Daily Archives: January 16, 2013

“ಮಲೆನಾಡ ಗಾಂಧಿ”ಯೊಡನೆಯ ಭೇಟಿ ಹುಟ್ಟಿಸಿದ ಪ್ರಶ್ನೆಗಳು, ಹೆಚ್ಚಿಸಿದ ಭರವಸೆಗಳು..

– ರವಿ ಕೃಷ್ಣಾರೆಡ್ಡಿ

ಮೊನ್ನೆ ಸೋಮವಾರ, ಸಂಕ್ರಾಂತಿಯಂದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಹೋಗಿದ್ದೆ. ಕೊಪ್ಪದಲ್ಲಿ ವಕೀಲರಾಗಿರುವ ಗೆಳೆಯ ಸುಧೀರ್ ಕುಮಾರ್ ಮುರೊಳ್ಳಿಯವರೊಡನೆ ಅಲ್ಲಿಯ ಮಾಜಿ ಶಾಸಕ ಮತ್ತು ಕರ್ನಾಟಕದ ಮಾಜಿ ಸಚಿವ, ನಿವೃತ್ತ ರಾಜಕಾರಣಿ ಹೆಚ್.ಜಿ.ಗೋವಿಂದ ಗೌಡರನ್ನು ಭೇಟಿಯಾಗಿದ್ದೆ. ನನ್ನೊಡನೆ ಇದ್ದ ಇನ್ನೊಬ್ಬ ಗೆಳೆಯ ಸತೀಶ್, ಗೌಡರನ್ನು ಸಂದರ್ಶನ ಮಾಡಿದರು.

ರಾಜ್ಯದ ಇನ್ನೊಬ್ಬ ದೇಶಪ್ರಸಿದ್ಧ ಗೌಡರು ನಮಗೆಲ್ಲಾ ಗೊತ್ತು. ಇತ್ತೀಚೆಗೆ ಅವರು ಮಾತನಾಡುತ್ತ, ಪಕ್ಕದ ರಾಜ್ಯದ ಕರುಣಾನಿಧಿಯವರಿಗೊದಗಿರುವ ಕೌಟುಂಬಿಕ ವಿಷಮ ಪರಿಸ್ಥಿತಿಯನ್ನು ತಾನು ತನ್ನ ಇಳಿಕಾಲದಲ್ಲಿ ನೊಡಲು ಇಚ್ಚಿಸುವುದಿಲ್ಲ ಎಂತಲೊ, ಹಾಗಾಗಲು ಬಿಡುವುದಿಲ್ಲ ಎಂತಲೋ ಅಂದಿದ್ದರು. ಅದು ಅವರ ಮತ್ತೊಬ್ಬ ಸೊಸೆ ರಾಜಕೀಯಕ್ಕೆ ಬರುವ ವಿಷಯಕ್ಕೆ ಮತ್ತು ಅವರ ಕುಟುಂಬದಲ್ಲಿ ನಡೆಯುತ್ತಿರುವ ಮೇಲಾಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸಿದ ರೀತಿ.

“ಮಲೆನಾಡ ಗಾಂಧಿ” ಎಂದೇ ಗುರುತಿಸಲಾಗುವ ಕೊಪ್ಪದ ಗೋವಿಂದ ಗೌಡರು ರಾಜಕೀಯ ನಿವೃತ್ತಿ ಘೋಷಿಸಿ ಸುಮಾರು 13 ವರ್ಷವಾಯಿತು. govindagowdaಅವರು ಜನತಾ ದಳದ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ, ಅಂದರೆ 1999 ರಲ್ಲಿ ನಡೆದ ರಾಜಕೀಯ ಕಚ್ಚಾಟಗಳನ್ನು ನೋಡಿ, ಇದು ತಮಗೆ ತರವಲ್ಲ ಎಂದು ಮತ್ತೊಮ್ಮೆ ಚುನಾವಣೆಗೆ ನಿಲ್ಲಲಿಲ್ಲ. ಆಗ ಅವರಿಗೆ ಬಹುಶಃ 73 ವರ್ಷವಾಗಿತ್ತೇನೊ. ಈಗ ಅವರಿಗೆ 87; ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ 88 ತುಂಬುತ್ತದೆ. ಆರೋಗ್ಯವಾಗಿದ್ದಾರೆ. ಈಗಲೂ ಪತ್ರಿಕೆ-ಪುಸ್ತಕಗಳನ್ನು ಓದುತ್ತಾರೆ. ಅವರ ಶ್ರೀಮತಿಯವರಾದ ಶಾಂತಕ್ಕನವರಿಗೆ 82 ಇರಬಹುದು. ಬಹಳ ಹಸನ್ಮುಖದ ಅವರೂ ಆರೋಗ್ಯದಿಂದಿದ್ದಾರೆ. ತಮ್ಮ ಮತ್ತು ತಮ್ಮ ಪತಿಯ ಬಟ್ಟೆಗಳನ್ನು ಅವರೇ ಒಗೆಯುತ್ತಾರೆ.

ಬಹುಶಃ ಅರವತ್ತು-ಎಪ್ಪತ್ತು ದಾಟಿದ ಕರ್ನಾಟಕದ ಯಾವೊಬ್ಬ ಮಾಜಿ ಸಚಿವನೂ ಗೋವಿಂದ ಗೌಡರಷ್ಟು ನೆಮ್ಮದಿಯ, ಸಂತೋಷದ, ಮತ್ತು ವೈಯಕ್ತಿಕ ವಿಷಾದಗಳಿಲ್ಲದ ಜೀವನ ನಡೆಸುತ್ತಿರುವುದು ಸಂದೇಹ. ಇಂತಹ ಮುಪ್ಪಿನ ಜೀವನ ಗಳಿಸಿಕೊಳ್ಳಲಾಗದೆ ಏನೆಲ್ಲಾ ಸಾಧಿಸಿದರೂ ಏನು ಪ್ರಯೋಜನ?

