ಅಣ್ಣಾ, ನಿಮ್ಮ ಅಖಾಡ ಅದಾಗಿರಲಿಲ್ಲ!


-ಚಿದಂಬರ ಬೈಕಂಪಾಡಿ


ಥಿಯರಿಯಲ್ಲಿ ಅತ್ಯುತ್ತಮ ಅಂಕ ಪಡೆಯುವ ವಿದ್ಯಾರ್ಥಿ ಪ್ರಾಕ್ಟಿಕಲ್‌ನಲ್ಲೂ ಅದಕ್ಕೆ ಸರಿಸಮನಾದ ಅಂಕ ಪಡೆಯಬೇಕು, ಅದು ನಿರೀಕ್ಷೆ. ಆದರೆ ಅದೆಷ್ಟೋ ಸಂದರ್ಭದಲ್ಲಿ ಹಾಗೆ ಆಗುವುದಿಲ್ಲ. ಥಿಯರಿಯಲ್ಲಿ ಕನಿಷ್ಠ ಅಂಕ ಪಡೆದವ ಪ್ರಾಕ್ಟಿಕಲ್‌ನಲ್ಲಿ ಗರಿಷ್ಠ ಅಂಕ ಪಡೆಯುವ ಸಾಧ್ಯತೆಗಳಿರುತ್ತವೆ. ಒಬ್ಬನೇ ವಿದ್ಯಾರ್ಥಿಯಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್‌ನಲ್ಲಿ ಯಾಕೆ ಇಂಥ ವ್ಯತ್ಯಾಸಗಳಾಗುತ್ತವೆ? ಥಿಯರಿ ಪುಸ್ತಕದಿಂದ ಪಡೆಯುವ ಅನುಭವ. ಬರೆದಿಟ್ಟ ಅನುಭವವನ್ನು ಓದಿಕೊಂಡು ಹಾಗೆಯೇ ಬರೆದುಬಿಡುತ್ತಾನೆ. ಅದರಲ್ಲಿ ಅವನ ಹೂಡಿಕೆ ಬೌದ್ಧಿಕ ಬಂಡವಾಳ ಮಾತ್ರ. ಪ್ರಾಕ್ಟಿಕಲ್ ಅಂದರೆ ಬೌದ್ಧಿಕ ಬಂಡವಾಳದ ಜೊತೆಗೆ ತನ್ನ ಗೆಯ್ಮೆಯನ್ನೂ ಹೂಡಬೇಕಾಗುತ್ತದೆ.

ಒಂದು ಶಿಲ್ಪವನ್ನು ಕಡೆಯುವ ಕುರಿತು ಥಿಯರಿ ಓದಿ ಬರೆದು ಬಿಡಬಹುದು. ಆದರೆ ಅದೇ ಶಿಲ್ಪವನ್ನು ಅವನಿಗೆ ಕೆತ್ತಲು ಕೊಟ್ಟರೆ ಖಂಡಿತಕ್ಕೂ ಕೆತ್ತಲಾರ. ಮನಸ್ಸಿನಲ್ಲಿ ಅವನು ಮೂಲಶಿಲ್ಪಕ್ಕಿಂತಲೂ ಸುಂದರವಾದ ಶಿಲ್ಪವನ್ನು ಕೆತ್ತಿನಿಲ್ಲಿಸಿಬಿಡುತ್ತಾನೆ. ಆದರೆ ಅದು ಅವನ ಒಳಗಣ್ಣಿಗೆ ಮಾತ್ರ ಕಾಣುತ್ತದೆ, ಹೊರಗಿನವರ ಕಣ್ಣಿಗೆ ಕಾಣಲು ಹೇಗೆ ತಾನೇ ಸಾಧ್ಯ? ಥಿಯರಿ ಮತ್ತು ಪ್ರಾಕ್ಟಿಕಲ್ ಎರಡರಲ್ಲೂ ಏಕರೂಪದ ಸಾಧನೆ ಸಾಧ್ಯವಿಲ್ಲದ ವಿದ್ಯಾರ್ಥಿಯ ಸ್ಥಿತಿ ಅಣ್ಣಾ ಮತ್ತವರ ತಂಡದ್ದು. ಅಣ್ಣಾ ಮತ್ತು ಅವರ ತಂಡ ಥಿಯರಿ ಹೇಳುತ್ತಲೇ ಹದಿನೆಂಟು ತಿಂಗಳು ದೇಶದ ಜನಮಾನಸದಲ್ಲಿ ನೆಲೆಯೂರಿದರು.

