Monthly Archives: December 2012

ಮಂಗಳೂರು ಹೋಮ್ ಸ್ಟೇ ದಾಳಿ: ಅಮಾಯಕನಿಗೆ ಶಿಕ್ಷೆ

– ರಾಜೇಶ್. ಡಿ.

ಹಾಸನದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಘೋರ, ಅಮಾನುಷ ಕೃತ್ಯದ ಆರೋಪಿಗಳ ಮೇಲೆ ಪೊಲೀಸರು ವಿವಿಧ ಕಾಯ್ದೆ ಹಾಗೂ ಸಂಹಿತೆಗಳ ಅಡಿಯಲ್ಲಿರುವ ಒಟ್ಟು ಐದು ಸೆಕ್ಷನ್‌ಗಳ ಅಡಿ ದೂರನ್ನು ದಾಖಲಿಸಿಕೊಂಡಿದ್ದಾರೆ.

ವಿಚಿತ್ರ ನೋಡಿ, ಮಂಗಳೂರಿನ ಹೋಮ್ ಸ್ಟೇ ದಾಳಿಯನ್ನು ವರದಿ ಮಾಡಿದ ನವೀನ್ ಸೂರಿಂಜೆ ವಿರುದ್ಧ ಅಲ್ಲಿಯ ಪೊಲೀಸರು  mangalore-jailಒಟ್ಟು ಹನ್ನೊಂದು ಸೆಕ್ಷನ್‌ಗಳ ಅಡಿ ಚಾರ್ಜ್‌ಷೀಟ್ ಹಾಕಿದ್ದಾರೆ. ಅವುಗಳ ಪಟ್ಟಿ ಹೀಗಿದೆ: ಅಕ್ರಮ ಕೂಟ (ಐಪಿಸಿ 143), ದೊಂಬಿ (147), ಮಾರಕಾಸ್ತ್ರಗಳಿಂದ ದೊಂಬಿ (148), ಅಕ್ರಮ ಪ್ರವೇಶ (447), ಮನೆ ಮೇಲೆ ದಾಳಿ (448), ಅಕ್ರಮವಾಗಿ ಮತ್ತೊಬ್ಬರನ್ನು ಹಿಡಿದು ನಿಲ್ಲಿಸುವುದು (341), ಪ್ರಚೋದನೆ ಇಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ (323/324), ಬೆದರಿಕೆ (506), ಉದ್ದೇಶ ಪೂರ್ವಕ ದಾಳಿ ಮತ್ತು ಶಾಂತಿ ಭಂಗ (504), ಮಹಿಳೆ ಮೇಲೆ ದಾಳಿ (354) ಮತ್ತು ಡಕಾಯತಿ (395). ಹೋಮ್ ಸ್ಟೇ ಮೇಲೆ ದಾಳಿ ನಡೆಸಿದವರಿಗೆ ಹಾಕಿದ್ದ ಎಲ್ಲಾ ಸೆಕ್ಷನ್‌ಗಳನ್ನೂ ವರದಿಗಾರ ನವೀನ್ ಮೇಲೂ ಹಾಕಿದ್ದಾರೆ ಪೊಲೀಸರು.

ನವೀನ್‌ರ ಜಾಮೀನು ಅರ್ಜಿ ಕರ್ನಾಟಕದ ಹೈಕೋರ್ಟ್ ನಲ್ಲಿ ತಿರಸ್ಕೃತಗೊಂಡಿದೆ. ಗೌರವಾನ್ವಿತ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ, “ಪ್ರಸ್ತುತ ಆರೋಪಿ ಮೇಲ್ನೋಟಕ್ಕೆ ಇತರೆ ಆರೋಪಿಗಳ ಜೊತೆ ಒಂದೇ ಉದ್ದೇಶದೊಂದಿಗೆ ಮತ್ತು ಬಹುತೇಕ ಒಟ್ಟಿಗೇ ಹೋಮ್ ಸ್ಟೇ ಪ್ರವೇಶಿಸಿದರು. ನಂತರ ಟಿ.ವಿ ಮಾಧ್ಯಮದಲ್ಲಿ ದಾಳಿಗೆ ಒಳಗಾದವರನ್ನು ಪದೇ ಪದೇ ತೋರಿಸಿ, ಅವರ ಮತ್ತು ಅವರ ಕುಟುಂಬದವರಿಗೆ ನೋವುಂಟು ಮಾಡುವಲ್ಲಿ ಇವರ ಪಾತ್ರವೂ ಇದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪೊಲೀಸರ ವರದಿ ಆಧಾರದ ಮೇಲೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನವೀನ್ ಸೂರಿಂಜೆ ಹಿನ್ನೆಲೆ ಮತ್ತು ದಾಳಿ ನಡೆಸಿದ ಸಂಘಟನೆಗೆ ಜೊತೆ ನವೀನ್ ಗೆ ಇರುವ ‘ಸಂಬಂಧ’ವನ್ನು ಪರಿಗಣನೆಗೆ ತೆಗೆದುಕೊಂಡು ಈ ಆರೋಪಗಳನ್ನು ವಿಶ್ಲೀಷಿಸುವುದಾದರೆ, ಅದು ಸಂಪೂರ್ಣ ಸುಳ್ಳು. “ಕರಾವಳಿ ಅಲೆ” ಪತ್ರಿಕೆಯಲ್ಲಿ ವರದಿಗಾರನಾಗಿದ್ದಾಗಿನ ದಿನಗಳಿಂದಲೂ ನವೀನ್ ಸೂರಿಂಜೆ ಸಂಘ ಪರಿವಾರ ಮತ್ತು ಅದರ ಇತರ ಸಂಘಟನೆಗಳ ವಿರುದ್ಧ ವರದಿ ಮಾಡಿದ್ದರು. ಇಂತಹದೇ ಕಾರಣಕ್ಕೆ ಈ ಹಿಂದೆ ನವೀನ್ ಮತ್ತು ದಿ ಹಿಂದು ಪತ್ರಿಕೆ ವರದಿಗಾರರೊಬ್ಬರ ಮೇಲೆ ಸಂಘ ಪರಿವಾರ ಪ್ರಚೋದಿತ ಹುಡುಗರು ಹಲ್ಲೆ ನಡೆಸಲು ಪ್ರಯತ್ನಿಸಿದ್ದರು ಎನ್ನುವುದು ವರದಿಯೂ ಆಗಿದೆ.

ಇವೆಲ್ಲಾ ವೈಯಕ್ತಿಕ ನೆಲೆಯಲ್ಲಿ ಗೊತ್ತಿರಬಹುದಾದ ವಿಚಾರಗಳು, ಹಾಗಾಗಿ ಅವುಗಳ ಆಧಾರದ ಮೇಲೆ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ದಾಳಿಗೆ ಒಳಗಾದ ಹುಡುಗರೇ ಈ ಬಗ್ಗೆ ಸ್ಷಷ್ಟ ಮಾತುಗಳಲ್ಲಿ ಹೇಳಿದ್ದಾರಲ್ಲ? ಅವರಿಂದ ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡು ಪೊಲೀಸರು ಅವರಿಗೆ ಬೇಕಾದಂತೆ ದೂರು ಬರೆದುಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ. ದಾಳಿಗೆ ಒಳಗಾದ ಹುಡುಗರು ಪತ್ರಿಕಾ ಪ್ರಕಟಣೆ ಕೂಡಾ ನೀಡಿದ್ದಾರೆ.

ಪದೇ ಪದೇ ಅಲ್ಲಲ್ಲಿ ವರದಿಯಾಗುತ್ತಿರುವ ಮತ್ತೊಂದು ಅಂಶವೆಂದರೆ, ವಿಡಿಯೋ ಮಾಡುತ್ತಿದ್ದವರನ್ನು morning-mist-homestayನವೀನ್ ನಿರ್ದೇಶಿಸುತ್ತಿದ್ದರು ಮತ್ತು ದಾಳಿಗೆ ಒಳಗಾದ ಮಹಿಳೆಯರನ್ನು ತುಂಡು ಬಟ್ಟೆಗಳಲ್ಲಿ ಸೆರೆ ಹಿಡಿಯಲು ಆಸಕ್ತಿ ವಹಿಸಿದರು. ಲಭ್ಯವಿರುವ ವಿಡಿಯೋ ದಾಖಲೆಯಲ್ಲಿ ಈ ಬಗ್ಗೆ ಸ್ಪಷ್ಟ ದೃಶ್ಯಗಳಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಸದ್ಯ ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೋ ದಾಖಲೆಗಳಲ್ಲಿ ಎಲ್ಲಿಯೂ ಈ ಬಗ್ಗೆ ಸ್ಪಷ್ಟ ದೃಶ್ಯಗಳಿಲ್ಲ.

ನವೀನ್ ಚಿತ್ರೀಕರಣ ವೇಳೆ ತೀವ್ರ ಆಸಕ್ತಿ ವಹಿಸಿದ್ದರೂ ಅದು ಬಹುಶಃ ಆರೋಪಿಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಉದ್ದೇಶದಿಂದಲೂ ಇರಬಹುದು. ಮೇಲಾಗಿ, ನವೀನ್ ಸೂರಿಂಜೆಯವರೇ ಹೇಳಿರುವಂತೆ ಅವರ ಜೊತೆ ಅವತ್ತು ಇದ್ದದ್ದು ಟಿ.ವಿ. 9 ಕೆಮರಾಮನ್. ತನ್ನ ಸಂಸ್ಥೆಯ ಕೆಮರಾಮನ್ ರಜೆಯಲ್ಲಿದ್ದಾಗ ಅಥವಾ ಲಭ್ಯವಿಲ್ಲದಿದ್ದಾಗ ಮತ್ತೊಂದು ಟಿವಿ ಉದ್ಯೋಗಿಯನ್ನು ಮನವಿ ಮೇರೆಗೆ ಕರೆಸಿಕೊಳ್ಳಬಹುದು. ಜೊತೆಗೆ ಆ ಕೆಮರಾಮನ್ ತಾನು ಸೆರೆಹಿಡಿಯುವ ದೃಶ್ಯಗಳು ತನ್ನ ಟಿವಿಗೂ (ಟಿವಿ-9) ಸಿಗುತ್ತವೆ ಎಂಬ ಉದ್ದೇಶದಿಂದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಂಪೂರ್ಣ ಗೋಜಲು ಗೋಜಲು ಆಗಿರುವ ಸಂದರ್ಭದಲ್ಲಿ ನಿರ್ದೇಶನ ಕೊಡುವುದು, ಅದನ್ನು ಮತ್ತೊಬ್ಬರು ಪಾಲಿಸುವುದು ವಿಡಿಯೋದಲ್ಲಿ ಗೋಚರಿಸುವ ಮಟ್ಟಿಗೆ ಸ್ಟಷ್ಟವಾಗಿರಲು ಸಾಧ್ಯವಿಲ್ಲ.

ಮೇಲಾಗಿ ನವೀನ್‌ರಂತೆ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ವರದಿಗಾರರ ಕೆಲಸ, ಸೆರೆಹಿಡಿದ ದೃಶ್ಯಗಳನ್ನು Mlr-hindujagaran-attackತಮ್ಮ ಕಚೇರಿಗೆ ಕಳುಹಿಸುವುದು. ಅದನ್ನು ಹೇಗೆ ಪ್ರಸಾರ ಮಾಡುತ್ತಾರೆಂಬುದು ಕೇಂದ್ರ ಕಚೇರಿಯಲ್ಲಿರುವವರ ಕೆಲಸ. ಅವರು ಆ ದೃಶ್ಯಗಳನ್ನು ಪದೇ ಪದೇ ತೋರಿಸುತ್ತಿದ್ದರೆ, ಅದರಿಂದ ಬೇಸರವಾಗಿದ್ದರೆ, ಘನ ನ್ಯಾಯಾಧೀಶರು ಸುದ್ದಿ ಪ್ರಸಾರ ಮಾಡಿದ ಎಲ್ಲಾ ಚಾನೆಲ್‌ಗಳ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಸೂಚಿಸಬಹುದಿತ್ತಲ್ಲ?

ಪೊಲೀಸರು ದೊಂಬಿ, ಹಲ್ಲೆ, ಮಾರಕಾಸ್ತ್ರಗಳಿಂದ ಹಲ್ಲೆ, ಶಾಂತಿ ಭಂಗ ಎಂದೆಲ್ಲಾ ಪ್ರಕರಣ ದಾಖಲಿಸಿದ್ದಾರಲ್ಲವೇ, ಅದೆಲ್ಲವೂ ಆಗಿದ್ದೆಲ್ಲಿ? ನವೀನ್ ಹೋಮ್ ಸ್ಟೇ ಪ್ರವೇಶಿಸಿದ್ದು ಕೆಮರಾಮನ್ ಜೊತೆಗೆ. ಹಾಗಾದರೆ ಕೆಮರಾ – ಮಾರಕಾಸ್ತ್ರವೆ? ದಾಳಿ ಮಾಡಿದ ಹುಡುಗರ ಮುಖವನ್ನು ಸ್ಪಷ್ಟವಾಗಿ ಸೆರೆಹಿಡಿದು ಅವರನ್ನು ಬಂಧಿಸಲು ಸಹಕಾರಿಯಾಗಿದ್ದು ಶಾಂತಿ ಭಂಗವೇ?

ದಕ್ಷಿಣ ಕನ್ನಡ ಜಿಲ್ಲಾಡಳಿತದ ಜವಾಬ್ದಾರಿ ಹೊತ್ತಿರುವ ರಾಜಕಾರಣಿಯೊಂದಿಗೆ ಇತ್ತೀಚೆಗೆ ಈ ಪ್ರಸಂಗದ ಬಗ್ಗೆ ಕೆಲ ಪತ್ರಕರ್ತರು ಅನೌಪಚಾರಿಕವಾಗಿ ಮಾತನಾಡುತ್ತಿದ್ದಾಗ, ಆ ರಾಜಕಾರಣಿಗೆ ನವೀನ್ ವಿರುದ್ಧ ದಾಖಲಾಗಿರುವ ಗಂಭೀರ ಸೆಕ್ಷನ್‌ಗಳ ಬಗ್ಗೆ ಗೊತ್ತಿಲ್ಲದ್ದು ಸ್ಪಷ್ಟವಾಯಿತು. ನವೀನ್ ಮೇಲೆ ಹಾಕಿರುವ ಸೆಕ್ಷನ್‌ಗಳ ಪಟ್ಟಿ ಕೊಟ್ಟಾಗ ಅವರು ಕೂಡಾ ಅಚ್ಚರಿ ವ್ಯಕ್ತಪಡಿಸಿದರು. ನಂತರ ಮಾತನಾಡುತ್ತ, “ನನ್ನ ಗ್ರಹಿಕೆ ಪ್ರಕಾರ, ಪೊಲೀಸರಿಗೆ ಆ ವರದಿಗಾರನ ಬಗ್ಗೆ ಯಾವುದೋ ಕಾರಣಗಳಿಗೆ ಸಿಟ್ಟು ಇತ್ತು. ಹಾಗಾಗಿಯೇ ಅವರ ವಿರುದ್ಧ ಇಂತಹ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿರುವ ಸಾಧ್ಯತೆ ಇದೆ. ಪೊಲೀಸರು ಮನಸ್ಸು ಮಾಡಿದರೆ, ಹೀಗೆ ಏನು ಬೇಕಾದರೂ ಮಾಡಿಯಾರು. ಅವರು ಆ ವಿಚಾರದಲ್ಲಿ ಸಮರ್ಥರು,” ಎಂದು ಹೇಳಿ ತಮ್ಮ naveen-soorinjeಆಪ್ತರಿಗೆ ಆದ ಇಂತಹದೇ ಅನುಭವವನ್ನು ಹಂಚಿಕೊಂಡರು.

ಆದರೆ ಆ ರಾಜಕಾರಣಿಗೆ ಗೊತ್ತಿರಲಿ, ಪೊಲೀಸರು ಸೇಡು ತೀರಿಸಿಕೊಳ್ಳುತ್ತಾರೆ ಎಂದು ಅವರ ಮೇಲೆ ಹೇಳುವುದರಿಂದ ಏನೂ ಲಾಭವಿಲ್ಲ. ಪೊಲೀಸರು ಅಂತಹದೊಂದು ತಪ್ಪೆಸಗಿದರೆ, ಮಾನ ಹೋಗುವುದು ಆಡಳಿತ ವ್ಯವಸ್ಥೆಯದು, ಅರ್ಥಾತ್ ಸರ್ಕಾರದ್ದು!

ಪೊಲೀಸರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಾವು ಹೊರಿಸಿರುವ ಎಲ್ಲಾ ಆರೋಪಗಳಿಗೆ ಸಾಕ್ಷಿ ಒದಗಿಸಲಾಗದೆ ಆರೋಪಿ ನವೀನ್ ಖುಲಾಸೆ ಆಗಬಹುದು. ಆದರೆ ಏನು ಪ್ರಯೋಜನ? ಈಗಾಗಲೆ ನವೀನ್‌ಗೆ ಶಿಕ್ಷೆ ಆಗಿದೆಯಲ್ಲ? ನವೆಂಬರ್ ಎರಡರಿಂದ ಅವರು ಬಂದೀಖಾನೆಯಲ್ಲಿಯೇ ಇದ್ದಾರೆ. ಪೊಲೀಸರ ಕುತ್ಸಿತ ಬುದ್ಧಿಗೆ ಅಮಾಯಕ ಬಲಿಯಾಗಬೇಕೆ?

