Monthly Archives: September 2012

ಪ್ರತಿಪಕ್ಷದಿಂದ ಅಧಿಕಾರದೆಡೆಗೆ ಬಿಜೆಪಿ ನಡೆ


-ಚಿದಂಬರ ಬೈಕಂಪಾಡಿ


ಕರ್ನಾಟಕದ ಬಿಜೆಪಿ ಸರ್ಕಾರ ನಿಜಕ್ಕೂ ರಾಜಕೀಯ ಇತಿಹಾಸದಲ್ಲಿ ಹೊಸ ಪರಂಪರೆಯನ್ನೇ ಹುಟ್ಟುಹಾಕಿದೆ ಎನ್ನಬಹುದು. ಯಾವುದೇ ಪಕ್ಷಕ್ಕೂ ಜನ ಪೂರ್ಣ ಬಹುಮತ ಕೊಡದಿದ್ದಾಗ ಸಂಖ್ಯಾಬಲ ಒಟ್ಟುಗೂಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದು ಅದು ಸಾಗಿ ಬಂದ ಹಾದಿಯನ್ನು ಅವಲೋಕಿಸಿದರೆ ಯಾರೇ ಆದರೂ ಕನಿಕರ ಪಡಬೇಕು. ಹಾಗೆಂದು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಇಷ್ಟೊಂದು ಸುಲಭವಾಗಿ ದಕ್ಕಿಸಿಕೊಳ್ಳುತ್ತೇನೆಂದು ಭಾವಿಸಲು ಕಾರಣಗಳೇ ಇರಲಿಲ್ಲ. 1980ರ ದಶಕದಲ್ಲಿ ಶಾಸನ ಸಭೆ ಪ್ರವೇಶ ಮಾಡಲು ಆರಂಭಿಸಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮಿತ್ರಪಕ್ಷಗಳ ಸಹಕಾರದಲ್ಲಿ ಸಮರ್ಥವಾಗಿ ಅಧಿಕಾರ ನಡೆಸಿದ್ದೇ ಕರ್ನಾಟಕದಲ್ಲೂ ಜನ ಬಿಜೆಪಿ ಪರ ಒಂದು ರೀತಿಯ ಅನುಕಂಪದ ಮೂಲಕವೇ ಅಧಿಕಾರ ಕೊಟ್ಟು ನೋಡಬಹುದೇನೋ ಎನ್ನುವ ಭಾವನೆ ಮೂಡಲು ಕಾರಣ.

ಕರ್ನಾಟಕವನ್ನು ಕಾಂಗ್ರೆಸ್ ಪಕ್ಷ ಆಳ್ವಿಕೆ ಮಾಡುತ್ತಲೇ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ ಮತ್ತು ಎಚ್.ಡಿ.ದೇವೇಗೌಡರ ಸಮಾಗಮನದ ಮೂಲಕ ತನ್ನ ಹಿಡಿತ ಕಳೆದುಕೊಂಡು ಮೂಲೆಗುಂಪಾಯಿತು.ಒಂದು ದಶಕ ಕಾಲ ಜನತಾಪರಿವಾರ ಕರ್ನಾಟಕವನ್ನು ಆಳಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ತನ್ನೊಳಗಿನ ಕಲಹದಿಂದ ಅಧಿಕಾರ ಕಳೆದುಕೊಂಡಿತು. ಮತ್ತೆ ಕಾಂಗ್ರೆಸ್ ವೀರೇಂದ್ರ ಪಾಟೀಲ್, ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ ಅಧಿಕಾರಕ್ಕೇರಿತು. ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಇಳಿಸಿದ ಕ್ಷಣದಿಂದಲೇ ಕಾಂಗ್ರೆಸ್ ಪಕ್ಷ ಈ ನಾಡಿನ ಅತ್ಯಂತ ಬಲಿಷ್ಠ ಸಮುದಾಯಗಳಲ್ಲಿ ಒಂದಾದ ವೀರಶೈವರ ಅವಕೃಪೆಗೆ ಗುರಿಯಾಯಿತು.

ವೀರೇಂದ್ರ ಪಾಟೀಲ್ ಅನಾರೋಗ್ಯಕ್ಕೆ ತುತ್ತಾದರು ಎನ್ನುವುದನ್ನು ಬಿಟ್ಟರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಅನಿವಾರ್ಯತೆಯೂ ಇರಲಿಲ್ಲ ಮತ್ತು ಪಾಟೀಲ್‌ರನ್ನು  ರಾಜೀವ್ ಗಾಂಧಿ ಅಧಿಕಾರದಿಂದ ಇಳಿಸಿದ ಕ್ರಮವೂ ಸರಿಯಾಗಿರಲಿಲ್ಲ. ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ ಅವರಿಂದಲೂ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ  ಅಧಿಕಾರದಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಮತ್ತೆ ದೇವೇಗೌಡರು ಕರ್ನಾಟಕದಲ್ಲಿ ಜನತೆಯ ವಿಶ್ವಾಸಗಳಿಸಿ ಮುಖ್ಯಮಂತ್ರಿಯಾಗುವ ಕನಸು ಸಾಕಾರಗೊಳಿಸಿಕೊಂಡರು, ಅದೇ ಹೊತ್ತಿಗೆ ಪ್ರಧಾನಿ ಹುದ್ದೆಗೂ ಏರಿದರು. ಈ ಕಾಲಕ್ಕೂ ಬಿಜೆಪಿ ಅಧಿಕಾರ ಸೂತ್ರ ಹಿಡಿಯುವ ಲಕ್ಷಣಗಳು ಗೋಚರಿಸಿರಲಿಲ್ಲ. ಎಸ್.ಎಂ.ಕೃಷ್ಣ `ಪಾಂಚಜನ್ಯ’ ಮೊಳಗಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದರು. ಆನಂತರ ಧರಂ ಸಿಂಗ್ ಅಧಿಕಾರದೊಂದಿಗೆ ಕಾಂಗ್ರೆಸ್ ಯುಗ ಮುಗಿಯಿತು.

ಎಚ್.ಡಿ.ಕುಮಾರಸ್ವಾಮಿ ರಾಜ್ಯರಾಜಕಾರಣದಲ್ಲಿ ಇದ್ದಕ್ಕಿದ್ದಂತೆಯೇ ಪ್ರಭಾವಿಯಾಗಿ ಬೆಳೆದು ಬೆರಗು ಮೂಡಿಸಿದರು. ಮೂರು ದಶಕಗಳ ಕಾಲ ವಿಧಾನಸಭೆಯ ಒಳಗೆ ಮತ್ತು ಹೊರಗೆ ಬಿಜೆಪಿಯ ಸಾರಥಿಯಾಗಿ ಬಿ.ಎಸ್.ಯಡಿಯೂರಪ್ಪ ಮಾಡಿದ ಹೋರಾಟಗಳು, ಜನಪರವಾದ ಅವರ ನಿಲುವುಗಳು ಅಧಿಕಾರದ ಸನಿಹಕ್ಕೆ ಬಂದು ನಿಲ್ಲುವಂತೆ ಮಾಡಿತು. ರಾಜಕೀಯದ ಇತಿಹಾಸವನ್ನು ಮತ್ತೊಮ್ಮೆ ಅವಲೋಕಿಸಿದರೆ ಬಿಜೆಪಿ ಕರ್ನಾಟಕದಲ್ಲಿ ಭದ್ರ ನೆಲೆಯೂರಲು ಮೂರು ಮಂದಿ ಗೋಚರಿಸುತ್ತಾರೆ.

ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದ ಗೌಡ. ಜೆಡಿಎಸ್ ಮುನ್ನಡೆಸುತ್ತಿದ್ದವರು ಎಚ್.ಡಿ.ದೇವೇಗೌಡರೇ ಆಗಿದ್ದರೂ ನಾಡಿನ ಜನ ಕುಮಾರಸ್ವಾಮಿಯವರನ್ನು ಅತಿಯಾಗಿ ನೆಚ್ಚಿಕೊಂಡಿದ್ದರು. ಬಿಜೆಪಿಯನ್ನು ತಾತ್ವಿಕವಾಗಿ ಒಪ್ಪದಿದ್ದರೂ ಬಿ.ಎಸ್.ಯಡಿಯೂರಪ್ಪ ಅವರ ಕಾಳಜಿಯನ್ನು ಸಂಶಯದಿಂದ ನೋಡಲು ಕಾರಣಗಳೇ ಇರಲಿಲ್ಲ. ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಡಿ.ವಿ.ಸದಾನಂದ ಗೌಡರು ಸಂಸತ್ ಸದಸ್ಯರಾಗಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಡೆದುಕೊಳ್ಳುತ್ತಿದ್ದ ರೀತಿ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಇಂಥ ಕಾಲಘಟ್ಟದಲ್ಲೇ 20-20 ಕರ್ನಾಟಕದಲ್ಲಿ ಪ್ರಚಲಿತಕ್ಕೆ ಬರಲು ಕಾರಣವಾಯಿತು.

ಕುಮಾರಸ್ವಾಮಿಯವರ ಯುವಮನಸ್ಸಿಗೆ ಜನ ಮನಸೋತಿದ್ದರು. ಯಡಿಯೂರಪ್ಪ ಅವರ ಹೋರಾಟದ ಕೆಚ್ಚನ್ನು ಜನ ಮೆಚ್ಚಿದ್ದರು. ಸದಾನಂದ ಗೌಡರ ಪಾದರಸದಂಥ ನಡವಳಿಕೆಯನ್ನು ಪಕ್ಷಾತೀತವಾಗಿ ಹೊಗಳುತ್ತಿದ್ದರು. ನಿಚ್ಚಳ ಬಹುಮತವಿಲ್ಲದಿದ್ದಾಗ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಮಾಡಿಕೊಂಡ 20 ತಿಂಗಳ ಅಧಿಕಾರ ಸೂತ್ರವನ್ನು ಜೆಡಿಎಸ್ ನಾಯಕರಾಗಿ ದೇವೇಗೌಡರು ವಿರೋಧಿಸಿದ್ದರು, ಆದರೆ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಸದಾನಂದ ಗೌಡರು ದೆಹಲಿ ಹೈಕಮಾಂಡ್‌ನ್ನು ಮನವೊಲಿಸಿದ್ದರು. ಈ ತ್ರಿಮೂರ್ತಿಗಳ ಸಮತೋಲನದ ನಡಿಗೆಯೇ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾಗಿತ್ತು.

ಜನರು ನಿರೀಕ್ಷೆ ಮಾಡದಿದ್ದ ಸ್ವರೂಪದಲ್ಲಿ ಮೊದಲ ವರ್ಷ ಈ ಜುಗಲ್ ಬಂಧಿ ಸರ್ಕಾರ ಕರ್ನಾಟಕವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದಿತ್ತು. ಯಡಿಯೂರಪ್ಪ ಅಕ್ಷರಷ: ಅಧಿಕಾರಕ್ಕೆ ಒಗ್ಗಿಕೊಳ್ಳಲು ಆ ಸಂದರ್ಭದಲ್ಲಿ ಹೆಣಗಿದ್ದರು ಅಂದರೂ ತಪ್ಪಾಗಲಾರದು. ಯಾಕೆಂದರೆ ಯಡಿಯೂರಪ್ಪ ಟ್ರೆಜರಿ ಬೆಂಚಲ್ಲಿ ಹಿಂದೆಂದೂ ಕುಳಿತವರೇ ಅಲ್ಲದ ಕಾರಣ ಅದೆಷ್ಟೋ ಸಲ ಅವರು ವಿಧಾನ ಸಭೆಯಲ್ಲಿ ಪ್ರತಿಪಕ್ಷದವರಂತೆ ನಡೆದುಕೊಳ್ಳುತ್ತಿದ್ದರು, ತಮ್ಮವರ ವಿರುದ್ಧವೇ ತಿರುಗಿಬೀಳುತ್ತಿದ್ದರು. ಇಂಥ ಸಂದರ್ಭದಲ್ಲಿ ಡಿ.ವಿ.ಸದಾನಂದ ಗೌಡರು ಸರ್ಕಾರದ ಮೈತ್ರಿಗೆ ಭಂಗ ಬರದ ರೀತಿಯಲ್ಲಿ ಪಕ್ಷ ಮುನ್ನಡೆಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ.

ಮೊದಲ 20 ತಿಂಗಳ ಅಧಿಕಾರ ನಿರ್ವಹಣೆ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಮೂರು ತಿಂಗಳ ಅವಧಿ ಜೆಡಿಎಸ್ ಮತ್ತು ಬಿಜೆಪಿಯ ವೈಮನಸ್ಸಿಗೆ ಸಿಲುಕಿ ತತ್ತರಿಸಿತು. ಯಡಿಯೂರಪ್ಪ ಅವರ ಹಠ, ಕುಮಾರಸ್ವಾಮಿಯವರ ಜಿದ್ದಿನ ಕಾರಣದಿಂದಾಗಿ ಸರ್ಕಾರ ಪತನವಾಯಿತು, ಮೈತ್ರಿ ಮುರಿದು ಬಿತ್ತು. ಕುಮಾರಸ್ವಾಮಿಯವರು ನುಡಿದಂತೆ ನಡೆದುಕೊಂಡು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ಬಹುಷ: ರಾಜಕೀಯದ ಚಿತ್ರಣವೇ ಬದಲಾಗುತ್ತಿತ್ತೇನೋ? ಯಡಿಯೂರಪ್ಪ ಅವರಿಗೆ ಜೆಡಿಎಸ್ ವಿರುದ್ಧ ಕಹಳೆ ಮೊಳಗಿಸಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಸುಲಭವಾಗುತ್ತಿರಲಿಲ್ಲವೇನೋ?   ಆದರೆ ಈ ಹೊತ್ತಿಗೆ ಕರ್ನಾಟಕದ ಜನರ ಮನಸ್ಸಿನಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದು ನಿಲ್ಲಿಸುವ ನಿರ್ಧಾರ ನೆಲೆಯೂರಿತ್ತು. ಇದರ ಪರಿಣಾಮವೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಬದಿಗೆ ಸರಿಸಿ ಬಿಜೆಪಿ ಅಧಿಕಾರ ಸೂತ್ರಹಿಡಿಯಿತು. ಇದರಲ್ಲಿ ಬಳ್ಳಾರಿ ಗಣಿಧಣಿಗಳ ಪಾತ್ರವನ್ನು ಬಿಜೆಪಿ ಮರೆಯುವಂತಿಲ್ಲ. ಒಂದರ್ಥದಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಜನಾಕರ್ಷಣೆ ಮಾಡುವಂತ ನಾಯಕರು ಮತ್ತೊಬ್ಬರಿರಲಿಲ್ಲ, ಈಗಲೂ ಈ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ಬಿಜೆಪಿ ಹೈಕಮಾಂಡ್ ಕೂಡಾ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಇದಕ್ಕಿದ್ದ ಬಲವಾದ ಕಾರಣ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ಪಟ್ಟಿದ್ದ ಶ್ರಮ. ಆದರೆ ಹೈಕಮಾಂಡ್ ಇಟ್ಟ ವಿಶ್ವಾಸವನ್ನು ಬಹುಕಾಲ ಯಡಿಯೂರಪ್ಪ ಉಳಿಸಿಕೊಳ್ಳಲಿಲ್ಲ ಎನ್ನುವುದು ದುರಂತ.

ಈಗ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜನರಿಗಿದ್ದ ನಂಬಿಕೆ, ವಿಶ್ವಾಸಗಳು ಮಂಜಿನಂತೆ ಕರಗಿಹೋಗಿವೆ. ಐದು ವರ್ಷಕ್ಕೆ ಮೂರು ಮಂದಿ ಮುಖ್ಯಮಂತ್ರಿಗಳು. ಅಗಣಿತವಾದ ಹಗರಣಗಳು, ಜೈಲುಪಾಲಾದವರು, ಲೋಕಾಯುಕ್ತ, ಸಿಬಿಐ, ಕ್ರಿಮಿನಲ್ ಕೇಸುಗಳಿರುವುದು ಬಿಜೆಪಿಯವರ ಮೇಲೆಯೇ ಅತೀ ಹೆಚ್ಚು. ಅಧಿಕಾರ ಅಲ್ಪ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಪ್ರಮಾದಗಳು ನಡೆದುಹೋಗಿವೆ ಎನ್ನುವುದನ್ನು ಜನ ಜೀರ್ಣಿಸಿಕೊಳ್ಳುವುದಾದರೂ ಹೇಗೆ?

ಹಕ್ಕುಚ್ಯುತಿ, ವಸ್ತುನಿಷ್ಠ ಪತ್ರಿಕೋದ್ಯಮ, ಮಾಧ್ಯಮ ಕಾರ್ಯವೈಖರಿ…

– ಜಿ. ಮಹಂತೇಶ್

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಕೆಲ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಪ್ರಕಟಿಸುತ್ತಿರುವುದರಿಂದ ಜನಪ್ರತಿನಿಧಿಗಳು, ಅದರಲ್ಲೂ ಚುನಾಯಿತ ಜನಪ್ರತಿನಿಧಿಗಳ ವಲಯದಲ್ಲಿ ಕೆಲ ಮಾಧ್ಯಮಗಳ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿ ಕಂಡು ಕಂಗಾಲಾಗುತ್ತಿದ್ದಾರೆ.

ಹಾಗೇ ನೋಡಿದರೆ, ಮಾಧ್ಯಮಗಳು ಮತ್ತು ಮಾಧ್ಯಮ ಪ್ರತಿನಿಧಿಗಳು (ವರದಿಗಾರರು, ಸಂಪಾದಕರು ಸೇರಿ) ಶಾಸಕ, ಮಂತ್ರಿಮಹೋದಯರ ಪರವಾಗಿಯೋ ಇಲ್ಲವೇ ಸ್ಟೆನೋಗ್ರಾಫರ್‌ಗಳ ರೀತಿಯೋ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಕೆಲ ಮಾಧ್ಯಮ ಪ್ರತಿನಿಧಿಗಳಂತೂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಉಪ್ಪಿಟ್ಟು-ಕೇಸರಿಬಾತ್ ಸವಿದಿದ್ದೇ ಹೆಚ್ಚು. ಇದಕ್ಕೆ ಜೊತೆಯಾಗಿ ಒಂದಷ್ಟು ಕವರ್‌ಗಳನ್ನು ಪ್ರತಿಫಲವಾಗಿ ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಪ್ರತಿಯಾಗಿ, ಮಂತ್ರಿ, ಶಾಸಕರಿಗೆ ಒಂದಷ್ಟು ಸಲಹೆ ನೀಡಿ ಕೃತಾರ್ಥರಾಗಿರುವವರಿಗೇನೂ ಕೊರತೆ ಇಲ್ಲ. ಇದು, ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನ್ವಯಿಸುವುದಿಲ್ಲ ಎಂಬುದನ್ನೂ ಇಲ್ಲಿ ಗಮನಿಸತಕ್ಕದ್ದು.

