Monthly Archives: August 2012

ವರ್ತಮಾನ.ಕಾಮ್‌ಗೆ ಇಂಟರ್ನ್ಸ್ ಬೇಕಾಗಿದ್ದಾರೆ…

ಸ್ನೇಹಿತರೇ,

ವರ್ತಮಾನದ ಕೆಲಸ ಹೆಚ್ಚುತ್ತಲೇ ಇದೆ. ನಮಗೆ ಬರುವ ಲೇಖನಗಳು, ಇಮೇಲ್‌ಗಳು, ಮತ್ತಿತರ ಒತ್ತಡಗಳನ್ನು ಇತರೆ ಆದ್ಯತೆಗಳ ಮಧ್ಯೆ ಒಮ್ಮೊಮ್ಮೆ ನಿಭಾಯಿಸುವುದು ಕಷ್ಟವೆ. ಅದರ ಜೊತೆಗೆ ವರ್ತಮಾನ.ಕಾಮ್ ಅನ್ನು ಬೇರೆಬೇರೆ ರೀತಿಯಲ್ಲಿ ಪರಿಚಯಿಸುತ್ತ, ವಿಸ್ತರಿಸುತ್ತ. ಮತ್ತಷ್ಟು ಪ್ರಸ್ತುತಗೊಳಿಸುತ್ತ ಹೋಗುವ ಸವಾಲು ಇದ್ದೇ ಇದೆ. ಈ ನಿಟ್ಟಿನಲ್ಲಿ ನಮ್ಮ ವೆಬ್‌‍ಸೈಟ್‌ಗೆ ಪತ್ರಿಕೋದ್ಯಮದ ಒಂದಿಬ್ಬರು ವಿದ್ಯಾರ್ಥಿಗಳನ್ನು ಇಂಟರ್ನ್ಸ್ ಆಗಿ ತೆಗೆದುಕೊಳ್ಳುವುದು ಉತ್ತಮ ಎನ್ನಿಸಿದೆ.

ಹಾಗಾಗಿ, ನೀವು ಪತ್ರಿಕೋದ್ಯಮದ ಅಂತಿಮ ವರ್ಷದ ವಿದ್ಯಾರ್ಥಿ ಆಗಿದ್ದಲ್ಲಿ (ಅಥವ ನಿಮಗೆ ಯಾರಾದರೂ ಗೊತ್ತಿದ್ದಲ್ಲಿ) ಮತ್ತು ವರ್ತಮಾನದಲ್ಲಿ ಇಂಟರ್ನ್ ಆಗಿ ಕೆಲಸ ಮಾಡಲು ಇಚ್ಚೆಪಟ್ಟಲ್ಲಿ, ದಯವಿಟ್ಟು ಸಂಪರ್ಕಿಸಿ. ನಿಮಗೆ ಖಂಡಿತವಾಗಿ ಕನ್ನಡ ಅಥವ ಇಂಗ್ಲಿಷ್‌ನಲ್ಲಿ ವರದಿ ಮಾಡುವುದು ಇಲ್ಲವೇ ಲೇಖನ ಬರೆಯುವುದು ಗೊತ್ತಿರಬೇಕು. ಕನ್ನಡದಲ್ಲಿ ಬರಹ/ನುಡಿ/ಯೂನಿಕೋಡ್‌ನಲ್ಲಿ ಟೈಪಿಂಗ್ ಗೊತ್ತಿರುವುದು ಕಡ್ಡಾಯ. ಇದರ ಜೊತೆಗೆ ನಿಮಗೆ ವಿಡಿಯೋ ಶೂಟಿಂಗ್ ಮತ್ತು ಎಡಿಟಿಂಗ್ ಅಷ್ಟಿಷ್ಟು ಗೊತ್ತಿದ್ದರೆ ಮತ್ತೂ ಉತ್ತಮ. ವಿಡಿಯೊ ಎಡಿಟಿಂಗ್ ಮತ್ತು ಗ್ರಾಫಿಕ್ಸ್ ಡಿಸೈನಿಂಗ್ ಗೊತ್ತಿರುವ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಅಥವ ಈಗ ತಾನೆ ಮುಗಿಸಿರುವವರಿಗೆ ಆದ್ಯತೆ.

ನೀವು ಕೆಲಸ ಮಾಡುವ ಸ್ಥಳ ಬೆಂಗಳೂರು ಆಗಿರುತ್ತದೆ. ಹೊರಗಿನ ಅಸೈನ್‌ಮೆಂಟ್‌ಗಳ ಖರ್ಚು-ವೆಚ್ಚಗಳನ್ನು ಭರಿಸಲಾಗುತ್ತದೆ. ಜೊತೆಗೆ ಸ್ಟೈಪೆಂಡ್ ಎಂದು ನಾಮಿನಲ್ ಆದ ಮೊತ್ತವನ್ನು ನೀಡಲಾಗುತ್ತದೆ. ಇಂಟರ್ನ್‌ಶಿಪ್‌ನ ಅವಧಿ ಕನಿಷ್ಟ ಮೂರು ತಿಂಗಳು.

ನಿಮ್ಮ ಸ್ವವಿವರ ಮತ್ತು ನೀವು ಬರೆದ ಲೇಖನಗಳ ಅಥವ ಅನುಭವದ ವಿವರಗಳೊಂದಿಗೆ ದಯವಿಟ್ಟು editor@vartamaana.com ಗೆ ಇಮೇಲ್ ಕಳುಹಿಸಿ. ಅಥವ ಈ ಕೆಳಗಿನ ಫಾರ್ಮ್ ಅನ್ನು ತುಂಬಿ. ಆದಷ್ಟು ಬೇಗ ಸಂಪರ್ಕಿಸಲಾಗುವುದು.
[contact-form subject=”interested in internship” to=”ravikreddy@yahoo.com”] [contact-field label=”Name” type=”name” required=”true” /] [contact-field label=”Email” type=”email” required=”true” /] [contact-field label=”Your Resume” type=”textarea” required=”true” /] [/contact-form]

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಕಪ್ಪು ಹಣ – ಅಧಿಕಾರಕ್ಕೇರುವ ಏಣಿ

– ಆನಂದ ಪ್ರಸಾದ್

ಬಾಬಾ ರಾಮದೇವ ಎಂಬ ಯೋಗ ಗುರು ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ವಾಪಾಸ್ ತರುವ ಬಗ್ಗೆ, ಲೋಕಪಾಲ್ ವಿಧೇಯಕ ತರುವ ಬಗ್ಗೆ, ಸಿಬಿಐ ಅನ್ನು ಕೇಂದ್ರ ಸರ್ಕಾರದ ನಿಯಂತ್ರಣಮುಕ್ತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಮುಗಿದಿದೆ. ಸರ್ಕಾರ ಅವರ ಯಾವ ಬೇಡಿಕೆಗಳ ಬಗ್ಗೆಯೂ ಸ್ಪಂದಿಸಿಲ್ಲ. ಆರಂಭದಲ್ಲಿ ತಮ್ಮದು ರಾಜಕೀಯರಹಿತ ಹೋರಾಟ ಎಂದು ಹೇಳಿಕೊಳ್ಳುತ್ತಿದ್ದ ಬಾಬಾ ಅವರು ಉಪವಾಸದ ಮೂರನೆಯ ದಿನ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳನ್ನು ತಮ್ಮ ಜೊತೆ ಸೇರಿಸಿಕೊಂಡು ತಮ್ಮದು ರಾಜಕೀಯ ಹೋರಾಟ ಎಂಬುದನ್ನು ಸಾಬೀತುಪಡಿಸಿದರು. ಒಂದೇ ಸಮನೆ ಕಾಂಗ್ರೆಸ್ ಪಕ್ಷದ ವಿರುದ್ಧ ಚಾಟಿ ಬೀಸುತ್ತಿರುವ ಬಾಬಾ ರಾಮದೇವರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ. ಈ ರೀತಿ ರಾಜಕೀಯ ಹೋರಾಟಗಳಿಗೆ ಸತ್ಯಾಗ್ರಹವನ್ನು ಬಳಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ನೇರವಾಗಿಯೇ ಎನ್.ಡಿ.ಎ. ಮೈತ್ರಿಕೂಟದ ಮುಖ್ಯ ಘಟಕವಾದ ಬಿಜೆಪಿ ಪಕ್ಷಕ್ಕೆ ಸೇರಿ ರಾಮದೇವ್ ತನ್ನ ಹೋರಾಟವನ್ನು ಕೈಗೊಳ್ಳುವುದು ಉತ್ತಮ.

ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಕಾಂಗ್ರೆಸ್ ಪಕ್ಷದಂತೆಯೇ ದುರುಪಯೋಗಪಡಿಸಿಕೊಂಡ ಬಿಜೆಪಿ ಆಗ ಸಿಬಿಐ ಅನ್ನು ಸರ್ಕಾರದ ನಿಯಂತ್ರಣಮುಕ್ತಗೊಳಿಸಲು ಪ್ರಯತ್ನಿಸಲಿಲ್ಲ. ರಾಜ್ಯಪಾಲರ ಹುದ್ಧೆಯನ್ನು ಕಾಂಗ್ರೆಸ್ ದುರುಪಯೋಗಪದಿಸಿಕೊಳ್ಳುತ್ತದೆ ಎಂದು ಹೇಳುವ ಬಿಜೆಪಿ ತಾನು ಅಧಿಕಾರದಲ್ಲಿದ್ದಾಗ ರಾಜ್ಯಪಾಲರ ಹುದ್ಧೆಯನ್ನು ದುರುಪಯೋಗಪಡಿಸಿಕೊಂಡಿದೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಬಿಜೆಪಿಯ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿರುವಾಗಲೂ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಜನ ನಂಬುವ ಸಾಧ್ಯತೆ ಇದೆ ಎನಿಸುವುದಿಲ್ಲ. ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಲೋಕಾಯುಕ್ತ ಹುದ್ಧೆ ಖಾಲಿಯಾಗಿದ್ದರೂ ಅದನ್ನು ತುಂಬದೆ ಖಾಲಿ ಬಿಟ್ಟಿರುವ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ನಿಯಂತ್ರಿಸುವ ಇಚ್ಛಾಶಕ್ತಿ ಇಲ್ಲ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಗಣಿ ಅಕ್ರಮಗಳ ಬಗ್ಗೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ ವರದಿಯ ಬಗ್ಗೆ ಯಾವ ಕ್ರಮವನ್ನೂ ಕರ್ನಾಟಕದ ಸರ್ಕಾರ ತೆಗೆದುಕೊಳ್ಳದೆ ಭ್ರಷ್ಟರಿಗೆ ರಕ್ಷಣೆ ಒದಗಿಸಿದೆ. ಅದೇ ರೀತಿ ಅಕ್ರಮ ಸರ್ಕಾರೀ ಭೂಮಿ ಒತ್ತುವರಿ ಕುರಿತು ರಾಮಸ್ವಾಮಿ ಕಮಿಟಿ ನೀಡಿದ ವರದಿಯ ಬಗ್ಗೆಯೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ಕಂಡೂ ಕಾಣದಂತೆ ವರ್ತಿಸಿ ಬಿಜೆಪಿ ಹೈಕಮಾಂಡ್ ಪ್ರೋತ್ಸಾಹಿಸಿತು. ಇಂಥ ಹಿನ್ನೆಲೆ ಇರುವ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಯಾರಾದರೂ ನಂಬಿದರೆ ಅದು ಅವರ ಮುಗ್ಧತೆಯನ್ನು ತೋರಿಸುತ್ತದೆ ಅಷ್ಟೇ.

ದೇಶದ ಮಠ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಇರುವ ಕಪ್ಪು ಹಣದ ಕುರಿತು ಬಾಬಾ ರಾಮದೇವ್ ಚಕಾರ ಎತ್ತುವುದಿಲ್ಲ. ಸ್ವತ: ರಾಮದೇವ್ ಮೇಲೆ ತೆರಿಗೆ ವಂಚನೆ ಇತ್ಯಾದಿ ಆರೋಪಗಳೂ ಇವೆ. ಹೀಗಾಗಿ ರಾಜಕೀಯ ಉದ್ಧೇಶದ ಬಾಬಾ ರಾಮದೇವರ ಹೋರಾಟದಿಂದ ದೇಶದಲ್ಲಿ ದೊಡ್ಡ ಸಂಚಲನೆ ಉಂಟಾಗಲಿಲ್ಲ. ಧಾರ್ಮಿಕ ಮುಖವಾಡ ಇರುವ ಕಾರಣ ಅವರ ಅನುಯಾಯಿಗಳು ಮತ್ತು ಸಂಘ ಪರಿವಾರದ ಸಂಘಟನೆಗಳ ಕೆಲವರು ಇಂಥ ಹೋರಾಟದಲ್ಲಿ ಭಾಗವಹಿಸಿದ್ದಾರೆಯೇ ವಿನಃ ದೇಶದ ಎಲ್ಲ ವರ್ಗಗಳ ಜನತೆ ಇದರಲ್ಲಿ ಪಾಲುಗೊಂಡಿಲ್ಲ. ಬಿಜೆಪಿಯಂಥ ಭ್ರಷ್ಟ ಹಾಗೂ ಕೋಮುವಾದಿ ಪಕ್ಷಕ್ಕೆ ಅಧಿಕಾರಕ್ಕೇರಲು ನೆರವಾಗುವ ನಿಟ್ಟಿನಲ್ಲಿ ಹೋರಾಟದ ವೇಷ ತೊಟ್ಟ ರಾಮದೇವರ ಹೋರಾಟ ಯಶಸ್ವಿಯಾಗುವ ಸಾಧ್ಯತೆ ಇಲ್ಲ. ಇಂಥ ಹೋರಾಟಗಳ ಹಿಂದಿನ ಉದ್ಧೇಶ ಬಿಜೆಪಿಯು ಅಧಿಕಾರದಲ್ಲಿರುವಾಗ ವರ್ತಿಸಿದ ರೀತಿ ಮತ್ತು ಅದು ಈಗ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನೋಡಿದರೆ ಎಂಥವರಿಗೂ ಅರ್ಥವಾಗುತ್ತದೆ. ಬಾಬಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮುಲಾಯಂ ಸಿಂಗ್, ಮಾಯಾವತಿ, ಚಂದ್ರಬಾಬು ನಾಯ್ಡು ಮೊದಲಾದವರ ಮೇಲೆ ಭ್ರಷ್ಟಾಚಾರದ ಆರೋಪಗಳು ಇವೆ. ಹೀಗಾಗಿ ಇವರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರೂ ಇದನ್ನು ಜನ ಗಂಭೀರವಾಗಿ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ. ಇದು ಅಧಿಕಾರಕ್ಕೆ ಏರಲು ನಡೆಸುವ ಸಾಮಾನ್ಯ ಕಸರತ್ತು ಹೊರತು ಮತ್ತೇನೂ ಅಲ್ಲ ಎಂಬುದನ್ನು ತಿಳಿಯಲು ಹೆಚ್ಚಿನ ಪಾಂಡಿತ್ಯ ಬೇಕಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವುಗಳ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಇವೆರಡರಲ್ಲಿ ಬಿಜೆಪಿ ಹೆಚ್ಚು ಕೋಮುವಾದಿ ಹಾಗೂ ಧಾರ್ಮಿಕ ಮೂಲಭೂತವಾದಿ ಎಂಬುದಷ್ಟೇ ವ್ಯತ್ಯಾಸ. ಭ್ರಷ್ಟಾಚಾರದಲ್ಲಿಯೂ ಬಿಜೆಪಿಯೇ ಮುಂದೆ ಎಂಬುದು ಕರ್ನಾಟದ ಪರಿಸ್ಥಿತಿಯನ್ನು ನೋಡಿದರೆ ಎಂಥ ಮೂರ್ಖನಿಗೂ ಗೊತ್ತಾಗುತ್ತದೆ. ಏಕೆಂದರೆ ಕಾಂಗ್ರೆಸ್ಸಿನ ಪ್ರಥಮ ಸರ್ಕಾರವು ಇಷ್ಟು ಭ್ರಷ್ಟವಾಗಿರಲಿಲ್ಲ. ಬಿಜೆಪಿಯು ಕರ್ನಾಟಕದ ತನ್ನ ಪ್ರಥಮ ಸರ್ಕಾರದಲ್ಲಿಯೇ ಕರ್ನಾಟಕದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಪರೇಷನ್ ಕಮಲ ಎಂಬ ಹೊಸ ಭ್ರಷ್ಟ ವಿಧಾನವನ್ನು ಪರಿಚಯಿಸಿ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿದೆ. ಇಂಥ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರೆ ಅದನ್ನು ತಲೆಯಲ್ಲಿ ಮೆದುಳು ಇರುವ ಯಾರಾದರೂ ನಂಬಲು ಸಾಧ್ಯವೇ? ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿಗಳೇ ಇಂಥ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವಾಗ ಇಂಥ ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆಯ ಹಿನ್ನೆಲೆಯಿಲ್ಲದ ಕಾಂಗ್ರೆಸ್ ಪಕ್ಷದವರು ಮಾಡುವ ಭ್ರಷ್ಟಾಚಾರ ದೊಡ್ಡದು ಎನಿಸುವುದಿಲ್ಲ. ಹೀಗಾಗಿಯೇ ಜನ ಕಾಂಗ್ರೆಸ್ಸಿನ ಭ್ರಷ್ಟತನವನ್ನು ನೋಡಿಯೂ ಕೇಂದ್ರದಲ್ಲಿ ಎರಡನೆಯ ಬಾರಿಗೆ ಅದರ ಮೈತ್ರಿಕೂಟಕ್ಕೆ ಬಹುಮತ ಕೊಟ್ಟಿರುವಂತೆ ಕಾಣುತ್ತದೆ.

ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಉದ್ಧೇಶ, ತಾಳ್ಮೆ, ಇಚ್ಛಾಶಕ್ತಿ ಇಂಥ ಹೋರಾಟಗಳಲ್ಲಿ ಕಾಣುವುದಿಲ್ಲ. ಅಂಥ ಉದ್ಧೇಶ ಇದ್ದಿದ್ದರೆ ಬಿಜೆಪಿಯಂಥ ಪಕ್ಷಗಳನ್ನು ಅಥವಾ ಭ್ರಷ್ಟಾಚಾರದ ಆರೋಪ ಇರುವ ಕುಟುಂಬ ಕೇಂದ್ರಿತ ಅಥವಾ ವ್ಯಕ್ತಿಕೇಂದ್ರಿತ ಪಕ್ಷಗಳನ್ನು ತಮ್ಮ ವೇದಿಕೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಇಂಥ ಆಂದೋಲನಗಳಿಂದ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಆಗುವ ಲಕ್ಷಣ ಕಾಣುವುದಿಲ್ಲ. ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ನಾಯಕತ್ವ ಯಾರಲ್ಲಿಯೂ ಇಲ್ಲ. ಹೀಗಾಗಿ ದೇಶವು ಇಂದು ಅನಾಥವಾಗಿರುವಂತೆ ಕಾಣುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿ, ನೆಹರೂ, ಪಟೇಲ್, ಸುಭಾಷಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದ ಪ್ರಗತಿಪರ ನಿಲುವಿನ ನಾಯಕರಿದ್ದರು. ಇಂದು ದೇಶವ್ಯಾಪಿ ಪ್ರಭಾವ ಬೀರಬಲ್ಲ ಪ್ರಗತಿಪರ ನಾಯಕರೇ ದೇಶದಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಪ್ರತಿಗಾಮಿ ಮೂಲಭೂತವಾದಿಗಳೇ ಮಹಾನ್ ನಾಯಕರಂತೆ ಫೋಸು ಕೊಡುತ್ತಿದ್ದಾರೆ.

ಸ್ವಾತಂತ್ಯದ ಗಣಪತಿ


– ಡಾ.ಎನ್.ಜಗದೀಶ್ ಕೊಪ್ಪ


ಸ್ವಾತಂತ್ರ್ಯ ಚಳವಳಿಗೆ ಈ ನೆಲದಲ್ಲಿ ಅನೇಕ ಇತಿಹಾಸಗಳಿವೆ. ಅದೇ ರೀತಿ ಅನೇಕ ಆಯಾಮಗಳು ಕೂಡ ಇವೆ. 84 ವರ್ಷಗಳ ಹಿಂದೆ ಬೆಂಗಳೂರಿನ ಸುಲ್ತಾನ್ ಪೇಟೆಯ ಶಾಲೆಯ ಮಕ್ಕಳಿಗೆ ಮಣ್ಣಿನಡಿಯಲ್ಲಿ ಸಿಕ್ಕ ಗಣಪತಿಯ ವಿಗ್ರಹವೊಂದು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಚಳವಳಿಗೆ ಪರೋಕ್ಷವಾಗಿ ಪ್ರೇರಣೆಯಾದ ಘಟನೆ ಇದೀಗ ಇತಿಹಾಸದ ಗರ್ಭದಲ್ಲಿ ಲೀನವಾಗಿದೆ. ಆದರೆ, ಇವತ್ತಿಗೂ ಇದೇ ಬೆಂಗಳೂರಿನ ಆರ್ಕಾಟ್ ಶ್ರೀನಿವಾಸ್‌ಚಾರ್ ರಸ್ತೆಯ ಸರ್ಕಾರಿ ಶಾಲೆಯ ಅಂಗಳದಲ್ಲಿರುವ ಈ ಮೂರ್ತಿ ಸ್ಕೂಲ್ ಗಣಪ ಎಂಬ ಹೆಸರಿನಿಂದ ಕರೆಸಿಕೊಂಡು ಪೂಜಿಸಿಕೊಳ್ಳುತ್ತಿದ್ದಾನೆ.

ಅದು 1928ರ ಆಗಸ್ಟ್ ತಿಂಗಳ ಸಮಯ. ಸುಲ್ತಾನ್ ಪೇಟೆಯಲ್ಲಿದ್ದ ಖಾಸಗಿ ಶಾಲೆಯೊಂದು ಆ ವರ್ಷ ಆರ್ಕಾಟ್  ಶ್ರೀನಿವಾಸ್‌ಚಾರ್ ರಸ್ತೆಗೆ ಸ್ಥಳಾಂತರಗೊಂಡು, ಸರ್ಕಾರಿ ಮಾಧ್ಯಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು.

ಶಾಲೆಯ ವಿದ್ಯಾರ್ಥಿಗಳು ಶಾಲೆಯ ಕೈತೋಟ ನಿರ್ಮಿಸುವ ಉದ್ದೇಶದಿಂದ ನೆಲ ಅಗೆಯುತ್ತಿದ್ದಾಗ ಮಣ್ಣಿನಲ್ಲಿ ಹುದುಗಿಹೋಗಿದ್ದ ಗಣಪನ ವಿಗ್ರಹವೊಂದು ವಿದ್ಯಾರ್ಥಿಗಳಿಗೆ ಸಿಕ್ಕಿತು. ಅಚಾನಕ್ಕಾಗಿ ಸಿಕ್ಕ ದೇವರ ಮೂರ್ತಿ ಬಿಸಾಡುವುದು ತರವಲ್ಲ ಎಂದು ತೀರ್ಮಾನಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಅಂಗಳದಲ್ಲಿ ಗಣಪತಿಯ ವಿಗ್ರಹವನ್ನಿಟ್ಟು ಪೂಜಿಸತೊಡಗಿದರು.

ಇದೇ ವೇಳೆಗೆ ಗಣೇಶನ ಹಬ್ಬವೂ ಬಂದಿದ್ದರಿಂದ ಸ್ಥಳೀಯ ಯುವಕರು ಕೈಜೋಡಿಸಿ ನೆಲದಲ್ಲಿ ಸಿಕ್ಕ ಗಣಪನ ನೆಪದಲ್ಲಿ 15 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಿದರು. ಪ್ರತಿ ದಿನ ಸಂಜೆ ಪೂಜೆ, ಪ್ರವಚನ ಹಾಗೂ ಭಾರತ ಸ್ವಾತಂತ್ರ ಹೋರಾಟ ಕುರಿತಂತೆ, ಹೋರಾಟಗಾರರಿಂದ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು.

ಈ ಶಾಲೆಯ ಮುಂಭಾಗ ಆ ಕಾಲದಲ್ಲಿ ಮುಸ್ಲಿಂ ಸಮುದಾಯದ ನಾಯಕರೂ ಹಾಗೂ ಪ್ರಜಾ ಪ್ರತಿನಿಧಿಗಳ ಸಭೆಯ ಸದಸ್ಯರಾದ ಮಹಮ್ಮದ್ ಅಬ್ಬಾಸ್ ಖಾನರ ಮನೆಯಿತ್ತು. ವಾಸ್ತವವಾಗಿ ಧರ್ಮಾತೀತರು ಮತ್ತು ಜಾತ್ಯಾತೀತರೂ ಆಗಿದ್ದ ಅಬ್ಬಾಸ್ ಖಾನರು ಪ್ರಜಾಪ್ರತಿನಿಧಿ ಸಭೆಯಲ್ಲಿ ಒಳ್ಳೆಯ ವಾಗ್ಮಿಗಳೆಂದು ಹೆಸರು ಪಡೆದಿದ್ದರು.