ಇತ್ತೀಚಿನ ಯುವಕರಿಗೆ ಗೋವಿಂದ ಗೌಡರ ಪರಿಚಯ ಇಲ್ಲದಿರಬಹುದು. ಆದರೆ, 1996 ರ ನಂತರದಲ್ಲಿ ಸರ್ಕಾರಿ ಶಾಲೆಗಳ ಅಧ್ಯಾಪಕರಾಗಿ ನೇಮಕಗೊಂಡ ಪ್ರತಿಯೊಬ್ಬ ಅಧ್ಯಾಪಕನಿಗೂ ಗೋವಿಂದ ಗೌಡರ ಹೆಸರು ಗೊತ್ತಿರಲೇಬೇಕು. ಸರಿಯಾಗಿ ಒಂದು ಲಕ್ಷ ಐದು ಸಾವಿರ ಅಧ್ಯಾಪಕರು (1,05,000) ಯಾವುದೇ ಸಂದರ್ಶನಗಳಿಲ್ಲದೆ, ಲಂಚ ಕೊಡದೆ, ವಶೀಲಿ-ಪ್ರಭಾವಗಳನ್ನು ಬಳಸದೆ, ಅತ್ಯಂತ ಪಾರದರ್ಶಕವಾಗಿ ತಮ್ಮ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಅಧ್ಯಾಪಕರಾಗಿ ನೇಮಕಗೊಂಡರು. ಅದನ್ನು ಮಾಡಿದ್ದು ಆಗಿನ ಶಿಕ್ಷಣ ಸಚಿವರಾಗಿದ್ದ ಹೆಚ್.ಜಿ.ಗೋವಿಂದ ಗೌಡರು. ಆಗ ಅವರಿಗೆ ನೆರವಾದವರು ರಾಜ್ಯದ ಐಎ‌ಎಸ್ ಅಧಿಕಾರಿಗಳಾದ ಎಸ್.ವಿ.ರಂಗನಾಥ್ (ಈಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು) ಮತ್ತು ಹರೀಶ್‌ ಗೌಡ.

ಗೋವಿಂದ ಗೌಡರು ಮಾತನಾಡುತ್ತ ಹೇಳಿದ್ದು, ಸಂದರ್ಶನಗಳ ಮೂಲಕ ನೇಮಿಸುವ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಮನಗಂಡೇ ತಾನು ಸಂದರ್ಶನ-ರಹಿತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು. ಸಚಿವರೂ ಒಳ್ಳೆಯವರಿದ್ದರು. ತಮ್ಮ ಕೈಕೆಳಗಿನ ಅಧಿಕಾರಿಗಳೂ ಒಳ್ಳೆಯವರಿರುವಂತೆ ನೋಡಿಕೊಂಡರು. ಯಾವುದೋ ಒಂದು ಗತಕಾಲದ ಸಂದರ್ಭದಲ್ಲಾದರೂ (ಹದಿನೈದು ವರ್ಷಗಳ ಹಿಂದೆ) ಕರ್ನಾಟಕದಲ್ಲಿ ಭ್ರಷ್ಟತೆಯ ಯಾವೊಂದು ಕುರುಹುಗಳೂ ಇಲ್ಲದೆ ಸರ್ಕಾರಿ ನೇಮಕಾತಿಗಳಾದವು.

ನಿಮಗೆ ಗೊತ್ತಿರಲಿ, ಸರ್ಕಾರಿ ಕೆಲಸಗಳಿಗೆಂದು ನಡೆಸುವ ಸಂದರ್ಶನಗಳಷ್ಟು ಶುದ್ದ ಮೋಸದ, ಅಕ್ರಮದ, ಭ್ರಷ್ಟಾಚಾರದ ವ್ಯವಸ್ಥೆ ಇನ್ನೊಂದಿಲ್ಲ. ಅಪಾಯಕಾರಿ ಹುಚ್ಚುನಾಯಿಗಳೆಲ್ಲ ಈ ಸಂದರ್ಶನದ ಪ್ಯಾನೆಲ್‌ಗಳಲ್ಲಿ ಇರುತ್ತಾರೆ. ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆಯುವಷ್ಟು ಭ್ರಷ್ಟತೆಗೆ ಹೋಲಿಕೆಗಳೇ ಇಲ್ಲವೇನೋ. ಪ್ರತಿಯೊಬ್ಬ ಜಾತಿಯ ಪ್ರಭಾವಿ ಮುಖಂಡನೂ ತಮ್ಮ ಜಾತಿಯವನೊಬ್ಬ ಕೆಪಿಎಸ್‍ಸಿ ಸದಸ್ಯನಾಗಬೇಕೆಂದು ಬಯಸುತ್ತಾರೆ ಮತ್ತು ಅದು ದುಡ್ಡು ಮಾಡಲೆಂದೇ ಇರುವ ಸದಸ್ಯತ್ವ. ರಾಜ್ಯದ ಯಾವೊಬ್ಬ ಘನತೆವೆತ್ತ ಅಧಿಕಾರಸ್ಥ ರಾಜಕೀಯ ಮುಖಂಡನೂ ಈ ಕ್ರಮವನ್ನು ಬದಲಿಸಲು ಹೋಗಿಲ್ಲ.

