Daily Archives: September 30, 2012

ಯಡಿಯೂರಪ್ಪ, ಇತಿಹಾಸ ಅವಲೋಕಿಸಿದರೆ ಭವಿಷ್ಯ ನಿರ್ಧರಿಸಬಹುದು


-ಚಿದಂಬರ ಬೈಕಂಪಾಡಿ


ರಾಜಕೀಯದಲ್ಲಿ ಅಧಿಕಾರ ಕಳೆದುಕೊಂಡರೆ ನೀರಿನಿಂದ ಹೊರ ತೆಗೆದ ಮೀನಿನಂಥ ಪರಿಸ್ಥಿತಿ. ಚಡಪಡಿಕೆ, ಹತಾಶೆ, ಸಿಟ್ಟು, ಸೆಡವು ಹೀಗೆ ಏನೇನೋ. ಅಧಿಕಾರಕ್ಕಿರುವ ಗುಣವೇ ಅಂಥದ್ದು, ಒಂಥರಾ ಅಮಲಿನಂತೆ. ಬಿಜೆಪಿಯಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದೂ ಸ್ಥಿತಿ ಇದಕ್ಕಿಂತೇನೂ ಭಿನ್ನವಲ್ಲ. ಹಾಗೆಂದು ಅದನ್ನು ಆಕ್ಷೇಪಿಸುವ ಧ್ವನಿಯೂ ಇದಲ್ಲ. ಅವರವರ ನೋವು, ಹತಾಶೆಗಳನ್ನು ಮತ್ತೊಬ್ಬರು ಕೇವಲವಾಗಿ ಕಾಣುವುದು ಸಹಜವಾದರೂ ಇಲ್ಲಿ ಆ ಉದ್ದೇಶವಲ್ಲ.

ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವುದು ಮಾಧ್ಯಮಗಳ ಕಾಮೆಂಟರಿ. ಇಂಥ ಕಾಮೆಂಟರಿಗಳಿಗೆ ಕಾರಣವಾಗುವವರು ಅವರ ಬೆಂಬಲಿಗರು ಮತ್ತು ಅದನ್ನು ಆಂತರಿಕವಾಗಿ ಅನುಭವಿಸುತ್ತಿರುತ್ತಾರೆ ಎನ್ನುವುದೂ ಸುಳ್ಳಲ್ಲ. ಆದರೆ ಯಡಿಯೂರಪ್ಪ ನೇರ ನುಡಿಯುವವರಾದರೂ ಪಕ್ಷ ತೊರೆಯುವ ಬಗ್ಗೆ ನೇರವಾಗಿ ಎಲ್ಲೂ ಹೇಳುವುದಿಲ್ಲ, ಆದರೆ ಪಕ್ಷ ತೊರೆಯುವ ಸುಳಿವುಗಳನ್ನು ಕೊಡುತ್ತಾರೆ. ಅದು ಅವರ ರಾಜಕೀಯ ಬುದ್ಧಿವಂತಿಕೆ.

ಬಿಜೆಪಿ ಸುಸಜ್ಜಿತವಾದ ಕಚೇರಿ ಹೊಂದಿದ್ದರೂ ಯಡಿಯೂರಪ್ಪ ತಮ್ಮದೇ ಆದ ಸಾರ್ವಜನಿಕ ಸಂಪರ್ಕ ಕಚೇರಿ ತೆರೆದಿದ್ದಾರೆ. ಅದು ಅವರ ವೈಯಕ್ತಿಕ ಸಾರ್ವಜನಿಕ ಸಂಪರ್ಕಕ್ಕೆ ಎನ್ನುವ ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ. ಈಗಲೂ ಆ ಕಚೇರಿ ಮೂಲಕವೇ ತಮ್ಮ ರಾಜಕೀಯ ನಡೆಗಳನ್ನು ನಿರ್ಧರಿಸುತ್ತಿದ್ದಾರೆ. ನಿತ್ಯವೂ ಈ ಕಚೇರಿಯ ಮೇಲೆ ಮಾಧ್ಯಮಗಳ ಕಣ್ಣು. ಅಲ್ಲಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಯಾವ ಸಭೆ ನಡೆಯುತ್ತದೆ, ಯಾರನ್ನು ಯಡಿಯೂರಪ್ಪ ಭೇಟಿ ಮಾಡುತ್ತಾರೆ ಇತ್ಯಾದಿ ಚಟುವಟಿಕೆಗಳನ್ನು ಮಾಧ್ಯಮಗಳು ಮತ್ತು ಅವರ ವಿರೋಧಿಗಳು ಕಣ್ಣಲ್ಲಿಕಣ್ಣಿಟ್ಟು ನೋಡುತ್ತಿರುತ್ತಾರೆ. ಅಂದರೆ ಯಡಿಯೂರಪ್ಪ ಕರ್ನಾಟಕದ ಬಿಜೆಪಿಗೆ ಟ್ರಂಪ್ ಕಾರ್ಡ್ ಇದ್ದಂತೆ, ಆದ್ದರಿಂದಲೇ ಇಷ್ಟೊಂದು ಮಹತ್ವ.

ಯಡಿಯೂರಪ್ಪ ಅವರ ರಾಜಕೀಯ ನಡೆಗಳನ್ನು ಗಮನಿಸಿದವರಿಗೆ ಅವರು ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಈಗ ಮಾಜಿ ಮುಖ್ಯಮಂತ್ರಿಯಾದ ಮೇಲೆ ಪ್ರತಿಯೊಂದು ಹಂತದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದನ್ನು ಅರ್ಥಮಾಡಿ ಕೊಳ್ಳಬಹುದು.

