Monthly Archives: March 2013

ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಲ್ಲವೇ?


– ಚಿದಂಬರ ಬೈಕಂಪಾಡಿ


 

ರಾಜಕಾರಣದಲ್ಲಿ ಮಹಿಳೆಯ ಪಾತ್ರ ಇರಬೇಕೇ?, ಇರಬೇಕಾದರೆ ಎಷ್ಟರ ಪ್ರಮಾಣದಲ್ಲಿರಬೇಕು?, ಮನೆ, ಕುಟುಂಬ, ಪತಿ, ಮಕ್ಕಳ ಯೋಗಕ್ಷೇಮ ನೋಡಿಕೊಂಡು ಸಂಸಾರ ಮುನ್ನಡೆಸುವುದಕ್ಕೇ ಮಹಿಳೆ ಸೀಮಿತವಾಗಬೇಕೇ? ಎನ್ನುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ. ಇಂಥ ಚರ್ಚೆಗಳಿಂದ ಸಾಮಾಜಿಕವಾಗಿ ಮಹಿಳೆಯ ಸ್ಥಾನ ಮಾನ ನಿರ್ಧಾರವಾಗುತ್ತದೆ ಎಂದೇನೂ ಭಾವಿಸಬೇಕಾಗಿಲ್ಲ. ಅಕಾಡೆಮಿಕ್ ಆಗಿ ನಡೆಯುವಂಥ ಚರ್ಚೆಗಳು, ವಿಚಾರ ಸಂಕಿರಣಗಳು ನೀಡಿರುವ ಅಭಿಪ್ರಾಯಗಳು ಅಕಾಡೆಮಿಕ್ ವ್ಯಾಪ್ತಿಗಷ್ಟೇ ಸೀಮಿತವಾಗಿವೆ ಹೊರತು ಅವು ಕಾರ್ಯರೂಪಕ್ಕೆ ಬಂದಿಲ್ಲ.

ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ತನಗೆ ಸರಿಸಮಾನವಾಗಿ ಗುರುತಿಸಲು ಬಯಸುವುದಿಲ್ಲ ಎನ್ನುವ ಆರೋಪವನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ. ಮಹಿಳೆಯನ್ನು ಶೋಷಣೆ ಮಾಡುತ್ತಲೇ ಪುರುಷ ಪ್ರಧಾನ ಸಮಾಜ ಬಂದಿದೆ ಎನ್ನುವುದನ್ನು ನಿರಾಕರಿಸುವಂತೆಯೂ ಇಲ್ಲ. ಆದರೆ ಈಕ್ಷಣದಲ್ಲೂ ಮಹಿಳೆ ರಾಜಕೀಯವಾಗಿ ತನಗೆ ಸಿಗಬೇಕಾದ ಸ್ಥಾನಮಾನ, ಹಕ್ಕನ್ನು ಪಡೆಯುವುದಕ್ಕೆ ಮನಸ್ಸು ಮಾಡಿಲ್ಲ. ಇದು ಆಕೆಯ ದೌರ್ಬಲ್ಯವೆಂದು ಸುಲಭವಾಗಿ ಹೇಳಿಬಿಡಬಹುದು, ಆದರೆ ವಾಸ್ತವ ಬೇರೆಯೇ ಇದೆ.

ಕರ್ನಾಟಕದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಿವೆ? ಎನ್ನುವ ಪ್ರಶ್ನೆಗೆ ಈಗ ಉತ್ತರವಿಲ್ಲ, women-gp-membersಮುಂದಿನ ಚುನಾವಣೆ ಕಾಲಕ್ಕೆ ಉತ್ತರ ಸಿಗಬಹುದೇನೋ?. ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯ ನೀಡುವ ವಚನ ಕೊಡುತ್ತವೆ. ಆದರೆ ಮಹಿಳೆಯನ್ನು ಹೊರತು ಪಡಿಸಿ ಎನ್ನುವುದಿಲ್ಲ, ಬದಲಾಗಿ ಮಹಿಳೆಯನ್ನೂ ಗಮನದಲ್ಲಿಟ್ಟುಕೊಂಡೇ ವ್ಯಾಖ್ಯಾನ ನೀಡುತ್ತವೆ. ಯಾಕೆಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ ಎನ್ನುವುದು ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಅವರೂ ಚುನಾವಣೆಯ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎನ್ನುವ ಅರಿವಿದೆ.

ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಒಟ್ಟು ಸುಮಾರು 4.18 ಕೋಟಿ ಮತದಾರರಿದ್ದು ಇವರಲ್ಲಿ 2.13 ಕೋಟಿ ಪುರುಷರು ಹಾಗೂ 2.4 ಕೋಟಿ ಮಹಿಳೆಯರು ಎನ್ನುವ ಮಾಹಿತಿ. ಮತದಾರರ ಬಲಾಬಲದ ಆಧಾರವಾಗಿಟ್ಟುಕೊಂಡರೆ ಶೇ.50 ರಷ್ಟು ಸ್ಥಾನಗಳನ್ನು ರಾಜಕೀಯ ಪಕ್ಷಗಳು ಮಹಿಳೆಯರಿಗೆ ಕೊಡಲೇ ಬೇಕು. ಹಿಂದೆಯೂ ಕೊಟ್ಟಿಲ್ಲ, ಈಗ ಕೊಡುವುದೂ ಇಲ್ಲ, ಆದರೆ ಮುಂದೆ ಕೊಡುವ ಅನಿವಾರ್ಯತೆ ಬರಬಹುದು.

ಹಾಗೆಯೇ ರಾಜ್ಯದ ರಾಜಕೀಯದ ಚಿತ್ರಣವನ್ನು ಸ್ಥೂಲವಾಗಿ ಗಮನಿಸಿದರೆ 224 ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಮಹಿಳೆಯರೇ ಪ್ರಬಲರು ಹಾಗೂ ಅವರೇ ನಿರ್ಣಾಯಕರು. ಕನಿಷ್ಠ 20 ಕ್ಷೇತ್ರಗಳಲ್ಲಿ ಮಹಿಳೆಯರೇ ಗೆಲ್ಲುವುದು ನಿಶ್ಚಿತ. ಇಂಥ ಪ್ರಬಲ ಸ್ತ್ರೀಶಕ್ತಿಯನ್ನು ಇಷ್ಟು ಕಾಲ ರಾಜಕೀಯದಲ್ಲಿ ಪುರುಷರು ಹೇಗೆ ನಿಭಾಯಿಸುತ್ತಾ ಬಂದಿದ್ದಾರೆ ಎನ್ನುವುದು ಅವರ ಚಾಣಾಕ್ಷತೆಗೆ ಸಾಕ್ಷಿ. ಆದರೆ ಇನ್ನು ಮುಂದೆ ಇಂಥ ಚಾಣಾಕ್ಷತೆಗೆ ಅವಕಾಶ ಕಡಿಮೆ. ಯಾಕೆಂದರೆ ಈಗ ಮಹಿಳೆಯರೂ ತಮ್ಮ ಹಕ್ಕು ಏನೆಂಬುದನ್ನು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಂದಿರಾ ಗಾಂಧಿ ಎಂದು ಹಣ್ಣು ಹಣ್ಣು ಮುದುಕಿ ಹೇಳಿಬಿಡಬಹುದು. ವಾಸ್ತವವೆಂದರೆ ಮತ್ತೆ ಪಂಚಾಯತ್ ರಾಜ್ ವ್ಯವಸ್ಥೆಗೆ ಮಹಿಳೆಯರು ಚಿರಋಣಿಯಾಗಿರಲೇಬೇಕು. ರಾಮಕೃಷ್ಣ ಹೆಗಡೆ, ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್ ಕರ್ನಾಟಕದ ಮಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಮಹಿಳೆಯರ ಸಕ್ರಿಯ ರಾಜಕಾರಣಕ್ಕೆ ಕಾರಣೀಕರ್ತರು. ರಾಜೀವ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿದ್ದರಿಂದ ಮಹಿಳೆ ಕೂಡಾ ರಾಜಕೀಯದಲ್ಲಿ ತನ್ನ ಛಾಪು ಮೂಡಿಸುವ ಹಂತಕ್ಕೆ ಬಂದಿದ್ದಾಳೆ.