ಗಲ್ಲಿಗೇರಿಸಿಬಿಟ್ಟರೆ ಅತ್ಯಾಚಾರಗಳು ನಿಂತುಬಿಡುತ್ತವೆಯೇ? ಪರಿಹಾರಗಳೇನು?

ತೇಜ ಸಚಿನ್ ಪೂಜಾರಿ

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಯುವತಿಯೊಬ್ಬಳ ಮಾನಭಂಗ ಪ್ರಕರಣವು ಜನಮಾನಸದಲ್ಲಿ ಆಕ್ರೋಶಭರಿತ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಪ್ರಜಾಪ್ರಭುತ್ವದ ಹೃದಯಭಾಗದಲ್ಲೇ ನಡೆದ ನಿರ್ದಯ ಅತ್ಯಾಚಾರವು ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳಿಗೆ ಕನ್ನಡಿ ಹಿಡಿಯುತ್ತದೆ. ಅತ್ಯಾಚಾರ ಘಟನೆಯು ಸಹಜವಾಗಿಯೇ ಯುವಸಮುದಾಯವನ್ನು ಕೆರಳಿಸಿದೆ. ದೆಹಲಿಯೂ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ-ಧರಣಿಗಳು ನಡೆಯುತ್ತಿವೆ. ಮಹಿಳಾ ಸಂಘಟನೆಗಳು ಏಕಸ್ವರದಲ್ಲಿ ಸ್ತ್ರೀ ಸುರಕ್ಷತೆಯ ಖಾತರಿಗೆ ಸರಕಾರಿ ವ್ಯವಸ್ಥೆಯನ್ನು ಒತ್ತಾಯಿಸುತ್ತಿವೆ. rape-illustrationಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯ ಇಂತಹ ಚಟುವಟಿಕೆಗಳು ಉತ್ತಮ ಬೆಳವಣಿಗೆಗಳೇ ಆಗಿವೆ. ಆದರೆ ಇದೇ ವೇಳೆಗೆ ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಅತ್ಯಾಚಾರದಂತಹ ಅನಾಗರಿಕ ಹಾಗೂ ಪೈಶಾಚಿಕ ಕೃತ್ಯಗಳನ್ನು ತಡೆಯಲು, ಮರಣದಂಡನೆಯಂತಹ, ಅಷ್ಟೇ ಅನಾಗರಿಕ ಶಿಕ್ಷೆಯ ಜಾರಿಗೆ ಒತ್ತಾಯಿಸುತ್ತಿವೆ. ಘಟನಾ ಕ್ಷಣದ ಭಾವುಕತೆಯು ಸಹಜವಾಗಿಯೇ ಅಂತಹ ಬೇಡಿಕೆಗಳನ್ನು ಅಪೇಕ್ಷಿಸುತ್ತದೆ. ಆದರೆ ವಸ್ತುನಿಷ್ಠವಾದ ಅಧ್ಯಯನಗಳು ಅತ್ಯಾಚಾರದಂತಹ ಅಫರಾಧಗಳ ನಿಯಂತ್ರಣದಲ್ಲಿ ಮರಣದಂಡನೆ ಶಿಕ್ಷೆಯ ಸಾಫಲ್ಯವನ್ನು ಪ್ರಶ್ನಿಸುತ್ತವೆ.

ಇಂತಹ ವಿವೇಚನಾರಹಿತ ಬೇಡಿಕೆಗಳ ಹಿನ್ನೆಲೆಯಲ್ಲಿ ಹಲವು ನಾಗರಿಕ ಹಕ್ಕು ಸಂಘಟನೆಗಳು ಗಲ್ಲು ಶಿಕ್ಷೆಯ ಮುಂದುವರಿಕೆ ಹಾಗೂ ವಿಸ್ತರಣೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಮಹಿಳೆಯರ ಶ್ರೇಯಸ್ಸಿಗೆ ಪ್ರಾಮಾಣಿಕವಾಗಿ ದುಡಿಯುತ್ತಿರುವ ವಿವಿಧ ಮಹಿಳಾ ಒಕ್ಕೂಟಗಳು ಕೂಡಾ ಅತ್ಯಾಚಾರ ತಡೆಯಯಲು ಮರಣದಂಡನೆ ಒಂದು ಪರಿಹಾರ ಎಂಬ ವಾದವನ್ನು ತಳ್ಳಿ ಹಾಕಿವೆ. ಇವೆಲ್ಲಾ ಬೆಳವಣಿಗೆಗಳು ಮರಣದಂಡನೆ ಶಿಕ್ಷೆಯ ಒಟ್ಟಾರೆ ಆಶಯ ಹಾಗೂ ಸಾಫಲ್ಯ ಕುರಿತಾದ ಚರ್ಚೆ ಹಾಗೂ ಅಧ್ಯಯನಗಳಿಗೆ ಅವಕಾಶ ಮಾಡಿಕೊಟ್ಟಿವೆ.

***

ಮರಣದಂಡನೆ ಶಿಕ್ಷೆಯನ್ನು ಶೈಕ್ಷಣಿಕ ಹಾಗೂ ಆರ್ಥಿಕ ನೆಲೆಯಲ್ಲಿ ಮುಂದುವರೆದಿರುವ ರಾಷ್ಟ್ರಗಳು ರದ್ದುಪಡಿಸಿವೆ. ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಹಾಗೂ ಅಮೇರಿಕಾ ಮಾತ್ರವೇ ಇದಕ್ಕೆ ಹೊರತಾಗಿವೆ. ಐರೋಪ್ಯ ಒಕ್ಕೂಟವು ಮರಣದಂಡನೆ ಶಿಕ್ಷೆಯನ್ನು ನಿಷೇದಿಸಬೇಕೆಂದು ತನ್ನ ಸದಸ್ಯ ರಾಷ್ಟ್ರಗಳಿಗೆ ಕಟ್ಟಪ್ಪಣೆ ವಿಧಿಸಿದೆ. ಸಿಂಗಾಪುರ, ತೈವಾನ್, ಇಂಡೋನೇಷಿಯದಂತಹ ದೇಶಗಳು ಗಲ್ಲು ಶಿಕ್ಷೆಯ ಜಾರಿ ಕುರಿತಂತೆ ಸ್ವಯಂ ನಿಯಂತ್ರಣವನ್ನು ಹೇರಿಕೊಂಡಿವೆ. ನಮ್ಮಲ್ಲೂ ಕೂಡಾ ಸರ್ವೋಚ್ಚ ನ್ಯಾಯಾಲಯದ ಮುತುವರ್ಜಿಯ ಫಲವಾಗಿ ಕೇವಲ “ಅಪರೂಪದಲ್ಲಿ ಅಪರೂಪ”ದ ಪ್ರಕರಣಗಳಲ್ಲಿ ಮಾತ್ರವೇ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ. ಉಳಿದಂತೆ ಅಮೇರಿಕಾ ಹಾಗೂ ಚೀನಾ ದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸುತ್ತಿವೆ.

“ಭಯಸೃಷ್ಟಿ” ಗಲ್ಲು ಶಿಕ್ಷೆಯ ಹಿನ್ನಲೆಯಲ್ಲಿ ಇರುವ ಸಾಮಾನ್ಯ ತರ್ಕವಾಗಿದೆ. ಅಂದರೆ ಕಠಿಣ ಶಿಕ್ಷೆಯ ಬೆದರಿಕೆಯನ್ನು ಒಡ್ಡುವ ಮೂಲಕ ಜನರನ್ನು ಅಂತಹ ಅಫರಾಧ ಕೃತ್ಯಗಳಲ್ಲಿ ತೊಡಗದಂತೆ ತಡೆಯುವುದಾಗಿದೆ. ಆದರೆ ಇಂತಹ ಬೆದರುಬೊಂಬೆ ತಂತ್ರದ ಸಾಫಲ್ಯವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸಿದಾಗ ಮರಣದಂಡನೆಯ ಭಯ ಅಫರಾದೀ ದುಷ್ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿರುವ ಅಂಶವು ಸ್ಪಷ್ಟವಾಗಿ ಗೋಚರಿಸುತ್ತದೆ. ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿರುವ ಐರೋಪ್ಯ ಸಮುದಾಯದ ರಾಷ್ಟ್ರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ಕಠಿಣ ಪ್ರತೀಕಾರಾತ್ಮಕ ಶಿಕ್ಷೆಗಳಿರುವ ಭಾರತ ಹಾಗೂ ಗಲ್ಪ್ ದೇಶಗಳಲ್ಲಿ ದಾಖಲಾಗುತ್ತಿವೆ. ಮರಣದಂಡನೆಯ ಭೀತಿಯಿಂದ ಅಮೇರಿಕಾದಲ್ಲಿ ಗುಂಡಿನ ದಾಳಿಗಳು ನಿಂತಿವೆಯೆ? ಕ್ರೈಮ್ ದಾಖಲೆಗಳ ಪ್ರಕಾರ ಭಾರತದಲ್ಲಿ 1992 ನಂತರ ಹತ್ಯಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಇದೇ ಕಾಲಾವಧಿಯಲ್ಲಿ ಮರಣದಂಡನೆ ಪ್ರಕರಣಗಳೂ ಕೂಡಾ ಸರ್ವೋಚ್ಚ ನ್ಯಾಯಾಲಯದ ರೂಲಿಂಗ್ ಫಲವಾಗಿ ಕಡಿಮೆಯಾಗುತ್ತಿವೆ. 1995ರ ತರುವಾಯ ಭಾರತದಲ್ಲಿ ಕೇವಲ ಕೆಲವು ಗಲ್ಲು ಶಿಕ್ಷೆಗಳು ಜಾರಿಯಾಗಿವೆ. hang-ropeಹೀಗಾಗಿ ತೊಂಭತ್ತರ ದಶಕದ ನಂತರದಲ್ಲಿ ನಮ್ಮ ದೇಶದಲ್ಲಿ ಕಡಿಮೆಯಾಗುತ್ತಿರುವ ಹತ್ಯಾ ಪ್ರಕರಣಗಳಿಗೆ ಕಾರಣಗಳನ್ನು ಅದೇ ಅವಧಿಯಲ್ಲಿ ಕಂಡುಬಂದ ಆರ್ಥಿಕ ಪ್ರಗತಿಯಲ್ಲಿ ಕಾನೂನು ತಜ್ಞರು ಹುಡುಕಿದ್ದಾರೆ.

ನ್ಯಾಯಾಡಳಿತೆಯ ವೈಫಲ್ಯ ಕೂಡಾ ಹಲವು ಚಿಂತಕರನ್ನು ಮರಣದಂಡನೆ ಶಿಕ್ಷೆಗೆ ವಿರೋಧ ವ್ಯಕ್ತಪಡಿಸುವಂತೆ ಮಾಡಿದೆ. ನ್ಯಾಯಾಧೀಶ, ತನಿಖಾ ಸಂಸ್ಥೆ ಹಾಗೂ ಪ್ರಾಸಿಕ್ಯೂಷನ್‌ಗಳ ತಪ್ಪು ನಡೆಗಳು ಶಿಕ್ಷೆಯ ಸ್ವರೂಪವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಅಮೇರಿಕಾದ ಅಪರಾಧ ತನಿಖಾ ಪ್ರಕ್ರಿಯೆಯಲ್ಲಿ ಡಿಎನ್ಎ ಬೆರಳಚ್ಚು ತಂತ್ರಜ್ಞಾನ ಜಾರಿಗೆ ಬಂದ ತರುವಾಯದಲ್ಲಿ (1990) ಸಾಂಪ್ರದಾಯಿಕ ತನಿಖೆ ಪ್ರಕ್ರಿಯೆಯಲ್ಲಿ ಆರೋಪ ಸಾಬೀತಾಗಿದ್ದ ಸುಮಾರು 300 ಆರೋಪಿಗಳು ದೋಷಮುಕ್ತಗೊಂಡಿದ್ದಾರೆ. ಅದರಲ್ಲಿ ಸುಮಾರು 17 ಪ್ರಕರಣಗಳು ಮರಣದಂಡನೆಯ ಶಿಕ್ಷೆಗೆ ಸಂಬಂಧಿಸಿದ್ದವು. ಇಂತಹ ಸುಳ್ಳು ಸಾಕ್ಷ, ಒತ್ತಾಯದ ತಪ್ಪೊಪ್ಪಿಗೆ ಹಾಗೂ ದೋಷಪೂರಿತ ಪೊರೆನ್ಸಿಕ್ ಮೊದಲಾದ ಕೊರತೆಗಳು ಕಾರಣಿಸುವ ಮರಣದಂಡನೆಯಂತಹ ಶಿಕ್ಷೆಗಳು ಅನಾಹುತಕಾರಿಯಾಗಿರುತ್ತವೆ. ಭಾರತದ ಸರ್ವೋಚ್ಚ ನ್ಯಾಯಾಲಯವೇ ಹದಿಮೂರು ಆರೋಪಿಗಳಿಗೆ ತಪ್ಪಾಗಿ, ಅಂದರೆ ಸುಪ್ರೀಂ ಕೋರ್ಟ್‌ನ ರೂಲಿಂಗನ್ನು ಮೀರಿ, ಗಲ್ಲು ಶಿಕ್ಷೆ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಅವರಿಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಹಲವು ನಿವೃತ್ತ ನ್ಯಾಯಾಧೀಶರುಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಇವುಗಳ ಜೊತೆಗೆ, ಸಮಾಜೋ ಆರ್ಥಿಕ ಅಂಶಗಳ ಅಧ್ಯಯನಗಳು ಕೂಡಾ ಮರಣದಂಡನೆ ಶಿಕ್ಷೆಯ ವಿಶ್ಲೇಷಣೆಯಲ್ಲಿ ಬಹಳ ಮಹತ್ವವನ್ನು ಪಡೆಯುತ್ತದೆ. ಇತಿಹಾಸದುದ್ದಕ್ಕೂ ನಿರ್ಗತಿಕ, ಬಡ ಹಾಗೂ ದುರ್ಬಲ ಜನಾಂಗಗಳೇ ರಾಜ್ಯವು ನೀಡುವ ಶಿಕ್ಷೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗಿವೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಸಮಾಜೋ ಆರ್ಥಿಕ ಪ್ರಕ್ಷುಬ್ಧತೆಗಳು ವ್ಯಕ್ತಿಯನ್ನು ಸುಲಭವಾಗಿ ಅಪರಾಧ ಕೃತ್ಯಗಳತ್ತ ತಳ್ಳುತ್ತವೆ. ಹಸಿವು ಹಾಗೂ ಅಜ್ಞಾನ ಸಹಜವಾಗಿಯೇ ತರ್ಕದ ನೆರವನ್ನು ಪಡೆಯುವುದಿಲ್ಲ. ಹಿಗಾಗಿಯೇ ಕಸಬ್‌ನಂತಹ ಬಲಿಪಶುಗಳು ಇನ್ಯಾರದ್ದೋ ಹಿಂಸೆಯ ಆಟದಲ್ಲಿ ದಾಳವಾಗುತ್ತಾರೆ: ಮತ್ತು ರಾಜ್ಯವು ನೀಡುವ ಅಷ್ಟೂ ಶಿಕ್ಷೆಗಳಿಗೆ ಪಾತ್ರರಾಗುತ್ತಾರೆ. ಸೂತ್ರಧಾರ ಮಾತ್ರ ರಾಜ್ಯದ, ಸಮಾಜದ ಪೋಷಣೆಯಲ್ಲಿ ನಿಶ್ಚಿಂತನಾಗಿರುತ್ತಾನೆ. ಎರಡನೆಯದಾಗಿ, ತಮ್ಮ ಮೇಲಣ ಆರೋಪಗಳನ್ನು ಅಲ್ಲಗೆಳೆಯಲು ನಿರ್ಗತಿಕರಲ್ಲಿ ಸಂಪನ್ಮೂಲಗಳ ಕೊರತೆಯಿರುತ್ತದೆ. ಮನು ಶರ್ಮಾನಂತಹ ಹೈಪ್ರೊಫೈಲ್ ಆರೋಪಿಗಳ ರಕ್ಷಣೆಗೆ ಜೇಠ್ಮಲಾನಿಗಳಂತಹ ಘನ ವಕೀಲರ ದಂಡೇ ಇರುತ್ತದೆ. ಅದರೆ ಬಡ ಆರೋಪಿಗಳು ಸರಿಯಾದ ಡಿಫೆನ್ಸಿನ ಕೊರತೆಯಿಂದಾಗಿ ಅವರು ನಿರಪರಾಧಿಗಳಾಗಿದ್ದ ಪಕ್ಷದಲ್ಲಿ ಕೂಡಾ ಅಪರಾಧಿಗಳಾಗಿ ದೋಷಿತರಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಮರಣದಂಡನೆಯ ವಿಕಾಸವೂ ಕೂಡಾ ಆಯಾ ಯುಗದ ಮೌಲ್ಯಗಳನ್ನು ಅನುಸರಿಸಿಯೇ ನಡೆದಿದೆ. ಪ್ರಾಚೀನ ಹಾಗೂ ಮಧ್ಯಯಗದಲ್ಲಿ “ಬಹು ಯಾತನೆಯಿಂದ ಕೂಡಿದ ಸಾವು” ಮರಣದಂಡನೆಯ ತತ್ವವಾಗಿತ್ತು. ಹೀಗಾಗಿಯೇ ಅಂತ್ಯಕಾಲದಲ್ಲಿ ಅತೀವ ವೇದನೆಯನ್ನುಂಟು ಮಾಡುವ ಶಿಕ್ಷೆಗಳಾದ ಶಿಲುಬೆಗೇರಿಸುವುದು, ಸಮುದ್ರಕ್ಕೆ ತಳ್ಳುವುದು, ಅಂಗ ಛೇದನ, ಪ್ರಾಣಿಗಳಿಗೆ ಆಹಾರವಾಗಿ ನೀಡುವುದು ಇವೇ ಮೊದಲಾದವುಗಳನ್ನು ವಿವಿಧ ನಾಗರಿಕತೆಗಳು ಅನುಸರಿಸುತ್ತಿದ್ದವು. ಮುಂದೆ ಆಧುನಿಕ ಕಾಲಘಟ್ಟದಲ್ಲಿ ಪ್ರೆಂಚ್ ಕ್ರಾಂತಿಯ ತರುವಾಯ “ಯಾತನಾ ರಹಿತ ಜೀವ ಹರಣ” ಶಿಕ್ಷೆಗೆ ಹಲವು ದೇಶಗಳು ಮನಸ್ಸು ಮಾಡಿದವು. ಮಾನವತೆಯ ಬೌದ್ದಿಕತೆಯಲ್ಲಿ ಕಂಡುಬಂದ ಬೆಳವಣಿಗೆಗಳು ಅಂತಹ ಬದಲಾವಣೆಗೆ ಕಾರಣವಾಗಿದ್ದವು. ಹೀಗಾಗಿಯೇ ಗಿಲೊಟಿನ್ ಯಂತ್ರ, ಗಲ್ಲು, ವಿಷಕಾರಿ ಇಂಜೆಕ್ಷನ್ ಹಾಗೂ ಇಲೆಕ್ಟ್ರಿಕ್ ಕುರ್ಚಿಗಳು ಬಳಕೆಗೆ ಬಂದವು. ಅಂದಿನಿಂದ ಇಂದಿನವರೆಗೆ ನಮ್ಮ ಬೌದ್ಧಿಕತೆಯಲ್ಲಿ ಹಲವು ಅಭೂತಪೂರ್ವ ಉನ್ನತಿಗಳು ದಾಖಲಾಗಿವೆ. “ನಾಗರಿಕತೆ”ಯ ಅರ್ಥವೂ ಬಹುವಾಗಿ ವಿಸ್ತರಿಸಲ್ಪಟ್ಟಿದೆ. ಇಂತಹ ಪರಿವೇಶದಲ್ಲಿ ಮರಣದಂಡನೆ ಶಿಕ್ಷೆಯ ನಿಷೇಧ ಅದರ ವಿಕಾಸ ಹಾದಿಯ ಸಹಜ ತಾತ್ವಿಕ ಬೆಳವಣಿಗೆಯಾಗಿರುತ್ತದೆ.

