ನ್ಯಾಯವು ಅನ್ಯಾಯ, ಅನ್ಯಾಯವೇ ನ್ಯಾಯ

-ಮಹದೇವ ಹಡಪದ ಸಾಲಾಪೂರ

ಭಾರತದಲ್ಲಿ ಶಿಕ್ಷೆಯನ್ನು ಕೊಡಬೇಕಾದವರು ಮತ್ತು ಕೊಡಿಸಬೇಕಾದವರು ಮಧ್ಯವರ್ತಿಗಳಂತೆ ದಲ್ಲಾಳಿಗಳಾಗಿರುತ್ತಾರೆ. ಅನ್ಯಾಯ, ವಂಚನೆ, ಮೋಸ, ಕ್ರೌರ್ಯ, ಸುಲಿಗೆಗಳೆಲ್ಲವನ್ನು ಇಂಥ ದಲ್ಲಾಳಿಗಳು ಮುಚ್ಚಿ ಹಾಕುವ ಸಲುವಾಗಿ ಹೊಂದಾಣಿಕೆಯ ಸೂತ್ರವೊಂದನ್ನು ಮುಂದಿಟ್ಟುಕೊಂಡು ವ್ಯಾಜ್ಯಗಳನ್ನು ಅಳಿಸಿ ಹಾಕಿಬಿಡುತ್ತಾರೆ. ನಮ್ಮ ಹಳ್ಳಿ ಕಡೆಗೆ ಹೀಗೆ ವ್ಯವಹರಿಸಲು ಮುಂದಾಗುವ ಮಹಾಶಯರನ್ನು ನರಿಬುದ್ಧಿ ಚತುರರೆಂದು, ನರಿಮನಿ ವಕೀಲರೆಂದು ಗುರುತಿಸಲ್ಪಡುತ್ತಾರೆ. ಆದರೆ ಹಾಕಿರುವ ಬೇಲಿಯೇ ಒಬ್ಬರ ಪರವಾಗಿ ನಿಂತು ಇನ್ನೊಬ್ಬರನ್ನು ಪರಿಹಾರದ ಖೆಡ್ಡಾಕ್ಕೆ ಕೆಡವಿ ಅನ್ಯಾಯದ ಪರ ಸಬೂಬು ಹೇಳುವಂತ ಘಟನೆಗಳು ಎಲ್ಲ ವ್ಯಾಜ್ಯಗಳ ಮೂಲದಲ್ಲಿ ನಡೆದಿರುತ್ತದೆ ಅನ್ನುವುದು ಮುಸುಕಿನೊಳಗಿನ ಮಾತು. ಬಲಿಷ್ಠರ ಬೆನ್ನು ಕಾಯುವ ಇಂಥ ಸಮೂಹಗಳ ದೈವಾಧಾರಿತ ನ್ಯಾಯಮಂಡಳಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಾದ ಮೇಲೆ ನ್ಯಾಯ ಕೇಳಿ ಸರಕಾರದ ಕಡತಗಳಲ್ಲಿ ಅನ್ಯಾಯಗಳು ದಾಖಲುಗೊಳ್ಳುತ್ತವೆ. ಹಾಗೆ ದಾಖಲಾಗುವ ಸಂದರ್ಭದಲ್ಲೂ ಲಾಬಿಗಳು ನಡೆಯುವ ಕಾರಣದಿಂದ ಎಷ್ಟೋ ತಕರಾರುಗಳನ್ನ ಪೋಲಿಸರೇ ತಳ್ಳಿ ಹಾಕಿಬಿಡುವ ಸಂಗತಿಗಳು ದಾಖಲಾಗದ ಭಾರತದ ಇತಿಹಾಸದಲ್ಲಿ ನಡೆದು ಹೋಗಿವೆ.