ಇವೆಲ್ಲವೂ ಹೊಸ ವಿಚಾರಗಳೇನಲ್ಲ. ರಾಜಕೀಯ ಪಕ್ಷಗಳು ಮಹಿಳೆಯರ ಪ್ರಾಬಲ್ಯವನ್ನು ಅರಿತಿದ್ದರೂ ಆಕೆಯನ್ನು ಬದಿಗೆ ಸರಿಸುವಲ್ಲಿ ತಮ್ಮ ಸಾಮರ್ಥ್ಯ ಮೆರೆದು ಬಚಾವ್ ಆಗಿದ್ದಾರೆ ಎನ್ನದೇ ವಿಧಿಯಿಲ್ಲ. ಈಗ ಆಕೆಗೂ ಅವಕಾಶ ಸಿಗುವಂಥ ಕಾಲ ಕೂಡಿ ಬಂದಿದೆ ಎನ್ನಿಸುತ್ತಿದೆ. shobha-yeddyurappaದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸೈದ್ಧಾಂತಿಕವಾಗಿ ಮಹಿಳೆಗೆ ಹೆಚ್ಚು ಗೌರವ ಕೊಡುವುದನ್ನು ಉಲ್ಲೇಖಿಸುತ್ತದೆ, ನಿಜ. ಆದರೆ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರೂ ಶೋಭಾ ಕರಂದ್ಲಾಜೆ ಅವರನ್ನು ಹೊರತು ಪಡಿಸಿದರೆ ಬೇರೆ ಯಾವ ಮಹಿಳೆಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಅಧಿಕಾರ ನಡೆಸಿದಂಥ ಕಾಂಗ್ರೆಸ್, ಜೆಡಿಎಸ್ ಆಡಳಿತದಲ್ಲೂ ಬೆರಳೆಣಿಕೆಯಷ್ಟು ಮಂದಿ ಮಹಿಳೆಯರು ಮಾತ್ರ ಸಚಿವರಾಗಿದ್ದರು. ಯಾಕೆ ಮಹಿಳೆಯರು ಹಕ್ಕೊತ್ತಾಯ ಮಾಡಲಿಲ್ಲ ಎನ್ನುವುದು ಕೇವಲ ಪ್ರಶ್ನೆಯಲ್ಲ ಆಕೆ ಅದೆಂಥ ಸಹನಶೀಲೆ ಎನ್ನುವ ಅಚ್ಚರಿ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪರೂಪಕ್ಕೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನಿಸುತ್ತಿರುವುದು ಕಾಂಗ್ರೆಸ್ ನಾಯಕರು 100 ಮಂದಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆಕೆಯ ಕೈಗಿತ್ತಾಗ ಅದನ್ನು ನೋಡಿ ಕೆಂಡಾಮಂಡಲವಾಗಿರುವುದಕ್ಕೆ. ಸೋನಿಯಾ ಗಾಂಧಿ ಅವರನ್ನು ರಾಜಕೀಯವಾಗಿ ನೋಡಿ ಈ ದೇಶದ ಯಾವ ಹೆಣ್ಣು ಮಗಳೂ ಆಕೆಯನ್ನು ಬೆಂಬಲಿಸಬೇಕಾಗಿಲ್ಲ, ಬದಲಾಗಿ ಅವರು ಎತ್ತಿದ ಮೂಲಭೂತ ಪ್ರಶ್ನೆಯನ್ನು ಗಮನಿಸಬೇಕು.

ಯಾಕೆ ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸುವ ಹೆಣ್ಣು ಮಕ್ಕಳಿಲ್ಲವೇ? ಎನ್ನುವ ಸೋನಿಯಾ ತಮ್ಮ ಪಕ್ಷದ ರಾಜ್ಯದ ಮುಖಂಡರಿಗೆ ಕೇಳಿದ ಪ್ರಶ್ನೆಯನ್ನು ಇಡೀ ದೇಶದ ರಾಜಕೀಯ ಪಕ್ಷಗಳ ನಿರ್ಣಾಯಕ ನಾಯಕರನ್ನು ಮಹಿಳೆಯರು ಕೇಳುವುದೇ ಹೆಚ್ಚು ಸೂಕ್ತ. ಖಂಡಿತಕ್ಕೂ ಕರ್ನಾಟಕದ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರಿಂದ ಇಂಥ ಪ್ರಶ್ನೆಯನ್ನು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ. ಯಾಕೆಂದರೆ ಸೋನಿಯಾ ಗಾಂಧಿಯರಿಗೆ ಸಿಗುವ ಫೀಡ್ ಬ್ಯಾಕ್ ಅಷ್ಟೊಂದು ಡೀಪ್ ಥಿಂಕಿಂಗ್‌ಗಳಲ್ಲ. ಆ ಸಂದರ್ಭಕ್ಕೆ, ತಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಫೀಡ್ ಮಾಡುವ ಜನರಿದ್ದಾರೆ, ಅವರ ಸುತ್ತಲೂ ಇರುವವರು ಥಿಂಕ್‌ಟ್ಯಾಂಕ್‌ಗಳಲ್ಲ, ಸೋನಿಯಾ ಅವರಿಗೂ ಇಲ್ಲಿಯ ತನಕ ಅಂಥ ಮೇಧಾವಿಗಳು ತನ್ನ ಇಕ್ಕೆಲಗಳಲ್ಲಿ ಇರಬೇಕೆನಿಸಿರಲಿಲ್ಲ. ಆದರೆ ಈಗ ಅವರೂ ರಾಜಕೀಯದಲ್ಲಿ ಪಕ್ವವಾಗುತ್ತಿದ್ದಾರೆ.

ಒಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕ್ಷೇತ್ರದಿಂದ ಮಹಿಳೆಯರು ಸ್ಪರ್ಧಿಸಲಿ, ಅಂದರೆ ಜಿಲ್ಲೆಗೆ ಒಬ್ಬರು ಮಹಿಳಾ ಅಭ್ಯರ್ಥಿಗೆ ಸ್ಥಾನ ಕಲ್ಪಿಸಬೇಕು, ಪರಿಷ್ಕರಿಸಿದ ಪಟ್ಟಿಯನ್ನು ತನ್ನಿ ಎಂದು ಹೇಳಿ ಸಭೆಯನ್ನು ಬರ್ಖಾಸ್ತು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ್ದ ಮೊದಲ ಕಂತಿನ 100 ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ತೇರದಾಳ ಕ್ಷೇತ್ರದಿಂದ ಚಿತ್ರ ನಟಿ ಉಮಾಶ್ರೀ ಅವರನ್ನು ಮಾತ್ರ ನಿರ್ಧರಿಸಿದ್ದರು, ಉಳಿದ 99 ಕ್ಷೇತ್ರಗಳೂ ಪುರುಷರೇ ವಶಪಡಿಸಿಕೊಂಡಿದ್ದರು.

ಈಗ ಸೋನಿಯಾ ಅವರ ಆಶಯದಂತೆ ಕಾಂಗ್ರೆಸ್ ನಾಯಕರು ಕನಿಷ್ಠ 28 ರಿಂದ 30 ವಿಧಾನಸಭಾ ಕ್ಷೇತ್ರಗಳಿಗೆ ಮಹಿಳೆಯರನ್ನು ಕಣಕ್ಕಿಳಿಸಬೇಕಾಗಿದೆ. karnataka_womenಖಂಡಿತಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಮಾಡಲು ಮಹಿಳೆಯರಿಗೆ ಕೊರತೆಯಿಲ್ಲ, ಸಂಪನ್ಮೂಲದ ಸಮಸ್ಯೆಯೂ ಇಲ್ಲ, ತಾವು ಕಣಕ್ಕಿಳಿಯುವುದಿಲ್ಲವೆಂದು ರಣಹೇಡಿ ಮಹಿಳೆಯರೂ ಯಾರೂ ಇಲ್ಲ. ನಾಯಕರನ್ನು ಕಾಡುತ್ತಿರುವ ಚಿಂತೆ ಸೋನಿಯಾ ಅವರ ಸೂಚನೆಯಂತೆ ಪಟ್ಟಿ ಪರಿಷ್ಕರಿಸಿ 29 ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಟ್ಟರೆ ತಮ್ಮ ಬೆಂಬಲಿಗ ಪುರುಷರ ಕಾಟ ತಡೆದುಕೊಳ್ಳುವುದು ಹೇಗೆ? ಎನ್ನುವುದು. ತುಸು ಎಡವಟ್ಟಾದರೂ ತಮ್ಮ ವಿರುದ್ಧವೇ ಬಂಡಾಯವೆದ್ದರೆ ನಿಭಾಯಿಸುವುದು ಸುಲಭವಲ್ಲ ಎನ್ನುವ ಚಿಂತೆ. ಆದರೆ ಕಾಂಗ್ರೆಸ್ ನಾಯಕರು ಸಕಾರಣವಿಲ್ಲದೆ ತಮ್ಮ ಅಧಿನಾಯಕಿಯ ಸೂಚನೆಯನ್ನು ನಿರಾಕರಿಸುವಂತಿಲ್ಲ. ಕನಿಷ್ಠ 20 ಸ್ಥಾನಗಳನ್ನಾದರೂ ಮಹಿಳೆಯರಿಗೆ ತ್ಯಾಗ ಮಾಡಲೇಬೇಕು. ಆದರೆ ಅದು ತ್ಯಾಗವಲ್ಲ, ಮಹಿಳೆಯರ ಹಕ್ಕು.

