Daily Archives: December 16, 2012

ಮಡೆಸ್ನಾನದ ಮನಸ್ಸುಗಳು ಮಲಿನವಾಗಿವೆ


-ಚಿದಂಬರ ಬೈಕಂಪಾಡಿ


 

ಮಡೆ ಸ್ನಾನ ಈಗಾಗಲೇ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಕುಕ್ಕೆ ಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಮಡೆಸ್ನಾನ ಪದ್ಧತಿಗೆ ಈಗ ಜಾಗತಿಕವಾದ ಪ್ರಚಾರ ಸಿಕ್ಕಿದೆ. ಜನರ ಖಾಸಗಿ ಬದುಕಿಗೆ ಸಂಬಂಧಿಸಿದ ಈ ಆಚರಣೆ ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿರುವುದು ಬದಲಾದ ಕಾಲಘಟ್ಟದ ಮನಸ್ಥಿತಿ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಲೌಕಿಕ ಜಂಜಡ, ಕಷ್ಟ ಕೋಟಲೆಗಳನ್ನು ಮಡೆಸ್ನಾನ ಹರಕೆ ಹೊತ್ತುಕೊಂಡು ಅಲೌಕಿಕ ಶಕ್ತಿಯ ಮೂಲಕ ಪರಿಹರಿಸಿಕೊಳ್ಳುವುದು ಸಾಧ್ಯ ಎನ್ನುವ ಬಲವಾದ ನಂಬಿಕೆಯನ್ನು ಪೋಷಿಸಿಕೊಂಡು ಬರಲಾಗಿದೆ. ಈ ಹರಕೆ ಹೇಳಿಕೊಳ್ಳುವವರು ಕೆಳವರ್ಗದ made-snanaಜನರು ಅದರಲ್ಲೂ ಅನಕ್ಷರತೆ, ಬಡತನಗಳ ಸುಳಿಯಲ್ಲಿ ನಲುಗಿದವರು ಎನ್ನುವುದು ಮುಖ್ಯ. ಯಾವೆಲ್ಲಾ ಸಮಸ್ಯೆಗಳಿಗೆ ಈ ಹರಕೆ ಹೊರುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ನಿಖರವಾಗಿ ಇಂಥ ಕಷ್ಟಗಳಿಗೇ ಎಂದೇನೂ ಹೇಳುವಂತಿಲ್ಲ. ಮಗಳಿಗೆ ಮದುವೆಯಾಗದಿದ್ದರೂ ಮಡೆಸ್ನಾನದ ಹರಕೆ, ಗುಣವಾಗದ ಕಾಯಿಲೆ ಎನ್ನುವುದು ಗೊತ್ತಾದರೂ ಇದೇ ಹರಕೆ, ಚರ್ಮ ರೋಗಗಳು ಗುಣವಾಗಲೆಂದು ಇದೇ ಹರಕೆ, ಉದ್ಯೋಗ ಸಿಗಲೆಂದೂ ಮಡೆಸ್ನಾನದ ಹರಕೆ ಹೀಗೆ ಪ್ರತಿಯೊಂದು ಕಷ್ಟಕ್ಕೂ ಮಡೆಸ್ನಾನದ ಹರಕೆ ಹೇಳಿಕೊಂಡರೆ ಪರಿಹಾರವಾಗುತ್ತದೆ ಎನ್ನಿಸಿದರೆ ಸಾಕು ಹರಕೆ ಹೊತ್ತುಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಸಿತು ಅಂತಾದರೆ ಹರಕೆ ತೀರಿಸುತ್ತಾರೆ, ಸಿದ್ಧಿಸದಿದ್ದರೆ ಹರಕೆ ತೀರಿಸಿದ ಮೇಲೆ ಸಿದ್ಧಿಸುತ್ತದೆ ಎನ್ನುವ ನಂಬಿಕೆಯಿಂದ ಮಡೆಸ್ನಾನ ಹರಕೆ ತೀರಿಸುವುದೂ ಇದೆ. ಆದ್ದರಿಂದ ಮಡೆಸ್ನಾನಕ್ಕೆ ಮಡೆಸ್ನಾನದ ಮೇಲಿನ ನಂಬಿಕೆಯೇ ಉತ್ತರ ಹೊರತು ಬೇರೇನೂ ಹೇಳುವಂತಿಲ್ಲ.