ಈ ಹಳ್ಳಿಗಳ ಹೊಟ್ಟೆಯನ್ನು ಬಗೆದರೆ ಅದೆಷ್ಟು ಅತ್ಯಾಚಾರಗಳು ಮಾನ ಮರ್ಯಾದೆಯ ಹೆಸರಲ್ಲಿ ಗಪ್ಪುಗಾರಾಗಿಲ್ಲ…? ಕಾಣೆಯಾಗಿದ್ದಾರೆ, ಆತ್ಮಹತ್ಯೆ ಎಂಬ ಹೆಸರಿನಲ್ಲಿ ಅದೇಸೊಂದು ಮರ್ಯಾದೆ ಹತ್ಯೆಗಳು ನಡೆದಿಲ್ಲ…? ಇಂಥಪ್ಪ ಕಥನಗಳು ಗೊತ್ತಿದ್ದರೂ ಸಂಸ್ಕೃತಿಯ ಹೆಸರಿನಲ್ಲಿ ಭಾರತದ ಪರ ವಕಾಲತ್ತು ವಹಿಸಿ ಮಾತನಾಡುವ ಮೂರ್ಖರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿರುತ್ತಾರೆ.

ನ್ಯಾಯ ಕಟ್ಟೆ, ಮಠದ ಅಂಗಳ, ಗ್ರಾಮ ಚಾವಡಿ, ಪಂಚಾಯತ್ ಕಟ್ಟೆಯಿಂದ ಹೊರಬಿದ್ದ ಗ್ರಾಮಭಾರತದ ಜನ ಈಗ ಪ್ರಜ್ಞಾವಂತರಾಗಿದ್ದು ಎಲ್ಲ sowjanya-rape-murderವ್ಯಾಜ್ಯಗಳನ್ನ ಕೋರ್ಟು ಕಟಕಟೆಗೆ ಎಳೆದು ತಂದು ನ್ಯಾಯ ಕೇಳಲು ಮುಂದಾಗುತ್ತಿದ್ದಾರೆ. ಆದರೆ ಪೋಲೀಸರು ಇವತ್ತಿನ ದಿನಮಾನದಲ್ಲಿ ಉಳ್ಳವರ, ಅನ್ಯಾಯದ ಪರವಹಿಸಿ ವ್ಯಾಜ್ಯಗಳನ್ನು ಬಗೆಹರಿಸುವ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿರುವುದಕ್ಕೆ ಈ ದಲ್ಲಾಳಿಗಳು ಕುಮ್ಮಕ್ಕು ಕೊಡುತ್ತಿದ್ದಾರೆ. ಎರಡು ಕೋಮಿನ, ಜಾತಿ-ಜನಾಂಗಗಳ, ಊರುಗಳ, ಪಂಗಡಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳಗಳಾದಾಗ ಸಾಮಾಜಿಕ ವಾತಾವರಣವನ್ನು ತಿಳಿಗೊಳಿಸಲು ಇಂಥ ಹೊಂದಾಣಿಕೆಗಳು ನಡೆಯುತ್ತವಲ್ಲ ಅದು ಉತ್ತಮವಾದ ಯೋಚನೆ ಅನ್ನಬಹುದು. ಆದರೆ ಅತ್ಯಾಚಾರಕ್ಕೊಳಗಾದವಳು, ಅನ್ಯಾಯಕ್ಕೊಳಗಾದ ವ್ಯಕ್ತಿ, ನ್ಯಾಯ ಕೊಡಿಸಿ ಎಂದು ಠಾಣೆಗೆ ಬಂದರೆ ಅಂಥವರ ಮೂಗಿಗೆ ತುಪ್ಪ ಸವರಿ ಇಡೀ ಪ್ರಕರಣವನ್ನು ಇಲ್ಲವಾಗಿಸುವ ನೀಚತನ ಅಸಹ್ಯ ಹುಟ್ಟಿಸುವಂತದ್ದು. ಇದು ಪ್ರಜಾಪ್ರಭುತ್ವದ ಆಂತರ್ಯವನ್ನು ಸಡಿಲುಗೊಳಿಸುತ್ತದೆ. ತುಂಬು ಗರ್ಭಿಣಿಯಾದ ಬೆಕ್ಕು ಎಳೆಂಟು ಮರಿಗಳಿಗೆ ಜನ್ಮಕೊಟ್ಟ ತಕ್ಷಣದಲ್ಲಿಯೇ ಮೂರು ನಾಲ್ಕು ಮರಿಗಳನ್ನು ತಾನೇ ತಿಂದು ಸದೃಢವಾಗುವ ಹಾಗೆ ವ್ಯವಸ್ಥೆಯನ್ನು ಒಳಗೊಳಗೆ ನುಂಗಿಹಾಕುವ ಈ ಕೆಟ್ಟ ಚಾಳಿಯೂ ಭಾರತದಿಂದ ಪ್ರಚೋದಿತವಾಗಿ ಉಳಿದುಕೊಂಡು ಬಂದಿದೆ ಹೊರತು ಪಾಶ್ಚಾತ್ಯದಿಂದ ಬಂದುದಲ್ಲ. ವ್ಯವಸ್ಥೆ ಹೊಸಕಿದ ಒಂದೆರಡು ಘಟನೆಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