ಬಹುತೇಕ ಮಾಧ್ಯಮ ಪ್ರತಿನಿಧಿಗಳು, ತಮ್ಮ ತಮ್ಮ ಕುಲಬಾಂಧವ ರಾಜಕಾರಣಿಗಳ ಪರವಾಗಿ ವರದಿ ಮಾಡುತ್ತಿದ್ದಾರೆ. ವಿಧಾನಸೌಧದ ಕಾರಿಡಾರ್ನಲ್ಲಿ ಇದರ ಸಾಕ್ಷಾತ್ ದರ್ಶನ ಮಾಡಿಕೊಳ್ಳಬಹುದು. ಜಾತಿಗಳ ವರ್ಗೀಕರಣದಂತೆಯೇ ಮಾಧ್ಯಮ ಪ್ರತಿನಿಧಿಗಳೂ ವರ್ಗೀಕರಣ ಆಗಿರುವುದೂ ಸುಳ್ಳಲ್ಲ. ಒಕ್ಕಲಿಗ ಪತ್ರಕರ್ತರು, ಲಿಂಗಾಯತ ಪತ್ರಕರ್ತರು, ಕುರುಬ ಪತ್ರಕರ್ತರು, ಬ್ರಾಹ್ಮಣ ಪತ್ರಕರ್ತರು (ಇವರು ಬಹಿರಂಗವಾಗಿ ಹೀಗೆಂದು ಗುರುತಿಸಿಕೊಳ್ಳುವುದಿಲ್ಲ), ಪರಿಶಿಷ್ಟ ಜಾತಿ, ಪ.ಪಂಗಡ ಪತ್ರಕರ್ತರು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರೋ ಪತ್ರಕರ್ತರು,.. ಹೀಗೆ ವಿವಿಧ ರೀತಿಯಲ್ಲಿ ವರ್ಗೀಕರಣ ಮಾಡಿಕೊಂಡಿರುವುದೇನೋ ಗುಟ್ಟಾಗಿ ಉಳಿದಿಲ್ಲ. ಇದರ ಮಧ್ಯೆಯೇ ಜಾತಿ, ಮತಗಳ ಚೌಕಟ್ಟಿನಾಚೆ ಸಿದ್ಧಾಂತಗಳ ಆಧರಿಸಿ ಒಂದಷ್ಟು ಪತ್ರಕರ್ತರ ಗುಂಪುಗಳಿರುವುದೂ ನಿಜ (ಎಡಪಂಥೀಯ, ಬಲಪಂಥೀಯ, ಇತರೆ).

ಇಂತಹ ಹೊತ್ತಿನಲ್ಲೇ ಮಾಧ್ಯಮಗಳು ಯಾರ ಕಾಳಜಿ ವಹಿಸಬೇಕು, ಯಾರ ಪರ ನಿಲ್ಲಬೇಕು, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಆಗಬಹುದೇನೋ. ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು ಎಂಬ ಅಭಿಪ್ರಾಯದ ಬಗ್ಗೆಯೇ ಸಾಕಷ್ಟು ಆಕ್ಷೇಪಗಳಿವೆ. ಇಂದಿಗೂ ವಸ್ತುನಿಷ್ಠರಾಗಿಯೇ ಉಳಿದುಕೊಂಡಿರುವ ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಅವರು ಹೇಳಿದ್ದ ಮಾತೊಂದು ಇಲ್ಲಿ ಹೇಳಬೇಕಿನಿಸಿದೆ: ‘ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬಾರದು, ಬದಲಿಗೆ ಪಕ್ಷಪಾತಿಯಾಗಿರಬೇಕು. ಇಲ್ಲಿ ಪಕ್ಷಪಾತಿ ಎಂದರೆ, ಯಾವುದೇ ನಿರ್ದಿಷ್ಟ ಜಾತಿ, ಕೋಮು ನೆಲೆಗಟ್ಟಿನಲ್ಲಿ ಅಲ್ಲ. ಬದಲಿಗೆ, ದುರ್ಬಲರು, ಅಸಹಾಯಕರು, ದನಿ ಕಳೆದುಕೊಂಡವರ ಪರವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು.’

ಹಾಗೆಯೇ, ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ರಾಜಕಾರಣಿಗಳು, ನಂತರದ ದಿನಗಳಲ್ಲಿ ಭ್ರಷ್ಟಾಚಾರ ಕಳಂಕ ಹೊತ್ತುಕೊಂಡ ಸಂದರ್ಭದಲ್ಲಿಯೂ ಆತನನ್ನು ತುಳಿತಕ್ಕೆ ಒಳಗಾದ ಸಮುದಾಯದವ ಎಂದು ಕನಿಕರ ತೋರಿ, ಅವನನ್ನ ರಕ್ಷಣೆ ಮಾಡುವುದು ಸರಿಯಲ್ಲ. ಭ್ರಷ್ಟಾಚಾರ ಯಾರು ಮಾಡಿದರೇನು, ಯಾವ ಸಮುದಾಯದವನಾದರೇನು, ಅವರನ್ನೆಲ್ಲ ಭ್ರಷ್ಟಾಚಾರಿ ಎಂದೇ ಪರಿಗಣಿಸಬೇಕು. ಅಂಥವರ ವಿರುದ್ಧ ಯಾವ ಮುಲಾಜೂ ಇಲ್ಲದೇ ವರದಿ ಪ್ರಕಟಿಸಬೇಕು ಎಂದು ಟಿ.ಕೆ. ತ್ಯಾಗರಾಜ್ ಹೇಳುತ್ತಾರೆ.

ಆದರೆ, ಇವತ್ತು ಆಗುತ್ತಿರುವುದೇನು? ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕರ ಕುರ್ಚಿಯಲ್ಲಿ ಕುಳಿತಿರುವವರಲ್ಲಿ ಜಾತಿ, ಕೋಮು ನೆಲೆಗಟ್ಟಿನಲ್ಲಿ ಯೋಚಿಸುವ ಸಂಪಾದಕರು ದಲಿತ ರಾಜಕಾರಣಿಗಳ ಭ್ರಷ್ಟಾಚಾರವನ್ನು ಮಾತ್ರ ಬಯಲು ಮಾಡುತ್ತ ಮುಂದುವರೆದ ಜಾತಿಗಳ ರಾಜಕಾರಣಿಗಳ ಭ್ರಷ್ಟಾಚಾರವನ್ನು ಉಪೇಕ್ಷಿಸುತ್ತಿರುವುದನ್ನೂ ಕಾಣಬಹುದಾಗಿದೆ. ಕನ್ನಡ ಮಾಧ್ಯಮ ವಲಯದಲ್ಲಿ ಇಂಥ ಸಂಪಾದಕರು ಈಗಲೂ ನಮ್ಮ ಕಣ್ಮುಂದೆ ಇದ್ದಾರೆ. ಇದು ಕೂಡ ಪಕ್ಷಪಾತವೇ. ಸ್ವಜನಪಕ್ಷಪಾತ.

ಉದಾಹರಣೆಗೆ, ಬಿಜೆಪಿ ರಾಷ್ಟ್ರೀಯ ಘಟಕದಲ್ಲಿ ಇವತ್ತಿಗೂ ತಮ್ಮ ಪ್ರಭಾವ, ವರ್ಚಸ್ಸು ಉಳಿಸಿಕೊಂಡಿರುವ ಅನಂತ್ ಕುಮಾರ್ ಅವರ ಬಗ್ಗೆ ಕೆಲ ಮಾಧ್ಯಮಗಳು ಚಕಾರ ಎತ್ತುವುದಿಲ್ಲ. ಹುಡ್ಕೋ ಹಗರಣ, ಅದಮ್ಯ ಚೇತನ ಟ್ರಸ್ಟ್. ಒಂದು ಕಾಲದಲ್ಲಿ ಟಿಪಿಕಲ್ ಮಧ್ಯಮವರ್ಗದ ಜೀವನ ನಡೆಸುತ್ತಿದ್ದ ಅನಂತಕುಮಾರ್ ಅವರ ಇತ್ತೀಚಿನ ಗಳಿಕೆ ಬಗ್ಗೆ ಮಾಧ್ಯಮಗಳು ಕನಿಷ್ಠ ಮಟ್ಟದಲ್ಲೂ ಪ್ರಶ್ನಿಸುವುದಿಲ್ಲ.

ಇದರರ್ಥ: ಅನಂತ್ ಕುಮಾರ್‌ರಂತಹ ರಾಜಕಾರಣಿಗಳಿಗೆ ಮಾಧ್ಯಮವನ್ನು ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡುವುದು ಗೊತ್ತಿದೆ ಎಂದು. ಹೀಗಾಗಿಯೇ ಮಾಧ್ಯಮಗಳನ್ನು ಯಾರು, ಹೇಗೆ ಬೇಕಾದರೂ ಮ್ಯಾನೇಜ್ ಮಾಡಬಹುದು ಎನ್ನುವಂತಾಗಿದೆ. ಮೀಡಿಯಾ ಮ್ಯಾನೇಜ್ ಮಾಡಲಿಕ್ಕಾಗಿಯೇ ರಾಜಕಾರಣಿಗಳಿಗೆ ಒಂದು ಕೋರ್ಸ್ ಮಾಡಬಹುದೇನೋ?

ಇದೆಲ್ಲದರ ಮಧ್ಯೆಯೇ ಮಾಧ್ಯಮ ವಲಯದಲ್ಲಿ ಇನ್ನೂ ಒಂದಷ್ಟು ಭರವಸೆಗಳು ಉಳಿದುಕೊಂಡಿವೆ. ಆದರೆ ಇಂಥ ಭರವಸೆಗಳು ಬಹು ಕಾಲ ಉಳಿಯವುದಿಲ್ಲ ಎಂದೆನಿಸುತ್ತದೆ. ಯಾಕೆಂದರೇ, ವಸ್ತುನಿಷ್ಠ ವರದಿ ಮಾಡಲು ತೆರಳುವ ಮಾಧ್ಯಮ ಪ್ರತಿನಿಧಿಗಳಿಗೆ, ಭ್ರಷ್ಟ ಚುನಾಯಿತ ಪ್ರತಿನಿಧಿಗಳು ಅಡೆ ತಡೆ ಒಡ್ಡುತ್ತಿದ್ದಾರೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ (ಬಿ.ಜೆ.ಪಿ.) ಅವರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಪ್ರಭಾವ ಬೀರಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದನ್ನು ವರದಿ ಮಾಡಿದ್ದ ಮಾಧ್ಯಮಗಳ ವಿರುದ್ಧ ಕಿಡಿ ಕಾರಿರುವುದು. ಇವರ ಕಿಡಿಗೆ ಮುಖ್ಯ ಕಾರಣ ಎಂದರೇ, ಕೆರೆ ಅಚ್ಚುಕಟ್ಟು ಪ್ರದೇಶ ಸುತ್ತಮುತ್ತ ಇದ್ದ 8 ಎಕರೆಯನ್ನು ತಮ್ಮ ಹಿಂಬಾಲಕರ ಮೂಲಕ ನೋಂದಣಿ ಮಾಡಿಸಿಕೊಂಡಿದ್ದನ್ನು, ಮತ್ತು ತಮ್ಮ ಪತ್ನಿ ಒಡೆತನದಲ್ಲಿರುವ ಜಮೀನಿನಲ್ಲೇ (3 ಎಕರೆ 8 ಗುಂಟೆ) ರೆಸಾರ್ಟ್ ನಿರ್ಮಾಣಕ್ಕೆ ಗುರುತು ಮಾಡಿಕೊಂಡಿದ್ದನ್ನು ಬಯಲಿಗೆಳೆದಿದ್ದಕ್ಕೆ.

ಇಂತಹ ವರದಿ ಸುದ್ದಿ ವಾಹಿನಿಯಲ್ಲಿ  ಬಿತ್ತರವಾಗಿದ್ದೇ ತಡ, “ಸುದ್ದಿ ವಾಹಿನಿ ತಮ್ಮನ್ನ ತೇಜೋವಧೆ ಮಾಡುತ್ತಿದೆ, ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಕೆಲಸ ಮಾಡಲಿಕ್ಕೆ ಆಗುತ್ತಿಲ್ಲ. ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ,” ಎಂದು ತುಂಬಿದ ಸದನದಲ್ಲೇ ಅಲವತ್ತುಕೊಂಡು, ಆ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು.

ಅಸಲಿಗೆ, ಈ ಸುದ್ದಿಯನ್ನು ಬಿತ್ತರಿಸಿದ ಸುದ್ದಿ ವಾಹಿನಿಗೆ ಯಾರೊಬ್ಬರ ತೇಜೋವಧೆಗಿಂತ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಸ್ಥಳೀಯ ಶಾಸಕ ಹಾಗೂ ಪ್ರಾಧಿಕಾರದ ಸದಸ್ಯ ಸಿ.ಟಿ.ರವಿ ಅವರು ಹೇಗೆ ಪ್ರಭಾವ ಬೀರಿದ್ದಾರೆ ಎಂಬಷ್ಟೇ ವಿಷಯದ ಬಗ್ಗೆ ದಾಖಲೆಗಳ ಸಮೇತ ಜನರ ಮುಂದೆ ಇಟ್ಟಿತ್ತು. ಇದು ಹೇಗೆ ಹಕ್ಕುಚ್ಯುತಿ ಆಗುತ್ತದೆ?

ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಿದ್ದು ಇದೇ ಪ್ರಥಮ ಬಾರಿ. ಹಿಂದೆ ಲಂಕೇಶ್ ಪತ್ರಿಕೆ ವಿರುದ್ಧವೂ ಒಮ್ಮೆ ಹಕ್ಕುಚ್ಯುತಿ ಮಂಡನೆಯಾಗಿತ್ತು. ಲಂಕೇಶ್ ಮತ್ತು ವರದಿಗಾರ ಟಿ.ಕೆ.ತ್ಯಾಗರಾಜ್ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು ಎಂದು ವಿಧಾನಸಭೆ ಸದಸ್ಯರು ಪಟ್ಟು ಹಿಡಿದಿದ್ದರು. ಇದಕ್ಕೆ ಕಾರಣವಾಗಿದ್ದು ಲಂಕೇಶ್ ಪತ್ರಿಕೆಯಲ್ಲಿ “ಶಾಸಕಿಯರ ಕಾಲ ಹರಣ” ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿ.

ಶಾಸಕಿಯರು ಸದನದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕಿತ್ತು, ಹೇಗೆ ಕಾರ್ಯ ನಿರ್ವಹಿಸಿದ್ದಾರೆ ಎಂಬ ಬಗ್ಗೆ ಪ್ರಕಟವಾಗಿದ್ದ ಆ ವರದಿಯನ್ನು ವಿವಿಧ ಪಕ್ಷಗಳನ್ನು ಪ್ರತಿನಿಧಿಸಿದ್ದ ಶಾಸಕಿಯರು ಅರಗಿಸಿಕೊಳ್ಳಲಿಲ್ಲ. ಈ ವರದಿಯಿಂದ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಬೊಬ್ಬೆ ಹಾಕಿದ್ದರು. ಶಾಸಕಿಯರ ಕಾಲ ಹರಣ ಶೀರ್ಷಿಕೆಯ ವರದಿ ಏಕಮುಖವಾಗಿರಲಿಲ್ಲ. ಬಹುಮುಖಿಯಾಗಿದ್ದ ಈ ವರದಿಯನ್ನ ಶಾಸಕಿಯರು ಓದಿ, ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿತ್ತು. ಆದರೆ ಅಂಥ ಕೆಲಸ ಕಡೆಗೂ ಆಗಲೇ ಇಲ್ಲ.

ಲಂಕೇಶ್ ಪತ್ರಿಕೆ ವಿರುದ್ಧ ಹಕ್ಕುಚ್ಯುತಿ ಮಂಡನೆಯಾದಾಗ ಅದನ್ನು ಬಲವಾಗಿ ವಿರೋಧಿಸಿದವರು ಶಾಸಕರಾಗಿದ್ದ ವಾಟಾಳ್ ನಾಗರಾಜ್. ಹಾಗೆ ನೋಡಿದರೆ, ವಾಟಾಳ್ ನಾಗರಾಜರ ಕಾರ್ಯ ವೈಖರಿ ಬಗ್ಗೆಯೂ ಲಂಕೇಶ್ ಪತ್ರಿಕೆ ಕುಟುಕಿತ್ತು (ವಟಗುಟ್ಟುವ ವಾಟಾಳ್, ಕನ್ನಡ ಓರಾಟಗಾರ ವಾಟಾಳ್, ಇತ್ಯಾದಿ ವರದಿಗಳು). ಇಷ್ಟೆಲ್ಲಾ ಆದರೂ ವಾಟಾಳ್ ನಾಗರಾಜರು ’ಲಂಕೇಶ್ ಪತ್ರಿಕೆ’ ಪರವಾಗಿ ಮಾತನಾಡಿ, ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಬೆಂಬಲವಾಗಿ ನಿಂತುಕೊಂಡರು. ಆಗಲೇ ಅನ್ನಿಸುವುದು ಸದನದಲ್ಲಿ ವಾಟಾಳ್ ನಾಗರಾಜ್ ಥರದವರು ಇರಬೇಕು ಎಂದು. ಹೀಗೆಂದ ಮಾತ್ರಕ್ಕೆ ಅದು ವಾಟಾಳ್ ನಾಗರಾಜರ ಓಲೈಕೆಯಲ್ಲ. ಅವರನ್ನು ಪ್ರಶ್ನಿಸುವುದು ಬೇಡ, ಕನ್ನಡ ಚಳವಳಿಯಿಂದ ಸ್ವಂತ ಕಲ್ಯಾಣ ಮಾಡಿಕೊಂಡಿರುವುದನ್ನೂ ಪ್ರಶ್ನಿಸುವುದು ಬೇಡ ಎಂದಲ್ಲ.

