Monthly Archives: January 2013

₹ 16 ಲಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಬಹುದೇ?


– ರವಿ ಕೃಷ್ಣಾರೆಡ್ಡಿ


 

ಇಂದು ದೇಶದ ಬಹುತೇಕ ಕಡೆ ಚುನಾವಣೆಗಳನ್ನು ಹಣ ನಿರ್ಧರಿಸುತ್ತಿದೆ. ಜಾತಿಯೂ ನಿರ್ಧರಿಸುತ್ತದೆ. ಆದರೆ, ಈಗಲೂ ಬಹುತೇಕ ಕ್ಷೇತ್ರಗಳಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಗೆಲ್ಲಬಲ್ಲ, ಬಹುಸಂಖ್ಯಾತ ಜಾತಿಯ ಅಭ್ಯರ್ಥಿಗೇ ಟಿಕೆಟ್ ನೀಡುವುದರಿಂದ ಕೊನೆಗೂ ಮುಖ್ಯವಾಗುವುದು ಯಾರು ಹೆಚ್ಚು ಹಣ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಹೆಚ್ಚು ಶಿಸ್ತುಬದ್ಧವಾಗಿ ವಿನಿಯೋಗಿಸುತ್ತಾರೆ ಎನ್ನುವುದು.

ಅಮೇರಿಕದಂತಹ ದೇಶಗಳಲ್ಲಿ ಚುನಾವಣಾ ವೆಚ್ಚದ ಮಿತಿಗಳಿಲ್ಲ. ಆಭ್ಯರ್ಥಿ ತನ್ನ ದುಡ್ಡನ್ನೇ ಬಳಸಬಹುದು ಅಥವ ಆತನಿಗೆ ಬಲವಿದ್ದಷ್ಟು ಹಣವನ್ನು ಜನರಿಂದ, ಸಂಘ-ಸಂಸ್ಥೆಗಳಿಂದ ಕೂಡಿಸಿ ಅಷ್ಟನ್ನೂ ಖರ್ಚು ಮಾಡಬಹುದು. ಅಲ್ಲಿ ಕೆಲವೊಂದು ನಿಬಂಧನೆಗಳಿವೆ, ಉದಾಹರಣೆಗೆ, ಒಬ್ಬ ಪ್ರಜೆ ಒಬ್ಬ ಆಭ್ಯರ್ಥಿಗೆ ಇಂತಿಷ್ಟು ಮೊತ್ತಕ್ಕಿಂತ ಹೆಚ್ಚಿಗೆ ನೀಡುವ ಹಾಗಿಲ್ಲ.

ನಮ್ಮ ದೇಶದಲ್ಲಿ ಆಯಾಯ ರಾಜ್ಯಗಳಿಗೆ ಸಂಬಂಧಿಸಿದಂತೆ ಅಭ್ಯ್ರರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿ ಇದೆ. ಪರಿಷ್ಕೃತ ಪಟ್ಟಿಯ ಪ್ರಕಾರ ರಾಜ್ಯದlincolnಲೋಕಸಭಾ ಅಭ್ಯರ್ಥಿ 40 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವ ಹಾಗೆ ಇಲ್ಲ. ವಿಧಾನಸಭಾ ಅಭ್ಯರ್ಥಿಯ ಮಿತಿ 16 ಲಕ್ಷ ರೂಗಳು. ಆದರೆ, ಪ್ರಮುಖ ಅಭ್ಯರ್ಥಿಗಳು ಖರ್ಚು ಮಾಡಲಿರುವ ಹಣ ಹತ್ತಾರು ಕೋಟಿಗಳನ್ನು ದಾಟಲಿದೆ. ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ರಾಜ್ಯದ ಹಲವಾರು ಕಡೆ ಅನೇಕ ಅಭ್ಯರ್ಥಿಗಳು ಸುಮಾರು ಐವತ್ತು ಕೋಟಿಗೂ ಹೆಚ್ಚು ಖರ್ಚು ಮಾಡಿದ್ದರು ಎಂಬ ಸುದ್ದಿಗಳಿದ್ದವು. ಆದರೆ ಅವರಲ್ಲಿ ಯಾರೊಬ್ಬರದೂ ತಮ್ಮ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗಕ್ಕೆ ಕೊಟ್ಟಾಗ ಅದು ಹತ್ತು ಲಕ್ಷಕ್ಕೆ ಮೀರಿದ (ಆಗಿನ ಮಿತಿ) ಉದಾಹರಣೆಗಳಿಲ್ಲ. ಬರಲಿರುವ ಚುನಾವಣೆಯಲ್ಲಿ ನೂರು ಕೋಟಿಯ ತನಕ ಖರ್ಚು ಮಾಡುವ ಒಬ್ಬಿಬ್ಬರಾದರೂ ನಮ್ಮಲ್ಲಿದ್ದಾರೆ. ಅಂದಹಾಗೆ, ನನ್ನೂರಿನ ಗ್ರಾಮಪಂಚಾಯಿತಿಯ ಸದಸ್ಯನೊಬ್ಬ ಸುಮಾರು 75 ಲಕ್ಷ ರೂಪಾಯಿಗಳನ್ನು ಕೇವಲ ಸಾವಿರ ಚಿಲ್ಲರೆ ಓಟಿಗೆ (ಆದರಲ್ಲಿ ಆತ ಪಡೆದದ್ದು ಸುಮಾರು ಐದಾರು ನೂರು ಓಟು ಇರಬಹುದು) ಖರ್ಚು ಮಾಡಿ ಗೆದ್ದ ಎನ್ನುತ್ತಾರೆ ನನ್ನೂರಿನ ಜನ. ಇನ್ನು ಅದರ ನೂರಿನ್ನೂರು ಪಟ್ಟು ದೊಡ್ಡದಾದ ಅಸೆಂಬ್ಲಿ ಕ್ಷೇತ್ರಕ್ಕೆ ನೂರು ಕೋಟಿ ಹೆಚ್ಚೇನೂ ಅಲ್ಲ.

ಆದರೆ ಇದು, ನ್ಯಾಯ ಸಮ್ಮತವೇ? ಕಾನೂನು ಸಮ್ಮತವೇ? ಕಾನೂನು ಬರೆಯುವವರ ಮೊದಲ ಅರ್ಹತೆಯೇ ಕಾನೂನು ಮುರಿಯುವುದಾದರೆ–ಇಷ್ಟು ಸ್ವಚ್ಚಂದವಾಗಿ–ಈ ದೇಶದ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿದೆಯೇ? ಇದೆಲ್ಲ ಗೊತ್ತಿರುವ ಜನ ಸುಮ್ಮನಿರುವುದಾದರೆ, ಅವರ ಆತ್ಮಸಾಕ್ಷಿ ಬದುಕಿದೆಯೇ?

ಇನ್ನು, ಕೇವಲ 16 ಲಕ್ಷಗಳಲ್ಲಿ ಚುನಾವಣಾ ಖರ್ಚು ನಿಭಾಯಿಸುವುದು ಸಾಧ್ಯವೇ?

ಬೇರೆಯೆಲ್ಲ ವಿಚಾರಗಳನ್ನು ಬದಿಗಿಟ್ಟು, ಕೇವಲ ಮೇಲಿನ ಈ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಒಂದೇ ಪದದ ಉತ್ತರ, ಹೌದು? ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕೇವಲ ಹದಿನಾರು ಲಕ್ಷ ರೂಪಾಯಿಗಳಿಗೆ ನೀವು ಒಂದು ಉತ್ತಮ ಚುನಾವಣಾ ಪ್ರಚಾರ ಮಾಡಬಹುದು.

ಹೇಗೆ?

ಮೊದಲಿಗೆ, ಯಾರೊಬ್ಬರಿಗೂ ಓಟಿಗಾಗಿ ದುಡ್ಡು ಕೊಡುವುದಿಲ್ಲ, ಹೆಂಡ ಕುಡಿಸುವುದಿಲ್ಲ, ಬಾಡೂಟ-ಮೃಷ್ಟಾನ್ನ ಭೋಜನಗಳ ಪಾರ್ಟಿ ಇಲ್ಲ, ಮತದಾರರಿಗೆ ಇನ್ಯಾವುದೇ ತರಹದ ಸೀರೆ-ರವಿಕೆ-ಉಂಗುರ-ವಾಚು-ಅಕ್ಕಿ-ಬೇಳೆಗಳ ಚುನಾವಣಾ ಹಿಂದಿನ ದಿನದ ಕಾಣಿಕೆಗಳಿಲ್ಲ. ಈ ಷರತ್ತುಗಳ ಮೇಲೆ ಪ್ರಚಾರ ಮಾಡಿದ್ದೇ ಆದರೆ, ಆ ಹದಿನಾರು ಲಕ್ಷ ರೂಪಾಯಿಗಳಲ್ಲಿ ಒಂದಷ್ಟು ಉಳಿಯಲೂ ಬಹುದು.

ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಎರಡು ಲಕ್ಷ ಮತದಾರರಿದ್ದಾರೆ. ಒಂದು ಮನೆಯಲ್ಲಿ ಸರಾಸರಿ ಎರಡೂವರೆ ಓಟಿದೆ ಎಂದುಕೊಂಡರೆ, gandhi1ಸುಮಾರು 80000 ಮನೆಗಳಿರುತ್ತವೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನೀವು ಸುಮಾರು 4 ಲಕ್ಷ ರೂಪಾಯಿಗಳಿಗೆ A-4 ಸೈಜಿನ, ಎರಡೂ ಬದಿಯ ಕಲರ್ ಪ್ರಿಂಟ್ ಇರುವ 8 ಲಕ್ಷ ಕರಪತ್ರಗಳನ್ನು ಮುದ್ರಿಸಬಹುದು. ಅಂದರೆ, ಸರಾಸರಿ ಒಂದು ಮನೆಗೆ ಹತ್ತು ಸಲ ಹಂಚಬಹುದಾದಷ್ಟು. ಇನ್ನು ಚುನಾವಣೆಗೆ ಒಂದು ತಿಂಗಳ ಕಾಲ ಸುಮಾರು ಮುವ್ವತ್ತು ಕಾರ್ಯಕರ್ತರನ್ನು ಸರಾಸರಿ ಹತ್ತರಿಂದ-ಹದಿನೈದು ಸಾವಿರ ರೂಗಳ ಸಂಬಳಕ್ಕೆ ತೆಗೆದುಕೊಂಡರೆ, ಅದು ಸುಮಾರು 4 ಲಕ್ಷಗಳ ಖರ್ಚಿನದು. ಈ ಕಾರ್ಯಕರ್ತರ ಓಡಾಟಕ್ಕೆ, ಬಸ್ ಚಾರ್ಜಿಗೆ, ಗಾಡಿಗಳಿಗೆ, ಡೀಸೆಲ್‌ಗೆ, ಮತ್ತು ಊಟತಿಂಡಿಗೆ ಸುಮಾರು 2.5 ಲಕ್ಷ ರೂಪಾಯಿ (ಸುಮಾರು ನಲವತ್ತು ಜನರಿಗೆ ದಿನಕ್ಕೆ ಸರಾಸರಿ 200 ರೂಗಳು, ಸಂಬಳದ ಹೊರತಾಗಿ). ಸುಮಾರು ಒಂದು ಲಕ್ಷ ರೂಪಾಯಿಗೆ ಎರಡು ಜೀಪ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಅದಕ್ಕೆ ಮೈಕ್ ಅದು ಇದೂ ಎಂತಾದರೆ ಅದಕ್ಕೆ 1 ಲಕ್ಷ. ಇಡೀ ಕ್ಷೇತ್ರಕ್ಕೆ ಸುಮಾರು ಎರಡು ನೂರು ಬ್ಯಾನರ್‌ಗಳಿಗೆ ಐವತ್ತು ಸಾವಿರ. ಈ ಲೆಕ್ಕದಲ್ಲಿ ನೀವು ಒಂದು ತಿಂಗಳ ಕಾಲ ಸುಮಾರು ಮುವ್ವತ್ತು-ನಲವತ್ತು ಜನ ಕಾರ್ಯಕರ್ತರನ್ನಿಟ್ಟುಕೊಂಡು ಇಡೀ ಕ್ಷೇತ್ರದ ತುಂಬ ಪ್ರಚಾರ ಮಾಡಬಹುದು. ಸುಮಾರು 12 ಲಕ್ಷ ರೂಗಳಲ್ಲಿ.

