Monthly Archives: February 2013

ನವೀನ್ ಸೂರಿಂಜೆ : ಮುಖ್ಯಮಂತ್ರಿಗಳಿಗೊಂದು ಪತ್ರ…

– ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

ರಾಜ್ಯ ಸರ್ಕಾರದ ಸಚಿವ-ಸಂಪುಟ ನವೀನ್ ಸೂರಿಂಜೆಯವರೆ ಮೇಲಿನ ಆಪಾದನೆಗಳನ್ನು ಕೈಬಿಡಲು ತೀರ್ಮಾನಿಸಿ ಇಂದಿಗೆ ಸರಿಯಾಗಿ ನಾಲ್ಕು ವಾರವಾಯಿತು. ಅದಾದ ನಂತರ ಮಾನ್ಯ ಮುಖ್ಯಮಂತ್ರಿಗಳು ನ್ಯಾಯಪ್ರಜ್ಞೆಯಿಂದ ವರ್ತಿಸಿದ್ದರೆ ಇಷ್ಟೊತ್ತಿಗೆ ನವೀನ್ ಸೂರಿಂಜೆ ಎಂದೋ ಬಿಡುಗಡೆ ಆಗಬೇಕಿತ್ತು. ಸಚಿವ ಸಂಪುಟದ ನಿರ್ಧಾರಗಳ ಮೇಲೆ ಮುಖ್ಯಮಂತ್ರಿ ಸಹಿ ಹಾಕುವ ಕ್ರಮ ಒಂದಿದೆ. ಅದು ಕೇವಲ ಶಿಷ್ಟಾಚಾರ. ಸಂಪುಟ ಸಭೆ ಆದ ದಿನವೇ ಅಥವ ಮಾರನೆಯ ದಿನವೇ ಮುಖ್ಯಮಂತ್ರಿ ಸಹಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಶಿಷ್ಟಾಚಾರದಂತೆ ನಾಲ್ಕು ವಾರಗಳ ಹಿಂದೆ (31-01-13) ಆದ ಸಂಪುಟ ಸಭೆ ತೀರ್ಮಾನಗಳ ಮೇಲೆ ಮುಖ್ಯಮಂತ್ರಿ ಮಾರನೆಯ ದಿನ ಸಹಿ ಹಾಕಿದರು. ಆದರೆ ನವೀನ್ ಸೂರಿಂಜೆ ವಿಷಯದ ಮೇಲಿನ ನಿರ್ಧಾರದ ಕಡತಕ್ಕೆ ಸಹಿ ಹಾಕದೆ ಹಾಗೆಯೇ ಉಳಿಸಿಕೊಂಡರು. ಇಂತಹುದೊಂದು ಘಟನೆ ಬಹುಶ: ಇಲ್ಲಿಯವರೆಗಿನ ಯಾವೊಂದು ಸಚಿವ ಸಂಪುಟದ ತೀರ್ಮಾನದ ವಿಷಯಕ್ಕೂ ಆಗಿಲ್ಲ. ಇದೊಂದು ಕೆಟ್ಟ ಪರಂಪರೆ.

ಇದೆಲ್ಲ ಯಾಕಾಯಿತು, ಇದರ ಹಿಂದೆ ಯಾರಿದ್ದಾರೆ, ಇಷ್ಟಕ್ಕೂ ನಮ್ಮ ಮುಖ್ಯಮಂತ್ರಿಗಳ ಘನತೆ, ಧೀಮಂತಿಕೆ, ನಿಷ್ಟುರತೆ, ನ್ಯಾಯಪ್ರಜ್ಞೆ ಎಷ್ಟಿದೆ naveen-soorinjeಎನ್ನುವ ವಿವರಗಳಿಗೆ ನಾನು ಹೋಗುವುದಿಲ್ಲ. ಇವೆಲ್ಲವನ್ನೂ ಬದಿಗಿಟ್ಟು ನಮ್ಮ ಈ ಮುಖ್ಯಮಂತ್ರಿ ತಮಗೆ ವೈಯಕ್ತಿಕವಾಗಿ ಹೆಚ್ಚು ಅನಾನುಕೂಲವಾಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ಅದು ನಮ್ಮನ್ನಾಳುವ ಜನರ ಸ್ವಾರ್ಥವನ್ನೂ, ಹೇಡಿತನವನ್ನೂ, ಅಧಿಕಾರಲೋಲುಪತೆಯನ್ನೂ, ನ್ಯಾಯಪ್ರಜ್ಞಾರಾಹಿತ್ಯವನ್ನೂ ತಿಳಿಸುತ್ತದೆ ಎಂದು ಭಾವಿಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಕೆಲವು ಪತ್ರಿಕೆಗಳು ಈ ವಿಷಯದ ಹಿಂದೆ ಬಿದ್ದಿದ್ದು ಫಾಲೊ-ಅಪ್ ಸ್ಟೋರಿಗಳನ್ನು ಮಾಡುತ್ತಿದ್ದಾರೆ (ದಿ ಹಿಂದು, ಡೆಕ್ಕನ್ ಕ್ರಾನಿಕಲ್). ರಾಜ್ಯದ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳೂ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಈ ಮೂಲಕ ಕೋರುತ್ತೇನೆ. ಹಾಗೆಯೇ, ನಾಡಿನ ನ್ಯೂಸ್ ಚಾನೆಲ್‌ಗಳೂ ಈ ವಿಷಯದ ಮೇಲೆ ಧ್ವನಿಯೆತ್ತಿ ತಮ್ಮ ಸಹೊದ್ಯೋಗಿಗೆ ನ್ಯಾಯ ದೊರಕಿಸಿಕೊಳ್ಳಬೇಕೆಂದೂ ವಿನಂತಿಸುತ್ತೇನೆ. ನವೀನ್ ಸೂರಿಂಜೆ ಜೈಲಿನಲ್ಲಿರುವ ಪ್ರತಿ ಕ್ಷಣವೂ ಅನ್ಯಾಯದ ವಿಸ್ತರಣೆ ಎಂದು ಪ್ರತ್ಯೇಕವಾಗಿ ಯಾರಿಗೂ ನೆನಪಿಸಬೇಕಿಲ್ಲ ಎಂದು ಭಾವಿಸುತ್ತೇನೆ.

ಇನ್ನು, ನಾನು, ನೀವು ಏನು ಮಾಡಬಹುದು? ಇಷ್ಟು ದಿನ ಕಾದದ್ದಾಯಿತು. ನೇರವಾಗಿ ಮುಖ್ಯಮಂತ್ರಿಗೇ ಪತ್ರ ಬರೆಯೋಣ, ಪೆಟಿಷನ್ ಮಾಡೋಣ. ಕೇವಲ ಅರ್ಧ ನಿಮಿಷದಲ್ಲಿ ನೀವು ಮುಖ್ಯಮಂತ್ರಿ ಕಚೇರಿಗೆ ಇಮೇಲ್ ಮಾಡಬಹುದು. ಅದಕ್ಕಾಗಿ ಈ ಪುಟದಲ್ಲಿ ಸುಲಭವಾದ ಸೌಲಭ್ಯ ಇದೆ. ಇಲ್ಲಿ ಕೆಳಗಿರುವ ಪತ್ರವನ್ನು ನೋಡಿ, ಅದಕ್ಕೆ ನಿಮ್ಮ ಸಹಮತಿಯಿದ್ದಲ್ಲಿ ನಿಮ್ಮ ಹೆಸರು, ಊರು, ಮತ್ತು ಇಮೇಲ್ ವಿಳಾಸ ನೀಡಿ “Sign Now” ಬಟನ್ ಒತ್ತಿದರೆ ಸಾಕು, ಈ ಪತ್ರ ನಿಮ್ಮ ಹೆಸರಿನಲ್ಲಿ ನೇರವಾಗಿ ಮುಖ್ಯಮಂತ್ರಿ, ಗೃಹ ಸಚಿವ, ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳ ಇಮೇಲ್ ವಿಳಾಸಕ್ಕೆ ಹೋಗುತ್ತದೆ. ನಾವು ಇಷ್ಟನ್ನಾದರೂ ಮಾಡಬಹುದಲ್ಲವೇ?

[emailpetition id=”1″]
[signaturelist id=”1″]

ಕಣ್ಮರೆಯಾದ ಮಾನವೀಯ ಒಳನೋಟಗಳು ಮತ್ತು ಸಹಜ ಸೆಕ್ಯುಲರ್‌ತನ

– ಬಿ. ಶ್ರೀಪಾದ ಭಟ್

ಇಂದು ನಾನು ನನ್ನ ಮನೆ ನಂಬರನ್ನು ಒರೆಸಿದೆ
ನನ್ನ ಓಣಿಯ ಹಣೆಯ ಮೇಲಿರುವ ಐಡೆಂಟಿಟಿಯನ್ನು ತೆಗೆದು ಹಾಕಿದೆ
ಪ್ರತಿಯೊಂದು ರಸ್ತೆಯಲ್ಲಿರುವ ನಾಮ ನಿರ್ದೇಶನಗಳನ್ನು ಅಳಿಸಿ ಹಾಕಿದೆ
ಆದರೆ ನೀನು ನಿಜವಾಗಲೂ ನನ್ನನ್ನು ಭೇಟಿಯಾಗಬೇಕೆಂದರೆ
ಪ್ರತಿಯೊಂದು ದೇಶದ ಮನೆಬಾಗಿಲುಗಳನ್ನು ತಟ್ಟು
ಪ್ರತಿಯೊಂದು ನಗರ,ಪ್ರತಿಯೊಂದು ಓಣಿಗಳನ್ನು ಸಹ
ಎಲ್ಲೆಲ್ಲಿ ಮುಕ್ತವಾದ ಚೈತನ್ಯ ಬದುಕಿರುತ್ತದೆಯೋ
ಅದೇ ನನ್ನ ಮನೆ
— ಅಮೃತಾ ಪ್ರೀತಂ

