ನಾಟಕ, ಸಿನೆಮಾ, ರಾಜಕೀಯ, ಡಬ್ಬಿಂಗ್ ಬಗ್ಗೆ ಆನಂತ ನಾಗ್

[ಕನ್ನಡ ಚಿತ್ರರಂಗದಲ್ಲಿ ಅನಂತ ನಾಗ್‌ರಿಗೆ ವಿಶೇಷವಾದ ಸ್ಥಾನವಿದೆ. ಉಂಡೂ ಹೋದ ಕೊಂಡೂ ಹೋದ, ಗೋಲ್‌ಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಗೌರಿ ಗಣೇಶ; ಹೀಗೆ ಕಮರ್ಷಿಯಲ್ ವಿಭಾಗದ ವಿವಿಧ ಚಿತ್ರಗಳಲ್ಲಿ ಅಭಿನಯಿಸಿ ಮಿನಿಮಮ್ ಗ್ಯಾರಂಟಿ ನಟ ಎನ್ನುವ ಖ್ಯಾತಿಯ ಜೊತೆಗೆ ಅದಕ್ಕೂ ಮೊದಲು ಎಂ.ಎಸ್.ಸತ್ಯುರ ’ಬರ’, ಸೋದರ ಶಂಕರ್ ನಾಗ್ ಜೊತೆ ಹಲವು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಂಗಭೂಮಿ, ಚಿತ್ರರಂಗ, ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅನಂತ ನಾಗ್‌ರನ್ನು ಅವರ ಜನ್ಮ ದಿನದ ಸಂದರ್ಭದಲ್ಲಿ ಜನಶ್ರೀ ವಾಹಿನಿಯ ನ್ಯೂಸ್ ಚೀಫ್ ಅನಂತ ಚಿನಿವಾರ್  ಸಂದರ್ಶಿಸಿದ್ದರು. ಆ ಸಂದರ್ಶನದ ಕೆಲವು ಭಾಗಗಳನ್ನು ಬರಹದ ರೂಪದಲ್ಲಿ ಇಲ್ಲಿ ಕೊಡುತ್ತಿದ್ದೇವೆ. ಬರಹಕ್ಕಿಳಿಸಿದವರು ಜಿ. ಮಹಾಂತೇಶ್.]

