Daily Archives: December 3, 2012

ರಾಜ್ಯ ಸರ್ಕಾರಕ್ಕೆ ಮಾರ್ಕಂಡೇಯ ಖಟ್ಜು ಮಂಗಳಾರತಿ


– ಡಾ.ಎನ್.ಜಗದೀಶ್ ಕೊಪ್ಪ


 

ಸರ್ಕಾರಿ ಸವಲತ್ತುಗಳಾದ ಸಾರಿಗೆ ಭತ್ಯೆ ಮತ್ತು ಮನೆ ಭತ್ಯೆ, ಹಾಗೂ ಗೂಟದ ಕಾರಿನಲ್ಲಿ ತಿರುಗುವುದು ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಭಾವಿಸಿರುವ ರಾಜ್ಯ ಬಿ.ಜೆ.ಪಿ. ಸರ್ಕಾರದ ಜನಪ್ರತಿನಿಧಿಗಳು ಮತ್ತು ಸಚಿವರು ಎಂಬ ಆರೋಪ ಹೊತ್ತಿರುವ ಮಹನೀಯರಿಗೆ ಭಾರತೀಯ ಪತ್ರಿಕಾ ಮಂಡಲಿ ಅಧ್ಯಕ್ಷರೂ ಹಾಗೂ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ಮಾರ್ಕಂಡೇಯ ಖಟ್ಜು ಮಂಗಳೂರಿನಲ್ಲಿ ಮಂಗಳಾರತಿ ಎತ್ತುವುದರ ಮೂಲಕ ಮುಖದ ನೀರು ಇಳಿಸಿದ್ದಾರೆ.

ಪತ್ರಕರ್ತ ನವೀನ್ ಸೂರಿಂಜೆಯ ಅಕ್ರಮ ಬಂಧನ ಮತ್ತು ನ್ಯಾಯಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಕೆಂಡಾಮಂಡಲರಾಗಿರುವ ಖಟ್ಜು ಸೋಮವಾರ ಮಂಗಳೂರಿನಲ್ಲಿ ಕರ್ನಾಟಕದಲ್ಲಿ ಈ ರೀತಿ ಪತ್ರಿಕಾ ಸ್ವಾತಂತ್ರ್ಯ ಹರಣವಾದರೆ, ಸಂವಿಧಾನದ ವಿಧಿ 356ನೇ ಪ್ರಕಾರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂತಹ ಎಚ್ಚರಿಕೆಯನ್ನು ಪಡೆದ ಮೊದಲ ರಾಜ್ಯ ಎಂಬ ಕುಖ್ಯಾತಿ ಈಗ ಕರ್ನಾಟಕಕ್ಕೆ ಲಭ್ಯವಾಗಿದೆ.

ತನ್ನ ಆತ್ಮಹತ್ಯೆಯ ಹಾದಿಯಲ್ಲಿ ಬಹುತೇಕ ಗುರಿ ತಲುಪಿರುವ ಬಿ.ಜೆ.ಪಿ. ಸರ್ಕಾರಕ್ಕೆ ಇಂತಹ ರಾಷ್ಟ್ರೀಯ ಮಟ್ಟದ ಅಪಮಾನಗಳು ಮರ್ಮಕ್ಕೆ ತಾಕುವ ಸಂಭವ ತೀರಾ ಕಡಿಮೆ. ಭಂಡತನವನ್ನು ಮೈಗೂಡಿಸಿಕೊಂಡಿರುವ ಇವರು, ಆಡಳಿತ ಯಂತ್ರವನ್ನು ಖದೀಮ ಅಧಿಕಾರಿಗಳು ಮತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ಉರಿಯುವ ಮನೆಯಲ್ಲಿ ಸಿಕ್ಕಿದ್ದನ್ನು ದೋಚಿದರು ಎಂಬಂತೆ ಸರ್ಕಾರಿ ಭೂಮಿಯ ಮೇಲೆ ಕಣ್ಣು ನೆಟ್ಟು ಹಾಡು ಹಗಲೇ ಯಾವುದೇ ನಾಚಿಕೆ, ಆತ್ಮಸಾಕ್ಷಿ ಇಲ್ಲದವರಂತೆ ದೋಚುತ್ತಿರುವಾಗ ಕರ್ನಾಟಕದ ಜನತೆಯ ಸ್ಥಿತಿ ’ಹರ ಕೊಲ್ಲಲ್ ಪರ ಕಾಯ್ವನೆ?’ ಎಂಬಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಇತ್ತೀಚೆಗಿನ ವರ್ತನೆಯನ್ನು ಗಮನಿಸಿದರೆ, ಇವರು ಪೊಲೀಸರ ಕೆಲಸವಿರಲಿ, ಯಾವುದೇ ಶ್ರೀಮಂತರ ಮನೆಯ ಬಾಗಿಲು ಕಾಯುವ ಸೆಕ್ಯೂರಿಟಿ ಹುದ್ದೆಗೂ ನಾಲಾಯಕ್ ಆಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.

ವರ್ಷದ ಹಿಂದೆ ಮನೆಯಲ್ಲಿ ಚಹಾಪುಡಿ ಮತ್ತು ಭಗತ್ ಸಿಂಗನ ಸಾಹಿತ್ಯ ಸಿಕ್ಕಿತು ಎಂಬ ಕಾರಣಕ್ಕಾಗಿ ವಿಠಲ ಮಲೆಕುಡಿಯ ಎಂಬ ಪತ್ರಿಕೋದ್ಯಮದ ಹುಡುಗನನ್ನು ಬಂಧಿಸಿ, ಜೈಲಿಗೆ ತಳ್ಳಿ ಆತನ ಭವಿಷ್ಯವನ್ನು ಹಾಳುಗೆಡವಿದ ಇದೇ ಪೊಲೀಸರು ಈಗ ಯುವ ಪತ್ರಕರ್ತ ನವೀನ್ ಬದುಕಿಗೆ ಮುಳ್ಳಾಗಿದ್ದಾರೆ. ಇವರ ಕುಕೃತ್ಯದ ಬಗ್ಗೆ ಹಿಂದೂ ಪತ್ರಿಕೆಯಲ್ಲಿ ಕಳೆದ ಶನಿವಾರ ಬೆಂಗಳೂರಿನ ಸ್ಥಾನಿಕ ಸಂಪಾದಕಿ ಪಾರ್ವತಿ ಮೆನನ್ ಲೇಖನವೊಂದನ್ನು ಬರೆದರು. ಈ ಲೇಖನ ಹಿಂದೂ ಪತ್ರಿಕೆಯ ರಾಷ್ಟ್ರದ ಎಲ್ಲಾ ಅವೃತ್ತಿಗಳಲ್ಲಿ ಪ್ರಕಟವಾಗಿ ಕರ್ನಾಟಕದ ಪೊಲೀಸರ ಸಣ್ಣತನವನ್ನು ಅನಾವರಣಗೊಳಿಸಿದೆ.

ಮಂಗಳೂರಿನಲ್ಲಿ ಹೋಂಸ್ಟೇ ದಾಳಿ ನಡೆದ ನಂತರ ಮಾಧ್ಯಮಗಳಿಗೆ ದೃಶ್ಯ ಮತ್ತು ವಿವರಗಳನ್ನು ಹಂಚಿಕೊಂಡ ನವೀನ್ ಮಂಗಳೂರಿನಲ್ಲಿ ಇದ್ದರೂ ಕೂಡ ಕಾಣೆಯಾಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನಿಜಕ್ಕೂ ಮಂಗಳೂರಿನಲ್ಲಿ ನವೀನ್ ಕಾಣೆಯಾಗಿದ್ದರೆ, ಈ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಬೇಕಿದೆ:

  • ಒಂದು: ನೀವು ವಿಚಾರಣೆಗೆ ಕರೆದಾಗ ನವೀನ್ ಬಂದು ವಿವರಣೆ ಒದಗಿಸಲಿಲ್ಲವೆ?
  • ಎರಡು: ಹೋಂಸ್ಟೇ ಘಟನೆ ನಡೆದ ನಂತರ ನವೀನ್ ಸೂರಿಂಜೆ ಕೆಲಸ ಮಾಡುತ್ತಿರುವ ಕಸ್ತೂರಿ ಛಾನಲ್ ಗೆ ಸುದ್ಧಿಗಳನ್ನು ಕಳಿಸುತ್ತಾ, ಕೆಲಸ ಮಾಡಲಿಲ್ಲವೆ? ಮಾಡಿಲ್ಲವಾದರೆ, ಆತ ಈ-ಮೈಲ್ ಮೂಲಕ ವಾಹಿನಿಗೆ ಮಂಗಳೂರಿನ ಸುದ್ಧಿ ಕಳಿಸಿದ ಬಗ್ಗೆ ಮಾಹಿತಿ ನೀಡಿದರೆ, ನೀವು ನೇಣು ಹಾಕಿಕೊಳ್ಳಲು, ಇಲ್ಲವೇ ಖಾಕಿ ಬಟ್ಟೆ ಕಳಚಿಟ್ಟು ಮಂಗಳೂರಿನ ಬೀದಿಯಲ್ಲಿ ಕಸ ಗುಡಿಸಲು ಸಿದ್ದರಿದ್ದೀರಾ?
  • ಮೂರು: ಕಳೆದ ನವಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಬೇಟಿ ನೀಡಿದಾಗ ನವೀನ್ ಸೂರಿಂಜೆಗೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲು ಪಾಸ್ ನೀಡಿದವರು ಯಾರು? ಆ ಸಮಯದಲ್ಲಿ ಪೊಲೀಸರು ಏನಾದರೂ ಹೆಂಡ ಕುಡಿದು ಪಾಸ್ ವಿತರಣೆ ಮಾಡಿದ್ದಾರೆಯೆ?

