Monthly Archives: September 2012

ಡೀಸೆಲ್ ಮರ : ಇಲ್ಲೂ ಪರೀಕ್ಷಿಸಬಾರದೇಕೆ?

-ಆನಂದ ಪ್ರಸಾದ್

ಮರದಲ್ಲಿ ಡೀಸೆಲ್ ಅಥವಾ ಇಂಧನ ಸಿಗುವಂತಿದ್ದರೆ ರೈತರು ಇಂಥ ಮರಗಳನ್ನು ಬೆಳೆದು ತಮ್ಮ ವಾಹನಗಳಿಗೆ ಇಂಧನ ಸ್ವಾವಲಂಬನೆಯನ್ನು ಸಾಧಿಸಬಹುದು. ಇಂಥ ಒಂದು ಮರ ಪ್ರಕೃತಿಯಲ್ಲಿ ಲಭ್ಯ ಇದೆ ಎಂದು ಅಂತರ್ಜಾಲದಿಂದ ತಿಳಿದು ಬರುತ್ತದೆ. ಇದಕ್ಕೆ ಡೀಸೆಲ್ ಮರ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಕೊಪೈಫೆರಾ ಲಾಂಗ್ಸ್‌ಡಾರ್ಫಿ (Copaifera langsdorfii). ಇದು ದಕ್ಷಿಣ ಅಮೆರಿಕಾದ ಅರ್ಜೆಂಟಿನ, ಬ್ರೆಜಿಲ್, ಪರಾಗ್ವೆ, ವೆನೆಜುಯೆಲ ದೇಶಗಳ ಉಷ್ಣವಲಯದ ಕಾಡುಗಳಲ್ಲಿ ಕಂಡುಬರುತ್ತದೆ.

ಆದಿವಾಸಿಗಳು ಇದರ ಕಾಂಡಕ್ಕೆ ತೂತು ಕೊರೆದು ದ್ರವವನ್ನು ತೆಗೆಯುತ್ತಾರೆ ಮತ್ತು ಇದನ್ನು ಔಷಧವಾಗಿ ಬಳಸುತ್ತಾರೆ. ಈ ಮರದಿಂದ ಈ ರೀತಿ ದ್ರವವನ್ನು ತೆಗೆಯಲು 15 ರಿಂದ 20 ವರ್ಷಗಳವರೆಗೆ ಬೆಳವಣಿಗೆ ಹೊಂದಿರಬೇಕು. ಒಂದು ಮರದಿಂದ ವರ್ಷಕ್ಕೆ 30 ರಿಂದ 56 ಲೀಟರ್ ಇಂಧನ ಲಭ್ಯ. ಮರದ ಕಾಂಡಕ್ಕೆ ತೂತು ಕೊರೆದು ಇಂಧನ ದ್ರವವನ್ನು ತೆಗೆಯಲಾಗುತ್ತದೆ. ಕಾಂಡದಲ್ಲಿ ಕೊರೆದ ತೂತಿಗೆ ಸಣ್ಣ ಪೈಪ್ ಅನ್ನು ಸಿಕ್ಕಿಸಿ ಅದರ ತುದಿಗೆ ಮುಚ್ಚಳ ಹಾಕಿ ಆರು ತಿಂಗಳಿಗೊಮ್ಮೆ ಮುಚ್ಚಳ ತೆಗೆದು ಇಂಧನ ಸಂಗ್ರಹಿಸಲಾಗುತ್ತದೆ. ಈ ರೀತಿ ವರ್ಷಕ್ಕೆ ಎರಡು ಸಲ ಇಂಧನ ಪಡೆಯಬಹುದು. ಈ ರೀತಿ ಪಡೆದ ಇಂಧನ ದ್ರವವನ್ನು ಸೋಸಿ ನೇರವಾಗಿ ಡೀಸೆಲ್ ಇಂಜಿನುಗಳಲ್ಲಿ ಬಳಕೆ ಮಾಡಬಹುದು. ಈ ದ್ರವ ಇಂಧನವು ಟರ್ಪೆoಟೈನ್ ಹೈಡ್ರೋಕಾರ್ಬನ್ ಗುಂಪಿಗೆ ಸೇರಿದ ರಾಸಾಯನಿಕವನ್ನು ಹೊಂದಿರುತ್ತದೆ. ಈ ದ್ರವವನ್ನು ಮರದಿಂದ ತೆಗೆದ ಮೂರು ತಿಂಗಳ ಒಳಗೆ ಡೀಸೆಲ್ ಇಂಜಿನಿಗೆ ಇಂಧನವಾಗಿ ಬಳಸಬಹುದು. ನಂತರ ಬಳಸಲು ಸಾಧ್ಯವಿಲ್ಲ.

ಡೀಸೆಲ್ ಮರದ ಕಾಂಡದ ಒಳಗೆ ಸೂಕ್ಸ್ಮ ತಂತುಗಳಲ್ಲಿ (capillaries) ಇಂಧನ ದ್ರವ ಶೇಖರಣೆಯಾಗುತ್ತದೆ ಮತ್ತು ಕಾಂಡಕ್ಕೆ ತೂತು ಕೊರೆದು ಇದನ್ನು ತೆಗೆಯಬಹುದು. ಬ್ರೆಜಿಲ್ ದೇಶದಲ್ಲಿ ಇಂಥ ಮರಗಳ ಪ್ಲಾoಟೇಶನ್‌ಅನ್ನು ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಆಸ್ಟ್ರೇಲಿಯದ ಉಷ್ಣವಲಯ ಪ್ರದೇಶದಲ್ಲಿ ಈ ಮರಗಳ 20,000 ಸಾವಿರ ಸಸಿಗಳನ್ನು ರೈತರಿಗೆ ಮಾರಲಾಗಿದೆಯಂತೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಸಿದ ಡೀಸೆಲ್ ಮರ 15 ರಿಂದ 20 ವರ್ಷಗಳ ಬೆಳವಣಿಗೆಯ ನಂತರ ವರ್ಷಕ್ಕೆ 10,000 ದಿಂದ 12,000 ಲೀಟರ್ ಇಂಧನ ನೀಡಬಹುದೆಂದು ಅಂದಾಜಿಸಲಾಗಿದೆ. ಅದರೂ ಇದು ಪ್ರಾಯೋಗಿಕ ಹಂತದಲ್ಲಿರುವುದರಿಂದ ಈ ಬಗ್ಗೆ ಏನನ್ನೂ ಹೇಳಲಾಗದು ಮತ್ತು ಎಲ್ಲ ಪ್ರದೇಶಗಳಲ್ಲೂ ಇದರ ಬೆಳವಣಿಗೆ, ಇಂಧನ ಇಳುವರಿ ಹೇಗಿರುತ್ತದೆ ಎಂದು ಪ್ರಯೋಗ ಮಾಡಿಯೇ ಕಂಡುಕೊಳ್ಳಬೇಕಷ್ಟೆ.

ಈ ಮರವು 15 ರಿಂದ 30 ಮೀಟರ್ ಎತ್ತರಬೆಳೆಯುತ್ತದೆ. ನಮ್ಮ ದೇಶಕ್ಕೂ ಈ ಡೀಸೆಲ್ ಮರದ ಬೀಜಗಳನ್ನು ತರಿಸಿ ಸಸಿ ಮಾಡಿ ನೆಟ್ಟು ಅರಣ್ಯ ಇಲಾಖೆಯವರು ಪ್ರಯೋಗ ಮಾಡಿ ನೋಡಿದರೆ ಒಳ್ಳೆಯದು. ಇದು ಯಶಸ್ವಿಯಾದರೆ ರೈತರಿಗೆ ಕನಿಷ್ಠ ತಮ್ಮ ಡೀಸೆಲ್ ವಾಹನಗಳಿಗೆ ತಮ್ಮ ನೆಲದಲ್ಲೇ ಇಂಧನ ಉತ್ಪಾದಿಸಿಕೊಳ್ಳಲು ಸಾಧ್ಯವಿದೆ. ಒಮ್ಮೆ ಉತ್ಪಾದನೆ ಆರಂಭವಾದರೆ ಈ ಮರವು 70 ವರ್ಷಗಳವರೆಗೆ ಇಂಧನ ನೀಡಬಲ್ಲದು. ಆದರೆ ಒಮ್ಮೆ ಇಳುವರಿ ಆರಂಭವಾಗಬೇಕಾದರೆ ದೀರ್ಘಕಾಲ ಕಾಯಬೇಕು. ಇದರ ಬೆಳವಣಿಗೆಗೆ ನೀರಿನ ಅವಶ್ಯಕತೆಯೂ ಇದೆಯೆಂದು ಅಂತರ್ಜಾಲದಲ್ಲಿ ಕಂಡುಬರುತ್ತದೆ. ಇದು 100 ರಿಂದ 400 ಸೆಂಟಿಮೀಟರ್ ವಾರ್ಷಿಕ ಮಳೆ ಬೀಳುವ ಹಾಗೂ 20 ರಿಂದ 27 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಇರುವ ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಈ ಮರದ ಕಾಂಡವು ಉತ್ತಮ ದರ್ಜೆಯ ಮರವಾಗಿ ಪೀಠೋಪಕರಣ ತಯಾರಿಗೂ ಬಳಸಬಹುದು.

ನಮ್ಮ ದೇಶದ ದಕ್ಷಿಣ ಭಾಗದಲ್ಲಿ ಈ ಮರವು ಬೆಳೆಯುವ ಸಂಭವವಿದೆ. ಇದನ್ನು ಪ್ರಾಯೋಗಿಕವಾಗಿ ಬೆಳೆಸಿ ನೋಡಲು ನಮ್ಮ ಕೃಷಿ ವಿಶ್ವವಿದ್ಯಾನಿಲಯಗಳು ಹಾಗೂ ಅರಣ್ಯ ಇಲಾಖೆ ಮುಂದಾಗಬೇಕಾಗಿದೆ. ಇಂಥ ಕೆಲವು ಮರಗಳನ್ನು ಕೃಷಿಕರು ಬೆಳೆಸಿ ಕನಿಷ್ಠ ಕೃಷಿಕರು ತಮ್ಮ ಡೀಸೆಲ್ ವಾಹನಗಳಿಗೆ, ಟ್ರಾಕ್ಟರ್ ಇತ್ಯಾದಿಗಳಿಗೆ ಇಂಧನ ಪಡೆಯುವಂತಾದರೆ ಡೀಸೆಲ್ ಬೆಲೆ ಏರಿಕೆಯಿಂದ ತಮ್ಮ ಮೇಲೆ ಹೆಚ್ಚಿನ ಭಾರವಾಗದಂತೆ ತಡೆಯಬಹುದು ಹಾಗೂ ಪಳೆಯುಳಿಕೆ ಇಂಧನಗಳ ಬಳಕೆಯಿಂದ ಉಂಟಾಗುವ ಹವಾಮಾನ ವೈಪರೀತ್ಯವನ್ನು ಸ್ವಲ್ಪ ಕಡಿಮೆ ಮಾಡಬಹುದು.

ಪ್ರಜಾ ಸಮರ-2 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕಳೆದ ಜೂನ್ 29 ರಂದು ನಕ್ಸಲ್ ಪೀಡಿತ ರಾಜ್ಯವಾದ ಛತ್ತೀಸ್‌ಘಡದಲ್ಲಿ ನಡೆದ ಘಟನೆ ಇದು. ಅಂದು ರಾತ್ರಿ ಸೂಕ್ಮ ಮತ್ತು ಬಿಜಾಪುರ್ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆ ಮತ್ತು ಛತ್ತೀಸ್‌ಘಡದ ನಕ್ಸಲ್ ನಿಗ್ರಹ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ 21 ಮಂದಿ ಮಾವೋವಾದಿ ನಕ್ಸಲರು ಮೃತಪಟ್ಟರೆಂಬ ಸುದ್ಧಿ ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ, ಪತ್ರಿಕೆಗಳಲ್ಲಿ ತಲೆ ಬರಹದ ವರದಿಯಾಗಿ ಪ್ರಕಟವಾಯಿತು. ಆದರೆ, ಛತ್ತೀಸ್‌ಘಡ ಸರ್ಕಾರ ಮಾರನೇ ದಿನ ತನ್ನ ವರಸೆ ಬದಲಿಸಿ ಘಟನೆಯಲ್ಲಿ ಮೃತಪಟ್ಟವರು ಶಂಕಿತ ಮಾವೋವಾದಿಗಳು (ನಕ್ಸಲರು) ಎಂದು ಹೇಳಿತು.

ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೂ ರವಾನಿಸಿತು. ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಮೃತ ಪಟ್ಟ ವ್ಯಕ್ತಿಗಳ ಶವಗಳನ್ನು ಗಮನಿಸಿದಾಗ ಅವರು ಶಂಕಿತ ನಕ್ಸಲರಲ್ಲ ಎಂಬ ಸಂಶಯ ಮೇಲು ನೋಟಕ್ಕೆ ಗೋಚರಿಸುತ್ತಿತ್ತು. ಶವಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೃತಪಟ್ಟವರು ಸ್ಥಳೀಯ ಕೋಟಗುಡ ಮತ್ತು ಸರ್ಕೆಗುಡ ಎಂಬ ಹಳ್ಳಿಯ ಆದಿವಾಸಿಗಳಾಗಿದ್ದರು.  ಕೊನೆಗೆ ಸಂಶಯದ ಜಾಡು ಹಿಡಿದು ಹೊರಟ ಪತ್ರಕರ್ತರಿಗೆ ಇದು ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಪಡೆ ಜಂಟಿಯಾಗಿ ನಡೆಸಿದ ಮುಗ್ದ ಆದಿವಾಸಿಗಳ ಮಾರಣ ಹೋಮದ ಕೃತ್ಯ ಎಂಬುದು ಮನದಟ್ಟಾಯಿತು.

