ಪ್ರಜಾ ಸಮರ – 13 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಮಧ್ಯಭಾರತದ ದಂಡಕಾರಣ್ಯದ ಬಸ್ತಾರ್ ಅರಣ್ಯದಲ್ಲಿ 1971 ರಲ್ಲಿ ಸಿ.ಪಿ.ಐ. (ಎಂ.ಎಲ್.) ಸಂಘಟನೆಯ ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದ ಹಾಗೂ ಚಾರು ಮುಜಂದಾರ್‌ನ ಸಂಗಾತಿ ಜೋಗು ರಾಯ್ ನಕ್ಸಲ್ ಚಟುವಟಿಕೆಗೆ ಬುನಾದಿ ಹಾಕಿದ ಮೊದಲ ವ್ಯಕ್ತಿ. ಈತನ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ವಲಯದ ರಾಯ್‌ಪುರ, ದರ್ಗ್, ಬಸ್ತಾರ್, ಬಿಲಾಸ್‌ಪುರ, ಸರ್ಗುಜ, ರಾಯ್‌ಗರ್, ಭೂಪಾಲ್, ಗ್ವಾಲಿಯರ್, ಉಜ್ಜಯನಿ ಜಿಲ್ಲೆಗಳಲ್ಲಿ ಕ್ರಾಂತಿಕಾರಿ ಕಿಸಾನ್ ಮಜ್ದೂರ್ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿದ್ದವು. ಬಸ್ತಾರ್ ಅರಣ್ಯ ಪ್ರದೇಶವನ್ನು ಕೇಂದ್ರವಾಗಿಟ್ಟು ಚಟುವಟಿಕೆ ಆರಂಭಿಸಿದ ನಕ್ಸಲರು ಜಗದಾಲ್‌ಪುರ್ ಎಂಬ ಜಿಲ್ಲಾ ಕೇಂದ್ರದಲ್ಲಿ ಪ್ರಥಮಬಾರಿಗೆ ಭಿತ್ತಿ ಪತ್ರವನ್ನು ಅಂಟಿಸುವುದರ ಮೂಲಕ ತಮ್ಮ ಆಗಮನವನ್ನು ಸರ್ಕಾರಕ್ಕೆ ಜಾಹಿರುಗೊಳಿಸಿದ್ದರು.

ನಿರಂತರವಾಗಿ ನಡೆದ ಸರ್ಕಾರದ ನಿರ್ಲಕ್ಷ್ಯ ಮತ್ತು ಶೋಷಣೆಗೆ ಒಳಗಾಗಿದ್ದ ಅಲ್ಲಿನ ಆದಿವಾಸಿಗಳ ಪಾಲಿಗೆ ನಕ್ಸಲ್ ಕಾರ್ಯಕರ್ತರು maoist-naxalitesಒಂದರ್ಥದಲ್ಲಿ ನಿಜವಾದ ಆಸರೆಯಾದರು. ಆದಿವಾಸಿಗಳ ಬವಣೆ ಮತ್ತು ಅವರ ಅತಂತ್ರ ಬದುಕಿನ ಇತಿಹಾಸ ನಿನ್ನೆ ಅಥವಾ ಮೊನ್ನೆಯದಲ್ಲ. ಇದಕ್ಕೆ ಶತಶತಮಾನಗಳ ಕಾಲದ ಇತಿಹಾಸವಿದೆ. ಇವರುಗಳ ಸಹಜ ಬದುಕಿಗೆ ಮೊದಲು ಅಡ್ಡಿಯೊಡ್ಡಿದವರೆಂದರೇ, ಭಾರತವನ್ನಾಳಲು ಬಂದ ಬ್ರಿಟೀಷರು.

ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಮೇರಿಕಾದ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರಂತೆ, ಆಫ್ರಿಕಾದ ಮೂಲ ನಿವಾಸಿಗಳಂತೆ, ಭಾರತದ ಆದಿವಾಸಿಗಳು ಸಹ ತಮ್ಮದೇ ಬದುಕು ಕಟ್ಟಿಕೊಂಡು, ಹೊರಜಗತ್ತಿನ ಸಂಪರ್ಕವಿಲ್ಲದೇ ಜೀವನ ನಡೆಸಿದ್ದರು. ಮಧ್ಯಭಾರತದ ಅರಣ್ಯಕ್ಕೆ 19 ನೇ ಶತಮಾನದ ಆರಂಭದಲ್ಲಿ ಮೊದಲ ಬಾರಿಗೆ ಬ್ರಿಟೀಷರು ಲಗ್ಗೆ ಇಟ್ಟರು. ಭಾರತದಲ್ಲಿ ರೈಲ್ವೆ ಮಾರ್ಗ ವಿಸ್ತರಿಸುವ ನೆಪದಲ್ಲಿ ಅರಣ್ಯದ ಮರಗಳನ್ನು ಕಡಿಯಲು ಹೊರಟಾಗ ಬ್ರಿಟೀಷ್ ಸರ್ಕಾರ ಪ್ರಥಮ ಬಾರಿಗೆ ಆದಿವಾಸಿಗಳ ಪ್ರತಿರೋಧವನ್ನು ಎದುರಿಸಬೇಕಾಯಿತು. ಈ ನೆಲದ ನಿಜವಾರಸುದಾರರಾದ ಆದಿವಾಸಿಗಳ ಸಮಸ್ಯೆಯ ಆಳಕ್ಕೆ ಇಳಿದು, ಅವರ ನೋವುಗಳನ್ನು ಅರ್ಥ ಮಾಡಿಕೊಳ್ಳುವ ಹೃದಯವಾಗಲಿ, ಅಥವಾ ವ್ಯವಧಾನವಾಗಲಿ ಬಿಟೀಷ್ ಸರ್ಕಾರಕ್ಕೆ ಮತ್ತು ಅಧಿಕಾರಿ ವರ್ಗಕ್ಕೆ ಇರಲಿಲ್ಲ. ಅಂದಿನ ಅವರ ಅಹಂಕಾರ ಮತ್ತು ದರ್ಪ ಎರಡು ಶತಮಾನಗಳ ನಂತರ ಆದಿವಾಸಿಗಳ ಸಮಸ್ಯೆಯಾಗಿ ಈಗ ನಕ್ಸಲ್ ಹೋರಾಟದ ರೂಪದಲ್ಲಿ ಭಾರತ ಸರ್ಕಾರವನ್ನು ಕಾಡುವುದರ ಜೊತೆಗೆ ಬಾಧಿಸುತ್ತಿದೆ.

1856 ರಿಂದ 1910 ರವರೆಗೆ ಮದ್ಯಭಾರತದ ಆದಿವಾಸಿಗಳು ಬ್ರಿಟೀಷ್ ಸಕಾರದ ಜೊತೆ ನಿರಂತರವಾಗಿ ನಡೆಸಿದ ಸಂಘರ್ಷದ ಫಲವಾಗಿ ಅಂದಿನ ಬ್ರಿಟೀಷ್ ಸರ್ಕಾರ, 1927 ರಲ್ಲಿ ಆದಿವಾಸಿಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಯನ್ನು ಜಾರಿಗೆ ತಂದು ಅವರು ಬದುಕುತ್ತಿರುವ ಅರಣ್ಯ ಪ್ರದೇಶವನ್ನು ಸುರಕ್ಷಿತ ವಲಯವೆಂದು ಘೋಷಿಸಿತು., ಅಲ್ಲಿ ಯಾವುದೇ ಚಟುವಟಿಕೆ ನಡೆಯದಂತೆ ನಿರ್ಬಂಧಿಸುವ ಹಕ್ಕನ್ನು ಆಯಾ ಜಿಲ್ಲಾ ಕಲೆಕ್ಟರ್‌ಗಳಿಗೆ ನೀಡಿತು.