ನನಗೆ ಇತ್ತೀಚೆಗೆ ಗೊತ್ತಾದ ಈ ಉದಾಹರಣೆಯ ಮೂಲಕ ಕೆಪಿಎಸ್‌ಸಿಯಲ್ಲಿ ನಡೆಯುವ ಸಂದರ್ಶನ ಎಂಬ ಮಹಾನ್ ಭ್ರಷ್ಟತೆಯನ್ನು ವಿವರಿಸಲು ಯತ್ನಿಸುತ್ತೇನೆ. ನಾಲ್ಕೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಅನೇಕ ಸರ್ಕಾರಿ ಕಾಲೇಜುಗಳಿಗೆ ಸಾವಿರಾರು ಅಧ್ಯಾಪಕರನ್ನು ನೇಮಿಸಲಾಯಿತು. ಒಬ್ಬ ಅಭ್ಯರ್ಥಿಗೆ ಎಲ್ಲಾ ಲಿಖಿತ ಪರೀಕ್ಷೆಗಳಲ್ಲಿ ಅತ್ಯುತ್ತಮ ಎನ್ನಬಹುದಾದಷ್ಟು, 85% ಅಂಕಗಳು ಬಂದಿದ್ದವು. ಸಂದರ್ಶನಕ್ಕೆಂದು ಇರುವುದು 25 ಅಂಕಗಳು. ಆ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ ಮೂರೇ ಮೂರು ಅಂಕಗಳು (ಅಂದರೆ ಸುಮಾರು 12%) ಬಂದರೂ ಲಿಖಿತ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ಕೆಲಸ ಖಚಿತ. ಆ ಅಭ್ಯರ್ಥಿ ಯಾವುದೇ ಜಾತಿ ವಶೀಲಿಬಾಜಿ ಮಾಡಲಿಲ್ಲ, ಹಣ ಕೊಟ್ಟು ಕೆಲಸ ಖಚಿತಪಡಿಸಿಕೊಳ್ಳುವ ಸಂಪ್ರದಾಯವನ್ನೂ ಪಾಲಿಸಲಿಲ್ಲ. ಆದರೆ ಸಂದರ್ಶನ ನಡೆಸಿದ ಅಧಮರು, ಹೊಟ್ಟೆಗೆ ಅನ್ನ ತಿನ್ನದ ಕೊಳಕರು, ನೀಚರು, ಲೋಫರ್‌ಗಳು, ಉತ್ತಮವಾಗಿ ಪ್ರಶ್ನೆಗಳಿಗೆ ಉತ್ತರಿಸಿದ ಆ ಅರ್ಹ ಅಭ್ಯರ್ಥಿಗೆ ಕೊಟ್ಟ ಅಂಕಗಳು ಕೇವಲ ಎರಡು. ಶೇ.ಹತ್ತಕ್ಕೂ ಕಡಿಮೆ. ಆ ಅಭ್ಯರ್ಥಿ ಎರಡನೇ ಸಲ ಅರ್ಜಿ ಹಾಕಿದಾಗಲೂ ಇದೇ ಪುನರಾವರ್ತನೆ. ಈ ಸಂದರ್ಶನ ನಡೆಸುವ ಹುಚ್ಚು-ಕಜ್ಜಿ ನಾಯಿಗಳನ್ನು ಏನು ಮಾಡಬೇಕು? ಅದನ್ನು ಈಗಲೂ ಮುಂದುವರೆಸುತ್ತಿರುವ ನಮ್ಮ ರಾಜಕಾರಣಿಗಳನ್ನು ಮತ್ತು ಅಧಿಕಾರಶಾಹಿಯನ್ನು ಹೇಗೆ ಶಿಕ್ಷಿಸಬೇಕು? ಒಳ್ಳೆಯತನವನ್ನು, ಯೋಗ್ಯತೆಯನ್ನು, ಪ್ರಾಮಾಣಿಕತೆಯನ್ನು ಶಿಕ್ಷಿಸುವ ಈ ಸಮಾಜಕ್ಕೆ ಭವಿಷ್ಯವುಂಟೆ?

ಈ ಹಿನ್ನೆಲೆಯಲ್ಲಿ ನೋಡಿದಾಗ ಕೇವಲ ಹದಿನೈದು ವರ್ಷದ ಹಿಂದೆ ಗೋವಿಂದ ಗೌಡರು ಮಾಡಿದ ಕಾರ್ಯ ನಮಗೆ ಗತಕಾಲದ್ದೆಂದು ಅನ್ನಿಸುತ್ತದೆ. ಈ ಹತ್ತು-ಹದಿನೈದು ವರ್ಷಗಳಲ್ಲಿ ಸಮಾಜ ಈ ಪರಿ ಸಂಪೂರ್ಣವಾಗಿ ಕೆಟ್ಟಿದ್ದಾದರೂ ಹೇಗೆ?