ಅಪರಾಧವನ್ನು ನಾವು ಗ್ರಹಿಸುವ ರೀತಿಯಲ್ಲೂ ಭಿನ್ನತೆಗಳಿವೆ ಎಂಬ ಅಂಶ ಇಲ್ಲಿ ಉಲ್ಲೇಖನೀಯ. ಸರಬ್ಜಿತ್ ಸಿಂಗ್‌ಗೆ ಪಾಕಿಸ್ತಾನದಲ್ಲಿ ನೀಡಿರುವ ಶಿಕ್ಷೆಯನ್ನು ಮಾಫಿ ಮಾಡಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅದೇ ನಾವು ಅಪ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಸರಬ್ಜಿತ್ ಸಿಂಗ್ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಂದು ಪಾಕ್ ಹೇಳುತ್ತಿದೆ. ಜೊತೆಗೆ ಈಗಾಗಲೇ ಪಾಕ್ ಸೆರೆವಾಸದಿಂದ ಹೊರಬಂದು ಭಾರತ ಪ್ರವೇಶಿಸಿರುವ ಇನ್ನಿಬ್ಬರು ಕೈದಿಗಳು ತಾವು ರಾ ಗೂಡಾಚರರಾಗಿದ್ದ ವಿಚಾರವನ್ನು ಇಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಅನ್ಸಾರ್ ಬರ್ನಿಯಂತಹ ಪಾಕ್ ಮಾನವ ಹಕ್ಕು ಹೋರಾಟಗಾರರು ಸರಬ್ಜಿತ್ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ. ಇದು “ಕಟ್ಟುವ” ನೆಲೆ. ನಮ್ಮಲ್ಲೂ ವಿವಿಧ ಆರೋಪಗಳ ಅಡಿಯಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ರಾಜೀವ ಹಂತಕರು ಹಾಗೂ ಬಲ್ವಂತ್ ಸಿಂಗ್ ರೊಜನಾ ಅವರ ಮರಣದಂಡನೆ ರದ್ದತಿ ಕೋರಿ ಕ್ರಮವಾಗಿ ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ನಡೆದ ಒತ್ತಾಯದ ಅಭಿವ್ಯಕ್ತಿಗಳನ್ನು ನಾವು ಕಂಡಿದ್ದೇವೆ. ಅಲ್ಲದೆ ಸೈನಿಕರು ನಡೆಸುವ ಅತ್ಯಾಚಾರ ಕೊಲೆಗಳನ್ನು ಒಪ್ಪುತ್ತಾ ಅವರನ್ನು ಆರಾಧಿಸುವ ವರ್ಗಗಳೂ ನಮ್ಮಲ್ಲಿವೆ. ಹೀಗಾಗಿಯೇ ಮಣಿಪುರದ rape-and-murder-of-thangjam-manorama-protestsತಂಗಜಮ್ ಮನೋರಮಾ (2004) ಮತ್ತು ಕಾಶ್ಮೀರದ ಸೋಫಿಯಾದ ನೇಲೋಫರ್ ಹಾಗೂ ಅಸೀಯಾರ ಅತ್ಯಾಚಾರ ಹಾಗೂ ಹತ್ಯಾ ಪ್ರಕರಣಗಳು ಕಾಲಗರ್ಭದಲ್ಲಿ ಮೌನವಾಗಿ ಕುಳಿತಿವೆ. ಹಾಗೆಯೇ ಪ್ಯಾಲೆಸ್ತೈನಿನಲ್ಲಿ ತಮ್ಮ ದೇಶ ನಡೆಸುತ್ತಿರುವ ಅತ್ಯಾಚಾರಗಳನ್ನು ಸಮ್ಮತಿಸುವ ಇಸ್ರೇಲಿಗರಿದ್ದಾರೆ. ಇಂತಹ ಪೃವೃತ್ತಿಗಳು ನಮ್ಮೊಳಗೇ ಇರುವ ದೌರ್ಬಲ್ಯಗಳನ್ನು ಪ್ರತಿನಿಧಿಸುತ್ತವೆ. ಮರಣದಂಡನೆಯಂತಹ ಶಿಕ್ಷೆಗಳೂ ಕೂಡಾ ಇಂತಹದ್ದೇ ದೇಶ, ಜಾತಿ, ಜನಾಂಗ, ವೃತ್ತಿ ಮೊದಲಾದ ಮಾನದಂಡಗಳನ್ನು ಆಧರಿಸಿಯೇ ಸ್ವೀಕರಣೆ ಯಾ ನಿರಾಕರಣೆಯ ನೆಲೆಯನ್ನು ಪಡೆಯುತ್ತವೆ. ಇಂತಹ ಎಲ್ಲಾ ಮಿತಿಗಳನ್ನು ಮೀರಿ ವ್ಯಕ್ತಿ ಹಾಗೂ ರಾಜ್ಯ ಇವೆರಡರ ಹಿಂಸೆಗಳನ್ನೂ ಏಕಕಾಲಕ್ಕೆ ಧಿಕ್ಕರಿಸಿ ಸ್ವಚ್ಛ ಜೀವಪರ ಧೋರಣೆಯನ್ನು ರೂಡಿಸಿಕೊಂಡಾಗಲೇ ಮನುಕುಲದ ಶ್ರೇಯಸ್ಸು ಸಾಧಿತವಾಗುತ್ತದೆ.

***

ಮತ್ತೆ ಅತ್ಯಾಚಾರ ಪ್ರಕರಣಗಳತ್ತ ದೃಷ್ಠಿ ಹಾಯಿಸಿದಲ್ಲಿ ಸದ್ಯದ ಗಲ್ಲು ಶಿಕ್ಷೆಯ ಬೇಡಿಕೆಯು ತೀರಾ ಕ್ಷುಲ್ಲಕವಾಗಿ ಕಾಣುತ್ತದೆ. ಇದು ಪ್ರಸ್ತುತ ಸಮಸ್ಯೆಯ ಮೂಲ ಹಾಗೂ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆಯ ದಾರಿ ತಪ್ಪಿಸುತ್ತದೆ. ಇತ್ತೀಚೆಗೆ ಸಮಸ್ಯೆಗಳಿಗೆ ಕೇವಲ ವ್ಯವಸ್ಥಾತ್ಮಕ ನೆಲೆಯಲ್ಲಿ ಪರಿಹಾರಗಳನ್ನು ಹುಡುಕುವ ಪ್ರವೃತ್ತಿಗಳು ಹೆಚ್ಚುತ್ತಿವೆ. ‘ಭ್ರಷ್ಟಾಚಾರದ ನಿವಾರಣೆಗೆ ಜನಲೋಕಪಾಲ’, ‘ಅತ್ಯಾಚಾರ ತಡೆಗೆ ಗಲ್ಲು’ ಇಂತಹ ಏಕಸೂತ್ರದ ಸಿಸ್ಟಮಿಕ್ ಬದಲಾವಣೆಗಳೇ ಅಂತಿಮ ಪರಿಹಾರವೆಂಬಂತೆ ಪ್ರತಿಪಾದನೆಯಾಗುತ್ತಿವೆ. ಇಂತಹದ್ದೇ ಮನಃಸ್ಥಿತಿಗಳು ಇನ್ನೊಂದೆಡೆ ಅತ್ಯಾಚಾರ ತಡೆ ತಂತ್ರವಾಗಿ ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆಯನ್ನು ಬೋಧಿಸುತ್ತಿವೆ.

ಮೊದಲ ಪರಿವರ್ತನೆ ಆಗಬೇಕಿರುವುದು ವ್ಯಕ್ತಿಯ ಮಟ್ಟದಲ್ಲೇ ಆಗಿದೆ. ಅತ್ಯಾಚಾರ ಪುರುಷನ ಆಹಂಕಾರದ, ದರ್ಪದ ಅಭಿವ್ಯಕ್ತಿಯೂ ಆಗಿದೆ. ಅಂತಹ ಹಿಂಸಾರತಿಯ ಭಾವನೆಗಳ ಜಾಗದಲ್ಲಿ ಸ್ತ್ರೀಯನ್ನು ಗೌರವಿಸುವ, ಆಕೆಯನ್ನು ಸಮಾನಳಾಗಿ ಕಾಣುವ ಚಿಂತನೆಗಳು ಹುಟ್ಟಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರವೇ ಹೆಣ್ಣನ್ನು ಕೇವಲ ಭೋಗವಸ್ತುವಾಗಿ ಕಾಣುವ ಸಮಾಜದ ಮನೋಧರ್ಮದಲ್ಲಿ ಬದಲಾವಣೆ ಕಂಡುಬರುತ್ತದೆ. ಇದಕ್ಕೆ ಅವಶ್ಯವಿರುವುದು ಮುಕ್ತವಾದ ಸಾಮಾಜೀಕರಣ ಪ್ರಕ್ರಿಯೆ. ಪೃವೃತ್ತಿಗಳ ಸ್ಥಾನದಲ್ಲಿ ಸಂಸ್ಕ್ರತಿಯನ್ನು ಪ್ರತಿಷ್ಠಾಪಿಸುವ ಪ್ರಕ್ರಿಯೆಯಲ್ಲಿ ಧರ್ಮ ದಯನೀಯ ವೈಫಲ್ಯ ಕಂಡಿದೆ. ಹೀಗಾಗಿ ಸಾಮಾಜಿಕರಣದ ಹೊಸ ನೆಲೆಗಳ ಶೋಧ ನಡೆಯಬೇಕಿದೆ. ಮಾನವ ಹಕ್ಕುಗಳು, ಸಹಜ ನ್ಯಾಯ, ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ನೆಲೆಯಲ್ಲಿ ನವ ಸಾಮಾಜಿಕರಣವು ರೂಪುಗೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ನಡೆಯಬೇಕಿರುವುದು ಪೋಲಿಸು ಹಾಗೂ ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆಗಳು. ಆಗ ಮಾತ್ರವೇ ಅತ್ಯಾಚಾರದಂತಹ ಪಿಡುಗುಗಳಿಗೆ ಅಂತ್ಯ ಹಾಡಬಹುದಾಗಿದೆ.

ಪ್ರಜಾ ಸಮರ – 15 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಬಡತನ, ಹಸಿವು, ನಿರುದ್ಯೋಗ, ಜಾತೀಯತೆ ಮತ್ತು ಭ್ರಷ್ಟಾಚಾರ, ಅರಾಜಕತೆ, ರಾಜಕೀಯ ಅಸ್ಥಿರತೆ ಇವೆಲ್ಲವುಗಳ ಒಟ್ಟು ಮೊತ್ತವೇ ಭಾರತದ ಬಿಹಾರ ರಾಜ್ಯ ಎನ್ನಲು ಯಾವುದೇ ಅಡ್ಡಿಯಿಲ್ಲ. ಕಳೆದ ಏಳು ವರ್ಷಗಳಿಂದ ನಿತೀಶ್ ಕುಮಾರ್ ಎಂಬ ಸಜ್ಜನ ಮತ್ತು ಭ್ರ್ರಷ್ಟಾಚಾರ ಮುಕ್ತ ರಾಜಕಾರಣಿಯ ಕೈಗೆ ಬಿಹಾರದ ಆಡಳಿತ ಸಿಕ್ಕ ಫಲವಾಗಿ ಇತ್ತೀಚೆಗೆ ಆ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಈ ಮೊದಲು ಬಿಹಾರದ ರಾಜ್ಯವನ್ನು ಅದೊಂದು ಸ್ಮಶಾನ ಎಂದು ಆರ್ಥಿಕ ಮತ್ತು ರಾಜಕೀಯ ಮತ್ತು ಸಾಮಾಜಿಕ ತಜ್ಞರು ವ್ಯಾಖ್ಯಾನಿಸಿದ್ದರು.

ಇಂದಿನ ವರ್ತಮಾನದ ಭಾರತದಲ್ಲಿ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಬಿಹಾರ್ ಮತ್ತು ಅದರಿಂದ ಬೇರ್ಪಟ್ಟು 2000 ದಲ್ಲಿ ನೂತನ ರಾಜ್ಯವಾಗಿ ಉದ್ಭವಿಸಿದ ಜಾರ್ಖಡ್ ರಾಜ್ಯಗಳು ಸಹ ಮುಂಚೂಣಿಯಲ್ಲಿವೆ.

ಬಿಹಾರ್ ರಾಜ್ಯಕ್ಕೆ ನಕ್ಸಲ್ ಚಳುವಳಿ ಹೊಸತೇನಲ್ಲ. ಪಶ್ಚಿಮ ಬಂಗಾಳದಲ್ಲಿ 1967 ರಲ್ಲಿ ಆರಂಭವಾದ ದಿನಗಳಲ್ಲೇ ಪಶ್ಚಿಮ ಬಂಗಾಳದ ಕೆಲವು ನಾಯಕರು ತಮ್ಮ ಹೋರಾಟವನ್ನು ಬಿಹಾರ ರಾಜ್ಯಕ್ಕೆ ವಿಸ್ತರಿಸಿದ್ದರು. ಈ ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಲ್ಲಿರುವ ದಲಿತರು ಮತ್ತು ಇತರೆ ಹಿಂದುಳಿದ ಜಾತಿಯ ಸಮುದಾಯಗಳಿಗೆ ನಕ್ಸಲಿಯರ ಹೋರಾಟ ಇವೊತ್ತಿಗೂ ಆಸರೆಯಾಗಿ ಮತ್ತು ರಕ್ಷಣೆಯಾಗಿ ನಿಂತಿದೆ. 1982 ರಲ್ಲಿ ಬಿಹಾರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವ ವರದಿಯ ಪ್ರಕಾರ 14 ಜಿಲ್ಲೆಗಳ 857 ವಲಯಗಳು ನಕ್ಸಲ್ ಚಟುವಟಿಕೆಯ ಕೇಂದ್ರಗಳಾಗಿದ್ದವು. ಇತ್ತೀಚೆಗೆ ನಕ್ಸಲ್ ಚಟುವಟಿಕೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಿದೆ.

