Monthly Archives: September 2012

ಯಡಿಯೂರಪ್ಪ, ಇತಿಹಾಸ ಅವಲೋಕಿಸಿದರೆ ಭವಿಷ್ಯ ನಿರ್ಧರಿಸಬಹುದು


-ಚಿದಂಬರ ಬೈಕಂಪಾಡಿ


ರಾಜಕೀಯದಲ್ಲಿ ಅಧಿಕಾರ ಕಳೆದುಕೊಂಡರೆ ನೀರಿನಿಂದ ಹೊರ ತೆಗೆದ ಮೀನಿನಂಥ ಪರಿಸ್ಥಿತಿ. ಚಡಪಡಿಕೆ, ಹತಾಶೆ, ಸಿಟ್ಟು, ಸೆಡವು ಹೀಗೆ ಏನೇನೋ. ಅಧಿಕಾರಕ್ಕಿರುವ ಗುಣವೇ ಅಂಥದ್ದು, ಒಂಥರಾ ಅಮಲಿನಂತೆ. ಬಿಜೆಪಿಯಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದೂ ಸ್ಥಿತಿ ಇದಕ್ಕಿಂತೇನೂ ಭಿನ್ನವಲ್ಲ. ಹಾಗೆಂದು ಅದನ್ನು ಆಕ್ಷೇಪಿಸುವ ಧ್ವನಿಯೂ ಇದಲ್ಲ. ಅವರವರ ನೋವು, ಹತಾಶೆಗಳನ್ನು ಮತ್ತೊಬ್ಬರು ಕೇವಲವಾಗಿ ಕಾಣುವುದು ಸಹಜವಾದರೂ ಇಲ್ಲಿ ಆ ಉದ್ದೇಶವಲ್ಲ.

ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವುದು ಮಾಧ್ಯಮಗಳ ಕಾಮೆಂಟರಿ. ಇಂಥ ಕಾಮೆಂಟರಿಗಳಿಗೆ ಕಾರಣವಾಗುವವರು ಅವರ ಬೆಂಬಲಿಗರು ಮತ್ತು ಅದನ್ನು ಆಂತರಿಕವಾಗಿ ಅನುಭವಿಸುತ್ತಿರುತ್ತಾರೆ ಎನ್ನುವುದೂ ಸುಳ್ಳಲ್ಲ. ಆದರೆ ಯಡಿಯೂರಪ್ಪ ನೇರ ನುಡಿಯುವವರಾದರೂ ಪಕ್ಷ ತೊರೆಯುವ ಬಗ್ಗೆ ನೇರವಾಗಿ ಎಲ್ಲೂ ಹೇಳುವುದಿಲ್ಲ, ಆದರೆ ಪಕ್ಷ ತೊರೆಯುವ ಸುಳಿವುಗಳನ್ನು ಕೊಡುತ್ತಾರೆ. ಅದು ಅವರ ರಾಜಕೀಯ ಬುದ್ಧಿವಂತಿಕೆ.

ಬಿಜೆಪಿ ಸುಸಜ್ಜಿತವಾದ ಕಚೇರಿ ಹೊಂದಿದ್ದರೂ ಯಡಿಯೂರಪ್ಪ ತಮ್ಮದೇ ಆದ ಸಾರ್ವಜನಿಕ ಸಂಪರ್ಕ ಕಚೇರಿ ತೆರೆದಿದ್ದಾರೆ. ಅದು ಅವರ ವೈಯಕ್ತಿಕ ಸಾರ್ವಜನಿಕ ಸಂಪರ್ಕಕ್ಕೆ ಎನ್ನುವ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ. ಈಗಲೂ ಆ ಕಚೇರಿ ಮೂಲಕವೇ ತಮ್ಮ ರಾಜಕೀಯ ನಡೆಗಳನ್ನು ನಿರ್ಧರಿಸುತ್ತಿದ್ದಾರೆ. ನಿತ್ಯವೂ ಈ ಕಚೇರಿಯ ಮೇಲೆ ಮಾಧ್ಯಮಗಳ ಕಣ್ಣು. ಅಲ್ಲಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಯಾವ ಸಭೆ ನಡೆಯುತ್ತದೆ, ಯಾರನ್ನು ಯಡಿಯೂರಪ್ಪ ಭೇಟಿ ಮಾಡುತ್ತಾರೆ ಇತ್ಯಾದಿ ಚಟುವಟಿಕೆಗಳನ್ನು ಮಾಧ್ಯಮಗಳು ಮತ್ತು ಅವರ ವಿರೋಧಿಗಳು ಕಣ್ಣಲ್ಲಿಕಣ್ಣಿಟ್ಟು ನೋಡುತ್ತಿರುತ್ತಾರೆ. ಅಂದರೆ ಯಡಿಯೂರಪ್ಪ ಕರ್ನಾಟಕದ ಬಿಜೆಪಿಗೆ ಟ್ರಂಪ್ ಕಾರ್ಡ್ ಇದ್ದಂತೆ, ಆದ್ದರಿಂದಲೇ ಇಷ್ಟೊಂದು ಮಹತ್ವ.

ಯಡಿಯೂರಪ್ಪ ಅವರ ರಾಜಕೀಯ ನಡೆಗಳನ್ನು ಗಮನಿಸಿದವರಿಗೆ ಅವರು ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಈಗ ಮಾಜಿ ಮುಖ್ಯಮಂತ್ರಿಯಾದ ಮೇಲೆ ಪ್ರತಿಯೊಂದು ಹಂತದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದನ್ನು ಅರ್ಥಮಾಡಿ ಕೊಳ್ಳಬಹುದು.

ಉಪಮುಖ್ಯಮಂತ್ರಿಯಾಗಿದ್ದಾಗಲೂ ಅವರು ಬಹಳ ಕಾಲ ಅಧಿಕಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿತ್ತು, ಸರ್ಕಾರದ ವಿರುದ್ಧವೇ ಸಿಡಿದು ಪ್ರತಿಪಕ್ಷಗಳ ನಾಯಕರಂತೆ ನಡೆದುಕೊಳ್ಳುತ್ತಿದ್ದರು. ಮುಖ್ಯಮಂತ್ರಿಯಾದಾಗಲೂ ಆವೇಶಕ್ಕೆ ಒಳಗಾಗಿ ಮಾತನಾಡಿ ಪ್ರತಿಪಕ್ಷದ ನಾಯಕರಂತೆ ಗುರುತಿಸಿಕೊಳ್ಳುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಯಡಿಯೂರಪ್ಪ ಮೂರು ದಶಕಗಳ ಕಾಲ ಆಡಳಿತ ವ್ಯವಸ್ಥೆಯ ವಿರುದ್ಧ ಮಾಡಿಕೊಂಡು ಬಂದ ಹೋರಾಟ. ಆ ಹೋರಾಟದ ಗುಂಗಿನಿಂದ ಹೊರಬರುವುದು ಈಗಲೂ ಅವರಿಗೆ ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಬಿಜೆಪಿಗೆ ಈಗಲೂ ಯಡಿಯೂರಪ್ಪ ಅನಿವಾರ್ಯ ಪಕ್ಷವನ್ನು ಅಧಿಕಾರದ ದಡಮುಟ್ಟಿಸಲು. ಅವರಿಗಿರುವ ಪಕ್ಷ ಸಂಘಟನೆಯ ಸಾಮರ್ಥ್ಯ ಮತ್ತು ತಂತ್ರಗಾರಿಕೆ ಬಿಜೆಪಿಯ ಕರ್ನಾಟಕ ಘಟಕದಲ್ಲಿ ಇನ್ನೂ ಅನೇಕರಿಗಿದೆಯಾದರೂ ಅದು ಭಿನ್ನನೆಲೆಯಲ್ಲಿದೆ ಹೊರತು ತಳಮಟ್ಟದಲ್ಲಿಲ್ಲ. ಜಾತಿಯ ಬಲವಿಲ್ಲದೆಯೇ ರಾಜಕೀಯದಲ್ಲಿ ಬೆಳೆದಿರುವ ಯಡಿಯೂರಪ್ಪ ಈಗ ಜಾತಿಯ ತೆಕ್ಕೆಗೆ ವಾಲುತ್ತಿದ್ದಾರೆ ಅನ್ನಿಸುತ್ತಿರುವುದು ವಾಸ್ತವ ಮತ್ತು ಬೇರೆ ಕಾರಣಗಳಿಗಾಗಿ. ಯಡಿಯೂರಪ್ಪ ಅವರ ಸಾಮರ್ಥ್ಯವನ್ನು ಹೈಕಮಾಂಡ್ ಕೂಡಾ ಚೆನ್ನಾಗಿ ಅರಿತಿದೆ, ಈ ಕಾರಣಕಾಗಿಯೇ ಅವರು ಹೈಕಮಾಂಡ್ ವಿರುದ್ಧ ಅದೆಷ್ಟೇ ಗುಟುರು ಹಾಕಿದರೂ ಸಹಿಸಿಕೊಂಡಿದೆ. ಇದು ಹೈಕಮಾಂಡ್‌ನ ದುರಂತವೇ ಹೊರತು ಯಡಿಯೂರಪ್ಪ ಅವರ ಹತಾಶೆಯಷ್ಟೇ ಅಲ್ಲ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಾಧ್ಯವಿಲ್ಲವೆಂದು ನಿಯತಕಾಲಿಕದ ಸರ್ವೇ ವರದಿಯನ್ನೇ ಆಧರಿಸಿ ಹೇಳಬೇಕಾಗಿರಲಿಲ್ಲ,  ಬಿಜೆಪಿಯ ಹೈಕಮಾಂಡ್‌ನ ಯಾರೇ ಕರ್ನಾಟಕದಲ್ಲಿ ಒಂದು ಸುತ್ತು ಹೊಡೆದರೆ ತಾಜಾ ವರದಿ ಸಿಕ್ಕಿಬಿಡುತ್ತದೆ. ಹೈಕಮಾಂಡ್ ಯಡಿಯೂರಪ್ಪ ಅವರು ಈ ಸ್ಥಿತಿಗೆ ತಲುಪಲು ಕಾರಣವೇ ಹೊರತು ಅನ್ಯರನ್ನು ಹೆಸರಿಸುವುದು ಅಥವಾ ಯಡಿಯೂರಪ್ಪ ಅವರನ್ನು ದೂಷಿಸುವುದು ಈ ಹಂತದಲ್ಲಿ ಸರಿಯಲ್ಲ.

ನೀವು ಕರ್ನಾಟಕದ ರಾಜಕೀಯ ಇತಿಹಾಸವನ್ನು ಹಿಂದಕ್ಕೆ ತಿರುಗಿ ನೋಡಿದರೆ ಯಡಿಯೂರಪ್ಪ ಅವರಂಥ ಅನೇಕ ಮಂದಿಯ ಮುಖಗಳು ಅನಾವರಣಗೊಳ್ಳುತ್ತವೆ. ಹಿಂದುಳಿದ ವರ್ಗದ ಚಾಂಪಿಯನ್ ಡಿ.ದೇವರಾಜ ಅರಸು, ಜನರಿಂದಲೇ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ರಾಜಕೀಯ ತಂತ್ರಗಾರಿಕೆಯಲ್ಲಿ ದೇಶದಲ್ಲೇ ನಿಪುಣರೆನಿಸಿಕೊಂಡಿದ್ದ ರಾಮಕೃಷ್ಣ ಹೆಗಡೆ ಈ ಮೂರೇ ಮಂದಿಯನ್ನು ವಿಶ್ಲೇಷಣೆ ಮಾಡಿದರೆ ಸಾಕು ಯಡಿಯೂರಪ್ಪ ಅವರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಅನ್ನಿಸಲು.

ದೇವರಾಜ ಅರಸು ಇಂದಿರಾಗಾಂಧಿಯವರ ನೆರಳಾಗಿದ್ದವರು. ಕರ್ನಾಟಕದಲ್ಲಿ ಅವರು ಜಾರಿಗೆ ತಂದ ಸುಧಾರಣಾ ಕ್ರಮಗಳು ಇಂದಿಗೂ ಹಿಂದುಳಿದವರು ಸ್ಮರಿಸಲು ಕಾರಣವಾಗಿದೆ. ಜನಪ್ರಿಯತೆ ಮತ್ತು ಅಧಿಕಾರ ತನ್ನ ನಾಯಕಿ ಇಂದಿರಾ ಅವರನ್ನೇ ಎದುರು ಹಾಕಿಕೊಳ್ಳುವಂತೆ ಮಾಡಿತು. ಹಿಂದುಳಿದವರು ಹಾಡಿಹೊಗಳಿದ ಕಾರಣದಿಂದಲೂ, ತನ್ನ ಬೆನ್ನ ಹಿಂದೆ ಜನ ಇರುತ್ತಾರೆ ಎನ್ನುವ ಭ್ರಮೆಯಿಂದಲೋ ಕಾಂಗ್ರೆಸ್ ಪಕ್ಷವನ್ನೇ ಇಬ್ಭಾಗ ಮಾಡಿದರು. ಕಾಂಗ್ರೆಸ್-ಯು (ಅರಸು ಕಾಂಗ್ರೆಸ್) ಸ್ಥಾಪಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಆದರೆ ಜನ ಅರಸು ಅವರನ್ನು ರಾಜಕೀಯವಾಗಿ ಬೆಂಬಲಿಸಲಿಲ್ಲ, ಇಂದಿರಾ ಅವರ ಬೆನ್ನಿಗೆ ನಿಂತರು. ಅಂದು ಅರಸು ಕಾಂಗ್ರೆಸ್ ಪರವಿದ್ದವರೆಲ್ಲರೂ ಇಂದಿರಾ ಗಾಂಧಿ ಅವರ ನೆರಳಾಗಿದ್ದವರು ಮಾತ್ರವಲ್ಲ ಟಿ.ಎ.ಪೈ ಅವರಂಥ ಮೇಧಾವಿ ಕೂಡಾ ಇಂದಿರಾರನ್ನು ತೊರೆದು ಅರಸು ಬೆಂಬಲಕ್ಕೆ ನಿಂತು ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. ಹಾಗಾದರೆ ಅರಸು ಅವರನ್ನು ಆರಾಧಿಸುತ್ತಿದ್ದ ಜನರು ಚುನಾವಣೆಯಲ್ಲಿ ಕೈಬಿಟ್ಟರೇಕೆ, ಇಂದಿರಾ ಕೈ ಹಿಡಿದರೇಕೆ?