ಗೋವಿಂದ ಗೌಡರು ಹೇಳಿದ ಇನ್ನೊಂದು ಮಾತು: ಅವರಿಗೆ ಐವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಅವರ ಯಾವೊಬ್ಬ ಅಳಿಯನಾಗಲಿ ಮತ್ತು ಮಗನಾಗಲಿ, ಅವರು ಸಚಿವರಾಗಿರುವ ತನಕವೂ ತಾನು ಇಂತಹವರ ಮಗ ಅಥವ ಅಳಿಯ ಎಂದುಕೊಂಡು ವಿಧಾನಸೌಧದ ಒಳಗೆ ಕಾಲಿಡಲಿಲ್ಲ. ಅವರು ರಾಜಕೀಯದಲ್ಲಿರುವ ತನಕವೂ ಅವರ ಮಗ ರಾಜಕೀಯಕ್ಕೆ ಬರಲು ಬಿಡಲಿಲ್ಲ. ಈಗ ಅವರ ಮಗನಿಗೆ ಸುಮಾರು 57 ವರ್ಷ ಇರಬಹುದು. ಇತ್ತೀಚೆಗೆ ಕಾಂಗ್ರೆಸ್ ಸೇರಿಕೊಂಡಿರುವ ಅವರಿಗೆ ಅಪ್ಪನ ಕಡೆಯಿಂದ ಯಾವೊಂದು ರಾಜಕೀಯ ಬೆಂಬಲವೂ, ವಶೀಲಿಬಾಜಿಯೂ ಇಲ್ಲ. ಆತ ರಾಜಕೀಯ ಮಾಡಬೇಕಿದ್ದರೆ ಆತನೇ ಹೆಸರು ಸಂಪಾದಿಸಿಕೊಂಡು ತನ್ನ ಸ್ವಂತ ಯೋಗ್ಯತೆಯ ಮೇಲೆ ರಾಜಕೀಯ ಮಾಡಲಿ ಎನ್ನುವುದು ಅಪ್ಪನ ನಿಲುವು. ತಮ್ಮ ಹೆಂಡತಿಯರನ್ನು, ಮಕ್ಕಳನ್ನು, ಅಳಿಯರನ್ನು, ಮೊಮ್ಮಕ್ಕಳನ್ನು, ಕೊನೆಗೆ ಪ್ರೇಯಸಿಯರನ್ನೂ ಸಹ, ಅನೈತಿಕ ಮಾರ್ಗಗಳಿಂದ ರಾಜಕೀಯ ನಾಯಕರನ್ನಾಗಿ ಪ್ರತಿಷ್ಠಾಪಿಸಲು ಯತ್ನಿಸುತ್ತಿರುವ ನಮ್ಮ ರಾಜಕೀಯ ನಾಯಕರು ಗೋವಿಂದ ಗೌಡರ ಜೀವನಾಚರಣೆಯನ್ನು ಗಮನಿಸಿ ತಮ್ಮ ಕುಕೃತ್ಯಗಳಿಗೆ ನೇಣು ಹಾಕಿಕೊಳ್ಳಬೇಕು.

ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ನಮ್ಮೆಲ್ಲರಿಗೂ ಇರುವಷ್ಟೇ ಅಸಮಾಧಾನ ಈ ವಯಸ್ಸಿನಲ್ಲಿಯೂ ಗೋವಿಂದ ಗೌಡರಿಗೆ ಇದೆ. ಹಾಗೆಂದು ಅವರು ನಮಗೆ ಕೇವಲ ನಿರಾಶೆಯ ಮಾತನಾಡಿ ಕಳುಹಿಸಲಿಲ್ಲ. ಬದಲಿಗೆ ಇನ್ನಷ್ಟು ಉತ್ಸಾಹ ತುಂಬಿ, ಜೀವನಪ್ರೀತಿಯನ್ನು ಹೆಚ್ಚಿಸಿ ಕಳುಹಿಸಿದರು.

ಕರ್ನಾಟಕದಲ್ಲಿ ಈಗ ಬದುಕಿರುವ ಎಷ್ಟು ಹಿರಿಯ ರಾಜಕಾರಣಿಗಳ ಬಗ್ಗೆ ನಾವು ಹೀಗೆ ಪ್ರೀತಿಯಿಂದ ಮತ್ತು ಗೌರವದಿಂದ ಮಾತನಾಡಲು ಸಾಧ್ಯ?

ದಿಲ್ಲಿ ಅತ್ಯಾಚಾರ : ದಾಖಲಾಗದ ಭಾವಗಳು

-ಎಲ್.ಎಂ. ನಾಗರಾಜು

ದಿಲ್ಲಿ ಅತ್ಯಾಚಾರ ಪ್ರಕರಣದ ಪ್ರತಿಭಟನೆಯ ಪ್ರಖರತೆಯ ಓಘ ವೇಗ ಕಳೆದುಕೊಳ್ಳುತ್ತಿದೆ. ಕಳೆದರ್ಧ ತಿಂಗಳು ದೇಶದ ಮಾಧ್ಯಮಗಳಲ್ಲಿ ಈ ಪ್ರಕರಣದ್ದೇ ಪುಕಾರು. ಈ ‘ಅತ್ಯಾಚಾರ ಸುದ್ದಿ ಸಂತೆ’ಯಲ್ಲಿ ಮೀಡಿಯಾಕ್ಕೆ ಉತ್ತಮ ವ್ಯಾಪಾರವೂ ಆಯಿತು. ಈ ಮಾರಾಟದ ಭರಾಟೆಯಲ್ಲಿ ಚರ್ಚೆಯಾಗಬೇಕಿದ್ದ ಹಲವು ಮುಖ್ಯ ಅಂಶಗಳು ಮುನ್ನಲೆಗೆ ಬರಲೇ ಇಲ್ಲ. ಈ ‘ಗದ್ದಲ ಮತ್ತು ಸಂತೆ’ ಬಗ್ಗೆ ಸ್ವಲ್ಪವೇ ತಕರಾರೆತ್ತಿದರೂ ಸಮೂಹ ಸನ್ನಿಯ ಅಮಲಿನಲ್ಲಿದ್ದ ಜನ ಮುಗಿಬಿದ್ದಾರೆಂಬ ಭಯವೂ ಹಲವರಲ್ಲಿ ಇಲ್ಲದಿರಲಿಲ್ಲವೇನೋ.

ನನಗೆ ತಿಳಿದಂತೆ ಮಾಧ್ಯಮೋದ್ಯಮದ ‘ಮೊಗಸಾಲೆ ಚರ್ಚೆ’ಯಲ್ಲಿ ಅತ್ಯಾಚಾರದ ಕಾರಣ, ಪರಿಹಾರ ಕುರಿತ ಚರ್ಚೆಯೇ ಆಗಲಿಲ್ಲ. rape-illustrationಬದಲಿಗೆ ‘ಆರೋಪಿಗಳನ್ನು ನಿರ್ವೀರ್ಯರನ್ನಾಗಿ ಮಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸಿ, ಸರಕಾರ ವಿಫಲ’ ಇದರ ಸುತ್ತಲೇ ಮಾತುಗಳು ಗಿರಕಿ ಹೊಡೆದವು.

