ಸೀಬೆಯ ಸೊಗಡು


-ಬಿ. ಶ್ರೀಪಾದ್ ಭಟ್


‘ನವಿಲು ನೆಲ’, ಒಂದು ಉದ್ದನೆಯ ನೆರಳು’ ಕಥಾಸಂಕಲನಗಳು, ಬಯಲು ಪರಿಮಳ (ವ್ಯಕ್ತಿಚಿತ್ರ ಸಂಪುಟ), ಲೋರ್ಕಾ ನಾಟಕ ಎರ್ಮಾ, ವೈಕುಂ ಬಷೀರ್‌ರವರ ಕತೆಗಳು ಹಾಗೂ ಇನ್ನೂ ಹಲವಾರು ಅನುವಾದಿತ ಕೃತಿಗಳನ್ನು ರಚಿಸಿರುವ ಅಧ್ಯಾಪಕ, ಲೇಖಕ ಎಸ್.ಗಂಗಾಧರಯ್ಯನವರ ಇತ್ತೀಚಿನ ಅನುವಾದಿತ ಕೃತಿ ಸೀಬೆಯ ಸೊಗಡು ಒಂದು ಕ್ರಿಯಾಶೀಲ, ಆಪ್ತವಾದ ಪುಸ್ತಕ. ಲ್ಯಾಟಿನ್ ಅಮೇರಿಕಾದ ಪ್ರಖ್ಯಾತ ಲೇಖಕ ‘ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನೊಂದಿಗೆ ಆತನ ಅಪ್ತ ಗೆಳೆಯ ಅಪುಲೆಯೋ ಮೆಂಡೋಜ್ ನಡೆಸಿದ ಮಾತುಕತೆಯನ್ನಾಧರಿಸಿದ ಮೂಲ ಪುಸ್ತಕ ‘ದ ಫ್ರಾಗನ್ಸ್ ಆಫ್ ಗ್ವಾವ’ ದ ಕನ್ನಡದ ಅನುವಾದವೇ ಈ ಸೀಬೆಯ ಸೊಗಡು’ ಕೃತಿ.

ಕಳೆದ ವರ್ಷ ಬಿಡುಗಡೆಗೊಂಡ ಲೇಖಕ ಕೇಶವ ಮಳಗಿಯವರು ಅತ್ಯಂತ ಸಮರ್ಥವಾಗಿ ಅನುವಾದಿಸಿದ ‘ಕಡಲಾಚೆಯ ಚೆಲುವೆ’ ಮತ್ತು’ಸಂಕಥನ’ (ಮೂಲ ಫ್ರಂಚ್ ಭಾಷೆ)ದ ನಂತರ ಈ ‘ಸೀಬೆಯ ಸೊಗಡು’ ಸಹ ಅತ್ಯಂತ ಅಪರೂಪದ ಅನುವಾದಿತ ಕೃತಿ.  ಈ ‘ಸೀಬೆಯ ಸೊಗಡು’ ಕೃತಿಯ ಬಗೆಗೆ ಲೇಖಕ ಗಂಗಾಧರಯ್ಯ ತಮ್ಮ ಮುನ್ನುಡಿಯಲ್ಲಿ ಇಲ್ಲಿ ಮಾರ್ಕ್ವೆಜ್ ತನ್ನ ಕಲೆಯ ಬಗ್ಗೆ, ಕಥನ ಕುತೂಹಲದ ಬಗ್ಗೆ, ತನ್ನ ಕಥೆಗಳು ನಡೆಯುವ ನೆಲದ ಬಗ್ಗೆ, ತನ್ನ ಗೆಳತಿಯರ ಬಗ್ಗೆ, ತನ್ನದೇ ಪುಸ್ತಕಗಳ ಬಗ್ಗೆ. ತಾನೇ ಕಡೆದ ಪಾತ್ರಗಳ ಬಗ್ಗೆ, ಅವುಗಳು ಮೈದಾಳಿದ ಕ್ಷಣಗಳ ಬಗ್ಗೆ, ಅಂಟಿಕೊಂಡ ಖ್ಯಾತಿ, ಪ್ರಭಾವಿಸಿದ ಮನಸ್ಸುಗಳು, ತನ್ನ ಬಾಲ್ಯ, ಅಲ್ಲಿ ಬರುವ ಅಜ್ಜ, ಅಜ್ಜಿಯರು, ಆಗಿನ ಪುರಾಣ, ಜಾನಪದ ಹತ್ತು ಹಲವು ಸಂಗತಿಗಳನ್ನು ಮೈದುಂಬಿಕೊಂಡವನಂತೆ ಬಿಚ್ಚಿಡುತ್ತಾ ಹೋಗುತ್ತಾನೆ ಎಂದು ಹೇಳುತ್ತಾರೆ. ಇದು ಸಂಪೂರ್ಣ ಸತ್ಯ. ತನ್ನ ವೈಯುಕ್ತಿಕ ಬದುಕನ್ನು ಕೇವಲ ಒಬ್ಬ ಪ್ರತಿಭಾವಂತ ಕಾದಂಬರಿಕಾರನಾಗಿಯೋ, ಕಥೆಗಾರನಾಗಿಯೋ ರೂಪಿಸಿಕೊಳ್ಳಲಿಚ್ಚಿಸದ ಮಾರ್ಕ್ವೆಜ್ ಅದರ ಜೊತೆ ಜೊತೆಗೆ ದಿನ ನಿತ್ಯ ಬದುಕಿನ ವಿವಿಧ ರೋಮಾಂಚನಗಳು, ತಲ್ಲಣಗಳು, ಮಾಂತ್ರಿಕ ಕ್ಷಣಗಳು, ವಾಸ್ತವ ಘಟನೆಗಳು ಮುಂತಾದುವುಗಳನ್ನು ಸಹ ತನ್ನೊಳಗೆ ಒಳಗೊಂಡು ಈ ಒಳಗೊಳ್ಳುವಿಕೆಯ ಪರಿಣಾಮವಾಗಿಯೇ ತನ್ನ ಲೇಖನಗಳು, ಕಥೆಗಳು, ಕಾದಂಬರಿಗಳು ಒಡಮೂಡುತ್ತವೆ ಎಂದು ನಂಬಿದವನು ಈ ಖ್ಯಾತ ಮಾಕ್ವೆಜ್.

