Daily Archives: August 26, 2012

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಮೊದಮೊದಲು ಭೂಮಿಗೆ 1 ಬಿಲಿಯನ್ ಅಂದರೆ 100 ಕೋಟಿ ವರ್ಷಗಳು ಅಂದರು.

ಆಮೇಲೆ 3 ಬಿಲಿಯನ್ ಅಂದರೆ 300 ಕೋಟಿ ವರ್ಷಗಳು ಅಂದರು.

ಕಡೆಗೆ 456 ಕೋಟಿಗಳು ಎಂಬ ತೀರ್ಮಾನಕ್ಕೆ ಬಂದರು. ಇದನ್ನೇ ಭೂಮಿ  ಹುಟ್ಟಿದ ಕಾಲವೆಂದು,  ಈ ಧೀರ್ಘ ಅವಧಿಯನ್ನು ಡೀಪ್ ಟೈಮ್ ಎಂದು ವಿಜ್ಞಾನಿಗಳು ಕರೆದಿದ್ದಾರೆ.

ಇಲ್ಲಿಗೆ ಭೂಮಿಯ ವಯಸ್ಸು ಎಷ್ಟು ಎಂಬ ವಿಚಾರ ಗೊತ್ತಾಯಿತು. ಆದರೆ ಈ 456 ಕೋಟಿ ವರ್ಷಗಳ ಪಯಣ ಹೇಗಿತ್ತು ಅನ್ನೋದನ್ನು ತಿಳಿಯುವ ಅಗತ್ಯವಿತ್ತು. ವಿಜ್ಞಾನಿಗಳು ಶಿಲೆಗಳನ್ನು, ಸಂಶೋಧನೆಗಳನ್ನು ಕ್ರಮವಾಗಿ ಜೋಡಿಸಿ ಭೂಮಿಯ ವಿಕಾಸದ ಹಾದಿಯನ್ನು ಅದರ ತಿರುವುಗಳನ್ನು ತಿಳಿಯಲು ಮುಂದಾದರು.

ಭೂಮಿ ಬಾಲ್ಯಾವಸ್ಥೆಯಲ್ಲಿದ್ದಾಗ ಉಲ್ಕೆಗಳು ಅಪ್ಪಳಿಸುತ್ತಿದ್ದವು. ಅದಾಗಲೇ ಲಾವಾರಸದಿಂದ ತುಂಬಿದ್ದ ಭೂಮಿ ನಿಧಾನವಾಗಿ ತಣಿಯಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಬಿದ್ದ ಉಲ್ಕೆಗಳು ಶಿಲೆಗಳ ರೂಪ ಪಡೆದವು ಎನ್ನುತ್ತಾರೆ ವಿಜ್ಞಾನಿಗಳು.

ವಾಸ್ತವವಾಗಿ ವಿಜ್ಞಾನಿಗಳಿಗೆ ಕೋಟ್ಯಂತರ ವರ್ಷಗಳಷ್ಟು ಪುರಾತನವಾದ ಶಿಲೆಗಳು ಸಿಕ್ಕಿದ್ದು ಕಡಿಮೆ. ಆದರೆ ಅಷ್ಟೇ ಪುರಾತನವಾದ ಯುರೇನಿಯಂನಿಂದ ಕೂಡಿದ ಜರ್ಕಾನ್ ಹರಳುಗಳು ದೊರೆತವು.

ಕೋಟ್ಯಾನುಕೋಟಿ ವರ್ಷಗಳಷ್ಟು ಹಿಂದೆ ಇದ್ದ ವಾತಾವರಣದ ಸ್ವರೂಪವನ್ನು ಕಟ್ಟಿಕೊಟ್ಟ ಹರಳುಗಳಿವು. ಆ ಕಾಲದಲ್ಲಿದ್ದ ನೀರಿನ ಕಣದ ಗುರುತುಗಳೂ ಈ ಹರಳುಗಳಿಂದಲೇ ಸಿಕ್ಕವು.

ನೀರು ಎಲ್ಲಿಂದ ಬಂತು?

ಇಷ್ಟಾಗಿಯೂ ನೀರು ಎಲ್ಲಿಂದ ಬಂತು ಎಂಬ ಬಗ್ಗೆ ನಿರ್ದಿಷ್ಟ ನಿಖರ ಮಾಹಿತಿ ಇಲ್ಲ.

ನೀರಿನ ಮೂಲ ಭೂಮಿಯಲ್ಲ ಎಂದು ಒಂದಿಷ್ಟು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಆಕಾಶವೇ ನೀರಿನ ಮೂಲ. ಉಲ್ಕೆಗಳೂ, ಧೂಮಕೇತುಗಳೂ, ನೀರಿನ ಕಣಗಳನ್ನು ಭೂಮಿಗೆ ತಂದವು ಎನ್ನುತ್ತಾರೆ.

ಇದಕ್ಕೆ ವಿರುದ್ಧವಾದ ವಾದವೂ  ಇದೆ. ಭೂಮಿ ತಣ್ಣಗಾಗುವ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಆವಿ, ಇಂಗಾಲದ ಡೈಆಕ್ಸೈಡ್ ಜೊತೆ ಬೆರೆತು ದಟ್ಟ ಮೋಡಗಳು ಆದವು. ಭೂಮಿ ಸುತ್ತ ಹರಡಿಕೊಂಡವು. ಆ ಮೋಡಗಳೇ ಭೂಮಿಗೆ ನೀರು ಹರಿಸಿದವು ಎನ್ನುವುದು ಆ ಇನ್ನೊಂದು ವಾದ.

ನೀರಿನ ಕುರಿತ ಈ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ನೀರು ಹೇಗೆ ಭೂಮಿಗೆ ಬಂತೋ ಏನೋ ಬಹುದೊಡ್ಡ ಬದಲಾವಣೇಯನ್ನೇ ತಂತು…

ಮಳೆ ಮಳೆ ಮಳೆ..

ಆಗ ಭೂಮಿಗೆ 400 ಕೋಟಿ ವರ್ಷಗಳು. ಭೂಮಿ ಸುತ್ತ ಹರಡಿಕೊಂಡಿದ್ದ ಮೋಡಗಳ ಮೇಲೆ ಗುಡುಗು ಮಿಂಚುಗಳು ಅಪ್ಪಳಿಸಿ ಮಳೆ ಸುರಿಯಲಾರಂಭಿಸಿತು.

ಒಂದಲ್ಲ, ಎರಡಲ್ಲ, ನೂರಲ್ಲ, ಇನ್ನೂರಲ್ಲ. ಲಕ್ಷಾಂತರ ವರ್ಷಗಳ ಕಾಲ ಮಳೆ ಸುರಿದೇ ಸುರಿಯಿತು. ಭೂಮಿ ಒಂದು ಜಲವಿಶ್ವವಾಗಿ ಪರಿವರ್ತನೆಗೊಂಡಿತು. ಭೂಮಿಯ 90 ಭಾಗ ನೀರು ತುಂಬಿಕೊಂಡು ಅಗಾಧ ಸಾಗರವಾಗಿ ಹೋಯಿತು.

ಇಷ್ಟಾಗಿಯೂ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿದ್ದವು. ಈ ಅಗಾಧ ಸಾಗರದಲ್ಲಿ ಅಲ್ಲಲ್ಲಿ ಇದ್ದ ದ್ವೀಪಗಳಿಂದ ಲಾವಾರಸ ಉಕ್ಕುವುದು ನಿಂತಿರಲಿಲ್ಲ. ಈ ಲಾವಾರಸ ಸಾಗರ ಸೇರಿ ಕಬ್ಬಿಣಾಂಶ ಹೆಚ್ಚಿ ನೀರು ಹಸಿರು ಬಣ್ಣಕ್ಕೆ ತಿರುಗಿತು. ಮತ್ತೊಂದೆಡೆ ಇಂಗಾಲದ ಡೈಆಕ್ಸೈಡ್ ಆಕಾಶವನ್ನು ದಟ್ಟವಾಗಿ ಆವರಿಸಿಕೊಂಡಿದ್ದರಿಂದ ಕೆಂಪಾಗಿ ಕಾಣುತ್ತಿತ್ತು.

