Monthly Archives: October 2012

ಇಲ್ಲದ ದೇವರುಗಳ ಸುತ್ತ ಮುತ್ತ

-ವಿಶ್ವಾರಾಧ್ಯ ಸತ್ಯಂಪೇಟೆ

ದೇವರುಗಳ ಬಗೆಗೆ ನನಗೆ ಆರಂಭದಿಂದಲೂ ಅಷ್ಟಕಷ್ಟೆ. ಇದಕ್ಕೆಲ್ಲ ಮುಖ್ಯವಾಗಿ ನನ್ನ ಮನೆಯೊಳಗೆ ನಡೆಯುತ್ತಿದ್ದ ಚರ್ಚೆಗಳು, ಪುಸ್ತಕಗಳ ಓದು ಕೂಡ ಕಾರಣವಾಗಿರಬಹುದು. ಅಂದಂತೆ ನನಗೆ ಆಗಾಗ ಅವರಿವರ ಮೈಮೇಲೆ ಬರುತ್ತಿದ್ದ ದೇವರುಗಳು, ಹೆಜ್ಜೆಗೂ ಸಿಕ್ಕುವ ದೇವರುಗಳು, ಎಳ್ಳು ನೀರು ಕಾಣದೆ ಬೇಕಾಬಿಟ್ಟಿಯಾಗಿ ಅಲ್ಲಲ್ಲಿ ಬಿದ್ದಿರುವ ದೇವರುಗಳನ್ನು ನೋಡಿದಾಗಲೆಲ್ಲ ಹಳಹಳಿಯಾಗುತ್ತಿತ್ತು. ತಲೆಯ ಮೇಲೆ ಗುಡಿಯನ್ನು ಹೊತ್ತುಕೊಂಡು ಬಂದು ಅವರಿವರ ಅಂಗಳದಲ್ಲಿ ದೇವರನ್ನು ನಿಲ್ಲಿಸಿ ಮೈಮೇಲೆ ಬಾಸುಂಡೆ ಬರುವಂತೆ ಹೊಡಕೊಳ್ಳುತ್ತಿದ್ದ ಪೋತರಾಜರ ಬಾರುಕೋಲಿನ ‘ಚಟಲ್’ ‘ಚಟಲ್’ ಶಬ್ಧ ಕಿವಿಗೆ ಬೀಳುತ್ತಿತ್ತು. ಆಗ ಪೋತರಾಜರ ಮೈಮೇಲೆ ಬಾಸುಂಡೆ ಅಥವಾ ರಕ್ತ ಚಿಲ್ಲನೆ ಚಿಮ್ಮಿನಿಲ್ಲುತ್ತಿತ್ತು. ರಕ್ತ ಬರುತ್ತಿರುವಂತೆ ಅಂಗಳ ತುಂಬೆಲ್ಲ ಓಡಾಡುತ್ತ ಪೋತರಾಜ ಏನೇನೋ ಹೇಳುತ್ತಿದ್ದ. ಆತ ಕಣ್ಣು ಕೆಂಪಗೆ ಮಾಡಿಕೊಂಡು ನಾಲಿಗೆ ಹೊರಚಾಚಿ ವಿಕಾರವಾಗಿ ಅರಚುತ್ತಿದ್ದ. ಇದನ್ನು ನಾನು ನೋಡಿ ಭಯದಿಂದ ನಡುಗುತ್ತಿದ್ದೆ. ಅಂಗೈಯನ್ನು ಮುಂದೆ ಚಾಚಿ ದೇವರಿಗಾಗಿ ದಾನವನ್ನು ಬೇಡುತ್ತಿದ್ದ. ಆತನ ಹೆಂಡತಿ ಮನೆಮನೆಗೆ ಹೋಗಿ ಮರದ ಮೂಲಕ ಕಾಳು ಪದಾರ್ಥಗಳನ್ನು ದಾನವಾಗಿ ಪಡೆಯುವುದು ನೋಡಿದಾಗಲೆಲ್ಲ. ದೇವರಂತ ದೇವರು ಭಿಕ್ಷೆ ಬೇಡುತ್ತಾನೆಯೆ? ಎಂದನ್ನಿಸುತ್ತಿತ್ತು.

ದಿನ ನಿತ್ಯದ ಮಲವಿಸರ್ಜನೆಗೆ ನಾನು ಬೇಕಂತಲೆ ಊರಿನಿಂದ ಒಂದು ಕಿ.ಮಿ.ದೂರ ಇರುವ ಬಯಲಿಗೆ ಚರಿಗೆ ಹಿಡಿದುಕೊಂಡು ಹೋಗುತ್ತಿದ್ದೆ. ಇದು ನಿರಂತರವೂ ನಮ್ಮ ಊರಿನ ಜನರೆಲ್ಲ ರೂಢಿಸಿಕೊಂಡು ಬಂದಿದ್ದ ಸಂಗತಿಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಮಧ್ಯಾಹ್ನದಲ್ಲಿ ಯಾರೋ ಒಬ್ಬರು ‘ಕೆರೆಯ ಕೆಳಗಡೆಯ ಗದ್ದೆಗಳಲ್ಲಿ ಮಣ್ಣು ಅಗೆಯುವಾಗ ಚಾಮುಂಡಿಯ ವಿಗ್ರಹ ಕಾಣಿಸಿಕೊಂಡಿದೆ’ ಎಂದು ಹೇಳುತ್ತ ನಡೆದಿದ್ದರು.

ಕುತೂಹಲ ತಡೆಯದ ನಾನು ಆ ಜಾಗಕ್ಕೆ ಹೋಗುವಷ್ಟರಲ್ಲಿ ಜನ ಜಾತ್ರೆಯಲ್ಲಿ ನೆರೆದಂತೆ ನೆರೆದು ಬಿಟ್ಟಿದ್ದರು. ಬಹಳ ವರ್ಷಗಳಿಂದ ಕಾಣಿಸಿಕೊಂಡ ‘ಚಾಮುಂಡಿ’ ನೆಲದಲ್ಲಿ ಸಿಕ್ಕಿರುವುದು ಊರಿನ ಎಲ್ಲರಿಗೂ ಒಳ್ಳೆಯದಾಗುವ ಲಕ್ಷಣ ಎಂದೆಲ್ಲ ಹೇಳುತ್ತಿದ್ದರು. ಅದಾಗಲೆ ಸಿಕ್ಕವಿಗ್ರಹಕ್ಕೆ ಕುಂಕುಮ, ಅರಿಶಿಣದ ಭಂಡಾರ ಚೆಲ್ಲಿದ್ದರು. ಕಾಯಿ, ಕರ್ಪೂರ ಊದುಬತ್ತಿ ಬೆಳಗಿದ್ದರು. ನಾಳೆ ಮಧ್ಯಾಹ್ನದ ಹೊತ್ತು ದೇವಿ ಚಾಮುಂಡಿಗೆ ವಿಶೇಷ ಪೂಜೆ ಇರುವುದಾಗಿ ಒಂದು ಕೋಣವನ್ನು ಬಲಿ ಕೊಡಬೇಕೆಂತಲೂ ಹೇಳುತ್ತಿದ್ದರು.

ಆದರೆ ಹೀಗೆ ಕೋಣವನ್ನು ಬಲಿ ಕೊಡುವ ಸಂದರ್ಭದಲ್ಲಿ ಯಾರೂ ಪರ ಊರಿನವರು ಅಲ್ಲಿ ಇರಬಾರದೆಂದು ಹೇಳಿದರು. ಒಂದು ವೇಳೆ ಅಂಥವರಿಗೆನಾದರೂ ಕೋಣ ಬಲಿ ಕೊಡುವಾಗ ಅದರ ರಕ್ತ ಹತ್ತಿದರೆ ಅವರನ್ನೆ ಬಲಿ ಕೊಡುವುದಾಗಿ ಹೇಳಿದ್ದರು. ಸತ್ಯಂಪೇಟೆಯಿಂದ ಶಹಾಪುರಕ್ಕೆ ವಲಸೆ ಬಂದಿರುವ ನಾನು ಮರುದಿನ ಅದರ ಸುತ್ತ ಮುತ್ತ ಕೂಡ ಸುಳಿಯದೆ ಬಹು ದೂರ ಉಳಿದು ಬಿಟ್ಟಿದ್ದೆ. ಮತ್ತೊಂದು ತಮಾಷೆಯ ಸಂಗತಿಯೆಂದರೆ ನಾನು ನಿತ್ಯವೂ ಕಕ್ಕಸಿಗೆ ಹೋಗಿ ಕೂಡುತ್ತಿದ್ದ ಬಯಲಿನ ಜಾಗ ಆ ಚಾಮುಂಡಿ ದೇವಿ ವಾಸವಾಗಿದ್ದ ಸ್ಥಾನವೇ ಆಗಿತ್ತು!

ದೇವರುಗಳಲ್ಲಿ ನಾನಾ ಬಗೆಯವು. ಕೆಲವು ಪಕ್ಕಾ ಸಸ್ಯಹಾರಿಯಾದರೆ ಇನ್ನು ಕೆಲವು ಮಾಂಸಾಹಾರಿಗಳು. ಕುರಿಕೋಳಿ ಬಲಿ ಕೆಲವಕ್ಕೆ ಬೇಕಾದರೆ ಕೋಣಗಳು ಕೆಲವಕ್ಕೆ ಆಹಾರ. ಮತ್ತೆ ಹಲವು ದೇವರಿಗೆ ಸಕ್ಕರೆ, ದೀಪ, ಧೂಪ ಇವಿಷ್ಟಿದ್ದರೆ ನಮ್ಮ ಇಷ್ಟಾರ್ಥವನ್ನು ಕೊಡಮಾಡಬಲ್ಲವು. ನಾನೀಗ ವಾಸಿಸುವ ಶಹಾಪುರದ ಕುಂಬಾರ ಓಣಿಯಲ್ಲಿ ನನ್ನ ತಂದೆ ಒಂದು ಹಳೆಯ ಮನೆಯನ್ನು ಖರೀದಿಸಿದ್ದರು. ಅದು ಸಂಪೂರ್ಣ ಸುಸಜ್ಜಿತ ಕಟ್ಟಡವಾಗಿರಲಿಲ್ಲ. ಗುಂಡು ಜಂತಿಯ, ಮಣ್ಣಿನ ಮನೆಯಾಗಿತ್ತು. ಎಡಕ್ಕಾಗಲಿ -ಬಲಕ್ಕಾಗಲಿ ಯಾವುದೆ ಕಿಟಕಿಗಳಿಲ್ಲದ ಹೊರಗಿನ ಗಾಳಿ ಬೆಳಕು ಇಲ್ಲದ ಉದ್ದಕ್ಕೆ ರೈಲುಡಬ್ಬಿಗಳಂತೆ ಮೂರು ರೂಮಿನ ಕಟ್ಟಡವಾಗಿತ್ತು. ಇಂಥ ರೂಮುಗಳ ರಿಪೇರಿ ಕೆಲಸಕ್ಕೆ ನನ್ನ ತಂದೆ ಗೌಂಡಿಗಳ ಜೊತೆಗೆ ನನ್ನನ್ನು ಅಲ್ಲಿ ಕುಳ್ಳಿರಿಸಿ ಹೋಗಿದ್ದರು. ಈ ಮನೆಯ ಮುಂದೆ ಕಾಲು ದಾರಿ ಇದ್ದುದ್ದರಿಂದ ಬಹಳಷ್ಟು ಜನ ಅಲ್ಲಿ ತಿರುಗಾಡುತ್ತಿದ್ದರು. ಕೂಸುಗಳನ್ನು ಮಗ್ಗುಲಲ್ಲಿ ಹೊತ್ತುಕೊಂಡ ತಾಯಂದಿರಂತೂ ಇಲ್ಲಿ ಹೇರಳವಾಗಿಯೆ ಹೋಗಿ ಬರುತ್ತಿದ್ದರು. ಇದನ್ನೆಲ್ಲ ನೋಡುತ್ತ ನಾನು ಮನೆಯ ಒಳಹೊರಗೆ ತಿರುಗಾಡುತ್ತಿದ್ದಾಗ ಒಬ್ಬ ತಾಯಿ ಬಂದು ‘ಇಗಾ ಎಪ್ಪಾ, ನಿಮ್ಮಮನ್ಯಾಗ ಏಳುಮಕ್ಕಳ ತಾಯಮ್ಮ ಅದಾಳ. ಆಕಿಗಿ ಸಕ್ಕರೆ ಹಾಕಿದೀಪಾ ಮುಡಸು. ನಮ್ಮಮನ್ಯಾಗ ಚುಕ್ಕೋಳು ಅಳಕತ್ಯಾವ’ – ಎಂದು ಒಂದೇ ಉಸುರಿನಲ್ಲಿ ಹೇಳುತ್ತ ನನ್ನ ಅಪ್ಪಣೆಗೂ ಕಾಯದೆ ಸಣ್ಣ ಸಕ್ಕರೆ ಚೀಟು, ಚಿಟಿಕೆ ದೀಪದ ಎಣ್ಣೆ, ಬತ್ತಿ ಕೊಟ್ಟು ಹೋಗಿಯೆಬಿಟ್ಟಳು.

ಇದನ್ನು ತಕ್ಕೊಂಡು ನಾನೇನು ಮಾಡಬೇಕು? ಗೊತ್ತಾಗಲಿಲ್ಲ. ಮನೆ ಒಳಕ್ಕೆ ದೀಪದ ಎಣ್ಣೆಯ ಗಿಂಡಿ, ಊದು ಬತ್ತಿ , ಸಕ್ಕರೆ ಚೀಟು ಹಿಡಕೊಂಡು ಒಳಹೋದೆ. ನನ್ನನ್ನು ನೋಡಿ ಗೌಂಡಿ ನಾಗಪ್ಪ ‘ಏನ್ರಿ…. ದೀಪಾ ಯಾರಿಗೆ ಮುಡಸಬೇಕು? ಎಲ್ಲಿ ಮುಡಸಬೇಕು?’ ಎಂದು ಕೇಳಿದ. ನನಗೂ ಇದೆಲ್ಲ ಹೊಸದಾದ್ದರಿಂದ ಆತನಿಗೆ: ಯಾರೋ ಒಬ್ಬ ಹೆಣ್ಣು ಮಗಳು ಬಂದು ಇದೆಲ್ಲ ಕೊಟ್ಟು ಏಳು ಮಕ್ಕಳ ತಾಯಮ್ಮಳ ಮುಂದೆ ದೀಪ ಮುಡಿಸರೀ ಎಂದು ಹೇಳಿಹೋದದ್ದಾಗಿ ಹೇಳಿದೆ. ಇಬ್ಬರೂ ಕೂಡಿ ಕತ್ತಲಲ್ಲಿ ದೀಪಹಚ್ಚಿ ಆ ಏಳುಮಕ್ಕಳ ತಾಯಿಯನ್ನು ಹುಡುಕ ತೊಡಗಿದೆವು. ಕೊನೆಯ ರೂಮಿನ, ನಟ್ಟನಡುವಿನ ಗೋಡೆಯ ಒಂದು ಮಾಡದಲ್ಲಿ ಆಕೆ ವಾಸವಾಗಿದ್ದ ಲಕ್ಷಣಗಳು ಗೋಚರಿಸ ತೊಡಗಿದವು. ಏಕೆಂದರೆ ಆ ಮಾಡ ಆಗಲೇ ದೀಪ ಹಚ್ಚಿಹಚ್ಚಿ ಕರ್ರಗಾಗಿತ್ತು. ಎಣ್ಣೆ ಚೆಲ್ಲಿಚೆಲ್ಲಿ ಮಾಡದಲ್ಲಿ ಒಂಥರಾ ಮೇಣದಂತಹ ಜಿಗುಟು ಹತ್ತಿಕೊಂಡಿತ್ತು. ಇದನ್ನು ಗುರುತಿಸಿದ ಗೌಂಡಿಯೆ ‘ಇಲ್ಯಾದ್ರಿ….. ಧಣಿ. ದೀಪ ಮುಡಸ್ರೀಮತ್ತ. ಖರೆವಂದ್ರ ಏಳುಮಕ್ಕಳ ತಾಯಿ ಬಲು ಖೋಡಿ ಹೆಣ್ಮಗಳು. ಚುಕ್ಕೋರು ಚುಣಗರು ಯಾರಾದರೂ ತನ್ನ ಮುಂದಹಾದು ಹೋದ್ರ ಅವ್ರಿಗಿ ಅಳಸಲಾರದೆ ಬಿಡಂಗಿಲ್ಲ. ಯಾವಾಗ ಆ ಮನೆಯವ್ರೂ ಸಕ್ಕರಿ ಕೊಟ್ಟು ದೀಪ ಹಚ್ಚತಾರೋ ಆವಾಗ ಮಾತ್ರ ಆಕಿ ಸುಮ್ನ ಆಗಾಕಿ’ ಎಂದು ಹೇಳಿದಾಗ, ಈಕೆ ಮಹಾಗಾಟಿ ಹೆಣ್ಣುಮಗಳಿರಬೇಕು ಎಂದುಕೊಂಡೆ.

ನನ್ನ ತಾಯಿ ಸ್ವಲ್ಪ ಜಾಸ್ತಿಯೆ ಸೆನ್ಸಿಟಿವ್ ಇರುವಾಕೆ. ದೇವರು ಎಂಬ ಪದವೆ ಆಕೆಗೆ ಅಪ್ಯಾಯಮಾನ. ಗೌರವ, ಪ್ರೀತಿ, ಭಕ್ತಿ. ಇದೆಲ್ಲಕ್ಕೂ ನನ್ನ ಮಕ್ಕಳಿಗೆ ಮರುಗಳಿಗೆ ಒಳ್ಳೆಯದಾಗಲಿ, ಯಾವುದೆ ತೊಂದರೆ ಬರದಿರಲಿ ಎಂಬುದೆ ಆಕೆಯ ಹೆಬ್ಬಯಕೆ. ಬಹುಶಃ ಇಂಥ ಮನಸ್ಥಿತಿ ಇರುವ ನನ್ನ ಅವ್ವನ ಕೈಗೆ ಈ ಏಳು ಮಕ್ಕಳ ತಾಯಮ್ಮ ಸಿಕ್ಕರೆ ಏನೋನೋ ಆವಾಂತರಗಳು ಘಟಿಸಬಹುದು ಎಂದೆನಿಸಿತು. ನನ್ನ ತಾಯಿ ನಿತ್ಯ ದೀಪ ಮುಡಿಸುತ್ತ, ಮುಡಿಸುತ್ತ ದೇವರನ್ನೆ ತನ್ನ ಮೈಮೇಲೆ ಆಹ್ವಾನಿಸಿ ಕೊಂಡರೆ? ಎಂದು ಕ್ಷಣ ಯೋಚಿಸಿದೆ. ದಿಗಿಲಾಯಿತು. ಆಗ ತಕ್ಷಣವೆ ನಮ್ಮ ಆಯಿ ನೆನಪಾದಳು. ಯಾವಾಗಲೋ ಒಂದು ಸಲ ಇದೆ ಏಳುಮಕ್ಕಳ ತಾಯಮ್ಮನ ವಿಷಯ ಬಂದಾಗ ಯಾರಿಗೋ ಹೇಳುತ್ತಿದ್ದಳು. ‘ಆಕಿ ಏಳು ಮಕ್ಕಳ ಹಡದಿರಬೇಕು. ನಾನು ಆಕೀಗಿಂತಲೂ ಎರಡು ಹೆಚ್ಚು ಮಕ್ಕಳ್ನಹಡದೀನಿ. ಯಾವ್ದು ಹೇಳಿತನ, ಉನೇಕಿ. ಕೆಲಸಕ್ಕಬರಲಾರದ್ದ. ದುಡುದು ಉಣ್ಣೋದು ಬಿಟ್ಟು ಇಂಥದ್ದಕ್ಕೆಲ ಗಂಟಬಿದ್ದಾವ’ ಎಂಬ ಮಾತುಗಳು ನೆನಪಿಗೆ ಬಂದವು. ಒಡನೆಯೆ ಈ ಏಳು ಮಕ್ಕಳ ತಾಯಮ್ಮನ ಮಾಡವನ್ನು ಮುಚ್ಚುವಂತೆನಾಗಪ್ಪ ಗೌಂಡಿಗೆ ಹೇಳಿದೆ. ಆತ ”ಏ ಎಪ್ಪಾ ಎಂಥ ಮಾತ್ಹೇಳ್ತೋ ಧಣಿ. ದೇವರ್ನ ಮುಚ್ಚು ಅಂತೇಲ್ಲಪ್ಪೋ! ನೀ ಬೇಕಾದ್ದಹೇಳ ನಾಮಾಡ್ತೀನಿ. ಈ ಕೆಲಸ ಮಾತ್ರನನ್ನಿಂದ ಸುತಾರಾಂ ಆಗೋದಿಲ್ಲ” ಎಂದು ಕೈ ಜಾಡಿಸಿ ಗೋಣು ಅಲ್ಲಾಡಿಸಿಬಿಟ್ಟ.

ಆಗ ಅನಿವಾರ್ಯವಾಗಿ ನಾನೇ ಆತನ ಹಳೆಯ ಜೋಡುಗಳನ್ನು ಆ ಮಾಡದಲ್ಲಿಟ್ಟು ಕಲ್ಲು ಸಿಮೆಂಟ್ನಿಂದ ಮುಚ್ಚಿಬಿಟ್ಟೆ! ಏಳು ಮಕ್ಕಳ ತಾಯಮ್ಮ ನಮ್ಮ ಮನೆಯ ಮಾಡದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಮಟ್ಟಸವಾಗಿ ಕುತುಗೊಂಡು ಸುಮಾರು ವರ್ಷಗಳೆ ಉರುಳಿ ಹೋಗಿವೆ. ಇದೆಲ್ಲ ಗೊತ್ತಿಲ್ಲದ ಕೆಲವು ಹೆಣ್ಣುಮಕ್ಕಳು ಆಗಾಗ ನಮ್ಮ ಮನಿಗಿ ಬಂದು ಸಕ್ಕರಿ ಚೀಟು, ಎಣ್ಣೆಯ ಗಿಂಡಿಹಿಡಕೊಂಡು ಏಳುಮಕ್ಕಳ ತಾಯಮ್ಮನನ್ನು ಹುಡುಕುತ್ತ ಬಂದರೆ ”ಒಂಭತ್ತು ಮಕ್ಳನ್ನ ಹಡದ ನಮ್ ಆಯಿ ಈ ಮನಿಗೆ ಬಂದಮ್ಯಾಲ ಏಳುಮಕ್ಕಳ ತಾಯಮ್ಮ ನಮ್ಮನಿಯಿಂದ ಹೊಂಟಹೋಗ್ಯಾಳ!” ಎಂದು ಸಲೀಸಾಗಿ ಹೇಳುತ್ತಿದ್ದೆ. ಆದರೆ ನನ್ನೆದುರಿಗೆ ಬಂದು ನಿಂತೋರೆಲ್ಲ ಕೇಳಬಾರದ್ದನ್ನ ಏನೋ ಕೇಳಿವಿ ಎಂಬಂತೆ ಕ್ಷಣ ಸ್ಥಂಭಿಬೂತರಾಗಿ ನಿಂತುಬಿಡುತ್ತಿದ್ದರು.ನಾನು ಚಿಕ್ಕವನಿದ್ದಾಗ ಸವಾರಿ ಬಂಡಿ ಕಟ್ಟಿಕೊಂಡು ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಗೆ ಹೋಗುತ್ತಿದ್ದೆವು. ಕೃಷ್ಣಾಪುರ, ಖಾನಾಪುರ ಊರುಗಳನ್ನು ಹಾಯ್ದು ಅಬ್ಬೆ ತುಮಕೂರಿಗೆ ಹೋಗಬೇಕಾಗುತ್ತಿತ್ತು. ದಾರಿಯಲ್ಲಿ ಹೋಗುವಾಗ ಟೊಂಕಮಟ ಎತ್ತರದ ಕಲ್ಲುಗಳಿಂದ ಕೂಡಿದ ಒಂದು ದಿಬ್ಬ ಬರುತ್ತದೆ. ಆ ದಿಬ್ಬದ ಸುತ್ತಲೂ ಅಮರಿ ಗಿಡದ ತೊಪ್ಪಲು ಬಿದ್ದಿರುತ್ತಿತ್ತು. ಆ ದಾರಿಯಲ್ಲಿ ಹೋಗುವವರು ಬರುವವರು ಒಂದೆ ಸಮ ಕ್ಯಾಕರಿಸಿ ಉಗುಳುತ್ತ, ಒಂದೆರಡು ಕಲ್ಲುಹೊಡೆದು, ಅಮರಿ ತಪ್ಪಲ ಅದರ ಮ್ಯಾಲೆ ಹಾಕಿ ಬರುತ್ತಿದ್ದರು. ಇದೆಲ್ಲ ಏನು? ಎಂದು ನಾನು ಸಹಜವಾಗಿ ಕೇಳಿದ್ದಕ್ಕೆ ಅಂದು ನನ್ನ ಜೊತೆಗೆ ಇದ್ದನಮ್ಮಮುತ್ಯಾ ‘ಇ(ವಿ)ಕಾರಗೇಡಿಗಳು. ಯಾವ್ದೂ ಗೊತ್ತಿಲ್ಲ ಇವಕ್ಕ. ಇದು ಉಗುಳು ಮಾರಿ ದೇವರಂತ! ಅದಕ್ಕ ಕ್ಯಾಕರಿಸಿ ಉಗುಳಿ ಮಂದೆಹೋಗ್ತಾರಂತ!’ ಎಂದು ಆತ ಸಲೀಸಾಗಿ ಹೇಳಿಬಿಟ್ಟ. ಆದರೆ ಉಗುಳಿಸಿಕೊಳ್ಳುವ ದೇವರೂನಮ್ಮಲ್ಲಿ ಇದ್ದಾನೆಯೆ? ಎಂಬುದಕ್ಕೆ ನನಗಿನ್ನೂ ಸ್ಷಷ್ಟ ಉತ್ತರ ಸಿಕ್ಕಿಲ್ಲ.