ಈ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ‘ಒನ್ ಹಂಡ್ರೆಡ್ ಇಯರ್ಸ ಆಫ್ ಸಾಲಿಟ್ಯೂಡ್’ ಕಾದಂಬರಿಯ ಪ್ರೇರಕವಾದ ಅಂಶಗಳನ್ನು ಕುರಿತಾಗಿ ನಾನೀಗಲೇ ಹೇಳುವಂತೆ, ಬಹುಷಃ ನನ್ನ ಅಜ್ಜಿಯ ಕತೆಗಳು ನನಗೆ ಮೊದಲ ಸುಳಿವು ಕೊಟ್ಟಿದ್ದವು. ಅವಳು ಬದುಕುತ್ತಿದ್ದ ಪರಿಸರದ ಪುರಾಣಗಳು, ದಂತ ಕತೆಗಳು ಹಾಗೂ ನಂಬಿಕೆಗಳು, ಅವಳ ಪ್ರತಿದಿನದ ಬದುಕಿನಲ್ಲಿ ಸಹಜವಾಗಿ ಅವಿಭಾಜ್ಯ ಅಂಗವಾಗಿ ಹೋಗಿದ್ದವು. ಅವಳನ್ನು ಮನಸ್ಸಲ್ಲಿಟ್ಟುಕೊಂಡಿದ್ದ ನನಗೆ ತಕ್ಷಣ ಮನವರಿಕೆಯಾಯ್ತು-ನಾನು ಹೊಸದೇನು ಕಂಡು ಹಿಡಿಯುತ್ತಿಲ್ಲ, ಅಧಿಕೃತವಾಗಿ ನಮ್ಮದಾದ, ಅಸಲಿ ಲ್ಯಾಟಿನ್ ಅಮೇರಿಕಾದ, ಶಕುನಗಳು, ಮುನ್ನುಳುಕಗಳು, ಮದ್ದುಗಳು ಹಾಗೂ ಮೂಢನಂಬಿಕೆಗಳ ಲೋಕವನ್ನು ಸೆರೆ ಹಿಡಿಯುತ್ತಾ ಪುನರ್ ರೂಪಿಸುತ್ತಿದ್ದೇನೆ ಅಷ್ಟೇ. ಉದಾಹರಣೆಗೆ ಪ್ರಾರ್ಥನೆ ಮಾಡುವ ಮೂಲಕ ಹಸುವಿನ ಕಿವಿಯೊಳಗಿಂದ ಹುಳುಗಳು ಆಚೆ ಬರುವಂತೆ ಮಾಡುವ ಕೊಲಂಬಿಯಾದ ಆ ಜನ ನಿನಗೆ ನೆನಪಿರಬಹುದು. ಲ್ಯಾಟಿನ್ ಅಮೇರಿಕಾದ ನಮ್ಮ ಪ್ರತಿದಿನದ ಇಡೀ ಬದುಕು ಇಂಥ ಸಂಗತಿಗಳಿಂದ ತುಂಬಿಹೋಗಿದೆ ಎಂದು ವಿವರವಾಗಿ ವಿಶ್ಲೇಷಿಸುತ್ತಾನೆ. ತನ್ನ ಇತರ ಕೃತಿಗಳ ಕುರಿತಾಗಿ ಇದೇ ಮಾದರಿಯ ಅನೇಕ ವಿಶ್ಲೇಷಣೆಗಳನ್ನು ಈ ಸಂದರ್ಶನದುದ್ದಕ್ಕೂ ಮಾರ್ಕ್ವೆಜ್ ಬಿಚ್ಚಿಡುತ್ತಾನೆ.

ಇದು ನಮಗೆಲ್ಲ ಮತ್ತೊಂದು ಲೋಕವನ್ನೇ ತೆರೆದಿಡುತ್ತದೆ. ತನ್ನ ಕೃತಿಗಳಲೆಲ್ಲ ‘ಆಟಮ್ ಆಫ್ ದಿ ಪೇಟ್ರಿಯಾರ್ಕ’ ಅನ್ನು ಅತ್ಯಂತ ಮಹತ್ವದ ಕೃತಿಯೆಂದು ಹೇಳುತ್ತಾನೆ. ಈ ಪುಸ್ತಕವನ್ನು ಅಧಿಕಾರದ ಒಂಟಿತನ ಕುರಿತ ಒಂದು ಪದ್ಯ ಎಂದು ವಿವರಿಸುತ್ತಾನೆ. 108 ಪುಟಗಳ ಈ ಸಂದರ್ಶನದಲ್ಲಿ ಮಾರ್ಕ್ವೆಜ್ ತನ್ನ ಬಾಲ್ಯ, ಮನೆತನ, ಶಿಕ್ಷಣ, ಅಧ್ಯಯನ, ಕೃತಿಗಳು, ರಾಜಕೀಯ, ಸ್ತ್ರೀಯರು, ಮೂಢನಂಬಿಕೆಗಳು ಹೀಗೆ ಅನೇಕ ವೈವಿಧ್ಯಮಯವಾದ ಸಂಗತಿಗಳನ್ನು ಅತ್ಯಂತ ತೀವ್ರತೆಯಿಂದ, ತೀಕ್ಷಣತೆಯಿಂದ, ತನ್ಮಯತೆಯಿಂದ ದೀರ್ಘವಾಗಿ ಚರ್ಚಿಸುತ್ತಾನೆ. ತನ್ನ ಖ್ಯಾತಿಯ ಕುರಿತಾದ ಪ್ರಶ್ನೆಯೊಂದಕ್ಕೆ ಇದು ನನ್ನನ್ನು ಆತಂಕಗೊಳಿಸುತ್ತದೆ. ಯಶಸ್ವಿ ಬರಹಗಾರರಿಗಾಗಿ ತಯಾರಿಲ್ಲದ ಭೂ ಖಂಡವೊಂದರಲ್ಲಿ, ಸಾಹಿತಿಕ ಯಶಸ್ಸಿನ ಪ್ರವೃತ್ತಿಯರದವನ ಪುಸ್ತಕಗಳು ಬಿಸಿ ಬಿಸಿ ಕೇಕುಗಳಂತೆ ಖರ್ಚಾಗುವುದೇ ಅವನಿಗೆ ಸಂಭವಿಸಬಹುದಾದ ಅತ್ಯಂತ ಕೆಟ್ಟ ಸಂಗತಿ. ಸಾರ್ವಜನಿಕ ಪ್ರದರ್ಶನ ಜುಗುಪ್ಸೆ ಅನಿಸುತ್ತದೆ. ಅಂತೆಯೇ ಈ ಟೆಲಿವಿಷನ್, ಸಮ್ಮೇಳನಗಳು, ಕಾನ್ಫರೆನ್ಸುಗಳು, ದುಂಡು ಮೇಜಿನ ಚರ್ಚೆಗಳು ಕೂಡ ನನಗೆ ಅಷ್ಟೇ ಜಿಗುಪ್ಸೆಯ ಸಂಗತಿಗಳು ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸುತ್ತಾನೆ ಮಾಕ್ವೆಜ್.