1) ಹದಿನೈದು ವರ್ಷದ ಹಿಂದೆ ದೆಹಲಿ ಅತ್ಯಾಚಾರಕ್ಕಿಂತಲೂ ಘೋರವಾದ ಅತ್ಯಾಚಾರವೊಂದು ತಾಲ್ಲೂಕು ಕೇಂದ್ರದಿಂದ ಇಪ್ಪತ್ತೈದು ಕಿ.ಮೀ. ದೂರದ ಒಂದು ಹಳ್ಳಿಯಲ್ಲಿ ನಡೆದು ಹೋಗಿತ್ತು. ನಾಲ್ಕೈದು ಜನರ ಗುಂಪು ಒಂದು ವಾರಕಾಲ ಬಿಟ್ಟುಬಿಡದೆ ನಿರಂತರ ಘಾಸಿಗೊಳಿಸಿದ್ದರು. ಅವಳ ಸಹಾಯಕ್ಕೆ ಪ್ರಿಯಕರನೂ ಇರಲಿಲ್ಲ, ತಾಯ್ತಂದೆಯರೂ ಬರಲಿಲ್ಲ. ಮಗಳು ಕಾಣೆಯಾಗಿದ್ದಾಳೆಂದು ಪೋಲಿಸರಲ್ಲಿ ದೂರು ಕೊಟ್ಟಾದ ಮೇಲೆ ಆಕೆಯನ್ನ ಊರ ಹೊರಗೆ ಬಿಸಾಡಿಯೂ ಹೋಗಿರಲಿಲ್ಲ. ಯಾರದೋ ಜೊತೆ ಓಡಿ ಹೋಗಿದ್ದಾಳೆಂದು ಊರವರೆಲ್ಲ ಮಾತಾಡುತ್ತಿದ್ದಾಗ ಆಕೆ ಗೌಡರ ಕಬ್ಬಿನ ತೋಟದ ನಡುವೆ ಮೈ-ಮನ ಸೋತು ಗಂಡಸಿನ ಕ್ರೌರ್ಯಕ್ಕೆ ಶರಣಾಗಿ ಒರಗಿದ್ದಳು. ನಾನು ಕಂಡಂತೆ ಆ ಹುಡುಗಿ ಮೈತುಂಬ ಬಟ್ಟೆ ತೊಟ್ಟು, ಅಣ್ಣ, ಚಿಕ್ಕಪ್ಪ, ದೊಡಪ್ಪ ಎಂದು ನೀತಿ ಹಿಡಿದು ಮಾತಾಡುವುದರಲ್ಲಿ ಎಂದೂ ದಾರಿ ತಪ್ಪಿರಲಿಲ್ಲ. ಕುರಿ ಕಾಯುವ ಹುಡುಗನೊಬ್ಬ ಈ ನಾಲ್ಕೈದು ಜನ ಆ ಕಬ್ಬಿನ ಗದ್ದೆಗೆ ಹೋಗಿಬರುತ್ತಿರುವುದನ್ನು ನೋಡಿ ನೋಡಿ, ಆ ಜಾಗ ಪತ್ತೆ ಹಚ್ಚಿ ಊರವರಿಗೆ ಸುದ್ದಿ ಮುಟ್ಟಿಸಿದ ಮೇಲೆ ಊರೆಲ್ಲ ಗುಲ್ಲೆದ್ದಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕ ನಂತರ ಆಕೆ ಬದುಕಿ ಬಂದಿದ್ದಳು. ಆದರೆ ಊರಿನ ದೈವ ಮತ್ತು ಪೋಲೀಸರ ಎದುರಿನಲ್ಲಿ ಪರಿಹಾರದ ರೂಪದ ಹೊಂದಾಣಿಕೆ ಸೂತ್ರಕ್ಕೆ ಒಪ್ಪಿಕೊಂಡ ಆ ಅಪರಾಧಿಗಳು ಆ ಪ್ರಕರಣದಿಂದ ನುಣುಚಿಕೊಂಡಿದ್ದರು. ಆಕೆ ತೀರ್ಮಾನ ಯಾರಿಗೂ ಬೇಕಿರಲಿಲ್ಲ. ಅವರು ಈಡುಗಂಟಾಗಿ ನೀಡಿದ್ದ ಹಣಕ್ಕೆ ಅವಳು ಬಲಿಪಶುವಾಗಿದ್ದಳು. ಮುಂದಿನ ಕಥೆಯಲ್ಲಿ ಅವಳೇ ಸತ್ತಳೋ… ಯಾರಾದರೂ ಹೊಡೆದು ಉರುಲು ಹಾಕಿದರೋ… ಆಕೆ ಹೆಣವಾಗಿ ಹಗ್ಗಕ್ಕೆ ಶರಣಾಗಿದ್ದಳು. ಆ ಎಲ್ಲ ಪುಢಾರಿಗಳಲ್ಲಿ ಕೆಲವರು ಈಗ ಊರಿನಲ್ಲಿ ಓಣಿ ಮೆಂಬರ್ರುಗಳಾಗಿ ಸುಖವಾಗಿದ್ದಾರೆ. ದೆಹಲಿ ಅತ್ಯಾಚಾರವನ್ನು ಚಡ್ಡಿಗಳ ರೀತಿಯಲ್ಲಿಯೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂಥ ಇವರು ಗೋಡ್ಸೆ ಭಕ್ತ/ಪ್ರಿಯ ದೇಶಪ್ರೇಮಿಗಳಂತೆ ಪೋಸು ಕೊಡುತ್ತಿರುವುದು ಇಂಡಿಯಾದ ವರ್ಚಸ್ಸಾಗಿದೆ.

2) ನಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ತೀವ್ರ ಉಬ್ಬಸವಾಗಿ ಉಸಿರೇ ನಿಂತು ಹೋದಂತಾಗಲು ನಾನು ನನ್ನೊಂದಿಗೆ ಇಬ್ಬರು ವಿದ್ಯಾರ್ಥಿ ಮಿತ್ರರ ಸಹಾಯದಿಂದ ಹೊಸದುರ್ಗದ ಸರಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದೆವು. ಆಗ ರಾತ್ರಿ 11:40. ಆದ್ದರಿಂದ ಹೊಸದುರ್ಗದ ಪ್ರಮುಖ ರಸ್ತೆಗಳು ಸ್ತಬ್ಧವಾಗಿ ನಿದ್ದೆ ಹೋದಂತಿದ್ದವು. ಆ ಹುಡುಗಿಗೆ ಆಕ್ಸಿಜೆನ್ ಹಾಕಿ ಬೆಡ್‍ರೆಸ್ಟ್ ಮಾಡಲು ಬಿಟ್ಟು ಹೊರ ಹೋದ ಶ್ರೀಧರ್ ಡಾಕ್ಟರ್ ತರಾತುರಿಯಲ್ಲಿ ಡ್ರಿಪ್ ಹಾಕಲು ಹಿಂದೆ ಮುಂದೆ ಓಡಾಡುತ್ತಿದ್ದರು. ಏನದು ಎಂದು ತಿರುಗಿ ನೋಡುವುದರೊಳಗೆ ಸರಿಸುಮಾರು ಮುವ್ವತ್ತೈದು ವರ್ಷದ ಹೆಂಗಸೊಬ್ಬಳನ್ನು ಐದಾರು ಜನ ಗಂಡಸರೊಂದಿಗೆ ಕರೆದುಕೊಂಡು ಬಂದು ಹಾಸಿಗೆ ಮೇಲೆ ಮಲಗಿಸಿದರು. ಬೆನ್ನಲ್ಲೆ ಮೂರು ಜನ ಗಂಡಸರೊಂದಿಗೆ ಪೋಲೀಸ ವ್ಯಾನೂ ಬಂದಿತ್ತು.

