Daily Archives: November 28, 2012

ಮರಣದಂಡನೆ ಮತ್ತು ಹ್ಯಾಂಗ್‌ಮನ್‌ಗಳು

– ಬಸವರಾಜು

ಭಾರತದ 1.2 ಬಿಲಿಯನ್ ಜನರಲ್ಲಿ ಎಲ್ಲಾ ತರಹದ ಕೆಲಸಗಳನ್ನು ಮಾಡುವವರಿದ್ದಾರೆ. ಆದರೆ ಇಲ್ಲಿ ಒಂದು ಕೆಲಸ ಖಾಲಿ ಇದೆ. ಆದ್ರೆ ಅದನ್ನು ಮಾಡೋಕೆ ಯಾರೂ ಮುಂದೆ ಬರುತ್ತಿಲ್ಲ. ಅದು ಗಲ್ಲಿಗೇರಿಸುವ ಕೆಲಸ!

2004ರಲ್ಲಿ ಅಸ್ಸಾಂ ಗಲ್ಲಿಗೇರಿಸುವ ಕೆಲಸಕ್ಕೆ ಆಸಕ್ತರನ್ನು ಕರೆದಿತ್ತು. ಈ ವೇಳೆ ಯಾರೊಬ್ಬರೂ ಅತ್ತ ಕಡೆ ತಲೆ ಹಾಕಿರಲಿಲ್ಲ. ಇಂದು ದೇಶದಾದ್ಯಂತ ಗಲ್ಲಿಗೇರಿಸುವ ಕೆಲಸ ಮಾಡುತ್ತಿರುವವರು ಕೆಲವೇ ಕೆಲವು ಮಂದಿ ಮಾತ್ರ. ಬಹುತೇಕರು ನಿವೃತ್ತಿ ತೆಗೆದುಕೊಂಡು ಮನೆಯಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿದ್ದ ಗಲ್ಲಿಗೇರಿಸುವ ಕೆಲಸಗಾರ ಜಾಧವ್ 1995ರಲ್ಲಿ ನಿವೃತಿಯಾದ. ತಿಹಾರ್ ಜೈಲ್ನಲ್ಲಿ ಅಂತಿಮ ಬಾರಿಗೆ 1989ರಲ್ಲಿ ಗಲ್ಲಿಗೇರಿಸಿದ್ದು. ಇಂದಿರಾ ಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೆಹಾರ್ ಸಿಂಗ್ರನ್ನು ಗಲ್ಲಿಗೇರಿಸಲಾಯ್ತು. ಇವರನ್ನು ಗಲ್ಲಿಗೇರಿಸಿದ್ದು ಕಲ್ಲು ಹಾಗೂ ಫಕೀರ್ ಎಂಬ ಹ್ಯಾಂಗ್ಮ್ಯಾನ್ಗಳು. ಅವರೀಗ ಇಲ್ಲ.

ಆದ್ರೆ ಕಲ್ಲು ಅವರ ಮಗ ಮಾಮು ಸಿಂಗ್ ಮೀರತ್ ಜೈಲಿನಲ್ಲಿ ಹ್ಯಾಂಗ್‌ಮ್ಯಾನ್  ಆಗಿ ಕೆಲಸ ಮಾಡುತ್ತಿದ್ದರು. ಇವರು 1997ರಲ್ಲಿ 10 ಮಂದಿಯ ಕುತ್ತಿಗೆಗೆ ನೇಣು ಬಿಗಿದಿದ್ದಾರೆ. ಆದರೆ, 1995 ರಿಂದಲೂ ಬಿಹಾರ, ಅಸ್ಸಾಂ, ಮಹಾರಾಷ್ಟ್ರ ಒಳಗೊಂಡು ಹಲವಾರು ರಾಜ್ಯದ ಜೈಲುಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳ ಕೆಲಸ ಖಾಲಿಯಿದೆ. ಬಹುಶಃ ಇದಕ್ಕೆ ಅವರಿಗೆ ಸಿಗುವ ಕೇವಲ 150 ರೂಪಾಯಿ ಕೂಲಿ, ತಾತ್ಕಾಲಿಕವಾದ ಕೆಲಸ, ಪಾಪಪ್ರಜ್ಞೆಯ ಕೀಳರಿಮೆ, ಇವೆಲ್ಲವೂ ಇರಬಹುದು.

ಇಷ್ಟಕ್ಕೂ, ಗಲ್ಲಿಗೇರಿಸುವ ದಿನ ಹ್ಯಾಂಗ್‌ಮ್ಯಾನ್ ಏನ್ ಕೆಲಸ ಮಾಡ್ಬೇಕು? ಆತ ಬೆಳಗ್ಗೆ 5 ಗಂಟೆಗೆ ಏಳಬೇಕು. ಗಲ್ಲುಗೇರುವವನಿಗೆ ಚಹ ನೀಡಿ, ಅವನ ಮೆಚ್ಚುಗೆಯ ಪವಿತ್ರ ಗ್ರಂಥವನ್ನು ಓದಲು ಕೊಡಬೇಕು. ಅಲ್ಲದೇ ಕೊನೆಯ ಆಸೆಯನ್ನೂ ಫೂರೈಸಲು ಮುಂದಾಗಬೇಕು.

