ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ.

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ

 “ಜಾತಿಯ ಗೋಡೆಯನ್ನು ಕೆಡವಿ”

‘ಜಾತಿಯ ಗೋಡೆಯನ್ನು ಕೆಡವಿ’ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ  ಹೊರಡಿಸಿರುವ ಪತ್ರ ಕಠಿಣ ಶಬ್ದಗಳಿಂದ ಕೂಡಿದ್ದು ಹಲವಾರು ದೇಶಗಳಲ್ಲಿ ಸಂಚಲನ ಮೂಡಿಸಿದೆ.  ಜಾತಿಪದ್ಧತಿಯಿಂದುಂಟಾಗುವ  ಮಾನವ ಹಕ್ಕು ಉಲ್ಲಂಘನೆಯನ್ನು  ಅವರು ಗುಲಾಮಗಿರಿ ಹಾಗೂ ಅಪಾರ್ಥೀಡ್‍ಗಳಿಗೆ ಹೋಲಿಸಿದ್ದಾರೆ. ಮಾನವ ಜನಾಂಗದ ಆ ಎರಡು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿದಂತೆಯೇ ಜಾತಿಪದ್ಧತಿಯನ್ನು ಸಹ ನಿರ್ಮೂಲನ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ.  ಅದಕ್ಕಾಗಿ ಎಲ್ಲ ದೇಶಗಳ ಸಹಕಾರವನ್ನು ಅವರು ಬಯಸುತ್ತಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 260 ಮಿಲಿಯನ್ ಜನರು ಪ್ರಪಂಚದಾದ್ಯಂತ ಜಾತಿ ಪದ್ಧತಿಯ ದೌರ್ಜನ್ಯಗಳಿಂದ ಬಳಲುತ್ತಿದ್ದಾರೆ.  ಭಾರತ ಪ್ರಮುಖವಾಗಿ ಕಾಣಿಸಿಕೊಂಡರೂ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತೀಯ ವಸಾಹತು ಸ್ಥಳಗಳಲ್ಲಿ ಜಾತಿಭೇದ ನೀತಿ ಇನ್ನೂ ಚಲಾವಣೆಯಲ್ಲಿದೆ ಎಂದು ನವಿ ಪಿಳ್ಳೆ ಬರೆಯುತ್ತಾರೆ.

ಹುಬ್ಬಳ್ಳಿಯ ಕೆಲವು ಗೆಳೆಯರು ‘ಮಾನವ ಹಕ್ಕು ಪ್ರತಿಪಾದನಾ ಸಂಸ್ಥೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಏಪ್ರಿಲ್ 2008 ರಲ್ಲಿ ನಡೆದ ಅದರ ಉದ್ಛಾಟನಾ ಸಮಾರಂಭದಲ್ಲಿ ನಾನು ಒಂದು ಮಾತು ಹೇಳಿದ್ದೆ.  ‘ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಅಪರಾಧವೆಂದು ಪರಗಣಿಸಲಾಗಿದೆ.  ಆದರೆ ವಾಸ್ತವದಲ್ಲಿ ಹಳ್ಳಿ, ಪಟ್ಟಣವೆನ್ನದೆ ಅದಿನ್ನೂ ಜೀವಂತವಾಗಿದೆ.  ಅದರ ಮಾತೃಗರ್ಭವಾದ ಜಾತಿ ಪದ್ಧತಿ ಅಳಿಯದ ಹೊರತು ಅಸ್ಪೃಶ್ಯತೆ ನಾಶವಾಗುವುದಿಲ್ಲ. ಆದ್ದರಿಂದ ಜಾತಿ ಪದ್ದತಿಯ ಆಚರಣೆಯನ್ನು ಸಂವಿಧಾನದಲ್ಲಿ ಅಪರಾಧವೆಂದು ಪರಿಗಣಿಸಿ ತಿದ್ದುಪಡಿ ತರಬೇಕು. ಆಗ ಅದರ ಪಾಪದ ಪಿಂಡವಾದ ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಬಹುದು’ ಎಂದು. ಆ ಸಂದರ್ಭದಲ್ಲಿ ಉಪಸ್ಥಿತರಾಗಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್.ನಾಯಕ್ ರವರು ಆ ಮಾತನ್ನು  ಅನುಮೋದಿಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಜಾತಿ ಪದ್ದತಿ ಆಚರಣೆಯನ್ನು ಸಂವಿಧಾನ ಮೂಲಕ ಅಳಿಸಿಹಾಕಬೇಕು ಎಂಬ ಕರೆಯನ್ನು ಸಹ ಕೊಟ್ಟಿದ್ದರು.  ಇದರ ನೆನಪು ಈ ಸಂದರ್ಭದಲ್ಲಿ ಪ್ರಸ್ತುತವೆಂದು ಉಲ್ಲೇಖಿಸುತ್ತಿದ್ದೇನೆ.

ಜಾತಿಯಾಧಾರಿತ ತಾರತಮ್ಯ – ಮಾನವ ಹಕ್ಕು ಉಲ್ಲಂಘನೆ:

ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್  ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು  ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಠರಾವು ಪಾಸುಮಾಡಿದೆ. ಅದಕ್ಕೆ ನೇಪಾಳ ಬೆಂಬಲ ನೀಡಿದೆ. ನೇಪಾಳ ದೇಶವು ನೀಡಿದ ಬೆಂಬಲವು ಮಹತ್ವದ್ದು ಎಂಬುದು ವಿಶೇಷ. ಯಾಕೆಂದರೆ ಇತ್ತೀಚಿನವರೆಗೂ ವಿಶ್ವದ ಏಕೈಕ ಹಿಂದೂ ರಾಷ್ಟ್ರ್ರವಾಗಿದ್ದ ನೇಪಾಳದಲ್ಲಿ ಭಾರತದಲ್ಲಿರುವಂತೆಯೆ ಹಿಂದೂಗಳು ಬಹುಸಂಖ್ಯಾತರು ಮತ್ತು ಅಲ್ಲಿಯೂ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳು ಬೇರು ಬಿಟ್ಟು ಸಮಾಜವನ್ನು ಕುರೂಪಗೊಳಿಸಿವೆ.  ವಿಪರ್ಯಾಸವೆಂದರೆ ಭಾರತ ಈ ಠರಾವನ್ನು ವಿರೋಧಿಸುತ್ತಿದೆ.  ಜಾತಿಪದ್ಧತಿ ಎಂಬುದು ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಾಗಿದ್ದು ಅದು ದೇಶದ ಆಂತರಿಕ ವಿಚಾರವೆಂದೂ, ಅದರ ನೇತ್ಯಾತ್ಮಕ ಅಂಶಗಳಾದ ಅಸ್ಪೃಶ್ಯತೆ, ಇತ್ಯಾದಿಯನ್ನು ಸಂವಿಧಾನದ ಮೂಲಕ ಹೋಗಲಾಡಿಸಿಕೊಂಡಿದೆಯೆಂದು ವಾದಿಸುತ್ತಾ ಬಂದಿದೆ.

