ಓ ನನ್ನ ಚೇತನ


-ಬಿ. ಶ್ರೀಪಾದ್ ಭಟ್


ಸಂಗೀತವು ಕೇವಲ ಶಬ್ದಗಳು ಮತ್ತು ಬೀಟ್ಸ್ ಮಾತ್ರವಲ್ಲ, ಬದಲಾಗಿ ಸಂಗೀತವೆಂದರೆ ಮತ್ತೊಬ್ಬರ ಭಾವನಾತ್ಮಕ್ಕೆ ವಶವಾಗುವುದು. ಭಾವನೆಗಳನ್ನು ಶಬ್ದಗಳಾಗಿ ಪೋಣಿಸಿದಾಗ ಇಲ್ಲಿ ಆ ಶಬ್ದಗಳೇ ಸಂಗೀತವಾಗುತ್ತದೆ. ಇಲ್ಲಿ ಕೇವಲ 7 ಸ್ವರಗಳು ಮಾತ್ರವಿಲ್ಲ, ಬದಲಾಗಿ ನೂರಾರು ಸಣ್ಣದಾದ ಸ್ವರ ಕಣಗಳು ಸಂಗೀತದ ಆತ್ಮವನ್ನು ಜೀವಂತವಾಗಿರಿಸುತ್ತವೆ. ನನಗೆ ಹಾಡುವುದೆಂದರೆ ನನ್ನ ಆತ್ಮದೊಂದಿಗೆ ಮಾತನಾಡಿದಂತೆ. ಅಂದರೆ ನನ್ನೊಳಿಗಿನೊಂದಿಗೆ ಸಂಪರ್ಕ ಸಾಧಿಸುವುದು. ಶಬ್ದಗಳು ಮತ್ತು ಭಾವನೆಗಳು ಒಂದಕ್ಕೊಂದು ಪೂರಕವಾಗಿ ರಂಜಿಸುವುದರ ವಿರುದ್ಧ ಪ್ರತಿಯೊಬ್ಬ ಸಂಗೀತಗಾರನೂ ಎಚ್ಚರದಿಂದ ಇರಬೇಕು – ಕಿಶೋರಿ ಅಮೋನ್ಕರ್

