Daily Archives: March 11, 2013

ತಮ್ಮಂತೆ ಎಲ್ಲರೂ ಜಾತಿರೋಗಿಗಳಾಗಬೇಕೆಂದು ಬಯಸುವ ಜಾತಿ ಸಂಘಗಳು

– ರವಿ ಕೃಷ್ಣಾರೆಡ್ಡಿ

ಫೆಬ್ರವರಿ.24, 2013 ರಂದು ಹಾಸನದಲ್ಲಿ ಅಲ್ಲಿಯ ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿದ್ದದ್ದು, ಅಲ್ಲಿ ಮಾಂಸಾಹಾರದ ತಿನಿಸುಗಳ ಮಾರಾಟಕ್ಕಿಟ್ಟದ್ದು, ಮತ್ತು ತದನಂತರದ ಕೆಲವು ವಾದವಿವಾದಗಳು ನಮ್ಮ ಓದುಗರಿಗೆ “ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!” ಲೇಖನದ ಮೂಲಕ ಗೊತ್ತಿರುವಂತಹುದೆ. ಒಂದು ಕೀಳುಮಟ್ಟದ ಅಪ್ರಪ್ರಚಾರ ಮತ್ತು ಅನೈತಿಕ ಪತ್ರಿಕೋದ್ಯಮಕ್ಕೆ ಮಾದರಿ ಈ ಘಟನೆಗಳು.

ಹಾಗೆಯೇ, ತಮಗೆ ಸಂಬಂಧಪಟ್ಟಿಲ್ಲದ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಜಾತ್ಯತೀತ ಲೇಖಕಿ “ತಮ್ಮ ಜಾತಿ-ಮತದವಳು” ಎಂಬ ಒಂದೇ ಕಾರಣಕ್ಕೆ ಅವರ ಮೇಲೆ ಹಕ್ಕುಸ್ವಾಮ್ಯ ಮಾಡಹೊರಟ ಅಲ್ಲಿಯ ಜೈನ ಸಂಘದ ವರ್ತನೆ ಅಪ್ರಬುಧ್ಹತೆಯುಳ್ಳದ್ದು ಮತ್ತದು ಖಂಡನೀಯ. ಮಾಂಸಾಹಾರದ ಬಗ್ಗೆ ತಮ್ಮ ತಕರಾರುಗಳಿದ್ದರೆ ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಈ ಜೈನ ಸಂಘ ತನ್ನ ಅಭಿಪ್ರಾಯ ಪ್ರಕಟಿಸಬೇಕಿತ್ತೇ ಹೊರತು ಕೇವಲ ರೂಪ ಹಾಸನರ ಹೇಳಿಕೆಯನ್ನು ಖಂಡಿಸಿದ್ದು, ಆದಕ್ಕಾಗಿ ಖಂಡನಾ ನಿರ್ಣಯಗಳನ್ನು ಕೈಗೊಳ್ಳುವುದು, ಕ್ಷಮೆ ಕೇಳಿ, ವಿಷಾದ ವ್ಯಕ್ತಪಡಿಸಿ ಎನ್ನುವುದು ಆ ಸಂಘದಲ್ಲಿರುವ ಮತಾಂಧರ ಮನಸ್ಥಿತಿಯನ್ನು ತೋರಿಸುತ್ತದೆ.