ಮಡೆಸ್ನಾನ ಹರಕೆಯಿಂದ ಸರ್ವರೋಗ ಗುಣವಾಗಿವೆ, ಬದುಕಿನಲ್ಲಿ ಕಷ್ಟಕೋಟಲೆಗಳೆಲ್ಲವೂ ಪರಿಹಾರವಾಗಿವೆ ಎನ್ನುವುದು ಯಾರೆಲ್ಲಾ ಹರಕೆ ಹೊತ್ತು, ಹರಕೆ ತೀರಿಸಿದ್ದಾರೆ ಅವರೇ ಹೇಳಬೇಕು. ಒಂದು ವೇಳೆ ಹೀಗಾಗಿದ್ದರೆ ನಿಜಕ್ಕೂ ಅದ್ಭುತ. ಈ ಜಗತ್ತಿನಲ್ಲಿ ಮನುಷ್ಯರಿಗೆ ಯಾವ ರೋಗರುಜಿನಗಳು ಬಾರದಂತೆ ತಡೆಗಟ್ಟುವ ಪದ್ಧತಿಯೆಂದು ಮಡೆಸ್ನಾನವನ್ನು ಜಾಗತೀಕರಣಗೊಳಿಸಬಹುದು. ಆಸ್ಪತ್ರೆಗಳು, ಔಷಧಿ, ವೈದ್ಯರು ಅನಗತ್ಯವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವಂಥ ವ್ಯವಸ್ಥೆಗೂ ಮೊರೆ ಹೋಗಬಹುದು. ಈಗ ಇರುವ ವೈದ್ಯಕೀಯ ಕಾಲೇಜುಗಳನ್ನು ಮುಚ್ಚಿ ಮಡೆಸ್ನಾನದಂಥ ಪದ್ಧತಿಯನ್ನು ಹೇಗೆ ಆಚರಿಸಬೇಕು ಎನ್ನುವುದನ್ನು ಕಲಿಸಲು ಬಳಕೆ ಮಾಡಿಕೊಳ್ಳಬಹುದು. ದುರಂತವೆಂದರೆ ಮಡೆಸ್ನಾನ ಪದ್ಧತಿ ಬೇಕೆಂದು ಹೇಳುವ ಮನಸ್ಸುಗಳು ಮಡೆಸ್ನಾನ ಮಾಡಿ ಬದುಕು ರೂಪಿಸಿಕೊಂಡವುಗಳಲ್ಲ. ಮಡೆಸ್ನಾನ ಮಾಡುವುದನ್ನು ನೋಡಿಯೇ ಆನಂದಿಸಿದಂಥವು. ಎಂಜಲು ಎಲೆಗಳ ಮೇಲೆ ಉರುಳುತ್ತಿರುವಾಗ ಪಕ್ಕದಲ್ಲಿ ನಿಂತು ತಾವೇ ಉಂಡು ಬಿಸಾಡಿದ ಎಲೆಗಳು ಅದೆಷ್ಟು ಪವಿತ್ರವೆಂದು ಹೆಮ್ಮೆಪಟ್ಟುಕೊಂಡ ಮನಸ್ಸುಗಳು. ಈ ಪದ್ಧತಿ ಅನೂಚಾನವಾಗಿ ಆಚರಣೆಯಲ್ಲಿರಬೇಕು ಎಂದು ತುಡಿಯುವ ಮನಸ್ಸುಗಳು.

ಮಡೆಸ್ನಾನಕ್ಕೆ ದೈವೀಶಕ್ತಿಯನ್ನು ತುಂಬಿರುವ ಮನಸ್ಸುಗಳಿಗೆ ಯಾಕೆ ತಾವೂ ಈ ಪದ್ಧತಿಯನ್ನು ಆಚರಿಸಬೇಕು ಅನ್ನಿಸುವುದಿಲ್ಲ? ಬಡವರು, ಹಿಂದುಳಿದ ಸಮುದಾಯಗಳು ಮಾತ್ರ ಇದನ್ನು ಪೇಟೆಂಟ್ ಮಾಡಿಕೊಳ್ಳುವುದಕ್ಕೆ ಕಾರಣವೇನು? ಈ ಪ್ರಶ್ನೆಗಳಿಗೆ ಈ ಪದ್ಧತಿಯನ್ನು ಜೀವಂತವಾಗಿಡುವಂಥ ಮನಸ್ಸುಗಳು ಉತ್ತರ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಪ್ರಶ್ನೆ ಕೇಳಿಯೇ ಗೊತ್ತು ಹೊರತು ಉತ್ತರ ಹೇಳುವ ಅನಿವಾರ್ಯತೆ ಬಂದಿಲ್ಲ. ಜೀತ ಮಾಡಿಸುವುದು, ಜಗಲಿಯ ಹೊರಗೆ ನಿಲ್ಲಿಸಿ ಅನ್ನ, ನೀರನ್ನು ತೆಂಗಿನ ಚಿಪ್ಪು, ಎಲೆಗಳಲ್ಲಿ ಕುಡಿಸಿ, madesnana-shivaram-beatenತಿನ್ನಿಸಿಯೇ ಗೊತ್ತು ಹೊರತು ಬೊಗಸೆಗೆ ನೀರು ಸುರಿಸಿಕೊಂಡು ಕುಡಿದ ನೋವು ಗೊತ್ತಿಲ್ಲ. ಹುಟ್ಟಿದ ಮಗುವಿಗೆ ನಾಮಕರಣ ಮಾಡಲು ರಾಮ, ಕೃಷ್ಣ, ಗೋವಿಂದ, ಹರಿಶ್ಚಂದ್ರ, ಸಾವಿತ್ರಿ, ಸೀತೆ, ರಾಧೆ ಎನ್ನುವ ಹೆಸರು ಹೇಳಿದ ಮನಸ್ಸುಗಳಲ್ಲ. ಕರಿಯ, ತಿಮ್ಮ, ಕೊರಗ, ನಿಂಗಿ ಮುಂತಾದ ಹೆಸರನ್ನೇ ಕರೆಯಲು ಹುಕುಂ ನೀಡಿದ ಮನಸ್ಸುಗಳು.