ಭಯೋತ್ಪಾದನೆ, ಕೋಮುವಾದ ಇಂದಿಗೂ ನಿರಂತರವಾಗಿ ಚಾಲ್ತಿಯಲ್ಲಿರುವುದನ್ನು ಅನುಭವಿಸುತ್ತಿರುವ ನಮಗೆಲ್ಲ ಇದೆಲ್ಲಾ ವಾಸ್ತವಕ್ಕೆ ಅದೇನಾ? ಎಂದು ಅನುಮಾನ ಹುಟ್ಟುವಷ್ಟರ ಮಟ್ಟಿಗೆ ಇವೆಲ್ಲ ಸಹಜ ಘಟನೆಗಳಾಗಿ ಹೋಗಿವೆ. ಕನಿಷ್ಟ ಮಟ್ಟದಲ್ಲಾದರೂ ಜೊತೆಗಾರರಾಗಿ ಬದುಕವಂತಹ ಜನ ಸಮೂಹವನ್ನು, ನಾಗರಿಕ ಸಮಾಜವನ್ನು ಕಟ್ಟಬೇಕಾದಂತಹ ರಾಜಕೀಯ ಪ್ರಜ್ಞೆ ಮತ್ತು ಮಾನವೀಯ, ಜನಪರ ರಾಜಕೀಯ ಸಿದ್ಧಾಂತಗಳು ಸತ್ತು ಹೋಗಿರುವುದೇ ಈ ಅರಾಜಕತೆಗೆ ಮೂಲಭೂತ ಕಾರಣವೆನ್ನುವ ತರ್ಕಗಳೂ ಇಂದು ಬೆಲೆ ಕಳೆದುಕೊಂಡಿದೆ. ಏಕೆಂದರೆ ರಾಜಕೀಯದ ಹೊರತಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ನಾವೆಲ್ಲ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇವೆಯೇ? ಇಲ್ಲ. ಒಂದು ವೇಳೆ ನಿಭಾಯಿಸಿದ್ದರೆ ಇವೆಲ್ಲ ಅವೇನಾ ಎನ್ನುವ ದುಸ್ಥಿತಿಗೆ ಬಂದು ತಲುಪುತ್ತಿರಲಿಲ್ಲ. ಸ್ವಾತಂತ್ರ್ಯ ನಂತರದ ಕಳೆದ 64 ವರ್ಷಗಳಲ್ಲಿ ಎಲ್ಲಾ ಧರ್ಮದ ಮೂಲಭೂತವಾದಿಗಳ ಕ್ರೌರ್ಯವನ್ನು, ಹಿಂಸೆಯನ್ನು ಸಶಕ್ತವಾಗಿ ಎದುರಿಸುವಂತಹ ವ್ಯವಸ್ಥೆಯನ್ನು ನಿರ್ಮಿಸಲು ನಾವೆಲ್ಲ ದಯನೀಯವಾಗಿ ಸೋತಿದ್ದೇವೆ. ವೈಯುಕ್ತಿಕ ನಂಬಿಕೆಗಳು ದ್ವೇಷವಾಗಿ ಪರಿವರ್ತನೆಗೊಂಡು ತದನಂತರ ಅದು ಹಿಂಸೆಯ ರೂಪ ತಾಳಿ ಸಮಾಜದ ಮೇಲೆ ಆಕ್ರಮಣ ನಡೆಸಿದಾಗ, ಈ ಹಿಂಸೆಗೆ ಮುಖಾಮುಖಿಯಾಗದೆ ನಾವೆಲ್ಲ ಮೂಕಪ್ರೇಕ್ಷಕರಾಗಬೇಕಾಗಿ ಬಂದದ್ದು ನಮ್ಮೆಲ್ಲರ ಸ್ವಯಂಕೃತ ಅಪರಾಧವಷ್ಟೇ.

ಇಲ್ಲದಿದ್ದರೆ ಪತ್ರಕರ್ತ ಸಿದ್ದಿಕಿಯನ್ನು ಭಯೋತ್ಪಾದನೆಯ ಆಪಾದನೆಯ ಮೇಲೆ ಬಂಧಿಸಿ ತಿಂಗಳುಗಳ ಕಾಲ ಜೈಲಿನಲ್ಲಿರಿಸಿದಾಗ, siddiqui‘ಇರಬಹುದೇನೋ, ಯಾವ ಹುತ್ತದಲ್ಲಿ ಯಾವ ಹಾವು ಯಾರಿಗೆ ಗೊತ್ತು’ ಎಂದು ಮುಗುಮ್ಮಾಗಿದ್ದ ನಾವು ಇದೇ ಸಿದ್ಧಿಕಿಯನ್ನು ಇತ್ತೀಚೆಗೆ ಅಪರಾಧಿಯಲ್ಲ, ಆತನ ಮೇಲೆ ಸುಳ್ಳು ಕೇಸುಗಳನ್ನು ಸೃಷ್ಟಿಸಲಾಗಿದೆ, ಆತನ ಮೇಲಿನ ಆರೋಪಗಳನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ತನಿಖಾ ತಂಡ ಕೋರ್ಟಗೆ ತಪ್ಪೊಪ್ಪಿಕೆಯ ಮನವಿ ಸಲ್ಲಿಸಿದಾಗ ‘ಎಂತಹ ಅನಾಹುತವಾಗಿ ಹೋಯಿತೆಂದು’ ನಾವ್ಯಾರೂ ಮರುಗಲಿಲ್ಲ, ತರುಣ ಪತ್ರಕರ್ತನೊಬ್ಬನ ಭವಿಷ್ಯವೇನು ಎಂದು ಚಿಂತಿಸಲಿಲ್ಲ. ಕನಿಷ್ಟ ಸಾರ್ವಜನಿಕವಾಗಿ ಈ ಫ್ಯಾಸಿಸ್ಟ್ ಶಕ್ತಿಗಳನ್ನು ಖಂಡಿಸಬೇಕಿತ್ತು!! ಕೆಲವು ಹಿಂದೂ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳನ್ನು ಭಯೋತ್ಪಾದನೆಯ ಆರೋಪದ ಮೇಲೆ ಬಂಧಿಸಿದಾಗ ಇದು ಹೇಗೆ ಸಾಧ್ಯವೆಂದು ಅಚ್ಚರಿ ಪಡುವ ಮನಸ್ಥಿತಿಯಿಂದ, ಮುಸ್ಲಿಂ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಲ್ಪಟ್ಟಾಗ ನಾನು ಹೇಳಲಿಲ್ಲವೇ ಎನ್ನುವ ಪೂರ್ವಗ್ರಹ ಪೀಡಿತ, ಕೊಳಕು, ಹಳಸಿದ ಮನಸ್ಥಿತಿಯಿಂದ ಹೊರಬರದ ಹೊರತು ವ್ಯವಸ್ಥೆಯಲ್ಲಿನ ಕ್ರೌರ್ಯಕ್ಕೆ ಪರ್ಯಾಯವಾದ ನೆಲೆಗಳು ಹುಟ್ಟಲಾರವು.

ಗಾಂಧೀಜಿ ಹತ್ಯೆಯೇ ಇಂಡಿಯಾ ದೇಶದ ಮೊಟ್ಟಮೊದಲ ಭಯೋತ್ಪಾದನೆಯ ಕೃತ್ಯ ಎಂದು ಹಿರಿಯ ಪತ್ರಕರ್ತ ಮಿತ್ರರು ಹೇಳುತ್ತಿದ್ದುದು ಅಕ್ಷರಶಃ ಸತ್ಯ. ಈ ಮೊಟ್ಟ ಮೊದಲ ಭಯೋತ್ಪಾದನೆಯನ್ನು ನಡೆಸಿದ ಸಂಘಟನೆ ಹಿಂದೂ ಮಹಾ ಸಭಾ ಮತ್ತು ಭಾರತದ ಮೊಟ್ಟ ಮೊದಲ ಭಯೋತ್ಪಾದಕ ನಾಥುರಾಮ್ ಘೋಡ್ಸೆ ತಮ್ಮ ಸಹವರ್ತಿಗಳಾಗಿದ್ದನ್ನು ಇಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗದಷ್ಟು ಸಂಘ ಪರಿವಾಕ್ಕೆ ಅಮ್ನೇಷಿಯಾ ತಗಲಿದೆ!! ಮಾಲೇಗಾವ್ ಸ್ಪೋಟ,ಹೈದರಾಬಾದನ ಜಾಮಾ ಮಸಿದಿಯ ಸ್ಪೋಟ,ಸಂಜೋತಾ ಎಕ್ಸಪ್ರೆಸ್‌ನ ಸ್ಪೋಟಗಳು ಮತ್ತು ಅಮಾಯಕರ ಸಾವುಗಳ ಕುರಿತಾಗಿ ಈಗ ಸಂಘ ಪರಿವಾರ ಕ್ವಚಿತ್ತೂ ಮಾತನಾಡುತ್ತಿಲ್ಲ.ತಮ್ಮ ಸಹವರ್ತಿಗಳೇ ಈ ಭಯೋತ್ಪಾದನೆಯ ಆರೋಪಗಳ ಮೇಲೆ ಜೈಲಿನಲ್ಲಿರುವುದು ಸಂಘಪರಿವಾರಕ್ಕೆ ನೆನಪಿಸಿಕೊಟ್ಟಷ್ಟೂ ಅದಕ್ಕೆ ಅಮ್ನೇಷಿಯಾ ಮರುಕಳಿಸುತ್ತದೆ!!

2002 ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ವಿನಾಕಾರಣ ಸಾವಿರಾರು ಮುಸ್ಲಿಮರನ್ನು ನಿರಾಳವಾಗಿ ಹತ್ಯೆ ಮಾಡಿದ್ದನ್ನು, ಆ ಕ್ರೌರ್ಯದ ಮನೋಸ್ಥಿತಿಯನ್ನು, ಈ ಹಿಂಸಾಚಾರದ ರೂವಾರಿಯೆಂದು ಆರೋಪಿತವಾಗಿರುವ ಫ್ಯಾಸಿಸ್ಟ್ ಮುಖ್ಯಂತ್ರಿ ನರೇಂದ್ರ ಮೋದಿ ಇವರನ್ನೆಲ್ಲ ಭಾರತದ ಮಧ್ಯಮ ವರ್ಗ ಇನ್ನಾದರೂ ಬಹಿರಂಗವಾಗಿ ಖಂಡಿಸಲಾರರೇಕೆ? sangh_parivarತನ್ನ ಕೈಗೆ ಅಂಟಿಕೊಂಡಿರುವ ಆ ರಕ್ತದ ಕಲೆ ಮತ್ತು ತನಗಂಟಿದ ಕಳಂಕ ಸಾಬೀತಾದರೆ ಮೋದಿ ಶಿಕ್ಷೆಗೆ ಒಳಗಾಗಲೇ ಬೇಕೆಂದು ಮಧ್ಯಮ ವರ್ಗ ಆಗ್ರಹಿಸಿ ಸರದಿ ಉಪವಾಸಕ್ಕೆ ತೊಡಗಲಾರರೇಕೆ? ಮುಸ್ಲಿಂ ಮೌಲ್ವಿಗಳನ್ನು, ಜಮಾತೆಗಳನ್ನು ಶಿಲಾಯುಗದವರೆಂದು ಖಂಡಿಸುವ ನಮ್ಮ ಮಧ್ಯಮವರ್ಗ ಅಷ್ಟೇ ನೈತಿಕತೆಯಿಂದ, ಮುಕ್ತ ಮನಸ್ಸಿನಿಂದ ಸಂಘ ಪರಿವಾರದ ಹಿಂದೂ ಫೆನಟಿಸಂ ಮತ್ತು ಕ್ಯಾಸ್ಟಿಸಂ ವಿರುದ್ಧ ಸಾರ್ವಜನಿಕವಾಗಿ ಹೋರಾಡುತ್ತಿಲ್ಲವೇಕೆ? ಕೇವಲ ಟಿವಿಗಳ ಮೂಲಕ ತಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಿಕೊಳ್ಳಬಯಸುವ ಇಂಡಿಯಾದ ಮಧ್ಯಮವರ್ಗಕ್ಕೆ ಈ ದೃಶ್ಯ ಮಾಧ್ಯಮವನ್ನು ಹೊರತುಪಡಿಸಿಯೂ ಅನೇಕ ಬಗೆಯ ಜ್ಞಾನದ ಮಾರ್ಗಗಳಿವೆ ಎಂದೇಕೆ ಅರಿವಾಗುತ್ತಿಲ್ಲ? ಇತರೇ ಜ್ಞಾನದ ಮಾರ್ಗಗಳನ್ನು ಮುಕ್ತ ಮನಸ್ಸಿನಿಂದ ನೋಡಿದ್ದರೆ ಈ ತ್ರಿಶೂಲಧಾರಿ ಸಂಘಪರಿವಾರದ ಲುಂಪೆನ್ ಗುಂಪನ್ನು ಮಧ್ಯಮವರ್ಗ ತೀವ್ರವಾಗಿ ಖಂಡಿಸುತ್ತಿತ್ತು. ಈ ಒಳನೋಟ ದಕ್ಕಿದ್ದರೆ ತನ್ನ ಧರ್ಮದ ಮತಾಂಧರಿಂದ ಹಲ್ಲೆಗೊಳಗಾದ ತಸ್ಲೀಮಾಳಿಗೆ ಆಸರೆ ಕೊಡಲು ಮುಂದಾದ ಸಂಘಪರಿವಾರದ ವರ್ತನೆಯ ಹಿಂದಿನ ಗುಪ್ತ ಕಾರ್ಯಸೂಚಿಗಳ ಕುರಿತಾಗಿ ಅರಿವಾಗುತ್ತಿತ್ತು.