ಉಪಮುಖ್ಯಮಂತ್ರಿಯಾಗಿದ್ದಾಗಲೂ ಅವರು ಬಹಳ ಕಾಲ ಅಧಿಕಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿತ್ತು, ಸರ್ಕಾರದ ವಿರುದ್ಧವೇ ಸಿಡಿದು ಪ್ರತಿಪಕ್ಷಗಳ ನಾಯಕರಂತೆ ನಡೆದುಕೊಳ್ಳುತ್ತಿದ್ದರು. ಮುಖ್ಯಮಂತ್ರಿಯಾದಾಗಲೂ ಆವೇಶಕ್ಕೆ ಒಳಗಾಗಿ ಮಾತನಾಡಿ ಪ್ರತಿಪಕ್ಷದ ನಾಯಕರಂತೆ ಗುರುತಿಸಿಕೊಳ್ಳುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಯಡಿಯೂರಪ್ಪ ಮೂರು ದಶಕಗಳ ಕಾಲ ಆಡಳಿತ ವ್ಯವಸ್ಥೆಯ ವಿರುದ್ಧ ಮಾಡಿಕೊಂಡು ಬಂದ ಹೋರಾಟ. ಆ ಹೋರಾಟದ ಗುಂಗಿನಿಂದ ಹೊರಬರುವುದು ಈಗಲೂ ಅವರಿಗೆ ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಬಿಜೆಪಿಗೆ ಈಗಲೂ ಯಡಿಯೂರಪ್ಪ ಅನಿವಾರ್ಯ ಪಕ್ಷವನ್ನು ಅಧಿಕಾರದ ದಡಮುಟ್ಟಿಸಲು. ಅವರಿಗಿರುವ ಪಕ್ಷ ಸಂಘಟನೆಯ ಸಾಮರ್ಥ್ಯ ಮತ್ತು ತಂತ್ರಗಾರಿಕೆ ಬಿಜೆಪಿಯ ಕರ್ನಾಟಕ ಘಟಕದಲ್ಲಿ ಇನ್ನೂ ಅನೇಕರಿಗಿದೆಯಾದರೂ ಅದು ಭಿನ್ನನೆಲೆಯಲ್ಲಿದೆ ಹೊರತು ತಳಮಟ್ಟದಲ್ಲಿಲ್ಲ. ಜಾತಿಯ ಬಲವಿಲ್ಲದೆಯೇ ರಾಜಕೀಯದಲ್ಲಿ ಬೆಳೆದಿರುವ ಯಡಿಯೂರಪ್ಪ ಈಗ ಜಾತಿಯ ತೆಕ್ಕೆಗೆ ವಾಲುತ್ತಿದ್ದಾರೆ ಅನ್ನಿಸುತ್ತಿರುವುದು ವಾಸ್ತವ ಮತ್ತು ಬೇರೆ ಕಾರಣಗಳಿಗಾಗಿ. ಯಡಿಯೂರಪ್ಪ ಅವರ ಸಾಮರ್ಥ್ಯವನ್ನು ಹೈಕಮಾಂಡ್ ಕೂಡಾ ಚೆನ್ನಾಗಿ ಅರಿತಿದೆ, ಈ ಕಾರಣಕಾಗಿಯೇ ಅವರು ಹೈಕಮಾಂಡ್ ವಿರುದ್ಧ ಅದೆಷ್ಟೇ ಗುಟುರು ಹಾಕಿದರೂ ಸಹಿಸಿಕೊಂಡಿದೆ. ಇದು ಹೈಕಮಾಂಡ್‌ನ ದುರಂತವೇ ಹೊರತು ಯಡಿಯೂರಪ್ಪ ಅವರ ಹತಾಶೆಯಷ್ಟೇ ಅಲ್ಲ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಾಧ್ಯವಿಲ್ಲವೆಂದು ನಿಯತಕಾಲಿಕದ ಸರ್ವೇ ವರದಿಯನ್ನೇ ಆಧರಿಸಿ ಹೇಳಬೇಕಾಗಿರಲಿಲ್ಲ,  ಬಿಜೆಪಿಯ ಹೈಕಮಾಂಡ್‌ನ ಯಾರೇ ಕರ್ನಾಟಕದಲ್ಲಿ ಒಂದು ಸುತ್ತು ಹೊಡೆದರೆ ತಾಜಾ ವರದಿ ಸಿಕ್ಕಿಬಿಡುತ್ತದೆ. ಹೈಕಮಾಂಡ್ ಯಡಿಯೂರಪ್ಪ ಅವರು ಈ ಸ್ಥಿತಿಗೆ ತಲುಪಲು ಕಾರಣವೇ ಹೊರತು ಅನ್ಯರನ್ನು ಹೆಸರಿಸುವುದು ಅಥವಾ ಯಡಿಯೂರಪ್ಪ ಅವರನ್ನು ದೂಷಿಸುವುದು ಈ ಹಂತದಲ್ಲಿ ಸರಿಯಲ್ಲ.

ನೀವು ಕರ್ನಾಟಕದ ರಾಜಕೀಯ ಇತಿಹಾಸವನ್ನು ಹಿಂದಕ್ಕೆ ತಿರುಗಿ ನೋಡಿದರೆ ಯಡಿಯೂರಪ್ಪ ಅವರಂಥ ಅನೇಕ ಮಂದಿಯ ಮುಖಗಳು ಅನಾವರಣಗೊಳ್ಳುತ್ತವೆ. ಹಿಂದುಳಿದ ವರ್ಗದ ಚಾಂಪಿಯನ್ ಡಿ.ದೇವರಾಜ ಅರಸು, ಜನರಿಂದಲೇ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ರಾಜಕೀಯ ತಂತ್ರಗಾರಿಕೆಯಲ್ಲಿ ದೇಶದಲ್ಲೇ ನಿಪುಣರೆನಿಸಿಕೊಂಡಿದ್ದ ರಾಮಕೃಷ್ಣ ಹೆಗಡೆ ಈ ಮೂರೇ ಮಂದಿಯನ್ನು ವಿಶ್ಲೇಷಣೆ ಮಾಡಿದರೆ ಸಾಕು ಯಡಿಯೂರಪ್ಪ ಅವರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಅನ್ನಿಸಲು.