ಎಸ್.ಬಂಗಾರಪ್ಪ ಜನನಾಯಕ ಎನ್ನುವುದರಲ್ಲಿ ಅನುಮಾನಗಳಿಲ್ಲ. ಸ್ವಂತ ಪಕ್ಷ ಕಟ್ಟಿದರು. ಮೊದಲ ಯತ್ನದಲ್ಲಿ ಅರ್ಧ ಯಶಸ್ಸು ಸಾಧಿಸಿದ್ದರಾದರೂ ರಾಮಕೃಷ್ಣ ಹೆಗಡೆಯವರ ಚಾಣಕ್ಯ ರಾಜಕೀಯ ನಡೆಯಿಂದಾಗಿ ಹಿನ್ನಡೆ ಅನುಭವಿಸಿದರು. ಮತ್ತೆ ಕಾಂಗ್ರೆಸ್ ಸೇರಿದರು, ಮುಖ್ಯಮಂತ್ರಿಯಾದರು. ಹೊರಬರುವ ಅನಿವಾರ್ಯತೆ ಎದುರಾದಾಗ ಕಾಂಗ್ರೆಸ್ ವಿರುದ್ಧ ಸೆಟೆದುನಿಂತು ನರಸಿಂಹರಾವ್ ಅವರನ್ನು ಹಾವು, ಚೇಳು ಅಂತೆಲ್ಲಾ ಹೀಯಾಳಿಸಿದ್ದರು. ರಾಜಕೀಯ ನಪುಂಸಕರೆಂದು ತಮ್ಮನ್ನು ಬೆಂಬಲಿಸದೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರನ್ನು ತೆಗಳಿದರು. ಒಬ್ಬ ರಾಜಕೀಯ ನಾಯಕನಾಗಿ ಬಂಗಾರಪ್ಪ ಅವರನ್ನು ಜನ ಮೆಚ್ಚಿಕೊಂಡರೇ ಹೊರತು ಅವರನ್ನು ಒಂದು ಪಕ್ಷ ಸ್ಥಾಪಕರಾಗಿ ಒಪ್ಪಿಕೊಳ್ಳಲಿಲ್ಲ.

ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲ್ ರಾಜಕೀಯದಲ್ಲಿ `ಲವಕುಶ’ ರೆನಿಸಿಕೊಂಡವರು. ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರ ಪತನವಾಗಿ ಜನತಾಪಕ್ಷ, ಬಂಗಾರಪ್ಪ ಅವರ ಕ್ರಾಂತಿರಂಗ ಜೊತೆಯಾಗಿ ಕಾಂಗ್ರೆಸೇತರ ಸರ್ಕಾರ ರಚನೆಗೆ ಯತ್ನಿಸಿದಾಗ ಮಣಿಪಾಲದ ಐಷಾರಾಮಿ ಹೊಟೇಲಲ್ಲಿ ವಾಸ್ತವ್ಯವಿದ್ದ ರಾಮಕೃಷ್ಣ ಹೆಗಡೆ ಸಂಧಾನಕಾರರಾಗಿ ನಿಯೋಜಿತರಾದವರು ತಾವೇ ಆ ಸರ್ಕಾರ ನಡೆಸುವ ಸಾರಥಿಯಾದರು. ಅಂಥ ಚಾಣಕ್ಯ ರಾಜಕಾರಣಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು. ಅವರ ರಾಜಕೀಯ ಬದುಕು ಕೂಡಾ ದುರಂತಮಯವಾಯಿತು.

ಕರ್ನಾಟಕಕ್ಕೆ ಈ ಮೂರೂ ವ್ಯಕ್ತಿಗಳ ಕೊಡುಗೆ ಅಪಾರ. ಅವರ ರಾಜಕೀಯ ಚಿಂತನೆಗಳೂ ಕೂಡಾ ಅನುಕರಣೀಯವೇ. ಆದರೂ ಜನ ಮಾತ್ರ ಅವರನ್ನು ಪಕ್ಷದಿಂದ ಹೊರಬಂದಾಗ ಒಬ್ಬ ಜನನಾಯಕನೆಂದು ಗುರುತಿಸಿ ಬೆನ್ನಿಗೆ ನಿಲ್ಲಲಿಲ್ಲ. ಅವರುಗಳು ಪಕ್ಷದ ಮುಂಚೂಣಿಯಲ್ಲಿದ್ದಾಗ ಮೆಚ್ಚಿದ್ದರು, ನಂಬಿದರು, ಬೆಂಬಲಿಸಿದರು. ಅವರೇ ಒಂದು ಪಕ್ಷ ಕಟ್ಟಿದಾಗ ಅದೇ ಜನ ಅವರನ್ನು ಬೆಂಬಲಿಸಲಿಲ್ಲ. ಇದು ರಾಜಕೀಯದ ನೀತಿ ಪಾಠ ಮತ್ತು ಜನರ ಭಾವನೆಗಳು ಹೇಗಿರುತ್ತವೆ ಎನ್ನುವುದಕ್ಕೆ ಉದಾಹರಣೆ.

ಪ್ರಸ್ತುತ ಯಡಿಯೂರಪ್ಪ ಅವರು ಬಿಜೆಪಿಗೆ ಅನಿವಾರ್ಯ. ಆದರೆ ಅವರಿಗೆ ಬಿಜೆಪಿ ಅನಿವಾರ್ಯವಲ್ಲವೆಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಬಿಜೆಪಿ ಅನಿವಾರ್ಯವಲ್ಲದಿರಬಹುದು ಈಗ. ಯಾಕೆಂದರೆ ಅವರು ಪಕ್ಷ ಕಟ್ಟಿದ್ದಾರೆ, ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಈಗ ಯಡಿಯೂರಪ್ಪ ಅವರೂ ತಮ್ಮದೇ ಆದ ಜನರನ್ನು ಹೊಂದಿದ್ದಾರೆ. ಯಡಿಯೂರಪ್ಪ ಅವರಿಗಿಂತಲೂ ಅವರ ಬೆಂಬಲಿಗರಿಗೆ ಅಧಿಕಾರದ ದಾಹ ಎಂದರೂ ತಪ್ಪಾಗಲಾರದು. ಇಂಥ ಬೆಂಬಲಿಗರ ಹೊಗಳಿಕೆಗೆ ಮನಸೋತು ಯಡಿಯೂರಪ್ಪ ಎಡವುತ್ತಾರೆಯೋ ಎನ್ನುವ ಅನುಮಾನಗಳು ಕಾಡುತ್ತಿದ್ದರೆ ತಪ್ಪಲ್ಲ. ಯಾಕೆಂದರೆ ಅದು ಮನುಷ್ಯನ ವೀಕ್ನೆಸ್. ಹೊಗಳಿಕೆಯನ್ನು ಮನಸ್ಸು ಬಹುಸುಲಭವಾಗಿ ಗುರುತಿಸುತ್ತದೆ, ತೆಗಳಿಕೆಯನ್ನು ಜೀರ್ಣಿಸಿಕೊಳ್ಳಲು ಹಿಂದೇಟು ಹಾಕುತ್ತದೆ. ಇಲ್ಲೂ ಯಡಿಯೂರಪ್ಪ ಅವರಿಗೂ ಇದೇ ಆಗುತ್ತಿದೆಯೇನೋ ಅನ್ನಿಸುತ್ತಿದೆ. ಈ ಹೊಗಳಿಕೆಗಳು ಅವರು ಪಕ್ಷದಲ್ಲಿರುವಷ್ಟು ಕಾಲ ಮಾತ್ರ. ಅರಸು ಅವರಂಥ ಧೀಮಂತ ರಾಜಕಾರಣಿ ಕೂಡಾ ತನ್ನ ಸುತ್ತಲೂ ಇರುವ ಜನರನ್ನು ನಂಬಿಯೇ ಕಾಂಗ್ರೆಸ್ ತೊರೆದು ಇಂದಿರಾ ಅವರಿಗೆ ಸೆಡ್ಡುಹೊಡೆಯಲು ಕಾರಣ. ಅದು ಕೇವಲ ಕಾಲ್ಪನಿಕ ಎನ್ನುವುದು ಅವರ ಪಕ್ಷ ಚುನಾವಣೆಯಲ್ಲಿ ಸೋತು ಸುಣ್ಣವಾದಾಗ ಅರಿವಾಯಿತೇ ಹೊರತು ಅದಕ್ಕೂ ಮೊದಲು ಅರ್ಥವಾಗಿರಲಿಲ್ಲ.

ಯಡಿಯೂರಪ್ಪ ಅವರೂ ಈಗ ಬಹುಷ ಮಾಡಬೇಕಾದ ಕೆಲಸವೆಂದರೆ ಇತಿಹಾಸವನ್ನು ಪುನರಾವಲೋಕನ ಮಾಡುವುದು. ಭೂತಕಾಲವನ್ನು ವರ್ತಮಾನದಲ್ಲಿ ನಿಂತು ನೋಡಿದರೆ ಭವಿಷ್ಯ ಗೋಚರವಾಗುತ್ತದೆ. ಅದು ಅವರ ಮುಂದಿನ ನಡೆಗೆ ದೀವಿಗೆಯಾಗುತ್ತದೆ.

ಜಾತಿಕಾರಣ ಹಾಗೂ ಅನ್ಯಾಕ್ರಾಂತತೆ


-ಡಾ.ಎಸ್.ಬಿ. ಜೋಗುರ


ಮಾರ್ಕ್ಸ್ 18 ನೇ ಶತಮಾನದಲ್ಲಿ ಕಾರ್ಮಿಕನಲ್ಲಿಯ ಪರಾಧೀನತೆ ಇಲ್ಲವೇ ಪರಕೀಯ ಪ್ರಜ್ಞೆ ಅನ್ಯಾಕ್ರಾಂತತೆಯ ಆವಿರ್ಭವಕ್ಕೆ ಕಾರಣವಾಗಬಲ್ಲದು ಎಂದು ಪ್ರತಿಪಾದಿಸಿದರೆ, ಎರಿಕ್ ಪ್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಧಾರ್ಮಿಕ ಪ್ರಭುತ್ವವೂ ಅನ್ಯಾಕ್ರಾಂತತೆಗೆ ಕಾರಣವಾಗುತ್ತದೆ ಎನ್ನುತ್ತಾರೆ. ತಾರ್ಕಿಕತೆಯ ಮೇಲೆ ಸವಾರಿ ಮಾಡುವಷ್ಟು ಪ್ರಭುತ್ವಕ್ಕೆ ಶಕ್ತಿ ಇದೆ. ಹಾಗಾದಾಗ ಅನ್ಯಾಕ್ರಾಂತತೆ ತಲೆದೋರುತ್ತದೆ ಎನ್ನುವುದನ್ನು ಅಲ್ ಗೋರೆ ಎನ್ನುವ ಚಿಂತರು ತಮ್ಮ ಕೃತಿ ‘ಅಜಾಲ್ಟ್ ಆನ್ ರೀಜನ್’ ಎನ್ನುವುದರಲ್ಲಿ ತೋರಿಸಿಕೊಟ್ಟಿದ್ದಾರೆ.

ಭಾರತೀಯ ಸಮಾಜದ ಏಕಮೇವ ಲಕ್ಷಣವಾಗಿರುವ ಜಾತಿ ಪದ್ಧತಿ ಕೂಡಾ ಅನೇಕ ಬಾರಿ ಅನ್ಯಾಕ್ರಾಂತತೆಗೆ ಕಾರಣವಾಗಬಹುದಾದ ಸನ್ನಿವೇಶಗಳನ್ನು ನಿರ್ಮಿಸಿಕೊಡುತ್ತದೆ. ಅದು 1990 ರ ಸಂದರ್ಭ. ದೆಹಲಿ ವಿಶ್ವವಿದ್ಯಾಲಯದ ರಾಜೀವ ಗೋಸ್ವಾಮಿ ಎನ್ನುವ ಯುವಕ ಮಂಡಲ ಕಮಿಷನ್ ವಿರುದ್ಧ ಮೈಗೆ ಬೆಂಕಿ ಹಚ್ಚಿಕೊಳ್ಳುವ ಅಣುಕು ಪ್ರದರ್ಶನ ಮಾಡುವ ಭರಾಟೆಯಲ್ಲಿ, ಖರೆ ಖರೆ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಮಾಧ್ಯಮಗಳ ಎದುರು ತೀರಾ ಭಾವಾವೇಶಕ್ಕೊಳಗಾಗಿ ಕಡ್ದಿ ಗೀರಿಯೆ ಬಿಟ್ಟ. ಪರಿಣಾಮ ಧಗಧಗ ಉರಿದು ಶವವಾದ. ಇಂಥಾ ಅನೇಕ ಪ್ರಸಂಗಗಳು ಜಾತಿಕಾರಣದ ಅನ್ಯಾಕ್ರಾಂತತೆಯ ವಿಷಯವಾಗಿ ನಮ್ಮ ದೇಶದಲ್ಲಿ ಆಗಾಗ ಜರುಗುವುದಿದೆ. ವಸಾಹತೋತ್ತರ ಭಾರತದಲ್ಲಿ ಜಾತಿ ಪದ್ಧತಿಯನ್ನು ಪ್ರಜಾಪ್ರಭುತ್ವದ ಕಡುವೈರಿಯ ಹಾಗೆ ಬೆಳೆಯಬಿಟ್ಟಿದ್ದು ಜಾತಿಕಾರಣದ ರಾಜಕಾರಣವಲ್ಲದೇ ಇನ್ನೇನು.?

