ಮೂಲ ಲೇಖನ: ಹರ್ಷ ಮಂದೇರ್
ಕನ್ನಡಕ್ಕೆ: ಕುಮಾರ್ ಬುರಡಿಕಟ್ಟಿ
ಇಡೀ ಗುಜರಾತನ್ನು ತಲ್ಲಣಗೊಳಿಸಿದ ಆ ಭಯೋತ್ಪಾದನೆ ಮತ್ತು ಮಾರಣಹೋಮಗಳು ನಡೆದ ಹತ್ತು ದಿನಗಳ ತರುವಾಯ ಅತ್ಯಂತ ಜಿಗುಪ್ಸೆ, ಭೀತಿಗಳಿಂದ ಸ್ಥಂಭೀಭೂತನಾಗಿ ಅಲ್ಲಿಂದ ಮರಳಿದೆ. ನನ್ನ ಹೃದಯ ಉತ್ಸಾಹಶೂನ್ಯವಾಗಿತ್ತು, ಆತ್ಮ ಬಳಲಿತ್ತು ಮತ್ತು ಅಪರಾಧಿ ಮತ್ತು ನಾಚಿಕೆ ಪ್ರಜ್ಞೆಯ ಭಾರದಿಂದ ಬಾಹುಗಳು ನಿತ್ರಾಣಗೊಂಡಿದ್ದವು.
ಆ ಭೀಕರ ನರಮೇಧದಲ್ಲಿ ಬದುಕುಳಿದ ಸುಮಾರು 53,000 ಮಹಿಳೆಯರು, ಪುರುಷರು, ಮಕ್ಕಳುಮರಿಗಳನ್ನು ಅಹಮದಾಬಾದಿನ 29 ತಾತ್ಕಾಲಿಕ ನಿರಾಶ್ರಿತರಶಿಬಿರಗಳಲ್ಲಿ ಕೂಡಿಹಾಕಲಾಗಿತ್ತು. ಅವುಗಳ ಮೂಲಕ ಹಾದು ಹೋಗುತ್ತಿದ್ದಂತೆ ಅವು ಪ್ರದಶರ್ಿಸುತ್ತಿದ್ದ ಆ ಬಾಹ್ಯ ಸಂಕಟ ಹೃದಯವನ್ನೇ ಕಲಕುತ್ತಿದ್ದವು.
ಒಣಗಿ ನಿಸ್ತೇಜವಾಗಿದ್ದ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಾ ಜನ ಪರಿಹಾರ ಸಾಮಗ್ರಿಗಳ ಪುಟ್ಟ ಪುಟ್ಟ ಪೊಟ್ಟಣಗಳನ್ನು ಹಿಡಿದುಕೊಂಡಿದ್ದರು. ಈ ಪ್ರಪಂಚದಲ್ಲಿ ಅವರಿಗಿದ್ದ ಆಸ್ತಿ ಅದಿಷ್ಟೆ. ಕೆಲವರು ಮೆಲುದನಿಯಲ್ಲಿ ಪಿಸುಗುಟ್ಟುತ್ತಿದ್ದರೆ, ಮತ್ತೆ ಕೆಲವರು ಈ ಶಿಬಿರಗಳಲ್ಲಿ ತಮ್ಮ ಮಕ್ಕಳಿಗೆ ಹಾಲು ಹೊಂದಿಸುವುದರಲ್ಲಿ, ದಾಳಿಗೊಳಗಾದವರ ಗಾಯಗಳಿಗೆ ಶುಶ್ರೂಷೆ ಮಾಡುವುದರಲ್ಲಿ ಹಾಗೂ ಮತ್ತಿತರ ತಮ್ಮ ದೈನಂದಿನ ಕೆಲಸಗಳಲ್ಲಿ ತಲ್ಲೀನರಾಗಿದ್ದರು.
ಆದರೆ ನೀವು ಈ ಶಿಬಿರಗಳಲ್ಲಿ ಎಲ್ಲಿಯೇ ಕುಳಿತುಕೊಳ್ಳಿ. ಕೀವುದುಂಬಿದ ದೊಡ್ಡ ಗಾಯವನ್ನು ಸೀಳಿದಾಗ ಹೊರಚಿಮ್ಮುವ ಕೀವಿನಂತೆ ಜನ ತಮ್ಮ ನೋವುಗಳನ್ನು ತೋಡಿಕೊಳ್ಳಲು ಪ್ರಾರಂಭಿಸಿಬಿಡುತ್ತಿದ್ದರು. ಅವರು ಬಿಚ್ಚಿಡುವ ಆ ಕತೆಗಳು ಅದೆಷ್ಟು ಭಯಾನಕವಾಗಿದ್ದವು ಎಂದರೆ ಬರೆಯುತ್ತಿದ್ದ ನನ್ನ ಪೆನ್ನು ತತ್ತರಿಸಿ ತಡವರಿಸುತ್ತಿತ್ತು.
ಮಹಿಳೆಯರ ಮೇಲೆ, ಪುಟ್ಟ ಪುಟ್ಟ ಮಕ್ಕಳ ಮೇಲೆ ಶಸ್ತ್ರಸಜ್ಜಿತ ಸಂಘಟಿತ ಯುವಕರ ಪಡೆ ನಡೆಸಿದ ಹೃದಯಹೀನ ಕ್ರೌರ್ಯದ ಭೀಬತ್ಸತೆಯನ್ನು ಈ ದೇಶ ಹಿಂದಿನ ಯಾವ ಗಲಭೆಗಳಲ್ಲೂ ನೋಡಿರಲಿಲ್ಲ. ಇದು ಈ ದೇಶ ಆಗಾಗ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ ಕಳೆದ ಶತಮಾನದ ಎಲ್ಲಾ ಗಲಭೆಗಳ ಕ್ರೌರ್ಯಗಳಿಗಿಂತಲೂ ಮಿಗಿಲಾಗಿತ್ತು. ನಾನು ಅಲ್ಲಿ ಕೇಳಿದ, ನೋಡಿದ ಎಲ್ಲದನ್ನೂ ಬರೆಯಲಾಗದಿದ್ದರೂ ಅದರ ಒಂದು ಸಣ್ಣ ಭಾಗವನ್ನಾದರೂ ಬರೆಯಲೇಬೇಕು ಎಂದು ನನ್ನ ಮೇಲೆ ನಾನೇ ಒತ್ತಡ ಹೇರಿಕೊಂಡಿದ್ದೇನೆ. ಏಕೆಂದರೆ ನಮಗೆಲ್ಲಾ ಗೊತ್ತಿರುವಂತೆ ಇದೊಂದು ಬಹುಮುಖ್ಯ ವಿಷಯ. ಅಥವಾ ಈ ಬರವಣಿಗೆ ನನ್ನ ಮೇಲಿರುವ ಭಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಇದ್ದರೂ ಇರಬಹುದು.
