Monthly Archives: March 2013

ನಿಮ್ಮ ಮನೆ ಬಾಗಿಲಿಗೆ ಬರುವವರನ್ನು ನೋಡಿ


– ಚಿದಂಬರ ಬೈಕಂಪಾಡಿ


 

ಕರ್ನಾಟಕದ ವಿಧಾನಸಭೆಯ 224 ಸ್ಥಾನಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಮತದಾರ ಪ್ರಭುಗಳು ಆಯ್ಕೆ ಮಾಡಬೇಕಾಗಿದೆ. ತಮಗೆ ಬೇಕಾದವರನ್ನು, ತಮ್ಮ ಉದ್ಧಾರ ಮಾಡುವವರನ್ನು ಹೆಕ್ಕಿ ತೆಗೆದು ವಿಧಾನಸೌಧಕ್ಕೆ ಕಳುಹಿಸಬೇಕಾಗಿದೆ. ಇದು ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಆಯ್ಕೆ ಪ್ರಕ್ರಿಯೆ. ನಮ್ಮನ್ನು ಯಾರು ಆಳಬೇಕು ಎನ್ನುವುದನ್ನು ನಾವೇ ನಿರ್ಧರಿಸುವಂಥ ಸದವಕಾಶ. ನಮ್ಮ ಮನೆ ಮುಂದೆ ಬಂದು ನಿಲ್ಲುವ, ಮತ ಹಾಕಿರೆಂದು ಕೈಮುಗಿದು ದೈನ್ಯತೆಯಿಂದ ಕೇಳುವ ಆ ಮುಖವನ್ನು ನಾವೂ-ನೀವು ಎಷ್ಟು ಬಾರಿ ಕಂಡಿದ್ದೇವೆ? ಆ ವ್ಯಕ್ತಿಯಿಂದ ಸಮಾಜಕ್ಕೆ ಎಷ್ಟು ಒಳಿತಾಗಿದೆ? ಸಮಾಜದಿಂದ ಆ ವ್ಯಕ್ತಿಗೆಷ್ಟು ಲಾಭವಾಗಿದೆ? ಆ ವ್ಯಕ್ತಿಯ ಜೊತೆಗೆ ಮತ ಯಾಚಿಸಲು ಬಂದವರು ಯಾವ ವ್ಯಕ್ತಿತ್ವ ಹೊಂದಿದವರು? ಮತಹಾಕಿ ಆರಿಸಿ ಕಳುಹಿಸಿದ ಮೇಲೆ ಅವರನ್ನು ನೋಡಲು, ಅವರಿಂದ ನಮ್ಮ ಕೆಲಸ ಮಾಡಿಸಿಕೊಳ್ಳಲು ಸುಲಭವೇ? ಕೆಲಸ ಮಾಡಿಕೊಡಬಲ್ಲರೇ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡರೆ ಆಯ್ಕೆ ಮಾಡುವುದು ಸುಲಭವಾಗುತ್ತದೆ. ಯಾಕೆಂದರೆ ನಿಮ್ಮ ಮುಂದೆ ಹಲವು ಮಂದಿ ಇರುತ್ತಾರೆ. ಪಕ್ಷದ ಹಿನ್ನೆಲೆ, ಮನೆತನದ ಪೂರ್ವಇತಿಹಾಸ, ಅವರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, election_countingಕಾರ್ಯಕ್ಷಮತೆ ಇತ್ಯಾದಿಗಳೆಲ್ಲವನ್ನೂ ಅಳೆದು ತೂಗಿ ಆಯ್ಕೆ ಮಾಡಬೇಕೇ, ಬೇಡವೇ ಎನ್ನುವ ನಿರ್ಧಾರಕ್ಕೆ ಬರಲು ಅವಕಾಶವಿದೆ.

ಹಿಂದಿನ ಚುನಾವಣೆಯಲ್ಲಿ ಹೀಗೆಯೇ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಿ ನಿಮ್ಮ ಮತ ಪಡೆದು ಆಯ್ಕೆಯಾದ ಮೇಲೆ ಮಾಡಿದ್ದೇನು? ಸಮಾಜಕ್ಕೆ ಕೊಟ್ಟ ಕೊಡುಗೆಯೇನು? ಮತ್ತೆ ಕಣಕ್ಕಿಳಿದಿರುವ ಈ ವ್ಯಕ್ತಿಗೆ ಮತ್ತೆ ವಿಧಾನ ಸೌಧದ ಮೆಟ್ಟಿಲೇರಲು ಅವಕಾಶ ಮಾಡಿಕೊಡಬೇಕೇ? ಎನ್ನುವುದನ್ನು ನಿರ್ಧರಿಸುವವರು ನೀವೇ ಆಗಿರುತ್ತೀರಿ. ಇಷ್ಟೆಲ್ಲಾ ಅಂಶಗಳನ್ನು ವಿಚಾರ ವಿಮರ್ಶೆ ಮಾಡಿ ಮತದಾರ ಮತ ಹಾಕುತ್ತಿದ್ದಾನೆಯೇ? ಇಂಥ ಅಳೆದು, ತೂಗಿ ಆಯ್ಕೆ ಮಾಡಲು ಅವಕಾಶವಾಗಿದೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಿದರೆ ಭ್ರಷ್ಟರು, ಅಪ್ರಾಮಾಣಿಕರು ಸಾಲುಗಟ್ಟಿ ಜೈಲು ಸೇರುತ್ತಿರುವವರು ನಮ್ಮವರೇ ಅಲ್ಲವೇ? ನಾವೇ ಆರಿಸಿ ಕಳುಹಿಸಿದವರಲ್ಲವೇ? ಎನ್ನುವ ಉತ್ತರ ಸುಲಭವಾಗಿ ಸಿಗುತ್ತದೆ.

ರಾಜಕಾರಣ ಭ್ರಷ್ಟವಾಗಿದೆ ಎನ್ನುವ ಮಾತಿನ ಹಿಂದಿರುವ ಸತ್ಯ ವ್ಯಕ್ತಿ ಭ್ರಷ್ಟನಾಗಿದ್ದಾನೆ ಎನ್ನುವುದು. ಭ್ರಷ್ಟಾಚಾರದ ಬಗ್ಗೆ ವಾಹಿನಿಗಳಲ್ಲಿ ಕುಳಿತು ಮಾತನಾಡುವವರು ಭ್ರಷ್ಟಾಚಾರ ಎನ್ನುವುದನ್ನು ರಾಜಕಾರಣದ ಅವಿಭಾಜ್ಯ ಅಂಗ ಎನ್ನುವಂತೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ಭ್ರಷ್ಟಾಚಾರ ಮಾಡಿದವನೇ ಮಾತನಾಡುವುದಕ್ಕೆ ನೈತಿಕತೆಯಾದರೂ ಎಲ್ಲಿದೆ? ಭ್ರಷ್ಟಾಚಾರ ತಾನಾಗಿಯೇ ಹುಟ್ಟಿಕೊಂಡದ್ದಲ್ಲ, ವ್ಯಕ್ತಿಯಿಂದ ಹುಟ್ಟು ಪಡೆದುಕೊಂಡಿದೆ, ಆದ್ದರಿಂದ ಭ್ರಷ್ಟಾಚಾರ ಹುಟ್ಟು ಹಾಕಿದ ವ್ಯಕ್ತಿಯೇ ಭ್ರಷ್ಟ ಹೊರತು ರಾಜಕಾರಣವಲ್ಲ. ರಾಜಕಾರಣಿ ಪ್ರಾಮಾಣಿಕನಾಗಿದ್ದರೂ ಅವನೂ ಆ ವ್ಯವಸ್ಥೆಯ ಭಾಗವಾಗಿ ಹೋಗುತ್ತಿರುವುದು ದುರಂತ. ಆದ್ದರಿಂದಲೇ ನಿಮ್ಮ ಮತಯಾಚನೆಗೆ ಬರುವವರು ರಾಜಕಾರಣದಲ್ಲಿ ಶುದ್ಧ ಹಸ್ತರಾಗಿದ್ದರೂ ಆ ವ್ಯವಸ್ಥೆಯನ್ನು ಸೇರಿದ ಮೇಲೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಭ್ರಷ್ಟರಾಗುತ್ತಿದ್ದಾರೆ. ಇದಕ್ಕೆ ಒಂದು ಪಕ್ಷ ಮಾತ್ರ ಸೀಮಿತವಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಎದುರಾಳಿಯನ್ನು ಮಣಿಸಲು ಅದೇ ತಂತ್ರ ಅನುಸರಿಸುತ್ತವೆ, ಅವುಗಳಿಗೆ ಅದು ಅನಿವಾರ್ಯವಾಗಿದೆ. ಇಂಥ ಅನಿವಾರ್ಯತೆ ಮತದಾರನಿಗೆ ಇರಬೇಕೇ? ಯಾಕೆ ತಾವು ಆಯ್ಕೆ ಮಾಡುವ ವ್ಯಕ್ತಿಯನ್ನು ಇಂಥ ಅನಿವಾರ್ಯತೆಯ ಒತ್ತಡಕ್ಕೆ ಒಳಗಾಗಿ ಆಯ್ಕೆ ಮಾಡಬೇಕು?

ಭ್ರಷ್ಟರನ್ನು ಆಯ್ಕೆ ಮಾಡಲೇ ಬೇಕು ಎನ್ನುವ ಅನಿವಾರ್ಯತೆ ಮತದಾರನಿಗೆ ಖಂಡಿತಕ್ಕೂ ಇಲ್ಲ. ಆದರೆ ಅಂಥ ಪ್ರಬುದ್ಧತೆ ಮತದಾರನಿಗೆ ಬಂದಿಲ್ಲ. ಅಣ್ಣಾ ಹಜಾರೆ ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ. ಯಾಕೆಂದರೆ ಅವರು ರಾಜಕೀಯ ಪಕ್ಷ ಸ್ಥಾಪಿಸಿದರೆ ಚುನಾವಣೆ ಎದುರಿಸಲು ಬಂಡವಾಳ ಹೊಂದಿಸಿಕೊಳ್ಳಬೇಕು. ಬಂಡವಾಳವಿಲ್ಲದಿದ್ದರೆ ಅವರು ಸ್ಪರ್ಧೆಗೆ ಇಟ್ಟ ಠೇವಣಿಯೂ ಸಿಗುವುದಿಲ್ಲ ಎನ್ನುವ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಜನರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸಿ ಗೆಲ್ಲುವಂಥ ರಾಜಕಾರಣವೇ ಈಗ ನಡೆಯುತ್ತಿರುವುದು. ಮತದಾರ ತಾನಾಗಿಯೇ ಮತಗಟ್ಟೆಗೆ ಬಂದು ಮತ ಚಲಾಯಿಸುವಂಥ ವ್ಯವಸ್ಥೆ ಖಂಡಿತಕ್ಕೂ ಇದೆ. INDIA-ELECTIONಆದರೆ ಹೀಗೆ ಸ್ವಪ್ರೇರಣೆಯಿಂದ ಮತಚಲಾಯಿಸುವವರ ಸಂಖ್ಯೆ ಶೇ.10 ರಿಂದ 15 ಮಾತ್ರ. ಶೇ. 20 ರಷ್ಟು ಮಂದಿ ಮತದಾನದಿಂದ ದೂರವೇ ಉಳಿಯುತ್ತಾರೆ. ಶೇ.20 ರಷ್ಟು ಮಂದಿ ಜಾತಿ ಹಿನ್ನೆಲೆಯಲ್ಲಿ ಮತ ಚಲಾಯಿಸುತ್ತಾರೆ. ಶೇ.20 ರಷ್ಟು ಮಂದಿ ಅಭ್ಯರ್ಥಿಯ ಹಣಬಲದ ಪ್ರಭಾವಕ್ಕೆ ಒಳಗಾಗುತ್ತಾರೆ. ಶೇ.20 ಮಂದಿ ಹಣ ಮತ್ತು ಪ್ರಭಾವ ಎರಡನ್ನೂ ಅವಲಂಬಿಸಿ ಆಯ್ಕೆ ಮಾಡುತ್ತಾರೆ. ಶೇ.5 ರಷ್ಟು ಮಂದಿ ಅತಂತ್ರರು. ಅವರಿಗೆ ಹಣ ಸಿಗಬಹುದು, ಸಿಗದೆಯೂ ಇರಬಹುದು. ಸಿಕ್ಕಿದರೆ ಖುಷಿ, ಸಿಗದಿದ್ದರೆ ಅಸಹಾಯಕತೆ ಅಷ್ಟೇ.