ಈ ಬಗ್ಗೆ ಕರ್ನಾಟಕದ ಜನತೆಗೆ ಪೊಲೀಸರು ಮತ್ತು ಗೃಹ ಇಲಾಖೆಯ ಹೊಣೆ ಹೊತ್ತಿರುವ ಆರ್. ಅಶೋಕ್ ಕೂಡಲೇ ಉತ್ತರಿಸಬೇಕಿದೆ.

ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಪೊಲೀಸರಿಂದ ಹರಣವಾಗುತ್ತಿರುವ ಸಂದರ್ಭದಲ್ಲಿ ದ್ವನಿ ಎತ್ತಬೇಕಾದ ನಮ್ಮ ಮಾಧ್ಯಮಗಳು ಪ್ರಳಯ ಎಂಬ ಪುಕಾರಿನ ಬಗ್ಗೆ ಪುಂಗಿ ಊದುತ್ತಾ ಕುಳಿತಿವೆ. ಪತ್ರಕರ್ತರಂತೂ ತಮಗೆ ಸಂಬಂಧಿಸದ ವಿಷಯವಲ್ಲವೇನೋ ಎಂಬಂತೆ ಪ್ರತಿಯೊಬ್ಬನೂ ತನ್ನ ಕಂಫರ್ಟ್‌-ಜೋನ್ (ಸುರಕ್ಷಿತ ವಲಯ) ನಲ್ಲಿ ಆರಾಮವಾಗಿದ್ದಾನೆ. ಪ್ರಜಾವಾಣಿಯ ಮಿತ್ರ ದಿನೇಶ್ ಅಮ್ಮಿನ್ ಮಟ್ಟು ಹಾಗೂ ಒಂದಿಬ್ಬರೂ ಹೊರತು ಪಡಿಸಿದರೆ, ಉಳಿದವರು ತಮ್ಮ ಪಂಚೇಂದ್ರಿಯವನ್ನು ಕಳೆದುಕೊಂಡವರಂತೆ ವರ್ತಿಸುತಿದ್ದಾರೆ. ಇನ್ನೂ ಪತ್ರಕರ್ತರ ಸವಲತ್ತುಗಳಿಗಾಗಿ ಸಂಘಗಳು, ವೇದಿಕೆಗಳು, ಪರಿಷತ್ತುಗಳು, ಕೂಟಗಳು, ಕ್ಲಬ್‌ಗಳು ಹೀಗೆ ರಾಜ್ಯಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡು ವಿಜೃಂಭಿಸುತ್ತಿವೆ. ಪಾಪ ಇವುಗಳ ಪದಾಧಿಕಾರಿಗಳು ರಾಜಕಾರಣಿಗಳ ಕಾಲು ಒತ್ತುತ್ತಾ ಅವರ ಪಾದದಡಿ ವಿಶ್ರಮಿಸಿರಬೇಕು.

ಕಳೆದ ವಾರ ಈ ಕುರಿತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೆಳೆಯರಾದ ಗಂಗಾಧರ್ ಮೊದಲಿಯಾರ್ ಜೊತೆ ದೂರವಾಣಿಯಲ್ಲಿ ಚರ್ಚಿಸಿದೆ. ಪಾಪ ಅವರೂ ಮರೆತಿರಬೇಕು. ಈ ಕಾರಣಕ್ಕಾಗಿಯೇ, ಪತ್ರಕರ್ತರ ಸಂಘವನ್ನು “ಕಾರ್ಯ ಮರೆತ ಪತ್ರಕರ್ತರ ಸಂಘ”ವೆಂದು ಲೇವಡಿ ಮಾಡಲಾಗುತ್ತಿದೆ. ಇಲ್ಲಿ ಕಾರ್ಯ ಮರೆತರೆ ಅಂತಹ ದೊಡ್ಡ ಅನಾಹುತವಿಲ್ಲ, ಪತ್ರಕರ್ತರ ಹಕ್ಕನ್ನೇ ಮರೆತರೆ ಹೇಗೆ? ಇದು ಪ್ರತಿಯೊಬ್ಬ ಪತ್ರಕರ್ತ ತನ್ನ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. (ಯಾವುದೇ ಪತ್ರಕರ್ತ ತನ್ನ ಸುದ್ದಿಯ ಮೂಲವನ್ನು ಪೊಲೀಸರಿಗೆ ಅಥವಾ ಸರ್ಕಾರಕ್ಕೆ ನೀಡಲೇಬೇಕೆಂಬ ನಿರ್ಬಂಧ ಇಲ್ಲ.)

ಮಿತ್ರರೇ, ಪೊಲೀಸರ ಈ ವಂಚನೆ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ದೊಡ್ಡದೊಂದು ಆಂದೋಲನ ತುರ್ತಾಗಿ ಕರ್ನಾಟಕದಲ್ಲಿ ನಡೆಯಬೇಕಿದೆ. ಇದಕ್ಕೆ ಮುಂದೆ ಬರುವ ಮಹನೀಯರ ಜೊತೆ ನಾನೂ ಸಹ ಕೈ ಜೋಡಿಸಲು ಸಿದ್ದನಿದ್ದೇನೆ. ಬೆಳಗಾವಿಯ ವಿಶೇಷ ಅಧಿವೇಶನ ಮುಗಿದ ಕೂಡಲೇ ಒಂದು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಿ ನಮ್ಮ ತಾತ್ವಿಕ ಸಿಟ್ಟನ್ನು ಸರ್ಕಾರಕ್ಕೆ ಮುಟ್ಟಿಸಬೇಕಿದೆ. ಆವಾಗ ಮಾತ್ರ ನವೀನ್ ಸೂರಿಂಜೆಯಂತಹವರಿಗೆ ನ್ಯಾಯ ಸಿಗಲು ಸಾಧ್ಯ.

Justice Katju’s statement in Mangalore on Naveen Soorinje’s case

Justice Markandey Katju

I have been approached by many journalists in Mangalore about my views regarding criminal proceedings against Naveen Soorinje.

It will not be proper for me to make any comment about the particular case of Naveen Soorinje because I am informed that charge-sheet has been filed in a court and that the judicial proceedings are pending before judicial magistrate, and I am told that a petition under Section 482 Cr.P.C is pending before the High Court praying for quashing of the criminal proceedings. As such, since the matter is sub-judice both before the trial court and the High Court it will not be proper for me to comment about the particular case of Mr. Naveen Soorinje.

However, I am informed that in Mangalore journalists are often harassed by the police and also by the hooligans. I therefore make it clear that the Press Council will not tolerate violation of press freedom either by assaults on journalists or giving threats or in any other manner. Freedom of the press is a fundamental right under Article 19 (1) (a) of the Constitution and it is the duty of the State to uphold this right.

I therefore warn the authorities, which includes both political, administrative and police authorities that if they violate this press freedom by assaults or threats to journalists or in any other manner the Press Council will take strong action in this connection. In particular, the State Government of Karnataka through its Chief Minister is given a strong warning to uphold press freedom and to suppress the activities of hooligans or police personnel who violate fundamental rights of citizens, including the journalists.

The State Government is warned that if it does not protect journalists and uphold press freedom it will be deemed that the State Government is unable to run the Government in accordance with the Constitution, and then the legal consequences in Article 355 and 356 of the Constitution may follow. Article 356 (is invoked) when the President of India finds on the report of the Governor or otherwise that the State Government is unable to function in accordance with the Constitution. I am also part of “otherwise” and anybody can make a recommendation. Of course it is up to the President to accept it or not. Under Article 355 Central Government can issue a warning to the State Government asking it to run the Government in accordance with the Constitution failing which recourse may be had to Article 356.