ಭಾರತ ಯಾಕೆ ಈ ನೀತಿ ಅನುಸರಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಜಾತಿ ವೃತ್ತಿ ಸಂಬಂಧಿತವಲ್ಲ ಎಂಬುದು, ಆನುವಂಶಿಕವಲ್ಲ ಎಂಬುದು ಭ್ರಮಾತ್ಮಕವಾದುದು.  ಈ ನಿಲುವು ನೈತಿಕವಾದುದಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಇಂಥ ಧೋರಣೆಯಿಂದ ಭಾರತ ಸಾಧಿಸ ಬೇಕಾಗಿರುವುದಾದರೂ ಏನನ್ನು.? ದೇಶದೊಳಗಿನ ಇಂಥ ಗಂಭೀರ ಸಮಸ್ಯೆಯೊಂದರ ಬಗ್ಗೆ ತನ್ನ ಅಂತರರಾಷ್ಟ್ರೀಯ ನಿಲುವು ಸತ್ಯಕ್ಕೆ ನಿಷ್ಠವಾಗಿರಬೇಕಾದ ಅನಿವಾರ್ಯತೆಯನ್ನು ಮರೆತು ಭಾರತ ವರ್ತಿಸುತ್ತಿದೆಯೆ? ಅದರ ಪರಿಣಾಮಗಳನ್ನು ಯೋಚಿಸಿದೆಯೆ?  ವಿಶ್ವಸಂಸ್ಥೆಯು ಜನಾಂಗೀಯ ಭೇದ ವಿನಾಶ ಸಮಿತಿಯೊಂದನ್ನು (Committee on Elimination of Racial Discrimination – CERD) ರಚಿಸಿದೆ.  ಅದು ಎಲ್ಲಾ ವಿಧದ ಜನಾಂಗೀಯ ಭೇದಗಳ ವಿನಾಶದ ಕುರಿತು 1968 ರಲ್ಲಿ  ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ರಚನೆಯಾಗಿದೆ.  ಆ ಒಡಂಬಡಿಕೆಗೆ ಭಾರತವೂ ಸಹಿ ಮಾಡಿದೆ.  ಆ ಒಡಂಬಡಿಕೆಯ ಪ್ರಕಾರ  ವಿಶ್ವಸಂಸ್ಥೆಯು ಜನಾಂಗ, ವರ್ಣ, ಅನುವಂಶೀಯ ಅಥವಾ ಕುಲಸಂಬಂಧೀ ಭೇದಗಳ ವಿರುದ್ಧ ರಕ್ಷಣೆಯ ಭರವಸೆಯನ್ನು ತನ್ನ ಸದಸ್ಯ ರಾಷ್ಟ್ರೀಯ ಪ್ರಜೆಗಳಿಗೆ ನೀಡುತ್ತದೆ.  1996 ರಲ್ಲಿ  ಜನಾಂಗೀಯ ಭೇದ ವಿನಾಶ ಸಮಿತಿಯು ದಲಿತರ ವಿರುದ್ಧ ನಡೆಸಲಾಗುವ ಭೇದವನ್ನು ಸಹ ಅನುವಂಶೀಯ ಆಧಾರದ ಭೇದ ನಿಷೇಧದ ಅಡಿಯಲ್ಲಿ ಪರಿಗಣಿಸಬಹುದು ಎಂದು ತೀರ್ಮಾನಿಸಿದೆ. ಒಬ್ಬ ಸಹಿದಾರನಾಗಿ ಭಾರತ ಒಡಂಬಡಿಕೆಯಲ್ಲಿ ಭೇದ ನೀತಿಗೊಳಪಡುವವರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಕಾಲಕಾಲಕ್ಕೆ ವರದಿಗಳ ಮೂಲಕ ನೀಡಬೇಕಾಗಿರುತ್ತದೆ.  ಅದನ್ನು ಸಮಿತಿಯು ಪರಿಶೀಲನಾ ಸಭೆಗಳಲ್ಲಿ ಪರಾಂಬರಿಸಿ ರಚನಾತ್ಮಕ ವಾಗ್ವಾದಗಳನ್ನು ನಡೆಸುತ್ತದೆ ಮತ್ತು ಸುಧಾರಣಾ ಸಲಹೆಗಳನ್ನು ನೀಡುತ್ತದೆ.

ಇಂತಹ ಒಂದು ಠರಾವನ್ನು 1996 ರಿಂದಲೂ ಭಾರತ ವಿರೋಧಿಸುತ್ತಾ ಬಂದಿದೆ.  ಭಾರತವು ಹತ್ತು ವರ್ಷಗಳ ನಂತರ ಫೆಬ್ರವರಿ 2007 ರಲ್ಲಿ ಈ ಠರಾವಿಗೆ ಉತ್ತರ ನೀಡಿದೆ.  ವಿಚಿತ್ರವೆಂದರೆ, ಅದರಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಒಂದು ಚಕಾರವೂ ಇಲ್ಲ. ಪ್ರತಿ ಘಂಟೆಗೆ ಇಬ್ಬರು ದಲಿತರನ್ನು ಥಳಿಸಲಾಗುತ್ತದೆ. ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಪಡುತ್ತಾರೆ.  ಇಬ್ಬರು ದಲಿತರು ಕೊಲ್ಲಲ್ಪಡುತ್ತಾರೆ  ಎರಡು ದಲಿತರ ಮನೆಗಳನ್ನು ಸುಡಲಾಗುತ್ತದೆ, ಎಂಬ ಅಂಕಿಅಂಶಗಳು ಅಧಿಕೃತವಾಗಿ ಲಭ್ಯವಿವೆ.  ಸಫಾಯಿ ಕರ್ಮಚಾರಿ ಆಂದೋಲನವು ಮೇ 2009 ರಲ್ಲಿ ದೆಹಲಿಯೊಂದರಲ್ಲೇ 1085 ಬರಿಗೈ ಜಾಡಮಾಲಿಗಳು ಇರುವರೆಂಬ ವಸ್ತುಸ್ಥಿತಿಯನ್ನು  ಮಾಹಿತಿ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಡೆದು ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.  ಸರ್ಕಾರದ ಕಡತಗಳಲ್ಲೆ ಕಂಡು ಬರುವ ಇಂಥ ಬರ್ಬರ ಸತ್ಯಗಳನ್ನು  ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹೇಗೆ ಅಲ್ಲಗಳೆಯಲಾಗಿದೆ ಎಂಬುದು ಸೋಜಿಗವೂ, ವಿಷಾದನೀಯವೂ ಆಗಿದೆ.

ಕೇವಲ ವಿಶ್ವಸಂಸ್ಥೆಯಷ್ಟೆ ಅಲ್ಲ, ಭಾರತದ ಜಾತಿಯಾಧಾರಿತ ಭೇದವನ್ನು ಖಂಡಿಸಿ ಯೂರೋಪು ಒಕ್ಕೂಟವೂ ಠರಾವು ಪಾಸು ಮಾಡಿದೆ.  ಯೂರೋಪು ಸಂಸದೀಯ ಮಾನವ ಹಕ್ಕು 2000, 2002, 2003 ಮತ್ತು 2005ರ ವರದಿಗಳಲ್ಲಿ ಜಾತಿಭೇದದ ಕುರಿತು, ದಲಿತರ ಸ್ಥಿತಿಗತಿ ಕುರಿತು ಉಲ್ಲೇಖಗಳಿವೆ.  ಈ ವರದಿಗಳು ವ್ಯಾಪಕವಾಗಿ ವಿತರಿಸಲ್ಪಡುತ್ತವೆ.  ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಷ್ಟೆ ಅಲ್ಲದೆ ಯೂರೋಪು ಸದಸ್ಯ ರಾಷ್ಟ್ರಗಳು, ಐಎಲ್ಓ, ಯುನಿಸೆಫ್,  ಮುಂತಾದ ಸಂಸ್ಥೆಗಳನ್ನು ವರದಿ ತಲುಪುತ್ತದೆ.  ಆದರೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ದಮನವನ್ನು  ಮರೆಮಾಚಲು ಭಾರತ ಪ್ರಯತ್ನಿಸುತ್ತಲೇ ಇದೆ.