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದು ಸಹಜವಾಗಿತ್ತು ಮತ್ತು ಅದು ಅಣ್ಣಾ ತಂಡದ ಥಿಯರಿ ಮಾತ್ರವಲ್ಲಾ ದೇಶದ ಶೇ.90ರಷ್ಟು ಜನರ ನಿಜವಾದ ಅನುಭವ ಕೂಡಾ. ಆದರೆ ಥಿಯರಿಯನ್ನು ಪ್ರಾಕ್ಟಿಕಲ್ ಹಂತಕ್ಕೆ ತರುವುದು ಅದೆಷ್ಟು ಕಠಿಣ ಎನ್ನುವುದಕ್ಕೆ ಛಿದ್ರವಾದ ಅಣ್ಣಾ ತಂಡವೇ ಸಾಕ್ಷಿ. ಪ್ರಬಲ ಲೋಕಪಾಲ್ ಜಾರಿಯಾಗಬೇಕು ಎನ್ನುವುದು ಥಿಯರಿ. ಜಾರಿಗೆ ಮಾಡುವುದು ಪ್ರಾಕ್ಟಿಕಲ್. ಥಿಯರಿಯಲ್ಲಿ ಅಣ್ಣಾ ತಂಡ ಅತ್ಯುತ್ತಮ ಸಾಧನೆ ಮಾಡಿತು, ಆದರೆ ಪ್ರಾಕ್ಟಿಕಲ್‌ನಲ್ಲಿ ಪರಾಭವಗೊಂಡಿತು. ಜಾರಿ ಮಾಡಬೇಕಾಗಿದ್ದವರು ಪ್ರಾಕ್ಟಿಕಲ್‌ನಲ್ಲಿ ಗೆದ್ದರು.

ಹಾಗೆ ನೋಡಿದರೆ ಅಣ್ಣಾ ಭ್ರಷ್ಟಾಚಾರದ ವಿರುದ್ಧ ಎತ್ತಿದ ಧ್ವನಿ ಈಗಲೂ ಸಮಂಜಸ, ಅವರ ಆರಂಭದ ಹೆಜ್ಜೆಯೂ ಸಮರ್ಪಕ. ಆದರೆ ಅವರು ಎಡವಿದ್ದು ಎಲ್ಲಿ ಎನ್ನುವುದು ಈಗಿನ ಸ್ಥಿತಿಯಲ್ಲಿ ಚರ್ಚೆಗೆ ಯೋಗ್ಯ. ತುತ್ತು ಕೂಳು ತಿನ್ನಲು ಅನುವಾಗುವಂತೆ ಕೂಲಿಗಾಗಿ ಕಾಳು ಯೋಜನೆಯಿಂದ ಹಿಡಿದು ದೇಶವನ್ನು ರಕ್ಷಿಸಲು ಖರೀದಿಸುವ ರಕ್ಷಣಾ ಸಲಕರಣೆಗಳ ಖರೀದಿ ತನಕ ಭ್ರಷ್ಟಾಚಾರದ ಕಮಟುವಾಸನೆ ಮೂಗಿಗೆ ಬಡಿಯುತ್ತದೆ. ಸತ್ತ ಹೆಣದ ಶವಪರೀಕ್ಷೆಯಿಂದ ಹಿಡಿದು ಉಸಿರಾಡಿಸುವ ಜೀವರಕ್ಷಕ ಔಷಧಿಯ ತನಕ ಭ್ರಷ್ಟಾಚಾರವಿದೆ ಅಂದ ಮೇಲೆ ಇದರ ಬೇರುಗಳ ಆಳ ಅದೆಷ್ಟು ಎನ್ನುವುದು ಗೋಚರವಾಗುತ್ತದೆ. ಇಂಥ ಬೇರುಗಳನ್ನು ಕೀಳಬೇಕಾದರೆ ಅದಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳ ಬೇಕಾಗಿತ್ತು. ಪಾರ್ಥೇನಿಯಮ್ ಗಿಡದಂತೆ ಬೆಳೆದು ನಿಂತಿರುವ ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತು ಹಾಕಬೇಕೆನ್ನುವ ಸಂಕಲ್ಪ ಅಣ್ಣಾ ಅವರ ಮಾನಸಿಕ ಥಿಯರಿ ಹೊರತು ಅದು ಪುಸ್ತಕ ಥಿಯರಿ ಆಗಿರಲಿಲ್ಲ.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮಹಾನ್ ಕ್ರಾಂತಿಗೆ ನಾಂದಿ ಹಾಡಿದರು. ಶೋಷಣೆ, ಸಾಮಾಜಿಕ ಅಸಮಾನತೆಯ ವಿರುದ್ಧ ಸೆಟೆದು ನಿಲ್ಲುವ ಮುನ್ನ ಅವುಗಳ ಕ್ರೌರ್ಯವನ್ನು ತುಂಬಾ ಹತ್ತಿರದಿಂದ ನೋಡಿದ್ದರು. ರಾಜನ ಆಡಳಿತದ ಭಾಗವಾಗಿದ್ದ ಬಸವಣ್ಣ ಅದರ ವಿರುದ್ಧವೇ ಹೋರಾಟಕ್ಕಿಳಿದು ಯಶಸ್ಸು ಕಂಡರು. ಒಬ್ಬ ಕಳ್ಳನ ಕೈಚಳಕವನ್ನು ಮತ್ತೊಬ್ಬ ಕಳ್ಳ ಗ್ರಹಿಸುವಷ್ಟು ಸುಲಭವಾಗಿ ಕಳ್ಳನಲ್ಲದಿದ್ದವನು ಗ್ರಹಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರಿ ಮತ್ತು ಭ್ರಷ್ಟಾಚಾರದ ಅರಿವಿರದ ವ್ಯಕ್ತಿಗಳ ನಡುವಿನ ವ್ಯತ್ಯಾಸವೂ ಇದೇ ಆಗಿದೆ.