ಅನಂತ ಚಿನಿವಾರ್ : ಇಷ್ಟು ವರ್ಷಗಳ ನಂತರ ಹಿಂದಕ್ಕೆ ತಿರುಗಿ ನೋಡಿದರೇ…

ಅನಂತ ನಾಗ್ : ಅಂದುಕೊಂಡದ್ದಕಿಂತ ಅಂದುಕೊಳ್ಳದಿರುವುದೇ ನನಗೆ ಜಾಸ್ತಿ ಸಿಕ್ಕಿದೆ. ಈ ಸಿನಿಮಾ, ರಾಜಕೀಯ ಪ್ಲಾನ್ ಮಾಡಿರಲಿಲ್ಲ. ಚಿಕ್ಕಂದಿನಿಂದಲೂ ತಂದೆ ತಾಯಿ ಅವರ ಮನಸ್ಥಿತಿ, ಆಶ್ರಮ. ಅಂದ್ರೇ ನನ್ನ ತಾಯಿಯವರು ದಕ್ಷಿಣ ಕನ್ನಡ, ತಂದೆ ಉತ್ತರ ಕನ್ನಡ. ತಾಯಿಯ ಊರಿನಲ್ಲೇ ಬೆಳೆದೆ. ತಾಯಿಯನ್ನೇ ತಂದೆ ನೋಡಿ ಮೆಚ್ಚಿದ್ದೂ ದಕ್ಷಿಣ ಕನ್ನಡದಲ್ಲೇ. ಆಶ್ರಮದ ವಾತಾವರಣದಲ್ಲೇ ನಾನು ಬೆಳೆದೆ. ಅನಂತ ನಾಗರಕಟ್ಟೆ ನನ್ನ ಮೂಲ ಹೆಸರು. ಆನಂದಾಶ್ರಮ ಗುರುಗಳು ನನ್ನ ತಂದೆಯನ್ನ ಆಶ್ರಮದ ಸೆಕ್ರೇಟರಿ ಮ್ಯಾನೇಜರ್ ಮಾಡಿದರು. ಹೀಗಾಗಿ ಬಾಲ್ಯದಲ್ಲೇ ಆಶ್ರಮ, ಮಠದ ವಾತಾವರಣದಲ್ಲಿ ಬೆಳೆದೆ. ಅಲ್ಲಿಯೇ ನನಗೆ ಸಂಸ್ಕಾರ ಸಿಕ್ಕಿದ್ದು. ಶಾಲೆಯಲ್ಲಿ ಚೆನ್ನಾಗಿ ಓದ್ತಾ ಇದ್ದೆ. ಹೊನ್ನಾವರ, ಸಿದ್ದಾಪುರದಲ್ಲಿ ಓದಿದ್ದೇನೆ. ಶಾಲೆಯಲ್ಲಿ ಡಿಬೇಟ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ನಾಟಕ, ಪ್ರಹಸನಗಳಲ್ಲಿ ಭಾಗವಹಿಸುತ್ತಿದ್ದೆ. ಎಲ್ಲರೊಂದಿಗೆ ನಾನು ಚೆನ್ನಾಗಿ ಬೆರೆಯುತ್ತಿದ್ದೆ. ನನ್ನ ತಂದೆ ಸ್ನೇಹಿತರು ಮುಂಬೈನಿಂದ ಬಂದು, ನನ್ನ ಪ್ರಗತಿ ನೋಡಿ ಮುಂಬೈಗೆ ಕರೆಸಿಕೊಂಡರು. ಪಟ್ಟಣ ನೋಡಿದ್ದೇ ನಾನು ಹೊನ್ನಾವರ, ಕುಮುಟಾ, ಕಾರವಾರ, ಮಂಗಳೂರೇ. ಇದನ್ನ ಬಿಟ್ಟರೇ ನಾನು ಬೇರೆ ಪಟ್ಟಣಗಳನ್ನ ನೋಡಿಯೇ ಇರಲಿಲ್ಲ. ಕನ್ನಡ ಮಾಧ್ಯಮದಲ್ಲಿ ಓದ್ತಿದ್ದ ನನಗೆ ಇಂಗ್ಲೀಷ್ ಕಂಟಕವಾಯ್ತು. ಇಂಗ್ಲೀಷ್‌ನಿಂದಾಗಿ ನನ್ನ ವ್ಯಕ್ತಿತ್ವ ಕ್ಷೀಣಿಸ್ತಾ ಹೋಯಿತು. ಕಲ್ಚರಲ್ ಶಾಕ್ ಆಯಿತು. ಹೆಚ್ಚು ಅರ್ಥ ಆಗ್ತಿರಲಿಲ್ಲ. ಮೊದಲ ಸ್ಥಾನದಲ್ಲಿ ಬರುತ್ತಿದ್ದ ನಾನು, ಕಡೆಯ ಸ್ಥಾನಕ್ಕೆ ತಳ್ಳಲ್ಪಟ್ಟೆ. ಮಠದಲ್ಲಿ ಬೆಳೆದಿದ್ದರಿಂದ ಸಂಸ್ಕೃತ ಕಷ್ಟ ಅಗ್ತಿರಲಿಲ್ಲ. ಇಂಗ್ಲೀಷ್, ಮರಾಠಿ, ಹೀಗೆ ಬೇರೆ ಬೇರೆ ಭಾಷೆಗಳನ್ನ ಕಲಿತೆ. ವಿಜ್ಞಾನ, ಭೂಗೋಳ, ಇತಿಹಾಸ ಅರ್ಥ ಆಗ್ತಿರಲಿಲ್ಲ.  9ನೇ ತರಗತಿಯಲ್ಲಿ ಫೈಲ್ ಆದೆ. ಹೊರಗಿನಿಂದ ಬಂದಿದ್ದೇನೆ ಅನ್ನುವ ಕಾರಣದಿಂದ 10ನೇ ತರಗತಿಗೆ ಕಳಿಸಿದರು. 10ನೇ ತರಗತಿಯಲ್ಲಿ ಇನ್ನೂ ಕಷ್ಟ ಆಗ್ಹೋಯ್ತು. ಇಲ್ಲಿ ನನಗೆ ಏನಾಯ್ತು… ಊರಿನಲ್ಲಿ ಚೆನ್ನಾಗಿ ಇದ್ದೆ. ಮಾನಸಿಕವಾಗಿ ಕುಗ್ಗಿ ಹೋದೆ. ಜೊತೆಗಾರರೊಂದಿಗೆ ಬೆರೆಯಲು ಕಷ್ಟ ಆಗ್ತಿತ್ತು. ಒಂಥರಾ ಶಾಕ್ ಆಯ್ತು. ಮೊದಲ 6 ತಿಂಗಳು ಮೌನವಾಗಿದ್ದೆ. ನಂತ್ರ ಸ್ಕೂಲು ಬಂಕ್ ಮಾಡ್ತಿದ್ದೆ. ಹೊರಗೆ ಹೋಗ್ತಿದ್ದೆ. ಮೆಟ್ರೋ ಥೇಟರ್ನಲ್ಲಿ ನನ್ನ ಚಿಕ್ಕಪ್ಪ ಅಕೌಂಟೆಂಟ್ ಆಗಿದ್ದ್ರು. ಅವ್ರನ್ನ ನೋಡ್ಲಿಕ್ಕೆ ಹೋಗ್ತಿದ್ದೆ. ಪ್ರತಿ ದಿನವೂ ಸಿನಿಮಾ ನೋಡ್ಲಿಕ್ಕೆ ಶುರು ಮಾಡಿದ್ದೇ ಆವಾಗ. ಇಂಗ್ಲೀಷ್ ಸಿನಿಮಾ ನೋಡಿದ್ದೇ ಹೆಚ್ಚು. 6 ತಿಂಗಳು ಹಾಗೇ ನಡೀತು. ಆ ಮೇಲೆ ಸಿಕ್ಕಾಕ್ಕೊಂಡೆ. ಇಂಗ್ಲೀಷ್‌ನಲ್ಲಿ ಬರೀಲಿಕ್ಕೆ ಬರಲ್ಲ…ನಾನು ಫೇಲ್  ಅಗಿದೆ. ಕ್ಲಾಸ್‌ನಲ್ಲಿ ಕೂರಲಿಕ್ಕೆ ನನಗೆ ನಾಚಿಕೆ ಆಗಿದೆ ಅಂತ ಹೇಳಿದೆ. ಮತ್ತೆ 10ನೇ ಕ್ಲಾಸನ್ನು ಹಾಗೂ ಹೀಗೂ ಪಾಸ್ ಮಾಡಿದೆ. ನಂತರ ಆರ್ಟ್ಸ್, ಕಾಮರ್ಸ್ ಬಿಟ್ಟು ಸೈನ್ಸ್‌ಗೆ ಹೋದೆ. ಆ ಸಮಯದಲ್ಲಿ ನನಗೆ ನಿಗೂಡ್ ಅನ್ನೋರ ಪರಿಚಯ ಆಯ್ತು. ನಾಟಕದಲ್ಲಿ ಹೆಸರು ಮಾಡಿದವರು ಅವರು. ಕೊಂಕಣಿ ಭಾಷೆಯಲ್ಲಿ ನಾಟಕ, ಚೈತನ್ಯ ಮಹಾಪ್ರಭುವಿನ ಜೀವನ ಕುರಿತ ನಾಟಕವದು. ನಾಟಕ ಮಾಡ್ತಾ ಮಾಡ್ತಾ ನನ್ನಲ್ಲಿ ಉಡುಗಿ ಹೋಗಿದ್ದ ಚೈತನ್ಯ ಬರಲಿಕ್ಕೆ ಶುರು ಆಯ್ತು. ಜನರ ಮೆಚ್ಚುಗೆ ಸಿಕ್ತು. ಕನ್ನಡ ಕೊಂಕಣಿ ನಾಟಕಗಳಲ್ಲಿ ಪಾತ್ರ ಮಾಡ್ತಾ ಹೋದೆ. ಸ್ಟೇಜ್‌ನಲ್ಲಿ ನಿಂತು ನಾಟಕ ಆಡೋದು ಇದ್ಯಲ್ಲ, ಅದು ಒಂಥರಾ ಸವಾಲು. ರಿಹರ್ಸಲ್‌ನಲ್ಲಿ ಸರಿ ಬರ್ತಿತ್ತು. ಸ್ಟೇಜ್‌ನಲ್ಲಿ ಒಂದೊಂದ್ಸಲ ಕಷ್ಟ ಆಗ್ತಿತ್ತು. ನಟ ಆಗ್ತಿನಿ ಅಂತ ನಾನು ಯಾವ ಕಾಲ್ದಲ್ಲೂ ಅಂದ್ಕೊಂಡಿರಲಿಲ್ಲ. ಕನ್ನಡಿಯಲ್ಲಿ ಮುಖ ನೋಡ್ಕೊಂಡಿದ್ಯೋ ಹ್ಯಂಗೇ, ನಾಟಕ ಗೀಟಕಾ ಸರಿ ಊಟಕ್ಕೇನು ಅಂತ ಕೆಲವರು ಕೇಳ್ಲಿಕ್ಕೆ ಶುರು ಮಾಡಿದರು. ಕೊಂಕಣಿ, ಕನ್ನಡ ನಾಟಕಗಳ ಮೂಲಕ ಬಂದೋನು. ಅಮೋಲ್ ಪಾಲೇಕರ್ ಪರಿಚಯ ಆಯಿತು. ಪಾಲೇಕರ್ ಸತ್ಯದೇವ್ ದುಬೆ ಅವರನ್ನ ಪರಿಚಿಯಿಸಿದರು. ಭೋಪಾಲ್‌ನಿಂದ  ಬಂದೋರು ಅವರು. ಸಂಪ್ರದಾಯಸ್ಥ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ ನಾನು, ಆಧುನಿಕ ನಾಟಕಗಳಲ್ಲೂ ಪಾತ್ರ ಮಾಡ್ಲಿಕ್ಕೆ ಶುರು ಮಾಡಿದರು. ಆಗ ಸಹಾಯಕ್ಕೆ ಬಂದಿದ್ದು ಸತ್ಯದೇವ್ ದುಬೆ. ಬಾಡಿ ಲಾಂಗ್ವೇಜ್ ಕಲಿಸಿದ್ದೇ ಅವರು. ರಿಹರ್ಸಲ್‌ನಲ್ಲಿ ಸಹಾಯ ಮಾಡಿದರು. ಸ್ಮಾರ್ಟ್ ನಡಿಗೆ ಕಲಿಸಿದ್ದೂ ದುಬೆ ಅವರು. ಕೊಂಕಣಿ, ಕನ್ನಡ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ ನಾನು, ಮರಾಠಿ, ಹಿಂದಿ ಭಾಷೆಯ ರಂಗ ಪ್ರಯೋಗಗಳಲ್ಲೂ ಕಾಣಿಸಿಕೊಂಡೆ. ಅಷ್ಟರಲ್ಲಿ ಸೈನ್ಸ್ ಮರೆತು ಹೋಗಿತ್ತು. ಇದೇ ನಾಟಕಗಳಲ್ಲಿ ಮೆಚ್ಚುಗೆ ಸಿಕ್ತಿತ್ತು. ನನ್ನನ್ನ ನೋಡಿ, ಯೂನಿಯನ್ ಬ್ಯಾಂಕ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ನನಗೆ ಕೆಲ್ಸ ಕೊಡಿಸಿದರು. ನನ್ನ ತಂದೆ ಮೇಲಿನ ನನ್ನ ಭಾರ ಕಡಿಮೆ ಆಗಿದ್ದೇ ಆಗ. ಅಷ್ಟೊತ್ತಿಗೆ ನನ್ನ ತಮ್ಮ ಶಂಕರ ಕೂಡ ನನ್ನ ಜೊತೆ ಸೇರಿಕೊಂಡೆ. ನಾಟಕಗಳಿಂದ ನನಗೆ ನೆರವು ಸಿಕ್ತಿತ್ತು. ಸತ್ಯದೇವ್ ದುಬೆ ಜತೆ ಕೆಲ್ಸ ಮಾಡ್ತಿದ್ದಾಗ ವೆಂಕಟರಾವ್ ಅನ್ನೋರು ಒಂದು ಪಾತ್ರಕ್ಕಾಗಿ ಹುಡುಕ್ತಾ ಇದ್ದ್ರು. ಕನ್ನಡದಲ್ಲಿ. ವಂಶವೃಕ್ಷಕ್ಕೆ. ನನ್ನನ್ನೂ ಕರೆಸಿದರು. ವೈ.ಎನ್.ಕೃಷ್ಣಮೂರ್ತಿ, ಜಿ.ವಿ.ಅಯ್ಯರ್, ಗಿರೀಶ್ ಕಾರ್ನಾಡ್ ಅವರ ಮೂಲಕ ಮೊದಲ ಚಿತ್ರ ಸಂಕಲ್ಪದಲ್ಲಿ ಪಾತ್ರ ಮಾಡಿದೆ. ನಂತ್ರ ಮುಂಬೈಗೆ ಹೋದೆ. ಸತ್ಯದೇವ್ ದುಬೆ ಅವರ ಎಲ್ಲಾ ನಾಟಕಗಳಲ್ಲಿ ರಿಹರ್ಸಲ್ ಮಾಡ್ತಿದ್ದೆ. ಒಟ್ಟು 5 ನಾಟಕಗಳ ರಿಹರ್ಸಲ್‌ನಲ್ಲಿ ಭಾಗವಹಿಸಿದ್ದೆ. ನಾಟಕಗಳಲ್ಲಿ ನೆಲೆ ನಿಲ್ಲಬೇಕು ಅಂದ್ಕೊಂಡಾಗಲೇ ಸಿನಿಮಾ ಕಡೆ ವಾಲಿದೆ. ಇದ್ರ ಬಗ್ಗೆ ದುಬೆ ಅವರಿಗೆ ನನ್ನ ಮೇಲೆ ಸ್ವಲ್ಪ ಸಿಟ್ಟಿತ್ತು. ಪುನಃ ಸಿನಿಮಾ, ನಂತ್ರ ನಾಟಕ, ಹೀಗೆ ನಡೀತಾ ಇತ್ತು. ನಂತರ ಸೈನ್ಸ್ ಬದಲಿಸಿ ಕಾಮರ್ಸ್‌ಗೆ ಸೇರಿಕೊಂಡೆ. ಕಾಮರ್ಸ್ ಪೂರೈಸಿದರೆ ಬ್ಯಾಂಕ್ ಕೆಲ್ಸಕ್ಕೆ ಅನ್ಕೂಲ ಆಗುತ್ತೆ ಅಂತ. ಸಂಜೆ ಪುನಃ ನಾಟಕಗಳಲ್ಲಿ ಪಾತ್ರ. ಇದು ದಿನನಿತ್ಯದ ದಿನಚರಿಯಾಯ್ತು. ಶಂಕರ ಆಗ ಸ್ಕೂಲ್ಗೆ ಹೋಗ್ತಿದ್ದ. ನನಗೂ ನಿನಗೂ ಯೋಗಾಯೋಗ, ಋಣ ಇಲ್ಲವೇನೋ, ನಾನು ಮಾಡ್ತಿರೋ ನಾಟಕಗಳಲ್ಲಿ ನೀನು ಪಾತ್ರ ಮಾಡ್ಲಿಕ್ಕೆ ಆಗ್ತಿಲ್ಲ, ನೋಡು ಶಾಂತರಾಂ ಫಿಲ್ಮ್ ಮಾಡ್ತಿದಾರೆ, ನೋಡು ಅಲ್ಲಿಗೆ ಹೋಗು ಅಂತ ದುಬೆ ಅಂದ್ರು. ಆಗಿನ್ನೂ ಸಂಕಲ್ಪ ಚಿತ್ರ ರಿಲೀಸ್ ಆಗಿರಲಿಲ್ಲ. ಇಲ್ಲಿ ಬಂದಾಗ ಶಾಂತರಾಂ ಜತೆ ಕೆಲ್ಸ ಮಾಡಿದೆ. ಹೀಗೆ ನಾನು ಯಾವ್ದನ್ನೂ ಅಂದ್ಕೊಂಡಂಗೆ ಆಗಿಲ್ಲ ಅನ್ನೋದಿಕ್ಕೆ ಇವೇ ಸಾಕು. ಹಳ್ಳಿಯಲ್ಲಿ ಎಷ್ಟು ಅಸಹಾಯಕನಾಗಿದ್ದೆ. ಕೆಳ ಮಧ್ಯಮ ವರ್ಗದಿಂದ ಬಂದಿದ್ದರೂ ಊಟಕ್ಕೇನೂ ತೊಂದರೆ ಇರಲಿಲ್ಲ. ಹಿಂದಿ, ಮರಾಠಿ, ಕನ್ನಡ, ಇಂಗ್ಲೀಷ್ ನಾಟಕಗಳಲ್ಲಿ ಪಾತ್ರ ಮಾಡ್ದೆ. ನನ್ನ ವೈಯಕ್ತಿಕವಾಗಿ ಕ್ರೈಸಿಸ್‌ನಲ್ಲಿ ಬೆಳೆದು ಬಂದೋನು.