ದೇವರಾಜ ಅರಸು ಇಂದಿರಾಗಾಂಧಿಯವರ ನೆರಳಾಗಿದ್ದವರು. ಕರ್ನಾಟಕದಲ್ಲಿ ಅವರು ಜಾರಿಗೆ ತಂದ ಸುಧಾರಣಾ ಕ್ರಮಗಳು ಇಂದಿಗೂ ಹಿಂದುಳಿದವರು ಸ್ಮರಿಸಲು ಕಾರಣವಾಗಿದೆ. ಜನಪ್ರಿಯತೆ ಮತ್ತು ಅಧಿಕಾರ ತನ್ನ ನಾಯಕಿ ಇಂದಿರಾ ಅವರನ್ನೇ ಎದುರು ಹಾಕಿಕೊಳ್ಳುವಂತೆ ಮಾಡಿತು. ಹಿಂದುಳಿದವರು ಹಾಡಿಹೊಗಳಿದ ಕಾರಣದಿಂದಲೂ, ತನ್ನ ಬೆನ್ನ ಹಿಂದೆ ಜನ ಇರುತ್ತಾರೆ ಎನ್ನುವ ಭ್ರಮೆಯಿಂದಲೋ ಕಾಂಗ್ರೆಸ್ ಪಕ್ಷವನ್ನೇ ಇಬ್ಭಾಗ ಮಾಡಿದರು. ಕಾಂಗ್ರೆಸ್-ಯು (ಅರಸು ಕಾಂಗ್ರೆಸ್) ಸ್ಥಾಪಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಆದರೆ ಜನ ಅರಸು ಅವರನ್ನು ರಾಜಕೀಯವಾಗಿ ಬೆಂಬಲಿಸಲಿಲ್ಲ, ಇಂದಿರಾ ಅವರ ಬೆನ್ನಿಗೆ ನಿಂತರು. ಅಂದು ಅರಸು ಕಾಂಗ್ರೆಸ್ ಪರವಿದ್ದವರೆಲ್ಲರೂ ಇಂದಿರಾ ಗಾಂಧಿ ಅವರ ನೆರಳಾಗಿದ್ದವರು ಮಾತ್ರವಲ್ಲ ಟಿ.ಎ.ಪೈ ಅವರಂಥ ಮೇಧಾವಿ ಕೂಡಾ ಇಂದಿರಾರನ್ನು ತೊರೆದು ಅರಸು ಬೆಂಬಲಕ್ಕೆ ನಿಂತು ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. ಹಾಗಾದರೆ ಅರಸು ಅವರನ್ನು ಆರಾಧಿಸುತ್ತಿದ್ದ ಜನರು ಚುನಾವಣೆಯಲ್ಲಿ ಕೈಬಿಟ್ಟರೇಕೆ, ಇಂದಿರಾ ಕೈ ಹಿಡಿದರೇಕೆ?

ಎಸ್.ಬಂಗಾರಪ್ಪ ಜನನಾಯಕ ಎನ್ನುವುದರಲ್ಲಿ ಅನುಮಾನಗಳಿಲ್ಲ. ಸ್ವಂತ ಪಕ್ಷ ಕಟ್ಟಿದರು. ಮೊದಲ ಯತ್ನದಲ್ಲಿ ಅರ್ಧ ಯಶಸ್ಸು ಸಾಧಿಸಿದ್ದರಾದರೂ ರಾಮಕೃಷ್ಣ ಹೆಗಡೆಯವರ ಚಾಣಕ್ಯ ರಾಜಕೀಯ ನಡೆಯಿಂದಾಗಿ ಹಿನ್ನಡೆ ಅನುಭವಿಸಿದರು. ಮತ್ತೆ ಕಾಂಗ್ರೆಸ್ ಸೇರಿದರು, ಮುಖ್ಯಮಂತ್ರಿಯಾದರು. ಹೊರಬರುವ ಅನಿವಾರ್ಯತೆ ಎದುರಾದಾಗ ಕಾಂಗ್ರೆಸ್ ವಿರುದ್ಧ ಸೆಟೆದುನಿಂತು ನರಸಿಂಹರಾವ್ ಅವರನ್ನು ಹಾವು, ಚೇಳು ಅಂತೆಲ್ಲಾ ಹೀಯಾಳಿಸಿದ್ದರು. ರಾಜಕೀಯ ನಪುಂಸಕರೆಂದು ತಮ್ಮನ್ನು ಬೆಂಬಲಿಸದೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರನ್ನು ತೆಗಳಿದರು. ಒಬ್ಬ ರಾಜಕೀಯ ನಾಯಕನಾಗಿ ಬಂಗಾರಪ್ಪ ಅವರನ್ನು ಜನ ಮೆಚ್ಚಿಕೊಂಡರೇ ಹೊರತು ಅವರನ್ನು ಒಂದು ಪಕ್ಷ ಸ್ಥಾಪಕರಾಗಿ ಒಪ್ಪಿಕೊಳ್ಳಲಿಲ್ಲ.

ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲ್ ರಾಜಕೀಯದಲ್ಲಿ `ಲವಕುಶ’ ರೆನಿಸಿಕೊಂಡವರು. ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರ ಪತನವಾಗಿ ಜನತಾಪಕ್ಷ, ಬಂಗಾರಪ್ಪ ಅವರ ಕ್ರಾಂತಿರಂಗ ಜೊತೆಯಾಗಿ ಕಾಂಗ್ರೆಸೇತರ ಸರ್ಕಾರ ರಚನೆಗೆ ಯತ್ನಿಸಿದಾಗ ಮಣಿಪಾಲದ ಐಷಾರಾಮಿ ಹೊಟೇಲಲ್ಲಿ ವಾಸ್ತವ್ಯವಿದ್ದ ರಾಮಕೃಷ್ಣ ಹೆಗಡೆ ಸಂಧಾನಕಾರರಾಗಿ ನಿಯೋಜಿತರಾದವರು ತಾವೇ ಆ ಸರ್ಕಾರ ನಡೆಸುವ ಸಾರಥಿಯಾದರು. ಅಂಥ ಚಾಣಕ್ಯ ರಾಜಕಾರಣಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು. ಅವರ ರಾಜಕೀಯ ಬದುಕು ಕೂಡಾ ದುರಂತಮಯವಾಯಿತು.

ಕರ್ನಾಟಕಕ್ಕೆ ಈ ಮೂರೂ ವ್ಯಕ್ತಿಗಳ ಕೊಡುಗೆ ಅಪಾರ. ಅವರ ರಾಜಕೀಯ ಚಿಂತನೆಗಳೂ ಕೂಡಾ ಅನುಕರಣೀಯವೇ. ಆದರೂ ಜನ ಮಾತ್ರ ಅವರನ್ನು ಪಕ್ಷದಿಂದ ಹೊರಬಂದಾಗ ಒಬ್ಬ ಜನನಾಯಕನೆಂದು ಗುರುತಿಸಿ ಬೆನ್ನಿಗೆ ನಿಲ್ಲಲಿಲ್ಲ. ಅವರುಗಳು ಪಕ್ಷದ ಮುಂಚೂಣಿಯಲ್ಲಿದ್ದಾಗ ಮೆಚ್ಚಿದ್ದರು, ನಂಬಿದರು, ಬೆಂಬಲಿಸಿದರು. ಅವರೇ ಒಂದು ಪಕ್ಷ ಕಟ್ಟಿದಾಗ ಅದೇ ಜನ ಅವರನ್ನು ಬೆಂಬಲಿಸಲಿಲ್ಲ. ಇದು ರಾಜಕೀಯದ ನೀತಿ ಪಾಠ ಮತ್ತು ಜನರ ಭಾವನೆಗಳು ಹೇಗಿರುತ್ತವೆ ಎನ್ನುವುದಕ್ಕೆ ಉದಾಹರಣೆ.

ಪ್ರಸ್ತುತ ಯಡಿಯೂರಪ್ಪ ಅವರು ಬಿಜೆಪಿಗೆ ಅನಿವಾರ್ಯ. ಆದರೆ ಅವರಿಗೆ ಬಿಜೆಪಿ ಅನಿವಾರ್ಯವಲ್ಲವೆಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಬಿಜೆಪಿ ಅನಿವಾರ್ಯವಲ್ಲದಿರಬಹುದು ಈಗ. ಯಾಕೆಂದರೆ ಅವರು ಪಕ್ಷ ಕಟ್ಟಿದ್ದಾರೆ, ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಈಗ ಯಡಿಯೂರಪ್ಪ ಅವರೂ ತಮ್ಮದೇ ಆದ ಜನರನ್ನು ಹೊಂದಿದ್ದಾರೆ. ಯಡಿಯೂರಪ್ಪ ಅವರಿಗಿಂತಲೂ ಅವರ ಬೆಂಬಲಿಗರಿಗೆ ಅಧಿಕಾರದ ದಾಹ ಎಂದರೂ ತಪ್ಪಾಗಲಾರದು. ಇಂಥ ಬೆಂಬಲಿಗರ ಹೊಗಳಿಕೆಗೆ ಮನಸೋತು ಯಡಿಯೂರಪ್ಪ ಎಡವುತ್ತಾರೆಯೋ ಎನ್ನುವ ಅನುಮಾನಗಳು ಕಾಡುತ್ತಿದ್ದರೆ ತಪ್ಪಲ್ಲ. ಯಾಕೆಂದರೆ ಅದು ಮನುಷ್ಯನ ವೀಕ್ನೆಸ್. ಹೊಗಳಿಕೆಯನ್ನು ಮನಸ್ಸು ಬಹುಸುಲಭವಾಗಿ ಗುರುತಿಸುತ್ತದೆ, ತೆಗಳಿಕೆಯನ್ನು ಜೀರ್ಣಿಸಿಕೊಳ್ಳಲು ಹಿಂದೇಟು ಹಾಕುತ್ತದೆ. ಇಲ್ಲೂ ಯಡಿಯೂರಪ್ಪ ಅವರಿಗೂ ಇದೇ ಆಗುತ್ತಿದೆಯೇನೋ ಅನ್ನಿಸುತ್ತಿದೆ. ಈ ಹೊಗಳಿಕೆಗಳು ಅವರು ಪಕ್ಷದಲ್ಲಿರುವಷ್ಟು ಕಾಲ ಮಾತ್ರ. ಅರಸು ಅವರಂಥ ಧೀಮಂತ ರಾಜಕಾರಣಿ ಕೂಡಾ ತನ್ನ ಸುತ್ತಲೂ ಇರುವ ಜನರನ್ನು ನಂಬಿಯೇ ಕಾಂಗ್ರೆಸ್ ತೊರೆದು ಇಂದಿರಾ ಅವರಿಗೆ ಸೆಡ್ಡುಹೊಡೆಯಲು ಕಾರಣ. ಅದು ಕೇವಲ ಕಾಲ್ಪನಿಕ ಎನ್ನುವುದು ಅವರ ಪಕ್ಷ ಚುನಾವಣೆಯಲ್ಲಿ ಸೋತು ಸುಣ್ಣವಾದಾಗ ಅರಿವಾಯಿತೇ ಹೊರತು ಅದಕ್ಕೂ ಮೊದಲು ಅರ್ಥವಾಗಿರಲಿಲ್ಲ.