ಅಣ್ಣಾ ಭ್ರಷ್ಟಾಚಾರ ಮಾಡಿದವರಲ್ಲ. ಆದರೆ ಭ್ರಷ್ಟಾಚಾರದ ಬಗ್ಗೆ ಒಳನೋಟವಿದೆ. ಅಣ್ಣಾ ತಂಡದಲ್ಲಿದ್ದವರು ಭ್ರಷ್ಟ ವ್ಯವಸ್ಥೆಯ ಅರಿವಿದ್ದವರು. ಆಡಳಿತ ಯಂತ್ರದ ಒಳಗಿದ್ದು ಹೊರಬಂದವರು. ಆದ್ದರಿಂದಲೇ ಅವರಿಗೆ ಭ್ರಷ್ಟಾಚಾರದ ಬೇರುಗಳ ಸ್ಪಷ್ಟ ಕಲ್ಪನೆಯಿತ್ತು. ಈ ಕಾರಣಕ್ಕಾಗಿ ಅಣ್ಣಾ ಮತ್ತವರ ತಂಡ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮತೋಲನದ ತಂಡವಾಗಿ ಜನರಿಗೆ ಗೋಚರವಾಗಿತ್ತು. ಈ ತಂಡದಲ್ಲಿ ಬೌದ್ಧಿಕವಾದ ಅನುಭವ ಧಾರಾಳವಾಗಿತ್ತು, ಜೊತೆಗೆ ಯಾರ ಬೌದ್ಧಿಕತೆ ಹೆಚ್ಚು ಎನ್ನುವ ಆಂತರಿಕ ಮೇಲಾಟವೂ ಇತ್ತು. ತಮ್ಮದೇ ಆಂತರಿಕ ತುಡಿತ ಅಣ್ಣಾತಂಡದ ಧ್ವನಿಯಾಗಬೇಕು ಎನ್ನುವ ಹಂಬಲವೂ ಇಣುಕತೊಡಗಿತು. ಇಂಥ ಒಳತುಡಿತದ ತಾಕಲಾಟಗಳು ಮಾಧ್ಯಮಗಳ ಮೂಲಕ ಅಣ್ಣಾತಂಡದ ಒಡೆದ ಸ್ವರಗಳಾಗಿ ಕೇಳಿಸತೊಡಗಿದ್ದವು. ಇವೆಲ್ಲವನ್ನೂ ಅಣ್ಣಾ ಗ್ರಹಿಸಲಾಗದಷ್ಟು ದಡ್ಡರೆಂದು ಆ ತಂಡದಲ್ಲಿದ್ದ ಕೆಲವರು ಸ್ವಯಂ ನಿರ್ಧಾರಕ್ಕೆ ಬಂದದ್ದು ದುರ್ದೈವ.