ಅನಂತ ಚಿನಿವಾರ್ : ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ವಿಚಾರದ ಬಗ್ಗೆ, ಮಾಧ್ಯಮ ತೊಡಕಾಗಲ್ವೇ? ಇವತ್ತಿನ ದಿನದಲ್ಲಿ ಕನ್ನಡ ಓದ್ಕೊಂಡೇ ಇಂಗ್ಲೀಷ್ ಕಲಿಯುವುದಕ್ಕಾಗಲ್ವಾ?

ಅನಂತ ನಾಗ್ : ಇದರ ಬಗ್ಗೆ ಇವತ್ತಿಗೂ ಚರ್ಚೆ ನಡೀತಾ ಇದೆ. ನನಗೆ ಅನೇಕರು ಕೇಳ್ತಾರೆ. ಕನ್ನಡ ಕಲಿತ್ಕೊಂಡು ಹಿಂದಿಯಲ್ಲಿ ಪಾತ್ರ ಮಾಡಿರೋ ಬಗ್ಗೆ. ಚಿಕ್ಕಂದಿನ ವಯಸ್ಸಿನಲ್ಲಿ ಮಕ್ಕಳು ಎಲ್ಲ ಬಹು ಭಾಷೆಗಳನ್ನೂ ಕಲಿಯುವ ಸಾಮರ್ಥ್ಯ ಇರುತ್ತೆ. ನನಗೇನೇ ಮರಾಠಿ, ಹಿಂದಿ, ಗುಜರಾತಿ, ಇಂಗ್ಲೀಷ್ ಕಲೀಲಿಕ್ಕೆ ಆಯ್ತು. ದುಬೆ ಅವರು ಇದಕ್ಕೆಲ್ಲ ನನಗೆ ಸಹಾಯ ಮಾಡಿದರು. ಹಳೆಯ ಪುಸ್ತಕಗಳನ್ನ ಕೊಟ್ಟು ಸಹಾಯ ಮಾಡಿದರು. ಭಾಷೆ ಕಲೀಲಿಕ್ಕೆ ಪರಿಶ್ರಮ ಹಾಕಿದೀನಿ. ಕನ್ನಡ ಕಲಿಯೋ ಜತೇಲೇ ಇಂಗ್ಲೀಷ್ ಕಲಿಸಬೇಕು. ಇಂಗ್ಲೀಷ್ ಅಂತರ್ರಾರಾಷ್ಟ್ರೀಯ ಭಾಷೆ, ನನ್ನ ಮಗಳನ್ನ ಕಾನ್ವೆಂಟ್ಗೆ ಕಳಿಸಿದೀನಿ. ಆದರೂ ಕನ್ನಡವನ್ನ ತುಂಬಾ ಚೆನ್ನಾಗಿ ಮಾತಾಡ್ತಾಳೆ. ಕನ್ನಡವೂ ಇದ್ದೇ ಇರುತ್ತೆ, ಇಂಗ್ಲೀಷ್ ಬೇಕು. ನನ್ನ ಹೆಂಡತಿ ಕನ್ನಡದವಳಲ್ಲ. ಆದರೂ ಕನ್ನಡದಲ್ಲೂ ಚೆನ್ನಾಗಿ ಮಾತಾಡ್ತಾಳೆ. ನನ್ನ ಮಗಳಂತೂ ತುಂಬಾ ಬೇಗ ಕನ್ನಡ ಮತ್ತು ಇಂಗ್ಲೀಷ್ ಕಲಿತಳು. ನಾನು ಇಂಗ್ಲೀಷ್‌ನಲ್ಲಿ ಟೈಪಿಂಗ್ ಕಲಿತಿದ್ದೆ, ಅದೀಗ ಕಂಪ್ಯೂಟರ್ ಕನ್ನಡಕ್ಕೂ ಸಹಾಯ ಆಗಿದೆ. ಇದು ಹೆಚ್ಚುವರಿ ಜ್ಞಾನ. ಇಂಗ್ಲೀಷ್ ಕಲಿತ ಕೂಡಲೇ ಕನ್ನಡ ಅಭಿಮಾನ ಇಲ್ಲ ಅಂತ ಹೇಳೋದಿಕ್ಕೆ ಬರೋದಿಲ್ಲ. ಎಲ್ಲಾ ದಿನಪತ್ರಿಕೆಗಳಲ್ಲಿ ಕನ್ನಡವೇ ನಂಬರ್ ಒನ್ ಆಗಿತ್ತು. ಈಗ ಇಂಗ್ಲೀಷ್ ಪೇಪರ್‌ಗಳೂ ಆ ನಿಟ್ಟಿನಲ್ಲಿ ಸಾಗ್ತಿದೆ.

ಅನಂತ ಚಿನಿವಾರ್ : ನಟ ಆಗಿದ್ದೀರಿ. ಬಹಳ ದಿನದಿಂದ ಕೇಳ್ಬೇಕು ಅಂದ್ಕೊಂಡಿದ್ದೆ, ವೈವಿಧ್ಯಮಯ ನಟನೆಯಲ್ಲಿ ಎಷ್ಟನ್ನ ಒಪ್ಪಿಕೊಂಡಿದ್ದೀರಿ? ಸಂತೋಷದಿಂದ ಒಪ್ಪಿಕೊಂಡಿದ್ದೀರಾ? ಸಂಖ್ಯೆ ದೃಷ್ಟಿಯಿಂದಲ್ಲ.

ಅನಂತ ನಾಗ್ : ಮೈನಾರಿಟಿ ಆಫ್ ರೋಲ್ಗಳು ನನ್ನ ಸಂತೋಷದಿಂದ ಕೂಡಿದಾವೆ. ನಾಟಕ ಮಾಡ್ದೇ ಇದ್ದ್ರೂ ರಿಹರ್ಸಲ್‌ನಲ್ಲಿ ಭಾಗವಹಿಸಿದ್ದೀನಿ. ಈ ಟೈಪ್ ರೋಲ್ ಇರಬೇಕು, ಅಂಥಾ ಪಾತ್ರ ಮಾಡ್ಬೇಕು ಅನ್ನೋ ಥರ ನಾನು ಬಯಸೋ ಥರ ಪಾತ್ರ ಸಿಕ್ಕೋದಿಲ್ಲ. ಆ ಮೇಲೆ 8-10 ಕಲಾತ್ಮಕ ಚಿತ್ರಗಳಲ್ಲೇ ಅಭಿನಯಿಸಿದ್ದೆ.  ಕಲಾತ್ಮಕ ಚಿತ್ರಗಳಿಂದಲೇ ನಾನು ಬಂದೋನು. ಹೀರೋ ಆಗ್ಬಿಟ್ಟೆ. ಆಕ್ಟರ್ ಆಗ್ಬಿಟ್ಟೆ ಭಾವನೆಯಿಂದ ಕೆಲ್ಸವನ್ನೂ ಬಿಟ್ಟೆ. ಯೂನಿಯನ್ ಬ್ಯಾಂಕ್ನೋರು ಹೇಳಿದ್ದೇನಂದ್ರೇ, ಅಲ್ಲಿ ಸರಿಯಾಗ್ಲಿಲ್ಲ, ಫೇಲ್ ಆದ್ದ್ರೇ ವಾಪಸ್ ಬ್ಯಾಂಕ್‌ಗೆ ಬಾ ಅಂತ ಅಂದ್ರು. ಆದ್ರೂ ರಾಜೀನಾಮೆ ಕೊಟ್ಟೆ.  ನಾನು ಕೆಲ್ಸ ಬಿಟ್ಮೇಲೆ ಕಲಾತ್ಮಕ ಚಿತ್ರಗಳಲ್ಲಿ ದುಡ್ಡು ಆಗ್ಲಿಲ್ಲ. ಹೀಗಾಗಿ ಕಮರ್ಷಿಯಲ್ ಚಿತ್ರಗಳಿಗೆ ಹೋದೆ. ವೃತ್ತಿ ಕರೆದ್ಮೇಲೆ ಲಕ್ಷ, 2 ಲಕ್ಷ ಅದರೂ ಬರಬೇಕು.

