Monthly Archives: August 2012

ನಿಜವನ್ನು ಎತ್ತಿಹಿಡಿಯಲಾಗದ, ಸುಳ್ಳನ್ನು ಖಂಡಿಸಲಾಗದ ಪರಿಸ್ಥಿತಿ


-ಬಿ. ಶ್ರೀಪಾದ್ ಭಟ್


 

ಸತ್ಯವನ್ನು ಮಾತನಾಡುವುದು ಯಾವಾಗಲೂ ಕ್ರಾಂತಿಕಾರಿ ಕೆಲಸವೇ. – ಗ್ರಾಮ್ಷಿ

ಫ್ರೊ.ಜಿ.ಹರಗೋಪಾಲ್, ಕನ್ನಾಬಿರಾನ್, ಫ್ರೊ.ಬಾಲಗೋಪಾಲ್; ಈ ಪ್ರಗತಿಪರ ಚಿಂತಕರು, ಮಾನವತಾವಾದಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಬಗೆಗೆ ಮಾತನಾಡಬೇಕಾದಾಗಲೆಲ್ಲ ಒಬ್ಬರನ್ನು ಬಿಟ್ಟು ಇನ್ನೊಬ್ಬರ ಬಗೆಗೆ ಮಾತನಾಡುವುದು ಕಷ್ಟ. ಅಷ್ಟರ ಮಟ್ಟಿಗೆ ಇವರು ನಮ್ಮೊಂದಿಗೆ ಬೆರೆತು ಹೋಗಿದ್ದಾರೆ. ಇವರ ಚಿಂತನೆಗಳು ಕೇವಲ ಪುಸ್ತಕದ ಓದಿನಿಂದ ರೂಪಿತಗೊಂಡಿದ್ದಲ್ಲ ಅಥವಾ ಇವರು ಮಾತನಾಡಿದಾಗ ತಾವು ಆಳವಾಗಿ ಅಧ್ಯಯನ ಮಾಡಿದ ವಿಷಯಗಳನ್ನು ಅಷ್ಟೇ ಪ್ರತಿಭೆಯಿಂದ ಹೊರ ಹಾಕುವ ಕೇವಲ ಮಾತಿನ ಮಾಂತ್ರಿಕರೂ ಅಲ್ಲ. ಇವರಾರೂ ಜ್ಞಾನಪೀಠಿಗಳೂ ಅಲ್ಲ. ಆದರೆ ವಾಸ್ತವದ ವಿದ್ಯಾಮಾನಗಳಿಗೆ, ವ್ಯವಸ್ಥೆಯ ಕ್ರೂರತೆಯೊಂದಿಗೆ ನೇರವಾಗಿ ಮುಖಾಮುಖಿಯಾದವರು. ಪ್ರಭುತ್ವದ ಹಿಂಸೆಯನ್ನು ಮತ್ತು ಭೂಗತ ಚಳವಳಿಗಳ ಪ್ರತಿ ಹಿಂಸೆಯ ಕುರಿತಾಗಿ ಅಥೆಂಟಿಕ್ ಆಗಿ ಮಾತನಾಡಲು ಇವರಿಗೆ ಮಾತ್ರ ಸಾಧ್ಯವೇನೋ ಅನ್ನುವಷ್ಟರ ಮಟ್ಟಿಗೆ ಇವರು ತಮ್ಮ ಸಾರ್ವಜನಿಕ ಜೀವನವನ್ನು ವ್ಯವಸ್ಥೆಯ ಶಾಂತಿಗಾಗಿ ಮೀಸಲಿಟ್ಟಿದ್ದಾರೆ. ಹೃದಯಂಗಮವಾದ ಸರಳತೆ ಹಾಗೂ ಅದ್ಭುತ ಪ್ರತಿಭೆ ಎರಡೂ ಒಂದಕ್ಕೊಂದು ಪೂರಕವಾಗಿ ಇವರ ವ್ಯಕ್ತಿತ್ವದಲ್ಲಿ ಬೆರೆತು ಹೋಗಿದೆ.

ಇತ್ತೀಚೆಗೆ ನಮ್ಮ ರಾಜ್ಯದ ಮಾನವ ಹಕ್ಕುಗಳ ಹೋರಾಟಗಾರರಾದ, ಲೇಖಕ ಫ್ರೊ.ನಗರಗೆರೆ ರಮೇಶ್ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು  ಪ್ರೊ.ಬಾಲಗೋಪಾಲ್ ಅವರು ಕಾಕತೀಯ ವಿಶ್ವವಿದ್ಯಾಲಯದಲ್ಲಿ ಗಣಿತದ ರೀಡರ್ ಆಗಿದ್ದರು. ಮಾನವ ಹಕ್ಕುಗಳ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಲುವಾಗಿ ತಮ್ಮ ರೀಡರ್  ಹುದ್ದೆಗೆ ರಾಜೀನಾಮೆ ನೀಡಿದರು. ಆದರೂ ಬಡವರಿಗೆ, ಶೋಷಿತರಿಗೆ ಸಹಾಯವನ್ನು ಮಾಡಲೇಬೇಕೆಂಬ ಗುರಿಯಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು. ನಂತರ ತಮ್ಮ ವಕೀಲ ವೃತ್ತಿಯ ಮೂಲಕ ಶೋಷಿತರ ಪರವಾಗಿಯೇ ಹೋರಾಡುತ್ತಿದ್ದರು. ಬಾಲಗೋಪಾಲ್ ಅವರು ಈ ಕೆಲಸಕ್ಕಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಕೇವಲ ರೂ 500 ರಿಂದ ರೂ.1500 ಮಾತ್ರ. ಇದನ್ನು ಮೀರಿ ಒಂದು ಪೈಸೆಯನ್ನೂ ಸಹ ಹೆಚ್ಚಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ ಈ ಕಾನೂನು ವೃತ್ತಿಯಿಂದ ಬರುವ ತಮ್ಮ ಮಾಸಿಕ ವರಮಾನದ ಮಿತಿಯನ್ನು ರೂಪಾಯಿ 18000 ಕ್ಕೆ ಮಿತಿಗೊಳಿಸಿಕೊಂಡಿದ್ದರು. ಇದನ್ನು ಎಂದೂ ದಾಟಲಿಲ್ಲ. ಒಂದು ವೇಳೆ ಇದಕ್ಕಿಂತಲೂ ಹೆಚ್ಚುವರಿ ಹಣ ದೊರೆತರೆ ತಮ್ಮ ಹೆಂಡತಿಗೆ ಕೊಟ್ಟುಬಿಡುತ್ತಿದ್ದರು, ಎಂದು ಹೇಳಿದರು.

ಈ ನಿಸ್ವಾರ್ಥದ ಮನೋಭಾವವೇ ಬಾಲಗೋಪಾಲ ಅವರನ್ನು ಮಾನವ ಹಕ್ಕುಗಳ ಹೋರಾಟಗಾರರಾಗಿ ರೂಪಿಸಿತು. ಇಲ್ಲಿ ಅವರು ದಣಿವರಿಯದೆ ದುಡಿದರು. ಪ್ರಾರಂಭದ ವರ್ಷಗಳಲ್ಲಿ ಫ್ರೊ.ಬಾಲಗೋಪಾಲ್ ಅವರು ನಕ್ಸಲ್ ಚಳವಳಿಯ ಸಿಂಪಥೈಸರ್ ಆಗಿ ಕಾಣಿಸಿಕೊಂಡರೂ ಕಾಲಕ್ರಮೇಣ ಈ ಮಾವೋವಾದಿ ಭೂಗತ ಚಳವಳಿ ಹಿಂಸೆಗೆ ಜಾರುತ್ತಿರುವುದನ್ನು ಕಂಡು ಸಂತಾಪಪಟ್ಟವರು. ಕಡೆಯ ವರ್ಷಗಳಲ್ಲಿ ಈ ಚಳವಳಿಯ ಬಗೆಗೆ, ಅದರ ಹಿಂಸೆಯ ಬಗೆಗೆ ತೀವ್ರ ವಿರೋಧವಾಗಿ ವಿಮರ್ಶಿಸಲಾರಂಭಿಸಿದರು. ಇವರ ಬದ್ಧತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸತ್ಯವನ್ನು ಹೇಳಲು ಎಂದೂ ಹಿಂದೆ ನೋಡುತ್ತಿರಲಿಲ್ಲ. ಕಡೆಗೆ ಮಾನವ ಹಕ್ಕುಗಳ ಒಕ್ಕೂಟದಿಂದ ಹೊರಬಂದು ತಮ್ಮದೇ ಆದ ಮಾನವ ಹಕ್ಕು ವೇದಿಕೆಯನ್ನು ಸ್ಥಾಪಿಸಿಕೊಂಡರು. ಅದಕ್ಕಾಗಿ ಪ್ರಭುತ್ವದಿಂದಲೂ ಮತ್ತು ಅನೇಕ ತೀವ್ರವಾದಿ ಎಡಪಂಥೀಯರ ಟೀಕೆಗೂ ಗುರಿಯಾಗಬೇಕಾಯಿತು. ಆದರೆ 2009ರ ಅಕ್ಟೋಬರ್ 1ರ ಮಾನವ ಹಕ್ಕುಗಳ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡುತ್ತಾ ಬಾಲಗೋಪಾಲ್ ಹೇಳಿದ ಮಾತುಗಳು: (ಕೃಪೆ: ಬಾಲಗೋಪಾಲ್ ಬರಹಗಳು, ಲಂಕೇಶ್ ಪ್ರಕಾಶನ) “ನಿಜವನ್ನು ನಿಜ ಎಂದು ಹೇಳಲಿಕ್ಕಾಗದ, ಭಯದಿಂದ ಬಾಯಿಕಟ್ಟಿಹೋಗಿರುವ ಪರಿಸ್ಥಿತಿ ಇಂದು ಯಾಕೆ ಮತ್ತು ಹೇಗೆ ಉಂಟಾಗಿದೆ? ನಿಜವನ್ನು ಎತ್ತಿಹಿಡಿಯಲಾಗದ, ಸುಳ್ಳನ್ನು ಖಂಡಿಸಲಾಗದ ಪರಿಸ್ಥಿತಿಯಲ್ಲಿ ಹಕ್ಕುಗಳಿಗೆ ಯಾವುದೇ ಅರ್ಥವೇ ಇರುವುದಿಲ್ಲ. ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಏಕೆ ಕೆಲಸ ಮಾಡುತ್ತಿಲ್ಲ ಎಂದು ಕೇಳುವಷ್ಟು ನಿರ್ಭೀತ ವಾತಾವರಣವೇ ಹೊರಟುಹೋಗಿದೆ. ಮಾಧ್ಯಮಗಳು, ಮೇಧಾವಿಗಳು ಕೂಡ ಯಾಕೆ ವಾಸ್ತವವನ್ನು ಕಾಣದೆ ಹೋಗಿದ್ದಾರೆ? ಇದಕ್ಕೆ ಕಾರಣ ನಿಜದ ಭಯ ಇರಬಹುದು. ಅಥವಾ ಅವಕಾಶವಾದವೂ ಇರಬಹುದು. ಆದರೆ ನಿಜವನ್ನು ಹೇಳಲು ಆಗದ ಪರಿಸ್ಥಿತಿಯಲ್ಲಿ ಪ್ರಜಾಸ್ವಾಮ್ಯವೂ ಇರುವುದಿಲ್ಲ. ಮಾನವ ಹಕ್ಕುಗಳೂ ಇರುವುದಿಲ್ಲ. ಇನ್ನು ಹಕ್ಕುಗಳನ್ನು ಗಳಿಸಿಕೊಳ್ಳುವುದಂತೂ ದೂರದ ಮಾತು. ಇಂತಹ ದೌರ್ಭಾಗ್ಯದ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ.” ಇದು ಅವರ ಕಡೆಯ ಬಹಿರಂಗ ಭಾಷಣವೂ ಸಹ. “ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ವೀಕ್ಲಿ” (ಇಪಿಡಬ್ಲೂ) ಪತ್ರಿಕೆಗೆ ಅವರು ನಿರಂತರವಾಗಿ ಬರೆದ ಲೇಖನಗಳನ್ನು ಪ್ರತಿಯೊಬ್ಬರೂ ಓದಲೇಬೇಕು. ಕಡೆಗೆ ಮೂರು ವರ್ಷಗಳ ಹಿಂದೆ ತಮ್ಮ 58ನೇ ವಯಸ್ಸಿನಲ್ಲಿ ತೀವ್ರ ಅನಾರೋಗ್ಯದ ನಿಮಿತ್ತ ತೀರಿಕೊಂಡರು.

ಇದೆಲ್ಲ ಮತ್ತೆ ನೆನಪಾದದ್ದು ಇತ್ತೀಚೆಗೆ ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದಲ್ಲಿ ಫ್ರೊ.ಜಾಫಟ್, ಐಜೂರ್ ಅವರ ನೇತೃತ್ವದಲ್ಲಿ ಆಯೋಜಿಸಿದ ಜಿ.ಹರಗೋಪಾಲ್ ಅವರ ಭಾಷಣ ಮತ್ತು ಸಂವಾದ ಕುರಿತಾದ ಕಮ್ಮಟದಲ್ಲಿ ಭಾಗವಹಿಸಿದಾಗ. ಫ್ರೊ.ಹರಗೋಪಾಲ್ ಅವರು ಸಹ ಬಾಲಗೋಪಲ್‌ರವರಂತೆ ಅಪ್ರತಿಮ ಚಿಂತಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು. ಇವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನದ ಫ್ರೊಫೆಸರ್ ಆಗಿದ್ದರು. ಇವರು ಶೋಷಿತರ ಪರವಾದ ತೀವ್ರವಾದ ಕಾಳಜಿಗಳಿಂದ ಮತ್ತು ದಮನಿತರ ಪರವಾಗಿ ಸದಾಕಾಲ ಬಹಿರಂಗವಾಗಿ ಪ್ರಭುತ್ವದ ವಿರುದ್ಧ ಮಾತನಾಡಬಲ್ಲವರಾಗಿದ್ದರು. ಇವರ ಜನಪ್ರಿಯ ಗುಣಗಳಿಂದಾಗಿಯೇ ಸರ್ಕಾರಿ ಅಧಿಕಾರಿಗಳು, ಶಾಸಕರುಗಳ ಅಪಹರಣವಾದಾಗಲೆಲ್ಲ ಆಂಧ್ರಪ್ರದೇಶದ, ಒರಿಸ್ಸಾ ಮತ್ತು ಛತ್ತೀಸಘಡ ಸರ್ಕಾರಗಳು ಇವರನ್ನು ಮಾವೋವಾದಿಗಳೊಂದಿಗೆ ಸಂಧಾನಕಾರರಾಗಿ ವ್ಯವಹರಿಸಲು ನಿಯೋಜಿಸುತ್ತಿದ್ದರು. ಹರಗೋಪಾಲ್ ಅವರು ಪ್ರಥಮ ಬಾರಿಗೆ ಸಂಧಾನಕಾರರಾಗಿ ವ್ಯವಹರಿಸಿದ್ದು 1977ರಲ್ಲಿ, ಆಂಧ್ರಪ್ರದೇಶದಲ್ಲಿ. ಆಗ “ಪೀಪಲ್ಸ್ ವಾರ್ ಗ್ರೂಪ್” ಎನ್ನುವ ಬಲಿಷ್ಠ ನಕ್ಸಲ್ ಸಂಘಟನೆ ಆ ಕಾಲಕ್ಕೆ ಸರ್ಕಾರಿ ಅಧಿಕಾರಿಗಳನ್ನು ಅಪಹರಿಸಿತ್ತು.

ಹೀಗೆ 1977ರಿಂದ ಶುರುವಾದ ಈ ತಮ್ಮ ಈ ಸಂಧಾನದ ಪ್ರಕ್ರಿಯೆ 2011ರಲ್ಲಿ ವಿನಲ್ ಕೃಷ್ಣ ಹಾಗೂ 2012ರಲ್ಲಿ ಅಲೆಕ್ಸ್ ಪೌಲ್‌ವರೆಗೂ ನಡೆದುಬಂದಿತು. ಈ 1977 ಹಾಗೂ 2012ರ 35 ವರ್ಷಗಳ ಆ ಕಾಲಘಟ್ಟ ಫ್ರೊ.ಹರಗೋಪಾಲ್‌ರಂತಹ ಮಾನವತಾವಾದಿಗೆ ಅನೇಕ ಕತ್ತಲ ಜಗತ್ತುಗಳನ್ನು ತೆರೆದು ತೋರಿಸಿತು. ಈ 35 ವರ್ಷಗಳಲ್ಲಿ ಅವರು ಮೇಲ್ನೋಟಕ್ಕೆ ಅನೇಕ ನಕ್ಸಲ್ ಅಪಹರಣಗಳ ವಿದ್ಯಾಮಾನಗಳಿಗೆ ಸಂಧಾನಕಾರರಾಗಿ ಸಾಕ್ಷಿಯಾಗಿದ್ದಾರೆ ಎನ್ನಿಸಿದರೂ ಅದನ್ನು ಮೀರಿ ಅವರು ಗ್ರಹಿಸಿದ ಹಾಗೂ ದಾಖಲಿಸಿದ ಪ್ರಜಾಪ್ರಭುತ್ವದ ವಿಭಿನ್ನ ರೀತಿಯ ಸೋಲುಗಳು ಇನ್ನೂ ಭಯಾನಕವಾಗಿವೆ. ಈ ಕತ್ತಲ ದಾರಿಯೇ ನಡೆದುಬಂದ ದಾರಿ, ಪ್ರಭುತ್ವದ ಒಳಸುಳಿಗಳು, ಪ್ರಭುತ್ವದ ಹಿಂಸೆ ಹಾಗೂ ಇದಕ್ಕೆ ಪ್ರತಿರೋಧವಾಗಿ ನಕ್ಸಲರ ಪ್ರತಿಹಿಂಸೆ ಇವೆಲ್ಲವನ್ನು ಅಂದು ಹರಗೋಪಾಲ್ ಅವರು ವಿವರವಾಗಿ ಬಿಚ್ಚಿಟ್ಟರು. 1977ರ ಸರ್ಕಾರಿ ಅಧಿಕಾರಿಗಳ ಅಪಹರಣದ ಹಿನ್ನೆಯ ಕುರಿತಾಗಿ ಅವರು ಹೇಳಿದ್ದು ಸರಿ ಸುಮಾರು 70ರ ದಶಕದಷ್ಟರಲ್ಲಿ ಸಮಾತಾವಾದದ ಚಿಂತನೆಗಳು, ಬಡತನ ಮತ್ತು ಶೋಷಣೆ, ಅಸಮಾನತೆ ಮತ್ತು ದೌರ್ಜನ್ಯದ ವಿರುದ್ಧದ ಹೋರಾಟ ಆಂಧ್ರಪ್ರದೇಶದ ವರಂಗಲ್ ಜಿಲ್ಲೆಯಾದ್ಯಾಂತ ಪಸರಿಸಿಬಿಟ್ಟಿತ್ತು. ಸಮತಾವಾದದ ಬಗೆಗೆನ ಕೂಗು ಶಾಲಾ ಕಾಲೇಜುಗಳು. ಸರ್ಕಾರಿ ಸಂಸ್ಥೆಗಳು. ಆಸ್ಪತ್ರೆಗಳು ಹೀಗೆ ಯಾವ ವಲಯಗಳನ್ನು ಬಿಟ್ಟಿರಲಿಲ್ಲ. ಆಗ ಕಾಲೇಜುಗಳಲ್ಲಿ ಜಮೀನ್ದಾರರ ದಬ್ಬಾಳಿಕೆ ಮತ್ತು ಹತ್ಯಾಕಾಂಡಗಳು, ಮೇಲ್ಜಾತಿಗಳ ಶೋಷಣೆಗಳ ಕುರಿತಾಗಿಯೇ ಪಾಠ ಮಾಡಬೇಕಾದಂತಹ ಪರಿಸ್ಥಿತಿಯಿತ್ತು. ಆ ಬಗೆಯ ಒತ್ತಡಗಳಿದ್ದವು. ಇವನ್ನು ಬಿಟ್ಟು ಶೈಕ್ಷಣಿಕ ಪಠ್ಯಕ್ಕೆ ಕುರಿತಾದ ವಿಷಯಗಳ ಕುರಿತಾಗಿ ಪಾಠ ಮಾಡಿದರೆ ಅವೆಲ್ಲ ವಿಧ್ಯಾರ್ಥಿಗಳ ಕಣ್ಣಲ್ಲಿ ತಿರಸ್ಕೃತಗೊಳ್ಳುತ್ತಿದ್ದವು. ಅಧ್ಯಾಪಕರು ಬೂರ್ಜ್ವಗಳೆಂದೇ ಪರಿಗಣಿಸಲ್ಪಡುತ್ತಿದ್ದರು. ಅಷ್ಟರ ಮಟ್ಟಿಗೆ ಇಡೀ ವರಂಗಲ್ ಜಿಲ್ಲೆ ಸ್ಪೋಟಕ ಸ್ಥಿತಿಗೆ ತಲುಪಿತ್ತು.

ಶತಮಾನಗಳಿಂದ ಜಮೀನ್ದಾರ ಗುಂಪುಗಳಿಂದ ದಲಿತರು ಮತ್ತು ಬಡ ರೈತರ ಮೇಲೆ ನಡೆಯುತ್ತಿದ್ದ ಶೋಷಣೆಗಳಿಗೆ ಕೊನೆಯೇ ಇರಲಿಲ್ಲ. ಆಗ ಯಾವುದೇ ಜಮೀನ್ದಾರನು ತನಗೆ ಬೇಕೆನಿಸಿದಾಗಲೆಲ್ಲ ಬಡ ರೈತರ, ಕೂಲಿ ಕಾರ್ಮಿಕರ ಅಷ್ಟೇಕೆ ಬಡ ಶಾಲಾ ಮಾಸ್ತರರ ಹೆಂಡತಿಯರನ್ನು ತಮ್ಮ ವಾಡೆಗಳಿಗೆ ಬಲತ್ಕಾರವಾಗಿ ಎಳೆದುಕೊಂಡು ಅತ್ಯಾಚಾರ ನಡೆಸಿ ನಂತರ ತಮ್ಮ ಅಡಿಯಾಳಾಗಿ ಇಟ್ಟುಕೊಳ್ಳುತ್ತಿದ್ದರು. ಇದು ದೌರ್ಜನ್ಯದ ಒಂದು ಸ್ಯಾಂಪಲ್. ಈ ಶೋಷಿತರಿಗೆ ಪ್ರಭುತ್ವದಿಂದಲೂ ಯಾವುದೇ ಸಹಾಯ ಹಸ್ತವಾಗಲೀ, ಸುರಕ್ಷತೆಯ ಭರವಸೆಯಾಗಲೀ ದೊರಕದಿದ್ದಾಗ ಇಡೀ ಜಿಲ್ಲೆಯ ಶೋಷಿತ ಸಮುದಾಯ ನಕ್ಸಲಿಸಂ ಕಡೆಗೆ ಹೊರಳಿತು. ಅದೇ ಕಾಲದಲ್ಲಿ ಆಂಧ್ರಪ್ರದೇಶಾದ್ಯಾಂತ ಮಾಫಿಯಾ ಗುಂಪುಗಳು ಹುಟ್ಟಿಕೊಂಡವು. ಆಗಿನ ಸರ್ಕಾರ ನೀರಾವರಿ, ರಸ್ತೆಗಳು, ಸಾರ್ವಜನಿಕ ಸಂಸ್ಥೆಗಳು, ಗಣಿಗಾರಿಕೆ ಹೀಗೆ ವಿವಿಧ ವಲಯಗಳಿಗೆ ಅಪಾರವಾದ ಹಣವನ್ನು ಬಿಡುಗಡೆ ಮಾಡಿತು. ಆದರೆ ಆ ಹಣವೆಲ್ಲ ಈ ವಿವಿಧ ಮಾಫಿಯಾ ಗುಂಪಿಗೆ ಸೋರಿಹೋಯಿತು. ಈ ಅವ್ಯವಹಾರದ ಫಲವಾಗಿ ಅನೇಕ ಮಧ್ಯವರ್ತಿಗಳು ಹುಟ್ಟಿಕೊಂಡರು. ಹೀಗಾಗಿ ಸರ್ಕಾರ, ಮಧ್ಯವರ್ತಿಗಳು ಮತ್ತು ವಿವಿಧ ಮಾಫಿಯಾಗಳು ಇವೆಲ್ಲದರ ಒಂದು ವಿಷವರ್ತುಲ ಸ್ಥಾಪಿತಗೊಂಡಿತು. ಈ ವಿದ್ಯಾಮಾನಗಳು ಆದರ್ಶದ ರಾಜಕಾರಣವನ್ನು ನಾಮಾವಶೇಷ ಮಾಡಿತು. ಇದರ ಬದಲಾಗಿ ಐಡೆಂಟಿಟಿ ರಾಜಕೀಯ ಹುಟ್ಟಿಕೊಂಡಿತು. ಈ ಐಡೆಂಟಿಟಿ ರಾಜಕೀಯವು ಜಾತಿಗಳು, ಸಂಸ್ಥೆಗಳ ಕೇಂದ್ರ ಸ್ಥಾನವಾಗಿ ಬೆಳೆಯಿತು. ಇದೆಲ್ಲದರ ವಿರುದ್ಧ ಹುಟ್ಟಿಕೊಂಡಿದ್ದೇ ನಕ್ಸಲರ ಭೂಗತ ಚಳವಳಿ. ಅದರ ಮೊದಲ ಚಟುವಟಿಕೆಯೇ 1977ರ ಅಪಹರಣ. ಆ 70ರ ಹಾಗೂ 80ರ ದಶಕದ ಅಪಹರಣಗಳ ಸುಖಾಂತ್ಯವಾಗುತ್ತಿದ್ದುದು ಬಂಧನದಲ್ಲಿದ್ದ ಕೆಲವು ನಕ್ಸಲ್ ನಾಯಕರು ಹಾಗು ನಕ್ಸಲರೆಂದು ಗುಮಾನಿಗೊಳಪಟ್ಟು ಬಂಧಿತರಾಗುತ್ತಿದ್ದ ಮುಗ್ಧ ವ್ಯಕ್ತಿಗಳ ಬಿಡುಗಡೆಯ ಮೂಲಕ.

