ಕಾಂಗ್ರೆಸ್ ರಾಜ್ಯಪಾಲ ಭಾರದ್ವಾಜರ ಸಲಹೆ ಕೇಳಿದ್ದರೆ…

– ರಮೇಶ್ ಕುಣಿಗಲ್

ಆಳುವ ಸರಕಾರದ ಸವಲತ್ತು, ಅಧಿಕಾರಗಳನ್ನು ಅನುಭವಿಸಿಯೂ ಹಿರಿಯ, ಪ್ರಾಮಾಣಿಕ ಪತ್ರಕರ್ತ ಎಂದೇ ಖ್ಯಾತರಾಗಿರುವ ಕುಲದೀಪ್ ನಯ್ಯರ್ ಅವರ ಆಟೋಬಯೋಗ್ರಾಫಿ ಎಂಬ ಹೆಸರಿನಲ್ಲಿ ಹೊರಬಂದಿರುವ ಹಿಸ್ಟರಿ ಪುಸ್ತಕವೊಂದು ಸದ್ಯದಲ್ಲೇ ಕನ್ನಡದಲ್ಲಿ ಬಿಡುಗಡೆಗೊಳ್ಳಲಿದೆ.

ಕೃತಿಯ ಪರಿಚಯ ಅಥವಾ ವಿಮರ್ಶೆಗೆ ಈ ಸಂದರ್ಭದಲ್ಲಿ ಹೋಗದೆ, ಲೇಖಕರು ತಮ್ಮ ಬರಹದಲ್ಲಿ ಪ್ರಸ್ತುತ ಕರ್ನಾಟಕ ರಾಜ್ಯಪಾಲರಿಗೆ ಸಂಬಂಧಿಸಿದಂತೆ ದಾಖಲಿಸಿರುವ ಘಟನೆಯನ್ನು ಚರ್ಚಿಸುವುದಷ್ಟೇ ಈ ಲೇಖನದ ಉದ್ದೇಶ. Beyond the Lines ಕೃತಿಯ ಪುಟ 342ರಲ್ಲಿ ಲೇಖಕರು ಹೀಗೆ ಬರೆಯುತ್ತಾರೆ..

“Karnataka governor H.R Bharadwaj admitted before me that altering register, etc was not a difficult task. ‘Nobody seeks my advice these days, otherwise the 2G or CWG scam could have been managed’, Bharadwaj said”.

ಈ ಸಾಲುಗಳಿಗೆ ಮೊದಲು ನಯ್ಯರ್ ಹವಾಲಾ ಪ್ರಕರಣದಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಲಖುಭಾಯಿ ಪಾಠಕ್ ಎಂಬುವವರಿಂದ ಹಣ ಪಡೆದಿದ್ದರು ಎನ್ನಲಾದ ಪ್ರಕರಣ ಕುರಿತು ಮಾತನಾಡುತ್ತಾರೆ. ಪಾಠಕ್ ಹಣ ನೀಡಿದ್ದನ್ನು ಒಪ್ಪಿಕೊಂಡಿದ್ದರೂ, ಅವರು ಪ್ರಧಾನಿಯನ್ನು ಭೇಟಿ ಮಾಡಿದ್ದಕ್ಕೆ ಯಾವ ಆಧಾರಗಳೂ ಸಿಗದಂತೆ ದಾಖಲೆಗಳನ್ನು ತಿರುಚಲಾಗಿತ್ತು ಎಂದು ಆರೋಪಿಸುತ್ತಾರೆ. ನಂತರ ಭಾರದ್ವಾಜ್ ಹೇಳಿದರು ಎನ್ನಲಾದ ಈ ಮೇಲಿನ ಮಾತನ್ನು ದಾಖಲಿಸುತ್ತಾರೆ.