1947 ರ ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಈ ಕಾನೂನನ್ನು ಮಾರ್ಪಡಿಸಿ 1950 ರಲ್ಲಿ ಅರಣ್ಯ ಮತ್ತು ಗಣಿಕಾರಿಕೆ ನಡೆಸುವ ಹಕ್ಕನ್ನು ತನ್ನದಾಗಿಸಿಕೊಂಡಿತು. ಇದರ ಫಲವಾಗಿ ಆದಿವಾಸಿಗಳಿಗೆ ಅರಣ್ಯದ ಕಿರು ಉತ್ಪನ್ನಗಳನ್ನು ಹೊರತು ಪಡಿಸಿದರೇ ಭೂಮಿಯ ಹಕ್ಕು ಇಲ್ಲವಾಯಿತು. ಮಧ್ಯ ಪ್ರದೇಶದಿಂದ ಬೇರ್ಪಟ್ಟು ಛತ್ತೀಸ್‌ಗಡ ರಾಜ್ಯವಾಗಿ ರೂಪುಗೊಂಡಿರುವ ಈ ರಾಜ್ಯದಲ್ಲಿ ಒಟ್ಟು ಭೂಮಿಯ ಶೇಕಡ ಐವತ್ತರಷ್ಟು ಅರಣ್ಯ ಪ್ರದೇಶವಿದ್ದು ಇಲ್ಲಿ ಆದಿವಾಸಿಗಳು ಬದುಕುತಿದ್ದಾರೆ.

1950 ರಲ್ಲಿ ಇವರನ್ನು ಹಿಂದುಳಿದ ಬುಡಕಟ್ಟು ಜನಾಂಗವೆಂದು ಗುರುತಿಸಿರುವ ಕೇಂದ್ರ ಸರ್ಕಾರ ಇವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಘೋಷಿಸಿದೆ. ಆದರೆ, ಈ ಅವಕಾಶವೆಲ್ಲಾ ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ನಾಗಲ್ಯಾಂಡ್ ಮತ್ತು ಮಿಜೋರಾಂ, ಮಣಿಪುರ ಹಾಗೂ ತ್ರಿಪುರಾ ರಾಜ್ಯಗಳ ಬುಡಕಟ್ಟು ಜನಾಂಗದ ಪಾಲಾಗುತ್ತಿದೆ. ಏಕೆಂದರೇ, ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶಕ್ಕೆ ಕಾಲಿಟ್ಟ ಕ್ರೈಸ್ತ ಮಿಷನರಿಗಳ ಪ್ರಭಾವದಿಂದ ಶಿಕ್ಷಣಕ್ಕೆ ತೆರೆದುಕೊಂಡ ಅಲ್ಲಿನ ಜನ ಕೇಂದ್ರ ಸರ್ಕಾರದ ಮೀಸಲಾತಿಯನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡರು. ಆದರೆ, ತಮ್ಮ ನೆಲದ ಸಂಸ್ಕೃತಿಯೊಂದಿಗೆ ಆಳವಾಗಿ ಬೆರೆತು ಹೋಗಿರುವ ಮಧ್ಯಭಾರತದ ಆದಿವಾಸಿಗಳು ನಾಗರೀಕ ಜಗತ್ತಿನ ಎಲ್ಲಾ ಸವಲತ್ತುಗಳಿಂದ ವಂಚಿತರಾದರು.

ಭಾರತದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಂರ ಮತಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರಗಳು ಕಾಲಕ್ಕೆ ತಕ್ಕಂತೆ ಅನೇಕ ಸವಲತ್ತುಗಳನ್ನು ಘೊಷಿಸಿಕೊಂಡು ಬಂದಿವೆ. ಆದರೇ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸದ ಮತ್ತು ತಾವು ವಾಸಿಸುವ ಹಳ್ಳಿಗಳು ಸಹ ಸರ್ಕಾರದ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಸೇರ್ಪಡೆಯಾಗದ ಕಾರಣ ಇಲ್ಲಿನ ಆದಿವಾಸಿಗಳು ಸ್ವಂತ ನೆಲದಲ್ಲಿ ಪರಕೀಯರಂತೆ ಬದುಕಬೇಕಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಅರಣ್ಯ ಭೂಮಿಯ ಮೇಲಿನ ಹಕ್ಕನ್ನು ಸ್ಥಾಪಿಸಿಕೊಂಡಿರುವ ಸರ್ಕಾರಗಳು ಆದಿವಾಸಿಗಳು ಬದುಕುತ್ತಿರುವ ಪ್ರದೇಶದಲ್ಲಿ ಹೇರಳವಾದ ಗಣಿಕಾರಿಕೆಗೆ ಮತ್ತು ಅಣೆಕಟ್ಟುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಹಲವಾರು ರೀತಿಯ ಸಂಘರ್ಷಕ್ಕೆ ದಾರಿಯಾಗಿದೆ. ಒರಿಸ್ಸಾ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳ ಸರ್ಕಾರಗಳು ಕಲ್ಲಿದ್ದಲು, ಅಲ್ಯೂಮಿನಿಯಂ ಬಾಕ್ಸೈಟ್ ಮತ್ತು ಕಬ್ಬಿಣದ ಅದಿರು ಇವುಗಳ ಗಣಿಗಾರಿಕೆಗೆ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಕಂಪನಿಗಳಿಗೆ ಪರವಾನಗಿ ನೀಡಿವೆ. coal-mine2005 ರಲ್ಲಿ ಆದಿವಾಸಿಗಳ ಗಮನಕ್ಕೆ ಬಾರದಂತೆ ಛತ್ತೀಸ್‌ಗಡ ಸರ್ಕಾರವು ಎಸ್ಸಾರ್ ಸ್ಟೀಲ್ ಕಂಪನಿಯೊಂದಿಗೆ 7000 ಕೋಟಿ ಬಂಡವಾಳದ ಉಕ್ಕು ತಯಾರಿಕಾ ಘಟಕ ಮತ್ತು ಟಾಟಾ ಕಂಪನಿಯೊಂದಿಗೆ 10000 ಕೋಟಿ ಬಂಡವಾಳದ ಉಕ್ಕಿನ ಕಾರ್ಖಾನೆಗೆ ಒಪ್ಪಂದ ಮಾಡಿಕೊಂಡಿತು. ಈಗ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತಿದ್ದು, ಆದಿವಾಸಿಗಳು ವಾಸಿಸುತ್ತಿರುವ ಹಳ್ಳಿಗಳ ಸುತ್ತ ಮುತ್ತ ಹತ್ತು ಅಡಿ ಎತ್ತರದ ಮಣ್ಣಿನ ದಿಬ್ಬವನ್ನು ನಿರ್ಮಿಸಿ ಅವರ ಸಂಚಾರಕ್ಕೆ ನಿರ್ಬಂಧ ಹೇರುವುದರ ಮೂಲಕ ಅರಣ್ಯದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಸಕಾರಗಳ ಇಂತಹ ಮೂರ್ಖತನದ ನಿರ್ಧಾರಗಳಿಂದಾಗಿ ಆದಿವಾಸಿಗಳು ತಮ್ಮ ರಕ್ಷಣೆಗಾಗಿ ನಕ್ಸಲರ ಮೊರೆ ಹೋಗುತಿದ್ದಾರೆ. ಈ ಪ್ರದೇಶದ ಹೊ, ಹೊರಾನ್, ಕೊಲ್ಸ್, ಮುಂಡಾ, ಗೊಂಡಾ, ಸಂತಾಲ್ ಮುಂತಾದ ಬುಡಕಟ್ಟು ಜನಾಂUದ ಆದಿವಾಸಿಗಳು ಮಾವೋವಾದಿ ನಕ್ಷಲರ ರಕ್ಷಣೆಯಲ್ಲಿ ಬದುಕು ದೂಡುತಿದ್ದಾರೆ.