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ :

ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ಅಂತರ್ಜಾತೀಯ  ವಿವಾಹಗಳು ಇಂದಿಗೂ ಕೊಲೆಯಲ್ಲಿ ಪರ್ಯವಸಾನವಾಗುತ್ತವೆ. ಅಸಮಾನತೆಯೆ ತತ್ವವಾಗಿರುವ ಜಾತಿ ಪದ್ಧತಿ ಮತ್ತು ಸಮಾನತೆ ಹಾಗೂ ಭ್ರಾತೃತ್ವವನ್ನು ಬೋಧಿಸುವ  ಪ್ರಜಾಪ್ರಭುತ್ವ ಪರಸ್ಪರ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ ವಿರೋಧೀ ಭಾವಗಳು. ಆದ್ದರಿಂದ ಭಾರತದ ಆತ್ಮ ಅಲಿಖಿತ ಸಂವಿಧಾನವಾಗಿರುವ ಜಾತಿಪದ್ದತಿಯೆಂದರೆ ತಪ್ಪಾಗಲಾರದು. ದುರದೃಷ್ಟವಶಾತ್ ಭಾರತದ ಒಳಗಡೆ ಚರ್ಚೆಗೊಳಗಾಗುವ ವಿಷಯ ಜಾತಿಪದ್ಧತಿ ಒಡಲುಗೊಂಡಿರುವ ಅಸ್ಪೃಶ್ಯತೆಯನ್ನು ಕುರಿತು ಮಾತ್ರ. ಇದು ಮಾನವತೆಗೆ ಅಂಟಿಕೊಂಡ ದೊಡ್ಡ ಕಳಂಕ ಎಂದು ವರ್ಣಿಸಿ ಎಲ್ಲ ಜಾತಿಯವರು ಖಂಡಿಸಲು ಇಚ್ಛಿಸುತ್ತಾರೆ. ಆದರೆ ಹುಟ್ಟುತ್ತಲೇ ಮೇಲು ಕೀಳನ್ನು ನಿರ್ಧರಿಸಿ ಬಿಡುವ ಜಾತಿಯೆ ಮಾನವತೆಗೆ ದೊಡ್ಡ ಕಳಂಕ ಎಂದು ಖಂಡಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವರ್ಣಾಶ್ರಮಕ್ಕೆ ಸಿಕ್ಕ ಗಾಂಧೀಜಿಯವರ ಬೆಂಬಲ ಜಾತಿಪದ್ಧತಿಗೂ ಪರೋಕ್ಷವಾಗಿ ಸಿಕ್ಕಿತೆಂಬ ನಂಬಿಕೆ. ಜಾತಿ ಪದ್ಧತಿಯ ಎಲ್ಲಾ ಅವಘಡಗಳನ್ನು ಭಾರತ ದಿನನಿತ್ಯ ಅನುಭವಿಸುತ್ತಲೇ ಸಾಮಾಜಿಕವಾಗಿ, ರಾಜಕೀಯವಾಗಿ ಕುಬ್ಜವಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಯಾವ ಸಮಾಜವಾದಿಯೂ ಹೇಳಲಾರ. ಅಂಬೇಡ್ಕರರನ್ನು ಹೊರತುಪಡಿಸಿ ಜಾತಿ ಪದ್ಧತಿಯ ಅನಿಷ್ಟಗಳನ್ನು ತಳ ಸ್ಪರ್ಶಿಯಾಗಿ ಅಭ್ಯಸಿಸಿದವರು ರಾಮಮನೋಹರ ಲೋಹಿಯಾ. ಜಾತಿ ಪದ್ಧತಿಯಿಂದ ಆಡಳಿತ ರಂಗ ಕಲುಷಿತಗೊಳ್ಳುತ್ತಿದೆ ಎಂಬ ಒಳ ನೋಟವಿದ್ದ ಲೋಹಿಯಾ ‘ಶೂದ್ರ ದ್ವಿಜರ ನಡುವೆ ಮದುವೆಯಾಗುವುದು ಆಡಳಿತ ರಂಗ, ಸಶಸ್ತ್ರ ಪಡೆಗಳ ನೇಮಕಾತಿಗೆ ಉಳಿದವುಗಳೊಂದಿಗೆ ಒಂದು ಅರ್ಹತೆಯೆಂದೂ, ಜೊತೆಗೂಡಿ ಊಟ ಮಾಡಲು ನಿರಾಕರಿಸುವುದನ್ನು ಒಂದು ಅನರ್ಹತೆಯೆಂದೂ ಕಟ್ಟಳೆಯಾದ ದಿನವೇ ಜಾತಿ ವಿರುದ್ಧ ಪ್ರಾಮಾಣಿಕ ಹೋರಾಟ ಪ್ರಾರಂಭವಾಗುತ್ತದೆ. ಆ ದಿನ ಇನ್ನೂ ಬರಬೇಕಿದೆ’ ಎನ್ನುತ್ತಾರೆ.

ಜಾತಿ ಶ್ರಮವನ್ನು ಮಾತ್ರ ವಿಭಜಿಸುವುದಿಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ ಎಂದು ಡಾ.ಅಂಬೇಡ್ಕರ್ ಹೇಳುತ್ತಾರೆ. ಇದು ಅಕ್ಷರಷಹಃ ಸತ್ಯ. ವಿಭಜಿತ ಜಾತಿಗಳು ತಮ್ಮದೇ ಗೋಡೆಗಳನ್ನು ನಿರ್ಮಿಸಿಕೊಂಡು ಕೂಪ ಮಂಡೂಕಗಳಾಗಿವೆ. ಹಳ್ಳಿಗಳಲ್ಲಿ ಇನ್ನೂ ಒಂದು ಜಾತಿಯ ಜೀವನ ಪದ್ಧತಿ ಇನ್ನೊಂದು ಜಾತಿಗೆ ಅಪರಿಚಿತವಾಗಿದೆ. ಸಮಾಜ ನಿರ್ಮಾಣ ಸಮರೂಪವಾಗಿರಲು ಇದು ಅಡಚಣೆಯಾಗುತ್ತದೆ. ಕೊಡು ಕೊಳ್ಳುವಿಕೆ ಇಲ್ಲದೆ ಸಂಸ್ಕೃತಿ ಬೆಳೆಯಲಾರದು. ಕುರುಬ ಜಾತಿಯ ಮಿತ್ರರೊಬ್ಬರು ‘ನಾವು ಸ್ಪೃಶ್ಯ ದಲಿತರು’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಊರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊರಲು ಇವರು ಬೇಕಾಗಿದ್ದರಂತೆ. ಡೊಳ್ಳು ಬಾರಿಸಲು, ವಾದ್ಯ ಊದಲು, ಪಂಜು ಹಿಡಿಯಲು, ಹಲಗೆ ಬಡಿಯಲು ಒಂದೊಂದು ಜಾತಿಗಳಿವೆ.   ದೇಗುಲ, ಮಠ ಯಾವುದೇ ಆದರೂ ಕೈ ಸೇವೆಗಳ ಅಗತ್ಯವಿರುವುದರಿಂದ ಸ್ಪೃಶ್ಯ ಕೆಳ ಜಾತಿಗಳ ಅವಶ್ಯಕತೆಯಿದೆ. ಶೋಷಣೆಯೇ ಜಾತಿ ಪದ್ಧತಿಯ ಜೀವಾಳ. ಸಾಮಾಜಿಕ ಅಸಮಾನತೆಯಿಂದ ಅವಮಾನವನ್ನೂ ಆರ್ಥಿಕ ಅಸಮಾನತೆಯಿಂದ ಹಸಿವನ್ನೂ ಕೆಳಜಾತಿಗಳು ಅನುಭವಿಸುತ್ತಿವೆ.