ಆದರೆ ಈಗ ಕಾಲ ಬದಲಾಗಿದೆ ಎನ್ನುವುದನ್ನು ಕರಿಯ, ತಿಮ್ಮ, ಕೊರಗ, ನಿಂಗಿಯ ಮೊಮ್ಮಕ್ಕಳು ಅರಿತಿದ್ದಾರೆ. ತನ್ನಜ್ಜ ಲಂಗೋಟಿಯಲ್ಲೇ ಕಾಲ ಕಳೆದರೂ ಅಪ್ಪ ಕೊನೆಗಾಲದಲ್ಲಿ ಪಂಚೆ ಹಾಕಿಕೊಳ್ಳುತ್ತಿದ್ದರು, ತಾನು ಪ್ಯಾಂಟ್ ಧರಿಸುತ್ತಿದ್ದೇನೆ, ಮಗನಿಗೆ ಮಾಡರ್ನ್ ಡ್ರೆಸ್ ಕೊಡಿಸುವುದು ಅದೆಷ್ಟು ಅನಿವಾರ್ಯ ಎನ್ನುವುದನ್ನು ಅರ್ಥಮಾಡಿಕೊಂಡಿದ್ದಾನೆ. ಆದ್ದರಿಂದಲೇ ಅವನಿಗೆ ಮಡೆಸ್ನಾನ ಹರಕೆ ಹೇಳುವುದರಲ್ಲಿ ನಂಬಿಕೆಯೂ ಇಲ್ಲ, ಅದು ಅವನಿಗೆ ಅನಿವಾರ್ಯವೂ ಆಗಿಲ್ಲ. ಒಂದು ಕಾಲದ ಅನಿವಾರ್ಯಭಾಗವಾಗಿ ಒಂದು ವರ್ಗ ಆಚರಿಸುತ್ತಿದ್ದ ಪದ್ಧತಿಯನ್ನೇ ಈಗಲೂ ಆಚರಿಸಬೇಕು ಎನ್ನುವುದು ನೀನು ಬದಲಾಗಬೇಡವೆಂದು ಕಟ್ಟಿ ಹಾಕುವಂಥ ಪ್ರಯತ್ನವೆಂದು ಯಾಕೆ ಭಾವಿಸಬಾರದು?

ಜಾಗತೀಕರಣ, ಉದಾರೀಕರಣವನ್ನು ಆವಾಹಿಸಿಕೊಂಡೇ ಬೆಳೆಯುತ್ತಿರುವಾಗ ಮತ್ತು ಅದು ಬದುಕಿನ ಅನಿವಾರ್ಯತೆಯಾಗಿರುವಾಗ ಆಚರಣೆಗಳು, ಪದ್ಧತಿಗಳು ಮಾತ್ರ ಯಾಕೆ ಇನ್ನೂ ಹೊಸತನ ಪಡೆದುಕೊಂಡಿಲ್ಲ? ಅಥವಾ ಹೊಸತನ ಪಡೆದುಕೊಳ್ಳಬಾರದು ಯಾಕೆ? ಮಡೆಸ್ನಾನ ಮಾಡದಿದ್ದರೆ
ಸಂಪ್ರದಾಯಕ್ಕೆ ಅಪಚಾರ ಮಾಡಿದಂತಾಗುತ್ತದೆ ಎನ್ನುವ ಮನಸ್ಸುಗಳಿಗೆ ತಾವೇ ಆ ಪದ್ಧತಿಯನ್ನು ಇನ್ನೂ ಶಾಸ್ತ್ರೋಕ್ತವಾಗಿ ಮಾಡಿದರೆ ಹೆಚ್ಚಿನ ಪುಣ್ಯ ಸಂಪಾದನೆ ಮಾಡಬಹುದಲ್ಲವೇ? ಹಣ, ಕೀರ್ತಿ ಬೇಕಾದರೆ ಇಂಥ ಪುಣ್ಯವನ್ನು ಯಾಕೆ ಬೇಡವೆನ್ನಬೇಕು?