ಮತ್ತೊಂದು ಕಡೆ ಈ ಮುಸ್ಲಿಂ ಮೂಲಭೂತವಾದಿಗಳ, ಈ ಪಾಪ್ಯುಲರ್ ಫ್ರಂಟ್‌ಗಳ, ಜಮಾತೆಗಳ ಧಾರ್ಮಿಕ ಮೂಲಭೂತವಾದ ಮತ್ತದರ ದುಷ್ಪರಿಣಾಮಗಳ ಕುರಿತಾಗಿ ನೇರವಾಗಿ ಖಂಡಿಸದೆ ಅದೇಕೆ ಅನೇಕ ಎಡಪಂಥೀಯ ಚಿಂತಕರು ಅದು ಹಾಗೇ, ಅದು ಹೀಗೆ ಎಂದು ಉಗ್ಗುತ್ತ ತಲೆಮರೆಸಿಕೊಳ್ಳುತ್ತಾರೆ? ಇನ್ನಾದರೂ ಈ ಎಡಪಂಥೀಯರು ತಾನು ಮುಸ್ಲಿಂ ಮೂಲಭೂತವಾದವನ್ನು ಖಂಡಿಸಿದರೆ ತಾನು ಸ್ವಧರ್ಮನಿಷ್ಟನಾಗಿಬಿಡುತ್ತೇನಲ್ಲ, ನನ್ನ ಸಿದ್ಧಾಂತಗಳ ಗತಿಯೇನು? ಎಂಬ ಹುಂಬ ಮತ್ತು ಚಲನರಹಿತ ಮನಸ್ಥಿತಿಯಿಂದ ಹೊರ ಬಂದು ವರ್ತಿಸತೊಡಗಿದಾಲೇ ಹೊಸಬೆಳಕು ಮೂಡುತ್ತದೆ. ಆಗ ಈ ಕೋಮುವಾದಿ ಮಧ್ಯಮವರ್ಗವನ್ನು ಈ ಹಿಂದೂತ್ವದ ಕಬಂಧಬಾಹುಗಳಿಂದ ಹೊರತರಬಹುದು. ಈ ಇಂಡಿಯ ಮುಜಾಹಿದ್ದಿನ್‌ಗಳು, ಲಷ್ಕರ್ ಎ ತೊಯ್ಬಾಗಳು ಯಾವುದೂ ಗೊತ್ತಿಲ್ಲದ, ಗೊತ್ತಿದ್ದರೂ ಅದರ ಸಹವಾಸ ಅವರಿಗೆ ಬೇಕಿಲ್ಲದ, Ghetto ಗಳಲ್ಲಿ ಅತಂತ್ರರಾಗಿ ಬದುಕುತ್ತಿರುವ ಇಂಡಿಯಾದ ಮುಸ್ಲಿಂರನ್ನು ಸಮಾಜದ ಮುಂಚೂಣಿಗೆ ತರುವಲ್ಲಿ ಇಂಡಿಯಾದ ಮಧ್ಯಮವರ್ಗ ಮತ್ತು ಎಡಪಂಥೀಯ ಚಿಂತಕರು ಅತ್ಯಂತ ಪ್ರಮುಖ ಪಾತ್ರ ವಹಿಸಲೇಬೇಕಾಗಿದೆ. ಈ ಮಧ್ಯಮವರ್ಗ ಮೋದೀಕರಣ, ಹಿಂದುತ್ವದ ಪ್ರಭಾವದಿಂದ ಕಳಚಿಕೊಂಡಾಗಲಷ್ಟೇ ಇದು ಸಾಧ್ಯ. ಆಗಲೇ ಎಲ್ಲಾ ಧರ್ಮಗಳ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ನೈತಿಕತೆಯ ಬಲ ದೊರಕುತ್ತದೆ. ಇಲ್ಲದಿದ್ದಲ್ಲಿ ಕ್ಷುಲ್ಲಕ, ಸ್ವಾರ್ಥ ರಾಜಕಾರಣ ಮತ್ತು ಮೂಲಭೂತವಾದಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ನಿರಂತರವಾಗಿ ಪರಿಸ್ಥಿಯ ದುರ್ಲಾಭ ಪಡೆದುಕೊಳ್ಳುತ್ತಲೇ ಇರುತ್ತವೆ.

ಕುಲಪತಿಗಳಲ್ಲ, ಇವರು ಹಣಪತಿಗಳು…

– ಜಿ.ಮಹಂತೇಶ್, ಭದ್ರಾವತಿ

“ಆ ಕುರ್ಚಿ ಮೇಲೆ ಅವರು ಕುಳಿತಿರುತ್ತಿದ್ದರೆ ದೇವರೆ ಆ ಕುರ್ಚಿ ಮೇಲೆ ಕುಳಿತುಕೊಂಡಿದ್ದರು ಎಂದು ನನಗೆ ಭಾಸವಾಗುತ್ತಿತ್ತು. ಅಂಥಾ ದೇವರು ಕೂತಿದ್ದ ಕುರ್ಚಿ ಮೇಲೆ ಇವತ್ತು ಅರ್ಹತೆ, ಮುನ್ನೋಟ ಇಲ್ಲದವರೆಲ್ಲ ಕುಳಿತು ಕುರ್ಚಿ ಮಹತ್ವಕ್ಕೆ ಧಕ್ಕೆ ತಂದು ಬಿಟ್ಟರು.”

ಇಲ್ಲಿ ಕುರ್ಚಿ ಎಂದು ಹೇಳುತ್ತಿರುವುದು ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿ ಕುರ್ಚಿ ಬಗ್ಗೆ. ಇಲ್ಲಿ ಕೂತಿದ್ದ ದೇವರು ಯಾರೆಂದರೆ, kuvempuಜಗತ್ತಿಗೆ ವಿಶ್ವಮಾನವ ಸಂದೇಶವನ್ನು ಸಾರಿದ ಯುಗದ ಕವಿ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಪ್ರಾಧ್ಯಾಪಕ ಹಾಗೂ ಕಟು ವಿಮರ್ಶಕರೊಬ್ಬರು ವಿಶ್ವವಿದ್ಯಾಲಯ ಆವರಣದಲ್ಲಿ ಹಣದ ವಹಿವಾಟು ಮತ್ತು ಜಾತಿಯ ಗಲೀಜನ್ನು ಕಂಡು, “ಇಂಥಾ ವೈಸ್ ಛಾನ್ಸಲರ್​ಗಳೆಲ್ಲ ವಿಶ್ವವಿದ್ಯಾಲಯವನ್ನು ಹಾಳು ಮಾಡಿಬಿಟ್ಟರು” ಎಂದು ತಣ್ಣಗೆ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ಮೌನವಾದರು.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯದಲ್ಲಿ ಅದೇ ಮೌನ ಈಗ ಹೆಪ್ಪುಗಟ್ಟಿದೆ. ಹೌದು, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆ ಎನ್ನುವುದು ಇವತ್ತು ಹರಾಜಿನಲ್ಲಿ ಕೂಗಿ ಉಳ್ಳವರು ಅದನ್ನು ಖರೀದಿಸುತ್ತಿರುವ ಸರಕಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆಗಳನ್ನು ನೋಡಿದರೆ ಇದು ಅರಿವಿಗೆ ಬರುತ್ತದೆ.