ಭೂಪಾಲ್ ದುರಂತದ ವಾಸ್ತವ ಮತ್ತು ವರ್ತಮಾನ

-ಅರುಣ್ ಜೋಳದಕೂಡ್ಲಿಗಿ

ಇಂದು ಭೂಪಾಲ್ ದುರಂತದ ದಿನ. ಈ ದುರಂತದ ಕಾರಣಕರ್ತರಿಗೆ 2010 ರಲ್ಲಿ ಬಂದ ನ್ಯಾಯಾಲಯದ ತೀರ್ಪು ಮತ್ತು ಅದರ ಹಿಂದಣ ಹುನ್ನಾರವನ್ನು ನಾವಿಂದು ನೆನೆಯಬೇಕಿದೆ. ಇದು ಅಮೇರಿಕಾ ಜಗತ್ತನ್ನು ತನ್ನ ತಾಳಕ್ಕೆ ತಕ್ಕಂತೆ ಆಡಿಸುವ ಆಟದ ಮುಖವಾಗಿಯೂ ಕಾಣುತ್ತದೆ.

ಜಗತ್ತು ಕಂಡ ಭೀಕರ ಭೂಪಾಲ್ ಕೈಗಾರಿಕಾ ದುರಂತ ಸಂಭವಿಸಿ ಇಲ್ಲಿಗೆ 28 ವರ್ಷಗಳು ಸಂಭವಿಸಿದವು. 1984 ಡಿಸೆಂಬರ್ 2-3 ರಲ್ಲಿ ನಡೆದ ಭೂಪಾಲ್ ಅನಿಲ ದುರಂತ ಅಂದು ಜಗತ್ತನ್ನೇ ತಲ್ಲಣಗೊಳಿಸಿತ್ತು. 25 ಸಾವಿರಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿದ್ದವು. ಅದು ಎಲ್ಲರ ಉಸಿರು ಕಟ್ಟಿಸಿತ್ತು. ಈಗಲೂ ಈ ದುರಂತವನ್ನು ನೆನಪಿಸಿಕೊಂಡರೆ ಮಾನವೀಯತೆ ಇರುವ ಯಾರಿಗಾದರೂ ಉಸಿರು ಕಟ್ಟುತ್ತದೆ. ಇದರ ಪರಿಣಾಮವನ್ನು ಈಗ ಹುಟ್ಟುವ ಮಕ್ಕಳೂ ಸಹ ಅನುಭವಿಸುತ್ತಿದ್ದಾರೆ.

ಈ ದುರಂತಕ್ಕೆ ಸಂಬಂದಿಸಿದ ತೀರ್ಪು 26 ವರ್ಷಗಳ ನಂತರ ಒಂದು ವರ್ಷದ ಹಿಂದಷ್ಟೆ ಹೊರ ಬಿದ್ದಿತು. ಈ ತೀರ್ಪು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಭಾರತ ಘಟಕದ ಮಾಜಿ ಅಧ್ಯಕ್ಷ ಕೇಶುಭ್ ಮಹಿಂದ್ರಾ ಅವರನ್ನು ಸೇರಿ ಎಂಟು ಮಂದಿ ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ವೀರಪ್ಪ ಮೊಯಿಲಿ ಮೊದಲಾದ ಕಾನೂನು ತಜ್ಞರು ಈ ತೀರ್ಪನ್ನು ನ್ಯಾಯದ ಸಮಾಧಿ ಎಂದು ಟೀಕಿಸಿದ್ದರು. ಸಂತ್ರಸ್ಥರ ಕುಟುಂಬದವರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ರೋಶಭರಿತರಾಗಿ ನ್ಯಾಯಾಲಯಗಳ ಮುಂದೆ ಪ್ರತಿಭಟನೆ ನಡೆಸಿದರು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೂ ಮೊರೆ ಹೋಗಿದ್ದಾರೆ. ಭೂಪಾಲ ಅನಿಲ ದುರಂತದ ಸಂತ್ರಸ್ತರು ನ್ಯಾಯಕ್ಕಾಗಿ ಈಗಲೂ ಕಾಯುತ್ತಿದ್ದಾರೆ. 2011 ಜೂನ್‌ನಲ್ಲಿ ಬಂದ ತೀರ್ಪಿನ ಹಿಂದೆ ಅದೆಷ್ಟೋ ಅಮೆರಿಕ ಪ್ರಾಯೋಜಿತ ಎನ್.ಜಿ.ಒ. ವರದಿಗಳ ಪರೋಕ್ಷ ಬೆಂಬಲವಿದೆ. ಅಂತಹ ಒಂದು ವರದಿಯು ಮಂಡನೆಯಾದ ಅನುಭವದ ಕೆಲವು ಟಿಪ್ಪಣಿಗಳಿವು.

2004 ರಲ್ಲಿ ಭೂಪಾಲ್ ಅನಿಲ ದುರಂತ ನಡೆದು 20 ವರ್ಷಗಳಾಗಿದ್ದವು. ಇದರ ನೆನಪಿಗಾಗಿ ಒಂದು ಎನ್.ಜಿ.ಒ. ಸತತ ಹತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿ ಸಿದ್ದಪಡಿಸಿದ ಒಂದು ವರದಿಯನ್ನು 2005 ರಲ್ಲಿ ಬಿಡುಗಡೆ ಮಾಡಿತು. ಆ ಕಾರ್ಯಕ್ರಮಕ್ಕೆ ಕರ್ನಾಟಕದ ಎನ್.ಜಿ.ಒ.ಗಳ ಕೆಲವು ಸದಸ್ಯರು, ಕೆಲವು ಆಸಕ್ತರು ಭೂಪಾಲ್ ಗೆ ತೆರಳಿದ್ದರು. ನಾನಾಗ ಹಂಪಿ ವಿವಿಯಲ್ಲಿ ಎಂ.ಎ. ಓದುತ್ತಿದ್ದೆ. ಇದರಲ್ಲಿ ಮರಿಯಮ್ಮನಹಳ್ಳಿಯ ಕನ್ನಡ ಉಪನ್ಯಾಸಕ ಸೋಮೇಶ್, ಗೆಳೆಯ ಚಂದ್ರಪ್ಪ ಸೊಬಟಿ ಮತ್ತು ನನ್ನನ್ನು ಒಳಗೊಂಡಂತೆ ಮೂರು ಜನ ಭೂಪಾಲ್‌ಗೆ ತೆರಳಿದ್ದೆವು. ಹೈದರಾಬಾದ್ ಕರ್ನಾಟಕದ ಮಹಿಳೆಯರ ಅಭಿವೃದ್ದಿಗಾಗಿ ಕೆಲಸಮಾಡುತ್ತೇವೆ ಎಂದು ಹೇಳಿಕೊಳ್ಳುವ ಸಖಿ ಎನ್ನುವ ಎನ್.ಜಿ.ಒ.ದ ಸಂಯೋಜಕಿಯಾದ ಡಾ. ಭಾಗ್ಯಲಕ್ಷ್ಮಿಯವರು ನಮ್ಮನ್ನು ಕಳುಹಿಸಿಕೊಟ್ಟಿದ್ದರು. ನಾವು ಆ ಎನ್.ಜಿ.ಒ.ದಲ್ಲಿ ಕೆಲಸ ಮಾಡದಿದ್ದರೂ ಆಸಕ್ತರಾಗಿ ಭಾಗವಹಿಸಲು ಹೋಗಿದ್ದೆವು. ಅದಕ್ಕಿಂತ ಮುಖ್ಯವಾಗಿ ಉಚಿತವಾಗಿ  ಭೂಪಾಲ್‌ಗೆ ಹೋಗುವ ಅವಕಾಶವೊಂದು ಸಿಕ್ಕ ಸಂಭ್ರಮದಲ್ಲಿ ಹೋಗಿದ್ದೆವು ಎನ್ನುವುದೇ ಸರಿ.

ಇದೊಂದು ಅಂತರಾಷ್ಟ್ರೀಯ ಸೆಮಿನಾರ್. ಬೇರೆ ಬೇರೆ ದೇಶದಿಂದ ಅನೇಕ ಪರಿಸರ ತಜ್ಞರು, ವಕೀಲರು, ಡಾಕ್ಟರುಗಳು, ಕೆಲವು ಸ್ಥಳೀಯ ನಾಯಕರು, ಭಾರತದ ಬೇರೆ ಬೇರೆ ರಾಜ್ಯಗಳಿಂದ ಎನ್.ಜಿ.ಒ.ಗಳ ಪ್ರತಿನಿಧಿಗಳು ಭೂಪಾಲ್‌ಗೆ ಬಂದಿದ್ದರು. ಈ ಸೆಮಿನಾರ್‌ಗೆ ಧನ ಸಹಾಯ ಮಾಡಿದ್ದು ಅಮೆರಿಕಾ ದೇಶ. ಇಲ್ಲಿ ಭಾಗವಹಿಸಿದ ಹಲವು ತಜ್ಞರಲ್ಲಿ ಅಮೆರಿಕಾದವರೂ ಇದ್ದರು. ಯಾವ ದೇಶವು ಅನಿಲ ದುರಂತಕ್ಕೆ ಕಾರಣವಾಗಿತ್ತೋ ಅದೇ ದೇಶ ಈ ದುರಂತದ ಬಗ್ಗೆ ಅಧ್ಯಯನ ಮಾಡಲು ಅಪಾರ ಹಣ ವ್ಯಯ ಮಾಡಿತ್ತು. ಇದರ ಮರ್ಮ ಏನೆಂದು ನನಗಾಗ ಅರ್ಥವಾಗಿರಲಿಲ್ಲ.