ಖ್ಯಾತ ಹಿಂದುಸ್ತಾನಿ ಹಾಡುಗಾರ್ತಿ ‘ಕಿಶೋರಿ ಅಮೋನ್ಕರ್’ ಅವರಿಗೆ 80 ವರ್ಷ ತುಂಬಿದೆ. ಕಳೆದ ವರ್ಷ ಕಿಶೋರಿ ತಾಯಿಯವರು 80ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಪುಣೆಯಲ್ಲಿ ಮೂರು ದಿನಗಳ ಸಂಕಿರಣಗಳು ಹಾಗೂ ವಿವಿಧ ಕಲಾವಿದರಿಂದ ಹಿಂದೂಸ್ತಾನಿ ಸಂಗೀತವಿತ್ತು. ಅಲ್ಲದೆ ‘ಕಿಶೋರಿ ಅಮೋನ್ಕರ್’ ಅವರು ತಮ್ಮ 80ನೇ ವಯಸ್ಸಿನಲ್ಲಿ ಹಾಡುವ ಕಾರ್ಯಕ್ರಮವಿತ್ತು. ಇದಕ್ಕೆ ಹೋಗಲಾಗದಿದ್ದಕ್ಕೆ ಬಹಳ ಪರಿತಪಿಸುತ್ತಿದ್ದೆ. ಅಲ್ಲಿಂದ ನನ್ನ ಸ್ನೇಹಿತ ಸುರೇಶ ಇದರ ಲೈವ್ ಕಾಮೆಂಟ್ರಿ ಕೊಡುತ್ತ ನನ್ನೊಳಗೆ ಕಿಚ್ಚನ್ನು ಹತ್ತಿಸುತ್ತಿದ್ದ!!
ನನ್ನಂತಹವರ ಪಾಲಿಗೆ ‘ಕಿಶೋರಿ ಅಮೋನ್ಕರ್’ರವರು ನಿಜದ ನೈಟಿಂಗೇಲ್. ಇವರ ಧ್ವನಿಯಲ್ಲಿ ಭೂಪ್, ಸಂಪೂರ್ಣ ಮಾಲಕೌಂಸ್, ಜಾನ್ಪುರಿ, ಗುರ್ಜರಿ ತೋಡಿ, ಲಲಿತ್, ದೇಷ್ಕರ್, ಭೀಮ್‌ಪಲಾಸ್‌ಗಳಂತಹ ಅಪೂರ್ವ ರಾಗಗಳನ್ನು ಕೇಳಿದಾಗ ಅದು ಕೇವಲ ಕಲಾಪ್ರಜ್ಞೆಯುಳ್ಳ ಅನುಭೂತಿ ಮಾತ್ರವಲ್ಲ, ಜೊತೆಗೆ ಮಹಾನ್ ಸಂತೋಷ, ಆಳವಾದ ನೋವು ಮತ್ತು ಹತಾಶೆಗಳಂತಹ ಸಣ್ಣ ಸಣ್ಣ ವಿವರಗಳು ನಮ್ಮೊಳಗೆ ಆಳವಾಗಿ ಇಳಿದಂತಹ ಅನುಭವ. ಕಿಶೋರಿತಾಯಿಯವರ ಸಂಗೀತದಲ್ಲಿ ಅಧ್ಯಾತ್ಮವು ಅದ್ಭುತ ರೀತಿಯಲ್ಲಿ ಮಿಳಿತಗೊಂಡು ಭಾವೋದ್ರೇಕದ ಆತ್ಯಾನಂದವನ್ನೂ ಮೀರಿ ಮತ್ತೊಂದು ಮಜಲನ್ನು ತಲಪುತ್ತದೆ. ಬಾಗೇಶ್ರೀ ರಾಗವನ್ನು ಹಾಡುವಾಗ ಪಂಚಮವನ್ನು ವಿಸ್ತರಿಸುವುದು ಕಿಶೋರಿತಾಯಿಯವರಿಗೆ ಅದು ಸ್ವರ್ಗದೆಡಗಿನ ಪಯಣದಂತೆ, ಕೇಳುಗರಾದ ನಾವೆಲ್ಲ ಮೋಕ್ಷವನ್ನು ಅರಸಿದಂತೆ! ಕಿಶೋರಿತಾಯಿಯವರ ಜೊತೆಜೊತೆಗೆ ನಾವೂ ಸಹ ಆ ಪಯಣದಲ್ಲಿ ಆಳವಾಗಿ ಭಾಗವಹಿಸಿದಾಗಲೇ ನಮಗೂ ಅದರ ಅನುಭೂತಿ ದೊರಕುತ್ತದೆ.

ಜೈಪುರ ಘರಾಣ ಶೈಲಿಯಲ್ಲಿ ಹಾಡುತ್ತಿದ್ದ ತಮ್ಮ ತಾಯಿ ‘ಮೋಗುಬಾಯಿ ಕುರ್ಡೀಕರ್’ ಅವರ ಬಳಿ ಸಂಗೀತವನ್ನು ಅಭ್ಯಾಸ ಮಾಡಿದ ಕಿಶೋರಿತಾಯಿ ತದನಂತರ ತಮ್ಮ ತಾಯಿಯ ಜೈಪುರ ಘರಾಣದ ಪ್ರಭಾವವನ್ನೂ ಮೀರಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡ ರೀತಿ ಹೃದಯಂಗಮವಾದದ್ದು. ಪು.ಲ.ದೇಶಪಾಂಡೆಯವರು ತಮ್ಮ ಸಮಕಾಲೀನ ಸಂಗೀತಗಾರ್ತಿಯರಾದ ಠುಮ್ರಿಯಲ್ಲಿ ಪರಿಣಿತಿ ಸಾಧಿಸಿದ ಗಿರಿಜಾದೇವಿ, ಶೋಭಾ ಗುರು ರವರಂತೆ ಭಜನ್‌ನಲ್ಲಿ ಪರಿಣಿತಿ ಸಾಧಿಸಿದ ಹಿರಾಬಾಯಿ ಬರೋಡೆಕರ್, ಗಂಗೂಬಾಯಿ ಹಾನಗಲ್‌ರಂತೆ  ಕಿಶೋರಿ ಅಮೋನ್ಕರ್ ಅವರು ಭಿನ್ನವಾಗಿ ನಿಲ್ಲವುದು ಅವರು ಅಪ್ಪಟ ಭಕ್ತಳಂತೆ ರಾಗಗಳನ್ನು ತನ್ನೊಳಗೆ ಅವಾಹಿಸಿಕೊಳ್ಳುವುದರ ಮೂಲಕ. ಇಲ್ಲಿ ವಾಸ್ತವತೆ ಮತ್ತು ಆಧ್ಯಾತ್ಮ ಸಂಯೋಜಗೊಳ್ಳುವ ರೀತಿ ಅವರನ್ನು ತಮ್ಮ ಸಮಕಾಲೀನ ಗಾಯಕಿರೊಂದಿಗೆ ಭಿನ್ನವಾಗಿ ನಿಲ್ಲಿಸುತ್ತದೆ ಎಂದು ಹೇಳುತ್ತಾರೆ. ಇದರಲ್ಲಿ ಅತಿಶಯೋಕ್ತಿಯಿಲ್ಲ. ಕಿಶೋರಿತಾಯಿಯವರು ಖಯ್ಯಾಲ್ ಗಾಯನದಲ್ಲಿ ವಿಳಂಬಿತ್ ತಾಲ್ ಹಾಗೂ ಧೃತ್ ತಾಲ್‌ಗಳನ್ನು ಬಳಸಿಕೊಳ್ಳುವ ರೀತಿಯನ್ನು ಅನುಭವಿಸಿದಾಗ, ಕಡೆಗೆ ಛೋಟೆ ಖಯ್ಯಾಲ್ ಅನ್ನು ಸಂಯೋಜಿಸಿ ಹಾಡುವ ಶೈಲಿಯನ್ನು ಕೇಳಿದಾಗ ಅವರ ಹಿರಿಮೆ ಅರ್ಥವಾಗುತ್ತದೆ.

