋದವನು ಬರುವುದು ತಡವಾಗಿತ್ತು. ತಾರಾ ಗಂಡ ಬರುವ ದಾರಿಗೆ ಕಣ್ಣು ಹಾಸಿ ಕುಳಿತಿದ್ದಳು. ಇಂದು ಗಂಡನೆದುರು ಹೇಳಲೇಬೇಕಾದ ವಿಷಯವೊಂದು ಅವಳಲ್ಲಿ ಒಂದು ಬಗೆಯ ಭಯವನ್ನು ಹೇಳುವ ಮುಂಚೆಯೆ ಹುಟ್ಟುಹಾಕಿತ್ತು.  ಅಷ್ಟಕ್ಕೂ ಆ ವಿಷಯವನ್ನು ಗಂಡನ ಮುಂದೆ ಹೇಳುವದಾದರೂ ಹೇಗೆ..? ಎಲ್ಲಿಂದ ಶುರು ಮಾಡುವುದು ಎಂದೆಲ್ಲ ಯೋಚಿಸುತ್ತಿರುವಂತೆಯೆ ಗಂಡ ಬಂದಾಗಿತ್ತು. ಕೂಡಲೇ ಊಟ ಬಡಿಸಿದಳು. ಆತನ ಊಟ ಮುಗಿಸಿ ಕೈ ತೊಳೆದುಕೊಳ್ಳುವಾಗ ಅಳುಕುತ್ತಲೇ ‘ಬಿಲಗದ ನೀರ ಕಟ್ಟಿ ಬರುಕೆ ಹೊಗದೆ ಆದರೆ ಪಾಗಾರಮನೆಯವರು ನಮ್ಮ ಬಿಲಗದ ನೀರ ಕಟ್ಟಿ ತಮ್ಮ ಗದ್ದಿಗೆ ನೀರ ಬಿಟ್ಟಕಂಡದ್ರ. ನಮ್ಮ ಗದ್ದೆಗೆ ನೀರೇ ತುಂಬಲಾಗತ’ ಎಂದಳು. ಶಂಕರಣ್ಣನಿಗೋ ಹೆಂಡತಿಯ ಮಾತು ಕೇಳಿ ಕೋಪ ನೆತ್ತಿಗೇರಿತ್ತು. ಎಲ್ಲರಿಗೂ ಕೇಳುವ ಹಾಗೆಯೇ ‘ಬೋಳಿ ಮಕ್ಕಳ, ಅವರಪ್ಪ ಮಾಡ್ಸಿಟ್ಟ ಬಿಲಗ ಅಂದಕಂಡರ..? ಯಾವಾಗ ಬೇಕ ಆವಾಗೆ ನೀರ ನಮ್ಮ ಬಿಲಗನಿಂದೆ ತಮ್ಮ ಗದ್ದಿಗೆ ಬಿಟ್ಕಣುಕೆ, ಇವರನ್ನ ಹಿಂಗೆ ಬಿಟ್ಟರೆ ಆಗುದಲ್ಲ. ಇವರಿಗೆ ಬ್ಯಾರೆ ಬಿಲಗ ಮಾಡ್ಸಕಣುಕೆ ಏನಾಗಿದ ಧಾಡಿ, ನಮ್ಮ ಗದ್ದಿಗೇ ಇನ್ನೂ ನೀರ ತುಂಬಲ ಅಂದ ಹೇಳತಿ, ನಮ್ಮ ನೀರ ತುಂಬದ ಮೇಲಾದರೂ ಬಿಟ್ಕಂಡರೆ ಬ್ಯಾರೆ ಆಗತ ಕಾಣಸ್ತಿ ಈ ಬೋಳಿ ಮಕ್ಕಳಿಗೆ,’ ಎನ್ನುತ್ತ ಜಗುಲಿಯತ್ತ ನಡೆದ. ಅಷ್ಟರಲ್ಲೇ ಅಲ್ಲೆಲ್ಲೋ ಅಡಗಿ ಕುಳಿತು ಶಂಕರಣ್ಣನ ಮಾತುಗಳನ್ನೇ ಆಲಿಸುತ್ತಿದ್ದ ಪಾಗಾರಮನೆ ಮಾದೇವ ಜಗಳ ಕಾಯಲೆಂದೆ ಬಂದವನಂತೆ ಏನು ನೀನು, ಆ ಮಕ್ಕಳೆ ಈ ಮಕ್ಕಳೆ ಅಂತಿ, ನಮ್ಮನ್ನ ಏನ್ ಅಂದ್ಕಬಿಟ್ಟಿ..? ನಿಂಗೂ ಕಾಣಸ್ತವ ನೋಡ್ತೆ ಇರ ಬಾಳ ದಿವಸ ಇಲ್ಲಾ ಹಾಗೆ ಹೀಗೆ ಅಂತ ಜಗಳಕ್ಕೇ ನಿಂತುಬಿಟ್ಟ. ಶಂಕರಣ್ಣನಿಗೂ ತಡೆಯಲಾಗಲಿಲ್ಲ. ಹೌದ ಹೇಳ್ದೆ. ನೀವು ಮತ್ತೆ ಕದ್ದ ನೀರ ಬಿಟ್ಕಂಡರೆ ಯಾರ ಹೇಳ್ದೇ ಇರ್ತರ? ನಮ್ಮ ಗದ್ದಿಗೆ ನೀರ ತುಂಬದ ಮೆಲಾದರೂ ನೀರ ಬಿಟ್ಕಂಡರೆ ಮಾತ ಬ್ಯಾರೆಯಾಗತ. ಒಬ್ಬರಿಗೊಬ್ಬರು ವಾದ ಪ್ರತಿವಾದದಲ್ಲೇ ತೊಡಗಿದ್ದರು. ಮಾದೇವನೋ ಇವನ ಯಾವ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ತನ್ನದೇ ಸರಿ ಎಂಬಂತೆ ಜಗಳಕ್ಕೆ ನಿಂತಿದ್ದ.

ಇವರಿಬ್ಬರ ಜಗಳ ಕೇಳಿ ಊರಿಗೆ ಊರೇ ಎಚ್ಚರಗೊಂಡಿತ್ತು. ನೆರೆದ ಜನರ ನಡುವೆ ಹಿರಿಯನೊಬ್ಬ ‘ಶಂಕರ ಹೇಳುದ ಸರಿಯಾಗೇ ಇದ ಮತ್ತ್ಯಾಕೆ ನೀನು ಅವನ ಜೊತೆಗೆ ಜಗಳ ಮಾಡ್ತೆ ಇಂವೆ, ಅಂವಗೆ ಹೇಳದೇ ಹ್ಯಾಂಗೆ ಬಿಲಗದ ನೀರ ಬಿಟ್ಕಂಡರಿ’ ಎಂದು ಕೇಳುತ್ತಿದ್ದರೆ ‘ಹಾಂ.. ಹಾಂ.. ನಂಗೆ ಗುತ್ತ ನೀವೆಲ್ಲ ಉಂದೇ ಅಂದೆ. ಏನ್ ಮಾಡ್ತ್ತರಿ.. ಏನ್ ಮಾಡ್ತರಿ’ ಅಂತ ಮೈಮೆಲೆ ಏರಿ ಬಂದ. ಎರಡೂ ಕಡೆಯವರು ಕೈ ಕೈ ಮಿಲಾಯಿಸಿದರು. ಹೊನ್ನಮ್ಮಜ್ಜಿ ಇವೆಲ್ಲವನ್ನು ನೋಡುತ್ತ ಮೊಮ್ಮಕ್ಕಳನ್ನು ಹಿಡಿದು ಒಂದು ಮೂಲೆಯಲ್ಲಿ ನಿಂತಿದ್ದಳು. ಶಂಕರಣ್ಣನ ಹೆಂಡತಿ ಗಂಡನನ್ನು ಎಳೆದೆಳೆದು ಜಗಳ ಸಾಕು ಎಂದರೂ ಅವನು ಮತ್ತಷ್ಟು ಜೋರಾಗುತ್ತಿದ್ದ. ಮಾದೇವನ ಮಗ ಗಿರೀಶ ಅದೆಲ್ಲಿದ್ದನೋ ಹಿಂದಿನಿಂದ ಗೂಳಿಯಂತೆ ನುಗ್ಗಿ ಶಂಕರಣ್ಣನ ತಲೆಯ ಮೇಲೆ ಕಟ್ಟಿಗೆಯ ತುಂಡಿನಿಂದ ಜೋರಾಗಿ ಬಡಿದ. ಅವನ ಆ ಹೊಡೆತಕ್ಕೆ ಶಂಕರಣ್ಣ ಅಲ್ಲಿಯೇ ಪ್ರಜ್ಞೆತಪ್ಪಿ ನೆಲಕ್ಕೆ ಕುಸಿದ.  ಒಂದು ಕ್ಷಣ ಏನಾಯಿತೆಂಬುದು ಯಾರಿಗೂ ತಿಳೀಯಲೇ ಇಲ್ಲ. ಶಂಕ್ರಣ್ಣ ಹಾಗೆ ಕುಸಿದು ಬಿದ್ದದ್ದನ್ನು ನೋಡಿದ ಆತನ ಮಕ್ಕಳು ಜೋರಾಗಿ ಅಪ್ಪಾ ಎಂದು ಅಳಲಾಲಂಭಿಸಿದವು. ಶಂಕರಣ್ಣನ ಕಡೆಯವರು ಗಡಬಡಿಸಿ ಗಿರೀಶನನ್ನು ಹಿಡಿದು ಚೆನ್ನಾಗಿ ಥಳಿಸಿದರು. ಶಂಕರಣ್ಣನನ್ನು ಮನೆಯ ಒಳಗೆ ತಂದು ಮಲಗಿಸಿ ನೀರು ಸಿಂಪಡಿಸಿದರೂ ಪ್ರಜ್ಞೆ ಬರಲಿಲ್ಲ. ತಲೆಯಿಂದ ರಕ್ತ ಸುರಿಯುತ್ತಿತ್ತು. ಪಾಗಾರಮನೆಯವರೆಲ್ಲರೂ ಓಡಿ ಹೋಗಿ ತಮ್ಮ ಮನೆ ಸೇರಿಕೊಂಡರು. ಅಲ್ಲಿದ್ದವರೆಲ್ಲ ರಕ್ತ ನಿಲ್ಲಿಸಲು ತಮಗೆ ಗೊತ್ತಿರುವ ವಿದ್ಯೆಯನೆಲ್ಲ ಪ್ರಯೋಗ ಮಾಡಿದರು. ಆದರೆ ರಕ್ತ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಅಷ್ಟರಲ್ಲಿ ಅವರಿಗೆ ಕಮಲಾಕರಣ್ಣನ ನೆನಪಾಗಿ ಅವನನ್ನು ಕರೆದು ಬರಲು ನಾಗರಾಜನನ್ನು ಕಳಿಸಿದರು. ರಾತ್ರಿಸಮಯ ಅವರ ಮನೆ ಕಡೆ ಹೋಗುವುದು ಅಪಾಯವಾಗಿತ್ತು. ಆದರೆ ಅನಿವಾರ್ಯವಾಗಿತ್ತು. ಆ ಕತ್ತಲಲ್ಲೇ ಓಡಿ ಹೋಗಿ ಕಮಲಾಕರಣ್ಣನನ್ನು ಕರೆ ತಂದ. ಅವನೇನೋ ಒಂದು ಔಷಧಿ ಹಾಕಿ ಪಟ್ಟೆ ಕಟ್ಟಿ ರಕ್ತ ಬರುವುದನ್ನು ನಿಲ್ಲಿಸಿದ. ಸ್ವಲ್ಪ ಹೊತ್ತಿನಲ್ಲೇ ಶಂಕರಣ್ಣನಿಗೆ ಎಚ್ಚರ ಬಂತು. ಅದು ಅವನ ಅಪ್ಪನಿಂದ ಕಲಿತ ನಾಟಿ ಔಷಧಿಯಾಗಿತ್ತು. ಒಂದು ವೇಳೆ ಆತ ಇರದೇ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಎಲ್ಲರೂ ಉಹಿಸಿದ್ದರು. ಶಂಕರಣ್ಣನ ದಾಯಾದಿಗಳು, ಸ್ನೇಹಿತರು ಎಲ್ಲರೂ ಸೇರಿ ಇವರನ್ನು ಹೀಗೇ ಬಿಟ್ಟರೆ ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಇವರ ಗಲಾಟೆ ಊರಿನಲ್ಲಿ ಹೆಚ್ಚುತ್ತಲೇ ಇದೆ.  ಪೋಲೀಸ್ ಕಂಪ್ಲೇಂಟ್ ಕೊಡುವುದೇ ಸೂಕ್ತ ಎಂದು ಒಂದು ನಿರ್ಧಾರಕ್ಕೆ ಬಂದರು. ನಾಳೆ ಶಂಕರನನ್ನು ಆಸ್ಪತ್ರೆಗೆ ಸೇರಿಸುವ ಮೊದಲು ಪೋಲೀಸ್ ಸ್ಟೇಷನ್‌ಗೆ ಹೋಗಿ ಇವನ ಸ್ಥಿತಿ ತೋರಿಸಿ ಕಂಪ್ಲೇಟ್ ಕೊಟ್ಟು ಆಮೇಲೆ ಆಸ್ಪತ್ರೆಗೆ ಹೋಗೋಣವೆಂದು ಕೆಲವರು ಹೇಳಿದರ, ಮತ್ತೆ ಕೆಲವರು ಶಂಕರನನ್ನು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿ ಆಮೇಲೆ ಸ್ಟೇಷನ್ನಿಗೆ ಹೋಗೋಣವೆಂದರು. ಮೊದಲು ಅವರೇನಾದರೂ ಹೋಗಿ ಕಂಪ್ಲೇಂಟ್ ಕೊಟ್ಟರೆ ನಾವೇ ಜೈಲು ಕಂಬಿ ಎಣಿಸುವವರು ಎಂದು ಕೆಲವರು ಹೇಳಿದರು. ಕೊನೆಗೆ ಎಲ್ಲರೂ ಸೇರಿ ಮೊದಲು ಸ್ಟೇಷನ್‌ಗೆ ಹೋಗಿ ನಂತರ ಆಸ್ಪತ್ರೆಗೆ ಹೋಗುವುದೆಂದು ತೀರ್ಮಾನಿಸಿದರು.