ಪ್ರತಿ ದಿನ ನಡೆಯುತ್ತಿದ್ದ ಪೂಜೆ, ಭಾಷಣ ಇವುಗಳಿಂದ ಕೆರಳಿದ ಕೆಲವು ಕಟ್ಟಾ ಮುಸ್ಲಿಂರು ಅಬ್ಬಾಸ್ ಖಾನರ ಕಿವಿ ಕಚ್ಚಿದರು. ಇದರ ಪರಿಣಾಮ ಖಾನರು ಅಂದಿನ ಮೈಸೂರು ರಾಜರ ಆಳ್ವಿಕೆಯಲ್ಲಿದ್ದ ಸರ್ಕಾರದ ಮೇಲೆ ಒತ್ತಡ ಹೇರಿ ಗಣಪನ ವಿಗ್ರಹವನ್ನು ಶಾಲೆಯಿಂದ ಎತ್ತಂಗಡಿ ಮಾಡಿ, ಸರ್ಕಾರದ ಕಚೇರಿಯ ಗೋದಾಮು ಸೇರುವಂತೆ ಮಾಡಿದರು.

ಈ ಘಟನೆ ಸಹಜವಾಗಿ ಹಿಂದೂ ಸಮುದಾಯವನ್ನು ಕೆರಳಿಸಿತು. ಏಕೆಂದರೆ, ಇವರಿಗೆ ನೆರೆಯ ಮಹಾರಾಷ್ಟ್ರದ ಪೂನಾದಲ್ಲಿ ಬಾಲಗಂಗಾಧರ ತಿಲಕ್‌ರವರು ಗಣಪತಿ ಉತ್ಸವದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಸಜ್ಜುಗೊಳಿಸುತ್ತಿದ್ದ ರೀತಿ ಪರೋಕ್ಷವಾಗಿ ಪ್ರೇರಣೆಯಾಗಿತ್ತು.

ಹಲವು ದಿನಗಳ ಕಾಲ ನಿರಂತರವಾಗಿ ನಡೆದ ಸ್ವಾತಂತ್ರ್ಯ ಪ್ರೇಮಿಗಳ ಹೋರಾಟ ಮತ್ತು ಪ್ರತಿಭಟನೆ 1929ರ ಜುಲೈ 30 ರಂದು ಬೆಂಗಳೂರಿನಲ್ಲಿ ಹಿಂಸೆಯ ರೂಪ ಪಡೆಯಿತು. ಇದಕ್ಕೆ ಪ್ರಮುಖ ಕಾರಣವೆಂದರೆ, ಮತ್ತೇ ಹತ್ತಿರ ಬರುತ್ತಿದ್ದ ಗಣೇಶನ ಹಬ್ಬ.

ಮತ್ತೇ ಅದೇ ಸ್ಥಳದಲ್ಲಿ ಮೂರ್ತಿ ಪ್ರತಿಷ್ಟಾಪಿಸಬೇಕೆಂಬ ಹಠ ಎಲ್ಲರಲ್ಲಿ ಎದ್ದು ಕಾಣುತ್ತಿತ್ತು. ಆ ದಿನ ಹಿಂದೂ ಯುವಕರು ಮತ್ತು ಮುಸ್ಲಿಂ ಬಾಂಧವರ ನಡುವೆ ಬೀದಿ ಕಾಳಗ ನಡೆಯಿತು. ಹಿಂದೂ ಯುವಕರು ಮುಸ್ಲಿಮರ ಮನೆಗೆ ನುಗ್ಗಿ ಹಲವರನ್ನು ಮನಬಂದವರಂತೆ ಥಳಿಸಿದರು. ಈ ಅನಿರೀಕ್ಷಿತ ಗಲಭೆಯಿಂದ ಬೆಚ್ಚಿ ಬಿದ್ದ ಅಬ್ಬಾಸ್ ಖಾನರು ಪೋಲಿಸ್ ಪಡೆಯನ್ನು ಕರೆಸಿದರು. ಆದರೆ, ಹಿಂದೂ ಯುವಕರು ಮತ್ತು ವಿದ್ಯಾರ್ಥಿಗಳು ಆ ಕಾಲಕ್ಕೆ ಸಿಮೆಂಟ್ ರಸ್ತೆಯಾಗಿದ್ದ ಆರ್ಕಾಟ್ ಶ್ರೀನಿವಾಸ ಚಾರ್ ರಸ್ತೆಯುದ್ದಕ್ಕೂ ವರ್ತಕರ ಪೇಟೆಯಿಂದ ರಾಗಿ ಮೂಟೆಗಳನ್ನು ಹೊತ್ತು ತಂದು ರಾಗಿಯನ್ನು ರಸ್ತೆಯಲ್ಲಿ ಚೆಲ್ಲುವುದರ ಮೂಲಕ ಪೋಲಿಸರು ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಗಳನ್ನು ಬೀಳುವಂತೆ ಮಾಡಿದರು.

ಇದರಿಂದ ಹೆದರಿದ ಪೊಲೀಸರು ಸೈಕಲ್ ಶಾಪ್ ಒಂದರಲ್ಲಿ ನಿಂತು ಗುಂಡು ಹಾರಿಸಿ ಉದ್ರಿಕ್ತ ಜನರನ್ನು ಚದುರಿಸಿದರು. ಪೊಲೀಸರ ಗುಂಡೇಟಿನಿಂದ ಚಂದ್ರ ರಾಜು ಎಂಬ ವಿದ್ಯಾರ್ಥಿ ತೀವ್ರ ಗಾಯಗೊಂಡನು. ಇದರಿಂದ ಮತ್ತಷ್ಟು ಉದ್ರೇಕಗೊಂಡ ಚಳವಳಿಕಾರರು ಪೋಲಿಸರ ಮೇಲೆ ತಿರುಗಿಬಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ನಗರದ ನ್ಯಾಯಾಧೀಶರಾಗಿದ್ದ ನಾರಾಯಣಸ್ವಾಮಿನಾಯ್ಡು ಅವರ ಪೇಟವನ್ನು ಕಿತ್ತುಹಾಕಿ ಅವರ ಕೈಯಲ್ಲಿದ್ದ ಬೆತ್ತವನ್ನು ಕಿತ್ತುಕೊಂಡು ಮನಸೋಯಿಚ್ಛೆ ಥಳಿಸಲಾಯಿತು. ಇದನ್ನು ಕಣ್ಣಾರೆ ಕಂಡ ಜಿಲ್ಲಾ ನ್ಯಾಯಾಧೀಶ ತಾಜ್ ಪಿರಾನ್ ಮತ್ತು ಪೋಲೀಸ್ ಇನ್ಸ್‌ಪೆಕ್ಟರ್ ಜನರಲ್ ಹಿರಿಯಣ್ಣಯ್ಯ ಸ್ಥಳದಿಂದ ಓಡಿಹೋದರು.

ಗಲಭೆಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಜಮಖಂಡಿ ಶ್ರೀ ಭೀಮರಾವ್, ಶ್ರೀ ರಾಮಲಾಲ್ ತಿವಾರಿ, ಶ್ರೀ ಹೆಚ್.ವಿ.ಸುಬ್ರಮಣ್ಯಮ್ ಇವರನ್ನು ಸರ್ಕಾರ ಬಂಧಿಸಿತು. ಈ ನಾಯಕರನ್ನು ಬಿಡುಗಡೆಗೊಳಿಸಲು ಆಗಿನ ಬೆಂಗಳೂರು ನಗರದ ಪ್ರಸಿದ್ಧ ವಕೀಲರಾಗಿದ್ದ ಬೇಲೂರು ಶ್ರೀನಿವಾಸ ಅಯ್ಯಂಗಾರ್ ಮತ್ತು ಪಾಮಡಿ ಸುಬ್ಬರಾಮಶೆಟ್ಟರು ಸರ್ಕಾರದ ಜೊತೆ ನಡೆಸಿದ ಸಂಧಾನ ವಿಫಲವಾಯಿತು. ಗಣಪತಿಯ ನೆಪದಲ್ಲಿ ಆರಂಭವಾದ ಈ ಗಲಭೆ ಜನಸಾಮಾನ್ಯರ ಸ್ವಾತಂತ್ರ್ಯ ಹೋರಾಟವಾಗಿ ಪರಿವರ್ತನೆಗೊಂಡಿತು.