ಈ ರೀತಿಯ ಕೊಡುಕೊಳ್ಳುವಿಕೆಯ ನಾಟಕಗಳು 80ರ ದಶಕದುದ್ದಕ್ಕೂ ನಡೆಯಿತು. ಈ ಎರಡು ದಶಕಗಳಲ್ಲಿ ಪ್ರಭುತ್ವವು ಸಹ ಯಾವುದೇ ಜಿಜ್ಞಾಸೆಯಲ್ಲಿ ತೊಡಗುತ್ತಿರಲಿಲ್ಲ. ಅಧಿಕಾರಿಗಳ ಅಪಹರಣ ಮತ್ತು ನಕ್ಸಲ್ ನಾಯಕರು ಹಾಗೂ ಮುಗ್ಧ ಜನರ ಬಿಡುಗಡೆ ಈ ಇಡೀ ಪ್ರಕ್ರಿಯೆಯಲ್ಲಿ ಹಿಂಸೆಯ ಸುಳಿವು ಇರಲಿಲ್ಲ. ಆದರೆ ಹಿಂಸೆ ತಲೆಯೆತ್ತಿದ್ದು 90ರ ದಶಕದ ನಂತರ. ಅಲ್ಲಿಂದ ಈ ನಕ್ಸಲ್ ಚಟುವಟಿಕೆಗಳು ಮತ್ತು ಅಪಹರಣಗಳು ಮತ್ತೊಂದು ತಿರುವನ್ನೇ ತೆಗೆದುಕೊಂಡಿತು. ಹಿಂಸೆ ಅಡಿಯಿಟ್ಟಿತು. ಹೀಗೆ ಅತ್ಯಂತ ವಿವರವಾಗಿ, ಎಳೆಎಳೆಯಾಗಿ ಆ ದಿನಗಳ ತಲ್ಲಣಗಳನ್ನು ಬಿಚ್ಚಿಟ್ಟರು. ಇದೇ ಕಾಲಘಟ್ಟದಲ್ಲಿ ನಕಲಿ ಎನ್‌ಕೌಂಟರ್‌ಗಳ ಸಂಖ್ಯೆ ಸಹ ಹೆಚ್ಚಾಗಿದ್ದು ಮವೋವಾದಿಗಳ ಪ್ರತಿ ಹಿಂಸೆಗೆ ಕಾರಣವೆಂದು ವಿವರಿಸಿದರು. ಪ್ರಭುತ್ವದ ದೌರ್ಜನ್ಯದ ಕುರಿತಾಗಿ ಮತನಾಡಿದ ಫ್ರೊ.ಹರಗೋಪಾಲ್ ಅವರು ಇದು ತನ್ನ ಮೇಲುಗೈ ಸಾಧಿಸಿದ್ದು ಚಂದ್ರಬಾಬು ನಾಯ್ಡು ಆಡಳಿತದ ಅವಧಿಯಲ್ಲಿ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು. ಇವರ ಕಾಲದಲ್ಲಿಯೇ ಮಾನವ ಹಕ್ಕುಗಳ ಹೋರಾಟಗಾರರರನ್ನು ಹತ್ಯೆ ಮಾಡಲಾಯಿತು. ತನ್ನನ್ನು ತಾನು ಛೀಫ್ ಎಕ್ಸಿಕ್ಯೂಟಿವ್ ಆಫೀಸರ್ ಎಂದು ಕರೆದುಕೊಂಡಿದ್ದ ಈ ಚಂದ್ರಬಾಬು ನಾಯ್ಡು ಅವರಿಗೆ ಆಗ ಮಧ್ಯಮವರ್ಗದವರು ಸುಭವಾಗಿ ಮೋಸಹೋದದ್ದು ಸಹಜವೇ ಆಗಿತ್ತು. ಅಪಾರ ಸಂಪತ್ತನ್ನು ಗಳಿಸುವುದು ಹಾಗೂ ಅದನ್ನು ಕ್ರೋಢೀಕರಿಸುವುದರ ಕಲೆ ಹುಟ್ಟಿಕೊಂಡಿದ್ದು ಸಹ ಚಂದ್ರಬಾಬು ನಾಯ್ಡು ಅವರ ಕಾಲದಲ್ಲಿ. ಇವರ ಕಾಲದಲ್ಲಿ ರಾಜಕೀಯವು ಸಂಪತ್ತಿನ ಹಿಂದೆ ಸದಾ ಸುತ್ತುವ ಅಧಿಕಾರವಾಗಿಯೂ, ಅಧಿಕಾರವೂ ಈ ಸಂಪತ್ತನ್ನು ಗಳಿಸುವ ರಾಜಕೀಯವಾಗಿಯೂ ಪರಿವರ್ತನೆಗೊಂಡಿದ್ದರ ಬಗೆಗೆ ವಿಷಾದಿಸಿದರು. ಶಾಂತಿಯ ಮಂತ್ರವನ್ನೇ ಜಪಿಸುತ್ತ ಅಧಿಕಾರವನ್ನು ಕಬ್ಜಾ ಮಾಡಿಕೊಂಡ ದಿವಂಗತ ರಾಜಶೇಖರ ರೆಡ್ಡಿಯವರ ಕಾಲದಲ್ಲಿ ಮಾವೋವಾದಿಗಳೊಂದಿನ ಸಂಧಾನವನ್ನು ಅತ್ಯಂತ ವ್ಯವಸ್ಥಿವಾಗಿ ಹಾಳುಗೆಡವಿದ್ದರ ಬಗೆಗೆ ವಿವರಿಸಿದರು. ಆಗ ಹೆಚ್ಚೂ ಕಡಿಮೆ ಶಸ್ತ್ರಗಳನ್ನು ತ್ಯಜಿಸಿದ್ದ ಮಾವೋವಾದಿಗಳು ಈ ಮಾತುಕತೆಯ ವಿಫಲತೆಯ ನಂತರ ಮರಳಿ ಭೂಗತ ಲೋಕಕ್ಕೆ ತೆರಳಿ ಮತ್ತಷ್ಟು ಹಿಂಸೆಯನ್ನು ಮೈಗೂಡಿಸಿಕೊಂಡಿದ್ದರ ಕುರಿತಾಗಿ ವಿವರಿಸಿದರು. ಗುಜರಾತ್‌ನಲ್ಲಿ ಜರುಗಿದ ಮುಸ್ಲಿಂರ ಹತ್ಯಾಕಾಂಡ ಹಾಗೂ ಅದರ ರೂವಾರಿ ನರೇಂದ್ರ ಮೋದಿಯವರ ಫ್ಯಾಸಿಸ್ಟ್ ಆಡಳಿತ ಕುರಿತಾಗಿ ಸ್ವಲ್ಪವೂ ತಕರಾರು ಎತ್ತದ ನಮ್ಮ ಮಧ್ಯಮ ವರ್ಗ ಈ ನಕ್ಸಲರ ಹಿಂಸೆಯ ಬಗೆಗೆ ಆತಂಕ ವ್ಯಕ್ತಪಡಿಸುತ್ತಿರುವುದರ ಹಿಪೋಕ್ರಸಿಯನ್ನು ವಿವರಿಸಿದರು.

ಈ 35 ವರ್ಷಗಳ ಸಂಧಾನಕಾರರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ಫ್ರೊ.ಹರಗೋಪಾಲ್ ಅವರು ಪ್ರಭುತ್ವದ ಹಿಂಸೆ ಮತ್ತು ಮಾವೋವಾದಿಗಳ ಪ್ರತಿ ಹಿಂಸೆಯನ್ನು ಹತ್ತಿರದಿಂದ ಪ್ರತ್ಯಕ್ಷವಾಗಿ ಕಂಡು ಅನುಭವಿಸಿದವರು. ಅನೇಕ ಬಾರಿ ಸಾವಿನ ಅಂಚಿನಿಂದ ಪಾರಾಗಿ ಬಂದವರು. ಹೀಗಾಗಿ ಅವರ ಇಡೀ ಭಾಷಣಕ್ಕೆ ಬಲು ದೊಡ್ಡ ಅಥೆಂಟಿಸಿಟಿ ದಕ್ಕಿತ್ತು. ಹಾಗೂ ಇದು ಸಹಜವೇ ಕೂಡ. ಆದರೆ ಇಲ್ಲಿ ಪ್ರಭುತ್ವದ ಹಿಂಸೆಯೊಂದಿಗೆ ಖಾಸಗೀ ಪಡೆಯಾದ ಜಮೀನ್ದಾರರ ಹಿಂಸೆಯು ಒಂದಕ್ಕೊಂದು ತಳುಕು ಹಾಕಿಕೊಂಡು ಅಮಾಯಕರ ಮೇಲೆ ನಿರಂತರವಾಗಿ ನಡೆಸಿದ ಶೋಷಣೆ ಮತ್ತು ಅತ್ಯಾಚಾರಗಳೇ ಇವುಗಳಿಗೆ ವಿರೋಧವಾಗಿ ಪ್ರತಿ ಹಿಂಸೆಯ ರೂಪವಾಗಿ ನಕ್ಸಲಿಸಂ ಹುಟ್ಟಿಕೊಳ್ಳಬೇಕಾದಂತಹ ಅನಿವಾರ್ಯ ಪರಿಸ್ಥಿತಿಗೆ ಕಾರಣವಾಯಿತು ಎನ್ನುವ ಅತ್ಯಂತ ಸರಳ ಹಾಗು ಸಿನೀಮಿಯ ಮಾದರಿಯ ಕಟು ವಾಸ್ತವವನ್ನು ಫ್ರೊ.ಹರಗೋಪಾಲ್ ಅವರು ವಿವರಿಸಿದರು. ಆದರೆ ಇದಕ್ಕೆ ಪ್ರತಿಹಿಂಸೆಯ ಅಗತ್ಯತೆಯ ಬಗೆಗೆ ಪ್ರಶ್ನಿಸಿದಾಗ ಇದಕ್ಕೆ ಫ್ರೊಫೆಸರ್ ಅವರ ಉತ್ತರ ಮಾತ್ರ ಬೇರೆ ಯಾವ ದಾರಿಯಿತ್ತು ಹೇಳಿ ಎಂಬ ಮರು ಪ್ರಶ್ನೆಗೆ ಮತ್ತೆ ಮತ್ತೆ ಹೊರಳುತ್ತಿತ್ತು!!

ಮಾನವ ಹಕ್ಕುಗಳನ್ನು ಕಾಪಾಡಲು ಸಂಪೂರ್ಣವಾಗಿ ಸೋತುಹೋದ ಪ್ರಭುತ್ವ ಮತ್ತು ನಾಗರಿಕ ವ್ಯವಸ್ಥೆಗೆ ಇದೇ ಮಾನವ ಹಕ್ಕುಗಳ ಮೇಲೆ ನಕ್ಸಲರು ಪ್ರತ್ಯುತ್ತರವಾಗಿ ಹಿಂಸೆಯ ಮೂಲಕ ಮರುಹಲ್ಲೆ ನಡೆಸಿದಾಗ ನಮಗೆ ಪ್ರಶ್ನಿಸುವ ಹಕ್ಕೆಲ್ಲಿದೆ ಎಂದು ಹರಗೋಪಾಲ್ ಅವರು ಕೇಳಿದಾಗ ಅಲ್ಲಿರುವ ಹಿರಿಯ ಪ್ರಜ್ಞಾವಂತರಲ್ಲೂ, ನನ್ನ ತಲೆಮಾರಿನವರಲ್ಲೂ ಹಾಗೂ 20ರ ಹರೆಯದ ವಿಧ್ಯಾರ್ಥಿಗಳಲ್ಲೂ ಯಾವುದೇ ಉತ್ತರವಿರಲಿಲ್ಲ. ಆದರೆ ಮಾವೋವಾದಿಗಳ ವ್ಯವಸ್ಥೆಯ ಮೇಲೆ ನಡೆಸುವ ಹಿಂಸೆಯ ಜೊತೆಜೊತೆಗೆ ಅವರೊಳಗಿನ ಭೂಗತ ಲೋಕದ ಬದುಕಿನಲ್ಲೂ ಮನೆಮಾಡಿರುವ ಅಪಾರ ವೈರುಧ್ಯಗಳ ಬಗೆಗೆ ಫ್ರೊ.ಹರಗೋಪಲ್ ಅವರು ಸಾಕಷ್ಟು ಬೆಳಕು ಚೆಲ್ಲಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಮಾವೋವಾದಿಗಳು ಭೂಮಾಲೀಕರಿಂದ, ಉದ್ದಿಮೆದಾರರಿಂದ ಹಫ್ತಾ ವಸೂಲಿಯ ದಂಧೆಯನ್ನು ಮೈಗೂಡಿಸಿಕೊಂಡಿರುವ ಬಗೆಗಿನ ಆರೋಪಗಳ ಕುರಿತಾಗಿ ವಿವರಿಸಲಿಲ್ಲ. ಈ ಮಾವೋವಾದಿಗಳ ಭೂಗತ ಲೋಕದೊಳಗೆ ಕಾಮ್ರೇಡ್‌ಗಳಾಗಿ ಹೋರಾಟಕ್ಕೆ ಸೇರಿಕೊಂಡ ಕೆಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಅನೇಕ ವರದಿಗಳಿವೆ. ಎಳೆ ವಯಸ್ಸಿನ ಬಾಲಕರನ್ನು ಈ ಭೂಗತ ಚಳವಳಿಗಳಿಗೆ ಸೇರಿಸಿಕೊಳ್ಳುತ್ತಿರುವ ಸ್ವಾರ್ಥದ ಕುರಿತಾಗಿ ಸಹ ಹೇಳಲಿಲ್ಲ. ತಮ್ಮ ಮೇಲೆ ಪೋಲಿಸ್ ಪಡೆಗಳ ತಂಡ ಎನ್ಕೌಂಟರ್ ನಡೆಸುವ ಸಂದರ್ಭಗಳಲ್ಲಿ, ತಮ್ಮ ಗುಪ್ತ ತಾಣಗಳ ಮೇಲೆ ನಡೆಸುವ ಶಸಸ್ತ್ರ ದಾಳಿಗಳಿಂದ ಪಾರಾಗಲು ಅಮಾಯಕ ಜನರು ಹಾಗೂ ಬಾಲಕರನ್ನು ಹ್ಯೂಮನ್ ಶೀಲ್ಡ್‌ಗಳಾಗಿ ಬಳಸಿಕೊಳ್ಳುತ್ತಿರುವ ಕೌರ್ಯದ ಕುರಿತಾಗಿ ಸಹ ಫ್ರೊ. ಮಾತನಾಡಲಿಲ್ಲ. ಅಲ್ಲದೆ ಬಲು ಮುಖ್ಯವಾಗಿ ಇಂದು ಒರಿಸ್ಸ ಹಾಗೂ ಛತ್ತೀಸಘಡ್ ರಾಜ್ಯಗಳಲ್ಲಿ ಮಾವೋವಾದಿಗಳಲ್ಲಿ ಹೆಚ್ಚಿನವರು ಆದಿವಾಸಿಗಳು. ಇದರ ವಿಪರ್ಯಾಸದ ಕುರಿತಾಗಿ ಚರ್ಚೆ ನಡೆಯಬೇಕಾಗಿತ್ತು. ಆದರೆ ನಾಗರಿಕ ಸಮಾಜದಲ್ಲಿ, ಪ್ರಜಾಪ್ರಭುತ್ವದಲ್ಲಿ ಜಾತೀಯತೆ, ಮಹಿಳೆಯ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಮುಂತಾದ ಶೋಷಣೆಗಳು ಮಾನವ ಹಕ್ಕುಗಳ ಉಲ್ಲಂಘನೆಗಳೇ ಅದರಲ್ಲಿ ಅನುಮಾನವೇ ಇಲ್ಲ.

ಆದರೆ ಈ ಅಧಿಕೃತವಾಗಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗೆ ವಿರೋಧವಾಗಿ ಪ್ರಜಾ ವಿಮೋಚನೆಯ ಹೆಸರಿನಲ್ಲಿ  ನಡೆಯುವ ಎಲ್ಲ ಬಗೆಯ ಭೂಗತ ಹೋರಾಟಗಳು ಹಿಂಸಾತ್ಮಕವಾಗಿದ್ದರೂ ಸರಿಯೇ ಅವು ಮತ್ತೊಂದು ಬಗೆಯಲ್ಲಿ ಮಾನವ ಹಕ್ಕುಗಳ ಪ್ರತಿಪಾದನೆಯನ್ನೇ ಮಾಡುತ್ತವೆ ಎನ್ನುವ ಪ್ರೊ.ಹರಗೋಪಾಲ್ ಅವರ ಸಮರ್ಥನೆ ಒಪ್ಪಲಿಕ್ಕೆ ಸಾಧ್ಯವೇ ಇಲ್ಲ ಆದರೆ ಈ ಅಸಹಾಯಕತೆಯ ಸಮರ್ಥನೆಯಲ್ಲೂ ಈ ಮಾವೋವಾದಿಗಳ ಸಶಸ್ತ್ರ ಸಂಘಟನೆ, ಹಿಂಸಾತ್ಮಕ ಕ್ರಾಂತೀ ಮಾರ್ಗ, ವಿಮೋಚನೆಯ ಹೆಸರಿನಲ್ಲಿ ಅಮಾಯಕರ ಹತ್ಯೆಗಳು ಇವೆಲ್ಲವನ್ನು ಫ್ರೊ.ಹರಗೋಪಾಲ್ ಅವರು ತೀವ್ರವಾಗಿ ಖಂಡಿಸಿದ್ದರು. ಹಿಂಸೆಗೆ ಅವರ ಸಮರ್ಥನೆ ಇರದಿದ್ದರೂ ಪರ್ಯಾಯ ಮಾರ್ಗಗಳ ಬಗೆಗಿನ ಅವರ ಪ್ರಶ್ನೆಗೆ ನಾವೆಲ್ಲ ಗಾಂಧೀ ಮಾದರಿಯನ್ನು ಉತ್ತರವಾಗಿ ಕೊಡಬೇಕಾಗಿತ್ತು. 70ರ, 80ರ ದಶಕದ ಫ್ಯೂಡಲ್ ವಿರೋಧಿ ನಕ್ಸಲ್ ಚಳವಳಿಗೂ 90ರ ದಶಕದ ಜಾಗತೀಕರಣಗೊಂಡ ಇಂಡಿಯಾ ನಂತರ 20 ವರ್ಷಗಳಲ್ಲಿ ಅನುಭವಿಸಿದ ಮಾವೋವಾದಿಗಳ ಭೂಗತ ಚಳವಳಿಗಳಿಗೂ ಹಾಗೂ ಅದರ ಹಿಂಸೆಯ ರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ನವ ಕಲೋನಿಯಲ್‌ನ ದಿನಗಳಲ್ಲಿ ಈ ಭೂಗತ ಚಳವಳಿ ದಕ್ಷಿಣದ ಆಂಧ್ರಪ್ರದೇಶದಿಂದ ಕ್ರಮೇಣ ಪಶ್ಚಿಮ ರಾಜ್ಯಗಳಿಗೆ ಕೇಂದ್ರಿತಗೊಂಡಿರುವುದರ ಹಿಂದೆ ಸರ್ಕಾರದ ಆತ್ಮಹ್ಯತ್ಯಾತ್ಮಕ ಹಾಗೂ ಭ್ರಷ್ಟಾಚಾರದ ಆಡಳಿತ ನೀತಿಗಳೇ ಕಾರಣ. ಇಲ್ಲಿನ ಖನಿಜ ಸಂಪತ್ತು ತಂದುಕೊಡುವ ಕೋಟ್ಯಾಂತರ ರೂಪಾಯಿಗಳ ಆದಾಯವು ಜಾಗತೀಕರಣದ ನೆಪದಲ್ಲಿ ಖಾಸಗಿ ಉದ್ಯಮಿಗಳ ಕೈಗೆ ಜಾರಿಕೊಂಡಿದ್ದು ಹಾಗೂ ಈ ಪ್ರಕ್ರಿಯೆಯಲ್ಲಿ ಆದಿವಾಸಿಗಳ ಹಾಗೂ ಹಿಂದುಳಿದ ಜನತೆಯ ಜನಜೀವನವೇ ಹದಗೆಟ್ಟು ಸಂಪೂರ್ಣವಾಗಿ ಅತಂತ್ರಗೊಂಡಿದ್ದು ಎಲ್ಲವೂ ಈಗಾಗಲೇ ಲೆಕ್ಕವಿಲ್ಲದಷ್ಟು ಬಾರಿ ಚರ್ಚಿತವಾಗಿದೆ. ಆದರೆ ಇದಕ್ಕೆ ಪರಿಹಾರ ಮಾತ್ರ ಇಂದು ಯಾರ ಕೈಗೂ ಸಿಗದಷ್ಟು ಬಲು ದೂರವಾಗಿ ಅವಸಾನಗೊಂಡಿದೆ. ಏಕೆಂದರೆ ಬಂಡವಾಶಾಹೀ ಮಾದರಿಗಳು ಸರ್ಕಾರಿ ಉದ್ದಿಮೆಗಳಾಗಿದ್ದಾಗ ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಷ್ಟೋ ಇಷ್ಟೋ ಪಾಲಿಸುತ್ತಿರುವಂತೆ ಕಂಡುಬಂದರೂ ಒಮ್ಮೆ ಅವು ಖಾಸಗೀಕರಣಗೊಂಡಾಗ ಈ ಎಲ್ಲಾ ನೆಲದ ಹಕ್ಕಿನ ಮಾದರಿಗಳಿಗೂ ತಿಲಾಂಜಲಿ ದೊರೆಯತ್ತದೆ. ಈ ಖಾಸಗೀ ಪಡೆಗಳಿಗೆ ಪ್ರಜಾತಾಂತ್ರಿಕ ಮೌಲ್ಯಗಳು ಕೇವಲ ಪುಸ್ತಕದ ಬದನೇಕಾಯಿ ಮಾತ್ರ. ಇಲ್ಲಿ ಐಡಿಯಾಲಜಿಗಳು ನಗೆಪಾಟಲಿಗೀಡಾಗುತ್ತವೆ. ಈ ಕಾಲಘಟ್ಟದಲ್ಲೇ ಸಾಮಾಜಿಕ ನ್ಯಾಯದ ಪರವಾದ ಚಳವಳಿಗಳು ಇನ್ನಿಲ್ಲದಂತೆ ನೆಲಕಚ್ಚಿದ್ದು ಈ ನವ ಕಲೋನಿಯಲ್‌ನ ಆರ್ಥಿಕ ಲಾಭ ತಂದುಕೊಡುವ ನವ ಫ್ಯೂಡಲ್‌ನ ರೋಮಾಂಚಕತೆಯ ಕಾರಣದಿಂದ. ಆಗಲೇ ಈ ಹಿಂಸಾತ್ಮಕ ಭೂಗತ ಮಾದರಿಗಳ ಮತ್ತೊಂದು ಆಯಾಮವೇ ಹುಟ್ಟಿಕೊಳ್ಳುತ್ತದೆ. ಚಿಂತಕ ‘ಚೊಮೆಸ್ಕಿ’ ತನ್ನ ದೇಶವಾದ ಅಮೇರಿಕಾದ ಬಗೆಗೆ ಹೇಳಿದ Manufactured Democracy ಮತ್ತು  friendly fascism ಪರಿಕಲ್ಪನೆ ನವ ಕಲೋನಿಯಲ್‌ ಸಂದರ್ಭದಲ್ಲಿ ಇಂಡಿಯಾದ ಪಾಲಿಗೂ ನಿಜವಾಗತೊಡಗಿರುವುದೂ ಸಹ ಪ್ರತಿರೋಧದ ನೆಲೆಯು ಹಿಂಸಾಚಾರಕ್ಕೆ ಹೊರಳುವುದಕ್ಕೆ ಕಾರಣ.

ಸರ್ಕಾರವೂ ಈ ಕೂಡಲೆ ನಕ್ಸಲ್‌ಪೀಡಿತ ಹಿಂದುಳಿದ ರಾಜ್ಯಗಳಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸಿ ಅಲ್ಲಿ ಸ್ವರ್ಗವನ್ನು ಸ್ಥಾಪಿಸಿದರೆ ಮಾವೋವಾದಿಗಳು ಇನ್ನಿಲ್ಲದಂತೆ ಮಾಯವಾಗುತ್ತಾರೆ ಎನ್ನುವ ಮಧ್ಯಮವರ್ಗದ ಸರಳೀಕೃತ ಗ್ರಹಿಕೆಯನ್ನು ಹರಗೋಪಾಲ್ ಅವರು ಬಹಳ ಆಳವಾಗಿ ವಿವೇಚಿಸಿದರು. ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಒಂದು ಹುಲ್ಲು ಗರಿಕೆ ಬೆಳೆಯುವುದು ಸಹ ಕಷ್ಟವೆನ್ನುವುದನ್ನು ನಾವೆಲ್ಲ ಅರಿತುಕೊಳ್ಳಲೇಬೇಕು. ಆದರೆ ನಮ್ಮಲ್ಲಿಯೇ ಗೊಂದಲಗಳಿದ್ದವು. ಈ ಹಿಂಸೆ ಹಾಗೂ ಪ್ರತಿಹಿಂಸೆಯ ಕರ್ಮಕಾಂಡಗಳನ್ನು ಕೇವಲ ಅಧ್ಯಯನಗಳ ಮೂಲಕ, ಮಾಧ್ಯಮಗಳ ಮೂಲಕ ಅರಿತುಕೊಂಡ ನಾವು ಈ ಹಿಂಸೆ ಹಾಗೂ ಪ್ರತಿಹಿಂಸೆಯನ್ನು 35 ವರ್ಷಗಳ ಕಾಲ ನೇರವಾಗಿ ಮುಖಾಮುಖಿಯಾಗಿದ್ದ, ಅದರ ಕಾರಣಕರ್ತರುಗಳನ್ನು ಹತ್ತಿರದಿಂದ ಕಂಡು ಚರ್ಚಿಸಿದ್ದ ಫ್ರೊ.ಹರಗೋಪಾಲ್ ಅವರ ಬಳಿ ನಾವು ಗಾಂಧೀ ಮಾದರಿಯನ್ನು ಮಾತನಾಡಿದರೆ ನಗೆಪಾಟಲಿಗೆ ಈಡಾಗುತ್ತಿದ್ದೆವು. ಆದರೆ ಪ್ರಜಾಪ್ರಭುತ್ವದ ರಕ್ಷಕರಾದ ನಾವು ಗಾಂಧೀ ಮಾರ್ಗವನ್ನು ಮರಳಿ ಈ ಎರಡೂ ಬಗೆಯ ಹಿಂಸೆಗಳೊಂದಿಗೆ ಮುಖಾಮುಖಿಯಾಗಿಸುತ್ತಾ ಪರಿಹಾರವನ್ನು ಕಂಡುಕೊಳ್ಳಲೇಬೇಕು ಎನ್ನುವುದರಲ್ಲಿ ನಮ್ಮಲ್ಲಂತೂ ಯಾವುದೇ ಅನುಮಾನಗಳಿಲ್ಲ. ಇಲ್ಲಿ ಯಾವುದೂ ಸುಲಭವಲ್ಲ. ಅದು ಹೇಗೆ ಎಂದರೆ ಅದಕ್ಕೆ ಸಿದ್ಧ ಉತ್ತರವಂತೂ ದೊರಕದು. ನಾವು ಮರಳಿ ಈ ನವ ಕಲೋನಿಯಲ್ ವ್ಯವಸ್ಥೆಯನ್ನು ಗಾಂಧೀಜಿಯವರ ಹಿಂದ್ ಸ್ವರಾಜ್ ಚಿಂತನೆಯೊಂದಿಗೆ ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಮೂಲಕ ಮೊದಲ ಹೆಜ್ಜೆಯನ್ನು ಶುರು ಮಾಡಬಹುದು. ಸಾಂಸ್ಕೃತಿಕ ಯಜಮಾನ್ಯಕ್ಕೆ ಹೆಚ್ಚಿನ ಅಧಿಕಾರ ದೊರಬೇಕು ಎಂದು ಹೇಳಿದ ಖ್ಯಾತ ರಾಜಕೀಯ ಚಿಂತಕ ಗ್ರಾಮ್ಷಿಯ ಮಾತುಗಳು ಇಂದಿಗೂ ಪ್ರಾಮುಖ್ಯತೆಯನ್ನು ಪಡೆದಿದೆ. ಗ್ರಾಮ್ಷಿ ಹೇಳಿದ ದುಡಿಯುವ ವರ್ಗಗಳನ್ನು ಬುದ್ಧಿ ಜೀವಿಗಳನ್ನಾಗಿಯೂ ರೂಪಿಸಬೇಕು ಎನ್ನುವ ಮಾತುಗಳು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತದೆ.