ರೂಪ ಹಾಸನರು ಜೈನ ಸಂಘದ ಪದಾಧಿಕಾರಿಗಳೇ ಅಥವ ಜೈನ ಮತದ ಪ್ರತಿನಿಧಿಯೇ? ಅಲ್ಲವೇ ಅಲ್ಲ. ಹಾಗಾಗಿ, ಕೇವಲ ರೂಪ ಹಾಸನರ ಹೇಳಿಕೆ ಖಂಡಿಸಿ ನಿರ್ಣಯ ತೆಗೆದುಕೊಂಡ ಈ ಸಂಘ ತನ್ನ ವ್ಯಾಪ್ತಿಯನ್ನು ಮೀರಿದೆ ಮತ್ತು ಪಾಳೇಗಾರಿಕೆ ಮನೋಭಾವದಿಂದ, ಸಂಕುಚಿತ ಜಾತಿಪ್ರಜ್ಞೆಯಿಂದ ನರಳುತ್ತಿದೆ. ಹಾಗೆಯೇ, ತಾನೆಷ್ಟು ಪ್ರತಿಗಾಮಿ ಮತ್ತು ತಮ್ಮ ಪದಾಧಿಕಾರಿಗಳು ಎಷ್ಟು ದಡ್ಡರು, ಅವಿವೇಕಿಗಳು, ಎಂದು ಜಾಹೀರು ಪಡಿಸಿಕೊಂಡಿದೆ. ಈ ಜಾತಿ ಸಂಘಟನೆಗಳಲ್ಲಿ ಒಂದಿಷ್ಟಾದರೂ ಕಾಮನ್ ಸೆನ್ಸ್ ಇರುವವರು ಇರುವುದಿಲ್ಲವೇ? ಯಾರಾದರೂ ಇಂತಹ ನಿರ್ಣಯಗಳ ವಿರುದ್ಧ ಕೋರ್ಟಿಗೆ ಹೋಗಿ ಇವರ ಅಧಿಕಾರದ ಅಥವ ಅಜ್ಞಾನದ ಮಿತಿಯನ್ನು ತಿಳಿಯಪಡಿಸಬೇಕು.

ಹೀಗೆ ಜಾತ್ಯತೀತರ ಮೇಲೆಲ್ಲ ಅವರು ನಮ್ಮನಮ್ಮ ಜಾತಿಗೆ ಸೇರಿದವರು ಎಂದು ಭಾವಿಸಿಕೊಂಡು ಈ ಲೇಖಕರು-ಚಿಂತಕರು ನಮ್ಮಂತೆ ಕೀಳು ಜಾತಿಮನೋಭಾವನೆಯ ಕಾಯಿಲೆಗೆ ಒಳಗಾಗಿಲ್ಲ, ಅವರೂ ಈ ಕಾಯಿಲೆ ಹತ್ತಿಸಿಕೊಂಡು ಓಡಾಡಾಬೇಕು ಎಂದು ಜಾತಿ ಸಂಘಟನೆಗಳೆಲ್ಲ ಹೇಳಿಕೆ ಕೊಡುತ್ತ ಹೊರಟರೆ, ಅವರು ನಗೆಪಾಟಲಿಗೀಡಾಗುತ್ತಾರಷ್ಟೇ ಅಲ್ಲ, ಅವರೆಲ್ಲರ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ.

ಜೈನ ಸಂಘದ ಹೇಳಿಕೆಗೆ ರೂಪ ಹಾಸನರು ಪ್ರತಿಕ್ರಿಯಿಸಿ “ಜನಮಿತ್ರ”ಕ್ಕೆ ಪತ್ರ ಬರೆದಿದ್ದಾರೆ ಮತ್ತು ಅದು ಆ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜೈನ ಸಂಘದ ನಿರ್ಣಯ, ಮತ್ತು “ಜನಮಿತ್ರ”ದಲ್ಲಿ ಪ್ರಕಟಗೊಂಡ ಪತ್ರಗಳು ಇಲ್ಲಿವೆ. ಪತ್ರಿಕೆಗಳ ಮತ್ತು ಸಂಘಟನೆಗಳ ಪ್ರತಿನಿಧಿಗಳು ಜವಾಬ್ದಾರಿಯಿಂದ ಮತ್ತು ಪ್ರಗತಿಪರ ಮನೋಭಾವದಿಂದ ಕಾರ್ಯನಿರ್ವಹಿಸಲಿ ಎಂದು ಆಶಿಸೋಣ.

jain-sangh-rupa-hassan
rupa-hassan-janamitra