ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ನಿಜವಾದ ರಾಜಕೀಯ


-ಚಿದಂಬರ ಬೈಕಂಪಾಡಿ


 

ಬಿಜೆಪಿ, ಕೆಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭಿನ್ನ ಅಂದುಕೊಂಡರೂ ಅವೆಲ್ಲವುಗಳ ನಡೆಗಳು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದೇ ಆಗಿರುತ್ತದೆ, ಅದೇ ಅವುಗಳ ಪರಮ ಗುರಿಯೂ ಆಗಿರುತ್ತದೆ.

ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ತೊರೆದಾಗಲೇ ಬಿಜೆಪಿ ಸರ್ಕಾರ ಮುಳುಗಿತು ಅಂದುಕೊಂಡಿದ್ದರು ಸಾಮಾನ್ಯ ಜನರು. ಯಾಕೆಂದರೆ ಯಡಿಯೂರಪ್ಪ ರಾಜೀನಾಮೆ ನೀಡಿ ತಮ್ಮವರಿಂದಲೂ ರಾಜೀನಾಮೆ ಕೊಡಿಸಿಬಿಡುತ್ತಾರೆ ಎನ್ನುವ ಸರಳ ಲೆಕ್ಕಾಚಾರ. ಇಂಥ ಲೆಕ್ಕಾಚಾರಗಳ ಹಿಂದೆ ಯಾವುದೇ ಗಹನವಾದ ವಿಚಾರವಿರುವುದಿಲ್ಲ. ಸಾಮಾನ್ಯ ಜನರು ಹೀಗೆಯೇ ಯೋಚಿಸಬೇಕೇ ಹೊರತು ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದರೆ ಸಾಮಾನ್ಯರಾಗಿಯೇ ಉಳಿಯುತ್ತಿರಲಿಲ್ಲ ಎನ್ನುವ ಅರಿವು ರಾಜಕಾರಣಿಗಳಿಗಿದೆ.

ಬುದ್ಧಿವಂತರು ಹೇಗೆ ಸೂಕ್ಷ್ಮವಾಗಿ ಹೆಜ್ಜೆಗಳನ್ನಿಡುತ್ತಾರೆ ಎನ್ನುವುದಕ್ಕೆ ಯಡಿಯೂರಪ್ಪ ಅವರ ನಡೆಗಳನ್ನು ಗಮನಿಸಿ. yeddyurappa-kjpಬಿಜೆಪಿ ಸರ್ಕಾರವನ್ನು ಬೀಳಿಸುವುದು ಯಡಿಯೂರಪ್ಪ ಅವರಿಗೆ ಚಿಟಿಕೆ ಹೊಡೆದಷ್ಟು ಸುಲಭವಿತ್ತು. ಹಾಗೆ ಮಾಡಲಿಲ್ಲ, ಮಾಡುವುದೂ ಇಲ್ಲ. ಯಾಕೆಂದರೆ ಅವರಿಗೆ ನಾಳಿನ ಚಿಂತೆಯಿದೆ. ಜಾತಿಯ ಮತಗಳ ಗಂಟಿನ ಮೇಲೆ ನೋಟವಿದೆ. ಅನುಕಂಪದ ಅಲೆಯನ್ನು ಆವಾಹಿಸಿಕೊಂಡಿದ್ದಾರೆ. ಸರ್ಕಾರ ಉರುಳಿಸಿದರೆ ಸ್ವಾರ್ಥ ಎನ್ನುವ ಹಣೆಪಟ್ಟಿ ಹಚ್ಚುತ್ತಾರೆ ಎನ್ನುವ ಭಯ. ಇವೆಲ್ಲ ಆರೋಪಗಳು ತಮ್ಮನ್ನು ಸುತ್ತಿಕೊಳ್ಳಬಾರದು ಎನ್ನುವ ಮುಂದಾಲೋಚನೆ ಯಡಿಯೂರಪ್ಪ ಅವರಿಗಿದ್ದುದರಿಂದಲೇ ಪ್ರತೀ ಹಂತದಲ್ಲೂ ನನ್ನ ಬೆಂಬಲಿಗರ ತಂಟೆಗೆ ಬರಬಾರದು ಎನ್ನುವ ಎಚ್ಚರಿಕೆ ಕೊಡುತ್ತಲೇ ಬಂದರು.

