– ತೇಜ ಸಚಿನ್ ಪೂಜಾರಿ
ನಮ್ಮ ಶಾಸಕ ಹಾಗೂ ಸಂಸದರಿಗೆ ಶಾಸನ ಸಭೆಗಳಿಗೆ ಸಂಬಂಧಪಟ್ಟ ಹಾಗೆ ಒಂದು ವಿಶೇಷ ಸಾಂವಿಧಾನಿಕ ಸವಲತ್ತು ಇದೆ. ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಅವರ ಒಟ್ಟಾರೆ ನಡವಳಿಕೆಯು ಹೊರಗಿನ ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ಸುಪರ್ದಿಗೆ ಬರುವುದಿಲ್ಲ. ಅಲ್ಲಿ ಸಭಾಧ್ಯಕ್ಷರೇ ಅಂತಿಮ ನ್ಯಾಯಾಧೀಶರು. ಶಾಸಕರು ನಿರ್ಭೀತ ಹಾಗೂ ನಿಷ್ಪಕ್ಷಪಾತ ಧೋರಣೆಯಿಂದ ಕಾರ್ಯನಿರ್ವಹಿಸಲು ಅನುವಾಗುವಂತೆ ನಮ್ಮ ಸಂವಿಧಾನ ನಿರ್ಮಾತೃಗಳು ಇಂತಹ ವ್ಯವಸ್ಥೆಯೊಂದನ್ನು ರೂಪಿಸಿದಾರೆ. ಇದು, ನಮ್ಮ ಪ್ರಜಾಪ್ರತಿನಿಧಿಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸಿದೆ. ಹೊರಗಿನ ಪೋಲಿಸರು ಸದನದ ಒಳಗಿನ ಅವರ ಕೃತ್ಯಗಳಿಗೆ ಸಂಬಂಧ ಪಟ್ಟಹಾಗೆ ಮಾನನಷ್ಟ ಮೊಕದ್ಧಮೆ ಹಲ್ಲೆ ದರೋಡೆ ಮೊದಲಾದ ಪ್ರಕರಣಗಳನ್ನು ದಾಖಲಿಸುವುದು ಅಸಾದ್ಯ. ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಸ್ವಾತಂತ್ರ್ಯ ಮೂಲಭೂತ ಅವಶ್ಯಕತೆಯಾಗಿರುತ್ತದೆ. ಅಂತಹ ಸ್ವಾತಂತ್ರ್ಯದ ರಕ್ಷಣೆಯ ಹಕ್ಕನ್ನು ನಮ್ಮ ಘನ ಸಂವಿಧಾನವು ಶಾಸಕರಿಗೆ ನೀಡಿದೆ.
ಇದೇ ಚೌಕಟ್ಟಿನಲ್ಲಿ ಯೋಚಿಸಿದಾಗ ಪತ್ರಕರ್ತರು ಅನುಭವಿಸಬೇಕಾದ ವಿಪತ್ಪರಂಪರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಪತ್ರಕರ್ತರು ಕರ್ತವ್ಯ ನಿರ್ವಹಿಸುವುದು ಶಾಸನ ಸಭೆಯಂತಹ ಸರ್ವರಕ್ಷಿತ ವ್ಯವಸ್ಥೆಯಲ್ಲಿ ಅಲ್ಲ. ಅವರ ಕ್ರಿಯಾಶಿಲತೆಯ ವೇದಿಕೆ ಹೊರಗಿನ ಸಮಾಜವೇ ಆಗಿದೆ. ಹೀಗಾಗಿ ಅವರು ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ನೇರ ಸುಪರ್ದಿಯಲ್ಲಿ ಬರುತ್ತಾರೆ. ಇದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತದೆ. ಅವರ ನಿಷ್ಕಾಮ ಹಾಗೂ ನಿರ್ಭೀತ ಸೇವೆಗೆ ಮಿತಿಗಳನ್ನು ಹೇರುತ್ತದೆ.