ಇಂಥ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುವಾಗ ಯಾರನ್ನು ದೂಷಿಸಬೇಕು? ಯಾಕೆ ದೂಷಿಸಬೇಕು?

ಅವಕಾಶವಾದಿ ರಾಜಕಾರಣ, ಹಣಬಲದ ರಾಜಕಾರಣ, ಸಾಮಾಜಿಕ ಬದ್ಧತೆಯ ರಾಜಕಾರಣ; ಹೀಗೆ ಮೂರು ಗುಂಪುಗಳನ್ನಾಗಿ ಮಾಡಿದರೆ ಪಾರುಪತ್ಯ ಮೆರೆಯುವುದು ಮೊದಲ ಎರಡು ಗುಂಪೇ ಹೊರತು ಮೂರನೆಯ ಗುಂಪು ಮೂಲೆಗುಂಪಾಗುತ್ತದೆ. ಅಣ್ಣಾ ಹಜಾರೆಯನ್ನು ಮೂರನೇ ಗುಂಪಿಗೆ ನಾಯಕ ಅಂದುಕೊಂಡರೆ ಸಾಮಾಜಿಕ ಬದ್ಧತೆಯ ರಾಜಕಾರಣ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತದೆ. ಈ ಸತ್ಯ ಅಣ್ಣಾನಿಗೂ ಗೊತ್ತು. ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಮಂದಿ ಅಣ್ಣಾನ ಭಾಷಣ ಕೇಳಲು ಬರುತ್ತಾರೆ, ಆದರೆ ಅವರೆಲ್ಲರೂ ಅಣ್ಣಾನ ಬೆನ್ನಿಗೆ ನಿಲ್ಲುವುದಿಲ್ಲ, ನಿಲ್ಲಲು ವ್ಯವಸ್ಥೆ ಬಿಡುವುದಿಲ್ಲ. ಆದ್ದರಿಂದಲೇ ಅಣ್ಣಾ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಶರಣಾದರು.

ಈ ದೇಶದ ರಾಜಕೀಯ ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ರೈತಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಮಂಡಿಯೂರಲೇ ಬೇಕು. vote-participate-democracyಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಿದ್ದರೂ ರೈತಶಕ್ತಿಯೇ ಬಲಿಷ್ಠ. ಆದರೆ ರೈತಶಕ್ತಿಯನ್ನು ಮುಷ್ಟಿಯಲ್ಲಿಟ್ಟುಕೊಂಡಿರುವ ಶಕ್ತಿ ಯಾವುದು? ಮಹೇಂದ್ರ ಸಿಂಗ್ ಟಿಕಾಯತ್ ಈ ದೇಶ ಕಂಡ ಸಮರ್ಥ ರೈತ ನಾಯಕ. ಅವರ ಒಂದು ಕರೆಗೆ ರಾಜಧಾನಿ ದೆಹಲಿ ಜನಸಾಗರವಾಗುತ್ತಿತ್ತು, ಸರ್ಕಾರ ನಡುಗುತ್ತಿತ್ತು. ಪ್ರೊ.ನಂಜುಂಡಸ್ವಾಮಿ ಈ ರಾಜ್ಯ ಕಂಡ ಮೇಧಾವಿ, ಚಿಂತಕ, ರೈತ ನಾಯಕ. ವಿಧಾನಸಭೆಯೊಳಗೆ ಅವರು ಮಾತಿಗೆ ನಿಂತರೆ ಕಂಚಿನಕಂಠ ಮೊಳಗುತ್ತಿತ್ತು. ಕೆಂಟುಕಿ ಚಿಕನ್ ವಿರುದ್ಧ ಎರಡು ದಶಕಗಳ ಹಿಂದೇಯೇ ಧ್ವನಿ ಎತ್ತಿದ್ದ ಪ್ರೊಫೆಸರ್ ಈಗ ಇಲ್ಲ, ಆದರೆ ಅವರ ಮಾತುಗಳು ಇಂದಿಗೂ ಪ್ರಸ್ತುತ. ಅವರು ಕಟ್ಟಿ ಬೆಳೆಸಿದ ರೈತ ಸಂಘಟನೆ ಈಗ ಏನಾಗಿದೆ?

ಆದ್ದರಿಂದ ಈ ಚುನಾವಣೆಯ ಕಾಲಘಟ್ಟದಲ್ಲಿ ಜನ ಚಿಂತನೆ ಮಾಡಬೇಕು ಎನ್ನುವುದು ಕಳಕಳಿ ಮಾತ್ರ. ಅದು ಆಗುತ್ತದೆ ಎನ್ನುವ ನಂಬಿಕೆ ಇಡುವಂತಿಲ್ಲ. ಜನ ತಾವಾಗಿಯೇ ಎಚ್ಚೆತ್ತುಕೊಳ್ಳಬೇಕು ಹೊರತು ಅಣ್ಣಾ ಎಚ್ಚೆತ್ತಿಸಬೇಕು ಎನ್ನುವುದು ನಿರೀಕ್ಷೆಯಾಗಬಾರದು. ಬಹಳ ಜನ ಯಾವಾಗ ಮಲಗುವುದು ಎನ್ನುವುದನ್ನೇ ನಿರೀಕ್ಷೆ ಮಾಡುತ್ತಾರೆ ಹೊರತು ನಿದ್ದೆ ಮಾಡಿದ್ದು ಸಾಕು ಬೇಗ ಏಳಬೇಕು ಎನ್ನುವುದನ್ನು ಬಯಸುವುದಿಲ್ಲ. ಈಗ ಜನ ಮಲಗಿದರೆ ರಾಜಕಾರಣಿಗಳು ಅಂಥ ಸಂದರ್ಭವನ್ನೇ ಕಾಯುತ್ತಿರುತ್ತಾರೆ. ಜನ ರಾಜಕಾರಣಿಗಳನ್ನು ಕಾಯುವ ವ್ಯವಸ್ಥೆ ನಿಲ್ಲಬೇಕು, ರಾಜಕಾರಣಿಗಳು ಜನರನ್ನು ಕಾಯುವಂತಾಗಬೇಕು. ಈ ಕಾಯುವಿಕೆ ಚುನಾವಣೆ ಕಾಲದಲ್ಲಿ ಮಾತ್ರವಲ್ಲ, ಚುನಾವಣೆ ನಂತರವೂ.

ಬೆತ್ತಲಾದಷ್ಟೂ ಮಾಧ್ಯಮ ಮಾನವಂತವಾಗುತ್ತದೆ!

– ಶ್ರಮಣ

“ಸಮಯ” ಸುದ್ದಿ ವಾಹಿನಿ ಮುಖ್ಯಸ್ಥರಾದ ಮಂಜುನಾಥ್ ಅವರಿಗೆ ಬಹುಪರಾಕು ಸಲ್ಲಲೇಬೇಕು. ಒಂದು ವಾರಗಳ ಕಾಲ ಅವರು ‘ಮಾಧ್ಯಮ ಭ್ರಷ್ಟರ ಬೆತ್ತಲು ಅಭಿಯಾನ’ ನಡೆಸಿದರು. ಅಭಿನಂದನೆ ಸಲ್ಲಬೇಕಾದ್ದು ಅದಕ್ಕಲ್ಲ, ಮಾಧ್ಯಮ ಲೋಕದ ಯಾವ ಭ್ರಷ್ಟನನ್ನೂ ‘ಬೆತ್ತಲು ಮಾಡದೆಯೂ’ ಅಭಿಯಾನ ಮಾಡಿದರಲ್ಲಾ ಅದಕ್ಕೆ! Corruption-in-News-Mediaಇದೊಂಥರಾ ಊಟ-ಉಪಚಾರ ಮಾಡಿಕೊಂಡೇ ಕೆಲವರು ಧರಣಿ ಕುಂತು ತಮ್ಮದು ‘ಉಪವಾಸ ಸತ್ಯಾಗ್ರಹ’ ಅಂತಾರಲ್ಲ ಹಾಗೆ.

ಲಂಚ ಪಡೆದ ಪ್ರಕರಣದಲ್ಲಿ ಬೆತ್ತಲಾದ ಶಾಸಕ ಸಂಪಂಗಿಯ ಹಾಗೆ, ಮಾಡಿದ ತಪ್ಪಿಗೆ ಜೈಲು ಅನುಭವಿಸಿ ಬೆತ್ತಲಾದ ಯಡಿಯೂರಪ್ಪನ ಹಾಗೆ, ಅದ್ಯಾಕೆ ಒಬ್ಬೇ ಒಬ್ಬೇ ಪತ್ರಕರ್ತ ಈ ಅಭಿಯಾನದಲ್ಲಿ ಬೆತ್ತಲಾಗಲಿಲ್ಲ. ಹಾಗಿದ್ದರೂ, ಆ ಕಾರ್ಯಕ್ರಮ ಸರಣಿಗೆ ‘ಬೆತ್ತಲು ಅಭಿಯಾನ’ ಅಂತ ಹೆಸರೇಕೆ ಸ್ವಾಮಿ?

ಸಮಯ ಸುದ್ದಿ ವಾಹಿನಿಯ ಬಳಗ ಎಡವಿದ್ದೇ ತಮ್ಮ ಕಾರ್ಯಕ್ರಮದ ಟೈಟಲ್ ಕಾರ್ಡ್‌ನಿಂದಾಗಿ. ಆ ತಲೆಬರಹದಡಿಯಲ್ಲಿ ಮಾಧ್ಯಮ ಲೋಕದೊಳಗಿನ ಭ್ರಷ್ಟಾಚಾರವನ್ನು ಚರ್ಚಿಸಿದ್ದಾರೆಯೇ ಹೊರತು, ಯಾರನ್ನೂ ಬೆತ್ತಲು ಮಾಡಿಲ್ಲ. ಅಂತಹದೊಂದು ಚರ್ಚೆಯಾಗಿದ್ದು ಶ್ಲಾಘನೀಯ. ಆದರೆ, ನಮಗೆ ಗೊತ್ತಿರುವ ಭ್ರಷ್ಟ ಪತ್ರಕರ್ತರೇನಾದರೂ ಈ ಅಭಿಯಾನದಲ್ಲಿ ಬೆತ್ತಲಾಗುತ್ತಾರಾ ಎಂದು ನಿರೀಕ್ಷಿಸಿದವರಿಗೆ ಮೋಸವಾಯಿತು.