ಗಾಂಧಿ ಹಾಗೂ ಅಂಬೇಡ್ಕರ್ ಮಧ್ಯೆಯೂ ಈ ಜಾತಿಯ ವಿಷಯವಾಗಿ, ರಾಷ್ಟ್ರೀಯತೆಯ ವಿಷಯವಾಗಿ ಚರ್ಚೆಗಳಿದ್ದವು. ವಾಗ್ವಾದಗಳಿದ್ದವು. ಆ ಸಂದರ್ಭದಲ್ಲಿ ಅಂಬೇಡ್ಕರರು ಜಾತಿಯ ವಿಷಯವಾಗಿ ಅನ್ಯಾಕ್ರಾಂತತೆಯನ್ನು ಹುಟ್ಟು ಹಾಕಿರುವುದು ನಿಜ, ಅದರ ಪರಿಣಾಮವೇ ಅವರು ನಾಸಿಕದ ಕಲಾರಾಂ ದೇಗುಲದ ಪ್ರವೇಶ, ಕೋಲಾಬಾ ಜಿಲ್ಲೆಯ ಮಹದ್ ಪ್ರದೇಶದ ಚೌಡರಕೆರೆಯ ನೀರನ್ನು ಸೇವಿಸಲು ಮಾಡಿದ ಹೋರಾಟ, ತಿರುವಾಂಕೂರಿನ ವೈಕಂ ಎಂಬಲ್ಲಿ ದೇವಸ್ಥಾನದ ಪಕ್ಕದ ರಸ್ತೆಯ ಮೇಲೆ ನಡೆಯಲು ಮಾಡಿರುವ ಹೋರಾಟಗಳೆಲ್ಲವೂ ಬಹುತೇಕವಾಗಿ ಜಾತಿಕಾರಣದ ಹೋರಾಟಗಳೇ. ಗಾಂಧೀಜಿಯವರಿಗೂ ಅಶ್ಪ್ರಶ್ಯತೆಯ ಬಗ್ಗೆ ಸೌಮ್ಯ ಸ್ವರೂಪದ ಸಿಡುಕಿತ್ತಾದರೂ ಅದರ ಹಿಂದೆ ಅಂಬೇಡ್ಕರ್ ಅವರಲ್ಲಿದ್ದ ಅನ್ಯಾಕ್ರಾಂತತೆಯ ಗುಣವಿರಲಿಲ್ಲ. ಜಾತಿಯ ವಿಷಯದಲ್ಲಿ ಹಗ್ಗ ಹರಿಯದೇ, ಕೋಲು ಮುರಿಯದೇ ಹಾವು ಸಾಯಬೇಕು ಎನ್ನುವ ಗಾಂಧೀಜಿಯವರ ಮನೋಧರ್ಮ ಅಂಬೇಡ್ಕರ್ ಅವರಿಗೆ ತಿಳಿದಿತ್ತು ಹಾಗಾಗಿಯೆ ತನ್ನ ಜನರಿಗೆ ಪ್ರತ್ಯೇಕವಾದ ಮತ ಕ್ಷೇತ್ರವನ್ನು ಅಂಬೇಡ್ಕರ್ ಕೋರಿರುವುದಿತ್ತು. ಗಾಂಧೀಜಿಯವರು ಇದರಿಂದ ರಾಷ್ಟ್ರೀಯತೆಗೆ ಧಕ್ಕೆ ಬರುತ್ತದೆ ಎನ್ನುವ ಕಾರಣವನ್ನಿಟ್ಟುಕೊಂಡು ಉಪವಾಸ ನಿರತರಾಗಿರುವುದರ ಬಗ್ಗೆ ಚಾರಿತ್ರಿಕ ಆಧಾರಗಳಿವೆ. ತಾನು ಸನಾತನಿಯಾಗಿದ್ದೇನೆ ಎನ್ನುತ್ತ ವರ್ಣವ್ಯವಸ್ಥೆಯನ್ನು ಅಪಾರವಾಗಿ ಇಷ್ಟಪಡುವ ಗಾಂಧಿಯಿಂದ ತನ್ನ ಜಾತಿಯ ಜನರಿಗೆ ನ್ಯಾಯ ಸಿಗದು ಎನ್ನುವ ಸತ್ಯ ಅಂಬೇಡ್ಕರ್‌ಗೆ ತಿಳಿಯದೇ ಇರಲಿಲ್ಲ. ಹಿಂದು ಧರ್ಮದಲ್ಲಿಯ ಮಡಿಮೈಲಿಗೆಯ ಆಚರಣೆಗಳಿಗೆ ಅಂಬೇಡ್ಕರ್ ರೋಸಿ ಹೋಗಿ, ಕೊನೆಗೂ ಲಕ್ಷಾನುಗಟ್ಟಲೆ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ಮೂಲಕ ತಮ್ಮ ಜಾತಿ ಆಧರಿತ ಅನ್ಯಾಕ್ರಾಂತತೆಗೆ ಉತ್ತರವನ್ನು ಕಂಡುಕೊಂಡರು.

ಅಂಬೇಡ್ಕರರು ರಾಜಕಾರಣವನ್ನು ನಿಯಂತ್ರಿಸುವ ಮಾರ್ಗವಾಗಿ ಜಾತಿಯನ್ನು ಪರಿಗಣಿಸಿದರು. ಗಾಂಧೀಜಿ ಮಾತ್ರ ಜಾತಿಯ ಮೂಲಕ ಅಸ್ಥಿತ್ವವನ್ನು ಗುರುತಿಸಿಕೊಳ್ಳುವುದನ್ನು ನಿರಾಕರಿಸಿದರು. ಜಾತಿಪದ್ಧತಿಯನ್ನು ಕುರಿತು 1931 ರ ಜನಗಣತಿಯ ಸಂದರ್ಭದಲ್ಲಿ ಕಮಿಷನರ್ ಆಗಿದ್ದ ಜೆ.ಎಚ್.ಹಟನ್ ಎನ್ನುವವರು ಒಂದು ಕೃತಿಯನ್ನು ರಚಿಸಿದ್ದರು. [ಕಾಸ್ಟ್ ಇನ್ ಇಂಡಿಯಾ] ಅದರಲ್ಲಿ ಅವರು ಮೂರು ಸಾವಿರ ಜಾತಿಗಳನ್ನು ಗುರುತಿಸಿ, ಜಾತಿಯ ಆಚರಣೆ, ಮಡಿ-ಮೈಲಿಗೆ, ಏಣಿಶ್ರೇಣಿ ಕ್ರಮ, ಸಾಂಪ್ರದಾಯಿಕ ಉದ್ಯೋಗ, ಸಾಮಾಜಿಕ ಸಂಪರ್ಕ, ಸಹಪಂಕ್ತಿ ಭೋಜನ ಮುಂತಾದವುಗಳ ಬಗ್ಗೆ  ಚರ್ಚಿಸಿದ್ದಾರೆ. ಅಮೂರ್ತವಾದ ಜಾತಿಪದ್ಧತಿ ಇಡೀ ಭಾರತೀಯ ಸಾಮಾಜಿಕ ಜೀವನವನ್ನೇ ನಿಯಂತ್ರಿಸುವ ಬಗೆಯನ್ನು ಅವರು ಗುರುತಿಸಿದ್ದಾರೆ. ಡಾ ಜಿ.ಎಸ್.ಘುರ್ರೆ, ಈರಾವತಿ ಕರ್ವೆ, ಎಮ್.ಎನ್.ಶ್ರೀನಿವಾಸ, ಎಲ್ ಡುಮಂಟ್, ಟಿ.ಎನ್.ಮದನ್ ಮುಂತಾದವರು ಜಾತಿಪದ್ಧತಿ ಭಾರತೀಯ ರಾಷ್ಟ್ರೀಯತೆ, ನಾಗರಿಕತ್ವ ಮತ್ತು ಆಧುನಿಕತೆಯನ್ನು ಪ್ರಭಾವಿಸುವ ಬಗ್ಗೆ ಚರ್ಚಿಸಿದ್ದಾರೆ.

ಜಾತಿಗಳ ರಾಜಕೀಯ ಪ್ರತಿನಿಧಿತ್ವದ ಬಗ್ಗೆ ಇವರು ಮಾತನಾಡಿದ್ದು ಕಡಿಮೆ. ಇವರಲ್ಲಿ ಕೆಲವರು ಜಾತಿಪದ್ಧತಿಯನ್ನಾಧರಿಸಿದ ಮೀಸಲಾತಿಯನ್ನಿಟ್ಟುಕೊಂಡು ಇದು ಭಾರತೀಯ ಸಾಮಾಜಿಕ ವ್ಯವಸ್ಥೆಯ ನೈತಿಕತೆಯನ್ನೇ ಹಾಳುಮಾಡಿದೆ ಎಂದಿರುವರು. ಪರೋಕ್ಷವಾಗಿ ಇವರೆಲ್ಲಾ ಜಾತಿಯ ಸಾಂಪ್ರದಾಯಿಕ ಆಚರಣೆಗಳನ್ನು ಬೆಂಬಲಿಸಿದವರೇ. ಅದನ್ನು ರಾಜಕೀಯ ಪ್ರಾತಿನಿಧಿಕತೆಯ ಭಾಗವಾಗಿ ಬಳಸಬಾರದು ಅದರಿಂದಾಗಿ ದೇಶದ ಅಖಂಡತೆಗೆ ಧಕ್ಕೆ ಬರುವ ಬಗ್ಗೆ ಮಾತನಾಡುವ ಇವರು ಗಾಂಧೀಜಿಯವರ ವಿಚಾರಗಳನ್ನು ಬೆಂಬಲಿಸುವುದಿದೆ. ಕೆಲ ಅಮೇರಿಕೆಯ ಸಮಾಜಶಾಸ್ತ್ರಜ್ಞರು ಭಾರತದಲ್ಲಿಯ ಜಾತಿಯಾಧಾರಿತ ಮೀಸಲಾತಿಯನ್ನು ಕುರಿತು ಇದು ಎರಡನೆಯ ದರ್ಜೆಯ ನಾಗರಿಕತ್ವದ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ ಎನ್ನುತ್ತಾರೆ.

Lloyd ಮತ್ತು Susanne Rudolph ಬರೆಯುತ್ತಾರೆ : ‘The price of discrimination in reverse has been a kind of blackmail in reverse; in return for access to opportunity and power the untouchable is asked to incriminate himself socially. This is not only profoundly disturbing but also an important source of alienation and rebellion.’

ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ರಾಜಕೀಯ ಪರಿಸರವನ್ನು ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುತ್ತಾ ಬಂದಿರುವ ಜಾತಿಪದ್ಧತಿಯು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸಮಾನ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯದ ತತ್ವಗಳನ್ನು ವಂಚಿಸುತ್ತಲೇ ಮುನ್ನಡೆದಿರುವಲ್ಲಿ ಜಾತಿಕಾರಣದಷ್ಟೇ ಪ್ರಬಲವಾಗಿ ರಾಜಕೀಯದೊಳಗಣ ಜಾತಿ ಪ್ರಾಬಲ್ಯವೂ ಕೆಲಸ ಮಾಡುತ್ತಿದೆ. ಶಾಲಾ ದಿನಗಳಿಂದಲೇ ಜಾತಿಯನ್ನು ಸ್ಪಷ್ಟವಾಗಿ ನಮೂದಿಸುವ ಅರ್ಜಿ ಕಾಲಂ ಒಂದು ನಿರಂತರವಾಗಿ ಉಳಿದುಕೊಂಡು ಬಂದಿದೆ. ತೀರಾ ಇತ್ತೀಚಿಗೆ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ನಲ್ಲಿಯೂ ಜಾತಿಯನ್ನು ನಮೂದಿಸುವ ಬಗ್ಗೆ ಯೋಚಿಸಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಜಾತಿಪದ್ಧತಿಯು ಒಂದು ಪ್ರಬಲ ಸಾಮಾಜಿಕ ನಿಯಂತ್ರಣದ ಸಾಧನವಾಗಿ ಸಾವಿರಾರು ವರ್ಷಗಳಿಂದ ಕಾರ್ಯನಿರ್ವಹಿಸಿರುವುದಿದೆ.