ಮೂಲ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ ಪಕ್ಷದಿಂದ ಸಿಡಿದು ಮಾವೋ-ಲೆನಿನ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ಸಿ.ಪಿ.ಐ. (ಎಂ.ಎಲ್.) ಚಾರು ಮುಜುಂದಾರ್ ನೇತೃತ್ವದಲ್ಲಿ ರಚಿಸಿಕೊಂಡ ಸಂದರ್ಭದಲ್ಲಿ ಬಿಹಾರದಲ್ಲಿ ಕಾರ್ಯನಿರ್ವಹಿಸುತಿದ್ದ ನಕ್ಸಲಿಯರ ಬಳಗವನ್ನು ದಕ್ಷಿಣ್ ದೇಶ್ ತಂಡವೆಂದು ಕರೆಯಲಾಗುತ್ತಿತ್ತು. ಅಮೂಲ್ಯಸೇನ್ ಮತ್ತು ಕನಯ್ ಚಟರ್ಜಿ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಜಂಗಲ್ ಮಹಲ್ ಎಂಬ ಅರಣ್ಯ ಪ್ರದೇಶದಲ್ಲಿದ್ದುಕೊಂಡು ಬಿಹಾರದ ಚಟುವಟಿಕೆಗಳನ್ನು ನಿಯಂತ್ರಿಸುತಿದ್ದರು. ಕನಾಯ್ ಚಟರ್ಜಿ ಬಿಹಾರದ ಔರಂಗಬಾದ್ ಮತ್ತು ಗಯಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ “ಬೆಂಗಾಲ್-ಬಿಹಾರ್ ಸ್ಪೆಷಲ್ ಏರಿಯಾ ಕಮಿಟಿ” ಎಂಬ ತಂಡವನ್ನು ಸ್ಥಾಪಿಸಿದನು. ನಂತರದ ದಿನಗಳಲ್ಲಿ ಈ ತಂಡ ತನ್ನ ಹೆಸರನ್ನು ಮಾವೋವಾದಿ ಕಮ್ಯೂನಿಷ್ಟ್ ಸೆಂಟರ್ (ಎಂ.ಸಿ.ಸಿ.) ಎಂದು ಬದಲಾಯಿಸಿಕೊಂಡಿತು. ಕನಾಯ್ ಚಟರ್ಜಿ ನಿಧನಾನಂತರ 1980 ರ ದಶಕದ ವೇಳೆಗೆ ಬಿಹಾರದ ನಾಯಕರಾಗಿ ಹೊರಹೊಮ್ಮಿದ್ದ ಶಿವಂಜಿ ಮತ್ತು ರಾಮಧರ್ ಸಿಂಗ್ ಇವರುಗಳ ನಡುವಿನ ಭಿನ್ನಾಭಿಪ್ರಾಯದಿಂದ ಸಂಘಟನೆಯಿಂದ ಹೊರಬಂದ ರಾಮಧರ್‌ಸಿಂಗ್ ಕನುಸನ್ಯಾಲ್ ನೇತೃತ್ವದ ಸಂಘಟನೆಗೆ ಸೇರ್ಪಡೆಯಾದ.

1980 ರ ದಿನಗಳಲ್ಲಿ ಬಿಹಾರದಲ್ಲಿ ಪ್ರಮೋದ್ ಮಿಶ್ರ ಮತ್ತು ಸಂಜಯ್ ದುಸದ್ ಎಂಬ ಇಬ್ಬರು ranvir-sena-violenceಉಗ್ರ ಸ್ವರೂಪದ ನಾಯಕರು ಮುಂಚೂಣಿಗೆ ಬಂದ ನಂತರ ಬಿಹಾರದಲ್ಲಿ ನಕ್ಸಲ್ ಚಟುವಟಿಕೆ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಐದು ಸಾವಿರ ಮಂದಿ ಪೂರ್ಣಾವಧಿ ಕಾರ್ಯಕರ್ತರು ಮತ್ತು ಹತ್ತು ಸಾವಿರ ಮಂದಿ ಬೆಂಬಲಿಗರು ನಕ್ಸಲ್ ಸಂಘಟನೆಯ ಜೊತೆ ಗುರುತಿಸಿಕೊಂಡಿದ್ದರು. ಇದೆ ವೇಳೆಗೆ ಬಿಹಾರದಲ್ಲಿ ಜಾತಿ ಕಲಹವೂ ಸಹ ಭುಗಿಲೆದ್ದಿತ್ತು. ರಜಪೂತರು ಮತ್ತು ಯಾದವರ ಸಮುದಾಯದ ನಡುವೆ ನಡೆದ ಜಾತಿ ಸಂಘರ್ಷ ಸಾಮೂಹಿಕ ಕಗ್ಗೊಲೆಯಲ್ಲಿ ಅಂತ್ಯಗೊಂಡಿತು. ಇದೇ ರೀತಿ ಕುಮ್ರಿ ಮತ್ತು ಭುಮಿಯಾರ್‌ಗಳು ದಲಿತ ಮತ್ತು ಹಿಂದುಳಿದ ಜಾತಿಗಳ ಮೇಲೆ ನಡೆಸಿದ ಅತ್ಯಾಚಾರ, ಕೊಲೆ ಇವೆಲ್ಲವೂ ಇಡೀ ಭಾರತ ಮಾತ್ರವಲ್ಲ, ಮನುಕುಲವೇ ನಾಚಿಕೆ ಪಡುವಂತಿತ್ತು. ಇಂತಹ ದ್ವೇಷದ ದಿನಗಳಲ್ಲಿ ದಲಿತರನ್ನು ಅಂತ್ಯಗೊಳಿಸುವುದೇ ನಮ್ಮ ಮುಖ್ಯ ಗುರಿ ಎಂದು ಬಹಿರಂಗವಾಗಿ ಘೋಷಿಸುವುದರ ಮೂಲಕ ಹುಟ್ಟಿಕೊಂಡ ರಣವೀರ ಸೇನೆ ಎಂಬ ಮೇಲ್ಜಾತಿ ವರ್ಗದ (ಭೂಮಿಯಾರ್ ಬ್ರಾಹ್ಮಣರ ಸಮುದಾಯದ) ದುಷ್ಟರ ಕೂಟ ಬಿಹಾರದಲ್ಲಿ ನಡೆಸಿದ ನರಮೇಧಗಳನ್ನು ಲೆಕ್ಕವಿಟ್ಟವರಿಲ್ಲ. ಇಂತಹ ವೇಳೆಯಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬಿಹಾರದ ದಲಿತ ಮತ್ತು ಹಿಂದುಳಿದ ಜಾತಿಯ ಸಮುದಾಯಗಳ ಪಾಲಿಗೆ ಮಾವೋವಾದಿ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರು ರಕ್ಷಣೆಯಾಗಿ ನಿಂತರು.

ಬೇಲಾ ಭಾಟಿಯ ಎಂಬ ಸಮಾಜ ಶಾಸ್ತ್ರಜ್ಞೆ ಬಿಹಾರದ ಹಿಂಸೆ ಮತ್ತು ಅಲ್ಲಿನ ಜಾತಿ ಸಂಘರ್ಷ ಹಾಗೂ ನಕ್ಸಲ್ ಚಳುವಳಿ ಕುರಿತಂತೆ ನಡೆಸಿದ ಸಂಶೋಧನಾ ಪ್ರಬಂಧ “The Naxal Movement in Bihar” ಏಪ್ರಿಲ್ 5 ರ “Economic & political Weekly” ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಡಿವಾಳ ಜಾತಿಗೆ ಸೇರಿದ ಯುವಕನೊಬ್ಬ ಪ್ರಥಮಬಾರಿಗೆ ಪದವಿ ಪಡೆದ ನಂತರ ಮೇಲ್ಜಾತಿ ಜನರಿಂದ ಅನುಭವಿಸಿದ ಅಪಮಾನಗಳು, ನಂತರದ ದಿನಗಳಲ್ಲಿ ಎಂ.ಎ. ಪದವಿ ಪಡೆದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ಆತನಿಗೆ ಬರುತಿದ್ದ ಕೆಲಸದ ಆದೇಶಗಳು ತಲುಪದ ಹಾಗೆ ಅಂಚೆ ಕಛೇರಿಯಲ್ಲಿ ಸಂಚು ನಡೆಸಿ ಆತನ ಬದಕು ಮತ್ತು ಅನ್ನವನ್ನು ಕಸಿದ ಸಮಾಜದ ಕ್ರೌರ್ಯ ಎಲ್ಲವೂ ಇಲ್ಲಿ ದಾಖಲಾಗಿದೆ. ಅಂತಿಮವಾಗಿ ರಾಮ್ ಪ್ರವೇಶ್ ಬೈತ ಎಂಬ ಹೆಸರಿನ ಈ ಯುವಕ ನಕ್ಸಲ್ ಚಳುವಳಿ ಜೊತೆ ಗುರುತಿಸಿಕೊಂಡು ನಾಯಕನಾಗಿ ಬೆಳೆದನು. 2008 ರಲ್ಲಿ ಬಿಹಾರ ಪೊಲೀಸರಿಂದ ಬಂಧಿತನಾಗಿ ಈಗ ಜೈಲಿನಲ್ಲಿದ್ದಾನೆ. ಇದೇ ರೀತಿ ಜಗದೀಶ್ ಮಾತೊ ಎಂಬ ಯುವಕನೊರ್ವ ಜಮೀನ್ದಾರರ ಗೂಂಡಾ ಪಡೆಯ ವಿರುದ್ದ ಸಿಡಿದೆದ್ದು, ಮಾಜಿ ಡಕಾಯಿತ ರಾಮೇಶ್ವರ್ ಐಹಿರ್ ಎಂಬಾತನ ಜೊತೆಗೂಡಿ ನಕ್ಸಲ್ ಪಡೆ ಕಟ್ಟಿಕೊಂಡು ಭೋಜ್ ಪುರ್ ಜಿಲ್ಲೆಯಲ್ಲಿ ಹೋರಾಡುತಿದ್ದ ಸಂದರ್ಭದಲ್ಲಿ ಕ್ರಮವಾಗಿ 1972 ಮತ್ತು 1975 ರಲ್ಲಿ ಇಬ್ಬರೂ ಪೊಲೀಸರ ಗುಂಡಿಗೆ ಬಲಿಯಾದರು.

ಬಿಹಾರದಲ್ಲಿ ನಕ್ಸಲ್ ಚಳುವಳಿ 1970 ರ ದಶಕದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿತು. ಕಲ್ಯಾಣ್ ರಾಯ್ ಎಂಬಾತ ಹುಟ್ಟುಹಾಕಿದ ಎಂ.ಎಂ.ಜಿ. (ಮ್ಯಾನ್. ಮನಿ. ಗನ್.) ಸಂಘಟನೆ ಸಿಂಗಭೂಮಿ ಜಿಲ್ಲೆ ಮತ್ತು ಜೆಮ್‌ಶೆಡ್‌ಪುರ ಸಮೀಪದ ಅರಣ್ಯ ವಲಯದಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಈ ಸಂಘಟನೆಯ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸರ ಬಂಧನಕ್ಕೆ ಒಳಗಾದಾಗ ಅವರ ಜೊತೆ ಓರ್ವ ಬ್ರಿಟನ್ ಯುವತಿ ಸಹ ಸಿಕ್ಕಿ ಬಿದ್ದಿದ್ದಳು. ಶಿಕ್ಷಕಿಯಾಗಿದ್ದ ಆಕೆ ಕೊಲ್ಕತ್ತ ನಗರದಲ್ಲಿದ್ದಾಗ ತಾನು ಪ್ರೀತಿಸಿದ ಯುವಕ ಅಮಲೇಂದ್ರ ಸೇನ್ ಜೊತೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದಳು. ಹಜಾರಿಬಾಗ್ ಸೆರೆಮನೆಯಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿದ ನಂತರ ಆಕೆಯನ್ನು ಬಿಹಾರ ಸರ್ಕಾರ ಆಕೆಯ ತಾಯ್ನಾಡಿಗೆ ಗಡಿಪಾರು ಮಾಡಿತು. 1980 ರಲ್ಲಿ ಆಕೆ ಇಂಗ್ಲೆಂಡ್ ತಲುಪಿದ ನಂತರ ಬರೆದ “My years in an Indian prison” ಕೃತಿಯಲ್ಲಿ ಭಾರತದ ಸೆರೆಮನೆಗಳ ಸ್ಥಿತಿ ಗತಿ ಮತ್ತು ಅಲ್ಲಿನ ಖೈದಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಬಗ್ಗೆ ವಿವರವಾಗಿ ದಾಖಲಿಸಿದ್ದಾಳೆ.

ಜಾತಿ ಮತ್ತು ಸಮಾಜದ ವೈರುದ್ಧಗಳ ಹಿನ್ನೆಯಲ್ಲಿ ಹುಟ್ಟಿಕೊಂಡ ನಕ್ಸಲ್ ಹೋರಾಟ ಬಿಹಾರದಲ್ಲಿ ಇವೊತ್ತಿಗೂ ಅದು ಜಾತಿಯ ಸಂಘರ್ಷವಾಗಿಯೇ ಮುಂದುವರಿದಿದೆ. 1980 ರ ದಶಕದಲ್ಲಿ ಚಾರು ಮುಜಂದಾರ್‌ನಿಂದ ಪ್ರೇರಿತನಾಗಿ ನಕ್ಸಲ್ ಪಡೆ ಸೇರಿದ್ದ ವಿನೋದ್ ಮಿಶ್ರಾ ಎಂಬ ದುರ್ಗಾಪುರದ ಇಂಜಿನಿಯರಿಂಗ್ ಕಾಲೇಜು ಪದವೀಧರ ಕಟ್ಟಿದ್ದ ಲಿಬರೇಶನ್ ಗ್ರೂಪ್ ಅಥವಾ ಎಂ.ಸಿ.ಸಿ. ನಕ್ಸಲ್ ಪಡೆ ಒಂದು ದಶಕದ ಕಾಲ ಬಿಹಾರದಲ್ಲಿ ಅಟ್ಟ ಹಾಸದಿಂದ ಮೆರೆಯುತಿದ್ದ ಜಮೀನ್ದಾರರು ಮತ್ತು ಮೇಲ್ಜಾತಿಯ ಜನರ ರಕ್ತದ ಹೊಳೆಯನ್ನೇ ಹರಿಸಿತು. ಇದಕ್ಕೆ ಪರೋಕ್ಷವಾಗಿ ಅಲ್ಲಿನ ಭುಮಿಯಾರ್ ಎಂಬ ಮೇಲ್ಜಾತಿಯ ಜನ ರಚಿಸಿಕೊಂಡ “ರಣಧೀರ್ ಸೇನಾ” ಎಂಬ ಪಡೆ ಕಾರಣವಾಗಿತ್ತು. ದಲಿತರನ್ನು ಕೊಂದು ಹಾಕುವುದೇ ನಮ್ಮ ಮುಖ್ಯ ಗುರಿ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದ ರಣಧೀರ್ ಸೇನೆ ನಕ್ಸಲರನ್ನು ಹಿಂಸೆಗೆ ಪ್ರಚೋದಿಸಿತ್ತು. ಡಾ. ಬಿಂದೇಶ್ವರ್ ಸಿಂಗ್ ಎಂಬುವರು ಬರೆದಿರುವ “Rural violence in Bihar” (1987) ಎಂಬ ಕೃತಿ ಜಾತಿಯ ನೆಪದಲ್ಲಿ ಬಿಹಾರದ ನೆಲದಲ್ಲಿ ಹರಿದ ನೆತ್ತರಿನ ಇತಿಹಾಸದ ಚಿತ್ರಣವನ್ನು ನೀಡುತ್ತದೆ.

1986 ರ ಸೆಂಪ್ಟಂಬರ್ ನಲ್ಲಿ ಔರಂಗಾಬಾದ್ ಜಿಲ್ಲೆಯಲ್ಲಿ 11 ಮಂದಿ ರಜಪೂತರು, 87 ರ ಮೇ 11 ರಂದು ಅದೇ ಔರಂಗಾಬಾದ್ ಜಿಲ್ಲೆಯಲ್ಲಿ 42 ರಜಪೂತರು, 1991 ರ ಜನವರಿ ತಿಂಗಳಿನಲ್ಲಿ ಗಯಾ ಜಿಲ್ಲೆಯಲ್ಲಿ ಇಬ್ಬರು ಪೊಲೀಸರು ಮತ್ತು ಅದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಐವರು ಮುಸ್ಲಿಮರು (ಗಯಾ ಜಿಲ್ಲೆ) ಮತ್ತು ಮೇ ತಿಂಗಳಿನಲ್ಲಿ ಗಯಾ ಜಿಲ್ಲೆಯ ಬಿ.ಜೆ.ಪಿ. ಪಕ್ಷದ ಸಂಸದ ಹಾಗೂ ಡಿಸಂಬರ್ ತಿಂಗಳಿನಲ್ಲಿ ಮೂವರು ಭೂಮಿಯಾರ್ ಬ್ರಾಹ್ಮಣರು, ಮತ್ತೆ 1992 ರ ಪೆಬ್ರವರಿ ತಿಂಗಳಿನಲ್ಲಿ 37 ಮಂದಿ ಭೂಮಿಯಾರ್ ಬ್ರಾಹ್ಮಣರು ನಕ್ಸಲರ ಹಿಂಸೆಯಲ್ಲಿ ಹತರಾದರು. 1990 ರ ವರ್ಷವೊಂದರಲ್ಲೇ ಬಿಹಾರದಲ್ಲಿ 167 ಹಿಂಸಾತ್ಮಕ ಘಟನೆಗಳು ನಡೆದು 57 ಮಂದಿ ಪ್ರಾಣ ತೆತ್ತಿದ್ದಾರೆ.