ಅನಂತ ಚಿನಿವಾರ್ : ಏನಾಯ್ತು ಅಂದ್ರೇ, ನಿಮ್ಮ ಕೆರೀಯರ್ ಪೀಕ್‌ನಲ್ಲಿದ್ದಾಗ ಚಂದನದ ಗೊಂಬೆ, ಬೆಂಕಿಯ ಬಲೆ, ಹೀಗೆ….

ಅನಂತ ನಾಗ್ : ಚಂದನದಗೊಂಬೆ, ಬೆಂಕಿಯ ಬಲೆಯಲ್ಲಿ ಗ್ರೇಟ್ ವ್ಯಾಲ್ಯು ಇತ್ತು. ಆ ಕಾಲ ಹಾಗಿತ್ತು.

ಅನಂತ ಚಿನಿವಾರ್ : ಕರೆಕ್ಟ್, ಕರೆಕ್ಟ್‌. ಒಬ್ಬ ಆರ್ಟಿಸ್ಟ್ ಆಗಿ?

ಅನಂತ ನಾಗ್ : ವಿಶೇಷವಾಗಿ ದೊರೆ ಭಗವಾನ್. ಭಗವಾನ್ ಅವ್ರು ವೆಂಕಟರಾವ್, ಸತ್ಯದೇವ್ ದುಬೆ ಥರ. ನನ್ನನ್ನೂ ಗೈಡ್ ಮಾಡಿದ್ರು. ಓಲ್ಡ್ ಮಾಡಲ್ ಥರ ಆಲ್ಲ. ಮಾಡ್ರನ್ ರೋಲ್. ಡಿಫರೆಂಟ್ ಪಾತ್ರಗಳನ್ನ ಕೊಟ್ಟರು. ಮಾರ್ಗದರ್ಶನ ಮಾಡಿದರು. ಅಟ್ ದ ಸೇಮ್ ಟೈಮ್, ಬೇರೆ ನಿರ್ದೇಶಕರು, ನಿರ್ಮಾಪಕರು, ಜನರು ನಿಮ್ಮನ್ನು ಈ ರೀತಿ ಇಷ್ಟ ಪಡ್ತಾರೆ ಅಂತ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದೆ. ನನಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾಯ್ತು.

ಅನಂತ ಚಿನಿವಾರ್ : ಎಕ್ಸಾಂಪಲ್‌ಗಳು ಹೇಳ್ಬೋದಾ? ನೀವು ಇಷ್ಟಪಡೋ ಪಾತ್ರಗಳು, ಮೇರಾ ನಾಮ್ ಜೋಕರ್ ಥರ ಪಾತ್ರವನ್ನ ಇಷ್ಟು ವರ್ಷಗಳಾದ್ರೂ ಇವತ್ತಿಗೂ ಒಪ್ಕೋಬೋದಲ್ಲಾ…

ಅನಂತ ನಾಗ್ : ಓಹೋ ಅಮೇಜಿಂಗ್. ಹಂಸಗೀತೆ, ಅನುರೂಪ, ಕನ್ನೇಶ್ವರರಾಮ, ಸಂಕಲ್ಪ, ಶ್ಯಾಮ್ ಬೆನೆಗಲ್  ಜೊತೆ ಅಂಕುರಾ, ಕಲಿಯುಗ್, ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ ಆಯ್ತು.

ಅನಂತ ಚಿನಿವಾರ್ : ಡ್ಯಾನ್ಸ್‌ಗೆ ನೀವು ಅನ್‌ಕಂಫರ್ಟಬಲ್…

ಅನಂತ ನಾಗ್ : ನಾನು ಹಳ್ಳಿಯಿಂದ ಬಂದೋನು. ಡ್ಯಾನ್ಸ್ ಅಷ್ಟಿರಲಿಲ್ಲ. ಬಹುತೇಕ ಡಾನ್ಸ್‌ಗಳಲ್ಲಿ ಸಾಹಿತ್ಯ ಸಂಗೀತ ಚೆನ್ನಾಗಿತ್ತು. ಟೀವಿಯಲ್ಲಿ ನನ್ನದೇ ಹಾಡುಗಳು ಪ್ರಸಾರ ಅಗ್ತಾ ಇರೋದನ್ನ ನೋಡಿದ್ರೇ ನನ್ನನ್ನ ಜನ ಹ್ಯಂಗೇ ಅಕ್ಸೆಪ್ಟ್ ಮಾಡಿದ್ರು ಅಂತ ಅನ್ನಿಸಿದ್ದೂ ಇದೆ.

ಅನಂತ ಚಿನಿವಾರ್ : 1960, 70, 80ರಲ್ಲಿ ಪ್ರಯೋಗಶೀಲ ಸಿನಿಮಾಗಳು ಬಂದಿದಾವೆ. ನಂತರ ಶಂಕರ್ ನಾಗ್ ಸೇರಿದರು. ಕಲಾತ್ಮಕ ಚಿತ್ರಗಳು ಬರ್ತಾ ಬರ್ತಾ ಕಮರ್ಷಿಯಲ್ ಚಿತ್ರಗಳ ಮಧ್ಯೆ ಅಂತರ ಹೆಚ್ಚಾಗ್ತಾ ಹೋಯ್ತು. ಈ ಸಂದರ್ಭದಲ್ಲಿ ಶಂಕರರನ್ನ ಹೇಗೆ ನೆನಪು ಮಾಡ್ಕೋತೀರಾ?

ಅನಂತ ನಾಗ್ : ಹೌದು, ಮಿಸ್ ಮಾಡ್ಕೊಳ್ತಿದೀನಿ. ಮಿಸ್ಸಿಂಗ್ ಮೋರ್ ಆಸ್ ಎ ಬ್ರದರ್. 6 ವರ್ಷಗಳ ಕಾಲ ನಾನು ಜತೇಲಿ ಇದ್ದೆ. ಬೆಳೆದಿದ್ದು ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್, ಸತ್ಯು… ಇನ್ ಫ್ಯಾಕ್ಟ್ ಸತ್ಯು ಜತೆ ಬರ ಮಾಡ್ದೆ. ಆ ಮೇಲೆ ಬರ ಬರ್ತಾ ಆರ್ಟ್ ಫಿಲ್ಮ್ ಕಡ್ಮೆ ಆಯ್ತು. ಶಂಕರನ ಒಂದಾನೊಂದು ಕಾಲದಲ್ಲಿ, ಬಾಕಿ ಕಮರ್ಷಿಯಲ್ ಆಯ್ತು. ಆಗ್ಲೂ ಕಮರ್ಷಿಯಲ್ ಫಿಲ್ಮ್ ಮಾಡಿದ್ವಿ. ಮಿಂಚಿನ ಓಟ, ಆಕ್ಸಿಡೆಂಟ್. ಸ್ಕ್ರಿಪ್ಟ್ ಚೆನ್ನಾಗೇ ಇತ್ತು. ಆಮೇಲೆ ಲಾಸ್ ಆಯ್ತು, ಶಂಕರ್ ಡೈರೆಕ್ಟ್ ಮಾಡಿ, ನಾನು ಆಕ್ಟ್ ಮಾಡಿದ್ರೂ. ಆ ಸಂದರ್ಭದಲ್ಲಿ ಮಾಲ್ಗುಡಿ ಡೇಸ್ ಸ್ಕ್ರಿಪ್ಟ್ ಬಂತು. ಶಂಕರ್ ವಾಸ್ ಹೆಸಿಟಂಟ್. ದಿಸ್ ಈಸ್ ಯುವರ್ ಮೀಡಿಯಂ, ಬಿಕಾಸ್ ನಾವು ಆರ್ಟ್ ಫಿಲ್ಮ್ ಕಡೆಯಿಂದ ಬಂದೋರು. ಮೆಂಟಲೀ ಒಪ್ಪಿತವಾಗಿರೋದು ಇದು. ಜನ ಏನನ್ನ ಬಯಸ್ತಾರೋ ಅದನ್ನ ಅವ್ರು ಮಾಡ್ತಾರೆ. ನಾವೇ ಹೇಳಿದ್ದು ಓಡಬೇಕು ಅನ್ನೋದು ನಿಜ ಆದ್ರೂ ನಾವು ಮಾಡಿದ್ದೂ ಓಡ್ಲಿಲ್ವಾ. ಶಂಕರ್ ವಾಸ್ ಎ ಯಂಗರ್ ಜನರೇಷನ್. ನಾವೇನಿದ್ದ್ರೂ ಓಲ್ಡ್ ಜನರೇಷನ್. ಶ್ಯಾಮ್ ಬೆನೆಗಲ್, ಸತ್ಯು, ದುಬೇ….