ಭಾರತದಂಥ ದೇಶ ಪುರುಷಪ್ರಧಾನ ಮನಃಸ್ಥಿತಿಯಿಂದ ಕೂಡಿದ್ದು, ‘ನ ಸ್ತ್ರೀ ಸ್ವಾತಂತ್ರಮರ್ಹತಿ’ ಎಂಬ ಮನುಶಾಸ್ತ್ರ ಇಲ್ಲಿ ಶತಮಾನಗಳ ಕಾಲ ಆಳಿದೆ. ಅದು ಗತಕಾಲವಾದರೂ ನಮ್ಮ ಮನಸ್ಥಿತಿ ಆ ಚಿಂತನೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಬದಲಿಗೆ ಅದೇ ಶ್ರೇಷ್ಠವೆಂದು ಪುನಃ ಅದನ್ನು ಕಟ್ಟುವ ಕೆಲಸವೂ ನಡೆಯುತ್ತಿರುವುದು ನಿಗೂಢವೇನಲ್ಲ.

ಅದೆಲ್ಲ ಇರಲಿ, ಈಗ ಅತ್ಯಾಚಾರದಂಥ ಪಾಶವೀ ಕತ್ಯಗಳಿಗೆ ಪ್ರೇರಕವಾಗುತ್ತಿರುವ ಕೆಲ ವಿಷಯಗಳತ್ತ ಚಿತ್ತ ಹರಿಸೋಣ. ಆ ಪೈಕಿ ಮೊದಲನೆಯದು ಜಾತಿ. ಈ ಕಾರಣಕ್ಕೇ ಮೇಲು ಕೀಳು ಎಂಬ ಕಲ್ಪನೆ ಜತೆಗೆ ‘ಕೀಳವರನ್ನು ಅನುಭವಿಸುವುದು ತಪ್ಪಲ್ಲ’ ಎಂಬ ಕಲ್ಪನೆ ದೇಶದ ಲಕ್ಷಾಂತರ ಹೆಣ್ಣುಮಕ್ಕಳ ಮಾನ, ಪ್ರಾಣಹರಣಕ್ಕೆ ಕಾರಣವಾಗಿದೆ. ಈ ಬಗ್ಗೆ ಚರ್ಚೆಯಾಗುವ ಕಾಲ ಬೇಗ ಬರಲಿ.

ಇನ್ನು ಧನ ಮತ್ತು ಅಧಿಕಾರ ಬಲ ಮತ್ತು ಇವುಗಳೆದುರು ನಡೆಯದ ಕಾನೂನಿನ ಆಟಕ್ಕೆ ನಿತ್ಯವೂ ಹಲವು ತಾಯಂದಿರ ಮಾನ, ಪ್ರಾಣ ಹಾಗೂ ಬದುಕಿನ ಘನತೆಯೇ ಪತನವಾಗುತ್ತಿದೆ. ಕಠಿಣ ಕಾನೂನು ಬೇಕು ಎನ್ನುವವರು ಕಾನೂನು ಖರೀದಿ ಬಗ್ಗೆ ಯೋಚಿಸುವಷ್ಟರ ಮಟ್ಟಿಗೆ ಪ್ರಾಜ್ಞರಲ್ಲದಿರಬಹುದು, ಇರಲಿ ಬಿಡಿ.

ಇನ್ನು ಅನುಭೋಗಿ ಸಂಸ್ಕೃತಿಯ ಆಟಾಟೋಪ ಕಣ್ಣಿಗೆ ಕಾಣಿಸದಂಥದ್ದು. ಕೆಲವೊಮ್ಮೆಯಷ್ಟೇ ಬೀದಿಗಿಳಿಯುವ ‘ಥಳುಕು-ಬಳುಕಿನ ಮಹಿಳೆಯರು ಮತ್ತು ಪುರುಷರು’ ಇದೇ ಸಂಸ್ಕೃತಿಯವರು; ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳೂ. ಇದರ ಪರಿಣಾಮ ಕೇವಲ ವಸ್ತುಗಳಷ್ಟೇ ಅಲ್ಲ, ಮನುಷ್ಯ ಮತ್ತು ಮನಸ್ಸುಗಳೂ ಭೋಗವಸ್ತುಗಳಾಗಿಬಿಟ್ಟಿವೆ. ನಮಗೆ ಪ್ರತಿಕ್ಷಣವೂ ಮಾಧ್ಯಮಗಳು ತೋರುವುದು ಹೆಂಗಸರ ಹೊಕ್ಕಳು, ಕೂದಲಿಲ್ಲದ ಕಂಕುಳು, ಹಿಡಿಗೆ ಸಿಗುವ ತೊಡೆಗಳು, ನಿರ್ದಿಷ್ಟ ಅಳತೆಯ ನಡು, sex-sellsಬೊಜ್ಜಿಲ್ಲದ ಹೊಟ್ಟೆ, ಗಂಡಸರ ಸಿಕ್ಸ್ ಪ್ಯಾಕ್, ಅದಕ್ಕೆ ತರಾವರಿ ವಸ್ತ್ರವಿನ್ಯಾಸ, ಇತ್ಯಾದಿ, ಇತ್ಯಾದಿ. ಇದನ್ನು ತೋರಿಸದಿದ್ದರೆ ‘ಕಾಸಾಗದು’ ಎನ್ನುವ ಧೋರಣೆ ಅದರದ್ದು. ಹೀಗೆ ನೋಡುಗರ ಕಣ್ಣಿಗೆ ‘ಮಜಾ’ ಕೊಡುವ ಉದ್ಯಮ ಸೃಷ್ಟಿಯಾಗಿದೆ.