ಬೆಳಿಗ್ಗೆ ಎದ್ದದ್ದೇ ಒಂದಷ್ಟು ಸಂಬಂಧಿಗಳು, ಸ್ನೇಹಿತರು, ಶಂಕರ ಮತ್ತು ಆತನ ಹೆಂಡತಿ ಸೇರಿ ಹಿಂದಿನ ದಿನದ ಯೋಜನೆಯಂತೆ ಟಪಾಲ್ ಬಸ್ಸಿಗೆ ಹೋರಟರು. ಅದನ್ನು ಪಾಗಾರಮನೆಯವರು ನೋಡಿದರೂ ಆಸ್ಪತ್ರೆಗೆ ಹೋಗಿರಬೇಕೆಂದುಕೊಂಡರು. ಆದರೂ ಒಳಗೊಳಗೆ ಮಾತ್ರ ಭಯ ಇದ್ದೇ ಇತ್ತು. ತಾವು ಇವರಿಗಿಂತ ಮೋದಲೇ ಕಂಪ್ಲೇಂಟ್ ಕೊಡಬೇಕು ಎನ್ನುವ ಯೋಚನೆಯನ್ನು ಮಾಡದೇ ಇರಲಿಲ್ಲ. ಅಲ್ಲಿ ಅವರು ಕಂಪ್ಲೇಂಟ್ ಕೊಟ್ಟು ಇನ್‌ಸ್ಪೆಕ್ಟರ್ ಹತ್ತಿರ ಒಂದು ಪತ್ರ ಬರೆಸಿಕೊಂಡರು ಆಸ್ಪತ್ರೆಯಲ್ಲಿ ತೊಂದರೆಯಾಗಬಾರದೆಂಬ ಉದ್ದೇಶದಿಂದ. ಪೆಟ್ಟು ತುಂಬಾ ಬಿದ್ದಿದ್ದರಿಂದ ಶಂಕರಣ್ಣ ಒಂದೆರಡು ದಿನ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಶಂಕರ ಮತ್ತು ಆತನ ಹೆಂಡತಿಯನ್ನು ಬಿಟ್ಟು ಉಳಿದವರು ಊರಿಗೆ ಮರಳಿದರು. ಮಾರನೇ ದಿನ ಪೋಲಿಸ್ ಜೀಪೊಂದು ಊರ ಹೊರಗಿನ ರಸ್ತೆಯ ಮೇಲೆ ಹೋದ ಸುದ್ದಿ ಹಬ್ಬಿತ್ತು. ಮುಂದಿನ ಊರವರೆಗೆ ಹೋದ ಪೋಲಿಸರು ಮತ್ತೆ ವಾಪಸ್ಸಾದರು. ಪೋಲಿಸರು ವಾಪಸ್ಸಾದುದನ್ನು ತಿಳಿದ ಪಾಗರಮನೆಯವುರು ಅವರು ತಮಗಾಗಿ ಬಂದವರಲ್ಲ ಎಂದುಕೊಂಡು ಮಾರನೇ ದಿನ ತಾವೇ ಖುದ್ದಾಗಿ ಪೋಲಿಸ್ ಕಂಪ್ಲೇಟ್ ಕೊಡಲು ಸ್ಟೇಷನ್ನಿಗೆ ಹೋದರು. ಪೋಲೀಸರ ಉದ್ದೇಶವೂ ಇದೇ ಆಗಿತ್ತು. ಅವರನ್ನು ಅಲ್ಲಿಯೇ ಹಿಡಿದು ಒಳಹಾಕಿ ಚೆನ್ನಾಗಿ ತಟ್ಟಿದರು. ಅವರ ಬಡಿತಕ್ಕೆ ಹೆದರಿ ಅವರು ಕೇಳುವ ಮೊದಲೇ ತಮ್ಮದೇ ತಪ್ಪೆಂದು ಒಪ್ಪಿಕೊಂಡರು. ಎರಡು ಮೂರು ದಿನಗಳ ಕಾಲ ಸ್ಟೇಷನಲ್ಲೇ ಆತಿಥ್ಯವಾಯಿತು. ಅವರ ಮನೆಯ ಹೆಣ್ಣು ಮಕ್ಕಳು, ಅವರ ಸಂಬಂಧಿಗಳು ಶಂಕರ ಮತ್ತು ಆತನ ದಾಯಾದಿಗಳ ಹತ್ತಿರ ಕಂಪ್ಲೇಂಟ್ ವಾಪಸ್ಸು ಪಡೆಯುವಂತೆ ಬೇಡಿಕೊಂಡರು. ನಂತರ ಊರಿನ ಮುಖಂಡರೆಲ್ಲರೂ ಸೇರಿ ಶಂಕರನ ಬಿಲಗದ ನೀರನ್ನು ಅವರು ಮುಟ್ಟಬಾರದು ಮತ್ತು ಊರಿನಲ್ಲಿ ಯಾರಿಗೂ ತೊಂದರೆ ಕೊಡಬಾರದು ಎಂಬ ಕರಾರಿನ ಮೇಲೆ ಕೇಸ್ ವಾಪಸ್ ಪಡೆಯುವುದೆಂದು ತೀರ್ಮಾನಿಸಲಾಯಿತು. ಅದರಂತೆಯೆ ಅವರ ಬಿಡುಗಡೆಯೂ ಆಯಿತು. ಅವರಿಗೆ ಈಗಾಗಲೇ ಬಹಳ ಅವಮಾನವಾಗಿದೆ ಇನ್ನು ಮುಂದೆ ಇವರಿಂದ ಯಾವ ತೊಂದರೆಯೂ ಇಲ್ಲವೆಂದು ಊರಿನವರೆಲ್ಲರೂ ನಿಟ್ಟುಸಿರುಬಿಟ್ಟರು. ಅದಕ್ಕೆ ತಕ್ಕಂತೆ ಅವರಲ್ಲಿ ಪರಿವರ್ತನೆಯೂ ಆಗಿತ್ತು. ಆದರೆ ಅವರಲ್ಲಿಯ ನಾಯಿಯ ಬಾಲದ ಕೆಲ ಗುಣಗಳು ಹಾಗೇ ಉಳಿದಿದ್ದವು. ಪೋಲಿಸ್ ಸ್ಟೇಷನ್‌ನಿಂದ ಬಂದ ಮೇಲೆ ಅವರ ಮನೆಗೆ ಅವರ ಸಂಬಂಧಿಕರು ಬರುವುದು ಹೋಗುವುದು ರಾತ್ರಿಯಿಡಿ ಕುಳಿತು ಮಾತನಾಡುವುದು ಕೇರಿಯ ಎಲ್ಲರ ಗಮನಕ್ಕೆ ಬಂದಿದ್ದರೂ ಸಂಬಂಧಿಕರು ಸುಖ ದು:ಖ ಕುರಿತು ಮಾತಾಡಿರಬಹುದು ಅಂದುಕೊಂಡಿದ್ದರು. ನಾಲ್ಕು ದಿನ ಜೈಲುವಾಸ ಮತ್ತು ಹಿಗ್ಗಾ ಮುಗ್ಗ ಬೆತ್ತದ ರುಚಿ ನೋಡಿದವರು ಮತ್ತೆ ಇಂಥ ಹಲ್ಕಾ ಕೆಲಸ ಮಾಡಲಾರರು ಎಂಬ ಊಹೆ ಸುಳ್ಳಾಗಲು ಹೊನ್ನಮ್ಮಜ್ಜಿ ಮಕ್ಕಳಂತೆ ಸಾಕಿ ಬೆಳಸಿದ ಗಿಡಮರಗಳು ನೆಲಕ್ಕುರುಳಿದ್ದೇ ಸಾಕ್ಷಿಯಾಗಿತ್ತು.

ಬಾವಿಯಲ್ಲಿ ನೀರು, ಬದುಕು ಕಣ್ಣೀರು

– ವೀರಣ್ಣ ಮಡಿವಾಳರ

ಈ ಬಾರಿಯ ಬರ ಬಹಳಷ್ಟು ಕಲಿಸಿದೆ. ಬಡವರ ಬದುಕಿನ ಬವಣೆಗಳಿಗೆ ಹೊಸ ಚಿತ್ರಗಳನ್ನು ಸೇರಿಸಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಹಣ ಹೆಂಡ ಬಟ್ಟೆಯ ಆಮಿಷ ತೋರಿಸಿ ವಂಚಿಸಿದ ಪರಂಪರೆಗೆ ಈಗ ಬರವೂ ಬಂಡವಾಳವಾದದ್ದು ಸೋಜಿಗವೇನು ಅಲ್ಲ. ಕೆಲವರಿಗೆ ನೀರು ಕೊಟ್ಟಂತೆ ಮಾಡಿ ಊರಿಗೆ ಕೊಟ್ಟೆವೆಂದು ಪತ್ರಿಕೆಗಳಲ್ಲಿ ನಗು ಮುಖ ಮೂಡಿಸಿಕೊಂಡವರು ತುಂಬ ಜನ. ಒಂದು ಕಾಲವಿತ್ತು ಮನೆಯಲ್ಲಿ ಹಿಟ್ಟಿಲ್ಲದಿದ್ದರೆ ಪಕ್ಕದ ಮನೆಯವರು ಕೇಳದೆಯೆ ಕೊಡುವಷ್ಟು ಉದಾರಿಯಾಗಿದ್ದರು. ಪಡೆದುಕೊಂಡವರು ಇದು ’ಕಡ’ ಮಾತ್ರ ಮರಳಿ ಪಡೆಯಬೇಕೆಂಬ ಶರತ್ತಿನೊಂದಿಗೆ ಪಡೆದು, ತಮ್ಮ ಕಾಲ ಬಂದಾಗ ಒಂದು ಹಿಡಿಯೂ ಕಡಿಮೆಯಿಲ್ಲದಂತೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು. ಇಂದು ಹಾಗಲ್ಲ. ಕಿಲೋಮೀಟರ್ ಗಟ್ಟಲೆ ಕೊಡಪಾನ ನೀರಿಗೆ ಹಿಂಡು ಹಿಂಡು ಜನ ಉರಿಬಿಸಿಲಲ್ಲಿ ಬರಿಗಾಲಲ್ಲಿ ಅಲೆಯುತ್ತಿರುವುದ ಕಣ್ಣಾರೆ ಕಂಡೂ ಕಾಣದಂತೆ ಹೊರಟ ಪ್ರತಿನಿಧಿಗಳಿಗೆ, ಯಾರೋ ನೀರು ಕೊಟ್ಟು ಜನರನ್ನು ತನ್ನತ್ತ ಸೆಳೆಯುತ್ತಿರುವುದು ಗೊತ್ತಾದದ್ದೇ ತಡ ಮುಂದೆ ಚುನಾವಣೆ ಬರುತ್ತಿರುವುದು ನೆನಪಾಗಿ ಮತ್ತೆ ಜನರ ಮೇಲಿನ ಮಮಕಾರದ ವೇಷ, ಓಣಿಯಲ್ಲೊಂದು ನೀರಿನ ಟ್ಯಾಂಕರ್ ಪ್ರತ್ಯಕ್ಷ, ಇಂಥವರೇ ನೀರು ತಂದಿದ್ದಾರೆಂದು ಸಾರಲು ನಾಲ್ಕಾರು ಜನ ಕಾಲಾಳುಗಳು ತಯಾರು. ದುರಂತವೆಂದರೆ ಹೀಗೆ ಈ ಬರಪೀಡಿತ ಜನರ ಮೇಲಿನ ಪ್ರೀತಿ ಬಹಳಷ್ಟು ಜನಕ್ಕೆ ಒಮ್ಮೆಲೇ ಬಂದು ತಮ್ಮ ತಮ್ಮ ಬಂಡವಾಳ ಬಯಲು ಮಾಡಿಕೊಂಡರು. ಕೆಲವರು ನಗೆಪಾಟಲಿಗೆ ಈಡಾದರು. ಈಗ ಎಲ್ಲೆಲ್ಲೂ ನೀರೂ ಸಹ ರಾಜಕೀಯದ ದಾಳ.

ಬರದ ಬೆಂಕಿ ನಿಜವಾಗಿಯೂ ಸುಟ್ಟದ್ದು ರೈತರನ್ನು ಮತ್ತು ಶ್ರಮಿಕ ವರ್ಗವನ್ನು. ಶ್ರಮಸಂಸ್ಕೃತಿ ವ್ಯಾಖ್ಯಾನಿಸಿಕೊಳ್ಳುವ ನಮ್ಮ ಮಾದರಿಗಳು ಬದಲಾಗಬೇಕಿದೆ. ಹಾಗಂತ ಇಂದಿನ ಮಣ್ಣಿನ, ಬೆವರಿನ, ದುಡಿಮೆಯ ಸಂಗತಿಗಳು ಬಯಸುತ್ತಿವೆ. ಶ್ರಮವನ್ನು ಸಂಸ್ಕೃತಿಯಾಗಿಸಿ ಔದಾರ್ಯದಿಂದ, ಆದರದಿಂದ, ಗೌರವದಿಂದ ನೋಡುತ್ತಿರುವಾಗಲೇ ಅದರ ಆಳದ ದುರಂತಗಳನ್ನು, ಸಾವಿನ ವಾಸನೆಯನ್ನೂ ಅಷ್ಟೇ ಪ್ರಾಮಾಣಿಕತೆಯಿಂದ ನೋಡಲು ಒಳಗಣ್ಣುಗಳು ಬೇಕಿದೆ.

ನೀರು ಬರಿದಾಗಿ ಬೇಸತ್ತು, ಅದೆಷ್ಟೋ ಜನ ಕಂಗಾಲಾದರು. ಕಣ್ಣ ಮುಂದೆಯೇ ಉರಿಬಿಸಿಲಿನ ಝಳಕ್ಕೆ ಸುಟ್ಟು ಹೋಗುತ್ತಿರುವ ಬೆಳೆಯನ್ನು ಬದುಕಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಅದರಲ್ಲಿ ಬಹಳಷ್ಟು ಜನ ಸರಿಯೋ ತಪ್ಪೋ ಲೆಕ್ಕಕ್ಕೆ ಸಿಗದಷ್ಟು ಕೊಳವೆ ಬಾವಿಗಳನ್ನು ತೆಗೆಸಿದರು, ಬಾವಿಗಳನ್ನು ತೋಡಿಸಲು ಮುಂದಾದರು. ಬಹುಶಃ ಬಹಳಷ್ಟು ಕಡೆ ಹಿಂದೆ ಎಂದೂ ಈ ಪ್ರಮಾಣದಲ್ಲಿ ಕಂಡಿರದ ಕೊಳವೆ ಬಾವಿಯ ಕೊರೆಯುವಿಕೆ ಈ ಬಾರಿ ಭೂಮಿಯ ಒಡಲು ಬಗಿದವು. ಸಿಕ್ಕಿದ್ದು ಎರಡಿಂಚು ನೀರಿಗಿಂತ ಹೆಚ್ಚಿಲ್ಲ. ಅದಕ್ಕೂ ಕಡಿಮೆ ಬಂದವರು ಮತ್ತೊಂದು ಪಾಯಿಂಟ್ ತೋರಿಸಿ ಬೆಳೆಯ ಜೊತೆ ಕೈಯನ್ನೂ ಸುಟ್ಟುಕೊಂಡರು. ಹೀಗೆ ಇದು ನಡೆಯುತ್ತಿರುವಾಗಲೇ ಕೆಲವೇ ದಿನಗಳಲ್ಲಿ ನೀರು ಬಿದ್ದಿದ್ದ ಬೋರ್‌ವಲ್‌ಗಳು ಬತ್ತಿಹೋದವು, ಮುಚ್ಚಿಯೂ ಹೋದವು. ಇದನ್ನು ಗಮನಿಸಿದ ಕೆಲವರು ಬಾವಿಗಳನ್ನು ತೆಗೆಸಿದರೆ ಶಾಶ್ವತವಾಗಿ ನೀರಾಗುತ್ತದೆ, ಒಂದು ಬಾರಿ ಮಳೆಯಾದರೂ ಸಾಕು ಎಲ್ಲಿಂದಲಾದರೂ ನೀರು ಬಂದು ಸೇರಿಕೊಳ್ಳುತ್ತದೆ ಎಂದು ಯೋಚಿಸಲಾರಂಭಿಸಿ ಬಾವಿ ತೋಡಿಸಲು ಮುಂದಾದರು. ಒಂದು ಊರಿಗೆ ನೂರರ ಸಂಖ್ಯೆಗಳಲ್ಲಿ ಕೊಳವೆ ಬಾವಿಗಳ ಜೊತೆಜೊತೆಗೆ ಹತ್ತಾರು ಬಾವಿಗಳು ಪ್ರಾರಂಭವಾದವು. ಅನುಮತಿ ಪಡೆಯುವ ಕಾನೂನು ಮರೆಯಲ್ಪಟ್ಟವು. ರೈತರಿಂದ ಗೊತ್ತಿಲ್ಲದೆ, ಆಡಳಿತದಿಂದ ಗೊತ್ತಿದ್ದೂ.