ಸತ್ಯಂ ಪೇಟೆಯ ನಮ್ಮಮನೆಯ ಹಿಂದುಗಡೆಯಿಂದ ನಮ್ಮ ತೋಟಕ್ಕೆ ಹೋಗುವ ಮಾರ್ಗದಲ್ಲೆಲ್ಲ ಮೂಟಿಗಟ್ಟಲೆ ಅಕ್ಕಿ ಅನಾಜನ್ನು ಅಲ್ಲಲ್ಲಿ ಇಟ್ಟಿದ್ದರು. ಕೆಲವು ಕಡೆ ಈಚಲ ಚಾಪೆಗಳು, ಈಚಲ ಪುಟ್ಟಿ, ಮೊರ ಎಲ್ಲವನ್ನು ಬಿಟ್ಟುಹೋಗಿದ್ದರು. ಯಾರು ಕೇಳದೆ ಅನಾಥವಾಗಿದ್ದರೂ ಇವನ್ನು ತೆಗೆದುಕೊಳ್ಳುವುದಿರಲಿ, ಅದರ ಕಡೆ ಯಾರೂ ತಲೆ ಎತ್ತಿ ಕೂಡ ನೋಡುತ್ತಿರಲಿಲ್ಲ. ಏಕೆಂದರೆ ಮರಗಮ್ಮ ದೇವರ ಹೆಸರಿನ ಮೇಲೆ ಇವೆಲ್ಲ ಮಾಡಿ ಇಳಿಸಿ ಇಟ್ಟುಹೋಗಿದ್ದರಂತೆ. ಇವನ್ನು ಮುಟ್ಟಿದರೆ ಅಥವಾ ಉಪಯೋಗಿಸಿದರೆ ಅವರಿಗೆ ತೊಂದರೆ ತಪ್ಪಿದ್ದಲ್ಲ ಎಂಬ ನಂಬಿಕೆ ಇರುವುದರಿಂದ ಅದನ್ನು ಯಾರೂ ಬಳಸಿಕೊಳ್ಳುತ್ತಿರಲಿಲ್ಲ. ನಮ್ಮಮನೆಗೆ ಆಗಾಗ ಬರುತ್ತಿದ್ದ ಹಣಮಂತನಿಗೆ ಇವನ್ನೆಲ್ಲ ಮನೆಗೆ ಒಯ್ದು ಉಪಯೋಗಿಸು ಎಂದು ನನ್ನ ತಂದೆ ಹೇಳಿದಾಗ ಆತ ಭಯದಿಂದ ಗಡಗಡ ನಡುಗಿದ. ನನಗೆ ಇದೆಲ್ಲ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ನನ್ನ ತಂದೆ ಮಾತ್ರ ಅಲ್ಲಲ್ಲಿ ದಾರಿಗುಂಟ ಇಟ್ಟಿದ್ದ ಅಕ್ಕಿಯ ಅನಾಜನ್ನು, ಈಚಲ ಚಾಪೆ, ಪುಟ್ಟಿ, ಮೊರಗಳನ್ನು ನಮ್ಮ ಮನೆಗೆ ತರಿಸಿದ್ದರು. ಸುಮಾರು ಮೂರ್ನಾಲ್ಕು ವರ್ಷಳಾದರೂ ನಾವೆಲ್ಲ ನಮ್ಮ ಮನೆಯಲ್ಲಿ ಈ ಈಚಲು ಚಾಪೆಗಳನ್ನೆಹಾಸಿ ಮಲಗುತ್ತಿದ್ದೇವು. ಅಕ್ಕಿಯನ್ನು ಬಳಸಿಕೊಂಡು ಅನ್ನಮಾಡಿ ಊಟಮಾಡಿದ್ದೇವು. ಈಚಲ ಪುಟ್ಟಿಗಳಂತೂ ಹೆಂಡಿ ಕಸವನ್ನು ಹೊತ್ತು ಹಾಕಲು ಉಪಯೋಗಿಸಿಕೊಂಡಿದ್ದೇವು.

ದೇವರುಗಳು ನಮ್ಮಂತೆ ಬಟ್ಟೆ ಉಟ್ಟುಕೊಳ್ಳುತ್ತವೆ. ನಾವು ಯಾವ ಆಹಾರವನ್ನು ಸೇವಿಸುತ್ತೇವೆಯೋ ಅದನ್ನು ಅವು ಸೇವಿಸುತ್ತವೆ. ನಮ್ಮಂತೆಯೆ ಕೆಲವು ದೇವರು ಉಗ್ರ. ಕೆಲವು ಸಂಭಾವಿತ. ಜೊತೆಗೆ ನಮ್ಮ ಐಸತ್ತಿಗೆ (ನಮ್ಮನಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ) ತಕ್ಕಂತೆ ತಾಮ್ರದ, ಕಂಚಿನ, ಹಿತ್ತಾಳಿಯ, ಕೆಲವರಲ್ಲಿ ಬಂಗಾರದ ದೇವರೂ ಉಂಟು. ಕೆಲವು ದೇವರ ಮುಂದೆ ಶಂಖ ಊದಬೇಕು. ತಾಳ ಮದ್ದಳೆ ಬಾರಿಸಬೇಕು. ಜಾಗಟೆ ಠಣಗುಡುತ್ತಿರಬೇಕು. ಸತತ ಭಜನೆಯ ತಾಳಗಳು ಕೆಲವಕ್ಕೆ ಬೇಕು. ಇತ್ತೀಚೆಗೆ ಕೆಲವು ದೇವರಿಗೆ ಸತತವಾಗಿ ಎಚ್ಚರದಿಂದ ಇರುವಂತೆ ನೋಡಿಕೊಳ್ಳಲು ಲೌಡ್ ಸ್ಪೀಕರ್ ಹಾಗೆ ಹಾಡುತ್ತಿರಬೇಕು.

ಗಣಪತಿಯ ಹಬ್ಬ ಬಂದಾಗಲಂತೂ ಎಲ್ಲಾ ಕೆಲಸ ಬೊಗಸೆ ಬಿಟ್ಟು ಆತನ ಚತುರ್ಥಿಯನ್ನು ಆಚರಿಸುತ್ತಾರೆ. ತಮ್ಮ ಬದುಕಿಗೆ ವಿಘ್ನಗಳು ಬರಬಾರದೆಂದು ಆತನ ಮೊರೆಹೋಗುತ್ತಾರೆ. ಆಶ್ಚರ್ಯವೆಂದರೆ ಅಪ್ಪಿತಪ್ಪಿಯೂ ಗಣೇಶನಂಥ ರೂಪ ಇರುವ ಮಗನನ್ನು ದಯಪಾಲಿಸು ಎಂದು ಯಾರು ಬೇಡಿಕೊಳ್ಳುವುದಿಲ್ಲ. ಗಣಪತಿಯ ಮುಂದೆ ನಮ್ಮ ಭಕ್ತಿಯನ್ನು ಪ್ರದರ್ಶಿಸಲು ಕುಣಿಯುತ್ತೇವೆ. ಕುಡಿಯುತ್ತೇವೆ. ನಮ್ಮ ಗಣಪನಿಗಂತೂ ಇತ್ತೀಚೆಗೆ ನಾನಾ ವೇಷ ತೊಡಿಸಿ ಸಂಭ್ರಮಪಡುತ್ತೇವೆ. ಹೀಗೆ ದೇವರು ಕೆಲವರಿಗೆ ಹೊಟ್ಟೆಪಾಡನ್ನು ಪೂರೈಸುವ ಕಚ್ಚಾ ವಸ್ತು. ಆ ಕಚ್ಚಾ ವಸ್ತುವನ್ನು ಸಿಂಗರಿಸಿ, ಇಲ್ಲದ ಕಥೆಗಳನ್ನೆಲ್ಲ ಪೋಣಿಸಿ, ಸ್ಥಳಪುರಾಣಗಳನ್ನು ಹೇಳುತ್ತ ಹೋದರೆ ಸಾಕು ನೋಡನೋಡುವಷ್ಟರಲ್ಲಿ ಆ ದೇವರು ಪ್ರಖ್ಯಾತನಾಗುತ್ತಾನೆ.

ನಾವು ಬೇಡಿಕೊಂಡದ್ದನ್ನೆಲ್ಲ ಕೊಡುವ ದೇವರಿದ್ದರಂತೂ ಆ ದೇವರಿಗೆ ಇರುವೆ ಮುತ್ತಿದಂತೆ ಜನ ಮುತ್ತುತ್ತಾರೆ.  ತಿರುಪತಿಯ ತಿಮ್ಮಪ್ಪನ ಹುಂಡಿಗೆ ಇಂದುಬೀಳುವ ಚಿನ್ನಾಭರಣ ದುಡಿದು ಗಳಿಸಿದ್ದಂತೂ ಖಂಡಿತ ಅಲ್ಲ. ಅದು ಪಾಪದ ಆಭರಣ. ಇಲ್ಲದಿದ್ದರೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರ ಖಚಿತವಾದ ಕಿರೀಟವನ್ನು ಬಳ್ಳಾರಿಯ ರೆಡ್ಡಿಗಳು ಕೊಟ್ಟಾಗ ಆತ ಅದನ್ನು ಗಪ್ ಚುಪ್ ಪಡಕೊಳ್ಳುತ್ತಿರಲಿಲ್ಲ.

ಕೆಲವು ದೇವರುಗಳಂತೂ ಆಗಾಗ ಮನುಷ್ಯರು ನಡೆಸುವಂತೆ ಗಿಮಿಕ್ ನಡೆಸುತ್ತವೆ. ತಮ್ಮ ನಿರ್ಜೀವವಾದ ಕಣ್ಣಿನಿಂದ ನೀರನ್ನು ಉದುರಿಸುತ್ತವೆ. ಫೋಟೋಗಳ ಒಳಗಿಂದ ಒಣ ಭಸ್ಮವನ್ನು ಉದುರಿಸುತ್ತವೆ. ವರ್ಷಕ್ಕೊಂದು ಬಾರಿ ಮಾತ್ರ ತಾನು ಜ್ಯೋತಿಯಾಗಿ ಮಾತ್ರ ಕಾಣಿಸಿಕೊಳ್ಳುವುದಾಗಿ ಪ್ರಕಟಿಸಿದ ಅಯ್ಯಯ್ಯಪ್ಪ ಸ್ವಾಮಿಯ ಕತೆಯಂತೂ ಹೇಳಲಾಸಲ್ಲ. ಸುಮಾರು ವರ್ಷಗಳಿಂದ ಜ್ಯೋತಿಯ ಹೆಸರಿನಲ್ಲಿ ಎಲ್ಲರನ್ನು ಕೋತಿಮಾಡಿದ ಅಯ್ಯಪ್ಪ ಗಿಮಿಕ್ ಮಾಡದೆ ಇದ್ದರೆ ಆತನನ್ನು ಯಾರು ಕೇಳುತ್ತಿರಲಿಲ್ಲ. ವರ್ಷಕ್ಕೊಂದು ಸಲ ಕರಿಬಟ್ಟೆ ಹಾಕಿಕೊಂಡು , ಹೆಣ್ಣುಮಕ್ಕಳನ್ನು ಮುಟ್ಟಿಸಿಕೊಳ್ಳದೆ ಅವರು ಮಾಡಿದ ಅಡುಗೆಯನ್ನು ಉಣ್ಣದೆ ಕಟ್ಟು ನಿಟ್ಟಿನವೃತ ಮಾಡಿದರೆ ಅಯ್ಯಪ್ಪ ಅವರಿಗೆ ಒಲಿಯುತ್ತಾನಂತೆ. ಈಮಹಾಶಯ ಯಾರಿಗೆ ಒಲಿದಿದ್ದಾನೋ ಬಿಟ್ಟಿದ್ದಾನೋ ಒಂದೂ ಗೊತ್ತಾಗಿಲ್ಲ. ಆದರೆ ಈತನ ದರ್ಶನಕ್ಕೆ ಹೋದ ಸಹಸ್ರಾರು ಮಂದಿ ಮಾತ್ರ ಹುಳು ಸತ್ತಂತೆ ಜನರ ಕಾಲ್ತುಳಿತಕ್ಕೆಸಿಕ್ಕು ಪರಲೋಕ ಸೇರಿದ್ದಂತೂ ಖಚಿತ!

ನಮ್ಮ ದೇಶದ ದೇವರುಗಳಿಗೆ ದಿನ ನಿತ್ಯವೂ ಮುಂಜಾನೆ ಬೆಳಗ್ಗೆ ಎದ್ದುನಾವೇ ಅವುಗಳನ್ನ ‘ಎದ್ದೇಳು ಮಂಜುನಾಥ… ಏಳು ಬೆಳಗಾಯಿತು’ ಎನ್ನಬೇಕು. ಆತನಿಗೆ ಮೊಸರು, ತುಪ್ಪ, ಬೆಣ್ಣೆಗಳ ಮೂಲಕ ಸ್ನಾನ ಮಾಡಿಸಬೇಕು. ದೀಪ ಮುಡಿಸಬೇಕು. ಧೂಪ ಹಚ್ಚಬೇಕು. ಆತವಾಸವಾಗಿರುವ ಗುಡಿಯ ಬಾಗಿಲು ತೆಗೆದಾಗ ಮಾತ್ರ ಎಲ್ಲರಿಗೂ ಆತ ದರ್ಶನಭಾಗ್ಯ ಕರುಣಿಸುತ್ತಾನೆ. ಇದೆಲ್ಲಕ್ಕಿಂತ ಮುಖ್ಯವಾಗಿ ದಿನವೂ ಈ ದೇವರುಗಳಿಗೆ ಬೆಳಗ್ಗೆ ಆಹ್ವಾನ ಮಂತ್ರಗಳ ಮೂಲಕ ದೇವರು ಆಯಾ ಮೂರ್ತಿಗಳ ಒಳಗಡೆ ಬರುವಂತೆ ಪ್ರತಿಷ್ಠಾಪನೆ ಮಾಡಬೇಕು. ರಾತ್ರಿ ಗುಡಿಗೆ ಕೀಲಿ ಹಾಕಿನಡೆದಾಗ ಮತ್ತೆ ವಿಸರ್ಜನೆಮಂತ್ರ ಹೇಳಬೇಕು. ನಮ್ಮ ದೇವರುಗಳು ಈಗ ಪೂಜಾರಿ ಹೇಳಿದಂತೆ ಬಾ ಅಂದಾಗ ಬರುತ್ತಾನೆ. ಹೋಗು ಎಂದಾಗ ಎದ್ದು ಹೋಗುತ್ತಾನೆ.ಇಂಥ ದೇವರಿಗಾಗಿಯೆ ನಾವುಗಳೆಲ್ಲ ಭಜನೆ ಮಾಡಿದ್ದೇವೆ. ಕೀರ್ತನೆ ಕೇಳಿದ್ದೇವೆ. ಜಪ ಮಾಡಿದ್ದೇವೆ. ಊಟ ಬಿಟ್ಟು ಉಪವಾಸ ಇದ್ದು ದೇವರನ್ನು ಒಲಿಸಿಕೊಳ್ಳುವ ಕಸರತ್ತು ಮಾಡಿದ್ದೇವೆ. ಸಹಸ್ರಾರು ಬಿಳಿಯ ಹಾಳೆಯ ಮೇಲೆಲ್ಲ ದೇವರ ಹೆಸರನ್ನು ಬರೆಬರೆದು ಸಂತೃಪ್ತರಾಗಿದ್ದೇವೆ. ಹೋಮ-ಹವನಗಳಿಂದ ದೇವರನ್ನು ಮತ್ತಷ್ಟು ಖುಷಿಪಡಿಸಲು ಯತ್ನಿಸಿದ್ದೇವೆ. ನಿಗಿ ನಿಗಿಯಾಗಿ ಹೊಳೆಯುವ ಬೆಂಕಿಯ ಕೆಂಡವನ್ನು ದೇವರಿಗಾಗಿ ತುಳಿದಿದ್ದೇವೆ. ಮೈ ಮೇಲೆ ಬಾಸುಂಡೆ ಬರುವಂತೆ ಚಾಟಿಯಿಂದ ಹೊಡಕೊಂಡಿದ್ದೇವೆ. ಗಲ್ಲದ, ತುಟಿಯ ಒಳಗಡೆ ಕಿರುಬೆರಳ ದಪ್ಪದ ಸಣ್ಣನೆಯ ಕಬ್ಬಿಣದ ತುಂಡನ್ನು ಸಿಕ್ಕಿಸಿಕೊಂಡಿದ್ದೇವೆ. ಚೂಪಾದ ಮುಳ್ಳಾವಿಗೆಯ ಮೇಲೆ ಒಂಟಿ ಕಾಲಿನಲ್ಲಿ ನಿಂತಿದ್ದೇವೆ. ಮಡಿ ಬಟ್ಟೆ ಉಟ್ಟು , ಕೆಲವು ಸಲ ದಶಾ ಬತ್ತಲೆಯಿಂದಲೂ ಪೂಜಿಸಿದ್ದೇವೆ. ಆದರೆ ದೇವರೆಂಬ ಆ ದೇವರು ಯಾರಿಗೂ ದರ್ಶನ ಭಾಗ್ಯ ಕರುಣಿಸಿಲ್ಲ.

ವಿಜ್ಞಾನದ ಇಂದಿನ ಯುಗದಲ್ಲಿ ಯೂಮಡಿಕೆ ದೈವ. ಮರದೈವ. ಬೀದಿಯ ಕಲ್ಲು ದೈವ. ಹಣಿಗೆ ದೈವ. ಬಿಲ್ಲ ನಾರಿ ದೈವ. ದೈವದೈವೆಂಬುದು ಕಾಲಿಡಲಿಂಬಿಲ್ಲ ಎನ್ನುವಷ್ಟು ಲಿಬಿಲಿಬಿ ಗುಟ್ಟುತ್ತಿವೆ. ದೇವರೆಂಬ ಈ ಕಸವನ್ನು ತೆಗೆದುಹಾಕಲು ವಿಚಾರದ ಕಸುವು ಬೇಕು. ಆ ಕಸುವು ಯಾರು ನಮ್ಮಲ್ಲಿ ತುಂಬಲು ಸಾಧ್ಯವಿಲ್ಲ. ಅದನ್ನು ನಾವು ನಾವೇ ನಮ್ಮಲ್ಲಿಯೇ ತಂದು ಕೊಳ್ಳಬೇಕು. ‘ಜ್ಞಾನದ ಬಲದಿಂದ ಅಜ್ಞಾನದ ಕೇಡುನೋಡಯ್ಯ. ಸತ್ಯದ ಬಲದಿಂದ ಅಸತ್ಯದ ಕೇಡನೋಡಯ್ಯ. ಜ್ಯೋತಿಯ ಬಲದಿಂದ ತಮಂಧದ ಕೇಡನೋಡಯ್ಯ’ ಎಂದು ತಿಳಿದು ನಡೆಯಬೇಕು.’ತನ್ನ ಬಿಟ್ಟು ದೇವರಿಲ್ಲ ಮಣ್ಣಬಿಟ್ಟು ಮಡಕೆ ಇಲ್ಲ’ ಎಂಬ ಜಾನಪದ ಮಹಿಳೆಯ ಮಾತಿಗೆ ಕಿವಿಗೊಡಬೇಕು. ‘ಸಣ್ಣನೆಯ ಮಳಲೊಳಗೆ. ನುಣ್ಣನೆಯ ಶಿಲೆಯೊಳಗೆ. ಬಣ್ಣಿಸುತ ಬರೆದ ಪಟದೊಳಗೆ ಇರುವಾತ ತನ್ನೊಳಗೆ ಇರನೆ ಸರ್ವಜ್ಞ’ ಎಂಬ ಕವಿಯ ಮಾತನ್ನು ನೆನೆಯುತ್ತ ನಮ್ಮ ಮನಸ್ಸಿನ ಕತ್ತಲೆಯನ್ನು ಹೊಡೆದೋಡಿಸಬೇಕು.

‘ಸತ್ತ ಕಲ್ಗಳ ಮುಂದೆ ಅತ್ತು ಕರೆಯದೆ ಜೀವದಾತೆಯನ್ನು ಕೂಗುವ ಮಾನವೀಯತೆ’ ನಾವು ಮೈಗೂಡಿಸಿಕೊಳ್ಳಬೇಕು ಎಂದು ಈಗ ಇನ್ನಷ್ಟು ಸ್ಪಷ್ಟವಾಗತೊಡಗಿದೆ.

(ಚಿತ್ರಕೃಪೆ : ಡಿ.ಜಿ. ಮಲ್ಲಿಕಾರ್ಜುನ್)

“ಸೂರೂರಿನ ದೈವ ಮಾಯವಾದ ಕತೆ” : ತೃತೀಯ ಬಹುಮಾನ ಪಡೆದ ಕತೆ

– ಶ್ರೀಲೋಲ.ಸಿ

ದೊಡ್ಮನೆ ವಿಷ್ಣುಮೂರ್ತಿ ಬಾಗಿಲ್ತಾಯರ ಮನೆಯಲ್ಲಿ ಅಂದು ಸಡಗರವೋ ಸಡಗರ. ಅವರ ಏಕೈಕ ಮಗಳು ಕಲ್ಪನಾಳಿಗೆ ಕಳೆದ ವಾರವಷ್ಟೆ ಮಂಗಳೂರಿನಲ್ಲಿ ಮದುವೆ ಮಾಡಿಸಿ, ಮಗಳು ಮತ್ತು ಅಳಿಯರನ್ನು ಪುತ್ತೂರಿನ ಹತ್ತಿರದ ತಮ್ಮ ಊರಾದ ಸೂರೂರಿಗೆ ಕರೆದು ತಂದಿದ್ದಾರೆ. ಹುಡುಗ ಶಶಾಂಕ, ಕಸ್ಟಂಸ್‌ನಲ್ಲಿ ಅಧಿಕಾರಿ. ಬಂದ ನೆಂಟರಿಷ್ಟರು ಒಬ್ಬೊಬ್ಬರೆ ಗಂಟುಮೂಟೆ ಕಟ್ಟಿದ್ದಾರೆ. ಬಾಗಿಲ್ತಾಯರ ಹೆಂಡತಿ ಸುನೀತಾ ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಮತ್ತೆ ಕೇಳಬೇಕೆ, ಅಳಿಯನಿಗೆ ಮಾಡಿ ಹಾಕಿದಷ್ಟು ಸಾಲದು. ತನ್ನ ತವರು ಮನೆ, ದೂರದ ಕೋಟದಲ್ಲಿ ಕಲಿತ ಕೊಟ್ಟೆ ಕಡುಬು, ಅರಿಶಿನ ಎಲೆಯ ಗಟ್ಟಿ, ಕೆಸುವಿನ ಎಲೆಯ ಗಂಟಿನ ಹುಳಿ ಹೀಗೆ ಯಾವುದಾವುದೋ ಹಳತು ಆದರೂ ಹೊಸರುಚಿಯ ಅಡಿಗೆಗಳನ್ನು ಮಾಡಿ ಬಡಿಸಿ, ಕೊನೆಗೆ “ಏನು ಅಳಿಯಂದಿರೇ, ನೀವು ಉಣ್ಣುವುದೇ ಇಲ್ಲ? ನಿಮ್ಮ ಪ್ರಾಯದಲ್ಲಿ ನಮ್ಮ ಮನೆಯವರದು ಬಕಾಸುರನ ಹೊಟ್ಟೆಯಂತಿತ್ತು. ಅಥವಾ ನನ್ನ ಅಡುಗೆ ನಿಮಗೆ ಸಮ ಬರಲಿಲ್ಲವೋ,” ಎಂದು ನುಡಿದು ನಡುವೆ ಗಂಡನನ್ನು ನೋಡಿ ಸಣ್ಣಗೆ ನಕ್ಕರು. ಇನ್ನೂ ಅತ್ತೆ ಎನ್ನುವ ಸಲುಗೆ ಬರದೇ ಇದ್ದ ಶಶಾಂಕನಿಗೆ “ಹಾಗೇನಿಲ್ಲ, ಕೂತು ಸಮಯ ಕಳೆಯುವುದಲ್ಲವೇ ಇಲ್ಲಿ? ಹಾಗಿರುವಾಗ ಎಷ್ಟುತಾನೆ ಉಣ್ಣಬಹುದು?” ಎಂದು ಸಂಕೋಚದಿಂದಲೇ ಉತ್ತರಿಸಿದ. ಬಾಗಿಲ್ತಾಯರು “ಶಶಾಂಕ, ಸುನೀತಳಿಗೆ ಒಂದು ಐಬು. ಅದೇನೆಂದರೆ ಆಕೆಗೆ ಕಡಿಮೆ ಅಡುಗೆ ಮಾಡಿ ಗೊತ್ತಿಲ್ಲ. ಇಬ್ಬರು ಮನೆಯಲ್ಲಿದ್ದರೂ ಇಪ್ಪತ್ತು ಮಂದಿಗಾಗುವಷ್ಟು ಅಡುಗೆ ಮಾಡುವುದು. ಕೇಳಿದರೆ ಮನೆಗೆ ಯಾರಾದರೂ ಬಂದರೆ ಅವರಿಗೆ ಏನು ಬಡಿಸುವುದು ಎಂಬ ಸಿದ್ಧ ಉತ್ತರ. ಹಾಗೆ ಬರುವುದಿಲ್ಲವೆಂದೇನಿಲ್ಲ. ಅಷ್ಟಾದ ಮೇಲೆ ಮಾಡಿದ ಅಡುಗೆ ಉಳಿಯಕೂಡದು. ದುಡ್ಡು ಕೊಟ್ಟು ತಂದ ಬೇಳೆ, ತರಕಾರಿಯನ್ನು ಬಿಸಾಡುವುದೆ? ಇಷ್ಟು ಸಮಯ ನಾನೊಬ್ಬನೆ ಅವಳ ಅಡುಗೆಯನ್ನು ಖರ್ಚು ಮಾಡಲು ಪ್ರಯತ್ನಿಸುತ್ತಿದ್ದೆ. ಕಲ್ಪನಾ ಮಾತ್ರ ಜಾಣೆ. ಅವಳ ಅಮ್ಮ ಎರಡನೆ ಬಾರಿ ಏನಾದರೂ ಬಡಿಸಲು ಬಂದರೆ, ತಟ್ಟೆಯನ್ನು ಕೈಯಲ್ಲಿ ಹಿಡಿದು ನಿಂತು, ಗಬಗಬನೆ ಉಂಡು ಕೈ ತೊಳೆಯಲು ಓಡುತ್ತಿದ್ದಳು. ಆದ್ದರಿಂದ ಅವಳಿಂದ ನನಗೆ ಏನೂ ಸಹಾಯವಾಗುವ ಭರವಸೆಯಿರುತ್ತಿರಲಿಲ್ಲ. ಈಗ ನೀವು ಬಂದಿದ್ದೀರಿ. ವರ್ಷದಲ್ಲಿ ಕೆಲವು ದಿನ ನನ್ನ ಕರ್ತವ್ಯವನ್ನು ನಿಮ್ಮ ಜೊತೆ ಹಂಚಿಕೊಳ್ಳಬಹುದೋ ಎಂಬ ಆಸೆ ನನಗೆ,” ಎಂದು ನಗುತ್ತಾ ಹೇಳಿದರು.