ಪೋಲಿಸ್ ವ್ಯವಸ್ಥೆಯು ಸರಕಾರದ ಅಡಿಯಾಳು. ಹೀಗಾಗಿ ಆಯಾ ಸಂಧರ್ಭದಲ್ಲಿ ಆಡಳಿತ ಸೂತ್ರ ಹಿಡಿದಿರುವ ರಾಜಕೀಯ ಪಕ್ಷವು ಪ್ರತಿಪಾದಿಸುತ್ತಿರುವ ಒಟ್ಟು ಮೌಲ್ಯವ್ಯವಸ್ಥೆಯನ್ನು ಧಿಕ್ಕರಿಸುವುದು ಸಾಮಾನ್ಯ ಪತ್ರಕರ್ತನಿಗೆ ಕಷ್ಟಸಾಧ್ಯ. ಜೊತೆಗೆ ಆಡಳಿತ ಪಕ್ಷವೇ ಮಾತ್ರವಲ್ಲದೇ ಆಯಾ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಮತ್ತು ಸರ್ವಪಕ್ಷಗಳಿಂದಲೂ ಸಮಾನ ಗೌರವನ್ನು ಪಡೆಯುತ್ತಿರುವ ಸಾಂಸ್ಕೃತಿಕ ಯಾಜಮಾನ್ಯವನ್ನು ಎದುರು ಹಾಕಿಕೊಳ್ಳುವುದು ಕೂಡಾ ಬಂಧನವನ್ನು ಆಹ್ವಾನಿಸಿದಂತೆಯೆ ಆಗಿರುತ್ತದೆ. ಪತ್ರಕರ್ತ ನವೀನ್ ಸೂರಿಂಜೆ ಇಂತಹ ಇಬ್ಬಗೆಯ ವೈರತ್ವವನ್ನು ಏಕಕಾಲಕ್ಕೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ಅವರ ಜೈಲುಪರ್ವ ಮತ್ತೆ ಮತ್ತೆ ಮುಂದುವರಿಯುತ್ತಲೇ ಇದೆ.
***
ಪತ್ರಿಕಾ ಸ್ವಾತ್ರಂತ್ರ್ಯ ಇಂದು ಕೇವಲ ಘೋಷಣೆಯಾಗಿಯೇ ಉಳಿದಿದೆ. ಕನಸುಗಳು ಹಾಗೂ ಮೌಲ್ಯಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬಾರದೆ ಕೇವಲ ಆದರ್ಶ ಮಾತ್ರವೇ ಆಗಿ ಉಳಿಯುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ವೈಫಲ್ಯವಾಗಿದೆ. ಮೂಲಭೂತ ಹಕ್ಕುಗಳು, ಸಮಾನತೆ, ಜಾತಿ ನಿರ್ಮೂಲನೆ, ಸಮಾಜವಾದ ಇಂತಹ ಮೌಲ್ಯಗಳು ಇನ್ನೂ ನಿಲುಕದ ಊರಿನಾಚೆಗೇ ಇವೆ. ಹಾಗೆಯೆ “ಪತ್ರಿಕಾ ಸ್ವಾತ್ರಂತ್ರ್ಯ.”
