ಕಿವುಡರೇ, ಆಲಿಸಿ! – ಭಗತ್ ಸಿಂಗ್ ಬರಹ

ಇಂಗ್ಲಿಷ್ ಮೂಲ: ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿಯ ನೋಟಿಸ್.

[ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್‌ರು 1929ರ ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದಾಗ, ಅದರೊಂದಿಗೆ ತಮ್ಮ ಗುರಿ ಮತ್ತು ಉದ್ದೇಶಗಳನ್ನೊಳಗೊಂಡ ಕರಪತ್ರಗಳನ್ನ ತೂರಿದ್ದರು. ತಾವು ನಡೆಸಿದ ಕೃತ್ಯದ ಸಕಲ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಲ್ಲದೆ ಕಿವುಡರು ಆಲಿಸುವಂತೆ ಮಾಡಬೇಕೆಂಬುದು ತಮ್ಮ ಉದ್ದೇಶ ಎಂದು ಘೋಷಿಸಿದರು. ಕೆಳಗಿರುವುದು ಕರಪತ್ರದ ಪೂರ್ಣಪಾಠ. ]

“ಕಿವುಡರು ಅಲಿಸುವಂತೆ ಮಾಡಬೇಕಾದರೆ ದೊಡ್ಡ ದನಿಯನ್ನೇ ತೆಗೆಯಬೇಕು.”

ಫ್ರೆಂಚ್ ಹುತಾತ್ಮ ವೇಲಿಯಂಟ್ ಇಂಥದ್ದೇ ಒಂದು ಸಂದರ್ಭದಲ್ಲಿ ಉಸುರಿದ ಈ ಸಾವಿಲ್ಲದ ಶಬ್ಧಗಳಿಂದ ನಾವು ನಮ್ಮ ಈ ಕೃತ್ಯವನ್ನು ಸಂಪೂರ್ಣವಾಗಿ, ಬಲವಾಗಿ ಸಮರ್ಥಿಸಿಕೊಳ್ಳುತ್ತೇವೆ.

ಸಮಾಜ ನಿರ್ಮಾಣದ ದಾರಿಯಲ್ಲಿ, ಕಳೆದ ಹತ್ತೇ ವರ್ಷಗಳ ಅವಧಿಯಲ್ಲಿ ಸತತವಾಗಿ ನಡೆಯುತ್ತಿರುವ ಅವಮಾನದ ಚರಿತ್ರೆಯ ಹಿನ್ನೆಲೆಯನ್ನು ಪುನಃ ನೆನಪಿಸಿಕೊಳ್ಳದೆಯೂ, ಇಂಡಿಯನ್ ಪಾರ್ಲಿಮೆಂಟ್ ಎಂಬ ಹೆಸರಿನ ಸಂಸ್ಥೆ ದೇಶದ ತಲೆಯ ಮೇಲೆ ಹೊಡೆದಂತೆ ಪದೇ ಪದೇ ನಡೆಸಿದ ನಾಚಿಕೆಗೇಡಿನ ಕೃತ್ಯಗಳ ಪ್ರಸ್ತಾಪಿಸದೆಯೂ, ಪ್ರಸ್ತುತ ಈಗ ನಡೆದಿರುವ ವರ್ತಮಾನದಲ್ಲಿಯೂ ಜನತೆ ಸೈಮನ್ ಕಮಿಶನ್‌ನಿಂದ ಸಮಾಜ ಸುಧಾರಿಸುವ ನಿಟ್ಟಿನಲ್ಲಿ ಕೆಲ ಮುಖ್ಯ ಹೆಜ್ಜೆಗಳನ್ನು ನಿರೀಕ್ಷಿಸುತ್ತಿರುವಾಗಲೂ ಈಗಲೂ ಇವರು ತಾವು ಹಂಚಿಕೊಳ್ಳಬಹುದಾದ ಎಲುಬುಗಳ ಕುರಿತೇ ಯೋಚಿಸುತ್ತಿದ್ದಾರೆ. ಈ ಬ್ರಿಟಿಷ್ ಸರ್ಕಾರ ಸಾರ್ವಜನಿಕ ಸುರಕ್ಷತೆ ಮತ್ತು ವಾಣಿಜ್ಯ ವಿವಾದದ ಮಸೂದೆಯಂಥವುಗಳನ್ನೆ ನಮ್ಮ ಮೇಲೆ ಹೇರಲು ಯತ್ನಿಸುತ್ತಿದೆ. ಅದಕ್ಕೆ ವಿರುದ್ಧವಾಗಿ ಪತ್ರಿಕಾ ಮಸೂದೆಯನ್ನು ಮುಂದಿನ ಅಧಿವೇಶನಕ್ಕೆ ಮೀಸಲಿಟ್ಟಿದ್ದಾರೆ. ಸಾಲದೆಂಬಂತೆ ಕಾರ್ಮಿಕ ಮುಖಂಡರನ್ನು, ಅದೂ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದವರನ್ನು ವಿನಾಕಾರಣ ಬಂಧಿಸಿರುವುದು. ಗಾಳಿ ಎತ್ತಕಡೆ ಬೀಸುತ್ತಿದೆಯೆಂಬುದನ್ನು ಕಣ್ಣೆದುರೇ ತೋರಿಸುತ್ತಿದೆ.