ಬ್ರಿಟೀಷರಿಂದ ಗೊಂಡ್ವಾನ ಎಂದು ಕರೆಸಿಕೊಳ್ಳುತಿದ್ದ ಈ ವಲಯದ ಬಹುತೇಕ ಅರಣ್ಯ ಪ್ರದೇಶ ಒರಿಸ್ಸಾದ ಮಲ್ಕನ್ ಗಿರಿ ಜಿಲ್ಲೆ ಸೇರಿದಂತೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದ ಒಂಬತ್ತು ಜಿಲ್ಲೆಗಳು ನಕ್ಸಲರ ಹಿಡಿತದಲ್ಲಿವೆ .ಇಲ್ಲಿನ ಅರಣ್ಯ ಪ್ರದೇಶಕ್ಕೆ ಅರಣ್ಯಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ಇರಲಿ, ಭಾರತದ ಸೇನೆ ಕೂಡ ಕಾಲಿಡಲು ಹಿಂಜರಿಯುತ್ತದೆ. ನಕ್ಸಲರೇ ಸೃಷ್ಟಿಸಿಕೊಂಡಿರುವ ಜನಾತನ್ ಸರ್ಕಾರ್ ವ್ಯವಸ್ಥೆ ಈ ಪ್ರದೇಶದಲ್ಲಿ ಜಾರಿಯಲ್ಲಿದೆ.

ದಂಡಕಾರಣ್ಯ ಮತ್ತು ಬಸ್ತರ್ ಆರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ಐದು ನೂರು ಜನರಿಂದ ಹಿಡಿದು ಐದು ಸಾವಿರ ಜನಸಂಖ್ಯೆವರೆಗೆ ಒಂದು ಆಡಳಿತ ಮಂಡಳಿ ಅಸ್ತಿತ್ವದಲ್ಲಿದೆ. ಇಲ್ಲಿ ಒಂಬತ್ತು ವಿಭಾಗಗಳು ಕಾರ್ಯನಿರ್ವಹಿಸುತ್ತವೆ. maoist_jungle_bastar_20091026ಕೃಷಿ, ವ್ಯಾಪಾರ ಮತ್ತು ಉದ್ಯೋಗ, ಆರ್ಥಿಕ ಚಟುವಟಿಕೆ, ನ್ಯಾಯ, ಆಸ್ಪತ್ರೆ, ಜನಸಂಪರ್ಕ, ಶಾಲೆ ಮತ್ತು ಸಾಂಸ್ಕೃತಿಕ ಚಟುವಟಿಕೆ, ಅರಣ್ಯ ಹೀಗೆ ವಿಭಾಗಗಳಿದ್ದು ಇವೆಲ್ಲವೂ ವಲಯ ಸಮಿತಿಯ ಮೇಲ್ವಿಚಾರಣೆಯಲ್ಲಿ ಕಾರ್ಯರ್ವಹಿಸುತ್ತವೆ. ಮೂರು ವಲಯ ಸಮಿತಿಗಳಿಗೆ ಒಂದು ಪ್ರಾದೇಶಿಕ ಸಮಿತಿ ಮಾಗದರ್ಶನ ನೀಡುತ್ತದೆ. ಇಂತಹ ಸಮಿತಿಗಳು ಬಸ್ತರ್, ದಂಡಕಾರಣ್ಯ ಮತ್ತು ಒರಿಸ್ಸಾದ ಮಲ್ಕನ್ ಗಿರಿ ಹಾಗೂ ಮಹಾರಾಷ್ಟ್ರದ ಗಡ್‌ಚಿರೋಲಿ ಅರಣ್ಯಪ್ರದೇಶಗಳಲ್ಲಿಯೂ ಸಹ ಅಸ್ತಿತ್ವದಲ್ಲಿ ಇವೆ.