“ಏನು ನೀವು ನನಗೆ ಐಬು, ಗೀಬು ಅಂತೆಲ್ಲ ಹೇಳುವುದು? ನಿಮಗೆ ಬೇಯಿಸಿ ಹಾಕುವುದೇ ಐಬು ಅಂತಾದರೆ, ಮಗಳು ಅಳಿಯ ಹೋದ ಮೇಲೆ ನಿಮಗೆ ಮೂರು ಹೊತ್ತು ಬೆಳ್ತಕ್ಕಿ ಗಂಜಿ ಬೇಯಿಸಿ ಹಾಕುತ್ತೇನೆ ನೋಡಿ,” ಎಂದರು ಸುನೀತಾ ಹುಸಿಮುನಿಸಿನಿಂದ.

ಬಾಗಿಲ್ತಾಯರು ಮಾತಿನ ವಿಷಯ ಬದಲಿಸಿ ಶಶಾಂಕನತ್ತ ನೋಡಿ” ಶಶಾಂಕ, ನಿಮಗೆ ನಮ್ಮೂರನ್ನು ತೋರಿಸುತ್ತೇನೆ. ಊರು ಎಂದರೆ ಬಹಳ ದೊಡ್ಡದೇನಲ್ಲ. ರಸ್ತೆಯಲ್ಲಿ ಒಂದು ಎರಡು ಫರ್ಲಾಂಗು ನಡೆದರೆ ಊರು ಖತಂ. ಕಾಫಿ ಕುಡಿದು ಒಂದು ರೌಂಡ್ ಹೋಗಿ ಬರುವ,” ಎಂದರು. ತಾಯಿಯ ಜೊತೆಯಲ್ಲಿ ಕಲ್ಪನಾ ನಿಲ್ಲುತ್ತೇನೆ ಎಂದು ಹೇಳಿದುದರಿಂದ ಮಾವ ಅಳಿಯ ಹೊರಟರು ಊರ ಸಂಚಾರಕ್ಕೆ.

ಸೂರೂರು ಅಂತ ದೊಡ್ಡ ಊರೇನಲ್ಲ. ಅಲ್ಲಿ ಇರುವುದು ನಾಲ್ಕಾರು ಬ್ರಾಹ್ಮಣರ ಮನೆಗಳು, ಎಲ್ಲರೂ ಬಾಗಿಲ್ತಾಯರೇ. ಯಾವುದೋ ಕಾಲದಲ್ಲಿ ಪೂಜೆಗೆಂದು ಪರ ಊರಿನಿಂದ ಬಂದಿದ್ದ ಓರ್ವ ಬ್ರಾಹ್ಮಣನ ವಂಶ ಅಲ್ಲಿ ರೆಂಬೆಕೊಂಬೆ ಚಾಚಿತ್ತು. ಹೆಸರುಗಳಿದ್ದರೂ ಅವರನ್ನು ದೊಡ್ಮನೆ ಬಾಗಿಲ್ತಾಯರೆಂದೋ, ಸಣ್ಣ ಬಾಗಿಲ್ತಾಯರೆಂದೋ, ಪೂಜೆಯ ಬಾಗಿಲ್ತಾಯರೆಂದೋ ಕರೆಯುವುದು ರೂಢಿ. ಊರಿನ ಓರ್ವನೇ ವರ್ತಕ ಸುರೇಂದ್ರ ಪೈ. ಅವನ ಮನೆ ಊರ ಮಧ್ಯಭಾಗದಲ್ಲಿತ್ತು. ಎರಡು ಶೆಟ್ಟರ ಮನೆ. ಹಾಗೆ ಇಪ್ಪತ್ತು ಮೂವತ್ತು ಬಿಲ್ಲವರ ಮನೆ ಊರಲ್ಲಿತ್ತು. ಊರಿನ ಸಮಸ್ತ ವ್ಯಾಪಾರ, ವ್ಯವಹಾರ ನಡೆಯವುದು ಸುರೇಂದ್ರ ಪೈಗಳ ಮೂಲಕವೆ. ಊರಿನವರ ಅಡಿಕೆ, ವೀಳ್ಯದೆಲೆ, ಕಾಳುಮೆಣಸುಗಳನ್ನು ಪುತ್ತೂರಿಗೆ ಸಾಗಿಸುವುದರಿಂದ ಹಿಡಿದು, ಮನೆವಾರ್ತೆಗೆ ಬೇಕಾದ ಉಪ್ಪು, ಜೀರಿಗೆ ಸರಬರಾಜು ಮಾಡುವ ಏಕಗವಾಕ್ಷಿ ವ್ಯವಸ್ಥೆ ಸುರೇಂದ್ರ ಪೈಗಳದ್ದು. ಊರಿನ ಹೆಚ್ಚಿನ ತೋಟಗಳು ಬಾಗಿಲ್ತಾಯರ ಕೈಯಲ್ಲಿದ್ದರೆ, ಅವುಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲು ಸಹಕರಿಸುವವರು ಬಿಲ್ಲವರು ಹಾಗೂ ಕಾಡಿನಂಚಿನಲ್ಲಿರುವ ಮಲೆಕುಡಿಯರು. ಹೀಗಾಗಿ ಮಕ್ಕಳು ಶಾಲೆಯಲ್ಲಿ ಸಮಾಜಶಾಸ್ತ್ರದಲ್ಲಿ ಓದುತ್ತಾರಲ್ಲ, ವೇದಕಾಲದ ಸಮಾಜದಲ್ಲಿರುವ ಬೇರೆ ಬೇರೆ ವರ್ಗಗಳು ಹಾಗೂ ಅವರ ಕರ್ತವ್ಯಗಳು, ಅವು ನಮ್ಮೂರಿಗೆ ಸಾಧಾರಣವಾಗಿ ಒಪ್ಪುತ್ತವೆ ಎಂದು ಬಾಗಿಲ್ತಾಯರು ಉದ್ದಕ್ಕೂ ಮಾತನಾಡುತ್ತಾ ಬಂದರು. ಹಾಗೆಯೇ ಮಾತನಾಡುತ್ತ ಅವರು ಊರಿನ ಈಶ್ವರ ದೇವಸ್ಥಾನಕ್ಕೆ ಬಂದರು. ದೇವಸ್ಥಾನವು ರಸ್ತೆಯ ಪಕ್ಕದಲ್ಲಿಯೇ ಇದ್ದುದರಿಂದ ಇಬ್ಬರು ಒಬ್ಬರೊಬ್ಬರ ಒಪ್ಪಿಗೆಗಾಗಿ ಕಾಯದೆ ಒಳಗೆ ನಡೆದರು. ವಿಶಾಲವಾದ ಪ್ರಾಂಗಣ. ಗರ್ಭಗುಡಿಯ ಒಳಗೆ ಎಳ್ಳೆಣ್ಣೆಯ ದೀಪಗಳು ಮಾತ್ರ ಇದ್ದುದರಿಂದ ಶಿವಲಿಂಗ ದೂರದಲ್ಲಿ ಎಲ್ಲಿಯೋ ಇದ್ದಂತೆ ಭಾಸವಾಗುತ್ತಿತ್ತು. ಲಿಂಗದ ಎದುರಿನ ಬೃಹತ್ ಬಸವ. ಅಲ್ಲಿಯೇ ಪಕ್ಕದಲ್ಲಿ ಕೌಳಿಗೆ, ಹರಿವಾಣ ತಟ್ಟೆ ಇಟ್ಟುಕೊಂಡು ಕೂತಿರುವ ಓರ್ವ ಬ್ರಾಹ್ಮಣ, ಬಾಗಿಲ್ತಾಯರನ್ನು ನೋಡಿ ನಕ್ಕು “ಅಣ್ಣಯ್ಯ, ಅಳಿಯನನ್ನು ಮಾತ್ರ ಕರೆದುಕೊಂಡು ಬಂದಿರುವ ಹಾಗಿದೆಯಲ್ಲ. ಕಲ್ಪನಾ ಎಲ್ಲಿ?” ಎಂದು ಕೇಳಿದರು.

“ಊರನ್ನು ತೋರಿಸುವ ಅಂತ ಮನೆಯಿಂದ ಹೊರಬಂದದ್ದು. ದೇವಸ್ಥಾನಕ್ಕೆಂದೇ ಬಂದದಲ್ಲ. ಕಲ್ಪನಾ, ಹೇಗೂ ನಾಡಿದ್ದು ಸೋಮವಾರ ರಂಗಪೂಜೆಗೆ ಬರಬೇಕಲ್ಲ,” ಎಂದರು. ಪ್ರಸಾದ ತೆಗೆದುಕೊಂಡು ಹೊರಜಗಲಿಯಲ್ಲಿ ಕುಳಿತು, “ನನ್ನ ದೊಡ್ಡಪ್ಪನ ಮಗ. ಈತನ ಅಪ್ಪನ ಹೆಸರು ಶಂಕರ ಬಾಗಿಲ್ತಾಯರು. ಈತ ಕೃಷ್ಣ. ಇವರನ್ನೇ ಪೂಜೆಯ ಬಾಗಿಲ್ತಾಯರು ಎನ್ನುವುದು. ಇವನ ಅಪ್ಪ, ಅಂದರೆ ನನ್ನ ದೊಡ್ಡಪ್ಪನೆ ಈ ದೇವಸ್ಥಾನ ಇಷ್ಟು ದೊಡ್ಡದಾಗಲು ಕಾರಣ. ಅಲ್ಲಿ ನೋಡಿ, ಅದು ನವಗ್ರಹ ಗುಡಿ. ಆ ಮೂಲೆಯಲ್ಲಿರುವುದು ದುರ್ಗೆಯ ಗುಡಿ. ಸುತ್ತಲೂ ಇರುವುದು ದೈವಗುಡಿಗಳು,” ಎಂದರು. ಶಶಾಂಕ ದೇವಸ್ಥಾನದ ಆವರಣದ ಒಳಗೆ ಸುತ್ತ ನೋಡಿದ. ಎಲ್ಲಾ ದಿಕ್ಕುಗಳಲ್ಲಿ ಕೆಂಪುಕಲ್ಲಿನಿಂದ ಮಾಡಿದ ಚಿಕ್ಕ ಚಿಕ್ಕ ಗೂಡುಗಳು. ಅದರ ಒಳಗೆ ಆಯತಾಕಾರದ ಒಂದೋ ಎರಡು ಕಲ್ಲುಗಳು. ಹೊರಗೊಂದು ಆ ಗುಡಿಗೊಪ್ಪುವ ಕಬ್ಬಿಣದ ಗೇಟುಗಳು. ಆಕಾರದಲ್ಲಾಗಲೀ, ಅಲಂಕಾರದಲ್ಲಾಗಲೀ ಯಾರನ್ನೂ ಆಕರ್ಷಿಸದ ವಸ್ತುಗಳಂತೆ ತೋರಿತು ಶಶಾಂಕನಿಗೆ. ದೇವಸ್ಥಾನದ ನೈಋತ್ಯ ದಿಕ್ಕಿನಲ್ಲಿ ಮಾತ್ರ ಒಂದು ಗೂಡು. ಯಾವುದೇ ಉಪಯೋಗ ಆಗದಂತಹ ರಚನೆಯ ಸುತ್ತ ಕಲ್ಲುಕಸ. ಉಳಿದ ಗೂಡುಗಳಿಗೆ ಇದ್ದಂತಹ ಕಬ್ಬಿಣದ ಗೇಟು ಸಹ ಇದಕ್ಕೆ ಇದ್ದಿರಲಿಲ್ಲ. ಪಕ್ಕದ ಗೋಳಿಮರದ ಬೇರುಗಳು ಗೋಡೆಯ ಎಡೆಯಿಂದ ಹೊರಬಂದಿದ್ದವು. ಅದರ ಬೀಜಗಳು ಬಿದ್ದು ಗಿಡಗಳು ಮೇಲೆ ಬಂದು ಆಳೆತ್ತರಕ್ಕೆ ಬೆಳೆದಿದ್ದವು. ಇಷ್ಟರವರೆಗೆ ಜಾಸ್ತಿ ಮಾತನಾಡದ ಶಶಾಂಕ “ಮಾವ, ಆ ಕಟ್ಟೋಣ ಯಾಕೆ ಹಾಗಿದೆ?” ಮದುವೆಯಾದ ಮೇಲೆ ಮೊದಲ ಸಲ ಬಾಗಿಲ್ತಾಯರನ್ನು ಮಾವ ಎಂದು ಸಲುಗೆಯಿಂದ ಕೇಳಿದ್ದ. “ಓ ಅದಾ, ಅದೊಂದು ದೊಡ್ಡ ಕತೆ. ನನ್ನ ತಂದೆ ಒಮ್ಮೆ ಅದರ ಬಗ್ಗೆ ಹೇಳಿದ್ದರು. ಈಗ ಗಂಟೆ ಹತ್ತು ಅಲ್ವಾ. ಬೆಳಗಿನ ತಿಂಡಿಯೇ ಹೊಟ್ಟೆಯಲ್ಲಿ ಉದ್ದುದ್ದ, ಅಡ್ಡಡ್ಡ ಕುಳಿತಿದೆ. ಹೇಗೂ ನಿಮ್ಮ ಅತ್ತೆ ಊಟಕ್ಕೆ ಬೇಕಾದಷ್ಟು ಸಿದ್ಧತೆ ಮಾಡುವವಳೆ. ಆದ್ದರಿಂದ ಒಂದು ಗಂಟೆಯವರೆಗೆ ಸಮಯವಿದೆ,” ಎಂದು ಹೇಳಿ ಪ್ರಾರಂಭಿಸಿದರು.

* * *

ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಮಾತು. ಸೂರೂರು ಈಗ ಇದ್ದ ಹಾಗೆಯೇ ಇತ್ತು, ಮನೆಗಳ ಸಂಖ್ಯೆಯಲ್ಲಿ. ಆದರೆ ಜನಸಂಖ್ಯೆಯ ದೃಷ್ಟಿಯಲ್ಲಿ ಅಲ್ಲ. ಅಷ್ಟೆ ಅಲ್ಲ, ಸೋಮವಾರ, ಅದರಲ್ಲೂ ಕಾರ್ತಿಕ ಸೋಮವಾರ, ಶಿವರಾತ್ರಿಯ ದಿನ, ಹೋಳಿ ಹುಣ್ಣಿಮೆಯ ದಿನಗಳಲ್ಲಿ ನಾಲ್ಕು ಬಾಗಿಲ್ತಾಯರ ಮನೆಗಳು ಪುತ್ತೂರು, ಪಂಜ, ಸುಳ್ಯ ಸೀಮೆಗಳ ಕೋಟ, ಮಾಧ್ವ, ಹವ್ಯಕ ಬ್ರಾಹ್ಮಣರಿಂದ ತುಂಬಿ ತುಳುಕುತ್ತಿದ್ದವು. ಮನೆಗಳು ಧರ್‍ಮಛತ್ರಗಳಂತೆ ಕಾಣುತ್ತಿದ್ದವು. ಅಡುಗೆ ಮನೆಯ ಒಲೆಗಳು ಹತ್ತು ಹದಿನೈದು ದಿನ ಸತತವಾಗಿ ಕಾವನ್ನು ಹೊರಚೆಲ್ಲುತ್ತಿದ್ದವು. ಅದಕ್ಕೆ ಕಾರಣ ಊರಿನ ಈಶ್ವರ ದೇವಸ್ಥಾನ. ಅದರ ಪೂಜೆಯ ಹೊಣೆ ಶಂಕರ ಬಾಗಿಲ್ತಾಯರದ್ದು. ಅವರ ಕೈಗುಣವೋ, ಅಥವಾ ಸಾಕ್ಷಾತ್ ಶಂಕರನ ಕೃಪೆಯೋ, ಒಟ್ಟಿನಲ್ಲಿ ಜನರು ಅಂದುಕೊಂಡದ್ದು ನಡೆಯತೊಡಗಿದಾಗ ದೇವಸ್ಥಾನಕ್ಕೆ ಬಂದು ಹೋಗುವವರ ಸಂಖ್ಯೆ ಜಾಸ್ತಿಯಾಯಿತು, ಉತ್ಪತ್ತಿಯೂ ಜಾಸ್ತಿಯಾಗತೊಡಗಿತು. ಒಣಹುಲ್ಲಿನ ಮೇಲ್ಛಾವಣಿ ಇದ್ದಂತಹ ಗರ್ಭಗುಡಿ ಶಿಲಾಮಯವಾಯಿತು. ದೇವರಪೂಜೆಗೆ ಒಂದು ಬಾವಿ ಇಲ್ಲದ ದೇವಸ್ಥಾನಕ್ಕೆ, ಶಂಕರ ಬಾಗಿಲ್ತಾಯರ ಆಸ್ಥೆಯಿಂದ ಹಾಗೂ ಊರವರ ಶ್ರಮದಾನದಿಂದ ಸಿಹಿನೀರಿನ ಬಾವಿ ದೊರಕುವಂತೆ ಆಯಿತು. ರಂಗಪೂಜೆ, ಸೋಣೆ ಆರತಿಗಳು ಮುಂಗಡವಾಗಿ ಕಾದಿರಿಸುವಷ್ಟು ದೇವಸ್ಥಾನದ ಪ್ರತಿಷ್ಠೆ ಊರ್ಧ್ವಮುಖವಾಯಿತು. ಹಾಗೆಯೇ ಶಂಕರ ಬಾಗಿಲ್ತಾಯರ ದೆಸೆಕೂಡ. ಸಾಧಾರಣ ರುದ್ರಾಕ್ಷಿ ಸರ ಹಾಕಿಕೊಳ್ಳುತ್ತಿದ್ದ ಬಾಗಿಲ್ತಾಯರು ಈಗ ಬೆಳ್ಳಿಯಿಂದ ಕಟ್ಟಿಸಿದ ನಾಲ್ಕು ನಾಲ್ಕು ರುದ್ರಾಕ್ಷಿ ಸರ, ಸ್ಫಟಿಕದ ಸರ, ಕೈಗೆ ಪವಿತ್ರದ ಉಂಗುರ ಹಾಕಿಕೊಳ್ಳುವಂತಾಯಿತು. ಹೆಂಡತಿಗೂ ಚಕ್ರಸರ, ಅವಲಕ್ಕಿ ಸರ, ಓಲೆಗಳನ್ನು ಮಾಡಿಸಿದರು. ಎಲ್ಲಾದರು ದಂಪತಿ ಪೂಜೆ ಇದ್ದರೆ ಶಂಕರ ಬಾಗಿಲ್ತಾಯ ದಂಪತಿಗಳಿಗೆ ಮೊದಲ ಮನ್ನಣೆ. ಅವರಿಲ್ಲವೆಂದರೆ ಉಳಿದವರು. ಹೀಗೆ ಶಂಕರ ಬಾಗಿಲ್ತಾಯರು ಸೂರೂರು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಒಂದು “ಜನ” ಎನಿಸಿಕೊಂಡರು.

ಸೂರೂರು ಹಾಗೂ ಸುತ್ತಲಿನ ಪರಿಸರ ಈಶ್ವರನ ಲೀಲಾಕ್ಷೇತ್ರ ಮಾತ್ರ ಆಗಿರದೆ, ಅನೇಕ ದೈವಗಳ ಆಡುಂಬೊಲವೂ ಆಗಿತ್ತು. ಊರಿನ ಅಂಚಿನ ಕಾನನದಲ್ಲಿ ಸತ್ಯದೇವತೆ, ಜುಮಾದಿ, ಬೊಬ್ಬರ್ಯ ಮುಂತಾದ ದೈವಗಳು ತಾವು ನಂಬಿದ ಜನರಿಗೆ ಇಂಬುಕೊಡುತ್ತಾ, ನೇಮೋತ್ಸವ, ಹರಕೆಗಳನ್ನು ಮನಸೋ ಇಚ್ಛೆ ಸ್ವೀಕರಿಸಿ, ಆನಂದದಿಂದ ಇದ್ದವು. ಇವುಗಳ ಪ್ರಸಿದ್ಧಿ ಬರಿಯ ಸೂರೂರಿನಲ್ಲಿ ಅಷ್ಟೆ ಅಲ್ಲದೆ ಸುತ್ತಮುತ್ತಲಿನ ಊರುಗಳಲ್ಲೂ ಕೂಡ ಹರಡಿತ್ತು. ಎಷ್ಟೋ ಬಾರಿ ಬ್ರಾಹ್ಮಣ ಸಮುದಾಯದವರು ಈ ದೈವಗಳಿಗೆ ಹರಕೆ ಹೇಳಿಕೊಂಡದ್ದು ಇತ್ತಲ್ಲದೆ, ಹರಕೆ ಪೂರ್ತಿಗೊಳಿಸಲು ತಮ್ಮ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಒಕ್ಕಲು ಮಕ್ಕಳಲ್ಲಿ ದೈವಗಳಿಗೆ ತಮ್ಮ ಪರವಾಗಿ ಕೋಳಿಗಳನ್ನು ಅರ್ಪಿಸಲು ಹೇಳಿದ್ದುಂಟು. ಈ ರೀತಿಯಲ್ಲಿ ಶಿಷ್ಟ ಹಾಗೂ ಜಾನಪದೀಯ ದೇವರುಗಳೆಲ್ಲ ಅಲ್ಲಿ ನೆಲೆಸಿದ್ದರಿಂದ ಸೂರೂರು, ಸುರರ ಊರು ಎಂದೂ ಅಂದುಕೊಳ್ಳಬಹುದಿತ್ತು.

ಈ ಎಲ್ಲ ದೈವಗಳು ಕರಾವಳಿಯ ಬೇರೆ ಬೇರೆ ಕಡೆಗಳಲ್ಲಿಯೂ ನೆಲೆಸಿದ್ದರೂ, ಸೂರೂರಿನಲ್ಲಿ ಮಾತ್ರ ನೆಲೆಸಿದ್ದ ಒಂದು ದೈವ ಕರಿಗಾರು. ಕರಿಗಾರು ಓರ್ವ ಮಲೆಕುಡಿಯರ ಧೀರ ಯುವಕ. ಯಾವುದೇ ದುರಭ್ಯಾಸವಿಲ್ಲದ ಈತ ಮಾತನಾಡುತ್ತಿದ್ದುದು ಬಲು ಕಡಿಮೆ. ಮದುವೆ ಆಗದ ಈತ ತಾನಿದ್ದ ಕೇರಿಯ ರಕ್ಷಕ. ಕೆಲವು ಬಾರಿ ರಾತ್ರಿ ತಟ್ಟನೆ ಎದ್ದು ಇಂಥವರ ಮನೆಯ ಕೊಟ್ಟಿಗೆಗೆ ಚಿಟ್ಟೆಹುಲಿ ಬರುತ್ತದೆ ಎಂದು ಮೊದಲೇ ಗೊತ್ತಿದ್ದವನಂತೆ ಹೋಗಿ, ಅಲ್ಲಿ ಹಸುಗಳು ಕೂಗಿ ಮನೆಯವರು ಬರುವ ಮುಂಚಿತವಾಗಿ, ಹುಲಿಯ ಕುತ್ತಿಗೆಯನ್ನು ತನ್ನ ಬಲಿಷ್ಠ ತೋಳುಗಳಿಂದ ಒತ್ತಿ ಹಿಡಿದು, ಉಸಿರುಗಟ್ಟಿಸಿ ಸಾಯಿಸಿ, ಏನೂ ಆಗಿಲ್ಲವೆಂಬಂತೆ ತನ್ನ ಮನೆಗೆ ಬಂದು ಮಲಗುತ್ತಿದ್ದ. ಆತನ ಹಿಂದೆ ಮುಂದೆ ಯಾರೂ ಇಲ್ಲದೆ ಇದ್ದುದರಿಂದ ಕೇರಿಯವರು ಕೊಡುತ್ತಿದ್ದ ಆಹಾರವೇ ಆತನ ನಿತ್ಯಾನ್ನವಾಗಿತ್ತು. ಮರ ಹತ್ತಿ ಮಾವು, ಹಲಸು, ಪುನರ್ಪುಳಿ ತೆಗೆಯುವುದರಲ್ಲಿ, ಜೇನ್ನೊಣ ಓಡಿಸಿ, ಜೇನುತಟ್ಟಿ ಹಿಂಡುವಲ್ಲಿ, ಬಿದಿರು ಚಾಪೆ, ಬುಟ್ಟಿ ಮಾಡುವಲ್ಲಿ ಆತನನ್ನು ಮೀರಿಸುವವರಿಲ್ಲ. ಅಂತಹ ವ್ಯಕ್ತಿ ಕೇರಿಯವರ ಕಷ್ಟ ಕಾಲದಲ್ಲಿ ಸಂಪೂರ್ಣ ಭಾಗಿಯಾಗಿರುತ್ತಿದ್ದ. ಸುಖ, ಸಂತೋಷಗಳ ಸಮಯದಲ್ಲಿ ಯಾವುದೋ ಮಾಯೆಯಲ್ಲಿ ಕಣ್ಮರೆಯಾಗುತ್ತಿದ್ದ. ಈ ಕರಿಗಾರು, ಒಂದು ವೈಶಾಖ ಹುಣ್ಣಿಮೆ ಮುಸ್ಸಂಜೆ ಕಾಡಿನಲ್ಲಿ ಜೇನು ತೆಗೆಯಲು ಹೋದವ ಹಿಂತಿರುಗಲಿಲ್ಲ. ಕೇರಿಯವರು ಒಂದೆರಡು ದಿನ ಕಾದ ಮೇಲೆ ಆತನನ್ನು ಹುಡುಕಲು ತೊಡಗಿದರು. ಆತ ಹತ್ತಿದ ಮರದ ಬುಡದಲ್ಲಿದ್ದ ಕೆರೆಯಲ್ಲಿ ಶವ ಮೇಲೆ ಬರುವುದೋ ಎಂದು ಕಾದರು. ಹುಲಿ ಹಿಡಿದಿರಬಹುದೆ ಎಂದು, ಸಾಮಾನ್ಯವಾಗಿ ಹುಲಿ ನಡೆಯುವ ಜಾಡನ್ನು ಪರೀಕ್ಷಿಸಿದರು. ಆದರೂ ಶವ ಪತ್ತೆಯಾಗಲಿಲ್ಲ. ಆತನ ನೆಂಟರಿಷ್ಟರು ಯಾರೂ ಇಲ್ಲದೆ ಇದ್ದುದರಿಂದ ಆತನಿಗಾಗಿ ಅಳುವವರು ಯಾರೂ ಇರಲಿಲ್ಲ. ಯಾರದ್ದಾದರೂ ದನ, ಕರುವನ್ನು ಹುಲಿಯೋ ಚಿರತೆಯೋ ಎಳೆದುಕೊಂಡು ಹೋದರೆ, ಛೇ, ಕರಿಗಾರು ಈಗ ಇದ್ದಿದ್ದರೆ ಎಂದು ಆತನನ್ನು ಜನರು ನೆನಪು ಮಾಡಿಕೊಳ್ಳುತ್ತಿದ್ದರು.