ಭೂಮಿಯ ವಾತಾವರಣದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿತ್ತು. 100 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶವಿತ್ತು. ಲಾವಾರಸ ಬೆರೆತು ಭೂಮಿಯನ್ನು ಆವರಿಸಿದ ನೀರು ಆಸಿಡ್‌ನಷ್ಟು ತೀಕ್ಷ್ಣವಾಗಿತ್ತು. ಸುಮಾರು50 ಕೋಟಿ ವರ್ಷಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.

ಈ ವಿಷಮ ವಾತಾವರಣ ಮುಂದಿನ ಬೆಳವಣಿಗೆಗೆ ವೇದಿಕೆ ರೂಪಿಸುತ್ತಿದ್ದವು ಎನ್ನಬಹುದೇನೊ. ಇನ್ನೂ ಕ್ರಿಯಾಶೀಲವಾಗಿದ್ದ ಜ್ವಾಲಾಮುಖಿಗಳು ಹೊಸರೀತಿಯ ಶಿಲಾಪದರವನ್ನು ರೂಪಿಸುತ್ತ, ಭೂಖಂಡಗಳ ಸೃಷ್ಟಿಕಾರ್ಯದಲ್ಲಿ ನಿರತವಾಗಿದ್ದವು. ಭೂಮಿ ಅಗಾಧವಾದ, ಅನನ್ಯವಾದ ಗ್ರಹ ಆಗುವ ಕಾಲ ಹತ್ತಿರವಾಗುತ್ತಿತ್ತು.

ಭೂಮಿ ಹುಟ್ಟಿ 100 ಕೋಟಿ ವರ್ಷಗಳಾಗುವ ಹೊತ್ತಿಗೆ ಎಲ್ಲಿ ನೋಡಿದರೂ ನೀರೆ ತುಂಬಿಕೊಂಡಿತ್ತು. ಜೊತೆಗೆ ಜ್ವಾಲಾಮುಖಿಗಳು ಲಾವಾರಸವನ್ನು ಚಿಮ್ಮುತ್ತಲೇ ಇದ್ದವು ಕೂಡ. ಈ ಪ್ರಕ್ರಿಯೆಯಲ್ಲಿ ಒಂದು ವಿಧದ ಶಿಲೆ ಸೃಷ್ಟಿಯಾಯಿತು. ಅದೇ ಗ್ರಾನೈಟ್ ಶಿಲೆ. ಇದೇ ಭೂಮಿಯ ಪದರವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತು.

ಭೂಮಿ ಜಲಾವೃತವಾಗಿ, ಸಾಗರದೊಳಗೆ ಜ್ವಾಲಾಮುಖಿಗಳು ಸಿಡಿಯುತ್ತಿದ್ದಾಗ ಶಿಲೆಯೊಂದು ರಚನೆಯಾಗಲಾರಂಭಿಸಿತು. ಕುದಿವ ನೀರು, ಲಾವಾರಸದ ಮಿಶ್ರಣದಿಂದ ಅತ್ಯಂತ ಕಠಿಣವಾದ ಭಾರದ ಶಿಲೆ ರಚನೆಯಾಯಿತು. ಅದೇ ಗ್ರಾನೈಟ್.

ದಕ್ಷಿಣ ಆಫ್ರಿಕಾದ ಸ್ಥಳವೊಂದರಲ್ಲಿ ಪತ್ತೆಯಾದ ಬಂಡೆಗಳು ಗ್ರಾನೈಟ್ ಶಿಲೆಯ ರಹಸ್ಯ ಬಿಚ್ಚಿಟ್ಟವು. ಈ ಬಂಡೆಗಳ ಅಧ್ಯಯನದಿಂದ ಗ್ರಾನೈಟ್ ಭೂಮಿಯ ತೊಗಟೆಯಾಗಿ ವಿಸ್ತರಿಸಿಕೊಂಡಿದ್ದು ವಿಜ್ಞಾನಿಗಳಿಗೆ ತಿಳಿದುಬಂತು.

ಹೀಗೆ ಗ್ರಾನೈಟ್ ಭೂಮಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿತು. ಕಾಲಾನಂತರದಲ್ಲಿ ಅಲ್ಲಲ್ಲಿ ಬಿರುಕುಬಿಟ್ಟು ಸಾಗರದ ನೀರು ಭೂಗರ್ಭ ಸೇರಲಾರಂಭಿಸಿತು.

250 ಕೋಟಿ ವರ್ಷಗಳು

ಈ ಹೊತ್ತಿಗೆ ಸಾಗರಗಳ ಪಾರುಪತ್ಯೆ ಕಡಿಮೆ ಆಯಿತು. ಭೂಮಿಯ ಬಹುಪಾಲು ಮೇಲ್ಮೈ ಘನರಚನೆಗಳಿಂದ ಕೂಡಿತ್ತು. ಭೂಖಂಡಗಳ ಉಗಮವಾಗಿತ್ತು. ಇದೇ ವೇಳೆ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಕೂಡ ಕಾಣಿಸಿಕೊಂಡಿತು. ಭೂಮಿಯಲ್ಲಿ ನೀರು ಕಾಣಿಸಿಕೊಂಡ ಕೋಟ್ಯಾಂತರ ವರ್ಷಗಳಲ್ಲಿ ಏಕಕೋಶ ಜೀವಿಗಳು ಕಾಣಿಸಿಕೊಂಡವು. ಅವುಗಳಿಂದ ಆಮ್ಲಜನಕ ಉತ್ಪತ್ತಿಯಾಯಿತು ಎಂದು ವಿಜ್ಞಾನಿಗಳು ಹೇಳಿದರು.

ಅಂತಹ ಜೀವಿಗಳು ಇದ್ದವೆ ಎಂಬ ಸಾಧ್ಯತೆ ಹೊಳೆದದ್ದೆ ಸ್ಟ್ರೊಮೆಟೊಲೈಟ್‌ಗಳನ್ನು ನೋಡಿದ ಮೇಲೆ.

1 ಅಡಿ ಅಗಲ, 2 ಅಡಿ ಎತ್ತರದ ಕಲ್ಲಿನಂತೆ ಕಾಣುವ  ರಚನೆಗಳೇ ಸ್ಟ್ರೊಮೆಟೊಲೈಟ್‌ಗಳು. ಬ್ಯಾಕ್ಟೀರಿಯಲ್ ಆಲ್ಗೇಗಳಿಂದ ಆದ ಇವು ಭೂಮಿಗೆ ಉಸಿರುಕೊಟ್ಟ ಜೀವಿಗಳು.

ಫಿಲಿಫ್ ಫ್ಲೈಫರ್ಡ್ ಎಂಬ ವಿಜ್ಞಾನಿ ಇವುಗಳನ್ನು ಪತ್ತೆ ಮಾಡಿದ್ದು. ನಂತರ ವಿಜ್ಞಾನಿಗಳು ಸ್ಟ್ರೊಮೆಟೊಲೈಟ್‌ಗಳ ಪಳೆಯುಳಿಕೆಗಳನ್ನು ಗುರುತಿಸಿದರು. ಏಕಕೋಶ ಜೀವಿಗಳ ಹಲವು ಪದರಗಳಿಂದಾದ ಈ ಸ್ಟ್ರೊಮೆಟೊಲೈಟ್‍ಗಳು ಭೂಮಿಯ ಬಹುಭಾಗಗಳಲ್ಲಿ ಹರಡಿಕೊಂಡಿದ್ದು ಕಂಡು ಬಂತು.

ದ್ಯುತಿಸಂಶ್ಲೇಷಣೆಯಿಂದ ವಾತಾವರಣಕ್ಕೆ ಆಮ್ಲಜನಕ ಪೂರೈಸಿದ ಮೊದಲ ಜೀವಿಗಳಿವು. ಬರೋಬ್ಬರಿ  200 ಕೋಟಿ ವರ್ಷಗಳು ನಿರಂತರವಾಗಿ ಈ ಪ್ರಕ್ರಿಯೆ ನಡೆಯಿತೆಂದು ವಿಜ್ಞಾನಿಗಳು ಹೇಳುತ್ತಾರೆ.

ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಬೇ ಬೀಚಿನಲ್ಲಿ ಇವತ್ತಿಗೂ ಸ್ಟ್ರೊಮೆಟೊಲೈಟ್‌ಗಳು ನೋಡಲು ಸಿಗುತ್ತವೆ.

220  ಕೋಟಿ ವರ್ಷಗಳಿಂದ 170 ಕೋಟಿ ವರ್ಷಗಳ ವರೆಗೆ ಸಾಗರದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕ ತುಂಬಿತು.