ಆದರೆ ಕೋಮುವಾದ ಹಿಂಸೆಯನ್ನು ಏಡ್ಸ್ ಮತ್ತು ಮಾವೋವಾದಿ ಹಿಂಸೆಯನ್ನು ವೈರಸ್ ಎಂತಲೂ ಕರೆದ ನಮ್ಮ ಪ್ರಮುಖ ಲೇಖಕರಾದ, ಕನ್ನಡದ ಅದ್ಭುತ ಕಥೆಗಾರರಾದ ಯು.ಆರ್.ಅನಂತಮೂರ್ತಿಯವರ ಜನಪ್ರಿಯ ಹೇಳಿಕೆ ಮಾತ್ರ ಅತ್ಯಂತ ಜೊಳ್ಳು ಎಂಬುದರ ಬಗೆಗೆ ಯಾವುದೇ ಸಂಶಯವಿಲ್ಲ. ಎಲ್ಲಾ ಬಗೆಯ ಸಂಸ್ಕೃತಿ ಚಿಂತನೆಗಳನ್ನು ರೋಮ್ಯಾಂಟಿಕ್‌ಗೊಳಿಸುವ, ಸದಾ ಜಗತ್ತಿನ ಚಿಂತಕರನ್ನು ಕೋಟ್ ಮಾಡುತ್ತಾ ಅತ್ಯಂತ ಆಕರ್ಷಕವಾಗಿ ಮಾತನಾಡುವ ನಮ್ಮ ಪ್ರೀತಿಯ ಲೇಖಕ ಅನಂತಮೂರ್ತಿಯವರಲ್ಲಿ ಯಾವುದೇ ಸಮಸ್ಯೆಗೆ ವಾಸ್ತವಾದದ ನೆಲೆಯ ಪರ್ಯಾಯ ಚಿಂತನೆಗಳಿದ್ದಂತಿಲ್ಲ. ಏಕೆಂದರೆ ಪ್ರತಿಯೊಂದನ್ನು ಅಮೂರ್ತವಾಗಿ, ಸಾಹಿತ್ಯದ ರೋಮಾಂಚಕತೆಯಲ್ಲಿ ಗ್ರಹಿಸುವ ಅನಂತಮೂರ್ತಿಯವರು ಯಾವುದನ್ನೂ ಹತ್ತಿರದಿಂದ ಹಾಗೂ ಅನುಭವದ ಮೂಸೆಯಲ್ಲಿ ಅರಿತು ಮಾತನಾಡಿದ್ದು ಕಡಿಮೆಯೆಂದೆನಿಸುತ್ತದೆ. ಅಷ್ಟೇಕೆ ಇಂಡಿಯಾದ ಸಮಾಜವಾದಿ ಚಳವಳಿಗಳ ಒಟ್ಟಾರೆ ಸಾಧನೆಗಳು, ಅದರ ಧನಾತ್ಮಕ ಹಾಗೂ ಖುಣಾತ್ಮಕ ಮಾದರಿಗಳು, ಈ ಚಳವಳಿ ಮತ್ತು ಸಿದ್ಧಾಂತ ಬಹುಪಾಲು ಸೋತದ್ದೆಲ್ಲಿ, ಕೆಲವೇ ಸಲ ಗೆದ್ದದ್ದೆಲ್ಲಿ ಎಂದು ಗುರುತಿಸಲು ಅನಂತಮೂರ್ತಿಯವರಿಗೆ ಇನ್ನೂ ಸಾಧ್ಯವಾದಂತಿಲ್ಲ. ಈ ಚಳವಳಿಯನ್ನು ಅದರಲ್ಲೂ ಕರ್ನಾಟಕದ ಸಮಾಜವಾದಿ ಚಳವಳಿಗಳನ್ನು ತೀರಾ ಹತ್ತಿರದಿಂದ ಕಂಡಂತಹ ಅನಂತಮೂರ್ತಿಯವರು ಇಂದಿಗೂ ಸಮಾಜವಾದವನ್ನು ಇಂಡಿಯಾದ ನೆಲೆಯಲ್ಲಿ ಅರ್ಥೈಸಲು ವಿಫಲರಾಗುತ್ತಾರೆ. ಏಕೆಂದರೆ ಇಂದಿಗೂ ಇವರಿಗೆ ನಮ್ಮ ಸಾಮಾಜಿಕ ಸಂರಚನೆಗಳು ಅರ್ಥವಾದಂತಿಲ್ಲ. ಏಕೆಂದರೆ ಬಲು ಸುಲಭವಾಗಿ ಇವರು ತಮ್ಮ ಮಾತಿನ ರೋಮಾಂಚಕತೆಗೆ ತಾವೇ ಮರುಳಾಗುವ ಗುಣದಿಂದ. ಏಕೆಂದರೆ ತಲ್ಲಣಗಳನ್ನು, ಕ್ರೈಸಿಸಸ್‌ನ್ನು ಖುಜುತ್ವದ ಗುಣದಿಂದ, ಶಬ್ದ ಸೂತಕದ ನೆಲೆಯಲ್ಲಿ ಮಾತನಾಡುವುದರ ಬದಲಾಗಿ ಆಕರ್ಷಕವಾಗಿ, ಅದ್ಭುತವಾಗಿ, ನಿರರ್ಗಳವಾಗಿ ಮಾತನಾಡುವುದರಿಂದ. ಏಕೆಂದರೆ ಎಲ್ಲವನ್ನೂ ಪುಸ್ತಕದ ಪಾಂಡಿತ್ಯದ ಮೂಲಕ ಅಧ್ಯಯನವನ್ನು ನಡೆಸಿ ಈ ಆಕರ್ಷಕ ಪಾಂಡಿತ್ಯವನ್ನೇ ತಮ್ಮ ವಾದಕ್ಕೆ ನೆಲೆಯನ್ನು ಬಳಸಿಕೊಂಡರೇ ಹೊರತಾಗಿ ಸಾಮಾನ್ಯ ಜನರ ಬದುಕಿನ ಜೀವನದೊಂದಿಗೆ ಒಡನಾಡಿ, ಬೆರೆತು ಆ ವಾಸ್ತವವಾದಿ ಅಧ್ಯಯನದಿಂದ ಜೀವಂತ ಮಾದರಿಗಳನ್ನು, ನೈಜ ಕಳಕಳಿಗಳನ್ನು ನಮ್ಮ ತಲೆಮಾರಿಗೆ ತಲುಪಿಸಲು ಅನಂತಮೂರ್ತಿಯವರು ವಿಫಲರಾಗಿದ್ದಾರೆ. ಉದಾಹರಣೆಗೆ ಪ್ರತಿಯಾಗಿ ಬಾಲಗೋಪಾಲ್ ಅವರು ಇಲ್ಲಿನ ಎನ್ಕೌಂಟರ್‌ಗಳ ಬಗೆಗೆ ಮಾತನಾಡಿದ್ದು, ಆದಿಲಾಬಾದಿನಲ್ಲಿ ಬರ ಹಾಗೂ ಟಾಡಾ, ಖುಷ್ಯಷೃಂಗನಿಗೆ ಕಾಯುತ್ತಿರುವ ರಾಯಲಸೀಮಾ, ಚುಂಡೂರು, ನಂತರದ ಇತರ ಚೂರುಗಳು ದಂತಹ ಅರ್ಥಪೂರ್ಣ ಒಳತೋಟಿಗಳನ್ನುಳ್ಳ, ನೆಲದ ಅಪ್ತತೆಯನ್ನು ಮೈದಾಳಿದ ನುಡಿಕಟ್ಟುಗಳ ಬರವಣಿಗೆಗಳನ್ನು ಹಾಗೂ ಚಿಂತನೆಗಳನ್ನು ನಮಗೆ ಕಾಣಿಸುವ ರೀತಿ ಬಲು ಅನನ್ಯವಾದದು. ಆದೇ ರೀತಿ ತೆಲಂಗಾಣ ಹೋರಾಟದ ಬಗೆಗೆ, ನವಕಲೋನಿಯಲ್‌ನ ಖಾಂಡವ ದಹನದ ಬಗೆಗೆ ಫ್ರೊ.ಹರಗೋಪಾಲ್ ಅವರು ಅತ್ಯಂತ ಮೌಲಿಕವಾಗಿ, ಮನಮುಟ್ಟುವಂತೆ ಬರೆದಿದ್ದಾರೆ ಹಾಗೂ ಮಾತನಾಡಿದ್ದಾರೆ. ಆದರೆ ನಮ್ಮ ಅನಂತಮೂರ್ತಿಯವರು ಹಾಗೂ ಅವರ ಮಾದರಿಯ ಕೆಲವು ಚಿಂತಕರಿಗೆ ಇದು ಸಾಧ್ಯವೇ ಅಗಲಿಲ್ಲ.

ತಮ್ಮ ಭಾಷಣದ ಮಧ್ಯೆ ಫ್ರೊ.ಹರಗೋಪಾಲ್ ಅವರು 35 ವರ್ಷಗಳ ಮಾನವ ಹಕ್ಕುಗಳ ಹೋರಾಟದ ಸಂದರ್ಭದಲ್ಲಿ ತಮ್ಮೊಂದಿಗೆ ಜೊತೆಜೊತೆಯಾಗಿ ನಡೆದ ಇಬ್ಬರು ಹಿರಿಯ ಐಎಎಸ್ ಆಫೀಸರ್‌ಗಳನ್ನು ನೆನೆಸಿಕೊಂಡರು. ಅವರು ಶಂಕರನ್ ಮತ್ತು ಬಿ.ಡಿ.ಶರ್ಮ. ಇದು ನಿಜಕ್ಕೂ ಹೃದಯಂಗಮವಾದದ್ದು. ಏಕೆಂದರೆ ಫ್ರೊ.ಹರಗೋಪಲ್ ಕುರಿತಾಗಿ ಮಾತನಾಡುವಾಗ ಮೇಲಿನ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಮಾತನಾಡಲು ಸಾಧ್ಯವೇ ಇಲ್ಲ.

ಶಂಕರನ್ ಅವರಂತೂ ಜನತೆಯ ಐಎಎಸ್ ಅಧಿಕಾರಿ ಎಂದು ಜನಪ್ರಿಯರಾಗಿದ್ದರು. ಬದಲಾವಣೆಗಾಗಿ ಕಾಯುತ್ತಾ ಕೂಡದೆ ಸ್ವತಃ  ತಾವೇ ಮುನ್ನುಗ್ಗಿ ಬದಲಾವಣೆಯ ಪ್ರಕ್ರಿಯೆಯೊಳಗೆ ಬೆರೆತದ್ದು ಈ ಶಂಕರನ್ ಅವರ ವಿಶೇಷತೆ. ತಮ್ಮ ಜೀವನವನ್ನೇ ದಲಿತರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟ ಅಪರೂಪದ ಐಎಎಸ್ ಅಧಿಕಾರಿ. ಬ್ರಹ್ಮಚಾರಿಯಾಗಿದ್ದ ಶಂಕರನ್ ಅವರು ತುಂಬಾ ಸರಳವಾಗಿ ಬದುಕಿದರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡರ ಅಡಿಯಲ್ಲಿ ಸೇವೆ ಸಲ್ಲಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಜೀತದ ಕಾಯಕವನ್ನು ನಿರ್ಮೂಲನೆಗೊಳಿಸಿದರು, ದಲಿತರಿಗೆ ವಿಶೇಷ  ಸ್ಥಾನಮಾನ ಕಲ್ಪಿಸಿದರು, ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಶೋಷಿತ ಸಮುದಾಯಕ್ಕೆ ವಿಶೇಷ ಸ್ಥಾನಮಾನಗಳನ್ನು, ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಆಂಧ್ರಪ್ರದೇಶದ ಸಮಾಜ ಕಲ್ಯಾಣ ಇಲಾಖೆಯ ಸೆಕ್ರೆಟರಿ ಆಗಿದ್ದಾಗ ಜೀತದಾಳುಗಳನ್ನು ಜೀತಮುಕ್ತಗೊಳಿಸಲು ತಾವೇ ಸ್ವತಃ  ಮುಂದೆ ನಿಂತು ಹಳ್ಳಿಗಳಿಗೆ ಸಂಚರಿಸಿ ಅಲ್ಲಿನ ಪ್ರತಿಯೊಬ್ಬರನ್ನು ವೈಯುಕ್ತಿಕವಾಗಿ ಮಾತನಾಡಿಸಿ ಜೀತವೆನ್ನುವುದರ ಕ್ರೌರ್ಯವನ್ನು ವಿವರಿಸಿ ಇದನ್ನು ತೊಲಗಿಸಲು ಮನವೊಲಿಸುತ್ತಿದ್ದರು. ಹಾಗೆಯೇ ತಮ್ಮ ಈ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿದರು. ಆದರೆ ಇದನ್ನು ಜೀರ್ಣಿಸಿಕೊಳ್ಳಲು ಆಗದ ಹಾಗೂ ಆಗ ಇದರಿಂದ ಕುಪಿತರಾದ ಆಗಿನ ಆಂಧ್ರದ ಮುಖ್ಯಮಂತ್ರಿಗಳು ಶಂಕರನ್ನು ತಂಟೆಕೋರರೆಂದು ಹಂಗಿಸಿದರು, ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ ಶಂಕರನ್ ಇದು ತನ್ನ ಕರ್ತವ್ಯ ಹಾಗೂ ಮಾನವೀಯತೆಯ ಕೆಲಸ ಎಂದು ಸಮರ್ಥಿಸಿಕೊಂಡರು. ಕಡೆಗೆ ಸರ್ಕಾರವು ಇವರನ್ನು ರಜೆಯ ಮೇಲೆ ತೆರಳುವಂತೆ ಒತ್ತಡ ತಂದಿತು. ಆದರೆ ಇವರೆಷ್ಟು ಜನಪ್ರಿಯರೆಂದರೆ ಈ ಸಂದರ್ಭದಲ್ಲಿ ತ್ರಿಪುರಾದ ಮುಖ್ಯಮಂತ್ರಿಗಳಾಗಿದ್ದ ನೃಪೇನ್ ಚಕ್ರವರ್ತಿ ಅವರು ಶಂಕರನ್ ಅವರನ್ನು ತಮ್ಮ ರಾಜ್ಯಕ್ಕೆ ಆದ್ಯತೆಯ ಮೇರೆಗೆ ಕರೆಸಿಕೊಂಡು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. ಈ ಇಬ್ಬರು ಬ್ರಹ್ಮಚಾರಿಗಳ ಜೋಡಿ ಆ ಕಾಲಕ್ಕೆ ತ್ರಿಪುರಾ ರಾಜ್ಯದಲ್ಲಿ ಮನೆಮಾತಾಗಿತ್ತು. ಇವರಿಬ್ಬರೂ ಒಂದು ಕೋಣೆಯ ಸರ್ಕಾರಿ ಅತಿಥಿಗೃಹದಲ್ಲಿ ವಾಸಿಸುತ್ತಿದ್ದರು. ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಿದರು. ಇವರಿಬ್ಬರ ಜೋಡಿಯ ಆಡಳಿತದ ಆ 6 ವರ್ಷಗಳು ಅತ್ಯಂತ ಯಶಸ್ವೀ ಅವಧಿಯಾಗಿತ್ತು ಎಂದು ಹರ್ಷ ಮಂದರ್ ಅವರು ನೆನಸಿಕೊಳ್ಳುತ್ತಾರೆ. ಶಂಕರನ್ ತಮ್ಮ ಜೀವನದುದ್ದಕ್ಕೂ ಈ ನಕ್ಸಲ್ ಚಳವಳಿಗಳ ಮಿಥ್ ಅನ್ನು, ಅದರ ವಿಫಲತೆಯ ಗುಣಗಳನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದ್ದರು. ಸುಪ್ರೀಂ ಕೋರ್ಟ್‌ಗೆ ಕಮಿಷನರ್ ಆಗಿ ನಿಯುಕ್ತರಾದಾಗ ಶಂಕರನ್ ಅವರು ಸರ್ಕಾರಗಳು ಹೇಗೆ ಅನುಕೂಲಕರ ಹಾಗೂ ಜನಪರ ಆಡಳಿತವನ್ನು ಕೊಡಲು ಸೋಲುತ್ತವೆ ಇವರ ಈ ಸೋಲಿನಿಂದ ಸಮಾಜದ ಕೆಳಗಿನ ವರ್ಗಗಳಿಗೆ ಆಗುವ ತೊಂದರೆಗಳು ಹಾಗೂ ಈ ತೊಂದರೆಗಳನ್ನು ಬಳಸಿಕೊಂಡು ಹುಟ್ಟಿಕೊಳ್ಳುವ ಮಾವೋವಾದಿಗಳು ಎಂಬುದರ ಕುರಿತಾಗಿ ಮನಮುಟ್ಟುವಂತೆ ವಿವರಿಸುತ್ತಿದ್ದರಂತೆ ಈ ಜನರ ಐಎಎಸ್ ಆಫೀಸರ್!! ಮಾವೋವಾದಿಗಳ ಸಮಸ್ಯೆಯನ್ನು ಗಾಂಧಿಯ ಮಾದರಿಯಲ್ಲಿ ಬಗೆಹರಿಸಲು ಶ್ರಮಿಸುತ್ತಿದ್ದರು. ಹಿಂಸೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಅತ್ಯಂತ ಕುತೂಹಲದ ವಿಷಯವೆಂದರೆ ಇಂತಹ ಶಂಕರನ್ ಅವರನ್ನು ಕೂಡ ನಕ್ಸಲರು ಅಪಹರಿಸಿದ್ದರು!! ಆದರೆ ಈ ಮಾವೋವಾದಿಗಳು ಶಂಕರನ್ ಅವರನ್ನು ಅಪಹರಿಸಿದ್ದು ಒತ್ತೆಯಾಳಾಗಿ ಇರಿಸಿಕೊಳ್ಳಲು ಅಲ್ಲ. ಬದಲಾಗಿ ಶಂಕರನ್ ಅವರೊಂದಿಗೆ ಸಮಾಜದ ಕಲ್ಯಾಣದ ಕುರಿತಾಗಿ ಚರ್ಚಿಸಲು!! ತಾವು ನಿಜಕ್ಕೂ ಹಿಂಸಾವಾದಿಗಳು ಅಲ್ಲವೆಂದು ತಮ್ಮ ಆಶಯಗಳನ್ನು ಶಂಕರನ್ ಅವರಿಗೆ ಮನವರಿಕೆ ಮಾಡಿಕೊಳ್ಳಲು. ಕೆಲವು ದಿನಗಳ ನಂತರ ಯಾವುದೇ ಷರತ್ತಿಲ್ಲದೆ ಶಂಕರನ್ ಅವರನ್ನು ಬಿಡುಗಡೆಗೊಳಿಸಿದ್ದರು!! ಇದು ಶಂಕರನ್‌ರವರ ಜನಪ್ರಿಯ ಮಾದರಿ. ನಂತರ ಎರಡು ಬಾರಿ ಹರಗೋಪಾಲ್ ಅವರೊಂದಿಗೆ ಜೊತೆಗೂಡಿ ಮಾವೋವಾದಿಗಳೊಂದಿಗೆ ಸಂಧಾನಕಾರರಾಗಿಯೂ ಕೆಲಸ ಮಾಡಿದ್ದರು ಈ ಶಂಕರನ್.

ಇದನ್ನೆಲ್ಲ ಶಂಕರನ್ ಸಾಧಿಸಿದ್ದು ಒಬ್ಬ ಐಎಎಸ್ ಅಧಿಕಾರಿಯಾಗಿಯೇ ಹೊರತು ರಾಜಕಾರಣಿಯಾಗಿಯಲ್ಲ. 1992ರಲ್ಲಿ ತಾವು ನಿವೃತ್ತಿ ಹೊಂದಿದ ನಂತರವೂ ಪುಂಜಗೊಟ್ಟದಲ್ಲಿ ಒಂದು ಕೋಣೆಯ ಸಣ್ಣ ಅಪಾರ್ಟಮೆಂಟ್ ಒಂದರಲ್ಲಿ ವಾಸಿಸುತ್ತಿದ್ದರು. ತಮ್ಮ ಪಿಂಚಣಿಯ ಅರ್ಧಭಾಗವನ್ನು ದಲಿತ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ತಮ್ಮ ಕಡೆಯ ದಶಕವನ್ನು ಸಫಾಯಿ ಕರ್ಮಚಾರಿಗಳ ಏಳಿಗೆಗಾಗಿ ಮೀಸಲಿಟ್ಟರು. ಮಲದ ಗುಂಡಿಯನ್ನು ತೊಳೆಯುವ ಭಂಗಿಗಳ ಸಂಖ್ಯೆಯನ್ನು 13 ಲಕ್ಷದಿಂದ 3 ಲಕ್ಷಕ್ಕೆ ಇಳಿಸಿದ್ದರು ಈ ಶಂಕರನ್. ಸಫಾಯಿ ಕರ್ಮಚಾರಿ ಸಂಘದ ನಾಯಕನದ ‘ಬಿಜವಾಡ ವಿಲ್ಸನ್’ ಇವರ ಮಗನಂತಿದ್ದ. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಸರ್ಕಾರಿ ಕೆಲಸದ ಮೇಲೆ ಪ್ರವಾಸದ ಹೊರಟಾಗ ಇಳಿದುಕೊಳ್ಳುತ್ತಿದ್ದುದು ದಲಿತರ ಕೇರಿಗಳಲ್ಲಿ! ಅನೇಕ ರಾಜ್ಯಗಳು ಮತ್ತು ದೆಹಲಿ ಹಾಗೂ ಆಂಧ್ರಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಂಕರನ್ ಅವರು ತಮ್ಮ ಅಧಿಕಾರದ ಅವಧಿಯುದ್ದಕ್ಕೂ ತಮ್ಮೊಂದಿಗೆ ಕೂಡಿಟ್ಟುಕೊಂಡಿದ್ದು ಕೇವಲ ಒಂದು ಭ್ರೀಫ್ಕೇಸ್ ಮತ್ತು ಅದರಲ್ಲಿ ಕೇವಲ ಎರಡು ಜೊತೆ ಬಟ್ಟೆಗಳು ಮಾತ್ರ. ಇದನ್ನು ಹರಗೋಪಾಲ್ ಅವರು  ಬಹಳ ಭಾವುಕರಾಗಿ ಆಗಿ ನೆನಸಿಕೊಂಡರು. ತಾವು ಸಾಯುವಾಗಲೂ ಈ ಐಎಎಸ್ ಅಧಿಕಾರಿ ಶಂಕರನ್ ಬಿಟ್ಟುಹೋಗಿದ್ದು ಈ ಭ್ರೀಫ್ಕೇಸ್ ಮತ್ತು ಆ ಎರಡು ಜೊತೆ ಬಟ್ಟೆಗಳು ಮತ್ತು ಸಾವಿರಾರು ವರ್ಷಗಳ ಕಾಲ ಜೀವಂತವಾಗಿ ಬದುಕುಳಿಯುವ ಆದರ್ಶದ, ಜನಪರ ಜೀವನದ ಮಾದರಿ.

ಅಕ್ಟೋಬರ್ 10 2010ರಲ್ಲಿ ತಮ್ಮ 76ರ ವಯಸ್ಸಿನಲ್ಲಿ ಹೃದಯಾಘಾತದಿಂದ ಶಂಕರನ್‌ಗುರು ತೀರಿಕೊಂಡರು. ಆಗ ಒಬ್ಬ ಜನನಾಯಕನ ಶವಸಂಸ್ಕಾರಕ್ಕೆ ಮುತ್ತುವಂತೆ ಜನಸಾಗರವೇ ಹರಿದುಬಂದಿತ್ತು. ಈ ಜನಸಾಗರದಲ್ಲಿ ಸರ್ಕಾರಿ ಅಧಿಕಾರಿಗಳು, ಪೋಲೀಸರು, ದಲಿತರು, ಆದಿವಾಸಿಗಳು, ಕೂಲಿಕಾರ್ಮಿಕರು ಎಲ್ಲರೂ ಸೇರಿದ್ದರು. ಈ ಎಲ್ಲರ ಕಣ್ಣಲ್ಲಿ ನೀರು. ಬರೀ ನೀರು. ತಂದೆಯನ್ನು, ಪೋಷಕನನ್ನು, ಗೆಳೆಯನನ್ನು ಕಳೆದುಕೊಂಡ ಅಪಾರವಾದ ಸಂಕಟ ಅಲ್ಲಿ ಮನೆಮಾಡಿತ್ತು.