ಇಂಥ ಅತೀವ ಪ್ರಚೋದನಕಾರಿ ಪರಿಸ್ಥಿತಿಗಳನ್ನು ತುಂಬ ಗಂಭೀರವಾಗಿ ಪರಿಗಣಿಸಿರುವ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ತನ್ನ ಜವಾಬ್ದಾರಿಯ ಸಂಪೂರ್ಣ ಅರಿವಿನಿಂದ ಈ ನಿರ್ದಿಷ್ಟ ಕೃತ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ. ಇದರ ಮುಖ್ಯ ಉದ್ದೇಶ-ನಾಚಿಕೆಗೇಡಿನ ಅವಮಾನಗಳನ್ನು ಸಹಿಸದಿರುವುದು, ಈ ವಿದೇಶೀ ಬ್ಯುರಾಕ್ರಟಿಕ್ ಶೋಷಕರು ಏನೇನು ಮಾಡಬೇಕೆಂದು ಬಯಸುವರೋ ಅದನ್ನೆಲ್ಲ ಸಾರ್ವಜನಿಕವಾಗಿ ಜನಸಾಮಾನ್ಯರ ಕಣ್ಣುಗಳೆದುರಲ್ಲಿ ಬೆತ್ತಲುಗೊಳಿಸುವುದು.

ಜನಪ್ರತಿನಿಧಿಗಳು ತಕ್ಷಣ ತಮ್ಮ ತಮ್ಮ ಕ್ಷೇತ್ರಗಳಿಗೆ ಹಿಂದಿರುಗಿ ಹೊರಡಿ ಮತ್ತು ಜನಸಮುದಾಯವನ್ನು ಮುಂಬರುವ ಕ್ರಾಂತಿಗೆ ಅಣಿ ಮಾಡಿರೆಂಬುದು ನಮ್ಮ ಆಶಯ. ಸರ್ಕಾರ ಹಲವಿಷಯ ಅರಿಯಬೇಕಿದೆ. ಮುಖ್ಯವಾಗಿ,

ಅಸಹಾಯಕ ಬಲಿಪಶುಗಳಂತಾಗಿರುವ ಎಲ್ಲ ಭಾರತೀಯ ಜನಸಮುದಾಯಗಳ ಧ್ವನಿಯಾಗಿ, ಸಾರ್ವಜನಿಕ ಸುರಕ್ಷೆ ಮತ್ತು ವಾಣಿಜ್ಯ ವಿವಾದ ಮಸೂದೆಯನ್ನು ಸಂಪೂರ್ಣ ವಿರೋಧಿಸುತ್ತಾ, ಲಾಲಾ ಲಜಪತರಾಯ್‌ರ ಧಾರುಣ ಹತ್ಯೆಯನ್ನು ಪ್ರತಿಭಟಿಸುತ್ತಾ ನಾವು ಹೇಳುವುದಿಷ್ಟೇ-

