Daily Archives: November 16, 2012

ನವೀನ್ ಸೂರಿಂಜೆ : ದಾರಿ ಬಲು ದೂರ…

ಸ್ನೇಹಿತರೆ,

ಮಂಗಳೂರಿನ ಜೆ‍ಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ಇಂದು ನವೀನ್ ಸೂರಿಂಜೆಯವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಬೀಳಲಿದೆ. ಈ ವಾರದಲ್ಲಿ ಹೆಚ್ಚು ರಜೆಗಳು ಇದ್ದವು. ಹಾಗಾಗಿ ಪರ-ವಿರುದ್ಧದ ವಾದ-ಪ್ರತಿವಾದಗಳು ಮೊನ್ನೆ ಮಂಗಳವಾರದಂದು ಮುಗಿದು ಇಂದಿಗೆ ಆದೇಶ ನೀಡುವುದಾಗಿ ಅಲ್ಲಿಯ ನ್ಯಾಯಾಧೀಶರು ಪ್ರಕಟಿಸಿದ್ದರು. ಆ ಆದೇಶ ನಿರಪರಾಧಿಯ ಪರ ಇರಲಿ ಎನ್ನುವುದು ನಮ್ಮೆಲ್ಲರ ಆಶಯ.

ಆದೇಶ ಏನೇ ಇರಲಿ, ಸಂವೇದನೆಯನ್ನೇ ಕಳೆದುಕೊಂಡ ಈ ಸರ್ಕಾರ ಮತ್ತು ಇಂತಹ ವಿಚಾರಗಳಿಗೆ ಹೆಚ್ಚು ಮಂಡೆ ಬಿಸಿ ಮಾಡಿಕೊಳ್ಳದ indifferent ಸಮಾಜದ ಸಮಕಾಲೀನ ಸಂದರ್ಭದಲ್ಲಿ ನವೀನ್ ಸೂರಿಂಜೆಯವರ ಕಾನೂನು ಹೋರಾಟದ ದಾರಿ ಬಹುದೂರ ಇದೆ. ಈ ಸಮಯದಲ್ಲಿ ಅವರಿಗೆ ನಮ್ಮೆಲ್ಲರ ನೈತಿಕ ಬೆಂಬಲ ಮತ್ತು ಸಹಕಾರ ಬಹಳ ಬೇಕಿದೆ. ನಮ್ಮ ವರ್ತಮಾನ.ಕಾಮ್ ಬಳಗದ ಶ್ರೀಪಾದ್ ಭಟ್ ಮತ್ತು ನಾನು ಕಳೆದ ಶನಿವಾರ ಮಂಗಳೂರಿಗೆ ಹೋಗಿಬರೋಣ ಎಂದು ಸಿದ್ದವಾದೆವು. ಆದರೆ ಜೈಲಿನಲ್ಲಿ ರಜಾ ದಿನಗಳಂದು ಸಂದರ್ಶನ ಇಲ್ಲದ ಕಾರಣ ಕೊನೆಕ್ಷಣದಲ್ಲಿ ಪ್ರಯಾಣ ರದ್ದು ಮಾಡಬೇಕಾಯಿತು. ಈಗಿನ ತೀರ್ಮಾನದ ಪ್ರಕಾರ ನಾಳೆ ಬೆಳಗ್ಗೆ ನಾವಿಬ್ಬರೂ ಮಂಗಳೂರಿನಲ್ಲಿರುತ್ತೇವೆ. ನವೀನರನ್ನು ನಾಳೆ ಜೈಲಿನಲ್ಲಿ ನೋಡುವುದಕ್ಕಿಂತ ಹೊರಗಡೆ ನೋಡುವ ಸಂದರ್ಭ ಇಂದು ಕೋರ್ಟ್ ಆದೇಶದ ಮೂಲಕ ಸೃಷ್ಟಿಯಾಗಲಿ ಎಂದು ಬಯಸುತ್ತಿದ್ದೇನೆ.

ಈ ವಾರ ಇಂಟರ್ನೆಟ್ ಹೆಚ್ಚು ನೋಡಿರಲಿಲ್ಲ. ಈಗ ತಾನೆ ದಿನೇಶ್ ಅಮಿನ್‌ಮಟ್ಟುರವರು ಬುಧವಾರ ಅವರ ಫೇಸ್‌ಬುಕ್‌ನಲ್ಲಿ ಬರೆದಿರುವ ಪೋಸ್ಟ್ ನೋಡಿದೆ. ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ ಎಂದು ಇಲ್ಲಿ ಕೊಡುತ್ತಿದ್ದೇನೆ.

ನವೀನ್ ಸೂರಿಂಜೆ ಜೈಲು ಸೇರಿ ಇಂದು ಸಂಜೆಗೆ ಒಂದು ವಾರವಾಗುತ್ತದೆ. ಈತನ ಬಂಧನವಾದ ಎರಡು ದಿನಗಳ ನಂತರ ಯಾರಿಂದಲೋ ಮೊಬೈಲ್ ನಂಬರ್ ಪಡೆದು ನವೀನ್ ಅಮ್ಮನಿಗೆ ಪೋನ್ ಮಾಡಿದ್ದೆ. ವಯಸ್ಸಾಗಿರುವ ನವೀನ್ ತಂದೆತಾಯಿಗಳು ಮನೆಯಲ್ಲಿ ಈಗ ಇಬ್ಬರೇ ಇದ್ದಾರೆ. ಆಸರೆಗೆ ಇದ್ದ ಮಗ ಜೈಲಲ್ಲಿ ಇದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ತಂದೆ-ತಾಯಿಯ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಬಹುದು. ನಾನೂ ಅದನ್ನೇ ನಿರೀಕ್ಷಿಸಿದ್ದೆ. ಆದರೆ ನಾನು ಕಂಡ ಆ ಅಮ್ಮನ ಚಿತ್ರವೇ ಬೇರೆ. ಅವರು ಬಂಧನವಾದ ದಿನದ ಬೆಳವಣಿಗೆಗಳನ್ನು ಹೇಳುತ್ತಾ ಹೋದರು.