ಮತ್ತು, ಗಲ್ಲಿಗೇರಿಸುವುದೂ ಒಂದು ಕಲೆ. ನೇಣಿಗೇರಿಸುವ ಪ್ರಕ್ರಿಯೆ ಸರಳವಾಗುವ ನಿಟ್ಟಿನಲ್ಲಿ ಹಗ್ಗ ತಯಾರಿಸಲು ಕೆಲವು ಹಂತಗಳ ತಯಾರಿ ಅಗತ್ಯವಿರುತ್ತದೆ. ಯಾವುದೇ ವ್ಯಕ್ತಿಯನ್ನು ಗಲ್ಲಿಗೆ ಹಾಕುವ ಮೊದಲು ಮಾರ್ಜಕ, ತುಪ್ಪ ಮತ್ತು ಇತರ ದ್ರವ್ಯಗಳನ್ನು ಹಗ್ಗಕ್ಕೆ ಲೇಪಿಸುತ್ತಾರೆ. ಮತ್ತು ನೇಣಿಗೆ ಹಾಕುವ ವ್ಯಕ್ತಿ ಅಪರಾಧಿಯನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಸ್ವತಃ ದೃಢ ಮನೋಭಾವವನ್ನು ಹೊಂದಿರುವುದು ಅಗತ್ಯ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಈ 65ರ ಮಾಮು ಸಿಂಗ್ ನೇರ ಅಥವಾ ಪರೋಕ್ಷವಾಗಿ ಪಾತಕಿಗಳನ್ನು ಗಲ್ಲಿಗೆ ಹಾಕುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಬಂದಿದ್ದರು.

ಇಷ್ಟರವರೆಗೆ ಮಾಮು ಸಿಂಗ್ ಹಲವು ರಾಜ್ಯಗಳಲ್ಲಿ 10 ಮಂದಿಯನ್ನು ನೇಣಿಗೇರಿಸಿದ್ದಾರೆ. ಅವರ ಪ್ರಕಾರ ತನ್ನ ಅನುಭವವನ್ನು ಪರಿಗಣಿಸಿ ಸರಕಾರವು ತನ್ನನ್ನೇ ಕಸಬ್ ನೇಣಿಗೆ ಹಾಕಲು ಕರೆಸುತ್ತದೆ. ಹಾಗೆ ಮಾಡಿದಲ್ಲಿ ನನಗೆ ಅತೀವ ಸಂತೋಷವಾಗುತ್ತದೆ ಎಂದು ಹೇಳಿಕೊಂಡಿದ್ದರು. ಆದ್ರೆ ಕಸಬ್ನನ್ನು ಗಲ್ಲಿಗೇರಿಸುವ ಮುಂಚೆಯೇ ಮಾಮು ಸಿಂಗ್ ಸತ್ತರು.

2009ರಲ್ಲಿ ದೇಶದ ಕೊನೆಯ ಹ್ಯಾಂಗ್‌ಮ್ಯಾನ್‌ ಅನಿಸಿಕೊಳ್ಳುತ್ತಿದ್ದ ನಾಥಾ ಮಲ್ಲಿಕ್ ಕೂಡ ಇಲ್ಲವಾದ. ಈ ಮೂಲಕ ರಾಷ್ಟ್ರದ ಹಲವು ಜೈಲುಗಳಲ್ಲಿ ಗಲ್ಲಿಗೇರಿಸುವ ಹುದ್ದೆ ಖಾಲಿಯಾಯ್ತು. 1995ರಿಂದ ಇಲ್ಲಿಯವರೆಗೂ ಒಬ್ಬರೂ ಆ ಕೆಲಸಕ್ಕೆ ಸ್ವಯಂಪ್ರೇರಿತರಾಗಿ ಸೇರಿಕೊಳ್ಳಲಿಲ್ಲ. ಇವತ್ತು ರಾಷ್ಟ್ರದ ಹಲವು ಜೈಲುಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳೇ ಇಲ್ಲ. ಆದರೆ ಗಲ್ಲು ಶಿಕ್ಷೆಗೆ ಒಳಪಟ್ಟ 300 ಮಂದಿ ಖೈದಿಗಳಿದ್ದಾರೆ. ಈಗಾಗಿಯೇ, ಕಸಬ್‌ನನ್ನು ಅನಿವಾರ್ಯವಾಗಿ ಸ್ವತಃ ಜೈಲಿನ ಜೈಲರ್ ಗಲ್ಲಿಗೇರಿಸಬೇಕಾಯಿತು.

ಮರಣದಂಡನೆಯನ್ನು ರದ್ದು ಪಡಿಸಬೇಕೆಂದು ಜಾಗತಿಕ ಮಟ್ಟದಲ್ಲಿ ಮತ್ತು ಮುಂದುವರೆದ ದೇಶಗಳಲ್ಲಿ ಜನಾಭಿಪ್ರಾಯ ರೂಪುಗೊಳ್ಳುತಿರುವಾಗ ಬಹುಶಃ ಭಾರತದಲ್ಲಿಯೂ ಮುಂದಿನ ದಿನಗಳಲ್ಲಿ ಹ್ಯಾಂಗ್‌ಮ್ಯಾನ್‌ಗಳು ಇಲ್ಲವಾಗಬಹುದೇನೊ.