ಪ್ರತಿಯೊಂದು ಜಾತಿಗೂ ಒಂದು ಅಘೋಷಿತ ಸಾರ್ವಜನಿಕ ನಡವಳಿಕೆಯಿದೆ. ಅದು ಅನೀತಿಯದಾಗಿದೆ. ಜಾತಿಯೆ ಅನೀತಿಯ ಕಟ್ಟಳೆಯಾಗಿರುವಾಗ ಅದರ ಪರಿಣಾಮಗಳು ಅನೀತಿಯುತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ರಾಷ್ಟ್ರಾಧ್ಯಕ್ಷರೊಬ್ಬರು ಕಾಶಿಯಲ್ಲಿ ಸಾರ್ವಜನಿಕವಾಗಿ 200 ಜನ ಬ್ರಾಹ್ಮಣರ ಪಾದಗಳನ್ನು ತೊಳೆದರು. ಅದನ್ನು ಲೋಹಿಯಾ ಚಿತ್ತಭ್ರಮೆ, ಅಸಭ್ಯತನ ಎಂದು ಬಹುವಾಗಿ ಖಂಡಿಸಿದರು, ಆದರೆ ನೆಹರೂ ಅದನ್ನು ಸಮರ್ಥಿಸಿಕೊಂಡರು, ಇನ್ನೊಬ್ಬ ರಾಷ್ಟ್ರಪತಿಗಳು ತಿರುಪತಿಯಲ್ಲಿ ತಲೆಬೋಳಿಸಿಕೊಂಡರು. ಈಗ ಮಂತ್ರಿಗಳು ತಮ್ಮ ಚೇಂಬರಿನೊಳಗೆ ಹೋಮ, ಹವನ ಮಾಡಿಸುತ್ತಾರೆ. ಕೆಳಜಾತಿಗಳು ಮಾರಮ್ಮನಿಗೆ ಕೊಡುವ ಕೋಣನ ಬಲಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇವೆಲ್ಲವೂ ಸಂವಿಧಾನದ ಜಾತ್ಯತೀತ ನಿಲುವಿಗೆ ಒಗ್ಗುವುದಿಲ್ಲವಾದರೂ ಧರ್ಮದ ಕವಚ ತೊಟ್ಟುಕೊಳ್ಳುವುದರಿಂದ ಅಧಿಕಾರಸ್ಥರು ಖಂಡಿಸಲಾರರು. ಇಂದಿಗೂ ಸಹ ಆಡಳಿತದ ಎಲ್ಲ ರಂಗಗಳಲ್ಲಿಯೂ ಇಂಥ ಅಪಸರಣಗಳನ್ನು (aberrations) ನೋಡಬಹುದು. ಒಂದು ಕಛೇರಿಯಲ್ಲಿ ಶುಕ್ರವಾರದ ಪೂಜೆಯನ್ನು ಮಾಡುವ  ನೌಕರ ಬ್ರಾಹ್ಮಣನೇ ಯಾಕಾಗಬೇಕು? ಇಂಥ ಅಲಿಖಿತ ಕಟ್ಟಳೆಗಳನ್ನು ವಿಸ್ತರಿಸಿಕೊಂಡು ಹೋಗಲು ಲೇಖನದ ಮಿತಿಯೊಳಗೆ ಸಾಧ್ಯವಾಗಲಾರದು. ನನ್ನ ಜಾತಿಯವರು ಹೆಚ್ಚು ಸಮಾನರು ಎಂಬುದೇ ಜಾತಿಪದ್ಧತಿಯ ಧೋರಣೆ. ಇಲ್ಲದಿದ್ದರೆ ಒಬ್ಬ ಕುಲಪತಿ ತನ್ನ ಆಧಿಕಾರಾವಧಿಯಲ್ಲಿ ತನ್ನ ಜಾತಿಯ ಸಿಬ್ಬಂದಿಯನ್ನೆ ಹೆಚ್ಚು ನೇಮಕ ಮಾಡುವುದು, ಒಬ್ಬ ಪ್ರಾಧ್ಯಾಪಕ ತನ್ನ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಒಬ್ಬ ಕಡು ಭ್ರಷ್ಟನೂ ಸಹ ಕಡತ ತನ್ನ ಜಾತಿಯವನಿಗೆ ಸಂಬಂಧಿಸಿದ್ದರೆ ಅದನ್ನು ಸ್ವಲ್ಪ ಅನುಕಂಪದಿಂದಲೇ ನೋಡುತ್ತಾನೆ. ಪಕ್ಷಪಾತ ನೀತಿಗೆ ಬಲಿಷ್ಠ, ದುರ್ಬಲ ಜಾತಿ ಎಂಬುವುದಿಲ್ಲ. ಕುರ್ಚಿ ದಕ್ಕಿದಾಗ ಬಲಿಷ್ಠ ದುರ್ಬಲನ ವಿರುದ್ಧವೂ, ದುರ್ಬಲ ಬಲಿಷ್ಠನ ವಿರದ್ಧವೂ ಸೇಡು ತೀರಿಸಿಕೊಳ್ಳುತ್ತಿರುತ್ತಾನೆ.

ರಾಜಕೀಯ ವ್ಯವಸ್ಥೆಯಲ್ಲಿ ‘ನನ್ನ ಜಾತಿಯವನು ಗೆಲ್ಲಲಿ’ ಎಂಬ ವಾಂಛೆ ಬಲಿಷ್ಠ ಜಾತಿಗಳ ಒಗ್ಗೂಡುವಿಕೆಗೆ ಕಾರಣವಾಗಿದೆ. ಅದೊಂದು ಸಾಂಕೇತಿಕ ಒಗ್ಗೂಡುವಿಕೆ ಅಷ್ಟೆ. ಆ ಕಾರಣದಿಂದಾಗಿ ಆ ಜಾತಿಯ ಎಲ್ಲರೂ ಫಲಾನುಭವಿಗಳಾಗಲು ಸಾಧ್ಯವಿಲ್ಲ ಅಥವಾ ಕನಿಷ್ಠ ಪ್ರತಿಫಲ ಪಡೆಯಲು (ರುಸುವತ್ತು ಹೊರತು) ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ ಪ್ರತಿಭೆ (ಮೆರಿಟ್) ಯನ್ನು ಮೆಟ್ಟಿ ಜಾತಿ ಸಮೂಹ  ತನ್ನ ನಾಯಕನನ್ನು ಆರಿಸುತ್ತದೆ. ಶತಮಾನಗಳಿಂದ ಅವಕಾಶ ವಂಚಿತ ಜಾತಿಗಳಿಗೆ ಕಾನೂನಿನ ಮೂಲಕ ನೀಡಿರುವ ಮೀಸಲಾತಿಯನ್ನು ಮೆರಿಟ್‍ನ ನೆಪವೊಡ್ಡುತ್ತಾ ವಿರೋಧಿಸುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪಂಡಿತರು ಜಾತಿಪದ್ಧತಿಯಿಂದ ನಿರಂತರವಾಗಿ ಹತವಾಗುತ್ತಿರುವ ಪ್ರತಿಭೆಯ ಬಗ್ಗೆ ಮಾತಾಡುವುದಿಲ್ಲ, ಜಾಣ  ಮೌನವಹಿಸುತ್ತಾರೆ.  ಪ್ರಾಯಶಃ ಇಂದು ಎಲ್ಲ ಪಕ್ಷಗಳು ವಂಶಾಡಳಿತಕ್ಕೆ ಜೋತು ಬಿದ್ದಿರುವುದು ಜಾತಿಪದ್ಧತಿಯಲ್ಲಿ ಪೂರ್ವಗ್ರಹವಿಲ್ಲದ(ದೆ) ಒಬ್ಬ ನಿಜ ನಾಯಕನನ್ನು ಆರಿಸಲು ಸಾಧ್ಯವಾಗದಿರುವ ಕಾರಣದಿಂದ ಎಂದು ಕಾಣುತ್ತದೆ.