* * *

ಮರು ವರ್ಷದ ವೈಶಾಖದ ಒಂದು ರಾತ್ರಿ ಗುರಿಕಾರ ತನಿಯ ಮಲೆಕುಡಿಯನ ಮಗ ಸೋಮ ಮಲೆಕುಡಿಯ ಹಠಾತ್ತಾಗಿ ನಿದ್ದೆಯಿಂದ ಎದ್ದು, ಇಡೀ ಕಾಡೇ ಪ್ರತಿಧ್ವನಿಸುವಂತೆ ಕೂಗತೊಡಗಿದನು. “ನೀವು ನನ್ನನ್ನು ಮರೆತಿರಬಹುದು. ಆದರೆ ನಾನಲ್ಲ. ನೀವು ನನ್ನ ಮಕ್ಕಳು. ನಿಮ್ಮ ಹಿತ ನನಗೆ ಮುಖ್ಯ. ನಿಮ್ಮ ನಿಮ್ಮ ಜಾನುವಾರಗಳ ರಕ್ಷಣೆ ನನ್ನದು. ಆದ್ದರಿಂದ ನಾನಿದ್ದೇನೆ. ಎಲ್ಲಿಯವರೆಗೆ ನನ್ನ ಅಗತ್ಯ ನಿಮಗಿರುವುದೋ ಅಲ್ಲಿಯವರೆಗೆ ನಾನಿರುವೆ,” ಎಂದು ಗಂಭೀರ ಧ್ವನಿಯಲ್ಲಿ ಗಟ್ಟಿಯಾಗಿ ಹೇಳತೊಡಗಿದ. ಗುರಿಕಾರ ತನಿಯ ನಿದ್ದೆಯಿಂದ ದಡಬಡನೆ ಎದ್ದು ಬಂದು ಮಗನ ಬಾಯಿಯಲ್ಲಿ ಬಂದ ಮಾತಗಳನ್ನು ಕೇಳಿ ಅವಾಕ್ಕಾದ. ಮರುಕ್ಷಣದಲ್ಲಿ ಚೇತರಿಸಿಕೊಂಡು, ಯಾವ ದೈವ ತನ್ನ ಮಗನನ್ನು ಮೆಟ್ಟಿಕೊಂಡಿತು ಎಂದು ಆಲೋಚಿಸಿ ಕೇಳಿದ.

“ದೈವವೆ, ನೀನು ನಮ್ಮನ್ನು ರಕ್ಷಿಸುವ ಹೌದಿರಬಹುದು. ಆದರೆ ಇದು ನುಡಿಕೊಡುವ ಹೊತ್ತೇ? ನಿನಗಾಗಿ ನಾನು ಹದಿನೈದು ದಿನಗಳಲ್ಲಿ ಕೋಲದ ವ್ಯವಸ್ಥೆ ಮಾಡುತ್ತೇನೆ. ಕೇರಿಯ ಜನರಿಗೂ ನೀನು ಅಭಯ ನೀಡಬೇಕು. ಆದರೆ ನೀನು ಯಾರೆಂದು ಇನ್ನೂ ತಿಳಿದಿಲ್ಲವಲ್ಲ,” ಎಂದನು.

“ಕಳೆದ ವರ್ಷ ಇದೇ ದಿನ, ನಿಮ್ಮನ್ನೆಲ್ಲ ಕಾಯುತ್ತಿದ್ದವ ಮಾಯವಾದದ್ದು ನೆನಪಿದೆಯೆ, ಗುರಿಕಾರ?” ಮಗನ ಬಾಯಿಂದ ತನ್ನನ್ನು ಏಕವಚನದಿಂದ ಸಂಭೋದಿಸಿದ್ದನ್ನು ಕೇಳಿ ಆಶ್ಚರ್ಯವಾಯಿತು. ಮರುಕ್ಷಣ ಇದನ್ನು ಆಡಿದ್ದು ಆತನಲ್ಲ, ಆತನಲ್ಲಿರುವ ದೈವ ಎಂದು ಮನಸ್ಸಿಗೆ ಬಂದ ಮೇಲೆ ಸ್ವಲ್ಪ ಸಮಾಧಾನವಾಯಿತು. ಭಯಭಕ್ತಿಯಿಂದಲೇ ಕೈಮುಗಿದು ಹೇಳಿದ.

“ಹೌದು, ಕರಿಗಾರು! ನೀನು ವಾಪಾಸು ಬಂದೆಯಾ, ನಮ್ಮನ್ನು ಕಾಪಿಡಲು ದೈವವಾಗಿ ಬಂದೆಯಾ?” ಎಂದು ಸಂತೋಷಗೊಂಡನು. ಮುಂದಿನ ಹದಿನೈದು ದಿನಗಳಲ್ಲಿ ಕರಿಗಾರು ಮಾಯವಾದ ಮರದ ಬುಡದಲ್ಲಿ ಒಂದು ಚಿಕ್ಕಕಲ್ಲಿನ ಕಟ್ಟೋಣ ರಚನೆಯಾಯಿತು. ಕರಿಗಾರುವಿನ ಪ್ರತೀಕವಾಗಿ ಒಂದು ಒರಟು ಕಲ್ಲು ಅಲ್ಲಿ ಪ್ರತಿಷ್ಠಾಪನೆಯಾಯಿತು. ಕೋಲವಾಯಿತು. ಮಲೆಕುಡಿಯರನ್ನು ಕಾಪಾಡಲು ಕರಿಗಾರು ಮತ್ತೆ ಬಂದ ಹಾಗೂ ಸೂರೂರಿಗೆ ಈಗಲೇ ಇರುವ ಏಳು ದೈವಗಳ ಪಟ್ಟಿಗೆ ಇನ್ನೊಂದರ ಪ್ರವೇಶವಾಯಿತು.

* * *

ಹೀಗೆ ಕರಿಗಾರು, ಸೋಮ ಮಲೆಕುಡಿಯನ ಮೇಲೆ ಅವಾಹನೆ ಆದ ಮೇಲೆ, ಅವನಲ್ಲಿ ಬಹಳಷ್ಟು ಬದಲಾವಣೆ ಕಂಡುಬಂದವು. ಶೇಂದಿ, ಹೊಗೆಸೊಪ್ಪುಗಳನ್ನು ಬಿಟ್ಟ. ಪೀಚಲು ದೇಹದವನಾದ ಆತ, ಕರಿಗಾರುವಿನಂತೆಯೆ ಚಕಚಕನೆ ಮರ ಏರತೊಡಗಿದ. ಆದ್ದರಿಂದ ಅಡಿಕೆ ಮರಗಳನ್ನು ಹತ್ತುವ ಕೆಲಸ ಸೋಮನಿಗೆ ದೊರೆಯಿತು. ಕರಿಗಾರು ಅವಿವಾಹಿತನಾಗಿದ್ದುದರಿಂದ ಇವನಿಗೂ ಮದುವೆ ಇಲ್ಲದೇ ಹೋಯಿತು. ದೊಡ್ಮನೆ ಬಾಗಿಲ್ತಾಯರ ಹಾಗೂ ಸೋಮನ ಪ್ರಾಯ ಒಂದೇ ಆಗಿದ್ದುದರಿಂದ ಅವರ ನಡುವೆ ಸಲುಗೆ ಇತ್ತು. ಸಾಮಾನ್ಯ ದಿನಗಳಲ್ಲಿ ಎಲ್ಲರಂತೆಯೇ ಇದ್ದ ವ್ಯಕ್ತಿ, ಕೋಲದ ದಿನ ಎಲ್ಲಿಂದಲೋ ಶಕ್ತಿ ಆವಾಹನೆ ಆದಂತಾಗಿ, ಕುಣಿತದ ಅಬ್ಬರ, ಕೇಕೆ ಅದರೊಂದಿಗೆ ಗಂಭೀರವಾಗಿ ನುಡಿ ಕೊಡುವುದು ಎಲ್ಲವೂ ಯಾರದೋ ನಿಯಂತ್ರಣಕ್ಕೆ ಒಳಪಟ್ಟು ಮಾಡಿದಂತೆ ಇರುತ್ತಿತ್ತು. ದಿನ ಕಳೆದು ಮುಪ್ಪಡರಿದರೂ, ವೇಗವಾಗಿ ನಡೆಯಲು ಆಗದಿದ್ದರೂ ಕೈಕಾಲುಗಳು ನಡುಗುತ್ತಿದ್ದರೂ ಮುಂಚಿನ ಹಾಗೆ ಕೋಲದ ದಿನ ನರ್ತಿಸುತ್ತಿದ್ದ. ಅದೇ ಗಾಂಭೀರ್‍ಯ, ಅದೇ ವೇಗ, ಅದೇ ಗಂಭೀರ ಸ್ಪಷ್ಟನುಡಿ.

* * *

ಪೂಜೆಯ ಶಂಕರ ಬಾಗಿಲ್ತಾಯರು ಸಾಮಾನ್ಯವಾಗಿ ಬೆಳಿಗ್ಗೆ ನಾಲ್ಕು ಗಂಟೆಯ ಸಮಯಕ್ಕೆ ಎದ್ದು, ಸ್ನಾನ ಶೌಚಾದಿ ಕಾರ್‍ಯಗಳನ್ನು ಮುಗಿಸಿ, ಮನೆದೇವರ ಪೂಜೆ ಮುಗಿಸಿ, ಈಶ್ವರ ದೇವಸ್ಥಾನಕ್ಕೆ ಬಂದು, ದೇವಸ್ಥಾನದ ಅಂಗಳದಲ್ಲೇ ಇದ್ದ, ಬಾವಿಯಿಂದ ನೀರು ಸೇದಿ, ಕೊಯ್ದಿಟ್ಟ ಹೂವುಗಳಿಂದ ಪೂಜೆ ಮಾಡುವುದು ರೂಢಿ. ಆದರೆ ಅವತ್ತು ಮಾತ್ರ ಹೂವು ಕೊಯ್ದು ತರುವ ಹೆಂಗಸು, ಜಾಗಟೆ, ನಗಾರಿ ಬಡಿಯುವ ದೇವಡಿಗರು ಬಂದಿದ್ದರೂ ಬಾಗಿಲ್ತಾಯರು ಬಂದಿರಲಿಲ್ಲ. ಸಾಮಾನ್ಯವಾಗಿ ಐದು ಗಂಟೆಗೆ ಏಳುವ ಅವರ ಧರ್‍ಮಪತ್ನಿ ಎದ್ದಾಗ, ಪಕ್ಕದಲ್ಲಿ ಇನ್ನೂ ಮಲಗಿದ್ದ ಪತಿಯನ್ನು ನೋಡಿ, ಮಲಗಿದ್ದಲ್ಲಿ ಏನಾದರೂ ಅನಾಹುತ ಆಯಿತೋ ಎಂದು ಗಾಬರಿಗೊಂಡು “ಇವರೆ, ಏಳಿ. ಬೆಳಗಾಯಿತು,” ಎಂದು ಎರಡೆರಡು ಬಾರಿ ಅವರ ಭಾರೀ ಗಾತ್ರದ ರಟ್ಟೆಯನ್ನು ಬಲವಾಗಿ ಅಲುಗಾಡಿಸಿ ಕೇಳಿದರು. ಎರಡು ಮೂರು ಬಾರಿ ಅಲ್ಲಾಡಿಸಿದ ಮೇಲೆ ನಿಧಾನವಾಗಿ ಯಾವುದೋ ವಿಸ್ಮೃತಿಯಿಂದ ಎದ್ದು ಕುಳಿತರು ಶಂಕರ ಬಾಗಿಲ್ತಾಯರು. ಸದ್ಯ ಗಂಡನಿಗೆ ಏನೂ ಆಗಿಲ್ಲವೆಂಬ ಸಮಾಧಾನ ಅವರ ಪತ್ನಿಗೆ ಆಯಿತು. ಎರಡು ನಿಮಿಷ ಹಾಗೇ ಕುಳಿತಿದ್ದ ಬಾಗಿಲ್ತಾಯರು ಸರಕ್ಕನೆ ಎದ್ದು, ಉತ್ತರೀಯವನ್ನು ಮೈಮೇಲೆ ಹೊದ್ದು “ಈಗ ಬರುವೆ” ಎಂದು ಪತ್ನಿಗೆ ಹೇಳಿ ಉತ್ತರಕ್ಕಾಗಿ ಕಾಯದೆ ಹಾಗೆಯೇ ಹೊರಟುಬಿಟ್ಟರು. ನೇರವಾಗಿ ಅವರು ಧಾವಿಸಿದ್ದು ದೇವಸ್ಥಾನಕ್ಕೆ. ಅಲ್ಲಿ ನೆರೆದಿದ್ದ ಆಳುಮಕ್ಕಳಿಗೆ, ಪೂಜೆಗೆ ಸಹಕಾರ ನೀಡುವವರಿಗೆ ಹಾಗೂ ಸೋಮವಾರದ ವಿಶೇಷ ಪೂಜೆ ನೋಡಲು ಬಂದವರಿಗೆ ಮಡಿಯಲ್ಲಿ ಬರದ, ಯಾವುದೇ ಪೂಜಾ ಸಾಮಗ್ರಿಗಳನ್ನು ತರದ ಬಾಗಿಲ್ತಾಯರನ್ನು ನೋಡಿ ಆಶ್ಚರ್‍ಯವಾಯಿತು. ದೇವಸ್ಥಾನದ ನಂದಿಯ ಸಮೀಪ ನಂತರ ದೇವಸ್ಥಾನದ ಹೊರಪೌಳಿಯ ಸುತ್ತ ಆಚೆಈಚೆ ನೋಡುತ್ತ, ಎರಡು ಸುತ್ತು ಬಂದರು ಬಾಗಿಲ್ತಾಯರು. ಅಷ್ಟೊತ್ತಿಗೆ ಬೆಳಗೂ ಆಗಿತ್ತು. ಜನಸಮುದಾಯವು ಸಾಕಷ್ಟು ನೆರೆದಿತ್ತು. ದೇವಸ್ಥಾನದ ಮೊಕ್ತೇಸರ ಶೆಟ್ಟರು ಅಷ್ಟೊತ್ತಿಗೆ ಬಂದಿದ್ದರು. ಯಾವುದೋ ಲೋಕದಲ್ಲಿ ಇದ್ದಂತಹ ಬಾಗಿಲ್ತಾಯರನ್ನು ಅವರು “ಬಾಗಿಲ್ತಾಯರೇ, ಎಲ್ಲವೂ ಕುಶಲವೇ?” ಎಂದರು

ಕೇಳಿಯೂ ಕೇಳದಂತಿದ್ದರು ಬಾಗಿಲ್ತಾಯರು. ಅರೆಗಳಿಗೆ ಆದನಂತರ “ನಿನ್ನೆ ರಾತ್ರಿ ನನಗೊಂದು ಕನಸು ಬಿತ್ತು. ಕನಸಿನಲ್ಲಿ ಸರ್ವಾಂಗ ಭಸ್ಮಧಾರಿ ತೇಜೋಭರಿತ ಮುಖಮಂಡಲದ ಮುದುಕರೊಬ್ಬರು ಉದ್ದವಾದ ಒಂದು ಕೋಲನ್ನು ಊರುತ್ತ, ನಮ್ಮ ದೇವಸ್ಥಾನಕ್ಕೆ ಬಂದಿದ್ದರು. ಅದು ಮಂಗಳಾರತಿಯ ಸಮಯ. ಆರತಿ ಕೊಡಲು ಅವರ ಮುಂದೆ ನಿಂತರೆ, ಅವರು ಅದನ್ನು ತೆಗೆದುಕೊಳ್ಳದೆ ‘ನನ್ನ ಸೇವೆಯನ್ನೇನೋ ಮಾಡುತ್ತಿರುವಿ. ಆದರೆ ನನ್ನ ಹಿಂಬಾಲಕ ಗಣದವರನ್ನು ಯಾಕೆ ಅಸಡ್ಡೆ ಮಾಡಿರುವೆ? ಅವರನ್ನೇಕೆ ಕಾಡಿನಲ್ಲಿ ಅನಾಥರನ್ನಾಗಿಸಿರುವೆ. ಅವರ ಅಗತ್ಯ ನಿನಗೆ ಅಷ್ಟಾಗಿ ಇಲ್ಲದಿದ್ದರೂ ನನಗಿದೆಯಲ್ಲ?’ ಎಂದು ಹೇಳಿ ಉತ್ತರಕ್ಕಾಗಿ ಕಾಯದೆ, ಇದೇ ನಂದಿಯ ಸಮೀಪದಲ್ಲಿ ಅದೃಶ್ಯರಾದರು. ಅವರು ಯಾರು ಏನು ಎಂಬ ಕುತೂಹಲದಲ್ಲಿರುವಾಗಲೇ ಹೆಂಡತಿ ಎಚ್ಚರಿಸಿದಳು.” ಎಂದರು.

ಜನರ ಮಧ್ಯದಲ್ಲಿ ಗುಜುಗುಜು ಸದ್ದು. ಅಲ್ಲಿ ಸೇರಿದ್ದ ಇತರೆ ಬಾಗಿಲ್ತಾಯರ ಮನೆಯವರು, ಮೊಕ್ತೇಸರರು ಏನೂ ತಿಳಿಯದೆ ಒಬ್ಬರ ಮುಖ ನೋಡಿಕೊಳ್ಳುತ್ತಿದ್ದರು. ಶಂಕರ ಬಾಗಿಲ್ತಾಯರು ದೇವಸ್ಥಾನದ ಹೊರಜಗಲಿಯತ್ತ ನಡೆದು ಅಲ್ಲಿ ಕುಳಿತರು. ಸುತ್ತುವರಿದಿದ್ದ ಎಲ್ಲರೂ ಅಲ್ಲಿ ನೆರೆದರು. ಎದುರಿಗಿದ್ದ ಗರುಡ ಸ್ಥಂಭದತ್ತ ನೆಟ್ಟ ನೋಟ ಹಿಡಿದ ಶಂಕರ ಬಾಗಿಲ್ತಾಯರು ನುಡಿದರು.

“ಕನಸಿನಲ್ಲಿ ಬಂದವರ ಕಣ್ಣಿನ ತೇಜಸ್ಸು, ಮಾತಿನ ಝೇಂಕಾರ ಇವೆಲ್ಲವನ್ನೂ ಗಮನಿಸಿದಾಗ ಅವರು ವಿಶೇಷ ವ್ಯಕ್ತಿಯೇ ಆಗಿರಬೇಕು. ನಾನು ನೀಡಿದ ಆರತಿಯನ್ನು ಸ್ವೀಕರಿಸಲಿಲ್ಲ. ಹಿಂಬಾಲಕರ ಬಗ್ಗೆ ವಿಚಾರಿಸಿದರು. ನಂದಿಯ ಸಮೀಪ ಅದೃಶ್ಯರಾದರು. ಇವೆಲ್ಲವನ್ನೂ ಒಂದಕ್ಕೊಂದು ಹೆಣೆದರೆ ಅವರು ಬೇರೆ ಯಾರೂ ಅಲ್ಲ, ದಿನಾಲು ನಾನು ಪೂಜಿಸುವ ಸಾಕ್ಷಾತ್ ಶಿವನೇ ಇರಬೇಕು,” ಎಂದು ಶಿವನನ್ನು ಅಲ್ಲಿಯೇ ನೋಡಿದಂತೆ ತಲೆಬಗ್ಗಿಸಿ ಕೈಮುಗಿದರು. ಸುತ್ತಲಿನ ಜನರು ಮೌನವಾಗಿ ಕೇಳುತ್ತಲೇ ಇದ್ದರು, ಏನೂ ಹೇಳಲು ತೋಚದೆ.

“ಹಾಗಾದರೆ, ದೇವರು ಹೇಳಿದ ಕಾಡಿನಲ್ಲಿರುವ ಅವರ ಹಿಂಬಾಲಕರು ಯಾರು?” ತಮ್ಮಷ್ಟಕ್ಕೆ ನುಡಿದ ಬಾಗಿಲ್ತಾಯರು ತಾವೇ ನುಡಿದರು. “ಕಾಡಿನಲ್ಲಿರುವವರು ನನ್ನಿಂದ ಅಸಡ್ಡೆಗೊಳಗಾದವರು ಅಂದರೆ ನಾನು ಪೂಜೆ ಮಾಡದೆ ಇರುವವರು. ಅಂದರೆ ನಮ್ಮೂರಿನ ದೈವಗಳೇ ಯಾಕಾಗಿರಬಾರದು?”

ನೆರೆದಿದ್ದ ಹಲವರಿಗೆ ಸಂತೋಷ. ತಮ್ಮ ಊರಿನವರಿಗೆ ಸಾಕ್ಷಾತ್ ದೇವರೇ ಬಂದು ಅಪ್ಪಣೆ ಕೊಡಿಸಿದೆ ಎಂಬುದು ಒಂದು ಕಾರಣವಾದರೆ ಅಂತಹ ಮಹಿಮಾನ್ವಿತರು ನಮ್ಮ ನಡುವೆ ಇದ್ದಾರೆ ಎಂಬ ಇನ್ನೊಂದು ಕಾರಣಕ್ಕೆ. ಕೆಲವರು ಆ ಕಾರಣಗಳಿಂದಾಗಿ ಸಂತೋಷಗೊಂಡರೆ, ಕೆಲವರು ಸಣ್ಣ ಅಪಸ್ವರ ತೆಗೆದರು. ಅವರಲ್ಲಿ ಮೊಕ್ತೇಸರರು ಒಬ್ಬರು.

“ಬಾಗಿಲ್ತಾಯರೆ, ದೇವರ ಅಪ್ಪಣೆಯನ್ನು ಪಾಲಿಸಬೇಕು. ನಿಜ. ಆದರೆ ಹೇಗೆ? ದೈವಗಳು ಊರಿನ ಎಲ್ಲ ದಿಕ್ಕುಗಳಲ್ಲಿ ಹರಡಿಹೋಗಿವೆ. ಇಲ್ಲಿಂದ ಒಂದು ದೈವದ ಗುಡಿಗೆ ಹೋಗಿ ಬರಲು ಒಂದು ಒಪ್ಪತ್ತು ಸಾಕಾಗಲಿಕ್ಕಿಲ್ಲ. ಅದೂ ಅಲ್ಲದೆ ಕೆಲವು ದೈವಗಳು ರಕ್ತವನ್ನೇ ಕೇಳುತ್ತವೆ. ಅಂತವುಗಳನ್ನು ನೀವು ಪೂಜಿಸುವುದು ಹೇಗೆ?”

ಶಂಕರ ಬಾಗಿಲ್ತಾಯರು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು. “ಕನಸಿನಲ್ಲಿ ಬಂದವರು ಇದನ್ನೆಲ್ಲ ಯೋಚಿಸಿಯೇ ನನಗೆ ಅಪ್ಪಣೆಕೊಟ್ಟಿರಬಹುದು. ಹಾಗೆಯೇ ನನ್ನ ಬಾಯಿಂದ ಬರುವ ಮಾತುಗಳನ್ನು ಅವರೇ ಆಡಿಸುತ್ತಿರಬಹುದು. ನನಗೀಗ ತೋಚುವುದು ಹೀಗೆ. ನಮ್ಮ ಮುಂದಿರುವ ಪ್ರಶ್ನೆಗಳು ಎರಡು. ಒಂದು ನೀವಂದಂತೆ ದೂರದ ಪ್ರಶ್ನೆ. ಅದರ ಉತ್ತರ ಕಷ್ಟದ್ದೇನಲ್ಲ. ಒಂದು ವೇಳೆ ನನಗೆ ಅಲ್ಲಿಗೆ ಹೋಗಲಿಕ್ಕೆ ಆಗದೆ ಇದ್ದರೆ, ದೈವಗಳನ್ನೆ ಇಲ್ಲಿಗೆ ತರಬಹುದಲ್ಲ. ದೇವಸ್ಥಾನದ ಸುತ್ತಲೂ ಸಾಕಷ್ಟು ಜಾಗವಿದೆ. ಇಲ್ಲಿಯೇ ಚಿಕ್ಕ ಚಿಕ್ಕ ಗುಡಿಗಳನ್ನು ಕಟ್ಟುವ. ಅನಂತರ ಶಾಸ್ತ್ರದಲ್ಲಿ ಹೇಳಿದಂತೆ ಅವುಗಳನ್ನು ಪ್ರತಿಷ್ಠಾಪಿಸೋಣ. ಇನ್ನು ನೀವು ಕೇಳಿದಿರಿ. ದೈವಗಳಿಗೆ ರಕ್ತ ಬೇಕು ಎಂದು. ಅವುಗಳು ಇಲ್ಲಿಗೆ ಬಂದ ಮೇಲೆ ಇಲ್ಲಿ ರಕ್ತ ನೈವೇದ್ಯ ಆಗಕೂಡದು. ನಾವು ವರ್ಷಕ್ಕೆ ಐದಾರು ಭೋಗಗಳನ್ನು ಹಾಕೋಣ. ಇನ್ನು ರಕ್ತವೇ ಬೇಕೆಂದಿದ್ದರೆ ಬೇರೆ ಕಡೆಯಲ್ಲಿ ಜನರು ಆ ಸೇವೆ ಮಾಡಿಕೊಳ್ಳಲಿ,” ಎಂದರು. ಮೊಕ್ತೇಸರರಿಗೆ ಇನ್ನೂ ಸಂಶಯ. ಹಾಗಾಗಿ “ಯಾವುದಕ್ಕೂ ಒಂದು ಸಲ ದೈವಗಳನ್ನೇ ಕೇಳುವದು ಒಳ್ಳೆಯದು,” ಎಂದರು.

