Monthly Archives: October 2012

ಹುಡುಗಿ ಅಪರಾತ್ರಿ ಅಲೆದಾಟಕ್ಕೆ ಹೋದರೆ ಏನಾಗುತ್ತೆ?

– ಬಿ.ಎನ್. ಪಲ್ಲವಿ

ಕನ್ನಡದ ಅಗ್ರಮಾನ್ಯ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯಲ್ಲಿ ಇಂದು ಒಂದು ಕಾರ್ಟೂನ್ ಪ್ರಕಟವಾಗಿದೆ. ಪ್ರಕಾಶ್ ಶೆಟ್ಟಿಯವರ ಕಾರ್ಟೂನ್ ಹೀಗಿದೆ – ‘ಹುಡುಗಿಯರು ಅಪರಾತ್ರಿಗೆ ಅಲೆದಾಟಕ್ಕೆ ಹೋದರೆ ಏನಾಗುತ್ತದೆ ಎಂಬುದರ ಬಗ್ಗೆಯೂ ಇಲ್ಲಿ ಪಾಠ ಕಲಿಸುತ್ತಾರೆ ಅಂದಾಗಾಯ್ತು!’ ಎಂದು ದಿನಪತ್ರಿಕೆ ಕೈಯಲ್ಲಿ ಹಿಡಿದ ಪ್ರಜೆ ಮಾತನಾಡುತ್ತಾನೆ. ಪಕ್ಕದಲ್ಲೇ ಒಬ್ಬ ಪೊಲೀಸ್ ಅಧಿಕಾರಿ ಇದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು ಎನ್ನಲಾದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಈ ಕಾರ್ಟೂನ್ ಪ್ರಕಟಗೊಂಡಿದೆ ಎನ್ನುವುದನ್ನು ಸುಲಭವಾಗಿ ಗ್ರಹಿಸಬಹುದು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಅದಿರಲಿ. ಈ ಕಾರ್ಟೂನ್ ಧ್ವನಿಸುತ್ತಿರುವ ಸಂದೇಶವೇನು? ನಾನು ಗ್ರಹಿಸಿದ್ದು ಇಷ್ಟು – ಅಪರಾತ್ರಿ ಅಲೆದಾಟಕ್ಕೆ ಹೋದ ಕಾರಣ ಆ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾಗಬೇಕಾಯಿತು. ರಾತ್ರಿ ಹೊತ್ತಲ್ಲಿ ಹೊರಗೆ ಹೋಗಿದ್ದರ ಪರಿಣಾಮ ಏನು ಎನ್ನುವುದನ್ನು ವಿಶ್ವವಿದ್ಯಾನಿಲಯ ಇಂತಹದೊಂದು ಘಟನೆ ಮೂಲಕ ವಿದ್ಯಾರ್ಥಿನಿ ಸಮೂಹಕ್ಕೆ ಕಲಿಸಿದೆ. ಹಾಗಾದರೆ, ಮಹಿಳೆ ರಾತ್ರಿ ಹೊರಗೆ ಅಲೆದಾಡಿದರೆ ಅವರು ಅತ್ಯಾಚಾರಕ್ಕೆ ಒಳಗಾಗುವ ಚಾನ್ಸ್ ಇರುತ್ತದೆ ಎನ್ನುವುದು ಪ್ರಕಾಶ್ ಶೆಟ್ಟಿಯವರ ಅಭಿಪ್ರಾಯ.

ಪುರುಷ ಕೇಂದ್ರಿತ ಆಲೋಚನೆಯ ಫಲ ಈ ಕಾರ್ಟೂನ್. ಅತ್ಯಾಚಾರದಂತಹ ಹೀನ ಕೃತ್ಯ ನಡೆಸಿದವರಿಗಿಂತ (ದಾಖಲಾಗಿರುವ ದೂರಿನ ಪ್ರಕಾರ), ರಾತ್ರಿ ಗೆಳೆಯನೊಂದಿಗೆ ಹೊರಗೆ ಹೋಗಿದ್ದ ವಿದ್ಯಾರ್ಥಿನಿಯೇ ಪ್ರಜಾವಾಣಿ ಮತ್ತು ಶೆಟ್ಟಿಯವರ ಕಣ್ಣುಗಳಿಗೆ ಅಪರಾಧಿಯಾಗಿ ಕಾಣುತ್ತಾರೆ. ಸ್ತ್ರೀಪರ ದನಿ ಎತ್ತುವ ಅನೇಕರಿಗೆ ಈ ಪತ್ರಿಕೆ ಅವಕಾಶ ಮಾಡಿಕೊಟ್ಟಿದೆ. ಸ್ತ್ರೀಶೋಷಣೆ ಮತ್ತು ಅವರ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಕೃತ್ಯಗಳು ನಡೆದಾಗಲೆಲ್ಲಾ ಪತ್ರಿಕೆ ಸ್ತ್ರೀಪರ ನಿಂತಿದೆ.

ಕಾರ್ಟೂನ್‌ಗಳು ವಿವಾದಕ್ಕೀಡಾದಗೆಲ್ಲಾ ಕಾರ್ಟೂನಿಸ್ಟ್‌ನ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಚರ್ಚೆ ಆಗುತ್ತದೆ. ಅಂತಹದೊಂದು ಕಾರ್ಟೂನ್ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಬಾರದಿತ್ತು ಎನ್ನುವ ಅಭಿಪ್ರಾಯ ಮಂಡಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ಕಾರ್ಟೂನ್ ಬರೆದವರ ಮತ್ತು ಅವನ್ನು ಓಕೆ ಮಾಡಿರುವ ಮನಸ್ಸುಗಳು ಎಂತಹವು ಎಂಬುದನ್ನು ಅರ್ಥ ಮಾಡಿಕೊಳ್ಳುವುದಷ್ಟೆ ಮುಖ್ಯ.

ಬೆಂಗಳೂರು ವಿವಿ ರಿಜಿಸ್ಟ್ರಾರ್ ಮೈಲಾರಪ್ಪ ಕೂಡಾ ಈ ಪ್ರಸ್ತುತ ಕಾರ್ಟೂನ್‌ನ ದನಿಯಲ್ಲಿಯೇ ಮಾತನಾಡಿದ್ದಾರೆ. ರಾತ್ರಿ ಹೊತ್ತು ಆ ವಿದ್ಯಾರ್ಥಿನಿ ಅದೇಕೆ ಓಡಾಡಬೇಕಿತ್ತು ಎಂದು ಮಾಧ್ಯಮದ ಮುಂದೆ ಕೇಳಿದ್ದಾರೆ. ಅಷ್ಟೇ ಅಲ್ಲ, ವಿವಿ ಕ್ಯಾಂಪಸ್‌ನಲ್ಲಿರುವ ಕೆಲ ವಿದ್ಯಾರ್ಥಿನಿಯರೂ ಇಂತಹದೇ ಪ್ರಶ್ನೆ ಎತ್ತಿದ್ದಾರೆ. ಅವರಿಗೆಲ್ಲಾ ಅತ್ಯಾಚಾರಕ್ಕಿಂತ, ಗೆಳೆಯನೊಂದಿಗೆ ರಾತ್ರಿ ಹೊರ ಹೋಗಿದ್ದೇ ದೊಡ್ಡ ಅಪರಾಧವಾಗಿ ಕಾಣುತ್ತಿದೆ. ಇವರೆಲ್ಲ ಇಂತಹ ಸಂಕುಚಿತ ಅಭಿಪ್ರಾಯ ಹೊಂದಲು ಈ ಹೊತ್ತಿನ ಮಾಧ್ಯಮಗಳೂ ಕಾರಣ.

(ಕಾರ್ಟೂನ್ ಕೃಪೆ: ಪ್ರಜಾವಾಣಿ)

ಅಧಿಕಾರರೂಢರ ದುರಹಂಕಾರ… ಕ್ರಾಂತಿಯತ್ತ ದೇಶ…


– ರವಿ ಕೃಷ್ಣಾರೆಡ್ಡಿ


ದಿನೇದಿನೇ ಈ ದೇಶ ದುರಂತದತ್ತ ಮತ್ತು ಕ್ರಾಂತಿಯತ್ತ ನಡೆಯುತ್ತಿದೆ. ಅಧಿಕಾರಕ್ಕೆ ಬಂದ ಯಾವ ಪಕ್ಷವೂ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಲ್ಲ. ಮತ್ತು ಇವು ಆರೋಪಗಳಷ್ಟೇ ಅಲ್ಲ, ಮೇಲ್ನೋಟಕ್ಕೇ ಆರೋಪ ರುಜುವಾತಾಗುವ, ಸಾಬೀತಾಗುವ ಪ್ರಕರಣಗಳು. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಕೆಟ್ಟಿದೆ. ಶಾಸಕಾಂಗದ ಜನಪ್ರತಿನಿಧಿಗಳು ಎಂದೋ ಕೆಟ್ಟಿದ್ಡಾರೆ. ಆಡಳಿತಾಂಗದ ಅಧಿಕಾರಿಗಳು ರಾಜಕಾರಣಿಗಳ ಜೊತೆಜೊತೆಗೇ ಕೆಟ್ಟಿದ್ದಾರೆ. ಹಾಗಾಗಿ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆಯೇ ಆಗುವುದಿಲ್ಲ. ದುರಹಂಕಾರದಿಂದ ಮತ್ತು ವೇಗದಿಂದ ಭ್ರಷ್ಟಾಚಾರ ಮತ್ತು ಅವುಗಳನ್ನು ಮುಚ್ಚಿಹಾಕುವ ಪ್ರವೃತ್ತಿ ಎಡೆಬಿಡದೆ ಸಾಗುತ್ತಿದೆ.