ಅಭ್ಯರ್ಥಿ ಮಾತ್ರ ಪ್ರತಿದಿನ ಬೆಳಗ್ಗೆ ಆರರಿಂದ ರಾತ್ರಿ ಹತ್ತರ ತನಕ ತಿಂಗಳು ಪೂರ್ತಿ ಪ್ರಚಾರದಲ್ಲಿ ತೊಡಗಬೇಕಾಗುತ್ತದೆ. ಒಂದಿಬ್ಬರು ಉತ್ತಮ ಸಹಾಯಕರನ್ನಿಟ್ಟುಕೊಳ್ಳಬೇಕಾಗುತ್ತದೆ. ಇನ್ನು ಸಂಬಳ ತೆಗೆದುಕೊಳ್ಳದೇ ಪ್ರಚಾರಕ್ಕೆ ಬರಬಲ್ಲ ಸ್ನೇಹಿತರ, ಸಮಾನಮನಸ್ಕರ, ಹಿತೈಷಿಗಳ, ನೆಂಟರ ಪಡೆ ಜೊತೆಯಾದರಂತೂ ಮೂರ್ನಾಲ್ಕು ಲಕ್ಷಗಳ ಉಳಿತಾಯವೇ ಆಗುತ್ತದೆ ಮತ್ತು ಪ್ರಚಾರಕ್ಕೆ ಬಲವೂ ಸಿಗುತ್ತದೆ.

ಇನ್ನು ಚುನಾವಣೆಯ ದಿನ: ಒಂದು ಕ್ಷೇತ್ರದಲ್ಲಿ ಸರಾಸರಿ ಎರಡುನೂರು ಬೂತ್‌ಗಳಿರುತ್ತವೆ. ನಿಮಗೆ ಆ ದಿನ ಕನಿಷ್ಟ ಐದುನೂರರಿಂದ ಸಾವಿರ ಕಾರ್ಯಕರ್ತರು ಬೇಕು. ಒಂದು ಬೂತ್‌ಗೆ ಎರಡು ಸಾವಿರ ಖರ್ಚು ಇಟ್ಟುಕೊಂಡರೆ 4 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದೇ ಸ್ವಲ್ಪ ಕಷ್ಟದ ಕೆಲಸ. ನಿಮ್ಮ ಒಂದು ತಿಂಗಳ ಪರಿಶ್ರಮ ಎದ್ದು ಕಾಣಿಸುವುದು ಮತ್ತು ನಿರ್ಣಾಯಕವಾಗುವುದು ಅಂದೇ.

ಹೀಗೆ 16 ಲಕ್ಷ ರೂಗಳಲ್ಲಿ ಒಬ್ಬ ಅಭ್ಯರ್ಥಿ, ತಾನು ಯಾರು, ತನ್ನ ಪಕ್ಷ ಯಾವುದು, ತಾನು ಮಾಡಲಿರುವುದೇನು, ಅವರು ಯಾತಕ್ಕಾಗಿ ಆತನಿಗೆ ಮತ ಕೊಡಬೇಕು, ಇತ್ಯಾದಿಗಳ ಬಗ್ಗೆ ಕ್ಷೇತ್ರದ ಬಹುತೇಕ ಮತದಾರರಿಗೆ ಖಂಡಿತವಾಗಿ ತಿಳಿಸಬಹುದು. ಅಲ್ಲಿಗೆ ಆತನ ಕರ್ತವ್ಯ ಮುಗಿಯುತ್ತದೆ.

ಇನ್ನು, ಓಟು ಹಾಕುವುದು ಬಿಡುವುದು ಜನರಿಗೆ ಬಿಟ್ಟ ವಿಚಾರ. ಅಭ್ಯರ್ಥಿ ತಾನು ನೈತಿಕವಾಗಿ ಮತ್ತು ಕಾನೂನಿನ ಮಿತಿಯಲ್ಲಿ ಮಾತ್ರ ತನ್ನ ಕೆಲಸ ಮಾಡಬಲ್ಲ. ಜನರ ತೀರ್ಮಾನ ಅವರದು. ಅದು ಎಲ್ಲಾ ಸಮಯದಲ್ಲೂ ಜವಾಬ್ದಾರಿಯುತವಾಗಿರುತ್ತದೆ ಅಂತೇನಿಲ್ಲ. ನಮ್ಮ ಪ್ರಯತ್ನ ಮಾಡಲೇಬೇಕಾಗಿದ್ದದ್ದು ಮತ್ತು ಮೌಲ್ಯಯುತವಾದದ್ದು ಎಂದು ಅಭ್ಯರ್ಥಿಯ ಆತ್ಮಸಾಕ್ಷಿಗೆ ಅನ್ನಿಸುವುದೇ ಎಲ್ಲಕ್ಕಿಂತ ದೊಡ್ಡದು.

ಹಾಗೆಯೇ, ಈ ಹದಿನಾರು ಲಕ್ಷ ಹೊಂದಿಸುವುದು ಹೇಗೆ? ಅಭ್ಯರ್ಥಿಯಾದಾತ ತನ್ನ ದುಡ್ಡಿಗಿಂತ ತನ್ನ ಕ್ಷೇತ್ರದ ಪ್ರಜ್ಞಾವಂತ ಮತದಾರರಿಂದಲೇ ಇದನ್ನು ಶೇಖರಿಸುವುದು ನ್ಯಾಯವಾದುದು ಮತ್ತು ಜವಾಬ್ದಾರಿಯುತವಾದುದು. ಅಷ್ಟಕ್ಕೂ ತಮಗೆ ಬೇಕಾದ, ಅರ್ಹನಾದ, ಯೋಗ್ಯನಾದ, ಪ್ರತಿನಿಧಿಯನ್ನು ಆರಿಸಿಕೊಳ್ಳುವುದು ಜನರ ಜವಾಬ್ದಾರಿ. ಅದಕ್ಕೆ ಬೇಕಾದ ಖರ್ಚುಗಳನ್ನು ಭರಿಸುವುದೂ ಆ ಜವಾಬ್ದಾರಿಯ ಭಾಗ. ಆದರೆ, ಅದು ವಾಸ್ತವವೇ? ಅದು ಬೇರೆ ವಿಷಯ ಮತ್ತು ಅದರಲ್ಲಿ ಹೆಚ್ಚಿನ ಭಾಗ ಅಭ್ಯರ್ಥಿಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರಜಾಪ್ರಭುತ್ವ ಹೇಗಿರಬೇಕು ಮತ್ತು ನಾವು ಏನು ಮಾಡಬೇಕು ಎನ್ನುವುದು ಪ್ರಜ್ಞಾವಂತರ ಜವಾಬ್ದಾರಿ. ಚುನಾವಣಾ ಸೋಲು-ಗೆಲುವು ನಂತರದ್ದು. ಇಂತಹ ಸಮುದ್ರ ಮಂಥನದಿಂದ ಇನ್ನೊಬ್ಬರ ದುಷ್ಟತನ ಕಡಿಮೆಯಾಗಿ, ಎಲ್ಲರಿಗಿಂತಲೂ ಯೋಗ್ಯನಾದ ಅಭ್ಯರ್ಥಿ ಆರಿಸಿಬಂದರೆ, ಅದೇ ಇಂತಹ ಪ್ರಯತ್ನಗಳ ಯಶಸ್ಸು ಮತ್ತು ಪ್ರಜಾಪ್ರಭುತ್ವದ ಸೊಗಸು.

ರಾಜ್ಯದಾದ್ಯಂತ ಈಗಿನ ಕೊಳಕು ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ, ತಮ್ಮ ಪಾತ್ರವೇನು ಮತ್ತು ತಾವು ಏನು ಮಾಡಬೇಕು-ಮಾಡಬಹುದುgandhi2ಎಂದುಕೊಳ್ಳುತ್ತಿರುವ ಪ್ರಜ್ಞಾವಂತರಿಗೆ, ಹೀಗೂ ಒಂದು ಪ್ರಯತ್ನ ಮಾಡಬಹುದು ಎಂದು ಇಷ್ಟನ್ನು ಬರೆದಿದ್ದೇನೆ. ಒಳ್ಳೆಯ ರಾಜಕೀಯ ಪಕ್ಷದಲ್ಲಿ ಅವಕಾಶ ಸಿಕ್ಕರೆ, ಪ್ರಯತ್ನಿಸಿ. ಇಲ್ಲವಾದರೆ, ಪಕ್ಷೇತರರಾಗಿಯಾದರೂ ನಿಂತು ಇಂದಿನ ಭ್ರಷ್ಟ ವ್ಯವಸ್ಥೆಯನ್ನು ವಿರೋಧಿಸಿ. ಹಾಗೆ ಮಾಡಲು ನೀವು ಹಾಕಿಕೊಳ್ಳಬೇಕಾದ ಒಂದೇ ಗಂಭೀರ ಪ್ರಶ್ನೆ, “ನನ್ನ ಕ್ಷೇತ್ರದ ಇತರೆ ಅಭ್ಯರ್ಥಿಗಳಿಗಿಂತ ಪ್ರಾಮಾಣಿಕತೆಯಲ್ಲಿ, ಕೆಲಸದಲ್ಲಿ, ಕಾಳಜಿಯಲ್ಲಿ, ಅಧ್ಯಯನದಲ್ಲಿ, ನಾನು ಉತ್ತಮನೋ ಅಲ್ಲವೋ?” ಎಂಬುದಷ್ಟೇ.

ನೀವು ನಿಲ್ಲದೇ ಇದ್ದರೂ, ಅಂತಹ ಒಬ್ಬ ವ್ಯಕ್ತಿಗೆ ಬೆಂಬಲಿಸುವ ಮೂಲಕ ನಿಮ್ಮ ರಾಜಕೀಯ ಸಕ್ರಿಯತೆಯನ್ನು ತೋರಿಸಬಹುದು ಮತ್ತು ಆ ಮೂಲಕ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬಹುದು.

ಗಾಂಧಿ, ನೆಹರೂ, ಪಟೇಲ್, ಜೇಪಿ, ಗೋಪಾಲಗೌಡ, ಲಿಂಕನ್, ಮಂಡೇಲಾ, ಒಬಾಮ, ಇವರೆಲ್ಲ ಆರಿಸಿಕೊಂಡ, ದುಡಿದ ಈ ರಾಜಕೀಯ ಕ್ಷೇತ್ರ ಹೊಲಸಲ್ಲ. ನಾವು ಹಾಗಾಗಲು ಬಿಟ್ಟಿದ್ದೇವೆ; ನಮ್ಮ ನಿಷ್ಕ್ರಿಯೆ, ಆಲಸ್ಯ, ಕೃತಘ್ನತೆಯಿಂದ. ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಇತರೆ ಎಲ್ಲಾ ಕ್ಷೇತ್ರಗಳಿಗಿಂತ ಪವಿತ್ರವಾದದ್ದು, ಆದರ್ಶನೀಯವಾದದ್ದು. ಹಾಗೆಯೇ ಕಠಿಣವಾದದ್ದು. ಅದನ್ನು ಎದುರಿಸಬಲ್ಲ ಛಲ ಮತ್ತು ನ್ಯಾಯನಿಷ್ಟೆ ನಿಮಗಿದ್ದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಜೀವನ ಈಗಿನದಕ್ಕಿಂತ ಸಹನೀಯವೂ, ಶ್ರೀಮಂತವೂ, ಅರ್ಥಪೂರ್ಣವೂ ಆಗಿರುತ್ತದೆ. ಹಾಗೆ ಮಾಡುವುದು ಮತ್ತು ಇರುವುದು ನಮ್ಮೆಲ್ಲರ ಜವಾಬ್ದಾರಿಯೂ ಅಲ್ಲವೇ?

ಒಬ್ಬ ವ್ಯಕ್ತಿಗೆ ಜೀವಮಾನದಲ್ಲಿ ಕೆಲವೇ ಸಂದರ್ಭಗಳಲ್ಲಿ ಎದುರಾಗುವ ಇಂತಹ ಒಂದು ಸವಾಲಿಗೆ ನಮ್ಮ ಸಮಾಜದಲ್ಲಿ ಎಷ್ಟು ಜನ ಉತ್ತರಿಸಬಹುದು?

ಲಿಂಗಪ್ರಮಾಣ ಹಾಗೂ ಅತ್ಯಾಚಾರದ ಹಾವಳಿ…

– ಡಾ.ಎಸ್.ಬಿ.ಜೋಗುರ

ದೆಹಲಿ ಮಾತ್ರವಲ್ಲ ದೇಶದ ಯಾವ ನಗರಗಳೂ… ಹಳ್ಳಿಗಳೂ ಬರುವ ದಿನಗಳಲ್ಲಿ ಮಹಿಳೆಯರ ಪಾಲಿಗೆ ಸೇಫ಼್ ಆಗಿ ಉಳಿದಿಲ್ಲ ಎನ್ನುವುದಕ್ಕೆ ಈಗ ಅಲ್ಲಲ್ಲಿ ಮತ್ತೆ ಮತ್ತೆ ಮರುಕಳುಹಿಸುತ್ತಿರುವ ಅತ್ಯಾಚಾರ ಪ್ರಕರಣಗಳೇ ಸಾಕ್ಷಿ. ರಾಜ್ಯದ ರಾಜಧಾನಿಯಿಂದ ಹಿಡಿದು ತುತ್ತತುದಿಯ ಬೀದರ, ಗುಲಬರ್ಗಾ ಜಿಲ್ಲೆಯವರೆಗೂ ಅತ್ಯಾಚಾರಗಳದ್ದೇ ಹಾವಳಿ.