ಫ್ರೊ.ಹರಗೋಪಾಲ್ ಅವರ ಮಾನವ ಹಕ್ಕುಗಳ ಹೋರಾಟದಲ್ಲಿ ಅವರ ಜೊತೆಗೆ ಎರಡನೇ ಸರ್ಕಾರಿ ಅಧಿಕಾರಿಯಾಗಿ ಹೆಗಲುಕೊಟ್ಟವರು ಮತ್ತೊಬ್ಬ ಐಎಎಸ್ ಅಧಿಕಾರಿ 87ರ ಹರೆಯದ ಬಿ.ಡಿ.ಶರ್ಮ. ಇವರೂ ಸಹ ತಮ್ಮ ಸರಳ ಜೀವನಕ್ಕೆ ಹೆಸರುವಾಸಿ. ಐಎಎಸ್ ಅಧಿಕಾರಿಯಾಗಿದ್ದರೂ ಜೀವನ ಪೂರ್ತಿ ಖಾದಿ ಬಟ್ಟೆಯನ್ನು ಮಾತ್ರ ತೊಟ್ಟರು. ಜೀವನಪೂರ್ತಿ ಆದಿವಾಸಿಗಳ ಹಕ್ಕಿಗಾಗಿ ಹೋರಾಡಿದರು. ಇವರು ತೀರಾ ಇತ್ತೀಚೆಗೆ ತಮ್ಮ 87ರ ಹರೆಯದಲ್ಲಿ  ಸುಕ್ಮ ಕಲೆಕ್ಟರ್ ಅಲೆಕ್ಸ ಪೌಲ್ ಮೆನನ್ ಮತ್ತು ಇಬ್ಬರು ಇಟಲಿ ಒತ್ತೆಯಾಳುಗಳ ಬಿಡುಗಡೆಗಾಗಿ ಹರಗೋಪಾಲ್ ಅವರೊಂದಿಗೆ ಸಂಧಾನಕಾರರಾಗಿ ಭಾಗವಹಿಸಿದ್ದರು. ಈ ಅಧಿಕಾರಿಗಳ ಅಪಹರಣದ ಬಗ್ಗೆ ಕೇಳಿದಾಗ ಬಿ.ಡಿ.ಶರ್ಮ ಹೇಳುತ್ತಿದ್ದುದು ‘ಸಾವಿರಾರು ಅಮಾಯಕ ಬಡವರು, ಆದಿವಾಸಿಗಳನ್ನು ಅನುಮಾನಾಸ್ಪದವಾಗಿ ಜೈಲಿನಲ್ಲಿ ಬಂಧಿಸಿಟ್ಟೀದ್ದೀರಲ್ಲ ಇದು ಅಪಹರಣವಲ್ಲವೇ’ ಎಂದು ಪ್ರಶ್ನಿಸುತ್ತಿದ್ದರು ಈ ಮಾಜಿ ಐಎಎಸ್ ಅಧಿಕಾರಿ! ಆದರೂ ಸಹ ಇವರು ಮಾವೋವಾದಿಗಳ ಹಿಂಸೆಯನ್ನು ಖಂಡಿಸುತ್ತಿದ್ದರು. ಇವರೊಂದಿಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿರುವ ಫ್ರೊ.ಹರಗೋಪಾಲ್ ನೆನೆಸಿಕೊಳ್ಳುತ್ತಾ  ಬಿ.ಡಿ.ಶರ್ಮ ಅವರು ಕಮಿಷನರ್ ಆಗಿದ್ದರೂ ಸಹ ಎರಡನೇ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಒಂದು ವೇಳೆ ಮುಂಗಡ ಟಿಕೇಟು ಸಿಗದಿದ್ದರೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಒರಿಸ್ಸಾದ ಆ ಸುಡುಬಿಸಿಲಿನಲ್ಲಿಯೂ ಶರ್ಮ ಅವರು ಫ್ಯಾನ್ ಅನ್ನು ಬಳಸುತ್ತಿರಲಿಲ್ಲ. ಈ ರೀತಿಯ ಸೌಲಭ್ಯಗಳನ್ನು ಬಯಸುವವನು ಅದು ಹೇಗೆ ಆದಿವಾಸಿಗಳ, ಕೂಲಿ ಕಾರ್ಮಿಕರ ಪರವಾಗಿ ಹೋರಾಡಲು ಸಾಧ್ಯ ಎಂದು ಸವಲತ್ತುಗಳನ್ನು ತಿರಸ್ಕರಿಸುತ್ತಿದ್ದರು. ಒರಿಸ್ಸಾದ ಬಸ್ತರ್‌ನಲ್ಲಿ ಕಮೀಷನರ್ ಆಗಿ ಕೆಲಸ ಮಾಡುವಾಗ ಗೊಂಡಾರಣ್ಯಗಳಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿದ್ದರು. ನನ್ನ ಜಿಲ್ಲೆಗೆ, ನನ್ನ ಜನರ ಬಳಿಗೆ ಹೊರಡುವಾಗ ನನಗೆ ಸುರಕ್ಷತೆ ಬೇಡ ಎಂದು ಹೇಳುತ್ತಿದ್ದರು. ಇವರು ಮಧ್ಯಪ್ರದೇಶದಲ್ಲಿ ಬುಡಕಟ್ಟುಗಳ ಸೆಕ್ರೆಟರಿ ಆಗಿದ್ದಾಗ ಅಲ್ಲಿನ ಸರ್ಕಾರವು 15 ಪೇಪರ್ ಕಾರ್ಖಾನೆಗಳನ್ನು ಸ್ಥಾಪಿಸುವುದನ್ನು ತಡೆದರು. ಈ ಕಾರ್ಖಾನೆಗಳು ಆದಿವಾಸಿಗಳ ಬದುಕನ್ನು ಹಾಳು ಮಾಡುತ್ತದೆಂದು ಗುಡುಗಿದ್ದರು. ಆದರೆ ಸರ್ಕಾರ ಇವರ ವಿರೋಧಕ್ಕೆ ಬೆಲೆ ಕೊಡದಿದ್ದಾಗ ಶರ್ಮ ರಾಜೀನಾಮೆಯನ್ನು ಕೊಟ್ಟರು. ಎಂದು ನೆನಸಿಕೊಳ್ಳುತ್ತಾರೆ. ಕೆಲಸದಿಂದ ನಿವೃತ್ತಿ ಹೊಂದಿದ ನಂತರ ‘ಭಾರತ ಜನಾಂದೋಲನ’ ವೆನ್ನುವ ಸಂಘವನ್ನು ಸ್ಥಾಪಿಸಿದರು. ಇದರ ಮೂಲಕ ಒರಿಸ್ಸಾದಲ್ಲಿ ಪೋಸ್ಕೋ ಕಂಪನಿಯ ವಿರುದ್ಧ ಆದಿವಾಸಿಗಳ ಪರವಾಗಿ ಹೋರಾಡಿದರು. ಪ್ರತಿ ಹಂತದಲ್ಲೂ ಸರ್ಕಾರವನ್ನು ಚಾಲೆಂಜ್ ಮಾಡುತ್ತಿದ್ದರು ಈ ನಿವೃತ್ತ ಐಎಎಸ್ ಅಧಿಕಾರಿ ಶರ್ಮ!!

ಆದರೆ ಬೌದ್ಧಿಕವಾಗಿ ದಿವಾಳಿಯಾದ ನಮ್ಮ ಮಾಧ್ಯಮಗಳಿಗೆ, ಅಧಿಕಾರಿಶಾಹಿಗೆ, ಮಧ್ಯಮವರ್ಗಕ್ಕೆ ಇವರ ಸರಳತೆ, ನಿಸ್ಪೃಹತೆ, ಮಾನವೀಯತೆ ಮತ್ತು ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟದ್ದು ಎಲ್ಲವೂ ಅಸಂಬದ್ಧವಾಗಿಯೂ, ಅನಗತ್ಯವಾಗಿಯೂ ಕಾಣಿಸಿರಲಿಕ್ಕೂ ಸಾಕು!. ಏಕೆಂದರೆ ಇವರಿಗೆ ಎಲ್ಲವೂ ಸರಕಾಗಿ ಕಾಣಿಸಿಕೊಳ್ಳಬೇಕು. ಆಗಲೇ ಇವನ್ನು ಪ್ಯಾಕೇಜ್ ಆಗಿ ಮಾರಲು ಸಾಧ್ಯ!!

ಶಿಕ್ಷಣ ಇಲಾಖೆಗೊಂದು ಆಕ್ಷೇಪಣಾ ಪತ್ರ…

ಸ್ನೇಹಿತರೆ,

ಪ್ರಾಥಮಿಕ ಶಿಕ್ಷಣದ ಕ್ಷೇತ್ರದಲ್ಲಿ ತಮ್ಮ “ಪ್ರೇರಣಾ” ಸಂಸ್ಥೆಯ ಮೂಲಕ ತೊಡಗಿಸಿಕೊಂಡು ಕೆಲಸ ಮಾಡುತ್ತ ಬಂದಿರುವ ರೂಪ ಹಾಸನರವರು ಸರ್ಕಾರಿ ಪ್ರಾಥಮಿಕ ಶಿಕ್ಷಣದ ಬಗ್ಗೆ ತಮ್ಮ ಲೇಖನಗಳ ಮೂಲಕ ಸರ್ಕಾರದ ಮತ್ತು ಪ್ರಜ್ಞಾವಂತರ ಗಮನ ಸೆಳೆಯುತ್ತ ಬಂದಿದ್ದಾರೆ. ಇದು ಅವರು ಕಳುಹಿಸಿರುವ ಮನವಿ ಪತ್ರ. ವರ್ತಮಾನದ ಓದುಗರಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದವರು ಅನೇಕರಿದ್ದಾರೆ ಮತ್ತು ನಮ್ಮೆಲ್ಲರಿಗೂ ಸಮಾನ, ಉಚಿತ, ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಸ್ಪಷ್ಟ ನಿಲುವಿದೆ. ಈ ನಿಟ್ಟಿನಲ್ಲಿ ರೂಪ ಹಾಸನರವರು ನಮಗೆ ಕಳುಹಿಸಿರುವ ಈ ಮನವಿ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಓದುಗರು ಇದರ ಬಗ್ಗೆ ಯೋಚಿಸಿ ನಿಮ್ಮ ಸ್ಪಷ್ಟ ಅಭಿಪ್ರಾಯವನ್ನು (ಅದು ಇಲ್ಲಿರುವುದಕ್ಕೆ ಸಹಮತವೇ ಆಗಿರಬೇಕೆಂದೇನೂ ಇಲ್ಲ) ಈ ಕೆಳಕಂಡ ಇಮೇಲ್ ವಿಳಾಸಕ್ಕೆ ತಲುಪಿಸಲು ಕೋರುತ್ತೇನೆ. ರವಿ ಕೃಷ್ಣಾರೆಡ್ಡಿ…

ಆತ್ಮೀಯರೇ,

ಹತ್ತು ಸಾವಿರದಸ್ಟು  ಸರ್ಕಾರಿ ಶಾಲೆ ಮುಚ್ಚುವಂತೆ ಪ್ರೊ. ಆರ್.ಗೋವಿಂದ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇದೆ ಆಗಸ್ಟ್ 31 ಕೊನೆಯ ದಿನವಾಗಿದೆ. ಮಕ್ಕಳ ಶಿಕ್ಷಣ ಕುರಿತು ಆಸಕ್ತಿ ಇರುವ ನೀವು- ನಿಮ್ಮ ಮಿತ್ರರು ದಯಮಾಡಿ ಇಲ್ಲಿಗೆ ಮೇಲ್ ಮಾಡಿ. ಆಕ್ಷೇಪಣೆ ಸಲ್ಲಿಸಿ. ನಾನು ಕೆಳಕಂಡಂತೆ ಆಕ್ಷೇಪಣೆ ಸಲ್ಲಿಸಿರುವೆ. ನೀವು ಅವಶ್ಯವೆನಿಸಿದರೆ ಹೆಸರು ಬದಲು ಮಾಡಿ ಈ ಪತ್ರವನ್ನೇ ಬಳಸಿಕೊಳ್ಳಬಹುದು. cpi.edu.sgkar@kar.nic.in


ಸದಸ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಯೋಜನಾ ನಿರ್ದೇಶಕರು,
ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ,
ನೃಪತುಂಗ ರಸ್ತೆ, ಕೆ.ಆರ್. ಸರ್ಕಲ್,
ಬೆಂಗಳೂರು,

-ಇವರಿಗೆ,

ಮಾನ್ಯರೆ,

ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಪುನರ್ ಸಂಘಟನೆ ಕುರಿತ ವರದಿಯು ಹಲವು ರೀತಿಯಲ್ಲಿ ಅವೈಜ್ಞಾನಿಕವಾಗಿದ್ದು, ಸರ್ಕಾರಿ ಶಾಲೆಗಳನ್ನು ಈಗಾಗಲೇ ಸಾವಿರ ಸಂಖ್ಯೆಯಲ್ಲಿ ಮುಚ್ಚಿದ್ದರಿಂದ ಶಿಕ್ಷಣ ಇಲಾಖೆಯ ಅಧಿಕೃತ ಶೈಕ್ಷಣಿಕ ವರದಿ 2010-11ರ ಪ್ರಕಾರ, ಶಾಲೆಯ ಹೊರಗಿದ್ದ 39841 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. 2011-12ರ ಮೊನ್ನೆಯ ಜೂನ್ ವರದಿಯನ್ವಯ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ದ್ವಿಗುಣವಾಗಿ 68301ರಷ್ಟಾಗಿದೆ! ಇದರ ಜೊತೆಗೆ ಇನ್ನೂ ಅಂದಾಜು 10 ಸಾವಿರ ಶಾಲೆಗಳನ್ನು ಮುಚ್ಚಿದರೆ ಶಾಲೆಗಳಿಂದ ಹೊರಗುಳಿವ ಮಕ್ಕಳ ಸಂಖ್ಯೆ ಅಧಿಕವಾಗಿ ಅವರನ್ನು ಶಿಕ್ಷಣದಿಂದ ವಂಚಿಸಿದಂತಾಗುತ್ತದೆ. ಜೊತೆಗೆ, ಈಗಾಗಲೇ ಮಿತಿಮೀರಿರುವ ಖಾಸಗಿ ಶೈಕ್ಷಣಿಕ ವಲಯಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಈ ಪ್ರಮಾಣದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವುದಾದರೆ ಎಲ್ಲ ಮಕ್ಕಳಿಗೂ ’ಉಚಿತ’ ’ಕಡ್ಡಾಯ’ ಶಿಕ್ಷಣ ಎಂಬ ಮಾತಿಗೆ ಅರ್ಥವಿದೆಯೇ?

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗಲು ಜನನ ಪ್ರಮಾಣದಲ್ಲಿನ ಕುಸಿತವೇ ಕಾರಣವೆಂದು ಒತ್ತಿ ಹೇಳಿರುವ ವರದಿ, ರಾಜ್ಯಾದ್ಯಂತಾ ಲಂಗುಲಗಾಮಿಲ್ಲದಂತೆ ತೆರೆದುಕೊಂಡಿರುವ 3000 ಕ್ಕೂ ಹೆಚ್ಚಿನ ಅನಧಿಕೃತ ಖಾಸಗಿ ಶಾಲೆಗಳ ಬಗೆಗಾಗಲಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ರಾಜ್ಯದಲ್ಲಿ ಯಾವುದೇ ಸ್ಪಷ್ಟ ನೀತಿ ನಿಯಮಗಳು ಇಲ್ಲದ್ದರಿಂದ ಅರ್ಧದಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವುದನ್ನಾಗಲಿ, ಸರ್ಕಾರಿ ಶಾಲೆಗಳು ಮೂಲ ಸೌಕರ್ಯವೂ ಇಲ್ಲದೇ ಸೊರಗಿರುವುದನ್ನಾಗಲಿ, 8000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಭರ್ತಿಗಾಗಿ ಕಾದಿರುವುದನ್ನಾಗಲಿ ವರದಿಯಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡ ಈ ವರ್ಷವೇ ’ಉಚಿತ’ ’ಕಡ್ಡಾಯ’ ಶಿಕ್ಷಣದಿಂದ ಇಷ್ಟೊಂದು ಮಕ್ಕಳನ್ನು ದೂರಮಾಡುತ್ತಿರುವುದು ವಿಪರ್ಯಾಸ. ರಾಜ್ಯದ ಬಡ-ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರದಿ ಅವೈಜ್ಞಾನಿಕವೂ, ಮಾರಕವೂ ಆದುದಾಗಿರುವುದರಿಂದ, ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಈ ಮೂಲಕ ವಿನಂತಿಸುತ್ತೇನೆ. ಬದಲಿಗೆ ಸರ್ಕಾರಿ ಶಾಲೆಗಳನ್ನು ಬಲಪಡಿಸಲು, ಅನಧಿಕೃತ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು, ಖಾಸಗಿವಲಯದ ಪಾಲುದಾರಿಕೆ ಎಷ್ಟು ಪ್ರಮಾಣದಲ್ಲಿರಬೇಕು? ಯಾವ ಸ್ವರೂಪದಲ್ಲಿರಬೇಕು? ಅದರ ಮೇಲೆ ಸರ್ಕಾರದ ನಿಯಂತ್ರಣ ಹೇಗಿರಬೇಕು? ಈ ಕುರಿತು ತಕ್ಷಣದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿ ಕಾರ್ಯಪ್ರವರ್ತರಾಗಬೇಕೆಂದು ಕೇಳಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,
ರೂಪ ಹಾಸನ
ಪ್ರೇರಣಾ
ಉತ್ತರ ಬಡಾವಣೆ,
ಹಾಸನ – 573201

ರಾಜಕೀಯ ಕ್ಷೇತ್ರದ ಸುಧಾರಣೆಗೆ ಕೆಲವು ಆಲೋಚನೆಗಳು

-ಆನಂದ ಪ್ರಸಾದ್

ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಬಹುತೇಕ ವಂಶವಾಹಿಪ್ರಭುತ್ವ ವ್ಯವಸ್ಥೆಯಾಗಿ ಮಾರ್ಪಾಡಾಗಿದ್ದು ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಉಳಿಸಿಕೊಳ್ಳಬೇಕಾದರೆ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಈಗ ಭಾರತದ ಬಹುತೇಕ ಪಕ್ಷಗಳು ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿವೆ. ಹೀಗಾಗಿ ಎಷ್ಟೇ ಚುನಾವಣೆಗಳು ನಡೆದರೂ ಸರ್ಕಾರದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಒಂದು ಕುಟುಂಬದ ವ್ಯಕ್ತಿಯೇ, ಆತ ಸರ್ಕಾರದ ಮುಖ್ಯಸ್ಥನಾಗಿರಲಿ ಇಲ್ಲದಿರಲಿ, ಆಗಿರುವುದು ಕಂಡು ಬರುತ್ತದೆ. ಇದನ್ನು ತಪ್ಪಿಸಬೇಕಾದರೆ ಒಂದು ರಾಜಕೀಯ ಪಕ್ಷದ ಅಧ್ಯಕ್ಷ ಹುದ್ಧೆಯನ್ನು ಒಂದು ಅವಧಿಗಿಂತ ಹೆಚ್ಚಾಗಿ ಒಬ್ಬನೇ ವಹಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಬೇಕು. ಒಮ್ಮೆ ಅಧ್ಯಕ್ಷ ಸ್ಥಾನ ಪಡೆದವರು ಮತ್ತೆ ಎರಡನೇ ಬಾರಿ ಪಕ್ಷದ ಅಧ್ಯಕ್ಷ ಹುದ್ಧೆಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ಕಡ್ಡಾಯ ಮಾಡಬೇಕು. ಹೀಗೆ ಮಾಡಿದರೆ ವಂಶವಾಹೀ ಒಂದೇ ಕುಟುಂಬದವರು ಅಥವಾ ಒಬ್ಬನೇ ವ್ಯಕ್ತಿ ಆಜೀವನಪರ್ಯಂತ ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುವುದನ್ನು ತಡೆಯಲು ಸಾಧ್ಯವಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಈ ನಿಯಮವನ್ನು ಚುನಾವಣಾ ಆಯೋಗ ಕಡ್ಡಾಯ ಮಾಡಬೇಕು ಮತ್ತು ಇದರಂತೆ ನಡೆದುಕೊಳ್ಳದ ರಾಜಕೀಯ ಪಕ್ಷದ ಮಾನ್ಯತೆಯನ್ನು ರದ್ದುಪಡಿಸಬೇಕು. ಇಂಥ ಒಂದು ನಿಯಮವನ್ನು ತರುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕಾದ ಅಗತ್ಯ ಇದೆ. ಎಲ್ಲ ರಾಜಕೀಯ ಪಕ್ಷಗಳೂ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸುವುದು ಕಡ್ಡಾಯ ಆಗಬೇಕು. ಐದು ವರ್ಷಗಳಿಗೊಮ್ಮೆ ರಾಜಕೀಯ ಪಕ್ಷಗಳು ಚುನಾವಣೆಯ ಮೂಲಕ ತಮ್ಮ ಪಕ್ಷದ ಅಧ್ಯಕ್ಷರನ್ನು ಆರಿಸುವುದು ಕಡ್ಡಾಯವಾಗಬೇಕು. ಪಕ್ಷದ ಅಧ್ಯಕ್ಷರು ತಮ್ಮ ಸರ್ಕಾರದ ಪ್ರಧಾನ ಮಂತ್ರಿಯನ್ನು ಅಥವಾ ಮುಖ್ಯಮಂತ್ರಿಯನ್ನು ಪರೋಕ್ಷವಾಗಿ ನಿಯಂತ್ರಿಸಲು ಅವಕಾಶವನ್ನು ರಾಜಕೀಯ ಪಕ್ಷ ನೀಡದಂತೆ ಅದರ ಸಂವಿಧಾನ ಇರಬೇಕು. ಇಂಥ ನಿಯಂತ್ರಣ ಸಂವಿಧಾನಬಾಹಿರ ಶಕ್ತಿಗಳಿಗೆ ಅವಕಾಶ ಮಾಡಿಕೊಡುವುದರಿಂದ ಇಂಥ ನಿಯಂತ್ರಣ ಸಾಧ್ಯವಾಗದಂತೆ ಮಾಡಬೇಕು.

ಸಂಸತ್ತಿಗೆ ಹಾಗೂ ರಾಜ್ಯಗಳ ಶಾಸನಸಭೆಗಳ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ ನೋಡಿ ಹಾಗೂ ಹಣ ಒದಗಿಸಬಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಚುನಾವಣೆ ಜಾತ್ಯಾಧಾರಿತವಾಗಿ ನಡೆಯುವಂತೆ ಮಾಡಿ ಭ್ರಷ್ಟರು ಜಾತಿಯ ಬಲದಿಂದ ಮತ್ತೆ ಮತ್ತೆ ಚುನಾಯಿತರಾಗುವಂತೆ ಮಾಡುತ್ತದೆ ಹಾಗೂ ಜಾತೀಯತೆ ಇಡೀ ಸರ್ಕಾರವನ್ನು ನಿಯಂತ್ರಿಸುವಂತೆ ಆಗುತ್ತದೆ. ಇದನ್ನು ತಪ್ಪಿಸಲು ಹಾಗೂ ಯೋಗ್ಯ ವ್ಯಕ್ತಿ ಅಭ್ಯರ್ಥಿಯಾಗುವುದನ್ನು ಖಚಿತಪಡಿಸಲು ಕೆಲವೊಂದು ಅರ್ಹತೆಗಳನ್ನು ಚುನಾವಣಾ ಆಯೋಗ ನಿಗದಿಪಡಿಸಬೇಕಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಒಂದು ಪ್ರವೇಶ ಪರೀಕ್ಷೆಯನ್ನು ಏರ್ಪಡಿಸಿ ಅವರ ಜ್ಞಾನವನ್ನು ಅಳೆಯುವ ಕೆಲಸ ಮಾಡಿದರೆ ಹಾಗೂ ನಿರ್ದಿಷ್ಟ ಅಂಕಗಳನ್ನು ಗಳಿಸುವ ಅಭ್ಯರ್ಥಿಗಳು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವಂತೆ ನಿಯಮ ತಂದರೆ ಅಯೋಗ್ಯರು ಚುನಾವಣೆಗಳಿಗೆ ಸ್ಪರ್ಧಿಸುವುದನ್ನು ತಪ್ಪಿಸಬಹುದು.

ಪ್ರವೇಶ ಪರೀಕ್ಷೆಯಲ್ಲಿ 80% ಅಂಕಗಳಿಸಿದವರು ಮಾತ್ರವೇ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿಯಮವನ್ನು ಜಾರಿಗೆ ತರಬೇಕು. ಮೀಸಲು ಸ್ಥಾನಗಳಲ್ಲಿ ಈ ಮಿತಿಯನ್ನು 70% ನಿಗದಿ ಪಡಿಸಬಹುದು. ಪ್ರವೇಶ ಪರೀಕ್ಷೆಯನ್ನು ಚುನಾವಣೆ ನಡೆಯುವ ಮೊದಲು ಚುನಾವಣಾ ಆಯೋಗವೇ ನಡೆಸುವಂತೆ ಆಗಬೇಕು. ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಸಂವಿಧಾನದ ಬಗೆಗಿನ ಜ್ಞಾನ, ರಾಜನೀತಿಯ ಬಗೆಗಿನ ಜ್ಞಾನ, ಭೌಗೋಳಿಕ ಜ್ಞಾನ, ಪರಿಸರ ಜ್ಞಾನ, ವಿಜ್ಞಾನ, ಕಲೆ, ಸಾಹಿತ್ಯ, ಆಡಳಿತದ ಬಗೆಗಿನ ಜ್ಞಾನ ಇತ್ಯಾದಿಗಳ ಬಗ್ಗೆ ಬಹು ಆಯ್ಕೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಬೇಕು. ಈ ಪರೀಕ್ಷೆಯಲ್ಲಿ 80% ಕ್ಕಿಂತ ಹೆಚ್ಚು (ಸಾಮಾನ್ಯ ವರ್ಗ), 70% ಕ್ಕಿಂತ ಹೆಚ್ಚು (ಮೀಸಲು ಕ್ಷೇತ್ರ) ಅಂಕ ಗಳಿಸಿದವರು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಪಡೆಯುವಂತೆ ಆಗಬೇಕು. ವೈದ್ಯಕೀಯ, ಇಂಜಿನಿಯರಿಂಗ್, ಐ.ಐ.ಟಿ., ಐ.ಎ.ಎಸ್., ಕೆ.ಎ.ಎಸ್. ಇತ್ಯಾದಿ ಪರೀಕ್ಷೆ ನಡೆಸಿ ಯೋಗ್ಯ ಹಾಗೂ ಪ್ರತಿಭಾವಂತರನ್ನು ಆರಿಸುವಂತೆ ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳನ್ನು ಆರಿಸಲು ಇಂಥ ಒಂದು ಮಾನದಂಡವನ್ನು ಚುನಾವಣಾ ಆಯೋಗ ಜಾರಿಗೆ ತಂದರೆ ನಮ್ಮ ಸಂಸತ್ತಿಗೆ, ಶಾಸನಸಭೆಗಳಿಗೆ ಹೆಚ್ಚು ಪ್ರಜ್ಞಾವಂತರನ್ನು, ಚಿಂತನಶೀಲರನ್ನು, ನಿಸ್ವಾರ್ಥಿಗಳನ್ನು ಕಳುಹಿಸಲು ಸಾಧ್ಯವಾಗಬಹುದು. ರಾಜಕೀಯ ಪಕ್ಷಗಳಿಂದ ಚುನಾವಣೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇಂಥ ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬರುವಂತಾದರೆ ಅವರು ಹೆಚ್ಚು ಯೋಗ್ಯರಾಗಿರುವ ಸಾಧ್ಯತೆ ಇದೆ. ಇಂಥ ಯೋಗ್ಯರ ನಡುವೆ ಚುನಾವಣೆಯಲ್ಲಿ ಸ್ಪರ್ಧೆ ಏರ್ಪಟ್ಟು ಅವರಲ್ಲಿ ಜನ ಯಾರನ್ನು ಆರಿಸುತ್ತಾರೋ ಆಗ ಶಾಸನಸಭೆಗಳು ಹೆಚ್ಚು ಜವಾಬ್ದಾರಿಯುತ ಹಾಗೂ ಸಂವೇದನಾಶೀಲರಿಂದ ತುಂಬಿ ಚೆನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯ. ಇಂಥ ಪರೀಕ್ಷೆಗಳಲ್ಲಿ ಅರ್ಹತೆ ಪಡೆದು ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಯಾದ ಶಾಸಕರು ಹಾಗೂ ಸಂಸದರು ಸಮರ್ಪಕವಾಗಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದೆ ಇದ್ದರೆ ಇದಕ್ಕಾಗಿ ನಡೆಸುವ ಅರ್ಹತಾ ಪರೀಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸಿ ಹೆಚ್ಚು ಮೇಧಾವಿಗಳು, ಚಿಂತಕರು, ಸಂವೇದನಾಶೀಲರು ಮಾತ್ರವೇ ಚುನಾವಣೆಗೆ ಸ್ಪರ್ಧಿಸುವಂತೆ ಆಗಬೇಕು.