ಅಣ್ಣಾತಂಡದ ಸಾಮೂಹಿಕ ನಿರ್ಧಾರ ತಂಡದ ವೇದಿಕೆಯಲ್ಲಿ ಆಗುವ ಬದಲು ಅವರವರ ಮನೆಗಳಲ್ಲಾಗತೊಡಗಿತು. ತಂಡದ ಬುದ್ಧಿವಂತರು ಹೇಳುವ ಮಾತು ಅಣ್ಣಾ ಅವರ ಬಾಯಿಯಿಂದ ಬರುವಂತಾಯಿತು. ಅಣ್ಣಾ ಅವರಿಗೆ ಆಂಗ್ಲಭಾಷೆಯ ಅರಿವಿಲ್ಲದ ಕಾರಣ ಅತ್ಯಂತ ಗಂಭೀರ ವಿಚಾರಗಳು ಮತ್ತು ಅಣ್ಣಾ ಅವರಿಗೆ ಗೊತ್ತಿಲ್ಲದ ಅಂಶಗಳು ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬಂದು ಎಡವಟ್ಟು ಉಂಟುಮಾಡಿದವು. ಇದನ್ನೂ ಅಣ್ಣಾ ಸಹಿಸಿಕೊಂಡರು. ಇಡೀ ಹೋರಾಟದ ದಿಕ್ಕು ಕವಲು ದಾರಿಹಿಡಿದದ್ದು ಬಾಬಾ ರಾಮ್‌ದೇವ್ ಅಖಾಡಕ್ಕಿಳಿದಾಗ ಎನ್ನುವುದನ್ನು ಮರೆಯುವಂತಿಲ್ಲ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹೋರಾಟದ ದಾರಿ ಹಿಡಿದು ಜನರ ಚಳವಳಿಯನ್ನಾಗಿ ರೂಪಿಸುತ್ತಿದ್ದರೆ ಅದೇ ಹೊತ್ತಿಗೆ ಬಾಬಾ ರಾಮ್‌ದೇವ್ ಕಪ್ಪು ಹಣವನ್ನು ಭಾರತಕ್ಕೆ ತರುವ ಹೋರಾಟಕ್ಕಿಳಿದರು. ಈ ಮೂಲಕ ಜಂತರ್ ಮಂತರ್, ರಾಮಲೀಲಾ ಮೈದಾನದಲ್ಲಿ ಸೇರುತ್ತಿದ್ದ ಜನರು ಇಬ್ಬರು ಹೋರಾಟಗಾರರ, ಎರಡು ಭಿನ್ನಮುಖಗಳನ್ನು ಕಾಣತೊಡಗಿದರು. ಇದು ಒಂದು ನೆಲೆಯ ಗುರಿ ಹಿಡಿದು ಸಾಗುತ್ತಿದ್ದ ಚಳವಳಿ ಕವಲು ದಾರಿಯಲ್ಲಿ ಸಾಗಲು ಕಾರಣವಾಯಿತು.

ಅಣ್ಣಾ ಅವರನ್ನು ಜನರು ನೋಡುತ್ತಿದ್ದ ವಿಧಾನ, ಜನರು ಅಣ್ಣಾ ಅವರನ್ನು ಗ್ರಹಿಸುತ್ತಿದ್ದ ರೀತಿಗೂ ರಾಮ್‌ದೇವ್ ಅವರು ಜನರನ್ನು ನೋಡುತ್ತಿದ್ದ ವಿಧಾನ, ಜನರು ಅವರನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿತ್ತು. ಅಣ್ಣಾ ಸಾಮಾಜಿಕ ಹೋರಾಟಗಾರರಾಗಿ ಕಾಣಿಸಿದರೆ ರಾಮ್‌ದೇವ್ ಅವರ ಕಾವಿಯೊಳಗೆ ಸುಪ್ತವಾಗಿದ್ದ ನಾಯಕತ್ವದ ಹಂಬಲ ವ್ಯಕ್ತವಾಗುತ್ತಿತ್ತು. ಏಕಕಾಲದಲ್ಲಿ ಧುತ್ತನೆ ಬಿದ್ದ ಎರಡು ಚಳವಳಿಗಳನ್ನು ಆಯ್ಕೆ ಮಾಡುವ ಸಂದಿಗ್ಧತೆ ಜನರಿಗಾಯಿತು. ಇದನ್ನೂ ಜನರು ಸಮಚಿತ್ತದಿಂದಲೇ ನೋಡಿದರು.