ನವೀನ್ ಪತ್ರಿಕಾ ಸ್ವಾತ್ರಂತ್ರ್ಯದ ಮಿಥ್ಯೆಗೆ ಸಾಕ್ಷಿಯಾಗಿ ನಿಂತಿದ್ದಾರೆ. ಪತ್ರಕರ್ತರ ಸ್ವಾತಂತ್ರ್ಯವನ್ನೂ ಹಕ್ಕುಗಳನ್ನೂ ಉಳಿಸಬೇಕಾದವರು ಯಾರು ಎಂಬ ಅಂಶವೇ ಸದ್ಯಕ್ಕೆ ತಿಳಿಯುತ್ತಿಲ್ಲ. ಪೋಲಿಸರು ಹೋಂಸ್ಟೇ ದಾಳಿಕೋರರ ಮೇಲೆ ಹೊರಿಸಿದ ಅಷ್ಟೂ ಆರೋಪಗಳನ್ನು ನವೀನ್ ಸೂರಿಂಜಿಯವರ ಮೇಲೂ ದಾಖಲಿಸಿದ್ದಾರೆ. ದರೋಡೆ, ಅಕ್ರಮ ಪ್ರವೇಶದಂತಹ ಮೊಕದ್ಧಮೆಗಳು ಕೂಡಾ ಇವೆ. ಕ್ರಿಯಾಶೀಲ ಪತ್ರಕರ್ತನೊಬ್ಬನ ಮೇಲೆ ಇಂತಹ ಕಠಿಣ ಕೇಸುಗಳನ್ನು ದಾಖಲಿಸಿದರೆ ಆತ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು ಸಾದ್ಯವೇ? ದಾಳಿಮಾಡಲು ಹೋದವರನ್ನೂ ವರದಿಮಾಡಲು ಹೋದ ಪತ್ರಕರ್ತನ್ನೂ ಒಂದೇ ತಕ್ಕಡಿಯಲ್ಲಿ ನೋಡುವುದು ನ್ಯಾಯವೇ? ದುರಾದೃಷ್ಟವಶಾತ್, ವ್ಯವಸ್ಥೆ ನ್ಯಾಯ ಅನ್ಯಾಯ ಅಥವಾ ಧರ್ಮ-ಅರ್ಧಮದ ಮಿತಿಗಳನ್ನು ಮೀರಿಯೇ ಕಾರ್ಯನಿರ್ವಹಿಸುತ್ತದೆ. ಅಂತಹ ಮಹಿಷಾಸುರ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿ ನಲುಗುತ್ತಿರುವ ಹಾವಿನಂತೆ ಇರುವ ಪತ್ರಿಕಾಸ್ಯಾತಂತ್ರ್ಯದ ಕ್ಷೀಣ ದನಿಯಂತೆ ನವೀನ್ ಕಾಣಿಸುತ್ತಿದ್ದಾರೆ.
***
ನವೀನ್ ಪ್ರಕರಣದಲ್ಲೂ ಒಂದು ತಾತ್ವಿಕ ಪ್ರಶ್ನೆ ಇದೆ. ಅದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಗೆ ಸಂಬಂಧಪಟ್ಟ ಪ್ರಶ್ನೆಯಾಗಿದೆ. ಅದು ದಾಳಿ ಯಾ ಹೊಡೆದಾಟದಂತಹ ಆಕಸ್ಮಿಕದ ಸಂಧರ್ಭಗಳಲ್ಲಿ ವರದಿಗಾರ ಯಾವ ರೀತಿ ವರ್ತಿಸಬೇಕು ಎಂಬ ಕುರಿತದ್ದಾಗಿದೆ. ಅಂತಹ ವಿಷಮ ಸಂಧರ್ಭದಲ್ಲಿ ಪತ್ರಕರ್ತ ಘಟನೆಯ ವರದಿ ಮಾತ್ರವೇ ಮಾಡುತ್ತಿರಬೇಕೇ ಅಥವಾ ಸಂಕಷ್ಟಕೀಡಾದವರ ನೆರವಿಗೆ ಹೋಗಬೇಕೇ ಎಂಬ ವಿಚಾರ. ಇದು ಪೂರ್ಣವಾಗಿ ಮೌಲ್ಯ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾಗಿದೆ. ಇದನ್ನು ಚರ್ಚಿಸಿ ಒಂದು ಮೌಲ್ಯವಾಗಿ ರೂಪಿಸಿಕೊಳ್ಳಬೇಕಾಗಿರುವುದು ಸಮಾಜವೇ ಹೊರತು ಕಾನೂನು ಅಥವಾ ಪೋಲಿಸ್ ವ್ಯವಸ್ಥೆಗಳಲ್ಲ್ಲ. ಪತ್ರಕರ್ತರ ವ್ಯಾಪಕತೆಯಿಂದಾಗಿ ಇಂತಹ ಪ್ರಕರಣಗಳು ಇಂದು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ ಮತ್ತು ಚರ್ಚೆಯಾಗುತ್ತಿವೆ. ವ್ಯವಸ್ಥೆಯು ವಾರಂಟ್-ಬಂಧನಗಳಂತಹ ತನ್ನೆಲ್ಲ ಅಹಂಕಾರ ಧೋರಣೆಯನ್ನು ಬಿಟ್ಟು ಸಾಮಾಜಿಕ ಚರ್ಚೆಗೆ ಅವಕಾಶ ಮಾಡಿಕೊಡುವುದು ಇಲ್ಲಿ ಅನಿವಾರ್ಯ.
