– ಎಸ್.ಜೆ. ಅಂಬ್ರೋಸ್ ಪಿಂಟೋ
[ಇದು ಆಂಬ್ರೋಸ್ ಪಿಂಟೋರವರು ಡೆಕ್ಕನ್ ಹೆರಾಲ್ಡ್ನಲ್ಲಿ 18/8/12ರಂದು ಬರೆದಿರುವ ಲೇಖನದ ಕೆಲವು ಭಾಗಗಳು. ಇದನ್ನು ಬಿ. ಶ್ರೀಪಾದ್ ಭಟ್ಟರು ಅನುವಾದಿಸಿದ್ದಾರೆ. ಬೆಂಗಳೂರಿನಿಂದ ಈಶಾನ್ಯ ರಾಜ್ಯಗಳ ಜನತೆ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ ಬರೆದಿರುವ ಈ ಲೇಖನ ಅಸ್ಸಾಂನಲ್ಲಿಯ ಜನಾಂಗೀಯ ಗಲಭೆಗಳ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಹೇಳುತ್ತದೆ.]
ಅಸ್ಸಾಂನಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಣೆಗಳು ಖಂಡಿತವಾಗಿಯೂ ಕೋಮುಗಲಭೆಗಳಲ್ಲ. ಯಾರೇ ಆಗಲಿ ಈಶಾನ್ಯ ರಾಜ್ಯದ ಜನತೆಯನ್ನು ಅದರಲ್ಲೂ ಮುಖ್ಯವಾಗಿ ಅಸ್ಸಾಂ ರಾಜ್ಯದ ಜನರನ್ನು ಮುಸ್ಲಿಂ ದ್ವೇಷದ ಹಿನ್ನೆಲೆಯನ್ನು ಮುಂದುಮಾಡಿ ಬೆದರಿಸಿದರೆ ಅದು ಶುದ್ಧ ತಪ್ಪು. ಬೋಡೋಗಳು ಮುಖ್ಯವಾಗಿ ಆದಿವಾಸಿಗಳು. ಇವರಲ್ಲಿ ಕೆಲ ಗುಂಪುಗಳು ಮಾತ್ರ ಹಿಂದು ಧರ್ಮದ ಆಚರಣೆಯನ್ನು ಅನುಸರಿಸುತ್ತವೆ. ಅಸ್ಸಾಂನಲ್ಲಿ ಈ ಆದಿವಾಸಿಗಳ ಜೊತೆಗೆ ಘರ್ಷಣೆಗೆ ಇಳಿದಿರುವ ಬಾಂಗ್ಲಾ ದೇಶದ ವಲಸಿಗರಲ್ಲಿ ಮುಸ್ಲಿಂರೂ ಮತ್ತು ಹಿಂದೂಗಳು ಇಬ್ಬರೂ ಇದ್ದಾರೆ. ಈ ವಲಸಿಗರಲ್ಲಿ ಶೇಕಡ 60 ರಷ್ಟು ಜನತೆ ಹಿಂದೂಗಳಾಗಿದ್ದರೆ ಶೇಕಡ 40 ರಷ್ಟು ಜನತೆ ಮುಸ್ಲಿಂರು. ಹೀಗಿದ್ದಾಗ ಈ ಬಾಂಗ್ಲಾ ವಲಸಿಗರು ಮತ್ತು ಆದಿವಾಸಿಗಳ ನಡುವಿನ ಘರ್ಷಣೆ ಹಿಂದೂ ಮತ್ತು ಮುಸ್ಲಿಂರ ನಡುವಿನ ಕೋಮುಗಲಭೆ ಹೇಗಾಗುತ್ತದೆ? ಏತಕ್ಕೆ ಈ ಜನಾಂಗೀಯ ಘರ್ಷಣೆಗೆ ಕೋಮುಗಲಭೆಯ ಸುಳ್ಳಿನ ಮುಖವಾಡ ತೊಡಿಸುತ್ತಿದ್ದಾರೆ?