ಕೂಲಿ ಕಾರ್ಮಿಕರ ಬದುಕಿನ ಚೈತನ್ಯ ಮತ್ತು ದುರಂತಗಳೆರಡೂ ಬೇರೆ ಎಲ್ಲ ಶ್ರಮಿಕರಿಗಿಂತ ಭಿನ್ನವಾದವು. ಹಾಗೆಯೇ ಬಾವಿ ತೋಡಲು ಬಂದಿರುವ ಇಲ್ಲಿನ ಕೆಲವು ಕುಟುಂಬಗಳ ಕಥೆಗಳಲ್ಲಿ ವ್ಯಥೆಗಳೇ ತುಂಬಿವೆ. ಸುಮಾರು ದಶಕಗಳಿಂದ ಬಾವಿ ತೋಡುವುದನ್ನೇ ಕಾಯಕ ಮಾಡಿಕೊಂಡಿರುವ ಒಂದು ಸಮುದಾಯವನ್ನು ಮಾತನಾಡಿಸಿದಾಗ ಹಲವು ಅಸಹನೀಯ ಸತ್ಯಗಳು ಗೊತ್ತಾದವು. ಬಾವಿ ತೋಡುವ ಕ್ರಿಯೆಯೇ ಅತ್ಯಂತ ಎಚ್ಚರದ ಶ್ರಮವನ್ನು ಬೇಡುವಂಥದ್ದು. ಹೀಗೆ ಬಾವಿ ತೋಡುವಾಗ ಯಾರದೋ ಜೀವ ಯಾವುದೋ ಕಲ್ಲಿನಲ್ಲೋ , ಕುಸಿದು ಬೀಳುವ ಗೋಡೆಯಲ್ಲೋ, ಅಥವಾ ನೀರನ್ನೆತ್ತುವ ಯಂತ್ರದ ಕೈಗೋ ಕೊಟ್ಟಿರುವಂಥ ಅಪಾಯದ ಸ್ಥಿತಿ.

ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕದರಾಪುರ ತಾಂಡಾ ಬಾವಿ ತೋಡುವ ಕಾಯಕವನ್ನೇ ಮಾಡುವ ಸಮುದಾಯಗಳ ಒಂದು ಊರು. ಇಲ್ಲಿನ ಕುಟುಂಬಗಳು ಹಲವಾರು ದಶಕಗಳಿಂದ ಬಾವಿ ತೋಡುತ್ತ ಬಂದಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ರೈತರು ಈ ದುಡಿಮೆಗಾರರ ಶ್ರಮದಿಂದ ಹೊಲದ ಬೆಳೆಗೆ ನೀರು ಕಂಡು ನೆಮ್ಮದಿಯಿಂದಿದ್ದಾರೆ. ಆದರೆ ಬಾವಿ ತೋಡಿದವರು ಮಾತ್ರ ಅಲ್ಲೇ ಇದ್ದಾರೆ.

ರಮೇಶ ರಾಮಚಂದ್ರ ಜಾಧವ ಎಂಬ ನಲವತ್ತೈದು ವರ್ಷದ ಈ ಕೂಲಿ ಕಾರ್ಮಿಕ ಬದುಕಿಗೆ ತೆರೆದುಕೊಂಡಿದ್ದೇ ಬಾವಿ ತೋಡುವುದರ ಮೂಲಕ. ಈತನ ಇಲ್ಲಿಯವರೆಗಿನ ಮೂರು ದಶಕಗಳು ಬಾವಿ ತೋಡುವುದನ್ನು ಮಾತ್ರವೇ ತುಂಬಿಕೊಂಡಿವೆ. ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಈ ದಗದ ತನ್ನ ಮೂಲಕ ತನ್ನ ಮಕ್ಕಳನ್ನೂ ಒಳಗು ಮಾಡಿಕೊಂಡಿದೆ. ತನ್ನ ಕಾಯಕದ ಬಗ್ಗೆ ಆತನನ್ನು ಕೇಳಿದಾಗ ಹೀಗೆ ಹೇಳಿದ: “ನಾನು ಭಾಳ ಚಿಕ್ಕವನಿದ್ದಾಗಿನಿಂದ ಈ ಕೆಲಸ ಮಾಡಿಕೋತ ಬಂದಿನ್ರಿ, ನಮಗ ಗೊತ್ತಿರೋದು ಬಾವಿ ತೋಡೋದು ಒಂದರಿ. ಬಾವಿ ತೋಡಿಯೇ ನಾನು ನನ್ನ ಹೆಂಡ್ತಿ, ನನ್ನ ಮಕ್ಳು, ನನ್ನವ್ವ ಹೊಟ್ಟಿತುಂಬಿಕೋತೀವ್ರಿ. ವರ್ಷಕ್ಕೆ ಕಡಿಮೀ ಅಂದ್ರ ಎಂಟು ಬಾವಿ ತೋಡತೀವ್ರಿ, ಒಂದೊಂದು ಬಾವಿಗೆ ಹದಿನೈದು ಇಪ್ಪತ್ತು ದಿನ, ಒಂದೊಂದು ಬಾವಿ ಒಂದು ತಿಂಗಳೂ ಹಿಡೀತವ್ರಿ. ಮೂವತ್ತು ವರ್ಷದಾಗ ಕರ್ನಾಟಕ ಮಹಾರಾಷ್ಟ್ರದ ಹಲವಾರು ಕಡೆ ನಾವು ಕಡಿದ ಬಾವಿ ನೀರು ತುಂಬಿಕೊಂಡು ಎಲ್ಲರ ಬಾಳೆ ಹಸನು ಮಾಡೇವ್ರಿ, ಆದ್ರ ನಮ್ಮ ಬದುಕ ಮೂರಾಬಟ್ಟಿ ಆಗೇತ್ರಿ. ಇಷ್ಟು ವರ್ಷ ಬಾವಿ ಕಡದ್ರೂ ಎಲ್ಲೋ ಒಂದಿಷ್ಟು ಗಾಯ ಆಗಿದ್ದು , ಕೈಕಾಲು ಮುರಿಯೋದು ಆಗಿದ್ದು ಬಿಟ್ರ ಎಂದೂ ಜೀವ ಹಾನಿ ಆಗಿದ್ದಿಲ್ರಿ, ಆದ್ರ ಈಗ ಮೂರು ತಿಂಗಳದಾಗ ನಮ್ಮವ್ವ , ನಮ್ಮ ತಂಗಿ ಇಬ್ರು ಬಾವಿ ತೋಡದ್ರಗ ಸತ್ತು ಹೋದರರ್ರಿ. ನಿಪ್ಪಾಣಿ ತಾಲೂಕಿನ ಆಡಿಬೆನಾಡಿ ಊರಾಗ ಬಾವಿ ತೋಡೋ ಮುಂದ ನನ್ನ ತಂಗಿ ಜೀಮಾಬಾಯಿ ನೀರೆತ್ತುವ ಮೋಟಾರು ಚಾಲು ಮಾಡೋ ಮುಂದ ವೈರ್ ಕಾಲಿಗೆ ಸುತ್ತಿ ಶಾಕ್ ಹೊಡದು ಸತ್ತಳ್ರಿ, ಈಗ ಮೊನ್ನೆ ನಮ್ಮ ತಾಯಿ ಕಸ್ತೂರಬಾಯಿ ಬಾವಿಯಿಂದ ಕಲ್ಲು ತುಂಬಿದ ಕಬ್ಬಿಣ ಬುಟ್ಟಿ ಎತ್ತೋ ಮುಂದ ತಪ್ಪಿ ನಮ್ಮವ್ವನ ಮ್ಯಾಲೆ ಬಿದ್ದು ಆಕಿನು ಸತ್ತಳ್ರಿ. ಬಾವಿ ತೋಡದ ಇದ್ರ ಹೊಟ್ಟಿಗಿಲ್ಲದ ಸಾಯ್ತೀವ್ರಿ, ಬಾವಿ ತೋಡಾಕ ಬಂದ್ರ ಹಿಂಗ ದುರಂತದಾಗ ಸಾಯ್ತೀವ್ರಿ ಎಲ್ಲಾ ಕಡೆ ನಮಗ ಸಾವ ಐತ್ರಿ.” ಹೀಗೆ ಹೇಳುವಾಗ ಆತನಿಗೆ ಹುಟ್ಟಿನಿಂದ ಇಲ್ಲಿವರೆಗೆ ಅನುಭವಿಸಿದ ನೋವು ಒತ್ತರಿಸಿ ಬಂದಿತ್ತು.

ಈ ಗಡಿನಾಡು ಭಾಗ ಸುಮಾರು ಕಡೆ ಕಲ್ಲಿನ ಪದರುಗಳಿಂದ ನಿರ್ಮಿತವಾಗಿದೆ. ಈ ಜನ ಕಡಿಯುವ ಬಾವಿಯ ಉದ್ದ ಮತ್ತು ಅಗಲ 50×50 ಅಡಿ , ಆಳ 70 ರಿಂದ 80 ಅಡಿಯವರೆಗೆ ಇರುತ್ತದೆ. ಇಷ್ಟು ಅಳತೆಯ ಬಾವಿಯ ತುಂಬ ಬಹಳಷ್ಟು ಕಡೆ ಕಲ್ಲೇ ತುಂಬಿರುತ್ತವೆ. ಕಡಿಯುವಾಗ ಸರಿಯಾಗಿ ನಿಗಾವಹಿಸಿ ಕೆಲಸ ಮಾಡಲೇಬೇಕು. ಒಂದೊಂದು ಅಡಿ ಆಳಕ್ಕೆ ಹೋದಾಗಲೂ ಅಪಾಯಗಳ ಸಾಧ್ಯತೆ ಹೆಚ್ಚುತ್ತಾ ಹೋಗುತ್ತವೆ. ಆಳಕ್ಕೆ ಹೋದಂತೆ ಮೇಲಿನ ಕಲ್ಲಿನ ಪದರದ ಗೋಡೆಗಳು ಬಿಚ್ಚಿಕೊಂಡು ಮೇಲೆ ಬಿದ್ದು ಜೀವಂತ ಸಮಾಧಿಯಾಗುವ ಸಾಧ್ಯತೆಗಳಿರುತ್ತವೆ. ಈ ಕೂಲಿಕಾರರು ಎಲ್ಲ ಅಪಾಯಗಳನ್ನು ತಮ್ಮ ಬದುಕಿನ ದೈನಿಕದ ಸಂಗಾತಿಗಳೆಂದುಕೊಂಡು ಕೆಲಸ ಮಾಡುತ್ತಾರೆ. ಬಾವಿ ಆಳದಲ್ಲಿರುವುದರಿಂದ ಅದನ್ನು ಕಡಿಯುವ ಶ್ರಮ ನೋಡುಗರಿಗೆ ಅಷ್ಟು ಅನುಭವಕ್ಕೆ ಬರುವುದಿಲ್ಲ. ಆದರೆ ಈ ಜನ ಒಂದೊಂದು ಬಾವಿ ಕಡಿದಾಗಲೂ ಇವರ ದೇಹದಿಂದ ಹರಿದ ಬೆವರು, ರಕ್ತ ಅದೆಷ್ಟೋ. ಅದೆಷ್ಟೋ ಗುಡ್ಡಗಳನ್ನು ಕಡಿದು ಹಾಕಿದ ಶ್ರಮ ಇವರದ್ದು ಎನ್ನಿಸುತ್ತದೆ.

ಕದರಾಪೂರ ತಾಂಡಾದ ಈ ಜನ ಸಮುದಾಯ ಊರಿನಲ್ಲಿರುವ ಜಮೀನನ್ನು ಬಿತ್ತನೆಗೆ ಸಿದ್ದಮಾಡಿ ಹಿರಿಯರನ್ನು ಬಿಟ್ಟು, ಬಾವಿಕಡಿಯಲು ತಮ್ಮ ಸಂಸಾರದ ಗಂಟನ್ನು ಹೊತ್ತು ಊರೂರು ಅಲೆಯುತ್ತಾರೆ. ಹೀಗೆ ಇವರ ಅಲೆದಾಟ ಕರ್ನಾಟಕವನ್ನೂ ದಾಟಿ ಮಹಾರಾಷ್ಟ್ರದ ಹಲವು ಜಿಲ್ಲೆಗಳನ್ನೂ ವ್ಯಾಪಿಸಿದೆ. ಹೊಲಗಳಿದ್ದಲ್ಲೇ ಟೆಂಟು ಹಾಕಿಕೊಂಡು ಬಾವಿ ಪಕ್ಕವೇ ರಾತ್ರಿ ಹಗಲು ದೂಡುತ್ತಾರೆ. ಇವರೊಂದಿಗೆ ಹಸುಗೂಸುಗಳು, ಖಾಯಿಲೆ ಬಿದ್ದ ಸಂಬಂಧಿಕರು, ವಯಸ್ಸಾದವರು ಎಲ್ಲರಿಗೂ ಇದೇ ಸ್ಥಿತಿ. ಕತ್ತಲಾದರೆ ಬೆಳಕಿಲ್ಲ, ಹಗಲಾದರೆ ಅಡವಿಯೇ ಎಲ್ಲ. ಬೆಳಿಗ್ಗೆ ಎಂಟುಗಂಟೆಗೆ ಕೆಲಸಕ್ಕೆ ತೊಡಗಿದರೆಂದರೆ ಕತ್ತಲಾಗುವವರೆಗೆ ಕೆಲಸ ಮಾಡುತ್ತಲೇ ಇರುತ್ತಾರೆ. ಬಾವಿ ದಂಡೆಯಲ್ಲಿಯೇ ಊಟ, ದಣಿವಾದಾಗ ಬಾವಿದಂಡೆಯಲ್ಲಿ ಸ್ವಲ್ಪ ಹೊತ್ತು ವಿರಾಮ.

