Monthly Archives: July 2012

ಸ್ಪಷ್ಟತೆಯಿಲ್ಲದ ಕಾಫಿರೈಟ್ಸ್ ಮಸೂದೆಯ ಅನುಮೋದನೆ

– ಪ್ರಶಾಂತ್ ಮಿರ್ಲೆ
ವಕೀಲರು

ಹೆಚ್ಚಿನ ವೈಜ್ಞಾನಿಕತೆಯಿಂದ ಅಭಿವೃದ್ಧಿಗೊಳ್ಳುತ್ತಿರುವ ನಮ್ಮ ಸಮಾಜದ ವಾಹಿನಿಗಳಲ್ಲಿ, ಸಾಮಾನ್ಯರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮಗೆ ಅರಿವಿಲ್ಲದಂತೆ ಯಾವುದಾರೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಕಾಯಿದೆಯನ್ನು ಉಲ್ಲಂಘಿಸುವ ಪರಿಸ್ಥಿತಿ ಎದುರಾಗುತ್ತಿದೆ. ಹಲವು ವರ್ಷಗಳ ದೀರ್ಘ ಪರಿಶ್ರಮದಿಂದ ಐತಿಹಾಸಿಕ ಹಕ್ಕುಸ್ವಾಮ್ಯ (ತಿದ್ದುಪಡಿ) ಮಸೂದೆ, 2012, ಸಂಸತ್ತಿನ ಎರಡು ಸದನದಲ್ಲಿ ಯಾವುದೇ ವಿರೋಧವಿಲ್ಲದೆ ಕಳೆದ ತಿಂಗಳು ಅನುಮೋದನೆಗೊಂಡಿದ್ದು ರಾಷ್ಟ್ರಪತಿಯವರ ಅಂಕಿತ ಪಡೆದು ಜಾರಿಯಾಗುವ ಹಂತದಲ್ಲಿರುತ್ತದೆ. ಆದರೆ, ಈ ಮಸೂದೆಯ ಮಂಡನೆ ಸಾಮಾಜಮುಖಿಯಾಗಿ ರೂಪಿಸಿರುವುದಾಗಿ ವಿಶ್ಲೇಷಿಸಿದರೂ ಕೆಲವು ವರ್ಗದ ಜನತೆಯಿಂದ ಅಷ್ಟೇ ವಿರೋಧ ವ್ಯಕ್ತವಾಗಿದೆ.

ಪ್ರಸ್ತುತ ತಿದ್ದುಪಡಿಯನ್ನು ಒಟ್ಟಾರೆ ಅವಲೋಕಿಸಿದಾಗ ಭಾರತದಲ್ಲಿನ ಹಾಲಿ ಹಕ್ಕುಸ್ವಾಮ್ಯ (ಕಾಫಿ ರೈಟ್ಸ್) ಕಾನೂನುಗಳಲ್ಲಿ ಹಲವು ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಕೆಲವು ವರ್ಗದ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಲ್ಲಿ ಸಫಲವಾಗಿರುವುದನ್ನು ಒಪ್ಪಿಕೊಳ್ಳಲೇ ಬೇಕಾಗಿರುತ್ತದೆ. ಅಂತೆಯೇ, ತಿದ್ದುಪಡಿಯ ಬಗೆಗೆ ನಮ್ಮ ಸಂಸತ್ತಿನಲ್ಲಿ ಪೂರ್ಣಪ್ರಮಾಣದ ಚರ್ಚೆಯಾಗದಿರುವುದು ವಿಷಾದಕರ ಸಂಗತಿ! ಇದಕ್ಕಾಗಿಯೇ ಈ ಲೇಖನದಲ್ಲಿ ಪ್ರಸ್ತುತ ತಿದ್ದುಪಡಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸಿದ್ದೇನೆ. ಅವುಗಳಲ್ಲಿ ಕೆಲವು ಇಂತಿವೆ.

ಅಂಗವಿಕಲರ ರಕ್ಷಣೆಗಾಗಿ ತೆಗೆದುಕೊಂಡ ಕ್ರಮಗಳು

ಪ್ರಸ್ತುತ ತಿದ್ದುಪಡಿ ಕರಡಿನಲ್ಲಿ ತೋರಿಸಿರುವಂತೆ ಅಂಧತ್ವ, ಕಿವುಡು ಅಥವಾ ಇತರ ಯಾವುದೇ ರೀತಿಯ ಅಂಗ ವೈಕಲ್ಯತೆಯನ್ನು ಹೊಂದಿರುವವರು, ಪ್ರಸ್ತುತ ತಿದ್ದುಪಡಿಯ ಕಲಮು ’51(1)(ಜಡ್ ಬಿ)’ ಮತ್ತು ’31ಬಿ’ ರ ಅಡಿಯಲ್ಲಿ ’ಯಾವುದೇ ಸಾಧನದ ಮೂಲಕ’ ಎಂಬ ವ್ಯಾಖ್ಯಾನವನ್ನು ಸೇರಿಸಲಾಗಿದೆ. ಇದರಿಂದ ಹಕ್ಕುಸ್ವಾಮ್ಯದ ಬಳಕೆಯು ಅಂಗವಿಕಲರಿಗೆ ಅನ್ವಯವಾಗುವ ಅಥವಾ ಅವರಿಗೆ ಅನುಭೋಗಿಸಲು ಅಥವಾ ಬಳಸಲು ಬೇಕಾದ ಸಾಧನಗಳ ಮೂಲಕ ಅವಕಾಶ ಕಲ್ಪಿಸಿಕೊಡುವುದರಿಂದ ಹಕ್ಕುಸ್ವಾಮ್ಯವುಳ್ಳವನು ಯಾವುದೇ ಲಾಭ ಹೊಂದುವಂತಿಲ್ಲ. ಉದಾ: ಅಂಧತ್ವವುಳ್ಳ ವ್ಯಕ್ತಿಗಳಿಗೆ ಮಾರುಕಟ್ಟೆಯಲ್ಲಿ ಬ್ರೈಲಿ ಲಿಪಿಯಲ್ಲಿ ಕಥೆ ಪುಸ್ತಕಗಳನ್ನು ಮಾರಾಟ ಮಾಡುವಾಗ ಬ್ರೈಲಿ ಲಿಪಿಯಲ್ಲಿ ಲಭ್ಯವಾಗುವಂತೆ ಮಾಡಿರುವುದಕ್ಕೆ ಯಾವುದೇ ವಿಶೇಷ ವೆಚ್ಚವನ್ನು ಪಡೆಯುವಂತಿಲ್ಲ. ಆದರೆ ಇಂತಹ ಸಾಧನಗಳ ಬಗೆಗಿನ ಪೂರೈಕೆಯನ್ನು ಕಲ್ಪಿಸುವುದು ಹಕ್ಕುಸ್ವಾಮ್ಯ ಹೊಂದಿರುವವನಷ್ಟೇ ಮಾಡಬೇಕಾಗಿರುವುದರಿಂದ ಅಂಗವಿಕಲರ ಬಳಕೆಗಾಗಿ ವಿಶೇಷ ಸಾಧನಗಳನ್ನು ಪೂರೈಸುವುದು ಹಾಸ್ಯಾಸ್ಪದವಾಗಿದೆ (ಇವುಗಳ ತಗಲುವ ವಿಶೇಷ ವೆಚ್ಚದ ಬಗೆಗೆ ಚರ್ಚೆ ಅನಗತ್ಯ ಎಂಬುವುದು ನನ್ನ ಭಾವನೆ).

ನ್ಯಾಯಸಮ್ಮತ ವ್ಯವಹಾರಗಳ ವ್ಯಾಪ್ತಿಯ ವಿಸ್ತಾರಗೊಳಿಸಿದ್ದು

ಹಳೆಯ ಕಾನೂನಿನಲ್ಲಿ ನ್ಯಾಯಸಮ್ಮತ ವ್ಯವಹಾರಗಳಲ್ಲಿ ’ಕಥೆ, ನಾಟಕ, ಸಂಗೀತ ಅಥವಾ ಕಲಾತ್ಮಕ ಕೆಲಸಗಳಿಗೆ’ ಸೀಮಿತವಾಗಿದ್ದು, ಪ್ರಸ್ತುತ ತಿದ್ದುಪಡಿಯಿಂದ ಸಾಫ್ಟ್‌ವೇರ್ ಹೊರತುಪಡಿಸಿದರು ಸೌಂಡ್ ರೆಕಾರ್ಡಿಂಗ್ ಅಥವಾ ವಿಡಿಯೋ ಚಿತ್ರೀಕರಣಕ್ಕೂ ಅನ್ವಯವಾಗುವಂತೆ ಎಲ್ಲಾ ರೀತಿಯ ಕೆಲಸಗಳಿಗೆ ವಿಸ್ತಾರವಾಗಿರುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಅಥವಾ ವಿಶೇಷ ಅಧ್ಯಯನಕ್ಕೆ ಮತ್ತು ಅನ್ವೇಷಣೆಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದಂತೆ ಆಗಿದೆ.

ಸರಳ ರೀತಿಯಲ್ಲಿ ಈಗ ಹಕ್ಕುಸ್ವಾಮ್ಯ ಪರವಾನಗಿಯ ವರ್ಗಾವಣೆ:

ಕಲಮು 21ರ ಮೇರೆಗೆ ಹಕ್ಕುಸ್ವಾಮ್ಯ ಹೊಂದಿರುವ ಯಾವುದೇ ವ್ಯಕ್ತಿಯು ತನ್ನ ಹಕ್ಕನ್ನು ಅದರ ಭಾಗಾಂಶವನ್ನು ವರ್ಗಾಯಿಸುವ ಅಥವಾ ಬಿಟ್ಟುಕೊಡಬೇಕಾದರೆ ನಿಗದಿತ ನಮೂನೆಯಲ್ಲಿ ಹಕ್ಕುಸ್ವಾಮ್ಯ ನೋಂದಾಣಾಧಿಕಾರಿಯಲ್ಲಿ ಸಲ್ಲಿಸಬೇಕಾಗಿತ್ತು. ಪ್ರಸ್ತುತ ತಿದ್ದುಪಡಿಯಿಂದ ಅಂತಹ ವರ್ಗಾವಣೆ ಬರೀ ಸಾರ್ವಜನಿಕ ಸೂಚನೆ ನೀಡುವುದರಿಂದ ಸಾಧ್ಯವಾಗಿದೆ. ಇಷ್ಟಲ್ಲದೇ, ಕಲಮು 30ರ ಮೇರೆಗೆ ಯಾವುದೇ ಹಕ್ಕುಸ್ವಾಮ್ಯ ಪರವಾನಗಿಯು ಲಿಖಿತ ರೂಪದಲ್ಲಿದ್ದು ಸಹಿಯನ್ನು ಹೊಂದಿರಬೇಕಾಗುತ್ತದೆ ಮತ್ತು ಪರವಾನಗಿಯು ಲಿಖಿತರೂಪದಲ್ಲಿ ಮಾತ್ರ ಲಭ್ಯ. ಇದರಿಂದ ಕಲಾತ್ಮಕ ಅನ್ವೇಷಣೆಗಳು, ಜಿ.ಎನ್.ಯು. ಪಬ್ಲಿಕ್ ಲೈಸನ್ಸ್ ಮತ್ತು ಮುಕ್ತವಾದ ವಿವಿಧ ಮಾದರಿಯ ಪರವಾನಗಿಗಳ ಬಳಕೆಗಳು ಭಾರತದಲ್ಲಿ ಕಾಲಿಡುವಂತಾಗಿದೆ.

WIPO ಹಕ್ಕುಸ್ವಾಮ್ಯ ಒಪ್ಪಂದದ ಮೇರೆಗೆ ಸಾರ್ವಜನಿಕ ವಾಚನಾಲಯಗಳಲ್ಲಿ ಎರವಲು ಪಡೆಯುವ ವಸ್ತುಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ ನೀಡುವ ಬಾಡಿಗೆ ಎಂಬ ಅರ್ಥವ್ಯಾಪ್ತಿಯಿಂದ ಹೊರತುಪಡಿಸಲಾಗಿದ್ದು ಇದರಿಂದ ಯಾವುದೇ ಲಾಭರಹಿತವಲ್ಲದ ಉದ್ದೇಶಕ್ಕೆ ಅಂದರೆ, ಲಾಭರಹಿತವಾಗಿ ನಡೆಸುವ ವಾಚನಾಲಯ ಅಥವಾ ಅಂತರ್ಜಾಲದಲ್ಲಿ ಲಭ್ಯವಿರುವ ಮುಕ್ತ ಮಾಹಿತಿಗಳ ಬಳಕೆ ಅಥವಾ ವಿದ್ಯಾಸಂಸ್ಥೆಗಳು ಕಂಫ್ಯೂಟರ್ ಪ್ರೋಗ್ರಾಮ್ ಅಥವಾ ಸೌಂಡ್ ರೆಕಾರ್ಡಿಂಗ್ ಅಥವಾ ಸಿನಿಮಾಆಟೋಗ್ರಾಫ್ ತುಣುಕುಗಳನ್ನು ಕಾನೂನು ಬದ್ದವಾಗಿ ಬಳಸಲು ಅನುಕೂಲ ಮಾಡಿಕೊಟ್ಟಂತಾಯಿತು.