ಬೋಡೋ ಆದಿವಾಸಿಗಳು ಮತ್ತು ಬಾಂಗ್ಲ ವಲಸಿಗರ ನಡುವಿನ ಸಂಘರ್ಷಕ್ಕೆ ಮೂಲಭೂತ ಕಾರಣವೇನೆಂದರೆ ಅದು ವಿವಾದಾತ್ಮಕ ವಲಯದಲ್ಲಿರುವ ಭೂಮಿ ಹಂಚಿಕೆಯ ಕುರಿತಾದದು. ಇಲ್ಲಿ ಬೋಡೋಗಳ ಬಳಿಯಿರುವ ಜಮೀನು ಸೀಮಿತ ವ್ಯಾಪ್ತಿಯುಳ್ಳದ್ದು. ಈ ಬೋಡೋ ಜನಾಂಗ ಈಶಾನ್ಯ ರಾಜ್ಯದ ಮೂಲನಿವಾಸಿಗಳಾಗಿದ್ದರೂ ಇವರ ತಮ್ಮ ವೈಯಕ್ತಿಕ ಹೆಸರಿನಲ್ಲಿ ಜಮೀನನ್ನು ಹೊಂದಿರಲಿಲ್ಲ. ಅಲ್ಲಿರುವ ಜಮೀನು ಇಡೀ ಆದಿವಾಸಿಗಳ ತಂಡದ ಒಡೆತನಕ್ಕೆ ಒಳಪಡುತ್ತದೆ ಮತ್ತು ಇದಕ್ಕೆಲ್ಲ ಒಬ್ಬ ಮುಖಂಡನಿರುತ್ತಾನೆ. ಇದು ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಬೋಡೋ ಸ್ವಾಯುತ್ತತೆ ಮಸೂದೆಯ ಪ್ರಕಾರ ಮೇಲಿನ ಜಮೀನಿನ ಅಧಿಕಾರ ರೂಪುಗೊಂಡಿದೆ. ಈ ರೀತಿಯಾಗಿ ಯಾವುದೇ ವೈಯುಕ್ತಿಕ ಐಡೆಂಟಿಟಿ ಇಲ್ಲದ ಕೇವಲ ಸೀಮಿತ ವ್ಯಾಪ್ತಿಯ ಜಮೀನನ್ನು ವೈಯಕ್ತಿಕವಾಗಲ್ಲದೆ ಒಂದು ತಂಡವಾಗಿ ಹೊಂದಿರುವ ಈ ಬೋಡೋ ಜನಾಂಗ ಅದು ಹೇಗೆ ತಮ್ಮ ಈ ಸೀಮಿತ ಜಾಗವನ್ನು ವಲಸಿಗರೊಂದಿಗೆ ಹಂಚಿಕೊಳ್ಳುತ್ತಾರೆ? ಈ ಬೋಡೋ ಬುಡಕಟ್ಟಿಗೆ ವೈಯಕ್ತಿಕ ಐಡೆಂಟಿಟಿ ಕೊಡಬೇಕಾಗಿದೆ. ಇವರಿಗೆ ಸಮಪ್ರಮಾಣದಲ್ಲಿ ಜಮೀನು ಹಂಚಿಕೆಯನ್ನು ಮಾಡಬೇಕಾಗಿದೆ. ವಲಸಿಗರಿಗೆ ಬದಲೀ ವಲಯಗಳಲ್ಲಿ ಜಮೀನನ್ನು ಕೊಡಬೇಕು. ಇಂತಹ ಸಂಕೀರ್ಣವಾದ, ಸೂಕ್ಷ್ಮ ವಿಷಯವನ್ನು ಮರೆಮಾಚಿ ಬದಲಾಗಿ ಇದಕ್ಕೆ ಎರಡು ಮತಗಳ ಘರ್ಷಣೆಯ ಮುಖವಾಡವನ್ನು ತೊಡಿಸಿ ಸಮಾಜದಲ್ಲಿ ಗಲಭೆಗಳನ್ನು ಹುಟ್ಟುಹಾಕುತ್ತಿರುವುದು ಖಂಡನೀಯ.