ಒಂದೆಡೆ ಹರಿಯಾಣಾ, ದೆಹಲಿಯಂಥಾ ರಾಜ್ಯಗಳಲ್ಲಿ ಲಿಂಗ ಪ್ರಮಾಣ ತೀವ್ರವಾಗಿ ಅಸಮತೋಲನದ ಸ್ಥಿತಿಯನ್ನು ತಲುಪಿರುವದಿದೆ. ಕೊಂಡು ತಂದ ಹೆಂಡತಿಯರ ಕತೆಗಳು ಮಾಮೂಲಾಗುತ್ತಿವೆ. ಹಾಗೆಯೇ ದೇಶವ್ಯಾಪಿಯಾಗಿ ಹೆಣ್ಣು ಸಂತಾನದ ಬರವಿರುವ ಹಾಗೆ ವಿವಾಹಕ್ಕೆ ಆಯಾ ಜಾತಿಗಳಲ್ಲಿ ಸಾಕಷ್ಟು ಕನ್ಯೆಯರ ಕೊರತೆಯಿರುವ ನಡುವೆ, ಆಯಾ ಜಾತಿಯ ಉಪಜಾತಿಗಳಲ್ಲಿ ಹಿಂದೆಂದೂ ನಡೆಯದಷ್ಟು ಮದುವೆಗಳು ಈಗೀಗ ನಡೆಯುತ್ತಿವೆ. sex ratioಅದಕ್ಕೆ ಕಾರಣ ಮಹಿಳೆಯರ ಲಿಂಗ ಪ್ರಮಾಣದಲ್ಲಿ ಇಳಿಮುಖತೆ ಆಗಿರುವುದೇ ಆಗಿದೆ. 2011 ರ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಅನೇಕ ಕಡೆಗಳಲ್ಲಿ 1000 ಪುರುಷರಿಗೆ 900 ಕ್ಕಿಂತಲೂ ಕಡಿಮೆ ಸ್ತ್ರೀಯರಿರುವ ರಾಜ್ಯಗಳ ಸಂಖ್ಯೆಯೇ ಸುಮಾರು 9 ರಷ್ಟಿದೆ. ಈಗ ಅತ್ಯಾಚಾರದಿಂದಲೇ ಸುದ್ದಿಯಾಗುತ್ತಿರುವ ದೆಹಲಿಯಲ್ಲಿ 1000 ಪುರುಷರಿಗೆ 866 ರಷ್ಟು ಮಹಿಳೆಯರಿದ್ದಾರೆ. ಹರಿಯಾಣಾದಲ್ಲಿ 877, ಪಂಜಾಬದಲ್ಲಿ 893, ಜಮ್ಮು-ಕಾಶ್ಮೀರದಲ್ಲಿ 883, ಸಿಕ್ಕಿಮ್‌ನಲ್ಲಿ 889, ಯುನಿಯನ್ ಟೆರಿಟರಿಗಳಾದ ಅಂದಮಾನ್ ಮತ್ತು ನಿಕೋಬಾರ್, ಚಂಡಿಗಡ್, ದಾದ್ರ ಮತ್ತು ನಾಗರ ಹವೇಲಿ ದಮನ್ ಮತ್ತು ದ್ಯು ಇಲ್ಲೆಲ್ಲಾ ಮಹಿಳೆಯರ ಲಿಂಗಪ್ರಮಾಣದಲ್ಲಿ ಸಮರೂಪವಿಲ್ಲ. ದಮನ್ ಮತ್ತು ದ್ಯು ನಲ್ಲಂತೂ 1000 ಪುರುಷರಿಗೆ ಬರೀ 618 ರಷ್ಟು ಮಹಿಳೆಯರಿದ್ದಾರೆ. ಕರ್ನಾಟಕ ರಾಜ್ಯವನ್ನು ಗಣನೆಗೆ ತೆಗೆದುಕೊಂಡಾಗ ಇಲ್ಲಿಯ ಲಿಂಗ ಪ್ರಮಾಣ 968 ರಷ್ಟಿದೆ. ಹೀಗಿರುವಾಗಲೂ ನಮ್ಮಲ್ಲಿಯೂ ಅತ್ಯಾಚಾರದ ಪ್ರಕರಣಗಳು ಕಡಿಮೆಯಿಲ್ಲ.

ದೆಹಲಿಯ ಅತ್ಯಾಚಾರ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿತ್ತು. ಅತ್ಯಂತ ಅಮಾನವೀಯವಾಗಿ, ತುಚ್ಚವಾಗಿ ನಡೆದ ಈ ಕೃತ್ಯ 23 ವರ್ಷದ ಯುವತಿಯನ್ನು ನುಂಗಿಹಾಕಿತು. ಕೊನೆಗೂ ಆ ಪಾತಕಿಗಳು ಅವಳನ್ನು ಕೊಂದರು. ದೆಹಲಿಯ ಜನತೆ ರೊಚ್ಚಿಗೆದ್ದು, ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಪ್ರಯತ್ನಿಸಿದ್ದರೊಂದ ಪ್ರಯೋಜನಗಳಾಗಿವೆಯೆಂದು ಅನಿಸದಿದ್ದರೂ ಈ ಬಗೆಯ ಬೃಹತ್ ಪ್ರತಿಭಟನೆ ಈ ವರೆಗೂ ಅತ್ಯಾಚಾರವನ್ನು ವಿರೋಧಿಸಿ ಈ ದೇಶದಲ್ಲಿ ನಡೆದಿರುವದಿಲ್ಲ. ಹಾಗೆ ನಡೆದಿದ್ದರೂ ಇಡೀ ದೇಶದ ಗಮನವನ್ನು ತನ್ನೆಡೆಗೆ ಸೆಳೆವ ನಿಟ್ಟಿನಲ್ಲಿ ಇರಲಿಲ್ಲ. ದೆಹಲಿ ಅತ್ಯಾಚಾರದ ಘಟನೆ ಹಾಗಾಗಲಿಲ್ಲ. ಇನ್ನೇನು ಜನ ಮರೆತುಬಿಡುತ್ತಾರೆ ಎಂದವರಿಗೆ ಶಾಕ್ ಕಾದಿತ್ತು. ಜನ ಬೀದಿಗಿಳಿದರು, ಪೋಲಿಸರ ದಬ್ಬಾಳಿಕೆಗೂ ಜಗ್ಗಲಿಲ್ಲ. ಈ ದೇಶದ ಎಲ್ಲ ಬಗೆಯ ಅನಿಷ್ಟಗಳನ್ನು ಇದೇ ರೀತಿಯಲ್ಲಿ ಜನ ಬೀದಿಗಿಳಿದು ಪ್ರತಿಭಟಿಸುವ ಸಂಸ್ಕೃತಿಯೊಂದು ಸಿದ್ಧ ಮಾದರಿಯಾಗಿ ರೂಪಗೊಳ್ಳದ ಹೊರತು ಜನರ ಸ್ಮರಣೆ ತಾತ್ಕಾಲಿಕ ಎಂದು ಸವಾರಿ ಮಾಡುವ ಪ್ರಭುತ್ವಕ್ಕೆ ಬುದ್ಧಿ ಬರದು.

ದೆಹಲಿಯ ಚಲಿಸುವ ಬಸ್ಸಿನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಹೀಗೆನ್ನುವಾಗಲೇ ಆ ಸೈತಾನರು ಆಕೆಯ ಮೇಲೆ ಮಾಡಿರಬಹುದಾದ ಹಲ್ಲೆಯ ಭೀಕರತೆಯನ್ನು ನಾವು ಊಹಿಸಬಹುದಾಗಿದೆ. ಬರುವ ಫ಼ೆಬ್ರುವರಿ ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಆ ಯುವತಿ ಚಿತೆಯನ್ನು ಏರಬೇಕಾಯಿತು. ಈ ಬಗೆಯ ಪೈಶಾಚಿಕ ಕೃತ್ಯಗಳು ಈಗೀಗ ಮತ್ತೆ ಮತ್ತೆ ದೇಶದ ಇತರೆಡೆಗಳಲ್ಲಿಯೂ ನಿರಂತರವಾಗಿ ನಡೆಯುತ್ತಿವೆ. rape-illustrationದೆಹಲಿಯ ಪ್ರಕರಣ ನಡೆದು ಇನ್ನೂ ತಿಂಗಳೂ ಕಳೆದಿಲ್ಲ, ಅದಾಗಲೇ ನಮ್ಮ ರಾಜ್ಯದಲ್ಲಿ ಹತ್ತಾರು ಈ ಬಗೆಯ ಅತ್ಯಾಚಾರದ ಪ್ರಕರಣಗಳು ನಡೆಯುತ್ತಲೇ ಇವೆ. ಅವು ತೀರಾ ಸಹಜ ಎನ್ನುವ ಹಾಗೆ ಘಟಿಸಿ, ಮರೆಯಾಗುತ್ತಿವೆ. ಈಚೆಗಷ್ಟೇ ಪ್ರವಾಸಕ್ಕೆ ತೆರಳುತ್ತಿದ್ದ ಬಾಲಕಿಗೆ ಡ್ರಾಪ್ ಕೊಡುವದಾಗಿ ಹೇಳಿ ಬೈಕ್ ಮೇಲೆ ಕರೆದೊಯ್ದು ಅತ್ಯಾಚಾರ ನಡೆಸಿದ ಬಗ್ಗೆ ಹಾಸನ ಜಿಲ್ಲೆಯ ಗೊರೂರು ತಾಲೂಕಿನಲ್ಲಿ ವರದಿಯಾಗಿದೆ. ಈ ಅತ್ಯಾಚಾರ ಎನ್ನುವದು ಒಂಥರಾ ಸಮೂಹ ಸನ್ನಿಯಾಗಿ ಪರಿವರ್ತನೆ ಹೊಂದುತ್ತಿದೆಯೇನೋ..? ಎನ್ನುವಷ್ಟು ತೀವ್ರವಾಗಿ ಜರುಗುತ್ತಿವೆ.

ಹೀಗೇ ಆದರೆ ಮುಂಬರುವ ದಿನಗಳಲ್ಲಿ ಮಹಿಳೆಯರ ಲಿಂಗ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ. ಇಲ್ಲಿಯವರೆಗೆ ಪಾಲಕರು ವರದಕ್ಷಿಣೆಗೆ ಹೆದರಿ ಹೆಣ್ಣು ಸಂತಾನವನ್ನು ತಿರಸ್ಕರಿಸುತ್ತಿದ್ದರೆ, ಈಗ ಈ ಅತ್ಯಾಚಾರದ ಸುಳಿಯಿಂದ ಅವರನ್ನು ಕಾಯುವದೇ ಹರಸಾಹಸ ಎಂದು ಬಗೆದು ಹೆಣ್ಣು ಸಂತಾನವನ್ನು ನಿರ್ಲಕ್ಷಿಸಬಹುದಾದ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ಇಡೀ ಸಮಾಜದ ಮನ:ಸ್ಥಿತಿಯೇ ಇಂದು ನೆಟ್ಟಗಿಲ್ಲ. ಹಾಗಾಗಿಯೇ ಪ್ರತಿನಿತ್ಯ ಬರೀ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ಆತ್ಮಹತ್ಯೆ ಇಂಥವುಗಳೇ ಹೆಚ್ಚೆಚ್ಚು ವಿಜೃಂಭಿಸುತ್ತಿವೆ. ಪ್ರಭುತ್ವಗಳು ದುರ್ಬಲ ಮತ್ತು ಅಸಹಾಯಕರ ಬೆನ್ನಿಗೆ ನಿಂತದ್ದು ಚರಿತ್ರೆಯೊಳಗೂ ನಮಗೆ ಕಾಣಸಿಗುವದಿಲ್ಲ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು, ನಮ್ಮ ಮಕ್ಕಳನ್ನು ನಾವೇ ಕಾಯಬೇಕು.