ಕಾರ್ಯಾಂಗದಲ್ಲಿ ಪ್ರಮುಖ ಹುದ್ಧೆಗಳನ್ನು ನಿರ್ವಹಿಸಲು ಅತ್ಯಂತ ಪ್ರತಿಭಾವಂತರನ್ನು ಪ್ರವೇಶಪರೀಕ್ಷೆಗಳ ಮೂಲಕ (ಐ.ಎ. ಎಸ್., ಐ.ಪಿ.ಎಸ್., ಐ.ಎಫ್.ಎಸ್., ಕೆ.ಎ.ಎಸ್. ಇತ್ಯಾದಿ) ಆಯ್ಕೆ ಮಾಡಿ ಅವರಿಗೆ ನಿರ್ದೇಶನ ನೀಡಲು ಕಡಿಮೆ ಯೋಗ್ಯತೆಯುಳ್ಳ, ಸಂವೇದನಾರಹಿತ, ಭ್ರಷ್ಟ, ವ್ಯಕ್ತಿಗಳನ್ನು ಚುನಾಯಿಸುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಗಂಭೀರ ದೋಷ ಅಡಗಿದೆ. ಇದು ಹೇಗಿದೆ ಎಂದರೆ ಕಡಿಮೆ ಜ್ಞಾನ ಹೊಂದಿರುವ ಒಬ್ಬ ಗುಮಾಸ್ತನನ್ನು ಒಂದು ಸಂಸ್ಥೆಯ ಮುಖ್ಯಸ್ಥನನ್ನು ನಿಯಂತ್ರಿಸಲು ಹಾಗೂ ನಿರ್ದೇಶಿಸಲು ಬಿಟ್ಟರೆ ಹೇಗಿರುತ್ತದೋ ಹಾಗೆ ಆಗಿದೆ. ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಂತೆ ಆಗಿದೆ. ಚುನಾವಣೆಗೆ ಸ್ಪರ್ಧಿಸುವ ಯೋಗ್ಯ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆರಿಸುವ ತಿದ್ದುಪಡಿ ತರಲು ಹಾಗೂ ರಾಜಕೀಯ ಪಕ್ಷಗಳಲ್ಲಿ ವಂಶವಾಹೀ ವ್ಯವಸ್ಥೆಯನ್ನು ಹೋಗಲಾಡಿಸುವ ನಿಯಮ ತರಲು ಈಗಿರುವ ಕಾನೂನುಗಳಲ್ಲಿ ಅವಕಾಶ ಇಲ್ಲವೆಂದಾದರೆ ಸೂಕ್ತ ಕಾನೂನು ತಿದ್ದುಪಡಿ ಮಾಡಲು ಒತ್ತಾಯ ಪ್ರಜೆಗಳಿಂದ ರೂಪುಗೊಳ್ಳಬೇಕಾದ ಅಗತ್ಯ ಇದೆ.

ಕಾರ್ಯಾಂಗದ ವಿವಿಧ ಹುದ್ಧೆಗಳಿಗೆ ಆಯ್ಕೆ ಮಾಡುವ ಕೆ.ಎ.ಎಸ್., ಐ.ಎ.ಎಸ್., ಐ.ಪಿ.ಎಸ್. ಇತ್ಯಾದಿ ಪರೀಕ್ಷೆಗಳಲ್ಲಿ ಜಾತಿ ನೋಡಿ ಆರಿಸುವ ಪದ್ಧತಿ ಇಲ್ಲದಿರುವಾಗ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆರಿಸುವಾಗ ಜಾತ್ಯಾಧಾರಿತವಾಗಿ ನಿರ್ಧರಿಸುವುದು ತಪ್ಪಬೇಕು. ಇದಕ್ಕಾಗಿ ಒಂದು ಸಂಸದ ಅಥವಾ ಶಾಸಕ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಜನರಿರುವ ಜಾತಿಯ ಅಭ್ಯರ್ಥಿಯನ್ನು ಯಾವ ರಾಜಕೀಯ ಪಕ್ಷಗಳೂ ನಿಲ್ಲಿಸಬಾರದು ಎಂಬ ಒಂದು ನಿಯಮವನ್ನು ಚುನಾವಣಾ ಆಯೋಗ ತರಬೇಕು. ಉದಾಹರಣೆಗೆ ಕೆಲವು ಮತಕ್ಷೇತ್ರಗಳಲ್ಲಿ ಲಿಂಗಾಯತರು, ಇನ್ನು ಕೆಲವು ಕ್ಷೇತ್ರಗಳಲ್ಲಿ ಒಕ್ಕಲಿಗರು ಹೀಗೆ ಒಂದೊಂದು ಜಾತಿಯ ಜನ ಅಧಿಕ ಸಂಖ್ಯೆಯಲ್ಲಿರುವಾಗ ಇದನ್ನು ಲೆಕ್ಕ ಹಾಕಿಯೇ ಅಂಥ  ಕ್ಷೇತ್ರಗಳಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಅಭ್ಯರ್ಥಿಗಳನ್ನು ಅಭ್ಯರ್ಥಿಯಾಗಿ ನಿಲ್ಲಿಸುವ ಪದ್ಧತಿಯನ್ನು ಚುನಾವಣಾ ಆಯೋಗ ನಿಯಮದ ಮೂಲಕ ನಿಲ್ಲಿಸುವಂತೆ ಮಾಡಬೇಕು. ಹೀಗೆ ಮಾಡಿದರೆ ಜಾತಿ ನೋಡಿ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವ ರಾಜಕೀಯ ಪಕ್ಷಗಳ ಕುಟಿಲ ನೀತಿಯನ್ನು ತಡೆಯಬಹುದು. ಇಂಥ ಒಂದು ನಿಯಮ ಬಂದರೆ ಜಾತಿಯ ಆಧಾರದಲ್ಲಿ ಶಾಸಕರ ಗುಂಪನ್ನು ಕಟ್ಟಿ ರಾಜಕೀಯ ಪಕ್ಷದೊಳಗೆ ಗುಂಪುಗಾರಿಕೆ ಮಾಡುವ ಹುಂಬರನ್ನು ನಿಯಂತ್ರಿಸಲು ಸಾಧ್ಯವಿದೆ ಹಾಗೂ ಪರಮ ಭ್ರಷ್ಟರು, ಊಳಿಗಮಾನ್ಯ ಮನೋಸ್ಥಿತಿಯ ಹಾಗೂ ಹುಂಬ ರಾಜಕಾರಣಿಗಳು ಜಾತಿ ಆಧಾರದಲ್ಲಿ ಮತ್ತೆ ಮತ್ತೆ ರಾಜಕೀಯದಲ್ಲಿ ಮೇಲುಗೈ ಸಾಧಿಸುವುದನ್ನು ತಡೆಯಲು ಸಾಧ್ಯ.

ಚುನಾವಣಾ ಆಯೋಗ ಸುಧಾರಣೆಗಳನ್ನು ತರಲು ಸಾಧ್ಯವಾಗದೆ ಹೋದರೆ ರಾಜಕೀಯ ಕ್ಷೇತ್ರಕ್ಕೆ ಬದಲಾವಣೆ ತರಲು ಹೊಸ ಪಕ್ಷಗಳನ್ನು ಸ್ಥಾಪಿಸುವವರು ಕೆಲವೊಂದು ನಿಯಮಗಳನ್ನು ಹೊಂದುವುದರಿಂದ ತಾವು ಇತರ ಪಕ್ಷಗಳಿಗಿಂತ ಭಿನ್ನ ಎಂದು ತೋರಿಸಲು ಸಾಧ್ಯ. ವಂಶವಾಹೀ ಪ್ರಭುತ್ವ ಬರದಂತೆ ತಡೆಯಲು ಪಕ್ಷದ ಸಂವಿಧಾನ ರೂಪಿಸುವಾಗಲೇ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ವ್ಯಕ್ತಿ ಪಕ್ಷದ ಅಧ್ಯಕ್ಷನಾಗಿ ಒಂದು ಬಾರಿ ಕಾರ್ಯ ನಿರ್ವಹಿಸಿದ್ದರೆ ಪುನಃ ಅವರು ಚುನಾವಣೆಗೆ ಸ್ಪರ್ಧಿಸಲಾಗದಂತೆ ನಿಯಮ ರೂಪಿಸಬಹುದು. ಇಂಥ ಒಂದು ನಿಯಮವನ್ನು ಸ್ವಾತಂತ್ರ್ಯ ದೊರಕಿದಾಗಲೇ ರಾಜಕೀಯ ಪಕ್ಷಗಳು ಸ್ವಯಂ ತಾವಾಗಿಯೇ ರೂಪಿಸಿಕೊಂಡಿದ್ದರೆ ಅಥವಾ ಸಂವಿಧಾನದಲ್ಲೇ ರಾಜಕೀಯ ಪಕ್ಷಗಳ ಸ್ಥಾಪನೆ ಹಾಗೂ ನಿರ್ವಹಣೆ ವಿಷಯದಲ್ಲಿ ಇಂಥ ಸೂತ್ರಗಳನ್ನು ಕಡ್ಡಾಯವಾಗಿ ವಿಧಿಸಿದ್ದರೆ ಇಂದು ಭಾರತ ವಂಶವಾಹೀ ಪ್ರಭುತ್ವಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿತ್ತು. ಹೊಸದಾಗಿ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆನ್ನುವವರು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆರಿಸುವಾಗ ಕೆಲವೊಂದು ಮಾನದಂಡಗಳನ್ನು ಇಟ್ಟುಕೊಂಡರೆ ಹೆಚ್ಚು ಸಂವೇದನಾಶೀಲ, ಚಿಂತನಶೀಲ, ಪ್ರಜ್ಞಾವಂತ ವ್ಯಕ್ತಿಗಳು ಶಾಸನಸಭೆಗಳಿಗೆ ಅರಿಸಿಬರುವಂತೆ ನೋಡಿಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ ಹೆಚ್ಚು ತಿಳುವಳಿಕೆ ಉಳ್ಳ ಪ್ರಾಧ್ಯಾಪಕರು, ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಸಾಹಿತಿಗಳು, ವಿಜ್ಞಾನ ಸಂಶೋಧನೆ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ವಿಜ್ಞಾನಿಗಳು ಮೊದಲಾದವರನ್ನು ಅವರ ನಿವೃತ್ತಿಯ ನಂತರ ಚುನಾವಣೆಗೆ ಅಭ್ಯರ್ಥಿಗಳನ್ನಾಗಿ ಮಾಡಿ ಗೆಲ್ಲಿಸಿ ಕಳುಹಿಸುವಂತಾದರೆ ಇವರೆಲ್ಲ ಚಿಂತನಶೀಲರಾಗಿರುವುದರಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಬಲಿಯಾಗುವ ಸಾಧ್ಯತೆ ಕಡಿಮೆ. ಇದರಿಂದ ಉತ್ತಮ ಸರ್ಕಾರ ರೂಪುಗೊಳ್ಳಲು ಸಾಧ್ಯ. ಕುವೆಂಪು, ಶಿವರಾಮ ಕಾರಂತರಂಥ ಮೇರು ಸಾಹಿತಿಗಳು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದರೆ ಮಹತ್ವದ ಜನಪರವಾದ ಬದಲಾವಣೆಗಳನ್ನು ತರಲು ಸಾಧ್ಯ ಹಾಗೂ ಇಂಥವರು ಎಷ್ಟೇ ಉನ್ನತ ಅಧಿಕಾರ, ಪ್ರಸಿದ್ಧಿ ದೊರಕಿದರೂ ಭ್ರಷ್ಟರಾಗುವ ಸಾಧ್ಯತೆ ಇಲ್ಲ. ಕುವೆಂಪು, ಎಚ್. ನರಸಿಂಹಯ್ಯ ಮೊದಲಾದ ಚಿಂತನಶೀಲರು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕೆಲಸ ಮಾಡಿ ತಮ್ಮ ಅವಧಿಯಲ್ಲಿ ವಿಶ್ವವಿದ್ಯಾನಿಲಯವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ಅವರಲ್ಲಿ ಇದ್ದ ಚಿಂತನಶೀಲತೆ, ಅಂತರ್ಮುಖಿ ವ್ಯಕ್ತಿತ್ವ, ಕನಸುಗಾರಿಕೆ, ದೂರದೃಷ್ಟಿ ಕಾರಣ. ಇಂಥ ವ್ಯಕ್ತಿತ್ವ ಇರುವವರು ಎಷ್ಟೇ ದೊಡ್ಡ ಅಧಿಕಾರ ದೊರಕಿದರೂ ಭ್ರಷ್ಟರೂ, ಅಹಂಕಾರಿಗಳೂ, ಸ್ವಜನ ಪಕ್ಷಪಾತಿಗಳೂ ಆಗುವುದಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿ ಇಂಥವರಿಗೆ ಮಹತ್ವದ ಹುದ್ಧೆಯನ್ನು ಕೊಡುವ ಚಿಂತನೆ ಆಗಬೇಕು ಅಥವಾ ಹೊಸ ರಾಜಕೀಯ ವ್ಯವಸ್ಥೆಗಾಗಿ ಶ್ರಮಿಸುವವರು ಈ ಕುರಿತು ಯೋಚಿಸಬೇಕಾಗಿದೆ.

ಬಹಿರ್ಮುಖಿಗಳು, ಮುನ್ನುಗ್ಗಿ ಹೋಗುವ ಸ್ವಭಾವ, ಭಾರೀ ವಾಕ್ಚಾತುರ್ಯವುಳ್ಳವರು ಇಂಥ ವ್ಯಕ್ತಿತ್ವದ ಜನ ಸಂಘಟನೆಯಲ್ಲಿ ಮುಂದು, ಆದರೆ ಇಂಥವರು ಉನ್ನತ ಅಧಿಕಾರ ಸಿಕ್ಕಾಗ ಭ್ರಷ್ಟರಾಗುವ, ಅಹಂಕಾರಿಗಳಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಇಂಥ ವ್ಯಕ್ತಿತ್ವವುಳ್ಳವರಿಗೆ ಉನ್ನತ ಅಧಿಕಾರ ಸ್ಥಾನವನ್ನು ರಾಜಕೀಯ ಪಕ್ಷದಲ್ಲಿ ನೀಡಲು ಸಾಧ್ಯವಾಗದಂತೆ ನಿಯಮ ರೂಪಿಸಬೇಕು. ಇಂಥವರಿಗೆ ಸಂಘಟನೆಯ ಜವಾಬ್ದಾರಿ ಮಾತ್ರ ನೀಡುವಂತೆ ಆಗಬೇಕು. ಉನ್ನತ ಸಾಧನೆ ಮಾಡಿದ ವಿಜ್ಞಾನಿಗಳು, ಕವಿಗಳು, ಸಾಹಿತಿಗಳು ಇಂಥ ವ್ಯಕ್ತಿಗಳನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಒಂದು ನಿಯಮವನ್ನು ಹೊಸ ರಾಜಕೀಯ ಪಕ್ಷಗಳು ರೂಪಿಸಬಹುದು. ಹೀಗೆ ಮಾಡಿದರೆ ಉನ್ನತ ಅಧಿಕಾರ ಸ್ಥಾನವಾದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಟ, ಪೈಪೋಟಿ ಉಂಟಾಗುವುದನ್ನು ತಡೆಯಬಹುದು. ಭಾರತದಲ್ಲಿ ಸ್ವಾತಂತ್ರ್ಯಾನಂತರ ನಾಯಕತ್ವದ ಪೈಪೋಟಿ, ಕಚ್ಚಾಟದಿಂದಾಗಿಯೇ ಪರ್ಯಾಯ ರಾಜಕೀಯ ವ್ಯವಸ್ಥೆಗಳನ್ನು ರೂಪಿಸುವ ಪ್ರಯತ್ನಗಳು ವಿಫಲವಾಗುತ್ತ ಬಂದಿವೆ. ಒಮ್ಮೆ ಅಧಿಕಾರಕ್ಕೆ ಬಂದ ಕೂಡಲೇ ಪಕ್ಷದಲ್ಲಿರುವ ನಾಯಕರ ನಡುವೆ ಅಥವಾ ಮೈತ್ರಿಕೂಟ ಸರ್ಕಾರವಾದರೆ ವಿವಿಧ ಘಟಕ ಪಕ್ಷಗಳ ನಡುವೆ ನಾಯಕತ್ವ ಸ್ಥಾನಕ್ಕಾಗಿ ಕಚ್ಚಾಟ ನಡೆಯುವುದು ಇಡೀ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸುವ ಪ್ರಯತ್ನಗಳಿಗೆ ಹಿನ್ನಡೆ ಆಗಿ ಅದು ವಿಫಲವಾಗಲು ಕಾರಣ. ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಪ್ರಯತ್ನಿಸುವವರು ಇದನ್ನು ತಪ್ಪಿಸಲು ಸ್ಪಷ್ಟ ನಿಯಮಗಳನ್ನು ರೂಪಿಸಿದರೆ ಮತ್ತು ರಾಜಕೀಯೇತರ ಉನ್ನತ ಸಾಧನೆ ಮಾಡಿದ ವ್ಯಕ್ತಿಯನ್ನು ನಾಯಕ ಸ್ಥಾನಕ್ಕೆ ತರುವ ನಿಯಮ ಮಾಡಿಕೊಂಡರೆ ಇಂಥ ಆಂತರಿಕ ಕಚ್ಚಾಟಗಳನ್ನು ನಿಯಂತ್ರಿಸಬಹುದು ಅಥವಾ ನಿವಾರಿಸಿಕೊಳ್ಳಬಹುದು.

ಸಾಮಾಜಿಕ ಚಳವಳಿ ಮತ್ತು ವರ್ತಮಾನದ ಸವಾಲುಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಕ್ಷಿಪ್ರ ಗತಿಯಲ್ಲಿ ಸಂಭವಿಸಿದ ಘಟನೆಗಳು ಮತ್ತು ಉಂಟಾದ ಪಲ್ಲಟಗಳು ಪ್ರಜ್ಞಾವಂತರ ಎದೆಯಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ದೇಶದ ಅವಿಭಾಜ್ಯ ಅಂಗದಂತಿರುವ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜಾರೆ ಎತ್ತಿದ ನೈತಿಕ ಪ್ರಶ್ನೆಗಳು ಹಾಗೂ ಹುಟ್ಟುಹಾಕಿದ ಚಳವಳಿ ಹೊಸ ತಲೆಮಾರಿಗೆ ಭರವಸೆಯನ್ನು ಹುಟ್ಟುಹಾಕಿದ್ದು ನಿಜ. ಆದರೆ, ಅಣ್ಣಾ ಚಳವಳಿ ಒಂದು ಚಂಡಮಾರುತದಂತೆ ಅಪ್ಪಳಿಸಿ ಮರೆಯಾದದ್ದು ಏಕೆ? ಎಂಬ ಪ್ರಶ್ನೆಗೆ ನಾವೀಗ ಉತ್ತರ ಕಂಡುಕೊಳ್ಳಬೇಕಾಗಿದೆ. ಅದೇ ರೀತಿ ಈಗ ಕಪ್ಪು ಹಣದ ಬಗ್ಗೆ ಧ್ವನಿ ಎತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ಇವರ ಚಳವಳಿ ಕೂಡ ಮೂಲೆ ಗುಂಪು ಸೇರಲು ಬಹಳ ದಿನ ಬೇಕಾಗಿಲ್ಲ, ಎನಿಸುತ್ತಿದೆ.

ಭಾರತದ ಹೋರಾಟದ ಇತಿಹಾಸ ಬಲ್ಲವರು ಅಣ್ಣಾ ಮತ್ತು ರಾಮ್ ದೇವ್ ಹುಟ್ಟು ಹಾಕಿದ ಚಳವಳಿಗಳ ಬಗ್ಗೆ ಈ ಮೊದಲೇ ಸಂಶಯ ವ್ಯಕ್ತ ಪಡಿಸಿದ್ದರು. ಯಾವುದೇ ಒಂದು ಹೋರಾಟ ತಳ ಮಟ್ಟದಿಂದ ರೂಪುಗೊಳ್ಳಬೇಕೆ ಹೊರತು, ಮೇಲಿನಿಂದ ಅಲ್ಲ.

ಭ್ರಷ್ಟಾಚಾರದ ವಿರುದ್ಧದ ಹೋರಾಟಗಳು ಭಾರತದಲ್ಲಿ ಏಕೆ ವಿಫಲವಾಗುತ್ತಿವೆ ಎಂಬುದಕ್ಕೆ ನಾವು ಇತಿಹಾಸದತ್ತ ಗಮನ ಹರಿಸಲೇಬೇಕು. ಏಕೆಂದರೆ, ಇತಿಹಾಸವೆಂದರೆ ಕೇವಲ ಭೂತಕಾಲದ ದಾಖಲೆ ಅಷ್ಟೇ ಅಲ್ಲ, ಅದು ಮನುಷ್ಯನ ತಪ್ಪುಗಳ ಸರಮಾಲೆಯ ಗ್ರಂಥವೂ ಹೌದು. ಎಚ್ಚರಿಕೆಯ ಗಂಟೆಯೂ ಹೌದು.

ಅಣ್ಣಾ ಹಜಾರೆಯ ಹೋರಾಟಕ್ಕೆ ಸಿಕ್ಕ ಮಾಧ್ಯಮಗಳ ಬೆಂಬಲ ಮತ್ತು ಅಸಂಖ್ಯಾತ ಯುವ ಜನತೆಯ ಸ್ಪೂರ್ತಿ ಕಾಲಕ್ರಮೇಣ ಏಕೆ ಕರಗಿಹೋಯಿತು? ಭಾರತದಲ್ಲಿ ಕ್ರಾಂತಿ ಜರುಗಿ ಹೋಯಿತು ಎಂದು ಹಗಲು, ರಾತ್ರಿ ಗಂಟಲು ಹರಿದುಕೊಂಡ ನಮ್ಮ ದೃಶ್ಯ ಮಾಧ್ಯಮಗಳು, ಅದೇ ಅಣ್ಣಾ ತಂಡದ ಸದಸ್ಯರ ಜಾತಕವನ್ನು ಜಾಲಾಡಿ, ಅವರ ನೈತಿಕತೆಯನ್ನು ಏಕೆ ಕುಗ್ಗಿಸಿದವು ಎಂಬುದನ್ನು ಅರ್ಥಮಾಡಿಕೊಂಡರೆ, ನಮ್ಮ ಸಾಮಾಜಿಕ ಚಳವಳಿಯ ರೂಪು ರೇಷೆ ಹೇಗಿರಬೇಕೆಂಬ ಆಲೋಚನೆಗಳು ಹೊಳೆಯುತ್ತವೆ.

1920-30 ರ ದಶಕದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿದ ಗಾಂಧೀಜಿಗೆ ಅಂದಿನ 30 ಕೋಟಿ ಜನತೆಯ ಬೆಂಬಲ ಹೇಗೆ ದೊರೆಯಿತು ಎಂಬುದು ಅರ್ಥವಾದರೆ, ನಮ್ಮ ಮುಂದಿನ ಚಳವಳಿಯ ಸ್ವರೂಪ ಕೂಡ ಸ್ವಷ್ಟವಾಗ ಬಲ್ಲದು.

ಅನಕ್ಷರಸ್ಥರ ನಾಡಾದ ಭಾರತದಲ್ಲಿ , ಯಾವ ಪ್ರಭಾವಿ ಮಾಧ್ಯಮಗಳ ಬೆಂಬಲವಿಲ್ಲದೆ ಗಾಂಧೀಜಿಯ ಸಂದೇಶಗಳು ನಾಡಿನ ಮೂಲೆ ಮೂಲೆಗೆ ತಲುಪುತಿದ್ದವು. ಗಾಂಧೀಜಿಯ ಕರೆಗೆ ಓಗೊಟ್ಟು ತಮ್ಮ ಮನೆ ಮಠಗಳನ್ನು ತೊರೆದು ಜನ ಬೀದಿಗೆ ಬರುತಿದ್ದರು. ಏಕೆ? ಗಾಂಧೀಜಿ ಒಬ್ಬ ಸಂತನಾಗಿರಲಿಲ್ಲ, ಅಥವಾ ಪ್ರವಾದಿಯಾಗಿರಲಿಲ್ಲ. ಕೇವಲ ನಮ್ಮ ನಿಮ್ಮಂತೆ ಎಲ್ಲಾ ದೌರ್ಬಲ್ಯಗಳನ್ನು ಉಳ್ಳ ನಾಯಕರಾಗಿದ್ದರು. ಆದರೆ, ಅವರ ಪಾರದರ್ಶಕತೆಯ ಬದುಕು, ಅವರನ್ನು ಮಹಾತ್ಮನನ್ನಾಗಿಸಿತು. ಯಾವುದೇ ಒಂದು ಜನನಾಯಕನಿಗೆ ಒಂದು ಸಮುದಾಯದ ಇಲ್ಲವೇ ಒಂದು ನಾಡಿನ ನೋವನ್ನು ತನ್ನದೆಂದು ಪರಿಭಾವಿಸುವ ಮಾತೃ ಹೃದಯವಿರಬೇಕು. ಅಂತಹ ಹೃದಯ ಭಾರತದ ನೆಲದಲ್ಲಿ ಗಾಂಧೀಜಿಗಿತ್ತು, ಅಂಬೇಡ್ಕರ್ ಗಿತ್ತು. ಇಂತಹ ವ್ಯಕ್ತಿಗಳ ಮಾದರಿಯನ್ನು ವರ್ತಮಾನದ ಭಾರತದಲ್ಲಿ ನಾವು ಯಾರಲ್ಲಿ ಕಾಣೋಣ?

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಷ್ಟೋ ಬಾರಿ ಗಾಂಧೀಜಿ ಹಾದಿ ತಪ್ಪಿದ್ದುಂಟು. ಇಂತಹ ವೇಳೆಯಲ್ಲಿ ಅವರನ್ನು ಕಟು ಮಾತುಗಳಲ್ಲಿ ಟೀಕೆ ಮಾಡಿ ಸರಿ ದಾರಿಗೆ ತರಲು ಅಂಬೇಡ್ಕರ್ ಇದ್ದರು, ಲೋಹಿಯಾ ಇದ್ದರು, ಈಗ ಯಾರಿದ್ದಾರೆ? ಅಂತಹ ನೈತಿಕತೆ ಭಾರತದ ರಾಜಕೀಯದಲ್ಲಿ ಯಾರು ಉಳಿಸಿಕೊಂಡಿದ್ದಾರೆ?

ಅಣ್ಣಾ ಹಜಾರೆ ಶುದ್ಧ ಚಾರಿತ್ರ್ಯವುಳ್ಳ ವ್ಯಕ್ತಿ ನಿಜ. ಇದೊಂದೇ ಅರ್ಹತೆ ಬಹು ಸಂಸ್ಕೃತಿ, ಬಹು ಧರ್ಮಗಳ ನಾಡಾದ ಭಾರತಕ್ಕೆ ಸಾಲದು. ನಮ್ಮನ್ನು ಆಳುವ ಸರ್ಕಾರಗಳು ಯಾವುವೇ ಇರಲಿ, ತಮ್ಮ ಹಾದಿಗೆ ಮುಳ್ಳಾಗುವ ಯಾವುದೇ ಹೋರಾಟವನ್ನು ಬಗ್ಗು ಬಡಿಯುವ ಕೌಶಲ್ಯಗಳನ್ನು ಅವು ಕರಗತ ಮಾಡಿಕೊಂಡಿವೆ. ಸರ್ಕಾರಗಳ ಜೊತೆ ಭ್ರಷ್ಟಾಚಾರಕ್ಕೆ ಕೈ ಜೋಡಿಸಿರುವ, ಈಸ್ಟ್ ಇಂಡಿಯಾ ಕಂಪನಿಯ ಮುಂದುವರಿದ ಸಂತತಿಯಂತಿರುವ ಆಧುನಿಕ ಕಾರ್ಪೋರೇಟ್ ಜಗತ್ತು ತೆರೆ ಮೆರೆಯಲ್ಲಿ ಕ್ರಿಯಾಶೀಲವಾಗಿದೆ. ಇಂತಹ ಅಗೋಚರ ಶಕ್ತಿಗಳನ್ನು ಮಣಿಸುವುದು ವರ್ತಮಾನದ ಚಳವಳಿಗಳಿಂದ ಸಾಧ್ಯವಿಲ್ಲ. ಅರೆಬೆಂದ ಮನಸ್ಥಿತಿಯ ಮಧ್ಯಮ ವರ್ಗದ ಜನತೆ ಮತ್ತು ಈ ನಾಡಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಯಾವುದೇ ತಿಳುವಳಿಯಿಲ್ಲದೆ, ಒಂದು ಮೂಗುತಿಗೆ, ಒಂದು ಬಾಟಲ್  ಅಗ್ಗದ ಸಾರಾಯಿಗೆ, ಐನೂರು ರೂಪಾಯಿ ನೋಟಿಗೆ ಪ್ರಾಮಾಣಿಕತೆಯಿಂದ ಮತವನ್ನು ದಾನ ಮಾಡುವ ಗ್ರಾಮಾಂತರ ಜನತೆಯನ್ನು ನಾವು ಪರಿರ್ತಿಸದೆ, ಹೋರಾಟ ಮಾಡಲು ಸಾಧ್ಯವೆ?