ಈಗ ಗೌರಿ ಲಂಕೇಶ್ ಪತ್ರಿಕೆ ವಿರುದ್ಧವೂ ಖುದ್ದು ಸಭಾಪತಿ ಬೋಪಯ್ಯ ಅವರೇ ಹಕ್ಕುಚ್ಯುತಿ ಮಂಡಿಸಿದ್ದಾರೆ. (ವಿಧಾನಸೌಧ, ವಿಧಾನಸಭೆಯಲ್ಲಿ ಕೆಲ ವಿಭಾಗಗಳಿಗೆ ನಡೆದಿರುವ ನೇಮಕಾತಿಗೆ ಸಂಬಂಧಿಸಿದಂತೆ.)

ಆದರೆ, ಸಿ.ಟಿ.ರವಿ ಅವರು ಸುದ್ದಿವಾಹಿನಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಅವರೊಬ್ಬರನ್ನು ಹೊರತುಪಡಿಸಿ ಉಳಿದ ಶಾಸಕರು, ಇದಕ್ಕೂ ತಮಗೂ ಸಂಬಂಧ ಇಲ್ಲವೇ ಇಲ್ಲ ಎಂಬಂತೆ ಕುಳಿತಿದ್ದರು. ಕನಿಷ್ಠ ಶಾಸಕರ ಹಕ್ಕುಗಳೇನು? ಬಾಧ್ಯತೆಗಳೇನು? ಎಂಬ ಬಗ್ಗೆ ಸದನದಲ್ಲಿ ಕನಿಷ್ಠ ಚರ್ಚೆ ಆಗಬೇಕಿತ್ತು. ಅಂಥ ಚರ್ಚೆ ಆಗಲೇ ಇಲ್ಲ.

ಜುಲೈ 1ರಂದು ಆಚರಿಸುವ ಪತ್ರಿಕಾ ದಿನಾಚರಣೆಗಳಲ್ಲಂತೂ ಮುಖ್ಯಮಂತ್ರಿಯಾದಿಯಾಗಿ ಮಂತ್ರಿ ಮಹೋದಯರು, ಶಾಸಕರು, ’ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು, ವಸ್ತುನಿಷ್ಠ ವರದಿಗಳನ್ನ ಪ್ರಕಟಿಸಬೇಕು, ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಕ್ಕೆ ಪೂರಕವಾದ ವಾತಾವರಣ ಇರಬೇಕು…’ ಹೀಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಲೇ ಇದ್ದಾರೆ. ಇದು ವಿಪರ್ಯಾಸವಲ್ಲದೆ ಮತ್ತೇನು? ವಸ್ತುನಿಷ್ಠತೆಯ ಬಗ್ಗೆ ಯಾರು ಮಾತನಾಡಿದ್ದಾರೋ ಅವರ ಬಗ್ಗೆಯೇ ವಸ್ತುನಿಷ್ಠ ವರದಿ ಪ್ರಕಟವಾದಾಗ ಅದನ್ನ ಅರಗಿಸಿಕೊಳ್ಳುವುದಿಲ್ಲ.

ಈಗ ನೀವೇ ಹೇಳಿ: ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು? ಯಾರ ಪರವಾಗಿರಬೇಕು? ಶಾಸಕರ ಹಕ್ಕು ಬಾಧ್ಯತೆಗಳೇನು? ನಿಜಕ್ಕೂ ಹಕ್ಕುಚ್ಯುತಿ ಆಗುವುದು ಯಾರಿಗೆ? ಯಾವ ಸಂದರ್ಭದಲ್ಲಿ? ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಪ್ರಭಾವ ಬೀರುವುದು, ಇಂಥವುಗಳ ಬಗ್ಗೆ ವರದಿ ಬಿತ್ತರಿಸಿದರೇ ಹಕ್ಕು ಚ್ಯುತಿ ಹೇಗಾಗುತ್ತದೆ? ಇಷ್ಟೆಲ್ಲಾ ಅಡೆ ತಡೆಗಳ ಮಧ್ಯೆ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು?

ರಾಜಕೀಯ ಅಸಹ್ಯವೇ? ಅದೊಂದು ಅನೈತಿಕ ನಿಲುವು…


– ರವಿ ಕೃಷ್ಣಾರೆಡ್ಡಿ


 
ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಒಂದು ಚರ್ಚೆ ಗಮನಿಸಿದೆ. ಗಾರಾ ಶ್ರೀನಿವಾಸ್ ಎನ್ನುವವರು ಶಿವಮೊಗ್ಗದಲ್ಲಿ “ಸೂರ್ಯಗಗನ” ಎನ್ನುವ ಪತ್ರಿಕೆ ನಡೆಸುತ್ತಿದ್ದಾರೆಂದು ಕಾಣಿಸುತ್ತದೆ. ಅವರು ಇತ್ತೀಚೆಗೆ ತಮ್ಮ ಫೇಸ್‌ಬುಕ್‌ನಲ್ಲಿ, “ಕಳೆದ ಹತ್ತು ವರ್ಷಗಳಿಂದ Journalist ಸೇವೆ ಸಲ್ಲಿಸುತ್ತಿರುವ ನಾನು ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ… …ಸಂದೇಶವನ್ನೀಡುವ ಉದ್ದೇಶದಿಂದ ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ.” ಎಂದು ಘೋಷಿಸಿಕೊಂಡಿದ್ದಾರೆ. ಅದಕ್ಕೆ ಇಂತಹ ವಿಚಾರಗಳಿಗೆ ಬರುವಂತೆ ಹಲವಾರು ಪರ-ವಿರುದ್ಧ ಕಾಮೆಂಟ್‌ಗಳು ಅಲ್ಲಿ ಬಂದಿವೆ. ಆದರೆ ಅಲ್ಲಿಯ ಮೊದಲ ಕಾಮೆಂಟೇ ತೀಕ್ಷ್ಣವಾಗಿದೆ. ಅದನ್ನು ಬರೆದಿರುವ ಹೆಣ್ಣುಮಗಳು ಒಬ್ಬ ಉದಯೋನ್ಮುಖ ಕವಿ ಎಂದೂ ಕಾಣಿಸುತ್ತದೆ. (ಅಂದ ಹಾಗೆ ಈ ಇಬ್ಬರೂ ನನಗೆ ಅಪರಿಚಿತರು.) ಬಹುಶಃ ಮಧ್ಯವಯಸ್ಕರಾಗಿರುವ ಈ ಮಹಿಳೆ ನೇರವಾಗಿ ಹೇಳಿರುವುದು: “ನೀವು ನಮ್ಮಿಂದ ದೂರ ಇದ್ದುಬಿಡಿ ಸರ್… ನಮಗೆ ಈ ರಾಜಕೀಯ ಬೇಡ.”

ಬಹುಶಃ ಇದಕ್ಕಿಂತ ಬೇಜವಾಬ್ದಾರಿಯುತ, ನಿಷ್ಠುರ, ಶಾಕಿಂಗ್ ಹೇಳಿಕೆ ಇತ್ತೀಚಿನ ದಿನಗಳಲ್ಲಿ ನಾನು ನೋಡಿರಲಿಲ್ಲ. ಬಹುಶಃ ಇವರಂತಹ ಅನೇಕ ಮಹಿಳೆಯರು ಮತ್ತು ಮಹನೀಯರು ನಮ್ಮ ನಡುವೆ ಇದ್ದಾರೆ, ಮತ್ತು ಅವರಿಗೆಲ್ಲ ಈಗ ನಾವು ನೋಡುತ್ತಿರುವ ರಾಜಕೀಯೇತರ ವ್ಯವಸ್ಥೆ ಬಹಳ ಸುಂದರವಾಗಿ ಕಾಣಿಸುತ್ತಿದೆ. ಅವರಿಗೆ ಈಗಿರುವ ಹಾಲಿ ವ್ಯವಸ್ಥೆಯಿಂದ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ರಾಜಕೀಯ ಬಿಟ್ಟರೆ ಬೇರೊಂದು ಕೆಟ್ಟ ವಿದ್ಯಮಾನ ಅವರ ಗಮನಕ್ಕೆ ಬಂದಿಲ್ಲ. ಅವರು ವೈಯಕ್ತಿಕವಾಗಿ ಈ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೇರುತ್ತಲೇ ಹೋಗುತ್ತಿದ್ದಾರೆ. ಮಿಕ್ಕವರ ಪಾಡು ಅವರಿಗೆ ಬೇಕಿಲ್ಲ. ಅವರಿಗೆ ಅಸಹ್ಯವಾಗಿ ಕಾಣುವ ಒಂದೇ ಒಂದು ಕೆಟ್ಟದ್ದು ಎಂದರೆ ಅದು ರಾಜಕಾರಣ ಮಾತ್ರ. ಮತ್ತು ಅದರಲ್ಲಿ ಅವರ ಪಾಲು ಏನೇನೂ ಇಲ್ಲ. ತಮ್ಮ ಪಾಡಿಗೆ ಅವರು ಕೆಲಸ ಮಾಡಿಕೊಂಡು ಹೋಗಲು, ಕತೆ-ಕವನ ಬರೆದುಕೊಳ್ಳಲು, ಶಾಪಿಂಗ್-ಪಾರ್ಟಿ ಮಾಡಿಕೊಳ್ಳಲು ಅವರನ್ನು ಬಿಟ್ಟರೆ ಸಾಕಾಗಿದೆ. ರಾಜಕಾರಣಿಗಳ ಹತ್ತಿರ ಕೂಡ ಇವರು ಸುಳಿಯುವುದಿಲ್ಲ. ಬಹುಶಃ ಅದಕ್ಕಾಗಿಯೇ ಓಟೂ ಹಾಕುವುದಿಲ್ಲ. ಜಾತಿ ಮತ್ತು ಹಣ ಮುಂದಿಟ್ಟುಕೊಂಡು ಮನೆಯ ಮುಂದೆ ಬರುವ “ಗಣ್ಯ” ರಾಜಕಾರಣಿಗಳ ಜೊತೆ ಮಾತ್ರ ನಗುನಗುತ್ತಲೇ ಮಾತನಾಡುತ್ತಾರೆ.

ಏನಾಗಿದೆ ಈ ಅಕ್ಷರ ಕಲಿತವರಿಗೆ? ಪತ್ರಿಕೆ ಓದುತ್ತಾರೆ. ಮೇಲಿನ ಮಹಿಳೆಯಂತಹವರಿಗೆ ತಾವು ಬರಹಗಾರ್ತಿ ಎನ್ನುವ ಕೋಡೂ ಬೇಕಾಗಿರುವುದರಿಂದ ಅಷ್ಟೊ ಇಷ್ಟೊ ಪುಸ್ತಕಗಳನ್ನೂ ಓದಬಹುದು. ಆದರೂ ಇವರಿಗೆ ಪ್ರಜಾಪ್ರಭುತ್ವ ಎನ್ನುವುದಾಗಲಿ, ಅದು ಹೇಗೆ ವ್ಯವಹರಿಸುತ್ತದೆ ಎಂದಾಗಲಿ, ಅದರ ಒಳಿತು-ಕೆಡುಕಿನಲ್ಲಿ ತಮ್ಮ ಪಾತ್ರ ಇದೆ ಎಂಬ ಸಾಮಾನ್ಯ ಜ್ಞಾನವಾಗಲಿ ಯಾಕಿಲ್ಲ? ಇಷ್ಟೆಲ್ಲಾ ಅಜ್ಞಾನಿಗಳೂ, ಅಹಂಕಾರಿಗಳು ಹೇಗಾದರು ಇವರು? ನಮ್ಮ ಶಿಕ್ಷಣ ವ್ಯವಸ್ಥೆ ಇಷ್ಟೊಂದು ದೋಷಪೂರಿತವಾಗಿದೆಯೆ? ಸಮುದಾಯದ ಹಿತದಲ್ಲಿ ತನ್ನ ಹಿತವೂ ಇದೆ ಎಂಬ ಸಾಮುದಾಯಿಕವಾಗಿ ಬದುಕುವ ಪ್ರಾಣಿಗಳ ಡಿಎನ್‍ಎ‌ಗಳಲ್ಲಿರುವ ತಂತು ಇವರಲ್ಲಿ ಮಿಸ್ ಆಗಿದ್ದಾದರೂ ಹೇಗೆ? ’ರಾಜಕೀಯ ಅಸಹ್ಯ, ನಾವು ಅದರಿಂದ ದೂರ ಇರುತ್ತೇವೆ” ಎನ್ನುವುದು ಇಂದಿನ ಸಂದರ್ಭದಲ್ಲಿ ತೀರಾ ಅನೈತಿಕ ನಿಲುವು ಮತ್ತು ಈ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ನಾನಾ ರೀತಿಯಲ್ಲಿ, ಬೇರೆಬೇರೆ ಆಯಾಮಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ (ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ) ರಾಜಕಾರಣ ಮಾಡುತ್ತಿರುವವರಿಗೆ ಮಾಡುವ ಅವಮಾನವೂ ಹೌದು. ಪ್ರಜ್ಞಾಹೀನ ನಡವಳಿಕೆ.

ಆರೇಳು ತಿಂಗಳಿನಲ್ಲಿ ಚುನಾವಣೆ ಬರುತ್ತದೆ. ಸುದ್ದಿಪತ್ರಿಕೆಗಳಿಗೆ ಮತ್ತು ಸುದ್ದಿಚಾನಲ್‌ಗಳಿಗೆ ಇನ್ನು ಮುಂದಕ್ಕೆ ಸುದ್ಧಿಗಳಿಗೆ ಕೊರತೆ ಇಲ್ಲ. ಯಾವುದನ್ನು ಬಿಡುವುದು ಎನ್ನುವುದೇ ಸಮಸ್ಯೆ ಆಗಬಹುದು. ಪಕ್ಷ ತೊರೆದು ಇನ್ನೊಂದು ಪಕ್ಷ ಕಟ್ಟುವವರು, ಆ ಪಕ್ಷದಿಂದ ಈ ಪಕ್ಷಕ್ಕೆ ಹಾರುವವರು, ಈ ಪಕ್ಷದಿಂದ ಮಗದೊಂದು ಪಕ್ಷಕ್ಕೆ ಸೇರುವವರು, ಇದ್ದ ಪಕ್ಷದಲ್ಲಿಯೇ ಬಂಡಾಯವೆದ್ದವರು ಸುದ್ಧಿಯ ಅತಿವೃಷ್ಟಿ ಸುರಿಸುತ್ತಾರೆ. ಇಷ್ಟು ದಿನ ವಾಚಾಮಗೋಚರವಾಗಿ ಬೈದಾಡಿಕೊಂಡವರೇ ನಾಳೆ ಅಕ್ಕಪಕ್ಕದಲ್ಲಿ ಪ್ರಾಣಸ್ನೇಹಿತರಂತೆ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಬಹಿರಂಗ ಸಭೆಗಳಲ್ಲಿ ಒಬ್ಬರನ್ನೊಬ್ಬರು ಓತಪ್ರೋತವಾಗಿ ಹೊಗಳಿಕೊಳ್ಳುತ್ತಾರೆ. ತಮ್ಮ ಜೊತೆಗೆ ನಿಂತ ಹೊಸ ಮಿತ್ರ ಇವರುಗಳಿಗೆ ಹಕ್ಕ, ಬುಕ್ಕ, ಸಂಗೊಳ್ಳಿ ರಾಯಣ್ಣ, ಟಿಪ್ಪು, ಕೃಷ್ಣದೇವರಾಯ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಎಂದೆಲ್ಲಾ ಕಾಣಿಸುತ್ತಾರೆ. ಜೊತೆ ಬಿಟ್ಟು ಹೋದವರು ಮೀರ್ ಸಾದಿಕ್, ಮಲ್ಲಪ್ಪ ಶೆಟ್ಟಿಗಳಾಗುತ್ತಾರೆ.

ಇದೇ ಸಮಯದಲ್ಲಿ ಯಾವ ಕಾರಣಕ್ಕಾಗಿ ರಾಜಕೀಯ ಮಾಡಬೇಕು ಎನ್ನುವ ಸ್ಪಷ್ಟ ಅರಿವಿಲ್ಲದ ಒಳ್ಳೆಯ ಜನರೂ ರಾಜಕೀಯ ಸೇರುತ್ತಾರೆ. ಎಂದಿನಂತೆ ಶ್ರೀಮಂತರು ಎಲ್ಲಾ ಪಾರ್ಟಿಗಳಲ್ಲಿ ಅವರ ಜೇಬಿನ ತೂಕದ ಆಧಾರದ ಮೇಲೆ ಹಂಚಿ ಹೋಗುತ್ತಾರೆ. ಜೊತೆಗೆ ಒಂದಷ್ಟು ಜೋಕರ್‌ಗಳೂ ಉದಯಿಸುತ್ತಾರೆ. ಎಲ್ಲಾ ಸೇರಿ ಯಾವುದಾದರೂ ಪಕ್ಷವೋ ಅಥವ ಪಕ್ಷೇತರವೋ, ಚುನಾವಣೆಗೆ ನಿಲ್ಲುತ್ತಾರೆ.

ಪಾಪ ನಮ್ಮ ಜನರು ತಾನೆ ಏನು ಮಾಡಲಾಗುತ್ತದೆ? ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬಿದ್ದ ಮೇಲೆ ಇರುವ ಕೇವಲ ಹತ್ತು-ಹದಿನೈದು ದಿನಗಳು ಅವರಿಗೆ ತಮ್ಮ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಏನೇನೂ ಸಾಲದು. ಏನೆಂದು ತಿಳಿದುಕೊಳ್ಳುವುದು? ಎಷ್ಟು ಅಭ್ಯರ್ಥಿಗಳು, ಅವರ ಹಿನ್ನೆಲೆ ಏನು, ಯಾರು ಒಳ್ಳೆಯವರು, ಯಾರು ಯೋಗ್ಯರು? ಅಬ್ಬಬ್ಬಾ ಎಷ್ಟೊಂದು ದೊಡ್ದಪಟ್ಟಿ. ತಮಗೆ ಸಿಗುವ ಅಷ್ಟಿಷ್ಟು ಬಿಡುವಿನ ಸಮಯದಲ್ಲಿ ಆರಾಮ ಮಾಡಿಕೊಳ್ಳುವುದೇ ತ್ರಾಸ ಆಗಿರುವಾಗ ಈ ತಲೆನೋವು ಬೇರೆ? ಈ ರಾಜಕೀಯ ಬೇರೆ ಅತಿ ಅಸಹ್ಯ. ಓಟು ಹಾಕುವುದೇ ಬೇಡ. ಹಾಕಲೇಬೇಕಾಗಿ ಬಂದರೆ, ನಮ್ಮ ಜಾತಿಯವರು ಯಾರು, ಪರಿಚಿತರು ಯಾರು, ನಾವು ಬೆಂಬಲಿಸಿಕೊಂಡು ಬಂದ ಪಕ್ಷ ಯಾವುದು? ಅಷ್ಟೂ ಆಗದಿದ್ದರೆ ಬೂತ್‌ನಲ್ಲಿ ಯಾವುದಕ್ಕೋ ಒತ್ತಿದರಾಯಿತು.