ರಾಬರ್ಟ್ ವಾದ್ರಾ ದೇಶದ ಜನತೆಯ ಎದುರು ಬೆತ್ತಲಾಗಿದ್ದಾರೆ. ಅವರ ಅತ್ತೆಯಂತೂ ಹಿಂದೆಂದಿಗಿಂತ ಹೆಚ್ಚು ಟೀಕೆಗೆ ಒಳಗಾಗುತ್ತಿದ್ದಾರೆ ಮತ್ತು ಜನತೆ ತಮಗೆ ದೊರಕಲಿರುವ ಅವಕಾಶಕ್ಕೆ ಕಾಯುತ್ತಿದ್ದಾರೆ. ಸೋನಿಯಾ ಮತ್ತು ಪ್ರಿಯಾಂಕರವರ ಮೇಲ್ನೋಟಕ್ಕೆ ಘನತೆ ಮತ್ತು ಗಂಭೀರತೆಯಿಂದ ಕೂಡಿದ್ದ ನಡವಳಿಕೆ, ಸೋನಿಯಾರವರು ಪ್ರಧಾನಿ ಸ್ಥಾನದಿಂದ ಹಿಂದೆ ಸರಿದದ್ದು, ಪ್ರಿಯಾಂಕಾರವರು ನೇರರಾಜಕಾರಣಕ್ಕೆ ಬರದೆ ತಮ್ಮ ಪ್ರಚಾರವನ್ನು ಉತ್ತರಪ್ರದೇಶದ ಎರಡು ಕ್ಷೇತ್ರಗಳಿಗೆ ಸೀಮಿತಗೊಳಿಸಿಕೊಂಡಿದ್ದ ಸಂಯಮ, ಇವೆಲ್ಲವೂ ಅವರ ಮನೆಯಲ್ಲಿಯೇ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪ ಮತ್ತು ಅಪರಾಧಗಳಿಂದ ಅವರನ್ನು ರಕ್ಷಿಸದು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಆರೋಪ ಕೇಳಿಬಂದ ನಂತರ ನಡೆದ ಘಟನೆಗಳು ಅವರ ಮತ್ತು ಅವರ ದಾಸವರ್ಗದ ಜನರ ಅಹಂಕಾರ ಮತ್ತು ಸ್ವೇಚ್ಚಾಚಾರವನ್ನು ಎತ್ತಿ ಎತ್ತಿ ತೋರಿಸುತ್ತಿವೆ.

ಈಗ ಕಾಂಗ್ರೆಸ್ ಪಕ್ಷದವರಿಂದ ದೂಷಣೆ ಮತ್ತು ಶಿಕ್ಷೆಗೆ ಒಳಗಾಗಿರುವ ಐಎ‌ಎಸ್ ಅಧಿಕಾರಿ ಅಶೋಕ್ ಖೇಮ್‍ಕ ನೆನ್ನೆ ರಾತ್ರಿ ಟಿವಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಒಂದು ವಿಚಾರ ಹೇಳಿದರು: “ರಾಜಕಾರಣಿಗಳ ಜೊತೆ ಸಕ್ರಿಯವಾಗಿ ಕೈಜೋಡಿಸಿ ರಾಜಾರೋಷದಿಂದ ಭ್ರಷ್ಟಾಚಾರ ಎಸಗುವ ಅಧಿಕಾರಿಗಳಿಗಿಂತ ವಿನಮ್ರವಾಗಿ ರಾಜಕಾರಣಿಗಳ ಜೊತೆಗೂಡಿ ಭ್ರಷ್ಟಾಚಾರ ಎಸಗುವ ಅಧಿಕಾರಿಗಳು ಬಹಳ ಅಪಾಯಕಾರಿ. ರಾಜಾರೋಷದಿಂದ ವರ್ತಿಸುವವರು ಇಂದಲ್ಲ ನಾಳೆ ಸಿಕ್ಕಿಬೀಳುತ್ತಾರೆ. ಆದರೆ ವಿನಮ್ರವಾಗಿ ಮತ್ತು ಧೂರ್ತತೆಯಿಂದ ಕೆಲಸ ಮಾಡುವವರು ಸಿಕ್ಕಿಬೀಳುವ ಸಂಭವ ಕಡಿಮೆ.” ಇದು ಕಳೆದ 19 ವರ್ಷದಲ್ಲಿ 43 ಬಾರಿ ವರ್ಗಾವಣೆ ಆಗಿರುವ, ಬೇರೆಯವರು ಅವರ ಬಗ್ಗೆ ಹೀಗೆ ಹೇಳುತ್ತಾರೆಂದು ಅವರೇ ಹೇಳಿಕೊಂಡ “ಪ್ರಾಮಾಣಿಕ ವ್ಯಕ್ತಿ, ಆದರೆ ಹೇಳಿದ ಮಾತು ಕೇಳದ” ಹಿರಿಯ ಅಧಿಕಾರಿ ಹೇಳುವ ಮಾತು. ನಮ್ಮ ಸಮಾಜದಲ್ಲಿ ಈ ಅಧಿಕಾರಸ್ಥ ರಾಜಕಾರಣಿಗಳ ದುರಹಂಕಾರ ಹೇಗಿದೆ ಅಂದರೆ, ಅದೇ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಸಂಸದನೊಬ್ಬ “ಖೇಮ್‌ಕ ತಾನು ಇಷ್ಟು ಬಾರಿ ವರ್ಗಾವಣೆ ಆಗಿರುವುದು ಯಾಕೆ ಎಂದು ಹೇಳಬೇಕು” ಎನ್ನುತ್ತ ಈ ಮನುಷ್ಯನದೇ ಏನೋ ತಪ್ಪಿರಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ. ಅದಕ್ಕೆ ಖೇಮ್‍ಕ ಹೇಳಿದ್ದು, ಅತೀವ ದು:ಖದಿಂದ, “ಇದು ಹೇಗಿದೆ ಅಂದರೆ, ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮೇಲೆ ಅವಳು ಏನು ಮಾಡಿದ್ದಕ್ಕೆ ಈ ಅತ್ಯಾಚಾರ ಮಾಡಲಾಯಿತು ಎಂದು ಕೇಳುವಂತಿದೆ” ಎಂದು. ಖೇಮ್‌ಕರಿಗೆ ಈಗಾಗಲೆ ಜೀವಬೆದರಿಕೆ ಹಾಕಲಾಗಿದೆ. ಹಲವು ಬೆದರಿಕೆ ಕರೆಗಳನ್ನು ಮಾಡಲಾಗಿದೆ. ಹರ್ಯಾಣ ಸರ್ಕಾರವಂತೂ ಅಧಿಕೃತವಾಗಿ ಹಿಂಬಡ್ತಿ ತರಹದ ಶಿಕ್ಷೆ ನೀಡಿ, ಅವರಿಗಿಂತ ಹದಿನೈದು ವರ್ಷ ಕಿರಿಯ ಆಧಿಕಾರಿಗೆ ಕೊಡುವ ಜವಾಬ್ದಾರಿಯನ್ನು ಕೊಟ್ಟು, ಮೂರು ತಿಂಗಳೂ ಆಗಿರದ ಅವರ ಸದ್ಯದ ಹುದ್ದೆಯಿಂದ ವರ್ಗಾವಣೆ ಮಾಡಿದೆ.

ಇದೆಲ್ಲವೂ ಯಾತಕ್ಕಾಗಿ? ರಾಬರ್ಟ್ ವಾದ್ರಾ ಮೇಲೆ ಕೇಳಿಬಂದ ಆರೋಪಗಳು ನೇರವಾಗಿ ಖೇಮ್‌ಕರವರ ಅಧೀನ ಅಧಿಕಾರಿಗಳ ಅಧಿಕಾರ ದುರುಪಯೋಗ ಮತ್ತು ಕಾನೂನು ಉಲ್ಲಂಘನೆಯನ್ನು ಎತ್ತಿ ತೋರಿಸುತ್ತಿದ್ದವು. ಅದು ಹೌದೇ ಅಲ್ಲವೇ ಎಂದು ವಿಚಾರಣೆಗೆ ಅಶೋಕ್ ಖೇಮ್‌ಕ ಮುಂದಾದ ಎರಡೇ ದಿನಕ್ಕೆ ರಾತ್ರಿ 10 ಗಂಟೆ ಸಮಯದಲ್ಲಿ ಸರ್ಕಾರ ಇವರ ವರ್ಗಾವಣೆ ಆದೇಶ ಹೊರಡಿಸಿದೆ.

ರಾತ್ರಿ ಕೇಳಿಬಂದ ವಿಚಾರಗಳಲ್ಲಿ ಒಂದು ವಿಚಾರ, ರಾಬರ್ಟ್ ವಾದ್ರಾ ವಿವಾದದಲ್ಲಿ ಸಾಮಾನ್ಯವಾಗಿ ಸಾಮಾನ್ಯ ಜನರಿಗೆ ತಿಂಗಳಾನುಗಟ್ಟಲೆ ತೆಗೆದುಕೊಳ್ಳುವ (ಖಾತಾ, ಇಲ್ಲವೇ ಮ್ಯುಟೇಷನ್ ಇರಬೇಕು) ಅನುಮತಿ/ಆದೇಶ ಪತ್ರವೊಂದು ವಾದ್ರಾಗೆ ಕೇವಲ ಒಂದೇ ದಿನದಲ್ಲಿ ಸಿಗುತ್ತದೆ. ಅಂದಹಾಗೆ ಇಂತಹವು ರಾಜಕಾರಣಿಗಳ, ಶ್ರೀಮಂತರ, ಅಧಿಕಾರಸ್ಥರ ವಿಚಾರಕ್ಕೆ ದೇಶದಾದ್ಯಂತ ದಿನವೂ ನಡೆಯುತ್ತದೆ. ನಮ್ಮ ರಾಜ್ಯದ ಗೃಹಸಚಿವ ಆರ್.ಆಶೋಕ್ ಅಕ್ರಮವಾಗಿ ಕೊಂಡುಕೊಂಡು ಡಿನೋಟಿಫೈ ಮಾಡಿಸಿಕೊಂಡ ಜಮೀನೊಂದರ ವಿಚಾರದಲ್ಲಿಯೂ ನೊಂದಾವಣೆ ಆದ ಮಾರನೆಯ ದಿನವೇ ಅವರಿಗೆ ಖಾತಾ ಸಿಕ್ಕಿತ್ತು. ಇದೆಲ್ಲವೂ ಪತ್ರಿಕೆಗಳಲ್ಲಿ, ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ದಾಖಲಾಗಿವೆ.