ಅಧಿಕಾರ ವಿಕೇಂದ್ರೀಕರಣದ ಪ್ರತಿಪಲವಾಗಿರುವ ನಮ್ಮ ಗ್ರಾಮ ಪಂಚಾಯಿತಿಗಳ ಭ್ರಷ್ಟಾಚಾರ ನಿಗ್ರಹಕ್ಕೆ ಸಾಮರ್ಥ್ಯವಿಲ್ಲದ ವ್ಯವಸ್ಥೆಯಲ್ಲಿ ಯಾವ ಚಳವಳಿಗಳ ಬಗ್ಗೆ ತಾನೆ ನಂಬಿಕೆ ಇಡಲು ಸಾಧ್ಯ? ಕಳೆದ ಮೂರು ವರ್ಷಗಳ ಹಿಂದೆ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಾಗಿ ನೇಮಕಗೊಂಡ 1800 ಯುವ ಪ್ರಾಮಾಣಿಕ ಪದವೀಧರರು ಏಕೆ ಹುದ್ದೆ ತೊರೆದು ಹೋಗುತಿದ್ದಾರೆ, ಅಥವಾ ಆತ್ಮಹತ್ಯೆಗೆ ಏಕೆ ಶರಣಾಗುತಿದ್ದಾರೆ? ಇವುಗಳ ಬಗ್ಗೆ ನಾವು ಎಂದಾದರೂ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡುದ್ದು ಉಂಟಾ?

ಕಪ್ಪು ಹಣದ ಬಗ್ಗೆ ಮಾತನಾಡುವ ಬಾಬಾ ರಾಮ್‌ದೇವ್‌ಗೆ ಕಳೆದ 2004ರ ಲೋಕಸಭೆಯಲ್ಲಿ ಇದ್ದ ಸದಸ್ಯರಲ್ಲಿ ಕೇವಲ 19 ಮಂದಿ ಕೋಟ್ಯಾಧಿಪತಿಗಳು ಇದ್ದರು, ಈಗಿನ ಲೋಕ ಸಭೆಯಲ್ಲಿ ಇವರ ಸಂಖ್ಯೆ 328 ಕ್ಕೆ ಹೇಗೆ ಏರಿದೆ ಎಂಬುದು ಮೊದಲು ತಿಳಿಯಬೇಕಿದೆ. ಬಿ.ಜೆ.ಪಿ. ಸದಸ್ಯರಿಗೆ ವೇದಿಕೆ ಮೇಲೆ ಹಾರ ಹಾಕಿ ಬರಮಾಡಿಕೊಳ್ಳುವ ಯೋಗ ಗುರು ವಿದೇಶದಲ್ಲಿ ಇರುವ ಕಪ್ಪು ಹಣ ತರುವ ಮೊದಲು ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.

ಕರ್ನಾಟಕದಲ್ಲಿ ನಾಯಕರ ಸ್ವಾರ್ಥ ಮನೋಭಾವದಿಂದ ನೆಲಕಚ್ಚಿರುವ, ಅಥವಾ ರೋಲ್ ಕಾಲ್ ಸಂಘಟನೆಗಳಾಗಿ ಪರಿವರ್ತನೆಗೊಂಡಿರುವ ರೈತಸಂಘ, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳನ್ನು ನೋಡಿದರೆ, ಯಾವ ಚಳವಳಿಯ ಬಗ್ಗೆ ಜನ ನಂಬಿಕೆ ಇಡಬೇಕು? ನೀವೆ ನಿರ್ಧರಿಸಿ.

ಉತ್ತರ ಕರ್ನಾಟಕ ಅಭಿವೃದ್ಧಿ ಸಾಧಿಸಿತೆ?

– ಡಾ. ಅಮರೇಶ ನುಗಡೋಣಿ

ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಯ ಜನರಿಗೆ, ಅದರಲ್ಲೂ ಮಂಗಳೂರು, ಕೊಡಗು, ಬೆಂಗಳೂರು ಮತ್ತು ಮೈಸೂರು ಜಿಲ್ಲಾ ವಾಸಿಗಳು ಕರ್ನಾಟಕ ಉತ್ತರ ಭಾಗದ ಬೀದರ್, ಗುಲಬರ್ಗಾ, ವಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಹೆಸರುಗಳನ್ನು ಕೇಳಿರಬಹುದೇ? ಕೇಳಿದರೂ ಯಾವ ಯಾವ ಕಾರಣಗಳಿಗಾಗಿ ಕೇಳಿರಬಹುದು? ಸರ್ಕಾರಿ ನೌಕರರಾದರೆ ಬಳ್ಳಾರಿ, ವಿಜಾಪುರಗಳನ್ನು ಭಯದಿಂದ ನೆನಪಿಟ್ಟುಕೊಂಡಿರುತ್ತಾರೆ. ಒಂದು ವೇಳೆ ತಮ್ಮ ಉದ್ಯೋಗದಲ್ಲಿ ತಪ್ಪುಗಳು ಘಟಿಸಿದರೆ ವರ್ಗಾವಣೆ ಎಂಬ ಶಿಕ್ಷೆ ಅನುಭವಿಸಲು ಈ ಜಿಲ್ಲೆಗೆ ಎಸೆದರೇನು ಮಾಡಬೇಕೆಂಬ ಭಯ. ಇಪ್ಪತ್ತು ವರ್ಷಗಳ ಹಿಂದೆ ಬಳ್ಳಾರಿ ಜೈಲಿಗೆ, ಗುಲಬರ್ಗಾ ಬಿಸಿಲಿಗೆ ಹೆಸರಾಗಿದ್ದವು. ಈಗ ಬಳ್ಳಾರಿ ಎಂದರೆ ಗಣಿಗಾರಿಕೆ. ಬಳ್ಳಾರಿ ಬಿಸಿಲಿಗೆ, ಜೈಲಿಗೆ ನೆನಪಾಗುತ್ತಿದ್ದುದು ಈಗ ಸರ್ಕಾರವನ್ನೇ ನಡುಗಿಸುವ ಜಿಲ್ಲೆಯಾಗಿ ನಿಂತಿದೆ. ಉದ್ದಿಮೆದಾರರಿಗೆ ಬರೀ ಕಬ್ಬಿಣದ ಅದಿರು ತುಂಬಿರುವ ಬಳ್ಳಾರಿಯ ನೆಲ ಗುಡ್ಡ ಬೆಟ್ಟಗಳು ಹಣದ ರಾಶಿಯಂತೆ ಕನಸಿನಲ್ಲಿ ಕಾಣುತ್ತಿರಬಹುದು. ಶಾಲಾ-ಕಾಲೇಜು ಮಕ್ಕಳು ಈ ಭಾಗದ ಕೆಲವು ಜಿಲ್ಲೆಗಳ ಹೆಸರನ್ನು ಪ್ರತಿವರ್ಷ ಕೇಳುತ್ತಿರುತ್ತವೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪದವಿ ಪರೀಕ್ಷೆಗಳ ಫಲಿತಾಂಶ ಪತ್ರಿಕೆಯಲ್ಲಿ ಪ್ರಕಟವಾದಾಗ ಪ್ರತಿವರ್ಷವೂ ಬೀದರ್, ವಿಜಾಪುರ, ರಾಯಚೂರು ಜಿಲ್ಲೆಗಳು ಫಲಿತಾಂಶದಲ್ಲಿ ಕೊನಯ ಜಿಲ್ಲೆಗಳಾಗಿ ಕಾಣಿಸಿಕೊಂಡಿರುತ್ತವೆ. ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಪ್ರತಿನಿಧಿಸುತ್ತಿದ್ದ ಚಿಂಚೋಳಿ ತಾಲೂಕಿನ ಶಾಲಾ-ಕಾಲೇಜಿನ ಮಕ್ಕಳು, ಸ್ವಾತಂತ್ರ್ಯಾ ನಂತರ ಸತತವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲುತ್ತಿರುವ ಮಲ್ಲಿ ಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿರುವ ಯಾದಗಿರಿ ತಾಲೂಕು (ಈಗ ಜಿಲ್ಲೆ) ಅದರಲ್ಲೂ ಗುರುಮಿಠಕಲ್‍ನ ಶಾಲಾ-ಕಾಲೇಜಿನ ಮಕ್ಕಳು ರಾಜ್ಯದಲ್ಲೇ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಕಾಣುತ್ತಾರೆ.

ಕರ್ನಾಟಕದ ದಕ್ಷಿಣ ಭಾಗದ ಜನರು ಅಲ್ಪಸ್ವಲ್ಪ ರಾಜಕೀಯ ಪ್ರಜ್ಞೆ ಇರುವವರೂ ಕೂಡ, ಉತ್ತರ ಕರ್ನಾಟಕದಿಂದ ಅದರಲ್ಲೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಂದ ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಕೇಳಿ ಬೆರಗಾಗುತ್ತಿರಬಹುದು. ಕೊಪ್ಪಳ, ರಾಯಚೂರು, , ಗುಲಬರ್ಗಾ, ಯಾದಗಿರಿ, ಬೀದರ್ ಜಿಲ್ಲೆಯ ಪ್ರಜೆಗಳು ಆಗಸ್ಟ್-15ರ ಬದಲು, ಸೆಪ್ಟಂಬರ್-17ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂಗತಿ; ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ಈ ಭಾಗದ ಜಿಲ್ಲೆಗಳಲ್ಲಿ ದಲಿತರಿಗೆ ಬಹಿಷ್ಕಾರ ಹಾಕುವಂತಹ ಸುದ್ದಿ; ಬೀದರಿನಲ್ಲಿ ಭಾನಾಮತಿಯಿಂದ ಘಟಿಸುವ ವಿಚಿತ್ರ ಘಟನೆಗಳ ಸುದ್ದಿ; ವೀರೇಂದ್ರ ಪಾಟೀಲರ ತಾಲೂಕು ಚಿಂಚೋಳಿಯಲ್ಲಿ ಬಡ, ದಲಿತ ಹೆಂಗಸರು ತಮ್ಮ ಮಕ್ಕಳನ್ನು ಮಾರಿಕೊಳ್ಳುತ್ತಿರುವ ಸುದ್ದಿ; ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‍ರ ಜೇವರ್ಗಿ ತಾಲೂಕು ಕರ್ನಾಟಕದ ಅಭಿವೃದ್ಧಿಶೀಲ ತಾಲೂಕುಗಳಲ್ಲಿ 174ನೇ (Last but one) ಸ್ಥಾನದಲ್ಲಿರುವ ಸುದ್ದಿ; ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಕಟ್ಟಕಡೆಯ 175ನೇ ಸ್ಥಾನದಲ್ಲಿರುವುದೇ ಅಲ್ಲದೇ ಈ ತಾಲೂಕು ಏಷಿಯಾದಲ್ಲಿ ಅತಿ ಹಿಂದುಳಿದ ತಾಲೂಕು ಎಂಬ ಸುದ್ದಿ; ಹಿಂದುಳಿದ ಜಿಲ್ಲೆಗಳಲ್ಲಿ ಗುಲಬರ್ಗಾ ಜಿಲ್ಲೆ ಒಂದಾಗಿದ್ದರೂ ಎಸ್.ಎಂ.ಕೃಷ್ಣ ಅವರ ಮಂತ್ರಿಮಂಡಲದಲ್ಲಿ ಈ ಜಿಲ್ಲೆಯ 13 ಶಾಸಕರಲ್ಲಿ 6 ಶಾಸಕರು ಸಚಿವರಾಗಿದ್ದ ಸುದ್ದಿ; ಈಗೀಗ ಹೈದರಾಬಾದ್ ಕರ್ನಾಟಕ  ‘ಪ್ರತ್ಯೇಕ ರಾಜ್ಯ’ ವಾಗಬೇಕೆಂಬ ಕೂಗಿನ ಸುದ್ದಿ; ಬಳ್ಳಾರಿಯ ಗಣಿಧಣಿಗಳು ತಿರುಪತಿ ತಿಮ್ಮಪ್ಪನಿಗೆ 50 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿ, ತೊಡಿಸಿದ ಸುದ್ದಿ; ಪ್ರಜೆಗಳಿಗೆ ಕಿಂಚತ್ತೂ ಬೇಕಿಲ್ಲಿದ ಶ್ರೀ ಕೃಷ್ಣದೇವರಾಯನ 500ನೇ ಪಟ್ಟಾಭಿಷೇಕದ ಉತ್ಸವವನ್ನು ರೆಡ್ಡಿಗಳು ಅದೇ ಪ್ರಜೆಗಳ ದುಡ್ಡಿನಿಂದ ಆಚರಿಸಿದ ಸುದ್ದಿ; ರಾಜ್ಯದಲ್ಲೇ ಈ ಭಾಗದ ಜಿಲ್ಲೆಗಳಿಂದ ಗುಳೆ (ವಲಸೆ) ಹೋಗುವವರ ಪ್ರಮಾಣ ಅಪಾರವಾಗಿದ್ದು, ಬೆಂಗಳೂರಿನಲ್ಲಿ ನಿರ್ಮಾಣ  ಹಂತದ ಕಟ್ಟಡವೊಂದು ಕುಸಿದು ಬಿದ್ದು, ಅಲ್ಲಿ ದುಡಿವ ಜನರು ಸತ್ತರೆ ಅವರು ರಾಯಚೂರು, ಬಾಗಲಕೋಟೆ, ಕೊಪ್ಪಳ ಜಿಲ್ಲೆಯಿಂದ ಗುಳೆ ಹೋಗಿರುವ ಜನರಾಗಿರುತ್ತಾರೆ ಎಂಬ ಸುದ್ದಿ – ಇಂತಹ ನೂರಾರು ಸುದ್ದಿಗಳಿಂದ ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕದವರಿಗೆ ಪರಿಚಯವಾಗುತ್ತದೇನೋ.

ಕರ್ನಾಟಕದ ಉತ್ತರ ಭಾಗದ ಬೆಳಗಾವಿ, ಧಾರವಾಡ, ಉ.ಕ.ಜಿಲ್ಲೆಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈ ಪ್ರೆಸಿಡೆನ್ಸಿಗೆ ಸೇರಿ, ನೇರ ಬ್ರಿಟಿಷರ ಆಡಳಿತಕ್ಕೆ ಒಳಗಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳೆದವು. ಮರಾಠಿ ಸಂಸ್ಕೃತಿಯ ಪ್ರಭಾವವಿದ್ದರೂ ಸ್ವಾತಂತ್ರ್ಯ ನಂತರ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳಿಂದ ಶ್ರೀಮಂತವಾಯ್ತು. ಲಿಂಗಾಯತರ ಪ್ರಭಾವ ಹೆಚ್ಚಾಗಿತ್ತು. ಲಿಂಗಾಯತ ಮಠಗಳು, ಅವುಗಳ ಶಿಕ್ಷಣ ಸಂಸ್ಥೆಗಳು ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಿದವು. ಹಿಂದೂಸ್ತಾನಿ ಸಂಗೀತಗಾರರಾದ ಮಲ್ಲಿ ಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಮುಂತಾದವರು ಪ್ರಸಿದ್ಧರಾದರೆ, ಮಧುರ ಚೆನ್ನ, ಬೇಂದ್ರೆ, ಡಿ.ಎಸ್. ಕರ್ಕಿ, ವಿನಾಯಕ, ಬಸವರಾಜ ಕಟ್ಟಿಮನಿ, ಆನಂದಕಂದ ಮುಂತಾದ ಸಾಹಿತಿಗಳು ಪ್ರಸಿದ್ಧರಾಗಿದ್ದಾರೆ.

ಉತ್ತರ ಕರ್ನಾಟಕದ ಒಳಗೇ ಇರುವ ಹೈದರಾಬಾದ್ ಕರ್ನಾಟಕದ ಬೀದರ್, ಗುಲಬರ್ಗಾ, ರಾಯಚೂರು, ಕೊಪ್ಪಳ ಮತ್ತು ಈಗಿನ ಯಾದಗಿರಿ ಜಿಲ್ಲೆಗಳು ಹಾಗೂ ವಿಜಾಪುರ, ಬಾಗಲಕೋಟೆ, ಗದಗ ಮುಂತಾದ 7 ಜಿಲ್ಲೆಗಳ ಈ ಪ್ರದೇಶಗಳ ಸಾಂಸ್ಕೃತಿಕ ಚರಿತ್ರೆ ಭಿನ್ನವಾಗಿದೆ. ಭಾಷಿಕವಾಗಿ ಈಗಲೂ ಉತ್ತರ ಭಾಗದ ಎಲ್ಲ ಜಿಲ್ಲೆಗಳು ಭಿನ್ನತೆಯಿಂದ ಕೂಡಿವೆ. ನಿಜವಾದ ಭಾಷಾ ವೈವಿಧ್ಯ ಈ ಜಿಲ್ಲೆಗಳಲ್ಲಿದೆ. ಆಡು ನುಡಿಯ ಸೊಗಡು ಭಿನ್ನ ಭಿನ್ನವಾಗಿದ್ದು ತನ್ನ ಚಹರೆಗಳನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿವೆ. ಪಂಪನ ಕಾಲದ, ರನ್ನನ ಕಾಲದ `ತಿರುಳ್ಗನ್ನಡ ನಾಡು’ ಈ ಭಾಗದಲ್ಲಿದೆ. ಈ ಪ್ರದೇಶಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿಯಿದೆ. ಈ ಪರಂಪರೆ, ಸಂಸ್ಕೃತಿ ಎಂದು ಹೇಳುವುದೆಲ್ಲ ಶ್ರೇಷ್ಠವಾದದ್ದು ಅಂತಲ್ಲ. ಕಾಲದ ಸ್ಥಿತ್ಯಂತರಗಳನ್ನು ಅನುಭವಿಸುತ್ತ, ಹೊಸದನ್ನು ದಕ್ಕಿಸಿಕೊಳ್ಳುತ್ತ, ಹಳೆಯದನ್ನೂ ಉಳಿಸಿಕೊಳ್ಳುತ್ತ, ಸಂಕರವಾಗಿ ನಿಂತ ಪರಂಪರೆ, ಸಂಸ್ಕೃತಿ ಈ ಪ್ರದೇಶದಲ್ಲಿದೆ. ಹಾಗೆ ನೋಡಿದರೆ ಸಾಹಿತ್ಯ, ಸಂಗೀತ, ಕಲೆ, ಜಾನಪದ ಎಲ್ಲವೂ ಈ ಪ್ರದೇಶದಲ್ಲಿ ಹುಟ್ಟಿ ಬೆಳೆದದ್ದೇ ಹೆಚ್ಚು. ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಂಕಲನ-ಸಂಗೋಪನ ಸಾಹಿತ್ಯ, ಪುರಾಣ ಸಾಹಿತ್ಯ, ತತ್ವಪದ  ಸಾಹಿತ್ಯ, ಮೊಹರಂ ಸಾಹಿತ್ಯ, ಜನಪದದ ದೊಡ್ಡಾಟ, ಸಣ್ಣಾಟ, ಗೊಂದಲಿಗರ ಕಥೆಗಳು, ಲಾವಣಿ ಸಾಹಿತ್ಯ ಮುಂತಾದವು ಈ ಪ್ರದೇಶದ್ದೇ ಆಗಿವೆ. ಆಧುನಿಕ ಪೂರ್ವದಲ್ಲಿ ಇದೆಲ್ಲವನ್ನೂ ಕಾಣಬಹುದು.

ರಾಜಕೀಯ ಸ್ಥಿತ್ಯಂತರಗಳಿಂದ ಈ ಪ್ರದೇಶದಲ್ಲಿ ‘ಅನ್ಯ ಭಾಷೆ, ಅನ್ಯ ಸಂಸ್ಕೃತಿ’ ಪ್ರಭುತ್ವಗಳು ನೆಲೆಗೊಂಡ ಪರಿಣಾಮದಿಂದ ಭಾಷೆ, ಧರ್ಮ ಸಂಕರಗೊಂಡವು. ಸಂಕರ ಸಂಸ್ಕೃತಿಯೇ ಜನಸಮುದಾಯಗಳಲ್ಲಿ ನೆಲೆ ನಿಂತಿತು. ಜನಸಮುದಾಯಗಳ ಮೇಲೆ ರಾಜಕೀಯ ಪ್ರಭುತ್ವಕ್ಕಿಂತ, ಧಾರ್ಮಿಕ ಪ್ರಭುತ್ವದ ಪ್ರಭಾವವೇ ಹೆಚ್ಚು. ರಾಜನನ್ನು ಪ್ರಶ್ನಾತೀತನನ್ನಾಗಿ ಕಾಣುವ ಗುಣವನ್ನು ವಚನಕಾರರು ಕಳೆದು ಹಾಕಿದ್ದರು. ಬದಲಿಗೆ ಸಾಧಕರನ್ನು ಗೌರವಿಸುವ ಗುಣವು ಜನಸಮುದಾಯಗಳಲ್ಲಿ ಬೆಳೆದಿತ್ತು. ರಾಜ ಸತ್ತರೆ ಆತನ ಸ್ಮಾರಕವನ್ನು ನಿರ್ಮಿಸಲು  ಯಾರೂ ಮುಂದಾಗುತ್ತಿರಲಿಲ್ಲ. ಅದೇ ಶರಣರು, ದಾಸರು, ಅನುಭಾವಿಗಳು, ಸಿದ್ಧರು, ಆರೂಢರು, ಸೂಫಿಗಳು, ಫಕೀರರು, ದರ್ವೇಶಿಗಳು ಸತ್ತರೆ ಅವರ ಸ್ಮಾರಕಗಳನ್ನು ಜನರೇ ನಿರ್ಮಿಸುವಂತಾಯಿತು. ಈ ಸಂಸ್ಕೃತಿ ಈ ಪ್ರದೇಶದ ಜನಸಮುದಾಯಗಳಲ್ಲಿ ಎದ್ದು ಕಾಣುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಮುಖ್ಯವಾಗಿ ಪ್ರಧಾನ ಧರ್ಮಗಳು ಸಮಾಜದ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಆಗಿದೆ. ವೈದಿಕ, ಜೈನ, ಶೈವ ಧರ್ಮಗಳು ಸಂಕುಚಿತವಾಗಿದ್ದವು. 12ನೇ ಶತಮಾನದ ಶರಣರ ಸಾಂಸ್ಕೃತಿಕ ಚಳವಳಿ ಅನೇಕ ಬದಲಾವಣೆಗಳನ್ನು ತಂದರೂ, ಅದು ನಂತರದಲ್ಲಿ ಸಾಂಸ್ಥಿಕವಾಗಿ ಬಲಗೊಂಡು ‘ಲಿಂಗಾಯತ , ವೀರಶೈವ’  ಧರ್ಮವಾಗಿ ಸಂಕುಚಿತಗೊಂಡಿತು. ಅಸಂಖ್ಯಾತ ಕೆಳ ಸಮುದಾಯಗಳು ‘ದೇವರು-ಧರ್ಮದ’ ಪರಿಕಲ್ಪನೆಯನ್ನು ಭಿನ್ನವಾಗಿ ಗ್ರಹಿಸಿದವು. ಈ ಜನಸಮುದಾಯಗಳಿಗೆ ಅವರುಗಳದ್ದೇ ಆದ ದೇವರು, ಧರ್ಮವನ್ನು ನಿದಿರ್ಷ್ಟವಾಗಿ ರೂಪಿಸಿಕೊಳ್ಳದೆ ತಬ್ಬಲಿಗಳಾದವು. ಆದರೂ ಈ ಜನಸಮುದಾಯಗಳು ತಬ್ಬಲಿಗಳಾಗದೇ ತಮ್ಮ ತಮ್ಮ ನೆಲೆಯಲ್ಲಿ ಆಧ್ಯಾತ್ಮಿಕವಾದ ಗುಂಪು, ಪಂಥಗಳಲ್ಲಿ ಒಗ್ಗೂಡಿಕೊಂಡವು. ಸ್ಥಳೀಯ ಸಾಧಕರೇ ಪೂಜ್ಯರಾದರು. ಅನುಭಾವಿಗಳು, ಆರೂಢರು, ಸೂಫಿಗಳು, ಫಕೀರರು ತಮ್ಮ ತಮ್ಮ ಅನುಭಾವ ಶಕ್ತಿಯಿಂದ ಜನಸಮುದಾಯಗಳ ಮೇಲೆ ಅಪಾರ ಪ್ರಮಾಣದಲ್ಲಿ ಪ್ರಭಾವ ಬೀರಿದರು. ಈ ಅನುಭಾವಿಗಳು ತೀರಿಕೊಂಡರೆ ಅವರ ಗದ್ದಿಗೆಗಳೇ ಆರಾಧನ ಕೇಂದ್ರವಾದವು. ದರ್ಗಗಾಗಳೂ ಇದನ್ನೇ ಸೂಚಿಸುತ್ತವೆ. ಧಾರ್ಮಿಕವಾಗಿ ಒಗ್ಗೂಡುವಿಕೆಯಿಂದ ಈ ಪ್ರದೇಶದಲ್ಲಿ ಸಮಾಧಿ ಸ್ಥಾನಗಳು ಆರಾಧನಾ ಕೇಂದ್ರಗಳಾಗಿ ಬೆಳೆದವು. ತತ್ವಪದಗಳು ಭಜನಾ ಮೇಳಗಳ ಮೂಲಕ ಸಾಮೂಹಿಕವಾಗಿ ಹೊರಹೊಮ್ಮಿದವು. ಈ ಸಮುದಾಯಗಳೇ ಮೊಹರಂ ಹಬ್ಬದಲ್ಲಿ ಹಾಡುತ್ತ ಕುಣಿದು ಸಂತೋಷ  ಪಡುತ್ತಿವೆ. ಹಿಂದು-ಮುಸ್ಲಿಂ ಸೌಹಾರ್ದತೆ ಈ ಪ್ರದೇಶದಲ್ಲಿ ತಾನೇ ತಾನಾಗಿ ಜೀವಂತವಾಗಿದೆ. ತಿಂತಿಣ ಮೌನೇಶ್ವರನ ದೇವಸ್ಥಾನದಲ್ಲಿ ‘ಏಕ್ ಲಾಕ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನೋದ್ದೀನ್ ಕಾಸಿಪತಿ ಗಂಗಾಧರ ಹರಹರ ಮಾಹಾದೇವ’ ಎಂಬ ಮಂತ್ರ ಪಠಿಸಲಾಗುತ್ತದೆ.