ಬಹುಷ: ಕಾಲ ಅದೆಷ್ಟು ಬದಲಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಸರಿಯಾದೀತು. ಸಾಮಾನ್ಯವಾಗಿ ಕರಾವಳಿ ಭಾಗವನ್ನು ಮನಸ್ಸಿನಲ್ಲಿಟ್ಟು ಹೇಳುವುದಾದರೆ ಉತ್ತರಕ್ರಿಯೆಯಲ್ಲಿ ಪಿಂಡ ಬಿಡುವುದು, ಸಾರ್ವಜನಿಕರಿಗೆ ತಿಥಿ ಊಟ ಹಾಕುವುದು ಎಲ್ಲಾ ಕಡೆಗಳಂತೆಯೇ. ದೇಹತ್ಯಜಿಸಿದ ಆತ್ಮವನ್ನು ಉತ್ತರಕ್ರಿಯೆಯ ದಿನ ರಾತ್ರಿ ಮನೆಗೆ ಆಹ್ವಾನಿಸಿ ಮಾಂಸಾಹಾರ (ಇದು ಮಾಂಸಾಹಾರಿಗಳ ಕುಟುಂಬ) ಬಡಿಸಿ, ಮದ್ಯ ಸಹಿತ ಅವರ ಇಷ್ಟದ ತಿನಿಸುಗಳನ್ನು ಇಟ್ಟು ಎರಡು ನಿಮಿಷಗಳ ಕಾಲ ಮನೆಯವರೆಲ್ಲರೂ ಮನೆಯ ಬಾಗಿಲು ಭದ್ರಪಡಿಸಿಕೊಂಡು ಹೊರಗಿದ್ದು ನಂತರ ಬಾಗಿಲು ತೆರೆದು ಬಡಿಸಿದ್ದೆಲ್ಲವನ್ನೂ ಎಲ್ಲರಿಗೂ ಹಂಚಿ ಊಟ ಮಾಡುವ ಸಂಪ್ರದಾಯವಿದೆ.

ಈಗ ಯಾರಿಗೂ ಬಿಡುವಿಲ್ಲ, ಎಲ್ಲರಿಗೂ ಅರ್ಜೆಂಟ್, ಕೆಲಸದ ಒತ್ತಡ, ಆದರೆ ಸಂಪ್ರದಾಯವನ್ನು ಬಿಡುವಂತಿಲ್ಲ. ಆದರೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ಸಂಜೆಯೊಳಗೆ ಫ್ಲೈಟ್ ಹತ್ತಬೇಕು, ರಾತ್ರಿಯೊಳಗೆ ದುಬೈ ವಿಮಾನವನ್ನು ಮುಂಬೈನಲ್ಲಿ ಹತ್ತಬೇಕು. ಆದರೆ ಹಿರಿ ಮಗ ತಾನೇ ಆಗಿರುವುದರಿಂದ ಉತ್ತರಕ್ರಿಯೆಗೆ ಇರಲೇಬೇಕು, ರಾತ್ರಿಯೂ ಇರುವುದು ಕಡ್ಡಾಯ. ಆದರೆ ತನ್ನ ಕೆಲಸ, ಮೀಟಿಂಗ್, ಫ್ಯಾಮಿಲಿ ಜೊತೆ ರಾತ್ರಿಗೆ ಇರಲೇ ಬೇಕು. ಅಂಥ ಸಂದರ್ಭದಲ್ಲಿ ರಾತ್ರಿಯ ಕಾರ್ಯಕ್ರಮವನ್ನು ಮಧ್ಯಾಹ್ನವೇ ಉತ್ತರ ಕ್ರಿಯೆ ಜೊತೆಗೇ ಕ್ಲಬ್ ಮಾಡುವುದು. ನಾನ್ ವೆಜ್, ವೆಜ್ ಎರಡೂ ಇರಬೇಕು, ಕ್ಯಾಟರಿಂಗ್ ವ್ಯವಸ್ಥೆ, ಕುಳಿತು ಉಣ್ಣಲು ಕಷ್ಟ, ಬಫೆ ಸಿಸ್ಟಮ್. ರಾತ್ರಿ ಮಾಡಬೇಕಾದ ಸಂಪ್ರದಾಯಗಳನ್ನು ಮಧ್ಯಾಹ್ನವೇ ಮಾಡಿಬಿಡುವುದು. ಇದರಿಂದ ಎಲ್ಲರಿಗೂ ಅನುಕೂಲ. ಇದು ನಿಧಾನವಾಗಿ ಜನಪ್ರಿಯವಾಗುತ್ತಿದೆ, ಇದಕ್ಕೇನೆನ್ನುತ್ತೀರಿ?