ಈ ಹಕ್ಕನ್ನು ಪ್ರತಿಯೊಂದು ರಾಜಕೀಯ ಪಕ್ಷವೂ ಮಹಿಳೆಯರಿಗೆ ಕೊಡಲೇ ಬೇಕಾದ ಅನಿವಾರ್ಯತೆಯನ್ನು ಸೋನಿಯಾ ಗಾಂಧಿ ತಂದಿಟ್ಟಿದ್ದಾರೆ. ರಾಜಕೀಯವಾಗಿ ಇಂದಿರಾ ಗಾಂಧಿ ಮಹಿಳೆಯರನ್ನು ಬಳಸಿಕೊಳ್ಳುವ ಚಾಕಚಕ್ಯತೆಯನ್ನು ನಂತರದ ನಾಯಕರು ಮುಂದುವರಿಸಲಿಲ್ಲ. ಅನಕ್ಷರಸ್ಥೆಗೂ ಆ ಕಾಲದಲ್ಲಿ ಇಂದಿರಮ್ಮ ಯಾರೆಂದು ಗೊತ್ತಿತ್ತು. Gandhisonia05052007[2]ಮಹಿಳೆಯರ ಜನಮಾನಸದಲ್ಲಿ ಅಷ್ಟೊಂದು ಗಾಢ ಪ್ರಭಾವವನ್ನು ಇಂದಿರಾ ಗಾಂಧಿ ಬೀರಿದ್ದರು. ಈಗ ಸೋನಿಯಾ ಉರುಳಿಸಿರುವ ರಾಜಕೀಯ ದಾಳ ಮಹಿಳೆಯರ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ, ಅವರ ಸಾಮರ್ಥ್ಯವನ್ನು ಗುರುತಿಸುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಂತಾಗಿದೆ. ಸೋನಿಯಾ ಗಾಂಧಿ ಅವರ ಈ ಹೆಜ್ಜೆ ರಾಜಕೀಯದಲ್ಲಿ ಮಹತ್ತರ. ಹಾಗೆಯೇ ಮಹಿಳೆಯರ ಶಕ್ತಿ ಪ್ರದರ್ಶನಕ್ಕೆ ಉಳಿದ ರಾಜಕೀಯ ಪಕ್ಷಗಳೂ ವೇದಿಕೆ ಕಲ್ಪಿಸಿಕೊಡುವಂಥ ಅನಿವಾರ್ಯತೆಗೆ ಈಡಾಗಿವೆ. ಸಾಮಾಜಿಕ ನ್ಯಾಯ ಮಹಿಳೆಯನ್ನು ಭಾಷಣದಲ್ಲಿ ಗುರುತಿಸಿ ಅಲ್ಲ, ಕಾರ್ಯದಲ್ಲೂ ಎನ್ನುವುದು ನೀತಿಪಾಠ.

ರಾಜಕಾರಣದಲ್ಲಿ ನಿಷ್ಠೆ ಮತ್ತು ಬದ್ಧತೆ ಶಾಶ್ವತವೇ?


– ಚಿದಂಬರ ಬೈಕಂಪಾಡಿ


 

ರಾಜಕೀಯದಲ್ಲಿ ಬದ್ಧತೆ ಮತ್ತು ನಿಷ್ಠೆ ಅತ್ಯಂತ ಹೆಚ್ಚು ಮಾನ್ಯವಾಗುವಂಥ ಮೌಲ್ಯಗಳು. ಬದ್ಧತೆ ಮತ್ತು ನಿಷ್ಠೆ ತನ್ನ ನಾಯಕರಿಗೆ, ಸಮೂಹಕ್ಕೆ ಮತ್ತು ಪಕ್ಷಕ್ಕೆ. ಇದು ಸರಳ ವ್ಯಾಖ್ಯಾನ. ಪ್ರಸುತ ರಾಜಕೀಯ ಸ್ಥಿತಿಯಲ್ಲಿ ಅಥವಾ ಈಗಿನ ಬದಲಾಗಿರುವ ವಾತಾವರಣದಲ್ಲಿ ಬದ್ಧತೆ ಮತ್ತು ನಿಷ್ಠೆಯನ್ನು ಕನ್ನಡಕ ಹಾಕಿಕೊಂಡು ಹುಡುಕಬೇಕಾಗಿದೆ. ಮೌಲ್ಯಗಳು ಅಪಮೌಲ್ಯಗಳಾಗಿರುವುದೇ ಹೆಚ್ಚು. ಮೌಲ್ಯಾಧಾರಿತ ರಾಜಕಾರಣದ ಹೆಸರು ಹೇಳುವುದು ಕೂಡಾ ರಾಜಕಾರಣಿಗಳಿಗೆ ಗೊತ್ತಿಲ್ಲವೋ ಅಥವಾ ಹಾಗೆ ಹೇಳಿ ಅದನ್ನು ಯಾಕೆ ಅಪಮೌಲ್ಯ ಮಾಡುವುದು ಎನ್ನುವ ತಿಳುವಳಿಕೆಯ ಕಾರಣವೋ ಗೊತ್ತಿಲ್ಲ. ಅಂತೂ “ಮೌಲ್ಯಾಧಾರಿತ ರಾಜಕಾರಣ” ಎನ್ನುವ ಪದ ಬಳಕೆ ಕಡಿಮೆಯಾಗಿದೆ. ರಾಮಕೃಷ್ಣ ಹೆಗಡೆ ಅವರಿಗೆ ಈ ಪದ ಬಳಕೆ ಬಿಟ್ಟು ಭಾಷಣವೇ ಇರುತ್ತಿರಲಿಲ್ಲ. ಎಲ್ಲ ಸಂದರ್ಭದಲ್ಲೂ ಅವರ ಬಾಯಿಂದ ಒಂದೆರಡು ಸಲವಾದರೂ ‘ಮೌಲ್ಯಾಧಾರಿತ’Ramakrishna-Hegdeಎನ್ನುವ ಪದ ಬಳಕೆಯಾಗುತ್ತಿತ್ತು. ಹಾಗೆಯೇ ನಜೀರ್ ಸಾಬ್ ಅವರಿಗೆ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಪದ ಬಳಕೆ ಇಷ್ಟವಾಗಿತ್ತು. ಸಾರ್ವಜನಿಕ ಸಭೆಯಾಗಲೀ, ಅಧಿಕಾರಿಗಳ ಜೊತೆ ನಡೆಸುವ ಪ್ರಗತಿ ಪರಿಶೀಲನಾ ಸಭೆಯಾಗಲೀ ನಜೀರ್ ಸಾಬ್ ಅವರು ಸಹಜವಾಗಿಯೇ ಈ ಪದ ಬಳಕೆ ಮಾಡುತ್ತಿದ್ದರು. ಇದರ್ಥ ಅವರಿಗೆ ಆ ಪದಗಳ ಮೇಲಿದ್ದ ಬದ್ಧತೆ ಅದೆಷ್ಟು ಎನ್ನುವುದು ಅರಿವಾಗುತ್ತದೆ.

ಈ ಉದಾಹರಣೆಯನ್ನು ಯಾಕೆ ಕೊಡಬೇಕಾಯಿತೆಂದರೆ ಈಗಿನ ರಾಜಕಾರಣದಲ್ಲಿ ಬದ್ಧತೆ ಮತ್ತು ನಿಷ್ಠೆ ಎರಡೂ ಇಲ್ಲ ಎನ್ನುವುದು ಸರ್ವರಿಗೂ ಗೊತ್ತಿದೆ. ಹಾಗೆಯೇ ಇವು ಇರಬೇಕೇ? ಅವುಗಳ ಅನಿವಾರ್ಯತೆ ಇದೆಯೇ? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಪಕ್ಷಾಂತರ ನಡೆಯುತ್ತಿರುವುದನ್ನು ಮತ್ತು ಆಪರೇಷನ್ ಕಮಲ, ಆಪರೇಷನ್ ಕಾಂಗ್ರೆಸ್ ಅಥವಾ ಆಪರೇಷನ್ ಜೆಡಿಎಸ್ ಹೀಗೆ ಈ ಆಪರೇಷನ್‌ಗಳು ಬದ್ಧತೆ ಮತ್ತು ನಿಷ್ಠೆ ಎರಡೂ ಅನಿವಾರ್ಯವಲ್ಲ ಎನ್ನುವುದಕ್ಕೆ ಸಾಕ್ಷಿ.