ಇಲ್ಲಿ ಇನ್ನೊಂದು ಮುಖ್ಯ ವಿಚಾರವೆಂದರೆ ಹೀಗೆ ಅಲೆಮಾರಿಗಳಾಗಿ ಬದುಕಿನ ನೊಗ ಹೊತ್ತ ಈ ದಲಿತ ಸಮುದಾಯ ಎಲ್ಲರೂ ಸಂಬಂಧಿಕರು, ಒಂದೇ ಊರಿನವರು. ಎಲ್ಲರೂ ಒಟ್ಟಾಗಿ ಊರು ಬಿಟ್ಟು ಬಾವಿ ಕಡಿಯುವ ವೇಳೆಗೆ ಏಳು ಎಂಟು ಜನರ ಗುಂಪಾಗಿ ಅಲ್ಲೊಂದು ಇಲ್ಲೊಂದು ಬಾವಿ ಕಡಿಯುವುದನ್ನು ಗುತ್ತಿಗೆ ತೆಗೆದುಕೊಳ್ಳುತ್ತಾರೆ. ಹೀಗೆ ಎರಡು ಜೀವ ಕಳೆದುಕೊಂಡದ್ದಕ್ಕೆ ಪರಿಹಾರದ ಕುರಿತು ಹೊಲದ ಮಾಲೀಕನನ್ನು ಪ್ರಶ್ನಿಸಿದರೆ ಅವ್ರಿಗೆ ಗುತ್ತಿಗಿ ಕೊಟ್ಟಿರತೀವ್ರಿ, ಏನ ಅಪಾಯ ಆದ್ರೂ ಅವ್ರ ಹೊಣಿರಿ ಎನ್ನುತ್ತಾನೆ. ಅಂದರೆ ಈ ಬಾವಿ ಕಡಿಯುವ ಜನ ತಮ್ಮ ಜೀವವನ್ನು ಪಣಕ್ಕಿಡುವುದರ ಜೊತೆಜೊತೆಗೇ ಅವರು ಕೊಡುವ ದುಡ್ಡಿಗಾಗಿ ಬಾವಿಕಡಿಯುವುದನ್ನು ಗುತ್ತಿಗೆ ಪಡೆದಿದ್ದಾರೆಂಬುದು ಹೊಲದ ಮಾಲೀಕನ ಅಭಿಪ್ರಾಯ.

ಈ ದುಡಿಯುವ ಜನರ ಬದುಕಿನ ಚೈತನ್ಯ ದುಡಿಯುವಿಕೆಯಲ್ಲಿಯೇ ಹಾಸುಹೊಕ್ಕಾಗಿಬಿಟ್ಟಿದೆ. ಇವರು ಕಡಿದ ಬಾವಿಯಿಂದ ತಲೆಮಾರುಗಳವರೆಗೆ ರೈತನ ಬದುಕು ಹಸಿರಾಗುತ್ತದೆ, ಆದರೆ ಹೀಗೆ ಬಾವಿ ಕಡಿದ ಜನ ಸಿಕ್ಕಷ್ಟು ತೆಗೆದುಕೊಂಡು ಮತ್ತೊಂದು ಬಾವಿ ಕಡಿಯಲು ಅಣಿಯಾಗುತ್ತಾರೆ. ರಮೇಶ ಜಾಧವರನ್ನು ಎಷ್ಟು ಬಾವಿ ಇದುವರೆಗೆ ಕಡಿದಿದ್ದೀರಿ ಎಂದು ಪ್ರಶ್ನಿಸಿದರೆ ಆತ ಹೀಗೆ ಹೇಳುತ್ತಾನೆ,  “ಎಷ್ಟು ಬಾವಿ ಕಡಿದೀನಿ ಅಂತ ಲೆಕ್ಕ ಇಟ್ಟಿಲ್ರಿ, ವರ್ಷಕ್ಕ ಕಡಿಮೀ ಅಂದ್ರ ಎಂಡು ಬಾವಿ ಕಡಿತೀವ್ರಿ, ಮೂವತ್ತು ಮೂವತ್ತೈದು ವರ್ಷದಿಂದ ಹೀಂಗ ಬಾವಿ ಕಡಕೋತ ಬಂದೀನ್ರಿ,” ಎನ್ನುತ್ತಾನೆ. ಅಂದರೆ ವರ್ಷಕ್ಕೆ ಐದು ಬಾವಿಯಂತೆ ತೆಗೆದುಕೊಂಡರು ಇಲ್ಲೀವರೆಗೆ ಆತ ಎರಡು ನೂರಕ್ಕೂ ಹೆಚ್ಚು ಬಾವಿಗಳನ್ನು ಕಡಿದಿದ್ದಾನೆ ಎಂದಾಯಿತು! ಇಷ್ಟು ವರ್ಷ ಬಾವಿ ಕಡಿದಿದ್ದರಿಂದ ನಿನಗ ಏನೇನು ಲಾಭವಾಗಿದೆ ಎಂದು ಕೇಳಿದರೆ ಲಾಭ ಅಂತ ಏನೂ ಇಲ್ರಿ ಎಲ್ಲಾರ ಹೊಟ್ಟಿ ತುಂಬೇತ್ರಿ ಎನ್ನುತ್ತಾನೆ.

ಈತನಿಗಿರುವ ಐದು ಮಕ್ಕಳಲ್ಲಿ ಈಗಾಗಲೇ ಮೂರು ಮಕ್ಕಳು ಕೆಲಸ ಮಾಡುವ ತಾಕತ್ತು ಬಂದ ಕೂಡಲೇ ಶಾಲೆ ಬಿಟ್ಟು ಈತನೊಂದಿಗೆ ಬಾವಿ ಕಡಿಯುತ್ತಿದ್ದಾರೆ. ಹೀಗೇಕೆ ಮಾಡುತ್ತೀರಿ ಎಂದರೆ ಅವರು ಸಾಲಿ ಕಲಿಯಾಕ ವಲ್ಲೆ ಅಂತಾರ್ರಿ ಎನ್ನುತ್ತಾನೆ. ಈ ಸಮುದಾಯವನ್ನು ಅಜ್ಞಾನ, ಮೂಢನಂಬಿಕೆ ಒಟ್ಟೊಟ್ಟಿಗೆ ಕಿತ್ತು ತಿನ್ನುತ್ತಿವೆ. ಇಷ್ಟು ವರ್ಷಗಳಾದರೂ ಇವರಿಗೆ ಅಕ್ಷರದ ಬಗ್ಗೆ ನಂಬಿಕೆಯೇ ಹುಟ್ಟಿಲ್ಲ. ತನ್ನ ಬದುಕಿನಲ್ಲಿ ಇತ್ತೀಚೆಗೆ ನಡೆದ ದುರಂತಗಳಿಗೆ ಆತ ಇಷ್ಟು ವರ್ಷ ಎಂದೂ ಹಿಂಗಾಗಿದ್ದಿಲ್ರಿ, ನಮ್ಮೂರಾಗ ನಮ್ಮ ತಮ್ಮನ ಮದುವ್ಯಾಗ ಎರಡೂ ನಿಂಬೆ ಹಣ್ಣು ಮಂತ್ರಿಸಿ ಹಂದರದಾಗ ಒಗದಾರ್ರಿ ನಮಗ ಕೇಡು ಮಾಡಾಕ, ಅದ್ಕ ಹಿಂಗಾಗೇತ್ರಿ ಎಂದು ತನ್ನ ಕಾರಣ ಹೇಳುತ್ತಾನೆ. ಹೀಗೆ ಹೇಳುವ ಈ ಮನಸ್ಥಿತಿ ಆತನಿಗೆ ಬಂದದ್ದಾದರೂ ಹೇಗೆ? ಮೇಲ್ವರ್ಗ, ಪುರುಹಿತಶಾಹಿ ವ್ಯವಸ್ಥೆಯ ಈ ಸಮಾಜ ಈ ರೀತಿಯ ಅಜ್ಞಾನದ ಬೀಜಗಳನ್ನು, ಮೂಢನಂಬಿಕೆಗಳನ್ನು ಅವರು ಅನುಭವಿಸುತ್ತಿರುವುದು ನೋವು ಎನ್ನುವುವದು ಅವರಿಗೆ ಗೊತ್ತಾಗದಂತೆ ಮಾಡಲು ಇವರ ಎದೆಗಳಲ್ಲಿ ಬಿತ್ತಿದೆಯೇನೋ ಎನ್ನಿಸುತ್ತದೆ. ಇವರ ಬಾವಿ ತೋಡುವ ಶ್ರಮ ಬೆಲೆಕಟ್ಟಲಾಗದ್ದು. ಆದರೆ ಇವರ ಬದುಕಿಗೇ ಯಾರೋ ಬಾವಿ ತೋಡಿ ಬಿಟ್ಟಿದ್ದಾರೆ, ಮೇಲೆತ್ತುವವರು ಎಲ್ಲೋ ಯಾವುದೋ ಯೋಚನೆಯಲ್ಲಿದ್ದಾರೆ! ಅದು ಎಲ್ಲರಿಗೂ ಗೊತ್ತಿರುವ ವಿಚಾರ ಅಲ್ಲವೆ?

ಬಾವಿಗಿಂತಲೂ ಜೀವ ಅಗ್ಗ

ಬಾವಿ ತೋಡುವ ಜನರಲ್ಲಿ ಆಯಾ ಊರುಗಳ ಜನರ ಪರಿಸ್ಥಿತಿಗಳು ಬೇರೆ. ತಮ್ಮ ತಮ್ಮಲ್ಲಿಯೇ ಕೆಲವು ಗುಂಪುಗಳನ್ನು ಮಾಡಿಕೊಂಡು ಬಾವಿ ಕಡಿಯುವುದನ್ನು ಗುತ್ತಿಗೆ ಹಿಡಿಯುತ್ತಾರೆ. ಹಾಗೆ ನೋಡಿದರೆ ಈ ರೀತಿ ಬಾವಿ ತೋಡಿ ದುಡಿಯುವುದು ಇವರೇ ಹೇಳುವಂತೆ ಇವರಿಗೆ ಸ್ವಲ್ಪ ಲಾಭದಾಯಕವಂತೆ. ನಾಲ್ಕು ದುಡ್ಡು ಹೆಚ್ಚಿಗೆ ಕೂಲಿ ಬಂದರೆ ನಮ್ಮ ಜನ ಅದೆಷ್ಟು ಸಹಜವಾಗಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇಲ್ಲಿ ಜೀವದ ಬೆಲೆ ತೋಡುವ ಬಾವಿಗಿಂತ ಅಗ್ಗವಾಗಿ ಹೋಗಿದೆಯಲ್ಲ, ಇದಕ್ಕಾರು ಹೊಣೆ?

ಇದೇ ಜುಲೈ ನಾಲ್ಕರ ಸಂಜೆ ಇನ್ನೇನು ಕತ್ತಲಾಗಬೇಕು, ಬಂಬಲವಾಡದ ಒಂದು ಬಾವಿ ಕಡಿಯುತ್ತಿದ್ದ ಜನರ ಬದುಕಿಗೆ ಕತ್ತಲಾವರಿಸಿಬಿಟ್ಟಿತು. ಬೆಳಿಗ್ಗೆಯಿಂದ ಎಡೆಬಿಡದೆ ಬಾವಿ ಕಡಿಯುತ್ತಿದ್ದವರು ಇನ್ನೇನು ಮುಗಿಸಿ ಮನೆಗೆ ಹೊರಡಬೇಕು ಅಷ್ಟರಲ್ಲಿ ನಡೆದ ಅನಾಹುತ ತಲ್ಲಣಿಸುವಂಥದ್ದು. ನಲವತ್ತು ಅಡಿಗಿಂತ ಹೆಚ್ಚು ಆಳ ಕಡಿದಿರುವ ಬಾವಿಯಿಂದ ಕೆಲಸ ಮುಗಿಯಿತು ಮೇಲೆ ಹೋಗೋಣ ಎಂದು ನಿರ್ಧರಿಸಿದ ಚುಕ್ಯಾ, ಪ್ರಕಾಶ, ಲಕ್ಷ್ಮಣ ಮೇಲೆ ಬರಲು ಕಲ್ಲು ಎತ್ತಿ ಹಾಕಲು ಇದ್ದ ಬುಟ್ಟಿಯನ್ನೇ ಬಳಸಲು ಬಯಸಿ, (ಪ್ರತಿಸಾರಿ ಅವರು ಮೇಲೆ ಬರಲು ಬಳಸುತ್ತಿದ್ದುದು ಅದೇ ಕಬ್ಬಿಣ ಬುಟ್ಟಿಯೇ. ಆದರೆ ಈ ಬಾರಿ ಪರಿಸ್ಥಿತಿ ಬೇರೆ ಇತ್ತು) ಯಾರಿ ಮಶಿನ್ ನಡೆಸಲು ಮೇಲೆ ಇದ್ದವನಿಗೆ ಹೇಳಿ, ತಾವು ಬಾವಿಯಲ್ಲಿದ್ದ ಕಬ್ಬಿಣ ಬುಟ್ಟಿಯಲ್ಲಿ ಮೂವರು ಕುಳಿತಿದ್ದಾರೆ. ವಿಷಾದದ ಸಂಗತಿಯೆಂದರೆ ಯಾರಿ ಯಂತ್ರವನ್ನು ನಡೆಸುತ್ತಿದ್ದವ ಬಹಿರ್ದೆಸೆಗೆ ಹೋಗಿದ್ದನಂತೆ, ಅಲ್ಲಿಯೇ ಬಾವಿಯ ಮೇಲಿದ್ದ ಮತ್ತೊಬ್ಬ ಮಶಿನ್ ನಡೆಸುವ ಮೂರ್ಖತನಕ್ಕಿಳಿದ. ಯಂತ್ರ ಮೂವರು ಕುಳಿತಿದ್ದ ಬುಟ್ಟಿ ಹೊತ್ತು ಮೇಲಕ್ಕೆ ಬರುತ್ತಿದ್ದಂತೆ ಅವಸರಿಸಿದ ಯಂತ್ರ ನಡೆಸುವವ ಜೋರಾಗಿ ಮಶಿನ್‌ನ್ನು ಈಚೆ ಎಳೆದದ್ದೇ ತಡ ಅನಾಹುತ ನಡೆದು ಹೋಯಿತು. ಇನ್ನೂ ಪೂರ್ತಿ ಮೇಲೆ ಬರದೇ ಇದ್ದ ಬುಟ್ಟಿ ಬಾವಿಯ ಗೋಡೆಗಳಿಗೆ ಜೋರಾಗಿ ಅಪ್ಪಳಿಸಿದೆ. ಅಪ್ಪಳಿಸಿದ ರಭಸಕ್ಕೆ ಮೂವರು ಕುಳಿತಿದ್ದ ಬುಟ್ಟಿ ಮುಗುಚಿದೆ. ಪ್ರಕಾಶ ಹೇಗೋ ಸಿಕ್ಕ ಆ ಯಂತ್ರದ ಕಬ್ಬಿಣದ ಚೈನಿಗೆ ಜೋತು ಬಿದ್ದ. ಆದರೆ ಚುಕ್ಯಾ, ಲಕ್ಮಣ ಇಬ್ಬರು ಅಷ್ಟು ಎತ್ತರದಿಂದ ಬಾವಿಯೊಳಕ್ಕೆ ಬಿದ್ದು ಜೀವ ಬಿಟ್ಟರೆಂದು ಅಲ್ಲಿದ್ದವರು ಹೇಳುತ್ತಾರೆ.