ಈ ದೇಶದಲ್ಲಿ ಕಾನೂನುಗಳೇನಿದ್ದರೂ ಬಡವರಿಗೆ, ದುಡ್ಡು ಹೊಂದಿಸಲಾಗದ ಅಶಕ್ತರಿಗೆ, ಪ್ರಾಮಾಣಿಕವಾಗಿ ಇರಬೇಕು ಎಂದು ಬಯಸುವವರಿಗೆ. ಈ ಗುಂಪಿನಲ್ಲಿರದವರಿಗೆ ಕಾನೂನುಗಳು ಅವರ ತೂಕದ ಜೇಬಿನಲ್ಲಿರುತ್ತವೆ. ಕಾನೂನುಗಳನ್ನು ದಿನವೂ ಉಲ್ಲಂಘಿಸಲಾಗುತ್ತದೆ. ದಿನೇದಿನೇ ಹಗರಣಗಳು ಪಕ್ಷಭೇದವಿಲ್ಲದೆ ಹೊರಬರುತ್ತಿವೆ; ಬಯಲುಸೀಮೆಯ ಹಳ್ಳಿಗಳಲ್ಲಿ ಬೆಳಗ್ಗೆ ಪಾಯಕಾನೆಗೆ ಹೋಗುವ ಜನ ಖಾಲಿ ಇರುವ ಬಯಲಿನಲ್ಲಿ ಸಾಮೂಹಿಕವಾಗಿ ಹಾಕುವ ಅಮೇದ್ಯದ ಗುಡ್ಡೆಗಳಂತೆ. ಇನ್ನು ನಮ್ಮ ಮಾಧ್ಯಮಗಳ ಮತ್ತು ಜನರ ಮನಸ್ಥಿತಿ ಕ್ಷಣಕ್ಕೊಂದು ಅಮೇಧ್ಯದ ಗುಡ್ಡೆಗೆ ಹಾರುವ ನೊಣದಂತಾಗಿದೆ. ಯಾವುದೂ ಮುಖ್ಯವಾಗುತ್ತಿಲ್ಲ. ಒಂದು ಕೋಲನ್ನು ಮುರಿಯದೆ ಸಣ್ಣದು ಮಾಡುವ ವಿಧಾನದಂತೆ ಅದಕ್ಕಿಂತ ಉದ್ದದ್ದ ಕೋಲು ಕಾಣಿಸಿಕೊಂಡಾಕ್ಷಣ ಹಳೆಯದು ಮರೆಯಾಗುತ್ತಿದೆ.

ಮೊನ್ನೆ ರಾಬರ್ಟ್ ವಾದ್ರಾ, ನೆನ್ನೆ ಸಲ್ಮಾನ್ ಖುರ್ಷಿದ್, ಇಂದು ನಿತಿನ್ ಗಡ್ಕರಿ; ಇವು ಏನಾದರೂ ಸಕಾರಾತ್ಮಕ ಬದಲಾವಣೆ ತರುತ್ತವೆಯೇ? ಬಹುಶಃ ಇಂದು ಬಯಲಾಗುವ ನಿತಿನ್ ಗಡ್ಕರಿ ಹಗರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಯ ಮೇಲೆ ಮತ್ತೊಮ್ಮೆ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಮಾತೂ ಕೇಳಿಬರಬಹುದು. ಇವರಿಗಂತೂ ಹತ್ತಾರು ಕೇಸುಗಳಲ್ಲಿ ಇದೂ ಒಂದಾಗಲಿದೆ. ಶಿಕ್ಷೆ? ನ್ಯಾಯಾಲಯದಲ್ಲಿ ಸಿಗುವುದು ಸಂದೇಹ. ನ್ಯಾಯಪ್ರಜ್ಞೆ ಕಳೆದುಕೊಂಡ ಸಮಾಜದಲ್ಲಂತೂ ಖಂಡಿತ ಸಿಗದು. ಯಾರೂ ಮಾಡದ್ದನ್ನು ಇವರು ಮಾಡಿಲ್ಲ ಎಂದು ಜನ ಪ್ರತಿಯೊಬ್ಬ ಅವಿವೇಕಿ, ಅನರ್ಹ, ಭ್ರಷ್ಟ, ದುಷ್ಟನ ವಿಚಾರಕ್ಕೆ ಹೇಳುತ್ತಿದ್ದಾರೆ.

ಅರಾಜಕತೆ ಮತ್ತು ಕ್ರಾಂತಿಯತ್ತ ದೇಶ ನಡೆಯುತ್ತಿದೆ. ಅದು ರಕ್ತರಹಿತ ಕ್ರಾಂತಿಯಾಗಿರಲಿ ಎಂದಷ್ಟೇ ನನ್ನ ಬಯಕೆ.

ಹಾಡುಗಳಾಗುವ ಭರದಲ್ಲಿ ಕಳೆದು ಹೋದ ವಚನಗಳು

ಎನ್.ಎಸ್.ಮನೋಹರ್

ಬಿ.ವಿ.ಕಾರಂತರು ಒಮ್ಮೆ ಹೇಳಿದ ಮಾತು, “ನಾಟಕಗಳಲ್ಲಿ ಹಾಡುಗಳು ಮಾತುಗಳಾಗಬೇಕು”. ಅವರ ಸಂಗೀತ ನಿರ್ದೇಶನದ ನಾಟಕಗಳಲ್ಲಿ ಹಾಡುಗಳು ಮಾತಾಗಿರುವ ಬಗೆಯನ್ನು ಗುರುತಿಸಬಹುದು. ರಂಗದ ಮೇಲೆ ಮಾತೇ ಪ್ರಧಾನ, ಏಕೆಂದರೆ ರಂಗದ ಉದ್ದೇಶ ಪ್ರೇಕ್ಷಕರನ್ನು ತಲುಪುವುದು.

ಪಕ್ಕಾ ಮಾತುಗಳೇ ಆಗಿರುವ ಶರಣರ ವಚನಗಳನ್ನು ಹಾಡುಗಳನ್ನಾಗಿಸುವ ಭರದಲ್ಲಿ ಶರಣ ಚಳವಳಿಯ ಉದ್ದೇಶ ಮತ್ತು ತಾತ್ವಿಕತೆಗಳಿಗೆ ಎಳ್ಳುನೀರು ಬಿಟ್ಟ ನೃತ್ಯ-ನಾಟಕವೊಂದರ ಬಗ್ಗೆ ಅಭಿಪ್ರಾಯ ಹೇಳುವುದಷ್ಟೆ ಈ ಬರಹದ ಉದ್ದೇಶ.

ಮೈಸೂರಿನ ನಿರಂತರ ಫೌಂಡೇಶನ್ ಕೆಲ ವರ್ಷಗಳಿಂದ ‘ಕೂಡಲಸಂಗಮ’ ಎನ್ನುವ ನೃತ್ಯ-ನಾಟಕವನ್ನು ಪ್ರದರ್ಶಿಸುತ್ತಾ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಈ ನೃತ್ಯ-ನಾಟಕದ 97ನೇ ಪ್ರದರ್ಶನ ಶನಿವಾರ (ಅಕ್ಟೊಬರ್ 13) ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಿತು. ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಸಿ.ಅಶ್ವಥ್ ಸಂಗೀತದಲ್ಲಿ ಶರಣರ ಹಲವು ವಚನಗಳು ನೃತ್ಯರೂಪದಲ್ಲಿ ಪ್ರದರ್ಶನಗೊಂಡವು. ನಿರ್ದೇಶನ ಎಂ.ಎಂ. ಸುಗುಣ ಅವರದ್ದು.

97ನೇ ಪ್ರದರ್ಶನವನ್ನು ಕಾಣುತ್ತಿರುವ ಈ  ನೃತ್ಯ-ನಾಟಕವನ್ನು ನೋಡಲೆಂದೇ ದೂರದ ಊರಿನಿಂದ ಹಾಸನಕ್ಕೆ ಹೋಗಿದ್ದ ನನ್ನ ನಿರೀಕ್ಷೆಗಳನ್ನು ನಾಟಕ ಹುಸಿ ಮಾಡಿತು. ಕೆಲ ವಚನಗಳು ಕೋಲಾಟದ ಪದಗಳಾಗಿ ಉಳಿದರೆ, ಮತ್ತೆ ಕೆಲವು ಮದುವೆ ಹಿಂದಿನ ದಿನದ ಮೆಹಂದಿ ಕಾರ್ಯಕ್ರಮದಲ್ಲಿ ಯುವಕ-ಯುವತಿಯರು ಹೆಜ್ಜೆಹಾಕಲು ಆಯ್ಕೆ ಮಾಡಿಕೊಳ್ಳಬಹುದಾದ ಜನಪ್ರಿಯ ಹಾಡುಗಳಿಗೆ ಸೀಮಿತವಾದವು. ವಚನ ಚಳವಳಿಯ ಐತಿಹಾಸಿಕ ಮಹತ್ವ ಮತ್ತು ಸಾಮಾಜಿಕ ಅಗತ್ಯಗಳ ಅರಿವಿನ ಕೊರತೆ ಪ್ರದರ್ಶನದ ಹೈಲೈಟ್.

‘ಎಲ್ಲಿ ಹೋದೆ ನೀ ಬಸವ..?’, ‘ನೀ ಇಲ್ಲದೆ ನಮ್ಮ ಕನಸುಗಳೆಲ್ಲಾ ಕಮರಿಹೋಗಿವೆ’… ಹೀಗೆ ಬಸವಣ್ಣನ ಇರುವಿಕೆಯನ್ನು ಗಾಢವಾಗಿ ಬಯಸುವ ಎರಡು ಪಾತ್ರಗಳು ನೃತ್ಯ-ನಾಟಕದ ಸೂತ್ರಧಾರರು. ಅವರೊಂದಿಗೆ ಬಂದು ಸೇರುವವನು – ಕೂಡಲ ಸಂಗಮ. ಈ ಮೂವರು ಬಸವಣ್ಣನ, ಅವನ ಅನುಯಾಯಿಗಳು ಹಾಗೂ 12 ನೇ ಶತಮಾನದ ಚಳವಳಿಯನ್ನು ತೀರಾ ರೋಮ್ಯಾಂಟಿಕ್ ಆಗಿ ನೆನೆಯುತ್ತಾ ಹೋದಂತೆ ವಚನಗಳು ಹಾಡಾಗಿ ರಂಗದ ಮೇಲೆ ಬರುತ್ತವೆ.

ಅಬ್ಬರದ ಸಂಗೀತದ ಮಧ್ಯೆ ವಚನಗಳ ಪಠ್ಯವನ್ನು ಗ್ರಹಿಸಲು ಪ್ರೇಕ್ಷಕರು ಹರಸಾಹಸ ಮಾಡಬೇಕಾಗುತ್ತದೆ. ಅಲ್ಲಿ ವಚನಕಾರರಿಗಿಂತ ಹಾಡುಗಾರ, ಕಂಸಾಳೆ ದನಿ, ಅಶ್ವಥ್ ರ ಶ್ರಮಕ್ಕೆ ಹೆಚ್ಚು ಮನ್ನಣೆ. ವಚನದ ಸಾರವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ವಚನಕಾರರ ಸ್ಥಾನ ತೀರಾ ಗೌಣ. ಪ್ರತಿ ವಚನದ ಅಂತ್ಯದಲ್ಲಿ ‘ಕೂಡಲಸಂಗಮ’ ಎಂಬ ಅಂಕಿತನಾಮ ಮಾತ್ರ ಓದುಗರನ್ನು ತಲುಪುತ್ತದೆ.