ಎಂಟು ತಿಂಗಳ ತುಂಬು ಗಭರ್ಿಣಿಯೊಬ್ಬಳು ತನ್ನನ್ನು ಬಿಟ್ಟುಬಿಡಿ ಎಂದು ದಾಳಿಕೋರರಿಗೆ ಪರಿಪರಿಯಾಗಿ ಅಂಗಲಾಚುವುದನ್ನು ಕಂಡಾಗ ಏನನ್ನಿಸುತ್ತದೆ? ಆದರೆ, ಆ ದಾಳಿಕೋರರು ಆಕೆಯನ್ನು ಬಿಡುವುದಿಲ್ಲ. ಆಕೆಯ ಹೊಟ್ಟೆಯನ್ನು ಸೀಳಿ, ಭ್ರೂಣವನ್ನು ಹೊರತೆಗೆದು, ಆಕೆಯ ಕಣ್ಣೆದುರೇ ಅದನ್ನು ಕತ್ತರಿಸಿಹಾಕುತ್ತಾರೆ. ಹತ್ತೊಂಬತ್ತು ಜನರ ಇಡೀ ಕುಟುಂಬವನ್ನು ಮನೆಯೊಳಗೆ ಕೂಡಿಹಾಕಿ, ಇಡೀ ಮನೆಗೆ ನೀರು ನುಗ್ಗಿಸಿ, ಆಮೇಲೆ ಹೈಟೆನ್ಷನ್ ವಿದ್ಯುತ್ ತಂತಿಯಿಂದ ಆ ಮನೆಗೆ ವಿದ್ಯುತ್ ಸ್ಪರ್ಶ ಮಾಡಿ ಅಷ್ಟೂ ಜನರನ್ನು ನಿರ್ದಯವಾಗಿ ಕೊಂದುಹಾಕಿದ್ದನ್ನು ಕೇಳಿದಾಗ ಏನನ್ನಿಸುತ್ತದೆ?
ಏನನ್ನಿಸುತ್ತದೆ? ತನ್ನ ತಾಯಿ ಮತ್ತು ಆರು ಜನ ಸಹೋದರ-ಸಹೋದರಿಯರನ್ನು ತನ್ನ ಕಣ್ಣೆದುರೇ ಹೇಗೆ ಕೊಚ್ಚಿ ಕೊಚ್ಚಿ ಕೊಂದರು ಎಂಬುದನ್ನು ಜುಹಾಪರ ಶಿಬಿರದಲ್ಲಿದ್ದ ಆರು ವರ್ಷದ ಬಾಲಕ ವಿವರಿಸುತ್ತಾನೆ. ಅತ್ಯಾಶ್ಚರ್ಯಕರ ರೀತಿಯಲ್ಲಿ ಆ ಹುಡುಗ ಬದುಕುಳಿಯುತ್ತಾನೆ. ಕಣ್ಣೆದುರಿಗೆ ನಡೆಯುತ್ತಿದ್ದ ಭೀಬತ್ಸತೆಯನ್ನು ನೋಡಿ ಅವನು ಪ್ರಜ್ಞೆತಪ್ಪಿ ಕುಸಿದುಬಿದ್ದದ್ದನ್ನು ನೋಡಿ ಸತ್ತೇ ಹೋಗಿದ್ದಾನೆ ಎಂದುಕೊಂಡು ದಾಳಿಕೋರರು ಅಲ್ಲಿಂದ ಹೊರಟು ಹೋಗುತ್ತಾರೆ.
ನರಮೇಧಕ್ಕೆ ಅತ್ಯಂತ ಕೆಟ್ಟ ರೀತಿಯಲ್ಲಿ ಬಲಿಯಾದ ಜನವಸತಿ ಪ್ರದೇಶಗಳಲ್ಲಿ ಅಹ್ಮದಾಬಾದಿನ ನರೋಡ-ಪಾಟಿಯ ಕೂಡ ಒಂದು. ಅಲ್ಲಿ ಪೊಲೀಸ್ ಪೇದೆಯೊಬ್ಬ ಮೂರು ತಿಂಗಳ ಮಗನನ್ನು ಎತ್ತಿಕೊಂಡಿದ್ದ ಯುತಿಯೊಬ್ಬಳಿಗೆ ಸುರಕ್ಷಿತ ಜಾಗಕ್ಕೆ ಹೋಗುವಂತೆ ಹೇಳಿದ್ದನ್ನು, ಅವನ ಮಾತನು ಕೇಳಿ ಆಕೆ ಅತ್ತ ಹೋದಾಗ ಅಲ್ಲಿ ದಾಳಿಕೋರರ ಗುಂಪು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಆ ತಾಯಿ-ಮಗು ಇಬ್ಬರನ್ನೂ ಜೀವಂತವಾಗಿ ಸುಟ್ಟುಹಾಕಿದ್ದನ್ನು ನರೋಡ-ಪಾಟಿಯಾದ ಮಹಿಳೆಯೊಬ್ಬಳು ವಿವರಿಸುತ್ತಾಳೆ.
ಮಹಿಳೆಯರ ಮೇಲೆ ಲೈಂಗಿಕ ಕ್ರೌರ್ಯ ನಡೆಸುವುದನ್ನು ಒಂದು ಆಯುಧವನ್ನಾಗಿ ಈ ಗುಜರಾತ್ ಬರ್ಬರತೆಯಲ್ಲಿ ಬಳಸಿದಷ್ಟು ವ್ಯಾಪಕವಾಗಿ ಬೇರಾವ ಗಲಭೆಗಳಲ್ಲೂ ಬಳಸಿದ್ದನ್ನು ನಾನು ಎಂದೂ ನೋಡಿಲ್ಲ. ಹುಡುಗಿಯರು ಮತ್ತು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವುದರ ಬಗ್ಗೆ, ಅದರಲ್ಲೂ ಆ ಕುಟುಂಬ ಸದಸ್ಯರ ಕಣ್ಣೆದುರೇ ಈ ಅತ್ಯಾಚಾರಗಳನ್ನು ನಡೆಸಿರುವ ಬಗ್ಗೆ, ನಂತರ ಆ ಮಹಿಳೆಯರನ್ನು ಜೀವಂತವಾಗಿ ಸುಡುವ ಮೂಲಕವೋ ಅಥವಾ ಸುತ್ತಿಗೆಯಿಂದ ಜಜ್ಜುವ ಮೂಲಕವೋ (ಒಂದು ಘಟನೆಯಲ್ಲಿ ಸ್ಕ್ರೂಡ್ರೈವರ್ನಿಂದ ಇರಿಯುವ ಮೂಲಕ) ಕೊಂದುಹಾಕಿರುವ ಬಗ್ಗೆ ಸಾಕಷ್ಟು ವರದಿಗಳು ಎಲ್ಲಾ ಕಡೆಯಿಂದ ಬಂದಿವೆ. ಆಗಲೇ ಭೀತಿಯಿಂದ ತತ್ತರಿಸಿದ್ದ ಮಹಿಳೆಯರನ್ನು ಇನ್ನಷ್ಟು ಭೀತಿಯಿಂದ ಕುಸಿಯುವಂತೆ ಮಾಡಲು ಶಸ್ತ್ರಸಜ್ಜಿತ ದಾಳಿಕೋರರು ಅವರತ್ತ ಬಟ್ಟೆಬಿಚ್ಚಿಕೊಂಡು ಬರುತ್ತಿದ್ದ ಗಾಬರಿಹುಟ್ಟಿಸುವ ಕತೆಗಳನ್ನು ಅಮನ್ ಚೌಕ್ ನಿರಾಶ್ರಿತರ ಶಿಬಿರದಲ್ಲಿದ್ದ ಮಹಿಳೆಯರು ಹೇಳುತ್ತಾರೆ.