ಇಂಥ ವ್ಯವಸ್ಥೆಯಲ್ಲಿ ಬಹು ಸಂಖ್ಯಾತರಾಗಿರುವ ಅಸಂಘಟಿತ ಸಣ್ಣ ಜಾತಿಗಳಿಗೆ ಆಗುತ್ತಿರುವ ಅನ್ಯಾಯ ಹೇಳತೀರದು. ಜಾತಿ ಲೆಕ್ಕಾಚಾರದಂತೆಯೆ ರಾಜಕೀಯ ನೇತೃತ್ವ ಪಡೆಯುತ್ತಿರುವ ಈ ದೇಶದಲ್ಲಿ ಅವರು ಹೆಚ್ಚೆಂದರೆ ಕೆಳಮಧ್ಯಮ ವರ್ಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ 62 ವರ್ಷಗಳಲ್ಲಿ ದಲಿತ, ಹಿಂದುಳಿದ ಜಾತಿಗಳು ಬಂಡವಾಳ ಶಾಹಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಜಾತಿ ಪದ್ಧತಿಯೆಂಬ  ದುರಂತ ವ್ಯವಸ್ಥೆ. ಈ ಭಸ್ಮಾಸುರ ಸ್ವರೂಪೀ ಜಾತಿಯ ಸೃಷ್ಟಿಗೆ ಕಾರಣವಾದ ‘ವೈದಿಕತೆ’ ಇಂದು ಎಷ್ಟು ಅಸಹಾಯಕವಾಗಿದೆ ಎಂದರೆ ತನ್ನನ್ನು ಓಲೈಸಿ ಬಂದ ಕಾರಣಗಳಿಗೆ ಬೇಡಿದ ವರವನ್ನು ದಯಪಾಲಿಸಿ ತಾನೇ ಪೇಚಿಗೆ ಸಿಕ್ಕಿ ಪರದಾಡುವ ಪರಶಿವನಂತಾಗಿದೆ.

ಕೇವಲ ಆಂತರಿಕ ಸಮಸ್ಯೆಗಳೆ? :

ಭಾರತ ಸರ್ಕಾರವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು  ಕೇವಲ ಆಂತರಿಕ ಸಮಸ್ಯಗಳೆಂದು ತಿಳಿದರೆ ಸಾಲದು.  ಈ ಸಮಸ್ಯೆಗಳು ಜನರ ಮನದಾಳದಲ್ಲಿ ಸ್ಥಾಪಿತವಾಗಿರುವುದು ಶತಶತಮಾನಗಳಿಂದ ಸ್ವಾರ್ಥ ಹಿತಾಸಕ್ತಿಗಳು ಭಿತ್ತಿದ ಮೌಢ್ಯದಿಂದ  ಮತ್ತು ಅದು ಗಟ್ಟಿಗೊಳ್ಳುತ್ತಿರುವುದು ಧಾರ್ಮಿಕ ಒತ್ತಾಸೆಯಿಂದ.  ಇದು ದೇಶಕ್ಕೂ ಮತ್ತು ಧರ್ಮಕ್ಕೂ ಒಂದು ಕಳಂಕವಾಗಿರುವುದು ಸತ್ಯ. ಆದ್ದರಿಂದ ಅದನ್ನು ತೊಳೆದುಕೊಳ್ಳುವುದಕ್ಕೆ ದೇಶವು ಮತ್ತು ಧರ್ಮವು ಕಟು ಬದ್ಧವಾಗಬೇಕು.  ಅದಕ್ಕಾಗಿ ವಿಶ್ವಸಂಸ್ಥೆಯಂಥ ಹೊರಗಿನ ಸ್ವಾಯತ್ತ ಸಂಸ್ಥೆಗಳ ಸಹಾಯ ಪಡೆಯುವುದಕ್ಕೆ ಹಿಂಜರಿಯಬಾರದು.  ರೋಗಿಯೊಬ್ಬನು ವೈದ್ಯನ ಮುಂದೆ ತನ್ನ ರೋಗನ್ನು ಹೇಳಿಕೊಳ್ಳಲೇಬೇಕು. ಆಗಲೇ ಚಿಕಿತ್ಸೆ ಸಾಧ್ಯ ಹಾಗೂ ಸುಲಭ.  ಸಂಕೋಚಪಟ್ಟುಕೊಂಡರೆ ರೋಗವು ಉಲ್ಬಣಿಸುತ್ತದೆ, ರೋಗಿಯನ್ನೆ ತಿನ್ನುತ್ತದೆ.  ವಿಶ್ವಸಂಸ್ಥೆ ಇರುವುದೇ ಜಾಗತಿಕ ನೆಲೆಯಲ್ಲಿ ಸಮಸ್ಯೆಗಳನ್ನು  ಎತ್ತಿಕೊಂಡು ನೊಂದ ದೇಶಗಳಿಗೆ ಸಹಾಯ ಹಸ್ತ ಚಾಚುವುದು.  ಮಾನವನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಭಾರತದಲ್ಲಾಗುತ್ತಿರುವ ಕುಲಸಂಬಂಧೀ (ethnic) ಒಳ ಹಿಂಸೆಗಳು ಅಪಾರ ಮತ್ತು ಅನನ್ಯ. ವಂಶ ಪಾರಂಪರ್ಯವಾಗಿ ಕೆಲವು ಕೆಳಜಾತಿಗಳು  ಮಾಡುತ್ತಿರುವ ಕೆಲಸಗಳು ಖಂಡನೀಯವು ಮತ್ತು ಅಮಾನವೀಯವೂ ಆಗಿವೆ.