ಈ ಎರಡೂ ಹೋರಾಟಗಳ ಟಾರ್ಗೆಟ್ ದೇಶದ ಶಕ್ತಿಕೇಂದ್ರ ಸಂಸತ್ ಎನ್ನುವುದು ಅತ್ಯಂತ ಮುಖ್ಯ. ದೇಶ, ಭಾಷೆ, ಸಂಸ್ಕೃತಿ, ಹಕ್ಕು, ಕರ್ತವ್ಯ ಹೀಗೆ ನಮ್ಮನ್ನು ಆಳುವ ಅಧಿಕಾರ ಸ್ಥಾನ. ಮತ್ತೊಂದು ರೀತಿಯಲ್ಲಿ ಈ ಕೇಂದ್ರ ನಮ್ಮ ಪ್ರತಿಬಿಂಬ. ನಮ್ಮೆಲ್ಲರ ಪರವಾಗಿ ಅವರಿದ್ದಾರೆ. ನಮ್ಮಿಂದಾಗಿ ಅವರು ಅಲ್ಲಿದ್ದಾರೆ. ಅವರಿಗೆ ಅವರದ್ದೇ ಆದ ಸ್ಥಾನಮಾನ, ಪರಮಾಧಿಕಾರವನ್ನು ಸಂವಿಧಾನ ಕೊಟ್ಟಿದೆ. ಆ ಶಕ್ತಿ ಕೇಂದ್ರದೊಳಗೆ ನಮಗೆ ಬೇಕಾದ ಕಾನೂನನ್ನು ಅವರು ಮಾಡಬೇಕು. ನಾವು ಹೊರಗಿನಿಂದ ಹೇಳುವುದು ಕಾನೂನಾಗುವುದಿಲ್ಲ. ಇದು ವ್ಯತ್ಯಾಸ ನಮಗೆ ಮತ್ತು ಅದರೊಳಗಿರುವವರಿಗೆ. ನಮ್ಮ ಪರವಾಗಿ ಕಾನೂನು ಮಾಡದವರನ್ನು ಮತ್ತೆ ಆ ಕೇಂದ್ರದೊಳಗೆ ಕಾಲಿಡದಂತೆ ಮಾಡುವ ಪರಮಾಧಿಕಾರ ನಮಗಿದೆ ಹೊರತು ಅವರ ಪರಮಾಧಿಕಾರದೊಳಗೆ ಹಸ್ತಕ್ಷೇಪಮಾಡುವ ಅಧಿಕಾರ ನಮಗಿಲ್ಲ. ಇದು ಓರ್ವ ಸಾಮಾನ್ಯವಾಗಿ ನಾನು ಗ್ರಹಿಸಿದ ವಿಧಾನ, ಇದಕ್ಕಿಂತಲೂ ಭಿನ್ನವಾಗಿ ಹಕ್ಕು, ಕರ್ತವ್ಯಗಳನ್ನು ವ್ಯಾಖ್ಯಾನಿಸುವುದೂ ಸಾಧ್ಯವಿದೆ.

ಇಂಥ ವಾಸ್ತವ ಸ್ಥಿತಿಯಲ್ಲಿ ಸಂಸತ್ತನ್ನು ಹೈಜಾಕ್ ಮಾಡುವಂಥ ಅಥವಾ ಶಕ್ತಿಕೇಂದ್ರದ ಅವಗಣನೆಯನ್ನು ಯಾವುದೇ ಚಳವಳಿ ಮಾಡಬಾರದು. ಅಣ್ಣಾ ತಂಡ ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಬದಲು ಆ ಶಕ್ತಿಕೇಂದ್ರದೊಳಗಿರುವವರಿಗೆ ಹೊರಗಿದ್ದೇ ಪರ್ಯಾಯವೆನ್ನುವಂತೆ ವರ್ತಿಸಿದ್ದು ಅತಿಯಾಯಿತು ಎನ್ನುವ ಅನಿಸಿಕೆ ಶಕ್ತಿಕೇಂದ್ರದೊಳಗಿನವರನ್ನು ವಿರೋಧಿಸುವವರಲ್ಲೂ ಮೂಡುವಂತಾದದ್ದು ದುರಾದೃಷ್ಟ. ಇದು ಚಳವಳಿಗಾದ ಮೊದಲ ಹಿನ್ನಡೆ.