ಅತ್ಯಂತ ಯಶಸ್ವಿಯಾಗಿ ಅನುವಾದಿತಗೊಂಡಿರುವ ಈ ‘ಸೀಬೆಯ ಸೊಗಡು’ ಪುಸ್ತಕದಲ್ಲಿ ಈ ಸಂದರ್ಶನ ನಡೆದ ಕಾಲಘಟ್ಟದ ಕುರಿತಾಗಿ ಎಲ್ಲಿಯೂ ಪ್ರಸ್ತಾವನೆಗೊಳ್ಳದಿರುವುದು ಮಾತ್ರ ಕೊಂಚ ನಿರಾಸೆ ಮೂಡಿಸುತ್ತದೆ.

ಅಹರ್ನಿಶಿ ಪ್ರಕಾಶನದವರು ಪ್ರಕಟಿಸಿದ ಪತ್ರಕರ್ತ, ಲೇಖಕ ಬಿ.ಎಂ.ಬಶೀರ್ ಬರೆದ ಅಂಗೈಯಲ್ಲಿ ಆಕಾಶ’ ಎನ್ನುವ ಶೀರ್ಷಿಕೆಯ ಹನಿಹನಿ ಕತೆಗಳು ಈ ವರ್ಷ ಪ್ರಕಟಗೊಂಡ 96 ಪುಟಗಳ ಅತ್ಯಂತ ಮಹತ್ವದ ಕೃತಿ. ಈ ಪುಸ್ತಕದ ಮುನ್ನುಡಿಯಲ್ಲಿ ಅಕ್ಷತಾ ಅವರು ಒಬ್ಬ ಸೂಕ್ಷ್ಮತೆಯ ಕವಿ, ಲೇಖಕ ಹೇಗೆ ತನ್ನ ಸುತ್ತಣ ಜಗತ್ತನ್ನು ನೋಡುತ್ತಾನೆ, ಅದರ ವಿವರಗಳನ್ನು ಅವಲೋಕಿಸುತ್ತಾನೆ, ಅದನ್ನು ಅಥೈಸಿಕೊಳ್ಳಲು ಯತ್ನಿಸುತ್ತಾನೆ, ಮತ್ತು ಹೇಗೆ ಲೋಕದ ವ್ಯಾಪಾರಕ್ಕೆ ಸ್ಪಂದಿಸುತ್ತಾನೆ ಎಂಬ ಹಿನ್ನೆಲೆಯಲ್ಲಿ ಈ ಕಥೆಗಳು ರೂಪುಗೊಂಡಿವೆ. ಅಲ್ಲಿ ಯಾವುದೇ ತೋರಿಕೆಯ ಜಗತ್ತಿಲ್ಲ. ಅರಿವು ಮೂಡಿಸಬೇಕೆಂಬ ಹಠವೂ ಇಲ್ಲ. ನಾ ಕಂಡ ಸಂಗತಿಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ ಎಂಬ ಲೇಖಕನ ಪಾರದರ್ಶಕತೆ ಈ ಕಥೆಗಳಿಗೆ ನೀಡಿರುವ ಆಯಾಮವೇ ಬೇರೆ ತರದ್ದು ಎಂದು ಒಟ್ಟಾರೆ ಈ ಹನಿ ಹನಿ ಕತೆಗಳ ಸ್ವರೂಪವನ್ನು ವಿವರಿಸುತ್ತಾರೆ. ಅಲ್ಲದೆ ಇಲ್ಲಿ ಲೇಖಕ ಬಶೀರ್ ಅವರೇ ಹೇಳುವಂತೆ ಮಿಂಚಿ ಮಾಯವಾಗುವ ಕೆಲವು ಕ್ಷಣಗಳು, ಘಟನೆಗಳು, ದೃಶ್ಯಗಳು, ಮಾತುಗಳು, ಸಾಲುಗಳು ಜೀವದ ಕೊನೆಯ ಉಸಿರಿನವರೆಗೂ ಮುಳ್ಳಿನಂತೆ ಕಚ್ಚಿ ಹಿಡಿದುಬಿಡುವುದಿದೆ.