ನಕ್ಸಲರ ಹಿಂಸೆಗೆ ಪ್ರತಿಯಾಗಿ ಮೇಲ್ಜಾತಿ ಸಮುದಾಯವಾದ ಭೂಮಿಯಾರ್ ಬ್ರಾಹ್ಮಣರು 1994 ರಲ್ಲಿ ಭೋಜ್ ಪುರ್ Brameshvar singಜಿಲ್ಲೆಯಲ್ಲಿ ಶಿವಸೇನೆಯ ಬಾಳ್‌ಥಾಕರೆ ಪ್ರತಿರೂಪದಂತಿದ್ದ ಬ್ರಹ್ಮೇಶ್ವರ್ ಸಿಂಗ್ ಎಂಬಾತನ ನೇತೃತ್ವದಲ್ಲಿ ಸ್ಥಾಪಿಸಿದ “ರಣವೀರ ಸೇನೆ” ನಿರಂತರವಾಗಿ ಐದು ವರ್ಷಗಳ ಕಾಲ ದಲಿತರನ್ನು ಕೊಲ್ಲುತ್ತಾ ಬಂದಿತು. 1995 ರಲ್ಲಿ ನಡೆದ ಬಿಹಾರದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಐವತ್ತು ಮಂದಿ ಹಿಂದುಳಿದ ವರ್ಗದ ಜನ ಹತ್ಯೆಯಾದರು. 1996 ರಲ್ಲಿ ಭೋಜ್ ಪುರ್ ಜಿಲ್ಲೆಯ ಬತನಿತೂಲ ಎಂಬ ಹಳ್ಳಿಯಲ್ಲಿ ಹದಿನಾರು ಮಂದಿ ದಲಿತ ಮಹಿಳೆಯರು, ಆರು ಜನ ಮಕ್ಕಳು ಮತ್ತು ಮೂರು ಹಸುಗೂಸುಗಳು ರಣವೀರ ಸೇನೆಯ ಕಿಚ್ಚಿಗೆ ಬಲಿಯಾದರು. 1997 ರ ಡಿಸಂಬರ್ ತಿಂಗಳಿನಲ್ಲಿ ಮತ್ತೇ ನಡೆದ ನರಮೇಧದಲ್ಲಿ 61 ಮಂದಿ ದಲಿತರು ಬಲಿಯಾದರು. bathanitola_protestಇವರಲ್ಲಿ ಹದಿನಾರು ಮಂದಿ ಮಕ್ಕಳು, ಇಪ್ಪತ್ತೇಳು ಮಹಿಳೆಯರು, ಹದಿನೆಂಟು ಮಂದಿ ಪುರುಷರು, ಹಾಗೂ ಐದು ಮಂದಿ ಅಪ್ರಾಪ್ತ ಬಾಲಕಿಯರು ಸೇರಿದ್ದರು. 1999 ರ ಜನವರಿಯಲ್ಲಿ ಜಹನಾಬಾದ್ ಜಿಲ್ಲೆಯಲ್ಲಿ ಮತ್ತೇ 22 ಮಂದಿ ದಲಿತರ ಮಾರಣಹೋಮ ಜರುಗಿತು. ಬಿಹಾರ ಸರ್ಕಾರ ರಣವೀರ ಸೇನೆ ಸಂಘಟನೆಯ ಮೇಲೆ ನಿಷೇಧ ಹೇರಿದ ನಂತರವೂ ಸಹ ದಲಿತರ ಸಾಮೂಹಿಕ ಕಗ್ಗೊಲೆ ನಿಲ್ಲಲೇ ಇಲ್ಲ. ಅಂತಿಮವಾಗಿ ರಣವೀರ ಸೇನೆಯ ಸಂಸ್ಥಾಪಕ ಬ್ರಹ್ಮೇಶ್ವರಸಿಂಗ್‌ನನ್ನು ನಕ್ಸಲ್ ಬೆಂಬಲಿತ ದಲಿತರು ಇದೇ 2012 ರ ಜೂನ್ ಒಂದರಂದು ಭೋಜ್‌ಪುರ ಪಟ್ಟಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡುವುದರ ಮೂಲಕ ದಲಿತರ ಸಾವಿಗೆ ಸೇಡು ತೀರಿಸಿಕೊಂಡರು. ಇಂತಹ ಹಿಂಸೆಯ ಚಟುವಟಿಕೆಯ ನಡುವೆ ವಿನೋದ್ ಮಿಶ್ರ ನಾಯಕತ್ವದ ಎಂ.ಸಿ.ಸಿ. ನಕ್ಸಲ್ ಪಡೆ ಬಿಹಾರದಲ್ಲಿ 3200 ಹೆಕ್ಟೇರ್ ಭೂಮಿಯನ್ನು ಜಮೀನ್ದಾರರಿಂದ ವಶಪಡಿಸಿಕೊಂಡು ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಿತ್ತು.

ಬಿಹಾರದ ಗಯಾ, ಸಿಂಗಭೂಮಿ, ಭೋಜ್‌ಪುರ, ನಳಂದ, ಜಹನಾಬಾದ್ ಔರಂಗಬಾದ್ ಜೆಮ್‌ಶೆಡ್‌ಪುರ ಜಿಲ್ಲೆ ಸೇರಿದಂತೆ ಕೇಂದ್ರ ಹಾಗೂ ದಕ್ಷಿಣ ಬಿಹಾರದಲ್ಲಿ ಏ.ಕೆ.47 ಬಂದೂಕ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 15000 ನಕ್ಸಲರನ್ನು ಹೊಂದಿತ್ತು. ಬಿಹಾರದ ನಕ್ಷಲ್ ಹೋರಾಟಕ್ಕೆ ಗಡಿಯಾಚೆಗಿನ ನೆರೆಯ ನೇಪಾಳದ ಮಾವೋವಾದಿ ನಕ್ಸಲ್ ಸಂಘಟನೆ ಉಚಿತವಾಗಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತು.

ಬಿಹಾರದ ಹಿಂದುಳಿದ ಮತ್ತು ದಲಿತರ ವಿಶ್ವಾಸ ಗಳಿಸಿದ್ದ ಎಂ.ಸಿ.ಸಿ. ನಕ್ಸಲ್ ಸಂಘಟನೆ ದಂಡಕಾರಣ್ಯದ ಮಾದರಿಯಲ್ಲಿ “ಕ್ರಾಂತಿಕಾರಿ ಕಿಸಾನ್ ಸಂಘಟನೆ”, “ಜನ್ ಸುರಕ್ಷಾ ಸಂಘಷ್ ಮಂರ್ಚ್”. “ಬುದ್ಧಿಜೀವಿ ಸಂಘ್”, ಮತ್ತು “ಕ್ರಾಂತಿಕಾರಿ ಚಾತ್ರ ಲೀಗ್” ಹಾಗೂ ಸಶಸ್ತ್ರ ಪಡೆಯಾದ “ಲಾಲ್ ರಕ್ಷಕ್ ದಳ್” ಎಂಬ ಅಂಗ ಘಟಕಗಳನ್ನು ಹೊಂದಿತ್ತು.

ಇದರ ಜೊತೆಗೆ 1982 ರಲ್ಲೇ ಚಾರು ಮುಜುಂದಾರ್‌ನ ಸಂಗಾತಿಗಳಲ್ಲಿ ಒಬ್ಬನಾಗಿದ್ದ ನಾಗಭೂಷಣ್ ಪಟ್ನಾಯಕ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಇಂಡಿಯನ್ ಪೀಪಲ್ಸ್ ಫ್ರಂಟ್ ಎಂಬ ರಾಜಕೀಯ ಘಟಕವನ್ನು ಪುನಶ್ಚೇತನಗೊಳಿಸಿ ಬಿಹಾರದಲ್ಲಿ 1985 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತಾದರೂ ಯಶಸ್ಸು ಕಾಣಲಿಲ್ಲ. ಆದre 1989 ರ ಚುನಾವಣೆಯಲ್ಲಿ ಇಂಡಿಯನ್ ಪೀಪಲ್ಸ್ ಫ್ರಂಟ್‌ನ ವತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಏಳು ಮಂದಿ ಶಾಸಕರು ಮತ್ತು ಓರ್ವ ಸಂಸದನನ್ನು ಬಿಹಾರದ ಜನತೆ ಆಯ್ಕೆ ಮಾಡಿದ್ದರು. ನಂತರದ ದಿನಗಳಲ್ಲಿ ಎಂ.ಸಿ.ಸಿ. ಸಂಘಟನೆ ಜೊತೆ ಆಂಧ್ರ ಮೂಲದ ಅಪ್ಪಾಳಸೂರಿ ಮತ್ತು ಪಶ್ಚಿಮ ಬಂಗಾಳದ ಬೊವನಿರಾಯ್ ನೇತೃತ್ವದ ಸಿ.ಪಿ.ಐ. ( ಎಂ.ಎಲ್.) ಅಂದರೆ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಗಳು ಸೇರ್ಪಡೆಯಾದ ನಂತರ ಕೆಲವು ನಾಯಕರು ರಾಜಕೀಯ ಚಟುವಟಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವದನ್ನು ಸ್ಥಗಿತಗೊಳಿಸಲಾಯಿತು. ಬಿಹಾರದಲ್ಲಿ ಮಾವೋ ಮತ್ತು ಲೆನಿನ್ ಪ್ರೇರಿತ ನಕ್ಸಲ್ ಚಟುವಟಿಕೆಯ ಜೊತೆ ಜೊತೆಯಲ್ಲಿ ಇದೇ ಮಾದರಿಯಲ್ಲಿ “ಮಜ್ದೂರ್ ಕಿಸಾನ್ ಸಂಗ್ರಾಮ್ ಸಮಿತಿ” ಎಂಬ ಸಂಘಟನೆ ದಲಿತ ಮತ್ತು ಭೂಹೀನರ ಪರವಾಗಿ ಹೋರಾಟ ನಡೆಸಿದ್ದು ಉಲ್ಲೇಖನಿಯವಾದದ್ದು.

ಜಯಪ್ರಕಾಶ್ ನಾರಾಯಣರ ಪಕ್ಕಾ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಡಾ.ವಿನಯ್ ಎಂಬುವರು 1979 ರಲ್ಲಿ ಜನತಾ ಪಕ್ಷದಿಂದ ಹೊರಬಂದು 1982 ರಲ್ಲಿ ಎಂ.ಕೆ.ಎಸ್.ಎಸ್. ಎಂಬ ಈ ಕ್ರಾಂತಿಕಾರಿ ಸಂಘಟನೆಯನ್ನು ಹುಟ್ಟು ಹಾಕಿದ್ದರು. ನಕ್ಸಲಿಯರಿಗಿಂತ ಭಿನ್ನವಾದ ಹಾದಿಯಲ್ಲಿ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಹೋರಾಟ ನಡೆಸುವುದು ಡಾ. ವಿನಯ್ ಅವರ ಕನಸಾಗಿತ್ತು. ಕೃಷಿ ಕಾರ್ಮಿಕರಿಗೆ ಕನಿಷ್ಟ ಕೂಲಿ, ಮತ್ತು ಜಮೀನ್ದಾರರ ಶೋಷಣೆಯನ್ನು ತಪ್ಪಿಸುವುದು ಹಾಗೂ ದಲಿತರ ರಕ್ಷಣೆಯನ್ನು ಗುರಿಯಾಗಿಟ್ಟುಕೊಂಡಿತ್ತು. ಆದರೆ 1986 ರಲ್ಲಿ ಒಂಬತ್ತು ಹಿಂದುಳಿದ ಕುಟುಂಬಗಳ ನಡುವಿನ ವೈಷಮ್ಯ ಪರಸ್ಪರ ಕುಟುಂಬಗಳ ಸದಸ್ಯರ ಹತ್ಯೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ 26 ಮಂದಿ ಎಂ.ಕೆ.ಎಸ್.ಎಸ್. ಕಾರ್ಯಕರ್ತರು ಪೊಲೀಸರ ಗುಂಡಿಗೆ ಬಲಿಯಾದರು. ಜೊತೆಗೆ ಸರ್ಕಾರ ಕೂಡ ಈ ಸಂಘಟನೆಯ ಮೇಲೆ ನಿಷೇಧ ಹೇರಿತು. ಇಂತಹ ಹಿನ್ನಡೆಯ ನಡುವೆ ಅಂತಿಮವಾಗಿ ವಿಧಿಯಿಲ್ಲದೆ ನಕ್ಸಲಿಯರ ಹಿಂಸೆಯ ಮಾರ್ಗವನ್ನು ಅನುಸರಿಸುತ್ತಿರುವ ಈ ಸಂಘಟನೆ ಸಧ್ಯ ಬಿಹಾರದಲ್ಲಿ 25 ಶಸ್ತ್ರ ಸಜ್ಜಿತ ಪಡೆಗಳು ಮತ್ತು ೩೦ಸಾವಿರ ಕಾರ್ಯಕರ್ತರನ್ನು ಹೊಂದಿದೆ. ಎಂ.ಕೆ.ಎಸ್.ಎಸ್. ಸಂಘಟನೆಯಲ್ಲೂ ಸಹ ಅತ್ಯಾಧುನಿಕ ಮಿಷಿನ್ ಗನ್, ಸ್ಟನ್ ಗನ್ ಮತ್ತು ಏ.ಕೆ.47 ಮತ್ತು ಏ.ಕೆ.56 ಬಂದೂಕಗಳಿರುವುದು ವಿಶೇಷವಾಗಿದೆ.

ಭಾರತದಲ್ಲಿ ಮಧ್ಯಭಾರತದ ದಂಡಕಾರಣ್ಯ ಹೊರತು ಪಡಿಸಿದರೆ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ dalit_hostel_burntನಕ್ಸಲರ ಚಟುವಟಿಕೆ ತೀವ್ರಗೊಂಡಿದೆ. ಹಾಗಾಗಿ ಆಧುನಿಕ ಬಿಹಾರದ ಚರಿತ್ರೆ ಎಂದರೇ ಅದು ರಕ್ತ ಚರಿತ್ರೆ ಎಂಬಂತಾಗಿದೆ. ಲಂಡನ್ ನಗರದಲ್ಲಿರುವ ಗೋಲ್ಡ್‌ಸ್ಮಿತ್ ವಿಶ್ವ ವಿದ್ಯಾನಿಲಯದ ಸಮಾಜಶಾಸ್ತ್ರಜ್ಞೆ ಅಲ್ಪ ಶಾ (Alpa Shah) ಎಂಬಾಕೆ ಕಳೆದ ಇಪ್ಪತ್ತು ವರ್ಷಗಳಿಂದ ನೇಪಾಳ ಮತ್ತು ಬಿಹಾರದ ನಕ್ಸಲ್ ಚಟುವಟಿಕೆ ಕುರಿತು ಅಧ್ಯನ ನಡೆಸುತಿದ್ದಾರೆ. ಈಕೆ ಸಂಪಾದಿಸಿರುವ “Windows in to a Revolution” ಎಂಬ ಕೃತಿಯಲ್ಲಿ ಬಿಹಾರ ರಾಜ್ಯದ ಪ್ರತಿಯೊಂದು ದಲಿತ ಕುಟುಂಬದ ದುರಂತದ ಚಿತ್ರಣವಿದೆ. ಅಲ್ಲಿನ ಪ್ರತಿ ಕ್ಷಣದ ನಕ್ಸಲ್ ಚಟುವಟಿಕೆಗಳು ಮತ್ತು ಮೇಲ್ಜಾತಿಯ ಹಿಂಸೆ ಇವುಗಳಿಗೆ ಸಾಕ್ಷಿಯಾಗಿದ್ದ ಈ ತಜ್ಞೆ ದಾಖಲಿಸಿರುವ ಅಂಶಗಳು ನಕ್ಸಲಿಯರು ಮತ್ತು ಅವರ ಹಿಂಸೆ ಕುರಿತಂತೆ ನಮ್ಮ ಮರುಚಿಂತನೆಗೆ ದಿಕ್ಸೂಚಿಯಾಗಬಲ್ಲವು.