ಯಡಿಯೂರಪ್ಪ ಅವರ ನಡೆಗಳನ್ನು ಅವರ ಗರಡಿಯಲ್ಲೇ ಪಳಗಿದ ಕೆ.ಎಸ್.ಈಶ್ವರಪ್ಪ ಅವರಿಗಿಂತ ಹೆಚ್ಚು ತಿಳಿದಿರುವುದು ಅನ್ಯರಿಗೆ ಸಾಧ್ಯವಿಲ್ಲ. ಮನೆಯ ವಾತಾವರಣದಲ್ಲೇ ಇಬ್ಬರೂ ರಾಜಕೀಯದಲ್ಲಿ ಅನೇಕ ದಾಳಗಳನ್ನು ಜೊತೆಯಾಗಿ ಉರುಳಿಸಿದ್ದವರು. ಒಬ್ಬರನ್ನೊಬ್ಬರು ರಾಜಕೀಯವಾಗಿ ಆಂತರಿಕವಾಗಿ ದ್ವೇಷಿಸುತ್ತಲೇ ಶಿವಮೊಗ್ಗವನ್ನು ಆವರಿಸಿಕೊಂಡು ಬೆಳೆದವರು. ಈ ಕಾರಣದಿಂದಲೇ ಯಡಿಯೂರಪ್ಪ ಅವರನ್ನು ‘ಪೇಪರ್ ಟೈಗರ್’ ಎಂದು ಕರೆದರು. ಸರ್ಕಾರವನ್ನು ಬೀಳಿಸಿ ಎನ್ನುವ ಪಂಥಾಹ್ವಾನ ನೀಡಿದರು.

ಹಾವೇರಿಯ ಕೆಜೆಪಿ ಸಮಾವೇಶದಲ್ಲಿ ಶಾಸಕರು ಭಾಗವಹಿಸಬಾರದು, ಯಡಿಯೂರಪ್ಪ ಅವರ ಬಲಕುಂದಿಸಬೇಕು shettar-yedi_eshwarಎನ್ನುವ ಸ್ಪಷ್ಟವಾದ ಗುರಿ ಬಿಜೆಪಿಗಿತ್ತು. ಈ ಕಾರಣದಿಂದಲೇ ಹಾವೇರಿ ಸಮಾವೇಶಕ್ಕೆ ಹೋದರೆ ಶಿಸ್ತು ಕ್ರಮ ಎನ್ನುವ ಬೆದರಿಕೆ ಬಿಜೆಪಿ ನಾಯಕರಿಂದ ಬಂದಿತ್ತು. ಸಜ್ಜನ್ ಅವರ ಮನೆಯಲ್ಲಿ ಆಯೋಜಿಸುವ ಉಪಹಾರ ಕೂಟದಲ್ಲೀ ಭಾಗವಹಿಸಿದರೂ ಕ್ರಮ ಜರಗಿಸುವ ಹೇಳಿಕೆ ಬಿಜೆಪಿಯಿಂದ ಬಂದಿತ್ತು.

ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರನ್ನು ಸಾಮಾವೇಶಕ್ಕೆ ಬನ್ನಿ ಎಂದು ಬಹಿರಂಗವಾಗಿ ಕರೆದಿರಲಿಲ್ಲ, ಬರಬೇಡಿ ಎನ್ನುವ ಸಂದೇಶ ನೀಡಿದ್ದರು. ಉಪಹಾರ ಕೂಟದಲ್ಲಿ ಐದಕ್ಕೂ ಹೆಚ್ಚು ಸಚಿವರು ಭಾಗವಹಿಸಿ ಸಮಾವೇಶಕ್ಕೆ ಗೈರಾಗಿದ್ದರು.ಹದಿನಾಲ್ಕು ಮಂದಿ ಶಾಸಕರು, ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಸಮಾವೇಶದ ವೇದಿಕೆ ಹತ್ತಿಸಿದರು. ಯಡಿಯೂರಪ್ಪ ಅವರೇ ಹೇಳಿಕೊಂಡಂತೆ ತಮಗಿರುವ 50 ಕ್ಕೂ ಹೆಚ್ಚು ಶಾಸಕರು ಸಮಾವೇಶದಿಂದ ದೂರ ಉಳಿದಿದ್ದರು.