ಅಹ್ಮದಾಬಾದ್ನಲ್ಲಿ ನಾನು ಭೇಟಿಯಾದ ಬಹುತೇಕ ಜನರು (ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ದಾಳಿಯಲ್ಲಿ ಬದುಕುಳಿದವರು ಇತ್ಯಾದಿ) ಎಲ್ಲರೂ ಒಂದು ಅಂಶವನ್ನು ಒಪ್ಪಿಕೊಳ್ಳುತ್ತಾರೆ. ಅದೆಂದರೆ, ಗುಜರಾತ್ನಲ್ಲಿ ನಡೆದದ್ದು ಒಂದು ಗಲಭೆಯಲ್ಲ; ಅದೊಂದು ಭಯೋತ್ಪಾದಕ ದಾಳಿ, ವ್ಯವಸ್ಥಿತವಾಗಿ, ಯೋಜಿತವಾಗಿ ನಡೆಸಲಾದ ಮಾರಣಹೋಮ, ಒಂದು ಹತ್ಯಾಕಾಂಡ.
ಶಸ್ತ್ರಸಜ್ಜಿತ ಬಾಹ್ಯ ಶತ್ರುವಿನ ವಿರುದ್ಧ ನಡೆಸಲಾಗುವ ಮಿಲಿಟರಿ ಕಾಯರ್ಾಚರಣೆಯ ರೀತಿಯಲ್ಲಿ ಸಂಘಟಿಸಲಾಗಿದ್ದ ಲೂಟಿಯ ಬಗ್ಗೆ, ಸುಲಿಗೆಯ ಬಗ್ಗೆ ಪ್ರತಿಯೊಬ್ಬರೂ ಮಾತಾಡಿದರು.
ಪ್ರಾರಂಭದಲ್ಲಿ ಒಂದು ಟ್ರಕ್ಕು ಉದ್ರೇಕಕಾರಿ ಘೋಷಣೆಗಳನ್ನು ಕೂಗುತ್ತಾ ಬಂತು; ಅದರ ಹಿಂದೆಯೇ ಹಲವು ಟ್ರಕ್ಕುಗಳು ಖಾಕಿ ಚೆಡ್ಡಿಗಳನ್ನು ಹಾಕಿದ, ಹೆಗಲ ಮೇಲೆ ಕೇಸರಿ ಬಟ್ಟೆಯನ್ನು ಸುತ್ತಿಕೊಂಡ ಯುವಕರನ್ನು ತುಂಬಿಕೊಂಡು ಬಂದವು. ಎಲ್ಲರೂ ಅತ್ಯಾಧುನಿಕ ಸ್ಫೋಟಕಗಳನ್ನು, ಸ್ಥಳೀಯ ನಿಮರ್ಿತ ಶಸ್ತ್ರಾಸ್ತ್ರಗಳನ್ನು, ಬಾಕು-ಚೂರಿಗಳನ್ನು ಮತ್ತು ತ್ರಿಶೂಲಗಳನ್ನು ಇಟ್ಟುಕೊಂಡು ಶಸ್ತ್ರಸಜ್ಜಿತರಾಗಿದ್ದರು. ತಮ್ಮ ಕಾಯರ್ಾಚರಣೆಯ ಸಂದರ್ಭದಲ್ಲಿ ದಣಿವಾರಿಸಿಕೊಳ್ಳಲು ನೀರಿನ ಬಾಟಲಿಗಳನ್ನೂ ಅವರು ಇಟ್ಟುಕೊಂಡಿದ್ದರು.
ಗಲಭೆ ನಡೆಯುತ್ತಿದ್ದ ಸ್ಥಳಗಳಲ್ಲಿ ಗಲಭೆಕೋರರ ನಾಯಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಮಾತನಾಡುತ್ತಿರುವುದು ಕಂಡುಬರುತ್ತಿತ್ತು; ಅವರು ಸಮನ್ವಯ ಕೇಂದ್ರದಿಂದ ಸಲಹೆ, ಸೂಚನೆಗಳನ್ನು ಪಡೆಯುತ್ತಾ ಹಾಗೂ ಗಲಭೆಯ ಸ್ಥಳದಲ್ಲಿ ನಡೆಯುತ್ತಿದ್ದ ಘಟನಾವಳಿಗಳ ವರದಿಗಳನ್ನು ಸಮನ್ವಯ ಕೇಂದ್ರಕ್ಕೆ ರವಾನಿಸುತ್ತಿದ್ದರು. ಕೆಲವರು ಮುಸ್ಲಿಂ ಕುಟುಂಬಗಳ ಮನೆಗಳ ಮತ್ತು ಆಸ್ತಿಪಾಸ್ತಿಗಳ ವಿವರಗಳನ್ನೊಳಗೊಂಡ ದಾಖಲೆಗಳನ್ನು, ಕಂಪ್ಯೂಟರ್ ಸೃಜಿತ ಹಾಳೆಗಳನ್ನು ಹಿಡಿದುಕೊಂಡಿರುವುದು ಕಂಡುಬರುತ್ತಿತ್ತು. ಅಲ್ಪಸಂಖ್ಯಾತ ಸಮುದಾಯಗಳ ಒಡೆತನದಲ್ಲಿರುವ ಬಿಲ್ಡಿಂಗ್ಗಳ ಬಗ್ಗೆ, ಅವರ ಬಿಸಿನೆಸ್ ಕೇಂದ್ರಗಳ ಬಗ್ಗೆ ದಾಳಿಕೋರ ನಾಯಕರಿಗೆ ವಿವರವಾದ ಜ್ಞಾನವಿತ್ತು. ಉದಾಹರಣೆಗೆ, ಒಂದು ರೆಸ್ಟೋರೆಂಟ್ನ ಮಾಲಿಕತ್ವದಲ್ಲಿ ಹಿಂದೂ ಮತ್ತು ಮುಸ್ಲಿಂ ಇಬ್ಬರೂ ಪಾಲುದಾರರಾಗಿರುವುದು ಅಥವಾ ಯಾವ್ಯಾವ ಮುಸ್ಲಿಂ ಕುಟುಂಬದಲ್ಲಿ ಗಂಡನೋ ಅಥವಾ ಹಿಂದೂ ಹೆಂಡತಿಯೋ ಹಿಂದೂ ಆಗಿದ್ದಾರೆ ಎಂಬಿತ್ಯಾದಿ ವಿವರಗಳು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗೆ ಮುಸ್ಲಿಮರೊಂದಿಗೆ ಹಿಂದೂಗಳೂ ಸೇರಿಕೊಂಡಿದ್ದರೆ ಅಂತಹ ಕುಟುಂಬ ಮತ್ತು ಬಿಸಿನೆಸ್ ಕೇಂದ್ರಗಳ ಮೇಲೆ ದಾಳಿ ಮಾಡಬಾರದು ಎಂಬುದು ಅವರ ಉದ್ದೇಶವಾಗಿತ್ತು.