(ಮುಂದುವರಿಯುವುದು)

Karnataka High Court

ನವೀನ್ ಸೂರಿಂಜೆಗೆ ಹೈಕೋರ್ಟ್‌ನಲ್ಲೂ ಜಾಮೀನು ನಿರಾಕರಣೆ…

– ರವಿ ಕೃಷ್ಣಾರೆಡ್ಡಿ

ಎರಡು ವಾರದ ಹಿಂದೆ (12/12/12) ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಯವರ ಜಾಮೀನು ಅರ್ಜಿ ಕುರಿತಾದ ವಾದ-ಪ್ರತಿವಾದ ನಡೆದು ನ್ಯಾಯಾಧೀಶರು ಅದರ ಕುರಿತ ತೀರ್ಪನ್ನು ಮೀಸಲಿಟ್ಟಿದ್ದರು. ಮುಂದಿನ ಎರಡು ದಿನಗಳಲ್ಲಿ ತೀರ್ಪು ಪ್ರಕಟವಾಗಲಿಲ್ಲ. ಅದಾದ ನಂತರ ಕೋರ್ಟ್‌ಗೆ ಚಳಿಗಾಲದ ರಜೆ. ಇಂದು ರಜಾ ಪೀಠ ಆದೇಶ ಹೊರಡಿಸಿತು: “ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ.” ನಾನು ಕೋರ್ಟ್‌ನಿಂದ ಹೊರಗೆ ಬಂದ ವಕೀಲರನ್ನು ನ್ಯಾಯಾಧೀಶರು ವಜಾಕ್ಕೆ ಕೊಟ್ಟಿರುವ ಕಾರಣಗಳನ್ನು ಕೇಳಿದೆ. ಅದಕ್ಕೆ ವಕೀಲರು ಪೋಲಿಸರು ಚಾರ್ಜ್‌ಷೀಟ್‌ನಲ್ಲಿ ಕೊಟ್ಟಿರುವ ಕಾರಣಗಳನ್ನೇ ಹೇಳುತ್ತಾ ಹೋದರು.

ಈಗ ಬಹುಶಃ ಮುಂದಿನ ದಾರಿ ದೆಹಲಿಯ ಸುಪ್ರೀಂ ಕೋರ್ಟ್.

ನಾನು ಸುಮಾರು ವರ್ಷದ ಹಿಂದೆ (2011 ರ ನವೆಂಬರ್‌ನಲ್ಲಿ) ಸಚಿವ ಸೋಮಣ್ಣನವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಸಮಯದಿಂದ ಕೋರ್ಟ್‌ ಕಲಾಪಗಳನ್ನು ಹತ್ತಿರದಿಂದ ನೋಡುತ್ತ ಬರುತ್ತಿದ್ದೇನೆ. ಕೋರ್ಟ್‌ಗಳ ಸ್ವಾತಂತ್ಯ, ಅಧಿಕಾರ, ಪ್ರಭಾವ, ಇವೆಲ್ಲವುಗಳ ಬಗ್ಗೆ ಕೆಲವು ನ್ಯಾಯಾಲಯಗಳ ಕಾರ್ಯವೈಖರಿ ನೋಡಿ ಭಯಮಿಶ್ರಿತ ಗೌರವ ಮೂಡಿತ್ತು. ಹಲವು ನ್ಯಾಯಾಧೀಶರ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ನೋಡಿ ಹೆಮ್ಮೆ ಸಹ ಪಡುತ್ತಿದ್ದೆ.

ಆದರೆ, ನವೀನ್ ಸೂರಿಂಜೆ ಬಂಧನವಾದಂದಿನಿಂದ ಕೋರ್ಟ್‌ಗಳ ಕಲಾಪವನ್ನು ಇನ್ನೂ ಹೆಚ್ಚಿನ ಕುತೂಹಲದಿಂದ ಗಮನಿಸುತ್ತಿದ್ದೇನೆ. ಪರಿಣಾಮವಾಗಿ ಕೋರ್ಟ್‌ಗಳ ಬಗ್ಗೆ ಅನುಮಾನ ಮತ್ತು ಅಸಮಾಧಾನ ಹೆಚ್ಚಾಗಿದೆ. ನಮ್ಮ ಹಲವು ಅಥವ ಅನೇಕ ನ್ಯಾಯಾಧೀಶರುಗಳು ಹೊರಗಿನ ಶಕ್ತಿಗಳ ಹಸ್ತಕ್ಷೇಪ, ಪ್ರಭಾವ, ಕಣ್ಸನ್ನೆಗಳಿಗೆ ಹೊರತಾಗಿಲ್ಲ ಎಂದು ಅರಿವಾಗುತ್ತಿದೆ. ಈ ನ್ಯಾಯಾಧೀಶರುಗಳೂ ಸಹ ನಮ್ಮ ಸಮಕಾಲೀನ ಸಮಾಜದ ಉತ್ಪನ್ನಗಳೇ ಅಲ್ಲವೇ? ಅವರೂ ಸಹ ವಕೀಲರಾಗಿ ಕಾರ್ಯನಿರ್ವಹಿಸಿ ನಂತರ ನ್ಯಾಯಾಧೀಶರಾದವರು. ನಮ್ಮ ಇಡೀ ಸಮಾಜ ಅನೈತಿಕತೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಅದಕ್ಷತೆ, ಅಪ್ರಾಮಾಣಿಕತೆಯಿಂದ ನರಳುತ್ತಿರುವಾಗ ನಮ್ಮ ಸಮಾಜದಿಂದಲೇ ಬಂದಂತಹ ಎಲ್ಲಾ ನ್ಯಾಯಾಧೀಶರುಗಳೂ ಅದಕ್ಕೆ ಹೊರತಾಗಿರುತ್ತಾರೆ ಎಂದು ಹೇಳುವುದು ಅಸಮಂಜಸ ಮತ್ತು ಅವಾಸ್ತವಿಕ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರಿರುವಂತೆ ಇಲ್ಲೂ ಇದ್ದಾರೆ, ಅಷ್ಟೇ.

ಎರಡು ದಿನಗಳ ಹಿಂದೆ ಹಿರಿಯ ವಕೀಲರೊಬ್ಬರು ಹೇಳುತ್ತಿದ್ದ ವಿಚಾರ ಕೇಳಿ ನನ್ನ ಗಾಬರಿ ಇನ್ನೂ ಹೆಚ್ಚಾಗಿದೆ. ನಿಮಗೆ ಗೊತ್ತಿಲ್ಲದಿರಬಹುದು, ನ್ಯಾಯಾಧೀಶರಾಗಿದ್ದ ಕೆಲವರು ಆ ಸಂಬಳಕ್ಕಿಂತ ವಕೀಲ ವೃತ್ತಿಯಲ್ಲಿಯೇ ಹೆಚ್ಚು ದುಡಿಯಬಹುದು ಎಂದು ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ವಕೀಲರಾಗಿದ್ದಾರೆ. ಮತ್ತು ರಾಜ್ಯದ ಹಲವು ಕಡೆ ಹಿರಿಯ ವಕೀಲರ ಜೂನಿಯರ್‌ಗಳಾಗಿದ್ದವರು ಇಂದು ನ್ಯಾಯಾಧೀಶರಾಗಿದ್ದಾರೆ. ಮತ್ತು ಇಲ್ಲಿ ಎಂತಹ ಗುಲಾಮಿತನ ಇದೆ ಎಂದರೆ ಕೆಲವೊಮ್ಮೆ ನ್ಯಾಯಾಧೀಶರ ಸೀನಿಯರ್ ಆಗಿದ್ದ ವಕೀಲರು ಕೋರ್ಟ್‌ ಹಾಲ್‌ನ ಒಳಗೆ ಪ್ರವೇಶಿಸಿದ ತಕ್ಷಣ ತಾನು ನ್ಯಾಯಾಧೀಶ ಎನ್ನುವುದನ್ನು ಮರೆತು ಅಭ್ಯಾಸಬಲದಿಂದ ನ್ಯಾಯಾಧೀಶರೇ ಎದ್ದು ನಿಂತದ್ದಿದೆಯಂತೆ. ಇಂದು ಭೇಟಿಯಾದ ವಕೀಲರೊಬ್ಬರು ಹೇಳುತ್ತಿದ್ದರು: “ನ್ಯಾಯಾಧೀಶರುಗಳನ್ನು ಅವರು ಪ್ರಾಕ್ಟಿಸ್ ಮಾಡುತ್ತಿದ್ದ ಜಾಗದಿಂದ ಐನೂರು-ಸಾವಿರ ಕಿ.ಮೀ.ಗಳ ದೂರಕ್ಕೆ ವರ್ಗಾಯಿಸಿ ಬಿಡಬೇಕು. ಆಗಲಾದರೂ ಈ ಗುಲಾಮಿತನ ಮತ್ತು ಕೆಲವು ವಕೀಲರುಗಳು ಬಕೆಟ್ ಹಿಡಿಯುವುದು ನಿಲ್ಲಬಹುದು.” ವಕೀಲರಲ್ಲಿಯೂ ನ್ಯಾಯಾಂಗದ ಪಕ್ಷಪಾತಿತನ ಅಥವ ಅದಕ್ಷತೆಯ ವಿರುದ್ಧದ ಕೂಗು ಹೆಚ್ಚಾಗುತ್ತಿದೆ.

ನ್ಯಾಯಾಧೀಶರೂ ಹೇಗೆ ಪ್ರಭಾವಕ್ಕೊಳಗಾಗುತ್ತಾರೆ ಮತ್ತು ಹೇಗೆ ಮಾಡಬಹುದು ಎನ್ನುವುದಕ್ಕೆ ನೀವು ರಾಜ್ಯದ ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯರ chhanumantaraya“ವಕೀಲರೊಬ್ಬರ ವಗೈರೆಗಳು” ಪುಸ್ತಕ ನೋಡಬಹುದು.

ಮತ್ತು ನ್ಯಾಯಾಧೀಶರ ಮೇಲೆಯೂ ಎಂತಹ ಗುರುತರ ಆರೋಪಗಳು ಮತ್ತು ಸಂಶಯಗಳಿವೆ ಎನ್ನುವುದಕ್ಕೆ ನೀವು ನಮ್ಮ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾದ ನ್ಯಾ. ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ನೋಡಬೇಕು. ಇದು ನಮ್ಮಲ್ಲಿ ಪ್ರಕಟವಾದ ಮಾರನೆಯ ದಿನವೇ ಈ ಪತ್ರವನ್ನೇ ಆಧಾರವಾಗಿಟ್ಟುಕೊಂಡು “ಡೆಕ್ಕನ್ ಕ್ರಾನಿಕಲ್” ಪತ್ರಿಕೆಯಲ್ಲಿಯೂ “Is this why Governor rejected Bannurmath for Ayukta post?” ಎಂಬ ಮುಖಪುಟ ವರದಿ ಪ್ರಕಟವಾಯಿತು. ಕರ್ನಾಟಕದ ಇನ್ಯಾವ ಘನತೆವೆತ್ತ ಮಾಧ್ಯಮ ಸಂಸ್ಥೆಯೂ ಈ ವಿಚಾರದ ಬಗ್ಗೆ ಮಾತನಾಡುವ, ಪ್ರಸ್ತಾಪಿಸುವ, ಕನಿಷ್ಟ ಪಕ್ಷ ಅದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುವ ಧೈರ್ಯವನ್ನೇ ಮಾಡಲಿಲ್ಲ. ಆದರೂ, ನಮ್ಮಲ್ಲಿ ಮತ್ತು ಡೆಕ್ಕನ್ ಕ್ರಾನಿಕಲ್‌ನಲ್ಲಿ ಈ ವಿಷಯ ಪ್ರಸ್ತಾಪವಾದ ಒಂದೇ ವಾರಕ್ಕೆ ಬನ್ನೂರುಮಠರು ಲೋಕಾಯುಕ್ತ ಹುದ್ದೆಯಿಂದ ಹಿಂದೆ ಸರಿದರು.

ಬರಲಿರುವ ದಿನಗಳಲ್ಲಿ ಭಾರತದಲ್ಲಿ ನ್ಯಾಯಕ್ಕಾಗಿ ಸಂಘರ್ಷ ಹೆಚ್ಚಾಗಲಿದೆ. ಇತ್ತೀಚಿಗೆ ದೆಹಲಿಯಲ್ಲಾಗುತ್ತಿರುವ ಪ್ರತಿಭಟನೆಗಳನ್ನೇ ಗಮನಿಸಿ. ನ್ಯಾಯ ಮತ್ತು ಆದರ್ಶಗಳಿಗಾಗಿ ತಮ್ಮ ವೃತ್ತಿ ಮತ್ತು ಖಾಸಗಿ ಬದುಕನ್ನು ಕಳೆದುಕೊಂಡು ಹೋರಾಟಕ್ಕೆ ಮತ್ತು ಸ್ವಯಂಪ್ರೇರಣೆಯಿಂದ ನ್ಯಾಯದ ಪರವಾಗಿ ಜೈಲಿಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಲಿದೆ. ಅದರ ನೇರ ಪ್ರಭಾವ ನಮ್ಮ ನ್ಯಾಯಾಂಗದ ಮೇಲೆಯೂ ಬೀಳಲಿದೆ. ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ ಎಲ್ಲಕ್ಕಿಂತ ಮೊದಲು ಆರಂಭವಾಗಬೇಕಿದೆ. ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗಗಳಂತೂ ಪೂರ್ತಿ ಭ್ರಷ್ಟವೂ, ನೆಚ್ಚಿಕೊಳ್ಳಲಾಗದಷ್ಟು ಅದಕ್ಷವೂ, ಅಪ್ರಾಮಾಣಿಕವೂ ಆಗಿವೆ. ಉಳಿದಿರುವ ಊರುಗೋಲು ನ್ಯಾಯಾಂಗವೊಂದೇ. “ನ್ಯಾಯಾಂಗ ನಿಂದನೆ” ಎಂಬ ಬೆದರು ಬೊಂಬೆಗೆ ಭಯಪಡಲು ನಿರಾಕರಿಸಿ ನಮ್ಮ ಈ ದೇಶದ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ನಾವೆಲ್ಲ ಪಣ ತೊಡಬೇಕಿದೆ. ಇಷ್ಟಕ್ಕೂ ನಾವು ಹೊರಗಿದ್ದು ಅಸಹಾಯಕತೆ ಮತ್ತು ಖಿನ್ನತೆ ಅನುಭವಿಸುವುದಕ್ಕಿಂತ ನ್ಯಾಯಕ್ಕಾಗಿ ಧ್ವನಿಯೆತ್ತಿದ ಕಾರಣಕ್ಕೆ ಜೈಲಿನ ಒಳಗೆ ಇರುವುದೇ ನಮ್ಮ ಮಾನಸಿಕ ಆರೋಗ್ಯ ಮತ್ತು ನೈತಿಕತೆ ದೃಷ್ಟಿಯಿಂದ ಉತ್ತಮವಾದದ್ದು ಎನ್ನಿಸುತ್ತದೆ.

ವಾಪಸು ನವೀನ್ ಸೂರಿಂಜೆ ವಿಷಯಕ್ಕೆ ಬರುವುದಾದರೆ, ನವೀನ್ ಸೂರಿಂಜೆ ಈಗ ಮಂಗಳೂರಿನ ಸರ್ಕಾರಿ ಆಸ್ಪತ್ರೆಯ ಜೈಲ್ ವಾರ್ಡ್‌ನಲ್ಲಿದ್ದಾರೆ. naveen-soorinjeಮಂಗಳೂರಿನಲ್ಲಿ ಕಳೆದ ಎರಡು-ಮೂರು ವಾರಗಳಿಂದ ಹರಡುತ್ತಿರುವ ಚಿಕನ್‌ಪಾಕ್ಸ್ ಅಥವ ಸಿಡುಬು ಜ್ವರ, ನವೀನ್ ಸೂರಿಂಜೆ ಇದ್ದ ಜೈಲ್ ಸೆಲ್‌ನ ಸಹಬಂಧಿಗಳಿಗೂ ಹರಡಿ, ಅದು ಹೀಗೆರಡು ದಿನಗಳ ಹಿಂದೆ ನವೀನ್‌ಗೂ ಹಬ್ಬಿ ಅವರು ಈಗ ಆಸ್ಪತ್ರೆಯ ಜೈಲ್ ವಾರ್ಡ್‌ನಲ್ಲಿ ಐಸೋಲೇಷನ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರಂತೆ.

ಒಂದು ವ್ಯವಸ್ಥೆ ಮತ್ತೂ ಉತ್ತಮವಾಗಿ ಬದಲಾಗಬೇಕಾದರೆ ಅಮಾಯಕರ, ನಿರಪರಾಧಿಗಳ, ನ್ಯಾಯಪರರ ಶೋಷಣೆ ಮತ್ತು ಬಲಿದಾನ ಬೇಕೇ ಬೇಕು ಎನ್ನುವುದು ಒಂದು ಸಮಾಜದ ಸಮಕಾಲೀನ ಸ್ಥಿತಿಯ ಘೋರ ನೀಚತನವನ್ನು ತೋರಿಸುತ್ತದೆ.

ವಿದ್ಯಮಾನಗಳಾಗಿ ಬದಲಾಗುತ್ತಿರುವ ಗತಕಾಲದ ದೌರ್ಜ್ಯನ್ಯಗಳು ಮತ್ತು ಸೋತು ಹೋದ ಆಧುನಿಕ ಇಂಡಿಯಾ

– ಬಿ. ಶ್ರೀಪಾದ ಭಟ್

ದೆಹಲಿಯಲ್ಲಿ ಒಂಟಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿವರಗಳು ದೇಶದ ಪ್ರಜ್ಞಾವಂತರು ನಾಚಿಕೆಯಿಂದ, ಅವಮಾನದಿಂದ, ಹೇಸಿಗೆಯಿಂದ ತಲೆತಗ್ಗಿಸುವಂತೆ ಮಾಡಿದೆ. ತನ್ನ ಪ್ರಜೆಗಳಿಗೆ ಕನಿಷ್ಠ ಮಟ್ಟದ ಭದ್ರತೆಯನ್ನು, ಘನತೆಯ ಬದುಕನ್ನು, ತಲೆ ಎತ್ತಿ ಜೀವಿಸುವ ಅವಕಾಶಗಳನ್ನು ಒದಗಿಸಲಾಗದಿದ್ದರೆ, ಕಲ್ಪಿಸಿಕೊಡಲಾಗದಿದ್ದರೆ ಇದು ದೇಶವೊಂದರ ಸೋಲು. ಹೀನಾಯ ಸೋಲು.