ಗಡಸು ಧ್ವನಿಯಲ್ಲಿ ಅವರನ್ನು ವಿಚಾರಿಸುತ್ತಿದ್ದ ಕ್ರಮದಿಂದಲೇ ಆ ಮೂವರು ಕಾಮುಕರು ಆಕೆಯ ಮೇಲೆ ಎರಗಿದ್ದರೆಂಬುದು ತಿಳಿಯುತ್ತಿತ್ತು. ಆ ಕ್ರೂರಿಗಳ ಬಗ್ಗೆ ಆಕೆಯ ಮನೆಯವರು ಆಕ್ರೋಶಭರಿತರಾದ್ದರಿಂದ ಅಪರಾಧಿಗಳನ್ನು ಕೂಡಲೆ ಠಾಣೆಗೆ ಕರೆದೊಯ್ಯಲಾಯಿತು. ತಡರಾತ್ರಿಯಾದ್ದರಿಂದ ವಿದ್ಯಾರ್ಥಿನಿಯನ್ನ ಮತ್ತವಳ ಜೊತೆಗೆ ಇಬ್ಬರನ್ನು ಅಲ್ಲಿಯೇ ಬಿಟ್ಟು ಉಳಿದ ನಾವೆಲ್ಲ ತಿರುಗಿ ಹಳ್ಳಿಗೆ ಹೊರಟೆವು. ಆ ದಿನದ ನಿದ್ದೆಯನ್ನ ಆ ಹೆಂಗಸಿನ ದೈನೇಸಿ ಸ್ಥಿತಿ ಕದ್ದಿದ್ದ ಕಾರಣಕ್ಕೆ ದೆಹಲಿ ಅತ್ಯಾಚಾರ, ಹಾಸನ, ಚಿಕ್ಕಮಗಳೂರು, ಕುಂದಾಪೂರ, ಬೆಂಗಳೂರು ಹೀಗೆ ಕಳೆದ ಹದಿನೈದು ದಿನದಿಂದ ಸುದ್ದಿಯಾಗುತ್ತಲಿರುವ ಎಲ್ಲ ಘಟನೆಗಳು ಮತ್ತೆ ನೆನಪಾಗುತ್ತಲಿದ್ದವು. ಆದರೆ ಮರುದಿನ ನಾನು ಕೇಳಿದ ಸುದ್ದಿ ಇಡೀ ಪ್ರಕರಣವನ್ನು ಮುಚ್ಚಿಹಾಕಿತ್ತು. ರಾತ್ರಿ ಸಂಭವಿಸಿದ ಆ ಅತ್ಯಾಚಾರ ಬೆಳಗಾಗುತ್ತಲೆ ಹಣಕಾಸಿನ ಹೊಂದಾಣಿಕೆಯಲ್ಲಿ ಮುಕ್ತಾಯವಾಗಿತ್ತು.