ವಚನ ಚಳವಳಿ ಅಸಮಾನತೆ ವಿರುದ್ಧ ದನಿ ಎತ್ತಿತ್ತು. ಹಾಗೆಯೇ ಎಲ್ಲರ ಅಭಿವೃದ್ಧಿಗಾಗಿ ‘ಕಾಯಕ’ವನ್ನು ಬೋಧಿಸಿತು. ಇವೆರಡು ಗಂಭೀರ ದನಿಯಲ್ಲಿ ಹೇಳಬೇಕಾದ ಸಂಗತಿಗಳು. ವಚನಗಳನ್ನು ಜನಪ್ರಿಯಗೊಳಿಸುವ ಭರದಲ್ಲಿ ಪಾಪುಲರ್ ಗಾಯಕರು ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದರೆ, ಈ ಸಂದೇಶ ಮೂಲೆಗುಂಪಾಗುವುದು ನಿರೀಕ್ಷಿತ. ವಿಮರ್ಶಕ ಕಿ.ರಂ. ನಾಗರಾಜ್ ಕೆಲವೆಡೆ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕರ ಬಗ್ಗೆ ಇಂಥದೇ ಮಾತುಗಳನ್ನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಾಸನದ ಪ್ರೇಕ್ಷಕರು ಪ್ರದರ್ಶನವನ್ನು ‘ಎಂಜಾಯ್’ ಮಾಡಿದರು. ಎಂಜಾಯ್ – ಪದವನ್ನು ಪ್ರಜ್ಞಾಪೂರ್ವಕವಾಗಿಯೇ ಬಳಸುತ್ತಿದ್ದೇನೆ. ಏಕೆಂದರೆ ಅಲ್ಲಿ ‘ಎಂಜಾಯ್’ ಮಾಡಲಷ್ಟೇ ಸಾಧ್ಯವಿತ್ತು, ‘ಎನ್‌ಲೈಟನ್ಮೆಂಟ್’ಗೆ ಅವಕಾಶ ಇರಲಿಲ್ಲ. ವೀಕೆಂಡ್ ಮೂಡಿನಲ್ಲಿದ್ದ ಕಲಾಸಕ್ತರು ಅಶ್ವಥ್ ರ ಮೋಡಿಗೆ ಮರುಳಾದರು, ವಚನಗಳನ್ನು ಕೇಳದೇ ಹೋದರು. ಪರೀಕ್ಷೆ ಮಾಡಬೇಕೆಂಬ ಉದ್ದೇಶ ಇದ್ದವರು ಮುಂದಿನ ಪ್ರದರ್ಶನದಲ್ಲಿ ಅಬ್ಬರದ ಸಂಗೀತದ ಮಧ್ಯೆ ವಚನಗಳಿಗೆ ಹುಡುಕಲು ಯತ್ನಿಸಬಹುದು.


ಯೂಟ್ಯೂಬ್‌ನಲ್ಲಿರುವ “ಕೂಡಲ ಸಂಗಮ” ನೃತ್ಯ-ನಾಟಕದ ಒಂದು ಭಾಗ:

ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ

– ಧನಂಜಯ ಕುಂಬ್ಳೆ

“ಈ ಜಗತ್ತು ಹೇಗಿದೆ ಎಂಬುದು ನೋಡುವ ಕಣ್ಣಿನಲ್ಲಿದೆ. ಪರಿಭಾವಿಸುವ ಮನಸ್ಸಿನ ಭಾವದಲ್ಲಿದೆ,” ಎಂಬ ಪ್ರಾಯ್ಡ್‌ನ ಮಾತು ಎಲ್ಲ ಕಾಲಕ್ಕೂ ಸತ್ಯ. ಧನಾತ್ಮಕ ದೃಷ್ಟಿಕೋನದವರಿಗೆ ಈ ಜಗತ್ತು ಭರವಸೆಯ ಬೆಳಕಾಗಿ, ಬದುಕಿಗೆ ಉತ್ಸಾಹ, ಚೈತನ್ಯ ತುಂಬುವ ಶಕ್ತಿಯಾಗಿ ಕಂಡರೆ, ಋಣಾತ್ಮಕ ಮನಸ್ಥಿತಿಯವರಿಗೆ ಬಿತ್ತಿದ ಬೀಜ ಚಿಗುರೊಡೆದು ಬರುವಲ್ಲೂ ಹಿಂಸೆಯೇ ಎದ್ದು ತೋರುತ್ತದೆ. ಇತ್ತೀಚೆಗೆ ನವೀನ್ ಸೂರಿಂಜೆಯವರ “ಆಳ್ವಾಸ್ ನುಡಿಸಿರಿ‌ಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಲೇಖನ ಓದಿದಾಗ ಅನ್ನಿಸಿದ್ದಿದು.

ಆಳ್ವರನ್ನು, ನುಡಿಸಿರಿಯನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಈ ಲೇಖನ ಎಷ್ಟು ಋಣಾತ್ಮಕವಾದುದು, ಪೂರ್ವಾಗ್ರಹ ಪೀಡಿತವಾದುದು ಎನ್ನುವುದು ಗೊತ್ತು. ಆದರೆ ದೂರದ ಓದುಗರು ಈ ಲೇಖನದಿಂದ ತಪ್ಪು ಅಭಿಪ್ರಾಯಕ್ಕೆ ಬರಬಾರದೆಂಬ ಕಾಳಜಿಯಿಂದ ಸತ್ಯವನ್ನು ಬಿಚ್ಚಿಡುವ ಉದ್ದೇಶದಿಂದ ಈ ಬರಹ. ಕಳೆದ ಹತ್ತು ವರ್ಷಗಳಿಂದ ಆಳ್ವರನ್ನು ನಿಕಟವಾಗಿ ಬಲ್ಲ ಓರ್ವ ಸಹೃದಯಿಯಾಗಿ ನನ್ನ ಈ ಪ್ರತಿಕ್ರಿಯೆ.

ಕೆರೆಯ ನೀರನು ಕೆರೆಗೆ ಚೆಲ್ಲಿ:
ಡಾ. ಮಿಜಾರುಗುತ್ತು ಮೋಹನ ಆಳ್ವರು ಎಳವೆಯಿಂದಲೇ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡಾಸಕ್ತರು. ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡು ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದವರು, ಬಹುಮಾನಗಳನ್ನು ಬಾಚಿಕೊಂಡವರು. ಕಾರ್ಕಳದ ಭುವನೇಂದ್ರ ಕಾಲೇಜು ಮತ್ತು ಉಡುಪಿಯ ಎಂಜಿಎಂ ಕಾಲೇಜುಗಳ ಹಳೇ ವಾರ್ಷಿಕಾಂಕಗಳನ್ನು ಹುಡುಕಿದರೆ, ಈ ಪರಿಸರದ ಗುರುಗಳನ್ನು, ಕಲಾಸಕ್ತರನ್ನು ಮಾತನಾಡಿಸಿದರೆ ಇದಕ್ಕೆ ಬೇಕಾದಷ್ಟು ಸಾಕ್ಷ್ಯಗಳು ದೊರಕುತ್ತವೆ. ಸುಮಾರು ಮೂರು ದಶಕಗಳ ಹಿಂದೆಯೇ ಮೂಡುಬಿದಿರೆಯಲ್ಲಿ ಒಂದು ಸಣ್ಣ ಕೊಠಡಿಯಲ್ಲಿ ತಾನು ವೈದ್ಯ ವೃತ್ತಿಯನ್ನು ಮಾಡುತ್ತಿರುವಾಗಲೇ ಏಕಲವ್ಯ ಕ್ರೀಡಾ ಸಂಸ್ಥೆಯನ್ನು ಆರಂಭಿಸಿದ, ವಿರಾಸತ್ ಕಾರ್ಯಕ್ರಮವನ್ನು ಸಂಘಟಿಸಿದ, ರಂಗಭೂಮಿಗೆ ಸಂಬಂಧಿಸಿದ ರಂಗಸಂಗಮ ಎಂಬ ಸಂಘಟನೆಯನ್ನು ಕಟ್ಟಿ ಬೆಳೆಸಿದವರು. ಇವರ ಸಾಂಸ್ಕೃತಿಕ ಆಸಕ್ತಿ “ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ” ಆರಂಭಿಸಿದ ಬಳಿಕ ಹುಟ್ಟಿದ್ದಲ್ಲ. ಸಂಸ್ಥೆ ಆರಂಭಗೊಂಡ ಬಳಿಕ ಅದನ್ನು ಹೆಚ್ಚು ಅಚ್ಚುಕಟ್ಟಾಗಿ, ಬೃಹತ್ ರೂಪದಲ್ಲಿ ನಡೆಸುತ್ತಿದ್ದಾರೆ ಅಷ್ಟೇ.

ವಿದ್ಯಾರ್ಥಿಗಳ ಡೊನೇಶನ್ ಹಣದಿಂದ ನುಡಿಸಿರಿ ವಿರಾಸತ್‌ನಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂಬುದು ನವೀನರ ಆರೋಪ. ಇದು ಸತ್ಯ. ’ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಧೋರಣೆ ಆಳ್ವರದ್ದು. ಆದರೆ ಅದಕ್ಕಾಗಿ ಎಂದೂ ಸುಲಿಗೆ ಮಾಡಿದವರಲ್ಲ. ಸಂಪೂರ್ಣ ಖಾಸಗಿಯಾಗಿರುವ ಸಂಸ್ಥೆಯೊಂದು ಮುನ್ನಡೆಯಬೇಕಾದರೆ ವಿದ್ಯಾರ್ಥಿಗಳಿಂದ ಸಂಗ್ರಹ ಅನಿವಾರ್ಯ. ಆದರೆ ಯಾವತ್ತೂ ದುಡ್ಡು ದೋಚಿದವರಲ್ಲ. ಸುತ್ತಮುತ್ತಲಿನ ಕಾಲೇಜುಗಳ ಫೀಸಿಗಿಂತ ಆಳ್ವಾಸ್ ದುಬಾರಿಯಲ್ಲ ಎಂಬುದು ಲೋಕಕ್ಕೇ ಗೊತ್ತಿರುವ ಸತ್ಯ. ಸಮಾಜದಿಂದ ಬಂದದ್ದನ್ನು ಸಮಾಜಕ್ಕೆ ನೀಡುವ, ಸದ್ಭಳಕೆ ಮಾಡುವ ಆಳ್ವರು ನಾಡು ನುಡಿ, ಸಂಸ್ಕೃತಿಯ ಪರಿಚಾರಿಕೆಯಲ್ಲಿ ತೊಡಗಿದ್ದಾರಲ್ಲ ಎಂದು ಸಂಭ್ರಮಿಸುವ ಬದಲು ನವೀನರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಿದ್ದಾರೆ. ಲಕ್ಷಗಟ್ಟಲೆ ಡೊನೇಶನ್ ಪಡೆದು ಅದನ್ನು ಯಾವ ಸಮಾಜಮುಖೀ ಕಾರ್ಯಕ್ಕೂ ಬಳಸದ ಹಲವು ಸಂಸ್ಥೆಗಳ ನಡುವೆ ಆಳ್ವರು ಅನನ್ಯರೂ, ಮಾದರಿಯೂ ಆಗಿದ್ದಾರೆ ಎಂದು ನವೀನರಿಗೆ ಯಾಕೆ ಅನಿಸುವುದಿಲ್ಲ?