ಚಳವಳಿ ತೀವ್ರಗೊಳ್ಳುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಹೆಚ್.ಕೆ.ವೀರಣ್ಣಗೌಡ, ಶ್ರೀ ಪಿ.ಆರ್.ರಾಮಯ್ಯ, ಶ್ರೀ ತಿ.ತಾ.ಶರ್ಮ, ಶ್ರೀ ತಗಡೂರು ರಾಮಚಂದ್ರರಾವ್, ಶ್ರೀ ವೀರಕೇಸರಿ ಸೀತಾರಾಮಶಾಸ್ತ್ರಿ ಮತ್ತು ಆನೇಕಲ್ಲಿನ ಶ್ರೀ ಸರ್ವಾಭಟ್ಟರು ಸೇರಿದಂತೆ 92 ಮಂದಿ ನಾಯಕರ ಮೇಲೆ ಸರ್ಕಾರ ಮೊಕದ್ದಮೆ ದಾಖಲಿಸಿತು. ಇದನ್ನು ಪ್ರತಿಭಟಿಸಿದ ಸರ್ಕಾರದ ವಕೀಲರು ಹಾಗೂ ಬ್ರಿಟಿಷರ ಅಧೀನದಲ್ಲಿದ್ದ ಕೋಲಾರ ಚಿನ್ನದ ಗಣಿಯ ವಕೀಲರಾಗಿದ್ದ ಸಂಪಿಗೆ ವೆಂಕಟಪತಯ್ಯ ಇವರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿತು.

ಸರ್ಕಾರದ ಕಠಿಣ ನಿರ್ಧಾರಗಳಿಗೆ ಜಗ್ಗದೆ ಸ್ವಾತಂತ್ರ್ಯ ಚಳವಳಿ ತೀವ್ರವಾಗುತ್ತಿದ್ದಂತೆ ಕೊನೆಗೆ ಜನರ ಒತ್ತಡಕ್ಕೆ ಮಣಿದ ಸರ್ಕಾರ ಅಂತಿಮವಾಗಿ ಸರ್ ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಸರ್ಕಾರಕ್ಕೆ ದೂರಾಲೋಚನೆಯ ಹಾಗೂ ಪ್ರಗತಿಪರವಾದ ವರದಿ ನೀಡಿದ ವಿಶ್ವೇಶ್ವರಯ್ಯನವರು, ಆಡಳಿತದಲ್ಲಿ ಜನಸಾಮಾನ್ಯರಿಗೆ ಅಧಿಕಾರ ನೀಡಿ ಅವರ ರಾಜಕೀಯ ದಾಹವನ್ನು ತೃಪ್ತಿಪಡಿಸಬೇಕು, ಇಲ್ಲದಿದ್ದರೆ ಜನರ ಚಳವಳಿಯನ್ನು ಹತ್ತಿಕ್ಕುವುದು ಅಸಾಧ್ಯ, ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದರು. ಆದರೆ ಸರ್ಕಾರ ವಿಶ್ವೇಶ್ವರಯ್ಯನವರ ವರದಿಯನ್ನು ಪರಿಗಣಿಸದೆ ಗೌಪ್ಯವಾಗಿಟ್ಟುಕೊಂಡಿತು.

ಈ ಘಟನೆ ಗಣಪತಿ ಗಲಾಟೆ ಎಂಬ ಹೆಸರಿನಲ್ಲಿ ಸಾತಂತ್ರ್ಯ ಹೋರಾಟಗಾರರಿಗೆ ಚಳವಳಿಯ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿತು. ಅನೇಕ ಲಾವಣಿಕಾರರು ಗಣಪತಿ ಗಲಾಟೆಯ ಘಟನಾವಳಿಯನ್ನು ಕುರಿತು ಲಾವಣಿ ಕಟ್ಟಿ ಜನ ಸಮೂಹಗಳ ನಡುವೆ ಅನೇಕ ವರ್ಷಗಳ ಕಾಲ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಿ.ನೀಲಕಂಠಯ್ಯ ಎಂಬುವವರು ರಚಿಸಿದ ಬೆಂಗಳೂರು ಗಣಪತಿ ಸತ್ಯಾಗ್ರಹದ ಲಾವಣಿ ಎಂಬ ಹೆಸರಿನ ಸ್ವಾತಂತ್ರ್ಯ ಹೋರಾಟದ ಈ ಹಾಡು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

(ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಉದಯ ಟಿ.ವಿ.ಪ್ರಸಾರ ಮಾಡುತ್ತಿರುವ ವಿಶೇಷ ಸಾಕ್ಷ್ಯ ಚಿತ್ರಕ್ಕೆ ಸಿದ್ಧ ಪಡಿಸಿದ ವರದಿ.)

ಗಾಂಧೀಜಿ, ನಮ್ಮನ್ನು ಕ್ಷಮಿಸಿ ಬಿಡಿ


-ಚಿದಂಬರ ಬೈಕಂಪಾಡಿ


 

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ದೇಶದ ಜನರು ತೇಲಾಡುತ್ತಿದ್ದಾರೆ. ಬ್ರಿಟೀಷರ ದಾಸ್ಯದಿಂದ ಮುಕ್ತಗೊಂಡು ಅಹಿಂಸಾ ಚಳುವಳಿಯ ಮೂಲಕ ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು ಎಂದು ಗುಣಗಾನ ಮಾಡುತ್ತೇವೆ. ಎಲ್ಲಿ ನೋಡಿದರೂ ಸಭೆ, ಸಮಾರಂಭ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಕೆ, ಸನ್ಮಾನ ಹೀಗೆ ಚಟುವಟಿಕೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಗಾಂಧೀಜಿ ನೆನಪಾಗುವಷ್ಟು ಬೇರೆ ಯಾರೂ ನೆನಪಾಗುವುದಿಲ್ಲ. ಯಾಕೆಂದರೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದವರು ಎನ್ನುವುದಕ್ಕಿಂತಲೂ ಅಹಿಂಸಾತ್ಮಕ ಹೋರಾಟದ ಮೂಲಕವೂ ಗೆಲ್ಲಬಹುದು ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟಿರುವ ಕಾರಣಕ್ಕೆ.

ಬಂದೂಕಿನಿಂದ ಚಿಮ್ಮುವ ಗುಂಡುಗಳು, ಹರಿತವಾದ ಚೂರಿ, ಚಾಕು, ಲಾಂಗು, ಮಚ್ಚು, ದೊಣ್ಣೆಗಳು ಬಹುಬೇಗ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುತ್ತವೆ ಎನ್ನುವ ನಂಬಿಕೆಯಿದ್ದವರು ಆಗಲೂ ಇದ್ದರು. ಆದರೆ ಗಾಂಧೀಜಿ ಮಾತ್ರ ಇವುಗಳಿಗೆ ಒಪ್ಪಿರಲಿಲ್ಲ. ಉಪವಾಸ, ಅಸಹಕಾರ, ಧರಣಿ ಮುಂತಾದ ಸರಳ ಸೂತ್ರಗಳನ್ನು ಮುಂದಿಟ್ಟುಕೊಂಡು ಬ್ರಿಟೀಷರನ್ನು ಮಣಿಸಿದರು. ಅಂಥ ಅಹಿಂಸಾವಾದಿಯ ನೆಲದಲ್ಲಿ ಈಗ ನೆತ್ತರಿನ ಕೋಡಿ ಹರಿಯುತ್ತಿದೆ. ಲಾಟಿ, ಬೂಟುಗಳು ಮಾತನಾಡುತ್ತವೆ. ಲಾಂಗು, ಮಚ್ಚು, ಪಿಸ್ತೂಲುಗಳು ಹೋರಾಟದ ಮುಂಚೂಣಿಯಲ್ಲಿವೆ. ಬಿಳಿ ಉಡುಪು ಧರಿಸುತ್ತಿದ್ದ ಅಂದಿನ ಸ್ವಾತಂತ್ರ್ಯ ಹೋರಾಟಗಾರರ ನೈತಿಕತೆಯೂ ಅವರು ಧರಿಸುತ್ತಿದ್ದ ಉಡುಪಿನಷ್ಟೇ ಬಿಳುಪಾಗಿತ್ತು. ಈಗ ಏನಾಗಿದೆ?