200 ಕೋಟಿ ವರ್ಷಗಳ ಆಮ್ಲಜನಕೀಕರಣದಿಂದ ಭೂಮಿ ನೀಲಿ ಬಣ್ಣಕ್ಕೆ ತಿರುಗಿತು.

ನೀಲಿ ಆಕಾಶ, ನೀಲಿ ಸಾಗರ….

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಮುಖವಿರದವನು : ಸಣ್ಣಕತೆ


-ಡಾ.ಎಸ್.ಬಿ. ಜೋಗುರ


 

ಸಂಜೀವಿನಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬೆಡ್ ಮೇಲೆ ಆಕೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಿದವರು ಅಲ್ಲಿಯೆ ಕುಳಿತಿದ್ದರು. ಆಕೆ ಯಾರು? ಏನು? ಎಂದು ಕೇಳಿದವರಿಗೆಲ್ಲಾ ಅವರದು ಒಂದೇ ಉತ್ತರ. ಪೋಲಿಸರಿಗೂ ಅದೇ ಉತ್ತರ… ‘ಸಾಹೇಬರ, ನಮಗೂ ಗೊತ್ತಿಲ್ಲ. ಅವರು ದಾವಣಗೇರಿಯವರಂತ, ಅವರ ಡ್ರೈವರ್ ಅಕಿ ಯಜಮಾನರನ್ನ ಕರೀಲಿಕ್ಕಂತ ಹೋಗ್ಯಾನ. ಅಂವಾ ಬರೋಮಟ ಅಂತ ನಾವು ಕುಂತೀವಿ ಅಷ್ಟೇ.. ಅದ್ಯಾಕಹೀಂಗ.. ಏನು ಕಾರಣ.. ಅನ್ನೂದು  ನಮಗೂ ತಿಳದಿಲ್ಲ.’ ಅಂತಿದ್ದರು.

***

ಅದು ಪೇಢಾನಗರಿ ಧಾರವಾಡದ ಕುಳಗೇರಿ ಕೆರೆ. ನಡೆಯಲಾಗದ ಕೆರೆಯ ದಂಡೆಯಲಿ, ವೀರಭದ್ರದೇವರ ಗುಗ್ಗಳದ ಪುರವಂತರ ನಡಿಗೆಯ ಮುಂದಾಸುವ ಹಡದಿಯಂತೆ ಟೈಲ್ಸ್‌ಗಳು ಅಚ್ಚುಕಟ್ಟಾಗಿ ಹೊಂದಿಕೊಂಡು ರಸ್ತೆಯಾಗಿವೆ. ಮಕ್ಕಳು ಮುದುಕರಾದಿಯಾಗಿ ಈ ಟೈಲ್ಸ್ ರಸ್ತೆಯ ಮೇಲೆ ಗಮತ್ತಿನ ನಡಿಗೆಗಾಗಿಯೆ ಒಂದು ಸುತ್ತು ಇಲ್ಲಿ ಸುಳಿಯುವುದಿದೆ. ಮೊದಮೊದಲು ರಾತ್ರಿ ಎಂಟು ಗಂಟೆಯವರೆಗೂ ಉಲುವಾಗಿರುತ್ತಿದ್ದ ಈ ಕೆರೆಯ ದಂಡೆ ಈಗ ಏಳರ ಸುಮಾರಿಗಾಗಲೇ ಸ್ತಬ್ಧವಾಗಿರುತ್ತದೆ. ಹೆಂಗಸರ ಕತ್ತಿನ ಚೈನು ಕದಿಯುವ ಪುಂಡ-ಪೋಕರಿಗಳಿಗೆ ಆ ಅಪಶ್ರೇಯಸ್ಸು ಸಲ್ಲಬೇಕು. ಸಾರ್ವಜನಿಕರ ಸಂಜೆಯ ವಿಹಾರಕ್ಕೆ ಹಿತಕರವಾಗಿರಲೆಂದು ಟೈಲ್ಸ್ ಜೋಡಿಸಿದರೆ ಮಕ್ಕಳು, ಮಹಿಳೆಯರು, ಮುದುಕರ ಮಧ್ಯೆಯೇ ಭಂವ್.. ಎಂದು ಬೈಕ್ ಓಡಿಸಿಕೊಂಡು ಧಿಮಾಕು ಮೆರೆಯುವ ಟಪೋರಿ ಪೋರರ ಕಿರಿಕಿರಿಯಂತೂ ವಾಯು ವಿಹಾರಿಗಳಿಗೆ ತಪ್ಪಿಲ್ಲ. ಈ ಕುಳಗೇರಿ ಕೆರೆಯ ಸುತ್ತಲ ಟೈಲ್ಸ್ ರಸ್ತೆಗೆ ಸಂಜೆಯಾಗುತ್ತಿರುವಂತೆ ಏರುವ ರಂಗು ತರಾವರಿ ವಿದ್ಯಮಾನಗಳಿಗೆ ಸಾಕ್ಷಿಯಾಗುವುದಂತೂ ಹೌದು. ಅಮ್ಮನ ಕೈ ಹಿಡಿದು ಅದ್ರವಾಗಿ ಹೆಜ್ಜೆಯೂರುವ ಪುಟ್ಟ ಕಂದಮ್ಮಗಳು, ಹೆಜ್ಜೆ ತಪ್ಪಿದ ವಯಸ್ಸಾದ ಅಜ್ಜ-ಅಜ್ಜಿಯರು, ಮುತ್ತಿಕೊಂಡಿರುವ ರೋಗರುಜಿನುಗಳ ಹಿಡಿತದಲ್ಲಿಡಲು ವಾಯುವಿಹಾರದ ಮನ:ಪೃವೃತ್ತಿಯನ್ನು ಸಹಜಪ್ರವೃತ್ತಿಯಾಗಿಸಿಕೊಂಡವರು, ಮೈಗೆ ಮೈ ತಾಗಿಸಿ ಹರಿವ ನೀರೆಡೆಗೆ ಮುಖ ಮಾಡಿ ಕುಳಿತ ಪ್ರಣಯಿಗಳು, ಹೊಸದಾಗಿ ಮದುವೆಯಾದವರು, ದೈಹಿಕ ಕಸರತ್ತನ್ನು ಮಾಡುವವರು, ಫ್ಯಾಶನ್ ಪರೇಡನಲ್ಲಿ ಹೆಜ್ಜೆ ಹಾಕುವಂತೆ ಸಾಗುವ ಲಲನೆಯರು, ಅದೇ ತಾನೇ ಕೆಲಸ ಮುಗಿಸಿ ಬುತ್ತಿಯ ಚೀಲವನ್ನು ಕೈಯಲ್ಲಿ ಹಿಡಿದು ಮೊಬೈಲ್‌ನಲ್ಲಿ ಹಾಡು ಕೇಳುತ್ತಾ ಸಾಗುವವರು, ಅಲ್ಲಲ್ಲಿ ಬೈಕ್ ನಿಲ್ಲಿಸಿ ನೀರಿಗಿಳಿದು ಮೊಣಕಾಲವರೆಗೆ ಪ್ಯಾಂಟ್ ಏರಿಸಿ ಮೀನು ಹಿಡಿಯುವವರು, ಕೆರೆಯ ದಂಡೆಯಲ್ಲಿ ಮೇಯುತ್ತಿದ್ದ ಎಮ್ಮೆಗಳನ್ನು ತನ್ನದೇ ಆದ ಧ್ವನಿವಿಶೇಷದೊಂದಿಗೆ ಕೂಗಿ ಕರೆಯುವವರು, ಸೂಟಿಗೆ ಬಂದ ಮೊಮ್ಮಕ್ಕಳನ್ನು ಕೆರೆಯ ದಡದಲ್ಲಿ ನಿಲ್ಲಿಸಿ ಕಪ್ಪು ಬಾತುಗೋಳಿಗಳನ್ನು ತೋರಿಸುವ ಅಜ್ಜಂದಿರು, ಲಲನೆಯರನ್ನು ನೋಡಲು ಅಲ್ಲಲ್ಲಿ ಕಣ್ಣು ಹಾಸಿ ಕುಳಿತ ಪಡ್ದೆ ಹುಡುಗರು. ಇಂತಪ್ಪ ಹತ್ತಾರು ಮಜಲುಗಳೊಂದಿಗೆ ಕೈ ಮಿಲಾಯಿಸಿದಂತಿರುವ ಈ ಕುಳಗೇರಿ ಕೆರೆಯ ದಂಡೆ ಸಾಯಂಕಾಲ ಒಂದು ಬಗೆಯ ಸಿರಿ ಸೊಬಗನ್ನೇ ತಳೆದಂತಿರುತ್ತದೆ.