ಅದು ಖಂಡಿತವಾಗಿಯೂ ಸಮೂಹ ಕ್ರೋಧದ ಸ್ವಯಂಪ್ರೇರಿತ ಸ್ಫೋಟವಂತೂ ಅಲ್ಲವೇ ಅಲ್ಲ. ನಿಜಕ್ಕೂ ಅದೊಂದು ಯೋಜಿತ ನರಮೇಧ.
ಟ್ರಕ್ಕುಗಳು ಅಗಾಧ ಪ್ರಮಾಣದ ಗ್ಯಾಸ್ ಸಿಲೆಂಡರ್ಗಳನ್ನು ತುಂಬಿಕೊಂಡು ಬಂದಿದ್ದವು. ಮೊದಲು ಶ್ರೀಮಂತ ಮುಸ್ಲಿಂ ಮನೆಗಳನ್ನು, ಬಿಸಿನೆಸ್ ಕೇಂದ್ರಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು. ನಂತರ ಅಡುಗೆ ಅನಿಲದ ಸಿಲೆಂಡರುಗಳಿಂದ ಎಲ್ಪಿಜಿ ಅನಿಲವನ್ನು ಹಲವಾರು ನಿಮಿಷಗಳ ಕಾಲ ಈ ಬಿಲಿಂಗ್ ಮತ್ತು ಮನೆಯೊಳಗೆ ನುಗ್ಗಿಸಲಾಗುತ್ತಿತ್ತು. ಕೊನೆಗೆ ತರಬೇತುಗೊಂಡ ಯುವಕರು ಬೆಂಕಿ ಹಚ್ಚಿ ಇಡೀ ಕಟ್ಟಡವನ್ನು ಯಶಸ್ವಿಯಾಗಿ ಸುಟ್ಟುಹಾಕುತ್ತಿದ್ದರು.
ಕೆಲವೊಂದು ಕಡೆ ಬೃಹದಾಕಾರದ ಸಿಮೆಂಟ್ ಕಟ್ಟಡಗಳನ್ನು ಸ್ಫೋಟಿಸಿ ಕೆಡವುದಕ್ಕೆ ಕಬ್ಬಿಣ ಬೆಸುಗೆಗೆ ಬಳಸುವ ಅಸಟಲೀನ್ ಅನಿಲವನ್ನು ಬಳಸಲಾಗಿತ್ತು. ಕೆಲವೆಡೆ ಮಸೀದಿ ಮತ್ತು ದಗರ್ಾಗಳನ್ನು ಧ್ವಂಸಗೊಳಿಸಿ ಅವುಗಳ ಜಾಗದಲ್ಲಿ ಹನುಮಂತನ ಮೂತರ್ಿಗಳನ್ನು ಪ್ರತಿಷ್ಠಾಪಿಸಿ ಕೇಸರಿ ಬಾಟುಗಳನ್ನು ಹಾರಿಸಲಾಯಿತು. ಅಹ್ಮದಾಬಾದ್ ಸಿಟಿ ಕ್ರಾಸಿಂಗ್ನಲ್ಲಿದ್ದ ಕೆಲವು ದಗರ್ಾಗಳನ್ನು ರಾತ್ರೋರಾತ್ರಿ ಧ್ವಂಸಗೊಳಿಸಿ ಅವುಗಳ ಜಾಗದಲ್ಲಿ ರಸ್ತೆ ನಿಮರ್ಾಣ ಸಾಮಗ್ರಿಗಳನ್ನು ಹಾಕಲಾಯಿತು. ಕೆಲವೆಡೆಯಂತೂ ಇದನ್ನು ಎಷ್ಟೊಂದು ಪರಿಣಾಮಕಾರಿಯಾಗಿ ಮಾಡಲಾಯಿತೆಂದರೆ ದಗರ್ಾ ಧ್ವಂಸಗೊಂಡ ಈ ಜಾಗಕ್ಕೂ ಉಳಿದ ಮಾಮೂಲಿ ರಸ್ತೆಗೂ ಯಾವುದೇ ವ್ಯತ್ಯಾಸವೂ ಕಾಣುತ್ತಿರಲ್ಲ. ಈಗ ರಸ್ತೆಯ ಭಾಗವೇ ಆಗಿರುವ ಈ ಸ್ಥಳಗಳಲ್ಲಿ ವಾಹನ ದಟ್ಟಣಿ ಹರಿಯುತ್ತಿದ್ದು ಹಿಂದೆ ಅಲ್ಲೊಂದು ದಗರ್ಾವಿತ್ತು ಎಂಬುದರ ಸಣ್ಣ ಸುಳಿವೂ ಸಿಗುವುದಿಲ್ಲ.
ರಾಜ್ಯ ಪೊಲೀಸ್ ಮತ್ತು ಆಡಳಿತ ಯಂತ್ರಾಗಗಳ ಆತ್ಮಸಾಕ್ಷಿಯಿಲ್ಲದ ವೈಫಲ್ಯ ಮತ್ತು ಕ್ರಿಯಾಶೀಲ ಮೌನಸಮ್ಮತಿ ಇದ್ದುದನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ. ಅನೇಕ ಕಡೆ ಪೊಲೀಸರೇ ಖುದ್ದಾಗಿ ಅಮಾಯಕ ಜನರನ್ನು ದಾಳಿಕೋರರ ಕೈಗೊಪ್ಪಿಸಿದ್ದಾರೆ. ದೊಂಬಿ, ಲೂಟಿ, ಅತ್ಯಾಚಾರ, ಕೊಲೆ, ಸುಲಿಗೆಗಳನ್ನು ನಡೆಸುತ್ತಿದ್ದ ಗುಂಪಿಗೆ ಪೊಲೀಸರೇ ಖುದ್ದಾಗಿ ರಕ್ಷಣೆ ಕೊಟ್ಟಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ದಂಗೆಕೋರರ ದಾಳಿಗಳಿಗೆ ಬಲಿಯಾಗುತ್ತಿದ್ದ ಅಮಾಯಕ ಮುಸ್ಲಿಮರು ಪೊಲೀಸರೆದುರು ಜೀವರಕ್ಷಣೆಗೆ ಅಂಗಲಾಚುತ್ತಿದ್ದರೂ ಪೊಲೀಸರು ಅದಕ್ಕೆ ಕಿವಿಗೊಟ್ಟಿಲ್ಲ.
ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ದಾಳಿಕೋರರ ಜೊತೆ ಸೇರಿ ಸಮೂಹ ಹಿಂಸೆಗೆ ನೇರವಾಗಿ ಗುರಿಯಾಗಿದ್ದ ಅಲ್ಪಸಂಖ್ಯಾತ ಸಮುದಾಯದ ಜನರತ್ತ ವಿನಾ ಕಾರಣ ಗುಂಡು ಹಾರಿಸಿದ ಅನೇಕ ವರದಿಗಳು ಬಂದಿವೆ. ನಂತರ ಯಾವ ಅಲ್ಪಸಂಖ್ಯಾತ ಸಮುದಾಯ ನರಮೇಧದ ಪ್ರಧಾನ ಬಲಿಪಶುವಾಗಿತ್ತೋ ಅದೇ ಸಮುದಾಯದ ಜನರನ್ನೇ ಪೊಲೀಸರು ಹೆಚ್ಚಾಗಿ ಬಂಧಿಸಿದರು.
ಎರಡು ದಶಕಗಳಿಗೂ ಹೆಚ್ಚು ಭಾರತೀಯ ಆಡಳಿತ ಸೇವೆಯಲ್ಲಿ (ಐಎಎಸ್) ಕಾರ್ಯನಿರ್ವಹಿಸಿರುವ ನನಗೆ ಈ ಪೊಲೀಸ್ ಮತ್ತು ನಾಗರಿಕ ಸೇವೆಯಲ್ಲಿರುವ ನನ್ನ ಸಮಾನ ದಜರ್ೆಯ ಅಧಿಕಾರಿಗಳು ಮಾಡಿದ ಕರ್ತವ್ಯಲೋಪವನ್ನು ಕಂಡು ನಿಜಕ್ಕೂ ನಾಚಿಕೆಯಾಗುತ್ತಿದೆ. ಭುಗಿಲೇಳುತ್ತಿದ್ದ ಕ್ರೂರ ಹಿಂಸಾಚಾರವನ್ನು ತಡೆಯುವುದಕ್ಕಾಗಿ, ಅಮಾಯಕ ಮಹಿಳೆಯನ್ನು, ಮಕ್ಕಳನ್ನು ಸಂಘಟಿತ ಕೊಲೆಗಡುಕರ ದಾಳಿಗಳಿಂದ ರಕ್ಷಿಸುವುದಕ್ಕಾಗಿ ನಿಣರ್ಾಯಕ ಸಶಸ್ತ್ರ ಬಲಗಳನ್ನು ನಿಯೋಜಿಸುವ ಮುನ್ನ ಈ ಅಧಿಕಾರಿಗಳು ತಮ್ಮ ರಾಜಕೀಯ ಪರಿವೀಕ್ಷಕರ ಆದೇಶಗಳಿಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕು ಎಂದು ಯಾವ ಕಾನೂನೂ ತಾಕೀತು ಮಾಡುವುದಿಲ್ಲ. ಅಂತಹ ಗಂಭೀರ ಸಂದರ್ಭದಲ್ಲಿ ಈ ಅಧಿಕಾರಿಗಳು ತತ್ಕ್ಷಣವೇ ಧೈರ್ಯ ಮತ್ತು ಸಹಾನುಭೂತಿಗಳಿಂದ ಸ್ವತಂತ್ರವಾಗಿ, ನಿಸ್ಪಕ್ಷಪಾತವಾಗಿ ಮತ್ತು ನಿಣರ್ಾಯಕವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಕಾನೂನು ಪ್ರೋತ್ಸಾಹಿಸುತ್ತದೆ. ಅಹ್ಮದಾಬಾದಿನಲ್ಲಿ ಒಬ್ಬನೇ ಒಬ್ಬ ಅಧಿಕಾರಿ ಈ ರೀತಿಯಲ್ಲಿ ಕಾರ್ಯತತ್ಪರನಾಗಿದ್ದರೆ ಕೂಡಲೇ ಪೊಲೀಸ್ ಬಲಗಳನ್ನು ನಿಯೋಜಿಸಿ, ಸೈನ್ಯವನ್ನು ಕರೆಸಿ ಕೆಲವೇ ಗಂಟೆಗಳಲ್ಲಿ ಹಿಂಸಾಚಾರವನ್ನು ತಡೆಗಟ್ಟಿ ಜನರನ್ನು ರಕ್ಷಿಸಬಹುದಿತ್ತು.
ಸ್ಥಳೀಯ ಪೊಲೀಸ್ ಮತ್ತು ಆಡಳಿತ ಯಂತ್ರಾಂಗದ ಸಕ್ರಿಯ ಬೆಂಬಲವಿಲ್ಲದೇ ಯಾವ ಗಲಭೆಯೂ ಕೆಲವು ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರೆಯಲಾರದು. ಗುಜರಾತಿನ ಪೊಲೀಸರ ಮತ್ತು ನಾಗರಿಕ ಆಡಳಿತಗಾರರ ಕೈಗೆ ನೂರಾರು ಅಮಾಯಕ ಜನರ ರಕ್ತ ಮೆತ್ತಿಕೊಂಡಿದೆ; ಮೌನದ ಮೂಲಕ ಈ ಷಡ್ಯಂತ್ರದಲ್ಲಿ ಪಾಲುದಾರನಾಗಿರುವ ಇಡೀ ರಾಷ್ಟ್ರದ ಉನ್ನತ ಅಧಿಕಾರಶಾಹಿಯ ಕೈಗೂ ಕೂಡ.
ಕೆಳ ದಜರ್ೆಯ ಪೊಲೀಸರು ಪರೋಕ್ಷವಾಗಿ ಹಿಂಸಾಚಾರದ ಬೆಂಬಲಕ್ಕೆ ನಿಂತಿರುವುದಕ್ಕೆ ಅವರು ಕೋಮುವಾದೀಕರಣಗೊಂಡಿರುವುದೂ ಕಾರಣ ಎಂದು ಹಿರಿಯ ಅಧಿಕಾರಿಗಳು ಹೇಳುವುದನ್ನೂ ನಾನು ಕೇಳಿದ್ದೇನೆ. ಇದೊಂದು ಕುಂಟುನೆಪವಷ್ಟೆ. ವೃತ್ತಿಪರತೆ ಮತ್ತು ಬದ್ಧತೆಗಳನ್ನು ಮೈಗೂಢಿಸಿಕೊಂಡ ಉನ್ನತ ಅಧಿಕಾರಿಗಳು ಇದೇ ಪಡೆಗಳಿಗೆ ನಾಯಕತ್ವ ನೀಡಿ ಮುನ್ನಡೆಸಿದಾಗ ಅವು ನಿಸ್ಪಕ್ಷಪಾತವಾಗಿ ಧೈರ್ಯದಿಂದ ಕಾರ್ಯನಿರ್ವಹಿಸಿವೆ. ಇಲ್ಲಿ ವೈಫಲ್ಯವಿರುವುದು ಉನ್ನತ ಪೊಲೀಸ್ ಮತ್ತು ನಾಗರಿಕ ಸೇವಾ ಅಧಿಕಾರಿಗಳ ನಾಯಕತ್ವದಲ್ಲೇ ಹೊರತು ತಮ್ಮ ಮೇಲಧಿಕಾರಿಗಳ ಆಜ್ಞೆಗಳನ್ನು ಕಡ್ಡಾಯವಾಗಿ ಪಾಲಿಸುವ ಹಾಗೆ ತರಬೇತುಗೊಳಿಸಲಾದ ಕೆಳದಜರ್ೆಯ ಖಾಕಿಪಡೆಯಲ್ಲಲ್ಲ ಎಂಬುದಂತೂ ಸ್ಪಷ್ಟ.