ಅನಂತ ಚಿನಿವಾರ್ : ಕಲಾತ್ಮಕ ಚಿತ್ರಗಳ ಬಗ್ಗೆ ಯಾಕೆ ಮಾತಾಡ್ತೀದಿನಿ ಅಂದ್ರೇ, ಬುದ್ದಿಜೀವಿ ಅನ್ನೋ ಪದಕ್ಕೆ ಇನ್ನೂ ವ್ಯಾಪಕ ಅರ್ಥ ಬಂದಿರಲಿಲ್ಲ. ಬುದ್ದಿಜೀವಿ ನಟ….

ಅನಂತ ನಾಗ್ : ದಟ್ ಇಸ್ ಥ್ಯಾಂಕ್ಸ್ ಟು ಲಂಕೇಶ್.

ಅನಂತ ಚಿನಿವಾರ್ : ನಾಸಿರುದ್ದೀನ್ ಶಾ ಥರದೋರು ಥೇಟರ್ ಕಡೆ ವಾಲ್ತಿದಾರೆ. ಆ ಥರ ಥೇಟರ್ ಕಡೆ ನೀವು ವಾಪಸ್?

ಅನಂತ ನಾಗ್ : ನಾಸಿರುದ್ದೀನ್ ಶಾ ಎನ್ಎಸ್‍ಡಿಯಲ್ಲಿ ಕಲಿತೋನು. ನಟನಾಗ್ಬೇಕು ಅಂತ ಹಂಬಲದಿಂದ ಬಂದೋನು ಅವ್ನು. ನಾನು ನಟನಾಗಬೇಕು ಅಂತ ಬಂದಿಲ್ಲ. ಅದ್ರೂ ನಾಟಕದಿಂದ ಬಂದೋನಾದ್ರೂ ಶ್ರೀನಿವಾಸಪ್ರಭು, ಶಂಕರ್ ಜತೆ ಒಂದಷ್ಟು ನಾಟಕಗಳನ್ನ ಆಡಿದ್ದೀನಿ. ಜೆ.ಪಿ. ಆಂದೋಲನ ಮೂಲಕ ರಾಜಕೀಯಕ್ಕೆ ಬಂದೆ. 1967ನೇ ಇಸವಿ. ಅಲ್ಲಿ ಬೇರೆ ನನಗೆ ಡೈಮನ್ಷನ್ ಆಫ್ ಲೈಫೇ ಬೇರೆ ಇತ್ತು. ಸಿನಿಮಾ ವೈಡೇಸ್ಟ್ ಮೀಡಿಯಾ. ಕ್ಯಾಂಪೇನ್ಗೆ ಹೋದಾಗ ಸಾವಿರ, ಲಕ್ಷ, ಹೀಗೆ ಜನ ಸೇರ್ತಾ ಇದ್ರು. ಇದೆಲ್ಲಾ ನಟ ಆಗಿದ್ದ್ರಿಂದ.

ಅನಂತ ಚಿನಿವಾರ್ : ಥೇಟರ್ ಆಫ್ ಪೊಲಿಟಿಕ್ಸ್, ನಿಮ್ಮನ್ನ ಸೆಳ್ಕೊಂಡು ಬಂತು.

ಅನಂತ ನಾಗ್ : ಈ ಪೊಲಿಟಿಕಲ್ ಥೇಟರ್ ಇದ್ಯಲ್ಲಾ, ರಿಯಲ್ ಲೈಫ್ ಪೊಲಿಟಿಕಲ್ ಥೇಟರ್, ಅನೇಕರು ಹೇಳ್ತಾರೆ, ಹಂಸಗೀತೆ ಎಷ್ಟು ಚೆನ್ನಾಗಿತ್ತು ಅಂತಾರೆ. ಟೈಮ್ ಈಸ್ ಫಾಸ್ಟ್. ಸಿಮಿಲರ್ಲಿ, ಯಂಗರ್ ಜನರೇಷನ್ ಕೇಳೋದೇ ಬೇರೆ. ನಸೀರುದ್ದೀನ್ ಶಾ ಈಸ್ ಫೈನ್. ಸಿನಿಮಾ ಆಕ್ಟರ್ ಆಗಿ ಇನ್ನೂ ನಟಿಸಬೇಕು ಅನ್ನೋ ಒಂದು ಫೈಯರ್ ಇನ್ ದಿ… ಹೊಟ್ಟೇಲಿ ಈಗ ಬೆಂಕಿಯೇ ಇಲ್ಲ.

ಅನಂತ ಚಿನಿವಾರ್ : ಆಸಕ್ತಿ ಕಳ್ಕೊಂಡಿದೀರಾ… ರಾಜಕೀಯದಲ್ಲೂ ಆಸಕ್ತಿ ಕಳ್ಕೊಂಡೀದೀರಾ?