ಅಂದು ಗಾಂಧಿ ‘ಬ್ರಿಟೀಷರೇ, ದೇಶಬಿಟ್ಟು ತೊಲಗಿ ’ ಎಂದು ಕರೆ ನೀಡಿದ್ದರು. ದೇಶದ ಜನರಲ್ಲೂ ಈ ಸಂದೇಶವನ್ನು ಬೆಳೆಸಿದ್ದರು. ಆಗ ಗಾಂಧಿ ಯಾವುದನ್ನು ವಿರೋಧಿಸಿದ್ದರೋ ಅದನ್ನೇ ಈಗ ನಾವು ಬೆಂಬಲಿಸುತ್ತಿದ್ದೇವೆ. ವಿದೇಶಿಗರನ್ನು ದೇಶದಿಂದ ಹೊರದಬ್ಬಿದ ನಮ್ಮ ಹಿರಿಯರನ್ನು ನೆನಪಿಸಿಕೊಂಡು ನಾವು ವಿದೇಶಿಗರೇ ಬನ್ನಿ ಭಾರತಕ್ಕೆ, ನೆಲ, ನೀರು ಕೊಡುತ್ತೇವೆ ಹೂಡಿಕೆ ಮಾಡಿ ಬಂಡವಾಳ ಎಂದು ರತ್ನಗಂಬಳಿ ಹಾಸಿ ವಿದೇಶಗಳನ್ನು ಆಹ್ವಾನಿಸುತ್ತಿದ್ದೇವೆ. ಇದಕ್ಕೆ ನಾವು ಕೊಟ್ಟುಕೊಳ್ಳುವ ಸಮರ್ಥನೆಯೂ ನಾಜೂಕಾಗಿದೆ.

ನಾವು ಅನುಭವಿಸುತ್ತಿರುವುದು ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ. ಆರ್ಥಿಕ ಸಮಾನತೆ ಸಿಕ್ಕಿಲ್ಲ. ಆರ್ಥಿಕ ಶಕ್ತಿ ಬಲಪಡಿಸಿಕೊಳ್ಳಲು ಜಾಗತೀಕರಣ, ಉದಾರೀಕರಣಗಳ ಬಾಗಿಲುಗಳನ್ನು ತೆರೆದಿಟ್ಟಿದ್ದೇವೆ. ಅದು ಅನಿವಾರ್ಯ ಎನ್ನುವ ವಾದ ಮಂಡಿಸಿ ಸಮಾಧಾನಪಟ್ಟುಕೊಳ್ಳುತ್ತೇವೆ. ವಿದೇಶಿ ಬಂಡವಾಳದ ಹೊಳೆ ಹರಿಸಲು ರಾಜ್ಯಗಳು ಫಲವತ್ತಾದ ಭೂಮಿಯನ್ನು ಮುಂದಿಟ್ಟುಕೊಂಡು ವಿದೇಶಗಳಿಗಾಗಿ ಕಾಯುತ್ತಿರುವುದು ವಿಪರ್ಯಾಸವೇ ಸರಿ. ಸ್ವದೇಶಿ ವಸ್ತುಗಳನ್ನೇ ಬಳಸಿ ಎನ್ನುವ ಸಂದೇಶ ಕೊಟ್ಟಿದ್ದ ಗಾಂಧೀಜಿ ವಿದೇಶಿ ವಸ್ತುಗಳಿಗೆ ಬೆಂಕಿ ಹಚ್ಚಿಸಿದ್ದರು. ಆದರೆ ನಾವು ಈಗೇನು ಮಾಡುತ್ತಿದ್ದೇವೆ?

ಜಪಾನ್, ಚೀನಾ, ಥೈವಾನ್, ಸಿಂಗಾಪುರ, ಅಮೇರಿಕಾದಲ್ಲಿ ತಯಾರಾದ ಉತ್ಪನ್ನಗಳನ್ನೇ ಬಯಸುತ್ತಿದ್ದೇವೆ. ಮಾನಮುಚ್ಚುವ ಒಳಉಡುಪಿನಿಂದ ಹಿಡಿದು ತಿನ್ನುವ ಆಹಾರದವರೆಗೆ ವಿದೇಶಿ ಉತ್ಪನ್ನಗಳೇ ಆಗಬೇಕು ಎನ್ನುವಷ್ಟರಮಟಿಗೆ ಅವುಗಳ ದಾಸರಾಗಿಬಿಟ್ಟಿದ್ದೇವೆ. ನಮ್ಮ ಸುತ್ತಮುತ್ತಲೂ ಸಿಗುವ ಕಚ್ಛಾವಸ್ತುಗಳನ್ನೇ ಬಳಕೆ ಮಾಡಿಕೊಂಡು ವಿದೇಶಿ ಕಂಪೆನಿಗಳು ತಯಾರಿಸುವ ಸರಕೆಂದರೆ ನಮಗೆ ಆಪ್ಯಾಯಮಾನ. ನಮ್ಮತನವನ್ನು ನಾವು ಕಳೆದುಕೊಂಡಿದ್ದೇವೆ ಎನ್ನುವ ಕಲ್ಪನೆಯೂ ಬರದಂಥ ಸ್ಥಿತಿಯಲ್ಲಿದ್ದೇವೆ. ವಿದೇಶಿ ಕಲೆ, ಸಂಸ್ಕೃತಿಯೆಂದರೆ ಸೂಜಿಗಲ್ಲಿನಂತೆ ಆಕರ್ಷಿತರಾಗುತ್ತಿದ್ದೇವೆ. ದೇಸಿ ಕಲೆಗಳು, ಸಂಸ್ಕೃತಿಯೆಂದರೆ ಅಲರ್ಜಿ. ನಮ್ಮದಲ್ಲದ ಚಿಂತನೆಗಳು ನಮ್ಮ ತಲೆ ತುಂಬಿಕೊಳ್ಳುತ್ತಿವೆ.

ಇಷ್ಟಾದರೂ ನಾವು ಎಚ್ಚೆತ್ತುಕೊಂಡಿಲ್ಲ ಅಥವಾ ಎಚ್ಚೆತ್ತುಕೊಳ್ಳಬೇಕೆಂಬ ಅನಿವಾರ್ಯತೆ ಕಾಡುತ್ತಿಲ್ಲ. ಇಲ್ಲಿ ಗಳಿಸಿದ್ದನ್ನೆಲ್ಲಾ ವಿದೇಶಗಳಲ್ಲಿ ಹೂಡಿಕೆ ಮಾಡಿಯೋ, ಠೇವಣಿ ಇರಿಸಿಯೋ ಹಾಯಾಗಿದ್ದೇವೆ. ಅದನ್ನೇ ಕಪ್ಪು ಹಣವೆಂದು ಹೆಸರಿಸಿ ಒಂದು ಹೋರಾಟಕ್ಕೂ ಕಾರಣವಾಗಿದ್ದೇವೆ. ಗಾಂಧಿ, ನೆಹರೂ ಮೈದಾನಗಳು ಹೋರಾಟಕ್ಕೆ ಸೀಮಿತವಾಗಿವೆ ಹೊರತು ಅವರ ಹೋರಾಟವನ್ನು ಸ್ಮರಿಸುವುದಕ್ಕಾಗಿ ಅಲ್ಲ ಎನ್ನುವುದು ದುರಂತ. ಭ್ರಷ್ಟಾಚಾರ ಸ್ವಾತಂತ್ರ್ಯ ಬಂದ ಮೇಲೆ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ನೆಲ, ಜಲ ಮಾರಾಟದಲ್ಲೂ ನಮ್ಮನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ.

ಭಯೋತ್ಪಾದನೆ ನಾವು ಬದುಕುವ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದೆ. ಹೆಣ್ಣುಮಕ್ಕಳು ದಾರಿಯಲ್ಲಿ ಹಗಲು ಹೊತ್ತು ನಿರ್ಭಯವಾಗಿ ನಡೆದಾಡುವಂಥ ಅದೆಷ್ಟು ಸುರಕ್ಷಿತ ನಗರಗಳಿವೆ?

ಗಾಂಧೀಜಿ ಮಲಹೊರುವುದು ಅನಿಷ್ಟವೆಂದರು. ಪಂಕ್ತಿಭೇದ ಅಸಮಾನತೆಯ ಪ್ರತಿರೂಪವೆಂದರು. ಈಗಲೂ ಮಲಹೊರುವುದಿಲ್ಲವೇ? ಮಲದ ಗುಂಡಿಗಿಳಿದು ಕೊಳಚೆ ಬಾಚುವ ಕೈಗಳಿಂದಲೇ ಅವರು ಆಹಾರ ತಿನ್ನುತ್ತಿಲ್ಲವೇ? ದೇವಸ್ಥಾಗಳು ಸಹಭೋಜನ, ಸಮಾನತೆಯನ್ನು ಪ್ರೋತ್ಸಾಹಿಸುತ್ತಿವೆಯೇ? ಧಾರ್ಮಿಕ ಮುಖಂಡರು, ಸನ್ಯಾಸಿಗಳು ವರ್ಣವ್ಯವಸ್ಥೆಯನ್ನು ಪಾಲನೆ ಮಾಡುತ್ತಿಲ್ಲವೇ?

ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಚಳುವಳಿಗಾಗಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಸ್ವಾತಂತ್ರ್ಯ ಬಂದ ನಂತರವೂ ವಿಸರ್ಜನೆಯಾಗದೆ ಉಳಿದುಕೊಂಡಿತಲ್ಲಾ, ಅದರ ಮೂಲ ಸ್ವರೂಪ ಉಳಿದಿದೆಯೇ?. ಅಣ್ಣಾ ಹಜಾರೆ ಸ್ವಾತಂತ್ರ್ಯ ಸಿಕ್ಕಿದ ನಂತರ ಮಾಡಿದ ಭಾಷಣದ ಹಿಂದಿ ಪ್ರತಿಯನ್ನು ತಮ್ಮ ಬೆಂಬಲಿಗರಿಗೆ ಹಂಚಿ ಅಣ್ಣಾ ತಂಡವೂ ವಿಸರ್ಜನೆಯಾಗಬೇಕೆಂದು ಹೇಳಬೇಕಾಯಿತು. ಆದರೆ ತಂಡ ವಿಸರ್ಜನೆಯಾಯಿತು, ರಾಜಕೀಯ ಪಕ್ಷವಾಗಿ ರೂಪತಳೆಯಿತು,್. ಗಾಂಧಿವಾದಿ ಹೇಳಲಾಗದೆ ತಳಮಳಗೊಳ್ಳುತ್ತಿರುವುದು ವಾಸ್ತವ ಅಲ್ಲವೇ?

ಗಾಂಧೀಜಿ ಅವರ ಕಲ್ಪನೆಯ ಸ್ವಾತಂತ್ರ್ಯ ನಾವು ಈಗ ಅನುಭವಿಸುತಿರುವುದಲ್ಲ. ಇದು ನಮ್ಮದೇ ಸ್ವಾತಂತ್ರ್ಯ. ಗಾಂಧೀಜಿ ಈಗ ನಮ್ಮ ನಡುವೆ ಬದುಕಿದ್ದರೆ ನಿಜಕ್ಕೂ ವ್ಯಥೆ ಪಡುತ್ತಿದ್ದರು ನಮ್ಮ ಸ್ವಾತಂತ್ರ್ಯದ ಸುಖಕಂಡು. ಗಾಂಧಿ ಮಹಾತ್ಮಾ ನಮ್ಮನ್ನು ಕ್ಷಮಿಸಿ ಬಿಡು ಎನ್ನುವ ಕೋರಿಕೆ. ಯಾಕೆಂದರೆ ಅವರು ಹೇಳಿದ್ದು ಅದನ್ನೇ, ಆದ್ದರಿಂದಲೇ ನಮ್ಮನ್ನು ಕ್ಷಮಿಸುತ್ತಾರೆ ಎನ್ನುವ ವಿಶ್ವಾಸವಿದೆ.

ಅನಾಮತ್ತಾಗಿ ದಕ್ಕಿದ ಸ್ವಾತಂತ್ರ್ಯದ ಸುಖ


-ಡಾ.ಎಸ್.ಬಿ. ಜೋಗುರ


ನಾನಾಗ ಏಳನೇ ತರಗತಿಯಲ್ಲಿರಬೇಕು. ಮನೆಯಲ್ಲಿ ತೀರಾ ಕಷ್ಟದ ದಿನಗಳು. ಒಂದಿತ್ತು ಒಂದಿಲ್ಲ ಎಂದರೂ ಎಲ್ಲವೂ ಇದೆ ಎನ್ನುವ ಹುರುಪಿನಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳವು. ಒಂದೇ ಒಂದು ಯುನಿಫಾರ್ಮನ್ನು ರಾತ್ರಿ ತೊಳೆದು, ಒಣಗಲು ಹಾಕಿ ಅದನ್ನು ಡಬಲ್ ರೂಲ್ ಪಾತ್ರಧಾರಿಯಂತೆ ಬಳಸುತ್ತಿದ್ದೆ. ಸ್ವಾತಂತ್ರ್ಯದ ದಿನಾಚರಣೆಗೆಂದೇ ಮೆತ್ತನೆಯ ಹಳದೀ ಬಣ್ಣದ ಐದು ನೂರಾ ಒಂದು [ಬಿಜಾಪೂರ ಬದಿ ಅದನ್ನು ‘ಪಾಶೆ ಏಕ್’ ಅಂತಿದ್ದರು] ಸಾಬೂನಿನ ಒಂದು ಕಚ್‍‍ನ್ನು ನನ್ನ ಯುನಿಫಾರ್ಮ್ ಕ್ಲೀನ್ ಮಾಡಲಿಕ್ಕೆಂದೇ ಅವ್ವ ನನಗೆ ಕೊಡುವುದಿತ್ತು. ಸವಳು ಬಾವಿಯ ನೀರಿನಲ್ಲಿ ಅದನ್ನು ಗಚ ಗಚ ತಿಕ್ಕಿ ತೊಳೆದು ಒಣಹಾಕಿ, ಮಲಗುವಾಗ ಅದನ್ನು ಮಡಚಿ ತಲೆದಿಂಬಿನಡಿ ಇಟ್ಟು ನಿದ್ದೆ ಹೋಗುತ್ತಿದ್ದೆ.

ಅದು ಸ್ವಾತಂತ್ರ್ಯತ್ಯೋತ್ಸವ ದಿನದ ಮುನ್ನಾ ರಾತ್ರಿ. ಯಾವಾಗಂದ್ರೆ ಆವಾಗ ಎಚ್ಚರಾಗಿ ಗಣಪತಿ ಮಾಡಿನಲ್ಲಿಟ್ಟ ಜಂಡಾ ಹಾಗೂ ಕ್ಲೀನಾಗಿ ತೊಳೆದು ಮಡಚಿ ತಲೆಬುಡದಲ್ಲಿಟ್ಟ ಯುನಿಫಾರ್ಮಳೆರಡೂ ಮತ್ತೆ ಮತ್ತೆ ಒಂದು ಬಗೆಯ ಕಾತರ ಸೃಷ್ಟಿಸುತ್ತಿದ್ದವು. ಅವ್ವ ‘ಅದೇನು ಹೊರಳಾಡ್ತಿ ಸುಮ್ಮ ಬೀಳು’ ಅಂದಾಗಲೂ ಬಲವಂತದಿಂದ ಕಣ್ಣುಮುಚ್ಚುತ್ತಿದ್ದೆನೇ ಹೊರತು ನಿದ್ದೆ ಬರುತ್ತಿರಲಿಲ್ಲ. ಶುಭ್ರವಾದ ಬಿಳಿ ಅಂಗಿ, ಖಾಕಿ ಚಡ್ಡಿ ತೊಟ್ಟು ಬೆಳ್ಳಂಬೆಳಿಗ್ಗೆ ಎದ್ದು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಶಾಲೆಯ ಕಡೆ ಓಡಿದ್ದೇ ಓಡಿದ್ದು. ಆಗ ಇಡೀ ಊರು ಸಂಭ್ರಮ ಪಡುತ್ತಿತ್ತು. ನಮ್ಮ ಮನೆಯ ಮುಂದೊಂದು ಪೋಸ್ಟ್ ಆಫೀಸು, ಅಲ್ಲಿಯೂ ಧ್ವಜಾರೋಹಣ. ಅವರು ಹಿಂದಿನ ದಿನವೇ ಸುಣ್ಣ ಬಣ್ಣ ಬಳಿದು ಧ್ವಜದ ಕಟ್ಟೆ ಸಿದ್ಧ ಪಡಿಸಿರುತ್ತಿದ್ದರು.