ತಮ್ಮ ಸುದ್ದಿ ವಾಹಿನಿ ವಿಶಿಷ್ಟವಾದ ನೀತಿ ಸಂಹಿತೆ ಜಾರಿಗೆ ತಂದಿದೆ ಎಂದು ಸಮಯ ಬೀಗುತ್ತಿದೆ. Samaya-TVಹಾಗಂತ ಮುರುಗೇಶ್ ನಿರಾಣಿಯ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುತ್ತೇವೆಂದು ಅವರು ಹೇಳಲು ಸಾಧ್ಯವೆ? ಅದು ಸಾಧುವಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಅಂತಹ ‘ಆಕುಪೇಶನಲ್ ಹಜಾರ್ಡ್ಸ್’ ಎಲ್ಲಾ ಸುದ್ದಿ ವಾಹಿನಿಗಳಿಗೆ ಇದ್ದದ್ದೇ. ಜನಶ್ರೀ ಸುದ್ದಿ ವಾಹಿನಿಗೆ ಶ್ರೀರಾಮುಲು ಎಂದಿಗೂ ‘ಸ್ವಾಭಿಮಾನಿ’ಯೇ. ಕಸ್ತೂರಿ ಸುದ್ದಿ ವಾಹಿನಿ ಪಾಲಿಗೆ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅತ್ಯಂತ ಜನಪ್ರಿಯ ರಾಜಕಾರಣಿಗಳು. ಆ ಮಿತಿಗಳನ್ನು ಆಯಾ ಸುದ್ದಿ ವಾಹಿನಿಗಳು ಮೀರಿ ಸುದ್ದಿ ಮಾಡುತ್ತವೆ ಎಂದು ನಿರೀಕ್ಷಿಸದ ಮಟ್ಟಿಗೆ ಪ್ರೇಕ್ಷಕ ಜಾಗೃತನಾಗಿದ್ದಾನೆ.

ಚರ್ಚೆಯಾಗದ ವಿಷಯಗಳು:
ಸಮಯ ನಡೆಸಿದ ಕಾರ್ಯಕ್ರಮಗಳಲ್ಲಿ ಚರ್ಚೆಯಾಗದೇ ಉಳಿದ ಹಲವು ಸಂಗತಿಗಳಿವೆ. ಅವುಗಳ ಮೂಲಕವೂ ಭ್ರಷ್ಟಾಚಾರವನ್ನು ನೋಡುವ ಸಾಧ್ಯತೆಗಳಿವೆ. ಮೂರ್ನಾಲ್ಕು ಸುದ್ದಿ ಸಂಸ್ಥೆಗಳು ನಿಯಮಿತವಾಗಿ ತನ್ನ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಸಂಬಳ ಕೊಟ್ಟರೂ, ವರದಿಗಾರರು ಅಲೆದಾಡಿ ಸುದ್ದಿ ಸಂಗ್ರಹಿಸಿದ ಖರ್ಚಿನ ಬಿಲ್ಲುಗಳನ್ನು ಕ್ಲಿಯರ್ ಮಾಡುತ್ತಿಲ್ಲ.

ಒಂದು ಸುದ್ದಿ ವಾಹಿನಿಯಂತೂ ‘ಬರುವ ಜೂನ್ ವರೆಗೆ ಸಂಬಳದ ಮಾತು ಕೇಳಬೇಡಿ..’ ಎಂಬ ಸೂಚನೆಯನ್ನು ತನ್ನ ಸಿಬ್ಬಂದಿಗೆ ಹೇಳಿದೆ. kannada-news-channelsಕೆಲವು ದಿನಗಳ ಹಿಂದೆ ಸಂಬಳ ನೀಡಲು ತಿಂಗಳುಗಟ್ಟಲೆ ತಡಮಾಡಿದ ಕಾರಣ ಹಠಾತ್ ಪ್ರತಿಭಟನೆಗೆ ಇಳಿದ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಿದ ವರದಿಗಳಿವೆ. ಇತ್ತೀಚಿನ ಚಾನೆಲ್ ಒಂದು ತನ್ನ ಜಿಲ್ಲಾ ಕೆಮರಾಮನ್‌ಗಳಿಗೆ ನಿಗದಿ ಮಾಡಿರುವ ಸಂಬಳವಂತೂ, ತೀರಾ ಕಡಿಮೆ. ನಾಲ್ಕು – ಐದು ಸಾವಿರ ರೂಗಳಿಗೆ ಒಬ್ಬ ವ್ಯಕ್ತಿ ತನ್ನ ಸಂಸಾರ ನಡೆಸಲು ಸಾಧ್ಯವೆ? ಎರಡು-ಮೂರು ತಿಂಗಳಾದರೂ ಸಂಬಳ ನೀಡದಿದ್ದರೆ ಮನೆ ಮಾಲೀಕನಿಗೆ ಬಾಡಿಗೆ ಕೊಡುವುದು ಹೇಗೆ? ಮಕ್ಕಳ ಸ್ಕೂಲ್ ಫೀ ಕಟ್ಟುವುದು ಹೇಗೆ?

ಈಗಂತೂ ಚುನಾವಣೆ ಬಿಸಿ. ವರದಿಗಾರರು ಸದಾ ಓಡಾಡುತ್ತಲೇ ಇರಬೇಕು. ಕೈಯಿಂದ ಖರ್ಚು ಮಾಡಿಕೊಂಡು ಸುದ್ದಿ ಮಾಡಲು ಹೋಗೋಣವೆಂದರೆ ಸಂಬಳವಿಲ್ಲ. ಅಪ್ಪಿ ತಪ್ಪಿ ಹೋದರೂ, ಆದ ಖರ್ಚನ್ನು ಆಫೀಸಿನವರು ತುಂಬುತ್ತಾರೆಂಬ ವಿಶ್ವಾಸವಿಲ್ಲ. ಇದು ಕೇವಲ ಸುದ್ದಿವಾಹಿನಿಗಳ ಸಮಾಚಾರವಲ್ಲ. ಕನ್ನಡದ ಘನತೆವೆತ್ತ ಪತ್ರಿಕೆಯೊಂದರ ತಾಲೂಕು ಮಟ್ಟದ ಬಿಡಿ ಸುದ್ದಿ ಸಂಗ್ರಹಕಾರರಿಗೆ ನಿಗದಿ ಮಾಡಿರುವ ಮಾಸಿಕ ಗೌರವಧನ ರೂ 750 ಮಾತ್ರ ಎಂದರೆ ನೀವು ವಿಧಿ ಇಲ್ಲದೆ ನಂಬಲೇ ಬೇಕು. ಅಂಗನವಾಡಿ ಸಹಾಯಕರು ಸಂಘ ಕಟ್ಟಿಕೊಂಡು ತಮ್ಮ ಗೌರವಧನಕ್ಕೆ ಹೋರಾಡುವ ಅವಕಾಶವಿದೆ. ಈ ತಾಲೂಕು ಮಟ್ಟದ ಪತ್ರಕರ್ತರಿಗೇನಿದೆ?

ಇಂತಹ ಸಂದರ್ಭಗಳಲ್ಲಿಯೇ ಭ್ರಷ್ಟಾಚಾರದ ನಾನಾ ಮುಖಗಳು ಅನಾವರಣಗೊಳ್ಳುವುದು. ರಾಜಕೀಯ ಪಕ್ಷದ ಸಮಾವೇಶ ನಡೆಸುವವರು ಪತ್ರಕರ್ತರನ್ನು ಕರೆಯುತ್ತಾರೆ. ಕೇವಲ ಕರೆದರೆ ಅವರು ಬರುವ ಸ್ಥಿತಿಯಲ್ಲಿಲ್ಲ ಎನ್ನುವ ಸಂಗತಿ ಕೂಡಾ ಬಹುತೇಕ ರಾಜಕೀಯ ಕಾರ್ಯಕರ್ತರಿಗೆ ಗೊತ್ತು. ಪಕ್ಷದ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡುತ್ತಾರೆ. ಆಗ ಸಹಜವಾಗಿ ವಾಹನ ವ್ಯವಸ್ಥೆ ಮಾಡಿ ಕಾರ್ಯಕ್ರಮ ಮಾಡಿದವರ ಸುದ್ದಿ ಮಾತ್ರ ಪ್ರಸಾರವಾಗುತ್ತದೆ. ಹಾಗಾದರೆ, ಬರದಿಂದ ತತ್ತರಿಸಿದ ರೈತ, ಶೋಷಣೆಗೆ ಬಲಿಯಾದ ದಲಿತ ಅಥವಾ ಮಹಿಳೆ – ಇಂತಹವರ ಸುದ್ದಿಗೆ ವಾಹನ ವ್ಯವಸ್ಥೆ ಮಾಡುವವರಾರು?

ಮುಖ್ಯವಾಗಿ ನೀತಿ ಸಂಹಿತೆ ಬೇಕಿರುವುದು ಚಾನೆಲ್ ಮುಖ್ಯಸ್ಥರಿಗೆ. tv-mediaಒಂದು ಸಂಸ್ಥೆ ತೆರೆಯುವ ಮುನ್ನ ‘ರಾಜಕೀಯ ಲಾಭವನ್ನಷ್ಟೇ’ ಅಲ್ಲದೆ ಆರ್ಥಿಕವಾಗಿ ತನ್ನ ಸಂಸ್ಥೆಯನ್ನು, ಸಿಬ್ಬಂದಿಯನ್ನು ಸುಸ್ಥಿತಿಯಲ್ಲಿಡಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ. ಚಾನೆಲ್ ನಡೆಸಲು ಕೈ ಹಾಕುವ ಹಿರಿಯ ಪತ್ರಕರ್ತರು ‘ಸಾಹಸಿ ಪತ್ರಕರ್ತರಾಗಿ’ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು. ಆದರೆ ಅವರ ಕೈ ಕೆಳಗೆ ದುಡಿಯುವ ಪತ್ರಕರ್ತರು ಸದಾ ‘ಸಾಲಗಾರ’ರಾಗಿಯೇ ಉಳಿಯುತ್ತಾರಲ್ಲ? ತನ್ನ ಸಿಬ್ಬಂದಿ ಅದ್ಧೂರಿಯಾಗಿ ಅಲ್ಲ, ಕನಿಷ್ಠ ವೃತ್ತಿ ಗೌರವ ಕಾಪಾಡಿಕೊಂಡು ಜೀವಿಸಲು ಬೇಕಾಗುಷ್ಟು ಸಂಬಳ ಕೊಡುವ ಜವಾಬ್ದಾರಿಯನ್ನು ಸುದ್ದಿ ಸಂಸ್ಥೆಗಳ ಮಾಲೀಕರು ಹೊರಬೇಕು.

ಇಷ್ಟು ಕಡಿಮೆ ಸಂಬಳವಾದರೂ, ಅವರೇಕೆ ಕೆಲಸಕ್ಕೆ ಸೇರಿಕೋಬೇಕು ಎಂದು ಅನೇಕರು ಕೇಳುತ್ತಾರೆ. ಇದಕ್ಕೆ ಎರಡು ಕಾರಣಗಳನ್ನು ತಕ್ಷಣಕ್ಕೆ ಗುರುತಿಸಬಹುದು. ಅನೇಕರು ತಾವು ಪತ್ರಕರ್ತರಾಗಬೇಕು, ಎಷ್ಟೇ ಕಷ್ಟವಾದರೂ ಪತ್ರಕರ್ತರೇ ಆಗಬೇಕು ಎಂದು ಕೊಂಡವರು ಸಂಬಳಕ್ಕಿಂತ ಕ್ಷೇತ್ರದೆಡೆಗಿನ ಆಸಕ್ತಿಯಿಂದ ಬಂದಿರುತ್ತಾರೆ. ಇನ್ನೊಂದು ಕಾರಣ – ಜೀವನ ನಡೆಸಲು ಒಂದು ಕೆಲಸ ಬೇಕು ಎಂಬ ಅನಿವಾರ್ಯತೆ.