ಈ ಸೆಮಿನಾರಿನಲ್ಲಿ ಅಳಿದುಳಿದ ಸಂತ್ರಸ್ಥರು, ದುರಂತದಲ್ಲಿ ಸಾವಿಗೀಡಾದವರ ಕುಟುಂಬದವರು ಮತ್ತು ಮುನ್ಸಿಪಾಲ್ ಕಾರ್ಪೋರೇಷನ್‌ನಲ್ಲಿ ವಾಸಿತ ಜನರು ಭಾಗವಸಿದ್ದರು. ಈ ಸೆಮಿನಾರ್ ಹಾಲ್‌ನ ಎದುರು ಐವತ್ತಕ್ಕೂ ಹೆಚ್ಚಿನ ಗಾಲಿ ಕುರ್ಚಿಗಳ ಸೈಕಲ್ ನಿಂತಿದ್ದವು. ಇವು ಭೂಪಾಲ್ ದುರಂತದ ಮೂಕ ಸಾಕ್ಷಿಗಳೇನೋ ಎನ್ನುವಂತಿತ್ತು. ಕಾರಣ ಅನಿಲ ದುರಂತದ ಪರಿಣಾಮವಾಗಿ ಅಂಗವಿಕಲರಾದವರ ತಳ್ಳು ಗಾಡಿಗಳವು. ಅಂತೆಯೇ ಅನೇಕ ಕುರುಡರೂ, ದೀರ್ಘಕಾಲೀನ ರೋಗ ಪೀಡಿತರಾದ ಜನರೂ ಆ ಸೆಮಿನಾರಿನಲ್ಲಿ ಕೂತು, ಇಂಗ್ಲೀಷಿನಲ್ಲಿ ಮಂಡನೆಯಾಗುತ್ತಿದ್ದ ಸಂಶೋಧನ ವರದಿಯನ್ನು ಅರ್ಥವಾಗದಿದ್ದರೂ ಸುಮ್ಮನೆ ಕೇಳುತ್ತಿದ್ದರು.

ಇದೊಂದು ವ್ಯವಸ್ಥೆಯ ವೈರುಧ್ಯದಂತೆ ಕಾಣುತ್ತಿತ್ತು. ನಂತರ ಈ ಭಾಷಣದ ಅನುವಾದವನ್ನು ರೇಡಿಯೋ ಅಲೆಗಳ ಮೂಲಕ ಪ್ರಸಾರ ಮಾಡಲಾಯಿತು. ಅದನ್ನು ಕೇಳಲು ಎಲ್ಲರಿಗೂ ಒಂದೊಂದು ಪುಟ್ಟ ರೇಡಿಯೋಗಳನ್ನು ಇಯರ್ ಫೋನ್‌ಗಳನ್ನು ವಿತರಿಸಲಾಯಿತು. ಮಂಡನೆಯಾಗುತ್ತಿರುವ ವಿಷಯಕ್ಕೂ ಆ ಅನುವಾದಕ್ಕೂ ಸಂಬಂಧವೇ ಇಲ್ಲ ಎನ್ನುವಂತಹ ಕೆಟ್ಟ ಅನುವಾದವನ್ನು ಜನರು ಕೇಳುತ್ತಾ ಕೂತರು. ಕೂತವರ ಗಮನವೆಲ್ಲಾ ಸೆಮಿನಾರಿನಲ್ಲಿ ಹಂಚಲಾಗುತ್ತಿದ್ದ ತಿಂಡಿ, ಟಿ, ಊಟದ ಕಡೆಗೇ ಇತ್ತು. ಕಾರಣ ದೈನಂದಿನ ಕಷ್ಟಗಳನ್ನು ಮರೆತು ಒಂದೆರಡು ದಿನ ಹೊಟ್ಟೆತುಂಬಾ ಒಳ್ಳೆಯ ಊಟ ಮಾಡಬಹುದು, ಒಂದಿಷ್ಟು ಹಣ ಸಿಗುತ್ತದೆಯೆಂಬ ಅನಿವಾರ್ಯತೆಯಿಂದ ಜನರು ಅಲ್ಲಿಗೆ ಬಂದಿದ್ದರು. ಆದರೆ ಆ ಎನ್.ಜಿ.ಒ. ಈ ವರದಿಯನ್ನು ಸಿದ್ದಪಡಿಸಲು ಅನಿಲ ದುರಂತದ ಸಂತ್ರಸ್ಥರೇ ಸಹಕಾರ ನೀಡಿದ್ದಾರೆಂದೂ, ಈ ವರದಿಯ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿದೆಯೆಂದೂ ಹೇಳುವಲ್ಲಿ ಹೆಮ್ಮೆ ಪಡುತ್ತಿತ್ತು.

ಇಲ್ಲಿ ಮಂಡನೆಯಾದ ವರದಿಯು ಒಳಗೊಂಡ ವಿಷಯದ ಸಂಕ್ಷಿಪ್ತ ವಿವರ ಹೀಗಿದ್ದವು: ಇಡೀ ವರದಿಯು ಭೊಪಾಲ್ ಅನಿಲ ದುರಂತದ ನಂತರದ ಬೆಳವಣಿಗೆಯನ್ನು ಗಮನಹರಿಸಿತ್ತು. ಅಮೆರಿಕಾವು ಪರಿಹಾರವನ್ನು ನೀಡಿದ್ದು, ಭೂಪಾಲ್‌ನಲ್ಲಿ ಆ ಪರಿಹಾರ ನಿಧಿಯ ದುರ್ಬಳಕೆಯಾದದ್ದನ್ನು ಅಂಕಿ ಅಂಶಗಳ ಸಮೇತ ವಿವರಿಸಲಾಯಿತು. ಇಲ್ಲಿನ ಆರೋಗ್ಯ ಇಲಾಖೆಯ ಬೇಜವಬ್ದಾರಿ ನಡವಳಿಕೆಯಿಂದಾಗಿ ಜನರು ಈಗಲೂ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತಿತ್ತು. ಈ ಅಪರಾಧವನ್ನು ಮಾಡಿದವರನ್ನು ಗುರುತಿಸಿ ಶಿಕ್ಷಿಸುವಂತೆಯೂ ಸೂಚಿಸಲಾಗಿತ್ತು. ಇದು ಮಧ್ಯಪ್ರದೇಶ ಸರಕಾರದ ವೈಫಲ್ಯವನ್ನು ಬಿಂಬಿಸುವಂತಿತ್ತು. ಆ ಕಾರಣವನ್ನು ಮುಂದು ಮಾಡಿ ಇಡೀ ದುರಂತಕ್ಕೆ ಕಾರಣವಾದ ಅಮೆರಿಕಾವನ್ನು ತಪ್ಪಿತಸ್ಥ ಭಾವನೆಯಿಂದ ದೂರ ಮಾಡುವ ಸೂಕ್ಷ್ಮಗಳು ಇದ್ದವು. ಇದೊಂದು ಆಕಸ್ಮಿಕವಾಗಿ ಘಟಿಸಿದ ಘಟನೆಯೆಂತಲೂ ಇದಕ್ಕಾಗಿ ಅಮೆರಿಕಾ ದೇಶವು ಸಾಕಷ್ಟು ಅನುಕಂಪವನ್ನು ವ್ಯಕ್ತಪಡಿಸಿದೆಯೆಂತಲೂ, ಅದಕ್ಕೆ ಪೂರಕವಾಗಿ ಸಾಕಷ್ಟು ಪರಿಹಾರವನ್ನು ನೀಡಿದೆಯೆಂತಲೂ ಈ ವರದಿಯಲ್ಲಿ ಬಿಂಬಿತವಾಗಿದ್ದವು. ಒಟ್ಟು ಭೂಪಾಲ್ ಅನಿಲ ದುಂರಂತದಲ್ಲಿ ಭಾರತದ್ದೇ ತಪ್ಪಿದೆ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ಸಾಬೀತು ಪಡಿಸುವಂತಿತ್ತು. ಈ ತಿಳುವಳಿಕೆಯನ್ನು ಜನರಲ್ಲಿ ಬಿತ್ತಲು ಈ ಎನ್.ಜಿ.ಒ. ಹತ್ತು ವರ್ಷಗಳ ಕಾಲ ಈ ಭಾಗದಲ್ಲಿ ಕೆಲಸ ಮಾಡಿತ್ತು. ಅದು ಅಲ್ಲಿನ ಕೆಲ ಜನರಲ್ಲಿ ಬಲವಾಗಿ ಬೇರೂರಿಸುವಲ್ಲಿ ಸಫಲವೂ ಆಗಿತ್ತು. ಬಹುಶಃ ಅಂತಹ ವರದಿಗಳ ಬೆಂಬಲದಿಂದಾಗಿಯೇ ಭೂಪಾಲ್ ದುರಂತಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರಲಿಕ್ಕೆ ಸಾದ್ಯವಿದೆ.