ಮುಂದಿನ ಚುನಾವಣೆಯಲ್ಲಿ ಗೆದ್ದು ಶಾಸಕರಾಗಲಿರುವವರೂ ಈಗಿರುವವರಿಗಿಂತ ಉತ್ತಮವಾಗಿರುವ ಸಾಧ್ಯತೆಗಳು ಇಲ್ಲ. ಅದಕ್ಕೆ ಚುನಾವಣೆಗೆ ನಿಲ್ಲುವವರಷ್ಟೇ ಕಾರಣರಲ್ಲ.

ಈಗ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಗಾರಾ ಶ್ರೀನಿವಾಸರ ವಿಚಾರಕ್ಕೆ ಬರೋಣ. ಅರ್ಹ ಜನ ಚುನಾವಣೆಗೆ ನಿಲ್ಲಬೇಕು. ಫಲಿತಾಂಶವನ್ನು ಅನೇಕ ಅಂಶಗಳು ನಿರ್ಧರಿಸುತ್ತವೆ. ಆದರೆ, ಜನಕ್ಕೆ ಪರ್ಯಾಯ ಆಯ್ಕೆಗಳಂತೂ ಇರಬೇಕು. ಆ ನಿಟ್ಟಿನಲ್ಲಿ ಹೊಸದಾಗಿ ನಿಲ್ಲುವವರು ಗಂಭೀರವಾಗಿ ಯೋಚಿಸಬೇಕು. ತಾನು ಯಾಕಾಗಿ ನಿಲ್ಲುತ್ತಿದ್ದೇನೆ ಮತ್ತು ಯಾವ ತ್ಯಾಗಕ್ಕೆ ಸಿದ್ಧ ಎನ್ನುವುದನ್ನು ಸ್ಪಷ್ಪಪಡಿಸಿಕೊಳ್ಳಬೇಕು. ವೈಯಕ್ತಿಕ ಕಾರಣಗಳಿಗಿಂತ ಸಮುದಾಯದ ಹಿತ ಮುಖ್ಯವಾಗಬೇಕು. ಗಾರಾ ಶ್ರೀನಿವಾಸ್ ಹೇಳುತ್ತಾರೆ: “…ಮತದಾರರಿಗೆ ಜಾಗೃತಿ ಮೂಡಿಸುವ ಇರಾದೆಯಲ್ಲಿ, ಪ್ರತಿಸ್ಪರ್ಧಿಗಳ ಜನ್ಮಜಾತಕ ಬಯಲು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಸಾಮಾನ್ಯ ಯುವ ಜನಾಂಗಕ್ಕೆ ಸಂದೇಶವನ್ನೀಡುವ…” ಈ ಉದ್ದೇಶ ಮತ್ತು ಹೇಳಿಕೆಗಳು ಅವರು ಯಾವ ಕಾರಣಕ್ಕೆ ಹಾಲಿ ಶಾಸಕನಿಗೆ ಪರ್ಯಾಯ ಎಂದು ಹೇಳುವುದಿಲ್ಲ. ಅವರ ಈ ಮಾತುಗಳು ಅಪ್ರಬುದ್ದವಾದದ್ದು. ವೈಯಕ್ತಿಕವಾಗಿ ಅವರು ಈಗಿರುವ ಶಾಸಕನಿಗಿಂತ ಉತ್ತಮ ವ್ಯಕ್ತಿಯೇ ಆಗಿರಬಹುದು. ಆದರೆ ಅದು ಅಲ್ಲಿ ಚುನಾವಣೆಗೆ ನಿಲ್ಲುವ ಪ್ರತಿಯೊಬ್ಬನ ವಿಚಾರಕ್ಕೂ ನಿಜ ಇರಬಹುದು. ಹಾಗಾಗಿ ಯಾಕೆ ನೀವು (ಗಾರಾ ಶ್ರೀನಿವಾಸ್) ಗಂಭೀರ ಅಭ್ಯರ್ಥಿ, ಯಾವಯಾವ ವಿಚಾರಗಳಲ್ಲಿ ನೀವು ಪರ್ಯಾಯವಾಗಿ ನಿಲ್ಲುತ್ತೀರ, ಮತ್ತು “ಪ್ರತಿಸ್ಪರ್ಧಿಗಳ ಜನ್ಮಜಾತಕ”ಕ್ಕೆ ಬದಲಾಗಿ ಅವರಿಗಿಂತ ನೀವು ಹೇಗೆ ಶಾಸಕ ಸ್ಥಾನಕ್ಕೆ ಉತ್ತಮರು ಎನ್ನುವುದನ್ನು ನಿರೂಪಿಸಬೇಕು. ಇನ್ನೊಬ್ಬರ ಜನ್ಮ ಜಾಲಾಡುವುದಕ್ಕೆ ಚುನಾವಣೆಗೇ ನಿಲ್ಲಬೇಕಿಲ್ಲ. ಅದೇ ನಿಮ್ಮ ಉದ್ದೇಶವಾಗಿದ್ದಾರೆ ಮೇಲೆ ನಿಮಗೆ ಪ್ರತಿಕ್ರಿಯಿಸಿರುವ ಮಹಿಳೆ (ಒಂದು ಅಂಶ) ಸರಿಯಾಗಿಯೇ ಹೇಳಿದ್ದಾರೆ.

ಅಂದ ಹಾಗೆ, ಚುನಾವಣೆಗೆ ಸಜ್ಜಾಗುತ್ತಿರುವ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ನನ್ನ ಶುಭಾಶಯಗಳು. ಚುನಾವಣಾ ಆಯೋಗದ ವೆಚ್ಚದ ಮಿತಿಯಲ್ಲಿಯೇ ಚುನಾವಣೆ ನಡೆಸಿ. ಅಕ್ರಮಗಳನ್ನು ನಿಮ್ಮ ಕೈಲಾದ ರೀತಿಯಲ್ಲಿ ಪ್ರತಿರೋಧಿಸಿ. ಸಾಧ್ಯವಾದಷ್ಟೂ ಗಂಭೀರವಾಗಿ ತೊಡಗಿಕೊಳ್ಳಿ.  ನಮ್ಮ ಈಗಿನ ಸಮಾಜದಲ್ಲಿ ಆದರ್ಶಗಳು ನಗೆಪಾಟಲಿಗೂ, ಭ್ರಷ್ಟರು ಹೀರೋಗಳಾಗಿಯೂ ಮಿಂಚುತ್ತಿರುವಾಗ ನಿಮ್ಮ ನಡೆ ಆದರ್ಶವಾದದ್ದು. ಅನೈತಿಕ ನಿಲುವುಗಳುಳ್ಳವರು ಮತ್ತು ಸಮಾಜದ ಒಂದು ವರ್ಗದ ಸಂಕುಚಿತ ಮನಸ್ಥಿತಿಯ ಜನ ಹಾಗೆ ಭಾವಿಸದಿದ್ದರೂ.

ಕಥೆ : ಹಂಬಲದ ಹೂ… ಮೋಹದ ಮುಳ್ಳು


-ಡಾ.ಎಸ್.ಬಿ. ಜೋಗುರ


 
ಅವರಪ್ಪ ನೆಟ್ಟ ಆಲದ ಮರವೀಗ ಜೋರದಾರ್ ಇಮಾಮಸಾಬನ ಡೀಪೂದೊಳಗ ವಡಗಟಕಿ ಆಗಿ ಒಂದರ ಮ್ಯಾಲೊಂದು ಗದ್ದ ಹೇರಕೊಂಡು ಗುಡ್ಡದಂಗ ಬಿದ್ದಕೊಂಡಿತ್ತು. ಮಣಕ್ಕ ನೂರು ರೂಪಾಯಿದಂಗ ಮಾರಾಟ ಆಗಿ, ಊರ ಮಂದಿ ಒಲಿ ಪುಟುವಿಗೆ ಆಸರಾಗಿತ್ತು. ಖುದ್ದಾಗಿ ಕಟಬಿಟಿ ಮಾಡಿ ಉರುಳಿಬಿದ್ದ ಗಿಡದ ಬಡ್ಯಾಗ ಬೀಜಾ ಹಾಕೂ ಹಿಕಮತ್ತು ಗುರಸಿದ್ದನ ಮೂರೂ ಮಕ್ಕಳಿಗಿರಲಿಲ್ಲ. ಅವರಪ್ಪನ ಗೋರಿ ಮ್ಯಾಲಿನ ಹೂವಿನ ಹಾರ ಬಾಡೂ ಮೊದಲೇ ಕಡದು ಗುಡ್ಡಾ ಹಾಕ್ತೀವಿ ಅನ್ನೂವಂಗ ನಿಂತ ಬೈಟಕ್ ಮ್ಯಾಲ ಆಸ್ತಿ ಪಾಲ ಮಾಡ್ಕೊಂಡು ಮೆರಿಯಾಕ ಸುರು ಮಾಡದರು. ಗುರಸಿದ್ದಗ ಒಬ್ಬಳೇ ಮಗಳು. ಅಣ್ಣತಮ್ಮದೇರ ಜೋಡಿ ಜಗಳಾಡಿ ಪಾಲ ಕೇಳೂದು ಚಂದಲ್ಲ ಅಂತ ಅಕಿ ಆಸ್ತಿ ಬಗ್ಗೆ ಮಾತೇ ಆಡಿರಲಿಲ್ಲ. ಅಕಿದೇ ಸುಟ್ಟರ ಸುಡಲಾರದಷ್ಟು ಆಸ್ತಿ ಇತ್ತು. ಅಕಿ ಗಂಡ ಸಿದ್ರಾಮಪ್ಪ ‘ಹುಚಗೊಟ್ಟಿಯಂಗ ಮಾಡಬ್ಯಾಡ ಅದು ನಿಮ್ಮಪ್ಪನ ಆಸ್ತಿ. ಕೈದೆಸಿರಿ ಅವರು ನಿನಗ ಅದರಾಗ ಪಾಲ ಕೊಡಬೇಕು’ ಅಂತ ಚಾವಿ ಕೊಟ್ಟ ಮ್ಯಾಲೂ ಶಿವನಿಂಗವ್ವ ಗಂಡನ ಮಾತ ಕಿವ್ಯಾಗ ಹಾಕೊಳಿಲ್ಲ. ಅವಳ ಅತ್ತಿ ತಾಯವ್ವ ‘ನಿನ್ನ ಅಣ್ಣತಮ್ಮದೇರು ಬಾಳ ಜಾಬಾದಿ ಅದಾರ, ನಾಳೆ ನೀ ತವರಮನಿಗಿ ಹೋದರ ಅವರೇನು ಬಾ ಅನ್ನೂ ಪೈಕಿ ಅಲ್ಲ. ಸುಮ್ಮ ಒಂದಿಟು ಹೊಲಾ ಮನಿ ಬರತೈ,ತಿ ತಗೊಂಡು ಕುಂದ್ರು’ ಅಂತ ಹೇಳದ ಮ್ಯಾಲೂ ಶಿವನಿಂಗವ್ವ ಅದರ ಬಗ್ಗೆ ಆಸೆನೇ ಮಾಡಿರಲಿಲ್ಲ. ಇಕಾಡಿ ಗುರಸಿದ್ದನ ಮಕ್ಕಳಾದ ಚನಮಲ್ಲ, ಶಿವಶಂಕರ, ಕಲ್ಲಪ್ಪ ಆಸ್ತಿ ಪಾಲು ಮಾಡೂ ಮುಂದ ತಂಗಿ ಶಿವನಿಂಗವ್ವಳ ನೆನಪು ಸೈತ ಮಾಡಿರಲಿಲ್ಲ. ಚನಮಲ್ಲನ ಹೆಂಡತಿ ಸುಭದ್ರವ್ವ ಗಂಡನ ಮುಂದ ‘ನಿಮಗ ಇರೂದೇ ಒಬ್ಬಾಕಿ ತಂಗಿ, ಅಕ್ಕ-ತಂಗಿದೇರಿಗಿ ಕೊಟ್ಟರ ಅದೇನು ಕಡಿಮಿ ಆಗೂವಂಗಿಲ್ಲ. ಅಕಿಗೊಂದೆರಡು ಎಕರೆ ಕೊಡ್ರಿ’ ಅಂದದ್ದೇ ಕಿರಿ ಸೊಸಿ ಪಾರವ್ವ ‘ಕೊಡೂದಿದ್ರ ನಿನ್ನ ಗಂಡನ ಪಾಲದಾಗ ಕೊಡು ನಾವಂತೂ ಕೊಡಲ್ಲ. ಅಕಿಗೇನು ಕಮ್ಮಿ ಐತಾ? ನೂರಾರು ಎಕರೆ ಜಮೀನು ಇದ್ದಕಿ. ನಮಗ ಮಕ್ಕಳು ಮರಿ ಅದಾವ, ಅಕಿಗಿ ಮಕ್ಕಳೂ ಇಲ್ಲ ಮರೀನೂ ಇಲ್ಲ’ ಅಂತ ಮಣ್ಣ ಕೊಟ್ಟು ಬಂದ ಮಂದಿ ಮುಂದೇ ವಡವಡ ಒದರಾಡಿ ಅಕಿ ಖರೆನೆ ಸಣ್ಣ ಸೊಸಿ ಆಗಿದ್ದಳು. ಊರಾನ ಹಿರೇರ ಮುಂದ ಹ್ಯಾಂಗ ಮಾತಾಡಬೇಕು ಅನ್ನೂ ಖಬರ್ ಸೈತಾ ಇಲ್ಲ ಅಕಿಗಿ ಅಂತ ಒಣ್ಯಾಗಿನ ಮಂದಿ ಮಾತಾಡೂದು ಅಕಿ ಕಿವಿಗಿ ಬಿದ್ದರೂ ಅವಳೇನು ತಲಿ ಕೆಡಿಸಿಕೊಂಡಿರಲಿಲ್ಲ. ಗುರುಸಿದ್ದನ ಮೂರೂ ಮಕ್ಕಳ ಹೊಟ್ಟೀಲೇ ಮೂರು, ನಾಕು ಮಕ್ಕಳು. ಹಿರಿ ಮಗ ಚನಮಲ್ಲನ ಮಕ್ಕಳು ಕೈಗಿ ಬಂದಂಗ ಆಗಿದ್ದರು. ಈ ಚನ್ನಮಲ್ಲಗ ಒಟ್ಟ ಐದು ಮಕ್ಕಳು. ಮೂರು ಗಂಡು, ಎರಡು ಹೆಣ್ಣು. ಅವನ ಬೆನ್ನ ಮ್ಯಾಲ ಶಿವಶಂಕರಪ್ಪ, ಆಂವಗೂ ನಾಕು ಮಕ್ಕಳು, ಎರಡು ಗಂಡು, ಎರಡು ಹೆಣ್ಣು. ಕಡಿಯುವ ಕಲ್ಲಪ್ಪ ಅಂವಗೂ ಮೂರು ಮಕ್ಕಳು. ಮೂರೂ ಗಂಡು ಹುಡುಗರು. ಕಲ್ಲಪ್ಪನ ಬೆನ್ನ ಮ್ಯಾಲ ತಂಗಿ ಗೋಲಗೇರಿ ಶಿವನಿಂಗವ್ವ. ಗುರಸಿದ್ದಪ್ಪ ಒಳಗಿನ ಸಂಬಂಧದೊಳಗೇ ಮಗಳ ಮದುವಿ ಮಾಡಿ ಕೊಟ್ಟಿದ್ದ. ಶಿವನಿಂಗವ್ವಳ ಮಾವ ಗುರಸಿದ್ದನ ಸೋದರಮಾವನೇ ಆಗಬೇಕು. ಶಿವನಿಂಗವ್ವಗ ಮಕ್ಕಳಾಗಿರಲಿಲ್ಲ. ಅವರೂ ಮನಾರ ತೋರಸಿದ್ರು, ದೇವರು ದಿಂಡರು ಅಂತ ರಗಡ ಮಾಡಿದ್ದರು ಆದರೂ ಮಕ್ಕಳಾಗಿರಲಿಲ್ಲ. ಸಿದ್ರಾಮಪ್ಪ ತನ್ನ ತಮ್ಮನ ಮಗ ರಮೇಶನನ್ನೇ ದತ್ತಕ ತಗೊಂಡಿದ್ದ. ಸಿದ್ರಾಮಗ ನೂರಾರು ಎಕರೆ ಜಮೀನಿತ್ತು. ಅನಾಮತ್ತಾಗಿ ನೂರಾರು ಚೀಲ ಕಾಳುಕಡಿ ಬರೂವಂಗಿತ್ತು. ಹಿಂಗಾಗಿ ಇನ್ನೊಬ್ಬರ ಆಸ್ತಿಗಿ ಆಸೆ ಪಡೊ ಮನಸ್ಯಾ ಅಂವಲ್ಲ. ತನ್ನ ಹೆಂಡತಿ ಅಣ್ಣತಮ್ಮದೇರು ಅಪ್ಪನ್ನ ಹೂತು ಬಂದದ್ದೇ ಆಸ್ತಿ ಸಲಾಗಿ ನ್ಯಾಯಾ ತಕ್ಕೊಂಡು ಕುಂತಿದ್ದು ನೋಡಿ ಅಂವಗ ಬಾಳ ಖಜೀಲಿ ಅನಿಸಿತ್ತು. ಅದಕ್ಕೇ ಒಂದು ಮಾತ ಆ ಕುರಸಾಲ್ಯಾಗೋಳಿಗಿ ಬಿಡಬ್ಯಾಡ ನೀನೂ ಪಾಲು ಕೇಳು ಅಂತ ಬೆನ್ನ ಹತ್ತಿದ್ದ. ಅವರೇ ಜಗಳಾಡೂದು ನೋಡಿ ಹಾಳಾಗಿ ಹೋಗಲಿ ಅಂತ ಸುಮ್ಮ ಉಳದಿದ್ದ. ಓಣ್ಯಾನ ಹಿರೇರಿಗಿ ಇವರಿಗಿ ಆಸ್ತಿ ಪಾಲು ಮಾಡಿ ಕೊಡೂ ಮಟಾ ಸಾಕುಬೇಕಾಗಿ ಹೊಯಿತು. ಹೊಲದಾಗಿನ ಬಾಂದಾ ಮ್ಯಾಲ ಇರೋ ಗಿಡದ ಟೊಂಗೆ ಸೈತಾ ಪಾಲ ಆಗಬೇಕು ಅಂತ ಅವರು ಜಗಳಾಡೂದು ನೋಡಿ ಇದೇನು ಬಗೆ ಹರಿಯೋ ಮಾತಲ್ಲ ಅಂತ ಹಿರೇರು ಎಲ್ಲಾ ಕೈಚೆಲ್ಲಿದ್ದರು. ಚನ್ನಮಲ್ಲಗ ಮತ್ತೀಗ ಬಿಟ್ಟರ ಮುಂದ ಆಗೂವಂಗಿಲ್ಲ ಅಂತ ಗೊತ್ತಿತ್ತು. ‘ನೀವೆಲ್ಲಾ ಹಿರೇರು ಹ್ಯಾಂಗ ಹೇಳ್ತೀರಿ ಹಂಗ’ ಅಂತ ಅಂದ ಮ್ಯಾಲ ಬೆಳ್ಳ ಬೆಳತನ ಕುಂತು ಪಾಲು ಮಾಡಿ ಬಗಿಹರಿಸಿದ್ದಿತ್ತು. ಇನ್ನೇನು ಎಲ್ಲಾ ಮುಗೀತು ಅನ್ನೂದರೊಳಗ ಕಲ್ಲಪ್ಪ ಅಂಗಳದಾಗಿನ ಎರಡು ಹಗೆ ಯಾರಿಗೆ ಹೋಗಬೇಕು? ಅನ್ನೋ ಪ್ರಶ್ನೆ ಎತ್ತಿದ್ದ. ಹಗೆಯೊಳಗ ಜ್ವಾಳಾ ಹಾಕೂದು ಬಿಟ್ಟೇ ಇಪ್ಪತ್ತು ವರ್ಷ ಆಗಿತ್ತು. ಹಿಂಗಾಗಿ ಆ ಹಿರೇರಿಗೂ ಆ ಹಗೆ ದ್ಯಾಸಕ್ಕ ಬಂದಿರಲಿಲ್ಲ. ಗುರಸಿದ್ದಗ ಮೂರು ಗಂಡು ಮಕ್ಕಳು. ಹಗೆ ನೋಡದರ ಎರಡು ಅದಾವ,  ಹ್ಯಾಂಗ ಪಾಲು ಮಾಡೂದು ಅನ್ನೂದು ಅವರಿಗಿ ತಿಳಿಲಾರದಂಗ ಆಯಿತು. ಶಿವಶಂಕರಪ್ಪ ಬಾಳ ದೊಡ್ಡ ಮನಸ ಮಾಡಿ ನನಗೇನು ಹಗೆ ಬ್ಯಾಡ ಅವರಿಬ್ಬರಿಗೇ ಹಂಚರಿ. ಅದರ ಬದಲೀ ದೊಡ್ಯಾಗಿರೋ ಪಾಯಿಖಾನಿ ಮಾತ್ರ ನನ್ನ  ಪಾಲಿಗಿ ಇರಲಿ ಅಂದದ್ದೇ ಅವರಿಗೂ ಅದೇ ಚುಲೋ ಅನಸ್ತು. ಅಷ್ಟಕ್ಕೂ ತಮ್ಮ ಮನ್ಯಾಗ ಯಾರೂ ಆ ಪಾಯಿಖಾನಿ ಸಮೀಪ ಹೋಗುವಂಗಿಲ್ಲ. ಏನಿದ್ದರೂ ಎಲ್ಲರೂ ಬಯಲಕಡಿಗೇ ನಡೆಯವ್ರು ಅಂತ ಶಿವಶಂಕರಪ್ಪನ ಕರಾರಿಗೆ ಹುಂ ಅಂದರು. ಆ ಹಿರೆರಿಗೆಲ್ಲಾ ಈ ಹಗೆ ಹಂಚಕೊಂಡಿದ್ದೇ ಬಾಳ ಖುಷಿ ಕೊಟ್ಟಿತ್ತು. ಗುರಸಿದ್ದಪ್ಪ ಸತ್ತು ಒಂದು ದಿನ ಕಳಿಯೊದರೊಳಗ ಮೂರೂ ಮಕ್ಕಳು ಬ್ಯಾರಿ ಆಗಿದ್ದರು.