ಬಳಕೆದಾರನಿಗೆ ಅಂತರ್ಜಾಲದಲ್ಲಿ ಮಧ್ಯವರ್ತಿಗಳಾಗಿ ವರ್ತಿಸುವ ಸರ್ವಿಸ್ ಪ್ರೊವೈಡರ್‌ಗಳಿಗೆ ತಾಂತ್ರಿಕ ಕಾರ್ಯ ನಿರ್ವಹಿಸುತ್ತವೆಂದು ಅವುಗಳ ಮೂಲಕ ಯಾರು ತಪ್ಪನ್ನು ಎಸಗುತ್ತಾರೋ ಅವರು ತಮ್ಮ ಕೃತ್ಯಕ್ಕೆ ಬಾಧ್ಯರಾಗುತ್ತಾರೆ ಹೊರತು ಸರ್ವಿಸ್ ಪ್ರೊವೈಡರ್‌ಗಳಲ್ಲ ಎನ್ನುವ ವ್ಯಾಖ್ಯಾನ ಅಂತರ್ಜಾಲ ಮಧ್ಯವರ್ತಿಗಳಿಗೆ ಸಮಾಧಾನ ಸಂಗತಿಯಾದರೂ ಅಂತರ್ಜಾಲದಲ್ಲಿ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವ ಇತರೇ ವ್ಯವಸ್ಥೆಯನ್ನು ಕಡೆಗಣಿಸಿದಂತಾಗಿದೆ. ಇದರಿಂದ ವ್ಯಾಪಕ ಚರ್ಚೆಯನ್ನು ನಿರೀಕ್ಷಿಸಬಹುದಾಗಿದೆ.

ಛಾಯಾಚಿತ್ರಗಳ ಮೇಲಿನ ಹಕ್ಕುಸ್ವಾಮ್ಯದ ಅವಧಿಯನ್ನು ಪ್ರಕಟಣೆಗೊಂಡ 60 ವರ್ಷದದಿಂದ ಹಕ್ಕುಸ್ವಾಮ್ಯದಾರನ ಮರಣದ ನಂತರದ 60 ವರ್ಷಗಳಿಗೆ ಏರಿಸಿರುವುದು ಹಲವು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಬರೀ 25 ವರ್ಷಗಳ ಮಿತಿಗೆ ಶಿಫಾರಸ್ಸು ಮಾಡಿದೆ ಮತ್ತು ತಿದ್ದುಪಡಿ ಮಾಡುವ ಸಲುವಾಗಿ ನೇಮಕವಾದ ಸಮಿತಿಯಿಂದಲೂ ಈ ವಿಷಯ ಕುರಿತು ಯಾವುದೇ ಶಿಫಾರಸ್ಸು ಆಗಿರಲಿಲ್ಲ. ಇಷ್ಟಲ್ಲದೇ, ನಮ್ಮ ಸಮಾಜದಲ್ಲಿ ಫೋಟೋಗ್ರಫಿ ಸಂಬಂಧಪಟ್ಟ ಹಕ್ಕು ಉಲ್ಲಂಘನೆಗೆ ಮತ್ತು ಅವುಗಳ ರಕ್ಷಣೆಗೆ ವಹಿಸುವ ಕ್ರಮಗಳು ಸ್ಪಷ್ಟವಾಗಿ ಇಲ್ಲದಿರುವುದರಿಂದ ಈ ತಿದ್ದುಪಡಿಯ ಪ್ರಯತ್ನ ಪ್ರಶ್ನಾರ್ಥಕವಾಗಿ ಉಳಿಯುತ್ತದೆ ಅಷ್ಟೇ!

ಪ್ರಸ್ತುತ ತಿದ್ದುಪಡಿಯಿಂದ ಮರುಮುದ್ರಣದ ಅಥವಾ ಮೂಲ ರೂಪದ ಕೆಲಸವನ್ನು ಕೈಗೊಳ್ಳುವುದಕ್ಕೆ ತುಸು ಬಿಗಿಗೊಳಿಸಿರುವ ಕ್ರಮಗಳು ಗಮನಾರ್ಹವಾಗಿವೆ:

  • ಮೂಲ ಮುದ್ರಣವನ್ನು ಅಥವಾ ಕೆಲಸವನ್ನು ಬೇರೆ ರೂಪದಲ್ಲಿ ಬದಲಾವಣೆಗೆ ಇದ್ದ 2 ವರ್ಷದ ಕಾಲಾವಧಿಯನ್ನು 5 ವರ್ಷಕ್ಕೆ ಏರಿಸಲಾಗಿದೆ.
  • ಯಾವ ಕೆಲಸವು ಮುಖ್ಯವಾಹಿಗೆ ತರಲಾಗಿರುತ್ತದೆಯೋ, ಅದರ ಮೂಲರೂಪದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವಂತಿಲ್ಲ. ಉದಾ: ಕ್ಯಾಸೆಟ್ ಮೂಲಕ ಹೊರತಂದ ಮುದ್ರಣವನ್ನು ಸಿಡಿ ಮೂಲಕ ಮತ್ತೆ ಹೊರತರುವಂತಿಲ್ಲ.
  • ಹಕ್ಕುಸ್ವಾಮ್ಯದಾರನಿಗೆ ಮುಂಗಡವಾಗಿ ಹಕ್ಕುಸ್ವಾಮ್ಯದಾರನ ಮೂಲ ಮುದ್ರಣದ 50000 ಸಂಖ್ಯೆಯ ಸಮನಾದ ಮೊತ್ತವನ್ನು ನೀಡಬೇಕು. ಆದರೆ ಮಾರುಕಟ್ಟೆಯ ಅಭಾವದಿಂದ ಕೆಲವು ಸಂದರ್ಭದಲ್ಲಿ ಹಕ್ಕುಸ್ವಾಮ್ಯ ಮಂಡಳಿಯ ಅನುಮತಿಯ ಮೇರೆಗೆ ಮುಂಗಡದಲ್ಲಿ ಮುಂಗಡವನ್ನು ಕಡಿಮೆ ಮಾಡಬಹುದಾಗಿದೆ.
  • ಯಾವುದೇ ಮುದ್ರಣದಲ್ಲಿ ಮೂಲ ಕರ್ತರಿಂದ ಅನುಮತಿ ಪಡೆದ ಬಗ್ಗೆ ಅಥವಾ ಮೂಲ ನಕಲು ಎಂಬ ವಿಷಯಗಳನ್ನು ಸೇರಿಸಿ ಗ್ರಾಹಕರಿಗೆ ತಪ್ಪು ಮಾಹಿತಿಯನ್ನು ಈಗಾಗಲೇ ನಿರ್ಬಂಧಿಸಲಾಗಿತ್ತು, ಈಗ ಸೌಂಡ್ ರೆಕಾರ್ಡಿಂಗ್ ಅಥವಾ ಚಲನ ಚಿತ್ರದ ಭಾಗಾಂಶವನ್ನಾಗಲಿ, ಎರವಲು ಪಡೆದ ಮಾಹಿತಿಯನ್ನು ಬಳಸಲು ನಿರ್ಬಂಧಿಸಲಾಗಿದೆ.
  • ಎಲ್ಲಾ ಮುದ್ರಿಕೆಗಳು ತಿರುಚುವ ಕೆಲಸ ಅವಶ್ಯವಿದ್ದಾಗ ಎಂಬ ಅಂಶವನ್ನು ತಗೆದುಹಾಕಿ ತಾಂತ್ರಿಕ ಕಾರಣಕ್ಕೆ ಎಂಬ ಬಳಸಿರುವುದು.

ಇವುಗಳನ್ನು ಗಮನಿಸಿದಾಗ ಕೊಲವರಿ ಹಾಡಿನ ಮೂಲ ಕರ್ತನ ಅನುಮತಿಯಿಲ್ಲದೆ ನಡೆದ ಹಾಡನ್ನು ತಿರುಚಿ ಹೆಚ್ಚಿನ ಪ್ರಚಾರಕ್ಕೂ ಅನುಕೂಲ ಮಾಡಿಕೊಟ್ಟ ಕ್ರಮಗಳು ಹಾಲಿ ಕಾನೂನಿನ ಪ್ರಕಾರ ಜೈಲಿಗೆ ಅಟ್ಟುವಷ್ಟು ದಂಡನಾರ್ಹ ಕೃತ್ಯವಾಗಿರುತ್ತದೆ. ಆದರೆ, ಇದರ ಬಗ್ಗೆ ಪ್ರಸ್ತುತ ಸಮಾಜ ಜಾಗರೂಕರಾಗಿರಬೇಕಾಗಿದೆ. ಹಕ್ಕುಸ್ವಾಮ್ಯ ಕಾಯಿದೆಯ ತಿದ್ದುಪಡಿಯಲ್ಲಿ ಗೀತ ರಚನೆಗಾರರ, ಸಂಗೀತ ಸಂಯೋಜಕರ ಮತ್ತು ಗಾಯಕರ ಹಕ್ಕುಗಳ ಕುರಿತು ಹೆಚ್ಚು ಚರ್ಚೆಗೆ ಒಳಪಟ್ಟ ವಿಷಯಗಳು ಮತ್ತು ಅವರ ಹಕ್ಕುಗಳನ್ನು ಎತ್ತಿಹಿಡಿಯಲು ಮಾಡಿರುವ ಪ್ರಯತ್ನದಿಂದ ನಿರ್ಮಾಪಕರು ಗಳಿಸುವ ರಾಜಧನದಲ್ಲಿ ಸಮಾನವಾಗಿ ಹೊಂದುವ ಅವಕಾಶ ಕಲ್ಪಿಸಿಕೊಟ್ಟಿದೆ.

ಆದರೆ, ರಾಜಧನವನ್ನು ಪಡೆಯುವ ಹಕ್ಕನ್ನು ಕುರಿತು ಯಾವುದೇ ವಿಶೇಷ ಹಕ್ಕಾಗಿ ಪರಿಗಣಿಸದಿರುವುದಿಲ್ಲ ಮತ್ತು ಎಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡದಿರುವುದಿಲ್ಲ. ಸಂಸತ್ತಿನಲ್ಲಿ ಈ ಕುರಿತು ಅನುಮೋದನೆ ಪಡೆಯುವಾಗ ಯಾವುದೇ ವಿಸ್ತೃತ ಚರ್ಚೆಗೂ ಒಳಪಟ್ಟಿರುವುದಿಲ್ಲ. ಹಾಗಾದರೆ ಅನಿಶ್ಚಿತ ಘಟನೆಗಳಿಗೆ ಇದರ ಉದ್ದೇಶ ಅರ್ಥೈಸುವುದು ಕಠಿಣವಾಗಿದೆ. ಉದಾ: ಗೀತ ರಚನೆಗಾರ ಮತ್ತು ಅವನ ವಾರಸುದಾರರೋಡನೆ ನಿರ್ಮಾಪಕನು ಸಂಪೂರ್ಣ ಹಕ್ಕುಸ್ವಾಮ್ಯವನ್ನು ತನ್ನ ಹೆಸರಿಗೆ ನಿಯೋಜಿಸಿಕೊಂಡರೆ ಅಥವಾ ರಾಜಧನವನ್ನು ಮತ್ತು ಅದರ ಹಕ್ಕನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಬೇಡಿಕೆ ಇಟ್ಟರೆ? ಇದಕ್ಕಾಗಿಯೇ ಸಂಸತ್ತಿನಲ್ಲಿ ಆಗುವ ಚರ್ಚೆಯು ಅನುಕೂಲವಾಗುತಿತ್ತು. ಮುಖ್ಯವಾಗಿ ಹಕ್ಕು ಸ್ವಾಮ್ಯ ಸೇವೆಗಳ ಬಳಕೆದಾರರ ಕುರಿತು ಅಂಗವಿಕಲರ ಬಗ್ಗೆ ಮಾತ್ರ ಚರ್ಚೆಗೆ ಒಳಪಟ್ಟು ಇತರೆಯವರ ಕುರಿತು ಯಾವುದೇ ಚರ್ಚೆಯಾಗದಿರುವುದು ತಿದ್ದುಪಡಿಯ ಕಾಳಜಿ ಬಗ್ಗೆ ಸಂಶಯಪಡುವಂತಾಗಿದೆ..

ಹೆಚ್ಚಿನ ವೈಜ್ಞಾನಿಕತೆಯಿಂದ ಅಭಿವೃದ್ಧಿಗೊಳ್ಳುತ್ತಿರುವ ನಮ್ಮ ಸಮಾಜದ ವಾಹಿನಿಗಳಲ್ಲಿ, ಸಾಮಾನ್ಯರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮಗೆ ಅರಿವಿಲ್ಲದಂತೆ ಯಾವುದಾರೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಕಾಯಿದೆಯನ್ನು ಉಲ್ಲಂಘಿಸುವ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ವಾಸ್ತವದ ಸನ್ನಿವೇಶವನ್ನು ನಮ್ಮ ಸಂಸದರಿಗೆ ತಿಳಿಹೇಳಿ ಸೂಕ್ತ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಇಲ್ಲವಾದರೆ ಪ್ರಸ್ತುತ ತಿದ್ದುಪಡಿಯಿಂದ ಆಗುವ ಗೊಂದಲಗಳಿಗೆ ಅಥವಾ ವ್ಯಾಜ್ಯಗಳಿಗೆ ಯಾರನ್ನು ಬಾಧ್ಯರನ್ನಾಗಿಸಬೇಕು?