ವಿವಿಧ ರಾಜ್ಯಗಳಲ್ಲಿ ಸ್ವಾತಂತ್ರ್ಯಾನಂತರ ಇಂತಹ ಸಾವಿರಾರು ಅತ್ಯಚಾರಗಳು ನಡೆದಿವೆ, ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂಡಿಯಾ ದೇಶವು ನೂರಾರು ಬಾರಿ ಸೋತಿದೆ. ದೇಶವೊಂದರ ನಾಗರೀಕತೆಯ ಬೇಜವಬ್ದಾರಿತನ ಮತ್ತು ನಿಷ್ಕ್ರಿಯತೆ, ಜವಬ್ದಾರಿಯುತ ರಾಜಕೀಯ ಪಕ್ಷಗಳ ಭೌದ್ಧಿಕ ದಿವಾಳಿತನ ಮತ್ತು ಭ್ರಷ್ಟಾಚಾರಗಳ ಕಾರಣದಿಂದ ನಾಡೊಂದು ತನ್ನೊಡಲೊಳಗೆ ಬಚ್ಚಿಟ್ಟುಕೊಂಡ ಅನೇಕ ವೈರುಧ್ಯಗಳನ್ನು ಅತ್ಯಂತ ಕ್ರೂರವಾಗಿ ಹಿಂಸೆಯ ರೂಪದಲ್ಲಿ, ದೌರ್ಜನ್ಯದ ಸ್ವರೂಪದಲ್ಲಿ, ಹಲ್ಲೆಗಳ ಸ್ವರೂಪದಲ್ಲಿ, ಅತ್ಯಾಚಾರಗಳ ರೂಪದಲ್ಲಿ ನಿರಂತರವಾಗಿ ಹೊರಹಾಕುತ್ತಿರುತ್ತವೆ.

ಇದು ಈ ಹಿಂದೆಯೂ ಅನೇಕ ಬಾರಿ ಜರುಗಿದೆ. ಭಾಗಲ್ಪುರ, ಬೆಲ್ಚಿ, ಕಂಬಾಲಪಲ್ಲಿಯಲ್ಲಿ ನಡೆದ ದಲಿತರ rape-illustrationಮಾರಣ ಹೋಮಗಳಿರಬಹುದು,ಮೀನಾಕ್ಷಿಪುರಂನಲ್ಲಿ, ಗುಜರಾತ್‌ನಲ್ಲಿ, ಮುಂಬೈನಲ್ಲಿ ಕೋಮುವಾದಿಗಳಿಂದ ಅಮಾನುಷ ದೌರ್ಜನ್ಯ, ಅತ್ಯಾಚಾರಕ್ಕೀಡಾದ ಮುಸ್ಲಿಂರರಿಬಹುದು, ಶೋಷಣೆಗೆ ಒಳಗಾಗಿ ಸಾವನ್ನಪ್ಪಿದ ಬೆಂಡಿಗೇರಿ, ಬದನವಾಳು, ಖೈರ್ಲಾಂಜೆಯ ಅಸಹಾಯಕ ದಲಿತ ಕುಟುಂಬಗಳಿರಬಹುದು, ಇಂದಿರಾಗಾಂಧಿಯವರ ಹತ್ಯೆಯ ನಂತರ ಅಮಾನುಷವಾಗಿ ಕ್ರೌರ್ಯಕ್ಕೆ ಬಲಿಯಾಗಿ ಸಾವನ್ನಪ್ಪಿದ ಸಾವಿರಾರು ಸಿಖ್ಖರಿರಬಹುದು,ಇನ್ನೂ ನೂರಾರು ಇದೇ ತರಹದ ದೌರ್ಜನ್ಯಗಳಿರಬಹುದು, ಘಟನೆಗಳು ನಡೆದಂತಹ ಸಂದರ್ಭದಲ್ಲಿ ಅತ್ಯಾಚಾರಗಳಾಗಿ, ಅಮಾನುಷ ಹಲ್ಲೆಗಳಾಗಿ, ಕೊಲೆಗಳಾಗಿ ಪರಿಗಣಿಸಲ್ಪಡುವ ಈ ಘಟನೆಗಳು ವರ್ಷಗಳು ಗತಿಸುತ್ತಾ ಹೋದ ಹಾಗೆ, ಬದಲಾದ ಕಾಲಘಟ್ಟದಲ್ಲಿ ಕಾಲಕ್ರಮೇಣ ವಿದ್ಯಮಾನಗಳಾಗಿ (phenomenon) ಬದಲಾಗುತ್ತವೆ. ಇದಕ್ಕೆ ಮನುಷ್ಯನ ಸಹಜ ಮರೆವಿನ ಕಾರಣವನ್ನು ನೀಡಿ ಸಮಜಾಯಿಷಿ ಕೊಡುವ ನಮ್ಮ ಆತ್ಮವಂಚನೆಗೆ ಏನು ಶಿಕ್ಷೆಯಿದೆ? ಇದನ್ನು ಸಮಾಜ ವಿಜ್ಞಾನಿಗಳು, ಅಂಥ್ರೋಪಾಲಜಿಷ್ಟರು ಆಳವಾದ ಅಧ್ಯಯನ ನಡೆಸಿದಂತೆ ಕಾಣುತ್ತಿಲ್ಲ. ಅಥವಾ ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ ಎನ್ನುವುದೇನಾರೂ ನಿಜವೇ?

ಇಂದು ದೆಹಲಿ ಅತ್ಯಾಚಾರದ ವಿರುದ್ಧ ಸಹಜವಾಗಿಯೇ ಮತ್ತು ನ್ಯಾಯವಾಗಿಯೇ ಅತ್ಯುಗ್ರವಾಗಿ ಪ್ರತಿಭಟಿಸುತ್ತಿರುವ ನಮ್ಮ ಮಧ್ಯಮವರ್ಗದ ನಾಗರೀಕರು ದಲಿತರ, ಮುಸ್ಲಿಂರ ವಿರುದ್ಧ ಹತ್ಯಾಕಾಂಡ ನಡೆದಾಗ ಎಲ್ಲಿದ್ದರು, ಏಕೆ ಮೌನವಾಗಿದ್ದರು ಎಂದು ಪ್ರಶ್ನೆಗಳನ್ನು ಪ್ರಜ್ಞಾವಂತರು ಸಾವಿರಾರು ಸಲ ಪ್ರಶ್ನಿಸಿ ಸ್ವತಃ ಸಿನಿಕರಾಗುತ್ತಿದ್ದಾರೆ ಮತ್ತು ಈ ಮೌಲಿಕ ಹಾಗೂ ಜೀವಪರ ಪ್ರಶ್ನೆಗಳನ್ನೆತ್ತಿದ್ದಕ್ಕೆ ಗೇಲಿಗೊಳಗಾಗುತ್ತಿದ್ದಾರೆ. ಇದಕ್ಕೆ ಮೂಲಭೂತ ಕಾರಣ ನಮ್ಮ ಮಧ್ಯಮ ವರ್ಗದ ನಾಗರಿಕರು ಮುಸ್ಲಿಂ, ದಲಿತ, ಮೀಸಲಾತಿ, ಅಂಬೇಡ್ಕರ್ ತರಹದ ಹೆಸರುಗಳನ್ನೇ ದ್ವೇಷಿಸುತ್ತಿರುವುದು, ಅವರ ಇರುವಿಕೆಯನ್ನೇ ಅಲ್ಲಗೆಳೆಯುತ್ತಿರುವುದು ಮತ್ತು ಇವರ ಈ ಮೂಲಭೂತ ಮನಸ್ಥಿತಿಯೇ ಸಹ ಮೇಲಿನ ಕ್ರೌರ್ಯದ ಪುನಾವರ್ತನೆಗಳಿಗೆ ಕಾರಣ. dalit-attackಹಾಗಿದ್ದರೆ ಬಹುಶಃ ಮೂಲಭೂತವಾಗಿ ಮನುಷ್ಯ ಮತ್ತು ವ್ಯವಸ್ಥೆ ತಮ್ಮ ಬದುಕನ್ನು ನಿರಂತರವಾಗಿ ಪವಿತ್ರೀಕರಣಗೊಳಿಸಕೊಂಡಿದ್ದರ ಕುರಿತಾಗಿ ನಾವು ಅಧ್ಯಯನ ನಡೆಸಬೇಕಾಗುತ್ತದೆ. ಈ ಪವಿತ್ರೀಕರಣದ ಪರಿಕಲ್ಪನೆಯೇ ವೈಯುಕ್ತಿಕ ನೆಲೆಯಲ್ಲಿ ಸೀಮಿತ ಪರಿಣಾಮವನ್ನು ಬೀರಿದರೆ ಸಾರ್ವಜನಿಕವಾಗಿ ಇದರಿಂದುಂಟಾಗುವ ದುಷ್ಪರಿಣಾಮಗಳು ಊಹೆಗೂ ನಿಲುಕದ್ದು. ಆಗ ಇಡೀ ರಾಷ್ಟ್ರವೇ ಹಿಂಸಾತ್ಮಕದ ಮುಖವನ್ನು ಧರಿಸುತ್ತದೆ.

2002 ರಲ್ಲಿ ಮುಸ್ಲಿಂರ ವಿರುದ್ಧ ಗುಜರಾತ್‌ನಲ್ಲಾಗಿರಬಹುದು, 1984 ರಲ್ಲಿ ಸಿಖ್ಖರ ವಿರುದ್ಧ ಉತ್ತರ ಭಾರತದಾದ್ಯಾಂತ ಜರುಗಿದ್ದಿರಬಹುದು, ಸಾವಿರಾರು ವರ್ಷಗಳಿಂದ ಈ ಪವಿತ್ರ ಭಾರತದಲ್ಲಿ ಅಸ್ಪೃಶ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಗಳಿರಬಹುದು. ಇದಕ್ಕೆ ಜ್ವಲಂತ ಉದಾಹರಣೆ 2002 ರಲ್ಲಿ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಪವಿತ್ರೀಕರಣದ ಹೆಸರಿನಲ್ಲಿ ಸಂಘಪರಿವಾರವು ನಡೆಸಿದ ಮುಸ್ಲಿಂರ ಹತ್ಯಾಕಾಂಡದ ಹಿಂಸಾಚಾರವು ಹತ್ತು ವರ್ಷಗಳ ನಂತರ ಇಂದು ಯಾವಾಗಲೋ ಆಗಿ ಹೋದ ವಿದ್ಯಮಾನವಾಗಿ ಬಿಂಬಿತವಾಗುತ್ತಿದೆ. ಈ ರೀತಿ ಬಿಂಬಿಸಲು ಪತ್ರಕರ್ತರು, ಮಾಧ್ಯಮಗಳು ಮತ್ತು ಇಂಡಿಯಾದ ಮಧ್ಯಮವರ್ಗ ಪ್ರತಿಸ್ಪರ್ಧಿಗಳಂತೆ ಸ್ಪರ್ಧೆಯಲ್ಲಿ ತೊಡಗಿದ್ದಾರೆ. 2007 ರಲ್ಲಿ ಈ ಮೋದಿ ಎರಡನೇ ಬಾರಿ ಗೆದ್ದಾಗ ಅದನ್ನು ವಿವರಿಸಲು ಸ್ವಲ್ಪವಾದರೂ ಕಸಿವಿಸಿಗೊಂಡ ಮೇಲಿನ ನಾಗರಿಕರು 2012 ರಲ್ಲಿ ಮೋದಿ ಮೂರನೇ ಬಾರಿ ಗೆದ್ದ ಮೇಲಂತೂ ಇದನ್ನು ಹ್ಯಾಟ್ರಿಕ್ ಎಂದು ಸಂಭ್ರಮಿಸುತ್ತಿವೆ. ಈ ಬಾರಿ ಹಿಂದಿನಂತೆ ಸಂಕೋಚವಾಗಲೀ, ಕಸಿವಿಸಿಯಾಗಲೀ ಇಲ್ಲ. ಎಲ್ಲರ ಬಳಿಯೂ ಸಿದ್ಧ ಉತ್ತರಗಳಿವೆ. ಅಭಿವೃದ್ಧಿ, ಕಾಸ್ಮೋಪಲಿಟನ್ ಕಲ್ಚರ್, ಸಂಪೂರ್ಣ ಕೈಗಾರೀಕರಣ ಮತ್ತು ಇಡೀ ರಾಜ್ಯವೇ ವಾಣಿಜ್ಯೀಕರಣಗೊಂಡಿರುವುದು ಇವೆಲ್ಲವನ್ನೂ ಉದಾಹರಿಸುತ್ತಾ ನೋಡಿ ಮಿಂಚುತ್ತಿದೆ ಗುಜರಾತ್ ಎಂದು ಸಂಭ್ರಮಿಸುತ್ತಿರುವ ಈ ಮಾಧ್ಯಮಗಳು, ಪತ್ರಕರ್ತರು ಮತ್ತು ಮಧ್ಯಮ ವರ್ಗ ಈ ತ್ರಿಮೂರ್ತಿಗಳ ಶೂನ್ಯ ಚಿಂತನೆಗಳ ಅಬ್ಬರಕ್ಕೆ ಅಳಿದುಳಿದ ಅಲ್ಪಸಂಖ್ಯಾತ ಪ್ರಜ್ಞಾವಂತರೆನಿಸಿಕೊಂಡವರು ಕೀಳರಿಮೆಯಿಂದ ನರಳುತ್ತಿರುವುದು ತಮಾಷೆಯಾಗಿದೆ. ಈ ಶೂನ್ಯ ಚಿಂತಕರ ಪ್ರಕಾರ ರಾಜ್ಯದ ಕೆಲವು ನಗರಗಳು ರಮ್ಯವಾಗಿದ್ದು, ಸುಂದರವಾಗಿದ್ದರೆ ಸಾಕು!! ನೋಡಿ ನೋಡಿ ಅಲ್ಲಿನ ವೈಭವವನ್ನು ಎಂದು ಮೈಮರೆಯಲೂ ಹಿಂಜರಿಯರು!!

ಆದರೆ ಗುಜರಾತ್ ಎನ್ನುವ ರಾಜ್ಯದ ಕಳೆದ ನೂರು ವರ್ಷಗಳ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯನ್ನು ವಿವರವಾಗಿ ಬಿಡಿಸಿಟ್ಟಿದ್ದರೆ ಇಂದು ಈ ಹ್ಯಾಟ್ರಿಕ್ ವೀರ ಮೋದಿಯ ಉನ್ನತೀಕರಣಕ್ಕೆ ಬ್ರೇಕ್ ಸಿಗುತ್ತಿತ್ತು. ಕಳೆದ ನೂರು ವರ್ಷಗಳಿಂದ ಗುಜಾರಾತ್ ರಾಜ್ಯವು ವಾಣಿಜ್ಯೀಕರಣದ ಅನೇಕ ಗುಣಗಳನ್ನು ತನ್ನೊಡಲೊಳಗಿಟ್ಟುಕೊಂಡಿದೆ. ಅಲ್ಲಿನ ಬಹುಪಾಲು ಪಟ್ಟಣಗಳು ಹಲವಾರು ದಶಕಗಳಿಂದ ಕೈಗಾರೀಕರಣ ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಸದಾ ಮುನ್ಚೂಣಿಯಲ್ಲಿದ್ದಿದ್ದನ್ನು ಬಹುಪಾಲು ಮಾಧ್ಯಮಗಳು ಮುಚ್ಚಿಟ್ಟವು. ಅನಾಯಕತ್ವ ಮತ್ತು ಮೋದಿಯ ಸಿಂಡ್ರೋಮ್‌ನಿಂದಾಗಿ ಅಪಾರ ಕೀಳರಿಮೆಯಿಂದ ನರಳುತ್ತಿರುವ, ನೈತಿಕವಾಗಿ ದಿವಾಳಿ ಹೊಂದಿದ ಕಾಂಗ್ರೆಸ್ ಪಕ್ಷವು ಇದರ ಕುರಿತಾಗಿ ಯಾವುದೇ ಬಗೆಯ ವರದಿಗಳನ್ನು ತಯಾರಿಸಲಿಲ್ಲ, ಆಧುನಿಕ ಕಮ್ಯುನಿಕೇಶನ್ನಿನ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ವಾಸ್ತವಾಂಶಗಳನ್ನು ಅಲ್ಲಿನ ಜನತೆಯ ಮುಂದಿಡಲೂ ಸಂಪೂರ್ಣವಾಗಿ ಸೋತಿತು ಈ ಕಾಂಗ್ರೆಸ್. ಒಂದು ಕಾಲದ ತಮ್ಮ ನಾಯಕರಾದ ಮಾಧವ ಸಿಂಗ್ ಸೋಳಂಕಿಯವರ ಆಡಳಿತದ ಮಾದರಿಗಳೂ ಮೋದಿಗಿಂತಲೂ ಮುಂದಿತ್ತೆನ್ನುವುದನ್ನು ಈ ಬೌದ್ಧಿಕವಾಗಿ ಭ್ರಷ್ಟಗೊಂಡ ಕಾಂಗ್ರೆಸ್ ಗುಜರಾತ್ ನಾಗರಿಕರಿಗೆ ವಿವರಿಸಲು ಸೋತಿತು.