ಮೂಲದಿಂದಲೂ ಲಿಂಗ ತರತಮ ನೀತಿಯನ್ನು ಒಪ್ಪಿಕೊಂಡು, ಅನುಸರಿಸಿಕೊಂಡು ಬಂದ ನಮ್ಮ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ಮೇಲಾಗುವ ಎಲ್ಲ ಬಗೆಯ ದೌರ್ಜನ್ಯಗಳು ಸಹ್ಯ ಎನ್ನುವ ಮನೋಭಾವದ ಎದುರು ಈ ಬಗೆಯ ಅತ್ಯಾಚಾರಗಳು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ಬಗೆಯ ಗಮನ ಸೆಳೆಯುತ್ತದೆ ಎನ್ನುವದೇ ಒಂದು ದೊಡ್ದ ಜಿಜ್ಞಾಸೆ. ಫ಼ೆಮಿನಿಜಂ ನೆಲೆಯಲ್ಲಿ ನಿಂತು ಮಾತನಾಡುವವರಿಗೆ ಪುರುಷ ಪದವನ್ನೂ ಸಹಿಸಲಾಗುವದಿಲ್ಲ. sex-ratioಹೀಗಿರುವ ನಡುವೆ ಮಹಿಳಾ ಸಬಲೀಕರಣದ ಮಾತು ಒಂದು ಸೈದ್ಧಾಂತಿಕ ಹೇಳಿಕೆಯಾಗಿ ಉಳಿಯಬಲ್ಲುದಷ್ಟೆ. ಗಂಡು-ಹೆಣ್ಣು ಇಬ್ಬರ ಸಹಭಾಗಿತ್ವದ ಹೋರಾಟದಲ್ಲಿರುವ ಶಕ್ತಿಗೆ ಮಾತ್ರ ಸಂಚಲನವನ್ನುಂಟು ಮಾಡಬಹುದಾದ ಗುಣಗಳಿವೆ. ಆ ದಿಸೆಯಲ್ಲಿಯೇ ಮಹಿಳೆಯ ಮೇಲಾಗುವ ದೌರ್ಜನ್ಯಗಳನ್ನು ವಿರೋಧಿಸಬೇಕಿದೆ.

ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಹೀಗೆ ನಡೆಯಬಹುದಾದ ದೌರ್ಜನ್ಯಗಳು ಸಾಂಸ್ಕೃತಿಕ ಯಜಮಾನಿಕೆಯ ಡೌಲಿನೊಂದಿಗೆ ನಡೆಯುತ್ತವೆ. ಏನೇ ಮಾಡಿದರೂ ಮೇಲ್ಮುಖಮಾಡಿ ನಡೆಯುವದೇ ತಮ್ಮ ಜಾತಿಯ ಗುಣ ಎಂದು ಪ್ರತಿಪಾದನೆ ಮಾಡುವವರನ್ನು ಅಲ್ಲಿ ಸಹಿಸಿಕೊಳ್ಳುವವರೂ ಇದ್ದಾರೆ. ಹೀಗಿರುವ ನಡುವೆ ದಮನಿತರ ಮೇಲೆ ನಡೆಯುವ ಈ ಲೈಂಗಿಕ ಅತ್ಯಾಚಾರಗಳು ಎಷ್ಟರ ಮಟ್ಟಿನ ನ್ಯಾಯವನ್ನು ಗ್ರಾಮೀಣ ಭಾಗಗಳಲ್ಲಿ ಒದಗಿಸಬಹುದು ಎನ್ನುವದೇ ಒಂದು ದೊಡ್ಡ ಪ್ರಶ್ನೆ.

ಹೀಗೆ ನಿರಂತರವಾಗಿ ಅತ್ಯಾಚಾರದ ಪ್ರಕರಣಗಳು ಘಟಿಸುತ್ತಾ ನಡೆದರೆ, ಅದು ಖಂಡಿತವಾಗಿ ಲಿಂಗ ಪ್ರಮಾಣದ ಅಂತರವನ್ನು ಇನ್ನಷ್ಟು ಹೆಚ್ಚಿಸುವದರಲ್ಲಿ ಸಂಶಯವೇ ಬೇಡ.

“ವರ್ತಮಾನ”ಕ್ಕೆ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ…

ಸ್ನೇಹಿತರೇ,

ಇತ್ತೀಚೆಗೆ ನಮ್ಮ ವರ್ತಮಾನ.ಕಾಮ್ ನಿಯಮಿತವಾಗಿ “ಅನಿಯಮಿತ”ವಾಗುತ್ತಿರುವುದನ್ನು ನೀವು ಗಮನಿಸಿಯೇ ಇರುತ್ತೀರ. ದಿನಕ್ಕೆ ಕನಿಷ್ಟ ಒಂದಾದರೂ ಲೇಖನ ಇರಬೇಕು ಮತ್ತು ಹಾಗಿದ್ದಲ್ಲಿ ಮಾತ್ರ ಅದು ತನ್ನ ಓದುಗವಲಯವನ್ನು ಹಿಡಿದಿಟ್ಟುಕೊಂಡಿರುತ್ತದೆ ಮತ್ತು ವಿಸ್ತರಿಸಿಕೊಳ್ಳುತ್ತದೆ ಎನ್ನುವ ನಂಬಿಕೆ ನನ್ನದು. ಆದರೆ, ಇತ್ತೀಚಿನ ದಿನಗಳಲ್ಲಿ ಅದು ಆಗುತ್ತಿಲ್ಲ. ಕಾರಣಗಳು ಅನಗತ್ಯ.

ಕರ್ನಾಟಕದ ರಾಜಕಾರಣ ಮತ್ತೊಮ್ಮೆ ಪಾತಾಳದಿಂದ ಪಾತಾಳಕ್ಕೆ ಜಾರುತ್ತಿದೆ. ಇದನ್ನೊಂದು ಅಸಂಗತ ನಾಟಕದಂತೆ ನೋಡುತ್ತ ಖುಷಿ ಪಡುವವರಿಗೆ ಬರಲಿರುವ ದಿನಗಳು ಇನ್ನೂ ಮಜಾ ಕೊಡಲಿವೆ. ನಮ್ಮ ಬಹುಪಾಲು ಸಮಸ್ಯೆಗಳಿಗೆ ಸಹನೀಯ ಪರಿಹಾರ ನೀಡಬಲ್ಲ ಪ್ರಜಾಪ್ರಭುತ್ವದ ರಾಜಕಾರಣ ಒಂದು ಒಳ್ಳೆಯ ಸಸ್ಪೆನ್ಸ್-ಥ್ರಿಲ್ಲರ್ ಸಿನೆಮಾದ ಚಿತ್ರಕತೆಯಂತೆ ರೋಚಕವಾಗೇನೋ ಸಾಗುತ್ತಿದೆ.

ಆದರೆ, ಜನತೆಯ ಜೀವನ ಮತ್ತು ಸಾಮಾಜಿಕ ಮೌಲ್ಯಗಳ ಸ್ಥಿತಿಗತಿಗಳೇನು? ರೋಚಕತೆಯ ಅಡ್ಡ ಪರಿಣಾಮಗಳೇನು? ಈಗಾಗಲೆ ರಾಗಿ ಕೆಜಿಗೆ ರೂ.30 ದಾಟಿದೆ. ಅಕ್ಕಿಯೂ ಗಗನಮುಖಿಯಾಗಿದೆ, ಮಧ್ಯಮವರ್ಗವೇನೋ ಬಚಾವಾಗಬಹುದು. ಆದರೆ, ಪಡಿತರ ವ್ಯವಸ್ಥೆಯಿಂದ ಹೊರಗಿರುವ ಬಡವರಿಗೆ ಮತ್ತು ಕೆಳಮಧ್ಯಮವರ್ಗದ ಬಡವರಿಗೆ ಈ ಬೇಸಿಗೆಯಲ್ಲಿ ನೀರೂ ಸಿಗದು. ಚಳಿಗಾಲದ ಮಧ್ಯಾಹ್ನಗಳು ಈಗಾಗಲೆ ಬೇಸಿಗೆಯ ಭಯ ಹುಟ್ಟಿಸುತ್ತಿವೆ. ಅಕ್ಕಿಬೇಳೆ, ನೀರು, ವಿದ್ಯುತ್; ಇವು ಮುಂದಿನ ದಿನಗಳಲ್ಲಿ ಬೇರೆಲ್ಲ ವಿಚಾರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿವೆ ಮತ್ತು ಬಹುಶಃ ಅದೇ ನಮ್ಮ ಮುಂದಿನ ದಿನಗಳ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳನ್ನು ಪ್ರಭಾವಿಸಲಿವೆ.

ಆದರೆ, ಸದ್ಯದ ಮಟ್ಟಿಗೆ ಇವು ಅಂತಹ ಗಂಭೀರ ವಿಷಯಗಳಲ್ಲ. ಮುಂದಿನ ಮೂರು-ನಾಲ್ಕು ತಿಂಗಳು ಕರ್ನಾಟಕದ ಜನರನ್ನು ರಾಜಕೀಯ ಮತ್ತು ಚುನಾವಣೆಗಳು ಆವರಿಸಿಕೊಳ್ಳಲಿವೆ. ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು vartamaana-reqನಮ್ಮ ಮುಂದಿನ ದಿನಗಳನ್ನು ನಿರ್ಧರಿಸುತ್ತವೆ ಎಂಬ ಪರಿವೆ ಇಲ್ಲದೆ ಬಹುಪಾಲು ಜನ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ. ಯಾರೇನು ಮಾಡಬಹುದು?

ವೈಯಕ್ತಿಕವಾಗಿ ಹೇಳುವುದಾದರೆ, ಮುಂದಿನ ಮೂರ್ನಾಲ್ಕು ತಿಂಗಳು ನನ್ನೆಲ್ಲ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಮೀಸಲಿಡಲಿದ್ದೇನೆ. ಅಪ್ರಿಯವಾದರೂ ಹೇಳಬೇಕಾದ, ನ್ಯಾಯವಾದ, ಪ್ರಸ್ತುತವಾದ ವಿಷಯಗಳನ್ನು ನನ್ನ ಕೈಲಾದ ಮಟ್ಟಿಗೆ ಹೇಳುವ ಪ್ರಯತ್ನ ಮಾಡುತ್ತೇನೆ. ಏನು ಮಾಡಿದರೆ ಅದು ಪರಿಣಾಮಕಾರಿಯಾಗಬಲ್ಲುದು ಎನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಫಲ-ನಿಷ್ಫಲಗಳ ಬಗ್ಗೆ ಯೋಚನೆಯಿಲ್ಲ. ಪ್ರಯತ್ನದ ಬಗ್ಗೆಯಷ್ಟೇ ನನ್ನ ಬದ್ಧತೆ.

ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ಗೆ ಎಷ್ಟು ಕೆಲಸ ಮಾಡಬಲ್ಲೆನೋ ಗೊತ್ತಿಲ್ಲ. ಹಾಗಾಗಿ ನಮ್ಮ ಬಳಗದ ಎಲ್ಲಾ ಲೇಖಕರಲ್ಲಿ ಮತ್ತು ಬೆಂಬಲಿಗರಲ್ಲಿ ಈ ಮೂಲಕ ವಿನಂತಿ ಮಾಡುವುದೇನೆಂದರೆ, ದಯವಿಟ್ಟು ಹೆಚ್ಚುಹೆಚ್ಚು ಬರೆಯಿರಿ ಮತ್ತು ಈ ವೇದಿಕೆ ಇನ್ನಷ್ಟು ಸಶಕ್ತವಾಗಿಸಲು ನಿಮ್ಮ ಕೈಲಾದುದನ್ನು ಮಾಡಿ. ಬರಹ ನಿಲ್ಲಿಸಿರುವವರು ಮತ್ತೆ ಆರಂಭಿಸಿ, ಕಡಿಮೆ ಬರೆಯುತ್ತಿರುವವರು ಹೆಚ್ಚು ಮಾಡಿ, ಬರೆಯದೇ ಇದ್ದವರು ಬರೆಯಲು ಆರಂಭಿಸಿ. ಬರೆಯಲು ವಿಷಯಗಳಿಗೇನೂ ಕೊರತೆಯಿಲ್ಲ. ಮತ್ತು ವರ್ತಮಾನ.ಕಾಮ್‌ನ ಆಶಯ ಮತ್ತು ಕಾಳಜಿಗಳು, ಅದರಲ್ಲಿ ಎತ್ತಲ್ಪಡುವ ವಿಷಯಗಳು, ಅದಕ್ಕಿರುವ ಓದುಗವಲಯ, ಮತ್ತು ಅದರ ಹಿಗ್ಗುತ್ತಲೇ ಇರುವ ಪ್ರಸ್ತುತತೆ; ಇವೆಲ್ಲ ನಿಮಗೆ ಗೊತ್ತಿರುವಂತಹುದೇ.