ಅನಂತ ನಾಗ್ : ಅದೇ ಎಗೇನ್, ಸಿನಿಮಾ ನಟನಾಗಿ ಬರಬೇಕು ಅಂತ ಹ್ಯಾಗ್ ಅಂದ್ಕೊಂಡಿಲ್ವೋ, ಹಾಗೇನೇ ಪೊಲಿಟಿಕಲೀ ಕೂಡ. ಜೆಪಿ ಮೂವ್‌ಮೆಂಟ್, ಕಾಂಗ್ರೆಸ್ ವಿರೋಧಿ ಅಲೆ ಇತ್ತು. ಆವಾಗ ಜನತಾ ಪಾರ್ಟಿ, ಲಂಕೇಶ್, ಖಾದ್ರಿ ಶಾಮಣ್ಣ, ಪಟೇಲ್ ಜತೇಲಿ, ಅಲ್ಲಿಂದ ಚೇಂಜ್ ಮಾಡ್ಲಿಲ್ಲ. ನಾನು, ಶಂಕರ್ ಜತೆ ಸೇರ್ಕೋಂಡು 84-85ರಲ್ಲಿ ಕ್ಯಾಂಪೇನ್ ಮಾಡಿದ್ವಿ. ಆಗ ಏನಾದ್ರೂ ಕೇಳಿ ಅಂದ್ರು ಜೀವರಾಜ್ ಆಳ್ವಾ ಅವ್ರು. ಆದ್ರೆ ನಮ್ಗೇ ಯಾವ ಆಸೆನೂ ಇರಲಿಲ್ಲ. ಎಮ್ಮೆಲ್ಸಿ ಕೊಡೋದಾದ್ರೇ ತಗೋತೀನಿ ಅಂದೆ. ಅದು ಆಗ. ಆದ್ರೆ ನಮ್ ತಂದೆಗೆ ಹುಷಾರಿರಲಿಲ್ಲ. ಆಗ ಶಂಕರ್‌ಗೆ ಕೇಳಿದೆ. ಅವ್ನು ಒಪ್ಪಲಿಲ್ಲ. ನಾವು 89ರಲ್ಲಿ ಅಧಿಕಾರ ಕಳ್ಕೊಂಡ್ವಿ. ಆವಾಗ ನಾನು ಎಮ್‌ಎಲ್‌ಸಿ. 94ರಲ್ಲಿ ಎಲೆಕ್ಷನ್ಗೆ ಹೋದಾಗ ನನಗೆ ಭಾಷಣ ಕೊಟ್ಟರು. ಆಗ ನಾನು ವೀರಾವೇಶದಿಂದ ಭಾಷಣ ಮಾಡ್ದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ, ದೇಶದಲ್ಲಿ ಅನ್ಯಾಯ ನಡೀತಿದೆ, ಅಂತ. ನಂತ್ರ ಪಟೇಲ್ರು ಜತೆ ಕಾರಿನಲ್ಲಿ ಹೋಗೋವಾಗ ಪಟೇಲ್ರು ಕೇಳಿದ್ರು, ನಡೀತಿರೋದೇ ರಾಜಕಾರಣ ಅಧಿಕಾರಕ್ಕಾಗಿ, ಕೆಟ್ಟ ಹೆಸ್ರು ಬರುತ್ತೆ ಅಂತ ಅಧಿಕಾರ ಬೇಡ ಅಂತಲ್ಲ, ಅಧಿಕಾರಕ್ಕಾಗಿ ಬೇಡ ಅನ್ನೋದಾದ್ರೇ ರಾಜಕಾರಣ ಯಾಕ್ ಮಾಡ್ತೀರಿ ಅಂತ ಅಂದ್ರು. ಈ ಮಧ್ಯಮ ವರ್ಗದೋರು ಹೀಗೇ, ಹಿಪೋಕ್ರಸಿ, ಅಂತ ಹೇಳಿದರು. ಪಟೇಲ್ರು ಮುಖ್ಯಮಂತ್ರಿ ಆದ್ಮೇಲೆ ನನಗೆ ಮಂತ್ರಿ ಪಟ್ಟಾನೂ ಸಿಕ್ತು. ಮಿನಿಸ್ಟರ್  ಅಗ್ಬೇಕು, ಎಮ್ಮೆಲ್ಲೆ ಆಗ್ಬೇಕು ಅಂತ ಬಂದಿಲ್ಲ, ಆದ್ರೂ ನಗರಾಭಿವೃದ್ಧಿ ಖಾತೆಯ ದೊಡ್ಡ ಜವಾಬ್ದಾರಿ ಕೊಟ್ಟ್ರು. ಆದ್ರೆ ನಾನ್ ಕೇಳಿದ್ದೇನಂದ್ರೇ, ಈ ಖಾತೆ ಮುಖ್ಯಮಂತ್ರಿ ಖಾತೆಗೆ ಹೊಂದ್ಕೊಂಡಿರಬೇಕು ಅಂತ ಕೇಳ್ದೆ. ಅದಕ್ಕವರು ನಕ್ಕರು.

ಅನಂತ ಚಿನಿವಾರ್ : ನೀವಿದ್ದ ಪೋರ್ಟೋಫೊಲೀಯೋ ಬಗ್ಗೆ ಹೇಳೋದಾದ್ರೇ ಇವತ್ತು ನಾವು ಹೇಳ್ತಿರೋ ಡಿನೋಟಿಫಿಕೇಷನ್, ಆಗ್ಲೂ ನೋಟಿಫಿಕೇಷನ್, ಡಿನೋಟಿಫಿಕೇಷನ್, ಆಗ್ಲೂ ಆಗ್ತಿತ್ತಾ? ಈಗ ಯಾಕೇ ದೊಡ್ಡ ಸುದ್ದಿ ಆಗ್ತಿದೆ?

ಅನಂತ ನಾಗ್ : ನೋಡಿ, ಇದು ಸೂಕ್ಷ್ಮ ವಿಚಾರ. ನಾನು ಹೆಚ್ಚು ತಿಳ್ಕೊಂಡವನಲ್ಲಾ. ನಾನು ಹೇಳ್ತೀನಿ, ನನ್ನ ದಷ್ಟಿಕೋನದಲ್ಲಿ. ನಿಮ್ಮತ್ರ 50 ಎಕರೆ ಪಿತ್ರಾರ್ಜಿತವಾಗಿ ಬಂದಿದೆ. ಅದು ನೆಲಮಂಗಲ ಆಚೆ. ಆವಾಗ ಗ್ರೀನ್ ಬೆಲ್ಟ್ ಅಂತಾನೋ, ಇಂಡಸ್ಟ್ರೀಯಲ್ ಪರ್ಪಸ್ ಅಂತಾನೋ ಸರ್ಕಾರ ನೋಟಿಫೈ ಮಾಡುತ್ತೆ. ಆವಾಗ ನಿಮಗೆ ಶಾಕ್ ಆಗುತ್ತೆ. ಪಿತ್ರಾರ್ಜಿತವಾಗಿ ಬಂದಿದ್ದು ನೋಟಿಫೈ ಆಯ್ತಲ್ಲಾ ಅಂತ. ನೋಟಿಫೈ ಮಾಡೋದು ಯಾಕ್ ಬರುತ್ತೆ ಅಂತಲ್ಲ. ನೋಟಿಫೈ ಆಯ್ತು ಅಂತಾನೇ ಕೋರ್ಟ್ಗೆ ಹೋಗ್ತಾರೆ. ಆಗ ಡಿನೋಟಿಫಿಕೇಷನ್ ಆಯ್ತು. ಅನೇಕ ಸಲ ನೋಟಿಫಿಕೇಷನ್ಗಳು….ಅಲ್ಲೇ ಡಿನೋಟಿಫಿಕೇಷನ್ಗಳೂ ಭ್ರಷ್ಟಾಚಾರಕ್ಕೆ ತಿರುಗಿಕೊಂಡಿದಾವೆ. ನೋಟಿಫಿಕೇಷನ್ಗಳು ಯಾಕ್ ಮಾಡ್ಬೇಕು. ಸೆಟ್ ಆಫ್ ಪೀಪಲ್, ಗ್ರೀನ್ ಬೆಲ್ಟ್ ಅಬ್ಜೆಕ್ಷನ್ಸ್ಗಳನ್ನ ಹಾಕ್ಬೇಕು….

ಅನಂತ ಚಿನಿವಾರ್ : ಡಿನೋಟಿಫಿಕೇಷನ್ ಬಗ್ಗೆ ಯಾಕೆ ಕೇಳಿದೆ ಅಂದ್ರೆ…

ಅನಂತ ನಾಗ್ : ಡಿನೋಟಿಫಿಕೇಷನ್ ಸವಾಲು ಯಾಕ್ ಬರುತ್ತೆ ಅಂದ್ರೆ, ಬಿ ಕಾಸ್ ಆಫ್ ನೋಟಿಫಿಕೇಷನ್. ಅದನ್ನ ಮಾಡೋವಾಗ್ಲೇ ಯೋಚನೆ ಮಾಡಿ, ಪಬ್ಲಿಕ್ಗೂ ಹೇಳಿ ಅಹವಾಲು ಕೇಳ್ಕೋಬೇಕು. ಡಿನೋಟಿಫಿಕೇಷನ್ ಅಂದ್ಕೂಡ್ಲೇ ಭ್ರಷ್ಟಾಚಾರ ಥರ ಆಗ್ಹೋಗಿದೆ.