ಒಂದು ಉದಾಹರಣೆಯನ್ನು ನಿರೂಪಿಸಲು ಬಯಸುತ್ತೇನೆ. ಒಬ್ಬ ಜಿಲ್ಲಾ ವರದಿಗಾರ ತನ್ನ ಮೇಲಿನ ಸಿಬ್ಬಂದಿಯವರ ಸೂಚನೆ ಮೇರೆಗೆ ತನ್ನ tv-mediaವಾಹಿನಿಗೊಂದು ಬಾಡಿಗೆ ಕಚೇರಿ ಹುಡುಕಿದ. ಮಾಲೀಕರೊಂದಿಗೆ ಬಾಡಿಗೆ ಮಾತುಕತೆಯಾಯಿತು. ಮೇಲಿನವರಿಂದಲೂ ಅದಕ್ಕೆ ಒಪ್ಪಿಗೆ ಸಿಕ್ಕಿತು. ಇನ್ನೇನು ತಿಂಗಳ ಬಾಡಿಗೆ ಕೊಡುವ ಸಂದರ್ಭ ಬಂತು, ಆ ಹೊತ್ತಿಗೆ ಆ ಮೇಲಿನ ಅಧಿಕಾರಿ ಅಥವಾ ಸಹೋದ್ಯೋಗಿ ಬದಲಾಗಿದ್ದ. ಹಿಂದಿನವರು ನಿಗದಿ ಮಾಡಿದ್ದ ಬಾಡಿಗೆಯನ್ನು ಹೊಸಬ ಒಪ್ಪಲು ಸಿದ್ಧನಿಲ್ಲ. ಮಾಲೀಕರೊಂದಿಗೆ ಮಾತನಾಡಿ ಮತ್ತಷ್ಟು ಕಡಿಮೆ ಮಾಡಿಸಿ ಎಂದು ಸೂಚಿಸಿದ. ಪೀಕಲಾಟಕ್ಕೆ ಸಿಲುಕಿದ ವರದಿಗಾರ, ಮಾಲೀಕರಿಂದ ಮುಜುಗರ ಅನುಭವಿಸುವುದನ್ನು ತಪ್ಪಿಸಿಕೊಳ್ಳಲು, ತನ್ನ ಕೈಯಿಂದಲೆ ಒಂದಷ್ಟು ಹಾಕಿ ಹಳೆಯ ಬಾಡಿಗೆಯನ್ನೇ ಮುಂದುವರೆಸಿದ. ಅಲ್ಲಿಗೇ ಕತೆ ಮುಗಿಯಲಿಲ್ಲ. ಆ ಮೇಲಿನ ಹುದ್ದೆಗೆ ಕೆಲವೇ ದಿನಗಳಲ್ಲಿ ಮತ್ತೊಬ್ಬ ಬಂದ. ತನ್ನ ಹಿಂದಿನವನಂತೆಯೇ ಈತನೂ ಮತ್ತೆ ಬಾಡಿಗೆ ಬಗ್ಗೆ ತಕರಾರು ತೆಗೆದ, ಮತ್ತಷ್ಟು ಕಡಿಮೆ ಮಾಡಿ ಎಂದ. ಪರಿಣಾಮವಾಗಿ ವರದಿಗಾರನೇ ತನ್ನ ಅಲ್ಪ ಸಂಬಳದಲ್ಲಿಯೇ ಹೊರಲಾರದ ಹೊರೆಯನ್ನು ಹೊತ್ತು ಏಗಬೇಕಾಯಿತು.

ಅಂತಹ ಪತ್ರಕರ್ತರು ಅನೇಕರಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ವೃತ್ತಿಗೆ ಕೊಡುವ ಗೌರವ ಮತ್ತು ಅದರೆಡೆಗೆ ಇರುವ ಅದಮ್ಯ ಒಲವು. ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಭರಪೂರ ಕನಸುಗಳನ್ನು ಹೊತ್ತ ಅನೇಕರು ದುಡಿಯುತ್ತಿದ್ದಾರೆ. ತಮ್ಮ ಕನಿಷ್ಠ ಆದಾಯದಲ್ಲಿಯೇ ತಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಂಡು ನಿಷ್ಠೆಯಿಂದ ಬದುಕುತ್ತಿದ್ದಾರೆ. ಅವರಿಗೆ ಯಾವ ನೀತಿ ಸಂಹಿತೆಯ ಅಗತ್ಯವೂ ಇಲ್ಲ. ಪತ್ರಿಕೋದ್ಯಮದಲ್ಲಿ ಇವತ್ತಿಗೂ ಒಂದಿಷ್ಟು ಪ್ರಾಮಾಣಿಕತೆ ಉಳಿದಿರೋದ್ದಕ್ಕೆ ಅವರೇ ಕಾರಣ.

ಮಾಧ್ಯಮ ಕ್ಷೇತ್ರದ ಒಳಗಿನ ಹುಳುಕುಗಳಿಗೆ ಮಾಧ್ಯಮದ ಬಾಗಿಲು ಇತ್ತೀಚೆಗಷ್ಟೆ ತೆರೆದುಕೊಳ್ಳುತ್ತಿವೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಅಪರೂಪ ಎಂಬಂತೆ ಪ್ರಜಾವಾಣಿ ದಿನ ಪತ್ರಿಕೆ ಹಾಸನ ಪತ್ರಕರ್ತರ ಸಂಘ ಕುರಿತ ಸುದ್ದಿಯೊಂದನ್ನು ಪ್ರಕಟಿಸಿತು. ಇದೇ ಹೊತ್ತಿಗೆ ಸಮಯ ವಾಹಿನಿ ಒಂದು ಸರಣಿ ಪ್ರಸಾರ ಮಾಡಿತು. ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳಲ್ಲಿ ಆಗಾಗ ಇನ್-ಹೌಸ್ ಸಂಗತಿಗಳು ಮುನ್ನೆಲೆಗೆ ಬಂದರೆ ಒಳಿತು. ಮಾಧ್ಯಮ ಬೆತ್ತಲಾದಷ್ಟೂ ಮಾನವಂತವಾಗುತ್ತದೆ!

ಕೊನೆಗೂ ನವೀನ್ ಸೂರಿಂಜೆ ಜಾಮೀನಿನ ಮೇಲೆ ಬಿಡುಗಡೆ

– ರವಿ ಕೃಷ್ಣಾರೆಡ್ಡಿ

ರಾಜ್ಯ ಸರ್ಕಾರದ ಸಚಿವ ಸಂಪುಟ ಪತ್ರಕರ್ತ ನವೀನ್ ಸೂರಿಂಜೆಯ ಮೇಲಿನ ಆರೋಪಗಳನ್ನು ಕೈಬಿಡಲು ನಿರ್ಧರಿಸಿ ಒಂದೂವರೆ Photo Captionತಿಂಗಳಾದರೂ ನಮ್ಮ ರಾಜ್ಯದ ಘನತೆವೆತ್ತ ಅಂಜುಗುಳಿ ಮುಖ್ಯಮಂತ್ರಿ ಆ ನಿರ್ಧಾರದ ಕಡತಕ್ಕೆ ಸಹಿ ಮಾಡದ ಕಾರಣ ನವೀನ್ ಸೂರಿಂಜೆ ಆ ಪ್ರಕ್ರಿಯೆ ಅಡಿಯಲ್ಲಿ ಬಿಡುಗಡೆಯಾಗಲಿಲ್ಲ. ಕೊನೆಗೂ ಬದಲಾದ ಪರಿಸ್ಥಿತಿಯ ಅಡಿಯಲ್ಲಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲು ಹತ್ತಿ, ಕಳೆದ ಸೋಮವಾರವಷ್ಟೇ (18-03-13) ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್‌ನ ಆದೇಶ ಪತ್ರ ಕೈಗೆ ಸಿಗಲು ಸುಮಾರು ನಾಲ್ಕು ದಿನ ತೆಗೆದುಕೊಂಡ ಕಾರಣ ನೆನ್ನೆ ಶನಿವಾರವಷ್ಟೇ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದು  ಸೂರಿಂಜೆ ಜೈಲಿನಿಂದ ಹೊರಬಂದಿದ್ದಾರೆ, ನಗುಮುಖದಿಂದ. ಮಿಕ್ಕೆಲ್ಲ ವಿಷಯಗಳು ಏನೇ ಇರಲಿ, ಕನಿಷ್ಟ ಒಂದು ನಿಟ್ಟುಸಿರಿನ ಸಮೇತದ ನಿರಾಳದ ನಗು ಬೀರುವ ಸಮಯ ಇದು:

ಇಂದು ಕೆಲವು ಪತ್ರಿಕೆಗಳಲ್ಲಿ ಬಂದ ಸೂರಿಂಜೆ ಬಿಡುಗಡೆಯ ವರದಿಗಳು:

ವಿಜಯ ಕರ್ನಾಟಕ :
naveen-released-vijaykarnataka-24-03-13

ಉದಯವಾಣಿ :
naveen-released-udayavani-24-03-13

ಸುಡುಹಗಲ ಸೊಲ್ಲು : ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ


– ಸರ್ಜಾಶಂಕರ ಹರಳಿಮಠ


 

[ದಿ.23 ಮತ್ತು 24 ರಂದು ಧಾರವಾಡದಲ್ಲಿ ಕರ್ನಾಟಕ ಜನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಆತ್ಮವಿಮರ್ಶೆಯ ಮಾತುಗಳು.]

ಈ ಹೊತ್ತು, ನೆರಳೇ ಇಲ್ಲದ ಸುಡು ಹಗಲಿನಲ್ಲಿ ನಿಂತಿರುವಂತೆ ನನಗೆ ಭಾಸವಾಗುತ್ತಿದೆ. ನೀರಿಲ್ಲದೆ ಒಣಗಿರುವ ಬಾಯಲ್ಲಿ ನಾನಾಡುವ ಈ ಕೆಳಗಿನ ಮಾತುಗಳು ನಿಮಗೆ ಕರ್ಕಶವೆನಿಸಬಹುದು, ಹೇಳದೆ ನನಗೆ ಬೇರೆ ದಾರಿಯಿಲ್ಲ.

ಎಲ್ಲಾ ಕಾಲವೂ ಬಿಕ್ಕಟ್ಟಿನದೇ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ಮಾತು ಸ್ವಲ್ಪ ಸಮಸ್ಯಾತ್ಮಕವಾದದ್ದು ಎಂದು ಅನ್ನಿಸುತ್ತಿದೆ. ಕಾಲಕ್ಕೆ ಸ್ಪಂದಿಸುವ ರೀತಿಯಲ್ಲಿ ಕಾಲ ಕೆಲವರಿಗೆ ಬಿಕ್ಕಟ್ಟಿನದಾಗಿಯೂ ಹಲವರಿಗೆ ಬಿಕ್ಕಟ್ಟಿಲ್ಲದ ನೆಮ್ಮದಿಯದ್ದಾಗಿಯೂ ಕಾಣಬಹುದು. ಒಂದು ಪತ್ರಿಕಾಗೋಷ್ಟಿಯಲ್ಲಿ janasahitya-samaveshaರೈತನಾಯಕರೊಬ್ಬರಿಗೆ ಪತ್ರಕರ್ತರು ರೈತಸಂಘದ ನಿಮ್ಮ ಬಣವೇಕೆ ಯಾವುದೇ ಹೋರಾಟ ಮಾಡುತ್ತಿಲ್ಲ ಎಂದು ಕೇಳಿದಾಗ ಅವರು ತಣ್ಣಗೆ ಉತ್ತರಿಸಿದ್ದೇನೆಂದರೆ ‘ರೈತರಿಗೆ ಸದ್ಯ ಯಾವುದೇ ಸಮಸ್ಯೆಯಿಲ್ಲ, ಅದಕ್ಕೆ ಹೋರಾಟವನ್ನೂ ಹಮ್ಮಿಕೊಂಡಿಲ್ಲ.’ ಆದರೆ ಅವರು ಈ ಮಾತು ಆಡುವಾಗಲೂ ವಿದ್ಯುತ್ ಸಮಸ್ಯೆಯಿಂದ, ಕುಸಿತಗೊಂಡ ಬೆಲೆಗಳಿಂದಾಗಿ ರೈತರು ತತ್ತರಿಸುತ್ತಿದ್ದರು, ದೊಡ್ಡ ಉದ್ಯಮಿಗಳಿಗಾಗಿ ಇವರ ಕೃಷಿಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿತ್ತು, ಮತ್ತು ಸಾಲದಿಂದ ದಿಕ್ಕೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ರೈತಮುಖಂಡರು ಈ ಕಾರಣಗಳನ್ನಿಟ್ಟುಕೊಂಡು ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿದ್ದರು. ಆದರೀಗ ಅವರು ನೆಮ್ಮದಿಯಾಗಿದ್ದರು. ಏಕೆಂದರೆ ಸರ್ಕಾರ ಅವರಿಗೆ ತಿಂಗಳಿಗೆ ಲಕ್ಷ ರೂಪಾಯಿ ಆದಾಯದ ನಿಗಮವೊಂದರ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿತ್ತು.