ಈ ಬದಲಾವಣೆಯನ್ನು ಒಪ್ಪಿಕೊಳ್ಳಬೇಕೇ, ಒಪ್ಪಿಕೊಳ್ಳಬಾರದೇ? ಅಥವಾ ಬದಲಾವಣೆಯೊಂದಿಗೆ made-snanaಸಂಪ್ರದಾಯದಲ್ಲೂ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವೇ? ಮಡೆಸ್ನಾನದ ವಿವಾದದ ನಂತರ ಪತ್ತೆ ಹಚ್ಚಲಾದ ಎಡೆಸ್ನಾನ ಈ ಬದಲಾವಣೆಯ ಉತ್ಪನ್ನವಾಗಿರಬಹುದೇ?

ಮಡೆಸ್ನಾನ ಪದ್ಧತಿಯ ಆಚರಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರಂತೆ. ಪಟಾಕಿ ಸಿಡಿಸಿ ಸಂಭ್ರಮಿಸಿರುವುದಕ್ಕಿಂತಲೂ ಅಂಥ ಸಂಭ್ರಮಕ್ಕೆ ಕಾರಣವಾದ ಕಾಣದ ಮನಸ್ಸುಗಳ ಚಿತಾವಣೆಯನ್ನು ಅರ್ಥಮಾಡಿಕೊಳ್ಳಬೇಕು.

ಮಡೆಸ್ನಾನದ ಮನಸ್ಸುಗಳ ಮಲಿನತೆ ತೊಳೆಯಬೇಕು. ಅಂಥ ಪ್ರಕ್ರಿಯೆಗೆ ಈಗ ಕಾಲ ಪಕ್ವಗೊಂಡಿದೆ.

ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ನಿಜವಾದ ರಾಜಕೀಯ


-ಚಿದಂಬರ ಬೈಕಂಪಾಡಿ


 

ಬಿಜೆಪಿ, ಕೆಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭಿನ್ನ ಅಂದುಕೊಂಡರೂ ಅವೆಲ್ಲವುಗಳ ನಡೆಗಳು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದೇ ಆಗಿರುತ್ತದೆ, ಅದೇ ಅವುಗಳ ಪರಮ ಗುರಿಯೂ ಆಗಿರುತ್ತದೆ.

ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ತೊರೆದಾಗಲೇ ಬಿಜೆಪಿ ಸರ್ಕಾರ ಮುಳುಗಿತು ಅಂದುಕೊಂಡಿದ್ದರು ಸಾಮಾನ್ಯ ಜನರು. ಯಾಕೆಂದರೆ ಯಡಿಯೂರಪ್ಪ ರಾಜೀನಾಮೆ ನೀಡಿ ತಮ್ಮವರಿಂದಲೂ ರಾಜೀನಾಮೆ ಕೊಡಿಸಿಬಿಡುತ್ತಾರೆ ಎನ್ನುವ ಸರಳ ಲೆಕ್ಕಾಚಾರ. ಇಂಥ ಲೆಕ್ಕಾಚಾರಗಳ ಹಿಂದೆ ಯಾವುದೇ ಗಹನವಾದ ವಿಚಾರವಿರುವುದಿಲ್ಲ. ಸಾಮಾನ್ಯ ಜನರು ಹೀಗೆಯೇ ಯೋಚಿಸಬೇಕೇ ಹೊರತು ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದರೆ ಸಾಮಾನ್ಯರಾಗಿಯೇ ಉಳಿಯುತ್ತಿರಲಿಲ್ಲ ಎನ್ನುವ ಅರಿವು ರಾಜಕಾರಣಿಗಳಿಗಿದೆ.

ಬುದ್ಧಿವಂತರು ಹೇಗೆ ಸೂಕ್ಷ್ಮವಾಗಿ ಹೆಜ್ಜೆಗಳನ್ನಿಡುತ್ತಾರೆ ಎನ್ನುವುದಕ್ಕೆ ಯಡಿಯೂರಪ್ಪ ಅವರ ನಡೆಗಳನ್ನು ಗಮನಿಸಿ. yeddyurappa-kjpಬಿಜೆಪಿ ಸರ್ಕಾರವನ್ನು ಬೀಳಿಸುವುದು ಯಡಿಯೂರಪ್ಪ ಅವರಿಗೆ ಚಿಟಿಕೆ ಹೊಡೆದಷ್ಟು ಸುಲಭವಿತ್ತು. ಹಾಗೆ ಮಾಡಲಿಲ್ಲ, ಮಾಡುವುದೂ ಇಲ್ಲ. ಯಾಕೆಂದರೆ ಅವರಿಗೆ ನಾಳಿನ ಚಿಂತೆಯಿದೆ. ಜಾತಿಯ ಮತಗಳ ಗಂಟಿನ ಮೇಲೆ ನೋಟವಿದೆ. ಅನುಕಂಪದ ಅಲೆಯನ್ನು ಆವಾಹಿಸಿಕೊಂಡಿದ್ದಾರೆ. ಸರ್ಕಾರ ಉರುಳಿಸಿದರೆ ಸ್ವಾರ್ಥ ಎನ್ನುವ ಹಣೆಪಟ್ಟಿ ಹಚ್ಚುತ್ತಾರೆ ಎನ್ನುವ ಭಯ. ಇವೆಲ್ಲ ಆರೋಪಗಳು ತಮ್ಮನ್ನು ಸುತ್ತಿಕೊಳ್ಳಬಾರದು ಎನ್ನುವ ಮುಂದಾಲೋಚನೆ ಯಡಿಯೂರಪ್ಪ ಅವರಿಗಿದ್ದುದರಿಂದಲೇ ಪ್ರತೀ ಹಂತದಲ್ಲೂ ನನ್ನ ಬೆಂಬಲಿಗರ ತಂಟೆಗೆ ಬರಬಾರದು ಎನ್ನುವ ಎಚ್ಚರಿಕೆ ಕೊಡುತ್ತಲೇ ಬಂದರು.