ಹೀಗೆ ಅನ್ಯಾಯವಾಗಿ ಜೀವ ಬಿಟ್ಟ ಲಕ್ಷ್ಮಣ ಎಮ್.ಎ. ಓದುತ್ತಿದ್ದ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವನ ತಂದೆಯ ದುಃಖ ಹೇಳತೀರದ್ದು. ಬೇಡವೆಂದರೂ ಕೇಳದೆ ಮನೆಯಲ್ಲಿ ಕೆಲಸ ಮಾಡದೇ ಕಾಲಹರಣ ಮಾಡುವುದೇಕೆಂದು ಬಾವಿ ತೋಡಲು ಬಂದಿದ್ದ ಲಕ್ಷ್ಮಣನ ಜೀವ ಬಾವಿ ಪಾಲಾಗಿ ಹೋಯಿತು.

ಚಿತ್ರಗಳು: ಮಲ್ಲಿಕಾರ್ಜುನ ದಾನಣ್ಣವರ

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ.)

ಮಹಿಳಾ ಪ್ರಾತಿನಿಧ್ಯವೆಂಬ ಪ್ರಹಸನ

– ಡಾ. ಎಚ್.ಎಸ್.ಅನುಪಮಾ

ಆರೂವರೆ ಕೋಟಿ ಜನಸಂಖ್ಯೆಯ ಕರ್ನಾಟಕ, ಕಳೆದ ನಾಲ್ಕು ವರ್ಷಗಳಲ್ಲಿ ಮೂರನೆಯ ಬಾರಿಗೆ ಹೊಸ ಸರ್ಕಾರ ಕಂಡು ಸುಭದ್ರವಾಗಿದೆ. “ಸಹಕಾರ” ತತ್ವದಲ್ಲಿ ಬಲವಾದ ನಂಬಿಕೆಯಿಟ್ಟಂತೆ ತೋರುವ ಸರ್ಕಾರವು ಅಧಿಕಾರವನ್ನು ಕೈಯಿಂದ ಕೈಗೆ ಬದಲಿಸಿಕೊಳ್ಳುತ್ತ, ಸರ್ವರನ್ನೂ ತೃಪ್ತಿಪಡಿಸುವುದರಲ್ಲೇ ತೊಡಗಿದೆ. ಜನಪರ ಕಾಳಜಿ, ಸಾಮಾಜಿಕ ಬದ್ಧತೆ, ಕನಿಷ್ಠ ಜವಾಬ್ದಾರಿಯಿಲ್ಲದ ಆಡಳಿತವನ್ನೇ ಈ ದಶಕದುದ್ದಕ್ಕೂ ಕಾಣುತ್ತ ಬಂದಿದ್ದೇವೆ.

ಈ ಬರಹದ ಉದ್ದೇಶ ತಾತ್ವಿಕತೆಯ ತಲೆಬುಡವಿಲ್ಲದ ಆಡಳಿತದ ವಿಮರ್ಶೆಯಲ್ಲ. ಈ ಸಲದ ಸರ್ಕಾರ ರಚನೆಯ ನಂತರ ಎದ್ದು ಕಾಣುವ ಒಂದಂಶದ ಕುರಿತು ಚರ್ಚಿಸಲೇಬೇಕೆನಿಸಿ ಅದನ್ನಿಲ್ಲಿ ಮಂಡಿಸಲಾಗಿದೆ. ಮೂರೂವರೆ ಕೋಟಿ ಮಹಿಳೆಯರಿರುವ ಕರ್ನಾಟಕದಲ್ಲಿ ಮಂತ್ರಿ ಸ್ಥಾನಕ್ಕೆ ಏರಲು ಕೇವಲ ಒಬ್ಬ ಮಹಿಳೆಗೆ ಅವಕಾಶ ದೊರೆಯಿತೆ? ಪ್ರಸ್ತುತ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಂದಿನಿಂದ ಅದರ ಕಣ್ಣಿಗೆ ಸಮರ್ಥ ಮಹಿಳಾ ನಾಯಕಿಯರೇ ಕಾಣಿಸುತ್ತಿಲ್ಲವೇ? ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಮುಂದುವರೆದ ರಾಜ್ಯ, ಸಿಲಿಕಾನ್ ವ್ಯಾಲಿ, ಪಿಂಚಣಿದಾರರ ಸ್ವರ್ಗ, ಅತಿ ಸುರಕ್ಷಿತ ಸಂಪನ್ಮೂಲಭರಿತ ರಾಜ್ಯ ವಗೈರೆ ವಗೈರೆ ಬಿರುದಾಂಕಿತ ಕರ್ನಾಟಕ ರಾಜ್ಯದ ಮಂತ್ರಿಮಂಡಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರನೆಯ ಒಂದು ಭಾಗ ಮಂತ್ರಿಗಳಿರುವುದು ಹೋಗಲಿ, ಆರನೆಯ ಒಂದು ಭಾಗ ಮಹಿಳೆಯರೂ ಕಾಣದಾಗಿದ್ದಾರೆ. ಇದು ಆಧುನಿಕಗೊಳ್ಳುತ್ತಿರುವ ಕರ್ನಾಟಕಕ್ಕೆ, ಇಲ್ಲಿನ ರಾಜಕಾರಣಕ್ಕೆ ಅವಮಾನಕರ ಸಂಗತಿಯಾಗಿದೆ.

ಮಹಿಳಾ ಮೀಸಲಾತಿ ಜಾರಿಗೆ ಬಂದ ಮೇಲೆ ಪ್ರತಿ ಹಳ್ಳಿ, ತಾಲೂಕು, ಜಿಲ್ಲೆಯಲ್ಲಿ ಮಹಿಳಾ ರಾಜಕಾರಣಿಗಳಿದ್ದಾರೆ. ನಮ್ಮ ಜಿಲ್ಲೆ ಉತ್ತರಕನ್ನಡವಂತೂ ಮಹಿಳಾಮಯವಾಗಿದೆ. ರಾಜಕಾರಣಿಗಳಷ್ಟೇ ಅಲ್ಲ, ಆಯಕಟ್ಟಿನ ಜಾಗಗಳಲ್ಲಿರುವ ಅನೇಕ ಅಧಿಕಾರಿಗಳು ಮಹಿಳೆಯರೇ ಆಗಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಇಂಥ ಜಿಲ್ಲೆಯಿಂದಲಾಗಲೀ ಅಥವಾ ಇಂಥ ಇತರ ಜಿಲ್ಲೆಗಳಿಂದಾಗಲೀ, ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ಏಕೆ ಮಹಿಳೆಯರು ಚುನಾಯಿತರಾಗುವಷ್ಟು ಬೆಳೆಯುತ್ತಿಲ್ಲ? ರಾಷ್ಟರೀಯ ಮತ್ತು ಪ್ರಾದೇಶಿಕ ಪಕ್ಷಗಳೆಂಬ ಭೇದಭಾವವಿಲ್ಲದೇ ಎಲ್ಲ ಪಕ್ಷಗಳೂ ಮಹಿಳಾ ರಾಜಕಾರಣಿಗಳನ್ನು ಬೆಳೆಸಲು ಯಾವ ಕಾರ್ಯಕ್ರಮ ಹಾಕಿಕೊಂಡಿವೆ? ಸ್ವಂತಿಕೆಯ ಮಾತನಾಡುವ, ಹೋರಾಟದ ಛಲವಿರುವ ಮಹಿಳಾ ಪ್ರತಿನಿಧಿಗಳನ್ನು ಮೂಲೆಗುಂಪು ಮಾಡಿ ‘ಹೌದಪ್ಪ’ಗಳಿಗೇ ಏಕೆ ಮಣೆ ಹಾಕಲಾಗಿದೆ? ಈ ಕಹಿಪ್ರಶ್ನೆಗಳ ಉತ್ತರಗಳು ಗುಟ್ಟಾಗೇನೂ ಉಳಿದಿಲ್ಲ. ಈ ತನಕ ನಡೆದು ಬಂದ ದಾರಿಯ ಹೆಜ್ಜೆಗುರುತುಗಳನ್ನೊಮ್ಮೆ ಅವಲೋಕಿಸಿದರೆ ತಾನೇ ಅರಿವಾಗುತ್ತದೆ.

***

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ನೊಬೆಲ್ ಶಾಂತಿಪ್ರಶಸ್ತಿ ವಿಜೇತ ದಕ್ಷಿಣ ಆಫ್ರಿಕಾದ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ‘ಭಾರತೀಯ ಮಹಿಳೆ ಆಧುನಿಕ ಭಾರತವನ್ನು ಮುನ್ನಡೆಸಿ ಆಳುವವಳಾಗಬೇಕು. 33% ಮೀಸಲಾತಿ ಕೊಡಹೊರಟಿರುವ ಭಾರತ ಜಗತ್ತಿಗೇ ದಾರಿದೀಪವಾಗಬೇಕು’ ಎಂದು ಹೇಳಿದರು. ದಮನಿತ ಸಮುದಾಯಗಳಿಗೆ, ಮಹಿಳೆಯರಿಗೆ ಅಧಿಕಾರದಲ್ಲಿ ಪಾಲು ಕೊಡುವ ಮೀಸಲಾತಿ ವ್ಯವಸ್ಥೆ ವಿಶ್ವಕ್ಕೇ ಮೇಲ್ಪಂಕ್ತಿಯೆಂಬ ಮೆಚ್ಚುಗೆಯ ಮಾತು ಎಲ್ಲೆಡೆಯಿಂದ ಕೇಳಿಬಂದಿತ್ತು. ನಿಜ. ಅದು ಭಾರತೀಯ ಮಹಿಳೆಯ ಕನಸೂ ಹೌದು. ಏಕೆಂದರೆ ಇಂದು ನಿನ್ನೆಯ ಮಾತಲ್ಲ, ಸಾವಿರಾರು ವರ್ಷಗಳಿಂದ ಅವಳು ಆಳಿಸಿಕೊಳ್ಳುವ ವರ್ಗಕ್ಕೆ ತಳ್ಳಲ್ಪಟ್ಟಿದ್ದಾಳೆಯೇ ಹೊರತು ಆಳುವ ಮಹಿಳೆಯಾಗಿ ದೇಶ ಮುನ್ನಡೆಸಲಿಲ್ಲ. ರಾಣಿಯರೆಂದರೆ ನಮ್ಮ ನೆನಪು ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಜಿಯಾ ಸುಲ್ತಾನಾ, ಚೆನ್ನಭೈರಾದೇವಿ ತನಕ ಹೋಗಿ ಹಾಗೇ ನಿಲ್ಲುತ್ತದೆ. ಸಹಸ್ರಮಾನ ಹಿಂದೆ ಹೋದರೆ ಅದು ಬರೀ ರಾಜರ ಕಥೆ. ಮಹಿಳಾ ಸಂಕಥನ ದಮನಿತರ ಕಥನ.

ಹೀಗಿರುವಾಗ ಸ್ವಾತಂತ್ರ್ಯ ಬಂದು 65 ವರ್ಷಗಳ ತರುವಾಯ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ 33% ಮೀಸಲಾತಿ ಕೊಡುವುದರ ಸಾಧಕ-ಬಾಧಕಗಳ ವಿಷಯ ಬಿಸಿ ಚರ್ಚೆಗೆ ಗ್ರಾಸವಾಯಿತು. ಮಹಿಳಾ ಮೀಸಲಾತಿ ಬೇರೆಬೇರೆ ನೆವಗಳ ಅಡೆತಡೆಗಳನ್ನೆದುರಿಸುತ್ತಿದೆ. ಇದೇನೂ ಹೊಸದಲ್ಲ. ಪಂಚಾಯತ್ ರಾಜ್ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಅವಶ್ಯಕತೆ ಎತ್ತಿ ಹಿಡಿದು ಬಲವಂತರಾಯ್ ಮೆಹ್ತಾ ಸಮಿತಿ 1957ರಲ್ಲಿ ನೀಡಿದ ವರದಿಯಂದ ಹಿಡಿದು, 1992ರ ಸಂವಿಧಾನದ 73ನೇ ತಿದ್ದುಪಡಿಯು ಪಂಚಾಯತ್‌ರಾಜ್‌ನಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸಿಕೊಡುವವರೆಗೆ ಮಹಿಳಾ ಮೀಸಲಾತಿ ಹಲವು ಮಜಲುಗಳನ್ನು ದಾಟಿ ಬಂದಿದೆ.