ರಾಜಕೀಯವಾಗಿ, ಸೈದ್ಧಾಂತಿಕವಾಗಿ ಕಡು ವಿರೋಧಿಯಾದ ಬಿಜೆಪಿ ಮತ್ತು ಜೆಡಿಎಸ್ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಡೆಸುತ್ತವೆ ಎನ್ನುವುದಾದರೆ ಸೈದ್ಧಾಂತಿಕ ಬದ್ಧತೆಯನ್ನು ಎಲ್ಲಿ ಹುಡುಕುವಿರಿ? ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೋದ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತೆ ಯುಪಿಎ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡುತ್ತವೆ, ಸಂಪುಟದಲ್ಲಿ ಭಾಗಿಯಾಗುತ್ತವೆ ಅಂತಾದರೆ ಸೈದ್ಧಾಂತಿಕ ಚೌಕಟ್ಟಿಗೆ ಎಲ್ಲಿದೆ ಬದ್ಧತೆ?

ಆದ್ದರಿಂದ ಬದ್ಧತೆ ಮತ್ತು ನಿಷ್ಠೆ ಎರಡೂ ಈಗಿನ ರಾಜಕಾರಣಕ್ಕೆ ಅನಿವಾರ್ಯವಲ್ಲ. ನಾಯಕರಿಗೂ ಬದ್ಧತೆ ಇರಬೇಕಾಗಿಲ್ಲ, ನಾಯಕರೆಂದು ಒಪ್ಪಿಕೊಂಡವರಿಗೂ ಬದ್ಧತೆ ಮತ್ತು ನಿಷ್ಠೆ ಇರಲೇಬೇಕೆನ್ನುವ ಕಟ್ಟುಪಾಡು ಬೇಕಾಗಿಲ್ಲ.

ಕರ್ನಾಟಕದ ರಾಜಕೀಯ ಸ್ಥಿತಿಯನ್ನೇ ಅವಲೋಕಿಸಿದರೆ ನಾಲ್ಕು ದಶಕಗಳ ಕಾಲ ಹಿಂದುತ್ವ, ಬಿಜೆಪಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ರಾಜಕೀಯದಲ್ಲಿ ನೆಲೆ, ಬೆಲೆ ಗಳಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ತೊರೆದ ಮೇಲೆ ತಾವು ಯಾರಿಗೆ ನಿಷ್ಠೆ ತೋರಿಸುತ್ತಿದ್ದರೋ, ಯಾವ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ, ನಿಷ್ಠರಾಗಿದ್ದರೋ ಅವರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದರೇ? ತಮ್ಮನ್ನು ಪದಚ್ಯುತಗೊಳಿಸಿದ ಕಾರಣಕ್ಕೆ ಆಕ್ರೋಶಗೊಂಡು ಪರ್ಯಾಯ ಪಕ್ಷ ಸ್ಥಾಪಿಸಿದ ಯಡಿಯೂರಪ್ಪ ಪ್ರತಿಪಾದಿಸುವ ಮೌಲ್ಯಗಳು ಯಾವುವು? yeddyurappa_rssಸಂಘ ಪರಿವಾರ ಕಲಿಸಿದ ನೀತಿ ಪಾಠ, ಬಿಜೆಪಿ ಕಲಿಸಿದ ತತ್ವ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ಈಗ ಕೆಜೆಪಿ ಕಟ್ಟಿಲ್ಲ. ಅವರು ಈಗ ಯಾವ ಸಿದ್ಧಾಂತವನ್ನೂ ಪ್ರತಿಪಾದಿಸುತ್ತಿಲ್ಲ. ಅವರು ಆಡುತ್ತಿರುವ ಮಾತು, ಮಾಡುತ್ತಿರುವ ಭಾಷಣದ ತುಣುಕುಗಳನ್ನು ಅವಲೋಕಿಸಿದರೆ ನಿಮಗೆ ಅವರು ನಾಲ್ಕು ದಶಕಗಳಿಂದ ನಂಬಿಕೊಂಡು, ಪಾಲಿಸಿಕೊಂಡು ಬಂದ ತತ್ವ, ಸಿದ್ಧಾಂತ, ನಿಷ್ಠೆಯ ಲವಲೇಶವೂ ಗೋಚರಿಸುವುದಿಲ್ಲ. ನಿಜವಾಗಿಯೂ ಅವರು ಕಾಂಗ್ರೆಸ್ ಪಕ್ಷ ಅಥವಾ ಬಿಜೆಪಿಗಿಂತಲೂ ಹೆಚ್ಚು ಸೆಕ್ಯೂಲರ್ ಎನ್ನುವ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ, ಮಾತು, ನಡವಳಿಕೆ ಮೂಲಕ. ಯಾಕೆಂದರೆ ಅದು ಈಗ ಅವರಿಗೆ ಅನಿವಾರ್ಯ. ಅವರು ತೋರಿಸಿದ ಪಕ್ಷ ನಿಷ್ಠೆಯಾಗಲೀ, ಬದ್ಧತೆಯಾಗಲೀ ಈಗ ಅವರ ನೆರವಿಗೆ ಬಂದಿಲ್ಲ ಆ ಪಕ್ಷ ಮತ್ತು ನಾಯಕರಿಂದ. ಆದ್ದರಿಂದಲೇ ಈಗ ಅವರು ಜನರಿಗೆ ಬದ್ಧರಾಗಿ, ಜನರಿಗೆ ನಿಷ್ಠರಾಗಿ, ಅಭಿವೃದ್ಧಿ ಮಾಡುವ ಕನಸು ನನಸು ಮಾಡುವುದಕ್ಕಾಗಿ ಹೆಚ್ಚಾಗಿ ಈ ನಾಡನ್ನು ಕಲ್ಯಾಣ ಕರ್ನಾಟಕ ಮಾಡುವುದಕ್ಕಾಗಿ ಕೆಜೆಪಿ ಕಟ್ಟಿದ್ದಾರಂತೆ. ಇವರೊಂದಿಗೆ ಹೆಜ್ಜೆ ಹಾಕಿರುವ ವಿ.ಧನಂಜಯ ಕುಮಾರ್ ಕೂಡಾ ಕಟ್ಟಾ ಸಂಘ ಪರಿವಾರ, ಹಿಂದುತ್ವ ಪ್ರತಿಪಾದನೆ ಮಾಡಿಕೊಂಡೇ ರಾಜಕೀಯದಲ್ಲಿ ತಮ್ಮ ನಿರೀಕ್ಷೆಗೂ ಮೀರಿದ ಸ್ಥಾನ ಪಡೆದಿದ್ದರು. ಅಟಲ್, ಅಡ್ವಾಣಿ, ರಾಜನಾಥ್ ಸಿಂಗ್ ಅವರ ಕಣ್ಣಿಗೆ ಯಡಿಯೂರಪ್ಪ, ಧನಂಜಯ ಕುಮಾರ್ ಭವಿಷ್ಯದ ಬೆಳಕಾಗಿದ್ದವರು, ಅವರುಗಳ ಒಡನಾಟದಲ್ಲಿ ಬೆಳೆದವರು. ಅಂಥ ಬದ್ಧತೆ, ನಿಷ್ಠೆಯನ್ನೂ ತೊರೆಯುವುದು ಸಾಧ್ಯವಾಗುವುದು ರಾಜಕೀಯದಲ್ಲಿ ಮಾತ್ರ, ಅದರಲ್ಲೂ ಅಧಿಕಾರಕ್ಕಾಗಿ ಮಾತ್ರ.

ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಸುಷ್ಮಾ ಅವರಿಗೆ ತೋರಿಸಿದ ನಿಷ್ಠೆ, ಬಿಜೆಪಿಗೆ ವ್ಯಕ್ತಪಡಿಸಿದ್ದ ಬದ್ಧತೆಯನ್ನು ನಿರಾಕರಿಸಲು ಸಾಧ್ಯವೇ? ಬಳ್ಳಾರಿಯಲ್ಲಿ ಹೆಸರಿರದಿದ್ದ ಬಿಜೆಪಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ್ದವರು ರೆಡ್ಡಿ ಬ್ರದರ್ಸ್. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಗಣಿನಾಡಿನಲ್ಲಿ ಕಮಲ ಕಲರವಕ್ಕೆ ಕಾರಣರು ಎನ್ನುವುದು ವಾಸ್ತವ ಸತ್ಯ. ಹೆತ್ತ ತಾಯಿಗಿಂತಲೂ ಹೆಚ್ಚು ನಿಷ್ಠೆ ತೋರಿಸುತ್ತಿದ್ದ ಶ್ರೀರಾಮುಲು, ಮಗನಿಗಿಂತೇನೂ ಕಡಿಮೆ ಪ್ರೀತಿ ಹರಿಸದ ಸುಷ್ಮಾ ಈ ಇಬ್ಬರಲ್ಲಿ ಯಾವ, ಬದ್ಧತೆ, ಯಾರಿಗೆ ಬದ್ಧತೆ, ಯಾವ ನಿಷ್ಠೆ, ಯಾರಿಗೆ ನಿಷ್ಠೆ ಹುಡುಕುತ್ತೀರಿ?