ಕುಲಪತಿಗಳ ನೇಮಕದಲ್ಲಿ ಮೂಗಿಗೆ ಬಡಿಯುತ್ತಿರುವುದು ಜಾತಿಯ ಕಮಟು ವಾಸನೆ. ವಿಶ್ವವಿದ್ಯಾಲಯವನ್ನು ಮುನ್ನಡೆಸಬೇಕಾದ ಕುಲಪತಿಗಳು ಕೋಟಿ ಕೋಟಿ ರೂಪಾಯಿ ಕೊಟ್ಟು ನೇಮಕವಾಗುತ್ತಿರುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲೂ ವ್ಯಾಪಕ ಚರ್ಚೆಗೀಡಾಗಿತ್ತು. ವಿಧಾನ ಮಂಡಲದ ಅಧಿವೇಶನದಲ್ಲಿ ಕುಲಪತಿಗಳ ನೇಮಕದ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ’ಶೈಕ್ಷಣಿಕ ವಲಯದಲ್ಲಿ ಉತ್ತಮ ಅನುಭವ ಹೊಂದಿರುವ ಪ್ರಾಧ್ಯಾಪಕರ ಮನಸ್ಸಿಗೆ ನೋವಾಗಿದೆ. ಇದು ನಿಜಕ್ಕೂ ವಿಷಾದನೀಯ,’ ಎಂದು ಮಂಗಳೂರಿನ ಸಮಾರಂಭದಲ್ಲಿ ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ, ಇದು ವಿಷಾದ ವ್ಯಕ್ತಪಡಿಸಿ, ಸುಮ್ಮನೆ ಕೂರುವ ಸಂಗತಿಯೂ ಅಲ್ಲ. ಸರಳ ಮತ್ತು ಸುಲಭದ ವಿಚಾರವೂ ಅಲ್ಲ. ವಿಶ್ವವಿದ್ಯಾಲಯಗಳು ಈಗ ಬ್ಯುಸಿನೆಸ್ ಸೆಂಟರ್​ಗಳಾಗುತ್ತಿವೆ. ಕೇಂದ್ರ ಧನ ಸಹಾಯ ಆಯೋಗ ಮತ್ತು ರಾಜ್ಯ ಸರ್ಕಾರ ಕೋಟಿ ಕೋಟಿಗಳ ಲೆಕ್ಕದಲ್ಲಿ ಅನುದಾನದ ಹೊಳೆಯನ್ನೇ ಹರಿಸುತ್ತಿರುವುದರಿಂದ ಎಲ್ಲರೂ ತಮ್ಮ ಶೈಕ್ಷಣಿಕ ಜೀವಮಾನದಲ್ಲಿ ಒಮ್ಮೆಯಾದರೂ ಕುಲಪತಿಗಳಾಗಲೇಬೇಕು ಎಂದು ವಿಧಾನಸೌಧದ ಮೂರನೇ ಮಹಡಿಯ ಕಂಬಗಳನ್ನು ಸುತ್ತು ಹಾಕುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯಕ್ಕೆ ಕುಲಪತಿ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ನಡೆದಿರುವ ಎಲ್ಲಾ ಪ್ರಕ್ರಿಯೆಗಳು ಅನುಮಾನಕ್ಕೀಡಾಗಿದೆ. ಶೋಧನಾ ಸಮಿತಿಗೆ ಸದಸ್ಯರೊಬ್ಬರ ನೇಮಕದಿಂದ ಹಿಡಿದು, ಕುಲಪತಿ ಹುದ್ದೆಗೆ ಕೂರುವವರೆಗೂ ಎಲ್ಲಾ ಪ್ರಕ್ರಿಯೆಗಳನ್ನು ತನಿಖೆಗೆ ಅಥವಾ ವಿಚಾರಣೆಗೆ ಒಳಪಡಿಸಿದರೆ, ಬಹಳಷ್ಟು ಸತ್ಯಗಳು ಹೊರಗೆ ಬರುವುದರಲ್ಲಿ ಅನುಮಾನವಿಲ್ಲ. ಕುಲಾಧಿಪತಿಗಳ ಕಚೇರಿಯಿಂದಲೇ ನೇಮಕ ಪತ್ರವನ್ನು ಖುದ್ದು ಪಡೆದುಕೊಂಡು ನೇರವಾಗಿ ವಿಶ್ವವಿದ್ಯಾಲಯಕ್ಕೆ ಹೋಗಿ ಅಧಿಕಾರ ಸ್ವೀಕರಿಸಿರುವುದನ್ನು ನೋಡಿದರೇ ಎಂಥವರಿಗೂ ಅನುಮಾನ ಬರದಿರದು.

ಈ ನೇಮಕ ಪ್ರಕ್ರಿಯೆ ಆದ ನಂತರ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳಿಗೆ ಆಗಿರುವ ನೇಮಕದ ಹಿಂದೆಯೂ ಇಂಥದ್ದೇ ಅನುಮಾನಗಳು ಎದುರಾಗಿವೆ. ಶತಮಾನೋತ್ಸವ ಸಂಭ್ರಮದ ಹೆಜ್ಜೆಗಳನ್ನಿಡುತ್ತಿರುವ ವಿಶ್ವವಿದ್ಯಾಲಯಕ್ಕೆ ನೇಮಕವಾದವರೇ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ನೇಮಕ ಮಾಡಿಸುವ “ಗುತ್ತಿಗೆ” ಪಡೆದುಕೊಂಡಿದ್ದರು, ಹೀಗಾಗಿ ಅವರ ಇಚ್ಛೆಯಂತೆ ಎರಡೂ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಿದ್ದಾರೆ ಎಂಬ ಚರ್ಚೆ ಈಗ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ತಾವು ಬಯಸಿದವರೇ ಕುಲಪತಿಗಳಾಗಬೇಕು ಎಂದು “ಗುತ್ತಿಗೆ” ಪಡೆದುಕೊಂಡ ಪ್ರಭೃತಿಗಳು, ನೇಮಕ ಪತ್ರಕ್ಕೆ ಸಹಿ ಮಾಡಿಸಲು ರಾತ್ರಿ ಇಡೀ ರಾಜಭವನದಲ್ಲಿ ತಂಗಿದ್ದರು ಎಂಬ ಸುದ್ದಿಯೂ ಶೈಕ್ಷಣಿಕ ವಲಯದಲ್ಲಿ ಹರಿದಾಡುತ್ತಿದೆ. ಸತ್ಯಾಂಶಗಳು ಬಯಲಿಗೆ ಬರಬೇಕಾದರೆ, ಕುಲಪತಿಗಳ ನೇಮಕ ದಿನಾಂಕದ ಹಿಂದುಮುಂದಿನ ದಿನಗಳಲ್ಲಿ ಯಾರ್‍ಯಾರು ರಾಜಭವನದಲ್ಲಿ ತಂಗಿದ್ದರು ಎನ್ನುವ ಮಾಹಿತಿ ಹೊರಬೀಳಬೇಕಷ್ಟೆ.

ಇಲ್ಲಿ, ಇನ್ನೂ ಒಂದು ವಿಚಾರವನ್ನು ಹೇಳಬೇಕು. ಅದೇನಂದರೇ ವಿಶ್ವವಿದ್ಯಾಲಯ ಕುಲಪತಿಗಳ ನೇಮಕದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಬಗ್ಗೆ. ಇತ್ತೀಚೆಗೆ vc-rangappaಮೂವರು ಕುಲಪತಿಗಳಾಗಿ ನೇಮಕವಾಗಿರುವ ವಿಶ್ವವಿದ್ಯಾಲಯಗಳ ಮಟ್ಟಿಗೆ ಹೇಳುವುದಾದರೇ ಸಾಮಾಜಿಕ ನ್ಯಾಯ ಕಸದ ಬುಟ್ಟಿಗೆ ಸೇರಿದೆ ಎಂಬುದು ನಿರ್ವಿವಾದ. ಮೂರು ವಿಶ್ವವಿದ್ಯಾಲಯಗಳಿಗೆ ನೇಮಕವಾಗಿರುವ ಮೂರೂ ಮಂದಿ ಒಂದೇ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಗಮನಾರ್ಹ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಕುಲಾಧಿಪತಿಗಳೇ ಅದನ್ನು ಕಸದ ಬುಟ್ಟಿಗೆ ಎಸೆದಿರುವುದು ನಿಜಕ್ಕೂ ದುರಂತ ಎಂದು ಹೇಳದೇ ಬೇರೆ ವಿಧಿ ಇಲ್ಲ.

ಮೊನ್ನೆ ಮೊನ್ನೆ ಪ್ರಧಾನಿ ಮನಮೋಹನ್ ಸಿಂಗ್ ದೇಶದ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆ ಬಗ್ಗೆ ತುಸು ಬೇಸರ ಮತ್ತು ಅಸಮಾಧಾನದಿಂದಲೇ ಮಾತನಾಡಿದ್ದರು. ಜಗತ್ತಿನ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯ ಇಲ್ಲ ಎಂದು ಬೇಸರಿಸಿದ್ದರು. ಕುಲಪತಿಗಳ ನೇಮಕದಲ್ಲಿ ಹಣದ ಪ್ರಭಾವ ಮತ್ತು ಜಾತಿಯ ಗಲೀಜು ಎಲ್ಲಿವರೆಗೆ ಇರುತ್ತದೆಯೋ ಅಲ್ಲಿವರೆಗೆ ಇಂಥ ಅಸಮಾಧಾನದ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಕು ಎಂದು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಕುಲಪತಿಗಳ ನೇಮಕದ ಬಗ್ಗೆ ಇನ್ನಷ್ಟು ಗಂಭೀರವಾಗಿ ಚರ್ಚೆಗಳಾಗಬೇಕಿದೆ. ವಿಶ್ವವಿದ್ಯಾಲಯಕ್ಕೆ ವಿವಿಧ ಮೂಲಗಳಿಂದ ಹರಿದು ಬರುತ್ತಿರುವ ಅನುದಾನದ ಲೆಕ್ಕಾಚಾರವೂ ಪರಿಣಾಮಕಾರಿಯಾಗಿ ಪರಿಶೋಧನೆ ಆಗಬೇಕಿದೆ. ಬ್ಯುಸಿನೆಸ್ ಸೆಂಟರ್‌ಗಳಾಗುತ್ತಿರುವ ವಿಶ್ವವಿದ್ಯಾಲಯಗಳನ್ನು ಶೈಕ್ಷಣಿಕ ಸಂಶೋಧನೆ ವ್ಯಾಪ್ತಿಗೆ ತರುವುದು ಮತ್ತು ಬೋಧನಾ ಅನುಭವ ಹಾಗೂ ಮುನ್ನೋಟ ಇರುವ ಪ್ರಾಧ್ಯಾಪಕರನ್ನು ಕುಲಪತಿಗಳನ್ನಾಗಿ ನೇಮಿಸುವುದೊಂದೇ ಇದಕ್ಕೆ ಪರಿಹಾರ. ಇದು ಇವತ್ತಿನ ಅಗತ್ಯ ಮತ್ತು ಅನಿವಾರ್ಯವೂ ಹೌದು.

ಸಿದ್ದಿಕಿ ಪ್ರಕರಣ : ಆಗಿದ್ದೇನು? ಅನ್ಯಾಯಕ್ಕೆ ನ್ಯಾಯ ಹೇಗೆ?

– ಗೌತಮ್ ರಾಜ್

ಆರು ತಿಂಗಳ ಹಿಂದಿನ ಮಾತು; ಬೆಂಗಳೂರು ಪೋಲೀಸರ ಅಂಗ ಸಂಸ್ಥೆಯಾಗಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ ಆಗಸ್ಟ್ 29, 2012 ರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಒಟ್ಟು ಹನ್ನೊಂದು ಜನ ಮುಸ್ಲಿಂ ಯುವಕರನ್ನು ಬಂಧಿಸಿತು. ಮರುದಿನ ರಾಜ್ಯದ ಡಿಜಿಪಿ ಲಾಲ್ ರುಕೊಮಾ ಪಚಾವೋ ಪತ್ರಿಕಾ ಘೋಷ್ಠಿಯಲ್ಲಿ ಈ ವಿವರಗಳನ್ನು ರಾಜ್ಯದ ಜನತೆಯ ಮುಂದೆ ಮಂಡಿಸಿದರು – ಈ ಹನ್ನೊಂದು ಜನ ಯುವಕರು ಲಷ್ಕರ್-ಎ-ತೊಯ್ಬಾ ಮತ್ತು ಹುಜಿ ಉಗ್ರವಾದಿ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದು, ಮೊದಲ ಬಾರಿಗೆ ಬಾಂಬು ಸಿಡಿಸುವುದನ್ನು ಕೈಬಿಟ್ಟು ಟಾರ್ಗೆಟೆಡ್ ಅಸಾಸಿನೇಷನ್‌ಗೆ ಕೈಹಾಕಿದ್ದು, ಅವರು ಕನ್ನಡಪ್ರಭ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ಅಂಕಣಕಾರ ಪ್ರತಾಪ ಸಿಂಹ,  VRL ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ, ಮತ್ತು ಹುಬ್ಬಳ್ಳಿಯ ಸಂಸದ ಪ್ರಹ್ಲಾದ್ ಜೋಶಿಯವರನ್ನು ಮುಗಿಸಲು ಸಂಚು ರೂಪಿಸಿದ್ದರು – ಎಂದು. ಅವತ್ತು ಸಿಸಿಬಿಯವರು ಒಂದು ಬಂದೂಕನ್ನು ಕೂಡ ವಶಪಡಿಸಿಕೊಂಡಿದ್ದರು.