ಯಡಿಯೂರಪ್ಪ ಅವರೂ ಈಗ ಬಹುಷ ಮಾಡಬೇಕಾದ ಕೆಲಸವೆಂದರೆ ಇತಿಹಾಸವನ್ನು ಪುನರಾವಲೋಕನ ಮಾಡುವುದು. ಭೂತಕಾಲವನ್ನು ವರ್ತಮಾನದಲ್ಲಿ ನಿಂತು ನೋಡಿದರೆ ಭವಿಷ್ಯ ಗೋಚರವಾಗುತ್ತದೆ. ಅದು ಅವರ ಮುಂದಿನ ನಡೆಗೆ ದೀವಿಗೆಯಾಗುತ್ತದೆ.

ಜಾತಿಕಾರಣ ಹಾಗೂ ಅನ್ಯಾಕ್ರಾಂತತೆ


-ಡಾ.ಎಸ್.ಬಿ. ಜೋಗುರ


ಮಾರ್ಕ್ಸ್ 18 ನೇ ಶತಮಾನದಲ್ಲಿ ಕಾರ್ಮಿಕನಲ್ಲಿಯ ಪರಾಧೀನತೆ ಇಲ್ಲವೇ ಪರಕೀಯ ಪ್ರಜ್ಞೆ ಅನ್ಯಾಕ್ರಾಂತತೆಯ ಆವಿರ್ಭವಕ್ಕೆ ಕಾರಣವಾಗಬಲ್ಲದು ಎಂದು ಪ್ರತಿಪಾದಿಸಿದರೆ, ಎರಿಕ್ ಪ್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಧಾರ್ಮಿಕ ಪ್ರಭುತ್ವವೂ ಅನ್ಯಾಕ್ರಾಂತತೆಗೆ ಕಾರಣವಾಗುತ್ತದೆ ಎನ್ನುತ್ತಾರೆ. ತಾರ್ಕಿಕತೆಯ ಮೇಲೆ ಸವಾರಿ ಮಾಡುವಷ್ಟು ಪ್ರಭುತ್ವಕ್ಕೆ ಶಕ್ತಿ ಇದೆ. ಹಾಗಾದಾಗ ಅನ್ಯಾಕ್ರಾಂತತೆ ತಲೆದೋರುತ್ತದೆ ಎನ್ನುವುದನ್ನು ಅಲ್ ಗೋರೆ ಎನ್ನುವ ಚಿಂತರು ತಮ್ಮ ಕೃತಿ ‘ಅಜಾಲ್ಟ್ ಆನ್ ರೀಜನ್’ ಎನ್ನುವುದರಲ್ಲಿ ತೋರಿಸಿಕೊಟ್ಟಿದ್ದಾರೆ.

ಭಾರತೀಯ ಸಮಾಜದ ಏಕಮೇವ ಲಕ್ಷಣವಾಗಿರುವ ಜಾತಿ ಪದ್ಧತಿ ಕೂಡಾ ಅನೇಕ ಬಾರಿ ಅನ್ಯಾಕ್ರಾಂತತೆಗೆ ಕಾರಣವಾಗಬಹುದಾದ ಸನ್ನಿವೇಶಗಳನ್ನು ನಿರ್ಮಿಸಿಕೊಡುತ್ತದೆ. ಅದು 1990 ರ ಸಂದರ್ಭ. ದೆಹಲಿ ವಿಶ್ವವಿದ್ಯಾಲಯದ ರಾಜೀವ ಗೋಸ್ವಾಮಿ ಎನ್ನುವ ಯುವಕ ಮಂಡಲ ಕಮಿಷನ್ ವಿರುದ್ಧ ಮೈಗೆ ಬೆಂಕಿ ಹಚ್ಚಿಕೊಳ್ಳುವ ಅಣುಕು ಪ್ರದರ್ಶನ ಮಾಡುವ ಭರಾಟೆಯಲ್ಲಿ, ಖರೆ ಖರೆ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಮಾಧ್ಯಮಗಳ ಎದುರು ತೀರಾ ಭಾವಾವೇಶಕ್ಕೊಳಗಾಗಿ ಕಡ್ದಿ ಗೀರಿಯೆ ಬಿಟ್ಟ. ಪರಿಣಾಮ ಧಗಧಗ ಉರಿದು ಶವವಾದ. ಇಂಥಾ ಅನೇಕ ಪ್ರಸಂಗಗಳು ಜಾತಿಕಾರಣದ ಅನ್ಯಾಕ್ರಾಂತತೆಯ ವಿಷಯವಾಗಿ ನಮ್ಮ ದೇಶದಲ್ಲಿ ಆಗಾಗ ಜರುಗುವುದಿದೆ. ವಸಾಹತೋತ್ತರ ಭಾರತದಲ್ಲಿ ಜಾತಿ ಪದ್ಧತಿಯನ್ನು ಪ್ರಜಾಪ್ರಭುತ್ವದ ಕಡುವೈರಿಯ ಹಾಗೆ ಬೆಳೆಯಬಿಟ್ಟಿದ್ದು ಜಾತಿಕಾರಣದ ರಾಜಕಾರಣವಲ್ಲದೇ ಇನ್ನೇನು.?