ಇದು ಈ ಭಾರತದ ತಮಸ್ಸಿನಲ್ಲಿ ಜರುಗಿರುವ ದುರಂತ ಕಥನಗಳ ಒಂದೆರಡು ಸಣ್ಣ ಉದಾಹರಣೆಗಳು. ನ್ಯಾಯಾಂಗದಲ್ಲಿನ ಕೆಲವು ಅನ್ಯಾಯಗಳ ಕುರಿತಾಗಿ ಬ್ರೆಖ್ಟ್ ಒಂದಂಕಿನ ಸುಂದರವಾದ “ಎಕ್ಸಪ್ಷನ್ ಆ್ಯಂಡ್ ದಿ ರೂಲ್” ಎಂಬ ನಾಟಕವೊಂದನ್ನು ಬರೆದಿದ್ದಾರೆ. The_Bulgarian_rapeಏನೂ ತಪ್ಪು ಮಾಡದಿರುವ ಕೂಲಿಯಾಳಿನ ವಿರುದ್ಧವೇ ತೀರ್ಪನ್ನು ಕೊಟ್ಟು ಬಿಡುವ ಆ ಸಂದರ್ಭ ಮೇಲುನೋಟಕ್ಕೆ ಅನ್ಯಾಯ ಅನ್ನಿಸಿದರೂ ಕೊಲೆಯಾಗುವ ಮುಂಚೆ ಕೂಲಿಯಾಳು ಸಂಶಯ, ಗುಮಾನಿಗಳಿಗೆ ಆಸ್ಪದ ಕೊಡುವ ರೀತಿಯಲ್ಲಿ ನಡೆದುಕೊಂಡದ್ದು ಉಳ್ಳವನ ಪರವಾಗಿ ವಾದ ಗೆಲ್ಲಲು ಕಾರಣವಾಗಿಬಿಡುವ ಸಾಮಾಜಿಕ ವ್ಯಂಗ್ಯ ನಾಟಕದಲ್ಲಿದೆ. ಅಂತೆಯೇ ನಮ್ಮಲ್ಲಿನ ಈ ಒಳ ಒಪ್ಪಂದದ ಸೂತ್ರಗಳು ನ್ಯಾಯಾಲಯದ ಮೆಟ್ಟಿಲೇರಲಿಕ್ಕೆ ಬಿಡದಿರುವುದು ನ್ಯಾಯಾಂಗವನ್ನು ಅವಮಾನಿಸಿದಂತಹ ನೀಚತನದ ಕೆಲಸವಾಗುತ್ತದೆ. ಇಂಥ ವ್ಯವಸ್ಥೆಯ ವಿರುದ್ಧ ಹೋರಾಡಿದಾಗ ಪ್ರಬಲ ಕಾನೂನುಗಳು ಒಂದಷ್ಟು ಜನರ ಬದುಕಿಗೆ ಸಹಾಯವಾಗಬಹುದು.

One thought on “ನ್ಯಾಯವು ಅನ್ಯಾಯ, ಅನ್ಯಾಯವೇ ನ್ಯಾಯ

  1. ಭಾರತೀಯ

    ನೀವು ಬರೆದಿದ್ದು ಅಕ್ಷರಶಃ ಸತ್ಯ … ನಾನೂ ಮೊನ್ನೆ ಇದೇ ರೀತಿಯಾಗಿ ಯೋಚಿಸುತ್ತಿದ್ದೆ. ವಕೀಲರು ಯಾವುದೇ ಪ್ರಕರಣವನ್ನು ತೆಗೆದುಕೊಂಡಾಗ ಅವರಿಗೆ ಅದರ ಸತ್ಯಾಸತ್ಯತೆಗಳು ಗೊತ್ತಾಗಿರುತ್ತವೆ. ಅಷ್ಟೆಲ್ಲ ಗೊತ್ತಿದ್ದರೂ ಅಪರಾಧಿಯ ಸಲುವಾಗಿ (ಮತ್ತು ಅವರು ಕೊಡುವ ದುಡ್ಡು, ಹೆದರಿಕೆಗಳ ಸಲುವಾಗಿ) ಹೊರಾಡುತ್ತಿರುವುದನ್ನು ನೋಡಿದರೆ ನಿರಪರಾಧಿಗಳ ಬಗ್ಗೆ ಕೆಡುಕೆನಿಸುತ್ತದೆ. ವಕೀಲರು (ನ್ಯಾಯಾಂಗ ವ್ಯವಸ್ಥೆ) ಅನ್ಯಾಯದ ವಿರುದ್ಧ ಹೋರಾಡುವ ವರೆಗೂ ಇದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ… ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ನಿನ್ನೆ ಇದ್ದ ದೊಡ್ಡ ಸಮಸ್ಯೆಗಳು ಇಂದು ಚಿಕ್ಕವಾಗುತ್ತವೆ … ಮರುದಿನ ಅದಕ್ಕಿಂತಲೂ ದೊಡ್ಡ ಸಮಸ್ಯೆ … ಇದರಲ್ಲಿ ರಾಜಕೀಯವಾಗಿ ಲಾಭ ಮಾಡಿಕೊಳ್ಳುವವರೆ ಹೆಚ್ಚು ವಿನಃ ಸಮಸ್ಯೆಗಳು ಕಡಿಮೆಯಾಗುವುದಿಲ್ಲ …

    Reply

Leave a Reply

Your email address will not be published. Required fields are marked *