ಈ ವಿವರಗಳು ಹೊರಬೀಳುತ್ತಿದ್ದಂತೆಯೇ ನಾಡಿನ ಜನರನ್ನು ಬೆಚ್ಚಿಬೀಳಿಸಿದ್ದು ಬಂಧಿತ ಯುವಕರ ವಿವರಗಳು. ಬಂಧಿತರಲ್ಲಿ ಒಬ್ಬsiddiqui ಮುತಿ-ಉರ್-ರೆಹಮಾನ್ ಸಿದ್ದಿಕಿ, ಪ್ರತಿಷ್ಠಿತ ಪ್ರಜಾವಾಣಿ ಸಮೂಹದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದ, ಮತ್ತೊಬ್ಬ ಐಜಾಜ್ ಅಹಮದ್ ಮಿರ್ಜಾ ಅತಿ ಸುನ್ನಿತವಾದ ಡಿಆರ್‌ಡಿಒ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ, ಒಬ್ಬ ಎಂಸಿಎ ವಿದ್ಯಾರ್ಥಿ, ಒಬ್ಬ ವೈದ್ಯ, ಮತ್ತೊಬ್ಬನ ತಂದೆ ಸದ್ಯ ಸೇವೆಯಲ್ಲಿರುವ ಅರಣ್ಯ ಅಧಿಕಾರಿ. ಪ್ರಜ್ಞಾವಂತರು ನಿಜಕ್ಕೂ ಬೆಚ್ಚಿಬಿದ್ದಿದ್ದರು.

ನಂತರ ಕೂಡ ಇನ್ನೂ ನಾಲ್ಕು ಜನರನ್ನು ನಗರದಿಂದಲೇ ಸಿಸಿಬಿ ಪೋಲೀಸರು ಬಂಧಿಸಿದರು. ಅಲ್ಲಿಗೆ ಒಟ್ಟಾರೆ 15 ಜನರನ್ನು ಈ ಪ್ರಕರಣದ ಸಂಬಂಧ ಬಂಧಿಸಲಾಯಿತು. ಆ ನಂತರದಲ್ಲಿ ಮಾದ್ಯಮದ ವರದಿಗಳನ್ನೂ ನೀವು ಓದಿಯೇ ಇರುತ್ತೀರಿ – ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಿಕಿ ಈ ಗುಂಪಿನ ನಾಯಕನೆಂದೂ, ಅಸಲು ಆತ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕೆಲಸಕ್ಕೆ ಸೇರಿದ್ದೇ ಅದರ ಎದುರಿರುವ ಮೆಟ್ರೋವನ್ನು ಉಡಾಯಿಸಲು ಎಂಬಲ್ಲಿಂದ ಹಿಡಿದು ಎಲ್ಲ ಗಾಳಿಪಟಗಳಿಗೂ ಸಂಕ್ರಾಂತಿಯ ಸಂಭ್ರಮ! ಈ ಎಲ್ಲ ಪಟಗಳನ್ನೂ ಹಾರಿಸುತ್ತಿದ್ದದ್ದು ಈ ಪ್ರಕರಣದ ತನಿಖೆ ನಡೆಸುತ್ತಿದ್ದವರೇ!

ಆ ನಂತರ ನವೆಂಬರ್‌ನಲ್ಲಿ ಈ ಪ್ರಕರಣದ ತನಿಖೆಯನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (NIA) ಕೈಗೆತ್ತಿಕೊಂಡಿತು. ಮೊನ್ನೆ ಬುಧವಾರ ಫೆಬ್ರವರಿ 20ನೇ ತಾರೀಖು ಎನ್‌ಐಎ ಈ ಪ್ರಕರಣದಲ್ಲಿ ಆರೋಪಟ್ಟಿಯನ್ನು ಸಲ್ಲಿಸಿದೆ. ಎನ್‌ಐಎ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಈ ಮೊದಲೇ ಹೇಳಿದ ಹಾಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 15. ಎನ್‌ಐಎ ಈಗ ಒಟ್ಟು 12 ಮಂದಿಯ ಮೇಲೆ ಆರೋಪಟ್ಟಿಯನ್ನು ಸಲ್ಲಿಸಿದೆ. ಈ ಹನ್ನೆರಡು ಮಂದಿಯಲ್ಲಿ 11 ಮಂದಿ ಈಗಾಗಲೇ ಬಂಧಿತರಾಗಿದ್ದರೆ, ಒಬ್ಬ ಜಾಕೀರ್ ಉಸ್ತಾದ್ ಸೌದಿ ಅರೇಬಿಯಾದಲ್ಲಿ ಕೂತಿರುವ ಹ್ಯಾಂಡ್ಲರ್. ಅಲ್ಲಿಗೆ ಒಟ್ಟು ಬಂಧಿತ 15 ಮಂದಿಯಲ್ಲಿ ನಾಲ್ವರ ವಿರುದ್ಧ ಎನ್‌ಐಎ ಆರೋಪಟ್ಟಿಯನ್ನು ಸಲ್ಲಿಸಿಲ್ಲ. ಇಲ್ಲಿರುವುದು ಸುದ್ದಿ.

ಎನ್‌ಐಎ ಮೂಲಗಳು ತಿಳಿಸುವಂತೆ ಮತ್ತು ಆರೋಪಪಟ್ಟಿಯ ಪ್ರತಿಯನ್ನು ಸ್ವತಃ ನಾನು ಕಂಡಿರುವಂತೆ, ಈ ನಾಲ್ವರು – ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ, ಸೈಯದ್ ಯೂಸುಫ್ ನಳಬಂದ್, ಐಜಾಜ್ ಅಹಮದ್ ಮಿರ್ಜಾ ಮತ್ತು ಸೈಯದ್ ತಂಜೀಮ್. ಈ ನಾಲ್ವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಎನ್‌ಐಎ ಅತ್ಯಂತ ಸ್ಪಷ್ಟವಾಗಿ ಹೇಳಿದೆ: “ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ ಮತ್ತು ಸೈಯದ್ ಯೂಸುಫ್ ನಳಬಂದ್ ಅವರ ವಿರುದ್ಧ ನಮಗೆ ಯಾವುದೇ ಸಾಕ್ಷ್ಯಾದಾರಗಳು ಸಿಕ್ಕಿಲ್ಲವಾದ್ದರಿಂದ ಅವರನ್ನು ಎಲ್ಲ ಆರೋಪಗಳಿಂದಲೂ ವಿಮುಕ್ತಗೊಳಿಸುತ್ತಿದ್ದೇವೆ. ಇನ್ನು ಐಜಾಜ್ ಅಹಮದ್ ಮಿರ್ಜಾ ವಿರುದ್ಧ ಇನ್ನೂ ತನಿಖೆ ಬಾಕಿಯಿದ್ದು ಅದಕ್ಕೆ ಮತ್ತಷ್ಟು ಕಾಲಾವಕಾಶ ನೀಡಬೇಕು. ಸದ್ಯದ ಮಟ್ಟಿಗೆ ಆತನ ವಿರುದ್ಧವೂ ಪ್ರಬಲ ಸಾಕ್ಷ್ಯಾಧಾರಗಳಿಲ್ಲ. ಇನ್ನು ನಾಲ್ಕನೆಯ ಸೈಯದ್ ತಂಜೀಮ್ – ಈತನನ್ನು ಬಂಧಿಸಿದ್ದೇ ನವೆಂಬರ್‌ನಲ್ಲಿ. ಹಾಗಾಗಿ ಈತನ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲಾವಕಾಶವಿದೆ. ಹಾಗಾಗಿ ಈ ನಾಲ್ವರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ.”

ಅಲ್ಲಿಗೆ ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ ಇಷ್ಟರಲ್ಲೇ ಗೌರವಯುತವಾಗಿ ಹೊರಬರುವ ಸಾಧ್ಯತೆಗಳಿವೆ. ಉಗ್ರವಾದಿಗಳ ತಂಡದ ನಾಯಕನೆಂದೇ ಬ್ರಾಂಡ್ ಆಗಿಹೋಗಿದ್ದ ಸಿದ್ಧಿಕಿಯನ್ನು ಎನ್‌ಐಎ ದೋಷಮುಕ್ತಗೊಳಿಸಿದೆ. ಆರು ತಿಂಗಳ ಕಾಲ ಜೈಲಿನಲ್ಲಿ ಕೊಳೆತ ಮೇಲೆ, ಉಗ್ರವಾದಿಯೆಂಬ ಅಪಾದನೆಯನ್ನು ಹೊತ್ತ ಮೇಲೆ ಈಗ ಕಡೆಗೂ ನ್ಯಾಯ ಸಿಕ್ಕಿದೆ, ಇಲ್ಲವೆನ್ನುತ್ತಿಲ್ಲ. ಆದರೆ ಇದು ನ್ಯಾಯವೇ?

ಒಂದು ಕ್ಷಣ – ಇಫ್ತಿಕಾರ್ ಗಿಲಾನಿ, ಶಹಿನಾ ಕೆಕೆ, ನವೀನ್ ಸೂರಿಂಜೆ ಮತ್ತಿತರೆ ಪತ್ರಕರ್ತರ ಪ್ರಕರಣಗಳೊಂದಿಗೆ ಈ ಪ್ರಕರಣವನ್ನು ಜೊತೆಗೂಡಿಸಿ ಇದು ಸರ್ಕಾರವು ಪತ್ರಕರ್ತ ಸಮೂಹವನ್ನು ದಮನಿಸಲು ನಡೆಸಿರುವ ಷಡ್ಯಂತ್ರ ಎಂದು ಬೊಬ್ಬಿಡುವುದು ಬೇಡ. ಪ್ರತಿ ಪ್ರಕರಣಕ್ಕೂ ಅದರದೇ ಆದ ಹಿನ್ನೆಲೆಯಿದೆ. ಮತ್ತು ಸಿದ್ಧಿಕಿಯನ್ನು ವೈಯಕ್ತಿಕವಾಗಿ ಬಲ್ಲ ನಾನು ಕಂಡಂತೆ ಈ ಪ್ರಕರಣದಲ್ಲಿ ಸಿದ್ಧಿಕಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದಲ್ಲ.