ಮಹಿಳೆಯ ಬದುಕನ್ನು ಸಹನೀಯಗೊಳಿಸುವ ಕ್ರಮಗಳು ಸಂಘರ್ಷವಿಲ್ಲದೆ ಸಮಾಜದ ಒಪ್ಪಿಗೆ ಪಡೆಯುತ್ತವೆ. ಎಲ್ಲಿ ಆಕೆಯನ್ನು ಬರೀ ಜೈವಿಕ ಮಹಿಳೆಯನ್ನಾಗಿ ನೋಡಲಾಗಿದೆಯೋ, ಎಲ್ಲಿ ಆಕೆ ಫಲಾನುಭವಿ ಮಾತ್ರವೋ (ಉದಾ: ಜನನಿ ಸುರಕ್ಷಾ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್ ಯೋಜನೆಗಳು) ಅಂಥ ಕ್ರಮಗಳು ಸ್ವಾಗತಿಸಲ್ಪಡುತ್ತವೆ. ಆದರೆ ಅವಳನ್ನು ನಾಗರಿಕ ವ್ಯಕ್ತಿಯಾಗಿ ಪರಿಗಣಿಸಿ ಅಧಿಕಾರ ಮರು ಹಂಚಿಕೆಯಾಗಬೇಕಾದಾಗ ವಿವಾದ ಶುರುವಾಗುತ್ತದೆ. ಮೊದಲು ಅಂಬೇಡ್ಕರ್ ಉದ್ದೇಶಿಸಿದ್ದ ಹಿಂದೂ ಕೋಡ್ ಬಿಲ್ ಆಸ್ತಿ ಹಕ್ಕು ಕೊಡುವಂತೆ ಹೇಳಿದಾಗ ಸಾಂಪ್ರದಾಯಿಕ ಹಿಂದೂಸಮಾಜದಲ್ಲಿ ವಿವಾದ ಭುಗಿಲೆದ್ದಿತ್ತು. ಈಗಲೂ ಅಧಿಕಾರ-ಆಸ್ತಿ ಹಂಚಿಕೆಯ ವಿಷಯ ಬಂದರೆ ಆ ಮಸೂದೆ ಸ್ಥಗಿತಗೊಳ್ಳುತ್ತದೆ. ಮಹಿಳಾ ಮೀಸಲಾತಿ ಮಸೂದೆಗೆ ಕಳೆದ 15 ವರ್ಷಗಳಿಂದ ಇದೇ ಆಗುತ್ತಿರುವುದು. ಜೊತೆಗೆ ಆಡಳಿತ ವ್ಯವಸ್ಥೆ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಬಯಸುತ್ತದೆಯೇ ಹೊರತು ಬದಲಾಯಿಸಲು ಅಲ್ಲ. ಸಂಘರ್ಷವಿಲ್ಲದೆ ಜನರನ್ನು ನಿಯಂತ್ರಿಸುವುದೇ ಅದರ ಮುಖ್ಯ ಗುರಿಯಾಗಿ ಎಂದಿಗೂ ಸುಧಾರಣಾ ನೆಲೆಯಲ್ಲಿಯೇ ಯೋಚಿಸುತ್ತದೆ. ಈಗ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಪ್ರಾತಿನಿಧ್ಯಕ್ಕೆ ಧಕ್ಕೆ ಬರುವುದೆಂದು ಮಹಿಳಾ ಮೀಸಲಾತಿ ಮಸೂದೆ ನೆನೆಗುದಿಗೆ ಬಿದ್ದಿರುವಾಗ ಈ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಮಹಿಳೆಯ ಆದ್ಯತೆಗಳು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿ ಅವು ಮಾದರಿ ಗ್ರಾಮಗಳಾಗುವ ಸಾಧ್ಯತೆ ಹೆಚ್ಚಿರುವುದನ್ನು ಅಂಕಿಅಂಶಗಳ ಸಮೇತ ತೋರಿಸಿದರೂ ಪುರುಷ ಮೇಲುಗೈಯ ರಾಜಕೀಯ ವ್ಯವಸ್ಥೆ ಹೆಣ್ಣಿನ ಅಧಿಕಾರ ನಿಭಾಯಿಸುವ ಶಕ್ತಿಯನ್ನು ಅನುಮಾನಿಸುತ್ತಲೇ ಬಂದಿದೆ. ಮೊದಲ ಬಾರಿ ಅಧಿಕಾರ ಸಿಕ್ಕಿದಾಗ ಅದನ್ನು ಬಳಸಿಕೊಳ್ಳುವಲ್ಲಿ ಗೊಂದಲಗೊಳ್ಳಬಹುದು. ಮೊದಲ ಅವಧಿಯಲ್ಲಿ ತನಗೆ ಅರಿವಾಗದ ವಿಷಯಗಳ ಬಗೆಗೆ ಪುರುಷ ಬಂಧುಗಳ ಸಹಾಯ ಪಡೆಯಬಹುದು. ಆದರೆ ನಿಶ್ಚಿತ ಅಧಿಕಾರ ಸಿಕ್ಕರೆ ಏನು ಮಾಡಬೇಕೆಂದು ಮಹಿಳಾ ಪ್ರತಿನಿಧಿಗಳು ಸಿದ್ಧರಾಗಿಯೇ ಆಗುತ್ತಾರೆ. ಮಹಿಳಾ ಪ್ರತಿನಿಧಿಗಳಲ್ಲಿ ಯಶಸ್ವೀ ಸದಸ್ಯರು, ರಬ್ಬರ್ ಸ್ಟಾಂಪ್‌ಗಳು, ಭ್ರಷ್ಟರು, ಜವಾಬ್ದಾರಿಯ ಅರಿವೇ ಆಗದವರು ಎಲ್ಲರೂ ನಮ್ಮೆದುರಿಗಿದ್ದಾರೆ. ಪ್ರಮೀಳಾ ರಾಜ್ಯ ರಾಮರಾಜ್ಯವಾದೀತೆಂದೇನೂ ಅಲ್ಲ. ಅವರ ನಡುವೆಯೇ ಅನಕ್ಷರಸ್ಥೆಯಾದರೂ ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ಪಟ್ಟು ಹಿಡಿದು ಕಲ್ಪಿಸಿಕೊಂಡವರಿದ್ದಾರೆ. ವಾದ ಮಾಡಿ ಜಯಿಸಿ ಹೊರಬಂದವರಿದ್ದಾರೆ. ಕುರ್ಚಿ ಮೇಲೆ ಕುಳಿತು ಗೊತ್ತೇ ಇಲ್ಲದಿದ್ದರೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು, ನಾಲ್ಕಾರು ಊರು ತಿರುಗಾಡಿ, ಪುಳಕಿತರಾದವರು; ರಾತ್ರಿಶಾಲೆಗೆ ಹೋಗಿ ಸಹಿ ಮಾಡಲು ಕಲಿತಿರುವವರು; ಅಡುಗೆ-ಮನೆಯ ಪರಿಧಿಯಾಚೆಯೂ ತನ್ನ ಪ್ರಾಮುಖ್ಯತೆಯಿದೆ ಎಂದು ಮೊದಲ ಬಾರಿ ಅನುಭವಕ್ಕೆ ಬಂದವರು; ಮುಟ್ಟಿಸಿಕೊಳ್ಳಲಾರದ ಅನರ್ಹತೆಯೇ ಈಗ ಅಧ್ಯಕ್ಷಗಿರಿಗೆ ಅರ್ಹತೆಯಾಗಿ ಒದಗಿಬಂದಿದ್ದಕ್ಕೆ ಅಚ್ಚರಿಪಟ್ಟವರು – ಇಂಥ ನೂರಾರು ವಿಭಿನ್ನ ವಿನೂತನ ಅನುಭವಗಳು ಮಹಿಳೆಯ ಪಾಲಿಗೆ ದೊರಕಿವೆ. ಸಬಲೀಕರಣದ ದಾರಿಯ ಮೊದಲ ಹೆಜ್ಜೆಯಲ್ಲಿ ಇವೆಲ್ಲ ಪ್ರಮುಖ ವಿಚಾರಗಳೇ. ಇಂಥ ಹೊಸ ಅನುಭವ ಕಥನಗಳು ಮಹಿಳಾ ಭಾವಕೋಶದಲ್ಲಿ ಸೇರಿಹೋಗುತ್ತಿರುವುದು ಖಂಡಿತವಾಗಿಯೂ ಹೊಸ ಬೆಳವಣಿಗೆಯೇ.

ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಮೀಸಲಾತಿ ಪ್ರಣೀತ ರಾಜಕೀಯ ಪ್ರವೇಶ ಈ ಎರಡರಿಂದಲೂ ಹಿಂದೆಂದೂ ಕನಸದಿದ್ದ ಜಗತ್ತನ್ನು ಮಹಿಳೆ ಕಾಣತೊಡಗಿದ್ದಾಳೆ. ಅದರಲ್ಲೂ ಗ್ರಾಮೀಣ ಪ್ರದೇಶದ, ಅಷ್ಟೇನೂ ಪರಿಣತ ಕಲಿಕೆಯಿಲ್ಲದವರೂ ಧೈರ್ಯವಾಗಿ ನಿಲ್ಲಬಲ್ಲಷ್ಟು ಆಶಾಭಾವನೆ ಬೆಳೆಸಿಕೊಂಡಿದ್ದಾರೆ. ಬೇಲಿಬದಿಯ ಉಳಿದೆಲ್ಲ ಮಾತುಕತೆಗಳ ಜೊತೆಗೆ ರಾಜಕೀಯದ, ಜಾತಿಯ ಗಹನ ಲೆಕ್ಕಾಚಾರಗಳು ಹಳ್ಳಿಯ ಹೆಣ್ಣುಮಕ್ಕಳ ತಲೆಯೇರಿ ಕುಳಿತಿವೆ. ದರಕು ಗುಡಿಸುತ್ತ, ಕಟ್ಟಿಗೆ ಕಡಿಯುತ್ತ, ಹೊಲಗದ್ದೆ-ಮನೆಗೆಲಸ ಮಾಡುತ್ತ, ನೀರು ಹೊರುತ್ತ, ನಾಲ್ಕು ಕಾಸು ದುಡಿದು ಗಂಡ ಮಕ್ಕಳ ಬಳಿ ಪಿರಿಪಿರಿಗೈದು ಹೇಗೋ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ ಮುಗುದೆಯರು ತಮ್ಮ ಸಹಿ, ಅದಕ್ಕಿರುವ ಪ್ರಾಮುಖ್ಯತೆ, ದುಡ್ಡು ಗಳಿಸಲಿರುವ ಎಷ್ಟೆಷ್ಟೋ ಹಾದಿಗಳು ಇವೆಲ್ಲವುಗಳಿಗೆ ಬೆರಗಿನಿಂದ ತೆರೆದುಕೊಳ್ಳತೊಡಗಿದ್ದಾರೆ. ನಮ್ಮೂರ ಪಂಚಾಯ್ತಿ ಅಧ್ಯಕ್ಷೆಯಾದ ಕೃಷಿ ಕಾರ್ಮಿಕಳಾಗಿದ್ದ ಮಾಸ್ತಿ ಹೇಳಿದಂತೆ, ‘ನಾ ಅಲ್ಲೀವರ್ಗೂ ಕುರ್ಚಿ ಮ್ಯಾಲೆ ಕುಂತೇ ಇರ್ಲಿಲ್ಲ. ಕಲ್ಲಾದ್ರೂ ಇರ್ಲಿ, ಕೆಸರಾದ್ರೂ ಇರ್ಲಿ, ನಮ್ದು ಯಾವತ್ತೂ ನೆಲನೇ. ಈಗ ಎಲ್ಲ ಬದಲಾಗದೆ. ಎಲ್ರ ಜತೆ ಕುರ್ಚಿ ಮ್ಯಾಲೆ ಕುಂತಾಯ್ತು. ಹುಬ್ಳಿ, ಕಾರವಾರ, ಬೆಂಗಳೂರು ಅಂತ ಊರೂರು ತಿರ್‍ಗಿ ಸೋನ್ಯಾ ಗಾಂಧಿನೂ ನೋಡಾಯ್ತು. ನಿಜಕೂ ಎಲ್ಲ ಸಪ್ನ ಅನುಸ್‌ಬಿಟ್ಟಿದೆ.’ ಹೌದು. ಗ್ರಾಮೀಣ ಮಹಿಳೆಯರಿಗೆ ಸಿಕ್ಕ ಅಧಿಕಾರ ಅವರು ಕನಸಿನಲ್ಲೂ ಊಹಿಸಲಾಗದ ಸವಲತ್ತು. ಅದೊಂದು ಪವಾಡವೇ. ಆದರೆ ಏನೇನು ತಮಗಾಗಿ ಲಭ್ಯವಿದೆ ಎಂಬುದು ತಿಳಿಯತೊಡಗಿದಷ್ಟೇ ಸಲೀಸಾಗಿ ಏನು ಮಾಡಬೇಕಿದೆ ಎನ್ನುವ ಕರ್ತವ್ಯಪ್ರಜ್ಞೆಯೂ ಅವರಲ್ಲಿ ಬಂದಿದೆಯೆ? ಯಾವುದು ಮೊದಲು? ಅಧಿಕಾರ ಅಥವಾ ಅಧಿಕಾರದ ಅರಿವು? ಹಕ್ಕುಪ್ರಜ್ಞೆ ಅಥವಾ ಕರ್ತವ್ಯದ ಅರಿವು?

ಈಗ ಅವಶ್ಯವಿರುವುದು ಗುಣಮಟ್ಟದ ಹಾಗೂ ಜವಾಬ್ದಾರಿಯುತ ಮಹಿಳಾ ನಾಯಕತ್ವ. ಮೀಸಲಾತಿಯೆಂಬ ಉಪಕರಣ ಬಳಸಿಕೊಂಡು ಮಹಿಳಾ ನಾಯಕತ್ವ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಅದನ್ನು ಬೆಳೆಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ಒಟ್ಟೊಟ್ಟಿಗೆ ಕೈ ಜೋಡಿಸಬೇಕಾಗಿದೆ. ಇಲ್ಲದಿದ್ದರೆ 33% ಮಹಿಳಾ ಮೀಸಲಾತಿ ಕೇವಲ ರಬ್ಬರ್ ಸ್ಟಾಂಪ್‌ಗಳನ್ನಷ್ಟೇ ಉತ್ಪಾದಿಸಿ, ರಾಜಕೀಯ ಹಿನ್ನೆಲೆ-ಪ್ರಭಾವವಿರುವವರ ಹೊರತು ಮತ್ಯಾವ ಮಹಿಳೆಯೂ ಮಂತ್ರಿ ಸ್ಥಾನಕ್ಕೆ ಅರ್ಹಳಾಗಿ ಕಾಣದೇ ಮಹಿಳಾ ಪ್ರಾತಿನಿಧ್ಯ ಎನ್ನುವುದೊಂದು ಪ್ರಹಸನವಾದೀತು.