ಯಡಿಯೂರಪ್ಪ ಅವರ ನಡೆಗಳನ್ನು ಅವರ ಗರಡಿಯಲ್ಲೇ ಪಳಗಿದ ಕೆ.ಎಸ್.ಈಶ್ವರಪ್ಪ ಅವರಿಗಿಂತ ಹೆಚ್ಚು ತಿಳಿದಿರುವುದು ಅನ್ಯರಿಗೆ ಸಾಧ್ಯವಿಲ್ಲ. ಮನೆಯ ವಾತಾವರಣದಲ್ಲೇ ಇಬ್ಬರೂ ರಾಜಕೀಯದಲ್ಲಿ ಅನೇಕ ದಾಳಗಳನ್ನು ಜೊತೆಯಾಗಿ ಉರುಳಿಸಿದ್ದವರು. ಒಬ್ಬರನ್ನೊಬ್ಬರು ರಾಜಕೀಯವಾಗಿ ಆಂತರಿಕವಾಗಿ ದ್ವೇಷಿಸುತ್ತಲೇ ಶಿವಮೊಗ್ಗವನ್ನು ಆವರಿಸಿಕೊಂಡು ಬೆಳೆದವರು. ಈ ಕಾರಣದಿಂದಲೇ ಯಡಿಯೂರಪ್ಪ ಅವರನ್ನು ‘ಪೇಪರ್ ಟೈಗರ್’ ಎಂದು ಕರೆದರು. ಸರ್ಕಾರವನ್ನು ಬೀಳಿಸಿ ಎನ್ನುವ ಪಂಥಾಹ್ವಾನ ನೀಡಿದರು.

ಹಾವೇರಿಯ ಕೆಜೆಪಿ ಸಮಾವೇಶದಲ್ಲಿ ಶಾಸಕರು ಭಾಗವಹಿಸಬಾರದು, ಯಡಿಯೂರಪ್ಪ ಅವರ ಬಲಕುಂದಿಸಬೇಕು shettar-yedi_eshwarಎನ್ನುವ ಸ್ಪಷ್ಟವಾದ ಗುರಿ ಬಿಜೆಪಿಗಿತ್ತು. ಈ ಕಾರಣದಿಂದಲೇ ಹಾವೇರಿ ಸಮಾವೇಶಕ್ಕೆ ಹೋದರೆ ಶಿಸ್ತು ಕ್ರಮ ಎನ್ನುವ ಬೆದರಿಕೆ ಬಿಜೆಪಿ ನಾಯಕರಿಂದ ಬಂದಿತ್ತು. ಸಜ್ಜನ್ ಅವರ ಮನೆಯಲ್ಲಿ ಆಯೋಜಿಸುವ ಉಪಹಾರ ಕೂಟದಲ್ಲೀ ಭಾಗವಹಿಸಿದರೂ ಕ್ರಮ ಜರಗಿಸುವ ಹೇಳಿಕೆ ಬಿಜೆಪಿಯಿಂದ ಬಂದಿತ್ತು.

ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರನ್ನು ಸಾಮಾವೇಶಕ್ಕೆ ಬನ್ನಿ ಎಂದು ಬಹಿರಂಗವಾಗಿ ಕರೆದಿರಲಿಲ್ಲ, ಬರಬೇಡಿ ಎನ್ನುವ ಸಂದೇಶ ನೀಡಿದ್ದರು. ಉಪಹಾರ ಕೂಟದಲ್ಲಿ ಐದಕ್ಕೂ ಹೆಚ್ಚು ಸಚಿವರು ಭಾಗವಹಿಸಿ ಸಮಾವೇಶಕ್ಕೆ ಗೈರಾಗಿದ್ದರು.ಹದಿನಾಲ್ಕು ಮಂದಿ ಶಾಸಕರು, ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಸಮಾವೇಶದ ವೇದಿಕೆ ಹತ್ತಿಸಿದರು. ಯಡಿಯೂರಪ್ಪ ಅವರೇ ಹೇಳಿಕೊಂಡಂತೆ ತಮಗಿರುವ 50 ಕ್ಕೂ ಹೆಚ್ಚು ಶಾಸಕರು ಸಮಾವೇಶದಿಂದ ದೂರ ಉಳಿದಿದ್ದರು.