ಶಿಕ್ಷಣ ಸಚಿವರೆ, ಕೇಸರೀಕರಣವೇನೂ ಭಾರತದ ಸಂಸ್ಕೃತಿಯಲ್ಲ…

– ಮಹಾದೇವ ಹಡಪದ

ಕೇಸರೀಕರಣಕ್ಕೆ ಒಂದು ಉದಾತ್ತ ಧ್ಯೇಯ, ಉದ್ಧೇಶ ಮತ್ತು ಅರ್ಥವಿದೆ ಎಂದೆಲ್ಲ ಹೇಳುವ ಸಂಕುಚಿತ ಸಂಸ್ಕೃತಿ ಆರಾಧಕರು. ಪಠ್ಯದಲ್ಲಿ ರಾಷ್ಟ್ರೀಯತೆಯೆಂದು ತಾವೇ ಕರೆದುಕೊಳ್ಳುತ್ತಿರುವ, ತಮ್ಮ ಪಕ್ಷ ಸಿದ್ಧಾಂತದ ಅಜಂಡಾವೊಂದನ್ನೆ ಹಿನ್ನೆಲೆಯಾಗಿಟ್ಟುಕೊಂಡು, ಭಾರತೀಯತೆಯನ್ನು ಜಾಗೃತಗೊಳಿಸುವ ಸಲುವಾಗಿಯೇ ಭಾವುಕರಾಗಿ ಇತಿಹಾಸದ ಒಂದೆಳೆಯ ಸತ್ಯವನ್ನೇ ಈ ದೇಶಾಭಿಮಾನದ ಸಂಕೇತವಾಗಿಸಿ, ಭಾರತೀಯತೆ, ರಾಷ್ಟ್ರೀಯತೆ ಎಂಬ ಮನೋಭಾವ ಬೆಳೆಸುವುದಾದರೆ ಇತಿಹಾಸದ ಸಂಶೋಧನಾ ಒರೆಗಲ್ಲಿನಲ್ಲಿ ಫಳಫಳ ಹೊಳೆಯುವ ಸತ್ಯಗಳು ಎಷ್ಟೋ ಇದ್ದಾವಲ್ಲ ಅಂತಹುದನ್ಯಾಕೆ ಪಠ್ಯದಲ್ಲಿ ಸೇರಿಸಲಾಗುವುದಿಲ್ಲ? ಇತಿಹಾಸದಲ್ಲಿನ ಕೇಸರೀಕರಣವನ್ನು ಪತ್ತೆಹಚ್ಚಿ ಅತ್ಯುತ್ಸಾಹದಲ್ಲಿ ಹೇಳುವುದಾದರೆ ಸೋತ ಭಾರತೀಯತೆಯ ಮುಖಭಂಗವನ್ನು ಸಹಿಸಲಾರದ ಬಾಲಿಶ ಅಜಂಡಾವೊಂದನ್ನು ಎಲ್ಲ ಧರ್ಮೀಯರ ಮಕ್ಕಳಿಗೂ ಕಲಿಸುವುದು ಯಾವ ನ್ಯಾಯ? ರಾಷ್ಟ್ರೀಯತೆ ಭಾವನೆ ಜಾಗೃತಗೊಳ್ಳುವುದು ಇತಿಹಾಸದಿಂದ ಎನ್ನುವುದು ನಗೆಪಾಟಲು.

ಓದು-ಬರಹ ಕಲಿಯದ ವ್ಯಕ್ತಿಗಳು ಕೂಡಾ ತನ್ನ ಆಸ್ತಿ, ಜಾತಿ, ಕುಟುಂಬ ಮಕ್ಕಳು ಮರಿಗಳನ್ನು ಪ್ರೀತಿಸುವುದು ಈ ಇಂಡಿಯಾದ ಸಂಸ್ಕೃತಿಯ ಭಾಗವೇ ಅಲ್ಲವೇ! ಅವರುಗಳು ಯಾರೂ ಫ್ಯಾಸಿಸ್ಟ ಅಲ್ಲ. ಮಕ್ಕಳಲ್ಲಿ ಮುಖ್ಯವಾಗಿ ಮನಷ್ಯತ್ವವನ್ನು ಕಲಿಸಬೇಕು, ಸುತ್ತಲಿನ ಪರಿಸರ ಪ್ರೀತಿಸುವುದನ್ನು ಕಲಿಸಬೇಕು. ಇಂದಿಗೂ ಮರ್ಯಾದಾ ಹತ್ಯೆಗಳು, ಮಲ ಬಳಿಯುವುದು, ಮಲ ಹೊರುವುದು, ದಲಿತರ ಮೇಲೆ ದೌರ್ಜನ್ಯ ನಡೆಸುವುದನ್ನು ಶ್ರದ್ಧೆಯಿಂದ ರೂಢಿಸಿಕೊಂಡವರು ಇರುವಾಗ ರಾಷ್ಟ್ರೀಯತೆಯ ಕುರಿತಾಗಿ ಜಾಗೃತಗೊಳ್ಳಲು ಹಪಹಪಿಸುವ ಕೇಸರಿಕರಣ ತನ್ನ ವೈದಿಕೀಕರಣದ ರೂಪುಗಳನ್ನು ಮಕ್ಕಳ ಮನಸ್ಸಿನ ಮೇಲೆ ಹೇರುವ ಮೂಲಕ ಸಾಂಸ್ಕೃತಿಕ ಚಲನೆಯನ್ನು ದಿಕ್ಕುತಪ್ಪಿಸಿ ಸನಾತನ ವೈದಿಕ ಪರಂಪರೆಯನ್ನ ಪುನಃ ಸ್ಥಾಪಿಸುವ ಹುನ್ನಾರವನ್ನು ನಡೆಸುತ್ತಿದೆ.

ಭಾರತ-ಚೀನಾದ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಬಿಜಾಪೂರ ಜಿಲ್ಲೆಯ ಜನತೆ ಅಂದಿನ ಪ್ರಧಾನಿಯವರ ತೂಕದಷ್ಟು ಚಿನ್ನವನ್ನು ತೂಗಿ ಕೊಟ್ಟದ್ದು ಭಾರತೀಯತೆಯ ಅಭಿಮಾನದಿಂದ ಹೊರತು ಕೇಸರೀಕರಣ ಹೇಳುವ ದೇಶಾಭಿಮಾನದಿಂದಲ್ಲ. ಕಟುವಾಸ್ತವದಿಂದಲೇ ದೇಶದ ಆಳ-ಅಂತಸ್ತಿನ ಬಗ್ಗೆ ಗೌರವ ಬರುತ್ತದೆ ಹೊರತು ಪುರೂರವ, ಯೋಗ, ಧ್ಯಾನ, ದತ್ತಪೀಠಗಳಿಂದಲ್ಲ. ವೈಚಾರಿಕ ಜಗತ್ತಿನ ಎಷ್ಟೋ ಸತ್ಯಗಳನ್ನು ಬಗ್ಗಿಸಿ ತಮ್ಮ ಅಜಂಡಾದ ಜೊತೆಗೆ ಸೇರಿಸಿಕೊಂಡು ರಾಜಕೀಯವಾಗಿ ಸದೃಢರಾಗಲು ಹೆಣಗುತ್ತಿರುವವರು ಇಂದು ಕೇಸರೀಕರಣವನ್ನು ಮಕ್ಕಳ ಮನಸ್ಸಿನ ಮೇಲೆ ಗಟ್ಟಿಗೊಳಿಸುವ ಮೂಲಕ ಇತಿಹಾಸದಲ್ಲಿ ಆಗಿರುವ ಕೆಲವು ಸಾಂಸ್ಕೃತಿಕ ಅನುಸಂಧಾನಗಳಿಗೆ ಬೇರೆಯದೇ ಆದ ಬಣ್ಣ ಬರೆಯಲು, ಅರ್ಧ ಸತ್ಯವನ್ನೆ ನೂರು ಸಲ ಜಪಿಸುವ ಮೂಲಕ ಸುಳ್ಳನ್ನು ಸತ್ಯವನ್ನಾಗಿಸುವ ಹುನ್ನಾರ ನಡೆಸಿದ್ದಾರೆ. ನನ್ನದು-ನಮ್ಮದು ಎನ್ನುವಲ್ಲಿ ಇನ್ನೊಬ್ಬರದು-ಇನ್ನೊಂದನ್ನು ದ್ವೇಷಿಸುವ ಭಾವ ಇರುತ್ತದೆ ಎನ್ನುವ ಸತ್ಯವನ್ನು ಭೋದಿಸುವ ಇವರ ವಸುದೈವ ಕುಟುಂಬಕಂ ಕಲ್ಪನೆ ಕೇಸರೀಕರಣವಲ್ಲದೆ ಮತ್ತೇನು?

ಕರ್ನಾಟಕದ ಶಿಕ್ಷಣ ಸಚಿವ ಕಾಗೇರಿಯವರು ಮೂಲ ಭಾರತೀಯ ಸಂಸ್ಕೃತಿಯಲ್ಲಿ ಮಾನಸಿಕ ಗುಲಾಮಗಿರಿ ಇರಲಿಲ್ಲವೆಂದು ಹೇಳಿರುವುದು ಗಮನಿಸಿದರೆ ಕಾಮಾಲೆ ಕಣ್ಣಿಂದ ಇತಿಹಾಸವನ್ನು ನೋಡುತ್ತಿರುವವರು ಯಾರೆಂಬುದನ್ನು ಅವರೇ ಹೇಳಿಕೊಂಡಂತಾಗಿದೆ. ನಿಮ್ಮ ಸಂಸ್ಕೃತಿಯಲ್ಲಿ ರಾಮನನ್ನು ಪ್ರತಿಷ್ಠಾಪಿಸುವ ಕಾರಣಕ್ಕಾಗಿಯೇ ರಾವಣನನ್ನು ರಾಕ್ಷಸನನ್ನಾಗಿ ಸೃಷ್ಟಿಸಿದೀರಲ್ಲ? ರಾಮ ಶಿವಧನಸ್ಸು ಮುರಿಯುವಲ್ಲಿ ಶಿವನೆಂಬ ದ್ರಾವಿಡ ಸಂಸ್ಕೃತಿಯೊಂದನ್ನು ಅಳಿಸಿ ವೈದಿಕತೆಯನ್ನು ಸ್ಥಾಪಿಸಿದರಲ್ಲ? ಒಂದು ವರ್ಗಕ್ಕೆ ವೈದಿಕರು ಸೃಷ್ಟಿಸಿರುವ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ, ಅಕ್ಷರ ಅಭ್ಯಾಸ, ಅಧ್ಯಯನಗಳಲ್ಲಿ ತೊಡಗಲು ನಿಮ್ಮ ಮೂಲ ಸಂಸ್ಕೃತಿಯಲ್ಲಿ ಅವಕಾಶ ಮಾಡಿಕೊಡಲಾಗಿತ್ತೋ? ಇಂಥ ಎಷ್ಟೋ ಅಸಮಾನತೆಗಳನ್ನು ಸೃಷ್ಟಿಸಿ ಸರ್ವೇಜನಾಃ ಸುಖಿನೋಭವಂತು ಎಂದು ಹೇಳುವ ನಿಮ್ಮ ಈ ಜಗತ್ತಿನ ಪ್ರೀತಿಯಲ್ಲಿ ಕೇಸರ ಹೊರತಾದ ಬೇರೆ ಬಣ್ಣಗಳಿಗೆ ಅವಕಾಶವಿಲ್ಲವೇ?

ಮುಕ್ತವಾದ ಸಮಾಜ ಕಟ್ಟುವ ಕನಸುಗಳನ್ನು ಎಳೆವಯಸ್ಸಿನಲ್ಲಿಯೇ ಬೋಧಿಸಬೇಕು. ಮುಕ್ಕಾದ ಇತಿಹಾಸವನ್ನಲ್ಲ. ವೇದವು ಗೊಡ್ಡು ಪುರಾಣ ಕಟ್ಟೆಯ ಹರಟೆ ಎಂಬ ಅರ್ಥದ ವಚನಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ. ಅಂಥ ವೈಚಾರಿಕ ತರ್ಕವನ್ನ ಪಠ್ಯವಾಗಿಸುತ್ತೀರಾ? ಭಾರತೀಯ ತತ್ವಶಾಸ್ತ್ರದಲ್ಲಿ ಬರುವ ಭಾವುಕ ಸಿದ್ಧಾಂತಿಗಳ ವಿಚಕ್ಷಕ ದೃಷ್ಟಿಕೋನದ ನಿಲುವುಗಳನ್ನು ಪಠ್ಯವಾಗಿ ಇಡಬಲ್ಲರೇ? ಅದಿರಲಿ, ಸ್ವಾತಂತ್ರ್ಯಾಪೂರ್ವದ 1918 1818 ರಲ್ಲಿ ಮಹಾರಾಷ್ಟ್ರದ ಭೀಮಾತೀರದ ಕೋರೆಗಾಂವದಲ್ಲಿ ಪೇಶ್ವೆ ಮತ್ತು ಮಹಾರರ ನಡುವೆ ಯುದ್ಧ ನಡೆದಾಗ ಪೇಶ್ವೆಗಳ 32 ಸಾವಿರ ಸೈನಿಕರನ್ನು ಮಾಹಾರರ 500 ಸೈನಿಕರು ಕೇವಲ ಹನ್ನೆರಡು ಗಂಟೆಗಳಲ್ಲಿ ಸೋಲಿಸಿದ (ಆ ಘಟನೆಯ ನೆನಪಿಗಾಗಿ ಕೋರೆಗಾಂವನಲ್ಲಿ ಶೌರ್ಯಸ್ಥಂಭ ಸ್ಥಾಪಿಸಲಾಗಿದೆ) ಇತಿಹಾಸವನ್ನೂ ನಿಮ್ಮ ಪಠ್ಯದಲ್ಲಿ ಸೇರಿಸುವುದಿಲ್ಲ ಯಾಕೆ?