ಬದ್ಧತೆ ಮತ್ತು ನಿಷ್ಠೆ ಕಾಣೆಯಾಗುತ್ತಿರುವ ಹಿನ್ನೆಲೆಯನ್ನು ವಿವರಿಸಲು ಮಾತ್ರ ಕೆಲವೇ ಕೆಲವು ಹೆಸರುಗಳನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದೆ ಹೊರತು ಇವಿಷ್ಟೇ ಹೆಸರೆಂದು ಯಾರೂ ಭಾವಿಸಬೇಕಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮರುಕ್ಷಣದಿಂದಲೇ ಮಹಾತ್ಮಾ ಗಾಂಧಿ ಅವರಿಗೂ ಬದ್ಧತೆ ಮತ್ತು ನಿಷ್ಠೆ ನಿರಂತರವಾಗಿ ಉಳಿಯಲಾರವು ತನ್ನ ಒಡನಾಡಿಗಳಲ್ಲಿ ಎನ್ನುವ ಸುಳಿವು ಸಿಕ್ಕಿತ್ತು. ಆದ್ದರಿಂದಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷ ವೇದಿಕೆ ಮಾತ್ರ, ಅದರ ಕೆಲಸ ಮುಗಿಯಿತು, ಅದನ್ನು ವಿಸರ್ಜಿಸುವುದೇ ಸೂಕ್ತವೆಂದು ಹೆಳಿದ್ದರು. ಅಲ್ಲಿಂದಲೇ ಪಕ್ಷ ವಿಭಜನೆಯ ಆರಂಭ ಎನ್ನುವುದನ್ನು ಮರೆಯುವಂತಿಲ್ಲ.

ಆಗಲೇ ಹೊಸ ಪಕ್ಷ, ಅವರವರ ಬದ್ಧತೆ, ನಿಷ್ಠೆಗೆ ಅನುಗುಣವಾಗಿ ಸ್ಥಾಪನೆಯಾದವು, ಅವುಗಳಲ್ಲಿ ನಂಬಿಕೆಯುಳ್ಳವರು, ವಿಶ್ವಾಸವಿರುವವರು ಸೇರಿಕೊಂಡರು. ಆಡಳಿತ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್ ಹೀಗೆ ವಿಭಜನೆಯಾಗುತ್ತಾ 70ರ ದಶಕದಲ್ಲಿ ಮತ್ತಷ್ಟು ಹೊಸ ಹೊಸ ಪಕ್ಷಗಳು ಜನ್ಮ ತಳೆದವು.

ಕಾಂಗ್ರೆಸ್ ಪಕ್ಷದ ಮೇಲೆ, ಇಂದಿರಾ ಗಾಂಧಿ ಮೇಲೆ ದೇವರಾಜ ಅರಸು ಅವರಿಗಿದ್ದ ಬದ್ಧತೆ, Devaraj Arasನಿಷ್ಠೆಯನ್ನು ಪ್ರಶ್ನೆ ಮಾಡಲು ಸಾಧ್ಯವಿತ್ತೇ? ಆದರೆ ಅವರೂ ತಮ್ಮ ಹಾದಿ ಬದಲಿಸಿಕೊಂಡರು ಅಧಿಕಾರಕ್ಕಾಗಿ. ಆದ್ದರಿಂದ ಬದ್ಧತೆ, ನಿಷ್ಠೆ ನಾಪತ್ತೆಯಾಗುತ್ತಿರುವುದು ಈಗಷ್ಟೇ ಎನ್ನುವಂತಿಲ್ಲ, ಅದರ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ವೀರೇಂದ್ರ ಪಾಟೀಲ್ ಇಂದಿರಾ ವಿರುದ್ಧವೇ ಚಿಕ್ಕಮಗಳೂರಲ್ಲಿ ಸ್ಪರ್ಧಿಸಿದ್ದರು. ಮತ್ತೆ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಮೂಲಕವೇ ಮುಖ್ಯಮಂತ್ರಿಯಾದರು. ಹಾಗಾದರೆ ನಿಷ್ಠೆ, ಬದ್ಧತೆಗೆ ಯಾವ ವ್ಯಾಖ್ಯಾನ ಕೊಡುತ್ತೀರಿ.

ಎಸ್.ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಹೇಗೆ ಜರೆದಿದ್ದರು. ನರಸಿಂಹ ರಾವ್ ಅವರನ್ನು ಚೇಳು ಎಂದಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಎಲ್ಲವು ಕಳೆದುಹೋದ ಅಧ್ಯಾಯವೆಂದಿದ್ದರು.

ಹೀಗೆ ವಿಶ್ಲೇಷಿಸುತ್ತಾ ಹೋದರೆ ಬದ್ಧತೆ ಮತ್ತು ನಿಷ್ಠೆಯ ಪಲ್ಲಟಗಳ ಪರಾಕಾಷ್ಠೆ ಇನ್ನು ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿಸಿದ ಮರುದಿನವೇ ತಾವು ಬದುಕಿನುದ್ದಕ್ಕೂ ಹೇಳುತ್ತಲೇ ಬಂದ ಸಿದ್ಧಾಂತ, ತೋರಿಸುತ್ತಾ ಬಂದ ನಿಷ್ಠೆ, ಬದ್ಧತೆಯನ್ನು ಬಿಟ್ಟು ಯಾರು ಯಾವ ಪಕ್ಷದ ಕದ ತಟ್ಟುತ್ತಾರೆಂದು ನೋಡುತ್ತಿರಿ. ಈ ಹಿಂದೆ ಎಂದೂ ಆಗದಿದ್ದಷ್ಟು ವಲಸೆ ನಡೆಯಲಿವೆ. ನಿಷ್ಠೆ, ಬದ್ಧತೆ ಅನಿವಾರ್ಯವಲ್ಲವೆಂದು ಸಾರಿ ಹೇಳಿರುವ ಯಡಿಯೂರಪ್ಪ ಟಿಕೆಟ್ ಸಿಗದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೊರೆದು ಬರುವವರಿಗೆ ಮಣೆ ಹಾಕಲಿದ್ದಾರೆ. ಆಗ ಟಿಕೆಟ್ ಕೊಟ್ಟರೆ ಯಡಿಯೂರಪ್ಪ ಅವರಿಗೆ ಬದ್ಧತೆ, ಅವರ ಕೆಜೆಪಿ ಪಕ್ಷಕ್ಕೆ ನಿಷ್ಠೆ. ಯಡಿಯೂರಪ್ಪ ಹೇಳುವ ಸಿದ್ಧಾಂತಕ್ಕೆ ಬದ್ಧರು ಮತ್ತು ನಿಷ್ಠರು. ಅಂತಿಮವಾಗಿ ಉಳಿದು ಬಿಡುವ ಪ್ರಶ್ನೆ ಇಲ್ಲೂ ಬದ್ಧತೆ, ನಿಷ್ಠೆ ಶಾಶ್ವತವೇ?

ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?