ಗಾಂಧಿ ಹಾಗೂ ಅಂಬೇಡ್ಕರ್ ಮಧ್ಯೆಯೂ ಈ ಜಾತಿಯ ವಿಷಯವಾಗಿ, ರಾಷ್ಟ್ರೀಯತೆಯ ವಿಷಯವಾಗಿ ಚರ್ಚೆಗಳಿದ್ದವು. ವಾಗ್ವಾದಗಳಿದ್ದವು. ಆ ಸಂದರ್ಭದಲ್ಲಿ ಅಂಬೇಡ್ಕರರು ಜಾತಿಯ ವಿಷಯವಾಗಿ ಅನ್ಯಾಕ್ರಾಂತತೆಯನ್ನು ಹುಟ್ಟು ಹಾಕಿರುವುದು ನಿಜ, ಅದರ ಪರಿಣಾಮವೇ ಅವರು ನಾಸಿಕದ ಕಲಾರಾಂ ದೇಗುಲದ ಪ್ರವೇಶ, ಕೋಲಾಬಾ ಜಿಲ್ಲೆಯ ಮಹದ್ ಪ್ರದೇಶದ ಚೌಡರಕೆರೆಯ ನೀರನ್ನು ಸೇವಿಸಲು ಮಾಡಿದ ಹೋರಾಟ, ತಿರುವಾಂಕೂರಿನ ವೈಕಂ ಎಂಬಲ್ಲಿ ದೇವಸ್ಥಾನದ ಪಕ್ಕದ ರಸ್ತೆಯ ಮೇಲೆ ನಡೆಯಲು ಮಾಡಿರುವ ಹೋರಾಟಗಳೆಲ್ಲವೂ ಬಹುತೇಕವಾಗಿ ಜಾತಿಕಾರಣದ ಹೋರಾಟಗಳೇ. ಗಾಂಧೀಜಿಯವರಿಗೂ ಅಶ್ಪ್ರಶ್ಯತೆಯ ಬಗ್ಗೆ ಸೌಮ್ಯ ಸ್ವರೂಪದ ಸಿಡುಕಿತ್ತಾದರೂ ಅದರ ಹಿಂದೆ ಅಂಬೇಡ್ಕರ್ ಅವರಲ್ಲಿದ್ದ ಅನ್ಯಾಕ್ರಾಂತತೆಯ ಗುಣವಿರಲಿಲ್ಲ. ಜಾತಿಯ ವಿಷಯದಲ್ಲಿ ಹಗ್ಗ ಹರಿಯದೇ, ಕೋಲು ಮುರಿಯದೇ ಹಾವು ಸಾಯಬೇಕು ಎನ್ನುವ ಗಾಂಧೀಜಿಯವರ ಮನೋಧರ್ಮ ಅಂಬೇಡ್ಕರ್ ಅವರಿಗೆ ತಿಳಿದಿತ್ತು ಹಾಗಾಗಿಯೆ ತನ್ನ ಜನರಿಗೆ ಪ್ರತ್ಯೇಕವಾದ ಮತ ಕ್ಷೇತ್ರವನ್ನು ಅಂಬೇಡ್ಕರ್ ಕೋರಿರುವುದಿತ್ತು. ಗಾಂಧೀಜಿಯವರು ಇದರಿಂದ ರಾಷ್ಟ್ರೀಯತೆಗೆ ಧಕ್ಕೆ ಬರುತ್ತದೆ ಎನ್ನುವ ಕಾರಣವನ್ನಿಟ್ಟುಕೊಂಡು ಉಪವಾಸ ನಿರತರಾಗಿರುವುದರ ಬಗ್ಗೆ ಚಾರಿತ್ರಿಕ ಆಧಾರಗಳಿವೆ. ತಾನು ಸನಾತನಿಯಾಗಿದ್ದೇನೆ ಎನ್ನುತ್ತ ವರ್ಣವ್ಯವಸ್ಥೆಯನ್ನು ಅಪಾರವಾಗಿ ಇಷ್ಟಪಡುವ ಗಾಂಧಿಯಿಂದ ತನ್ನ ಜಾತಿಯ ಜನರಿಗೆ ನ್ಯಾಯ ಸಿಗದು ಎನ್ನುವ ಸತ್ಯ ಅಂಬೇಡ್ಕರ್‌ಗೆ ತಿಳಿಯದೇ ಇರಲಿಲ್ಲ. ಹಿಂದು ಧರ್ಮದಲ್ಲಿಯ ಮಡಿಮೈಲಿಗೆಯ ಆಚರಣೆಗಳಿಗೆ ಅಂಬೇಡ್ಕರ್ ರೋಸಿ ಹೋಗಿ, ಕೊನೆಗೂ ಲಕ್ಷಾನುಗಟ್ಟಲೆ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ಮೂಲಕ ತಮ್ಮ ಜಾತಿ ಆಧರಿತ ಅನ್ಯಾಕ್ರಾಂತತೆಗೆ ಉತ್ತರವನ್ನು ಕಂಡುಕೊಂಡರು.