ಮತ್ತು, ಚುನಾವಣೆ ಮುಗಿದ ನಂತರ ಕನಿಷ್ಟ ಕೆಲವು ತಿಂಗಳುಗಳನ್ನು ವರ್ತಮಾನ.ಕಾಮ್‌ಗೆ ಮೀಸಲಿಡುತ್ತೇನೆ. ಅದಕ್ಕೆ ಪೂರಕವಾಗಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಮತ್ತು ಇತರೆ ಆಯಾಮಗಳತ್ತಲೂ ಆಲೋಚಿಸಬೇಕಿದೆ. ಈ ವರ್ಷ ವರ್ತಮಾನ.ಕಾಮ್‌ಗೂ ನಿರ್ಣಾಯಕ ವರ್ಷವಾಗಲಿದೆ. ಇಲ್ಲಿಯತನಕ ಕೈಹಿಡಿದವರು ಕೈಬಿಡಲಾರರು ಎನ್ನುವ ನಿರೀಕ್ಷೆಯಲ್ಲಿ…

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಇಲ್ಲಿರಲಾರೆ, ನಾನಲ್ಲಿಗೆ ಹೋಗಲಾರೆ…

– ಬಿ.ಶ್ರೀಪಾದ ಭಟ್

ಬಂಡಾಯದಲ್ಲಿ ತೊಡಗುವ ಪ್ರತಿಯೊಬ್ಬನಿಗೂ ಬಂಡಾಯ ಮತ್ತು ಬದಲಾವಣೆ ಸಾವು ಬದುಕಿನ ಪ್ರಶ್ನೆಯಾಗಿದ್ದಾಗ ಅದಕ್ಕೆ ಅರ್ಥ ಬರುತ್ತದೆ. ಹಾಗೆಯೇ ಬಂಡಾಯಗಾರನಿಗೆ ತಾನು ಒಡೆದು ಬೀಳಿಸುತ್ತಿರುವ ವ್ಯವಸ್ಥೆ ಯಾವ ರೀತಿಯಲ್ಲಿ ಕೆಲಕಾಲವಾದರೂ ಜೀವನವನ್ನು ಪೊರೆದಿತ್ತು ಎಂಬ ಅರಿವಿರಬೇಕು. ಜೀವನ್ಮರಣದ ಪ್ರಶ್ನೆಯಾದಾಗಲೇ ಬಂಡಾಯ ಮನುಷ್ಯನಾಳದ ಮೌನ ಕೂಡ ಆಗುತ್ತದೆ. ಹಾಗಾದಾಗಲೇ ಅದು ಬಂಡಾಯಗಾರನ ಬೊಬ್ಬೆ,ಘೋಷಣೆಗಳಿಗೆ ಕೂಡ ಶಕ್ತಿ ಒದಗಿಸುತ್ತದೆ. ಒಬ್ಬ ಎಚ್ಚರವಾಗಿದ್ದೂ ಸುಪ್ತಲೋಕವನ್ನು ಪ್ರವೇಶಿಸಬಲ್ಲ, ತನ್ನ ಸುತ್ತಣ ಜಡತ್ವವನ್ನರಿತು ಜೀವಂತಿಕೆಗಾಗಿ ಪ್ರಯತ್ನಿಸಬಲ್ಲ, ಆದರೆ ಪ್ರತಿಭಟನೆಯವನು ಒಂದೇ ಸ್ತರದಲ್ಲಿ ಉಳಿಯುವ ಅಪಾಯವಿದೆ.  – ಪಿ.ಲಂಕೇಶ್

ಸಾಹಿತ್ಯದ ಮೂಲ ಲಕ್ಷಣಗಳೇನು ಎನ್ನುವ ಜಿಜ್ಞಾಸೆಗಳು ಮತ್ತು ವಾಗ್ವಾದಗಳು ಬಂಡಾಯ ಸಾಹಿತ್ಯ ಶುರುವಾದ ಎಪ್ಪತ್ತರ ದಶಕದಿಂದ lankeshಮೊದಲುಗೊಂಡು ಇಪ್ಪತ್ತೊಂದನೇ ಶತಮಾನದ ಎರಡನೇ ದಶಕದವರೆಗೂ ಮುಂದುವರೆದಿದೆ. ಈ ಚರ್ಚೆಗಳಲ್ಲಿ ನವ್ಯ ಮತ್ತು ಬಂಡಾಯಗಳೆಂಬ ಎರಡು ವಿಭಿನ್ನ ಸಾಹಿತ್ಯಕ ಘಟ್ಟಗಳೇ ಕೇಂದ್ರ ಸ್ಥಾನ ಪಡೆದುಕೊಂಡು ಆಯಾ ಕಾಲಘಟ್ಟಗಳಲ್ಲಿ ರಚಿತವಾದ ಸಾಹಿತ್ಯಕ ಕೃತಿಗಳನ್ನು ಪರೀಕ್ಷೆಗೆ ಒಳಪಡಿಸಿ ನಾನು ಅದರ ವಿರೋಧಿ ಮತ್ತು ಇದರ ಪರ ಎನ್ನುವ ಸ್ಪಷ್ಟವಾದ, ಗೆರೆ ಎಳೆದಂತಹ ನಿಲುವುಗಳನ್ನೊಳಗೊಂಡ ಎಂಬತ್ತರ ಮತ್ತು ತೊಂಬತ್ತರ ದಶಕಗಳ ಕಾಲವನ್ನು ದಾಟಿ ನನಗೆ ನವ್ಯದ ಕಲೆಗಾರಿಕೆ ಮತ್ತು ಬಂಡಾಯದ ಸಾಮಾಜಿಕತೆ ಮಾತ್ರ ಮುಖ್ಯ ಎಂದು ಅಭಿಮತವನ್ನು ವ್ಯಕ್ತಪಡಿಸುವ ಇಂದಿನ ತಲೆಮಾರಿನ ಲೇಖಕರವರೆಗೂ ಈ ಘೋಷಿತ ಸಾಹಿತ್ಯಕ ಧೋರಣೆಗಳು ಹರಿದು ಬಂದಿದೆ.

ಆದರೆ ಅಂದಿನ ಕಾಲದಿಂದ ಶುರುವಾಗಿ ಇಂದಿನ ತಲೆಮಾರಿನವರೆಗೂ ಪ್ರತಿಯೊಬ್ಬ ಸಾಹಿತಿಯೂ ಒಂದು ನಿಯಂತ್ರಿತ ಶಕ್ತಿಗೆ ಒಳಗಾಗಿ ಮಾತನಾಡುತ್ತ ತನ್ನನ್ನು ತಾನು ಇಂದಿನ ಸಂದರ್ಭಕ್ಕೆ ಪ್ರಸ್ತುತವಾಗಿದ್ದೇನೆ ತಾನೆ ಎನ್ನುವ ಜಾಣ ಎಚ್ಚರಿಕೆಯನ್ನು ಮೈಗೂಡಿಸಿಕೊಳ್ಳುತ್ತ ತನ್ನ ಧೋರಣೆಗಳನ್ನು ವ್ಯಕ್ತಪಡಿಸುತ್ತಿರುವುದು ಮಾತ್ರ ಒಂದು ದುರಂತ. ಇಲ್ಲದಿದ್ದರೆ ಎಷ್ಟೇ ಶತಮಾನಗಳು ಕಳೆಯಲಿ ತನ್ನ ಮೂಲ ಲಕ್ಷಣವಾದ ಅಂತರಂಗದ ಶಕ್ತಿಯನ್ನಾಧರಿಸಿ, ಸಾಹಿತ್ಯದ ಆ ಅಂತರಂಗದ ಶಕ್ತಿಯನ್ನು ಲೇಖಕನು ತನ್ನ ಪ್ರತಿಭೆಯನ್ನು ಕಥೆ, ಕಾವ್ಯ, ಕಾದಂಬರಿಗಳ ಮೂಲಕ ಹೊರ ಹಾಕುತ್ತಾನೆ, ಹೀಗೆ ಹೊರ ಹಾಕುವ ಸಂದರ್ಭದಲ್ಲಿ ಬಹಿರಂಗದ ವಾಸ್ತವಗಳ ಘಟನೆಗಳನ್ನು ನೇರವಾಗಿಯೋ, ರೂಪಕಗಳಾಗಿಯೋ ಬಳಸಿಕೊಳ್ಳುತ್ತಾನೆ. ಆ ಮೂಲಕ ಪದೇ ಪದೇ ಎದುರಾಗುವ ಹೊಸ ಬಗೆಯ ಸವಾಲುಗಳಿಗೂ ಉತ್ತರಿಸುತ್ತಿರುತ್ತಾನೆ. ಇದುವೇ ಸಾಹಿತ್ಯ ಪರಂಪರೆಯ ಸಹಜ ದೃಷ್ಟಿ ಎಂದು ನಮಗೇಕೆ ಅರ್ಥವಾಗುತ್ತಿಲ್ಲ?

ಪಂಪನಿಂದ ಶುರುವಾದ ಈ ಸಾಹಿತ್ಯದ ಪರಂಪರೆ ಇಂದಿನ ತಲೆಮಾರಿನ ಕವಿ ಅರೀಫ್ ರಾಜರವರೆಗೆ ಬಂದು ನಿಂತಿದೆ. ಈ ಪರಂಪರೆಗಳಲ್ಲಿ ಬಂದಂತಹ ಸಾಹಿತ್ಯದ ಅಭಿವ್ಯಕ್ತಿ ಕ್ರಮಗಳು ಅನನ್ಯವಾಗಿದ್ದು ಮತ್ತು ಯಾವುದೇ ಒಳಗಿನ ಮತ್ತು ಹೊರಗಿನ ಪ್ರಭಾವಳಿಗಳಿಂದ ಮುಕ್ತವಾಗಿಯೇ ಕೃತಿಗಳು ರಚನೆಗೊಂಡಿವೆ. ಈ ಪರಂಪರೆಯ ಸಾಹಿತ್ಯವು ಮೂಲಭೂತವಾಗಿ ನೆಚ್ಚಿದ್ದು ಸದಾ ಕಾಲ ಅಲ್ಲಾಡಿಸುತ್ತಿರುವ ಸಾಹಿತಿಯ ಅಂತರಂಗದ ಮೂಲಭೂತ ಸಂವೇದನೆಯನ್ನು. ಈ ಸಂವೇದನೆಗೆ ಬಹಿರಂಗದ ಸಾಮಾಜಿಕ ಕಾರಣಗಳನ್ನು ಪೂರಕವಾಗಿ ಬಳಸಿಕೊಂಡು ಈ ಪರಂಪರೆಯ ಲೇಖಕರು ತಮ್ಮ ಸಾಹಿತ್ಯವನ್ನು ರಚಿಸಿದರು. ವಾಸ್ತವಿಕತೆ, ಅನುಭವ, ಸೃಜನಶೀಲತೆ, ತಲ್ಲಣಗಳ ಗ್ರಹಿಕೆ ಎಲ್ಲವನ್ನೂ ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳ ಪರಸ್ಪರ ಪೂರಕ ನೆಲೆಗಳಲ್ಲಿ ಸಮರ್ಥವಾಗಿ ಅರಿತುಕೊಂಡಾಗ ಮಾತ್ರ ನಿಜದ, ಜನಪರ ಸಾಹಿತಿಯಾಗುತ್ತಾನೆ. ಬದಲಾಗಿ ನಾನೊಂದು ಕೇಂದ್ರಗೊಂಡ ನೆಲೆಯ ಧೋರಣೆಯನ್ನು ನೆಚ್ಚಿಕೊಂಡು ಮಾತ್ರ ಸಾಹಿತ್ಯವನ್ನು ರಚಿಸುತ್ತೇನೆ ಮತ್ತು ಅದು ಸಮಾಕಾಲೀನ ಸಂದರ್ಭದಲ್ಲಿ ನನಗೊಂದು ನೆಲೆ ಒದಗಿಸುತ್ತದೆ, ಖ್ಯಾತಿ ತಂದು ಕೊಡುವ ಸಾಧ್ಯತೆಗಳಿವೆ ಎಂದುಕೊಂಡು ಹೊರಟರೆ ನಮ್ಮ ಕತೆ ಮುಗಿಯಿತೆಂದರ್ಥ. ಫಿನಿಷ್!!.