ಹಾವೇರಿ ಸಮಾವೇಶ ನಡೆಯುತ್ತಿರುವಾಗಲೇ ಸಮಾವೇಶದ ವೇದಿಕೆ ಹತ್ತಿದವರ ವಿರುದ್ಧ ಕ್ರಮ ಎಂದು ಬಿಜೆಪಿ ನಾಯಕರು ಬ್ರೇಕಿಂಗ್ ನ್ಯೂಸ್ ಕೊಟ್ಟರು. ಈ ಹಂತದಲ್ಲಿ ಬಿಜೆಪಿ ಸರ್ಕಾರ ಮುಳುಗಿತು ಎಂದೇ ಜನ ಭಾವಿಸಿಬಿಟ್ಟಿದ್ದರು. ಯಾಕೆಂದರೆ ಕೆ.ಎಸ್.ಈಶ್ವರಪ್ಪ ಅವರು ಕೊಟ್ಟ ಹೇಳಿಕೆಯಲ್ಲಿ ಅಂಥ ಮೊನಚಿತ್ತು. ಸರ್ಕಾರ ಬಲಿಕೊಡಲೂ ಸಿದ್ಧವೆಂದು ಮಾಜಿಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಅಬ್ಬರಿಸಿದ್ದರು. ಡಿಸೆಂಬರ್ 10 ರಂದು ವಿಧಾನ ಸಭೆಯ ಅಧಿವೇಶನವೇ ನಡೆಯುವುದು ಅನುಮಾನ, ಎಲ್ಲರೂ ರಾಜೀನಾಮೆ ಕೊಡುತ್ತಾರೆ ಎನ್ನುವ ನಂಬಿಕೆ ಹುಟ್ಟಿಸಿದ್ದರು. ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿ, ಕೆಜೆಪಿ ವಿರುದ್ಧ ಹರಿಹಾಯ್ದರು. ಅವರು ಪ್ರತಿಪಕ್ಷದ ನಾಯಕರಾಗಿದ್ದ ಕಾರಣ ಇದೆಲ್ಲವೂ ನಿರೀಕ್ಷಿತವೇ ಆಗಿತ್ತು. ಶೆಟ್ಟರ್ ರಾಜೀನಾಮೆಗೆ ಮಾಡಿದ ಒತ್ತಾಯವೂ ಸಾಂದರ್ಭಿಕ. ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿ ತಮಿಳುನಾಡಿಗೆ ನೀರು ಬಿಡುವುದಿಲ್ಲ, ಒಂದು ವೇಳೆ ಬಿಡುವುದಿದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಅಂದಿದ್ದರು. ಆದರೆ ಅದೇ ದಿನ ರಾತ್ರಿಯಿಂದಲೇ ತಮಿಳುನಾಡಿಗೆ ನೀರು ಹರಿಸಿ ದೆಹಲಿಯಲ್ಲಿ ಸಂಸದರ ಸಭೆ ನಡೆಸಿದರು. ಮಧ್ಯಾಹ್ನದ ವೇಳೆಗೆ ಕೆಜೆಪಿಯಲ್ಲಿ ಗುರುತಿಸಿಕೊಂಡ ಸಂಸದ ಬಸವರಾಜು ಮತ್ತು ಸಹಕಾರಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡುವ ಮಾಹಿತಿ ನೀಡಿದ್ದರು. ಇದು ಸಿದ್ಧರಾಮಯ್ಯ ಅವರ ಸಿಟ್ಟಿಗೆ ಕಾರಣ ಅಂತೇನೂ ಭಾವಿಸಬೇಕಾಗಿಲ್ಲ. ಜಗದೀಶ್ ಶೆಟ್ಟರ್ ರಾಜೀನಾಮೆ ಕೊಡಬೇಕೆಂದು ಪ್ರತಿಪಕ್ಷದ ನಾಯಕರ ಸಹಜ ಕರ್ತವ್ಯ ನಿಭಾಯಿಸಿದರು ಅಷ್ಟೇ.