ಅಂಬೇಡ್ಕರರು ರಾಜಕಾರಣವನ್ನು ನಿಯಂತ್ರಿಸುವ ಮಾರ್ಗವಾಗಿ ಜಾತಿಯನ್ನು ಪರಿಗಣಿಸಿದರು. ಗಾಂಧೀಜಿ ಮಾತ್ರ ಜಾತಿಯ ಮೂಲಕ ಅಸ್ಥಿತ್ವವನ್ನು ಗುರುತಿಸಿಕೊಳ್ಳುವುದನ್ನು ನಿರಾಕರಿಸಿದರು. ಜಾತಿಪದ್ಧತಿಯನ್ನು ಕುರಿತು 1931 ರ ಜನಗಣತಿಯ ಸಂದರ್ಭದಲ್ಲಿ ಕಮಿಷನರ್ ಆಗಿದ್ದ ಜೆ.ಎಚ್.ಹಟನ್ ಎನ್ನುವವರು ಒಂದು ಕೃತಿಯನ್ನು ರಚಿಸಿದ್ದರು. [ಕಾಸ್ಟ್ ಇನ್ ಇಂಡಿಯಾ] ಅದರಲ್ಲಿ ಅವರು ಮೂರು ಸಾವಿರ ಜಾತಿಗಳನ್ನು ಗುರುತಿಸಿ, ಜಾತಿಯ ಆಚರಣೆ, ಮಡಿ-ಮೈಲಿಗೆ, ಏಣಿಶ್ರೇಣಿ ಕ್ರಮ, ಸಾಂಪ್ರದಾಯಿಕ ಉದ್ಯೋಗ, ಸಾಮಾಜಿಕ ಸಂಪರ್ಕ, ಸಹಪಂಕ್ತಿ ಭೋಜನ ಮುಂತಾದವುಗಳ ಬಗ್ಗೆ  ಚರ್ಚಿಸಿದ್ದಾರೆ. ಅಮೂರ್ತವಾದ ಜಾತಿಪದ್ಧತಿ ಇಡೀ ಭಾರತೀಯ ಸಾಮಾಜಿಕ ಜೀವನವನ್ನೇ ನಿಯಂತ್ರಿಸುವ ಬಗೆಯನ್ನು ಅವರು ಗುರುತಿಸಿದ್ದಾರೆ. ಡಾ ಜಿ.ಎಸ್.ಘುರ್ರೆ, ಈರಾವತಿ ಕರ್ವೆ, ಎಮ್.ಎನ್.ಶ್ರೀನಿವಾಸ, ಎಲ್ ಡುಮಂಟ್, ಟಿ.ಎನ್.ಮದನ್ ಮುಂತಾದವರು ಜಾತಿಪದ್ಧತಿ ಭಾರತೀಯ ರಾಷ್ಟ್ರೀಯತೆ, ನಾಗರಿಕತ್ವ ಮತ್ತು ಆಧುನಿಕತೆಯನ್ನು ಪ್ರಭಾವಿಸುವ ಬಗ್ಗೆ ಚರ್ಚಿಸಿದ್ದಾರೆ.

ಜಾತಿಗಳ ರಾಜಕೀಯ ಪ್ರತಿನಿಧಿತ್ವದ ಬಗ್ಗೆ ಇವರು ಮಾತನಾಡಿದ್ದು ಕಡಿಮೆ. ಇವರಲ್ಲಿ ಕೆಲವರು ಜಾತಿಪದ್ಧತಿಯನ್ನಾಧರಿಸಿದ ಮೀಸಲಾತಿಯನ್ನಿಟ್ಟುಕೊಂಡು ಇದು ಭಾರತೀಯ ಸಾಮಾಜಿಕ ವ್ಯವಸ್ಥೆಯ ನೈತಿಕತೆಯನ್ನೇ ಹಾಳುಮಾಡಿದೆ ಎಂದಿರುವರು. ಪರೋಕ್ಷವಾಗಿ ಇವರೆಲ್ಲಾ ಜಾತಿಯ ಸಾಂಪ್ರದಾಯಿಕ ಆಚರಣೆಗಳನ್ನು ಬೆಂಬಲಿಸಿದವರೇ. ಅದನ್ನು ರಾಜಕೀಯ ಪ್ರಾತಿನಿಧಿಕತೆಯ ಭಾಗವಾಗಿ ಬಳಸಬಾರದು ಅದರಿಂದಾಗಿ ದೇಶದ ಅಖಂಡತೆಗೆ ಧಕ್ಕೆ ಬರುವ ಬಗ್ಗೆ ಮಾತನಾಡುವ ಇವರು ಗಾಂಧೀಜಿಯವರ ವಿಚಾರಗಳನ್ನು ಬೆಂಬಲಿಸುವುದಿದೆ. ಕೆಲ ಅಮೇರಿಕೆಯ ಸಮಾಜಶಾಸ್ತ್ರಜ್ಞರು ಭಾರತದಲ್ಲಿಯ ಜಾತಿಯಾಧಾರಿತ ಮೀಸಲಾತಿಯನ್ನು ಕುರಿತು ಇದು ಎರಡನೆಯ ದರ್ಜೆಯ ನಾಗರಿಕತ್ವದ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ ಎನ್ನುತ್ತಾರೆ.

Lloyd ಮತ್ತು Susanne Rudolph ಬರೆಯುತ್ತಾರೆ : ‘The price of discrimination in reverse has been a kind of blackmail in reverse; in return for access to opportunity and power the untouchable is asked to incriminate himself socially. This is not only profoundly disturbing but also an important source of alienation and rebellion.’