ಹಿಂದೂ ಸಾಮಾಜಿಕ ವ್ಯವಸ್ಥೆಯ ಜೀವನಾದಿಯಂತೆ ಅದು ಬದುಕಿನ ನಿರ್ಧಾರಕ ಸಂಗತಿಯಾಗಿ ಕೆಲಸ ಮಾಡುತ್ತಿತ್ತು. ಅದರ ಆಚರಣೆಯ ವಿಕಾರಗಳನ್ನು ಅರಿತಿದ್ದರೂ ರಾಜಕೀಯ ವಲಯದ ಹಿತಾಸಕ್ತಿಗಳು ಜಾತಿಪದ್ಧತಿಯನ್ನು ವ್ಯವಸ್ಥಿತವಾಗಿ ಕಾಪಾಡಿಕೊಳ್ಳುವ. ಉಳಿಸಿಕೊಳ್ಳುವ ಯತ್ನ ಮಾಡುತ್ತಲೇ ಬಂದಿವೆ. ರಾಜಕೀಯ ವಲಯದಲ್ಲಿ ಜಾತಿಯಾಧಾರಿತ ಸ್ಥಾನಮಾನಗಳ ಹಂಚಿಕೆ ಸಮರ್ಪಕವಾಗಿರದಿದ್ದಾಗ ಅನ್ಯಾಕ್ರಾಂತತೆ ತಲೆ ಎತ್ತುತ್ತದೆ. ಒಂದು ಬಾರಿ ರಾಜಕೀಯ ವಲಯದಲ್ಲಿ ಸ್ಥಾಪಿತವಾದ  ಜಾತಿಯ ಪ್ರಾಬಲ್ಯ ನಂತರ ಮಿಕ್ಕ ಎಲ್ಲ ವಲಯಗಳಲ್ಲಿಯೂ ತನ್ನ ಪ್ರಭಾವವನ್ನು ಬೀರದೇ ಇರಲಾರದು. ಕೆಳಜಾತಿಗಳ ಮೇಲೆ ಮೇಲಿನ ಜಾತಿಗಳ ದೌರ್ಜನ್ಯ ಸಾಮಾಜಿಕ ಅನುಮತಿಯೊಂದಿಗೆ ನಡೆಯುವ ಹಾಗೆ ಮುಂದುವರೆಸಿಕೊಂಡು ಬರಲಾಗಿದೆ. ಜಾತಿಯ ಏಣಿ ಶ್ರೇಣಿಯಲ್ಲಿಯ ಕಟ್ಟುನಿಟ್ಟಾದ ಸ್ಥಾನಮಾನಗಳನ್ನು ಕೆಳಸ್ತರಗಳಿಗೆ ನೆನಪು ಮಾಡಿಕೊಡುವ ನಿಟ್ಟಿನಲ್ಲಿ ಆಗಾಗ ಕೆಳ ಜಾತಿಗಳ ಮೇಲೆ ಮೇಲಿನವರ ಅಟ್ಟಹಾಸಗಳು ಬಯಲುಗೊಳ್ಳುವುದಿದೆ. ಪತ್ರಕರ್ತ ಎಮ್.ಜೆ. ಅಕ್ಬರ್ ಅವರು ಒಂದು ಕಡೆ ಹೀಗೆ ಬರೆಯುತ್ತಾರೆ: ‘1981 ರ ಸಂದರ್ಭದಲ್ಲಿ ಉತ್ತರ ಪ್ರದೇಶದ ಅನೇಕ ಹಳ್ಳಿಗಳಲ್ಲಿ ಹರಿಜನರನ್ನು ಕೊಲ್ಲಲಾಯಿತು. ಸಾಮಾಜಿಕ ಏಣಿ ಶ್ರೇಣಿಯಲ್ಲಿ ಅವರ ಸ್ಥಾನ ಮಾನಗಳು ಏನಿವೆ ಎನ್ನುವುದನ್ನು ನೆನಪು ಮಾಡಿಕೊಡುವುದೇ ಆ ಕೊಲೆಗಳ ಹಿಂದಿನ ಸಂದೇಶವಾಗಿತ್ತು’. ಈಗಲೂ ಈ ಬಗೆಯ ಹಲ್ಲೆಗಳು ಆಗಾಗ ಸುದ್ದಿಯಾಗುವುದಿದೆ. ಈ ಜಾತಿಕಾರಣ ಪರೋಕ್ಷವಾಗಿ ರಾಷ್ಟ್ರೀಯ ಐಕ್ಯತೆಗೆ ಗಂಡಾಂತರಕಾರಿಯಾಗಿ ಪರಿಣಮಿಸಿರುವುದೂ ಹೌದು.

ಖೆರ್ಲಾಂಜಿ ನರಮೇಧದ ನೆನಪುಗಳು


– ಡಾ.ಎನ್.ಜಗದೀಶ್ ಕೊಪ್ಪ


ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲಿ ಜಾತಿಯ ಅಮಲನ್ನು ನೆತ್ತಿಗೇರಿಸಿಕೊಂಡು ಮಾನವೀಯತೆಯನ್ನ ಮರೆತವರ ಬಗ್ಗೆ ಬರೆಯಲು ಈ ನೆಲದಲ್ಲಿ ಒಬ್ಬ ವ್ಯಕ್ತಿಗೆ ಅವನ ಪೂರ್ತಾ ಆಯಸ್ಸು ಸಾಲದು. ಈ ನೆಲದಲ್ಲಿ ನಿರಂತರ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಕ್ಕೆ, ವರ್ತಮಾನದ ಸಮಾಜದ ಅಸಹನೆಗೆ ಮತ್ತು ಅದರ ಜಾತೀಯ ಮನೋಭಾವಕ್ಕೆ ಹಾಳೆಯ ಮೇಲೆ ಅಕ್ಷರಗಳು ದಾಖಲಾಗಲು ಹೇಸಿಗೆ ಪಟ್ಟುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಭಾರತದ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ದಲಿತ ಕುಟುಂಬವೊಂದರ ಸದಸ್ಯರ ನರಮೇಧ ನಡೆದು ಇಂದಿಗೆ ಆರು ವರ್ಷ. ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಖೆರ್ಲಾಂಜಿ ಗ್ರಾಮದಲ್ಲಿ 2006 ರ ಸೆಪ್ಟಂಬರ್ 29 ರಂದು ನಡೆದ ಈ ಅಮಾನುಷ ಘಟನೆ ಇಡೀ ಮನುಕುಲ ನಾಚಿಕೆಯಿಂದ ಮುದುಡಿಕೊಳ್ಳುವಂತಹದ್ದು. ಇಂದಿಗೂ ಸಮಾಜದಲ್ಲಿ ಜಾತಿ ಸಂಘಟನೆಗಳು ಎಷ್ಟು ಬಲಿಷ್ಟವಾಗಿವೆ ಮತ್ತು ಕ್ರೂರವಾಗಿವೆ ಎಂಬುದಕ್ಕೆ ಮನ ಕಲಕುವ ಈ ದುರಂತ ನಮ್ಮೆದುರು ಸಾಕ್ಷಿಯಾಗಿದೆ.

ಕಳೆದ ಜುಲೈ ತಿಂಗಳಿನಲ್ಲಿ ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಾದ ಗೊಂಡಿಯ ಮತ್ತು ಚಂದ್ರಾಪುರ್ ಮತ್ತು ಭಂಡಾರ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುತಿದ್ದಾಗ ಅನಿರಿಕ್ಷಿತವಾಗಿ ಈ ಹಳ್ಳಿಗೆ ಬೇಟಿ ನೀಡುವ ಸಂದರ್ಭ ಒದಗಿ ಬಂದಿತು. ನನಗೆ ಖೆರ್ಲಾಂಜಿ ಘಟನೆ ಗೊತ್ತಿತ್ತೇ ಹೊರತು, ಆ ಹಳ್ಳಿ ಭಂಡಾರ ಜಿಲ್ಲೆಯಲ್ಲಿ ಇದೆ ಎಂಬುದು ತಿಳಿದಿರಲಿಲ್ಲ.

ಜುಲೈ ಮೊದಲ ವಾರ ಭಂಡಾರ ಪಟ್ಟಣದ ಪ್ರಥಮ ದರ್ಜೆ ಕಾಲೇಜೊಂದಕ್ಕೆ ಬೇಟಿ ನೀಡಿ, ಅಲ್ಲಿನ ಅಧ್ಯಾಪಕರ ಜೊತೆ ಭಂಡಾರ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹಬ್ಬಲು ಕಾರಣವಾದ ಅಂಶಗಳನ್ನು ಚರ್ಚಿಸುತಿದ್ದೆ. ಅಲ್ಲಿನ ಅಧ್ಯಾಪಕ ಮಿತ್ರರು ಭಂಡಾರ ಜಿಲ್ಲೆಯ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯ ಕುರಿತು ಮಾತನಾಡುತ್ತಾ ಖೆರ್ಲಾಂಜಿ ಘಟನೆಯನ್ನು ವಿವರಿಸಿದಾಗ, ಭಾರತದ ಕಪ್ಪು ಇತಿಹಾಸದಲ್ಲಿ ಧಾಖಲಾಗಿರುವ ಈ ನತದೃಷ್ಟ ಗ್ರಾಮ ಭಂಡಾರ ಜಿಲ್ಲೆಯಲ್ಲಿದೆ ಎಂಬುದು ನನಗೆ ತಿಳಿಯಿತು. ಕಾಂಬ್ಳೆ ಎಂಬ ಮರಾಠಿ ಉಪನ್ಯಾಸಕ ಮಿತ್ರ ತನ್ನ ಮೋಟಾರ್ ಬೈಕ್‌ನಲ್ಲಿ ಈ ಗ್ರಾಮಕ್ಕೆ ಕರೆದೊಯ್ದು ಅಂದಿನ ಕರಾಳ ಕೃತ್ಯವನ್ನು ವಿವರಿಸಿದ.

ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಗೆ ಹೊಂದಿಕೊಂಡಿಂತೆ ಇರುವ ಭಂಡಾರ ಜಿಲ್ಲೆ ಇವತ್ತಿಗೂ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಚಂದ್ರಭಾಗ ಎಂಬ ನದಿಯ ಕಾರಣ ಒಂದಿಷ್ಟು ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಜಿಲ್ಲಾ ಕೇಂದ್ರವಾದ ಭಂಡಾರದಿಂದ 26 ಕಿಲೋಮೀಟರ್ ದೂರವಿರುವ ಖೆರ್ಲಾಂಜಿ ಗ್ರಾಮ ಬಹುತೇಕ ಹಿಂದುಳಿದ ಜಾತಿಯ ಜನರು ವಾಸಿಸುವ ಒಂದು ಕುಗ್ರಾಮ. ಕುಣಬಿ ಎಂಬ ಹಿಂದುಳಿದ ಜನಾಂಗದ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ಒಂದಿಷ್ಟು ಮಂದಿ ದಲಿತರಿದ್ದು ಅವರೆಲ್ಲಾ ವಿದ್ಯಾವಂತರಾಗಿರುವುದು ವಿಶೇಷ. ದಲಿತರ ಪಾಲಿನ ಸ್ವಾಭಿಮಾನ ಮತ್ತು ಆತ್ಮ ಸಾಕ್ಷಿಯಂತಿರುವ ಡಾ. ಅಂಬೇಡ್ಕರ್ ಇದೇ ನಾಗಪುರ ಪ್ರಾಂತ್ರಕ್ಕೆ ಸೇರಿದ ಮೂಲದವರು ಎಂಬ ಹೆಮ್ಮೆ ಈ ಭಾಗದ ದಲಿತರಿಗೆ ಇಂದಿಗೂ ಹೆಮ್ಮೆಯ ವಿಷಯವಾಗಿದೆ. ಹಾಗಾಗಿ ಅಂಬೇಡ್ಕರ್ ರವರಿಂದ ಪ್ರೇರಿತವಾಗಿರುವ ಪ್ರತಿಯೊಂದು ದಲಿತ ಕುಟುಂಬದಲ್ಲಿ ವಿದ್ಯಾವಂತ ಯುವ ತಲೆಮಾರು ಇರುವುದು ಇಲ್ಲಿಯ ವಿಶೇಷ.

ಖೆರ್ಲಾಂಜಿ ಗ್ರಾಮದ ಬಯ್ಯಲಾಲ್ ಬೂತ್‌ಮಾಂಗೆ ಎಂಬ ದಲಿತ ಕುಟುಂಬದ ಸದಸ್ಯರೆಲ್ಲರೂ ವಿದ್ಯಾವಂತರಾಗಿದ್ದು, ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿ ಹಳ್ಳಿಯ ಜನರ ನಡುವೆ ಸ್ವಾಭಿಮಾನದ ಬದುಕನ್ನು ಕಂಡುಕೊಂಡಿದ್ದರು. ಬಯ್ಯಾಲಾಲ್‌ಗೆ ಐದು ಎಕರೆ ನೀರಾವರಿ ಭೂಮಿ ಇದ್ದ ಕಾರಣ ತಮ್ಮ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದ. ಜೊತೆಗೆ ಪತ್ನಿ ಸುರೇಖ ಕೂಡ ಪಿ.ಯು.ಸಿ. ವರೆಗೆ ಓದಿದ್ದ ಹೆಣ್ಣುಮಗಳಾಗಿದ್ದಳು. ಯಾವುದೇ ಅನ್ಯಾದ ವಿರುದ್ಧ ಸಿಡಿದೇಳುವ ಶಕ್ತಿಯನ್ನು ಈ ದಲಿತ ಕುಟುಂಬ ಹೊಂದಿರುವುದನ್ನು ಕಂಡು ಕೆಲವು ಮೇಲ್ಜಾತಿ ಜನರ ಕಣ್ಣುಗಳು ಕೆಂಪಾಗಿದ್ದವು.