ಹಾಗೆಯೇ, ನಮ್ಮ ನಾಡಿನ ಗಾಳಿಯಾಡುವ ಪ್ರತಿಸ್ಥಳದಲ್ಲೂ ಸಮಸ್ಯೆಗಳಿವೆ, ಸಂಕಟಗಳಿವೆ. ಧರ್ಮದ ಕಾರಣಕ್ಕೆ ಕೊಲೆಗಳು, ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು, ಕೃಷಿಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ರೈತರು, ಬಿಗಿಯಾಗುತ್ತಿರುವ ಜಾತಿ ಸಂಕೋಲೆಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ಅಗೋಚರವಾದ ಆಕೆಯ ಮೇಲಿನ ಕುಟುಂಬದೊಳಗಿನ ಹಿಂಸೆಗಳು… ಇಂತಹ ನೂರು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಆದರೆ ಇದನ್ನು ತಮ್ಮ ಸಮಸ್ಯೆಯೆಂದು ತಮ್ಮೊಳಗೆ ತೆಗೆದುಕೊಳ್ಳುವವರಿಗೆ ಮಾತ್ರ ಇದು ಸಮಸ್ಯೆ. ಈ ಎಲ್ಲಾ ಸಂಕಟಗಳಿಗೆ ಎಷ್ಟು ಜನ ಮಿಡಿಯುತ್ತಾರೆಂಬುದನ್ನು ಅಂದಾಜಿಸುವುದೂ ಒಂದು ಬಗೆಯಲ್ಲಿ ಕಷ್ಟದ ಕೆಲಸ. ಈ ಸಂಕಟಗಳಿಗೆ ಮರುಗುವವರ ಸಂಖ್ಯೆ ಸಾಕಷ್ಟಿರಬಹುದು. ಆದರೆ ಇವರ ಮರುಗುವಿಕೆ ಸಂಕಟದ ನಿವಾರಣೆಯ ದಿಕ್ಕಿನಲ್ಲಿ ಕ್ರಿಯಾತ್ಮಕವಾಗದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಈ ಕ್ರಿಯೆ ಎನ್ನುವುದು ಕೂಡ ಹಲವು ಬಗೆಯದ್ದು. ಈ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಅದನ್ನು ನಿವಾರಿಸಲು ಹೋರಾಟಗಾರ ಪ್ರಯತ್ನಿಸುತ್ತಾನೆ. ಸಂವೇದನಾಶೀಲ ಲೇಖಕ ತನ್ನ ಬರವಣಿಗೆಯಲ್ಲಿ ಅದನ್ನು ಎದುರುಗೊಳ್ಳುತ್ತಾನೆ. ತನ್ನ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಲು ಲೇಖಕ ಹೋರಾಟಗಾರನಿಗೆ ನೆರವು ನೀಡಿದ್ದು ಇತಿಹಾಸದುದ್ಧಕ್ಕೂ ನಡೆದಿದೆ. ಕುವೆಂಪು ಅವರ ಸಾಹಿತ್ಯ ಕರ್ನಾಟಕದಲ್ಲಿ ಶೂದ್ರ ಚಳುವಳಿಯನ್ನು ನಿರ್ದೇಶಿಸಿದ್ದನ್ನು ಇಲ್ಲಿ ನಾವು ಗಮನಿಸಬಹುದು. ಲಂಕೇಶ್ ಪತ್ರಿಕೆ ಈ ನಿಟ್ಟಿನಲ್ಲಿ ದೊಡ್ಡ ಕೆಲಸವನ್ನೇ ಮಾಡಿತು. ದಲಿತ ಚಳವಳಿ, ರೈತ ಚಳವಳಿ ಈ ನಾಡಿನಲ್ಲಿ ಒಂದು ಕಾಲಘಟ್ಟದ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಇದರಲ್ಲೆಲ್ಲ ಲೇಖಕ ಸಮೂಹದ ಪಾತ್ರವೂ ಮುಖ್ಯವಾಗಿದೆ. ಆದರಿಂದು ಲೇಖಕರಾದ ನಾವು ಎಷ್ಟು ಜನ ಲೋಕದ ನಿತ್ಯಸಂಕಟಗಳಿಗೆ ಸ್ಪಂದಿಸುತ್ತಿದ್ದೇವೆ ಎನ್ನುವುದು ಪ್ರಶ್ನೆ.

ಈ ಕಾಲಘಟ್ಟ ಒಬ್ಬ ಲೇಖಕನಿಂದ ಸಮಾಜಕ್ಕೆ ಸ್ಪಂದಿಸುವ, ಅದನ್ನು ತಿದ್ದುವ ಬರವಣಿಗೆಯನ್ನು ಮಾತ್ರವಲ್ಲ, ಆತನಿಂದ ಹೋರಾಟವನ್ನೂ ನಿರೀಕ್ಷಿಸುತ್ತಿದೆ ಎನಿಸುತ್ತಿದೆ. ‘ಸುಮ್ಮನೆ ಬರೆದುಕೊಂಡಿದ್ದರೆ ಸಾಲದು, ಬರೆದಿದ್ದನ್ನು ಸಾಧಿಸಲು ಬೀದಿಗಿಳಿಯಿರಿ’ ಎಂದು ಹೋರಾಟಗಾರರ ಬಾಯಲ್ಲಿ ಸಮಾಜವೇ ಹೇಳಿಸುತ್ತಿದೆ ಎನಿಸುತ್ತಿದೆ.

ಬಂಡಾಯ ಸಾಹಿತ್ಯ ಸಂಘಟನೆ ಅಥವಾ ಜಾಗೃತ ಸಾಹಿತ್ಯ ಸಮ್ಮೇಳನ ಅಂತಿಮವಾಗಿ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರೂ ಅದು ನೇರವಾಗಿ ಸಾಹಿತ್ಯದ ಉದ್ದೇಶವನ್ನು ಪ್ರಶ್ನಿಸುತಿತ್ತು. ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಕುರಿತು ಮರುಚಿಂತನೆ ಮತ್ತು ಹೊಸ ಸಮಾಜ ನಿರ್ಮಾಣಕ್ಕೆ ಬೇಕಾದ ನೆಲೆ ಹಾಗೂ ಪ್ರೇರಣೆಗಳ ಕುರಿತು ಕರ್ನಾಟಕ ಜನಸಾಹಿತ್ಯ ಸಮಾವೇಶ ನಡೆಯುತ್ತಿದೆಯೆಂದು ನಾವಿಲ್ಲಿ ಹೇಳಿಕೊಂಡರೂ ಅದಕ್ಕಿಂತಲೂ ಮಿಗಿಲಾದ ನಮ್ಮೆದುರಿನ ಬಿಕ್ಕಟ್ಟುಗಳನ್ನು ನಾವು ಮುಖಾಮುಖಿಯಾಗಲೇಬೇಕಾಗಿದೆ. ಸಾಹಿತ್ಯಕ್ಷೇತ್ರವನ್ನೊಳಗೊಂಡು ಎಲ್ಲ ಕ್ಷೇತ್ರಗಳೂ ಭ್ರಷ್ಟಗೊಂಡಿರುವ, ಸಾಹಿತಿಗಳನ್ನೂ ಒಳಗೊಂಡಂತೆ ಸಂವೇದನಾರಹಿತ ಸಮಾಜ ರೂಪುಗೊಳ್ಳುತ್ತಿರುವ, ಒಂದು ರೀತಿಯಲ್ಲಿ ಸಾಹಿತಿಗಳನ್ನೂ ಒಳಗೊಂಡಂತೆ ಎಲ್ಲರಲ್ಲೂ ಜಾತಿಪ್ರಜ್ಞೆ ಹರಳುಗಟ್ಟುತ್ತಿರುವ ಅತ್ಯಂತ ಸಂಕೀರ್ಣ ಕಾಲಘಟ್ಟವಿದು. ಈ ಕಾಲವನ್ನು ಮುಖಾಮುಖಿಯಾಗಲು ಬಾಹ್ಯ ಸಮಾಜಕ್ಕೆ ಮಾತ್ರವಲ್ಲ ಸ್ವತಃ ನಮಗೂ ಆತ್ಮವಿಮರ್ಶೆಯ ಚಿಕಿತ್ಸೆ ಬೇಕಾಗಿದೆ. ನಮ್ಮ ಮಿತಿಗಳನ್ನು ಮೀರುತ್ತ ಹೊಸ ದಿಗಂತದೆಡೆಗೆ ನೋಡಬೇಕಾಗಿದೆ.

“…ಸಾಹಿತಿ ಪ್ರತ್ಯೇಕ ಜೀವಿಯಾಗಿ ಉಳಿದು ಉಪಯೋಗವಿಲ್ಲ. ತನ್ನ ಜನತೆಯ ಸುಖ ದುಃಖಗಳಲ್ಲಿ, ರಾಗ ದ್ವೇಷಗಳಲ್ಲಿ, ಧಾರ್ಮಿಕತೆಯಲ್ಲಿ, ಕನಸು ಮನಸುಗಳಲ್ಲಿ, ಕೊನೆಗೆ ಅಂಧಶ್ರದ್ಧೆಗಳಲ್ಲಿ ಕೂಡ ಅವನು ಒಂದಾಗಬೇಕು. ಈ ಸಂಗತಿ ಸಾಹಿತ್ಯದ ಆದರ್ಶವಾಗಿರದೆ ಅದರ ಮೂಲಭೂತ ಅವಶ್ಯಕತೆಯಾಗಿದೆ…” [ಲಂಕೇಶ್]. ಆದರೆ ಸಾಹಿತಿಗಳ ಜವಾಬ್ದಾರಿ ಈಗ ಇನ್ನೂ ಹೆಚ್ಚಿದೆ.

ಜಾಗೃತ ಸಾಹಿತ್ಯ ಸಮ್ಮೇಳನದ ತಮ್ಮ ಉದ್ಘಾಟನಾ ಭಾಷಣದಲ್ಲಿ lankeshಲಂಕೇಶ್ ಅವರು ಈ ಸಮ್ಮೇಳನ ಸಂಘಟಿಸಲು ಕಾರಣವಾದ ಅಂಶಗಳನ್ನು ಪ್ರಸ್ತಾಪಿಸುತ್ತ ಸಾಹಿತ್ಯಿಕ ಕಾರಣಗಳನ್ನು ವಿವರವಾಗಿ ಚರ್ಚಿಸುತ್ತ “ಅಗತ್ಯ ಬಿದ್ದರೆ” ಒಟ್ಟಾಗಿ ಜನವಿರೋಧಿ ಘಟನೆಗಳ ವಿರುದ್ಧ ಪ್ರತಿಭಟಿಸುವ ವಾತಾವರಣ ಮೂಡಿಸುವುದು ಅನಿವಾರ್ಯವಾಗಿತ್ತು ಎಂದು, ಇದು ಸಾಹಿತ್ಯದ ಅಂತಹ ಪ್ರಧಾನವಾದ ಕೆಲಸವಲ್ಲ ಎಂಬ ದನಿಯಲ್ಲಿ ಹೇಳುತ್ತಾರೆ. ಬಹುಶಃ ಆ ಕಾಲವೂ ಸಾಹಿತಿಗಳಿಂದ ಹೋರಾಟವನ್ನು ನಿರೀಕ್ಷಿಸುತ್ತಿರಲಿಲ್ಲವೇನೋ. ಆದರೆ ಪ್ರತಿಕ್ಷಣವೂ ಜನವಿರೋಧಿ ಕೃತ್ಯಗಳು ಜರುಗುವ ಈ ಹೊತ್ತಿನಲ್ಲಿ ಇಂತಹವುಗಳನ್ನು ಪ್ರತಿಭಟಿಸುವ ಮತ್ತು ಪ್ರತಿಭಟಿಸುವ ವಾತಾವರಣವನ್ನು ಮೂಡಿಸುವುದೇ ಸಾಹಿತಿಗಳ ಮತ್ತು ಸಾಹಿತ್ಯದ ಆದ್ಯತೆಯ ಜವಾಬ್ದಾರಿ ಎಂದು ನನಗನ್ನಿಸುತ್ತಿದೆ.