ಕೊರಗರೊಂದಿಗೆ ಕುಣಿದ ಆಳ್ವ:
ನುಡಿಸಿರಿಗೆ ಬಂದು ಕಾರ್ಯಕ್ರಮ ನೀಡಿದ ಬಳಿಕ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದ ಭಾವಚಿತ್ರವನ್ನು ತೆಗೆದು ಕೊರಗರಿಗೆ ಅವಮಾನ ಎಂದು ಬಿಂಬಿಸುವ ಪ್ರಯತ್ನ ನವೀನರದ್ದು. ನುಡಿಸಿರಿಯ ವೇದಿಕೆಯಲ್ಲಿ ಕೊರಗರ ಡೋಲು ಕುಣಿತಕ್ಕೆ ಅವಕಾಶ ನೀಡಿದ್ದು ಮಾತ್ರವಲ್ಲ ತಾನೂ ಕೂಡ ಅವರೊಂದಿಗೆ ಡೋಲು ಬಾರಿಸಿ ಕುಣಿದವರು ಆಳ್ವರು.

ಅನಂತರ ದೀಪಾವಳಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಕೊರಗರ ಕಲಾ ತಂಡಗಳಿಗೆ ಅವಕಾಶ ನೀಡಿದ್ದಾರೆ. ಇಷ್ಟು ಮಾತ್ರವಲ್ಲ ಕೊರಗ ಜನಾಂಗದಲ್ಲಿನ ಅನಕ್ಷರತೆಯನ್ನು ಹೋಗಲಾಡಿಸುವ ಸದುದ್ದೇಶದಿಂದ ಕೊರಗ ವಿದ್ಯಾರ್ಥಿಗಳಿಗೆ ವಿಶೇಷ ದತ್ತು ಸ್ವೀಕಾರ ಯೋಜನೆಯನ್ನು ಆರಂಭಿಸಿ ಯಾವುದೇ ಶುಲ್ಕವಿಲ್ಲದೇ ಊಟ, ವಸತಿ ಸಹಿತ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ. ಪ್ರಸ್ತುತ 78 ವಿದ್ಯಾರ್ಥಿಗಳು ಈ ಉಚಿತ ಶಿಕ್ಷಣ ಯೋಜನೆಯಡಿ ಕಲಿಯುತ್ತಿದ್ದಾರೆ. ಇವಲ್ಲದೇ ದಲಿತ ಸಮುದಾಯದ ಜೇನು ಕುರುಬ, ಮಲೆ ಕುಡಿಯ, ಸಿದ್ದಿ ಜನಾಂಗದ ವಿದ್ಯಾರ್ಥಿಗಳನ್ನೂ ದತ್ತು ಸ್ವೀಕಾರ ಮಾಡಿ ಮಕ್ಕಳಂತೆ ನೋಡುತ್ತಿರುವ ಆಳ್ವರು ಕೊರಗರಿಗೆ ಅವಮಾನ ಮಾಡಿದ್ದಾರೆ ಎಂದು ದೂಷಿಸುವ ಮನಸ್ಸಾದರೂ ನವೀನರಿಗೆ ಹೇಗೆ ಬಂತು?

ಡೊನೇಶನ್ ಹಣ ಡೊನೇಶನ್ ಹಣ ಎಂದು ಮಾತು ಮಾತಿಗೆ ಹೇಳುವ ನವೀನ ಸೂರಿಂಜೆಯವರು ಶೈಕ್ಷಣಿಕ, ಕ್ರೀಡಾ, ವಿಕಲಚೇತನ, ಸಾಂಸ್ಕೃತಿಕ, ಆರ್ಥಿಕ ದುರ್ಬಲ ವರ್ಗದವರಿಗೆ ಆಳ್ವರು ಉಚಿತ ಶಿಕ್ಷಣ ನೀಡುತ್ತಿರುವುದನ್ನು ಗಮನಿಸಬೇಕು. ಪ್ರಸ್ತುತ 2000ಕ್ಕೂ ಅಧಿಕ ವಿದ್ಯಾರ್ಥಿಗಳು, ಈವರೆಗೆ 15,000 ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಫಲಾನುಭವಿಗಳಿದ್ದಾರೆ. ಮಾತ್ರವಲ್ಲ ಅವರು ಬುದ್ಧಿಮಾಂದ್ಯ ಮಕ್ಕಳಿಗಾಗಿಯೇ ಆರಂಭಿಸಿದ ವಿಶೇಷ ಶಾಲೆ, ವಾರದಲ್ಲಿ ಒಂದು ದಿನ ಎಚ್‌ಐವಿ ಪೀಡಿತರಿಗೆ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯಂತಹ ಕಾರ್ಯಕ್ರಮಗಳು, ನಿರಂತರ ನಾಡಿನ ಮೂಲೆಮೂಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ದೇಶದ ಖ್ಯಾತನಾಮರಿಂದ ತಿಂಗಳು ಗಟ್ಟಲೆ ಒದಗಿಸುವ ತರಬೇತಿ, ಸಾವಿರಾರು ಜನರಿಗೆ ಉದ್ಯೋಗ, ಇಂತಹ ಕಾರ್ಯಗಳು ನವೀನ್‍ರಿಗೆ ಕಾಣಿಸುವುದಿಲ್ಲವೇ?

ಇಫ್ತಾರ್ ಕೂಟದಲ್ಲಿ ಆಳ್ವರು:
ಸಮಾಜೋತ್ಸವದ ವೇದಿಕೆಯಲ್ಲಿ ಕಾಣಿಸಿಕೊಂಡದ್ದೇ ಅಪರಾಧ ಎಂಬಂತೆ ಬಿಂಬಿಸುವ ಪ್ರಯತ್ನ ನವೀನರದ್ದು. ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷರಾಗಿ ಅವರು ಕರಾವಳಿಯ ಶಾಂತಿ ಕೆಡಿಸುವ ಉಗ್ರ ಭಾಷಣವನ್ನು ಮಾಡಿಲ್ಲ. ಸಾಮರಸ್ಯ ನಮ್ಮ ನಾಡಿನ ಗುಣ ಎಂಬುದನ್ನು ಸಾರಿದ್ದರು. ಇದೇ ಆಳ್ವರು ಕಳೆದ ಹಲವು ವರ್ಷಗಳಿಂದ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಮುಸಲ್ಮಾನ ಬಂಧುಗಳ ಜತೆಗೆ ಪ್ರಾರ್ಥನೆ ಮಾಡಿ ಇಫ್ತಾರ್ ಕೂಟವನ್ನು ನಡೆಸುತ್ತಿದ್ದಾರೆ.

ಶಿಕ್ಷಕರ ದಿನಾಚರಣೆಯಂದು ಪ್ರತಿವರ್ಷ ಕ್ರೈಸ್ತ ಗುರುಗಳನ್ನು ಸನ್ಮಾನಿಸಿ ಗೌರವಿಸುತ್ತಾರೆ. ಜಾತಿ, ಮತ, ಧರ್ಮ ಯಾವುದೇ ಭೇದಭಾವಗಳಿಲ್ಲದೇ ನೌಕರರನ್ನು ನಿಯಮಿಸಿಕೊಳ್ಳುತ್ತಾರೆ. ಕರಾವಳಿಯ ಎಲ್ಲ ಧರ್ಮಿಯರೂ ಆಳ್ವರನ್ನು ಗೌರವದಿಂದ, ಪ್ರೀತಿಯಿಂದ ತಮ್ಮ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಇದೇ ಕಾರಣಕ್ಕೆ.

ಎಡಪದವು ಪ್ರಕರಣ ಶಿಸ್ತುಕ್ರಮದ್ದು:
ಇನ್ನು ಎಡಪದವು ಪ್ರಕರಣ. ನವೀನರು ಸುಳ್ಳನ್ನೇ ಸುದ್ದಿಯಾಗಿಸಿದ್ದಾರೆ. ಎಡಪದವು ಶಾಲೆ ಸರ್ಕಾರಿ ಶಾಲೆಯಲ್ಲ. ಅದು ಅನುದಾನಿತ ಶಾಲೆ. ಆಳ್ವರು ಅದರ ಗೌರವ ಸಲಹೆಗಾರರಲ್ಲ. ಸಂಚಾಲಕರು. ಎಡಪದವು ಶಾಲೆಯನ್ನು ಆರಂಭಿಸಿದವರೇ ಡಾ.ಮೋಹನ ಆಳ್ವರ ತಂದೆ ಆನಂದ ಆಳ್ವರು. ಕಳೆದ ಕೆಲವು ವರ್ಷಗಳಿಂದ ಮೋಹನ ಆಳ್ವರು ಈ ಶಾಲೆಯ ಸಂಚಾಲಕರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮಾತ್ರವಲ್ಲ ಆಳ್ವರ ಸಂಸ್ಥೆಯ ಮೂಲಕ ದತ್ತು ಸ್ವೀಕಾರ ಮಾಡಿದ ವಿದ್ಯಾರ್ಥಿಗಳೂ ಅಲ್ಲಿ ಕಲಿಯುತ್ತಿದ್ದರು. ಅದಕ್ಕೆಲ್ಲಾ ದಾಖಲೆಗಳಿವೆ. ಕಾಲೇಜಿನ ಅನುಮತಿಯಿಲ್ಲದೇ ಕ್ರೀಡಾಕೂಟಕ್ಕೆ ಹೋಗಿ ಅನುಚಿತ ವರ್ತನೆಗೆ ಸುದ್ದಿಯಾದ್ದಕ್ಕೆ ವಿದ್ಯಾರ್ಥಿಗಳನ್ನು ಶಾಲೆಯವರು ಪ್ರಶ್ನಿಸಿದ್ದು, ಅದಕ್ಕೆ ವಿದ್ಯಾರ್ಥಿಗಳು ತೋರಿದ ಉಢಾಫೆಗೆ ಶಿಸ್ತುಕ್ರಮವನ್ನು ಸಂಚಾಲಕರಾಗಿ ಆಳ್ವರು ನಡೆಸಿದ್ದರು. ತಾನೇ ಸಂಚಾಲಕನಾಗಿರುವ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಆಳ್ವರು ಮಾಡುತ್ತಾರೆಯೇ? ಅಷ್ಟಕ್ಕೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳ ಗೊಂಚಲನ್ನು ತನ್ನದಾಗಿಸಿಕೊಳ್ಳುವ ಆಳ್ವಾಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಕ್ರೀಡಾಕೂಟದಲ್ಲಿ ಪದಕ ಪಡೆಯಲು ಇಂತಹ ಸಣ್ಣತನಗಳ ಅಗತ್ಯವಿದೆಯೇ?