***

ಇರೋ ಒಂದು ಮನಿ ಮೂರು ಪಾಲದೊಳಗ ಹಂಚಿಕಿ ಆಗಿ ದನಾ ಕಟ್ಟೊ ಅಂಗಳ ಸೈತಾ ಅಂದಗೇಡಿಯಾಗಿತ್ತು. ಅಂಗಳದ ನಟ್ಟ ನಡುವ ಇರೋ ಎರಡೂ ಹಗೆದಮ್ಯಾಲ ಒಂದೊಂದು ಕೋಲಿ ಎದ್ವು. ಚನ್ನಮಲ್ಲನ ಇಸ್ಪೀಟ್ ಆಡೂ ಚಟಕ್ಕ ಪಾಲಾದ ಆಸ್ತಿ ತಿಂಗಳೊಪ್ಪತ್ತಿನೊಳಗ ನಿಖಾಲಿಯಾದಂಗ ಆಗಿತ್ತು. ಶಿವಶಂಕರಪ್ಪ ಆರಕ್ಕೇರಲಾರದೇ. ಮೂರಕ್ಕಿಳಿಯಲಾರದೇ ಇದ್ದಿದ್ದರೊಳಗೇ ಹತ್ಯಾಗಿ ಸಂಸಾರ ಮಾಡಕೊಂಡು ಹೊಂಟಿದ್ದ. ಕಲ್ಲಪ್ಪ ಮೊದಲೇ ರಿಕಾಮಿ, ಕೈಗಿ ಆಸ್ತಿ ಬಂದ ಮ್ಯಾಲ ಕೆಟ್ಟ ಕುಡುಕ ಆಗಿ ಒಂದೊಂದು ಗೊತ್ತಿಗಿ ಹಚ್ಚತಾ ನಡದಿದ್ದ. ಮಕ್ಕಳು ಇನ್ನೂ ಸಣ್ಣವರು. ಪಾರವ್ವ ಗಂಡಗ ಈ ಚಟಾ ಚಲೋ ಅಲ್ಲ ಅಂತ ಎಟ್ಟು ಹೇಳದರೂ ಕೇಳಲಿಲ್ಲ. ಮಕ್ಕಳ ಮುಂದಿನ ಬದುಕು ಹ್ಯಾಂಗ ಅನ್ನೂದು ಒಂಚೂರೂ ಯೋಚನೆ ಮಾಡಲಾರದೇ ಹ್ಯಾಂಗ ಬೇಕು ಹಂಗ ಕುಡದು ಹಿರೇರ ಆಸ್ತಿನೆಲ್ಲಾ ಕಲ್ಲಪ್ಪ ಗೊತ್ತಿಗಿ ಹಚ್ಚಿದ್ದ. ಅವರಪ್ಪ ಇರೋ ಕಾಲಕ್ಕ ಎರಡೂ ಹಗೆದೊಳಗ ನೂರಾರು ಚೀಲ ಜೋಳ ತುಂಬಿ ತುಳಕತ್ತಿದ್ವು. ಅವು ಅಂತಿಂಥಾ ಹಗೆ ಅಲ್ಲ ಗುಂಡಕ ಕರಿ ಕಲ್ಲಿಂದ ಸುತ್ತಲೂ ಬಾವಿ ಕಟ್ಟದಂಗ ಮಜಭೂತಾಗಿ ಕಟ್ಟಿದ್ದರು. ಇಪ್ಪತ್ತು ಅಡಿ ಉದ್ದ ಹತ್ತಡಿ ಅಗಲ ಇಂಥಾ ಹಗೆಯೊಳಗ ಕೈಹಾಕದರ ಸಾಕು ಸಿಗುವಂಗ ಜೋಳಾ ತುಂಬಿರತಿದ್ದರು. ಅದರಲ್ಲಿ ವರ್ಷಗಟ್ಟಲೆ ಹಾಕಿಟ್ಟ ಜ್ವಾಳ ತಾಜಾ ಇರತಿದ್ವು. ಕಾಲ ಸರದಂಗ ಒಳಗ ಹಾಕಿರೋ ಜ್ವಾಳಾ ಮುಗ್ಗ ಆಗಲಿಕ್ಕ ಶುರು ಆದಿಂದ ಗುರಸಿದ್ದ ಅಲ್ಲಿ ಜ್ವಾಳಾ ಹಾಕೂದನ್ನ ಬಿಟ್ಟಿದ್ದ. ಆ ಹಗೆಯೊಳಗ ಇಳಿಯೂದೇ ಒಂದು ದೊಡ್ದ ಸಾಹಸ. ದಮ್ಮಿನವರು ಒಳಗ ಇಳಿದರ ಮ್ಯಾಲಿನ ಉಸಿರ ಮ್ಯಾಲ ಕೆಳಗಿನ ಉಸಿರು ಕೆಳಗ ಆಗಿ ಜೀವ ಕಲಾಸೇ.. ಹಂಗಾಗೇ ಒಳಗ ಇಳಿಯೂದಿದ್ರ ಗುರಸಿದ್ದಪ್ಪ ಕುರಿ ತುಳಜಪ್ಪನನ್ನೇ ಕರಸತ್ತಿದ್ದ. ಹಗೆದ ಬಾಯಿ ಮ್ಯಾಲಿರೋ ಪಾಟೀಗಲ್ಲಿಗೆ ಸುತ್ತಾಲಕೂ ಮೆತ್ತಿದ ಕರ್ಲಮಣ್ಣು ತಗದು ಹಗೂರಕ ಆ ಪಾಟೀಗಲ್ಲು ಮ್ಯಾಲ ಎತ್ತಿದ್ದೇ ಬುಶ್..! ಅಂತ ಬಿಸಿಬಿಸಿ ಹವಾ ಹೊರಗ ಬರತ್ತಿತ್ತು. ಹಗೆಯೊಳಗಿನ ಜ್ವಾಳಾ ತಗದು ಚೀಲಕ್ಕ ತುಂಬ್ತಾ ಹೋದಂಗ ಹಗೆ ಖಾಲಿಯಾಗ್ತಾ ಬರತ್ತಿತ್ತು. ಹಗೆ ತಳಕ್ಕ ಹತ್ತದಾಗ ಒಳಗ ಇಣುಕಿ ನೋಡೂದು ಸೈತಾ ಭಯ ಹುಟ್ಟಸತ್ತಿತ್ತು. ಅಂತದರೊಳಗೂ ಆ ಕುರಿ ತುಳಜಪ್ಪ ಕೆಳಗ ಕುಂತು ಬಕಿಟ್ ತುಂಬಿ ತುಂಬಿ ಕೊಡತ್ತಿದ್ದ. ಮೊದಲೇ ಕರಿಮೈ. ಒಳಗಿನ ಝಳಕ ಮೈ ಅನೂದು ಬೆವರತಾ ಬೆವರಿ, ಒಂದು ಸವನ ಮಿರಿಮಿರಿ ಮಿಂಚತಿತ್ತು. ಒಂಥರಾ ಕುಮುಸುಗಟ್ಟಿದ ವಾಸನೆನೂ ಮೂಗಿಗಿ ಹೊಡೀತಿತ್ತು. ಹಂಗ ಇಡೀ ದಿನ ಎರಡೂ ಹಗೆಯೊಳಗಿಂದ ಜ್ವಾಳಾ ತಗಿಯೂದೇ ಒಂದು ಕಸರತ್ತು ಆಗಿರತಿತ್ತು. ಈಗ ಆ ಪರಿ ಜೋಳಾನೂ ಬೆಳಿಯುವಂಗಿಲ್ಲ ಹಂಗೇ ಆ ತರದ ಹಗೆಗಳೂ ಇಲ್ಲ. ಗುರಸಿದ್ದನ ಕಾಲಕ್ಕ ಬಾಳ ದೊಡ್ಡದು ಅಂತ ಗುರತಿಸಿಕೊಂಡಿದ್ದ ಮನಿ ಮೂರು ಪಾಲು ಆದ ಮ್ಯಾಲ, ಮನಿಯೊಳಗೂ ಮಕ್ಕಳು ಮೊಮ್ಮಕ್ಕಳು ಅಂತ ಬಂದ ಮ್ಯಾಲ ಇರೋ ಆ ಮನಿ ಸಾಕಾಗಲಿಲ್ಲ. ಹಂಗಂತ ಬ್ಯಾರೇ ಜಾಗಾ ತಗೊಂಡು ಮನಿ ಕಟ್ಟಿಸೂವಷ್ಟು ಶಾಣೆರೂ ಅವರಲ್ಲ. ಅಲ್ಲಿದಲ್ಲೇ ಇಟ್ಟು ಮಲ್ಲಿ ಮನಿ ಸಾರಸದ್ಲು ಅನ್ನೂವಂಗ ಅಂಗಳದೊಳಗ ಇರೋ ಎರಡೂ ಹಗೆ ಮ್ಯಾಲೇ ಎರಡು ಕೋಲಿ ಎಬ್ಬಿಸಿ ಸಂಸಾರ ನಡಸದ ಗುರಸಿದ್ದನ ಮಕ್ಕಳು ಅಲ್ಲೊಂದು ಅಂಗಳ ಇತ್ತು, ಎರಡು ಹಗೆ ಇದ್ವು ಅಂತ ಹೇಳಾಕ ಯಾವ ಗುರುತನ್ನೂ ಬಿಟ್ಟಿರಲಿಲ್ಲ. ಎರಡೂ ಕೈ ಬೀಸತಾ ತಿರುಗಾಡಲಿಕ್ಕ ಬರಲಾರದಷ್ಟು ಅಟಕ ಮಾಡಿ ಇಟ್ಟಿದ್ದರು. ಗುರಸಿದ್ದನ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಒಬ್ಬರಿಗೊಬ್ಬರು ತಾಳಿಲ್ಲ ಮೇಳಿಲ್ಲ ಎನ್ನುವಂಗ ಮುಖಾ ಹೊಳ್ಳಸಕೊಂಡು ತಿರಗಾಡತಿದ್ದರು. ಕಿರಿ ಸೊಸಿ ಪಾರವ್ವ ಈ ಮನಿಯೊಳಗ ತನಗಾಗಲೀ ತನ್ನ ಮಕ್ಕಳಿಗಾಗಲೀ ಸುಖಾ ಇಲ್ಲ ಅಂತ ರಾಗಾ ತಗದಳು. ಗಂಡಗ ಬಂದಷ್ಟು ಬಂತು ಇದನ್ನು ಮಾರಿ ನಡೀರಿ, ಬ್ಯಾರೆ ಕಡಿ ಜಾಗಾ ತಗೊಂಡು ಮನಿ ಕಟ್ಟಸಮ್ಮು ಅನ್ನೂ ಮಾತ ಶುರು ಮಾಡದಳು. ಮಾರಿದ ರೊಕ್ಕದಳಗೇ ತನಗೂ ಒಂದಷ್ಟು ದಿನ ಮಜಾ ಹೊಡಿಲಾಕ ಆಯಿತು ಅಂತ ಹೇಳಿ ಹೆಂಡ್ತಿ ಪಾರವ್ವ ಹಂಗ ಹೇಳಿದ್ದೇ ಅಡೂಡಿ ಮಾಡಿ ಗಂಡ ಕಲ್ಲಪ್ಪ ತನ್ನ ಪಾಲಿನ ಮನೀನ್ನ ಒಬ್ಬ ಮಾರವಾಡಿಗೆ ಮಾರಿಬಿಟ್ಟ. ಹೆಂಡತಿ ಪಾರವ್ವ ಅಕಿನ ತವರು ಮನಿಗಿ ಹೋಗಿ ಕುಂತಳು. ಗಂಡ ಕಲ್ಲಪ್ಪ ಕಿಸೆಯೊಳಗಿನ ದುಡ್ದ ಖಾಲಿಯಾಗೂಮಟ ಕುಡಕೊಂತ ತಿರಗದ. ಕಿಸೆಯೊಳಗಿನ ರೊಕ್ಕ ಖಾಲಿಯಾದ ಮ್ಯಾಲ ಹೆಂಡತಿ ಊರಾಗ ಹೋಗಿ ಬಿದ್ದಕೊಂಡ. ಅಕಿ ಮನಿ ಮಾರಿದ್ದ ರೊಕ್ಕಾ ಒಯದು ಅಕಿ ಅಪ್ಪನ ಕೈಯಾಗ ಕೊಟ್ಟು ಗಂಡ ಕಲ್ಲಪ್ಪನ ಮಂಗ್ಯಾ ಮಾಡಿದ್ದಳು. ಈ ಕಲ್ಲ ದಿನ್ನಾ ಕುಡಿಯಾಕ ಇಪ್ಪತ್ತು ರೂಪಾಯಿ ಸಲಾಗಿ ಹೆಂಡತೀಗಿ ಜೀ ಅನ್ನಾಕ ಶುರು ಮಾಡತು.