ದೇಶದಾದ್ಯಂತ ಇಂದಿಗೂ ಬರಿಗೈಯಲ್ಲಿ ಕಕ್ಕಸು ತೊಳೆಯುವ, ತಲೆಯ ಮೇಲೆ ಮಲ ಹೊರುವವರ ಸಂಖ್ಯೆ 3.40 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ.  ದೇಶದ ರಾಜಧಾನಿಯೂ ಸೇರಿದಂತೆ ಮುಂದುವರೆದ ಅನೇಕ ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸತ್ತ ದನವನ್ನು  ಸುಲಿಯುವುದಕ್ಕೆ, ಚರ್ಮ  ಹದ ಮಾಡುವುದಕ್ಕೆ, ಚಪ್ಪಲಿ ಹೊಲಿಯುವುದಕ್ಕೆ ಒಂದೊಂದು ಜಾತಿಗಳಿರುವುದು ಅವು ಇನ್ನೂ ಅನೂಚಾನವಾಗಿ ಮುಂದುವರೆದಿರುವುದು ಗುಟ್ಟಿನ ವಿಷಯಗಳಲ್ಲ.  ಇಂಡಿಯಾದ ಸಂಸತ್ತು ಮತ್ತು ವಿಧಾನ ಸಭೆಗಳು ಕಣ್ಣುಮುಚ್ಚಿ ಬಿಡುವುದರೊಳಗೆ ಮಾನವ ಹಕ್ಕುಗಳನ್ನು ಕುರಿತ ಮಸೂದೆಗಳನ್ನು ಮಂಡಿಸಿ ಪಾಸುಮಾಡಿ ಕಾನೂನು ಹೊರಡಿಸುತ್ತವೆ.  ಆದರೆ ಅವು ಜಾರಿಯಾಗುವ ಸಾಧ್ಯತೆಗಳು ಕಡಿಮೆ.  ಮಾಹಿತಿ ತಂತ್ರಜ್ಞಾನದ ಮೂಲಕ ಅತಿ ಶೀಘ್ರವಾಗಿ ಅಂಗೈ ಪರದೆಯಲ್ಲಿ ಮೂಡುವ ಸತ್ಯ ದರ್ಶನಗಳನ್ನು ಅಲ್ಲಗಳೆಯಲು ಇನ್ನೂ ಸಾಧ್ಯವಿಲ್ಲ.  ಆದ್ದರಿಂದ ಸಂಕೋಚಗಳನ್ನು, ಮುಜುಗರಗಳನ್ನು ಬದಿಗಿಟ್ಟು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳಿಂದ ನಲುಗುತ್ತಿರುವ ಭಾರತ ಠರಾವನ್ನು ಬೆಂಲಿಸುವ ಜಾಣ್ಮೆ ತೋರಬೇಕು. ನೇಪಾಳದಂತಹ ನೆರೆರಾಜ್ಯ ಸಮಿತಿಯ ಠರಾವನ್ನು ಬೆಂಬಲಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಬೆಂಬಲ ನೀಡದಿರುವುದಕ್ಕೆ ಕಾರಣ ರಹಿತವಾಗಿರುವ ಭಾರತ ವಿಶ್ವದ ಇತರ ರಾಷ್ಟ್ರಗಳ ಎದುರು ತಲೆ ತಗ್ಗಿಸುವಂತಾಗುತ್ತದೆ.  ಆದ್ದರಿಂದ ಈಗ ಒತ್ತಡ ಹೆಚ್ಚಾಗಿದೆ.  ಜಾತಿ ಪದ್ಧದತಿಯ ಮೂಲ ಹಿಂದೂ ಧರ್ಮವೇ ಎಂಬುದು ಕಹಿಯಾದರೂ ಸತ್ಯ.  ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅಥವಾ ಕೆಳಗೆ ಇರುವುದರಿಂದ ಭೇದ ನೀತಿಯನ್ನು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ವಿಶ್ವಸಂಸ್ಥೆಯು  ಜನಾಂಗೀಯ ಭೇದ ವಿನಾಶ ಸಮಿತಿಯನ್ನು ರಚಿಸಿರುವ ಉದ್ದೇಶವೇ ತಾರತಮ್ಯ ನೀತಿಯನ್ನು ಗುರುತಿಸಿ ನಿರ್ಮೂಲನ ಮಾಡುವ  ಕಾರಣವಾಗಿರುವುದರಿಂದ ಇದನ್ನು ಕೈಬಿಡಲು ಅಥವಾ ಮರೆಮಾಚಲು ಸಹ ಸಮಿತಿಗೆ ಸಾಧ್ಯವಾಗುವುದಿಲ್ಲ.

ಸಮಾನತೆ ಇಲ್ಲದೆಡೆಯಲ್ಲಿ ಸಮಾನ ಅವಕಾಶಗಳು ಇರಲಾರವು.  ಹುಟ್ಟಿನ ಮೂಲದ ಆಧಾರದ ಮೇಲೆ ಸಮಾನ ಅವಕಾಶಗಳಿಂದ ವಂಚಿತರಾದವರು ಮಾನವ ಹಕ್ಕುಗಳ ವಂಚಿತರು ಅಷ್ಟೇ ಅಲ್ಲ, ದೌರ್ಜನ್ಯಕ್ಕೆ ಒಳಗಾದವರೂ ಆಗಿರುತ್ತಾರೆ.  ಆದ್ದರಿಂದ ವಿಶ್ವಸಂಸ್ಥೆಯ ನಿಲುವನ್ನು ಒಪ್ಪಲೇ ಬೇಕಾಗುತ್ತದೆ.  ಜಾತಿಭೇದ ನೀತಿಯನ್ನು ಖಂಡಿಸಲೇಬೇಕಾಗುತ್ತದೆ.  ಇದನ್ನು ಭಾರತ ಅರಿಯಬೇಕಾಗಿದೆ. 2001 ರಲ್ಲಿ ದರ್ಬಾನ್‍ನಲ್ಲಿ ನಡೆದ ಜನಾಂಗೀಯ ಮತ್ತು ಇತರ ಭೇದ ನೀತಿ ಕುರಿತ ವಿಶ್ವ ಸಮ್ಮೇಳನದಲ್ಲಿ  ಶ್ರುತಪಡಿಸಿದ  ಡರ್ಬಾನ್  ಪ್ರಕಟಣೆಯ ಕಾರ್ಯಸೂಚಿಯಲ್ಲಿದು ಸ್ಪಷ್ಟವಾಗಿದೆ. 2001 ರ ಡರ್ಬಾನ್  ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ಚರ್ಚೆಗೆ ತರಲು ಸಾಧ್ಯವಾಗಲಿಲ್ಲ.  ಆದರೂ ಅದು  ದಲಿತರು ನಡೆಸಿದ ಸಂಘಟಿತ ಒತ್ತಡ ತಂತ್ರದಿಂದ  ಅನುವಂಶೀಯ ವೃತ್ತಿ ತಾರತಮ್ಯ ಎಂಬ ಹೆಸರಿನಲ್ಲಿ ತುಸು ಚರ್ಚೆಗೊಳಾಯಿತು. ಈಗ ಚರ್ಚೆ ಗೆತ್ತುಕೊಂಡಿರುವುದು ಅದರ ಅನುಸರಣಾ ವರದಿ.