“ಹಾಗೆ ಆಗಲಿ. ಈಗ ಮೇ ತಿಂಗಳು. ಪತ್ತನಾಜಿ ಮುಗಿದಿದೆಯಲ್ಲ. ಇನ್ನು ಏನಿದ್ದರೂ ಮಳೆಗಾಲ ಮುಗಿದ ಮೇಲೆಯೇ. ಆದರೆ ಕೋಲ ಆಗಲಿಲ್ಲ ಎಂಬ ಕಾರಣಕ್ಕೆ ಉಳಿದ ಕೆಲಸ ನಿಧಾನವಾಗಬಾರದು. ಯಜಮಾನರು ಹೇಳಿದ ಮಾತನ್ನು ಮನೆಯವರು ತೆಗೆದು ಹಾಕುತ್ತಾರೆಯೇ? ಹಾಗೆಯೆ ದೇವರು ಹೇಳಿದ ಮೇಲೆ ಗಣಗಳು ಇಲ್ಲ ಎನ್ನುವುದಿಲ್ಲ. ಆದ್ದರಿಂದ ದೇವಸ್ಥಾನದ ಎಂಟು ಕಡೆ ಗುಡಿಗಳ ಕೆಲಸ ಪ್ರಾರಂಭವಾಗಲಿ. ಮುಂದಿನ ವರ್ಷ ಎಲ್ಲ ಕೋಲಗಳನ್ನು ಶಿವರಾತ್ರಿಗೆ ಮುಂಚಿತವಾಗಿ ಮಾಡುವ. ಶಿವರಾತ್ರಿ ಮತ್ತು ಪ್ರತಿಷ್ಠಾಪನೆ ಎಲ್ಲವೂ ಒಂದೇ ಸಮಯದಲ್ಲಿ ಮಾಡಿಸಿ, ಹುಡಿ ಹಾರಿಸಿಬಿಡುವ,” ಎಂದರು ಬಾಗಿಲ್ತಾಯರು ಉತ್ಸಾಹದಿಂದ.

* * *

ಈ ಘಟನೆ ಆದ ಬಳಿಕ ಶಂಕರ ಬಾಗಿಲ್ತಾಯರ ಅಲೌಕಿಕ ಶಕ್ತಿಯ ಬಗ್ಗೆ ಸುತ್ತಮುತ್ತಲಿನ ಊರುಗಳಲ್ಲಿ ಕತೆ ಉಪಕತೆ ಹುಟ್ಟಿ ಅವರ ಕೀರ್ತಿ ಹರಡಿತು. ಅವರನ್ನು ಕಂಡರೆ ಭಕ್ತಿ ಗೌರವದಿಂದ ಹಿಂದೆ ನಮಸ್ಕರಿಸದವರೂ ಕರಜೋಡಿಸುವಂತಾಯಿತು. ಯಾವುದೇ ಅನ್ನ ಸಂತರ್ಪಣೆ, ಮದುವೆ ಮುಂಜಿಗಳಲ್ಲಿ ಬಾಗಿಲ್ತಾಯರಿಗೆ ಅಗ್ರಪಂಕ್ತಿ. ಒಂದು ವೇಳೆ ಅವರಿಗೆ ಬೇರೆ ಕಾರ್‍ಯಕ್ರಮ ಇದೆ ಎಂದಾದರೆ, ಕಾರ್‍ಯಕ್ರಮದ ದಿನವನ್ನೇ ಬದಲಾಯಿಸಿದ ನಿದರ್ಶನಗಳೂ ಇದ್ದವು. ವೈನಾಗಿ ತೀಡಿದ ಕಚ್ಚೆ ಪಂಚೆ ಉಟ್ಟು, ತಮ್ಮ ಕೇಸರಿ ಬಣ್ಣದ ರೇಷ್ಮೆ ಶಾಲು ಹೊದ್ದು, ನಾಲ್ಕಾರು ರುದ್ರಾಕ್ಷಿ ಮಾಲೆ ಕುತ್ತಿಗೆಗೆ ಹಾಕಿಕೊಂಡು, ಎದ್ದು ಕಾಣುವ ವಿಭೂತಿಯನ್ನು ಧರಿಸಿ ಯಾವುದಾದರೂ ಕಾರ್‍ಯಕ್ರಮಕ್ಕೆ ಬಂದರೆ, ಸುತ್ತಲಿನ ಜನ ಎದ್ದು ನಿಂತು ಸ್ವಾಗತಿಸತೊಡಗಿದರು. ಪುರೋಹಿತರಿದ್ದರೂ ಮಂತ್ರಾಕ್ಷತೆಯ ಬಟ್ಟಲನ್ನು ಅವರ ಕೈಗೆ ಕೊಟ್ಟು ಆಶೀರ್ವಾದ ಪಡಕೊಳ್ಳತೊಡಗಿದರು. ಅಂತಹ ದಿನಗಳಲ್ಲಿ ಮಂತ್ರಾಕ್ಷತೆ ಹಾಕಿಕೊಳ್ಳುವವರ ಸಾಲು ಮಾಮೂಲಿಗಿಂತ ಉದ್ದವೇ ಆಗುತ್ತಿತ್ತು. ಬಾಗಿಲ್ತಾಯರ ಖ್ಯಾತಿಯಿಂದಾಗಿ ದೇವಸ್ಥಾನದ ಸುತ್ತಮುತ್ತಲಿನ ಊರುಗಳಿಂದ ಅಲ್ಲದೆ, ದೂರದ ಊರುಗಳಿಂದಲೂ ಜನರು ಬರಲಾರಂಭಿಸಿದರು. ಸೋಮವಾರ, ಹುಣ್ಣಿಮೆಯ ದಿನ ಹಾಗೂ ವಿಶೇಷ ದಿನಗಳಲ್ಲಿ ದೇವಸ್ಥಾನದ ರಥಬೀದಿಯಲ್ಲಿ ಅಂಗಡಿಗಳು ಏಳತೊಡಗಿದವು. ಪರ ಊರಿನಿಂದ ಬಂದವರಿಗಾಗಿ ಪೈಗಳು ತಮ್ಮ ತಂಗಿಯ ಮಗನಿಗೆ ಹೋಟೆಲ್ಲು ಮಾಡಿಸಿಕೊಟ್ಟರು. ಕೆಲವು ಖಾಯಂ ಬ್ರಾಹ್ಮಣರಿಗೆ ದಕ್ಷಿಣೆಗಳು ಸಿಗುವ ಹಾಗೆ ಆಯಿತು. ಹೀಗೆ ಊರಿನ ಕೆಲವರ ಆರ್ಥಿಕ ಸ್ಥಿತಿ ಸುಧಾರಿಸತೊಡಗಿತು. ದೈವಗಳಿಗೆ ಗುಡಿಗಳ ನಿರ್ಮಾಣ ಸಹ ವೇಗವಾಗಿ ನಡೆಯುತ್ತಿತ್ತು.

* * *

ಶಂಕರ ಬಾಗಿಲ್ತಾಯರ ಯೋಚನೆ, ಯೋಜನೆಗಳನ್ನು ಸೋಮ ಅಷ್ಟಾಗಿ ಇಷ್ಟಪಡಲಿಲ್ಲ. ಆತನು ಅವರ ಒಕ್ಕಲಮಗನಾಗಿದ್ದರೂ ಕೂಡ. ಒಂದು ದಿನ ಸೋಮ, ದೊಡ್ಮನೆ ಬಾಗಿಲ್ತಾಯರಲ್ಲಿ ತನ್ನ ಮನದಲ್ಲಿ ಹಿಂದಿನಿಂದ ಕಾಡುತ್ತಿದ್ದ ಅನುಮಾನವನ್ನು ಪ್ರಸ್ತಾಪಿಸಿದ.

“ಅಯ್ಯ, ನನಗೆ ಇದೊಂದೂ ಅರ್ಥ ಆಗುವುದಿಲ್ಲ. ಈಶ್ವರ ದೇವರು ಶಂಕರ ಒಡೆಯರ ಕನಸಿನಲ್ಲಿ ಬಂದು ಹೇಳಿದಂತೆ, ನಮ್ಮ ದೈವಗಳು ಯಾಕೆ ನಮ್ಮ ಕನಸಿನಲ್ಲಿ ಬಂದು, ನಾವು ಅಲ್ಲಿಗೆ ಹೋಗಬೇಕು ಅಂತ ಹೇಳಲಿಲ್ಲ. ಇಷ್ಟರವರೆಗಿನ ಯಾವುದೇ ಕೋಲದಲ್ಲೂ ಈ ವಿಷಯವನ್ನು ಯಾವ ದೈವವೂ ಹೇಳಲಿಲ್ಲ. ನುಡಿಕೊಟ್ಟು ನಾನು ಇಲ್ಲಿ ಸಂತೋಷವಾಗಿದ್ದೇನೆ. ನಿಮ್ಮ ಸೇವೆಯಿಂದ ತೃಪ್ತಿಗೊಂಡಿದ್ದೇನೆ ಎಂದು ದೈವವು ಹೇಳಿದೆಯೇ ಹೊರತು, ನುಡಿ ಕೊಡುವಾಗ ನಾನು ಶಿವನ ಗಣ, ನಾನು ಸ್ವಲ್ಪ ದಿನಗಳಲ್ಲಿ ಇಲ್ಲಿಂದ ಎದ್ದುಹೋಗುತ್ತೇನೆ, ಅಂತ ಎಂದೂ ಹೇಳಿರಲಿಲ್ಲ. ಇದರ ಅರ್ಥ ದೈವಕ್ಕೆ ತಾನು ಯಾರು ಅಂತ ಗೊತ್ತಿಲ್ಲ ಅಂತ ಅಲ್ಲವೆ. ಹಾಗಾದರೆ ಇಷ್ಟರವರೆಗೆ ತಾನು ಯಾರು ಎಂದು ಗೊತ್ತಿಲ್ಲದ ದೈವದಿಂದ ನುಡಿ ಕೇಳಿದ್ದೇವೆಯೆ? ಇಷ್ಟಾದ ಮೇಲೆ ಇವು ಕೊಟ್ಟ ನುಡಿಯನ್ನು ಸತ್ಯ ಎಂದು ನಂಬುವುದಾದರೂ ಹೇಗೆ. ಛೇ, ಹಾಗೆ ಆಗಲಿಕ್ಕೆ ಸಾಧ್ಯವಿಲ್ಲ. ಯಾವುದೋ ಕಾಲದ ಘಟನೆಯನ್ನು ನಿನ್ನೆ ಕಂಡಂತೆ ಹೇಳುವ ದೈವಗಳು ಸುಳ್ಳಾಡುವುದು ಹೇಗೆ. ಅದೂ ಅಲ್ಲದೆ ಅವುಗಳು ಅಲ್ಲಿ ಸುಖವಾಗಿ ಹೇಗೆ ಇರಬಲ್ಲವು. ಇಲ್ಲಿ ಇರುವಷ್ಟು ವಿಶಾಲವಾದ ಜಾಗ, ನೀರು ಅಲ್ಲಿ ಅವುಗಳಿಗೆ ಸಿಕ್ಕೀತೇನು. ಅಲ್ಲಿನಿಂದಲೆ ನಮ್ಮ ಕೇರಿ ಹಟ್ಟಿ, ಹೊಲಗದ್ದೆಗಳನ್ನ ಹೇಗೆ ಕಾಪಾಡಿಯಾವು? ಅವುಗಳನ್ನು ನೋಡಲಿಕ್ಕೆ ನಾವು ಒಂದು ದಿನದ ಕೆಲಸ ಕೂಲಿ ಬಿಟ್ಟು ಊರಿನೊಳಗೆ ಹೋಗಬೇಕಾ? ಹೋದ ಮೇಲೂ ನಮ್ಮನ್ನು ಈಶ್ವರ ದೇವಸ್ಥಾನದಂತೆ ದೂರದಲ್ಲಿ ನಿಲ್ಲಿಸಿಯಾರು. ನಮ್ಮ ದೈವಗಳನ್ನು ನಮ್ಮಿಷ್ಟದಂತೆ ಪೂಜಿಸಲು ಬಿಡುವುದಿಲ್ಲ. ಒಡೆಯರೆ ಇದೇನೋ ನನಗೆ ಸರಿ ಕಾಣವುದಿಲ್ಲ,” ಎಂದು ಸೋಮ ತನ್ನ ಅಸಮಾಧಾನ ವ್ಯಕ್ತಪಡಿಸಿದ.

ದೊಡ್ಮನೆ ಬಾಗಿಲ್ತಾಯರು ದ್ವಂದ್ವಕ್ಕೀಡಾದರು. ಸೋಮ ಹೇಳುವುದೂ ಸರಿ. ಆದರೆ ಶಂಕರ ಬಾಗಿಲ್ತಾಯರ ಕನಸೇ ಸುಳ್ಳೆ ಅಥವಾ ದಿನಾ ಶಿವನ ಪೂಜೆ ಮಾಡಿ, ಅದರ ಬಗ್ಗೆಯೇ ಆಲೋಚಿಸಿ, ಅವರ ಸ್ವಂತ ಅಭಿಪ್ರಾಯ ಕನಸಿನ ರೂಪದಲ್ಲಿ ವ್ಯಕ್ತವಾಯಿತೇ? ಯಾವುದು ಸರಿ, ಯಾವುದು ತಪ್ಪು? ಯಾರು ಸರಿ, ಯಾರು ತಪ್ಪು? ಗೊತ್ತಾಗದೆ, ಸುಮ್ಮನೆ ಗೋಣು ಆಡಿಸಿದರು.

* * *

ಮಳೆಗಾಲ ಮುಗಿದು, ದೀಪಾವಳಿ ಕಳೆದು. ಮಕರ ಸಂಕ್ರಾಂತಿ ಆದ ಮೇಲೆ ಸರತಿಯಲ್ಲಿ ಕೋಲಗಳು ನಡೆದವು. ಶಂಕರ ಬಾಗಿಲ್ತಾಯರ ಮಾತಿನ ವರಸೆ, ಕನಸಿನ ವಿಸ್ತರಣೆ ಹಾಗೂ ಮೊಕ್ತೇಸರರ ಆಶ್ವಾಸನೆ ಇವುಗಳಿಂದ ದೈವಗಳು ಸಂತೋಷಗೊಂಡವು. ತಮ್ಮ ತಮ್ಮ ಸ್ಥಾನದಿಂದ ದೇವಸ್ಥಾನದ ಸುತ್ತ ನೆಲೆಗೊಳ್ಳಲು ಒಪ್ಪಿದವು. ಒಂದು ವೇಳೆ ತಮ್ಮನ್ನು ಅಲ್ಲಿ ಸರಿಯಾಗಿ ನಡೆಸಿಕೊಳ್ಳದಿದ್ದರೆ ನೀವು ತೊಂದರೆಗೀಡಾಗುತ್ತೀರಿ ಎಂದೂ ಕೆಲವು ದೈವಗಳು ಬೆದರಿಸಿದವು. ಈ ಎಲ್ಲ ಬೆಳವಣಿಗೆಯನ್ನು ನೋಡುತ್ತಿದ್ದ ಸೋಮ ಚಡಪಡಿಸುತ್ತಿದ್ದ. ಕರಿಗಾರು ದೈವವು ತನ್ನ ಬಾಯಿಯಲ್ಲಿ ಇನ್ನೆರಡು ದಿನದಲ್ಲಿ ನಡೆಯುವ ಕೋಲದಲ್ಲಿ ಇದೇ ಮಾತನ್ನು ಆಡಿಸುತ್ತದೆಯೇ? ಒಂದು ವೇಳೆ ಹಾಗೆ ಆಡಿಸಿದರೆ ಊರ ಹೊರಗಿರುವ ನಮ್ಮ ಕೇರಿಯನ್ನು ಊರಿನ ಒಳಗೆ ಕುಳಿತು ನಮ್ಮನ್ನು ರಕ್ಷಿಸುತ್ತದೆಯೇ ದೈವ? ಪ್ರಶ್ನೆಗಳಿಗೆ ಉತ್ತರ ಸಿಗದೆ ಚಡಪಡಿಸತೊಡಗಿದ.

* * *

ಮಾರನೇ ದಿನ ಮುಂಜಾವಿನಲ್ಲಿ ಕರಿಗಾರು ದೈವಸ್ಥಾನಕ್ಕೆ ಬಂದವರಿಗೆ ಆಶ್ವರ್ಯ ಕಾದಿತ್ತು. ಮೂರಡಿ ನೆಲದ ಕೆಳಗೆ ಹಾಗೂ ಒಂದಡಿ ನೆಲದ ಮೇಲೆ ಇರುವ ಕರಿಗಾರುವನ್ನು ಪ್ರತಿಬಿಂಬಿಸುತ್ತಿದ್ದ ಆಯತಾಕಾರದ ಕಲ್ಲು ಅಲ್ಲಿಂದ ಮಾಯವಾಗಿತ್ತು. ಯಾವುದೇ ಗುದ್ದಲಿ, ಪಿಕಾಸಿಗಳನ್ನು ಉಪಯೋಗಿಸದೆ. ಕಲ್ಲನ್ನು ಸತತವಾಗಿ ಅಲ್ಲಾಡಿಸಿ, ಮೇಲಕ್ಕೆ ತೆಗೆದಂತೆ ಭಾಸವಾಗುತ್ತಿತ್ತು. ಜನರು ಊರತುಂಬ ಗುಲ್ಲೆಬ್ಬಿಸಿದರು. ಶಂಕರ ಬಾಗಿಲ್ತಾಯರು ಅಲ್ಲಿಗೆ ಓಡೋಡಿ ಬಂದರು. ಎಲ್ಲವೂ ಸುಸೂತ್ರವಾಗಿ ತನ್ನಿಷ್ಟದಂತೆ ನಡೆಯಿತು ಎಂದು ಅಂದು ಕೊಳ್ಳುತ್ತಿರುವಾಗಲೇ ಇದ್ಯಾವುದು ಪ್ರಾರಬ್ಧ ಎಂದು ತಲೆಯ ಮೇಲೆ ಕೈಯಿಟ್ಟುಕೊಂಡರು. ಸ್ವಲ್ಪ ತಡೆದು ಮೊಕ್ತೇಸರರ ಹತ್ತಿರ, “ಶೆಟ್ಟರೆ, ಇದು ಯಾಕೋ ನಮಗೆ ಆಗದವರು ಮಾಡಿದ ಕೆಲಸವೆ. ತತ್‌ಕ್ಷಣಕ್ಕೆ ನಾವೇನೂ ಮಾಡುವ ಹಾಗಿಲ್ಲ. ಹೇಗೂ ನಾಳೆ ಕೋಲ ಇದೆಯಲ್ಲ. ದೈವಕ್ಕೇ ಪ್ರಶ್ನೆ ಇಟ್ಟರಾಯಿತು. ಆದರೂ ನಿಮ್ಮ ಸಮಾಧಾನಕ್ಕೆ ನಾಲ್ಕು ಜನರನ್ನು ಹುಡುಕಲು ಕಳಿಸಿ. ಅದರಿಂದ ಏನೂ ಫಲ ಸಿಗದು,” ಎಂದರು. ಅವರು ಹೇಳಿದಂತೆ ಅರಸಿ ಹೋದವರು ಬರಿಗೈಲಿ ಬಂದರು.

ಕೋಲದ ದಿನ ಬಂದು ಬಿಟ್ಟಿತು. ಸೋಮ ಬೆಳಿಗ್ಗೆ ಕೆರೆಯಲ್ಲಿ ಮಿಂದು ಇಡೀ ದಿನ ಸಂಪ್ರದಾಯದಂತೆ ಉಪವಾಸವಿದ್ದು, ಗುರಿಕಾರರ ಮನೆಗೆ ಹೋಗಿ, ಎಣ್ಣೆ ಮತ್ತು ಕೋಲದ ಪರಿಕರಗಳನ್ನು ಭಕ್ತಿಯಿಂದ ತಂದು, ಹೊತ್ತು ಕಂತುವ ಹೊತ್ತಿಗೆ ಕೋಲಕ್ಕೆ ತಯಾರಿ ನಡೆಸಿ ಸಿದ್ಧನಾದ. ವಾದ್ಯ ಬೇಂಡುಗಳ ಶಬ್ದ ತಾರಕಕ್ಕೇರುತ್ತಿದ್ದಂತೆ, ಕರ್ಕಶವಾಗಿ ಕೇಕೆ ಹಾಕಿ ಆವೇಶದಿಂದ ಕುಣಿಯತೊಡಗಿದ. ಮುಪ್ಪಾತಿ ಮುಪ್ಪ ಸೋಮುವಿನ ಕೈಕಾಲುಗಳಲ್ಲಿ ಅದ್ಯಾವ ಮಾಯೆಯಿಂದ ಶಕ್ತಿ ತುಂಬಿಕೊಳ್ಳುತ್ತಿತ್ತೊ ಕಾಣೆ, ಆತನ ಕುಣಿತದ ಕಸುವು, ಹುರುಪು ಇಷ್ಟರವರೆಗೆ ಎಂದೂ ಕಂಡಿರಲಿಲ್ಲ ಎಂಬುದು ನೋಡಿದವರ ಅಂಬೋಣ.

“ನಂಬಿದವರಿಗೆ ಇಂಬು ಕೊಡುವವ ನಾನು. ಯಾರಲ್ಲಿ ಏನಾದರು ದುಗುಡ, ತೊಂದರೆ ಇದ್ದರೆ ಕೇಳಬಹುದು,” ಎಂದಿತು ಗಂಭೀರವಾಗಿ ದೈವ.

ಶಂಕರ ಬಾಗಿಲ್ತಾಯರು ಗಂಟಲನ್ನು ಸರಿಪಡಿಸಿಕೊಳ್ಳುತ್ತಾ “ದೈವವೆ, ನಿನ್ನ ತಿಳುವಳಿಕೆ ದೊಡ್ಡದು. ಆದರೂ ಭಕ್ತರ ಬಾಯಲ್ಲಿ ಕೇಳಬೇಕು ಅಂತ ನಿನ್ನ ಬಯಕೆ, ಆಗಲಿ. ಹೇಳುತ್ತೇನೆ,” ಎಂದು ಹತ್ತು ತಿಂಗಳಿಂದ ನಡೆದ ಘಟನೆಗಳೆಲ್ಲವನ್ನೂ ತಿಳಿಸಿ, ದೈವಗಳೆಲ್ಲದರ ಒಪ್ಪಿಗೆಯಂತೆ ಪ್ರತಿಷ್ಠೆ ಮಾಡಿ ಸಾಂಗವಾಗಿ ಪೂಜೆ ನಡೆಯುತ್ತಿದ್ದುದನ್ನು ಹೇಳಿದರು. “ನಮ್ಮ ಊರಿನ ಅತಿ ಹೆಚ್ಚು ಶಕ್ತಿಯ, ವಿಶಿಷ್ಟ ಕಾರಣಿಕ ಉಳ್ಳ ದೈವ ನೀನು. ನಮ್ಮ ಊರಿನ ಜನರ ಮೇಲಿನ ನಿನ್ನ ಪ್ರೀತಿ ದೊಡ್ಡದು. ಅದಕ್ಕೆ ಅಲ್ಲವೇ, ನಮ್ಮ ಊರಿನಲ್ಲಿ ಮಾತ್ರ ನೀನು ಇರುವುದು. ನೀನೂ ಸಹ, ಊರ ಒಳಗಿನ ದೇವಸ್ಥಾನದ ಸಮೀಪ ಬಂದರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವ ನಾನು. ಆದರೆ ಈಗ ನಿನ್ನನ್ನೇ ನಿನ್ನೆ ರಾತ್ರಿ ಯಾರೋ ಮಾಯ ಮಾಡಿದ್ದಾರೆ. ಈಗ ನಮಗೆ ನೀನೆ ದಾರಿ ತೋರಬೇಕು. ಆ ಬಿಂಬ ಎಲ್ಲಿದೆ ಎಂದು ತೋರಿದರೆ ಮತ್ತೆ ಅದನ್ನು ಪುನರ್‌ಪ್ರತಿಷ್ಠೆ ಮಾಡಿಸಿ ಪೂಜೆಗೆ ವ್ಯವಸ್ಥೆ ಮಾಡಬೇಕೆಂದಿದ್ದೇನೆ. ದಯವಿಟ್ಟು ಅದರ ಇರುವು ಅರುಹಬೇಕು. ಇಲ್ಲ ಬೇರೆ ಬಿಂಬವನ್ನು ಪ್ರತಿಷ್ಠಾಪಿಸಲು ಅನುಮತಿ ಕೊಡಬೇಕು,” ಎಂದು ಪಂಚೆಯನ್ನು ಕೆಳಗೆ ಬಿಟ್ಟು ಉತ್ತರೀಯವನ್ನು ಕಂಕುಳಲ್ಲಿ ಸಿಕ್ಕಿಸಿ, ಬೆನ್ನು ಬಗ್ಗಿಸಿ ಕೇಳಿದರು.