ಘಟನೆಯಲ್ಲಿ ಗಾಯಗೊಂಡು ಬದುಕುಳಿದ ಮೂವರು ಆದಿವಾಸಿಗಳ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಬಾಲಕನನ್ನು ಜಗದಾಲ್‌ಪುರದ ಮಹಾರಾಣಿ ಆಸ್ಪತ್ರೆಗೆ ಸಾಗಿಸಿ ಗುಪ್ತವಾಗಿ ಚಿಕಿತ್ಸೆ ಕೊಡಿಸುತ್ತಿರುವುದನ್ನು ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ವರದಿಗಾರ ಪತ್ತೆ ಹಚ್ಚಿದರೆ, ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕಾಲಿಗೆ ಗಾಯಗೊಂಡಿದ್ದ ಇಬ್ಬರು ಆದಿವಾಸಿಗಳನ್ನು (ಕಕಸೆಂಟಿ ಮತ್ತು ಮರ್ಕಮ್ ಸೋಮ) ಟೈಮ್ಸ್ ಆಫ್ ಇಂಡಿಯಾ ವರದಿಗಾರ ಪೊಲೀಸರ ಕಣ್ಣು ತಪ್ಪಿಸಿ ವಾರ್ಡ್‌ಬಾಯ್ ವೇಷದಲ್ಲಿ ಆಸ್ಪತ್ರೆಯ ಒಳಹೊಕ್ಕು ಪತ್ತೆ ಹಚ್ಚಿದ್ದ, ಅಲ್ಲದೆ ಅವರನ್ನು ಮಾತನಾಡಿಸಿ ಆ ರಾತ್ರಿ ನಡೆದ ಘಟನೆಯನ್ನು ದಾಖಲು ಮಾಡಿಕೊಂಡಿದ್ದ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಯುದ್ಧ ಗೆದ್ದ ಉತ್ಸಾಹದಲ್ಲಿ 21 ಮಂದಿ ನಕ್ಸಲಿಯರನ್ನು ಸದೆ ಬಡಿದ ಕಥೆಯನ್ನು ಮಾಧ್ಯಮದ ಮುಂದೆ ಹೆಮ್ಮೆಯಿಂದ ಹೇಳುಕೊಳ್ಳುತ್ತಿದ್ದರೆ, ಇತ್ತ ಮಧ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಸತ್ತವರು ಅಮಾಯಕ ಆದಿವಾಸಿಗಳು ಎಂಬ ವರದಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಜುಲೈ 3ರಂದು ಪೂನಾದಿಂದ ಹೊರಡುವ ಅಜಾದ್ ಎಕ್ಸ್‌ಪ್ರಸ್ ರೈಲಿನಲ್ಲಿ ಹೊರಟು 4ರಂದು ಮಧ್ಯಾಹ್ನ ಬಿಲಾಸ್‌ಪುರ್ ತಲುಪಿ, ಸಂಜೆ ವೇಳೆಗೆ ರಾಯ್‌ಪುರ್ ತಲುಪಿದ ನನಗೆ ಅಲ್ಲಿ ಸಿಕ್ಕ ಮಾಹಿತಿ ಬೇರೆಯದೇ ಆಗಿತ್ತು. ವಾಸ್ತವವಾಗಿ ಅಲ್ಲಿ ನಡೆದ ಘಟನೆ ಇದು. ಈ ಬಾರಿಯ ಮುಂಗಾರು ಮಳೆ ಆರಂಭವಾಗುವ ಮುನ್ನ ಆದಿವಾಸಿಗಳಿಗೆ ಬೇಸಾಯಕ್ಕೆ ಅರಣ್ಯ ಭೂಮಿಯನ್ನು ಹಂಚುವುದಕ್ಕಾಗಿ ಇಬ್ಬರು ಸ್ಥಳೀಯ ನಕ್ಸಲ್ ನಾಯಕರು ಸಭೆ ಕರೆದಿದ್ದರು. ನಕ್ಸಲ್ ನಾಯಕರಿಗೆ ಬೆಂಗಾವಲಾಗಿ ಮತ್ತಿಬ್ಬರು ನಕ್ಸಲರು ಬಂದೂಕ ಹಿಡಿದು ಸಭೆಗೆ ಬಂದಿದ್ದರು. 150ಕ್ಕೂ ಹೆಚ್ಚು ಮಂದಿ ಸೇರಿದ್ದ ಈ ಗ್ರಾಮ ಸಭೆಯಲ್ಲಿ ನಾಲ್ವರು ನಕ್ಸಲರು ಹೊರತು ಪಡಿಸಿದರೆ, ಉಳಿದವರೆಲ್ಲಾ ಸ್ಥಳೀಯ ಹಳ್ಳಿಗಳ ಆದಿವಾಸಿಗಳಾಗಿದ್ದರು. ಈ ಕುರಿತಂತೆ ಜುಲೈ ಮೊದಲ ವಾರ ಹಿಂದೂ ದಿನಪತ್ರಿಕೆ ಮತ್ತು ಟೈಮ್ಸ್ ಆಫ್ ಇಂಡಿಯ ಪತ್ರಿಕೆಗಳು ಸಮಗ್ರ ತನಿಖಾ ವರದಿಯನ್ನು ಪ್ರಕಟಿಸಿದ ಮೇಲೆ ರಾಜಧಾನಿ ದೆಹಲಿಯಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಗೃಹ ಸಚಿವ ಪಿ.ಚಿದಂಬರಂ, ಛತ್ತೀಸ್‌ಘಡ ಸರ್ಕಾರದ ತಪ್ಪು ಮಾಹಿತಿಯಿಂದ ಆ ರೀತಿ ಹೇಳಿಕೆ ನೀಡಬೇಕಾಯಿತೆಂದು ದೇಶದ ಮುಂದೆ ವಿಷಾದ ವ್ಯಕ್ತಪಡಿಸಿದರು. ನಕ್ಸಲರ ಹೋರಾಟವನ್ನು ಕೊನೆಗಾಣಿಸಬೇಕೆಂಬ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಎಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂಬುದಕ್ಕೆ ಸರ್ಕಾರದ ಈ ಕೆಳಗಿನ ಹೇಳಿಕೆ ಮತ್ತು ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಇದೇ ಸೆಪ್ಟಂಬರ್ 9 ರ ಶನಿವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೆಹಲಿಯಲ್ಲಿ ಕರೆದಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸಭೆಯಲ್ಲಿ ದೇಶದ ಬುದ್ಧಿಜೀವಿಗಳು ನಕ್ಸಲ್ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿ, ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ನಕ್ಸಲ್ ಚಟುವಟಿಕೆ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ ಎಂದಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯ ತನ್ನ 2011-12ರ ವಾರ್ಷಿಕ ವರದಿಯಲ್ಲಿ ದೇಶದ ಒಂಬತ್ತು ರಾಜ್ಯಗಳ 106 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಪ್ರಕಟಿಸಿದೆ. ಇದೇ ಆಗಸ್ಟ್ 29ರಂದು ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿರುವ ಗೃಹ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, 12 ರಾಜ್ಯಗಳ 84 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಹೇಳಿದ್ದಾರೆ. ಪ್ರಧಾನಿಯಿಂದ ಹಿಡಿದು ಗೃಹ ಸಚಿವ ಹಾಗೂ ಅವರ ಸಹಾಯಕ ಸಚಿವ ಮತ್ತು ಗೃಹ ಇಲಾಖೆಯವರೆಗೂ ನಕ್ಸಲ್ ಚಟುವಟಿಕೆ ಕುರಿತ ಮಾಹಿತಿಯಲ್ಲಿ ಸಾಮ್ಯತೆ ಇಲ್ಲವೆಂದ ಮೇಲೆ ಇವರ ಹೇಳಿಕೆಗಳಿಗೆ ಯಾವ ಮಹತ್ವವಿದೆ ಯೋಚಿಸಿ?

ನಕಲಿ ಎನ್‌ಕೌಂಟರ್‌‌ನಲ್ಲಿ ಸತ್ತ ಅಮಾಯಕ ಆದಿವಾಸಿಗಳ ಕುಟುಂಬಳಿಗೆ ಈವರೆಗೆ ಕೇಂದ್ರ ಸರ್ಕಾರದಿಂದಾಗಲಿ, ಛತ್ತೀಸ್‌ಘಡ ಸರ್ಕಾರದಿಂದಾಗಲಿ ಯಾವುದೇ ಪರಿಹಾರ ದೊರಕಿಲ್ಲ. ಅರಣ್ಯ ರೋಧನ ಎಂಬ ಮಾತಿಗೆ ಅಥವಾ ಶಬ್ಧಕ್ಕೆ ನಾವು ಶಬ್ಧಕೋಶ ನೋಡಿ ಅರ್ಥ ತಿಳಿಯಬೇಕಾಗಿಲ್ಲ. ಮಧ್ಯ ಮತ್ತು ಪೂರ್ವ ಭಾರತದ ಅರಣ್ಯದ ಒಳ ಹೊಕ್ಕು ಅಲ್ಲಿನ ನಿವಾಸಿಗಳ ನೋವು ಮತ್ತು ಆಕ್ರಂಧನ ಇವುಗಳಿಗೆ ಕಣ್ಣು ಮತ್ತು ಕಿವಿಯಾದರೆ ಸಾಕು ಅದರ ನಿಜವಾದ ಅರ್ಥ ನಮಗೆ ಮನದಟ್ಟಾಗಬಲ್ಲದು.

ಇದು ಕಳೆದ ವರ್ಷ 2011 ರ ಪೆಬ್ರವರಿಯಲ್ಲಿ ನಡೆದ ಘಟನೆ. (ಈ ಅಮಾನವೀಯ ವರದಿ ಹಿಂದೂ ಪತ್ರಿಕೆಯಲ್ಲಿ ಕೂಡ ವರದಿಯಾಗಿತ್ತು.) ಕಳೆದ ವರ್ಷ ನಡೆದ ಐ.ಪಿ.ಎಲ್. ಕ್ರಿಕೆಟ್ ಟೂರ್ನಿಗೆ ಹಿಂದಿ ಸಿನಿಮಾ ನಟ ಶಾರುಖ್‌ಖಾನ್ ಮಾಲಿಕತ್ವದ ಕೊಲ್ಕತ್ತ ನೈಟ್ ರೈಡರ್ಸ್ ತಂಡ ದೆಹಲಿಯ ಗೌತಮ್ ಗಂಭೀರ್ ಎಂಬ ಆಟಗಾರರನ್ನು 13 ಕೋಟಿ ರೂಪಾಯಿಯ ದಾಖಲೆ ಹರಾಜಿನಲ್ಲಿ ಖರೀದಿಸಿತ್ತು. ಮುಂಬೈನ ಪಂಚತಾರಾ ಹೋಟೆಲ್‌‍ನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ದೂರದ ಛತ್ತೀಸ್‌ಘಡದ ದಂಡಕಾರಣ್ಯದ ನಡುವೆ ಇದ್ದ ಕುಗ್ರಾಮದ ಹಳ್ಳಿಯೊಂದರ ಆದಿವಾಸಿಯೊಬ್ಬನ  ಒಂಬತ್ತು ವರ್ಷದ ಮಗಳೊಬ್ಬಳು ಅಸಹಜ ಸಾವನ್ನಪ್ಪಿದ್ದಳು. ಆದಿನ ಸಾಯಂಕಾಲ ಆದಿವಾಸಿ ದಂಪತಿಗಳು ಮಗಳ ಅಂತ್ಯ ಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿರುವಾಗಲೇ ಅಡ್ಡಿ ಮಾಡಿದ ಪೊಲೀಸರು ಮರಣೋತ್ತರ ಶವ ಪರೀಕ್ಷೆ ಮಾಡಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಬೇಕೆಂದು ಆದೇಶವಿತ್ತರು. ಪೊಲೀಸರಿಗೆ ಲಂಚ ಕೊಡಲು ಅಸಮರ್ಥನಾದ ಆ ಮಗ್ಧ ಆದಿವಾಸಿ ಇಡೀ ರಾತ್ರಿ ಶವವನ್ನು ತನ್ನ ಮನೆಯ ವರಾಂಡದಲ್ಲಿ ಇಟ್ಟುಕೊಂಡು, ಬೆಳಗಿನ ಜಾವ ಐದು ಗಂಟೆಗೆ ಎದ್ದು 40 ಕಿಲೋಮೀಟರ್ ದೂರದ ಜಗದಾಲ್‌ಪುರ್ ಆಸ್ಪತ್ರೆಗೆ ತನ್ನ ಸೈಕಲ್‌ನ ಹಿಂಭಾಗಕ್ಕೆ ಕಟ್ಟಿಗೆ ಹೊರೆ ಕಟ್ಟಿದಂತೆ ಕಟ್ಟಿಕೊಂಡು ಸೈಕಲ್ ತುಳಿದ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಮರೋಣತ್ತರ ಪರೀಕ್ಷೆಗೆ ಶವ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿ ಸಂಜೆ ಸಂಜೆ ಆರು ಗಂಟೆಗೆ ಆತನಿಗೆ ಶವ ಒಪ್ಪಿಸಿದರು. ಶವ ಪರೀಕ್ಷೆಗಾಗಿ ಕುತ್ತಿಗೆಯಿಂದ ಕಿಬ್ಬೊಟ್ಟೆಯವರೆಗೆ ಆ ಹೆಣ್ಣು ಮಗಳ ಶವವನ್ನು ಸೀಳಿ, ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಆ ಬಡ ಆದಿವಾಸಿ ರೈತನ ಬಳಿ ಇದ್ದ ನಲವತ್ತು ರೂಪಾಯಿಯನ್ನು ಆಸ್ಪತ್ರೆ ಸಿಬ್ಬಂದಿ ಕಸಿದುಕೊಂಡಿದ್ದರು. ಆನಂತರ ಸರಿಯಾಗಿ ಹೊಲಿಗೆ ಹಾಕದೆ, ಈಚಲ ಛಾಪೆಯಲ್ಲಿ ಸುತ್ತಿದ ಮಗಳ ಶವವನ್ನು ಅವನಿಗೆ ನೀಡಲಾಯಿತು. ರಕ್ತ ಸೋರುತ್ತಿದ್ದ ತನ್ನ ಕರುಳ ಕುಡಿಯ ಶವವನ್ನು ಮತ್ತೇ ಸೈಕಲ್ಲಿಗೆ ಕಟ್ಟಿಕೊಂಡು ಕತ್ತಲ ರಾತ್ರಿಯಲ್ಲಿ ಜಿಲ್ಲಾ ಕೇಂದ್ರದಿಂದ ತನ್ನ ಹಳ್ಳಿಗೆ ಆ ಮುಗ್ಧ ಅಮಾಯಕ ಸೈಕಲ್ ತುಳಿಯತೊಡಗಿದ. ಮಗಳ ಸಾವಿನ ನೋವಿನಿಂದ ಹೊರಬರಲಾರದ ಸ್ಥಿತಿಯಲ್ಲಿ ಆತ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಏನನ್ನೂ ತಿನ್ನದೆ, 80 ಕಿಲೋಮೀಟರ್ ದೂರ ಸೈಕಲ್ ತುಳಿದು ರಾತ್ರಿ ತನ್ನ ಹಳ್ಳಿಗೆ ಬಂದು ಶವದ ಅಂತ್ಯ ಕ್ರಿಯೆ ಮುಗಿಸಿದಾಗ ನಡುರಾತ್ರಿ ಮೀರಿತ್ತು. ಮತ್ತೇ ಮಾರನೇ ದಿನ ಬೆಳಿಗ್ಗೆ ಆತ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮರಣೋತ್ತರ ಪರೀಕ್ಷೆಯ ವರದಿ ತಲುಪಿಸಬೇಕಾಗಿತ್ತು.

ಪ್ರಿಯ ಓದುಗರೆ, ಒಂದು ಕ್ಷಣ ನಿಮ್ಮ ಅಸ್ತಿತ್ವವನ್ನು ಮರೆತು ಆ ಬಡ ಹೆಣ್ಣು ಮಗಳ ತಂದೆಯಾಗಿ ನಿಮ್ಮನ್ನು ಊಹಿಸಿಕೊಂಡು ಚಿಂತಿಸಿ? ಅನಕ್ಷರಸ್ಥ ಮುಗ್ಧ ಆದಿವಾಸಿಯೊಬ್ಬ ಅನುಭವಿಸಿದ ನೋವಿಗೆ ಶಬ್ಧಗಳಾಗಲಿ, ಅಕ್ಷರವಾಗಲಿ, ಭಾವನೆಗಳಾಗಲಿ ಮೂಡಿ ಬರಲು ಸಾಧ್ಯವೆ? ಇದು ವ್ಯವಸ್ಥೆಯ ಕ್ರೌರ್ಯ ಎಂದು ಅನಿಸುವುದಿಲ್ಲವೆ? ನಮಗೆ ಗೋಚರಿಸದ, ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದ ಇಂತಹ ಸಾವಿರಾರು ನೋವಿನ ಕಥೆಗಳು ಅರಣ್ಯದಲ್ಲಿ ನೊಂದವರ ನಡುವೆ ಪ್ರತಿಧ್ವನಿಸುತ್ತಿವೆ. ಅಕ್ಷರ ಲೋಕದಿಂದ ವಂಚಿತರಾದವರ ನೋವು ಒಂದು ಬಗೆಯಾದರೆ, ಅಕ್ಷರ ಕಲಿತು ತಮ್ಮ ಹಕ್ಕುಗಳಿಗೆ ಪ್ರತಿಪಾದಿಸಿ ಕತ್ತಲ ಲೋಕದಲ್ಲಿ ಕೊಳೆಯುತ್ತಿರುವ ಆದಿವಾಸಿ ಜನಗಳ ನೋವು ಇನ್ನೊಂದು ಬಗೆಯದು.