ಆದದ್ದಿಷ್ಟು. ಕನ್ನಡಪ್ರಭದ ಅಂಕಣಕಾರ ಪ್ರತಾಪ ಸಿಂಹರನ್ನು ಮುಗಿಸಲು ಕೆಲ ಮುಸ್ಲಿಂ ಹುಡುಗರು ನಗರದಲ್ಲಿ ಸಂಚು ರೂಪಿಸಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಸಿಸಿಬಿಯವರಿಗೆ ಲಭಿಸುತ್ತದೆ. siddiqui-arrestಈ ಕುರಿತು ಅಸಲು ಕೆಲಸ ಮಾಡಿದವರು ಆಂಧ್ರದ ಗುಪ್ತಚರ ಇಲಾಖೆ. ಹೈದರಾಬಾದಿನ ವಿವಾದಿತ ಇಮಾಮ್ ಒಬ್ಬರ ಕುಟುಂಬದ ಒಬ್ಬನ ಚಲನವಲನಗಳನ್ನು ಗಮನಿಸುತ್ತಿದ್ದವರಿಗೆ ಆತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಶುರು ಮಾಡುವುದು ಆಶ್ಚರ್ಯವಾಗುತ್ತದೆ. ಆತನನ್ನು ಹಿಂಬಾಲಿಸಿ ನಗರಕ್ಕೆ ಬಂದವರಿಗೆ ಆತ ಜೆಸಿ ನಗರದ ಮುನಿರೆಡ್ಡಿಪಾಳ್ಯದ ಒಂದು ರೂಮಿನ ಸಣ್ಣ ಮನೆಯಲ್ಲಿ ಕೆಲವರನ್ನು ಬೇಟಿಯಾಗುತ್ತಿದ್ದಾನೆಂದೂ ತಿಳಿಯುತ್ತದೆ.

ಆ ಮನೆಯಲ್ಲಿ ವಾಸ ಇದ್ದವರು ಐದು ಮಂದಿ – ಎಲ್ಲರೂ ಹುಬ್ಬಳ್ಳಿಯ ಓಲ್ಡ್ ಸಿಟಿ ಭಾಗದ ಮುಸ್ಲಿಂ ಯುವಕರು, ಬೆಂಗಳೂರಿನಲ್ಲಿ ಬದುಕು ಅರಸಿ ಬಂದವರು – ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ, ಸೈಯದ್ ಯೂಸುಫ್ ನಳಬಂದ್, ಐಜಾಜ್ ಅಹಮದ್ ಮಿರ್ಜಾ, ಆತನ ತಮ್ಮ ಶೋಯೆಬ್ ಅಹಮದ್ ಮಿರ್ಜಾ ಮತ್ತು ರಿಯಾಜ್ ಅಹಮದ್ ಬ್ಯಾಹಟ್ಟಿ. ಇವರ ಬಗ್ಗೆ ತನಿಖೆ ಮಾಡುತ್ತಾ ಹೋದಾಗ ಹುಬ್ಬಳ್ಳಿಯಲ್ಲಿ ಇವರ ಸಂಪರ್ಕ ಇದ್ದ ಐದು ಮಂದಿ ಬಯಲಾಗುತ್ತಾರೆ. ಆನಂತರ ಆಂಧ್ರದ ಗುಪ್ತಚರ ಇಲಾಖೆ ಬೆಂಗಳೂರಿನ ಸಿಸಿಬಿಗೆ ಈ ಮಾಹಿತಿಯನ್ನು ಸ್ಪೂನ್‌ಫೀಡ್ ಮಾಡುತ್ತದೆ.

ಧಿಗ್ಗನೆದ್ದು ಕೂತ ಸಿಸಿಬಿ ಪೋಲೀಸರು ಆಗಸ್ಟ್ 29 ರ ಮುಂಜಾವು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಒಟ್ಟು 11 ಮಂದಿಯನ್ನು ಬಂಧಿಸಿಬಿಟ್ಟರು, ಜೇಮ್ಸ್ ಬಾಂಡ್‌ಗಳಂತೆ ಪೋಸುಕೊಟ್ಟವರು ಪ್ರಥಮ ಮಾಹಿತಿ ವರದಿಯಲ್ಲೇ ಆತ್ಮರತಿಯ ರಂಜನೀಯ ಕಥೆಗಳನ್ನು ಬರೆದುಕೊಂಡರು. ಪ್ರತಾಪ ಸಿಂಹ ತಮ್ಮನ್ನು ಚೆ ಗೋವೆರಾನಿಗೆ ಹೋಲಿಸಿಕೊಂಡರು.

ನಂತರದ್ದು ಮೀಡಿಯಾ ಮ್ಯಾನೇಜ್‌ಮೆಂಟ್. ನಮ್ಮ ಗುಪ್ತಚರ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರೊಬ್ಬರು ಅದನ್ನು “ಪರ್ಸೆಪ್ಷನ್ ಮ್ಯಾನೇಜ್‌ಮೆಂಟ್” ಎಂದು ಕರೆಯುತ್ತಾರೆ. ಅದನ್ನು ಅದ್ಭುತವಾಗಿ ಮಾಡಿದರು ಸಿಸಿಬಿಯ ಜೇಮ್ಸ್ ಬಾಂಡುಗಳು. ಸ್ವತಃ ತಮ್ಮ ನೌಕರನೇ ಬಂಧಿತನಾಗಿದ್ದ ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಪತ್ರಿಕೆಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಪತ್ರಿಕೆಗಳು ಇದಕ್ಕೆ ಬಲಿಯಾದವುಗಳೇ,

ಈಗ ಎನ್‌ಐಎ ತನಿಖೆ ನಡೆಸಿ ಆರೋಪಪಟ್ಟಿ ಹಾಕುವಾಗ ಜೆಸಿ ನಗರದ ಮುನಿರೆಡ್ಡಿಪಾಳ್ಯದ ಮನೆಯಿಂದ ನಮ್ಮ ಸಿಸಿಬಿಯವರು ಬಂಧಿಸಿದ್ದ ಐವರಲ್ಲಿ ಮೂವರ ವಿರುದ್ಧ ಯಾವುದೇ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ. ಇದರಲ್ಲಿ ಸ್ವಂತ ಅಣ್ಣ ತಮ್ಮಂದಿರಾದ ಐಜಾಜ್ ಅಹಮದ್ ಮಿರ್ಜಾ ಮತ್ತು ಶೋಯೆಬ್ ಅಹಮದ್ ಮಿರ್ಜಾ ಅವರಲ್ಲಿ ಶೋಯೆಬ್ ಅಹಮದ್ ಮಿರ್ಜಾನನ್ನು ಈ ಉಗ್ರ ಸಂಚಿನ ಪ್ರಮುಖ ರೂವಾರಿಯೆಂದು ಗುರುತಿಸಿದರೆ, ಆತನ ಅಣ್ಣ ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿದ್ದ ಐಜಾಜ್ ಅಹಮದ್ ಮಿರ್ಜಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದಿರುವುದು ಎನ್‌ಐಎ ತನಿಖೆಯ ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಗೆ ದ್ಯೋತಕ. ಒಂದು ವೃತ್ತಿಪರ ತನಿಖೆಯ ಉದಾಹರಣೆ. ಹೀಗೆ ಯಾವುದೇ ಸಾಕ್ಷ್ಯಗಳಿಲ್ಲವೆಂದು ನಮ್ಮ ಮುತಿ-ಉರ್-ರೆಹಮಾನ್ ಸಿದ್ಧಿಕಿಯನ್ನೂ ಸಹ ಎನ್‌ಐಎ ಎಲ್ಲ ಆರೋಪಗಳಿಂದಲೂ ಮುಕ್ತಗೊಳಿಸಿದೆ.

ಅಷ್ಟೇ ಅಲ್ಲ ನಮ್ಮ ಸಿಸಿಬಿಯವರು ಬಂಧಿಸಿದ ಎಲ್ಲ ಹದಿನೈದು ಜನರ ವಿರುದ್ಧವೂ ಐಪಿಸಿಯ ಸೆಕ್ಷನ್ 121 ರ ಅಡಿ (ಭಾರತ ಪ್ರಭುತ್ವದ ವಿರುದ್ಧ ಯುದ್ಧ ಸಾರುವುದು) ಕೇಸು ಹಾಕಿದ್ದರು. ಆದರೆ ಎನ್‌ಐಎ ಈ ಕೇಸನ್ನು ಕೈಬಿಟ್ಟಿದೆ. ಯುಎಪಿಎ, 1967 ರ ಸೆಕ್ಷನ್ 10, 13, 17 ಮತ್ತು 18 ರಡಿಯಷ್ಟೇ ಪ್ರಕರಣ ದಖಲಿಸಿದ್ದಾರೆ. ಇದು ಅತ್ಯಂತ ಫೇರ್ ಆದ ಕ್ರಮ. ನಾಲ್ವರು ಹುಡುಗರು ಒಂದು ಬಂದೂಕು ಹಿಡಿದು ತಮ್ಮ ಕೋಮಿನ ವಿರುದ್ಧ ಬರೆಯುತ್ತಿದ್ದಾನೆಂಬ ಒಂದು ಸಿಟ್ಟು ಮತ್ತು ಮತಾಂಧತೆಯಲ್ಲಿ ಆತನನ್ನು ಹೊಡೆಯಲು ಹುಚ್ಚರಂತೆ ತಿರುಗುವುದು ಹೇಗೆ ಪ್ರಭುತ್ವದ ವಿರುದ್ಧ ಯುದ್ಧ ಸಾರಿದಂತಾಗುತ್ತದೆ?

ನಿಜ, ಎನ್‌ಐಎ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡದ್ದರಿಂದ ನ್ಯಾಯ ದೊರಕಿತು. ಇಂಥ ಪ್ರಕರಣಗಳಲ್ಲಿ ಎಲ್ಲ ಆಸೆಗಳನ್ನೂ ಕಳೆದುಕೊಂಡಿದ್ದ ನಮ್ಮಂಥವರಿಗೆ ಒಂದು ಆಶಾಭಾವನೆಯನ್ನು ಚಿಗುರಿಸಿರುವುದು ದಿಟ. ಆದರೆ ಈಗ ಸಿಸಿಬಿ ಪೋಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು? ಒಂದು ಮನೆಯಲ್ಲಿ ಐವರು ಹುಡುಗರು ಇದ್ದರೆಂದ ಮಾತ್ರಕ್ಕೆ ಐವರನ್ನು ಹೆಡೆಮುರಿಗೆ ಕಟ್ಟಿ ತಂದವರು ಈಗ ಏನು ಹೇಳುತ್ತಾರೆ? ಅವರ ವಿರುದ್ಧ ಯಾವ ಕ್ರಮವೂ ಇಲ್ಲವೇ? ತಮ್ಮನ್ನು ಅಂತಹ ಕ್ರಮಗಳಿಂದ ರಕ್ಷಿಸಿಕೊಳ್ಳಲು ಬಹುಶಃ ಯುಎಪಿಎ, 1967 ದ ಸೆಕ್ಷನ್ 18 ನ್ನೂ ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ.
Section 18, UAPA, 1967:
Protection of action taken in good faith.
No suit, prosecution or other legal proceeding shall lie against the District Magistrate or any officer authorised in this behalf by the Government or the District Magistrate in respect of anything which is in good faith done or intended to be done in pursuance of this Act or any rules or orders made thereunder.