ಹೊಟ್ಟೆ ಮತ್ತು ಅದರ ಕೆಳಗಿನ ಭಾಗದ ಅಂಗಗಳ ಸಂತೃಪ್ತಿಯನ್ನಷ್ಟೇ ಮನುಷ್ಯ ತಲುಪಬೇಕಾದ ಗಮ್ಯ ಎನ್ನಲಾಗುತ್ತಿದೆ. ಇದೇ ಸಂಸ್ಕೃತಿ ದೇಶದ ಮೂಲೆಮೂಲೆಗೆ ನುಗ್ಗುತ್ತಿದೆ. ಮೊಬೈಲು ಕೊಟ್ಟು, ಅದರಲ್ಲಿ ಸೆಕ್ಸ್ ವಿಡಿಯೋ ಕೊಡುತ್ತಿದೆ. ಮಕ್ಕಳು, ಯುವಕರು, ಮುದುಕರು, ಎಲ್ಲ ವಯೋಮಾನದವರೂ ಇದರ ಫಲಾನುಭವಿಗಳಾಗುತ್ತಿದ್ದಾರೆ. ಈ ಹಕೀಕತ್ತು ಯಾರಿಗೂ ಅರ್ಥವಾಗುವಂಥದ್ದಲ್ಲ. (ಈ ಸಂಸ್ಕೃತಿಯ ಸಿನಿಮಾ, ಟಿವಿ ಕಾರ್ಯಕ್ರಮಗಳ ಸಂದೇಶ ಮತ್ತು ರಂಜನೆಯಂತೂ ಹೇಳಲೇ ಬೇಡಿ) ಜನಕ್ಕೆ ಕಾಸೇ ನೀತಿ, ಕಾಸೇ ಧರ್ಮವಾಗಿದೆ. ಉಳ್ಳವರ ತೃಷೆ ತಣಿಸಲು ದಾರಿಗಳಿವೆ. ಇಲ್ಲದವರದ್ದು ಅಡ್ಡದಾರಿ.

ಇನ್ನು ಸೆಕ್ಸ್‌ಗೆ ನಮ್ಮಲ್ಲಿ ಯಾವ ಸ್ಥಾನವಿದೆ ಎಂದು ಮಾತಾಡಿದರೂ ಅದು ಬಹಿಷ್ಕಾರದ ಆದೇಶಕ್ಕೆ ಆಹ್ವಾನವೇ ಸರಿ. ಮನುಷ್ಯ ಸಹಜ ಹಸಿವಾದ ಲೆಂಗಿಕತೆ ಇಲ್ಲಿ ದಕ್ಕಬೇಕಾದರೆ, ಜಾತಿ, ವಯಸ್ಸು, ಧರ್ಮ, ವಿವಾಹ, ಇತ್ಯಾದಿಯಂತಹ ಅನೈಸರ್ಗಿಕ ಹಾದಿಯನ್ನು ಕ್ರಮಿಸಬೇಕು. ಆದರೆ, ದೇಹದ ಸಹಜ ಹಸಿವನ್ನು ಅಸಹಜವಾಗಿಯಾದರೂ ಹೆಚ್ಚಿಸಿ ಅವರನ್ನು ಅತ್ಯಾಚಾರದಂಥ ಕುಕೃತ್ಯಕ್ಕೆ ಪ್ರೇರಣೆ ನೀಡುವಂಥ ಸಂದರ್ಭಗಳೇ ಸೃಷ್ಟಿಯಾಗುತ್ತಿವೆ. ಆದಾಗ್ಯೂ, ‘ಕಾಲ ಕೆಟ್ಟೋಯ್ತು ಕಣ್ರೀ, ಅಮ್ಮನ್ನ ಅಮ್ಮನ್ ತರಾ ನೋಡ್ತಿಲ್ಲ, ತಮ್ಮನ್ನ ತಮ್ಮನ್ ತರಾ ನೋಡಲ್ಲ’ ಎಂದು ಮಮ್ಮಲ ಮರುಗುವ ಮಂದಿ, ಅದರ ಪರಿಹಾರಕ್ಕೆ ಇರುವ ದಾರಿಗಳೇನು ಎಂದು ಯಾರಾದರು ಸೂಚಿಸಿದರೆ ಅಥವ ಕೇಳಿದರೆ ಬಟ್ಟೆ ಬಿಚ್ಚಿ ಜಂಗಿ ಕುಸ್ತಿಗೆ ನಿಂತುಬಿಡುತ್ತಾರೆ. ಮಚ್ಚು, ಕುಡ್ಲು ಕೊಡ್ಲಿಗಳೂ ಕೈಗೆ ಬಂದು ಬಿಡುತ್ತವೆ. ಹಾಗೆಯೇ, ಕೆಲವು ಮೂಢ ನಂಬಿಕೆಗಳಿಗೂ ಕೊರತೆಯಿಲ್ಲ. ‘ವರ್ಜಿನ್ ಸವಿದರೆ, ರೋಗ ದೂರ’, ‘ಇಂಥ ಜಾತಿಯ ಹೆಣ್ಣಿನ ರುಚಿ ಹೀಗೆ,’ ಇತ್ಯಾದಿ, ಇತ್ಯಾದಿ.

ಇನ್ನು ನಗರೀಕರಣ ಎಂಬ ನರಕದಲ್ಲಿ ಧನಿಕರ ಪಾಲಿಗೆ ಬದುಕೆಂದರೆ ಭೋಗ. ಒಬ್ಬ ಬಾಯ್‌ಫ್ರೆಂಡ್ ಇಲ್ಲದಿದ್ದರೆ ಆಕೆ ಹೆಣ್ಣೇ ಅಲ್ಲ. ಒಬ್ಬ ಗರ್ಲ್‌ಫ್ರೆಂಡ್ ಇಲ್ಲದಿದ್ದರೆ ಆತ ಗಂಡೇ ಅಲ್ಲ ಎನ್ನುವ ಭಾವ ಯುವಜನರಲ್ಲಿ. ಜತೆಜತೆಗೆ ಹೈ-ಫೈ ಕಲ್ಚರ್ ಎಂಬ ಪ್ರತ್ಯೇಕ ಜಾತಿ ಬೆಳೆಯುತ್ತಿದೆ. ಓದು, ಹಣ, ಕೆಲಸ, ಅಂತಸ್ತುಗಳ ಆದಾರದ ಮೇಲೆ ಜನ ಎರಡು ಜಾತಿಯಾಗಿ ವಿಭಾಗವಾಗುತ್ತಿದ್ದಾರೆ. ಈ ಪೈಕಿ ಮೇಲು ಜಾತಿಗೆ ಸೇರಲು ಶ್ರಮಿಸುತ್ತಿರುವ ಜನರು ಹತಾಶರಾಗಿ, ಅದು ನಾನಾ ರೂಪದಲ್ಲಿ ವ್ಯಕ್ತವಾಗುತ್ತಿದೆ. ಒಂದು ಜಾತಿಗೆ ಮತ್ತೊಂದು ಜಾತಿ ಬಗ್ಗೆ ಜುಗುಪ್ಸೆ ಬೆಳೆಯುತ್ತಿದೆ. ಅತ್ಯಾಚಾರಿಗಳ ಮನಸ್ಸು ಇಂಥ ಮಾದರಿಯದ್ದೇನೋ ಎನಿಸುತ್ತದೆ. ಇಲ್ಲದಿರೆ, ತೃಷೆ ತೀರಿದ ಬಳಿಕವಾದರೂ ಬಿಟ್ಟು ಕಳುಹಿಸಬಹುದಿತ್ತಲ್ಲ. ಸರಳು ತುರುಕಿ ಕೊಂದರೇಕೆ ಎಂಬ ಪ್ರಶ್ನೆಗೆ, ರಾಜಕೀಯ ಮನಃಶಾಸ್ತ್ರಜ್ಞರೊ, ಸಮಾಜ ಶಾಸ್ತ್ರಜ್ಞರೋ ಉತ್ತರ ಕೊಡಲಿ.

ಇದೇ “ಸಂಸ್ಕೃತಿ”ಯ ಇನ್ನೊಂದು ರೂಪವು ಯುಟಿವಿಗಳಂಥ ಕಾರ್ಯಕ್ರಮಗಳಲ್ಲಿ ಕಾಣಬಹುದು. ಪರಸ್ಪರ ಕಾಸಿದೆ ಎಂದು ಲವ್ ಮಾಡುವ ಹುಡುಗ ಹುಡುಗಿಯರು, ‘ಒಂದು ತಿಂಗಳ ಬಳಿಕ ಸೆಕ್ಸ್‌ನಲ್ಲಿ ಅನ್‌ಫಿಟ್ ಅನಿಸಿದ.. ಸೋ ಬೇರೆಯವನ ಹುಡುಕಾಡಿದೆ’ ಎನ್ನುವ ಕನ್ಯೆಯರು, ಐದು ದಿನ ಕೆಲಸ ಮಾಡುತ್ತಾ ಪ್ರತಿ ವಾರದ ಎರಡು ದಿನ ಹೊಸ ಸಂಗಾತಿಯೊಂದಿಗೆ ಇರವಬಯಸುವ ಯುವಜನರು ನಮ್ಮ ಮಧ್ಯೆಯೇ ಇದ್ದಾರೆ. ಭೋಗದ ಬೆನ್ನುಬಿದ್ದು ತಪ್ತಿ ಕಾಣದೆ ನಿರಂತರ ’ಲವ್, ಸೆಕ್ಸ್, ಔರ್ ಧೋಖಾ’ದಲ್ಲಿ ಮುಳುಗಿರುವ ವಿಷಯವನ್ನೂ ಯಾರೂ ಉದಾಹರಿಸಲಿಲ್ಲ.