– ಆನಂದ ಪ್ರಸಾದ್

ನಮ್ಮ ದೇಶದಲ್ಲಿ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರವನ್ನು ಪ್ರೇರೇಪಿಸಿದ ಬಲಪಂಥೀಯರಿಗೆ ಶಿಕ್ಷೆ ಆಗುವುದು ಕಂಡುಬರುವುದು ಬಹಳ ಕಡಿಮೆ. ಕಾನೂನು ಕೈಗೆತ್ತಿಕೊಂಡು ಸಶಸ್ತ್ರ ಹೋರಾಟದ ಹಾದಿ ಹಿಡಿದಿರುವ ನಕ್ಸಲರಿಗೆ ಹೆಚ್ಚಾಗಿ ಶಿಕ್ಷೆಯಾಗುತ್ತದೆ. ನ್ಯಾಯಾಲಯದಲ್ಲಿ ನಕ್ಸಲರು ಸಾಕ್ಷ್ಯಗಳಿಲ್ಲದೆ ಬಿಡುಗಡೆಯಾಗಬಹುದೆಂದು ಪೊಲೀಸರೇ ಎಷ್ಟೋ ನಕ್ಸಲ್ ನಾಯಕರನ್ನು ಯಾವುದೇ ವಿಚಾರಣೆಯಿಲ್ಲದೆ ನಕಲಿ ಎನ್ಕೌಂಟರ್ ಹೆಸರಿನಲ್ಲಿ ಕೊಂದುಹಾಕುತ್ತಾರೆ. ನಕ್ಸಲರು ಹಿಂಸೆಯ communal-clashಹಾದಿ ಹಿಡಿದಿರುವ ಕಾರಣ ಇದರ ಬಗ್ಗೆ ಜನರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ನ್ಯಾಯಾಲಯವು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದು ಅವರಿಗೆ ಕ್ಷಮಾದಾನ ನೀಡಬೇಕು, ನೀಡಬಾರದು ಎಂಬ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ಕಾನೂನು ಎಲ್ಲರಿಗೂ ಒಂದೇ, ಅದರಲ್ಲಿ ಭೇದ ಇರಬಾರದು. ಇದೇ ರೀತಿ ಬಲಪಂಥೀಯ ಹಿಂಸಾಚಾರ ಪ್ರೇರೇಪಿಸಿದ ನಾಯಕರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ. ಹಾಗಾದಾಗ ಮಾತ್ರ ಧಾರ್ಮಿಕ ವಿಷಯಗಳನ್ನು ರಾಜಕೀಯ ಅಧಿಕಾರಸಾಧನೆಗಾಗಿ ದುರ್ಬಳಕೆ ಮಾಡಿ ದುರಾಡಳಿತ ನೀಡುವ ದುಷ್ಟರಿಗೆ ಪಾಠ ಕಲಿಸಿದಂತೆ ಆಗುತ್ತದೆ ಹಾಗೂ ಅಂಥವರು ಮತ್ತೆ ಮತ್ತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ವಿಷಯಗಳನ್ನು ಉಪಯೋಗಿಸಿಕೊಳ್ಳುವುದನ್ನು ನಿಯಂತ್ರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯ.

1992ರಲ್ಲಿ ಬಾಬ್ರಿ ಮಸೀದಿಯನ್ನು ನ್ಯಾಯಾಲಯದ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು ಎಂಬ ಆದೇಶದ ಹೊರತಾಗಿಯೂ ಬಲಪಂಥೀಯ ಹಿಂದುತ್ವವಾದಿಗಳು ಕರಸೇವೆಯ ನೆಪದಲ್ಲಿ ಉರುಳಿಸಿದರು.್ ಇದು ಹಾಡಹಗಲೇ ನಡೆದ ಬಲಪಂಥೀಯರು ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡ ಕೃತ್ಯವಾದರೂ ಈವರೆಗೂ ಈ ಕೇಸಿನಲ್ಲಿ ಸಂಬಂಧಪಟ್ಟ ಯಾರಿಗೂ ಶಿಕ್ಷೆ ಆಗಿಲ್ಲದಿರುವುದು ಏನನ್ನು ಸೂಚಿಸುತ್ತದೆ ಇದು ಸೂಚಿಸುವುದು ಏನೆಂದರೆ ಬಲಪಂಥೀಯರು ಕಾನೂನನ್ನು ಉಲ್ಲಂಘಿಸಿದರೆ ಅವರಿಗೆ ಕ್ಷಮಾದಾನ ಇದೆಯೆಂದು ಅಲ್ಲವೇ? ಬಲಪಂಥೀಯರ ಈ ದ್ವಂದ್ವ ನೀತಿಯನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾದ ಅಗತ್ಯ ಇದೆ. ಬಾಬ್ರಿ ಮಸೀದಿಯ ಜಾಗದಲ್ಲಿ ಹಿಂದೆ ರಾಮನ ದೇವಾಲಯ ಇತ್ತು, ಅದನ್ನು ಹಿಂದೆ ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿ ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದರು ಎಂಬುದು ಬಲಪಂಥೀಯರ ವಾದ ಹಾಗೂ ಅಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬುದು ಅವರ ವಾದ. ಇದು ನಿಜವಾಗಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇರುವ ನಮ್ಮ ದೇಶದಲ್ಲಿ ಅದಕ್ಕೊಂದು ನಾಗರಿಕ ವಿಧಾನ ಇದೆ ಅಲ್ಲವೇ? ಅಂಥ ನಾಗರಿಕ ವಿಧಾನಗಳಲ್ಲಿ ಒಂದು ನ್ಯಾಯಾಲಯದ ಮೊರೆ ಹೋಗಿ ತೀರ್ಪು ಬರುವವರೆಗೂ ಕಾಯುವುದು. ಇಲ್ಲವಾದರೆ ಇದೇ ವಿಷಯವನ್ನು ಮುಖ್ಯ ಚುನಾವಣಾ ವಿಷಯವಾಗಿ ಎತ್ತಿಕೊಂಡು ಸ್ಪರ್ಧಿಸಿ ಮೂರನೇ ಎರಡು ಬಹುಮತವನ್ನು ಪಡೆದು ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಿ ಅದನ್ನು ಅಗತ್ಯ ಮೂರನೇ ಎರಡು ಬಹುಮತದ ಮೂಲಕ ಪಾಸು ಮಾಡಿಸಿಕೊಂಡು ನಂತರ ಮುಂದುವರಿದಿದ್ದರೆ ಬಾಬ್ರಿ ಮಸೀದಿ ನಾಶದಿಂದ ದೇಶದಲ್ಲಿ ಉಂಟಾದ ಭೀಕರ ಗಲಭೆಗಳು ನಡೆಯುತ್ತಿರಲಿಲ್ಲ. ಹೀಗಾಗಿ ಬಲಪಂಥೀಯ ಹಿಂದುತ್ವವಾದಿಗಳು ದೇಶದ ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡು assam_violenceಮಹಾ ಹಿಂಸಾಚಾರಕ್ಕೆ ಕಾರಣರಾದುದು ಸ್ಪಷ್ಟ. ಈ ಸಂದರ್ಭದಲ್ಲಿ ನಡೆದ ಗಲಭೆಗಳಲ್ಲಿ 2000 ಸಾವಿರಕ್ಕೂ ಅಧಿಕ ಜನ ಸಾವಿಗೀಡಾದರು. ಇದರಿಂದ ದೇಶಕ್ಕೆ ಉಂಟಾದ ರಾಷ್ಟ್ರೀಯ ನಷ್ಟ 20,000 ಕೋಟಿ ರೂಪಾಯಿಗಳು ಎಂದು ಮಾಧ್ಯಮಗಳು ವರದಿ ಮಾಡಿವೆ. ಗುಜರಾತಿನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ 10,000 ಕೋಟಿ ರೂಪಾಯಿಗಳ ರಾಷ್ಟ್ರೀಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಯೆಲ್ಲಾ ಗಲಭೆಗಳು ಮತೀಯವಾದಿಗಳು ಅಧಿಕಾರ ಪಡೆಯಲು ನಡೆಸಿದ ಕಸರತ್ತಿನ ಫಲವಾಗಿ ಉಂಟಾಗಿವೆ. ಇದು ಬಲಪಂಥೀಯರ ದೇಶಭಕ್ತಿಯ ಒಂದು ಸ್ಯಾಂಪಲ್. ದೇಶಭಕ್ತಿಯ ಬಗ್ಗೆ ಬಹಳ ಬೊಬ್ಬೆ ಹಾಕುವ ಬಲಪಂಥೀಯರು ವಿವೇಕ ಹಾಗೂ ವಿವೇಚನೆಯಿಂದ ವರ್ತಿಸಿದ್ದಿದ್ದರೆ ಈ ಎಲ್ಲ ಗಲಭೆಗಳನ್ನು ತಡೆಯಬಹುದಿತ್ತು. 1992ರ ಮುಂಬೈ ಗಲಭೆಯಲ್ಲಿ ತನಿಖಾ ಆಯೋಗ ಪಾತ್ರವಿದೆ ಎಂದು ಸೂಚಿಸಿದ ಬಲಪಂಥೀಯರಿಗೂ ಯಾವುದೇ ಶಿಕ್ಷೆ ಆಗಿಲ್ಲ. ಇದರಿಂದಾಗಿ ನಮ್ಮ ದೇಶದ ನ್ಯಾಯನಿರ್ಣಯ ವ್ಯವಸ್ಥೆ ಹಾಗೂ ಅದನ್ನು ಜಾರಿಮಾಡಬೇಕಾದ ಆಡಳಿತ ವ್ಯವಸ್ಥೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪನಂಬಿಕೆ ಮೂಡುವುದರಲ್ಲಿ ಸಂಶಯವಿಲ್ಲ.