ಇಡೀ ಜಗತ್ತನ್ನು ಪ್ರೀತಿಸು ಎಂಬ ತತ್ವವನ್ನು ಸಾರಿರುವುದಾಗಿ ಹೇಳಿಕೊಳ್ಳುವ ವೈದಿಕ ಮನಸ್ಸುಗಳು ಯಾವ ಅಸ್ಮಿತೆಯನ್ನು ಉಳಿಸಿಕೊಳ್ಳಲು ಯಾವ ರಾಷ್ಟ್ರೀಯತೆ ಭಾವನೆಯನ್ನು ಜಾಗೃತಗೊಳಿಸಲು ಶಿಕ್ಷಣದಲ್ಲಿ ಕೇಸರೀಕರಣದ ಪಠ್ಯ ಹಾಕುತ್ತಿದ್ದಾರೆ? ಇತಿಹಾಸದಲ್ಲಿ ಮರೆಯಾದ ಧರ್ಮಧಾರಿತ ಅಂದರೆ ವೈದಿಕ ಪುರೋಹಿತಶಾಹಿತ್ವವನ್ನು ಪ್ರತಿಪಾದಿಸಿದ ವ್ಯಕ್ತಿಗಳನ್ನು ಪರಿಚಯಿಸುವುದು ನಮ್ಮ ಶಿಕ್ಷಣ ಸಚಿವರಿಗೆ ಭಾರತೀಯತೆ, ರಾಷ್ಟ್ರೀಯತೆಯ ಅಭಿಮಾನವಾಗಿಬಿಟ್ಟಿದೆ. ಮಕ್ಕಳಲ್ಲಿ ಮೊದಲು ಸ್ವಾತಂತ್ರ್ಯದ ಕಲ್ಪನೆ, ಮಾನವೀಯ ಮೌಲ್ಯಗಳು, ಸಮಾನತೆಯ ಬದುಕಿನ ಕುರಿತಾದ ಅರಿವು ಮೂಡಿಸುವುದು ಮುಖ್ಯ. ಕೇಸರೀಕರಣವೇ ಭಾರತೀಕರಣ ಎನ್ನುವ ಶಿಕ್ಷಣ ಸಚಿವರು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು-ತಮ್ಮ ಪಕ್ಷ ಸಿದ್ಧಾಂತದ ಅಜಂಡಾವನ್ನು ಕರ್ನಾಟಕದ ಮಕ್ಕಳ ಮನಸ್ಸಿಗೆ ತುರುಕುವ ಪ್ರಯತ್ನ ರಾಷ್ಟ್ರೀಯತೆ ಆಗಲಾರದು.

‘ಪ್ಲಾಂಟರ್ಸ್’ ಗಾಳಕ್ಕೆ ಸಿಕ್ಕಿ ಬೀಳುವ “ಪತ್ರಕರ್ತ” ಮೀನುಗಳು!

– ಶಿವರಾಮ್ ಕೆಳಗೋಟೆ

ಹಲವರಿಗೆ ನೆನಪಿರಬಹುದು, ಈಗ್ಗೆ ನಾಲ್ಕು ವರ್ಷಗಳ ಹಿಂದೆ ಜರ್ಮನ್ ನಾಜಿ ಯುದ್ಧ ಆರೋಪಿ ಜೊಹಾನ್ ಬಾಷ್ (88) ಎಂಬಾತ ಗೋವಾ – ಕರ್ನಾಟಕ ಗಡಿ ಪ್ರದೇಶ (ಖಾನಾಪುರ ಕಾಡುಗಳಲ್ಲಿ) ಪೊಲೀಸರಿಗೆ ಸಿಕ್ಕುಬಿದ್ದಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ನಾಡಿನ ಬಹುತೇಕ ಪತ್ರಿಕೆಗಳು ಆ ಸುದ್ದಿಯನ್ನು ಮುಖಪುಟದಲ್ಲಿ ಅಚ್ಚುಹಾಕಿದವು. ಸುದ್ದಿಗೆ ಪೂರಕವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಯಾಗಳನ್ನು ಪತ್ರಕರ್ತರು ಪಡೆದಿದ್ದರು. ಅಂತಹದೊಂದು ಸುದ್ದಿಯನ್ನು ಈ-ಮೇಲ್ ಮೂಲಕ ಪತ್ರಿಕಾಲಯಗಳಿಗೆ ತಲುಪಿಸಿದ್ದು ಪೆರುಸ್ ನಾರ್ಪ್ (Perus Narkp) ಎಂಬ ಹೆಸರಿನ ತಂಡ. ಆ ಸುದ್ದಿಯನ್ನು ಕಳುಹಿಸಿ, ಮಾರನೆಯ ದಿನ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ನೋಡಿ ಮೊದಲು ಎಂಜಾಯ್ ಮಾಡಿದ್ದು ಅವರೇ. ಹೀಗೊಂದು ಕೀಟಲೆ ಮಾಡಲೆಂದೇ ಆ ಗ್ರೂಪ್ ರೂಪ ಪಡೆದಿತ್ತು. ಅವರ ಹೆಸರಿನಲ್ಲಿಯೇ ಅವರ ಉದ್ದೇಶ ಸ್ಪಷ್ಟವಿತ್ತು – Super Prank (ಸಕ್ಕತ್ ಕೀಟಲೆ). ಡೆಕ್ಕನ್ ಹೆರಾಲ್ಡ್, ಟೆಲಿಗ್ರಾಫ್ ಸೇರಿದಂತೆ ಅನೇಕ ಪತ್ರಿಕೆಗಳು ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದ್ದವು. ಕನ್ನಡ ಪತ್ರಿಕೆಗಳೂ ಸುದ್ದಿಯನ್ನು ‘ಮಿಸ್’ ಮಾಡಲಿಲ್ಲ.

ಸುದ್ದಿ ಪ್ರಕಟವಾದ ನಂತರ ಪೆರುಸ್ ನಾರ್ಪ್ ತಂಡ ತಮ್ಮ ‘ಕೀಟಲೆ’ ಯಶಸ್ವಿಯಾದುದರ ಬಗ್ಗೆ ಮತ್ತೊಂದು ಮೇಲ್ ಕಳುಹಿಸಿ ಎಲ್ಲಾ ಸಂಪಾದಕರ, ವರದಿಗಾರರರನ್ನು ಗೇಲಿ ಮಾಡಿತು. ಸುದ್ದಿ ಬಂದಾಕ್ಷಣ ಕ್ರಾಸ್ ಚೆಕ್ ಮಾಡದೆ ಪ್ರಕಟಿಸುವ ಪತ್ರಿಕೆಗಳ ಧೋರಣೆಯನ್ನು ಅವರು ಟೀಕಿಸಿದ್ದರು. ಈ ಪ್ರಕರಣ ಆದದ್ದು 2008 ರ ಜೂನ್ 30 ಮತ್ತು ಜುಲೈ 1 ರ ಹೊತ್ತಿಗೆ.

ಜುಲೈ 1 ಕನ್ನಡಿಗರ ಪಾಲಿಗೆ ‘ಪತ್ರಿಕಾ ದಿನ’. ಪೆರುಸ್ ನಾರ್ಪ್ ಕನ್ನಡ ಪತ್ರಿಕೆಗಳ ಮಟ್ಟಿಗೆ ಒಳ್ಳೆಯ ಪತ್ರಿಕಾ ದಿನಕ್ಕಾಗಿ ಒಳ್ಳೆಯ ‘ಉಡುಗೊರೆ’ಯನ್ನೇ ಕೊಟ್ಟಿತ್ತು. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರಬಂದ ನೆನಪಿಗೆ ಆ ದಿನವನ್ನು ಪತ್ರಿಕಾ ದಿನವಾಗಿ ಆಚರಿಸುತ್ತೇವೆ. (ಜಿಲ್ಲೆಗಳಲ್ಲಿರುವ ಅನೇಕ ವೃತ್ತಿನಿರತ ಸಂಘಗಳು ಪತ್ರಿಕಾ ದಿನವನ್ನು ಈ ತಿಂಗಳಲ್ಲಿ ಯಾವಾಗಲಾದರೊಮ್ಮೆ ಆಚರಿಸುತ್ತಾರೆ. ಆ ಕಾರಣಕ್ಕಾಗಿ ವಿವಿಧ ಜನಪ್ರತಿನಿಧಿಗಳಿಂದ, ಸಂಘ ಸಂಸ್ಥೆಗಳಿಂದ ಹಾಗೂ ಅಧಿಕಾರಿಗಳಿಂದ ಚಂದಾ ಎತ್ತುವ ‘ಸಂಸ್ಕೃತಿ’ ಯೂ ಇದೆ.)

ಪೆರುಸ್ ನಾರ್ಪ್ ಪರವಾಗಿಲ್ಲ. ಏಕೆಂದರೆ ತಾವು ಕೊಟ್ಟ ಸುದ್ದಿ ಸಂಪೂರ್ಣ ಕಟ್ಟುಕತೆ ಅಂತ ಮಾರನೆಯ ದಿನವೇ ಹೇಳಿಬಟ್ಟರು. ಆದರೆ ಪ್ರತಿದಿನ ಹೀಗೊಂದು ಕತೆಕಟ್ಟಿ ಬಿತ್ತರಿಸುವ ಅನೇಕರಿದ್ದಾರೆ. ಅದೇ ಕತೆಗೆ ಮಾಧ್ಯಮದವರು ಬಣ್ಣ ತುಂಬಿ, ಬಿತ್ತರಿಸಿದ ನಂತರವೂ, ಅದು ‘ಕಟ್ಟುಕತೆ’ ಎಂದು ಸ್ಪಷ್ಟನೆ ನೀಡುವವರು ಯಾರೂ ಇಲ್ಲ. ಕ್ರಾಸ್ ಚೆಕ್ ಮಾಡದೆ ಸುದ್ದಿ ಬಿತ್ತರಿಸಿದ ನಂತರ, ತಾವು ಬರೆದಿದ್ದೇ ಅಥವಾ ತೋರಿಸಿದ್ದೇ ಸತ್ಯ ಎಂದು ಬೀಗುವ ಮಾಧ್ಯಮ ಮಂದಿಯೇ ನಮ್ಮ ಮಧ್ಯೆ ಹೆಚ್ಚು. ಉದಾಹರಣೆಗೆ ಬೆಂಗಳೂರಿನ ಎಷ್ಟೋ ಆಸ್ಪತ್ರೆಗಳಲ್ಲಿ ಆಗಾಗ ‘ವಿಶ್ವದಲ್ಲಿಯೇ ಮೊದಲ ಬಾರಿಗೆ’ ಅಥವಾ ‘ಏಶಿಯಾದಲ್ಲಿಯೇ ಮೊದಲ ಬಾರಿಗೆ’, ಅಥವಾ ‘ಭಾರತದಲ್ಲಿಯೇ ಮೊದಲ ಬಾರಿಗೆ’ ಎಂಬ ವಿಶೇಷಣ ಹೊತ್ತ ಸರ್ಜರಿಗಳು ನಡೆದ ಬಗ್ಗೆ ವರದಿಗಳು ಆಗಾಗ ಪತ್ರಿಕೆ, ಟಿವಿಗಳಲ್ಲಿ ಕಾಣುತ್ತೇವೆ. ಅನೇಕ ಬಾರಿ ಈ ವಿಶೇಷಣಗಳು ಆಸ್ಪತ್ರೆ ಪಿ.ಆರ್.ಒ.ಗಳ (ಮಾಧ್ಯಮ ಸಂಪರ್ಕಾಧಿಕಾರಿ) ಸೃಷ್ಟಿ.

ಆಧಾರ ರಹಿತ ಸುದ್ದಿಗಳನ್ನು ಬಿತ್ತರಿಸುವವರು ಹೇರಳವಾಗಿ ಇರುವಾಗ, ಅಂಥದೇ ಸುದ್ದಿಯನ್ನು ಮಾಧ್ಯಮ ಸಂಸ್ಥೆಗಳಿಗೆ ಮುಟ್ಟಿಸಿ ತಮ್ಮ ಬೇಳೆ, ತರಕಾರಿಗಳನ್ನು ಬೇಯಿಸಿಕೊಳ್ಳುವವರೂ ಬೇಕಾದಷ್ಟು ಮಂದಿ ಇದ್ದೇ ಇರ್ತಾರೆ. ರಾಜಕೀಯ ಚಟುವಟಿಕೆಗಳ ಕಾಲದಲ್ಲಂತೂ ಈ ಬೇಳೆ-ತರಕಾರಿ-ಚಿಕನ್ ಬೇಯಿಸುವ ಪ್ರಕ್ರಿಯೆ ಭಾರಿ ಜೋರಾಗಿ ನಡೆಯುತ್ತಿರುತ್ತೆ. ಎದುರುಬಣದ ಪ್ರತಿಕ್ರಿಯೆ ಏನಿರಬಹುದು ಎಂದು ಪರೀಕ್ಷಿಸಲು ಎಲ್ಲಾ ಬಣಗಳಲ್ಲಿ ಸುದ್ದಿ ಪ್ಲಾಂಟ್ ಮಾಡುವ ಮಾಧ್ಯಮ ಸ್ನೇಹಿ ‘ಪ್ಲಾಂಟರ್ಸ್’ ಇರುತ್ತಾರೆ. ಆಯಕಟ್ಟಿನ ಸ್ಥಾನದಲ್ಲಿರುವ ಪತ್ರಕರ್ತರನ್ನು ಸಂಪರ್ಕಿಸಿ ತಮಗೆ ಬೇಕಾದ ಸುದ್ದಿಯನ್ನು ‘ಪ್ಲಾಂಟ್’ ಮಾಡಿಸುತ್ತಾರೆ. 2009ರಲ್ಲಿ ಜೆಡಿಎಸ್ ‘ಒಪ್ಪಂದ’ದ ಪ್ರಕಾರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಹೆಚ್.ಡಿ. ಕುಮಾರಸ್ವಾಮಿ ತಂದೆ ದೇವೇಗೌಡರ ಮಾತು ಕೇಳಿ ‘ವಚನದ್ರೋಹ’ ಮಾಡಿದರು ಎಂಬ ಮಾತು ಆಗ ಪ್ರಚಲಿತದಲ್ಲಿತ್ತು.  ಆಗ ಒಂದು ಸುದ್ದಿ ‘ಪ್ಲಾಂಟ್’ ಆಯಿತು – ಕುಮಾರಸ್ವಾಮಿ ಜೆಡಿಎಸ್ ನಿಂದ ಹೊರ ಬಂದು ಒಂದು ಪ್ರಾದೇಶಿಕ ಪಕ್ಷ ಸ್ಥಾಪಿಸುತ್ತಾರೆ. ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಈ ಸುದ್ದಿ ಮುಖಪುಟದ ಲೀಡ್ ಆಗಿ ಪ್ರಕಟವಾಯಿತು. ಆ ನಂತರ ಆ ಸುದ್ದಿ ಸತ್ತು ಹೋಯಿತು.

ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಗಳೆಲ್ಲಾ ನಿಜವೇ ಆಗಿದ್ದರೆ, ಈ ಹೊತ್ತಿಗೆ ಡಿ.ವಿ ಸದಾನಂದಗೌಡರ ಸರಕಾರ ಬಿದ್ದು ಎಷ್ಟೋ ದಿನಗಳಾಗಬೇಕಿತ್ತು. ಮುಖ್ಯಮಂತ್ರಿ ವಿರೋಧಿ ಪಾಳೆಯ ಘೋಷಿಸಿದ ಹಲವು ‘ಡೆಡ್ ಲೈನ್’ಗಳು ಆಗಿ ಹೋದವು. ಕೋರ್ಟ್ ಆವರಣದಲ್ಲಿ ನಡೆದ ಗಲಭೆಯಲ್ಲಿ ಒಂದು ಚಾನೆಲ್ ‘ಮೂರು ಮಂದಿ ಪೊಲೀಸರು’ ಹತರಾದರು ಎಂದು ಸುದ್ದಿ ಮಾಡಿತು. ಅದು ‘ಪ್ಲಾಂಟರ್ಸ್’ ಹಾವಳಿ ಪರಿಣಾಮ. ಕೋರ್ಟ್ ಆವರಣಕ್ಕೆ ಕರ್ತವ್ಯದ ಮೇಲೆ ಹೋಗಿದ್ದ ಪೊಲೀಸರ ಕುಟುಂಬದ ಪರಿಸ್ಥಿತಿ ಹೇಗಾಗಿರಬೇಡ.

ಅಷ್ಟೇ ಅಲ್ಲ, ಮಾಧ್ಯಮಗಳು ತಮ್ಮ ವಿವೇಚನೆ ಕಳೆದುಕೊಂಡಾಗ ಅಮಾಯಕರು ಆರೋಪಿಗಳಾಗುತ್ತಾರೆ, ಅಪರಾಧಿಗಳಾಗುತ್ತಾರೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಹನೀಫ್ ಹೀಗೆ ‘ಭಯೋತ್ಪಾದಕ’ ಪಟ್ಟ ಅನುಭವಿಸಬೇಕಾಯಿತು. ಲಂಡನ್ ನ ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಆರೋಪಿಯಾಗಿದ್ದ ಕಫೀಲ್, ಆಸ್ಟ್ರೇಲಿಯಾ ನ್ಯಾಯಾಂಗ ಹನೀಫ್ ನನ್ನು ‘ನಿರಪರಾಧಿ’ ಎಂದು ಘೋಷಿಸುವವರೆಗೂ ನಮ್ಮ ಮಾಧ್ಯಮದ ಕಣ್ಣಲ್ಲಿ ಹನೀಫ್ ಭಯೋತ್ಪಾದಕನಾಗಿಯೇ ಉಳಿದುಹೋದರು. ಅವರ ಕುಟುಂಬ ಅನುಭವಿಸಿದ ಯಾತನೆಗೆ ಯಾರೂ ಸಮಾಧಾನ ಹೇಳಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮೋಟರ್ ಬೈಕ್ ಕದ್ದು ಸಿಕ್ಕಿಬಿದ್ದಿದ್ದ ಇಬ್ಬರು ದಾವಣಗೆರೆ ಪೊಲೀಸರ ವಶದಲ್ಲಿದ್ದರು. ಆ ಸುದ್ದಿ ದಿನೇ ದಿನೇ ನಾನಾ ರೂಪ ಪಡೆಯಿತು. ಬೆಂಗಳೂರಿನಿಂದ ದಾವಣಗೆರೆಗೆ ಧಾವಿಸಿದ ವಿಶೇಷ ವರದಿಗಾರರೊಬ್ಬರು ‘ಬಂಧಿತರು ಉಗ್ರರು, ಅವರು ಅಮೆರಿಕಾ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದರು’ ಎಂದು ಬರೆದರು. ಮೊಟಾರ್ ಬೈಕ್ ಕಳ್ಳರು ಅಂತಹದೊಂದು ‘ಕನಸು’ ಕಂಡಿರಬಹುದು, ಆದರೆ ‘ಸಂಚು’ ಹೂಡಿದ್ದರು ಎಂದರೆ?

ಇಂಟರ್ನೆಟ್ ಪ್ರವಾಹದ ಈ ಕಾಲದಲ್ಲಿ ಸುದ್ದಿ ಎಲ್ಲಿಂದ ಬೇಕಾದರೂ ಬರಬಹುದು. ಕೆಲವೊಮ್ಮೆ ಬ್ಲಾಗ್, ಫೇಸ್‌ಬುಕ್, ಟ್ವಿಟರ್‌ಗಳು ಸುದ್ದಿ ಕೊಡಬಹುದು. ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ಮುಖ್ಯ. ‘ಪ್ಲಾಂಟರ್ಸ್’ ಗಳ ಗಾಳಕ್ಕೆ ಸಿಕ್ಕಿಬೀಳಬಾರದು ಎಂದು ನೇರವಾಗಿ ಹೇಳಿಬಿಡಬಹುದು. ಆದರೆ ಪ್ಲಾಂಟರ್ಸ್‌ಗಳ  ಉದ್ದೇಶದಲ್ಲಿ ತಮ್ಮ ಹಿತಾಸಕ್ತಿಯನ್ನೂ ನೋಡಿಕೊಳ್ಳುವ ಪತ್ರಕರ್ತರೂ ಇದ್ದಾರಲ್ಲ!

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -26)


– ಡಾ.ಎನ್.ಜಗದೀಶ್ ಕೊಪ್ಪ 


 

ಉತ್ತರ ಭಾರತದ ಅರಣ್ಯ ಮತ್ತು ಅದರೊಳಗಿನ ಜೀವಸಂಕುಲಗಳ ರಕ್ಷಣೆಗಾಗಿ ಜಿಮ್ ಕಾರ್ಬೆಟ್ ಕೈಗೊಂಡ ಅಭಿಯಾನ ಅವನಿಗೆ ನಿರೀಕ್ಷೆಗೂ ಮೀರಿ ಯಶಸ್ಸನ್ನು ತಂದು ಕೊಟ್ಟಿತು. ಭಾರತದ ಬ್ರಿಟಿಷ್ ಸರ್ಕಾರ, ಅರಣ್ಯ ಕುರಿತಂತೆ ಅರಣ್ಯಾಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ನೀಡಲು ಕಾರ್ಬೆಟ್‌ನನ್ನು ನಿಯೋಜಿಸಿತು. 1930ರ ದಶಕದಲ್ಲಿ ಭಾರತದಲ್ಲಿ ಸಾಮಾನ್ಯ ಹುದ್ದೆಗಳನ್ನು ಹೊರತು ಪಡಿಸಿದರೆ, ಮುಖ್ಯವಾದ ಹುದ್ದೆಗಳು ಬ್ರಿಟಿಷರ ಅಧೀನದಲ್ಲಿದ್ದವು. ಇಲ್ಲಿ ಅರಣ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕ ಬ್ರಿಟಿಷ್ ಅಧಿಕಾರಿಗಳು ಭಾರತದ ಅರಣ್ಯವೆಂದರೆ, ಬೆಚ್ಚಿಬೀಳುತ್ತಿದ್ದರು. ಶೀತಪ್ರದೇಶವಾದ ಇಂಗ್ಲೆಂಡ್‌ನಿಂದ ಬಂದ ಅವರು, ಭಾರತದ ಉಷ್ಣವಲಯದ ಕಾಡುಗಳ ಸಸ್ಯ ವೈವಿಧ್ಯ, ತರಾವರಿ ಹಾವುಗಳು, ವಿಷಜಂತುಗಳು, ಅಪಾಯಕಾರಿ ಪ್ರಾಣಿಗಳು ಇವುಗಳಿಂದ ಭಯ ಭೀತರಾಗುತ್ತಿದ್ದರು.

ಹೀಗೆ ಅರಣ್ಯ ಮತ್ತು ತನ್ನ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆಗೆ ಪಣತೊಟ್ಟು ದುಡಿಯುತ್ತಿದ್ದಂತೆ ಕಾರ್ಬೆಟ್ ಅರವತ್ತನೇ ವರ್ಷಕ್ಕೆ ಕಾಲಿಟ್ಟ. ಇದೇ ವೇಳೆಗೆ 85 ವರ್ಷ ದಾಟಿದ ಅವನ ಹಿರಿಯ ಮಲಸಹೋದರಿ ಡೊಯಲ್ ವೃದ್ಧಾಪ್ಯದ ಕಾರಣದಿಂದ ಮಾನಸಿಕ ಸಮತೋಲನ ಕಳೆದುಕೊಂಡಳು. ಅವಳನ್ನು ನಿಯಂತ್ರಿಸುವುದು ಕಾರ್ಬೆಟ್ ಮತ್ತು ಅವನ ಅಕ್ಕ ಮ್ಯಾಗಿಗೆ ಕಷ್ಟವಾಯಿತು. ಡೊಯಲ್ ಕೆಲವೊಮ್ಮೆ ತೊಟ್ಟಿದ್ದ ಬಟ್ಟೆಯನ್ನು ಕಳಚಿ ಮನೆಯ ಗೇಟ್ ದಾಟಿಬಿಡುತ್ತಿದ್ದಳು. ಇದು ಕಾರ್ಬೆಟ್‌ಗೆ ತೀರಾ ಮುಜುಗರವನ್ನುಂಟು ಮಾಡುತ್ತಿತ್ತು. ಅವಳನ್ನು ನಿಯಂತ್ರಿಸಲು. ಭಾರತೀಯ ಮೂಲದ ನಾಲ್ಕು ಸೇವಕಿಯರನ್ನು ನೇಮಕಮಾಡಿಕೊಂಡಿದ್ದ.  ಡೊಯಲ್ ಒಂದು ವರ್ಷ ಕಾಯಿಲೆಯಿಂದ ಬಳಲಿ ನಂತರ ಅಸುನೀಗಿದಾಗ, ಅಕ್ಕ ತಮ್ಮ ಇಬ್ಬರೂ, ಅವಳ ಸಾವಿನ ಸಂಕಟದ ನಡುವೆಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಡೊಯಲ್ ಸಾವಿನೊಂದಿಗೆ 1857ರ ಸಿಪಾಯಿ ದಂಗೆಗೆ ಸಾಕ್ಷಿಯಾಗಿದ್ದ ಕಡೆಯ ಜೀವವೊಂದು ಕಳಚಿಬಿದ್ದಂತಾಯಿತು. ಕಾರ್ಬೆಟ್‌ನ ತಾಯಿ ಮೇರಿ ಮೊದಲ ಪತಿಯಿಂದ ಪಡೆದಿದ್ದ ಮೂವರು ಮಕ್ಕಳಲ್ಲಿ ಡೊಯಲ್ ಕೂಡ ಒಬ್ಬಳಾಗಿದ್ದಳು. ಮೇರಿಯ ಮೊದಲ ಪತಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆಗ್ರಾದಲ್ಲಿ ನಡೆದ 1857ರ ಸಿಪಾಯಿ ದಂಗೆ  ಹೋರಾಟದಲ್ಲಿ ಭಾರತೀಯ ಸಿಪಾಯಿಗಳ ಕೈಯಲ್ಲಿ ಹತ್ಯೆಯಾದಾಗ, ಬಾಲಕಿಯಾಗಿದ್ದ ಡೊಯಲ್ ತಾಯಿಯ ಜೊತೆ ನೈನಿತಾಲ್ ಗಿರಿಧಾಮ ಸೇರಿಕೊಂಡಿದ್ದಳು. ಕಾರ್ಬೆಟ್‌ನ ಪಾಲಿಗೆ ಹಿರಿಯಕ್ಕನಂತೆ ಇದ್ದ ಈಕೆ ಜೀವನ ಪೂರ್ತಿ ಅವಿವಾಹಿತಳಾಗಿ ಉಳಿದಳು.

ಡೊಯಲ್‌ನ ಸಾವಿನ ನಂತರ ಕಾರ್ಬೆಟ್ ಕುಟುಂಬದಲ್ಲಿ ಮ್ಯಾಗಿ ಮತ್ತು ಕಾರ್ಬೆಟ್ ಮಾತ್ರ ಉಳಿದುಕೊಂಡರು. ಉಳಿದ ಸಹೋದರ ಸಹೋದರಿಯರು ಉದ್ಯೋಗ ನಿಮಿತ್ತ ಇಂಗ್ಲೆಂಡ್, ಆಫ್ರಿಕಾ, ಕೀನ್ಯಾ ಮುಂತಾದ ಕಡೆ ವಲಸೆ ಹೊರಟು ಅಂತಿಮವಾಗಿ ಅಲ್ಲಿಯೇ ನೆಲೆ ನಿಂತರು. ಕಾರ್ಬೆಟ್‌ನಂತೆ ಮ್ಯಾಗಿ ಕೂಡ ಸರಳ ಜೀವನ ಮೈಗೂಡಿಸಿಕೊಂಡಿದ್ದಳು. ಸರಳವಾದ ಉಡುಪುಗಳನ್ನು ಧರಿಸುತ್ತಿದ್ದಳು. ವಿಶೇಷ ಕಾರ್ಯಕ್ರಮಗಳು ಇಲ್ಲವೇ ಔತಣಕೂಟಗಳಿಗೆ ಮಾತ್ರ ಒಳ್ಳೆಯ ಉಡುಪು ಧರಿಸುತ್ತಿದ್ದಳು. ಮನೆಯಲ್ಲಿ ಸೇವಕ, ಸೇವಕಿಯರು ಇದ್ದ ಕಾರಣ ಆಕೆಗೆ ಮನೆಗೆಲಸದ ಒತ್ತಡಗಳು ಇರಲಿಲ್ಲ. ಮ್ಯಾಗಿ ಕೂಡ ಕಾರ್ಬೆಟ್ ನಂತೆ ಹಿಂದಿ ಸೇರಿದಂತೆ ಸ್ಥಳಿಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವುದನ್ನ ಕಲಿತಿದ್ದಳು. ಇದು ಆಕೆಗೆ ಸ್ಥಳೀಯ ಸೇವಕರೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಯಿತು. ಮ್ಯಾಗಿಯ ಬದುಕು ತಮ್ಮನ ಹಾಗೆ ಸರಳತೆಯಿಂದ ಕೂಡಿದ್ದರೂ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮತ್ತು ಶುದ್ಧವಾದ ಗಾಳಿ ಬೆಳಕು ಸದಾ ಮನೆಯೊಳಗೆ ಇರುವಂತೆ ನೋಡಿಕೊಳ್ಳುತ್ತಿದ್ದಳು. ಅದರಂತೆ ಮನೆಯನ್ನು ಆಕೆ ಸದಾ ಸುಸ್ಥಿತಿಯಲ್ಲಿ ಇಟ್ಟಿದ್ದ ಕಾರಣ. ಅವಳು ಮತ್ತು ಕಾರ್ಬೆಟ್ ವಾಸಿಸುತ್ತಿದ್ದ ಗಾರ್ನಿಹೌಸ್ ಬಂಗಲೆ ನೈನಿತಾಲ್ ಪಟ್ಟಣದಲ್ಲಿ ಹೆಸರುವಾಸಿಯಾಗಿತ್ತು.