ಆದರೆ ಬಹುತೇಕ ಸಾಹಿತಿಗಳು ಹೋರಾಟದ ಬಗ್ಗೆ ಕಳಕಳಿ ತೋರಿದರೂ ಅದು ವಿಶ್ವಾಸಾರ್ಹ ಎನಿಸುತ್ತಿಲ್ಲ. ಪ್ರಧಾನವೆಂದು ತೋರುವ ಸಾಹಿತ್ಯಲೋಕ ಹೋರಾಟಗಾರರನ್ನು ಮತ್ತು ಹೋರಾಟನಿರತ ಲೇಖಕಮಿತ್ರರನ್ನು ಒಂದು ಬಗೆಯ ಅಸ್ಪೃಶ್ಯ ಭಾವನೆಯಲ್ಲಿ ನೋಡುವುದನ್ನು ಗಮನಿಸಬಹುದು. ಮೂಲಭೂತವಾಗಿ ಹೋರಾಟಗಳ ಬಗ್ಗೆಯೇ ಸಾಹಿತ್ಯವಲಯಕ್ಕೆ ಅಸ್ಪೃಶ್ಯ ಭಾವನೆಯಿರುವಂತಿದೆ. ಹೋರಾಟಗಳು ಕಣ್ಮರೆಯಾಗಿವೆ ಎಂದು ಮತ್ತೆ ಮತ್ತೆ ದುಃಖಗೊಂಡವರಂತೆ ಗೊಣಗುವ ಸಾಹಿತಿಗಳು ಸದ್ಯ ಚಾಲ್ತಿಯಲ್ಲಿರುವ ಮಹಿಳಾಪರ ಹೋರಾಟ, ಕೋಮು ಸೌಹಾರ್ದ ಚಳವಳಿ, ಎಡಪಂಥೀಯ ಚಳವಳಿಗಳಲ್ಲಿ ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದ್ದಾರೆ? ಗಣಿದೊರೆಗಳ ಅಟ್ಟಹಾಸಕ್ಕೆ, ಭ್ರಷ್ಟ ರಾಜಕಾರಣಿಗಳ ಸ್ವಜನಪಕ್ಷಪಾತವನ್ನು ಎದುರಿಸಲಾರದೆ ಚಳವಳಿಗಳೂ ಕಳೆಗುಂದುತ್ತಿದ್ದಾಗ ಕಾನೂನು ಹೋರಾಟದ ಮೂಲಕ ಇವರನ್ನೆಲ್ಲ ಜೈಲಿಗಟ್ಟಿದ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ ಇದೇ ಧಾರವಾಡದ ಎಸ್.ಆರ್.ಹಿರೇಮಠರನ್ನು ಸಾಹಿತ್ಯಲೋಕದ ಎಷ್ಟು ಜನ ಬೆಂಬಲಿಸಿದ್ದೇವೆ? ಚಳವಳಿಗಳಿಗೆ ಪೂರಕವಾಗಿ ಎಷ್ಟು ಸಾಹಿತ್ಯ ರಚಿಸಿದ್ದೇವೆ? ಹೋರಾಟಗಾರರು ನಮ್ಮ ಬೆಂಬಲ ಕೇಳಿದಾಗ ಎಷ್ಟರಮಟ್ಟಿಗೆ ಸ್ಪಂದಿಸಿದ್ದೇವೆ?

ಸರ್ಕಾರಿ ಹುದ್ದೆಯಲ್ಲಿರುವ ಸಾಹಿತಿಗಳು ಆ ಕಾರಣಕ್ಕೆ ನೇರವಾಗಿ ಚಳುವಳಿಗಲ್ಲಿ ಭಾಗವಹಿಸಲಾಗದೆಂದು ನೀಡುವ ಕಾರಣ ಹುರುಳಿಲ್ಲದ್ದು. ಹೀಗಿದ್ದರೂ ಪರೋಕ್ಷವಾಗಿ ಚಳುವಳಿಗಳಲ್ಲಿ ಭಾಗವಹಿಸಲು ಸಾಧ್ಯವಿದೆ. ಬ್ರಿಟೀಷ್ ಸರ್ಕಾರದ ವಿರುದ್ಧ ನಾಟಕಗಳನ್ನು ಮಾಡುತ್ತ ಸ್ವಾತಂತ್ರ್ಯ ಚಳುವಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದ ಕನ್ನಡ ಮತ್ತು ಮರಾಠಿ ರಂಗಭೂಮಿಯ ಕಲಾವಿದರು ಸರ್ಕಾರ ಇಂತಹ ನಾಟಕಗಳನ್ನು ನಿಷೇಧಿಸಿದಾಗ ಪುರಾಣದ ಘಟನೆಗಳನ್ನು ನೆಪವಾಗಿರಿಸಿಕೊಂಡು ಚಳುವಳಿಗೆ ಪ್ರೇರಕವಾದ ನಾಟಕಗಳನ್ನಾಡುತ್ತಿದ್ದುದನ್ನು ಇತ್ತೀಚೆಗೆ ಬಿಡುಗಡೆಗೊಂಡ karnataki“ಅಮೀರ್ ಬಾಯಿ ಕರ್ನಾಟಕಿ” ಕೃತಿ ಹೃದಯಂಗಮವಾಗಿ ಚಿತ್ರಿಸುತ್ತದೆ. ಪ್ರಭುತ್ವವನ್ನು ಜಾಣತನದಿಂದ ಮರೆಮಾಚಿ ಹೋರಾಟಕ್ಕೆ ಬೆಂಬಲಿಸುವ ಇಂತಹ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಇದೂ ಸಾಧ್ಯವಾಗದಿದ್ದರೆ ಕನಿಷ್ಟ ಹೋರಾಟಗಳಿಗೆ ಆರ್ಥಿಕ ನೆರವನ್ನಂತೂ ನೀಡಲು ಸಾಧ್ಯವಿದೆ. ಆದರೆ ವೈಯುಕ್ತಿಕವಾಗಿ ಉತ್ತಮ ಆದಾಯ ತರುವ ನೌಕರಿಗಳಲ್ಲಿರುವ ಸಾಹಿತಿಗಳು ಹೋರಾಟಗಳಿಗೆ ಎಷ್ಟರಮಟ್ಟಿನ ಹಣಕಾಸಿನ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರ ನಿರಾಶಾದಾಯಕವಾಗಿದೆ.

ನಾವು ಇಲ್ಲಿ ಏಕೆ ಸೇರುತ್ತಿದ್ದೇವೆ? ಸಾಹಿತ್ಯ ಜನರಿಂದ ದೂರ ಹೋಗುತ್ತಿದೆ ಅಥವಾ ಸಾಹಿತ್ಯ ಕ್ಷೇತ್ರವನ್ನು ಕಾರ್ಪೋರೆಟ್ ವಲಯ ಕಬ್ಜಾ ಮಾಡಿಕೊಳ್ಳುತ್ತಿದೆ, ಇದನ್ನು ತಪ್ಪಿಸಿ ಜನರತ್ತ ಸಾಹಿತ್ಯವನ್ನು ಕೊಂಡೋಯ್ಯಬೇಕು ಎಂಬ ಉದ್ದೇಶದಿಂದ ತಾನೇ? ಆದರೆ ಇಂತಹ ಕಾಳಜಿಯ ಬಗ್ಗೆ ನೈಜ ಪ್ರಾಮಾಣಿಕತೆ ನಮ್ಮೆಲ್ಲರಲ್ಲೂ ಇದೆಯೇ?

ನಾವು ನಮ್ಮ ಬೆನ್ನು ತಿರುಗಿಸಿ ನೋಡಿದಾಗ ಹಿಂದೆಯೂ ಆ ಕಾಲಘಟ್ಟದ ಒಟ್ಟಾರೆ ಇಂತಹುದೇ ಉದ್ದೇಶಗಳಿಗಾಗಿಯೇ ಹುಟ್ಟಿದ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಜಾಗೃತ ಸಾಹಿತ್ಯ ಸಮಾವೇಶದೊಳಗೆ ಸೇರಿದವರು ಏನೇನಾದರು? ಸಾಮುದಾಯಿಕವಾಗಿ ಈ ಸಂಘಟನೆಗಳು ಆ ಕಾಲಘಟ್ಟದ ತುರ್ತಿಗೆ ಸ್ಮಂದಿಸಿದ್ದನ್ನು ಮರೆಯಲಾಗುವುದಿಲ್ಲ. ಆದರೆ ಈ ಸಮ್ಮೇಳನಗಳಲ್ಲಿ ಒಟ್ಟಾದವರು ಎಷ್ಟು ಜನ ತಮ್ಮ ವಿಚಾರಗಳಿಗೆ ಬದ್ಧರಾಗಿ ಉಳಿದಿದ್ದಾರೆ? ಕೆಲವರು ಅಧಿಕಾರ ಸ್ಥಾನಗಳಿಗಾಗಿ ರಾಜಕಾರಣಿಗಳನ್ನೂ ಮೀರಿಸುವ ಕೆಲಸಗಳಲ್ಲಿ ತೊಡಗಿದರು. ಸಾಹಿತ್ಯ ಸಮ್ಮೇಳನಗಳಲ್ಲಿ ಮೆರವಣಿಗೆ ವಿರೋಧಿಸಿದ್ದ ದೊಡ್ಡ ಸಾಹಿತಿಗಳು ತಾವು ಅಧ್ಯಕ್ಷರಾದಾಗ ಮುತ್ತೈದೆಯರ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಇನ್ನೊಬ್ಬರು ನಾಲ್ಕು ಜನ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಸಂಭ್ರಮಿಸಿದರು. ನಾಳೆ ನಾವುಗಳು ಕೂಡ ಇಲ್ಲಿ ಮಾಡುವ ಭಾಷಣಗಳ ವಿರುದ್ಧ ಹೋದರೂ ನನಗೆ ಅಚ್ಚರಿಯಿಲ್ಲ. ಯಾಕೆಂದರೆ ನಾವೆಲ್ಲಾ ಈ ಆಕಾಂಕ್ಷೆಗಳಿಂದ ದೂರವಾಗಿ ನಮ್ಮನ್ನು ನಾವೇ ಮೀರಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಸಾಕ್ಷಿಗಳೆಲ್ಲಿದೆ?

ಈ ಐಡೆಂಟಿಟಿ ಕ್ರೈಸಿಸ್ ಎಲ್ಲರ ಸಮಸ್ಯೆ. ಬಹುಶಃ ನಮ್ಮಲ್ಲಿ ಒಂದಷ್ಟು ಜನ ಪ್ರಶಸ್ತಿ, ಸನ್ಮಾನ, ಬೇರೆ ವೇದಿಕೆಗಳಲ್ಲಿ ಸ್ಥಾನಮಾನಗಳು ದೊರಕಿದ್ದರೆ ಇಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎನಿಸುತ್ತದೆ. ಅದನ್ನು ಇನ್ನಷ್ಟು ವಿವರವಾಗಿ ಹೇಳಬಯಸುತ್ತೇನೆ.