ನಕ್ಸಲರ ಈ ಜನತಾ ಸರ್ಕಾರದ ಕಾರ್ಯಚಟುವಟಿಕೆಗಳಿಗಾಗಿ ಈ ಪ್ರಾಂತ್ಯದಲ್ಲಿ ಕಾಮಗಾರಿ ಕೆಲಸ ನಿರ್ವಹಿಸುವ ಗುತ್ತಿಗೆದಾರರು, ಅರಣ್ಯ ಗುತ್ತಿಗೆದಾರರು, ಅಬಕಾರಿ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಮತ್ತು ಗಣಿಗಾರಿಕೆ ಹಾಗೂ ಉದ್ದಿಮೆ ನಡೆಸುವ ಕಂಪನಿಗಳಿಂದ ಹಣವನ್ನು ವಸೂಲಿ ಮಾಡಲಾಗುತ್ತದೆ. ನಕ್ಸಲ್ ಸಂಘಟನೆಯ ಹಿರಿಯ ಪದಾಧಿಕಾರಿಯೊಬ್ಬ ದೆಹಲಿ ಮತ್ತು ಪ್ರೆಂಚ್ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ವಾರ್ಷಿಕವಾಗಿ ಐದುಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದಾಗಿ ಹೇಳಿದ್ದಾನೆ. ಇದಕ್ಕೆ ಪೂರಕವಾಗಿ ಜಾರ್ಖಂಡ್ ರಾಜ್ಯದ ಗ್ರಾಮೀಣಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಸಂಪತ್ ಎಂಬುವರು ಜಾರ್ಖಂಡ್ ರಾಜ್ಯವೊಂದರಲ್ಲಿ ವಾರ್ಷಿಕವಾಗಿ ಐನೂರು ಕೋಟಿ ರೂಪಾಯಿಗಳನ್ನು ನಕ್ಸಲ್ ಸಂಘಟನೆಗಳು ವಸೂಲಿ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಈ ರೀತಿ ಸಂಗ್ರಹವಾದ ಹಣವನ್ನು ತಮ್ಮ ಹಿಡಿತದಲ್ಲಿರುವ ಹಳ್ಳಿಗಳ ಅಭಿವೃದ್ಧಿ ಮತ್ತು ಶಸ್ತ್ರಾಸ್ತ್ರ ಖರೀದಿಗಾಗಿ ನಕ್ಸಲರು ಉಪಯೋಗಿಸುತಿದ್ದಾರೆ. ದಂಡಕಾರಣ್ಯದಲ್ಲಿ (ನಾಲ್ಕು ರಾಜ್ಯಗಳು ಸೇರಿ) ಹತ್ತುಸಾವಿರ ಶಸ್ತ್ರಸಜ್ಜಿತ ನಕ್ಸಲ್ ಯೋಧರಿದ್ದು ಇವರಿಗೆ ಸಹಾಯಕರಾಗಿ ಸಮವಸ್ತ್ರವಿಲ್ಲದ ಸುಮಾರು 90000 ನಕ್ಸಲರು ಬೆಂಬಲವಾಗಿ ನಿಂತಿದ್ದಾರೆ.

ನಕ್ಸಲ್ ಸಂಘಟನೆಯಲ್ಲಿ ಕೇಂದ್ರ ಸಮಿತಿಯೊಂದು ಇದ್ದು ಈ ಸಮಿತಿ ಸಂಘಟನೆಯ ಸರ್ವೋಚ್ಛ ಅಂಗವಾಗಿದೆ. ನಲವತ್ತು ಸದಸ್ಯರಿರುವ ಸೆಂಟ್ರ್ರಲ್ ಕಮಿಟಿ ಎಂದು ಕರೆಯಲಾಗುವ ಈ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ವ್ಯಕ್ತಿ ಮುಖ್ಯನಾಯಕನಾಗಿರುತ್ತಾನೆ. (ಈಗ ಗಣಪತಿ ಸರ್ವೋಚ್ಚ ನಾಯಕ.) ನಂತರ ಕೇಂದ್ರ ಸಮಿತಿಯ ಅಡಿಯಲ್ಲಿ ಬರುವ ಪಾಲಿಟ್ ಬ್ಯೂರೋ ಎಂಬ ಸಮಿತಿಯಿದ್ದು ಇದಕ್ಕೆ ಹದಿನಾಲ್ಕು ಮಂದಿ ಸದಸ್ಯರಾಗಿರುತ್ತಾರೆ. ನಕ್ಸಲ್ ಸಂಘಟನೆಯ ಎಲ್ಲಾ ವಿಷಯಗಳ ಕುರಿತಂತೆ ಪಾಲಿಟ್ ಬ್ಯೂರೋ ಸದಸ್ಯರು ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡುತ್ತಾರೆ.maoist-mass-meeting ಅಂತಿಮ ನಿರ್ಧಾರ ಕೇಂದ್ರ ಸಮಿತಿ ತೆಗೆದುಕೊಳ್ಳುತ್ತದೆ. ಪಾಲಿಟ್ ಬ್ಯೂರೊ ಅಂಗದ ಪ್ರತಿಯೊಬ್ಬ ಸದಸ್ಯ ಒಂದೊಂದು ವಲಯದ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುತ್ತಾನೆ. ಇತ್ತೀಚೆಗೆ ಸಂಘಟನೆಯ ಸದಸ್ಯರ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದು, ಒರಿಸ್ಸಾ, ಜಾರ್ಖಂಡ್ ಮುಂತಾದ ಅರಣ್ಯ ಪ್ರದೇಶಗಳಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದ ಯುವಕರು ತಾವೇ ನಾಯಕರೆಂದು ಸ್ವಯಂ ಘೋಷಿಸಿಕೊಂಡು ನಕ್ಸಲ್ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇಂತಹವರಲ್ಲಿ ಒರಿಸ್ಸಾದ ಸವ್ಯಸಾಚಿಪಾಂಡ ಎಂಬಾತ ಕೂಡ ಮುಖ್ಯನಾದವನು.