ಇದಕ್ಕೆ ಏನು ಹೇಳಬೇಕು? ಸಿದ್ಧಿಕಿ ಹೊರಬರುತ್ತಾನೆ ನಿಜ. ಆದರೆ ನೀವು ಸುಮ್ಮನೆ ಮುತಿ-ಉರ್-ರೆಹಮಾನ್ ಸಿದ್ಧಿಕಿಯ ಹೆಸರು ಹೊಡೆದು ನೋಡಿ ಗೂಗಲ್ಲಿನಲ್ಲಿ – ನೂರು ಪುಟಗಳು ಪುಟಿಯುತ್ತವೆ ಆತನನ್ನು “ಮಾಸ್ಟರ್ ಮೈಂಡ್” ಎಂದು ಘೋಷಿಸುತ್ತಾ. ಇದರಿಂದ ಬಿಡುಗಡೆ? ಆತ ಜೀವನದುದ್ದಕ್ಕೂ ಈ ಉಗ್ರವಾದಿ ಎಂಬ ಹಣೆಪಟ್ಟಿಯನ್ನು ಹೊರಲೇಬೇಕಲ್ಲವೇ? ಸಮಾಜ ಮುಖ್ಯವಾಹಿನಿಯ ಮಾತು ಬಿಡಿ. ನಮ್ಮ ಪೋಲೀಸ್ ವ್ಯವಸ್ಥೆ, ಗುಪ್ತಚರ ವ್ಯವಸ್ಥೆಯ ಕಣ್ಣಲ್ಲಿ ಈಗಲೂ ಆತ ಸಾಕ್ಷ್ಯಾಧಾರಗಳು ಲಭಿಸದೆ ತಪ್ಪಿಸಿಕೊಂಡ ಒಬ್ಬ ಉಗ್ರ ಅಷ್ಟೆ. ಆತ ಜೀವನ ಪರ್ಯಂತ ನಮ್ಮ ಪೋಲೀಸ್ ಮತ್ತು ಗುಪ್ತಚರ ಇಲಾಖೆಗಳ ರಡಾರ್‌ನಲ್ಲಿ ಇದ್ದೇ ಇರುತ್ತಾನೆ. ಪ್ರತಿ ಉಗ್ರವಾದಿ ದಾಳಿಯ ನಂತರವೂ ಆತ ತನ್ನ ಇನ್ನೋಸೆನ್ಸ್ ಅನ್ನು ಋಜು ಮಾಡುತ್ತಲೇ ಇರಬೇಕು. 2001 ರ ಸುಮಾರಿನಲ್ಲಿ ಪಾಕಿಸ್ತಾನಕ್ಕೆ ಗುಪ್ತಚರ ಏಜೆಂಟನಾಗಿ ಕೆಲಸ ಮಾಡುವ ಆರೋಪದ ಮೇಲೆ ಬಂಧಿತನಾಗಿ ನಂತರ ಖುಲಾಸೆಯಾದ ಪತ್ರಕರ್ತ ಇಫ್ತಿಕಾರ್ ಗಿಲಾನಿಯನ್ನು ನಮ್ಮ ದೆಹli ಪೋಲೀಸರು ಅಫ್ಜಲ್ ಗುರುವನ್ನು ನೇಣಿಗೇರಿಸಿದ ಕೂಡಲೇ ಗೃಹ ಬಂಧನದಲ್ಲಿರಿಸಿದರು. ಆತ ಇವತ್ತು ರಾಷ್ಟ್ರೀಯ ಪತ್ರಿಕೆಯೆನ್ನಿಸಿಕೊಂಡಿರುವ ಡಿಎನ್‌ಎದ ಹಿರಿಯ ಸಂಪಾದಕ! ಇದಕ್ಕೆ ಬೆಲೆ ಕಟ್ಟುವವರಾರು?

ಇವತ್ತು ಶನಿವಾರ ಎನ್‌ಐಎದಲ್ಲಿ ಈ ಪ್ರಕರಣದ ವಿಚಾರಣೆಯಿದ್ದು, ಸಿದ್ಧಿಕಿಯ ಬಿಡುಗಡೆಯ ಕ್ರಮಗಳು ಶುರುವಾಗುತ್ತವೆ. ಮಂಗಳವಾರದಂದು ಆತ ಸ್ವತಂತ್ರ ಹಕ್ಕಿಯಾಗಿ ಹೊರಬರುವ ಎಲ್ಲ ನಿರೀಕ್ಷೆಗಳಿವೆ. ಆತ ಹೊರಬಂದ ಮೇಲೆ ಮತ್ತೆ ಆತನನ್ನು ಮುಖ್ಯವಾಹಿನಿಗೆ ತರಬೇಕಿದೆ. ಆತನನ್ನು ಹೇಗೆ ನಡೆಸಿಕೊಳ್ಳುತ್ತದೆ ನಮ್ಮ ಸಮಾಜ ಎಂಬುದರ ಮೇಲೆ ಅದರ ಪ್ರಬುದ್ಧತೆಯನ್ನು ಅಳೆಯಬಹುದಾಗಿದೆ. ಈ ನಿಟ್ಟಿನಲ್ಲಿ “ಡೆಕ್ಕನ್ ಹೆರಾಲ್ಡ್ ಪತ್ರಿಕೆ” ಇನ್ನೂ ಆತನನ್ನು ಕೆಲಸದಿಂದ ತೆಗೆದುಹಾಕದೆ ಇಟ್ಟುಕೊಂಡಿರುವುದು ಅತ್ಯಂತ ಸ್ವಾಗತಾರ್ಹ. ಮಂಗಳವಾರ ಆತ ಹೊರಬಂದರೆ ಬುಧವಾರದಿಂದಲೇ ಆತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಲು ಶುರು ಮಾಡಬಹುದೆಂಬ ವರ್ತಮಾನವಿದೆ. ಪ್ರಜಾವಾಣಿ ಸಮೂಹದ ಈ ಕ್ರಮವನ್ನು ನಾವು ಸ್ವಾಗತಿಸುವ ಅವಶ್ಯಕತೆಯಿದೆ. ಅಂತೆಯೇ ಒಂದು ದಕ್ಷ, ವೃತ್ತಿಪರ, ಪಾರದರ್ಶಕ ತನಿಖೆಗಾಗಿ ಎನ್‌ಐಎಗೆ ಒಂದು ಕೃತಜ್ಞತೆ ಸಲ್ಲಿಸಬೇಕಿದೆ.

ಕೊನೆಯದಾಗಿ ಒಂದು ಮಾತು – ಪ್ರತಾಪ ಸಿಂಹ ಮತ್ತು ಅವರಂತೆ ಬರೆಯುವವರಿಗೆ: ಒಂದು ಕೋಮಿನ ತಮ್ಮದೇ ವಯಸ್ಸಿನ ತಮ್ಮಷ್ಟೇ ಬಿಸಿರಕ್ತದ ವಿದ್ಯಾವಂತ ಹುಡುಗರು ತಮ್ಮ ಬರವಣಿಗೆಯಿಂದ ಬೇಸತ್ತು, ಹೌಹಾರಿ ರೇಜಿಗೆಯಾಗಿ ಕೊಲ್ಲಲು ಹವಣಿಸುತ್ತಾರೆಂದರೆ ಆ ಬರವಣಿಗೆ ಅವರ ಮನಸ್ಸುಗಳನ್ನು ಎಷ್ಟು ಘಾಸಿಗೊಳಿಸಿರಬಹುದು? ಟೀಕೆಯನ್ನು ಸಹಿಸಿಕೊಳ್ಳಲಾಗದವರು, ಇವರಂತೆಯೇ ಮತಾಂಧರೂ ಆಗಿರುವ ಹುಡುಗರು ಪೆನ್ನು ಹಿಡಿದು ಉತ್ತರಿಸುವ ಬದಲು ಬಂದೂಕು ಹಿಡಿದರು. ಅದು ಅವರ ಅಭಿವ್ಯಕ್ತಿ ಮತ್ತು ಅಪರಾಧ. ಬರವಣಿಗೆ ಎದೆಗೆ ಬಿದ್ದ ಅಕ್ಷರವಾಗಬೇಕು. ಒಂದು ಕೋಮಿನ ವಿರುದ್ಧ ಒಂದು ತೀರದ ನಂಜನ್ನಿಟ್ಟುಕೊಂಡು ಬರೆಯುವುದು ಪ್ರಚಾರ ಮತ್ತು ಅಪಪ್ರಚಾರದ ಬರವಣಿಗೆ. ಇಂತಹದು ಪತ್ರಿಕೋದ್ಯಮವಾ? ಚೆ ಗೋವೆರಾನಿಗೆ ಹೋಲಿಸಿಕೊಂಡು ಆ ಹಿರಿಯ ಚೇತನದ ಸ್ಮೃತಿಗೂ ಅವಮಾನ ಮಾಡಿ ಭ್ರಮೆಗಳಲ್ಲಿ ತೇಲುವ ಬದಲು ಇದು ಆತ್ಮಾವಲೋಕನಕ್ಕೆ ಸಕಾಲ.

ಸಿದ್ದಿಕಿ ಪ್ರಕರಣ: ‘ಮಾಸ್ಟರ್ ಮೈಂಡ್’ ಎಂದವರು ಈಗ ಏನ್ಮಾಡ್ತಾರೆ?

– ಸುಧಾಂಶು ಕಾರ್ಕಳ

ಡೆಕ್ಕನ್ ಹೆರಾಲ್ಡ್ ವರದಿಗಾರ ಮುತಿ-ಉರ್-ರಹಮಾನ್ ಸಿದ್ದಿಕಿ ವಿರುದ ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್‌ಐ‌ಎ) ತನ್ನ ಚಾರ್ಜಶೀಟ್ ನಲ್ಲಿ ಯಾವುದೇ ಉಲ್ಲೇಖ ಮಾಡದೆ ಅವರ ವಿರುದ್ಧ ಹೊರಿಸಲಾಗಿದ್ದ ಆರೋಪಗಳನ್ನು ಸಾಬೀತುಪಡಿಸಲು ಆಗಲಿಲ್ಲ ಎಂಬ ಸೂಚನೆ ನೀಡಿದೆ.siddiqui ಆರು ತಿಂಗಳ ಕಾಲ ಸಿದ್ದಿಕಿ ಆತ ಅನುಭವಿಸಿದ ಶಿಕ್ಷೆ, ಅವಮಾನ, ಎದುರಿಸಿದ ಅನುಮಾನದ ಕಣ್ಣುಗಳು, ಟಾರ್ಚರ್, ತನ್ನದೇ ವೃತ್ತಿಯ ಹಲವರು ಕಟ್ಟಿದ ಕತೆಗಳು..ಎಲ್ಲವನ್ನೂ ನೆನಸಿಕೊಂಡರೆ ಆತಂಕ, ಭಯ, ಬೇಸರ ಎಲ್ಲವೂ ಒಮ್ಮೆಗೇ.