ಒಂದು ಕಾಲದಲ್ಲಿ ಈ ಕೆರೆಯ ದಂಡೆಯ ಮೇಲೆ ಹೆಜ್ಜೆಯೂರುವುದೇ ದುಸ್ತರ. ಅಭಿವೃದ್ಧಿಯ ಸೋಂಕಿಗೆ ಕೆರೆಯ ದಂಡೆ ಒಳಗಾದದ್ದೇ ತಡ ಸುತ್ತಲೂ ಸುತ್ತಿ ಸುಳಿಯುವಂತೆ ಟೈಲ್ಸ್ ರಸ್ತೆಯೊಂದು ತಲೆ ಎತ್ತಿತು. ಅಲ್ಲಿಂದ ಶುರುವಾದ ಜನರ ವಾಯು ವಿಹಾರ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದೆ. ಮೆಲ್ಲಗೆ ಬರೀಗಾಲಿನಿಂದ ನಡೆಯುವವರಿಂದ ಹಿಡಿದು, ಸ್ಪೋಟ್ಸ್ ಶೂ ಗಳನ್ನು ಧರಿಸಿ ದಾಪುಗಾಲು ಹಾಕುವವರವರೆಗೂ ಇಲ್ಲಿನ ನಡಿಗೆ ಇವೆ. ಇಲ್ಲಿ ವಾಕಿಂಗ್ ಮಾಡುವವರು ಹಾಡು ಹೇಳುತ್ತಲೇ ಅಲೆಯುವವರಂತೆ ತೋರುತ್ತಾರೆ. ಅವರ ಶರೀರದ ಯಾವುದೋ ಒಂದು ಮೂಲೆಯಿಂದ ತರತರದ ಹಾಡುಗಳು ಗುನುಗುತ್ತಿರುತ್ತವೆ. ಅದರಲ್ಲಿಯ ಸಂಗೀತದ ಸ್ವಾದಕ್ಕೆ ಹದವಾಗಿ ಹೆಜ್ಜೆ ಹಾಕುವವರೂ ಇದ್ದಾರೆ. ಅಂತೂ ಒಂದು ಕಾಲದಲ್ಲಿ ಸುತ್ತಲೂ ಹುದುಲು ಹಾಸಿಕೊಂಡಿದ್ದ ಈ ಕುಳಗೇರಿ ಕೆರೆ ಈಗ ಟೈಲ್ಸ್ ರಸ್ತೆಯ ಸಹವಾಸದಲ್ಲಿ ಮೊಬೈಲ್ ಮ್ಯುಜಿಕ್ ಕೇಳುವ ಗಮತ್ತನ್ನು ಅನುಭವಿಸುತ್ತಿದೆ. ಕೆರೆಯ ಮುಖವನ್ನೊಮ್ಮೆ ಆಪ್ತವಾಗಿ ದಿಟ್ಟಿಸಿದರೆ ಅದು ಮಾತ್ರ ಇಲ್ಲಿ ವಾಯು ವಿಹಾರ ಮಾಡುವವರ ಸಹವಾಸದಿಂದ ಸುಖವಾಗಿಲ್ಲ ಎನಿಸುತ್ತದೆ. ದಡದಲ್ಲಿ ಬೀಸಾಡುವ ಪ್ಲಾಸ್ಟಿಕ್ ಪೊಟ್ಟಣ, ಗುಟಕಾ ಚೀಟಿ, ನೀರಿನ ಬಾಟಲ್, ಕಸ ಕಡ್ಡಿ, ದೇವರ ಫೋಟೊ ಮೇಲಿನ ಕೊಳೆತ ಹೂವು, ಕೆಂಪು ವಸ್ತ್ರದಲ್ಲಿ ಬಿಗಿದ ಮನೆಯ ಮೂಲೆಯ ತೆಂಗು, ಅಲ್ಲಲ್ಲಿ ಕುಳಿತು ತಿಂದು ಬೀಸಾಡಿದ ಕಾಗದದ ಪೊಟ್ಟಣಗಳು ಹೊತ್ತುಗೊತ್ತಿಲ್ಲದೇ ಕೆರೆಗಿಳಿದು ಮೀನು ಹಿಡಿಯುತ್ತಾ ನೀರು ಕಲಕುಗೊಳಿಸುವ ರೀತಿ ಇಂಥಾ ಹತ್ತಾರು ಮನುಷ್ಯನ ಅಪವರ್ತನೆಗಳಿಂದ ಕುಳಗೇರಿಯ ಗಂಗಾಮಾತೆ ಸಿಕ್ಕಾಪಟ್ಟೆ ಸಿಟ್ಟಾಗಿರುವುದೂ ಇದೆ. ಆದರೂ ತನ್ನ ಬಳಕೆಯ ಬಗ್ಗೆ ಖುಷಿ ಇದೆ. ನೀನ್ಯಾರಿಗಾದೆಯೋ ಎಲೇ ಮಾನವಾ.? ಎನ್ನುವ ಪ್ರಶ್ನೆಯೂ ಅಲ್ಲಿದೆ.