ಆ ವೇಳೆಗಾಗಲೇ ನೈನಿತಾಲ್ ಪಟ್ಟಣಕ್ಕೆ ವಿದ್ಯುತ್ ಬಂದಿದ್ದರೂ ಕೂಡ ಯಾವುದೇ ಆಡಂಬರದ ಬದುಕು ಅವರದಾಗಿರಲಿಲ್ಲ. ಮನೆಯಲ್ಲಿ ಸಾಕಿಕೊಂಡಿದ್ದ, ಆನೆ, ಕುದುರೆ, ನಾಯಿ, ಬಗೆಬಗೆಯ ಪಕ್ಷಿಗಳು ಇವುಗಳ ಮೇಲ್ವಿಚಾರಣೆಗೆ ಸೇವಕರು, ಅವರ ಕುಟುಂಬಗಳು. ಎಲ್ಲರೂ ಸೇರಿ ಕಾರ್ಬೆಟ್ ಕುಟುಂಬ ಒಂದು ಮಿನಿ ಭಾರತವಿದ್ದಂತೆ ಇತ್ತು. ಸೇವಕರ ಮಕ್ಕಳ ಶಾಲಾ ಶುಲ್ಕ, ಅವರ ಬಟ್ಟೆ, ಪುಸ್ತಕ ಇವುಗಳ ಖರ್ಚನ್ನು ಸ್ವತಃ ಕಾರ್ಬೆಟ್ ಭರಿಸುತ್ತಿದ್ದ. ಮಳೆಗಾಲ ಮತ್ತು ಚಳಿಗಾಲದಲ್ಲಿ ಯಾರಾದರೂ ಕಾಯಿಲೆ ಬಿದ್ದರೆ, ಮನೆಯಲ್ಲಿ ಇರುತ್ತಿದ್ದ ಔಷಧಿಗಳ ಜೊತೆ, ರೋಗಿಗಳನ್ನು ತಾಯಿಯಂತೆ ಉಪಚರಿಸುವ ಗುಣವನ್ನು ಸಹೋದರಿ ಮ್ಯಾಗಿ ಮೈಗೂಡಿಸಿಕೊಂಡಿದ್ದಳು.

ಕಾರ್ಬೆಟ್ ರೂಢಿಸಿಕೊಂಡಿದ್ದ ಪರಿಸರ ರಕ್ಷಣೆಯ ಗುಣದಿಂದಾಗಿ ಅವನಿಗೆ ದೂರದ ದೆಹಲಿಯ ವೈಸ್‌ರಾಯ್ ಕುಟುಂಬವೂ ಸೇರಿದಂತೆ, ಹಲವು ಉನ್ನತ ಅಧಿಕಾರಿಗಳ ಕುಟುಂಬದಿಂದ ಔತಣ ಕೂಟಕ್ಕೆ ಆಹ್ವಾನ ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ತನ್ನ ಅಕ್ಕ ಮ್ಯಾಗಿಯನ್ನು ಕಾರ್ಬೆಟ್ ಜೊತೆಯಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದ. ಔತಣಕೂಟ ತಡರಾತ್ರಿವರೆಗೂ ನಡೆಯುತ್ತಿತ್ತು. ಜಿಮ್ ಕಾರ್ಬೆಟ್ ಅಲ್ಲಿ ಶಿಕಾರಿ ಕಥೆಗಳನ್ನು, ಹಾಗೂ ಅವನು ಬೇಟೆಯಾಡಿದ ನರಹಂತಕ ಚಿರತೆಗಳ ಕಥೆಯನ್ನು ರೋಮಾಂಚಕಾರಿಯಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ. ಅವನ ಸಾಹಸದ ಕಥೆಗಳನ್ನು ಇಡೀ ಶರೀರವನ್ನು ಕಿವಿಯಾಗಿಸಿಕೊಂಡು ಅಧಿಕಾರಿಗಳ ಕುಟುಂಬದ ಸದಸ್ಯರು ಆಲಿಸುತ್ತಿದ್ದರು. ಇಂತಹ ಅದ್ಬುತ ರೋಮಾಂಚಕಾರಿ ಕಥನಗಳನ್ನು ನೀವು ಏಕೆ ಬರೆದು ದಾಖಲಿಸಬಾರದು? ಎಂಬ ಪ್ರಶ್ನೆ ಅಧಿಕಾರಿಯೋರ್ವನ ಪತ್ನಿಯಿಂದ ಬಂದಾಗ, ಆಕ್ಷಣಕ್ಕೆ  ಕಾರ್ಬೆಟ್‌ಗೆ ಹೌದೆನಿಸಿತು. ಹೌದು ಬರೆಯಲೇ ಬೇಕು. ಬರೆಯುತ್ತೀನಿ ಎಂದು ಆಕೆ ಆಶ್ವಾಸನೆ ನೀಡಿದ. ಹಾಗಾಗಿ ಕಾರ್ಬೆಟ್ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಅನುಭವಗಳನ್ನು ದಾಖಲಿಸಲು ನಿರ್ಧರಿಸಿದ.

1931ರ “ದ ಹಂಟರ್ ಆನ್ಯುಯಲ್” ಎಂಬ ಪತ್ರಿಕೆಯಲ್ಲಿ ಕಾರ್ಬೆಟ್ ’ಪಿಪಾಲ್ ಪಾನಿ ಟೈಗರ್’ ಎಂಬ ಹುಲಿಯೊಂದನ್ನು ಬೇಟೆಯಾಡಿದ ಪ್ರಸಂಗವನ್ನು ಪ್ರಥಮವಾಗಿ ಬರೆದು ಪ್ರಕಟಿಸಿದ. ಈ ರೋಚಕ ಅನುಭವಕ್ಕೆ ಪೂರಕವಾಗಿ ಪತ್ರಿಕೆಯ ಸಂಪಾದಕ ಶಿಕಾರಿ ಕುರಿತಂತೆ ಅರ್ಥಪೂರ್ಣ ಲೇಖನವೊಂದನ್ನು ಸಹ ಬರೆದಿದ್ದ. ಇದರಿಂದಾಗಿ ಕಾರ್ಬೆಟ್‌ನ ಮೊದಲ ಬರಹಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಜೊತೆಗೆ ಅವನಿಗ ಬರವಣಿಗೆ ಕುರಿತಾಗಿ ಆತ್ಮವಿಶ್ವಾಸ ಹೆಚ್ಚಿಸಿತು. ನಂತರ ನೈನಿತಾಲ್ ಗಿರಿಧಾಮದಲ್ಲಿ ಪ್ರಕಟವಾಗುತ್ತಿದ್ದ “ನೈನಿತಾಲ್ ರಿವ್ಯೂ ಆಪ್ ದ ವೀಕ್ಲಿ” ಪತ್ರಿಕೆಗೆ ಪರಿಸರ ರಕ್ಷಣೆ ಮತ್ತು ಕುಮಾವನ್ ಪ್ರಾಂತ್ಯದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರಂತರವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ. ಈ ಪತ್ರಿಕೆ ನೈನಿತಾಲ್ ಗಿರಿಧಾಮದ ಆಂಗ್ಲ ಸಮುದಾಯದಲ್ಲಿ ಜನಪ್ರಯತೆ ಪಡೆದಿತ್ತು. ಅಲ್ಲದೆ, ಬೇಸಿಗೆಯಲ್ಲಿ ನೈನಿತಾಲ್‌ಗೆ ಬರುತ್ತಿದ್ದ ದೆಹಲಿಯ ಬ್ರಿಟಿಷ್ ಅಧಿಕಾರಿಗಳು ಈ ಪತ್ರಿಕಗೆ ಚಂದದಾರರಾಗಿದ್ದರು. ಕಾರ್ಬೆಟ್ ಪತ್ರಿಕೆಯಲ್ಲಿ ಏನೇ ಬರೆದರೂ ಅದು ದೂರದ ದೆಹಲಿಗೆ ತಲುಪುತಿತ್ತು.

ಈ ವೇಳೆಯಲ್ಲಿ ಭಾರತ ಉಪಖಂಡದ ಗೌರ್ನರ್ ಆಗಿದ್ದ ಸರ್ ಮಾಲ್ಕಮ್‌ ಹೈಲಿ ಎಂಬಾತ ಭಾರತದ ಅರಣ್ಯಗಳನ್ನು ಸಂರಕ್ಷಿಸುವ ಕುರಿತಂತೆ ಗಂಭೀರವಾಗಿ ಆಲೋಚನೆ ಮಾಡಿ, ಜಿಮ್ ಕಾರ್ಬೆಟ್ ಮತ್ತು ಆರ್ಕ್ಷ್‌ಪರ್ಡ್ ವಿ.ವಿ.ಯ ಕಾನೂನು ಪದವೀಧರ ಹಸನ್ ಅಬಿದ್ ಜಪ್ರಿ ಇವರನ್ನು ಭಾರತೀಯ ವನ್ಯ ಮೃಗ ರಕ್ಷಣೆ ಕುರಿತ ಇಲಾಖೆಗೆ ಗೌರವ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ. ಅಬಿದ್ ಜಪ್ರಿ ಕಾನೂನು ಪದವೀಧರನಾಗಿದ್ದ. ಕಾರ್ಬೆಟ್ ಅರಣ್ಯ ಮತ್ತು ವನ್ಯ ಜೀವಿಗಳ ತಜ್ಞನಾದುದರ ಫಲವಾಗಿ ಈ ಇಬ್ಬರೂ ತಜ್ಞರು ವನ್ಯ ಮೃಗ ರಕ್ಷಣೆಗೆ  ಕಾನೂನು ಸೇರಿದಂತೆ ಹಲವಾರು ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದರು.

‘ಇಂಡಿಯನ್ ವೈಲ್ಡ್ ಲೈಪ್’ ಹೆಸರಿನ ಪತ್ರಿಕೆಯೊಂದನ್ನು ರೂಪಿಸಿ, ಅಬಿದ್ ಜಪ್ರಿ ಸಂಪಾದಕತ್ವದಲ್ಲಿ ಪ್ರಕಟಿಸಲು ಆರಂಭಿಸಿದರು. ಈ ಪತ್ರಿಕೆಯಲ್ಲಿ ಭಾರತದ ಉಷ್ಣವಲಯದ ಅರಣ್ಯ ಮತ್ತು ಅವುಗಳ ವೈಶಿಷ್ಟ್ಯ, ಅಲ್ಲಿ ವಾಸಿಸುವ ಪ್ರಾಣಿಗಳ ವೈವಿಧ್ಯತೆ ಮತ್ತು ಅವುಗಳ ಜೀವನ ಚಕ್ರ ಹೀಗೆ ಎಲ್ಲಾ ಮಾಹಿತಿಗಳು ಇರುತ್ತಿದ್ದವು. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಪಾಲಿಗೆ ಮಾರ್ಗದರ್ಶಿಯಂತಿತ್ತು.
ಗೌರ್ನರ್ ಸರ್ ಮಾಲ್ಕಮ್ ಹೈಲಿ ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳವನಾಗಿದ್ದ. ಇದರ ಸದುಪಯೋಗ ಪಡಿಸಿಕೊಂಡ ಕಾರ್ಬೆಟ್, ಕಲದೊಂಗಿ ಮತ್ತು ಚೋಟಿ ಹಲ್ದಾನಿಗೆ ಸನೀಹದಲ್ಲಿ ಇದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಅಭಯಾರಣ್ಯವಾಗಿ ಮಾರ್ಪಡಿಸುವ ಪ್ರಸ್ತಾಪವನ್ನು ಗೌರ್ನರ್ ಮುಂದಿಟ್ಟ. ಭಾರತದಂತಹ ಸೀಮಿತ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರ್ಬೆಟ್ ಇಂತಹ ಕೃತ್ಯಗಳಿಂದ ಅರಣ್ಯದಲ್ಲಿ ವನ್ಯಮೃಗಗಳ ಸಮತೋಲನ ಕಾಯ್ದುಕೊಳ್ಳುವುದು ಕಷ್ಟ ಎಂಬ ವಿಷಯವನ್ನು ಮಾಲ್ಕಮ್ ಹೈಲಿ ಮನವರಿಕೆ ಮಾಡಿಕೊಟ್ಟ. ಉತ್ತರ ಭಾರತದ ಅರಣ್ಯಗಳಲ್ಲಿ ಮೋಜಿಗಾಗಿ ಹಲವಾರು ಸಂಸ್ಥಾನಗಳ ಮಹಾರಾಜರು ಮತ್ತು ಬ್ರಿಟಿಷ್ ಅಧಿಕಾರಿಗಳು ಬೇಟೆಯಾಡುತ್ತಿರುವುದನ್ನು ಕಂಡು ಸ್ವತಃ ಅರಣ್ಯಾಧಿಕಾರಿಗಳ ಜಗಳವಾಡಿ ಮನಸ್ತಾಪ ಕಟ್ಟಿಕೊಂಡಿದ್ದ ಜಿಮ್ ಕಾರ್ಬೆಟ್‌ಗೆ, ಭಾರತದಲ್ಲಿ ಆಯ್ದ ಕೆಲವು ಅರಣ್ಯ ಪ್ರದೇಶಗಳನ್ನು ಕನಿಷ್ಟ ಐದು ವರ್ಷಗಳ “ಕಾಲ ಅಭಯಾರಣ್ಯೆ” ಎಂದು ಘೋಷಿಸಿ ಪ್ರಾಣಿಗಳ ಬೇಟೆಯನ್ನು ನಿಷೇಧಿಸಬೇಕು ಎಂಬುದು ಅವನ  ಮಹದಾಸೆಯಿತ್ತು.