ಇಷ್ಟೆಲ್ಲಾ ಕ್ರೌರ್ಯ, ಅನ್ಯಾಯ, ಅತ್ಯಾಚಾರ, ಮಾನವ ಯಾತನೆಗಳು ನಡೆಯುತ್ತಿದ್ದರೂ ‘ನಾಗರಿಕ ಸಮಾಜ’, ಗಾಂಧಿವಾದಿಗಳು, ಅಭಿವೃದ್ಧಿ ಕಾರ್ಯಕರ್ತರು, ಎನ್ಜಿಓಗಳು ಹಾಗೂ ಕಚ್ ಮತ್ತು ಅಹ್ಮದಾಬಾದಿನಲ್ಲಿ ಭೂಕಂಪ ಸಂಭವಿಸಿದಾಗ ಬಹಳ ಕ್ರಿಯಾಶೀಲವಾಗಿದ್ದ ಆ ಕಪೋಲಕಲ್ಪಿತ ಗುಜರಾತಿ ಮಾನವಪ್ರೇಮಿಗಳು ಎಲ್ಲಿ ಹೋಗಿದ್ದರು?
ಹತ್ಯಾಕಾಂಡ ಭೀಕರವಾಗಿ ನಡೆಯುತ್ತಿದ್ದ ಸಮಯದಲ್ಲಿ ನಗರದ ಪ್ರಮುಖ ಅಭಯಾಶ್ರಮವಾಗಬೇಕಿದ್ದ ಅಹ್ಮದಾಬಾದಿನ ಸಬರಮತಿ ಆಶ್ರಮ ತನ್ನ ಆಸ್ತಿಪಾಸ್ತಿ ರಕ್ಷಿಸಿಕೊಳ್ಳುವುದಕ್ಕೋಸ್ಕರ ಬಾಗಿಲು ಮುಚ್ಚಿಕೊಂಡಿತ್ತು! ನರಬೇಟೆಗಾಗಿ ಮುನ್ನುಗ್ಗಿ ಬರುತ್ತಿದ್ದ ದಾಳಿಕೋರ ಗುಂಪುಗಳನ್ನು ತಡೆಯುವುದಕ್ಕೆ ಯಾವ ಗಾಂಧಿವಾದಿ ನಾಯಕರು ಅಥವಾ ಎನ್ಜಿಓ ನಿವರ್ಾಹಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮುಂದೆ ಬಂದರು? ಈ ದೇಶದ ನಾಗರಿಕರಾಗಿ ನಾವು ಈಗಾಗಲೇ ನಮ್ಮ ಬೆನ್ನಮೇಲೆ ಹೊತ್ತುಕೊಂಡಿರುವ ನಾಚಿಕೆಗಳ ಭಾರಕ್ಕೆ ಇನ್ನೊಂದು ನಾಚಿಕೆಯನ್ನು ಸೇರಿಸಿಕೊಳ್ಳಲೇಬೇಕಾಗಿದೆ. ಅದೆಂದರೆ, ಗಲಭೆಗಳಲ್ಲಿ ಬಲಿಪಶುಗಳಾಗಿದ್ದ ಮುಸ್ಲಿಮರಿಗಾಗಿ ತೆರೆದ ಅಹ್ಮದಾಬಾದಿನ ಬಹುತೇಕ ನಿರಾಶ್ರಿತ ಶಿಬಿರಗಳ ನಿರ್ವಹಣೆ ಮತ್ತು ಖಚರ್ುವೆಚ್ಚಗಳನ್ನು ಮುಸ್ಲಿಂ ಸಂಘಟನೆಗಳೇ ನೋಡಿಕೊಳ್ಳಬೇಕಾದ ದುಸ್ಥಿತಿ ಇರುವುದು! ಇದನ್ನೆಲ್ಲಾ ನೋಡಿದರೆ, ಮುಸ್ಲಿಂ ಜನ ಅನುಭವಿಸಿದ ಆ ಭೀಕರ ನರಕಯಾತನೆ, ನೋವು, ದ್ರೋಹ ಮತ್ತು ಅನ್ಯಾಯಗಳು ಕೇವಲ ಇತರ ಮುಸ್ಲಿಮರ ಹೃದಯಗಳನ್ನು ಮಾತ್ರ ತಟ್ಟುತ್ತಿವೆ ಎಂಬಂತೆ; ಆ ಬಲಿಪಶುಗಳನ್ನು ಸಂತೈಸುವಲ್ಲಿ, ಅವರ ಕಣ್ಣೀರು ಒರೆಸುವಲ್ಲಿ, ಅವರನ್ನು ಪುನಶ್ಚೇತನಗೊಳಿಸುವಲ್ಲಿ ಮುಸ್ಲಿಮರಲ್ಲದ ನಮ್ಮೆಲ್ಲರ ಪಾಲು ಏನೂ ಇಲ್ಲ ಎಂಬಂತೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಲಾಗಿದೆ. ಅಮಾಯಕ ಪ್ರಜೆಗಳಿಗೆ ಕರ್ಷಣೆ ಮತ್ತು ಪರಿಹಾರಗಳನ್ನು ಖಾತ್ರಿಯಾಗಿ ಕೊಡುವ ಪ್ರಾಥಮಿಕ ಜವಾಬ್ದಾರಿ ಹೊತ್ತುಕೊಂಡಿರುವ ಪ್ರಭುತ್ವದ ಇರುವಿಕೆ ಈ ಯಾವ ನಿರಾಶ್ರಿತ ಶಿಬಿರಗಳಲ್ಲೂ ಕಾಣಲಿಲ್ಲ; ನಿರಾಶ್ರಿತ ಶಿಬಿರಗಳನ್ನು ನಿರ್ವಹಿಸುವುದು, ಭದ್ರತೆಯನ್ನು ಖಾತ್ರಿಪಡಿಸುವುದು, ಅಲ್ಲಿ ರಕ್ಷಣಾರಹಿತವಾಗಿ ಕೂಡಿಹಾಕಲಾಗಿದ್ದ ಹತ್ತಾರು ಸಾವಿರ ಮಹಿಳೆ, ಪುರುಷ ಮತ್ತು ಮಕ್ಕಳ ಹಸಿದ ಹೊಟ್ಟೆಗೆ ಉಣಬಡಿಸುವುದಕ್ಕೆ ಅಗತ್ಯವಿರುವ ಸಂಪನ್ಮೂಲ ಒದಗಿಸುವುದು ಮುಂತಾದ ಎಲ್ಲಾ ಜವಾಬ್ದಾರಿಗಳಿಂದಲೂ ಸಕರ್ಾರ ವಿಮುಖವಾಗಿತ್ತು.