ಕಾಂಗ್ರೆಸ್, ಜೆಡಿಎಸ್‌ಗೆ ಸರ್ಕಾರದ ವಿರುದ್ಧ ಅವಿಶ್ವಾಸ ತಂದು ತಾವೇ ಬಹಿರಂಗವಾಗಿ ಹೇಳಿದಂತೆ ಜನಹಿತ ಕಾಪಾಡದ, ಅಧಿಕಾರ ನಡೆಸಲು Siddaramaiahನೈತಿಕತೆ ಇಲ್ಲದ ಸರ್ಕಾರವನ್ನು ಉರುಳಿಸಿ ಜನರ ಮುಂದೆ ನ್ಯಾಯ ಕೇಳಬಹುದಿತ್ತು. ಕಾವೇರಿ ಧುಮ್ಮಿಕ್ಕಿ ಹರಿಯುತ್ತಿದ್ದಾಗ ಮಂಡ್ಯದಲ್ಲಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ಸರ್ಕಾರದ ವಿರುದ್ಧ ಅವಿಶ್ವಾಸ ತನ್ನಿ, ಈ ಸರ್ಕಾರ ತೊಲಗಬೇಕು, ಸಿದ್ಧರಾಮಯ್ಯ ಅವರೂ ಅವಿಶ್ವಾಸ ಮಂಡಿಸಬೇಕು ಎನ್ನುವ ಕರೆ ಕೊಟ್ಟರು. ಕಾವೇರಿ ತೀರದವರೇ ಆದ ಸಿದ್ಧರಾಮಯ್ಯ ಕಾವೇರಿ ಕೊಳ್ಳದ ಹೋರಾಟ ಸಮಿತಿಯ ಮುಖಂಡರ ಮಾತಿಗೆ ಮರುಳಾಗಲಿಲ್ಲ ಅಥವಾ ಆವೇಶಕ್ಕೆ ಒಳಗಾಗಿ ಹೇಳಿಕೆಯಲ್ಲೂ ಕೊಡಲಿಲ್ಲ. ಇದು ನುರಿತ ರಾಜಕಾರಣಿಯ ಅನುಭವದ ನಡೆ. ಸರ್ಕಾರ ಉರುಳಿಸಿದ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ ಎನ್ನುವ ಭಯ ಸಿದ್ಧರಾಮಯ್ಯ ಅವರನ್ನು ಕಾಡದಿರಲು ಹೇಗೆ ತಾನೇ ಸಾಧ್ಯ?.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತ್ತವರ ನಾಯಕರ ವೀಕ್‌ನೆಸ್ ಅನ್ನಿ ಜಾಣತನವೆಂದಾದರೂ ಕರೆಯಿರಿ, ಅದೆಲ್ಲವೂ ಯಡಿಯೂರಪ್ಪ ಅವರಿಗೂ ಗೊತ್ತು, ಈಶ್ವರಪ್ಪ ಅವರಿಗೂ ಗೊತ್ತು. ಆದ್ದರಿಂದಲೇ ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುವುದಿಲ್ಲವೆಂದು ಶೆಟ್ಟರ್, ಈಶ್ವರಪ್ಪ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು.

ಈಗಿನ ಲೇಟೆಸ್ಟ್ ಸುದ್ದಿ ನೋಡಿ. ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದು ಹದಿನಾಲ್ಕು ಶಾಸಕರು, ಏಳು ಮಂದಿ ವಿಧಾನಪರಿಷತ್ ಸದಸ್ಯರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವ ನಿರ್ಧಾರ ಮಾಡಿದೆ. ಆದರೆ ಎರಡು ದಿನಗಳ ಬಳಿಕ ಬೆಂಗಳೂರಲ್ಲಿ ಮತ್ತೆ ಸಭೆ ಸೇರಿ ಬೆಳಗಾವಿ ನಿರ್ಣಯವನ್ನು ಜಾರಿ ಮಾಡುವುದು. ಅಷ್ಟೊತ್ತಿಗೆ ವಿಧಾನ ಮಂಡಲದ ಅಧಿವೇಶನ ಮುಗಿದಿರುತ್ತದೆ, ಯಾವ ಮುಜುಗರವೂ ಇರುವುದಿಲ್ಲ.

ಇಷ್ಟಕ್ಕೂ ಇದೆಲ್ಲವೂ ರಾಜಕೀಯದ ನಡೆಗಳು ಮಾತ್ರ, ಫಲಿತಾಂಶವಲ್ಲ. ಜನರು ಫಲಿತಾಂಶ ನಿರೀಕ್ಷಿಸುವುದು ಸಹಜ. ಇಂಥ ನಿರೀಕ್ಷೆಯನ್ನು ಗುಟ್ಟು ಹಾಕುತ್ತಲೇ ಅಧಿಕಾರ ಅನುಭವಿಸುವುದು, ಜನರನ್ನು ಕುತೂಹಲದ ಮಡುವಿನಲ್ಲಿಟ್ಟು ಮಾಡುವುದು ನಿಜವಾದ ರಾಜಕೀಯ. ಅದರಾಚೆಗೆ ನೀವೇನಾದರೂ ಯೋಚಿಸಿದರೆ ಅದು ಮೂರ್ಖತನ.

Leave a Reply

Your email address will not be published. Required fields are marked *