***
ನವೀನ್ ಪ್ರತಿನಿಧಿಸುವ ಪತ್ರಿಕಾ ಸ್ಯತ್ರಂತ್ರ್ಯವನ್ನು ರಕ್ಷಿಸುವಲ್ಲಿ ಸಮಾಜದ ಜವಾಬ್ದಾರಿಯೂ ಇದೆ. ಆದರೆ ನಮ್ಮ ಸಮಾಜ ಇಲ್ಲೇ ಎಡವಿದೆ. ಬಂಧನದ ವಿರುದ್ದ ನಡೆಯಬೇಕಾಗಿದ್ದ ಹೋರಾಟ ಪ್ರತಿಭಟನೆಗಳು ಆರಂಭಗಳ ದಿನಗಳಿಗಷ್ಟೇ ಮೀಸಲಾದವು. ಇಂತಹ ಆರಂಭಶೂರತ್ವದ ವ್ಯಾಧಿಯು ಪತ್ರಕರ್ತರ ವಲಯಕ್ಕೂ ವ್ಯಾಪಿಸಿದೆ. ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಪತ್ರಿಕೆಗಳೂ, ಚಾನೆಲ್ಗಳೂ ಇದ್ದಾಗ್ಯೂ ಒಬ್ಬ ಪತ್ರಕರ್ತನನ್ನೂ, ಆತನ ಸ್ವಾತಂತ್ರ್ಯವನ್ನೂ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಅವರ ನಿರ್ವೀರ್ಯತೆಗೆ ಸಾಕ್ಷಿಯಾಗಿದೆ.
ಸಾಮಾಜಿಕ ಕ್ರಿಯಾಶಿಲತೆಗೆ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತ್ಯ ಹಾಗೂ ಬೌದ್ದಿಕ ವಲಯವೂ ಕೂಡಾ ನವೀನ್ ವಿಚಾರದಲ್ಲಿ ಮೌನಕ್ಕೆ ಶರಣಾಗಿ ಕುಳಿತಿದೆ. ಸಾಹಿತ್ಯಿಕ ಕೂಡುಗೆಗಳನ್ನೆಲ್ಲ ಬಿಟ್ಟು ನೋಡಿದಲ್ಲಿ ಒಬ್ಬ ಪುಂಡು ಕೋಮುವಾದಿಯಂತೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಡಾ| ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲು ರಾಜ್ಯಪಾಲರು ನಿರಾಕರಿಸಿದಾಗ ಅದನ್ನು ಪ್ರತಿಭಟಿಸುವ ಸಲುವಾಗಿಯೇ ಅನಂತಮೂರ್ತಿಯವರು ದೈಹಿಕ ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮಾವೇಶದಲ್ಲಿ ಭಾಗವಹಿಸಿದ್ದರು. ಮತ್ತು ರಾಜ್ಯಪಾಲರ ನಿಲುವನ್ನು ಕಠಿಣ ಮಾತುಗಳಿಂದ ಖಂಡಿಸಿದ್ದರು. ಆದರೆ ಅವರೂ ಸೇರಿದಂತೆ ಕನ್ನಡದ ಹಲವು ಸಾಹಿತ್ಯ ಪ್ರತಿಭೆಗಳು ನವೀನ್ ಬಂಧನದ ಕೆಲವೇ ದಿನಗಳಲ್ಲಿ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಅದೇ ಸಮಯದಲ್ಲಿ ಅಲ್ಲೇ ಮಂಗಳೂರಿನ ಜೈಲಿನಲ್ಲಿ ಕೊಳೆಯುತ್ತಿದ್ದ ಸಾಮಾಜಿಕ ಕಳಕಳಿಯ ಪತ್ರಕರ್ತ ನವೀನ್ ಸೂರಿಂಜೆಯ ಬಂಧನವನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡುವಂತಹ ದೊಡ್ಡಮನಸ್ಸನ್ನು ಕನ್ನಡದ ಯಾವ ಜ್ಞಾನಪೀಠವೂ ತೋರಲಿಲ್ಲ ಎಂಬುವುದು ನಮ್ಮ ಸಾಮಾಜಿಕ ಸಂಧರ್ಭದ ನಿರೀಕ್ಷತ ದುರ್ದೈವವಾಗಿದೆ! ಮೌಲಿಕ ಸಾಹಿತ್ಯದ ದೌರ್ಬಲ್ಯವೇ ಇದು. ಒಂದೋ ಅದು ವ್ಯವಸ್ಥೆಯ ಪಾದಸೇವೆ ಮಾಡುತ್ತಿರುತ್ತದೆ ಇಲ್ಲವೇ ಗಾಂಧಾರಿ ಸಿಂಡ್ರೋಮ್ನಿಂದ ಬಳಲುತ್ತಿರುತ್ತದೆ. ಅನಂತಮೂರ್ತಿಯವರು ತಮ್ಮ ನುಡಿಸಿರಿ ಭಾಷಣದಲ್ಲಿ ಇತ್ತೀಚಿಗೆ ತಾವು ದಕ್ಷಿಣ ಕನ್ನಡದವರೇ ಆದ ಸೇಡಿಯಾಪು ಕೃಷ್ಣಭಟ್ಟರ ಕೃತಿಗಳು ಓದುತ್ತಿದ್ದೇನೆ ಎಂದು ಹೇಳಿದ್ದಾರೆ. ಬಹುಶಃ ಅವರು ಅದೇ ದಿನಗಳಲ್ಲಿ ದಕ್ಷಿಣ ಕನ್ನಡದ ವಾರ್ತೆಗಳನ್ನು ಕೇಳಬೇಕಿತ್ತೋ ಏನೋ.
ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲು ನವೀನ್ ಯಾವ ಕಾರ್ಪೊರೇಟ್ ಪತ್ರಕರ್ತನೂ ಅಲ್ಲ; ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಲು ಠಾಕ್ರೆಯಂತಹ ರುದ್ರ ಭಯಂಕರನೂ ಅಲ್ಲ. ಒರ್ವ ಬಡಪಾಯಿ ಪತ್ರಕರ್ತನಷ್ಟೇ. ದೌರ್ಜನ್ಯದ ವ್ಯವಸ್ಥೆಯೊಂದರ ರೌರವ ಕ್ರೌರ್ಯಕ್ಕೆ ಕನ್ನಡಿ ಹಿಡಿದದ್ದಷ್ಟೇ ಅವರ ಅಪರಾದ. ಚಕ್ಕಳ ಹಾಕಿಸಿ ಮುಂದೆ ಕೂರಿಸಿಕೊಂಡು ತನ್ನನ್ನು ಧಿಕ್ಕರಿಸುವ ವ್ಯಕ್ತಿ ಹಾಗೂ ಸಂಘಟನೆಗಳನ್ನು ಹದಮಾಡುವ ಕಲೆ ವ್ಯವಸ್ಥೆಗೆ ಯಾವತ್ತೋ ಸಿದ್ದಿಸಿದೆ. ಅಂತಹ ಅಪಾಯಕ್ಕೆ ನವೀನ್ ಸಿಲುಕದಂತೆ ನೋಡಿಕೊಳ್ಳುವುದು ಕ್ರಿಯಾಶೀಲ ಸಮಾಜದ ಕರ್ತವ್ಯವಾಗಿದೆ.