ಅನಿಲ ದುರಂತಕ್ಕೆ ಬಲಿಯಾದವರ ಪರವಾಗಿ ಸತ್ಯು ಎಂಬುವವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಅವರು ವೃತ್ತಿಯಲ್ಲಿ ಎಂಜಿನಿಯರ್ ಆದರೂ ಸಮಾಜ ಸೇವೆಗೆ ತಮ್ಮನ್ನು ಒಪ್ಪಿಸಿಕೊಂಡವರಾಗಿದ್ದರು. ಅವರು ಈ ವರದಿಯನ್ನು ತಾತ್ವಿಕವಾಗಿ ವಿರೋಧಿಸಿದರು. ಈ ವರದಿಯು ಅನಿಲ ದುರಂತದ ಸಮಸ್ಯೆಯ ಗಂಭೀರತೆಯನ್ನು ಲಘುವಾಗಿಸುತ್ತದೆ, ಇದು ಮುಂದೆ ನ್ಯಾಯಾಲಯದ ತೀರ್ಪಿನ ವೇಳೆಯಲ್ಲಿ ಈ ವರದಿಯನ್ನು ಸಾಕ್ಷ್ಯ ಎಂದು ಪರಿಗಣಿಸಿದರೆ ಇದಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ನುಡಿದಿದ್ದರು. ಆದರೆ ಇಡೀ ಸೆಮಿನಾರಿನಲ್ಲಿ ಅವರ ಅಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಯಿತು. ಸೆಮಿನಾರಿಗಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಖರ್ಚಾಗಿರಬಹುದು. ಏಕೆಂದರೆ ಸೆಮಿನಾರಿಗೆ ಬಂದವರಿಗೆ ರಾಜಾತಿಥ್ಯವನ್ನು ನೀಡಲಾಗಿತ್ತು. ಸೆಮಿನಾರ್ ಮುಗಿದ ನಂತರ ಅನಿಲ ದುರಂತವಾದ ಮುನ್ಸಿಪಾಲ್ ಕಾರ್ಪೋರೇಷನ್‌ನ ವಾರ್ಡಗಳ ಭಾಗಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಅದು ಅತ್ಯಂತ ದಾರಿದ್ರ್ಯ ಬಡತನ ತಾಂಡವಾಡುತ್ತಿದ್ದ ಒಂದು ಸ್ಲಮ್‌ನಂತಿತ್ತು. ದೈಹಿಕ ಅಂಗವೈಕಲ್ಯದ ಲಕ್ಷಣಗಳು ಕಾಣುವ ಜನರೇ ಬಹುವಾಗಿ ಕಾಣಿಸಿಕೊಂಡರು.

ಅಲ್ಲಿನ ಮಕ್ಕಳೆಲ್ಲಾ ತಮ್ಮನ್ನು ನೋಡಲು ಬಂದವರ ಹತ್ತಿರ ಹಸಿದ ಮುಖಹೊತ್ತು ಬಂದರು. ಸೆಮಿನಾರ್ ಆಯೋಜಕರು ಅವರಿಗೆ ಬಿಸ್ಕತ್ತು ಮುಂತಾದ ತಿಂಡಿ ಪದಾರ್ಥಗಳನ್ನು ನೀಡಿದರು. ನಮಗೆ ಆ ಏರಿಯಾದಲ್ಲಿ ಸುತ್ತಾಡಿ ಜನರನ್ನು ಮಾತನಾಡಿಸಬೇಕೆಂಬ ಆಸೆ ಇದ್ದರೂ ಸೆಮಿನಾರ್ ಆಯೋಜಕರು ಅದಕ್ಕೆ ಅವಕಾಶ ಕೊಡಲಿಲ್ಲ. ಪ್ರವೇಶ ನಿಷಿದ್ಧವಾದ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯ ಕಾಂಪೊಂಡಿನೊಳಗೆ ಯಥೇಚ್ಚ ಕುರುಚಲು ಗಿಡಗಳು ಬೆಳೆದು ಸ್ಮಶಾನದಂತೆ ಗೋಚರಿಸುತ್ತಿತ್ತು. ಅನಿಲ ದುರಂತದ ನೆನಪನ್ನು ತರುವ ಸ್ಮಾರಕವೊಂದರ ಕಲಾಕೃತಿ ಮುಗಿಲ ಕಡೆ ಮುಖ ಮಾಡಿ ರೋಧಿಸುತ್ತಿತ್ತು. ಅತ್ಯಂತ ಯಶಸ್ವಿಯಾಗಿ ಸೆಮಿನಾರ್ ನಡೆದುದಕ್ಕೆ ರಾತ್ರಿ ಎನ್.ಜಿ.ಒ. ಸಂಯೋಜಕರುಗಳು ಪಾರ್ಟಿಯನ್ನು ಆಯೋಜಿಸಿದ್ದರು. ಕೆಲವರು ಕುಡಿದ ಮತ್ತಿನಲ್ಲಿ ಅನಿಲ ದುರಂತದಿಂದ ಮಡಿದವರನ್ನು ನೆನೆದು ಅಳುತ್ತಿರುವ ದೃಶ್ಯಗಳು ಮಸುಕು ಮಸುಕಾಗಿ ಕಾಣುತ್ತಿದ್ದವು. ಈಗ ಮಂಡನೆಯಾದ ನ್ಯಾಯಾಲಯದ ತೀರ್ಪಿನ ಹಿಂದೆ ಈ ವರದಿಯ ಪರೋಕ್ಷ ಪ್ರಭಾವ ಇರುವ ಸಾಧ್ಯತೆ ಇದೆ. ಆಗ ಸಂಸ್ಥೆಯ ಸಂಯೋಜಕರುಗಳು ಬಹುಶಃ ಈ ತೀರ್ಪನ್ನು ವಿಜಯದ ಸಂಕೇತವನ್ನಾಗಿ ಆಚರಿಸಿರಬಹುದೇನೋ?

ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಕೆಲವು ಎನ್.ಜಿ.ಒ. ಅಧ್ಯಯನಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯ

– ತೇಜ ಸಚಿನ್ ಪೂಜಾರಿ

ಸೃಷ್ಠಿ ಹಾಗೂ ಲಯ ಭರತಖಂಡದ ಸಾಂಸ್ಕ್ರತಿಕ ಬದುಕಿನ ಎರಡು ಮಹತ್ವದ ಪಾರಂಪರಿಕ ಪರಿಭಾಷೆಗಳಾಗಿವೆ. ಇವೆರಡೂ ಕಾರ್ಯಗಳಿಗೆ ಅಧಿಪತಿ ಸ್ಥಾನದಲ್ಲಿ ಪ್ರತ್ಯೇಕ ದೈವ ನಿಯಾಮಕರಿದ್ದಾರೆ. ಪ್ರತ್ಯೇಕತೆಯ ಅಂಶವು ಇಲ್ಲಿನ ತಾತ್ವಿಕ ಅವಶ್ಯಕತೆಯೂ ಆಗಿದೆ. ಯಾಕೆಂದರೆ, ಸೃಷ್ಠಿಕರ್ತ ಹಾಗೂ ಲಯಕರ್ತ ಒಬ್ಬನೇ ಆದಲ್ಲಿ ಕೆಡುಕನ್ನು ಯಾಕೆ ಸೃಷ್ಠಿಸಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಂತಹ ಕನಿಷ್ಠ ವೈಚಾರಿಕತೆಯ ಸಂಶಯ ಇಂದು ನಮ್ಮ ಕನ್ನಡ ವಾಹಿನಿಗಳ ಪ್ರಜ್ಞಾವಂತ ವೀಕ್ಷಕರಲ್ಲಿ ಸೃಷ್ಠಿಯಾಗುತ್ತಿದೆ. ಅವುಗಳು ಒಂದೆಡೆ ನಿತ್ಯಾನಂದ ರುಷಿಕುಮಾರರಂತಹ ಸ್ವಾಮಿಗಳ ಕಾಷಾಯ ವಸ್ತ್ರದ ಬಣ್ಣ ಬಯಲು ಮಾಡುತ್ತಿದ್ದರೆ ಇನ್ನೊಂದೆಡೆ ಅಂತಹದ್ದೇ ಕ್ರತ್ರಿಮ ಸ್ವಾಮೀಜಿಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿವೆ. ಅನ್ಯಾಯದ ಲಯಕರ್ತನ ಸೋಗಿನಲ್ಲೇ ನಡೆಯುತ್ತಿರುವ ಸೃಷ್ಠಿಕರ್ತನ ಕಾರ್ಯಾಚರಣೆಗೆ ಪ್ರಾತಃಕಾಲದ ಹೊತ್ತು ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಜೋತಿಷ್ಯ ಸಮಾಲೋಚನೆಯ ಕಾರ್ಯಕ್ರಮಗಳು ವೇದಿಕೆಯಾಗಿ ಬಳಕೆಯಾಗುತ್ತಿವೆ. ‘ಮಹರ್ಷಿ ದರ್ಪಣ’, ‘ಓಂಕಾರ ಮಾತುಕತೆ’, ‘ಪ್ರಣವಂ’, ‘ಆಯುಷ್ಮಾನ್ ಭವ’, ‘ರಾಶಿಫಲ’, ಮೊದಲಾದ  ಜ್ಯೋತಿಷಿ ಕಾರ್ಯಕ್ರಮಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ಮಾಧ್ಯಮಗಳಾಗಿ ರೂಪುಗೊಳ್ಳುತ್ತಿವೆ.