ಆಳ್ವಾಸ್ ಆವರಣದಲ್ಲಿ ದೈವದ ಪ್ರತಿಮೆ ಅನಾವರಣ:
ಇನ್ನು ದೈವಗಳನ್ನು ವೇದಿಕೆಗೆ ತಂದ ಕುರಿತು. ದೈವಗಳಲ್ಲಿ ದಲಿತರ ದೈವ, ಮೇಲ್ವರ್ಗದವರ ದೈವ ಎಂಬ ಭೇದಭಾವವಿಲ್ಲ. ದೈವಗಳಲ್ಲೂ ಸಂಕುಚಿತ ಜಾತಿ ರಾಜಕೀಯವನ್ನು ತರುವುದು ಸಲ್ಲದು.ದೈವಗಳು ಕರಾವಳಿಯ ಜನಮಾನಸದ ಗೌರವ ಭಕ್ತಿಗೆ ಪಾತ್ರವಾದವು. ಸ್ವತ: ಆಳ್ವರೂ ದೈವಾರಾಧನೆಯನ್ನು ಮಾಡುತ್ತಾ ಬಂದ ಹಿರಿಯರ ಕುಟುಂಬದಿಂದ ಬಂದವರೇ. ದೈವಾರಾಧನೆಯಲ್ಲಿರುವ ಕಲಾತ್ಮಕ ಅಂಶವನ್ನು ನಾಡಿಗೆ ಪರಿಚಯಿಸಬೇಕು ಎಂಬ ಸದುದ್ದೇಶದಿಂದ ದೈವಾರಾಧನೆಯನ್ನು ಅವರು ವೇದಿಕೆಗೆ ತಂದಿದ್ದಾರೆ. ಎಲ್ಲೂ ದೈವಗಳಿಗಾಗಲೀ, ದಲಿತರಿಗಾಗಲೀ ಅವಮಾನವಾಗುವಂತೆ ಅವರು ನಡೆದುಕೊಂಡಿಲ್ಲ. ಕರಾವಳಿಯ ಹೆಚ್ಚಿನ ದೈವಾರಾಧನೆಯಲ್ಲಿ ಬಳಸುವ ಎಲ್ಲ ಆಭರಣ ವಿಶೇಷಗಳ ಸಂಗ್ರಹ ಅವರ ಬಳಿ ಇದೆ. ತಮ್ಮ ಕಾಲೇಜಿನ ಆವರಣದಲ್ಲಿ ದೈವದ ಪ್ರತಿಮೆಯನ್ನು ನಿಲ್ಲಿಸಿ ತಮ್ಮ ಗೌರವವನ್ನು ಸಲ್ಲಿಸಿದ್ದಾರೆ. ದೈವಗಳು ದಲಿತರಿಗೆ ಎಷ್ಟು ಸೇರಿದ್ದೋ, ಅಷ್ಟೇ ಉಳಿದ ಸಮಾಜದ ಸಮುದಾಯಗಳಿಗೂ ಸೇರಿದ್ದು. ದೈವಾರಾಧನೆ ಒಂದು ಸಮಾಜದ ಆಸ್ತಿ ಎಂಬುದನ್ನು ನಾವು ಮನಗಾಣಬೇಕಿದೆ. ವೇದಿಕೆಗಳಲ್ಲಿ, ಯಕ್ಷಗಾನಗಳಲ್ಲಿ ದೇವಿ, ರಾಮ, ಕೃಷ್ಣ, ಯೇಸು, ಮಹಮ್ಮದ್ ಬರಬಹುದಾದರೆ ಗೌರವಕ್ಕೆ ಧಕ್ಕೆ ಬಾರದಂತೆ ದೈವಾರಾಧನೆಯ ಕಲಾತ್ಮಕತೆಯನ್ನು ಪ್ರದರ್ಶಿಸುವುದು ತಪ್ಪಾದರೂ ಹೇಗಾಗುತ್ತೆ?

ಇದು ಮಾಧ್ಯಮ ಲೋಕಕ್ಕೆ ಅವಮಾನ:
ಆಳ್ವರಿಗೆ ಸಿಗುತ್ತಿರುವ ಪ್ರಚಾರ ನೋಡಿ ಸ್ವತ: ಮಾಧ್ಯಮ ಕ್ಷೇತ್ರದಲ್ಲಿರುವ ನವೀನರಿಗೆ ಸಖತ್ ಹೊಟ್ಟೆನೋವಾದಂತಿದೆ. ಒಳ್ಳೆಯ ಕೆಲಸವನ್ನು ನೋಡಿ ಬೆಂಬಲಿಸುವ ಪ್ರಾಮಾಣಿಕ ಮಾಧ್ಯಮದ ಮಂದಿ ಇನ್ನೂ ಸಾಕಷ್ಟು ಮಂದಿ ಇದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಪ್ಯಾಕೇಜ್‌ಗಳಿಗೆ ಮಾಧ್ಯಮಗಳು ತಮ್ಮನ್ನು ಮಾರಿಕೊಳ್ಳುತ್ತವೆ ಎನ್ನುವುದರ ಮೂಲಕ ನವೀನರು ಇಡೀ ಮಾಧ್ಯಮದವರನ್ನೇ ಅವಮಾನಿಸುತ್ತಿದ್ದಾರೆ. ಹೀಗೆ ಪ್ಯಾಕೇಜ್ ನೀಡಲಾಗಿದೆ ಎಂಬುದಕ್ಕೆ ಅವರಲ್ಲಿ ದಾಖಲೆಗಳೇನಾದರೂ ಇವೆಯಾ?

ಆಳ್ವರು ನಡೆಸುತ್ತಿರುವ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ, ಗುಣಮಟ್ಟದಿಂದ ಕೂಡಿವೆ, ನಾಡಿಗೆ ಮಾದರಿಯಾಗಿದೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದ ಸಾಹಿತಿಗಳು ಚಿಂತಕರು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಮಾಧ್ಯಮಗಳೂ ಅಷ್ಟೇ ಪ್ರೀತಿಯಿಂದ ಪ್ರಚಾರ ಕೊಡುತ್ತಿವೆ. ಇದರ ಪರಿಣಾಮ ಇಂತಹ ಸಾಂಸ್ಕೃತಿಕ ವಾತಾವರಣದಲ್ಲಿ ನಮ್ಮ ಮಕ್ಕಳು ಕಲಿಯಬೇಕೆಂದು ಹಂಬಲಿಸಿ ಹೆತ್ತವರು ಇಲ್ಲಿ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇಲ್ಲಿಗೆ ಬಂದ ಸಾಹಿತಿಗಳೆಲ್ಲ ಸುಳ್ಳು ಸುಳ್ಳೆ ಹೊಗಳಿದ್ದಾರೆ ಎಂಬ ನಿಮ್ಮ ಮಾತು ಈವರೆಗೆ ನುಡಿಸಿರಿಯ ವೇದಿಕೆಯಲ್ಲಿ ಮಾತನಾಡಿದ 800ಕ್ಕೂ ಅಧಿಕ ವಿಮರ್ಶಕರ, ಕವಿಗಳ, ಕಥೆಗಾರರ, ಚಿಂತಕರ, ಕನ್ನಡ ಹಿತಚಿಂತಕರ, ಸಾವಿರಾರು ಮಂದಿ ಕಲಾವಿದರ ನೈತಿಕತೆಯನ್ನೇ ಅವಮಾನಿಸಿದಂತೆ ಎಂಬ ಎಚ್ಚರ ನವೀನರಿಗಿದೆಯೇ?

ಇನ್ನು ನುಡಿಸಿರಿಗೆ ಅನಂತಮೂರ್ತಿಯವರು ಬರಬೇಕೇ ಎಂಬ ಕುರಿತು. ಇಂದು ನುಡಿಸಿರಿ ನಾಡಿನ ಮಹತ್ವದ ಸಮ್ಮೇಳನವಾಗಿದೆ. ಕನ್ನಡ ನಾಡು ನುಡಿಯ ಅಸ್ಮಿತೆಯ ಪ್ರತೀಕ. ಇಲ್ಲಿನ ಮಾತಿಗೆ ಇಡೀ ಕರ್ನಾಟಕ ಕಿವಿಗೊಡುತ್ತದೆ. ನಾಡು ಗಮನಿಸುವಾಗ ನಾವು ಕೊಡುವುದೂ ಅಷ್ಟೇ ಗುಣಮಟ್ಟದ್ದಿರಬೇಕು. ಒಳ್ಳೆಯ ವಿಚಾರಗಳು ಎಲ್ಲ ಕಡೆಯಿಂದ ಹರಿದು ಬರಲಿ ಎಂಬ ಆಶಯವನ್ನಿಟ್ಟುಕೊಂಡು ಪ್ರಜಾಪ್ರಭುತ್ವ ಮಾದರಿಯಲ್ಲಿ ನುಡಿಸಿರಿಯ ಎಲ್ಲ ಆಯ್ಕೆಗಳು ನಡೆದಿವೆ. ನಡೆಯುತ್ತಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಎಲ್ಲ ಸೂಚನೆಗಳೂ, ಆಯ್ಕೆಗಳೂ ನಡೆಯುತ್ತವೆ. ಬರುವ ಸಾಹಿತಿಗಳಿಗೆ ನುಡಿಸಿರಿ ವೇದಿಕೆ. ವಿಚಾರಗಳೂ ಅವರವರದೇ. ಎಲ್ಲ ವಿಚಾರಧಾರೆಗಳಿಗೂ ಸಮಾನ ಗೌರವ. ಈ ಹಿಂದಿನ ಸಮ್ಮೇಳನದ ಅಧ್ಯಕ್ಷರು, ಉದ್ಘಾಟಕರು, ಸನ್ಮಾನಿತರು, ಭಾಗವಹಿಸಿದ ಸಾಹಿತಿಗಳ ವಿವರಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಅಲ್ಲಿ ಎಡ, ಬಲ, ಜಾತಿ, ಮತ, ಪ್ರದೇಶ ಈ ಯಾವ ಪರ ಒಲವೂ ಇಲ್ಲ. ಗುಣಮಟ್ಟ, ಜನಮಾನ್ಯತೆ ಒಂದೇ ಮಾನದಂಡ. ಅನಂತಮೂರ್ತಿಯವರು ದೇಶ ಕಂಡಿರುವ ಅದ್ಭುತ ಚಿಂತಕ. ವಾಗ್ಮಿ. ಅವರ ಚಿಂತನೆಗಳಿಗೆ ನುಡಿಸಿರಿಯ ಅಪಾರ ಸಹೃದಯಿ ಬಳಗ ಕಾದಿದೆ. ಅವರು ಬಂದೇ ಬರುತ್ತಾರೆ ಎಂಬ ವಿಶ್ವಾಸ ಸಾಹಿತ್ಯಾಸಕ್ತರದ್ದು.