2011 ರ ಆಗಸ್ಟ್ ತಿಂಗಳಿನಲ್ಲಿ ಛತ್ತೀಸ್‌ಘಡದ ರಾಯ್‌ಪುರನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆದಿವಾಸಿಗಳ ಪರವಾಗಿ ಕಪ್ಪು ಬಾವುಟ ಪ್ರದರ್ಶಿಸಲು ನಿರಾಕರಿಸಿದ ಸೋನಿ ಸೂರಿ ಎಂಬ 35 ವರ್ಷದ ಆದಿವಾಸಿ ಜನಾಂಗದ ಶಿಕ್ಷಕಿ ಹಾಗೂ ಅವಳ ಚಿಕ್ಕಪ್ಪನ ಮಗ ಲಿಂಗರಾಮ್ ಬಸ್ತರ್ ವಲಯದಲ್ಲಿ ನಕ್ಸಲರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಆದರೂ ಚತ್ತೀಸ್‌ಘಡ ಪೊಲೀಸರಿಗೆ ಇವರ ಮೇಲೆ ನಕ್ಸಲಿಯರ ಬೆಂಬಲಿಗರೆಂಬ ಗುಮಾನಿ. ಈ ಕಾರಣಕ್ಕಾಗಿ ಈ ಇಬ್ಬರೂ ಬಸ್ತರ್ ವಲಯದ ಜಿಲ್ಲಾಧಿಕಾರಿ ಶ್ರೀನಿವಾಸಲು ಎಂಬ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿಯನ್ನು ಭೇಟಿಯಾಗಿ ತಮಗೆ ಮತ್ತು ತಮ್ಮ ಜನಾಂಗಕ್ಕೆ ನಕ್ಸಲ್ ಮಾವೋವಾದಿಗಳು ಮತ್ತು ಪೊಲೀಸರಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಳ್ಳುತ್ತಾರೆ. ಇದನ್ನು ಸ್ವತಃ ಜಿಲ್ಲಾಧಿಕಾರಿ ಧೃಡಪಡಿಸಿದ್ದಾನೆ. ಮೆಟ್ರಿಕ್‌ವರೆಗೆ ಓದಿ, ವಾಹನ ಚಾಲಕನ ಪರವಾನಿಗೆ ಪಡೆದಿದ್ದ ಲಿಂಗರಾಮ್‌ಗೆ ಪೊಲೀಸರು ತಮ್ಮ ಇಲಾಖೆಯ ಜೀಪ್ ಚಾಲಕನಾಗಿ, ನಕ್ಸಲಿಯರ ಅಡಗುತಾಣಗಳನ್ನು ತೋರಿಸಬೇಕೆಂದು ಒತ್ತಾಯಿಸಿದಾಗ ಆತ ನಕ್ಸಲರ ಭಯದಿಂದ ಕೆಲಸ ನಿರಾಕರಿಸುವುದರ ಜೊತೆಗೆ ದೆಹಲಿಗೆ ಹೋಗಿ ಮಾನವ ಹಕ್ಕುಗಳ ಸ್ವಯಂ ಸೇವಾ ಸಂಘಟನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಳ್ಳತ್ತಾನೆ. ಇವುಗಳ ನಡುವೆ ಛತ್ತೀಸ್‌ಘಡ ಸೇರಿದಂತೆ ದಂಡಕಾರಣ್ಯದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಆದಿವಾಸಿ ಜನಾಂಗದ ಮೇಲೆ ನಡೆಸಿದ ಅತಿಕ್ರಮಣ, ಅತ್ಯಾಚಾರ, ಶೋಷಣೆ ಇವೆಲ್ಲವೂ ಮಾನವ ಹಕ್ಕುಗಳ ಸಂಘಟನೆ ಮೂಲಕ ಹೊರ ಜಗತ್ತಿಗೆ ಬಹಿರಂಗವಾಗುತ್ತಿರುವುದು ನುಂಗಲಾರದ ತುತ್ತಾಗಿತ್ತು. ಇದಕ್ಕೆ ಶಿಕ್ಷಕಿ ಮತ್ತು ಅವಳ ಸಹೋದರರು ಕಾರಣ ಎಂಬ ಗುಮಾನಿ ಛತ್ತೀಸ್‌ಘಡ ಪೊಲೀಸರಿಗೆ ಇತ್ತು. ಇದರಿಂದಾಗಿ ಅಲ್ಲಿನ ಪೊಲೀಸರಿಗೆ ಶಿಕ್ಷಕಿ ಸೋನಿ ಸೂರಿ ಕುಟುಂಬದ ಬಗ್ಗೆ ದ್ವೇಷ ಬೆಳೆಯಲು ಕಾರಣವಾಯಿತು. ಇದೇ ವೇಳೆ ಲಂಡನ್‌ ನಗರದಲ್ಲಿ ವಿಕಿಲಿಕ್ಸ್ ಅಂತರ್ಜಾಲ ಪತ್ರಿಕೆ ಬಿಡುಗಡೆ ಮಾಡಿದ್ದ ಭಾರತದ ಅಮೇರಿಕಾ ರಾಯಭಾರಿ ಕಚೇರಿಯ ಸಂದೇಶಗಳ ಪೈಕಿ, ಎಸ್ಸಾರ್ ಸ್ಟೀಲ್ ಕಂಪನಿ ಅಪಾರ ಪ್ರಮಾಣದಲ್ಲಿ ಮಾವೋವಾದಿ ನಕ್ಸಲರಿಗೆ ಹಣವನ್ನು ನೀಡಿ ಛತ್ತೀಸ್‌ಘಡದಲ್ಲಿ ಗಣಿಕಾರಿಕೆ ನಡೆಸುತ್ತಿದೆ ಎಂಬುದನ್ನು ಬಹಿರಂಗಗೊಳಿಸಿತ್ತು. ಇದನ್ನು ಆಧಾರವಾಗಿಕೊಂಡು ದಂತೆವಾಡದ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್‌ಗತ  ಎಂಬಾತ ಪಲ್‌ನಾರ್ ಎಂಬ ಹಳ್ಳಿಯ ಬಳಿ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸೋನಿ ಸೂರಿಯನ್ನು ಬಂಧಿಸಿದ.

ಇದಕ್ಕೂ ಎರಡು ತಿಂಗಳ ಮುನ್ನ ಆಕೆಯ ಪತಿಯನ್ನು ನಕ್ಸಲ್ ಬೆಂಬಲಿಗ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಎಸ್ಸಾರ್ ಕಂಪನಿಯಿಂದ ಹಣವನ್ನು ಪಡೆದು ನಕ್ಸಲಿಯರಿಗೆ ಕೊಂಡೊಯ್ಯುತ್ತಿದ್ದಳು ಎಂಬ ಆರೋಪದಡಿ ಈಕೆಯನ್ನು 40 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಲಾಯಿತು. ಇಡೀ ಭಾರತದ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಈಕೆಯ ಬಂಧನದ ಅವಧಿಯಲ್ಲಿ ಜರುಗಿ ಹೋಯಿತು. ನ್ಯಾಯಾಲಯದ ಮುಂದೆ ಹಾಜರು ಪಡಿಸದೆ, ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವೇಳೆ ಈಕೆಯ ಗುಪ್ತಾಂಗಕ್ಕೆ ಕಲ್ಲು ಇಟ್ಟಿಗೆ ಚೂರುಗಳನ್ನು ತುರುಕಿ ಚಿತ್ರ ಹಿಂಸೆ ನೀಡಲಾಯಿತು. ಇದು ಹೊರಜಗತ್ತಿಗೆ ಬಹಿರಂಗವಾಗುವ ವೇಳೆಗೆ ಸೋನು ಸೂರಿಯನ್ನು ಗುಪ್ತವಾಗಿ ಕೊಲ್ಕತ್ತ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿರುವ ಅಮೇರಿಕಾದ ನೋಮ್ ಚಾಮ್‌ಸ್ಕಿ ಸೇರಿದಂತೆ ಭಾರತದ ಅರುಣಾ ರಾಯ್ ಮತ್ತು ಅರುಂಧತಿ ರಾಯ್, ಸಿನಿಮಾ ನಿರ್ದೇಶಕ ಆನಂದ್‌ ಪಟುವರ್ಧನ್ ಹಾಗೂ ಅಶೋಕ್ ಮೆಂಡರ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ ಪರಿಣಾಮ ಸುಪ್ರೀಂ ಕೋರ್ಟ್ ಈಕೆಯ ಬಂಧನದ ವಿಷಯವನ್ನು ವಿಚಾರಣೆಗೆ ಎತ್ತಿಕೊಂಡಿತು. ಈ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಪೊಲೀಸರು ನೀಡಿದ ಹೇಳಿಕೆ ಕೂಡ ಬದಲಾಗಿತ್ತು. ಎಸ್ಸಾರ್ ಕಂಪನಿಯ ದಲ್ಲಾಳಿಯೊಬ್ಬ ನಕ್ಸಲಿಯರಿಗೆ 15 ಲಕ್ಷ ಹಣ ಸಂದಾಯ ಮಾಡುತ್ತಿದ್ದಾಗ ಜೊತೆಯಲ್ಲಿ ಸೋನು ಸೂರಿ ಇದ್ದಳು ಎಂಬುದು ಪೊಲೀಸರ ಹೇಳಿಕೆ. ಇವರ ಹೇಳಿಕೆ ನಿಜವೇ ಆಗಿದ್ದರೆ, ಆ ದಿನ ಸಂತೆಯಲ್ಲಿದ್ದ ಸಾವಿರಾರು ಮಂದಿ ಕೂಡ ಪೊಲೀಸರ ದೃಷ್ಟಿಯಲ್ಲಿ ಅಪರಾಧಿಗಳಾಗಬೇಕು. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸೋನು ಸೂರಿಯ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ದೆಹಲಿಯ ವೈದ್ಯರ ವರದಿ ಕೂಡ ಈಕೆಯ ಗುಪ್ತಾಂಗ ಮತ್ತು ಗರ್ಭಕೋಶದ ಬಳಿ ಕಲ್ಲು ಮತ್ತು ಇಟ್ಟಿಗೆ ಚೂರುಗಳು ಇದ್ದುದನ್ನು ಧೃಡಪಡಿಸಿದೆ. ಈಗ ಸೋನು ಸೂರಿ ಕೊಲ್ಕತ್ತ ಆಸ್ಪತ್ರೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಚೇತರಿಸಿಕೊಳ್ಳುತ್ತಿದ್ದಾಳೆ. ಈಕೆಯ ಪತಿ ಜೈಲಿನಲ್ಲಿದ್ದಾನೆ. ಈಕೆಯ ತಂದೆಯನ್ನು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮಗೆ ಬೆಂಬಲಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ನಕ್ಸಲಿಯರು ಗುಂಡಿಟ್ಟು ಕೊಂದಿದ್ದರು. ಇವಳ ಐದು ವರ್ಷದ ಮಗು ದಂತೆವಾಡದ ಅರಣ್ಯ ಪ್ರದೇಶದಲ್ಲಿನ ಹಳ್ಳಿಯೊಂದರಲ್ಲಿ ವೃದ್ಧ ಅಜ್ಜಿಯ ಹಾರೈಕೆಯಲ್ಲಿದೆ. ಶಿಕ್ಷಕಿ ಸೋನು ಸೂರಿಗೆ ಅಮಾನುಷ ಚಿತ್ರ ಹಿಂಸೆ ನೀಡಿದ ದಂತೆವಾಡದ ಪೊಲೀಸ್ ಅಧಿಕಾರಿಗೆ ಈ ವರ್ಷ ಕೇಂದ್ರ ಸರ್ಕಾರ ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕವನ್ನು ನೀಡಿದೆ.

ಅಮಾಯಕರ ವಿರುದ್ಧ ವ್ಯವಸ್ಥೆಯ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಹ ಸ್ಥಿತಿಯಲ್ಲಿ ಮಧ್ಯ ಭಾರತದ ಅರಣ್ಯವಾಸಿಗಳು ಬದುಕುತ್ತಿದ್ದಾರೆ. ಇದರ ವಿರುದ್ಧ  ಧ್ವನಿ ಎತ್ತಿದ ವಿದ್ಯಾವಂತರು ನಕ್ಸಲಿಯರ ಬೆಂಬಲಿಗರು ಎಂಬ ಆರೋಪದಡಿ ಜೈಲಿಗೆ ನೂಕಲ್ಪಟ್ಟು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಇಲ್ಲಿನ ದಂಪತಿಗಳ ಚಿತ್ರ ಗಮನಿಸಿ, ಇವರು ಉತ್ತರ ಪ್ರದೇಶದ ಅಲಹಾಬಾದಿನ ವಿದ್ಯಾವಂತ ದಂಪತಿಗಳು. ಸೀಮಾ ಅಜಾದ್ ಹೆಸರಿನ ಈಕೆ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ, ಅಲಹಾಬಾದ್ ನಗರದಲ್ಲಿ ತನ್ನ ಪತಿ ವಿಶ್ವವಿಜಯ್ ಜೊತೆಯಲ್ಲಿ ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತೆ, ಅಲ್ಲದೆ ದಸ್ತಕ್ ಎಂಬ ಪತ್ರಿಕೆಯ ಸಂಪಾದಕಿ. 2010 ರಲ್ಲಿ ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಮತ್ತು ನಲವತ್ತು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡ ಉತ್ತರ ಪ್ರದೇಶದ ಪೊಲೀಸರು ಈ ದಂಪತಿಗಳನ್ನು ಮಾವೋವಾದಿ ನಕ್ಸಲ್ ಸಂಘಟನೆಯ ಬೆಂಬಲಿಗರು ಎಂಬ ಆರೋಪದಡಿ ಬಂಧಿಸಿದ್ದಾರೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅಲಹಾಬಾದ್ ಸ್ಥಳೀಯ ನ್ಯಾಯಾಲಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೀಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ದಂಪತಿಗಳು ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಮುಂದುವರೆದಿದೆ. ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಇತ್ತು ಎನ್ನುವುದಾದರೆ, ಅದು ಪೊಲೀಸರ ದೃಷ್ಟಿಯಲ್ಲಿ ಅಪರಾಧ ಎನ್ನುವುದಾದರೆ, ಸಾವಿರಾರು ಪುಟಗಳಷ್ಟು ಮಾಹಿತಿ ಇಟ್ಟುಕೊಂಡು ಬರೆಯುತ್ತಿರುವ ನಾನು ಮತ್ತು ಈ ಕ್ಷಣದಲ್ಲಿ ಇದನ್ನು ಓದುತ್ತಿರುವ ನೀವೂ ಕೂಡ ಅಪರಾಧಿಗಳು. ಹಿಂಸೆಯನ್ನು ಹತ್ತಿಕ್ಕಲು ಹಿಂಸೆಯ ಹಾದಿ ಪರ್ಯಾಯವಲ್ಲ. ಆದರೆ, ಪೊಲೀಸರು ಈ ಹಾದಿಯನ್ನೇ ಆಯ್ಕೆ ಮಾಡಿಕೊಂಡಿರುವುದು ವರ್ತಮಾನದ ದುರಂತ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನ ಮನೆಯಲ್ಲಿ ಸಿಕ್ಕ ನಕ್ಸಲ್ ಸಾಹಿತ್ಯವೆಂದರೆ, ಭಗತ್ ಸಿಂಗನ ಆತ್ಮಚರಿತ್ರೆ, ಮತ್ತು 200 ಗ್ರಾಂ ಚಹಾಪುಡಿ ಮಾತ್ರ. ಆದರೂ ಆತ ಸೆರೆಮನೆಗೆ ದೂಡಲ್ಪಟ್ಟ.

ಈಗಲೂ ನಕ್ಸಲರು ಹಿಂಸೆಯನ್ನು ಮುಂದುವರೆಸುತ್ತಿರುವುದಕ್ಕೆ (ವಿಶೇಷವಾಗಿ ಗಿರಿಜನರಿರುವ ಪ್ರದೇಶಗಳಲ್ಲಿ) ಮತ್ತು ಅದಕ್ಕೆ ಈ ವ್ಯವಸ್ಥೆ ಮತ್ತು ಪೋಲಿಸರ ಅಮಾನುಷ ದೌರ್ಜನ್ಯವೂ ಒಂದು ಪ್ರಮುಖ ಕಾರಣವಾಗಿ ಹೇಗೆ ಪೂರಕವಾಗಿದೆ ಎಂಬ ಪ್ರಶ್ನೆಗಳಿಗೆ ಈ ಮೇಲಿನ ಘಟನೆಗಳು ನಮಗೆ ಕೆಲವೊಂದು ಉತ್ತರಗಳನ್ನು ಕೊಡಬಲ್ಲವು. ಹಾಗೇಯೇ, ಈ ಸಮಸ್ಯೆಗೆ ಒಂದಷ್ಟು ಪರಿಹಾರದ ದಾರಿಗಳನ್ನೂ.

(ಮುಂದುವರೆಯುವುದು)

ಶುಭಾಶಯ ಕೋರುತ್ತಾ ಉದಯಿಸುತ್ತಿದ್ದಾರೆ ಜನಸೇವಕರು, ಆಶೀರ್ವದಿಸಿ…

– ರವಿ ಕೃಷ್ಣಾರೆಡ್ಡಿ

“ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು”

ಹೀಗೆಂದು ಬೆಂಗಳೂರು ಮತ್ತು ಸುತ್ತಮುತ್ತಲ ಊರುಗಳ ಹಾದಿಬೀದಿಗಳಲ್ಲೆಲ್ಲಾ ಬಂಟಿಂಗ್ಸ್, ಫ್ಲೆಕ್ಸ್, ಬ್ಯಾನರ್‌ಗಳು ತಲೆಯೆತ್ತಿ ರಾರಾಜಿಸುತ್ತಿವೆ. ಶುಭಾಶಯಗಳನ್ನು ಕೋರುತ್ತಿರುವವರ ಸುಂದರ ಮುಖಾರವಿಂದಗಳು ಎಲ್ಲಾ ತರಹದ ನಮೂನೆಯಲ್ಲಿವೆ. ಬಹುಶಃ ಕರ್ನಾಟಕದ ಇತಿಹಾಸದಲ್ಲಿ ಇಲ್ಲಿಯವರೆಗೆ ಇಷ್ಟೊಂದು ಮಂದಿ ನಾಡಿನ ಜನತೆಗೆ ಈ ಹಬ್ಬಗಳಿಗೆ ಶುಭಾಶಯಗಳನ್ನು ಕೋರಿರಲಿಲ್ಲವೇನೊ! ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನು ಪ್ರತಿ ತಿಂಗಳೂ ಒಂದು ಹಬ್ಬ ಇದೆ. ಮುಂದಿನ ತಿಂಗಳಿನಲ್ಲಿ ದಸರಾ, ಬಕ್ರೀದ್, ಅದಾದ ನಂತರ ದೀಪಾವಳಿ, ನಂತರ ಕ್ರಿಸ್‌ಮಸ್, ನಂತರ ಹೊಸವರ್ಷ, ನಂತರ ಸಂಕ್ರಾಂತಿ, ಶಿವರಾತ್ರಿ, ಯುಗಾದಿ… ಜನರಿಗೆ ಶುಭಾಶಯಗಳೋ ಶುಭಾಶಯಗಳು. ಧನ್ಯರೀ ಪ್ರಜೆಗಳು.