ದೇಶಕ್ಕೆ ಈ ಮಟ್ಟದ ಹಾನಿ ಮಾಡಿದವರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಬಾಬ್ರಿ ಮಸೀದಿಯ ನಾಶಕ್ಕೆ ಕಾರಣರಾದ ಮತೀಯವಾದಿಗಳು ಯಾರು, ಅವರು ಮಾಡಿದ ಜನರನ್ನು ಉದ್ರೇಕಿಸುವ ಭಾಷಣಗಳು, ವೀಡಿಯೊಗಳು ಇವುಗಳ ಆಧಾರದ ಮೇಲೆ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿದೆ, ಆದರೂ ಅವರಿಗೆ ಶಿಕ್ಷೆ ಆಗುವುದಿಲ್ಲ ಎಂದರೆ ಅವರನ್ನು ಶಿಕ್ಷಿಸಲು ಆಡಳಿತ ಹಾಗೂ ನ್ಯಾಯಾಂಗ ವಿಫಲವಾಗಿದೆ ಎಂದಲ್ಲವೇ? ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಕಾನೂನು ಕೈಗೆತ್ತಿಕೊಳ್ಳುವ ಎಲ್ಲರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ.

ರಾಜಕಾರಣದ ಭ್ರಷ್ಟ ಸುಳಿಗಳ ನೋಟ


– ಚಿದಂಬರ ಬೈಕಂಪಾಡಿ


 

ಜಾಗತಿಕವಾಗಿ ಮಲೇಶಿಯಾಕ್ಕೆ ಭ್ರಷ್ಟಾಚಾರದಲ್ಲಿ ಅಗ್ರಪಟ್ಟ. ನಂತರದ ಸ್ಥಾನ ಮೆಕ್ಸಿಕೋ, ಕಡೆಯ ಸ್ಥಾನ ಜಪಾನ್ ಎನ್ನುವುದು ಅಧ್ಯಯನ ವರದಿಯ ತಿರುಳು. ಭ್ರಷ್ಟಾಚಾರ ವಿಶ್ವಮಾನ್ಯವಾಗಿದೆ. ಭಾರತದಲ್ಲಿ ರಾಜಕಾರಣದ ಮೂಲಕವೇ ಭ್ರಷ್ಟಾಚಾರ ಹುಟ್ಟಿಕೊಂಡಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪಕ್ಷ ಮುನ್ನಡೆಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹ ಭ್ರಷ್ಟಾಚಾರದ ಮೂಲ. ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿದಾಗ ಅರಿವಿಗೆ ಬರುವ ಸಂಗತಿಯೆಂದರೆ 60 ರ ದಶಕದಲ್ಲಿ ರಾಜಕೀಯ ಪಕ್ಷಗಳಿಗೆ ಸಂಪನ್ಮೂಲ ಸಂಗ್ರಹಿಸುವ ಅನಿವಾರ್ಯತೆ ಇರಲಿಲ್ಲ. 70 ರ ದಶಕದಲ್ಲಿ ಇದರ ಉಗಮ. ಕಾರ್ಪೊರೇಟ್ ಸಂಸ್ಥೆ ತಾನಾಗಿಯೇ ಪಾರ್ಟಿ ಫಂಡ್‌ಗೆ ದೇಣಿಗೆ ನೀಡುವ ಸಂಪ್ರದಾಯ ಆರಂಭ ಮಾಡಿತು. ಅದಕ್ಕೆ ಪ್ರತಿಯಾಗಿ ಗುತ್ತಿಗೆ ಪಡೆಯುವುದಕ್ಕೆ ಪರ್ಸೆಂಟೇಜ್ ವ್ಯವಹಾರ. ಇದು ಯಾವ ಮಟ್ಟಕ್ಕೆ ಬೆಳೆಯಿತೆಂದರೆ ಈಗ ತಳಮಟ್ಟದ ಗ್ರಾಮಪಂಚಾಯತ್ ಗುತ್ತಿಗೆ ಪಡೆಯುವುದಕ್ಕೂ ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿದೆ. ಇದನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ?

70 ರ ದಶಕದಲ್ಲಿ ಒಂದು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ 50 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗಿತ್ತು. ಅಷ್ಟೊಂದು ಸಂಪನ್ಮೂಲ ಹೊಂದಿಸಿಕೊಳ್ಳುವುದಕ್ಕೆ ಅಭ್ಯರ್ಥಿಗೆ ಅಸಾಧ್ಯವಾಗುತ್ತಿತ್ತು. ಈ ಕಾರಣಕ್ಕೆ ಪಕ್ಷದ ವತಿಯಿಂದ ಇಂತಿಷ್ಟು ಫಂಡ್ ಕೊಡುವ ಸಂಪ್ರದಾಯ ಬೆಳೆಯಿತು. ಆ ಕಾಲದಲ್ಲಿ ಗರಿಷ್ಠ ಒಂದು ಲೋಕಸಭಾ ಕ್ಷೇತ್ರದ ಸಿರಿವಂತ ಅಭ್ಯರ್ಥಿ 2 ಕೋಟಿ ರೂಪಾಯಿ ವೆಚ್ಚ ಮಾಡಿದ್ದು ದಾಖಲೆ, ಈಗ?

ಒಂದು ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗೆ ಅಭ್ಯರ್ಥಿಗಳು ಮಾಡುವ ಖರ್ಚು ಹುಬ್ಬೇರಿಸುವಂತೆ ಮಾಡುತ್ತದೆ. ಯಾವುದೇ ದೇಶ ಆರ್ಥಿಕವಾಗಿ ಬಲಿಷ್ಠವಾಗಿದ್ದರೂ ಭ್ರಷ್ಟವಾಗಿದ್ದರೆ ಆ ದೇಶ ಬಲಿಷ್ಠವಲ್ಲ ಎನ್ನುವುದು ಆರ್ಥಿಕ ಥಿಯರಿ. ಆದರಿಂದಲೇ ಭಾರತ ಶ್ರೀಮಂತಿಕೆಯಿದ್ದರೂ ಬಡ ದೇಶ.

ಭ್ರಷ್ಟಾಚಾರವನ್ನು ಹುಟ್ಟು ಹಾಕಿದ ದೇಣಿಗೆ ಸಂಸ್ಕೃತಿ ಈಗ ರಾಜಕಾರಣವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿದೆ. ಹಿಂದೆ ಆಡಳಿತ ಪಕ್ಷಗಳಿಗೆ ಮಾತ್ರ ಸಾಧ್ಯವಿದ್ದ ದೇಣಿಗೆ ಪಡೆಯುವ ಸಾಮರ್ಥ್ಯ ಈಗ ವಿರೋಧ ಪಕ್ಷಗಳಿಗೂ ಸಾಧ್ಯವಾಗಿದೆ. ಯಾಕೆಂದರೆ ತಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭರವಸೆಯಿಂದ. ಈಗಲೂ ಪಕ್ಷಗಳು ನಿಧಿ ಸಂಗ್ರಹಿಸುವ ಸಂಪ್ರದಾಯವಿದೆ. ಹಿಂದೆಯೂ ಬಿ-ಫಾರಂ ಪಡೆಯಲು ಅಭ್ಯರ್ಥಿಗಳು ಹಂತಹಂತವಾಗಿ ಹಣಕೊಡಬೇಕಾಗಿತ್ತು, ಈಗಲೂ ಅದು ಮುಂದುವರಿದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಕರ್ನಾಟಕದ ಮಟ್ಟಿಗೆ ರಾಜಕಾರಣವನ್ನು ಭ್ರಷ್ಟಾಚಾರ ಆವರಿಸಿಕೊಂಡುಬಿಟ್ಟಿದೆ. ರಾಜಕಾರಣದಲ್ಲಿ ಶುದ್ಧ ಹಸ್ತ ಎನ್ನುವ ಮಾತಿಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ವ್ಯಾಖ್ಯಾನಿಸುತ್ತಾರೆ. ಅತೀ ಭ್ರಷ್ಟ, ಇದ್ದವರಲ್ಲಿಯೇ ಕಡಿಮೆ ಭ್ರಷ್ಟ ಎನ್ನುವ ಮಟ್ಟಿಗೆ ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಭ್ರಷ್ಟಾಚಾರ ಮಾಡಿಯೂ ಜಾಣತನದಿಂದ ನಿಭಾಯಿಸುವವರಿದ್ದಾರೆ. ಭ್ರಷ್ಟಾಚಾರವನ್ನು ಅರಗಿಸಿಕೊಳ್ಳುವಂಥ ಸಾಮರ್ಥ್ಯವನ್ನು ಗಳಿಸಿದವರೂ ಇದ್ದಾರೆ. ಚುನಾವಣೆ ಕಾಲಘಟ್ಟದಲ್ಲಿ ಮಾತ್ರ ಕೇಳಿ ಬರುವ ಭ್ರಷ್ಟಾಚಾರದ ಆರೋಪಗಳಿಗೆ ಅಷ್ಟೊಂದು ಮಹತ್ವ ಕೊಡಬೇಕಾಗಿಲ್ಲ ಅಂದುಕೊಂಡರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರ ಬಗ್ಗೆ ಆರೋಪ ಬಂದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಮೇಲೆ ಅಬಕಾರಿ ಸಚಿವ ರೇಣುಕಾಚಾರ್ಯ ಮಾಡಿರುವ ಆರೋಪ ತಾಜಾ. ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಕಾಲದಲ್ಲಿ ತಾವು ಸದಾನಂದ ಗೌಡರ ಕೋರಿಕೆಯಂತೆ ಹಣಕೊಟ್ಟಿದ್ದೆ ಎಂದಿದ್ದಾರೆ. ತಮ್ಮಲ್ಲಿ ಹಣಕೊಟ್ಟಿರುವುದಕ್ಕೆ ದಾಖಲೆಗಳಿವೆ, ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಒಂದು ವೇಳೆ ದಾಖಲೆ ಇಟ್ಟುಕೊಂಡಿದ್ದರೆ ನಿಜಕ್ಕೂ ರೇಣುಕಾಚಾರ್ಯ ಬುದ್ಧಿವಂತ ರಾಜಕಾರಣಿ. ಹಣಪಡೆದು ದಾಖಲೆ ಮೂಲಕ ಸಿಕ್ಕಿಹಾಕಿಕೊಂಡರೆ ಸದಾನಂದ ಗೌಡರು ದಡ್ಡ ರಾಜಕಾರಣಿ ಎನ್ನುವುದು ಇಲ್ಲಿ ಮುಖ್ಯವಲ್ಲ. ರಾಜಕಾರಣದ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅತೀ ಮುಖ್ಯ.