ಇಷ್ಟು ದಿನಗಳ ಕಾಲ ತನಿಖೆ ಮಾಡಿದ ನಂತರವೂ ತನಿಖಾ ಸಂಸ್ಥೆಗೆ ಆತನ ವಿರುದ್ಧ ಚಾಜ್ರ್ ಶೀಟ್ ಹಾಕಲಾಗಲಿಲ್ಲ. ಆದರೆ ನಾಡಿನ ಪ್ರಮುಖ ಪತ್ರಿಕೆಗಳು ಸಿದ್ದಿಕಿ ವಿರುದ್ಧ ಪುಂಖಾನುಪುಂಖವಾಗಿ ಕತೆ ಬರೆದವು. ಟೈಮ್ಸ್ ಆಫ್ ಇಂಡಿಯಾ ಎಂಬ ದೇಶದ ನಂಬರ್ 1 ಪತ್ರಿಕೆ ಸಿದ್ದಿಕಿಯನ್ನು ಭಯೋತ್ಪಾದಕ ಚಟುವಟಿಕೆಗಳ ಹಿಂದಿನ ‘ಮಾಸ್ಟರ್ ಮೈಂಡ್’ ಎಂದು ಬಣ್ಣಿಸಿತು.

ಅಷ್ಟೇ ಏಕೆ, ಬಂಧನವಾದ ಮಾರನೆಯ ದಿನವೇ ಬಂಧಿತರನ್ನೆಲ್ಲಾ ಮುಲಾಜಿಲ್ಲದೆ ‘ಉಗ್ರರು’ ಎಂದು ಹಣೆಪಟ್ಟಿಕಟ್ಟಿದ್ದು ಸಂಯಮ ಕಳೆದುಕೊಂಡಿರುವ ಮಾಧ್ಯಮ. ಆತ ಸಿದ್ದಿಕಿ ಅಲ್ಲದೆ ಸಿದ್ದಯ್ಯನೋ, ಸಿದ್ದಲಿಂಗೇಶನೋ ಆಗಿದ್ದರೆ ‘ಉಗ್ರ’ ಎಂದು ಘೋಷಿಸುವ ಉತ್ಸಾಹವನ್ನು ಮಾಧ್ಯಮ ತೋರಿಸುತ್ತಿತ್ತೇ? (ಇಂತಹದೇ ಆರೋಪ ಹೊತ್ತು ಜೈಲು ವಾಸ ಅನುಭವಿಸುತ್ತಿರುವ ಪ್ರಜ್ಞಾಳನ್ನು ಇಂದಿಗೂ ಮಾಧ್ಯಮ ‘ಸಾಧ್ವಿ ಪ್ರಜ್ಞಾ’ ಎಂದೇ ಸಂಬೋಧಿಸುತ್ತಿದ್ದಾರೆ. ಸಿದ್ದಕಿಗೆ ಸಿಕ್ಕ ‘ಉಗ್ರ’ ಪಟ್ಟ ಆಕೆಗೆ ಏಕಿಲ್ಲ?)

ಸಿದ್ದಿಕಿಯಿಂದ ಪೊಲೀಸರು ಲ್ಯಾಪ್ ಟಾಪ್ ವಶಪಡಿಸಿಕೊಂಡರು. ಅವನ ಬಳಿ ವಿದೇಶಿ ಕರೆನ್ಸಿ ಇತ್ತು, ವಿದೇಶಿ ಬ್ಯಾಂಕ್ ಅಕೌಂಟ್ ಇತ್ತು..- ಹೀಗೆ ಏನೆಲ್ಲಾ ಕತೆ ಬರೆದರಲ್ಲಾ..ಈಗ ಕ್ಷಮೆ ಕೇಳುವ ಸೌಜನ್ಯ ತೋರುತ್ತಾರಾ? ಒಂದು ಪತ್ರಿಕೆಯವರು ಬರೆದರು – ಅವನ ಲ್ಯಾಪ್ ಟ್ಯಾಪ್ ನಲ್ಲಿ ಗೋಧ್ರ ಹತ್ಯಾಕಾಂಡ ಕುರಿತ ವಿಡಿಯೋ ತುಣುಕುಗಳಿದ್ದವು ಮತ್ತು ಇಬ್ಬರು ಪತ್ರಕರ್ತರು ನರೇಂದ್ರ ಮೋದಿಯನ್ನು ಭೇಟಿ ಮಾಡುತ್ತಿರುವ ಚಿತ್ರವೂ ಸಿಕ್ಕಿತು. ಗೋಧ್ರ ಹತ್ಯಾಕಾಂಡದ ದೃಶ್ಯಗಳು ಇಂದು ಲಕ್ಷಾಂತರ ಲ್ಯಾಪ್ ಟಾಪ್ ಗಳಲ್ಲಿ ಇರಬಹುದು. ಹಾಗಾದರೆ ಅವರೆಲ್ಲರೂ ಲಷ್ಕರ್-ಎ-ತೊಯಬಿ ಸಂಘಟನೆಯವರು ಎನ್ನಬೇಕೆ?

ಸಿದ್ದಿಕಿ ವಿರುದ್ಧ ಆರೋಪಗಳೆಲ್ಲವೂ ಗಂಭೀರವಾದವು. ಅವರ ಜೊತೆಗೆ ಇದ್ದವರಿಗೂ, ಅವನ ಬಗ್ಗೆ ಚೆನ್ನಾಗಿ ಗೊತ್ತಿದ್ದವರಿಗೂ ಆ ಆರೋಪಗಳು ದಂಗು ಪಡಿಸಿದವು. ಅವರ ಪರವಾಗಿ ದನಿ ಎತ್ತಿದ್ದವರ ಸಂಖ್ಯೆ ತೀರಾ ಕಡಿಮೆಯಾಗಲು ಇದೂ ಕಾರಣ. ಎಲ್ಲಾ ಪತ್ರಿಕೆಗಳು, ಟಿವಿ ಚಾನೆಲ್ ಗಳು ಸಿದ್ದಕಿ ಒಬ್ಬ ಉಗ್ರ ಎನ್ನುತ್ತಿರುವಾಗ ಪರ ವಹಿಸುವುದು ಹೇಗೆ?

ಸದ್ಯ ಎನ್‌ಐ‌ಎ ಅವರ ವಿರುದ್ಧ ದೋಷಾರೋಪಣೆ ಮಾಡಿಲ್ಲ. ಹಾಗಾದರೆ, ಕಳೆದ ಆರು ತಿಂಗಳು ಅವರು ಕಳೆದುಕೊಂಡಿದ್ದನ್ನೆಲ್ಲಾ ಹಿಂದಕ್ಕೆ ಪಡೆಯಲು ಸಾಧ್ಯವೇ? ಪೊಲೀಸರು ಕೊಟ್ಟ ಟಾರ್ಚರ್ ಮರೆಯಲು ಸಾಧ್ಯವೇ? ಅವರ ಮಧ್ಯಮ ವರ್ಗದ ಕುಟುಂಬ ಅನುಭವಿಸಿರುವ ಯಾತನೆಗೆ ಸಮಾಧಾನ ಹೇಳುವವರಾರು? ಎಂತಹ ಅಸಹ್ಯ ಪರಿಸ್ಥಿತಿ ಇದೆ ನೋಡಿ, ಸಿದ್ದಿಕಿ ವಿರುದ್ಧ ಸುಳ್ಳೇ ಸುಳ್ಳೆ ವರದಿ ಮಾಡಿದವರು ಮುಂದೆ ಬಂದು ಒಂದೇ ಒಂದು ಸಾಲಿನ ‘ತಪ್ಪಾಯ್ತು’ ಎಂದು ಬರೆಯುವುದಿಲ್ಲ.

ಡೆಕ್ಕನ್ ಹೆರಾಲ್ಡ್‌ನಲ್ಲಿ ಮುಖ್ಯ ಸ್ಥಾನದಲ್ಲಿರುವ ರಶೀದ್ ಕಪ್ಪನ್ ಅವರು ತಮ್ಮ ಫೇಸ್ ಬುಕ್ ಸ್ಟೇಟಸ್‍ನಲ್ಲಿ ಸಿದ್ದಿಕಿಯನ್ನು ವರದಿಗಾರನನ್ನಾಗಿ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಇದು ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಸಿದ್ದಿಕಿ ವರದಿಗಾರಿಕೆಗೆ ಬೀದಿಗೆ ಬಂದರೆ, ಅವರ ವಿರುದ್ದ arnabಕಪೋಲ ಕಲ್ಪಿತ ಸುದ್ದಿ ಬರೆದ ಸಹೋದ್ಯೋಗಿಗಳು ಅನುಮಾನದ ಕಣ್ಣುಗಳಿಂದ ನೋಡುವುದನ್ನೇ ನಿಲ್ಲಿಸುತ್ತಾರಾ?

ದೆಹಲಿ ವಿ.ವಿ ಕಾಲೇಜಿನ ಉಪನ್ಯಾಸಕ ಎಸ್. ಆರ್. ಗಿಲಾನಿ ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿದ್ದರೂ “ಟೈಮ್ಸ್ ನೌ”ನ ಅರ್ನಾಬ್ ಗೋಸ್ವಾಮಿ ಕಣ್ಣಲ್ಲಿ ಇಂದಿಗೂ ಆರೋಪಿ. ಅಫ್ಜಲ್ ಗುರು ನೇಣುಗಂಬಕ್ಕೆ ಏರಿದ ಸಂದರ್ಭದ ಟಿವಿ ಚರ್ಚೆಯಲ್ಲಿ ‘ಗಿಲಾನಿ ಹೇಗೋ ಬಚಾವಾಗಿಬಿಟ್ಟ’ ಎಂದು ಕೀಳು ಮಟ್ಟದ ಟೀಕೆ ಮಾಡಿದ್ದರು ಗೋಸ್ವಾಮಿ. ಗಿಲಾನಿ ಮತ್ತೊಂದು ಚಾನೆಲ್ ನಲ್ಲಿ ಸಂವಾದಕನಾಗಿ ಪಾಲ್ಗೊಳ್ಳುವುದನ್ನೂ ಮೂದಲಿಸಿದ್ದರು. ಹೀಗಿರುವಾಗ ಸಿದ್ದಿಕಿ ಬಗ್ಗೆ ಮಾಧ್ಯಮದ ಬೀದಿ ಬೀದಿಗಳಲ್ಲಿರುವ ಮರಿ ಗೋಸ್ವಾಮಿಗಳು ಭಿನ್ನವಾಗಿ ವರ್ತಿಸುತ್ತಾರೆಂದು ನಿರೀಕ್ಷಿಸುವುದು ಕಷ್ಟಕರ. ಸಿದ್ದಿಕಿಗೆ ಯಶಸ್ಸು ಲಭಿಸಲಿ. ಹೆಚ್ಚು ಗೋಜಲುಗಳಿಲ್ಲದೆ ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಗೆ ಬರಲಿ.