ಶೌಚಾಲಯದ ಮುರುಕು ಗೋಡೆಯ ಇಟ್ಟಿಗೆಯ ಚೂರು:

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವಿ ಪಿಳ್ಳೆ, ತಮಿಳು ಮೂಲದ ದಕ್ಷಿಣ ಆಫ್ರಿಕಾದವರು. ಅವರಿಗೆ ಜಾತಿಪದ್ಧತಿಯ ಉಪದ್ರವಗಳು ಮತ್ತು ದಕ್ಷಿಣ ಏಷಿಯಾ ದೇಶಗಳ ಸಾಮಾಜಿಕ ನೀತಿ ಚೆನ್ನಾಗಿ ತಿಳಿದಿದೆ. ಅವರು ಠರಾವಿಗೆ ಬೆಂಬಲ ನೀಡಿದ  ನೇಪಾಳದ ವಿದೇಶಾಂಗ ಸಚಿವರನ್ನು ಅಭಿನಂದಿಸಿ ಇದು ಜಾತಿಪದ್ಧತಿಯ ಸಮಸ್ಯೆಗಳನ್ನು ಸ್ವತಃ  ಹೊತ್ತಿರುವ ದೇಶ ಇಟ್ಟ ಮಹತ್ವದ ಹೆಜ್ಜೆ, ಇದನ್ನು ಇತರರು ಪಾಲಿಸಬೇಕು ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಅಂತಃ ಸತ್ವವೆಂದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆ ಮತ್ತು  ಸಮಾನ ಅವಕಾಶಗಳು ಇರುವಂತೆ ನೋಡಿಕೊಳ್ಳುವುದು. ಜಾತಿಪದ್ಧತಿ ಈ ಮೂಲ ಹಕ್ಕುಗಳನ್ನೆ ನಿರಾಕರಿಸುತ್ತದೆ. ಆದ್ದರಿಂದ ಅದು ಮಾನವ ಹಕ್ಕಿನ ಉಲ್ಲಂಘನೆಯ ಪರಿಧಿಯೊಳಗೆ ಬರುತ್ತದೆ. ವಿಶ್ವಸಂಸ್ಥೆಯ ಜನಾಂಗೀಯ ಭೇದ ವಿನಾಶ ಸಮಿತಿ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ನವಿ ಪಿಳ್ಳೆ ‘ಜಾತಿ ಎಂಬ ನಾಚಿಕೆಗೇಡು ಪರಿಕಲ್ಪನೆಯನ್ನು ನಾಶ ಮಾಡುವ ಕಾಲ ಕೂಡಿಬಂದಿದೆ’ ಎಂದು ಆವೇಶ ಭರಿತರಾಗಿ ಹೇಳುತ್ತಾರೆ. ಇದಕ್ಕೆ ಕಾರಣ ಜಾತಿಯಿಂದ ನೊಂದ ಕೆಲವು ಜನರು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮುರಿದು ಬಿದ್ದ ಶೌಚಾಲಯದ ಗೋಡೆಯ ಇಟ್ಟಿಗೆಯ ಚೂರೊಂದನ್ನು ಕೊಟ್ಟರಂತೆ.  ಆ ಇಟ್ಟಿಗೆ ಚೂರು ಬರಿಗೈಯಲ್ಲಿ ಕಕ್ಕಸು ತೊಳೆಯುವ ಕೆಳಜಾತಿ ಜನರ ಜಾಗತಿಕ ಹೋರಾಟದ ಸಂಕೇತವಾಗಿ ಅವರಿಗೆ ಕಂಡಿತಂತೆ.  ಇದು ಆ ಜನ ತಾವು ಬಯಸಿ ಮಾಡುತ್ತಿರುವುದಲ್ಲ.  ಕೆಳಜಾತಿಯ ಹುಟ್ಟಿನ ಕಾರಣದಿಂದ ಮಾಡುತ್ತಿರುವುದು. ಅದನ್ನು ತಮ್ಮ  ಪೂರ್ವಜರಿಂದ ಬಳುವಳಿಯಾಗಿ  ಪಡೆದದ್ದು, ಈ ಕಾರಣಕ್ಕಾಗಿಯೆ ಜೀವನ ಪರ್ಯಂತ ‘ಮೈಲಿಗೆ’ ಅನುಭವಿಸುತ್ತಿರುವುದು ಮತ್ತು ಹೊರಗೆ ಹಾಕಲ್ಪಟ್ಟು  ಮುಟ್ಟಿಸಿಕೊಳ್ಳಬಾರದವರಾಗಿರುವುದು.

ಕಾಂಗ್ರೆಸ್‍ನ ಯುವ ನೇತಾರ ಚುನಾವಣೆಗಳ ಗೆಲುವಿನ ಶಿಲ್ಪಿ ಎಂದೇ ಖ್ಯಾತರಾಗಿರುವ  ರಾಹುಲ್ ಗಾಂಧಿ ಇತ್ತೀಚೆಗೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.  ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಇಡೀ ಪಕ್ಷದ ಜನ ಪ್ರತಿನಿಧಿಗಳಿಗೆ ರಾಜ್ಯಾದಾದ್ಯಂತ ಹಳ್ಳಿಗಳ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು  ಕರೆ ನೀಡಿದ್ದರು. ಅದು ವಿಫಲವಾಯಿತೆಂಬುದು ಬೇರೆ ಮಾತು.  ಆದರೆ ಅವರ ಉದ್ದೇಶ ಮತ್ತು ದಲಿತರ ಬಗೆಗೆ ತೋರುತ್ತಿರುವ ಕಳಕಳಿ ಅವರ ವೈರಿಗಳ ಪ್ರಶಂಸೆಯನ್ನು ಗಳಿಸುತ್ತಿದೆ. ಅವರೊಮ್ಮೆ ಭಾರತಕ್ಕೆ ಹಲವು ಸಲ ಭೇಡಿ ನೀಡಿದ್ದ ಇಂಗ್ಲೆಂಡಿನ ಪತ್ರಕರ್ತ ಮಿತ್ರರೊಬ್ಬರನ್ನು ಉತ್ತರ ಪ್ರದೇಶದ ಹಳ್ಳಿಯೊಂದಕ್ಕೆ ಕರೆದೊಯ್ದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಆ ಮಿತ್ರರು ಈ ಭಾರತದ ಪರಿಚಯವೇ ನನಗಿರಲಿಲ್ಲ ಎಂದು ಉದ್ಗರಿಸಿದ್ದರು! ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರಿಗೆ ದಲಿತೋದ್ಧಾರದ ನೈಜ ಕಳಕಳಿ ಇದ್ದಲ್ಲಿ ವಿಶ್ವಸಂಸ್ಥೆಯ ಠರಾವನ್ನು ಬೆಂಬಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಸಂಸ್ಕೃತಿಯ ಕುರೂಪತೆಯನ್ನು ತೊಡೆದು ಹಾಕಲು ರಾಜಕೀಯ ಬೆರೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಾಗಿ ಉಳಿದರೆ ಜಾತಿ ನಾಶವಾಗಲಾರದು. 1936 ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‌‌‌‌‌‌ರವರು ಲಾಹೋರ್‌‌‌‌‌‌‌ನಲ್ಲಿ  ‘ಜಾತ್ ಪಾತ್ ತೋಡಕ್ ಸಮಿತಿ’ ಏರ್ಪಡಿಸಿದ್ದ ಸಭೆಗಾಗಿ ಸಿದ್ಧಪಡಿಸಿದ  ಜಾತಿ ವಿನಾಶ ಕುರಿತ ಐತಿಹಾಸಿಕ ಭಾಷಣ ಹಿಂದೂ ಮುಖಂಡರುಗಳನ್ನು ತಲ್ಲಣಗೊಳಿಸಿತು. ಅದು ದಲಿತೇತರ ಹಿಂದುಗಳನ್ನು  ಕುರಿತು ಬರೆದ ಭಾಷಣ.  ಗಾಂಧೀಜಿಯವರು ಸಹ ಜಾತಿ ಭೇದವನ್ನು ಅಳಿಸಲು ಮೇಲುಜಾತಿಯ ಮನಸ್ಸುಗಳ ಬದಲಾವಣೆಯನ್ನು ಬಯಸಿದ್ದರು.  ಆದ್ದರಿಂದ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿ ಜನರವರೆಗೆ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆಯ ನಾಶ ಸಾಧ್ಯವಾಗಬಹುದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

3 thoughts on “ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ.