ನಕ್ಸಲರ ಗುರಿ ಮತ್ತು ಉದ್ದೇಶ ಆದಿವಾಸಿ ಮತ್ತು ಅರಣ್ಯವಾಸಿ ಬುಡಕಟ್ಟು ಜನರ ಕಲ್ಯಾಣ ಎಂಬುದು ನಿಜವಾದರೂ, ಇದರಿಂದ ಆದಿವಾಸಿಗಳು ನೆಮ್ಮದಿಯಿಂದ ಬಾಳುತಿದ್ದಾರೆ ಎಂಬುದು ಮಾತ್ರ ಕೇವಲ ಅರ್ಧ ಸತ್ಯ. ಸರ್ಕಾರ ಮತ್ತು ನಕ್ಸಲರ ನಡುವಿನ ಸಂಘರ್ಷದಲ್ಲಿ ಸಿಲುಕಿ ಹಾಕಿಕೊಂಡಿರುವ ಅಮಾಯಕ ಆದಿವಾಸಿಗಳ ಸ್ಥಿತಿ “ಅತ್ತ ದರಿ, ಇತ್ತ ಪುಲಿ” ಎಂಬಂತಾಗಿದೆ. ಭಾರತದ ಇತರೆ ಪ್ರದೇಶಗಳಿಗೆ ಹೋಲಿಸಿದರೆ, ದಂಡಕಾರಣ್ಯ ಮತ್ತು ಬಸ್ತರ್ ಅರಣ್ಯ ಪ್ರದೇಶದಲ್ಲಿ ಹಿಂಸೆ ಮಿತಿ ಮೀರಿದೆ. ಇದಕ್ಕೆ ಸರ್ಕಾರದ ಅವಿವೇಕದ ನಿರ್ಣಯ ಕೂಡ ಕಾರಣವಾಗಿದೆ. ನಕ್ಸಲರನ್ನು ನಿಗ್ರಹಿಸಲು ಆದಿವಾಸಿಗಳನ್ನು ಎತ್ತಿ ಕಟ್ಟುವುದರ ಮೂಲಕ ಅವರ ಕೈಗೆ ಬಂದೂಕ ಕೊಟ್ಟು ಸ್ಥಾಪಿಸಿದ “ಸಲ್ವಜುಡಂ” ಎಂಬ ಸರ್ಕಾರದ ಕೃಪಾಪೋಷಿತ ಸಂಘಟನೆ ಆದಿವಾಸಿಗಳ ಪಾಲಿಗೆ ಮರಣಶಾಸನವಾಗಿದೆ.

Leave a Reply

Your email address will not be published. Required fields are marked *