ಕೊರತೆ.. ಹಸಿವು.. ಬಡಕಲು ಶರೀರದ ಮಕ್ಕಳು


-ಡಾ.ಎಸ್.ಬಿ. ಜೋಗುರ


 

ಅರಳುವ ಹೂಗಳಂತೆ ವಿಕಸಿತವಾಗಬೇಕಾದ ಮಕ್ಕಳು ಮೊಗ್ಗಿರುವ ಹಂತದಲ್ಲಿಯೇ ಕಮರುವ, ಉದುರುವ ಸ್ಥಿತಿ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ  ವ್ಯಾಪಕವಾಗ ತೊಡಗಿದೆ. ಮಕ್ಕಳು ಆಯಾ ದೇಶದ ಭವಿಷ್ಯ. ಮುಂಬರುವ ನಾಗರಿಕತೆಯ ರೂವಾರಿಗಳು. ದುರಂತವೆಂದರೆ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶದ ಮಕ್ಕಳಿಗಿಂತಲೂ ನಿಕೃಷ್ಟವಾದ ಬದುಕನ್ನು ಸಾಗಿಸುವ ಪರಿಸ್ಥಿತಿಯಿದೆ. ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವಿಕೆ, ಪೌಷ್ಟಿಕ ಆಹಾರದ ಕೊರತೆಯ ಪರಿಣಾಮವಾಗಿ ದೇಶದಲ್ಲಿ ಸುಮಾರು 42.5 ಪ್ರತಿಶತದಷ್ಟು ಮಕ್ಕಳು ಕೃಶ ಇಲ್ಲವೇ ಬಡಕಲು ಶರೀರ ಮತ್ತು ಕಡಿಮೆ ತೂಕದವರಾಗಿದ್ದಾರೆ ಎನ್ನುವುದನ್ನು ಕೆಳಗಿನ ಅಂಕಿ ಅಂಶಗಳು ತೋರಿಸಿಕೊಡುತ್ತವೆ. ಪೌಷ್ಟಿಕ ಆಹಾರ ಸೇವನೆ ಆಯಾ ದೇಶದ ಪ್ರತಿಯೊಂದು ಮಗುವಿನ ಹಕ್ಕಾದರೂ ಹಸಿವಿನ ಸೂಚ್ಯಾಂಕದಲ್ಲಿ ಕರ್ನಾಟಕ 11 ನೇ ಸ್ಥಾನದಲ್ಲಿದೆ. 5 ವರ್ಷ ವಯೋಮಿತಿಯ ಒಳಗಿನ ಮಕ್ಕಳು ಆರೋಗ್ಯವಂತ ಮಗುವಿನ ತೂಕ ಹೊಂದಿರದೇ ಕೃಶವಾದ ಬೆಳವಣಿಗೆಯನ್ನು ಹೊಂದಲು ಪೌಷ್ಟಿಕ ಆಹಾರದ ಕೊರತೆ ಹಾಗೂ ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವುದೇ ಆಗಿದೆ.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ 5 ವರ್ಷ ವಯೋಮಿತಿಯೊಳಗಿನ ಕಡಿಮೆ ತೂಕದ ಮಕ್ಕಳ ಪ್ರಮಾಣವನ್ನು ಭಾರತ ಮಾನವ ಅಭಿವೃದ್ಧಿ ಸೂಚ್ಯಾಂಕವು ಗುರುತಿಸಿರುವುದಿದೆ. ಪಂಜಾಬ್‌ನಲ್ಲಿ 24.6 ಪ್ರತಿಶತ, ಕೇರಳದಲ್ಲಿ 22.7 ಪ್ರತಿಶತ, ಆಂಧ್ರಪ್ರದೇಶದಲ್ಲಿ 32.7 ಪ್ರತಿಶತ, ಅಸ್ಸಾಮ್‌ನಲ್ಲಿ 36.4 ಪ್ರತಿಶತ, ಹರಿಯಾಣಾದಲ್ಲಿ 39.7 ಪ್ರತಿಶತ, ತಮಿಳುನಾಡಿನಲ್ಲಿ 30 ಪ್ರತಿಶತ, ರಾಜಸ್ಥಾನದಲ್ಲಿ 40.4 ಪ್ರತಿಶತ, ಪಶ್ಚಿಮಬಂಗಾಲದಲ್ಲಿ 38.5 ಪ್ರತಿಶತ, ಉತ್ತರಪ್ರದೇಶದಲ್ಲಿ 42.3 ಪ್ರತಿಶತ, ಮಹಾರಾಷ್ಟ್ರದಲ್ಲಿ 36.7 ಪ್ರತಿಶತ, ಕರ್ನಾಟಕ 37.6 ಪ್ರತಿಶತ, ಓರಿಸ್ಸಾ 40.9 ಪ್ರತಿಶತ, ಗುಜರಾತ 44.9 ಪ್ರತಿಶತ, ಛತ್ತೀಸಘಡ್  47.6 ಪ್ರತಿಶತ, ಬಿಹಾರ 51.1 ಪ್ರತಿಶತ, ಜಾರ್ಖಂಡ್ 57.1 ಪ್ರತಿಶತ, ಮಧ್ಯಪ್ರದೇಶ 59.8 ಪ್ರತಿಶತ.

ಕರ್ನಾಟಕ ತನ್ನ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂತಲೂ ಹೆಚ್ಚಿನ ಪ್ರಮಾಣದ ಕಡಿಮೆ ತೂಕದ ಮಕ್ಕಳನ್ನು ಹೊಂದಿರುವ ರಾಜ್ಯವಾಗಿದೆ. ದೇಶದಲ್ಲಿ ಅತೀ ಹೆಚ್ಚು ಕೃಶ ಶರೀರವನ್ನು ಹೊಂದಿರುವ ಮಕ್ಕಳನ್ನು ಮಧ್ಯಪ್ರದೇಶ [59.8] ಹೊಂದಿದ್ದರೆ ಅತೀ ಕಡಿಮೆ ಪ್ರಮಾಣದಲ್ಲಿ ಕೇರಳ [22.7] ಹೊಂದಿರುವುದಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಮರಣ ಪ್ರಮಾಣ ನಗರಪ್ರದೇಶಗಳಿಗಿಂತಲೂ ಹೆಚ್ಚಿಗಿದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 47 ಮಕ್ಕಳು ಮರಣಹೊಂದಿದರೆ, ನಗರ ಪ್ರದೇಶದಲ್ಲಿ ಆ ಪ್ರಮಾಣ 31 ರಷ್ಟಿದೆ. ಒಟ್ಟಾರೆಯಾಗಿ ಲಭ್ಯವಿರುವ ಕಡಿಮೆ ಪ್ರಮಾಣದ ವೈದ್ಯಕೀಯ ಸೌಲಭ್ಯಗಳು ಮತ್ತು ಪೌಷ್ಠಿಕ ಆಹಾರ ಸೇವನೆಯ ಕೊರತೆಗಳೇ ಈ ಬಗೆಯ ಕಡಿಮೆ ತೂಕದ ಮಕ್ಕಳ ಪ್ರಮಾಣಕ್ಕೆ, ಅವರ ಸಾವುನೋವುಗಳಿಗೆ ಕಾರಣ.

ದೇಶ ಸ್ವಾಯತ್ತವಾಗಿ ಆರು ದಶಕಗಳು ಕಳೆದರೂ ನಮ್ಮಲ್ಲಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಭಾರತೀಯ ಮೆಡಿಕಲ್ ಕೌನ್ಸಿಲ್ ವರದಿ 2008 ರ ಪ್ರಕಾರ 31 ಮಾರ್ಚ್ 2008 ರವರೆಗೆ ನೊಂದಾಯಿತ ವೈದ್ಯರ ಸಂಖ್ಯೆ 695254. ಇದನ್ನು ಇಲ್ಲಿಯ ಜನಸಂಖ್ಯೆಯನ್ನು ಆಧರಿಸಿ ವಿಭಜಸಿದರೆ 1600 ಜನರಿಗೆ ಒಬ್ಬ ವೈದ್ಯ ಎನ್ನುವ ಹಾಗಾಗುತ್ತದೆ. ಭಾರತದಲ್ಲಿ 10 ಸಾವಿರ ಜನರಿಗೆ 6 ವೈದ್ಯರಿದ್ದರೆ ಚೈನಾದಂತಹ ರಾಷ್ಟ್ರಗಳಲ್ಲಿ ಅದೇ ಜನಸಂಖ್ಯೆಗೆ 14 ಜನ ವೈದ್ಯರಿದ್ದಾರೆ. ದೆಹಲಿ ಗುಜರಾತ ಮತ್ತು ಓರಿಸ್ಸಾ ಹೊರತು ಪಡಿಸಿದರೆ ಮಿಕ್ಕ ಬಹುತೇಕ ರಾಜ್ಯಗಳು ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿಲ್ಲ. ಮಧ್ಯಪ್ರದೇಶದ 1155 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಸುಮಾರು 196 ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರಿಲ್ಲದೇ ಕಾರ್ಯನಿರತವಾಗಿವೆ. ಕೇವಲ ವೈದ್ಯರ ಪ್ರಮಾಣ ಮಾತ್ರವಲ್ಲದೇ ನಮ್ಮಲ್ಲಿ ನರ್ಸಗಳ ಸಂಖ್ಯೆಯೂ ಕಡಿಮೆಯೇ.

ಯುರೋಪನಂತಹ ರಾಷ್ಟ್ರಗಳಲ್ಲಿ 100 ಇಲ್ಲವೇ 150 ಜನ ರೋಗಿಗಳಿಗೆ ಓರ್ವಳು ನರ್ಸ್ ಇದ್ದರೆ ನಮ್ಮಲ್ಲಿ 1205 ಜನರಿಗೆ ಓರ್ವಳು ನರ್ಸ್ ಇರುವಂಥಹ ಸ್ಥಿತಿ ಇದೆ. ಕೇವಲ ಒಬ್ಬರೋ ಇಬ್ಬರೋ ಇರುವ ದಾದಿಗಳ ನೆರವಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಡೆಸಬೇಕಿದೆ. ಬಿಹಾರ, ಛತ್ತೀಸಘಡ್, ಜಾರ್ಖಂಡ್‌ದಂತಹ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಈ ಬಗೆಯ ಕೊರತೆ ಇನ್ನಷ್ಟು ಹೆಚ್ಚಿಗಿದೆ. ಪುರುಷ ಆರೋಗ್ಯ ಸೇವಕರ ಕೊರತೆಯಂತೂ ಇಲ್ಲಿಯ ಗ್ರಾಮೀಣ ಭಾಗಗಳಲ್ಲಿ ತೀರಾ ಬಾಧಕವಾಗಿದೆ. ಮತ್ತೆ ಕೆಲವೆಡೆ ನರ್ಸಗಳಿದ್ದಾರೆ, ವೈದ್ಯರೂ ಇದ್ದಾರೆ ಆದರೆ ಅವರಿಗೆ ಅಲ್ಲಿಯ ಸ್ಥಿತಿಗೆ ಪೂರಕವಾಗಿ ಲಭ್ಯವಿರಬೇಕಾದ ಸಂಪನ್ಮೂಲಗಳ ಕೊರತೆ ಕಾಡುತ್ತದೆ. ಹೀಗೆ ಅನೇಕ ಬಗೆಯ ನೆಟ್ಟಗಿರದ ವ್ಯವಸ್ಥೆಯ ನಡುವೆ ಒಂದು ದೇಶದ ಮಾನವ ಸಂಪನ್ಮೂಲ ರೂಪುಗೊಳ್ಳಬೇಕಿರುವುದು ವಿಷಾದನೀಯವೇ ಹೌದು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತ ಆಫ್ರಿಕಾದಂತಹ ದೇಶಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಆರೋಗ್ಯಕ್ಕಾಗಿ ಹಣವನ್ನು ವ್ಯಯಿಸುವುದಿದೆ. ಆಫ್ರಿಕಾ ಆರೋಗ್ಯಕ್ಕಾಗಿ 6.2 ಪ್ರತಿಶತದಷ್ಟು ಮೊತ್ತವನ್ನು ವಿನಿಯೋಗಿಸಿದರೆ, ಭಾರತ ಕೇವಲ 4.1 ಪ್ರತಿಶತ ಮಾತ್ರ ಆ ದಿಶೆಯಲ್ಲಿ ವ್ಯಯಿಸುತ್ತದೆ ಎನ್ನುವುದನ್ನು ವರದಿ ಮಾಡಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ಥಾನವನ್ನು ಹೊರತುಪಡಿಸಿದರೆ ವಿಶ್ವದ ಬಹುತೇಕ ರಾಷ್ಟ್ರಗಳು ತನ್ನ ದೇಶದ ಪ್ರಜೆಗಳ ಆರೋಗ್ಯಕ್ಕಾಗಿ ಹೆಚ್ಚೆಚ್ಚು ಹಣವನ್ನು ವ್ಯಯಿಸುತ್ತವೆ. ಭಾರತ ಆ ದಿಶೆಯಲ್ಲಿ ಆಫ್ರಿಕಾದಂತಹ ರಾಷ್ಟ್ರಗಳನ್ನು ಮೀರಿ ತೋರಿಸಬೇಕಿದೆ.

ಗ್ರಾಮ ಸ್ವರಾಜ್ಯದ ಕನಸು ಕಂಡ ಬಾಪೂಜಿಯ ಗ್ರಾಮಗಳಲ್ಲಿ ಇಂದು ವಾಸಕ್ಕೆ ಯೋಗ್ಯವಿಲ್ಲದ ಮನೆಗಳಿವೆ, ಪೌಷ್ಠಿಕ ಆಹಾರದ ಕೊರತೆಯಿದೆ, ವೈದ್ಯಕೀಯ ಸೌಲಭ್ಯಗಳು ಸರಿಯಾಗಿಲ್ಲ, ಕುಡಿಯಲು ಶುದ್ಧವಾದ ನೀರಿಲ್ಲ, ಶೌಚಾಲಯ ವ್ಯವಸ್ಥೆಯಿಲ್ಲ, ವಿದ್ಯುತ್ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಇಂಥಾ ಹತ್ತಾರು ಇಲ್ಲಗಳ ನಡುವೆಯೇ ಈ ದೇಶದ ಮಕ್ಕಳು ಭವ್ಯ ನಾಗರಿಕರಾಗಿ ರೂಪುಗೊಳ್ಳಬೇಕಿದೆ. ಹಸಿವು ಮತ್ತು ಬಡತನಗಳು ಗ್ರಾಮೀಣ ಭಾರತವನ್ನು ಕಿತ್ತು ತಿನ್ನುತ್ತಿವೆ. ಆಹಾರ ಧಾನ್ಯಗಳನ್ನು ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲಿಯೇ ಇಂದು ಹಸಿವು, ಬಡತನ ಮತ್ತು ಪೌಷ್ಠಿಕಾಂಶಗಳ ಕೊರತೆಯನ್ನು ಎದುರಿಸಬೇಕಾಗಿ ಬಂದುದು ಒಂದು ದೊಡ್ದ ವಿಪರ್ಯಾಸವೇ ಹೌದು.

ಈ ಅನೈತಿಕ ಕಾರ್ಯಕ್ರಮವನ್ನು ಪ್ರಾಯೋಜಿಸಿದವರು, ಮಾಧ್ಯಮ-ವೃಂದ!

– ಡಾ. ಅಶೋಕ್. ಕೆ.ಆರ್.