  1. shashi

    ಆದಿಕವಿ ಪಂಪನಿಂದ ಆರಂಭಗೊಂಡು ಇಂದಿನ ದಿನದವರೆಗೂ ಎಲ್ಲ ಮಹಾನುಭಾವರೂ “ಮಾನವಜಾತಿ ಒಂದೇ” ಎಂಬುದನ್ನು ಹಲವಾರು ರೀತಿಯಲ್ಲಿ ಹೇಳಿದ್ದಾರೆ. ಆದರೆ, ಹಿಂದಿನದೆಲ್ಲವನ್ನೂ ತೆಗಳುತ್ತ, ಇಂದಿನದೆಲ್ಲವೂ ದೊಡ್ಡದು ಎಂದು ಬೀಗುವ, ಸೋ ಕಾಲ್ಡ್ ಮಾಡ್ರನ್ ಮಂದಿ ಹೊರಗಶ್ಟೆ ಮಾಡ್ರನ್ ಆಗಿದ್ದಾರೆಯೇ ಹೊರತು, ಒಳಗೆ ಮಾತ್ರ ಈಗಲೂ ಅದೇ ಪುರಾತನ ಕಂದಾಚಾರಗಳಿಗೆ ಕಟ್ಟುಬಿದ್ದಿದ್ದಾರೆ. ಐಟಿ ದುನಿಯಾವೇ ನಾಗರಿಕತೆಯ ಉನ್ನತ ಶಿಖರ ಎಂದೇ ಭಾವಿಸಿರುವ ಮಂದಿ, ಮದುವೆಯ ಸಂದರ್ಭಕ್ಕೆ ಬಂದಾಗ ತಮ್ಮ ಜಾತಿಯ, ತಮ್ಮ ಕುಲದ ವಧು ವರರಿಗೆ ಮರೆಹೋಗುತ್ತಾರೆ. ಇದು ಇವರ ದೃಶ್ಟಿಯಲ್ಲಿ ತಮ್ಮ ಪರಂಪರೆ. ಸಂಸ್ಕೃತಿಯನ್ನು ಉಳಿಸಿಕೊಳ್ಳುವ “ಮಹತ್ ಕಾರ್ಯ”. ಹಿಂದೆಂದೂ ಇರದಿದ್ದ ಜಾತಿ ಸಂಘಟನೆಗಳು ಅಣಬೆಯಂತೆ ಹಳ್ಳಿಪಟ್ಟಣನಗರಮಹಾನಗರಗಳೆನ್ನದೆ ತಲೆಯೆತ್ತಿವೆ. ಎಲ್ಲ ಜಾತಿಗಳವರೂ ತಮ್ಮ ಸಮುದಾಯದ ಮಕ್ಕಳಿಗಾಗಿ ವಸತಿನಿಲಯಗಳನ್ನೂ ಕಟ್ಟಿ ತಮ್ಮ “ಉದಾರತೆ”ಯನ್ನು ಮೆರೆದಿದ್ದಾರೆ. ಇನ್ನು ಮತಾಂತರವಾಗಿರುವ ಮಂದಿಯೂ ಬೇರೆ ಮತದಲ್ಲೂ ತಮ್ಮ ಜಾತಿಯ ಬೇರನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಇಶ್ಟಾದರೂ ನಾವು ಮಾನವರು. ಬರೀ ಮಾನವರಲ್ಲ, “ಅತ್ಯಾಧುನಿಕ”, “ನಾಗರಿಕ” ಮಾನವರು. ನಾವು “ಮಾನವ ಹಕ್ಕು”ಗಳ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಕು!!!

    Reply
  2. Appi

    ಜಾತಿ ವ್ಯವಸ್ಥೆ ನಾವೆಲ್ಲಾ ಇನ್ನ ಹೆಚ್ಚು ನಾಗರಿಕತನವನ್ನು ರೂಧಿಸಿಕೊಂದಸ್ತು ಹೆಚ್ಚಗುತ್ತಿದ್ದೆ. ಕಾರ್ಪೋರತೆ ವಲಯದಲ್ಲಂತೂ ತಮ್ಮ “ವಂಶದ ಹೆಸರುಗಲ್ಲಿಂದ” ಕೆಲಸಗಳು ಆಗುವ ಹಾಗಿದೆ.

    Reply
  3. basavaraj halli

    ನಾವು ಜಾತಿಯನ್ನು ತೊರೆದಿದ್ದೇವೆ ಎಂದು ಹೇಳುತ್ತಲೇ ಕೆಲವರು ಜಾತಿ ಮಾಡುವವರಿದ್ದಾರೆ. ಜಾತಿಗಳೇಕೆ ಇನ್ನೂ ಹುಲುಸಾಗಿ ಬೆಳೆಯುತ್ತಿವೆ. ಅದಕ್ಕೆ ನೀರುಣಿಸುತ್ತಿರುವವರು ಯಾರು ? ಜಾತಿವಿನಾಶಕ್ಕೆ ಕಾಲ ಬರುವುದೇ ಇಲ್ಲವೇ ಹಲವು ಪ್ರಶ್ನೆಗಳು ಕಾಡುತ್ತವೆ. ಮೇಲ್ವರ್ಗಗಳು ಕೆಳ ವರ್ಗಗಳನ್ನು ಗುಲಾಮಗಿರಿಗೆ ತಳ್ಳುವ ಉದ್ದೇಶದಿಂದ ಮಾಡಿದ ಜಾತಿಗಳು ಆಧುನಿಕತೆಯಲ್ಲೂ ಉಳಿದುಕೊಂಡಿರುವುದು ನೋಡಿದರೆ ಆಳುವ ವರ್ಗಗಳ ಕಬಂಧಬಾಹುಗಳು ಸಾವಿರಾರು ವರ್ಷಗಳಿಗೂ ಮೀರಿ ನಿಂತಿರುವುದು ಆಶ್ಚರ್ಯವೆನಿಸುತ್ತದೆ. ಶ್ರಮ, ಪ್ರೀತಿ,ಸ್ನೇಹ, ಪ್ರಾಮಾಣಿಕತೆ, ನಿಷ್ಠೆ, ನಂಬಿಕೆಯ ಒಟ್ಟು ಮೊತ್ತದ ಮೇಲೆ ವ್ಯಕ್ತಿಯನ್ನು ಗುರುತಿಸುವ ಕಾಲ ಬರುವವರೆಗೂ ಜಾತಿ ಜಾಢ್ಯಗಳು ನಾಟಕ ಮಾಡುತ್ತಲೇ ಇರುತ್ತವೆ.
    ಬಸವರಾಜ ಹಳ್ಳಿ

    Reply

Leave a Reply to basavaraj halli Cancel reply

Your email address will not be published. Required fields are marked *