ಆ ದಿನದ ಸಾಯಂಕಾಲಕ್ಕೆ ಎಂದಿನ ರಂಗಿರಲಿಲ್ಲ. ಮೇ ತಿಂಗಳ ಕೊನೆಯ ದಿನವಾದ್ದರಿಂದ ಮುಗಿಲ ಮಾರಿಯಲ್ಲಿ ಮಬ್ಬು ಕವಿದಿತ್ತು. ಹೀಗಾಗಿ ಕೆರೆಯ ಅಂದ ಕಳೆಗಟ್ಟಿದಂಗಿತ್ತು. ದಿನಾಲು ಸ್ವರ್ಣರೂಪಿಯಾಗಿ ಕಂಗೊಳಿಸುವ ಸೂರ್ಯನೂ ಅಂದು ತುಸು ಡಲ್ ಹೊಡೆದಂಗಿದ್ದ. ಅವನ ಮುಖದಲ್ಲಿಯೂ ಮಬ್ಬು ಮುಸುಕಿತ್ತು. ಸನ್‌ಸೆಟ್ ನೋಡಬೇಕೆನ್ನುವವರ ಪಾಲಿಗೆ ಆ ದಿನ ನಿರಾಶೆಯನ್ನೇ ನಿಗದಿಮಾಡಿದಂತಿತ್ತು. ಸೂರ್ಯ ಯಾವ ಕಳೆಯೂ ಇಲ್ಲದೇ ಕುಳಗೇರಿಯ ಎರಡು ಮೊಬೈಲ್ ಟಾವರ್‌ಗಳ ಮಧ್ಯದಲ್ಲಿ ಮುಖ ಹುದುಗಿಸಿದ್ದ. ಅಲ್ಲಿಂದಲೇ ಕೆಳಗಿಳಿಯುತ್ತಿದ್ದ. ಆತನ ಮುಖ ಅಂದು ನೋಡುವಂತಿರಲಿಲ್ಲ. ಸಾಯಂಕಾಲದ ಆರು ಗಂಟೆಯ ಹೊತ್ತಿಗಾಗಲೇ ಆತ ಅಸ್ತಂಗತನಾಗುವಂತಿದ್ದ. ಎರಡು ಮೂರು ಕಂಪನಿಗಳ ಮೊಬೈಲ್ ಟವರ್‌ಗಳ ನಡುವೆ ಮುಖ ಹುದುಗಿಸಿ ಆತ ಕೆಳಗಿಳಿಯುವುದನ್ನು ನೋಡುವದೇ ಒಂದು ವಿಲಕ್ಷಣವಾಗಿತ್ತು. ಪಕ್ಕಾ ಜೋಲು ಮುಖದವನಾಗಿ ಕಾಣುವ ಸೂರ್ಯ ಆ ಸಾಯಂಕಾಲದ ಯಾವ ಜೀವಜಂತುಗಳಿಗೂ ಉಮೇದನ್ನು ನೀಡಿರಲಿಲ್ಲ. ಅಲ್ಲೊಬ್ಬ ಗೌಳಿ ದಡದಿಂದ ಸ್ವಲ್ಪ ಒಳಗೆ ತನ್ನ ಎಮ್ಮೆಗಳನ್ನು ತೊಳೆಯುತ್ತಿದ್ದ. ಎಮ್ಮೆಗಳ ಹಿಂಡು ಮೈಯಲ್ಲಾ ನೀರಲ್ಲಿ ಮುಳುಗಿಸಿ, ಬರೀ ಮುಖಮಾತ್ರ ಮೇಲೆ ಮಾಡಿ ಸಂಪತ್ತಿಗೆ ಸವಾಲ್ ಚಿತ್ರದ ’ಯಾರೇ ಕೂಗಾಡಲೀ..’ ಎನ್ನುವ ಹಾಡು ಹೇಳುತ್ತಿರುವಂತಿದ್ದವು. ಆ ಗೌಳಿ ಒಂದೊಂದೇ ಎಮ್ಮೆಯನ್ನು ಪಕ್ಕಕ್ಕೆ ಕರೆದು ಹದವಾಗಿ ಉಜ್ಜುತ್ತಿದ್ದ. ಹಾಗೆ ತಿಕ್ಕಿಸಿಕೊಳ್ಳುವ ಎಮ್ಮೆ ತನ್ನ ಬಾಲವನ್ನು ಸ್ವಲ್ಪ ಮೇಲೆತ್ತಿ ಸುಖಪ್ರದರ್ಶನ ಮಾಡುತ್ತಿತ್ತು. ಆತ ನೀರು ಸಿಂಪಡಿಸಿ ಉಜ್ಜುತ್ತಲೇ ಇದ್ದ. ಮಿಕ್ಕ ಎಮ್ಮೆಗಳ ಹಿಂಡು ಆ ಸುಖಕ್ಕಾಗಿ ಹಾತೊರೆಯುತ್ತಿದ್ದವು. ಅಲ್ಲೊಂದು ಸಣ್ಣ ಸೇತುವೆ ಅದರ ಅಡಿಯಲ್ಲಿ ಒಬ್ಬ ಯುವಕ ಅದರ ಗೋಡೆಯನ್ನು ಅಂದಗೇಡಿಯಾಗಿಸುವತ್ತ ತೊಡಗಿದ್ದ. ಅವನದೇ ಇನ್ನೊಬ್ಬ ಕೈಮುರುಕ ಸಂಗಾತಿ ಅಲ್ಲೇ ಹತ್ತಿರದಲ್ಲಿ ಮೀನಿಗೆ ಗಾಳ ಹಾಕಿ ನಿಂತಿದ್ದ. ಅವನ ಒಂದು ಕೈ ಪ್ಲಾಸ್ಟರ್ ಸಹವಾಸದಲ್ಲಿದ್ದರೂ ಆತ ಫಿಶಿಂಗ್ ಮಾಡುತ್ತಿದ್ದ. ಅವನಿಗೆ ಸ್ವಲ್ಪ ದೂರದಲ್ಲಿ.. ಅವನ ಕಣ್ಣಳತೆಯಲ್ಲಿ ಸಣ್ಣ ಸಣ್ಣ ಮೀನುಗಳು ಮೇಲೆ ನೆಗೆದು ಅವನನ್ನು ವ್ಯಂಗ್ಯ ಮಾಡುತ್ತಿದ್ದವು. ಅವನೋ ತನ್ನ ಒಂದೇ ಕೈಯಿಂದ ಮೀನು ಹಿಡಿಯುವ ಕಸರತ್ತನ್ನು ನಡೆಸಿಯೆ ಇದ್ದ. ಗೋಡೆ ಕೆಡಿಸಿದ ಯುವಕ ಈಗ ತನ್ನ ಕೈಮುರುಕ ಗೆಳೆಯನ ಫಿಶಿಂಗ್ ಸ್ಟೈಲನ್ನು ಮೊಬೈಲ್ ಕ್ಯಾಮಾರದಲ್ಲಿ ಕ್ಲಿಕ್ ಮಾಡುತ್ತಿದ್ದ.

ಆ ಸೇತುವೆಯ ಅಂಚಲ್ಲಿ ಒಬ್ಬಾತ ಹೆಗಲಿಗೊಂದು ಹರಕು ಬ್ಯಾಗನ್ನು ನೇತಾಡಿಕೊಂಡು ಬಂದು ಮೆಲ್ಲಗೆ ಕೆರೆಯ ದಂಡೆಯ ಮೇಲಿನ ಕಲ್ಲಿನ ಮೇಲೆ ಕುಳಿತ. ಆತ ಧರಿಸಿದ ಬಿಳಿ ಅಂಗಿ ಕಪ್ಪಾಗಿ ಕಮಟುಗಟ್ಟಿತ್ತು. ಪಾದಗಳು ಹುಟ್ಟು ಬೆತ್ತಲೆ ಸ್ಥಿತಿಯಲ್ಲಿದ್ದವು. ತಲೆಗೂದಲು ಕೆದರಿ ವಿಕಾರವಾಗಿತ್ತು. ಹಣೆಯ ಮೇಲೆ ಉದ್ದನೆಯ ಒಂದು ವಿಕಾರವಾದ ಕಚ್ಚಿತ್ತು. ಆತನನ್ನು ನೋಡಿದ ಯಾರೇ ಆಗಲಿ ಅವನೊಬ್ಬ ರಿಕಾಮಿ.. ಸೋಂಬೇರಿ ಎಂದು ಮೆಲ್ನೋಟದಲ್ಲಿಯೆ ಹೇಳಬಹುದಿತ್ತು. ಆತ ಅತ್ತಿತ್ತ ನೋಡಿ ತನ್ನ ಆಸು ಪಾಸು ಯಾರೂ ಇಲ್ಲದ್ದನ್ನು ಖಾತ್ರಿ ಪಡಿಸಿಕೊಂಡು, ಮೆಲ್ಲನೆ ತನ್ನ ಚೀಲದೊಳಗಿಂದ ಏನೋ ಒಂದನ್ನು ಹೊರತೆಗೆದ. ಅದು ಕೆಂಪು ವಸ್ತ್ರದಲ್ಲಿರುವ ತೆಂಗಿನಕಾಯಿ. ಅದಿನ್ನೂ ಹಸಿಹಸಿಯಾಗಿತ್ತು. ಕೆರೆಯಲ್ಲಿ ಪೂಜೆ ಮಾಡಿ ಎಸೆದದ್ದು ತೇಲುತ್ತಾ ದಡಕ್ಕೆ ಬಂದು ಈ ಸೋಂಬೇರಿಯ ಕೈ ಸೇರಿತ್ತು. ಆ ಮೇಲಿನ ಕೆಂಪು ವಸ್ತ್ರವನ್ನು ಬಲತ್ಕಾರ ಮಾಡುವವನಂತೆ ಆತ ಟರಟರನೇ ಹರಿದೊಗೆದ. ಬಾಯಿಂದ ಬರಬರನೇ ಮೇಲಿನ ಜಿಬ್ಬರವನ್ನು ಸುಲಿದ. ಅದನ್ನು ಕಿವಿಯ ಬಳಿ ಹಿಡಿದು ಅಲುಗಾಡಿಸಿದ. ಇವನ ಕಿವಿಯಲ್ಲಿ ಅದೇನೋ ಹೇಳುತ್ತಿದೆ ಎನ್ನುವವನಂತೆ ಧ್ಯಾನಸ್ಥನಾಗಿ ಆಲಿಸಿದ. ತಾನು ಕುಳಿತ ಕಲ್ಲಿಗೆ ಆ ಕಾಯಿಯಿಂದ ಟಪಾರ್ ಎಂದು ಒಂದೇಟು ಕೊಟ್ಟ. ಒಳಗಿನ ಕೊಬ್ಬರಿಯ ಮುಸುಕು ಗುಡಕ್.. ಅಂತ ಉರುಳಿ ಬಿತ್ತು. ಅದನ್ನೆತ್ತಿ ತನ್ನ ಚೀಲಕ್ಕೆ ಹಾಕಿದ. ಮತ್ತೆ ಅಂತದೇ ಇನ್ನೊಂದು ತೆಂಗಿನ ಕಾಯಿಯನ್ನು ಹೊರತೆಗೆದ. ಅದರ ಸಿಪ್ಪೆ ತುಂಬಾ ಗಟ್ಟಿಯಾಗಿತ್ತು. ಹಲ್ಲಿನಿಂದ ಸುಲಿಯುವಂತಿರಲಿಲ್ಲ. ತಾನು ಕುಳಿತ ಕಲ್ಲಿನ ಮೇಲೆ ಅದನ್ನಿಟ್ಟು ಇನ್ನೊಂದು ಕಲ್ಲಿನಿಂದ ಬಲವಾಗಿ ಅದರ ಮೇಲ್ಬಾಗವನ್ನು ಜಜ್ಜತೊಡಗಿದ. ಇದು ಸುಮಾರು ಹೊತ್ತು ನಡೆಯಿತು ಆದರೂ ಅದು ಒಡೆಯಲಿಲ್ಲ. ಆತ ಮುಖದ ಬೆವರನ್ನು ಒಂದೇ ಸವನೆ ಒರೆಸುತ್ತಲೇ ಅ ಕಾಯಿಯ ನೆತ್ತಿಗೆ ಚಚ್ಚುತ್ತಿದ್ದ. ಎಷ್ಟು ಚಚ್ಚಿದರೂ ಅದು ಬಿಚ್ಚಲಿಲ್ಲ ಆತನಿಗೆ ಸಿಟ್ಟು ಬಂದಿತ್ತು ಅದನ್ನು ಜೋರಾಗಿ ಕೆರೆಯ ಒಳಗೆ ಜ್ಯಾವೆಲಿನ್ ಥ್ರೋ ಎಸೆಯುವಂತೆ ಎಸೆದು ಬಿಟ್ಟ. ಚೀಲವನ್ನು ತನ್ನ ಹೆಗಲಿಗೇರಿಸಿ ಅಲ್ಲಿಂದ ಮೆಲ್ಲಗೆ ಎದ್ದು ನಡೆದ. ಅದಾಗಲೇ ಕೆರೆಯ ಸುತ್ತಲೂ ಮಬ್ಬು ಕವಿದಿತ್ತು. ವಾಯು ವಿಹಾರಕ್ಕೆಂದು ಬಂದವರು ಮರಳಿ ಮನೆಗೆ ನಡೆದಿದ್ದರು. ಹಕ್ಕಿಗಳು ತಮ್ಮ ತಮ್ಮ ಗೂಡಿನ ದಿಕ್ಕಿಗೆ ಮುಖ ಮಾಡಿದ್ದವು. ಆ ವಿಶಾಲವಾದ ಬಯುಲಿನಲ್ಲಿ ಕೆರೆ ನಿಧಾನವಾಗಿ ಕಳೆದುಹೋಗುತ್ತಿತ್ತು. ಕತ್ತಲಾವರಿಸುವ ಮುನ್ನ ಕಾಲ್ಕೀಳಬೇಕು ಎಂದು ಲಗುಬಗೆಯಿಂದ ವಿಹಾರಿಗಳು ಹೆಜ್ಜೆ ಹಾಕುತ್ತಿದ್ದರು. ಅದಾಗಲೇ ತುಸು ಕತ್ತಲಾದಂಗಿತ್ತು. ಕೆರೆಯ ದಂಡೆಯ ಸುತ್ತಲೂ ಮೌನ ಆವರಿಸಿಕೊಳ್ಳುವ ಹೊತ್ತಲ್ಲಿ ದಡಲ್..! ಅನ್ನುವ ಜೋರಾದ ಸದ್ದು… ಸೇತುವೆ ಮೇಲಿಂದ ಯಾರೋ ನೀರಲ್ಲಿ ಬಿದ್ದಂಗಿತ್ತು. ಕೆರೆಯ ದಂಡೆಯ ಪಾವಟಣಿಗೆಯ ಮೇಲೆ ಕುಳಿತ ಒಂದಿಬ್ಬರು ಸೇತುವೆ ಬದಿ ಧಾವಿಸಿ ಓಡಿ ಬಂದಂಗಿತ್ತು…ಸುತ್ತಲೂ ಕತ್ತಲಾವರಿಸಿತ್ತು.