ಎಂಬತ್ತರ ದಶಕದಲ್ಲಿ ಯುವ ಹೋರಾಟಗಾರ, ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಬೆಂಜಮಿನ್ ಮೋಲಾಯ್ಸ್ Benjamin_Moloise_Livesಕುರಿತಾಗಿ ಆ ಕಾಲದಲ್ಲಿ ವಿಧ್ಯಾರ್ಥಿಗಳಾಗಿದ್ದ ನಾವೆಲ್ಲ ಬಂಡಾಯ ಚಳುವಳಿಯ ಪ್ರಭಾವಳಿಯಲ್ಲಿ ಬರೆದ ಸಾವಿರಾರು ಪದ್ಯಗಳು ಕಸದ ಬುಟ್ಟಿಗೆ ಸೇರಲು ಬಹುಕಾಲ ಹಿಡಿಯಲಿಲ್ಲ! ಇದು ಒಂದು ಸಣ್ಣ ಉದಾಹರಣೆಯಷ್ಟೇ. ಇಂತಹವು ಸಾವಿರಾರಿವೆ. ಲಂಕೇಶರು ಆಗ ಬಂಡಾಯದ ನಮ್ಮನ್ನೆಲ್ಲ ಡಂಬಾಯದವರೆಂದು ವ್ಯಂಗವಾಡುತ್ತಿದ್ದುದು ಕೇವಲ ವ್ಯಂಗವಲ್ಲ, ಅವರ ಆಳದಲ್ಲಿ ನೋವಿತ್ತು. ನಾವು ವೈಯುಕ್ತಿಕವಾಗಿ ಸುಮ್ಮನೆ ಕುಳಿತಿಲ್ಲ, ನಮ್ಮಲ್ಲಿಯೂ ಸಾಮಾಜಿಕ ಪ್ರಜ್ಞೆಯಿದೆ, ನೋಡಿ ನಾವೆಲ್ಲ ಹೇಗೆ ತರುತ್ತೇವೆ ಸಾಮಾಜಿಕ ಬದಲಾವಣೆಗಳನ್ನು ಎಂದು ಅತ್ಯುತ್ಸಾಹದಿಂದ ಹೊರಟ ತೊಂಬತ್ತರ ದಶಕದ ನಮ್ಮ ತಲೆಮಾರಿನ ಆ ಗುಂಪು ಮುಗ್ಗರಿಸಲು ಬಹಳ ಕಾಲ ಬೇಕಾಗಲಿಲ್ಲ. ನಮ್ಮ ಕತ್ತಿವರಸೆಯ ಬೀದಿ ಹೋರಾಟದ ಈ ಆವೇಶ ನಮ್ಮ ತಲೆಮಾರಿಗೆ ಕಟು ಪ್ರಾಮಾಣಿಕತೆಯನ್ನು, ಸೈದ್ಧಾಂತಿಕ ಬದ್ಧತೆಯನ್ನು, ಜಾತ್ಯಾತೀತತೆಯನ್ನು ತಂದು ಕೊಟ್ಟಿದ್ದು ನಿಜವೇ. ಆದರೆ ಅದು ಯಾವುದೇ ಅನುಭವಗಳಿಲ್ಲದ, ಕೇವಲ ಸರಳ ಮಾದರಿಗಳಾದ ಸಮಾಜವಾದ, ಮಾರ್ಕ್ಸವಾದಗಳನ್ನು ಪುಂಖಾನುಪುಂಖವಾಗಿ ಉರುಹೊಡೆದು ಬೆಂಕಿಯುಗುಳುತ್ತಿದ್ದ, ಕೇವಲ ಬೌದ್ಧಿಕ ಕಸರತ್ತನ್ನು ನೆಚ್ಚುತ್ತಿದ್ದ ಈ ಮಾದರಿಯ ಗುಂಪನ್ನು ತೊಂಬತ್ತರ ದಶಕದಲ್ಲಿ ಲಂಕೇಶರು “ಅಗ್ನಿ ಭಕ್ಷಕರು” ಎಂದು ಕರೆದರು. ಇಲ್ಲದಿದ್ದರೆ ಕುವೆಂಪು “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ” ಎಂದು ಸುಖಾ ಸುಮ್ಮನೆ ಹೇಳಲಿಲ್ಲ!! ಇಲ್ಲದಿದ್ದರೆ ಎಪ್ಪತ್ತರ ದಶಕದಲ್ಲಿ “ಹೊಸ ದಿಗಂತದೆಡೆಗೆ” ಎಂದು ಬರೆದ ತೇಜಸ್ವಿ, ಮೂವತ್ತು ವರ್ಷಗಳ ನಂತರ ಇಪ್ಪತ್ತೊಂದನೇ ಶತಮಾನದಲ್ಲಿ ಹೊಸ ಕಾಲದ, ಹೊಸ ಭಾಷೆಯ, ಹೊಸ ನುಡಿಕಟ್ಟಿನ ಅನ್ವೇಷಣೆ ಎಂದು “ಮಾಯಾಲೋಕ”ವನ್ನು ಬರೆದದ್ದು ಸುಮ್ಮನೆಯೇ? ಹಾಗೆಯೇ ಅನೇಕ ಪ್ರಗತಿಪರ ತಲೆಮಾರುಗಳನ್ನು ರೂಪಿಸಿದ ಈ ಜೀನಿಯಸ್ ಲೇಖಕರು ಅಕ್ಟಿವಿಸಂಗಳಿಗೆ ನಮಸ್ಕಾರ ಹೊಡೆದಿದ್ದೇಕೆ ಎಂಬುದನ್ನು ನಾವು ಸರಿಯಾಗಿ ಗ್ರಹಿಸದೆ ಹೋದರೆ ಅದು ನಮ್ಮೆಲ್ಲರ ಸೋಲು.

ಮೇಲಿನ ಎಲ್ಲ ವೈರುದ್ಧ್ಯಗಳು ಮತ್ತು ವಿರೋಧಾಭಾಸಗಳನ್ನು ಮೀರಲೆಂದೇನೋ ಎಂಬಂತೆ ಹುಟ್ಟಿಕೊಂಡಿದ್ದು ಯಾವುದೇ ಹಣೆಪಟ್ಟಿಗಳಿಲ್ಲದ, ಸಿದ್ಧಾಂತಗಳ ಹಂಗಿಲ್ಲದ ಸಾಹಿತಿಗಳ ಹೊಸ ಗುಂಪು ಅರ್ಥಾತ್ ಭಜನಾ ಮಂಡಳಿ. ಸಾಮಾಜಿಕ ಜವಾಬ್ದಾರಿಗಳ ಅವಶ್ಯಕತೆ ಏಕೆ ಎಂದು ಪ್ರಶ್ನಿಸುತ್ತಾರೆ ಈ ಭಜನಾ ಮಂಡಳಿಯ ಸದಸ್ಯರು. ಬಹುಪಾಲು ವಿಪ್ರವೃಂದವೇ ತುಂಬಿಕೊಂಡಿರುವ, ಯಾವುದೇ ಸಿದ್ಧಾಂತಗಳ ಹಂಗಿಲ್ಲದ ಈ ಭಜನಾ ಮಂಡಳಿಗೆ ಪರಸ್ಪರ ಬೆನ್ನು ಕೆರೆದುಕೊಳ್ಳುವ ಖ್ವಾಯಿಷ್ ಬಹಳ. ಅದೇ ಅವರ ಬಂಡವಾಳ. ಬ್ರಾಹ್ಮಣೇತರರಿಗೆ ಪ್ರವೇಶ ಬಹಳ ಕಡಿಮೆ. ಸಿಕ್ಕರೂ ಅವರು ನವ ಬ್ರಾಹ್ಮಣರಾಗಿರಬೇಕು!! ನಮ್ಮದು ದೇಶ ಮತ್ತು ಕಾಲದ ಸಾಹಿತ್ಯ ಎಂದು ಹೆಮ್ಮೆಯಿಂದ ಹೇಳುವ ಈ ಗುಂಪಿಗೆ ಆಕರ್ಷಕವಾಗಿ ಬರೆಯುವ ಜನಪ್ರಿಯ ಶೈಲಿ ಸಿದ್ಧಿಸಿದೆ. ಬರೆಯುವ ಕಸುಬುಗಾರಿಕೆಯನ್ನು ಅದ್ಭುತವೆನ್ನುವಷ್ಟರ ಮಟ್ಟಿಗೆ ತಮ್ಮದಾಗಿಸಿಕೊಂಡಿದ್ದಾರೆ. ಸಾಹಿತ್ಯವನ್ನು ಕೋಮುವಾದ, ಸಾಮಾಜಿಕ ಅಸಮಾನತೆ, ಶೋಷಣೆ, ವರ್ಗ ಸಂಘರ್ಷಗಳೆಂದು ವಿಂಗಡಿಸಬಾರದೆಂದು ಸ್ಪಷ್ಟವಾಗಿ ಹೇಳುತ್ತಾರೆ ಈ ವಟುಗಳು. ಅಕ್ರಮಗಳು, ಅಸಮಾನತೆಗಳ ಫಲವಾಗಿ ವ್ಯವಸ್ಥೆಯ ಹೊಳೆಯಲ್ಲಿ ಮನುಜನ ರಕ್ತವೇ ಹರಿದು ಹೋಗುತ್ತಿದ್ದರೂ ಅದಾವುದರ ಪರಿವಿಲ್ಲದೇ ದಂಡೆಯ ಮೇಲೆ ಕುಳಿತು ಹಕ್ಕಿ ಹಾರುತಿದೆ ನೋಡಿದಿರಾ ಎಂದು ರಮ್ಯವಾಗಿ, ಸುಶ್ರಾವ್ಯವಾಗಿ ಹಾಡುವ ಈ ಗುಂಪು, ಮುಂದುವರೆದು ರಸಾನುಭವವೇ ನಮ್ಮ ಜೀವಾಳ ಅದನ್ನು ನಮ್ಮ ಅನುಭವದಿಂದ ಹೆಕ್ಕಿ ಹೆಕ್ಕಿ ತೆಗೆದು ನಿಮಗೆ ರಸವತ್ತಾಗಿ ಉಣ ಬಡಿಸುತ್ತೇವೆ, ನೀವು ಸಹ ಅಷ್ಟೇ ಹೊಟ್ಟೆ ತುಂಬಾ ಉಂಡು ತೇಗಿರಿ ಎಂದು ಆಹ್ವಾನಿಸುತ್ತದೆ. ಅದರ ಪ್ರತಿಫಲವೇ ತಿಂಗಳಿಗೆ ಸರಾಸರಿ ಮೂರರಿಂದ ನಾಲ್ಕು ಪುಸ್ತಕಗಳ ಪ್ರಕಟಣೆ, ಚರ್ಚೆ, ವಡೆ, ಉಪ್ಪಿಟ್ಟು, ಕೇಸರಿ ಭಾತುಗಳ ಫಲಾಹಾರ, ಇತ್ಯಾದಿ,ಇತ್ಯಾದಿ. ಜಾಗತೀಕರಣವನ್ನು ಬಳಸಿಕೊಂಡ ಈ ಆಧುನಿಕ ಬ್ರಾಹ್ಮಣರ ಪ್ರಹಸನ ಇಂದು ಕೇಂದ್ರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಕಳೆದ ಎಂಟು ವರ್ಷಗಳಿಂದ ಸಂಘ ಪರಿವಾರದ ಆಡಳಿತವಿರುವುದು ಹಾಗೂ ಇದೇ ಕಾಲಘಟ್ಟದಲ್ಲಿ ಈ ವಟುಗಳು ಪ್ರವರ್ಧಮಾನಕ್ಕೆ ಬಂದು ರಾಜ್ಯಾದ್ಯಾಂತ ನಳನಳಿಸುತ್ತಿರುವುದಕ್ಕೆ ಅನೇಕ ಒಳ ಸಂಬಂಧಗಳಿವೆ. ಅರೆಸ್ಸೆಸ್ ಗುಂಪು ಅಧಿಕಾರದಲ್ಲಿದ್ದರೆ ಬ್ರಾಹ್ಮಣ್ಯ ಮೇಲುಗೈ ಸಾಧಿಸುತ್ತದೆ ಎಂಬುದಕ್ಕೆ ಕಳೆದ ಒಂದು ದಶಕದಲ್ಲಿ ಮೇಲಿನ ಭಜನಾ ಮಂಡಳಿಯು ಗಳಿಸಿದ ಜನಪ್ರಿಯತೆಯೇ ಸಾಕ್ಷಿ.