ಇಲ್ಲಿನ ಹನಿ ಹನಿ ಕತೆಗಳು ಪರಿಶುದ್ಧವಾದ, ಪ್ರಾಮಾಣಿಕವಾದ, ಸರಳವಾದ ಜಾತ್ಯಾತೀತ ಬದುಕಿನ ಅವಶ್ಯಕತೆಯ ಕುರಿತಾಗಿ ತಣ್ಣಗಿನ ಆದರೆ ತೀಕ್ಷಣವಾದ ಧ್ವನಿಯಲ್ಲಿ ಮಾತನಾಡುತ್ತದೆ. ಈ ಧ್ವನಿಯಲ್ಲಿ ಗಾಂಧಿಯೂ ಇದ್ದಾರೆ, ಏಸುವೂ ಇದ್ದಾನೆ, ಬುದ್ಧನೂ ಇದ್ಧಾನೆ ಕಡೆಗೆ ಪೈಗಂಬರರೂ ಸಹ. ಈ ದಾರ್ಶನಿಕರನ್ನು ಲೇಖಕ ಬಶೀರ್ ಅಥೈಸಿಕೊಂಡು ಆ ಮೂಲಕ ತಾನು ಕಂಡುಕೊಂಡ ಕಾಣ್ಕೆಯನ್ನು ಸಣ್ಣ ಸಣ್ಣ ಕತೆಗಳ ಮೂಲಕ, ರೂಪಕಗಳ ಮೂಲಕ ವಿವರಿಸುತ್ತಾ ಸಾಗಿರುವುದು ಒಂದು ಅರ್ಥಪೂರ್ಣ ಪಯಣ. ಈ ಬದುಕು ವೈಯುಕ್ತಿಕವೂ ಹೌದು, ಸಾರ್ವಜನಿಕವೂ ಹೌದು. ಈ ಬದುಕಿನಲ್ಲಿ ಮನುಷ್ಯನ ಕೊಳ್ಳುಬಾಕುತನದ ಹಪಾಹಪಿತನದಿಂದ, ಕ್ರೌರ್ಯದಿಂದ ಮತ್ತು ತಿಳಿಗೇಡಿತನದಿಂದ ಸಮಾಜದಲ್ಲಿ ಉಂಟಾಗುವ ಅವ್ಯವಸ್ಥೆ, ಅಸ್ವಾಸ್ಥ್ಯ ಮತ್ತು ಅನಾಗರಿಕ ಸ್ಪರ್ದೆ ಹೇಗೆ ಇಡೀ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುತ್ತದೆ ಎಂದು ಲೇಖಕರು ಈ ಹನಿ ಹನಿ ಕತೆಗಳ ಮೂಲಕ ಹೃದಯಂಗಮವಾಗಿ ಕಟ್ಟಿದ್ದಾರೆ. ಇದು ಅತ್ಯಂತ ಜನಪ್ರಿಯ ಪುಸ್ತಕವೆನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಜನಪ್ರಿಯತೆ ಸೃಜನಶೀಲತೆಯ ಮೂಲಕ, ಸಹನೆ, ಕುರುಣೆ, ಭ್ರಾತೃತ್ವದ ಮೂಲಕ, ಮೌಲ್ಯಾಧಾರಿತ ವರ್ತನೆಗಳ ಮೂಲಕ ಸಾಧಿಸಿದ್ಧು ಮಾತ್ರ ಅರ್ಥಪೂರ್ಣ.

ಬಶೀರರ ಈ ಹನಿ ಹನಿ ಕತೆಗಳು ವೈಚಾರಿಕತೆಯನ್ನು, ಸಮಕಾಲೀನತೆಯ ಸ್ವಾರ್ಥ ಮನೋಭೂಮಿಕೆಯನ್ನು, ವಾಸ್ತವಿಕ ಹಿಂಸೆಯ ಅನಾವರಣವನ್ನು ಸಂಯಮದಿಂದ ಆದರೆ ತೀವ್ರ ಒಳನೋಟಗಳ ಮೂಲಕ  ಹೊರಸೂಸುತ್ತವೆ.

Leave a Reply

Your email address will not be published. Required fields are marked *