 ***

ಕಲ್ಲಪ್ಪನ ಕಡಿಂದ ಮನಿ ಖರೀದಿ ಮಾಡಿದ ಮಾರವಾಡಿ ಅದಕ್ಕ ಸುಣ್ಣ ಬಣ್ಣ ಹಚ್ಚಿಸಿ ಬಾಡಿಗಿಗೆ ಕೊಟ್ಟಿದ್ದ. ಹಗೆದ ಮ್ಯಾಲಿನ ಕೋಲಿಯೊಳಗ ಬ್ಯಾಕೋಡದ ನಾಲ್ಕು ಕಾಲೇಜ್ ಹುಡುಗರು ಬಾಡಿಗೆಗಿದ್ದರು. ಅವರೆಲ್ಲಾ ಬಿ.ಎ. ಮೊದಲ ವರ್ಷದಲ್ಲಿ ಓದತಿದ್ದರು. ಅವರು ಬಾಡಿಗೆಯಿರೋ ಆ ಕೋಲಿ ಹಗೆದ ಮ್ಯಾಲ ಕಟ್ಯಾರಂತ ಅವರಿಗಿ ಗೊತ್ತಿರಲಿಲ್ಲ. ಅವತ್ತೊಂದಿನ ರಾತ್ರಿ ಹಗೆಯೊಳಗ ಕೊರಕ್.. ಕೊರಕ್ ಅಂತ ಏನೋ ಕೊರಿಯೋ ಅವಾಜ್ ಬಂದಂಗ ಆಯಿತು. ಅದರ ಮ್ಯಾಲ ತಲಿ ಇಟ್ಟು ಮಲಗಿರೋ ರವಿಕುಮಾರಗೆ ಆ ಅವಾಜ್ ಮತ್ತಷ್ಟು ಜಾಸ್ತಿ ಆಗ್ತಾನೇ ಹೋಯಿತು. ನೆಲಕ್ಕೆ ಕಿವಿ ಹಚ್ಚದರ ಸಾಕು ಆ ಸದ್ದು ಜೋರಾಗಿ ಕೇಳುತ್ತಿತ್ತು. ಬೆಳಿಗ್ಗೆ ಎದ್ದಕೂಡಲೇ ಆ ವಿಷಯವನ್ನು ತನ್ನ ರೂಮ್‌ಮೇಟ್ಸ್ ಮುಂದೆ ಹೇಳಿದ. ಅವರಾರೂ ಅದನ್ನು ನಂಬಲಿಲ್ಲ. ನಿನಗೆ ಕನಸು ಬಿದ್ದಿರಬೇಕು ಅಂತ ಜೋಕ್ ಮಾಡದರು. ಆಗ ರವಿಕುಮಾರ ಈ ದಿನ ಆ ಜಾಗದಲ್ಲಿ ನೀನು ಮಲಗು ಅಂತ ತನ್ನನ್ನು ಜೋಕ್ ಮಾಡಿದ ಪ್ರದೀಪನಿಗೆ ಹೇಳಿದ. ಅದೇನು ಮಹಾ..! ಮಲಗ್ತೀನಿ ಬಿಡ ಅಂದ. ಮಲಗಿದ. ಮಧ್ಯರಾತ್ರಿಯ ಹೊತ್ತಲ್ಲಿ ಆ ಅವಾಜ್ ಹಿಂದಿನ ದಿನಕ್ಕಿಂತಲೂ ಜೋರಾಗಿ ಶುರುವಾಯಿತು. ಪ್ರದೀಪ ತಟ್ಟನೇ ಎದ್ದು ಕುಳಿತ. ಲೈಟ್ ಆನ್ ಮಾಡಿದ. ರವಿಕುಮಾರನನ್ನು ಎಬ್ಬಿಸಿದ. ಆತ ಕಣ್ಣುಜ್ಜುತ್ತಲೇ ‘ಏನೋ..?’ ಎಂದ.
‘ನೀ ಹೇಳಿದ್ದು ಖರೆ.. ಬಾಳ ಜೋರ್ ಅವಾಜ್ ಬರತೈತಿ’
‘ಆಯಿತು ಈಗ ಮಲಗು ಮುಂಜಾನೆ ನೋಡಮ್ಮು’

ಪ್ರದೀಪನಿಗೆ ನಿದ್ದೆ ಬೀಳಲಿಲ್ಲ. ಮರುದಿನ ಬೆಳಿಗ್ಗೆ ಮನೆಯ ಮಾಲಿಕರ ಮುಂದೆ ಆ ವಿಷಯ ಹೇಳಿದ. ಅದಕ್ಕವರು ‘ಅಲ್ಲಿ ಮೊದಲು ಬಕಾರ ಇತ್ತು. ಬಹುಷ: ಇಲಿ ಗಿಲಿ ಇರಬೇಕು ಅಷ್ಟೆ.. ಹೆದರಬ್ಯಾಡಿರಿ’ ಅಂದ. ಆ ದಿನದ ರಾತ್ರಿ ಆ ಕೊರೆಯುವ ಅವಾಜು ಸಹಿಸಲಿಕ್ಕಾಗಲೇ ಇಲ್ಲ. ರವಿಕುಮಾರ ಮತ್ತು ಪ್ರದೀಪ ಇಬ್ಬರೂ ಎದ್ದು ಕುಳಿತರು. ನೋಡೊಣ ಏನಾದರೂ ಇದೆ ಎಂದು ಹಗೆಯ ಮೇಲಿನ ಪಾಟೀಗಲ್ಲಿನ ಸುತ್ತಲೂ ಮೆತ್ತಲಾದ ಮಣ್ಣನ್ನು ಮೆಲ್ಲಗೆ ಕೊರೆಯತೊಡಗಿದರು. ಅವರು ಕೊರೀಲಿಕ್ಕ ಶುರು ಮಾಡಿದ್ದೇ ಒಳಗಿನ ಅವಾಜ್ ಬಂದ್ ಆಯಿತು. ಆಗ ಇವರೂ ಕೊರೆಯುವದನ್ನು ನಿಲ್ಲಿಸಿಬಿಟ್ಟರು. ತುಸು ಹೊತ್ನಲ್ಲಿ ಮತ್ತೆ ಕೊರಕ್..ಕೊರಕ್..ಅನ್ನೋ ಸದ್ದು.. ಇವತ್ತು ಬೇಡ ಇನ್ನೊಂದು ದಿನ ನೋಡೊಣ ಈಗ ಮಲಕೋ ಅಂತ ಪ್ರದೀಪ ಹೇಳಿದ್ದೇ ರವಿಕುಮಾರ ಮತ್ತು ಸತೀಶ ಲೈಟ್ ಆಫ್ ಮಾಡಿ ಮಲಗಿಬಿಟ್ಟರು. ಅವರಿಗೆ ಆ ಕೊರೆತದ್ದೇ ಒಂದು ದೊಡ್ಡ ಕಿರಕಿರಿಯಾಗಿತ್ತು. ಅವತ್ತು ಸಾಯಂಕಾಲ ಶಿವಶಂಕರಪ್ಪ ರವಿಕುಮಾರನ್ನ ಕಂಡದ್ದೇ,
‘ಏನೋ ತಮ್ಮಾ, ರಾತ್ರಿ ಕೋಲಿಯೊಳಗ ಲೈಟ್ ಹತ್ತದಂಗಿತ್ತು’
‘ಅದೇನಂತೀರಿ, ಅಲ್ಲೇನೋ ಮೊದಲು ಹಗೆ ಇತ್ತಂತಲ್ಲ..? ರಾತ್ರಿ ಇಡೀ ನಿದ್ದೆಯಿಲ್ಲ. ಒಳಗ ಏನೋ ಕೊರಕ್.. ಕೊರಕ್.. ಅಂತ ಕೊರದಂಗ ಕೇಳಸತೈತಿ’
‘ಓ ಅದಾ..? ಬಹುಷ: ಅಲ್ಲಿ ಹೆಗ್ಗಣ ಇರಬೇಕು ತಳದಾಗ ಇರೋ ಜ್ವಾಳದ ನಾತಕ್ಕ ಬಂದಿರತಾವ’
‘ಆ ಹಗೆ ಯಾಕ ಮುಚ್ಚದರಿ..?’
‘ಮತ್ತೇನು ಮಾಡೂದು.. ನಮ್ಮಪ್ಪ ಹೋದ ಮ್ಯಾಲ ಒಕ್ಕಲತನಾನೇ ಮುರದು ಹೋಯಿತು..’
‘ಹಗೆ ಅಂದ್ರ ಬಾಳ ದೊಡ್ಡದಿತ್ತಾ..?’
‘ಹೌದು, ಕಮ್ಮೀತಕಮ್ಮಿ ಅಂದ್ರೂ ನೂರು ಚೀಲ ಜ್ವಾಳಾ ಹಿಡಿತಿದ್ವು.’
‘ಅಂತಾ ಹಗೆ ಎಷ್ಟಿದ್ವು..?’
‘ಎರಡೇ. ಒಂದು ನಮ್ಮಣ್ಣನ ಪಾಲಿಗಿ ಬಂದೈತಿ, ಇನ್ನೊಂದು ನಮ್ಮ ತಮ್ಮ ಕಲ್ಲಪ್ಪನ ಪಾಲಿಗಿ ಬಂದಿತ್ತು. ನೀವು ಈಗ ಬಾಡಿಗೆ ಇರೋದು ನಮ್ಮ ತಮ್ಮನ ಮನೀನೇ. ಅಂವಾ ಹೆಂಡತಿ ಮಾತ ಕೇಳಿ ಮಾರಕೊಂಡು ಹೋಗ್ಯಾನ.’
‘ಏನೇ ಹೇಳ್ರಿ ನಿಮ್ಮ ಆ ಹಗೆದಿಂದ ನಮ್ಮ ನಿದ್ದಿ ಹಾಳಾಗಕತೈತಿ..’ ಅನ್ಕೊಂತ ರವಿಕುಮಾರ ಕೈಯಾಗ ಬಾಲ್ದಿ ಹಿಡಕೊಂಡು ಬಾವಿಕಡೆ ನಡೆದ.

ಕತ್ತಲ ಆಗತಾ ಇದ್ದಂಗ ರವಿಕುಮಾರ ಮತ್ತು ಪ್ರದೀಪಗೆ ಆ ಕೊರೆತದ ಕಿರಿಕಿರಿದೇ ಒಂದು ತಲೆನೋವು. ಇವತ್ತು ಆಗಿದ್ದು ಆಗಲಿ ಅದೇನು ಅಂತ ನೋಡೇ ಬಿಡೂದು ಅಂತ ಕೋಲ್ಯಾಗಿರೋ ಸಣ್ಣ ಬ್ಯಾಟರಿಗಿ ಶೆಲ್ ಹಾಕಿಸಿ ಇಟಗೊಂಡಿದ್ದರು. ರಾತ್ರಿ ಬಾರಾ ಸುಮಾರ ಮತ್ತ ಶುರು ಆಯಿತು.. ದಿನದಿಂದ ದಿನಕ್ಕ ಆ ಆವಾಜ್ ಬಾಳ ಜೋರ್ ಆಗಾಕತ್ತು. ಹಗೆದ ಬಾಯಿಗಿ ಮುಚ್ಚಿರೋ ಪಾಟಿಗಲ್ಲಿನ ಸುತ್ತಲೂ ಈ ಮೂರೂ ಹುಡುಗರು ಕೂಡಿ ಹಗೂರಕ ಹಡ್ಡಾಕ ಶುರುಮಾಡದರು. ಆ ಮಣ್ಣೆಲ್ಲಾ ಅಲ್ಲೇ ಬಾಜೂಕ ಹಾಕರಿ ಮತ್ತ ಅದು ಹ್ಯಾಂಗಿತ್ತು ಹಂಗ ಮಾಡಾಕ ಬೇಕಾಗತೈತಿ ಅಂತ ಪ್ರದೀಪ ಮೆಲ್ಲಗೆ ಹೇಳದ. ಹಗೆಕ ಮುಚ್ಚಿರೋ ಪಾಟಿಕಲ್ಲಿನ ಬಾಯಿ ಸಡ್ಲ್ ಆಗಿದ್ದೇ ಗಬ್ಬಂತ್ ವಾಸನೆ ಬರಾಕ್ ಶುರು ಆಯಿತು. ರವಿಕುಮಾರ ಮೂಗು ಮುಚ್ಚಿ ಒಂದೇ ಸವನೇ ಬಚ್ಚಲಿಗೆ ಓಡಿ ಹೋದ. ಸತೀಶ ಅನ್ನೋ ಹುಡುಗ ಮೂಗು,ಬಾಯಿಗೆ ಬಟ್ಟೆ ಕಟ್ಟಿಕೊಂಡ. ಬಹುಷ: ಒಳಗ ಇಲಿನೋ..ಹೆಗ್ಗಣೋ ಸತ್ತಿರಬೇಕು ಅಂತ ಲೆಕ್ಕಾ ಹಾಕಿ ಹಗೂರಕ ಮೂವರೂ ಕೂಡಿ ಪಾಟೀಕಲ್ಲು ಎತ್ತಿದರು. ಅಲ್ಲೇ ಮಗ್ಗಲದಾಗ ಸರಿಸಿ ಇಟ್ಟರು. ಇಡೀ ರೂಮಲ್ಲಿ ಒಂಥರಾ ಹೊಲಸು ವಾಸನೆ. ರವಿಕುಮಾರ ಮೂಗು-ಬಾಯಿಗೆ ಕರವಸ್ತ್ರ ಬಿಗಿದು ಬ್ಯಾಟರಿ ಕೈಗೆತ್ತಿಕೊಂಡ. ಹಗೆಯೊಳಗೆ ಟಾರ್ಚ್ ಹಿಡಿದ ಏನೋ ಒಂದು ಪುಟ್ಟ ಜೀವಿ ಬುದಂಗನೇ ಓಡಿ ಹೋದಂತಾಯಿತು. ಆತ ಬೆಚ್ಚಿ ಬಿದ್ದ. ರವಿಕುಮಾರನ ಕಣ್ಣುಗಳು ಅಗಲವಾಗಿದ್ದವು..ಪ್ರದೀಪ ಮತ್ತು ಸತೀಶನ ಬಾಯಿಂದ ಮಾತೇ ಹೊರಡುತ್ತಿಲ್ಲ. ಹೌದು. ಅದೊಂದು ಶವ…! ಕೊಳೆತ ಶವ..ಹುಳಗಳು ಮುಕುರಿವೆ.. ಸಣ್ಣ ಬಾಲಕನ ಶವ. ದಿಕ್ಕೇ ತೋಚಲಿಲ್ಲ. ರಾತ್ರೋರಾತ್ರಿ ಅವರು ಅಲ್ಲಿಂದ ಫೇರಿಯಾದರು..

***

ಬೆಳ್ಳಂಬೆಳಿಗ್ಗೆ ಗುರುಸಿದ್ದನ ಮನೆಯ ಮುಂದೆ ಪೋಲೀಸ್ ವ್ಯಾನೊಂದು ಬಂದು ನಿಂತಿತ್ತು. ನೆರೆದ ಜನರೆಲ್ಲಾ ತಮತಮಗಷ್ಟೇ ಕೇಳುವಂತೆ ಮಾತಾಡುತ್ತಿದ್ದರು. ಆ ರೂಮಲ್ಲಿ ಬಾಡಿಗೆಯಿದ್ದ ಹುಡುಗರೂ ಅಲ್ಲೇ ಇದ್ದಾರೆ. ಅವರು ರಾತ್ರಿ ನೇರವಾಗಿ ಪೋಲಿಸರ ಬಳಿಗೆ ತೆರಳಿ ಸುದ್ದಿ ಮುಟ್ಟಿಸಿದ್ದರು. ಚನಮಲ್ಲ , ಶಿವಶಂಕರಪ್ಪ ಮತ್ತು ಅವರ ಮನೆಯ ಹೆಣ್ಣುಮಕ್ಕಳೆಲ್ಲಾ ಅಲ್ಲೇ ಒಂದೆಡೆ ಕುಳಿತಿದ್ದರು. ಎಲ್ಲರ ಮೂಗುಗಳು ಮುಚ್ಚಿವೆ. ಆ ಶವ ಅದಾಗಲೇ ಮುಕ್ಕಾಲು ಭಾಗ ಕೊಳೆತು ಹೋಗಿತ್ತು. ಘಟನೆ ನಡೆದು ತುಂಬಾ ದಿನವಂತೂ ಆಗಿಲ್ಲ ಎನ್ನುವದು ಪೋಲಿಸರಿಗೆ ಖಾತ್ರಿಯಾಗಿತ್ತು. ಆ ಶವದ ಬಟ್ಟೆ, ಉಡುದಾರದ ಚೈನು, ಕೊರಳಲ್ಲಿಯ ತಾಯತ ಅವೆಲ್ಲವನ್ನು ಆ ಮನೆಯವರಿಗೆ ತೋರಿಸಿದಾಗ ಚನಮಲ್ಲನ ಹೆಂಡತಿ ಸುಭದ್ರಾ ‘ಇದು ನಿಮ್ಮ ತಂಗಿ ಶಿವನಿಂಗವ್ವಳ ಮಗ ರಮೇಶನೇ..’ ಅಂತ ಜೋರಾಗಿ ಅಳಲಿಕ್ಕೆ ಶುರುಮಾಡಿದಳು. ಕಳೆದ ಒಂದು ತಿಂಗಳಿಂದಲೂ ತನ್ನ ಮಗ ಕಳಕೊಂಡಿದ್ದಾನೆ. ನಿಮ್ಮೂರ ಜಾತ್ರೆಯೊಳಗೇ ಕಳಕೊಂಡಾನ ಹುಡುಕಿಕೊಡ್ರಿ ಅಂತ ಅತ್ತು..ಕರದು ಮಾಡಿ ಹೋಗಿದ್ದಲು. ಮೊನ್ನೆಯಷ್ಟೇ ಪೋಲಿಸ್ ಶ್ಟೇಷನ್‌ಗೆ ಕಂಪ್ಲೇಂಟ್ ಕೂಡಾ ಕೊಟ್ಟಿದ್ದಳು. ಈಗೇನಾದರೂ ಅಕಿಗೆ ವಿಷಯ ತಿಳಿದರೆ ಗತಿ ಏನು.? ಅಂತೆಲ್ಲಾ ಯೋಚನೆ ಮಾಡಿ ಒಂದೇ ಸವನೇ ಎಲ್ಲರೂ ಗೋಳಾಡತೊಡಗಿದರು. ಚನಮಲ್ಲಗೆ ಆ ಪಾರಿ, ಯಾಕ ಗಡಿಬಿಡಿ ಮಾಡಿ ಮನಿ ಮಾರಿಸಿದ್ದಳು ಅಂತ ಈಗ ತಿಳಿಯಾಕ ಶುರು ಆಗಿತ್ತು. ಅವನು ಪೋಲಿಸರ ಎದುರಲ್ಲಿ ಆ ಮನೆಯೊಳಗೆ ಮುಂಚೆ ಇದ್ದದ್ದು ಯಾರು. ಈಗ ಅವರೆಲ್ಲಿ.? ಎನ್ನುವದರ ಬಗ್ಗೆ ಮಾಹಿತಿ ಕೊಟ್ಟಿದ್ದ. ಒಂದು ತಾಸಿನೊಳಗ ಪೋಲಿಸರು ಅಕಿನ್ನ ಮತ್ತ ಅಕಿನ ಗಂಡ ಕಲ್ಲಪ್ಪನ್ನ ಪೋಲಿಸ್ ಸ್ಟೇಷನ್ನಿಗೆ ಎಳಕೊಂಡು ಬಂದರು. ಮೊದಮೊದಲ ತಾ ಏನೂ ಮಾಡಿಲ್ಲ ಅನ್ಕೋಂತೇ ಇದ್ದ ಪಾರವ್ವ ದಢೂತಿ ಪೋಲಿಸಮ್ಮನ ಒದೆತ ಮುಕುಳಿಮ್ಯಾಲ ಬಿದ್ದಿದ್ದೇ ಕತಿ ಮಾಡಿ ಹೇಳಾಕ ಶುರು ಮಾಡಿದಳು. ಗಂಡ ಕಲ್ಲಪ್ಪಂತೂ ಪೋಲಿಸರ ಹೊಡತ ತಾಳಲಾರದೇ ಎಲ್ಲಾ ಹೇಳಿಬಿಟ್ಟಿದ್ದ. ಅವರಿಬ್ಬರೂ ತಾವೇ ಆ ಹುಡುಗಗ ವಿಷ ಹಾಕಿ ಸಾಯಿಸಿದ್ದು ಅಂತ ಒಪ್ಪಿಕೊಂಡ ಮ್ಯಾಲ ರಾತ್ರೋರಾತ್ರಿ ಪೋಲಿಸರಮಟ ಬಂದು ಸುದ್ದಿ ಮುಟ್ಟಿಸಿದ ಆ ಹುಡುಗರಿಗಿ ಧೈರ್ಯ ಬಂದಿತ್ತು. ಶಿವನಿಂಗವ್ವ ಹೊರಗಿನ ಹೆಣಮಗಳಲ್ಲ. ಖಾಸಾ ಪಾರವ್ವಳ ಗಂಡನ ತಂಗಿ, ಅಂದರೆ ನಾದಿನಿ. ಮೊದಲೇ ಅಕಿಗಿ ಮಕ್ಕಳಿಲ್ಲ ಅಂತ ಚಿಂತಿ. ಕೊರಗಿ ಕೊರಗಿ ಸಾಯ್‌ತಾಳ ಅನ್ನೂವಂಗ ಆಗಿದ್ದ ಹೆಣಮಗಳಿಗಿ ಮತ್ತ ಬದುಕಿನ ಮ್ಯಾಲ ಆಸೆ ತಂದಿಟ್ಟಿದ್ದು ಆ ದತ್ತಕ ಮಗ ರಮೇಶ. ಆ ರಮೇಶನೂ ಬ್ಯಾರೇ ಯಾರೂ ಅಲ್ಲ. ಶಿವನಿಂಗವ್ವಳ ಮೈದುನನ ಮಗ. ಮನ್ಯಾಂದು ಮನ್ಯಾಗೇ ಉಳದಂಗ ಅಗ್ತಾವ ಅಂತ ಹೇಳಿ ಗಂಡ ಸಿದ್ರಾಮ ಮತ್ತು ಶಿವನಿಂಗವ್ವ ಬಾಳ ಯೋಚನೆ ಮಾಡಿ ಆ ಹುಡುಗನ್ನ ದತ್ತಕ ತಗೊಂಡಿದ್ದರು. ಮಲಕಣ್ಣ ದೇವರ ಜಾತ್ರಿ ದಿನ ಕಳಕೊಂಡ ಹುಡುಗ ಹಿಂಗ ತನದೇ ಸಂಬಂಧಿಗಳ ಮನಿಯೊಳಗಿನ ಹಗೆಯೊಳಗ ಹೆಣಾ ಹಾಗಿ ಬಯಲಾಗ್ತದ ಅಂತ ಯಾರಿಗೂ ಕನಸ ಮನಸಿನೊಳಗೂ ಇರಲಿಲ್ಲ. ಪೋಲಿಸರ ಮುಂದ ಪಾರವ್ವ ಮತ್ತ ಅಕಿನ ಗಂಡ ಕಲ್ಲಪ್ಪ ಯಾಕ ಹಿಂಗ ಮಾಡದರು ಅನ್ನಲಿಕ್ಕ ಖರೆ ಖರೆ ಕತೀನೇ ಹೇಳಿದ್ರು.