ಪ್ರಧಾನ ಧರ್ಮಗಳು ಈ ಪ್ರದೇಶದಲ್ಲಿ ಅವುಗಳ ಪಾಡಿಗೆ ಅವು ಸಂಕುಚಿತವಾಗಿ ದೇವಸ್ಥಾನ, ಮಠಮಾನ್ಯಗಳ ಜೊತೆಗೆ ಇದ್ದವು. ಅಪಾರ ಸಂಖ್ಯೆಯ ಕೆಳವರ್ಗಗಳು, ಬಡವರು, ರಾಜಪ್ರಭುತ್ವವನ್ನು, ಧರ್ಮಪ್ರಭುತ್ವವನ್ನು ಹೆಚ್ಚು ನಂಬಿಕೊಳ್ಳಲಿಲ್ಲ. ಕಷ್ಟ-ಸುಖಗಳನ್ನು ಆಧ್ಯಾತ್ಮ ಸಾಧಕರ ಸಮಾಧಿ, ದರಗಾಗಳಿಗೆ ಹೋಗಿ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ತಮ್ಮ ಹಕ್ಕುಗಳು ಯಾವುವು? ಅವುಗಳನ್ನು ಯಾರಿಂದ ದಕ್ಕಿಸಿಕೊಳ್ಳಬೇಕು ಎಂಬ ರಾಜಕೀಯ ಪ್ರಜ್ಞೆ ಈ ಪ್ರದೇಶದ ಜನಸಮುದಾಯಗಳಲ್ಲಿ ಬೆಳೆಯಲಿಲ್ಲ. ಈ ಹೊತ್ತಿಗೂ ಈ ಭಾಗದ ಜಿಲ್ಲೆಗಳು-ತಾಲೂಕುಗಳು ಹಿಂದುಳಿದಿವೆ. ತಾರತಮ್ಯ ನೀತಿಗೆ ಒಳಗಾಗುತ್ತಿವೆ ಎಂಬುದನ್ನು ಅಂಕಿ ಅಂಶಗಳು ಕಣ್ಣಿಗೆ ಹೊಡೆದು ಹೇಳುತ್ತಿವೆ. ಆದರೂ  ಸರ್ಕಾರದ ಮೇಲೆ ಒತ್ತಡ ತರುವ ಹೋರಾಟಗಳು ನಡೆಯುತ್ತಿಲ್ಲ. ಈ ಭಾಗದ ರಾಜಕಾರಣಿಗಳಿಗೆ ಅಸ್ತಿತ್ವವೇ ಇಲ್ಲ ಅನಿಸುತ್ತಿದೆ. ಹೋರಾಟದ ಬದಲು ‘ಪ್ರತ್ಯೇಕ ರಾಜ್ಯ’ ದ ಬೇಡಿಕೆ ಇಟ್ಟು ಹೋರಾಡಲು ತೊಡಗಿಕೊಂಡು ಹಾಸ್ಯಾಸ್ಪದವಾಗುತ್ತಿದ್ದಾರೆ. ಅಪಾರ ಪ್ರಮಾಣದ ಭೂಮಿ ಮೇಲ್ವರ್ಗಗಳ ಕೈಯಲ್ಲಿಯೇ ಇತ್ತು. ಭೂ ಸೂಧಾರಣಾ ಕಾಯ್ದೆ ಪರಿಣಾಮಕಾರಿಯಾಗಿ ಈ ಭಾಗದಲ್ಲಿ ಆಗಲಿಲ್ಲ. 100 ರಿಂದ 500 ಎಕರೆ ಭೂಮಿ ಇರುವವರೇ ಸಣ್ಣ ರೈತರಾಗಿದ್ದರು. 1000-2000 ಎಕರೆ ಭೂಮಿಯನ್ನು ಹೊಂದಿದ ಭೂಮಾಲೀಕರಲ್ಲಿ ಬ್ರಾಹ್ಮಣ, ಲಿಂಗಾಯತರೂ ಇದ್ದರೂ. ಕೆಳವರ್ಗಗಳಿಗೆ ಭೂಮಿ ಇರಲಿಲ್ಲ. ಹೀಗಾಗಿ ಅತಿ  ಶ್ರೀಮಂತಿಕೆ ಮತ್ತು ಅತಿ ಬಡತನ ಈ ಪ್ರದೇಶದಲ್ಲಿ ಕಾಣುವ ಮುಖ್ಯ ಲಕ್ಷಣವಾಗಿದೆ. ಬಡತನ ಇರುವಲ್ಲಿ ಬರೀ ಗೋಳಾಟ, ನರಳಾಟ ಮಾತ್ರ ಇರುತ್ತದೆಂದು ತಿಳಿಯಬೇಕಾಗಿಲ್ಲ. ನಿತ್ಯದ ಹೊಟ್ಟೆ ಪಾಡನ್ನು ದುಡಿದು ನಿಭಾಯಿಸಿಕೊಳ್ಳುತ್ತಾರೆ. 1980 ರ ವರೆಗೆ ಈ ದುಡಿವ ವರ್ಗ ವಲಸೆ ಹೋಗುತ್ತಿರಲಿಲ್ಲ. ಈ ಪ್ರಾಂತ್ಯದಲ್ಲಿ ಭೂಮಾಲೀಕರ ಕೆಳಗೆ ಬಡವರು ದುಡಿದು ಜೀವನ ಮಾಡುತ್ತಿದ್ದರು. 1980 ರ ನಂತರ ಜೀವನ ನಿರ್ವಹಣೆ ಕಷ್ಟವಾಯಿತು. ಆಗ ಗದಗ, ಕೊಪ್ಪಳ, ಬಳ್ಳಾರಿ, ವಿಜಾಪುರ, ಬಾಗಲಕೋಟೆ, ಗುಲಬರ್ಗಾ, ರಾಯಚೂರು, ಬೀದರ್ ಜಿಲ್ಲೆಗಳ ಜನರು ಮುಂಬಯಿ, ಪುಣೆ, ಕೊಲ್ಹಾಪುರ, ಸೊಲ್ಲಾಪುರ, ಹೈದರಾಬಾದ್, ಬೆಂಗಳೂರು, ಮಂಗಳೂರು, ಮಡಿಕೇರಿ ನಗರಗಳಿಗೆ ವಲಸೆ ಹೋಗುವುದಕ್ಕೆ ಆರಂಭಿಸಿದರು. ಈಗ ಅತಿಯಾಗಿ ಕೆಲವು ತಾಲೂಕುಗಳ ಹಳ್ಳಿಗಳಲ್ಲಿ ಜನರೇ ಇಲ್ಲದ ಸ್ಥಿತಿ ಒದಗಿದೆ. ವಲಸೆ ಹೋಗುವ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತವೆ. ಈ ಪ್ರದೇಶದಲ್ಲಿ 67.21% ಮಕ್ಕಳು ಶಾಲೆಗೆ ಹೋಗುತ್ತಿಲ್ಲ.

ಬಡತನ ಇರುವಲ್ಲಿ ಸಂಸ್ಕೃತಿ ಶ್ರೀಮಂತವಾಗಿರುತ್ತದೆ ಎಂಬುದಕ್ಕೆ ಉತ್ತರ ಕರ್ನಾಟಕ  ಸಾಕ್ಷಿಯಾಗಿದೆ. ಎಷ್ಟು ಬಗೆಯ ಕಲೆಗಳು ಈ ಪ್ರದೇಶದಲ್ಲಿದ್ದವು ಎಂಬುದನ್ನು ಶೋಧನೆಯಿಂದ ಅರಿಯಬೇಕು. ಗೊಂದಲಿಗರ ಆಟ, ಹಗಲುವೇಷಗಾರರ ಆಟ, ಜಾತಿಗೇರರ ಆಟ, ಬುಡುಬುಡಿಕೆಯವರ ಆಟ, ತತ್ವಪದ ಹಾಡುವವರು, ದಾಸರ ಹಾಡುಗಳು ನೂರಾರು ಬಗೆಯ ಇಂಥ ಕಲಾವಿದರೆಲ್ಲರೂ ಹಳ್ಳಿಹಳ್ಳಿಗಳಲ್ಲಿ ನಿತ್ಯವೂ ಪ್ರದರ್ಶನಗಳನ್ನು ನೀಡುತ್ತಲೇ ಇರುತ್ತಿದ್ದರು. ನಿತ್ಯ ಬೆಳಗಾದರೆ ಸಾಕು ಹೊತ್ತು ಮುಳುಗುವವರೆಗೆ ಈ ಎಲ್ಲ ಕಲಾವಿದರು ಮನೆಮನೆ ಬಾಗಿಲಿಗೆ ಬಂದು ತಮ್ಮ ಕಲೆ ಪ್ರದರ್ಶಿಸಿ ಹೋಗುವುದನ್ನು ಕಾಣಬಹುದಾಗಿತ್ತು. ತಂಬೂರಿ ನಾದವು ಮೂಡಲು ಮೂಡುವಾಗ ಕೇಳುತ್ತಿದ್ದುದು, ಸೂರ್ಯ ಮುಳುಗಿದಾಗ ನಿಲ್ಲುತ್ತಿತ್ತು. ಬ್ರಿಟಿಷರು ಬಂದು ಇವರನ್ನು ಭಿಕ್ಷುಕರು ಎಂದು ಪೀಡಿಸಿದ್ದು ನಮಗೆ ಗೊತ್ತಿದೆ. ಸ್ವಾತಂತ್ರ್ಯದ ನಂತರ ಕಾಲು ಶತಮಾನದವರೆಗೆ ಈ ಕಲಾವಿದರು ಚಟುವಟಿಕೆಯಿಂದ ಕಾರ್ಯಶೀಲರಾಗಿದ್ದರು. ನಗರಗಳು, ಆಧುನಿಕತೆ ಬೆಳೆಯಲಾರಂಭಿಸಿ ಇವರು ಮೂಲೆಗುಂಪಾಗುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ಈ ಕಲಾವಿದರು ಪ್ಲಾಸ್ಟಿಕ್ ವಸ್ತುಗಳನ್ನು ಮಾರುತ್ತಿದ್ದಾರೆ. ಕಲೆ ಮರೆತು ತಮಗೆ ಅನುಕೂಲವಾದ ಪುಡಿ ವ್ಯಾಪಾರಗಳಲ್ಲಿ ತೊಡಗಿದ್ದಾರೆ.

ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಾದ್ಯಂತ ಈಗಲೂ ಜೀವಂತವಾಗಿರುವ ಜಾತ್ರೆಗಳು ಸಂಭ್ರಮದಿಂದ ನಡೆಯುತ್ತವೆ.  20 ವರ್ಷಗಳ ಹಿಂದೆ ಒಂದೊಂದು ಜಾತ್ರೆಗಳು ತಿಂಗಳ ಕಾಲ ನಡೆಯುತ್ತಿದ್ದವು. ಈಚಿನ ವರ್ಷಗಳಲ್ಲಿ ದೊಡ್ಡ ಜಾತ್ರೆಗಳು ಕೂಡ ವಾರ ಹತ್ತು ದಿನಗಳ ಒಳಗೆ ಮುಗಿದು ಜನ ಖಾಲಿಯಾಗುತ್ತಾರೆ. ಮೈಲಾರ, ಹಂಪೆ, ಹುಲಗಿ, ಕೊಪ್ಪಳ, ಕುಕನೂರು, ಕನಕಗಿರಿ, ನೀರಮಾನ್ವಿ, ಕಲಮಾಲಿ, ಕವಿತಾಳ, ಅಮರೇಶ್ವರ, ಕೊಡೇಕಲ್ಲು, ತಿಂತಿಣಿ, ಹುಮನಾಬಾದ ಮುಂತಾದ ನೂರಾರು ಸ್ಥಳಗಳಲ್ಲಿ ನಡೆಯುವ ಜಾತ್ರೆಗಳಿಗೆ ಲಕ್ಷಾಂತರ ಜನ ಸೇರುತ್ತಾರೆ. ಸರ್ಕಾರಕ್ಕೆ ಜಾತ್ರೆಯ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ. ಜನರು ನಿಯಂತ್ರಣ ಮೀರುತ್ತಾರೆ. ಪ್ರಸ್ತುತ ಕಾಲದಲ್ಲಿ ತಾಲೂಕು, ಹೋಬಳಿಗಳೂ ಕೂಡ ವ್ಯಾಪಾರ ಕೇಂದ್ರಗಳಾಗಿವೆ. ಆದರೂ ಈ ಜಾತ್ರೆಗಳು ವ್ಯಾಪಾರ ಕೇಂದ್ರಗಳಾಗಿ ಜನರನ್ನು ಸೆಳೆಯುತ್ತವೆ. ಎಲ್ಲ ಬಗೆಯ ವಸ್ತುಗಳು ಮಾರಾಟಕ್ಕೆ ಸಿಗುತ್ತವೆ. ಎತ್ತುಗಳಿಂದ ಹಿಡಿದು ಹೇರ್‌ಪಿನ್ನುಗಳವರೆಗೆ  ವ್ಯಾಪಾರವಾಗುತ್ತದೆ. ಈ ಪ್ರದೇಶದ ಹಳ್ಳಿಗರು ತಮ್ಮ ಮೆಚ್ಚಿನ ಜಾತ್ರೆಗಳಿಗೆ ಪರಿವಾರ ಸಹಿತ ಹೋಗಿ ತಮಗೆ ಬೇಕಾದ ಸಾಮಾನುಗಳನ್ನು ಕಂಡು ಖುಷಿ ಪಡುತ್ತಾರೆ. ಕೆಲವು ಜಾತ್ರೆಗಳು ಕೆಲವು ವಸ್ತುಗಳ ಮಾರಾಟಕ್ಕೇ ಪ್ರಸಿದ್ಧವಾಗಿರುತ್ತವೆ.

ಜಾತ್ರೆಗಳ ಇನ್ನೊಂದು ವಿಶೇಷವೆಂದರೆ, ಹೇಳಿಕೆ ಅಥವಾ ಕಾರಣಿಕಗಳು. ಅನೇಕ ಜಿಲ್ಲಾ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಹೇಳಿಕೆ-ಕಾರಣಿಕಗಳನ್ನು ಜನರು ಶ್ರದ್ಧೆಯಿಂದ ಕೇಳುತ್ತಾರೆ, ನಂಬುತ್ತಾರೆ. ಮೈಲಾರ ಜಾತ್ರೆ ಈ ಕಾರಣದಿಂದ ಪ್ರಸಿದ್ಧಿ ಪಡೆದಿದೆ. ಜಾತ್ರೆಯಲ್ಲಿ ದೇವರ ಪ್ರತಿನಿಧಿ ಎಂಬಂತಿರುವ ಪೂಜಾರಿ ನಿಗದಿತ ಕಾರ್ಯಗಳ ನಂತರ, ನಿಗದಿತ ಸಮಯಕ್ಕೆ ಹೇಳುವ ‘ಕಾರಣಿಕ’ವನ್ನು ನೆರೆದ ಜನಸಮುದಾಯ ಕೇಳಿ, ಅದನ್ನು ವರ್ಷದ ಉದ್ದಕ್ಕೂ ಅರ್ಥೈಸುತ್ತಲೇ ಇರುತ್ತಾರೆ. ಈ ‘ಕಾರಣಿಕ’ದ ನುಡಿಯ ಅರ್ಥವನ್ನು ವ್ಯಾಪಾರಿಗಳು, ವ್ಯವಸಾಯಗಾರರು, ಕಸುಬುದಾರರು, ಹೆಂಗಸರು, ಗಂಡಸರು ಆ ವರ್ಷದಲ್ಲಿ ತಮ್ಮ ಬದುಕಿನ ಉದ್ದಕ್ಕೂ ಸಮಯ-ಸಂದರ್ಭಕ್ಕೆ ಅನುಸಾರವಾಗಿ, ನಡೆದ, ಘಟಸಿದ ಘಟನೆಗಳೊಂದಿಗೆ ಅರ್ಥಮಾಡಿಕೊಳ್ಳುತ್ತಾರೆ. ಮಳೆ-ಬೆಳೆ, ವ್ಯಾಪಾರ, ಮದುವೆ ಮುಂತಾದ ಸಂಗತಿಗಳ ಭವಿಷ್ಯವನ್ನು ನಿರ್ಧರಿಸಿಕೊಳ್ಳುತ್ತಾರೆ. ಆಧುನಿಕತೆ ಬೆಳೆದರೂ ಈ ಸಂಪ್ರದಾಯಗಳು ಇನ್ನೂ ಜೀವಂತಿಕೆಯಿಂದ ಕೂಡಿವೆ. ಜಾತ್ರೆಗಳು ಈ ಜನಸಮುದಾಯಗಳ ಸೃಜನಶೀಲತೆಗೆ ಸಂಕೇತವಾಗಿವೆ. ಉರುಸುಗಳನ್ನೂ ಇಲ್ಲಿ ನೆನೆಯಬಹುದು.

ಮೊಹರಂ ಹಬ್ಬವೂ ಅಷ್ಟೆ. ಈ ಪ್ರದೇಶದಲ್ಲಿ ನಡೆಯುವ ಮೊಹರಂಗಳು ಅನನ್ಯವಾಗಿವೆ. ಮುಸ್ಲಿಮ್ ಹಬ್ಬವಾದರೂ ಪಾಲ್ಗೊಳ್ಳುವವರಲ್ಲಿ ಮುಕ್ಕಾಲು ಭಾಗ ಮುಸ್ಲಿಮೇತರರಿದ್ದಾರೆ. ಅನೇಕ ಹಳ್ಳಿಗಳಲ್ಲಿ ಮುಸ್ಲಿಮ್ ಕುಟುಂಬಗಳು ಇರುವುದಿಲ್ಲ. ಆದರೂ ಮೊಹರಂ ಹಬ್ಬವು ಸಂಭ್ರಮದಿಂದ ನಡೆಯುತ್ತವೆ. ಕೊಪ್ಪಳದ ಕುದುರೆಮೋತಿ, ರಾಯಚೂರಿನ ಮುದಗಲ್ಲು, ಬೀದರ್, ಗುಲಬರ್ಗಾ, ಬಾಗಲಕೋಟೆ, ಗದಗ ಈ ಎಲ್ಲ ಜಿಲ್ಲೆಗಳಲ್ಲಿ ಈ ಹಬ್ಬಗಳು ಮುಸ್ಲಿಮೇತರರ ಪಾಲ್ಗೊಳ್ಳುವಿಕೆಯಿಂದಲೇ ಬೃಹತ್ ಪ್ರಮಾಣದಲ್ಲಿ ನಡೆಯುತ್ತವೆ. ಕುದುರೆಮೋತಿ ಊರಿನಲ್ಲಿ ಮೊಹರಂ ನಡೆಯುವ ಸಂದರ್ಭದಲ್ಲಿ ಊರಿನ ಯಾರ ಮನೆಯಲ್ಲಿ ಯಾವ ಊರಿನ ಅತಿಥಿಗಳೂ ಹೋಗಿ ಆಶ್ರಯ ಪಡೆದು ಮೊಹರಂನಲ್ಲಿ ಪಾಲ್ಗೊಳ್ಳಬಹುದೆಂಬ ಸಂಪ್ರದಾಯವಿದೆ. ಅನೇಕ ಬುಡಕಟ್ಟಿನ ಜನ ಈ ಊರಿನ ಮೊಹರಂಗೆ ತಪ್ಪದೇ ಬರುತ್ತಾರೆ. ಮೊಹರಂ ಮುಗಿಸಿಕೊಂಡು ಈ ಬುಡಕಟ್ಟಿನವರೆಲ್ಲ ಒಂದೆಡೆ ಸೇರಿ ತಮ್ಮ ನಡುವಿನ ಜಗಳಗಳನ್ನು ‘ನ್ಯಾಯಕಟ್ಟೆ’ಯಲ್ಲಿ ಬಗೆ ಹರಿಸಿಕೊಂಡು ಹೋಗುತ್ತಾರೆ. ಈ ಸಂಸ್ಕೃತಿ ಇನ್ನೂ ಜೀವಂತವಾಗಿದೆ.

ಈ ಭಾಗದ ಜನರಲ್ಲಿ ರಾಜಕೀಯ ಪ್ರಜ್ಞೆ ಕಮ್ಮಿ. ಇಲ್ಲೇ ವಚನಕಾರರ ಚಳವಳಿ ನಡೆದಿದೆ. ರಾಜ ಪ್ರಭುತ್ವವನ್ನೂ, ಧರ್ಮದ ಪ್ರಭುತ್ವವನ್ನು ಪ್ರಶ್ನಿಸಿದ ವಚನಕಾರರು ಪರ್ಯಾಯ ಬದುಕನ್ನು ರಚಿಸಿಕೊಳ್ಳಲು ಚಳವಳಿಯನ್ನೇ ನಡೆಸಿದರು. ‘ಪ್ರತಿಭಾವಂತ’ ರಿಗೆ ಮಾತ್ರ ಸಾಹಿತ್ಯ ರಚನೆ ಸಾಧ್ಯವೆಂದು ನಂಬಿಕೆಯಿದ್ದ ಕಾಲದಲ್ಲಿ, ಸಮಾಜದ ಕಟ್ಟಕಡೆಯ ಕುಟುಂಬಗಳೂ ವಚನ ರಚಿಸಿ ಬೆರಗನ್ನುಂಟುಮಾಡಿದರು. ಈ ಕಾಲದಲ್ಲಿ ಯಜಮಾನಿಕೆಯನ್ನು ಪ್ರಶ್ನಿಸುವುದು, ಅದನ್ನು ಬದಿಗೊತ್ತಿ ಪರ್ಯಾಯ ದಾರಿಗಳನ್ನು ಸಮರ್ಥವಾಗಿ ಹುಟ್ಟು ಹಾಕುವುದು ನಡೆಯಿತು. ಇಂಥ ಪರಂಪರೆ ಮುಂದುವರಿದು ಬಲಗೊಳ್ಳಲಿಲ್ಲ. ರಾಜಕೀಯ ಸ್ಥಿತ್ಯಂತರಗಳು ನಡೆದವು. ಈ ಪ್ರಾಂತದಲ್ಲಿ ಮರಾಠಿ ಪೇಶ್ವೆ, ಇಸ್ಲಾಮ್ ಪ್ರಭುತ್ವಗಳು ನೆಲೆಗೊಂಡವು. ಶರಣರ ವಿಚಾರಗಳನ್ನು ಕೇವಲ ಧರ್ಮದ ನೆಲೆಗೆ ಸೀಮಿತಗೊಳಿಸಲಾಯಿತು. ವಚನ ಚಳವಳಿಯ ಫಲವಾದ ಸಾಹಿತ್ಯವನ್ನೇ ಸಾಂಸ್ಥಿಕಗೊಳಿಸಿ `ವೀರಶೈವೀಕರ’ಣಗೊಳಿಸಲಾಯಿತು. ಜಾತ್ಯತೀತ ಸಮಾಜದ ಕನಸು ಮುರಿದು ಬಿತ್ತು. ಶರಣ-ವಚನಕಾರರ ಸಮಾಜ ಸೇರಬಯಸಿದ ಅನೇಕ ಕೆಳಜಾತಿ ಸಮುದಾಯಗಳು ತಬ್ಬಲಿಗಳಾದವು. ರಾಜ ಪ್ರಭುತ್ವವನ್ನು, ಅದರ ಕಾರ್ಯವನ್ನು, ಅದರಲ್ಲಿ ಪ್ರಜೆಗಳಾದ ತಮ್ಮ ಪಾಲ್ಗೊಳ್ಳುವಿಕೆಯನ್ನು ಕುರಿತು ಯೋಚಿಸಲಿಲ್ಲ. ಈ ಪ್ರಜ್ಞೆಯೇ ಬೆಳೆಯಲಿಲ್ಲ. ಮೇಲಿಂದ ಮೇಲೆ ಪ್ರಭುತ್ವಗಳು ಬಂದು ಹೋದವು. ವಿಜಯನಗರ ಮತ್ತು ಆದಿಲ್ ಶಾಹಿ ಎರಡೂ ಪತನಗೊಂಡ ಮೇಲೆ ಈ ಪ್ರಾಂತ್ಯದಲ್ಲಿ ಅರಾಜಕತೆಯೇ ಹೆಚ್ಚಾಯಿತು. ವಿಜಯನಗರ, ಬಹಮನಿ-ಆದಿಲ್ ಶಾಹಿಗಳ ನಡುವೆ ನಡೆದ ಯುದ್ಧಗಳಿಗೆ ಲೆಕ್ಕವಿಲ್ಲ. ಈ ಎರಡು ರಾಜ್ಯಗಳ ನಡುವಿನ ಯುದ್ಧದ ಭೂಮಿಯೇ ಈ ಪ್ರಾಂತ್ಯವಾಗಿತ್ತು. 17 ರಿಂದ 20ನೇ ಶತಮಾನದ ಅರ್ಧಭಾಗದವರೆಗೆ ಕರ್ನಾಟಕದ ಉತ್ತರ ಭಾಗವು ಯಾವ ಸ್ಥಿತಿ ತಲುಪಿತ್ತು ಎಂಬುದನ್ನು ಇತಿಹಾಸಕಾರ ಬಿ. ಶೇಕ್ಅಲಿ ಹೀಗೆ ಬರೆಯುತ್ತಾರೆ: “ನಿರಂತರವಾಗಿ ರಾಜಕೀಯ ತಂತ್ರಗಳು ಮತ್ತು ದೈವಿಕ ಬಲ ಇವುಗಳನ್ನು ಎಲ್ಲ ಪಕ್ಷಗಳೂ ತಮ್ಮ ವಿರೋಧಿಗಳನ್ನು ಅಡಗಿಸಲು ಬಳಸುತ್ತಿದ್ದವು. ಪರಿಣಾಮವಾಗಿ ಇಡೀ ದೇಶವೇ ಕುದಿಯುವ ಕುಲುಮೆಯಾಗಿತ್ತು. ದೇಶವಿಡೀ ರಣಭೂಮಿಯಾಗಿ ಪರಿವರ್ತನೆಗೊಂಡು ಒಂದಿಷ್ಟು ಸ್ಥಳವೂ ಶಾಂತಿ ನೆಮ್ಮದಿಗಾಗಿ ಉಳಿಯದಂತಾಗಿತ್ತು. ಈ ಜನರಿಗೆ ಆಳುವವರು ಮರಾಠರಾಗಲೀ, ನಿಜಾಮರಾಗಲೀ, ಫ್ರೆಂಚರಾಗಲೀ, ಇಂಗ್ಲಿಷರಾಗಲೀ, ಅಥವಾ ಹೈದರಾಲಿ ಆಗಲೀ ಮುಖ್ಯ ವರಮಾನ ಮೂಲವೆಂದರೆ ಯುದ್ಧ ವಿಜಯಗಳಿಂದ ದೊರಕುವ ಫಲ. ಯಾರಾದರೊಬ್ಬರು ಶಾಂತಿಯಿಂದ ಇರಬಯಸಿದರೂ, ಮಿಕ್ಕವರು ಆ ಸುಖವನ್ನು ಸವಿಯಲು ಬಿಡುತ್ತಿರಲಿಲ್ಲ. ಎಲ್ಲರಲ್ಲೂ ಒಂದು ಹುಚ್ಚು, ಆವೇಶ, ಸಾಧ್ಯವಾದಷ್ಟು ಭೂಮಿಯನ್ನು ಕಸಿದುಕೊಳ್ಳಬೇಕು, ಕೊಳ್ಳೆಹೊಡೆಯಬೇಕು, ಸಾಧ್ಯವಾದಷ್ಟು ಸಂಪಾದಿಸಬೇಕು. ಅಧಿಕಾರ ಕಿತ್ತಾಟದ ಈ ಹಂತದಲ್ಲಿ ಯಾವುದೇ ಬಗೆಯ ರಚನಶೀಲ ಅಥವಾ ಸಾಂಸ್ಕೃತಿಕ ಬೆಳವಣಿಗೆ ಎನ್ನುವುದು ಸಾಧ್ಯವೇ ಇಲ್ಲದ ವಿಚಾರ. ಇಡೀ ಶತಮಾನವೇ ಒಂದು ಬೇಗುದಿಯ ಸುದೀರ್ಘ ಅವಧಿ. ದಂಗೆ-ಕ್ರಾಂತಿ ಇವು ದಿನದ ಮಾತಾಗಿದ್ದವು. ಯುದ್ಧವೆನ್ನುವುದು ಈ ಕಾಲದ ಸಾಮಾನ್ಯ ಚಟುವಟಿಕೆಯೇ ಆಗಿಹೋಯಿತು.” ಈ ಇತಿಹಾಸಕಾರರ ದೀರ್ಘ ಮಾತನ್ನು ಬಳಸಲು ಕಾರಣವಿದೆ. ಸ್ಥಿರವಾದ ರಾಜ-ಪ್ರಭುತ್ವವೇ ಇಲ್ಲ.  ಪ್ರಜೆಗಳು ತಮ್ಮ ಕಷ್ಟಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಬಡತನ, ಯುದ್ಧ, ದೋಚುವಿಕೆ, ಶಾಂತಿ, ನೆಮ್ಮದಿ ಇಲ್ಲದ ದೀರ್ಘ ಬೇಗುದಿಯ ಪರಿಸ್ಥಿತಿಯಲ್ಲಿ ಸಾಮಾನ್ಯರು ವೈರಾಗ್ಯದಿಂದ ಆಧ್ಯಾತ್ಮದ ಕಡೆಗೆ, ಧಾರ್ಮಿಕ ಗುಂಪುಗಳ ಕಡೆ ಒಲಿದು ಸೋಮಾರಿಗಳಾದರು ಎಂದರೆ ತಪ್ಪಾಗುವುದಿಲ್ಲ. ವಚನಕಾರರ ಚಳವಳಿಯಲ್ಲಿ ಮಹಿಳೆಗೆ ಒಳ್ಳೆಯ ಸ್ಥಾನ-ಮಾನಗಳು ದಕ್ಕಿದವು. ಮುನ್ನೆಲೆಗೆ ಬರಲು ಅವಕಾಶಗಳು ಸಿಕ್ಕವು. ತಮ್ಮ ಶಕ್ತಿಯನ್ನು, ಬಲವನ್ನು ತೋರಿಸಿದರು. ವಚನೋತ್ತರ ಕಾಲದಿಂದ ಮಹಿಳೆ ಸಾಂಸ್ಕೃತಿಕವಾಗಿ ನಾಪತ್ತೆಯಾದಳು. ದಾಸರಲ್ಲಿ ಮಹಿಳೆಯಿಲ್ಲ. ತತ್ವಪದಕಾರರಲ್ಲಿ ಮಹಿಳೆಯಿಲ್ಲ. 12ನೇ ಶತಮಾನದಲ್ಲಿ ಸಾಂಸ್ಕೃತಿಕವಾಗಿ ಮುಂಚೂಣಿಗೆ ಬಂದ ಮಹಿಳೆ ನಂತರ 20ನೇ ಶತಮಾನ ಬಂದರೂ ನಾಪತ್ತೆಯೇ. ಆದರೆ ಈ ಪ್ರದೇಶದಲ್ಲಿ ಅದರಲ್ಲೂ ದುಡಿದ ವರ್ಗದಲ್ಲಿ ಮಹಿಳೆಯೇ ಬದುಕನ್ನು ನಿರ್ವಹಿಸುತ್ತಿರುವುದು ಎಂಬುದನ್ನು ಮರೆಯುವಂತಿಲ್ಲ. ಪುರುಷ ಸೋಮಾರಿ, ಮೈಗಳ್ಳ ಎಂಬುದನ್ನು ಅನೇಕ ಸಮೀಕ್ಷೆಗಳು ಹೇಳುತ್ತವೆ. ದುಡಿವ ಮಹಿಳೆಯೇ ಪುರುಷನಿಗಿಂತ ಹೆಚ್ಚು ಸೃಜನಶೀಲಳಾಗಿ ನಿಂತಿದ್ದಾಳೆ. ಜಮೀನ್ದಾರ-ಪ್ಯೂಡಲ್ ವ್ಯವಸ್ಥೆಯಲ್ಲಿ ಬಡತನದ ದುಡಿವ ಮಹಿಳೆ ಮಾನಸಿಕವಾಗಿ, ದೈಹಿಕವಾಗಿ ಶೋಷಿತಳೇ ಆಗಿದ್ದಾಳೆ. ಆದರೂ ಬದುಕುವ ಕುಟುಂಬವನ್ನು ಸಲಹುವ ಛಲ ಮಹಿಳೆಯಲ್ಲಿದೆ. ಈ ಪ್ರಾಂತ್ಯದ ಸಾಹಿತ್ಯದಲ್ಲಿ ಈ ಅಂಶ ಪ್ರಧಾನವಾಗಿ ಕಾಣುತ್ತದೆ.