ಕ್ಲಾಸಿಕ್ ಸಂಗೀತವನ್ನು ಮನರಂಜನೆಯನ್ನಾಗಿ ನೋಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ‘ಕಿಶೋರಿ ಅಮೋನ್ಕರ್’ ಸಹಜವಾಗಿಯೇ ತಮ್ಮ ತೆಳ್ಳಗಿನ ದೇಹ ಹಾಗೂ ಕೋಲು ಮುಖದಿಂದಾಗಿ ಎಂದೂ ಜನಪ್ರಿಯವಾದ ಪ್ರದರ್ಶನದ ಸ್ಟಾರ್ ಆಗಿ ರೂಪಿತಗೊಳ್ಳಲೇ ಇಲ್ಲ. ಇದಕ್ಕೆ ಅವರೊಳಗಿನ ಅಂತರ್ಮುಖೀ ವ್ಯಕ್ತಿತ್ವವೂ ಕಾರಣ. ಹಿಂದೂಸ್ತಾನಿ ಸಂಗೀತವನ್ನು ವಿವರಿಸುವಂತೆ ಕೇಳಿದಾಗ ಕಿಶೋರಿ ತಾಯಿ ನಿರಾಕರಿಸುತ್ತ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದರೆ ನಿನಗೆ ಅದು ಕಣ್ಣಿಗೆ ಸಹ ಕಾಣದು, ಬದಲಾಗಿ ನೀನು ಅದನ್ನು ಆ ಪ್ರೀತಿಯ ತರಂಗಗಳ ಮೂಲಕ ಅನುಭವಿಸಬೇಕಷ್ಟೇ. ಹಿಂದುಸ್ತಾನಿ ಸಂಗೀತವೂ ಸಹ ಅಷ್ಟೇ ಎಂದು ಖಚಿತವಾಗಿ ಹೇಳುತ್ತಿದ್ದರು. ರಸಿಕ ಕೇಳುಗರೆನ್ನುವ ಪದವನ್ನು ತಿರಸ್ಕರಿಸುತ್ತಿದ್ದರು. ವಿಭಾ ಪುರಂದರೆ ಅವರು ಹೇಳಿದಂತೆ, she can say “Yes. I contradict myself. I contain many.”