ಹಾವೇರಿ ಸಮಾವೇಶ ನಡೆಯುತ್ತಿರುವಾಗಲೇ ಸಮಾವೇಶದ ವೇದಿಕೆ ಹತ್ತಿದವರ ವಿರುದ್ಧ ಕ್ರಮ ಎಂದು ಬಿಜೆಪಿ ನಾಯಕರು ಬ್ರೇಕಿಂಗ್ ನ್ಯೂಸ್ ಕೊಟ್ಟರು. ಈ ಹಂತದಲ್ಲಿ ಬಿಜೆಪಿ ಸರ್ಕಾರ ಮುಳುಗಿತು ಎಂದೇ ಜನ ಭಾವಿಸಿಬಿಟ್ಟಿದ್ದರು. ಯಾಕೆಂದರೆ ಕೆ.ಎಸ್.ಈಶ್ವರಪ್ಪ ಅವರು ಕೊಟ್ಟ ಹೇಳಿಕೆಯಲ್ಲಿ ಅಂಥ ಮೊನಚಿತ್ತು. ಸರ್ಕಾರ ಬಲಿಕೊಡಲೂ ಸಿದ್ಧವೆಂದು ಮಾಜಿಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಅಬ್ಬರಿಸಿದ್ದರು. ಡಿಸೆಂಬರ್ 10 ರಂದು ವಿಧಾನ ಸಭೆಯ ಅಧಿವೇಶನವೇ ನಡೆಯುವುದು ಅನುಮಾನ, ಎಲ್ಲರೂ ರಾಜೀನಾಮೆ ಕೊಡುತ್ತಾರೆ ಎನ್ನುವ ನಂಬಿಕೆ ಹುಟ್ಟಿಸಿದ್ದರು. ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿ, ಕೆಜೆಪಿ ವಿರುದ್ಧ ಹರಿಹಾಯ್ದರು. ಅವರು ಪ್ರತಿಪಕ್ಷದ ನಾಯಕರಾಗಿದ್ದ ಕಾರಣ ಇದೆಲ್ಲವೂ ನಿರೀಕ್ಷಿತವೇ ಆಗಿತ್ತು. ಶೆಟ್ಟರ್ ರಾಜೀನಾಮೆಗೆ ಮಾಡಿದ ಒತ್ತಾಯವೂ ಸಾಂದರ್ಭಿಕ. ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿ ತಮಿಳುನಾಡಿಗೆ ನೀರು ಬಿಡುವುದಿಲ್ಲ, ಒಂದು ವೇಳೆ ಬಿಡುವುದಿದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಅಂದಿದ್ದರು. ಆದರೆ ಅದೇ ದಿನ ರಾತ್ರಿಯಿಂದಲೇ ತಮಿಳುನಾಡಿಗೆ ನೀರು ಹರಿಸಿ ದೆಹಲಿಯಲ್ಲಿ ಸಂಸದರ ಸಭೆ ನಡೆಸಿದರು. ಮಧ್ಯಾಹ್ನದ ವೇಳೆಗೆ ಕೆಜೆಪಿಯಲ್ಲಿ ಗುರುತಿಸಿಕೊಂಡ ಸಂಸದ ಬಸವರಾಜು ಮತ್ತು ಸಹಕಾರಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡುವ ಮಾಹಿತಿ ನೀಡಿದ್ದರು. ಇದು ಸಿದ್ಧರಾಮಯ್ಯ ಅವರ ಸಿಟ್ಟಿಗೆ ಕಾರಣ ಅಂತೇನೂ ಭಾವಿಸಬೇಕಾಗಿಲ್ಲ. ಜಗದೀಶ್ ಶೆಟ್ಟರ್ ರಾಜೀನಾಮೆ ಕೊಡಬೇಕೆಂದು ಪ್ರತಿಪಕ್ಷದ ನಾಯಕರ ಸಹಜ ಕರ್ತವ್ಯ ನಿಭಾಯಿಸಿದರು ಅಷ್ಟೇ.