‘……ಸಾಮಾನ್ಯವಾಗಿ ರಾತ್ರಿ ಮನೆಗೆ ಬರುವುದು ಲೇಟ್ ಆದ ಕೂಡಲೇ ನಾನು ಪೋನ್ ಮಾಡ್ತೇನೆ… ಆ ದಿನವೂ ಪೋನ್ ಮಾಡಿದ್ದೆ…. ಗೆಳೆಯನ ಮನೆಯಲ್ಲಿರುವುದಾಗಿ ಹೇಳಿದ್ದ…ಮರುದಿನ ನನಗೆ ಗೊತ್ತಾದರೂ ಅವನ ತಂದೆಗೆ ಹೇಳಲಿಲ್ಲ..ಈಗ ಗೊತ್ತಾಗಿದೆ…ಅವನ ಅಣ್ಣಂದಿರೆಲ್ಲ ಬೇರೆ ಊರಿನಲ್ಲಿದ್ದಾರೆ…ನೀವೇ ಅವನಿಗೆ ಸಹಾಯ ಮಾಡಬೇಕು…’ ಎಂದು ಹೇಳುತ್ತಾ ಹೋದರು.

ಹತ್ತು ನಿಮಿಷಗಳ ನಮ್ಮ ಸಂಭಾಷಣೆಯಲ್ಲಿ ಆ ತಾಯಿ ಒಂದೇ ಒಂದು ಶಬ್ದ ನವೀನ್ ವಿರುದ್ಧ ಮಾತನಾಡಲಿಲ್ಲ. ‘…ಊರಿನ ಉಸಾಬರಿ ಇವನಿಗ್ಯಾಕೆ ಬೇಕು…ಈಗ ನಮ್ಮನ್ನು ನೋಡಿಕೊಳ್ಳುವವರು ಯಾರಿದ್ದಾರೆ?..ಎಲ್ಲರೂ ಹೀಗೆ, ಕಂಡವರ ಮಕ್ಕಳನ್ನು ಬಾವಿಗೆ ದೂಡಿ ಚಂದ ನೋಡ್ತಾರೆ..’ – ಇಂತಹ ಡೈಲಾಗ್ಗಳನ್ನು ನಿರೀಕ್ಷಿಸಿದ್ದ ನನಗೆ ಆ ತಾಯಿಯ ಮಾತು ಕೇಳಿ ಅಚ್ಚರಿಯಷ್ಟೇ ಅಲ್ಲ, ಕಾಲುಮುಟ್ಟಿ ನಮಸ್ಕರಿಸಬೇಕೆನಿಸುವಷ್ಟು ಗೌರವವೂ ಮೂಡಿತು.

ಇಂತಹ ಒಳ್ಳೆಯ ತಾಯಿಯ ಮಗ ನವೀನ್ ತಪ್ಪು ಕೆಲಸ ಮಾಡಲು ಸಾಧ್ಯವೇ? ನವೀನ್ ಸೂರಿಂಜೆಯನ್ನು ಬಂಧಿಸಿ ಸೇಡು ತೀರಿಸಿಕೊಳ್ಳಲು ಹೊರಟಿರುವ ಮಂಗಳೂರಿನ ಪೊಲೀಸರಿಗೆ ಕೂಡಾ ನವೀನ್ಗೆ ಸಿಕ್ಕಂತಹ ಒಳ್ಳೆಯ ಅಮ್ಮ ಸಿಕ್ಕಿಬಿಟ್ಟಿದ್ದಿದ್ದರೆ? ಇಲ್ಲದೆ ಇದ್ದರೆ ಅವರ ತಾಯಿಯ ಬುದ್ದಿ ಮಾತು ಕೇಳುವಷ್ಟು ಅವರು ಒಳ್ಳೆಯವರಾಗಿರುತ್ತಿದ್ದರೆ? ನಮ್ಮೆಲ್ಲರ ಪ್ರೀತಿಯ ನವೀನ್ ಬೆಳಕಿನ ಹಬ್ಬವನ್ನು ಕತ್ತಲೆಯಲ್ಲಿ ಕಳೆಯಬೇಕಾಗುತ್ತಿರಲಿಲ್ಲ. ನವೀನ್‌ಗೆ ಸಿಕ್ಕಂತಹ ಅಮ್ಮ ಎಲ್ಲರಿಗೂ ಸಿಗಲಿ.

ದಿನೇಶ್ ಅಮಿನ್‌ಮಟ್ಟು

ಇಂದು, ನವೀನ್‌ರಂತಹವರು, ನವೀನರ ತಾಯಿ-ತಂದೆಯಂತಹವರು ಈ ಸಮಾಜಕ್ಕೆ ಹೆಚ್ಚುಹೆಚ್ಚು ಅಗತ್ಯವಾಗುತ್ತ ಹೋಗುತ್ತಿದ್ದಾರೆ. ನಾವೂ ಸಹ ಅವರಲ್ಲೊಬ್ಬರಾಗೋಣ, ಅಲ್ಲವೇ?

ನಮಸ್ಕಾರ,
ರವಿ ಕೃಷ್ಣಾರೆಡ್ಡಿ