ಅದು 1993ರ ಇಸವಿ. ಧೀರ್ಘಕಾಲೀನ ಬರ ಮತ್ತು ಅಂತರ್ಯುದ್ಧದಿಂದ ಸೂಡಾನ್ ದೇಶ ಬಸವಳಿದಿತ್ತು. ಯುಎನ್ ನ ವತಿಯಿಂದ ಕೆವಿನ್ ಕಾರ್ಟರ್ ಎಂಬ ಛಾಯಾವರದಿಗಾರ ಸೂಡಾನ್ ದೇಶದಲ್ಲಿ ಸಂಚರಿಸುತ್ತಿದ್ದ. ಅಲ್ಲಿ ಆತ ತೆಗೆದ ಒಂದು ಚಿತ್ರಕ್ಕೆ 1994ರಲ್ಲಿ ಪ್ರತಿಷ್ಠಿತ ಪುಲಿಟ್ಜಿರ್ ಪ್ರಶಸ್ತಿ ಲಭಿಸಿತು. ಬರಪೀಡಿತ ಪ್ರದೇಶದ ಅಪೌಷ್ಟಿಕ ಮಗುವೊಂದು ಆಯಾಸದಿಂದ ತಲೆತಗ್ಗಿಸಿ ಕುಳಿತಿದೆ, ಹಿನ್ನೆಲೆಯಲ್ಲಿ ಆ ಮಗುವಿನ ಸಾವಿಗೆ ಕಾದಿರುವಂತೆ ರಣಹದ್ದೊಂದು ಕುಳಿತಿರುವ ಚಿತ್ರವದು. ಚಿತ್ರ ತೆಗೆದ ಕೆವಿನ್ ಕಾರ್ಟರ್ ಆ ರಣಹದ್ದನ್ನು ಓಡಿಸಿ ಮಗುವಿನ ಬಗ್ಗೆ ಇನ್ನೇನೂ ಗಮನವೀಯದೆ ಆ ಸ್ಥಳದಿಂದ ತೆರಳಿಬಿಡುತ್ತಾನೆ. ಆ ದೇಶದ ಬಹಳಷ್ಟು ಮಕ್ಕಳು ನಾನಾ ಖಾಯಿಲೆಗಳಿಂದ ಬಳಲುತ್ತಿರುವ ಕಾರಣ ಯಾರನ್ನೂ ಮುಟ್ಟಿಸಿಕೊಳ್ಳಬಾರದೆಂದು ಯು.ಎನ್. ಸಲಹೆ ಕೊಟ್ಟಿರುತ್ತದೆ. ಕಾರಣವೇನೇ ಇರಲಿ ಕೆವಿನ್ ಕಾರ್ಟರನ ವರ್ತನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಪಡುತ್ತದೆ. ಸೂಡಾನ್ ದೇಶದ ದುಃಸ್ಥಿತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದಕ್ಕೆ ಹೊಗಳಿಕೆ ಸಲ್ಲುವುದರ ಜೊತೆಗೆ ಚಿತ್ರ ತೆಗೆದು ಹೊರಟುಹೋದವನ ಅಮಾನವೀಯತೆಯನ್ನು ಕಟುವಾಗಿ ಖಂಡಿಸಲಾಗುತ್ತದೆ. ಸೂಡಾನಿನ ಬರ ಪರಿಸ್ಥಿತಿ, ಬಡತನ, ತೆಗೆದ ಚಿತ್ರದ ಪ್ರಭಾವ, ವೈಯಕ್ತಿಕ ಜೀವನದ ಸಂಘರ್ಷಗಳು ಎಲ್ಲವೂ ಕೆವಿನ್ ಕಾರ್ಟರನನ್ನು ಮಾನಸಿಕವಾಗಿ ಘಾಸಿಗೊಳಿಸಿ ಪುಲಿಟ್ಜಿರ್ ಪ್ರಶಸ್ತಿ ಪಡೆದ ಕೆಲವೇ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತದೆ.

ಇಸವಿ 2012. ಅಸ್ಸಾಮಿನ ಗುವಾಹಟಿ ನಗರದಲ್ಲಿ 20ರ ಹರೆಯದ ಯುವತಿಯೊಬ್ಬಳ ಮೇಲೆ ಇಪ್ಪತ್ತಕ್ಕೂ ಹೆಚ್ಚು ಯುವಕರು ಸಾರ್ವಜನಿಕ ಪ್ರದೇಶದಲ್ಲಿ ಮಾನಭಂಗಕ್ಕೆ ಯತ್ನಿಸುತ್ತಾರೆ. ಅದೇ ಸಮಯಕ್ಕೆ ಆ ಜಾಗಕ್ಕೆ ಬಂದ ನ್ಯೂಸ್ ಲೈವ್ ವಾಹಿನಿಯ ವರದಿಗಾರ ಗೌರವ್ ಜ್ಯೋತಿ ನಿಯೋಗ್ ತನ್ನ ಮೊಬೈಲಿನಲ್ಲಿ ಆ ದೃಶ್ಯವನ್ನು ಸೆರೆಹಿಡಿಯುತ್ತಾನೆ. ಆ ವಿಡಿಯೋ ವಾಹಿನಿಗಳಲ್ಲಿ ದಿನವಹೀ ಪ್ರಸಾರವಾಗುತ್ತದೆ, ಯುಟ್ಯೂಬಿಗೂ ಅಪ್ ಲೋಡ್ ಮಾಡಲಾಗುತ್ತದೆ. ಯುವತಿಯ ಮುಖವನ್ನು ಮರೆಮಾಚಬೇಕೆಂಬ ನೈತಿಕ ಪ್ರಜ್ಞೆಯೂ ವಾಹಿನಿಗಳಿಗಿರಲಿಲ್ಲ. ಇದಿಷ್ಟೇ ಆಗಿದ್ದರೆ ಈ ಲೇಖನ ಬರೆಯುವ ಅಗತ್ಯವಿರಲಿಲ್ಲವೇನೋ. ನಂತರದ ಬೆಳವಣಿಗೆಯಲ್ಲಿ ಮಾನಭಂಗಕ್ಕೆ ಪ್ರಯತ್ನಿಸಿದ ಯುವಕರಲ್ಲಿ ಕೆಲವರು ವರದಿಗಾರನ ಸ್ನೇಹಿತರೆಂದು, ಆ ವರದಿಗಾರನ ಕುಮ್ಮಕ್ಕಿನಿಂದಲೇ ಈ ಪ್ರಕರಣ ನಡೆಯಿತೆಂದು ದೂಷಿಸಲಾಗಿದೆ. ವರದಿಗಾರ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ನ್ಯೂಸ್ ಲೈವ್ ವಾಹಿನಿಯ ಪ್ರಧಾನ ಸಂಪಾದಕ ಅತನು ಭೂಯಾನ್ ಕೂಡ ರಾಜೀನಾಮೆ ಕೊಟ್ಟಿದ್ದಾನೆ. ರಾಜಕೀಯದಿಂದ ಈ ಪ್ರಕರಣವೂ ಮುಕ್ತವಾಗಿಲ್ಲ. ಅಸ್ಸಾಂನ ಮುಖ್ಯಮಂತ್ರಿ ತರುಣ್ ಗೊಗೊಯ್ ನ ಅಪಮಾನಕ್ಕೀಡು ಮಾಡಲೆಂದೇ ನ್ಯೂಸ್ ಲೈವ್ ವಾಹಿನಿಯವರು ಈ ವಿಡಿಯೋವನ್ನು ಸೃಷ್ಟಿಸಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಈ ಆರೋಪ ಮಾಡುವವರ ಮುಖ್ಯ ವಾದವೆಂದರೆ ನ್ಯೂಸ್ ಲೈವ್ ವಾಹಿನಿಯ ಒಡತಿ ರಿಂಕಿ ಭೂಯಾನ್ ಶರ್ಮ ಅಸ್ಸಾಂ ರಾಜ್ಯದ ಆರೋಗ್ಯ ಮಂತ್ರಿ ಹಿಮಂತ ಬಿಸ್ವಾ ಶರ್ಮರ ಪತ್ನಿ! ಆರೋಗ್ಯ ಮಂತ್ರಿ ಮತ್ತು ಮುಖ್ಯಮಂತ್ರಿಯ ನಡುವೆ ಶೀತಲ ಸಮರ ಜಾರಿಯಲ್ಲಿದೆ!!

ಗುವಾಹಟಿಯಲ್ಲಿ ನಡೆದ ಈ ದುಷ್ಕೃತ್ಯದ ಹಿಂದಿರಬಹುದಾದ ಈ ಒಳಸಂಚುಗಳಲ್ಲಿ ಯಾವುದೊಂದು ನಿಜವಾದರೂ ಮಸಿ ಬಳಿಸಿಕೊಂಡಿದ್ದು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾದ ಪತ್ರಿಕೋದ್ಯಮ; ಅದರಲ್ಲೂ ದೃಶ್ಯವಾಹಿನಿಗಳು. ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಭರದಲ್ಲಿ ಸುದ್ದಿಯನ್ನು ತಿರುಚುವುದಕ್ಕಷ್ಟೇ ಇವರ ಅನೈತಿಕತೆ ಸೀಮಿತವಾಗದೆ ಸುದ್ದಿಯನ್ನು ಸೃಷ್ಟಿಸಲೂ ಪ್ರಾರಂಭಿಸಿದ್ದಾರೆ. ಇನ್ನು ರಾಜಕೀಯ ಪಕ್ಷಗಳ, ಉದ್ದಿಮೆದಾರರ ಕೈಗೊಂಬೆಯಾಗಿ ಅವರ ಅನುಕೂಲಕ್ಕೆ ತಕ್ಕಂತೆ ಸುದ್ದಿ ಬಿತ್ತರಿಸುತ್ತ ‘ನ್ಯೂಸ್’ ಎಂಬ ಪದದ ಅರ್ಥವನ್ನೇ ‘ಬ್ರೇಕ್’ ಮಾಡಲಾರಂಭಿಸಿದ್ದಾರೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಕೆಂಬ ಕ್ಷೀಣ ಧ್ವನಿ ಮಾಧ್ಯಮದವರದೇ ತಪ್ಪುಗಳಿಂದ ಬಲಗೊಂಡರೆ ಅಚ್ಚರಿಯಿಲ್ಲ.

ಪತ್ರಕರ್ತ ಅಥವಾ ವರದಿಗಾರ ತಾನು ನೋಡುವ, ವರದಿ ಮಾಡುವ ಪ್ರತಿಯೊಂದು ಘಟನೆಯ ಬಗ್ಗೆಯೂ ಸ್ಪಂದಿಸುವುದು ಸಾಧ್ಯವೂ ಇಲ್ಲ, ವೃತ್ತಿಧರ್ಮವೂ ಅಲ್ಲ. ಪ್ರವಾಹ ಪೀಡಿತ ಪ್ರದೇಶದ ವರದಿಗೆ ತೆರಳಿದ ಪತ್ರಕರ್ತ ಫೋಟೋ ತೆಗೆದು ವರದಿ ಮಾಡುವುದರ ಜೊತೆಗೆ ಪ್ರತಿ ಮನೆಗೂ ವೈಯಕ್ತಿಕ ಸಹಾಯವನ್ನೂ ಮಾಡಬೇಕೆಂದು ಅಪೇಕ್ಷಿಸುವುದು ಉತ್ಪ್ರೇಕ್ಷೆಯ ಮಾತಾದೀತು. ಅಂಥ ಸನ್ನಿವೇಶಗಳಲ್ಲಿ ಪತ್ರಕರ್ತನ ಆದ್ಯ ಕರ್ತವ್ಯ ಅಲ್ಲಿನ ಪರಿಸ್ಥಿತಿಯನ್ನು ಜನಸಮುದಾಯದ ಮನಕ್ಕೆ ತಲುಪುವಂತೆ ಮಾಡುವುದು. ನೊಂದ ಜನರಿಗೆ ಜನಸಮುದಾಯದ ಸಹಾಯಹಸ್ತ ದೊರಕುವಂತೆ ಮಾಡುವುದು. ಒಂದು ಹುಡುಗಿಯ ಮೇಲೆ ಇಪ್ಪತ್ತು ಮೂವತ್ತು ಜನರಿಂದ ಮಾನಭಂಗ ಯತ್ನವಾಗುತ್ತಿದ್ದಾಗ ಅವರನ್ನು ತಡೆಯಲು ಹೋಗಿ ತನ್ನ ಪ್ರಾಣಕ್ಕೇ ಸಂಚಕಾರ ತೆಗೆದುಕೊಳ್ಳುವುದು ಪತ್ರಕರ್ತನ ಕರ್ತವ್ಯವಾಗಲಾರದು. ಹೆಚ್ಚೆಂದರೆ ಪೋಲೀಸರಿಗೆ ತಿಳಿಸಿ ಅಪರಾಧಿಗಳನ್ನು ಗುರುತಿಸಲು ಸಾಧ್ಯವಾಗುವಂತೆ ವಿಡಿಯೋ ಮಾಡಬಹುದಷ್ಟೇ. ಆದರೆ ಘಟನೆಗೆ ಪತ್ರಕರ್ತನೇ ಕುಮ್ಮಕ್ಕು ನೀಡಿ ಕಾರಣಕರ್ತನಾಗಿಬಿಟ್ಟರೆ? ಪತ್ರಿಕಾ ಧರ್ಮದ ಗತಿ?

ಇದು ಎಲ್ಲೋ ದೂರದ ಗುವಾಹಟಿಯಲ್ಲಾದ ಘಟನೆ ಎಂದು ನಾವು ಉದಾಸೀನ ಮನೋಭಾವ ತಾಳುವಂತಿಲ್ಲ. ನಮ್ಮ ಕನ್ನಡ ವಾಹಿನಿಗಳನ್ನು ವೀಕ್ಷಿಸಿದಾಗಲೂ ಇಂಥ ‘ಸುದ್ದಿ ನಿರ್ಮಾಣ’ ಮಾಡುವವರ ದೊಡ್ಡ ಪಡೆಯನ್ನೇ ಕಾಣಬಹುದು. ‘ಅಯೋಗ್ಯ ಗಂಡನಿಗೆ ಗೂಸಾ’, ‘ಒದೆ ತಿಂದ ಆಂಟಿ’, ‘ಕಳ್ಳನಿಗೆ ಧರ್ಮದೇಟು’, ‘ಕೈಕೊಟ್ಟ ಪ್ರಿಯಕರನಿಗೆ ಸಖತ್ತಾಗಿ ಬಿತ್ತು’, ’ಆಂಟಿ ಬಲು ತುಂಟಿ’ – ಈ ರೀತಿಯ ಎಷ್ಟೋ ವರದಿಗಳನ್ನು ನೋಡಿದಾಗ ಆ ವರದಿಗಾರ ಮತ್ತವರ ವಾಹಿನಿಯ ನೈತಿಕತೆಯ ಬಗ್ಗೆ ಪ್ರಶ್ನೆ ಮೂಡದೇ ಇರದು. ವಾಹಿನಿಗಳವರು ಬರುವವರೆಗೂ ಕಾಯುತ್ತ ಕುಳಿತು ನಂತರ ಹೊಡೆದು ಬಡಿಯುವ ನಟನೆ ಮಾಡುವಂತೆ ಕಾಣುವ ಇಂಥ ವರದಿಗಳಲ್ಲಿ ಪತ್ರಕರ್ತರ ಪಾಲೆಷ್ಟು? ಜನರ ಪಾಲೆಷ್ಟು? ವಾಹಿನಿಯ ಪಾತ್ರವೆಷ್ಟು? ನೈಜ ಸುದ್ದಿಯ ಪಾಲೆಷ್ಟು? ಈಗ ಮತ್ತೊಮ್ಮೆ ಈ ಲೇಖನದ ಮೊದಲಲ್ಲಿ ಬರೆದ ಕೆವಿನ್ ಕಾರ್ಟರನ ಬಗ್ಗೆ ಓದಿ. ಅಂದಿನ ಪತ್ರಿಕೋದ್ಯಮಕ್ಕೂ ಇಂದಿನದಕ್ಕೂ ವ್ಯತ್ಯಾಸಗಳು ಗೋಚರಿಸುತ್ತದೆಯಲ್ಲವೇ? ಸುದ್ದಿಯ ಸೃಷ್ಟಿಕರ್ತರು ಅಂದೂ ಇದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ಅಂಥ ಸೃಷ್ಟಿಕರ್ತರ ಸಂಖ್ಯೆ ಕಡಿಮೆಯಾಗದೆ ಹೆಚ್ಚಾಗುತ್ತಿರುವುದು ಇಂದಿನ ಪತ್ರಿಕೋದ್ಯಮದ ದುರಂತ.