ಅನಂತ ಚಿನಿವಾರ್ : ಸಿನಿ ಜಗತ್ತಿನ ಯಾವ್ದೇ ಕಾರ್ಯಕ್ರಮದಲ್ಲೂ ಭಾಗವಹಿಸ್ತಿಲ್ಲ.

ಅನಂತ ನಾಗ್ : ಆ ಸದ್ದುಗದ್ದಲ ನಂಗ್ಯಾಕೋ ಇಷ್ಟ ಇಲ್ಲ. ಸಿನಿಮಾ ಲೈಫೇ ಒಂದು ಶೋ ಬ್ಯುಸಿನೆಸ್. ಒಂಥರಾ ಆರ್ಟಿಫಿಷಿಯಲ್ ಜಗತ್ತು. ಇವತ್ತಿಗೂ ಹಾಗೇ ಇದೆ. ಪ್ರೆಸೆಂಟ್ ಆಗಿ ಬದಕೋಕೋ ಆಗ್ತಿಲ್ಲ, ಮುಂದೆ ಹೋಗೋಕೂ ಆಗ್ತಿಲ್ಲ.

ಅನಂತ ಚಿನಿವಾರ್ : ಮತ್ತೆ ನಿಮ್ಮ ಸಿನೆಮಾ ಬಗ್ಗೆ. ನಿಮ್ಮ ಕಮರ್ಷಿಯಲ್ ಸಿನೆಮಾಗಳಲ್ಲಿ ಖುಷಿ ಪಟ್ಟ ಸಿನೆಮಾ ಬಗ್ಗೆ.

ಅನಂತ ನಾಗ್ : ಒಂದು ಬಹಳ ತೃಪ್ತಿ ಕೊಟ್ಟಂತಹ ಶ್ಯಾಮ್ ಬೆನಗಲ್ ಚಿತ್ರ, ಮರಾಠಿಯಲ್ಲಿ, ಉಂಡೂರಾ ಕಾದಂಬರಿ ಆಧರಿಸಿದ ಚಿತ್ರ. ತೆಲುಗು ಮತ್ತು ಮರಾಠಿಯಲ್ಲಿ. ಆ ಪಾತ್ರವೇ ಮೂರು ಸ್ತರದಲ್ಲಿ ಬಂದಿದೆ. ಹಂಸಗೀತೆಯಲ್ಲಿನ ಪಾತ್ರ, ಚಂದನದ ಬೊಂಬೆ, ಬೆಳದಿಂಗಳ ಬಾಲೆ, ಬೆಂಕಿಯ ಬಲೆ, ಹಾಗೇನೇ ಸತ್ಯು ಅವರ ಬರ ಚಿತ್ರ. ಇನ್ನೂ ಬೇರೆ ಬೇರೆ ಇದಾವೆ.

ಅನಂತ ಚಿನಿವಾರ್ : ಕನ್ನಡ ಚಿತ್ರರಂಗದ ಇವತ್ತಿನ ಸ್ಥಿತಿ ಬಗ್ಗೆ…

ಅನಂತ ನಾಗ್ : ಯಂಗರ್ ಜನರೇಷನ್ ಮಾಡ್ತಿದೆ. ಇಂಡಸ್ಟ್ರೀ ಉಳೀಬೇಕು. ಸಿನೆಮಾದಲ್ಲಿ ಸೃಜನಶೀಲತೆ ಇರಲೇಬೇಕು. ಬೇರೇ ಬೇರೆ ಡೋಸಸ್ ಇರಬೇಕು. ಶಿಕ್ಷಣ, ಎಂಟರ್ಟೈ‌ನ್ಮೆಂಟ್,  ಈಗ ಮಾಡ್ತಾ ಇದಾರೆ, ಆದ್ರೆ ಜನ ಬರ್ತಿಲ್ಲ.

ಅನಂತ ಚಿನಿವಾರ್ : ಡಬ್ಬಿಂಗ್ ಬಗ್ಗೆ?

ಅನಂತ ನಾಗ್ : ಸಂಕುಚಿತ ಅನ್ನಿಸಿದರೂ ಇಲ್ಲಿನ ಪರಿಸ್ಥಿತಿನೇ ಬೇರೆ ಇದೆ. ತಮಿಳುನಾಡು, ಕೇರಳ, ಉತ್ತರ ಭಾರತ, ಆಂಧ್ರ, ಹೋಲಿಸಿದರೇ ಇಲ್ಲಿ ಎಲ್ಲಾ ಭಾಷೆಗಳ ಚಿತ್ರಗಳೂ ಬರುತ್ತೆ. ಆದ್ರೆ ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು ಹೋಗೋದೇ ಇಲ್ಲ. ಈ ನಿಟ್ಟಿನಲ್ಲಿ ಡಬ್ಬಿಂಗ್ ಬೇಡ ಅನ್ನೋದು ನನ್ನ ಭಾವನೆ. ಮದ್ರಾಸಿನಿಂದ ನಮ್ಮ ಇಂಡಸ್ಟ್ರಿಯನ್ನ ಇಲ್ಲಿಗೆ ತರಬೇಕಾದರೇ ಹರ ಸಾಹಸ ಮಾಡ್ಬೇಕಾಯ್ತು. ಮೊನ್ನೆ ಶಿವರಾಜ್ ಕುಮಾರ್ ಮಾತಾಡಿದ್ರು. ನಂಗೆ ಖುಷಿ ಆಯ್ತು. ಪರ ಭಾಷೆಗಳ ಚಿತ್ರಗಳನ್ನ ನೋಡೋದಿಕ್ಕೆ ತಕರಾರು ಇಲ್ಲ. ಆ ಭಾಷೆಯವರು ತಮ್ಮ ಚಿತ್ರಗಳನ್ನ ನೋಡ್ಲಿ, ಆದ್ರೆ ಕನ್ನಡಕ್ಕೆ ಡಬ್ ಮಾಡೋದು ಸರಿಯಲ್ಲ.

One thought on “ನಾಟಕ, ಸಿನೆಮಾ, ರಾಜಕೀಯ, ಡಬ್ಬಿಂಗ್ ಬಗ್ಗೆ ಆನಂತ ನಾಗ್

  1. ಪ್ರಜೆ

    ಅನಂತನಾಗ್‌ ವ್ಯಕ್ತಿತ್ವದ ಅನೇಕ ಮಗ್ಗುಲುಗಳನ್ನ ಸಂದರ್ಶನದ ಮೂಲಕ ಅನಂತ್‌ ಚಿನಿವಾರ್‌ ಸಮರ್ಥವಾಗಿ ತೆರೆದಿಟ್ಟಿದ್ದಾರೆ. ಟಿವಿ ಸಂದರ್ಶನವನ್ನ ಅಕ್ಷರ ರೂಪಕ್ಕಿಳಿಸಿದ ಜಿ. ಮಹಾಂತೇಶ್‌ರಿಗೆ ಧನ್ಯವಾದಗಳು. ಇಂಥ ಸಂದರ್ಶನ ಸರಣಿ ವರ್ತಮಾನದಲ್ಲಿ ಆಗಾಗ ಬರುತ್ತಿರಲಿ.

    Reply

Leave a Reply

Your email address will not be published. Required fields are marked *