ಇಂದು ಪತ್ರಿಕೆಗಳು ಬಂಡವಾಳಶಾಹಿಗಳ ಕೈಯಲ್ಲಿವೆ. ಇವು ಜನಪರ ಪತ್ರಿಕೆಗಳು, ಇವು ಜನವಿರೋಧಿ ಪತ್ರಿಕೆಗಳು ಎಂದು ಸರಳವಾಗಿ ವಿಂಗಡಿಸಲಾಗದಂತೆ ಇವುಗಳ ಸ್ವರೂಪವಿದೆ. ಇಲ್ಲಿ ಎಲ್ಲಿ ತಾನು ಬರೆಯಬೇಕು ಎನ್ನುವುದನ್ನು ನಿರ್ಧರಿಸಿಕೊಳ್ಳಲಾಗದಷ್ಟು ನಾವಿಂದು ಅಸಹಾಯಕರಿದ್ದೀವಿ. ಆದರೆ ಪ್ರಚ್ಚನ್ನ ಕೋಮುವಾದಿಯಾಗಿರುವ ಪತ್ರಿಕೆಗಳಲ್ಲಿ ನಾವೇಕೆ ಕಾಣಿಸಿಕೊಳ್ಳುತ್ತಿದ್ದೇವೆ? ಯಥಾಸ್ಥಿತಿವಾದಿಗಳಾದ ಮಠಗಳು, ಕರಾವಳಿಯಲ್ಲಿ ರಾಕ್ಷಸನಂತೆ ಬೆಳೆದ ಹಿಂದೂ ಕೋಮುವಾದ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಸಣ್ಣ ಪ್ರಮಾಣದಲ್ಲಿ ಮೂಡಿದ ಮುಸ್ಲಿಂ ಮೂಲಭೂತವಾದಕ್ಕೆ ಮೂಲವಾದವರು ನಡೆಸುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಭ್ರಮದಿಂದ ಭಾಗವಹಿಸಲು ನಮಗೆ ಹೇಗೆ ಸಾಧ್ಯವಾಗುತ್ತದೆ?

ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು, ಸಮಾರಂಭಗಳಲ್ಲಿ ಸನ್ಮಾನಿಸಿಕೊಳ್ಳುವುದು ಬಹುಶಃ ಎಲ್ಲರಲ್ಲಿಯೂ ಇರುವ ದೌರ್ಬಲ್ಯವಿರಬೇಕು.

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ’ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ, ಅದನ್ನು ಬೇಕಾದರೆ ವಾಪಸು ಕೊಡುತ್ತೇನೆ’ ಎಂದಿದ್ದ ಗೊಪಾಲಕೃಷ್ಣ ಅಡಿಗರು ಇನ್ನೊಂದು ಪ್ರಶಸ್ತಿ ಬಂದಾಗ ಖುಷಿಯಿಂದ ಪಡೆದಿದ್ದರು. ಇದನ್ನು ಪ್ರಶ್ನಿಸಿದರೆ ‘ನಾನೂ ಮನುಷ್ಯನೇ ಅಲ್ಲವೆ’ ಎಂದು ಸಣ್ಣದನಿಯಲ್ಲಿ ಸಮರ್ಥಿಸಿಕೊಂಡಿದ್ದರು. ಇದನ್ನು ಮೀರದೆ ನಮಗೆ ಗತ್ಯಂತರವಿಲ್ಲ. ನಾವು ಪ್ರಕಟವಾಗುವ ಮತ್ತು ನಾವು ಮಾತನಾಡಲು ನಿಲ್ಲುವ ಜಾಗದ ಬಗ್ಗೆ ನಾವು ಖಚಿತವಾಗಿರದಿದ್ದರೆ ನಾವಾಡುವ ಮಾತೂ ವಿಶ್ವಾಸಾರ್ಹತೆ ಪಡೆಯುವುದಿಲ್ಲ.

ಇನ್ನೊಂದು ನಮ್ಮನ್ನು ಇನ್ನೂ ನಿಯಂತ್ರಿಸುತ್ತಿರುವ ಜಾತಿಪ್ರಜ್ಞೆ. ನಿಜವಾಗಿಯೂ ನಾವು ಜಾತ್ಯಾತೀತರಾಗಿದ್ದೇವೆಯೇ ಅಥವಾ ಹೊರನೋಟಕ್ಕೆ ಹಾಗೆ ನಟಿಸುತ್ತಿದ್ದೇವೆಯೇ ಎಂಬ ಅನುಮಾನ ಬರುತ್ತಿದೆ.

ಇನ್ನು ನಮ್ಮನ್ನು ಆವರಿಸಿರುವ ‘ದಾಹ’.

ಒಂದು ಘಟನೆ ನೆನಪಾಗುತ್ತಿದೆ. ಶಿವಮೊಗ್ಗದಲ್ಲಿ ಹಲವು ಕಾಲ ನೆಲೆಸಿದ್ದ ಸಾಹಿತಿಗಳೊಬ್ಬರು ಯಾವುದೋ ಕಾರಣಕ್ಕೆ ಬೇರೆ ಜಿಲ್ಲೆಗೆ ಹೋಗಿ ನೆಲೆಸಿದರು. ಅವರು ಇಲ್ಲಿಂದ ಹೋಗಿ ಅನೇಕ ವರ್ಷಗಳಾದ ನಂತರದ ಈ ಕಾಲದಲ್ಲಿ ಶಿವಮೊಗ್ಗದಲ್ಲಿ ತಲೆ ತಿರುಗಿಸುವಂತಹ ಬದಲಾವಣೆಗಳಾಗಿವೆ. ಭೂದಾಹದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಿಂದಾಗಿ ಹತ್ತು ಸಾವಿರವಿದ್ದ ಕನಿಷ್ಟ ಅಳತೆಯ ನಿವೇಶನದ ಬೆಲೆ ಹದಿನೈದು-ಇಪ್ಪತ್ತು ಲಕ್ಷಕ್ಕೇರಿದೆ. ಸಾಮಾನ್ಯರಿರಲಿ, ಮೇಲ್ಮಧ್ಯಮ ವರ್ಗದವರೂ ನಿವೇಶನದ ಕನಸು ಕಾಣದಂತಾಗಿದೆ. ಕಡಿಮೆ ದರದಲ್ಲಿ ಸಿಗುವ ನಗರಸಭೆಯ ನಿವೇಶನಕ್ಕೆ ಅನೇಕ ವರ್ಷ ಕಾಯಬೇಕಾಗಿದೆ. ಅದೂ ಸಿಗುತ್ತದೆಂಬ ಗ್ಯಾರಂಟಿಯಿಲ್ಲ. ಈ ಸಮಯದಲ್ಲಿಯೇ ಸಾಹಿತಿಗಳಿಗೆ ಹದಿನೈದು ವರ್ಷದ ಹಿಂದೆ ತಾವು ಶಿವಮೊಗ್ಗದಲ್ಲಿದ್ದಾಗ ಅಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಕ್ಕೆ ಅರ್ಜಿ ಹಾಕಿದ್ದು ನೆನಪಾಗಿದೆ. ಸೀನಿಯಾರಿಟಿ ಬೇರೆ ಇದ್ದುದರಿಂದ ಅವರು ಅರ್ಜಿ ಹಾಕಿದ್ದಾರೆ. ಅವರಿಗದು ಸಿಕ್ಕಿದೆ ಕೂಡ. ಆದರೆ ಅವರಿಗೆ ಅವರು ನೆಲೆನಿಂತ ಊರಲ್ಲಿಯೇ ಸ್ವಂತ ಮನೆಯಿದೆ. ಮಕ್ಕಳು ಇವರಿಗೆ ಪ್ರೀತಿಯಿಂದ ಇನ್ನೊಂದು ನಿವೇಶನವನ್ನು ಕೊಂಡುಕೊಟ್ಟಿದ್ದಾರೆ. ಶಿವಮೊಗ್ಗದ ನಿವೇಶನದಲ್ಲೇನೂ ಮನೆ ಕಟ್ಟುವುದಿಲ್ಲ. ಇದನ್ನರಿತು ಇನ್ನೂ ನಿವೇಶನ ಇರದ ಬಾಡಿಗೆ ಮನೆಯಿಲ್ಲಿರುವ shimoga-udaಅವರ ಪರಿಚಿತರೊಬ್ಬರು ಅವರನ್ನು ನೀವೀಗ ಮಂಜೂರಾದ ನಿವೇಶನವನ್ನು ಮಾರುತ್ತೀರಾ ಎಂದು ಕೇಳಿದ್ದಾರೆ. ಹೌದು ಎನ್ನುವ ಉತ್ತರ ಬಂದಿದೆ. ಉತ್ಸಾಹಗೊಂಡ ಇವರು ಬೆಲೆ ಕೇಳಿದ್ದಾರೆ. ಅವರು ಹೇಳಿದ ಬೆಲೆ ಕೇಳಿ ಇವರು ಭೂಮಿಗಿಳಿದು ಹೋಗಿದ್ದಾರೆ. ಆದರೆ ಸಾಹಿತಿಗಳೇನೂ ಇಲ್ಲದ ಬೆಲೆ ಹೇಳಿರಲಿಲ್ಲ. ಆ ನಿವೇಶನದ ಈಗಿನ ಮಾರುಕಟ್ಟೆ ದರ ಇಪ್ಪತ್ತೈದು ಲಕ್ಷ. ಅಷ್ಟನ್ನೇ ಅವರು ಹೇಳಿದ್ದು. ಅವರು ಆ ನಿವೇಶನ ಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೊಟ್ಟ ಹಣ ಮೂರು ಲಕ್ಷ ಮಾತ್ರವಾಗಿತ್ತು.!

ಈ ದಾಹಕ್ಕೆ ಏನೆನ್ನುವುದು? ಇಂತಹ ದಾಹವೇ ನಮ್ಮನ್ನು ಜನರತ್ತ ಹೋಗದಿರುವಂತೆ ತಡೆದಿರುವುದು. ಜಾಗತೀಕರಣದ ಪರಿಣಾಮವಾದ ಈ ಮೇರೆಯಿಲ್ಲದ ದಾಹವೇ ಎಲ್ಲರಂತೆ ನಮ್ಮನ್ನೂ ಕೆಟ್ಟ ಲೋಭಿಗಳನ್ನಾಗಿ ಮಾಡಿದೆ. ಇಂತಹ ದಾಹಗಳನ್ನು ಮೀರದಿದ್ದರೆ ನಾವು ಈ ಸಮಾವೇಶದಲ್ಲಿ ಮಾತನಾಡುವುದೆಲ್ಲ ಹಾಸ್ಯಗೋಷ್ಟಿಯ ರಂಜನೆಯ ಮಾತಾಗುತ್ತದೆ.

ಇಷ್ಟೆಲ್ಲಾ ಒಂದು ರೀತಿಯ ಉಪದೇಶಾತ್ಮಕವಾಗಿ ಹೇಳಿದ ನಾನೂ ಈ ತಲೆಮಾರಿನ ಸಾಹಿತಿಗಳು ಮೀರಬೇಕಾದ ಈವರೆಗೆ ಹೇಳಿದ ಮಿತಿಗಳನ್ನು ಹೊಂದಿರಬಹುದು. ಕಡು ಆತ್ಮವಿಮರ್ಶೆಯಲ್ಲಿ ಧ್ಯಾನಿಸದಿದ್ದರೆ, ಎಲ್ಲರಂತೆ ನಮ್ಮನ್ನೂ ಆವರಿಸಿರುವ ‘ದಾಹ’ವನ್ನು ನೀಗಿಕೊಳ್ಳದಿದ್ದರೆ, ನಮ್ಮ ಆಳದಲ್ಲಿರಬಹುದಾದ ಜಾತಿಕುರುಹುಗಳನ್ನು ಮೀರದಿದ್ದರೆ, ನಾಡನ್ನು ಬಾಧಿಸುತ್ತಿರುವ ಸಂಕಟಗಳ ನಿವಾರಣೆಯ ಹೋರಾಟಗಳಿಗೆ ಕೈಜೋಡಿಸದಿದ್ದರೆ, ಪ್ರಶಸ್ತಿ ಸನ್ಮಾನಗಳ ಗುಂಗಿನಿಂದ ಹೊರಬರದಿದ್ದರೆ, ನಮ್ಮಿಂದ ನಮ್ಮ ಜನಕ್ಕೆ ಏನೂ ದಕ್ಕುವುದಿಲ್ಲ. ಮಾತ್ರವಲ್ಲ ನಮ್ಮಿಂದ ಒಳ್ಳೆಯ ಸಾಹಿತ್ಯ ನಿರ್ಮಾಣವೂ ಸಾಧ್ಯವಾಗುವುದಿಲ್ಲ.