***

“ಆತಂಕ” ಹಾಗೂ “ಬೆರಗು” ದೈವ ನಿರ್ಮಾಣ ಪ್ರಕ್ರಿಯೆಯ ಎರಡು ಪ್ರಮುಖ ಅಂಶಗಳು. “ಅಜ್ಞಾನ” ಅವುಗಳ ಕಾರ್ಯಾಚರಣೆಗೆ ವೇದಿಕೆ ಒದಗಿಸಿಕೊಡುತ್ತದೆ. ಹೀಗಾಗಿಯೇ ನಮ್ಮ ಹಿರೀಕರು ಗಾಳಿ, ಅಗ್ನಿ, ಬೆಳಕು, ಮಳೆ ಇವೇ ಮೊದಲಾದ ಸಹಜ ಪ್ರಾಕೃತಿಕ ಅಂಶಗಳ ಮರ್ಮ ಅರಿಯಲಾಗದೆ ಬೆರಗು ಪಟ್ಟು ಕ್ರಮೇಣ ಆತಂಕಿತರಾಗಿ ಅವುಗಳಿಗೆ ಅತಿಮಾನುಷ ದೈವಸ್ವರೂಪವನ್ನು ನೀಡಿದ್ದರು. ಇದು ಶತಶತಮಾನಗಳ ಹಿಂದಿನ ಕತೆ. ಆದರೆ ಇಂದೂ ಕೂಡಾ ಅದೇ ಅಂಶಗಳನ್ನು ಮುಂದಿಟ್ಟುಕೊಂಡು ಕನ್ನಡ ವಾಹಿನಿಗಳು ದೈವ ಸ್ವರೂಪಿ ಸ್ವಾಮೀಜಿಗಳನ್ನು ನಿರ್ಮಿಸ ಹೊರಟಿವೆ. ಇಲ್ಲಿ ಹೊಸ ಸೇರ್ಪಡೆ “ಪ್ರಲೋಭನೆ”ಯ ಅಂಶ. ನಮ್ಮ ಬೌಧ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳು ಟೆಲಿವಿಷನ್ ಚಾನೆಲ್‌ಗಳ ಇಂತಹ ಅಸಹ್ಯ ಹಾಗೂ ಸಮಾಜ ವಿರೋಧಿ ಕಾರ್ಯತಂತ್ರಗಳಿಗೆ ಅವಕಾಶ ಮಾಡಿಕೊಡುತ್ತಿವೆ.

***

ಆತಂಕ ಭಾವನೆಯ ನಿರ್ದಿಷ್ಟ ಗುಣ ವಿಶೇಷತೆಗಳನ್ನು ಕನ್ನಡ ಟೆಲಿವಿಷನ್ ಚಾನಲ್‌ಗಳು ತಮ್ಮ ಕುತ್ಸ್ತಿತ ಉದ್ದೇಶಗಳ ಈಡೇರಿಕೆಗೆ ಬಳಸಿಕೊಳ್ಳುತ್ತಿವೆ. ಪ್ರಸಾರ ಮಾಧ್ಯಮ ಕ್ಷೇತ್ರದಲ್ಲಿ “ಆತಂಕ ಸನ್ನಿವೇಶ” ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತದೆ. ಮನೋವೈಜ್ಞಾನಿಕ ನೆಲೆಯಲ್ಲಿ ಜನರನ್ನು ಅತಿಮಾನುಷತೆಯತ್ತ ನೂಕಬಲ್ಲ ಶಕ್ತಿಯು ಕೂಡಾ ಆತಂಕ ಭಾವಕ್ಕಿದೆ. ಇದೇ ಹಿನ್ನೆಲೆಯಲ್ಲಿ ಆತಂಕ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಕನ್ನಡ ವಾಹಿನಿಗಳು ಕಾರ್ಯಾಚರಿಸುತ್ತಿವೆ. ನಾನಾ ನೆಲೆಯ ಹಾಗೂ ನಾನಾ ನಮೂನೆಯ ಬೀತಿ ಉಂಟುಮಾಡುವ ಸನ್ನಿವೇಶಗಳನ್ನು ಜನಮಾಸದಲ್ಲಿ ಸೃಷ್ಟಿಸಿ ಟಿ.ಆರ್.ಪಿ. ಸಾಧನೆಗೈಯಲು ಹೊಂಚುಹಾಕುತ್ತಿವೆ. ಒಂದೆಡೆ ನೆರೆ, ಬರ, ತ್ಸುನಾಮಿ, ಸೌರ ಮಾರುತಗಳು, ಸೂಪರ್‌ಮೂನ್, ಶುಕ್ರ ಸಂಕ್ರಮಣ, ಅಗ್ನಿಸ್ಪೋಟ ಮೊದಲಾದ ಸಹಜ ಪ್ರಾಕೃತಿಕ ವಿದ್ಯಮಾನಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿವೆ. ಇನ್ನೊಂದೆಡೆ ಮಹಾಪ್ರಳಯ, ಭೂಪಥ ಬದಲಾವಣೆ, ಮನುಕುಲದ ನಾಶ ಮೊದಲಾದ ಮಿಥ್ಯೆಗಳು ಹಾಗೂ ಅವೈಜ್ಞಾನಿಕ ಪಂಚಾಂಗಗಳು ಮತ್ತು ಗ್ರಹಗತಿ ಆಧಾರಿತ ಸುಳ್ಳಿನ ಕಂತೆಗಳನ್ನೇ ಸತ್ಯವೆಂಬತೆ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿವೆ. ಜೊತೆಗೆ ಸಹಜವಾಗಿಯೇ ಆತಂಕ ಪಡಬೇಕಾಗಿರುವ ಹವಾಮಾನ ಬದಲಾವಣೆಗಳಂತ ವೈಜ್ಞಾನಿಕ ವಿಚಾರಗಳ ಸುತ್ತ ಇನ್ನಷ್ಟು ಅನಾವಶ್ಯಕ ಹಾಗೂ ಅವೈಜ್ಞಾನಿಕ ಆತಂಕಗಳನ್ನು ಸೃಷ್ಟಿಸಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಈ ಮೂರು ನಮೂನೆಯ ಕಾರ್ಯಕ್ರಮಗಳ ತತ್‌ಕ್ಷಣದ ಉದ್ದೇಶ ಒಂದೇ ಆಗಿದೆ . ಅದು, “ಆತಂಕ ನಿರ್ಮಾಣ”.