ಅಣ್ಣಾ ಅವರು ಒಬ್ಬ ವ್ಯಕ್ತಿಯಾಗಿ ಚಳವಳಿಯ ಹಾದಿ ಹಿಡಿದಾಗ, ಉಪವಾಸ ಕುಳಿತಾಗ ಶಕ್ತಿಕೇಂದ್ರದೊಳಗೆ ತಲ್ಲಣ ಉಂಟಾಗಿತ್ತು. ಅಂಥ ಶಕ್ತಿ ಅಣ್ಣಾ ಅವರ ಮೊದಲ ಹೆಜ್ಜೆಯಲ್ಲಿತ್ತು. ಆದರೆ ಅಣ್ಣಾ ತಂಡವಾಗಿ ಕಾಣಿಸಿಕೊಂಡಮೇಲೆ, ಅದರಲ್ಲೂ ಒಡಕುಗಳು ಬೆಳಕಿಗೆ ಬಂದ ಮೇಲೆ ಶಕ್ತಿಕೇಂದ್ರ ಇಳಿವಯಸ್ಸಿನ ಅಣ್ಣಾ ಉಪವಾಸಕ್ಕೆ ಕುಳಿತಾಗ ನಿರ್ಲಿಪ್ತವಾಗಿಬಿಡುತ್ತದೆ. ಅಂದರೆ ಉಪವಾಸ ಎನ್ನುವುದು ಅಹಿಂಸಾತ್ಮಕ ಚಳವಳಿಯ ಕೊನೆಯ ಅಸ್ತ್ರ ಮತ್ತು ಅದು ಅತ್ಯಂತ ನಿರ್ಣಾಯಕವಾದ ಅಸ್ತ್ರವೂ ಹೌದು.

ಗಾಂಧೀಜಿಯವರು ಬ್ರಿಟಿಷ್ ಸಾಮ್ರಾಜ್ಯವನ್ನೇ ಹಿಮ್ಮೆಟ್ಟಿಸಿದ್ದು ಕೂಡಾ ಇಂಥ ಅಹಿಂಸಾ ಚಳವಳಿಯ ಮೂಲಕವೇ. ಅಂಥದ್ದೇ ಚಳವಳಿಯನ್ನು ಹೂಡಿದ ಅಣ್ಣಾ ಯಾವುದೇ ಫಲವಿಲ್ಲದೆ ತಾವಾಗಿಯೇ ಶಸ್ತ್ರತ್ಯಾಗಮಾಡಿದಂತೆ ಉಪವಾಸ ನಿಲ್ಲಿಸಿದ್ದೂ ಕೂಡಾ ಚಳವಳಿಯಲ್ಲಿ ಶಕ್ತಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿ. ಪ್ರತಿಕ್ರಿಯೆ ಎನ್ನುವುದು ಕ್ರಿಯೆಯನ್ನು ಅವಲಂಬಿಸಿರುತ್ತದೆ. ನಿರಂತರವಾದ ಕ್ರಿಯೆಗೆ ನಿರಂತರವಾದ ಪ್ರತಿಕ್ರಿಯೆ ನಿರೀಕ್ಷಿಸಬಹುದು, ಆದರೆ ಅದು ಬರಲೇಬೇಕೆಂದಿಲ್ಲ. ಅಣ್ಣಾ ಉಪವಾಸದಲ್ಲೂ ಇದೇ ಆಗಿದ್ದು. ಉಪವಾಸ ಅಣ್ಣಾ ಅವರ ನಿರಂತರ ಅಸ್ತ್ರ ಎನ್ನುವಂತಾಯಿತು. ಒಂದು ರೀತಿಯಲ್ಲಿ ಅಣ್ಣಾ ಅವರ ಉಪವಾಸವನ್ನು ಶಕ್ತಿಕೇಂದ್ರ ನಿರ್ಲಕ್ಷ್ಯಕ್ಕೆ ಯೋಗ್ಯ ಎನ್ನುವಂತೆ ಗ್ರಹಿಸಿತು ಮಾತ್ರವಲ್ಲ ಹಾಗೆಯೇ ನಡೆದುಕೊಂಡಿತು.