ಇಷ್ಟಕ್ಕೂ ಯಾರಿವರು, ಈ ಶುಭ ಹಾರೈಸುತ್ತಿರುವವರು? ಯಾಕೆ ಹೀಗೆ ಸಾಂಕ್ರಾಮಿಕ ರೋಗದಂತೆ ಶುಭಾಶಯ ಕೋರುತ್ತಿದ್ದಾರೆ? ಯಾಕೆ ಇದ್ದಕ್ಕಿದ್ದಂತೆ ಕಟೌಟ್‌ಗಳು, ಬ್ಯಾನರ್‌ಗಳು, ಸಮಾಜಸೇವಾ ಕಾರ್ಯಕ್ರಮಗಳು, ಹೆಚ್ಚಾಗುತ್ತಿವೆ?

ಚುನಾವಣೆ ಹತ್ತಿರ ಬರುತ್ತಿದೆ.

ಇವತ್ತು ರಾಜಕೀಯ ನಾಯಕರಾಗುವುದು ಯಾವ ರೀತಿಯಿಂದಲೂ ಕಷ್ಟವಲ್ಲ–ನಿಮ್ಮಲ್ಲಿ ಬೇಕಾಬಿಟ್ಟಿಯಾಗಿ ಚೆಲ್ಲಬಹುದಾದ ದುಡ್ಡಿದ್ದರೆ. ರಾತ್ರೋರಾತ್ರಿ ಯಾರು ಬೇಕಾದರೂ ನಾಯಕನಾಗಿಬಿಡಬಹುದು. ವಿದ್ಯೆ, ವಯಸ್ಸು, ಅನುಭವ, ಕಾಳಜಿ, ಪ್ರಾಮಾಣಿಕತೆ, ಸಿದ್ಧಾಂತ, ತ್ಯಾಗ, ನಿಷ್ಠೆ, ಬದ್ಧತೆ, ಇವು ಯಾವುವೂ ರಾಜಕಾರಣಿಯಾಗಲು ಮತ್ತು ರಾಜಕೀಯ ನಾಯಕನಾಗಲು ಇರಲೇಬೇಕಾದ ಅರ್ಹತೆಗಳಲ್ಲ. ಇವತ್ತು ಬೇಕಾದ ಅರ್ಹತೆಗಳು: ದುಡ್ಡು, ದುಡ್ಡು, ದುಡ್ಡು.

ನಾನು ವಾಸಿಸುವ ಬೆಂಗಳೂರು ದಕ್ಷಿಣದ ಸುತ್ತಮುತ್ತ ಹೆಚ್ಚಿಗೆ ಶುಭಾಶಯ ಕೋರುತ್ತಿರುವವರು ರಿಯಲ್ ಎಸ್ಟೇಟ್‌ನಲ್ಲಿ ದುಡ್ಡು ಮಾಡಿರುವವರು ಎಂದು ಹೇಳಬಹುದಾದ ಜನ. ಅವರ ಜಾತಿನಾಮ, ವೇಷಭೂಷಣ, ಎಲ್ಲಾ ಬೆರಳುಗಳಲ್ಲಿಯ ಉಂಗುರಗಳು,  ಕುತ್ತಿಗೆಯಲ್ಲಿ ನೇತಾಡುವ ನಾಯಿಗಳ ಕೊರಳಪಟ್ಟಿಯಷ್ಟು ದಪ್ಪಗಾತ್ರದ ಚೈನ್, ಮೇಲಿನ ಗುಂಡಿ ಬಿಚ್ಚಿದ ಅಂಗಿ, ಕೈಯಲ್ಲಿ ಮೊಬೈಲ್ ಹಿಡಿದು ಧೀರನಡಿಗೆಯಲ್ಲಿರುವಾಗ ತೆಗೆಸಿದ ಚಿತ್ರ,  ಇತ್ಯಾದಿಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಅದರ ಜೊತೆಗೆ ಎಂತೆಂತಹುದೊ ವ್ಯವಹಾರಗಳಲ್ಲಿ ದುಡ್ಡು ಮಾಡಿ ಅಧಿಕಾರದ ಹಪಹಪಿಗೆ ಬಿದ್ದವರು ಮತ್ತು ಸ್ಥಳೀಯ ಶಾಸಕ, ಕಾರ್ಪೊರೇಟರ್‌ನ ಚೇಲಾ ಆಗಿದ್ದುಕೊಂಡು ಮುಂದಿನ ಚುನಾವಣೆಗಳಲ್ಲಿ ಮುಂಚೂಣಿಗೆ ಬರಬೇಕು ಎಂದುಕೊಂಡಿರುವ ಮಹಾನುಭಾವರು. ಜೊತೆಗೆ ಹಾಲಿ ಶಾಸಕರ ಬೆಂಬಲಿಗರಲ್ಲಿ ತಮ್ಮ ಶಾಸಕನಿಗೆ ನಿಷ್ಠೆ ತೋರಿಸಿಕೊಳ್ಳುವ ಹಂಬಲದಲ್ಲಿರುವವರು. ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಕೆಚ್ ಹಾಕುತ್ತಿರುವವರು. ಇವರಲ್ಲಿ ಒಂದಷ್ಟು ಜನ ಈಗಾಗಲೇ ತಮಗೆ ಟಿಕೆಟ್ ಕೊಡಿಸಬಲ್ಲ ನಾಯಕರನ್ನು ಅವರಿಗೆ ಸಲ್ಲಿಸಬೇಕಾದಷ್ಟು ಕಪ್ಪ ಸಲ್ಲಿಸಿ ಆ ನಾಯಕರ ಫೊಟೋಗಳೊಂದಿಗೆ ತಮ್ಮದನ್ನೂ ಹಾಕಿಸಿಕೊಂಡು ಎಲ್ಲೆಲ್ಲಿಯೂ ಜನರಿಗೆ ಶುಭಾಶಯ ಕೋರುತ್ತಿದ್ದಾರೆ. ಒಂದೇ ಪಕ್ಷದ ಹಲವಾರು ಜನ ಒಂದೇ ಪಟ್ಟಣದಲ್ಲಿ ಬೇರೆಬೇರೆಯಾಗಿಯೇ ಶುಭಾಶಯ ಕೋರುತ್ತಿದ್ದಾರೆ. ಸ್ವೀಕರಿಸಿಕೊಳ್ಳಿ.

ನೆನ್ನೆಯ ಪತ್ರಿಕೆಗಳಲ್ಲಿ “’ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬಂಟಿಂಗ್ಸ್, ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು` ಎಂದು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ಎಚ್ಚರಿಕೆ ನೀಡಿದರು.” ಎಂದು ವರದಿಯಾಗಿದೆ. ಆದರೆ, ಇದು ಎಂತಹ ಘನಗಂಭೀರ ಎಚ್ಚರಿಕೆ ಎಂದೂ, ಇದಕ್ಕೆ ನಮ್ಮ ಸ್ಥಾಪಿತ ಮತ್ತು ಉದಯೋನ್ಮುಖ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಬೆಂಗಳೂರಿನ ಬೀದಿಗಳಲ್ಲಿಯೇ ಕಾಣಿಸುತ್ತದೆ. ಕಳೆದ ಎರಡು ದಿನಗಳಿಂದ ನಗರದ ಹಲವೆಡೆ ಈ ಬ್ಯಾನರ್‌ಗಳನ್ನು ತೆಗೆದಿರುವುದು ಎದ್ದು ಕಾಣುತ್ತದೆ, ನಿಜ. ಆದರೆ ಇದು ಎಷ್ಟು ದಿನ? ವಿಧಾನಸೌಧದ ಸುತ್ತ, ಪ್ರಮುಖವಾಗಿ ಶಾಸಕರ ಭವನದ ಮುಂದೆ ಇರುವ ಬ್ಯಾನರ್–ಬಂಟಿಂಗ್ಸ್ ಕಿತ್ತು ಹಾಕಿಸಿದರೆ ಹಾಗೂ ಅಲ್ಲಿ ಮತ್ತೆ ಹಾಕದಿರುವ ಹಾಗೆ ನೋಡಿಕೊಂಡರೆ ಸಾಕು, ಅಷ್ಟು ಮಾತ್ರದ ನಗೆಪಾಟಲು ಮತ್ತು ಕಾನೂನು ಉಲ್ಲಂಘನೆ ತಪ್ಪುತ್ತದೆ.

ಸುಮಾರು ಒಂದೆರಡು ತಿಂಗಳಿನ ಹಿಂದೆ ಪ್ರಜಾವಾಣಿಯಲ್ಲಿ ವಿಶೇಷ ವರದಿಯೊಂದು ಪ್ರಕಟವಾಗಿತ್ತು. ಬೆಂಗಳೂರು ಸುತ್ತಮುತ್ತಲಿನ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಮಾಜ ಸೇವಾ ಕಾರ್ಯಗಳು ಹೆಚ್ಚಾಗಿವೆ ಎಂದು. ಮಾಡುತ್ತಿರುವವರು ಯಾರು? ಬೆಂಗಳೂರಿನಲ್ಲಿ ನೆಲೆಸಿರುವ ಆ ಭಾಗದ ಹಣವಂತರು ಕೆಲವರು, ಮತ್ತು ಸ್ಥಳೀಯವಾಗಿಯೇ ವಾಸಿಸುತ್ತಿರುವ ಮತ್ತೊಂದಷ್ಟು ಶ್ರೀಮಂತರು. ಯಾವುದ್ಯಾವುದೊ ಕಾರ್ಯಕ್ರಮಗಳನ್ನು ಆಯೋಜಿಸಿ ಅಲ್ಲಿ ದಾನಧರ್ಮಗಳನ್ನು ಮಾಡಿಯಾದ ಮೇಲೆ “ಮುಂದಿನ ಚುನಾವಣೆಯಲ್ಲಿ ನಮ್ಮನ್ನು/ಇವರನ್ನು ಮರೆಯಬೇಡಿ” ಎಂದು ಕಡ್ಡಾಯವಾಗಿ ಫಲಾನುಭವಿಗಳನ್ನು ಕೋರುತ್ತಾರಂತೆ, ಆಣೆ ಹಾಕಿಸಿಕೊಳ್ಳುತ್ತಾರಂತೆ. ಸದ್ಯ, ಛಾಪಾ ಕಾಗದದ ಮೇಲೆ ಸಹಿ ಮಾಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಆದರೆ ಇದು ಬೆಂಗಳೂರಿನ ಸುತ್ತಮುತ್ತಲು ಮಾತ್ರ ಎನ್ನಲಾಗದೇನೊ. ರಾಜ್ಯದ ಯಾವ ಮೂಲೆಗೆ ಹೋದರೂ ಈ ಬ್ಯಾನರ್‌ಗಳು ಕಾಣಿಸುತ್ತವೆ. ಕೆಲವು ಕಡೆ, ಅಲ್ಲಿಯ ಸ್ಥಳೀಯ ಆರ್ಥಿಕ ಸ್ಥಿತಿ ಮತ್ತು ರಾಜಕೀಯ ಪೈಪೋಟಿಯ ಆಧಾರಗಳ ಮೇಲೆ ಒಂದಷ್ಟು ಏರುಪೇರು ಇರಬಹುದು. ಆದರೆ, ಯಾರಿಗಾದರೂ ಈಗ ನಾಯಕನಾಗಿ ಪ್ರತಿಷ್ಠಾಪಿತನಾಗಬೇಕಾದರೆ ಮೊದಲು ಮಾಡಬೇಕಾದ ಸುಲಭ ಕೆಲಸ ಬ್ಯಾನರ್ ಹಾಕಿಸುವುದು, ಕಟೌಟ್ ನಿಲ್ಲಿಸುವುದು.

ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಜನನಾಯಕರು ಉದಯಿಸುತ್ತಿದ್ದಾರೆ. ಪ್ರತಿ ಹಬ್ಬದ ಸಮಯದಲ್ಲೂ.

ಅಧಿಕಾರಶಾಹಿ ಮನಸ್ಸು ಮತ್ತು ಸೋನಿಯಾ ಗಾಂಧಿ


-ಚಿದಂಬರ ಬೈಕಂಪಾಡಿ


 

ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವನತಿಗೆ ಕ್ಷಣಗಣನೆ ಆರಂಭವಾದಂತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಮಧ್ಯಂತರ ಚುನಾವಣೆಗ ಹಪಹಪಿಸುತ್ತಿವೆ. ಅವುಗಳ ದಾಹ ನೀಗಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆಯೇನೋ ಎನ್ನುವ ರೀತಿಯಲ್ಲಿ ಘಟನಾವಳಿಗಳು ಘಟಿಸುತ್ತಿವೆ. ಇಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾಗಿರುವುದು ಯುಪಿಎ ಸರ್ಕಾರದ ಸಂಕಷ್ಟಕ್ಕೆ ಯಾರು ಹೊಣೆ ಎನ್ನುವ ಕುರಿತು. ಯುಪಿಎ ಘಟಕ ಪಕ್ಷಗಳು ಖಂಡಿತಕ್ಕೂ ಕಾರಣವಲ್ಲ, ಹಾಗಾದರೆ ಇದರ ಹೊಣೆಯನ್ನು ಕಾಂಗ್ರೆಸ್ ಪಕ್ಷದ ಹೆಗಲಿಗೆ ಹೊರಿಸಬೇಕಾಗುತ್ತದೆ ಮತ್ತು ಅದು ಸಹಜವೂ ಹೌದು.

2ಜಿ ಹಗರಣ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಿಂದ ಹಿಡಿದು ಡೀಸೆಲ್ ದರ ಏರಿಕೆ, ಚಿಲ್ಲರೆಯಲ್ಲೂ ನೇರಬಂಡವಾಳ ಹೂಡಿಕೆ ತನಕ ಯುಪಿಎ ಸರ್ಕಾರದ ಹೆಜ್ಜೆಗಳನ್ನು ಅವಲೋಕಿಸಿದರೆ ಇವೆಲ್ಲವೂ ಕಾಂಗ್ರೆಸ್ ಪಕ್ಷ ತಾನಾಗಿಯೇ ಮೈಮೇಲೆ ಎಳೆದುಕೊಂಡವು ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಂತೂ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಮನೋಭಾವ ಹೆಚ್ಚಿದಂತೆ ಭಾಸವಾಗುತ್ತಿದೆ. ಆದರೆ ಬಹುಮುಖ್ಯವಾಗಿ ಇಬ್ಬರನ್ನು ಈ ಸಂದರ್ಭದಲ್ಲಿ ಚರ್ಚಿಸಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಇಬ್ಬರೂ ಯುಪಿಎ ಸರ್ಕಾರವನ್ನು ಮುನ್ನಡೆಸುತ್ತಿರುವವರು. ಪ್ರಧಾನಿಯಾಗಿ ಡಾ.ಮನಮೋಹನ್ ಸಿಂಗ್ ಅಧಿಕಾರ ನಿರ್ವಹಿಸುತ್ತಿದ್ದರೆ ಅವರನ್ನು ನಿಯಂತ್ರಿಸುತ್ತಿರುವವರು ಸೋನಿಯಾ ಗಾಂಧಿ. ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಮುತ್ಸದ್ದಿತನದ ಕೊರತೆಯಿದೆ ಎನ್ನುವುದನ್ನು ಹೇಳಲು ಯಾವ ಪಂಡಿತರೂ ಬೇಕಾಗಿಲ್ಲ. ಅವರು ಬೆಳೆದಿರುವ ಹಿನ್ನೆಲೆಯಲ್ಲಿ ಅವರನ್ನು ಮುತ್ಸದ್ಧಿಯನ್ನಾಗಿಸುವ ಯಾವ ಕುರುಹುಗಳೂ ಇಲ್ಲ. ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿ ಅಧಿಕಾರ ಅನುಭವಿಸುತ್ತಿದ್ದಾರೆ. ಇನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ರಾಜಕಾರಣಿಯಂತೂ ಅಲ್ಲವೇ ಅಲ್ಲ. ಓರ್ವ ಸರ್ಕಾರಿ ಅಧಿಕಾರಿಯಾಗಿ ಡಾ.ಸಿಂಗ್ ಅವರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇವರ ರಾಜಕೀಯ ಪ್ರವೇಶ ಕೂಡಾ ಆಕಸ್ಮಿಕ. ಆದ್ದರಿಂದಲೇ ಡಾ.ಸಿಂಗ್ ಅವರಿಗೆ ಜನರ ನಾಡಿಮಿಡಿತದ ನೇರ ಅನುಭವವಿಲ್ಲ.

ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಈಗ ತನ್ನ ಹೊಣೆಗಾರಿಕೆ ನಿಭಾಸುತ್ತಿದೆ ಅನ್ನಿಸದಿರುವುದಕ್ಕೆ ಅದು ಯುಪಿಎ ಸರ್ಕಾರದ ಸಾರಥ್ಯವಹಿಸಿ ನಡೆದುಕೊಂಡ ರೀತಿಯೇ ಸಾಕ್ಷಿ. ರಾಜಕೀಯ ಪಕ್ಷ ಯಾವೊತ್ತೂ ಜನರ ಜೊತೆ ಹೆಜ್ಜೆ ಹಾಕಲು ಬಯಸುತ್ತದೆ. ಅದು ಅಧಿಕಾರದಲ್ಲಿ ಉಳಿಯಲು ಅನಿವಾರ್ಯ ಕೂಡಾ. ಆದರೆ ರಾಜಕೀಯ ಪಕ್ಷದ ನಡೆಗಳಿಗೆ ಅಧಿಕಾರಶಾಹಿ ವಿರುದ್ಧವಾಗಿ ಹೆಜ್ಜೆ ಹಾಕುತ್ತದೆ. ಇಲ್ಲೂ ಹೀಗೆ ಆಗುತ್ತಿದೆ. ಕಾಂಗ್ರೆಸ್ ಪಕ್ಷ ಜನರ ನಾಡಿಮಿಡಿತಕ್ಕೆ ಸ್ಪಂದಿಸಿ ನಡೆಗಳನ್ನು ಇಡಬೇಕಾಗಿತ್ತು. ಅಂತೆಯೇ ಪ್ರಧಾನಿಯೂ ಕೂಡಾ. ಆದರೆ ಸೋನಿಯಾ ಗಾಂಧಿ ಮತ್ತು ಡಾ.ಮನಮೋಹನ್ ಸಿಂಗ್ ಜನರಿಂದ ವಿಮುಖರಾಗುತ್ತಿದ್ದಾರೆ ಅನ್ನಿಸತೊಡಗಿದೆ.

ಸೋನಿಯಾ ಗಾಂಧಿ ಅವರ ಇಂಥ ನಡೆಗಳಿಗೆ ಮತ್ತೆ ಕಾರಣ ಹುಡುಕಿದರೆ ಅವರಿಗೆ ಸಿಗುತ್ತಿರುವ ಸಲಹೆಗಳು ಸರಿಯಾಗಿಲ್ಲ ಎನ್ನುವುದು ಅರಿವಿಗೆ ಬರುತ್ತವೆ. ಅವರಿಗೆ ಸಿಗುವ ಸಲಹೆಗಳನ್ನು ವಿಮರ್ಶೆಗೆ ಒಳಪಡಿಸುವ ಜಾಣ್ಮೆಯ ಕೊರತೆ ಎದ್ದುಕಾಣುತ್ತದೆ. ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಯಡವಟ್ಟೇ ಹಗರಣಗಳಿಗೆ ಕಾರಣ ಎನ್ನುವುದಂತೂ ಸ್ವತ: ಸೋನಿಯಾ ಅವರು ಹೇಗೆ ತಾನೇ ಜೀರ್ಣಿಸಿಕೊಳ್ಳಲು ಸಾಧ್ಯ? ವಾಸ್ತವವಾಗಿ ಸೋನಿಯಾ ಅವರು ಜನರ ನಾಡಿಮಿಡಿತಕ್ಕೆ ಪೂರಕವಾಗಿ ಹೆಜ್ಜೆ ಹಾಕುತ್ತಿದ್ದರೆ ಇಂಥ ಬಿಕ್ಕಟ್ಟು ಬರಲು ಸಾಧ್ಯವಿರಲಿಲ್ಲ. ಬದಲಾಗಿ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಡೆಗಳನ್ನು ಗೌರವಪೂರ್ವಕವಾಗಿ ಮಾನ್ಯಮಾಡುವ ಮೂಲಕ ಹಿನ್ನಡೆ ಕಾಣುವಂತಾಯಿತು.

ಡಾ.ಮನಮೋಹನ್ ಸಿಂಗ್ ಅವರು ಈ ದೇಶಕಂಡ ಉತ್ತಮ ಅರ್ಥಶಾಸ್ತ್ರಪಂಡಿತ ಥಿಯರಿಟಿಕಲ್ ಆಗಿ. ಆದರೆ ರಾಜಕೀಯ ಪಕ್ಷಕ್ಕೆ ಥಿಯರಿಗಿಂತಲೂ ಪ್ರಾಕ್ಟಿಕಲ್ ಮುಖ್ಯವಾಗುತ್ತದೆ. ಇದನ್ನು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ಸಮರ್ಥವಾಗಿ ಗುರುತಿಸಿದ್ದರು ಮತ್ತು ಅನುಷ್ಠಾನಕ್ಕೆ ತರುವ ಎದೆಗಾರಿಕೆ ತೋರಿಸಿದರು. ಅಂಥ ಎದೆಗಾರಿಕೆಯನ್ನು ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಮುಂದುವರಿಸಿದರು. ನಂತರ ಬಂದ ಡಾ.ಮನಮೋಹನ್ ಸಿಂಗ್ ಥಿಯರಿಗೆ ಮಾತ್ರ ಅಂಟಿಕೊಂಡರೇ ಹೊರತು ಪ್ರಾಕ್ಟಿಕಲ್ ಆಗಿ ಯೋಚಿಸಲಿಲ್ಲ, ಹಾಗೆ ಯೋಚಿಸುವುದು ಅವರ ಜಾಯಮಾನವೂ ಅಲ್ಲ.

ಡಾ.ಮನಮೋಹನ್ ಸಿಂಗ್ ಅವರ ಸುದೀರ್ಘ ನಡೆಗಳನ್ನು ಹತ್ತಿರದಿಂದ ಗಮನಿಸಿದರೆ ಅವರು ಓರ್ವ ಬ್ಯೂರೋಕ್ರೆಟ್ ಹೊರತು ಅವರಲ್ಲಿ ರಾಜಕಾರಣಿಯ ಮನಸ್ಸನ್ನು ಗುರುತಿಸುವುದು ಸಾಧ್ಯವಿಲ್ಲ. ಲಲಿತ್ ನಾರಾಯಣ್ ಮಿಶ್ರ ಅವರ ಮೂಲಕ ಡಾ.ಸಿಂಗ್ 70ರ ದಶಕದಲ್ಲಿ ವಿದೇಶಾಂಗ ವ್ಯವಹಾರ ವಿಭಾಗದ ಸಲಹೆಗಾರರಾಗಿ ಅಖಾಡಕ್ಕಿಳಿದರು. 1982ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮುಖ್ಯಸ್ಥರಾದರು. ಈ ಹುದ್ದೆ ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುವ ಗುರುತರವಾದ ಹುದ್ದೆ. ಆ ಕಾಲಕ್ಕೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಅನೇಕ ಸುಧಾರನೆಗಳನ್ನು ಜಾರಿಗೆ ತರುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ರಾಜಕೀಯ ಶಕ್ತಿಗೆ ದುರ್ಬಲವರ್ಗದವರ ಬೆಂಬಲ ಪಡೆಯುವುದು ಅವರ ಉದ್ದೇಶವಾಗಿತ್ತು. ಆ ಕಾಲದಲ್ಲೇ ಬಿ.ಜನಾರ್ಧನ ಪೂಜಾರಿ ಅವರನ್ನು ಇಂದಿರಾ ಗಾಂಧಿ ಅವರು ಹಣಕಾಸು ಖಾತೆ ಸಹಾಯಕ ಸಚಿವರನ್ನಾಗಿ ಮಾಡಿದ್ದರು. ತೀರಾ ಹಿಂದುಳಿದ ವರ್ಗದಿಂದ ಬಂದಿದ್ದ ಜನಾರ್ಧನ ಪೂಜಾರಿಯವರು ಬ್ಯಾಂಕ್‌ಗಳ ಮೂಲಕ ಸಾಲಮೇಳ ಜಾರಿಗೆ ತಂದು ಹೊಸ ಕ್ರಾಂತಿಯುಂಟುಮಾಡಿದರು. ಈ ಸಂದರ್ಭದಲ್ಲಿ ಡಾ.ಮನಮೋಹನ್ ಸಿಂಗ್ ಅರ್ಥವ್ಯವಸ್ಥೆಯನ್ನು ಓರ್ವ ಅಧಿಕಾರಿಯಾಗಿ ನಿಭಾಯಿಸುತ್ತಾ ಸಾಲಮೇಳವನ್ನು ಬೆಂಬಲಿಸಿರಲಿಲ್ಲ. ಆದರೆ ಪೂಜಾರಿ ಅವರ ಈ ವಿನೂತನ ಹೆಜ್ಜೆ ಇಂದಿರಾ ಅವರಿಗೆ ಪ್ರಿಯವಾಗಿತ್ತು. ಬ್ಯಾಂಕ್‌ಗಳಿಂದ ಸಣ್ಣಮಟ್ಟದ ಸಾಲ ವಿತರಣೆ ದೇಶವ್ಯಾಪಿ ಚಳುವಳಿಯ ರೂಪದಲ್ಲಿ ಬೆಳೆಯಿತು. ಇದನ್ನು ಡಾ.ಸಿಂಗ್ ಮುಗುಮ್ಮಾಗಿ ನೋಡಿದರು. ರಾಜೀವ್ ಗಾಂಧಿ ಅವರು ಸಾಲಮೇಳ ಬೆಂಬಲಿಸಿದರು, ನಂತರ ಪಿ.ವಿ.ನರಸಿಂಹ ರಾವ್ ಅವರೂ ಜನರನ್ನು ತನ್ನ ತೆಕ್ಕೆಗೆ ಸೆಳೆಯಲು ಸಾಲಮೇಳ ಅಸ್ತ್ರವೆಂದೇ ಬೆಂಬಲಿಸಿದ್ದರು. ಸುಮಾರು ಐದು ವರ್ಷಗಳ ಕಾಲ ಜನಾರ್ಧನ ಪೂಜಾರಿ ಅವರು ಅಕ್ಷರಷ: ಈ ದೇಶದ ಬ್ಯಾಂಕ್‌ಗಳು ಬಡವರತ್ತ ಮುಖಮಾಡುವಂತೆ ಮಾಡಿದರು. ಆದರೆ ಅವುಗಳಿಂದ ಆದ ಆರ್ಥಿಕ ಬದಲಾವಣೆಗಳನ್ನು ಗುರುತಿಸುವುದು ಬೇರೆಯೇ ಮಾತು. ಪೂಜಾರಿ ಅವರನ್ನು ಬ್ಯೂರೋಕ್ರೆಟ್ ವ್ಯವಸ್ಥೆ ಆ ಸ್ಥಾನದಿಂದ ಕದಲಿಸುವಲ್ಲಿ ಸಫಲವಾಯಿತು. ಮತ್ತೆ ಇಂದಿನತನಕ ಸಾಲಮೇಳಗಳನ್ನು ಮಾಡಿಲ್ಲ. ಕಾಂಗ್ರೆಸ್ ಪಕ್ಷ ಈ ಸಾಲಮೇಲಗಳ ಮೂಲಕ ಚೈತನ್ಯ ಪಡೆದುಕೊಂಡಿದ್ದಂತೂ ನಿಜ.

ಅಂದರೆ ಜನಪರವಾದ ಕಾಳಜಿ ಮತ್ತು ಒಂದು ರಾಜಕೀಯ ಪಕ್ಷದ ನಾಯಕನಿಗೆ ಇರಬೇಕಾದ ಮುಂದಾಲೋಚನೆ ಆಗಲೂ ಡಾ.ಮನಮೋಹನ್ ಸಿಂಗ್ ಅವರಿಗೆ ಇರಲಿಲ್ಲ ಎನ್ನುವುದಕ್ಕೆ ಈ ಮಾತುಗಳು ಪುಷ್ಠಿ ನೀಡುತ್ತವೆ. ಇಂಥ ಹಿನ್ನೆಲೆಯಿರುವ ಸಾರಥಿಯಿಂದ ಸಾಮಾನ್ಯ ಜನರು ಡೀಸೆಲ್ ಬೆಲೆ ಹೆಚ್ಚಿಸಬೇಡಿ ಎನ್ನುವುದು ಕೇಳಿಸುವುದು ಹೇಗೆ? ಅಡುಗೆ ಅನಿಲ ಸಿಲಿಂಡರ್‌ಗಳು ವರ್ಷಕ್ಕೆ ಆರು ಮಾತ್ರ ಎನ್ನುವ ಮಿತಿ ಸರಿಯಲ್ಲ ಎನ್ನುವುದು ಅರ್ಥವಾಗುವುದಾದರೂ ಹೇಗೆ? ವಿದೇಶಿ ಬಂಡವಾಳ ಹೂಡಿಕೆಗೆ ಬಾಗಿಲು ತೆರೆಯಬೇಡಿ ಎನ್ನುವುದು ಅರ್ಥವಾಗುವುದಾರೂ ಹೇಗೆ?

ಆದ್ದರಿಂದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಮುತ್ಸದ್ದಿತನದ ಕೊರತೆಯಿಂದಾಗಿ ತನ್ನ ಭವಿಷ್ಯವನ್ನು ಮಸುಕಾಗಿಸಿಕೊಳ್ಳುತ್ತಿದೆ. ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕಳೆದುಕೊಳ್ಳುವುದೇನೂ ಇಲ್ಲ, ಅವರಿಗೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವ ಜರೂರತ್ತೂ ಇಲ್ಲ ಎನ್ನುವುದನ್ನು ಕಾಂಗ್ರೆಸ್ ಅಧಿನಾಯಕಿ ಅರ್ಥ ಮಾಡಿಕೊಂಡಿದ್ದರೆ ಅನಾಹುತ ತಪ್ಪಿಸಬಹುದಾಗಿತ್ತು. ಹಾಗೆ ನೋಡಿದರೆ ಬಿಜೆಪಿಗೆ ಬ್ಯೂರೋಕ್ರೆಟ್ ಮನಸ್ಸಿರಬೇಕಿತ್ತು, ಅದು ಬದಲಾವಣೆ ಮಾಡಿಕೊಂಡಿದೆ. ಮಮತಾ ಬ್ಯಾನರ್ಜಿ, ಮುಲಾಯಂ, ಶರದ್ ಯಾದವ್, ಕರುಣಾನಿಧಿ, ಲಾಲೂಪ್ರಸಾದ್ ಯಾದವ್, ದೇವೇಗೌಡ ಸಹಿತ ಈ ದೇಶದ ಎಡಪಕ್ಷಗಳು ಒಗ್ಗಟ್ಟಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಯಾವ ಸಂದೇಶ ರವಾನಿಸುತ್ತಿದೆ? ಆದ್ದರಿಂದ ಈ ದೇಶದ ರಾಜಕೀಯ ಶಕ್ತಿಯನ್ನು ಕಾಂಗ್ರೆಸ್ ನಿರಾಯಾಸವಾಗಿ ಕಳೆದುಕೊಳ್ಳಲು ಯಾರು ಹೊಣೆ?

ಅಸ್ಸಾಂ ಸಂಘರ್ಷ, ವದಂತಿ: ಕನ್ನಡ ಮೀಡಿಯಾ ನೋಡಿದ್ದು ಹೇಗೆ?

ದಿನೇಶ್ ಕುಮಾರ್ ಎಸ್.ಸಿ.

ಮೀಡಿಯಾ ಅನ್ನುವುದು ತೀವ್ರಗತಿಯಲ್ಲಿ ಬದಲಾಗುತ್ತಿರುವ, ನಮ್ಮ ಬದುಕನ್ನು ನಿಯಂತ್ರಿಸುವಷ್ಟು ಪ್ರಭಾವಶಾಲಿಯಾಗಿ ಬೆಳೆದಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮೀಡಿಯಾ ಸಶಕ್ತವಾಗಿ ಬೆಳೆಯುತ್ತಿರುವ ಹೊತ್ತಿನಲ್ಲೇ ಅದು ತನ್ನ ಮೇಲೆ ತಾನು ಇನ್ನಷ್ಟು ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಾದ ಅಗತ್ಯವಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಸಾಮಾಜಿಕ ಪ್ರಜ್ಞೆಯನ್ನು ಅದು ಕಳೆದುಕೊಳ್ಳುತ್ತಲೇ ಸಾಗಿದೆ. ಇತ್ತೀಚಿನ ವಿದ್ಯಮಾನಗಳಲ್ಲಿ ಅದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇದೆ. ಮೀಡಿಯಾ ಭ್ರಷ್ಟಾಚಾರದ ವಿರುದ್ಧ ಇದೆ ಎಂಬ ಹಾಗೆ ಕಾಣಿಸುತ್ತಿರುತ್ತದೆ, ಆದರೆ ಸ್ವತಃ ತಾನೇ ಭ್ರಷ್ಟಗೊಂಡು ಹೋಗಿದೆ. ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವಂತೆ ಬರಿಗಣ್ಣಿಗೆ ಕಾಣಿಸುತ್ತಿರುತ್ತದೆ, ಆದರೆ ತಾನೇ ಜನರನ್ನು ಭೀತಗೊಳಿಸುವ ಕೆಲಸ ಮಾಡುತ್ತಿರುತ್ತದೆ. ಜಾತಿವಾದದ ವಿರುದ್ಧ ಗುಟುರು ಹಾಕಿದಂತೆ ಕಾಣುತ್ತಿರುತ್ತದೆ, ಆದರೆ ತೀರಾ ಅಸಹ್ಯವಾದ ಜಾತೀಯತೆಯನ್ನು ಮೀಡಿಯಾ ಇವತ್ತು ಮೈತುಂಬ ತುಂಬಿಕೊಂಡಿದೆ. ಮೀಡಿಯಾ ಇವತ್ತು ತೀವ್ರಗೊಳ್ಳುತ್ತಿರುವ ಕೋಮುವಾದದ ವಿರುದ್ಧ ಇರಬೇಕಿತ್ತು, ಆದರೆ ಕೋಮುವಾದಿ ನಿಲುವುಗಳಿಗೆ ಅಂಟಿಕೊಂಡು, ರಾಜಾರೋಷವಾಗಿ ಕೋಮುವಿಷವನ್ನು ಹರಡುವ ಕೆಲಸ ಮಾಡುತ್ತಿದೆ.