ಆಫ್ರಿಕಾದ ಅರಣ್ಯಗಳಲ್ಲಿ ಬೇಟೆಯಾಡಿ ಅನುಭವವಿದ್ದ ಕಾರ್ಬೆಟ್‌ಗೆ ಅಲ್ಲಿನ ಲಕ್ಷಾಂತರ ಹೆಕ್ಟೇರ್ ಪ್ರದೇಶದ ವಿಸ್ತೀರ್ಣದ ಬಗ್ಗೆ ಮತ್ತು ಭಾರತದ ಸೀಮಿತ ಅರಣ್ಯ ಪ್ರದೇಶದ ವೈವಿಧ್ಯಮಯ ಸಸ್ಯ ಸಂಪತ್ತು, ವನ್ಯ ಜೀವಿಗಳ ಕುರಿತು ಮಾಹಿತಿ ಇತ್ತು. ಇದನ್ನು ಗೌರ್ನರ್‌ಗೆ ಮನವರಿಕೆ ಮಾಡಿಕೊಟ್ಟ. ಇದರ ಫಲವಾಗಿ ಕಲದೊಂಗಿ ಸಮೀಪದ ಮುನ್ನೂರು ಚದುರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ 1934ರಲ್ಲಿ ಅಭಯಾರಣ್ಯ ಎಂದು ಅಧಿಕೃತವಾಗಿ ಘೋಷಿಸಿತು. ಈ ಅರಣ್ಯದ ನಡುವೆ ರಾಮಗಂಗಾ ನದಿ ಹರಿಯುತ್ತಿದ್ದು, ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಊರಿಗೆ ರಾಮ್‌ನಗರ್ ಎಂಬ ಹೆಸರು ಬಂದಿದೆ. ಈಗ ಪಟ್ಟಣವಾಗಿ ಬೆಳೆದಿರುವ ರಾಮ್‌ನಗರ್‌ನಲ್ಲಿ ಅಭಯಾರಣ್ಯದ ಉಸ್ತುವಾರಿ ನೋಡಿಕೊಳ್ಳಲು ಅರಣ್ಯ ಕಚೇರಿಯನ್ನು ತೆರೆಯಲಾಗಿದೆ.

1974ರಲ್ಲಿ ರಾಮಗಂಗಾ ನದಿಗೆ ಅಣೆಕಟ್ಟು ನಿರ್ಮಿಸಿದರ ಫಲವಾಗಿ 54 ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನಿರಿನಲ್ಲಿ ಮುಳುಗಡೆಯಾಯಿತು. ಈ ನಷ್ಟವನ್ನು ಸರಿದೂಗಿಸಲು ಭಾರತ ಸರ್ಕಾರ ಮತ್ತೇ ಇನ್ನೂರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅಭಯಾರಣ್ಯಕ್ಕೆ ಸೇರ್ಪಡೆ ಮಾಡಿತು. 1955ರಲ್ಲಿ ಜಿಮ್ ಕಾರ್ಬೆಟ್ ನಿಧನ ಹೊಂದಿದ ನಂತರ 1957ರಲ್ಲಿ ಹುಲಿಗಳ ರಕ್ಷಿತ ತಾಣವಾಗಿದ್ದ ಈ ಪ್ರದೇಶವನ್ನು ಜಿಮ್ ಕಾರ್ಬೆಟ್ ಅಭಯಾರಣ್ಯ ಎಂದು ಭಾರತ ಸರ್ಕಾರ ನಾಮಕರಣ ಮಾಡಿದೆ. ವಾಸ್ತವವಾಗಿ ಜಿಮ್ ಕಾರ್ಬೆಟ್‌ಗಿಂತ ಮೊದಲು ಈ ಪ್ರಾಂತ್ಯದಲ್ಲಿ ಅರಣ್ಯಾಧಿಕಾರಿಗಳಾಗಿದ್ದ ಇ.ಆರ್.ಸ್ಟೀವನ್ ಮತ್ತು ಇ.ಎ.ಸ್ಮಿತೀಸ್ ಎಂಬುವರು ಈ ಅರಣ್ಯ ಪ್ರದೇಶವನ್ನು ಆಭಯಾರಣ್ಯ ಎಂದು ಘೋಷಿಸಲು ಸರ್ಕಾರಕ್ಕೆ 1924 ಮತ್ತು 1927ರಲ್ಲಿ ಶಿಫಾರಸ್ಸು ಮಾಡಿದ್ದರು. ಆದರೆ, ಕಾರ್ಬೆಟ್‌ನ ಆತ್ಮೀಯ ಗೆಳೆಯ ಹಾಗೂ ತಾಂಜೇನಿಯಾದ ಕೃಷಿ ತೋಟದ ಪಾಲುದಾರ, ವಿಂದಮ್ ಕುಮಾವನ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿದ್ದ ವೇಳೆ ಇವರ ಶಿಫಾರಸ್ಸುಗಳನ್ನ ತಿರಸ್ಕರಿಸಿದ್ದನು. ಏಕೆಂದರೆ, ಸ್ವತಃ ಬೇಟೆಗಾರನಾಗಿದ್ದ ವಿಂದಮ್‌ಗೆ ವನ್ಯಮೃಗಗಳ ಶಿಕಾರಿ ಎಂಬುದು ಹವ್ಯಾಸವಾಗಿರದೆ ವ್ಯಸನವಾಗಿತ್ತು. ಅಂತಿಮವಾಗಿ ಆ ಇಬ್ಬರು ಅಧಿಕಾರಿಗಳ ಕನಸು ಕಾರ್ಬೆಟ್ ಮೂಲಕ ನೆನಸಾಯಿತು.

ಈಗ ಉತ್ತರಾಂಚಲ ರಾಜ್ಯಕ್ಕೆ ಸೇರಿರುವ ಜಿಮ್ ಕಾರ್ಬೆಟ್ ಅಭಯಾರಣ್ಯಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ರಾಮ್‌ನಗರ್ ಪಟ್ಟಣದಲ್ಲಿರುವ ಅರಣ್ಯ ಕಚೇರಿಯಲ್ಲಿ ಅನುಮತಿ ಪಡೆದು ಇಲಾಖೆ ನೀಡುವ ವಾಹನವನ್ನು ಬಾಡಿಗೆ ಪಡೆದು ಅರಣ್ಯವನ್ನು ವೀಕ್ಷಣೆ ಮಾಡಬಹುದು. ಅರಣ್ಯ ಸಫಾರಿಗೆ ನಮ್ಮ ಜೊತೆಯಲ್ಲಿ ಒಬ್ಬ ಅರಣ್ಯ ರಕ್ಷಕನನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು. ಐದು ಜನರ ವಾಹನ ಶುಲ್ಕ 1,200 ರೂಪಾಯಿ, ಅರಣ್ಯ ರಕ್ಷಕನ ಶುಲ್ಕ 300 ರೂ. ಮತ್ತು ಅರಣ್ಯ ಭೇಟಿ ಶುಲ್ಕ 250 ರೂ.ಗಳನ್ನು ಪ್ರವಾಸಿಗರಿಂದ ವಸೂಲಿ ಮಾಡಲಾಗುತ್ತಿದೆ. ಯಾವುದೇ ಆಹಾರ, ಬೆಂಕಿಪೊಟ್ಟಣ, ಸಿಗರೇಟ್  ಮುಂತಾದವುಗಳಿಗೆ ನಿಷೇಧ ಹೇರಲಾಗಿದೆ. ಅಲ್ಲಿನ ಅರಣ್ಯ ಇಲಾಖೆ ಪ್ರವಾಸಿಗರಿಂದ ಅಪಾರ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದರೂ ಕೂಡ, ಅಭಯಾರಣ್ಯ ಪ್ರದೇಶವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಲ್ಲಿ ಸೋತಿದೆ. ಅಲ್ಲಿನ ಅಧಿಕಾರಿಗಳು, ಸಫಾರಿಗೆ ಬಳಸುವ ಖಾಸಾಗಿ ವಾಹನಗಳ ಮಾಲೀಕರ ಜೊತೆ ಕೈ ಜೋಡಿಸಿ, ಪ್ರವಾಸಿಗರಿಂದ ಹಣ ಸುಲಿಯುವುದರಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ. ಇದು ಜಿಮ್ ಕಾರ್ಬೆಟ್‌ನಂತಹ ಅಪ್ರತಿಮ ವ್ಯಕ್ತಿಗೆ ಅಲ್ಲಿನ ಸರ್ಕಾರ ಮಾಡುತ್ತಿರುವ ಅಪಮಾನವಲ್ಲದೆ, ಬೇರೇನೂ ಅಲ್ಲ.

                                                                              (ಮುಂದುವರಿಯುವುದು)

ಒಂದು ಪ್ರಶಸ್ತಿ ಹಾಗೂ ಒಂದು ಆಶಾವಾದ

– ಹರ್ಷಕುಮಾರ್ ಕುಗ್ವೆ

ದೇಶದ ಪ್ರಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಸ್ಥಾಪಿಸಿದ ಕೌಂಟರ್ ಮೀಡಿಯಾ ಪ್ರಶಸ್ತಿಯು ಗೆಳೆಯ ಟಿ.ಕೆ. ದಯಾನಂದ ಮತ್ತು ವಿ. ಗಾಯತ್ರಿಯವರಿಗೆ ಸಿಕ್ಕಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಪ್ರೋತ್ಸಾಹಕ್ಕಾಗಿ ಪಿ. ಸಾಯಿನಾಥ್ ಅವರು ತಮ್ಮ “ಬರಗಾಲ ಅಂದರೆ ಎಲ್ಲರಿಗೂ ಇಷ್ಟ” ಎಂಬ ಕೃತಿಗೆ ಬಂದ ಸಂಭಾವನೆ ಹಣದಿಂದ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಪತ್ರಿಕೋದ್ಯಮವನ್ನು ಸಮಾಜದ ಪ್ರಗತಿ, ಉನ್ನತಿಗಾಗಿ ಇರುವ ಒಂದು ಸಾಧನ ಎಂದು ಯೋಚಿಸುವವರ ಪಾಲಿಗೆ ಇದೊಂದು ಸಂತೋಷದ ವಿಷಯ.

ಇಂದು ದೇಶದ ಉದ್ದಗಲಕ್ಕೂ ಪಿ. ಸಾಯಿನಾಥ್ ಅವರು ಚಿರಪರಿಚಿತ. ‘ದೇಶದ ಎಲ್ಲ ಇಂಗ್ಲಿಷ್ ಪತ್ರಿಕೆಗಳೂ ಸಮಾಜದ ಮೇಲ್ದರ್ಜೆಯ ಶೇಕಡ 5 ಜನರಿಗಾಗಿ ಲೇಖನಗಳನ್ನು ಬರೆಯುತ್ತವೆ. ನಾನು ತೀರ ಕೆಳದರ್ಜೆಯ ಶೇಕಡ 5 ಜನರಿಗಾಗಿ ಬರೆಯುತ್ತೇನೆ,’ ಎಂಬ ಧ್ಯೇಯವನ್ನಿಟ್ಟುಕೊಂಡೇ ಪತ್ರಿಕಾರಂಗದಲ್ಲಿ ಕೃಷಿ ಮಾಡಿರುವವರು ಸಾಯಿನಾಥ್. ಮೊದಲಿಗೆ ಬ್ಲಿಟ್ಝ್, ನಂತರ ಟೈಮ್ಸ್ ಆಫ್ ಇಂಡಿಯಾಗಳಲ್ಲಿ ವರದಿಗಾರರಗಿ ಕೆಲಸ ಮಾಡಿ ಈಗ ದಿ ಹಿಂದೂ ಪತ್ರಿಕೆಯಲ್ಲಿ ಗ್ರಾಮೀಣ ವಿಭಾಗದ ಸಂಪಾದಕರಾಗಿರುವ ಪಿ. ಸಾಯಿನಾಥ್ ತಮ್ಮ ಬರಹಗಳ ಮೂಲಕ ಪ್ರಕಾಶಿಸುತ್ತಿರುವ ಭಾರತದ ಗ್ರಾಮೀಣ ಬದುಕಿನ ದುಸ್ಥಿತಿಗಳನ್ನು ಒಂದೊಂದಾಗಿ ತೆರೆದಿಟ್ಟು ಎಲ್ಲರನ್ನೂ ದಂಗುಬಡಿಸಿದವರು. ದೇಶದ ನೂರಾರು ಹಳ್ಳಿಗಳನ್ನು ಸುತ್ತಾಡುತ್ತಾ ಕಳೆದ ಒಂದೆರಡು ದಶಕಗಳಲ್ಲಿ ಒಂದೂವರೆ ಲಕ್ಷ ನೇಗಿಯೋಗಿಗಳು ಪ್ರಾಣ ಕಳೆದುಕೊಳ್ಳಲು ಇರುವ ಕಾರಣಗಳನ್ನು ಅಧ್ಯಯನ ನಡೆಸಿದವರು. ಶ್ರೀಸಾಮಾನ್ಯನ ಪರವಾದ ಘೋಷಣೆ ಕೂಗುತ್ತಲೇ ಗದ್ದುಗೆಗೇರುವ ಸರ್ಕಾರಗಳು ಅಧಿಕಾರದಲ್ಲಿ ಅದೇ ಶ್ರೀಸಾಮಾನ್ಯನ ಬದುಕನ್ನೇ ಕಿತ್ತುಕೊಳ್ಳುವಂತೆ ಮಾಡುವ ನೀತಿ ರೀತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟವರು. ಜನಸಾಮಾನ್ಯರಿಗೆ ತೆರಿಗೆಯ ಹೊರೆಯನ್ನು ವಿಪರೀತ ಹೊರಿಸುತ್ತಲೇ ಕಾರ್ಪೊರೇಟ್ ವಲಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ವಿನಾಯತಿ ನೀಡುತ್ತಾ ಬರುವ ಆಳುವವರ ಇಬ್ಬಂದಿತನವನ್ನು ಅಂಕಿ ಅಂಶಗಳ ಸಮೇತ ಬಿಚ್ಚಿಡುತ್ತಿರುವವರು.