ದೈವ ಒಮ್ಮೆ ಹೂಂಕರಿಸಿತು. ಒಂದು ನಿಮಿಷ ನೀರವ ಮೌನ. ಮತ್ತೆ ಆ ಕತ್ತಲೆಯ ಮಹಾಮೌನವನ್ನು ಸೀಳುವಂತೆ ಕರ್ಕಶವಾದ ಕೇಕೆ ಹಾಕಿ ದೈವ ಉಚ್ಛಸ್ವರದಲ್ಲಿ ನುಡಿಯಿತು.

“ಭಕ್ತರೆ, ನನ್ನ ಪ್ರತಿಬಿಂಬ! ನನ್ನ ಪ್ರತಿಬಿಂಬ!! ನಿಮಗೆಲ್ಲರಿಗೂ ನನಗಿಂತ ನನ್ನ ಬಿಂಬದ ಚಿಂತೆಯೆ ಜಾಸ್ತಿ ಎನ್ನಿಸುತ್ತಿದೆ. ನಾನಿದ್ದರೆ ನನ್ನ ಬಿಂಬ. ಇಲ್ಲದಿದ್ದರೆ ಬರಿ ಕಲ್ಲು. ನನ್ನ ಇರುವಿಕೆ ನನ್ನ ಭಕ್ತರ ಸಂತೋಷದಲ್ಲಿದೆ, ಅವರ ಶ್ರೇಯಸ್ಸಿನಲ್ಲಿದೆ, ಅವರ ಕಷ್ಟ ಕಾರ್ಪಣ್ಯಗಳ ನಿವಾರಣೆಯಲ್ಲಿದೆ. ಅವರ ಊರುಕೇರಿ, ಹೊಲ, ದನ, ಮನೆಗಳ ರಕ್ಷಣೆಯಲ್ಲಿದೆ. ಆದರೆ ನೀವು ಮಾಡುತ್ತಿರುವುದಾದರೂ ಏನು. ನನಗಿಂತ ನನ್ನ ಬಿಂಬದ ಸ್ಥಳಾಂತರವೇ ಮುಖ್ಯವಾದಂತಿದೆ. ಇರಲಿ, ಭಕ್ತರ ಕೋರಿಕೆಯನ್ನು ಮನ್ನಿಸುವುದು ನನ್ನ ಕರ್ತವ್ಯ. ಆದರೆ ಒಂದು ಮಾತು ತಿಳಿದುಕೊಳ್ಳಿರಿ. ನಾನು ಅಲ್ಲಿ ನಾನಾಗಿರುವುದಿಲ್ಲ,” ಎಂದು ಕೆರೆಯಿರುವ ಉತ್ತರ ದಿಕ್ಕಿನತ್ತ ತನ್ನ ಬಲಗೈಯನ್ನು ಎತ್ತಿ ತೋರಿಸಿತು. ಕೆಲಹೊತ್ತು ಚಾಚಿದ್ದ ಕೈ ಹಾಗೆಯೇ ಇತ್ತು. ದೈವದ ಮುಂದಿನ ನುಡಿಗಾಗಿ ಕಾತರತೆಯಿಂದ ಕಾಯುತ್ತಿದ್ದ ಜನಕ್ಕೆ ಇನ್ನೊಂದು ವಿಸ್ಮಯ. ನಿಂತಿದ್ದ ಸೋಮ ಬುಡ ಕಳಚಿದ ಅಡಿಕೆಮರದಂತೆ ಕುಸಿದ ಬಿದ್ದ. ಬಿದ್ದವನಲ್ಲಿ ಒದ್ದಾಟ ಇಲ್ಲ, ಚಲನೆಯೂ ಇಲ್ಲ. ನಾಲ್ಕಾರು ಜನ ಹತ್ತಿರ ಬಂದರು. ಒಂದಿಬ್ಬರು ಗಾಳಿ ಹಾಕಿದರು, ಎತ್ತಿ ಕುಳ್ಳಿರಿಸಲು ಪ್ರಯತ್ನಿಸಿದವರಿಗೆ ತಿಳಿಯಿತು ಸೋಮ ಇನ್ನಿಲ್ಲವೆಂದು. ಹಾಗೆಯೇ ಕೂಗಿ ಹೇಳಿದರು. ಎಲ್ಲರಿಗೂ ದಿಗ್ಭ್ರಮೆ.

ಯಾಕೆ ಹೀಗಾಯ್ತು?

ಕರಿಗಾರುವಿಗೆ ಈ ದೈವಸ್ಥಾನ ಬೇಡವಾಗಿತ್ತೇ?

ದೂರದಲ್ಲಿರುತ್ತೇನೆ ಎಂದು ಹೇಳಲು ಕೈಎತ್ತಿ ತೋರಿಸಿದನೆ??

ಸೋಮನೇ ಯಾಕೆ ಬಲಿಯಾಗಬೇಕಿತ್ತು???

ಒಬ್ಬೊಬ್ಬರಲ್ಲಿ ಒಂದೊಂದು ಆಲೋಚನೆ….

ಮಾರನೇ ದಿನ ಜನರು ಉತ್ತರ ದಿಕ್ಕಿನತ್ತ ಹೊರಟರು. ಹಾಡಿ, ಕಂದಕ ಒಂದೂ ಬಿಡದೆ ಜಾಲಾಡಿದರು. ಕರಿಗಾರುವಿನ ಕಲ್ಲು ಸಿಗಲಿಲ್ಲ. ಬಾಗಿಲ್ತಾಯರ ದೈವಗಳ ಸ್ಥಾನಾಂತರ ಕರಿಗಾರುವಿಗೆ ಇಷ್ಟವಾಗಿಲ್ಲವೆಂದೇ ಅದರ ಪ್ರತಿಬಿಂಬ ಕಣ್ಮರೆಯಾಯಿತೆಂದೂ ಅವರಿಬ್ಬರ ನಡುವೆ ಮೊದಲಿನ ದೈವ ಹಾಗೂ ಭಕ್ತನ ಸಂಬಂಧ ಉಳಿದೆಲ್ಲವೆಂತಲೂ ಜನ ಆಡಿಕೊಳ್ಳತೊಡಗಿದರು. ಸೋಮ ವೃತ್ತಿಯಲ್ಲಿ ಅಡಿಕೆ ಮರ ಹತ್ತುವವನು. ಇದೇ ಘಟನೆಯನ್ನು ನೆಪವಾಗಿರಿಸಿ ಬೇರೆಯವರು ಅಡಿಕೆಮರವನ್ನೇರಲು ಹಿಂಜರಿದರು. ಅದಕ್ಕೆ ಸರಿಯಾಗಿ ಬಾಗಿಲ್ತಾಯರು ದೂರದ ಸೀಮೆಯಿಂದ ಅಡಿಕೆ ಕೊಯ್ಯಿಸಲು ಕರೆತಂದಿದ್ದ ಬ್ಯಾರಿ, ಬಾಗಿಲ್ತಾಯರ ಕಣ್ಣೆದುರೇ ಅಡಿಕೆಮರದಿಂದ ಬಿದ್ದು ಸತ್ತು ಹೋದ. ವರ್ಷ ಕಳೆಯುವ ಹೊತ್ತಿನಲ್ಲಿ ಬಾಗಿಲ್ತಾಯರಿಗೆ ಲಕ್ವ ಹೊಡೆದು ಹಾಸಿಗೆ ಸೇರುವಂತಾಯಿತು. ಡಾಕ್ಟರರು ಅವರ ಅತೀ ರಕ್ತದೊತ್ತಡದಿಂದ ಹೀಗಾದದ್ದು ಎಂದರೂ, ಊರಿನ ಜನರು ಅದು ಕರಿಗಾರುವಿನ ಶಾಪ ಎಂದುಕೊಂಡರು.

* * *

ದೀರ್ಘವಾದ ಕತೆಯನ್ನು ಬಾಗಿಲ್ತಾಯರು ಉತ್ಸಾಹದಿಂದಲೇ ಹೇಳಿ ಮುಗಿಸಿದರು. ಶಶಾಂಕನೂ ಮೌನವಾಗಿ ಕುತೂಹಲದಿಂದ ಕೇಳಿದ. ಕೊನೆಯಲ್ಲಿ ಬಾಗಿಲ್ತಾಯರು ಜಗುಲಿಯಿಂದ ಎದ್ದು ಬೆನ್ನು ನೆಟ್ಟಗೆ ಮಾಡುತ್ತ “ಬಿಂಬವು ಎಲ್ಲಿಗೆ ಹೋಯಿತು ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ. ಆದರೆ ಸೋಮನೇ ಮಾಡಿರಬಹುದು ಎಂಬುದು ನನ್ನ ಅಪ್ಪನ ಅಭಿಪ್ರಾಯ. ಅದೂ ಅಲ್ಲದೆ ಅದು ಬಲುಭಾರವಿರುವುದರಿಂದ, ಹಾಗೂ ಸೋಮ ಅದನ್ನು ಬಹುದೂರದವರೆಗೆ ಎತ್ತಿಕೊಂಡು ಹೋಗಲಾಗದಷ್ಟು ವಯಸ್ಸಾಗಿದ್ದರಿಂದ, ಬಹುಶಃ ಅದನ್ನು ಎದುರಿನ ಕೆರೆಗೆ ಹಾಕಿದ್ದಿರಬಹುದು. ಕೆರೆಯು ಬಹಳ ಆಳವಿದ್ದುದರಿಂದ ಯಾರೂ ಅದರಲ್ಲಿಳಿದು ಹುಡುಕಲು ಪ್ರಯತ್ನಿಸಲಿಲ್ಲ. ನೋಡಿ, ಅವನು ಮನಸ್ಸು ಮಾಡಿದ್ದರೆ ದೈವ ಮೈಮೇಲೆ ಬಂದಾಗ ಬಿಂಬವನ್ನು ಇಲ್ಲಿಂದ ಕೊಂಡೊಯ್ಯಬಾರದು ಎಂದು ಅಪ್ಪಣೆ ಕೊಡಿಸಬಹುದಿತ್ತು. ಆದರೆ ಹಾಗೆ ಆತ ಮಾಡದೆ ಸಾಮಾನ್ಯ ವ್ಯಕ್ತಿಯೊಬ್ಬ ಮಾಡುವಂತೆ ಬಿಂಬವನ್ನು ಅಲ್ಲಿಂದ ಮಾಯಮಾಡಿದ. ದೈವದಂತೆ ಅದು ಇದ್ದ ದಿಕ್ಕಿನತ್ತ ಕೈತೋರಿ ಸತ್ಯವನ್ನೇ ಹೇಳಿದ. ಆತ ತಪ್ಪುದಿಕ್ಕಿನತ್ತ ತೋರಿಸದೆ ಉಳಿದ. ಇದನ್ನೆಲ್ಲ ನೋಡುವಾಗ ಸೋಮನ ಮೈಮೇಲೆ ದೈವ ಆವಾಹನೆ ಆದ ಮೇಲೆ ಆತ ಬಹುಶಃ ಸೋಮನಾಗಿ ಉಳಿಯುತ್ತಿರಲಿಲ್ಲ ಅನ್ನಿಸುತ್ತದೆ, ಅಲ್ಲವೆ. ಇರಲಿ, ಹೊತ್ತು ನೆತ್ತಿಯ ಮೇಲೆ ಏರಿದೆ. ಮನೆಗೆ ತಡ ಮಾಡಿ ಹೋದರೆ, ಸುನೀತಾ ಇನ್ನೂ ನಾವು ಬರಲು ಸಮಯವಿದೆ ಎಂದು ಇನ್ನೇನಾದರೂ ಅಡುಗೆ ಮಾಡಿ, ನಮ್ಮ ಮೂಗಿನವರೆಗೆ ತಿನ್ನಿಸುತ್ತಾಳೆ. ಬೇಗ ಮನೆಗೆ ಹೋಗುವ,” ಎಂದು ಹಾಸ್ಯಕ್ಕೆ ತಾವೂ ನಕ್ಕು ಅಳಿಯನನ್ನು ನಗಿಸಿ ಕೊಡೆ ಬಿಡಿಸಿ ನಡೆದರು.

ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…


-ನವೀನ್ ಸೂರಿಂಜೆ


 

ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ” ಎಂಬ ಲೇಖನಕ್ಕೆ ನನ್ನ ನೆಚ್ಚಿನ ಸಾಹಿತಿ ನಾ.ದ.ಶೆಟ್ಟಿಯವರು ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. “ನವೀನ್‌ರವರು ಬರೆದ ಒಂದೊಂದು ವಾಕ್ಯವನ್ನು ಒಬ್ಬರೇ ಕುಳಿತು ಪ್ರಾಂಜಲ ಮನಸ್ಸಿನಿಂದ ಮರು ಓದು ನಡೆಸಲಿ” ಎಂಬ ಅವರ ಮಾತಿನಂತೆ ಒಂದೊಂದು ವಾಕ್ಯವನ್ನು ಓದಿದಾಗಲೂ ಹಲವಾರು ವಿಷಯಗಳು ಸ್ಪಷ್ಟವಾಗಿ ಹೇಳಲಾಗಿಲ್ಲ ಅನ್ನಿಸಿತು. ಮೂಡಬಿದ್ರೆಯ “ಆಳ್ವಾಸ್ ಶಿಕ್ಷಣ ಸಂಸ್ಥ”ಯ ಮೋಹನ ಆಳ್ವ ಪ್ರಾಯೋಜಕತ್ವದ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ಕಾರ್ಯಕ್ರಮಗಳನ್ನು ಇನ್ನಷ್ಟು ವಿಶಾಲವಾಗಿ ಮತ್ತು ಆಳವಾಗಿ ವಿಮರ್ಶಿಸಿ ಬರವಣಿಗೆಗಿಳಿಸಬೇಕಿತ್ತು. ಅದಕ್ಕಿಂತಲೂ ಮುಖ್ಯವಾಗಿ ಲೇಖನ ಮೋಹನ ಆಳ್ವರ ಬಗೆಗೆ ಬರೆದುದೇ ಅಲ್ಲ ಎಂಬುದನ್ನು ಬಹಳಷ್ಟು ಮಂದಿ ಅರ್ಥ ಮಾಡಿಕೊಂಡಿದ್ದೇ ಇಲ್ಲ. ವಿದ್ಯಾರ್ಥಿಗಳ ಡೋನೇಷನ್ ಹಣದಲ್ಲಿ ನಡೆಸುವ, ವಿದ್ಯಾರ್ಥಿ ಚಳುವಳಿಗಳಿಗೆ ಅವಕಾಶ ಮಾಡಿಕೊಡದ, ಡೆಮಾಕ್ರಟಿಕ್ ಆಗಿ ನಡೆಯದ, ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಅರ್ಥವಾಗುವಂತೆ ಸ್ಪಷ್ಟಪಡಿಸಬೇಕಿತ್ತು.

ಕನ್ನಡ ನಾಡು ನುಡಿಯ ರಕ್ಷಣೆಗಾಗಿ ಆಳ್ವಾಸ್ ನುಡಿಸಿರಿಯನ್ನು ಆಯೋಜಿಸುವುದು ಮತ್ತು ಇಲ್ಲಿ ನಡೆಯುವ ಕಾರ್ಯಕ್ರಮದ ಅಚ್ಚುಕಟ್ಟುತನ ಎಲ್ಲವೂ ಪ್ರಶಂಸನೀಯವೇ, ಮತ್ತು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಯಬೇಕಾಗಿರುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ. ನುಡಿಸಿರಿ ಮತ್ತು ವಿರಾಸತ್ ಈ ಎರಡೂ ಕಾರ್ಯಕ್ರಮಗಳು ಯಾವುದೇ ಪ್ರಜಾಪ್ರಭುತ್ವ ಮಾಧರಿಯಲ್ಲಿ ನಡೆಯದೆ ವ್ಯಕ್ತಿಯೊಬ್ಬನ ಸರ್ವಾಧಿಕಾರದಲ್ಲಿ ಸ್ವಯಂ ವೈಭವೀಕರಿಸುತ್ತಾ ನಡೆಯುವುದು ಮಾತ್ರ ಅಸಹನೀಯ. ಹೇಳಿಕೊಳ್ಳಲು ಒಂದಷ್ಟು ಜನರನ್ನು ಸೇರಿಕೊಂಡ ಸಮಿತಿ ಎಂಬುದಿದ್ದರೂ ಅದೊಂದು “ಆಳ್ವಾಸ್ ಭಜನಾ ಮಂಡಳಿ” ಯಂತೆ ಕಾರ್ಯನಿರ್ವಹಿಸುತ್ತದೆ. ಆಳ್ವಾಸ್ ನುಡಿಸಿರಿ ಎಂಬುದು ಕಾಲೇಜು ವಿದ್ಯಾರ್ಥಿಗಳದ್ದೋ ಅಥವಾ ಕಾಲೇಜಿನ ಮಾಮೂಲಿ ಕಾರ್ಯಕ್ರಮದಂತೆ ನಡೆಯುವುದಾದರೆ ಇಲ್ಲಿ ಆಳ್ವರ ಪಾರುಪತ್ಯ ಪ್ರಶ್ನಾತೀತ. ಆದರೆ ಆಳ್ವಾಸ್ ನುಡಿಸಿರಿ ಎಂಬುದು ಕನ್ನಡದ ಮನಸ್ಸುಗಳನ್ನು ಕಟ್ಟುವ ಸಮ್ಮೇಳನ ಎಂಬುದಾಗಿ ಬಿಂಬಿಸಿ ನಡೆಸುವುದರಿಂದ ಈ ಕಾರ್ಯಕ್ರಮದ ಸಂಘಟನೆ ಡೆಮಾಕ್ರಟಿಕ್ ಆಗಿರಬೇಕು. ಜೀವನದಲ್ಲಿ ಏನೋ ಸಾಧನೆ ಮಾಡಬೇಕು ಎಂದು ಕಷ್ಟಪಟ್ಟು ಹಣ ಹೊಂದಿಸಿ ಶಿಕ್ಷಣ ಸಂಸ್ಥೆಗೆ ನೀಡುವ ಡೊನೇಷನ್ ಹಣದಲ್ಲಿ ನುಡಿಸಿರಿ ನಡೆಸುವ ಅವಶ್ಯಕತೆ ಏನಿದೆ? ಮಂಗಳೂರು ಸೇರಿದಂತೆ ರಾಜ್ಯದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ಡೊನೇಷನ್ ಪಡೆದುಕೊಳ್ಳುತ್ತವೆ ಮತ್ತು ಸಮಾಜಕ್ಕೆ ಅವುಗಳು ಯಾವ ಕೊಡುಗೆ ನೀಡುತ್ತದೆ ಎಂಬುದೆಲ್ಲ ಅಪ್ರಸ್ತುತ. ಯಾಕೆಂದರೆ ಅಂತಹ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಸೇರಬೇಕಾದ ಆಳ್ವಾಸ್ ಶಿಕ್ಷಣ ಸಂಸ್ಥೆಯು ಮೂರುದಿನದ ಸಾಹಿತ್ಯ ಜಾತ್ರೆ ಮಾಡಿ ಏನೇನೂ ಸಾಧನೆ ಮಾಡದೆ “ಒಳ್ಳೆಯವನು” ಅನ್ನಿಸಿಕೊಳ್ಳುವುದು ಸರಿಯಲ್ಲ. ಅದೊಂಥರಾ “ಲಕ್ಷ ಲಕ್ಷ ವರದಕ್ಷಿಣೆ ತಗೆದುಕೊಂಡು ಊರವರಿಗೆಲ್ಲಾ ಬಾಡೂಟ ಹಾಕಿಸಿದಂತೆ”. ಮದುವೆಯ ಊಟ ಮಾಡಿದವರು “ಯಾರ ದುಡ್ಡಾದರೇನು. ಒಳ್ಳೆ ಊಟ ಹಾಕಿದ್ನಲ್ಲ. ಉಳಿದವರ ತರಹ ತಾನು ವರದಕ್ಷಿಣೆ ತಗೊಂಡು ಬ್ಯಾಂಕ್ನಲ್ಲಿ ಇಟ್ಟಿಲ್ಲವಲ್ಲ” ಎಂದು ಹೇಳುವುದಕ್ಕಿಂತ ಭಿನ್ನವಲ್ಲ. ಯಾರದ್ದೋ ಮಕ್ಕಳ ದುಡ್ಡಿನಲ್ಲಿ ಆಳ್ವರು ಯಾಕೆ ಸಾಹಿತ್ಯ ಜಾತ್ರೆ ಮಾಡಬೇಕು? ಸಮಿತಿ ಎಂಬುದನ್ನು ರಚನೆ ಮಾಡಿಕೊಂಡ ನಂತರ ಹಣಕಾಸು ಸೇರಿದಂತೆ ಕಾರ್ಯಕ್ರಮದ ಎಲ್ಲಾ ಉಸ್ತುವಾರಿಯನ್ನೂ ಸಮಿತಿ ವಹಿಸಿಕೊಳ್ಳಬೇಕು.

ನುಡಿಸಿರಿ ಉದ್ದೇಶ ಕನ್ನಡ ನಾಡು ನುಡಿಯ ರಕ್ಷಣೆಯೇ ಆಗಿದ್ದರೆ ಪ್ರಚಾರಕ್ಕಾಗಿ ಇಷ್ಟೆಲ್ಲಾ ಚಡಪಡಿಸೋ ಅಗತ್ಯ ಇಲ್ಲ. ವಿಚಾರ ಸಂಕಿರಣಗಳು, ಗೋಷ್ಠಿಗಳು ಸೇರಿದಂತೆ ಇಡೀ ಕಾರ್ಯಕ್ರಮ ಎಷ್ಟು ಪ್ರಚಾರವಾಗುವುದು ಅವಶ್ಯಕತೆ ಇದೆಯೋ ಅಷ್ಟು ಪ್ರಚಾರವನ್ನು ಅದು ಅದರ ಮೌಲ್ಯದ ಆಧಾರದ ಮೇಲೆ ಪಡೆದುಕೊಳ್ಳುತ್ತದೆ. ಒಂದು “ಒಳ್ಳೆಯ ಕಾರ್ಯಕ್ರಮ”ದ ಪ್ರಚಾರಕ್ಕಾಗಿ ಮಾಧ್ಯಮದ ವ್ಯವಸ್ಥೆಯನ್ನು ಭ್ರಷ್ಠಗೊಳಿಸುವುದು ಎಷ್ಟು ಸರಿ? ಎರಡು ಮೂರು ವರ್ಷಗಳ ಹಿಂದೆ ನುಡಿಸಿರಿಯ ಮರುದಿನ ಮಂಗಳೂರಿನ ಮಹಾರಾಜ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಪತ್ರಕರ್ತರಿಗಾಗಿ ರಾತ್ರಿ ಭೋಜನಾ ಕೂಟ ಏರ್ಪಡಿಸುತ್ತಿದ್ದರು. ಪತ್ರಕರ್ತರಿಗೆ ಬೇಕಾದಷ್ಟು ಗುಂಡು ತುಂಡು ಸರಬರಾಜಾಗುತ್ತಿತ್ತು. ಖುದ್ದು ಆಳ್ವರೇ ಈ ಗುಂಡು ತುಂಡು ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. (ಆಳ್ವರು ಮದ್ಯ ಸೇವಿಸುತ್ತಿರಲಿಲ್ಲ.) ನುಡಿಸಿರಿಯ ಮರುದಿನ ಈ ಪಾರ್ಟಿ ನಡೆಯುತ್ತಿದ್ದರಿಂದ ಇದನ್ನು ನಾವು ಒಂದಷ್ಟು ಪತ್ರಕರ್ತರು ತಮಾಷೆಗಾಗಿ “ಆಳ್ವಾಸ್ ಕುಡಿಸಿರಿ” ಎಂದು ಕರೆಯುತ್ತಿದ್ದೆವು. ಇಂತಹ ಪಾರ್ಟಿಗಳನ್ನು ಆಯೋಜನೆ ಮಾಡಿ ತನ್ನ ಕಾರ್ಯಕ್ರಮಕ್ಕೆ ಪ್ರಚಾರ ಪಡೆದುಕೊಳ್ಳುವುದಕ್ಕೆ ಏನನ್ನಬೇಕು? ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ಸಾಹಿತ್ಯ ಜಾತ್ರೆ ನಡೆಸುವುದೇ ಅಲ್ಲದೆ ಆ ಹಣದ ಪಾಲನ್ನು ಪತ್ರಕರ್ತರಿಗೆ ಮತ್ತು ಪತ್ರಿಕೆಗಳಿಗೆ ನೀಡುವುದು ಎಷ್ಟು ಸರಿ ?