ಭಂಡಾರ ಜಿಲ್ಲೆಯಲ್ಲಿ ಇನ್ನೊಂದು ಹಿಂದುಳಿತ ಜಾತಿಗೆ ಸೇರಿದ ಕುಣುಬಿ ಜನಾಂಗ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಿತ್ತು. ಬಹುತೇಕ ವಿಧಾನ ಸಭಾಕ್ಷೇತ್ರಗಳು, ಗ್ರಾಮ ಪಂಚಾಯಿತು, ತಾಲ್ಲೋಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ಈ ಜಾತಿಗೆ ಸೇರಿದ ಜನಪ್ರತಿನಿಧಿಗಳ ಸ್ವತ್ತಾಗಿದ್ದವು.

ಬಯ್ಯಾಲಾಲ್ ಬೂತ್‌ಮಾಂಗೆ ತನ್ನ ಜಮೀನಿಗೆ ಸಂಬಂಧಪಟ್ಟ ವಿವಾದಕ್ಕೆ ತನ್ನ ಹಳ್ಳಿಯ ಕುಣುಬಿ ಜನಾಂಗದ ಸದಸ್ಯರ ಮೇಲೆ ಮೊಕದ್ದಮೆ ದಾಖಲಿಸಿದ ಪರಿಣಾಮವಾಗಿ ಇತಿಹಾಸ ಕಂಡರಿಯದ ಅಮಾನವೀಯ ರೀತಿಯಲ್ಲಿ ಖೆರ್ಲಾಂಜಿಯಲ್ಲಿ ದಲಿತ ಕುಟುಂಬದ ನರಮೇಧವೊಂದು ನಡೆದು ಹೋಯಿತು.

2006 ರ ಸೆಪ್ಟಂಬರ್ 29 ರಂದು ಬಯ್ಯಾಲಾಲ್ ತನ್ನ ಜಮೀನಿಗೆ ಹೋದ ಸಂದರ್ಭದಲ್ಲಿ ನೇರವಾಗಿ ಅವನ ಮನೆಗೆ ನುಗ್ಗಿದ ಕುಣಬಿ ಜನಾಂಗದ ಸದಸ್ಯರು ಪತ್ನಿ ಸುರೇಖ ಮತ್ತು ಮಗಳು 19 ವರ್ಷದ ಪ್ರಿಯಾಂಕಳನ್ನು ಮನೆಯಿಂದ ಹೊರೆಗೆ ಎಳೆದು ತಂದು ಅವರನ್ನು ನಗ್ನಗೊಳಿಸಿ ಖೆರ್ಲಾಂಜಿ ಹಳ್ಳಿಯ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಇದನ್ನು ತಡೆಯಲು ಬಂದ ಇಬ್ಬರು ಗಂಡು ಮಕ್ಕಳಾದ ಕಿಶನ್ ಮತ್ತು ಸುಧೀರ್  ಅವರನ್ನು ಸಹ ಅರನಗ್ನಗೊಳಿಸಿ, ಥಳಿಸಿ ಮರೆವಣಿಗೆಯಲ್ಲಿ ಕೊಂಡೊಯ್ದರು. ಊರಿನ ಮಧ್ಯಭಾಗಕ್ಕೆ ಈ ಅಮಾಯಕರನ್ನು ಕರೆತಂದ ಜನ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಜೀವ ಹೋಗುವವರೆಗೂ ತುಳಿದರು. ಕ್ಷಣದಲ್ಲಿ ಜಾತಿಯ ದೆವ್ವ ಮೆಟ್ಟಿದವರಂತೆ ವರ್ತಿಸುತಿದ್ದ ಕುಣಬಿ ಜನಾಂಗದ ಈ ಅಮಾನುಷ ಕೃತ್ಯವನ್ನು ತಡೆಯುವ ಶಕ್ತಿ ಆ ಹಳ್ಳಿಯಲ್ಲಿ ಯಾರಿಗೂ ಇರಲಿಲ್ಲ. ಎಲ್ಲರೂ ಮೌನವಾಗಿ ಈ ನರಮೇಧಕ್ಕೆ ಸಾಕ್ಷಿಯಾದರು. ಒಬ್ಬ ಮಗನ (ಸುಧೀರ್) ಶವವನ್ನು ಊರಾಚೆಗಿನ ಕಾಲುವೆಗೆ ತೆಗೆದುಕೊಂಡು ಹೋಗಿ ಬಿಸಾಡಿದರು. ಈ ಘಟನೆಯ ವೇಳೆ ಬಯ್ಯಾಲಾಲ್ ಮನೆಯಲ್ಲಿ ಇಲ್ಲದ ಕಾರಣ ಅವನ ಜೀವ ಮಾತ್ರ ಉಳಿಯಿತು. (ಅಲ್ಲಿ ಸಂಗ್ರಹಿಸಿಕೊಂಡು ಬಂದ ಚಿತ್ರಗಳೇ ಘಟನೆಯ ಭೀಕರತೆಯನ್ನು ಹೇಳುತ್ತವೆ.)

ದುರಂತವೆಂದರೆ, ಇಡೀ ಭಾರತವೇ ನಾಚಿ ತಲೆ ತಗ್ಗಿಸುವಂತಹ ಈ ಘಟನೆ ನಡೆದರೂ ಇದು ಯಾವುದೇ ಪತ್ರಿಕೆಯಲ್ಲಿ, ಅಥವಾ ದೃಶ್ಯ ಮಾಧ್ಯದಲ್ಲಿ ಮೊದಲ ನಾಲ್ಕು ದಿನಗಳ ಕಾಲ ಸುದಿಯಾಗಲಿಲ್ಲ. ನಾಗಪುರದ ಟೈಮ್ಸ್ ಆಪ್ ಇಂಡಿಯಾದ ಪ್ರತಿನಿಧಿ ಸಬ್ರಿನಾ ಬರ್‌ವಾಲ್ಟರ್ ಎಂಬುವರು ಈ ಹಳ್ಳಿಗೆ ತೆರಳಿ, ಅಲ್ಲಿನ ಕೆಲವು ದಲಿತ ಯುವಕರು ತೆಗೆದಿದ್ದ ಛಾಯಾ ಚಿತ್ರಗಳನ್ನು ಸಂಗ್ರಹಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ಧಿಮಾಡಿದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತು. ನಂತರ ನಾಗಪುರದಲ್ಲಿ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಹಿಂಸೆಗೆ ಇಳಿದಾಗ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಸರ್ಕಾರ ಘಟನೆಯನ್ನು ಸಿ.ಬಿ.ಐ. ಗೆ ವಹಿಸಿತು. ನಂತರ ರಾಷ್ಟ್ರ ಮಟ್ಟದಲ್ಲಿ ಅನೇಕ ಸ್ವತಂತ್ರ ತನಿಖಾ ಆಯೋಗಗಳು ಖೇರ್ಲಾಂಜಿ ಗ್ರಾಮಕ್ಕೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದವು. ಘಟನೆಯ ಹಿಂದೆ ಕುಣಭಿ ಜಾತಿಗೆ ಸೇರಿದ್ದ ಸ್ಥಳಿಯ ಬಿ.ಜೆ.ಪಿ. ಶಾಸಕ ಕುರ್ಡೆಯ ಕೈವಾಡವಿದೆ ಎಂದು ಸಹ ಅನೇಕ ಸಂಘಟನೆಗಳು ಆರೋಪಿಸಿದ್ದವು.

ಸಿ.ಬಿ.ಐ. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿಯನ್ನು ಬಂಧಿಸಿತು. 2008ರಲ್ಲಿ ಭಂಡಾರ ಜಿಲ್ಲಾ ನ್ಯಾಯಾಲಯ 24 ಬಂಧಿತ ಆರೋಪಿಗಳಲ್ಲಿ ಎಂಟು ಮಂದಿಗೆ ಗಲ್ಲು ಶಿಕ್ಷೆ ಮತ್ತು ಆರು ಮಂದಿಗೆ 25 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ಉಳಿದವರನ್ನು ಸಾಕ್ಷಾಧಾರಗಳ ಕೊರತೆಯ ಮೇಲೆ ಖುಲಾಸೆಗೊಳಿಸಿತು. ಆರೋಪಿಗಳು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ನಾಗಪುರದ ವಿಭಾಗೀಯ ಹೈಕೋರ್ಟ್ ಪೀಠದ ಮೆಟ್ಟಿಲೇರಿದಾಗ, ವಿಭಾಗೀಯ ಪೀಠ ಭಂಡಾರದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು 2008ರ ಜುಲೈನಲ್ಲಿಎತ್ತಿ ಹಿಡಿಯಿತು. ಮತ್ತೇ ಅರೋಪಿಗಳು ಮುಂಬೈ ಹೈಕೋರ್ಟ್ ನ್ಯಾಯಾಲಯದ ಕದತಟ್ಟಿದರು. ಮುಂಬೈ ಉಚ್ಛ ನ್ಯಾಯಾಲಯ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಎಂಟು ಮಂದಿ ಆರೋಪಿಗಳಲ್ಲಿ ಆರುಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಕೇವಲ ಇಬ್ಬರಿಗೆ ಮಾತ್ರ ಗಲ್ಲು ಶಿಕ್ಷೆ ವಿಧಿಸಿತು. ಈ ಕುರಿತು ಈಗ ನರಮೇಧದಲ್ಲಿ ಉಳಿದ ದಲಿತ ಬಯ್ಯಾಲಾಲ್ ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ. ಜೊತೆಗೆ ಜೀವ ಭಯದಿಂದ ತನ್ನೂರಾದ ಖೆರ್ಲಾಂಜಿಯನ್ನು ತೊರೆದಿದ್ದಾನೆ. ಇವನಿಗೆ ಮಹಾರಾಷ್ಟ್ರ ದ ದಲಿತ ಚಿಂತಕ ಹಾಗೂ ಲೇಖಕ ಆನಂದ್ ತೇಲ್ತುಬ್ಡೆ ಆಸರೆಯಾಗಿ ನಿಂತು ಹೋರಾಟ ನಡೆಸುತಿದ್ದಾರೆ.

ಜಾತಿಪದ್ಧತಿಯ ವಿನಾಶಕ್ಕೆ ಹನ್ನೊಂದನೇ ಶತಮಾನದ ಬಸವಣ್ಣ ನಿಂದ ಹಿಡಿದು 20ನೇ ಶತಮಾನದ ಗಾಂಧಿ, ಅಂಬೇಡ್ಕರ್, ಲೋಹಿಯಾ ವರೆಗೆ ಅನೇಕ ಮಹನೀಯರು ಜೀವನ ಪೂರ್ತಿ ಹೊರಾಡಿದರೂ ಅದು ಹಲವು ರೂಪಗಳಲ್ಲಿ ಮೈದಾಳುತ್ತ್ತಾ ಮನುಕುಲಕ್ಕೆ ಸವಾಲಾಗುತ್ತಾ ನಿಂತಿರುವುದಕ್ಕೆ ಈ ಖೆರ್ಲಾಂಜಿ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗಿನ ದಶಕದಲ್ಲಿ ಜಾತಿ ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಮಾಂಸ, ಮಜ್ಜೆ ಮತ್ತು ರಕ್ತವಾಗಿ ಎಲ್ಲಾ ಅಧಿಕಾರಸ್ಥ ಜನಗಳ ಮತ್ತು ಜನಪ್ರತಿನಿಧಿಗಳ ನರನಾಡಿಗಳಲ್ಲಿ ಹರಿಯುತ್ತಿರುವುದನ್ನು ಗಮನಿಸಿದರೆ, ಭವಿಷ್ಯ ಭಾರತದ ಬಗ್ಗೆ ಯಾವ ಆಶಯ ಮತ್ತು ಕನಸುಗಳು ಪಜ್ಞಾವಂತರ ಎದೆಯಲ್ಲಿ ಈಗ ಹಸಿರಾಗಿ ಉಳಿದಿಲ್ಲ. ಉಳಿಯುವ ಸಾಧ್ಯತೆಗಳು ಕೂಡ ಇಲ್ಲ.

ಸಿರಿಗೆರೆ ಶ್ರೀ ವಿಚಾರ : ಹೇಳದೇ ಉಳಿದುಕೊಂಡ ವಿಷಯಗಳು

-ಜಿ.ಮಹಂತೇಶ್

ನಿವೃತ್ತಿ ಹಿಂತೆಗೆತ ನಿರ್ಧಾರ :

ಸಿರಿಗೆರೆ ಶ್ರೀಗಳು ಪೀಠದಿಂದ ಸ್ವಯಂ ನಿವೃತ್ತಿ ಘೋಷಿಸಿದ ದಿನವೇ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡ ಪ್ರಸಂಗ, ಬಿಟ್ಟ ಬಾಣವನ್ನು ಮತ್ತದೇ ಸಿರಿಗೆರೆ ಬತ್ತಳಿಕೆಯೊಳಗೆ ಮರಳಿದಂತಿದೆ. ತುಂಬಿದ ಸಭೆಯಲ್ಲಿ ಶ್ರೀಗಳು ಒಂದಷ್ಟು ಹೊತ್ತು ಭಾವುಕರಾದ ಹಿನ್ನೆಲೆಯಲ್ಲಿ ಅಲ್ಲಿ ಕಣ್ಣೀರ ಸಾಗರವೇ ಹರಿದಿತ್ತು. ಇನ್ನೇನು ಇಡೀ ಸಾಗರ ಉಕ್ಕಿ ಹರಿಯಲಿದೆ ಎಂದು ಭಾವಿಸುತ್ತಿದ್ದಂತೆ, ಇಡೀ ಸಾಗರವನ್ನೇ ತನ್ನೊಳಗೆ ಇಂಗಿಸಿಕೊಂಡಿರುವುದು ಸಿರಿಗೆರೆ ಮಣ್ಣಿನ ವೈಶಿಷ್ಟ್ಯ.

ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸ್ವಯಂ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಜನಪ್ರಿಯ ಪತ್ರಿಕೆಯೊಂದು, ಇದನ್ನೇ ಮಾದರಿಯಾಗಿಟ್ಟುಕೊಂಡು 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳೇಕೆ ನಿರ್ಧಾರ ಪ್ರಕಟಿಸಬಾರದು ಎಂದು ಜನಮತ ನಡೆಸಿತ್ತು. 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳ ಪಟ್ಟಿಯಲ್ಲಿ ಸಿರಿಗೆರೆ ಮಠದ ಆದ್ಯ  ಭಕ್ಕರಲ್ಲೊಬ್ಬರಾಗಿರುವ ಡಾ.ಶಾಮನೂರು ಶಿವಶಂಕರಪ್ಪ,  ಯಡಿಯೂರಪ್ಪ ಅವರಂಥ ‘ಧೀಮಂತ’ ರಾಜಕಾರಣಿಗಳ್ಯಾರು ಜನಮತವನ್ನು ಕೇಳಿಸಿಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸ.

ಸ್ವಯಂ ನಿವೃತ್ತಿ ಘೋಷಣೆ ಮತ್ತು ಭಕ್ತರು ಹಾಕಿದ ಒತ್ತಡದಿಂದ ನಿವೃತ್ತಿಯಿಂದ ಹಿಂದೆ ಸರಿದ (ಉತ್ತರಾಧಿಕಾರಿ ಆಯ್ಕೆ ಆಗುವವರೆಗೆ) ಈ ಪ್ರಸಂಗದ ಮೂಲಕ ಸಿರಿಗೆರೆ ಸಾಮ್ರಾಜ್ಯದಲ್ಲಿ ಮತ್ತೊಮ್ಮೆ ವಿಜೃಂಭಿಸಿದ್ದು ಮತ್ತದೇ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು. ಇದೇ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪರಿಚಿತರೊಬ್ಬರು ಇನ್ನೊಂದು ಸುದ್ದಿಯತ್ತ ಗಮನ ಸೆಳೆದರು.  ’ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಘೋಷಿಸುವ ಮೊದಲೇ,  ಅಂದರೆ ಅದಕ್ಕೆ ಒಂದೆರಡು ದಿನಗಳ ಹಿಂದೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು  “ವಿಜಯ ವಾಣಿ” ಪತ್ರಿಕೆಯಲ್ಲಿ  ಹಿಂದಿನ ದೊಡ್ಡ ಗುರುಗಳು 60ನೇ ವಯಸ್ಸಿಗೇ ನಿವೃತ್ತಿಯಾದ ಬಗ್ಗೆ ಪ್ರಸ್ತಾಪಿಸಿ ಬರೆದಿದ್ದರು.  ಬಹುಶಃ ಅವರ ಬರಹದಿಂದ ಕ್ರುದ್ಧರಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಹೊಂದುವ ಹಂಬಲವನ್ನು ವ್ಯಕ್ತಪಡಿಸಿರಬಹುದು,’ ಎಂದು.

ಚನ್ನಗಿರಿ ತಾಲೂಕಿನ ಸಾಣೆಹಳ್ಳಿಯ ಈ ಮಠ, ಸಿರಿಗೆರೆಯ ಶಾಖಾ ಮಠ. ಪಂಡಿತಾರಾಧ್ಯರು, ಡಾ.ಶಿವಮೂರ್ತಿ ಶಿವಾಚಾರ್ಯರಂತಲ್ಲ. ಒಂದಷ್ಟು ಸ್ವಾಮೀಜಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಮಾಮೂಲಿ ಸಾಣೆಹಳ್ಳಿಯನ್ನು ರಂಗಕರ್ಮಿಗಳ ಹಳ್ಳಿಯನ್ನಾಗಿಸಿದ್ದು ಇವರ ವಿಶೇಷ. ಸಿ.ಜಿ.ಕೃಷ್ಣಸ್ವಾಮಿ ಅವರಂಥ ರಂಗಕರ್ಮಿಯಿಂದ ನಿಜವಾದ ಅರ್ಥದಲ್ಲಿ ಕೆಲಸ ತೆಗೆಸಿದ್ದ ಪಂಡಿತಾರಾಧ್ಯರು, ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಥವಾ ಸಿರಿಗೆರೆ ಪ್ರಧಾನ ಮಠದ ಸಾಂಸ್ಕೃತಿಕ ಮುಖ ಎಂದರೇ ತಪ್ಪೇನಿಲ್ಲ. ಇವರ ಜೊತೆಗಿನ ಒಡನಾಟದಿಂದಾಗಿಯೇ ಹಲವಾರು ಪ್ರಗತಿಪರರು ಸಿರಿಗೆರೆ ಮಠದ ಬಗ್ಗೆ ಮತ್ತು  ಡಾ.ಶಿವಮೂರ್ತಿ ಶಿವಾಚಾರ್ಯರ ಪಾಳೇಗಾರಿಕೆ ಮತ್ತು ಪ್ರತಿಗಾಮಿ ನಿಲುವುಗಳ ಬಗ್ಗೆ, ಅವರು ನಡೆಸುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಭಿನ್ನಾಭಿಪ್ರಾಯ ತೋರಿಸದೆ ಇರುತ್ತಾರೆ.

ಪ್ರಾಣಿ ಬಲಿ ನಿಷೇಧ :

ಅಷ್ಟೇ ಅಲ್ಲ. ಮೌಢ್ಯತೆ, ಪ್ರಾಣಿ ಬಲಿ ವಿರುದ್ಧ ದೊಡ್ಡ ದನಿಯಲ್ಲದಿದ್ದರೂ ಸಣ್ಣ ದನಿಯನ್ನು ಪಂಡಿತಾರಾಧ್ಯರು ಎತ್ತಿದ್ದಾರೆ. ಇದಕ್ಕೆ ಅವರನ್ನ ಅಭಿನಂದಿಸಲೇಬೇಕು. ದಾವಣಗೆರೆಯಲ್ಲಿ ಲಾಗಾಯ್ತಿನಿಂದಲೂ ನಡೆಯುತ್ತಿರುವ ದುರ್ಗಾಂಬಿಕಾ ಜಾತ್ರಾ ಮಹೋತ್ಸವದಲ್ಲಿ ಕೋಣ ಬಲಿ ಕೊಡುವುದರ ವಿರುದ್ಧ ದನಿ ಎತ್ತುವ ಮೂಲಕ ಪ್ರಥಮ ಬಾರಿಗೆ ದನಿ ಎತ್ತಿ, ಕಳಕಳಿ ವ್ಯಕ್ತಪಡಿಸಿದ್ದರು. ಆದರೆ, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯರು ಇವರಿಗೆ ಬೆಂಬಲಿಸಿದ್ದರ ಬಗ್ಗೆ ಎಲ್ಲಿಯೂ ಕೇಳಿ ಬರಲಿಲ್ಲ. ಕನಿಷ್ಠ ಉಸಿರೆತ್ತಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಅಂದ ಹಾಗೇ, ದುರ್ಗಾಂಬಿಕೆಗೆ ಕೋಣ ಬಲಿ ಕೊಡುವ ಪದ್ಧತಿ ಇವತ್ತು ನೆನ್ನೆಯದಲ್ಲ. ತಲ ತಲಾಂತರಗಳಿಂದಲೂ ನಡೆದು ಬರುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಕೂಡ ಸಿರಿಗೆರೆಯ ಡಾ.ಶಿವಮೂರ್ತಿ ಶ್ರೀಗಳಾಗಲೀ, ಪಂಡಿತಾರಾಧ್ಯ ಶ್ರೀಗಳಾಗಲೀ ತುಂಬಾ ಮೊದಲೇ ಕೋಣ ಬಲಿಯನ್ನ ನಿಷೇಧಿಸಲು ಅರಿವು ಮೂಡಿಸಬಹುದಿತ್ತು. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದ ಶ್ರೀಗಳು, 60ರ ಇಳಿ ವಯಸ್ಸಿನಲ್ಲಿ ಅದೂ ದಿಢೀರ್ ಎಂದು ಕೋಣ ಬಲಿ ನಿಷೇಧಿಸುವುದರ ಬಗ್ಗೆ ದನಿ ಎತ್ತಿದ್ದರ ಹಿಂದೆ ಒಂದಷ್ಟು ಪ್ರಶ್ನೆಗಳಿವೆ. ಇಲ್ಲಿ ಪ್ರಶ್ನೆಗಳಿರುವುದು ಕೋಣ ಬಲಿ ವಿರುದ್ಧ ದನಿ ಎತ್ತಿದ್ದಕ್ಕಲ್ಲ. ದನಿ ಎತ್ತಿರುವ ಕಾಲಘಟ್ಟದ ಬಗ್ಗೆ.

ಇದೇ ದುರ್ಗಾಂಬಿಕ ಜಾತ್ರಾ ಮಹೋತ್ಸವ ಸಮಿತಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಸ್ಥಳೀಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೂ ಈ ವಿಚಾರ ಗೊತ್ತಿಲ್ಲವೆಂದೇನಿಲ್ಲ. ಕೋಣ ಬಲಿ ನಿಷೇಧಿಸುವ ಬಗ್ಗೆ ನಿಜಕ್ಕೂ ಶ್ರೀಗಳಲ್ಲಿ ಇಚ್ಛಾಶಕ್ತಿ ಇದ್ದಿದ್ದರೇ ತಮ್ಮ ಮಾತುಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಿರುವ ಶಾಮನೂರು ಶಿವಶಂಕರಪ್ಪನವರಿಗೆ ಈ ಬಗ್ಗೆ ತಾಕೀತು ಮಾಡಬಹುದಿತ್ತಲ್ಲ?

ಕೋಣ ಬಲಿ ಬಗ್ಗೆ ಪ್ರಸ್ತಾಪವಾಗಿರುವ ಕಾರಣದಿಂದಾಗಿ  ನರ ಬಲಿಯನ್ನೂ ಪ್ರಸ್ತಾಪಿಸುವುದು ಉಚಿತ ಎನ್ನಿಸುತ್ತದೆ. ರಾಣೆಬೆನ್ನೂರು ತಾಲೂಕಿನ ತಿರುಮಲದೇವರಕೊಪ್ಪ ಎನ್ನುವ ಸಣ್ಣ ಊರಿನಲ್ಲಿ ಸಿರಿಗೆರೆ ಮಠಕ್ಕೆ ನಡೆದುಕೊಳ್ಳುವ ಭಕ್ತನಿಂದ ದಲಿತ ಸಮುದಾಯಕ್ಕೆ ಸೇರಿರುವ ಯುವಕನನ್ನು ವಾಸ್ತು ಬದಲಿಸುವ ನೆಪದಲ್ಲಿ ಬಲಿ ತೆಗೆದುಕೊಂಡಿದ್ದರೂ (ಹಾವೇರಿ ಪೊಲೀಸರು ಈ ಪ್ರಕರಣವನ್ನ ನರಬಲಿ ಎಂದು ಕರೆಯದೇ ಅನೈತಿಕ ಸಂಬಂಧ ಎಂದು ಹಣೆಪಟ್ಟಿ ಕಟ್ಟಿ ಸಹಜ ಕೊಲೆ ಪ್ರಕರಣ ಎಂದು ಮುಚ್ಚಿ ಹಾಕಿದೆ) ಪಂಡಿತಾರಾಧ್ಯ ಶ್ರೀಗಳು ಮತ್ತು ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ತಮ್ಮ ಭಕ್ತರಿಗೆ ಇದರ ಬಗ್ಗೆ ನಿಜವಾದ ಅರ್ಥದಲ್ಲಿ ಜಾಗೃತಿ ಮೂಡಿಸಬಹುದಿತ್ತಲ್ಲ?

ಇವರಿಬ್ಬರಷ್ಟೇ ಅಲ್ಲ. ವಿವಿಧ ಕೋಮುಗಳಿಗೆ ಸೇರಿರುವ ಯಾವ ಮಠಾಧೀಶರೂ ನರಬಲಿ ಪ್ರಕರಣವನ್ನು ಇವತ್ತಿಗೂ ಗಂಭಿರವಾಗಿ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಷಾದ ಎನಿಸದಿರದು. ಇರಲಿ, ಸಿರಿಗೆರೆ ಮಠದಿಂದಲೇ ಯಾಕೆ ಇಂಥ ಕೆಲಸ ಆಗಬೇಕಿದೆ ಎಂದರೇ, ಈ ಮಠಕ್ಕಿರುವ ಭಕ್ತ ವೃಂದ, ಅಪಾರ ಪ್ರಮಾಣದಲ್ಲಿದೆ. ಸಹಜವಾಗಿ ಆಯಾ ಸಮುದಾಯದ ಮಂದಿ, ತಮ್ಮ ಸಮುದಾಯದ ಮಠಾಧೀಶರು ಹೇಳುವ ಮಾತುಗಳನ್ನ ಅಕ್ಷರಶಃ ಪಾಲಿಸುತ್ತಾರೆ ಎನ್ನುವ ನಂಬಿಕೆಯಿಂದ.