ಸ್ವಾತಂತ್ರ್ಯ ಪೂರ್ವದಿಂದಲೂ ಈ ದೇಶದ ರಾಜಕೀಯ ಪರಿಸರವನ್ನು ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುತ್ತಾ ಬಂದಿರುವ ಜಾತಿಪದ್ಧತಿಯು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸಮಾನ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯದ ತತ್ವಗಳನ್ನು ವಂಚಿಸುತ್ತಲೇ ಮುನ್ನಡೆದಿರುವಲ್ಲಿ ಜಾತಿಕಾರಣದಷ್ಟೇ ಪ್ರಬಲವಾಗಿ ರಾಜಕೀಯದೊಳಗಣ ಜಾತಿ ಪ್ರಾಬಲ್ಯವೂ ಕೆಲಸ ಮಾಡುತ್ತಿದೆ. ಶಾಲಾ ದಿನಗಳಿಂದಲೇ ಜಾತಿಯನ್ನು ಸ್ಪಷ್ಟವಾಗಿ ನಮೂದಿಸುವ ಅರ್ಜಿ ಕಾಲಂ ಒಂದು ನಿರಂತರವಾಗಿ ಉಳಿದುಕೊಂಡು ಬಂದಿದೆ. ತೀರಾ ಇತ್ತೀಚಿಗೆ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ನಲ್ಲಿಯೂ ಜಾತಿಯನ್ನು ನಮೂದಿಸುವ ಬಗ್ಗೆ ಯೋಚಿಸಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಜಾತಿಪದ್ಧತಿಯು ಒಂದು ಪ್ರಬಲ ಸಾಮಾಜಿಕ ನಿಯಂತ್ರಣದ ಸಾಧನವಾಗಿ ಸಾವಿರಾರು ವರ್ಷಗಳಿಂದ ಕಾರ್ಯನಿರ್ವಹಿಸಿರುವುದಿದೆ.

ಹಿಂದೂ ಸಾಮಾಜಿಕ ವ್ಯವಸ್ಥೆಯ ಜೀವನಾದಿಯಂತೆ ಅದು ಬದುಕಿನ ನಿರ್ಧಾರಕ ಸಂಗತಿಯಾಗಿ ಕೆಲಸ ಮಾಡುತ್ತಿತ್ತು. ಅದರ ಆಚರಣೆಯ ವಿಕಾರಗಳನ್ನು ಅರಿತಿದ್ದರೂ ರಾಜಕೀಯ ವಲಯದ ಹಿತಾಸಕ್ತಿಗಳು ಜಾತಿಪದ್ಧತಿಯನ್ನು ವ್ಯವಸ್ಥಿತವಾಗಿ ಕಾಪಾಡಿಕೊಳ್ಳುವ. ಉಳಿಸಿಕೊಳ್ಳುವ ಯತ್ನ ಮಾಡುತ್ತಲೇ ಬಂದಿವೆ. ರಾಜಕೀಯ ವಲಯದಲ್ಲಿ ಜಾತಿಯಾಧಾರಿತ ಸ್ಥಾನಮಾನಗಳ ಹಂಚಿಕೆ ಸಮರ್ಪಕವಾಗಿರದಿದ್ದಾಗ ಅನ್ಯಾಕ್ರಾಂತತೆ ತಲೆ ಎತ್ತುತ್ತದೆ. ಒಂದು ಬಾರಿ ರಾಜಕೀಯ ವಲಯದಲ್ಲಿ ಸ್ಥಾಪಿತವಾದ  ಜಾತಿಯ ಪ್ರಾಬಲ್ಯ ನಂತರ ಮಿಕ್ಕ ಎಲ್ಲ ವಲಯಗಳಲ್ಲಿಯೂ ತನ್ನ ಪ್ರಭಾವವನ್ನು ಬೀರದೇ ಇರಲಾರದು. ಕೆಳಜಾತಿಗಳ ಮೇಲೆ ಮೇಲಿನ ಜಾತಿಗಳ ದೌರ್ಜನ್ಯ ಸಾಮಾಜಿಕ ಅನುಮತಿಯೊಂದಿಗೆ ನಡೆಯುವ ಹಾಗೆ ಮುಂದುವರೆಸಿಕೊಂಡು ಬರಲಾಗಿದೆ. ಜಾತಿಯ ಏಣಿ ಶ್ರೇಣಿಯಲ್ಲಿಯ ಕಟ್ಟುನಿಟ್ಟಾದ ಸ್ಥಾನಮಾನಗಳನ್ನು ಕೆಳಸ್ತರಗಳಿಗೆ ನೆನಪು ಮಾಡಿಕೊಡುವ ನಿಟ್ಟಿನಲ್ಲಿ ಆಗಾಗ ಕೆಳ ಜಾತಿಗಳ ಮೇಲೆ ಮೇಲಿನವರ ಅಟ್ಟಹಾಸಗಳು ಬಯಲುಗೊಳ್ಳುವುದಿದೆ. ಪತ್ರಕರ್ತ ಎಮ್.ಜೆ. ಅಕ್ಬರ್ ಅವರು ಒಂದು ಕಡೆ ಹೀಗೆ ಬರೆಯುತ್ತಾರೆ: ‘1981 ರ ಸಂದರ್ಭದಲ್ಲಿ ಉತ್ತರ ಪ್ರದೇಶದ ಅನೇಕ ಹಳ್ಳಿಗಳಲ್ಲಿ ಹರಿಜನರನ್ನು ಕೊಲ್ಲಲಾಯಿತು. ಸಾಮಾಜಿಕ ಏಣಿ ಶ್ರೇಣಿಯಲ್ಲಿ ಅವರ ಸ್ಥಾನ ಮಾನಗಳು ಏನಿವೆ ಎನ್ನುವುದನ್ನು ನೆನಪು ಮಾಡಿಕೊಡುವುದೇ ಆ ಕೊಲೆಗಳ ಹಿಂದಿನ ಸಂದೇಶವಾಗಿತ್ತು’. ಈಗಲೂ ಈ ಬಗೆಯ ಹಲ್ಲೆಗಳು ಆಗಾಗ ಸುದ್ದಿಯಾಗುವುದಿದೆ. ಈ ಜಾತಿಕಾರಣ ಪರೋಕ್ಷವಾಗಿ ರಾಷ್ಟ್ರೀಯ ಐಕ್ಯತೆಗೆ ಗಂಡಾಂತರಕಾರಿಯಾಗಿ ಪರಿಣಮಿಸಿರುವುದೂ ಹೌದು.