ಅತ್ಯಾಚಾರಗಳಂಥ ಸಾಮಾಜಿಕ ಪಿಡುಗುಗಳ ಬಗ್ಗೆ ಬರೆಯುವವರು, ಮಾತಾಡುವವರಿಂದ ಜನ ಸ್ವಲ್ಪವಾದರೂ ನಿಯತ್ತು, ಬದ್ಧತೆಯನ್ನು ನಿರೀಕ್ಷಿಸುತ್ತಾರೆ. ಆ ಜಾಗ್ರತೆ ಇಲ್ಲದೆ ಹೋದರೆ, ‘ಎಲ್ಲ ಗಂಡಸರೂ ದಪ್ಪ ದಪ್ಪ ಜಿರಲೆಗಳು ಕಂಡಂತೆ ಕಾಣುತ್ತಿದ್ದಾರೆ’ ಎಂದು ನಾಟಕೀಯವಾಗಿ ಗೀಚಬೇಕಾಗುತ್ತದೆ. ಅತ್ಯಾಚಾರ ಘಟನೆ ಮರೆತು, ‘ಮರ್ಕಟ ಮನದ ತುರಿಕೆ ತಡೆಯಲಾಗದೆ ಹುಡುಕಿ ಹೊರಡುವ ಪ್ರೀತಿ!’ ಬಗ್ಗೆ ಬರೆದು ಬೆತ್ತಲಾಗುತ್ತೇವೆ. ಅತ್ಯಾಚಾರದಲ್ಲೂ ರಾಜಕೀಯ ಬೆಳೆ ಅರಸಿ ಸಣ್ಣವರಾಗುತ್ತೇವೆ. ಇಲ್ಲವೇ ಯಾವುದನ್ನೂ ಕಟುವಾಗಿ ಮಾತನಾಡದೆ ‘ಎಲ್ಲೆಡೆ ಸಲ್ಲುವ ಬರವಣಿಗೆ ಬರೆದು’ ಆರಾಮವಾಗಿ ಹೊಟ್ಟೆ ಹೊರೆಯುತ್ತೇವೆ. sowjanya-rape-murderನಮ್ಮ ಪಕ್ಕದ ಮನೆಯ ಬಾಲೆ “ಸೌಜನ್ಯ ಅತ್ಯಾಚಾರ ಪ್ರಕರಣ” ಗೊತ್ತಾಗುವುದೇ ಇಲ್ಲ. ಇನ್ನು ಖೈರ್ಲಂಜಿ ಬಗ್ಗೆ ಯಾರಿಗೆ ಗೊತ್ತಾಗುತ್ತೆ? ಈ ಕುರಿತು ನಾವು ಬಳಸುವ ರೂಪಕಗಳೂ ‘ನೋ ಕಾಮೆಂಟ್ಸ್’ ಅನಿಸಬೇಕು. ಎಲ್ಲೆಲ್ಲಿಂದಲೋ ಪೆಕಪೆಕ ನಗು ತರುವಂತಿರಬಾರದು ಎನ್ನುತ್ತಾರೆ, ಏನಂತೀರಿ?

ಕಾಕತಾಳೀಯವೋ ಏನೋ, ದೆಹಲಿ ಘಟನೆ ಬಳಿಕ ಇಂದಿನವರೆಗೂ ಅತ್ಯಾಚಾರ ಪ್ರಕರಣಗಳು ನಿರಂತರ ವರದಿಯಾಗುತ್ತಲೇ ಇವೆ. ರಾಜ್ಯದಲ್ಲಂತೂ ಪ್ರಕರಣ ದಾಖಲಾಗುತ್ತಿರುವ ಪ್ರಮಾಣ ಏರುತ್ತಿದೆ. ವಿದೇಶಗಳಲ್ಲಿ ಸಣ್ಣ ಘಟನೆಗಳಿಗೂ ಜನ ಸರಕಾರಗಳು ವಿವಿಗಳತ್ತ ನೋಡುತ್ತವೆ. ಆದರೆ, ನಮ್ಮ ವಿವಿಗಳ ಸಮಾಜಶಾಸ್ತ್ರ ವಿಭಾಗಗಳು, ಮಹಿಳಾ ವಿವಿಗಳು ಅಸಲಿಯತ್ತೇನು ಎಂಬ ಬಗ್ಗೆ ಜನರ ಮನಹೊಕ್ಕು ಹೊಸ ವಿಷಯಗಳನ್ನು ತರುವ ಕೆಲಸ ಮಾಡುತ್ತಿಲ್ಲ. ಬದಲಿಗೆ ನಮ್ಮಂಥಹ ಅಯೋಗ್ಯರು ಬಾಯಿಗೆ ಬಂದಂತೆ ಹರಟುತ್ತಾ, ಸಮಸ್ಯೆಗಳನ್ನು ಸಮಸ್ಯೆಗಳಾಗಿಯೇ ಉಳಿಸುವ ಅಧ್ವಾನ ಮಾಡುತ್ತೇವೆ.

ಕೊನೆಯದಾಗಿ, ಮಹಿಳೆಯರ ಮೇಲಿನ ಲೈಂಗಿಕ ಹಲ್ಲೆಗಳಷ್ಟೇ ಅತ್ಯಾಚಾರಗಳೇ? ಖಂಡಿತ ಅಲ್ಲ, ವೈಯಕ್ತಿಕ ತೀಟೆಗೆ ಯಾರದ್ದೋ ಕೆಲಸ ಕಳೆಯುವುದು, ಲಾಭಕ್ಕಾಗಿ ಜನರನ್ನು ಬಳಸಿ ಬೀಸಾಡುದುವುದು, ಯಾವಾಗಲೂ ಒಬ್ಬರ ಅಸಹಾಯಕತೆ ಮೇಲೆ ಆಟ ಆಡುವುದು. ಸುಖಾ-ಸುಮ್ಮನೆ ಇನ್ನೊಬ್ಬರ ಮೇಲೆ ಅಪಪ್ರಚಾರ ಮಾಡಿಬಿಡುವುದು, ಅಧಿಕಾರ, ಹಣ, ಜಾತಿ, ಅಂತಸ್ತು, ಬಣ್ಣ ಇವುಗಳ ಹೆಸರಿನಲ್ಲಿ ಅನ್ಯರಿಗೆ ಕೊಡುವ ನೋವು, ಇವೆಲ್ಲ ವೇಳೆಯೂ ಅಗುವ ಪರಿಣಾಮ ಅತ್ಯಾಚಾರದಷ್ಟೇ ಘೋರವಾಗಿರುತ್ತದೆ. “ನೇಣು ಹಾಕಿ, ನಿರ್ವೀರ್ಯರಾಗಿಸಿ, ಆಕೆಯ ಕುಟುಂಬಕ್ಕೆ ನ್ಯಾಯಕೊಡಿ” ಎಂದು ಅರಚುತ್ತಿರುವ ನಮ್ಮೆಲ್ಲರಿಗೂ ಇದು ಅರ್ಥವಾಗಲಿ.