ಸಾಹಿತ್ಯದಲ್ಲಿ ಶ್ರೇಷ್ಟತೆಯ ಕುರಿತಾಗಿ ನಮ್ಮ ಕಾಮ್ರೇಡ್‌ರು ಅನಗತ್ಯವಾಗಿ ತಲೆಕೆಡಿಸಿಕೊಂಡಿರುವುದರ ಬಗ್ಗೆ ಪೂರಕವಾಗಿ ಇಷ್ಟೆಲ್ಲವನ್ನು ಬರೆಯಬೇಕಾಗಿ ಬಂದಿದ್ದು. ತೊಂಬತ್ತರ ದಶಕದಲ್ಲಿ ನಡೆದ ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಈ “ಶ್ರೇಷ್ಟತೆಯ ವ್ಯಸನ”ವೆನ್ನುವ ಪದವನ್ನು ಕೆ.ವಿ.ಸುಬ್ಬಣ್ಣ ಹುಟ್ಟು ಹಾಕಿದರು. DR nagarajಕಸಾಪದ ಅಸಾಹಿತ್ಯಕ ಧೋರಣೆಗೆ ವಿರುದ್ಧವಾಗಿ ಲಂಕೇಶ್, ಡಿ.ಆರ್.ನಾಗರಾಜ್, ಕಿ.ರಂ.ನಾಗರಾಜ್ ಮತ್ತವರ ಸ್ನೇಹಿತರು ನಡೆಸಿದ ಜಾಗೃತ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ಸಂದರ್ಭದಲ್ಲಿ ಗೋಪಾಲ ಕೃಷ್ಣ ಅಡಿಗರು ಸಾಹಿತ್ಯದಲ್ಲಿ ಶ್ರೇಷ್ಟತೆ ಎನ್ನುವುದು ನನಗೆ ಜೀವನ್ಮರಣದ ಪ್ರಶ್ನೆ ಎಂದರು. ಇದನ್ನು ಲಂಕೇಶರು ಸಂಪೂರ್ಣವಾಗಿ ಅನುಮೋದಿಸಿದರು. ಆದರೆ ಲಂಕೇಶ್ ಮತ್ತು ಅಡಿಗರು ಈ ಶ್ರೇಷ್ಟತೆಯನ್ನು ಎಂದಿಗೂ ವರ್ಣನಾತ್ಮಕಾವಾಗಿ ಹಾಗೂ ಸೌಂದರ್ಯಾತ್ಮಕವಾಗಿ ಬಳಸಿ ಹೇಳಿರಲಿಲ್ಲ.( ಇದರ ಕುರಿತಾಗಿ ಚಿಂತಕ ಡಿ.ಎಸ್.ನಾಗಭೂಷಣ ಅವರು 2011 ರಲ್ಲಿ, “ಸಂವಾದ” ಮಾಸ ಪತ್ರಿಕೆಯಲ್ಲಿ ಅತ್ಯಂತ ಮೌಲಿಕವಾದ, ವಿವರವಾದ, ಉತ್ತಮವಾದ ಲೇಖನವನ್ನು ಬರೆದಿದ್ದಾರೆ).

ಎಂಬತ್ತರ ದಶಕದಲ್ಲಿ ಈ ಯುವ ಸಮೂಹ ಬಂಡಾಯದ ಹೆಸರಿನಲ್ಲಿ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಸುವಿಲ್ಲದೆ, ತೆಳುವಾಗಿ ಬರೆದು ನಾಮಾವಶೇಷವಾಗಿ ಹೋಗುತ್ತಾರೆ ಎಂದು ಲಂಕೇಶರಿಗಂತೂ ಮನದಟ್ಟಾಗಿತ್ತು. ಅದಕ್ಕೇ ಬಂಡಾಯದ ಕೃತಿ “ಕಪ್ಪು ಕಾವ್ಯ”ಕ್ಕೆ ಬೆನ್ನುಡಿ ಬರೆಯುತ್ತಾ “ಕಾವ್ಯ ಕನ್ನಿಕೆಯ ತೊಡೆಯ ಮೇಲೆ ಮಲಗಿ ನಾವು ಅಳುವಂತಾದ್ದೇನಿದೆ” ಎಂದು ಪ್ರಶ್ನಿಸಿದ್ದರು. ಶತಮಾನಗಳು ದಾಟಿದರೂ ಲೇಖಕನೊಬ್ಬನ ಸಾಹಿತ್ಯವು ಕಣ್ಮರೆಯಾಗದೆ ತನ್ನ ಐಡೆಂಟಿಟಿಯನ್ನು ಕಳೆದುಕೊಳ್ಳದೆ ಬದುಕಿ ಉಳಿಯಬೇಕು, ಅಂತಹ ಸಾಹಿತ್ಯವನ್ನು ರಚಿಸಬೇಕೆಂದು ಲಂಕೇಶ್ ಸದಾ ಆಶಿಸುತ್ತಿದ್ದರು. ಕಾವ್ಯದ ಕುರಿತಾಗಿ ಬರೆಯುತ್ತಾ ಲಂಕೇಶರು ಹೇಳುತ್ತಾರೆ, “ಕಾವ್ಯದಲ್ಲಿ ಶ್ರೇಷ್ಟತೆ ಕುರಿತಾಗಿ ಮಾತನಾಡುವವರು, ಉತ್ತಮ ಕಾವ್ಯಕ್ಕಾಗಿ ಶೋಧಿಸುತ್ತಲೇ ಹೋಗುವ ವಿಮರ್ಶಕರು ನಿಜಕ್ಕೂ ಸೂಚಿಸುವುದು ಒಂದು ಸಮಾಜಕ್ಕೆ ಕಾವ್ಯ ಎಷ್ಟು ಅನಿವಾರ್ಯ ಎಂಬುದನ್ನು. ಒಬ್ಬ ಉತ್ತಮ ಕವಿಯ ಕಾವ್ಯ ಅಚ್ಚಾದಾಗ ಕೇವಲ ಇನ್ನೂರು ಜನ ಅದನ್ನು ಓದಬಹುದು, ಅವರಲ್ಲಿ ಅನೇಕರನ್ನು ಅದು ಮುಟ್ಟದಿರಬಹುದು. ಆದರೆ ಅದು ಅರ್ಥಪೂರ್ಣ ಕಾವ್ಯವಾಗಿದ್ದರೆ ಕೇವಲ ಹತ್ತು ಜನರ ಹೃದಯವನ್ನು ಮುಟ್ಟಿ ಒಂದು ಜನತೆಯ ನುಡಿಕಟ್ಟಿನ, ಪ್ರಜ್ಞೆಯ ಭಾಗವಾಗುವ ಶಕ್ತಿ ಪಡೆದಿರುತ್ತದೆ.” ಲಂಕೇಶರು ಸಾಹಿತ್ಯದಲ್ಲಿ ಶ್ರೇಷ್ಟತೆಯನ್ನು ಬಯಸಿದ್ದು ಈ ಹಿನ್ನೆಲೆಯಲ್ಲಿ. ಯಾವುದೇ ಪ್ರುಭುತ್ವದ ಮುಖವಾಣಿಯಾಗದೇ, ರಾಜೀ ಗುಣವನ್ನು, ಗುಲಾಮಗಿರಿಯನ್ನು ನಿರಾಕರಿಸಿ, ಸಮಾಜದ, ಜನತೆಯ ವಿಶ್ವಾಸಾರ್ಹತೆಯನ್ನು ನಿರಂತರವಾಗಿ ಉಳಿಸಿಕೊಂಡ ಸಾಹಿತ್ಯ ರಚನೆಗೊಳ್ಳಬೇಕು, ಅದು ತಂತಾನೇ ಶ್ರೇಷ್ಠ ಸಾಹಿತ್ಯವಾಗುತ್ತದೆ ಎಂದು ವಿವರಿಸಿದ ಲಂಕೇಶರು, ಇದಕ್ಕೆ ಉದಾಹರಣೆಯಾಗಿ ಯುರೋಪಿನ, ಅಮೇರಿಕಾದ, ಇಂಡಿಯಾದ ನೂರಾರು ಲೇಖಕರ ಸಾಹಿತ್ಯವನ್ನು ವಿವರಿಸಿದರು.

ಆದರೆ ಆಗ ಬಂಡಾಯ ಚಳುವಳಿಯೊಂದಿಗೆ ಜಗಳ ಕಾಯ್ದುಕೊಂಡಿದ್ದ ಲಂಕೇಶ್ ಮತ್ತು ಅವರ ಸ್ನೇಹಿತರ ವಿರುದ್ಧ ಈ ಶ್ರೇಷ್ಟತೆಯ ವ್ಯಸನದ ಪದಬಳಕೆಯು ಅಸ್ತ್ರವಾಗಿ ಪ್ರಯೋಗಗೊಂಡು ಇದೇ ಧೋರಣೆ ಮುಂದಿನ ಎರಡು ದಶಕಗಳ ಕಾಲ ಚಾಲ್ತಿಯದ್ದು ಯಾರಾದರೂ ಶ್ರೇಷ್ಟತೆ ಎಂದಾಕ್ಷಣ ಅವರ ವಿರುದ್ಧ ಈ ಶ್ರೇಷ್ಟತೆಯ ವ್ಯಸನವನ್ನು ಆರೋಪಿಸಿ ಬಾಯಿ ಮುಚ್ಚಿಸಲಾಗುತ್ತಿದೆ. ಇದರ ಮಿತಿಯನ್ನರಿಯದೆ ನಮ್ಮ ಪ್ರಗತಿಪರ ಸ್ನೇಹಿತರನೇಕರೂ ಸಹ ಮತ್ತೆ ಮತ್ತೆ ಈ ಶ್ರೇಷ್ಟತೆಯ ವ್ಯಸನದ ಕುರಿತಾಗಿ ಮಾತನಾಡುತ್ತಾ ಅದನ್ನು ಸಾರ್ವತ್ರೀಕರಿಸುತ್ತಿರುವುದು ನನ್ನಂತಹವರಿಗೆ ಸಹಮತವಿಲ್ಲ. ಈ ಟೀಕೆಯ ಮೂಲಕ ಮರಳಿ ನಾವು ಕಸವನ್ನೇ ಒಳಗೊಂಡ ಸಾಹಿತ್ಯದ ಸೃಷ್ಟಿಗೆ ಕಾರಣಕರ್ತರಾಗಬಾರದು.

ಹಾಗೆಯೇ, ಈ ಶ್ರೇಷ್ಟತೆಯ ವ್ಯಸನವನ್ನು ಬಳಸಿ ಟೀಕಿಸಿದ ಕೆ.ವಿ.ಸುಬ್ಬಣ್ಣರ ನೀನಾಸಂ ಮತ್ತು ಅದರ ಗುಂಪು ಇಂದು ಮಾಡುತ್ತಿರುವುದಾರೂ ಏನು? ಶ್ರೇಷ್ಟತೆಯ ಧ್ಯಾನವೇ!! ಒಂದು ಜಾತಿಯ ಒಳಪಂಗಡದ ನೆಲೆಯಲ್ಲಿ ಹುಟ್ಟಿಕೊಂಡ ಈ ನೀನಾಸಂನ ಶ್ರೇಷ್ಟತೆಯ ಧ್ಯಾನವನ್ನು ನಮ್ಮ ಪ್ರಗತಿಪರ ಗೆಳೆಯರು ಮೊದಲು ಪ್ರಶ್ನಿಸಬೇಕು. ಯಾವುದೇ ಸಿದ್ಧಾಂತಗಳ ಹಣೆಪಟ್ಟಿಯಿಲ್ಲವೆಂದು ಬರೆಯುತ್ತಿರುವ ಮೇಲಿನ ಭಜನಾ ಮಂಡಳಿಯ ವಿಪ್ರ ವೃಂದ ಹುಟ್ಟು ಹಾಕುತ್ತಿರುವ ಶ್ರೇಷ್ಟತೆಯ ವ್ಯಸನದ ಮಾದರಿಯನ್ನು ನಮ್ಮ ಪ್ರಗತಿಪರ ಗೆಳೆಯರ ಗುಂಪು ನೇರವಾಗಿ ಪ್ರಶ್ನಿಸಬೇಕು. ದೇಶಕಾಲದ ಶ್ರೇಷ್ಟತೆಯ ವ್ಯಸನವನ್ನು ನೇರವಾಗಿ ಸಂಬಂಧಿಸಿದವರಿಗೆ ಪ್ರಶ್ನಿಸದೆ ಕೇವಲ ಸಾಮಾನ್ಯವಾಗಿ ಗೊಣಗಿದ್ದು ನಮ್ಮೆಲ್ಲರ ಮಿತಿಯಲ್ಲವೇ? “ಸ್ವಪ್ನ ಸಾರಸ್ವತ” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಆ ಕಾದಂಬರಿಯ ಮೂಲಭೂತವಾದಿ ಮತ್ತು ಜಾತಿವಾದಿ ಗುಣಗಳನ್ನು ಎತ್ತಿ ಚರ್ಚಿಸದೆ ಅದರ ಶ್ರೇಷ್ಟತೆಯನ್ನು ವಿಮರ್ಶಕರು ಹೊಗಳುತ್ತಿದ್ದಾಗ ನಾವೆಲ್ಲ ಅದರ ಶ್ರೇಷ್ಟತೆಯ ವ್ಯಸನವನ್ನು ಪ್ರಶ್ನಿಸಬೇಕಾಗಿತ್ತು. ಅಳ್ವಾಸ್ ನುಡಿಸಿರಿಯು ಲಜ್ಜೆಗೆಟ್ಟು ಶ್ರೇಷ್ಟತೆಯ ವ್ಯಸನವನ್ನು ಪ್ರದರ್ಶಿಸುತ್ತಿದ್ದರೆ ನಾವೆಲ್ಲ ಕಪ್ಪು ಬಾವುಟ ಹಿಡಿದು ಅಲ್ಲಿ ವೇದಿಕೆಯ ಮುಂದೆ ವಿರೋಧಿಸಬೇಕಾಗಿತ್ತು. ಸಂಸ್ಕಾರ ಕಾದಂಬರಿಯನ್ನು ಶ್ರೇಷ್ಠ ಕೃತಿಯೆಂದು ಮರಳಿ ಮರಳಿ ಸ್ಥಾಪಿಸಬಯಸುವ ಪಟ್ಟಭದ್ರ ಹಿತಾಸಕ್ತಿಗಳ ಶ್ರೇಷ್ಟತೆಯ ವ್ಯಸನವನ್ನು ನಾವು ನೇರವಾಗಿ ಪ್ರಶ್ನಿಸಬೇಕಲ್ಲವೇ? ಇಂತಹವು ಸಾವಿರ ಉದಾಹರಣೆಗಳಿವೆ.