ಅಸ್ಸಾಂ ನಾಗರಿಕರು ಬೆಂಗಳೂರು ತೊರೆದು ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿದ ವಿದ್ಯಮಾನದ ಕುರಿತು ಚರ್ಚಿಸುವ ಮುನ್ನ, ಇತ್ತೀಚಿಗೆ ನಡೆದ ಇನ್ನೊಂದು ವಿದ್ಯಮಾನದ ಕುರಿತು ಪ್ರತಿಕ್ರಿಯೆ ನೀಡಿ ಮುಂದುವರೆಯುತ್ತೇನೆ. ಇತ್ತೀಚಿಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಒಂದಷ್ಟು ಶಂಕಿತ ಆರೋಪಿಗಳನ್ನು ಬಂಧಿಸಿದರು. ಈ ಆರೋಪಿಗಳು ಕೆಲ ಗಣ್ಯ ವ್ಯಕ್ತಿಗಳನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಎಂಬ ಕಾರಣಕ್ಕೆ ಬಂಧಿಸಲಾಗಿದೆ ಎಂಬುದು ಪೊಲೀಸರ ಹೇಳಿಕೆಯಾಗಿತ್ತು. ಇದಾದ ತರುವಾಯ ನಮ್ಮ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಗಮನಿಸಿ. ಪೊಲೀಸರು ಪತ್ರಕರ್ತರಿಗೆ ಬಿಡುಗಡೆ ಮಾಡುವ ಹೇಳಿಕೆಗಳು ಸರ್ಕಾರಿ ಗುಮಾಸ್ತರು ಬರೆಯುವ ಟಿಪ್ಪಣಿ ಹಾಗಿರುತ್ತದೆ. ಅಲ್ಲಿ ಊಹಾಪೋಹಗಳಿಗೆ ಅವಕಾಶ ಇರುವುದಿಲ್ಲ. ಪ್ರತಿಯೊಂದು ಪದಕ್ಕೂ ಅವರು ಜವಾಬ್ದಾರರಾಗಿರುವುದರಿಂದ ಈ ಹೇಳಿಕೆಗಳಲ್ಲಿ ಉತ್ಪ್ರೇಕ್ಷೆ ಇರುವ ಸಾಧ್ಯತೆ ಕಡಿಮೆ. ಕಾಗೆ ಗೂಬೆ ಕಥೆಗಳನ್ನು ಹೆಣೆದಿದ್ದರೂ ಪೊಲೀಸರು ಒಂದು ಹಂತದವರೆಗೆ ತೀರಾ ಅತಿರಂಜಿತವಾದ ಹೇಳಿಕೆ ನೀಡುವುದಿಲ್ಲ. ಇಂಥ ಪೊಲೀಸು ಹೇಳಿಕೆಗಳು ಪತ್ರಿಕೆಗಳಿಗೆ, ಚಾನಲ್‌ಗಳಿಗೆ ಸೇಲ್ ಆಗುವ ವಸ್ತುಗಳಲ್ಲ. ಅವರಿಗೆ ಬೇರೆಯದೇ ಸ್ವರೂಪದ ಸುದ್ದಿ ಬೇಕು. ಆ ಸುದ್ದಿಯಲ್ಲಿ ರೋಚಕತೆ ಇರಬೇಕು, ಪ್ರಚೋದಿಸುವ ಗುಣವಿರಬೇಕು. ಹಾಗಾಗಿ ಸುದ್ದಿಗಳನ್ನು ಬೇಯಿಸಿ ತಯಾರಿಸುವ ಕೆಲಸ ಶುರುವಾಗುತ್ತದೆ.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಸುದ್ದಿ ಹೊಸೆಯುವುದು ಈಗೀಗ ತುಂಬಾ ಸುಲಭ. ಒಂದು ಉದಾಹರಣೆ ಹೇಳುತ್ತೇನೆ. ಒಬ್ಬ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಭಾವಿಸಿಕೊಳ್ಳಿ. ನಾನು ಓರ್ವ ಪತ್ರಕರ್ತನಾಗಿ ನನ್ನ ಕಚೇರಿಯಲ್ಲೇ ಅದಕ್ಕೆ ಸಂಬಂಧಿಸಿದಂತೆ ನೂರು ಕಥೆ ಹೆಣೆಯಬಲ್ಲೆ. ಬಂಧಿತನಿಗೆ ಐಎಸ್ಐ ಸಂಪರ್ಕವಿದೆ. ಅವನು ಹುಜಿ, ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವನು. ಅಲ್ ಖೈದಾ ಸೇರಲು ಹವಣಿಸುತ್ತಿದ್ದ. ಅವನಿಗೆ ಮುಸ್ಲಿಂ ರಾಷ್ಟ್ರಗಳಿಂದ ಹಣ ಬರುತ್ತಿತ್ತು. ಅವನ ಮನೆಯಲ್ಲಿ ಜೆಹಾದಿಗೆ ಸಂಬಂಧಿಸಿದ ಪುಸ್ತಕಗಳಿದ್ದವು. ಈ ಒಂದೊಂದಕ್ಕೂ ಒಂದಷ್ಟು ರೆಕ್ಕೆ ಪುಕ್ಕ ಜೋಡಿಸಿದರೆ ಒಂದೊಂದು ಸ್ಟೋರಿಯಾಗಿ ಬಿಡುತ್ತದೆ. ಬಂಧನಕ್ಕೆ ಒಳಗಾದವರಲ್ಲಿ ಏನೂ ತಪ್ಪು ಮಾಡದ, ಭಯೋತ್ಪಾದನೆ ಎಂದರೆ ಏನೇನೂ ಗೊತ್ತಿಲ್ಲದ ಅಮಾಯಕರೂ ಇದ್ದಿರಬಹುದು ಎಂಬುದು ಪತ್ರಕರ್ತನಿಗೆ ಮುಖ್ಯವಾಗುವುದೇ ಇಲ್ಲ. ತಾನು ಬರೆಯುವ ಸುದ್ದಿ ಸೇಲ್ ಆಗಬೇಕು ಎನ್ನುವುದಷ್ಟೇ ಮುಖ್ಯ. ಆತ ಕೆಲಸ ಮಾಡುವ ಪತ್ರಿಕೆಯ ನೇತೃತ್ವ ವಹಿಸಿಕೊಂಡವನು ಸೇರಿದಂತೆ ಮಾಲೀಕನವರೆಗೆ ಎಲ್ಲರಿಗೂ ಇದಷ್ಟೇ ಮುಖ್ಯ. ಅದರಲ್ಲೂ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಇಟ್ಟುಕೊಂಡವನೇ ಪತ್ರಕರ್ತನಾಗಿದ್ದರೆ ಮುಗಿದೇಹೋಯಿತು. ಬಂಧಿತರನ್ನು ವಿಚಾರಣೆಯೂ ಇಲ್ಲದೆ ನೇಣಿಗೆ ಹಾಕಬೇಕು ಎಂದು ಸೂಚಿಸುವಂತಿರುತ್ತವೆ ಅವರ ವರದಿಗಳು.

ಬೆಂಗಳೂರು-ಹುಬ್ಬಳ್ಳಿಯಲ್ಲಿ ಬಂಧಿತರಾದವರ ಕುರಿತು ಕನ್ನಡ ಪತ್ರಿಕೆಗಳಲ್ಲಿ ಊಹಾಪೋಹದ ವರದಿಗಳೇ  ಪುಟಗಟ್ಟಲೆ ತುಂಬಿಕೊಂಡವು. ಕಡೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸುಳ್ಳು ಸುಳ್ಳೇ ಸುದ್ದಿ ಬರೆಯಬೇಡಿ ಎಂದು ಪತ್ರಿಕೆಗಳಿಗೆ ಎಚ್ಚರಿಕೆ ನೀಡಬೇಕಾಯಿತು. ಇಂಥ ಎಚ್ಚರಿಕೆಗಳಿಗೆ, ಸೂಚನೆಗಳಿಗೆ, ಸಲಹೆಗಳಿಗೆ, ಟೀಕೆಗಳಿಗೆ ನಮ್ಮ ಪತ್ರಿಕೆಗಳು ಎಂದೂ ತಲೆಕೆಡಿಸಿಕೊಂಡಿದ್ದಿಲ್ಲ. ಅವುಗಳಿಗೆ ಬಿಸಿಬಿಸಿಯಾದ ಸುದ್ದಿ ಬೇಕು, ಅವು ಸೇಲ್ ಆಗಬೇಕು. ಪೈಪೋಟಿಯಲ್ಲಿರುವ ಪತ್ರಿಕೆಗಳಿಗಿಂತ ಭಿನ್ನವಾದ ಸುದ್ದಿಯನ್ನು ನೀಡಬೇಕು. ಅದಕ್ಕಾಗಿ ಸುಳ್ಳಾದರೂ ಬರೆದು ದಕ್ಕಿಸಿಕೊಳ್ಳುತ್ತೇವೆ ಎಂಬ ಉಡಾಫೆಯ, ಬೇಜವಾಬ್ದಾರಿತನದ, ಸಮಾಜದ್ರೋಹದ ನಿಲುವಿಗೆ ಅಂಟಿಕೊಂಡಿರುತ್ತವೆ.

ಅಸ್ಸಾಂನಲ್ಲಿ ಬೋಡೋಗಳು ಮತ್ತು ಮುಸ್ಲಿಮರ ನಡುವೆ ನಡೆದ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಈಶಾನ್ಯ ರಾಜ್ಯಗಳ ಸಾವಿರಾರು ನಾಗರಿಕರು ಕರ್ನಾಟಕ ತೊರೆದು ತಮ್ಮ ಮಾತೃಭೂಮಿಗೆ ವಾಪಾಸಾದ ಘಟನೆಗಳಲ್ಲೂ ನಮ್ಮ ಮೀಡಿಯಾ ದೃಷ್ಟಿಕೋನವನ್ನು ಹಲವು ಬಗೆಗಳಲ್ಲಿ ಪ್ರಶ್ನಿಸಬೇಕಾಗುತ್ತದೆ.

ಮೊದಲನೆಯದಾಗಿ ಈಶಾನ್ಯ ರಾಜ್ಯದ ನಾಗರಿಕರು ತಮ್ಮ ರಾಜ್ಯಗಳಿಗೆ ವಾಪಾಸಾಗಿದ್ದನ್ನು ವಲಸೆ ಎಂದು ಬಿಂಬಿಸಿದ್ದನ್ನೇ ನಾನು ಪ್ರಶ್ನಿಸಲು ಬಯಸುತ್ತೇನೆ. ಆ ನಾಗರಿಕರು ವಿದ್ಯಾಭ್ಯಾಸದ ಕಾರಣಕ್ಕೋ, ಉದ್ಯೋಗದ ಕಾರಣಕ್ಕೋ ಕರ್ನಾಟಕಕ್ಕೆ ವಲಸೆ ಬಂದವರು. ಅವರು ವಾಪಾಸು ತಮ್ಮ ಊರಿಗೆ ಹೋಗುತ್ತಿದ್ದರೆ, ಅದು ಯಾವುದೇ ಕಾರಣಕ್ಕೆ ಆಗಿದ್ದರೂ ಅದು ವಲಸೆ ಅಲ್ಲ, ತಮ್ಮ ಊರಿಗೆ ಮರಳುವ ಪ್ರಕ್ರಿಯೆ ಅಷ್ಟೆ. ಗುಳೆ, ವಲಸೆ ಎಂಬ ಶಬ್ದಗಳನ್ನು ಬಳಸುವ ಮೂಲಕ ಕನ್ನಡ ಪತ್ರಿಕೆಗಳು ತಾಂತ್ರಿಕ ದೋಷವನ್ನು ಮಾಡಿದವು. ತನ್ಮೂಲಕ ಬಹಳ ಸುಲಭವಾಗಿ ಬಗೆಹರಿಯಬಹುದಾಗಿದ್ದ ಸಮಸ್ಯೆಗೆ ದೊಡ್ಡ ಸ್ವರೂಪವನ್ನು ತಂದುಕೊಟ್ಟವು. ಭಾರತದ ಸಂವಿಧಾನ ದೇಶದ ಯಾವುದೇ ನಾಗರಿಕ ಯಾವುದೇ ಭಾಗದಲ್ಲಿ ಹೋಗಿ ವಾಸಿಸಿದರೂ ಅದು ವಲಸೆಯಾಗುವುದಿಲ್ಲ ಎಂದು ಕೆಲವರು ಸಮರ್ಥಿಸಬಹುದು. ಆದರೆ ಅದು ಕಾಯ್ದೆಯ ಮಾತು. ಭಾರತದ ಪ್ರಾದೇಶಿಕ ವೈವಿಧ್ಯತೆ, ಒಕ್ಕೂಟದ ವ್ಯವಸ್ಥೆ ಸೂಕ್ಷ್ಮಹೆಣಿಗೆಯಲ್ಲಿ ಜೋಡಿಸಲ್ಪಟ್ಟಿರುವುದರಿಂದ ಹೀಗೆ ಸರಳೀಕರಿಸಿ ನೋಡಲಾಗುವುದಿಲ್ಲ. ವಿಷಯ ಇಷ್ಟು ಸರಳವಾಗಿದ್ದರೆ, ಈಶಾನ್ಯ ರಾಜ್ಯಗಳು, ಬಿಹಾರ, ಒರಿಸ್ಸಾ, ಮಹಾರಾಷ್ಟ್ರ ಹಾಗು ದೇಶದ ಹಲವು ಭಾಗಗಳಲ್ಲಿ ಈಗ ನಡೆಯುತ್ತಿರುವ ಸಂಘರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾತನ್ನು ಹೇಳಬೇಕಾಗುತ್ತದೆ. ಇದು ವಲಸೆಗೆ ಸಂಬಂಧಿಸಿದ ವಿಚಾರಸಂರ್ಕಿಣವಲ್ಲವಾದ್ದರಿಂದ ಈ ವಿಷಯವನ್ನು ನಾನು ಹೆಚ್ಚು ಬೆಳೆಸಲು ಬಯಸುವುದಿಲ್ಲ. ಆ ವಿಷಯದಲ್ಲಿ ನನಗೆ ನನ್ನದೇ ಆದ ನಿಲುವುಗಳಿವೆ, ಅದನ್ನು ಬೇರೆ ಸಂದರ್ಭಗಳಲ್ಲಿ ಹೇಳುತ್ತೇನೆ.

ಮತ್ತೆ ಈಶಾನ್ಯ ನಾಗರಿಕರು ತಮ್ಮ ರಾಜ್ಯಗಳಿಗೆ ವಾಪಾಸು ಹೋದ ವಿಷಯಕ್ಕೆ ಬರುವುದಾದರೆ, ಯಾವುದೇ ನಾಗರಿಕರು ತಾವು ಇರುವ ಜಾಗದಿಂದ ಭಯಭೀತರಾಗಿ, ಪ್ರಾಣರಕ್ಷಣೆಗಾಗಿ ಮತ್ತೊಂದು ಜಾಗಕ್ಕೆ ಹೋಗುವ ಪರಿಸ್ಥಿತಿ ಎಲ್ಲೂ ಉದ್ಭವವಾಗಬಾರದು. ಮಾನವೀಯತೆಯಲ್ಲಿ ವಿಶ್ವಾಸವಿಟ್ಟವರು ಯಾರೂ ಇದನ್ನು ಒಪ್ಪುವುದಿಲ್ಲ. ಇದನ್ನು ಸಂಭ್ರಮಿಸುವ ಮನಸ್ಥಿತಿಯವರೂ ನಾಗರಿಕ ಸಮಾಜದಲ್ಲಿ ಇರಬಾರದು. ಇಂಥ ಪರಿಸ್ಥಿತಿ ಎದುರಾದರೆ ಅದನ್ನು ಮನುಷ್ಯತ್ವದ ಹಿನ್ನೆಲೆಯಲ್ಲೇ ಮೊದಲು ನೋಡಬೇಕಾಗುತ್ತದೆ.