ಆಳ್ವರು ಕೊರಗ ಮತ್ತು ದಲಿತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂಬುದು ಅಕ್ಷರಶ ನಿಜ. ಹಾಗೆಂದು ಒಂದಿಡೀ ಸಮುದಾಯವನ್ನು ಅವಮಾನಿಸುವ ಮತ್ತು ಅನಿಷ್ಠ ಪದ್ದತಿಗಳನ್ನೇ ಸಂಸ್ಕೃತಿ ಎಂದು ತೋರಿಸುವ ಹಕ್ಕು ಆಳ್ವರಿಗೆ ಇಲ್ಲ. ವರ್ತಮಾನ.ಕಾಮ್‌ನಲ್ಲಿ ನಾನು ಬರೆದ ಲೇಖನಕ್ಕೆ ಪ್ರತಿಯಾಗಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಎಂದು ಬರೆದವರು ಆಳ್ವರು ವೇದಿಕೆಯಲ್ಲಿ ಕೊರಗರ ಡೋಲಿನೊಂದಿಗೆ ಕುಣಿಯುವ ಫೋಟೋ ಪ್ರಸ್ತಾಪಿಸಿ ನಾನು ಹೇಳಿದ್ದು ಸುಳ್ಳು ಎಂದಿದ್ದಾರೆ. ಆದರೆ ಇದು ಅಸಾಂದರ್ಭಿಕ ಪೋಟೋ ಮತ್ತು ಅವರು ಸತ್ಯವನ್ನು ಮರೆಮಾಚಿ ಯಾವುದನ್ನೋ ಎಲ್ಲಿಯೋ ಪ್ರಸ್ತಾಪಿಸಿದ್ದಾರೆ. “ಆಳ್ವಾಸ್ ನುಡಿಸಿರಿ”ಯಲ್ಲಿ ಕೊರಗರನ್ನು ಮೆರವಣಿಗೆಯಲ್ಲಿ ಡೋಲು ಬಡಿಯಲು ಬಳಸಿ ವೇದಿಕೆಗೆ ಹತ್ತಲು ಬಿಡದೆ ಹೊರಗಡೆ ಕೂರಿಸಲಾಗಿತ್ತು. ಇದೊಂದು ರೀತಿಯಲ್ಲಿ ಅಜಲು ಪದ್ದತಿಯ ಪುನರಾವರ್ತನೆಯಷ್ಟೆ. ಆದರೆ ಅದಕ್ಕೆ ಸಮರ್ಥನೆಯಾಗಿ ಬಳಕೆಯಾಗಿರುವ ಫೋಟೋ “ಆಳ್ವಾಸ್ ದೀಪಾವಳಿ” ಕಾರ್ಯಕ್ರಮದ್ದು (ಪಕ್ಕದಲ್ಲಿಯ ಚಿತ್ರವನ್ನು ಮತ್ತೊಮ್ಮೆ ಗಮನಿಸಿ). ಅದು ಆಳ್ವರು ದಲಿತ ನಿಂದನೆ ಮಾಡಿದ್ದಾರೆ ಎಂದು ದಲಿತರು ಜಿಲ್ಲಾಧಿಕಾರಿಯನ್ನು ದೂರಿಕೊಂಡ ನಂತರ ನಡೆದ ದೀಪಾವಳಿ ಉತ್ಸವದ್ದು. ಹಾಗಾಗಿ ಆಳ್ವರ ಪರ ಬರೆದ ಅಥವ ಬರೆಸಲ್ಪಟ್ಟ ಲೇಖನ ಅಸಾಂದರ್ಭಿಕ ಸುಳ್ಳುಗಳ ಕಂತೆ ಮಾತ್ರವಲ್ಲ, ವಸ್ತುನಿಷ್ಟತೆ ಮತ್ತು ವಿಮರ್ಶಾಸ್ವಾತಂತ್ರ್ಯ ಕಳೆದುಕೊಂಡು ಆಳ್ವರ ಪರ ಪಕ್ಷಪಾತದಿಂದ ಕೂಡಿದೆ.

ಇನ್ನು, ಆಳ್ವರು ಮಂಗಳೂರಿನ ನೆಹರೂ ಮೈದಾನದಲ್ಲಿ ಹಿಂದೂ ಸಮಾಜೋತ್ಸವವನ್ನು ಸಂಘಟಿಸಿ “ಈ ದೇಶ ಹಿಂದೂಗಳಿಗೆ ಮಾತ್ರ ಸೇರಿದ್ದು. ಇಲ್ಲಿ ಹಿಂದೂಗಳಾಗಿ ಇರುವವರು ಅಥವಾ ಹಿಂದುತ್ವವನ್ನು ಒಪ್ಪಿಕೊಂಡವರು ಮಾತ್ರ ಬದುಕಬಹುದು” ಎಂದು ಯಾರಿಂದಲೋ ಭಾಷಣ ಮಾಡಿಸಿ ಹಿಂದೂ ಮುಸ್ಲಿಮರ ಮಧ್ಯೆ ಸೃಷ್ಟಿ ಮಾಡಿರುವ ಅಳಿಸಲಾಗದ ಕಂದಕ ತನ್ನ ಕಾಲೇಜಿನ ಆವರಣದಲ್ಲಿ ಇಫ್ತಾರ್ ಕೂಟ ಮಾಡಿದರೂ, ಮಸೀದಿ ಕಟ್ಟಿದರೂ ಸರಿ ಹೋಗುವಂತದ್ದಲ್ಲ.

ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳ ಮೇಲೆಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಸಂಚಾಲಕರಾಗಿದ್ದರು. ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು. ನಾವು ಅಂದಿನ ಕ್ರೀಡಾ ಉಪನ್ಯಾಸಕರ ಬಳಿ ಕೂಡಾ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೆವು. ವಿದ್ಯಾರ್ಥಿಗಳು ಅಲೋಶಿಯಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ರೀಡಾ ಕೂಟಕ್ಕೆ ಪ್ರಾಂಶುಪಾಲರ ಆದೇಶದಂತೆ ಹೊರಟಿದ್ದರು. ಶಿಸ್ತುಕ್ರಮ ಕೈಗೊಳ್ಳುವುದು ಪ್ರಾಂಶುಪಾಲರ ಕೆಲಸವೇ ಹೊರತು ಸಂಚಾಲಕರದ್ದಲ್ಲ.

ಡೊನೇಷನ್ ಹಣದಲ್ಲಿ ಅಥವಾ ಹಿಂದೂ ಸಮಾಜೋತ್ಸವದ ಸಂಘಟಕ ಸಾಹಿತ್ಯದ ಕಾರ್ಯಕ್ರಮ ಮಾಡೋದರಲ್ಲಿ ತಪ್ಪೇನು? ತಪ್ಪು ಏನೂ ಇಲ್ಲ. ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯಬೇಕು, ಈ ಸಮಾಜ ಜಾತ್ಯಾತೀತ ಮತ್ತು ಧರ್ಮಾತೀತವಾಗಿರಬೇಕು ಮತ್ತು ಈ ಸಮಾಜದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಮತ್ತು ಈ ನೆಲ ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಬಲವಾಗಿ ಪ್ರತಿಪಾದಿಸುವ ನನ್ನ ನೆಚ್ಚಿನ ಮೇಷ್ಟು ಅನಂತಮೂರ್ತಿಯವರು ಇಂತಹ ಕಾರ್ಯಕ್ರಮಕ್ಕೆ ಹೋಗುವುದು ಮಾತ್ರ ಆಕ್ಷೇಪಾರ್ಹ. ತೊಗಾಡಿಯಾ, ಕಾರಂತ, ಗುರೂಜಿಯಂತವರನ್ನು ಕರೆಸಿ ಭಾಷಣ ಮಾಡಿಸೋ ವ್ಯಕ್ತಿಯೇ ಅನಂತಮೂರ್ತಿ, ಬರಗೂರುರಂತವರನ್ನೂ ಕರೆಸಿ ಭಾಷಣ ಮಾಡಿಸುತ್ತಾರೆ ಎಂದರೆ ಮಾತ್ರ ನಮ್ಮ ಕನ್ನಡದ ಮನಸ್ಸಿಗೆ ನೋವಾಗುತ್ತದೆ. ಮೋಹನ ಆಳ್ವರು ಒರ್ವ ಉತ್ತಮ ಸಂಘಟಕ. ಆದರೆ ಡೆಮಾಕ್ರಟಿಕ್ ಆಗಿರುವ ಸಂಘಟಕ ಅಲ್ಲ. ಡೊನೇಷನ್ ಹಣದಲ್ಲಿ ತನಗೆ ಬೇಕಾದಂತೆ ಕಾರ್ಯಕ್ರಮ ನಡೆಸಿ ಅದನ್ನೇ ಕನ್ನಡ ಮನಸ್ಸುಗಳ ಕಾರ್ಯಕ್ರಮ ಎಂದರೆ ಒಪ್ಪಲು ಸಾಧ್ಯವಿಲ್ಲ. ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ.

ಪ್ರಜಾ ಸಮರ-6 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


1980ರಲ್ಲಿ ಆಂಧ್ರದಲ್ಲಿ ಪ್ರಜಾಸಮರ ದಳಂ (P.W.G.) ಎಂಬ ನಕ್ಸಲ್ ಸಂಘಟನೆಯನ್ನು ಹುಟ್ಟುಹಾಕಿದ ಕೊಂಡಪಲ್ಲಿ ಸೀತಾರಾಮಯ್ಯನವರಾಗಲಿ, ಅಥವಾ ಅವರ ಸಹಚರ ಕೆ.ಜಿ.ಸತ್ಯಮೂರ್ತಿಯಾಗಲಿ ಧಿಡೀರನೆ ನಕ್ಸಲ್ ಹೋರಾಟಕ್ಕೆ ದುಮುಕಿದವರಲ್ಲ. ಇವರಿಬ್ಬರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಕೊಂಡು 70 ರ ದಶಕದಿಂದ ಕಮ್ಯೂನಿಷ್ಟ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದು, ಪಕ್ಷ ವಿಭಜನೆಗೊಂಡಾಗ, ಚಾರು ಮುಜುಂದಾರ್ ನೇತೃತ್ವದ ಸಿ.ಪಿ.ಐ. (ಎಂ.ಎಲ್) ಬಣದ ಜೊತೆ ಗುರುತಿಸಿಕೊಂಡವರು. ತೆಲಂಗಾಣ ಪ್ರಾಂತ್ಯದ ರೈತರ, ಆದಿವಾಸಿಗಳ ಮತ್ತು ಕೂಲಿ ಕಾರ್ಮಿಕರ ಹೋರಾಟಗಳಿಗೆ ಕೈಜೋಡಿಸಿ ಜೊತೆ ಜೊತೆಯಲ್ಲಿ ಹೋರಾಡಿದವರು. ಮತ್ತು ಪಶ್ಚಿಮ ಬಂಗಾಳದಲ್ಲಿ ಪೊಲೀಸರಿಂದ ಹತ್ಯೆಯಾದ ತಮ್ಮ ನಾಯಕ ಚಾರು ಮುಜುಂದಾರ್ ಆದರ್ಶವನ್ನು ಎತ್ತಿ ಹಿಡಿಯಲು ಶಿಕ್ಷಕ ವೃತ್ತಿಯನ್ನು ತೊರೆದು 1972ರಲ್ಲಿ ನೇರವಾಗಿ ಹೋರಾಟದ ಕಣಕ್ಕೆ ಇಳಿದವರು.

ಕೊಂಡಪಲ್ಲಿ ಸೀತಾರಾಮಯ್ಯ ಕೃಷ್ಣಾ ಜಿಲ್ಲೆಯ ಲಿಂಗಾವರಂ ಎಂಬ ಗ್ರಾಮದ ಶ್ರೀಮಂತ ಕುಟುಂಬದಲ್ಲಿ ಜನಿಸಿ ನಂತರ ಜೊನ್ನಪಡು ಎಂಬ ಗ್ರಾಮದಲ್ಲಿ ಬೆಳದವರು. ಕೆ.ಜಿ.ಸತ್ಯಮೂರ್ತಿ ಸಹ ಇದೇ ಕೃಷ್ಣಾ ಜಿಲ್ಲೆಯ ಗಂಗಾವರಂ ಎಂಬ ಹಳ್ಳಿಯ ದಲಿತ ಕುಟುಂಬದಲ್ಲಿ ಜನಿಸಿದವರು. ಇಬ್ಬರೂ ವಾರಂಗಲ್ ಜಿಲ್ಲಾ ಕೇಂದ್ರದಲ್ಲಿದ್ದ ಪಾತಿಮಾ ಎಂಬ ಶಾಲೆಯಲ್ಲಿ ಶಿಕ್ಷಕರಾಗಿ ದುಡಿಯುತ್ತಾ ಎಂಡಪಂಥೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ಸೀತಾರಾಮಯ್ಯ ಹಿಂದಿ ಶಿಕ್ಷಕರಾಗಿದ್ದರೆ, ಕೆ.ಜಿ. ಸತ್ಯಮೂರ್ತಿ ಇಂಗ್ಲಿಷ್ ಶಿಕ್ಷರಾಗಿದ್ದರು. ಜೊತೆಗೆ ಶಿವಸಾಗರ ಎಂಬ ಕಾವ್ಯ ನಾಮದಲ್ಲಿ ಆಂಧ್ರದ ದಲಿತ ಲೋಕದ ನೋವು ಮತ್ತು ಅಸಮಾನತೆಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸುತ್ತಾ ಸತ್ಯಮೂರ್ತಿ, ಆ ಕಾಲದ ಆಂಧ್ರದ ಪ್ರಮುಖ ದಲಿತ ಕವಿಯಾಗಿ ಹೆಸರುವಾಸಿಯಾಗಿದ್ದರು.

ಕೊಂಡಪಲ್ಲಿ ಸೀತಾರಾಮಯ್ಯ ಚಾರುಮುಜಂದಾರ್‌ನಿಂದ ಪ್ರೇರಿತರಾಗಿದ್ದರೂ ಸಹ ನಕ್ಸಲ್ ಸಂಘಟನೆಯನ್ನು ವಿಭಿನ್ನವಾಗಿ ರೂಪಿಸಬೇಕೆಂದು ಬಯಸಿದ್ದರು. ದೀನ ದಲಿತರ ಮುಕ್ತಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ನಾಡಿನ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಬೇಕೆಂದು ಅವರು ಕನಸು ಕಂಡಿದ್ದರು. ಸೀತಾರಾಮಯ್ಯನವರಲ್ಲಿ ಇದ್ದ ಒಂದು ವಿಶಿಷ್ಟ ಗುಣವೆಂದರೆ, ಇತರರು ಯಾರೇ ಆಗಿರಲಿ ಯಾವುದೇ ರೀತಿಯ ಸಲಹೆ ಅಥವಾ ಅಭಿಪ್ರಾಯ ನೀಡಿದರೆ, ಅವುಗಳನ್ನು ಸಹನೆಯಿಂದ ಆಲಿಸುತ್ತಿದ್ದರು. ನಂತರ ತಮ್ಮ ವಿಚಾರಗಳನ್ನು ಅವರ ಮುಂದಿಟ್ಟು ಮನವೊಲಿಸುತ್ತಿದ್ದರು. ಕೊಂಡಪಲ್ಲಿ ಸೀತಾರಾಮಯ್ಯನವರ ಇಂತಹ ಗುಣವೇ ಅವರನ್ನು ದೇಶದ ನಕ್ಸಲ್ ಸಂಘಟನೆಯ ಮಹಾ ನಾಯಕನನ್ನಾಗಿ ರೂಪಿಸಿತು ಎಂದು ವರವರರಾವ್ ಅಭಿಪ್ರಾಯ ಪಟ್ಟಿದ್ದಾರೆ. ಅದು ಅಕ್ಷರಶಃ ನಿಜಕೂಡ ಹೌದು. ಕೊಂಡಪಲ್ಲಿಯವರ ಹೋರಾಟದ ಹೆಜ್ಜೆ ಗುರುತುಗಳನ್ನು ಅವಲೋಕಿಸುತ್ತಾ ಹೋದರೆ ಈ ಅಂಶ ಸತ್ಯವೆನಿಸುತ್ತದೆ.

ನಕ್ಸಲ್ ಸಂಘಟನೆಯನ್ನು ಭೂಗತವಾಗಿ ಸಜ್ಜುಗೊಳಿಸಬೇಕೆಂಬುದು ಚಾರು ಮುಜಂದಾರನ ಆಶಯ ಮತ್ತು ಗುರಿಯಾಗಿತ್ತು. ಈ ಕುರಿತು 1970ರಲ್ಲಿ ನಡೆದ ಸಿ.ಪಿ.ಐ. (ಎಂ.ಎಲ್.) ಸಭೆಯಲ್ಲೂ ಕೂಡ ಬಲವಾಗಿ ಪ್ರತಿಪಾತಿಸಿದ್ದ. ಆದರೆ, ಇದಕ್ಕೆ ಭಿನ್ನವಾಗಿ ಸೀತಾರಾಮಯ್ಯ ಆಂಧ್ರದಲ್ಲಿ ಬಹಿರಂಗವಾಗಿ ನಕ್ಸಲ್ ಸಂಘಟನೆಯನ್ನು ರೂಪಿಸತೊಡಗಿದರು. ಏಕೆಂದರೆ, ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಳಗೊಳ್ಳದ ಯಾವುದೇ ಹೋರಾಟ ಯಶಸ್ವಿಯಾಗುವುದಿಲ್ಲ ಎಂಬುದು ಅವರ ಧೃಡನಿಲುವಾಗಿತ್ತು. ಈ ಕಾರಣಕ್ಕಾಗಿ ಅವರು ವಾರಂಗಲ್‌ನ ಓರ್ವ ಇಂಜಿನಿಯರಿಂಗ್ ವಿಧ್ಯಾರ್ಥಿಯನ್ನು (ರಾಮರೆಡ್ಡಿ) ಮೂರು ತಿಂಗಳ ಕಾಲ ಮುಲ್ಲುಗು ಎಂಬ ಅರಣ್ಯ ಪ್ರದೇಶಕ್ಕೆ ಕಳುಹಿಸಿ, ಅಲ್ಲಿನ ಆದಿವಾಸಿಗಳ ಬಗ್ಗೆ ಅಧ್ಯಯನ ನಡೆಸಿ ಆದಿವಾಸಿಗಳ ಬದುಕು ಕುರಿತಂತೆ ಮಾಹಿತಿ ಕಲೆ ಹಾಕಿದ್ದರು. ತಾವು ಮುನ್ನಡೆಸುವ ಹೋರಾಟಕ್ಕೆ ಆಧಾರ ಸ್ಥಂಭವಾಗಬೇಕಾಗಿರುವ ಅನಕ್ಷರಸ್ಥ ಆದಿವಾಸಿಗಳು, ದಲಿತರು, ಬಡ ರೈತ ಮತ್ತು ಕೂಲಿಕಾರ್ಮಿಕರನ್ನು ತಲುಪಬೇಕಾದರೆ, ಭಾಷಣದಿಂದ ಅಥವಾ ಅವರೊಂದಿಗೆ ನಡೆಸುವ ಚರ್ಚೆಯೊಂದಿಗೆ ಸಾಧ್ಯವಿಲ್ಲ ಎಂಬುದುನ್ನು ಸೀತಾರಾಮಯ್ಯ ಅನುಭವದಿಂದ ಅರಿತಿದ್ದರು.

ಅನಕ್ಷರಸ್ಥರನ್ನು ತಲುಪಲು ಹಾಡು, ನೃತ್ಯ, ಬಯಲು ನಾಟಕವೇ ಸೂಕ್ತ ಎಂದು ತೀರ್ಮಾನಿಸಿ 1972ರಲ್ಲಿ “ಜನ ನಾಟ್ಯ ಮಂಡಲಿ” ಎಂಬ ಸಾಂಸ್ಕೃತಿಕ ಅಂಗ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆಯ ಮೂಲಕ ಬೆಳಕಿಗೆ ಬಂದ ಅದ್ಭುತ ಪ್ರತಿಭೆಯೇ ಗದ್ದಾರ್ ಎಂಬ ಜನಪ್ರಿಯ ಗಾಯಕ.

ಗುಮ್ಮುಡಿ ವಿಠಲರಾವ್ ಎಂಬ ಹೆಸರಿನ ದಲಿತ ಕುಟುಂಬದ ಈ ಜಾನಪದ ಕೋಗಿಲೆ 1949 ರಲ್ಲಿ ಮೇಡಕ್ ಜಿಲ್ಲೆಯ ಹಳ್ಳಿಯೊಂದರಿಂದ ಬಂದವರು. ಸೀತಾರಾಮಯ್ಯನವರ ಕರೆಗೆ ಓಗೊಟ್ಟು ಹೈದರಾಬಾದಿನ ತಮ್ಮ ಇಂಜಿನಿಯರಿಂಗ್ ವಿಧ್ಯಾಭ್ಯಾಸವನ್ನು ಅರ್ಧದಲ್ಲಿ ಕೈಬಿಟ್ಟು ಬಂದು ಜನನಾಟ್ಯ ಮಂಡಲಿಗೆ ಸೇರಿ ಅದಕ್ಕೆ ಉಸಿರಾದವರು. ನಾಡಿನ ಜ್ವಲಂತ ಸಮಸ್ಯೆಗಳನ್ನು, ಹಳ್ಳಿಗಾಡಿನ ಜನರ ನೋವುಗಳನ್ನು ಮತ್ತು ದಲಿತರ, ಶೋಷಿತ ಸಮುದಾಯದ ಹೆಣ್ಣುಮಕ್ಕಳ ಅವ್ಯಕ್ತ ಭಾವನೆಗಳೆಲ್ಲವನ್ನೂ ಹಾಡಾಗಿಸಿ ಆಂಧ್ರದ ಹಳ್ಳಿಗಾಡಿನ ಪ್ರತಿ ಮನೆ ಮತ್ತು ಮನಕ್ಕೂ ನೇರವಾಗಿ ತಲುಪಿದ ಅಪ್ರತಿಮ ಗಾಯಕ ಮತ್ತು ನೃತ್ಯಗಾರ ಈ ಗದ್ದಾರ್. ಇವರು ಹಾಡುತಿದ್ದ ಸತ್ಯಮೂರ್ತಿಯವರ ಕವಿತೆಗಳು, ಶ್ರೀ.ಶ್ರೀ.ಯವರ ಬಂಡಾಯದ ಕಾವ್ಯದ ಸಾಲುಗಳು ಹಾಗೂ ಆ ಕ್ಷಣಕ್ಕೆ ತಾವೇ ಕಟ್ಟಿ ಹಾಡುತಿದ್ದ ಹಳ್ಳಿಗರ ಮತ್ತು ಆದಿವಾಸಿಗಳ ನೋವಿನ ಕಥನ ಗೀತೆಗಳು ಮತ್ತು ಅವರು ಮಾಡುತಿದ್ದ ನೃತ್ಯ ಇವೆಲ್ಲವೂ ಪರೋಕ್ಸವಾಗಿ ಆಂಧ್ರ ಪ್ರದೇಶದಲ್ಲಿ ನಕ್ಸಲ್ ಹೋರಾಟ ಜನ ಸಾಮಾನ್ಯರ ನಡುವೆ ಕಾಡ್ಗಿಚ್ಚಿನಂತೆ ಹರಡಲು ಸಹಾಕಾರಿಯಾಯಿತು. ಭಾಷಣದಲ್ಲಿ ನಾಯಕರು ಹೇಳಬೇಕಾದ ಸಂಗತಿಗಳನ್ನು ಗದ್ದಾರ್ ಹಾಡಿನ ಮೂಲಕ ಸರಳವಾಗಿ ತಲುಪಿಸಿಬಿಡುತ್ತಿದ್ದರು. ದಣಿವರಿಯದ ಅವರ ಕಳೆದ ನಾಲ್ಕು ದಶಕದ ಹಾಡು ನೃತ್ಯದ ಅಭಿಯಾನ ಈಗಲೂ ಮುಂದುವರಿದಿದೆ. (ಗದ್ದಾರ್ ಇತ್ತೀಚೆಗೆ ಪ್ರತ್ಯೇಕ ತೆಲಂಗಾಣ ಹೋರಾಟದ ಜೊತೆ ಕೈ ಜೋಡಿಸಿದ್ದು ಚಳವಳಿಯ ನಾಯಕ ಟಿ.ಆರ್. ಚಂದ್ರಶೇಖರ್ ರಾವ್ ಜೊತೆ ಹೋರಾಟ ನಡೆಸುತಿದ್ದಾರೆ.)

ತಮ್ಮ ಹೋರಾಟಕ್ಕೆ ಸಾಂಸ್ಕೃತಿಕ ಸಂಘಟನೆಯ ಜೊತೆಗೆ ಯುವಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ ಎಂಬ ಸಂಘಟನೆಯನ್ನು ಸೀತಾರಾಮಯ್ಯ ಹುಟ್ಟುಹಾಕಿದರು. ಏಕಕಾಲದಲ್ಲಿ ನಕ್ಸಲ್ ಚಟುವಟಿಕೆಯನ್ನು ಭೂಗತವಾಗಿ ಮತ್ತು ಬಹಿರಂಗವಾಗಿ ಮುನ್ನೆಡೆಸುವುದು ಅವರ ಗುರಿಯಾಗಿತ್ತು. ಆ ವೇಳೆಗಾಗಲೇ ಬಲಿಷ್ಟ ಜಮೀನ್ದಾರರು ಮತ್ತು ಅವರ ಬೆಂಬಲಿಗರಾಗಿ ನಿಂತಿರುವ ಪೊಲೀಸರ ವಿರುದ್ಧ ಹೋರಾಡಲು ಕೇವಲ ಬಿಲ್ಲು ಬಾಣಗಳು ಸಾಲುವುದಿಲ್ಲ ಎಂಬುದನ್ನು ಶ್ರೀಕಾಕುಳಂ ಜಿಲ್ಲೆಯ ಘಟನೆಗಳ ಅನುಭವದಿಂದ ಅರಿತಿದ್ದ ಸೀತಾರಾಮಯ್ಯ ಬಂದೂಕಗಳ ಸಂಗ್ರಹಕ್ಕೂ ಸಹ ಮುಂದಾದರು. ಇದಕ್ಕೆ ಬೇಕಾದ ಹಣಕ್ಕಾಗಿ ಜಮೀನ್ದಾರರ ಮತ್ತು ಹಣದ ಲೇವಾದೇವಿದಾರರ ಮನೆಗಳಿಗೆ ಕಾರ್ಯಕರ್ತರನ್ನು ನುಗ್ಗಿಸುವುದರ ಮೂಲಕ ಅಪಾರ ಸಂಪತ್ತನ್ನು ದೋಚತೊಡಗಿದರು.

ಸೀತಾರಾಮಯ್ಯನವರ ಇಂತಹ ಕ್ರಾಂತಿಕಾರಕ ಧೋರಣೆಗಳು ಆಂಧ್ರಪ್ರದೇಶದಲ್ಲಿ ನಕ್ಸಲ್ ಸಂಘಟನೆಗೆ ಅಪಾರ ಯುವ ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ಹೈದರಾಬಾದ್‌ನ ಉಸ್ಮಾನಿಯಾ ವಿ.ವಿ. ಮತ್ತು ವಾರಂಗಲ್ ಪಟ್ಟಣದ ರೀಜನಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮಾಹಿತಿ ನೀಡದೆ ಅರ್ಧಕ್ಕೆ ವಿದ್ಯಾಭ್ಯಾಸ ತೊರೆದು ನಕ್ಸಲ್ ಹೋರಾಟಕ್ಕೆ ದುಮುಕಿದರು. ಕೆಲವರು ಬಂದೂಕು ಮತ್ತು ಗೆರಿಲ್ಲಾ ಯುದ್ಧ ತಂತ್ರದ ತರಬೇತಿಗಾಗಿ ಗುಂಟೂರು, ತಿರುಪತಿ, ವಿಶಾಖಪಟ್ಟಣ ಮುಂತಾದ ಕಡೆ ಅರಣ್ಯ ಪ್ರದೇಶಗಳಲ್ಲಿ ಭೂಗತರಾದರು.