ಪಾರವ್ವಗ ಮೂರು ಗಂಡು ಹುಡುಗರು. ಎರಡನೇ ಮಗ ಶಿವಪುತ್ರ ಹುಟ್ಟಿದ ದಿನದಿಂದಲೇ ನಾದನಿ ಶಿವನಿಂಗವ್ವ ನಿನ್ನ ಮಗನ್ನೇ ದತ್ತಕ ತಗೋಂತೀನಿ ಅಂತ ಅನಕೊಂಡು ಬಂದಿದ್ದಲು. ಪಾರವ್ವಗ ಶಿವಪುತ್ರನ ಮ್ಯಾಲ ಮತ್ತೂ ಒಂದು ಗಂಡೇ ಆಯಿತು. ಅವಾಗ ಪಾರವ್ವಗೂ ತನ್ನ ಮಗಾ ಗೋಲಗೇರಿ ಶಿವನಿಂಗವ್ವಳ ಮನಿಗಿ ದತ್ತಕ ಹೋದರ ಅವನಿಗಿ ಮುಂದ ಸುಖಾ ಆಗತೈತಿ. ಚುಲೋ ಆಸ್ತಿ ಇದ್ದ ಮನಿತನ ಅಂತೆಲ್ಲಾ ಲೆಕ್ಕಾ ಹಾಕಿದ್ದಲು. ಗಂಡ ಕುಡಿಲಾಕ ಶುರು ಮಾಡಿ ಒಂದೊಂದು ಆಸ್ತಿ ಮೂರಾಬಟ್ಟೆ ಮಾಡಾಕ ಶುರು ಮಾಡಿಂದ ಪಾರವ್ವಗ ಶಿವನಿಂಗವ್ವಳ ಆಸ್ತಿ ಮ್ಯಾಲ ಆಸೆ ಮೂಡಾಕತ್ತತು. ನೀ ಕುಡದು ಸಾಯಿ ಅಷ್ಟರೊಳಗ ನಿನ್ನ ತಂಗಿಗಿ ನನ್ನ ಮಗನ್ನ ದತ್ತಕ ತಗೊ ಅಂತ ಹೇಳು ಅಂತಾ ಇದ್ದಂಗೇ ಶಿವನಿಂಗವ್ವಳ ಗಂಡ ಸಿದ್ರಾಮ ತನ್ನ ತಮ್ಮನ ಮಗನ್ನೇ ದತ್ತಕ ತಗೊಂಡರಾಯಿತು ಅಂತ ತೀರ್ಮಾನಿಸಿದ್ದ. ಈ ಸುದ್ದಿ ಕೇಳಿ ಪಾರವ್ವಗ ಬಾಳ ತಾಪ ಆಗಿತ್ತು. ಅವತ್ತಿನಿಂದ ಒಳಗೊಳಗ ಶಿವನಿಂಗವ್ವಳ ಮ್ಯಾಲ ಕತ್ತಿ ಮಸಿಯಾಕ ಸುರು ಮಾಡಿದ್ದಲು. ಅದೇ ವ್ಯಾಳೆದೊಳಗ ಆ ಹುಡುಗ ಮಲಕಣ್ಣದೇವರ ಜಾತ್ರಿಗಿ ಬಂದಿತ್ತು. ಮನ್ಯಾನ ಮಂದಿ ಎಲ್ಲರೂ ತೇರ ನೋಡಾಕ ಹೋಗಿದ್ದರು. ಕುಡುಕ ಕಲ್ಲಪ್ಪ ಮೊದಲೇ ಮನ್ಯಾಗ ಎಲ್ಲಾ ಪ್ಲ್ಯಾನ್ ಮಾಡಕೊಂಡಿದ್ದ. ಪಾರವ್ವ ಆ ರಮೇಶನನ್ನ ಕರದು ಬಾ ನಿನಗ ಜಾತ್ರಿಗಿ ಆಟಗಿ ಸಾಮಾನ ಇಸಗುಟತೀನಿ ಅಂತ ಸೀದಾ ಮನಿಗಿ ಕರಕೊಂಡು ಬಂದು, ಬುಂದೆ ಲಾಡೂದೊಳಗ ವಿಷ ಹಾಕಿ ಆ ಹುಡುಗಗ ತಿನ್ನಾಕ ಕೊಟ್ಟಿದ್ದೇ ಅದು ತಿರುಗಿ ಬಿತ್ತು. ಹಂಗೇ ಅದನ್ನ ಹಗೆದೊಳಗ ಹಾಕಿ ಮ್ಯಾಲ ಪಾಟೀಗಲ್ಲನ್ನು ಮುಚ್ಚಿ ಅದು ಹ್ಯಾಂಗಿತ್ತು ಹಂಗ ಮಾಡಿ ಮತ್ತ ತೇರ ನೋಡಾಕ ನಿಂತಗೊಂಡಿದ್ದರು.

ರಮೇಶನ ಅವ್ವ ಶಿವನಿಂಗವ್ವ ಇಡೀ ದಿನ ಹೌಹಾರಿ ತನ್ನ ಮಗ ಎಲ್ಲಿ ಕಳಕೊಂಡ ಅಂತ ಹೇಳಿ ಅಳ್ಕೊಂತ ಕರಕೊಂತ ಊರಿಗಿ ಹೋಗಿದ್ದಲು. ಈ ಬದಿ ಚನಮಲ್ಲ.. ಶಿವಶಂಕರಪ್ಪ ಅವನ ಮಕ್ಕಳು ಎಲ್ಲಾರೂ ರಮೇಶನ್ನ ಹುಡುಕಿದ್ದೇ ಹುಡಿಕಿದ್ದು. ಎಲ್ಲೂ ಸುಳಿವು ಸಿಗಲಿಲ್ಲ. ಒಂದೆರಡು ದಿನ ಬಿಟ್ಟು ಶಿವನಿಂಗವ್ವ ಪೋಲಿಸರಿಗೆ ಪಿರ್ಯಾದು ನೀಡಿದ್ದಳು. ಆಗಲೇ ಈ ಪಾರವ್ವಗ ಮನಿ ಮಾರೂ ಐಡಿಯಾ ಮೂಡಿದ್ದು. ಮನಿ ತಗೊಳೋ ಶೇಡಜಿ ಅದನ್ನ ಮಾಲಿಡೋ ಗೋಡೌನ ಮಾಡ್ತೀನಿ ಅಂತ ಹೇಳಿದ್ದಿತ್ತು. ಹಿಂಗ ಬಾಡಿಗಿ ಕೊಡ್ತಾನ ಅಂತ ಅಕಿಗಿ ಅನಿಸಿರಲಿಲ್ಲ. ಬಾಡಗಿ ಕೊಟ್ಟರೂ ಬಾಡಿಗೆಗೆ ಇದ್ದವರು ಹಗೆ ಹಡ್ಡತಾರ ಅಂತ ಅವಳಿಗಾದರೂ ಎಲ್ಲಿ ಗೊತ್ತು..? ತಿಳಿದೋ.. ತಿಳಿಯದೆಯೋ ಮಾಡಿದ ತಪ್ಪಿಗೆ ಪಾರವ್ವ ಮತ್ತ ಗಂಡ ಕಲ್ಲಪ್ಪ ಇಬ್ಬರಿಗೂ ಹದಿನಾಲ್ಕು ವರ್ಷ ಜೈಲು ಶಿಕ್ಷೆಯಾಗಿತ್ತು.

***

ಶಿವನಿಂಗವ್ವ ಆಕೆಯ ಗಂಡ ಸಿದ್ರಾಮಪ್ಪ ತಿಂಗಳೊಪ್ಪತ್ತು ಯೋಚನೆ ಮಾಡಿ, ಒಂದು ತೀರ್ಮಾನಕ್ಕೆ ಬಂದಿದ್ದರು. ಅಪ್ಪ -ಅವ್ವ ಸುಮಾರ ಇದ್ದರ ಮಕ್ಕಳೇನು ಮಾಡಬೇಕು, ಅದೂ ಅಲ್ಲದೇ ಕಳ್ಳುಬಳ್ಳಿ ಸಂಬಂಧ ಬಿಡಲಿಕ್ಕೆ ಆಗತೈತೇನು, ಎಂದೆಲ್ಲಾ ಯೋಚನೆ ಮಾಡಿ ಅವರ ಮೂವರೂ ಮಕ್ಕಳನ್ನು ತಮ್ಮ ಹತ್ತಿರವೇ ಇಟ್ಟುಕೊಳ್ಳುವದೆಂದು ನಿರ್ಧರಿಸಿದ್ದರು. ಆ ಹುಡಗರೆಲ್ಲರೂ ದೊಡ್ಡವರಾದ ಮ್ಯಾಲೂ ತಮ್ಮ ಅತ್ತೆಯನ್ನು ಅವ್ವ ಅಂತ ಕರಿಯೂದು ಕೇಳಿ ಊರವರಿಗೆಲ್ಲಾ ಅಚ್ಚರಿಯೂ ಆಗ್ತಿತ್ತು. ಖುಷಿನೂ ಆಗಿತ್ತು.

ಖಡ್ಗವಾಗದ ಕಥೆಗಳು, ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರರು


-ಬಿ. ಶ್ರೀಪಾದ್ ಭಟ್


2005 ರಲ್ಲಿ ಪ್ರಕಟವಾದ ಲೇಖಕಿ ಸುಮಂಗಲಾರವರ ‘ಜುಮುರು ಮಳೆ’, 2008 ರಲ್ಲಿ ಪ್ರಕಟವಾದ ಡಾ.ವಿನಯಾರವರ ‘ಊರ ಒಳಗಣ ಬಯಲು’ ಮತ್ತು ಎಲ್.ಸಿ. ಸುಮಿತ್ರಾರವರ ‘ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ’ ,  2009 ರಲ್ಲಿ ಪ್ರಕಟವಾದ ಸುಮಂಗಲಾರವರ ‘ಕಾಲಿಟ್ಟಲ್ಲಿ ಕಾಲುದಾರಿ’, ಮತ್ತು 2011 ರಲ್ಲಿ ಪ್ರಕಟವಾದ ಗೀತಾ ವಸಂತರವರ ‘ಚೌಕಟ್ಟಿನಾಚೆಯವರು’ ಕಥಾ ಸಂಕಲನಗಳನ್ನು ಮತ್ತೊಮ್ಮೆ ಅಂದರೆ 2012 ರಲ್ಲಿ ಮರು ಓದಿದಾಗ ಮೊದಲ ಓದಿನಲ್ಲಿ ದಕ್ಕಿದ ಪ್ರಾಮಾಣಿಕ ಸಂವೇದನೆಗಳು, ಅಂತಕರಣವನ್ನು ತಟ್ಟುವ ಆಪ್ತ ಶೈಲಿ, ಕಥೆಗಳನ್ನು ಯಶಸ್ವಿಯಾಗಿ ಕಟ್ಟುವ ಕಲೆಗಾರಿಕೆ ಮತ್ತು ಬಲು ಮುಖ್ಯವಾಗಿ ಸ್ತ್ರೀ ಸಂವೇದನೆಯ ಸೂಕ್ಷ್ಮತೆಗಳನ್ನು ಅಬ್ಬರದ ಭಾಷೆಯನ್ನು ಬಳಸದೆ ತಣ್ಣಗಿನ ಪಿಸುಮಾತಿನಲ್ಲಿ ಮನಸ್ಸಿಗೆ ನಾಟುವಂತೆ ಬರೆದದ್ದು ಇಂದಿಗೂ ದಟ್ಟವಾಗಿ ನಮ್ಮನ್ನು ತಟ್ಟುತ್ತವೆ.

ಇದು ಈ ಲೇಖಕಿಯರ ಯಶಸ್ಸು. ನಮ್ಮ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೇಲಿನ ಲೇಖಕಿಯರು ಸಮಕಾಲೀನ ಕಥೆಗಾರ್ತಿಯರಾಗಿ ಬಹಳ ಮುಖ್ಯವಾಗುತ್ತಾರೆ. ಈ ಕಥೆಗಳ ಪ್ರಖರತೆ ಅದರ ಮಾನವೀಯ ಗುಣಗಳಲ್ಲಿದೆ. ಸಮಾಜದ ಎಲ್ಲಾ ಬಗೆಯ ಸಂಕೋಲೆಗಳನ್ನು ಕಡಿದು ಹಾಕುವ ಪ್ರತಿರೋಧದ ಶಕ್ತಿಯನ್ನು ತನ್ನ ಒಡಲೊಳಗಿಂದಲೇ ಪಡೆದುಕೊಳ್ಳುವುದು ಇಲ್ಲಿನ ಕಥೆಗಳ ಅನನ್ಯತೆ. ಯಾವುದೇ ರೀತಿಯ ಶಾಸ್ತ್ರೀಯ ಬದ್ಧವಾದ ಸಿದ್ಧಾಂತವಾದಿಗಳಲ್ಲದ ಈ ಲೇಖಕಿಯರು ಕನ್ನಡ ಕಥಾ ಸಾಹಿತ್ಯಕ್ಕೆ ತಂದುಕೊಟ್ಟ ಮಾನವೀಯ ಸಂಬಂಧಗಳ ಅನುಭವ ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತವೆ. ವಿನಯಾರವರ ‘ಒಂದು ಖಾಸಗೀ ಪತ್ರದ’ ಕಥೆಯಲ್ಲಿ ನಾಯಕಿ ಹೇಳುವ ‘ಕೇಳು ಮಾರಾಯ ಹೆಣ್ಮಕ್ಕಳಿಗೆ ಬೇರೇನೆ ಲೋಕ ಕಾಣ್ತದೆ’ ಎಂಬ ಮಾತು ಮೇಲಿನ ಎಲ್ಲಾ ಲೇಖಕಿಯರ ಕಥೆಗಳ ವೈಚಾರಿಕ ಪರಿಭಾಷೆ ಮತ್ತು ಸಮಾಜದ ಎಲ್ಲಾ ಬಗೆಯ ಸನಾತನವಾದವನ್ನು, ಮೌಢ್ಯವನ್ನು, ಶೋಷಣೆಯನ್ನು ಧಿಕ್ಕರಿಸುವ ತಣ್ಣನೆಯ ಖಾಸಗೀ ಶೈಲಿ. ಇದು ವ್ಯವಸ್ಥೆಯೊಂದಿಗೆ ಮುಖಾಮುಖಿಯಾಗುವ ಸೃಜಶೀಲ ನಡೆ.