ಎಲ್ಲ ಬೋಡೋಗಳು ಈ ವಲಸಿಗರೊಂದಿಗೆ ಘರ್ಷಣೆಗೆ ಇಳಿದಿದ್ದಾರೆಂದು ಹೇಗೆ ತೀರ್ಮಾನಿಸುತ್ತೀರಿ? ವಿವಾದವಿರುವುದು ಅತ್ಯಂತ ಸೀಮಿತ ವ್ಯಾಪ್ತಿಯುಳ್ಳ ಜಮೀನಿನ ಕುರಿತಾಗಿ. ಅದೂ ಅಸ್ಸಾಂನ ಮೂಲೆಯೊಂದರ ಸಣ್ಣ ವಲಯದಲ್ಲಿ. ಅದೇ ರೀತಿ ಅಸ್ಸಾಂನ ಕೊಕ್ರಜಾರ್ನಲ್ಲಿರುವ ಮುಸ್ಲಿಂರೆಲ್ಲರೂ ವಲಸಿಗರಲ್ಲ. ಇಲ್ಲಿನ ಅನೇಕ ಮುಸ್ಲಿಂರು ಶತಮಾನಗಳಿಂದ ಬದುಕುತ್ತಿದ್ದಾರೆ. ಇವರಿಗೆ ಕೊಕ್ರಜಾರ್ನಲ್ಲಿ ಬದುಕಲು ಸರ್ವರೀತಿಯಲ್ಲಿ ಹಕ್ಕಿದೆ. ಇಲ್ಲಿರುವ ಎಲ್ಲ ಮುಸ್ಲಿಂರನ್ನು ವಲಸಿಗರು ಎನ್ನುವ ಸರಳ ತೀರ್ಮಾನಕ್ಕೆ ಬರುವುದು ಖಂಡಿತ ತಪ್ಪಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ. ಈ ರೀತಿ ಸುಳ್ಳು ಸುದ್ದಿಗಳನ್ನು ಅಪಪ್ರಚಾರಗೊಳಿಸಿ ಹಿಂಸೆಯನ್ನು ಹುಟ್ಟುಹಾಕುವುದನ್ನು ಖಂಡಿಸಲೇಬೇಕು. ಈ ರೀತಿಯ ವಿಷವನ್ನು ಹರುಡುತ್ತಿರುವ ಲುಂಪೆನ್ ಗುಂಪುಗಳ ಹಿಂದೆ ಖಂಡಿತವಾಗಿಯೂ ಶಕ್ತಿಯೊಂದು ಕಾರ್ಯನಿರ್ವಹಿಸುತ್ತಿದೆ.
ಇನ್ನೊಂದು ಪ್ರಮುಖ ವಿಷಯವೇನೆಂದರೆ ಬೆಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಬೋಡೋ ಪಂಗಡದವರು ಕಡಿಮೆ ಅಥವಾ ಬಹುಶ ಇಲ್ಲವೇ ಇಲ್ಲ. ಬೆಂಗಳೂರಿನಲ್ಲಿರುವ ವಿದ್ಯಾರ್ಥಿಗಳು ಮಣಿಪುರ, ನಾಗಾಲ್ಯಾಂಡ್, ಮಿಜೋರೋಂ, ಅರುಣಾಚಲ ಪ್ರದೇಶ, ತ್ರಿಪುರ, ಸಿಕ್ಕಿಂ, ಅಸ್ಸಾಂ, ಟಿಬೆಟ್, ನೇಪಾಳ ಹೀಗೆ ವಿಭಿನ್ನ ರಾಜ್ಯಗಳಿಗೆ ಸೇರಿದವರು. ಇವರೆಲ್ಲರೂ ಸಮಾನವಾಗಿ ಮುಂಗೋಲಿಯನ್ ಮುಖಲಕ್ಷಣವನ್ನು ಹೊಂದಿರುವ ಒಂದೇ ಕಾರಣಕ್ಕಾಗಿ ಇವರನ್ನು ಬೋಡೋಗಳೆಂದು ಹಣೆಪಟ್ಟಿ ಹಚ್ಚುವುದು ಮೂರ್ಖತನದ ಪರಮಾವಧಿಯೇ ಸರಿ. ಇವರಿಗೂ ಅಸ್ಸಾಂನಲ್ಲಿ ಜಮೀನಿನ ಹಂಚಿಕೆಯ ಕುರಿತಾಗಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ.
(ಕೃಪೆ: ಡೆಕ್ಕನ್ ಹೆರಾಲ್ಡ್)