ಮತ್ತೊಂದು ಪ್ರಮುಖವಾಗಿ ಅಲ್ಲಿನ ಜಾತಿಗಳ ಸಮೀಕರಣಗಳನ್ನು ಮೋದಿ ಅತ್ಯಂತ ಚಾಣಾಕ್ಷತೆಯಿಂದ ತನ್ನ Narendra_Modiಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದನ್ನು ನಮ್ಮ ದಿನೇಶ್ ಅಮೀನ್ ಮಟ್ಟು ಅವರು ಇದರ ಕುರಿತಾಗಿ ಪ್ರಜಾವಾಣಿಯಲ್ಲಿ ಅತ್ಯಂತ ವಿವರವಾಗಿ ಬರೆದಿದ್ದನ್ನು ಬಿಟ್ಟರೆ ಬೇರೆ ಯಾವ ಮಾಧ್ಯಮಗಳೂ ವಿವರವಾಗಿ ಬರೆದಂತಿಲ್ಲ. ಒಂದು ವೇಳೆ ಬೇರೆ ಮಾಧ್ಯಮಗಳು ಚರ್ಚಿಸಿದ್ದರೆ ಇದು ನನ್ನ ಓದಿನ ಮಿತಿಯಿರಬಹುದು. ಅದೇ ಗುಜರಾತ್‌ನ ಸೌರಾಷ್ಟ್ರದ ಭಾಗವು ಬರಗಾಲಕ್ಕೆ ತುತ್ತಾಗಿ, ಆಡಳಿತಾರೂಢ ಪಕ್ಷದ ನಿರ್ಲಕ್ಷದಿಂದಾಗಿ ಅದು ಕ್ರಮೇಣ ವಿದರ್ಭದ ಮಾದರಿಯಲ್ಲಿ ವಿನಾಶವಾಗುತ್ತಿರುವುದನ್ನು ಸಹ ಪ್ರಜಾವಾಣಿಯ ವರದಿಗಾರರ ಹೊರತಾಗಿ, ಮತ್ತು ಕೆಲವು ಆಂಗ್ಲ ಮಾಧ್ಯಮಗಳ ಹೊರತಾಗಿ (ದ ಹಿಂದೂ, ತೆಹೆಲ್ಕ) ಇತರ ಬಹುಪಾಲು ಮಾಧ್ಯಮಗಳು ವಿವರವಾಗಿ ಚರ್ಚಿಸಿದಂತಿಲ್ಲ. ಒಂದು ವೇಳೆ ಚರ್ಚಿಸಿದ್ದರೆ ಇದೂ ಕೂಡ ನನ್ನ ಓದಿನ ಮಿತಿಯಿರಬಹುದು.

ಇಡೀ ಗುಜರಾತನಲ್ಲಿ ಒಂದು ಕಣ್ಣನ್ನು ಕಿತ್ತು ಮತ್ತೊಂದು ಕಣ್ಣಿಗೆ ಜೋಡಿಸುವ ಸಿದ್ಧಾಂತಡಿಯಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಕೃಷಿ ವಲಯವನ್ನು ಹೆಚ್ಚೂ ಕಡಿಮೆ ನಿಶ್ಯೇಷಗೊಳಸಿ ಅಲ್ಲಿನ ಇಂಚಿಂಚೂ ಕೃಷಿ ಭೂಮಿಯನ್ನು ಕೈಗಾರಿಕೆಯ ವಲಯವನ್ನಾಗಿ ಬದಲಾಯಿಸುತ್ತಿರವುದು, ಗುಜರಾತಿನಲ್ಲಿ ನದಿಯೆನ್ನುವುದು ರೈತರಿಗೆ ಬಾಳಸಂಜೀವಿನಿಯೆನ್ನುವ ಜೀವಮಂತ್ರ ಕಣ್ಮರೆಯಾಗಿ ಇಂದು ಅದು ಕೈಗಾರೀಕರಣಕ್ಕೆ ಅಕ್ಷಯವಾಗಿ ಬಳಕೆಯಾಗುತ್ತಿದೆ. ಇದು ವ್ಯವಸ್ಥೆಯಲ್ಲಿ ಒಂದು ಬಗೆಯಲ್ಲಿ ಅಸಮಾನತೆಯನ್ನೇ ಸೃಷ್ಟಿಸುತ್ತಿರುವುದರ ಕುರಿತಾಗಿ ಯಾರೊಬ್ಬರೂ ಮಾತನಾಡುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಈ ಎಸ್‌ಇಝೆಡ್ ವಿರುದ್ಧ, ಕೃಷಿ ಭೂಮಿಯ ವಶೀಕರಣದ ವಿರುದ್ಧ ನಡೆಯುವ ರೈತರ ಹೋರಾಟಗಳನ್ನು ಯಶಸ್ವಿಯಾಗಿ ವರದಿ ಮಾಡುವ ಬಹುಪಾಲು ಮಾಧ್ಯಮಗಳು ಪ್ರತಿಭಟಿಸಲೂ ದನಿಯಿಲ್ಲದಷ್ಟು ನಿಶ್ಯಕ್ತರಾಗಿರುವ ಗುಜರಾತಿನ ಕೃಷಿಕರು ಮೋದಿಯ ಆಡಳಿತದಲ್ಲಿ ನಾಮಾವಶೇಷವಾಗುತ್ತಿರುವುದನ್ನು ಯಾವ ಮಾಧ್ಯಮಗಳೂ ವಿವರವಾಗಿ ಚರ್ಚಿಸಿಲ್ಲ. ನಮ್ಮ ಕಣ್ಣೆದುರಿಗೇ ಇಡೀ ಗುಜರಾತ್ ರಾಜ್ಯ ಕಾರ್ಪೋರೇಟಿಸಂನ ಸುಳಿಯಲ್ಲಿ ಸಿಲುಕಿಕೊಂಡು ಮಹಾತ್ಮ ಗಾಂಧಿ ಮತ್ತು ಸಬರಮತಿ ಆಶ್ರಮಗಳು ಹೆಚ್ಚೂ ಕಡಿಮೆ ಶೂನ್ಯವಾಗುತ್ತಿರುವುದರನ್ನು ಯಾರೊಬ್ಬರೂ ಚರ್ಚಿಸುತ್ತಿಲ್ಲ. ಈ ಮೋದಿಯು ಬಹಿರಂಗವಾಗಿ ಉದ್ಯಮಿಗಳೊಂದಿಗೆ ಗುರುತಿಸಿಕೊಳ್ಳುವುದನ್ನು,ಸಂವಿಧಾನಕ್ಕೆ ವಿರೋಧವಾಗಿ ಬಂಡವಾಳಶಾಹಿಗಳೊಂದಿಗೆ ಬಹಿರಂಗವಾಗಿ ಅನೈತಿಕವಾಗಿ ಒಡನಾಡುತ್ತಿರುವುದನ್ನು ಸಚ್ಚಾರಿತ್ರ್ಯದ ಹಿನ್ನಲೆಯಲ್ಲಿ, ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮೋದಿಯನ್ನು ಪ್ರಶ್ನಿಸದೆ ಅತನನ್ನು ಚಾಣಾಕ್ಷನೆಂಬಂತೆ ಹೊಗಳುತ್ತಿವೆ. ಬೇರೆ ರಾಜ್ಯಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಈ ನಡೆಗಳನ್ನು ಬಂಡವಾಳಶಾಹಿಗಳೊಂದಿಗಿನ ಅನೈತಿಕ ಮೈತ್ರಿಯೆಂದು ಪರಿಗಣಿತವಾದರೆ ಗುಜರಾತಿನಲ್ಲಿ, ಮೋದಿಯ ವಿಷಯದಲ್ಲಿ ಇದು ಅಭಿವೃದ್ದಿಯಾಗಿ ಬಿಂಬಿತವಾಗುತ್ತದೆ. ಅಲ್ಲಿ ಮಕ್ಕಳ ಅಪೌಷ್ಟಿಕತೆಯ ಕತೆಗಳು ರಾರಾಜಿಸುತ್ತಿದ್ದರೂ ಅದನ್ನು ತೆರೆಮರೆಗೆ ಸರಿಸಲಾಗುತ್ತದೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಮೇಲಿನ ನಿರಂತರ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬರುತ್ತಿಲ್ಲ. ಗೊತ್ತಿದ್ದರೂ ಯಾರೊಬ್ಬರೂ ವಿರೋಧಿಸುತ್ತಿಲ್ಲ. ಅಲ್ಲಿನ ಖ್ಯಾತ ಗಾಂಧಿವಾದಿ ಚುನ್ನಿಭಾಯಿ ವೈದ್ಯ ಅತ್ಯಂತ ಮಾರ್ಮಿಕವಾಗಿ ಹೇಳುತ್ತಾರೆ: “1.5 ಕೋಟಿ ಖರ್ಚು ಮಾಡಿ ಗಾಂಧಿ ಮಂದಿರವನ್ನು ಕಟ್ಟುವ ಆರೆಸಸ್‌ನ ನರೇಂದ್ರ ಮೋದಿ ತಾನು ಗಾಂಧಿ ಹಂತಕ ಗೋಡ್ಸೆಯ ಕುರಿತಾಗಿ ಯಾವ ಅಭಿಪ್ರಾಯವನ್ನು ಹೊಂದಿದ್ದೇನೆಂದು ಜನತೆಗೆ ತಿಳಿಸಲಿ.”

ಇದೆಲ್ಲಕ್ಕಿಂತಲೂ ಮುಖ್ಯವಾಗಿ 2002 ರ ನಂತರ ಜಾತಿಗಳನ್ನು, ಕೋಮುಗಳನ್ನು ಕ್ರೋಢೀಕರಿಸಿ ಯಶಸ್ವಿಯಾಗಿ ಒಡೆದು ಬಹುಸಂಖ್ಯಾತರಿಗೆ ಪವಿತ್ರೀಕರಣದ ಹೆಸರಿನಲ್ಲಿ ಆತ್ಮಬಲವನ್ನು ತಂದುಕೊಡುತ್ತ, ಅಲ್ಪಸಂಖ್ಯಾತರಿಗೆ ಅದೇ ಪವಿತ್ರೀಕರಣದ ಔನ್ಯತ್ಯವನ್ನು ಪದೇ ಪದೇ ನೆನಪಿಸುತ್ತಾ ಸದಾ ಭಯದ ವಾತಾವರಣವನ್ನು ನಿರ್ಮಿಸಿದ ಮೋದಿಯ ಫ್ಯಾಸಿಸ್ಟ್‌ನ ಉಗ್ರ ಮುಖವನ್ನು ಬಹುಪಾಲು ಮಾಧ್ಯಮಗಳು ದಿಟ್ಟ ಆಡಳಿತಾತ್ಮಕ ನಡೆಯನ್ನಾಗಿ ಕಂಡಿದ್ದು ಪ್ರಜಾಪ್ರಭುತ್ವದ ಬಲು ದೊಡ್ಡ ಸೋಲು. ಇಂದು ಮುಸ್ಲಿಂಮರಿಗೆ ನೀವು ಸಾಂದರ್ಭಿಕವಾಗಿ, ಬದಲಾದ ವ್ಯವಸ್ಥೆಯೊಂದಿಗೆ ಸಹಜವಾಗಿ ಹೊಂದಿಕೊಳ್ಳುತ್ತ (ಎಷ್ಟು ಸರಳವಾಗಿ ಹೇಳಿಬಿಡುತ್ತೇವೆ ನೋಡಿ!!) ಮುನ್ನಡೆಯಿರಿ ಎಂದು ಬೇರೆ ಈ ಮಾಧ್ಯಮಗಳು ಅಮಾನವೀಯವಾಗಿ ತಾಕೀತು ಮಾಡುತ್ತಿವೆ. 6 ಕೋಟಿ ಗುಜಾರಾತಿನವರೆಲ್ಲರೂ ಒಂದೇ ಎಂದು ಬೊಗಳೆ ಬಿಡುವ ಈ ಮೋದಿ ಮತ್ತು ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಯ ಕಣಕ್ಕಿಳಿಸಲಿಲ್ಲ. ಟಿಕೀಟು ನೀಡಲಿಲ್ಲ. ಇದರ ಹಿಂದೆ ಕೆಲಸ ಮಾಡುತ್ತಿರುವ ಮತಾಂಧ ಫ್ಯಾಸಿಸಂ ಮನಸ್ಸನ್ನು ಎಳೆಎಳೆಯಾಗಿ ಬಿಡಿಸಿಡಬೇಕಾದ ಮಾಧ್ಯಮಗಳು ಇದನ್ನು ಸಂಪೂರ್ಣವಾಗಿ ಕೈ ಬಿಟ್ಟು ಮೋದಿಯನ್ನು ಕೇವಲ ರಾಜಕೀಯ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ವೈಭವೀಕರಿಸಿದ್ದು ದುರಂತವೇ ಸರಿ.

ಚುನಾವಣಾ ರಾಜಕಾರಣದ ನೆಲೆಯಲ್ಲಿ ಮಾತ್ರ ಮೋದಿಯನ್ನು ವಿಶ್ಲೇಷಿಸಿದರೆ ಅಲ್ಲಿ ಮೋದಿಯನ್ನು ಹಿಂದಿಕ್ಕುವವರಾರೂ ಇಲ್ಲ. ಅನುಮಾನವೇ ಇಲ್ಲ. ಆದರೆ ರಾಜಕೀಯ ವಿಶ್ಲೇಣೆಯೆಂದರೆ ಇಷ್ಟು ಮಾತ್ರವೇ? ರಾಜ್ಯದ ಗಾರ್ಡಿಯನ್ ಆಗಿ ಅಧಿಕಾರ ವಹಿಸಿಕೊಂಡಂತಹ ಚಾಣಾಕ್ಷ ರಾಜಕಾರಣಿ ತನ್ನ ಉದ್ದೇಶಗಳ ಸಾಧನೆಗೋಸ್ಕರ ಅನುಕೂಲವಂತ ಕಾವಲುಭಟರನ್ನು ನೇಮಿಸಿಕೊಂಡು, ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಅಣಕಿಸುವಂತೆ ರಾಜ್ಯಭಾರ ನಡೆಸುತ್ತಾ, ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತ ಪ್ರಜೆಗಳನ್ನು ಸದಾ ಭಯದ ನೆರಳಿನಲ್ಲಿಡುತ್ತಾ ಆಡಳಿತವನ್ನು ನಡೆಸಿದರೆ ಆ ಮಾದರಿಯ ರಾಜ್ಯಾಡಳಿತವನ್ನು ನೂರಾರು ವರ್ಷಗಳ ಹಿಂದಿನ ಕಾಲದ ಫ್ಯಾಸಿಸ್ಟ್ ಮಾದರಿಯ ರಾಜ್ಯಾಡಳಿತವೆಂದೇ ಕರೆಯಲಾಗುತ್ತದೆ. ಆದರೆ 2012 ರಲ್ಲಿ ಇಂದು ಮೋದಿಯು ಅದನ್ನೇ ನೆನಪಿಸುವಂತೆ ಆಡಳಿತ ನಡೆಸುತ್ತಿದ್ದರೂ ಭಾರತದ ಬಹುಸಂಖ್ಯಾತ ಪ್ರಜೆಗಳು ಆತನ ಅದ್ಭುತ ಭಾಷಣದ ಕಲೆಗೆ ಅದರ ತಲೆದೂಗಿಸುವ ದೈಹಿಕ ಭಾಷೆಗೆ ಮಾರುಹೋಗಿದ್ದು, ಕೃತಕ ಅಭಿವೃಧ್ಧಿಯನ್ನು ವಿಂಗಡಿಸಲಾಗದೇ ಸೋತಿದ್ದು, ಕುಟಿಲ ರಾಜನೀತಿಯ ಯಶಸ್ಸನ್ನೇ ಒಂದು ಮಾದರಿಯನ್ನಾಗಿ ಜಗತ್ತಿಗೆ ಒತ್ತಿ ಒತ್ತಿ ಹೇಳುತ್ತಿರುವುದು,

ಮೋದಿಯ 2002 ರ ಹತ್ಯಾಕಾಂಡವು ಹತ್ತು ವರ್ಷಗಳ ನಂತರ ಇವರೆಲ್ಲರ ಕಣ್ಣಲ್ಲಿ ಒಂದು ಆಗಿ ಹೋದ ವಿದ್ಯಮಾನವಾಗಿರುವುದು ಆಧುನಿಕ ಇಂಡಿಯಾದ ಒಟ್ಟಾರೆ ದಮನ ನೀತಿಯ ತತ್ವಗಳನ್ನು ಬಯಲುಗೊಳಿಸುತ್ತದೆ.