ಭಾರದ್ವಾಜರ ವಾಚಾಳಿತನ ಗೊತ್ತಿರುವ ಯಾರಿಗೇ ಆಗಲಿ, ಅವರು ಹೀಗೆ ಹೇಳಿರುವುದನ್ನು ಸಂಶಯಿಸುವುದಿಲ್ಲ. ಎಷ್ಟೇ ಆಗಲಿ, ಬೋಫೋರ್ಸ್ ಹಗರಣದ ಮುಷ್ಟಿಯಿಂದ ಕಾಂಗ್ರೆಸ್ ರಾಜಕಾರಣದ ಪ್ರಥಮ ಕುಟುಂಬವನ್ನು ಮುಕ್ತಗೊಳಿಸಿದ ಆರೋಪ ಅವರ ಮೇಲೆ ಈಗಾಗಲೇ ವಿರೋಧ ಪಕ್ಷಗಳು ಹೊರಿಸಿವೆ. ಇದೇ ಹಿನ್ನೆಲೆಯಲ್ಲಿ ನೋಡಿದಾಗ, ‘ಇತ್ತೀಚಿನ ದಿನಗಳಲ್ಲಿ ನನ್ನ ಸಲಹೆಯನ್ನು ಯಾರೂ ಕೇಳುತ್ತಿಲ್ಲ’ ಎಂದು ಅವಲತ್ತುಕೊಳ್ಳುವುದರ ಹಿಂದೆ, ಈ ಹಿಂದೆ ಅವರ ಸಲಹೆಯಿಂದಲೇ ಹಲವರು ಪಾರಾಗಿದ್ದರು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

“ದಾಖಲೆಗಳನ್ನು ತಿರುಚುವುದು ಕಷ್ಟದ ಕೆಲಸವೇನಲ್ಲ..” ಎನ್ನುವ ಮೂಲಕ ಸದ್ಯ ದೊಡ್ಡ ಚರ್ಚೆಯಲ್ಲಿರುವ 2G, CWG ಅಥವಾ ಮುಂದುವರಿದು ಕೋಲ್‌ಗೇಟ್ ಹಗರಣಗಳಿಂದ ಸರಕಾರದ ನೇತಾರರು ದಾಖಲೆಗಳನ್ನು ತಿರುಚುವ ಮೂಲಕ ಹೊರಬರುವುದು ಕಷ್ಟವೇನಾಗಿರಲಿಲ್ಲ ಎಂದು ಭಾರದ್ವಾಜರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಭಾರದ್ವಾಜ್ ಬಿಜೆಪಿ ಸರಕಾರ ಇರುವ ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಬಂದ ನಂತರವೂ ‘ನಾನು ಒಬ್ಬ ಕಾಂಗ್ರೆಸ್ಸಿಗ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡಿದ್ದರು. ‘ಹೈಕಮಾಂಡ್’ ಕರೆದರೆ ಕೇಂದ್ರಕ್ಕೂ ಹಿಂದುರುಗಲು ಸಿದ್ಧ, ಎಲ್ಲಿಯೂ ಇಲ್ಲವಾದರೆ ಇಂದಿಗೂ ಕೋಟ್ ಸಿದ್ಧವಿದೆ, ನಾನು ನನ್ನ ಹೆಂಡತಿ ಇಬ್ಬರೂ ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ ಎಂದು ಪತ್ರಿಕಾ ಸಂದರ್ಶನಗಳಲ್ಲಿ ಹೇಳಿದ ಉದಾಹರಣೆಗಳಿವೆ. (ಅವರ ಪತ್ನಿಯೂ ಸುಪ್ರೀಂಕೋರ್ಟ್ ಹಿರಿಯ ವಕೀಲರು).

ಆಡಳಿತದಲ್ಲಿರುವ ಸರಕಾರಗಳಿಗೆ ಇಂತಹ ‘ಆಪತ್ಬಾಂಧವರ’ ಸಹಕಾರ, ಸಲಹೆಗಳು ಬೇಕಾಗುತ್ತವೆ. ಇಂತಹ ‘ಸಲಹೆ, ಸಹಕಾರ’ ನೀಡಿ ಭಾರದ್ವಾಜರಂತಹ ವಕೀಲರು, ಸಂವಿಧಾನ ತಜ್ಞರು ತಮ್ಮ ಸೇವೆಗೆ ಅನುಗುಣವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸುತ್ತಾರೆ. ಅವರು ಇಂದು ಕರ್ನಾಟಕದ ರಾಜ್ಯಪಾಲರಾಗಿರುವುದೂ ಅಂತಹುದೇ ಸೇವೆಯ ಫಲ.

One thought on “ಕಾಂಗ್ರೆಸ್ ರಾಜ್ಯಪಾಲ ಭಾರದ್ವಾಜರ ಸಲಹೆ ಕೇಳಿದ್ದರೆ…

Leave a Reply to basavaraj halli Cancel reply

Your email address will not be published. Required fields are marked *