ಮುಂದುವರೆದು ವಿಭಾ ಪುರಂದರೆ ಅವರು ಹೇಳುತ್ತಾರೆ ಕಿಶೋರಿತಾಯಿಯವರು ತಮ್ಮೊಳಗೆ ಮಗುವನ್ನು, ಮಿಸ್ಟಿಕ್ ಅನ್ನು, ಕಲಾವಿದೆಯನ್ನು ಕೂಡಿಟ್ಟುಕೊಂಡಿದ್ದರು. ಆಕೆ ತನಗೆ ಪರಿಚಿತ ಜಗತ್ತನ್ನು ಪ್ರೀತಿಸುವುದಕ್ಕಿಂತ ತನಗೆ ಅಪರಿಚಿತ ಜಗತ್ತಿನೊಂದಿಗಿನ ಗ್ರಹಿಕೆ ನಿಜಕ್ಕೂ ಮಂತ್ರಮುಗ್ಧಗೊಳಿಸುತ್ತದೆ. ಕಿಶೋರಿತಾಯಿಯವರು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ ಈ ಸ್ವರಗಳು ಎಷ್ಟರಮಟ್ಟಿಗೆ ನನಗೆ ಪರಿಚಿತ? ಈ ಸ್ವರಗಳು ತಮ್ಮೊಳಗೆ ವರ್ತಿಸುವ ಬಗೆ ನಾನು ಹೇಗೆ ತಿಳಿದುಕೊಳ್ಳುವುದು? ಒಂದು ಇದನ್ನು ನಾನು ನೋಡುವಂತಾಗಿದ್ದರೆ ಬಹಶ ನಾನು ಈ ಸ್ವರಗಳೊಂದಿಗೆ ಮಾತನಾಡಬಹುದಿತ್ತು. ಸೌಂದರ್ಯದ ಹುಡುಕಾಟ ಕಿಶೋರಿತಾಯಿಯವರನ್ನು ಪಲಾಯನವಾದಿಗಳನ್ನಾಗಿ ಮಾಡಲಿಲ್ಲ. ಅವರ ಪ್ರಕಾರ ಜೀವನದ ಕ್ರೌರ್ಯಗಳಾದ ನೋವುಗಳು, ಹಿಂಸೆ ಮತ್ತು ಕತ್ತಲನ್ನು ಈ ಸಂಗೀತದ ಕಲೆಯು ಸ್ಪರ್ಶಿಸಿದಾಗ ಆ ಕ್ರೌರ್ಯಗಳು ಅಳಸಿಹೋಗುವುದಿಲ್ಲ, ಬದಲಾಗಿ ಆ ಕ್ರೌರ್ಯದಿಂದ ಹೊರಬರುವ ಶಕ್ತಿಯನ್ನು, ಬಲವನ್ನು, ಬೆಳಕನ್ನು ನೀಡುತ್ತದೆ.

ಗುಲಾಬಿಯೊಂದಿಗೆ ಅದರ ಮುಳ್ಳನ್ನು ಮುಟ್ಟಿದಾಗ ಆಗುವ ನೋವು ಶಾಂತಿಯ ಸ್ವರೂಪದ್ದಾಗಿರುತ್ತದೆ ಅದೇ ರೀತಿ ಕಲೆಯೂ ಸಹ. ಮೊನ್ನೆ ಮಂಗಳೂರಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆದ ಅಮಾನುಷ ಹಲ್ಲೆಯನ್ನು ನೋಡಿ ಮನಸ್ಸು ಮುರಿದು ಹೋಗಿತ್ತು. ಗೂಂಡಾಗಳ ಈ ಹಲ್ಲೆಯನ್ನು ಸಾರ್ವಜನಿಕವಾಗಿ ಪ್ರತಿಭಟಿಸಿದರೂ ಮನಸ್ಸಿಗೆ ಸಮಾಧಾನವಿರಲಿಲ್ಲ. ಒಂದು ರೀತಿಯ ಅಪರಾಧ ಮನೋಭಾವ ಕಾಡುತ್ತಲೇ ಇತ್ತು. ಆಗ ನನ್ನ ಚೇತನ ಕಿಶೋರಿತಾಯಿಯ ಧ್ವನಿಯನ್ನು ಆಲಿಸತೊಡಗಿದಾಗ ಆ ಕ್ರೌರ್ಯದಿಂದ ಹೊರಬರುವ ಶಕ್ತಿ, ಮತ್ತು ಬೆಳಕು ಗೋಚರಿಸತೊಡಗಿತು.

ಕಿಶೋರಿ ಅಮೊನ್ಕರ್, ನಿನಗೆ ಸಾವಿರದ ಶರಣು.

Leave a Reply

Your email address will not be published. Required fields are marked *