ಇವುಗಳ ಜೊತೆಗೆ, ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಇನ್ನೂ ಕೆಲವು ಕಾರ್ಯಕ್ರಮಗಳು ಜನಮನದಲ್ಲಿ ಬೆರಗನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆಕರ್ಷಕ ನಿರೂಪಣ ತಂತ್ರಗಳನ್ನು ಹೊಂದಿರುವ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ, ತರ್ಕದ ಗೋಜಿಗೆ ಹೋಗದ ಸಾಮಾನ್ಯ ಪ್ರೇಕ್ಷಕ “ಹೀಗೂ ಉಂಟೆ?” ಎಂಬ ಬೆರಗಿಗೆ ಖಂಡಿತ ಒಳಗಾಗುತ್ತಾನೆ. ಎಲ್ಲೋ ಒಂದು ಮೂಲೆಯಲ್ಲಿ ಇರೋ ಸೀಮಿತ ವ್ಯಾಪ್ತಿಯ ಗುಡಿ ದೇಗುಲಗಳು, ಧರ್ಮ ಜೀವಿಗಳು ಮತ್ತು ಕಾಗೆ, ಗೂಬೆ, ಹಲ್ಲಿ , ಹದ್ದು, ನಂದಿ, ಎಮ್ಮೆ ಮೊದಲಾದ ಪ್ರಾಣಿ ಪಕ್ಷಿಗಳು, ಹಾಗೆಯೇ ದೆವ್ವ ಭೂತ ಪಿಶಾಚದಂತಹ ಭ್ರಮೆಗಳು ಹಾಗೂ ಅಮಾವಾಸ್ಯೆ ಹುಣ್ಣಿಮೆಯಂತ ದಿನ ವಿಶೇಷತೆಗಳು- ಇವುಗಳಿಗೆ ಜನಪದೀಯ ನಂಬುಗೆಗಳು ಆರೋಪಿಸಿರುವ ಅತೀಂದ್ರಿಯ ಶಕ್ತಿಗಳನ್ನೇ ಕೇಂದ್ರವಾಗಿಟ್ಟು ಪ್ರೇಕ್ಷಕ ಸಮೂಹದಲ್ಲಿ “ಅಚ್ಚರಿ” ಉಂಟುಮಾಡುವ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಜೊತೆಗೆ ಜನ್ಮ “ಜನ್ಮಾಂತರ” ಸರಪಳಿಯ ಸತ್ಯಗಳನ್ನು ಹೆಕ್ಕಿ ತೆಗಿಯುತ್ತಿರುವಂತೆ ಬಿಂಬಿಸಲ್ಪಡುವ ಸಮ್ಮೋಹನ ಆಧಾರಿತ ಕಾರ್ಯಕ್ರಮಗಳು, ರಹಸ್ಯ-ನಿಗೂಢ ವಿಚಾರಗಳು ಜನರ ಮನದಲ್ಲಿ ವಾರಗಟ್ಟಲೆ ಗುಂಯಿಗುಡುವಂತೆ ಮಾಡುತ್ತಿವೆ.

ಆತಂಕ ಹಾಗೂ ಬೆರಗು ಸೃಷ್ಟಿಯ ಕಾರ್ಯಕ್ರಮಗಳ ಜೊತೆಜೊತೆಗೆ ವೀಕ್ಷಕರಿಗೆ ಪ್ರಲೋಭನೆ ಒಡ್ಡುವ ಕೆಲಸವನ್ನು ಕೂಡಾ ಕನ್ನಡವಾಹಿನಿಗಳು ಮಾಡುತ್ತಿವೆ. ಈಗಾಗಲೇ ಆಸ್ತಿತ್ವದಲ್ಲಿರುವ ಧರ್ಮ ಹಾಗೂ ಶಕುನ ಪರಂಪರೆಗಳಿಂದ ಅವುಗಳು ಪ್ರಲೋಭನಾ ಸಾಮಾಗ್ರಿಗಳನ್ನು ಪಡೆದುಕೊಳ್ಳುತ್ತಿವೆ. ಪ್ರಲೋಭನೆಯ ಅಂಶವು ಸಾಮಾನ್ಯವಾಗಿ ಅಸುರಕ್ಷಿತ ಭಾವ ವಾತಾವರಣದಲ್ಲಿ ಕಾರ್ಯಾಚರಿಸುತ್ತದೆ. ಅಂತೆಯೇ, ಜಾಗತಿಕರಣದ ಹಿನ್ನೆಲೆಯಲ್ಲಿ ಇಂದು ಸೃಪ್ಟಿಯಾಗಿರುವ ಅಸ್ಥಿರತೆ ಹಿಂಸೆ ಹಾಗೂ ಮೌಲ್ಯ ಕ್ಷಯದಂತ ಅಧಃಪತನದ ಪರಿವೇಶಗಳು ಪ್ರಲೊಭನೆಗೆ ಅವಕಾಶವೀಯುತ್ತಿವೆ. ಕನ್ನಡ ವಾಹಿನಿಗಳು ಇಂತಹ ವಿಷಮ ಪರಿಸ್ಥಿತಿಗಳ ಭರಪೂರ ಲಾಭ ಪಡೆಯುತ್ತಿವೆ. ತೀರ್ಥಕ್ಷೇತ್ರ ಪ್ರಯಾಣ, ವಾಹನ ಹಾಗೂ ದೂರವಾಣಿ ಸಂಖ್ಯಾವಿಶೇಷಗಳು, ವಾಸ್ತು ಬದಲಾವಣೆಗಳು, ಮಂತ್ರ ತಂತ್ರಗಳ ಆಚರಣೆ ಮೊದಲಾದ ಅವೈಜ್ಞಾನಿಕ ಹಾಗೂ ಸಮೂಹ ಸನ್ನಿಯ ಆಯ್ಕೆಗಳನ್ನು ನೀಡುತ್ತಾ ಒಳಿತಾಗುವ ಪ್ರಲೋಭನೆಯನ್ನು ಒಡ್ಡುತ್ತಿವೆ.

***

ಹೀಗೆ, ಕನ್ನಡ ದೂರದರ್ಶನ ಚಾನೆಲ್‌ಗಳು ಆತಂಕ, ಬೆರಗು ಹಾಗೂ ಪ್ರಲೋಭನೆಯ ಸಂಕೀರ್ಣ ವಾತಾವರಣವೊಂದನ್ನು ಸೃಷ್ಠಿಸಿ ಅಲ್ಲಿ ಭಾವಿ ಸ್ವಾಮೀಜಿಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡುತ್ತಿವೆ. ಅಧ್ಯಾತ್ಮಿಕ ಜಿಜ್ಞಾಸೆಗಳು ಹಾಗೂ ಸಾಧನೆಗಳ ಮುಖಾಂತರ ಗುರುಸ್ಥಾನ ಸಂಪಾದನೆ ಮಾಡುವ ಪರಂಪರೆಯು ಇಂದು ನಮ್ಮಲ್ಲಿ ಇಲ್ಲವಾಗಿದೆ. ಅದರ ಸ್ಥಾನದಲ್ಲಿ ಕೇವಲ ಬಾಹ್ಯ ಸೌಂದರ್ಯದ ನೆಲೆಯಲ್ಲಿ ಸ್ವಾಮಿತ್ವದ ಪ್ರಭಾವಳಿಯನ್ನು ದಕ್ಕಿಸಿಕೊಳ್ಳುವ ಹುನ್ನಾರುಗಳು ನಡೆಯುತ್ತಿವೆ. ವೈಚಾರಿಕತೆಯ ಪ್ರವರ್ತರಾಗಬೇಕಿದ್ದ ನಮ್ಮ ಟೆಲಿವಿಷನ್ ಚಾನಲ್‌ಗಳು ಇಂತಹ ಕುತಂತ್ರಗಳಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗಿಯಾಗಿರುತ್ತಿರುವುದು ಸದ್ಯದ ಸಾಮಾಜಿಕ ಸಂದರ್ಭದ ದುರ್ದೈವವಾಗಿದೆ.

ಆಕರ್ಷಕ ವೇದಿಕೆ, ಗಮನ ಸೆಳೆಯುವ ನಿರೂಪಣೆ ಹಾಗೂ ನಿಖರ ಸಂಬೋಧನೆ; ಇವು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ತಂತ್ರ ವಿಶೇಷತೆಗಳಾಗಿವೆ. ಇವುಗಳು ಬಾಹ್ಯ ಸೌಂದರ್ಯದ ಬಹು ಸಾಮಾನ್ಯ ನೆಲೆಗಳನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯ ಸಮಾಲೋಚನಯ ಕಾರ್ಯಕ್ರಮಗಳು ನಡೆಯುವ ರಂಗಮಂಟಪಗಳು ವೀಕ್ಷಕರ ಮನದಲ್ಲಿ ಭಕ್ತಿಭಾವಗಳನ್ನು ಸೃಷ್ಟಿಸುವಂತಿರುತ್ತವೆ. ಅಲಂಕೃತ ಶಿವಲಿಂಗ, ಗಣೇಶ ಮೊದಲಾದ ವಿಗ್ರಹಗಳು, ಗುರುಪೀಠ ಸ್ವರೂಪಿ ಆಸನಗಳು ಹಾಗೂ ಓಂಕಾರದಂತಹ ಬೃಹತ್ ಜಿಹ್ನೆಗಳು ವೇದಿಕೆಯ ಮುಖ್ಯ ಆಕರ್ಷಣೆಗಳಾಗಿರುತ್ತವೆ. ಕಾರ್ಯಕ್ರಮಗಳ ಕೇಂದ್ರ ಬಿಂದುಗಳಾದ ಜ್ಯೋತಿಷಿಗಳು ಕೂಡಾ ಕಾರ್ಯಕ್ರಮದ ಉದ್ದಕ್ಕೂ ಪುಲ್ ಕಾಸ್ಟೂಮ್‌ನಲ್ಲೇ ಇರುತ್ತಾರೆ. ಎಲ್ಲರೂ ಫ್ಯಾಶನ್ ನಾಮದಾರಿಗಳೇ. ಅತ್ಯಾಧುನಿಕ ಕಂಪ್ಯೂಟರ್ ಹಾಗೂ ಪಾರಂಪರಿಕ ತಾಳೆಗರಿ ಇವೆರಡನ್ನೂ ಏಕಕಾಲಕ್ಕೆ ಬಳಸುವಂತಹ ಚಾತುರ್ಯವನ್ನು ಮೆರೆಯುತ್ತಾರೆ. ನಗರಗಳ ವೀಕ್ಷಕರಲ್ಲಿ ನಂಬಿಕೆಯನ್ನು ಉಂಟುಮಾಡಲು ಇವು ಎರಡೂ ಬಹಳ ಮುಖ್ಯವಾದ ಸಾಧನಗಳಾಗಿವೆ. ಜೊತೆಗೆ ದೂರವಾಣಿಯಂತಹ ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿ ವೀಕ್ಷಕರ ಜೊತೆಗೆ ಸಂಬಂಧಗಳನ್ನು ಸ್ಥಾಪಿಸುವ ಪ್ರಯತ್ನಗಳೂ ನಡೆಯುತ್ತವೆ. ಇಂತಹ ಗುರು-ಶಿಷ್ಯ, ಸ್ವಾಮಿ-ಅನುಯಾಯಿ ಸಂಬಂಧಗಳು ಆಯಾ ಜ್ಯೋತಿಷಿಗಳು ಮುಂದೆ ಪಡೆಯಲಿರುವ ಅವಸ್ಥೆಯಲ್ಲಿ ನೆರವಿಗೆ ಬರುತ್ತವೆ.