ಶಿಕ್ಷಣ ವ್ಯಾಪಾರೀಕರಣ, ಅನುಭವ ಮಂಟಪ :

ಇನ್ನು, ಸಿರಿಗೆರೆ ಶ್ರೀಗಳ ಬಗ್ಗೆ ಅಪಸ್ವರ ಎತ್ತಿದ್ದಕ್ಕೆ ಒಂದಷ್ಟು ಮಂದಿ ತಗಾದೆ ತೆಗೆದರು. ಅವರ ಮುಖ್ಯ ತಗಾದೆಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸಿರಿಗೆರೆ ಮಠ ಮಾಡಿರುವ ಕೆಲಸವನ್ನು ನೆನೆಯದಿರುವುದಕ್ಕೆ. ನಿಜಕ್ಕೂ ಹೇಳುವುದಾದರೇ ಶೈಕ್ಷಣಿಕ ವ್ಯವಸ್ಥೆಯನ್ನು ವ್ಯಾಪಾರೀಕರಣ ಮಾಡಿರುವ ಮಠಗಳಲ್ಲಿ ಸಿರಿಗೆರೆ ಮಠವೂ ಒಂದು ಎಂಬುದನ್ನ ತಗಾದೆ ಎತ್ತಿರುವವರು ಗಮನಿಸಬೇಕು.

ನಿಮಗೆ ಅನುಭವ ಮಂಟಪದ ಹೆಸರು ಗೊತ್ತಿರಬೇಕಲ್ಲ. 12ನೇ ಶತಮಾನದಲ್ಲಿ ನಿಜವಾದ ಕ್ರಾಂತಿ ಸಂಭವಿಸಿದ್ದೇ ಈ ಅನುಭವ ಮಂಟಪದ ಮೂಲಕ. ದಾವಣಗೆರೆ ನಗರದಲ್ಲಿ “ಅನುಭವ ಮಂಟಪ”ದ ಹೆಸರಿನಲ್ಲಿ ಶಾಲಾ ಕಾಲೇಜು ನಡೆಸುತ್ತಿರುವ ಸಿರಿಗೆರೆ ಮಠ, ಡೊನೇಷನ್ ಹೆಸರಿನಲ್ಲಿ ಪೋಷಕರನ್ನು ಸುಲಿಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಅಷ್ಟು ಸುಲಭವಾಗಿ ಇಲ್ಲಿ ಪ್ರವೇಶ ದೊರೆಯುವುದಿಲ್ಲ. ಸರ್ಕಾರ ಡೊನೇಷನ್ ನಿಷೇಧಿಸಿದ್ದರೂ “ಅನುಭವ ಮಂಟಪ” ಶಾಲೆ ಮಾತ್ರ ಬೋಧನಾಶುಲ್ಕಕ್ಕೆ ಹೊರತಾದ ಡೊನೇಷನ್ ತೆಗೆದುಕೊಳ್ಳುವುದರಿಂದ ಹಿಂದೆ ಸರಿದ ಹಾಗೆ ಕಾಣುವುದಿಲ್ಲ.

ಅಣ್ಣ ಬಸವಣ್ಣನ ಆಶಯಗಳನ್ನು ಪುಂಖಾನುಪುಂಖವಾಗಿ ಉದ್ಧರಿಸುವ ಮಠಗಳಲ್ಲಿ ಸಿರಿಗೆರೆ ಮಠ ಅಗ್ರಗಣ್ಯ. ಇಂಥ ಮಠ, ಮೇಲಿನ ಮಾತುಗಳೆಲ್ಲ ನಿಜವೇ ಆದರೆ, ಶಿಕ್ಷಣವನ್ನು  ವ್ಯಾಪಾರೀಕರಣ ಮಾಡಿರುವುದು, ಅದರಲ್ಲೂ ಶಾಲೆ, ಕಾಲೇಜಿಗೆ ಅನುಭವ ಮಂಟಪ ಹೆಸರಿಟ್ಟು, ಡೊನೇಷನ್ ಹೆಸರಿನಲ್ಲಿ ವಸೂಲಿಗಿಳಿದಿರುವುದು ನಿಜಕ್ಕೂ ದುರದೃಷ್ಟಕರ. ಶಿಕ್ಷಣವನ್ನು ಅಕ್ಷರಶಃ ವ್ಯಾಪಾರೀಕರಣ ದೂಡಿರುವ ಸಿರಿಗೆರೆ ಮಠ, ಶೈಕ್ಷಣಿಕ ವಲಯಕ್ಕೆ ನೀಡಿರುವ ಕೊಡುಗೆ ಏನು ಎನ್ನುವುದನ್ನು ನಿಜ ಶರಣರು ಅರಿಯಬೇಕಿದೆ. ಎಲ್ಲಿಯ ಬಸವ ಕಲ್ಯಾಣದ ಅನುಭವ ಮಂಟಪ? ಎಲ್ಲಿಯ ಸಿರಿಗೆರೆಯ ಅನುಭವ ಮಂಟಪ?

ಇನ್ನು, ಸಿರಿಗೆರೆ ಮಠದ ಆಶ್ರಯದಲ್ಲಿರುವ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ನೇಮಕಾತಿಯಲ್ಲೂ ಹಣದ ಚೀಲ ತಂದವರಿಗಷ್ಟೇ ಇಲ್ಲಿ ಮನ್ನಣೆ ಎನ್ನುವ ವಾತಾವರಣ ಇದೆ ಎನ್ನುವ ಮಾತಿದೆ. ಯಾರೂ ಇದನ್ನೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಮಠ ಕಳಿಸುವ ಪಟ್ಟಿಯನ್ನೇ ಸರ್ಕಾರ ಮಾನ್ಯ ಮಾಡಬೇಕು. ಅಂಥದ್ದೊಂದು ಅಘೋಷಿತ, ಅಲಿಖಿತ ಆಜ್ಞೆ. ಹಾಗೆಯೇ, ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗೆ ಕನಿಷ್ಠ ಆರೇಳು ಲಕ್ಷ ರೂಪಾಯಿ ಕೊಟ್ಟವರಿಗಷ್ಟೇ ಮಠದ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದಂತೆ. ಆಕಸ್ಮಾತ್ ಹಣ ಇಲ್ಲದಿದ್ದರೇ, ಶ್ರೀಗಳು ತೋರಿಸುವ ಕನ್ಯೆಯನ್ನು ವಿವಾಹ ಆಗುವ ಮೂಲಕ ಅದನ್ನು ಸರಿದೂಗಿಸಬೇಕಂತೆ. ಈ ಮಾತುಗಳು ಕಪೋಲ ಕಲ್ಪಿತವಲ್ಲ, ಬದಲಿಗೆ  ಮಠದಲ್ಲಿ ಕೇಳಿ ಬರುವ ಪ್ರಚಲಿತ ಮಾತುಗಳು. ಇವೆಲ್ಲ ಹಿಂದಿನ ಹಿರಿಯ ಸ್ವಾಮಿಗಳನ್ನು ನೋಡಿ ಬೆಳೆದ ಈ ಮಠಕ್ಕೆ ನಡೆದುಕೊಳ್ಳುವ ಹಳೆತಲೆಮಾರಿನ ಪ್ರಾಮಾಣಿಕ ಭಕ್ತರಿಗೆ ಇರಿಸುಮುರಿಸು ಮಾಡಿದೆ ಎನ್ನುವ ಮಾತಿದೆ.

ಇವು, ಸಿರಿಗೆರೆ ಶ್ರೀಗಳು ಮತ್ತು ಶಾಖಾ ಮಠಗಳ ಶ್ರೀಗಳ ಬಗ್ಗೆ ಇರುವ ಆಕ್ಷೇಪಗಳು. ಇಂಥ ಮಠಗಳ ಪಾಲಿಗೆ ಅಣ್ಣ ಬಸವಣ್ಣ ಕೇವಲ ಒಂದು ಸರಕಷ್ಟೇ.

ಈಗ ನೀವೇ ಹೇಳಿ, ಬಸವಣ್ಣನ ಆಶಯಗಳಿಗೂ, ಸಿರಿಗೆರೆ ಮಠದ ಆಶಯಗಳ ಮಧ್ಯೆ ಏನಾದರೂ ಸಾಮ್ಯತೆಗಳಿವೆಯಾ? ಬಸವಣ್ಣನ ಆಶಯಗಳಿಗೆ ಪೂರಕವಾಗಿ ಸಿರಿಗೆರೆ ಮಠ ಯಾವತ್ತೂ ಕಾರ್ಯ ನಿರ್ವಹಿಸಿಲ್ಲ ಎಂಬುದು ಇದರಿಂದ ಸ್ಪಷ್ಟ ಅಗಬಹುದೇನೋ?

ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಬಿಜೆಪಿ ತೊಳಲಾಟ


-ಚಿದಂಬರ ಬೈಕಂಪಾಡಿ


ಇದು ಎರಡು ಅತ್ಯಂತ ಮುಖ್ಯ ವಿಷಯಗಳ ನಡುವಿನ ಆಯ್ಕೆ, ಸಿದ್ಧಾಂತ ಮತ್ತು ವ್ಯಕ್ತಿ. ಸಿದ್ಧಾಂತ ಅನಿವಾರ್ಯವೋ, ವ್ಯಕ್ತಿ ಅನಿವಾರ್ಯವೋ? ಸಿದ್ಧಾಂತವನ್ನು ರೂಪಿಸುವವನು ವ್ಯಕ್ತಿ. ಸಿದ್ಧಾಂತವನ್ನು ಅನುಷ್ಠಾನ ಮಾಡುವವನು ವ್ಯಕ್ತಿ. ಇವೆರಡರಲ್ಲಿ ಯಾವುದು ಮುಖ್ಯ? ಎರಡೂ ಮುಖ್ಯ ಎನ್ನುವ ಉತ್ತರ ಸಹಜವಾದರೂ ಆಯ್ಕೆ ಮಾಡಬೇಕಾಗಿರುವುದು ಒಂದನ್ನು ಮಾತ್ರ.

ನಿಜಕ್ಕೂ ಇಂಥ ಸಂದರ್ಭದಲ್ಲಿ ಆಯ್ಕೆ ಅಷ್ಟು ಸುಲಭವಲ್ಲ, ಇದೇ ಸ್ಥಿತಿ ಈಗ ಬಿಜೆಪಿಗೆ. ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೂಡಾ ಈ ವಿಚಾರ ಅತ್ಯಂತ ಗಹನವಾಗಿ ಚರ್ಚೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಕೂಡಾ ಬಿಜೆಪಿಯ ಪಾಲಿಗೆ ಸಿದ್ಧಾಂತ ಮತ್ತು ವ್ಯಕ್ತಿ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಕಗ್ಗಂಟಾಗಿದೆ. ವಾಸ್ತವ ಸ್ಥಿತಿಯ ಹಿನ್ನೆಲೆಯಲ್ಲಿ ಬಿಜೆಪಿಯ ಇತಿಹಾಸವನ್ನು ಅವಲೋಕಿಸಿದರೆ ಇನ್ನೂ ಹೆಚ್ಚು ಸೂಕ್ಷ್ಮವಾದ ಸಂಗತಿಗಳು ಅನಾವರಣಗೊಳ್ಳುತ್ತವೆ.

ಸಂಘಪರಿವಾರ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಹೀಗೆಂದು ವ್ಯಾಖ್ಯಾನಿಸಲಾಗುತ್ತದೆ. ಇದು ಅರ್ಧ ಸತ್ಯ ಈಗ. ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲು ಜನಸಂಘವನ್ನು ನೆನಪಿಸಿಕೊಂಡರೆ ಅದು ನಿಜಕ್ಕೂ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಯಾವ ಕಾಲಕ್ಕೂ ಪ್ರಸ್ತುತವಾಗುವ ತನ್ನದೇ ವ್ಯಾಪ್ತಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದ್ದ ಸಂಘಟನೆ. ಅದಕ್ಕೆ ರಾಜಕೀಯವಾದ ಮಹತ್ವಕಾಂಕ್ಷೆ ಅಂದು ಇರಲಿಲ್ಲ, ಬದಲಾಗಿ ಸಿದ್ಧಾಂತವನ್ನು ಪ್ರತಿಪಾದಿಸುವುದು ಮೂಲ ಆಶಯವಾಗಿತ್ತು. ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ಗೆಲುವನ್ನು ನಿರೀಕ್ಷೆ ಮಾಡುತ್ತಿರಲಿಲ್ಲ ಬದಲಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಆದ್ಯತೆಯಾಗಿತ್ತು.

ಆದರೆ ರಾಜಕೀಯ ಆಶೋತ್ತರಗಳು ಬೆಳೆದಂತೆಲ್ಲಾ ಸಂಘಪರಿವಾರವೂ ತನ್ನ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿತು. ಸಿದ್ಧಾಂತವನ್ನು ಇಟ್ಟುಕೊಂಡೇ ರಾಜಕೀಯ ಶಕ್ತಿಯನ್ನು ಉದ್ಧೀಪನಗೊಳಿಸುವುದು ಅದರ ಆಶಯವಾಗಿ ಗೋಚರಿಸಿತು. ಇದಕ್ಕೆ ಕ್ರಿಯಾತ್ಮಕ ಮತ್ತು ಹೆಚ್ಚು ವ್ಯವಸ್ಥಿತವಾದ ಚೌಕಟ್ಟು ಹಾಕಿಕೊಳ್ಳಲು ಅದಕ್ಕೆ ಸಾಧ್ಯವಾಗಿರಲಿಲ್ಲ ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸುವ ತನಕ. ತನ್ನ ಸರ್ವಾಧಿಕಾರಕ್ಕೆ ಧಕ್ಕೆಯಾಗುತ್ತಿದೆ ಎನ್ನುವ ಆತಂಕ ಕಾಡಿದಾಗ ಇಂದಿರಾಗಾಂಧಿ ಮನಸ್ಸಿನಲ್ಲಿ ಮೂಡಿದ ತುರ್ತು ಪರಿಸ್ಥಿತಿ ಘೋಷಣೆ ಸಂಘಪರಿವಾರ ಬಯಸುತ್ತಿದ್ದ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯಲು ಬೇಕಾದ ತನ್ನದೇ ಆದ ಚೌಕಟ್ಟು ಹಾಕಿಕೊಳ್ಳಲು ನೆರವಾಯಿತು ಎನ್ನುವುದನ್ನು ಮರೆಯಬಾರದು. ಸಂಘಪರಿವಾರದ ಟಿಸಿಲಾಗಿ ಬಿಜೆಪಿ ಚಿಗುರಲು ಈ ದೇಶದಲ್ಲಿ ಜನರು ಕಾರಣರು ಎನ್ನುವುದು ವಾಸ್ತವ ಸತ್ಯವಾದರೂ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದೇ ಇದು ನೀರು, ಗೊಬ್ಬರ ದೊರಕಿ ಪೊಗದಸ್ತಾಗಿ ಬೆಳೆಯಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಈ ಕಾರಣಕ್ಕಾಗಿ ಬಿಜೆಪಿ ತನ್ನ ಹುಟ್ಟುಹಬ್ಬದಂದು ಇಂದಿರಾ ಅವರ ಸ್ಮರಣೆಯನ್ನು ಮಾಡಿದರೆ ತಪ್ಪಿಲ್ಲ.