ಆಳುವ ಸರ್ಕಾರಗಳನ್ನು ತಮ್ಮ ಬೇಕು-ಬೇಡಗಳನ್ನು ನಿಲ್ಲಿಸಿ ಕೇಳುವ ರಾಜಕೀಯ ಪ್ರಜ್ಞೆ ಈ ಭಾಗದ ಜನರಲ್ಲಿ ಬೆಳೆಯಲಿಲ್ಲ. ರೈತರು ಸಾಲು ಸಾಲಾಗಿ ಸತ್ತರು. ದುಡಿವ ಸಮುದಾಯಗಳು ಲಕ್ಷಾಂತರ ಜನ ಗುಳೆ ಹೋಗುತ್ತಿದ್ದಾರೆ. ಅಕಾಲಿಕ ನೆರೆ ಬಂದು ಇದ್ದವರು ಸಂತ್ರಸ್ತರಾದರೂ ಅವರಿಗೆ ಸೂರು ಒದಗಿಸುವ ಸರ್ಕಾರ ಇಲ್ಲ. ಇದ್ದರೂ ನಿರ್ಲಕ್ಷ್ಯವೇ ತುಂಬಿದೆ. ಜನರಲ್ಲಿ ಕೇಳುವ ಗುಣ ಇಲ್ಲದ ಕಾರಣ ಅಭಿವೃದ್ಧಿ ಕನಸಾಗಿದೆ. ತಾರತಮ್ಯ ಹೆಚ್ಚಾಗಿದೆ. ಈ ಭಾಗದ ಜನರು ತಮ್ಮ ಭಾಗದ ಅಭಿವೃದ್ಧಿಯ ಬಗ್ಗೆ, ತಾರತಮ್ಯದ ಬಗ್ಗೆ ಒಟ್ಟುಗೂಡಿ ಚರ್ಚಿಸಿದ್ದಾಗಲೀ, ವಿಚಾರ ಸಂಕಿರಣವಾಗಲೀ, ವರ್ಕಶಾಪ್ ಮಾಡಿದ್ದಾಗಲೀ ಕಂಡು ಬರುವುದಿಲ್ಲ. ಬುದ್ದಿಜೀವಿಗಳು ತಮ್ಮ ಪಾಡಿಗೆ ತಾವಿದ್ದಾರೆ. ಕುತೂಹಲದ ಸಂಗತಿಯೆಂದರೆ, ಹೈದರಾಬಾದ್ ಕರ್ನಾಟಕ ಪ್ರಾಂತ್ಯದಿಂದ ರಾಜಕೀಯದಲ್ಲಿ ವೀರೇಂದ್ರ ಪಾಟೀಲ್, ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಬಿಟ್ಟರೆ ನಾಲ್ಕನೇ ಹೆಸರಿಲ್ಲ. ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ರಾಜಕೀಯ ನಾಯಕರು ಹೆಚ್ಚಾಗಿ ಯಾಕೆ ಕಾಣಿಸಿಕೊಂಡಿಲ್ಲ? ಕಾಣಿಸಿಕೊಂಡರೂ ಹೆಸರಿಗೆ ರಾಜಕಾರಣಿಗಳಾಗಿ, ಒಂದೋ, ಎರಡೋ ಅವಧಿಗೆ ಶಾಸಕರಾಗಿ, ಸಚಿವರಾಗಿ ಮಾಯವಾದವರೇ ಹೆಚ್ಚು. ಜನರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕರೇ ಹುಟ್ಟಿಕೊಳ್ಳುತ್ತಿಲ್ಲ. ಈಗ ಅತಿಯಾಗಿ ಸುದ್ದಿಯಲ್ಲಿರುವ ಬಳ್ಳಾರಿಯ ಗಣಿಧಣಿಗಳು ರಾಜಕಾರಣಿಗಳಾಗಿ, ಮಂತ್ರಿಗಳಾಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರನ್ನು ರಾಜಕಾರಣಿಗಳು ಅನ್ನಲು ಸಾಧ್ಯವೇ? ಪ್ರಜಾಶಕ್ತಿಯನ್ನು ಮಾರಾಟದ ಸರಕನ್ನಾಗಿ ಮಾಡಿ ಅದನ್ನು ಕೊಂಡುಕೊಂಡಿದ್ದಾರೆ. ಅವರಲ್ಲಿರುವ ದುಡ್ಡಿನಿಂದ ಬಳ್ಳಾರಿ ಜಿಲ್ಲೆಯನ್ನು ಇಂಡಿಯಾದ ಮಾದರಿ ಜಿಲ್ಲೆಯನ್ನಾಗಿ ಮಾಡಬಹುದು. ಆದರೆ ಬಳ್ಳಾರಿಯ ರಸ್ತೆಗಳಲ್ಲಿ ಅರ್ಧಗಂಟೆ ತಿರುಗಾಡಲು ಸಾಧ್ಯವಿಲ್ಲ. ಅಷ್ಟು ಗಣಿ ಧೂಳು ತುಂಬಿದೆ.

ಗುಲಬರ್ಗಾ ಜಿಲ್ಲೆಯ ನೆಲದಲ್ಲಿ ಸಿಗುವ ‘ಪರಸೆ’ ಕಲ್ಲು (ಸಿಮೆಂಟ್), ಇಳಕಲ್ಲನಲ್ಲಿ ಸಿಗುವ ಗ್ರ್ಯಾನೆಟ್ ಕಲ್ಲು, ಬಳ್ಳಾರಿಯ ಕಬ್ಬಿಣದ ಅದಿರು ಹೀಗೆ ಈ ಭಾಗದಲ್ಲಿ ಪ್ರಾಕೃತಿಕ ಸಂಪತ್ತು ಬೇಕಾದಷ್ಟಿದೆ. ಉದ್ದಿಮೆ ಸ್ಥಾಪಿಸುವವರು ಯಾರು? ಹೊರಗಿನವರು. ಗುಲಬರ್ಗಾದ ತೊಗರಿ, ರಾಯಚೂರಿನ ಭತ್ತ, ಬಾಗಲಕೋಟೆಯ ಹತ್ತಿ, ಗದಗಿನ ಮೆಣಸಿನಕಾಯಿ, ಸಂಡೂರಿನ, ಹುಬ್ಬಳ್ಳಿಯ ಉಳ್ಳಾಗಡ್ಡೆ, ಬೆಳಗಾವಿಯ ಕಬ್ಬು ಹೀಗೆ ಭೂಮಿಯ ವ್ಯವಸಾಯದಿಂದ ಬೇಕಾದಷ್ಟು ಉತ್ಪನ್ನವಿದೆ. ಆದರೆ ಅದನ್ನು ನಿರ್ವಹಿಸುವ ದಲ್ಲಾಳಿಗಳು ಶ್ರೀಮಂತರಾಗುತ್ತಾರೆ. ಭೂಮಿ ಇರುವ ರೈತರು ಸಾಯುತ್ತಾರೆ. ದುಡಿದವರು ನಗರಗಳಿಗೆ ವಲಸೆ ಹೋಗುತ್ತಾರೆ. ಆಯಾ ಜಿಲ್ಲೆಗಳಲ್ಲಿರುವ ನೈರ್ಸಗಿಕ ಸಂಪತ್ತನ್ನು ಉದ್ಯಮಿಗಳು ಅಕ್ಷರಶಃ ಕೊಳ್ಳೆ ಹೊಡೆಯುತ್ತಿದ್ದಾರೆ. ಗಣಿಗಾರಿಕೆ ರಾಷ್ಟ್ರೀಕರಣವಾಗಬೇಕು ಎಂಬ ಹೋರಾಟ ಯಾರಿಂದಲೂ ಹುಟ್ಟಿ ನಡೆಯಲಾರದಂಥ ಸ್ಥಿತಿಯಿದೆ. ಸ್ಥಳೀಯವಾಗಿದ್ದ ಗುಡಿ ಕೈಗಾರಿಕೆಗಳು ನಾಶವಾಗಿ ಹೋಗಿವೆ. ಕಸುಬುದಾರರು ತಮ್ಮ ಮೂಲ ಕಸುಬನ್ನು ಮರೆಯುವಂತೆ ಜಾಗತೀಕರಣ ಬೆಳೆದಿದೆ.

ಉತ್ತರ ಕರ್ನಾಟಕದ ಅನೇಕ ಜಿಲ್ಲೆ, ತಾಲೂಕುಗಳು ಸಾಂಸ್ಕೃತಿವಾಗಿ ಮಹತ್ವ ಪಡೆದಿವೆ. ತುಂಬ ಜನಪ್ರಿಯವಾಗಿರುವ ಹಂಪೆ, ಬದಾಮಿ, ಪಟ್ಟದಕಲ್ಲು, ಐಹೊಳೆ, ವಿಜಾಪುರ, ಬೀದರ್ ಸ್ಥಳಗಳು ಪ್ರವಾಸೋದ್ಯಮ ನಕ್ಷೆಗಳಲ್ಲಿ ಕಾಣುತ್ತವೆ. ರಾಜರ ಆಳ್ವಿಕೆಯಿಂದ ದೇವಾಲಯಗಳು, ಗುಹೆಗಳು ವಾಸ್ತುಶಿಲ್ಪ, ಕಲ್ಲಿನ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ನಿಸರ್ಗ ನಿರ್ಮಿತ ಸ್ಥಳಗಳ ಪರಿಚಯ ಹೊರಗಿನವರಿಗಿಲ್ಲ. ಬಹಳ ಮುಖ್ಯ ಎಂದು ಕರೆಯುವ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲಗಳನ್ನು ಪ್ರವಾಸೋದ್ಯಮ ಇಲಾಖೆ ಮಾಡಿಲ್ಲ. ವಸತಿ ಸೌಕರ್ಯ ಇದ್ದರೂ ಬಿಳಿ ಆನೆಯಾಗಿವೆ. ಮೇಲ್ಮಧ್ಯಮ ವರ್ಗದವರಿಗೂ ಕೈಗೆ ನಿಲುಕದ ಹಾಗೆ ಬೆಲೆಗಳನ್ನಿಟ್ಟಿರುತ್ತಾರೆ. `ಮಯೂರ’ಎಂದು ಕರೆಯುವ ಪ್ರವಾಸೋದ್ಯಮ ಹೋಟೆಲುಗಳಲ್ಲಿ ಎಲ್ಲವೂ ದುಬಾರಿ. ಆದರೆ ವ್ಯವಸ್ಥೆ ಮಾತ್ರ ಅತಿ ಸಾಧಾರಣ. ಬಳ್ಳಾರಿ ಬಿಸಿಲಿಗೆ, ಜೈಲಿಗೆ, ಸರ್ಕಾರಿ ನೌಕರರ ಶಿಕ್ಷೆಗೆ ಗುರಿಮಾಡಲು ವರ್ಗಾವಣೆಗೆ ಇಂಥದಕ್ಕೆ ಹೆಸರುವಾಸಿಯಾಗಿದೆಯಷ್ಟೆ. ಆದರೆ ಹೊಸಪೇಟೆ, ಸಂಡೂರು, ಹಡಗಲಿ, ಹರಪನಹಳ್ಳಿ, ಮುಂಡರಗಿ, ಮೊಳಕಾಲ್ಮೂರು, ಆನೆಗುಂದಿ ಮುಂತಾದ ಊರುಗಳ ಸರಹದ್ದುಗಳಲ್ಲಿ ಮನತಣಿಯುವ ನಿಸರ್ಗ ತಾಣಗಳಿವೆ. ಸಂಡೂರು ತಾಲೂಕಿನಲ್ಲಿರುವ ನರಸಿಂಗಾಪುರ, ತಾರಾನಗರ, ನವಲಟ್ಟಿ, ಉಬ್ಬಲಗುಂಡಿ, ನಾರಾಯಣಪುರ, ರಾಜಾಪುರ, ದೇವಗಿರಿ, ನಂದಿಹಳ್ಳಿ, ಯಶವಂತನಗರ, ಬಂಡ್ರಿ ಮುಂತಾದ ಗ್ರಾಮಗಳು ಕಣಿವೆ, ಬೆಟ್ಟಗಳಿಂದ, ನೀರಿನ ಝರಿಗಳಿಂದ ಮನಸೆಳೆಯುತ್ತವೆ. ನಾರಿಹಳ್ಳಿ, ನಂದಿಹಳ್ಳಿ (ಕುಮಾರಸ್ವಾಮಿ ದೇವಸ್ಥಾನ) ಸುಂದರ ತಾಣಗಳಾಗಿದ್ದವು. ಆದರೆ ಗಣಿಗಾರಿಕೆಯಿಂದ ಈ ಸುಂದರ ನಿಸರ್ಗ, ಊರು, ಹೊಲಗಳಲ್ಲಿನ ವ್ಯವಸಾಯ ಹದಗೆಟ್ಟು ಹೋಗಿದೆ. ಯಾವ ಬೆಳೆಯೇ ಆಗಲಿ, ಬೆಳೆಯುತ್ತಿದ್ದಂತೆ ಧೂಳು ಅಡರಿ ಮುಚ್ಚಿ ಹೋಗುತ್ತವೆ. ಊರಿನ ರಸ್ತೆಗಳಲ್ಲಿ ಧೂಳು ಅಡರಬಾರದೆಂದು ಹಗಲು ನೀರು ಹಾಕುತ್ತಾರೆ. ಯಾವಾಗಲೂ ರೊಚ್ಚೆಯಲ್ಲಿ ತಿರುಗಾಡಬೇಕು. ಹಳ್ಳಿಗಳಲ್ಲಿ ಗಿಡಮರಗಳ ಮರ್ಮರ, ನೀರಿನ ಜುಳುಜುಳು ಶಬ್ದ ಕೇಳಿದ್ದ ಜನ ಈಗ ಸ್ಫೋಟಕಗಳ ಸಿಡಿಯುವ ಶಬ್ದ, ಲಾರಿಗಳ ನಿರಂತರ ಶಬ್ದ ಕೇಳಬೇಕು. ಪಶು, ಪಕ್ಷಿ, ಪ್ರಾಣಿ, ವನ್ಯಜೀವಿಗಳು ಅಲೆದಾಡುವಂತೆ ಈಗ ಗುಡ್ಡಗಳಲ್ಲಿ ಲಾರಿ, ಜೀಪುಗಳು ತಿರುಗಾಡುತ್ತವೆ. ಬಳ್ಳಾರಿ, ಹೊಸಪೇಟೆಗಳೂ ಧೂಳಿನಿಂದ ವಿಕಾರಗೊಂಡಿವೆ. ಜನರ ಬದುಕನ್ನು ಕೆಡಿಸಿರುವ ಈ ಗಣಿಗಾರಿಕೆಯು, ಪುನಃ ಸ್ಥಾಪಿಸಲಾರದ ಸ್ಥಿತಿಗೆ ಊರು, ನಿಸರ್ಗ, ಜನರನ್ನು ಪ್ರಾಣಿಸಂಕುಲ, ಪಕ್ಷಿ ಸಂಕುಲವನ್ನು ನಾಶಮಾಡುತ್ತಿದೆ. ಗಣಿಮಾಲೀಕರು ಚುನಾವಣೆಗೆ ನಿಂತು, ಪ್ರಜಾಶಕ್ತಿಯನ್ನು ನೋಟಿನಿಂದ ಕೊಂಡು, ರಾಜ್ಯದ ರಾಜಕೀಯ ಪಾವಿತ್ರ್ಯವನ್ನೇ ನಾಶಮಾಡಿದ್ದಾರೆ. ಗುಲಬರ್ಗಾ ಜಿಲ್ಲೆಯ ಒಣ ಬೇಸಾಯದಿಂದ ಜನ ಹೇಗೋ ಬದುಕುತ್ತಿದ್ದರು. ನೆಲದಲ್ಲಿ ಸಿಗುವ ಸಿಮೆಂಟಿನ ಕಚ್ಚಾವಸ್ತು ಶಾಬಾದಿ ಪರಸೆ ಕಲ್ಲುಗಳ ಗಣಿಯಿಂದ ಶಹಾಬಾದ್, ಸೇಡಂ, ತಾಂಡೂರು ತಾಲೂಕುಗಳೂ ಸಿಮೆಂಟಿನ ಧೂಳಿನಿಂದ ಮುಳುಗಿವೆ. ಇಲ್ಲಿನ ಉದ್ದಿಮೆದಾರರು ತಮ್ಮ ಬಂಡವಾಳ ಹೆಚ್ಚಿಸಿಕೊಂಡಿದ್ದಾರೆ. ಆದರೆ ಜನರ ಜೀವನಮಟ್ಟ ಕುಸಿದು ಹೋಗುವಂತೆ ಮಾಡಿದ್ದಾರೆ. ಇಲ್ಲಿನ ಉದ್ದಿಮೆದಾರರು ಬಳ್ಳಾರಿ ಗಣಿಧಣಿಗಳ ಹಾಗೆ ರಾಜಕೀಯವನ್ನು ಪ್ರವೇಶಿಸಿ ರಾಜ್ಯವನ್ನು ಹದಗೆಡಿಸಿಲ್ಲ ಅಷ್ಟೇ. ಬೀದರಿನ ಕೋಟೆ, ಕೋಟೆಯ ಕೆಳಗಿರುವ ಅಷ್ಟೂರಿನ ಗೋರಿಗಳನ್ನು ನೋಡಿದರೆ ಖುಷಿಯಾಗುತ್ತದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಲದುರ್ಗವು ಕೃಷ್ಣಾನದಿ ಎರಡಾಗುವ ಸ್ಥಳ. ನಡುಗಡ್ಡೆಯಾಗಿ ಭೀಕರವಾಗಿ, ರಮ್ಯವಾಗಿ ಮನಸೆಳೆಯುತ್ತದೆ. ಕೃಷ್ಣಾನದಿ ಹಾಗೇ ಮುಂದೆ ಹರಿಯುತ್ತ ಬರೀ ಗುಡ್ಡಬೆಟ್ಟಗಳಲ್ಲಿ, ಕಣಿವೆಯಾಗಿ ಹರಿದು ತಿಂತಿಣಿ, ದೇವದುರ್ಗ, ದೇವಸೂಗೂರು, ಅಲ್ಲಿಂದ ಕೆಳಗೆ ನಾರದದಗಡ್ಡೆ ಮುಂತಾದ ಮೂರು ನಾಲ್ಕು ನಡುಗಡ್ಡೆಗಳನ್ನು  ನಿರ್ಮಿಸಿದೆ. ಜಲದುರ್ಗಾದ ಸಮೀಪ ಛಾಯಾಭಗವತಿಯಿದೆ. ಬಸವಸಾಗರ ಅಣೆಕಟ್ಟು ಇದೆ. ಮುದಗಲ್ಲಿನ ಕೋಟೆಯಿದೆ. ಕೊಡೇಕಲ್ಲು ಇದೆ. ಮೊಗಲರ ಸಮಾಧಿಗಳಿರುವ ದಿಗ್ಗಿ ಗ್ರಾಮ ಇದೆ. ಇವು ಐತಿಹಾಸಿಕ ಕುರುಹುಗಳಾಗಿ ನಿಂತಿವೆ. ಆದರೆ ಸರ್ಕಾರ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗಾಗಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಹುಬ್ಬಳ್ಳಿಯಿಂದ ಬೆಳಗಾವಿಗೆ ರೈಲಿನಲ್ಲಿ ಪ್ರಯಾಣಿಸಿದರೆ ಸುಖಕರ ಅನುಭವ ಆಗುತ್ತದೆ. ಎಡ-ಬಲ ಕಾಡು, ನಡುವೆ ಅಲ್ಲಲ್ಲಿ ಊರು, ವ್ಯವಸಾಯದ ಹೊಲಗಳು ಕಣ್ಣಿಗೆ ಹಬ್ಬ ನೀಡುತ್ತದೆ.

ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಉ.ಕ. ಬೆಳಗಾವಿ, ಧಾರವಾಡ, ಬಿಟ್ಟರೆ, ಬಾಗಲಕೋಟೆ, ವಿಜಾಪುರ, ಗದಗ, ಕೊಪ್ಪಳ, ರಾಯಚೂರು, ಗುಲಬರ್ಗಾ ಮತ್ತು ಬೀದರ್ , ಈ ಏಳು ಜಿಲ್ಲೆಗಳು ಸಾಂಸ್ಕೃತಿಕವಾಗಿ ಶ್ರೀಮಂತವಾಗಿವೆ. ಆರ್ಥಿಕವಾಗಿ ಹಿಂದುಳಿದಿವೆ. ನೈರ್ಸಗಿಕ ಸಂಪತ್ತಿದೆ. ಅದು ಬಂಡವಾಳ ಹೂಡುವವರಿಂದ ಲೂಟಿಯಾಗುತ್ತಿದೆ. ಜನರಿಗೆ ವಿದ್ಯಾವಂತರಾಗಿ, ರಾಜಕೀಯ ಪ್ರಜ್ಞೆ ಪಡೆಯಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗದೇ ಇರುವುದು. ತಾಂತ್ರಿಕ ಶಿಕ್ಷಣ ಕಲಿಯಲು ದಾರಿಯಾಗುವ ಪಿ.ಯು.ಸಿ. ಪದವಿಯನ್ನು ವಿಜ್ಞಾನದಲ್ಲಿ ಕಲಿಯಲು ಕಾಲೇಜುಗಳ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರಿ ಪದವಿಪೂರ್ವ ವಿಜ್ಞಾನ ಕಾಲೇಜುಗಳ ಸಂಖ್ಯೆ ತೀರಾ ಕಮ್ಮಿಯಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾಗುವ ಸೂಚನೆಗಳೂ ಕೂಡ ಕಾಣಿಸುತ್ತಿಲ್ಲ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ ಮತ್ತು ಇತರೆ ಅಂತರ್ಜಾಲ ಮೂಲಗಳು.)