ಇದು ಮಾಹಿತಿ ತಂತ್ರಜ್ಞಾನದ ಯುಗ. ಎಸ್ಎಂಎಸ್‌ಗಳು, ಸೋಷಿಯಲ್ ನೆಟ್‌ವರ್ಕ್‌ಗಳ ಕಾಲ. ಸೋಷಿಯಲ್ ನೆಟ್‌ವರ್ಕ್‌ಗಳು ಮುಖ್ಯವಾಹಿನಿಯ ಮೀಡಿಯಾ ಹೇಳದ ಸತ್ಯಗಳನ್ನು ಬಿಚ್ಚಿಡುತ್ತ ಹೋಗುತ್ತಿರುವುದು ಒಂದು ಸಕಾರಾತ್ಮಕ ಬೆಳವಣಿಗೆ. ಆದರೆ ಅದೇ ಸಂದರ್ಭದಲ್ಲಿ ಸಾಮಾಜಿಕ ತಾಣಗಳು ಯಾವ, ಯಾರ ಅಂಕೆಯೂ ಇಲ್ಲದಂತೆ ಬೆಳೆಯುತ್ತಿರುವುದು, ಸಾಮಾಜಿಕ ಜವಾಬ್ದಾರಿಗಳು ಇಲ್ಲದ ವ್ಯಕ್ತಿ, ಗುಂಪುಗಳು ಅಶಾಂತಿಯನ್ನು ಹರಡಲು, ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಸಾಮಾಜಿಕ ತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯಿಂದಾಗಿ ಅನೇಕ ರೀತಿಯ ಅಪಾಯಗಳನ್ನು ನಮ್ಮ ಮುಂದೆ ತಂದೊಡ್ಡುತ್ತಿವೆ.

ಅಸ್ಸಾಂ ಸಂಘರ್ಷದ ವಿಷಯದಲ್ಲಿ ಹಬ್ಬಿದ ವದಂತಿಗಳಲ್ಲಿ ಸೋಷಿಯಲ್ ಮೀಡಿಯಾದ ಪಾತ್ರವೇ ಹೆಚ್ಚಿನದು. ನಾನು ಗಮನಿಸಿದಂತೆ ಅಸ್ಸಾಂ ಸಂಘರ್ಷ ಶುರುವಾದ ಸಂದರ್ಭದಲ್ಲಿ ಚಿತ್ರ ವಿಚಿತ್ರ ಫೊಟೋಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡವು. ಇಂಥ ಫೊಟೋಗಳನ್ನು ಶೇರ್ ಮಾಡಿದವರು ಒಂದೋ ಹಿಂದೂ ಮೂಲಭೂತವಾದಿಗಳಾಗಿದ್ದರು ಅಥವಾ ಮುಸ್ಲಿಂ ಮೂಲಭೂತವಾದಿಗಳಾಗಿದ್ದರು. ಹಿಂದೂ ಮೂಲಭೂತವಾದಿಗಳು ಶೇರ್ ಮಾಡಿದ ಫೊಟೋಗಳಿಗೆ ಕೊಟ್ಟ ವಿವರಣೆ ಪ್ರಕಾರ ಮುಸ್ಲಿಮರು ಹಿಂದೂಗಳನ್ನು ಸಾಮೂಹಿಕ ಕಗ್ಗೊಲೆ ಮಾಡುತ್ತಿದ್ದರು, ಮುಸ್ಲಿಂ ಮೂಲಭೂತವಾದಿಗಳು ಅಂಟಿಸಿದ ಫೊಟೋಗಳ ಪ್ರಕಾರ ಹಿಂದೂಗಳು ಮುಸ್ಲಿಮರನ್ನು ಸಾಮೂಹಿಕ ಕಗ್ಗೊಲೆ ಮಾಡಿದ್ದರು. ಈ ಫೊಟೋಗಳ ನಿಜಾಯಿತಿಯನ್ನು ಪ್ರಶ್ನಿಸುವವರು ಯಾರು? ಈ ಫೊಟೋಗಳು ಅಸ್ಸಾಂ ಸಂಘರ್ಷಕ್ಕೆ ಸಂಬಂಧಿಸಿದ್ದೇ ಅಲ್ಲವೇ ಎಂಬುದನ್ನು ವಿವೇಚನೆಯಿಂದ ಗಮನಿಸುವ ಜವಾಬ್ದಾರಿಯೂ ಇಲ್ಲದಂತೆ ಒಬ್ಬರಿಂದ ಒಬ್ಬರಿಗೆ ಶೇರ್ ಆಗತೊಡಗಿದ್ದವು.

ಇದಾದ ನಂತರ ಭಗತ್ ಸಿಂಗ್ ಕ್ರಾಂತಿ ಸೇನೆ ಎಂಬ ಸಂಘಟನೆಯೊಂದು ಪ್ರಕಟಣೆ ನೀಡಿ, ಕರ್ನಾಟಕದಲ್ಲಿರುವ ಈಶಾನ್ಯ ರಾಜ್ಯಗಳ ನಾಗರಿಕರನ್ನು ರಂಜಾನ್ ಮುಗಿಯುವ ಸಂದರ್ಭದಲ್ಲಿ ಕೊಂದು ಹಾಕಲು ಮುಸ್ಲಿಂ ಸಂಘಟನೆಗಳು ಫತ್ವಾ ಹೊರಡಿಸಿವೆ, ಈಶಾನ್ಯ ರಾಜ್ಯದ ನಾಗರಿಕರು ಸಹಾಯಕ್ಕಾಗಿ ತಮ್ಮ ದೂರವಾಣಿ ಸಂಖ್ಯೆಯನ್ನು (ಹೆಲ್ಪ್ ಲೈನ್) ಸಂಪರ್ಕಿಸಿ, ಎಂದು ಹೇಳಿತ್ತು. ಈ ಥರದ ವದಂತಿಗಳು ಒಂದಕ್ಕೊಂದು ಬೆಳೆದು ಈಶಾನ್ಯ ರಾಜ್ಯದ ನಾಗರಿಕರಿಗೆ ಸಾಮೂಹಿಕ ಎಸ್ಎಂಎಸ್‌ಗಳ ರೂಪದಲ್ಲಿ ಭೀತಿ ಹುಟ್ಟಿಸಲಾರಂಭಿಸಿದವು. ಆಗ ಶುರುವಾಗಿದ್ದೇ ವಾಪಾಸು ತವರಿಗೆ ಹೋಗುವ ತವಕ.

ಈಶಾನ್ಯ ರಾಜ್ಯಗಳ ನಿವಾಸಿಗಳು ವಾಪಾಸು ಹೋಗಲು ಆರಂಭಿಸಿದ ಮೊದಲನೇ ದಿನ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಪ್ರಹಸನವೇ ನಡೆದುಹೋಯಿತು. ಈ ನಾಗರಿಕರು ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ತಮ್ಮ ಸಮವಸ್ತ್ರ ಸಮೇತ ಆರ್‌ಎಸ್‌ಎಸ್ ಕಾರ್ಯಕರ್ತರು ಹಾಜರಾದರು. ಪೊಲೀಸರು ತಂಡೋಪತಂಡವಾಗಿ ಬಂದು ನಿಂತರು. ಅದಾದ ಮೇಲೆ ಮಂತ್ರಿ ಮಹೋದಯರು ಒಬ್ಬರಾದ ಮೇಲೊಬ್ಬರಂತೆ ಬಂದುನಿಂತರು. ಆರ್‌ಎಸ್‌ಎಸ್ ಕಾರ್ಯಕರ್ತರು ಹೇಳಿಕೊಂಡ ಪ್ರಕಾರ ಅವರು ಅಸ್ಸಾಂ ನಾಗರಿಕರಿಗೆ ರಕ್ಷಣೆ ನೀಡಲು ಬಂದಿದ್ದರು! ರಕ್ಷಣೆ ಕೊಡಲು ಪೊಲೀಸರು ಇರುವಾಗ ಲಾಠಿ ಹಿಡಿದ ಆರ್‌ಎಸ್‌ಎಸ್  ಕಾರ್ಯಕರ್ತರಿಗೇನು ಕೆಲಸ? ಈ ಪ್ರಶ್ನೆ ಪೊಲೀಸ್ ಅಧಿಕಾರಿಗಳಿಗೆ ಹೊಳೆಯಲೇ ಇಲ್ಲವೆನ್ನಿಸುತ್ತದೆ. ಮಂತ್ರಿ ಮಹೋದಯರು ವಾಪಾಸು ಹೋಗಬೇಡಿ ಎಂದು ಕಾಡಿ ಬೇಡಿ ಟಿಕೆಟ್ ಬುಕ್ ಮಾಡಿದ್ದ ಜನರನ್ನು ವಾಪಾಸು ಹೋಗಲು ಪುಸಲಾಯಿಸುತ್ತಿದ್ದರು. ಪೊಲೀಸರಿಗೆ ಮಾಮೂಲಿನಂತೆ ಎಲ್ಲರನ್ನೂ ಕಾಯುವ ಕೆಲಸ.

ಕನ್ನಡ ಮೀಡಿಯಾ ಇದೆಲ್ಲವನ್ನೂ ಅತಿರಂಜಿತವಾಗಿ ಚಿತ್ರಿಸಿತು. ನಿಜಕ್ಕೂ ಈಶಾನ್ಯ ರಾಜ್ಯದ ಜನರ ಸಾಮೂಹಿಕ ನರಮೇಧ ನಡೆದೇಹೋಗುವುದೇನೋ ಎಂಬಂತೆ ಬಣ್ಣಬಣ್ಣದ ಸುದ್ದಿಗಳು ಪ್ರಕಟಗೊಂಡವು. ಸಾಮಾನ್ಯ ಜನರಿಗೆ ಅರ್ಥವೇ ಆಗದ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಗೋಜಿಗೇ ಪತ್ರಿಕೆಗಳು ಹೋಗಲಿಲ್ಲ.

’ವಿಜಯ ಕರ್ನಾಟಕ’  ಮುಖಪುಟದಲ್ಲೇ ಒಂದು ವರದಿ ಪ್ರಕಟಿಸಿತು. ವದಂತಿ ಮೂಲ ಹುಟ್ಟಿದ್ದು ಎಲ್ಲಿಂದ ಎಂಬುದನ್ನು ವಿವರಿಸುವ ವರದಿ ಅದು. ಬಹುಶಃ ಅದನ್ನು ಹೊರತುಪಡಿಸಿದರೆ ಇಷ್ಟು ರಂಪಕ್ಕೆ ಕಾರಣವಾದ ಹಿನ್ನೆಲೆ ಏನು ಎಂಬುದನ್ನು ವಿವರಿಸುವ ಗೋಜಿಗೆ ನಮ್ಮ ಪತ್ರಿಕೆಗಳು ಹೋಗಲಿಲ್ಲ. ಭಗತ್ ಸಿಂಗ್ ಕ್ರಾಂತಿ ಸೇನೆಯು ನೀಡಿದ ಹೆಲ್ಪ್ ಲೈನ್ ನಂಬರಿಗೆ ಕರೆ ಮಾಡಿ ಮಾತನಾಡಿದ್ದ ವಿಜಯ ಕರ್ನಾಟಕ ವರದಿಗಾರ, ಯಾವ ಮುಸ್ಲಿಂ ಸಂಘಟನೆ ಫತ್ವಾ ನೀಡಿದೆ? ನಿಮ್ಮ ಬಳಿ ಮಾಹಿತಿ ಇದ್ದರೆ ನೀಡಿ ಎಂದು ಪ್ರಶ್ನೆ ಮಾಡಿದ್ದರು. ಆದರೆ ಅವರಿಂದ ಯಾವ ಉತ್ತರವೂ ಬಂದಿರಲಿಲ್ಲ. ಇದೆಲ್ಲವೂ ಆ ಮುಖಪುಟದ ವರದಿಯಲ್ಲಿ ಪ್ರಕಟಗೊಂಡಿತ್ತು. ಈ ಕ್ಷಣದವರೆಗೆ ಈ ವದಂತಿಗಳನ್ನು ಯಾಕಾಗಿ ಹಬ್ಬಿಸಲಾಯಿತು? ಹಬ್ಬಿಸಿದವರು ಯಾರು? ಇದರ ಪ್ರಯೋಜನ ಯಾರಿಗಾಯಿತು? ಈ ಪ್ರಶ್ನೆಗಳನ್ನು ಇಟ್ಟುಕೊಂಡು ವರದಿ ಮಾಡುವ ಕೆಲಸವನ್ನು ನಮ್ಮ ಮೀಡಿಯಾ ಮಾಡಲೇ ಇಲ್ಲ.

ಇದನ್ನು ನಾನು ಹೇಳುವ ಹೊತ್ತಿನಲ್ಲಿ ಪತ್ರಿಕೆಗಳು ಏನನ್ನು ವರದಿ ಮಾಡಬೇಕಿತ್ತು? ಈಶಾನ್ಯ ಜನರು ವಾಪಾಸು ಹೋಗಿದ್ದನ್ನು ಬರೆದಿದ್ದೇ ತಪ್ಪಾ ಎಂದು ನೀವು ಪ್ರಶ್ನಿಸಬಹುದು. ನಿಜ, ಈಶಾನ್ಯ ರಾಜ್ಯದ ಜನರು ಅಸಹಜವಾಗಿ ಬೆಂಗಳೂರು ಬಿಟ್ಟು ಹೊರಟಿದ್ದನ್ನು ವರದಿ ಮಾಡುವುದು ಸರಿ. ಆದರೆ ಇಡೀ ವರ್ತಮಾನದ ಹಿಂದಿನ ಹುನ್ನಾರಗಳನ್ನು ಬಿಡಿಸಿಡುವ ಯತ್ನವನ್ನು ಯಾವ ಪತ್ರಿಕೆಯೂ ಮಾಡಲಿಲ್ಲ.

ನಾನು ಒಂದು ಮಾತನ್ನು ಹೇಳುತ್ತೇನೆ, ಇಲ್ಲಿರುವ ಈಶಾನ್ಯ ರಾಜ್ಯದ ನಾಗರಿಕರು ತಪ್ಪು ತಿಳಿಯಬಾರದು. ನಿಮ್ಮ ಬಗೆ ಹೃದಯಪೂರ್ವಕವಾದ ಕಾಳಜಿ ಇಟ್ಟುಕೊಂಡೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ಈ ಬಿಜೆಪಿ ಸರ್ಕಾರ ಬಂದ ನಂತರ ಭೀಕರ ಸ್ವರೂಪದ ನೆರೆ ಪ್ರವಾಹ ಉತ್ತರ ಕರ್ನಾಟಕದ ಲಕ್ಷಾಂತರ ಜನರ ಬದುಕನ್ನೇ ಛಿದ್ರಗೊಳಿಸಿತು. ನೂರಾರು ಜನರು ಸತ್ತರು. ಸಾವಿರಾರು ಮಂದಿ ಮನೆಮಠ ಕಳೆದುಕೊಂಡರು. ಊರೂರೇ ನಾಶವಾಯಿತು. ಹೀಗೆ ಪ್ರಕೃತಿ ವಿಕೋಪದಿಂದ ನೊಂದು ಬೆಂದವರ ರಕ್ಷಣೆಗೆ ಈ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸಲೇ ಇಲ್ಲ. ತನ್ನ ಉತ್ತರದಾಯಿತ್ವವನ್ನು ನಿಭಾಯಿಸಲೇ ಇಲ್ಲ. ಸಂತ್ರಸ್ಥರಿಗೆ ಮೂರು ವರ್ಷ ಕಳೆದರೂ ಮನೆಗಳನ್ನು ಕಟ್ಟಿಕೊಡುವ ಕೆಲಸ ಈ ಸರ್ಕಾರದಿಂದ ಆಗಿಲ್ಲ. ಈ ವರ್ಷ ಕಳೆದ ಒಂದು ದಶಕದಲ್ಲಿ ಕಾಣದಂತ ಭೀಕರ ಬರ ಅದೇ ಉತ್ತರ ಕರ್ನಾಟಕವನ್ನು ಬಾಧಿಸುತ್ತಿದೆ. ಜನ ತಂಡೋಪತಂಡವಾಗಿ ಮಹಾನಗರ, ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇದೇ ಸರ್ಕಾರದ ಮಂತ್ರಿಯೊಬ್ಬರು ಹೇಳಿದ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಯಸುತ್ತೇನೆ. “ಉತ್ತರ ಕರ್ನಾಟಕದ ಜನರಿಗೆ ಗುಳೆ ಹೋಗುವುದೊಂದು ಚಟ, ಅದಕ್ಕಾಗಿ ಗುಳೆ ಹೋಗುತ್ತಾರೆ,” ಎಂದರು ಒಬ್ಬ ಘನತೆವತ್ತ ಮಂತ್ರಿ.