ಹೊಸ ಸಾಹಿತ್ಯ ಚಳವಳಿಯನ್ನು ಕಟ್ಟುವ ಗುಂಗಿನಲ್ಲಿರುವ ನಾವೆಲ್ಲ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗಿರುವುದು ಕೆಲವು ಸ್ಥಾಪಿತ ಶಕ್ತಿ ಕೇಂದ್ರಗಳ ಕುರಿತಾಗಿ ಎಚ್ಚರಿಕೆಯ ಮತ್ತು ಸ್ಪಷ್ಟ ಮತ್ತು ನೇರವಾದ ನಿಲುವುಗಳು. ಮೇಲ್ನೋಟಕ್ಕೆ ಪ್ರಗತಿಪರರೆಂದು ಕಂಡುಬಂದರೂ ಯಾವುದೇ ಪ್ರಗತಿಪರ ಶಕ್ತಿಗಳನ್ನು ಆಪೋಶನ ಮಾಡಿಕೊಂಡು ವಾತಾಪಿ ಜೀರ್ಣೋಭವ ಎಂದು ಅರಗಿಸಿಕೊಳ್ಳುವ ಲೇಖಕರ ಮತ್ತು ಸಾಹಿತಿಗಳ ಕುರಿತಾಗಿ ಮ್ಮ ಪ್ರಗತಿಪರ ಗೆಳೆಯರ ಮೈಯೆಲ್ಲ ಕಣ್ಣಾಗಿರಲಿ ಎಂದೇ ಕಳಕಳಿಯಿಂದ ಆಶಿಸುತ್ತೇನೆ.

ಅಲ್ಲೂ ಬುಳುಬುಳು, ಇಲ್ಲೂ ಬುಳು ಬುಳು.. ಬೇಡ

-ಡಾ.ಎಸ್.ಬಿ.ಜೋಗುರ

ಧಾರವಾಡದ ಸಾಹಿತ್ಯ ಸಂಭ್ರಮವನ್ನು ಅನೇಕರು ಅಲ್ಲಿಯ ಮಾರ್ಗಸೂಚಿಗಳನ್ನಿಟ್ಟುಕೊಂಡು ಹೊರಗುಳಿದರು. ಒಂದು ತಾತ್ವಿಕವಾದ ಕಾರಣಕ್ಕಾಗಿ ಹೊರಗುಳಿದರೂ ಅಲ್ಲಿ ನಡೆದಿರುವ ಆರೋಗ್ಯಪೂರ್ಣ ಮತ್ತು ಔಚಿತ್ಯಪೂರ್ಣ ಚರ್ಚೆಗಳನ್ನು ತಾತ್ವಿಕವಾದ ಭಿನ್ನಾಭಿಪ್ರಾಯಗಳನ್ನು ಮೀರಿಯೂ ಒಪ್ಪಿಕೊಳ್ಳಬೇಕಾದ ಅವಶ್ಯಕತೆಯಿದೆ.

ಕೇವಲ ಪ್ರತಿರೋಧವೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಎಡ-ಬಲಗಳ ತಾತ್ವಿಕ ಸಿದ್ಧಾಂತಗಳ ಜೊತೆಜೊತೆಗೆ ಅಂತಿಮವಾಗಿ ಉಳಿಯಬೇಕಾದುದು ಒಳ್ಳೆಯತನ ಮಾತ್ರ. ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡಿರುವ ಸಾಹಿತಿಗಳ ಪ್ರಮಾಣಕ್ಕಿಂತ ಹತ್ತಾರು ಪಟ್ಟು ಅವುಗಳಿಂದ ವಿಚಲಿತರಾದವರಿದ್ದಾರೆ. ನಡುವೆಯೇ ಕೆಲವರು ಟಿ.ಎ., ಡಿ.ಎ. ಸಾಹಿತಿಗಳಿದ್ದಾರೆ. ಸಾಹಿತ್ಯ ಸಮ್ಮೇಳನಗಳಿರಲಿ, ಗೋಷ್ಟಿಗಳಿರಲಿ ಅಂತಿಮವಾಗಿ ಉಳಿಯಬಹುದಾದ ಚರ್ಚೆ ಮತ್ತು ತಿರುಳು ಇವರ ಬಾಯಲ್ಲಿ ಈ ಟಿ.ಎ., ಡಿ.ಎ.ಗೆ ಸಂಬಂಧಿಸಿದ್ದಾಗಿರುತ್ತದೆ. ಇಷ್ಟು ಕೊಟ್ಟರೆ ಬರ್ತೀವಿ ಎಂದು ಸಂಘಟಕರಿಗೆ ಬರೆ ಹಾಕುವ ರೀತಿಯಲ್ಲಿ ಗೆರೆ ಕೊರೆಯುವ ಸಾಹಿತಿ sahitya-sambhramaಮಹೋದಯರೂ ಅಲ್ಲಿದ್ದಾರೆ ಎನ್ನುವುದನ್ನು ನಾನು ಕೇಳಿದ್ದೇನೆ. ಇಂಥವರನ್ನು ಬೆಳ್ಳಬೆಳತನ ಕುಳ್ಳರಿಸಿಕೊಂಡು ರಾಮಾಯಣ ಹೇಳಿದರೂ ಬೆಳಿಗ್ಗೆ ಎದ್ದದ್ದೇ ಮತ್ತೆ ಇವರಿಡೊ ಪ್ರಶ್ನೆ ಸೀತೆ ರಾಮನಿಗೆ ಏನಾಗಬೇಕು..?

ಧಾರವಾಡದ ಸಾಹಿತ್ಯ ಸಂಭ್ರಮದ ಕಾರ್ಯಕ್ರಮ ಮಾರ್ಗಸೂಚಿಯೇ ನೆಟ್ಟಗಿಲ್ಲವೆಂದು ತಕರಾರು ತೆಗೆದವರ ಎದುರಲ್ಲಿ ಅತ್ಯಂತ ಸಾತ್ವಿಕವಾದದ್ದಾದರೂ ಸವಾಲುಗಳಂತೂ ಇವೆ. ಅನೇಕರು ಇವರು ಸಂಭ್ರಮವನ್ನು ಠೀಕಿಸಿ ದೂರ ಉಳಿದರು ನೋಡೊಣ ಇವರು ಹೇಗೆ ಮಾಡ್ತಾರೆ ಅಂತ ಕಾಯ್ದು ಕುಳಿತವರಿದ್ದಾರೆ. ಇವರಲ್ಲಿ ಕೆಲವರು ಅಲ್ಲೂ ಬುಳು ಬುಳು ಇಲ್ಲೂ ಬುಳು ಬುಳು ಜಾತಿಯವರೂ ಇದ್ದಾರೆ. ಇವರನ್ನು ಸಾಧ್ಯವಾದ ಮಟ್ಟಿಗೆ ಕೈ ಬಿಡುವದೇ ಉತ್ತಮ. ಜೊತೆಗೆ ಅಡ್ದಗೋಡೆಯ ದ್ವೀಪದಂತಿರುವ ವ್ಯಕ್ತಿತ್ವಗಳೂ ಇವೆ. ಇವು ಎರಡೂ ಬದಿಗೆ ಬೆಳಕಾಗದೇ ಇರೋ ಬೆಳಕನ್ನೆಲ್ಲಾ ಬುಡದ ಕತ್ತಲನ್ನು ಕಳೆಯುವಲ್ಲಿಯೇ ಖರ್ಚು ಮಾಡಿಬಿಡುವವರು. ಇವರಿಂದಲೂ ಈ ಪ್ರಗತಿಪರ ಸಾಹಿತ್ಯ ವೇದಿಕೆ ಪಾಠ ಕಲಿಯಬೇಕಿದೆ.

ಎಷ್ಟೇ ಆಗಲಿ ಹಿರಿಯರು ಎನ್ನುವ ರಿಯಾಯತಿ ಎದುರು ಬಂದಾಗ ಕೈ ಮುಗಿದು ನಮಸ್ಕರಿಸುವುದಕ್ಕೆ ಸೀಮಿತಗೊಳಿಸುವದು ಉತ್ತಮ. ಒಟ್ಟಾರೆ ಯಾವುದನ್ನು ಟೀಕಿಸಿ, ಸರಿಯಾದದ್ದಲ್ಲ ಎಂದು ದೂರ ಸರಿಯಲಾಯಿತೋ ಮತ್ತೆ ಅದೇ ತತ್ವಗಳ ಸನಿಹಕ್ಕೆ ಬಾರದ ಹಾಗೆ ಎಚ್ಚರ ವಹಿಸುವದರಲ್ಲಿಯೇ ಬರುವ ಮಾರ್ಚ್ ತಿಂಗಳಲ್ಲಿ ಜರುಗುವ ಸಾಹಿತ್ಯ ಚಟುವಟಿಕೆಗಳ ಅರ್ಥವಂತಿಕೆ ಅಡಗಿದೆ.

ಈಗಾಗಲೇ ಸ್ನೇಹಿತರ ವಲಯದಲ್ಲಿ ಮಾತುಗಳು ಶುರುವಾಗಿವೆ. ಆ ಮಾತುಗಳ ಆರಂಭದಲ್ಲಿಯೇ ನೋಡೊಣ ನೀವು ಹೇಗೆ ಮಾಡುತ್ತೀರಿ..? ಎನ್ನುವ ಸವಾಲಿರುತ್ತದೆ. ಅವರು ಹಾಗೆ ಸವಾಲನ್ನು ಚ್ಯಾಲೆಂಜ್ ಥರಾ ಇಡುವಲ್ಲಿಯೂ ಒಂದು ತರ್ಕವಡಗಿದೆ. ಸಂಭ್ರಮ, ಉತ್ಸವಕ್ಕೆ ಪರ್ಯಾಯವಾಗಿ ನಾವು ಏನೋ ಒಂದು ವಿಶಿಷ್ಟವಾದುದನ್ನು ಮಾಡಿ ತೋರಿಸುತ್ತೇವೆ ಎಂದು ಮುನ್ನಡೆದಾಗ ಎರಡೂ ಕಡೆಯೂ ಸಲ್ಲಲು ಯತ್ನಿಸುವ ಮನಸುಗಳಿಗೆ ಇಲ್ಲಿ ಅವಕಾಶವನ್ನು ನೀಡಲೇಬಾರದು. ಅವರು ಹೀಗೇ ಬೇಕಾದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ, ಆದರೆ ವೇದಿಕೆಯನ್ನು ಮಾತ್ರ ಅವರಿಗೆ ಹಂಚಬಾರದು. ಈಗಾಗಲೇ ಒಂದು ಬಗೆಯ ಮಾನಸಿಕ ಸ್ತರವನ್ನು ಅವರು ಸಂಪಾದಿಸಿದವರು. ಅವರನ್ನು ನಾವು ಒಳಗೊಂಡರೆ ನಾವು ಮಾಡುತ್ತಿರುವದು ಕೂಡಾ ಸಾಹಿತ್ಯ ಸಂಭ್ರಮದ ಮುಂದುವರೆದ ಭಾಗವೇ ಆಗುತ್ತದೆ. ಆ ದಿಶೆಯಲ್ಲಿ ಈಗ ಸಾಹಿತ್ಯಕ ಚಟುವಟಿಕೆಗಳನ್ನು ರೂಪಿಸಹೊರಟವರಿಗೆ ತಿಳಿದಿರಲಿ, ಈ ದ್ವಂದ್ವವಾದಿಗಳು ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳಲಿ, ಆದರೆ ಗೋಷ್ಟಿಗಳಲ್ಲಿ ಅವಕಾಶ ಕೊಡುವುದು ಬೇಡ.