***

ಅದು ಧಾರವಾಡದ ಹೃದಯಭಾಗದಲ್ಲಿರುವ ವಿಚಾರ ರಶ್ಮಿ ಸಭಾಂಗಣ. ಆ ದಿನ ಅದು ಕಿಕ್ಕಿರಿದು ತುಂಬಿತ್ತು. ಕೆಲವರು ಕುಳಿತುಕೊಳ್ಳಲು ಆಸನಕ್ಕಾಗಿ ಪರದಾಡುತ್ತಿದ್ದರು. ದಾವಣಗೇರಿಯ ಪ್ರಸಿದ್ಧ ಕೌಟುಂಬಿಕ ಸಲಹೆಗಾರ ಡಾ.ವಿನಯಕುಮಾರ ಆ ದಿನ ಆಗಮಿಸುವವರಿದ್ದರು. ಅವರು ಇಡೀ ರಾಜ್ಯದಾದ್ಯಂತ ಸುಪರಿಚಿತರು. ಇಲ್ಲಿಯವರೆಗೂ ಒಡೆದು ಹೋಗಲಿರುವ ಸುಮಾರು ಐದುನೂರು ಕುಟುಂಬಗಳನ್ನು ಅವರು ಮತ್ತೆ ಬೆಸೆದಿದ್ದಾರೆ. ಸಂಬಂಧ ಕಡಿದುಕೊಳ್ಳಬೇಕೆನ್ನುವವರು ಕೂಡಿ ಬದುಕುವಂತೆ ಮಾಡಿದವರು. ಅವರ ಮಾತು, ಅವರು ಕೊಡುವ ದೃಷ್ಠಾಂತ, ವಿಚಾರಗಳ ಪ್ರಭಾವಕ್ಕೆ ಒಳಗಾಗದವರಿಲ್ಲ. ಈಗೀಗ ಎಲ್ಲ ಕಡೆಗೂ ವಿಚ್ಚೇದನದ ಹಾವಳಿ ವಿಪರೀತ. ಸಣ್ಣ ಸಣ್ಣ ಕಾರಣಗಳಿಗಾಗಿ ಚಿಕ್ಕ ಮಕ್ಕಳು ಟೂ.. ಬಿಡುವಷ್ಟೇ ಹಗುರಾಗಿ ಪರಿಣಮಿಸಿರುವ ಈ ವಿಚ್ಚೇದನಕ್ಕೆ ಡಾ.ವಿನಯಕುಮಾರರ ಮಾತುಗಳು ರಾಮಬಾಣವಿದ್ದಂತೆ. ಹಾಗೆಂದು ಅವರನ್ನು ಕರೆಯಿಸಿದ ಸಂಘಟಕರು ಧಾರವಾಡ ಶಹರದ ತುಂಬೆಲ್ಲಾ ಬ್ಯಾನರ್ ಬಿಗಿದಿರುವುದಿತ್ತು. ಅತ್ಯಂತ ಸಂದಿಗ್ದವಾದ ಕೌಟುಂಬಿಕ ಸಮಸ್ಯೆಗಳನ್ನೆಲ್ಲಾ ಬೆಣ್ಣೆಯಲ್ಲಿಯ ಕೂದಲು ತೆಗೆದಂತೆ ಅವರು ಸರಿದೂಗಿಸಿದ್ದಾರೆ ಎನ್ನುವುದು ಅವರ ಸಹಾಯಕ ರಮೇಶನ ಮಾತು. ಕೇವಲ ದಾವಣಗೇರಿ ಮಾತ್ರವಲ್ಲ, ರಾಜ್ಯದ ಅನೇಕ ಕಡೆಗಳಿಂದ ಅವರ ಬಳಿ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕೇಳಿ ಬರುವವರಿದ್ದಾರೆ. ಎಂದೆಲ್ಲಾ ಹೇಳುವುದನ್ನು ಕೇಳಿಯೆ ಅನೇಕರು ಅವರ ಮಾತುಗಳನ್ನು ನಿಂತಾದರೂ ಕೇಳಬೇಕು ಎಂದು ಕಾದಿದ್ದರು. ಸಂಘಟಕರು ಹೀಗೆ ಸೇರಿದ ಜನಜಂಗುಳಿಯನ್ನು ಕಂಡು ಟಿಕೆಟ್ ಇಡಬಹುದಾಗಿತ್ತು ಎಂದು ಪರಿತಪಿಸುತ್ತಿದ್ದರು. ಈ ಬಾರಿ ಹೀಗೇ ಇರಲಿ ಇನ್ನೊಮ್ಮೆ ಕರೆದಾಗ ಟಿಕೆಟ್ ಇಟ್ಟರಾಯ್ತು ಅಂತ ಸಂಘಟಕರಲ್ಲೇ ಒಬ್ಬಾತ ಸಲಹೆ ಕೊಡುತ್ತಿದ್ದ.