ನಾನು ಗುಜರಾತಿನಲ್ಲಿ ಅನುಭವಿಸಿದ ಏಕೈಕ ಸಮಾಧಾನಕರ, ಹೆಮ್ಮೆ ಮತ್ತು ಭರವಸೆಯ ಕ್ಷಣ ಎಂದರೆ ಮುಜಿದ್ ಅಹ್ಮದ್ ಮತ್ತು ರೋಷನ್ ಬೆಹನ್ ಎಂಬ ವ್ಯಕ್ತಿಗಳನ್ನು ನೋಡಿದ್ದು. ತಮ್ಮ ಸುತ್ತಲೂ ಬಿದ್ದಿದ್ದ ಧ್ವಂಸದ ಪಳೆಯುಳಿಕೆಗಳ ನಡುವೆಯೇ ದಣಿವರಿಯದಂತೆ ಮಾನವೀಯತೆಯಿಂದ ಕೆಲಸ ಮಾಡುತ್ತಿದ್ದ ಜೀವಗಳವು.
ಅಮನ್ ಚೌಕ್ ಶಿಬಿರದಲ್ಲಿ ಮಕ್ಕಳುಮರಿಗಳು ಊಟ, ಹಾಲು ಸಿಗದೇ ಪರಿತಪಿಸದಿರಲಿ ಎಂದು ಅಥವಾ ಅವರ ಗಾಯಗಳು ಚಿಕಿತ್ಸೆಯಿಲ್ಲದೇ ಉಲ್ಬಣಗೊಳ್ಳದಿರಲಿ ಎಂದು ಬೆಳಿಗ್ಗೆ ನಾಲ್ಕು ಗಂಟೆಯಿಂದ ಮಧ್ಯರಾತ್ರಿಯ ತನಕ ದಣಿವರಿಯದಂತೆ ಕೆಲಸ ಮಾಡಿದ ಸ್ವಯಂಸೇವಕರಿಗೆ ಅಲ್ಲಿನ ಮಹಿಳೆಯರು ತುಂಬಿದ ಹೃದಯದಿಂದ ಕೃತಜ್ಞರಾಗಿದ್ದರು. ಆ ಸ್ವಯಂಸೇವಕರ ನಾಯಕ ಮುಜಿದ್ ಅಹ್ಮದ್ ಒಬ್ಬ ಪಧವೀಧರನಾಗಿದ್ದು ಆತನ ಪುಟ್ಟ ಕೆಮಿಕಲ್ ಫ್ಯಾಕ್ಟರಿಯನ್ನೂ ಗಲಭೆಯಲ್ಲಿ ಸುಟ್ಟು ಹಾಕಲಾಗಿತ್ತು. ಆದರೆ, ತನ್ನ ಸ್ವಂತ ಉದ್ಯಮಕ್ಕಾದ ನಷ್ಟದ ಬಗ್ಗೆ ಚಿಂತಿಸುವುದಕ್ಕೆ ಆತನ ಬಳಿ ಸಮಯವಿರಲಿಲ್ಲ. ಆ ಶಿಬಿರದಲ್ಲಿದ್ದ ಸುಮಾರು 5000 ಜನರ ಹಸಿವನ್ನು ನೀಗಿಸುವುದಕ್ಕಾಗಿ ಆತ ಪ್ರತೀದಿನ ಸುಮಾರು 1600 ಕೇಜಿ ದವಸಧಾನ್ಯಗಳನ್ನು ಹೊಂದಿಸಬೇಕಿತ್ತು.
ಸುಮಾರು 60 ವರ್ಷದ ರೋಷನ್ ಬೆಹೆನ್ ಎಂಬ ಮಹಿಳೆಯ ಮುಂದೆಯೂ ಅದಕ್ಕಿಂತಲೂ ಗುರತರವಾದ ಸವಾಲುಗಳಿದ್ದವು. ಜುಹಾಪರ ಶಿಬಿರದಲ್ಲಿದ್ದ ಆಕೆ ಅಲ್ಲಿದ್ದವರ ಒಂದೊಂದು ಭಯಾನಕ ಕತೆಗಳನ್ನು ಕೇಳಿದಾಗಲೂ ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೀರ ಕೋಡಿಯನ್ನು ಒರೆಸಿಕೊಳ್ಳುತ್ತಾ ಕಾರ್ಯನಿರ್ವಹಿಸುತ್ತಿದ್ದಳು. ಆಕೆಯ ಬಳಿಯೂ ಯಾತನೆ ಮತ್ತು ಕ್ರೋಧಗಳ ಆಡಂಭರಗಳಿಗಾಗಿ ಸಮಯವಿರಲಿಲ್ಲ. ಆಕೆ ಮಲಗುತ್ತಿದ್ದುದೇ ವಿರಳ. ಅವಳ ಜೊತೆಗಿದ್ದ ಸ್ವಯಂಸ್ವೇವಕರು ಪ್ರಧಾನವಾಗಿ ಆ ಶಿಬಿರದ ಸುತ್ತಮುತ್ತಲಿದ್ದ ಕಾಮರ್ಿಕ ವರ್ಗದ ಬಡ ಮಹಿಳೆ ಮತ್ತು ಪುರುಷರೇ ಆಗಿದ್ದರು. ಹೃದಯಹೀನ ದಾಳಿಕೋರರ ಭೀಬತ್ಸತೆಯಿಂದ ಪಾರಾಗಿ ಈ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೆರೆದಿದ್ದ ನೂರಾರು ಅಮಾಯಕ ಜನರಿಗೆ ತಾತ್ಕಾಲಿಕ ಶೌಚಾಲಯ, ಊಟ ಒದಗಿಸುವ, ಅವರನ್ನು ಸಂತೈಸುವ ಕೆಲಸದಲ್ಲಿ ಈ ಸ್ವಯಂ ಸೇವಕರು ತಲ್ಲೀನರಾಗಿದ್ದರು.