ದೇಶದ ಹಳ್ಳಿಗಳು ಎದುರಿಸುವ ಬರಗಾಲ ಮತ್ತು ರೈತರ ಸಂಕಷ್ಟಗಳ ಕುರಿತು ಅಷ್ಟೊಂದು ಆಳವಾಗಿ ಅಧ್ಯಯನ ಮಾಡಿ ಬರೆದ ಮತ್ತೊಬ್ಬ ಲೇಖಕನಿಲ್ಲ. ಉನ್ನತ ಕೌಟುಂಬಿಕ ಹಿನ್ನೆಲೆಯಿಂದ ಬಂದೂ ಸಮಾಜದ ದುರ್ಬಲ ಜನರಿಗಾಗುತ್ತಿರುವ ಅನ್ಯಾಯದ ಬಗ್ಗೆ ಬರೆದು ಸಮಾಜವನ್ನೂ ಎಚ್ಚರ ಸ್ಥಿತಿಯಲ್ಲಿಡಲು ಶ್ರಮಿಸುತ್ತಿರುವ ಪಿ. ಸಾಯಿನಾಥ್ ಇಂದು ದೇಶದ ಉದ್ದಗಲಕ್ಕೂ ಸಾವಿರಾರು ಬರೆಹಗಾರರ, ಪತ್ರಕರ್ತರ ಪಾಲಿನ ಮಾರ್ಗದರ್ಶಿ.

ಪಿ. ಸಾಯಿನಾಥ್ ಅವರ “ಬರಗಾಲ ಅಂದರೆ ಎಲ್ಲರಿಗೂ ಇಷ್ಟ” ಕೃತಿಯನ್ನೋದಿದ್ದೇ ತಾನೂ ಸಾಯಿನಾಥ್ ಇಟ್ಟ ಹೆಜ್ಜೆಯ ಜಾಡಿನಲ್ಲೇ ಸಾಗಬೇಕು ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡು ಕಾರ್ಯತತ್ಪರನಾಗಿದ್ದು ಟಿ.ಕೆ. ದಯಾನಂದ್. ತುಮಕೂರಿನ  ಸ್ಲಂ ಒಂದರಲ್ಲಿ ಹುಟ್ಟಿ ಬಡತನ, ಜಾತಿಬೇಧಗಳ ಎಲ್ಲಾ ಮಜಲುಗಳನ್ನೂ ಅನುಭವಿಸಿ ಅದರ ನಡುವೆಯೇ  ಕಾಲೇಜು ಶಿಕ್ಷಣವನ್ನೂ ಪಡೆದು ಸಾಮಾಜಿಕ ಕ್ರಿಯೆ ಮತ್ತು ಪತ್ರಿಕೋದ್ಯಮಕ್ಕೆ ಧುಮುಕಿದ್ದ ದಯಾನಂದ್ ಕಳೆದ ಒಂದೂವರೆ ವರ್ಷದಿಂದ ಎಡೆಬಿಡದೆ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯವಾದದ್ದು. ವರ್ಷದ ಹಿಂದೆ ಹಾವೇರಿ ಜಿಲ್ಲೆಯ ಸವಣೂರಿನ ಭಂಗಿ ಸಮುದಾಯವು ಮಲಸ್ನಾನ ಮಾಡಿದ್ದನ್ನು ಮಾಧ್ಯಮಗಳಲ್ಲಿ ನೋಡಿ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಈ ಘಟನೆಯ ಬೆನ್ನುಬಿದ್ದು ಹೊರಟ ದಯಾನಂದ, ಚಂದ್ರಶೇಕರ್, ಪುರು, ಪತ್ರು ಪಿಯುಸಿಎಲ್ ನ ರಾಜೇಂದ್ರ ಅವರು ರಾಜ್ಯದ ಮುಂದೆ ಆಘಾತಕಾರಿ ಅಂಶಗಳನ್ನು ಅನಾವರಣಗೊಳಿಸಿದರು. ಪ್ರತಿ ಜಿಲ್ಲೆಯ ನಗರ ಹಳ್ಳಿಗಳಲ್ಲಿ ಕ್ಯಾಮೆರಾಗಳನ್ನು ಹಿಡಿದುಕೊಂಡು ಹೋಗಿ ಕಾನೂನಿನಲ್ಲಿ ದಶಕದ ಕೆಳಗೇ ನಿಷೇಧವಾಗಿರುವ ಈ ಕ್ಷಣದಲ್ಲೂ ಎಷ್ಟು ಅವ್ಯಾಹತವಾಗಿದೆ ಎಂಬುದನ್ನು ಬಯಲುಗೊಳಿಸಿದರು. ರಾಜ್ಯದಲ್ಲಿ ಮಲಹೊರುವ ಕೆಲಸದಲ್ಲಿ ತೊಡಗಿರುವ ಲಕ್ಷಾಂತರ ಜನರಿದ್ದಾರೆ ಮತ್ತು ಅವರಿಗೆ ಅದೆಷ್ಟು ಅನಿವಾರ್ಯ ಕೆಲಸವಾಗಿ ನಮ್ಮ ವ್ಯವಸ್ಥೆ ಮಾಡಿದೆ ಎಂಬುದನ್ನು ಸಾಕ್ಷಿ ಪುರಾವೆಗಳ ಸಮೇತ ಬಹಿರಂಗಪಡಿಸದರು. ಮಾತ್ರವಲ್ಲ ಮಲಹೊರುತ್ತಿರುವವರು ಹುಳುಗಳಂತೆ ಸಾಯುತ್ತಿದ್ದರೂ ನಾಗರೀಕ ಸಮಾಜ ಮತ್ತು ಮುಖ್ಯವಾಹಿನಿ ಮಾದ್ಯಮಗಳು ಕುರುಡಾಗಿರುವುದು ಇವರ ಪರಿಶೋಧನೆಗಳಿಂದ ತಿಳಿದುಬಂದಿತು.  ಮೊದಲಿಗೆ ಕೆಂಡಸಂಪಿಗೆ, ಸಂಪಾದಕೀಯ, ವರ್ತಮಾನ ದಂತಹ ಅಂತರ್ಜಾಲ ತಾಣಗಳಲ್ಲಿ ಈ ವಿಷಯ ಪ್ರಕಟಗೊಂಡು ನಂತರ ಇತರೆ ಮುಖ್ಯವಾಹಿನಿ ಮಾಧ್ಯಮಗಳೂ ಆ ಕಡೆ ಗಮನ ಹರಿಸುವಂತಾಯಿತು.  ಕೆಂಡಸಂಪಿಗೆಯಲ್ಲಿ “ರಸ್ತೆ ನಕ್ಷತ್ರ” ಎಂಬ ಲೇಖನ ಸರಣಿಯೊಂದು ಹಲವು ವಾರಗಳ ಕಾಲ ಸದ್ದಿಲ್ಲದೆ ಪ್ರಕಟವಾಯಿತು. ನಾಗರೀಕ ಸಮಾಜದ ಕಣ್ಣೆದುರಿಗೇ ದಿನನಿತ್ಯ ಅತ್ಯಂತ ದುರ್ಭರ ಬದುಕು ಸಾಗಿಸುವ ಅನೇಕರ ಬದುಕುಗಳ ಅನಾವರಣಗೊಳಿಸುವ ಸಂದರ್ಶನದ ಸರಣಿ ಅದು. ದಯಾನಂದ್ ಅದ್ಭುತವಾಗಿ ಬರಹ ರೂಪಕ್ಕೆ ಇಳಿಸುತ್ತಿದ್ದ ಆ ಬರೆಹಗಳು ನಮ್ಮ ಬಗ್ಗೆ ನಮಗೇ ನಾಚಿಕೆಯುಂಟು ಮಾಡಬಲ್ಲಂತವು, ಹೃದಯವನ್ನೇ ಕಲಕಿಸಿಬಿಡುವಂತವು. ಕಣ್ಣೀರು ಉಕ್ಕಿಸಬಲ್ಲಂತವು. ಪತ್ರಿಕೋದ್ಯಮ ಮತ್ತು ಆಕ್ಟಿವಿಸಂ ಎರಡರ ಪರಿಚಯವಿರುವ ದಯಾನಂದರ ಬರಹಗಳು ಹೊಸ ಬಗೆಯ ಅನುಭವವವನ್ನೇ ನೀಡುತ್ತವೆ. ಸಮಾಜಮುಖಿ ಚಿಂತನೆಗೆ ಬರೆಹ  ಮತ್ತು ಪತ್ರಿಕೋದ್ಯಮ ಒದಗಿಸಬಹುದಾದ ಶಕ್ತಿಯ ಸಾಧ್ಯತೆಗಳನ್ನು ದಯಾನಂದ್ ತೋರಿಸಿದ್ದಾರೆ.

ಪತ್ರಕರ್ತೆ ವಿ. ಗಾಯತ್ರಿಯವರು ರಾಜ್ಯದಲ್ಲಿ ಅವ್ಯಾಹತವಾಗಿ ನಡೆದಿರುವ ರೈತರ ಆತ್ಮಹತ್ಯೆಗಳ ಬೆನ್ನುಬಿದ್ದು ತಳಮಟ್ಟದ ವರದಿ ವಿಶ್ಲೇಷಣೆ ನಡೆಸಿದವರು.

ಇಂದು ನಮ್ಮ ಮಾದ್ಯಮಗಳು ಬಿತ್ತರಗೊಳಿಸುವ ಒಂದೊಂದೂ ಸುದ್ದಿಯೂ ಒಂದೊಂದು ಮನರಂಜನೆಯಾಗಿದೆ. ಅಲ್ಲಿ ರೋಚಕತೆ, ಅತಿರಂಜನೆ ಇವೆಲ್ಲಾ ಇರದಿದ್ದರೆ ಅದು ಪತ್ರಿಕೋದ್ಯಮವೇ ಅಲ್ಲ ಎಂಬ ಮನೋಭಾವನೆ ಇಂದು ಬಂದುಬಿಟ್ಟಿದೆ. ಹಳ್ಳಿಗಳಲ್ಲಿ ಕ್ರೈಂ ವರದಿಗಳು ಬಿಟ್ಟರೆ ಇನ್ಯಾವುದೂ ನಮ್ಮ ಮಾಧ್ಯಮಗಳಿಗೆ ಸುದ್ದಿಯಾಗಿ ಉಳಿದಿಲ್ಲ. ಒಂದೊಮ್ಮೆ ಗಂಭೀರ ವಿಷಯಗಳನ್ನು ಅಪರೂಪಕ್ಕೆ ವರದಿ ಮಾಡಿದರೂ ಅವುಗಳ ಫಾಲೋ ಅಪ್ ಎಂಬುದೇ ಇರುವುದಿಲ್ಲ. ಎಲ್ಲೋ ಒಂದಷ್ಟು ನಗರವಾಸಿ ಮಧ್ಯಮ ವರ್ಗದ ಮನೆಗಳ ಜನರು ನೋಡುವ ಕಾರ್ಯಕ್ರಮಗಳನ್ನೇ ಮಾನದಂಟವಾಗಿಟ್ಟುಕೊಂಡ ಅವೈಜ್ಞಾನಿಕ ಟಿ.ಆರ್.ಪಿ ಎಂಬುದು ದೃಶ್ಯ ಮಾಧ್ಯಮಗಳ ಕಾರ್ಯಕ್ರಮಗಳನ್ನು ನಿರ್ಧರಿಸುತ್ತಿದೆ. ಕಾಸಿಗಾಗಿ ಬರುವ ಸುದ್ದಿಗಳು ಮುಖಪುಟಗಳಲ್ಲಿ ರಾರಾಜಿಸುತ್ತವೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮದ ಘನತೆ ಹೆಚ್ಚಿಸುವ ಕೆಲಸವನ್ನು ಒಂದಷ್ಟು ಜನರಾದರೂ ಮಾಡುತ್ತಿದ್ದರೆ ಅದೇ ಬಹುದೊಡ್ಡ ಆಶಾವಾದ. ಈ ಯಾದಿಯಲ್ಲಿ ಮುನ್ನಡೆದಿರುವ ದಯಾನಂದ ಟಿ.ಕೆ .ಮತ್ತು ವಿ. ಗಾಯತ್ರಿಯವರಿಗೆ ಕೌಂಟರ್ ಮಿಡಿಯಾ ಪ್ರಶಸ್ತಿ ಲಭಿಸಿರುವುದಕ್ಕೆ ನಾವೆಲ್ಲರೂ ಸಂಭ್ರಮಿಸಲು ಸಾಕಷ್ಟು ಕಾರಣವಿದೆ.