ಕರ್ನಾಟಕದಲ್ಲಿ ರಾಜಕಾರಣಿಗಳ ಮೇಲೆ ಅದರಲ್ಲೂ ಗುರುತರವಾದ ಜವಾಬ್ದಾರಿ ನಿಭಾಯಿಸುವಂಥವರ ವಿರುದ್ಧ ಆರೋಪಗಳು ಹೊಸತೇನೂ ಅಲ್ಲ. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ಧರಂ ಸಿಂಗ್, ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹೀಗೆ ಎಲ್ಲರ ವಿರುದ್ಧವೂ ಒಂದಲ್ಲ ಒಂದು ಆರೋಪ ಥಳುಕು ಹಾಕಿಕೊಂಡಿದೆ.

ಅತ್ಯಂತ ಮುಖ್ಯವಾಗಿ ಎರಡು ಕಾರಣಗಳಿಂದಾಗಿ ರಾಜಕಾರಣ ಭ್ರಷ್ಟಾಚಾರದ ಸುಳಿಗೆ ಸಿಲುಕಿದೆ. ಅಧಿಕಾರದ ಮೇಲೆ ಕುಳಿತ ವ್ಯಕ್ತಿ ಪಕ್ಷ ಮುನ್ನಡೆಸಲು ಸಂಪನ್ಮೂಲ ಒದಗಿಸಬೇಕು ಎನ್ನುವುದು ಮೊದಲ ಕಾರಣವಾದರೆ ಸಹಜವಾಗಿಯೇ ಮತ್ತೊಂದು ಕಾರಣ ಸ್ವಹಿತಾಸಕ್ತಿ. ರಾಜಕಾರಣಿ ಸನ್ಯಾಸಿಯಲ್ಲ, ಸನ್ಯಾಸಿಗಳೆಲ್ಲರೂ ಭ್ರಷ್ಟಾಚಾರದಿಂದ ಹೊರತಲ್ಲ ಎನ್ನುವುದು ಬೇರೆಯೇ ಮಾತು.

ಚುನಾವಣೆ ಎನ್ನುವುದು ಯಾವಾಗ ದುಬಾರಿಯಾಯಿತೋ ಆ ಕ್ಷಣದಿಂದಲೇ ಭ್ರಷ್ಟಾಚಾರದ ವೇಗ ಮತ್ತು ವ್ಯಾಪ್ತಿ ಹೆಚ್ಚಾಯಿತು. corruption-india-democracyಯಾವುದೇ ಮುಖ್ಯಮಂತ್ರಿ ಒಂದು ಪಕ್ಷದ ಹಿನ್ನೆಲೆಯಿಂದಾಗಿ ಅಧಿಕಾರಕ್ಕೇರಿದರೂ ಸಂಪನ್ಮೂಲಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಅಲಿಖಿತ ನಿಯಮ ಈಗಿನ ರಾಜಕಾರಣದಲ್ಲಿ. ಈ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೊಂದು ವೇಳೆ ಅಲ್ಲಗಳೆದರೆ ಆತ್ಮವಂಚನೆಯಾಗುತ್ತದೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಮಿತಿಯೂ ಇಲ್ಲ, ಮಾನದಂಡವೂ ಇಲ್ಲ. ಪೊಲೀಸ್ ಠಾಣೆ ಸ್ಥಾಪನೆಯಾಯಿತೆಂದರೆ ಅಲ್ಲಿ ಕಳವು, ಹೊಡೆದಾಟ, ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಯಾಕೆಂದರೆ ಆ ಠಾಣೆಯವರಿಗೂ ಕೆಲಸಬೇಕಲ್ಲ. ಹಾಗೆಯೇ ಭ್ರಷ್ಟಾಚಾರ ತಡೆಗೆ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕಾರಣಿಗಳು, ಅಧಿಕಾರಸ್ಥರು ಸಾಲುಗಟ್ಟಿ ಕೋರ್ಟು ಕಚೇರಿಗೆ ಎಡತಾಕುವಂತಾಗಿದೆ. ಯಾಕೆಂದರೆ ಅದು ಕೆಲಸ ಮಾಡುತ್ತಿದೆ, ಮಾಡಲೇ ಬೇಕು.

ಚುನಾವಣಾ ವೆಚ್ಚವನ್ನು ನಿಯಂತ್ರಣ ಮಾಡುವ ಮೊದಲೇ ಅಭ್ಯರ್ಥಿಗಳು ಮಾಡುತ್ತಿದ್ದ ವೆಚ್ಚಕ್ಕಿಂತೇನೂ ಈಗ ಕಡಿಮೆಯಾಗಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ವೆಚ್ಚ ಮಾಡುವ ವಿಧಾನಗಳು ಮಾತ್ರ ಬದಲಾಗಿವೆ. ಅತ್ಯಂತ ಮಹತ್ವದ ಅಂಶವೆಂದರೆ ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ ತನ್ನ ಸ್ವಂತ ದುಡಿಮೆಯನ್ನು ಹೂಡಿಕೆ ಮಾಡಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ, ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಸಾಧ್ಯ. ಸಂಪನ್ಮೂಲ ಹೊಂದಿಸಿಕೊಳ್ಳುತ್ತಾರೆ, ಹೊಂದಿಸಿಕೊಳ್ಳಲೇ ಬೇಕು. ಇಂಥ ವ್ಯವಸ್ಥೆಯ ಭಾಗವಾಗಿ ರಾಜಕಾರಣದಲ್ಲಿ ಭ್ರಷ್ಟಾಚಾರ ಬೆಳೆದುಬಂದಿದೆ. ಚುನಾವಣಾ ವ್ಯವಸ್ಥೆಯಲ್ಲೇ ಬದಲಾವಣೆಯಾಗಬೇಕು ಎನ್ನುವುದು ನಿರೀಕ್ಷೆಯಾದರೂ ಅಂಥ ಮಾನಸಿಕ ಸ್ಥಿತಿ ರಾಜಕಾರಣಿಗಳಲ್ಲಿ ಬೆಳೆಯುವುದು ಯಾವಾಗ? ಸೈಕಲ್ ತುಳಿದುಕೊಂಡೇ ರಾಜಕೀಯಕ್ಕೆ ಇಳಿದ ವ್ಯಕ್ತಿ ಅದೇ ಸೈಕಲ್‌ಗೆ ತನ್ನನ್ನು ಸೀಮಿತಗೊಳಿಸಿಕೊಳ್ಳುವಂಥ ಮನಸ್ಥಿತಿ ಉಳಿಸಿಕೊಳ್ಳಲು ಸಾಧ್ಯವೇ? ಸಾಧ್ಯವಾಗಲಿ ಎನ್ನುವುದು ಈ ಕ್ಷಣದ ಆಶಯ.