ಇಂಥ ಸರ್ಕಾರ ಈಶಾನ್ಯ ರಾಜ್ಯದ ನಾಗರಿಕರು ತಾತ್ಕಾಲಿಕವಾಗಿ ತಮ್ಮ ರಾಜ್ಯಗಳಿಗೆ ಹೊರಟು ನಿಂತಾಗ ತೋರಿದ ಕಾಳಜಿ ಎಷ್ಟು ಪ್ರಮಾಣದಲ್ಲಿ ಪ್ರಾಮಾಣಿಕವಾಗಿತ್ತು ಎಂಬ ಪ್ರಶ್ನೆ ಎಂಥ ದಡ್ಡರನ್ನಾದರೂ ಕಾಡುತ್ತದೆ. ಸಚಿವರೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಪ್ರಕಾರ ಸುಮಾರು ಆರುಗಂಟೆ ಅವರು ರೈಲ್ವೆ ನಿಲ್ದಾಣದಲ್ಲೇ ಇದ್ದು ಈಶಾನ್ಯ ರಾಜ್ಯದ ನಾಗರಿಕರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಜತೆಯಲ್ಲಿ ಪೊಲೀಸರು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು. ಈ ಮಂತ್ರಿ ಎಂದೂ ಬರ ಬಂದು ಬವಣೆ ಅನುಭವಿಸುತ್ತಿರುವ ಜನರಿರುವ ಒಂದೇ ಒಂದು ಹಳ್ಳಿಯಲ್ಲಿ ಒಂದೇ ಒಂದು ಗಂಟೆ ಇದ್ದುಬಂದವರಲ್ಲ. ಯಾಕೆ ಈ ಆಷಾಢಭೂತಿತನ?

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಮಣಿಪುರದ ಉಕ್ಕಿನ ಮಹಿಳೆ ಐರೋನ್ ಶರ್ಮಿಳಾ ದೇವಿ ಕಳೆ 12 ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ. ಒಂದೆಡೆ ಬಂಡುಕೋರರಿಂದ ಮತ್ತೊಂದೆಡೆ ನಮ್ಮದೇ ಸೈನ್ಯದಿಂದ ಮಣಿಪುರಿಗಳು ದೌರ್ಜನ್ಯ, ಕೊಲೆ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಆರ್‌ಎಸ್‌ಎಸ್ ಸಂಘಟನೆ ಎಂದಾದರೂ ಶರ್ಮಿಳಾಗೆ ಬೆಂಬಲ ಸೂಚಿಸಿದೆಯಾ? ಮಣಿಪುರಿ ಜನರ ನೋವಿಗೆ, ಸಂಕಟಕ್ಕೆ ಸ್ಪಂದಿಸಿದೆಯಾ? ಇಲ್ಲದಿದ್ದಲ್ಲಿ ಇದ್ದಕ್ಕಿದ್ದಂತೆ ಈಶಾನ್ಯ ರಾಜ್ಯದ ಜನರ ಬಗ್ಗೆ ಈ ಕಾಳಜಿ ಹುಟ್ಟಿಕೊಂಡಿದ್ದಾದರೂ ಹೇಗೆ?

ಇದೆಲ್ಲವೂ ಆಳುವ ಬಿಜೆಪಿ ಸರ್ಕಾರದ ಒಂದು ರಾಜಕೀಯ ಅಜೆಂಡಾದ ಭಾಗ, ಆರ್‌ಎಸ್‌ಎಸ್  ಪ್ರತಿಪಾದಿಸುತ್ತ ಬಂದಿರುವ ಹಿಂದೂರಾಷ್ಟ್ರ ನಿರ್ಮಾಣದ ಷಡ್ಯಂತ್ರದ ಒಂದು ಗಂಭೀರ ಹೆಜ್ಜೆ  ಎಂದು ನಮ್ಮ ಪತ್ರಿಕೆಗಳಿಗೆ ಯಾಕೆ ಹೊಳೆಯಲಿಲ್ಲ? ಈಶಾನ್ಯ ರಾಜ್ಯದ ನಾಗರಿಕರಿಗೆ ಸಹಾನುಭೂತಿ ತೋರಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ ಲಾಠಿ ಹಿಡಿದ ಆರ್‌ಎಸ್‌ಎಸ್  ಕಾರ್ಯಕರ್ತರ ಜತೆ ನಿಂತು ಈ ಸಚಿವರುಗಳು ಮಾಡಿದ ನಾಟಕಗಳನ್ನು ಬಯಲುಗೊಳಿಸುವ ಕೆಲಸವನ್ನು ನಮ್ಮ ಮೀಡಿಯಾ ಮಾಡಲೇ ಇಲ್ಲ.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್ ಎಂಬ ವೆಬ್‌ಸೈಟ್ ಒಂದರಲ್ಲಿ ಒಂದು ಬರೆಹವನ್ನು ಗಮನಿಸಿದೆ. ಅಸ್ಸಾಂ ನಲ್ಲಿ ನಡೆದ ಸಂಘರ್ಷದ ತಲಸ್ಪರ್ಶಿ ಚಿತ್ರಣ ಅದರಲ್ಲಿತ್ತು. ಅಷ್ಟಕ್ಕೂ ಅಸ್ಸಾಂನಲ್ಲಿ ನಡೆದದ್ದು ಹಿಂದೂ-ಮುಸ್ಲಿಂ ಮತೀಯ ಸಂಘರ್ಷ ಅಲ್ಲವೇ ಅಲ್ಲ. ಅದು ಜನಾಂಗೀಯ ದ್ವೇಷಕ್ಕೆ ಹುಟ್ಟಿಕೊಂಡ ಗಲಭೆ. ಭೂಮಿಯ ಮಾಲಿಕತ್ವಕ್ಕಾಗಿ ಬೋಡೋಗಳು ಮತ್ತು ಮುಸ್ಲಿಮರ ನಡುವೆ ಉಂಟಾದ ಸಂಘರ್ಷವದು. ಇಂಥ ಸ್ಪಷ್ಟ ಮಾಹಿತಿಯನ್ನು ಕೊಡುವ ಕೆಲಸವನ್ನು ಮುಖ್ಯವಾಹಿನಿಯ ಪತ್ರಿಕೆಗಳು ನೀಡಬೇಕೆಂದು ನಾಗರಿಕ ಸಮಾಜದ ಸ್ವಾಸ್ಥವನ್ನು ಉಳಿಸಬಯಸುವ ಎಲ್ಲ ಮನಸುಗಳು ಬಯಸುವುದು ಸಹಜ. ಅಸ್ಸಾಂನ ಬೋಡೋಗಳು ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಅಲ್ಲಿರುವ ಜನರೇ ಹೇಳಬೇಕು. ಹೀಗಿರುವಾಗ ಹಿಂದೂ-ಮುಸ್ಲಿಂ ಸಂಘರ್ಷದ ರೂಪ ಪಡೆದುಕೊಂಡಿದ್ದಾದರೂ ಹೇಗೆ? ಇದನ್ನು ಪ್ರಶ್ನಿಸಬೇಕಾದವರು ಯಾರು? ಕನ್ನಡ ಮೀಡಿಯಾಗಳೇಕೆ ಆಳಕ್ಕೆ ಇಳಿದು ವರದಿ ಮಾಡಲಿಲ್ಲ?

ಈಶಾನ್ಯ ರಾಜ್ಯದ ಜನರು ಭೀತರಾಗಿ ತಮ್ಮ ರಾಜ್ಯಗಳಿಗೆ ಹೊರಟಿದ್ದಂತೂ ನಿಜ. ಆದರೆ ಅವರಲ್ಲಿದ್ದ ಇದ್ದ ಭೀತಿಯನ್ನು ಹೆಚ್ಚಿಸುವ ಕೆಲಸವನ್ನು ನಮ್ಮ ರಾಜಕಾರಣಿಗಳು, ಧರ್ಮ ರಕ್ಷಕ ಸಂಘಟನೆಗಳು, ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಮಾಡಿದವು. ಯಾರಿಗೂ ಸತ್ಯ ಹುಡುಕಿಕೊಳ್ಳುವ ಅಗತ್ಯವೂ ಕಾಣಲಿಲ್ಲ. ಬೆಂಗಳೂರಿನ ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರನ್ನು ಮಾತನಾಡಿಸಿ, ಅವರಿಂದ ಹೇಳಿಕೆ ಪಡೆಯುವ ಪ್ರಯತ್ನಗಳೂ ನಮ್ಮ ಪತ್ರಿಕೆಗಳಿಂದ ಸರಿಯಾದ ಪ್ರಮಾಣದಲ್ಲಿ ನಡೆಯಲಿಲ್ಲ. ಕೆಲವು ಮುಸ್ಲಿಂ ಸಂಘಟನೆಗಳ ಮುಖಂಡರು ರೈಲ್ವೆ ನಿಲ್ದಾಣಕ್ಕೆ ತೆರಳಿ ಇಲ್ಲಿ ಭೀತಿಗೊಳ್ಳುವಂಥದ್ದು ಏನೂ ಇಲ್ಲ, ನಾವೆಲ್ಲರೂ ಅನ್ಯೋನ್ಯವಾಗಿರೋಣ ಎಂದು ಹೇಳಿದ್ದೂ ಸಹ ಸರಿಯಾದ ರೀತಿಯಲ್ಲಿ ವರದಿಯಾಗಲಿಲ್ಲ.

ವದಂತಿಕೋರರು, ಹಿಂಸಾವಿನೋದಿಗಳು, ಸರ್ಕಾರ, ಧರ್ಮರಕ್ಷಕ ಸಂಘಟನೆಗಳು ಮತ್ತು ಮೀಡಿಯಾ ಒಟ್ಟಾಗಿ ಸೇರಿ ಮಾಡಿದ್ದೇನೆಂದರೆ ಹುಸಿಶತ್ರುಗಳನ್ನು ಕಲ್ಪಿಸಿಕೊಂಡು ಗಾಳಿಯಲ್ಲಿ ಗುದ್ದಾಡಿದ್ದು. ಇಡೀ ಪ್ರಹಸನದಲ್ಲಿ ಖಳನಾಯಕನ ಸ್ಥಾನಕ್ಕೆ ಬಲವಂತವಾಗಿ ಕೂರಿಸಲಾಗಿದ್ದು ಮುಸ್ಲಿಂ ಸಮುದಾಯವನ್ನು. ಇಡೀ ಬೆಂಗಳೂರಿನಲ್ಲಿ ಯಾವ ರೀತಿಯ ಗಲಭೆ ನಡೆಯದಿದ್ದರೂ, ಹಿಂಸಾಚಾರ ಸಂಭವಿಸದಿದ್ದರೂ ಅದರ ಹೊಣೆಯನ್ನು ಮುಸ್ಲಿಂ ಸಮುದಾಯದ ಮೇಲೆ ಹೊರಿಸಲಾಯಿತು. ಇದಲ್ಲದೆ ಕರ್ನಾಟಕದ ಮಾನವನ್ನು ವಿನಾಕಾರಣ ಹರಾಜು ಹಾಕಲಾಯಿತು. ಬಿಜೆಪಿ ಸರ್ಕಾರಕ್ಕೆ ಮತ್ತು ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್‌ಗೆ ತನ್ನ ಹಿಂದುತ್ವದ ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಚಲಾವಣೆಗೆ ತಂದ ಸಂತೋಷ. ಮಂತ್ರಿಗಳಿಗೆ ನ್ಯಾಷನಲ್ ಟೆಲಿವಿಷನ್ ಚಾನಲ್ ಗಳಲ್ಲಿ ಮಿರಮಿರನೆ ಮಿಂಚಿದ ಖುಷಿ. ಇಲ್ಲಿ ಪ್ರದರ್ಶನದ ವಸ್ತುಗಳಾಗಿದ್ದು ಬಡಪಾಯಿ ಈಶಾನ್ಯ ರಾಜ್ಯದ ಜನತೆ.

ಮೀಡಿಯಾ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂಬುದು ಪ್ರಜ್ಞಾವಂತರ ಅಪೇಕ್ಷೆ. ಆದರೆ ಕನ್ನಡ ಮೀಡಿಯಾ ಸೇರಿದಂತೆ ಮೀಡಿಯಾ ಸಂಪೂರ್ಣವಾಗಿ ಅಪ್ಪಟ ವ್ಯಾಪಾರಿಗಳ ಕೈಗೆ, ರಾಜಕಾರಣಿಗಳ ಕೈಗೆ ಸಿಕ್ಕಿದೆ. ಹೀಗಾಗಿ ಜನರನ್ನು ಭೀತಿಯಿಂದ ಕಾಪಾಡಬೇಕಾದ ಮಾಧ್ಯಮವೇ ಇಂದು ಭಯೋತ್ಪಾದನೆಯ ಕೆಲಸದಲ್ಲಿ ತೊಡಗಿದೆ. ಈಶಾನ್ಯ ರಾಜ್ಯಗಳ ಜನರಲ್ಲಿ ಹಬ್ಬಿದ ಊಹಾಪೋಹದ ವಿಷಯದಲ್ಲಾಗಲೀ, ನಂದಿನಿ ಹಾಲಿನಲ್ಲಿ ವಿಷ ಬೆರೆಸಲಾಗಿದೆ ಎಂಬ ವಿಷಯದಲ್ಲಾಗಲೀ, ಮೆಹಂದಿ ಹಚ್ಚಿಕೊಂಡ ಕೈಗಳಿಗೆ ಅಪಾಯವಾಗಲಿದೆ ಎಂದು ಹಬ್ಬಿದ ಊಹಾಪೋಹದ ವಿಷಯದಲ್ಲಾಗಲೀ ಅಥವಾ ಬೆಂಗಳೂರು-ಹುಬ್ಬಳ್ಳಿಗಳಲ್ಲಿ ಬಂಧಿತ ಶಂಕಿತ ಆರೋಪಿಗಳ ವಿಷಯದಲ್ಲಾಗಲೀ, ನಮ್ಮ ಮೀಡಿಯಾ ಮಾಡಿದ್ದು ಭೀತಿ ಹಬ್ಬಿಸುವ ಭಯೋತ್ಪಾದನೆಯ ಕೆಲಸವನ್ನೇ.

ಕಡೆಯದಾಗಿ ಇಲ್ಲಿರುವ ಈಶಾನ್ಯ ರಾಜ್ಯಗಳ ಜನರು ಮತ್ತು ದೇಶದ ಇತರ ಯಾವುದೇ ಭಾಗದಿಂದ ಬಂದಿರಬಹುದಾದ ಜನರಿಗೆ ನನ್ನ ಮನವಿಯೊಂದಿದೆ. ಇದು ನಾನು ನನ್ನ ಭಾಷಾ ದುರಹಂಕಾರದಿಂದ ಹೇಳುತ್ತಿರುವ ಮಾತಲ್ಲ. ನಾನು ಆಂಧ್ರಪ್ರದೇಶದಲ್ಲಿ ಮೂರು ತಿಂಗಳಿದ್ದೆ. ತೆಲುಗು ಭಾಷೆ ಅರ್ಧದಷ್ಟು ಕಲಿತುಬಿಟ್ಟೆ. ನೀವು ಐದು ಹತ್ತು ವರ್ಷಗಳಿಂದ ಇಲ್ಲಿದ್ದೀರಿ. ಕನ್ನಡ ಭಾಷೆ ಕಲಿತಿಲ್ಲ, ಕಲಿಯುವ ಪ್ರಯತ್ನವನ್ನೂ ಮಾಡಿಲ್ಲ. ಕೆಲವು ಬಡಾವಣೆಗಳಲ್ಲಿ ನಿಮ್ಮದೇ ತಂಡಗಳಲ್ಲಿ ಬದುಕುತ್ತಿದ್ದೀರಿ. ಇಲ್ಲಿನ ಜನ, ಸಂಸ್ಕೃತಿ, ಭಾಷೆ, ಸಮಾಜ ಯಾವುದನ್ನೂ ನೀವು ಪರಿಚಯ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ಹೀಗಾಗಿ ಇಲ್ಲಿನ ಜನರೊಂದಿಗೆ ಒಂದು ಆರೋಗ್ಯಕರ ಸಂವಹನವೂ ನಿಮಗೆ ಸಾಧ್ಯವಾಗಿಲ್ಲ. ಇಂಥ ವದಂತಿಗಳು ಹಬ್ಬಿದ ಸಂದರ್ಭದಲ್ಲಿ ನಿಮಗೆ ಇಲ್ಲಿನ ಸ್ಥಳೀಯತೆ, ಸ್ಥಳೀಯ ಜನರ ಒಡನಾಟ, ಭಾಷೆ-ಸಂಸ್ಕೃತಿ ಅರ್ಥವಾಗಿದ್ದರೆ ಹೆದರಿ ಓಡಿಹೋಗುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಇನ್ನಾದರೂ ನೀವು ಇರುವ ಊರು, ರಾಜ್ಯದ ಭಾಷೆಯನ್ನು ಕಲಿತು, ಅಲ್ಲಿನ ಜನರೊಂದಿಗೆ ಒಡನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ.

(ಮೀಡಿಯಾ ವಾಚ್, ಬೆಂಗಳೂರು ಸಂಸ್ಥೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ “ಎಕ್ಸೋಡಸ್ ಫ್ರಂ ಬೆಂಗಳೂರು, ವಾಟ್ ರೋಲ್ ಕ್ಯಾನ್ ಮೀಡಿಯಾ ಪ್ಲೇ ಇನ್ ಎ ಟೈಮ್ ಆಫ್ ಎಸ್ಎಂಎಸ್ ಅಂಡ್ ಫೇಸ್‌ಬುಕ್” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಭಾಷಣ.)