ಸುದ್ದಿ ಚಾನಲ್‌ಗಳ ಬುದ್ಧಿಗೇಡಿತನ


– ಡಾ.ಎನ್.ಜಗದೀಶ್ ಕೊಪ್ಪ


ಸಾರ್ವಜನಿಕ ಬದುಕಿನಲ್ಲಿ ಸುದ್ದಿ ಮತ್ತು ಮಾಹಿತಿ ಪ್ರಸಾರಕ್ಕೆ ತೆರೆದುಕೊಂಡಿರುವ ನಮ್ಮ ಸುದ್ದಿ ಮಾಧ್ಯಮಗಳಿಗೆ ಒಂದು ಸಾಮಾಜಿಕ ಹೊಣೆಗಾರಿಕೆ ಇರದಿದ್ದರೆ, ಏನಾಗಬಹುದು ಎಂಬುದಕ್ಕೆ ಇತ್ತೀಚೆಗೆ ನಮ್ಮ ಕನ್ನಡ ಸುದ್ದಿ ಚಾನಲ್‌ಗಳು ಸುದ್ದಿಯ ಹೆಸರಿನಲ್ಲಿ ಕರ್ನಾಟಕದ ಜನತೆಗೆ ಲದ್ದಿಯನ್ನು ಉಣಬಡಿಸುತ್ತಿರುವುದೇ ಸಾಕ್ಷಿ.

ಈ ನಾಡಿನ ಜ್ವಲಂತ ಸಮಸ್ಯೆ ಅಥವಾ ಜೀವನ್ಮರಣದ ಪ್ರಶ್ನೆಯಂಬಂತೆ ಕಳೆದ ನಾಲ್ಕುದಿನಗಳಿಂದ ಒಬ್ಬ ಕಿರುತೆರೆ ನಟಿಯ ಸಾವು ಕುರಿತು ನಡೆಯುತ್ತಿರುವ ಚರ್ಚೆ, ಈ ಕನ್ನಡ ನೆಲದ ಭವಿಷ್ಯದ ದಿನಗಳ ಬಗ್ಗೆ ಗಾಬರಿ ಹುಟ್ಟಿಸುವಂತಿದೆ. ತನ್ನ ಅವಿವೇಕತನದ ನಿರ್ಧಾರದಿಂದ ವಂಚಕನೊಬ್ಬನ ನಾಲ್ಕನೇ ಪತ್ನಿಯಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟು ನಂತರ ಕೊಲೆಯಾದ ಈ ಕಿರುತೆರೆಯ ನಟಿಯ ಬಗ್ಗೆ ಪೈಪೋಟಿಗೆ ಬಿದ್ದಂತೆ ಕನ್ನಡ ಚಾನಲ್‌ಗಳು ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುತ್ತಿರುವ ಬಗೆಯನ್ನು ಗಮನಿಸಿದರೆ, ಮನಸ್ಸಿನಲ್ಲಿ ಜಿಗುಪ್ಸೆ ಮೂಡುತ್ತದೆ.

ಒಂದು ಜೀವದ ದುರಂತ ಸಾವಿನ ಬಗ್ಗೆ ಮರುಕ ಪಡಬೇಕಾದ್ದು ಮನುಷ್ಯನ ಸಹಜ ಗುಣ. ಆದರೆ, ಅದು ವಿವೇಕದ ಎಲ್ಲೇ ಮೀರಬಾರದು. ಆಕೆಯ ಬದುಕಿನ ವೃತ್ತಾಂತವನ್ನು ಎತ್ತಿಕೊಂಡು ಆ ಹೆಣ್ಣುಮಗಳ ಖಾಸಗಿ ಬದುಕು ಮತ್ತು ಆಕೆಯ ಕುಟುಂಬದ ಜಾತಕವನ್ನು ರಸ್ತೆಯ ಬದಿಯಲ್ಲಿ ಕಬ್ಬಿನ ಹಾಲು ಮಾರುವವನು ಕಬ್ಬನ್ನು ಹಿಂಡುವಂತೆ ಹಿಂಡಿದರೆ, ಪ್ರಯೋಜನವೇನು? ಈ ಘಟನೆಯಲ್ಲಿ ಆಕೆಯ ಪಾತ್ರವೂ ಇತ್ತು ಎಂಬುದನ್ನು ಮರೆಮಾಚಿ ಆಕೆಯನ್ನು ಹುತಾತ್ಮಳಂತೆ ವರ್ಣಿಸುತ್ತಿರುವ ಚಾನಲ್‌ಗಳ ಕೃತಕ ಮಾತುಕತೆಗಳು ಅಸಹ್ಯ ಮೂಡಿಸುತ್ತವೆ.

ಆಕೆಯೇನು ಅವಿದ್ಯಾವಂತೆಯಾಗಿರಲಿಲ್ಲ, ಇಂಜಿನಿಯರಿಂಗ್ ಪದವಿ ಮುಗಿಸಿ, ಕಿರುತೆರೆಯಲ್ಲಿ ಹತ್ತು ವರ್ಷಗಳ ಕಾಲ ದುಡಿದು ನೆಲೆ ಕಂಡುಕೊಂಡಿದ್ದ ಹೆಣ್ಣು ಮಗಳಾಗಿದ್ದಳು. ತಾನು ಯಾರನ್ನು ಮದುವೆಯಾಗಬೇಕು ಎಂಬುದರ ಬಗ್ಗೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲಾರದ ಅಸಹಾಯಕಳಾಗಿರಲಿಲ್ಲ. ಹಳ್ಳಿಗಾಡಿನ ಏಳನೇ ತರಗತಿ ಓದಿದ ಹುಡುಗಿಯರು ಪೋಷಕರನ್ನು ಧಿಕ್ಕರಿಸಿ ತಾನು ಮೆಚ್ಚಿದ ಹುಡುಗನ ಜೊತೆ ಪೊಲೀಸ್ ಠಾಣೆಗೆ ಹೋಗಿ ಮದುವೆಯಾಗುತ್ತಿರುವ ಈ ದಿನಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ಅಪಾರ ಸಹೃದಯರ ಗೆಳೆತನ ಸಂಪಾದಿಸಿದ್ದ ಈ ನಟಿಗೆ ಅದು ಏಕೆ ಸಾಧ್ಯವಾಗಲಿಲ್ಲ? ಇದು ಇಲ್ಲಿಗೆ ಮುಗಿಯಬಹುದಾದ ಮಾತು.

ನಡೆದಿರುವ ದುರಂತದ ಘಟನೆಯ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡು, ಆಕೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವಾಗ ಆಕೆಯ ಬೆಡ್ ರೂಂ ರಹಸ್ಯ, ಮತ್ತು ಆಕೆಯ ಗಂಡನ ಪುರುಷತ್ವದ ಬಗೆಗಿನ ಸಂದೇಹವನ್ನು ಈ ಚಾನಲ್‌ಗಳು ಚುಯಿಂಗ್ ಗಂ ನಂತೆ  ಬಹಿರಂಗವಾಗಿ ಅಗಿಯುತ್ತಿರುವುದೇಕೆ?

ಇದೀಷ್ಟೇ ಆಗಿದ್ದರೇ ಸಹಿಸಬಹುದಿತ್ತು ಆದರೆ, ಕಳೆದ ಎರಡು ತಿಂಗಳಿಂದ ಕಪಟ ಸನ್ಯಾಸಿ ಎಂದು ಜಗಜ್ಜಾಹೀರಾಗಿರುವ ನಿತ್ಯಾನಂದನ ಪರ ವಿರೋಧ ಕುರಿತು ಚಾನಲ್‌ಗಳಲ್ಲಿ ನಡೆಯುತ್ತಿರುವ ವಾಗ್ವಾದಗಳು ನ್ಯಾಯಾಲಯದಲ್ಲಿನ ವಕೀಲರ ವಾದಗಳನ್ನು ನಾಚಿಸುವಂತಿವೆ. ಆರತಿರಾವ್ ಎಂಬಾಕೆ ಸಾಮಾನ್ಯ ಹೆಣ್ಣು ಮಗಳೇಲ್ಲ, ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆರು ವರ್ಷ ದುಡಿದು ಅನುಭವಗಳಿಸಿದಾಕೆ. ಆತನ ಜೊತೆ ಪಲ್ಲಂಗ ಹಂಚಿಕೊಂಡಾಗ ಈಕೆಯ ವಿವೇಕ ಅಥವಾ ಪ್ರಜ್ಞೆ ಯಾವ ಕಾಡಿನಲ್ಲಿ ಅನಾಥವಾಗಿ ಅಲೆಯುತ್ತಿತ್ತು. ಈಗ ದುರಂತ ನಾಯಕಿಯಂತೆ ಕ್ಯಾಮರಾ ಮುಂದೆ ಕಣ್ಣೀರು ಹರಿಸುವುದು, ಅದಕ್ಕೆ ನಿರೂಪಕ ಉಪ್ಪು, ಖಾರ, ಮಸಾಲೆ ಬೆರಸಿ, ವರ್ಣಿಸುವುದು ಇದೆಲ್ಲಾ ಒಂದು ಚಾನಲ್ ಕಥೆಯಾದರೆ, ನಿತ್ಯಾನಂದನ ಪರ ತೊಡೆ ತಟ್ಟಿ ನಿಂತಿರುವ ಮತ್ತೊಂದು ಚಾನಲ್ ಇದೇ ಆರತಿಯನ್ನು ವೇಶೈಯಂತೆ ಬಿಂಬಿಸುತ್ತಿದೆ. ಆಕೆಯ ವೈದ್ಯಕೀಯ ವರದಿಗಳ ಬಗ್ಗೆ ತೀರ್ಪು ನೀಡಲು ಇವರಿಗೆ ಅಷ್ಟೋಂದು ಕಾಳಜಿ ಏಕೆ? ಇವುಗಳನ್ನು ಗಮನಿಸಿದರೇ, ಇವರು ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಬೇಕಾಗಿದೆ.

“ಕೊಲೆ, ಅನೈತಿಕ ಸಂಬಂಧ, ಇವುಗಳ ವಿಚಾರಣೆಗೆ ಪೊಲೀಸರು, ನ್ಯಾಯಲಯ, ವಕೀಲರು ಏಕೆ ಬೇಕು? ನಾವಿದ್ದೀವೆ,” ಎಂಬಂತಿದೆ ಇತ್ತಿಚೆಗಿನ ಕನ್ನಡದ ಚಾನಲ್‌ಗಳ ಸಂಸ್ಕೃತಿ. ಇವುಗಳೆಲ್ಲವನ್ನು ಮೀರಿದ, ಆದ್ಯತೆಯ ಮೇಲೆ ಚರ್ಚಿಸಬೇಕಾದ ವಿಷಯಗಳು ಕರ್ನಾಟಕದಲ್ಲಿ ತುಂಬಿ ತುಳುಕುತ್ತಿವೆ ಆದರೆ, ಗ್ರಹಿಸುವ ಹೃದಯಗಳು ಇರಬೇಕು. ಪ್ರತಿ ನಿತ್ಯ ನಡೆಯುವ ರೈತರ ಆತ್ಮಹತ್ಯೆ, ಕುಸಿಯುತ್ತಿರುವ ಬೇಸಾಯದ ಬಗೆಗಿನ ರೈತನ ಕಾಳಜಿ, ಬರದಿಂದ ತತ್ತರಿಸುತ್ತಿರುವ ಗ್ರಾಮೀಣ ಜನತೆ, ಮೇವಿಲ್ಲದೆ ಕಟುಕರ ಮನೆಗೆ ಸಾಗುತ್ತಿರುವ ಜಾನುವಾರುಗಳು, ನಾಗಾಲೋಟದಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಗರಗಳಲ್ಲಿ ತತ್ತರಿಸಿ ಹೋಗಿರುವ ಬಡವರು ಇವರೆಲ್ಲಾ ಗಂಭೀರವಾಗಿ ಏಕೆ ಚರ್ಚೆಯಾಗುತ್ತಿಲ್ಲ?

ಒಂದು ಕೆ.ಜಿ. ಅಕ್ಕಿ ಬೆಲೆ ಮತ್ತು ಸಕ್ಕರೆಯ ಬೆಲೆ ನಲವತ್ತು ರೂಪಾಯಿ ಆಗಿದೆ. ಬಡವರು ಅಕ್ಕಿ ತಿನ್ನಬೇಕೊ? ಸಕ್ಕರೆ ತಿನ್ನಬೇಕೊ? ಭಾರತದ 118 ಕೋಟಿ ಜನರಲ್ಲಿ 92 ಕೋಟಿ ಮೊಬೈಲ್ ಚಂದಾದಾರರಿದ್ದಾರೆ. ಸರಾಸರಿ ಪ್ರತಿಯೊಬ್ಬ ವ್ಯಕ್ತಿ ತಿಂಗಳಿಗೆ ನೂರು ರೂ ಖರ್ಚು ಮಾಡುತ್ತಿದ್ದಾನೆ ಎಂದು ಲೆಕ್ಕ ಹಾಕಿದರೂ ತಿಂಗಳಿಗೆ 92 ಸಾವಿರ ಕೋಟಿ ರೂಗಳು ಅರ್ಥವಿಲ್ಲದ ಖಾಲಿ ಶಬ್ಧಗಳಾಗಿರುವ ಮಾತಿಗೆ ವ್ಯಯ ಮಾಡುತ್ತಿದ್ದೇವೆ. ಇದು ನಾಚಿಕೇಗೇಡಿನ ಸಂಗತಿ ಎಂದು ನಮಗೆ ಅನಿಸುವುದಿಲ್ಲ. ದಶಕದ ಹಿಂದೆ ಈ ಮೊಬೈಲ್ ಇಲ್ಲದಿದ್ದಾಗಲೂ ಜನ ಬದುಕಿದ್ದರಲ್ಲವೆ? ಈ ಹಣ ಯಾರನ್ನು ಉದ್ದಾರ ಮಾಡುತ್ತಿದೆ ಎಂಬುದರ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ಹೇಳಬೇಕಾದವರು ಯಾರು? ದೃಶ್ಯ  ಮಾಧ್ಯಮಗಳೇಕೆ ಮೌನವಾಗಿವೆ. ನಮ್ಮನ್ನಾಳುವವರು ಯಾವ ವಿಷಯದಲ್ಲಿ ಮುಳುಗಿದ್ದಾರೆ? ಈ ರಾಜ್ಯದಲ್ಲಿ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳ ಒಂದು ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂದು ಯಾರಿಗಾದರೂ ಅನಿಸುತ್ತಾ? ಇಂತಹ ಗಂಭೀರ ವಿಷಯಗಳು ಯಾಕೆ ಚರ್ಚೆಯಾಗುತ್ತಿಲ್ಲ? ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅನಾವರಣಗೊಳಿಸಲು ಒಬ್ಬ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್‌ನಿಂದ ಸಾಧ್ಯವಾಯಿತು. ದೇಶದೆಲ್ಲೆಡೆ ಒಂದೇ ಸಮನೇ ಘರ್ಜಿಸುತ್ತಿರುವ ನೂರಕ್ಕೂ ಹೆಚ್ಚಿನ ಸುದ್ದಿ ಚಾನಲ್‌ಗಳು ಏನು ಮಾಡುತ್ತಿದ್ದವು?

ಘಟಿಸಿ ಹೋದ ವಿಷಯಗಳನ್ನು ತೆಗೆದುಕೊಂಡು ಮಸಾಲೆ ಹಾಕಿ ರುಬ್ಬುವುದಕ್ಕೆ ಇಂತಹ ಸುದ್ದಿ ಚಾನಲ್‌ಗಳು ಕನ್ನಡದ ಜನತೆಗೆ ಅವಶ್ಯಕತೆ ಇಲ್ಲ. ಸಮಸ್ಯೆಯ ಆಳಕ್ಕೆ ಇಳಿಯುವ , ಅವುಗಳನ್ನು ಹುಡುಕಿಕೊಂಡು ಹೋಗಿ ಜನತೆಯ ಮುಂದಿಡುವ ಮನಸ್ಸುಗಳು ಈಗ ಬೇಕಾಗಿವೆ. ಮಂಡ್ಯ ಜಿಲ್ಲೆಯ ಆಡು ಭಾಷೆಯಲ್ಲಿ ಒಂದು ಮಾತಿದೆ. “ಬಾಳೆ ಗಿಡ ಕಡಿಯೊದ್ರಲ್ಲಿ ನನ್ನ ಗಂಡ ಶೂರ ಧೀರ” ಅಂತಾ. ನಮಗೆ ಬಾಳೇ ಗಿಡ ಕಡಿಯುವವರು ಬೇಕಾಗಿಲ್ಲ. ಈ ನೆಲದಲ್ಲಿ ಎಲ್ಲೆಂದರಲ್ಲಿ ಬೆಳೆದು ತಾಂಡವವಾಡುತ್ತಿರು ಮುಳ್ಳಿನ ಗಿಡಗಳು ಮತ್ತು ಕಳೆಗಳನ್ನು ಕಿತ್ತು ಹಾಕಿ ನೆಲವನ್ನು ಹಸನು ಮಾಡುವ ಅಪ್ಪಟ ಮನುಷ್ಯರು ಬೇಕಾಗಿದ್ದಾರೆ.

ನನ್ನ ಕಥೆಗಾರ ಮಿತ್ರ ಕೇಶವ ಮಳಗಿ ಹೇಳಿದ ಒಂದು ಅತ್ಯಂತ ಮೌಲ್ಯಯುತ ಮಾತು ನೆನಪಾಗುತ್ತಿದೆ: “ಗಂಟಲು ಹರಿದುಕೊಳ್ಳುವ, ಘೋಷಣೆ ಕೂಗುತ್ತಿರುವ ಈ ದಿನಗಳಲ್ಲಿ ಅಂತರಂಗದ ಪಿಸು ಮಾತಿಗೆ ಕಿವಿ ಕೊಡುವವರು ಕಡಿಮೆಯಾಗುತಿದ್ದಾರೆ.” ಒಂದೇ ಸಮನೆ ಸುದ್ದಿಯ ಹೆಸರಿನಲ್ಲಿ ವಿವೇಚನೆಯಿಲ್ಲದೆ ಗಂಟಲು ಹರಿದುಕೊಳ್ಳುತಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆ ನಮ್ಮನ್ನು (ಅಂದರೇ ದೃಶ್ಯ ಮಾಧ್ಯಮದ ಒಂದು ಭಾಗವಾಗಿರುವ ನನ್ನನ್ನೂ ಒಳಗೊಂಡಂತೆ) ಪತ್ರಕರ್ತರು ಎಂದು ಕರೆಯುವುದಿಲ್ಲ, ಬದಲಾಗಿ ಬಫೂನುಗಳು ಎಂದು ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಮ ತನ್ನ ವಚನವೊಂದರಲ್ಲಿ ನಮ್ಮನ್ನು ಹೀಗೆ ಎಚ್ಚರಿಸಿದ್ದಾನೆ:

ಶಬ್ಧ ಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು
ತಮ್ಮ ತಾವರಿಯರು
ಇದು ಕಾರಣ-ಮೂರು ಲೋಕವೆಲ್ಲವೂ
ಬರಸೂರೆವೋಯಿತ್ತು ಗುಹೇಶ್ವರಾ.

(ವ್ಯಂಗ್ಯಚಿತ್ರ ಕೃಪೆ : ಪ್ರಕಾಶ್ ಶೆಟ್ಟಿ, ಪ್ರಜಾವಾಣಿ.)