ಅಷ್ಟೂ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರೂಪಕರು ಸ್ತ್ರೀಯರೇ ಆಗಿದ್ದಾರೆ. ಎಲ್ಲಾ ವಾಹಿನಿಗಳು ಒಟ್ಟಾಗಿ ನಿರ್ಣಯಿಸಿವೆಯೋ ಏನೋ ಎಂಬಂತೆ ಭಾಸವಾಗುವ ಸಮವಸ್ತ್ರ ಸ್ವರೂಪಿ ವೇಷಭೂಷಣದೊಂದಿಗೇ ನಿರೂಪಕಿಯರು ಕಾರ್ಯಕ್ರಮಗಳಿಗಳಲ್ಲಿ ಹಾಜರಿರುತ್ತಾರೆ. ಜರತಾರಿ ಸೀರೆ, ಹಿಂದಕ್ಕೆ ಎಳೆದು ಕಟ್ಟಿದ ಕೂದಲು, ಮುಡಿಗೆ ಹೂವು, ಫಲಕದ ಸರ ಹಾಗೂ ಜುಮುಕಿ ಧರಿಸಿರುವ ಸಾಂಪ್ರದಾಯಿಕ ನಿಲುವು ಅವರದ್ದು. ಮಾತುಗಳೂ ಅಷ್ಟೇ ಆಕರ್ಷಕ.

ವಿಶಿಷ್ಟ ಸಂಭೋಧನಾ ತಂತ್ರಗಳು ಕೂಡಾ ಇಲ್ಲಿನ ಕಾರ್ಯಕ್ರಮಗಳ ವಿಶೇಷತೆಗಳಾಗಿವೆ. ಅಷ್ಟೂ ಕಾರ್ಯಕ್ರಮಗಳಲ್ಲಿ ಜ್ಯೋತಿಷಿಗಳನ್ನು ಸಂಬೋಧಿಸಲು “ಗುರೂಜಿ” ಎಂಬ ಪದ ಬಳಕೆಯಾಗುತ್ತಿದೆ. “ಗುರೂಜಿ” ಸಂಭೋಧನೆಗೆ ಇಲ್ಲಿ ವಿಶೇಷವಾದ ಹಿನ್ನೆಲೆ ಇದೆ. ಏಕೆಂದರೆ ಅಂತಹದ್ದೇ ಸ್ಥಾನ ವಿಶೇಷತೆಗಳನ್ನು ಪ್ರತಿನಿಧಿಸುತ್ತಿದ್ದ ಬಾಬಾ ಹಾಗೂ ಸ್ವಾಮಿಯಂತಹ ಪದಗಳು ಬ್ಲೇಡ್ ಮತ್ತು ಕಳ್ಳ ವಿಶೇಷಣಗಳಿಂದ ಕುಲಗೆಟ್ಟಿವೆ! ಮಾತ್ರವಲ್ಲದೆ, ಗುರೂಜಿ ಎಂಬ ಪದಕ್ಕೆ ಮಾರುಕಟ್ಟೆ ಮೌಲ್ಯವೂ ಇದೆ ಎಂಬ ಅಂಶ ಇಲ್ಲಿ ಉಲ್ಲೇಖನೀಯ. ಟೆಕ್‌ಗುರು, ಮಾನೇಜ್‌ಮೆಂಟ್ ಗುರು ಮೊದಲಾದ ಪರಿಭಾಷೆಗಳು ಇಂತಹ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ಹಿಗಾಗಿಯೇ ನಮ್ಮ ಟಿ.ವಿ. ಚಾನೆಲ್‌ಗಳು ಜ್ಯೋತಿಷಿಗಳನ್ನು ಗುರೂಜಿ ಎಂದೇ ಸಂಬೋಧಿಸುತ್ತವೆ ಮತ್ತು ವಿಕ್ಷಕರಿಗೂ ಹಾಗೇ ಮಾಡುವಂತೆ ಪ್ರಚೋದಿಸುತ್ತಿವೆ. ಉಳಿದಂತೆ ಪಾರಂಪರಿಕ ತೂಕದ ಪದಗಳಾದ ಮಹರ್ಷಿ, ಬ್ರಹ್ಮರ್ಷಿ ಮೊದಲಾದ ಪದಗಳನ್ನು ಕೂಡಾ ಅಲ್ಲಲ್ಲಿ ಬಳಸುತ್ತಿವೆ. ಇಂತಹ ಸಂಬೋಧನ ತಂತ್ರಗಳು ಆಯಾ ಸ್ವಾಮೀಜಿಗಳಿಗೆ ಒಂದು ವಿಶಿಷ್ಟವಾದ ಸ್ವಾಮಿತ್ವದ ಪ್ರಭಾವಳಿಯನ್ನು ದಯಪಾಲಿಸುತ್ತಿವೆ.

* * *

ಕನ್ನಡ ವಾಹಿನಿಗಳ ಇವಿಷ್ಟೂ ತಂತ್ರಗಳ ಸಫಲ ಕಾರ್ಯಚಾರಣೆಗೆ ವೇದಿಕೆಯನ್ನು ಒದಗಿಸುತ್ತಿರುವುದು ನಮ್ಮ ಬೌದ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಲಾಭಕೋರತನ. ಅಜ್ಞಾನದ ಆಧುನಿಕ ಸ್ವರೂಪವಾದ ಬೌದ್ಧಿಕ ದಾರಿದ್ರ್ಯವು ಸಮಾಜದಲ್ಲಿ ಮೌಢ್ಯಗಳ ರೂಪಣೆ ಹಾಗೂ ಪ್ರಸರಣ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುತ್ತಿದೆ. ಜ್ಞಾನ ಪರಿಕರಗಳ ಸುಲಭ ಲಭ್ಯತೆ ಮತ್ತು ಶಿಕ್ಷಣದ ನಿಕಟ ಸಾರ್ವತ್ರಿಕತೆಯಂತಹ ಪೂರಕ ಪರಿವೇಶಗಳಿದ್ದರೂ ಕೂಡ ನಮ್ಮ ನಗರಗಳ ಜನರು “ಹೀಗೂ ಉಂಟೆ?” ಎಂಬ ಪ್ರಶ್ನೆಯಾಚೆಗೆ ಯೋಚಿಸುವ ಪ್ರಯತ್ನ ಮಾಡುತ್ತಿಲ್ಲ . ಇಂತಹ ವೈಚಾರಿಕ ಕೊರತೆಗೆ ಜೊತೆಯಾಗಿರುವುದು ಕಾರ್ಪೊರೇಟ್ ಹಿತಾಸಕ್ತಿಗಳು. ಜ್ಯೋತಿಷ್ಯದಂತಹ ಕಾರ್ಯಕ್ರಮಗಳು ಸಮಾಜದಲ್ಲಿ “ಯಥಾಸ್ಥಿತಿ”ಯನ್ನು ಉಳಿಸಿಕೊಳ್ಳಲು ನೆರವಾಗುವುದರ ಜೊತೆಗೆ ಮಾರುಕಟ್ಟೆ ಆಧಾರಿತ ಜಾಹಿರಾತು ತಂತ್ರಗಳಿಗೂ ಅವಕಾಶ ನೀಡುತ್ತಿವೆ. ಹೀಗಾಗಿಯೇ ಕಾರ್ಪೊರೇಟ್ ಶಕ್ತಿಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯಕ್ರಮಗಳನ್ನು ತುಂಬು ಹೃದಯದಿಂದ ಪ್ರಾಯೋಜಿಸುತ್ತಿವೆ.