ನಾನು ಈ ನಿರಾಶ್ರಿತ ಶಿಬಿರಗಳ ಮೂಲಕ ಹಾದು ಹೋಗುತ್ತಿದ್ದಾಗ ನನಗೆ ಎದುರಾದ ಒಂದು ಪ್ರಶ್ನೆ ಎಂದರೆ ಈ ಕರಾಳ ಸನ್ನಿವೇಶದಲ್ಲಿ ಗಾಂಧಿಜಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬುದು. ಗಾಂಧಿಜಿ ಶಾಂತಿಗಾಗಿ ಉಪವಾಸ ಮಾಡುತ್ತಿದ್ದಾಗ ಕಲ್ಕತ್ತಾದಲ್ಲಿ ನಡೆದ ಗಲಭೆಗಳನ್ನು ನೆನಪಿಸಿಕೊಂಡೆ. ತನ್ನ ಮಗನನ್ನು ಮುಸ್ಲಿಮರ ಗುಂಪು ಕೊಂದು ಹಾಕಿದ್ದರ ಬಗ್ಗೆ ಬಹಳ ಸಿಟ್ಟು ಮತ್ತು ಪ್ರತೀಕಾರ ಮನೋಭಾವದಿಂದ ಗಾಂಧೀಜಿಯೊಂದಿಗೆ ಮಾತನಾಡಲು ಒಬ್ಬ ಹಿಂದೂ ವ್ಯಕ್ತಿಯೊಬ್ಬ ಬರುತ್ತಾನೆ. ಆಗ ಗಾಂಧಿ ಈ ರೀತಿ ಹೇಳಿದ್ದರಂತೆ: ನಿನ್ನ ನೋವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಬಯಕೆ ನಿನಗೆ ನಿಜಕ್ಕೂ ಇದ್ದರೆ, ಕೊಲೆಗೀಡಾದ ನಿನ್ನ ಮಗನ ವಯಸ್ಸಿನವನೇ ಆದ ಇನ್ನೊಬ್ಬ ಹುಡುಗನನ್ನು, ಹಿಂದೂಗಳ ದಾಳಿಯಲ್ಲಿ ತಂದೆತಾಯಿಗಳನ್ನು ಕಳೆದುಕೊಂಡು ಅನಾಥನಾಗಿರುವ ಒಬ್ಬ ಮುಸ್ಲಿಂ ಹುಡುಗನನ್ನು ಹುಡುಕು. ಅವನನ್ನು ನಿನ್ನ ಮಗನ ರೀತಿಯಲ್ಲೇ ಬೆಳೆಸು. ಆದರೆ, ಆತ ಮುಸ್ಲಿಮನಾಗಿ ಹುಟ್ಟಿರುವುದರಿಂದ ಅವನನ್ನು ಒಬ್ಬ ಮುಸ್ಲಿಮ ಶ್ರದ್ಧೆಯ ವ್ಯಕ್ತಿಯನ್ನಾಗಿಯೇ ಬೆಳೆಸು. ಆಗ ಮಾತ್ರವೇ ನೀನು ನಿನ್ನ ನೋವು, ಕೋಪ ಮತ್ತು ಪ್ರತೀಕಾರಕ್ಕಾಗಿನ ನಿನ್ನ ತುಡಿತವನ್ನು ನಿವಾರಿಸಿಕೊಳ್ಳುಲು ಸಾಧ್ಯ ಎಂಬುದು ನಿನಗೆ ಅರ್ಥವಾಗುತ್ತದೆ.
ಅಂತಹ ಮಾತುಗಳನ್ನು ಆಡುವಂಥವರು ಈಗಿಲ್ಲ. ಈಗಿರುವುದು ಅಮಾಯಕರ ಮೇಲಿನ ತಮ್ಮ ನಂಜುಕಾರಿ ಕೃತ್ಯಗಳನ್ನು ಸಮಥರ್ಿಸಿಕೊಳ್ಳುವುದಕ್ಕೆ ನ್ಯೂಟನ್ನ ಭೌತಶಾಸ್ತ್ರೀಯ ನಿಯಮಗಳನ್ನು ಪ್ರತಿಪಾದಿಸುವವರೇ. ನಾವು ಗಾಂಧೀಜಿಯ ಮಾತುಗಳನ್ನು ನಮ್ಮ ಹೃದಯಾಂತರಾಳದಲ್ಲಿ ಕಂಡುಕೊಳ್ಳಬೇಕಿದೆ; ನ್ಯಾಯ, ಪ್ರೀತಿ ಮತ್ತು ಸಹಿಷ್ಣುತೆಗಳ ಮೇಲೆ ಸಾಕಷ್ಟು ನಂಬಿಕೆಯಿಡಬೇಕಿದೆ.
ಗುಜರಾತಿನ ಕೊಲೆಗಡುಕ ಗುಂಪುಗಳು ನನ್ನಿಂದ ಬಹಳಷ್ಟನ್ನು ಕಿತ್ತುಕೊಂಡಿವೆ. ಅದರಲ್ಲಿ ಒಂದು ಎಂದರೆ ನಾನು ಆಗಾಗ ಬಹಳ ಹೆಮ್ಮೆ ಮತ್ತು ಬದ್ಧತೆಯಿಂದ ಹಾಡುತ್ತಿದ್ದ ಒಂದು ಹಾಡು. ಅದು: ಸಾರೆ ಜಹಾಂ ಸೆ ಅಚ್ಚಾ, ಹಿಂದೂಸ್ತಾನ ಹಮಾರ ಹಮಾರ… (ಇಡಿ ವಿಶ್ವಕ್ಕಿಂತ ನಮ್ಮ ಹಿಂದೂಸ್ತಾನವೇ ಉತ್ತಮ).
ಇದು ನಾನು ಮುಂದೆಂದೂ ಹಾಡಲಾರದ ಹಾಡು.
ಅನುವಾದಕರ ಪರಿಚಯ – ಶಿಕಾರಿಪುರ ತಾಲೂಕಿನ ಪುಟ್ಟ ಗ್ರಾಮ ಕಡೆನಂದಿಹಳ್ಳಿಯವರಾದ ಕುಮಾರ್ ಬುರಡಿಕಟ್ಟಿ ತಮ್ಮ ಶಾಲಾ ಕಾಲೇಜು ದಿನಗಳಿಂದಲೂ ಹಲವು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದವರು. ಪ್ರಸ್ತುತ ಸಂಡೆ ಇಂಡಿಯನ್ ಪತ್ರಿಕೆಯ ಸಹಸಂಪಾದಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. LTTE ಚಳವಳಿ ಕುರಿತ “ಓ ಈಳಂ”, ನಕ್ಸಲೈಟ್ ಚಳವಳಿ ಕುರಿತ “ಜಂಗಲ್ ನಾಮ” ಮತ್ತು” ಕಾಶ್ಮೀರ-ರಣರಂಗವಾಗಿರುವ ಬೀದಿಗಳು” ಇವರ ಪ್ರಮುಖ ಕೃತಿಗಳು. ಗುಜರಾತ್ ಹತ್ಯಾಕಾಂಡ ಕುರಿತ ಸತ್ಯ ಶೋಧನ ಸಮಿತಿ ಸದಸ್ಯರಾಗಿದ್ದರು.
(ಹರ್ಷ ಮಂದೇರ್ ಅವರ ಲೇಖನಗಳ ಸಂಗ್ರಹವನ್ನು ಅಹರ್ನಿಶಿ ಪ್ರಕಾಶನ ಸದ್ಯದಲ್ಲೆ ಹೊರತರಲಿದೆ).