ಕಾಂಗ್ರೆಸ್, ಜೆಡಿಎಸ್‌ಗೆ ಸರ್ಕಾರದ ವಿರುದ್ಧ ಅವಿಶ್ವಾಸ ತಂದು ತಾವೇ ಬಹಿರಂಗವಾಗಿ ಹೇಳಿದಂತೆ ಜನಹಿತ ಕಾಪಾಡದ, ಅಧಿಕಾರ ನಡೆಸಲು Siddaramaiahನೈತಿಕತೆ ಇಲ್ಲದ ಸರ್ಕಾರವನ್ನು ಉರುಳಿಸಿ ಜನರ ಮುಂದೆ ನ್ಯಾಯ ಕೇಳಬಹುದಿತ್ತು. ಕಾವೇರಿ ಧುಮ್ಮಿಕ್ಕಿ ಹರಿಯುತ್ತಿದ್ದಾಗ ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ಸರ್ಕಾರದ ವಿರುದ್ಧ ಅವಿಶ್ವಾಸ ತನ್ನಿ, ಈ ಸರ್ಕಾರ ತೊಲಗಬೇಕು, ಸಿದ್ಧರಾಮಯ್ಯ ಅವರೂ ಅವಿಶ್ವಾಸ ಮಂಡಿಸಬೇಕು ಎನ್ನುವ ಕರೆ ಕೊಟ್ಟರು. ಕಾವೇರಿ ತೀರದವರೇ ಆದ ಸಿದ್ಧರಾಮಯ್ಯ ಕಾವೇರಿ ಕೊಳ್ಳದ ಹೋರಾಟ ಸಮಿತಿಯ ಮುಖಂಡರ ಮಾತಿಗೆ ಮರುಳಾಗಲಿಲ್ಲ ಅಥವಾ ಆವೇಶಕ್ಕೆ ಒಳಗಾಗಿ ಹೇಳಿಕೆಯಲ್ಲೂ ಕೊಡಲಿಲ್ಲ. ಇದು ನುರಿತ ರಾಜಕಾರಣಿಯ ಅನುಭವದ ನಡೆ. ಸರ್ಕಾರ ಉರುಳಿಸಿದ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ ಎನ್ನುವ ಭಯ ಸಿದ್ಧರಾಮಯ್ಯ ಅವರನ್ನು ಕಾಡದಿರಲು ಹೇಗೆ ತಾನೇ ಸಾಧ್ಯ?.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತ್ತವರ ನಾಯಕರ ವೀಕ್‌ನೆಸ್ ಅನ್ನಿ ಜಾಣತನವೆಂದಾದರೂ ಕರೆಯಿರಿ, ಅದೆಲ್ಲವೂ ಯಡಿಯೂರಪ್ಪ ಅವರಿಗೂ ಗೊತ್ತು, ಈಶ್ವರಪ್ಪ ಅವರಿಗೂ ಗೊತ್ತು. ಆದ್ದರಿಂದಲೇ ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವುದಿಲ್ಲವೆಂದು ಶೆಟ್ಟರ್, ಈಶ್ವರಪ್ಪ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು.

ಈಗಿನ ಲೇಟೆಸ್ಟ್ ಸುದ್ದಿ ನೋಡಿ. ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದು ಹದಿನಾಲ್ಕು ಶಾಸಕರು, ಏಳು ಮಂದಿ ವಿಧಾನಪರಿಷತ್ ಸದಸ್ಯರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವ ನಿರ್ಧಾರ ಮಾಡಿದೆ. ಆದರೆ ಎರಡು ದಿನಗಳ ಬಳಿಕ ಬೆಂಗಳೂರಲ್ಲಿ ಮತ್ತೆ ಸಭೆ ಸೇರಿ ಬೆಳಗಾವಿ ನಿರ್ಣಯವನ್ನು ಜಾರಿ ಮಾಡುವುದು. ಅಷ್ಟೊತ್ತಿಗೆ ವಿಧಾನ ಮಂಡಲದ ಅಧಿವೇಶನ ಮುಗಿದಿರುತ್ತದೆ, ಯಾವ ಮುಜುಗರವೂ ಇರುವುದಿಲ್ಲ.

ಇಷ್ಟಕ್ಕೂ ಇದೆಲ್ಲವೂ ರಾಜಕೀಯದ ನಡೆಗಳು ಮಾತ್ರ, ಫಲಿತಾಂಶವಲ್ಲ. ಜನರು ಫಲಿತಾಂಶ ನಿರೀಕ್ಷಿಸುವುದು ಸಹಜ. ಇಂಥ ನಿರೀಕ್ಷೆಯನ್ನು ಗುಟ್ಟು ಹಾಕುತ್ತಲೇ ಅಧಿಕಾರ ಅನುಭವಿಸುವುದು, ಜನರನ್ನು ಕುತೂಹಲದ ಮಡುವಿನಲ್ಲಿಟ್ಟು ಮಾಡುವುದು ನಿಜವಾದ ರಾಜಕೀಯ. ಅದರಾಚೆಗೆ ನೀವೇನಾದರೂ ಯೋಚಿಸಿದರೆ ಅದು ಮೂರ್ಖತನ.