ಈ ಘಟನೆವರೆಗೂ ಅತ್ಯಂತ ಸಹನೆಯಿಂದಲೇ ಇದ್ದ ಅಣ್ಣಾ ತಂಡದ ಕೆಲವರಲ್ಲಿ ವ್ಯಕ್ತವಾಗುತ್ತಿದ್ದ ಶಕ್ತಿಕೇಂದ್ರ ಪ್ರವೇಶಮಾಡುವ ಮಾನಸಿಕ ತುಡಿತವನ್ನು ಗ್ರಹಿಸಿ ಜರ್ಝರಿತರಾದರು. ತಾವೇ ಶಕ್ತಿಕೇಂದ್ರ ಪ್ರವೇಶ ಮಾಡಬೇಕೆನ್ನುವ ತುಡಿತ ಜನರಲ್ಲಿ ಹುಟ್ಟುವ ಮುನ್ನವೇ ತಾವೇ ಪ್ರವೇಶಿಸಬೇಕೆನ್ನುವ ತುಡಿತವನ್ನು ಅದುಮಿಟ್ಟುಕೊಳ್ಳಲಾಗದ ಮತ್ತು ಅದೇ ಮೂಲ ಉದ್ದೇಶವಾಗಿದ್ದ ತನ್ನವರ ಆಶಯವನ್ನು ಗ್ರಹಿಸಿದರು ಅಣ್ಣಾ. ಆದರೆ ಆ ತುಡಿತಕ್ಕೆ ಅವರು ಭಾವೋದ್ವೇಗಗೊಂಡದ್ದು ಮಾತ್ರ ಅಚ್ಚರಿಯೆನಿಸಿತು. ಪರ್ಯಾಯ ಶಕ್ತಿ ರೂಪಿಸುವ ಅಣ್ಣಾ ಆಶಯ ತಂಡದ ಕೆಲವರಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿ ಅಂಕುರಿಸಿತು. ಈ ಹಂತದಲ್ಲಿ ನಿಜಕ್ಕೂ ಅಣ್ಣಾ ಎಚ್ಚೆತ್ತುಕೊಂಡರು. ಅಣ್ಣಾ ತಂಡವನ್ನು ವಿಸರ್ಜಿಸಿ ನಿರುಮ್ಮಳರಾದರು. ಇದು ಅವರು ಇಟ್ಟ ಸರಿಯಾದ ಹೆಜ್ಜೆ. ತಂಡವಾಗಿ ಅಣ್ಣಾ ಮತ್ತಷ್ಟು ದಿನ ಮುಂದುವರಿದಿದ್ದರೆ ಅವರಿಗೆ ಗೊತ್ತಿಲ್ಲದಂತೆಯೇ ಮತ್ತೊಂದು ತಪ್ಪಿಗೆ ನಾಂದಿಯಾಗುತ್ತಿದ್ದರು. ಪಕ್ಷ ರಾಜಕಾರಣ, ಅಣ್ಣಾ, ನಿಮ್ಮ ಅಖಾಡವಲ್ಲ. ಹೆಸರಿಲ್ಲದ ಪಕ್ಷಕ್ಕೆ ನೀವೇ ನಾಯಕ. ಪಕ್ಷದ ನಾಯಕಗೆ ಕಾಲಮಿತಿಯಿದೆ. ಜನರ ನಾಯಕ ತಾನೇ ಕಾಲ ನಿರ್ಧರಿಸುತ್ತಾನೆ. ನಿಮ್ಮ ಹಿಂದೆ ಜನರಿರಬೇಕು. ಶಕ್ತಿಕೇಂದ್ರದ ಮುಂದೆ ಉಪವಾಸ ಮಾಡಿ ದೇಹದಂಡಿಸುವುದು ಮುಖ್ಯವಲ್ಲ. ಶಕ್ತಿಕೇಂದ್ರವೇ ಜನರ ಮುಂದೆ ಮಂಡಿಯೂರುವಂತೆ ಮಾಡುವುದು ನಿಮ್ಮ ಗುರಿಯಾಗಬೇಕು ಎಂದು ಅನ್ನಿಸುವುದಿಲ್ಲವೇ?

Leave a Reply

Your email address will not be published. Required fields are marked *