ವ್ಯಕ್ತಿಗಳನ್ನು ಕೊಲ್ಲಬಹುದೇ ಹೊರತು ವಿಚಾರಗಳನ್ನಲ್ಲ. ಚರಿತ್ರೆಯ ಈ ಪಾಠ ಎಷ್ಟೊ ಬಾರಿ ಪುನರಾವರ್ತನೆಗೊಂಡಿದೆ. ಈಗಲೂ ನಮ್ಮೆದುರಿಗಿರುವುದು ಅದೇ. ವಿಶಾಲ ಸಾಮ್ರಾಜ್ಯಗಳು ಅನೇಕ ಬಾರಿ ನಾಶಗೊಂಡಿವೆ. ಆದರೆ, ಪ್ರತಿಬಾರಿಯೂ ವಿಚಾರಗಳು ಉಳಿದುಕೊಂಡಿವೆ. ಕ್ರಾಂತಿಯು ಕಹಳೆ ಮೊಳಗಿಸುತ್ತಾ ಯಶಸ್ವಿಯಾಗಿ ಮೆರವಣಿಗೆ ಸಾಗುವಾಗ ಬಾರ್ಬೋನ್‌ಗಳೂ, ಜಾರ್‌ಗಳೂ ನೆಲಕಚ್ಚಿ ಹೋಗಿದ್ದಾರೆ.

ನಾವುಗಳು ಮಾನವ ಬದುಕಿನ ಅಮೂಲ್ಯತೆ ಬಲ್ಲವರು. ಉಜ್ವಲ ಭವಿಷ್ಯದ ಕನಸನ್ನುಳ್ಳವರು. ಜನಸಾಮಾನ್ಯರು  ಪೂರ್ಣಶಾಂತಿಯನ್ನೂ, ಸ್ವಾತಂತ್ರ್ಯವನ್ನೂ ಮನಸಾರೆ ಅನುಭವಿಸುತ್ತಾ ಬದುಕಬೇಕೆಂಬ ಆಸೆಯುಳ್ಳವರು.

ಆದರೆ ನಮ್ಮ ದೌರ್ಭಾಗ್ಯ.

ಮನುಷ್ಯ ರಕ್ತ ಚೆಲ್ಲಾಡಲು ನಮ್ಮನ್ನು ಪ್ರೇರೇಪಿಸಲಾಗುತ್ತಿದೆ. ಆದರೆ ಒಂದಂತೂ ಅನಿವಾರ್ಯ. ವ್ಯಕ್ತಿಗಳು ಮಾಡುತ್ತಿರುವ ತ್ಯಾಗ, ಬಲಿದಾನಗಳು ಕ್ರಾಂತಿಯ ದಾರಿಯಲ್ಲಿ ಸ್ವಾತಂತ್ರ್ಯವನ್ನೇ ತರುತ್ತವೆ. ಮನುಷ್ಯನು ಮನುಷ್ಯನನ್ನು ಶೋಷಿಸುವ ಕ್ರಿಯೆಯನ್ನು ತೊಡೆದು ಹಾಕುವುದು ಅನಿವಾರ್ಯ.

ಕ್ರಾಂತಿ ಚಿರಾಯುವಾಗಲಿ.
ಸರ್ದಾರ್ ಬಲರಾಜ್
ಕಮಾಂಡರ್ ಇನ್ ಚೀಫ್.

*

[“ಬಲರಾಜ್” ಎಂಬುದು ಚಂದ್ರಶೇಖರ್ ಆಜಾದ್‌ರ ಅನೇಕ ಹೆಸರುಗಳಲ್ಲೊಂದು]

Leave a Reply

Your email address will not be published. Required fields are marked *