1973-74 ರ ವೇಳೆಗೆ ಆಂಧ್ರದಲ್ಲಿ ನಕ್ಸಲ್ ಸಂಘಟನೆ ಬಿಸಿರಕ್ತದ ವಿದ್ಯಾವಂತ ಯುವಕರಿಂದ ಕೂಡಿದ ಬಲಿಷ್ಟ ಸಂಘಟನೆಯಾಗಿ ಹೊರಹೊಮ್ಮಿತ್ತು. 1975ರ ಪೆಬ್ರವರಿ ತಿಂಗಳಿನಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಬೃಹತ್ ಯುವ ಸಮಾವೇಶದಲ್ಲಿ ಸಾವಿರಾರು ಯುವಕರು ಪಾಲ್ಗೊಂಡು ಸರ್ಕಾರದ ಕೆಂಗಣ್ಣಿಗೆ ಗುರಿಯಾದರು. ಅಮಾಯಕ ಆದಿವಾಸಿಗಳನ್ನು ಮತ್ತು ಬಡ ರೈತ ಹಾಗೂ ಕೂಲಿಕಾರ್ಮಿಕರನ್ನು ಶೋಷಣೆಗೆ ಒಳಪಡಿಸಿರುವ ಅರಣ್ಯಾಧಿಕಾರಿಗಳು, ಜಮೀನ್ದಾರರು, ಬಡ್ಡಿ ಹಣದ ಮೂಲಕ ಬಡವರನ್ನು ಸುಲಿಯುತ್ತಿರುವ ಲೇವಾದೇವಿದಾರರ ಇವರುಗಳ ಮೇಲೆ ನೇರ ಕ್ರಮ ಜರುಗಿಸಲು ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಇದೇ ವೇಳೆಗೆ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿಯೆದ್ದು ಪ್ರಧಾನಿಯಾಗಿದ್ದ  ಇಂದಿರಾಗಾಂಧಿ ನೇತೃತ್ವ ಕಾಂಗ್ರೇಸ್ ಸರ್ಕಾರದಿಂದ ತನ್ನ ಅಧಿಕಾರದ ಗದ್ದುಗೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 1975ರ ಜುಲೈ ತಿಂಗಳಿನಲ್ಲಿ ರಾಷ್ಟ್ರಾದ್ಯಂತ ತುರ್ತುಪರಿಸ್ಥಿತಿ ಜಾರಿಗೊಳಿಸಿ, ನಾಗರೀಕರ ಹಕ್ಕುಗಳ ಮೇಲೆ ನಿರ್ಭಂಧ ಹೇರಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವ್ಯವಸ್ಥೆಗೆ ಇದು ಇನ್ನೊಂದು ರೀತಿಯಲ್ಲಿ ಅನೂಕೂಲವಾಗಿ ಪರಿಣಮಿಸಿತು. ಆಂಧ್ರ ಪ್ರದೇಶದಲ್ಲಿ ಸರ್ಕಾರದ ವಕ್ರದೃಷ್ಟಿಗೆ ಗುರಿಯಾಗಿದ್ದ ಎಲ್ಲಾ ಪ್ರಗತಿಪರ ಸಂಘಟನೆಗಳ ಮೇಲೆ ನಿಷೇಧ ಹೇರಿ ನಾಯಕರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಆಂಧ್ರದ ರ್‍ಯಾಡಿಕಲ್ ಯೂತ್ ಸಂಘಟನೆಯ ನೂರಾರು ಯುವಕರನ್ನು ದರೋಡೆ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ಬಂಧಿಸಲಾಯಿತು. ಸಂಘಟನೆಯ ಮುಂಚೂಣಿಯಲ್ಲಿದ್ದ ಯುವ ನಾಯಕರಾದ ಜನಾರ್ಧನ್, ಮುರಳಿ, ಆನಂದ್ ಮತ್ತು ಸುಧಾಕರ್ ಎಂಬ ನಾಲ್ವರು ವಿದ್ಯಾರ್ಥಿಗಳನ್ನು ನಿರ್ಜನ ಅರಣ್ಯಕ್ಕೆ ಕರೆದೊಯ್ದ ಆಂಧ್ರ ಪೊಲೀಸರು, ಎನ್ಕೌಂಟರ್ ನೆಪದಲ್ಲಿ ಗುಂಡಿಕ್ಕಿ ಕೊಂದರು. ಇಂತಹ ಅಮಾನುಷ ನರಮೇಧದ ಮೂಲಕ ಆಂಧ್ರ ಪೊಲೀಸರು ತಮಗೆ ಅರಿವಿಲ್ಲದಂತೆ ಆಂಧ್ರದ ನೆಲದಲ್ಲಿ ಇವತ್ತಿಗೂ ತಾಂಡವವಾಡುತ್ತಿರುವ ನಕ್ಸಲ್ ಹೋರಾಟದ ರಕ್ತ ಚರಿತ್ರೆಗೆ ಮುನ್ನುಡಿ ಬರೆದಿದ್ದರು. ಈ ಘಟನೆ ಆಂಧ್ರದಲ್ಲಿ  ಕೊಂಡಪಲ್ಲಿ ಸೀತಾರಾಮಯ್ಯ, ಕೆ.ಜಿ. ಸತ್ಯಮೂರ್ತಿ ಮತ್ತು ಬಂಗಾಳದ ಸುನೀತ್ ಕುಮಾರ್ ಘೋಷ್‌ರವರನ್ನು ಸಹಜವಾಗಿ ಕೆರಳಿಸಿತು. ಈವರೆಗೆ ಕೇವಲ ಪಟ್ಟಭದ್ರ ಹಿತಾಶಕ್ತಿಗಳನ್ನು ಮಾತ್ರ ತಮ್ಮ ಹಿಟ್ಲಿಸ್ಟ್ ಗುರಿಯಾಗಿರಿಸಿಕೊಂಡಿದ್ದ ಅವರು ಈ ಪಟ್ಟಿಗೆ ಆಂಧ್ರದ ಪೊಲೀಸರನ್ನು ಸೇರಿಸಿದರು.

ಈ ನಡುವೆ ಸಂಘಟನೆಗೆ ಶಸ್ತ್ರಾಸಗಳನ್ನು ಖರೀದಿಸಲು ಮಹಾರಾಷ್ಟ್ರಕ್ಕೆ ತೆರಳಿದ್ದ ಸೀತಾರಾಮಯ್ಯ ಅಪಾರ ಮದ್ದುಗುಂಡು, ಸ್ಪೋಟಕ ಸಾಮಾಗ್ರಿಗಳು ಮತ್ತು ಬಂದೂಕುಗಳನ್ನು ಸಂಗ್ರಹಿಸಿಕೊಂಡು ಆಂಧ್ರಕ್ಕೆ ವಾಪಾಸಾಗುತಿದ್ದ ವೇಳೆ 1976ರ ಏಪ್ರಿಲ್ 26ರಂದು ನಾಗಪುರ ಪೊಲೀಸರ ಕೈಗೆ ವಾಹನ ಸಮೇತ ಸಿಕ್ಕಿಬಿದ್ದರು. ಮೂರು ತಿಂಗಳ ನಂತರ ಜಾಮೀನಿನ ಮೇಲೆ ಬಂಧನದಿಂದ ಬಿಡುಗಡೆಯಾದ ಅವರು ಪ್ರಥಮ ಬಾರಿಗೆ ಭೂಗತರಾಗುವ ಮೂಲಕ ನಕ್ಸಲ್ ಸಂಘಟನೆಯನ್ನು ಮುನ್ನಡೆಸತೊಡಗಿದರು. 1978ರಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತುಪರಿಸ್ಥಿತಿಯನ್ನು ತೆರವುಗೊಳಿಸಿದ ನಂತರ, ಅದೇ ವರ್ಷ ಕೊಂಡಪಲ್ಲಿ ಸೀತಾರಾಮಯ್ಯ ಜನನಾಟ್ಯಮಂಡಲಿ ಮತ್ತು ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ ಜೊತೆಗೆ ರ್‍ಯಾಡಿಕಲ್ ಯೂತ್ ಲೀಗ್ ಎಂಬ ಮತ್ತೊಂದು ಸಂಘಟನೆಯನ್ನು ಹುಟ್ಟು ಹಾಕಿ ಈ ಮೂರು ಸಂಘಟನೆಗಳನ್ನು ಸಿ.ಪಿ.ಐ. (ಎಂ.ಎಲ್) ಎಂಬ ಮಾತೃ ಸಂಘಟನೆಯ ಮೂಲಕ ಹೋರಾಟದ ಹಾದಿಯಲ್ಲಿ ಕೊಂಡೊಯ್ಯಲು ನಿರ್ಧರಿಸಿದರು.

ವಿದ್ಯಾರ್ಥಿಗಳನ್ನು ಬೇಸಿಗೆ ರಜಾದಿನಗಳಲ್ಲಿ ಗುಡ್ಡ ಗಾಡು ಪ್ರದೇಶದ ಆದಿವಾಸಿಗಳ ಹಾಡಿಗಳಿಗೆ (ಗ್ರಾಮ) ಮತ್ತು ಅರಣ್ಯದ ಅಂಚಿನ ಹಳ್ಳಿಗಾಡಿನಲ್ಲಿ ವಾಸಿಸುತಿದ್ದ ರೈತರು ಮತ್ತು ಕೂಲಿ ಕಾರ್ಮಿಕರ ಬಳಿ ಕಳುಹಿಸಿ ಅವರ ಜೊತೆ ವಾಸಿಸುವಂತೆ ಪ್ರೊತ್ಸಾಹಿಸಿದರು. ವ್ಯವಸ್ಥೆಯ ಕ್ರೌರ್ಯದ ಮುಖಗಳನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಲು ಮಾರ್ಗದರ್ಶನ ನೀಡಿದರು. ಜೊತೆಗೆ ಸಂಘಟನೆಗೆ ಮತ್ತು ಹೋರಾಟಕ್ಕೆ ಆಸಕ್ತಿ ತೋರಿದ ಯುವಕರ ಮಾಹಿತಿಯನ್ನು ಕಲೆ ಹಾಕತೊಡಗಿದರು. ಅವರ ಈ ಆಲೋಚನೆ ನಿರೀಕ್ಷೆಗೂ ಮೀರಿ ಫಲಪ್ರದವಾಯಿತು. ಕೇವಲ ನಗರ, ಪಟ್ಟಣ ಮೂಲದ ವಿದ್ಯಾರ್ಥಿಗಳನ್ನು ಒಳಗೊಂಡಿದ್ದ ನಕ್ಸಲ್ ಸಂಘಟನೆಗೆ ಹಳ್ಳಿಗಾಡಿನ ಯುವಕರು, ಆದಿವಾಸಿಗಳು ಸೇರಿದ ನಂತರ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ (1978ರಿಂದ 2003ರವರೆಗೆ) ಆಂಧ್ರದ ನೆಲ ನಕ್ಸಲ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು.

(ಮುಂದುವರಿಯುವುದು)

ಕನ್ನಡ ಸುದ್ದಿ ವಾಹಿನಿಗಳ ತನಿಖಾ ವರದಿಗಳ ನೈತಿಕತೆಯೆ ಪ್ರಶ್ನಾರ್ಹವಾದಾಗ…


– ಡಾ.ಅಶೋಕ್. ಕೆ.ಆರ್.


 

ಮಹಾಲಯ ಅಮಾವಾಸೆಗೆಂದು ಶನಿವಾರ ಊರು ತಲುಪಿ ಕನ್ನಡದ ಸುದ್ದಿವಾಹಿನಿಗಳನ್ನು ನೋಡೋಣವೆಂದು ಚಾನೆಲ್ಲನ್ನು ಬದಲಿಸುತ್ತ ಕುಳಿತಾಗ ನಟಿ ಹೇಮಾಶ್ರಿಯ ಸಾವಿನ ಸುತ್ತ ಗೋಜಲು–ಗೊಂದಲಗಳನ್ನು ನಿರ್ಮಿಸುವಲ್ಲಿ ಎಲ್ಲಾ ವಾಹಿನಿಗಳೂ ಪೈಪೋಟಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವು. ‘ಅಯ್ಯೋ! ಮೂರು ದಿನದಿಂದ ಎಲ್ಲಾ ಚಾನೆಲ್ಲಿನಲ್ಲೂ ಇದೇ ಸುದ್ದಿ. ಸತ್ತೋಳ ಬಗ್ಗೆ ನಿಜವೋ–ಸುಳ್ಳೋ ಬೇಡದ ಮಾತನ್ನೆಲ್ಲಾ ಆಡುತ್ತಿದ್ದಾರೆ’ ಎಂದರು ಮನೆಯವರು. ಈ ಸುದ್ದಿ ವಾಹಿನಿಗಳ ಗೋಳೇ ಇಷ್ಟು ಎಂದುಕೊಳ್ಳುತ್ತಾ ಚಾನೆಲ್ ಬದಲಿಸಿದೆ. ಮಾರನೇ ದಿನ ಮತ್ತೊಂದು ‘ಪ್ರಹಸನಕ್ಕೆ’ ಕನ್ನಡ ವಾಹಿನಿಗಳು ಸಿದ್ಧಗೊಳ್ಳುತ್ತಿರಬಹುದೆಂಬ ಯಾವುದೇ ಸೂಚನೆಯಿಲ್ಲದೆ ಭಾನುವಾರ ’ಪಬ್ಲಿಕ್ ಟಿವಿ’  ’ಸ್ಟಿಂಗ್’ ಮಾಡಿತು!!

ಸ್ವಾಮಿಯ ಕಳ್ಳ ಹೋರಾಟದ ಕಥೆ:
ಯಾವುದೇ ಚಳುವಳಿಯಲ್ಲಿ ಪಾಲ್ಗೊಂಡ ಹೋರಾಟಗಾರರ ನಡುವೆ ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಯನ್ನೇ ಪ್ರಮುಖವಾಗಿಸಿಕೊಂಡವರು ಇದ್ದೇ ಇರುತ್ತಾರೆ. ಅವರನ್ನು ಗುರುತಿಸಿ ಚಳುವಳಿಯಿಂದ ಅವರನ್ನು ಹೊರಹಾಕುವ ಅಥವಾ ಅವರನ್ನು ಸರಿದಾರಿಗೆ ತರುವ ಜವಾಬುದಾರಿ ಆ ಚಳುವಳಿಯ ಮುಖಂಡರದು. ಮುಖಂಡರೇ ಲೋಭಿಯಾಗಿಬಿಟ್ಟಿದ್ದರೆ? ಆ ಮುಖಂಡನ ಹಿಂದಿರುವ ಜನರೇ ಮುಖಂಡನನ್ನು ಚಳುವಳಿಯಿಂದ ದೂರ ಸರಿಸಿ ಹೋರಾಟ ಮುಂದುವರಿಸಬೇಕಷ್ಟೇ. ತತ್ವಾಧಾರಿತ ಹೋರಾಟಗಾರರ ಉಪಸ್ಥಿತಿಯಲ್ಲಿ ಮುಖಂಡನೊಬ್ಬನ ಆಗಮನ – ನಿರ್ಗಮನದಿಂದ ಚಳುವಳಿ ವಿಚಲಿತಗೊಳ್ಳಲಾರದು; ಕೊಂಚ ಹಿನ್ನಡೆ ಅನುಭವಿಸುವುದು ಸ್ವಾಭಾವಿಕವಾದರೂ ಮಂದಡಿಯಿಡಲು ಹೆಚ್ಚು ಸಮಯ ತೆಗೆದುಕೊಳ್ಳಲಾರದು. ನಿತ್ಯಾನಂದನ ವಿರುದ್ಧದ ಹೋರಾಟದ ಮೂಲಕ ದೃಶ್ಯ ಮಾಧ್ಯಮಗಳ ಮುಖಾಂತರವೇ ಪ್ರಸಿದ್ಧಿಗೆ ಬಂದ ಕಾಳಿ ಸ್ವಾಮಿ[ಋಷಿಕುಮಾರ ಸ್ವಾಮಿ] ತನ್ನ ಮಾಜಿ ‘ಶಿಷ್ಯ’ರ ಮೂಲಕ ತನ್ನ ನಿಜರೂಪದ ದರ್ಶನ ಮಾಡಿಸಿದ್ದಾನೆ! ಮಾಜಿ ಶಿಷ್ಯರು ಪಬ್ಲಿಕ್ ಟಿವಿಯನ್ನು ವೇದಿಕೆಯಾಗಿ ಉಪಯೋಗಿಸಿಕೊಂಡು ಕಪಟ ಸ್ವಾಮಿಯೊಬ್ಬನ ಅಸಲಿ ಮುಖವನ್ನು, ಆತನ ಧನದಾಹವನ್ನು ಅನಾವರಣಗೊಳಿಸಿ ಸ್ವಾಮೀಜಿಯ ‘ಸಮಾಜ ಪರ’ ಕಾಳಜಿಗಳನ್ನು ನೈಜವೆಂದೇ ನಂಬಿದ್ದ ಸಹಚರರಿಗೆ, ಹಿಂಬಾಲಕರಿಗೆ ಅಘಾತವುಂಟುಮಾಡಿದ್ದಾರೆ.

ಮಾಜಿ ಶಿಷ್ಯರು ಸ್ವಾಮೀಜಿಯ ದುರುಳ ಮುಖವನ್ನು ಅನಾವರಣಗೊಳಿಸಲು ಪಟ್ಟ ಶ್ರಮ ಮತ್ತು ಪಬ್ಲಿಕ್ ವಾಹಿನಿ ಅದನ್ನು ಪ್ರಸಾರ ಮಾಡಿದ್ದು ಎರಡೂ ಶ್ಲಾಘನೀಯವೇ. ಚಳುವಳಿಗಳನ್ನು ಅನೀತಿವಂತರ ದೆಸೆಯಿಂದ ಹಾಳಾಗುವುದನ್ನು ತಪ್ಪಿಸಲು ಸಹಕಾರಿಯಾಗುವಂತಹ ಸಂಗತಿಯೂ ಹೌದು. ಆದರೆ ಇಂಥದೊಂದು ವರದಿ ಮತ್ತದರ ಪ್ರಸಾರದ ವಿಷಯದಲ್ಲಿ ದೃಶ್ಯಮಾಧ್ಯಮಗಳು ನಡೆದುಕೊಂಡ ರೀತಿ ಸರಿಯೇ? ಮಾಧ್ಯಮದವರೇ ಉತ್ತರಿಸಬೇಕು. ಇಂಥಹ ವರದಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾದ ಮಾಧ್ಯಮ ಮುಖ್ಯಸ್ಥರೇ ಎಡವುತ್ತಿದ್ದಾರೆಯೇ? ಒಂದು ಘಂಟೆಯ ಚರ್ಚೆಯಲ್ಲಿ, ನಂತರ ದಿನಕ್ಕತ್ತು ನಿಮಿಷ ಆ ಘಟನೆಯ ಫಾಲೋಅಪ್ ನಲ್ಲಿ ಮುಗಿಯಬೇಕಿದ್ದ ವರದಿಯನ್ನು ಒಂದಲ್ಲ ಎರಡಲ್ಲ ಮೂರು ದಿನ ಸತತವಾಗಿ ಜಗ್ಗಾಡಿದ ಉದ್ದಿಶ್ಯವೇನು ಎಂಬ ಸಂಶಯ ನೋಡುಗನಲ್ಲಿ ಮೂಡುವುದು ಸಹಜವಲ್ಲವೇ?

ಮೊದಲ ದಿನ ಪಬ್ಲಿಕ್ ಟಿವಿಯಲ್ಲಿ, ನಂತರ ಇತರ ವಾಹಿನಿಗಳಲ್ಲಿ ಸತತವಾಗಿ ಸ್ವಾಮಿಯ ಬಗ್ಗೆಯೇ ಚರ್ಚೆ ನಡೆಯಿತು. ಹೋಗಲಿ, ಕರ್ನಾಟಕದಲ್ಲಿ ಯಾವ ರೀತಿಯ ಸಾಮಾಜಿಕ ಸಮಸ್ಯೆಗಳೂ ಇಲ್ಲ, ಇರುವುದಿದೊಂದೇ ಸಮಸ್ಯೆ ಎಂಬ ಭಾವನೆ ಮಾಧ್ಯಮದವರಿಗಿದ್ದರೆ ಕೊನೇ ಪಕ್ಷ ಚರ್ಚೆಯ ಸ್ವರೂಪವನ್ನಾದರೂ ಸರಿದಿಕ್ಕಿನಲ್ಲಿಡಬೇಕಿತ್ತಲ್ಲವೇ? ಈ ಕಳ್ಳ ಸ್ವಾಮಿಯ ‘ಡೀಲ್’ ಚಳುವಳಿಗಳ ನೆಪದಲ್ಲಿ ದೇಶದಲ್ಲಿ – ರಾಜ್ಯದಲ್ಲಿ ಸ್ವಸ್ವಾರ್ಥದಿಂದಾಗಿ ಕುಗ್ಗಿ ಹೋದ ಚಳುವಳಿಗಳ ವಿಮರ್ಶೆ ನಡೆದಿದ್ದರೆ ನೈಜ ಕಳಕಳಿಯ ಇಂದಿನ ಹೋರಾಟಗಾರರು ತಮ್ಮ ಸಂಗಡಿಗರ ಬಗ್ಗೆ ಮುಖಂಡರ ಬಗ್ಗೆ ಎಚ್ಚರವಹಿಸಿ ಚಳುವಳಿಗಳ ಬಲ ಕುಗ್ಗದಂತೆ ಜಾಗ್ರತವಹಿಸಲು ಸಹಕಾರಿಯಾಗುತ್ತಿತ್ತೇನೋ? ಆದರೆ ನಡೆದ ಚರ್ಚೆಗಳು ಸ್ವಾಮಿಯ ‘ಪೂರ್ವಜನ್ಮದ’ ವೈಯಕ್ತಿಕ ವಿಷಯಗಳೆಡೆಗೇ ಹೆಚ್ಚೆಚ್ಚು ಕೇಂದ್ರೀಕೃತಗೊಳ್ಳುತ್ತಾ ಸಾಗಿ ಸ್ವಾಮೀಜಿಯ ವಿರುದ್ಧ ದೋಷಾರೋಪಣೆ ಮಾಡಿದವರಲ್ಲೂ ಯಾವುದೋ ವೈಯಕ್ತಿಕ ಹಿತಾಸಕ್ತಿ ಇದ್ದಿರಬಹುದು ಎಂಬ ಅನುಮಾನ ಮೂಡಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾಗಿವೆ. ಸ್ವಾಮೀಜಿಯ ಮದುವೆ – ಮಕ್ಕಳು, ನಾಟ್ಯ, ನಾಟಕ, ಸಿನಿಮಾದ ಸಂಗತಿಗಳನ್ನೇ ಅಗತ್ಯಕ್ಕಿಂತ ಹೆಚ್ಚಾಗಿ ವೈಭವೀಕರಿಸಿದ ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಸಂಶಯ ಹುಟ್ಟುತ್ತದೆ. ಕೆಲವು ಮಾಧ್ಯಮಗಳು ವಿರುದ್ಧವಾಗಿ, ಕೆಲವು ಮಾಧ್ಯಮಗಳು ಸ್ವಾಮಿಯ ಪರವಾಗಿ ನಡೆಸಿದ ಕಾರ್ಯಕ್ರಮಗಳು ಪ್ರತಿಯೊಂದೂ ವಾಹಿನಿಗೂ ಅಥವಾ ಅದರ ಒಡೆಯರಿಗೂ ‘ಹಿಡನ್ ಅಜೆಂಡಾ’ ಇರಬಹುದೆಂಬ ಭಾವ ಮೂಡಿಸುತ್ತದೆ.

ಸುದ್ದಿ ಸಂಗ್ರಹ, ಅದರ ನೈಜತೆಯ ಜೊತೆಜೊತೆಗೆ ಅದನ್ನು ಪ್ರಸ್ತುತಪಡಿಸುವ ವಿಧಾನವೂ ಮುಖ್ಯವೆಂಬ ಅಂಶ ಪತ್ರಿಕೋದ್ಯಮದಲ್ಲೇ ಈಸುತ್ತಿರುವವರಿಗೆ ತಿಳಿಯಲಿಲ್ಲವೇ? ಇಂಥ ಕೆಟ್ಟ ಪ್ರಸ್ತುತಿಯ ವರದಿಗಳನ್ನು ನಾಟಕದಂತೆ, ಸಿನಿಮಾದಂತೆ ನೋಡುತ್ತ ‘ಆನಂದಿಸುವ’, ವಾಹಿನಿಗಳ ಟಿಆರ್‌ಪಿ ಹೆಚ್ಚಿಸಿ ಇಂಥಹುದೇ ಕಾರ್ಯಕ್ರಮಗಳು ಮೂಡಿಬರಲು ತನ್ನ ಕೊಡುಗೆ ನೀಡುತ್ತಿರುವ ನೋಡುಗನ ಪಾತ್ರವನ್ನೂ ಇಲ್ಲಿ ಮರೆಯಬಾರದು. ಸಾಮಾಜಿಕ ಪ್ರಾಮುಖ್ಯತೆಯ ವರದಿಯೊಂದನ್ನು ವೈಯಕ್ತಿಕ ಟೀಕೆಯ ಮಟ್ಟಕ್ಕೆ ಇಳಿಸಿಬಿಡುವ ಇಂಥ ವರದಿಗಾರಿಕೆಗಳು ದೃಶ್ಯ ಮಾಧ್ಯಮದ ಮೇಲೆ ನಿಯಂತ್ರಣ ಹೇರಬೇಕೆಂಬ ಧ್ವನಿಗೆ ಮತ್ತಷ್ಟು ಬಲ ನೀಡುವುದರಲ್ಲಿ ಸಂಶಯವಿಲ್ಲ.