ಮುಸುಕಿನ ಗುದ್ದಾಟ ತಂದೀತು ಅತಂತ್ರ ವಿಧಾನಸಭೆ

– ಆನಂದ ಪ್ರಸಾದ್

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಕಳೆದ ಒಂದು ದಶಕದಿಂದ ಕರ್ನಾಟಕವು ಅತಂತ್ರ ವಿಧಾನಸಭೆಯನ್ನು ಹೊಂದಿ ಬಹಳಷ್ಟು ತೊಂದರೆಯನ್ನು ಅನುಭವಿಸಿದೆ. ಹೀಗಾಗಿ ಅತಂತ್ರ ವಿಧಾನಸಭೆಯನ್ನು ತಂದರೆ ಮತ್ತೆ ರಾಜಕೀಯ ಸಮಯಸಾಧಕತನ ಹಾಗೂ ಚೌಕಾಸಿ ರಾಜಕೀಯ ಮೇಲುಗೈ ಪಡೆದು ರಾಜ್ಯದ ಹಿತಾಸಕ್ತಿ ಮೂಲೆಗುಂಪಾಗುವುದು ನಿಶ್ಚಿತ. ಹಾಗಾಗಿ ಇದನ್ನು ತಡೆಗಟ್ಟಬೇಕಾದರೆ ಸ್ಥಿರ ವಿಧಾನಸಭೆಯನ್ನು ರೂಪಿಸುವ ರೀತಿಯಲ್ಲಿ ಜನ ಮತದಾನ ಮಾಡಬೇಕಾದುದುದು ಅನಿವಾರ್ಯ. ಸದ್ಯದ ಚುನಾವಣಾಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯಬಹುದು ಎಂಬ ಸೂಚನೆಯನ್ನು ನೀಡಿವೆಯಾದರೂ ಇದರಿಂದ ಮೈಮರೆತು ಮುಸುಕಿನ ಗುದ್ದಾಟಕ್ಕೆ ಕಾಂಗ್ರೆಸ್ಸಿಗರು ಇಳಿದರೆ ಫಲಿತಾಂಶ ಅತಂತ್ರವಾಗಬಹುದು. ಕಾಂಗ್ರೆಸ್ ಜಯಗಳಿಸಿದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬುದು ನಿರ್ಧರಿತವಾಗಿಲ್ಲ. ಕಾಂಗ್ರೆಸ್ಸಿನ ಒಮ್ಮತದ ಕೊರತೆಯಿಂದ ಹಾಗೂ ಕಚ್ಚಾಟ ಅತಿರೇಕಕ್ಕೆ ಹೋಗುವುದನ್ನು ತಡೆಯುವ ಉಪಾಯವಾಗಿ ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗುವುದು ನಡೆದುಬಂದಿರುವ ಸಂಪ್ರದಾಯ. ಹೀಗಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಣಯಿಸುವುದು ಹೈಕಮಾಂಡ್.

ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಹುದ್ಧೆಗೆ ಪ್ರಧಾನ ಆಕಾಂಕ್ಷಿಗಳು siddaramaiah_dharam_khargeಸಿದ್ಧರಾಮಯ್ಯ, ಪರಮೇಶ್ವರ್ ಹಾಗೂ ಖರ್ಗೆ ಮೂವರು ಇದ್ದಾರೆ. ಇವರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳಿತಾಗಬಹುದು. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪಗಳಿಲ್ಲದ, ಸೋಗಲಾಡಿತನವಿಲ್ಲದ, ನೇರ, ನಿಷ್ಠುರ ನಡೆನುಡಿಯ, ಕುಟುಂಬ ಸದಸ್ಯರು ರಾಜಕೀಯ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿರದ ಸಮಾಜವಾದಿ ಹಿನ್ನೆಲೆಯೇ ಸಿದ್ಧರಾಮಯ್ಯನವರ ಧನಾತ್ಮಕ ಅಂಶ. ಆಡಳಿತಾತ್ಮಕವಾಗಿಯೂ ಅಧಿಕಾರಿಗಳ ಮೇಲೆ ಬಿಗಿಯಾದ ಹಿಡಿತ ಸಾಧಿಸುವ ಸಾಮರ್ಥ್ಯ ಇವರಿಗೆ ಇದೆ. ಹೀಗಾಗಿ ಇವರು ಮುಖ್ಯಮಂತ್ರಿಯಾದರೆ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಆದರೆ ಕಾಂಗ್ರೆಸ್ಸಿನ ಒಳಸುಳಿಗಳು ಇವರನ್ನು ಮುಖ್ಯಮಂತ್ರಿಯಾಗಲು ಬಿಡುತ್ತವೆಯೋ ಎಂಬುದು ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ.

ಮಲ್ಲಿಕಾರ್ಜುನ ಖರ್ಗೆಯೂ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಇವರು ತಮ್ಮ ಪುತ್ರನನ್ನು ರಾಜಕೀಯದಲ್ಲಿ ತೊಡಗಿಸಿದ ಆರೋಪ ಹೊಂದಿದ್ದಾರೆ ಹಾಗೂ ಇವರ ಪುತ್ರ ಪಕ್ಷದಲ್ಲಿ ಹಸ್ತಕ್ಷೇಪ ನಡೆಸುವ ಹಾಗೂ ಇತರರನ್ನು ಮೂಲೆಗುಂಪು ಮಾಡುವ ವ್ಯಕ್ತಿತ್ವ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಖರ್ಗೆಯವರು ವಿಚಾರಶೀಲ, ಕಂದಾಚಾರಗಳಿಗೆ ಮಹತ್ವ ಕೊಡದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರಿಗೂ ಆಡಳಿತದಲ್ಲಿ ಹಿಡಿತ ಸಾಧಿಸುವ ಕಲೆ ಕರಗತವಾಗಿದೆ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸರಾಸರಿ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಇವರ ಮಾತುಗಾರಿಕೆ ಮಾತ್ರ ಆಕರ್ಷಕವಾಗಿಲ್ಲ ಮತ್ತು ಬಹಳ ನಿಧಾನವಾಗಿ ಬಾವಿಯ ಆಳದಿಂದ ಮಾತಾಡಿದಂತೆ ಇವರ ಮಾತುಗಳು ಕಂಡುಬರುತ್ತವೆ.

ಇನ್ನೊಬ್ಬ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಜಿ. ಪರಮೇಶ್ವರ್. ಇವರು ಕೂಡ ಕಾಂಗ್ರೆಸ್ಸಿನಲ್ಲಿ ದೀರ್ಘ ರಾಜಕೀಯ ಅನುಭವ ಹೊಂದಿದವರೇ. ಭ್ರಷ್ಟಾಚಾರದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗೆಯೇ ಕುಟುಂಬದ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿದ ಆರೋಪಗಳು ಇವರ ಮೇಲೆಯೂ ಕೇಳಿಬಂದಿಲ್ಲ. ಹಾಗಾಗಿ ಇವರು ಮುಖ್ಯಮಂತ್ರಿಯಾದರೂ ಸಾಮಾನ್ಯ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು. ಮಾಜಿ ಮುಖ್ಯಮಂತ್ರಿ smkrsihwigಎಸ್ಸೆಂ ಕೃಷ್ಣ ಒಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಇವರು ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಹುದ್ಧೆ, ರಾಜ್ಯಪಾಲ ಹುದ್ಧೆ ಹೀಗೆ ಉನ್ನತ ಸ್ಥಾನಗಳನ್ನು ಏರಿರುವುದರಿಂದ ಹಾಗೂ ವಯಸ್ಸೂ ಆಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡುವುದು ಯೋಗ್ಯವಲ್ಲ ಹಾಗೂ ಜನರೂ ಅದನ್ನು ಮೆಚ್ಚುವುದಿಲ್ಲ. ಹೀಗಾಗಿ ಅವರು ರಾಜಕೀಯದಿಂದ ನಿವೃತ್ತಿಯಾಗುವುದು ಸೌಜನ್ಯದ ಹಾಗೂ ಸಜ್ಜನಿಕೆಯ ನಡವಳಿಕೆ ಆದೀತು.

ಕಾಂಗ್ರೆಸ್ಸಿನ ಪ್ರಧಾನ ಮುಖ್ಯಮಂತ್ರಿ ಆಕಾಂಕ್ಷಿಗಳು ಹೈಕಮಾಂಡ್ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಒಬ್ಬರ ಕಾಲನ್ನು ಒಬ್ಬರು ಎಳೆಯದೆ, ಭಿನ್ನಮತ ತೋರದೆ ಸಿಕ್ಕಿದ ಹುದ್ಧೆಯಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿರುವುದು ರಾಜ್ಯದ ಇಂದಿನ ಅತೀ ಅಗತ್ಯಗಳಲ್ಲೊಂದು. ಇಲ್ಲದೆ ಹೋದರೆ ರಾಜ್ಯದ ಜನ ಮತ್ತೆ ಅತಂತ್ರ ವಿಧಾನಸಭೆಯಂಥ ಪರಿಣಾಮಗಳನ್ನೇ ನೀಡಬಹುದು. ಕಾಂಗ್ರೆಸ್ಸಿಗರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಹಾಗೂ ಚುನಾವಣಾಪೂರ್ವ ಸಮೀಕ್ಷೆಗಳ ಅಭಿಪ್ರಾಯದಿಂದ ಮೈಮರೆತು ಕಚ್ಚಾಟದಲ್ಲಿ ತೊಡಗಿದರೆ ರಾಜ್ಯದ ಜನ ಮತ್ತೆ ಅತಂತ್ರ ಫಲಿತಾಂಶ ನೀಡುವ ಸಾಧ್ಯತೆ ದಟ್ಟವಾಗಿದೆ. ಜನರ ಅಭಿಪ್ರಾಯವನ್ನು ಕಡೆಗಣಿಸಿದರೆ, ತಮ್ಮನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂಬ ಅಹಂಕಾರದಿಂದ ನಡೆದುಕೊಂಡರೆ ಅತಂತ್ರ ವಿಧಾನಸಭೆಯ ಫಲಿತಾಂಶವೇ ಬಂದೀತು. ಸ್ಥಳೀಯ ಸಂಸ್ಥೆ ಚುನಾವಣಾ ವಿಜಯವನ್ನು ಕಾಂಗ್ರೆಸ್ಸಿಗರು ಅಲ್ಲಲ್ಲಿ ಅದ್ಧೂರಿಯಾಗಿ ಆಚರಿಸಿದುದು ಕಂಡುಬಂದಿದೆ. ಇಂಥ ಆಚರಣೆಗಳ ಅಗತ್ಯವಿಲ್ಲ. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ದೊಡ್ಡ ದೊಡ್ಡ ಬ್ಯಾನರುಗಳನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಕಿರುವುದು ಕೂಡ ಕಂಡುಬರುತ್ತದೆ. ಇಂಥ ತೋರಿಕೆ ಹಾಗೂ ಆಡಂಬರದ ಅಗತ್ಯ ಇಲ್ಲ. ಇಂಥವುಗಳನ್ನು ತಡೆದು ಜನರಿಗಾಗಿ ಕೆಲಸ ಮಾಡುವುದನ್ನು ಪ್ರವೃತ್ತಿಯನ್ನು ಕಾಂಗ್ರೆಸ್ಸಿಗರು ಬೆಳೆಸಿಕೊಳ್ಳುವುದು ಅಗತ್ಯ.