ಬಿಜೆಪಿಯ ಸಿದ್ಧಾಂತ ಸಂಘಪರಿವಾರದ ಸಿದ್ಧಾಂತದ ಪಡಿಯಚ್ಚಲ್ಲ ಅಥವಾ ಹೌದು ಎನ್ನುವುದು ಚರ್ಚೆಯ ಮತ್ತೊಂದು ಮುಖ. ಆದರೆ ಸಂಘಪರಿವಾರದ ಸಿದ್ಧಾಂತದ ತಳಹದಿಯಮೇಲೆಯೇ ಬಿಜೆಪಿ ಬೆಳೆದಿದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಸಂಘಪರಿವಾರಕ್ಕೆ ತನ್ನ ಸಿದ್ಧಾಂತವನ್ನು ಗಟ್ಟಿಗೊಳಿಸುತ್ತಾ ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆನ್ನುವುದು ಆಶಯ. ಆದರೆ ಬಿಜೆಪಿ ಸಂಘಪರಿವಾರದ ಆಶಯವನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲಾಗದೆ, ರಾಜಕೀಯ ಶಕ್ತಿಯಾಗಿ ಬೆಳೆಯಲು ತನ್ನದೇ ಆದ ಅಜೆಂಡಾವನ್ನು ಅನುಷ್ಠಾನಕ್ಕೆ ತರಲಾಗದೆ ತೊಳಲಾಡಿರುವುದು ಕೂಡಾ ಇತಿಹಾಸದ ಒಂದು ಭಾಗ.

ರಾಮಜನ್ಮಭೂಮಿ ವಿವಾದ ಅಥವಾ ಶ್ರೀರಾಮ ಮಂದಿರ ನಿರ್ಮಾಣ ಬಿಜೆಪಿಯ ಮೊದಲ ಆದ್ಯತೆ ಎಂದು ಒಪ್ಪಿಕೊಳ್ಳಲಾಗದು. ಒಂದು ವೇಳೆ ಇದೇ ಆಗಿದ್ದರೆ ಕೇಂದ್ರದಲ್ಲಿ ಅಧಿಕಾರವಿದ್ದಾಗ ಸಂಘಪರಿವಾರದ ಆಶಯವನ್ನು ಒಪ್ಪಿಕೊಂಡು ಅದನ್ನು ಕಾರ್ಯಗತಮಾಡುವಂಥ ದಿಟ್ಟತನವನ್ನು ತೋರಿಸುತ್ತಿತ್ತು, ಅದು ಸರಿಯೇ?, ತಪ್ಪೇ? ಎನ್ನುವುದು ಚರ್ಚೆಯ ಮತ್ತೊಂದು ಮಗ್ಗುಲು, ಇಲ್ಲಿ ಅದನ್ನು ಚರ್ಚಿಸುವುದು ಉದ್ದೇಶವಲ್ಲ. ಬಿಜೆಪಿಗೆ ಆಗಲೂ ಸಂಘಪರಿವಾರದ ಪರಿಧಿಯಲ್ಲೇ ಸಾಗುತ್ತಾ ತನ್ನದೇ ಆದ ಕ್ಯಾನ್ವಾಸ್ ರೂಪಿಸಿಕೊಳ್ಳುವುದು ಮುಖ್ಯವಾಗಿತ್ತು. ಆದ್ದರಿಂದ ಯಾರೂ ಬಿಜೆಪಿ ಸಿದ್ಧಾಂತದಿಂದ ಅರ್ಥಾತ್ ಸಂಘಪರಿವಾರದ ಸಿದ್ಧಾಂತದಿಂದ ದೂರಾವಾಗಿದೆ ಎಂದು ಭಾವಿಸಬೇಕಾಗಿಲ್ಲ ಅಥವಾ ಅದನ್ನೇ ನೆಚ್ಚಿಕೊಂಡಿದೆ ಎಂದೂ ಭ್ರಮೆಗೊಳಗಾಗುವ ಅಗತ್ಯವಿಲ್ಲ. ಸಿದ್ಧಾಂತದೊಂದಿಗೆ ರಾಜಕೀಯ ಶಕ್ತಿಯಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇದೆ.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ನಿತಿನ್ ಗಡ್ಕರಿ, ಮುರಳಿಮನೋಹರ ಜೋಷಿ, ರಾಜನಾಥ್ ಸಿಂಘ್, ನರೇಂದ್ರಮೋದಿ, ಬಿ.ಎಸ್. ಯಡಿಯೂರಪ್ಪ ಅವರುಗಳೊಳಗೇ ಸಂಘಪರಿವಾರ ಮತ್ತು ಬಿಜೆಪಿ ಸಿದ್ಧಾಂತಗಳ ತಾಕಲಾಟವಿದೆ.

ಸಂಘಪರಿವಾರದ ಮನಸ್ಸುಗಳು ಅಡ್ವಾಣಿಯವರನ್ನು ಒಪ್ಪುವಂತೆ, ನರೇಂದ್ರ ಮೋದಿಯವರನ್ನು ಒಪ್ಪುವಂತೆ ನಿತಿನ್ ಗಡ್ಕರಿ ಅವರನ್ನು ಒಪ್ಪುವುದಿಲ್ಲ. ಹಾಗೆಯೇ ಬಿಜೆಪಿ ಮನಸ್ಸುಗಳು ಕೂಡಾ ಈ ನಾಯಕರುಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುತ್ತವೆ. ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಮುತ್ಸದ್ದಿಯಾದ ಕಾರಣ ಸಂಘಪರಿವಾರ ಮತ್ತು ಬಿಜೆಪಿಯ ನಡುವೆ ಸಮತೋಲನ ಕಾಪಾಡಿಕೊಂಡು ಯಶಸ್ವಿ ನಾಯಕರೆಂದು ಈಗಲೂ ಗೌರವಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲೇ ಸಿದ್ಧಾಂತ ಮತ್ತು ವ್ಯಕ್ತಿ ಈ ಎರಡರ ನಡುವೆ ಆಯ್ಕೆ ಬಹುಕಷ್ಟ ಎನ್ನುವುದು. ನರೇಂದ್ರ ಮೋದಿಯವರ ಅಭಿವೃದ್ಧಿಯ ಹೆಜ್ಜೆಗಳನ್ನು ಗುಣಗಾನಮಾಡುವವರು ಅವರ ಸಿದ್ಧಾಂತವನ್ನು ಇಷ್ಟಪಡುವುದಿಲ್ಲ. ನಿತಿನ್ ಗಡ್ಕರಿಯನ್ನು ಸಂಘಪರಿವಾರ ಮೆಚ್ಚಿಕೊಂಡರೂ ಅದರ ಭಾಗವೇ ಆಗಿರುವ ಅಡ್ವಾಣಿಯವರು ಯಾಕೆ ಮೆಚ್ಚುತ್ತಿಲ್ಲ?, ಮೋದಿಯನ್ನು ಯಾಕೆ ಬೆಂಬಲಿಸುತ್ತಿಲ್ಲ?, ಇಲ್ಲೇ ತಾಕಲಾಟವಿರುವುದು.

ಸಂಘಪರಿವಾರದ ಮೂಲಕವೇ ಬೆಳೆದು ಬಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಈಗಿನ ನಡೆಗಳಲ್ಲಿ ಯಾವ ಸಿದ್ಧಾಂತವನ್ನು ಗುರುತಿಸಲು ಸಾಧ್ಯ?. ಸಂಘಪರಿವಾರದ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ರಾಜಕೀಯ ಮಾಡುತ್ತಿದ್ದಾರೆಯೇ ಅಥವಾ ಬಿಜೆಪಿಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಮುನ್ನಡೆಯುತ್ತಿದ್ದಾರೆಯೇ?

ಕರ್ನಾಟಕದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿಯಲ್ಲಿ ಸಂಘಪರಿವಾರದ ಸಿದ್ಧಾಂತವನ್ನು ಕಾಣುತ್ತಿದ್ದೀರಾ?, ಅಥವಾ ರಾಜಕೀಯ ಪಕ್ಷವಾಗಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲವನ್ನು ಗುರುತಿಸುತ್ತಿದ್ದೀರಾ? ’ಬಿಜೆಪಿಗೆ ಬರುವವರು ಸಿದ್ಧಾಂತವನ್ನು ಜೀರ್ಣಿಸಿಕೊಳ್ಳಲು ಮೊದಲು ಕಲಿಯಿರಿ,’ ಹೀಗೆಂದು ಬಿಜೆಪಿ ಹಿರಿತಲೆಗಳೇ ರಾಮಕೃಷ್ಣ ಹೆಗಡೆ ಕಟ್ಟಾಶಿಷ್ಯ ಡಾ.ಜೀವರಾಜ್ ಆಳ್ವರನ್ನು ಕುರಿತು ಹೇಳಿದ್ದ ಹಳೆ ಮಾತು ಎನ್ನುವಂತಿಲ್ಲ. ಯಾಕೆಂದರೆ ಆಪರೇಷನ್ ಕಮಲದ ಮೂಲಕ ಬಂದವರಿಗೆ ಇತ್ತೀಚೆಗೆ ಬಿಜೆಪಿ ನಾಯಕರು ಹೇಳುತ್ತಿರುವ ನೀತಿ ಪಾಠ.

ಹಾಗಾದರೆ ಬಿಜೆಪಿಯಿಂದ ಹೊರಗೆ ಹೋಗುವವರು ತಮ್ಮ ಸಿದ್ಧಾಂತವನ್ನು ಬಿಟ್ಟುಹೋಗಲೇ ಬೇಕಲ್ಲವೇ? ಯಾಕೆಂದರೆ ಅವರು ನಂಬಿಕೊಂಡು ಬಂದ ಸಿದ್ಧಾಂತ ಅವರನ್ನು ಅಧಿಕಾರದಿಂದ ವಂಚಿಸಿದೆ ಎನ್ನುವ ಕಾರಣಕ್ಕಾಗಿಯಲ್ಲವೇ ಪಕ್ಷ ತೊರೆಯುತ್ತಿರುವುದು.

ಆದ್ದರಿಂದಲೇ ಕರ್ನಾಟಕದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ಸಿದ್ಧಾಂತ ಇವೆರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವುದು ಅದೆಷ್ಟು ಕಠಿಣವೆಂದು. ಬಿಜೆಪಿ ಹೈಕಮಾಂಡ್ ಇದೇ ಸಂಧಿಗ್ಧತೆಯಲ್ಲಿದೆ ಅನ್ನಿಸುತ್ತದೆ. ಇದನ್ನು ಯಡಿಯೂರಪ್ಪ ಅವರೂ ಚೆನ್ನಾಗಿ ಅರಿತುಕೊಂಡಿರುವುದರಿಂದಲೇ ಪಟ್ಟುಹಿಡಿದಿದ್ದಾರೆ. ಸಿದ್ಧಾಂತವನ್ನು ಪಾಲಿಸಲೇಬೇಕು, ಶಿಸ್ತನ್ನು ಬಿಡುವಂತಿಲ್ಲ ಎಂದಾರೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಸಹಿಸುವಂತಿಲ್ಲ. ಸಿದ್ಧಾಂತಕ್ಕಿಂತಲೂ ವ್ಯಕ್ತಿ ಮತ್ತು ಅಧಿಕಾರ ಮುಖ್ಯ ಎನ್ನುವುದಾದರೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಮಣೆ ಹಾಕಲೇಬೇಕು. ಸಿದ್ಧಾಂಕ್ಕಿಂತ ತನಗೆ ಅಧಿಕಾರವೇ ಮುಖ್ಯ, ತಾನು ಆ ಪಕ್ಷಕ್ಕೆ ಅನಿವಾರ್ಯವೆಂದು ಯಡಿಯೂರಪ್ಪ ಭಾವಿಸಿದರೆ? ಈ ಹಿನ್ನೆಲೆಯಲ್ಲಿ ಸೂರಜ್‌ಕುಂಡ್ ಸಿದ್ಧಾಂತ ಮತ್ತು ವ್ಯಕ್ತಿ ಇವೆರಡರಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳಬಹುದು ಎನ್ನುವುದು ಈಗಿನ ಕುತೂಹಲ.