ಬಗೆ ಬಗೆ ಬಣ್ಣದ ಪರಪರಿ ಹಾಗೂ ಬಾಗಿಲಲ್ಲಿ ಮಾವಿನ ತಳಿರಿನ ತೋರಣ ಅಲ್ಲಿದ್ದವರ ಸಡಗರಗಳೆಲ್ಲಾ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಿರುತ್ತಿತ್ತು. ಓದು ಬರಹ ತಿಳಿಯದ ಅವ್ವ -ಅಪ್ಪ ತಮ್ಮ ಮಗ ಬೆಳಿಗ್ಗೆ ಜಂಡಾ ಹಾರಸಲಿಕ್ಕ ಹೋಗ್ತಾನ ಅಂತ ಮಾತ್ರ ಹೇಳುತ್ತಿದ್ದುದಿತ್ತು. ಅವರಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದಿದೆಯಾದರೂ ಆಗಸ್ಟ 15 ಹಾಗೂ ರಿಪಬ್ಲಿಕ್‌ಡೇ ನಡುವಿನ ಅಂತರಗಳು ತಿಳಿದಿರಲಿಲ್ಲ. ನಮ್ಮನ್ನ ಸ್ಕೂಲಗೆ ಜಂಡಾ ಹಾರಿಸಲು ಕಳುಹಿಸಿದ್ದೇ ಅವರು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ನಡೆಯುತ್ತಿದರು. ಸ್ವಾತಂತ್ರ್ಯದ ದಿನವೂ ನಮ್ಮ ಅಪ್ಪ-ಅವ್ವಗೆ ಸೂಟಿ ಸಿಕ್ಕಿರಲಿಲ್ಲ. ನಾನು ಶಾಲೆಯಲ್ಲಿ ಧ್ವಜ ಹಾರಿಸಿ, ಆಮೇಲೆ ಊರಲ್ಲಿ ನಡೆಯುವ ಪ್ರಭಾತಪೇರಿಯಲ್ಲಿ ನನ್ನದೇ ಕ್ಲಾಸಿನ ಹುಡುಗರ ಕೈ ಕೈ ಹಿಡಿದು ಊರಲ್ಲಿ ಸಾಗುವಾಗ ನನ್ನ ಮನೆಯ ಹತ್ತಿರ ಬಂದಾಗ ನನ್ನ ಸಂಬಂಧಿಗಳು, ಪರಿಚಯದವರು ಯಾರಾದರೂ ಇದ್ದಾರೆಯೆ? ನನ್ನನ್ನು ಗಮನಿಸುತ್ತಿದ್ದಾರೆಯೆ.? ಎಂದು ಗಮತ್ತಿನಿಂದ ನೋಡುತ್ತಿದ್ದೆ. ತೀರಾ ಅಪರೂಪಕ್ಕೆ ಒಮ್ಮೊಮ್ಮೆ ಮನೆಯ ಹತ್ತಿರ ಬಂದಾಗ ಹೊಸ ಹೋರಿಯೊಂದು ನೊಗ ಕಳಚಿಕೊಳ್ಳುವಂತೆ, ಕೈ ಕೈ ಹಿಡಿದ ಗೆಳೆಯರನ್ನು ಬಿಟ್ಟು ಫರಾರಿಯಾಗುತ್ತಿದ್ದೆ.

ಅದಕ್ಕೆ ಹಸಿವಿನ ಕಿರಿಕಿರಿ ಕಾರಣವಾಗಿರುತ್ತಿತ್ತೇ ಹೊರತು ಬೇಕೆಂದು ಹಾಗೆ ಮಾಡುತ್ತಿರಲಿಲ್ಲ. ಇಡೀ ಊರಲ್ಲಿ ಪ್ರಭಾತಪೇರಿ ಹೊರಟು ತಹಶೀಲ್ದಾರ ಕಚೇರಿಯ ಬಳಿ ಧ್ವಜ ಹಾರಿಸಿ, ಅವರು ಹಂಚುವ ಪೆಪ್ಪರಮಿಂಟ್ ಬಾಯಿಗೆ ಬೀಳುವವರೆಗೂ ಅಲ್ಲಿರುತ್ತಿದ್ದೆ. ಪ್ರಾಥಮಿಕ ಹಂತದಲ್ಲಿದ್ದ ಆ ಹುರುಪು ಕ್ರಮೇಣವಾಗಿ ಕರಗುತ್ತಲೇ ಬಂತು. ಕಾಲೇಜಿನ ದಿನಗಳಲ್ಲಂತೂ ಹಾಗೆ ಬೆಳಿಗ್ಗೆ ಎದ್ದು ಜಂಡಾ ಹಾರಿಸಲು ತೆರಳಿದ್ದು ತೀರಾ ಕಡಿಮೆ. ಅಲ್ಲೇ ಮನೆಯ ಹತ್ತಿರವಿರುವ ಯಾವುದಾದರೂ ಒಂದು ಕಚೇರಿಯ ಧ್ವಜಾರೋಹಣದಲ್ಲಿ ಭಾಗವಹಿಸುತ್ತಿದ್ದೆ. ಸ್ವಾತಂತ್ರ್ಯದ ಜಂಡಾ ಹಾರಿಸುವ ಮಕ್ಕಳಾಗಿರುವಾಗಿನ ಆ ಹುರುಪು ಕ್ರಮೇಣವಾಗಿ ಕರಗಲು ಕಾರಣವಾದರೂ ಏನು..? ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಅನೇಕ ಬಾರಿ ಯೋಚಿಸಿರುವೆ. ಅನಾಮತ್ತಾಗಿ ಯಾವುದೇ ಆಗಲೀ ದಕ್ಕಬಾರದು ಪಾರತಂತ್ರದ ನೊಗ ಹೊತ್ತವರಿಗೆ ಮಾತ್ರ ಸ್ವಾತಂತ್ರ್ಯದ ಮೌಲಿಕ ಅನುಭವ ಸಾಧ್ಯ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಿಸಿದ ಸಂತಾನಕ್ಕೆ ದೇಶಪ್ರೇಮದ ಪರಿಕಲ್ಪನೆ ಸರಿಯಾಗಿ ಅಂತರ್ಗತವಾಗಲಿಲ್ಲ. ಅವರ ಪಾಲಿಗೆ ಸ್ವಾತಂತ್ರ್ಯೋತ್ಸವದ ದಿನಾಚರಣೆ ಮಿಕ್ಕ ಇತರೆ ಸಾಂಪ್ರದಾಯಿಕ ಹಬ್ಬಗಳ ಸಾಲಲ್ಲಿ ಒಂದಾಯಿತೇ ಹೊರತು ಅದೊಂದು ಮೌಲಿಕ ಆಚರಣೆ ಎನ್ನುವ ಪರಿಪಾಠವನ್ನು ಪ್ರತಿಯೊಂದು ಮನೆಯಲ್ಲೂ ಬೆಳೆಸಲಿಲ್ಲ. ಆ ಬಗೆಯ ಪರಿಣಾಮದಲ್ಲಿಯೆ ಪಕ್ವವಾದ ಸಂತಾನ ಸ್ವಾತಂತ್ರ್ಯ ದಿನಾಚರಣೆ ರವಿವಾರ ಬಂತೆಂದರೆ ಪರಿತಪಿಸುವಂತಾದದ್ದು ಒಂದು ವಿಷಾದನೀಯ ಸಂಗತಿಯೆ ಹೌದು.

ಧ್ವಜಾರೋಹಣದ ಸಂಭ್ರಮ ಎನ್ನುವದು ಈಗ ಕೇವಲ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಎನ್ನುವಂಥಾ ಪರಿಸರ ನಿರ್ಮಾಣವಾಗಿದೆ. ಸ್ವಾತಂತ್ರ್ಯದ ಸುಖ ಅನುಭವಿಸುತ್ತಿರುವ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆ ಅದಾಗಿದೆ ಎನ್ನುವ ಪ್ರಜ್ಞೆ, ಪರಿಪಾಠ, ಸ್ವ ಒತ್ತಾಸೆ ಮೂಡಲೇ ಇಲ್ಲ. ಮಿಕ್ಕ ದಿನಾಚರಣೆಗಳ ಔಪಚಾರಿಕತೆ ಮತ್ತು ಕಾಟಾಚಾರ ಇಲ್ಲಿಯೂ ಎಂಟ್ರಿ ಹೊಡೆಯುವಂತಾದದ್ದು ಇನ್ನೊಂದು ದುರಂತ. ಅತ್ಯಂತ ಅರ್ಥವತ್ತಾಗಿ ಅಚರಿಸಬೇಕಾದ ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ತೀರಾ ಯತಾರ್ಥವಾಗಿ ಆಚರಿಸುತ್ತಿದ್ದೇವೆ. ದೇಶ, ದೇಶಪ್ರೇಮದ ಭಾವನೆಗಳನ್ನು ಧರ್ಮ ಜಾತಿಯ ಸೋಂಕಿನಿಂದ ವಿಸ್ತೃತಗೊಳಿಸಲಾಗದು ಹಾಗಾದಾಗ ಅದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯನ್ನು ತರುತ್ತದೆ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡಾ ತನ್ನ ದೇಶ, ಭಾಷೆ, ಜನ, ಸಂಸ್ಕೃತಿಯನ್ನು ಯಾವುದೇ ರೀತಿಯ ಬಾಹ್ಯ ಒತ್ತಡವಿಲ್ಲದೇ ಪ್ರೀತಿಸಬೇಕು, ಗೌರವಿಸಬೇಕು. ಸ್ವಾತಂತ್ರ್ಯೋತ್ಸವದ ದಿನಾಚರಣೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಒಂದು ಹೊಸ ಬಗೆಯ ಅರ್ಥವಂತಿಕೆಯನ್ನು ತಂದು ಕೊಡುವಂತಾಗಬೇಕು.