ಇಲ್ಲಿ ವಿನಯಾರವರ “ಊರ ಒಳಗಣ ಬಯಲು” ಕಥೆಯಲ್ಲಿ ಒಂದು ಅಂತರ್ಜಾತೀಯ ವಿವಾಹದ ಸಣ್ಣ ಎಳೆಯನ್ನು ಬಳಸಿಕೊಂಡು ಕೋಮು ಗಲಭೆಯ ಕರಾಳತೆಯನ್ನು ತೋರಿಸುತ್ತಾರೆ. ಬದುಕಿನ ಪ್ರೀತಿಯ ಅವಶ್ಯಕತೆಯನ್ನು ದಟ್ಟವಾಗಿ ಕಟ್ಟುತ್ತಾರೆ. ಮಾನವೀಯ ಸಂಬಂಧಗಳ ದಟ್ಟತೆಯನ್ನು ಇವರ ಮತ್ತೊಂದು ಕಥೆ ‘ಕಡಿ ತನಕಾ ಕಾಯೋ ಅಭಿಮಾನ’ ಕಥೆಯಲ್ಲಿ ಅನುಭವಕ್ಕೆ ಬರುತ್ತದೆ. ಮುನ್ನುಡಿಯಲ್ಲಿ ಲೇಖಕಿ ನೇಮಿಚಂದ್ರ ಹೇಳುವಂತೆ ವಿನಯಾ ಒಂದು ಬಗೆಯ ನಿರುದ್ವೇಗದ ಮತ್ತು ನಿರಾಯಾಸದ ಶೈಲಿಯಲ್ಲಿ ಕತೆಯನ್ನು ಹೆಣೆಯುತ್ತಾರೆ, ನುರಿತ ಬೆರಳುಗಳಲ್ಲಿ ಕಸೂತಿ ಹಾಕಿದಂತೆ.

ಲೇಖಕಿ ಸುಮಂಗಲಾರವರ “ಜುಮುರು ಮಳೆ” ಕಥಾಸಂಕಲನಕ್ಕೆ ಲೇಖಕ ಜಿ.ಎಸ್.ಸದಾಶಿವ ಅವರು ಮುನ್ನುಡಿಯಲ್ಲಿ, ’ವಿಷಾದ ಇಲ್ಲಿನ ಕಥೆಗಳ ಸ್ಥಾಯೀ ಭಾವ. ಈ ಕಥಾ ಸಂಕಲನದ ಕಥೆಗಳೆಲ್ಲವೂ ಪ್ರಬುದ್ಧ ಕತೆಗಾರ್ತಿಯೊಬ್ಬಳು ರೂಪುಗೊಳ್ಳುತ್ತಿದ್ದಾಳೆ ಎಂಬುದನ್ನು ಹೇಳುತ್ತವೆ. ತನಗೆ ದಕ್ಕುವ ಅನುಭವ ದ್ರವ್ಯವನ್ನು ಕಥೆಯಾಗಿಸುವ ಕಲೆಯನ್ನು ಸುಮಂಗಲ ಸಾಧಿಸಿಕೊಂಡಿದ್ದಾರೆಂಬುದು ಸಾಮಾನ್ಯ ಸಂಗತಿಯೇನೂ ಅಲ್ಲ,’ ಎಂದು ಬರೆಯುತ್ತಾರೆ. ಈ ಕಥಾ ಸಂಕಲನದ ‘ಚೌಕಟ್ಟಿನಿಂದ ಹೊರಬಂದ ಚಿತ್ರ’ , ‘ಆಲಿಕಲ್ಲು’ (ಇದು ನನ್ನ ಫೇವರಿಟ್), ‘ಎದೆಯೊಲೊಂದು ಬಳೇ ಚೂರು’, ‘ಫಾತೀಮಾಳಿಗೆ ಮಳೆಯೆಮದರೆ ಇಷ್ಟ’ ತರಹದ ಕಥೆಗಳು ಮೇಲಿನ ಮಾತುಗಳಿಗೆ ಸ್ಪಷ್ಟ ಉದಾಹರಣೆಗಳು. ಹಾಗೆಯೇ ಇವರ ಮತ್ತೊಂದು ಕಥಾ ಸಂಕಲನ ‘ಕಾಳಿಟ್ಟಲ್ಲಿ ಕಾಲುದಾರಿ’ಯ ಮುತ್ತಿನ ಬುಗುಡಿ, ನಮಸ್ತೇ ಭಾರತ್ ಗ್ಯಾಸ್ ಕಥೆಗಳು ಕೂಡ ನಾವೇ ಬರೆದ ಕತೆಗಳೇನೋ ಎನ್ನುವಷ್ಟರ ಮಟ್ಟಿಗೆ ನಮಗೆ ಆಪ್ತವಾಗಿಬಿಡುವ ಕತೆಗಳು.

ಲೇಖಕಿ ಎಲ್.ಸಿ. ಸುಮಿತ್ರಾರವರ ಕಥಾಸಂಕಲನ ಗುಬ್ಬಿ ಹಳ್ಳದ ಸಾಕ್ಷಿಯಲಿಗೆ ಮುನ್ನುಡಿ ಬರೆದಿರುವ ವಿಮರ್ಶಕ ಟಿ.ಪಿ.ಅಶೋಕ, ’ಮಲೆನಾಡಿನ ಪರಿಸರದಲ್ಲಿ ಆಳವಾಗಿ ಬೇರುಬಿಟ್ಟ ಲೇಖಕಿ ಸುಮಿತ್ರಾ. ಮಲೆನಾಡು ಸುಮಿತ್ರಾ ಅವರಿಗೆ ಜನ್ಮಭೂಮಿ ಮತ್ತು ಕರ್ಮಭೂಮಿ ಎರಡೂ ಹೌದು. ತಾವು ಹುಟ್ಟಿ ಬೆಳೆದ, ಸದ್ಯ ನೆಲೆಸಿರುವ ಮಲೆನಾಡು ಹೇಗೆ ಬದಲಾಗುತ್ತಿದೆ ಎಂಬ ಎಚ್ಚರಿಕೆಯೂ ಇದೆ. ತನ್ನ ಪರಂಪರೆಯೊಂದಿಗೂ, ಈಗಿನ ಪರಿಸರದೊಂದಿಗೂ ಏಕಕಾಲಕ್ಕೆ ಸಂಭಾಷಿಸುವ ಗುಣ ಇಲ್ಲಿನ ಬರಹಗಳಿಗೆ ಸಹಜವಾಗಿ ಪ್ರಾಪ್ತವಾಗಿದೆ,’ ಎಂದು ಬರೆಯುತ್ತಾರೆ.  ಈ ಮಾತುಗಳಿಗೆ ಇಲ್ಲಿನ ಶೀರ್ಷಿಕೆ ಕಥೆಯಾದ ‘ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ’ ಅತ್ಯುತ್ತಮ ಉದಾಹರಣೆ.

ಇಲ್ಲಿ ನಗರದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಮರಳಿ ತನ್ನ ಹಳ್ಳಿಗೆ ಬಂದು ವ್ಯವಸಾಯದಲ್ಲಿ ನಿರತನಾಗುವ ನಿಸರ್ಗ ಪಟೇಲ್‌ನ ಪ್ರಜ್ಞೆ ಮತ್ತು ಪರಿಸರ ಒಂದು ರೀತಿಯಲ್ಲಿ ಪರಸ್ಪರ ತಳುಕು ಹಾಕಿಕೊಂಡಿರುವಂತಹವು. ಇದರ ವಿವರಣೆಗೆ ಹೋಗುವುದಾದರೆ ನಿಮ್ಮೊಡನಿದ್ದೂ ನಿಮ್ಮಂಗಿಲ್ಲ ಎನ್ನುವ ಸ್ಥಿತಿ ಈ ನಿಸರ್ಗ ಪಟೇಲನದು. ಅಂದರೆ ಅವನ ಆಧುನಿಕ ಪ್ರಜ್ಞೆ ಅವನ ಕಾಡಿನ ಪರಿಸರದೊಂದಿಗೆ ಒಳಗೊಳ್ಳುವುದು ಪರಕೀಯ ನೆಲೆಯಲ್ಲಿ. ಇವನೆಂದೂ ತನ್ನ ಊರ ಉಸಾಬರಿಗೆ ಹೋಗನು. ಆದರೆ ಮಲೆನಾಡಿನ ಇಂದಿನ ಪಲ್ಲಟಗಳು ಇವನ ತಲ್ಲಣಗಳು. ಆದರೆ ಇದನ್ನು ಅವನ್ನು ವ್ಯಕ್ತ ಪಡಿಸುವುದು ನಿನ್ನೆ ಮೊನ್ನೆ ಬಂದ ನಕ್ಸಲ್ ನಾಯಕರು ತೋಟದ ಕೆಲಸಗಾರರಿಗೆ ಅಪ್ತವಾದಷ್ಟು ನಾವು ಆಗಲಾರೆವು ಎಂದು ಉದ್ಗರಿಸುವುದರ ಮೂಲಕ. ಇಡೀ ಕಥೆ ನಕ್ಸಲೈಟರ ಚಟುವಟಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸಿರುವ ರೀತಿ ಅದ್ಭುತವಾದದ್ದು. ಇಲ್ಲಿ ಟಿ.ಪಿ.ಅಶೋಕ ಹೇಳುವಂತೆ ‘ನಕ್ಸಲೈಟರ ಪ್ರವೇಶವು ಸದ್ಯದ ಮಲೆನಾಡಿನ ಬಡವರ ಬವಣೆ, ಅವರ ಅತೃಪ್ತಿ, ಸಿಡಿದು ಸ್ಪೋಟಗೊಳ್ಳುವ ಕಾಲ ಸಮೀಪಿಸುತ್ತಿರುವುದರ ಕುರುಹಾಗಿದೆ,’ ಎಂದಷ್ಟೇ ಹೇಳುತ್ತದೆ. ‘ಗುಬ್ಬೀ ಹಳ್ಳದ ಸಾಕ್ಷಿ” ಕನ್ನಡದ ಅತ್ಯುತ್ತಮ ಕಥೆಗಳಲ್ಲೊಂದು.

ಹಾಗೆಯೇ ‘ಕಲ್ಲಿನ ಕೋಳಿ’ ಕಥೆಯೂ ಸಹ ಒಂದು ಕುಟುಂಬವನ್ನು ಬಳಸಿಕೊಂಡು ಇಡೀ ಮಲೆನಾಡಿನ ದೈನಂದಿನ ಜೀವನವನ್ನು, ಅಲ್ಲಿನ ಬುದುಕಿನ ಏರುಪೇರನ್ನು, ಈ ಏರುಪೇರುಗಳು ಅವರು ನಡೆಸುವ ವ್ಯವಸಾಯದ ಬೆಳೆಗಳೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಅದ್ಭುತವಾಗಿ ಪ್ರತಿಮಾತ್ಮಕವಾಗಿ ಕಟ್ಟುತ್ತಾರೆ.

ಲೇಖಕಿ ಗೀತಾ ವಸಂತ ಅವರ ಕಥಾ ಸಂಕಲನ ಚೌಕಟ್ಟಿನಾಚೆಯವರು ಒಂಬತ್ತು ಕಥೆಗಳನ್ನು ಒಳಗೊಂಡಿದೆ. ಇಲ್ಲಿನ ಶೀರ್ಷಿಕೆ ಕತೆಯಾದ ‘ಚೌಕಟ್ಟಿನಾಚೆಯವರು’ ಕತೆಯಲ್ಲಿ ಲೇಖಕಿ ಕೇಳುವ ‘ಪ್ರೀತಿಯೆಂದರೇನು ಹಾಗಾದರೆ? ಮಾಲ್ತಕ್ಕ ಪಾಪಣ್ಣಿಗೆ ಮೊಲೆ ಕೊಟ್ಟಿದ್ದೇ? ದೊಡ್ಡಮ್ಮ ದೊಡ್ಡಪ್ಪನಿಗೆ ಗಟ್ಟಿಸಾರು ಬಡಿಸಿದ್ದೇ? ಶ್ರೀಧರ ಭಾವ ಪಾಪಣ್ಣಿಗೆ ಎರಡೆಳೆ ಚಿನ್ನದಸರ ತಂದು ಹಾಕಿ ಫೋಟೋ ತೆಗೆದಿದ್ದೆ ? ದುರ್ಗಿ ಪಾಪಣ್ಣಿಯ ಕೈ ಒತ್ತಿಕೊಂಡು ಕಣ್ಮುಚ್ಚಿಕೊಂಡಿದ್ದೇ?’ ಮುಂತಾಗಿ ಕೇಳುವ ಪ್ರಶ್ನೆಗಳೇ ಇಡೀ ಕತೆಯು ಓದುಗನಲ್ಲಿ ಉಂಟು ಮಾಡುವ ತಳಮಳಗಳಿಗೆ ಸಾಕ್ಷಿಯಾಗಿ ಮೂಡಿ ಬರುತ್ತವೆ. ಇಲ್ಲಿ ಒಂಥರಾ ವಿಚಿತ್ರ ಹೆಂಗಸಾದ ದುರ್ಗಿಯು ಕತೆಯಲ್ಲಿ ಹೇಳುವಂತೆ ಹತ್ತಿರವಿರುವಾಗ ತುಂಬಾ ನಿಚ್ಚಳವಾಗಿ ಕಾಣುವ ಆಕೆ ಗುಂಪಿನಲ್ಲಿರುವಾಗ ಮುಸುಕು ಮುಸುಕಾಗಿ ಬೇರೆಯವಳೇ ಆಗಿ ಕಾಣುತ್ತಾಳೆ. ಇಡೀ ಕಥೆ ಈ ಧೀಮಂತ ಹೆಣ್ಣು ದುರ್ಗಿಯ ಆಶಯವನ್ನು ಸಶಕ್ತವಾಗಿ ಮಂಡಿಸುತ್ತದೆ. ಹಾಗೆಯೇ ಮತ್ತೊಂದು ಕತೆಯಾದ ’ಹಸಿರು ರೇಷ್ಮೆ ಸೀರ” ಇಲ್ಲಿನ ಅತ್ಯಂತ ಯಶಸ್ವೀ ಕತೆ. ಇಲ್ಲಿನ ತುಂಗ್ ಚಿಕ್ಕೀ ಕನ್ನಡದ ಕಥಾಲೋಕದ ಅದ್ಭುತ ಪಾತ್ರಗಳಲ್ಲೊಂದು.

ಒಟ್ಟಾರೆ ಮೇಲಿನ ಲೇಖಕಿಯರ ಬಂಡಾಯ ನಿಜದ ಅಕ್ಕನ ಬಂಡಾಯ. ಕೆಳಗೆ ಬಿದ್ದಷ್ಟೂ ನೆಲಕ್ಕೆ ಕೈಯೂರಿ ಮೇಲೇಳುವ ಬಂಡಾಯ. ಇಲ್ಲಿನ ಕತೆಗಳು ಖಡ್ಗವಾಗಲೊಲ್ಲದ ಆದರೆ ಜನರ ನೋವಿಗೆ ಮಾತ್ರ ಮಿಡಿಯುವ ಪ್ರಾಣಮಿತ್ರರು. ಈ ಲೇಖಕಿಯರು ಜನಸಾಮಾನ್ಯರಲ್ಲಿ ಕಂಡುಕೊಳ್ಳುವ ವಿಶಿಷ್ಟ ಗುಣಗಳು ಇವರ ಆಳವಾದ ಒಳನೋಟಗಳಿಗೆ ಸಾಕ್ಷಿ. ಜೀವನವನ್ನು ಪ್ರಬುದ್ಧತೆಯಿಂದ ಅರಿತುಕೊಂಡ ಈ ಲೇಖಕಿಯರು ಅದರ ಕರಾಳತೆಯನ್ನು, ವೈವಿಧ್ಯತೆಯನ್ನು, ನಿಗೂಢತೆಯನ್ನು, ಜೀವಂತಿಕೆಯನ್ನು ಕತೆಗಳಾಗಿ ಸೃಷ್ಟಿಸಿದ ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಹೃದಯಂಗಮವಾದದ್ದು.

ಪಿ.ಲಂಕೇಶ್‌ರವರು ಹಿಂದೊಮ್ಮೆ ಲೇಖಕಿ ವೈದೇಹಿಯವರ ಕುರಿತಾಗಿ ಬರೆದಂತೆ ವಿನಯಾ, ಸುಮಂಗಲಾ, ಎಲ್.ಸಿ.ಸುಮಿತ್ರ, ಗೀತಾ ವಸಂತ, ನೇಮಿಚಂದ್ರರಂತಹ ಲೇಖಕಿಯವರ ಸಾಹಿತ್ಯವೂ ಸಹ ‘ಈಕೆಯ ಕ್ರಿಯಾಶೀಲ ಲೇಖನಿ’.

ನಮ್ಮ ಪ್ರತಿಭಾವಂತ ವಿಮರ್ಶಕರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಲೇಖಕಿಯರನ್ನು ಚರ್ಚಿಸುವ ಸಂದರ್ಭದಲ್ಲಿ ಕೊಡಗಿನ ಗೌರಮ್ಮರವರಿಂದ ಶುರು ಮಾಡಿ ತ್ರಿವೇಣಿ, ಅನುಪಮಾ ನಿರಂಜನ, ವೀಣಾ ಶಾಂತೇಶ್ವರವರ ಮೂಲಕ ಪ್ರತಿಭಾ ನಂದಕುಮಾರ, ವೈದೇಹಿಯವರವರೆಗೆ ಬಂದು ನಿಶ್ಚಲರಾಗಿ ನಿಂತು ಬಿಡುವ ಪರಿ ನಿಜಕ್ಕೂ ತಮಾಷೆಯಾಗಿದೆ. ಇವರಿಗೆ ಮೇಲಿನ ಲೇಖಕಿಯರ ಕ್ರಿಯಾಶೀಲ ಲೇಖನಿ ಕಣ್ಣಿಗೆ ಕಾಣದಂತಾಗಿದ್ದಕ್ಕೆ ಅವರ ಅಪ್ರಾಮಾಣಿಕತೆಯೇ ಕಾರಣವಷ್ಟೆ. ಅದರ ಹೊರತಾಗಿ ಬೇರೇನಿದೆ?