ಸಾಯಂಕಾಲ ಆರು ಘಂಟೆಯ ಸಮಯ. ಸರಿಯಾಗಿ ನಿಗದಿಗೊಳಿಸಿದ ಸಮಯಕ್ಕೆ ವಿನಯಕುಮಾರ ಹಾಜರ್. ಬಿಳಿ ಶರ್ಟ್ ಕಪ್ಪು ಪ್ಯಾಂಟ್, ನೀಲಿ ಬಣ್ಣದ ಟೈ ಧರಿಸಿದ್ದ ವಿನಯಕುಮಾರ ಒಂದು ಲಕ್ಜುರಿ ಕಾರಿಂದ ಮೆಲ್ಲಗೆ ಕೆಳಗಿಳಿದ, ತುಂಬಾ ಸ್ಪುರದ್ರೂಪಿ. ಮೇಲ್ನೋಟಕ್ಕೆ ತಕ್ಷಣವೇ ಸೆಳೆಯಬಹುದಾದ ವ್ಯಕ್ತಿತ್ವ. ಕಾರಿನ ಒಳಗೆ ಅವರ ಧರ್ಮಪತ್ನಿ ಇದ್ದಂಗಿತ್ತು. ಅವರು ಕಾರಿನಿಂದ ಕೆಳಗಿಳಿಯಲಿಲ್ಲ. ಡ್ರೈವರಿಗೆ ವಿನಯಕುಮಾರ ಏನೋ ಹೇಳಿದಂತಿತ್ತು. ಆತ ತಲೆ ಅಲ್ಲಾಡಿಸಿದ. ಕಾರು ಹೊರಟೇ ಬಿಟ್ಟಿತು. ವಿನಯಕುಮಾರ ವಿಚಾರ ರಶ್ಮಿ ಸಭಾಂಗಣದ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದ. ಅಪಾರ ಸಂಖ್ಯೆಯ ವಾಹನಗಳು ನಿಂತಿರುವುದನ್ನು ನೋಡಿ ಒಳಗಿರಬಹುದಾದ ಜನಸಮೂಹವನ್ನು ಅಂದಾಜಿಸಿದ. ಆತನ ನಡಿಗೆಯಲ್ಲಿ ಒಂದು ಬಗೆಯ ಗತ್ತಿತ್ತು. ಸಭಾಂಗಣದ ಒಳಗೆ ಬರುತ್ತಿರುವಂತೆ ಜನ ಜೋರಾಗಿ ಚಪ್ಪಾಳೆ ತಟ್ಟತೊಡಗಿದರು ವಿನಯಕುಮಾರ ಒಬ್ಬ ಚಿತ್ರನಟನ ಹಾಗೆ ಕೈ ಬೀಸುತ್ತಾ ನೇರವಾಗಿ ವೇದಿಕೆಗೆ ಬಂದರು. ಹಾಗೆ ಬಂದದ್ದೇ ಅವರಿಗೆ ಮೀಸಲಾಗಿಟ್ಟ ಆಸನದಲ್ಲಿ ಕುಳಿತರು. ಸ್ವಾಗತ, ಪುಷ್ಪಾರ್ಪಣೆ, ಪರಿಚಯದ ನಂತರ ಅವರ ಮಾತು. ಅವರನ್ನು ಪರಿಚಯಿಸುವಾತನೇ ಸುಮಾರು ಅರ್ಧ ಘಂಟೆ ಸಮಯವನ್ನು ತೆಗೆದುಕೊಂಡ. ಡಾ ವಿನಯಕುಮಾರ ಮತ್ತೆ ಮತ್ತೆ ತಮ್ಮ ಕೈಗಡಿಯಾರವನ್ನು ನೋಡಿಕೊಳ್ಳುತ್ತಿದ್ದರು. ಅಂತೂ ಪರಿಚಯ ಮಾಡುವಾತ ತನ್ನ ಮಾತನ್ನು ಮುಗಿಸಿದ. ಪರಿಚಯ ಮಾಡುವಾತ ಎದುರಲ್ಲಿ ಕಿಕ್ಕಿರಿದು ನೆರೆದ ಜನರನ್ನು ಕಂಡು ಅತ್ಯಂತ ಭಾವನಾತ್ಮಕವಾಗಿ ಸಾವಿರಾರು ಒಡೆಯಲಿದ್ದ ಕುಟುಂಬಗಳನ್ನು ಸರಿಪಡಿಸಿದ್ದಾರೆ ಎಂದದ್ದನ್ನು ವೇದಿಕೆಗೆ ಬಂದದ್ದೇ ಡಾ ವಿನಯಕುಮಾರ ’ನನ್ನ ಮೇಲಿನ ಅಭಿಮಾನದಿಂದ ಸಾವಿರಾರು ಕುಟುಂಬಗಳನ್ನು ಬೆಸೆದವರು ಎಂದು ಹೇಳಿದರು. ಆದರೆ ಆ ಸಂಖ್ಯೆಯ ಕಡೆಗೆ ಇನ್ನೂ ನಾನು ನಡೆಯಬೇಕಿದೆ. ಇಲ್ಲಿಯವರೆಗೆ ಐದನೂರಾ ಎಪ್ಪತ್ತು ಕುಟುಂಬಗಳನ್ನು ಕೂಡಿಸಿರುವೆ. ಮೊನ್ನೆ ರಾಣೆಬೆನ್ನೂರಿನ ಒಂದು ಜೋಡಿ ವಿಚ್ಚೇದನಕ್ಕಾಗಿ ತುದಿಗಾಲಲ್ಲಿ ನಿಂತಿದ್ದರು. ಅವರೀಗ ತುಂಬಾ ಅನ್ಯೊನ್ಯವಾಗಿದ್ದಾರೆ. ಅದೇ ನನ್ನ ಇತ್ತೀಚಿನ ಪುನರ್ಬೆಸುಗೆ’ ಅಂದದ್ದೇ ಜನ ಜೊರಾಗಿ ಚಪ್ಪಾಳೆ ತಟ್ಟಿದರು. ಅಷ್ಟಕ್ಕೂ ಈ ಬಗೆಯ ಜನಸಮೂಹ ವಿನಯಕುಮಾರಗೆ ಇದೇ ಮೊದಲಂತೂ ಅಲ್ಲ. ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಮಾತನಾಡಿದ ಅವರಿಗೆ ಕೇವಲ ಐದಾರು ನೂರು ಇರಬಹುದಾದ ಆ ಸಭಾಂಗಣ ಅವರನ್ನು ಬೆರಗುಗೊಳಿಸಿರಲಿಲ್ಲ. ಅಲ್ಲೇ ಟೇಬಲ್ ಮೆಲಿದ್ದ ನೀರಿನ ಬಾಟಲ್ ಕೈಗೆತ್ತಿಕೊಂಡು ನೀರು ಕುಡಿದು, ಕೈಯಲ್ಲಿಯ ವಾಚನ್ನು ನೋಡಿಕೊಂಡು ಮಾತಿಗೆ ಶುರು ಮಾಡಿದರು. ’ಸ್ನೇಹಿತರೇ ನಮ್ಮ ಸುತ್ತ ಮುತ್ತಲೂ ಮನೆಮುರುಕರೇ ತುಂಬಿಕೊಂಡಿದ್ದಾರೆ. ಜೊತೆಗೆ ಐಹಿಕ ಅಬ್ಯುದಯವೇ ನಿಜವಾದ ಬದುಕು ಎನ್ನುವ ಭ್ರಮೆಗಳು ನಮ್ಮನ್ನು ಸುತ್ತಿಕೊಂಡಿವೆ. ನೋಡಿದ್ದೆಲ್ಲಾ ಬೇಕು ಎನ್ನುವ ವಾಂಛಲ್ಯಗಳು ನಮ್ಮ ಮನ:ಸ್ಥಿತಿಯನ್ನು ಭೃಷ್ಟವಾಗಿಸುತ್ತಿವೆ. ನಮ್ಮ ತಂದೆ-ತಾಯಿಗಳು ಬದುಕಿದ ಕೌಟುಂಬಿಕ ಜೀವನ ನಮಗೆ ಸಾಧ್ಯವಾಗುತ್ತಿಲ್ಲ. ಗಂಡ-ಹೆಂಡತಿ ಎನ್ನುವ ಸಂಬಂಧಗಳು ಕತ್ತಿಯಂಚಿನ ನಡಿಗೆಯಾಗುತ್ತಿವೆ. ದೀರ್ಘಕಾಲದ ದಾಂಪತ್ಯದ ಪರಂಪರೆ ಸೊರಗುತ್ತಿದೆ. ಕೆಲ ಧಾರವಾಹಿಗಳಂತೂ ವಿವಾಹಪೂರ್ವ ಮತ್ತು ನಂತರದ ಸಂಬಂಧಗಳನ್ನು ಸಹ್ಯ ಎನ್ನುವಂತೆ ತೋರಿಸುತ್ತಾ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕುಗಳನ್ನು ಮೂಡಿಸುತ್ತಿವೆ. ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ದಂಪತಿಗಳು ವಿರಸಕ್ಕಿಳಿಯುತ್ತಾರೆ. ಇದು ಮುಂಚಿನಂತೆ ಉಂಡು ಮಲಗುವತನಕ ಮಾತ್ರ ಉಳಿಯದೇ ಉಂಡು ಮಲಗಿದ ಮೇಲೂ ಮುಂದುವರೆಯುತ್ತಿದೆ. ಅಷ್ಟಕ್ಕೂ ಕೌಟುಂಬಿಕ ಭದ್ರತೆಗೆ ಅತಿ ಮುಖ್ಯವಾದ ಸೂತ್ರ ಪರಸ್ಪರ ತಿಳುವಳಿಕೆ ಮತ್ತು ಒಬ್ಬರನ್ನೊಬ್ಬರು ಗೌರವಿಸುವ ಗುಣ. ನನ್ನ ಬಳಿಗೆ ಬರುವ ಅನೇಕರು ತಮ್ಮ ಗಂಡ, ಹೆಂಡತಿ ತಮಗೆ ತುಂಬಾ ಬೋರ್ ಆಗಿದ್ದಾರೆ ಎನ್ನುವ ಮಾತನ್ನು ಹೇಳುತ್ತಾರೆ ನಾನಾಗ ಮನದಲ್ಲಿಯೆ ನಗುತ್ತೇನೆ. ಇದು ಖಂಡಿತ ತಪ್ಪು. ಈ ಸಂದರ್ಭದಲ್ಲಿ ನಾನು ಸಾಕ್ರೇಟಿಸ್‌ನ ಒಂದು ಉದಾಹರಣೆಯನ್ನು ನೀಡುವುದು ಉಚಿತ. ಒಬ್ಬ ವ್ಯಕ್ತಿ ಮಧ್ಯರಾತ್ರಿಯ ಹೊತ್ತಿಗೆ ಸಾಕ್ರೇಟಿಸ್ ಮನೆಯ ಬಾಗಿಲನ್ನು ಬಡಿದ. ಸಾಕ್ರೇಟೀಸ್ ಕಾರಣ ಕೇಳಿದ. ತಾನು ಒಂದು ಹುಡುಗಿಯನ್ನು ಮದುವೆಯಾದೆ. ಕಾಡಿಸಿ, ಬೆನ್ನಿಗೆ ಬಿದ್ದು ಇಷ್ಟ ಪಟ್ಟು ಮದುವೆಯಾದೆ. ಆದರೆ ಈಗ ಅವಳನ್ನು ಕಂಡರೆ ನನಗಾಗುತ್ತಿಲ್ಲ. ಅವಳ ಜೊತೆಗೆ ಕೂಡಿ ಬಾಳುವುದೇ ಸಾಧ್ಯವಿಲ್ಲ ಎನಿಸುತ್ತಿದೆ ಏನು ಮಾಡಲಿ.? ಎಂದಾಗ ಸಾಕ್ರೆಟಸ್ ತಣ್ಣಗೆ ನಗುತ್ತಾ ಇದು ಸಮಸ್ಯೆಯೆ  ಅಲ್ಲ. ನಿನ್ನ ದಾಂಪತ್ಯ ಜೀವನ ಸರಿಹೋಗಬೇಕೆಂದರೆ ಒಂದು ಸುಲಭ ಉಪಾಯವಿದೆ. ನೀನು ಮೊಟ್ಟ ಮೊದಲ ಬಾರಿಗೆ ಆ ಹುಡುಗಿಯನ್ನು ನೋಡಿದಾಗ ನಿನ್ನ ನೋಟ ಮತ್ತು ಭಾವನೆ ಹೇಗಿತ್ತು ಅದೇ ದೃಷ್ಟಿಯಿಂದ ಮನೆಗೆ ಹೋಗಿ ಅವಳನ್ನು ಕಾಣು ಎಲ್ಲ ಸರಿಹೋಗುತ್ತದೆ ಎಂದನಂತೆ’ ಆಗ ಜನ ತುಂಬಾ ಜೋರಾಗಿ ಚಪ್ಪಾಳೆ ತಟ್ಟಿದರು. ಸುಮಾರು ಒಂದು ಘಂಟೆ ನಿರಂತರವಾಗಿ ಹಾಗೇ ಮಾತನಾಡುತ್ತಾ ಹೋದ. ಅಷ್ಟರಲ್ಲಿ ಯಾರೋ ಒಬ್ಬಾತ ಎದ್ದು ನಿಂತು ’ಸರ್ ನೀವು ಹೇಳುವದೆಲ್ಲಾ ಸರಿ ಕೆಲ ಹೆಂಗಸರು ಲಕ್ಷ್ಮೀಶ ಕವಿಯ ಚಂಡಿಯಂತಿರುತ್ತಾರೆ ಅಂಥವರನ್ನು ಹೇಗೆ ಸರಿ ಮಾಡುವದು.?’ ಎಂದಾಗ ವಿನಯಕುಮಾರ ನಗುತ್ತಾ ’ಮಹನೀಯರೇ ಅದಕ್ಕೆ ಕವಿ ಲಕ್ಷ್ಮೀಶ ರೇ ಪರಿಹಾರ ಕೊಟ್ಟಿರುವುದಿದೆ ಎಂದಾಗ ಇಡೀ ಸಭೆ ಕೊಳ್ಳೆಂದು ನಗೆಗಡಲಲ್ಲಿ ತೇಲಿತು. ಪ್ರಶ್ನೆ ಕೇಳಿದಾತನಿಗೆ ಮಾತ್ರ ಸಮಾಧಾನವಾದಂತಿರಲಿಲ್ಲ. ‘ಕೊನೆಯದಾಗಿ ಒಂದು ಮುಖ್ಯವಾದ ಮಾತು’ ಎನ್ನುತ್ತಿರುವಾಗ ವಿನಯಕುಮಾರನ ಕಾರ್ ಡ್ರೈವರ್ ಆವೇಗದಿಂದ ಓಡಿ ಬಂದು, ಅವರ ಕಿವಿಯಲ್ಲಿ ಏನೋ ಹೇಳಿದ. ತಕ್ಷಣವೇ ಅವರ ಮುಖದಲ್ಲಿಯ ರಕ್ತ ಹೆಪ್ಪು ಗಟ್ಟಿದಂತಾಗಿ ‘ನಾನೀಗ ಹೊರಡಲೆಬೇಕು..ದಯಮಾಡಿ ಕ್ಷಮಿಸಿ’ ಎಂದವನೇ ಅವಸರದಿಂದ ವೇದಿಕೆಯಿಂದ ಕೆಳಗಿಳಿದು ತನ್ನ ಡ್ರೈವರನನ್ನೇ ಹಿಂಬಾಲಿಸಿದ. ಡಾ ವಿನಯಕುಮಾರ ಮುಖದಲ್ಲಿ ಏನೋ ನಡೆಯಬಾರದ್ದು ನಡೆದ ಭಾವವಿತ್ತು. ಅಲ್ಲಿ ನೆರೆದ ಜನರ ನೂರಾರು ಪ್ರಶ್ನೆಗಳು ಹಾಗೇ ಉಳಿದವು. ಅವರು ನಿರುತ್ತರರಾಗಿದ್ದರು.

(ಕಲೆ: ಲೇಖಕರದು)